Thursday, March 08, 2012

ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ!

ಭಾವಗೀತೆಯಾಗಿ, ಚಲನಚಿತ್ರಗೀತೆಯಾಗಿ ಹಲವಾರು ದಶಕಗಳಿಂದ ಕನ್ನಡಿಗರ ಜನಮಾನಸದಲ್ಲಿ ನೆಲೆಯಾಗಿರುವ ಹಾಡು ’ದೋಣಿಹಾಡು’. ಒಂದು ಸುಂದರ ಮುಂಜಾವಿನಲ್ಲಿ ಕೆರೆಯ ನೀರಿನಲ್ಲಿ ದೋಣಿಯಾತ್ರೆ ಮಾಡುತ್ತಾ, ಸೂರ್ಯೋದಯದ ಸೊಬಗನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿರುವ ಹಾಡು ಇದು. ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ! ಎಂದು ಆರಂಭವಾಗುವ ಈ ಕವಿತೆಯ ಹುಟ್ಟಿಗೆ ಒಂದು ಐತಿಹಾಸಿಕ ಮಹತ್ವವಿದೆ. ಈ ಹಾಡು ಹುಟ್ಟಿ ಎಂಬತ್ತು ವರ್ಷಗಳೇ ಕಳೆದಿವೆ!
ಕುಕ್ಕನಹಳ್ಳಿ ಕೆರೆಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಅದೇ ಕುಕ್ಕನಹಳ್ಳಿ ಕೆರೆಗೂ ಮೈಸೂರು ವಿಶ್ವವಿದ್ಯಾನಿಲಯಕ್ಕೂ, ಕವಿ ಕುವೆಂಪು ಅವರಿಗೂ ಬಿಡಿಸಲಾಗದ ನಂಟಿದೆ. ಒಂಟಿಕೊಪ್ಪಲಿನ ಕಡೆಯಿಂದ ಮಹಾರಾಜ ಕಾಲೇಜಿನ ಕಡೆಗೆ ಬರಲು ಒಮ್ಮೊಮ್ಮೆ ಕುಕ್ಕನಹಳ್ಳಿ ಕೆರೆಯಲ್ಲಿ ದೋಣಿ ಏರಿ ಬರುವುದು ನಡೆಯುತ್ತಿತ್ತು. ಮಹಾರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಪ್ರೊ.ಜೆ.ಸಿ.ರಾಲೊ ಅವರು ಒಂದು ಸೀಮೆದೋಣಿಯನ್ನು ತರಿಸಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಕುಕ್ಕನಹಳ್ಳಿ ಕೆರೆಯಲ್ಲಿ ದೋಣಿಯಾಟಕ್ಕೆ ಅವಕಾಶ ಕಲ್ಪಿಸಿದ್ದರಂತೆ. ೧೯೨೦-೩೦ರ ದಶಕದಲ್ಲಿ ಕುಕ್ಕನಹಳ್ಳಿಯ ಕೆರೆ ಈಗಿನಂತಿರಲಿಲ್ಲ; ಹೇಗಿತ್ತು ಎಂಬುದಕ್ಕೆ ಕುವೆಂಪು ಅವರ ಸಾಹಿತ್ಯದಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಿವೆ. ಕುಕ್ಕನಹಳ್ಳಿಯ ಕೆರೆಯ ಸಾಮೀಪ್ಯ, ಕೆರೆಯ ನೀರಿನಲ್ಲಿ ದೋಣೀಯೇರಿ ತೇಲುತ್ತಾ ಸುತ್ತಲಿನ ಹಸಿರು ಸಸ್ಯರಾಶಿ, ದೂರದ ಚಾಮುಂಡಿಬೆಟ್ಟ, ಸೂರ್ಯೋದಯ, ಸೂರ್ಯಾಸ್ತ ಇವುಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕವಿಗೆ ಸಹಜವಾಗಿಯೇ ಸಂತೋಷ ನೀಡಿರಬಹುದು. ಕುಕ್ಕನಹಳ್ಳಿಯ ಕೆರೆಯಾಚೆ ಒಮ್ಮೆ ನಡೆದಾಗ, ಕವಿಗೆ, ಸಾಯಂಕಾಲವು ’ಧ್ಯಾನದೊಳಿರ್ಪ ತಪಸ್ವಿನಿಯಂತೆ’ ತೋರುತ್ತಿತ್ತಂತೆ! ದಿನವೂ ಪ್ರಾತಃಕಾಲ ಒಂದು-ಒಂದೂವರೆಗಂಟೆಯ ಹೊತ್ತು ನೀರಿನಲ್ಲಿ, ಲಯಬದ್ಧವಾಗಿ ಹುಟ್ಟುಹಾಕುತ್ತಾ ಸಾಗುತ್ತಿದ್ದಾಗಲೇ ಕವಿಗೆ ಈ ಹಾಡು ಹೊಳೆದಿದ್ದು. ೯.೮.೧೯೩೦ ಈ ಹಾಡನ್ನು ರಚಿಸಿ ಹಾಡಲು ಕೊಟ್ಟರಂತೆ. ನಂತರ ದೋಣಿಯಲ್ಲಿ ಹೋಗುವಾಗಲೆಲ್ಲಾ ಹುಟ್ಟಿನ ಲಯಕ್ಕೆ ಸರಿಯಾಗಿ ಈ ಹಾಡನ್ನು ದೋಣಿಯಲ್ಲಿದ್ದವರೆಲ್ಲಾ ಹಾಡುತ್ತಿದ್ದರಂತೆ. ಆ ದಿನಗಳಲ್ಲಿ. ಕಾಲೇಜಿನ ದೋಣಿ ಕಲಾಪ ಮತ್ತು ಈಜುಗಾರಿಕೆ ವಿಭಾಗದ ಕ್ಯಾಪ್ಟನ್ ಆಗಿದ್ದ ಬಿ.ಟಿ.ಗೋವಿಂದಯ್ಯ ಎಂಬುವವರು ಈ ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದವರು, ಹೀಗೆ ದಾಖಲಿಸಿದ್ದಾರೆ.
"ತರುಣ ಕವಿ ಕುವೆಂಪು ನಿಂತು ನೋಡಿದರು. ನಾವೂ ಅವರನ್ನು ನೋಡಿದೆವು. ಗೌರವಾನ್ವಿತ ವ್ಯಕ್ತಿಯಲ್ಲವೇ? “ಬರ್ತಿರಾ, ಬನ್ನಿ” ಎಂದು ಕವಿಗೆ ನಾನು ಆಹ್ವಾನವಿತ್ತೆ. ದೋಣಿಯನ್ನು ನಾವಿಕರು ದಂಡೆಯ ಸಮೀಪ ತಂದರು. ಮುಗುಳ್ನಗು ಬೀರುತ್ತಾ ಪುಟ್ಟಪ್ಪನವರು ಮೆಟ್ಟಲುಗಳನ್ನಿಳಿದು ಬಂದರು. ನೀರಿನಲ್ಲಿಳಿದು ದೋಣಿಯನ್ನು ಹಿಡಿದು ಅವರಿಗೆ ದೋಣಿ ಏರಲು ನೆರವಾದೆ. ಅಲುಗಾಡುತ್ತಿದ್ದ ದೋಣಿಯಲ್ಲಿ ತಡವರಿಸುತ್ತಾ ಅವರು ಕೊನೆಯಂಚಿನ ಅತಿಥಿ ಆಸನದಲ್ಲಿ ಕುಳಿತರು. ದೋಣಿ ದಡ ಬಿಟ್ಟಿತು. ಅದರ ಚಲನ ವೇಗ ತೀವ್ರವಾಯಿತು. ಐವರು ಹುಟ್ಟು ಹಿಡಿದವರು ಕ್ರಮಬದ್ಧವಾಗಿ ಸಟ್ಟುಗ ಮೊಗೆಯಲಾಗಿ ಕಡಾಣಿಯ ಠಕ್ ಠಕ್ ಸದ್ದು, ಸೀಳುವ ನೀರಿನ ಸುಯ್ಯಿ, ತಾಳಮೇಳವಾಯಿತು. ಕವಿಯ ಕುಂಡಲಿನಿ ಶಕ್ತಿ ಕುದುರಿತು. ಹೆಚ್ಚಿನ ಮಾತಿಲ್ಲ. ಅವರ ಭಾವೋನ್ಮುಖವಾದ ಶ್ರೀವದನದಿಂದ ‘ಗೋವಿಂದಯ್ಯ, ನೋಡಿ, ಹುಟ್ಟು ಹಾಕಲು ಈ ಪದಗಳ ನೆರವಾದೀತೇ? ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ’ ಎಂದರು. ಸಟ್ಟುಗ ಹಿಡಿದು ನೀರು ಮೊಗೆತಕ್ಕೆ ನಾನು ಕುಳಿತೆ. ಕುವೆಂಪು ಧ್ವನಿಗೂಡಿಸಿದರು. ತಾಳ ಸರಿಗೂಡಿತು. ‘ಬಲು ಸೊಗಸು ಜೋಡಿ’ ಎಂದೆ. ಶ್ರೀ ಪುಟ್ಟಪ್ಪನವರು ಸಶ್ರಾವ್ಯವಾಗಿ ಹಾಡುತ್ತಾರೆ. ಹಾಡಿದರು. ಕವಿಯ ಹೃದಯದಲ್ಲಿ ಹೊತ್ತು ಬ್ರಾಹ್ಮೀ ಮುಹೂರ್ತದಲ್ಲಿ ದೋಣಿ ವಿಹಾರ ವೈಭವೋಪೇತವಾಗಿತ್ತು. ಕುವೆಂಪು ಅತಿಥಿಯಲ್ಲ, ಆಗಂತುಕನಲ್ಲ ನಮ್ಮ ಕೂಟಕ್ಕೆ ಸೇರಿಹೋದವರೆಂದೆನಿಸಿತು. ಆನಂದದ ವಾತಾವರಣದಲ್ಲಿ ನಾವೆಲ್ಲರೂ ಮೈಮರೆಯುತ್ತಿದ್ದೆವು. ಏನೊಂದು ಸಿಹಿ!"
’ದೋಣಿಹಾಡು’
ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ!
ಬೀಸುಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ!
ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ,
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ,
ನೋಡಿ, ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ! ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ!
(’ಮೂಡುವೆಣ್ಣು’ ಎಂಬ ಪದಪ್ರಯೋಗ ಗಮನಾರ್ಹ)
ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡತೈತರೆ ಬಾಲಕೋಮಲ ದಿನಮಣಿ!
ಹಸುರು ಜೋಳದ ಹೊಲದ ಗಾಳಿ ತೀಡಿ ತಣ್ಣಗೆ ಬರುತಿದೆ,
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ!
ದೂರಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ;
ಅದನೆ ಹೋಲುತ, ಅಂತೆ ತೇಲುತ ದೋಣಿಯಾಟವನಾಡಿರಿ!
ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ!
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ!
ದೋಣಿಯ ಚಲನೆಯ ಲಯದೊಂದಿಗೆ ಆರಂಭವಾಗುವ ಹಾಡು, ಸೂರ್ಯೋದಯದ ಸೌಂದರ್ಯವನ್ನು ಕಟ್ಟಿಕೊಡುತ್ತಲೇ, ಬದುಕಿನ ಅನಂತತೆಯನ್ನು ಮನಗಾಣಿಸಿ, ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ! ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ! ಎಂಬ ತಾತ್ವಿಕತೆಯನ್ನು ಮನಗಾಣಿಸುತ್ತದೆ! ಹಸುರುಹುಲ್ಲಿನ ತುದಿಯಲ್ಲಿ ಮುತ್ತಿನಂತೆ ಬೆಳ್ಳಗಿರುವ ಸಾವಿರ ಸಾವಿರ ಹನಿಗಳ ಸಾಲು, ಉದಯರವಿಯ ಪ್ರಥಮಕಿರಣಗಳು ಬಿದ್ದಗಳಿಗೆಯಲ್ಲಿ ಒಂದೊಂದು ಹನಿಗಳೂ ಒಂದೊಂದು ಬಿಡಿ ವಜ್ರದಂತೆ ಪ್ರಕಾಶಿಸುವ ಶಿವಸೌಂದರ್ಯವನ್ನು ಕವಿ ಪದರೂಪದಲ್ಲಿ ಸೆರೆಹಿಡಿದಿರುವುದರಲ್ಲೇ ಈ ಕವಿತೆಯ ಅನನ್ಯತೆ ಅಡಗಿದೆ. ಸೂರ್ಯೋದಯವರ್ಣನೆಯಿಂದ ’ವಿಶ್ವಕವಿವರನ ಕಾವ್ಯಂ ಭುವನವಿದು’ ಎಂಬ ಭಾವ ಸಹೃದಯನಲ್ಲಿ ಮೂಡಿ ಪ್ರಜ್ವಲಿಸಿ ಮರೆಯಾಗಿಬಿಡುತ್ತದೆ! ಒತ್ತಕ್ಷರಗಳು ಅತಿ ವಿರಳವಾಗಿರುವುದು ಈ ಕವಿತೆಯ ಲಯ ದೋಣಿಯ ತೇಲುವಿಕೆಯ ಲಯದೊಂದಿಗೆ ಮಿಳಿತವಾಗಿರುವುದಕ್ಕೆ ಸಾಕ್ಷಿಯಾಗಿವೆ. ಪಲ್ಲವಿಯ ಸಾಲುಗಳಲ್ಲಂತೂ ಒತ್ತಕ್ಷರಗಳೇ ಇಲ್ಲ! ಒಂದು ಮತ್ತು ಚರಣಗಳಲ್ಲಿ ಕೇವಲ ಮೂರು ಮೂರು; ಎರಡನೆಯದರಲ್ಲಿ ಒಂದು ಮಾತ್ರ! 3, 4; 3, 4; 3, 4; -4 ಮಾತ್ರಾಗಣಗಳ ಪಂಕ್ತಿಗಳು ನೀರಿನ ಅಲೆಗಳಂತೆಯೇ ತಳುಕಿ ಬಳುಕಿ ಭಾವವನ್ನು ಹೊಮ್ಮಿಸುತ್ತವೆ! ಇಡೀ ಪದ್ಯವನ್ನು ಕಿರುಭಾಮಿನಿ ಷಟ್ಪದಿಯ ರೂಪದಲ್ಲಿಯೂ ಬರೆಯಬಹುದು, ಕೆಳಕಂಡಂತೆ!
ದೋಣಿ ಸಾಗಲಿ,
ಮುಂದೆ ಹೋಗಲಿ,
ದೂರ ತೀರವ ಸೇರಲಿ!
ಬೀಸುಗಾಳಿಗೆ
ಬೀಳುತೇಳುವ
ತೆರೆಯ ಮೇಗಡೆ ಹಾರಲಿ!

