Monday, December 29, 2014

ಸಪ್ತರ್ಷಿ ಅಯ್ಯರ್ ಮತ್ತು ವಿದ್ಯಾರ್ಥಿ ಕವಿ

ಆವೊತ್ತು ನಮಗಿದ್ದುದ್ದು ಇಂಗ್ಲಿಷ್ ಪೀರಿಯಡ್. ಇಂಗ್ಲಿಷ್ ಪಾಠ ಹೇಳುವ ಅಧ್ಯಾಪಕರು ರಜಾ ತೆಗೆದುಕೊಂಡಿದ್ದರು. ಆದರೆ ಆಗ ಮಹಾರಾಜಾ ಹೈಸ್ಕೂಲಿಗೆ ಹೆಡ್‌ಮಾಸ್ಟರ್ ಆಗಿದ್ದ ಆರ್.ವಿ. ಕೃಷ್ಣಸ್ವಾಮಿ ಅಯ್ಯರ್ ಅವರು ಬಹಳ ನಿಷ್ಠುರ ನಿಷ್ಠಾವಂತರಾಗಿದ್ದುದರಿಂದ ಅಧ್ಯಾಪಕರು ರಜಾ ತೆಗೆದುಕೊಂಡು ಬರಲಾಗದಿದ್ದರೂ ವಿದ್ಯಾರ್ಥಿಗಳಿಗೆ ಪೀರಿಯಡ್ ನಷ್ಟವಾಗಬಾರದೆಂದು ಬೇರೆ ಯಾರಾದರೂ ಅಧ್ಯಾಪಕರು ಆ ಕರ್ತವ್ಯಕ್ಕೆ ನಿಯಮಿತರಾಗಿರುತ್ತಿದ್ದರು. ಪಾಠ ಇಂಗ್ಲಿಷ್ ಪೀರಿಯಡ್ ಆಗಿದ್ದರೂ ಗಣಿತದ ಅಧ್ಯಾಪಕರಾದರೂ ಚಿಂತೆಯಿಲ್ಲ, ಆ ಪೀರಿಯಡ್ಡನ್ನು ತೆಗೆದುಕೊಳ್ಳಲೇಬೇಕಾಗಿತ್ತು! ನಾವು ಇಂಗ್ಲಿಷ್ ಅಧ್ಯಾಪಕರಿಗಾಗಿ ಕಾಯುತ್ತಾ ಕುಳಿತಿದ್ದೆವು, ಮೊದಲನೆಯ ಪೀರಿಯಡ್ಡಿನಲ್ಲಿ. ಸಾಮಾನ್ಯವಾಗಿ ಮೊದಲನೆಯ ಪೀರಿಯಡ್ಡುಗಳೆಲ್ಲ ರಾಜಭಾಷೆಯಾದ ಇಂಗ್ಲಿಷಿಗೇ ಮೀಸಲಾಗಿರುತ್ತಿತ್ತು. ಕನ್ನಡಕ್ಕೆ ಕೊನೆಕೊನೆಯ ಗಂಟೆಗಳು, ಕನ್ನಡ ಕಾಟಾಚಾರ ಮಾತ್ರದ ವಿಷಯವಾಗಿದ್ದುದರಿಂದ.
ಅಧ್ಯಾಪಕರೇನೊ ಸ್ವಲ್ಪ ತಡವಾಗಿಯಾದರೂ ಬಂದರು. ನೋಡುತ್ತೇವೆ: ಇಂಗ್ಲಿಷ್ ಅಧ್ಯಾಕರಲ್ಲ, ಗಣಿತದ - ಅದರಲ್ಲಿಯೂ ’ಆಲ್ಜೀಬ್ರ’ದ (ಬೀಜಗಣಿತದ) ಅಧ್ಯಾಪಕರು, ಸಪ್ತರ್ಷಿ! ಅವರೂ ಅಯ್ಯರೆ; ಆದರೆ ನಾವು ಅವರನ್ನು ’ಸಪ್ತರ್ಷಿ’ ಎಂದೆ ಕರೆಯುತ್ತಿದ್ದುದು.
ಸಪ್ತರ್ಷಿಯವರು ತುಂಬ ಸಾತ್ವಿಕ ವ್ಯಕ್ತಿ, ಮಹಾ ಸಾಧು, ಇತರ ಅಧ್ಯಾಪಕರನ್ನು ಕಂಡರೆ ನಮಗಾಗುತ್ತಿದ್ದ ಭಯಭಾವನೆ ಅವರ ಮುಂದೆ ಉಂಟಾಗುತ್ತಿರಲಿಲ್ಲ. ಅವರು ತುಸು ಸ್ಥೂಲಕಾಯದ ಜಬಲುಜಬಲು ವ್ಯಕ್ತಿ. ಅವರ ಉಡುಪೂ ಇತರರಂತೆ ’ಟ್ರಿಮ್’ ಆಗಿರುತ್ತಿರಲಿಲ್ಲ. ಅಂಚಿಲ್ಲದ ಒಂದು ಬಿಳಿ ರುಮಾಲು ಸುತ್ತಿರುತ್ತಿದ್ದರು. ಅದೂ ಖಾದಿಯದೇ ಇರಬೇಕು. ಒಂದು ಖಾದಿಬಟ್ಟೆಯ ಬಿಳಿಕೋಟು; ಅಂಥಾದ್ದೆ ಬಿಳಿ ಪಂಚೆ ಕಚ್ಚೆ ಹಾಕಿರುತ್ತಿದ್ದರು. ವಯಸ್ಸು ಐವತ್ತರ ಆಚೆ ಈಚೆ ಇರಬಹುದು. ನಡೆ, ನುಡಿ, ಚಲನ ವಲನ, ದನಿ ಎಲ್ಲದರಲ್ಲಿಯೂ ಅತ್ಯಂತ ಸಾವಧಾನದ ಭಂಗಿ. ಕೆಲವರು ಅವರಿಗೆ ಹಿಂದೊಮ್ಮೆ ತಲೆ ಕೆಟ್ಟಿತ್ತೆಂದು ಗುಸುಗುಸು ಮಾತಾಡಿಕೊಳ್ಳುತ್ತಿದ್ದರು. ಕೆಲವರು ಅವರಿಗೆ ’ಈಗಲೂ ಅಷ್ಟಕಷ್ಟೆ!’ ಎಂದೂ ಸೂಚಿಸುತ್ತಿದ್ದರು. ಅದಕ್ಕೆಲ್ಲ ಕಾರಣ ಅವರ ಆಧ್ಯಾತ್ಮಿಕ ಧ್ಯಾನಶೀಲತೆ ಎಂದೇ ನನ್ನ ಭಾವನೆ. ಅವರು ಸಿಟ್ಟುಗೊಂಡದ್ದನ್ನಾಗಲಿ ಮುಖ ಸಿಂಡರಿಸಿದ್ದನ್ನಾಗಲಿ ನಾನು ಕಂಡಿರಲಿಲ್ಲ. ಯಾವಾಗಲೂ ಮುಗುಳು ನಗುಮೊಗದಿಂದಲೆ ಮಾತಾಡುತ್ತಿದ್ದರು. ಪಾಠ ಹೇಳುವಾಗಲೂ! ಅವರು ತೆಗೆದುಕೊಳ್ಳುತ್ತದ್ದುದ್ದು, ಬೀಜಗಣಿತ. ನನಗೇನು ಅಂತಹ ಹೃದಯಪ್ರಿಯ ವಿಷಯವಾಗಿರಲಿಲ್ಲ ಅದು. ಆದರೂ ಅವರ ಪೀರಿಯಡ್ಡಿನ್ನು ಸಂತೋಷದಿಂದ ಎದುರುನೋಡುತ್ತಿದ್ದರು ವಿದ್ಯಾರ್ಥಿಗಳು. ಬೀಜಗಣಿತದಂತಹ ಅಪ್ರಿಯ ವಿಷಯವೂ ಪ್ರಿಯವಾಗುತ್ತಿತ್ತು ಸಪ್ತರ್ಷಿಷಗಳು ಬೋಧಿಸಿದಾಗ.
