Monday, December 29, 2014

ಸಪ್ತರ್ಷಿ ಅಯ್ಯರ್ ಮತ್ತು ವಿದ್ಯಾರ್ಥಿ ಕವಿ

ಆವೊತ್ತು ನಮಗಿದ್ದುದ್ದು ಇಂಗ್ಲಿಷ್ ಪೀರಿಯಡ್. ಇಂಗ್ಲಿಷ್ ಪಾಠ ಹೇಳುವ ಅಧ್ಯಾಪಕರು ರಜಾ ತೆಗೆದುಕೊಂಡಿದ್ದರು. ಆದರೆ ಆಗ ಮಹಾರಾಜಾ ಹೈಸ್ಕೂಲಿಗೆ ಹೆಡ್‌ಮಾಸ್ಟರ್ ಆಗಿದ್ದ ಆರ್.ವಿ. ಕೃಷ್ಣಸ್ವಾಮಿ ಅಯ್ಯರ್ ಅವರು ಬಹಳ ನಿಷ್ಠುರ ನಿಷ್ಠಾವಂತರಾಗಿದ್ದುದರಿಂದ ಅಧ್ಯಾಪಕರು ರಜಾ ತೆಗೆದುಕೊಂಡು ಬರಲಾಗದಿದ್ದರೂ ವಿದ್ಯಾರ್ಥಿಗಳಿಗೆ ಪೀರಿಯಡ್ ನಷ್ಟವಾಗಬಾರದೆಂದು ಬೇರೆ ಯಾರಾದರೂ ಅಧ್ಯಾಪಕರು ಆ ಕರ್ತವ್ಯಕ್ಕೆ ನಿಯಮಿತರಾಗಿರುತ್ತಿದ್ದರು. ಪಾಠ ಇಂಗ್ಲಿಷ್ ಪೀರಿಯಡ್ ಆಗಿದ್ದರೂ ಗಣಿತದ ಅಧ್ಯಾಪಕರಾದರೂ ಚಿಂತೆಯಿಲ್ಲ, ಆ ಪೀರಿಯಡ್ಡನ್ನು ತೆಗೆದುಕೊಳ್ಳಲೇಬೇಕಾಗಿತ್ತು! ನಾವು ಇಂಗ್ಲಿಷ್ ಅಧ್ಯಾಪಕರಿಗಾಗಿ ಕಾಯುತ್ತಾ ಕುಳಿತಿದ್ದೆವು, ಮೊದಲನೆಯ ಪೀರಿಯಡ್ಡಿನಲ್ಲಿ. ಸಾಮಾನ್ಯವಾಗಿ ಮೊದಲನೆಯ ಪೀರಿಯಡ್ಡುಗಳೆಲ್ಲ ರಾಜಭಾಷೆಯಾದ ಇಂಗ್ಲಿಷಿಗೇ ಮೀಸಲಾಗಿರುತ್ತಿತ್ತು. ಕನ್ನಡಕ್ಕೆ ಕೊನೆಕೊನೆಯ ಗಂಟೆಗಳು, ಕನ್ನಡ ಕಾಟಾಚಾರ ಮಾತ್ರದ ವಿಷಯವಾಗಿದ್ದುದರಿಂದ.
ಅಧ್ಯಾಪಕರೇನೊ ಸ್ವಲ್ಪ ತಡವಾಗಿಯಾದರೂ ಬಂದರು. ನೋಡುತ್ತೇವೆ: ಇಂಗ್ಲಿಷ್ ಅಧ್ಯಾಕರಲ್ಲ, ಗಣಿತದ - ಅದರಲ್ಲಿಯೂ ’ಆಲ್ಜೀಬ್ರ’ದ (ಬೀಜಗಣಿತದ) ಅಧ್ಯಾಪಕರು, ಸಪ್ತರ್ಷಿ! ಅವರೂ ಅಯ್ಯರೆ; ಆದರೆ ನಾವು ಅವರನ್ನು ’ಸಪ್ತರ್ಷಿ’ ಎಂದೆ ಕರೆಯುತ್ತಿದ್ದುದು.
ಸಪ್ತರ್ಷಿಯವರು ತುಂಬ ಸಾತ್ವಿಕ ವ್ಯಕ್ತಿ, ಮಹಾ ಸಾಧು, ಇತರ ಅಧ್ಯಾಪಕರನ್ನು ಕಂಡರೆ ನಮಗಾಗುತ್ತಿದ್ದ ಭಯಭಾವನೆ ಅವರ ಮುಂದೆ ಉಂಟಾಗುತ್ತಿರಲಿಲ್ಲ. ಅವರು ತುಸು ಸ್ಥೂಲಕಾಯದ ಜಬಲುಜಬಲು ವ್ಯಕ್ತಿ. ಅವರ ಉಡುಪೂ ಇತರರಂತೆ ’ಟ್ರಿಮ್’ ಆಗಿರುತ್ತಿರಲಿಲ್ಲ. ಅಂಚಿಲ್ಲದ ಒಂದು ಬಿಳಿ ರುಮಾಲು ಸುತ್ತಿರುತ್ತಿದ್ದರು. ಅದೂ ಖಾದಿಯದೇ ಇರಬೇಕು. ಒಂದು ಖಾದಿಬಟ್ಟೆಯ ಬಿಳಿಕೋಟು; ಅಂಥಾದ್ದೆ ಬಿಳಿ ಪಂಚೆ ಕಚ್ಚೆ ಹಾಕಿರುತ್ತಿದ್ದರು. ವಯಸ್ಸು ಐವತ್ತರ ಆಚೆ ಈಚೆ ಇರಬಹುದು. ನಡೆ, ನುಡಿ, ಚಲನ ವಲನ, ದನಿ ಎಲ್ಲದರಲ್ಲಿಯೂ ಅತ್ಯಂತ ಸಾವಧಾನದ ಭಂಗಿ. ಕೆಲವರು ಅವರಿಗೆ ಹಿಂದೊಮ್ಮೆ ತಲೆ ಕೆಟ್ಟಿತ್ತೆಂದು ಗುಸುಗುಸು ಮಾತಾಡಿಕೊಳ್ಳುತ್ತಿದ್ದರು. ಕೆಲವರು ಅವರಿಗೆ ’ಈಗಲೂ ಅಷ್ಟಕಷ್ಟೆ!’ ಎಂದೂ ಸೂಚಿಸುತ್ತಿದ್ದರು. ಅದಕ್ಕೆಲ್ಲ ಕಾರಣ ಅವರ ಆಧ್ಯಾತ್ಮಿಕ ಧ್ಯಾನಶೀಲತೆ ಎಂದೇ ನನ್ನ ಭಾವನೆ. ಅವರು ಸಿಟ್ಟುಗೊಂಡದ್ದನ್ನಾಗಲಿ ಮುಖ ಸಿಂಡರಿಸಿದ್ದನ್ನಾಗಲಿ ನಾನು ಕಂಡಿರಲಿಲ್ಲ. ಯಾವಾಗಲೂ ಮುಗುಳು ನಗುಮೊಗದಿಂದಲೆ ಮಾತಾಡುತ್ತಿದ್ದರು. ಪಾಠ ಹೇಳುವಾಗಲೂ! ಅವರು ತೆಗೆದುಕೊಳ್ಳುತ್ತದ್ದುದ್ದು, ಬೀಜಗಣಿತ. ನನಗೇನು ಅಂತಹ ಹೃದಯಪ್ರಿಯ ವಿಷಯವಾಗಿರಲಿಲ್ಲ ಅದು. ಆದರೂ ಅವರ ಪೀರಿಯಡ್ಡಿನ್ನು ಸಂತೋಷದಿಂದ ಎದುರುನೋಡುತ್ತಿದ್ದರು ವಿದ್ಯಾರ್ಥಿಗಳು. ಬೀಜಗಣಿತದಂತಹ ಅಪ್ರಿಯ ವಿಷಯವೂ ಪ್ರಿಯವಾಗುತ್ತಿತ್ತು ಸಪ್ತರ್ಷಿಷಗಳು ಬೋಧಿಸಿದಾಗ.
ಅವರು ’ಆಲ್ಜೀಬ್ರ’ ಪಾಠಕ್ಕೇ ಶುರುಮಾಡುತ್ತಾರೆ ಎಂದು ಭಾವಿಸಿದ್ದ ನಮಗೆ ಅಚ್ಚರಿಯಾಯಿತು ’ The Nature of Poetry’ (’ಕಾವ್ಯ ಸ್ವರೂಪ’ ಅಥವಾ ಕವಿತೆ ಎಂದರೇನು?) ಎಂಬ ವಿಷಯದ ಮೇಲೆ ಪ್ರಬಂಧ ಬರೆಯಿರಿ ಎಂದು ಅವರು ಹೇಳಿದಾಗ. ಪ್ರಬಂಧವನ್ನು ಇಂಗ್ಲಿಷಿನಲ್ಲಿಯೆ ಬರೆಯಬೇಕೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿರಲಿಲ್ಲ. ಆಗ ಕನ್ನಡ ಇಂಗ್ಲಿಷಿನ ಸಿಂಹಾಸನದ ಕೆಳಗೆ ಕಾಲೊರಸಾಗಿತ್ತಷ್ಟೆ! ಆ ಭಾಷೆಯಲ್ಲಿ ಪ್ರಬಂಧ ಬರೆಯಿಸಿಕೊಳ್ಳುವಷ್ಟು ಗೌರವ ಅದಕ್ಕೆಲ್ಲಿಂದ ಬರಬೇಕು, ಆ ವರ್ನಾಕ್ಯುಲರ್‌ಗೆ, ಅಂದರೆ, ಗುಲಾಂಭಾಷೆಗೆ?
ವಿದ್ಯಾರ್ಥಿಗಳಲ್ಲಿ ಪ್ರಬಂಧ ಬರೆಯುವಂತೆ ಎಲ್ಲರೂ ನಟಿಸುತ್ತಿದ್ದರು. ಆದರೆ ಕೆಲವರೇ ಮಾತ್ರ ನಿಜವಾಗಿಯೂ ಬರೆಯಲು ಪ್ರಯತ್ನಿಸುತ್ತಿದ್ದವರು: ಅನೇಕರಿಗೆ ವಿಷಯವೇ ಅಗಮ್ಯವಾಗಿತ್ತು! ಅಂತೂ ತಮ್ಮ ಕೈಸೇರಿದ ಕೆಲವನ್ನು ಸಪ್ತರ್ಷಿಗಳು ವೇದಿಕೆಯ ಮೇಲಿದ್ದ ಮೇಜಿನ ಹಿಂದಿದ್ದ ಕುರ್ಚಿಯ ಮೇಲೆ ಕುಳಿತು ಪರಿಶೀಲಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆ ಎದ್ದು ನಿಂತರು. ಮುಖದ ಮೇಲೆ ಏನೊ ಆನಂದದ ಮಂದಹಾಸ. ಉತ್ಸಾಹದ ಧ್ವನಿಯಲ್ಲಿ ತರಗತಿಯನ್ನು ಸಂಬೋಧಿಸಿ ’ಮಿತ್ರರೆ, ವಿದ್ಯಾರ್ಥಿಗಳು ಬರೆದಿರುವ ಪ್ರಬಂಧಗಳಲ್ಲಿ ಒಂದನ್ನು ಮಾದರಿಯಾಗಿ ನಿಮಗೆ ಓದುತ್ತೇನೆ. ಕಿವಿಗೊಟ್ಟು ಆಲಿಸಿ’ ಎಂದು ಹೇಳಿ ಭಾವಪೂರ್ಣವಾಗಿ ಓದಲುತೊಡಗಿದರು. ನೋಡುತ್ತೇನೆ: ಅದು ನಾನು ಬರೆದದ್ದೆ: From joy we come, in joy we live, towards joy we move, and into joy we merge in end? -so sings the sage of the upanishads ಎಂದು ಪ್ರಾರಂಭಿಸಿದ್ದೆ ಆ ನನ್ನ ಪ್ರಬಂಧವನ್ನು.
ಸಪ್ತರ್ಷಿಗಳು ಇಡೀ ಪ್ರಬಂಧವನ್ನು ಗಂಭೀರವಾಗಿ ಪೂರ್ತಿಯಾಗಿ ಓದಿದರು. ಅವರ ಮುಖಭಂಗಿಯಲ್ಲಿ ತಾವು ಮಾಡುತ್ತಿರುವ ಕಾರ್ಯದ ಪವಿತ್ರತೆಯ ಅರಿವಿನಿಂದ ಮೂಡಿದುದೋ ಎಂಬಂತಹ ಗಾಂಭೀರ್ಯವಿತ್ತು. ಅವರ ಧ್ವನಿಯಲ್ಲಿ ಗೌರವ ಭಾವನೆ ಕಡಲಾಡುತ್ತಿತ್ತು. ಅವರ ಚೇತನವೆಲ್ಲ ಏನೊ ಒಂದು ಧನ್ಯತೆಯನ್ನು ಅನುಭಾವಿಸುವಂತಿತ್ತು. ಕ್ಲಾಸಿಗೆ ಕ್ಲಾಸೇ, ವಿಷಯದ ಅರಿವಾಗಲಿ ಬಿಡಲಿ, ಸೂಜಿಬಿದ್ದರೂ ಸದ್ದಾಗುವಂತಹ ನಿಃಶಬ್ದತೆಯಿಂದ ಕಿವಿನಿಮಿರಿ ಆಲಿಸಿತ್ತು. ಓದು ಪೂರೈಸಲು ಕೊಟಡಿಯೆ ಸಂತೃಪ್ತಿಯಿಂದೆಂಬಂತೆ ಸುಯ್ದಂತಾಯ್ತು. ಸಪ್ತರ್ಷಿಯವರು ಹೃದಯ ತುಂಬಿ ತಮಗಾದ ಆನಂದವನ್ನು ಪ್ರಶಂಸೆಯ ಅಮೃತಧಾರೆಯಲ್ಲಿ ಎರೆದುಬಿಟ್ಟರು. ಎಂದೆಂದಿಗೂ ಮರೆಯಲಾಗದಿದ್ದ ಒಂದೆರಡು ವಾಕ್ಯಗಳು ಮಾತ್ರ ನೆನಪಿಗೆ ಬರುತ್ತಿವೆ: Friends, this is a great day, we have spent an hour of blessedness! (ಮಿತ್ರರೆ, ಇದೊಂದು ಮಹಾ ಸುದಿನ. ನಾವು ಕಳೆದ ಈ ಒಂದು ಘಂಟೆ ಧನ್ಯ!)
ಇತರ ಪ್ರಬಂಧಗಳನ್ನು ಅವರವರಿಗೆ ಹಿಂದಕ್ಕೆ ಕೊಟ್ಟಂತೆ ನನ್ನದನ್ನು ನನಗೆ ಹಿಂತಿರುಗಿಸಲಿಲ್ಲ. ಅದನ್ನವರು ಜೇಬಿನಲ್ಲಿಟ್ಟುಕೊಂಡು ಸಮಯ ಸಂದರ್ಭ ಒದಗಿದಂತೆಲ್ಲ ಅಧ್ಯಾಪಕವರ್ಗದವರಿಗೂ ತಮ್ಮ ನಾಗರಿಕಮಿತ್ರರಿಗೂ ಓದಿ ಹೇಳುತ್ತಿದ್ದರೆಂದು ಎಷ್ಟೋ ಕಾಲದ ಮೇಲೆ ನನಗೆ ನಾ. ಕಸ್ತೂರಿಯವರು ಹೇಳಿದ ಜ್ಞಾಪಕ.
***
ಕೆಲವರಾದರೂ ಊಹಿಸಿದಂತೆ, ಇದು ಕುವೆಂಪು ಅವರ ಬದುಕಿನಲ್ಲಿ ನಡೆದ ಒಂದು ಘಟನೆ. ಮುಂದಿನ ಜನವರಿ ೨೨ಕ್ಕೆ ಈ ಘಟನೆ ನಡೆದು ೯೦ ವರ್ಷಗಳಾಗಲಿವೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬದಕ್ಕೆ ಪ್ರತ್ಯಕ್ಷ ಸಾಕ್ಷಿ ಈ ಘಟನೆ. ಒಇದು ನಡೆದಾಗ ಕುವೆಂಪು ಅವರಿಗೆ ಕೇವಲ ಹತ್ತೊಂಬೊತ್ತು ವರ್ಷಗಳು. ಅಂದಿನ ದಿನಚರಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರೂ, ’ಸಪ್ತರ್ಷಿ ಅಯ್ಯರ್ ವಿಚಾರವಾಗಿಯೂ ನಾಲ್ಕು ಮಾತು ವಿವರವಾಗಿ ಬರೆಯದಿದ್ದರೆ ’ಅಸಾಧಾರಣ’ವಾದುದನ್ನು ’ಯಕಃಶ್ಚಿತ’ಗೊಳಿಸಿದ ಔದಾಸೀನ್ಯದ ಅಪರಾಧವೆಸಗಿದಂತಾಗುತ್ತದೆ.’ ಎಂದು ಈ ಘಟನೆಯನ್ನು ’ನೆನಪಿನ ದೋಣಿಯಲ್ಲಿ’ ವಿವರವಾಗಿ ದಾಖಲಿಸಿದ್ದಾರೆ. ಕುವೆಂಪು ಅವರ ೧೧೧ನೆಯ ಜನ್ಮದಿನೋತ್ಸವದಲ್ಲಿ ಕವಿಯೊಂದಿಗೆ ಕವಿಗುರುವನ್ನು ಸ್ಮರಿಸುವುದು ಸಂದರ್ಭೋಚಿತವೇ ಆಗಿದೆ.

-ಡಾ. ಬಿ.ಆರ್. ಸತ್ಯನಾರಾಯಣ
ಗ್ರಂಥಪಾಲಕರು, ಸುರಾನ ಕಾಲೇಜು
ಸೌತ್ ಎಂಡ್ ರಸ್ತೆ, ಬಸವನಗುಡಿ
ಬೆಂಗಳೂರು -04
9535570748

Friday, December 19, 2014

ಕಾನೂರು ಹೆಗ್ಗಡಿತಿ ಕಾದಂಬರಿಯ ಪಾತ್ರಪ್ರಪಂಚ

ಕಾನೂರು ಹೆಗ್ಗಡತಿ ಕಾದಂಬರಿ ರಚಿತವಾಗಿ, ಇದೇ ಡಿಸೆಂಬರ್ ೧೬ನೆಯ ತಾರೀಖಿಗೆ (ಕುವೆಂಪು ಮುನ್ನುಡಿಯ ದಿನಾಂಕ) ಸಾರ್ಥಕ ೭೮ ವರ್ಷಗಳು ತುಂಬುತ್ತವೆ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ೧೭.೯.೧೯೩೩ರ ದಿನಚರಿಯಲ್ಲಿ ಹೀಗೆ ಹೇಳಿದೆ: ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ. ಹಗಲೆಲ್ಲ ಅದನ್ನೇ ಕುರಿತು ಆಲೋಚಿಸಿದೆ. ಇದು ಕಳೆದ ಎರಡೇ ದಿನಗಳಲ್ಲಿ, ಅಂದರೆ ೧೯.೯.೧೯೩೩ರ ಬೆಳಿಗ್ಗೆಯಿಂದಲೇ ಕಾದಂಬರಿಯ ಬರವಣಿಗೆ ಆರಂಭವಾಗುತ್ತದೆ. ಅಂದಿನಿಂದ ಸುಮಾರು ನಾಲ್ಕು ವರ್ಷಗಳ ನಂತರ ೧೯೩೭ರಲ್ಲಿ ಕಾದಂಬರಿ ಬೆಳಕು ಕಾಣುತ್ತದೆ.
ಈ ಎಲ್ಲಾ ಘಟನೆಗಳ ಹಿಂದಿದ್ದ ಮನೋಬಲಕ್ಕೆ ಧೈರ್ಯ ತುಂಬಿದವರು, ಕನಸನ್ನು ಬಿತ್ತಿದವರು ಕುವೆಂಪು ಅವರ ಗುರುಗಳಾದ ಶ್ರೀ ಟಿ.ಎಸ್.ವೆಂಕಣ್ಣಯ್ಯನವರು. ಟಾಲ್‌ಸ್ಟಾಯ್, ರೋಮಾ ರೋಲಾ, ಥಾಮಸ್ ಹಾರ್ಡಿ, ಗಾಲ್ಸ್‌ವರ್ದಿ ಮೊದಲಾದವರ ಮಹಾಕಾದಂಬರಿಗಳನ್ನು ಓದಿದ ಮೇಲೆ ’ಕನ್ನಡದಲ್ಲಿ ಅಂತಹ ಒಂದು ಕಾದಂಬರಿ ಯಾವಾಗ ಹುಟ್ಟುತ್ತದೆ?’ ಎಂದು ಕಾಯುತ್ತಿದ್ದ ಕುವೆಂಪು, ತಮ್ಮ ಮಿತ್ರರಾಗಿದ್ದ ಅನೇಕ ಲೇಖಕರಲ್ಲಿ ’ನೀವೇಕೆ ಬರೆಯಲು ಪ್ರಯತ್ನಿಸಬಾರದು?’ ಎಂದು ಪೀಡಿಸುತ್ತಿದ್ದರಂತೆ.
ಒಂದು ದಿನ ಸಂಜೆ ಕುಕ್ಕನಹಳ್ಳಿ ಕೆರೆಯ ದಂಡೆಯ ಮೇಲೆ ವಾಯುಸಂಚಾರದಲ್ಲಿದ್ದಾಗ ವೆಂಕಣ್ಣಯ್ಯನವರು ’ನೀವೇ ಏಕೆ ಬರೆಯಬಾರದು?’ ಎಂದರಂತೆ. ಆಗ ಕುವೆಂಪು ಅವರು ’ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಅಥವಾ ಸಾಧಾರಣ ಕಾದಂಬರಿ ಬರೆದಂತೆಯೇ? ಮಹಾಕಾದಂಬರಿಗೆ ಇಂಗ್ಲಿಷಿನಲ್ಲಿ ಗ್ರೇಟರ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರ ಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯ – ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ! ಅವನ್ನೆಲ್ಲ ಅನ್ವಯ ಕೆಡದಂತೆ, ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು ಪುಟಗಳಲ್ಲಿ ನಡೆಸುವುದು ಸಾಧ್ಯವೇ? ನಾನು ಬರೆಯಹೊರಟರೆ ಉತ್ತರಕುಮಾರನ ರಣಸಾಹಸವಾಗುತ್ತದಷ್ಟೆ!’ ಎಂದು ನಕ್ಕಬಿಟ್ಟಿದ್ದರಂತೆ.
ಆದರೆ ಶಿಷ್ಯನ ಸಾಮರ್ಥ್ಯದಲ್ಲಿ ವೆಂಕಣ್ಣಯ್ಯನವರಿಗೆ ಶಂಕೆಯಿನಿತೂ ಇರಲಿಲ್ಲ. ಮುಂದುವರೆದು ಅವರು ಹೀಗೆ ಹೇಳಿದ್ದರು. ’ನೋಡಿ, ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೆ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನ ಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ ಇನ್ನೊಬ್ಬರಿಗೆ ಹೇಳುತ್ತಾ ಹೋಗುವುದರ ಬದಲು ನೀವೇ ಒಂದು ಕೈ ನೋಡಿಬಿಡಿ!’
ಗುರುವಿನ ಸಲಹೆಯನ್ನು ಆಶೀರ್ವಾದ ರೂಪದಲ್ಲಿ ಧರಿಸಿದ ಕವಿ, ಮಹಾ ಕಾದಂಬರಿ ರಚಿಸುವ ಗೀಳಿಗೆ ವಶವಾಗಿಬಿಡುತ್ತಾರೆ. ಆಗ ಮೊದಲು ಹುಟ್ಟಿದ್ದೇ ’ಕಾನೂರು ಹೆಗ್ಗಡಿತಿ’. ’ಮಲೆನಾಡಿನ ಮೂಲೆಯಲ್ಲಿ’, ’ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಮೊದಲಾದ ಹೆಸರುಗಳನ್ನು ಆಲೋಚಿಸಿದ್ದರೂ ಕೊನೆಯಲ್ಲಿ ನಿಂತದ್ದು ’ಕಾನೂರು ಹೆಗ್ಗಡಿತಿ’ ಎಂಬುದು.
ಮಹಾ ಕಾದಂಬರಿ ಎಂದರೆ ನೂರಾರು ಪುಟಗಳು, ಸಾವಿರಾರು ಘಟನೆಗಳು, ಅಸಂಖ್ಯಾತ ಸ್ಥಳಗಳು ಇವೆಲ್ಲವನ್ನೂ ಒಂದಕ್ಕೊಂದು ಜೋಡಿಸುತ್ತಾ ಹದಗೆಡದಂತೆ ಕಟ್ಟಿಕೊಡುವ ಕಥನಕ್ರಮವೇ ಮುಖ್ಯವಾದುದು. ವೆಂಕಣ್ಣಯ್ಯನವರ ಮಾತಿನಲ್ಲೇ ಹೇಳುವುದಾದರೆ ’ಕಥನ, ಸಂವಾದ ಮತ್ತು ವರ್ಣನೆಗಳ ಹದವರಿತ ಮಿಶ್ರಣವಾಗಿರಬೇಕು.’ ಮುಂದುವರೆದು ಹೇಳುವುದಾದರೆ ಭೂತ-ವರ್ತಮಾನ-ಭವಿಷ್ಯತ್ ಹೀಗೆ ತ್ರಿಕಾಲದಲ್ಲೂ ಕವಿಯ ಮನಸ್ಸು ಸಂಚರಿಸುತ್ತಿರಬೇಕಾಗುತ್ತದೆ. ಭವಿಷ್ಯದ ಕಡೆಗೆ ದೃಷ್ಟಿಯಿಟ್ಟು ವರ್ತಮಾನದಲ್ಲಿ ವಿಹರಿಸುತ್ತಿದ್ದರೂ ಕವಿಯ ಒಂದು ಕೈ ಭೂತಕಾಲದತ್ತಲೂ ಚಾಚಿರುತ್ತದೆ. ಆ ಭೂತಕಾಲವೇ ನಮ್ಮ ಇಂದಿನ ವರ್ತಮಾನವನ್ನು ರೂಪಿಸುತ್ತಿದೆ ಎಂಬ ಎಚ್ಚರವಿದ್ದೇ ಇರುತ್ತದೆ. ಭೂತ-ವರ್ತಮಾನಗಳೆರಡೂ ನಮ್ಮ ಭವಿಷ್ಯತ್‌ಕಾಲಕ್ಕೆ ಮುನ್ನುಡಿಯಂತಿರುತ್ತವೆ.
’ಕಾದಂಬರಿ ಕರತಲ ರಂಗಭೂಮಿ: ಅಂಗೈಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ’ ಎಂದು ಮುನ್ನುಡಿಯಲ್ಲಿ ಕುವೆಂಪು ಮೊದಲಿಗೇ ಹೇಳಿದ್ದಾರೆ.
ಈ ಕಾದಂಬರಿ ಐತಿಹಾಸಿಕವಾಗಿಯೂ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಚಳುವಳಿ, ಗಾಂಧಿಪ್ರಭಾವ, ಮದ್ಯಪಾನ ವಿರೋಧಿ ಚಳುವಳಿ ಮೊದಲಾದವುಗಳು, ಮಲೆನಾಡಿನ ಬದುಕು, ಕೃಷಿ-ಕಾಡು, ಸಂಸ್ಕೃತಿ ಎಲ್ಲವೂ ಅನಾವರಣಗೊಳ್ಳುತ್ತವೆ. ಅದಕ್ಕೆ ಕುವೆಂಪು ಅವರು ತಮ್ಮ ಕಾದಂಬರಿಯನ್ನು ಕುರಿತು ’ನನ್ನ ಕಾದಂಬರಿ’ ಎಂಬ ಚುಟುಕುವೊಂದರಲ್ಲಿ
ಕಲೆ ಹಡೆದ ಕಲ್ಪನೆಯೆ
ಕತ್ತರಿಯು, ಕೇಳ;
ಹಾಳೆ ಹಾಳೆಗಳಾಗಿ
ಕತ್ತರಿಸಿ ಬಾಳ
ರಟ್ಟು ಹಾಕಿದೆನೊಟ್ಟು:
ಕಾದಂಬರಿಯ ಹುಟ್ಟು
ಗುಟ್ಟೆಲ್ಲ ರಟ್ಟು!
ಎಂದು ಹಾಡಿದ್ದಾರೆ.
ಈ ಮಹಾಕಾದಂಬರಿಗೆ ೭೮ ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ, ಕಾದಂಬರಿ ತೆರೆದುಕೊಳ್ಳುವ ಸ್ಥಳಗಳ, ಎಲ್ಲಾ ಪಾತ್ರಗಳ ಒಂದು ಪಟ್ಟಿಕೆಯನ್ನು ಸಂಪಾದಿಸಿದ್ದೇನೆ. ಮೊದಲ ಬಾರಿಗೆ ’ಕಾದಂಬರಿಯ ಅರಣ್ಯಜಗತ್ತನ್ನು ಪ್ರವೇಶಿಸುವ’ ಓದುಗರಿಗೆ, – ಈಗಾಗಲೇ ಓದಿರುವವರಿಗೂ – ಉಪಯೋಗವಾಗುತ್ತದೆ ಎಂಬ ನಂಬಿಕೆ ನನ್ನದು.

ಕಾದಂಬರಿಯಲ್ಲಿನ ಸ್ಥಳಗಳು
ತೀರ್ಥಹಳ್ಳಿ
ತೀರ್ಥಹಳ್ಳಿ ರಾಮತೀರ್ಥದ ಕಲ್ಲುಸಾರ
ಕಾನೂರು
ಮುತ್ತಳ್ಳಿ
ಸೀತೆಮನೆ
ಕೆಳಕಾನೂರು
ಅಗ್ರಹಾರ
ನೆಲ್ಲುಹಳ್ಳಿ
ಕಳ್ಳಂಗಡಿ
ಕಾನುಬೈಲು
ಕತ್ತಲೆಗಿರಿ
ಉಲ್ಲೇಖಮಾತ್ರವಾದ ಸ್ಥಳಗಳು
ಮೈಸೂರು
ಚಾಮುಂಡಿಬೆಟ್ಟ
ಅಠಾರ ಕಛೇರಿ
ಅರಮನೆ
ಕುಕ್ಕರಹಳ್ಳಿ ಕೆರೆ
ಕುರುವಳ್ಳಿ
ಕೊಪ್ಪ
ಬೆಂಗಳೂರು
ತಿರುಪತಿ
ಧರ್ಮಸ್ಥಳ
ಆಗುಂಬೆ ಘಾಟಿ
ಕುಂದದ ಗುಡ್ಡ
ಕುದುರೆಮುಖ
ಮೇರುತಿ ಪರ್ವತ
ಕೂಳೂರು ಸಿದ್ಧರಮಠ
ಸಿಬ್ಬಲುಗುಡ್ಡೆ
ಕಾನೂರು

