Friday, April 29, 2011

'ನನ್ನ ತೇಜಸ್ವಿ'ಗೆ ಅನಾಮಿಕರ ಕಾಟ!


ಕೆಂಡಸಂಪಿಗೆಯಲ್ಲಿ ’ನನ್ನ ತೇಜಸ್ವಿ’ಯ ಗುಂಗಿನಲ್ಲಿ: ಸಿಂಧು ಬರೆದ ಲಾವಂಚ ಓದಿದೆ. ಒಂದು ಕೃತಿಯ ಓದಿಗೆ ತತ್ಕ್ಷಣ ನೀಡುವ ಪ್ರತಿಕ್ರಿಯೆಯಾಗಿದ್ದು ಸಹಜವಾಗಿಯೇ ಇದೆ. ನಾನೂ ’ನನ್ನ ತೇಜಸ್ವಿಯ’ನ್ನು ಕೇವಲ ಒಂದೂವರೆ ದಿನದಲ್ಲಿ ಓದಿ ಮುಗಿಸಿದೆ. ಅದರ ಬಗ್ಗೆ ನನಗನ್ನಿಸಿದ್ದನ್ನು ಬರೆಯಬೇಕಂಬ ಒಳಗಿನ ಒತ್ತಡ, ಹೊರಗಿನ ಬದುಕಿನ ಒತ್ತಡಗಳಿಂದ ಹಾಗೆಯೇ ಉಳಿದುಬಿಟ್ಟಿದೆ. ಮುಂದೆ ಎಂದಾದರೊಮ್ಮೆ ಬರೆದೇನು!
ಸಿಂಧು ಅವರ ಅಭಿಪ್ರಾಯಸ್ವರೂಪದ ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ತಮ್ಮ ಸ್ವಂತ ಹೆಸರನ್ನೂ ಹೇಳಿಕೊಳ್ಳಲು ಇಚ್ಛಿಸದ ಆದರೆ ನಿರ‍್ಮೋಹಿ(!)ಯಾಗಿರುವವರು (ಅವರ ಹೆಸರಿನ ಬಗ್ಗೆ ಅವರಿಗೆ ತುಂಬಾ ಮೋಹವಿರಬೇಕು. ಅದಕ್ಕೇ ಅದನ್ನು ಯಾರಿಗೂ ಹೇಳುತ್ತಿಲ ಅನ್ನಿಸುತ್ತದೆ.) ‘ಅವರ ಬರಹಗಳೆಲ್ಲವೂ ಸತ್ವಭರಿತವೇನಲ್ಲ. ಅವರ ಸಾಹಿತ್ಯ ಕೃಷಿಯಲ್ಲಿ ಜೊಳ್ಳು ಬರಹಗಳೂ ಇವೆ. ಅವನ್ನು ನಿರ್ಲಕ್ಷಿಸಿ ಸದಾ ಅವರ ಬರಹವನ್ನು ಹೊಗಳಿ ಬರೆಯುವುದು ಸರಿಯೆ?’ ಎಂದು ಪ್ರತಿಕ್ರಿಯಿಸಿದ್ದಾರೆ. ತಮ್ಮ ಹೆಸರನ್ನು ಹೇಳಿಕೊಳ್ಳುವ ನೇರವಂತಿಕೆಯನ್ನು ಪ್ರದರ್ಶಿಸದ ಶ್ರೀಯುತರು ಇನ್ನೊಬ್ಬರಿಂದ ಏಕೆ ನೇರ ಬರಹಗಳನ್ನು ವಿಮರ್ಶೆಯನ್ನು ನಿರೀಕ್ಷಿಸುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ. ಅನಾಮಿಕರಾಗಿ ಗಾಳಿಸುದ್ದಿ ಹಬ್ಬಿಸುವಂಥ ಕಾಮೆಂಟ್ ಹಾಕುವುದು, ಒಬ್ಬರನ್ನು ಹೊಗಳಿಯೋ ತೆಗಳಿಯೋ ಬರೆಯುವುದು, ಒಂದು ರೀತಿಯಲ್ಲಿ ಇವರನ್ನು ವಿಕೃತ ಸಂತೋಷಿಗಳು ಎನ್ನಬಹುದು. ಹಿಂದೊಮ್ಮೆ ಅನಾಮಿಕ ಕಾಮೆಂಟಿಗರನ್ನು ಕತ್ತಲೆ ಸಾಮ್ರಾಜ್ಯದ ಬೆತ್ತಲೆ ಚಕ್ರವರ್ತಿಗಳು ಎಂದು ಕರೆದಿದ್ದೆ. ತಾವು ಕತ್ತಲೆಯಲ್ಲಿ ನಿಂತು, ಬೇರೆಯವರನ್ನು ಬೆಳಕಿನಲ್ಲಿ ಬೆತ್ತಲಾಗಿಸುವ ಈ ಚಟ ಆನ್ ಲೈನ್ ಸಾಹಿತ್ಯ ಚಟುವಟಿಕೆಗೆ ಹತ್ತಿದ ಶಾಪ! ಅನಾಮಿಕರಾಗಿದ್ದುಕೊಂಡು,  ಮೌಲ್ಯಯುತ ಬರಹಗಳಿಂದ ಕ್ರಿಯಾಶೀಲರಾಗಿರುವ, ಮಿತ್ರರೂ ಇದ್ದಾರೆ. ಅವರನ್ನು ಅಭಿನಂದಿಸೋಣ.
ಅದು ಒತ್ತಟ್ಟಿಗಿರಲಿ. ಅಷ್ಟಕ್ಕೂ ಸಿಂಧು ಅವರು ಇಲ್ಲಿ ತೇಜಸ್ವಿಯವರ ಸಾಹಿತ್ಯದ ವಿಮರ್ಶೆಗೆ ಇಳಿದಿಲ್ಲ ಎಂಬುದು ಸ್ಪಷ್ಟವಾಗಿಯೇ ಇದೆ. ಶ್ರೀಮತಿ ರಾಜೇಶ್ವರಿಯವರ ’ನನ್ನ ತೇಜಸ್ವಿ’ ಕೃತಿಯ ಓದಿನ ರಸಾನುಭೂತಿಂಇನ್ನು ಸಿಂದು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅದು ಅವರ ಪ್ರಮಾಣಿಕ ಅನಿಸಿಕೆ. ‘ನನ್ನ ತೇಜಸ್ವಿ’ ಕೃತಿಯೂ ಕೂಡ ತೇಜಸ್ವಿಯವರ ಸಾಹಿತ್ಯದ ವಿಮರ್ಶೆಗೆ ಹೊರಟ ಕೃತಿಯಲ್ಲ. ಸಾಹಿತ್ಯಕ್ಕಿಂತಲೂ ಬದುಕನ್ನು ಹೆಚ್ಚು ಪ್ರೀತಿಸುತ್ತಿದ್ದ ತೇಜಸ್ವಿಯವರ ಇನ್ನೊಂದು ಮುಖ ಆ ಕೃತಿಯಲ್ಲಿ ಕಂಡರಿಸಲ್ಪಟ್ಟಿದೆ. ಸಾಹಿತಿಯಾಗಿ ನಮಗೆ ತೇಜಸ್ವಿ ಎಷ್ಟು ಮುಖ್ಯವೋ ಅವರು ಬದುಕೂ ಮುಖ್ಯ. ತೇಜಸ್ವಿಯವರ ಬದುಕಿನ ನೂರಾರು ಕ್ಷಣಗಳನ್ನು ಒಂದು ರೀತಿಯ ಸ್ಲೈಡ್ ಶೋ ಮೂಲಕ ನಮಗೆ ತೋರಿಸಿರುವ ಪ್ರಯತ್ನ. ಸ್ಲೈಡ್ ಶೋ ನಡೆಯುವಾಗ ನಮ್ಮ ಅನುಭಕ್ಕೆ ಎಷ್ಟು ದಕ್ಕುತ್ತದೋ ಅಷ್ಟೆ. ಹೆಚ್ಚಿನ ಅನುಭವ ಬೇಕೆಂದರೆ, ಮತ್ತೆ ಹಿಂದಿನ ಸ್ಲೈಡಿಗೆ ಹೋಗಬೇಕು. ಅಲ್ಲಿಯೂ ದಕ್ಕದಿದ್ದರೆ, ಬೇರೆಡೆ ಹುಡುಕಾಟ ಮಾಡಬೇಕು. ಈ ಹುಡುಕಾಟವೇ ಬದುಕು!
ಈ ಕೃತಿ ತೇಜಸ್ವಿಯವರನ್ನು ಹೆಚ್ಚು ಹೆಚ್ಚು ನಮ್ಮ ಹತ್ತಿರಕ್ಕೆ ತಂದು ನಿಲ್ಲಿಸಿದೆ. ‘ಅಣ್ಣನ ನೆನಪು’ ’ಮಗಳು ಕಂಡ ಕುವೆಂಪು’ ಬರುವವರೆಗೂ ಕುವೆಂಪು ಅವರ ಬಗ್ಗೆ ಇದ್ದ ಮಿಥ್‌ಗಳು ಎಷ್ಟು! ಆದರೆ ಆ ಕೃತಿಗಳನ್ನು ಓದಿದ ನಂತರ, ಅದುವರೆವೆಗೂ ಯಾವುದೋ ಲೋಕದವರಾಗಿದ್ದ ಕುವೆಂಪು ನಮಗೆ ಹೆಚ್ಚು ಮಾನವೀಯವಾಗಿ ಕಂಡಿದ್ದಾರೆ. ಅಂತಹುದೇ ಒಂದು ಕೃತಿ ನನ್ನ ತೇಜಸ್ವಿ. ಹಾಗೆ ನೋಡಿದರೆ ಇಲ್ಲಿ ಕುವೆಂಪು ಅವರ ವಿಚಾರವೂ ಬರುತ್ತದೆ. ತೇಜಸ್ವಿ ಮತ್ತು ತಾರಿಣಿಯವರಿಗೆ ಕುಂವೆಂಪು ಕಂಡಿದ್ದಕ್ಕಿಂತ ಭಿನ್ನವಾಗಿ ರಾಜೇಶ್ವರಿಯವರಿಗೆ ಕಂಡಿದ್ದಾರೆ. ಈ ಕೃತಿಯ ಓದಿನ ನಂತರ ಕುವೆಂಪು ನಮಗೆ ಇನ್ನಷ್ಟು ಹತ್ತಿರವಾಗುತ್ತಾರೆ. ಇಷ್ಟು ನಮ್ಮದಾಗಬೇಕೆ ಹೊರತು ಇಲ್ಲಿ ಕುವೆಂಪು ಅವರ ಸಾಹಿತ್ಯದ ವಿಮರ್ಶೆಯನ್ನು ಅಪೇಕ್ಷಿಸುವುದು ಅನುಚಿತವೆಂದು ಮಾತ್ರ ಹೇಳಬಹುದು. ಅಷ್ಟಕ್ಕೂ ತೆಗಳಿ ಬರೆಯುವುದನ್ನೇ ವಿಮರ್ಶೆ ಎಂದು ಪರಿಭಾವಿಸುವ ಮನಸ್ಥಿತಿಯ ಬಗ್ಗೆಯೇ ನನಗೆ ಗುಮಾನಿಯಿದೆ.
ಬೇರೊಬ್ಬರಿಗೆ ಇಷ್ಟವಾಗುವಂತೆ, ಸಿಂಧು ಅಥವಾ ಬೇರಾವುದೇ ಬರಹಗಾರ ಬರೆಯಬೇಕು, ಅದು ಕೆಂಡಸಂಪಿಗೆಯಲ್ಲೇ ಪ್ರಕವಾಗಬೇಕು ಎನ್ನುವಂತೆ ’ಡಿಮ್ಯಾಂಡ್’ ಮಾಡುವುದು ಎಷ್ಟು ಸರಿ? ಒಬ್ಬರ ಕೃತಿಯ ಓದಿನ ಅನುಭವವನ್ನು ಹಂಚಿಕೊಳ್ಳುತ್ತಿರುವ, ಕೃತಿಯನ್ನು ಪರಿಚಯ ಮಾಡಿಕೊಡುತ್ತಿರುವ ಲೇಖನದಲ್ಲಿ, ಕೃತಿಯಲ್ಲಿ ಕೇಂದ್ರಬಿಂದುವಾಗಿರುವ ವ್ಯಕ್ತಿಯ ಸಾಹಿತ್ಯದ ಬಗ್ಗೆ ವಿಮರ್ಶೆ ಬರಬೇಕು ಎಂದು ಬಯಸುವುದು ಎಷ್ಟು ಸರಿ? ನಿರ್ಮೋಹಿಗಳು ನಿರ್ಮೋಹಿಗಳಾಗಿ ಯೋಚಿಸಲಿ.
ಎಡ್ವರ‍್ಡ್ ಬುಲ್ಲೂ ಎಂಬ ಮೀಮಾಂಸಕಾರ ಪ್ರತಿಪಾದಿಸಿರುವಂತೆ ಒಂದು ಕೃತಿಯನ್ನು ಆಸ್ವಾದಿಸುವಾಗ ಓದುಗ, ಕೃತಿಯಿಂದ ಒಂದು ಆರೋಗ್ಯಕರ ಮಾನಸಿಕ ಅಂತರವನ್ನು (ಸೈಕಿಕಲ್ ಡಿಸ್ಟೆನ್ಸ್) ಕಾಪಾಡಿಕೊಳ್ಳಬೇಕಾಗುತ್ತದೆ. ಈ ಅಂತರವನ್ನು ಒಂದು ಕೃತಿಯನ್ನು ಮೊದಲಬಾರಿಗೆ ಓದುವಾಗ ಏಕಾಏಕಿ ಸಾಧಿಸಲು ಸಾಧ್ಯವಿಲ್ಲ. ಒಂದು ಪಕ್ಷ ನಿರ್ಮೋಹಿಯವರ ಅಭಿಪ್ರಾಯದಂತೆ ಲೇಖಕಿ ಕೃತಿಯನ್ನು ’ಅಂಡರ್ ಡಿಸ್ಟೆನ್ಸ್’ನಲ್ಲೇ ನಿಂತು ನೋಡಿದ್ದಾರೆ ಎಂದುಕೊಳ್ಳುವ. ಕೃತಿಯ ನಡುವೆ ಆರೋಗ್ಯಕರ ‘ಮಾನಸಿಕ ಅಂತರ’ವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯವಿರುವ ನಿರ್ಮೋಹಿಯವರೇ ಏಕೆ ತೇಜಸ್ವಿಯವರ ಸಾಹಿತ್ಯವನ್ನು ಕುರಿತಂತೆ ವಿಮರ್ಶಾ ಗ್ರಂಥವನ್ನು ಬರೆಯಬಾರದು. ಅದರಲ್ಲಿ ತೇಜಸ್ವಿಯವರ ಸಾಹಿತ್ಯದ ಜೊಳ್ಳು ಗಟ್ಟಿಗಳನ್ನು ಬೇರ್ಪಡಿಸಿ ನಮಗೂ ತೋರಿಸಬಾರದು? ಆದರೆ ಒಂದು ಮಾತ್ರ ನಿಜ. ಸಿದ್ಧ ವಿಮರ್ಶೆಯ ಚೌಕಟ್ಟಿನಲ್ಲಿ ತೇಜಸ್ವಿಯ ಸಾಹಿತ್ಯವನ್ನು ಇಟ್ಟ ತಕ್ಷಣ ನಿಮ್ಮ ಉದ್ದೇಶದ ಶೇಕಡ ಎಪ್ಪತ್ತೈದು ಭಾಗ ನೀವು ಅನುತ್ತೀರ್ಣವಾದಂತೆಯೇ! ಇದು, ತೇಜಸ್ವಿಯವರ ಸಾಹಿತ್ಯವನ್ನು ಕುರಿತಂತೆ ಹಲವಾರು ವಿಚಾರ ಸಂಕಿರಣದಲ್ಲಿ ಭಾಗವಹಿಸಿರುವ ನನ್ನ ಅನುಭವ.
ಇನ್ನೊಂದು ಪ್ರತಿಕ್ರಿಯೆ: "ಕಡುಗಪ್ಪು ರಾತ್ರಿಯಲ್ಲಿ ಬಿಸಿಯೂಟ ಮುಗಿಸಿ, ಕಿಟಕಿಯಾಚೆಗೆ ನೀಲಿಯೆದೆಯಲ್ಲಿ ನಕ್ಷತ್ರ ನೋಡುತ್ತಾ" ಕಡುಗಪ್ಪು ರಾತ್ರಿಯಲ್ಲಿ ನೀಲಿಬಣ್ಣ ಕಾಣಲು ಸಾಧ್ಯವೇ ಎಂಬದು.
ನಿರ್ಮೋಹಿಯವರನ್ನು ಬೆಂಬಲಿಸುವ ಕಡುಮೋಹಿಯವರು ತಮ್ಮ ವಾದದ ಸಮರ್ಥನೆಗೆ ಬಳಸಿರುವ ಸಾಲುಗಳನ್ನು ಗಮನಿಸಿ. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಗುಣ ದೋಷಗಳ ವಿಚಾರ ಬರುತ್ತದೆ. ದೋಷವೂ ಕೂಡ ಒಮ್ಮೊಮ್ಮೆ ಅಲಂಕಾರವಾಗಿರುತ್ತದೆ ಎಂಬ ಮಾತೂ ಬರುತ್ತದೆ. ಇದು ಸಮರ್ಥನೆಗೆಂದು ಹೇಳುತ್ತಿರುವುದಿಲ್ಲ. ಅವರು ಬಳಸಿರುವ ವಾಕ್ಯದ ಇಂದು ಮುಂದು ನನಗೆ ಗೊತ್ತಿಲ್ಲದಿರುವುದರಿಂದ ಆ ವಾಕ್ಯವನ್ನಷ್ಟೇ ಇಟ್ಟುಕೊಂಡು ನನ್ನ ಓದಿನ ಅರಿವಿನಲ್ಲಿ ಒಂದೆರಡು ಮಾತುಗಳನ್ನು ಬರೆಯಲಿಚ್ಚಿಸುತ್ತೇನೆ.
ಟಿ.ಎಸ್.ಎಲಿಯಟ್ ಅಭಿಪ್ರಾಯದಂತೆ ಒಂದು ಒಳ್ಳೆಯ ಕಾವ್ಯವನ್ನು ಓದಿದಾಗ, ಅದು ಅರ್ಥವಾಗುವ ಮುಂಚೆಯೇ ಓದುಗನಿಗೆ ರಸಾನುಭವ ಆಗಿಬಿಡುತ್ತದೆ. ಟಿ.ಎಸ್. ಎಲಿಯಟ್ಟನ ಕಾವ್ಯವನ್ನು ಅಷ್ಟಾಗಿ ಮೆಚ್ಚದಿದ್ದ ಕುವೆಂಪು ಅವರೂ ಸಹ ಎಲಿಯಟ್ಟನ ಕಾವ್ಯಮೀಮಾಂಸೆಯ ತತ್ವವನ್ನು ಒಪ್ಪಿಕೊಂಡಿದ್ದರು. ಡಾ.ಪ್ರಭುಶಂಕರರು ಕುವೆಂಪು ಅವರ ಮಾರ್ಗದರ್ಶನದಲ್ಲಿ ’ಕನ್ನಡದಲ್ಲಿ ಭಾವಗೀತೆಗಳು’ ಎಂಬ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾಗ, ’ಮಲ್ಲಿಗೆ ಹೂವು ಬಿರಿಯುವ ಸದ್ದು ಕೇಳಿಸುತ್ತದೆ’ ಎನ್ನುವ ಅರ್ಥದಲ್ಲಿ ಬರುವ ಭಾವಗೀತೆಯೊಂದರ ಸಾಲನ್ನು ಕುರಿತು ಇದು ಹೇಗೆ ಸಾಧ್ಯ. ಇದು ತೀರಾ ಅಭೌತಿಕ ಅಲ್ಲವೆ ಎಂದು ಕೇಳಿದ್ದರಂತೆ. ಆಗ ಕುವೆಂಪು ಅವರು ‘ಖಂಡಿತಾ ಸಾಧ್ಯವಿದೆ. ಪ್ರತಿಭಾವಂತನಾದ ಕವಿ ಆ ಸದ್ದನ್ನು ಆಲಿಸಬಲ್ಲ; ಆದರೆ ಅದು ಹೊರಕಿವಿಯಿಂದಲ್ಲ; ಒಳಕಿವಿಯಿಂದ’ ಎಂಬ ಅರ್ಥದಲ್ಲಿ ಮಾತನಾಡುತ್ತಾರೆ.
ಬೇಂದ್ರೆಯವರ ಪ್ರಸಿದ್ಧ ’ಬೆಳಗು’ ಕವಿತೆಯಲ್ಲಿ ’ಗಿಡಗಂಟೆಯಾ ಕೊರಳೊಳಗಿಂದ ಹಕ್ಕಿಗಳ ಹಾಡು’ ಎಂಬ ಸಾಲು ಬರುತ್ತದೆ. ಮೇಲ್ನೋಟಕ್ಕೆ ಇದು ಸಾಧ್ಯವೇ ಎನ್ನಿಸುತ್ತದೆ. ಆದರೆ ಒಮ್ಮೆ ಯೋಚಿಸಿ. ಎಷ್ಟೋ ಬಾರಿ ಹಕ್ಕಿಯ ಉಲಿ ನಮಗೆ ಕೇಳಿಸುತ್ತದೆಯಾದರೂ ಹಕ್ಕಿ ನಮಗೆ ಕಾಣಿಸುವುದಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಮರಗಿಡಗಳ ಎಲೆಗಳು ನಮಗೆ ಕಾಣಿಸುತ್ತದೆಯೇ ಹೊರತು ಹಕ್ಕಿ ಕಾಣಿಸುವುದಿಲ್ಲ. ಆದರೆ ಹಾಡು ಕೇಳಿಸುತ್ತದೆ. ಆಗ ಅದು ಪ್ರತಿಭಾಸಂಪನ್ನನಾದ ಕವಿಗೆ ಮರಗಿಡಗಳೇ ಹಾಡುತ್ತಿರುವಂತೆ ಭಾಸವಾಗುತ್ತದೆ ಅಲ್ಲವೆ? ಹಾಗೆಯೇ ನೋಡುವ ಅಲ್ಲಲ್ಲ, ಕಾಣುವ ಕಣ್ಣಿದ್ದರೆ ರಾತ್ರಿಯ ವೇಳೆಯೂ ಕಡುಕಪ್ಪು ಕತ್ತಲಲ್ಲೂ ’ನಿಲಿಯೆದೆಯ ನಕ್ಷತ್ರಗ’ಳು ಕಾಣಬಹುದು! ಆದರೆ ನನಗೆ ಆಶ್ಚರ್ಯವಾಗುವುದು, ’ನನ್ನ ತೇಜಸ್ವಿ’ ಕೃತಿಯಲ್ಲಿ, ಮತ್ತು ಅದರ ಓದಿನ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿರುವ ಲೇಖನದಲ್ಲಿ ಈ ಸಾಹಿತ್ಯ ವಿಮರ್ಶೆ,  ಮೀಮಾಂಸೆ ಎಲ್ಲಾ ಬೇಕು ಎನ್ನುವ ಹಠ ಏಕೆ ಎಂಬುದು!
ಸಾಹಿತ್ಯ ಹೆಚ್ಚೋ ಬದುಕು ಹೆಚ್ಚೋ ಎಂಬ ಪ್ರಶ್ನೆಯೇ ಒಂದು ಹಂತದವರೆಗೆ ಅಸಂಬದ್ಧವೆನ್ನಿಸುತ್ತದೆ. ಆದರೆ ಪ್ರಶ್ನೆ ಎದುರಾದಾಗ ಬದುಕು ಹೆಚ್ಚು ಎಂಬುದು ನನ್ನ ಅಭಿಪ್ರಾಯ. ತೇಜಸ್ವಿ ಸಾಹಿತ್ಯ ದೊಡ್ಡದೋ ಬದುಕು ದೊಡ್ಡದೋ, ಅವರ ಫೋಟೋಗ್ರಫಿ ಉತ್ಕೃಷ್ಟವೋ ಸಾಹಿತ್ಯ ಉತ್ಕೃಷ್ಟವೋ ಇತ್ಯಾದಿ ಪ್ರಶ್ನೆಗಳೇ ಅಸಂಬದ್ಧ. ಅವರ ಸಾಹಿತ್ಯದಂತೆ ಅವರ ಬದುಕೂ ನನ್ನ ಮಟ್ಟಿಗಂತೂ ಸಾಕಷ್ಟು ಪರಿಣಾಮ ಬೀರಿದೆ. ಆದ್ದರಿಂದ ಅವರ ಸಾಹಿತ್ಯದಲ್ಲಿ ಬರುವ ಒಂದು ಸಾಲು ಅಥವಾ ಒಂದು ಪುಟ ಅಥವಾ ಒಂದು ಇಡೀ ಪುಸ್ತಕವೇ ಅಪ್ರಸ್ತುತವಾದರೆ ನನಗೇನೂ ಅನ್ನಿಸುವುದಿಲ್ಲ! ಆದರೂ ನನ್ನ ಪಾಲಿಗೆ ’ಅರಿವಿನ ಗುರು’ವಾಗಿಯೇ ತೇಜಸ್ವಿ ಉಳಿಯುತ್ತಾರೆ. ನಮ್ಮ ಅರಿವಿನ ದಿಗಂತಗಳನ್ನು ವಿಸ್ತರಿಸಿ, ಚಿಂತಿಸುವುದನ್ನು ಕಲಿಸಿದ ತೇಜಸ್ವಿ ನನಗೆ ಮುಖ್ಯವಾಗುವುದು ಹೀಗೆ! ’ನನ್ನ ತೇಜಸ್ವಿ’ ಕೃತಿ ರಚನೆಯಾಗುವವರೆಗೂ ರಾಜೇಶ್ವರಿಯವರ ತೇಜಸ್ವಿಯಾಗಿದ್ದರು. ಈಗ ನನ್ನ ತೇಜಸ್ವಿಯೂ ಆಗಿದ್ದಾರೆ. ಕೃತಿಯೋದಿದ ಪ್ರತಿಯೊಬ್ಬ ಸಹೃದಯನಿಗೂ ತೇಜಸ್ವಿ ತನ್ನವನಾಗುತ್ತಲೇ ಹೋಗುತ್ತಾರೆ. ಇದು ಈ ಕೃತಿಯ ವಿಶೇಷ. ಸಾಹಿತಿಗಳ ಸಾಹಿತ್ಯವನ್ನು ನಾವು ಓದಿಕೊಳ್ಳಬಹುದು. ಆದರೆ ಅವರ ಬದುಕು? ಅದು ನಮಗೆ ಮುಖ್ಯವಾದಾಗಲೆಲ್ಲಾ ’ನನ್ನ ತೇಜಸ್ವಿ’ಯಂಥಹ ಕೃತಿಗಳ ಅಗತ್ಯತೆ ಎದ್ದು ಕಾಣುತ್ತದೆ. ಅದಕ್ಕಾಗಿ ಶ್ರೀಮತಿ ರಾಜೇಶ್ವರಿಯವರಿಗೆ ಅಭಿನಂದನೆಗಳು ಸಲ್ಲುತ್ತವೆ.
ಆ ಕೃತಿಯನ್ನು ನಾನು ಓದಿ ಮುಗಿಸಿದಾಗ ನನಗನ್ನಿಸಿದ್ದನ್ನು ಪುನರಾವರ್ತನೆಯಾದರೂ ಇಲ್ಲಿ ಮತ್ತೊಮ್ಮೆ ಹೇಳುತ್ತೇನೆ. ತೇಜಸ್ವಿ ಹುಡಕಾಟದಲ್ಲಿದ್ದಾಗ, ರಾಜೇಶ್ವರಿಯವರೂ ಹಡುಕಾಟದಲ್ಲಿರುತ್ತಿದ್ದರು. ತೇಜಸ್ವಿ ಕಂಡಿದ್ದನ್ನು ತಾವೂ ಕಾಣುತ್ತಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ, ಆ ಕ್ಷಣದ ತೇಜಸ್ವಿಯವರನ್ನು ಕಾಣುತ್ತಿದ್ದರು. ತೇಜಸ್ವಿ ಹಕ್ಕಿಗಳ ಭಾವನೆಗಳನ್ನು ಗ್ರಹಿಸುತ್ತಿದ್ದರೆ, ರಾಜೇಶ್ವರಿಯವರು ಅದರ ಜೊತೆಗೆ ತೇಜಸ್ವಿಯವರ ಭಾವನೆಗಳನ್ನೂ ಗ್ರಹಿಸುತ್ತಿದ್ದರು. ಅವೆಲ್ಲವುಗಳನ್ನು ಪುಸ್ತಕದಲ್ಲಿ ತುಂಬಾ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ. ತೇಜಸ್ವಿಯವರು ರಾಜೇಶ್ವರಿಯವರಿಗೆ ಬರೆದ ಪತ್ರಗಳನ್ನೂ ಪುಸ್ತಕದಲ್ಲಿ ಸಂಕಲಿಸಲಾಗಿದೆ. ಅವು ಆ ಕಾಲದ ಸಾಮಾಜಿಕ ಸಾಹಿತ್ಯಕ ವಿಚಾರಗಳನ್ನು ಒಳಗೊಂಡಿರುವ ವಿಶಿಷ್ಟ ದಾಖಲೆಗಳು!