ಅವರು ’ಆಲ್ಜೀಬ್ರ’ ಪಾಠಕ್ಕೇ ಶುರುಮಾಡುತ್ತಾರೆ ಎಂದು ಭಾವಿಸಿದ್ದ ನಮಗೆ ಅಚ್ಚರಿಯಾಯಿತು ’ The Nature of Poetry’ (’ಕಾವ್ಯ ಸ್ವರೂಪ’ ಅಥವಾ ಕವಿತೆ ಎಂದರೇನು?) ಎಂಬ ವಿಷಯದ ಮೇಲೆ ಪ್ರಬಂಧ ಬರೆಯಿರಿ ಎಂದು ಅವರು ಹೇಳಿದಾಗ. ಪ್ರಬಂಧವನ್ನು ಇಂಗ್ಲಿಷಿನಲ್ಲಿಯೆ ಬರೆಯಬೇಕೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿರಲಿಲ್ಲ. ಆಗ ಕನ್ನಡ ಇಂಗ್ಲಿಷಿನ ಸಿಂಹಾಸನದ ಕೆಳಗೆ ಕಾಲೊರಸಾಗಿತ್ತಷ್ಟೆ! ಆ ಭಾಷೆಯಲ್ಲಿ ಪ್ರಬಂಧ ಬರೆಯಿಸಿಕೊಳ್ಳುವಷ್ಟು ಗೌರವ ಅದಕ್ಕೆಲ್ಲಿಂದ ಬರಬೇಕು, ಆ ವರ್ನಾಕ್ಯುಲರ್‌ಗೆ, ಅಂದರೆ, ಗುಲಾಂಭಾಷೆಗೆ?
ವಿದ್ಯಾರ್ಥಿಗಳಲ್ಲಿ ಪ್ರಬಂಧ ಬರೆಯುವಂತೆ ಎಲ್ಲರೂ ನಟಿಸುತ್ತಿದ್ದರು. ಆದರೆ ಕೆಲವರೇ ಮಾತ್ರ ನಿಜವಾಗಿಯೂ ಬರೆಯಲು ಪ್ರಯತ್ನಿಸುತ್ತಿದ್ದವರು: ಅನೇಕರಿಗೆ ವಿಷಯವೇ ಅಗಮ್ಯವಾಗಿತ್ತು! ಅಂತೂ ತಮ್ಮ ಕೈಸೇರಿದ ಕೆಲವನ್ನು ಸಪ್ತರ್ಷಿಗಳು ವೇದಿಕೆಯ ಮೇಲಿದ್ದ ಮೇಜಿನ ಹಿಂದಿದ್ದ ಕುರ್ಚಿಯ ಮೇಲೆ ಕುಳಿತು ಪರಿಶೀಲಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆ ಎದ್ದು ನಿಂತರು. ಮುಖದ ಮೇಲೆ ಏನೊ ಆನಂದದ ಮಂದಹಾಸ. ಉತ್ಸಾಹದ ಧ್ವನಿಯಲ್ಲಿ ತರಗತಿಯನ್ನು ಸಂಬೋಧಿಸಿ ’ಮಿತ್ರರೆ, ವಿದ್ಯಾರ್ಥಿಗಳು ಬರೆದಿರುವ ಪ್ರಬಂಧಗಳಲ್ಲಿ ಒಂದನ್ನು ಮಾದರಿಯಾಗಿ ನಿಮಗೆ ಓದುತ್ತೇನೆ. ಕಿವಿಗೊಟ್ಟು ಆಲಿಸಿ’ ಎಂದು ಹೇಳಿ ಭಾವಪೂರ್ಣವಾಗಿ ಓದಲುತೊಡಗಿದರು. ನೋಡುತ್ತೇನೆ: ಅದು ನಾನು ಬರೆದದ್ದೆ: From joy we come, in joy we live, towards joy we move, and into joy we merge in end? -so sings the sage of the upanishads ಎಂದು ಪ್ರಾರಂಭಿಸಿದ್ದೆ ಆ ನನ್ನ ಪ್ರಬಂಧವನ್ನು.