ಚಂದ್ರಯ್ಯಗೌಡ : ಕಾನೂರು ಮನೆಯ ಯಜಮಾನ; ಹೂವಯ್ಯನ ತಂದೆ ಸುಬ್ಬಯ್ಯಗೌಡರ ತಮ್ಮ; ಸುಬ್ಬಯ್ಯಗೌಡರ
ಮರಣಾನಂತರ ಕಾನೂರು ಮನೆಗೆ ಯಜಮಾನರಾಗಿರುತ್ತಾರೆ
ಸುಬ್ಬಯ್ಯಗೌಡ : ಚಂದ್ರಯ್ಯಗೌಡರ ದಿವಂಗತ ಅಣ್ಣ; ಹೂವಯ್ಯನ ತಂದೆ
ನಾಗಮ್ಮ : ಹೂವಯ್ಯನ ತಾಯಿ; ಚಂದ್ರಯ್ಯಗೌಡರ ದಿವಂಗತ ಅಣ್ಣ ಸುಬ್ಬಯ್ಯಗೌಡರ ಹೆಂಡತಿ; ಸೀತೆಮನೆ ಸಿಂಗಪ್ಪಗೌಡರ ಹೆಂಡತಿಯ ಅಕ್ಕ
ಹೂವಯ್ಯ : ಚಂದ್ರಯ್ಯಗೌಡರ ಅಣ್ಣ ಸುಬ್ಬಯ್ಯಗೌಡ ಮತ್ತು ನಾಗಮ್ಮನವರ ಮಗ
? : ಚಂದ್ರಯ್ಯಗೌಡರ ಮೊದಲ ಹೆಂಡತಿ; ರಾಮಯ್ಯನ ತಾಯಿ
? : ಚಂದ್ರಯ್ಯಗೌಡರ ಎರಡನೆಯ ಹೆಂಡತಿ; ಪುಟ್ಟಮ್ಮ ಮತ್ತು ವಾಸುವಿನ ತಾಯಿ
ರಾಮಯ್ಯ : ಹೂವಯ್ಯನ ಚಿಕ್ಕಪ್ಪ ಚಂದ್ರಯ್ಯಗೌಡರ ಮೊದಲ ಹೆಂಡತಿಯ ಮಗ;
ಸುಬ್ಬಮ್ಮ : ಚಂದ್ರಯ್ಯಗೌಡರ ಮೂರನೆಯ ಹೆಂಡತಿ; ನೆಲ್ಲುಹಳ್ಳಿಯ ಪೆದ್ದೇಗೌಡರ ಮಗಳು
ಪುಟ್ಟಮ್ಮ : ಚಂದ್ರಯ್ಯಗೌಡರ ಎರಡನೆಯ ಹೆಂಡತಿಯ ಮಗಳು; ರಾಮಯ್ಯನ ಮಲತಂಗಿ
ವಾಸು : ಚಂದ್ರಯ್ಯಗೌಡರ ಎರಡನೆಯ ಹೆಂಡತಿಯ ಮಗ; ರಾಮಯ್ಯನ ಮಲತಮ್ಮ; ಕೊನೆಯಲ್ಲಿ ಕಾನೂರಿನ ಗೌಡನಾಗುವವನು; ಸೀತೆಯ ತಂಗಿ ಲಕ್ಷ್ಮಿಯನ್ನು ಮದುವೆಯಾಗುವವನು
ಪುಟ್ಟಣ್ಣ : ಮನೆಯ ಕೆಲಸಗಾರ; ಹೂವಯ್ಯನ ನಂಬಿಕಸ್ಥ ಬಂಟ; ಒಳ್ಳೆಯ ಬೇಟೆಗಾರ
ರಂಗಪ್ಪಸೆಟ್ಟಿ : ಕಾನೂರು ಮನೆಯ ಸೇರೆಗಾರ
ನಿಂಗ : ಗಾಡಿಯಾಳು; ಧರ್ಮಸ್ಥಳ ಯಾತ್ರೆಯ ನಡುವೆ ಅಕಾಲದಲ್ಲಿ ಮರಣ ಹೊಂದಿದವನು
ಪುಟ್ಟ : ನಿಂಗನ ಮಗ; ವಾಸುವಿನ ಸಮವಯಸ್ಕ; ಕೊನೆಯಲ್ಲಿ ಸಣ್ಣಪುಟ್ಟಣ್ಣ ಎಂದು ಕರೆಸಿಕೊಳ್ಳುವವನು
ಬೈರ : ಕಾನೂರು ಮನೆಯ ಜೀತದಾಳು; ಮನೆ ಭಾಗವಾದಾಗ ಹೂವಯ್ಯನ ಜೊತೆಗೆ ಸೇರುವವನು
ಸೇಸಿ : ಬೈರನ ಹೆಂಡತಿ
ಗಂಗ : ಬೈರನ ಮಗ; ವಾಸುವಿನ ಸಮವಯಸ್ಕ; ಚಿಕ್ಕವಯಸ್ಸಿಗೆ ಸತ್ತು ಹೋಗುತ್ತಾನೆ
ಸಿದ್ದ : ಜೀತದಾಳು
ಗಂಗೆ : ಘಟ್ಟದಾಳು; ಸೇರೆಗಾರರ ಪ್ರೇಯಸಿ; ಚಂದ್ರಯ್ಯಗೌಡರ ಪ್ರೀತಿಗೆ ಒಳಗಾಗಿದ್ದವಳು
ಕೃಷ್ಣಯ್ಯಸೆಟ್ಟಿ : ಗಂಗೆಯ ಮೊದಲ ಪ್ರಣಯಿ
ತಿಮ್ಮಯ್ಯಸೆಟ್ಟಿ : ಗಂಗೆಯನ್ನು ಮದುವೆಯಾದ ಮುದುಕ ಶ್ರೀಮಂತ
ತಿಮ್ಮ : ಹಳೆಪೈಕದವನು; ಚಂದ್ರಯ್ಯಗೌಡರ ಒಕ್ಕಲು; ಗೌಡರಿಗೆ ಕಳ್ಳು ಕಾಯಿಸಿಕೊಡುವವನು
ಬಾಡುಗಳ್ಳ ಸೋಮ: ಗಟ್ಟದಾಳು; ಕೊನೆಯಲ್ಲಿ ಕಾನೂರಿನ ಸೇರೆಗಾರ ಸೋಮಯ್ಯಸೆಟ್ಟಿ ಎಂದು ಕರೆಸಿಕೊಳ್ಳುವವನು
ಬಗ್ರ : ಘಟ್ಟದಾಳು
ಸದಿಯ : ಘಟ್ಟದಾಳು
ಕಾಡಿ : ಘಟ್ಟದಾಳು
ಸುಬ್ಬಿ : ಘಟ್ಟದಾಳು
ಗುತ್ತಿ : ಒಬ್ಬ ಆಳು (ಮಲೆಗಳಲ್ಲಿ ಮದುಮಗಳು ಕಾದಂಬರಿಯ ಕೊನೆಯಲ್ಲಿ ನಾಯಿಗುತ್ತಿ, ಕಾನೂರು ಚಂದ್ರಯ್ಯಗೌಡರಲ್ಲಿ ಜೀತದಾಳಾಗಿ ನಿಲ್ಲುವ ಸೂಚನೆಯಿದೆ. ಅದೇ ಗುತ್ತಿಯೆಂದು ತಿಳಿಯಬಹುದು)
ಬಚ್ಚ : ಬೇಲರಾಳು
? : ಗಂಗೆಯ ತಂದೆ
? : ಗಂಗೆಯ ತಾಯಿ
? : ಕಾನೂರು ಮನೆಯ ಅಡುಗೆಯವನು
? : ಹೂವಯ್ಯ ವಾಸವಿದ್ದ ಕೆಳಕಾನೂರು ಮನೆಯ ಅಡುಗೆಯವನು
? : ಕಾನೂರು ಪಟೇಲರು
ಮುತ್ತಳ್ಳಿ
ಶಾಮಯ್ಯಗೌಡ : ಮುತ್ತಳ್ಳಿ ಮನೆತನದ ಯಜಮಾನ; ಪಟೇಲ; ಕಾನೂರು ಚಂದ್ರಯ್ಯಗೌಡರ ಭಾವನೆಂಟ
ಗೌರಮ್ಮ : ಶಾಮಯ್ಯಗೌಡರ ಹೆಂಡತಿ; ಚಿನ್ನಯ್ಯನ ತಾಯಿ
ಚಿನ್ನಯ್ಯ : ಶಾಮಯ್ಯಗೌಡ-ಗೌರಮ್ಮನವರ ಮಗ; ಸೀತೆಯ ಅಣ್ಣ; ಕಾನೂರು ಪುಟ್ಟಮ್ಮನ ಗಂಡ
ಸೀತೆ : ಶಾಮಯ್ಯಗೌಡ-ಗೌರಮ್ಮನವರ ಹಿರಿಯ ಮಗಳು; ಚಿನ್ನಯ್ಯನ ತಂಗಿ;
ಲಕ್ಷ್ಮಿ : ಶಾಮಯ್ಯಗೌಡ-ಗೌರಮ್ಮನವರ ಕಿರಿಯ ಮಗಳು; ಸೀತೆಯ ತಂಗಿ; ಕೊನೆಯಲ್ಲಿ ಕಾನೂರು ವಾಸಪ್ಪಗೌಡನನ್ನು ಮದುವೆಯಾಗುವ ಹುಡುಗಿ
ರಮೇಶ : ಚಿನ್ನಯ್ಯ ಪುಟ್ಟಮ್ಮರ ಮೊದಲ ಮಗ
ಲಲಿತೆ : ಚಿನ್ನಯ್ಯ ಪುಟ್ಟಮ್ಮರ ಮಗಳು
ಮಾಧೂ : ಚಿನ್ನಯ್ಯ ಪುಟ್ಟಮ್ಮರ ಕೂಸು
ಕುಂಬಾರ ನಂಜ : ಶಾಮಯ್ಯಗೌಡರ ಒಕ್ಕಲು
? : ನಂಜನ ಹೆಂಡತಿ
ರಂಗಿ : ನಂಜನ ಹೆಣ್ಣುಕೂಸು
ಕಾಳ : ಮನೆಯ ಆಳು
ರಾಮಕ್ಕ : ಕಾಳನ ದಿವಂಗತ ತಾಯಿ
ಸೀತೆಮನೆ
ಸಿಂಗಪ್ಪಗೌಡ : ಸೀತೆಮನೆ ಯಜಮಾನ; ಹೂವಯ್ಯನ ತಾಯಿ ನಾಗಮ್ಮನವರ ತಂಗಿಯ ಗಂಡ; ಸಂಬಂಧದಲ್ಲಿ ಹೂವಯ್ಯನಿಗೆ ಚಿಕ್ಕಪ್ಪ;
? : ಸಿಂಗಪ್ಪಗೌಡರ ಹೆಂಡತಿ; ಹೂವಯ್ಯನ ತಾಯಿ ನಾಗಮ್ಮನವರ ಸಹೋದರಿ; ಕೃಷ್ಣಪ್ಪನ ತಾಯಿ
ಕೃಷ್ಣಪ್ಪ : ಸಿಂಗಪ್ಪಗೌಡರ ಮಗ
ಶಂಕರಯ್ಯ : ಸಿಂಗಪ್ಪಗೌಡರ ಕೊನೆಯ ಮಗ
ಕಿಲಸ್ತರ ಜಾಕಿ : ಕೃಷ್ಣಪ್ಪನ ಬಂಟ
? : ದನ ಕಾಯುವವನು
ಸುಕ್ರ : ಗಾಡಿ ಹೊಡೆಯುವವನು
ಅಗ್ರಹಾರ
ವೆಂಕಪ್ಪಯ್ಯ : ಜೋಯಿಸರು; ಚಂದ್ರಮೌಳೇಶ್ವರ ದೇವಾಲಯದ ಅರ್ಚಕರು
? & ? : ವೆಂಕಪ್ಪಯ್ಯನವರ ಇಬ್ಬರು ಮಕ್ಕಳು
? & ? : ಇಬ್ಬರು ಬ್ರಾಹ್ಮಣ ಬಾಲಕರು
ಮಂಜಭಟ್ಟರು : ವೃದ್ಧ ಬ್ರಾಹ್ಮಣರು
ಸಿಂಗಾಜೋಯಿಸರು: ಅಗ್ರಹಾರದ ಬ್ರಾಹ್ಮಣರು
ರಾಮಭಟ್ಟರು : ಅಗ್ರಹಾರದ ಬ್ರಾಹ್ಮಣರು
ಕೆಳಕಾನೂರು
ಅಣ್ಣಯ್ಯಗೌಡರು : ಚಂದ್ರಯ್ಯಗೌಡರ ಒಕ್ಕಲು
ಓಬಯ್ಯ : ಅಣ್ಣಯ್ಯಗೌಡರ ಎರಡನೆಯ ಹೆಂಡತಿಯ ಮಗ; ಕಾನೂರು ಬಿಟ್ಟು ಹೋದರೂ, ಕೊನೆಯಲ್ಲಿ ಕಾನೂರು ಮನೆಯಲ್ಲೇ ಆಶ್ರಯ ಪಡೆದಾತ
? : ಅಣ್ಣಯ್ಯಗೌಡರ ನಾಲ್ಕನೆಯ ಹೆಂಡತಿ
? : ಮೂರನೆಯ ಹೆಂಡತಿಯ ಮಗಳು
ನೆಲ್ಲುಹಳ್ಳಿ
ಪೆದ್ದೇಗೌಡ : ಸುಬ್ಬಮ್ಮನ ತಂದೆ
? : ಸುಬ್ಬಮ್ಮನ ತಾಯಿ
? : ಸುಬ್ಬಮ್ಮನ ಅತ್ತಿಗೆ
? : ಕುತ್ತುರೆ ಹಾಕುವ ಯುವಕ; ಸುಬ್ಬಮ್ಮ ಚಂದ್ರಯ್ಯಗೌಡರನ್ನು ಮದುವೆಯಾಗುವ ಮೊದಲು ಈ ಯುವಕನಿಗೆ ಕೊಡುವ ಗಾಳಿಸುದ್ದಿಯಿದ್ದಿತ್ತು.
ಕಳ್ಳಂಗಡಿ
ಚಿಕ್ಕಣ್ಣ : ಕಳ್ಳಂಗಡಿಯ ಮಾಲೀಕ
? : ಕಳ್ಳಗಂಡಿಯವನ ಹೆಂಡತಿ
? : ಅಂಗಡಿಯವನ ಮಗ
ಮನೆ ಹಿಸ್ಸೆ ಪಂಚಾಯ್ತಿಯಲ್ಲಿ ಭಾಗವಹಿಸಿದ್ದ ಪಾಲು ಮುಖಂಡರು
ಬಾಳೂರು ಸಿಂಗೇಗೌಡ
ಬೈದೂರು ಬಸವೇಗೌಡ
ನೆಲ್ಲಹಳ್ಳಿ ಪೆದ್ದೇಗೌಡ
ಮುದ್ದೂರು ಭರ್ಮೇಗೌಡ
ಎಂಟೂರು ಶೇಷೇಗೌಡ
ಮೇಗ್ರಳ್ಳಿ ನಾಗಪ್ಪ ಹೆಗ್ಗಡೆ
ಇತರೆ
ಅತ್ತಿಗದ್ದೆ ಹಿರಿಯಣ್ಣಗೌಡ
ರಂಗಮ್ಮ – ಅತ್ತಿಗದ್ದೆ ಹಿರಿಯಣ್ಣಗೌಡರ ಮಗಳು
ನುಗ್ಗಿಮನೆ ತಮ್ಮಣ್ಣಗೌಡ
ದಾನಮ್ಮ – ನುಗ್ಗಿಮನೆ ತಮ್ಮಣ್ಣಗೌಡರ ಮಗಳು
ಸಂಪಗೆಹಳ್ಳಿ ಪುಟ್ಟಯ್ಯಗೌಡ
ದುಗ್ಗಮ್ಮ – ಸಂಪಗೆಹಳ್ಳಿ ಪುಟ್ಟಯ್ಯಗೌಡರ ಮಗಳು
ತೀರ್ಥಹಳ್ಳಿ ಡಾಕ್ಟರ್
ಪೊಲೀಸಿನವರು
ತೀರ್ಥಹಳ್ಳಿ ಹೆಗ್ಗಡೆ
ಮಾರ್ಕ – ಹೆಂಡ ಕಟ್ಟುವ ಬಗನಿ ಮರಗಳಿಗೆ ಮಾರ್‍ಕ್ ಮಾಡುವವನು
ಗಾರ್ಡ – ಫಾರೆಸ್ಟ್ ಗಾರ್ಡ್
ಮುತ್ತಳ್ಳಿ ಸೇರೆಗಾರ
ಸೀತೆಮನೆ ಸೇರೆಗಾರ
ಕುದುಕ – ಬಿಲ್ಲರವನು
? – ಸೈಕಲ್ ಸವಾರ
ತೀರ್ಥಹಳ್ಳಿಯ ಕಿಲಸ್ತರು
ಸಾಕುಪ್ರಾಣಿಗಳು
ನಂದಿ ಮತ್ತು ಲಚ್ಚ – ಕಾನೂರು ಮನೆಯ ಎತ್ತುಗಳು
ಪುಟ್ರಾಮ – ಕಾನೂರಿನ ಒಂದು ಎತ್ತು
ಟೈಗರ್, ರೂಬಿ, ಟಾಪ್ಸಿ, ಡೈಮಂಡು, ಕೊತ್ವಾಲ, ಡೂಲಿ ಮತ್ತು ರೋಜಿ – ಕಾನೂರು ಮನೆಯ ನಾಯಿಗಳು
ಡೈಮಂಡು ಮತ್ತು ರೂಬಿ – ಮುತ್ತಳ್ಳಿ ಮನೆಯ ನಾಯಿಗಳು
? – ಎತ್ತು
ಪಾಟ್‌ರೈಟ್ – ಸೀತೆಮನೆಯ ಒಂದು ನಾಯಿ

Tuesday, September 16, 2014

ಗುಡಿಯ ಪೀಠದಲ್ಲಿ ಮೂರ್ತಿಯಿಲ್ಲ!

ಅಯ್ಯೋ,
ಗುಡಿಯ ಪೀಠದಲ್ಲಿ
ಮೂರ್ತಿಯಿಲ್ಲ!
ದೇವರೆಲ್ಲಿ?
ಹರಕುಬಟ್ಟೆ ತಿರುಕನಲ್ಲಿ ಲೀನವಾದನು!
(ಕುವೆಂಪು) 






Tuesday, September 09, 2014

ಚಿದಂಬರ ರಹಸ್ಯ : ಕುವೆಂಪು ಮತ್ತು ತೇಜಸ್ವಿ

ದೇವರು ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ – ಇದು ತೇಜಸ್ವಿಯವರ ಅನಿಸಿಕೆ. ಇದ್ದಾನೆ, ಇಲ್ಲ ಈ ಎರಡರ ನಡುವೆಯೇ ಮಾನವ ನಾಗರಿಕತೆ ವಿಕಾಸವಾಗುತ್ತಾ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ದೇವರು ಇದ್ದಾನೆ ಎಂದು ಖಚಿತವಾದ ದಿನ ಎಲ್ಲವೂ ಮುಗಿದು ಹೋಗುತ್ತದೆ; ಹಾಗೆಯೇ ದೇವರು ಇಲ್ಲ ಎಂದು ಖಚತವಾದಾಗಲೂ ಸಹ! ಹೀಗೇಕೆ? ಇದೊಂದು ಚಿದಂಬರ ರಹಸ್ಯ.
ಚಿದಂಬರ ರಹಸ್ಯ ಎಂಬುದು ತೇಜಸ್ವಿಯವರ ಒಂದು ಕಾದಂಬರಿ. ಅದರಲ್ಲಿ ಒಂದು ಪ್ರಮುಖವಾದ ಪ್ರಶ್ನೆಯನ್ನು ತೇಜಸ್ವಿ ಎತ್ತುತಾರೆ – ಜಯರಾಮನ ಮೂಲಕ. ಅದು ಹೀಗಿದೆ:
ಮನುಷ್ಯಪ್ರಜ್ಞೆ ನಿಜವಾಗಿ ಸ್ವತಂತ್ರವೋ? ಅಥವಾ ಅದೊಂದು ಭ್ರಮೆಯೋ? ಇಡೀ ಗ್ರಹತಾರೆ ನಿಹಾರಿಕೆಗಳ ಈ ವಿಶ್ವವೆಲ್ಲಾ ತಮ್ಮ ತಮ್ಮ ನಿಯಮಕ್ಕೆ ಬದ್ಧವಾಗಿ ವರ್ತಿಸುತ್ತಿವೆ. ಪ್ರತಿಯೊಂದು ಅಣು ಪರಮಾಣುವಿನಲ್ಲೂ ಎಲೆಕ್ಟ್ರಾನುಗಳು ಪ್ರೋಟಾನುಗಳೂ ತಮ್ಮ ನಿಯಮಗಳ ಸರಹದ್ದಿನಲ್ಲಿ ಸುತ್ತುತ್ತಿವೆ. ಅಂಥದರಲ್ಲಿ ಇದರಿಂದ ಹೊಮ್ಮಿದ ಈ ಪ್ರಜ್ಞೆ ನಿಯಮಾತೀತವೇ? ನಿಜವಾಗಿಯೂ ಸ್ವತಂತ್ರವೆ?
ಚಿದಂಬರ ರಹಸ್ಯ ಓದಿದ ಪ್ರತಿಯೊಬ್ಬನ ಮನಸ್ಸಿನಲ್ಲಿ ಇದು ಆಗಾಗ ಗಿರಕಿ ಹೊಡೆಯುತ್ತಲೇ ಇರುತ್ತದೆಯಲ್ಲವೆ? ಮನುಷ್ಯಪ್ರಜ್ಞೆ ಸ್ವತಂತ್ರ, ಅದು ಯಾವುದೇ ನಿಯಮಕ್ಕೆ ಒಳಪಟ್ಟಿಲ್ಲ ಎಂದಾದರೆ, ಮಾನವನೇ ಸರ್ವಸ್ವತಂತ್ರ. ಅವನೇ ದೇವರು!!! ಆದರೆ, ಆತನ ಪ್ರಜ್ಞೆ ಒಂದು ನಿಯಂತ್ರಣಕ್ಕೆ ಒಳಪಟ್ಟಿದ್ದೇ ಆಗಿದ್ದಲ್ಲಿ, ನಮ್ಮೆಲ್ಲಾ ನಿರ್ಧಾರಗಳು, ಪ್ರಯತ್ನ, ಸಂಶೋಧನೆ, ಸಾಧನೆ ಎಲ್ಲವೂ ಮೊದಲೇ, ಯಾರಿಂದಲೋ ನಿರ್ಧಾರಿಸಲ್ಪಟ್ಟ ಸತ್ಯಗಳು. ಅಂದರೆ ರೆಡಿಮೇಡ್ ಸ್ಕ್ರಿಪ್ಟ್!! ಜಗತ್ತು ಒಂದು ನಾಟಕ ರಂಗಭೂಮಿ, ನಾವೆಲ್ಲಾ ಅಲ್ಲಿ ಪಾತ್ರಧಾರಿಗಳು ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ! ಸಿದ್ಧವಾಗಿರುವ ನಾಟಕದಲ್ಲಿ ನಾವೆಲ್ಲಾ ಬಂದು ಒಂದೊಂದು ಪಾತ್ರ ಮಾಡಿ ಹೋಗುತ್ತಿದ್ದೇವೆ ಅಷ್ಟೆ! (ಶ್ಮಶಾನ ಕುರುಕ್ಷೇತ್ರಂ ನಾಟಕದಲ್ಲಿ ಸ್ವರ್ಣಸ್ವಪ್ನದಿಂದ ಎಚ್ಚತ ಧುರ್ಯೋಧನನ ಪಾತ್ರಧಾರಿ ಇದ್ದಕ್ಕಿದ್ದಂತೆ ಕೃಷ್ಣನೊಡನೆ “ನಾನೆನ್ನ ಪಾತ್ರಮಂ ನೇರಮಾಗಭಿನಯಿಸಿ ತೋರ್ದೆನೇನ್? ಮೇಣ್ ಅದರೊಳೇನಾದರುಂ ತಪ್ಪಿದೆನೊ?” ಎಂದು ಕೇಳುವುದನ್ನು, “ನಾಟಕಮಂ ನೇರವಾಗಿ ಕೊನೆಗಾಣ್ಚು! ನಾನ್ ಪೋಗಿ ಬರ್ಪೆನ್. ಅಲ್ಲಿ ನಿನ್ನನ್ ಮರಳಿ ಕಾಣುವೆನ್” ಎಂದು ಕೃಷ್ಣ ಹೇಳುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು)
ಮನುಷ್ಯಪ್ರಜ್ಞೆ ವಿಧಿನಿಯಮಗಳ ಅಧೀನಾನೋ ಅಥವಾ ಸ್ವತಂತ್ರವೊ? ಇವೆರಡರಲ್ಲಿ ಯಾವುದು ಸತ್ಯವಾದರೂ ಅದು ವಿಸ್ಮಯವೇ ಆಗಿರುತ್ತದೆ!
ತೇಜಸ್ವಿಯವರ ಈ ವಾದ ಮೇಲ್ನೋಟಕ್ಕೆ ಅಮೂರ್ತಕಲ್ಪನೆಯಂತೆ ಕಾಣುತ್ತದೆ. ಇಂತಹುದೊಂದು ಆಲೋಚನೆ ಅಥವಾ ಪ್ರಶ್ನೆ ತೇಜಸ್ವಿಯವರಿಗೆ ಕಾಡಲು ಕಾರಣವೇನು? ಅದಕ್ಕೆ ಮೂಲಾಧಾರವೇನಾದರೂ ಇದೆಯೆ? ಇದಕ್ಕೆ ಯಾವುದಾದರೂ ಪ್ರೇರಣೆ ಪ್ರಭಾವ ಇದೆಯೆ? ಇವೆಲ್ಲಾ ಪ್ರಶ್ನೆಗಳು ಚಿದಂಬರ ರಹಸ್ಯವನ್ನು ಮತ್ತೆ ಮತ್ತೆ ಓದುವವರಿಗೆ ಕಾಡಿದ್ದರೆ ಆಶ್ಚರ್ಯವಲ್ಲ.
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೌದು ಎಂದೇ ಹೇಳಬಹುದು? ಅದಕ್ಕೂ ಪೂರ್ವದಲ್ಲಿಯೇ ಈ ಸಮಸ್ಯೆ ಬೇರೊಂದು ರೂಪದಲ್ಲಿ ಒಬ್ಬರನ್ನು ಕಾಡಿತ್ತು. ಆ ಒಬ್ಬರು ಒಬ್ಬರೇ – ಕುವೆಂಪು!

ಕುವೆಂಪು ಅವರನ್ನು ಕಾಡಿರುವ ಚಿದಂಬರ ರಹಸ್ಯ ಯಾವುದೆಂದು ನೋಡೋಣ:
ಕುವೆಂಪು ಅವರ ’ರಸೋ ವೈ ಸಃ’ ಎಂಬ ಸಾಹಿತ್ಯ ಮೀಮಾಂಸೆಯ ಪುಸ್ತಕದಲ್ಲಿ ’ಕವಿನಿರ್ಮಿತಿಯಲ್ಲಿ ನಿಯತಿಕೃತ ನಿಯಮರಾಹಿತ್ಯ’ ಎಂಬ ಲೇಖನವಿದೆ. ಒಂದು ಕಲಾಕೃತಿಯ ನಿರ್ಮಾಣದಲ್ಲಿ ಕಲಾವಿದನ ಪಾತ್ರವೇನು? ಕಲಾವಿದ ಸರ್ವತಂತ್ರ ಸ್ವತಂತ್ರನೇ? ಅಥವಾ ಪರತಂತ್ರ ಅಧೀನನೇ? ಎಂಬೆಲ್ಲಾ ಪ್ರಶ್ನೆಗಳೆಲ್ಲಾ ಬರುತ್ತವೆ?
ಮೊದಲಿಗೆ ‘ನಿಯತಿಕೃತ ನಿಯಮ’ ಎಂಬುದನ್ನು ಮಾತ್ರ ಓದಿಕೊಂಡಾಗ ಜಗತ್ತನ್ನು ಮುನ್ನಡೆಸುತ್ತಿರುವ ಶಕ್ತಿ (ದೇವರು, ಗುರುತ್ವಾಕರ್ಷಣ ಯಾವುದೋ ಒಂದು) ಅದು ಕೆಲವೊಂದು ನಿಯಮಕ್ಕೆ ಒಳಪಟ್ಟಿದೆ. ಅಥವಾ ತನ್ನಷ್ಟಕ್ಕೆ ತಾನೇ ಕೆಲವೊಂದು ನಿಯಮಗಳನ್ನು ಸೃಷ್ಟಿಸಿಕೊಂಡಿದೆ. ಅಂತಹುದೊಂದು ಅಥವಾ ಹಲವು ನಿಯಮಗಳಿವೆ. ‘ರಾಹಿತ್ಯ’ ಎಂದು ಓದಿಕೊಂಡರೆ,ಕವಿನಿರ್ಮಿತಿ ’ನಿಯತಿಕೃತ ನಿಯಮ’ಗಳಿಗೆ ರಾಹಿತ್ಯವಾದದ್ದು, ಹೊರತಾದದ್ದು ಎಂದಾಗುತ್ತದೆ. ಅಂದರೆ ಕವಿ ಅಥವಾ ಕಲಾವಿದ ಸರ್ವತಂತ್ರ ಸ್ವತಂತ್ರ! ಕವಿರ್ಮಿತಿಯು ನಿಯತಿಕೃತ ನಿಯಮಗಳಿಗೆ ಅತೀತವಾದದ್ದು ಎಂಬುದು ಮೀಮಾಂಸಕ ಕುವೆಂಪು ಅಭಿಮತವಲ್ಲ. ಅವರ ಅಭಿಪ್ರಾಯ ‘ಕವಿನಿರ್ವಿತಿ ನಿಯತಿಕೃತವಾಗಿಯೂ ಇದ್ದು, ನಿಯಮರಾಹಿತ್ಯವೂ ಆಗಿರಬೇಕು! ಅದನ್ನು ಮುಂದೆ ನೋಡಬಹುದು.
ಇಡೀ ಶೀರ್ಷಿಕೆಯನ್ನು -ಕುವೆಂಪು ಬರೆದಿರುವಂತೆ- ’ಕವಿನಿರ್ಮಿತಿಯಲ್ಲಿ ನಿಯತಿಕೃತ ನಿಯಮರಾಹಿತ್ಯ’ ಎಂದು ಓದಿಕೊಂಡಾಗ ಎರಡು ಪ್ರಮುಖ ಅಂಶಗಳು ಎದ್ದು ಕಾಣುತ್ತವೆ. ಒಂದು ನಿಯತಿಕೃತ; ಇನ್ನೊಂದು ನಿಯಮರಾಹಿತ್ಯ. ಕವಿಯ ಕೃತಿ ನಿಯತಿಕೃತವಾಗಿಯೂ ಅಂದರೆ ಈ ಜಗತ್ತನ್ನು ಮುನ್ನಡೆಸುತ್ತಿರುವ ಶಕ್ತಿಗೆ ಅಥವಾ ಆ ಶಕ್ತಿಯಿಂದ ಕೃತವಾದ (ನಿರ್ಮಿಸಲ್ಪಟ್ಟ) ನಿಯಮಗಳಿಗೆ ಅಧೀನವಾಗಿಯೇ ಇದೆ ಎಂದಾಗುತ್ತದೆ. ನಿಯಮ ರಾಹಿತ್ಯವಾಗಿದೆ ಎಂದರೆ ಅದು ಸರ್ವತಂತ್ರಸ್ವತಂತ್ರ, ಅದು ನಿಯಮವನ್ನು ಮೀರಿದ್ದಾಗಿದೆ ಎಂದಾಗುತ್ತದೆ. ನಿಯಮಕ್ಕೊಳಪಟ್ಟು ನಿಯಮವನು ಮೀರುವುದು. ಕಾನೂನನ್ನು ಗೌರವಿಸುತ್ತಲೇ ಅದನ್ನು ಮೀರುವುದು – ಗಾಂಧೀಜಿಯ ಆಶಯವನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. (ಕುವೆಂಪು ತಮ್ಮ ಬರವಣಿಗೆಯಲ್ಲಿ ಪಂಕ್ಚ್ಯುಲ್ ಮಾರ್ಕ್ಸ್, ಸ್ಪೇಸ್, ಪದಜೋಡಣೆ, ಪದವಿಂಗಡಣೆ ಇವುಗಳಿಗೆ ಕೊಟ್ಟಿರುವ ಮಹತ್ವವನ್ನು ಮನಗಾಣಬೇಕು)
ಅನಾದಿಕವಿ ತತ್ವವನ್ನು ಪ್ರತಿಪಾದಿಸುವ ಕುವೆಂಪು ಈ ಸಮಸ್ಯೆಗೆ ಪರಿಹಾರವನ್ನೂ ಕಂಡುಕೊಳ್ಳುತ್ತಾರೆ. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕವಿಯನ್ನು ಅಭಿನವ ಸೃಷ್ಟಿಕರ್ತ ಎಂದು ಕರೆದಿರುವುದನ್ನು ಮನಗಾಣಬೇಕು. ’ಕಾವ್ಯಕೃತಿಯನ್ನು ರಚಿಸುವ ಕವಿಯೂ ಈಶ್ವರ ಸೃಷ್ಟಿಯಲ್ಲಿ ಒಂದು ಕೃತಿಮಾತ್ರನಾಗಿದ್ದಾನೆ.’ ಎಂದು ಕುವೆಂಪು ಅವರದೇ ಇನ್ನೊಂದು ಮಾತಿದೆ. ಇದನ್ನೇ ರಾಮಾಯಣದರ್ಶನಂ ಕಾವ್ಯದಲ್ಲಿ ಮೊದಲಲ್ಲಿಯೇ,
“ನೆಯ್ದಾಳುತಿದೆ ಜಗವನೊಂದು ಅತಿವಿರಾಣ್ ಮನಂ,
ಸೂಕ್ಷ್ಮಾತಿಸೂಕ್ಷ್ಮ ತಂತ್ರದಿಂ ಬಿಗಿದು ಕಟ್ಟಿಯುಂ
ಜೀವಿಗಳ್ಗೆ ಇಚ್ಛೆಯಾ ಸ್ವಾತಂತ್ರ್ಯಭಾವಮಂ ನೀಡಿ”
ಎಂದು ಹಾಡಿದ್ದಾರೆ. ಇದು ಅನಾದಿಕವಿ ತತ್ವಕ್ಕೆ ಪೂರಕವಾಗಿಯೇ ಇರುವಂತದ್ದು. ಇಡೀ ಸೃಷ್ಟಿಯೇ ಒಂದು ಮಹಾಕಾವ್ಯ ಅಥವಾ ಮಹಾಕಲಾಕೃತಿ! ಅದು ಶಾಶ್ವತವೂ ನಿತ್ಯನೂತನವೂ ಆದುದಾಗಿದೆ. ಅದನ್ನು ಋತ ಅಥವಾ ನಿಯತಿ ಅಥವಾ ಶಕ್ತಿ ಅಥವಾ ದೇವರು (ಅತಿವಿರಾಣ್ ಮನಂ) ಸೃಷ್ಟಿಮಾಡಿದೆ; ಮಾಡುತ್ತಲೇ ಇದೆ. ಅದರಲ್ಲಿ ಈ ಜಗತ್ತಿನ ಪ್ರತಿಯೊಂದು ಆಗುಹೋಗುಗಗಳು, -ಮಹಾಸ್ಫೊಟ, ಗ್ರಹತಾರೆನಿಹಾರಿಗೆಳ ಚಲನೆ, ಆಕರ್ಷಣೆ, ಜೀವವಿಕಾಸ, ಮನುಷ್ಯಪ್ರಯತ್ನ, ನಾಗರಿಕತೆ, ಸಾಧನೆ, ಯೋಚನೆ, ಆಲೋಚನೆ, ತಂತ್ರ, ಕುತಂತ್ರ- ಎಲ್ಲವೂ ಆ ಸೃಷ್ಟಿಕಾವ್ಯದ ಭಾಗಗಳೇ ಆಗಿವೆ. ಸನ್ನಿವೇಶಗಳೇ ಆಗಿವೆ, ಪಾತ್ರಗಳೇ ಆಗಿವೆ! ಆದ್ದರಿಂದ ಕಲಾಕೃತಿಯನ್ನು ನಿರ್ಮಿಸುವ ಕಲಾವಿದನೂ ಈ ಬೃಹತ್ ಸೃಷ್ಟಿಯಲ್ಲಿ ಒಂದು ಕೃತಿ ಮಾತ್ರ!
ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ ಕೊನೆಯ ಸಂಚಿಕೆ ಅಭಿಷೇಕ ವಿರಾಡ್‌ದರ್ಶನಂ. ರಾಮಪಟ್ಟಾಭಿಷೇಕದ ಕಥೆಯನ್ನು ಬರೆಯಲು ಕುಳಿತ ಕವಿಗೆ ಅತೀಂದ್ರತೀಯ ಶಕ್ತಿ ಅನುಭವದ್ಗೋಚರವಾಗುತ್ತದೆ. ಅದನ್ನು ಕವಿ ‘ನೀನಾರ್, ಮಹಾಪುರುಷ?’ ಎಂದು ಪ್ರಶ್ನಿಸುತ್ತಾರೆ. ಆಗ ಆ ಅತೀಂದ್ರಿಯ ಶಕ್ತಿ ಹೀಗೆ ಹೇಳುತ್ತದೆ:
ಅನಾದಿಕವಿ ಕಣಾ! ವಾಲ್ಮೀಕಿ
ವ್ಯಾಸ ಹೋಮರ್ ದಾಂತೆ ಫಿರ್ದೂಸಿ ಮಿಲ್ಟನ್
ಮಹಾಕವೀಶ್ವರರೆನಗೆ ಬಾಹುಮಾತ್ರಗಳಲ್ತೆ?
ಬಹುನಾಮರೂಪಗಳ್, ಬಹುಕಾಲದೇಶಗಳ್
ನನಗೆ. ನೀನುಂ ನಾನೆಯೆ, ಕುವೆಂಪು!
ಈ ಜಗತ್ತಿನಲ್ಲಿ ಇದುವರೆಗೆ ಆಗಿ ಹೋಗಿರುವ ಮಹಾಮಹಾಮಹಿಮರೆಲ್ಲರೂ, ಮಹತ್‌ಘಟನೆಗಳು – ಮಹಾಸ್ಪೋಟ, ಚಂದ್ರಲೋಕಯಾತ್ರೆ, ಮಂಗಳಯಾನ, ಮಹಾಯುದ್ಧಗಳು, ಮಹಾಮಹಾಸಂಶೋಧನೆಗಳು (ವಿಜ್ಞಾನ ನಿತ್ಯಸತ್ಯದ ವಿಸ್ತರಣೆ ಎಂಬ ಅಭಿಪ್ರಾಯವೂ ಇದೆ.) – ಎಲ್ಲವೂ ಆ ಅನಾದಿಕವಿ ಚಿತ್ರಿಸಿರುವ ಪಾತ್ರಗಳು ಘಟನೆಗಳು ಮಾತ್ರ! ಈ ಸೃಷ್ಟಿಯೇ ಒಂದು ಬೃಹತ್ ಕಲಾಕೃತಿ! (ದೇವರು ರುಜು ಮಾಡಿದನು ಕವಿ ರಸವಶನಾಗುತ ಅದ ನೋಡಿದನು).
ಕುವೆಂಪು ಪ್ರತಿಪಾದಿಸಿರುವ ವಿಚಾರಧಾರೆ ಅತ್ಯಂತ ಅಮೂರ್ತವಾದುದು. ’ಚಿದಂಬರ ರಹಸ್ಯ’ದಲ್ಲಿ ತೇಜಸ್ವಿಯವರು ಅದನ್ನು ಆದಷ್ಟು ಮೂರ್ತಗೊಳಿಸಿ ನಮ್ಮ ಕೈಗೆಟಕುವಂತೆ ಮಾಡಿದ್ದಾರೆ ಎನ್ನಬಹುದು. (ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ! – ಕುವೆಂಪು)

Monday, August 25, 2014

ರಜನೀಗಂಧ

ಬೆಳಿಗ್ಗೆ ಎದ್ದವಳೆ ರಜನಿ ತನ್ನ ಕಣ್ಣು ಕಿವಿಗಳೆರಡನ್ನೂ ಮಗಳ ರೂಮಿನೆಡೆಗೆ ನೆಟ್ಟಳು. ರೂಮಿನ ಬಾಗಿಲು ತೆಗೆದೇ ಇತ್ತಾದರೂ ಒಳಗೆ ಮಗಳು ಇರುವ ಸೂಚನೆಗಳು ಕಾಣಲಿಲ್ಲ. ರಜನಿ ಬಾತ್ ರೂಮಿನ ಕಡೆ ಹೋಗುತ್ತಾ ’ಸಾನ್ವಿ ನನಗೆ ಹೇಳದೆ ಕೆಲಸಕ್ಕೆ ಹೊರಟು ಬಿಟ್ಟಳೆ? ಹಾಗಾಗಿದ್ದರೆ, ಇದೇ ಮೊದಲ ಬಾರಿಗೆ ಮಗಳು ನನಗೆ ತಿಳಿಸದೆ ಮನೆಯಿಂದ ಹೊರ ಹೊರಟಿದ್ದಾಳೆ’ ಎನ್ನಿಸಿ ತಲೆ ಸುತ್ತು ಬಂದಂತಾಯ್ತು. ಹೇಗೋ ಸಾವಾರಿಸಿಕೊಂಡು ಬ್ರಷ್ ಮಾಡಿ, ಮುಖ ತೊಳೆದು ಮಗಳ ರೂಮಿನ ಕಡೆ ನಡೆದಳು. ಒಳಗೆ ಕಣ್ಣಾಡಿಸಿದವಳಿಗೆ ಆಶ್ಚರ್ಯವಾಗುವಂತೆ, ಮಗಳು ಪದ್ಮಾಸನ ಹಾಕಿ ಕುಳಿತಿರುವುದು ಕಂಡಿತು. ಆಫೀಸಿಗೆ ಹೊರಡಲು ಸಿದ್ಧಳಾಗಿಯೇ ಕುಳಿತಿದ್ದಾಳೆ ಎಂದುಕೊಂಡು ಕಿಟಕಿಯಿಂದ ಹೊರಗೆ ನೋಡಿದ ರಜನಿಗೆ ಸಿದ್ಧವಾಗಿ ನಿಂತಿದ್ದ ಸ್ಕೂಟರ್ ಕಂಡಿತು. ಹಾಗೇ ಬಾಗಿಲಿಗೆ ಒರಗಿ ನಿಂತು, ಧ್ಯಾನದಲ್ಲಿ ಮುಳುಗಿದ್ದ ಮಗಳನ್ನೇ ನೋಡುತ್ತಾ ನಿಂತವಳಿಗೆ, ರಾತ್ರಿ ನಡೆದ ಮಾತುಕತೆಗಳು ನೆನಪಾದವು. ’ಎಲ್ಲ ಗಂಡಸರು ಕೆಟ್ಟವರು ಎಂಬ ನಿನ್ನ ಪೂರ್ವಾಗ್ರಹದಿಂದ ಒಮ್ಮೆ ಹೊರ ಬಂದು ನೋಡು. ಅದರಿಂದ ನೀನು ಹೊರ ಬರದಿದ್ದರೆ, ನಿನ್ನ ಹೋರಾಟದ ಬದುಕೇ ವ್ಯರ್ಥವಾಗಿ ಹೋಗಲಿದೆ.’ ಎಷ್ಟು ತಣ್ಣಗೆ ಹೇಳಿದ್ದಳು. ಆದರೆ ನಾನೇಕೆ ಹಾಗೆ ಕೂಗಾಡಿದ್ದೆ? ’ನಿನಗೆ ಅಮ್ಮನಿಗಿಂತ ಅವನೇ ಹೆಚ್ಚಾದನೆ?’ ಛೆ! ಎಂಥಾ ಅವಿವೇಕಿತನ ಅನ್ನಿಸಿತು ರಜನಿಗೆ.


