Monday, December 31, 2012

ಕುವೆಂಪು ಕಾವ್ಯಯಾನ ಮತ್ತು ಅಜ್ಞಾತ ಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ ಪುಸ್ತಕಗಳ ಬಿಡುಗಡೆ ಸಮಾರಂಭ - ಕುಪ್ಪಳಿ 29.12.12

ಪ್ರಾರ್ಥನೆ - ಶ್ರೀ ಕಾ.ಹಿ. ರಾಧಾಕೃಷ್ಣ

ಬಿಡುಗಡೆ

ಪರಿಚಯ - ಡಾ. ಚಂದ್ರಶೇಖರ ನಂಗಲಿ


ಅಲಿಗೆ ಪುಟ್ಟಯ್ಯನಾಯಕರ ನೆನಪು


ಧನ್ಯತೆ - ಸತ್ಯನಾರಾಯಣ

ಅಭಿನಂದನೆ - ಶ್ರೀ ವಿ.ಎಂ. ಕುಮಾರಸ್ವಾಮಿ

ನೆನಪು - ಶ್ರೀ ಅಮ್ಮಡಿ ನಾಗಪ್ಪನಾಯಕ


ಅಧ್ಯಕ್ಷಭಾಷಣ - ಚಂದ್ರಶೇಖರ ಕಂಬಾರ





Friday, December 28, 2012

ಕಾವ್ಯಯಾನಕ್ಕೆ ಬೆನ್ನು ತಟ್ಟಿದ ಹಂಪನಾ


ಅಪರೂಪದ ಕವಿತೆಗಳ ವಿಶ್ಲೇಷಣೆ
ಡಾ.ಬಿ.ಆರ್.ಸತ್ಯನಾರಾಯಣರ ಈ ಕೃತಿ ಕುವೆಂಪು ಕಾವ್ಯಯಾನ ತನ್ನ ಶೀರ್ಷಿಕೆಯನ್ನು ಸಾರ್ಥಕ ಪಡಿಸಿದೆ. ಈ ಪುಸ್ತಕದಲ್ಲಿರುವ ಬಿಡಿ ಬಿಡಿ ಬರೆಹಗಳನ್ನು ಒಂದೊಂದಾಗಿ ಓದುತ್ತ ಹೊರಟರೆ, ಒಟ್ಟು ಪುಸ್ತಕದ ಓದು ಮುಗಿಯುವ ಹೊತ್ತಿಗೆ ಕುವೆಂಪುರವರ ಕಾವ್ಯಪ್ರಪಂಚವನ್ನು ಹೊಕ್ಕು ಹೊರಬಂದ ಅನುಭವ ಆಗುತ್ತದೆ.
ಕುವೆಂಪುರವರು ಬರೆದಿರುವ ಆತ್ಮಕಥೆಯ ಬೃಹದ್‌ಗ್ರಂಥದ ಹೆಸರು ನೆನಪಿನ ದೋಣಿಯಲ್ಲಿ ಎಂದು. ತಮ್ಮ ಬದುಕಿನ ಚಿತ್ರಣವನ್ನು ನೆನಪಿನ ದೋಣಿಯಲ್ಲಿ ಪಯಣಿಸುತ್ತ ಕಟ್ಟಿಕೊಟ್ಟಿದ್ದಾರೆ. ಬಿ.ಆರ್.ಸತ್ಯನಾರಾಯಣರು ಈ ಪುಸ್ತಕದಲ್ಲಿ ಕುವೆಂಪುರವರ ಕವಿತೆಗಳನ್ನೇ ಬಳಸಿಕೊಂಡು ಒಂದು ಕಾವ್ಯ ಪ್ರಯಾಣ(ಯಾನ) ಮಾಡಿದ್ದಾರೆ. ಇದರಿಂದ ಓದುಗರಿಗೆ ಏಕಕಾಲಕ್ಕೆ ಎರಡು ಪ್ರಯೋಜನಗಳು ದಕ್ಕಿವೆ. ಒಂದು, ಕುವೆಂಪುರವರ ಕವಿತೆಗಳ ಪರಿಚಯ; ಎರಡು, ಕುವೆಂಪುರವರ ಜೀವನ ಮತ್ತು ಮನೋಧರ್ಮದ ಪರಿಚಯ.

ಸತ್ಯನಾರಾಯಣರು ಆರಿಸಿಕೊಂಡಿರುವ ಕವಿತೆಗಳ ಸ್ವಾರಸ್ಯ ಹೃದ್ಯವಾಗಿದೆ. ಜತೆಗೆ ಅವರು ವಾಡಿಕೆಯಾಗಿರುವ ಮಾಮೂಲು ಕವಿತೆಗಳನ್ನು ಉದಾಹರಿಸುವುದಲ್ಲದೆ ಅಷ್ಟಾಗಿ ಪ್ರಚಲಿತವಾಗಿರದ ಅಪರೂಪದ ಅಪ್ರಕಟಿತ ಕವಿತೆಗಳನ್ನು ವಿಶ್ಲೇಷಿಸಿರುವುದು ಶ್ಲಾಘನೀಯ. ಇದಲ್ಲದೆ ಆಯ್ದುಕೊಂಡಿರುವ ಕವಿತೆಗಳು ಮೈಪಡೆದ ಸಮಯ, ಸ್ಥಳ ಸಂದರ್ಭ ಮತ್ತು ಔಚಿತ್ಯ ಕುರಿತು ಮಾಹಿತಿಯನ್ನು ಒದಗಿಸಿ ಉಪಕರಿಸಿದ್ದಾರೆ. ಕುವೆಂಪುರವರ ಬಾಳಿನ ಕೆಲವು ಅಪೂರ್ವ ಹಾಗೂ ಮಹತ್ವದ ರಸಗಳಿಗೆಯನ್ನು ಗುರುತಿಸಿರುವುದು ಈ ಕಾವ್ಯಯಾನದ ಮತ್ತೊಂದು ಹೆಚ್ಚುಗಾರಿಕೆ. ಸತ್ಯನಾರಾಯಣರು ತಮ್ಮ ಈ ಗ್ರಂಥ ಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿತವಾಗಿದೆಯೆಂದು ವಿನಯಪೂರ್ವಕ ವಿಜ್ಞಾಪಿಸಿದ್ದಾರೆ. ಆದರೆ ಇಲ್ಲಿನ ಬರವಣಿಗೆಯ ಹಾಸು ಇನ್ನೂ ಮಿಗಿಲಾಗಿದ್ದು ಪ್ರೌಢರಿಗೂ ಪ್ರಿಯವಾಗುತ್ತದೆ.

ಕುವೆಂಪು ಸಮಗ್ರ ಕನ್ನಡ ಸಾಹಿತ್ಯದಲ್ಲಿ ಶಿಖರಸೂರ್ಯ. ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ಅವರ ಕೊಡುಗೆ ಗಣ್ಯವಾದದ್ದು. ಭಾವಗೀತೆಗಳಿಂದ ಹಿಡಿದು ಶಿಶುಸಾಹಿತ್ಯದಿಂದ ತೊಡಗಿ, ಕಾವ್ಯ, ನಾಟಕ, ವಿಮರ್ಶೆ, ಕಾದಂಬರಿ, ಮಹಾಕಾವ್ಯದವರೆಗೆ ಅದರ ವ್ಯಾಪ್ತಿಯಿದೆ. ಸಾಹಿತ್ಯೇತರ ಕಾರಣಗಳಿಗಾಗಿಯೂ ಕುವೆಂಪು ಮಹತ್ವದವರು. ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಅವರ ಛಾಪು ಗಾಢತರವಾಗಿದೆ. ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿಯನ್ನು ಬಿತ್ತಿದ ಏಕಮೇವಾದ್ವಿತೀಯರು ಕುವೆಂಪು. ಮಹಾಕವಿಯಾಗಿ ದಾರ್ಶನಿಕರಾಗಿ ಸಾಂಸ್ಕೃತಿಕ ನಾಯಕರಾಗಿ ಕುವೆಂಪುರವರು ವರ್ತಮಾನಕ್ಕೆ ಹೇಗೆ ಪ್ರಸ್ತುತರಾಗಿದ್ದಾರೆ ಎಂಬುದನ್ನು ಅವರ ಕಾವ್ಯದಿಂದ ಆಯ್ದ ಭಾಗಗಳಿಂದ ಡಾ. ಬಿ.ಆರ್. ಸತ್ಯನಾರಾಯಣ ಸಮರ್ಥವಾಗಿ ಸ್ಥಾಪಿಸಿ ಅಭಿನಂದನಾರ್ಹರಾಗಿದ್ದಾರೆ.
೧೦.೦೯.೨೦೧೨
ನಾಡೋಜ ಪ್ರೊ. ಹಂಪ. ನಾಗರಾಜಯ್ಯ

Thursday, December 27, 2012

ಕುವೆಂಪು ಕಾವ್ಯಯಾನಕ್ಕೊಂದು ಆರಂಭ

ನನ್ನ ಮಾತು
ಇಲ್ಲಿನ ಬರಹಗಳು ಕುವೆಂಪು ಕಾವ್ಯದ ವಿಮರ್ಶೆಯಲ್ಲ; ಕೇವಲ ಮರು ಓದು ಎಂಬುದನ್ನು ಮೊದಲೇ ಸ್ಪಷ್ಟಪಡಿಸುತ್ತೇನೆ. ಏಕೆಂದರೆ ನಾನು ವಿಮರ್ಶಕನಲ್ಲ; ಕೇವಲ ಒಬ್ಬ ಓದುಗ ಮಾತ್ರ. ಕುವೆಂಪು ಕಾವ್ಯ-ಬದುಕು ಸಾಮಾನ್ಯ ಓದುಗನಾದ ನನ್ನನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಿಬಿಟ್ಟಿವೆ. ಒಬ್ಬ ಓದುಗನಾಗಿ, ಕೆಲವು ಕವನಗಳ ಸಾಂದರ್ಭಿಕ ಹಿನ್ನೆಲೆಯಲ್ಲಿ ನಡೆಸಿದ ಕಾವ್ಯಯಾತ್ರೆಯ ಫಲವೇ ಈ ಬರಹಗಳು. 

