Monday, January 30, 2012

ಶಿವಮುಖಚಂದ್ರಿಕೆಯ ಸೌಂದರ್ಯದಿಂ ಶಿವನುದ್ಭವಿಪಂತೆ!

ಮಲೆನಾಡಿನ ಚಿತ್ರಗಳ ಮುನ್ನುಡಿಯಲ್ಲಿ ’ಕವಿಶೈಲದಂತೆಯೆ ಅಥವಾ ಅದಕ್ಕಿಂತಲೂ ಒಂದು ಕೈ ಮೇಲಾಗಿದೆ ನವಿಲುಕಲ್ಲು’ ಎಂದು ಕವಿ ಬರೆದಿದ್ದಾರೆ. ಕುವೆಂಪು ಅವರ ಗದ್ಯ-ಪದ್ಯಗಳೆರಡರಲ್ಲೂ ನವಿಲು ಕಲ್ಲಿನ ಸೂರ್ಯೋದಯದ ವರ್ಣನೆಗಳು ಬಣ್ಣಿತವಾಗಿವೆ. ಬಯಲು ಸೀಮೆಯಿಂದ ಬಂದ ಗೆಳೆಯರನ್ನು ಬೆಳಗಿನ ಜಾವ ನಾಲ್ಕು ಗಂಟೆಗೆ ಎಬ್ಬಿಸಿ ಕರೆದುಕೊಂಡು ನವಿಲುಕ್ಲಲಿನ ಸೂರ್ಯೋದಯದ ವರ್ಣವೈಭವನನ್ನು ತೋರಿಸುವುದು ಕವಿಯ ಹವ್ಯಾಸಗಳಲ್ಲೊಂದಾಗಿತ್ತು! ’ಅದನ್ನು ನೋಡಿ ಅನುಭವಿಸಿದಲ್ಲದೆ ಅದರ ಸೌಂದರ್ಯ ಮಹಿಮೆಗಳು ತಿಳಿಯುವುದಿಲ್ಲ. ನಾನಂತೂ ಅದನ್ನು ನೋಡಿ ಸೋತು ಶರಣಾಗಿದ್ದೇನೆ. ಆ ಸ್ವರ್ಗೀಯ ದೃಶ್ಯದ ಮಹಾ ವಿಗ್ರಹ ನನ್ನ ಮನೋಮಂದಿರದಲ್ಲಿ ಚಿರವಾಗಿ ಸ್ಥಾಪಿಸತವಾಗಿದೆ. ಅದಕ್ಕಲ್ಲಿ ದಿನ ದಿನವೂ ಆರಾಧನೆ ನಡೆಯುತ್ತಿದೆ.’ ಎನ್ನುತ್ತಾರೆ ಕವಿ. ಒಮ್ಮೆ ಗೆಳಯರೊಂದಿಗೆ ನೋಡಿದ ಚಿತ್ರಣವನ್ನು ಹೀಗೆ ಬರೆದಿದ್ದಾರೆ. ’ಮಂಜಿನ ಇಂದ್ರಜಾಲಗಳನ್ನು ಅವಲೋಕಿಸುತ್ತ ನಿಂತಿದ್ದ ಹಾಗೆಯೆ ಬಹುದೂರದ ಪೂರ್ವದಿಗಂತದಲ್ಲಿ ಅರುಣಕಾಂತಿ ತಲೆದೋರಿ ಪರ್ವತ ಶಿಖರ ಪಂಕ್ತಿಗಳಿಂದಾದ ದಿಗಂತರೇಖೆ ಸ್ಪಷ್ಟವಾಯಿತು. ನಾವೆಲ್ಲರೂ ಮಾತಾಡದೆ ಎವೆಯಿಕ್ಕದೆ ಉತ್ಕಂಠಭಾವದಿಂದ ನಿಂತು ಭಗವಾನ್ ಸೂರ್ಯದೇವನ ಪ್ರಥಮದರ್ಶನದ ಮಹೋತ್ಸವನ್ನೇ ಎದುರು ನೋಡುತ್ತಿದ್ದೆವು. ಕೆಂಬೆಳಕು ಮತ್ತಿನಿತು ಉದ್ದೀಪನವಾಗಿ ನೋಡುತ್ತಿರೆಯಿರೆ ದಿವಾಕರನ ರಕ್ತಾಕ್ತ ವಿಶಾಲ ಬಿಂಬದ ನೇಮಿರೇಖೆ ಸುದೂರದೂರದ ಪರ್ವತಶೀಖರಗಳ ಮೇಲೆ ಹಠಾತ್ತಾಗಿ ಪ್ರತ್ಯಕ್ಷವಾಯಿತು! ನಮ್ಮೆದೆಗಳಲ್ಲಿ ನೆತ್ತರು ಚಿಮ್ಮಿತು; ಮನದಲ್ಲಿ ಭಾವವುಕ್ಕಿತು. ತಳತಳಿಸುವ ಮಿಂಚಿನ ವಕ್ರರೇಖೆಯಂತೆ ಹೊರಮೂಡಿದ ದಿನೇಶನು ನೋಡೆ ನೋಡೆ ಕುಂಕುಮದಲ್ಲಿ ಮಿಂದು ಮಿಂಚಿನುಂಡೆಯಾದನು!’
ನೆನಪಿನ ದೋಣಿಯಲ್ಲಿ ೧-೪-೧೯೩೫ ರಿಂದ ೧೫-೬-೧೯೩೫ರವರೆಗಿನ ರಜಾದಿನಗಳನ್ನು ಊರಿನಲ್ಲಿ ಕಳೆದೆ. ಆದ್ದರಿಂದ ದಿನಚರಿಯನ್ನು ಬರೆದಿಲ್ಲ ಎಂದಿದ್ದಾರೆ. ಆದರೆ ಆ ದಿನಗಳಲ್ಲಿ ನಡೆದ ಘಟನೆಗಳನ್ನು ನೆನಪಿನಾಧಾರದಲ್ಲಿ ದಾಖಲಿಸಿದ್ದಾರೆ. ಆ ರಜಾದಿನಗಳಲ್ಲಿಯೇ ಚಿಕ್ಕಮಗಳೂರಿನಲ್ಲಿ ನಡೆದ ಉಪನ್ಯಾಸ ಸಪ್ತಾಹ ಕಾರ್ಯಕ್ರಮಕ್ಕೆ ಪ್ರೊ. ವೆಂಕಣ್ಣಯ್ಯ, ನಾ.ಕಸ್ತೂರಿ, ತೀ.ನಂ. ಶ್ರೀಕಂಠಯ್ಯ ಮತ್ತು ಜಿ ಹನುಮಂತರಾಯರು ಬಂದಿರುತ್ತಾರೆ. ಅವರೆಲ್ಲರನ್ನೂ ಕರೆದುಕೊಂಡು ಮಲೆನಾಡು ಯುವಕರ ಸಂಘದ ವಾರ್ಷಿಕೋತ್ಸವಕ್ಕೆ ಹುಗಲವಳ್ಳಿಗೆ ಹೋಗುತ್ತಾರೆ. ಅದರ ಮಾರನೆಯ ದಿನ ನವಿಲುಕಲ್ಲಿಗೆ ಸೂರ್ಯೋದಯವನ್ನು ನೋಡಲು ಹೋಗುವ ಕಾರ್ಯಕ್ರಮ ಹಾಕಿಕೊಳ್ಳುತ್ತಾರೆ. ಆ ಯಾತ್ರೆಯ ರಸಕ್ಷಣಗಳನ್ನು ಕವಿಯ ಮಾತುಗಳಲ್ಲೇ ನೋಡಬಹುದು.

ಬೆಳಿಗ್ಗೆ ಐದು ಗಂಟೆಗೆ ಮೊದಲೆ ಎಲ್ಲರನ್ನೂ ಎಬ್ಬಿಸಿ, ಕಾರಿನಲ್ಲಿ ಕಾಡು ರಸ್ತೆಯಲ್ಲಿಯೇ ಅವರನ್ನೆಲ್ಲ ’ನವಿಲುಕಲ್ಲು’ ಗುಡ್ಡದ ಬುಡದವರೆಗೆ ಕರೆದೊಯ್ದೆವು. ಅಲ್ಲಿಂದ ಕತ್ತಲು ನೆತ್ತಿಗೆ ಏರಿದೆವು. ಅಂದು ಉಷಃಕಾಲದಿಂದ ಹಿಡಿದು ಸೂರ್ಯೋದಯದವರೆಗೂ ನಾವು ಕಂಡ ದೃಶ್ಯಪರಂಪರೆಯ ಅದ್ಭುತ ಸೌಂದಾರ‍್ಯಾನುಭೂತಿಯನ್ನು ಇಲ್ಲಿ ನಾನು ವರ್ಣಿಸುವುದಿಲ್ಲ. . . ಅದರ ಮಹತ್ವವನ್ನೆಲ್ಲ ಒಂದು ನಡೆದ ಘಟನೆಯಿಂದಲೆ ಸೂಚಿಸ ಬಯಸುತ್ತೇನೆ: ನಾವೆಲ್ಲರೂ ಪಂಕ್ತಿಯ ಹಿಂದೆ ಪಂಕ್ತಿಯೆಂತೆ ಮೇಲಮೇಲಕ್ಕೆದ್ದು ಪೂರ್ವದಿಗಂತದಲ್ಲಿ ವಿಶ್ರಾಂತವಾಗಿದ್ದ ಪರ್ವತಶ್ರೇಣಿಗಳತ್ತ ಬಿಡುಗಣ್ಣಾಗಿ ಮಾತಿಲ್ಲದೆ ಸುಮಾರು ಒಂದು ಒಂದೂವರೆ ಗಂಟೆಯವರೆಗೂ ನಿಷ್ಪಂದರೆಂಬಂತೆ ನೋಡುತ್ತಿದ್ದೆವು. ರಸಾನುಭವದ ತುತ್ತತುದಿಯಲ್ಲಿ ಸಮಾಧಿ ಸ್ಥಿತಿಯಿಂದ ಇಳಿದುಬಂದವರಂತೆ ಎಚ್ಚತ್ತು ನಿಟ್ಟುಸಿರುಬಿಡುತ್ತಿದ್ದಂತೆ, ಧ್ಯಾನಲೀನ ಸ್ನಿಗ್ಧಮಂದಸ್ಮತರಾಗಿದ್ದ ಪ್ರೊ.ವೆಂಕಣ್ಣಯ್ಯನವರು ತಮ್ಮ ಸಾವಧಾನವಾದ ಆರ್ದ್ರ ಗಂಭೀರ ಧ್ವನಿಯಲ್ಲಿ ನನ್ನ ಕಡೆ ತಿರುಗಿ, ಏನನ್ನೋ ಯಾಚಿಸುತ್ತಿರುವರೋ ಅಥವಾ ಆಜ್ಞಾಪಿಸುತ್ತಿರುವರೋ ಎಂಬಂತೆ 'ಪುಟ್ಟಪ್ಪ, ಇದನ್ನು ಹಿಡಿದಿಟ್ಟುಕೋ!' ಎಂದು ಮತ್ತೆ ಆ ದಿವ್ಯದೃಶ್ಯದತ್ತ ಕಣ್ಣಾಗಿ ಮುಂದೆ ಮಾತನಾಡಲಾರದವರಂತೆ ಮೌನಿಯಾದರು.

ಗುರುವಿನಾಜ್ಞೆಯನ್ನು ಶಿಷ್ಯ ಶಿರಸಾವಹಿಸಿ ಪಾಳಿಸುವಂತೆ ಕವಿ ಕುವೆಂಪು ನವಿಲುಕಲ್ಲಿನ ಉಷಃಕಾಲ ಮತ್ತು ಸೂರ್ಯೋದಯವನ್ನು ಹಿಡಿದಿಟ್ಟುಕೊಂಡರು, ತಮ್ಮ ಎರಡು ಕವಿತೆಗಳಲ್ಲಿ. ’ಹಿಡಿದಿಟ್ಟುಕೊಂಡರು’ ಎನ್ನುವುದಕ್ಕಿಂತ, ಅದನ್ನು ಸಹೃದಯರಿಗೆ ಉಣಬಿಡಿಸಿದರು ಎಂಬುದೇ ಹೆಚ್ಚು ಸೂಕ್ತವಾದೀತು. ನವಿಲುಕಲ್ಲಿನಲ್ಲಿ ಉಷಃಕಾಲ (೧೩-೪-೧೯೩೫) ಮತ್ತು ನವಿಲುಕಲ್ಲಿನಲ್ಲಿ ಸೂರ್ಯೋದಯ (೨೫-೫-೧೯೩೫) ಊರಿನಲ್ಲಿದ್ದಾಗಲೇ ರಚಿತವಾದವುಗಳಾಗಿವೆ.

ಬಣ್ಣ ಬಣ್ಣದ ಹೂವುಗಳನ್ನು ಮುಡಿದು ಮೂಡುತ್ತಿರುವ ಉಷೆವೆಣ್ಣಿನ ಚಿತ್ರಣ ಮೊದಲ ಕವಿತೆಯಲ್ಲಿದೆ.
ದತ್ತುರಿಯ ಹೂವು, ತಾವರೆ, ಕಿತ್ತಿಳೆಯ ಹಣ್ಣು,
ಕೇಸರಿ, ಗುಲಾಬಿ, ಕುಂಕುಮರಂಗು - ತರತರದ
ಫಲಕುಸುಮ ಸಮ ರತ್ನರಾಗ ಸುಮನೋಹರದ
ಭೋಗಮಂದಾಕಿನಿಯ ಪ್ರವಹಿಸುವಂತೆ ಉಷೆವೆಣ್ಣು
ಮೂಡುತಿಹಳದೊ ದೂರ ದಂತುರ ದಿಗಂತದಲಿ,
ಪ್ರತಿಭಾತಟಿತ್ತಿನಿಂ ಮನವನುಜ್ವಲಗೈದು,
ಸೌಂದರ್ಯ ನಂದನವನಾತ್ಮ ನಾಕಕೆ ನೆಯ್ದು,
ಗಿರಿವನ ತರಂಗಮಯ ಸಹ್ಯಾದ್ರಿರಂಗದಲಿ!
ಹಬ್ಬಿಹುದರಳೆಮಂಜು ನೊರೆಯ ಹೆಗ್ಗಡಲಾಗಿ
ಬಿತ್ತರದ ಬಿಂಕದಿಂ ಕಂದರಂಗಳ ತುಂಬಿ,
ಸೃಷ್ಟಿಸುತೆ ಸಾಗರದ್ವೀಪ ಸಮ್ಮೋಹಮಂ.
ಭಾವಭಾಗೀರಥಿಯು ಧುಮುಕಿದೆ ನಭಶ್ಚುಂಬಿ
ಪ್ರಾಣಶೈಲಾಗ್ರದಿಂ ಪ್ರಾಸ ಘೋಷಿಣಿಯಾಗಿ
ಕೊಚ್ಚಿ ಕರಗಿಸಿ ದೇಹ ನಾನೆಂಬ ಗೇಹಮಂ!
’ಭೋಗಮಂದಾಕಿನಿಯ ಪ್ರವಹಿಸುವಂತೆ ಉಷೆವೆಣ್ಣು ಮೂಡುತಿಹಳದೊ’ ಎಂಬಂತಹ ಅದ್ಭುತ ಉಪಮೆಯನ್ನೊಳಗೊಂಡ ಈ ಸಾನೆಟ್ಟು ಕುವೆಂಪು ಅವರ ಸೂರ್ಯೋದಯ ಗೀತೆಗಳಲ್ಲಿ ಅನನ್ಯವಾದುದು. ಒಂದು ರೀತಿಯಲ್ಲಿ, ತಾಣು ಕಂಡ ದರ್ಶನವನ್ನು ಕಲಾತ್ಮಕವಾಗಿ ಸಹೃದಯರ ಮುಂದಿಟ್ಟಿರುವ ಸಾಕ್ಷಚಿತ್ರ! ಆ ಸೌಂದರ್ಯಸಾಗರದ ಮುಂದೆ ಮಾನವನ ಅಹಂಕಾರ, ದೇಹ-ಗೇಹಗಳೆಲ್ಲವೂ ಕರಗಿ ಕೊಚ್ಚಿಹೋಗಿಬಿಡುತ್ತವೆ. ಇಂತಹ ಇನ್ನೊಂದು ಸಾಕ್ಷಚಿತ್ರವೇ ನವಿಲುಕ್ಕಲಿನಲ್ಲಿ ಸೂರ್ಯೋದಯ ಕವಿತೆ.
ಕತ್ತಲೆಯ ಬಸಿರಿಂದೆ ಮೆಲ್ಲಮೆಲ್ಲನೆ ಪೊರಗೆ
ಪೊಣ್ಮುತಿದೆ ಶಿಖರಕಂದರಮಯಂ ಸಹ್ಯಾದ್ರಿ.
ಸ್ಪಷ್ಟತರವಾಗುತಿರೆ ಭೂವ್ಯೋಮಗಳ ಸಂಧಿ,
ದೃಶ್ಯ ಚಕ್ರದ ನೇಮಿಯಂದದಿ ದಿಗಂತ ಫಣಿ
ಸುತ್ತುವರಿದಿದೆ ದೃಷ್ಟಿವಲಯಮಂ. ನಾಣ್ಗೆಂಪು
ಮೊಗದೊಳೇರುವ ಉಷಾಭೊಗಿನಿಯ ಫಣೆಯಲ್ಲಿ
ಬೆಳ್ಳಿ, ಉಜ್ವಲ ತಾರೆ, ಕುಂಕುಮ ಹರಿದ್ರದಿಂ
ರಂಜಿಸುವ ಪೊಂಬಣೆಗೆ ರಜತ ತಿಲಕದ ಬಿಂದು
ತಾನೆನೆ ವಿರಾಜಿಸಿದೆ.
ಸುಮಾರು ಐದು ಗಂಟೆಯಿಂದಲೇ ಮೇಲಿನ ಪ್ರಕೃತಿವ್ಯಾಪಾರಗಳು ಪ್ರಾರಂಭವಾಗುತ್ತವೆ. ತುಸುಗಪ್ಪು ಬಣ್ಣದ ಬಿತ್ತಿಯ ಮೇಲೆ ಕಪ್ಪು ಬಣ್ಣದ ರೇಖೆಗಳನ್ನು ಎಳೆದಂತೆ, ಮಗುವೊಂದು ತನಗೆ ತೋಚಿದಂತೆ ಗೀಚಿದಂತೆ ನವಿಲು ಕಲ್ಲಿನಿಂದ ಕಾಣುವ ದೃಶ್ಯ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಕತ್ತಲೆಯ ಬಸಿರಿಂದೆ ಮೆಲ್ಲಮೆಲ್ಲನೆ ಪೊರಗೆ ಪೊಣ್ಮುತಿದೆ ಶಿಖರಕಂದರಮಯಂ ಸಹ್ಯಾದ್ರಿ ಎಂಬ ಸಾಲುಗಳನ್ನು ಓದುತ್ತಿದ್ದಂತೆ, ಕವಿ ಕಂಡ ದರ್ಶನ ನಮ್ಮ ಕಣ್ಣೆದುರಿಗೇ ಕುಣಿಯುವಂತಹ ವರ್ಣನೆ ಮನಮುಟ್ಟುತ್ತದೆ. ಭೂಮಿ ಯಾವುದು? ಆಕಾಶ ಯಾವುದು? ಎಂಬುದು ಅಸ್ಪಷ್ಟವಾಗಿ ಗೋಚರವಾಗತೊಡಗುತ್ತದೆ. ಈ ಅಸ್ಪಷ್ಟ ಚಿತ್ರಣ ಕಣ್ಣಿಗೆ ಕಟ್ಟುತ್ತಿರುವಾಗಲೇ ಮೈಗೆ ತಾಕುವ ತಣ್ಣನೆಯ ಗಾಳಿ, ನೀಲಿಯ ಒಳ ಹೊದಿಕೆಯನ್ನು ತೋರುತ್ತಿರುವ ಆಕಾಶ, ಕತ್ತಲೆಗಂಬಳಿಯಿಂದ ಹೊರಗೆ ಬರುತ್ತಿರುವ ಹಾಗೂ ಮಂಜಿನ ಪರದೆಯೊಳಗಿನ ಭೂಮಿ, ಹಸುರುಡುಗೆಯ ಕಾಡು ಎಲ್ಲವೂ ಲೋಕಮೋಹಕವಾಗಿ ನೀಲಿಯ ಕನಸಿನಂತೆ ಕವಿಗೆ ಕಾಣುತ್ತವೆ.
ಹಸುರು ತಳಿರನು ತುಳಿದು,
ನಲುಗಿ, ನಲಿಯಿಸಿ, ನಲಿದು, ಯೋಜನ ಸುವಿಸ್ತರದ
ಕಾಂತಾರ ಪರಿಮಳಂಬೊತ್ತ ತಣ್ಣನೆ ಗಾಳಿ
ಮಂದ ಮಂದಂ ತೀಡಿ ಬೀಸುತಿದೆ ಸುಖವಾಗಿ,
ತಂಪಾಗಿ. ಕತ್ತಲೆಯ ಕಂಬಳಿಯನುಳಿಯೆ ತೊರೆ,
ನೀಲಿಯೊಳಹೊದಿಕೆ ತಾಂ ತೋರ್ದುದೆನೆ, ಹಸರಿಸದೆ
ಹೊಗೆಯ ಮಂಜಿನ ತೆಳ್ಳನೆಯ ಪರದೆ, ಭೂದೇವಿ
ಉಟ್ಟ ಹಸುರುಡೆಯ ಹೋಲುವ ಕಾಡುಗಳ ಮೇಲೆ,
ಲೋಕಮೋಹಕವಾಗಿ ನೀಲಿಯ ಕನಸಿನಂತೆ!
ಪೆಂಪುವಡೆದಿರಲಿಂತು ಕಣ್ಗೆ.
ಆಗ ಸುತ್ತಲಿನ ಜೀವಚೈತನ್ಯ ಸೂರ್ಯನಾಗಮನದ ಸೂಚನೆಗೆ ಸ್ಪಂದಿಸುತ್ತದೆ, ಹೀಗೆ.
ಕಿವಿಗಿಂಪಾಗಿ ಕೇಳುತಿದೆ ಮಲೆವಕ್ಕಿಗಳ ಕೊರಳಿನಿಂಚರಂ,
ನಾದದ ಮಧುರ ನಂದನದ್ವಾರ ತೆರೆದಂತೆ.
ಮರದ ತುದಿಗೋಡಿನಲಿ ಕಾಮಳ್ಳಿ; ಪೊದೆಗಳಲಿ
ಪಿಕಳಾರಿ; ಹಸುರು ಚಾಮರಗಳನೆ ನಭಕೆತ್ತಿ
ಹಿಡಿದಂತೆ ಉಷೆಯ ನಸುಕಿನೊಳೆಸೆವ ಗರಿಗರಿಯ
ಬಿದಿರು ಮೆಳೆಗಳ ಗಳುಗಣೆಯ ಚೆಲವುನೆತ್ತಿಯಲಿ
ಕೆಮ್ಮೊನೆಯ ಹಸುರು ಹಳದಿಯ ಮೆಯ್ಯ ಗಿಳಿವಿಂಡು;
ಹೊಸತಳಿರ ಮರೆಯ ಕೋಗಿಲೆ; ಹೆಸರೆ ಇಲ್ಲದಿಹ
ನೂರಾರು ಸುಮಧುರ ವಿಹಂಗಮ ಅಮರಗಾನ!
ಸಂಗೀತ ಸೌಧಕ್ಕೆ ಹೊಂಗಳಶವಿಟ್ಟಂತೆ,
ಆಲಿಸದೊ, ಸುರಗೇಯ ಗಂಗೆಯನು ಹರಿಸುತಿದೆ
ಕಾಜಾಣ! ಗಾನದಾನಂದಕ್ಕೆ ಝುಮ್ಮೆಂದು
ಸ್ಪಂದಿಸುತಿದೆ ಶೈಲ ಕಾನನ ವಿರಾಟ್ ಪ್ರಾಣ!
ಸಂಗೀತದ ಹಿಮ್ಮೇಳದಲ್ಲಿ, ಸೂರ್ಯನ ಪ್ರಥಮದರ್ಶನದ ನಿರೀಕ್ಷೆಯಲ್ಲಿ ಕುಳಿತ ಕವಿ, ಅದಕ್ಕೆ ಸ್ಪಂದಿಸುತ್ತಿರುವ ಶೈಲಕಾನನ ವಿರಾಟ್ ಪ್ರಾಣವನ್ನು ಕಂಡು ಆಶ್ಚರ್ಯಪಡುವಷ್ಟರಲ್ಲಿ ಪೂರ್ವದಿಗಂತದಲ್ಲಿ ಬಣ್ಣಗಳ ಮೆರವಣಿಗೆ ಪ್ರಾರಂಭವಾಗುತ್ತದೆ.
ಅದೊ ನೋಡು, ಬಣ್ಣಗಳ ದಿಬ್ಬಣಂ! ಗಗನದಾ
ಶೈಲ ಶೈಲಿಯ ದಂತುರ ದಿಗಂತ ರಂಗದಲಿ
ದೇವತೆಗಳೆಲ್ಲರೂ ಅಪ್ಸರಿಯರೊಡಗೂಡಿ
ಇಂದ್ರನೈರಾವತದ ಹಿಂದುಗಡೆ ಮೆರವಣಿಗೆ
ಹೊರಟಿಹರೊ ಎನೆ ಶೋಭಿಸುತ್ತಿದೆ ಮನವನೊಲಿಸಿ!
ಶಿವನ ಮುಖಚಂದ್ರಿಕೆಯೆ ಸೌಂದರ್ಯ ರೂಪದಿಂ

ಪ್ರತ್ಯಕ್ಷವಾಗುತಿರೆ ಶಿವನೆ ಮೈದೋರ್ದಂತೆ
ಆಹ ನೋಡದೊ, ಮಲೆಗಳಾಚೆಯ ಸುದೂರದಲಿ
ಒಯ್ಯನಾವಿರ್ಭವಿಪನಮರ ತೇಜಸ್ವಿ ರವಿ!
ದೇವತೆಗಳೆಲ್ಲರೂ ಅಪ್ಸರೆಯರ ಜೊತೆಗೂಡಿ ಇಂದ್ರನ ಐರಾವತದೊಂದಿಗೆ ಹೊರಟಿರುವ ಭವ್ಯಮೆರವಣಿಗೆಯಂತೆ ಕಾಣುತ್ತಿರುವ ಬಣ್ಣಗಳ ಮೆರವಣಿಗೆ ಶಿವನ ಮುಖಚಂದ್ರಿಕೆಯ ಸೌಂದರ್ಯದಿಂದ ದರ್ಶನವಾಗುವ ಶಿವನಂತೆಯೆ ಕವಿಗೆ ಕಂಡಿದೆ. ಆಗಲೇ ಆವಿಭವಿಸುವುನು ಅಮರ ತೇಜಸ್ವಿ ರವಿ! ಮುಂದಿನದು ಕವಿಯ ಕೋರಿಕೆ:
ಹೃದಯಪ್ರಪಾತಕ್ಕೆ ಧುಮುಕುತಿದೆ ರಸದ ಧುನಿ
ಭಾವಜಲಪಾತದಿಂ! ಮೌನವೆ ಮಹಾ ಸ್ತೋತ್ರಂ
ಈ ಭೂಮ ಭವ್ಯ ಸೌಂದರ‍್ಯದಾರಾಧನೆಗೆ!
ನೋಡ, ಸುಮ್ಮನೆ ನೋಡ; ಮಾತಿಲ್ಲಿದೆಯೆ ನೋಡ:
ಈ ದೃಶ್ಯ ಮಾಧುರ‍್ಯದಿದಿರಿನಲಿ ಕರ್ಕಶಂ
ಕವಿಯ ವಾಣಿಯು ಕೂಡ!
ನೋಡು, ಸುಮ್ಮನೆ ನೋಡು;
ದೃಶ್ಯದಲಿ ತಲ್ಲೀನನಪ್ಪನ್ನೆಗಂ ನೋಡು!
ಅದರೊಳೊಂದಾಗುವುದೆ ಪರಮ ರಸಿಕತೆ; ಅದಕೆ
ಮಿಗಿಲಹ ರಸಾನಂದ ಮತ್ತೆ ಬೇರೊಂದಿಲ್ಲ!
ಕುವೆಂಪು ಅವರ ಸೂರ್ಯೋದಯ ಗೀತೆಗಳ ಬಗ್ಗೆ ಎಸ್.ವಿ.ಪಿ.ಯವರು, ’ವಿಜ್ಞಾನಿಯಾಗಿ, ತತ್ವಜ್ಞಾನಿಯಾಗಿ, ಎಲ್ಲಕ್ಕೂ ಮಿಗಿಲಾಗಿ ಕವಿಯಾಗಿ ಕುವೆಂಪು ದರ್ಶೀಸಿದ ವಾಸ್ತವ ಲೋಕದ ಚಿತ್ರ ಇಲ್ಲಿದೆ. ವಾಸ್ತವಜಗತ್ತು, ಅದನ್ನು ನೋಡಿದ ಕವಿಯ ಮನದಲ್ಲಿ ಮೂಡಿದ ಭಾವ, ಆ ಭಾವದಲ್ಲಿ ಬಾಹ್ಯವನ್ನು ಮರೆತು, ಆ ಸೌಂದರ್ಯ ಸನ್ನಿಧಿಯಲ್ಲಿ ತಲ್ಲೀನನಾಗಿ ಆ ಮುಂದೆ ರಸಾನಂದದ ಪರಿಣಾಮ ಸುಖವನ್ನು ಪಡೆಯುವುದು, ಈ ಕ್ರಮದಲ್ಲಿ ಈ ಗೀತೆಗಳ ವಸ್ತುವಿನ್ಯಾಸವಿದೆ’ ಎಂದಿದ್ದಾರೆ. ಮುಂದುವರೆದು, ’ಕವಿಯ ವೈಯಕ್ತಿಕವಾದ ಅನುಭವ ವಿಶೇಷಗಳನ್ನು ಇಲ್ಲಿ ಕಾಣುವುದರಿಂದ ಇವು ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ನಮಗೆ ಕಣ್ಣಿಗೆ ಕಟ್ಟಿಕೊಡುತ್ತವೆ. ಮೂರ್ತಿಮತ್ತಾಗಿ ಇಲ್ಲಿ ವರ್ಣಿಸಿದ ಚಿತ್ರಗಳು ನಮ್ಮ ಮನಃಪಟಲದ ಮೇಳೆ ಅಚ್ಚೊತ್ತಿದಂತೆ ಮೂಡಿ ನಿಲ್ಲುತ್ತವೆ. ಉದಯದ ಚಿತ್ರಗಾರನಿಗೆ ಬೇಕಾದ ಎಲ್ಲ ವಿವರಗಳನ್ನೂ ವಿಷಯಕ್ಕೆ ಒದಗಿಸಿಕೊಡುವಂತೆ ಈ ವರ್ಣನೆಗಳಿವೆ’ ಎಂದಿದ್ದಾರೆ. ಸೂರ್ಯೋದಯೋತ್ತರ ಮತ್ತು ಸೂರ್ಯೋದಯವನ್ನು, ಪೂರ್ವದಿಕ್ಕಿನ ವರ್ಣವೈವಿಧ್ಯವನ್ನು ಅಪೂರ್ವವಾಗಿ ವರ್ಣಿಸಿರುವ ಈ ಗೀತೆಗಳು ಒಂದು ದೃಷ್ಟಿಯಲ್ಲಿ ಸಾಕ್ಷಿಚಿತ್ರಗಳೇ ಆಗಿವೆ.

’ಕೆಂಬೆಳಕು ಮತ್ತಿನಿತು ಉದ್ದೀಪನವಾಗಿ ನೋಡುತ್ತಿರೆಯಿರೆ ದಿವಾಕರನ ರಕ್ತಾಕ್ತ ವಿಶಾಲ ಬಿಂಬದ ನೇಮಿರೇಖೆ ಸುದೂರದೂರದ ಪರ್ವತಶೀಖರಗಳ ಮೇಲೆ ಹಠಾತ್ತಾಗಿ ಪ್ರತ್ಯಕ್ಷವಾಯಿತು! ತಳತಳಿಸುವ ಮಿಂಚಿನ ವಕ್ರರೇಖೆಯಂತೆ ಹೊರಮೂಡಿದ ದಿನೇಶನು ನೋಡೆ ನೋಡೆ ಕುಂಕುಮದಲ್ಲಿ ಮಿಂದು ಮಿಂಚಿನುಂಡೆಯಾದನು!’ ಕವಿಯ ಈ ಮಾತುಗಳ ದೃಶ್ಯರೂಪವನ್ನು ಕೆಳಗಿನ ವಿಡಿಯೋ ತುಣುಕಿನಲ್ಲಿ ಕಾಣಬಹುದು.
http://nandondmatu.blogspot.in/2008/12/blog-post_12.html

Monday, January 23, 2012

ವಿಶ್ವಕಾವ್ಯದಷ್ಪಷ್ಟ ಪೂರ್ಣತೆಯಲ್ಲಿ, ಸ್ಪಷ್ಟವ್ಯಕ್ತಿತ್ವದಾಕಾಂಕ್ಷೆ

ಭೂತದ ಸಿಲೇಟು ಎಂದು ಕರೆಯಲ್ಪಡುತ್ತಿದ್ದ ದೊಡ್ಡ ಚಪ್ಪಟೆಯಾಕಾರದ ವಿಶಾಲ ಕಲ್ಲು, ಗುಡ್ಡದ ಓರೆಯಲ್ಲಿ ನೆಲಕ್ಕೆ ಹಾಸಿದಂತೆ ಸಣ್ಣ ಸಣ್ಣ ಚಪ್ಪಡಿಗಳು ಇದ್ದು ಕಲ್ಲುಗಳೇ ದಿಬ್ಬಣವಾಗಿ ಸಾಗುತ್ತಿರುವಂತೆ ಕಾಣುವ ದಿಬ್ಬಣದಕಲ್ಲು, ಹಾಗೂ ಆಳೆತ್ತರದ ಮನುಷ್ಯಾಕೃತಿ ಕಲ್ಲು, ಇವೆಲ್ಲಾ ಕವಿಶೈಲದ ಮೇಲೆ ನಿಮಗೆ ಕಾಣುವ ನೈಸರ್ಗಿಕ ದೃಶ್ಯಗಳು. ಈಗ ಇಲ್ಲದ ಬೂರುಗದ ಮರ ಕುವೆಂಪು ಸಾಹಿತ್ಯದಲ್ಲಿ ಹೊಸಹುಟ್ಟು ಪಡೆದುಕೊಂಡಿದೆ! ಇವುಗಳಲ್ಲಿ ಭೂತದ ಸಿಲೇಟು ಮತ್ತು ದಿಬ್ಬಣದ ಕಲ್ಲು ಎಂಬುವು ಹಳ್ಳಿಯ ಪ್ರತಿಭೆ ಗುರುತಿಸಿದ ಹೆಸರುಗಳಾಗಿದ್ದರೆ, ಕವಿಶೈಲ ಮತ್ತು ಶಿಲಾತಪಸ್ವಿ (ಆಳೆತ್ತರದ ಮನುಷ್ಯಾಕೃತಿ ಕಲ್ಲು) ಎಂಬುವು ಕವಿ ಕುವೆಂಪು ಆರೋಪಿಸಿದ ಹೆಸರುಗಳು. ಇಂದಿಗೂ ಅಲ್ಲಿಗೆ ಬರುವ ಪ್ರವಾಸಿಗರು, ಮಲೆನಾಡಿನ ಚಿತ್ರಗಳೂ ಕೃತಿಯನ್ನು ಓದಿದವರಾಗಿದ್ದರೆ, ಮೇಲಿನ ಎಲ್ಲಾ ಸ್ಥಳಗನ್ನು ಗುರುತಿಸಿ ಮಾತನಾಡುವುದನ್ನು ನಾನು ನೋಡಿದ್ದೇನೆ. ಕವಿಶೈಲದ ಮೇಲೆ ಗದ್ಯ ಪದ್ಯಗಳೆರಡರಲ್ಲೂ ಕುವೆಂಪು ಪ್ರತಿಭೆ ಲಾಸ್ಯವಾಡಿಬಿಟ್ಟಿದೆ. ಮನುಷ್ಯಾಕೃತಿಯ ಆಳೆತ್ತರದ ಕಲ್ಲು ಕವಿಗೆ 'ಶಿಲಾತಪಸ್ವಿ'ಯಾಗಿ ಕಂಡಿದೆ. ಶಿಲಾತಪಸ್ವಿ ಎಂಬ ಕವಿತೆ ೩-೩-೧೯೩೧ರ ರಚನೆಯಾಗಿದೆ. 28-2-1931 ರಿಂದ 7-3-1931ರವರೆಗೆ ಕವಿಯ ದಿನಚರಿ ದಾಖಲಾಗಿಲ್ಲ. ೨೮-೨-೧೯೩೧ರ ದಿನಚರಿಯ ಪ್ರಕಾರ ಕುಪ್ಪಳಿ ಮನೆ ಜಮೀನು ವಿಷಯದಲ್ಲಿ ಕಾನೂನು ಪ್ರಕಾರ ವ್ಯವಹರಿಸುವುದಕ್ಕೆ ಸಹೋದರ ವೆಂಕಟಯ್ಯನಿಗೆ ಪವರ್ ಆಫ್ ಅಟಾರ್ನಿ ಕಳುಹಿಸಿದ್ದನ್ನು ದಾಖಲಾಗಿದೆ. ೮-೩-೧೯೩೧ರ ದಿನಚರಿಯ ಪ್ರಕಾರ ಮೈಸೂರಿನಲ್ಲಿಯೇ ಕವಿ ಇದ್ದರು. ಬಹುಶಃ ಶಿಲಾತಪಸ್ವಿ ಕವಿತೆ ರಚನೆಯಾದಾಗ ಕವಿಶೈಲದ ಆಳೆತ್ತರದ ಮನುಷ್ಯಾಕೃತಿಯ ಕಲ್ಲು - ಶಿಲಾತಪಸ್ವಿ - ಕವಿಯ ಎದುರಿಗೆ ಇರಲಿಲ್ಲ ಅನ್ನಿಸುತ್ತದೆ. ಕುಪ್ಪಳಿಯಲ್ಲಿದ್ದ ದಿನಗಳಲ್ಲಿ ಬೆಳೆಗು ಬೈಗು ಕವಿಶೈಲದಲ್ಲಿ ಕಾಣುತ್ತಿದ್ದ ಆ ಕಲ್ಲು ಕವಿಯ ಮನೋಭಿತ್ತಿಯ ಮೇಲೆ ಏನೇನು ಪ್ರಭಾವ ಬೀರಿತ್ತೋ ಏನೋ? ಒಂದೇ ಬೀಸಿನಲ್ಲಿ ಸುಮಾರು ೧೫೫ ಸಾಲುಗಳ ದೀರ್ಘ ಕವಿತೆ ರಚಿತವಾಗಿದೆ. ಈ ಸೃಷ್ಟಿಯ ಉಗಮ ಮತ್ತು ವಿಕಾಸವನ್ನು ವಿಜ್ಞಾನ ಮತ್ತು ಉಪನಿಷತ್ತುಗಳ ಹಿನ್ನೆಲೆಯಿಂದ ವ್ಯಾಖ್ಯಾನಿಸುತ್ತದೆ–ಒಂದು ಕಥನ ರೂಪದಲ್ಲಿ.
ವ್ಯೋಮ ಮಂಡಿತ ಸಹ್ಯಶೈಲಾಗ್ರದಡವಿಯಲಿ
ಸಂಚರಿಸುತಿರೆ, ಸಂಜೆ ಪಶ್ಚಿಮ ದಿಗಂತದಲಿ
ಕೆನ್ನಗೆಯ ಬೀರಿತ್ತು. ರವಿ ಮುಳುಗುತಿರ‍್ದಂ;
ಎಂದು ಪ್ರಾರಂಭವಾಗುವ ಕವಿತೆಯ ಮೊದಲ ಭಾಗದಲ್ಲಿ ಸೂರ್ಯಾಸ್ತದ ವರ್ಣವೈಭವವನ್ನು ಕಾಣಬಹುದು. ಆಗ, ಧನ್ಯಂ ನಾನೆಂದು ತೇಲುತಿರೆ ಸೌಂದರ್ಯಪೂರದಲಿ ಕವಿಗೆ ಒಂದು ದನಿ ಕೇಳಿಸಿತ್ತದೆ. ಹಾಗೆಯೆ ಮೊರಡಾದ ಮನುಜನಾಕಾರದಲ್ಲಿ ಶಿಲೆಯೊಂದು ಕಾಣಿಸುತ್ತದೆ. ಆ ಶಿಲೆ ’ಓ ಕಬ್ಬಿಗನೆ’ ಎಂದು ಕವಿಯನ್ನು ಕರೆದು ಹೀಗೆ ಹೇಳುತ್ತದೆ.
ತನ್ನಂ
ಕಲ್ಲು ಕರೆಯಿತು ಎಂದು ಬೆಚ್ಚದಿರು. ಮುನ್ನಂ,
ನಾವಿರ‍್ವರೊಂದೆ ಬಸಿರಿಂ ಬಂದು ಲೀಲೆಯಲಿ
ಮುಳುಗಿದೆವು ಸಂಸಾರ ಮಾಯಾಗ್ನಿ ಜ್ವಾಲೆಯಲಿ.
ನೀನು ಮರೆತಿರಬಹುದು, ಚೇತನದ ಸುಖದೊಳಿಹೆ;
ನಾನು ಮರೆತಿಲ್ಲದನು, ಜಡತನದ ಸೆರೆಯೊಳೊಹೆ!
ಆ ಕಲ್ಲು ಹಾಗೂ ಕವಿ ಇಬ್ಬರೂ ಸಹ್ಯಾದ್ರಿಯ ಬಸಿರಿಂದುದಯಿಸಿದವರೆ! ಆ ಕಲ್ಲು ಕಿತ್ತಡಿಯ (ಸನ್ಯಾಸಿ, ತಪಸ್ವಿ) ನುಡಿಯನ್ನು ಕೇಳಿ ಕವಿ ಆಶ್ಚರ್ಯದಲ್ಲಿ ನಿಲ್ಲುತ್ತಾರೆ. ಹರಳುಗಂಬನಿಯುರುಳಿಸುತ್ತ ಜಗತ್ತಿನ ಸೃಷ್ಟಿಪೂರ್ವ ಸ್ಥಿತಿಯ ಬಗ್ಗೆ, ಮಹಾಸ್ಫೋಟದ ನಂತರದ ಸೃಷ್ಟಿಯ ಬಗ್ಗೆ ಬಂಡೆ ಮಾತನಾಡುತ್ತದೆ. ಹೊನಲು ಹರಿವಂದದಲಿ ಆಕಾಶವನ್ನು ತುಂಬಿದ ಆ ವಾಣಿಗೆ ಗಿರಿವನಶ್ರೇಣಿ, ಮರಗಿಡಗಳು ಎಲ್ಲವೂ ಅನುಕಂಪವನ್ನು ತೋರಿ ನಿಂತು ಆಲಿಸುತ್ತಿರುವಂತೆ ಕವಿಗೆ ಭಾಸವಾಗುತ್ತದೆ.
ಕಾಲವಲ್ಲಿರಲಿಲ್ಲ; ದೇಶವಲ್ಲಿರಲಿಲ್ಲ;
ಗ್ರಹಕೋಟಿ ಶಶಿಸೂರ್ಯ ತಾರಕೆಗಳಿರಲಿಲ್ಲ;
ಬೆಳಕು ಕತ್ತಲೆ ಎಂಬ ಭೇದವಿನಿತಿರಲಿಲ್ಲ.
ಮಮಕಾರ ಶೂನ್ಯದಲಿ ಮುಳುಗಿದ್ದುವೆಲ್ಲ.
ಮೂಡಿದುದು ಮೊದಲು ಮಮಕಾರವೆಂಬುವ ಮಾಯೆ;
ಬೆಂಕೊಂಡು ತೋರಿದುದು ಸೃಷ್ಟಿ ಎಂಬುವ ಛಾಯೆ.
ಕಾಲದೇಶದ ಕಡಲ ಕಡೆಹದಲಿ ಸಿಕ್ಕಿ
ಆದಿಮ ಲಯಾಗ್ನಿ ಹೊರಹೊಮ್ಮಿದುದು. ಉಕ್ಕಿ
ಸುತ್ತಿದುದು; ಚಿಮ್ಮಿದುದು ದೆಸೆದೆಸೆದೆಸೆಗೆ ಹಬ್ಬಿ
ಘೂರ್ಣಿಸುತೆ ವಿಶ್ವದ ಅನಂತತೆಯನೇ ತಬ್ಬಿ.
ಅಂದು ಮೊತ್ತಮೊದಲಬಾರಿಗೆ ಉಂಟಾದ ಮಹಾಸ್ಫೋಟದಿಂದ ಚಿಮ್ಮಿದ ಲಯಾಗ್ನಿಯ ಘನೀಕೃತ ರೂಪವೇ ಕಲ್ಲು! ಹಾಗೆ ಸೃಷ್ಟಿಯಾದ ಕಲ್ಲು
ಆ ವಿಶ್ವಕಾವ್ಯದಷ್ಪಷ್ಟ ಪೂರ್ಣತೆಯಲ್ಲಿ,
ಸ್ಪಷ್ಟವ್ಯಕ್ತಿತ್ವದಾಕಾಂಕ್ಷೆಯಿಂ, ನಿಂದಲ್ಲಿ
ನಿಲದೆ ಸಂಚರಿಸಿದೆವು ಆ ಅಗ್ನಿಜದಲ್ಲಿ:
ನೋಡಿನ್ನುಮಿಹುದಾ ಕಲೆ ನನ್ನ ಎದೆಯಲ್ಲಿ!
......................................................
ಆ ಸನಾತನ ಶೈಲತಪಸಿಯೆದೆಯಾಳದಲಿ
ಯುಗಯುಗಗಳಿನ್ನುಮವಿತಿಹವಲ್ಲಿ.
ಕವಿಗೆ ದಿಗ್ಭ್ರಾಂತಿಯಾಗುತ್ತದೆ. ಮುಂದೆ ನಡೆದುದ್ದು ಒಂದು ರೀತಿಯಲ್ಲಿ ಉಳಿವಿಗಾಗಿ ಹೋರಾಟ!
ಹರಿದು ಭೋರಿಡುವ ಆ ಅಗ್ನಿಪ್ರವಾಹಂ
ದಿಕ್ಕುದಿಕ್ಕಿಗೆ ಸಿಡಿದೊಡೆದು, ದೇಶದೇಹಂ
ಗ್ರಹಭೂಮಿ ಶಶಿಸೂರ್ಯ ತಾರಾಖಚಿತಮಾಯ್ತು!
ನನಗೆ ಈ ಭೂಗರ್ಭವೇ ಸೆರೆಯ ಮನೆಯಾಯ್ತು!
ಕಲ್ಪಕಲ್ಪಗಳಿಂದ ನಾನಿಲ್ಲಿ ಸೆರೆಯಾಗಿ
ನರಳಿದೆನು ಕತ್ತಲಲಿ. ಜ್ಯೋತಿದರ್ಶನಕಾಗಿ
ಮೊರೆಯಿಟ್ಟುಕೂಗುತಿರೆ, ಕಲ್ಲೆನಗೆ ಮೈಯಾಗಿ
ಕಡೆಗಿಲ್ಲಿ ನೆಲೆಸಿದೆನು.
ಮಹಾಸ್ಪೋಟದ ನಂತರ ಅಗಣಿತ ಆಕಾಶಕಾಯಗಳು ನಿರಂತರ ಸುತ್ತುತ್ತಲ್ಲೇ, ಕೆಲವು ಶಕ್ತಿಕೇಂದ್ರಗಳಾಗಿ, ಹಲವು ಶಕ್ತಿಕೇಂದ್ರಗಳ ಸುತ್ತ ಸುತ್ತುತ್ತಲೇ ತಮ್ಮ ತಮ್ಮ ಅಸ್ತಿತ್ವವನ್ನು ಸ್ಥಾಪಿಸತೊಡಗಿದ್ದನ್ನು ಹೇಳುತ್ತದೆ. ಮಹಾಸ್ಫೋಟದ ನಂತರ ಉಳಿವಿಗಾಗಿ ನಡೆದ ಹೋರಾಟದಲ್ಲಿ ಕಲ್ಲನಗೆ ಮೈಯಾಗಿ ಕಡೆಗಿಲ್ಲಿ ನೆಲೆಸಿದನು ಎಂದ ಈ ಶಿಲೆಗೆ ದೊರೆತ ಜಾಗ ಈ ಭೂಗರ್ಭ! ಕವಿತೆಯ ಈ ಭಾಗ ಕುವೆಂಪು ಅವರ ವಿಜ್ಞಾನನಿಷ್ಠೆಯನ್ನು ಎತ್ತಿ ತೋರಿಸುತ್ತದೆ. ಹೀಗಿರುವಾಗಲೇ ವಿಕಾಸವಾದ ಶುರುವಾಗಿಬಿಡುತ್ತದೆ! ಆ ಶಿಲೆಯ ಸೋದರರೆಲ್ಲ ಮರಗಿಡಗಳ ರೂಪದಲ್ಲಿ, ಪ್ರಾಣಿರೂಪದಲ್ಲಿ, ನರರಾಕೃತಿಯಲ್ಲಿ ಮೂಡುತ್ತಾರೆ. ಶಿಲೆಗೆ ಜೊತೆಯಾಗುತ್ತಾರೆ.
ನನ್ನ ಸೋದರರೆಲ್ಲ ಮರಗಿಡಗಳಂದದಲಿ
ಮೂಡಿದರು; ಉಸಿರೆಳೆದು ಬೆಳೆಬೆಳೆದು ಚಂದಲಿ
ನಲಿದಾಡಿದರು; ಕೆಲರು ಸ್ವಪ್ನವನು ಸೀಳಿ
ತಿರುಗಾಡಿದರು ಪ್ರಾಣಿರೂಪವನು ತಾಳಿ;
ಮೆಲ್ಲಮೆಲ್ಲನೆ ಕೆಲರು ನರರಾಕೃತಿಯ ತಳೆದು
ತಪ್ಪು ಹಾದಿಯೊಳೆನಿತೊ ಶತಮಾನಗಳ ಕಳೆದು
ನಾಗರಿಕರಾದರೈ ಬುದ್ಧಿ ಶಕ್ತಿಯ ತೋರಿ!
ಮನುಷ್ಯಾಕೃತಿಯ ಕಲ್ಲನ್ನು ನೋಡುತ್ತಲೇ ಕವಿಗೆ ಜಗತ್ಸೃಷ್ಟಿಯ ರಹಸ್ಯದ ಒಂದೆಳೆ, ನಾಗರಿಕತೆಯ ಉಗಮದ ಇನ್ನಂದೆಳೆ ಗೋಚರಿಸಿಬಿಡುತ್ತದೆ! ಆ ಆದಿಶಿಲೆಗೆ ಈ ಜೀವಚೈತನ್ಯದ ಭೂಮಿಯ ಬದುಕಿನ ಮುಂದೆ ವಿಶ್ವದ ಸರ್ವಸ್ವವೂ ಕೀಳಾಗಿ, ದಾಸ್ಯವೆಂಬಂತೆ ಕಾಣುತ್ತದೆ. ಕ್ರಿಮಿಯೊಂದರಲ್ಲಿರುವ ಚೇತನದ ಕಣವಿಲ್ಲದ ಗ್ರಹ ತಾರೆಗಳು. ನೇಸರ್ಗೆ ಕ್ರಿಮಿಗಿರದ ದಾಸ್ಯಂ! ಸೂರ್ಯನದ್ದೂ ದಾಸ್ಯವೇ? ಆದ್ದರಿಂದ ಯುಗಜೀವಿಯಾದರೂ ತನ್ನಿಚ್ಛೆ ಏನೆಂಬುದರಿಹದಿಹ ದಾಸ್ಯ ಸಾವಿಗಿಂತ ಮಿಗಿಲು. ಎಲ್ಲ ಜಡತೆಯ ಬಯಕೆ ಚೈತನ್ಯದ ಸಿದ್ಧಿಯೇ ಆಗಿರುತ್ತದೆ. ಅದನ್ನು ಮೊದಲು ಅರಿತವನೇ ಮಾನವ! ಜಡತನಕೆ ಬೇಸತ್ತು ಜೀವಚೈತನ್ಯವನ್ನು ಆಶಿಸಿಸುತ್ತಿದ್ದ ಶಿಲೆ ಕವಿಯನ್ನು ಸಹೋದರ ಎಂದು ಸಂಬೋಧಿಸಿ ಮುಂದುವರೆಯುತ್ತದೆ.
ಶಿಲ್ಪಿಯೊರ್ವನು ಇಲ್ಲಿ ತಿರುಗುತ್ತೆ
ಬಂದು, ಮರುಗುತ್ತೆ ನನಗೆ, ಬಂಡೆಯನು ಕಡೆದು
ಬಿಡಿಸಿದನು. ನಾನು ಈ ರೂಪವನು ಪಡೆದು
ಕಲೆಯ ಸಾನ್ನಿಧ್ಯದಲಿ ಒಂದಿನಿತು ಕಣ್ದೆರೆದು,
ಪೂರ್ವಬಂಧದ ಶಿಲಾಕ್ಲೇಶವನು ನಸುತೊರೆದು
ಚೇತನದ ಛಾಯೆಯನು ಸವಿಯತೊಡಗಿದೆನಂದು.
(ಕಲ್ಗೆ ಕಣ್ಣಿತ್ತ ಆ ಕಲೆಯೆನಗತುಲ ಬಂಧು!)
ಕಲೆಯ ಕಣ್ಣಿರದ ನರರಿಗೆ ನಾನು ಬರಿ ಕಲ್ಲು;
ಕವಿಯನುಳಿದಾರಿಗೂ ಕೇಳದೆನ್ನೀ ಸೊಲ್ಲು!
ಕಲೆಗಾರನಿಂದ ಸ್ವಲ್ಪಮಟ್ಟಿನ ಕಲಾರೂಪವನ್ನು ಪಡೆದು ಕಲ್ಲಿಗೆ ಸಂತಸ. ಬಹುಶಃ ಆ ಕಲೆಗಾರ ಪ್ರಕೃತಿಯೇ ಇರಬೇಕು! (ಶಿಲಾತಪಸ್ವಿ ಬಂಡೆಯ ಹತ್ತಿರ ತಿಮ್ಮಪ್ಪ ಅನ್ನುವ ಹೆಸರು ಮಸುಕು ಮಸುಕಾಗಿ ಕಾಣುತ್ತದೆ. ಕುವೆಂಪು ಅವರ ಎಳೆವೆಯ ಗೆಳೆಯ. ಮಲೆನಾಡಿನ ಚಿತ್ರಗಳು ಓದಿದವರಿಗೆ ಗೊತ್ತಲ್ಲ. - ಓ.ಎಲ್.ಎನ್.)ಕಲ್ಲು ಈಗ ಚಂದ್ರ-ಸೂರ್ಯೋದಯ ಚಂದ್ರ-ಸೂರ್ಯಾಸ್ತ ಹಕ್ಕಿಯ ದನಿ, ದುಂಬಿಯ ಝೇಂಕಾರ ಬೀಸುವ ತಂಗಾಳಿ ಎಲ್ಲವನ್ನು ಅನುಭವಿಸಬಲ್ಲದು, ಕಲೆಯ ಕಾರಣದಿಂದ! ಅಷ್ಟಕ್ಕೂ ತೃಪ್ತವಾಗದ ಆ ಶಿಲಾತಪಸ್ವಿಗೂ ಒಂದು ಕನಸಿದೆ. ಆ ಕನಸಿನೀಡೇರಿಕೆಗೆ ಕವಿಯ ನರವನ್ನು ಅದು ಯಾಚಿಸುತ್ತದೆ, ಹೀಗೆ:
ಒಂದಿಲ್ಲ
ಒಂದು ದಿನ ಮುಂದೆ ನಿನ್ನಂತೆ ತಿರುಗಾಡುವೆನು;
ಕವಿಯಾಗಿ ಕನ್ನಡದ ಕವನಗಳ ಮಾಡುವೆನು;
ಮಾಡಿ, ನಿನ್ನಂತೆಯೇ ಜನಗಳಿಗೆ ಹಾಡುವೆನು!
ಅದಕಾಗಿ, ಓ ಕವಿಯೆ, ನಿನ್ನ ನೆರವನು ಬೇಡಿ
ಕರೆದಿನಿಂದೀಯೆಡೆಗೆ; ನೀನಿಲ್ಲಿಗೈತಂದು
ನಿತ್ಯವೂ ನನಗಾಗಿ ನಿನ್ನ ರಚನೆಯಾ ಹಾಡಿ
ಕಲೆಯ ಸಾನ್ನಿಧ್ಯದಿಂದೆನಗೆ ನರತನ ಬಂದು,
ನಿನ್ನಂತೆಯೇ ನಾನು ಚೇತನದ ಮುಕ್ತಿಯಂ!
ಪಡೆದು ನಲಿವಂದದಲಿ ನೀಡೆನಗೆ ಶಕ್ತಿಯಂ!
ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ,
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ.
ಮನುಜರಿಗೆ ಸೊಗಮೀವ ಕರ‍್ತವ್ಯವೊಂದೆ
ನಿನ್ನೆದೆಂದರಿಯದಿರು; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವವು; ಏಕೆನೆ ಕವನದಿಂದೆ
ಕಲ್ಗಳೂ ವಾಲ್ಮೀಕಿಯಾಗಿಹವು ಹಿಂದೆ!
ಕವಿ ಮಾತಳಿಯಾಗುತ್ತಾನೆ! ಕೇವಲ ಕಲ್ಲನ್ನು ಕೈಯಿಂದ ಸ್ಪರ್ಶಿಸುತ್ತಾನೆ, ಸಾಂತ್ವಾನಗೈವುವನಂತೆ. ನಾಳೆಯಿಂದ ಕವಿಗೆ ನಿತ್ಯವೂ ಆ ಶಿಲಾತಪಸ್ವಿಯನ್ನು ಕಂಡು ಮಾತನಾಡುವ ಸಂಕಲ್ಪ ಮೂಡುತ್ತದೆ.
ಕಲ್ಲುಗೆಳೆಯ ಬಿಡದೆ
ಕಂಡು ಮಾತಾಡುವೆನು; ಕವನಗಳ ಹಾಡುವೆನು!
ಶಿಲೆಯು ಕಲೆಯಪ್ಪನ್ನೆವರಮಾನು ಹಾಡುವೆನು!
ಎಂದು ಕವಿತೆ ಮುಗಿಯುತ್ತದೆ. ಕಲೆಯ ಅಂತಿಮ ಗುರಿ ಜಡದಲ್ಲೂ ಚೇತನವನ್ನರಳುಸುವುದೇ ಅಲ್ಲವೇ? ಶ್ರೀ ಎಸ್.ವಿ.ಪಿ.ಯವರು ಈ ಕವಿತೆಯ ಬಗ್ಗೆ ಬರೆಯುತ್ತಾ ಹೀಗೆ ಹೇಳಿದ್ದಾರೆ: ಭೌತಶಾಸ್ತ್ರ, ಶಿಲಾಶಾಸ್ತ್ರ, ಜೀವಶಾಸ್ತ್ರಗಳ ಅಧ್ಯಯನದಿಂದ ಜ್ಞಾನ ಸಂಪನ್ನನಾದ ವಿಜ್ಞಾನಿ ಅಗ್ನಿಶಿಲೆ, ವರುಣಶಿಲೆ, ರೂಪಾಂತರಶಿಲೆಯ ವಿಷಯವಾಗಿ ಗ್ರಹಿಸುವ ಭಾವಗಳನ್ನೆಲ್ಲಾ ಕವಿ ಕುವೆಂಪು ಇಲ್ಲಿ ಹೃದ್ಯವಾಗಿ ಅನುಭವಸತ್ಯದ ರಸದರ್ಶನ ವಿಧಾನದಿಂದ ಕಂಡು ತಿಳಿಸಿದ್ದಾರೆ. ಈಗ ಸುಮಾರು ಇನ್ನೂರು ಕೋಟಿ ವರುಷಗಳ ಹಿಂದೆ ಇದ್ದ ನಮ್ಮ ಭೂಮಂಡಲದ ಸ್ಥಿತಿಯಿಂದ ಮೊನ್ನೆ ನಿನ್ನೆ ಇವತ್ತಿನ ಭೂಮಂಡಲದ ಸ್ಥಿತಿಯವರೆಗಿನ ಒಂದು ಚರಿತ್ರೆ ಇಲ್ಲಿ ಕಾಣಬರುತ್ತದೆ. ನಿರ್ಜೀವಕಲ್ಪದಿಂದ ಮಾನವಜೀವಕಲ್ಪದವರೆಗೆ ಬರುವ ಶಿಲೆಯ ಚರಿತ್ರೆ ಇಲ್ಲಿದೆ. ಇದೊಂದು ’ಋಷಿಕವಿಯ ರಸತಪಸ್ಸಿನ ಬಲದಿಂದ ಅನುಭವವೇದ್ಯವಾದ ವಿಜ್ಞಾನಸತ್ಯದ ಬೃಹತ್ಕಥೆ.’ ‘ಎಲ್ಲ ಜಡತೆಯ ಬಯಕೆಯೂ ಚೈತನ್ಯ ಸಿದ್ಧಿಯೇ’ ಎನ್ನುವ ಈ ಚಿಂತನಸ್ಫುರಣೆ ಕ್ರಮೇಣ, ಇರುವುದೆಲ್ಲವೂ ಚೈತನ್ಯವೇ–ಎನ್ನುವ ‘ದರ್ಶನ’ವಾಗಿ ಅವರ ಸಾಹಿತ್ಯದಲ್ಲಿ ಅಭಿವ್ಯಕ್ತವಾಗಿರುವುದನ್ನು ಗುರುತಿಸಬಹುದು.
ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲೂ ಅಹಲ್ಯೆಯನ್ನು ಶಿಲಾತಪಸ್ವಿನಿ ಎಂದು ಕವಿ ಕರೆದಿದ್ದಾರೆ. ರಾಮನಾಗಮನದಿಂದ ಆಕೆಯ ಶಿಲಾತಮ ಕಠೋರ ತಪಸ್ಸು ಕೊನೆಗೊಳ್ಳುತ್ತದೆ.
ದಿವ್ಯ ಮಾಯಾ ಶಿಲ್ಪಿ
ಕಲ್ಪನಾ ದೇವಿಯಂ ಕಲ್ಲಸೆರೆಯಿಂ ಬಿಡಿಸಿ
ಕೃತಿಸಿದನೆನಲ್, ರಘುತನೂಜನಡಿದಾವರೆಗೆ
ಹಣೆಮಣಿದು ನಿಂದುದೊರ್ವ ತಪಸ್ವಿನೀ ವಿಗ್ರಹಂ,
ಪಾಲ್ ಬಿಳಿಯ ನಾರುಡೆಯ, ರ್ಪಿರುಳ ಸೋರ‍್ಮುಡಿಯ,
ಪೊಳೆವ ನೋಂಪಿಯ ಮೊಗದ ಮಂಜು ಮಾಂಗಲ್ಯದಿಂ.
ಪೆತ್ತ ತಾಯಂ ಮತ್ತೆ ತಾನೆ ಪಡೆದಂತಾಗೆ
ನಮಿಸಿದನೊ ರಘುಜನುಂ ಗೌತಮ ಸತಿಯ ಪದಕೆ,
ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ!
ಕವಿಶೈಲದಲ್ಲಿ ಈಗ ಇಲ್ಲದ, ಆದರೆ ಹಿಂದೆ ಇದ್ದ ಬೂರುಗದ ಮರವೊಂದರ ಬಗ್ಗೆ ಕವಿಯ ಮಾತುಗಳನ್ನು ಶ್ರೀಮತಿ ತಾರಿಣಿಯವರು ದಾಖಲಿಸಿದ್ದಾರೆ. ತಂದೆಯೊಂದಿಗೆ ಕುಪ್ಪಳಿ ಪರಿಸರವನ್ನು ಸುತ್ತುವುದಕ್ಕೆ ಹೋದಾಗ ಕವಿ, ಶಿಲಾತಪಸ್ವಿ ಕವಿತೆಗೆ ಪ್ರಭಾವ ಬೀರಿದ ಮನುಷ್ಯಾಕೃತಿಯ ಆಳೆತ್ತರದ ಕಲ್ಲು ಮತ್ತು ಬೂರುಗದ ಮರವಿದ್ದ ಜಾಗವನ್ನು ತೋರಿಸುತ್ತಾರೆ. ಒಂದು ದಿನ ಬೂರುಗದ ಮರದ ಬಳಿ ತಾನು ಕಂಡ ದೃಶ್ಯವನ್ನು ಈ ರೀತಿ ವಿವರಿಸಿದ್ದಾರೆ: ಒಮ್ಮೆ ಬೇಸಗೆ ರಜಕ್ಕೆ ಬಂದಾಗ ಇಲ್ಲಿ ಕಾಳ್ಗಿಚ್ಚಿನಿಂದ ಸುಟ್ಟ ನೆಲ ಕರಿಯಾಗಿತ್ತು. ಬೂರುಗದ ಮರದಿಂದ ಕಾಯೊಡೆದು ಹತ್ತಿ ರಾಶಿ ರಾಶಿ ಕರಿಯ ನೆಲದ ಮೇಲೆ ಬಿಳಿಯಾಗಿ ಅರಳೆ ಚಲ್ಲಿತ್ತು. ಅದನ್ನೇ ನೋಡುತ್ತಾ ಅಲ್ಲಿಯೇ ಕಲ್ಲಿನ ಮೇಲೆ ಕುಳಿತಿದ್ದೆ. ಸ್ವಲ್ಪ ಹಒತ್ತಿಗೆ ಒಂದು ಸಣ್ಣ ಹಕ್ಕಿ ಬಂದು ಆ ಅರಳೆಯನ್ನು ಬಾಯಲ್ಲಿ ಕಚ್ಚಿಕೊಂಡು ಗೂಡುಕಟ್ಟಲು ಹಾರಿಹೋಯಿತು. ಈ ಎಲ್ಲ ಅನುಭವಗಳೇ ಶ್ರೀರಾಮಾಯಣದರ್ಶನಂನಲ್ಲಿ ಬಂದಿರುವುದು.
ಹೀಗೆ ಹೇಳುತ್ತಲೇ ಕವಿಶೈಲದ ನೆತ್ತಿಯ ಹತ್ತಿರ ಬಂದಾಗ ಒಂದು ಕಡೆ ಕೈ ತೋರಿ ’ಇಲ್ಲಿಯೇ ಇದ್ದುದ್ದು ಒಂದು ದೊಡ್ಡ ಬೂರುಗದ ಮರ’ ಎಂದು, ರಾಮಾಯಣದರ್ಶನಂನಲ್ಲಿ ಬರು ಆ ಭಾಗವನ್ನು ಹೇಳುತ್ತಾರೆ. ಕಿಷ್ಕಿಂದಾ ಸಂಪುಟದ ಸಂಚಿಕೆ ೯ ಸುಗ್ರೀವಾಜ್ಞೆಯಲ್ಲಿ ಬಂದಿರುವ ಆ ಸಾಲುಗಳು ಹೀಗಿವೆ.
ಎಲೆಯುದುರಿ ಬರಲಾದ ಬೂರುಗದ ಮರದಲ್ಲಿ
ಬಲಿತ ಕಾಯ್ ಓಡೊಡೆದು, ಬಿಸಿಲ ಕಾಯ್ಪಿಗೆ ಸಿಡಿದು,
ಹೊಮ್ಮಿತ್ತು ಸೂಸಿತ್ತು ಚಿಮ್ಮಿತ್ತು ಚೆದುರಿತ್ತು
ಚೆಲ್ಲಿತ್ತರಳೆಬೆಳ್ಪು, ಮಸಿಯ ಚೆಲ್ಲಿರ್ದವೊಲ್
ಕಾಳ್ಗಿಚ್ಚು ಕರಿಕುವರಿಸಿದ ನೆಲದ ಕರ್ಪಿನೊಳ್
ಚಿತ್ರಿಸಿ ಶರನ್ನೀರದೋಲ್ಮೆಯಂ. ದಾಂಪತ್ಯ
ಸುಖದಿ ತೃಪ್ತಿಯನಾಂತು ಬಸಿರ ನೋಂಪಿಯ ಸಿರಿಗೆ
ಗೂಡುಕಟ್ಟುವ ಚಿಟ್ಟೆಹಕ್ಕಿ ತಾನಾ ಹತ್ತಿಯಂ
ಮೊಟ್ಟೆಮರಿಗಳೀಗೆ ಮೆತ್ತೆಯನೆಸಗೆ ಕೊಕ್ಕಿನೊಳ್
ಕೊಂಡೊಯ್ದುದಾಯ್ತು. ಮುಳ್ ಪೊದೆಯ ಬೆಳ್ಮಾರಲಂ
ಕಾಯ್ ತುಂಬಿ ಹಣ್ತನಕೆ ಹಾರೈಸುತಿರ್ದುದಾ
ಹೊಸಮಳೆ ಹರಕೆಗಾಗಿ. ಬೆನ್ನು ಹೊಟ್ಟೆಗೆ ಹತ್ತಿ,
ಬಿಸಿಲ ಬೇಗೆಗೆ ಬತ್ತಿ, ಬರದ ಗರ ಬಡಿದಿರ್ದ ಕಲ್
ಕೊರಕು ಕಂಕಾಲತೆಯ ಮಲೆಯ ತೊರೆ ತಾನಲ್ಲಲ್ಲಿ
ತುಂಡು ತುಂಡಾಗಿ ತಂಗಿದುದುಡುಗಿ ಚಲನೆಯಯಂ:
ಬೇಸಗೆಯ ಧಗೆಗೆ ಚಾದಗೆಯಾದುದಯ್ ವಿಪಿನಗಿರಿ
ಭೂಮಿ!