ನನ್ನ ಮಾತಿನಿಂದ ಮಗಳು ಕೋಪ ಮಾಡಿಕೊಂಡಿರಬಹುದು, ಮಾತೂ ಆಡಿಸದಿರಬಹುದು ಎನ್ನಿಸಿತು. ಅಷ್ಟರಲ್ಲಿ ಸಾನ್ವಿ ಕಣ್ತೆರೆದು, ಅದೇ ತುಂಬು ಮುಗುಳ್ನಗೆಯಿಂದ ’ಅಮ್ಮಾ, ನೀನು ಮಲಗಿ ಬಿಟ್ಟಿದ್ದೆಯಲ್ಲ, ಅದಕ್ಕೆ ಎಚ್ಚರವಾಗುವವರೆಗೂ ಸುಮ್ಮನೆ ಕಣ್ಮುಚ್ಚಿ ಕುಳಿತಿದ್ದೆ ಅಷ್ಟೆ. ನಾನಿನ್ನು ಬರುತ್ತೇನೆ’ ಎಂದು ಬ್ಯಾಗು ಹಿಡಿದು ಸ್ವಲ್ಪ ಅವಸರದಲ್ಲೇ ಹೊರಟಳು. ಅವಳು ಸ್ಕೂಟರ್ ಹತ್ತಿ ಹೊರಟ ನಂತರವೇ ರಜನಿಗೆ ಗಡಿಯಾರ ನೋಡಬೇಕೆನ್ನಿಸಿದ್ದು. ನಿತ್ಯ ತಾನು ಏಳುವದಕ್ಕಿಂತ ಎರಡು ಗಂಟೆಗಳ ತಡವಾಗಿ ಎದ್ದಿದ್ದಾಳೆ! ನಾನು ಏಳಲೆಂದೇ ಕಾಯ್ದು, ಅರ್ಧಗಂಟೆ ತಡವಾಗಿ ಆಫೀಸಿಗೆ ಹೋಗುತ್ತಿದ್ದಾಳೆ. ಒಂದು ಕ್ಷಣ ರಜನಿಗೆ ನಾಚಿಕೆಯೆನ್ನಿಸಿತು. ಅಡುಗೆ ಮನೆಗೆ ನುಗ್ಗಿ ಕಾಫಿ ಮಾಡಿ ಕುಡಿಯುತ್ತಾ ಹಾಗೇ ವರಾಂಡಕ್ಕೆ ಬಂದು ಕುಳಿತುಕೊಂಡಳು.
ಮೊನ್ನೆ ಮೊನ್ನೆಯವರೆಗೂ ಪುಟಾಣಿಯಂತಿದ್ದ ಮಗಳು ಈಗ ಎಷ್ಟೊಂದು ಬೆಳೆದಿದ್ದಾಳೆ. ಮಾತು ಕೃತಿಯಲ್ಲಿ ಎಷ್ಟೊಂದು ಪ್ರಬುದ್ಧತೆ ಬಂದಿದೆ. ರಾತ್ರಿ ನಾನು ಅಷ್ಟೊಂದು ಜೋರು ಧ್ವನಿಯಲ್ಲಿ ಕಠಿಣವಾಗಿ ಮಾತನಾಡಿದರೂ ಮಗಳು ಧ್ವನಿಯೇರಿಸಲಿಲ್ಲ. ಆದರೆ ಹೇಳಬೇಕೆಂದಿರುವುದನ್ನು ಸ್ಪಷ್ಟವಾಗಿ ಹೇಳಿದಳು. ಈಗಿನ ಮಕ್ಕಳ ಧೈರ್ಯವೇ ಧೈರ್ಯ. ನನಗೆ ಈ ಧೈರ್ಯವಿದ್ದಲ್ಲಿ, ಈ ಇಪ್ಪತ್ತೈದು ವರ್ಷಗಳನ್ನು ನಾನು ಇನ್ನೂ ಉತ್ತಮವಾಗಿ ಕಳೆಯಬಹುದಾಗಿತ್ತು. ಕೊಟ್ಟ ಹೆಣ್ಣು ಕುಲಕ್ಕೆ ಹೊರತು ಎಂದು ದೂರ ಮಾಡಿದ ತಂದೆ ತಾಯಿ, ಮಗನನ್ನು ಬುಟ್ಟಿಗೆ ಹಾಕಿಕೊಂಡು ಮದುವೆ ಮಾಡಿಕೊಂಡಳು ಎಂದು ದ್ವೇಷ ಸಾಧಿಸುತ್ತಿದ್ದ ಅತ್ತೆ, ಗಂಡು ಮಗುವನು ಹೆರಲಿಲ್ಲ ಎಂಬ ನೆಪವನ್ನಿಟ್ಟುಕೊಂಡು ಆಸ್ತಿಯಾಸೆಗೆ ಬೇರೊಂದು ಮದುವೆಗೆ ಸಿದ್ಧನಾಗಿದ್ದ ಗಂಡ ಇವರೆಲ್ಲರ ನಡುವೆ ನನ್ನ ಬದುಕಿಗೆ ಒಂದು ಅರ್ಥವನ್ನು ಕೊಟ್ಟಿದ್ದು ಇದೇ ಮಗಳು. ನನಗೆ ಮಗಳಂತೆ ತಣ್ಣಗೆ ಇದ್ದು ಒಮ್ಮೆಲೆ ದೈರ್ಯ ಪ್ರದರ್ಶಿಸುವ ತಾಕತ್ತು ಇಲ್ಲದಿರಬಹುದು. ಆದರೆ, ಎಲ್ಲರಿಂದಲೂ ದೂರವಾಗಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಾನು ಬದುಕು ಕಟ್ಟಿಕೊಂಡಿದ್ದು, ಮಗಳನ್ನು ಸಜ್ಜನಳಾಗಿ ಬೆಳೆಸಿದ್ದು, ಒಳ್ಳೆಯ ಶಿಕ್ಷಣ ಕೊಡಿಸಿದ್ದು ಇವೆಲ್ಲವೂ ನನ್ನ ಧೈರ್ಯದ ಪ್ರತಿಫಲವೇ ಅಲ್ಲವೆ? ಆದರೆ ಹೀಗೇಕೆ ನಾನು ಧೈರ್ಯ ಕೆಡುತ್ತಿದ್ದೇನೆ. ಮಗಳು ನನಗೆ ಇದಿರಾಡಿದಳು ಎಂದೆ ಅಥವಾ ನನಗೆ ಈ ಗಂಡಸು ಜಾತಿಯ ಮೇಲೆ ಕಳೆದುಹೋಗಿರುವ ನಂಬಿಕೆಯೀಂದಲೇ… ಮುಗಿದು ಹೋಗಿದ್ದ ಕಾಫಿಯ ಕಪ್ಪನ್ನು ಹಾಗೇ ಹಿಡಿದು ಯೋಚಿಸುತ್ತಿದ್ದಳು ರಜನಿ.
ಇದೆಲ್ಲವೂ ಒಮ್ಮೆಲೆ ಸರಿಯಾಗಿಬಿಟ್ಟರೆ ಎಷ್ಟು ಚಂದ ಅನ್ನಿಸತು. ಮೊದಲಿನಂತೆ ನಾನು ನನ್ನ ಮಗಳು ನಡುವೆ ಯಾವುದೇ ಗೋಡೆ ಕಟ್ಟಿಕೊಳ್ಳದೆ ಮುಕ್ತವಾಗಿ ಮಾತನಾಡುವ ಸಂದರ್ಭ ಸೃಷ್ಟಿಯಾಗಬೇಕು. ಅದಕ್ಕೆ ಏನು ಮಾಡಬೇಕು? ಏನಾದರೂ ಮಾಡಲೇ ಬೇಕು ಅನ್ನಿಸಿತು ರಜನಿಗೆ. ಹೋರಾಟದಿಂದ ಬದುಕನ್ನು ರೂಪಿಸಿಕೊಂಡವಳಿಗೆ ಇದೊಂದು ಸಮಸ್ಯೆಯೇ ಅಲ್ಲವೆನ್ನಿಸಿ ಸ್ವಲ್ಪ ಸಮಾಧಾನವೆನ್ನಿಸಿತು. ಮೊದಲು, ಮೊದಲಿನಿಂದ ಏನೇನಾಯಿತು ಎಂದು ಯೋಚಿಸಬೇಕು, ವಿಚಾರ ಮಾಡಬೇಕು. ನಂತರ ನನ್ನ ಮತ್ತು ಸಾನ್ವಿ ಇಬ್ಬರ ಅಭಿಪ್ರಾಯಗಳನ್ನು ಮುಕ್ತವಾಗಿ ಯೋಚಿಸಬೇಕು. ಆಗ, ನಮ್ಮಿಬ್ಬರ ನಡುವಿನ ಈ ಕಹಿ ಘಟನೆಗೆ ಅಂತ್ಯ ಹಾಡಬಹುದು ಎನ್ನಿಸಿ, ಮನಸ್ಸಿನಲ್ಲಿ ಸ್ವಲ್ಪ ಧೈರ್ಯವೂ ಮೂಡಿತು. ಆ ಧೈರ್ಯವನ್ನು ಕಳೆದಕೊಳ್ಳುವ ಮೊದಲೇ ಕಾರ್ಯಪ್ರವೃತ್ತಳಾಗಿ ಇಂದು ಸಂಜೆಯ ಒಳಗಾಗಿ ನಾನು ಮತ್ತೆ ನನ್ನ ಮಗಳ ಮುದ್ದಿನ ಅಮ್ಮನಾಗಬೇಕು ಅನ್ನಿಸಿದ ಕ್ಷಣ ಮನಸ್ಸು ಒಂದು ರೀತಿಯ ಹಗುರತೆಯನ್ನು ಅನುಭವಿಸಿತು.
ಇವೆಲ್ಲವೂ ಶುರುವಾಗಿದ್ದು ಕಳೆದ ಮೂರು ತಿಂಗಳಿನಿಂದ. ಆತ ಬಂದು ಎಲ್ಲವನ್ನೂ ಕೆಡಿಸಿದನೆ, ಅಥವಾ ಹೊಸದೊಂದು ಸಮಸ್ಯೆಯನ್ನು ಹುಟ್ಟು ಹಾಕಿದನೆ? ಹಾಗೆ ನೋಡಿದರೆ ಆ ಸಮಸ್ಯೆಯ ಮೂಲ ಸಾನ್ವಿಯೇ ಹೊರತು ಅವನಲ್ಲ. ನೋಡುತ್ತಾ ಹೋದರೆ ಸಮಸ್ಯೆಯ ಮೂಲ ನಾನೇ ಅಲ್ಲವೆ? ಒಂದು ಕ್ಷಣ ನನ್ನ ಅತಿಯಾದ ಒಳ್ಳೆಯತನದಿಂದ ಭಾವುಕಳಾಗಿ ಅತಿಯಾದ ಆತ್ಮೀಯತೆಯನ್ನು ಅವನಿಗೆ ತೋರಿಸಿದೆನೆ? ನಾನು ಅವನೊಡನೆ ನಿರ್ಭಾವುಕಳಾಗಿ ವರ್ತಿಸಿಬಿಟ್ಟಿದ್ದರೆ ಈ ಸಮಸ್ಯೆಯೇ ಏಳುತ್ತಿರಲಿಲ್ಲ. ಅವನಾರೊ? ನಾವಾರೊ? ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ನನ್ನ ಬದುಕಿನಲ್ಲಿ ನಡೆದ ಒಂದು ಆಕಸ್ಮಿಕ ಘಟನೆಯ ನೆಪವಾಗಿ ಈಗ ಈತ ಅವತರಿಸಿದ್ದಾನೆ ಎಂದರೆ ಅದು ಬದುಕಿನ ವೈಚಿತ್ರವಲ್ಲವೆ? ಅಥವಾ ಬದುಕೆಂಬುದು ಇರುವುದು ಹೀಗೆಯೇ?… ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮೂಡುತ್ತಾ ರಜನಿಗೆ ಹಿಂದೆ ನಡೆದ್ದೆಲ್ಲವೂ ಒಮ್ಮೆ ನೆನಪಾಗತೊಡಗಿತ್ತು. ಸಮಸ್ಯೆಯ ಪರಿಹಾರಕ್ಕೆ ಅದು ಅವಶ್ಯವೂ ಆಗಿತ್ತು ಹಾಗೂ ಅದಕ್ಕೆ ರಜನಿಯ ಮನಸ್ಸು ಸಿದ್ಧವಾಗಿಯೂ ಇತ್ತು.
ರಜನಿ ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದ ಮೇಲೆಯೇ ಪ್ರೀತಿಯಲ್ಲಿ ಬಿದ್ದಿದ್ದು. ಅಪ್ಪ ಅಮ್ಮ ಸಂಪ್ರದಾಯವಾದಿಗಳು. ಈ ಪ್ರೀತಿಗೀತಿ ಎಂದರೆ ಮಾರುದ್ದ ಹಾರುತ್ತಿದ್ದರು. ಆದರೆ ರಜನಿಯನ್ನು ಪ್ರೀತಿಸಿದ್ದ ಆನಂದನಿಗೆ ಯಾವುದರಲ್ಲೂ ಕೊರತೆಯಿರಲಿಲ್ಲ; ಅಪ್ಪ ಇರಲಿಲ್ಲ ಎಂಬುದೊಂದನ್ನು ಬಿಟ್ಟು. ರಜನಿಯ ಅಪ್ಪ ಅಮ್ಮ ’ಎಂತದೊ ಒಂದು ಗಂಡನ್ನು ಅವಳೇ ಹುಡುಕಿಕೊಂಡಿದ್ದಾಳೆ. ಅದೊಂದನ್ನು ಬಿಟ್ಟರೆ ಆನಂದ ನಿರಾಕರಿಸುವಂತಹ ಸಂಬಂಧವೇನೂ ಅಲ್ಲ. ಅಂತೂ ’ನೀನು ಪ್ರೀತಿಸಿದ್ದೀಯ, ಆರಿಸಿಕೊಂಡಿದ್ದೀಯ. ಮುಂದಿನದಲ್ಲೆಕ್ಕೂ ನೀನೆ ಜವಾಬ್ದಾರಿ’ ಎಂದು ಮದುವೆಗೆ ಒಪ್ಪಿಬಿಟ್ಟಿದ್ದರು. ಮದುವೆಯೂ ಚೆನ್ನಾಗಿಯೇ ನಡೆದು ಹೋಯಿತು. ಆದರೆ, ಮದುವೆಯಾಗಿ ಗಂಡನ ಮನೆಯಲ್ಲಿ ನೆಲೆ ನಿಂತ ಮೇಲೆಯೇ ಗೊತ್ತಾಗಿದ್ದು, ಅವಳ ಅತ್ತೆಗೆ ಆ ಮದುವೆ ಇಷ್ಟವಿರಲಿಲ್ಲ ಎಂದು. ಮಾತು ಮಾತಿಗೂ ’ನನ್ನ ಮಗನನ್ನು ಬುಟ್ಟಿಗೆ ಹಾಕಿಕೊಂಡು ಮದುವೆ ಮಾಡಿಕೊಂಡೆ’ ಎಂಬ ಅರ್ಥ ಬರುವಂತೆ ಅತ್ತೆ ಮಾತನಾಡುತ್ತಿದ್ದರು. ಆದರೂ ರಜನಿಗೆ ಬದುಕು ಸಹ್ಯವಾಗಿಯೇ ಇತ್ತು. ಆನಂದನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಕಡಿಮೆ ಸಂಬಳದ್ದಾದರೂ ಅವಳಿಗೊಂದು ಕೆಲಸವೂ ಇತ್ತು. ಎಲ್ಲವೂ ಚೆನ್ನಾಗಿತ್ತು… ಸಾನ್ವಿ ಹುಟ್ಟುವವರೆಗೆ!
ಸಾನ್ವಿ ಇನ್ನು ಹೊಟ್ಟೆಯಲ್ಲಿದ್ದಾಗಲೇ ಆನಂದ ಸ್ವಲ್ಪ ಅಂತರ್ಮುಖಿಯಂತೆ ವರ್ತಿಸುತ್ತಿದ್ದು, ಕೆಲವೊಮ್ಮೆ ಮಾತಿನಲ್ಲಿ ಒರಟುತನ ರಜನಿಯ ಗಮನಕ್ಕೆ ಬಂದಿತ್ತಾದರೂ, ಅವರಿಗೆ ಬೇಕೆಂದಾಗಲೆಲ್ಲಾ ನಾನು ಮೊದಲಿನಂತೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹೀಗೆ ಆಡುತ್ತಿರಬಹುದು ಎಂದುಕೊಂಡಿದ್ದಳು. ಒಮ್ಮೆ ಮಗುವಾದ ಮೇಲೆ ಮತ್ತೆ ಸರಿಹೋಗುತ್ತಾರೆಂಬ ಸಮಾಧಾನದಿಂದಲೇ ಮಗುವಿನ ನಿರೀಕ್ಷೆ ಮಾಡುತ್ತಿದ್ದಳು. ಆದರೆ ಆಗಿದ್ದೇನು? ಹೆರಿಗೆಯಲ್ಲಿ ತುಂಬಾ ತೊಂದರೆಯಾಯಿತು. ತಾಯಿ ಮಗು ಇಬ್ಬರಲ್ಲಿ ಒಬ್ಬರನ್ನು ಉಳಿಸಿಕೊಳ್ಳಬೇಕಾದ ಸಂದರ್ಭವೆಂದು ಡಾಕ್ಟರು ಹೇಳಿದ್ದರಂತೆ. ಹೇಗೋ, ತಾಯಿ ಮಗಳಿಬ್ಬರು ಉಳಿದರು. ಆದರೆ, ಆದರೆ… ಮುಂದೆ ತಾಯಿಯಾಗುವ ಭಾಗ್ಯ ರಜನಿಗಿಲ್ಲ ಎಂದು ಡಾಕ್ಟರು ಹೇಳಿದಾಗ, ಆ ಕ್ಷಣ ರಜನಿಗೆ ಏನೂ ಅನ್ನಿಸಲಿಲ್ಲ. ಮುದ್ದಾದ ಮಗು ಇದೆಯಲ್ಲ ಸಾಕು ಅನ್ನಿಸಿಬಿಟ್ಟಿತು. ರಜನಿ ಹೆರಿಗೆಯ ನೋವಿನಲ್ಲಿದ್ದಾಗ ಹೊರಗೆ ಅತ್ತೆ ಗಂಡ ಏನೆಂದುಕೊಂಡಿದ್ದರೊ ಅವಳಿಗೆ ತಿಳಿಯದು. ಆದರೆ ಹೆಣ್ಣು ಮಗು ಎಂದಾಕ್ಷಣ, ಅತ್ತೆ ಮಗುವನ್ನು ಮುಟ್ಟಿಯೂ ನೋಡದೆ ಮುಖ ತಿರುಗಿಸಿ ಹೊರಟಿದ್ದರು. ಗಂಡನ ನಡುವಳಿಕೆಯಲ್ಲಿ ಮೊದಲಿದ್ದ ಅಂತರ್ಮುಖತೆ, ಮಾತಿನಲ್ಲಿದ್ದ ಒರಟುತನ ಹೆಚ್ಚಾಯಿತು. ಮಾತು ಮಾತಿನಲ್ಲೂ ಗಂಡು ಮಗುವನ್ನು ನೀನು ಹೆರಲಿಲ್ಲ ಎಂಬುದೇ ಅವನ ಅಭಿವ್ಯಕ್ತಿಯಾಗಿತ್ತು. ಸರಿಯಾಗಿ ಮುಖಕ್ಕೆ ಮುಖಕೊಟ್ಟು ಮಾತನಾಡುತ್ತಿರಲಿಲ್ಲ. ಮೊದಲೇ ರಜನಿಯೆಂದರೆ ದ್ವೇಷ ಸಾಧಿಸುತ್ತಿದ್ದ ಅತ್ತೆಗೆ, ಮಗನ ಈ ನಡವಳಿಕೆ ಒಳ್ಳೆಯ ಅಸ್ತ್ರವಾಗಿಬಿಟ್ಟಿತ್ತು. ಅದು ದಿನ ಕಳೆದಂತೆ ಬೆಳೆಯುತ್ತಲೇ ಹೋಗಿ ಬದುಕು ಅಸಹನೀಯ ಅನ್ನಿಸಿಬಿಟ್ಟಿತು ರಜನಿಗೆ.
ಸಾನ್ವಿಗೆ ಆರೇಳು ತಿಂಗಳು ತುಂಬುವುದರೊಳಗೆ ಅವಳ ಗಂಡನಿಗಿದ್ದ ಹೊರ ಸಂಬಂಧವೊಂದರ ಸುಳಿವು ರಜನಿಗೆ ದೊರೆತು ಕ್ರುದ್ಧಳಾದಳು. ಅಪ್ಪ ಅಮ್ಮ ಇಬ್ಬರೂ ವಿಷಯ ತಿಳಿದರೂ ನಿರ್ಲಿಪ್ತರಾಗಿ ನಿನ್ನ ಸಂಸಾರ ನಿನ್ನದು ಎಂದು ಕೈ ತೊಳೆದುಕೊಂಡುಬಿಟ್ಟಿದ್ದರು. ಗಂಡ ಅತ್ತೆ ಬಾಯಿ ಬಿಟ್ಟು ’ಮನೆ ಬಿಟ್ಟು ತೊಲಗು’ ಎಂದು ಹೇಳಲಿಲ್ಲ ಅಷ್ಟೆ. ಆದರೆ ಮಾಡಬೇಕಿದ್ದಲ್ಲೆವನ್ನೂ ಮಾಡುತ್ತಲೇ ಇದ್ದರು. ಅಂತಹ ಅಸಹನೀಯ ಬದುಕಿಗೆ ಒಂದು ಅಂತ್ಯ, ತುಂಬಾ ನಾಟಕೀಯವಾಗಿ ಒದಗಿ ಬಂತು.
ಸಾನ್ವಿ ಹುಟ್ಟಿ ವರ್ಷವಾದರೂ ಕೆಲಸಕ್ಕೆ ಹೋಗಿರಲಿಲ್ಲ. ಕೆಲಸಕ್ಕೆ ಹೋದರೆ ಸಾನ್ವಿಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಒಂದು ವರ್ಷ ತುಂಬುತ್ತಲೇ, ಅತ್ತೆ ಗಂಡ ಕೆಲಸಕ್ಕೆ ಹೋಗಕೂಡದೆಂದು ಎಷ್ಟೇ ಹೆದರಿಸಿದರೂ ಕೇಳದೆ ಮಗುವನ್ನು ಡೇ ಕೇರಿನಲ್ಲಿ ಹಾಕಿ ಕೆಲಸಕ್ಕೆ ಸೇರಿಬಿಟ್ಟಳು. ಒಂದೆರಡು ತಿಂಗಳು ಕಳೆದಿರಬಹುದು ಅಷ್ಟೆ. ಒಂದು ದಿನ ಸಂಜೆ ಆಫೀಸಿನಲ್ಲಿ ಕೆಲಸ ಹೆಚ್ಚಿದ್ದರಿಂದ ತಡವಾಗಿ, ಮಗಳನ್ನು ಕರೆದುಕೊಂಡು ಬರಲು ಡೇ ಕೇರಿನತ್ತ ಹೆಜ್ಜೆ ಹಾಕುತ್ತಿದ್ದಳು. ಹಾದಿಯಲ್ಲಿ ಬೃಹತ್ತಾಗಿ ಬೆಳೆದಿದ್ದ ಮರಗಳ ಸಾಲಿನಲ್ಲಿ ಸಾಗಬೇಕಾದರೆ ಯಾರೋ ಒಬ್ಬ ಧುತ್ತನೆ ಬಂದು ಎದುರಿಗೆ ನಿಂತು, ಚಾಕು ತೋರಿಸಿ ಹಣಕೊಡುವಂತೆ ಕೇಳಿ ಕೈಯಲ್ಲಿದ್ದ ಪರ್ಸ್ ಕಿತ್ತುಕೊಂಡ. ರಜನಿಗೆ ಜೀವ ಬಾಯಿಗೆ ಬಂದಿತು. ಆದರೂ ಸಾವಾರಿಸಿಕೊಂಡು, ಅದರಲ್ಲಿ ಹಣವಿಲ್ಲ. ಇದ್ದರೂ ನೂರೊ ಇನ್ನೂರೊ ಅಷ್ಟೆ ಎಂದಳು. ಆ ರಸ್ತೆಯಲ್ಲಿ ಜನಸಂಚಾರವೂ ಇರಲಿಲ್ಲ. ಆತ ಅತ್ತಿತ್ತ ನೋಡುತ್ತ ಸ್ವಲ್ಪ ಭಯದಿಂದಲೇ ಹಿಂದಿ ಮಿಶ್ರಿತ ಕನ್ನಡ ಭಾಷೆಯಲ್ಲಿ ಏನೇನೊ ಮಾತನಾಡುತ್ತಿದ್ದ. ಮಾತಿನ ಭರದಲ್ಲಿ ಆತ ಹಿಡಿದಿದ್ದ ಚಾಕು ಯಾವಾಗಲೊ ಆತನ ಪ್ಯಾಂಟಿನ ಜೇಬು ಸೇರಿತ್ತು. ಸಮಯ ನೋಡಿ ಕಿರುಚಿಕೊಳ್ಳಬೇಕು ಅಂದುಕೊಳ್ಳುತ್ತಿದ್ದ ರಜನಿಗೆ, ಆತನ ಮಾತುಗಳ ನಡುವೆ ಬಿಕ್ಕುತ್ತಿರುವ ಧ್ವನಿ ಕೇಳಿ ಸುಮ್ಮನಾಗಿಬಿಟ್ಟಳು. ಆಗ ಅವಳಿಗೆ ಅರ್ಥವಾಗಿದ್ದಿಷ್ಟು. ಆತ, ಯಾವುದೊ ಕಂಪೆನಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದಾನೆ. ಅವನಿಗೆ ಆರು ವರ್ಷದ ಮಗನಿದ್ದಾನೆ. ತಾಯಿಯಿಲ್ಲದ ತಬ್ಬಲಿ. ಆತನಿಗೆ ಸಖತ್ ಖಾಯಿಲೆ. ತುರ್ತಾಗಿ ಆಪರೇಷನ್ ಆಗಬೇಕು ಕನಿಷ್ಠ ಹತ್ತು ಸಾವಿರಾವದರೂ ಬೇಕು. ಎಲ್ಲೂ ಸಾಲ ಸಿಗಲಿಲ್ಲ. ಈ ಊರಿನಲ್ಲಿ ಯಾರೂ ಪರಿಚಯದವರಿಲ್ಲ. ಮಗನನ್ನು ಉಳಿಸಿಕೊಳ್ಳಬೇಕು ಎಂಬ ಒಂದೇ ಆಸೆಯಿಂದ ಕಳ್ಳತನಕ್ಕೆ ಬಂದೆ. ಇಲ್ಲೂ ಏನು ಗಿಟ್ಟಲಿಲ್ಲ ಎಂದು ಗೋಳಾಡಿದ್ದ ಆತ, ಏನಾದರೂ ಸಹಾಯ ಮಾಡುವಂತೆ ಬೇಡಿಕೊಂಡ.
ರಜನಿ, ತನ್ನ ಬಳಿ ಏನೂ ಇಲ್ಲವೆಂದು, ಆತನಿಂದ ಕೊಸರಿಕೊಂಡು ಹೋಗುವ ಸಂದರ್ಭದಲ್ಲೇ ಆಕೆಯ ಕೊರಳಲ್ಲಿದ್ದ ಮಾಂಗಲ್ಯದ ಸರ ಆತನ ಕಣ್ಣಿಗೆ ಬಿದ್ದಿದ್ದು. ಕ್ಷಣಾರ್ಧದಲ್ಲಿ ಚಾಕನ್ನು ಮತ್ತೆ ಹೊರತೆಗೆದು ಆಕೆಯ ಕುತ್ತಿಗೆಗೆ ಹಿಡಿದು, ಸರವನ್ನು ಕಿತ್ತುಕೊಂಡುಬಿಟ್ಟಿದ್ದ. ಅವಳನ್ನು ಬಿಟ್ಟು ಹೊರಟ ಆತ ಒಂದು ಕ್ಷಣ ತಡೆದು ಮತ್ತೆ ಅವಳ ಕೈಸೇರಿದ್ದ ಬ್ಯಾಗನ್ನೂ ಕಿತ್ತು ಕ್ಷಣಾರ್ಧದಲ್ಲಿ ಮರಗಳ ಸಾಲಿನ ಕತ್ತಲಲ್ಲಿ ಮರೆಯಾಗಿಬಿಟ್ಟಿದ್ದ. ಮಗನ ಖಾಯಿಲೆಯ ಕಾರಣದಿಂದ ಅಳುತ್ತಿದ್ದ ಅವನ ಬಗ್ಗೆ, ತನ್ನ ಮಗುವನ್ನು ಕರೆದು ತರಲು ಹೊರಟಿದ್ದ ರಜನಿ ಸ್ವಲ್ಪ ಕರುಣೆಯಿಂದಲೇ ಅವನ ಮಾತುಗಳನ್ನು ಆಲಿಸುತ್ತಿದ್ದವಳು, ಅವನ ಈ ನಡೆಯನ್ನು ನಿರೀಕ್ಷಿಸಿಯೇ ಇರಲಿಲ್ಲ. ಆಗಲೇ ಸಾಕಷ್ಟು ತಡವಾಗಿದ್ದುದರಿಂದ, ಮನೆಯಲ್ಲಿ ಗಂಡ ಅತ್ತೆಯರ ಮಾತಿನ ಧಾಳಿಯನ್ನು ಎದುರಿಸಬೇಕಾದ್ದರಿಂದ ಹಾಗೂ ಇನ್ನು ಕೂಗಿದರೂ ಉಪಯೋಗವಿಲ್ಲ ಎಂದುಕೊಂಡು ಡೇ ಕೇರಿನತ್ತ ನಡೆದಳು.