ಕವನಗಳ ಹುಟ್ಟಿನ ಸಂದರ್ಭದ ಹಿನ್ನೆಲೆಯಲ್ಲಿ ಅವುಗಳನ್ನು ನೋಡುವುದು, ಆ ಕವಿತೆಗಳಿಗೆ ಮತ್ತೊಂದು ಆಯಾಮವನ್ನು ತಂದುಕೊಡುತ್ತದೆ ಎಂಬ ನಂಬಿಕೆ ನನ್ನದು. ಕುವೆಂಪು ಅವರ ಬದುಕು-ಬರಹವನ್ನು ಗ್ರಹಿಸುವಲ್ಲಿ ಇದೊಂದು ಹೊಸ ಆಯಾಮವಷ್ಟೆ! ಖಂಡ ಖಂಡವಾಗಿ ಅಖಂಡವನ್ನು ಗ್ರಹಿಸುವ ಹಾಗೆ. ಕವಿತೆಗಳ ಸಂದರ್ಭವನ್ನು ಹುಡುಕಿಕೊಂಡು ಹೊರಟ ನನಗೆ ಸಿಕ್ಕಿದ್ದು ಪ್ರಕೃತಿಯ ಶಿಶು, ಗುರುವಿನೊಲುಮೆಯ ಶಿಷ್ಯ, ಶಿಷ್ಯರೊಲುಮೆಯ ಗುರು, ಪೂರ್ಣಾಂಗಿಗೊಲಿದ ಪತಿ, ಮಕ್ಕಳ ವಾತ್ಸಲ್ಯಮಯೀ ತಂದೆ, ಪೂರ್ಣಾನಂದದ ಅನುಭಾವಿ, ಕಲ್ಮಶವಿಲ್ಲದ ಚಿಂತಕ, ಗದ್ದಲವಿಲ್ಲದ ಕ್ರಾಂತಿಕಾರ, ಅದ್ಭುತಗಳನ್ನು ಸಾಧಿಸಿದ ದಾರ್ಶನಿಕ ಕುವೆಂಪು!
 
ಕೇವಲ ಕುವೆಂಪು ಕಾವ್ಯಗಳನ್ನು ಓದುವುದು ಮತ್ತು ಆಸಕ್ತ ಓದುಗರಿಗೆ ಓದಿಸುವುದು ಇಲ್ಲಿನ ಬರಹಗಳ ಏಕಮಾತ್ರ ಉದ್ದೇಶ.  ನಿಮ್ಮ ಲೇಖನವನ್ನು ಓದಿದಾಗ, ಕವಿತೆಯ ಪೂರ್ಣಪಾಠವನ್ನು ಓದಬೇಕೆನ್ನಿಸಿದರೂ, ಕಾರ್ಯದೊತ್ತಡದಿಂದ ಓದಲಾಗುತ್ತಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದರು. ಅದಕ್ಕಾಗಿ ಸಾಧ್ಯವಾದಷ್ಟು ಕಡೆ, ಕವಿತೆಗಳ ಪೂರ್ಣಪಾಠ ಉಲ್ಲೇಖಿಸಿದ್ದೇನೆ. ಬ್ಲಾಗಿನಲ್ಲಿ ಬರೆಯುವಾಗ ಭಾಗಶಃ ಉಲ್ಲೇಖಗೊಳ್ಳುತ್ತಿದ್ದ ಕವಿತೆಗಳನ್ನು  ಅಲ್ಲಲ್ಲಿಯೇ ಪೂರ್ತಿಯಾಗಿ ಓದಲು ಅನುವಾಗವಂತೆ ಪೂರ್ಣಪಾಠ ನೀಡಬೇಕಂತಲೂ ಹಲವಾರು ಸ್ನೇಹಿತರು ಒತ್ತಾಯಿಸಿದ್ದೂ ಅದಕ್ಕೆ ಕಾರಣ. ಇಲ್ಲಿಯ ಬರಹಗಳಲ್ಲಿ, ಅವುಗಳ ಸಂಯೋಜನೆಯಲ್ಲಿ ಏನಾದರೂ ಅಸಂಬದ್ಧತೆ ಕಂಡು ಬಂದರೆ, ಅದಕ್ಕೆ ನಾನೇ ಪೂರ್ಣ ಹೊಣೆಗಾರನಾಗಿರುತ್ತೇನಯೇ ಹೊರತು, ಕವಿಯ ಕಾವ್ಯವಲ್ಲ.
ನನ್ನ ನಂದೊಂದ್ಮಾತು ಬ್ಲಾಗಿನಲ್ಲಿ ಕುವೆಂಪು ಕಾವ್ಯದ ಬಗ್ಗೆ ನಾನು ಬರೆದ ಲೇಖನಗಳನ್ನು ಓದಿ ಪ್ರೋತ್ಸಾಹಿಸಿದ, ಪ್ರತಿಕ್ರಿಯೆ ನೀಡಿದ, ಪ್ರೀತಿಯಿಂದ ಜಗಳಕ್ಕೆ ಬಿದ್ದ ಆತ್ಮೀಯರಿಗೆ,
ನಾಲ್ಕೈದು ಕಂತುಗಳಲ್ಲಿ ಮುಗಿಸಬೇಕೆಂದಿದ್ದ ಬರವಣಿಗೆಯನ್ನು, ದಯಮಾಡಿ ಕುವೆಂಪು ಅವರ ಕಾವ್ಯದ ಬಗೆಗಿನ ಬರವಣಿಗೆಯನ್ನು ಮುಂದುವರೆಸಿ, ನಮ್ಮ ಕೆಲಸದ ನಡುವೆ ಆ ಮಹಾಕವಿಯನ್ನು ಪೂರ್ತಿ ಓದಲಾಗದಿದ್ದರೂ, ನಿಮ್ಮ ಬರಹಗಳ ಮೂಲಕ ಸ್ವಲ್ಪವಾದರೂ ಓದಿಕೊಳ್ಳುತ್ತೇವೆ ಎಂದು ಪ್ರೀತಿಯಿಂದ ಒತ್ತಾಯಿಸಿದ ನನ್ನ ಬ್ಲಾಗ್ ಸ್ನೇಹಿತರಿಗೆ, ಅನಿವಾಸಿ ಭಾರತೀಯರಿಗೆ,
ಬ್ಲಾಗಿನಲ್ಲಿ ಪ್ರಕಟವಾಗುವಾಗಲೇ ಕೆಲವೊಂದನ್ನು ಬ್ಲಾಗಿನಿಂದೆತ್ತಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ಸಂಪಾದಕರುಗಳಿಗೆ, ಸಂಪದ, ಅವಧಿ, ದಟ್ಸ್‌ಕನ್ನಡ ಮತ್ತು ಕೆಂಡಸಂಪಿಗೆ ಮೊದಲಾದ ಆನ್‌ಲೈನ್ ಪತ್ರಿಕೆಗಳವರಿಗೆ,
ಕುವೆಂಪು ಕವಿತೆಗಳ ಬರವಣಿಗೆಯ ಬಗ್ಗೆ ತಿಳಿಸಿದಾಗ, ಪ್ರೋತ್ಸಾಹದ ಮಾತನಾಡಿದ ಶ್ರೀಮತಿ ತಾರಿಣಿಯವರಿಗೆ ಮತ್ತು ಶ್ರೀಮತಿ ರಾಜೇಶ್ವರಿಯವರಿಗೆ, 
ಆಗೊಮ್ಮೆ ಈಗೊಮ್ಮೆ ನಾನು ಕೊಟ್ಟ ಈ ಸರಣಿಯ ಲೇಖನಗಳನ್ನು ಓದಿ ಪ್ರತಿಕ್ರಿಯಿಸಿದ, ಪ್ರೋತ್ಸಾಹಿಸಿದ ಹಿರಿಯ ಮಿತ್ರರಾದ ಶ್ರೀ ಜಿ.ಎಸ್.ಎಸ್.ರಾವ್, ಶ್ರೀ ಎಸ್.ಎಂ.ಪೆಜತ್ತಾಯ ಹಾಗೂ ಶ್ರೀ ಎಂ.ವಿ.ಕುಮಾರಸ್ವಾಮಿಯವರಿಗೆ,  ಮತ್ತು ನಮ್ಮ ಮನೆಯವರಿಗೆ,
ತಮ್ಮ ಕಾರ್ಯಬಾಹುಳ್ಯದ ನಡುವೆಯೂ, ಈ ಕಿರಿಯನ ಪ್ರಾರ್ಥನೆಗೆ ಓಗೊಟ್ಟು, ಕೃತಿಗೆ ಮುನ್ನುಡಿಯನ್ನು ಬರೆದು ಆಶೀರ್ವದಿಸಿರುವ ಹಿರಿಯ ಸಂಶೋಧಕರಾದ ನಾಡೋಜ ಪ್ರೊ. ಹಂಪ. ನಾಗರಾಜಯ್ಯನವರಿಗೆ,
ಈಗ, ಲೇಖನಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವ ಮಿತ್ರ ಸೃಷ್ಟಿ ನಾಗೇಶನಿಗೆ, ಮುಖಪುಟ ಕಲಾವಿದರಾದ ಸುಧಾಕರ ದರ್ಭೆ ಮತ್ತು ಸತ್ಯಶ್ರೀ ಪ್ರಿಂಟರ‍್ಸ್ ಎಲ್.ಲಿಂಗಪ್ಪನವರಿಗೆ,
ಮತ್ತು ಸಹೃದಯ ಓದುಗರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
 


Wednesday, December 26, 2012

ರಸತಪಸ್ವಿಯ ನೆನವರಿಕೆ

ಕುವೆಂಪು ಅವರ ನೆನಪಿನ ದೋಣಿಯಲ್ಲಿ ಕೃತಿಯನ್ನು ಓದುವಾಗ ಪುಟ್ಟಯ್ಯನಾಯಕರ ಹೆಸರನ್ನು ಎದುರುಗೊಂಡಿದ್ದೆ. ನಂತರ ಅಲಿಗೆ ಗುರು ಅವರ ಎರಡು ಪುಸ್ತಕಗಳಲ್ಲಿ ಈ ಹೆಸರನ್ನು ಗಮನಿಸಿದ್ದೆ. ಕುವೆಂಪು ಅವರು ಗೌರವಪೂರ್ವಕವಾಗಿ ಪುಟ್ಟಯ್ಯನಾಯಕರನ್ನು ನೆನಪಿಸಿಕೊಳ್ಳುವುದು, ಪುಟ್ಟಯ್ಯನಾಯಕರು ಕುವೆಂಪು ಅವರ ತಾಯಿಯೊಂದಿಗೆ ಮಾತನಾಡಿದ್ದು, ಸಮಾಧಾನ ಮಾಡಿದ್ದು ಈ ಎಲ್ಲಾ ಅಂಶಗಳಿಂದ, ಯಾರೋ ಆ ಭಾಗದ ಸಹೃದಯ ಹಿರಿಯರು, ಕುವೆಂಪು ಅವರಿಗಿಂತ ವಯಸ್ಸಿನಲ್ಲಿ ಬಹುದೊಡ್ಡವರು ಎಂಬ ಭಾವನೆ ನನ್ನಲ್ಲಿ ನೆಲೆನಿಂತಿತ್ತು.