Tuesday, April 26, 2011

ಕುಡಕರಾಗಬೇಕೆ? ಇಷ್ಟಕ್ಕೆ!

ಮೊನ್ನೆ ಊರಿಗೆ ಹೋಗಿದ್ದಾಗ ಒಂದು ಆಘಾತಕರ ಸುದ್ದಿ ಕಾಯ್ದು ಕುಳಿತಿತ್ತು. ನಮ್ಮ ಬಂಧುಗಳ ಊರಿನ ಪರಿಚಯದವರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ವಯಸ್ಸು ಸುಮಾರು ಅರವತ್ತು ಇರಬಹುದು. ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು, ಮೊಮ್ಮಕ್ಕಳು ಎಲ್ಲಾ ಇದ್ದ ಈ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುವಂತದ್ದು ಏನಾಗಿತ್ತೆಂಬುದು ನನಗೆ ಯಕ್ಷಪ್ರಶ್ನೆಯಾಗಿಬಿಟ್ಟಿತ್ತು. ಹಾಗೆ ನೋಡಿದರೆ ದಿವಂಗತರು ಸಾಮಾನ್ಯದ ಕುಳವೇನಲ್ಲ. ಸಾಕಷ್ಟು ಹೊಲ ತೋಟ ಎಲ್ಲಾ ಇತ್ತು. ಊರಿನ ಕೆಲವು ಮುಖಂಡರಲ್ಲಿ ಇವರೂ ಒಬ್ಬರಾಗಿದ್ದರು. ಸುತ್ತ ಹತ್ತೂರುಗಳ ಇಲ್ಲಸಲ್ಲದ ಪಂಚಾಯ್ತಿಗೆಂದು ಕಟ್ಟೆಗಳಲ್ಲೂ ಕೂತವರು. ರೈತಸಂಘದ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದವರು. ಕೃಷಿಯ ಜೊತೆಗೆ ಹತ್ತಿರದ ಸಂತೆಯಲ್ಲಿ ವ್ಯಾಪಾರವನ್ನೂ ಇಟ್ಟುಕೊಂಡಿದ್ದವರು. ಇಷ್ಟೆಲ್ಲಾ ಲೋಕದ ನಂಟು ಉಳಿಸಿಕೊಂಡು ಬದುಕುತ್ತಿದ್ದ ಮನುಷ್ಯ ಸಾಯುವುದೆಂದರೆ!
ಕುಡಿತ ಕುಡಿಯುವವರನ್ನೂ ಕುಡಿಯದವರನ್ನೂ ಹಾಳು ಮಾಡುತ್ತದೆ. ದಿವಂಗತರ ಆತ್ಮಹತ್ಯೆಗೂ ಕುಡಿತಕ್ಕೂ ತಳಕು ಹಾಕಿಕೊಂಡ ಸುದ್ದಿಗಳು ಕೊನೆಗೂ ನಿಜವಾಗಿ ಬಿಟ್ಟಿದ್ದವು. ದಿವಂಗತರಿಗೆ ಸ್ವಲ್ಪ ಕುಡಿತದ ಚಟವಿತ್ತು. ಆದರೆ ಎಂದು ಮಿತಿ ಮೀರಿರಲಿಲ್ಲ. ವಾರಕ್ಕೋ ಪಕ್ಷಕ್ಕೋ ಮಾತ್ರ. ಅವರ ಈ ದೌರ್ಬಲ್ಯ ಮಕ್ಕಳು ಮತ್ತು ಅವರ ನಡುವೆ ಹಲವಾರು ಬಾರಿ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಬುದ್ಧಿ ಹೇಳುವ ನೈತಿಕತೆಯನ್ನು ಕುಡಿತ ಅವರಿಂದ ಕಿತ್ತುಕೊಂಡಿತ್ತು. ಇಬ್ಬರೂ ಗಂಡು ಮಕ್ಕಳು ಒಳ್ಳೆಯವರಾಗಿದ್ದರು. ತಂದೆ ತಾಯಿ ಬಂಧು ಬಳಗ ಎಂದು, ತಮ್ಮ ಕೆಲಸ ತಾವು ಮಾಡಿಕೊಂಡು ಇದ್ದವರು. ಅಪ್ಪನ ಕುಡಿತ ಹಲವಾರು ಬಾರಿ ಅವರನ್ನು ಮುಜುಗರಕ್ಕೆ ಒಳಪಡಿಸಿತ್ತು. ಆಗೆಲ್ಲಾ ಅವರು ಅಪ್ಪನಿಗೆ ಕುಡಿತ ಬಿಡುವಂತೆ, ಒತ್ತಾಯ ಹೇರುತ್ತಿದ್ದರು. ಆಗ ಬಿಸಿಬಿಸಿ ಮಾತುಗಳಾಗುತ್ತಿದ್ದವು. ದಿವಂಗತರದು ಒಂದೇ ಮಾತು. ’ನಾನು ನನ್ನ ಜೀವನದಲ್ಲಿ ಏನೆಲ್ಲಾ ಮಾಡಿದ್ದೇನೆ. ನಿಮಗಾಗಿ ಆಸ್ತಿ ಪಾಸ್ತಿ ಮಾಡಿಟ್ಟಿದ್ದೇನೆ. ಯಾವುದನ್ನೂ ಹಾಳು ಮಾಡಿಲ್ಲ. ಏನೂ ವಾರಕ್ಕೋ ತಿಂಗಳಿಗೋ ಒಮ್ಮೆ ಕುಡಿದರೆ ಅದಕ್ಕೂ ಅಡ್ಡಿ ಮಾಡುತ್ತೀರಲ್ಲ’ ಎನ್ನುತ್ತಿದ್ದರು.
ಆದರೆ ಮೊನ್ನೆ ಸಾಯುವ ಮೊದಲು ನಡೆದ ಘಟೆನಗಳು ಮಾತ್ರ ಸ್ವಲ್ಪ ಭಯಂಕರವಾಗಿಯೇ ಇದ್ದವು. ಬಯಲು ಸೀಮೆಯಲ್ಲಿ ಯುಗಾದಿ ಕಳೆಯಿತೆಂದರೆ ಗ್ರಾಮದೇವತೆಗಳ ಜಾತ್ರೆಗಳು ಪ್ರಾರಂಭವಾಗಿಬಿಡುತ್ತವೆ. ಒಂದೊಂದು ಊರಿನಲ್ಲಿ ಒಂದೊಂದು ದಿವಸ ಜಾತ್ರೆ, ಬಲಿ ಎಂದು ಭರ್ಜರಿ ಊಟ ಇರುತ್ತದೆ. ಇತ್ತೀಚಿಗೆ ಬಂದವರಿಗೆ ಕುಡಿಯುವುದಕ್ಕೆ ಕೊಡುವುದು ಹಳ್ಳಿಗಳಲ್ಲಿ, ಸ್ವಲ್ಪ ಮುಂದುವರೆದ ಮನೆಗಳವರಲ್ಲಿ ಫ್ಯಾಷನ್ನಾಗಿಬಿಟ್ಟಿದೆ. ಅಂತಹುದೇ ಒಂದು ಊರಿನಲ್ಲಿ ಒಂದು ಜಾತ್ರೆ. ದಿವಂಗತರ ಸ್ನೇಹಿತರ ಮನೆಯಲ್ಲಿ ಹತ್ತಾರು ಕುರಿ ಕೋಳಿ ಕಡಿದು ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಯಥಾಪ್ರಕಾರ ಹಲವಾರು ಸ್ನೇಹಿತರೊಂದಿಗೆ ದಿವಂಗತರೂ ಊಟಕ್ಕೆ ಹೋಗಿದ್ದಾರೆ. ಊಟಕ್ಕೆ ಮೊದಲು ನಡೆದ ತೀರ್ಥಸಮಾರಾಧನೆ ಜೋರಾಗಿಯೇ ಇತ್ತು. ನೆಂಚಿಕೊಳ್ಳಲು ಕೋಳಿ ಮಾಸದ ತುಂಡು. ಹೊತ್ತು ಕಳೆದಿದ್ದೇ ಗೊತ್ತಾಗಿಲ್ಲ. ದಿವಂಗತರಂತೂ ಚೆನ್ನಾಗಿಯೇ ಕುಡಿದು ಚಿತ್ತಾಗಿಬಿಟ್ಟಿದ್ದಾರೆ.
ಊಟ ಮಾಡಿದರೋ ಬಿಟ್ಟರೋ. ಯಾರದೋ ಬೈಕ್ ಹತ್ತಿಕೊಂಡು ತಮ್ಮ ಊರಿನ ಕಡೆ ಹೊರಟಿದ್ದಾರೆ. ಬೈಕ್ ಓಡಿಸುತ್ತಿದ್ದವನೂ ಕುಡಿದಿದ್ದವನೇ ಆದರೂ ಇವರಷ್ಟು ಚಿತ್ತಾಗಿರಲಿಲ್ಲ. ಕತ್ತಲಲ್ಲಿ ಹಿಂದೆ ಕುಳಿತಿದ್ದ ಇವರು ಬಿದ್ದು ಹೋದದ್ದೂ ಬೈಕ್ ಓಡಿಸುತ್ತಿದ್ದವನಿಗೆ ಗೊತ್ತಾಗಲೇ ಇಲ್ಲ. ಇವರು ಹಿಂದೆ ಕುಳಿತಿದ್ದು ಅವನಿಗೇ ಮರತೇ ಹೋಗಿತ್ತು. ಸುಮ್ಮನೆ ಮನೆಗೆ ಹೋಗಿ ಮಲಗಿಬಿಟ್ಟ. ಇತ್ತ ಬಿದ್ದ ಇವರ ಮುಖವೆಲ್ಲಾ ಜಜ್ಜಿ ಹೋಗಿತ್ತು. ಹಲ್ಲುಗಳು ಮುರಿದು ಹೋಗಿದ್ದವು. ಬೆಳಿಗ್ಗೆ ಇವರಿಗೆ ಎಚ್ಚರವಾಗಿ ತಾನು ಎಲ್ಲಿ ಬಿದ್ದಿದ್ದೇನೆ ಎಂದು ಅರಿವಾಗುವಷ್ಟರಲ್ಲಿ ಊರವರಿಗೆಲ್ಲಾ ಸುದ್ದಿ ತಿಳಿದುಹೋಗಿತ್ತು. ಮಕ್ಕಳು ಅಪ್ಪ ಮನೆಗೆ ಬರುವುದನ್ನೇ ಕಾಯುತ್ತಿದ್ದರು. ಬಂದ ತಕ್ಷಣ ತರಾಟೆಗೆ ತೆಗೆದುಕೊಳ್ಳುವುದು ಅವರ ಉದ್ದೇಶ. ಆದರೆ ಅಪ್ಪನಿಗೆ ಆಗಲೇ ತನ್ನ ತಪ್ಪಿನ ಅರಿವಾಗಿತ್ತು. ಊರವರ ಕಣ್ಣಲ್ಲಿ ತಾನು ಸಣ್ಣವನಾಗಿಬಿಟ್ಟೆ ನನ್ನ ಹೆಂಡತಿ ಮಕ್ಕಳಿಗೆ ಇದರಿಂದ ಅವಮಾನವಾಗುತ್ತದೆ ಎಂದೆಲ್ಲಾ ಅನ್ನಿಸಿತೋ ಏನೋ? ಮನೆಗೆ ಹೋಗಲೇ ಇಲ್ಲ. ತನ್ನ ಬಳಿ ಬಂದವರ ಕಣ್ಣು ತಪ್ಪಿಸಿ ಮರೆಯಾಗಿಬಿಟ್ಟರು.
ಒಂದು ದಿನ ಕಳೆಯಿತು. ಮಕ್ಕಳಿಗೆ ಗಾಬರಿಯಾಗಿ ತಮಗೆ ತಿಳಿದ ನೆಂಟರಿಷ್ಟರ, ಸ್ನೇಹಿತರ ಹಾಗೂ ಅಪ್ಪ ಹೋಗುತ್ತಿದ್ದ ಜಾಗವನ್ನೆಲ್ಲಾ ಹುಡಕಲಾರಂಭಿಸಿದರು. ಸಂಜೆಯ ವೇಳೆಗೆ ಕೊಟ್ಟಿಗೆಯ ಕಡೆಯಿಂದ ಏನೋ ದುರ್ವಾಸನೆ ಬರುತ್ತಿದೆ ಎಂದು ಅವರ ಹೆಂಡತಿಗೆ ಮೊದಲು ಗೊತ್ತಾಯಿತು. ಕೊಟ್ಟಿಗೆ ಬಾಗಿಲು ತೆಗೆದೇ ಇತ್ತು. ವಾಸನೆಯ ಮೂಲ ಕೊಟ್ಟಿಗೆ ಅಟ್ಟ ಎಂಬುದು ಖಚಿತವಾಯಿತು. ಮನೆಯಲ್ಲಿದ್ದ ಸೊಸೆಯರಿಗೆ ತಿಳಿಸಿ, ಅಪ್ಪನನ್ನು ಹುಡುಕಿಕೊಂಡು ಹೋಗಿದ್ದ ಮಕ್ಕಳಿಗೆ ಪೋನ್ ಮಾಡಿಸಿ ಕರೆಸಿಕೊಂಡರು. ಮಕ್ಕಳು ಸ್ವಲ್ಪ ಭಯದಿಂದಲೇ ಅಕ್ಕಪಕ್ಕದವರ ಮನೆಯವರನ್ನು ಸೇರಿಸಿಕೊಂಡು ಕೊಟ್ಟಿಗೆಯ ಅಟ್ಟಕ್ಕೆ ಹತ್ತಿ ನೋಡಿದರೆ ಅಪ್ಪ ಸತ್ತು ಹೆಣವಾಗಿದ್ದ. ವಿಷದ ಬಾಟಲಿ ಹತ್ತಿರದಲ್ಲೇ ಬಿದ್ದಿತ್ತು!
ವಿಷ ಅವರನ್ನು ಒಂದೇ ಬಾರಿಗೆ ಕೊಂದುಹಾಕಿತ್ತು. ಆದರೆ ಕುಡಿತ ಅವರನ್ನು ಎಂದೋ ಬಲಿತೆಗೆದುಕೊಂಡುಬಿಟ್ಟಿತ್ತು!

[ಈ ಮೇಲಿನ ಘಟನೆ ನಡೆದಾಗ ನನ್ನ ತಂದೆ, ಹಿಂದೆ ನಡೆದ ಒಂದು ಘಟನೆಯನ್ನು ನನಗೆ ಹೇಳಿದರು. ಈ ಕುಡಿತದ ಕಾರಣವಾಗಿ ನನ್ನ ಹಳ್ಳಿಗಳಲ್ಲಿ ಅನಾಹುತಗಳಾದ ಇನ್ನೊಂದಿಷ್ಟು ಘಟನೆಗಳು ಮನಸ್ಸನ್ನು ಕೊರೆಯುತ್ತಿವೆ. ಅವುಗಳ ಬಗ್ಗೆಯೂ ಬರೆಯಬೇಕೆನ್ನಿಸುತ್ತಿದೆ. ಒಳಗಿನ ಒತ್ತಡ ಕೆಲಸ ಮಾಡಿದಾಗ, ಖಂಡಿತಾ ಬರೆಯುತ್ತೇನೆ!]
ಕುಡಿತದಿಂದ ಅನಾಹುತ ಸೃಷ್ಟಿಸಿದ ಇಬ್ಬರು ವ್ಯಕ್ತಿಗಳ ಬಗ್ಗೆ ಈಗಾಗಲೇ ಬರೆದಿದ್ದೇನೆ. ಅವುಗಳ ಲಿಂಕ್ :
ಶಾಂತಣ್ಣ ಸತ್ತು ಶಾಂತನಾದ!

ಥಣಾರಿಯ ಪ್ರಣಯ ಪ್ರಸಂಗ

Monday, April 25, 2011

ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ

ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ 'ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ' ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆದಿತ್ತು. ನಾನು 13ರಂದು ಮಂಡಿಸಿದ 'ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ' ಎಂಬ ಲೇಖನದ ಪೂರ್ಣಪಾಠ ಇಲ್ಲಿದೆ. 14.4.11ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಪ್ರಬಂಧದ ಬಗ್ಗೆ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಅದರ ಚಿತ್ರವನ್ನು ಇಲ್ಲಿ ಕಾಣಿಸಿರುತ್ತೇನೆ.