ಅವಳ ನಿರೀಕ್ಷೆಯಂತೆ ಮನೆಯಲ್ಲಿ ಅತ್ತೆ ಗಂಡ ಇಬ್ಬರೂ ಧಾಳಿಗೆ ಸಿದ್ಧರಾಗಿ ನಿಂತಿದ್ದರು. ರಜನಿ ಸಂಯಮದಿಂದಲೇ ನಡೆದುದೆಲ್ಲವನ್ನೂ ಹೇಳಿದಳು. ಅವರ ಕೋಪದ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಮಾಂಗಲ್ಯ ಸರವನ್ನು ಕಳೆದುಕೊಂಡು ಬಂದಿದ್ದಾಳೆ ಎಂಬುದು. ಬಾಯಿಗೆ ಬಂದಹಾಗೆ ಮಾತನಾಡಿ, ಯಾವನೊ ಮಿಂಡನಿಗೆ ಕೊಟ್ಟು ಬಂದಿದ್ದಾಳೆ; ಅದಕ್ಕೇ ಇಷ್ಟು ಸಮಾಧಾನದಿಂದ ಇದ್ದಳೇ ಎಂದು ರಜನಿಯನ್ನು ಹಾಗೂ ಏನೂ ಅರಿಯದ ಕಂದನನ್ನು ಅನಿಷ್ಟವೆಂದು ನಿಂದಿಸಿದಾಗ, ರಜನಿಗೆ ಅಸಹ್ಯ ಎನ್ನಿಸಿಬಿಟ್ಟಿತು. ತನ್ನ ಒಂದಷ್ಟು ಬಟ್ಟೆಗಳನ್ನು ಬ್ಯಾಗಿಗೆ ತುರುಕಿಕೊಂಡು ಮಗುವನ್ನು ಎತ್ತಿಕೊಂಡು ಮನೆ ಬಿಟ್ಟು ಹೊರಟೇಬಿಟ್ಟಳು. ಆ ರಾತ್ರಿಯನ್ನು ಸ್ನೇಹಿತೆಯೊಬ್ಬಳ ಮನೆಯಲ್ಲಿ ಕಳೆದು ಮುಂದಿನ ದಾರಿಯನ್ನು ನಿರ್ಧರಿಸಿಬಿಟ್ಟಿದ್ದಳು. ವರ್ಷ ತುಂಬುವಷ್ಟರಲ್ಲಿ ಆನಂದನ ಸಂಬಂಧಕ್ಕೆ ವಿಚ್ಛೇಧನದ ಮುದ್ರೆಯೊತ್ತಿ, ಮಗಳ ಭವಿಷ್ಯಕ್ಕೆ ಪಣತೊಟ್ಟವಳಿಗೆ, ಆತ ಇನ್ನೊಂದು ಮದುವೆಯಾದ ಸುದ್ದಿ ತಿಳಿದಾಗಲು ಮನಸ್ಸು ವಿಕಾರವಾಗಿರಲಿಲ್ಲ.
ಅಂದಿನಿಂದ ಶುರುವಾದ ಅವಳ ಹೋರಾಟದ ಬದುಕು ಒಂದು ನೆಲೆ ನಿಂತು, ಮಗಳಿಗೆ ಮದುವೆ ಮಾಡುವ ಆಲೋಚನೆ ಅವಳ ಮನಸ್ಸಿಗೆ ಬರುಷ್ಟರಲ್ಲಿಯೇ ಈಗಿನ ಸಮಸ್ಯೆ ಶುರುವಾಗಿದ್ದು. ಮೂರು ತಿಂಗಳ ಹಿಂದೆ, ಅವಳಿಗೆ ಬಂದ ಕಾಗದಲ್ಲಿ, ಇಂತಹ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರಜನಿ ಎಂಬುವವರು ನೀವೇ ಆಗಿದ್ದರೆ, ನಿಮ್ಮನ್ನು ಬೇಟಿಯಾಗಿ ಒಂದು ವಿಷಯವನ್ನು ಅರಿಕೆ ಮಾಡಿಕೊಳ್ಳಬೇಕಾಗಿದೆ. ದಯಮಾಡಿ ಅವಕಾಶ ಮಾಡಿಕೊಡಿ. ನೀವು ಕೆಲಸ ಮಾಡುತ್ತಿದ್ದ ಕಛೇರಿಯಿಂದಲೇ ಈ ಮನೆಯ ವಿಳಾಸ ತಿಳಿದುಕೊಂಡೆ ಎಂದು ಬರೆದಿತ್ತು. ಕೆಳಗೆ ಕುಲವಂತ್ ಎಂಬ ಹೆಸರೂ ಅದರ ಕೆಳಗೆ ಮೊಬೈಲ್ ನಂಬರ್ ಬರೆದಿತ್ತು. ರಜನಿಗೆ ಏನೊಂದೂ ಅರ್ಥವಾಗಲಿಲ್ಲ. ಕಾಗದದಲ್ಲಿ ತಿಳಿಸಿದಂತೆ ಆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದವಳು ಅವಳೆ. ಆದರೆ ಈ ಕುಲವಂತ್ ಯಾರು? ಆತ ನನ್ನನ್ನು ಏಕೆ ಭೇಟಿಯಾಗಬೇಕು? ಆತನ ನನಗೆ ತಿಳಿಸಬೇಕಾಗಿರುವ ವಿಷಯ ಯಾವುದು? ತುಂಬಾ ತಲೆಕೆಡಿಸಿಕೊಂಡಳು. ಮಗಳಲ್ಲೂ ಈ ವಿಷಯ ತಿಳಿಸಿ ಪರಿಹಾರ ಕೇಳಿದಳು. ಮಗಳು, ಅದೊಂದು ಸಮಸ್ಯೆಯೇ ಅಲ್ಲವೆನ್ನುವಂತೆ ’ಅಮ್ಮಾ, ಹೀಗೆ ವಿಷಯ ತಿಳಿಯದೇ ಒದ್ದಾಡುವುದಕ್ಕಿಂತ, ಆತನನ್ನು ಬರಲು ಹೇಳು. ವಿಷಯ ಏನೆಂದು ತಿಳಿಯುತ್ತದೆ. ಆಮೇಲೆ ಮುಂದೇನು ಎಂದು ಯೋಚಿಸೋಣ’ ಎಂದಿದ್ದಳು. ಸಾನ್ವಿಯೇ ಕಾಗದದಲ್ಲಿದ್ದ ನಂಬರಿಗೆ ಮೆಸೇಜ್ ಮಾಡಿ, ಮುಂದಿನ ಭಾನುವಾರ ನೀವು ಬಂದು ಅಮ್ಮನನ್ನು ಭೇಟಿಯಾಗಬಹುದು ಎಂದು ತಿಳಿಸಿದಳು.
ಭಾನುವಾರ ಹತ್ತಿರವಾದಂತೆ ರಜನಿ ಉದ್ವೇಗದಲ್ಲಿ ಮುಳಗಿ ಏಳುತ್ತಿದ್ದಳು. ಸಾನ್ವಿ ಮಾತ್ರ ಯಾವುದೇ ಒತ್ತಡಕ್ಕೂ ಒಳಗಾಗದೆ, ಅಮ್ಮನಿಗೆ ಸಮಾಧಾನ ಹೇಳುತ್ತ, ’ನಾನಿದ್ದೇನಲ್ಲ’ ಎನ್ನುತ್ತಿದ್ದಳು. ಸುಮಾರು ಹತ್ತು ಗಂಟೆಯ ವೇಳೆಗೆ, ಮನೆಯ ಮುಂದೆ ಟ್ಯಾಕ್ಸಿಯೊಂದು ನಿಂತಾಗ ಇಬ್ಬರೂ ಅದಕ್ಕೆ ಕಣ್ಣಾದರು. ಸುಮಾರು ಮೂವತ್ತು ಮೂವತ್ತೈದರ ಕಟ್ಟುಮಸ್ತಾದ ಯುವಕನೊಬ್ಬ ಇಳಿದು ಅವರೆಡೆಗೆ ಬಂದ. ಯಾರೂ ಬೇಕಾದರೂ, ಆತ ಪೊಲೀಸು ಎಂದೊ ಮಿಲಿಟರಿಯವನು ಎಂದೊ ಹೇಳಬಹುದಿತ್ತು, ಹಾಗಿತ್ತು ಆತನ ದೃಢ ನಿಲುವು. ಅಚ್ಚುಕಟ್ಟಾದ ಕ್ರಾಫ್ ಕಟ್, ಪ್ರಕಾಶಮಾನವಾಗಿ ಹೊಳೆಯುತ್ತಿರುವ ಕಣ್ಣುಗಳು, ಮುಗುಳುನಗೆಯನ್ನು ಸೂಸುತ್ತಿದ್ದ ಆತನ ಮುಖದಲ್ಲಿ ಒಂದು ರೀತಿಯ ಗಾಂಭೀರ್ಯವಿತ್ತು. ಮುಂದೆ ಸಾಗಿ ಬಂದವನು, ’ರಜನಿ ಯಾರು?’ ಎಂಬ ಅರ್ಥದಲ್ಲಿ ನೋಡಿ, ಅರ್ಥವಾದವನಂತೆ ತುಸು ಬಾಗಿ ರಜನಿಗೆ ನಮಸ್ಕರಿಸಿದ. ಆರಂಭದ ಸ್ವಾಗತವಾದ ಮೇಲೆ ಮಾತಿಗೆ ಕುಳಿತ ಆತ, ತನ್ನ ಹೆಸರು ಕುಲವಂತ್ ಎಂದು ಪರಿಚಯಿಸಿಕೊಂಡು ತಾನು ಬಂದ ಉದ್ದೇಶವನ್ನು ಹೇಳಿದ್ದ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ರಜನಿಯ ಮಾಂಗಲ್ಯವನ್ನು ಕಿತ್ತು ಓಡಿ ಹೋಗಿದ್ದ ಬಲವಂತ್ ಎಂಬ ಸೆಕ್ಯುರಿಟಿ ಗಾರ್ಡ್ ಈಗ ದಿವಂಗತ. ಆತನ ಮಗನೇ ಈ ಕುಲವಂತ್. ಅಪ್ಪ ನಿಮಗೆ ಕೊಡಬೇಕೆಂದು ಒಂದು ಪತ್ರವನ್ನು ಕೊಟ್ಟು, ಅದರ ಜೊತೆಯಲ್ಲಿ ಈ ಒಂದು ಲಕ್ಷ ರುಪಾಯಿಯನ್ನು ನಿಮಗೆ ತಲುಪಿಸುವಂತೆ ಸಾಯುವ ಮುನ್ನ ನನ್ನಿಂದ ಮಾತು ತೆಗೆದುಕೊಂಡಿದ್ದ ಎಂದು ತಿಳಿದಾಗ ರಜನಿಗೆ ಮಾತೇ ಹೊರಡಲಿಲ್ಲ. ರಜನಿ ಪತ್ರವನ್ನು ಓದಿ ದಿಘ್ಮೂಢಳಾಗಿ ಸಾನ್ವಿಯ ಕೈಗೆ ಇತ್ತಿದ್ದಳು. ಸಾನ್ವಿ ಪತ್ರವನ್ನು ಓದಿ ಸನ್ನಿವೇಶವನ್ನು ಅರ್ಥ ಮಾಡಿಕೊಂಡಳು.
ಅಂದು ರಜನಿಯ ಮಾಂಗಲ್ಯವನ್ನು ಕದ್ದು ಓಡಿ ಹೋಗಿದ್ದ ಬಲವಂತ್ ಅದನ್ನು ಮಾರಿ ಮಗನ ಆಪರೇಷನ್ ಮಾಡಿಸಿದ್ದ. ಆದರೆ ಆತನಿಗೆ ತಾನು ಮಾಡಿದ್ದು ತಪ್ಪು. ಹೆಣ್ಣು ಮಗಳ ಮಾಂಗಲ್ಯವನ್ನು ಕಿತ್ತು ತಪ್ಪು ಮಾಡಿದೆ ಎಂಬ ಪಾಪಪ್ರಜ್ಞೆ ಕಾಡತೊಡಗಿತು. ಹೇಗಾದರೂ ಮಾಡಿ ಅದನ್ನು ಯಾವ ರೂಪದಲ್ಲಾದರೂ ಹಿಂತಿರುಗಿಸಿ ಆ ತಾಯಿಯಲ್ಲಿ ತಾನು ಕ್ಷಮೆ ಕೇಳಬೇಕೆಂದುಕೊಂಡ. ಆತನ ಈ ನಿರ್ಧಾರ ಆತನಿಗೆ ಮಾಂಗಲ್ಯ ಸರ ಕಿತ್ತುಕೊಂಡ ಕ್ಷಣದಲ್ಲಿಯೇ ಮನೋಗಮ್ಯವಾಗಿತ್ತೊ ಏನೋ, ಆಕೆಯ ಬ್ಯಾಗನ್ನು ಕಿತ್ತು ತಂದಿದ್ದ. ಅದರಲ್ಲಿದ್ದ ಅವಳ ಕಛೇರಿಯ ವಿಳಾಸವಿದ್ದ ಕಾರ್ಡುಗಳನ್ನು ಎತ್ತಿಟ್ಟುಕೊಂಡಿದ್ದ. ತಾನು ಇನ್ನು ಇಲ್ಲಿದ್ದರೆ, ಪೋಲೀಸರ ಕೈಗೆ ಸಿಕ್ಕಿ ಬೀಳಬಹುದು. ಇದರಿಂದ ನನ್ನ ಮಗ ಅನಾಥನಾಗಬೇಕಾಗುತ್ತದೆ. ಜೊತೆಗೆ ನಾನು ಋಣಮುಕ್ತನಾಗುವುದೂ ಸಾಧ್ಯವಿಲ್ಲ. ಆದ್ದರಿಂದ ಈ ಊರನ್ನೇ ಬಿಟ್ಟು, ಬೇರೆಲ್ಲಾದರೂ ನೆಲೆಸಿ, ತನ್ನ ಕಾರ್ಯವನ್ನು ಸಾಧಿಸಬೇಕೆಂದು ಯೋಜಿಸಿ. ತನ್ನ ತವರು ರಾಜ್ಯದ ಡೆಹ್ರಾಡೂನನ್ನು ಸೇರಿಬಿಟ್ಟಿದ್ದ. ಅಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿ, ಆತ ಭಾರತೀಯ ಸೇನೆಯಲ್ಲಿ ಒಳ್ಳೆಯ ಹುದ್ದೆಗೆ ಸೇರಿಸುವಲ್ಲಿ ತನ್ನ ಇಡೀ ಬದುಕನ್ನೇ ಸವೆಸಿದ್ದ. ಇನ್ನೇನು ಎಲ್ಲಾ ಕೆಲಸ ಮುಗಿಯಿತು, ಮಗನಿಗೆ ಮದುವೆ ಮಾಡುವ ಮೊದಲು ನಾನು ಋಣಮುಕ್ತನಾಗಬೇಕು ಎಂದುಕೊಳ್ಳುವಷ್ಟರಲ್ಲಿ ಕ್ಯಾನ್ಸರ್ ಆತನನ್ನು ಆವರಸಿಕೊಂಡಿತ್ತು. ಅದರಲ್ಲಿಯೇ ನಾಲ್ಕು ವರ್ಷಗಳನ್ನು ಕಳೆದ ಆತ ಒಂದು ದಿನ ಮಗನನ್ನು ಕರೆಸಿ ಎಲ್ಲಾ ವಿಷಯ ತಿಳಿಸಿ ಕಣ್ಣು ಮುಚ್ಚಿಬಿಟ್ಟಿದ್ದ.
ಆಗಲೇ ಕುಲವಂತನಿಗೆ, ಅಪ್ಪ ನನಗೆ ಕನ್ನಡ ಮಾತನಾಡುವುದನ್ನು ಏಕೆ ಕಲಿಸಿದ್ದ, ಕರ್ನಾಟಕದ ಬಗ್ಗೆ ಏಕೆ ಹೆಚ್ಚಿಗೆ ತಿಳಿಸಿ ಹೇಳುತ್ತಿದ್ದ ಎಂಬ ಹಲವಾರು ಅನುಮಾನಗಳಿಗೆ ಉತ್ತರ ದೊರಕಿದ್ದು. ಅಪ್ಪ ಅವನ ಮನಸ್ಸಿನಲ್ಲಿ ಬಹು ದೊಡ್ಡ ವ್ಯಕ್ತಿಯಾಗಿ ಬೆಳೆದು ನಿಂತಿದ್ದ. ಕುಲವಂತ್ ಅಪ್ಪ ಕೊಟ್ಟಿದ್ದ ಕಛೆರಿಗೆ ಸಂಪರ್ಕ ಸಾಧಿಸಿ ರಜನಿಯ ವಿಳಾಸ ಪತ್ತೆ ಹಚ್ಚುವಷ್ಟರಲ್ಲಿ ಮೂರು ತಿಂಗಳುಗಳೇ ಕಳೆದು ಹೋಗಿದ್ದವು. ’ಅಪ್ಪ ಅಂದು ಮಾಡಿದ ತಪ್ಪಿಗೆ ಅಪ್ಪನ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ದಯಮಾಡಿ, ಇದನ್ನು ಸ್ವೀಕರಿಸಿ ನಮ್ಮ ತಂದೆಯನ್ನು ಋಣಮುಕ್ತನನ್ನಾಗಿ ಮಾಡಬೇಕು. ಆ ಮೂಲಕ ಅವನ ಆತ್ಮಕ್ಕೆ ಶಾಂತಿ ದೊರಕಿಸಬೇಕು’ ಎಂದು ಕೈಮುಗಿದು ನಿಂತಿದ್ದ ಕುಲವಂತನನ್ನು ನೋಡಿ ರಜನಿ, ಸಾನ್ವಿ ಇಬ್ಬರೂ ಮಾತಿಲ್ಲದವರಾದರು. ರಜನಿ, ತನ್ನ ಗಂಡ ಕಟ್ಟಿದ್ದ ಒಂದು ಚಿನ್ನದ ತುಣುಕಿಗೆ ’ಮಾಂಗಲ್ಯ’ ಎಂಬ ಗೌರವದಿಂದ, ಅದನ್ನು ಚಿನ್ನದ ಸರವೊಂದಕ್ಕೆ ಸೇರಿಸಿ ಧರಿಸಿದ್ದು ಈ ರೀತಿ ಉಪಯೋಗಕ್ಕೆ ಬಂದೀತೆ ಎಂದು ಆಶ್ಚರ್ಯಪಟ್ಟಳು.
ಒಂದು ತಿಂಗಳ ಮಟ್ಟಿಗೆ ರಜೆಯಲ್ಲಿ ಬಂದಿದ್ದ ಕುಲವಂತನನ್ನು ತಮ್ಮ ಮನೆಯಲ್ಲೇ ಉಳಿದುಕೊಳ್ಳಲು ರಜನಿ ಹೇಳಿದಳು. ಆದರೆ, ಆತ ಇಲ್ಲಿಯ ತನ್ನ ಸಹದ್ಯೋಗಿ ಮಿತ್ರನ ಜೊತೆಯಲ್ಲಿ, ಅಪ್ಪ ಬಹಳವಾಗಿ ಹೇಳುತ್ತಿದ್ದ ಈ ರಾಜ್ಯದ ಪ್ರವಾಸ ಮಾಡಲು ನಿರ್ಧರಿಸಿದ್ದ. ಒಂದು ವಾರದ ಮಟ್ಟಿಗೆ ಅಲ್ಲಿ ಇರಲು ಒಪ್ಪಿದ್ದು, ಅವರು ಆ ಹಣವನ್ನು ತೆಗೆದುಕೊಳ್ಳಲು ಒಪ್ಪಿದ ಮೇಲೆಯೆ. ಹಣ ತೆಗೆದುಕೊಳ್ಳಲು ರಜನಿ ಒಪ್ಪಿದ್ದೂ ಕೂಡಾ, ಸಾನ್ವಿ ಆ ಹಣವನ್ನು ಅಗತ್ಯವಿರುವ ಮಕ್ಕಳ ಚಿಕಿತ್ಸೆಗೆ ಬಳಸುವ ಉಪಾಯ ಸೂಚಿಸಿದ ಮೇಲೆಯೆ.
ಒಂದು ವಾರ ಕಳೆಯುವುದರೊಳಗಾಗಿ ಕುಲವಂತ್ ಅವರ ಮನೆಯಲ್ಲಿ ಒಬ್ಬನಾಗಿ ಹೋಗಿದ್ದ. ರಜನಿಗೆ ಬದುಕು ಎಷ್ಟೊಂದು ಸುಂದರ ಅನ್ನಿಸತು. ಕುಲವಂತನ ನಡೆ ನುಡಿ ಎಲ್ಲದರಲ್ಲೂ ಒಂದು ಗಾಂಭೀರ್ಯವಿತ್ತು; ಸಭ್ಯತೆಯಿತ್ತು. ಆತ ಅವರ ಮನೆಯಲ್ಲಿ ಕಳೆದ ಒಂದು ವಾರದಲ್ಲಿ ತನಗೆ ನೆನಪಿರದ ತನ್ನ ತಾಯಿಯನ್ನು ರಜನಿಯಲ್ಲಿ ಕಂಡಿದ್ದ. ಸಾನ್ವಿಯ ಜೊತೆಗಿನ ಒಡನಾಟ ಆತನಲ್ಲಿ ಹೊಸತೊಂದು ತಂಗಾಳಿಯನ್ನೇ ಎಬ್ಬಿಸಿತ್ತು. ಸಾನ್ವಿಗೂ ಅಷ್ಟೆ! ಕುಲವಂತ್ ತನ್ನ ಸ್ನೇಹಿತನೊಂದಿಗೆ ಕರ್ನಾಟಕ ಸುತ್ತುವ ಯೋಜನೆಯಲ್ಲಿ ಹಲವಾರು ಏರ್ಪಾಟುಗಳನ್ನು ಮಾಡಿಕೊಂಡ. ರಜನಿ ಸಾನ್ವಿಯರ ಜೊತೆಯಲ್ಲಿಯೇ ಹಲವಾರು ಊರುಗಳನ್ನು ಸುತ್ತಿದ. ರಜೆ ಮುಗಿದು ಅವನು ಊರಿಗೆ ಹೊರಟು ನಿಂತ ದಿನ, ಇಪ್ಪತ್ತೈದು ವರ್ಷಗಳಿಂದ ಎಂದೂ ಅಳದಿದ್ದವಳು ಬಿಕ್ಕಳಿಸಿ ಅತ್ತುಬಿಟ್ಟಿದ್ದಳು. ಸಾನ್ವಿಯೇ ಅಮ್ಮನಿಗೆ ಸಮಾಧಾನ ಮಾಡಿದ್ದಳು.
ಕುಲವಂತ್ ಊರಿಗೆ ಹೊರಟಾಗ ದುಃಖಿಸುತ್ತಿದ್ದ ಅಮ್ಮನನ್ನು ಸಮಾಧಾನ ಮಾಡಿದ್ದ ಸಾನ್ವಿಗೆ, ಕುಲವಂತ್ ಹೊರಟು ಹೋದ ಮೇಲೆ ತಾನೇನನ್ನೊ ಕಳೆದಕೊಂಡೆ ಅನ್ನಿಸತೊಡಗಿತ್ತು. ಕೆಲವೇ ದಿನದಲ್ಲಿ ಅವಳಿಗೆ ಅದು ಏನೆಂದು ಅರ್ಥವೂ ಆಯಿತು. ಅಮ್ಮನ ಬಳಿ ಮೊದಲಿನಂತೆ ಮಾತನಾಡುವುದು ಕಷ್ಟವೆನ್ನಿಸತೊಡಗಿತು. ಆಕೆ, ತಡ ಮಾಡದೆ, ಕುಲವಂತನಿಗೆ ಫೋನ್ ಮಾಡಿ, ಆತನನ್ನು ತಾನು ಪ್ರೀತಿಸುತ್ತಿರುವ ವಿಷಯವನ್ನು ಧೈರ್ಯವಾಗಿ ತಿಳಿಸಿಬಿಟ್ಟಳು. ಅದಕ್ಕಾಗಿಯೇ ಕಾಯುತ್ತಿದ್ದನೇನೊ ಎಂಬಂತೆ ಕುಲವಂತ್, ಆಕೆಯ ಪ್ರೀತಿಯನ್ನು ತಕ್ಷಣ ಸ್ವೀಕರಿಸಿದ. ಆದರೆ ’ನಿನ್ನ ಅಮ್ಮನ ಒಪ್ಪಿಗೆ ದೊರೆಯುವವರೆಗೂ ನಾನೇನನ್ನೂ ಹೇಳಲಾರೆ’ ಎಂದುಬಿಟ್ಟ. ಸಾನ್ವಿಗೆ ಅದೊಂದು ದೊಡ್ಡ ಸಮಸ್ಯೆ ಎನ್ನಿಸಲೇ ಇಲ್ಲ. ಆದರೆ ಕುಲವಂತ್, ’ಎಲ್ಲಿಂದಲೊ ಬಂದವನು, ಹಿಂದು ಮುಂದು ತಿಳಿಯದವನು, ಕೇವಲ ಒಂದೇ ವಾರದಲ್ಲಿ ನನ್ನ ಮಗಳ ತಲೆಯಲಿ ಪ್ರೀತಿ ಪ್ರೇಮದ ವಿಷಯ ತುಂಬಿ, ಮಗಳನ್ನು ನನ್ನಿಂದ ದೂರ ಮಾಡಿಬಿಟ್ಟ ಎಂದು ನಿನ್ನ ಅಮ್ಮನಿಗೆ ಅನ್ನಿಸಿದರೆ, ಅದು ನಮಗೆ ಒಳ್ಳೆಯದಲ್ಲ. ಆಕೆ ಜೀವನದಲ್ಲಿ ತುಂಬಾ ನೊಂದಿದ್ದಾಳೆ. ಅವಳ ನೋವಿನಲ್ಲಿ ಅಷ್ಟೊ ಇಷ್ಟೊ ನನ್ನ ತಂದೆಯ ಪಾತ್ರವೂ ಇದೆ. ಅವರಿಗೆ ನೋವಾಗುವುದು ನನಗೆ ಇಷ್ಟವಿಲ್ಲ’ ಎಂದಿದ್ದು ರಜನಿಗೆ ಸ್ವಲ್ಪ ಮಟ್ಟಿನ ಆತಂಕವನ್ನುಂಟು ಮಾಡಿತು.
ಇನ್ನು ವಿಷಯ ಮುಚ್ಚಿಟ್ಟು ಪ್ರಯೋಜನವಿಲ್ಲವೆಂದು ಅರಿತ ಸಾನ್ವಿ ನೇರವಾಗಿ ರಜನಿಗೆ ವಿಷಯ ತಿಳಿಸಿದಳು. ಅವಳ ಆತಂಕ ನಿಜವಾಗಿಸುವಂತೆ ರಜನಿ ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟಳು. ’ಅಮ್ಮ ಈ ವಿಷಯದಲ್ಲಿ ಕುಲವಂತ್ ಯಾವ ತಪ್ಪನ್ನೂ ಮಾಡಿಲ್ಲ. ನಾನೇ ಮೊದಲಾಗಿ ಅವನ ಬಳಿ ಪ್ರೀತಿಯ ವಿಷಯ ಪ್ರಸ್ತಾಪಿಸಿದೆ. ಆದರೂ ಅವನು, ನಿನ್ನ ಅಮ್ಮನ ಒಪ್ಪಿಗೆಯ ನಂತರವೇ ನನ್ನ ಒಪ್ಪಿಗೆ ಎಂದು ಹೇಳಿದ್ದಾನೆ’ ಎಂದು ಸಾನ್ವಿ ಎಷ್ಟೇ ಬಿಡಿಸಿ ಹೇಳಿದರೂ ರಜನಿಗೆ ದುಃಖ ತಡೆಯಲಾಗಲಿಲ್ಲ.
’ಹೌದು ಆತ ಒಳ್ಳೆಯವನೆ. ಇಷ್ಟು ದಿನ ನಾನು ನೋಡಿದೆನಲ್ಲ. ಮಗಳೆ, ನನ್ನ ಆತಂಕ ಅದಲ್ಲ. ಆತ ಎಷ್ಟೇ ಒಳ್ಳೆಯವನಿರಬಹುದು. ಆದರೆ ಗೊತ್ತಿದ್ದೂ ಗೊತ್ತಿದ್ದೂ ಒಬ್ಬ ಕಳ್ಳನ ಮಗನಿಗೆ ಮಗಳನ್ನು ಮದುವೆ ಮಾಡಿಕೊಡಬೇಕಾ? ಎಂದು ಮನಸ್ಸಿಗೆ ತುಂಬಾ ಆತಂಕವಾಗುತ್ತಿದೆ’ ಎಂದು ಗೋಳಾಡಿದಳು. ’ಅಮ್ಮ ನನಗೆ ನಿನ್ನ ಆತಂಕ ಅರ್ಥವಾಗುತ್ತಿದೆ. ಆತ ಎಂತಹ ಸಂದರ್ಭದಲ್ಲಿ ಕಳ್ಳತನ ಮಾಡಿದ್ದಾನೆ ಎಂಬುದು ನಿನಗೆ ಈಗ ಗೊತ್ತಾಗಿದೆ. ಅದಕ್ಕಾಗಿ ಆತ ಎಷ್ಟೊಂದು ಪಶ್ಚತ್ತಾಪ ಪಟ್ಟಿದ್ದಾನೆ ಎಂಬುದು ಗೊತ್ತಾಗಿದೆ. ಋಣಮುಕ್ತನಾಗಬೇಕೆಂದು ಆತ ಎಷ್ಟು ಹಂಬಲಿಸಿದ್ದನೆಂದೂ ತಿಳಿದಿದೆ. ಅಪ್ಪನ ಆಸೆಯ ಈಡೇರಿಕೆಗಾಗಿ ಕುಲವಂತ್ ಇಲ್ಲಿಯವರೆಗೆ ಬರುವ ಅಗತ್ಯವೇನಿತ್ತು? ಅಪ್ಪ ಸತ್ತ ಮೇಲೆ ಅವನ ಆಸೆಯೂ ಸತ್ತಂತೆ ಎಂದು ಸುಮ್ಮನಿರಬಹುದಿತ್ತಲ್ಲ. ಸಾವಿರಾರು ಮೈಲಿಯಿಂದ ನಮ್ಮನ್ನು ಹುಡುಕಿಕೊಂಡು ಬಂದು, ಆದ ತಪ್ಪಿಗೆ, ತನ್ನ ಅಪ್ಪನ ತಪ್ಪಿಗೆ ಕ್ಷಮೆ ಕೇಳಿದ್ದಾನೆ. ಅಪ್ಪನ ಆಸೆಯಂತೆ ಅವನನ್ನು ಋಣಮುಕ್ತನನ್ನಾಗಿಸಿದ್ದಾನೆ. ಇನ್ನು ನೀನು ಕೊಡಬಹುದಾಗಿದ್ದ ಜಾತಿಯ ಕಾರಣ. ಅದನ್ನು ನೀನು ಇಪ್ಪತ್ತೈದು ವರ್ಷಗಳ ಹಿಂದೆಯೇ ಮೀರಿಬಿಟ್ಟಿದ್ದೀಯ. ಅದರಲ್ಲಿ ನಿನಗೆ ನಂಬಿಕೆಯೂ ಇಲ್ಲ ಎಂದು ನನಗೆ ಗೊತ್ತು. ಅಮ್ಮಾ, ನನಗೆ ಚೆನ್ನಾಗಿ ಗೊತ್ತು, ಈ ಆತಂಕ ನಿಜವಾಗಿ ನಿನ್ನನ್ನು ಕಾಡುತ್ತಿರುವುದು ಈ ಕ್ಷಣಕ್ಕಷ್ಟೆ. ಆದರೆ ನಿನ್ನ ಆತಂಕಕ್ಕೆ ಬೇರೆಯದೇ ಕಾರಣವಿದೆ ಎಂದು ನನಗೆ ಅನ್ನಿಸುತ್ತಿದೆ’ ಎಂದು ದೀರ್ಘವಾಗಿ ಮಾತನಾಡಿದ ಸಾನ್ವಿ ಸುಮ್ಮನೆ ಕುಳಿತು ಬಿಟ್ಟಳು.
’ನಾನು ಪ್ರೀತಿಸಿಯೇ ಮದುವೆಯಾಗಿದ್ದು. ಕೇವಲ ಒಂದೇ ವಾರದಲ್ಲಿ ಪ್ರೀತಿ ಹುಟ್ಟುತ್ತದೆಯೆ? ಈ ಗಂಡಸರ ವಿಷಯ ಅಷ್ಟೊಂದು ಸುಲಭವಲ್ಲ. ಮಗಳೆ, ಯೋಚನೆ ಮಾಡು’ ಎಂದು ಏನೇನೊ ಹಲುಬಿದ ರಜನಿಗೆ ಸಾನ್ವಿಯ ಸಮಾಧಾನ ತಲೆಯಲ್ಲಿ ಹೋಗಲೇ ಇಲ್ಲ. ಆಗಲೇ ಸಾನ್ವಿ, ನಿನಗೆ ಗಂಡಸರ ಬಗ್ಗೆ ಪೂರ್ವಾಗ್ರಹವಿದೆ ಎಂದು ಹೇಳಿ ಅದರಿಂದ ಹೊರಗೆ ಬಂದು ಯೋಚಿಸುವಂತೆ ಹೇಳಿದ್ದು.
ಎಷ್ಟು ಹೊತ್ತು ಹಾಗೇ ಕುಳಿತಿದ್ದಳೊ, ರಜನಿಗೆ ಹೊಟ್ಟೆ ಚುರುಗುಟ್ಟತೊಡಗಿತು. ದಿನಾ ತಾನೇ ತಿಂಡಿ ಮಾಡುತ್ತಿದ್ದುದು. ರಜೆಯ ದಿವಸಗಳಲ್ಲಿ ಮಾತ್ರ ಸಾನ್ವಿ ತಿಂಡಿ ಮಾಡಲು ಜೊತೆ ಸೇರುತ್ತಿದ್ದಳು. ಇಂದು ಸಾನ್ವಿ ಏನು ಮಾಡಿಕೊಂಡಳೊ ಎನ್ನಿಸಿ ಮನಸ್ಸಿಗೆ ಕಸಿವಿಸಿಯಾಯಿತು. ಅಡುಗೆ ಮನೆಗೆ ಹೋಗಿ ನೋಡಿದವಳಿಗೆ ಆಶ್ಚರ್ಯವಾಗುವಂತೆ ಅವಳಿಗಿಷ್ಟವಾದ, ಅವರೇ ಕಾಳು ಹಾಕಿ ಮಾಡಿದ ಉಪ್ಪಿಟ್ಟು ಹಾಟ್ ಬಾಕ್ಸಿನಲ್ಲಿ ಕುಳಿತಿತ್ತು. ಸಾನ್ವಿಗೆ ಉಪ್ಪಿಟ್ಟು ಎಂದರೆ ಅಷ್ಟಕ್ಕಷ್ಟೆ. ಉಪ್ಪಿಟ್ಟು ತಿನ್ನುವುದಿರಲಿ, ತಿನ್ನುವವರನ್ನು ನೋಡಿದರೂ ನನಗಾಗುವುದಿಲ್ಲ ಎನ್ನುತಿದ್ದಳಾದರೂ, ನಾನು ಮಾಡಿದ ದಿನ ಅದೇ ಮಾತುಗಳನ್ನು ಹೇಳುತ್ತಲೇ ಉಪ್ಪಿಟ್ಟು ತಿನ್ನುತ್ತಿದ್ದಳು. ಇಂದು ನನಗಾಗಿ ಉಪ್ಪಿಟ್ಟು ಮಾಡಿದ್ದಾಳೆ ಎನ್ನಿಸಿ, ಒಂದು ಕ್ಷಣ ಮಗಳ ಬಗ್ಗೆ ಹೆಮ್ಮೆಯನ್ನಿಸಿತು. ಒಂದಷ್ಟು ತಿಂಡಿಯನ್ನು ತಟ್ಟೆಗೆ ಹಾಕಿಕೊಂಡು ಬಂದು ಸೋಪಾದಲ್ಲಿ ಕುಳಿತಳು.
ಇಂದು ನನ್ನ ಎದುರಿಗೆ ಇರುವ ಸಮಸ್ಯೆ ಏನು? ಇಂದು ಸಂಜೆಯ ಒಳಗಾಗಿ ಅದಕ್ಕೆ ನಾನು ಕಂಡುಕೊಳ್ಳಬೇಕಾದ ಪರಿಹಾರವೇನು? ಮೊದಲನೆಯ ತುತ್ತು ಮುಗಿಯುವಷರಲ್ಲೇ, ಅವಳಿಗೆ ಕುಲವಂತ್ ಯೋಗ್ಯ ವರನಂತೂ ಹೌದು ಅನ್ನಿಸಿ ಮನಸ್ಸಿನಲ್ಲಿ ಸ್ವಲ್ಪ ಉತ್ಸಾಹ ಮೂಡಿತು. ಇನ್ನೊಂದಿಷ್ಟು ತುತ್ತುಗಳು ಒಳಗಿಳಿಯುವಷ್ಟರಲ್ಲಿ, ನೆನ್ನೆ ಮನಸ್ಸಿನಲ್ಲಿ ಉಂಟಾಗಿದ್ದ, ಆತನ ತಂದೆ ಕಳ್ಳತನ ಮಾಡಿದ್ದ ಎಂಬ ನೆನಪು, ಈಗ ಕಹಿಯೆನ್ನಿಸಲಿಲ್ಲ. ಜೊತೆಗೆ ಅದೊಂದು ಅರ್ಥವಿಲ್ಲದ ಯೋಚನೆ ಅನ್ನಿಸಿ ತನಗೆ ತಾನೇ ನಕ್ಕಳು. ಮೂರನೆಯದು, ಗಂಡಸರ ವಿಚಾರ. ಇದೇ ನಿಜವಾಗಿದ್ದಲ್ಲಿ ನಾನು ಮಗಳಿಗೆ ಮದುವೆಯನ್ನೇ ಮಾಡುವ ಹಾಗಿಲ್ಲ ಎಂಬ ವಿಚಾರ ಮನಸ್ಸಿಗೆ ಹೊಳೆದಿದ್ದೇ ತಡ ಅವಳ ಮನಸ್ಸಿನಲ್ಲಿ ಮುಸುಕಿದ್ದ ಆತಂಕದ ತೆರೆ ಹಿಂದೆ ಸರಿಯಿತು.
ಸಂಜೆ ಮಗಳು ಮನೆಗೆ ಬರುವಷ್ಟರಲ್ಲಿ ಅವಳಿಗಿಷ್ಟವಾದ ಚಿಕನ್ ಬಿರಿಯಾನಿ ಮಾಡಬೇಕು ಅನ್ನಿಸಿತು, ರಜನಿಗೆ. ಆ ಯೋಚನೆ ಮನಸ್ಸಿಗೆ ಬಂದದ್ದೇ ತಡ ಅದಕ್ಕಾಗಿ ಸಿದ್ಧತೆ ನಡೆಸಲು ಸಡಗರಿದಂದಲೇ ಮೇಲೆದ್ದಳು.