ನಾನು ನನ್ನ ಬ್ಲಾಗಿನಲ್ಲಿ ಕುವೆಂಪು ಅವರ ಕೆಲವು ಕವಿತೆಗಳ ಸಂದರ್ಭದ ಸ್ವಾರಸ್ಯವನ್ನು ಕುರಿತು ಬರೆಯುತ್ತಿದ್ದಾಗ, ಮೊದಲೇ ಪರಿಚಯವಾಗಿದ್ದ ಶ್ರೀ ವಿ.ಎಂ. ಕುಮಾರಸ್ವಾಮಿಯವರು, ಒಂದು ದಿನ ಪೋನ್ ಮಾಡಿ, ಅಲಿಗೆ ಪುಟ್ಟಯ್ಯನಾಯಕರ ಬಗ್ಗೆ, ಕುವೆಂಪು ಅವರ ಅಜ್ಜಿಯ (ಶೇಷಮ್ಮ) ತವರುಮನೆಯ ಬಗ್ಗೆ, ಕುವೆಂಪು ಮತ್ತು ಪುಟ್ಟಯ್ಯನಾಯಕರ ಸಂಬಂಧದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಅವರ ಬಗ್ಗೆ ಗೊತ್ತಿರುವ ವಿಷಯಗಳನ್ನು ಬರೆದು ಕೊಡುವಂತೆ ಕೇಳಿದರು. ನಾನೂ ಒಪ್ಪಿಕೊಂಡು, ಇಡೀ ನೆನಪಿನ ದೋಣಿಯಲ್ಲಿ ಕೃತಿಯನ್ನೂ ಹಾಗೂ ಗುರು ಅವರ ಎರಡು ಕೃತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಒಂದು ಲೇಖನವನ್ನು ಸಿದ್ಧಪಡಿಸಿ ಕೊಟ್ಟಿದ್ದೆ. ಆ ಸಂದರ್ಭದಲ್ಲಿ ಪುಟ್ಟಯ್ಯನಾಯಕರು ಕುವೆಂಪು ಅವರಿಗಿಂತ ಕೇವಲ ಎಂಟು ವರ್ಷ ದೊಡ್ಡವರೆಂದೂ, ಸಂಬಂಧದಲ್ಲಿ ಅಣ್ಣನಾಗಬೇಕೆಂದು ನನಗೆ ತಿಳಿಯಿತು. ಅದಕ್ಕಿಂತ ಹೆಚ್ಚಾಗಿ ಶ್ರೀ ಪುಟ್ಟಯ್ಯನಾಯಕರ ಎತ್ತರ ಬಿತ್ತರಗಳು ನನ್ನಲ್ಲಿ ಬೆರಗು ಮೂಡಿಸಿದ್ದವು. ಎರಡು ಮೇರು ವ್ಯಕ್ತಿತ್ವಗಳ ನಡುವೆ ನಾನು ಮೂಕವಿಸ್ಮಿತನಾಗಿ ನಿಂತುಬಿಟ್ಟಿದ್ದೆ. ಒಬ್ಬರು ರಸಋಷಿ; ಇನ್ನ್ನೊಬ್ಬರು ರಸತಪಸ್ವಿ. ಒಬ್ಬರು ಕವಿ; ಇನ್ನೊಬ್ಬರು ಕವಿಮನದವರು ಹಾಗೂ ಕವಿಜನಪ್ರಿಯರು. ಒಬ್ಬರು ರೈತರು; ಇನ್ನೊಬ್ಬರು ರೈತರಿಗೂ ಉಸಿರನ್ನಿತ್ತವರು!
ನಾನು ಕಳುಹಿಸಿದ ಲೇಖನವನ್ನು ಓದಿದ ಕುಮಾರಸ್ವಾಮಿಯವರು, ಅಲಿಗೆ ಪುಟ್ಟಯ್ಯನಾಯಕರಂತಹ ಜನಸಮುದಾಯದ ನಾಯಕರ ಬಗ್ಗೆ ಒಂದೂ ಪುಸ್ತಕ ಬರದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ನೀನು ಕುವೆಂಪು ಸಾಹಿತ್ಯ ಬಗ್ಗೆ ಚೆನ್ನಾಗಿ ಓದಿಕೊಂಡಿದ್ದೀಯಾ ಎಂದು ನಿನ್ನ ಬರವಣಿಗೆಗಳಿಂದ ತಿಳಿಯುತ್ತಿದೆ. ಪುಟ್ಟಯ್ಯನಾಯಕರ ಬಗ್ಗೆ ಒಂದು ಪುಸ್ತಕವನ್ನು ನೀನೇಕೆ ಸಿದ್ಧಪಡಿಸಬಾರದು. ಅದಕ್ಕೆ ಬೇಕಾದ ಸಹಕಾರವನ್ನು ನಾನು ನೀಡುತ್ತೇನೆ ಎಂದು ಕೇಳಿದರು. ಮತ್ತೊಮ್ಮೆ ಕುವೆಂಪು ಪ್ರಪಂಚದಲ್ಲಿ ವಿಹರಿಸುವ ಸಂದರ್ಭವನ್ನು ನಾನು ಕಳೆದುಕೊಳ್ಳುತ್ತೇನೆಯೇ? ಸಂತೋಷವಾಗಿ ಒಪ್ಪಿದೆ. ಫೋನಿನಲ್ಲಿಯೇ ಪುಸ್ತಕ ಹೇಗಿರಬೇಕು ಎಂಬ ಒಂದು ಸ್ಥೂಲ ಕಲ್ಪನೆಗೆ ನಾವು ಬಂದಿದ್ದೆವು. ಒಂದರ ಹಿಂದೊಂದು ಬರುತ್ತಿದ್ದ ಈಮೇಲುಗಳಲ್ಲಿಯೂ ಮಾಹಿತಿ ವಿನಿಮಯ ಮಾಡಿಕೊಂಡೆವು. ನೀನು ಒಮ್ಮೆ ಅಲಿಗೆಗೆ ಹೋಗಿ ಬಾ ಎಂದು ಕುಮಾರಸ್ವಾಮಿ, ನನಗೆ ಅಲಿಗೆ ಮನೆಯವರ ಎಲ್ಲರ ಪರಿಚಯವನ್ನು ಪೋನಿನಲ್ಲಿಯೇ ಮಾಡಿಕೊಟ್ಟರು.
ಪೂರ್ಣಚಂದ್ರ ತೇಜಸ್ವಿಯವರ ನೆನಪಿನಲ್ಲಿ ೫.೪.೧೨ರಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದವನು ಅಲಿಗೆ ಮನೆಗೆ ನನ್ನ ಹೆಂಡತಿ ಮಗಳೊಂದಿಗೆ ಭೇಟಿಯಿತ್ತೆ. ಅಲ್ಲಿಯವರು ನನಗೆ ನೀಡಿದ ಸ್ವಾಗತ, ನಮ್ಮನ್ನು ಸತ್ಕರಿಸಿದ ರೀತಿ, ನೀಡಿದ ಮಾಹಿತಿಗಳು ನನ್ನನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿದ್ದವು. ನಾನು ಪುಟ್ಟಯ್ಯನಾಯಕರ ಹಾಗೂ ಅವರ ಕಾಲದ ಚಿತ್ರಣವನ್ನು ಬಿಂಬಗ್ರಾಹ್ಯವಾಗಿಸಿಕೊಳ್ಳತೊಡಗಿದ್ದೆ. ಮಾಹಿತಿ ನೀಡುವುದರಲ್ಲಿದ್ದ ಆತ್ಮೀಯತೆ ಕೃತಿಯಲ್ಲೂ ನಡೆಯುತ್ತಿತ್ತು. ಕೇವಲ ಐದಾರು ಗಂಟೆ ಕಳೆಯುವಷ್ಟರಲ್ಲಿ ನಾವೂ ಆ ಬೃಹತ್ ಮನೆತನದ ಭಾಗವಾಗಿದ್ದೇವೊ ಎಂಬ ಭಾವನೆ ನಮ್ಮನ್ನಾವರಿಸಿತ್ತು. ರಸತಪಸ್ವಿಯ ಚಿತ್ರಣ ಮನದಲ್ಲಿ ಮೂಡುತ್ತಿತ್ತು.
ಮುಂದೆ ಮೂರೇ ತಿಂಗಳಲ್ಲಿ ಕುಮಾರಸ್ವಾಮಿಯವರು ಭಾರತಕ್ಕೆ ಬಂದಾಗ, ಮತ್ತೆ ಅಲಿಗೆ ಮನೆಗೆ ಭೇಟಿ ಕೊಡುವ ಅವಕಾಶ ನನಗೆ ಸಿಕ್ಕಿತ್ತು. ಮೂರು ದಿನಗಳ ಕಾಲ ಕುಪ್ಪಳಿಯಲ್ಲಿ ಉಳಿದಕೊಂಡು, ಅಮ್ಮಡಿ, ದೇವಂಗಿ, ಹೊಸಕೇರಿ, ಅಲಿಗೆ, ಹಿರಿಕೊಡಿಗೆ ಮುಂತಾದ ಪ್ರದೇಶಗಳಲ್ಲಿ ಸುತ್ತಿ ಪುಟ್ಟಯ್ಯನಾಯಕರ ಕಾರ್ಯಕ್ಷೇತ್ರವನ್ನು ಪರಿಚಯ ಮಾಡಿಕೊಂಡೆವು. ಹಿರಿಯರಾದ ಶ್ರೀ ಅಮ್ಮಡಿ ಆರ್. ನಾಗಪ್ಪನಾಯಕರು ಶಿವಮೊಗ್ಗದಿಂದ ಬಂದು ನಮ್ಮ ಜೊತೆ ಸೇರಿದ್ದರಿಂದ, ಬಾಗಶಃ ನಾವು ಪುಟ್ಟಯ್ಯನಾಯಕರ ಪ್ರಪಂಚವನ್ನು ಪ್ರವೇಶಿಸಿದ್ದೆವು.
ಪುಟ್ಟಯ್ಯನಾಯಕರನ್ನು ಹತ್ತಿರದಿಂದ ಬಲ್ಲ, ಅವರೊಂದಿಗೆ ಒಡನಾಡಿದ ಹಲವಾರು ಮಂದಿಯನ್ನು ಸಂಪರ್ಕಿಸಿ, ಅವರಿಗೆ ಗೊತ್ತಿರುವ ಮಾಹಿತಿಯನ್ನು ಬರೆದುಕೊಡುವಂತೆ, ನೀಡುವಂತೆ ಕೇಳಿಕೊಳ್ಳಲಾಗಿತ್ತು. ನಾವು ಸಂಪರ್ಕಿಸಿದ ಎಲ್ಲರೂ ಸ್ಪಂದಿಸದಿದ್ದರೂ, ಪುಟ್ಟಯ್ಯನಾಯಕರ ಕುಟುಂಬದವರು, ಆತ್ಮೀಯರು, ಅವರ ಶಿಷ್ಯರು, ಅಭಿಮಾನಿಗಳು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಲ್ಲದೆ, ಲೇಖನಗಳನ್ನೂ ಬರೆದುಕೊಟ್ಟರು. ನಾಯಕರ ಮರಿಮೊಮ್ಮಗ ೧೩ ವರ್ಷದ ಮಂಚಲ್‌ನಿಂದ ಹಿಡಿದು, ಹಿರಿಯರಾದ ನಾಗಪ್ಪನಾಯಕ ಹಾಗೂ ಪುಟ್ಟಯ್ಯನಾಯಕರ ಶ್ರೀಮತಿ ರಾಜಮ್ಮ ಅವರುಗಳವರೆಗೆ ಎಲ್ಲರೂ ನೀಡಿದ ಸಹಕಾರದಿಂದ ಈ ಕೃತಿ ಸಿದ್ಧಗೊಂಡಿದೆ. ಕುಮಾರಸ್ವಾಮಿಯವರ ದೃಢನಿರ್ಧಾರ, ಅವರ ಕಾರ್ಯಚಾತುರ್ಯದಿಂದ ಇಂದು ಸಹೃದಯ ಓದುಗರ ಕೈ ಸೇರುತ್ತಿದೆ.