ಬೆಂಗಳೂರಿನ ಸ್ಥಳನಾಮಗಳ ಬಗ್ಗೆ ಈಗಾಗಲೇ ಹಲವಾರು ವಿದ್ವಾಂಸರು ಬೆಳಕು ಚೆಲ್ಲಿದ್ದಾರೆ. ’ಬೆಂಗಳೂರು’ ಎಂಬ ಸ್ಥಳನಾಮದ ಬಗೆಗೆ ನಡೆದ ಅಧ್ಯಯನಗಳು ಅಸಂಖ್ಯಾತ. ಬೆಂಗಳೂರು ಪದದ ಪ್ರಾಚೀನರೂಪಗಳು ಯಾವ ಶಾಸನದಲ್ಲಾಗಲೀ, ಸಾಹಿತ್ಯಕೃತಿಯಲ್ಲಾಗಲೀ ಉಲ್ಲೇಖಗೊಂಡಿಲ್ಲ. ಅತ್ಯಂತ ಪ್ರಾಚೀನ ಉಲ್ಲೇಖವಾಗಿ ದೊರೆತಿರುವ ಬೇಗೂರಿನ ಶಾಸನದಲ್ಲಿಯೂ ’ಬೆಂಗಳೂರು’ ಎಂದು ಸ್ಪಷ್ಟವಾಗಿಯೇ ಇದೆ. ಬೆಂದಕಾಳು ಊರು, ಬೆಂದಕಾಡು ಊರು, ಬೆಂಗಾಡು ಊರು, ಬೆಣಚುಕಲ್ಲು ಊರು... ಇತ್ಯಾದಿ ಹಲವಾರು ನಿಷ್ಪತ್ತಿಗಳಲ್ಲಿ, ಊಹೆಗಳಲ್ಲಿ ಯಾವುದನ್ನು ಒಪ್ಪಿಕೊಳ್ಳಬೇಕು ಬಿಡಬೇಕು ಎಂಬುದೇ ಬಹುದೊಡ್ಡ ಸಮಸ್ಯೆಂಇಇಗಿದೆ.
ಸಾಮಾನ್ಯವಾದ ಐತಿಹಾಸಿಕ ಆಕರಗಳನ್ನು ಬಿಟ್ಟು ಸ್ವಲ್ಪ ಭಿನ್ನವಾಗಿ ನೋಡಲೆತ್ನಿಸಿದಾಗ ದೊರೆತಿದ್ದು, ಕೆನೆತ್ ಅಂಡರ್‌ಸನ್ ಉಲ್ಲೇಖಿಸಿರುವ ವಿಷಯ. ’ಇಲ್ಲಿಯ ಜನ ಹೆಚ್ಚಾಗಿ ತಿನ್ನುವ, ರುಚಿಕಟ್ಟಾದ ಹಾಗೂ ತರಾವರಿ ಕಾಳುಗಳಿಂದಲೇ ಈ ಹೆಸರು ಬಂದಿದೆಯೆಂದು ಇಲ್ಲಿನ ಜನ ನಂಬಿದ್ದಾರೆ’ ಎಂಬುದನ್ನು ಅಂಡರ್‌ಸನ್ ದಾಖಲಿಸಿದ್ದಾನೆ. ಬೇಯಿಸಿ ತಿನ್ನಬಹುದಾದ ಕಾಳುಗಳ ದೆಸೆಯಿಂದಿಲೇ ಬೆಂಗಳೂರು ಹೆಸರು ರೂಪಗೊಂಡಿರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಬಹುದು, ಅಷ್ಟೆ.
ಬೃಹದಾಕಾರವಾಗಿ ಹಾಗೂ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸ್ಥಳನಾಮಗಳು ನೆಲೆಗೊಳ್ಳುವುದು, ಬದಲಾಗುವುದು, ಸಂಕ್ಷಿಪ್ತಗೊಳ್ಳುವ ಪ್ರಕ್ರಿಯೆಯೇ ವಿಶೇಷವಾದುದು. ಮೊದಲ ಹಂತದಲ್ಲಿ ಕನ್ನಡ ಅಥವಾ ದ್ರಾವಿಡಮೂಲದಲ್ಲಿದ್ದ ಹೆಸರುಗಳು, ಸಂಸ್ಕೃತೀಕರಣಗುಳ್ಳುತ್ತಿದ್ದವು. ನಂತರದಲ್ಲಿ ಕನ್ನಡ ಹಾಗೂ ಸಂಸ್ಕೃತ ಭಾಷಾಮೂಲದಿಂದ ಇಂಗ್ಲಿಷ್ ಭಾಷೆಗೆ, ಇಂಗ್ಲಿಷ್ ಭಾಷೆಯಿಂದ ಇಂಗ್ಲಿಷ್ ಭಾಷೆಯ ಸಂಕ್ಷಿಪ್ತರೂಪದೆಡೆಗೆ ಬದಲಾಗಿರುವುದನ್ನು ಕಾಣಬಹುದು. ಮತ್ತೊಂದು ಬೆಳವಣಿಗೆಯೆಂದರೆ ಇಂಗ್ಲಿಷ್ ಭಾಷೆಯಿಂದ ಮತ್ತೆ ಭಾರತೀಯ ಹೆಸರುಗಳನ್ನು ಪಡೆದಿರುವುದನ್ನು ನೋಡಬಹುದು. ಭಾರತೀಯ ಹೆಸರುಗಳನ್ನು ಸಂಕ್ಷಿಪ್ತಗೊಳಿಸಿರುವುದೂ ಉಂಟು.
ಕೆಲವು ಉದಾಹರಣೆಗಳ ಮೂಲಕ ಈ ಬದಲಾಗುವ ಪ್ರವೃತ್ತಿಯನ್ನು ಹೆಚ್ಚು ಮನನ ಮಾಡಿಕೊಳ್ಳಬಹುದು.
ಮೂಲ ಹೆಸರುಗಳ ನಿರಾಕರಣೆಯ ಪ್ರವೃತ್ತಿ
ಬಸವನಹಳ್ಳ>ಬಸವನಪುರ>ಬಸವಣ್ಣನಗುಡಿ>ಬಸವನಗುಡಿ>ಬುಲ್‌ಟೆಂಪಲ್
ಬಸವನಹಳ್ಳದ ಪಕ್ಕದಲ್ಲಿದ್ದ ಊರು ಬಸವನಹಳ್ಳಿ. ಬಹುಶಃ ಅಲ್ಲಿ ಬಸವಣ್ಣನ ದೇಗುಲ ಬಂದ ಮೇಲೆ ಬಸವಣ್ಣನಗುಡಿ ಆಗಿತ್ತು. ನಗರೀಕರಣಕ್ಕೆ ಒಳಗಾಗಿ ಬಸವನಪುರ ಎಂದು ಬದಲಾಯಿತು. ಈಗ ಬಸವನಗುಡಿ ಎಂದಾಗಿದೆ. ಆದರೆ ಬಸವನಗುಡಿ ರಸ್ತೆ ಎಂಬುದು ಮಾತ್ರ ’ಬುಲ್‌ಟೆಂಪಲ್ ರೋಡ್’, ’ಬುಲ್‌ಟೆಂಪಲ್ ರಸ್ತೆ’ ಎಂದು ಬದಲಾಗಿದೆ.
ಜಯನಗರ ತಾಯಪ್ಪನಹಳ್ಳಿ ಬ್ಲಾಕ್>ಜಯನಗರ ಟಿ ಬ್ಲಾಕ್
ಪ್ರಸಿದ್ಧಿ ಪಡೆಯುತ್ತಿದ್ದ ಜಯನಗರ ಬಡಾವಣೆಗಳಿಗೆ ಆಧುನಿಕವಾಗಿ ಫರ್ಟ್ಸ್ಟ್ ಬ್ಲಾಕ್, ಸೆಂಕೆಂಡ್ ಬ್ಲಾಕ್ ಎಂದು ಹೆಸರು ಕೊಡುವುದನ್ನು ತಾಯಪ್ಪನಹಳ್ಳಿಯ ಜನ ವಿರೋಧಿಸುತ್ತಾರೆ. ಅವರನ್ನು ಸಮಾಧಾನ ಮಾಡಲೋ ಎಂಬಂತೆ, ತಾಯಪ್ಪನಹಳ್ಳಿಯ ಆರಂಭದ ಅಕ್ಷರ ’ಟಿ’ಯನ್ನು ಬಳಸಿ ಜಯನಗರ ಟಿ ಬ್ಲಾಕ್ ಎಂದು ಹೆಸರು ನೀಡಲಾಗಿದೆ.
ಭೈರಸಂದ್ರ ತಾವರೆಕೆರೆ ಮಡಿವಾಳ ಲೇಔಟ್>ಬಿ.ಟಿ.ಎಂ.ಲೇಔಟ್
ಈ ಮೂರು ಹಳ್ಳಿಗಳನ್ನು ಒಳಗೊಂಡಂತೆ ರೂಪುಗೊಂಡ ಬಡವಾಣೆ ಇಂದಿನ ಬಿ.ಟಿ.ಎಂ. ಲೇಔಟ್. ಸುಂದರವೂ ಆಕರ್ಷಕವೂ ಆದ ಮೂಲದ ಹೆಸರುಗಳನ್ನು ಮರೆಮಾಚಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ತಾರಾಮಂಡಲ್‌ಪೇಟೆ > ಕಬ್ಬನ್‌ಪೇಟೆ
ಟಿಪ್ಪುವಿನ ಕಾಲದಲ್ಲಿ ಆಯುಧ ಕಾರ್ಖಾನೆಯಿದ್ದ ಜಾಗದಲ್ಲಿ ತಲೆಯೆತ್ತಿದ್ದ ಜನವಸತಿ ಪ್ರದೇಶಕ್ಕೆ ತಾರಾಮಂಡಲ್‌ಪೇಟೆ ಎಂದು ಹೆಸರಾಗಿತ್ತು. ಕ್ಷಿಪಣಿಗಳು ಅಲ್ಲಿ ಸಿದ್ಧಗೊಂಡು ಪರಿಕ್ಷೆಗೆ ಒಳಪಡುತ್ತಿದ್ದವು ಎನ್ನಲಾಗುತ್ತಿದೆ. ಅವುಗಳನ್ನು ಪರೀಕ್ಷಿಸುವಾಗ ಆಕಾಶದಲ್ಲಿ ಉಂಟಾಗುತ್ತಿದ್ದ ಬೆಳಕಿನ ವರ್ಣವೈಭವವನ್ನು ಸೂಚಿಸುವಂತೆ ತಾರಾಮಂಡಲ್‌ಪೇಟೆ ಎಂದಾಗಿದ್ದಿರಬೇಕು. ನಂತರ ಮಾರ್ಕ್ ಕಬ್ಬನ್ ಸ್ಮರಣಾರ್ಥ ಕಬ್ಬನ್ ಪೇಟೆ ಎಂದು ಹೆಸರು ಬದಲಾಯಿಸಲಾಯಿತು. ಆದರೂ ಈಗಲೂ ಅಲ್ಲಿಯ ಮುಸಲ್ಮಾನರು ತಾರಾಮಂಡಲ್ ಪೇಟೆ ಎಂದೇ ಕರೆಯುತ್ತಾರೆ. ಅಲ್ಲಿರುವ ಮಸೀದಿಗೆ ತಾರಾಮಂಡಲ್‌ಪೇಟೆ ಮಸೀದೆ ಎಂದೇ ಹೆಸರಾಗಿದೆ.
ಶಾಸನದಲ್ಲಿ ದೇಶಿಪಟ್ಟಣಮ್, ದೊಂಬಲೂರು, ತೊಂಬಲೂರು, ತೊಮ್ಮಲೂರು ಎಂದೆಲ್ಲಾ ಕಾಣಿಸಿಕೊಂಡು ದೊಮ್ಮಲೂರು ಎಂದಾಗಿರುವ ಬಡಾವಣೆಗೆ ಹಿಂದೆ ಭಗತ್‌ಸಿಂಗ್‌ನಗರ ಎಂದು ಹೆಸರು ಇಡುವ ಪ್ರಯತ್ನ ನಡೆದು, ಕೆಲವು ಹೋರಾಟಗಾರರ ವಿರೋಧದಿಂದಾಗಿ ದೊಮ್ಮಲೂರು ಎಂದೇ ಉಳಿದದೆ. ಆದರೆ ಈ ವಿರೋಧ ದೀವಟಿಗೆ ರಾಮನಹಳ್ಳಿ ದೀಪಾಂಜಲಿನಗರವಾದಾಗ ವ್ಯಕ್ತವಾಗಿದ್ದರೆ, ದೀವಟಿಗೆ ಎಂಬ ಅಚ್ಚಗನ್ನಡದ ಪದಕ್ಕೊಂದು ಶಾಶ್ವತ ನೆಲೆ ಸಿಕ್ಕುತ್ತಿತ್ತು.
ಮೂಲಹೆಸರುಗಳನ್ನು ಮರೆಸಿ ಹೆಚ್ಚಾಗಿ ಆಂಗ್ಲ ಪದಗಳ ವ್ಯಕ್ತಿಗಳ ಹೆಸರುಗಳನ್ನು ಮೆರೆಸುವ ಪ್ರವೃತ್ತಿ ಮೇಲಿನ ಉದಾಹರಣೆಗಳದ್ದಾದರೆ, ಕೆಲವು ಸ್ಥಳಗಳಲ್ಲಿ ಅದಕ್ಕೆ ವಿರುದ್ಧವಾದ ಪ್ರವೃತ್ತಿಯನ್ನೂ ಕಾಣಬಹುದಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಖಾಸಗಿ ಶಿಕ್ಷಕರಾಗಿದ್ದು, ಮುಂದೆ ಮೈಸೂರು ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸಿದ ಸ್ಟೂವರ್ಟ್ ಫ್ರೇಜರ್ ಸ್ಮರಣಾರ್ಥ ಫ್ರೇಜರ್‌ಟೌನ್ ಅಸ್ತಿತ್ವಕ್ಕೆ ಬಂದಿತ್ತು. ಈಗ ಅದನ್ನು ಪುಲಕೇಶಿನಗರ ಎಂದು ಮರುನಾಮಕರಣ ಮಾಡಲಾಗಿದೆ.
ರೈಲ್ವೆ ಪ್ಯಾರಲಲ್ ಕಾಲೋನಿ ಎಂಬುದು ಸಂಕ್ಷಿಪ್ತಗೊಂಡು ಆರ್.ಪಿ.ಸಿ.ಲೇಔಟ್ ಆಗಿತ್ತು. ಈಗ ಹಂಪಿನಗರವಾಗಿದೆ.
ಒಂದು ಕಾಲದಲ್ಲಿ ಸೌತ್ ಪೆರೇಡ್ ರಸ್ತೆಯಾಗಿದ್ದ ಇಂದಿನ ಎಂ.ಜಿ.ರೋಡ್ನೆಂದು ಸಂಕ್ಷಿಪ್ತವಾಘುವ ಮುನ್ನ ಮಹಾತ್ಮಗಾಂಧಿ ರಸ್ತೆ ಎಂದೇ ಕರೆಸಿಕೊಳ್ಳುತ್ತಿತ್ತು.
ಸಂಸ್ಕೃತೀಕರಣಗೊಳಿಸುವ ಪ್ರವೃತ್ತಿ
ಬಸವನಹಳ್ಳ>ವೃಷಭಾವತಿ
ನಂಜನಗೂಡು ಗರಳಪುರಿಯಾದಂತೆ, ಹುಲ್ಲಹಳ್ಳಿ ತೃಣಪುರಿಯಾದಂತೆ ಬಸವನಹಳ್ಳ ವೃಷಭಾವತಿ ಆಗಿರುವುದನ್ನು ಕಾಣಬಹುದು.
ದೀವಟಿಗೆ ರಾಮನಹಳ್ಳಿ>ದೀಪಾಂಜಲಿನಗರ
ದೀವಟಿಗೆ ಎಂಬ ಅಚ್ಚಗನ್ನಡದ ಪದವನ್ನು, ಅದರ ಮುಂದಿದ್ದ ರಾಮನಹಳ್ಳಿಯನ್ನು ನಿರಾಕರಿಸಿ ದೀಪಾಂಜಲಿನಗರ ಎಂದು ಸಂಸ್ಕೃತೀಕರಣಗೊಳಿಸಿರುವುದು ಸ್ಪಷ್ಟವಾಗಿದೆ.
ಆಂಗ್ಲೀಕರಣಗೊಳಿಸುವ ಪ್ರವೃತ್ತಿ
ಮದರಾಸಿನಿಂದ ಭೂಮಿ ಅಳತೆ ಮಾಡಲು ಬಂದಿದ್ದ ಮೋಜಿಣಿದಾರರುಗಳಿಗೆ ಬಸವನಗುಡಿಯಲ್ಲಿ ನಿವೇಶನ ನೀಡಲಾಯಿತು. ಆ ಭಾಗದ ರಸ್ತೆಗೆ ಬಾಂದುನವರ ರಸ್ತೆ ಎಂದು ಹೆಸರು ನೀಡಲಾಯಿತು. ಮುಂದೆ ಅದು ಸರ್ವೆಯರ‍್ಸ್ ಸ್ಟ್ರೀಟ್ ಎಂದಾಯಿತು. ಬಸವನಗುಡಿ ರಸ್ತೆ ಬುಲ್‌ಟೆಂಪಲ್ ರೋಡ್, ಕೆ.ಆರ್.ಮಾರುಕಟ್ಟೆ ಕೆ.ಆರ್.ಮಾರ್ಕೆಟ್ ಎಂದು ಬದಲಾಗಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹಹುದಾಗಿದೆ.
ವ್ಯಕ್ತಿಗಳ ಹೆಸರುಗಳನ್ನು ಇಡುವ ಪ್ರವೃತ್ತಿ
ಇದು ಬೆಂಗಳೂರಿನಲ್ಲಿ ಹಿಂದಿನಿಂದಲೂ ವ್ಯಾಪಕವಾಗಿ ನಡೆದುಕೊಂಡು ಬಂದಿರುವುದನ್ನು ನೋಡಬಹುದಾಗಿದೆ. ಅದು ಇನ್ನೂ ನಿಂತಿಲ್ಲ! ಅದರಲ್ಲಿ ಕೆಲವು ವಿಶೇಷವಾದವುಗಳನ್ನು ಇಲ್ಲಿ ಗಮನಿಸಲಾಗುವುದು.
ವ್ಯಕ್ತಿಯ ಸ್ಮರಣಾರ್ಥ ಇಟ್ಟ ಹೆಸರುಗಳು
೧೯೩೪ರಲ್ಲಿ ಬೆಂಗಳೂರಿಗೆ ಬಂದಿದ್ದ ಮಹಾತ್ಮಗಾಂಧಿಯವರು, ಬಸವನಗುಡಿಯ ಅಂಗಡಿಬೀದಿಗೆ ಬಂದು ಅಲ್ಲಿ ವಾಚನಾಲಯವೊಂದನ್ನು ಉದ್ಘಾಟಿಸಿದ್ದರು. ಅದರ ಸ್ಮರಣಾರ್ಥ ಆ ಅಂಗಡಿ ಬೀದಿಗೆ ಗಾಂಧಿಬಜಾರ್ ಎಂದೇ ಹೆಸರಾಯಿತು.
ಪ್ರಥಮ ಭಾರತೀಯ ಗೌರ‍್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರ ಸ್ಮರಣಾರ್ಥ ಬಡಾವಣೆಯೊಂದಕ್ಕೆ ಇಟ್ಟ ಹೆಸರು ರಾಜಾಜಿನಗರ.
೧೯೬೦ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ೬೫ನೆಯ ಅಧಿವೇಶನ ಬೆಂಗಳೂರಿನಲ್ಲಿ ನಡೆದಾಗ, ಅಧಿವೇಶನ ನಡೆದ ಸ್ಥಳಕ್ಕೆ  ಗಾಂಧೀವಾದಿ, ಸ್ವತಂತ್ರ ಹೋರಾಟಗಾರ ಕನ್ನಡಿಗ ಕಾರ್ನಾಡು ಸದಾಶಿವರಾಯರ ಹೆಸರನ್ನು ಇಡಲಾಗಿತ್ತು. ಆ ಸ್ಥಳದಲ್ಲಿ ಅಲ್ಲಿ ಬಡವಾಣೆಯಾದಾಗ, ಅವರ ಸ್ಮರಣಾರ್ಥ ಸದಾಶಿವನಗರ ಎಂದು ಹೆಸರಿಸಲಾಯಿತು.
೧೮೯೪ರಷ್ಟು ಹಿಂದೆಯೇ ರಚನೆಯಾದ ಬೆಂಗಳೂರಿನ ಪ್ರಥಮ ಬಡಾವಣೆಗೆ ೨೮.೧೨.೧೮೯೪ರಂದು ಕಲ್ಕತ್ತದಲ್ಲಿ ನಿಧನರಾದ ಚಾಮರಾಜ ಒಡೆಯರ ಸ್ಮರಣಾರ್ಥ ಚಾಮರಾಜೇಂದ್ರ ಪೇಟೆ ಎಂದು ಹೆಸರಿಡಲಾಯಿತು. ಅದೀಗ ಚಾಮರಾಜಪೇಟೆ ಎಂದಾಗಿದೆ.
ಜಯಚಾಮರಾಜೇಂದ್ರ ಒಡೆಯರವರ ಸ್ಮರಾಣರ್ಥ ಜಯನಗರ, ರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿಯವರ ಸ್ಮರಣಾರ್ಥ ಗಿರಿನಗರ ಹೆಸರುಗಳು ರೂಪುಗೊಂಡಿವೆ.
ವ್ಯಕ್ತಿಯ ಹೆಸರುಗಳು ಸಂಕ್ಷಿಪ್ತಗೊಳ್ಳುವ ಪ್ರವೃತ್ತಿ
ಜಯಪ್ರಕಾಶ ನಾರಾಯಣ ನಗರ > ಜೆ.ಪಿ.ನಗರ
ಜಯಚಾಮರಾಜೇಂದ್ರನಗರ > ಜೆ.ಸಿ.ನಗರ
ಕೃಷ್ಣರಾಜೇಂದ್ರನಗರ > ಕೆ.ಆರ್.ನಗರ
ಕೃಷ್ಣರಾಜೇಂದ್ರ ರಸ್ತೆ > ಕೆ.ಆರ್.ರೋಡ್
