Monday 30 November 2009

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!

1998-2000 ನಾನು ಕನ್ನಡ ಎಂ.ಎ. ಮಾಡಿದ್ದು. ಆಗ ನನಗೆ ಬೇಂದ್ರೆ ಮತ್ತು ಜನ್ನ ವಿಶೇಷಕವಿಗಳಾಗಿ ಅಧ್ಯಯನಕ್ಕೆ ಇದ್ದವರು. ಬೇಂದ್ರೆ ಆಧುನಿಕ ಕನ್ನಡದ ವರಕವಿಯಾದರೆ, ಜನ್ನ ಹನ್ನೆರಡನೆಯ ಶತಮಾನದ ಕವಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಹಾಸನ ಜಿಲ್ಲೆಯ ಪರಿಸರದಲ್ಲಿ ಹುಟ್ಟಿ ಬೆಳೆದು ಕವಿಚಕ್ರವರ್ತಿ ಎನಿಸಿಕೊಂಡವನು.
ಕನ್ನಡ ಕವಿಚಕ್ರವರ್ತಿಗಳು ಮೂವರು. ಪೊನ್ನ, ರನ್ನ ಮತ್ತು ಜನ್ನ.
ಕನ್ನಡ ರತ್ನತ್ರಯರು ಮೂವರು. ಪಂಪ, ಪೊನ್ನ ಮತ್ತು ರನ್ನ.
ಆದರೆ ನಿಜವಾಗಿಯೂ ಈ ಎರಡೂ ಪಟ್ಟಿಯಲ್ಲಿ ಇರಬೇಕಾದವರು, ಪಂಪ, ರನ್ನ ಮತ್ತು ಜನ್ನ! ಇದು ನನ್ನ ಅನಿಸಿಕೆ. ಇರಲಿ ಬಿಡಿ. ಇಲ್ಲಿ ನಾನು ಯಾವ ಕವಿಯ ಸ್ಥಾನನಿರ್ದೇಶನಕ್ಕೂ ನಿಂತಿಲ್ಲವಾದ್ದರಿಂದ ಮತ್ತೆ ಜನ್ನನೆಡೆಗೆ ಬರುತ್ತೇನೆ.
ಈಗ್ಗೆ ಮೂರ್ನಾಲ್ಕು ತಿಂಗಳ ಹಿಂದೆ, ಅಂದರೆ ಉದಯ ಇಟಗಿಯವರು ಲಿಬಿಯಾದಿಂದ ಭಾರತಕ್ಕೆ ಬಂದು, ಬ್ಲಾಗ್ ಮಿತ್ರರನ್ನು ಒಂದೆಡೆ ಸೇರಿಸಿ ಊಟ ಹಾಕಿಸಿದ್ದರು. ಆ ದಿನ ಪ್ರಕಾಶ ಹೆಗಡೆ ಮೊದಲಾದವರು, ಹಳಗನ್ನಡ ಕಾವ್ಯಗಳ ನನ್ನ ಆಸಕ್ತಿಯಬಗ್ಗೆ ಮಾತನಾಡುತ್ತಾ, (ಅಷ್ಟೊತ್ತಿಗಾಗಲೇ ರನ್ನ ಜೀವನ ಚರಿತ್ರೆ ನನ್ನ ಬ್ಲಾಗಿನಲ್ಲಿ ಪ್ರಕಟವಾಗಿತ್ತು) ‘ಸಾರ್ ಜನ್ನನ ಬಗ್ಗೆ ಬರೆಯಿರಿ. ಆತನ ಬಗ್ಗೆ ಕೇಳಿದ್ದೇವೆ. ನೀವು ವಿವರವಾಗಿ ಬರೆಯಿರಿ’ ಎಂದು ಹೇಳಿದ್ದರು. ಹಲವಾರು ಕಾರ‍್ಯನಿಮಿತ್ತವಾಗಿ ಅದಕ್ಕಿಂತ ಹೆಚ್ಚಾಗಿ ನನ್ನ ಸೋಮಾರಿತನದಿಂದಾಗಿ ನಾನು ಆ ಕಡೆ ತಲೆ ಕೂಡಾ ಹಾಕಿ ಮಲಗಲಿಲ್ಲ!