ನನ್ನನ್ನು ಚಿಂತೆಗೆ ಈಡುಮಾಡಿದ ವಿಷಯವೆಂದರೆ, ಒಂದು ಕಾಲದಲ್ಲಿ ಪುಟ್ಟಯ್ಯನಾಯಕರಿಂದ ಪುರಸ್ಕರಿಸಲ್ಪಟ್ಟವರು, ಅವರ ಪ್ರೀತಿಯ ಅತಿಥಿಸತ್ಕಾರವನ್ನು ಉಂಡವರು, ಅವರು ಬದುಕಿದ್ದಾಗ, ವಾರಗಟ್ಟಲೆ ಅಲಿಗೆಗೆ ಬಂದು ಉಳಿದು ಉಂಡು ತಿಂದು ಹೋದವರು, ತಮ್ಮ ಪುಸ್ತಕಗಳನ್ನು ಕಳುಹಿಸಿ ಅವರಿಂದ ಮೆಚ್ಚುಗೆ ಪತ್ರಗಳನ್ನು ಬರೆಯಿಸಿಕೊಂಡವರು, ಅದನ್ನು ಬೇರೆಯವರಿಗೆ ತೋರಿಸಿ ಬೀಗಿದವರು... ಇಂತಹ ಕೆಲವರು ಕೇವಲ ಬಾಯಿ ಮಾತಿನಲ್ಲಿ ಪುಟ್ಟಯ್ಯನಾಯಕರನ್ನು ನೆನಪು ಮಾಡಿಕೊಂಡರೂ, ಅವರ ಬಗ್ಗೆ, ಅವರ ಜೊತೆಗಿನ ಒಡನಾಟದ ಬಗ್ಗೆ ಬರೆದುಕೊಡದೇ ಹೋದದ್ದು! ಅದೂ ಕೆಲವರು ದೊಡ್ಡ ದೊಡ್ಡ ಬರಹಗಾರರೆನ್ನಿಸಿಕೊಂಡವರೂ ಕೂಡಾ! ಅದೇನೇ ಇರಲಿ, ಪುಟ್ಟಯ್ಯನಾಯಕರಂತಹ ಶಾಂತಜೀವಿಯ ಸ್ಮರಣೆಯೇ ನಮ್ಮ ಬದುಕಿಗೆ ಒಂದು ನವಚೈತನ್ಯವನ್ನು ನೀಡಬಲ್ಲುದು ಎಂಬುದು ನನ್ನ ಅನುಭವ. ನಾಯಕರಿಂದ ಉಪಕೃತರಾದವರೇ ಅಂತಹ ಅವಕಾಶವನ್ನು ಕಳೆದುಕೊಂಡರಲ್ಲ ಎಂಬ ಬೇಸರವೂ ಆಗುತ್ತದೆ.
ಕುವೆಂಪು ಅವರೇ ಕರೆದಿರುವಂತೆ ನಾಯಕರು ಅಜ್ಞಾತ ಮಹಾಪುರುಷ. ಅವರು ಬದುಕು, ಆದರ್ಶಗಳನ್ನು ಗಮನಿಸಿದರೆ ಅವರೊಬ್ಬ ನಿಷ್ಕಾಮ ಕರ್ಮಯೋಗಿ. ಅಂತಹ ಮಹಾವ್ಯಕ್ತಿಯ ಪ್ರಭಾವಲಯದಲ್ಲಿ ಸುತ್ತಿ, ಅವರ ಬದುಕು, ಆದರ್ಶ, ಧ್ಯೇಯಗಳನ್ನು ಅರಿಯುವ ತನ್ಮೂಲಕ ಅಲಿಗೆಯಂತಹ ಒಂದು ಸಾರ್ಥಕ ಮನೆತನದ ಇತಿಹಾಸದಬಗ್ಗೆ, ಪರಂಪರೆಯ ಬಗ್ಗೆ ಅನುಸಂಧಾನ ನಡೆಸುವ ಭಾಗ್ಯ ನನ್ನದಾಗಿದೆ.
ಈ ಕೆಲಸಕ್ಕೆ ಪುಟ್ಟಯ್ಯನಾಯಕರ ಕುಟುಂಬವರ್ಗದವರು ನೀಡಿದ ಸಹಕಾರ  ಅಪಾರವಾದದ್ದು. ಅದಕ್ಕಾಗಿ ಆ ಇಡೀ ಮನೆತನದ ಸರ್ವರಿಗೂ ಮೊದಲಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪ್ರತಿಯೊಬ್ಬರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ. ಅದನ್ನು ಎದುರು ನೋಡುವಂತಹ ಸಂಸ್ಕಾರವೂ ಆ ಕುಟುಂಬದವರಿಗಿಲ್ಲ ಎಂಬುದೇ ಅಲಿಗೆಯವರ ದೊಡ್ಡಸ್ತಿಕೆ. ಮೊದಲ ಭೇಟಿಯಲ್ಲೇ ಮಿತ್ರಗೌರವವನ್ನು ದಯಪಾಲಿಸಿ ತಮ್ಮ ಅತಿಥಿ ಸತ್ಕಾರದಲ್ಲಿ ನನ್ನ ಕುಟುಂಬವನ್ನು ಮುಳುಗಿಸಿದ ಹಿರಿಯರಾದ ಶ್ರೀ ಗಣಪಯ್ಯನಾಯಕರ ಕುಟುಂಬವರ್ಗ, ಹಲವಾರು ಮಾಹಿತಿಗಳನ್ನು ನೀಡಿದ ಶ್ರೀ ವಿಜಯರಾಘವ ಅವರ ಕುಟುಂಬವರ್ಗ, ಹಾಗೂ ಇಡೀ ಅಲಿಗೆ ಮನೆಯನ್ನೇ ನಮ್ಮ ಮುಂದೆ ತೆರೆದಿಟ್ಟಿದ್ದ ಶ್ರೀ ವಿವೇಕಾನಂದ ಮತ್ತು ಶ್ರೀ ವಿಷ್ಣುಮೂರ್ತಿ ಮತ್ತು ಅವರ ಮನೆಯವರನ್ನು ನಾನಿಲ್ಲಿ ನೆನೆಯಲೇಬೇಕಾಗಿದೆ. ಅಲಿಗೆಯ ಬಂಧುಗಳಾದ ಶ್ರೀಮತಿ ಹೆಚ್.ಬಿ. ಪ್ರಮೀಳಾ ಅವರು ತಾವು  ಬಾಲ್ಯದಲ್ಲಿ ಕಂಡಿದ್ದ ಅಜ್ಜಯ್ಯನ ನೆನಪನ್ನು ದಾಖಲಿಸಿದ್ದಾರೆ. ಅವರನ್ನಿಲ್ಲಿ ಗೌರವದಂದ ನೆನೆಯುತ್ತೇನೆ.
ಅಲಿಗೆ ಮನೆಯವರೊಂದಿಗೆ ಈ ಕೆಲಸದಲ್ಲಿ ಸಹಕರಿಸಿ, ಮಾಹಿತಿ ನೀಡಿ, ಲೇಖನವನ್ನು ಬರೆದುಕೊಟ್ಟ, ಅಮ್ಮಡಿ ಆರ್. ನಾಗಪ್ಪನಾಯಕ, ಕೋಣೆಗದ್ದೆ ಪದ್ಮನಾಭ ಶ್ರೀಮತಿ ಹೆಚ್.ಬಿ ಪ್ರಮೀಳಾ, ಹೆಚ್.ಸಿ.ದಯನಂದ, ಕಡಿದಾಳು ದಯಾನಂದ, ಕಾ.ಹಿ. ರಾಧಾಕೃಷ್ಣ ಅವರಿಗೆ ಕೃತಜ್ಞನಾಗಿದ್ದೇನೆ. ಅವರ ಲೇಖನಗಳು ಈ ಪುಸ್ತಕದ ಮಹತ್ವವನ್ನು ಹೆಚ್ಚಿಸಿವೆ. ಅವುಗಳನ್ನು ಓದುವುದೆಂದರೆ ಗತಕಾಲಕ್ಕೇ ಒಂದು ಪಯಣ ಮಾಡಿದಂತೆ. ಪುಟ್ಟಯ್ಯನಾಯಕರನ್ನು ಕಂಡಿರದ ನನ್ನಂತವರಿಗೆ ಅವರನ್ನು ತಂದು ಮುಂದೆ ನಿಲ್ಲಿಸಿದ್ದಾರೆ.
ಕುಪ್ಪಳಿಯಲ್ಲಿ ಸಿಕ್ಕಾಗ ಅಲಿಗೆ ಪುಟ್ಟಯ್ಯನಾಯಕರ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಲ್ಲದೆ, ಲೇಖನವನ್ನು ಬರೆದುಕೊಟ್ಟ ಹಿರಿಯರಾದ ಶ್ರೀ ಕಡಿದಾಳ ಶಾಮಣ್ಣ ಅವರ ಸೌಜನ್ಯಕ್ಕೆ ನಾನು ಆಭಾರಿಯಾಗಿದ್ದೇನೆ. ಪುಟ್ಟಯ್ಯನಾಯಕರು ತೇಜಸ್ವಿಯವರಿಗೆ ಬರೆದಿದ್ದ ಕಾಗದಗಳನ್ನು ಸ್ಕ್ಯಾನ್ ಮಾಡಿಸಿ ನೀಡಿದ್ದಲ್ಲದೆ, ತೇಜಸ್ವಿಯವರ ಮುಖಾಂತರ ತಾವು ಕಂಡಿದ್ದ ಪುಟ್ಟಯ್ಯನಾಯಕರ ಬಗ್ಗೆ ಪ್ರೀತಿಯಿಂದ ಬರೆದುಕೊಟ್ಟ ಶ್ರೀಮತಿ ರಾಜೇಶ್ವರಿಯವರಿಗೂ ಹಾಗೂ ನಾಯಕರು ಅವರ ಹೃದಯಸಾಮ್ರಾಟರಾಗಿದ್ದ ಕುವೆಂಪು ಅವರಿಗೆ ಬರೆದಿರುವ ಹಲವಾರು ಪತ್ರಗಳನ್ನು ಪರಿಶೀಲಿಸಿ, ಆಯ್ದ ಪತ್ರಗಳನ್ನು ನೀಡಿದ್ದಲ್ಲದೆ, ತಾವು ಬಾಲ್ಯದಲ್ಲಿ ಕಂಡಿದ್ದ ನಾಯಕರ ಬಗ್ಗೆ ಆಪ್ತವಾಗಿ ಬರೆದುಕೊಟ್ಟಿರುವ  ಶ್ರೀಮತಿ ತಾರಿಣಿ ಚಿದಾನಂದಗೌಡ ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ. ಕುವೆಂಪು ಮತು ತೇಜಸ್ವಿಯವರಿಗೆ ಬಂದಿರುವ ಎಲ್ಲಾ ಕಾಗದಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಅವುಗಳು ಮುಂದಿನ ತಲೆಮಾರಿಗೆ ಲಭ್ಯವಾಗುವಂತೆ ಮಾಡುತ್ತಿರುವ ತಾರಿಣಿ ಮತ್ತು ರಾಜೇಶ್ವರಿಯವರ ಪ್ರಯತ್ನಕ್ಕೆ ನಾವು ಋಣಿಯಾಗಿದ್ದೇವೆ.
ಶ್ರೀಯುತರೆಲ್ಲರೂ ನೀಡಿದ ಮಾಹಿತಿಗಳು, ಬರೆದುಕೊಟ್ಟ ಲೇಖನಗಳು ಮತ್ತು ಇನ್ನಿತರ ಲಭ್ಯ ಮಾಹಿತಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ಈ ಪುಸ್ತಕದ ಮೊದಲ ಭಾಗವನ್ನು ಸಿದ್ಧಪಡಿಸುವಲ್ಲಿ ನನಗೆ ನೆರವಾದವರು, ಹಿರಿಯರಾದ ಅಲಿಗೆ ವಿವೇಕಾನಂದ ಅವರು. ಪುಟ್ಟಯ್ಯನಾಯಕರ ಮಗನಾಗಿದ್ದರೂ, ಹೊರಗಿನ ವ್ಯಕ್ತಿಯಂತೆ, ವಸ್ತುನಿಷ್ಟವಾಗಿ ಯೋಚಿಸಿ, ದಾಖಲಿಸುವಲ್ಲಿ ಅವರು ಅಪಾರ ಶ್ರಮವಹಿಸಿದ್ದಾರೆ. ಅಲಿಗೆಯಿಂದ ಬೆಂಗಳೂರಿಗೆ ಬಂದು ಐದಾರು ದಿನಗಳ ಕಾಲ ನಮ್ಮೊಡನಿದ್ದು ಅಲಿಗೆ ಮನೆಯ ಇತಿಹಾಸ, ಸಂಸ್ಕೃತಿ, ಆಗಿ ಹೋದ ಮಹನೀಯರುಗಳು, ಪುಟ್ಟಯ್ಯನಾಯಕರ ಒಡನಾಡಿಗಳು, ಘಟನೆಗಳು ಇವುಗಳ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಹಲವನ್ನು ಬರೆದೂ ಕೊಟ್ಟಿದ್ದಾರೆ. ಆ ಬರವಣಿಗೆಯ ಡಿ.ಟಿ.ಪಿ.ಯಾಗುತ್ತಿದ್ದ ಹಾಗಯೇ ಅದರ ಕರಡಚ್ಚು ತಿದ್ದುವಲ್ಲಿಯೂ ಶ್ರೀಯುತರ ಪರಿಶ್ರಮವಿದೆ. ಅದಕ್ಕಾಗಿ ಅವರಿಗೆ ನಾನು ಆಭಾರಿಯಾಗಿದ್ದೇನೆ. ನಮಗಾಗಿ, ನಮಗೆ ಬೇಕೆಂದಲ್ಲಿಗೆ ಅವರನ್ನು ಬೆಂಗಳೂರಿನಲ್ಲಿ ಕರೆದುಕೊಂಡು ಬರುತ್ತಿದ್ದ ಹೆ.ಚ್.ಸಿ ದಯಾನಂದ ಅವರ ಶ್ರಮವನ್ನು ಪ್ರೀತಿಯಿಂದ ನೆನೆಯುತ್ತೇನೆ.
ಎಲ್ಲರ ಅಹಕಾರದಿಂದ, ಸಿಕ್ಕಿದ ಮಾಹಿತಿಗಳು ಮತ್ತು ಲಭ್ಯ ಆಕರಗಳಿಂದ ಸ್ಥೂಲವಾಗಿ ಅಲಿಗೆ ಮನೆಯ ಇತಿಹಾಸ, ಸಾಂಸ್ಕೃತಿಕ ಮಹತ್ವ,, ಪುಟ್ಟಯ್ಯನಾಕರ ತಂದೆಯ ಸಾಧನೆಗಳು, ಪುಟ್ಟಯ್ಯನಾಯಕರ ಬದುಕು, ಧ್ಯೇಯ, ಆದರ್ಶ, ವ್ಯಕ್ತಿತ್ವ ಮೊದಲಾದವನ್ನು ಮೊದಲಭಾಗದಲ್ಲಿ ಕಟ್ಟಿಕೊಡಲು ಯತ್ನಿಸಲಾಗಿದೆ. ನಂತರ ಪುಟ್ಟಯ್ಯನಾಯಕರ ಬಗ್ಗೆ ಬೇರೆಯವರು ಬರೆದ ಲೇಖನಗಳನ್ನು ಕೊಟ್ಟಿದೆ.
ಇಂತಹ ಮಹತ್ವದ ಕೆಲಸವನ್ನು ನನ್ನ ಮೇಲೆ ನಂಬಿಕೆಯಿಟ್ಟು  ನನಗೆ ವಹಿಸಿದ್ದಲ್ಲದೇ ಸ್ವತಃ ತಾವೂ ಸಕ್ರೀಯವಾಗಿ ನನ್ನೊಂದಿಗಿದ್ದ, ಹಿರಿಯರೂ ಅಭಿಮಾನಧನರೂ ಆದ ಶ್ರೀ ಕುಮಾರಸ್ವಾಮಿಯವರಿಗೆ ನಾನು ಆಭಾರಿಯಾಗಿದ್ದೇನೆ. ಅವರೊಂದಿಗೆ ಕುಪ್ಪಳಿ ಪ್ರವಾಸಕ್ಕೆ ಬಂದುದಲ್ಲದೆ, ಹಲವಾರು ಸಲಹೆಗಳನ್ನು ನೀಡಿ ಮಾರ್ಗದರ್ಶನ ಮಾಡಿದ ಡಾ. ಹ.ಕ.ರಾಜೇಗೌಡರಿಗೆ ಮತ್ತು ಮಾಹಿತಿ ಸಂಗ್ರಹಿಸುವಲ್ಲಿ ಹಾಗೂ ಛಾಯಾಚಿತ್ರಗಳನ್ನು ತೆಗೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದ ಶ್ರೀ ಟಿ. ಗೋವಿಂದರಾಜು ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ತಮ್ಮ ಸಂಗ್ರಹದಲ್ಲಿದ್ದ ಪೋಟೊವನ್ನು ಒದಗಿಸಿದ ಹಿರಿಯ ಜಾನಪದ ತಜ್ಞ ಕ.ರಾ.ಕೃ. ಅವರನ್ನಿಲ್ಲಿ ನೆನೆಯುತ್ತೇನೆ.
ಕೈಬರಹದಲ್ಲಿದ್ದ ಕೆಲವು ಲೇಖನಗಳನ್ನು ಡಿ.ಟಿ.ಪಿ. ಮಾಡಿ ಸಹಕರಿಸಿದ ನನ್ನ ಶ್ರೀಮತಿ ಶ್ವೇತಾ, ಕರಡಚ್ಚು ತಿದ್ದುವಲ್ಲಿ ಸಹಕರಿಸಿದ ಹಿರಿಯರಾದ ಶ್ರೀ ಜಿ.ಎಸ್.ಎಸ್.ರಾವ್ ಅವರಿಗೂ, ನನ್ನ ಈ ಕೆಲಸಕ್ಕೆ ಸಮಯಾನುಕೂಲ ಮಾಡಿಕೊಟ್ಟ ಮಗಳು ಈಕ್ಷಿತಾಳಿಗೂ, ನನ್ನ ಸುರಾನಾ ಕಾಲೇಜಿನ ಸರ್ವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಮಿತ್ರ ಸೃಷ್ಟಿ ನಾಗೇಶನಿಗೆ, ಮುಖಪುಟ ಕಲಾವಿದರಾದ ಸುಧಾಕರ ದರ್ಭೆ ಮತ್ತು ಸತ್ಯಶ್ರೀ ಪ್ರಿಂಟರ‍್ಸ್ ಎಲ್.ಲಿಂಗಪ್ಪನವರಿಗೆ ಹಾಗೂ ಸಹೃದಯ ಓದುಗರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