ಹೊನ್ನಗಿಂಡಿಯ
ಹಿಡಿದು ಕೈಯೊಳು
ಹೇಮವಾರಿಯ ಚಿಮುಕಿಸಿ,
ಮೇಘಮಾಲೆಗೆ
ಬಣ್ಣವೀಯುತ
ಯಕ್ಷಲೋಕವ ವಿರಚಿಸಿ,

ನೋಡಿ, ಮೂಡಣ
ದಾ ದಿಗಂತದಿ
ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ!
ಚೆಲುವೆಯಾಕೆಗೆ
ಸುಪ್ರಭಾತವ ಬಯಸಿರಿ!

ಕೆರೆಯ ಅಂಚಿನ
ಮೇಲೆ ಮಿಂಚಿನ
ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು
ಮೂಡತೈತರೆ
ಬಾಲಕೋಮಲ ದಿನಮಣಿ!

ಹಸುರು ಜೋಳದ
ಹೊಲದ ಗಾಳಿಯು
ತೀಡಿ ತಣ್ಣಗೆ ಬರುತಿದೆ,
ಹುದುಗಿ ಹಾಡುವ
ಮತ್ತಕೋಕಿಲ
ಮಧುರವಾಣಿಯ ತರುತಿದೆ!

ದೂರಬೆಟ್ಟದ
ಮೇಲೆ ತೇಲುವ
ಬಿಳಿಯ ಮೋಡವ ನೋಡಿರಿ;
ಅದನೆ ಹೋಲುತ,
ಅಂತೆ ತೇಲುತ
ದೋಣಿಯಾಟವನಾಡಿರಿ!

ನಾವು ಲೀಲಾ
ಮಾತ್ರ ಜೀವರು,
ನಮ್ಮ ಜೀವನ ಲೀಲೆಗೆ!
ನಿನ್ನೆ ನಿನ್ನೆಗೆ,
ಇಂದು ಇಂದಿಗೆ
ಇರಲಿ ನಾಳೆಯು ನಾಳೆಗೆ!
ಮುಂದೆ, ೨೪.೮.೧೯೩೦ರಂದು ತುಂಬಾ ಹೊತ್ತು ಮೈಮರೆತು ದೋಣಿಯಲ್ಲಿ ತೇಲುತ್ತಿದ್ದರಂತೆ. ಕವಿ ಹಾಕುತ್ತಿದ್ದ ಹುಟ್ಟು ಕವೆಯಿಂದ ತಪ್ಪಿ, ಕಾಲು ಮೇಲಾಗಿ ದೋಣಿಯೊಳಗೆ ಬಿದ್ದು ಸೊಂಟಕ್ಕೆ ಪೆಟ್ಟೂ ಕೂಡ ಮಾಡಿಕೊಂಡಿದ್ದರಂತೆ. ಈ ಘಟನೆಯನ್ನೂ ಬಿ.ಟಿ.ಗೋವಿಂದಯ್ಯ ದಾಖಲಿಸಿದ್ದಾರೆ. "ಕಾಲನಿಗೆ ಅಸೂಯೆಯಿದೆ. ನಮ್ಮ ಆನಂದವನ್ನು ಮೊಟಕುಗೊಳಿಸಿದ. ಕುವೆಂಪು ಚುಕ್ಕಾಣಿ ಹಿಡಿದರು. ಪರಿಣತರಾದರು. ಹುಟ್ಟು ಹಾಕುವುದನ್ನು ಕಲಿಯಬೇಕು. ನಾನು ವಿವರ ಹೇಳಿಕೊಟ್ಟೆ. ಸಟ್ಟುಗ, ನೀರೊಳಗೆ ಸಾಕಷ್ಟು ಅದ್ದಿ ಮೊಗೆತದ ಸೆಳೆತಕ್ಕೆ ಸಿಗಬೇಕು ಇಲ್ಲವಾದರೆ ಕಡಾಣಿಯಿಂದ ಜಾರಿ ದೇಹಕ್ಕೆ ಅಪ್ಪಳಿಸೀತು ಎಂಬ ಎಚ್ಚರ ಕೊಟ್ಟಿದ್ದೆ. ಒಂದೇ ಸಾಲಿನಲ್ಲಿ ಈರ್ವರು ಕುಳಿತು ಎರಡು ಬದಿಯಿಂದಲೂ ಹುಟ್ಟು ಹಾಕಬಹುದಿತ್ತು. ನಾನು ಜತೆ ಕುಳಿತು ಪ್ರಾಯೋಗಿಕ ಅಭ್ಯಾಸಕ್ಕೆ ಅನುವು ಮಾಡಿದೆ. ಪುಟ್ಟಪ್ಪನವರು ಸಟ್ಟುಗ ಹಿಡಿದು ಹುಟ್ಟು ಹಾಕಿದರು. ಸರಿದೋರಿತು. ಕವಿಯ ಬಾಯಲ್ಲಿ ಸ್ವರ ಮೂಡಿತು. ‘ಭಾವನಾ ಪ್ರಪಂಚಕ್ಕೇರದೆ ವಾಸ್ತವ ಪ್ರಪಂಚದಲ್ಲಿರಬೇಕು ಪುಟ್ಟಪ್ಪನವರೇ-ಸಟ್ಟುಗ ಅಣಿಯಿಂದ ಜಾರೀತು’ ಎಂದು ನಾನು ಹೇಳುವಷ್ಟರಲ್ಲಿ, ಕುವೆಂಪು ಹಿಡಿದಿದ್ದ ಸಟ್ಟುಗ ‘ಹಿಮಮಣಿ’ ಸೆಳೆತಕ್ಕೆ ಲಾಳದಿಂದ ಹೊರ ಚಿಮ್ಮಿತು. ಬಾಗಿ ಎಳೆಯುತ್ತಿದ್ದ ತರುಣ ಕವಿ ಧೊಪ್ಪನೆ ದೋಣಿಯ ತಳಕ್ಕೆ ಬಿದ್ದರು- ಹಲಗೆ ತಾಕಿತು. ತಳದ ಅಡ್ಡಪಟ್ಟಿಗಳಿಂದ ಬೆನ್ನು ಮೂಳೆಗೆ ನೋವಾಯಿತು. ಅವರನ್ನು ಮೇಲೆಳಿಸುವ ಕೆಲಸ ಕೆಲವರಿಗೆ, ದೋಣಿಯನ್ನು ದಂಡೆಗೆ ಒಯ್ಯುವ ಕೆಲಸ ಇತರರಿಗೆ. ಒಬ್ಬನಂತೂ ದಡ ಸೇರುತ್ತಲೇ ದೋಣಿಯಿಂದ ಹಾರಿ, ಓಡಿ ಓಡಿ ದೂರದಲ್ಲಿ ಹಾಯುತ್ತಿದ್ದ ಟಾಂಗಾ ಒಂದನ್ನು ತಂದ. ಮೃದುವಾಗಿ ಕವಿಯನ್ನು ದೋಣಿಯಿಂದ ದಂಡೆಗೆ, ದಂಡೆಯಿಂದ ಟಾಂಗಾಕ್ಕೆ ಏರಿಸಿದ್ದಾಯಿತು. ನಾನು ಒದ್ದೆಯಾಗಿದ್ದ ಮೈಗೆ ಉಡುಪು ಧರಿಸಿಕೊಂಡು ಹೊರಟೆ. ಕವಿಯಾಗ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಡಾಕ್ಟರು ಮತ್ತು ನರ‍್ಸ್‌ಗಳು ಗೌರವ ಉಪಚಾರಗಳಿಂದ ಚಿಕಿತ್ಸೆ ಮಾಡಿ ಪುಟ್ಟಪ್ಪನವರು ಗುಣಮುಖರಾದರು."
ಜಟ್ಟಿಯೊಬ್ಬನಿಂದ ಉಳುಕು ತೆಗೆಸಿದರೂ ನೋವು ಹೋಗಲಿಲ್ಲ. ಆಶ್ರಮದಲ್ಲಿ ಸಹವಾಸಿಯಾಗಿದ್ದ ಪ್ರಿಯಾನಾಥ್ ಮಹಾರಾಜ್ (ಸ್ವಾಮಿ ಚಿನ್ಮಾತ್ರಾನಂದ) ಅವರು ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಮೇಲಿಂದ ಮೇಲೆ ಎಲೆಕ್ಟ್ರಿಕ್ ಮಸಾಜ್ ಮಾಡಿಸಿಕೊಂಡು ಕಳೆಯಬೇಕಾಯಿತಂತೆ! ಆ ನೋವಿನಲ್ಲಿ ೫.೯.೧೯೩೦ರಂದು ಬರೆದ ಸಾಲುಗಳಿವು.
ಸೊಗದಂತೆಯೇ ನೋವೂ ಧೀರರಿಗಾಹಾರಮಲ್ತೆ?
ನೋವೆ ಬಾಳಿಗೆ ಸಾಣೆಯಲ್ತೆ? ಮಣಿಕರ್ಣಿಕೆಯಲ್ಲಿ
ಮಸಣಗಾಹಿಯು ನೀನಲ್ತೆ? ಬೃಂದಾವನದಲ್ಲಿ ತುರುಗಾಹಿಯೂ
ನೀನಲ್ತೆ? ಅದರಿಂದಲೆ ನಾನು ನಿನ್ನನ್ನು ಸುಖದಲ್ಲಿಯೂ
ದುಃಖದಲ್ಲಿಯೂ ಕಂಡು ಆರಾಧಿಸಬಲ್ಲೆ.
ಈ ದೋಣಿಯಾಟ, ದೋಣಿಹಾಡು ಬಹಳದಿನಗಳ ಕಾಲ ಮುಂದುವರೆದಿತ್ತು. ೨೧.೨.೧೯೩೧ ಪಂಜೆ ಮಂಗೇಶರಾಯರು ಮೈಸೂರಿಗೆ ಬಂದಿದ್ದಾಗ, ಒಂಟಿಕೊಪ್ಪಲಿನ ಆಶ್ರಮದಿಂದ ಕಾಲೇಜಿಗೆ ಹೋಗುವಾಗ ದೋಣಿಯಲ್ಲೇ ಕವಿಗೋಷ್ಠಿ ನಡೆದುಹೋಗುತ್ತದೆ.. ಅಂದು ಮಂಗೇಶರಾಯರು ದೋಣಿಯಲ್ಲಿ ತಮ್ಮದೊಂದು ಕವನ ವಾಚಿಸುತ್ತಾರೆ. ಉದ್ದಕ್ಕೂ ’ದೋಣಿಹಾಡು’ ಗೀತೆಯನ್ನು ಕುವೆಂಪು ಮತ್ತು ಡಿ.ಎಲ್.ನರಸಿಂಹಾಚಾರ್ ಇಬ್ಬರೂ ಕೂಡಿ ಹಾಡುತ್ತಾರೆ. ತೀನಂಶ್ರೀಯವರ ಸ್ವಾಗತಗೀತೆಯನ್ನು ಡಿ.ಎಲ್.ಎನ್. ಹಾಡುತ್ತಾರೆ.
೧೯೩೪ರಲ್ಲಿ ದೋಣಿಹಾಡು ’ನವಿಲು’ ಕವನಸಂಕಲನವನ್ನು ಸೇರಿ ಪ್ರಕಟವಾಗುತ್ತದೆ. ಹಲವಾರು ದಿಗ್ಗಜ ಗಾಯಕರು ಅದನ್ನು ಹಾಡಿ ಜನಪ್ರಿಯಗೊಳಿಸಿದ್ದಾರೆ. ೧೯೬೫ರಲ್ಲಿ ’ಮಿಸ್.ಲೀಲಾವತಿ’ ಚಿತ್ರಕ್ಕೆ ಬಳಸಿಕೊಳ್ಳಲಾಯಿತು. ಚಲನಚಿತ್ರಗೀತೆಯಾಗಿಯೂ ’ದೋಣಿಹಾಡು’ ಚಿರನೂತನವಾಗಿದೆ.