ಮೊನ್ನೆ ಪದವಿ ತರಗತಿಯೊಂದಕ್ಕೆ, (ಕನ್ನಡ ಉಪನ್ಯಾಸಕರೊಬ್ಬರು ದೀರ್ಘಾವಧಿ ರಜೆ ಹೋಗಿದ್ದರಿಂದ) ‘ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೋಳ್’ ಎಂಬ ಜನ್ನನ ಯಶೋಧರ ಚರಿತ್ರೆಯ ಪದ್ಯಭಾಗವನ್ನು ಪಾಠ ಮಾಡುವ ಅವಕಾಶ ಸಿಕ್ಕಿತ್ತು. ಅಂದಿನಿಂದ ಜನ್ನ ಮತ್ತೆ ಮತ್ತೆ ಕಾಡುತ್ತಿದ್ದಾನೆ. ಆತನ ಬದುಕಿನ ವಿವರಗಳನ್ನು ಕುರಿತು ವಿವರಗಳನ್ನು ಸಂಗ್ರಹಿಸಲು, ಓದಲು ಪ್ರಾರಂಭಿಸಿದ್ದೇನೆ.

ವಿಶೇಷಕವಿಯಾಗಿ ಜನ್ನನನ್ನು ಅಧ್ಯಯನ ಮಾಡುವಾಗ ಆತನ ಅನಂತನಾಥಪುರಾಣ ಕಾವ್ಯದ ಭಾಗವಾದ ಚಂಡಶಾಸನ ವೃತ್ತಾಂತ ನನ್ನ ಮೇಲೆ ತೀವ್ರವಾದ ಪರಿಣಾಮ ಬೀರಿದ್ದಲ್ಲದೇ ಮುಂದೆ ಒಂದು ಸಣ್ಣ ಕಥೆಯಾಗಿ ನನ್ನಿಂದ ಬರೆಯಿಸಿಕೊಂಡಿತ್ತು. ಚಂಡಶಾಸನ ಕಥೆಗೂ, ರಾವಣ ಸೀತಾಪಹರಣ ಮಾಡಿದ ಕಥೆಗೂ ಅಲ್ಲಲ್ಲಿ ಹೋಲಿಕೆಯನ್ನು ವಿಮರ್ಶಕರು ಗುರುತಿಸುತ್ತಾರೆ. ಅಪಹರಣದ ಸಮಯದಲ್ಲಿ ಅಲ್ಲಿ ಜಟಾಯು ಅಡ್ಡ ಬರುತ್ತಾನೆ; ಇಲ್ಲಿ ಸಿಂಹಚೂಡ ಎಂಬ ಸಾಮಂತ ಅಡ್ಡ ಬರುತ್ತಾನೆ! ರಾವಣ ರಾಮನ ಮಾಯಾಶಿರಸ್ಸನ್ನು ತಂದು ತೋರಿದಾಗ ಸೀತೆ ಮೂರ್ಛೆ ಹೋಗುತ್ತಾಳೆ. ಆದರೆ ಇಲ್ಲಿ ಸುನಂದೆ ಸತ್ತೇ ಹೋಗುತ್ತಾಳೆ! ರಾವಣ ಯುದ್ಧ ಮುಂದುವರೆಸಿ ರಾಮನಿಂದ ಹತನಾದರೆ ಇಲ್ಲಿ ಚಂಡಶಾಸನ ಸುನಂದೆಯ ಜೊತೆಯಲ್ಲಿಯೇ ಚಿತೆಯೇರುತ್ತಾನೆ!