Friday, December 21, 2012

ಕುವೆಂಪು ಕಾವ್ಯ ಯಾನ & ಅಲಿಗೆ ಪುಟ್ಟಯ್ಯನಾಯಕ

ಕುವೆಂಪು ಕಾವ್ಯಯಾನ & ಅಲಿಗೆ ಪುಟ್ಟಯ್ಯನಾಯಕ

ಈ ಎರಡೂ ಪುಸ್ತಕಗಳು ಕುವೆಂಪು ಜನ್ಮದಿನ 29.12.2012ರಂದು ಕುಪ್ಪಳಿ ಕುವೆಂಪು ಶತಮಾನೋತ್ಸವ ಭವನದಲ್ಲಿ ಸಂಜೆ ಐದು ಗಂಟೆಗೆ ಬಿಡುಗಡೆಯಾಗಲಿವೆ.



Tuesday, December 18, 2012

ನಮ್ಮ ಗಣೇಶ ಮೇಷ್ಟ್ರು


ನಾಳೆ 19.12.2012 ಬುಧವಾರ ಸಂಜೆ 4.30 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಮ್ಮ ಮೇಷ್ಟ್ರು ಡಾ. ಕೈದಾಳ ರಾಮಸ್ವಾಮಿ ಗಣೇಶ ಅವರಿಗೆ ಅಭಿನಂದನಾ ಸಮಾರಂಭ ನಡೆಯುತ್ತಿದೆ. ಅವರಿಗೆ "ಕೈದಾಳ" ಎಂಬ ಅಭಿನಂದನಾ ಗ್ರಂಥವನ್ನು ಅವರ ವಿದ್ಯಾರ್ಥಿಗಳು, ಅಭಿಮಾನಿಗಳು ಮಿತ್ರರು ಸೇರಿ ಸಮರ್ಪಿಸಲಿದ್ದಾರೆ.
ಅವರ ಮತ್ತು ನನ್ನ ಗುರು-ಶಿಷ್ಯ ಸಂಬಂಧವನನ್ಉ ಕುರಿತಂತೆ ಈ ಬರಹ