ಸಪ್ತರ್ಷಿಗಳು ಇಡೀ ಪ್ರಬಂಧವನ್ನು ಗಂಭೀರವಾಗಿ ಪೂರ್ತಿಯಾಗಿ ಓದಿದರು. ಅವರ ಮುಖಭಂಗಿಯಲ್ಲಿ ತಾವು ಮಾಡುತ್ತಿರುವ ಕಾರ್ಯದ ಪವಿತ್ರತೆಯ ಅರಿವಿನಿಂದ ಮೂಡಿದುದೋ ಎಂಬಂತಹ ಗಾಂಭೀರ್ಯವಿತ್ತು. ಅವರ ಧ್ವನಿಯಲ್ಲಿ ಗೌರವ ಭಾವನೆ ಕಡಲಾಡುತ್ತಿತ್ತು. ಅವರ ಚೇತನವೆಲ್ಲ ಏನೊ ಒಂದು ಧನ್ಯತೆಯನ್ನು ಅನುಭಾವಿಸುವಂತಿತ್ತು. ಕ್ಲಾಸಿಗೆ ಕ್ಲಾಸೇ, ವಿಷಯದ ಅರಿವಾಗಲಿ ಬಿಡಲಿ, ಸೂಜಿಬಿದ್ದರೂ ಸದ್ದಾಗುವಂತಹ ನಿಃಶಬ್ದತೆಯಿಂದ ಕಿವಿನಿಮಿರಿ ಆಲಿಸಿತ್ತು. ಓದು ಪೂರೈಸಲು ಕೊಟಡಿಯೆ ಸಂತೃಪ್ತಿಯಿಂದೆಂಬಂತೆ ಸುಯ್ದಂತಾಯ್ತು. ಸಪ್ತರ್ಷಿಯವರು ಹೃದಯ ತುಂಬಿ ತಮಗಾದ ಆನಂದವನ್ನು ಪ್ರಶಂಸೆಯ ಅಮೃತಧಾರೆಯಲ್ಲಿ ಎರೆದುಬಿಟ್ಟರು. ಎಂದೆಂದಿಗೂ ಮರೆಯಲಾಗದಿದ್ದ ಒಂದೆರಡು ವಾಕ್ಯಗಳು ಮಾತ್ರ ನೆನಪಿಗೆ ಬರುತ್ತಿವೆ: Friends, this is a great day, we have spent an hour of blessedness! (ಮಿತ್ರರೆ, ಇದೊಂದು ಮಹಾ ಸುದಿನ. ನಾವು ಕಳೆದ ಈ ಒಂದು ಘಂಟೆ ಧನ್ಯ!)
ಇತರ ಪ್ರಬಂಧಗಳನ್ನು ಅವರವರಿಗೆ ಹಿಂದಕ್ಕೆ ಕೊಟ್ಟಂತೆ ನನ್ನದನ್ನು ನನಗೆ ಹಿಂತಿರುಗಿಸಲಿಲ್ಲ. ಅದನ್ನವರು ಜೇಬಿನಲ್ಲಿಟ್ಟುಕೊಂಡು ಸಮಯ ಸಂದರ್ಭ ಒದಗಿದಂತೆಲ್ಲ ಅಧ್ಯಾಪಕವರ್ಗದವರಿಗೂ ತಮ್ಮ ನಾಗರಿಕಮಿತ್ರರಿಗೂ ಓದಿ ಹೇಳುತ್ತಿದ್ದರೆಂದು ಎಷ್ಟೋ ಕಾಲದ ಮೇಲೆ ನನಗೆ ನಾ. ಕಸ್ತೂರಿಯವರು ಹೇಳಿದ ಜ್ಞಾಪಕ.
***
ಕೆಲವರಾದರೂ ಊಹಿಸಿದಂತೆ, ಇದು ಕುವೆಂಪು ಅವರ ಬದುಕಿನಲ್ಲಿ ನಡೆದ ಒಂದು ಘಟನೆ. ಮುಂದಿನ ಜನವರಿ ೨೨ಕ್ಕೆ ಈ ಘಟನೆ ನಡೆದು ೯೦ ವರ್ಷಗಳಾಗಲಿವೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬದಕ್ಕೆ ಪ್ರತ್ಯಕ್ಷ ಸಾಕ್ಷಿ ಈ ಘಟನೆ. ಒಇದು ನಡೆದಾಗ ಕುವೆಂಪು ಅವರಿಗೆ ಕೇವಲ ಹತ್ತೊಂಬೊತ್ತು ವರ್ಷಗಳು. ಅಂದಿನ ದಿನಚರಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರೂ, ’ಸಪ್ತರ್ಷಿ ಅಯ್ಯರ್ ವಿಚಾರವಾಗಿಯೂ ನಾಲ್ಕು ಮಾತು ವಿವರವಾಗಿ ಬರೆಯದಿದ್ದರೆ ’ಅಸಾಧಾರಣ’ವಾದುದನ್ನು ’ಯಕಃಶ್ಚಿತ’ಗೊಳಿಸಿದ ಔದಾಸೀನ್ಯದ ಅಪರಾಧವೆಸಗಿದಂತಾಗುತ್ತದೆ.’ ಎಂದು ಈ ಘಟನೆಯನ್ನು ’ನೆನಪಿನ ದೋಣಿಯಲ್ಲಿ’ ವಿವರವಾಗಿ ದಾಖಲಿಸಿದ್ದಾರೆ. ಕುವೆಂಪು ಅವರ ೧೧೧ನೆಯ ಜನ್ಮದಿನೋತ್ಸವದಲ್ಲಿ ಕವಿಯೊಂದಿಗೆ ಕವಿಗುರುವನ್ನು ಸ್ಮರಿಸುವುದು ಸಂದರ್ಭೋಚಿತವೇ ಆಗಿದೆ.