Monday, February 27, 2012

ಶ್ರೀಗುರುದೇವಗೆ ನೀನೆ ನಿವೇದಿಸು ಕಬ್ಬಿಗನಿಂಚರಗಾಣ್ಕೆಯಿದು!

ಮಲೆನಾಡಿನ ಚಿತ್ರಗಳು ಕೃತಿಯನ್ನೋದಿದವರಿಗೆ ತಿಮ್ಮು ಎಂಬ ಪಾತ್ರದ ಪರಿಚಯವಿದ್ದೇ ಇರುತ್ತದೆ. ಇರುಳು ಬೇಟೆಗೆ ಹೋಗಿ ಕವಿಗಳಾಗಿ ಹಿಂತಿರುಗಿದ ಕಥನವುಳ್ಳ ’ಕಾಡಿನಲ್ಲಿ ಕಳೆದ ಒಂದಿರುಳು’ ಲೇಖನದಲ್ಲಿ ಬರುವ ಮೂವರು ವ್ಯಕ್ತಿಗಳಲ್ಲಿ ಈ ತಿಮ್ಮುವೂ ಒಬ್ಬರು. ’ರಾಮರಾವಣರ ಯುದ್ಧ’ದಲ್ಲಿ ಆಂಜನೇಯ ಎತ್ತುತ್ತಿದ್ದ ಕೈಲಾಸಪರ್ವತವನ್ನು ಮೆಟ್ಟಿದ ಶಿವನ ಪಾತ್ರದಾರಿಯೂ ಈ ತಿಮ್ಮುವೆ! ಶಿಲಾತಪಸ್ವಿ ಬಂಡೆಯ ಮೇಲೆ ಅಕ್ಷರರೂಪದಲ್ಲಿ ಅಮರನಾಗಿರುವ ತಿಮ್ಮು, ಕುವೆಂಪು ಅವರ ದೊಡ್ಡ ಚಿಕ್ಕಪ್ಪಯ್ಯ ರಾಮಯ್ಯಗೌಡರ ಮಗ. ಕುವೆಂಪು ಅವರು ಮೈಸೂರಿನಲ್ಲಿ ಓದುತ್ತಿದ್ದಾಗ, ರಾಮಯ್ಯಗೌಡರ ನಿಧನಾನಂತರ ಕುವೆಂಪು ಅವರಿಗೆ ಸಂಬಂಧಿಸಿದ ಆಸ್ತಿಯನ್ನು ನೋಡಿಕೊಂಡವರು. ಅದಕ್ಕಿಂತ ಹೆಚ್ಚಾಗಿ ಕುವೆಂಪು ಅವರ ಬಾಲ್ಯದ ಒಡನಾಡಿ, ಬಾಲ್ಯದ ನಾನಾ ಚೇಷ್ಟೆಗಳ ಜೊತೆಗಾರ, ಬೇಟೆಯ ಸಹಪಾಠಿ, ಕವಿಯ ಮೊದಲ ಸಹೃದಯ ಕೇಳುಗ!

ಆಶಾವಾದಿಯಾಗಿದ್ದ ಆಧ್ಯಾತ್ಮಿಕನ ಶ್ರದ್ಧೆಯಿಂದ ಊರ್ಧ್ವಮುಖಿಯಾಗಿ ಪ್ರಶಾಂತವಾಗಿದ್ದ ಕವಿಚೇತನ ಮನೆಯ ವಿಚಾರದಲ್ಲಿ ಉದಾಸೀನವಾಗಿತ್ತು. ಆದರೆ ಆ ಸರವೋರದ ಪ್ರಶಾಂತಿಗೆ ಆಗಾಗ ಭಂಗಬರುತ್ತಿತ್ತು ಎಂಬುದು ಕವಿಯ ಮಾತುಗಳಿಂದಲೇ ವ್ಯಕ್ತವಾಗುತ್ತದೆ. ದೊಡ್ಡಚಿಕ್ಕಪ್ಪಯ್ಯನ ಮರಣಾನಂತರ ಇಷ್ಟಮಿತ್ರರ-ನೆಂಟರ ಸಹಾಯದಿಂದ ಕುಪ್ಪಳಿ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದ ತಿಮ್ಮುವಿಗೆ ಅನಾರೋಗ್ಯವೆಂದು ೧.೧.೧೯೨೯ ಒಂದು ಕಾಗದ ಬರುತ್ತದೆ. ಅದು ಬಂದ ದಿನವೇ, ತಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ.
ದುಃಖ ಮಲಗಿಹುದೆಮ್ಮ ಸುಖದ ಎದೆಯಲ್ಲಿ!
ಪಾಪವಡಗಿಹುದೆಮ್ಮ ಪುಣ್ಯದೆದೆಯಲ್ಲಿ!
ಎಂದು ಎರಡು ಸಾಲಿನ ಮಂತ್ರಾಕ್ಷತೆಯನ್ನು ದಿನಚರಿಯಲ್ಲಿ ಬರೆಯುತ್ತಾರೆ. ಆ ದಿನಕ್ಕೆ ಕೇವಲ ಎಂಟು ದಿನಗಳ ಮುಂಚೆ ಬರೆದಿದ್ದ, ’ಕೈಬಿಟ್ಟರೆ ನೀ ಗತಿಯಾರೈ? ಕಿರುದೋಣಿಯಿದು ಮುಳುಗದೇನೈ?’ ಎಂದು ಆರಂಭವಾಗುವ ’ನಾವಿಕ’ ಪದ್ಯದಲ್ಲಿ ನೊರೆನೊರೆಯಾಗಿಹ ತೆರೆತೆರೆಯಲ್ಲಿ ಮೃತ್ಯುವು ನೃತ್ಯವ ಮಾಡುತಿದೆ! ಎಂಬ ಸಾಲನ್ನು ಬರೆದಿರುತ್ತಾರೆ! ಅದರಿಂದ ಮನಸ್ಸು ಒಂದು ರೀತಿಯ ಅವ್ಯಕ್ತ ಆತಂಕಕ್ಕೆ ಈಡಾಗುತ್ತದೆ. ಪತ್ರ ಬಂದ ನಂತರ ೩.೧.೧೯೨೯ರಲ್ಲಿ ರಚಿಸಿರುವ ’ದಾರಿ ತೋರೆನೆಗೆ’ ಕವಿತೆಯಲ್ಲಿ,
ಕವಲೊಡೆದ ಹಾದಿಗಳು;
ಕವಿದಿಹುದು ಕತ್ತಲೆಯು;
ಕಿವಿಗೊಟ್ಟು ಕೇಳಿದರೆ
ಕರೆವ ದನಿಯಿಲ್ಲ;
ಕಣ್ಣಿಟ್ಟು ನೋಡಿದರೆ
ಹೊಳೆವ ಸೊಡರಿಲ್ಲ!
ಹೆಪ್ಪಗಟ್ಟಿಹುದಿರುಳು!
ಮರಳಿನಲಿ ಕೆಸರಿನಲಿ
ಮುಂದೆ ತೆರಳಿದ ಜನರ
ಹೆಜ್ಜೆಗಳ ಕಾಣೆ;
ಕತ್ತಲಲಿ ಕೈಹಿಡಿದು
ಕಾಯುವರ ಕಾಣೆ!
ಎಂದ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ. ಹಿಂದೆ ತಾಯಿಗೆ ಹುಷಾರಿಲ್ಲ ಎಂಬ ಪತ್ರ ಬಂದಾಗ ಉದಾಸೀನ ಮಾಡಿದಂತೆ ಮಾಡಲು ಈಗ ಸ್ವಾಮೀಜಿ ಬಿಡುವುದಿಲ್ಲ. ಹಿತವಚನ ಹೇಳಿ ಊರಿಗೆ ಹೊರಡಿಸುತ್ತಾರೆ. ಆದರೆ, ಇವರು ಅಲ್ಲಿಗೆ ತಲುಪುವಷ್ಟರಲ್ಲಿ ಆಗಬಾರದ್ದು ಆಗಿ ಹೋಗಿರುತ್ತದೆ. ತಿಮ್ಮು ತೀರಿಕೊಂಡಾಗಿತ್ತು. ದಹನಸಂಸ್ಕಾರವೂ ಪೂರೈಸಿತ್ತು. (ಆಗ ತಿಮ್ಮುವಿನ ಚಿಕ್ಕವಯಸ್ಸಿನ ಹೆಂಡತಿ ಗರ್ಭಿಣಿಯಾಗಿದ್ದಳು. ಮುಂದೆ ಶೊಕಾಗ್ನಿಯಲ್ಲಿ ಬೆಂದ ಅವಳು ಹೆತ್ತ ಕೂಸೂ ಬದುಕಲಿಲ್ಲ - ಕುವೆಂಪು). ತಮ್ಮ ತಾಯಿ ಸತ್ತಾಗ ಯಾವ ಸ್ಥಿತಿಪ್ರಜ್ಞೆಯನ್ನು ತೋರಿಸಿದ್ದರೋ ಈಗಲೂ ಅದೇ ಮನಸ್ಥಿತಿಯನ್ನು ಪ್ರದರ್ಶಿಸುತ್ತಾರೆ. ಆತ್ಮದ ಅಮೃತತ್ವದ ಶ್ರದ್ಧೆ ನನಗೆ ಅನುಭವದ ದಿಟದ ವಸ್ತುವಾಗಿತ್ತು ಎನ್ನುತ್ತಾರೆ. ದುಃಖದ ಕಡಲಿನಲ್ಲಿ ಮುಳುಗಿದ ಮನೆಯವರನ್ನು ಜಗಲಿಯಲ್ಲಿ ಸೇರಿಸಿ, ಭಗವದ್ಗೀತೆಯನ್ನೋದುತ್ತಾರೆ.