೧೯೯೮ರಲ್ಲಿ ನಾನು ಉದ್ಯೋಗಾರ್ಥಿಯಾಗಿ ಬೆಂಗಳೂರಿಗೆ ಬಂದೆ. ಸಂಜೆ ವೇಳೆ ಕಳೆಯಲು, ಜೊತೆಗೆ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮಾಡುತ್ತಿದ್ದುದರಿಂದ ಉಪಯೋಗವಾಗಬಹುದೆಂದು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಶಾಸನಶಾಸ್ತ್ರ ಪ್ರವೇಶ ತರಗತಿಗೆ ಸೇರಿಕೊಂಡಿದ್ದೆ. ಮೊದಲ ವರ್ಷ ಕಳೆದು ಪ್ರೌಢ ತರಗತಿಗಳು ಆರಂಭವಾಗುವಷ್ಟರ ಹೊತ್ತಿಗೆ ನಾನು ಸಾಯಂಕಾಲದ ವೇಳೆ ಕರ್ತವ್ಯ ನಿರ್ವಹಿಸಬೇಕಾಗಿದ್ದರಿಂದ, ಆರಂಭದ ತರಗತಿಗಳಿಗೆ ಹೋಗಲಾಗಲೇ ಇಲ್ಲ. ಶಾಸನಶಾಸ್ತ್ರ ತರಗತಿಗಳಲ್ಲಿ ನಡೆಯುತ್ತಿದ್ದ ಕರ್ನಾಟಕ ಸಾಂಸ್ಕೃತಿಕ ಇತಿಹಾಸದ ಬಗೆಗಿನ ಚರ್ಚೆಗಳು ನನ್ನ ಆ ಕಡೆಗೆ ಎಳೆಯುತ್ತಲೇ ಇದ್ದವು. ಒಂದು ದಿನ ನನ್ನ ಸಹದ್ಯೋಗಿಯನ್ನು ಹೇಗೋ ಒಪ್ಪಿಸಿ ತರಗತಿಗೆ ನಡೆದೇ ಬಿಟ್ಟೆ. ಇನ್ನೂ ಮೆಟ್ಟಿಲು ಹತ್ತುತ್ತಿರುವಾಗಲೇ ಹಳಗನ್ನಡ ಪದ್ಯವೊಂದರ ಸಾಲುಗಳು ಕಿವಿಗಪ್ಪಳಿಸುತ್ತಿದ್ದವು. ಧ್ವನಿ ಹೊಸದಾಗಿತ್ತು ಅಂದರೆ ಪ್ರವೇಶ ತರಗತಿಗಳಲ್ಲಿ ಇದ್ದ ಮೇಷ್ಟ್ರು ಇವರಾಗಿರಲಿಲ್ಲ. ಮುಂದುವರೆದು ಬಾಗಿಲಲ್ಲಿ ನಿಂತಾಗ, ನಾನು ಒಳ ಬರಲೇ ಎಂದು ಕೇಳುವಷ್ಟರಲ್ಲಿ ಬನ್ನಿ ಬನ್ನಿ ಎಂದು ಕುಳಿತುಕೊಳ್ಳಲು ಜಾಗ ತೋರಿಸಿ ಮತ್ತೆ ಪಾಠ ಮಾಡುತ್ತಿದ್ದ ಪದ್ಯಗಳಲ್ಲಿ ಮುಳುಗಿದರು. ಪದ್ಯಗಳನ್ನು ಅವರು ಓದುತ್ತಿದ್ದ ರೀತಿಯೇ ನನ್ನನ್ನು ಮಂತ್ರಮುಗ್ಧನನ್ನಾಗಿಸಿತ್ತು. ಅತ್ಯಂತ ಸ್ಪಷ್ಟವಾಗಿ, ಪದ್ಯವನ್ನು ಓದಿ, ಬಿಡಿಸಿ ಓದಿ, ಅರ್ಥೈಸಿ, ಅನ್ವಯಿಸಿ ಅವರು ಅದ್ಭುತವಾಗಿ ಪಾಠ ಮಾಡುತ್ತಿದ್ದರು. ಒಂದು ಗಂಟೆಯ ಕಾಲ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನ ಹೆಸರು ಕೇಳಿ ಅಟೆಂಡೆನ್ಸ್ ರಿಜಿಸ್ಟರಿನಲ್ಲಿ ಹೆಸರು ಬರೆದುಕೊಂಡರು ಮೇಷ್ಟ್ರು.
ಸೊಗಸಾದ ಹಳಗನ್ನಡ ಪಾಠವನ್ನು ನಾನು ಮೊದಲ ಬಾರಿಗೆ ಕೇಳಿದ್ದೆ. ತರಗತಿಯ ನಂತರ, ಪಾಠ ಮಾಡಿದ ಮೇಷ್ಟ್ರು ಡಾ.ಕೆ.ಆರ್.ಗಣೇಶ ಅವರೆಂತಲೂ, ಅವರು ಮಾಡುತ್ತಿದ್ದುದು ಬೊಪ್ಪಣನ ಗೊಮ್ಮಟಸ್ತುತಿಯೆಂತಲೂ ನನಗೆ ತಿಳಿಯಿತು. ಹೀಗೆ ನನ್ನ ಮತ್ತು ಮೇಷ್ಟ್ರ ಮುಖಾಮುಖಿಯಾಯಿತು. ಅಂದಿನಿಂದ ನಾನು ಹಠ ಹಿಡಿದು ನನ್ನ ಕೆಲಸದ ಅವಧಿಯನ್ನು ಬದಲಾಯಿಸಿಕೊಂಡು ತರಗತಿಗಳಿಗೆ ಹಾಜರಾಗತೊಡಗಿದೆ. ಗಣೇಶ ಮೇಷ್ಟ್ರು ನಮ್ಮ ಮೇಷ್ಟ್ರು ಆಗಿದ್ದರು! ಪ್ರೌಢ ತರಗತಿಯಲ್ಲಿ ಮೇಷ್ಟ್ರ ಜೊತೆಯಲ್ಲಿ ಎರಡು ಬಾರಿ ಪ್ರವಾಸ ಹೋಗಿಬರುವ ಅವಕಾಶ ನನಗೆ ಲಭಿಸಿತು. ಒಮ್ಮೆ ಶ್ರವಣಬೆಳಗೊಳಕ್ಕೆ ಹೋಗಿಬಂದೆವು. ಎರಡನೆಯ ಬಾರಿ ಹತ್ತು ದಿನಗಳ ಭರ್ತಿ ಪ್ರವಾಸದಲ್ಲಿ ಅರಳಗುಪ್ಪೆ, ಅರಸೀಕೆರೆ, ಹೊಂಬುಚ್ಚ, ಕೋಟಿಪುರ, ಬನವಾಸಿ, ಹಾನಗಲ್ಲು, ಗದಗ, ಬದಾಮಿ, ಪಟಟ್ದಕಲ್ಲು, ಐಹೊಳೆ, ಮಹಾಕೂಟ ಎಲ್ಲವನ್ನೂ ಅಧ್ಯಯನದ ದೃಷ್ಟಿಯಿಂದ ನೋಡುವ ಅವಕಾಶ ನನ್ನದಾಯಿತು. ಆಗ ಗಣೇಶ ಮೇಷ್ಟ್ರ ನಿಜವಾದ ವಿದ್ವತ್ತು, ಅವರೊಳಗಿನ ಅತ್ಯಂತ ಯಶಸ್ವೀ ಶಿಕ್ಷಕ, ಅವರ ಪ್ರತಿಭೆ, ವಿಶಾಲವಾದ ಕಾರ್ಯಕ್ಷೇತ್ರ ಅನುಭವ ಎಲ್ಲವೂ ನನಗೆ ಮನದಟ್ಟಾಯಿತು.
ಬಾ.ರಾ. ಗೋಪಾಲ ಪ್ರಶಸ್ತಿ ಸಮಾರಂಭ