ಸಿಲ್ವರ್ ಜ್ಯೂಬಿಲಿ ಪಾರ್ಕ್ ರೋಡ್ > ಎಸ್.ಜೆ.ಪಿ.ರೋಡ್
ಕೃಷ್ಣರಾಜೇಂದ್ರ ಮಾರುಕಟ್ಟೆ > ಕೆ.ಆರ್.ಮಾರ್ಕೆಟ್
ನರಸಿಂಹರಾಜ ಕಾಲೋನಿ > ಎನ್.ಆರ್.ಕಾಲೋನಿ
ರವೀಂದ್ರನಾಥ ಟ್ಯಾಗೋರ್ ನಗರ > ಆರ್.ಟಿ.ನಗರ
ತ್ಯಾಗರಾಜನಗರ > ಟಿ.ಆರ್.ನಗರ
ವಿಶ್ವೇಶ್ವರಪುರಂ > ವಿವಿಪುರಂ
ಮೊದಲಿದ್ದ ವ್ಯಕ್ತಿಯ ಹೆಸರುಗಳನ್ನು ನಿರಾಕರಿಸಿ ಬೇರೊಬ್ಬ ವ್ಯಕ್ತಿಯ ಹೆಸರನ್ನು ನೀಡುವ ಪ್ರವೃತ್ತಿ
ದಿಗ್ವಿಜಯ ಮುಗಿಸಿದ ಭರತ ಶಾಸನ ಕೆತ್ತಿಸಲು ಹೋದಾಗ ಪರ್ವತ ಆಗಲೇ ವಿಜಯಶಾಸನಗಳಿಂದ ತುಂಬಿಹೋಗಿರುತ್ತದೆ. ಆಗ ಭರತ ಅದರಲ್ಲಿ ಒಂದಷ್ಟನ್ನು ಅಳಿಸಿ ತನ್ನ ವಿಜಯಶಾಸನವನ್ನು ಹಾಕಿಸುತ್ತಾನಂತೆ. ಹಾಗೆ, ಆಯಾ ಕಾಲದ ವ್ಯಕ್ತಿಗಳ ಗೌರವಾರ್ಥ ಇಟ್ಟ ಹೆಸರುಗಳ ಬದಲಿಗೆ, ವರ್ತಮಾನದ ವ್ಯಕ್ತಿಯ ಹೆಸರನ್ನಿಡುವ ಪ್ರವೃತ್ತಿ ಇದಾಗಿದೆ.
ಭಾರತದ ವೈಸ್‌ರಾಯ್ ಹಾಗೂ ಗವರ್ನರ್ ಜನರಲ್ ಆಗಿದ್ದ ಚಾರ್ಲ್ಸ್ ಬ್ಯಾರನ್ ಹಾರ್ಡಿಂಜ್ ೧೯೧೩ರ ನವಂಬರ್‌ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ನೆನಪಿಗಾಗಿ ಹಾರ್ಡಿಂಜ್ ರಸ್ತೆ ಎಂದು ಹೆಸರಿಟ್ಟಿದ್ದರು. ಮುಂದೆ ಆ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡ ಬಂದಮೇಲೆ, ಅದು ಪಂಪಮಹಾಕವಿ ರಸ್ತೆ ಎಂದು ಬದಲಾಗಿದೆ.
೧೭೯೧ ಮತ್ತು ೧೭೯೯ರಲ್ಲಿ ನಡೆದ ಮೈಸೂರು ಯುದ್ಧಗಳಲ್ಲಿ ಬ್ರಿಟಿಷರ್ ಪರವಾಗಿ ಹೋರಾಡಿ ಮಡಿದ ೪೨೭ ಜನ ಸೈನಿಕರಗೆ ಶ್ರದ್ಧಾಂಜಲಿ ಪೂರ್ವಕವಾಗಿ, ಯುದ್ಧನಡೆದ ಸ್ಥಳದಲ್ಲಿಯೇ ೩೫ ಅಡಿ ಎತ್ತರದ ಸ್ತಂಭವನ್ನು ನಿರ್ಮಾಣ ಮಾಡಿ, ಸುತ್ತಲೂ ಶಿಲಾಶಾಸನವನ್ನು ಹಾಕಿಸಿ ಸೆನೋಟಾಪ್ ನಿರ್ಮಿಸಲಾಗಿರುತ್ತದೆ. ಅದರ ಎದುರಿಗೆ ರಸ್ತೆಯನ್ನು ನಿರ್ಮಿಸಿ ಸೆನೋಟಾಪ್ ರಸ್ತೆ ಎಂದು ನಾಮಕರಣ ಮಾಡಲಾಗಿರುತ್ತದೆ. ೧೯೬೪ರಲ್ಲಿ ಈ ಸ್ಮಾರಕವನ್ನು ನೆಲಸಮಗೊಳಿಸಿದಾಗ ರಸ್ತೆಗೆ ನೃಪತುಂಗ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಭಾರತದ ವೈಸ್‌ರಾಯ್ ಹಾಗೂ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಇರ್ವಿನ್ ಅವರು ೧೯೨೭ರಲ್ಲಿ ಬೆಂಗಳೂರಿಗೆ ಬಂದಿದ್ದರ ಸ್ಮರಣಾರ್ಥ ಸ್ಕೌಟ್ ಕಚೇರಿಯ ಬಳಿಯ ವೃತ್ತಕ್ಕೆ ಇರ್ವಿನ್ ಸರ್ಕಲ್ ಎಂದು ನಾಮಕರಣ ಮಾಡಲಾಗಿತ್ತು. ಮುಂದೆ ಸ್ಕೌಟ್ ಸಂಸ್ಥೆಗೆ ವಿಶೇಷ ಸೇವೆ ಸಲ್ಲಿಸಿದ ಪ್ರೊ.ಪಿ.ಶಿವಶಂಕರ್ ಅವರ ಹೆಸರನ್ನು ಇಡಲಾಯಿತು.
ಈ ಹೆಸರುಗಳ ಗೊಡವೆಯೇ ಬೇಡ ಎಂದು ಇದ್ದ ಹೆಸರುಗಳನ್ನು ನಿರಾಕರಿಸಿ ಕೇವಲ ಸಂಖ್ಯೆಗಳಿಗೆ ಜೋತುಬಿದ್ದಿರುವ ಪ್ರವೃತ್ತಿಯೂ ಇದೆ. ಉದಾಹರಣೆಗೆ ಚಾಮರಾಜಪೇಟೆಯ ಆಲ್ಬರ‍್ಟ್ ವಿಕ್ಟರ್ ರಸ್ತೆ, ಆಂಜನೇಯ ದೇವಸ್ಥಾನದ ರಸ್ತೆ, ರಾಮೇಶ್ವರ ಗುಡಿ ರಸ್ತೆ, ಸೆಂಟ್ರಲ್ ಬ್ಯಾಂಕ್ ರಸ್ತೆ ಮತ್ತು ಕೆ.ಪಿ.ಪುಟ್ಟಣಶೆಟ್ಟಿ ರಸ್ತೆ ಎಂಬವುಗಳು ಕ್ರಮವಾಗಿ ಚಾಮರಾಜಪೇಟೆ ಫರ್ಸ್ಟ್ ಮೈನ್, ಸೆಕೆಂಡ್ ಮೈನ್, ಥರ್ಡ್ ಮೈನ್, ಫೋರ್ಥ್ ಮೈನ್ ಮತ್ತು ಫಿಫ್ತ್ ಮೈನ್ ಎಂದು ಬಳಕೆಯಲ್ಲಿರುವುದನ್ನು ನೋಡಬಹುದಾಗಿದೆ.
ಹೊಸ ಹೆಸರು ಕೊಟ್ಟರೂ ಹಳೆಯ ಹೆಸರನ್ನು ಬಿಟ್ಟುಕೊಡದ ಪ್ರವೃತ್ತಿ
೧೮೩೦-೪೦ರ ದಶಕದಲ್ಲಿ ರೆಸಿಡೆನ್ಸಿ ಕಟ್ಟಡಕ್ಕೆ ಅಭಿಮುಖವಾಗಿದ್ದ ರಸ್ತೆಗೆ ರೆಸಿಡೆನ್ಸಿ ರಸ್ತೆ ಎಂದು ಹೆಸರೂ ಚಾಲ್ತಿಗೆ ಬಂದಿತ್ತು. ಇತ್ತೀಚಿಗೆ ಅದಕ್ಕೆ ಜನರಲ್ ಕಾರಿಯಪ್ಪ ರಸ್ತೆ ಎಂದು ಹೆಸರಿಟ್ಟಿದ್ದರೂ, ಜನಮಾನಸದಲ್ಲಿ ರೆಸಿಡೆನ್ಸಿ ರಸ್ತೆಯಾಗಿಯೇ ಉಳಿದದೆ.
ಸೌತ್ ಎಂಡ್ ಸರ್ಕಲ್‌ನಲ್ಲಿ ತೀನಂಶ್ರೀಯವರ ಪ್ರತಿಮೆಯನ್ನೂ ಸ್ಥಾಪಿಸಿ, ವೃತ್ತಕ್ಕೆ ತೀನಂಶ್ರೀ ವೃತ್ತ ಎಂದು ಹೆಸರು ನೀಡಿ ದೊಡ್ಡದಾಗಿ ಫಲಕ ಕೂಡ ಹಾಕಿಸಲಾಗಿದೆ. ಆದರೆ ಈಗಲೂ ಸೌತ್ ಎಂಡ್ ಸರ್ಕಲ್ ಎಂದೇ ಜನಜನಿತವಾಗಿದೆ.
ಸೌತ್ ಎಂಡ್ ವೃತ್ತದಿಂದ ನಾಗಸಂದ್ರ ವೃತ್ತದವರೆಗಿನ ರಸ್ತೆಗೆ, ಅದೇ ರಸ್ತೆಯಲ್ಲಿ ವಾಸವಾಗಿದ್ದ ಶತಾಯುಷಿ ದಿವಂಗತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಅವರ ಸ್ಮರಣಾರ್ಥ ನಿಟ್ಟೂರು ಶ್ರೀನಿವಾಸರಾವ್ ರಸ್ತೆ ಎಂದು ನಾಮಕರಣ ಮಾಡಿದ್ದರೂ, ಸೌತ್ ಎಂಡ್ ರೋಡ್ ಎಂದೇ ಚಾಲ್ತಿಯಲ್ಲಿದೆ.
ಮೇಲಿನ ಮೂರು ಉದಾಹರಣೆಗಳು ತೀರಾ ಇತ್ತೀಚಿನವುಗಳು. ಬಹಳ ಹಿಂದೆಯೇ, ೧೮೭೦-೧೮೭೫ರ ನಡುವೆ ಮೈಸೂರು ರಾಜ್ಯದ ಚೀಫ್ ಕಮಿಷನರ್ ಆಗಿದ್ದ ಸರ್ ರಿಚರ‍್ಡ್ ಮೀಡ್ ಅವರ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದ ಮೀಡ್ಸ್ ಪಾರ್ಕ್ ಇಂದಿನ ಕಬ್ಬನ್ ಪಾರ್ಕ. ಸ್ವತಃ ಮೀಡ್ಸ್ ಅವರೇ ದೀರ್ಘಾವದಿಗೆ ಕಮಿಷನರ್ ಆಗಿ ಜನಪ್ರಿಯಗೊಂಡಿದ್ದ ಸರ್ ಮಾರ್ಕ್ ಕಬ್ಬನ್ ಸ್ಮರಣಾರ್ಥ, ೧೮೭೩ರಲ್ಲಿ ಕಬ್ಬನ್ ಪಾರ್ಕ ಎಂದು ಹೆಸರು ನೀಡುತ್ತಾರೆ. ಅದು ಜನಪ್ರಿಯವಾಗಿದ್ದಾಗಲೇ, ೧೯೨೭ರಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ರಜತ ಪಟ್ಟಬಂಧಮಹೋತ್ಸವ ಸಮಾರಂಭದ ನೆನಪಿಗೋಸ್ಕರ ಕಬ್ಬನ್ ಪಾರ್ಕಿನಲ್ಲಿ, ಅವರ ತಂದೆ ಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ’ಚಾಮರಾಜೇಂದ್ರಪಾರ್ಕ’ ಎಂದು ಮರುನಾಮಕರಣ ಮಾಡಲಾಯಿತು. ಆದರೆ ಇಂದಿಗೂ ಕಬ್ಬನ್ ಪಾರ್ಕ ಎಂದೇ ಜನಪ್ರಿಯವಾಗಿದೆ.
ಇದ್ದ ಹೆಸರನ್ನು ಮರೆಮಾಚಿಸಿ, ತಮಗೆ ಬೇಕಾದ ಹೆಸರನ್ನು ಇಟ್ಟರೂ, ಜನಮಾನಸದಲ್ಲಿ ಬೇರೆ ಇನ್ನಾವುದೋ ಹೆಸರು ನೆಲೆಸಿಬಿಡುತ್ತದೆ. ಅಂತಹ ಉದಾಹರಣೆಯೆಂದರೆ, ಇಂದಿನ ಗೂಡ್ಸ್‌ಷೆಡ್ ರಸ್ತೆ. ಮೊದಲು ಈ ರಸ್ತೆಗೆ ಕೆಮ್ಮಣ್ಣುಗುಂಡಿ ರಸ್ತೆ ಎಂದು ಅಚ್ಚಗನ್ನಡದ ಹೆಸರಿತ್ತು. ೧೯೪೫-೪೬ರಲ್ಲಿ ಆ ರಸ್ತೆಗೆ ಕಾಂಕ್ರೀಟ್ ಹಾಕಲಾಯಿತು. ಅದಕ್ಕೆ ಕಾರಣಕರ್ತರಾಗಿದ್ದ ಡಾ.ಟಿ.ಸಿ.ಎಮ್. ರಾಯನ್ ಅವರ ಸ್ಮರಣಾರ್ಥ ಟಿಸಿಎಮ್ ರಾಯನ್ ರಸ್ತೆ ಎಂದು ನಾಮಕರಣ ಮಾಡಲಾಯಿತು. ಆದರೆ ಇಂದು ಜನಬಳಕೆಯಲ್ಲಿ ಅದು ಗೂಡ್ಸ್‌ಷೆಡ್ ರಸ್ತೆಯೆಂದೇ ಚಿರಪರಿಚಿತವಾಗಿದೆ. ಆಶ್ಚರ್ಯವೆಂದರೆ ರಾಯನ್ ವೃತ್ತ ಎಂಬುದು ಚಾಲ್ತಿಯಲ್ಲಿದೆ.
ಇಂದಿನ ಮೆಜೆಸ್ಟಿಕ್ ಪ್ರದೇಶಕ್ಕೆ ಯಾರೂ ಆ ಹೆಸರು ಇಟ್ಟು ಕರೆಯಲಿಲ್ಲ. ಅಲ್ಲಿದ್ದ ಮೆಜೆಸ್ಟಿಕ್ ಚಿತ್ರಮಂದಿರದ ಅವತ್ತಿನ ಸಾಂಸ್ಕೃತಿಕ ಪ್ರಾಮುಖ್ಯತೆಯ ಫಲವಾಗಿ, ಚಲನಚಿತ್ರ ಪ್ರದರ್ಶನಗಳಿಲ್ಲದ ಕಾಲದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿದ್ದುದರಿಂದ ಸುತ್ತಮುತ್ತಲಿನ ಜನ ’ಮೆಜೆಸ್ಟಿಕ್ಕಿಗೆ ಹೋಗೋಣ’ ಎಂದು ಹೆಚ್ಚಾಗಿ ಬಳಸುತ್ತಿದ್ದುರಿಂದ ’ಮೆಜೆಸ್ಟಿಕ್’ ಎಂಬ ಹೆಸರು ಸಹಜವಾಗಿಯೇ ನಿಂತುಬಿಟ್ಟಿತು. ಇದೇ ಸಾಲಿಗೆ ಸೇರಿಸಬಹುದಾದ ಇನ್ನೊಂದು ಸ್ಥಳನಾಮವೆಂದರೆ ದೊಡ್ಡಣ್ಣ ಹಾಲ್. 
ಬಸ್‌ನಿಲ್ದಾಣಗಳ ಸ್ಥಳನಾಮಗಳು ರೂಪುಗೊಳ್ಳುವುದು ಸಹಜವಾಗಿಯೇ. ಸಿನಿಮಾ ಥಿಯೇಟರ್‌ಗಳಿದ್ದಂತಹ ಸ್ಥಳಗಳು ಬಹುಬೇಗ ಚಾಲ್ತಿಗೆ ಬಂದುಬಿಡುತ್ತವೆ. ಶಾಂತಿ, ಉಮಾ, ನಂದ ಮುಂತಾದವು. ಈಗ ಶಾಂತಿ ಮತ್ತು ನಂದ ಚಿತ್ರ ಮಂದಿರಗಳು ಈಗ ಇಲ್ಲದಿದ್ದರೂ ಅದೇ ಹೆಸರಿನಿಂದ ಕರೆಯುವುದನ್ನು ಕಾಣಬಹುದಾಗಿದೆ. ಕಾಲೇಜು, ಆಸ್ಪತ್ರೆ, ದೇವಸ್ಥಾನಗಳಿದ್ದರೆ ಅವುಗಳ ಹೆಸರಿನಿಂದಲೇ ಕರೆಯುವುದುಂಟು. ನ್ಯಾಷನಲ್ ಕಾಲೇಜು ಸ್ಟಾಪ್, ಗಣೇಶನ ಗುಡಿ ಸ್ಟಾಪ್, ರಾಮ ಮಂದಿರ ಸ್ಟಾಪ್, ನಿಮ್ಹಾನ್ಸ್ ಸ್ಟಾಪ್, ಜಯದೇವ ಸ್ಟಾಪ್ ಇತ್ಯಾದಿ. ಇತ್ತೀಚಿಗೆ ನಮ್ಮ ಕಾಲೇಜಿನ ವಿದ್ಯಾರ್ಥಿಯೊಬ್ಬ ಎಂ.ಟಿ. ಸರ‍್ಕಲ್ ಎಂದು ಹೇಳಿದ. ನಾನು ಕತೂಹಲದಿಂದ ಅದ್ಯಾವದು ಎಂ.ಟಿ.ಸರ‍್ಕಲ್ ಎಂದು ಕೇಳಿದರೆ, ಅದು ’ಮೀಸೆ ತಿಮ್ಮಯ್ಯ ಸರ‍್ಕಲ್’ ಎಂಬುದರ ಸಂಕ್ಷಿಪ್ತ ರೂಪವಾಗಿತ್ತು. ಆದರೆ ಇವುಗಳೀಗೆ ಆಯುಷ್ಯ ಕಡಿಮೆ ಎಂದು ಹೇಳಬಹುದು. ಆದರೆ ಇದೆಲ್ಲವೂ ಸಹಜವಾಗಿ ನಡೆಯುವ ಕ್ರಿಯೆಯಾದ್ದರಿಂದ ಮಹತ್ವದ್ದಾಗುತ್ತದೆ.
ಒಂದು ಸ್ಥಳಕ್ಕೆ ಸ್ಥಳನಾಮ ರೂಪುಗೊಳ್ಳುವುದು ಸಹಜ ಪ್ರಕ್ರಿಯೆ. ಅಲ್ಲಿ ಒಳ್ಳೆಯದು ಕೆಟ್ಟದು ಎಂಬುದರ, ಹಳೆಯದು ಹೊಸದು ಎಂಬುದರ, ತನ್ನದು ಪರಕೀಯರದು ಎಂಬುದರ ವರ್ತಮಾನದ ವಿವೇಚನೆ ಆ ಪ್ರಕ್ರಿಯೆಗೆ ಇರುವುದಿಲ್ಲ. (ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡು, ಊರವರಿಂದ ಬಹಿಷ್ಕೃತನಾಗಿ, ಊರಿನಿಂದ ಹೊರಗೆ ನೆಲೆನಿಂತು, ಅಲ್ಲಿಯೇ ಒಂದು ಊರು ಬೆಳೆಯಲು ಕಾರಣನಾದ ವ್ಯಕ್ತಿಯ ಹೆಸರಿನಿಂದ ಕಳ್ಳಬೋರನಕೊಪ್ಪಲು ಎಂಬ ಊರು ಇಂದೂ ಇದೆ.) ಒಂದು ಸ್ಥಳದ ಹೆಸರುನ್ನು ಬದಲಾಯಿಸುವ ಕ್ರಿಯೆ ಜನಜೀವನದ ಚಲನಶೀಲತೆಯ ಫಲವಾಗಿ ಮೂಡಿದರೆ ಅದು ಚಿರಕಾಲ ನಿಲ್ಲುತ್ತದೆ. ಇಲ್ಲದಿದ್ದರೆ, ಭರತನಂತವರು ಹುಟ್ಟಿ ಇರುವ ಶಾಸನಗಳನ್ನು ಅಳಿಸಿ ಹೊಸ ಶಾಸನ ಬರೆಸುತ್ತಲೇ ಇರುತ್ತಾರೆ. ಇರುವುದನ್ನು ಬದಲಾಯಿಸುವ ಪ್ರವೃತ್ತಿ ಸಲ್ಲದು. ಅದರಿಂದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕೊಂಡಿಗಳು ಕಳಚಿಹೋಗುತ್ತವೆ. ಅದರಿಂದ ನಷ್ಟವಾಗುವುದು ಇತಿಹಾಸದಲ್ಲಿ ಆಗಿ ಹೋದ ವ್ಯಕ್ತಿ ಅಥವಾ ಘಟನೆಗಳಿಗಲ್ಲ; ಬದಲಾಗಿ ವರ್ತಮಾನದಲ್ಲಿ ಬದುಕುತ್ತಿರುವ ನಮಗೆ ಹಾಗೂ ನಾಡಿನ ಸಾಂಸ್ಕೃತಿಕ ಭವಿಷ್ಯಕ್ಕೆ ಹಾನಿಯಾಗುತ್ತದೆ.