-ಡಾ. ಬಿ.ಆರ್. ಸತ್ಯನಾರಾಯಣ
ಗ್ರಂಥಪಾಲಕರು, ಸುರಾನ ಕಾಲೇಜು
ಸೌತ್ ಎಂಡ್ ರಸ್ತೆ, ಬಸವನಗುಡಿ
ಬೆಂಗಳೂರು -04
9535570748

Friday, December 19, 2014

ಕಾನೂರು ಹೆಗ್ಗಡಿತಿ ಕಾದಂಬರಿಯ ಪಾತ್ರಪ್ರಪಂಚ

ಕಾನೂರು ಹೆಗ್ಗಡತಿ ಕಾದಂಬರಿ ರಚಿತವಾಗಿ, ಇದೇ ಡಿಸೆಂಬರ್ ೧೬ನೆಯ ತಾರೀಖಿಗೆ (ಕುವೆಂಪು ಮುನ್ನುಡಿಯ ದಿನಾಂಕ) ಸಾರ್ಥಕ ೭೮ ವರ್ಷಗಳು ತುಂಬುತ್ತವೆ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ೧೭.೯.೧೯೩೩ರ ದಿನಚರಿಯಲ್ಲಿ ಹೀಗೆ ಹೇಳಿದೆ: ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ. ಹಗಲೆಲ್ಲ ಅದನ್ನೇ ಕುರಿತು ಆಲೋಚಿಸಿದೆ. ಇದು ಕಳೆದ ಎರಡೇ ದಿನಗಳಲ್ಲಿ, ಅಂದರೆ ೧೯.೯.೧೯೩೩ರ ಬೆಳಿಗ್ಗೆಯಿಂದಲೇ ಕಾದಂಬರಿಯ ಬರವಣಿಗೆ ಆರಂಭವಾಗುತ್ತದೆ. ಅಂದಿನಿಂದ ಸುಮಾರು ನಾಲ್ಕು ವರ್ಷಗಳ ನಂತರ ೧೯೩೭ರಲ್ಲಿ ಕಾದಂಬರಿ ಬೆಳಕು ಕಾಣುತ್ತದೆ.
ಈ ಎಲ್ಲಾ ಘಟನೆಗಳ ಹಿಂದಿದ್ದ ಮನೋಬಲಕ್ಕೆ ಧೈರ್ಯ ತುಂಬಿದವರು, ಕನಸನ್ನು ಬಿತ್ತಿದವರು ಕುವೆಂಪು ಅವರ ಗುರುಗಳಾದ ಶ್ರೀ ಟಿ.ಎಸ್.ವೆಂಕಣ್ಣಯ್ಯನವರು. ಟಾಲ್‌ಸ್ಟಾಯ್, ರೋಮಾ ರೋಲಾ, ಥಾಮಸ್ ಹಾರ್ಡಿ, ಗಾಲ್ಸ್‌ವರ್ದಿ ಮೊದಲಾದವರ ಮಹಾಕಾದಂಬರಿಗಳನ್ನು ಓದಿದ ಮೇಲೆ ’ಕನ್ನಡದಲ್ಲಿ ಅಂತಹ ಒಂದು ಕಾದಂಬರಿ ಯಾವಾಗ ಹುಟ್ಟುತ್ತದೆ?’ ಎಂದು ಕಾಯುತ್ತಿದ್ದ ಕುವೆಂಪು, ತಮ್ಮ ಮಿತ್ರರಾಗಿದ್ದ ಅನೇಕ ಲೇಖಕರಲ್ಲಿ ’ನೀವೇಕೆ ಬರೆಯಲು ಪ್ರಯತ್ನಿಸಬಾರದು?’ ಎಂದು ಪೀಡಿಸುತ್ತಿದ್ದರಂತೆ.
ಒಂದು ದಿನ ಸಂಜೆ ಕುಕ್ಕನಹಳ್ಳಿ ಕೆರೆಯ ದಂಡೆಯ ಮೇಲೆ ವಾಯುಸಂಚಾರದಲ್ಲಿದ್ದಾಗ ವೆಂಕಣ್ಣಯ್ಯನವರು ’ನೀವೇ ಏಕೆ ಬರೆಯಬಾರದು?’ ಎಂದರಂತೆ. ಆಗ ಕುವೆಂಪು ಅವರು ’ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಅಥವಾ ಸಾಧಾರಣ ಕಾದಂಬರಿ ಬರೆದಂತೆಯೇ? ಮಹಾಕಾದಂಬರಿಗೆ ಇಂಗ್ಲಿಷಿನಲ್ಲಿ ಗ್ರೇಟರ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರ ಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯ – ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ! ಅವನ್ನೆಲ್ಲ ಅನ್ವಯ ಕೆಡದಂತೆ, ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು ಪುಟಗಳಲ್ಲಿ ನಡೆಸುವುದು ಸಾಧ್ಯವೇ? ನಾನು ಬರೆಯಹೊರಟರೆ ಉತ್ತರಕುಮಾರನ ರಣಸಾಹಸವಾಗುತ್ತದಷ್ಟೆ!’ ಎಂದು ನಕ್ಕಬಿಟ್ಟಿದ್ದರಂತೆ.
ಆದರೆ ಶಿಷ್ಯನ ಸಾಮರ್ಥ್ಯದಲ್ಲಿ ವೆಂಕಣ್ಣಯ್ಯನವರಿಗೆ ಶಂಕೆಯಿನಿತೂ ಇರಲಿಲ್ಲ. ಮುಂದುವರೆದು ಅವರು ಹೀಗೆ ಹೇಳಿದ್ದರು. ’ನೋಡಿ, ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೆ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನ ಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ ಇನ್ನೊಬ್ಬರಿಗೆ ಹೇಳುತ್ತಾ ಹೋಗುವುದರ ಬದಲು ನೀವೇ ಒಂದು ಕೈ ನೋಡಿಬಿಡಿ!’
ಗುರುವಿನ ಸಲಹೆಯನ್ನು ಆಶೀರ್ವಾದ ರೂಪದಲ್ಲಿ ಧರಿಸಿದ ಕವಿ, ಮಹಾ ಕಾದಂಬರಿ ರಚಿಸುವ ಗೀಳಿಗೆ ವಶವಾಗಿಬಿಡುತ್ತಾರೆ. ಆಗ ಮೊದಲು ಹುಟ್ಟಿದ್ದೇ ’ಕಾನೂರು ಹೆಗ್ಗಡಿತಿ’. ’ಮಲೆನಾಡಿನ ಮೂಲೆಯಲ್ಲಿ’, ’ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಮೊದಲಾದ ಹೆಸರುಗಳನ್ನು ಆಲೋಚಿಸಿದ್ದರೂ ಕೊನೆಯಲ್ಲಿ ನಿಂತದ್ದು ’ಕಾನೂರು ಹೆಗ್ಗಡಿತಿ’ ಎಂಬುದು.
ಮಹಾ ಕಾದಂಬರಿ ಎಂದರೆ ನೂರಾರು ಪುಟಗಳು, ಸಾವಿರಾರು ಘಟನೆಗಳು, ಅಸಂಖ್ಯಾತ ಸ್ಥಳಗಳು ಇವೆಲ್ಲವನ್ನೂ ಒಂದಕ್ಕೊಂದು ಜೋಡಿಸುತ್ತಾ ಹದಗೆಡದಂತೆ ಕಟ್ಟಿಕೊಡುವ ಕಥನಕ್ರಮವೇ ಮುಖ್ಯವಾದುದು. ವೆಂಕಣ್ಣಯ್ಯನವರ ಮಾತಿನಲ್ಲೇ ಹೇಳುವುದಾದರೆ ’ಕಥನ, ಸಂವಾದ ಮತ್ತು ವರ್ಣನೆಗಳ ಹದವರಿತ ಮಿಶ್ರಣವಾಗಿರಬೇಕು.’ ಮುಂದುವರೆದು ಹೇಳುವುದಾದರೆ ಭೂತ-ವರ್ತಮಾನ-ಭವಿಷ್ಯತ್ ಹೀಗೆ ತ್ರಿಕಾಲದಲ್ಲೂ ಕವಿಯ ಮನಸ್ಸು ಸಂಚರಿಸುತ್ತಿರಬೇಕಾಗುತ್ತದೆ. ಭವಿಷ್ಯದ ಕಡೆಗೆ ದೃಷ್ಟಿಯಿಟ್ಟು ವರ್ತಮಾನದಲ್ಲಿ ವಿಹರಿಸುತ್ತಿದ್ದರೂ ಕವಿಯ ಒಂದು ಕೈ ಭೂತಕಾಲದತ್ತಲೂ ಚಾಚಿರುತ್ತದೆ. ಆ ಭೂತಕಾಲವೇ ನಮ್ಮ ಇಂದಿನ ವರ್ತಮಾನವನ್ನು ರೂಪಿಸುತ್ತಿದೆ ಎಂಬ ಎಚ್ಚರವಿದ್ದೇ ಇರುತ್ತದೆ. ಭೂತ-ವರ್ತಮಾನಗಳೆರಡೂ ನಮ್ಮ ಭವಿಷ್ಯತ್‌ಕಾಲಕ್ಕೆ ಮುನ್ನುಡಿಯಂತಿರುತ್ತವೆ.
’ಕಾದಂಬರಿ ಕರತಲ ರಂಗಭೂಮಿ: ಅಂಗೈಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ’ ಎಂದು ಮುನ್ನುಡಿಯಲ್ಲಿ ಕುವೆಂಪು ಮೊದಲಿಗೇ ಹೇಳಿದ್ದಾರೆ.
ಈ ಕಾದಂಬರಿ ಐತಿಹಾಸಿಕವಾಗಿಯೂ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಚಳುವಳಿ, ಗಾಂಧಿಪ್ರಭಾವ, ಮದ್ಯಪಾನ ವಿರೋಧಿ ಚಳುವಳಿ ಮೊದಲಾದವುಗಳು, ಮಲೆನಾಡಿನ ಬದುಕು, ಕೃಷಿ-ಕಾಡು, ಸಂಸ್ಕೃತಿ ಎಲ್ಲವೂ ಅನಾವರಣಗೊಳ್ಳುತ್ತವೆ. ಅದಕ್ಕೆ ಕುವೆಂಪು ಅವರು ತಮ್ಮ ಕಾದಂಬರಿಯನ್ನು ಕುರಿತು ’ನನ್ನ ಕಾದಂಬರಿ’ ಎಂಬ ಚುಟುಕುವೊಂದರಲ್ಲಿ
ಕಲೆ ಹಡೆದ ಕಲ್ಪನೆಯೆ
ಕತ್ತರಿಯು, ಕೇಳ;
ಹಾಳೆ ಹಾಳೆಗಳಾಗಿ
ಕತ್ತರಿಸಿ ಬಾಳ
ರಟ್ಟು ಹಾಕಿದೆನೊಟ್ಟು:
ಕಾದಂಬರಿಯ ಹುಟ್ಟು
ಗುಟ್ಟೆಲ್ಲ ರಟ್ಟು!
ಎಂದು ಹಾಡಿದ್ದಾರೆ.
ಈ ಮಹಾಕಾದಂಬರಿಗೆ ೭೮ ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ, ಕಾದಂಬರಿ ತೆರೆದುಕೊಳ್ಳುವ ಸ್ಥಳಗಳ, ಎಲ್ಲಾ ಪಾತ್ರಗಳ ಒಂದು ಪಟ್ಟಿಕೆಯನ್ನು ಸಂಪಾದಿಸಿದ್ದೇನೆ. ಮೊದಲ ಬಾರಿಗೆ ’ಕಾದಂಬರಿಯ ಅರಣ್ಯಜಗತ್ತನ್ನು ಪ್ರವೇಶಿಸುವ’ ಓದುಗರಿಗೆ, – ಈಗಾಗಲೇ ಓದಿರುವವರಿಗೂ – ಉಪಯೋಗವಾಗುತ್ತದೆ ಎಂಬ ನಂಬಿಕೆ ನನ್ನದು.