Wednesday, August 13, 2014

ಗೌರಿ ಕಲ್ಯಾಣ

ಪೆಟ್ಟಿಗೆ ದೇವರ ಉತ್ಸವಕ್ಕೆ ಬರಬೇಕೆಂದು ಗೌರಮ್ಮ ಬರೆದಿದ್ದ ಕಾಗದವನ್ನು ಕಂಡು ಬಹಳ ಸಂತೊಷವಾಯಿತು. ಶಿವರಾತ್ರಿ ಕಳೆದು ಮೂರನೆಯ ದಿನಕ್ಕೆ ನಡೆಯಲಿದ್ದ ಉತ್ಸವಕ್ಕೆ ಹೊರಡಲು ಇನ್ನೂ ಒಂದು ವಾರ ಸಮಯವಿತ್ತು. ಅವಳ ಪರಿಚಯವಾಗಿ ಎರಡು ವರ್ಷಗಳಾದ ಮೇಲೆ ಬಂದ ಮೊದಲ ಪತ್ರ ಇದಾಗಿತ್ತು. ಎರಡು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದ ಜನಪದ ಕಲಾಮೇಳವನ್ನು ವರದಿ ಮಾಡಲೆಂದು ಹೋಗಿದ್ದಾಗ ಮೊದಲ ಬಾರಿಗೆ ಅವಳನ್ನು ನೋಡಿದ್ದೆ. ಕಲಾಮೇಳದ ಕೊನೆಯ ದಿನದ ಕೊನೆಯ ಕಾರ್ಯಕ್ರಮ ಗೌರಮ್ಮಳದಾಗಿತ್ತು. ಆಗಲೇ ಎದ್ದು ಹೊರಟಿದ್ದ ಜನ ನೆಲಕ್ಕೆ ಅಂಟಿ ಕುಳಿತುಕೊಳ್ಳುವಂತೆ ಸುಶ್ರಾವ್ಯವಾಗಿ, ನಾಲ್ಕು ಜನ ಹಿಮ್ಮೇಳದ ಮಹಿಳೆಯರೊಂದಿಗೆ ಹಾಡಲು ಪ್ರಾರಂಭಿಸಿದಾಗ ಜನ ಬೆರಗಾಗಿ ನೋಡಿದ್ದರು. ಅಂದು ಗೌರಮ್ಮ ಹಾಡಿದ್ದ ಹಾಡಿನ ಸಾಲುಗಳು ಇನ್ನೂ ನನ್ನ ಕಿವಿಯಲ್ಲಿ ಮಾರ್ಧನಿಸುತ್ತಿವೆ.
        ಅಕ್ಕಕ್ಕ ಮಾತನಾಡೆ ಚಿಕ್ಕ ಗೌರಸಂದ್ರ
        ಹೆಚ್ಚಿನ ಮಾನ್ಯದ ಗರತಿ ಮತ್ತೊಂದು ಮಾತನಾಡೆ||ಅಕ್ಕಕ್ಕ||
        ಏಳುತಲೆ ಎದ್ದು ತಾಯೀನ ನೆನದೇವು
        ನಾಗಭೂಷಣದ ನೆರಿಗೋಳೆ ಮಾತನಾಡೆ||ಅಕ್ಕಕ್ಕ||
        ಮಟ್ಟ ಮಧ್ಯಾಹ್ನದಾಗ ಹುಟ್ಟಿತ್ತು ಬೇವಿನ ಮರ
        ಹುಟ್ಟುತಲೆ ಕಾಯಿ ಜಡಿವುತಲೆ||ಅಕ್ಕಕ್ಕ||
        ಹುಟ್ಟುತಲೆ ಕಾಯಿ ಜಡಿವುತಲೆ ಅಕ್ಕ ಮಾರಿ
        ಹುಟ್ಟಳು ಬೇವಿನ ಮರುದಾಗೆ||ಅಕ್ಕಕ್ಕ||
        ಹುಟ್ಟಿದ ಏಳೆ ದಿನಕ್ಕೆ ಶಿವಪೂಜೆ ಬೊಮ್ಮಲಿಂಗ
        ಜೊತಿ ಬಂದು ಬಿಳಿಯ ಕಣಗಾಲ||ಅಕ್ಕಕ್ಕ||
        ಹೋಗಿ ನೋಡನು ಬನ್ನಿ ಓಲೆ ಇಟ್ಟವಳೆ
        ಬೊಮ್ಮಯ್ಯನ ಅಕ್ಕಯ್ಯ ಮಾತನಾಡೆ||ಅಕ್ಕಕ್ಕ||
ಹೀಗೆ ಸುಮಾರು ಹದಿನೈದು ನಿಮಿಷಗಳ ಕಾಲ ಹಾಡಿ ಮುಗಿಸಿದಾಗ ಇಡೀ ಸಭೆ ಎದ್ದು ನಿಂತು ‘ಒನ್ಸ್‌ಮೋರ್’ ಎಂದಿತ್ತು. ಸಂಘಟಕರ ಅಪ್ಪಣೆಯ ಮೇರೆಗೆ ಮತ್ತೊಂದು ಹಾಡನ್ನು ಮೊದಲಿಗಿಂತ ಚನ್ನಾಗಿ ಹಾಡಿದ್ದಳು. ಮೊದಲ ಹಾಡಿನಲ್ಲಿದ್ದ ಒಂದು ರೀತಿಯ ಭಯ ಎರಡನೆಯ ಹಾಡಿನಲ್ಲಿರಲಿಲ್ಲ.
ಬೆಳ್ಲಿನ ಗೊಂಡೇದ ಶರಣಾನೆ ಓಬಯ್ಯಾ
ಎಲ್ಲೋದರು ನಿಮ್ಮ ದಯವಿರಲಿ ಹೂವೇ
ಹೂವೇ ಸೋಬಾನವೇ ವನದೊಳಗಿನ ಹೂವೆಲ್ಲ ಸೋಬಾನವೇ||
ಎತ್ತಗೋದರು ನಮ್ಮ ನೆತ್ತಿ ಮ್ಯಾಲಿರುವೋನೆ
ಮುತ್ತೀನ ಗೊಂಡೇನ ಶರಣಾನೆ||ಹೂವೇ||
ಮುತ್ತೀನ ಗೊಂಡೇನ ಶರಣಾನೆ ಓಬಯ್ಯ
ಎತ್ತೋದರು ನಿನ್ನ ದಯವಿರಲಿ||ಹೂವೇ||
ಸೂರ್ಯ ಮೂಡಿದಂಗೆ ಮೂಡ್ಯಾನ ಓಬಯ್ಯ
ಹೂವಿನ ಉರಿಬಾಣ ಬಲಗೈಲಿ||ಹೂವೇ||
ಹೂವಿನ ಉರಿಬಾಣ ಬಲಗೈಲಿ ಹಿಡುಕೊಂಡು
ಮೂಡ್ಯಾನೆ ಕಕ್ಕೆ ಮರುದಾಗೆ||ಹೂವೇ||
ಆಕೆ ಹಾಡು ನಿಲ್ಲಿಸಿ ಐದು ನಿಮಿಷಗಳ ಕಾಲ ನಿರಂತರವಾಗಿ ಬಿದ್ದ ಚಪ್ಪಾಳೆಯೇ ಆ ತಂಡಕ್ಕೆ, ಇಡೀ ಜನಪದ ಮೇಳದಲ್ಲಿ ಒಂದು ವಿಶಿಷ್ಟವಾದ ಸ್ಥಾನವನ್ನು ಕಲ್ಪಿಸಿತ್ತು. ಅತ್ಯುತ್ತಮವಾದ ಮೂರು ಕಲಾ ತಂಡಗಳನ್ನು ಗುರುತಿಸಲು ಒಂದು ಸಮಿತಿಯೂ ನೇಮಕವಾಗಿದ್ದು, ಅದರ ವರದಿ ಸಂಜೆ ಆರು ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹೊರಬೀಳುವದರಲ್ಲಿತ್ತು. ಅದಕ್ಕೆ ಇನ್ನೂ ಒಂದು ಗಂಟೆ ಇದ್ದುದ್ದರಿಂದ ನಾನು ಆಕೆಯ ಬೆನ್ನು ಬಿದ್ದೆ.
ನಾನು ಪತ್ರಿಕೆಯವನೆಂದು ತಿಳಿದಾಗ, ಚಿಪ್ಪಿನೊಳಗೆ ಮುದುರಿಕೊಳ್ಳುವ ಆಮೆಯಂತೆ ವರ್ತಿಸಿದ ಗೌರಮ್ಮ ಮತ್ತು ಆಕೆಯ ಕಲಾತಂಡದಲ್ಲಿ ಇದ್ದುದ್ದು ಕೇವಲ ಆರು ಜನರು ಮಾತ್ರ. ಅದರಲ್ಲಿ ಹಾಡುತ್ತಿದ್ದ ಐದು ಮಂದಿ ಮಹಿಳೆಯರಾಗಿದ್ದರೆ, ಒಬ್ಬ ಅವರ ಜೊತೆಯಲ್ಲಿ ಬಂದಿದ್ದ ಓಬಳಯ್ಯ ಎಂಬ ಗಂಡಸು. ಸುಮಾರು ಒಂದು ಗಂಟೆ ಕಾಲ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಸಾಕಷ್ಟು ವಿವರಗಳನ್ನೂ ಸಂಗ್ರಹಿಸಿ, ನಮ್ಮ ಪತ್ರಿಕೆಯಲ್ಲಿ ವಿವರವಾಗಿ ಎರಡು ಕಂತುಗಳ ಒಂದು ಸಚಿತ್ರ ಲೇಖನವನ್ನು ಪ್ರಕಟಿಸಿದ್ದೆ. 
ಅವರು ಮೊಳಕಾಲ್ಮೂರು ತಾಲ್ಲೂಕಿನ ಗೌರಸಂದ್ರ ಎಂಬ ಊರಿನಿಂದ ಬಂದಿದ್ದ ಮ್ಯಾಸಬೇಡ ಎಂಬ ಬುಡಕಟ್ಟು ಜನಾಂಗದವರಾಗಿದ್ದರು. ಸುಮಾರು ಹದಿನೆಂಟು ವರ್ಷಗಳನ್ನು ದಾಟಿರದ ಗೌರಮ್ಮಳೇ ಆ ತಂಡದ ನಾಯಕಿಯಾಗಿದ್ದಳು. ಏಕೆಂದರೆ, ಗೌರಮ್ಮ ಒಬ್ಬಳೇ ಅವರಲ್ಲಿದ್ದ ವಿದ್ಯಾವಂತೆ. ಹಟ್ಟಿಯ ಪೂಜಾರಿಯ ಒಬ್ಬಳೇ ಮಗಳಾಗಿದ್ದರಿಂದಲೂ, ಹಟ್ಟಿಗೆ ಮದುವೆ ಮತ್ತೊಂದು ಕಾರ್ಯಗಳನ್ನು ಮಾಡಿಸಲು ಬರುತ್ತಿದ್ದ, ಪೂಜಾರಿಗೆ ಚನ್ನಾಗಿ ಪರಿಚಯವಿದ್ದ ಬ್ರಾಹ್ಮಣ ಜೋಯಿಸ ವೆಂಕಟಯ್ಯನವರು ಕರುಣೆ ತೋರಿಸಿದ್ದರಿಂದ ಬ್ರಾಹ್ಮಣ ಕೇರಿಯಲ್ಲಿದ್ದ ನಾಲ್ಕನೇ ಕ್ಲಾಸನ್ನು ಮುಗಿಸಿದ್ದಳು. ಆಕೆ ಸ್ಕೂಲಿಗೆ ಸೇರಿದ್ದರಿಂದ ಪೂಜಾರಿಯು ಹಟ್ಟಿಯ ಜನರ ಬಾಯಿಗೆ ಬಿದ್ದಿದ್ದ. ಅದನ್ನು ತಿಳಿದಿದ್ದ ಜೋಯಿಸರು ಅವಳನ್ನು ಮುಂದಿನ ಓದಿಗೆ ಕಳಿಸು ಎಂದು ಹೇಳಲಿಲ್ಲ. ಗೌರಮ್ಮಳ ಓದು ಹಟ್ಟಿಗೆ ಬರುತ್ತಿದ್ದ ಯಾವುದಾದರೊಂದು ಕಾಗದವನ್ನು ಓದಿಸಲು ಬ್ರಾಹ್ಮಣರ ಕೇರಿಗೆ ಹೋಗುವದನ್ನು ತಪ್ಪಿಸುವಷ್ಟಕ್ಕೇ ಸೀಮಿತವಾಗಿತ್ತು. ಹಟ್ಟಿಯ ಇತರ ಹೆಂಗಸರ ಜೊತೆ ಸೇರಿ ಚೆನ್ನಾಗಿ ಹಾಡುತ್ತಿದ್ದ ಗೌರಮ್ಮ, ಅಕ್ಕ ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ದೇವರ ಉತ್ಸವ ಮುಂತಾದವಕ್ಕೆ ಹೋಗಿ ಹಾಡಿ ಬರುವ ಒಂದು ತಂಡವನ್ನು ರೂಪಿಸಿಕೊಂಡಳು. ಕೈಗೊಂದಿಷ್ಟು ದುಡ್ಡು ಬೀಳುತ್ತಿದ್ದರಿಂದ ಇತರ ಹೆಂಗಸರ ಗಂಡಂದಿರೂ ಬಾಯಿ ಮುಚ್ಚಿಕೊಂಡಿದ್ದರು.
        ಜೋಯಿಸರ ಕಿರಿಯ ಮಗ ಮೈಸೂರಿನಲ್ಲಿ ಓದುತ್ತಿದ್ದವನು. ಅಲ್ಲಿ ನಡೆಯು ಜನಪದ ಕಲಾಮೇಳಕ್ಕೆ ಗೌರಮ್ಮಳ ತಂಡವನ್ನು ಒಪ್ಪಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದ. ನಾನು ಅವರ ಇನ್ನಿತರ ಹಾಡುಗಳು ಆಚಾರ ವಿಚಾರಗಳ ಬಗ್ಗೆ ಕೇಳಿದಾಗ, ‘ಒಮ್ಮೆ ಊರಿಗೆ ಬನ್ನಿ. ಎಷ್ಟು ಬೇಕಾದರೂ ಹಾಡು ಕೇಳಬಹುದು. ಎಲ್ಲಾ ಆಚಾರ ವಿಚಾರಗಳೂ ಗೊತ್ತಾಗುತ್ತವೆ’ ಎಂದು ತುಸು ನಾಚಿಕೆಯಿಂದಲೇ ಉತ್ತರಿಸಿದ್ದಳು ಗೌರಮ್ಮ. ಅದಕ್ಕೆ ಪೂರಕವಾಗಿ ಓಬಳಯ್ಯ, ‘ಸ್ವಾಮಿ ಪೆಟ್ಟಿಗೆ ದೇವರ ಉತ್ಸವಕ್ಕೆ ಬಂದು ಬುಡಿ. ನಮ್ಮ ದೇವರು ದಿಂಡಿರು ಎಲ್ಲಾ ಗೊತ್ತಾಗುತ್ತೆ’ ಎಂದು ಅಹ್ವಾನವಿತ್ತಿದ್ದ. ಪೆಟ್ಟಿಗೆ ದೇವರ ಉತ್ಸವಕ್ಕೆ ಕಾಗದ ಬರೆಯುವಂತೆ ಹೇಳಿ ನನ್ನ ವಿಳಾಸವನ್ನು ಮರೆಯದೆ ಕೊಟ್ಟಿದ್ದೆ. ಅಂದು ಸಂಜೆ ನಡೆದ ಸಮಾರಂಭದಲ್ಲಿ ಅವರ ತಂಡಕ್ಕೆ ಮೊದಲನೇ ಸ್ಥಾನ ಸಿಕ್ಕಿತ್ತು. ನಾನು ಗೌರಮ್ಮಳ ಮುಖವನ್ನೇ ನೋಡುತ್ತಿದ್ದೆ. ಆಕೆಯ ತಂಡದ ಹೆಸರು ಹೇಳುತ್ತಿದ್ದಂತೆ ಚಿಕ್ಕ ಹುಡುಗಿಯಂತೆ ಚಪ್ಪಾಳೆ ತಟ್ಟಿ ನಕ್ಕಿದ್ದಳು. ಅವಳು ಬಹುಮಾನ ಪಡೆಯವ ಚಿತ್ರಗಳನ್ನು ಆಕೆಗೆ ಕಳುಹಿಸುವಾಗ ಅದರ ಬಗ್ಗೆ ಒಂದು ಕಾಗದವನ್ನೂ ಬರೆದಿದ್ದೆ. ಆದರೆ ಆ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆಯಿರದೆ, ಅವರ ವಿಷಯವೇ ಮರೆತುಹೋಗಿದ್ದ ಈ ದಿನಗಳಲ್ಲಿ ‘ಊರಿಗೆ ಬನ್ನಿ’ ಎಂದು ಗೌರಮ್ಮ ಬರೆದಿದ್ದ ಪತ್ರ ನನ್ನಲ್ಲೇನೋ ಹೊಸ ಹುರುಪನ್ನು ಮೂಡಿಸಿತ್ತು.
*    *   *  * *** *  *   *    *
ಮೊಳಕಾಲ್ಮೂರಿನಿಂದ ಗೌರಸಂದ್ರ ಸೇರುವಷ್ಟರಲ್ಲಿ ಸೂರ್ಯ ಪಡುವಣಕ್ಕಿಳಿಯುತ್ತಿದ್ದ. ನಾನು ಒಂದಿಂಚು ದೂಳಿನಿಂದ ಮುಚ್ಚಿ ಹೋಗಿದ್ದೆ. ಸುಮ್ಮರು ನಲವತ್ತು-ಐವತ್ತು ಗುಡಿಸಲುಗಳಿದ್ದ ಆ ಹಳ್ಳಿಯ ಮುಂದೆ ನಾನು ನಿಂತಾಗ ಅಲ್ಲಿದ್ದ ಮಕ್ಕಳು ಹೆದರಿ ಓಡಿಬಿಟ್ಟರು. ನಾಲ್ಕು ಸಾಲುಗಳಲ್ಲಿ ಕಟ್ಟಿದ್ದ, ಐದಾರು ಅಡಿ ಎತ್ತರದ ಮಣ್ಣಿನ ಗೋಡೆಯ ಮೇಲೆ ಬಿದಿರನ್ನು ಜೋಡಿಸಿ ಬಾದೆಹುಲ್ಲನ್ನು ಹೊದೆಸಿ ನಿರ್ಮಿಸಿದ್ದ ಎಲ್ಲಾ ಗುಡಿಸಲುಗಳೂ ನೋಡಲು ಒಂದೇ ರೀತಿಯಿದ್ದವು. ಅವುಗಳ ನಡುವೆ ವೃತ್ತಾಕಾರದಲ್ಲಿ, ಎತ್ತರವಾಗಿದ್ದ ಗುಡಿಸಲಿನ ಬಳಿ ಜನ ಸೇರಿಕೊಂಡು ಏನನ್ನೋ ಮಾಡುತ್ತಿದ್ದರು. ಅದರಿಂದ ಸ್ವಲ್ಪ ಎಡಕ್ಕೆ, ಬೇರೆ ಗುಡಿಸಲುಗಳಿಗಿಂತ ಸ್ವಲ್ಪ ದಡ್ಡದಾದ ಇನ್ನೊಂದು ಗುಡಿಸಲಿತ್ತು.
ನಾನು ಆ ಜನಗಳನ್ನು ಸಮೀಪಿಸುವಷ್ಟರಲ್ಲಿ ಗೌರಮ್ಮ ನನ್ನ ಮುಂದೆ ಪ್ರತ್ಯಕ್ಷಳಾದಳು. ‘ನೀವು, ನೀವು ಪತ್ರಿಕೆಯವರಲ್ಲವೆ?’ ಎಂದು ಅವಳು ಕೇಳಿದ ಪ್ರಶ್ನೆ, ನನಗೆ ‘ಚಿಕ್ಕವಳಿದ್ದಾಗ ಇವಳು ಹೇಗಿದ್ದಿರಬೇಕು?’ ಎಂದು ಯೋಚಿಸುವಂತೆ ಮಾಡಿತು. ನನ್ನನ್ನು ಕರೆದುಕೊಂಡು ಹೊರಟ ಗೌರಮ್ಮ, ‘ನೋಡಿ. ಇದೆ ನಮ್ಮ ಪೆಟ್ಟಿಗೆ ದೇವರ ಗುಡಿ’ ಎಂದು ವೃತ್ತಾಕಾರದಲ್ಲಿದ್ದ ಗುಡಿಸಲನ್ನು ತೋರಿದಳು. ಮುಂದಕ್ಕೆ ನಡೆದು, ಅದರ ಎಡಕ್ಕೆ ಇದ್ದ ದೊಡ್ಡ ಗುಡಿಸಲಿನ ಮೆಟ್ಟಿಲನ್ನತ್ತಿ, ‘ಒಳಗೆ ಬನ್ನಿ. ಇದೆ ನಮ್ಮ ಮನೆ’ ಎಂದು ಸ್ವಾಗತಿಸಿದಳು. ‘ಅಪ್ಪ. ಇವರೆ ನಾನ್ಹೇಳಿದ್ದ ಪತ್ರಿಕೆಯವರು. ಮೈಸೂರಿನಲ್ಲಿ ನಮ್ಮ ಬಗ್ಗೆ ಬರೆದು, ಅದರ ಚಿತ್ರ ಕಳಿಸಿದ್ದರಲ್ಲ ಅವರೆ’ ಎಂದು ಆಕೆಯ ಅಪ್ಪನಿಗೆ ಪರಿಚಯ ಮಾಡಿಸಿದಳು. ಚಿಮಣಿ ದೀಪದ ಬೆಳಕಿಗೆ ಕಣ್ಣು ಹೊಂದಿಸಿಕೊಂಡು ನೋಡಿದ ನನಗೆ ಕಂಡಿದ್ದು, ಸುಮಾರು ಐವತ್ತು ವರ್ಷ ವಯಸ್ಸಿನ ಕಪ್ಪು ಬಣ್ಣದ ಕಂಬಳಿಯನ್ನು ಬಲ ಪಕ್ಕಕ್ಕೆ ಹಾಕಿಕೊಂಡು, ಎಡಭಾಗದಲ್ಲಿ ಒಂದು ಬಲವಾದ ದೊಣ್ಣೆಯನ್ನು ಇಟ್ಟುಕೊಂಡು ಕುಳಿತಿದ್ದ ಅಜಾನುಬಾಹುವನ್ನು. ಆತನ ಮುಂದೆ ಕುಳಿತಿದ್ದ ಇಬ್ಬರು ನಾವು ಬಂದ ತಕ್ಷಣ ಎದ್ದು ಹೊರಟರು. ನಮಸ್ಕಾರ, ಪ್ರತಿನಮಸ್ಕಾರಗಳಾದ ಮೇಲೆ ನನ್ನ ಕಡೆಗೆ ಕಂಬಳಿಯನ್ನು ನೂಕುತ್ತ ‘ಕುಕ್ಕಳ್ಳಿ’ ಎಂದ. ಆತನ ಕಿವಿಯಲ್ಲಿದ್ದ ಒಂಟಿಗಳು ದೀಪದ ಬೆಳಕಿಗೆ ಠಳಾಯಿಸುತ್ತಿದ್ದವು. ‘ನೋಡಿ ಅಯ್ಯನವರೆ, ನಾನು ಪತ್ರಿಕೆಯವನು. ನನ್ನ ಬಗ್ಗೆ ನಿಮ್ಮ ಮಗಳು ಎಲ್ಲಾ ಹೇಳಿರಬಹುದು. ನಿಮ್ಮ ಹಬ್ಬ ಹರಿದಿನ, ದೇವರು ಇತ್ಯಾದಿಗಳನ್ನೆಲ್ಲ ನೋಡ್ಬೇಕು ಅಂತ ಮೈಸೂರಲ್ಲಿ ಹೇಳಿದ್ದೆ. ನಾಳೆ ಹಬ್ಬ ಅಂತ ಗೊತ್ತಾಯ್ತು. ಅದಕ್ಕೆ ಬಂದೆ. ನಿಮಗೆ ಗೊತ್ತಿರೊ ವಿಚಾರಗಳನ್ನು ಸ್ವಲ್ಪ ಹೇಳಿದ್ರೆ ನಿಮ್ಮ ಬಗ್ಗೆ ಏನಾದ್ರು ಬರಿಬಹುದು’ ಎಂದೆ. ಅದಕ್ಕವನು ‘ಆಗಲಿ ತಗಳಿ. ನಮ್ಮಟ್ಟಿಗೆ ಓದ್ದೊರು ಬರೋದೆ ಕಡಿಮೆ. ಬಂದ್ರೆ ಆ ಅಯ್ನೋರು, ಇಲ್ಲ ಅವ್ರ ಮಗ. ನಾಳೆ ನಾಡ್ದು ಎರಡು ದಿನ ಹಬ್ಬ. ನೋಡ್ಕಂಡು ಹೋಗಿ. ನಿಮ್‌ಗೇನು ಬೇಕೊ ಅದನ್ನೆಲ್ಲ ನಮ್ಮ ಗೌರಿ ಹೇಳತಾಳೆ. ಅವಳಿಗೆ ಎಲ್ಲಾ ಗೊತೈತೆ’ ಎಂದ. ‘ನಾನು ಸ್ವಲ್ಪ ಹೊರಗೆ ಅಡ್ಡಾಡಿಕೊಂಡು ಬರ್ತಿನಿ’ ಎಂದು ಮೇಲೆದ್ದೆ. ಗೌರಿಯೂ ಹಿಂದೆ ಬಂದಳು.
ಪೆಟ್ಟಿಗೆ ದೇವರ ಗುಡಿಯ ಬಳಿ ಬಂದಾಗ ಎಂಟತ್ತು ಜನ ನಮ್ಮ ಸುತ್ತ ಸುತ್ತಿಕೊಂಡರು. ಮಕ್ಕಳು ನಾನೂ ಒಬ್ಬ ಮನುಷ್ಯ ಎಂದುಕೊಂಡು ಸ್ವಲ್ಪ ಹತ್ತಿರ ಬದಿದ್ದವು. ಗೌರಿ ಸ್ವಲ್ಪ ಜೋರಾಗಿ ‘ಇವ್ರು ಪತ್ರಿಕೆಯೋರು. ಬೆಂಗ್ಳೂರಿಂದ ಬಂದವ್ರೆ ನಮ್ಮೂರಿನ ಪೆಟ್ಟಿಗೆ ದೇವ್ರ ಹಬ್ಬ ನೋಡಾಕೆ. ನಮ್ಮ ಚಿತ್ರ ಎಲ್ಲ ಕಳ್ಸಿದ್ದರಲ್ಲ ಇವ್ರೆ’ ಎಂದಳು. ಓಬಳಯ್ಯ ಮುಂದೆ ಬಂದು ‘ನಾನ್ ಸ್ವಾಮಿ, ಓಬಳಯ್ಯ. ಮೈಸೂರಿಗೆ ಬಂದಿದ್ನಲ್ಲ’ ಎಂದು ಪರಿಚಯಿಸಿಕೊಂಡ. ಗೌರಿ ಕೊನೆಯಲ್ಲಿ ‘ಇವ್ರೆ’ ಎನ್ನುವಾಗ ನಾಚಿಕೊಂಡಳೆ ಎಂದು ನಾನು ಯೋಚಿಸುತ್ತಿದ್ದೆ!
ರಾತ್ರಿ ಬಹಳ ಹೊತ್ತಾಗುತ್ತಾ ಹೋದಂತೆ ಚಳಿಯೂ ಹೆಚ್ಚಾಗುತ್ತಾ ಹೋಗುತಿತ್ತು. ಗೌರಿಯ ಹಟ್ಟಿಯ ಹೊರಗಿನ ಜಗಲಿಯಲ್ಲಿ ಕುಳಿತು ಮಾತನಾಡುವಾಗ ನಡುವೆ ನಾನು ‘ಈ ಚಳಿಗೆ ಒಳ್ಳೆ ಕೋಳಿ ಸಾರು ಮುದ್ದೆ ಇದ್ದಿದ್ರೆ ಚನ್ನಾಗಿತ್ತು’ ಅಂದೆ. ತಕ್ಷಣ ಸುಮ್ಮನಿರುವಂತೆ ಹೇಳಿದ ಗೌರಿ ‘ನೀವು ಕೋಳಿ ತಿನ್ನುತ್ತೀರ ಎಂದು ಗೊತ್ತಾದರೆ ನಿಮ್ಮನ್ನು ಪೆಟ್ಟಿಗೆ ದೇವರ ಗುಡಿಯ ಒಳಗೆ ಸೇರಿಸದೆ ಓಡಿಸುತ್ತಾರೆ ಅಷ್ಟೆ’ ಎಂದಳು. ನನಗೆ ಆಶ್ಚರ್ಯವಾಯಿತು. ದನ, ಕೋಣ ತಿನ್ನುವ ಈ ಜನಕ್ಕೆ ಕೋಳಿ ಏಕೆ ಆಗುವುದಿಲ್ಲ ಎಂದು. ಅದನ್ನೆ ಗೌರಿಗೆ ಕೇಳಿದಾಗ, ‘ಅದು ನಮ್ಮ ದೇವರಿಗೆ ಆಗುವುದಿಲ್ಲ. ಅದು ನಮ್ಮ ಹಟ್ಟಿಗೆ ಬಂದರೆ ಸಾಯಿಸಿ ದೂರ ಎಸೆಯುತ್ತಾರೆ. ಅಲ್ಲದೆ ಇಡೀ ಹಟ್ಟಿಯನ್ನು ಸಗಣಿಯಿಂದ ಸಾರಿಸಿ ಸೂತಕ ಕಳೆಯುತ್ತಾರೆ’ ಎಂದಳು. ‘ಅದೆ ಏಕೆ?’ ಎಂದರೆ, ‘ವಿಜಯನಗರದ ರಾಮರಾಯನಿಗೂ ಸಾಬರಿಗೂ ಯುದ್ಧವಾಗುವಾಗ, ಒಂದು ಕೋಳಿ ನಮ್ಮ ಕಡೆಯ ವೀರನೊಬ್ಬನನ್ನು ರಕ್ಷಿಸಿತ್ತು ಅದಕ್ಕೆ, ಎಂದಳು. ನನಗೆ ಇನ್ನು ಆಶ್ಚರ್ಯ! ‘ನಿಮ್ಮ ವೀರನನ್ನು ರಕ್ಷಿಸಿದ ಕೋಳಿಯನ್ನು ಪೆಟ್ಟಿಗೆ ದೇವರ ಗುಡಿಯಲ್ಲೇ ಇಟ್ಟು ಪೂಜೆ ಮಾಡಬೇಕೆ ಹೊರತು ಒಡೆದು ಸಾಯಿಸುವುದೆ?’ ಎಂದೆ. ‘ಏನು? ನೀವು ಯಾವಗಲೂ ಪತ್ರಿಕೆಯವರಂತೆಯೇ ಪ್ರಶ್ನೆ ಕೇಳುತ್ತೀರಿ’ ಎಂದು ಸ್ವಲ್ಪ ಹೆಚ್ಚಾಗಿಯೇ ನಾಚಿಕೊಂಡಳು.
ನಾನು ಅವಳನ್ನೇ ದಿಟ್ಟಿಸಿ ನೋಡುತ್ತಿದ್ದೆ. ಅದನ್ನು ಗಮನಿಸಿದ ಗೌರಿ ‘ಅದೇಕೊ ನನಗೆ ಗೊತ್ತಿಲ್ಲ’ ಎಂದಳು ಚಿಕ್ಕ ಮಗುವಿನಂತೆ. ಮತ್ತೆ ನನ್ನ ಪ್ರಶ್ನೆಗಳು ಮುಂದುವರೆದವು. ‘ನಾನವಳಿಗೆ ಹತ್ತಿರವಾಗುತ್ತಿದ್ದೇನೆ’ ಎಂಬ ಒಂದು ಭಾವನೆ ಮನಸ್ಸಿಗೆ ಬಂದು ಹಿತವೆನಿಸಿತು. ‘ವಿಜಯನಗರದ ಯುದ್ಧದಲ್ಲಿ ನಿಮ್ಮ ಜನ ಭಾಗವಹಿಸಿದ್ದರೆ?’ ಎಂದೆ. ಅವಳಿಗೆ ನನ್ನ ಈ ಪ್ರಶ್ನೆಯಿಂದ ಖುಷಿಯಾದಂತೆ ಅನ್ನಿಸಿತು. ‘ಹೌದು. ನಮ್ಮ ಜನ ಆ ಯುದ್ಧದಲ್ಲಿ ಮೀಸಲು ಪಡೆಯವರಾಗಿದ್ದರಂತೆ. ಬೆಟ್ಟ ಗುಡ್ಡಗಳೆಡೆಯಲ್ಲಿ ನಡೆಯುತ್ತಿದ್ದ ಯುದ್ಧಗಳಲ್ಲಿ ನಮ್ಮವರನ್ನೇ ರಾಮರಾಯ ನಂಬಿಕೊಂಡಿದ್ದನಂತೆ. ನಮ್ಮವರು ಬೇಹುಗಾರರಾಗಿಯೂ ಕೆಲಸ ಮಾಡಿದ್ದರಂತೆ’ ಎಂದು ಚಿಕ್ಕ ಮಗುವಿನಂತೆಯೇ ಉತ್ತರಿಸಿದಳು. ಅವಳೀಗ ಯಾವುದೇ ಸಂಕೋಚವಿಲ್ಲದೆ ನನ್ನ ಮುಖವನ್ನೇ ನೋಡುತ್ತ ಮಾತನಾಡುತ್ತಿದ್ದಳು. ‘ನಿಮ್ಮ ಹೆಂಗಸರೇಕೆ ಕುಪ್ಪಸ ಹಾಕುವುದಿಲ್ಲ? ಎಂದಾಗ ‘ಅಯ್ಯೋ ಅದೊಂದು ದೊಡ್ಡ ರಗಳೆ. ಕುಪ್ಪಸ ಹಾಕಿಕೊಂಡರೆ ಅವರಿಗೆ ಹುಣ್ಣಾಗುತ್ತಂತೆ. ದೇವರಿಗೂ ಕೋಪ ಬರುತ್ತಂತೆ. ಅದಕ್ಕೆ’ ಎಂದಳು. ‘ಮತ್ತೆ ನೀನು ಹಾಕಿದ್ದೀಯ?’ ಎಂದಾಗ ‘ನಾನು ಪೂಜಾರಿ ಮಗಳು’ ಅಂದು ನನ್ನೆಡೆಯಿಂದ ದೃಷ್ಟಿಯನ್ನು ಹೊರಳಿಸಿ ‘ನೀವು ಬಂದಿದ್ದೀರಲ್ಲ ಅದಕ್ಕೆ’ ಎಂದು ಮತ್ತಷ್ಟು ನಾಚಿಕೊಂಡಳು. ‘ಈ ಪೂಜಾರಿ ಅಂದರೆ ಏನು?’ ಎಂದು ನಾನು ಪ್ರಶ್ನೆ ಕೇಳುವುದಕ್ಕು ಅವಳ ಅಪ್ಪ ಬರುವುದಕ್ಕು ಸರಿಯಾಯಿತು. ‘ಇದನ್ನು ಅಪ್ಪನನ್ನೆ ಕೇಳಿ’ ಎಂದು ಎದ್ದು ಹೊರಟಳು. ನನಗೆ ಮತ್ತೆ ಮಾತು ಮುಂದುವರೆಸುವುದಕ್ಕೆ ಬೇಸರವಾದರೂ ಪೂಜಾರಿ ಹೇಳಿದ್ದೆಲ್ಲವನ್ನು ಕೇಳಿಸಿಕೊಂಡೆ.
        ‘ನಾವು ಬ್ಯಾಡರು ಅಂತ ಕಾಡ ಜನ. ನಿಜವಾಗಲು ನಾವು ನಾಯಕರು. ಚಿತ್ರದುರ್ಗದ ಮದಕರಿ ನಾಯಕ್ರಿಲ್ವರ ಅವ್ರ ವಂಶದೋರು ನಾವು. ನಾವು ಬ್ಯಾಟೆ ಆಡ್ತೀವಲ್ಲ ಅದಕ್ಕೆ ಬ್ಯಾಡರು ಅಂತಾರೆ. ನೀವೇನೊ ಕೇಳಿದರಲ್ಲ. ಪೂಜಾರಿ ಯಾರು ಅಂತ. ಈಗ ನಮ್ಮ ಪೆಟ್ಟಿಗೆ ದೇವರಿಲ್ವ. ಅದಕ್ಕೆ ಪೂಜಾರಿ ಆಗಿರೋದು ಅಂತ. ಹೆಂಗಸ್ರು ಪೂಜಾರಿ ಆಗಬಹುದು. ಆದರೆ ಅವ್ಳು ಮದುವೆ ಆಗಂಗಿಲ್ಲ. ಗಂಡ್ಸು ಆಗಬಹುದು. ಹೆಂಗ್ಸುನ್ನ ದೇವ್ರ ಹೊತ್ತೊಳು ಅಂತಾರೆ. ಅವ್ಳಿಗೆ ಮಕ್ಳುಗಿಕ್ಳು ಆದರೆ ಏನು ತೊಂದರೆ ಇಲ್ಲ. ನಮ್ಮ ಜನ್ದೋವು ತಾಮುಂದೆ ನಾಮುಂದೆ ಅಂತ ತೆರ ಕೊಟ್ಟು ಮದುವೆ ಆಯ್ತವೆ. ಪೂಜಾರಿ ಆಗದಂದ್ರೆ ಬಾಳ ದೊಡ್ಡ ಮಾತು. ಅವ್ರಿಗೆ ಬೇರೆ ಮಶಾಣನೆ ಇರುತ್ತೆ. ನಾಳೆ ನೀವೆ ನೋಡ್ತಿರಲ್ಲ. ಒಂದೆರಡು ಗಂಡೈಕ್ಳಿಗೆ ಮುದ್ರೆ ಹಾಕಿ ಪೂಜಾರಿ ಬಿಡ್ತಾರೆ’ ಎಂದು ಮಾತು ಮುಗಿಸಿದ ಪೂಜಾರಯ್ಯ ‘ಇನ್ನ ವಸಿ ನಿದ್ದೆ ಮಾಡೋಗಿ. ಬೆಳಿಗ್ಗೆ ಹೊತ್ತಿಗ್ಮುಂಚೆ ಏಳ್ಬೇಕು’ ಎಂದು ಎದ್ದು ಹೊರಟ.
*    *   *  * *** *  *   *    *
ಬೆಳಿಗ್ಗೆ ಐದುಐದೂವರೆಗೆಲ್ಲ ಗೌರಿಯೇ ಬಂದು ಎಬ್ಬಿಸಿದಾಗ ನಾನೂ ಖುಷಿಯಿಂದಲೇ ಎದ್ದು ಕುಳಿತೆ. ಗೌರಿಯಾಗಲೆ ಮಿಂದು ಮಡಿಯುಟ್ಟಿದ್ದಳು. ನಾನು ಅವಳನ್ನೇ ನೋಡುತ್ತಿರುವುದನ್ನು ಗಮನಿಸಿದ ಗೌರಿ ‘ನೀವು ಸ್ನಾನ ಮಾಡಿ. ಗುಡಿ ಹತ್ರ ಹೋಗಾನ ದೇವರನ್ನ ಎತ್ತೊ ಹೊತ್ಗೆ’ ಎಂದಳು. ನಾನು ಸ್ವಲ್ಪ ಚುಡಾಯಿಸುವವನ ರೀತಿಯಲ್ಲಿ ‘ನಿಮ್ಮಲ್ಲಿ ಅಳಿಯನಿಗೂ ಇದೇ ರೀತಿ ಉಪಚಾರ ಇರುತ್ತಾ’ ಎಂದೆ. ‘ಉಪಚಾರವೇನೊ ಇರುತ್ತೆ. ಆದರೆ ನೀವು ಆಗ್ತಿನಿ ಅಂದ್ರೆ ಸಗಣಿ ತಿಂದು, ಗಂಜಲ ಕುಡ್ದು ನಾಲಗೆನೂ ಸುಟ್ಟಗಬೇಕಾಗುತ್ತೆ’ ಎಂದು ನಕ್ಕಳು. ನಾನೂ ಅವಳಿಗೆ ಇಷ್ಟವಾಗಿದ್ದೇನೆ ಎಂಬ ದೈರ್ಯದಿಂದ ‘ನಾನು ಈ ಮನೆ ಅಳಿಯ ಆಗಬಹುದೆ?’ ಎಂದು ಮೆಲುದನಿಯಲ್ಲಿ ಕೇಳಿದೆ. ಅವಳ ಒಂದು ಮಾತನ್ನೂ ಆಡದೆ ನನ್ನ ಕಡೆಗೊಮ್ಮೆ ನೋಡಿ ಎದ್ದು ಹೋದಳು. ನನಗೆ ‘ಅಯ್ಯೊ, ನಾನು ಹೀಗೆ ಕೇಳಬಾರದಿತ್ತು’ ಅನ್ನಿಸಿತು.
ನಾವು ಗುಡಿಯ ಬಳಿ ಬರುವಷ್ಟರಲ್ಲಿ ನೂರಾರು ಜನ ಜಮಾಯಿಸಿಬಿಟ್ಟಿದ್ದರು. ಓಬಳಯ್ಯ ಬಿಳಿ ಕಸೆ ಅಂಗಿ ಚಲ್ಲಣ ತೊಟ್ಟು ಗುಡಿಯ ಬಾಗಿಲಲ್ಲೆ ನಿಂತಿದ್ದ. ಗೌರಿಯ ತಂದೆ ಬಂದು ಕಾಯಿ ಹೊಡೆದಾಕ್ಷಣ ಪೆಟ್ಟಿಗೆಯಾಕಾರದ ದೇವರನ್ನು ಒಂದು ಕಂಬಳಿಯಲ್ಲಿಟ್ಟು ಹೊತ್ತುಕೊಂಡು ಕೆರೆಯ ಕಡೆಗೆ ಹೊರಟರು. ಗೌರಿ ‘ಇದೇ ಪೆಟ್ಟಿಗೆ ದೇವರು’ ಎಂದು ನನ್ನ ಕಿವಿಯಲ್ಲಿ ಉಸುರಿದಳು. ಅದು ನನಗೆ ಇಷ್ಟವಾಯಿತಾದರೂ, ಹಲವಾರು ಕಣ್ಣುಗಳು ನಮ್ಮನ್ನೇ ನೋಡುತ್ತಿದ್ದುದನ್ನು ಕಂಡು ಒಂದು ರೀತಿಯ ಮುಜುಗರವಾಯಿತು. ಅದನ್ನು ತೋರಿಸಿಕೊಳ್ಳದೆ, ‘ಅದರ ಒಳಗೇನಿದೆ?’ ಎಂದೆ. ‘ನನಗೂ ಗೊತ್ತಿಲ್ಲ. ನಮ್ಮ ಪೆಟ್ಟಿಗೆ ದೇವ್ರು ತಾಮ್ರದ್ದು. ಅದನ್ನು ತಗಿದಂಗೆ ಬೆಸಗೆ ಹಾಕ್ಬಿಟ್ಟವರೆ. ನಾನು ಬೇರೆ ಹಟ್ಟಿ ಮರದ ಪೆಟ್ಟಿಗೆ ದೇವರನ್ನು ನೋಡಿದ್ದೀನಿ. ಅದ್ರೊಳಗೆ ಅದೆಂತದೋ ಕಲ್ಲಿರ್ತವೆ’ ಎಂದಳು. ‘ಸಾಲಿಗ್ರಾಮದ ಕಲ್ಲು’ ಎಂದು ನಾನಂದಾಗ ‘ಹೌದು ಹೌದು. ನಿನ್ಗೆಂಗೆ ಗೊತ್ತು?’ ಎಂದಳು. ಅವಳು ಏಕವಚನ ಬಳಸಿದ್ದು ನನಗೆ ಇಷ್ಟವಾಯಿತು. ‘ನಮ್ಮ ಜನ ಪೆಟ್ಟಿಗೆಯಲ್ಲಿ ಕಲ್ಲಿಟ್ಟು ಪೂಜೆ ಮಾಡ್ತಾರೆ ಅಂದ್ರೆ ಅದು ಸಾಲಿಗ್ರಾಮದ ಕಲ್ಲೇ ಆಗಿರುತ್ತೆ’ ಎಂದೆ.
ಕೆರೆಯಲ್ಲಿ ಪೆಟ್ಟಿಗೆ ದೇವರಿಗೆ ಸ್ನಾನ ಮಾಡಿಸಿಕೊಂಡು ಹೊಸ ಕಂಬಳಿಯಲ್ಲಿಟ್ಟು ತಂದರು. ಇನ್ನೊಂದು ಕಂಬಳಿಯಲ್ಲಿ ಗದ್ದುಗೆ ಮಾಡಿ ದೇವರನ್ನು ಪ್ರತಿಷ್ಠೆ ಮಾಡಿ ಪೂಜೆಗೆ ಪ್ರಾರಂಭಿಸಿದರು. ಅಷ್ಟರಲ್ಲಿ ಇಬ್ಬರು ಹುಡುಗರನ್ನು ಅಲ್ಲಿಗೆ ಕರೆತಂದರು. ಇಬ್ಬರಿಗೂ ಸುಮಾರು ಏಳೆಂಟು ವರ್ಷಗಳಿರಬಹುದು ಅಷ್ಟೆ. ಇಬ್ಬರಿಗೂ ಸ್ನಾನ ಮಾಡಿಸಿ ಚಲ್ಲಣ ತೊಡಿಸಿದ್ದರು. ಅದಕ್ಕಿದ್ದ ಲಾಡಿಯ ತುದಿಗೆ ಕುಚ್ಚಿನಂತ ಗೊಂಡೆ ಹೂವಿನ ಅಲಂಕಾರವಿತ್ತು. ಅವರಿಗೆ ತೊಡಿಸಿದ್ದ ಕಸೆ ಅಂಗಿಗೆ ಎರಡೂ ಕಡೆ ತ್ರಿಶೂಲ, ಚೇಳು, ಹಾವು, ಸೂರ್ಯ ಮುಂತಾದವುಗಳನ್ನು ಕಸೂತಿ ಹಾಕಿದ್ದರು. ಪೂಜಾರಿಯು ಬಂದು ಅವರಿಬ್ಬರಿಗೂ ತೀರ್ಥ ಹಾಕಿದ ಮೇಲೆ, ಓಬಳಯ್ಯ ಕಾಯಿಸಿದ ಸ್ವಸ್ತಿಕ್ ಆಕಾರದ ಮುದ್ರೆಯನ್ನು ತಂದು ಹೆಂಗಸರ ಕಡೆಗೆ ನೋಡಿ ‘ಹೂಂ, ಹೇಳಿ’ ಎಂದ. ನಾನು ನನ್ನ ರೆಕಾರ್ಡರನ್ನು ಆನ್ ಮಾಡಿದೆ.
ಹತ್ತನೆ ವರುಸದ ಮುಟ್ಟಾದ ಎಲಿವಳಗ
ತಾಯಂಜನದೇವಿ ಧರಿಸ್ಯಾಳ ಸುವ್ವೀ
ತಾಯಂಜನದೇವಿ ಧರಿಸಿದ ಕಾರಣದಿಂದ ಸುವ್ವೀ
ಸ್ವಾಮಿ ಹುಟ್ಟ್ಯಾನು ಲಂಕಿ ಹನುಮಯ್ಯ ಸುವ್ವೀ
ಅಕ್ಕಂಜಣದೇವಿ ಬಾಲನ ಪಡೆದಾಳೆ ಸುವ್ವೀ
ಕಾಲ ತೊಳೆವುಕೆ ನೀರ ಮೊದಲಿಲ್ಲ ಸುವ್ವೀ
ಕಾಲ ತೊಳೆವುಕೆ ನೀರಿಲ್ಲ ಹನುಮಯ್ಯ ಸುವ್ವೀ
ದೋರಲ ಸಮುದ್ರ ತಿರುವ್ಯಾನೆ ಸುವ್ವೀ
ಹೀಗೆ ಹಾಡು ಸಾಗಿರುವಾಗಲೇ ಓಬಳಯ್ಯ ಇಬ್ಬರು ಹುಡುಗರಿಗೂ ತೋಳಿನ ಮೇಲೆ ಮುದ್ರೆ ಹೊತ್ತಿದ. ಅವರಲ್ಲಿ ಒಬ್ಬನೂ ತುಟಿತೆರೆದು ಅಳಲಿಲ್ಲ. ಆದರೆ ನನಗೆ ಅಯ್ಯೋ ಎನ್ನಿಸಿತು. ಗೌರಿಯ ಮುಖ ನೊಡಿದೆ. ಅವಳಿಗೂ ಅಯ್ಯೋ ಅನ್ನಿಸಿರಬೇಕು ಎಂದುಕೊಂಡೆ. ‘ಇಂದಿನಿಂದ ಅವರು ಪೂಜಾರಿಯರು’ ಎಂದ ಗೌರಿಯ ಮಾತಿನಲ್ಲಿ ನೋವಿತ್ತೆ ಎಂದು ಹುಡುಕುವ ವಿಫಲ ಪ್ರಯತ್ನವನ್ನೂ ಮಾಡಿದೆ.
        ಸುಮಾರು ಮೂರು ಗಂಟೆಯ ಹೊತ್ತಿಗೆ ದೇವರ ಉತ್ಸವಗಳೆಲ್ಲ ಮುಗಿದು ಸೀಪರು ಅಡಿಗೆ ಸಿದ್ದವಾಗಿ ಕಾಯುತ್ತಿತ್ತು. ‘ಪೂಜಾರಿ ಇನ್ನು ಊಟಕ್ಕೆ ಏಳಿ’ ಎಂದಾಗ ಜನವೆಲ್ಲ ಗುಡಿಯ ಮುಂದೆ ಎರಡು ಸಾಲಾಗಿ ಕುಳಿತರು. ಮುತ್ತುಗದ ಎಲೆಯನ್ನು ನವ್ಯಕಲಾಕೃತಿಯಂತೆ ಜೋಡಿಸಿ ಕಟ್ಟಿದ್ದ ಊಟದ ಎಲೆಗಳ ಮೇಲೆ ಮಾಡಿದ್ದ ಎಲ್ಲಾ ರೀತೀಯ ಅಡುಗೆಯನ್ನು ಎಲ್ಲರಿಗೂ ಬಡಿಸುವವರಗೆ ತಿನ್ನಬಾರದೆಂದು ಗೌರಿ ಮೊದಲೇ ನನಗೆ ಹೇಳಿದ್ದಳು. ಓಬಳಯ್ಯ ಮುಂದೆ ನಿಂತು ಬಡಿಸುತ್ತಿದ್ದ. ‘ಎಲ್ಲಾರ್ದು ಆಯ್ತು ಪೂಜಾರ್ರೆ’ ಎಂದಾಗ, ಪೂಜಾರಿ ‘ಇನ್ನು ಊಟ ಮಾಡಬೌದಲ್ಲ’ ಎಂದು ಹೇಳುತ್ತಿರುವಾಗಲೇ ಸಾಲಿನ ನಡುವಿನಿಂದ ಎದ್ದ ಠೊಣಪನಂತಿದ್ದವನೊಬ್ಬ, ‘ಪೂಜಾರ್ರೆ, ಒಂದು ಮಾತು ಇತ್ಯರ್ಥ ಆಗಗಂಟ ತುತ್ತು ಎತ್ತಂಗಿಲ್ಲ’ ಎಂದ. ಗೌರಿ ‘ಅವ್ನ ಹೆಸ್ರು ಪಾಲ’ ಎಂದಳು. ಅತ್ತ ಪೂಜಾರಿ ‘ಹೇಳು ಪಾಲ. ಅದೇನು ಮಾತು?’ ಎಂದ. ‘ನಿಮ್ಮಗಳಿಚಾರನೆ’ ಎಂದಾಗ ಅಲ್ಲಿದ್ದ ಸಮಸ್ತರ ಬಾಯಿಂದ ಚಿತ್ರವಿಚಿತ್ರವಾದ ಶಬ್ಧಗಳು ಹೊರಬಂದವು. ನಾನು ಗೌರಿ ಮುಖಮುಖ ನೋಡಿಕೊಂಡೆವು. ಸದ್ಯಕ್ಕೆ ಊಟವಿಲ್ಲವೆಂದೋ ಏನೋ ಕೆಲವರು ಕುಕ್ಕುರಗಾಲಲ್ಲಿ ಕುಳಿತುಕೊಂಡರು. ಎದ್ದು ನಿಂತ ಪಾಲ ‘ಪೂಜಾರ್ರೆ ನಮ್ಮಟ್ಟಿ ಕಟ್ಟು ಕಟ್ಳೆ ನಿಮಗೆ ಗೊತ್ತೇ ಇದೆ. ನಮ್ಮ ಕುಲದ ಎಣ್ಣುಮಗ್ಳು ಇನ್ನೊಂದು ಕುಲದವನ್ನ ಮದುವೆ ಆಗಂಗಿಲ್ಲ. ಅದ್ರಲ್ಲು ನಿಮ್ಮಗ್ಳು ಹಿಂಗೆ ನಮ್ಮ ಜಾತಿಯವನೆ ಅಲ್ಲದ ಪ್ಯಾಟೆ ಹುಡುಗನ ಜೊತೆ ಮೊದುವೆಗೆ ಮೊದ್ಲೆ ತಿರ್ಗಾಡದು ಸರಿಯಾಗ್ತದ. ಅವ್ಳೇನು ದೇವ್ರ ಹೊತ್ತವ್ಳು ಅಲ್ವಲ್ಲ ಹೆಂಗಾದ್ರು ಮಾಡ್ಕಳ್ಳಿ ಅನ್ನಾಕೆ’ ಎಂದ. ಇದಾವುದನ್ನೂ ನಿರೀಕ್ಷಿಸಿರದ ನನಗೆ ಆಶ್ಚರ್ಯವೂ ಭಯವೂ ಆಗಿ ಗೌರಿಯ ಮುಖವನ್ನು ನೋಡುವ ಮನಸ್ಸಾಗಲಿಲ್ಲ.
ಪೂಜಾರಿ ಎದ್ದು ನಿಂತು ‘ಮಾಜನಗಳೆ, ವಿಷಯ ನನ್ನ ಮನೆಗೆ ಸಂಬಂಧಿಸಿರೋದ್ ಆದ್ರಿಂದ ನಾನು ಕೆಳಗೆ ಕುತ್ಗಂತಿನಿ. ನಾಕು ಜನ ಮುಖಂಡ್ರು ಹೆಂಗಿದ್ರು ಅವ್ರೆ. ಇನ್ನೊಬ್ರು ಯಾರಾದ್ರು ಮೇಲಕ್ಕೆ ಕುತ್ಕಳ್ಳಿ’ ಎಂದು ಕೆಳಗಿಳಿದು ಬಂದು ನಿಂತುಕೊಂಡ. ಯಾರೋ ‘ಓಬಳಯ್ಯ’ ಅಂದರು. ಇನ್ನಾರೋ ‘ಪಾಲಯ್ಯ’ ಅಂದರು. ಆದರೆ ಕಟ್ಟೆ ಮೇಲೆ ಕುಳಿತಿದ್ದವನೊಬ್ಬ ‘ಬಾ ಓಬಳಯ್ಯ’ ಎಂದಾಗ ಓಬಳಯ್ಯ ಹೋಗಿ ಕುಳಿತುಕೊಂಡ. ಪಂಚಾಯ್ತಿ ಶುರುವಾಯಿತು. ನಮ್ಮಿಬ್ಬರಿಗೂ ಎದ್ದು ನಿಲ್ಲುವಂತೆ ಯಾರೋ ಹೇಳಿದರು. ನಾವು ಎದ್ದು ಕಟ್ಟೆಗೆ ಸಮೀಪ ಬಂದು ನಿಂತು ಕೂಂಡೆವು. ನಾನು ಮಾತನಾಡಲು ಹೋದಾಗ ಗೌರಿ ಸುಮ್ಮನಿರುವಂತೆ ಕಣ್ಣಲ್ಲೆ ಸೂಚಿಸಿದಳು. ಬುಡಕಟ್ಟು ಜನಾಂಗದಲ್ಲಿ ಈ ತರದ ವಿಷಯಗಳನ್ನು ಬಹಳ ಗಂಭೀರವಾಗಿ ತಗೆದುಕೊಳ್ಳುತ್ತಾರೆ ಎಂದು ಎಲ್ಲೋ ಓದಿದ್ದು ಜ್ಞಾಪಕಕ್ಕೆ ಬಂದು ಸಣ್ಣಗೆ ಭಯವಾಗುವುದರ ಜೊತೆಗೆ ಗೌರಿಗೆ ಏನು ಮಾಡುತ್ತಾರೋ ಅನ್ನಿಸಿ ಮನಸ್ಸಿಗೆ ಬೇಸರವಾಯಿತು. ಪಾಲಯ್ಯ ಮುಂದುವರೆಸಿ, ‘ಈಗ ಹೆಂಗು ಅವ್ಳು ಕುಲಗೆಟ್ಟವ್ಳೆ. ಅವ್ಳನ್ನು ದೇವ್ರಿಗೆ ಬುಟ್ಬುಡಿ. ಇಲ್ಲಾಂದ್ರೆ ಅವಯ್ಯನಿಗೆ ಕೊಟ್ಟು ಮದುವೆ ಮಾಡಿ. ಅವ್ರು ತೆರ ತಪ್ದಂಡ ಕೊಡ್ಲಿ’ ಎಂದ. ಪಾಲಯ್ಯ ನನಗೆ ಇಷ್ಟವಾಗತೊಡಗಿದ. ಆದರೆ ಯಾರದರೂ ಗೌರಿಯನ್ನು ದೇವರಿಗೇ ಬಿಡಬೇಕೆಂದರೆ ಎಂದು ಭಯವಾಯಿತು. ‘ನೋಡಿ. ನಾವೇನು ತಪ್ಪು ಮಾಡಿಲ್ಲ. ಗೌರಿ ಒಳ್ಳೆ ಹುಡುಗಿ. ನನ್ಜೊತೆ ಅವಳು ತಿರುಗಾಡಿದ್ದೆ ತಪ್ಪಾಗಿದ್ರೆ ನೀವು ಕೇಳಿದ ತಪ್ಪುದಂಡವನ್ನು ನಾನು ಕೊಡ್ತಿನಿ. ಅವಳನ್ನು ದೇವರಿಗೆ ಬಿಡುವ ವಿಚಾರ ಬೇಡ’ ಎಂದೆ. ‘ಆಗ ಮೇಲೆ ಕುಳಿತಿದ್ದವರೊಬ್ಬರು ‘ಸಯಾಬ್ರೆ, ಇದೆಲ್ಲ ನಿಮ್ಗೆ ಗೊತ್ತಾಗಕಿಲ್ಲ. ಸುಮ್ಕಿರಿ’ ಎಂದು ಗೌರಿಗೆ ‘ಏನವ್ವ ಗೌರಿ. ನೀನ್ ಓದ್ದೋಳು. ಈಗ ನೀನೆ ಹೇಳು. ದೇವ್ರಿಗೆ ಒಪ್ಪಿಸ್ಕೊಂತಿಯಾ ಇಲ್ಲ ಈವಯ್ಯನ್ನ ಮದುವೆ ಆಗ್ತಿಯ. ನೀನ್ ಮದುವೆ ಆಗ್ತಿನಿ ಅಂದ್ರೆ ಈವಯ್ಯನ್ಕುಟೆ ಮದುವೆ ಮಾಡ್ಸ್ ಜವಬ್ದಾರಿ ಈ ಪಂಚಾತಿದು’ ಎಂದ. ಗೌರಿ ಏನು ಹೇಳುತ್ತಾಳೆ ಎಂದು ನಾನು ಕುತೂಹಲದಿಂದ ನೊಡತೊಡಗಿದೆ. ಅವಳು ಮಾತನಾಡದೆ ಅವಳ ಅಪ್ಪನ ಕಡೆಗೆ ನೊಡುತ್ತಿದ್ದಳು. ಆಗ ಸಾಲಿನಲ್ಲಿದ್ದವ್ನೊಬ್ಬ ‘ಹೊತ್ತಾಗುತ್ತೆ ಬೇಗ ಯೋಳಮ್ಮೌ. ಈಗ್ಲೆ ಅಡ್ಗೆ ತಣ್ಗಾಗೈತೆ’ ಎಂದು ಕೂಗಿದ. ಅದಕ್ಕೆ ಪರವಿರೋದವಾದ ಕೂಗುಗಳೂ ಕೇಳಿಬಂದವಾದರೂ ನಾನಾವುದನ್ನೂ ಗಮನಿಸದೆ, ಗೌರಿಯನ್ನೇ ನೋಡುತ್ತಿದ್ದೆ. ‘ಅವ್ರು ಒಪ್ಪೊದಾದ್ರೆ ನಾನು ಅವ್ರನ್ನೆ ಮದುವೆಯಾಗ್ತಿನಿ. ಇಲ್ಲಂದ್ರೆ ನಿಮ್ಮ ದಮ್ಮಯ್ಯ ಅಂತಿನಿ ದೇವ್ರಿಗೆ ಮಾತ್ರ ಬಿಡ್ಬೇಡಿ. ಇನ್ನೇನಾದ್ರು ಶಿಕ್ಷೆ ಕೊಡಿ’ ಎಂದು ಕೈ ಮುಗಿದು ಕೇಳಿದಳು. ಬೇರೆಯವರು ಇನ್ನು ಏನಾದರು ಹೇಳಬಹುದೆಂದುಕೊಂಡ ನಾನು ತಕ್ಷಣ ‘ನೋಡಿ. ತಪ್ಪು ನನ್ನದು. ಗೌರಿಗೆ ಏಕೆ ಶಿಕ್ಷೆ. ಅವಳನ್ನು ಯಾವ ದೇವರಿಗೂ ಬಿಡುವುದೂ ಬೇಡ. ನಾನೇ ಮದುವೆಯಾಗುತ್ತೇನೆ. ಹೇಳಿ ಎಷ್ಟು ತೆರ ಕೊಡಬೇಕು’ ಎಂದೆ. ಗೌರಿಯ ಮುಖ ಸಂತೋಷದಿಂದ ಕಂಗೊಳಿಸುತ್ತಿತ್ತು. ಅತ್ತ ಪೂಜಾರಿಯೂ ಕೃತಜ್ಞತಾಪೂರ್ವಕವಾಗಿ ನನ್ನಡೆಗೆ ನೋಡುತ್ತಿದ್ದ.
ಮುಖಂಡರಲ್ಲೊಬ್ಬರು, ‘ಮಾಮೂಲಿ, ಐವತ್ತೊಂದ್ರುಪಾಯಿ ತೆರ ಕೊಡ್ಲಿ. ಇನ್ನೈವತ್ತೊಂದ್ರುಪಾಯಿ ದಂಡ ಕೊಡ್ಲಿ’ ಎಂದರು. ಆಗ ಪಾಲನೆದ್ದು, ‘ಅದೆಂಗಾದಾತು ಬುಡಿ. ನಮ್ಮ ಕುಲದವ್ರೆ ಐವತ್ತೊಂದ್ರುಪಾಯಿ ತೆರ ಕೊಡ್ತಾರೆ. ಈವಯ್ಯ ಬೇರೆ ಜಾತಿ. ಕೊಡ್ಲಿ ಬುಡಿ ಇನ್ನೊಂದಿಷ್ಟು ತೆರಾನ. ದಂಡಾನು ಅಷ್ಟೆ’ ಎಂದ. ಆಗ ಇನ್ನೊಬ್ಬ ಪಂಚಾಯ್ತಿದಾರ ‘ಪಾಲಯ್ಯ ನಿಂದು ಅತಿಯಾಯ್ತು. ಕಟ್ಟೆ ಮ್ಯಾಲೆ ಕೂತಿರೊ ನಮ್ಗೇನು ಗೊತ್ತಿಲ್ವ ಏನ್ ಮಾಡ್ಬೇಕು ಅಂತ. ಸುಮ್ಕಿರು’ ಎಂದು ನನ್ನ ಕಡೆಗೆ ತಿರುಗಿ ‘ನೋಡಿ ಅಯ್ನೋರೆ. ನೂರೈವತ್ತೊಂದ್ರುಪಾಯಿ ತೆರ ಕೊಟ್ಬುಡಿ. ದಂಡಾನು ಅಷ್ಟೆ’ ಅಂದ. ನಾನು ‘ಆಗಲಿ. ಆದ್ರೆ ಮದುವೇನ ಇವತ್ತೇ ಮಾಡಿ ಕೊಡ್ಬೇಕು. ಮದುವೆ ಖರ್ಚಿಗೇನು ಯೋಚ್ನೆ ಮಾಡೋದ್ಬೇಡ. ನಾನ್ಕೊಡ್ತಿನಿ’ ಎಂದೆ. ಗೌರಿ ನಗುತ್ತಿರುವಂತೆ ಕಾಣುತ್ತಿತ್ತು ನನ್ನ ಅವಸರವನ್ನು ಕಂಡು. ಆದರೆ ನನಗೆ ಯಾವ ಅವಸರವೂ ಇರಲಿಲ್ಲ. ಬೇರೆ ಯಾರಾದರೂ ಏನಾದರೂ ಹೇಳಿ, ಯಾವ ಗೊತ್ತು ಗುರಿಯಿಲ್ಲದೇ ಸಾಗುತ್ತಿದ್ದ ಈ ಪಂಚಾಯ್ತಿಯಲ್ಲಿ ಗೌರಿಯನ್ನು ದೇವರಿಗೆ ಬಿಡಿ ಎಂದುಬಿಟ್ಟರೆ ಎಂಬ ಭಯ ನನ್ನದಾಗಿತ್ತು. ನಾನು ಹೇಳಿದ್ದಕ್ಕೆ ಪಂಚಾಯ್ತಿದಾರರು ಒಪ್ಪಿಕೊಂಡರಾದರೂ, ‘ಊಟಕ್ಕೆ ಮೊದಲು ಮದುವೆ ಸಾಧ್ಯವಿಲ್ಲ. ದೋಯಿಸ್ರನ್ನು ಕರೆಸ್ಬೇಕು. ಅದ್ರಿಂದ ಈಗ ಊಟ ಆಗ್ಲಿ ನಾಳೆ ಮದುವೆ ಆಗ್ಲಿ’ ಎಂದರು. ಇದಕ್ಕೆ ಬಹಳ ಮಂದಿ ಒಪ್ಪಿಗೆಯನ್ನೂ ಕೊಟ್ಟರು. ನಾನು ಹೆಮ್ಮೆಯಿಂದ ಗೌರಿಯ ಕಡೆಗೆ ನೊಡುತ್ತಿದ್ದರೆ ಪಾಲಯ್ಯ, ‘ಮದುವೆ ಬೇಕಾದ್ರೆ ನಾಳೆನೆ ಮಾಡಿ. ಈಗ ತೆರ ಕೊಟ್ಟು ಇಳ್ಳೇವು ಶಾಸ್ತ್ರ ಮಾಡ್ಕಂಬುಡ್ಲಿ. ಅದುಕ್ಮುಂಚೆ ಈವಯ್ಯನ ಅಪ್ಪ ಅವ್ವನ್ನ ಒಂದು ಮಾತ್ಕೇಳ್ಬಾರದ? ಅದು ಈಗ್ಲೆ ತೀರ್ಮಾನ ಆಗ್ಲಿ’ ಎಂದ.
ಮತ್ತೆ ಪಾಲ ನನಗೆ ಇಷ್ಟವಾದ. ನನಗೆ ತೊಂದರೆ ಕೊಡಬೇಕೆಂಬುದೇ ಅವನ ಎಣಿಕೆಯಾಗಿದ್ದಿರಲಿಲ್ಲ ಅನ್ನಿಸಿತು. ‘ನೋಡಿ, ನನ್ನ ತಂದೆ ತಾಯಿ ಭಯ ನಿಮಗೆ ಬ್ಯಾಡ. ಅವರಾರು ಈಗಿಲ್ಲ. ನಾನು ಒಬ್ಬೊಂಟಿ. ಈಗ ಬೇಕಾದ್ರೆ ಅದೇನೊ ಶಾಸ್ತ್ರ ಅಂದ್ರಲ್ಲ ಅದನ್ನು ಮಾಡಿ. ಪಾಪ, ಜನ ಎಲ್ಲ ಊಟನಾದ್ರು ಮಾಡ್ಲಿ’ ಎಂದೆ. ಎದ್ದು ನಿಂತೆ ಓಬಳಯ್ಯ ‘ಇನ್ಮೇಲೆ ನೀನೆಲ್ಲಿ ಒಬ್ಬೊಂಟಿ ಬುಡಣ್ಣಯ್ಯೌ. ನಾವಿಲ್ವ. ಗೌರವ್ವಿಲ್ವಾ. ತತ್ತಾ ಇತ್ತ ನೂರೈವತ್ತೊಂದ್ರುಪಾಯಿಯ’ ಎಂದ. ಆತನ ಮಾತು ನನಗೆ ಇಷ್ಟವಾಯಿತು. ಜಗತ್ತಿನಲ್ಲಿ ನನಗೂ ಬಂಧುಗಳಿದ್ದಾರೆ ಎನ್ನಿಸಿತು. ನಾನು ನೂರೈವತ್ತೊಂದು ರುಪಾಯಿ ಕೊಡುವಷ್ಟರಲ್ಲಿ ಮುಖಂಡರೊಬ್ಬರು ಪೂಜಾರಿಯನ್ನು ಕರೆದು ಅವನ ಕೈಯಲ್ಲಿ ವಿಳ್ಳೇದೆಲೆಯನ್ನೂ ಅಡಿಕೆಯನ್ನೂ ಕೊಟ್ಟರು. ನನ್ನಿಂದ ಹಣವನ್ನು ಪಡೆದ ಪೂಜಾರಿ ಅದರಲ್ಲಿನ ಒಂದು ರುಪಾಯಿಯನ್ನು ತಿರುಗಿ ವಿಳ್ಳೇದೆಲೆಯ ಮೇಲೆ ಇಟ್ಟು ‘ನಮ್ಮ ಹೆಣ್ಣು ನಿಮಗೆ’ ಎಂದು ನನಗೆ ತಿರುಗಿ ಕೊಟ್ಟರು.
        ‘ಇನ್ನಾದ್ರು ಊಟ ಮಾಡ್ಬೌದಲ್ಲ’ ಎಂದ್ ಓಬಳಯ್ಯ ‘ನಾಳೆ ಮದುವೆ ಊಟ. ಒಂದೆರಡು ಕುರಿಗಳನ್ನಾದ್ರು ಕಡಿಬೇಕಪ್ಪ’ ಎಂದು ಪೂಜಾರಿಗೆ ಹೇಳಿದ. ಆದರೆ ಮತ್ತೆ ಎದ್ದು ನಿಂತ ಪಾಲಯ್ಯ, ‘ನಂದು ಇನ್ನೂ ಒಂದ್ಮಾತೈತೆ’ ಎಂದ. ಜನರೆಲ್ಲ ‘ಏನು" ಎಂಬಂತೆ ಅಸಹನೆಯಿಂದ ಅವನ ಕಡೆಗೆ ನೋಡಿದರು. ‘ಯಾಕ್ರಪ್ಪ ಎಲ್ಲ ಮರೆತುಬುಟ್ರಾ. ಕುಲ್ವಲ್ಲದಕುಲ್ದೋನ ಜೊತೆ ಮದುವೆಯಾದೋಳ ಮತ್ತೆ ನಮ್ಮ ಕುಲಕ್ಕೆ ಸೇರಿಸ್ಕಣದುಕ್ಕು ಮುಂಚೆ ಅವ್ಳ ಸುದ್ದಿಯಾಗ್ಬಾರ್ದಾ? ಅದನ್ನು ಯೀಗ್ಲೆ ತೀರ್ಮಾನ ಮಾಡ್ಬುಡಿ’ ಎಂದ. ಈ ಪಾಲಯ್ಯ ನನಗೆ ವಿಚಿತ್ರ ಮನುಷ್ಯನಂತೆ ಕಂಡ. ತನ್ನ ಕುಲದಲ್ಲಿ ಅಚಲವಾದ ನಿಷ್ಟೆಯನ್ನು ಹೊಂದಿದ್ದವನಂತೆ, ತನ್ನ ಕುಲಕ್ಕೂ ದೇವರಿಗೂ ಒಂದಿನಿತೂ ಅಪಚಾರವಾಗಬಾರದೆಂದು ಹಾರೈಸುವ ಹಿತೈಷಿಯಂತೆ ಕಂಡ. ಓಬಳಯ್ಯ ಮತ್ತೆ ನಿಂತು ‘ಅದ್ಕೂ ನಿನ್ಗೀಗ್ಲೆ ಅವಸ್ರಾನ? ಇದ್ದೇ ಇದೆ. ಗೌರಿನ ತಂಗಡಿ ಗಿಡದ್ ಬಳಿ ನಿಲ್ಸಿ, ಬೇವಿನ್ಕಡ್ಡಿಲಿ ನಾಲ್ಗೆ ಸುಟ್ಟು, ಗೋಗಂಧದಲ್ಲಿ ತೊಳ್ದು ಸುದ್ದಿ ಮಾಡಿ ಕರ್ಕಾಣದು. ಅಷ್ಟೆಯ’ ಎಂದ. ಅದಕ್ಕೆ ಎಲ್ಲರೂ ಒಪ್ಪಿದರು.
ಆದರೆ ನನಗೆ ಇದು ಒಪ್ಪಿಗೆಯಾಗಲಿಲ್ಲ. ‘ನೋಡಿ. ನೀವು ಅಂದ್ಕೊಂಡಿರೊ ತಪ್ಪು ನನ್ನಿಂದ ಆಗಿದೆ. ಅದೇನು ಶುದ್ದೀಕರಣ ಮಾಡ್ತಿರೊ ಅದನ್ನ ನನಗೆ ಮಾಡಿ. ಈ ನಾಲ್ಗೆ ಸುಡೋದು ಅದನ್ನೆಲ್ಲ ನನ್ಕೈಲಿ ನೋಡಕ್ಕಾಗಲ್ಲ’ ಎಂದೆ. ಅದಕ್ಕೆ ಮುಂದೆ ಬಂದ ಗೌರಿ, ‘ಇಲ್ಲ ನೀವು ನನಗೆ ಮಾಡಿರೊ ಉಪ್ಕಾರನೆ ಸಾಕು. ನನ್ನ ನಾಲ್ಗೆನೆ ಸುಡುಸ್ಕೋತಿನಿ. ಬೇಕಾದ್ರೆ ನೀವು ದೂರ ನಿಂತ್ಕಳಿ’ ಎಂದಳು. ಓಬಳಯ್ಯ ಜೋರಾಗಿ ನಗುತ್ತ ‘ಕೇಳ್ರಪ್ಪ. ನಮ್ಗೆ ಊಟದ್ ಚಿಂತೆ. ಇವರಿಗೆ ಇನ್ನವುದೋ ಚಿಂತೆ. ಅದೆಲ್ಲ ಮದುವೆ ಆದ್ಮೇಲಿನ್ ಮಾತು. ಈಗ ಊಟ ಮಾಡೇಳಿ’ ಎಂದು ಪೂಜಾರಿಯ ಕಡೆಗೆ ತಿರುಗಿ ‘ಪೂಜಾರಪ್ಪ ಇನ್ನೇನು ಯೇಳ್ಬುಡು’ ಎಂದ. ಗೌರಿಯ ಅಪ್ಪ ತನ್ನ ಎರಡು ಕೈಗಳನ್ನೆತ್ತಿ ‘ಇನ್ನ ಊಟ ಮಾಡ್ಬೌದಪ್ಪ. ಮಾಡಿ’ ಎಂದು ಜೋರಾಗಿ ಕೂಗಿದ.
ಜನರೆಲ್ಲ ಊಟದ ಕಡೆಗೆ ಗಮನಹರಿಸಿದರೆ ನಾವಿಬ್ಬರು ಪರಸ್ಪರ ಮುಖ ನೋಡಿಕೊಳ್ಳುತ್ತಿದ್ದುದನ್ನು ಗಮನಿಸಿದ ಓಬಳಯ್ಯ, ‘ಯಾಕೆ? ಮದುವೆ ಗಂಡುಹೆಣ್ಣಿಗೆ ಊಟ ಬ್ಯಾಡವಾ?’ ಎಂದಾಗ ಜನರೆಲ್ಲ ಒಂದು ಗಳಿಗೆ ಊಟ ನಿಲ್ಲಿಸಿ ‘ಗೊಳ್’ ಎಂದು ನಕ್ಕು ಮತ್ತೆ ಊಟ ಮುಂದುವರೆಸಿದರು.
*    *   *  * *** *  *   *    *