Sunday, January 15, 2012

ದಿಗ್ವಧೂ ಭ್ರೂಮಧ್ಯೆ, ಕಾಣ್, ರಂಗುಮಾಣಿಕ ಬಿಂದು!

ಎಲ್ಲರಿಗೂ ಮಕರಸಂಕ್ರಾಂತಿಯ ಶುಭಾಶಯಗಳು.

ಕವಿಶೈಲದ ಬಗೆಗಿನ ಕವಿಯ ಪ್ರೇಮ ಬೆರಗು, ಅಲ್ಲಿ ಧ್ಯಾನಸ್ಥರಾಗಿ ಕಾಲ ದೇಶಗಳನ್ನು ಮೀರಿ ವಿಹರಿಸುವ ಮನಸ್ಸು ಎಲ್ಲವನ್ನೂ ಕವಿಶೈಲದ ಸಾನೆಟ್ಟುಗಳಲ್ಲಿ ನೋಡಿದೆವು. ಆದರೆ ಈ ಸಾನೆಟ್ಟುಗಳ ರಚನೆಯಾಗುವ ಸರಿಸುಮಾರು ಒಂದು ವರ್ಷಕ್ಕೆ ಮೊದಲೇ (೧೭-೫-೧೯೩೩) ರಚಿತವಾಗಿರುವ ’ಕವಿಶೈಲದಲ್ಲಿ ಸಂಧ್ಯೆ’ ಎಂಬ ಕವಿತೆಯನ್ನು ಓದದೆ, ಕವಿಶೈಲದ ಬಗೆಗಿನ ಕುತೂಹಲ ತಣಿಯುವುದಿಲ್ಲ.
ದೃಷ್ಟಿದಿಗಂತದ ಮೇರೆಯ ದಾಟಿ
ಗಗನದ ಮೇಘವಿತಾನವ ಮೀಟಿ
ದೂರಕೆ ದೂರಕೆ ಸುದೂರ ದೂರಕೆ
ಹಬ್ಬಿದೆ ಪರ್ವತ ದಿಗಂತ ಶೈಲಿ,
ಮೈಲಿ ಮೈಲಿ!
ಎಂದು ಕವಿತೆ ಆರಂಭವಾಗುತ್ತದೆ. ಕವಿಶೈಲದ ಶಿಖರವೇದಿಕೆಯಲ್ಲಿ ಕುಳಿತಾಗ ಕಣ್ಣೆದುರಿಗೆ ಬಿಚ್ಚಿಕೊಳ್ಳುವ ಗಗನಚುಂಬಿ ಸಹ್ಯಾದ್ರಿ ಶಿಖರತರಂಗಗಳ ವಿಸ್ತಾರದ ಅನಂತತೆಯ ಅಕ್ಷರೂಪ! ಮುಂದುವರೆದು ಕವಿಶೈಲದಿಂದ ಕಾಣುವ ಸಂಜೆಯ ರವಿ, ರವಿಯ ರಶ್ಮಿಯಿಂದ ದಿಗಂತದಲ್ಲಿ ಮೂಡುವ ವಿವಿಧ ವಿನ್ಯಾಸಗಳು, ಕವಿಶೈಲದಲ್ಲಿ ಒಬ್ಬನೇ ಇರುವ ಕವಿಗೆ ದೊರೆತ ಅನುಭವವನ್ನು ಕವನ ಕಟ್ಟಿಕೊಡುತ್ತದೆ.
ಪಶ್ಚಿಮ ಗಿರಿಶಿರದಲಿ ಸಂದ್ಯೆಯ ರವಿ;
ನಿರ್ಜನ ಕವಿಶೈಲದೊಳೊಬ್ಬನೆ ಕವಿ;
ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ,
ಅನಂತ ಶಾಂತಿ!
ಕವನ ರಚಿತವಾದ ಸುಮಾರು ಎರಡು ವರ್ಷಗಳ ನಂತರ, ಮಲೆನಾಡು ಯುವಕರ ಸಂಘದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬಂದು ಒಂದು ವಾರಗಳ ಕಾಲ ಕವಿ ಕುವೆಂಪುವನ್ನು ರೂಪಿಸಿದ ಮಲೆಯನಾಡನ್ನು ಪ್ರೀತಿಯಿಂದ ಸುತ್ತಿದ ಬಿ.ಎಂ.ಶ್ರೀ.ಯವರಿಗೆ ಕವಿಶೈಲದಲ್ಲಿ, ಕವಿ ಕೊಟ್ಟಿರುವ ಸಂಜೆಯ ವರ್ಣವಿಹಾರದ ಪ್ರತ್ಯಕ್ಷದರ್ಶನವಾಗುತ್ತದೆ. ಕಣ್ಣಮುಂದೆ ಕಾಣುತ್ತಿರುವುದನ್ನು ಅರಿಯಲು ಕವಿವರ್ಣನೆಯ ಅಗತ್ಯವೇ ಇರಲಿಲ್ಲ ಅನ್ನಿಸುವಷ್ಟು ಸಾದೃಶವಾಗಿತ್ತಂತೆ!
ಸೊಂಡಿಲ ಮೇಗಡೆ ಸೊಂಡಿಲ ಚಾಚಿ
ವಿಶಾಲ ವ್ಯೋಮದ ಕರೆಯನೆ ಬಾಚಿ
ಸ್ಪರ್ಧಿಸುತಿರುವುವೊ ಎನೆ ದಿಗ್ದಂತಿ
ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ,
ಗಂತಿ ಗಂತಿ!
’ಕುಪ್ಪಳಿ ಮನೆಯ ಇದಿರಿಗೇ ಗೋಡೆಯಂತೆ ಎದ್ದಂತಿದ್ದ ಗುಡ್ಡವನ್ನು ಮುತ್ತಿದ್ದ, ಮುದ್ದೆ ಮುದ್ದೆ ಹಸುರನ್ನೆ ಮೆತ್ತಿದಂತಿದ್ದ, ಸಾರ್ವಕಾಲಿಕ ಶ್ಯಾಮಲ ಅರಣ್ಯಶ್ರೇಣಿ’ ಅಂದೂ ಕಾಣುತ್ತದೆ.
ತೆರೆತೆರೆ ತೆರೆಯೆದ್ದರಣ್ಯ ಶ್ರೇಣಿ
ಬಿದ್ದಿದೆ ನಿದ್ದೆಯೊಳೋ ಎನೆ ಪ್ರಾಣಿ
ಅಸಂಖ್ಯ ವರ್ಣದಿ ಅಪಾರ ಪರ್ಣದಿ
ತಬ್ಬಿದೆ ಭೂಮಿಯನೆರಂಕೆ ಚಾಚಿ
ವೀಚಿ ವೀಚಿ!
ಸೃಷ್ಟಿಯ ಅನಂತತೆಯಲ್ಲಿ ಮನುಷ್ಯ ಒಂದು ಅಣು ಮಾತ್ರ. ಇನ್ನು ಆ ಮಹತ್ತಿನಡಿಯಲ್ಲಿ ಸರ್ವವೂ ಮಹತ್ತಾಗಿರಬೇಕಾದ್ದೇ!
ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ
ಈ ಸಹ್ಯ ಮಹಾ ಬೃಹತ್ತಿನಲ್ಲಿ!
ಕ್ಷುದ್ರಸ್ಪಷ್ಟತೆಗೆಡೆಯಿಲ್ಲೆಲ್ಲಿ?
ಭವ್ಯಾಸ್ಫುಟವಿದು - ಶರೀರ ಸೀಮಾ
ವಿಹೀನಧಾಮ!
ಮಿತ್ರರಿಗೆ ಇಲ್ಲಿ ಮಾತೇ ಬೇಡ ಎಂದು ಹೇಳಿದ, ಇಡೀ ಸಹ್ಯಾದ್ರಿ ಗಿರಿಶ್ರೇಣಿಯನ್ನು ಧ್ಯಾನಸ್ಥಯೋಗಿಯಂತೆ ಪರಿಭಾವಿಸಿದ ಕವಿಪ್ರತಿಭೆ, ಅನಂತತೆಯ ಮೌನದ ನಡುವಿನ ಝೇಂಕಾರವನ್ನು ಆಲಿಸುತ್ತದೆ. ಅದಕ್ಕಾಗಿ ತನ್ನನ್ನು ತಾನು ಇಲ್ಲವಾಗಿಸಿಕೊಳ್ಳುವುದು ಹೀಗೆ.
ಆಲಿಸು! ಕೇಳುತಲಿದೆ ಓಂಕಾರ:
ನಿತ್ಯನಿರಂತರ ಅಳಿ ಝೇಂಕಾರ!
ಮನವೇ, ಧ್ಯಾನದಿ ಮುಳುಗು ನಿಧಾನದಿ:
ನುಂಗಲಿ ನಿನ್ನಂ ತಪಃ ಸುಷುಪ್ತಿ,
ಅನಂತ ತೃಪ್ತಿ!
ಕವಿಶೈಲಕ್ಕೆ ಅಂಟಿಕೊಂಡಂತೆಯೇ, ಅದರ ಪೂರ್ವಕ್ಕೆ ಆಕಾಶಗಾಮಿಯಾಗಿ ನಿಂತಿರುವ ಶಿಖರವೇ ಸಂಜೆಗಿರಿ. ಅಲ್ಲಿಂದಲೂ ಸಹ್ಯಾದ್ರಿಯ ಶಿಖರತರಂಗಗಳಲ್ಲಿ ಕಳೆದು ಹೋಗುವ ಸೂರ್ಯಾಸ್ತವನ್ನು ಸವಿಯಬಹುದಾಗಿದೆ. ಅದರಿಂದ ಉದ್ಬೋಧಗೊಂಡ ಕವಿಯ ಮನಸ್ಸಿನಿಂದ ಹುಟ್ಟಿದ ಒಂದು ಸಾನೆಟ್ಟು ’ಸಂಜೆಗಿರಯಲಿ ಸಂಜೆ’ ಎಂಬುದು ೧೨-೫-೧೯೩೫ರಂದು ರಚಿತವಾಗಿದೆ.
ಸಂಜೆಗಿರಿಯಲಿ ಸಂಜೆ: ಯಾವ ದೊರೆ ನನಗೆ ಸರಿ?
ಸ್ವರ್ಗದಲಿ ಕರುಬುತಿಹನಿಂದ್ರನೆನ್ನಂ ನೋಡಿ,
ಧೇನು ಸುರತರು ಸುರಾಂಗನೆಯರಂ ರೋಡಾಡಿ!
ಈ ನಿಸರ್ಗಶ್ರೀಗೆ ಮೇಣಾವ ಸಗ್ಗಸಿರಿ
ವೆಗ್ಗಳಂ? ಪಂಕ್ತಿ ಪಂಕ್ತಿಗಳಾಗಿ ಕಣ್ದಿಟ್ಟಿ
ಸೋಲ್ವಂತೆ ಪರ್ಣಾರ್ಣವ ಮಹಾ ತರಂಗತತಿ
ಪ್ರಸರಿಸಿವೆ. ಗಿರಿಶಿವನೆದೆಯ ಮೇಲೆ ಶ್ಯಾಮಸತಿ
ಕಾನನ ಮಹಾಕಾಳಿ ತಾನಿಲ್ಲಿ ನಿತ್ಯನಟಿ!
ಸುಯ್ದಪಂ ಶಿಶಿರ ಶೀತಲ ಸುಖ ಸಮೀರಣಂ
ಮರ‍್ಮರ ಧ್ವನಿಗೈದು. ಸಾಂದ್ರ ಕಾಂತಾರದಲಿ
ಲಕ್ಷಮಧುಕರ ಪಕ್ಷಿರವದಿ ನಾದದ ಸಿಂಧು
ಮಸಗುತಿದೆ. ಸಂಜೆರವಿ, ಅದೊ, ವರುಣ ದಿಗ್ವಾರಣಂ
ತಾನೆನಲೆಸೆವ ಶೈಲ ಮಸ್ತಕ ಸುದೂರದಲಿ
ದಿಗ್ವಧೂ ಭ್ರೂಮಧ್ಯೆ, ಕಾಣ್, ರಂಗುಮಾಣಿಕ ಬಿಂದು!
ಇಲ್ಲಿಂದ ಕಾಣುವ ಸಹ್ಯಾದ್ರಿಗಿರಿಯೇ ಶಿವ; ಆತನ ಎದೆಯ ಮೇಲೆ ನರ್ತಿಸುವ ನೆರಳುಬೆಳಕೆಂಬ ಮಹಾಕಾಳಿ ಇಲ್ಲಿ ’ನಿತ್ಯನಟಿ’ಯಾಗಿದ್ದಾಳೆ. ತಾನು ದರ್ಶಿಸುತ್ತಿರುವ ಇಂತಹ ಮಹೋನ್ನತ ಸನ್ನಿವೇಶಗಳಿಂದ ಪ್ರಕೃತಿಯನ್ನು ಪೀರ‍್ವ ಕವಿಯ ಮನಸ್ಸು ತೃಪ್ತಗೊಳ್ಳುತ್ತದೆ. ಅದು ಅಂತಿಂತ ತೃಪ್ತಿಯಲ್ಲ. ಅಮರಾವತಿಯ ಇಂದ್ರನೇ ಈ ಕವಿಯ ಸೌಭಾಗ್ಯವನ್ನು ಕಂಡು ಕರುಬಬೇಕು. ಇಂತಹ ಮನೋಭಾವ ಕವಿಗೆ ಆಗ ಬಂದು ಈಗ ಹೋಗುವಂತಹುದಲ್ಲ; ಕವಿಯ ಸ್ಥಾಯೀ ಭಾವ. ಹಲವಾರು ಕವಿತೆಗಳಲ್ಲಿ ಅದನ್ನು ಕಾಣಬಹುದು. ಮುಖ್ಯವಾಗಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ದಶರಥನ ಪಾತ್ರ ಸನ್ನಿವೇಶವೊಂದರಲ್ಲಿ ಅನುಭವಿಸುವ ಮನಸ್ಥಿತಿಯನ್ನು ಗಮನಿಸಬಹುದು.