ಕಾದಂಬರಿಯಲ್ಲಿನ ಸ್ಥಳಗಳು
ತೀರ್ಥಹಳ್ಳಿ
ತೀರ್ಥಹಳ್ಳಿ ರಾಮತೀರ್ಥದ ಕಲ್ಲುಸಾರ
ಕಾನೂರು
ಮುತ್ತಳ್ಳಿ
ಸೀತೆಮನೆ
ಕೆಳಕಾನೂರು
ಅಗ್ರಹಾರ
ನೆಲ್ಲುಹಳ್ಳಿ
ಕಳ್ಳಂಗಡಿ
ಕಾನುಬೈಲು
ಕತ್ತಲೆಗಿರಿ
ಉಲ್ಲೇಖಮಾತ್ರವಾದ ಸ್ಥಳಗಳು
ಮೈಸೂರು
ಚಾಮುಂಡಿಬೆಟ್ಟ
ಅಠಾರ ಕಛೇರಿ
ಅರಮನೆ
ಕುಕ್ಕರಹಳ್ಳಿ ಕೆರೆ
ಕುರುವಳ್ಳಿ
ಕೊಪ್ಪ
ಬೆಂಗಳೂರು
ತಿರುಪತಿ
ಧರ್ಮಸ್ಥಳ
ಆಗುಂಬೆ ಘಾಟಿ
ಕುಂದದ ಗುಡ್ಡ
ಕುದುರೆಮುಖ
ಮೇರುತಿ ಪರ್ವತ
ಕೂಳೂರು ಸಿದ್ಧರಮಠ
ಸಿಬ್ಬಲುಗುಡ್ಡೆ
ಕಾನೂರು

ಚಂದ್ರಯ್ಯಗೌಡ : ಕಾನೂರು ಮನೆಯ ಯಜಮಾನ; ಹೂವಯ್ಯನ ತಂದೆ ಸುಬ್ಬಯ್ಯಗೌಡರ ತಮ್ಮ; ಸುಬ್ಬಯ್ಯಗೌಡರ
ಮರಣಾನಂತರ ಕಾನೂರು ಮನೆಗೆ ಯಜಮಾನರಾಗಿರುತ್ತಾರೆ
ಸುಬ್ಬಯ್ಯಗೌಡ : ಚಂದ್ರಯ್ಯಗೌಡರ ದಿವಂಗತ ಅಣ್ಣ; ಹೂವಯ್ಯನ ತಂದೆ
ನಾಗಮ್ಮ : ಹೂವಯ್ಯನ ತಾಯಿ; ಚಂದ್ರಯ್ಯಗೌಡರ ದಿವಂಗತ ಅಣ್ಣ ಸುಬ್ಬಯ್ಯಗೌಡರ ಹೆಂಡತಿ; ಸೀತೆಮನೆ ಸಿಂಗಪ್ಪಗೌಡರ ಹೆಂಡತಿಯ ಅಕ್ಕ
ಹೂವಯ್ಯ : ಚಂದ್ರಯ್ಯಗೌಡರ ಅಣ್ಣ ಸುಬ್ಬಯ್ಯಗೌಡ ಮತ್ತು ನಾಗಮ್ಮನವರ ಮಗ
? : ಚಂದ್ರಯ್ಯಗೌಡರ ಮೊದಲ ಹೆಂಡತಿ; ರಾಮಯ್ಯನ ತಾಯಿ
? : ಚಂದ್ರಯ್ಯಗೌಡರ ಎರಡನೆಯ ಹೆಂಡತಿ; ಪುಟ್ಟಮ್ಮ ಮತ್ತು ವಾಸುವಿನ ತಾಯಿ
ರಾಮಯ್ಯ : ಹೂವಯ್ಯನ ಚಿಕ್ಕಪ್ಪ ಚಂದ್ರಯ್ಯಗೌಡರ ಮೊದಲ ಹೆಂಡತಿಯ ಮಗ;
ಸುಬ್ಬಮ್ಮ : ಚಂದ್ರಯ್ಯಗೌಡರ ಮೂರನೆಯ ಹೆಂಡತಿ; ನೆಲ್ಲುಹಳ್ಳಿಯ ಪೆದ್ದೇಗೌಡರ ಮಗಳು
ಪುಟ್ಟಮ್ಮ : ಚಂದ್ರಯ್ಯಗೌಡರ ಎರಡನೆಯ ಹೆಂಡತಿಯ ಮಗಳು; ರಾಮಯ್ಯನ ಮಲತಂಗಿ
ವಾಸು : ಚಂದ್ರಯ್ಯಗೌಡರ ಎರಡನೆಯ ಹೆಂಡತಿಯ ಮಗ; ರಾಮಯ್ಯನ ಮಲತಮ್ಮ; ಕೊನೆಯಲ್ಲಿ ಕಾನೂರಿನ ಗೌಡನಾಗುವವನು; ಸೀತೆಯ ತಂಗಿ ಲಕ್ಷ್ಮಿಯನ್ನು ಮದುವೆಯಾಗುವವನು
ಪುಟ್ಟಣ್ಣ : ಮನೆಯ ಕೆಲಸಗಾರ; ಹೂವಯ್ಯನ ನಂಬಿಕಸ್ಥ ಬಂಟ; ಒಳ್ಳೆಯ ಬೇಟೆಗಾರ
ರಂಗಪ್ಪಸೆಟ್ಟಿ : ಕಾನೂರು ಮನೆಯ ಸೇರೆಗಾರ
ನಿಂಗ : ಗಾಡಿಯಾಳು; ಧರ್ಮಸ್ಥಳ ಯಾತ್ರೆಯ ನಡುವೆ ಅಕಾಲದಲ್ಲಿ ಮರಣ ಹೊಂದಿದವನು
ಪುಟ್ಟ : ನಿಂಗನ ಮಗ; ವಾಸುವಿನ ಸಮವಯಸ್ಕ; ಕೊನೆಯಲ್ಲಿ ಸಣ್ಣಪುಟ್ಟಣ್ಣ ಎಂದು ಕರೆಸಿಕೊಳ್ಳುವವನು
ಬೈರ : ಕಾನೂರು ಮನೆಯ ಜೀತದಾಳು; ಮನೆ ಭಾಗವಾದಾಗ ಹೂವಯ್ಯನ ಜೊತೆಗೆ ಸೇರುವವನು
ಸೇಸಿ : ಬೈರನ ಹೆಂಡತಿ
ಗಂಗ : ಬೈರನ ಮಗ; ವಾಸುವಿನ ಸಮವಯಸ್ಕ; ಚಿಕ್ಕವಯಸ್ಸಿಗೆ ಸತ್ತು ಹೋಗುತ್ತಾನೆ
ಸಿದ್ದ : ಜೀತದಾಳು