ಆಗ ಅವರ ಮೊದಲ ಕವನ ಸಂಕಲನದ ಪ್ರಕಟಣೆಯ ಸಿದ್ಧತೆಗಳು ನಡೆಯುತ್ತಿರುತ್ತವೆ. ಅದಕ್ಕೆ ಮುನ್ನುಡಿಯ ರೂಪದಲ್ಲಿ ಗೊಲ್ಲನ ಬಿನ್ನಹ ಎಂಬ ಕವನ ೨೫.೩.೧೯೨೯ರಲ್ಲಿ ರಚನೆಯಾಗುತ್ತದೆ. ಅದರಲ್ಲಿ ತಿಮ್ಮುವಿನ ಮರಣದ ದುಃಕದ ತೀವ್ರತೆಯನ್ನು, ಕವಿಯೇ ಹೇಳಿದ ಆತ್ಮದ ಅಮೃತತ್ವ ಶ್ರದ್ಧೆಯನ್ನು ಕಾಣಬಹುದು.
ಕಾಡಿನ ಕೊಳಲಿದು, ಕಾಡ ಕವಿಯು ನಾ,
ನಾಡಿನ ಜನರೊಲಿದಾಲಿಪುದು
ಬೃಂದೆಯ ನಂದನ ಕಂದನೆ ಬಂದು
ಗೊಲ್ಲನ ಕೊಳಲಿ ನಿಂದಿಹನೆಂದು
ಭಾವಿಸಿ ಮನ್ನಿಸಿ ಲಾಲಿಪುದು.
ಎಂದು ಕವಿತೆ ಆರಂಭವಾಗುತ್ತದೆ. ಕವಿತೆಯ ನಾಲ್ಕನೆಯ ವಿಭಾಗದಲ್ಲಿ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ.
ಬನಗಳ ಹೂಗಳ ಸೊಬಗನು ಮೀರುವ
ಚೆಲುವಿನ ಹೊಲಬಿಗ ಬಾಲೆಯರೆ;
ಬನದಲಿ ಬಯಲಲಿ ಹೊಳೆಯಲಿ ಮಳೆಯಲಿ
ನನ್ನೊಡನಾಡಿದ ಬಾಲಕರೆ;
ನಡೆಯಲಿ ಮೆಲ್ಲೆದೆ, ನುಡಿಯಲಿ ಮೆಲುದನಿ,
ನಿಮ್ಮದು ಮಲೆಗಳ ಸೋದರರೆ;
ರಂಗು, ತಿಮ್ಮು, ಗೌರಿ, ಗಿರಿಜೆ,
ಚಂದದ ಹೆಸರಿನ ಸೋದರರೆ;
ನಿಮ್ಮೊಡನಾಡಿದ ಗುಟ್ಟಿನ ನುಡಿಗಳ
ಬಯಲಿಗೆ ಬೀರುವೆ, ಮನ್ನಿಸಿರಿ!
ನಿಮ್ಮಂತೆಯೆ ನಾ ಹಾಡಲು ಬರದಿರೆ
ಪಾಮರ ಗೋಪನ ಮನ್ನಿಸಿರಿ!
ನಿಮ್ಮೆಲ್ಲರ ಶಿಷ್ಯನು ನಾ, ನಮಿಸುವೆ;
ಆಶೀರ್ವಾದವ ಬೇಡುವೆನು.
ತಮ್ಮ ಬಾಲ್ಯದ ಅನುಭವ ಶ್ರೀಮಂತಿಕೆಯನ್ನು ಹೆಚ್ಚಿಸಿದ ಬಾಲ್ಯದ ಕೆಳೆಯರನ್ನು ಸ್ಮರಿಸುವುದು, ಅವರನ್ನು ಗುರುವೆಂದು ಭಾವಿಸುವುದು ಕನ್ನಡ ನವೋದಯ ಸಂದರ್ಭದಲ್ಲಿ ಮೂಡುತ್ತಿದ್ದ ಹೊಸಬೆಳಕಿಗೆ ಸಾಕ್ಷಿಯಾಗಿವೆ. ಇಲ್ಲಿಂದ ಮುಂದಕ್ಕೆ ಕವಿತೆ ಪೂರ್ಣವಾಗಿ ತಿಮ್ಮುವಿಗೆ ಸಂಬಂಧಿಸಿದ್ದುದಾಗಿದೆ. ಈ ಗೊಲ್ಲನ ಕೊಳಲು ನುಡಿಯುವಾಗ, ಆ ಕೊಳಲನ್ನು ಸಿದ್ಧಮಾಡಿಕೊಟ್ಟ, ಅದಕ್ಕೆ ಕಣ್ಣನ್ನು ಕೊರೆದುಕೊಟ್ಟ ಸಹೋದರನು ಇಲ್ಲದಿರುವ ದುಃಖ ಐದನೆಯ ಭಾಗದಲ್ಲಿ ಬಿಂಬಿತವಾಗಿದೆ.
ಬನದೊಳು ಮೊದಲೀ ವೇಣುವನಕಟಾ
ಕೇಳಿದ ಕಿವಿಗಳನೊಡೆದೆಯ, ದೇವ?
ಗೊಲ್ಲನ ಕೊಳಲಿಗೆ ಉಸಿರನು ಕೊಟ್ಟಾ
ಎದೆಯಲರೊಂದನು ಕೊಯ್ದೆಯ, ಶಿವನೆ!
ಗೊಲ್ಲನ ಹಾಡನು ಹುರಿದುಂಬಿಸಿದಾ
ತಮ್ಮನ ತಿಮ್ಮುವನೊಯ್ದೆಯ, ಹರಿಯೆ!
ಕೊಳಲನು ಮೆಳೆಯಿಂ ಕೊಯ್ದವ ನೀನೆ,
ಕೊಳಲಿಗೆ ಕಣ್ಗಳ ಸಮೆದವ ನೀನೆ,
ನಚ್ಚಿನ ಮೆಚ್ಚಿನ ಸೋದರನೆ!
ಗೊಲ್ಲನ, ಅಣ್ಣನ ಗಾನವ ಕೇಳಿ
ಹೆಮ್ಮೆಯೊಳುಬ್ಬುತ ಮುದವನು ತಾಳಿ
ನಲಿದೈ ಮುದ್ದಿನ ಸೋದರನೆ!
ಆ ಕಣ್ಣಿನ ಬೆಳಕಳಿದುದೆ ಅಕಟಾ!
ಆ ಬಾಯ್ಬೆಂದುದೆ ಅಕಟಕಟಾ!
ಆ ಎದೆಯೊರತೆಯು ಬತ್ತಿತೆ ಹಾ! ಹಾ!
ಬಾಳಿ ಜಾತ್ರೆಯು ಮುಗಿದುದೆ ಹಾ!
ಗೊಲ್ಲನ ಕೊಳಲನು ಕೇಳುತ ನಲಿವರು
ಏನನು ಬಲ್ಲರು ಸೋದರನೆ?
ಗೊಲ್ಲನ ಜಸದಲಿ ಅರೆಪಾಲೆಲ್ಲಾ
ನಿನ್ನದೆ, ನಿನ್ನದೆ, ಸೋದರನೆ!
ಕವಿಪ್ರತಿಭೆಗೆ ಬಾಲ್ಯದಲ್ಲಿ ದೊರೆತ ವ್ಯುತ್ಪತ್ತಿಯಲ್ಲಿ ಅರೆಪಾಲು ಆ ಸಹೋದರನದೇ ಆಗಿದೆ. ಆತನೊಡನೆ ಕಳೆದ ದಿನಗಳು, ಮಾಡಿದ ಸಾಹಸಗಳು, ಬೇಟೆಯ ಮೋಜು, ಅದರಲ್ಲಿ ತಿಮ್ಮು ಸಾಧಿಸಿದ್ದ ಪರಿಣಿತಿ ಎಲ್ಲವೂ ಅಡಕವಾಗಿವೆ.
ಕಾಡಿನೊಳಿಬ್ಬರೆ ತಿರುಗಿದೆವಂದು,
ಹೂಗಳ ಕೊಯ್ದೆವು ಹಣ್ಗಳ ತಂದು.
ಬಣ್ಣದ ಚಿಟ್ಟೆಗಳನು ಹಿಡಿವಾಗ
ಮುದ್ದಿನ ತಿಮ್ಮುವೆ ಮುಂದಾಳು;
ಕೋಗಿಲೆಗಳ ನಾವಣಕಿಸುವಾಗ
ಅಲ್ಲಿಯು ನಾನೇ ಹಿಂದಾಳು;
ಕಡಿದಾದರೆಗಳನೇರುವ ಸಮಯದಿ,
ಹುತ್ತದ ಜೇನನು ಕೀಳುವ ಸಮಯದಿ,
ಬಿರುಸಿನ ಬೇಟೆಯನಾಡುವ ಸಮಯದಿ,
ಎಲ್ಲಿಯು ತಿಮ್ಮುವೆ ಕೆಚ್ಚಾಳು!
ನನಗಾತನೆ ನಮ್ಮೂರಿನ ಕಣ್ಣು;
ಈಗವನಾದನೆ ಬೇಳಿದ ಮಣ್ಣು!
ನನ್ನೆದೆಗಾತನೆ ಕನ್ನಡಿಯಂತೆ.
ಸೋದರನೆನ್ನಯ ಪಡಿನೆಳಲಂತೆ.
ಕನ್ನಡಿಯೊಡೆದುದು ಬರುಗನ ಸಂತೆ.
ಮೂಡಿತು ಮನದಲಿ ಮುರಿಯದ ಚಿಂತೆ.
ಒಂದೇ ವೀಣೆಯ ತಂತಿಗಳಂತೆ,
ಕಾಮನಬಿಲ್ಲಿನ ಬಣ್ಣಗಳಂತೆ,
ಹಾಡುವ ಕೊಳಲಿನ ಕಣ್ಣುಗಳಂತೆ
ಕೂಡಿದೆವಾಡಿದೆವೆಲೆ ತಮ್ಮಾ!
ಪರುಷವು ಹರಿದೀ ವೀಣೆಯ ವಾಣಿ.
ಬಡ ಮಳೆಬಿಲ್ಬಗೆಗೊಳಿಸದು ಇಂದು!
ಕಣ್ಣೊಂದಿಲ್ಲದ ಕೊಳಲಿದು ಇಂದು
ಕೊಡದಂದಿನ ಗಾನವ ತಮ್ಮಾ!
ಮೆಳೆಯಿಂದ ಬಿದಿರು ಕಡಿದು, ಕೊಳಲನ್ನು
ಮಾಡಿಕೊಟ್ಟ ತಮ್ಮನೇ ಆ ಕೊಳಲಿನ ಒಂದು ಕಣ್ಣಾಗಿದ್ದನು. ಅದರಿಂದ ಹೊಮ್ಮತ್ತಿದ್ದ ನಾದ ಮಾಧುರ್ಯವಾಗಿದ್ದು ಆತನಿಂದಲೆ! ಆದರೆ ಕೊಳಲಿನ ಒಂದು ಕಣ್ಣು ಈಗ ಹೋಗಿಬಿಟ್ಟಿದೆಯೇನೋ ಅನ್ನಿಸುತ್ತದೆ ಕವಿಗೆ. ಮುಂದಿನ ಭಾಗದಲ್ಲಿ ಆತ್ಮದ ಅಮೃತತ್ವನ್ನು ನೆನೆದು ಕೃತಿಯನ್ನು ತಿಮ್ಮುವಿಗೆ ಅರ್ಪಿಸುತ್ತಾರೆ.
ಹೋದವರೆಲ್ಲರ ಊರನು ಸೇರಿದೆ,
ತಮ್ಮಾ, ಗೊಲ್ಲನ ದುಃಖಕೆ ಮಾರಿದೆ!
ನಾ ಸಾವಿಗೆ ಅಂಜುವೆನೆಂದಲ್ಲ,
ಅದರರ್ಥವ ತಿಳಿಯದನೆಂದಲ್ಲ;
ನಿನ್ನಾ ಸಂಗಕೆ ಕೊರಗುವೆನು;
ನಿನ್ನಾ ಪ್ರೇಮಕೆ ಮರುಗುವೆನು!
ಶ್ರೀಗುರುದೇವನ ಪಾದವ ಸೇರಿದೆ;
ಬಲ್ಲೆನು ನಾನೂ ಸೇರುವೆನು.
ಮಾಡುವ ಕೆಲಸವ ಮುಗಿಯಿಸಿ ಬೇಗನೆ
ಬಲ್ಲೆನು ನಾನೂ ಸೇರುವೆನು.
ನಿನ್ನಯ ನೆನಪಿಗೆ ಗೊಲ್ಲನು ನೀಡುವ
ಪ್ರೇಮದ ಗಾನದ ಕಾಣ್ಕೆಯಿದು!
ಶ್ರೀಗುರುದೇವಗೆ ನೀನೆ ನಿವೇದಿಸು
ಕಬ್ಬಿಗನಿಂಚರಗಾಣ್ಕೆಯಿದು!
ಕವಿಯು ತನ್ನ ಮೊದಲ ಕೃತಿಪುಷ್ಪವನ್ನು ತನ್ನ ಗುರುದೇವನಿಗೆ ನಿವೇದಿಸಬೇಕಾಗಿದೆ. ಆದರೆ ಹಾಗೆ ನಿವೇದಿಸುವ ತನ್ನನ್ನು, ತನ್ನ ಕೊಳಲನ್ನು ರೂಪಿಸಿದ ತನ್ನ ಸಹೋದರನೇ ಹೆಚ್ಚು ಅರ್ಹ ಎಂದು ಕವಿ ಭಾವಿಸುತ್ತಾರೆ.