ಕಥೆ ಸೃಷ್ಟಿಯಾಗುವ ಕೆಲವು ದಿನಗಳ ಹಿಂದಷ್ಟೇ ಗುಜರಾತಿನಲ್ಲಿ ಭಯಂಕರ ಭೂಕಂಪ ಸಂಭವಿಸಿತ್ತು. ಪ್ರಕೃತಿ ಸೃಷ್ಟಿಸಬಹುದಾದ ವಿಕೋಪಗಳ ಜೊತೆಯಲ್ಲಿ ಮಾನವ ಸೃಷ್ಟಿಸುತ್ತಿದ್ದ ವಿಕೋಪಗಳೂ ಭಯಾನಕವೇ ಆಗಿದ್ದವು. ಪ್ರಾಕೃತಿಕ ವಿಕೋಪಗಳು ಸೃಷ್ಟಿಸಬಹುದಾದ ಭಯಂಕರ ಅನಾಹುತಗಳು, ಅದರ ಮುಂದೆ ಮಾನವನ ಅಲ್ಪತೆ, ಕ್ಷುದ್ರತೆಗಳು ನನ್ನ ಮನಸ್ಸನ್ನು ಆವರಿಸಿದ್ದ ಕಾಲ. ಆ ಹಿನ್ನೆಲೆಯಲ್ಲಿ ಚಂಡಶಾಸನ ವೃತ್ತಾಂತ ಕಥೆ ರಚನೆಯಾಗಿತ್ತು. ಕಥೆಗೆ ಒಂದು ರೀತಿಯ ನಾಟಕೀಯತೆ ಆವರಿಸಿಕೊಂಡು ಹೊಸತನದಿಂದ ಕೂಡಿತ್ತು. ಈ ಹಿಂದೆ ನನ್ನ ಒಂದೆರಡು ಸಣ್ಣಕಥೆಗಳು ಸಣ್ಣಪುಟ್ಟ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ (ಈಗ ಅವುಗಳ ಪ್ರತಿ ಸಹ ನನ್ನಲ್ಲಿಲ್ಲ!) ಕನ್ನಡ ಪ್ರಭದಲ್ಲಿ ಪ್ರಕಟವಾದ ಈ ಕಥೆ ನನಗೆ ‘ಕಥೆಗಾರ’ ಎಂಬ ಗುರುತಿನ ಚೀಟಿಯನ್ನು ನೀಡಿತ್ತು! (ಪ್ರಕಟವಾಗಿ ಮೂರು ತಿಂಗಳ ನಂತರ ನನಗೆ ಓದುಗರೊಬ್ಬರಿಂದ ಈ ವಿಷಯ ತಿಳಿಯಿತು!)

ಜನ್ನನ ಬದುಕು ಬರಹದ ಬಗ್ಗೆಯೇ ಲೇಖನ ಬರೆಯಲು ಸಿದ್ಧತೆ ನಡೆಸುತ್ತಿದ್ದಾಗ ಇದೆಲ್ಲಾ ನೆನಪಾಯಿತು. ಲೇಖನ ಸಿದ್ಧವಾಗಲು ಇನ್ನೂ ಕೆಲವಾರು ದಿನಗಳು ಬೇಕು ಅಷ್ಟರಲ್ಲಿ ನಿಮಗೆ ಈ ಚಂಡಶಾಶನವೃತ್ತಾಂತವನ್ನು ಒಮ್ಮೆ ಓದಿಸಬೇಕೆಂದು ಬ್ಲಾಗಿಗೆ ಎರಡು ಕಂತುಗಳಲ್ಲಿ ಹಾಕುತ್ತಿದ್ದೇನೆ. ನಿಮಗೇನನ್ನಿಸುತ್ತದೆ ಎಂಬುದು ನನಗೆ ಮುಖ್ಯ.
* * *

ಮಾವಿಂಗೆ ಮಾಲ್ಲಿಗೆಗಳ್ ಕೂರ್ತಡೆ, ಮಾವು ಕೂರ್ತುದು ವಸಂತಶ್ರೀಗೆ- ಅನಂತನಾಥ ಪುರಾಣ : ಜನ್ನ

ಭಾಗ - ೧

ಸಹೃದಯರೆ, ನಾನು ಕಾಲ. ವ್ಯಂಗದಿಂದಲೋ, ಗೌರವದಿಂದಲೋ ಕೆಲವರು ನನ್ನನ್ನು ಕಾಲರಾಯನೆಂದು ಕರೆಯುತ್ತಾರೆ. ಈಕೆ ಸೃಷ್ಟಿ. ನನ್ನ ಸಹೋದರಿ. ಈಕೆಯ ಗರ್ಭದಿಂದುದಯಿಸಿದ ಒಳಿತು ಕೆಡುಕುಗಳನ್ನು ನಾನು ನನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೋಗುತ್ತೇನೆ. ನಿರಂತರ ಸೃಷ್ಟಿಕಾರ್ಯದಲ್ಲಿ ನಿರತಳಾದ ಇವಳಿಗೆ ವರ್ತಮಾನದಲ್ಲಿ ಹೆಜ್ಜೆ, ಭವಿಷ್ಯದಲ್ಲಿ ದೃಷ್ಟಿ. ಭೂತದ ಕಡೆಗೆ ನೋಡಲಿವಳಿಗೆ ಸಮಯವಾಗಲಿ, ಸಹನೆಯಾಗಲಿ ಇಲ್ಲ. ನಿರಂತರತೆಯಲ್ಲೊಮ್ಮೆ ಬಿಡುವು ಬೇಸರಗಳಾದಾಗ ನನ್ನ ಬಳಿಬಂದು ‘ಕಾಲರಾಯ ಒಂದಿಷ್ಟು ಇತಿಹಾಸವನ್ನಾದರು ಹೇಳು’ ಎಂದು ದಂಬಾಲು ಬೀಳುತ್ತಾಳೆ. ತನ್ನ ಗರ್ಭದಲ್ಲಿಯೇ ಅಗಣಿತ ವ್ಯಾಪಾರಗಳನ್ನಿಟ್ಟುಕೊಂಡಿರುವ ಇವಳಿಗೆ, ತಾನೇ ಪ್ರಸವಿಸಿದ ಇತಿಹಾಸವನ್ನು ಇಣುಕುವ ಚಪಲ ನನ್ನ ಗರ್ಭದಲ್ಲಿಳಿದು. ನಾನೂ ಒಪ್ಪಿದ್ದೇನೆ. ನಿಮ್ಮನ್ನೂ ಕರೆದಿದ್ದೇನೆ. ಈಕೆಯೊಬ್ಬಳಿಗೆ ನಾನು ಕಥೆ ಹೇಳಿದರೆ ಆಗುವ ಶ್ರಮ ಮತ್ತು ಸಾರ್ಥಕತೆ ನಿಮಗೆ ಹೇಳುವುದರಿಂದ ಹೆಚ್ಚೇನು ಆಗುವುದಿಲ್ಲ. ಒಮ್ಮೊಮ್ಮೆ ಸಾರ್ಥಕತೆಯ ತೂಕ ಹೆಚ್ಚಾಗುತ್ತದೆಯಾದರೂ, ಇಂದು ಇತಿಹಾಸದಿಂದ ಪಾಠ ಕಲಿಯುವವರೆಷ್ಟು ಮಂದಿ ಇದ್ದಾರೆ ಹೇಳಿ. ಇತಿಹಾಸವೆಂಬುದು ರಂಜನೆಯ ವಸ್ತುವಾಗಿದೆ. ವರ್ತಮಾನದಲ್ಲಿ ನಿಂತು, ಭೂತವನ್ನು ಮರೆತು, ಭವಿಷ್ಯವನ್ನು ನೋಡುತ್ತಿರುವ ಈಕೆಯ ಗರ್ಭಸಂಜಾತರಿಗೆ!
ಸೃಷ್ಟಿ ಕೇಳು, ನೀನು ಈಗಿನ ನಿನ್ನ ಇರುವಿಕೆಯಿಂದ ‘ನಾನೆಷ್ಟು ಸುಂದರಿ’ ಎಂದು ಅಹಂಕಾರ ಪಡುತ್ತಿದ್ದೀಯ. ನಿನ್ನೊಳಗೇನಿದೆಯೆಂಬುದೇ ನಿನಗೆ ಗೊತ್ತಿಲ್ಲ. ಪ್ರಸವದ ನಂತರ ತಿರುಗಿ ನೋಡದ ನಿನಗೆ, ನೀನು ಪ್ರಸವಿಸಿ ನನ್ನ ತೆಕ್ಕೆಗೆ ಬಂದ ‘ವಸ್ತು’ ಏನೆಂಬುದು ತಿಳಿಯುವುದೇ ಇಲ್ಲ. ನೀನು ಪ್ರಸವಿಸಿದ್ದೆಲ್ಲವೂ ಒಳಿತಲ್ಲ, ಕೆಡಕೂ ಇದೆ; ಸುಂದರವಲ್ಲ, ಕುರೂಪವೂ ಇದೆ; ಸತ್ಯವಲ್ಲ, ಅಸತ್ಯವೂ ಇದೆ. ಇದು ಎಲ್ಲ ಕಾಲಕ್ಕೂ ಇದ್ದದ್ದೆ. ಆದರೆ ಈ ವರ್ತಮಾನದ ಮಕ್ಕಳು ಅವಘಡಗಳು ನಡೆದಾಗ, ‘ಕೆಟ್ಟಕಾಲ’ ‘ಕಲಿಗಾಲ’ ‘ಕಾಲದ ಮಹಿಮೆ’ ಮುಂತಾಗಿ ಉದ್ಗರಿಸುತ್ತಾರೆ. ಪಾಪ! ಇವರಿಗೆ ಗೊತ್ತಿಲ್ಲ. ಇವರಂದುಕೊಂಡಿರುವ ಈ ನಾಗರೀಕತೆಯ ಒಂದೊಂದು ಪೊರೆ ಕಳಚಿದಾಗಲೂ ಬದಲಾಗುತ್ತಿರುವುದು ಅದರ ಹೊರಮೈಯಷ್ಟೇ ಎಂದು. ಅದರ ಸುಪ್ತಮನಸ್ಸಿನಾಳದಲ್ಲಿರುವ ಈ ಒಳಿತು ಕೆಡಕುಗಳು ವಾಸನಾರೂಪದಲ್ಲಿ ಉಳಿದುಬಿಡುತ್ತವೆ ಎಂದು.