ಪ್ರೌಢ ತರಗತಿಗಳು ಮುಗಿಯುವಷ್ಟರಲ್ಲಿ, ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಹಸ್ತಪ್ರತಿ ತರಗತಿಗಳು ನಡೆಯುತ್ತವೆ ಎಂದು, ಅಲ್ಲಿಯೂ ಗಣೇಶ ಮೇಷ್ಟ್ರು ಪಾಠ ಮಾಡುತ್ತಾರೆಂದು ತಿಳಿದು, ಹೋಗಿ ಸೇರಿಕೊಂಡೆ. ಅಲ್ಲಿಯೂ ಅಷ್ಟೆ ಕನ್ನಡ ಕಾವ್ಯ ಛಂದಸ್ಸು ಪಾಠ ಕೇಳುವ ಸೌಭಾಗ್ಯ ಸಿಕ್ಕಿತು. ಹಸ್ತಪ್ರತಿ ತರಗತಿಗಳು ಮುಗಿಯುವಷ್ಟರಲ್ಲಿ, ಪ್ರತಿಷ್ಠಾನದಲ್ಲೇ ಸಿರಿಕಂಟ ಕಾವ್ಯಾಸಕ್ತರ ಕೂಟದ ರಚನೆಯಾಯಿತು. ನಾನು ಸಂಚಾಲಕನಾಗಿದ್ದೆ. ಸಿರಿಕಂಟದ ಆಶ್ರಯದಲ್ಲಿ ಹಳಗನ್ನಡ ಕಾವ್ಯಾಭ್ಯಾಸ ಶಿಭಿರಗಳನ್ನು ನಡೆಸುತ್ತಿದ್ದೆವು. ಗಣೇಶ ಮೇಷ್ಟ್ರ ಮಾರ್ಗದರ್ಶನ ಅದಕ್ಕಿತ್ತು. ಕನ್ನಡ ಸಾಹಿತ್ಯದ ಆಳಕ್ಕಿಳಿಯಲು ನನಗೆ ನೆರವಾಗಿದ್ದೇ ಆ ತರಗತಿಗಳು. ಆ ವರ್ಷವೂ ಮೇಷ್ಟ್ರ ಮಾರ್ಗದರ್ಶನದಲ್ಲಿ ಕರ್ನಾಟಕದ ಹಲವಾರು ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವದ ಸ್ಥಳಗಳನ್ನು ಸಂದರ್ಶಿಸುವ ಸೌಭಾಗ್ಯ ನನ್ನದಾಗಿತ್ತು.
ಆ ನಡುವೆ ನನ್ನ ಕನ್ನಡ ಎಂ.ಎ. ಮುಗಿದಿತ್ತು. ಕನ್ನಡ ಛಂದಸ್ಸಿಗೆ ನಾನು ಮಾಡಿಕೊಂಡಿದ್ದ ನೋಟ್ಸುಗಳನ್ನು ಸ್ವಲ್ಪ ವಿಸ್ತರಿಸಿ ಪುಸ್ತಕರೂಪಕ್ಕೆ ತಂದಿದ್ದೆ. ಅದನ್ನು ಪ್ರಕಟಿಸಲು ಸುಮುಖ ಪ್ರಕಾಶನದವರು ಮುಂದೆ ಬಂದಿದ್ದರು. ಆಗ ನಾನು ಅದನ್ನು ಮೇಷ್ಟ್ರ ಗಮನಕ್ಕೆ ತಂದೆ. ಅವರು ಅದನ್ನೊಮ್ಮೆ ಇಡಿಯಾಗಿ ಓದಿ, ತಿದ್ದಿ, ಚೊಕ್ಕದಾದ ಮುನ್ನುಡಿಯನ್ನೂ ಬರೆದು ನನ್ನನ್ನು ಆಶೀರ್ವದಿಸಿದ್ದರು. ಹಾಸನದಲ್ಲಿ ನನ್ನ ಮದುವೆ ನಡೆಯುವುದಿತ್ತು. ಅಷ್ಟು ದಊರ ಬರುತ್ತಾರೊ ಇಲ್ಲವೊ ಎಂಬ ಅನುಮಾನದಿಂದಲೇ ಮದುವೆ ಆಹ್ವಾನವಿತ್ತಿದ್ದೆ. ಆಶ್ಚರ್ಯವೆಂದರೆ, ಮದುವೆಯ ದಿನ ಬೆಳಿಗ್ಗೆ ಅವರು ನನ್ನೆದುರಿಗೆ ಪ್ರತ್ಯಕ್ಷಾವಾಗಿದ್ದರು. ನಾನಾಗ ಮದುವೆ ಗಂಡಿನ ವೇಷದಲ್ಲಿದ್ದು, ವಾದ್ಯದವರ ಹಿಂದೆ, ಬಂಧು-ಬಳಗದವರ ಸ್ನೇಹಿತರ ನಡುವೆ ನಡೆದುಕೊಂಡು ಛತ್ರ ಪ್ರವೇಶ ಮಾಡುವುದರಲ್ಲಿದ್ದೆ. ಮೇಷ್ಟ್ರನ್ನು ನೋಡಿ ನಾನು, ತಕ್ಷಣ ಎಲ್ಲದರಿಂದ ಬಿಡಿಸಿಕೊಂಡು ಒಬ್ಬರೇ ನಿಂತಿದ್ದ ಅವರನ್ನು ಮಾತನಾಡಿಸಲು ಓಡಿದೆ. ನಾನು ಹಾಗೆ ಓಡಿದ್ದನ್ನು ಕಂಡು ಅಲ್ಲಿದ್ದವರೆಲ್ಲಾ ಸ್ವಲ್ಪ ಗೊಂದಲಕ್ಕೀಡಾಗಿಬಿಟ್ಟಿದ್ದರು. ಅದು ಮೇಷ್ಟ್ರ ಗಮನಕ್ಕೂ ಬಂದಿತ್ತು. ತಕ್ಷಣ, ಅವರೇ ಮುಂದೆ ಬಂದು, ನೀವು ಹೋಗಿ, ಅವರ ಜೊತೆ ನಿಲ್ಲಿ. ನಾನು ಒಬ್ಬನೇ ಇದ್ದರೂ ನನಗೇನೂ ಯೋಚನೆಯಿಲ್ಲ. ಇನ್ನೇನು ಉಳಿದವರು ಬಂದುಬಿಡುತ್ತಾರೆ ಎಂದು ನನ್ನನ್ನು ಹಿಂದಕ್ಕೆ ಓಡಿಸಿಬಿಟ್ಟಿದ್ದರು!
ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಹತ್ತಿದ್ದ ಹಳಗನ್ನಡ ಕಾವ್ಯದ ರುಚಿಯನ್ನು ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ. ಆಗ ನಾನು ಹಿರಿಯರಾದ ಜಿ.ಎಸ್.ಎಸ್.ರಾವ್, ಸಂಧ್ಯಾ ಮೇಡಂ, ಮನೋಜ್ ಅವರನ್ನು ಸೇರಿಸಿಕೊಂಡು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ಮೇಷ್ಟ್ರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುವ ಕಾರ್ಯತಂತ್ರವನ್ನು ರೂಪಿಸಿದೆ. ಅದು ಮನೋಜ್ ಅವರ ಮನೆಯಲ್ಲಿ ಕಾರ್ಯಗತವಾಯಿತು. ನನ್ನ ಶ್ರೀಮತಿ ಶ್ವೇತಾ ಮತ್ತು ಮನೋಜ್ ಅವರ ಶ್ರೀಮತಿ ರಂಜಿತಾ ನಮ್ಮ ಗುಂಪಿಗೆ ಸೇರಿಕೊಂಡರು. ಐದು ತಿಂಗಳ ನನ್ನ ಮಗಳನ್ನು ನಡುವೆ ಮಲಗಿಸಿಕೊಂಡು ನಾವು ಸುತ್ತಲು ಕುಳಿತು ಕಾವ್ಯವನ್ನು ಓದಿ ನಮಗೆ ತೋಚಿದಂತೆ ಅರ್ಥೈಸುತ್ತಿದ್ದೆವು. ಮಾರ್ಗದರ್ಶಕರಾಗಿದ್ದ ಮೇಷ್ಟ್ರು ನಮ್ಮನ್ನು ತಿದ್ದುತ್ತಿದ್ದರು. ನಮ್ಮ ತಂಡದ ಯಾರೇ ತಪ್ಪು ಹೇಳಿದರೂ, ಅದನ್ನು ತಪ್ಪು ಎನ್ನದೆ, ಅದೂ ಒಂದು ರೀತಿಯಲ್ಲಿ ಸರಿ ಎಂದು ಹೇಳಿ, ನಂತರ ಅವರೇ ಅದನ್ನು ವಿವರಿಸುತ್ತಿದ್ದರು. ಅವರು ಕಾವ್ಯವನ್ನು ಓದುವ ರೀತಿ, ಪದವಿಭಾಗ, ಅನ್ವಯ, ಸ್ವಾರಸ್ಯ ಮೊದಲಾದವನ್ನು ನಿಧಾನವಾಗಿ ಕಲಿಸಿದರು. ಆದರೆ ಅವರು ಅದನ್ನು ನಮಗೆ ಕಲಿಸುತ್ತಿದ್ದೇನೆ ಎಂದು ಯಾವತ್ತೂ ಹೇಳಲಿಲ್ಲ. ನಮಗೂ ಹಾಗೆ ಅನ್ನಿಸಲಿಲ್ಲ. ಆದರೆ ನಮಗೆ ಆಶ್ಚೆರ್ಯವಾಗುವ ರೀತಿಯಲ್ಲಿ ನಾವು ಅದನ್ನು ಕಲಿಯುತ್ತಿದ್ದೆವು.
ರಾಮಾಯಣ ದರ್ಶನಂ ತರಗತಿಯಲ್ಲಿದ್ದ ನಾವು ಆರೂ ಜನರು ಮೇಷ್ಟ್ರ ಮಾರ್ಗದರ್ಶನದಲ್ಲಿ ಭುವನೇಶ್ವರ, ಪುರಿ, ಕೊನಾರ್ಕ್ ಮೊದಲಾದ ಕಡೆ ಒಂದು ಪ್ರವಾಸ ಮಾಡಿ ಬಂದೆವು. ತರಗತಿಗಳು ವಾರಕ್ಕೆ ಒಂದು ದಿನ ನಡೆಯುತ್ತಿದ್ದವು. ಅದರ ನಡುವೆ, ಹಿರಿಯರಾದ ಜಿ.ಎಸ್.ಎಸ್. ರಾವ್ ಅವರ ಆರೋಗ್ಯದಲ್ಲಿ ಏರುಪೇರಾದಾಗ, ಅವರು ಹುಷಾರಾದ ಮೇಲೆ ಅವರ ಮನೆಯಲ್ಲೇ ತರಗತಿಗಳು ನಡೆಯಲಾರಂಭಿಸಿದವು. ಸುಮಾರು ಮೂರೂವರೆ ವರ್ಷಗಳ ಕಾಲ, ವಾರಕ್ಕೆ ಒಂದು ದಿನ, ಒಂದು-ಒಂದೂವರೆ ಗಂಟೆಗಳ ಕಾಲ ನಮ್ಮ ಕಾವ್ಯಾಧ್ಯಯನ ನಡೆದೆ ಯಶಸ್ವಿಯಾಗಿ ಮುಗಿಯಿತು! ಎಷ್ಟೋ ದಿನಗಳು, ಅವರು ಬರುವಾಗಲೇ, ಬಿಸಿಬಿಸಿ ಬನ್ ಅಥವಾ ಪ್ಲೇನ್ ಕೇಕ್ ಅಥವಾ ಕಡ್ಲೆಬೀಜವನ್ನೂ ತರುತ್ತಿದ್ದರು. ಅದನ್ನು ನಮಗೆ ಕೊಟ್ಟು,ನಾವು ತಿಂದು ಮುಗಿಸಿದ ಮೇಲೆಯೇ ತರಗತಿಗಳು ಆರಂಭವಾಗುತ್ತಿದ್ದವು. ಆಗಾಗ ನನ್ನ ಮಗಳಿಗೆ ಚಾಕೊಲೇಟ್ ಸಹ ಇರುತ್ತಿತ್ತು. ಅದರ ನಡುವೆಯೇ ನನ್ನ ಶ್ರೀಮತಿ ಮುಕ್ತವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮಾಡುತ್ತಿದ್ದಳು. ಅದಕ್ಕೂ ಮೇಷ್ಟ್ರು ಆಗಾಗ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಕೆಲವೊಮ್ಮೆ ನಮ್ಮ ಮನೆಗೇ ಬಂದು ಕಾವ್ಯಮೀಮಾಂಸೆ, ಭಾಷಾಚರಿತ್ರೆ ಪಾಠ ಮಾಡಿ, ನನ್ನ ಮಗಳೊಂದಿಗೆ ಸ್ವಲ್ಪ ಹೊತ್ತು ಆಟವಾಡಿ ಹೋಗುತ್ತಿದ್ದರು. ಆದ್ದರಿಂದ ನನ್ನ ಮಗಳಿಗೆ ಅವರು ಮೇಷ್ಟ್ರುತಾತ ಆಗಿದ್ದರು.