ಮೂವರು ಹೆಂಡತಿಯರಿದ್ದರೂ ದಶರಥನಿಗೆ ಮಕ್ಕಳಾಗಿಲ್ಲ. ’ಸಿರಿಯನಿತುಮಿರ್ದೊಡಂ’ ಅವರ ತಲೆಗಳಲ್ಲಿ ಬೆಳ್ಳಿಕೂದಲು ಮೂಡಿದ್ದರೂ ದಶರಥನಿಗೆ ಸಂತಾನದ ಪ್ರತೀಕ್ಷೆ ಕಾಡುತ್ತಿರುತ್ತದೆ. ಆದರೆ ಅದು ಕ್ರಿಯಾಶೀಲವಾಗಿ ಮುಂದಡಿಯಿಡಲು ಪ್ರಕೃತಿಯ ಲೀಲಾನಾಟಕವೊಂದು ಕಾರಣವಾಗಬೇಕಿರುತ್ತದೆ. ಆ ಸಂದರ್ಭ ಹೀಗಿದೆ.
ತಿರುಗುತಿರಲರಮನೆಯ ಸಿರಿದೋಂಟದೋಳ್:
ಮರಿಯ ತೆರೆವಾಯ್ಗಿಡುತೆ ತನ್ನ ಕೊಕ್ಕಂ, ಕುಟುಕು
ಕೊಡುತಿರ್ದ ತಾಯ್ವಕ್ಕಿಯಂ ಕಂಡು, ಕಣ್ ನಟ್ಟು,
ಕಾಲ್‌ನಟ್ಟು ನಿಂದನು ಮರಂಬಟ್ಟು.
ಈ ದೃಶ್ಯ ಸೃಷ್ಟಿಯ ಮಹದ್‌ವ್ಯೂಹದಲ್ಲಿ ನಿತ್ಯ ನಡೆಯುವ ಸಾಮಾನ್ಯ ಸಂಗತಿ. ಆದರೆ ಅಂದು ಅದನ್ನು ನೋಡಿದ ದಶರಥನಿಗೆ ಅದೊಂದು ಋತದಿಚ್ಛೆ!
ಮಕ್ಕಳಂ ಪಡೆದ ಪಕ್ಕಿಯ ಸಿರಿತನಂ ಚಕ್ರವರ್ತಿಗೆ ತನ್ನ
ಬಡತನವನಾಡಿ ಮೂದಲಿಸಿತೆನೆ, ಕರುಬಿ ಕುದಿದನ್
ಕೋಸಲೇಶ್ವರನಾ ವಿಹಂಗಮ ಸುಖಕೆ ಕಾತರಿಸಿ.
ದೇವತೆಗಳಾಶಿತಮೊ? ಋತದಿಚ್ಛೆಯೊ? ವಿಧಿಯೊ?
ಪಕ್ಕಿ ಗುಬ್ಬಚ್ಚಿಯಾದೊಡಮೇಂ? ವಿಭೂತಿಯಂ
ತಿರೆಗೆ ಕರೆವಾಸೆಯಂ ಕೆರಳಿಸಿದುದಾ ದೊರೆಯ
ಹೃದಯದಲಿ!
ಹಕ್ಕಿಗಳ ಸಿರಿತನ ಚಕ್ರವರ್ತಿಯ ಸಿರಿತನವನ್ನು ಮೂದಲಿಸಿದ್ದರಿಂದಲೇ ದೇವ ಶಕ್ತಿಗಳು ಸಂಚು ಹೂಡಿದ್ದರೋ ಎಂಬಂತೆ ಆ ಮುದುಕನ ಎದೆಯಲ್ಲಿ ಮಕ್ಕಳ ಆಸೆ ಮಿಂಚುತ್ತದೆ. ದಶರಥ ಪುತ್ರಕಾಮೇಷ್ಠಿಯನ್ನು ಮಾಡಲು ಉದ್ದೇಶಿಸುತ್ತಾನೆ. ಆಗ ಬರುವ ಜಾಬಾಲಿ ಋಷಿ ಆಡುವ ಮಾತುಗಳು, ಕವಿ ಎಷ್ಟೇ ಆದ್ಯಾತ್ಮಿಯಾದರೂ ಜನಮುಖಿಯೂ ಸಮಾಜಮುಖಿಯೂ ಆಗಿರಲು ಸಾಧ್ಯ ಎಂಬುದನ್ನು ತೋರಿಸುತ್ತದೆ.

ಸಂಪ್ರದಾಯ ಎಂದು ದಿಗ್ವಿಜಯ ಹಯಮೇಧ ಮೊದಲಾದುವಗಳಿಂದ ಒದಗುವ ಹಿಂಸೆ ಕ್ರೌರ್ಯವನ್ನು ತಪ್ಪಿಸಿ, ಅವುಗಳಿಲ್ಲದ ಪ್ರೇಮವನ್ನೇ ವ್ರತವಾಗಿ ಸ್ವೀಕರಿಸಿ ಪೂಜಿಸಿದರೆ ಮಾತ್ರ ಜಗತ್ತನ್ನಾಳುತ್ತಿರುವ ಋತ (ಸತ್ಯ) ಮೆಚ್ಚುತ್ತದೆ.
ನೆಲದಲ್ಲಿ, ಭಾನಲ್ಲಿ,
ಕಡಲು ಕಾಡುಗಳಲ್ಲಿ ಪಕ್ಕಿ ಮಿಗ ಪುಲ್ಗಳಲಿ
ಆರ್ಯರಲಿ ಮೇಣ್ ಅನಾರ್ಯರಲಿ, ಕೇಳ್, ವಿಶ್ವಮಂ
ಸರ್ವತ್ರ ತುಂಬಿದಂತರ್ಯಾಮಿ ಚೇತನಂ ತಾಂ
ಪ್ರಾಮಾತ್ಮವಾಗಿರ್ಪುದದರಿಂದೆ ಹಿಂಸೆಯಿಂ
ಪ್ರೇಮಮೂರ್ತಿಗಳಾದ ಸಂತಾನಮುದಿಸದಯ್.
ಶ್ರೀರಾಮಚಂದ್ರನಂತಹ ಪ್ರೇಮಮೂರ್ತಿಯುದಯಿಸಬೇಕಾದರೆ ಸೃಷ್ಟಿಗಿರಬೇಕಾದ ಉದಾತ್ತೆಯೂ ಅನನ್ಯವಾಗಿರಬೇಕಾಗುತ್ತದೆ. ಮಾನವಕೇಂದ್ರಿತ ಆಲೋಚನಾಕ್ರಮದಿಂದ ಹೊರಬಿದ್ದು ಎಲ್ಲರೊಳಗೊಂದಾಗಿ, ಎಲ್ಲವುದರೊಳಗೊಂದಾಗಿ ಯೋಚಿಸಿದಾಗ ಮೇಲಿನ ಮಾತುಗಳಲ್ಲಿ ಅಡಗಿರುವ ಸತ್ಯದ ದರ್ಶನವಾಗುತ್ತದೆ. ಆ ದರ್ಶನ ಸ್ವಯಂವೇದ್ಯವೇ ಹೊರತು ಬಾಹ್ಯಪ್ರದರ್ಶನಕ್ಕಲ್ಲ ಎಂಬುದೂ ಮನುಷ್ಯನ ಅಲೋಚನಾ ಮತ್ತು ಅಭಿವ್ಯಕ್ತಿ ಕ್ರಮದ ಇತಿ ಮಿತಿಗಳನ್ನು ತೆರೆದಿಡುತ್ತದೆ.

ಈ ಸೃಷ್ಟಿಯ ಜಡಚೇತನಗಳಲ್ಲಿ ತುಂಬಿರುವ ಚೇತನವೇ ಪ್ರೇಮ. ಆದ್ದರಿಂದ ಹಿಂಸೆಯಿಂದ ಪ್ರೇಮಮೂರ್ತಿಗಾಳದ ಸಂತಾನ ಉದಯಿಸುವುದಿಲ್ಲ ಎಂದು ಹೇಳುತ್ತಾ-
ವಿಶ್ವಶಕ್ತಿಸ್ವರೂಪಿಯನಗ್ನಿಯಂ ಭಜಿಸು ನೀಂ
ಸಾತ್ವಿಕ ವಿಧಾನದಿಂ. ಪ್ರಜೆಗಳಂ ಬಡವರಂ
ಸತ್ಕರಿಸವರ್ಗೆ ಬಗೆ ತಣಿವವೋಲ್. ತೃಪ್ತಿಯಿಂ
’ದೊರೆಗೊಳ್ಳಿತಕ್ಕೆ!’ ಎಂದಾ ಮಂದಿ ಪರಸಲ್ಕೆ,
ಪರಕೆಯದೆ ದೇವರಾಶೀರ್ವಾದಕೆಣೆಯಾಗಿ
ಕೃಪಣ ವೀಧಿಯಂ ಪಿಂಡಿ ತಂದೀವುದೈ ನಿನಗೆ
ನೆಲದರಿಕೆಯೊಳ್ಮಕ್ಕಳಂ.
ಎನ್ನುತ್ತಾರೆ. ಪ್ರಕೃತಿಯೊಳಗೊಂದಾಗಿ ಸಾಗಿದ ಸಾಧಕನ ಸಾಧನೆಗೆ ಕೊನೆಯೆಂಬುದೇ ಇಲ್ಲ. ಅದು ನಿತ್ಯಚಲನಶೀಲವಾದುದು ಮತ್ತು 'ನಿತ್ಯಋತ'ಮುಖಿಯಾದುದು.

Monday, January 09, 2012

ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!

"ನಾವು ನಿಂತ ಸ್ಥಳ ಎತ್ತರವಾಗಿತ್ತು. ಸುಮಾರು ಮೂವತ್ತು ಮೈಲಿಗಳ ದೃಶ್ಯ ನಮ್ಮೆದುರಿಗಿತ್ತು. ದಿಗಂತವಿಶ್ರಾಂತವಾದ ಸಹ್ಯಾದ್ರಿ ಪರ್ವತಶ್ರೇಣಿಗಳು ತರಂಗತರಂಗಗಳಾಗಿ ಸ್ಪರ್ಧೆಯಿಂದ ಹಬ್ಬಿದ್ದುವು. ದೂರ ಸರಿದಂತೆಲ್ಲ ಅಸ್ಫುಟವಾಗಿ ತೋರುತ್ತಿದ್ದುವು. ಕಣಿವೆಗಳಲ್ಲಿ ಇಬ್ಬನಿಯ ಬಲ್ಗಡಲು ತುಂಬಿತ್ತು. ವೀಚಿವಿಕ್ಷೋಭಿತ ಶ್ವೇತಫೇನಾವೃತ ಮಹಾವಾರಿಧಿಯಂತೆ ಪಸರಿಸಿದ್ದ ತುಷಾರ ಸಮುದ್ರದಲ್ಲಿ ಶ್ಯಾಮಲಗಿರಿಶೃಂಗಳು ದ್ವೀಪಗಳಂತೆ ತಲೆಯೆತ್ತಿಕೊಂಡಿದ್ದುವು. ಕಂದರ ಪ್ರಾಂತಗಳಲ್ಲಿದ್ದ ಗದ್ದೆ ತೋಟ ಹಳ್ಳಿ ಕಾಡು ಎಲ್ಲವೂ ಹೆಸರಿಲ್ಲದಂತೆ ಅಳಿಸಿಹೋಗಿದ್ದುವು. ದೃಷ್ಟಿಸೀಮೆಯನ್ನೆಲ್ಲ ಆವರಿಸಿದ್ದ ತುಷಾರಜಲನಿಧಿಯಲ್ಲಿ ಹಡಗುಗಳಲ್ಲಿ ಕುಳಿತು ಸಂಚರಿಸಬಹುದೆಂಬಂತಿತ್ತು! ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು. ಇಬ್ಬನಿಯ ಕಡಲಿನಿಂದ ತಲೆಯೆತ್ತಿ ನಿಂತಿದ್ದ ಗಿರಿಶೃಂಗಗಳು ಮುಂಬೆಳಕಿನ ಹೊಂಬಣ್ಣವನ್ನು ಹೊದೆದಿದ್ದುವು. ಬಾಲಸೂರ್ಯನ ಸ್ನಿಗ್ಧಕೋಮಲ ಸುವರ್ಣಜ್ಯೋತಿಯಿಂದ ವೃಕ್ಷಾರಜಿಗಳ ಶ್ಯಾಮಲಪರ್ಣವಿತಾನಗಳಲ್ಲಿ ಖಚಿತವಾಗಿದ್ದ ಸಹಸ್ರ ಸಹಸ್ರ ಹಿಮಮಣಿಗಳು ಅನರ್ಘ್ಯರತ್ನಸಮೂಹಗಳಂತೆ ವಿರಾಜಿಸುತ್ತಿದ್ದುವು. ಬೆಳ್ನೊರೆಯಂತೆ ಹಬ್ಬಿದ ಇಬ್ಬನಿಯ ಕಡಲಿನಲ್ಲಿ ಮುಳುಗಿಹೋಗಿದ್ದ ಕಣಿವೆಯ ಕಾಡುಗಳಿಂದ ಕೇಳಿಬರುತ್ತಿದ್ದ ವಿವಿಧವಿಹಂಗಮಗಳ ಮಧುರವಾಣಿ ಅದೃಶ್ಯರಾಗಿ ಉಲಿಯುವ ಗಂಧರ್ವಕಿನ್ನರರ ಗಾಯನದಂತೆ ಸುಮನೋಹರವಾಗಿತ್ತು. ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು! ನೋಡಿದೆವು, ನೋಡಿದೆವು, ಸುಮ್ಮನೆ ಭಾವಾವಿಷ್ಟರಾಗಿ!"

ಸ್ನೇಹಿತರೊಂದಿಗೆ ಇರುಳು ಬೇಟೆಗೆ ಹೋಗಿದ್ದ ಯುವಕವಿ ಪುಟ್ಟಪ್ಪ, ತಾನು ಕುಳಿತಿದ್ದ ಜಾಗ, ಸಮಯ ಎಲ್ಲವನ್ನೂ ಮರೆತು ಪ್ರಕೃತಿ ಉಪಾಸಕನಾಗಿಬಿಡುತ್ತಾನೆ. ’ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು’ ಎಂಬಂತೆ ಕವಿಗೆ ಕಂಡ ಚಂದ್ರೋದಯ ’ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು’ ಅನ್ನಿಸಿಬಿಡುತ್ತದೆ. ಇಡೀ ರಾತ್ರಿಯನ್ನು ಹೀಗೇ ಕಳೆದು, ನಸುಕಿನಲ್ಲಿಯೇ ಬರಿಗೈಯಲ್ಲಿ ಸ್ನೇಹಿತರೊಂದಿಗೆ ಮನೆಗೆ ಹಿಂತಿರುಗುವಾಗ ’ಅರುಣೋದಯದ ಹೇಮಜ್ಯೋತಿ ಪೂರ್ವದಿಗ್ಭಾಗದಲ್ಲಿ ಪ್ರಬಲಿಸುತ್ತಿತ್ತು.’ ಬರುವ ದಾರಿಯಲ್ಲಿ ಬಂಡೆಗಳಿಂದ ಬಯಲಾದ ಪ್ರದೇಶದಲ್ಲಿ ನಿಂತು ನೋಡಿದಾಗ ಕಂಡ ದೃಶ್ಯವೇ ಮೇಲೆ ಕವಿಯ ಮಾತುಗಳಲ್ಲಿ ಮೂಡಿದೆ. ಅಂದು ಆ ದೃಶ್ಯವನ್ನು ಕವಿಗೆ ತೋರಿಸಿದ ಆ ಜಾಗವೇ ’ಕವಿಶೈಲ’. ಕುವೆಂಪು ಸಾಹಿತ್ಯದ ಪರಿಚಯವಿದ್ದವರೆಲ್ಲರಿಗೂ ’ಕವಿಶೈಲ’ ಗೊತ್ತಿರುತ್ತದೆ.

ಕುಪ್ಪಳಿ ಕವಿಮನೆಯ ಹಿಂಬದಿಗೆ ದಿಗಂತಮುಖಿಯಾಗಿರುವ ಪರ್ವತವೇ ಕವಿಶೈಲ. ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು; ಕಲಾವಂತನಿಗೆ ಸಗ್ಗವೀಡು ಆಗಿರುವ ಕವಿಶೈಲದ ನಿಜಮನಾಮ ಆಗ್ಗೆ ’ದಿಬ್ಬಣಕಲ್ಲು’. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.

ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ! ಕವಿಶೈಲದ ಬಗ್ಗೆ ಕವಿ ಕೇವಲ ಹನ್ನೆರಡು ದಿನಗಳಲ್ಲಿ ಆರು ಸಾನೆಟ್ಟುಗಳನ್ನು ಬರೆದಿದ್ದಾರೆ! ಮೊದಲ ಒಂದನ್ನು ಬಿಟ್ಟರೆ ಉಳಿದ ಐದು ಸಾನೆಟ್ಟುಗಳು ಐದೇ ದಿನದಲ್ಲಿ ದಿನಕ್ಕೊಂದರಂತೆ ರಚನೆಯಾಗಿವೆ! ಮಲೆನಾಡಿನ ಚಿತ್ರಗಳು ಪುಸ್ತಕದಲ್ಲಿ ಮೇಲೆ ವರ್ಣಿಸಿರುವ ಕವಿಶೈಲದ ವರ್ಣನೆಗೆ ಸಂವಾದಿಯಾಗಿ ೧೬.೪.೧೯೩೪ರಲ್ಲಿ ಮೊದಲನೆಯ ಸಾನೆಟ್ ರಚಿತವಾಗಿದೆ. ಈ ಸಾನೆಟ್ ರಚನೆಯಾಗುವುದಕ್ಕೆ ಎರಡು ದಿನಗಳ ಮುಂಚಿನ ದಿನಚರಿಯಲ್ಲಿ ಹೀಗೆ ಬರೆದಿದ್ದಾರೆ: ನಾನು ಚಂದ್ರು (ದೇವಂಗಿ ಚಂದ್ರಶೇಖರ) ಕವಿಶೈಲಕ್ಕೆ ಏರಿದೆವು. ಹಿಂದಿನ ದಿನದ ಮಳೆಯಿಂದ ಕಾಡು ಮಲೆ ನೆಲಗಳು ಮಿಂದು ಮಡಿಯಾಗಿದ್ದುವು. ಇಂದು ಬೆಳಿಗ್ಗೆ ದೊರಕಿದ ದೃಶ್ಯವು ನಮ್ಮ ಪುಣ್ಯಕ್ಕೆ ಎಣೆಯಿಲ್ಲದಂಥದ್ದು. ಕಣಿವೆಗಳನ್ನು ತುಂಬಿದ್ದ ಮಂಜಿನ ಪರದೆಯ ಮೇಲೇಳತೊಡಗಿ, ಸಲಸಲಕ್ಕೂ ಎದೆ ಹಾರಿಸುವಂತಹ ದೃಶ್ಯಗಳು ಗೋಚರಿಸಿದುವು. ಅದನ್ನು ಎಂದಾದರೂ ಕಲಾಸುಂದರಿಯ ಕೃಪೆಯಿಂದ ಸಾಹಿತ್ಯರೀತ್ಯಾ ಹೊರಹೊಮ್ಮಿಸುತ್ತೇನೆ. - ಆ ದಿನ ಕವಿಗೆ ದೊರಕಿದ ದರ್ಶನ ಎರಡು ದಿನಗಳ ನಂತರ ಸಾನೆಟ್ ರೂಪತಾಳಿದ್ದು ಕೆಳಕಂಡಂತೆ.

ನೋಡಯ್ಯ, ಪ್ರಿಯಬಂಧು, ಚೈತ್ರರವಿಯುದಯದಲಿ
ಸಹ್ಯಾದ್ರಿ ಕಾನನಗಳುತ್ತಮಾಂಗದಿ ಸೃಷ್ಟಿ
ದೃಶ್ಯ ವೈಕುಂಠವನೆ ನೆಯ್ದಿದೆ! ಕಲಾದೃಷ್ಟಿ
ದರ್ಶನವನುದ್ದೀಪನಂಗೈಯೆ ಹೃದಯದಲಿ,
ಪ್ರಾಣಪಕ್ಷಿ ಸುವರ್ಣಪರ್ಣಂಗಳನು ಬಿಚ್ಚಿ
ಹಾರಿಹುದಸೀಮತೆಗೆ!..............
ಕವಿ ತನಗಾದ ಅನುಭವವನ್ನು ಸಹೃದಯನಿಗೆ ಹೇಳುತ್ತಿರುವಂತೆ ಆರಂಭವಾಗುವ ಸಾನೆಟ್ಟು ಮುಂದುವರೆದು ತಾನು ಕಂಡಿದ್ದೇನು ಎಂಬುದನ್ನು ಕಣ್ಣಿಗೆ ಕಟ್ಟಿಸಿಬಿಡುತ್ತದೆ.
.................. ಕಣಿವೆ ಕಣಿವೆಗಳಲ್ಲಿ
ಮಂಜಿನ ಮಹಾಮಾಯೆ ನೊರೆಯ ರಾಸಿಯ ಚೆಲ್ಲಿ
ವಾರಿಧಿಯ ವಿರಚಿಸಿದೆ, ಕಟುನಿಮ್ನತೆಯ ಮುಚ್ಚಿ.
ನೋಡು, ಆ ಶೀಖರವೆದ್ದಿದೆ ದ್ವೀಪವೆಂಬಂತೆ
ಕ್ಷೀರಫೇನಧಿ ಮಧ್ಯೆ ಶ್ಯಾಮಲ ಶಿರವನೆತ್ತಿ;
ಸ್ವರ್ಗಪ್ರದೇಶದೊಂದಂಶವೆಂಬಂದದಿಂ!
ವಾರಿಧಿಯ ವಿರಚಿಸಿರುವ ಮಂಜಿನ ಮಾಯೆ ನೊರೆ ಹಾಲಿನ ನೊರೆಯಂತೆ ಶೋಭಿಸಿದೆ. ಹಾಲ್ನೊರೆಯ ನಡುವೆ ತಲೆಯೆತ್ತಿರುವ ಹಸಿರು ಗಿರಿ ಕಡಲಿನ ನಡುವಿನ ದ್ವೀಪದಂತಾಗಿಬಿಟ್ಟಿದೆ. ಗದ್ಯದಲ್ಲಿ ಬಂದಿದ್ದ ಬಲ್ಗಡಲು, ಶ್ವೇತಫೇನಾವೃತ ಎಂಬ ಕಲ್ಪನೆಗಳು ಇಲ್ಲಿ ಬೇರೊಂದು ರೂಪದಲ್ಲಿ - ಕಟುನಿಮ್ನತೆ, ಕ್ಷೀರಫೇನ - ಬಂದಿವೆ.
ಪ್ರಿಯಬಂಧು, ಇದು ನಮ್ಮ ದೈನಂದಿನಿಳೆಯಂತೆ
ಕಾಣದೈ: ಸೌಂದರ್ಯ ದೇವತೆಗಳಿದೊ ಸುತ್ತಿ
ಬಿಗಿವರೆಮ್ಮನು ಬಾಹುಬಂಧನಾನಂದದಿಂ!
ಮೇಲಿನ ಸಾನೆಟ್ಟು ರಚನೆಯಾದ ಒಂದು ವಾರಕ್ಕೆ ಸರಿಯಾಗಿ (೨೩.೪.೧೯೩೪) ಕವಿಗೆ ಮತ್ತೆ ಕವಿಶೈಲ ಕಾಡತೊಡುಗುತ್ತದೆ. ಕವಿಗೆ ಆನಂದವನ್ನುಂಟುಮಾಡುವ ಕವಿತಾ ಮನೋಹರಿಯ ಪ್ರಥಮ ಪ್ರಣಯಿಯಾಗಿ ಕವಿಶೈಲ ಕವಿಗೆ ಕಾಣುತ್ತದೆ.

ಓ ನನ್ನ ಪ್ರಿಯತಮ ಶಿಖರ ಸುಂದರನೆ, ನನ್ನ
ಜೀವನಾನಂದ ನಿಧಿ ಕವಿತಾ ಮನೋಹರಿಯ
ಪ್ರಥಮೋತ್ತಮಪ್ರಣಯಿ, ವನದೇವಿಯೈಸಿರಿಯ
ಪೀಠ ಚೂಡಾಮಣಿಯೆ, ಓ ಕವಿಶೈಲ, ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಕವಿಗೆ ದಿವ್ಯಾನಂದವನ್ನುಂಟು ಮಾಡಿದ ಕವಿಶೈಲವನ್ನು ಎಷ್ಟು ವರ್ಣಿಸಿದರೂ ತೃಪ್ತಿಯಿಲ್ಲ. ಇಡೀ ನಾಡನ್ನು, ನಾಡಿನ ಸುಂದರ ತಾಣಗಳನ್ನು ಕಂಡು ದಿವ್ಯತೆಯನ್ನನುಭವಿಸಿದ್ದರೂ ಈ ಶಿಖರಸುಂದರ ಕವಿಗೆ ಮಾಡಿರುವ ಮೋಡಿ ವರ್ಣಿಸಲಸದಳ. ಅದು ಕವಿಯನ್ನು ಚಳಿ ಮಳೆ ಬಿಸಿಲು ರಾತ್ರಿ ಹಗಲು ಎನ್ನದೆ ಕಾಡುವುದು ಹೀಗೆ.

ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ! ನೀಲಗಿರಿ, ಬ್ರಹ್ಮಗಿರಿ,
ಗೇರುಸೊಪ್ಪೆಯ ಭೀಷ್ಮ ಜಲಪಾತ, ಆಗುಂಬೆ,
ಶೃಂಗೇರಿ, ಚಂದ್ರಾದ್ರಿಗಳನೆಲ್ಲಮಂ ಕಂಡೆ;
ವನರಾಜಿ ಜಲರಾಶಿ ಸೂರ್ಯಾಸ್ತಗಳನುಂಡೆ!
ಆದರೇಂ? ಮೀರಿರುವುದವುಗಳಂ ನಿನ್ನ ಸಿರಿ:
ಹೆತ್ತಮ್ಮಗಿಂ ಮತ್ತೊಳರೆ? ತಾಯಹಳೆ ರಂಭೆ?
ಒಂದೇ ದಿನದ ನಂತರ (೨೫.೪.೧೯೩೪) ಮೂಡಿರುವ ಸಾನೆಟ್ಟು, ಕವಿಶೈಲದಿಂದ ಕವಿ ಕಂಡ ಸೂರ್ಯಾಸ್ತವನ್ನು, ಅದರಿಂದ ಭಾವಮುಖನಾದ ಕವಿಯನ್ನು ಕಂಡರಿಸುತ್ತದೆ. ಸೂರ್ಯಾಸ್ತ ಕಾರಣದಿಂದ ಉಂಟಾಗುವ ವರ್ಣವೈವಿಧ್ಯವನ್ನೂ ಕವಿತೆ ಕಟ್ಟಿಕೊಡುತ್ತದೆ. ಹೆಚ್ಚಿನ ಮಾತೇ ಬೇಕಾಗಿಲ್ಲ; ಅಷ್ಟು ಸರಳವಾಗಿದೆ ಕವಿತೆ!
ತೆರೆ ಮೇಲೆ ತೆರೆಯೆದ್ದು ಹರಿಯುತಿದೆ ಗಿರಿಪಂಕ್ತಿ
ಕಣ್ದಿಟ್ಟಿ ಹೋಹನ್ನೆಗಂ. ಚಿತ್ರ ಬರೆದಂತೆ
ಕಡುಹಸುರು ತಿಳಿಹಸುರುಬಣ್ಣದ ಸಂತೆ
ಶೋಭಿಸಿಹುದಾತ್ಮವರಳುವ ತೆರದಿ. ದಿಗ್ದಂತಿ
ಕೊಂಕಿಸಿದ ದೀರ್ಘಬಾಹುವ ಭಂಗಿಯನು ಹೋಲಿ
ಮೆರೆದಿದೆ ದಿಗಂತರೇಖೆ. ಮುಳುಗುತಿದೆ ಸಂಜೆರವಿ
ಕುಂಕುಮದ ಚೆಂಡಿನೊಲು ದೂರದೂರದಲಿ. ಕವಿ
’ಭಾವಮುಖ’ನಾಗುತಿಹನಾವೇಶದಲಿ ತೇಲಿ!
ಬಳಿ ಕುಳಿತು ಭವ್ಯ ದೃಶ್ಯವ ನೋಡುತಿರುವೆನ್ನ
ಸೋದರನೆ, ಹೃದಯದಲಿ ಯಾವ ಭಾವಜ್ವಾಲೆ
ಪ್ರಜ್ವಲಿಸುತಿದೆ? ಮನದೊಳಾವ ಚಿಂತಾಗಾನ
ರೆಕ್ಕೆಗರಿಗೆದುರುತಿದೆ? ಅಥವ ನೋಟವೆ ನಿನ್ನ
ಸರ್ವಸ್ವವಾಗಿದೆಯೆ? ಇರಲಿ : ನಿನ್ನೆದೆ ಸೋಲೆ
ಸೃಷ್ಟಿಸೌಂದರ್ಯಕದೆ ಅಮೃತಗಂಗಾಸ್ನಾನ!
ಸೃಷ್ಟಿಯ ಚೆಲುವನ್ನು ನೋಡಿ ಒಂದರೆಕ್ಷಣ ನಾವು ಮನಸೋತರೂ ಸರಿಯೆ; ಅದು ಅಮೃತಗಂಗಾಸ್ನಾನಕ್ಕೆ ಸಮ. ಆ ’ಒಂದರೆಕ್ಷಣ’ ಎಲ್ಲರಿಗೂ ಲಭಿಸುವುದು ಮಾತ್ರ ದುರ್ಲಭ! ಸೂರ್ಯೋದಯ, ಸೂರ್ಯಾಸ್ತವನ್ನು ಕವಿಶೈಲದಲ್ಲಿ ಕಂಡ ಕವಿಗೆ ಮಳೆಗಾಲದ ದಿನದ ಸಂಜೆಯಲ್ಲಿ ಕವಿಶೈಲವನ್ನು ಕಾಣುವ ಭಾಗ್ಯವೂ ಬರುತ್ತದೆ. ಮಳೆಗಾಲದ ಸಂಜೆಯ ಕವಿಶೈಲದ ಬಗ್ಗೆ
ಮೇಘಗವಾಕ್ಷದೆಡೆಯ ಸಂಧ್ಯಾಗಗನವೇದಿಕೆಯಲ್ಲಿ ಲೋಕಮೋಹಕವಾದ ಅಸಂಖ್ಯ ವರ್ಣೋಪವರ್ಣಗಳ ಮೆರವಣಿಗೆ ಪ್ರಾರಂಭವಾಯಿತು. ಹಾಗೆಯೇ ನಮ್ಮ ಹೃದಯ ಮಂದಿರಗಳಲ್ಲಿ ಅಸಂಖ್ಯ ಭಾವೋಪಭಾವಗಳ ಮಹೋತ್ಸವವೂ ಪ್ರಾರಂಭವಾಯಿತು. ಆ ಸೌಂದರ್ಯ ಸಮುದ್ರದಲ್ಲಿ ನಾವೆಲ್ಲರೂ ತೆರೆತೆರೆಗಳಾಗಿ ಅಶರೀರಗಳಾಗಿ ವಿಶ್ವವಿಲೀನವಾದೆವು. ನನ್ನ ಕಣ್ಣಿವೆಗಳು ಅನೈಚ್ಛಿಕವಾಗಿಯೆ ಮುಗುಳಿದುವು.........ಕಣ್ದೆರೆದಾಗ ಕತ್ತಲೆಯಾಗಿತ್ತು ಎಂದು ಮಲೆನಾಡಿನ ಚಿತ್ರಗಳು ಕೃತಿಯ ಮುನ್ನುಡಿಯಲ್ಲಿ ಬರೆದಿದ್ದರೆ, ಮಳೆ ಹೊಯ್ದ ಮಾರನೆಯ ಬೆಳಗಿನ ಚಿತ್ರಣವನ್ನು ೨೬.೪.೧೯೩೪ರ ಸಾನೆಟ್ಟಿನಲ್ಲಿ ಕಡೆದಿಟ್ಟಿದ್ದಾರೆ.

ಮಳೆಬಂದು ನಿಂತಿಹುದು; ಮಿಂದಿಹುದು ಹಸುರೆಲ್ಲ;
ಬಿಸಿಲ ಬೇಗೆಯು ಮಾದು, ಬಂದಿಹುದು ಹೊಸತಂಪು;
ಹೊಸತು ಮಳೆ ತೋಯಿಸಿರುವ ನೆಲದ ಕಮ್ಮನೆ ಕಂಪು
ತೀಡುತಿರೆ, ಮಣ್ಣುತಿನ್ನುವುದೇನು ಮರುಳಲ್ಲ!
ವಾಯು ಮಂಡಲ ಶುಭ್ರ; ಗಗನದಲಿ ಮುಗಿಲಿಲ್ಲ;
ಮೈಲತುತ್ತಿನ ಬಣ್ಣದಗಲ ಗಾಜನು ಹೋಲಿ
ಕಮನೀಯವಾಗಿರಲು ಧೌತಾಂಬರದ ನೀಲಿ,
ಕವಿಗೆ ಮನೆ ಬೇಡೆಂಬುದೊಂದು ಸೋಜಿಗವಲ್ಲ!
ಕರಿದಾಗಿ ಹಸರಿಸಿಹ ಕವಿಶೈಲದರೆಯಲ್ಲಿ
ಬಿಸಿಲಿನಲಿ ಮಿರುಗುತಿವೆ ಕನ್ನಡಿಗಳೆಂಬವೋಲ್
ನಿಂತ ನೀರುಗಳು; ಆವಿಗಳೆದ್ದು, ಅಲ್ಲಲ್ಲಿ,
ನಭಕೇರುತಿವೆ. ಹಕ್ಕಿ ಹಾಡತೊಡಗಿವೆ, ಕೇಳು;
ಹೇ ಬಂಧು, ಸೊಬಗಿನಲಿ ನಿನ್ನಾತ್ಮವನು ತೇಲು;
ಪ್ರಜ್ವಲಿಸಲೈ ಕಲ್ಪನೆ, ಕೆರಳ್ದ ಬೆಂಕಿಯೋಲ್!
ಮನೆಯೇ ಬೇಡ; ಕವಿಶೈಲ ಸಾಕು ಎಂಬುದು ಸೋಜಿಗವಲ್ಲ ಎನ್ನುವ ಕವಿ, ಮತ್ತೆ ಮಾರನೆಯ ದಿನ (೨೭-೪-೧೯೩೪) ರಚಿತವಾದ ಸಾನೆಟ್ಟಿನಲ್ಲಿ ಹಿಂದಿನ ರಾತ್ರಿ ಕತ್ತಲಲ್ಲಿ, ನಕ್ಷತ್ರದ ಬೆಳಕಲ್ಲಿ ಕವಿಶೈಲದ ಮೇಲೆ ನಿಂತು ಅನುಭವಿಸಿದ್ದನ್ನು ಅಕ್ಷರಕ್ಕಿಳಿಸಿದ್ದಾರೆ. ಕತ್ತಲೂ ಕೂಡ ಕವಿಗೆ ಕಾವ್ಯವನ್ನು ತೋರಿಸಬಲ್ಲುದು ಎಂಬುದು ಈ ಸಾನೆಟ್ಟಿನ ಮಹಿಮೆ. ಕಾಣುವ ಕಣ್ಣು ಇದ್ದವನಿಗೆ ಕತ್ತಲೆಯೂ ಕಾಣಿಸುತ್ತದೆ; ಕಿವಿಯಿದ್ದವನಿಗೆ ಕತ್ತಲೆಯೂ ಕೇಳಿಸುತ್ತದೆ!
ನಿರ್ಜನತೆ; ನೀರವತೆ; ಕಗ್ಗತ್ತಲಲಿ ಧಾತ್ರಿ
ತಲ್ಲೀನ. ಕೋಟಿಯುಡುಮಂಜರಿಗಳುಪಕಾಂತಿ
ಬೆಳಕಲ್ಲ: ಕಗ್ಗತ್ತಲೆಯ ಛಾಯೆ, ಬೆಳಕಿನ ಭ್ರಾಂತಿ!-
ಏಂ ಶಾಂತಿ, ವಿಶ್ರಾಂತಿ!- ಕವಿಶೈಲದಲಿ ರಾತ್ರಿ:
ತಿಮಿರಪಾನದಿ ಮೂರ್ಛೆಗೊಂಡಂತಿಹ ಜಗತ್ತು
ಮರಳಿ ಕಣ್ದೆರೆದು ಎಚ್ಚರುಹ ಚಿಹ್ನೆಯೆ ಇಲ್ಲ;
ಭೀಷಣ ಗಭೀರತೆಯೊಳದ್ದಿದೆ ಭುವನವೆಲ್ಲ;
ರಂಜಿಸಿದೆ ಲಯ ವಿಪ್ಲವದ ಭವ್ಯಸಂಪತ್ತು!
ದೇಹಭಾವವೆ ಹೋಗಿ ನನ್ನಹಂಕಾರಕ್ಕೆ
ಕತ್ತಲೆಯೆ ಕವಚವಾಗಿದೆ; ಇಂದ್ರಿಯಂಗಳಿಗೆ
ಕತ್ತಲೆಯೆ ವಿಷಯವಾಗಿದೆ; ನೋಡೆ ಕಂಗಳಿಗೆ
ಕತ್ತಲೆಯ ಕಾಣ್ಕೆ; ಕೇಳಲು ಕಿವಿಗಳೆರಡಕ್ಕೆ
ಕತ್ತಲೆಯೆ ಸದ್ದು!- ನನ್ನೆದೆಯೊಳನುಭವವಿದೇನು?
ಭಯವೋ? ಆವೇಶವೋ? ಅಹಂಕಾರಲಯವೋ ಏನು?
ಪ್ರಕೃತಿಯ ಅದಮ್ಯತೆ, ನಿಗೂಢತೆ, ಭವ್ಯತೆ, ರುದ್ರರಮಣೀಯತೆಯ ಎದುರಿಗೆ ಮಾತಿಲ್ಲವಾಗುವುದೆಂದರೆ ಇದೆ ಇರಬೇಕು. ದೇಹಭಾವವೇ ಹೋಗುವುದೆಂದರೆ ಸಮಾಧಿ ಸ್ಥಿತಿಯನ್ನು ತಲುಪಿದಂತೆಯೇ ಸರಿ. ರಾತ್ರಿಯ ನಿಗೂಢತೆ ಮನುಷ್ಯನಲ್ಲಿ ಹುಟ್ಟಿಸುವ ಕಲ್ಪನೆಗಳಿಗೆ ಎಂದಿಗೂ ಯಾವತ್ತಿಗೂ ಕೊನೆಯಿಲ್ಲ!