Monday, February 20, 2012

ಶಿವರಾತ್ರಿಯ ನೆಪ; ಜಲಗಾರನ ಜಪ

೧೯೨೭-೨೮ ಕುವೆಂಪು ಅವರ ಸಾಹಿತ್ಯಕ ಜೀವನದ ಮಹತ್ತರ ಘಟ್ಟ. ಅವರು ಎಂ.ಎ. ಕನ್ನಡ ತರಗತಿಗೆ ಸೇರಿದ್ದರಿಂದ ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆಯ ಶಾಸ್ತ್ರೀಯವಾದ ಅಭ್ಯಾಸದ ಅವಕಾಶ ಲಭಿಸಿತು. ಕವಿಯ ಸೃಜನ ಪ್ರತಿಭೆಯ ತಾಯಿಬೇರಿಗೆ ಅಮೃತಾಹಾರ ಒದಗಿದಂತಾಗಿತ್ತು. ಕನ್ನಡದಲ್ಲಿ ಇಂಗ್ಲೀಷಿನಂತೆ ಸರ್ವವಿಧವಾದ ಛಂದೋವೈವಿಧ್ಯತೆಯಿಂದ ಕೂಡಿದ ಸಾಹಿತ್ಯವನ್ನು ಸೃಷ್ಟಿಸಬೇಕೆಂಬ ಅವರ ಹಂಬಲ ಕ್ಷಣಿಕವಾದುದಾಗಿರಲಿಲ್ಲ. ಕುಳಿತಲ್ಲಿ, ನಿಂತಲ್ಲಿ, ಓದುವಾಗ, ಬರೆಯುವಾಗ - ಕೊನೆಗೆ ನಿದ್ದೆ ಮಾಡುವಾಗಲೂ ಅದರ ಬಗ್ಗೆ ಚಿಂತಿಸಿತ್ತಿದ್ದರು. ಸಾನೆಟ್ ಮತ್ತು ಬ್ಲಾಂಕ್‌ವರ್ಸ್ ಛಂದಸ್ಸುಗಳಲ್ಲಿ ಪರಿಣಿತಿ ಸಾಧಿಸುತ್ತಿದ್ದಂತೆ, ಅವುಗಳಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮನಸ್ಸು ಹಾತೊರೆಯುತ್ತಿತ್ತು. ಬ್ಲಾಂಕ್‌ವರ್ಸ್ ಗತಿಯಲ್ಲಿ ಆಗಲೇ ಕರಿಸಿದ್ದ ಮತ್ತು ಪ್ರಾಯಶ್ಚಿತ್ತ ಎಂಬ ದೀರ್ಘ ಕಥನಕವನಗಳು ರಚಿತವಾಗಿದ್ದವು. ಆಗ ಕವಿಗೆ, ಈ ಬ್ಲಾಂಕ್‌ವರ್ಸ್ ಛಂದೋಶೈಲಿಯನ್ನು ಬಳಸಿಕೊಂಡು ಕನ್ನಡದಲ್ಲಿ ನಾಟಕ ರಚಿಸಬಹುದಲ್ಲ ಎಂಬ ಯೋಚನೆ ಪ್ರಬಲವಾಗಿ, ಒಳಗಿನ ಒತ್ತಡವಾಗಿ ಬೆಳೆಯತೊಡುಗುತ್ತದೆ. ಅದುವರೆಗೆ ಯಾರೂ ಕನ್ನಡದಲ್ಲಿ ನಾಟಕಕ್ಕೆ ಬ್ಲಾಂಕ್‌ವರ್ಸ್ ಪ್ರಯೋಗ ಮಾಡಿರಲೂ ಇಲ್ಲ. ಅದಕ್ಕೆ ಅನುಗುಣವಾದ ನಾಟಕದ ವಸ್ತು, ವಿಷಯ, ರೂಪ ಇವುಗಳ ಬಗ್ಗೆ ಏನೊಂದೂ ಹೊಳೆಯದೆ ಕವಿ ಭಾವಶೂನ್ಯನಾಗಿದ್ದಾಗಲೇ ಒಂದು ದಿನ ಅಸಮಾನ್ಯವೆನ್ನಬಹುದಾದ ಘಟನೆಯೊಂದು ನಡೆದುಬಿಡುತ್ತದೆ.

ದಿವಾನರ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಆಶ್ರಮದಲ್ಲಿ ಕವಿಯ ವಾಸ. ಮನೆ ಚಿಕ್ಕದಾಗಿದ್ದುದರಿಂದ, ಪ್ರತ್ಯೇಕ ದೇವರ ಮನೆಯಿರಲಿಲ್ಲ. ಪೂಜೆ ಮುಗಿದ ಮೇಲೆ, ಪರದೆಯೊಂದನ್ನು ಅಡ್ಡ ಎಳೆದು, ದೇವರ ಕಡೆ ತಲೆ ಹಾಕಿ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದರು. ಒಂದು ಭಾನುವಾರ ಹಗಲು ವೇಳೆಯಲ್ಲಿಯೇ ಕವಿ ಗಡದ್ದಾದ ನಿದ್ದೆಯಲ್ಲಿ ಮುಳುಗಿಬಿಟ್ಟಿರುತ್ತಾರೆ. ಕನ್ನಡ, ನಾಟಕ, ಬ್ಲಾಂಕ್‌ವರ್ಸ್ ಈ ವಿಚಾರಗಳೇ ತಲೆಯಲ್ಲಿದ್ದುರಿಂದಲೋ ಏನೋ ಕವಿಗೆ ಅದರದೇ ಒಂದು ಕನಸು ಬೀಳುತ್ತದೆ. ಅದು ಹೀಗಿತ್ತು: ನಾನೊಂದು ಬೃಹದ್‌ಗಾಥ್ರದ ಅಪ್ರಾಸಛಂದಸ್ಸಿನ (ಬ್ಲಾಂಕ್‌ವರ್ಸ್) ಮಹಾಕಾವ್ಯ (ಎಪಿಕ್) ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ. ತೂಕವಾಗಿದೆ! ಎಷ್ಟು ಮನೋಹರವಾಗಿ ಮುದ್ರಿತವಾಗಿದೆ! ಅದರ ಕ್ಯಾಲಿಕೊ ಬೈಂಡಿನ ಸೌಂದರ್ಯವೊ ಹೇಳತೀರದು! ಹಾಳೆಗಳನ್ನು ಮಗುಚಿ ನೋಡುತ್ತಿದ್ದೇನೆ: ನುಣ್ಣನೆ ಕಾಗದ, ಮುದ್ದಾದ ಅಚ್ಚು! ಓದುತ್ತಿದ್ದೇನೆ....

ಅಷ್ಟರಲ್ಲಿ ರೀ, ರೀ ಪುಟ್ಟಪ್ಪ! ಎಷ್ಟು ನಿದ್ದೆ ಮಾಡ್ತೀರ್ರಿ? ಏಳ್ರಿ! ಎಂದು ಭುಜ ಹಿಡಿದು ಅಲುಗಿಸುತ್ತ ಎಚ್.ಬಿ.ನಂಜಯ್ಯ ಎಂಬುವವರು ಕವಿಯ ನಿದ್ರೆಗೂ ಅದಕ್ಕಿಂತ ಹೆಚ್ಚಾಗಿ ಕನಸಿಗೂ ಭಂಗ ತಂದುಬಿಡುತ್ತಾರೆ. ಪಾಪ! ಆತನಿಗೆ ಹೇಗೆ ಗೊತ್ತಾಗಬೇಕು ತಾನೆಸಗಿದ ಮಹಾ ಅನರ್ಥ? - ಕವಿಯ ಪ್ರತಿಕ್ರಿಯೆಯಿದು. ಆದರೂ ಕವಿಗೆ ಸಂತೋಷವಾಗುತ್ತದೆ; ಕನಸಿನಲ್ಲಾದರೂ ಎಪಿಕ್ಕಿಗೆ ಬೇಕಾದ ಅಪ್ರಾಸ ಛಂದಸ್ಸಿನ ಗುಟ್ಟು ಸಿಕ್ಕಿತಲ್ಲಾ ಎಂದು. ಆದರೆ ಕನಸಿನಲ್ಲಿ ಕಂಡಿದ್ದ ಪುಸ್ತಕದಲ್ಲಿದ್ದ ಭಾಷೆ ಲಿಪಿ ಯಾವುದೂ ನೆನಪಾಗುವುದಿಲ್ಲ. ಅದರ ಒಂದು ಸಾಲನ್ನಾದರೂ ನೆನಪಿಗೆ ತಂದುಕೊಳ್ಳುವ ಪ್ರಯತ್ನ ಸಫಲವಾಗುವುದಿಲ್ಲ.