ನನ್ನ ಪಿಹೆಚ್.ಡಿ. ಅಧ್ಯಯನ ಆರಂಭವಾದಾಗ ನಾನು ಅವರ ಸಲಹೆಗಳನ್ನು ಕೇಳುತ್ತಿದ್ದೆ. ನಾನು ಕೇಳುತ್ತಿದ್ದ ಎಲ್ಲ ಅನುಮಾನಗಳಿಗೆ ಉತ್ತರಿಸುತ್ತಿದ್ದರೂ, ತೀರ್ಮಾನಗಳನ್ನು ನನಗೆ ಬಿಡುತ್ತಿದ್ದರು. ನನ್ನ ಮಹಾಪ್ರಬಂಧ ಅಂತಿಮವಾಗುತ್ತಿದ್ದಾಗಲೇ, ನನ್ನ ಮನೆಯೂ ನಿರ್ಮಾಣವಾಗುತ್ತಿತ್ತು. ನನ್ನ ಬರವಣಿಗೆಯನ್ನು ಅವರಿಗೊಮ್ಮೆ ತೋರಿಸಿ ಅಭಿಪ್ರಾಯ ಪಡೆಯುತ್ತಿದ್ದೆ. ಮಹಾಪ್ರಬಂದವನ್ನು ತಿದ್ದುವಲ್ಲಿ ಅವರ ಸಹಕಾರವನ್ನು ವರ್ಣಿಸಲಸಾಧ್ಯ. ಸ್ವತಃ ಅವರೇ ನನ್ನ ಕೇಲೇಜಿನ ಬಳಿ ಬಂದು, ನನ್ನ ಗ್ರಂಥಾಲಯಲದಲಿ ಕುಳಿತು, ಪ್ರೂಫ್ ನೋಡಿಕೊಡುತ್ತಿದ್ದರು. ಪ್ರೂಫ್ ನೋಡುವಾಗಲೇ ಅವರಿಗಾದ ಸಂದೇಹಗಳನ್ನು ಒಂದು ಹಾಳೆಯಲ್ಲಿ ಬರೆದು, ಇವುಗಳ ಕಡೆಗೆ ಗಮನ ಹರಿಸಿ ಎಂದು ನನಗೆ ಕೊಡುತ್ತಿದ್ದರು. ಅವರ ಸಂಗ್ರಹದ ಹಲವಾರು ಅಪರೂಪದ ಪುಸ್ತಕಗಳನ್ನು ನನಗೆ ತಂದುಕೊಟ್ಟು, ನಾನು ಗ್ರಂಥಾಲಯಗಳಿಗೆ ಅಲೆಯುವ ಶ್ರಮವನ್ನೂ ತಪ್ಪಿಸಿದ್ದರು. ಅವರ ಶಿಶ್ಯವಾತ್ಸಲ್ಯದಿಂದ ನಾನು ನನ್ನ ಪಿಹೆಚ್.ಡಿ. ಅಧ್ಯಯನವನ್ನು ಯಶಸ್ವಿಯಾಗಿ ಮುಗಿಸಿದೆ. ಅದು ಮುಂದೆ ಪುಸ್ತಕ ರೂಪದಲ್ಲಿ ಪ್ರಕಟವಾದಾಗ, ನನ್ನ ಇನ್ನೊಬ್ಬ ಮೇಷ್ಟ್ರೂ, ಮಾರ್ಗದರ್ಶಕರೂ ಆದ ಡಾ. ದೇವರಕೊಂಡಾರೆಡ್ಡಿ ಮತ್ತು ಡಾ. ಕೆ.ಆರ್. ಗಣೇಶ ಅವರಿಗೆ ಗೌರವಪೂರ್ವಕವಾಗಿ ಅರ್ಪಣೆ ಮಾಡಿದ್ದೆ.
ರಾಮಾಯಣದರ್ಶನಂ ಮುಗಿದ ಮೇಲೆ ಪಂಪಭಾರತವನ್ನು ನಮ್ಮ ತಂಡ ಅಧ್ಯಯನಕ್ಕೆ ಆರಿಸಿಕೊಂಡತು. ಗಣೇಶ ಮೇಷ್ಟ್ರು ಪಂಪನ, ಹಾಗೂ ಅವನ ಕಾವ್ಯದ ಗುಣಾವಗುಣಗಳನ್ನೆಲ್ಲಾ ಸರ್ವ ಆಯಾಮಗಳಿಂದ ನಮಗೆ ಬಿಡಿಸಿಟ್ಟಿದ್ದರು.  ಅಧ್ಯಯನದಲ್ಲಿ ಅವರ ಶ್ರದ್ಧೆ, ಶಿಷ್ಯಂದಿರಾದ ನಮಗೇ ನಾಚಿಕೆ ಮೂಡಿಸುವಂತಿತ್ತು! ಇಡೀ ಪಂಪಭಾರತದ ಪುಸ್ತಕವನ್ನು ಬಿಚ್ಚಿ. ಪ್ರತಿ ಹಾಳೆಯ ನಡುವೆ ಒಂದು ಬಿಳಿ ಹಾಳೆಯನ್ನು ಇಟ್ಟು ಮತ್ತೆ ಬೈಂಡ್ ಮಾಡಿಸಿದ್ದರು. ಹಲವಾರು ಹಳಗನ್ನಡದ ಕಾವ್ಯಗಳನ್ನು ಅವರು ಅದೇ ರೀತಿ ರೀ-ಬೈಂಡ್ ಮಾಡಿಸಿ ಇಟ್ಟುಕೊಂಡಿದ್ದರು. ಪ್ರತಿ ಪದ್ಯವನ್ನು ಓದಿ, ಅರ್ಥೈಸಿ, ಅನ್ವಯಿಸಿರುತ್ತಿದ್ದರು. ತಮ್ಮ ಅನುಮಾನಗಳನ್ನು ಬಿಳಿ ಹಾಳೆಯಲ್ಲಿ ಬರೆದಿರುತ್ತಿದ್ದರು. ಛಂದಸ್ಸು, ಅಲಂಕಾರ, ವಿಶೇಷ ಯಾವುದನ್ನೂ ಅವರು ನಿರ್ಲಕ್ಷ್ಯ ಮಾಡುತ್ತಿರಲಿಲ್ಲ. ನಿಜವಾಗಿಯೂ ಹಳಗನ್ನಡದ ಅಧ್ಯಯನಕ್ಕೆ ಒಂದು ಮಾದರಿ ಎಂದರೆ ಅದು ನಮ್ಮ ಮೇಷ್ಟ್ರು ಮಾತ್ರ. ಪಂಪಭಾರತ ಮುಗಿಯುತ್ತಿದ್ದಂತೆ, ಅವರೇ ಹರಿಶ್ಚಂದ್ರಕಾವ್ಯವನ್ನು ಸೂಚಿಸಿ ಅಧ್ಯಯನವನ್ನು ಮುಂದುವರೆಸೆವಂತೆ ನಮ್ಮನ್ನು ಪ್ರೇರೇಪಿಸಿದ್ದಾರೆ.
ಹಳಗನ್ನಡ ಸಾಹಿತ್ಯ, ಶಾಸನ ಸಾಹಿತ್ಯ ಇವೆಲ್ಲದರ ನಡುವೆಯೂ ಅವರು ಹಲವಾರು ಕ್ಷೇತ್ರಗಳಲ್ಲಿ ಆಸಕ್ತರು. ತಮ್ಮ ಹಳೆಯ ಸ್ಕೂಟರುಗಳನ್ನು ರಿಪೇರಿ ಮಾಡುವುದರಲ್ಲಿ, ಅವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿ ಅವರ ನೈಪುಣ್ಯತೆ ಅಗಾಧವಾದದ್ದು. ಅವರ ಕಂಪ್ಯೂಟರ್ ಜ್ಞಾನವನ್ನು ನೋಡಿ ನಮ್ಮ ಕನ್ನಡ ಮೇಷ್ಟ್ರುಗಳು ಕಲಿಯಬೇಕು. ಅತ್ಯಂತ ವೇಗವಾಗಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಟೈಪ್ ಮಾಡುವ ಚಾಕಚಕ್ಯತೆಯೂ ಅವರಿಗಿದೆ. ಅವರ ಕೈಬರಹವೂ ಅಷ್ಟೆ, ತಪ್ಪಿಲ್ಲದ ಸ್ಪಷ್ಟ ಬರವಣಿಗೆ. ಸಾವಿರಾರು ಜನರ ಹಸ್ತಪ್ರತಿಗಳ ನಡುವೆಯೂ ನಾನು ಅವರ ಕೈಬರಹದ ಹಸ್ತಪ್ರತಿಯನ್ನು ಸುಲಭವಾಗಿ ಗುರುತಿಸಬಲ್ಲೆ. ಅವರೇ ಸಿದ್ಧ ಪಡಿಸಿದ ಹಲವಾರು ನೋಟ್ಸುಗಳನ್ನು ಅವರೇ ಕ್ಸೆರಾಕ್ಸ್ ಮಾಡಿಸಿ ನಮಗೆ ಓದಲು ಕೊಟ್ಟಿದ್ದಾರೆ. ಅವರು ಸಿದ್ಧಪಡಿಸಿರುವ ಶಾಸನಗಳ, ಕಾಲೇಜಿನ ಪಠ್ಯಭಾಗಗಳ, ಕಾವ್ಯಭಾಗಗಳ ನೋಟ್ಸುಗಳನ್ನು ಹೇಗಿವೆಯೋ ಹಾಗೇ ಮುದ್ರಿಸಿದರೂ ಅತ್ಯುತ್ತಮ ಪುಸ್ತಕಗಳಾಗುತ್ತವೆ.
ಮೇಷ್ಟ್ರಿಗೆ ಹಳೆಯ ಹಿಂದಿ ಚಲನಚಿತ್ರಗೀತೆಗಳೆಂದರೆ ಇಷ್ಟ. ಹಲವಾರು ಸಿನಿಮಾದ ಸಿ.ಡಿ.ಗಳನ್ನು ಸಂಗ್ರಹಸಿದ್ದಾರೆ. ಹಲವಾರು ಯುದ್ಧ ಸರಣಿಯ ಇಂಗ್ಲಿಷ್ ಸಿನಿಮಾಗಳನ್ನು ನಾನು ಅವರಿಂದ ಸಿ.ಡಿ. ಪಡೆದು ನೋಡಿದ್ದೇನೆ. ಯಾವಾಗಲೂ ರೇಡಿಯೋ ಒಂದನ್ನು ಜೊತೆಯಲ್ಲಿರಿಸಿಕೊಂಡು, ತಮಗೆ ಬೇಕೆನ್ನಿಸಿದಾಗ, ಯಾವುದೋ ಸ್ಟೇಷನ್ನಿಗೆ ಟ್ಯೂನ್ ಮಾಡಿ, ಶಾಸ್ತ್ರೀಯ ಸಂಗೀತವನ್ನೊ, ಹಳೆಯ ಗೀತೆಗಳನ್ನು ಕೇಳುತ್ತ ಅವರು ದಿವ್ಯಾನಂದವನ್ನು ಅನುಭವಿಸಬಲ್ಲರು. ಕ್ರಿಕೆಟ್ ಬಗ್ಗೆಯೂ ಅಷ್ಟೆ! ಅದರಲ್ಲೂ ಟೆಸ್ಟ್ ಕ್ರಿಕೆಟ್ ಎಂದರೆ ಅವರಿಗೆ ಅಚ್ಚುಮೆಚ್ಚು. ಜೊತೆಗೆ, ಲೆಕ್ಕ ಪತ್ರಗಳನ್ನು ಇಡುವುದರಲ್ಲಿ, ಅವುಗಳನ್ನು ಆಡಿಟ್ ಮಾಡುವುದರಲ್ಲಿ ಅವರಿಗೆ ವಿಶೇಷ ಆಸಕ್ತಿಯಿದೆ. ಹಲವಾರು ಸಣ್ಣಪುಟ್ಟ ಸಂಘಸಂಸ್ಥೆಗಳಿಗೆ ಉಚಿತವಾಗಿ ಆಡಿಟ್ ಮಾಡಿಕೊಡುವ ಅವರ ಹವ್ಯಾಸ ಗಮನಾರ್ಹ.
ತಾನಾಯ್ತು, ತನ್ನ ಕೆಲಸವಾಯ್ತು. ತನ್ನಿಂದಂತೂ ಯಾರಿಗೂ ತೊಂದರೆಯಿಲ್ಲ. ಎಂದು ಅವರು ಬಾಯಿಬಿಟ್ಟು ಹೇಳದಿದ್ದರೂ, ಅದರಂತೆಯೇ ಬದುಕುತ್ತಿರುವವರು. ಅವರ ಪ್ರತಿಫಲಾಪೇಕ್ಷೆಯಿಲ್ಲದ ಕರ್ತವ್ಯಶೀಲತೆ, ವೃತ್ತಿಯ ಬಗೆಗಿನ ಗೌರವ, ಕ್ರಿಯಾಶೀಲ ಬದುಕು ಸದಾ ಅನುಕರಣೀಯ.