Monday, August 04, 2014

‘ಪದಧ್ವನಿ’ ಅಂದರೆ… ...

ಭಾರತೀಯ ಕಾವ್ಯಮೀಮಾಂಸೆಯ ಧ್ವನಿ ಸಿದ್ಧಾಂತದ ಪ್ರಬೇಧಗಳಲ್ಲಿ ಪದಧ್ವನಿ ಎಂಬುದೊಂದುಂಟು. ‘ಶಬ್ದ ಶಕ್ತಿಮೂಲ’ ಧ್ವನಿಯನ್ನು ಹೇಳುವಾಗ, ಕೇವಲ ಒಂದು ಪದದ ಮೇಲೆ ಒತ್ತು ಬೀಳುವುದನ್ನು ಹಾಗೂ ಆ ಪದದಿಂದಲೇ ಒಂದು ಅಲಂಕಾರ ಧ್ವನಿಸುವುದನ್ನು ಪದಧ್ವನಿ ಎನ್ನಲಾಗುತ್ತದೆ.
ವಿಚ್ಛಿತ್ತಿಶೋಭಿನೈಕೇನ ಭೂಷಣೇನೇವ ಭಾಮಿನಿ
ಪದದ್ಯೋತ್ಯೇನ ಸುಕವೇರ್ಧ್ವನಿನಾ ಭಾತಿ ಭಾರತಿ||
ರಮಣೀಯವಾಗಿ ಶೋಭಿಸುವ ಒಂದೇ ಆಭರಣದಿಂದ ಸ್ತ್ರೀ ಹೇಗೆ ಕಳೆಗೂಡುವಳೋ ಹಾಗೆ ಒಂದು ಪದವು ಹೊಳೆಯಿಸುವ ಧ್ವನಿಯಿಂದಲೇ ಸುಕವಿಯ ವಾಣಿ ಕಳೆಗೂಡುತ್ತದೆ! ಹಲವಾರು ಉದಾಹರಣೆಗಳಿಂದ ಅದನ್ನು ಮನನ ಮಾಡಿಕೊಳ್ಳಬಹುದು.
ಸಂಸ್ಕೃತ ಕಾವ್ಯದಿಂದಲೇ ಆರಂಭಿಸುವುದಾದರೆ, ಭಾಸನ ಊರುಭಂಗ ನಾಟಕದಲ್ಲಿ, ತೊಡೆ ಮುರಿದುಕೊಂಡು ಮರಣಶ್ಯಯ್ಯೆಯಲ್ಲಿ ಬಿದ್ದಿರುವ ದುರ್ಯೋಧನನಿಗೂ ಆತನ ಕಿರಿಯ ಮಗ ದುರ್ಜಯನಿಗೂ ನಡೆಯುವ ಸಂಭಾಷಣೆಯನ್ನು ಗಮನಿಸಬಹುದು. ತೊಡೆಯ ಮೇಲೆ ಕೂರಲು ಬಂದ ದುರ್ಜಯನನ್ನು ದೊರೆ ತಡೆದು, ‘ಈ ಪೀಠ ನಿನಗೆ ಇನ್ನು ಸಿಗುವುದಿಲ್ಲ’ ಎನ್ನುತ್ತಾನೆ. ‘ಮಹಾರಾಜನು ಹೋಗುವುದೆಲ್ಲಿಗೆ?’ ಎಂಬ ದುರ್ಜಯನ ಪ್ರಶ್ನೆಗೆ ‘ನೂರು ಮಂದಿ ತಮ್ಮಂದಿರ ಹಿಂದೆ ಹೋಗುತ್ತೇನೆ.’ ಎನ್ನುತ್ತಾನೆ ದುರ್ಯೋಧನ. ಅಷ್ಟರಲ್ಲಿ ಆತನ ನೂರು ಮಂದಿ ತಮ್ಮಂದಿರೂ ಸತ್ತುಹೋಗಿರುತ್ತಾರೆ! ಆದರೆ ಅದು ಮಗುವಿಗೆ ಅರ್ಥವಾಗುವುದಾದರೂ ಹೇಗೆ? ‘ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗು’ ಎನ್ನುತ್ತಾನೆ. ಆಗ ದುರ್ಯೋಧನ ‘ಹೋಗು ಮಗು. ಹೀಗೆಂದು ವೃಕೋದರನನ್ನು ಕೇಳು’ ಎನ್ನುತ್ತಾನೆ. ಈ ಮಾತು ಆ ಮಗುವಿಗೆ ಎಷ್ಟು ಅರ್ಥವಾಯಿತೊ ಇಲ್ಲವೊ. ಆದರೆ ಓದುಗನ ಹಾಗೂ ನಾಟಕದ ನೋಡುಗನ ಮನಸ್ಸು ಒಂದು ಕ್ಷಣ ವಿಹ್ವಲಗೊಳ್ಳುವುದು ಮಾತ್ರ ನಿಜ. ಅಲ್ಲಿ ವೃಕೋದರ ಅಂದರೆ ತೋಳನಂತೆ ಹೊಟ್ಟೆಯುಳ್ಳವನು ಅಂದರೆ ಭೀಮ! ಇನ್ನೇನು ಪ್ರಾಣ ಬಿಡಲಿರುವ ದುರ್ಯೋಧನನ ಜೊತೆಯಲ್ಲಿ ಹೋಗಲು ಆತನ ಮಗನಿಗೆ ಅನುಮತಿ ಕೊಡಬೇಕಾದವನು ಭೀಮ! ಭೀಮ ಇಲ್ಲಿ ಯುದ್ಧೋನ್ಮತ್ತನಾದವನು. ಆತನಿಗೆ ಕೌರವರ ನಾಶ ಮುಖ್ಯವೇ ಹೊರತು, ಚಿಕ್ಕವರು ದೊಡ್ಡವರು ಎಂಬದಲ್ಲ. ದುರ್ಯೋಧನನ ಸಂತತಿಯನ್ನೇ ಕೊನೆಗಾಣಿಸುವ ಪ್ರತಿಜ್ಞೆ ಮಾಡಿದವನು ಮಗುವೆಂದು ಕರುಣೆ ತೋರುವುದಿಲ್ಲ. ಆದ್ದರಿಂದಲೇ ದುರ್ಯೋಧನ ಭೀಮನನ್ನು ಕೇಳಹೋಗು ಎನ್ನುತ್ತಾನೆ. ಭೀಮ ಅನ್ನುವುದಕ್ಕಿಂತ ವೃಕೋದರ ಎಂಬ ಪದ ಈ ಸಂದರ್ಭಕ್ಕೆ ಹೆಚ್ಚು ಅರ್ಥವನ್ನೊದಗಿಸುತ್ತದೆ. ತೋಳ ಎಂಬುದು ಹಸಿವೆಯ ಸಂಕೇತ. ತೋಳಕ್ಕೆ ಅರ್ಥಾತ್ ಹಸಿವಿಗೆ ಯಾವುದೇ ಕರುಣೆಯಿರುವುದಿಲ್ಲ. ಅದು ಹಸುಗೂಸನ್ನಾದರೂ ಕೊಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತದೆ. ಆ ಕಾರಣದಿಂದ ಇಲ್ಲಿ ಭೀಮ ಎನ್ನುವುದಕ್ಕಿಂತ ವೃಕೋದರ ಪದವೇ ಹೆಚ್ಚು ಧ್ವನಿಪೂರ್ಣವೆನ್ನಿಸುತ್ತದೆ.

ರನ್ನನ ಗದಾಯುದ್ಧದ ‘ಕುರುಧರೆಯೊಳ್ ಕುರುಪತಿಯನರಸಿದಂ ಪವನಸುತಂ’ ಎಂಬ ಮಾತನ್ನು ಗಮನಿಸಬಹುದು. ಕುರುಪತಿ ರಾಜ ದುರ್ಯೋಧನ. ರಾಜನನ್ನು ಆತನ ರಾಜ್ಯದಲ್ಲಿಯೇ ಹುಡುಕುವುದೆಂದರೆ ಎಂತಹ ಆಭಾಸವಾಗುತ್ತದೆ ಎಲ್ಲವೆ? ಇನ್ನು ಮುಂದುವರೆದರೆ, ಹುಡುಕುತ್ತಿರುವವನು ಭೀಮ ಅನ್ನುವುದಕ್ಕಿಂತ ಪವನಸುತ ಎಂಬುದು ಹೆಚ್ಚು ಸಂಗತ. ಪವನ ಎಂದರೆ ಗಾಳಿ; ಗಾಳಿ ಇಲ್ಲದ, ಪ್ರವೇಶ ಮಾಡದ ಜಾಗವೇ ಇಲ್ಲ! ಹಾಗಿರುವಾಗ, ಪವನಸುತನಾದ ಭೀಮ ಕುರುಪತಿಯಾದ ದುರ್ಯೋಧನನ್ನು ಕುರುಧರೆಯಲ್ಲೇ ಹುಡುಕುತ್ತಿದ್ದಾನೆ! ಇಲ್ಲಿ ಕುರುಧರೆ, ಕುರುಪತಿ ಮತ್ತು ಪವನಸುತ ಈ ಮೂರೂ ಪದಗಳು ಪದಧ್ವನಿಯ ಅತ್ಯುತ್ತಮ ಉದಾಹರಣೆಗಳಾಗಿವೆ. ರನ್ನನ ಇನ್ನೊಂದು ಪ್ರಸಿದ್ಧ ಮಾತು, ನೀರೊಳಿರ್ದುಂ ಬೆಮರ್ತನ್ ಉರಗಪತಾಕಂ ಎಂಬುದು. ನೀರೊಳಗಿದ್ದೂ ಬೆವರಬೇಕಾದರೆ ಆತನ ಮೇಲೆ ಇದ್ದ ಒತ್ತಡವೆಷ್ಟು? ಆತನ ಕ್ರೋಧವೆಂತದ್ದು? ಇದೆಲ್ಲವನ್ನೂ ಓದುಗನಿಗೆ ಮನಗಾಣಿಸಬೇಕಾದರೆ, ಇಲ್ಲಿ ದುರ್ಯೋಧನ ಎಂದೊ, ಸುಯೋಧನ ಎಂದೊ ಕರೆಯುವ ಆಗಿಲ್ಲ. ಉರಗಪತಾಕ ಎಂಬ ಪದವೇ ದುರ್ಯೋಧನನ ಮತ್ಸರದ ಸ್ವಭಾವವನ್ನು ಮನಗಾಣಿಸುತ್ತದೆ.
ಬೇಂದ್ರೆಯವರ ‘ಮೂವತ್ತು ಮೂರು ಕೋಟಿ’ ಕವನದ ಸಾಲುಗಳು:
ಮೂವತ್ತು ಮೂರು ಕೋಟೀ ಮೂವತ್ತು ಮೂರು ಕೋಟೀ!
ಬಯಕೆಗಳು ಬಸಿರುಗಳು ಹಡೆದದ್ದು ಹಿಂಗಿದ್ದು
ಮೂವತ್ತು ಮೂರು ಕೋಟಿ!
ಸೂಲಗಳು
ಮೂವತ್ತು ಮೂರು ಕೋಟಿ!!
ಎಂಬ ಸಾಲುಗಳನ್ನು ಗಮನಿಸಬೇಕು. ಭಾರತದ ಜನಸಂಖ್ಯೆ ಮೂವತ್ತು ಮೂರು ಕೋಟಿ. ಅವರನ್ನು ಹಡೆದದ್ದು ಬಯಸಿ ಬಯಸಿ! ಆದರೆ ಅವು ಹಿಂಗಿ ಹೋಗುತ್ತಿವೆ! ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ವೀರ್ಯತೆಯನ್ನು ಪ್ರದರ್ಶಿಸಿದವರಿಗೆ ಬೇಂದ್ರೆ ಬೀಸಿದ ಚಾಟಿ ಇದು! ಸೂಲ ಎಂಬ ಪದಕ್ಕೆ ಹೆರಿಗೆ, ಶೂಲ(ಗಲ್ಲು), ಚುಚ್ಚುವುದು ಮೊದಲಾದ ಅರ್ಥಗಳಿವೆ. ಮೇಲ್ನೋಟಕ್ಕೆ ಮೂವತ್ತು ಮೂರು ಕೋಟಿ ಹೆರಿಗೆಗಳು ಎನ್ನಿಸಿದರೆ, ಒಳನೋಟಕ್ಕೆ ಮೂವತ್ತುಮೂರುಕೋಟಿ ಶೂಲಗಳು ಮಗ್ಗುಲ ಮುಳ್ಳಾಗಿ ಚುಚ್ಚುತ್ತಿವೆ ಎನ್ನುವುದನ್ನು ಧ್ವನಿಸುತ್ತದೆ. ಇಲ್ಲಿ ಸೂಲ ಎಂಬ ಒಂದೇ ಪದ ಇಡೀ ಕವಿತೆಯ ಅರ್ಥಸಾಧ್ಯತೆಯನ್ನು ಬಹುವಾಗಿ ಅರ್ಥಪೂರ್ಣವಾಗಿ ವಿಸ್ತರಿಸಿಬಿಡುತ್ತದೆ.
ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ನಾಟಕದ ತುದಿಯಲ್ಲಿ, ಪಾಂಡವರಿಗೆ ಕರ್ಣ ಕುಂತಿಯ ಮಗ, ನಮಗೆ ಸ್ವತಃ ಅಣ್ಣ ಎಂಬ ಸತ್ಯ ಗೊತ್ತಾಗುತ್ತದೆ. ಆಗ ಭೀಮನ ಬಾಯಿಯಲ್ಲಿ ಹೊರಡುವ ಉದ್ಘಾರ ‘ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ!’ ಎಂಬುದು. ಈ ಮಾತಿನೊಂದಿಗೆ ದೃಶ್ಯವೂ ಮುಕ್ತಾಯವಾಗುತ್ತದೆ. ಮಿಡುಕುಳ್ಳ ಗಂಡನಾಗಿ ದ್ರೌಪದಿಯ ಶಪಥಕ್ಕೆ ಶಸ್ತ್ರವಾಗಿದ್ದವನು ಭೀಮ. ಇಡೀ ಕೌರವರ ಸಂತತಿಯನ್ನು ಯಮಪುರಿಗಟ್ಟುವಲ್ಲಿ ಆತನದೇ ಪ್ರಮುಖ ಪಾತ್ರ. ಆತ ಯುದ್ಧಭಯಂಕರನೂ ಆಗಿದ್ದಂತೆ ಯುದ್ಧೋನ್ಮಾದನೂ ಆಗಿಬಿಟ್ಟಿದ್ದ. ಅದಕ್ಕೆ ಕಾರಣ, ಧರ್ಮಪರರಾಗಿದ್ದ ತನ್ನವರಿಗೆ ಒದಗಿದ ಕಷ್ಟಗಳ ಸರಮಾಲೆ. ಅದಕ್ಕೆ ಕಾರಣ, ದುರ್ಯೋಧನ ಮೊದಲಾದವರು. ಆ ದುರ್ಯೋಧನನಿಗೆ ಬೆಂಗಾವಲಾಗಿ ಬೆಂಬಲವಾಗಿ ನಿಂತವನು ಕರ್ಣ. ಆತ ಸತ್ತ ಮೇಲೆ, ಕರ್ಣ ಅವರೆಲ್ಲರ ಹಿರಿಯ ಎಂದು ತಿಳಿದಾಗ, ಧರ್ಮವಿಜಯಕ್ಕಾಗೇ ಯುದ್ಧ ಮಾಡುತ್ತಿದ್ದೇನೆ ಎಂದುಕೊಂಡಿದ್ದ ಭೀಮನ ಮನಸ್ಥಿತಿ ಹೇಗಾಗಿರಬೇಡ! ಧರ್ಮ, ಯುದ್ಧ, ಸಂಬಂಧಗಳು ಎಲ್ಲವೂ ಅರ್ಥಹೀನವೆನ್ನಿಸಿಬಿಡುತ್ತದೆ. ಅದುವರೆಗೂ ಮಹೋನ್ನತ ಉದ್ದೇಶಕ್ಕಾಗಿ ನಡೆಯುತ್ತಿದೆ ಎಂದುಕೊಂಡಿದ್ದ ಯುದ್ಧ ಅರ್ಥಹೀನವಾಗುತ್ತದೆ. ಅದನ್ನು ಭೀಮನ ಒಂದು ಮಾತು ಇಡಿಯಾಗಿ ಕಟ್ಟಿಕೊಟ್ಟಿದೆ. ಆ ಮಾತಿಗೆ ಯಾವುದೇ ವಿವರಣೆಗಳನ್ನು ಕವಿ ಕೊಡದೆ ದೃಶ್ಯವನ್ನು ಕೊನೆಗಾಣಿಸಿರುವುದೇ ಅದರ ಅರ್ಥಸಾಧ್ಯತೆಯನ್ನು ಇನ್ನೂ ಹೆಚ್ಚಿಸಿರುತ್ತದೆ.
ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ, ಸೀತೆಯ ಪ್ರಭಾವದಿಂದ, ಸೀತಾಪಹರಣಕ್ಕೆ ಕಾರಣಳಾಗಿದ್ದ ಚಂದ್ರನಖಿಯೂ ಉದ್ಧಾರಪಥ ಹಿಡಿದ ಸೂಚನೆಯನ್ನು ಅರಿತ ರಾವಣ, ಸೀತೆ, ಚಂದ್ರನಖಿಯರ ಎದುರಿಗೇ ಆಡುವ ಮಾತುಗಳಿವು.
ನೀನಾದೊಡಂ, ಅನಲೆಯಾದೊಡಂ, ಮತ್ತಂ ಇನ್ನಾರಾದೊಡಂ
ಇತ್ತಲ್ ಈ ಬನಕೆ ಕಾಲಿಟ್ಟುದಂ ಕೇಳ್ದೆನಾದೊಡೆ… (ಎನ್ನುವಷ್ಟರಲ್ಲಿ ಹಕ್ಕಿಯೊಂದು ಕೆಡವಿದ ಹಾಲಿವಾಣ ಮರದ ಕೆಂಪು ಹೂವೊಂದು ರಾವಣನ ತಲೆಯ ಮೇಲೆ ಬೀಳುತ್ತದೆ! ಅದನ್ನು ಗಮನಿಸಿ ತಲೆಕೊಡವಿದ ರಾವಣ)
ಕೊರಳ್ ಉರುಳ್ದಪುದು’
ಎಂದು ಮಾತನ್ನು ಪೂರೈಸುತ್ತಾನೆ. ಆತ ಮಾತನ್ನು ಆರಂಭಿಸಿದ ರಭಸ ಮುಗಿಸುವಷ್ಟರಲ್ಲಿ ಕಾಣೆಯಾಗಿಬಿಟ್ಟಿರುತ್ತದೆ. ಇಲ್ಲಿ ಕೊರಳ್ ಉರುಳುವುದು ಯಾರದು? ಹೂವನ್ನು ರಾವಣನ ಮೇಲೆ ಕೆಡವಿದ ಹಕ್ಕಿಯದೆ? ಎಂಬ ಸಂದಗ್ಧ ಒಂದು ಕ್ಷಣ ಓದುಗನಿಗೆ ಮೂಡಿದರೆ ಆಶ್ಚರ್ಯವೇನಿಲ್ಲ! ಇನ್ನು ಅನಲೆ ಚಂದ್ರನಖಿಯರ ತಲೆಯನ್ನು ತೆಗೆಯುವಷ್ಟು ಕ್ರೂರಿಯಲ್ಲ ರಾವಣ. ಇಲ್ಲಿ ಕೊರಳು ಉರುಳಲು ಸಿದ್ಧವಾಗಿರುವುದು ಸ್ವತಃ ರಾವಣನದೆ! ಹಳ್ಳಿಯ ಕಡೆ ಜಾತ್ರೆಯಲ್ಲಿ ಬಲಿ ಕೊಡಲಿರುವ ಕೋಳಿ ಕುರಿಗಳಿಗೆ ತೀರ್ಥವೆಂದು ನೀರನ್ನು ಪ್ರೋಕ್ಷಿಸಿ, ಹೂವನ್ನು ಬಲಿಯ ತಲೆಗೆ ಮಡಿಸುತ್ತಾರೆ. ಹಾಗೆ ರಾವಣನ ತಲೆಯ ಮೇಲೆ ಹೂವು ಬಿದ್ದಿದೆ! ಅದೂ ಕೆಂಪು ಹೂವು. ರಾವಣನ ತಲೆ ಉರುಳುವುದೇ ಸಹಜ ಪ್ರಕ್ರಿಯೆ. ಸೃಷ್ಟಿಯ ರಚನೆಯಲ್ಲಿ ಹೂವೊಂದು ತೊಟ್ಟು ಕಳಚಿ ಬೀಳುವುದೂ, ರಾಮಾಯಣದ ಕಥಾಚಕ್ರದಲ್ಲಿ ರಾವಣನ ತಲೆ ಉರುಳುವುದೂ ಎರಡೂ ಸಹಜ ಕ್ರಿಯೆಗಳೇ ಆಗಿವೆ!
ಕವಿಯಿಂದ ಒಮ್ಮೆ ಮಾತ್ರ ರಚಿತವಾಗುವ ಕಾವ್ಯ ಓದುಗನಿಂದ ಮತ್ತೆ ಮತ್ತೆ ನೂತನವಾಗಿ ರಚಿತವಾಗುತ್ತಲೇ ಸಾಗುತ್ತದೆ. ಅಂತ ಕಾವ್ಯದ ಓದು ಹೆಚ್ಚು ಹೆಚ್ಚು ಅರ್ಥಪೂರ್ಣವೂ ಆಗಿರಬೇಕು. ಓದು ಅರ್ಥಪೂರ್ಣವಾಗಬೇಕಾದರೆ ಹಲವಾರು ಕೀಲಿಕೈಗಳು ಬೇಕಾಗುತ್ತವೆ. ಅವುಗಳಲ್ಲಿ ಈ ಪದಧ್ವನಿಯೂ ಒಂದು. ಇದರ ಅರಿವು ಕಾವ್ಯವನ್ನು ಸಹೃದಯನಿಗೆ ಮತ್ತಷ್ಟು ಆಪ್ತವಾಗಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Wednesday, July 09, 2014

