Wednesday, July 09, 2014

ಪ್ರಶಸ್ತಿ OK; ಹಣ AK???

ಬಹುಶಃ ಬೇರಾವ ರಾಜ್ಯದಲ್ಲೂ, ಅಷ್ಟೇ ಏಕೆ? ವಿಶ್ವದ ಯಾವ ರಾಷ್ಟ್ರದಲ್ಲೂ ಇಲ್ಲದಷ್ಟು, ಕರ್ನಾಟಕ ಸರ್ಕಾರ ಕೃಪಾಪೋಷಿತ ಅಕಾಡೆಮಿಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಅಕಾಡೆಮಿಗೂ ಒಬ್ಬೊಬ್ಬ ಅಧ್ಯಕ್ಷ, ಪ್ರತಿಯೊಂದಕ್ಕೂ ಹತ್ತಕ್ಕೂ ಹೆಚ್ಚು ಮಂದಿ ಸದಸ್ಯರು, ಅವರ ಗೌರವ ವೇತನ, ಸಾರಿಗೆ, ಊಟೋಪಚಾರ ಇತ್ಯಾದಿ ಖರ್ಚುಗಳು, ಪ್ರತಿ ಅಕಾಡೆಮಿಗೂ ಒಂದೊಂದು ಸರ್ಕಾರಿ ಕಚೇರಿ, ಅದಕ್ಕೊಬ್ಬ ರಿಜಿಸ್ಟ್ರಾರ್ ಮಟ್ಟದ ಅಧಿಕಾರಿ ಇತರೆ ಸಿಬ್ಬಂಧಿ ವರ್ಗ ಇವುಗಳಿಗಾಗಿಯೇ ಕೋಟ್ಯಂತರ ರುಪಾಯಿಗಳು ಖರ್ಚಾಗುತ್ತಿವೆ. ಜೊತೆಗೆ ಪ್ರತಿಯೊಂದು ಅಕಾಡೆಮಿಯು ಪುಸ್ತಕಗಳನ್ನು ಪ್ರಕಟಿಸುತ್ತದೆ, ಪ್ರಶಸ್ತಿಗಳನ್ನು ನೀಡುತ್ತದೆ. ಇದರ ಖರ್ಚಂತೂ ಕೋಟಿ ದಾಟುತ್ತದೆ. ಅಕಾಡೆಮಿಗಳಿಂದ ಹೊರತಾಗಿ ಸರ್ಕಾರ ನೇರವಾಗಿ ಹಲವಾರು ಪ್ರಶಸ್ತಿಗಳನ್ನು ನೀಡುತ್ತದೆ. ಪಂಪ, ಬಸವ, ಪುರಂದರ... ಇತ್ಯಾದಿ. ಇದರ ಮೇಲೆ  ಪ್ರತಿ ವರ್ಷ ನೂರಾರು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತದೆ. ಇತ್ತೀಚಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ತಲಾ ಒಂದು ಲಕ್ಷ, ಹಾಗೂ 20 ಗ್ರಾಂ ಚಿನ್ನದ ಪದಕ ನೀಡುತ್ತಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದರ ಲೆಕ್ಕಾಚಾರವಂತೂ ಕೋಟಿಗಳನ್ನೇ ಮೀರುತ್ತದೆ. ಇನ್ನು ಚಲನಚಿತ್ರ ಕ್ಷೇತ್ರದ ರಾಜ್ಯ ಮಟ್ಟದ ಪ್ರಶಸ್ತಿಗಳನ್ನೂ ಸೇರಿಸಿಕೊಳ್ಳಬೇಕು. ಯಾರದೊ ತೆವಲಿಗೆ ತೆಗೆದ ಕೆಟ್ಟ ಚಿತ್ರಗಳಿಗೂ, ಅದು ಸ್ವಮೇಕ್, ಕನ್ನಡದ್ದು ಎಂಬ ಏಕೈಕ ಕಾರಣಕ್ಕಾಗಿ ಲಕ್ಷಾಂತರ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ಒಟ್ಟಾರೆ, ಪ್ರತಿ ವರ್ಷ ಸುಮಾರು ಹತ್ತು-ಹದಿನೈದು ಕೋಟಿಗಳಗಿಂತ ಹೆಚ್ಚು ಹಣ ಈ ಪ್ರಶಸ್ತಿಗಳ ಕಾರಣದಿಂದ ಖರ್ಚಾಗುತ್ತಿದೆ. ಪ್ರಶಸ್ತಿ ವಿತರಣಾ ಸಮಾರಂಭಗಳಿಗೆ ಆಗುವ ಖರ್ಚುಗಳನ್ನಂತೂ ಕೇಳುವಂತೆಯೇ ಇಲ್ಲ. ಐದು ನಿಂಬೆ ಹಣ್ಣುಗಳಿಗೆ ಇನ್ನೂರು ರುಪಾಯಿ ಬಿಲ್ ಮಾಡಿದ್ದ ಭೂಪನನ್ನು ಕೇಳಿದರೆ, ಟ್ಯಾಕ್ಸಿ ಖರ್ಚು ಸೇರಿದೆ ಎಂದಿದ್ದನಂತೆ! ಅಕಾಡೆಮಿಗಳ ಅಧ್ಯಕ್ಷ ಪದವಿಗೆ, ಸದಸ್ಯತ್ವಕ್ಕೆ, ಪ್ರಶಸ್ತಿಗಳಿಗೆ ನಡೆಸುವ ಲಾಬಿಗಳು, ಸ್ವಜನಪಕ್ಷಪಾತ ಇವೆಲ್ಲಾ ಸಾಮಾನ್ಯ ಜನತೆಗೆ ಸಾಂಸ್ಕೃತಿಕ ಲೋಕದ ಬಗ್ಗೆ ಹಲವಾರು ಅನುಮಾನಗಳನ್ನು ಹುಟ್ಟುಹಾಕುತ್ತಿವೆ. ಅಕಾಡೆಮಿಗಳ ಖರ್ಚು ವೆಚ್ಚ, ಅದರಿಂದ ಆಗುತ್ತಿರುವ ಉಪಯೋಗ ಏನು ಎಂಬುದರ ಬಗ್ಗೆ ಇದುವರೆಗೂ ಗಂಭಿರವಾಗಿ ಸರ್ಕಾರವಾಗಲಿ, ಸಾಂಸ್ಕೃತಿಕ ಲೋಕವಾಗಲಿ ಅವಲೋಕನ ನಡೆಸಿಯೇ ಇಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಸಾರ್ವಜನಿಕ ತೆರಿಗೆ ಹಣವನ್ನು ಬಹಿರಂಗವಾಗಿಯೇ ಮಜಾ ಉಡಾಯಿಸಲಾಗುತ್ತಿದೆ. ಯಾರಿಗೂ ಯಾರೂ ಲೆಕ್ಕ ಕೇಳಬೇಕಾಗಿಲ್ಲ; ಕೊಡಬೇಕಾಗಿಲ್ಲ! ಹಣ ಕೊಡುವ ಸರ್ಕಾರವೇ ಲೆಕ್ಕ ಕೇಳುತ್ತದೆಯೊ ಇಲ್ಲವೊ ಗೊತ್ತಿಲ್ಲ. ಇದೊಂದು ಉತ್ತರದಾಯಿತ್ವವಿಲ್ಲದ ವ್ಯವಸ್ಥೆಯಂತೆ, ಸಂಚಿನಂತೆ ಶ್ರೀಸಾಮಾನ್ಯನಿಗೆ ಕಂಡರೆ ಆಶ್ಚರ್ಯವೇನಿಲ್ಲ.