ಗಂಗೆ : ಘಟ್ಟದಾಳು; ಸೇರೆಗಾರರ ಪ್ರೇಯಸಿ; ಚಂದ್ರಯ್ಯಗೌಡರ ಪ್ರೀತಿಗೆ ಒಳಗಾಗಿದ್ದವಳು
ಕೃಷ್ಣಯ್ಯಸೆಟ್ಟಿ : ಗಂಗೆಯ ಮೊದಲ ಪ್ರಣಯಿ
ತಿಮ್ಮಯ್ಯಸೆಟ್ಟಿ : ಗಂಗೆಯನ್ನು ಮದುವೆಯಾದ ಮುದುಕ ಶ್ರೀಮಂತ
ತಿಮ್ಮ : ಹಳೆಪೈಕದವನು; ಚಂದ್ರಯ್ಯಗೌಡರ ಒಕ್ಕಲು; ಗೌಡರಿಗೆ ಕಳ್ಳು ಕಾಯಿಸಿಕೊಡುವವನು
ಬಾಡುಗಳ್ಳ ಸೋಮ: ಗಟ್ಟದಾಳು; ಕೊನೆಯಲ್ಲಿ ಕಾನೂರಿನ ಸೇರೆಗಾರ ಸೋಮಯ್ಯಸೆಟ್ಟಿ ಎಂದು ಕರೆಸಿಕೊಳ್ಳುವವನು
ಬಗ್ರ : ಘಟ್ಟದಾಳು
ಸದಿಯ : ಘಟ್ಟದಾಳು
ಕಾಡಿ : ಘಟ್ಟದಾಳು
ಸುಬ್ಬಿ : ಘಟ್ಟದಾಳು
ಗುತ್ತಿ : ಒಬ್ಬ ಆಳು (ಮಲೆಗಳಲ್ಲಿ ಮದುಮಗಳು ಕಾದಂಬರಿಯ ಕೊನೆಯಲ್ಲಿ ನಾಯಿಗುತ್ತಿ, ಕಾನೂರು ಚಂದ್ರಯ್ಯಗೌಡರಲ್ಲಿ ಜೀತದಾಳಾಗಿ ನಿಲ್ಲುವ ಸೂಚನೆಯಿದೆ. ಅದೇ ಗುತ್ತಿಯೆಂದು ತಿಳಿಯಬಹುದು)
ಬಚ್ಚ : ಬೇಲರಾಳು
? : ಗಂಗೆಯ ತಂದೆ
? : ಗಂಗೆಯ ತಾಯಿ
? : ಕಾನೂರು ಮನೆಯ ಅಡುಗೆಯವನು
? : ಹೂವಯ್ಯ ವಾಸವಿದ್ದ ಕೆಳಕಾನೂರು ಮನೆಯ ಅಡುಗೆಯವನು
? : ಕಾನೂರು ಪಟೇಲರು
ಮುತ್ತಳ್ಳಿ
ಶಾಮಯ್ಯಗೌಡ : ಮುತ್ತಳ್ಳಿ ಮನೆತನದ ಯಜಮಾನ; ಪಟೇಲ; ಕಾನೂರು ಚಂದ್ರಯ್ಯಗೌಡರ ಭಾವನೆಂಟ
ಗೌರಮ್ಮ : ಶಾಮಯ್ಯಗೌಡರ ಹೆಂಡತಿ; ಚಿನ್ನಯ್ಯನ ತಾಯಿ
ಚಿನ್ನಯ್ಯ : ಶಾಮಯ್ಯಗೌಡ-ಗೌರಮ್ಮನವರ ಮಗ; ಸೀತೆಯ ಅಣ್ಣ; ಕಾನೂರು ಪುಟ್ಟಮ್ಮನ ಗಂಡ
ಸೀತೆ : ಶಾಮಯ್ಯಗೌಡ-ಗೌರಮ್ಮನವರ ಹಿರಿಯ ಮಗಳು; ಚಿನ್ನಯ್ಯನ ತಂಗಿ;
ಲಕ್ಷ್ಮಿ : ಶಾಮಯ್ಯಗೌಡ-ಗೌರಮ್ಮನವರ ಕಿರಿಯ ಮಗಳು; ಸೀತೆಯ ತಂಗಿ; ಕೊನೆಯಲ್ಲಿ ಕಾನೂರು ವಾಸಪ್ಪಗೌಡನನ್ನು ಮದುವೆಯಾಗುವ ಹುಡುಗಿ
ರಮೇಶ : ಚಿನ್ನಯ್ಯ ಪುಟ್ಟಮ್ಮರ ಮೊದಲ ಮಗ
ಲಲಿತೆ : ಚಿನ್ನಯ್ಯ ಪುಟ್ಟಮ್ಮರ ಮಗಳು
ಮಾಧೂ : ಚಿನ್ನಯ್ಯ ಪುಟ್ಟಮ್ಮರ ಕೂಸು
ಕುಂಬಾರ ನಂಜ : ಶಾಮಯ್ಯಗೌಡರ ಒಕ್ಕಲು
? : ನಂಜನ ಹೆಂಡತಿ
ರಂಗಿ : ನಂಜನ ಹೆಣ್ಣುಕೂಸು
ಕಾಳ : ಮನೆಯ ಆಳು
ರಾಮಕ್ಕ : ಕಾಳನ ದಿವಂಗತ ತಾಯಿ
ಸೀತೆಮನೆ
ಸಿಂಗಪ್ಪಗೌಡ : ಸೀತೆಮನೆ ಯಜಮಾನ; ಹೂವಯ್ಯನ ತಾಯಿ ನಾಗಮ್ಮನವರ ತಂಗಿಯ ಗಂಡ; ಸಂಬಂಧದಲ್ಲಿ ಹೂವಯ್ಯನಿಗೆ ಚಿಕ್ಕಪ್ಪ;
? : ಸಿಂಗಪ್ಪಗೌಡರ ಹೆಂಡತಿ; ಹೂವಯ್ಯನ ತಾಯಿ ನಾಗಮ್ಮನವರ ಸಹೋದರಿ; ಕೃಷ್ಣಪ್ಪನ ತಾಯಿ
ಕೃಷ್ಣಪ್ಪ : ಸಿಂಗಪ್ಪಗೌಡರ ಮಗ
ಶಂಕರಯ್ಯ : ಸಿಂಗಪ್ಪಗೌಡರ ಕೊನೆಯ ಮಗ
ಕಿಲಸ್ತರ ಜಾಕಿ : ಕೃಷ್ಣಪ್ಪನ ಬಂಟ
? : ದನ ಕಾಯುವವನು