ಪ್ರಶಸ್ತಿ OK; ಹಣ AK???

ಬಹುಶಃ ಬೇರಾವ ರಾಜ್ಯದಲ್ಲೂ, ಅಷ್ಟೇ ಏಕೆ? ವಿಶ್ವದ ಯಾವ ರಾಷ್ಟ್ರದಲ್ಲೂ ಇಲ್ಲದಷ್ಟು, ಕರ್ನಾಟಕ ಸರ್ಕಾರ ಕೃಪಾಪೋಷಿತ ಅಕಾಡೆಮಿಗಳು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಅಕಾಡೆಮಿಗೂ ಒಬ್ಬೊಬ್ಬ ಅಧ್ಯಕ್ಷ, ಪ್ರತಿಯೊಂದಕ್ಕೂ ಹತ್ತಕ್ಕೂ ಹೆಚ್ಚು ಮಂದಿ ಸದಸ್ಯರು, ಅವರ ಗೌರವ ವೇತನ, ಸಾರಿಗೆ, ಊಟೋಪಚಾರ ಇತ್ಯಾದಿ ಖರ್ಚುಗಳು, ಪ್ರತಿ ಅಕಾಡೆಮಿಗೂ ಒಂದೊಂದು ಸರ್ಕಾರಿ ಕಚೇರಿ, ಅದಕ್ಕೊಬ್ಬ ರಿಜಿಸ್ಟ್ರಾರ್ ಮಟ್ಟದ ಅಧಿಕಾರಿ ಇತರೆ ಸಿಬ್ಬಂಧಿ ವರ್ಗ ಇವುಗಳಿಗಾಗಿಯೇ ಕೋಟ್ಯಂತರ ರುಪಾಯಿಗಳು ಖರ್ಚಾಗುತ್ತಿವೆ. ಜೊತೆಗೆ ಪ್ರತಿಯೊಂದು ಅಕಾಡೆಮಿಯು ಪುಸ್ತಕಗಳನ್ನು ಪ್ರಕಟಿಸುತ್ತದೆ, ಪ್ರಶಸ್ತಿಗಳನ್ನು ನೀಡುತ್ತದೆ. ಇದರ ಖರ್ಚಂತೂ ಕೋಟಿ ದಾಟುತ್ತದೆ. ಅಕಾಡೆಮಿಗಳಿಂದ ಹೊರತಾಗಿ ಸರ್ಕಾರ ನೇರವಾಗಿ ಹಲವಾರು ಪ್ರಶಸ್ತಿಗಳನ್ನು ನೀಡುತ್ತದೆ. ಪಂಪ, ಬಸವ, ಪುರಂದರ... ಇತ್ಯಾದಿ. ಇದರ ಮೇಲೆ  ಪ್ರತಿ ವರ್ಷ ನೂರಾರು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತದೆ. ಇತ್ತೀಚಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ತಲಾ ಒಂದು ಲಕ್ಷ, ಹಾಗೂ 20 ಗ್ರಾಂ ಚಿನ್ನದ ಪದಕ ನೀಡುತ್ತಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಇದರ ಲೆಕ್ಕಾಚಾರವಂತೂ ಕೋಟಿಗಳನ್ನೇ ಮೀರುತ್ತದೆ. ಇನ್ನು ಚಲನಚಿತ್ರ ಕ್ಷೇತ್ರದ ರಾಜ್ಯ ಮಟ್ಟದ ಪ್ರಶಸ್ತಿಗಳನ್ನೂ ಸೇರಿಸಿಕೊಳ್ಳಬೇಕು. ಯಾರದೊ ತೆವಲಿಗೆ ತೆಗೆದ ಕೆಟ್ಟ ಚಿತ್ರಗಳಿಗೂ, ಅದು ಸ್ವಮೇಕ್, ಕನ್ನಡದ್ದು ಎಂಬ ಏಕೈಕ ಕಾರಣಕ್ಕಾಗಿ ಲಕ್ಷಾಂತರ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ಒಟ್ಟಾರೆ, ಪ್ರತಿ ವರ್ಷ ಸುಮಾರು ಹತ್ತು-ಹದಿನೈದು ಕೋಟಿಗಳಗಿಂತ ಹೆಚ್ಚು ಹಣ ಈ ಪ್ರಶಸ್ತಿಗಳ ಕಾರಣದಿಂದ ಖರ್ಚಾಗುತ್ತಿದೆ. ಪ್ರಶಸ್ತಿ ವಿತರಣಾ ಸಮಾರಂಭಗಳಿಗೆ ಆಗುವ ಖರ್ಚುಗಳನ್ನಂತೂ ಕೇಳುವಂತೆಯೇ ಇಲ್ಲ. ಐದು ನಿಂಬೆ ಹಣ್ಣುಗಳಿಗೆ ಇನ್ನೂರು ರುಪಾಯಿ ಬಿಲ್ ಮಾಡಿದ್ದ ಭೂಪನನ್ನು ಕೇಳಿದರೆ, ಟ್ಯಾಕ್ಸಿ ಖರ್ಚು ಸೇರಿದೆ ಎಂದಿದ್ದನಂತೆ! ಅಕಾಡೆಮಿಗಳ ಅಧ್ಯಕ್ಷ ಪದವಿಗೆ, ಸದಸ್ಯತ್ವಕ್ಕೆ, ಪ್ರಶಸ್ತಿಗಳಿಗೆ ನಡೆಸುವ ಲಾಬಿಗಳು, ಸ್ವಜನಪಕ್ಷಪಾತ ಇವೆಲ್ಲಾ ಸಾಮಾನ್ಯ ಜನತೆಗೆ ಸಾಂಸ್ಕೃತಿಕ ಲೋಕದ ಬಗ್ಗೆ ಹಲವಾರು ಅನುಮಾನಗಳನ್ನು ಹುಟ್ಟುಹಾಕುತ್ತಿವೆ. ಅಕಾಡೆಮಿಗಳ ಖರ್ಚು ವೆಚ್ಚ, ಅದರಿಂದ ಆಗುತ್ತಿರುವ ಉಪಯೋಗ ಏನು ಎಂಬುದರ ಬಗ್ಗೆ ಇದುವರೆಗೂ ಗಂಭಿರವಾಗಿ ಸರ್ಕಾರವಾಗಲಿ, ಸಾಂಸ್ಕೃತಿಕ ಲೋಕವಾಗಲಿ ಅವಲೋಕನ ನಡೆಸಿಯೇ ಇಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಸಾರ್ವಜನಿಕ ತೆರಿಗೆ ಹಣವನ್ನು ಬಹಿರಂಗವಾಗಿಯೇ ಮಜಾ ಉಡಾಯಿಸಲಾಗುತ್ತಿದೆ. ಯಾರಿಗೂ ಯಾರೂ ಲೆಕ್ಕ ಕೇಳಬೇಕಾಗಿಲ್ಲ; ಕೊಡಬೇಕಾಗಿಲ್ಲ! ಹಣ ಕೊಡುವ ಸರ್ಕಾರವೇ ಲೆಕ್ಕ ಕೇಳುತ್ತದೆಯೊ ಇಲ್ಲವೊ ಗೊತ್ತಿಲ್ಲ. ಇದೊಂದು ಉತ್ತರದಾಯಿತ್ವವಿಲ್ಲದ ವ್ಯವಸ್ಥೆಯಂತೆ, ಸಂಚಿನಂತೆ ಶ್ರೀಸಾಮಾನ್ಯನಿಗೆ ಕಂಡರೆ ಆಶ್ಚರ್ಯವೇನಿಲ್ಲ.
ಹೋಗಲಿ ಒಂದು ಪಕ್ಷ, ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಗಾಗಿ, ಅದರ ಮುಂದುವರಿಕೆಗಾಗಿ ಇಷ್ಟೊಂದು ಪ್ರಶಸ್ತಿಗಳು ಬೇಕೇ ಬೇಕು ಎಂದಿಟ್ಟುಕೊಳ್ಳೋಣ. ಅವುಗಳ ಸಂಖ್ಯೆಗಾದರೂ ಒಂದು ಮಿತಿ ಇರಬಾರದೆ? ಕಾಸಿಗೊಂದು ಕೊಸರಿಗೊಂದು ಪ್ರಶಸ್ತಿ ಇರುವುದರಿಂದಲೇ, ಅವುಗಳಿಗೆ ಗೌರವವೇ ಇಲ್ಲದಂತಾಗಿದೆ. ಕನಿಷ್ಠ ಪಕ್ಷ ಅವುಗಳ ಸಂಖ್ಯೆ ಕಡಿಮೆಯಿದ್ದರೆ, ಆಗಲಾದರೂ ಅವುಗಳನ್ನು ಪಡೆದುಕೊಂಡವರಿಗೂ ಒಂದಿಷ್ಟು ಗೌರವವಿರುತ್ತದೆಯೇನೊ?
ಇನ್ನು, ಪ್ರಶಸ್ತಿಯೆ ಜೊತೆಯಲ್ಲಿ ಹಣ, ಚಿನ್ನದ ಪದಕ ಇವೆಲ್ಲಾ ಬೇಕೆ? ಎಂಬ ಪ್ರಶ್ನೆ. ಈ ಪ್ರಶಸ್ತಿಗಳ ಹಿಂದೆ ಇಷ್ಟೊಂದು ಹಣವಿರುವುದರಿಂದಲೇ ಅವುಗಳಿಗೆ ಲಾಬಿ ಮಾಡುವವರೂ ಜಾಸ್ತಿಯಾಗಿದ್ದಾರೆ! ಪ್ರದೇಶಿಕವಾರು, ಜಾತಿವಾರು ಪ್ರಶಸ್ತಿಗಳು ಹಂಚಿಕೆಯಾಗುತ್ತಿವೆ. ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆಯುವುದೇ ನಮ್ಮ ಸಾಂಸ್ಕೃತಿಕ ಅವನತಿಯನ್ನು ತೋರಿಸುತ್ತದೆಯಾದರೂ, ಅದನ್ನು ಗಮನಿಸುವ ಸ್ಥಿತಿಯಲ್ಲಿ ಯಾರೂ ಇಲ್ಲ. ಅರ್ಜಿ ಹಿಡಿದು ಮಂತ್ರಿ ಮಹೋದಯರ ಹಿಂದೆ ತಿರುಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಆತ್ಮಾವನತಿಯನ್ನು ತಪ್ಪಿಸಲಾದರೂ, ಹಣ ನೀಡುವುದು ಬೇಡ. ಪ್ರಶಸ್ತಿಗಳನ್ನು ನೀಡಲಿ. ಸ್ಮರಣ ಫಲಕಗಳನ್ನು ಬೇಕಾದರೆ ನೀಡಲಿ. ಹಣ ಕೊಡಲೇ ಬೇಕೆಂದರೆ, ಅದನ್ನು ಪ್ರಶಸ್ತಿ ಪುರಸ್ಕೃತರ ಹೆಸರಿನಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳ, ನಿರ್ಗತಿಕ ರೋಗಿಗಳ ಕ್ಷೇಮಕ್ಕಾಗಿ ಬಳಸಿಕೊಳ್ಳಬಹುದಲ್ಲವೆ. ಹಣದ ಅಗತ್ಯವಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ಓದಿಗಾಗಿ ಖರ್ಚು ಮಾಡಬಹುದಲ್ಲವೆ? ಕೆಲವೊಂದು ಪ್ರಶಸ್ತಿಗಳ ಜೊತೆಯಲ್ಲಿ ನೀಡುವ ಹಣದಲ್ಲಿ ಒಂದೊಂದು ಶಾಲಾ ಕಟ್ಟಡವನ್ನೇ ನಿರ್ಮಾಣ ಮಾಡಬಹುದು. ಆ ಶಾಲೆಗೆ ಪುರಸ್ಕೃತರ ಹೆಸರನ್ನೇ ಇಟ್ಟರೆ ಅವರನ್ನೂ ಗೌರವಿಸಿದಂತಾಗುತ್ತದೆಯಲ್ಲವೆ? ಪ್ರತಿವರ್ಷ ನೀಡುವ ರಾಜ್ಯೋತ್ಸವ ಪ್ರಶಸ್ತಿಯ ಜೊತೆಯಲ್ಲಿ ನೀಡುವ ಚಿನ್ನ-ಹಣದಲ್ಲಿ ದೊಡ್ಡ ದೊಡ್ಡ ಶಾಲೆ- ಆಸ್ಪತ್ರೆ ಕಟ್ಟಡಗಳನ್ನೇ ಕಟ್ಟಬಹುದು. ಅವುಗಳಿಗೆ ಇಂತಹ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರುಸ್ಕೃತರ ಸ್ಮಾರಕ ಕಟ್ಟಡ ಎಂದು ಬರೆಸಲಿ. ಪುರಸ್ಕೃತರ ಹೆಸರನ್ನು ಬೇಕಾದರೆ ಅಮೃತಶಿಲೆಯಲ್ಲೇ ಕೆತ್ತಿಸಲಿ! ತೀರಾ ಇತ್ತೀಚಿನ ಉದಾಹರಣೆ ನೋಡಿ. ಕೆಂಪೇಗೌಡ ದಿನಾಚರಣೆ ನೆಪದಲ್ಲಿ ಬಿ.ಬಿ.ಎಂ.ಪಿ.ಯು ಪ್ರತಿವರ್ಷ ಕೆಲವರಿಗೆ ಪ್ರಶಸ್ತಿ ನೀಡುತ್ತದೆ. ಈ ವರ್ಷ ಸುಮಾರು 136 ಜನರಿಗೆ ತಲಾ 12000 ಹಣವನ್ನು ಪ್ರಶಸ್ತಿ ಫಲಕದ ಜೊತೆಯಲ್ಲಿ ನೀಡುತ್ತಿದೆ. ಇದು ಸುಮಾರು 16 ಲಕ್ಷ ರೂಪಾಯಿಗಳಾಗುತ್ತದೆ. ಇತರೆ ಖರ್ಚೆಲ್ಲಾ ಸೇರಿ ಸುಮಾರು 20 ಲಕ್ಷಗಳಾಗಬಹುದು.  (ಕೊನೆಗಳಿಗೆಯಲ್ಲಿ 185ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ಕೊಡಲಾಯಿತಂತೆ! ಅಂದರೆ ಇನ್ನೂ ಹತ್ತು ಲಕ್ಷ ಹೆಚ್ಚು ಹಣ!) ಬಿ.ಬಿ.ಎಂ.ಪಿ. ಈಗಿರುವ ತನ್ನ ಹಣಕಾಸಿನ ಪರಿಸ್ಥಿತಿಯಲ್ಲಿ ಇಷ್ಟೊಂದು ಹಣವನ್ನು ಖರ್ಚು ಮಾಡುವುದು ಎಷ್ಟು ಸರಿ? ಬಿ.ಬಿ.ಎಂ.ಪಿ.ಯ ಆಶ್ರಯದಲ್ಲಿರುವ ಶಾಲಾ ಕಟ್ಟಡಗಳನ್ನು ನೋಡಿದರೆ, ಕಿತ್ತು ಹೋಗಿರುವ ರಸ್ತೆಗಳನ್ನು ನೋಡಿದರೆ, ಕಸದ ಸಮಸ್ಯೆಯನ್ನು ನೋಡಿದರೆ ಇಷ್ಟೊಂದು ಹಣ ಖರ್ಚು ಮಾಡುವುದು ಖಂಡಿತಾ ಸರಿಯಲ್ಲ. ಆದರೆ ಬಿಬಿಎಂಪಿ ಎಂಬ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
ಸರಾಸರಿ, ಪ್ರತಿ ವರ್ಷ ಪ್ರಶಸ್ತಿಗಾಗಿ ಖರ್ಚು ಮಾಡುವ ಹಣದಲ್ಲಿ ನೂರು ಶಾಲಾ ಕಟ್ಟಡಗಳನ್ನು ನಿರ್ಮಿಸಬಹುದು. ಕನಿಷ್ಠ ಹತ್ತು ವರ್ಷಗಳ ಕಾಲ ಈ ಪ್ರಶಸ್ತಿಗಳ ಜೊತೆ ಹಣ ನೀಡುವುದನ್ನು ನಿಲ್ಲಿಸಿದರೆ ಒಂದು ಸಾವಿರ ಶಾಲೆಗಳನ್ನು ನಿರ್ಮಾಣ ಮಾಡಬಹುದು! ಒಳ್ಳೆಯ ಶಾಲೆ, ಒಳ್ಳೆಯ ವಾತಾವರಣ ಕಲ್ಪಿಸಿಕೊಟ್ಟರೆ, ಒಳ್ಳೆಯ ವಿದ್ಯಾಭ್ಯಾಸ ಒದಗಿಸಿದರೆ ಮಕ್ಕಳಿಗೆ ಸಂಸ್ಕೃತಿಯ ಅರಿವು ತಾನಾಗೆ ಮೂಡುತ್ತದೆ.

ಪ್ರಶಸ್ತಿಗಳ ಹಿಂದೆ ಹಣವಿಲ್ಲ ಎಂದಾದಲ್ಲಿ ಲಾಬಿ ಮಾಡುವವರೂ ಕಡಿಮೆಯಾಗುತ್ತಾರೆ. ಅದರಿಂದ ಸಾಂಸ್ಕೃತಿಕ ಲೋಕದ ಘನತೆಯಾದರೂ ಉಳಿಯುತ್ತದೆ.ಅಷ್ಟಕ್ಕೂ ಪ್ರಶಸ್ತಿಗಳ ಹಣದಲ್ಲೇ ಬದುಕು ಸಾಗಿಸಬೇಕಾದ ಅನಿವಾರ್ಯತೆ ಎಷ್ಟು ಜನಕ್ಕೆ ಇರುತ್ತದೆ? ಅಂತಹವರ ಕಷ್ಟಕಾಲದಲ್ಲಿ ಸರ್ಕಾರ ನೇರವಾಗಿ ನೆರವು ನೀಡಬಹುದು. ಅಂತಹವರಿಗಾಗಿಯೇ, ಪ್ರಶಸ್ತಿಯ ಹಣದ ಒಂದು ಭಾಗದಲ್ಲಿ ಸಾಮೂಹಿಕ ವಿಮೆ ಮಾಡಿಸಬಹುದು. ಹೀಗೆ ಪ್ರಶಸ್ತಿ ಪುರಸ್ಕೃತರಿಗೆ ಯಾವುದೇ ಹಣ ನೀಡದೆ, ಆ ಹಣದಿಂದಲೇ ಅವರನ್ನೆಲ್ಲಾ ಸಾಮೂಹಿಕ ವಿಮೆಗೆ ಒಳಪಡಿಸಿದರೆ, ಸರ್ಕಾರ ಹಣ ಕೊಡುವುದು, ಅದರಿಂದ ವಿವಾದಗಳಾಗುವುದು ತಪ್ಪುತ್ತದೆ. ಪ್ರಶಸ್ತಿ ಪುರಸ್ಕೃತರನ್ನು ಯಶಸ್ವಿನೀ, ಸಂಧ್ಯಾ-ಸುರಕ್ಷಾ, ವಸತಿ, ಆ-ಭಾಗ್ಯ, ಈ-ಭಾಗ್ಯ ಮೊದಲಾದ ಯೋಜನೆಗಳಡಿ ತರಬಹುದು. ಈ ನಿಟ್ಟಿನಲ್ಲಿ, ವಿಸ್ತೃತವಾದ ಸಾರ್ವಜನಿಕ ಚರ್ಚೆ ನಡೆಸಿ, ಸರ್ಕಾರವೇಕೆ ಒಂದು ಸಮಗ್ರ ಸಾಂಸ್ಕೃತಿಕ ಯೋಜನೆ ರೂಪಿಸಬಾರದು? ಈ ನಿಟ್ಟಿನಲ್ಲಿ ಮಾದ್ಯಮಗಳು ಮನಸ್ಸು ಮಾಡಿದರೆ ಒಂದು ಜನಾಂದೋಲನವನ್ನೇ ರೂಪಿಸಬಹುದು. ಆದರೆ ಮಾದ್ಯಮಕ್ಕೂ ಒಂದು ಅಕಾಡೆಮಿ ಮಾಡುವ ಮೂಲಕ, ಸರ್ಕಾರಿ ಪ್ರಶಸ್ತಿ ನೀಡುವ ಮೂಲಕ ಆ ಕ್ಷೇತ್ರವನ್ನೂ ಮಲಿನಗೊಳಿಸಿಬಿಟ್ಟಿದೆ ಅನ್ನಿಸುತ್ತಿದೆ.
ಹಿಂದೆ ರಾಜ್ಯ ಪ್ರತಿಯೊಂದು ಆಗು ಹೋಗುಗಳಿಗೂ ರಾಜನೇ ಹೊಣೆಯಾಗಿರುತ್ತಿದ್ದ. ಆತ ಸಾಹಿತಿ ಕಲಾವಿದರನ್ನೂ ಪೋಷಿಸುತ್ತಿದ್ದ. ಆದರೆ ಈಗ ಇರುವುದು ರಾಜಾಡಳಿತವಲ್ಲ; ಪ್ರಜಾಪ್ರಭುತ್ವ. ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ, ತನಗೆ ಬೇಕಾದವರಿಗೆ ಪ್ರಶಸ್ತಿ-ಹಣ  ನೀಡುತ್ತಾ ಸಾರ್ವಜನಿಕ ತೆರಿಗೆ ಹಣವನ್ನು ಪೋಲು ಮಾಡುವುದು ಎಷ್ಟು ಸರಿ? ವಿಧಾನಸಭೆಯಲ್ಲಿಯೇ ಒಬ್ಬ ಮಂತ್ರಿ ನಮ್ಮನ್ನು ಗೆಲ್ಲಸಿದವರಿಗೆ ಹೆಚ್ಚು ಕೊಟ್ಟರೆ ತಪ್ಪೇನು? ಎಂದು ಪ್ರಶ್ನಿಸುತ್ತಾರೆ! ಜನರೇ ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟಾಗ ಅದಕ್ಕೊಂದು ಬೆಲೆ. ಪ್ರಜಾ ಸರ್ಕಾರದಲ್ಲಿ ಪ್ರಶಸ್ತಿ ನೀಡಬೇಕಾದವರು ಪ್ರಜಗಳೇ ಹೊರತು, ರಾಗದ್ವೇಷಗಳಿಂದ, ಜಾತಿಮೋಹದಿಂದ, ಪಕ್ಷಪಾತದಿಂದ ಕೂಡಿದ ಅಧಿಕಾರಸ್ಥರಲ್ಲ!
ನಿಜವಾಗಿಯೂ ನೇರವಾಗಿ ಜನರು, ಸಾರ್ವಜನಿಕ ಸಂಘ-ಸಂಸ್ಥೆಗಳು ನೀಡುವ ಪ್ರಶಸ್ತಿಗಳೇ ಸಧ್ಯದ ಮಟ್ಟಿಗೆ ಅತ್ಯಂತ ಶ್ರೇಷ್ಠವೆನ್ನಬಹುದು. ಏಕೆಂದರೆ ಅಲ್ಲಿ ದುಡ್ಡು ಕಡಿಮೆ ಇರುತ್ತದೆ. ಕೆಲವು ಪ್ರಸಸ್ತಿಗಳಿಗೆ ದುಡ್ಡೇ ಇರುವುದಿಲ್ಲ. ಲಾಬಿ ಇರುವುದಿಲ್ಲ. ಜನರೇ ಒಬ್ಬ ಸಾಧಕನನ್ನು ಗುರುತಿಸಿ ನೀಡುವುದರಿಂದ ಅದು ಮೌಲಿಕವೂ ಆಗಿರುತ್ತದೆ.
ಕೊನೆಗೂ ಈ ಜಗತ್ತಿನಲ್ಲಿ, ಆತ್ಮಗೌರವವನ್ನು ಅಡವಿಟ್ಟು ಉಳಿಸಿಕೊಳ್ಳಬೇಕಾದ ಹಾಗೂ ಪಡೆದುಕೊಳ್ಳಬೇಕಾದ ವಸ್ತು ಯಾವುದಾದರೂ ಇದೆಯೆ ಎಂದರೆ ಇಲ್ಲ ಎಂಬುದೇ ಉತ್ತರ!

Friday, June 27, 2014

ಹಂಸರಾಜ್ ಭಾರದ್ವಾಜ್: ರಾಜ್ಯ ಬಿಡುತ್ತಿರುವ ಈ ಹೊತ್ತಿನಲ್ಲಿ...

2011 ಮೇ ತಿಂಗಳಿನಲ್ಲಿ ರಾಜಭವನದಲ್ಲಿ  ’ರಾಷ್ಟ್ರಕವಿ ಕುವೆಂಪು: ಎ ಡೈಲಾಗ್’ ಎಂಬ ಕಾರ್ಯಕ್ರಮ ನಡೆದಿತ್ತು. ಅದರಲ್ಲಿ ರಾಜ್ಯಪಾಲರು ಸಕ್ರೀಯವಾಗಿ ಭಾಗವಹಿಸಿದ್ದರು. ರಾಜಕೀಯ ಜಂಜಾಟಗಳೇನೇ ಇದ್ದರೂ, ಅವರೊಬ್ಬ 'ಜಂಟಲ್ಮ್ಯಾನ್' ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅಂದು ನಾನು ಬರೆದ ಬ್ಲಾಗ್ ಬರಹದ ಸಂಕ್ಷಿಪ್ತ ರೂಪವನ್ನು, ಇಂದು ಅವರು ರಾಜ್ಯವನ್ನು ಬಿಟ್ಟು ಹೊರಡುತ್ತಿರುವ ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ  ಇಲ್ಲಿ ಪ್ರಕಟಿಸುತ್ತಿದ್ದೇನೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಯುತ H.R. ಭಾರದ್ವಾಜ್ ಅವರು ಸಿದ್ಧಪಡಿಸಿದ್ದ ಭಾಷಣವನ್ನು ಪಕ್ಕಕ್ಕಿಟ್ಟು, ಸುಮಾರು ನಲವತ್ತೈದು ನಿಮಿಷಗಳ ಕಾಲ ಕುವೆಂಪು, ಅವರ ಸಾಹಿತ್ಯ, ವೇದ-ಉಪನಿಷತ್ತುಗಳ ಮಹತ್ವ, ಭಾರತೀಯ ಸಂಸ್ಕೃತಿ, ಕನ್ನಡ ನಾಡಿನ ಹೆಚ್ಚುಗಾರಿಕೆ, ಬಾಹುಬಲಿ, ತುಲಸೀದಾಸ್, ಗಾಂಧಿ, ವಿಶ್ವೇಶ್ವರಯ್ಯ ಮೊದಲಾದವರ ಜೀವನದರ್ಶನವನ್ನು ಕುರಿತು ಮಾತನಾಡಿದರು. ರಾಜ್ಯಪಾಲರಾಗಿ ಬಂದ ಹೊಸತರಲ್ಲಿ ’ನಾಡಗೀತೆ’ಯ ಬಗ್ಗೆ ಕೇಳಿ ಆಶ್ಚರ್ಯಪಟ್ಟಿದ್ದ ಶ್ರೀಯುತರು ನ್ಯಾಯಾಧೀಶರೊಬ್ಬರು ಕೇಳಿಸಿದ ಸಂಪೂರ್ಣ ನಾಡಗೀತೆ ಮತ್ತು ಅವರ ವಿವರಣೆ ಕೇಳಿ ಏನೋ ಒಂದು ಅನಿರ್ವಚನೀಯ ಸಂತೋಷವನ್ನು ಅನುಭವಿಸಿದ್ದರಂತೆ. ಅದರಲ್ಲಿ ಬರುವ ’ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸೀಕ ಜೈನುರುದ್ಯಾನ’ ಹಾಗೂ ’ಕಪಿಲ ಪತಂಜಲ ಗೌತಮ ಜಿನನುತ’ ಮೊದಲಾದ ಸಾಲುಗಳನ್ನು ಕೇಳಿ ಇದನ್ನು ಬರೆದವರ ಮನೋಶ್ರೀಮಂತಿಕೆಯ ಬಗ್ಗೆ ಯೋಚಿಸಿದ್ದರಂತೆ. ’ಭಾರತಜನನಿಯ ತನುಜಾತೆ’ ಎಂಬ ಭಾವದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ರಾಜ್ಯಪಾಲರು, ಕುವೆಂಪು ಅವರ ಬಗ್ಗೆ ಮೊದಲು ತಿಳಿದ ಸಂದರ್ಭವನ್ನು ನೆನಪಿಸಿಕೊಂಡರು. ಮೇಲುಕೋಟೆಯ ಪ್ರವಾಸಿಮಂದಿರದಲ್ಲಿದ್ದ ಕುವೆಂಪು ಅವರ ಪೋಟೋವನ್ನು ತೋರಿಸಿ, ಅಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ’ಯಾರಿದು? ಈ ಜಂಟ್ಲಮನ್’ ಎಂದು ಕೇಳಿದ್ದರಂತೆ. ಅಂದು ಅವರು ತಿಳಿಸಿದ ವಿಚಾರಗಳಿಂದ ಪ್ರೇರಿತರಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಬೇಟಿಕೊಟ್ಟಾಗ ಇನ್ನೂ ಹೆಚ್ಚಿನ ವಿವರಗಳನ್ನು ಕೇಳಿ ಕುವೆಂಪು ಅವರ ಬಗ್ಗೆ ಬಂದಿದ್ದ ಇಂಗ್ಲಿಷ್ ಪುಸ್ತಕಗಳನ್ನು ಓದಿದರಂತೆ. ನಂತರ ಕುವೆಂಪು ಅವರ ಕೆಲವು ಅನುವಾದಿತ ಕೃತಿಗಳನ್ನು ಓದಿ ಪ್ರಭಾವಿತರಾದೆ ಎಂದು ನೆನಪಿಸಿಕೊಂಡರು. ಗಾಂಧಿ ಪ್ರಣೀತ ವೈಷ್ಣವ ಭಕ್ತಿ ಹೇಗೆ ವಿಶ್ವಾತ್ಮಕವಾದುದು ಹಾಗೆಯೇ ಕುವೆಂಪು ಪ್ರತಿಪಾದಿಸಿದ ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ ಕೂಡ ವಿಶ್ವಾತ್ಮಕವಾದುದು ಎಂದರು. ತಲಸಿರಾಮಾಯಣ ಮತ್ತು ಕುವೆಂಪು ರಾಮಾಯಣಗಳಲ್ಲಿ ಪ್ರತಿಪಾದಿತವಾಗಿರುವ ಜ್ಯಾತ್ಯಾತೀತ ಆಶಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂದಿನ ಸಂದರ್ಭದಲ್ಲಿ ಮನುಷ್ಯ ಎಷ್ಟೇ ರಿಲಿಜಿಯಸ್ ಆಗಿದ್ದರೂ ಜ್ಯಾತ್ಯಾತೀತನಾಗಿರಬೇಕಾದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು. ಹೋಮರ್, ವ್ಯಾಸ, ವಾಲ್ಮೀಕಿ, ಮಿಲ್ಟನ್, ಫಿರ್ದೂಸ್, ತುಲಸೀದಾಸ್ ಮುಂತಾದವರ ಪರಂಪರೆಯಲ್ಲಿ ಕುವೆಂಪು ಮತ್ತು ಅವರ ದರ್ಶನವನ್ನು ತುಲನಾತ್ಮಕವಾಗಿ ನೋಡಿದರು. 
ಭಾರದ್ವಾಜ್ ಅವರ ವಾಗ್ವೈಖರಿ ನನಗೆ ದಂಗುಬಡಿಸಿತ್ತು. ಅವರ ರಾಜಕೀಯ ಜಂಜಾಟಗಳೇ ಏನೇ ಇರಲಿ, ಕರ್ನಾಟಕದ ರಾಜ್ಯಪಾಲರಾಗಿ ಅವರು ಕರ್ನಾಟಕವನ್ನು ಅರ್ಥಮಾಡಿಕೊಂಡಿರುವ, ಮಾಡಿಕೊಳ್ಳುತ್ತಿರುವ ರೀತಿ ಮಾತ್ರ ಅನನ್ಯ. ಮೊತ್ತಮೊದಲ ಬಾರಿಗೆ ರಾಷ್ಟ್ರಗೀತೆಯಲ್ಲಿ ದ್ರಾವಿಡ ಪದವನ್ನು ಕೇಳಿದ್ದಾಗ ಇದೇನಿದು? ಎಂದು ಗೊಂದಲಕ್ಕೊಳಗಾಗಿದ್ದರಂತೆ. ಆದರೆ ಇಂದು, ಇಡೀ ಭಾರತಕ್ಕೆ ದಕ್ಷಿಣಭಾರತದ ಕೊಡುಗೆಯ ಬಗ್ಗೆ, ದಕ್ಷಿಣ ಭಾರತದ ಸಂಸ್ಕೃತಿಯ ಬಗ್ಗೆ ತುಂಬಾ ಹೆಮ್ಮೆಯಿಂದ ಮಾತನಾಡಿದರು. ಭಾರತೀಯತೆಗೆ ದಕ್ಷಿಣಭಾರತ, ವಿಶೇಷವಾಗಿ ಕರ್ನಾಟಕ ನೀಡಿದ ಕೊಡುಗೆ ಅನನ್ಯವಾದುದು ಎಂದರು. ಗುಲ್ಬರ್ಗ ಸುತ್ತಮುತ್ತಲಿನ ಅಲೆಮಾರಿ ಜನಾಂಗದಿಂದ ಹಿಡಿದು, ಬಹುಭಾಷಾ ಹಾಗೂ ಬಹುಧರ್ಮೀಯ ನೆಲೆಗಳಾಗಿರುವ ಕರಾವಳಿ ಪ್ರದೇಶದ ಅನನ್ಯತೆಯ ಬಗ್ಗೆ, ಶ್ರವಣಬೆಳಗೊಳದ ಬಾಹುಬಲಿಯ ಬಗ್ಗೆ ಅವರು ತನ್ಮಯವಾಗಿ ಮಾತನಾಡುತ್ತಿದ್ದರೆ ಇಡೀ ಸಭಾಂಗಣ ದಂಗಬಡಿದಂತೆ ನಿಶ್ಯಬ್ಧವಾಗಿ ಕುಳಿತು ಕೇಳಿಸಿಕೊಳ್ಳುತ್ತಿತ್ತು. ಅಲ್ಲಿ ನೆರೆದಿದ್ದ ವಿವಿಧ ಕ್ಷೇತ್ರಗಳ, ವಿವಿಧ ವಿಷಯಗಳ ತಜ್ಞರುಗಳನ್ನು ಉದ್ದೇಶಿಸಿ, ಈ ರಾಜಭವನ ನಿಮ್ಮದು, ನಾನು ಬಳಸುತ್ತಿರುವುದು ಕೇವಲ ಒಂದು ಕೊಠಡಿ. ನಿಮ್ಮ ಇಂತಹ ರಚನಾತ್ಮಕ ಕಾರ್ಯಕ್ರಮಕ್ಕೆ ರಾಜಭವನದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದಾಗ ದೊಡ್ಡ ಚಪ್ಪಾಳೆಯೊಂದಿಗೆ ಜನ ಹರ್ಷ ವ್ಯಕ್ತಪಡಿಸಿದರು. ಕುವೆಂಪು ಅವರ ಬಗ್ಗೆ ಒಂದು ಒಳ್ಳೆಯ ಇಂಗ್ಲಿಷ್ ಪುಸ್ತಕ ತರಲು ಬೇಕಾದ ಸಹಕಾರವನ್ನು ನೀಡುವುದಾಗಿಯೂ ಘೊಷಿಸಿದರು. ವಿಶ್ವೇಶ್ವರಯ್ಯ, ಕುವೆಂಪು ಮುಂತಾದವರಿಂದ ಕರ್ನಾಟಕ ಅಂದು, ಇಂದು ಮುಂದೆಯೂ ಒಂದು ಒಳ್ಳೆಯ ಪ್ರಗತಿಪರ ರಾಜ್ಯ ಎಂದು ಹೇಳಿ ತಮ್ಮ ಮಾತು ಮುಗಿಸಿದರು. 
ಬಹುಶಃ, ಅಲ್ಲಿದ್ದ ಎಲ್ಲ ಕನ್ನಡಿಗರಿಗಿಂತ, ವಿಶೇಷವಾಗಿ, ಒಂದು ಆರೋಗ್ಯಕರ ಅಂತರದಲ್ಲಿ ನಿಂತು ಕುವೆಂಪು ಅವರನ್ನು, ಕರ್ನಾಟಕವನ್ನು ಈ ರಾಜ್ಯಪಾಲರು ಅರ್ಥಮಾಡಿಕೊಂಡಿದ್ದಾರೆ ಅನ್ನಿಸಿತು. ಸುದೀರ್ಘ ಸಾರ್ವಜನಿಕ ಜೀವನದ ಅನುಭವ, ಹಿಂದಿ ಮತ್ತು ಇಂಗ್ಲಿಷ್ ಸಾಹಿತ್ಯ, (ಅವರು ಸ್ನಾತಕೋತ್ತರ ಪದವಿ ಮೊದಲು ಪಡೆದಿದ್ದು ಸಾಹಿತ್ಯದಲ್ಲಿ!) ತತ್ವಶಾಸ್ತ್ರದ ಅಧ್ಯಯನ ಅವರಿಗೆ ಇಂತಹ ಅವಕಾಶವನ್ನು ಒದಗಿಸಿಕೊಟ್ಟಿದೆ ಎನ್ನಬಹುದು.
ಬೆಳಿಗ್ಗೆ ಹತ್ತೂವರೆಗೆ ಆರಂಭವಾಗಿ ನಿಗದಿತ ಒಂದು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಮುಗಿಯಿತು. ಕಾರ್ಯಕ್ರಮ ಮುಗಿದ ಮೇಲೂ, ರಾಜ್ಯಪಾಲರು ಸುಮಾರು ಅರ್ಧಗಂಟೆಗಳ ಕಾಲ ಎಲ್ಲರೊಡನೆ (ಊಟದ ಸಮಯದಲ್ಲೂ) ಮಾತನಾಡುತ್ತಾ ನಿಂತಿದ್ದರು. ಔತಣಕೂಟದ ಆಯೋಜಕರು ಸ್ವತಃ ರಾಜ್ಯಪಾಲರೇ ಆಗಿದ್ದರು!