ಹೋಗಲಿ ಒಂದು ಪಕ್ಷ, ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಗಾಗಿ, ಅದರ ಮುಂದುವರಿಕೆಗಾಗಿ ಇಷ್ಟೊಂದು ಪ್ರಶಸ್ತಿಗಳು ಬೇಕೇ ಬೇಕು ಎಂದಿಟ್ಟುಕೊಳ್ಳೋಣ. ಅವುಗಳ ಸಂಖ್ಯೆಗಾದರೂ ಒಂದು ಮಿತಿ ಇರಬಾರದೆ? ಕಾಸಿಗೊಂದು ಕೊಸರಿಗೊಂದು ಪ್ರಶಸ್ತಿ ಇರುವುದರಿಂದಲೇ, ಅವುಗಳಿಗೆ ಗೌರವವೇ ಇಲ್ಲದಂತಾಗಿದೆ. ಕನಿಷ್ಠ ಪಕ್ಷ ಅವುಗಳ ಸಂಖ್ಯೆ ಕಡಿಮೆಯಿದ್ದರೆ, ಆಗಲಾದರೂ ಅವುಗಳನ್ನು ಪಡೆದುಕೊಂಡವರಿಗೂ ಒಂದಿಷ್ಟು ಗೌರವವಿರುತ್ತದೆಯೇನೊ?
ಇನ್ನು, ಪ್ರಶಸ್ತಿಯೆ ಜೊತೆಯಲ್ಲಿ ಹಣ, ಚಿನ್ನದ ಪದಕ ಇವೆಲ್ಲಾ ಬೇಕೆ? ಎಂಬ ಪ್ರಶ್ನೆ. ಈ ಪ್ರಶಸ್ತಿಗಳ ಹಿಂದೆ ಇಷ್ಟೊಂದು ಹಣವಿರುವುದರಿಂದಲೇ ಅವುಗಳಿಗೆ ಲಾಬಿ ಮಾಡುವವರೂ ಜಾಸ್ತಿಯಾಗಿದ್ದಾರೆ! ಪ್ರದೇಶಿಕವಾರು, ಜಾತಿವಾರು ಪ್ರಶಸ್ತಿಗಳು ಹಂಚಿಕೆಯಾಗುತ್ತಿವೆ. ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆಯುವುದೇ ನಮ್ಮ ಸಾಂಸ್ಕೃತಿಕ ಅವನತಿಯನ್ನು ತೋರಿಸುತ್ತದೆಯಾದರೂ, ಅದನ್ನು ಗಮನಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ಅರ್ಜಿ ಹಿಡಿದು ಮಂತ್ರಿ ಮಹೋದಯರ ಹಿಂದೆ ತಿರುಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಆತ್ಮಾವನತಿಯನ್ನು ತಪ್ಪಿಸಲಾದರೂ, ಹಣ ನೀಡುವುದು ಬೇಡ. ಪ್ರಶಸ್ತಿಗಳನ್ನು ನೀಡಲಿ. ಸ್ಮರಣ ಫಲಕಗಳನ್ನು ಬೇಕಾದರೆ ನೀಡಲಿ. ಹಣ ಕೊಡಲೇ ಬೇಕೆಂದರೆ, ಅದನ್ನು ಪ್ರಶಸ್ತಿ ಪುರಸ್ಕೃತರ ಹೆಸರಿನಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳ, ನಿರ್ಗತಿಕ ರೋಗಿಗಳ ಕ್ಷೇಮಕ್ಕಾಗಿ ಬಳಸಿಕೊಳ್ಳಬಹುದಲ್ಲವೆ. ಹಣದ ಅಗತ್ಯವಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ಓದಿಗಾಗಿ ಖರ್ಚು ಮಾಡಬಹುದಲ್ಲವೆ? ಕೆಲವೊಂದು ಪ್ರಶಸ್ತಿಗಳ ಜೊತೆಯಲ್ಲಿ ನೀಡುವ ಹಣದಲ್ಲಿ ಒಂದೊಂದು ಶಾಲಾ ಕಟ್ಟಡವನ್ನೇ ನಿರ್ಮಾಣ ಮಾಡಬಹುದು. ಆ ಶಾಲೆಗೆ ಪುರಸ್ಕೃತರ ಹೆಸರನ್ನೇ ಇಟ್ಟರೆ ಅವರನ್ನೂ ಗೌರವಿಸಿದಂತಾಗುತ್ತದೆಯಲ್ಲವೆ? ಪ್ರತಿವರ್ಷ ನೀಡುವ ರಾಜ್ಯೋತ್ಸವ ಪ್ರಶಸ್ತಿಯ ಜೊತೆಯಲ್ಲಿ ನೀಡುವ ಚಿನ್ನ-ಹಣದಲ್ಲಿ ದೊಡ್ಡ ದೊಡ್ಡ ಶಾಲೆ- ಆಸ್ಪತ್ರೆ ಕಟ್ಟಡಗಳನ್ನೇ ಕಟ್ಟಬಹುದು. ಅವುಗಳಿಗೆ ಇಂತಹ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರುಸ್ಕೃತರ ಸ್ಮಾರಕ ಕಟ್ಟಡ ಎಂದು ಬರೆಸಲಿ. ಪುರಸ್ಕೃತರ ಹೆಸರನ್ನು ಬೇಕಾದರೆ ಅಮೃತಶಿಲೆಯಲ್ಲೇ ಕೆತ್ತಿಸಲಿ! ತೀರಾ ಇತ್ತೀಚಿನ ಉದಾಹರಣೆ ನೋಡಿ. ಕೆಂಪೇಗೌಡ ದಿನಾಚರಣೆ ನೆಪದಲ್ಲಿ ಬಿ.ಬಿ.ಎಂ.ಪಿ.ಯು ಪ್ರತಿವರ್ಷ ಕೆಲವರಿಗೆ ಪ್ರಶಸ್ತಿ ನೀಡುತ್ತದೆ. ಈ ವರ್ಷ ಸುಮಾರು 136 ಜನರಿಗೆ ತಲಾ 12000 ಹಣವನ್ನು ಪ್ರಶಸ್ತಿ ಫಲಕದ ಜೊತೆಯಲ್ಲಿ ನೀಡುತ್ತಿದೆ. ಇದು ಸುಮಾರು 16 ಲಕ್ಷ ರೂಪಾಯಿಗಳಾಗುತ್ತದೆ. ಇತರೆ ಖರ್ಚೆಲ್ಲಾ ಸೇರಿ ಸುಮಾರು 20 ಲಕ್ಷಗಳಾಗಬಹುದು.  (ಕೊನೆಗಳಿಗೆಯಲ್ಲಿ 185ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ಕೊಡಲಾಯಿತಂತೆ! ಅಂದರೆ ಇನ್ನೂ ಹತ್ತು ಲಕ್ಷ ಹೆಚ್ಚು ಹಣ!) ಬಿ.ಬಿ.ಎಂ.ಪಿ. ಈಗಿರುವ ತನ್ನ ಹಣಕಾಸಿನ ಪರಿಸ್ಥಿತಿಯಲ್ಲಿ ಇಷ್ಟೊಂದು ಹಣವನ್ನು ಖರ್ಚು ಮಾಡುವುದು ಎಷ್ಟು ಸರಿ? ಬಿ.ಬಿ.ಎಂ.ಪಿ.ಯ ಆಶ್ರಯದಲ್ಲಿರುವ ಶಾಲಾ ಕಟ್ಟಡಗಳನ್ನು ನೋಡಿದರೆ, ಕಿತ್ತು ಹೋಗಿರುವ ರಸ್ತೆಗಳನ್ನು ನೋಡಿದರೆ, ಕಸದ ಸಮಸ್ಯೆಯನ್ನು ನೋಡಿದರೆ ಇಷ್ಟೊಂದು ಹಣ ಖರ್ಚು ಮಾಡುವುದು ಖಂಡಿತಾ ಸರಿಯಲ್ಲ. ಆದರೆ ಬಿಬಿಎಂಪಿ ಎಂಬ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
ಸರಾಸರಿ, ಪ್ರತಿ ವರ್ಷ ಪ್ರಶಸ್ತಿಗಾಗಿ ಖರ್ಚು ಮಾಡುವ ಹಣದಲ್ಲಿ ನೂರು ಶಾಲಾ ಕಟ್ಟಡಗಳನ್ನು ನಿರ್ಮಿಸಬಹುದು. ಕನಿಷ್ಠ ಹತ್ತು ವರ್ಷಗಳ ಕಾಲ ಈ ಪ್ರಶಸ್ತಿಗಳ ಜೊತೆ ಹಣ ನೀಡುವುದನ್ನು ನಿಲ್ಲಿಸಿದರೆ ಒಂದು ಸಾವಿರ ಶಾಲೆಗಳನ್ನು ನಿರ್ಮಾಣ ಮಾಡಬಹುದು! ಒಳ್ಳೆಯ ಶಾಲೆ, ಒಳ್ಳೆಯ ವಾತಾವರಣ ಕಲ್ಪಿಸಿಕೊಟ್ಟರೆ, ಒಳ್ಳೆಯ ವಿದ್ಯಾಭ್ಯಾಸ ಒದಗಿಸಿದರೆ ಮಕ್ಕಳಿಗೆ ಸಂಸ್ಕೃತಿಯ ಅರಿವು ತಾನಾಗೆ ಮೂಡುತ್ತದೆ.