ಮೇಲಿನ ಐದು ಸಾನೆಟ್ಟುಗಳಿಗೆ ಕಲಶವಿಟ್ಟಂತೆ ಮಾರನೆಯ ದಿನವೇ (೨೮-೪-೧೯೩೪) ಆರನೆಯ ಸಾನೆಟ್ಟು ರಚನೆಯಾಗಿದೆ. ಕವಿಯಲ್ಲಿ ತಾನು ಕಂಡ ದರ್ಶನವೆಲ್ಲವನ್ನೂ ಸರ್ವರೂ ಕಾಣಬೇಕು ಎಂಬ ಭಾವ ಯಾವಾಗಲೂ ಸ್ಥಾಯಿ. ಸಹೃದಯನನ್ನೂ ತನ್ನೊಂದಿಗೆ ಕರೆದೊಯ್ಯಬೇಕೆಂಬ ಅಚಲ ತುಡಿತ. ಸಹೃದಯನಿಗೆ ಹೇಳುತ್ತಿರುವಂತೆ ಕವನ ಆರಂಭವಾಗುತ್ತದೆ.
ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ:
ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!
ಮುಗಿಲ್ದೆರೆಗಳಾಗಸದಿ ಮುಗುಳ್ನಗುವ ತದಿಗೆಪೆರೆ,
ಕೊಂಕು ಬಿಂಕವ ಬೀರಿ, ಬಾನ್ದೇವಿ ಚಂದದಲಿ
ನೋಂತ ಸೊಡರಿನ ಹಣತೆಹೊಂದೋಣಿಯಂದದಲಿ
ಮೆರೆಯುತ್ತೆ ಮತ್ತೆ ಮರೆಯಾಗುತ್ತೆ ತೇಲುತಿರೆ,
ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ
ಸರಸವಾಡುತಿವೆ ಅದೊ ತರುಲತ ಧರಾತಲದಿ!-
ಪಟ್ಟಣದಿ, ಬೀದಿಯಲಿ, ಮನೆಯಲ್ಲಿ, ಸರ್ವತ್ರ
ಇದ್ದೆಯಿದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? - ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೆ ಮಹಾಸ್ತೋತ್ರ!
ಸಹ್ಯಾದ್ರಿಯ ಗಿರಿಶ್ರೇಣಿ ಧ್ಯಾನಸ್ಥ ಯೋಗಿಯಂತೆ ಕವಿಗೆ ಕಂಡಿದೆ. ಪರಿಭಾವಿಸಿದಷ್ಟೂ ಅರ್ಥಗಳು ಈ ಹೋಲಿಕೆಗಿದೆ. ಪುಟ್ಟದಾದರೂ ಮಹತ್ತಾಗಿರುವ ಮತ್ತೊಂದು ಹೋಲಿಕೆ ’ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ ಸರಸವಾಡುತಿವೆ ಅದೊ ತರುಲತ ಧರಾತಲದಿ!’ ಎಂಬುದು. ಓಡುವ ಮೋಡಗಳ ನೆರಳು ದಟ್ಟಕಾಡು, ಗಿರಿಗಳನ್ನು ಹಾಯ್ದು ಹೋಗುವ ದೃಶ್ಯ ಶಿವ-ಪಾರ್ವತಿಯರ ಸರಸದಂತೆ! ಅಂತಹ ಭವ್ಯತೆಯನ್ನು ದರ್ಶಿಸಿ ದಿವ್ಯತೆಯನ್ನು ಅನುಭವಿಸಬೇಕಾದರೆ ಅಲ್ಲಿ ಮೌನವೇ ಮಹಾಮಂತ್ರವಾಗಬೇಕು. ಅದೇ ಕವಿಯ ಬಯಕೆ ಕೂಡ. ಪ್ರಕೃತಿ ದೇವಿಯ ದೇವಾಲಯದಲ್ಲಿ ಆನಂದವೇ ಪೂಜೆ. ಅಲ್ಲಿ ಗಂಟೆ, ಮಂಗಳಾರತಿ, ಜಾಗಟೆ, ಮಂತ್ರ ಬೇಕಾಗಿಲ್ಲ! ಮೌನವೊಂದಿದ್ದರೆ ಸಾಕು. ಕವಿಶೈಲವೊಂದೇ ಅಲ್ಲ; ಯಾವುದೇ ಪ್ರಕೃತಿತಾಣಗಳಿಗೆ ಹೋಗುವ ಆಸಕ್ತರಿಗೆ ಈ ಸರಳ ಸತ್ಯ ಅರಿವಾದರೆ ನಿಸರ್ಗ ಮತ್ತಷ್ಟು ಸುಂದರತರವಾಗಿರುತ್ತದೆ.
ಕರನಿರಾಕರಣೆಯ ಚಳುವಳಿ ನಡೆಯುತ್ತಿದ್ದ ಸಂದರ್ಭದಲ್ಲಿ, ಭೂಗತರಾಗಿ ಚಳುವಳಿಯನ್ನು ನಿರ್ದೇಶಿಸುತ್ತಿದ್ದ ಡಾ. ಹರ್ಡೀಕರ ಕಾನಕಾನಹಳ್ಳಿ ಸರ್ದಾರ್ ವೆಂಕಟರಾಮಯ್ಯ ಅವರಿಗೆ ಕುಪ್ಪಳಿ ಮನೆಯ ಉಪ್ಪರಿಗೆ ಅಡಗುತಾಣವಾಗಿತ್ತು. ದೇಶಭಕ್ತರಿಂದ ಅವರು ಸರ್ದಾರ್ ಎಂದು ಕರೆಸಿಕೊಂಡಿದ್ದರು. ಅವರು ಆಗಾಗ ಕವಿಶೈಲಕ್ಕೆ ಹೋಗಿ ಕಾಲ ಕಳೆಯುತ್ತಿದ್ದರಂತೆ. ಆ ಸಂದರ್ಭದಲ್ಲಿ ದೇವನಾಗರಿ ಲಿಪಿಯಲ್ಲಿ ಕವಿತೆಯೊಂದನ್ನು ಕೆತ್ತಿದ್ದಾರೆ. ಅದರ ಸಾಲುಗಳೆರಡು ಹೀಗಿದೆ.
ನಾಮೀ ಒತ್ಥರ್ ಪರ್
ನಾಮ್ ಕವಿಯೋಂಕೆ ಅಮರ್
ಹೆಸರಯ ಪಡೆದ ಅರೆಯ ಮೇಲೆ
ಕವಿಯ ಹೆಸರು ಅಮರವಾಯ್ತು!

Monday, January 02, 2012

ಹುತಾತ್ಮ ಜತೀಂದ್ರನಾಥರಿಂದಾಗಿ ಮೊಳಗಿದ 'ಪಾಂಚಜನ್ಯ'

ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ, ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!

’ಪಾಂಚಜನ್ಯ’ ಹೆಸರಿನ ಈ ಕವಿತೆ ಅದೇ ಹೆಸರಿನ ಸಂಕಲನದ ಆದ್ಯ ಕವಿತೆಯಾಗಿದೆ. ಕುವೆಂಪು ಅವರ ಬಹುತೇಕ ಕ್ರಾಂತಿಗೀತೆಗಳನ್ನು ’ಪಾಂಚಜನ್ಯ’ ಸಂಕಲನ ಒಳಗೊಂಡಿದೆ. ಕವಿವಾಣಿ ಯುಗವಾಣಿಯೂ ಹೌದು; ಜನವಾಣಿಯೂ ಹೌದು. ಒಂದು ಯುಗದ ಆಗುಹೋಗುಗಳ, ಜನಜೀವನದ ವಕ್ತಾರನಂತೆ ಒಬ್ಬ ಕಲಾಕಾರನಿರುತ್ತಾನೆ. ೨೦.೯.೧೯೨೯ರಂದು ರಚನೆಯಾಗಿರುವ ’ಪಾಂಚಜನ್ಯ’ದ ಹಿಂದೆ, ಅಂದಿನ ಸ್ವತಂತ್ರ ಹೋರಾಟದ ಹುತಾತ್ಮರೊಬ್ಬರ ಕಥೆಯಿದೆ. ಇಡೀ ಭಾರತ ’ನಾನೊಂದೆ’ ಎಂಬಂತೆ ಪ್ರವರ್ತಿಸುತ್ತಿದ್ದ ಕಾಲವದು. ’ಸ್ವಾತಂತ್ರಕ್ಕಾಗಿ ನಡೆಯುತ್ತಿದ್ದ ಸತ್ಯಾಗ್ರಹದ ಸಮರದಲ್ಲಿ ನಿರ್ಭೀತರಾಗಿ ನುಗ್ಗಿ ಜಯವನ್ನು ಸಾಧಿಸಬೇಕೆಂದು ಕುವೆಂಪು ’ಪಾಂಚಜನ್ಯ’ ಎಂಬ ಹೆಸರಿನ ಕವನದಲ್ಲಿ ನಾಡಿನ ಯುವಶಕ್ತಿಗೆ ಕರೆ ಕೊಟ್ಟಿದ್ದಾರೆ’ ಎಂದು ಮೇಲ್ನೋಟಕ್ಕೆ ಸುಲಭವಾಗಿ ಹೇಳಬಹುದು. ಆದರೆ, ಸ್ವತಃ ಕವಿಗಿಂತ ಎರಡು ತಿಂಗಳಷ್ಟೇ ಹಿರಿಯರಾಗಿದ್ದ ಕ್ರಾಂತಿಕಾರಿಯೊಬ್ಬರು ಕೇವಲ ೨೫ನೇ ವಯಸ್ಸಿನಲ್ಲಿ ಹುತಾತ್ಮರಾಗಿ ಹೋದ ಇತಿಹಾಸವನ್ನೊಮ್ಮೆ ನೋಡಲೇಬೇಕು. ಆಗ ’ಪಾಂಚಜನ್ಯ’ ಕವಿತೆಯ ಹಿರಿಮೆ ಗರಿಮೆಗಳು ಮನದಟ್ಟಾಗುತ್ತವೆ.

ಕಲ್ಕತ್ತಾದಲ್ಲಿ ೨೭.೧೦.೧೯೦೪ರಂದು ಮದ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಜತೀಂದ್ರನಾಥ ದಾಸ್ ಅವರ ತಂದೆ ಭಂಕಿಮ್ ಬೆಹಾರಿ ಮತ್ತು ತಾಯಿ ಸುಹಾಸಿನಿ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಜತೀಂದ್ರನಾಥ ಮೆಟ್ರಿಕ್ಯುಲೇಷನ್ ಮತ್ತು ಇಂಟರ್‌ಮಿಡಿಯೇಟ್ ಪರೀಕ್ಷೆಗಳಲ್ಲಿ ಮೊದಲ ದರ್ಜೆಯಲ್ಲಿ ಪಾಸಾಗಿದ್ದರು. ಅಂದು ದೇಶದಾದ್ಯಂತ ನಡೆಯುತ್ತಿದ್ದ ಸ್ವತಂತ್ರ ಹೋರಾಟದ ಬಿಸಿಗೆ ವಿದ್ಯಾರ್ಥಿಯಾಗಿದ್ದಾಗಲೇ ಆಕರ್ಷಿತರಾಗಿದ್ದರು. ಗಾಂಧೀಜಿಯವರಿಂದ ಪ್ರಭಾವಿತರಾದರು. ೧೯೨೧ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ಪಿಕೆಟಿಂಗ್ ನಡೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದಾಗ ಅವರ ವಯಸ್ಸು ಕೇವಲ ೧೭.

ಜೈಲಿನಲ್ಲೇ ಇದ್ದುಕೊಂಡು, ಭಗತ್ ಸಿಂಗ್ ಮತ್ತು ಸಹಚರರೂ ಸೇರಿದಂತೆ ಭಾರತದಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದ ಹಲವಾರು ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯೂ ಆದರು. ಬಂಗಾಳದ ಕ್ರಾಂತಿಕಾರಿ ಸಂಘಟನೆಯಾದ ’ಅನುಶೀಲನ ಸಮಿತಿ’ಯನ್ನು ಸೇರಿ ತಮ್ಮ ಹೋರಾಟಕ್ಕೆ ಒಂದು ವೇದಿಕೆಯನ್ನು ಸೃಷ್ಟಿಸಿಕೊಂಡರು. ೧೯೨೫ರಲ್ಲಿ ವಿದ್ಯಾಸಾಗರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರು. ಆಗ ಬ್ರಿಟಿಷ್ ಸರ್ಕಾರ, ತೀವ್ರತರವಾದ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂಬ ಆಪಾದನೆಯ ಮೇಲೆ ಬಂಧಿಸಿ, ಮೈಮೆನ್ ಸಿಂಗ್ ಕೇಂದ್ರ ಕಾರಾಗೃಹಕ್ಕೆ ತಳ್ಳಿಬಿಟ್ಟಿತು. ಜೈಲಿನಲ್ಲಿ ರಾಜಕೀಯ ಖೈದಿಗಳನ್ನು ಅನಾಗರಿಕವಾಗಿ ನಡೆಸಿಕೊಳ್ಳಲಾಗುತ್ತಿದ್ದುದನ್ನು ಕಂಡ ಜತೀಂದ್ರನಾಥ್ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು. ೨೦ ದಿನಗಳವರೆಗೂ ನಡೆದ ಉಪವಾಸ ಸತ್ಯಾಗ್ರಹ, ಜೈಲ್ ಸೂಪರಿಂಟೆಂಡೆಂಟ್ ಕ್ಷಮಾಪಣೆ ಕೇಳುವುದರೊಂದಿಗೆ ಕೊನೆಗೊಂಡಿತು. ಕೇವಲ ೨೧ ವರ್ಷದ ಸತ್ಯಾಗ್ರಹಿ ಜತೀಂದ್ರನಾಥ ಎಂಬ ಯುವಕ ಕಲ್ಕತ್ತಾದಲ್ಲಿ ಮನೆಮಾತಾಗಿಬಿಟ್ಟ. ಆ ಹೋರಾಟದ ಯಶಸ್ಸಿನ ನಂತರ ಜತೀಂಧ್ರನಾಥರನ್ನು ಬ್ರಿಟಿಷ್ ಸರ್ಕಾರ ಸಣ್ಣಪುಟ್ಟ ಕಾರಣಗಳಿಗೂ ಜೈಲಿಗೆ ಕಳುಹಿಸುವ ಮನೋಧರ್ಮ ಪ್ರದರ್ಶಿಸುತ್ತಿತ್ತು.

೧೪.೬.೧೯೨೯ರಂದು ಜತೀಂದ್ರನಾಥರ ಕ್ರಾಂತಿಕಾರಿ ಚಟುವಟಿಕೆಗಳ ಕಾರಣವನ್ನೊಡ್ಡಿ ಬಂಧಿಸಿ, Supplementary Lahore Conspiracy Caseನಲ್ಲಿ ಅಪಾದಿತನೆಂದು ತೀರ್ಮಾನಿಸಿ, ಲಾಹೋರ್ ಬೋರ‍್ಸ್ಟಲ್ ಜೈಲಿಗೆ ಕಳುಹಿಸಲಾಯಿತು. ಲಾಹೋರ್ ಜೈಲಿನಲ್ಲಿ ಸ್ವತಂತ್ರ ಹೋರಾಟಗಾರರಿಗೆ, ವಿಚಾರಣಾಧೀನ ಖೈದಿಗಳಿಗೆ ಅತಿಯಾಗಿ ಕಿರುಕುಳ ನೀಡಲಾಗುತ್ತಿತ್ತು. ಖೈದಿಗಳಿಗೆ ನೀಡಲಾಗುತ್ತಿದ್ದ ಸಮವಷ್ತ್ರಗಳು ಕೊಳೆಯಾಗಿರುತ್ತಿದ್ದುವು. ಅಡುಗೆಮನೆ ಜಿರಲೆ ಇಲಿಗಳ ವಾಸಸ್ಥಾನವಾಗಿಬಿಟ್ಟಿತ್ತು. ಕುಡಿಯಲು ಕೊಡುತ್ತಿದ್ದ ನೀರಿನಲ್ಲಿ ಹುಳುಗಳು ತೇಲುತ್ತಿದ್ದುವು. ಓದಲು ಪುಸ್ತಕ ಪತ್ರಿಕೆಗಳನ್ನು ಕೊಡುತ್ತಿರಲಿಲ್ಲ. ಆದರೆ, ಅದೇ ಜೈಲಿನಲ್ಲಿದ್ದ ಇಂಗ್ಲಿಷ್ ಖೈದಿಗಳನ್ನು ಉತ್ತಮತರವಾಗಿ ನಡೆಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಜತೀಂದ್ರನಾಥ ದಂಗೆಯೆದ್ದುಬಿಟ್ಟರು. ತಾರತಮ್ಯವನ್ನು ವಿರೋಧಿಸಿ ೧೩.೭.೧೯೨೯ರಿಂದ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು. ಜೈಲಿನ ಆಡಳಿತ ಜತೀಂದ್ರನಾಥ ಮತ್ತು ಇತರ ಸತ್ಯಾಗ್ರಹಿಗಳಿಗೆ ಹೊಡೆದು ಬಡಿದು ಹಿಂಸಿಸಿದ್ದಲ್ಲದೆ, ಕುಡಿಯಲು ನೀರನ್ನು ಸಹ ಕೊಡಲಿಲ್ಲ. ಬಲವಂತವಾಗಿ ಆಹಾರ ತಿನ್ನಿಸುವ ಯತ್ನವೂ ನಡೆಯಿತು. ಆದರೂ ಜತೀಂದ್ರನಾಥ ಉಪವಾಸವನ್ನು ನಿಲ್ಲಿಸಲಿಲ್ಲ. ಗಾಂಧೀಜಿ ಮೊದಲಾದ ನಾಯಕರುಗಳು ಜತೀಂದ್ರನಾಥ ಮತ್ತು ಇತರ ಸತ್ಯಾಗ್ರಹಿಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರದ ಮೇಲೆ ಒತ್ತಡ ಹೇರತೊಡಗಿದರು. ದಿನೇ ದಿನೇ ತೀವ್ರತರವಾಗುತ್ತಿದ್ದ ಹೋರಾಟವನ್ನು ಗಮನಿಸಿದ ಜೈಲು ಆಡಳಿತ ಯಾವುದೇ ನಿರ್ಬಂಧಗಳಿಲ್ಲದೆ ಜತೀಂದ್ರನಾಥರನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ವರದಿ ನೀಡಿತು. ಆದರೆ ಸರ್ಕಾರ ಅದಕ್ಕೆ ಒಪ್ಪದೆ ಬೇಲ್ ಮೇಲೆ ಬಿಡುಗಡೆ ಮಾಡುವುದಾಗಿ ಹೇಳಿತು. ಜತೀಂದ್ರನಾಥರು ಅದನ್ನು ಒಪ್ಪಲಿಲ್ಲ. ೧೩.೯.೧೯೨೯ ಉಪವಾಸ ಸತ್ಯಾಗ್ರಹದ ೬೩ನೆಯ ದಿನ, ಮಧ್ಯರಾತ್ರಿ ೧ ಗಂಟೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಜತೀಂದ್ರನಾಥರ ಪ್ರಾಣಪಕ್ಷಿ ಹಾರಿಹೋಯಿತು. ಸಾವಿನ ಸುದ್ದಿ ತಿಳಿದ ತಕ್ಷಣ ವೈಸರಾಯ್ Jatin Das of the Conspiracy Case, who was on hunger strike, died this afternoon at 1 p.m. Last night, five of the huunger strikers gave up their hunger strike. So there are only Bhagat Singh and Dutt who are on strike ...ಎಂದು ಲಂಡನ್ನಿಗೆ ತಂತಿ ಕಳುಹಿಸಿದ.