Monday, April 18, 2011

ಸಾವು ಎಂಬ ಮಂತ್ರವಾದಿಯು ಬರಲು... ... ...

‘ನಿಮಗೆ ಪೋನಿದೆಯಂತೆ’ ಎಂದ ಮಿತ್ರನಿಗೆ ಜಾಡಿಸಿ ಒದಿಯಬೇಕೆನಿಸಿತು. ಆಗ ತಾನೆ ಊಟ ಮುಗಿಸಿ, ಮೂರು ಮಹಡಿ ಹತ್ತಿ ಬಂದು ಕುಳಿತಿದ್ದೆ. ಅಷ್ಟರಲ್ಲಿ ಆತ ಬಂದಿದ್ದ. ಆದರೂ, ನನ್ನ ಅನುಭವಕ್ಕೆ ಬಂದವರಲ್ಲಿ ಕಂಡ, ಬೆರಳೆಣಿಕೆಯಷ್ಟು ಮಂದಿ ಒಳ್ಳೆಯ ಜನಗಳಲ್ಲಿ ಈ ಮಿತ್ರನೂ ಒಬ್ಬನಾಗಿದ್ದ. ಮತ್ತೆ ಕಾಲೆಳೆದುಕೊಂಡು ಮಹಡಿ ಇಳಿಯತೊಡಗಿದೆ. ‘ಪೋನ್ ಯಾರದಿರಬಹುದು?’ ಎಂಬ ಪ್ರಶ್ನೆಗಿಂತ, ನನಗೆ ಪೋನ್ ಬಂದಾಗಲೆಲ್ಲ ಬಯ್ಯುತ್ತಲೇ ರಿಸಿವರ್ ಕೈಗಿಡುವ ಸಿಡುಬು ಮುಖದ ಮ್ಯಾನೇಜರನ ಸಿಡುಕು ಮೂತಿ ಕಣ್ಣ ಮುಂದೆ ಕುಣಿಯುತ್ತಿತ್ತು. ನಾನು ಅಂದುಕೊಂಡಿದ್ದು ಸುಳ್ಳಾಗಿಸಬಾರದೆಂಬಂತೆ, ಒಟಗುಡುತ್ತಲೆ ಮ್ಯಾನೆಜರ್ ರಿಸಿವರನ್ನು ನನ್ನತ್ತ ಸರಿಸಿದ.
ಆ ತುದಿಯಲ್ಲಿ ಅಜ್ಜನಿದ್ದ!
‘ಮಗಾ, ಲಕ್ಕಣ್ಣ ಹಾಸ್ಗೆ ಹಿಡುದ್ಬುಟ್ಟವ್ನೆ. ಆಗ್ಲೊ ಈಗ್ಲೊ ಅಂತಾಯಿದೆ ಜೀವ. ಅದ್ರೊಳ್ಗೆ, ನಿನ್ನನ್ನ ನೋಡ್ಬೇಕು ಕರ್ಸಿ ಅಂತ ಗೋಳಾಡ್ತಾವ್ನೆ. ವಸಿ ಬಂದೋಗು’ ಎಂದ ಅಜ್ಜನ ಮೇಲೆ, ಮಿತ್ರನ ಮೇಲೆ ಬಂದದ್ದಕ್ಕಿಂತ ಹೆಚ್ಚಿನ ಸಿಟ್ಟು ಬಂತು.
...ಇನ್ನೆಂದು ನಿನ್ನ ಮನೆ ಹೊಸಲು ತುಳಿಯೊದಿಲ್ಲವೊ. ನಿನ್ಗು ನಿನ್ನ ಅಧಿಕಾರಕ್ಕು ದಿಕ್ಕಾರ ಇರ್ಲಿ. ನಿನ್ನಂತ ಒಬ್ಬ ಥರ್ಡ್ ಗ್ರೇಡ್ ರಾಜಕಾರಣಿ ಬೆಂಬಲ ಇಲ್ದಿದ್ರು ಆತ್ಮಬಲ ಇದ್ದವ್ನು ಗೆದ್ದು ಬದುಕ್ತಾನೆ ಅನ್ನೊದಿಕ್ಕೆ ನಾನೆ ಸಾಕ್ಷಿ... ಎಂದು ನನಗಿಂತ ಮೂರು ಪಟ್ಟು ವಯಸ್ಸಾಗಿದ್ದ ಲಕ್ಕಣ್ಣನ ಮುಖಕ್ಕೆ ಹೊಡೆದಂತೆ ಹೇಳಿ ಬಂದು ಸುಮಾರು ಹತ್ತು ವರ್ಷಗಳೇ ಕಳೆದು ಹೋಗಿತ್ತು. ಲಕ್ಕಣ್ಣನಿಗಿಂತ ಮುಂಚೆ ಈ ಅಜ್ಜನೇ ಸಾಯಬಾರದಾಗಿತ್ತೆ ಎಂದುಕೊಳ್ಳುತ್ತಿರುವಾಗಲೆ, ನಾನು ಏನು ಮಾತನಾಡದಿದ್ದುದನ್ನು ಕಂಡ ಅಜ್ಜ, ಕಿವುಡರಿಗೆ ಹೇಳುವ ಹಾಗೆ ‘ಕೇಳುಸ್ತಾಯಿತಾ. ಏನೊ ಕೆಟ್ಗಾಲ. ಹತ್ತನ್ನೆರಡು ವರ್ಷದ ಮಾತು. ಅದ್ನ ಇಟ್ಕೊಂಡು ಸಾಯೊ ಮುದುಕ್ನ ಆಸೆ ಈಡೇರುಸ್ತೆ ಇರಕಾಯ್ತದ. ಸುಮ್ನೆ ಬಂದೋಗು’ ಎಂದು ಪೋನ್ ಕಟ್ ಮಾಡಿಯೇ ಬಿಟ್ಟ. ಅಜ್ಜ ಭಯಂಕರ ಹಠವಾದಿ. ಅವನ ಗರಡಿಯಲ್ಲೇ ನಾನು ಬೆಳೆದಿದ್ದು. ಹಾಗೆ ಪೋನ್ ಕಟ್ ಮಾಡುತ್ತಲೆ ‘ನೀನು ಬರಲೇಬೇಕು. ಇದು ನನ್ನಾಜ್ಞೆ’ ಎಂಬ ಸಂದೇಶವನ್ನೂ, ಅದೇಶವನ್ನೂ ನನಗೆ  ದಯಪಾಲಿಸಿದ್ದ.
***
ಯಾವತ್ತೂ ಪ್ರಯಾಣದಲ್ಲಿ ನಿದ್ದೆ ಮಾಡುತ್ತಿದ್ದವನಿಗೆ ಇಂದು ಮಾತ್ರ ಪ್ರಯತ್ನಪಟ್ಟರೂ ನಿದ್ದೆ ಮಾಡಲಾಗಲಿಲ್ಲ. ಬಸ್ ಮುಂದೆ ಮುಂದೆ ಸಾಗಿದಂತೆ ನನ್ನ ನೆನಪು ಹಿಂದೆ ಹಿಂದೆ ಓಡತೊಡಗಿತು.
ಅಜ್ಜ ಹೇಳಿದಂತೆ ಇದು ಹನ್ನೆರಡು ವರ್ಷದ ಹಿಂದಿನ ಮಾತು. ನಾನಾಗ ಎಸ್ಸೆಲ್ಸಿ ಪಾಸು ಮಾಡಿದ್ದೆ. ಅಪ್ಪ ಅಮ್ಮ ಯಾರೆಂದು ತಿಳಿಯದ ನನ್ನನ್ನು ಸಾಕಿದ್ದು ಈ ಅಜ್ಜಯ್ಯನೆ. ಬೇಲಿಗೆ ಮುಳ್ಳು ಕಟ್ಟುವ ಕಾಯಕದ ಅಜ್ಜಯ್ಯ, ಉಪವಾಸ ಮಾಡಿಯಾದರೂ ನನ್ನನ್ನು ಓದಿಸುತ್ತೆನೆ ಎನ್ನುತ್ತಿದ್ದ. ಅದರಂತೆ ಮಾಡಿಯೂ ಇದ್ದ. ಕುಂದೂರು ಮಠದ ಬೋರೆಯ ಮೇಲೆ ಆಗಲೊ ಈಗಲೊ ನೆಲ ಕಚ್ಚಲು ತಯಾರಾಗಿದ್ದ ಸರ್ಕಾರಿ ಸ್ಕೂಲಿನಲ್ಲಿ ಓದುತ್ತಿದ್ದೆ. ಅದಕ್ಕಿಂತ ಒಳ್ಳೆಯ ಸ್ಕೂಲಿನಲ್ಲಿ ಓದಿಸುವ ಆಸೆ ಅಜ್ಜಯ್ಯನಿಗೇನೋ ಇತ್ತು. ಆದರೆ ಅವನ ಸಂಪಾದನೆ ಅದಕ್ಕೆ ಪೂರಕವಾಗಿರಲಿಲ್ಲ.
ತರಗತಿಯಲ್ಲಿದ್ದ ನಲವತ್ತೈದು ಜನರಲ್ಲಿ ಪಾಸಾಗಿದ್ದ ಏಕೈಕ ವ್ಯಕ್ತಿ ನಾನೇ ಆಗಿದ್ದೆ. ಅಜ್ಜನನ್ನು ಹಿಡಿದು ನಿಲ್ಲಿಸುವವರು ಯಾರೂ ಇರಲಿಲ್ಲ. ಎಸ್ಸೆಲ್ಸಿ ಮುಗಿದ ಮೇಲೆ ಏನನ್ನು ಓದಿಸಬೇಕೆಂದು ಅಜ್ಜನಿಗಾಗಲಿ, ಏನನ್ನು ಓದಬೇಕೆಂದು ನನಗಾಗಲಿ ಏನೂ ಗೊತ್ತಿರಲಿಲ್ಲ. ಅಜ್ಜಯ್ಯ ಸಿಕ್ಕಸಿಕ್ಕವರಲ್ಲಿ ಮುಂದಕ್ಕೇನು ಓದಿಸುವುದು ಎಂದು ಕೇಳುತ್ತಿದ್ದ. ಒಬ್ಬೊಬ್ಬರೂ ಒಂದೊಂದು ಹೇಳುತ್ತಿದ್ದರು. ಅದರಿಂದಾಗಿ ಅಜ್ಜಯ್ಯನಿಗೆ ಐಟಿಯೆ, ಪಾಲ್ಟೆಕ್ನಿಕ್ ಪಿಯುಸಿ ಮುಂತಾದ ವಿಚಿತ್ರ ರೀತಿಯ ಹೊಸ ಪದಗಳ ಪರಿಚಯವೂ, ಅವುಗಳನ್ನು ಓದಿದರೆ ಯಾವ ಕೆಲಸ ಸಿಕ್ಕುತ್ತದೆ ಎಂಬ ಭಯಂಕರ ಜ್ಞಾನವೂ ಸಿಕ್ಕಿತು!. ‘ನಮ್ಮ ಹುಡುಗನ್ನ ಪಾಲ್ಟೆಕ್ನಿಕ್ ಮಾಡ್ಸಿ ಇಂಜಿನೆರು ಮಾಡ್ತಿನಿ’ ಎನ್ನುತ್ತಿದ್ದ. ಆದರೆ ‘ಯಾವುದನ್ನು ಓದಿದರೆ ಬೇಗ ಕೆಲಸ ಸಿಕ್ಕುತ್ತದೆ?’ ಎಂಬ ಅಜ್ಜಯ್ಯನ ಪ್ರಶ್ನೆಗೆ ಸಿಕ್ಕಿದ ಪುಕ್ಕಟ್ಟೆ ಸಲಹೆಯಂತೆ ನನ್ನನ್ನು ಐಟಿಐ ಗೆ ಸೇರಿಸಲು ತೀರ್ಮಾನಿಸಿದ. ಹಾಸನದ ಕಾಲೇಜಿನಲ್ಲಿ ಅರ್ಜಿ ಹಾಕಿದ್ದೂ ಅಯಿತು. ಆದರೆ ನನಗಿದ್ದ ಪರ್ಸಂಟೇಜಿನಲ್ಲಿ ನನಗೆ ಸೀಟು ಸಿಗುವುದು ದೂರದ ಮಾತಾಗಿತ್ತು. ಆಗ ಅಜ್ಜಯ್ಯನ ನೆನಪಿಗೆ ಬಂದವನು ಈ ಲಕ್ಕಣ್ಣ.
ಹಾಗೆ ನೋಡಿದರೆ ಲಕ್ಕಣ ಅಜ್ಜಯ್ಯನಿಗೆ ದೂರದವನೇನು ಅಲ್ಲ. ಸ್ವತಃ ಲಕ್ಕಣ್ಣನ ತಂಗಿಯನ್ನೆ ಈ ಅಜ್ಜಯ್ಯ ಮದುವೆಯಾಗಿದ್ದ. ಬಾವನೆಂಟನ ಸಂಬಂಧ ಮುರಿದುಬಿದ್ದು ಅಲ್ಲಿಗೇ ಇಪ್ಪತೈದು ವರ್ಷಗಳಾಗಿದ್ದವು. ಅಜ್ಜಯ್ಯನಿಗೆ ಇಷ್ಟೊಂದು ಹತ್ತಿರದ ಸಂಬಂಧಿಯೊಬ್ಬನಿದ್ದಾನೆ ಎಂದು ನನಗೆ ತಿಳಿದಿದ್ದು ಆಗಲೆ. ಲಕ್ಕಣ್ಣ ಆಗ ಜಿಲ್ಲಾ ಪಂಚಾಯಿತ್ ಸದಸ್ಯನಾಗಿದ್ದ. ಆರು ತಿಂಗಳ ಹಿಂದಷ್ಟೆ ಆತ ಎಲೆಕ್ಷನ್ನಿಗೆ ನಿಂತಿದ್ದಾಗ, ಈ ಅಜ್ಜಯ್ಯನೇ ನನ್ನಿಂದ ಒಂದು ಕಳ್ಳ ಓಟನ್ನು ಲಕ್ಕಣ್ಣನ ಗುರುತಿಗೆ ಹಾಕಿಸಿದ್ದ. ಆದರೆ ಆಗಲೂ ಲಕ್ಕಣ್ಣ ತನ್ನ ಸಂಬಂಧಿಯೆಂದು ನನ್ನ ಹತ್ತಿರ ಹೇಳಿರಲಿಲ್ಲ.
ಭಯಂಕರ ಆಶಾವಾದಿಯೂ, ದುರಾಸೆಯವನೂ ಆಗಿದ್ದ ಲಕ್ಕಣ್ಣನ ತಂದೆ ಚಿಕ್ಕ ವಯಸ್ಸಿನಲ್ಲೇ ಸತ್ತು ಹೋಗಿದ್ದರಿಂದ ಆತನೇ ಮನೆಯ ಯಜಮಾನನಾಗಿದ್ದ. ಆತನಿಗಿದ್ದ ತಂಗಿಯನ್ನು ಒಳ್ಳೆಯ ಕಡೆ ಕೊಟ್ಟು ಮದುವೆ ಮಾಡಿದರೆ ಹೆಚ್ಚು ಹಣ ಖರ್ಚು ಮಾಡಬೇಕಾಗುವುದೆಂಬ ದೂರಾಲೋಚನೆಯಿಂದ, ಬೇಲಿ ಕಟ್ಟುವ, ಮೆದೆ ಹಾಕುವ ಕೆಲಸಗಳನ್ನು ಮಾಡಿಕೊಂಡು ಚುರುಕಾಗಿ ಊರಿನಲ್ಲಿ ಓಡಾಡಿಕೊಂಡಿದ್ದ ತಬ್ಬಲಿ ಹುಡುಗನಿಗೆ ಗಂಟು ಹಾಕಿ ಮನೆಯಲ್ಲಿಯೇ ಇಟ್ಟುಕೊಂಡಿದ್ದ. ತಂಗಿಯ ಮೇಲಿನ ಪ್ರೀತಿಯಿಂದ ಹೀಗೆ ಮಾಡಿದ್ದಾನೆ ಎಂದು ಊರವರು ಮಾತನಾಡಿಕೊಳ್ಳುತ್ತಿದ್ದರು. ಆದರೆ ವಾಸ್ತವ ಬೇರೆಯೇ ಇತ್ತು. ಲಕ್ಕಣ್ಣನಿಗೆ ದುಡಿಯಲು ಇಬ್ಬರು ಆಳುಗಳು ಬೇಕಿತ್ತು ಅಷ್ಟೆ. ಯಾವ ಸಂಬಳವನ್ನೂ ಕೊಡದೆ ಅವರನ್ನು ಪಡೆದಿದ್ದ. ಸ್ವಭಾವತಃ ಶ್ರಮ ಜೀವಿಯಾಗಿದ್ದ ಅಜ್ಜಯ್ಯನಿಗೆ ದುಡಿಮೆ ಏನು ಅನ್ನಿಸದಿದ್ದರೂ, ಸ್ವಲ್ಪ ಬುದ್ದಿವಂತಳಾಗಿದ್ದ ಆತನ ಹೆಂಡತಿಗೆ ಬಹು ಬೇಗ ತನ್ನ ಅಣ್ಣನ ಮನಸ್ಸು ಅರ್ಥವಾಗಿತ್ತು. ಇಲ್ಲಿ ಮಾಡುವ ಕೂಲಿಯನ್ನು ಬೇರೆ ಕಡೆ ಮಾಡಿದರೂ ಸರಿಯೆ ಎಂದುಕೊಂಡು, ಗಂಡನನ್ನು ಹೊರಡಿಸಿಕೊಂಡು ಬೇರೆ ಸಂಸಾರ ಹೂಡಿಯೇ ಬಿಟ್ಟಳು. ಲಕ್ಕಣ್ಣನಿಂದ ಬಹುವಾಗಿ ಚಿತ್ರವಿಚಿತ್ರ ಹಿಂಸೆಗೊಳಗಾಗಿ, ಇನ್ನೇನು ನೆಮ್ಮದಿಯಿಂದ ಇರುತ್ತೇವೆ ಅಂದುಕೊಳ್ಳುವಷ್ಟರಲ್ಲಿ ವಿಧಿ ಕೈಕೊಟ್ಟಿತ್ತು. ನಾನು ಅಜ್ಜಯ್ಯನ ಮನೆ, ಮನ ಸೇರುವಷ್ಟರಲ್ಲಿ ಅಜ್ಜಯ್ಯನ ಹೆಂಡತಿ ಸತ್ತು ಆರು ತಿಂಗಳಾಗಿತ್ತು. ಆತನೂ ತಬ್ಬಲಿಯಾದ್ದರಿಂದಲೋ, ತನಗೆ ಮಕ್ಕಳಿಲ್ಲದಿದ್ದರಿಂದಲೋ ಏನೊ ತಬ್ಬಲಿಯಾಗಿದ್ದ ನನ್ನನ್ನು ಸಾಕಿಕೊಂಡಿದ್ದ. ದುರದೃಷ್ಟವೆಂದರೆ, ಇಬ್ಬರು ಹೆಂಡತಿಯರಿದ್ದರೂ ಲಕ್ಕಣ್ಣನಿಗೆ ಮಕ್ಕಳಾಗಿರಲಿಲ್ಲ. ನನಗೆ ಐಟಿಐ ಸೀಟು ಕೊಡಿಸಲೆಂಬ ಏಕೈಕ ಕಾರಣದಿಂದ, ಇಪ್ಪತೈದು ವರ್ಷಗಳ ನಂತರ ಅಜ್ಜಯ್ಯ ಲಕ್ಕಣ್ಣನ ಮನೆಯ ಹೊಸಲು ತುಳಿದಿದ್ದ.
ಅಜ್ಜಯ್ಯನೇ ಮೊದಲು ಮನೆಗೆ ಬಂದಿದ್ದರಿಂದ ಗೆದ್ದವನಂತೆ ಬೀಗುತ್ತಿದ್ದ ಲಕ್ಕಣ್ಣ ಸೀಟು ಕೊಡಿಸಿಯೇ ತೀರುತ್ತೇನೆ ಎಂಬ ಆಶ್ವಾಸನೆಯನ್ನು ಕೊಟ್ಟ. ‘ಜಿಲ್ಲಾ ಪಂಚಾಯಿತ್ ಸದಸ್ಯನ ಕೋಟಾದಲ್ಲಿ ನಿನಗೆ ಸೀಟು ಗ್ಯಾರಂಟಿ’ ಎಂದು ನನ್ನ ತಲೆ ಸವರಿ ಹೇಳಿದ್ದ.
ಅದಕ್ಕೆ ಪೂರಕವಾಗಿಯೋ ಎಂಬಂತೆ ನಾಲ್ಕಾರು ಬಾರಿ ಕಾಲೇಜಿನ ಬಳಿ ಬಂದು ಹೋಗಿ ಮಾಡಿದ್ದ. ಬಂದಾಗಲೆಲ್ಲ ನನ್ನನ್ನು ಅಜ್ಜಯ್ಯನನ್ನು ಹೊರಗಡೆ ನಿಲ್ಲಿಸಿ ಪ್ರಿನ್ಸಿಪಾಲರ ಕೊಠಡಿಯಲ್ಲಿ ಗಂಟೆಗಟ್ಟಲ್ಲೆ ಕುಳಿತಿದ್ದು ಬರುತ್ತಿದ್ದ. ಹೊರ ಬಂದಾಗಲೆಲ್ಲ ‘ಸೀಟು ಸಿಗುತ್ತೆ ಬಿಡು. ನೀನೇನು ಯೋಚನೆ ಮಾಡಬೇಡ’ ಎನ್ನುತ್ತಿದ್ದ. ಅಜ್ಜಯ್ಯ ಲಕ್ಕಣ್ಣನನ್ನು ಪೂರ್ತಿಯಾಗಿ ನಂಬಿಬಿಟ್ಟಿದ್ದ. ಮತ್ತೆ ಆತ ಹೇಳುತ್ತಿದ್ದ ಕೆಲಸಗಳನ್ನು ಮಾಡಿಕೊಡುತ್ತಿದ್ದ, ಪುಕ್ಕಟ್ಟೆಯಾಗಿ!
ನನಗೆ ಸೀಟು ಸಿಗಲಿಲ್ಲ. ಇದರಿಂದಾಗಿ ಲಕ್ಕಣ್ಣ ಮತ್ತು ಅಜ್ಜಯ್ಯನವರ ಹೊಸ ಸ್ನೇಹಕ್ಕೇನು ಕೊರತೆಯಾಗಲಿಲ್ಲ. ನಾನು ಪಿಯುಸಿ ಸೇರಿಕೊಂಡೆ. ಆದರೆ ಒಂದು ವರ್ಷ ಕಳೆಯುವದರೊಳಗಾಗಿ ಸತ್ಯ ಏನು ಎಂಬುದು ಸ್ಪಷ್ಟವಾಗತೊಡಗಿತು. ಹಾಸನಕ್ಕೆ ದಿನವೂ ಹೋಗಿ ಬಂದು ಮಾಡುತ್ತಿದ್ದ ನನಗೆ ಅಲ್ಲಿಯ ಕೆಟ್ಟ ರಾಜಕಿಯದ ಪರಿಚಯವೂ ತಕ್ಕ ಮಟ್ಟಿಗೆ ಆಯಿತು. ಅದರಿಂದಾಗಿ ನಾನೂ, ಅಜ್ಜಯ್ಯನೂ ಲಕ್ಕಣ್ಣನಿಂದ ಮೋಸ ಹೋಗಿದ್ದ ವಿಚಾರವೂ ತಿಳಿಯಿತು. ಜಿಲ್ಲಾ ಪಂಚಾಯಿತ್ ಸದಸ್ಯನ ಕೋಟಾದಲ್ಲಿ ಲಕ್ಕಣ್ಣನಿಗೆ ಎರಡು ಸೀಟು ಇದ್ದುದ್ದು ನಿಜವೇ ಆಗಿತ್ತು. ನನಗೆ ಕೊಡಿಸುತ್ತೇನೆ ಎಂದು ಹೇಳುತ್ತಲೇ, ಮೂರು ಮೂರು ಸಾವಿರ ಹಣಕೊಟ್ಟ ಇಬ್ಬರು ಬೇರೆ ಹುಡುಗರಿ ಸೀಟು ಕೊಡಿಸಿದ್ದ. ಅವರಿಬ್ಬರಿಗೂ ನನಗಿಂತ ಕಡಿಮೆ ಅಂಕಗಳಿದ್ದವೂ ಕೂಡ!
ಅಜ್ಜಯ್ಯನಿಗೆ ವಿಷಯ ತಿಳಿದು ಮತ್ತೊಮ್ಮೆ ಶಪಥ ಮಾಡಿ ಲಕ್ಕಣ್ಣನ ಸಂಬಂಧವನ್ನು ಕಡಿದುಕೊಂಡ. ಅದಕ್ಕೆ ನಾನೇ ಕಾರಣ ಎಂದು ಭಾವಿಸಿದ ಲಕ್ಕಣ್ಣ ನಾನಾ ರೀತಿಯಲ್ಲಿ ನನಗೆ ಕಾಟ ಕೊಡಲಾರಂಭಿಸಿದ. ವರ್ಷವೆರಡು ಕಳೆಯುವುದರಲ್ಲಿ ಲಕ್ಕಣ್ಣ ನನ್ನ ಶತ್ರುವಾಗಿಬಿಟ್ಟಿದ್ದ. ಆತನ ಕೊಲೆ ಮಾಡಿಯಾದರೂ ಸರಿಯೆ ಆತನ ಕಾಟ ಕಳೆದುಕೊಳ್ಳ ಬೇಕು ಎಂಬ ಭಯಂಕರ ನಿರ್ಧಾರಕ್ಕೆ ನಾನು ಬಂದುಬಿಟ್ಟಿದ್ದೆ. ಆತ ಮುಂದಿನ ಎಲೆಕ್ಷೆನ್ನಿಗೆ ನಿಂತಾಗ, ಆತನ ವಿರೋಧಿ ಗೆಲ್ಲುವಂತೆ ಪ್ರಚಾರ ಮಾಡಿದೆ. ಲಕ್ಕಣ್ಣ ಸೋತು ಹೋಗಿದ್ದ. ಕಾರಣ ನನ್ನನ್ನು ಮುಗಿಸಲು ಸಂಚು ಮಾಡ ತೊಡಗಿದ. ಅದನ್ನು ಅರಿತ ಅಜ್ಜಯ್ಯ ನನ್ನನ್ನು ಊರು ಬಿಟ್ಟು ಹೋಗುವಂತೆ ಒತ್ತಯಿಸಿ ಬೆಂಗಳೂರು ಬಸ್ಸು ಹತ್ತಿಸಿದ್ದ. ನನ್ನ ಓದಿಗೆ ಸಿಕ್ಕ ಸೆಕುರಿಟಿ ಗಾರ್ಡ್ ಕೆಲಸ ಮಾಡುತ್ತಲೇ ಎಸ್‌ಡಿಸಿ ಪರೀಕ್ಷೆಯನ್ನು ಕಟ್ಟಿ ಪಾಸು ಮಾಡಿಕೊಂಡು ಸರ್ಕಾರಿ ಗುಮಾಸ್ತನಾದೆ. ಆಗ ಧೈರ್ಯದಿಂದ ಊರಿಗೆ ಹೋಗಿ ಲಕ್ಕಣ್ಣನ ಮುಖದೆದುರು ನಿಂತು, ಉಗಿದು, ಆತನಿಗೆ ದಿಕ್ಕಾರ ಕೂಗಿ ಬಂದಿದ್ದೆ. ಸಿಟಿಗೆ ಬರಲೊಪ್ಪದ ಅಜ್ಜಯ್ಯ ಊರಿನಲ್ಲಿಯೇ ಉಳಿದಿದ್ದ. ಇತ್ತ ನಾನು ಬೆಂಗಳೂರಿನಲ್ಲಿ, ಗುಮಾಸ್ತನಾಗಿ ಹತ್ತು ವರ್ಷಗಳನ್ನು ಕಳೆದಿದ್ದೆ.
***
ಬಸ್ಸಿಳಿದ ನನಗೆ ನೇರವಾಗಿ ಲಕ್ಕಣ್ಣನ ಮನೆಗೆ ಹೋಗಲು ಇಷ್ಟವಾಗದೆ ಅಜ್ಜಯ್ಯನನ್ನು ಹುಡುಕಿ ಹೊರಟೆ. ಅಜ್ಜಯ್ಯ ಸಿಗುವ ಮೊದಲೆ, ಲಕ್ಕಣ್ಣನ ಕಿರಿಯ ಹೆಂಡತಿಯ ತಮ್ಮ ಸಿಕ್ಕಿದ. ಲಕ್ಕಣ್ಣನನ್ನು ಹಟ್ಟಿಗೆ ಹಾಕಿದ್ದಾರಂತೆಲೂ, ಇನ್ನೇನು ಸಾಯುತ್ತನೆಂತಲೂ ಹೇಳಿದ. ಅಜ್ಜಯ್ಯನನ್ನು ಕರೆಯಲು ಲಕ್ಕಣ್ಣ ಹೇಳಿದ್ದರಿಂದ ಅಜ್ಜಯ್ಯನನ್ನೇ ಹುಡುಕಿಕೊಂಡು ಆತನೂ ಹೊರಟಿದ್ದ.
ನಾವು ಹಟ್ಟಿಗೆ ಬರುವಷ್ಟರಲ್ಲಿ ಅಜ್ಜಯ್ಯನೂ ಬಂದಿದ್ದ. ಜನ ಆಗಲೇ ಗುಂಪುಗೂಡಿದ್ದರು. ಅಜ್ಜಯ್ಯ ಎಲ್ಲರನ್ನು ಸರಿಸಿ ನನ್ನನ್ನು ಮಲಗಿದ್ದ ಲಕ್ಕಣ್ಣನ ಸಮೀಪಕ್ಕೆ ತಳ್ಳಿ ನಿಲ್ಲಿಸಿದ. ಲಕ್ಕಣ್ಣನೆಡೆಗೆ ಬಾಗಿ ನಾನು ಬಂದಿರುವುದನ್ನು ಮೆಲ್ಲಗೆ ಕೂಗಿ ಕೂಗಿ ಹೇಳಿದ. ಎಷ್ಟೋ ಹೊತ್ತಿನ ನಂತರ ನಿಧಾನವಾಗಿ ಕಣ್ಣು ತೆರೆದ ಲಕ್ಕಣ್ಣ ನನ್ನನ್ನು ಗುರುತು ಹಿಡಿಯಲು ನಿಮಿಷಗಳೇ ಬೇಕಾಯಿತು. ಗುರುತು ಹತ್ತಿದ್ದರಿಂದಲೋ ಏನೋ ಆತನ ಮುಖದ ಮೇಲೆ ಸಣ್ಣಗೆ ನಗು ಮೂಡಿತು. ಆತನ ದೇಹದಲ್ಲಿ ಉಂಟಾದ ಚಲನೆಯಿಂದಾಗಿ, ಆತ ಬಲಗೈನ್ನೆತ್ತಲು ಪ್ರಯತ್ನಿಸುತ್ತಿರುವಂತೆ ನನಗನ್ನಿಸಿ, ಬಾಗಿ ಅವನ ಕೈಹಿಡಿದುಕೊಂಡೆ. ಮೈ ಆಗಲೇ ತಣ್ಣಗಾಗುತ್ತಿತ್ತು. ನಾನು ಮುಟ್ಟಿದ್ದರಿಂದಲೊ ಏನೊ ಎಲ್ಲರೂ ಆಶ್ಚರ್ಯ ಪಡುವಂತೆ ತನ್ನೆರಡು ಕೈಗಳಿಂದ ನನ್ನ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ಕಣ್ಮುಚ್ಚಿದ. ಮುದುಕನ ಕಣ್ಣುಗಳಿಂದ ನೀರು ಹರಿಯತೊಡಗಿತು. ಕಣ್ಣನ್ನು ತೆರೆಯದೆ, ನನ್ನ ಕೈಗಳನ್ನು ಬಿಟ್ಟು ತನ್ನೆರಡು ಕೈಗಳನ್ನು ನನ್ನಡೆಗೆ ಮುಗಿಯುವವನಂತೆ ಎದೆಯ ಮೇಲೆ ಜೋಡಿಸಿಕೊಂಡ. ನಾನು ಆತನ ಮುಖದ ಹತ್ತಿರವೇ ಬಾಗಿಕೊಂಡು ಗಂಭೀರನಾಗಿ ಆತನ ಮುಖವನ್ನೇ ತದೇಕ ಚಿತ್ತದಿಂದ ಗಮನಿಸುತ್ತಿದ್ದೆ. ನಾನು ನೋಡು ನೋಡುತ್ತಿದ್ದಂತೆ ಮುಖ ಕಳಾಹೀನವಾಗಿ ಜೀವ ಕಳೆಯೇ ಇಲ್ಲವಾಂದತೆನ್ನಿಸಿತು. ಇನ್ನೇನು ಪ್ರಾಣ ಹೋಯಿತು ಅಂದುಕೊಂಡು ಆತನ ಕೈಗಳನ್ನು ಮುಟ್ಟಿದೆ. ಕೈ ತಣ್ಣಗಾಗಿದ್ದವು. ಉಸಿರೂ ನಿಂತು ಹೋಗಿತ್ತು. ಮುಚ್ಚಿದ ಕಣ್ಣಿನಲ್ಲಿ ಹರಿದಿದ್ದ ನೀರು, ಮುಗಿದ ಕೈಗಳು ಮಾತ್ರ ಹಾಗೆಯೇ ಇದ್ದವು.
ಅಲ್ಲಿ ಸೇರಿದ್ದವರಲ್ಲಿ ಬಹಳಷ್ಟು ಮಂದಿ ‘ನಿನ್ನನ್ನು ನೋಡಿ ಕ್ಷಮೆ ಕೇಳಿ ಸತ್ತ. ನೀನು ಕ್ಷಮಿಸಿಬಿಡು’ ಎಂದು ಏನೇನೋ ಹೇಳುತ್ತಿದ್ದರು. ಎಂಥ ದರ್ಪಿಷ್ಟನನ್ನು, ಅಹಂಕಾರಿಯನ್ನು, ಕೆಟ್ಟ ಮನುಷ್ಯನನ್ನು, ಕಟುಕನನ್ನು ಬಗ್ಗಿಸುವ ‘ಸಾವು’ ಎಂಬ ಮತ್ರವಾದಿಯ ಬಗ್ಗೆ ನಾನು ಯೋಚಿಸುತ್ತಿದ್ದೆ. ಅಜ್ಜಯ್ಯ ನನ್ನ ಹೆಗಲ ಮೇಲೆ ಕೈ ಹಾಕಿ ‘ಇನ್ನು ಹೋಗಣವೇ’ ಎಂಬಂತೆ ನೋಡಿದ. ನಾನು ಮರು ಮಾತನಾಡದೆ ಅವನನ್ನು ಹಿಂಬಾಲಿಸಿದೆ.