ಅಂದು ಕನಸಿನಲ್ಲಿ ಸಿಕ್ಕ ಅಪ್ರಾಸ ಛಂದಸ್ಸಿನ ಗುಟ್ಟು ವ್ಯರ್ಥವಾಗಲಿಲ್ಲ. ಆ ಛಂದೋಲಯದಲ್ಲಿ ಹಿಡಿತ ಸಾಧಿಸಿದ ಕವಿ ಕೇವಲ ನಾಲ್ಕು ದಿನಗಳಲ್ಲಿ ’ಜಲಗಾರ’, ’ಯಮನಸೋಲು’ ಮತ್ತು ’ಮಹಾರಾತ್ರಿ’ ಎಂಬ ಮೂರು ನಾಟಕಗಳನ್ನು ಬರೆದು ಮಗಿಸಿಬಿಡುತ್ತಾರೆ. ಇವುಗಳಲ್ಲಿ ಮೊದಲನೆಯದೇ ಅಪ್ರಾಸ ಛಂದಸ್ಸಿನ ’ಸರಳರಗಳೆ’ ರೂಪದಲ್ಲಿರುವ, ಕೇವಲ ಎರಡು ದೀರ್ಘ ದೃಶ್ಯಗಳಿರುವ ಜಲಗಾರ ಎಂಬ ನಾಟಕ. ನಾಟಕ ರಚನೆಯಾದ ದಿನವೇ, ರಚಿಸುವಾಗ ಇದ್ದ ಆವೇಶದಲ್ಲಿಯೇ, ಆಶ್ರಮದಲ್ಲಿ ಸ್ವಾಮೀಜಿ, ನಾ.ಕಸ್ತೂರಿ ಮುಂತಾದವರ ಮುಂದೆ ಓದುತ್ತಾರೆ. ಅದರಲ್ಲಿದ್ದ ಹೊಸ ಆಲೋಚನೆಗಳು, ಹೊಸ ಭಾವಗಳು ಎಲ್ಲರ ಗಮನ ಸೆಳೆಯುತ್ತವೆ. ಹೀಗೆ ಕನ್ನಡದ ಮೊತ್ತಮೊದಲ ಸರಳರಗಳೆಯ ನಾಟಕ ಸಿದ್ಧವಾಗುತ್ತದೆ.

ಮಹಾಶಿವರಾತ್ರಿಯ ದಿನ ಶರತ್ಕಾಲದ ಸುಂದರ ಮುಂಜಾನೆ. ಊರಿನ ಕಾಯಕಯೋಗಿಜಲಗಾರನು ಸಂತೋಷವಾಗಿ ’ಮಂಜು ಹರಿಯುವವರೆಗೆ ಕುಳಿತಿಲ್ಲಿ, ನಲಿಯುವೆನು ನಲ್ಗಬ್ಬಗಳ ಹಾಡಿ’ ಎಂದು ಹಾಡುತ್ತಿದ್ದಾನೆ. ಮುಂಜಾವಿನ ಸೊಬಗಿಗೆ ಆತನೂ ಮಾರುಹೋಗಿದ್ದಾನೆ. ’ಸೃಷ್ಟಿಕರ್ತನನೆಮಗೆ ಸಾಧಿಸಲು, ತೋರಿಸಲು, ಸೃಷ್ಟಿಯಿದು ಸಾಲದೇ? ..... ಬಿಜ್ಜೆಯೇಂ ತೋರ್ಕುಮೇ ಎದೆಯರಿವು ತೋರದಾ ಪರಮನಂ?’ ಎನ್ನಿಸಿಬಿಡುತ್ತದೆ. ಆಗ ’ನೇಗಿಲ ಯೋಗಿಯು ನಾನು; ಮಣ್ಣಿನ ಭೋಗಿಯು ನಾನು!’ ಎಂದು ಹಾಡುತ್ತಾ ಒಬ್ಬ ರೈತನ ಆಗಮನವಾಗುತ್ತದೆ. ಆಗ ಜಲಗಾರ ’ಮುಂಜಾನೆಯೊಳಗೆಲ್ಲಿ ಹೋಗುತಿಹೆ, ರೈತ?’ ಎನ್ನುತ್ತಾನೆ. ಆಗ ರೈತ-
ಓಹೊ ನೀನರಿಯೆಯಾ? ಇಂದು ನಮ್ಮೂರ
ಶಿವಗುಡಿಯ ಜಾತ್ರೆ! ಬರುವುದಿಲ್ಲವೆ ನೀನು?
ತೇರೆಳೆಯಲೆಂದನಿಬರೂ ಬರುತಿಹರು.
ಎಂದು ಆ ದಿನದ ಮಹತ್ವವನನು ಹೇಳುತ್ತಾನೆ. ’ನನಗೇಕೆ ಶಿವಗುಡಿಯ ಜಾತ್ರೆ? ಜೋಯಿಸರು ದೇಗುಲದ ಬಳಿಗೆನ್ನ ಸೇರಿಸರು’ ಎನ್ನುತ್ತಾನೆ ಜಲಗಾರ. ಪಾಪ ರೈತನಿಗೆ ಜಲಗಾರನ ಮಾತುಗಳಲ್ಲಿದ್ದ ನೋವು ಅರ್ಥವಾಗುವುದಿಲ್ಲ. ’ದೂರದಲ್ಲಿಯೇ ನಿಂತು ಕೈಮುಗಿದು ಬಾ.’ ಎನ್ನುತ್ತಾನೆ. ಶಿವದರ್ಶನಕ್ಕೆ ದೇವಾಲಯಕ್ಕೆ ಹೋಗುವ ಅವಶ್ಯಕತೆ ಜಲಗಾರಿನಿಗೆ ಕಾಣುವುದಿಲ್ಲ.

ಶಿವಗುಡಿಯ ಶಿವನು ಜೋಯಿಸರ ಶಿವನಂತೆ; ನನ್ನ ಶಿವನೀ ಮಣ್ಣಿನಲ್ಲಿಹನು. ಕಪ್ಪುರದೊಳಗಿಲ್ಲ, ಮಂಗಳಾರತಿಯೊಳಗಿಲ್ಲ, ಹೂವುಗಳಲ್ಲಿಲ್ಲ; ಕೊಳೆತ ಕಸದೊಳಗಿಹನು ನನ್ನ ಶಿವ’ ಎಂದು ’ಲೋಕ ನಗಬೇಕಾದರೆ ಆರಾದರೂ ಅಳಬೇಕು’ ಎನ್ನುವಂತೆ ತಾನು ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತಾನೆ. ರೈತ ’ಪೂಜೆಯೆಂಬುದನರಿಯ; ದೇವನೆಂಬುದನರಿಯ; ಹುಟ್ಟುಗುಣ ಸುಟ್ಟರೂ ಹೋಗುವುದೆ?’ ಎಂದು ತಾನು ತಂದಿದ್ದ ಹೂವು ಹಣ್ಣುಗಳೊಂದಿಗೆ ಶಿವಾಲಯದೆಡೆಗೆ ಹೊರಡುತ್ತಾನೆ. ’ತಿರೆಗಿಂತ ದೇಗುಲವದೊಳದೇನ್?’ ಎಂದು ಜಲಗಾರ ಹಾಡುತ್ತಾನೆ.

ಆಗ ಇಬ್ಬರು ಪಾರ್ವರ ಪ್ರವೇಶವಾಗುತ್ತದೆ. ದೂರದಿಂದ ಹಾಡು ಕೇಳಿದ ಅವರಲ್ಲೊಬ್ಬ
ಕೊಳಲಿನಿದನಿಯಂತೆ ಸವಿಗೊರಲಿನಿಂದೊಗೆದ
ಗಾಯನವದೆನಿತಿಂಪು! ಹಾಡಿದವರಾರೊ?
ಎನ್ನುತ್ತಾನೆ. ಎರಡನೆಯವನು-
ಯಾರೋ ದಿವ್ಯಾತ್ಮನಿರಬೇಕು. ಮಧುರತಮ
ಗಾಯನವು ಅಮಲತಮ ಹೃದಯದಿಂದಲ್ಲದೆ
ಹೊರಹೊಮ್ಮಲರಿಯದು! ಗುಡಿಯ ಬಳಿಯಾದರೂ
ಹಾಡಿದನೆ!
ಎನ್ನುತ್ತಾನೆ. ಜಲಗಾರನನ್ನು ನೋಡಿ ಹಾಡಿದವನು ಅವನೇ ಎಂದು ತಿಳಿಯುತ್ತಿದ್ದ ಹಾಗೆ ಅವರ ವರ್ತನೆಯೇ ಬದಲಾಗಿಬಿಡುತ್ತದೆ.
ಸಂಗೀತವನಿತೇನು ಮನಮೋಹಿಪಂತೆ
ಇರಲಿಲ್ಲ. ಗಾನದೇವಿಯು ಹೀನ ಜಲಗಾರನನ್
ಒಲಿಯುವಳೇ? ಎಂದಿಗೂ ಇಲ್ಲ
ಎಂದು ಒಬ್ಬನು,
ಶೂದ್ರರೊಳ್
ಕವಿವರ್ಯರುದಿಸುವರೆ? ಹುಟ್ಟುವರೆ ಪಂಡಿತರ್?
ಜನಿಸುವರೆ ಶಿಲ್ಪಿಗಳ್? ಗಾಯಕರ್? ಯೋಗಿಗಳ್?
ಅಸದಳಂ! ಹೊತ್ತಾಯ್ತು ಹೋಗೋಣ
ಎಂದು ಹೊರಡುತ್ತಾರೆ. ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಸಫಲರಾದರೂ, ಸಾಮಾಜಿಕ ಕಾರಣದಿಂದ ಅದನ್ನು ಸ್ವೀಕರಿಸುವ ಮನೋಭಾವ ಅವರಿಗಿರುವುದಿಲ್ಲ.