ಸುಕ್ರ : ಗಾಡಿ ಹೊಡೆಯುವವನು
ಅಗ್ರಹಾರ
ವೆಂಕಪ್ಪಯ್ಯ : ಜೋಯಿಸರು; ಚಂದ್ರಮೌಳೇಶ್ವರ ದೇವಾಲಯದ ಅರ್ಚಕರು
? & ? : ವೆಂಕಪ್ಪಯ್ಯನವರ ಇಬ್ಬರು ಮಕ್ಕಳು
? & ? : ಇಬ್ಬರು ಬ್ರಾಹ್ಮಣ ಬಾಲಕರು
ಮಂಜಭಟ್ಟರು : ವೃದ್ಧ ಬ್ರಾಹ್ಮಣರು
ಸಿಂಗಾಜೋಯಿಸರು: ಅಗ್ರಹಾರದ ಬ್ರಾಹ್ಮಣರು
ರಾಮಭಟ್ಟರು : ಅಗ್ರಹಾರದ ಬ್ರಾಹ್ಮಣರು
ಕೆಳಕಾನೂರು
ಅಣ್ಣಯ್ಯಗೌಡರು : ಚಂದ್ರಯ್ಯಗೌಡರ ಒಕ್ಕಲು
ಓಬಯ್ಯ : ಅಣ್ಣಯ್ಯಗೌಡರ ಎರಡನೆಯ ಹೆಂಡತಿಯ ಮಗ; ಕಾನೂರು ಬಿಟ್ಟು ಹೋದರೂ, ಕೊನೆಯಲ್ಲಿ ಕಾನೂರು ಮನೆಯಲ್ಲೇ ಆಶ್ರಯ ಪಡೆದಾತ
? : ಅಣ್ಣಯ್ಯಗೌಡರ ನಾಲ್ಕನೆಯ ಹೆಂಡತಿ
? : ಮೂರನೆಯ ಹೆಂಡತಿಯ ಮಗಳು
ನೆಲ್ಲುಹಳ್ಳಿ
ಪೆದ್ದೇಗೌಡ : ಸುಬ್ಬಮ್ಮನ ತಂದೆ
? : ಸುಬ್ಬಮ್ಮನ ತಾಯಿ
? : ಸುಬ್ಬಮ್ಮನ ಅತ್ತಿಗೆ
? : ಕುತ್ತುರೆ ಹಾಕುವ ಯುವಕ; ಸುಬ್ಬಮ್ಮ ಚಂದ್ರಯ್ಯಗೌಡರನ್ನು ಮದುವೆಯಾಗುವ ಮೊದಲು ಈ ಯುವಕನಿಗೆ ಕೊಡುವ ಗಾಳಿಸುದ್ದಿಯಿದ್ದಿತ್ತು.
ಕಳ್ಳಂಗಡಿ
ಚಿಕ್ಕಣ್ಣ : ಕಳ್ಳಂಗಡಿಯ ಮಾಲೀಕ
? : ಕಳ್ಳಗಂಡಿಯವನ ಹೆಂಡತಿ
? : ಅಂಗಡಿಯವನ ಮಗ
ಮನೆ ಹಿಸ್ಸೆ ಪಂಚಾಯ್ತಿಯಲ್ಲಿ ಭಾಗವಹಿಸಿದ್ದ ಪಾಲು ಮುಖಂಡರು
ಬಾಳೂರು ಸಿಂಗೇಗೌಡ
ಬೈದೂರು ಬಸವೇಗೌಡ
ನೆಲ್ಲಹಳ್ಳಿ ಪೆದ್ದೇಗೌಡ
ಮುದ್ದೂರು ಭರ್ಮೇಗೌಡ
ಎಂಟೂರು ಶೇಷೇಗೌಡ
ಮೇಗ್ರಳ್ಳಿ ನಾಗಪ್ಪ ಹೆಗ್ಗಡೆ
ಇತರೆ
ಅತ್ತಿಗದ್ದೆ ಹಿರಿಯಣ್ಣಗೌಡ
ರಂಗಮ್ಮ – ಅತ್ತಿಗದ್ದೆ ಹಿರಿಯಣ್ಣಗೌಡರ ಮಗಳು
ನುಗ್ಗಿಮನೆ ತಮ್ಮಣ್ಣಗೌಡ
ದಾನಮ್ಮ – ನುಗ್ಗಿಮನೆ ತಮ್ಮಣ್ಣಗೌಡರ ಮಗಳು
ಸಂಪಗೆಹಳ್ಳಿ ಪುಟ್ಟಯ್ಯಗೌಡ
ದುಗ್ಗಮ್ಮ – ಸಂಪಗೆಹಳ್ಳಿ ಪುಟ್ಟಯ್ಯಗೌಡರ ಮಗಳು
ತೀರ್ಥಹಳ್ಳಿ ಡಾಕ್ಟರ್
ಪೊಲೀಸಿನವರು
ತೀರ್ಥಹಳ್ಳಿ ಹೆಗ್ಗಡೆ
ಮಾರ್ಕ – ಹೆಂಡ ಕಟ್ಟುವ ಬಗನಿ ಮರಗಳಿಗೆ ಮಾರ್‍ಕ್ ಮಾಡುವವನು
ಗಾರ್ಡ – ಫಾರೆಸ್ಟ್ ಗಾರ್ಡ್
ಮುತ್ತಳ್ಳಿ ಸೇರೆಗಾರ
ಸೀತೆಮನೆ ಸೇರೆಗಾರ
ಕುದುಕ – ಬಿಲ್ಲರವನು
? – ಸೈಕಲ್ ಸವಾರ
ತೀರ್ಥಹಳ್ಳಿಯ ಕಿಲಸ್ತರು
ಸಾಕುಪ್ರಾಣಿಗಳು
ನಂದಿ ಮತ್ತು ಲಚ್ಚ – ಕಾನೂರು ಮನೆಯ ಎತ್ತುಗಳು
ಪುಟ್ರಾಮ – ಕಾನೂರಿನ ಒಂದು ಎತ್ತು
ಟೈಗರ್, ರೂಬಿ, ಟಾಪ್ಸಿ, ಡೈಮಂಡು, ಕೊತ್ವಾಲ, ಡೂಲಿ ಮತ್ತು ರೋಜಿ – ಕಾನೂರು ಮನೆಯ ನಾಯಿಗಳು
ಡೈಮಂಡು ಮತ್ತು ರೂಬಿ – ಮುತ್ತಳ್ಳಿ ಮನೆಯ ನಾಯಿಗಳು
? – ಎತ್ತು
ಪಾಟ್‌ರೈಟ್ – ಸೀತೆಮನೆಯ ಒಂದು ನಾಯಿ