ಹುತಾತ್ಮ ಜತೀಂದ್ರನಾಥರ ಪಾರ್ಥಿವ ಶರೀರವನ್ನು ಲಾಹೋರಿನಿಂದ ಕಲ್ಕತ್ತಾಕ್ಕೆ ರೈಲಿನಲ್ಲಿ ತರಲಾಯಿತು. ದಾರಿಯುದ್ದಕ್ಕೂ ಪ್ರತೀ ನಿಲ್ದಾಣದಲ್ಲೂ ಸಾವಿರಾರು ಜನರು ಅಂತಿಮ ನಮನ ಸಲ್ಲಿಸುತ್ತಿದ್ದರು. ಕಲ್ಕತ್ತಾದಲ್ಲಿ ಸುಮಾರು ೬ ಲಕ್ಷ ಜನರ ಎರಡು ಮೈಲಿ ಉದ್ದ ಮೆರವಣಿಗೆಯಲ್ಲಿ ಇಡೀ ದೇಶದ ಪರವಾಗಿ ಅಂತಿಮ ನಮನ ಸಲ್ಲಿಸಲಾಯಿತು.

ಇಷ್ಟೆಲ್ಲಾ ಘಟನೆಗಳಿಂದಾಗಿ ಭಾರತದದಾದ್ಯಂತ ಸ್ವಂತಂತ್ರ ಹೋರಾಟದ ಕಿಚ್ಚು ಹೆಚ್ಚಾಯಿತು. ಬೀದಿ ಬೀದಿಗಳಲ್ಲಿ ಹರತಾಳ, ಪ್ರತಿಭಟನೆ, ಪಿಕೆಟಿಂಗ್ ನಡೆದವು. ಮೋತಿಲಾಲ್ ನೆಹರೂ ಅವರು, ಲಾಹೋರ್ ಜೈಲಿನ ಅಮಾನವೀಯ ನಡವಳಿಕೆಯನ್ನು ವಿರೋಧಿಸಿ, ನಡೆಯಬೇಕಿದ್ದ ಕೇಂದ್ರೀಯ ಅಸೆಂಬ್ಲಿಯ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದಲ್ಲದೆ, ಅಸೆಂಬ್ಲಿಯಲ್ಲಿ ಗೊತ್ತುವಳಿಯನ್ನು ಮಂಡಿಸಿ ೫೫-೪೭ರ ಅಂತರದಲ್ಲಿ ಗೆಲುವಾಗುವಂತೆ ನೋಡಿಕೊಂಡರು. ಮೊಹಮದ್ ಅಲಂ, ಗೋಪಿನಾಥ ಚಂದ್ ಭಾರ್ಗವ ಮೊದಲಾದ ನಾಯಕರು ಪಂಜಾಬ್ ಲೆಜಿಸ್ಲೇಟೀವ್ ಕೌನ್ಸಿಲ್ಲಿಗೆ ರಾಜಿನಾಮೆ ನೀಡಿ ಪ್ರತಿಭಟಿಸಿದರು. Another name has been added to the long and splendid roll of Indian martyrs. Let us bow our heads and pray for strength to act to carry on the struggle, however long it may be and whatever consequences, till the victory is ours ". ಎಂದು ಜವಹರಲಾಲ್ ನೆಹರೂರವರೂ ಹೋರಾಟಕ್ಕಿಳಿದರು. ಜತೀಂದ್ರನಾಥರ ಸತ್ಯಾಗ್ರಹ ಮತ್ತು ಸಾವು, ಬ್ರಿಟೀಷ್ ಸರ್ಕಾರದ ತಾರತಾಮ್ಯ ನೀತಿಯನ್ನು, ತಣ್ಣನೆಯ ಕ್ರೌರ್ಯವನ್ನು ಜಗತ್ತಿನೆದರಿಗೆ ತೆರೆದಿಟ್ಟಿತ್ತು.

ಜತೀಂದ್ರನಾಥರ ಸಾವು ಇಡೀ ಭಾರತವನ್ನು ಅದರಲ್ಲೂ ಯುವಕರನ್ನು ಬಡಿದೆಬ್ಬಿಸಿಬಿಟ್ಟಿತ್ತು. ದಕ್ಷಿಣ ಭಾರತದ ದಕ್ಷಿಣ ಮೂಲೆಯ ಮೈಸೂರು ಸಂಸ್ಥಾನದಲ್ಲೂ ಬ್ರಿಟೀಷ್ ಸರ್ಕಾರದ ವಿರುದ್ಧ ಪ್ರತಿಭಟನೆಗಳಾಗುತ್ತಿದ್ದುವು. ಯುವಕರೇ ಹೆಚ್ಚಾಗಿ ಹೋರಾಟಕ್ಕೆ ಇಳಿದರು. ಆಗಲೇ ಈ ’ಪಾಂಚಜನ್ಯ’ ಮೊಳಗಿಬಿಟ್ಟಿತು. ’ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ! ಜಗ್ಗದೆಯೆ, ಕುಗ್ಗದೆಯೆ, ಹಿಗ್ಗಿ ನಡೆ ಮುಂದೆ!’ ಎಂದು ಕರೆಯನ್ನಿತ್ತು ಕವಿತೆ ಮುಂದುವರೆಯುತ್ತದೆ.
ಬೆಚ್ಚ ಬಿಡು, ನೆಚ್ಚ ನೆಡು

ಕೆಚ್ಚದೆಯ ಗುಡಿಯಲ್ಲಿ;
ಸೆರೆಯ ಹರಿ, ಅರಿಯನಿರಿ,
ಹುಟ್ಟಳಿಸು ಹುಡಿಯಲ್ಲಿ!
ನಾನಳಿವೆ, ನೀನಳಿವೆ,
ನಮ್ಮೆಲುಬುಗಳ ಮೇಲೆ
ಮೂಡುವುದು, ಮೂಡುವುದು
ನವಭಾರತದ ಲೀಲೆ!
ನೊಂದ ದನಿ, ಕಣ್ಣಪನಿ,
ಬರಿದೆ ಎಂದೊರೆಯದಿರು!
ತೆತ್ತ ಹಣ, ಸತ್ತ ಹೆಣ
ಹೋಯ್ತೆಂದು ಮೊರೆಯದಿರು!
ಪೊಡವಿಯೊಳಡಗಿರುವ
ತಳಹದಿಯ ತೆಗಳುವರೆ?
ಮೆರೆಯುತಿರುವರಮನೆಯ
ಸಿರಿಯೊಂದ ಹೊಗಳುವರೆ?
ಎಲ್ಲ ಇದೆ, ಎಲ್ಲ ಇದೆ
ನಿತ್ಯತೆಯ ಗಬ್ಬದಲಿ;
ಮುಂದೆಯದು ತೋರುವುದು
ಬಿಡುಗಡೆಯ ಹಬ್ಬದಲಿ!
ನೆಚ್ಚುಗೆಡಬೇಡ ನಡೆ,
ಕೆಚ್ಚದೆಯ ಕಲಿಯೆ!
ಬೆಚ್ಚಿದರೆ, ಬೆದರಿದರೆ,
ಕಾಳಿಗದು ಬಲಿಯೆ?
ಭರತಖಂಡದ ಹಿತವೆ
ನನ್ನ ಹಿತ ಎಂದು,
ಭರತಮಾತೆಯ ಮತವೆ
ನನ್ನ ಮತ ಎಂದು.
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ತಿ ನನಗದೆಂದು,
ನುಗ್ಗು ಮುಂದಕೆ, ಧೀರ,
ಕಾಳೆಗದ ಕೊಲೆಗೆ!
ನುಗ್ಗು ಮರಣಕೆ, ವೀರ,
ಸಗ್ಗದಾ ನೆಲೆಗೆ!
ನೋಡದೋ ನೋಡಲ್ಲಿ: ದರ್ಪರಥದಡಿಯಲ್ಲಿ
ಹೊರಳುತಿರುವಳು ತಾಯಿ ನೆತ್ತರಿನ ಪುಡಿಯಲ್ಲಿ!
ಬಾಳನೊರೆಯಿಂದ ಹಿರಿ! ನುಗ್ಗು, ನಡೆ, ಕಟ್ಟ ಹರಿ!
ತಡೆಯ ಬಂದವರ ಇರಿ! ಒಲಿಯುವಳು ಜಯದ ಸಿರಿ!
ಜನ್ಮವೊಂದಳಿದರೇಂ? ನೂರಿಹವು ಬಲಿಗೆ!
ಕಾಳೆಗದೊಳಳಿಯಲೇಂ? ಸಾವೆ ಸಿರಿ ಕಲಿಗೆ!
ನಿಂತೇನು ನೋಡುತಿಹೆ? ಹದುಗುವರೆ ಇಲ್ಲಿ?
ಮಸಣವಾಗಲಿ ಎದೆಯು ರಣರಂಗದಲ್ಲಿ!
ನೆತ್ತರನು ನೋಡುವೆಯ? ಸತ್ತವರ ನೋಡುವೆಯ?
ಕಂಕಾಲಗಳ ಗೂಡೆ? ಮರಳುಗಳ ನೆಲೆಬೀಡೆ?
ಕಾಳಿಯಳಕುವಳೇನು ರಕ್ಕಸರ ಬಲಿಗೆ?
ಸಮರ ರಂಗದ ನಡುವೆ ಬೆದರಿಕೆಯೆ ಕಲಿಗೆ?
ಹಾ ನೋವು! ಹಾ ನೋವು!
ಎಂದೆಲ್ಲ ಕೂಗುವರೆ?
ಹಾ ನೀರು! ಹಾ ನೀರು!
ಎಂದಸುವ ನೀಗುವರೆ?
ಕೂಗಿಗೆದೆಗರಗದಿರು!
ಬೇನೆಯಿರೆ ಮರುಗದಿರು!
ಕಂಬನಿಯ ಕರೆಯದಿರು,
ಗುರಿಯ ಮರೆಯದಿರು,
ಕಲಿಯೆ, ಹಿಂಜರಿಯದಿರು,
ತಾಯ ತೊರೆಯದಿರು!
ಎಲುಬುಗಳ ತೊಲೆಗಳಲಿ
ಮಾಂಸದಾ ಮಣ್ಣಿನಲಿ
ನೆತ್ತರಿನ ನೀರಿನಲಿ
ಬೇನೆ ಬಿಸುಸುಯ್ಲಿನಲಿ
ಬಿಡುಗಡೆಯ ಸಿರಿಗುಡಿಯ
ಮಸಣದಲಿ ಕಟ್ಟು!
ಪಾವನದ ತಾಯಡಿಯ
ಬಲ್ಮೆಯಲಿ ಮುಟ್ಟು!
ಅತ್ಮವಚ್ಯುತವೆಂದು
ಜನ್ಮಗಳು ಬಹವೆಂದು
ಮೃತ್ಯ ನಶ್ವರವೆಂದು
ಭಾರತಿಗೆ ಜಯ ಎಂದು
ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!
ಭರತಖಂಡದ ಹಿತವೇ ನನ್ನ ಹಿತ ಎಂದು ಭರತಮಾತೆಯ ಮತವೆ ನನ್ನ ಮತ ಎಂದು... ಭಾರತಾಂಬೆಯ ಮುಕ್ತಿ ನನಗೆಂದು ನುಗ್ಗು ಮುಂದಕ್ಕೆ ಧೀರ ಕಾಳೆಗದ ಕೊಲೆಗೆ ನುಗ್ಗು ಮರಣಕೆ ವೀರಸಗ್ಗದ ನೆಲೆಗೆ ಎಂದು ಕವಿತೆ ಕರೆಕೊಡುತ್ತದೆ.

ಕವಿತೆಯ ಛಂದೋಬಂಧವೇ ಓದುಗ ಮತ್ತು ಕೇಳುಗ ಇಬ್ಬರನ್ನೂ ಬಡಿದೆಬ್ಬಿಸುವಂತಿದೆ. ೫ ೫ ಮಾತ್ರೆಯ ಪುಟ್ಟ ಪುಟ್ಟ ಪಂಕ್ತಿಗಳು ಈ ದೀರ್ಘ ಕವಿತೆಯಲ್ಲಿವೆ. ಒಂದೇ ರೀತಿಯ ಛಂದೋಬಂಧವಿದ್ದರೆ ದೀರ್ಘ ಕವಿತೆಗಳಿಗೆ ತಟ್ಟಬಹುದಾದ ಏಕತಾನತೆಯಿಂದ ಈ ಕವಿತೆ ಮುಕ್ತವಾಗಿದೆ ಎನ್ನಬಹುದು. ಕೆಲವೊಮ್ಮೆ, ಮುಕ್ತಾಯದ ಸಾಲುಗಳಲ್ಲಿ ಭಾವಕ್ಕನುಗುಣವಾಗಿ ೫ ೩ ಮಾತ್ರೆಯ ಪಂಕ್ತಿಗಳನ್ನು ತಂದಿರುವುದರಿಂದ ಕವನದ ವಾಚನ ಏರಿಳಿತದೊಂದೊಗೆ ಸಾಗುತ್ತದೆ. ಮೊದಲ ಸಾಲುಗಳಿಂದಲೇ ಈ ತಂತ್ರ ಪ್ರಯೋಗಗೊಂಡಿದ್ದು, ಫಲಪ್ರದವಾಗಿದೆ. ಎರಡೆರಡು ಸಾಲುಗಳನ್ನು ಒಟ್ಟಿಗೆ ಸೇರಿಸಿ ೫ ೫ ೫ ೫ ಮಾತ್ರೆಗಳ ಮತ್ತು ೫ ೫ ೫ ೩ ಮಾತ್ರೆಗಳ ಪಂಕ್ತಿಗಳಾಗಿಯೂ ಬದಲಾಯಿಸಿಕೊಳ್ಳಬಹುದು. ಇದರಿಂದ ಕವಿತೆ ಓಟಕ್ಕಾಗಲಿ ಅರ್ಥಕ್ಕಾಗಲಿ ತೊಂದೆರೆಯಾಗುವುದಿಲ್ಲ ಎನ್ನುವುದು ವಿಶೇಷ. (ಪ್ರಯೋಗಾರ್ಥವಾಗಿ ಒಂದು ಭಾಗವನ್ನು ಹಾಗೇ ಸಂಯೋಜಿಸಲಾಗಿದೆ.)

’ಪಾಂಚಜನ್ಯ’ ಮತ್ತು ಆ ರೀತಿಯ ಕ್ರಾಂತಿಗೀತೆಗಳನ್ನು ಹಾಡುವುದರ ಬಗ್ಗೆ, ಕುವೆಂಪು ಅವರು ಪಾಂಚಜನ್ಯದಂತಹ ಕವಿತೆಗಳನ್ನು ಸಾಭಿನಯ ವಾಚನಕ್ಕಾಗಿಯೆ ಬರೆದ್ದದ್ದು. ಸಾಧಾರಣವಾಗಿ ’ಪಾಂಚಜನ್ಯ’ ಮತ್ತು ’ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ’ ಕವನಸಂಗ್ರಹಗಳಲ್ಲಿರುವ ಕವನಗಳೆಲ್ಲ ವಾಚನ ಜಾತಿಗೆ ಸೇರಿವೆ, ಗಾಯನ ಜಾತಿಗಲ್ಲ. ಆದರೂ ಕೆಲವರು, ಅದರಲ್ಲಿಯೂ ಇತ್ತೀಚಿಗೆ ರೇಡಿಯೋ ಪ್ರಚಾರಕ್ಕೆ ಬಂದ ಮೇಲೆ, ಅವುಗಳನ್ನು ಗಾಯನ ಮಾಡುತ್ತಿರುವುದನ್ನು ಆಲಿಸಿ ತುಂಬ ನೊಂದುಕೊಂಡಿದ್ದೇನೆ. ಎನ್ನುತ್ತಾರೆ

ಆಗ ಕುವೆಂಪು ತಾವು ಬರೆಯುತ್ತಿದ್ದ ದಿನಚರಿ, ಪತ್ರಗಳು, ಕವಿತೆಗಳು ಮೊದಲಾದುವುಗಳ ತುದಿಯಲ್ಲಿ ’ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು. ಪಾಂಚಜನ್ಯವನ್ನು ಮೊದಲು ಪ್ರಕಟಿಸಿದ ’ವಿಶ್ವಕರ್ಣಾಟಕ’ ಪತ್ರಿಕೆಯ ಸಂಪಾದಕರಿಗೆ ಬರೆದಿದ್ದ ಪೋಸ್ಟ್ ಕಾರ್ಡಿನಲ್ಲೂ ಈ ಕ್ರಾಂತಿ ಬೀಜಾಕ್ಷರಗಳನ್ನು ಕಂಡು, ತಿ.ತಾ.ಶರ್ಮರು ’ಅಷ್ಟು ಬಟ್ಟಬಯಲಾಗಿ ಬರೆಯಬಾರದು’ ಎಂದು ಕವಿಯ ಹಿತಕ್ಕಾಗಿ ಹೇಳಿದ್ದರಂತೆ. ಕುವೆಂಪು ಈ ಕ್ರಾಂತಿಗೀತೆಯನ್ನು ಬರೆದು ಸಭೆಗಳಲ್ಲಿ ವೀರಾವೇಶದಿಂದ ಅಭಿನಯಪೂರ್ವಕವಾಗಿ ವಾಚಿಸುತ್ತಿದ್ದರು. ಸಭೆಗಳಲ್ಲಿ ಮಾತ್ರವಲ್ಲದೆ ಜೈಲಿನ ಒಳಗೂ ’ಪಾಂಚಜನ್ಯ’ ಕವಿತೆ ಕ್ರಾಂತಿಗೀತೆಯಾಗಿ ಕೇಳತೊಡಗಿತು.

ಸ್ವತಂತ್ರಹೋರಾಟದ ಸಭೆ ಸಮಾರಂಭಗಳಲ್ಲಿ, ಸೆರೆಮನೆಗಳಲ್ಲಿ, ಪ್ರತಿಭಟನಾ ಮೆರವಣಿಗೆಯಲ್ಲಿ ಮೊಳಗುತ್ತಿದ್ದ ಈ ಕ್ರಾಂತಿಗೀತೆ ಬ್ರಿಟಿಷ್ ಆಡಳಿತದ ಕಿವಿಗೂ ಬಿದ್ದಿತ್ತು. ಬ್ರಿಟಿಷರ ಪರವಾಗಿ ದೇಶೀಯ ಸಂಸ್ಥಾನಗಳಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ರೆಸಿಡೆಂಟ್ ’ರಾಜದ್ರೋಹದ ವಸ್ತುವನ್ನು ಪ್ರಕಟಿಸಿದ್ದಕ್ಕಾಗಿ’ ಎಂದು ವಿಶ್ವಕರ್ಣಾಟಕ ಪತ್ರಿಕೆಯ ಸಂಪಾದಕರಿಗೆ ನೋಟೀಸು ಕೊಟ್ಟೇಬಿಟ್ಟ! ಪಾಂಚಜನ್ಯವನ್ನು ಇಂಗ್ಲಿಷಿಗೆ ಭಾಷಾಂತರ ಮಾಡಲು ಹಾಗೂ ಅದರಲ್ಲಿರುವ ರಾಜದ್ರೋಹದ ವಿಷಯವನ್ನು ತೋರಿಸಲು ಮೈಸೂರು ಸರ್ಕಾರದ ಅಧಿಕೃತ ಭಾಷಾಂತರ ಇಲಾಖೆಗೆ ಕಳುಹಿಸಲಾಯಿತು. ಆದರೆ, ಅಲ್ಲಿ ಭಾಷಾಂತರಕಾರರಾಗಿದ್ದವರು ಸಿ.ಕೆ.ವೆಂಕಟರಾಮಯ್ಯ ಎಂಬ ದೇಶ ಭಕ್ತರು! ಅವರು ಪಾಂಚಜನ್ಯವನ್ನು ಭಾಷಾಂತರಿಸಿ ಅದರಲ್ಲಿ ಸಾಮಾನ್ಯವಾದ ದೇಶಭಕ್ತಿಯ ವಿಚಾರವಿದೆಯೆಂದೂ ಯಾವ ದೇಶವನ್ನಾಗಲಿ ಸರ್ಕಾರವನ್ನಾಗಲಿ ಜನಾಂಗವನ್ನಾಗಲಿ ಹೆಸರಿಸಿಲ್ಲವೆಂದೂ, ಆದ್ದರಿಂದ ಕಾನೂನು ಪ್ರಕಾರಕ್ಕೆ ಅದು ಒಳಗಾಗುವಂತಿಲ್ಲವೆಂದೂ ಉತ್ತರ ನೀಡಿದ್ದರು.