Thursday, April 07, 2011

ಕುಪ್ಪಳಿ, ತೇಜಸ್ವಿ, ಪುಸ್ತಕ ಬಿಡುಗಡೆ, ಕವಿಶೈಲ, ಸೂರ್ಯಾಸ್ತ...

ಏಪ್ರಿಲ್ ೫. ಕುಪ್ಪಳಿಯ ಹೇಮಾಂಗಣದಲ್ಲಿ ಎರಡು ಪುಸ್ತಕಗಳ ಬಿಡುಗಡೆಯ ಸಮಾರಂಭ. ಒಂದು, ರಾಜೇಶ್ವರಿಯವರ ನನ್ನ ತೇಜಸ್ವಿಯಾದರೆ, ಎರಡನೆಯದು ಕರೀಗೌಡ ಬೀಚನಹಳ್ಳಿಯವರ ತೇಜಸ್ವಿ ಬದುಕು ಮತ್ತು ಬರಹ. ಮದ್ಯಾಹ್ನ ವಿಚಾರಗೋಷ್ಠಿ.
ಕಾರ್ಯಕ್ರಮಕ್ಕೂ ಮೊದಲು ತೇಜಸ್ವಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಒಂದು ನಿಮಿಷದ ಮೌನಾಚರಣೆಯಲ್ಲಿ ಅಲ್ಲಿದ್ದವರೆಲ್ಲಾ ಮುಳುಗಿದ್ದಾಗ, ಕಾಡಿನೊಳಗಿದ್ದ ಹಕ್ಕಿಗಳು ಮಾತ್ರ ಹಾಡುತ್ತಲೇ ಇದ್ದವು! ಜೀರುಂಡೆಗಳೂ ಸಹ!
ನಂತರ ನಡೆದ ಸಮಾರಂಭದಲ್ಲಿ ಜಯಂತ ಕಾಯ್ಕಿಣಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಮಾತನಾಡುವಾಗ ನನ್ನ ತೇಜಸ್ವಿ ಎಂಬ ಶಿರ್ಷಿಕೆಯಲ್ಲಿ ಅಡಗಿರುವ ಆಪ್ತಭಾವವನ್ನು ಆತ್ಮೀಯವಾಗಿ ವ್ಯಾಖ್ಯಾನಿಸಿದರು. ರಾಜೇಶ್ವರಿಯವರೂ ಪ್ರತಿಕ್ರಿಯಿಸಿದರು.
ತೇಜಸ್ವಿ ಹುಡಕಾಟದಲ್ಲಿದ್ದಾಗ, ರಾಜೇಶ್ವರಿಯವರೂ ಹಡುಕಾಟದಲ್ಲಿರುತ್ತಿದ್ದರು. ತೇಜಸ್ವಿ ಕಂಡಿದ್ದನ್ನು ತಾವೂ ಕಾಣುತ್ತಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ, ಆ ಕ್ಷಣದ ತೇಜಸ್ವಿಯವರನ್ನು ಕಾಣುತ್ತಿದ್ದರು. ತೇಜಸ್ವಿ ಹಕ್ಕಿಗಳ ಭಾವನೆಗಳನ್ನು ಗ್ರಹಿಸುತ್ತಿದ್ದರೆ, ರಾಜೇಶ್ವರಿಯವರು ಅದರ ಜೊತೆಗೆ ತೇಜಸ್ವಿಯವರ ಭಾವನೆಗಳನ್ನೂ ಗ್ರಹಿಸುತ್ತಿದ್ದರು. ಅವೆಲ್ಲವುಗಳನ್ನು ಪುಸ್ತಕದಲ್ಲಿ ತುಂಬಾ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ. ತೇಜಸ್ವಿಯವರು ರಾಜೇಶ್ವರಿಯವರಿಗೆ ಬರೆದ ಪತ್ರಗಳನ್ನೂ ಪುಸ್ತಕದಲ್ಲಿ ಸಂಕಲಿಸಲಾಗಿದೆ. ಅವು ಆ ಕಾಲದ ಸಾಮಾಜಿಕ ಸಾಹಿತ್ಯಕ ವಿಚಾರಗಳನ್ನು ಒಳಗೊಂಡಿರುವ ವಿಶಿಷ್ಟ ದಾಖಲೆಗಳು!