Wednesday, June 11, 2014

ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ಏಕೆ ಓದಬೇಕು?

‘ರಾಮಾಯಣದ ಕಥೆ ಗೊತ್ತಿರುವುದೆ. ಅದನ್ನೇ ಆಧರಿಸಿ ಬರೆದ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಏಕೆ ಓದಬೇಕು?’ ಇದು ನನ್ನ ಸ್ನೇಹಿತರೊಬ್ಬರು ನನಗೆ ಕೇಳಿದ ಪ್ರಶ್ನೆ. ಆಗ ನಾನು ಅವರಿಗೆ ಶ್ರೀ ರಾಮಾಯಣ ದರ್ಶನಂ ಕಾವ್ಯದಿಂದಲೇ ಆಯ್ದ ಒಂದು ಕಥೆ ಹೇಳಿದೆ. (ಅಲ್ಲಿ ಕಥೆ ಹೇಳಿದ ಹಾಗೆಯೇ ಇಲ್ಲಿ ಬರೆಯುವುದು ಕಷ್ಟ). ಅದು ಹೀಗಿದೆ:
[KAN0010483b.jpg]
ಕಪಿಸೈನ್ಯವೆನ್ನೆಲ್ಲ ಕಟ್ಟಿಕೊಂಡು ಲಂಕೆಗೆ ಮುತ್ತಿಗೆ ಹಾಕಲು ರಾಮ ಹೊರಟಿದ್ದಾನೆ. ಸಮುದ್ರದ ದಡ ಸೇರಿ ಆ ರಾತ್ರಿ ಮಂತ್ರಾಲೋಚನೆಯಲ್ಲಿ ತೊಡಗುತ್ತಾರೆ. ರಾಮ ಕಪಿಸೈನ್ಯದ ಸೇನಾಪತಿಯಾದ ನೀಲನನ್ನು ಪ್ರತ್ಯೇಕವಾಗಿ ಕರೆದು, ಸಮುದ್ರೋಲ್ಲಂಘನದ ಗಂಭೀರತೆಯ ಬಗ್ಗೆ ಮಾತನಾಡುತ್ತಿದ್ದಾಗ, ಇಬ್ಬರು ಸೈನಿಕರು ಅತ್ತ ಬರುತ್ತಾರೆ. ನೀಲ-ರಾಮರನ್ನು ಕಂಡು ಇಬ್ಬರೂ ಧೀರ ಮರ್ಯಾದೆಯಿಂದ ನಮಸ್ಕರಿಸುತ್ತಾರೆ. ಆಗ ರಾಮ ‘ನೀವು ಯಾರ ಪಡೆಯವರು?’ ಎಂದು ಸ್ನೇಹಭಾವದಿಂದ ಕೇಳುತ್ತಾನೆ. ಬಂದಿದ್ದವರಲ್ಲಿ ಕುಳ್ಳಗಿದ್ದವನು ಉದ್ದಗಿದ್ದವನ ಮುಖವನ್ನು ನೋಡುತ್ತಾನೆ. ಆಗ ಆ ಉದ್ದಗಿದ್ದವನು ‘ನಾವು ದಧಿಮುಖೇಂದ್ರನ ದಳದವರು’ ಎಂದು ಉತ್ತರಿಸುತ್ತಾನೆ. ‘ನಿಮ್ಮ ಹೆಸರೇನು?’ ಎಂಬ ಪ್ರಶ್ನೆಗೆ, ‘ಈತ ನನ್ನ ಗೆಳೆಯ ರಂಹ ನನ್ನನ್ನು ವಹ್ನಿ ಎನ್ನುತ್ತಾರೆ.’ ಎನ್ನುತ್ತಾನೆ.
ರಾಮ ‘ನೀವು ಯಾವ ಯುದ್ಧದಲ್ಲಿ ಪಳಗಿದವರಾಗಿದ್ದೀರಿ?’ ಎನ್ನುತ್ತಾನೆ. ವಹ್ನಿ ‘ಈ ನನ್ನ ಮಿತ್ರ ವಜ್ರಮಜಷ್ಠಿಯ ಮಲ್ಲಯುದ್ಧದಲ್ಲಿ ಫಳಗಿದವನು. ಕಾಡಾನೆಯ ಕೋಡನ್ನು ಹಿಡಿದು ಅದರ ನೆತ್ತಿ ಹಿಸಿದು ಹೋಗುವಂತೆ ಗುದ್ದಬಲ್ಲವನು. ಮೊನ್ನೆಯಷ್ಟೇ ನಾನು ಇದನ್ನು ಕಂಡಿದ್ದೇನೆ’ ಎಂದು ತನ್ನ ಮಿತ್ರನ ಬಗ್ಗೆ ಮಾತ್ರ ಹೇಳಿ ಸುಮ್ಮನಾಗುತ್ತಾನೆ. ಆದರೆ ರಾಮ ‘ನೀನು?’ ಎಂದು ಕೇಳಿದಾಗ, ವಿನಯಪೂರ್ವಕವಾಗಿ ಉತ್ತರಿಸುವ (ತನ್ನ ಬಗ್ಗೆ ತಾನೇ ಹೇಳಿಕೊಳ್ಳುವ ಸಂಕೋಚದಲ್ಲಿ) ಆಲೋಚನೆಯಿಲ್ಲಿ ವಹ್ನಿ ಇದ್ದಾಗಲೇ, ಆತನ ಸ್ನೇಹಿತ ರಂಹ, ನಿಜವಾಗಿಯೂ ಹೃದಯದಿಂದ ಉಕ್ಕುತ್ತಿದ್ದ ಉತ್ಸಾಹದಿಂದ ‘ಗಗನಮನದಲ್ಲಿ ಈತ ಅಪ್ರತಿಮ. ಶತ್ರುಗಳ ಆನೆಗಳಿಗೆ ಸಿಂಹನಿದ್ದಂತೆ ಈ ವಹ್ನಿದೇವ. ಮಹಾಮಾಯಾವಿ; ಜೊತೆಗೆ ಇಚ್ಛೆ ಬಂದ ರೂಪವನ್ನು ಧರಿಸಬಲ್ಲವನು. ಬಂಡೆಯನ್ನೆತ್ತಿ ಕವಣೆ ಕಲ್ ಬೀರಿದನೆಂದರೆ ಶತ್ರುವಿನ ಕೋಟೆ ಎಷ್ಟೇ ಬಲಿಷ್ಟವಾಗಿದ್ದರೂ ಬಿರುಕು ಬಿಟ್ಟ ಹಾಗೆಯೇ! ಬಿಲ್ಲು ವಿದ್ಯೆಯಂತೂ ಈತನಿಗೆ ಮಕ್ಕಳಾಟ. ಕತ್ತಿಯುದ್ಧದ ಕಲಿ. ಗದಾಯುದ್ಧ ಭಯಂಕರನೂ ಹೌದು……’ ಹೀಗೆ ರಂಹ ತನ್ನ ಮಾತು ಮುಂದುವರಿಸುತ್ತಿದ್ದಾಗಲೇ ವಹ್ನಿ ತಡೆಯುತ್ತಾನೆ. ರಾಮನೆಲ್ಲಿ ತಪ್ಪು ತಿಳಿಯುತ್ತಾನೊ ಎಂಬ ಭಯ ಆತನದು.
ರಂಹನನ್ನು ತಡೆದು ರಾಮನೆಡೆಗೆ ತಿರುಗಿದ ವಹ್ನಿ, ‘ರಾಜೇಂದ್ರ ಈ ನನ್ನ ಮಿತ್ರನ ಅತಿ ಉತ್ಸಾಹವ್ನನು ಮನ್ನಿಸಿ’ ಎನ್ನುತ್ತಾನೆ. ರಾಮ ‘ನಿನ್ನನ್ನು ನೋಡಿದರೆ ಆತ ಹೇಳಿದ್ದು ಅತಿ ಅಲ್ಪ ಎನ್ನಿಸುತ್ತದೆ ವಹ್ನಿ’ ಎಂದಾಗ, ವಹ್ನಿ ತಲೆ ಬಾಗಿ ನಮಸ್ಕರಿಸುತ್ತಾನೆ. ಮತ್ತೆ ‘ದಧಿಮುಖೇಂದ್ರನ ದಳದಲ್ಲಿ ನಾನೊಬ್ಬನೆ ಅತ್ಯಲ್ಪ. ಇನ್ನೂ ಮಹಾಮಹಾ ಧೀರರಿದ್ದಾರೆ’ ಎನ್ನುತ್ತಾನೆ. ‘ನಿನ್ನಂತಹ ತುಳಿಲಾಳುಗಳನ್ನು ಪಡೆದ ದಧಿಮುಖೇಂದ್ರನೆ ಧನ್ಯ. ಪರಸ್ಪರ ಸ್ನೇಹದಿಂದ ಸಾಮರ್ಥ್ಯದಿಂದ ಇರುವ ನೀವಿಬ್ಬರೂ ನಿಜವಾಗಿಯೂ ಮಹಿಮರು’ ಎಂದು ಹೇಳಿ ಸ್ವಲ್ಪ ತಡೆದು ವಹ್ನಿ, ‘ನಿನಗೆ ಸಹಧರ್ಮಿಣಿಯ ಸುಖದ ಒಡನಾಟವಿದೆಯೆ?’ ಎಂದು ಕೇಳಿದ. ‘ಊರಿನಲ್ಲಿದ್ದಾಳೆ’ ಎನ್ನುತ್ತಾನೆ ವಹ್ನಿ.
‘ಅಯ್ಯೊ. ಇರುವರೇನು? ಇರುವುದನ್ನು ಬಿಟ್ಟು ಬಂದು ಸಂಕಟಕ್ಕೆ ಸಿಕ್ಕಿಬಿಟ್ಟೆ. ಅತ್ತ ನಿನ್ನ ಹೆಂಡತಿಯೂ ದುಃಖಿ. ನನ್ನ ಕಾರಣದಿಂದ ನಿಮಗೆಲ್ಲಾ ಈ ಕಷ್ಟ’ ಎಂದು ರಾಮ ಪರಿತಪಿಸುತ್ತಾನೆ. ತಕ್ಷಣ ವಹ್ನಿಗೆ ಅರ್ಥವಾಗುತ್ತದೆ. ಮೊಣಕಾಲೂರಿ, ಕೈಮುಗಿದು ‘ನನ್ನ ಮಾತಿನ ಅರ್ಥವ್ಯಾಪ್ತಿ ತಪ್ಪಿತು. ನನ್ನ ವಿನೋದವನ್ನು ಕ್ಷಮಿಸು’ ಎಂದು ಬೇಡುತ್ತಾನೆ. ತಕ್ಷಣ ರಾಮ ಸ್ನೇಹಭಾವದಿಂದ ಆತನನ್ನು ಹಿಡಿದೆತ್ತಿ ‘ಏಳೇಳು ಭಟಶ್ರೇಷ್ಠ. ಮಕ್ಕಳಿದ್ದಾರೆಯೆ ನಿನಗೆ?’ ಎನ್ನುತ್ತಾನೆ. ‘ಒಬ್ಬನಿದ್ದಾನೆ’ ಎನ್ನುತ್ತಾನೆ ವಹ್ನಿ. ‘ಚಿಕ್ಕವನೆ?’ ಎಂಬ ರಾಮನ ಮಾತಿಗೆ ‘ಚಿಕ್ಕವನಲ್ಲದಿದ್ದರೆ ಈಗ ನನ್ನ ಪಕ್ಕದಲ್ಲಿರುತ್ತಿರಲಿಲ್ಲವೆ ನಿನ್ನ ಸೇವೆಯ ದೇವಕಾರ್ಯಕ್ಕೆ!’ ಎನ್ನುತ್ತಾನೆ ವಹ್ನಿ. ‘ಮತ್ತೀಗ ಅವರಿಗೆ ರಕ್ಷಕರು ಯಾರು?’ ಎಂಬ ರಾಮನ ಪ್ರಶ್ನೆಗೆ ‘ನಾನೆ’ ಎಂದುತ್ತರಿಸುತ್ತಾನೆ, ವಹ್ನಿ. ‘ನೀನೆ?’ ಎಂದ ರಾಮ ಸ್ವಲ್ಪ ಹೊತ್ತು ತಡೆದು ‘ಮರಣದಲ್ಲಿ ರಣ ಇದೆ. ಹಣಬರೆಹವು ಹೇಳುವುದು ಪಕ್ಕಕ್ಕಿರಲಿ, ಕೈಬರೆಹವೂ ಅದನ್ನೇ ಸಾರುತ್ತಿದೆ, ನೋಡು’ ಎನ್ನುತ್ತಾನೆ.
ರಾಮನ ಮಾತಿಗೆ ವಹ್ನಿ ಮತ್ತು ನೀಲರಿಬ್ಬರೂ ನಗುತ್ತಾರೆ. ತನ್ನ ಧೈರ್ಯಕ್ಕೆ ನಾಲಗೆಯನ್ನು ನೀಡಿದ ವಹ್ನಿ ‘ಯಾವ ಧರ್ಮಕ್ಕೆ ನಾವು ಸಾವನ್ನಪ್ಪುತ್ತೇವೆಯೋ ಆ ಧರ್ಮ ಲೋಕವನ್ನು ಕಾಪಾಡುತ್ತದೆ. ಅದಕ್ಕೆ ನನ್ನ ಸತಿಸುತರು ಹೊರತಲ್ಲ!. ರಾಜೇಂದ್ರ ಈ ಯುದ್ಧದಲ್ಲಿ ಸರ್ವಸೇನಾಪತಿ ನೀಲ ನಮ್ಮನ್ನು ಮುನ್ನಡೆಸುತ್ತಿದ್ದಾನೆ. ಆದ್ದರಿಂದ ನಾವೆಲ್ಲರೂ ನಮ್ಮ ನಮ್ಮ ಮನೆಗಳ ಮಂಗಳವನ್ನು ಕಾಣುತ್ತೇವೆ. ಅದಲ್ಲದಿದ್ದರೂ, ವಿಧಿ ಅನ್ಯವನ್ನು ಬಗೆದರೆ, (ನನಗೆ ಗೊತ್ತು ವಿದಿಗೆ ಕರುಣೆಯೆಂಬುದಿಲ್ಲ!) ಬದುಕುವುದಕ್ಕಿಂತ ಸಾವೇ ಮೇಲು. ರಾವಣ ಹೊತ್ತೊಯ್ದಿರುವುದು ಒಬ್ಬನ ಸತಿಯನ್ನಲ್ಲ; ಸತಿತನವನ್ನೇ ಹೊಯ್ದಿದ್ದಾನೆ. ಆ ಸತೀತ್ವವನ್ನು ಕಾಪಾಡಲಾಗದಿದ್ದರೆ ಈ ಭೂಮಿಯ ಮೇಲೆ ಗಂಡಸೊಬ್ಬನೂ ಇರಲಾಗದು! ರಘುವರ, ನೀನು ಕೇಳಿದ ಕುಶಲ ಪ್ರಶ್ನೆಯ ಕೃಪೆಯಿಂದಲೇ ಹೆಂಡತಿ ಮಕ್ಕಳು ಸುರಕ್ಷಿತರಾಗಿದ್ದಾರೆ!’ ಎಂದು ಉತ್ತರಿಸುತ್ತಾನೆ. ರಾಮನಿಗೆ ಮನಸ್ಸು ತುಂಬಿ ಬರುತ್ತದೆ. ಸೈನಿಕಸ್ನೇಹಿತರನ್ನು ಕೈಸನ್ನೆಯಿಂದಲೇ ಕಳುಹಿಸಿಕೊಡುತ್ತಾನೆ.
ಬೆಳದಿಂಗಳು ಭೂಮಿ ಕಡಲನ್ನು ಒಂದೇ ಎನ್ನುವಂತೆ ವ್ಯಾಪಿಸಿಬಿಟ್ಟಿರುತ್ತದೆ. ರಾಮ ಸೇನಾಪತಿ ನೀಲನೆಡೆಗೆ ತಿರುಗಿ ‘ನಿಮ್ಮ ಸಂಸ್ಕೃತಿ ಮಿಗಿಲ್ ನಿಮ್ಮ ನಾಗರಿಕತೆಗೆ ಪಿರಿದು!’ ಎಂದು ಉದ್ಘರಿಸುತ್ತಾನೆ.
ಕಥೆ ಮುಗಿದು ಐದಾರು ನಿಮಿಷ ಯಾರೂ ಮಾತನಾಡಲಿಲ್ಲ. ನಂತರ ನಾನೇ ಮುಂದುವರೆದು ನನ್ನ ಸ್ನೇಹಿತರಿಗೆ, ಈ ಕಥೆಯಲ್ಲಿ ನಿಮ್ಮ ಗಮನಕ್ಕೆ ಬಂದ ಕೆಲವು ಮೌಲ್ಯಗಳನ್ನು ಹೇಳಿ ಎಂದೆ.

ರಾಮನ ಸ್ನೇಹಭಾವ, ರಾಜ ಸೈನಿಕ ಎಲ್ಲರೂ ಒಂದೆ ಎಂಬ ಪ್ರಜಾಪ್ರಭುತ್ವವಾದಿ ನಿಲುವು, ತಮ್ಮ ತಮ್ಮ ಬಗ್ಗೆ ಏನೂ ಹೇಳದೆ ಪರಸ್ಪರರ ಸಾಮರ್ಥ್ಯದ ಬಗ್ಗೆ ಮಾತ್ರ ಗೌರವದಿಂದ ಹೇಳುವ ರಂಹ ಮತ್ತು ವಹ್ನಿಯರು, ಅವರ ಸ್ವಾಮಿನಿಷ್ಠೆ, ತನ್ನ ಸಹೋದ್ಯೋಗಿಗಳು ನನಗಿಂತ ಸಾಮರ್ಥ್ಯರು ಎನ್ನುವಲ್ಲಿರುವ ವಿನಯ, ಗಂಡನಿಂದ ದೂರವಾಗಿ ದುಃಖದಲ್ಲಿದ್ದಿರಬಹುದಾದ ಸೈನಿಕನ ಹೆಂಡತಿಯ ದುಃಖ ತನ್ನ ಸೀತೆಯ ದುಃಖಕ್ಕಿಂತ ಕಡಿಮೆಯಲ್ಲ ಎಂಬ ಭಾವ, ಹೆಂಡತಿ ಮಕ್ಕಳ ಹೊಣೆ ನನ್ನದು ಎಂಬ ಮಾನವಪ್ರಯತ್ನದ ಮಾತು, ಮಾನವಪ್ರಯತಯ್ನವನ್ನೂ ಮೀರಿ ಘಟಿಸಬಹುದಾದ ಸಂಗತಿಗಳಿಗೆ ಭಾರತೀಯ ಸಂಸ್ಕೃತಿಯ ತಳಹದಿಯಾದ ಧರ್ಮ ಆದ್ಯಾತ್ಮದ ಸಮಾಧಾನ, ನಾವು ರಕ್ಷಿಸಿದ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ರಾಷ್ಟ್ರಭಾವ, ಧರ್ಮದ ಉಳಿವಿಗಾಗಿ ವೈಯಕ್ತಿಕ ತ್ಯಾಗಕ್ಕೂ ಸಿದ್ಧವಾದ ಮನಸ್ಥಿತಿ, ನಿನ್ನ ಪ್ರಶ್ನೆಯಿಂದಲೇ ಅವರು ಕ್ಷೇಮ ಎನ್ನುವಲ್ಲಿ ಇರುವ ಅಗಾಧವಾದ ನಂಬಿಕೆ, ತನ್ನೊಬ್ಬನ ಸುಖಕ್ಕೋಸುಗ ಸೈನಿಕರು, ಅವರ ಹೆಂಡತಿ ಮಕ್ಕಳೆಲ್ಲರೂ ಅನುಭವಿಸಬೇಕಾದ ದುಃಖದ ಅರಿವು, ಯುದ್ಧವೆಂದರೆ ಸಾವು ಎಂಬ ಮಾತು, ಅದರಿಂದ ಸೂಚಿತವಾಗುವ ಯುದ್ಧವಿರೋಧಿ ನಿಲುವು, ಸೀತೆಯ ರೂಪದಲ್ಲಿ ರಾವಣ ಕದ್ದೊಯ್ದದ್ದು ಸತೀತ್ವವನ್ನೇ ಎಂಬ ಸಾರ್ವತ್ರೀಕರಣಭಾವ, ಸೈನಿಕನೂ ಜ್ಞಾನಿಯೂ ಆಗಿರಬಲ್ಲ ಎಂಬಂತಹ ವಹ್ನಿಯ ಮಾತುಗಳು, ನಿಮ್ಮ ಸಂಸ್ಕೃತಿ ದೊಡ್ಡದು ಎನ್ನುವಲ್ಲಿ ಬಹುಮುಖೀ ಸಂಸ್ಕೃತಿಯ ಬಗೆಗಿನ ಗೌರವ, ಮನ್ನಣೆ…….. ಹೀಗೆ ನನ್ನ ಕಥೆಯ ಕೇಳುಗ ಸ್ನೇಹಿತರು ಹೇಳುತ್ತಲೇ ಇದ್ದರು!
“ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತೆ?” ಎಂದೆ. “ಕುವೆಂಪು ಬರೆದಿರುವುದು ರಾಮಾಯಣವನ್ನಲ್ಲ; ರಾಮಾಯಣ ದರ್ಶನವನ್ನು. ಅದಕ್ಕಾಗಿ ಓದಲೇಬೇಕು” ಎಂದರು.
ಈ ಪುಟ್ಟ ಸಂಗತಿಯ ಬಗ್ಗೆ ಯೋಚಿಸಿದಂತೆಲ್ಲಾ ಬೆಳೆಯುತ್ತಲೇ ಹೋಗುತ್ತದೆ ನಮ್ಮ ವಿಚಾರಲಹರಿ. ’ನಿನ್ನ ಮಗನ ರಕ್ಷಕ ಯಾರು?’ ಎಂಬ ಪ್ರಶ್ನೆಗೆ ವಹ್ನಿ ’ನಾನೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ. ಪುತ್ರವಿರಹದಿಂದಲೇ ಮರಣವನ್ನಪ್ಪಿದ ತನ್ನ ತಂದೆ ರಾಮನಿಗೆ ನೆನಪಾಗಿರಬೇಕು. ರಾಮ ನಿಟ್ಟುಸಿರು ಬಿಡುತ್ತಾನೆ. ಗಮನಿಸಬೇಕು, ಕವಿ ಇಲ್ಲಿ ರಾಮ ಎನ್ನುವುದಿಲ್ಲ, ’ದಶರಥಾತ್ಮಜ’ ಎನ್ನುತ್ತಾರೆ! ’
ನನ್ನ ಸತಿಸುತರೊಂದು ಹೊರತೆ’ ಎಂಬ ವಹ್ನಿಯ ಮಾತುಗಳು ಕವಿಯ ಸಮಷ್ಟಿಪ್ರಜ್ಞೆಗೆ ಸಾಕ್ಷಿಯಾಗಿವೆ. ’ಮರಣದಲ್ಲಿ ರಣವಿದೆಯಪ್ಪಾ, ಹಣೆಬರೆಹ ಹೇಳೋದೇನೇ ಇರಲಿ, ಕೈಬರೆಹವೇ ಸಾರುತಿದೆ’ ಎಂಬ ರಾಮನ ಮಾತಿನಲ್ಲಿ ವ್ಯಕ್ತವಾಗುವ ಹಾಸ್ಯಪ್ರಜ್ಞೆ ಮನಮುಟ್ಟುತ್ತದೆ.
ಇಲ್ಲಿ ಬರುವ ವಹ್ನಿ ರಂಹ ಇಬ್ಬರೂ ಸಾಮಾನ್ಯ ಸೈನಿಕರು. ಆದರೂ ಸಂಸ್ಕೃತಿಯಲ್ಲಿ ಸಂಪನ್ನರು! ವಹ್ನಿ ತನ್ನ ಸ್ನೇಹಿತನ ಬಲದ ಬಗ್ಗೆ ಮೊದಲು ಮಾತನಾಡಿ, ತನ್ನ ವಿಷಯ ಬಂದಾಗ ಸಂಕೋಚಪಡುತ್ತಾನೆ. ಇತ್ತ ರಂಹ ಯಾವುದಕ್ಕೂ ಬಾಯಿ ತೆರೆಯದವನು, ಸಂಕೋಚವನ್ನೇ ಮೈದಾಳಿ ನಿಂತವನು, ವಹ್ನಿಯ ಸಾಮರ್ಥ್ಯವನ್ನು ತಿಳಿಸಲು ಮಾತ್ರ ಉತ್ಸಾಹ ತೋರುತ್ತಾನೆ. ಪರಸ್ಪರ ಎಂತಹ ಗೌರವ ಆ ಸ್ನೇಹಿತರಲ್ಲಿ! ತನ್ನ ಪ್ರಶಂಸೆಯ ಮಾತು ಬಂದಾಗಲೂ, ತನ್ನ ಸೇನಾಪತಿ ದಧೀಮುಖನ ಪಡೆಯಲ್ಲಿ ನಾನೇ ಅತ್ಯಲ್ಪ. ಉಳಿದವರು ಇನ್ನೂ ಅಸಾಮಾನ್ಯರು ಎಂಬಲ್ಲಿ ಇರುವ ವಿನಯ ಇದಂತೂ ಮನಸ್ಸಿಗೆ ತಾಕುತ್ತದೆ. ಸೈನಿಕರೊಂದಿಗೂ ರಾಮ ಅಷ್ಟೊಂದು ಸರಸವಾಗಿ ಸ್ನೇಹಭಾವದಿಂದ ಮಾತನಾಡುವವನಾಗಿರುವುದೇ ಆತ ಪುರುಷೋತ್ತಮ ಎಂಬುದಕ್ಕೆ ಸಾಕ್ಷಿ!
ಕನ್ನಡಭಾಷೆಯ ಕಾವ್ಯಸೌಂದರ್ಯವನ್ನು ಸವಿಯಲೋಸುಗವೂ ಈ ಕಾವ್ಯವನ್ನು ಓದಬೇಕು. ಇದೇ ಭಾಗದ ಕೆಲವು ಸಾಲುಗಳು:
“ನಿನ್ನ ನೋಡಿದರಾತನೊರೆದನತ್ಯಲ್ಪಮಂ,
ವಹ್ನಿ !” ಕೋಸಲನೃಪನ ನುಡಿಗೆ ತಲೆಬಾಗಿದನ್
ದೀರ್ಘೋನ್ನತಂ ; ಮತ್ತೆ “ದಧಿಮುಖೇಂದ್ರನ ದಳದಿ
ನಾನೊರ್ವನತ್ಯಲ್ಪನೆಯೆ ದಿಟಂ, ದೇವ.” “ನೀನ್
ಅಲ್ಪನಾಗಿರ್ಪವೊಲ್ ತುಳಿಲಾಳ್ಗಳಂ ಪಡೆದ
ದಧಿಮುಖೇಂದ್ರನೆ ಧನ್ಯನೈಸೆ ! — ನೀಮಿರ್ವರುಂ
ಮಹಿಮರೆ ವಲಂ, ಪರಸ್ಪರ ಸಖ್ಯದಿಂ, ಮತ್ತೆ
ಪೇರದಟಿನಿಂ. — ವಹ್ನಿ, ನಿನಗೆ ಸಹಧರ್ಮಿಣಿಯ
ಸುಖ ಸಂಗಮಿರ್ಪುದೇನಯ್ ?” “ಇರ್ದುದೆನ್ನೂರೊಳಗೆ.”
ಪ್ರತ್ಯತ್ತರದ ಇಂಗಿತವ್ಯಂಗ್ಯಕೊಂದಿನಿತೆ
ನಕ್ಕು, ಸೀತಾಪ್ರಾಣವಲ್ಲಭಂ: “ಇರ್ದುದೇನ್ ?
ಅಯ್ಯೊ ಇರ್ಪುದನುಳಿದು ಬಂದು ಸಂಕಟಕೇಕೆ
ಸಿಲ್ಕಿದಯ್? ನಿನ್ನವೊಲೆ ನಿನ್ನಾಕೆಯುಂ ದಃಖಿ !”
ಸುಯ್ದು ಕೇಳ್ದನ್, “ನನ್ನ ಕತದಿಂದಾದುದಲ್ತೆ
ನಿಮಗೆ ಬನ್ನಮ್, ವಹ್ನಿ ?”
ತತ್ತರಿಸಿದನು ವಹ್ನಿ
ಸುಯ್ಲುರಿಗೆ ಸಿಲ್ಕಿ. ಕೈಮುಗಿದು, ಮೊಣಕಾಲೂರಿ,
ಬೇಡಿದನ್: “ದೇವ, ಮನ್ನಿಸು ನನ್ನ ಬಿನದಮಂ.
ತಪ್ಪಿತರ್ಥವ್ಯಾಪ್ತಿ!”
“ಏಳೇಳ್, ಭಟವರೇಣ್ಯ;
ಮಕ್ಕಳಿಹರೇ ನಿನಗೆ?” ರಘುಜನೆಂದನು, ದನಿಯೆ
ನೇಹವ ಸೂಸುವಂತೆ.
“ಇರ್ಪನೊರ್ವನ್, ದೇವ.”
“ಚಿಕ್ಕವನೆ?” “ಅಲ್ಲದಿರೆ ನನ್ನ ಪಕ್ಕದೊಳಿರನೆ
ನಿನ್ನ ಸೇವೆಯ ದೇವ ಕಾರ್ಯಕ್ಕೆ?” “ಅವರ್ಗಾರ್
ರಕ್ಷಕರ್?” “ನಾನೆ!” ಸುಯ್ಯುತೆ ದಶರಥಾತ್ಮಜಂ
ವೀರ ವಹ್ನಿಯ ಕಣ್ಗಳಂ ಕರುಣೆಯಿಂ ನೋಡಿ
“ನೀನೆ?” ಎಂದಿನಿತು ಜಾನಿಸಿ ಮತ್ತೆ, “ಮರಣದೋಳ್
ರಣಮಿಹುದು, ವಹ್ನಿ; ಹಣೆಬರೆಹಮೊರೆಯುವುದಿರ್ಕೆ,
ಸಾರುತಿದೆ ಕೈಬರೆಹಮುಂ!” ಧ್ವನಿಯರಿತು ನಕ್ಕನಾ
ರಾಮ ನೀಲರ ಕೂಡೆ ಭಟವರಿಷ್ಠಂ ವಹ್ನಿ; ಮೇಣ್
ತನ್ನ ಧೈರ್ಯಕೆ ನೀಡಿದನು ನಾಲಗೆಯನಿಂತು:
“ಆವ ಧರ್ಮಕೆ ಸಾವನಪ್ಪುವೆವೊ ಪೊರೆವುದಾ
ಧರ್ಮಮೀ ಲೋಕಮಂ. ನನ್ನ ಸತಿಸುತರೊಂದು
ಹೊರತೆ? …..
ದಶಶಿರಂ ಪೊತ್ತುಯ್ದುದೊರ್ಬ್ಬನ ಸತಿಯನಲ್ತು;
ಸತಿತನವನುಯ್ದಿಹನ್! ಪುರುಷನಿರಲಾಗದೀ
ಧರೆಯ ಮೇಲೊರ್ವನುಂ ಪೊರೆಯದನ್ನೆಗಮಾ
ಸತೀತ್ವಮಂ! ರಘುವರ, ಸುರಕ್ಷಿತರ್ ನನ್ನವರ್
ನಿನ್ನ ಈ ಕೇಳ್ದ ಕುಶಲಪ್ರಶ್ನ ಕೃಪೆಯಿಂದಮುಂ!”

ಕುವೆಂಪು ವಾಲ್ಮೀಕಿಯ ರಾಮಾಯಣವನ್ನೇ ಕನ್ನಡದಲ್ಲಿ ಅನುವಾದಿಸಿದ್ದರೆ, ರಾಮಾಯಣದ ಕಥೆಯನ್ನಷ್ಟೇ ಬರೆದಿದ್ದರೆ ಅದೊಂದು ಕನ್ನಡ ರಾಮಾಯಣ ಮಾತ್ರವಾಗುತ್ತಿತ್ತು. ರಾಮಾಯಣದ ಕಥೆ ’ನಿತ್ಯ’. ಅದಕ್ಕೆ ವಿರಾಮವೆಂಬುದೇ ಇಲ್ಲ. (’ರಾಮಾಯಣಂ ಅದು ವಿರಾಮಾಯಣಂ ಕಣಾ!’). ರಾಮಾಯಣ ರಾಮನಿಗಿಂತಲೂ ದೊಡ್ಡದು (ರಾಮಂಗೆ ಮಿಗಿಲಲ್ತೆ ರಾಮಾಯಣಂ). ಎಲ್ಲರಿಗೂ ಗೊತ್ತಿರುವ ವಾಲ್ಮೀಕಿ ರಾಮಾಯಣದ ಕಥೆಯ ಮೂಲಕ (ತನು ನಿನ್ನದಾದೊಡಂ ಚೈತನ್ಯ ನನ್ನದೆನೆ, ಕಥೆ ನಿನ್ನದಾದೊಡಂ ಕೃತಿ ನನ್ನ ದರ್ಶನಂ) ಕುವೆಂಪು ರಾಮಾಯಣದ ದರ್ಶನವನ್ನು ಹೀಗೆ ಸಣ್ಣ ಸಣ್ಣ ಸಂಗತಿಗಳ ಮೂಲಕ, ಕಥೆ-ಸಂಭಾಷಣೆಗಳ ಮೂಲಕ, ಅಲಂಕಾರಗಳ ಮೂಲಕ ಹೇಳುತ್ತಾ ಹೋಗುತ್ತಾರೆ. ಆದ್ದರಿಂದಲೇ ಇದು ರಾಮಾಯಣ ದರ್ಶನ, ರಾಮಾಯಣದ ಕಥೆ ಗೊತ್ತಿದ್ದವರೂ ಓದಲೇ ಬೇಕಾದ ದರ್ಶನಕಾವ್ಯ.
(ಮೂಲದಲ್ಲಿಯೇ ಈ ಪ್ರಸಂಗವನ್ನು ಓದುವವರಿಗೆ: ಶ್ರೀರಾಮಾಯಣ ದರ್ಶನಂ, ಸಂಪುಟ 3; ಸಂಚಿಕೆ 6; ಸಾಲುಗಳು 215-297.)