ಪ್ರಶಸ್ತಿಗಳ ಹಿಂದೆ ಹಣವಿಲ್ಲ ಎಂದಾದಲ್ಲಿ ಲಾಬಿ ಮಾಡುವವರೂ ಕಡಿಮೆಯಾಗುತ್ತಾರೆ. ಅದರಿಂದ ಸಾಂಸ್ಕೃತಿಕ ಲೋಕದ ಘನತೆಯಾದರೂ ಉಳಿಯುತ್ತದೆ.ಅಷ್ಟಕ್ಕೂ ಪ್ರಶಸ್ತಿಗಳ ಹಣದಲ್ಲೇ ಬದುಕು ಸಾಗಿಸಬೇಕಾದ ಅನಿವಾರ್ಯತೆ ಎಷ್ಟು ಜನಕ್ಕೆ ಇರುತ್ತದೆ? ಅಂತಹವರ ಕಷ್ಟಕಾಲದಲ್ಲಿ ಸರ್ಕಾರ ನೇರವಾಗಿ ನೆರವು ನೀಡಬಹುದು. ಅಂತಹವರಿಗಾಗಿಯೇ, ಪ್ರಶಸ್ತಿಯ ಹಣದ ಒಂದು ಭಾಗದಲ್ಲಿ ಸಾಮೂಹಿಕ ವಿಮೆ ಮಾಡಿಸಬಹುದು. ಹೀಗೆ ಪ್ರಶಸ್ತಿ ಪುರಸ್ಕೃತರಿಗೆ ಯಾವುದೇ ಹಣ ನೀಡದೆ, ಆ ಹಣದಿಂದಲೇ ಅವರನ್ನೆಲ್ಲಾ ಸಾಮೂಹಿಕ ವಿಮೆಗೆ ಒಳಪಡಿಸಿದರೆ, ಸರ್ಕಾರ ಹಣ ಕೊಡುವುದು, ಅದರಿಂದ ವಿವಾದಗಳಾಗುವುದು ತಪ್ಪುತ್ತದೆ. ಪ್ರಶಸ್ತಿ ಪುರಸ್ಕೃತರನ್ನು ಯಶಸ್ವಿನೀ, ಸಂಧ್ಯಾ-ಸುರಕ್ಷಾ, ವಸತಿ, ಆ-ಭಾಗ್ಯ, ಈ-ಭಾಗ್ಯ ಮೊದಲಾದ ಯೋಜನೆಗಳಡಿ ತರಬಹುದು. ಈ ನಿಟ್ಟಿನಲ್ಲಿ, ವಿಸ್ತೃತವಾದ ಸಾರ್ವಜನಿಕ ಚರ್ಚೆ ನಡೆಸಿ, ಸರ್ಕಾರವೇಕೆ ಒಂದು ಸಮಗ್ರ ಸಾಂಸ್ಕೃತಿಕ ಯೋಜನೆ ರೂಪಿಸಬಾರದು? ಈ ನಿಟ್ಟಿನಲ್ಲಿ ಮಾದ್ಯಮಗಳು ಮನಸ್ಸು ಮಾಡಿದರೆ ಒಂದು ಜನಾಂದೋಲನವನ್ನೇ ರೂಪಿಸಬಹುದು. ಆದರೆ ಮಾದ್ಯಮಕ್ಕೂ ಒಂದು ಅಕಾಡೆಮಿ ಮಾಡುವ ಮೂಲಕ, ಸರ್ಕಾರಿ ಪ್ರಶಸ್ತಿ ನೀಡುವ ಮೂಲಕ ಆ ಕ್ಷೇತ್ರವನ್ನೂ ಮಲಿನಗೊಳಿಸಿಬಿಟ್ಟಿದೆ ಅನ್ನಿಸುತ್ತಿದೆ.