ತಾರಿಣಿಯವರ ಮಗಳು ಕಂಡ ಕುವೆಂಪು ಕೃತಿ ಕುವೆಂಪು ಅವರನ್ನು ನಮ್ಮ ಸಮೀಪಕ್ಕೇ ತಂದು ನಿಲ್ಲಿಸಿತ್ತು. ಈಗ ರಾಜೇಶ್ವರಿಯವರ ನನ್ನ ತೇಜಸ್ವಿ ತೇಜಸ್ವಿಯವರನ್ನು ಇನ್ನಷ್ಟು ಮತ್ತಷ್ಟು ಸಮೀಪಕ್ಕೆ ತಂದು ನಿಲ್ಲಿಸುತ್ತಿದೆ!
ಇಡೀ ಸಮಾರಂಭ ಆಪ್ತವಾಗಿ ನಡೆಯಿತು. ನಡುವೆ ಕುವೆಂಪು ಗೀತೆಗಳ ಗಾಯನ ಸುಮಧುರವಾಗಿತ್ತು. ಪ್ರೊ. ಚಿದಾನಂದಗೌಡ, ಶ್ರೀಮತಿ ತಾರಿಣಿ, ಕಡಿದಾಳು ಶಾಮಣ್ಣ, ಅವರ ಶ್ರೀಮತಿ ಶ್ರೀದೇವಿ, ಕಡಿದಾಳು ಪ್ರಕಾಶ್, ಶ್ರೀಕಂಠ ಕೂಡಿಗೆ, ರಾಜೇಂದ್ರ ಚೆನ್ನಿ, ಹಿ.ಚಿ.ಬೋರಲಿಂಗಯ್ಯ, ಕರೀಗೌಡ ಬೀಚನಹಳ್ಳಿ, ನರೇಂದ್ರ ದೇರ್ಲ, ಅಮರೇಶ ನುಗುಡೋಣಿ, ದಿವಾಕರ ಹೆಗಡೆ, ಜವಳಿ, ಈಶ್ವರಪ್ರಸಾದ್, ಜಾದವ್, ದೀಪಕ್, ಮಲ್ಲಕ್, ಕೃಷ್ಣಮೂರ್ತಿ ಹನೂರು, ನಾಗೇಶ, ಗಣಪತಿ, ರಮೇಶ್ ಇನ್ನೂ ಅನೇಕರಿಂದ (ಹೆಚ್ಚಿನವರ ಹೆಸರು ಗೊತ್ತಿಲ್ಲ) ಕೂಡಿದ್ದ ಸಭೆಯಲ್ಲಿ ತೇಜಸ್ವಿಯವರ ನೆನಪಿನೊಂದಿಗೆ ಹರಟೆ ನಗೆ ಸಂವಾದ ಎಲ್ಲವೂ ಸೇರಿಕೊಂಡಿತ್ತು. ಯುಗಾದಿ ಹಬ್ಬದ ಮಾರನೆಯ ದಿನವಾದರೂ ಸ್ಥಳೀಯರು ಸಾಕಷ್ಟು ಜನ ಭಾಗವಹಿಸಿದ್ದರು. ಕುಪ್ಪಳಿಯಲ್ಲಿದ್ದಷ್ಟೂ ಹೊತ್ತು, ಬೇರೊಂದು ಲೋಕದಲ್ಲಿದ್ದ ಅನುಭವ!
ಬೆಂಗಳೂರಿನಲ್ಲಿ ಅವಸರದಿಂದ, ವಾಹನಗಳ ಶಬ್ದ, ಹೊಗೆಗಳ ನಡುವೆ ನಡೆಯುತ್ತಿದ್ದ ಪುಸ್ತಕ ಬಿಡುಗಡೆ ಸಮಾರಂಭಗಳನ್ನು ಕಂಡಿದ್ದ ನನಗೆ, ಕಾಡಿನ ನಡುವಿನಲ್ಲಿ, ಹತ್ತಾರು ಹಕ್ಕಿಗಳ, ಜೀರುಂಡೆಗಳ, ಆಗಾಗ ಬೀಸುವ ತಂಗಾಳಿಗೆ ಅಲುಗಾಡುವ ಸಸ್ಯಸಂಕುಲ-ಚೈತ್ರಕಾಲದ ಚಿಗುರಿನ ಕಲರವ-ದ ನಡುವೆ ನಡೆದ ಪುಸ್ತಕ ಬಿಡುಗಡೆ ಸಮಾರಂಭ ಹೊಸತೊಂದು ಲೋಕವನ್ನು ತೆರೆದಿಟ್ಟಿತ್ತು. ಅತ್ಯಂತ ಅಚ್ಚುಕಟ್ಟಾಗಿ ಸಮಾರಂಭವನ್ನು ಆಯೋಜಿಸಿದ್ದ ಶ್ರೀ ಕಡಿದಾಳು ಪ್ರಕಾಶ್ ನಿಜಕ್ಕೂ ಅಭಿನಂದಾರ್ಹರು.

ಸಂಜೆ ಕವಿಶೈಲದಲ್ಲಿ ಕಂಡ ಸೂರ್ಯಾಸ್ತ ಅತ್ಯದ್ಭುತವಾಗಿತ್ತು. ಕವಿಶೈಲದಲ್ಲಿ ಬಿ.ಎಂ.ಶ್ರೀ., ಟಿ.ಎಸ್.ವೆಂ., ಕುವೆಂಪು, ಪೂಚಂತೇ ಎಂದು ಕವಿಗಳ ಸ್ವಹಸ್ತಾಕ್ಷರವಿದೆ. ಕವಿಶೈಲವನ್ನು ಕುರಿತಂತೆ ಕುವೆಂಪು ಅವರ ಸಾಹಿತ್ಯದಲ್ಲಿ ನೂರಾರು ಪುಟಗಳ ದಾಖಲೆಯಿದೆ. ಕವಿಶೈಲ ಎಂಬ ಶಿರ್ಷಿಕೆಯ ಆರು ಕವಿತೆಗಳಲ್ಲದೆ, ಅಲ್ಲಿನ ಸೂರ್ಯಾಸ್ತವನ್ನು, ಕವಿಶೈಲದಿಂದ ಕಾಣುವ ಕುಂದಾದ್ರಿಯನ್ನು ಕುರಿತು ಹಲವಾರು ಕವಿತೆಗಳನ್ನು ನೋಡಬಹುದಾಗಿದೆ.
ಓ ನನ್ನ ಪ್ರಿಯತಮ ಶೀಖರ ಸುಂದರನೆ, ನನ್ನ ಜೀವನಾನಂದ ನಿಧಿ ಕವಿತಾ ಮನೋಹರಿಯ ಪ್ರಥಮೋತ್ತಮಪ್ರಣಯಿ, ವನದೇವಿಯೈಸಿರಿಯ ಪೀಠ ಚೂಡಾಮಣಿಯೆ, ಓ ಕವಿಶೈಲ ಎಂದು ಕವಿಶೈಲವನ್ನು ಕುವೆಂಪು ಸಂಬೋಧಿಸಿದ್ದಾರೆ!
ಅಲ್ಲಿಂದ ಕಾಣುವ ದೃಶ್ಯವನ್ನು ತೆರೆ ಮೇಲೆ ತೆರೆಯೆದ್ದು ಹರಿಯುತಿದೆ ಗಿರಿಪಂಕ್ತಿ ಕಣ್ದಿಟ್ಟಿ ಹೋಹನ್ನೆಗಂ. ಚಿತ್ರ ಬರೆದಂತೆ ಕಡಹಸುರು ತಿಳಿಹಸುರುಬಣ್ಣದ ಸಂತೆ ಎಂದು ಹಾಡಿದ್ದಾರೆ.
ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ: ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ! ಸಹ್ಯಾದ್ರಿ ಗಿರಿಪಂಕ್ತಿಯೇ ಧ್ಯಾನಕ್ಕೆ ಕುಳಿತಿರುವಂತೆ ಕಂಡಿರುವ ಕಲ್ಪನೆ ಅದ್ಭುತ!
ಪಟ್ಟಣದಿ, ಬೀದಿಯಲಿ, ಮನೆಯಲ್ಲಿ, ಸರ್ವತ್ರ
ಇದ್ದೆಯಿದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೇ ಮಹಾಸ್ತೋತ್ರ!

Monday, April 04, 2011

ಯುಗಾದಿಯ ಹಾದಿ ಕುಪ್ಪಳ್ಳಿಯತ್ತ!


ಎಲ್ಲರಿಗೂ ಯುಗಾದಿಯ ಶುಭಾಶಯಗಳು
ಈ ಪೋಸ್ಟ್ ನನ್ನ ಬ್ಲಾಗಿನಲ್ಲಿ ಕಾಣಿಸಿಕೊಳ್ಳುವ ಹೊತ್ತಿಗೆ ನಾನು ಕುಪ್ಪಳ್ಳಿಯ ಹಾದಿಯಲ್ಲಿರುತ್ತೇನೆ. ಮೊನ್ನೆ ಪೋನ್ ಮಾಡಿದ್ದಾಗ ಶ್ರೀಮತಿ ರಾಜೇಶ್ವರಿಯವರು ಏಪ್ರಿಲ್ ೫ನೆಯ ತಾರೀಖಿನಂದು ಅವರ ’ನಾನು ಕಂಡ ತೇಜಸ್ವಿ’ ಪುಸ್ತಕ ಕುಪ್ಪಳ್ಳಿಯಲ್ಲಿ ಬಿಡುಗಡೆಯಾಗುತ್ತಿದೆಯೆಂದು ತಿಳಿಸಿ ಆಹ್ವಾನಿಸಿದರು. ರಜೆಯಲ್ಲಿ ಒಂದು ದಿನ ಮಗಳನ್ನು ಎಲ್ಲಿಗಾದರೂ ಕರೆದುಕೊಂಡು ಹೋಗುತ್ತೇನೆ ಎಂದು ಹೇಳದ್ದರಿಂದ, ಕುಪ್ಪಳ್ಳಿಗೇ ಹೋಗಲು ತಕ್ಷಣ ತೀರ್ಮಾನಿಸಿಬಿಟ್ಟೆ. ಯುಗಾದಿಯ ದಿನ ಊರಿನಲ್ಲಿ ಇರಲೇಬೇಕಿತ್ತು. ಅಲ್ಲಿಂದ ಹಾಗೇ ಕುಪ್ಪಳ್ಳಿಗೆ ಪ್ರಯಾಣ ಮಾಡಲು ನಿರ್ಧರಿಸಿಯೇಬಿಟ್ಟೆ.
ಈ ಹಿಂದೆ ನಾನು ಎರಡು ಬಾರಿ ಕುಪ್ಪಳ್ಳಿಗೆ ಹೋಗಿದ್ದೆ. ಮೊದಲ ಸಲ, ಅಂದರೆ ೨೦೦೩ರಲ್ಲಿ ಹೋಗಿದ್ದೆ. ಆಗ ಕವಿಶೈಲದಲ್ಲಿ ಸೂರ್ಯಾಸ್ತವನ್ನೂ ನೋಡಿದ್ದೆ. ನನ್ನ ಬಳಿ ಕ್ಯಾಮೆರಾ ಕೂಡ ಇರಲಿಲ್ಲ. ಕವಿಮನೆಯ ಮುಂದೆ ಕಾಲುವೆಯಲ್ಲಿ ಜುಳು ಜುಳು ನೀರು ಹರಿಯುತ್ತಿತ್ತು. ನಾನು ನನ್ನ ಹೆಂಡತಿ ಕಾಲುವೆಯ ಪಕ್ಕದಲ್ಲೇ ಕುಳಿತು ಊಟ ಮಾಡಿದ್ದು ಇನ್ನೂ ಅಚ್ಚಹಸುರಾಗಿದೆ.

ಎರಡನೆಯ ಬಾರಿ, ೨೦೦೮ರಲ್ಲಿ, ನಾನು, ನನ್ನ ಹೆಂಡತಿ, ಮಗಳು ಮತ್ತು ಇಬ್ಬರು ಸ್ನೇಹಿತರು ನವಿಲುಕಲ್ಲಿನ ಸೂರ್ಯೋದಯ ನೋಡುವುದಕ್ಕೆಂದೇ ಯೋಜನೆ ರೂಪಿಸಿಕೊಂಡು ಹೋಗಿದ್ದೆವು. ನವಿಲುಕಲ್ಲಿನ ಸೂರ್ಯೋದಯದ ವರ್ಣದೋಕುಳಿಯನ್ನು ನೋಡಿ ಖುಷಿಪಟ್ಟಿದ್ದೆವು ಕೂಡಾ. ಆದರೆ ಆಗ ಕವಿಶೈಲದಲ್ಲಿ ಸೂರ್ಯಾಸ್ತವನ್ನು ನೋಡಲಾಗಿರಲಿಲ್ಲ. ಈ ಬಾರಿ ಸೂರ್ಯಾಸ್ತವನ್ನು ನೋಡಿಕೊಂಡು ಬರುವಂತೆ ಪ್ಲಾನ್ ಮಾಡಿದ್ದೇನೆ.

ಏಪ್ರಿಲ್ ೫ ತೇಜಸ್ವಿಯವರ ದೇಹ ನಮ್ಮಿಂದ ದೂರವಾದ ದಿನ. ಇಂದು ಅಲ್ಲಿ ರಾಜೇಶ್ವರಿಯವರ ’ನಾನು ಕಂಡ ತೇಜಸ್ವಿ’ ಪುಸ್ತಕದ ಜೊತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯವರು ಪ್ರಕಟಿಸಿರುವ ’ತೇಜಸ್ವಿ ಬದುಕು - ಬರಹ’ ಪುಸ್ತಕವೂ ಬಿಡುಗಡೆಯಾಗುತ್ತಿದೆ. ವಿಚಾರಗೋಷ್ಠಿಯೂ ಇದೆ.

ಅಲ್ಲಿಂದ ಬಂದ ಮೇಲೆ ಮತ್ತೆ ಸಿಗೋಣ.

ಕುವೆಂಪು ಅವರ 'ಯುಗಾದಿ' ಕವಿತೆಯೊಂದಿಗೆ ಮತ್ತೊಮ್ಮೆ ಯುಗಾದಿಯ ಶುಭಾಶಯಗಳು.

ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು!

ಗೀತೆಯ ಘೋಷದಿ ನವ ಅತಿಥಿಯ ಕರೆ;
ಹೃದಯ ದ್ವಾರವನಗಲಕೆ ತೆರೆ, ತೆರೆ!
ನವ ಜೀವನ ರಸ ಬಾಳಿಗೆ ಬರಲಿ,
ನೂತನ ಸಾಹಸವೈತರಲಿ!

ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು; ಮರೆ;
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ವತ್ಸರವನು ಕೂಗಿ ಕರೆ!

ಸಂಶಯ ದ್ವೇಷಾಸೂಯೆಯ ದಬ್ಬು;
ಸುಖಶ್ರದ್ಧಾ ಧೈರ್ಯಗಳನು ತಬ್ಬು,
ಉರಿಯಲಿ ಸತ್ಯದ ಊದಿನಕಡ್ಡಿ,
ಚಿರ ಸೌಂದರ್ಯದ ಹಾಲ್ಮಡ್ಡಿ!

ತೊಲಗಲಿ ದುಃಖ, ತೊಲಗಲಿ ಮತ್ಸರ,
ಪ್ರೇಮಕೆ ಮೀಸಲು ನವ ಸಂವತ್ಸರ!
ನಮ್ಮೆದೆಯಲ್ಲಿದೆ ಸುಖನಿಧಿ ಎಂದು
ಹೊಸ ಹೂಣಿಕೆಯನು ತೊಡಗಿಂದು!

ಮಾವಿನ ಬೇವಿನ ತೋರಣ ಕಟ್ಟು,
ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವೂಬೆಲ್ಲ;
ಎರಡೂ ಸವಿವನೆ ಕಲಿ ಮಲ್ಲ!

ಹೊಸ ಮರದಲಿ ಹೂ ತುಂಬಿದೆ ನೋಡು!
ಆಲಿಸು! ಜೇನಿನ ಹಬ್ಬದ ಹಾಡು!
ಜೀವನವೆಂಬುದು ಹೂವಿನ ಬೀಡು;
ಕವಿಯೆದೆ ಹೆಜ್ಜೇನಿನ ಗೂಡು!

ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!

(ಕೃಪೆ: ಕುವೆಂಪು ಸಮಗ್ರಕಾವ್ಯ , ಸಂಪುಟ-೧. ಸಂಪಾದಕರು: ಡಾ.ಕೆ.ಶಿವಾರೆಡ್ಡಿ)