ಮುಂದೆ ಒಬ್ಬ ಯುವಕ ಬಂದು ಜಲಗಾರನಿಗೆ ’ಒಂದು ದಿನವಾದರೂ ವಿಶ್ರಾಂತಿಯಿರಲಿ; ಬಾ, ಹೋಗೋಣ’ ಎನ್ನುತ್ತಾನೆ. ಆದರೆ ಜಲಗಾರ ’ನೀನು ಶಿವನ ಗುಡಿಯೊಳಗರಸು; ನಾನು ಪುಡಿಯೊಳಗರಸುವೆನು’ ಎಂದು ಬೀಳ್ಕೊಡುತ್ತಾನೆ. ’ತ್ವಮೇವ ಮಾತಾ ಚಿ ಪಿತಾ ತ್ವಮೇವ!’ ಎಂದು ಮಂತ್ರ ಹೇಳುತ್ತ ಬರುವ ಭಟ್ಟನೊಬ್ಬ, ’ಕಣ್ಣಿಲ್ಲ, ಧರ್ಮರೇ, ಕಾಸು ಕೊಡಿರಪ್ಪಾ!’ ಎನ್ನುತ್ತಾ ಬರು ತಿರುಕನಿಗೆ ’ನೀ ಸತ್ತರೆನಗೇನೊ? ಮಡಿಬಟ್ಟೆ ಮುಟ್ಟುವೆಯಾ? ಅದಕೆ ದೇವರು ನಿನ್ನ ಕಣ್ಣಿಂಗಿಸಿದ್ದು’ ಎಂದು, ಮತ್ತೆ ’ತ್ವಮೇವ ಮಾತಾ ಚ......’ ಹೇಳುತ್ತಾ ಸಾಗಿ ಹೋಗುತ್ತಾನೆ. ನಂತರ ವಿಚಾರವಾದಿಗಳಂತೆ ಕಾಣುವ ಇಬ್ಬರು ತರುಣರ ಪ್ರವೇಶವಾಗುತ್ತದೆ. ’ಜಗವೆಲ್ಲ ದೇವನಿಹ ಗುಡಿಯಲ್ಲವೇ, ಗೆಳೆಯ?’ ಎನ್ನುವ ಒಬ್ಬ;
ಮೊದಲ ಠಕ್ಕನು ಮೊದಲ ಬೆಪ್ಪನಂ ಸಂಧಿಸಲು
ಸಂಭವಿಸಿತೆಂಬರೀ ಮತ ಎಂಬ ಮತಿವಿಕಾರಂ.
ದೊರೆ ಪುರೋಹಿತರ್ ಅವಳಿಮೊಲೆಯೂಡಿ ಸಲುಹಿದರದಂ.
ಮತದ ಮದಿರೆಯನೀಂಟಿ ಮಂಕುಬಡಿದಿದೆ ಜನಕೆ.
ಕೊನೆ ದೊರೆಯ ಕೊರಳಿಗಾ ಕೊನೆ ಪುರೋಹಿತನ ಕರುಳ್
ಉರುಳಾಗುವಾ ವರೆಗೆ ಸುಖವಿಲ್ಲ ಈ ಧರೆಗೆ!
ಎನ್ನುವ ಇನ್ನೊಬ್ಬ ತಮ್ಮ ವಿಚಾರಧಾರೆಯನ್ನು ಹರಿಯಬಿಡುತ್ತಾರೆ. ತಿರುಕ ಅವರ ಬಳಿ ಭಿಕ್ಷೆ ಬೇಡಿದಾಗ ಕೊಡುವಂತೆ ನಟಿಸಿ, ಕೊಡದೆ ಆತನನ್ನು ಗೋಳು ಹುಯ್ದುಕೊಳ್ಳುತ್ತಾರೆ. ’ಭಿಕ್ಷುಕರ ದೆಸೆಯಿಂದ ದೇಶವೇ ಹಾಳಾಯ್ತು! ಲೋ! ನಿನ್ನ ಕಣ್ಣು ಕುರುಡೇನೊ, ಠಕ್ಕ!’ ಎಂದು ಆತನನ್ನು ಹಿಂಸಿಸುತ್ತಾರೆ. ಜಲಗಾರ ಬಂದು ತಿರುಕನನ್ನು ಬಿಡಿಸಿಕೊಳ್ಳುತ್ತಾನೆ. ಆ ಯುವ ವಿಚಾರವಾದಿಗಳ ವಿಚಾರ ಕೇವಲ ಪುಸ್ತಕದ ಬದನೆಯಾಗುತ್ತದೆ!
ಎದ್ದೇಳು ಭಿಕ್ಷುಕನೆ, ನನ್ನನ್ನದೊಳೆ, ಮುಷ್ಟಿ
ನಿನಗಿಕ್ಕಿ, ಶಿವಪೂಜೆ ಮಾಡುವೆನು. ನೀನೆನ್ನ
ಸೋದರ, ನೀನೆನ್ನ ದೇಗುಲ!...........
ಎನ್ನುತ್ತಾನೆ ಜಲಗಾರ. ಮುಂದೆ, ಎರಡನೆಯ ದೃಶ್ಯದಲ್ಲಿ ಜಲಗಾರ ತನ್ನ ಸಂಜೆಯ ಕೆಲಸವನ್ನು ಮಾಡುತ್ತಿರುತ್ತಾನೆ. ಜಾತ್ರೆಗೆ ಹೋದವರೆಲ್ಲಾ ಹಿಂತಿರುಗುತ್ತಿರುತ್ತಾರೆ. ಜಾತ್ರೆಯ ವೈಭವ, ಆಡಂಬರದ್ದೇ ಮಾತು! ’ಜಲಗಾರ ಪುಣ್ಯವಿಲ್ಲವೊ ನಿನಗೆ!’ ಎನ್ನುತ್ತಾನೆ ರೈತ. ’ಶಿವಗುಡಿಯಿಂದ ಏನು ತಂದೆ’ ಎಂಬ ಜಲಗಾರನ ಮಾತಿಗೆ ’ಹಣ್ಣು ಕಾಯಿ ಹೂವು ಕರ್ಪೂರ ಕುಂಕುಮ’ ಎನ್ನುತ್ತಾನೆ; ದೇವಾಲಯದ ಕಲಾವೈಭವವನ್ನು ವರ್ಣಿಸುತ್ತಾನೆ! ತನ್ನ ಬದುಕಿನ ಕಷ್ಟವನ್ನು ಹಾಡುತ್ತಾ ಹುಡುಗಿಯೊಬ್ಬಳು ಹೋಗುತ್ತಾಳೆ. ಪಾರ್ವರಿಬ್ಬರು ಬರುತ್ತಾರೆ. ಅಂದಿನ ಅವರ ದಕ್ಷಿಣೆ, ಹಣ್ಣುಕಾಯಿನ ದುಡ್ಡು, ತೀರ್ಥ ಮಾರಿದ ದುಡ್ಡುಗಳ ಬಾರಿ ಲೆಕ್ಕಾಚಾರದಲ್ಲಿ ಅವರಿಬ್ಬರೂ ಮುಳುಗಿರುತ್ತಾರೆ. ’ಅಂತೂ ನಮಗೆಲ್ಲ ಶಿವಗುಡಿಯ ದೆಸೆಯಿಂದ ಹಿಟ್ಟು ಹೊಟ್ಟೆಗೆ, ದುಡ್ಡು ಬಟ್ಟೆಗೆ’ ಎಂದು ಒಬ್ಬ; ’ಗುಟ್ಟು ಬಿಟ್ಟರೆ ಕೆಟ್ಟೆ. ನಡೆ ಬೇಗ’ ಎಂದು ಇನ್ನೊಬ್ಬ ಹೇಳುತ್ತಾ ಹೋಗುತ್ತಾರೆ. ಇವರ ಮಾತು ಕೇಳಿದ ಜಲಗಾರ-
ಜೋಯಿಸರು
ಗುಡಿಯ ನುಗ್ಗುವ ಮುನ್ನವೇ ಶಿವನ ಹೊರಗಟ್ಟಿ
ನುಗ್ಗುವರು. ಶಿವಶಿವಾ ಗುಡಿಯೊಳಿದ್ದರು ಕೂಡ
ದೇವರಿಂದತಿ ದೂರವಿಹ ಪಾಪಿಯೆಂಥವನು?
ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಕವಿಯೊಬ್ಬ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆನ್ನುವಂತೆ ’ಕೊರಗಲೇಕೆ? ಮರುಗಲೇಕೆ? ಬರಿದೆ ಬಾಳನು ಜರೆವುದೇಕೆ? ಎಂದು ಹಾಡುತ್ತಾನೆ. ಹುಡುಗರ ಗುಂಪೊಂದು ’ನಾವು ಮರುಳರು, ನಾವು ಕುಡುಕರು, ಮರುಳುತನವೆಮ್ಮಾಟವು’ ಎಂದು ಹಾಡುತ್ತಾ ಸಾಗುತ್ತದೆ! ಇವೆಲ್ಲವನ್ನೂ ಕಂಡ, ಕೆಲಸ ಮುಗಿಸಿದ ಜಲಗಾರ ’ಕುಳಿತಿಲ್ಲಿ ಶಿವನಂ ಧ್ಯಾನಿಸುವೆ’ ಎಂದು ಮಧುರವಾಗಿ ಹಾಡತೊಡಗುತ್ತಾನೆ. ಜಲಗಾರನ ವೇಷದಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ. ಆಗ ಜಲಗಾರ-
ನೀನಾರು ಆಕೃತಿಯೆ! ನೀನಾರು? ಯಾರು?
ಮಾನುಷವಾಗಿ ಕಂಡರೂ ಅಮಾನುಷವಾಗಿ
ತೋರುತಿಹೆ! ಮಿಣುಕುತಿಹ ತಾರೆಗಳನೇಳಿಸುವ
ಕಂಗಳಿಂದೇಕೆನ್ನ ನೋಡುತಿಹೆ ಇಂತು?
ನೀನಾರು? ಆಕೃತಿಯೆ?
ಎಂದು ಹೆದರುತ್ತಲೇ ಕೇಳುತ್ತಾನೆ. ಆಗ ಶಿವ-
ನಾನೊಬ್ಬ ಜಲಗಾರ.
ಅಂಜದಿರು, ಸೋದರನೆ! ಜಗದ ಜಲಗಾರ
ನಾನು! ಶಿವನೆಂದು ಕರೆಯುವರು ಎನ್ನ!
........................................................
ರುದ್ರನೆಂಬರು ಎನ್ನ; ಶಿವನೆಂಬರೆನ್ನ;
ಹೇಸುವರು, ಅಂಜುವರು, ಜಲಗಾರನೆನಲು!
ಎನ್ನುತ್ತಾನೆ. ಆಗ ಜಲಗಾರ ಮುಗ್ಧವಾಗಿ, ವಿನಯದಿಂದ-
ನಿನ್ನನಾ ಶಿವನೆಂದು ನಂಬುವುದೆಂತು? ಹೇ ದೇವ,
ನಿನ್ನೀ ರೂಪಮಂ ನಾನೆಂದುಮಾವೆಡೆಯೊಳುಂ
ಕಂಡರಿಯೆ, ಕೇಳರಿಯೆ. ತಿಳಿದವರು, ಪಂಡಿತರು,
ಬೇರೊಂದು ರೀತಿಯಲ್ಲಿ ಬಣ್ಣಿಸಿರುವರು ನಿನ್ನ
ಎಂದು ಕೇಳುತ್ತಾನೆ. ಆಗ ಶಿವ, ’ನಾನು ಶಾಸ್ತ್ರಿಗಳ ಶಿವನಲ್ಲ, ಕಾವ್ಯಗಳ ಶಿವನಲ್ಲ, ಬೆಳ್ಳಿಬೆಟ್ಟದ ಮೇಲೆ ಗಿರಿಜೆಯೊಡಗೂಡಿ ಸರಸವಾಡುವ ರಸಿಕ ಶಿವನಲ್ಲ! ಬ್ರಹ್ಮಾಂಡ ಒತ್ತುತಿಹ ಕಸದ ರಾಸಿಯ ಮೇಲೆ ಹತ್ತಿ, ನಿಂತು ನರ್ತನವೆಸಗುತಿಹ ತೋಟಿ ನಾನು! ನಿಜಶಿವನು ಜಲಗಾರ! ನಿನ್ನ ಮುಂದಿಹನು, ನೋಡು’ ಎನ್ನುತ್ತಾನೆ. ಆದರೂ, ”ಪಂಡಿತರದೇಕಂತು ಬಣ್ಣಿಪರು ನಿನ್ನ?’ ಎಂಬ ಜಲಗಾರನ ಪ್ರಶ್ನೆಗೆ, ಶಾಸ್ತ್ರಿಗಳ ಕಂಗಳಿಗೆ ನಾನು ನೋಡಲು ಕುರೂಪಿಯಾಗಿದರಿಂದ ತಣ್ಗದಿರನೊಡವೆ ಮಾಡಿದರು. ಅವರ ಭಾಗಕೆ ನಾನು ಪಾಪಿಯಾಗಿದ್ದರಿಂದ ಗಂಗೆಯನ್ನು ತಲೆಯಲ್ಲಿಟ್ಟು ಶುದ್ಧ ಮಾಡಿದರು! ಅಸ್ಪೃಶ್ಯನಾಗಿದ್ದರಿಂದ ಹಣೆಗಣ್ಣಿನ ಬೆಂಕಿಯಿಂದ ಸುಟ್ಟರು. ರೌದ್ರವಾಗಿ ನಾನು ಕಾಣಬೇಕೆಂದು ಹಾವುಗಳ ಸುತ್ತಿದರು ಎಂದೆಲ್ಲಾ ಹೇಳಿ,
ಚಂದ್ರನಿಲ್ಲದೆ, ಗೆಂಗೆ
ಇಲ್ಲದೆಯೆ, ಹೆಣೆಗಣ್ಣು ಹಾವುಗಳು ಇಲ್ಲದೆಯೆ,
ಜಿನವಾರ ಬೂದಿಗಳು ಇಲ್ಲದೆಯೆ, ಶಿವಗುಡಿಗೆ
ಸೇರಿಸರು ಶಿವನಾದ ಎನ್ನ. ಅದರಿಂದ
ನಿಜವಾದ ಶಿವನು, ಜಲಗಾರ ಶಿವನು,
ಶಿವಗುಡಿಯ ಪೀಠದಲಿ ಎಂದೆಂದಿಗೂ ಇಲ್ಲ!
ಎನ್ನುತ್ತಾನೆ. ’ನೀನು ಮತ್ತೆಲ್ಲಿರುವೆ?’ ಎಂಬ ಜಲಗಾರನ ಪ್ರಶ್ನೆಗೆ-
ಬೀದಿ ಗುಡಿಸುವ ಬಡವನೆದೆಯಲ್ಲಿ ನಾನಿರುವೆ!
ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ!
ಎಲ್ಲಿ ಹೊಲೆಯನು ನನ್ನ ಕಾರ್ಯದಲಿ ತೊಡಗಿಹನೊ
ಅಲ್ಲಿ ನಾನವನ ಪಕ್ಕದೊಳಿರುವೆ. ಕುಂಟರನು,
ಕುರುಡರನು, ದೀನರನು, ಅನಾಥರನು ಕೈಹಿಡಿದು
ಪೊರೆಯುತಿಹನೆಡೆಯಿರುವೆ................
....................................
ಊರ ತೋಟಿಯು ನೀನು; ಜಗದ ತೋಟಿಯು ನಾನು!
ಬಾ ಎನ್ನ ಸೋದರನೆ. ನೀನೆನ್ನ ನಿಜಭಕ್ತ!
ನಿನ್ನದೇ ಶಿವಭಕ್ತಿ! ನೀನೇ ಶಿವಭಕ್ತ!
ನೀನೆ ನಾನಾಗಿಹೆನು! ನಾನೆ ನೀನಾಗಿರುವೆ!
ಶಿವ ನೀನು! ಶಿವ ನೀನು!
ಎಂದು ಜಲಗಾರ ರೂಪಿಯಾದ ಶಿವ ಹಾಡುತ್ತಾನೆ. ಆಗ ಭಾವಪರವಶನಾದ ಜಲಗಾರ ’ಶಿವ ನಾನು! ಶಿವ ನಾನು!’ ಎಂದು ಹೇಳುತ್ತಾ ಶಿವನ ತೆಕ್ಕೆಯೊಳಗಾಗುತ್ತಾನೆ. ನಾಟಕ ಮುಗಿಯುತ್ತದೆ.