ಹಿಂದೆ ರಾಜ್ಯ ಪ್ರತಿಯೊಂದು ಆಗು ಹೋಗುಗಳಿಗೂ ರಾಜನೇ ಹೊಣೆಯಾಗಿರುತ್ತಿದ್ದ. ಆತ ಸಾಹಿತಿ ಕಲಾವಿದರನ್ನೂ ಪೋಷಿಸುತ್ತಿದ್ದ. ಆದರೆ ಈಗ ಇರುವುದು ರಾಜಾಡಳಿತವಲ್ಲ; ಪ್ರಜಾಪ್ರಭುತ್ವ. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ, ತನಗೆ ಬೇಕಾದವರಿಗೆ ಪ್ರಶಸ್ತಿ-ಹಣ  ನೀಡುತ್ತಾ ಸಾರ್ವಜನಿಕ ತೆರಿಗೆ ಹಣವನ್ನು ಪೋಲು ಮಾಡುವುದು ಎಷ್ಟು ಸರಿ? ವಿಧಾನಸಭೆಯಲ್ಲಿಯೇ ಒಬ್ಬ ಮಂತ್ರಿ ನಮ್ಮನ್ನು ಗೆಲ್ಲಸಿದವರಿಗೆ ಹೆಚ್ಚು ಕೊಟ್ಟರೆ ತಪ್ಪೇನು? ಎಂದು ಪ್ರಶ್ನಿಸುತ್ತಾರೆ! ಜನರೇ ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟಾಗ ಅದಕ್ಕೊಂದು ಬೆಲೆ. ಪ್ರಜಾ ಸರ್ಕಾರದಲ್ಲಿ ಪ್ರಶಸ್ತಿ ನೀಡಬೇಕಾದವರು ಪ್ರಜಗಳೇ ಹೊರತು, ರಾಗದ್ವೇಷಗಳಿಂದ, ಜಾತಿಮೋಹದಿಂದ, ಪಕ್ಷಪಾತದಿಂದ ಕೂಡಿದ ಅಧಿಕಾರಸ್ಥರಲ್ಲ!
ನಿಜವಾಗಿಯೂ ನೇರವಾಗಿ ಜನರು, ಸಾರ್ವಜನಿಕ ಸಂಘ-ಸಂಸ್ಥೆಗಳು ನೀಡುವ ಪ್ರಶಸ್ತಿಗಳೇ ಸಧ್ಯದ ಮಟ್ಟಿಗೆ ಅತ್ಯಂತ ಶ್ರೇಷ್ಠವೆನ್ನಬಹುದು. ಏಕೆಂದರೆ ಅಲ್ಲಿ ದುಡ್ಡು ಕಡಿಮೆ ಇರುತ್ತದೆ. ಕೆಲವು ಪ್ರಸಸ್ತಿಗಳಿಗೆ ದುಡ್ಡೇ ಇರುವುದಿಲ್ಲ. ಲಾಬಿ ಇರುವುದಿಲ್ಲ. ಜನರೇ ಒಬ್ಬ ಸಾಧಕನನ್ನು ಗುರುತಿಸಿ ನೀಡುವುದರಿಂದ ಅದು ಮೌಲಿಕವೂ ಆಗಿರುತ್ತದೆ.
ಕೊನೆಗೂ ಈ ಜಗತ್ತಿನಲ್ಲಿ, ಆತ್ಮಗೌರವವನ್ನು ಅಡವಿಟ್ಟು ಉಳಿಸಿಕೊಳ್ಳಬೇಕಾದ ಹಾಗೂ ಪಡೆದುಕೊಳ್ಳಬೇಕಾದ ವಸ್ತು ಯಾವುದಾದರೂ ಇದೆಯೆ ಎಂದರೆ ಇಲ್ಲ ಎಂಬುದೇ ಉತ್ತರ!