ಈ ನಾಟಕ ಆರಂಭದಲ್ಲಿಯೇ, ಮೈಸೂರಿನ ಸಾಹಿತ್ಯ ವಲಯದಲ್ಲಿ ಹಲವರ ಪ್ರಶಂಸೆಯನ್ನೂ ಕೆಲವರ ನಿಂದನೆಯನ್ನೂ ಎದುರಿಸಬೇಕಾಯಿತು. ನಾ.ಕಸ್ತೂರಿಯವರು ಸ್ವತಃ ತಾವೇ ನಿರ್ದೇಶಿಸಿ, ಸ್ಕೌಟು ದಳದ ವಾರ್ಷಿಕೋತ್ಸವದಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಮುಂದೆ ಪ್ರದರ್ಶಿಸುತ್ತಾರೆ. (ನಾನು ನನ್ನ ರೂಢಿಯಂತೆ ಆ ನಾಟಕ ಪ್ರದರ್ಶನಕ್ಕೆ ಹೋಗಿರಲಿಲ್ಲ-ಕುವೆಂಪು) ಅದಕ್ಕೆ ಸಾಕಷ್ಟು ಶ್ಲಾಘನೆಯೂ ವ್ಯಕ್ತವಾಗುತ್ತದೆ. ಆದರೆ ಆಗ್ಗೆ ಮೈಸೂರಿನ ವೃದ್ಧಪಿತಾಮಹರೆಂದು ಪ್ರಸಿದ್ಧರಾಗಿದ್ದ ಎಂ.ವೆಂಕಟಕೃಷ್ಣಪ್ಪಯ್ಯನವರು ತಮ್ಮ ಪತ್ರಿಕೆಯಲ್ಲಿ, ’ಆ ನಾಟಕ ಬ್ರಾಹ್ಮಣರನ್ನು ಅವಹೇಳನ ಮಾಡುವುದಕ್ಕೆ ಬರೆಯಲಾಗಿದೆ’ ಎಂದೂ ’ಜಾತಿದ್ವೇಷದ ವಿಷದ ಹಲ್ಲನ್ನು ಬಿತ್ತುವವರು ವಿಷದ ಫಲವನ್ನೆ ಅನುಭವಿಸಬೇಕಾಗುತ್ತದೆ’ ಎಂದೂ ಟೀಕಿಸಿದ್ದರಂತೆ. ಆದರೆ, ನಾಟಕದಲ್ಲಿ ವ್ಯಕ್ತವಾಗಿದ್ದ ಹೊಸ ವಿಚಾರಗಳಿಂದಾಗಿ ನಾಟಕ ದಿನದಿಂದ ದಿನಕ್ಕೆ ಆಸಕ್ತರನ್ನು ಸೆಳೆಯುತ್ತಲೇ ಹೋಯಿತು. ಎಷ್ಟೋ ದಿನಗಳವರೆಗೂ ನಾಟಕಕ್ಕೆ ವ್ಯಕ್ತವಾಗಿದ್ದ ಪ್ರಶಂಸೆ-ನಿಂದನೆಗಳು ಕವಿಗೆ ತಿಳಿಯಲೇ ಇಲ್ಲ! ತಿಳಿದಾಗಲೂ ಒಂದು ನಗುವಷ್ಟೇ ಕವಿಯ ಉತ್ತರವಾಗಿತ್ತು.

೧೯೨೮ ಅಥವಾ ೧೯೨೯ನೆಯ ವರ್ಷದ ಶಿವರಾತ್ರಿಯ ದಿನ ಹಲವರ ಒತ್ತಾಯದ ಮೇರೆಗೆ ಜಲಗಾರ ನಾಟಕವನ್ನು ಸ್ವತಃ ಕವಿಯ ಬಾಯಿಂದ ಕೇಳುವ ಕಾರ್ಯಕ್ರಮವನ್ನು ಯೋಜಿಸಲಾಗಿತ್ತು. ನಾಟಕದ ಕೊನೆಯಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ ಎಂಬುದರಿಂದಲೋ ಅಥವಾ ಶಿವರಾತ್ರಿಯಾಗಿದ್ದರಿಂದಲೋ ಏನೋ ಸಾಕಷ್ಟು ಜನ ಸೇರಿದ್ದರು. ಕವಿಯೂ ಅಪ್ರಾಸಛಂದಸ್ಸಿನ ಹೊಸ ಶೈಲಿಯಲ್ಲಿ ಅದನ್ನು ಧ್ವನಿಯ ಮಟ್ಟಿಗಾದರು ಅಭಿನಯಪೂರ್ವಕವಾಗಿ ವಾಚಿಸಿದರು. ಜನರೆಲ್ಲಾ ಮೆಚ್ಚಿಕೊಂಡರು. ಆದರೆ ಲಿಂಗಾಯಿತ ಶಿವಭಕ್ತರೊಬ್ಬರು ಮಾತ್ರ ಕುವೆಂಪು ಕಡೆಗೆ ಕೈದೋರುತ್ತಾ, ಭಯಂಕರವಾಗಿ ’ಶಿವದ್ರೋಹಿ! ಶಿವದ್ರೋಹಿ!’ ಎಂದು ಆರ್ಭಟಿಸುತ್ತಾ, ಶಿವನಿಂದೆಯಾದಲ್ಲಿ ನಿಲ್ಲಬಾರದು ಎನ್ನುವಂತೆ ಸಭಾತ್ಯಾಗ ಮಾಡಿದರಂತೆ! ಮೊದಲು ವಿಷಯ ತಿಳಿಯದೆ, ಶಿವಭಕ್ತರ ಆರ್ಭಟದಿಂದ ಗಾಬರಿಯಾಗಿದ್ದ ಸ್ವಾಮೀಜಿಗಳು, ತಾತಗಾರು, ನಾ.ಕಸ್ತೂರಿಯವರು ಮತ್ತಿತರರು ಜೋರಾಗಿ ನಕ್ಕುಬಿಟ್ಟರಂತೆ!

ಕುವೆಂಪು ಅವರು ನಿಧನರಾದಾಗ, ಅಂತಿಮದರ್ಶನಕ್ಕಾಗಿ ಉದಯರವಿಯ ಮುಂದೆ ಸಾಲುಗಟ್ಟಿದ ಸಾವಿರಾರು ಜನರುಗಳಲ್ಲಿ ಜಾಡಮಾಲಿಗಳ ಗುಂಪೊಂದು ಸಹ ಸಾಲಿನಲ್ಲಿ ನಿಂತಿತ್ತು. ಅವರಾರು ಕುವೆಂಪು ಅವರಿಗೆ ಪರಿಚಿತರಲ್ಲ, ಅವರ ಸಾಹಿತ್ಯವನ್ನು ಓದಿದವರೂ ಅಲ್ಲ. ಅದನ್ನು ನೋಡಿ, ಕುತೂಹಲದಿಂದ ರಾಮದಾಸ್ ಮೊದಲಾದವರು ಅವರನ್ನು ಮಾತನಾಡಿಸಿದಾಗ, ಅವರೆಲ್ಲರೂ ಕುವೆಂಪು ಮತ್ತು ಜಲಗಾರ ನಾಟಕದ ಹೆಸರುಗಳನ್ನು ಹೇಳಿದರಂತೆ! ಒಬ್ಬ ಬರಹಗಾರ ಅಥವಾ ಆತನ ಒಂದು ಕೃತಿ ಜನರ ಸ್ವತ್ತಾಗಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ.

ಇಂದು ಶಿವರಾತ್ರಿ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದು ಹಾಡಿದ ಬಸವನ ಹೆಸರನ್ನು ಹೇಳಿಕೊಂಡು, ಆತನ ಧರ್ಮದ ವಾರಸುಧಾರರೆನಸಿಕೊಂಡವರು, ರಾಜಕಾರಣಿಗಳು, ಮಠಾಧಿಪತಿಗಳು ನೂರು - ಇನ್ನೂರು ಅಡಿಯ ಶಿವಮೂರ್ತಿಗಳನ್ನು ಲಿಂಗಗಳನ್ನು ಮಾಡಿಸುತ್ತಾ - ಎದೆಯೊಳಗಿನ ಶಿವನಿಗೆ ಸಮಾಧಿ ಕಟ್ಟುತ್ತಾ - ಕಾಂಕ್ರೀಟ್ ಶಿವನ ಆರಾಧಕರಾಗುತ್ತಿದ್ದಾರೆ. ’ನಿಜಶಿವನಾರು?’ ಎಂಬುದನ್ನು ಅರಿಯುವುದೇ ನಿಜವಾದ ಶಿವರಾತ್ರಿಯಲ್ಲವೆ?

ಚಿತ್ರಗಳು : ಲಕ್ಷ್ಮಣ್. ಸಿ. (picasa web albums)