ಸೃಷ್ಟಿ, ಈಗ ಹೇಳುತ್ತೇನೆ ಕೇಳು. ಪುರಾಣವೋ, ಇತಿಹಾಸವೋ ಅದು ಒತ್ತಟ್ಟಿಗಿರಲಿ. ಪುರಾಣದೊಳಗಿನ ಇತಿಹಾಸ, ಇತಿಹಾಸದೊಳಗಿನ ಪುರಾಣ ಅದೂ ನನಗೆ ಸಂಬಂಧಿಸಿದ್ದಲ್ಲ. ನನ್ನ ಪ್ರಕಾರ ಈ ಕ್ರಿಯೆಗೆ ಹಿಂದು, ಇಂದು ಮತ್ತು ಮುಂದು ಎಂಬ ವಿಶೇಷಣಗಳೇ ಬೇಡ.
ಬಾ ಸೃಷ್ಟಿ, ಇತ್ತ ಬಾ. ನನ್ನೊಳಗೆ ಇಣುಕಿ ನೋಡು. ಅದೋ ಅಲ್ಲಿ ನೋಡು. ಕಾಣಿಸುತ್ತದೆಯೆ ಇದು ಯುದ್ಧಭೂಮಿ. ಬೆಳಗಿನಿಂದ ಸಂಜೆಯವರೆಗೂ ಪ್ರಾಣದ ಹಂಗು ತೊರೆದು ಹೋರಾಡಿದ ಸೈನಿಕರು ನಿದ್ರಾಮಾತೆಯ ಮಡಿಲಲ್ಲಿದ್ದಾರೆ. ಗಾಯಗೊಂಡ ಯೋಧರಿಗೆ ಉಪಚಾರವೂ ನಡೆದಿದೆ. ಸಾಕಷ್ಟು ಬೆವೆರಿಳಿಸಿದ ಆನೆ ಕುದುರೆಗಳು ವಿಶ್ರಾಂತಿಯನ್ನುಣ್ಣುತ್ತಿವೆ. ಇದೆಲ್ಲಾ ಆ ಸೂರ್ಯದೇವನ ಕೃಪೆ ನೋಡು. ಹೆಣ್ಣು, ಹೊನ್ನು ಮತ್ತು ಮಣ್ಣು ಇಂತದ್ದಕ್ಕೆಲ್ಲಾ ಲಜ್ಜಾಹೀನರಾಗುವ ರಾಜರು, ಕಾನೂನು ಕಟ್ಟಳೆಗಳನ್ನು ಮುರಿದರೂ, ಸೂರ್ಯ ಮುಳುಗಿದ ಮೇಲೆ ಯುದ್ಧ ನಿಲ್ಲಿಸಿಬಿಡುತ್ತಾರೆ. ಇದು ಯುದ್ಧದ ಕಟ್ಟಳೆಗಳ ಬಗ್ಗೆ ಅವರಿಗಿರುವ ನಿಷ್ಟೆಗಿಂತ, ನಾಳೆ ಮತ್ತೆ ಕಚ್ಚಾಡಲು ಶಕ್ತಿ ಸಂಚಯಮಾಡಲಿಕ್ಕೆ ಮಾಡಿಕೊಂಡಿರುವ ಸಂಚು. ಅದನ್ನೇ ಅವರು ಕಾನೂನು, ಕಟ್ಟಳೆ, ಯುದ್ಧವಿಧಿವಿಧಾನಗಳೆಂದು ಹೇಳುತ್ತಾರೆ. ಆದರೆ ಅದನ್ನೂ ಮುರಿದ ‘ವೀರ ಯೋಧ’ರು ನನ್ನ ತೆಕ್ಕೆಯಲ್ಲಿದ್ದಾರೆ. ಅದಿರಲಿ, ಇಲ್ಲಿ ಕೇಳು. ಅಲ್ಲಿ ಪಂಜುಗಳುರಿಯುತ್ತಿರುವ ಬಿಡಾರವನ್ನು ನೋಡು. ರಾತ್ರಿಕಾವಲೂ ಇದೆ. ಬಿಡಾರದೊಳಗೆ ಅತ್ತಿಂದಿತ್ತ ತಿರುಗುತ್ತಿರುವವನು ವಸುಷೇಣ. ಸುರಮ್ಯ ದೇಶದ ಅರಸು. ಈಗ ಈತನ ಯುದ್ಧ ಈ ಮಕರಗ್ರಾಹಪುರದ ಅರಸು ಚಂಡಶಾಸನ ಮೇಲೆ. ಕಾರಣ! ನಾನು ಹೇಳುವುದಕ್ಕಿಂತ ನೀನೆ ತಿಳಿಯುವುದು ಉತ್ತಮ. ಹೋಗು, ಸ್ವಲ್ಪ ಹೊತ್ತು ಈತನ ಮಾನಸಸರೋವರದಲ್ಲಿ ವಿಹರಿಸಿ ಬಾ. ನಾನಿಲ್ಲಿಯೇ ಕಾಯುತ್ತಿರುತ್ತೇನೆ.
* * *

ನಾನು ಯಾರು? ನಾನು ಯಾರು? ಭರತವರ್ಷದ ಸುರಮ್ಯ ದೆಶದ ಅರಸು. ಪೌದನಪುರವರಾಧೀಶ್ವರ ವಸುಷೇಣ. ನನ್ನಂತವನ ವಿಷಯದಲ್ಲೂ ಹೀಗಾಗಬೇಕೆ? ಲತೆಯೆಂದು ಅಪ್ಪಿದ್ದು ಹಾವಾಗಿ ಕಚ್ಚಬೇಕೆ? ಅ ಹಾವು ಕಚ್ಚಿ ಮೈಯೆಲ್ಲಾ ವಿಷವೇರುತ್ತಿದೆ. ಅದು ನನ್ನ ಮೈಯನ್ನು ಪೂರ್ಣ ಆವರಿಸುವ ಮುನ್ನ ಆ ಜಂತುವನ್ನು ಹಿಡಿದು ಈ ವಿಷವನ್ನು ಇಳಿಸಬೇಕು. ಇಲ್ಲ, ಅದನ್ನು ಕೊಲ್ಲಬೇಕು. ಛೇ! ಈ ಸೂರ್ಯ ಇನ್ನೊಂದೆರಡು ಗಳಿಗೆ ತಡವಾಗಿ ಅಸ್ತಮಿಸಬಾರದೆ. ಇಂದೇ ಆ ಕ್ಷುದ್ರಜಂತುವನ್ನು ಇಲ್ಲವಾಗಿಸಿಬಿಡುತ್ತಿದ್ದೆ.
ಏನೆಲ್ಲಾ ಆಯಿತು ಈ ಐದು ದಿನಗಳಲ್ಲಿ. ಒಂದೇ ಗುರುವಿನ ಶಿಷ್ಯರಿಬ್ಬರಲ್ಲಿ ನಾಳೆ ಒಬ್ಬ ಸಾಯಬೇಕು, ಇನ್ನೊಬ್ಬನಿಂದ. ಇದು ನನ್ನ ಕನಸು ಮನಸುಗಳಲ್ಲೂ ಸುಳಿದಿರದ ಕಲ್ಪನೆ. ಆದರಿಂದು ವಾಸ್ತವವಾಗಿ ಬಂದು ನನ್ನೆದುರೇ ನಿಂತು ನನ್ನನ್ನೇ ಅಣಕಿಸುತ್ತಿದೆ.
ಓ ಚಂಡಶಾಸನ, ನನ್ನ ಪ್ರಿಯಮಿತ್ರ ಚಂಡಶಾಸನ. ನೀನೇಕೆ ಹೀಗೆ ಮಾಡಿದೆ? ಒಂದು ವಾರದ ಕೆಳಗೆ ನಿನ್ನಾಳೊಬ್ಬ ಬಂದು, ‘ಮಕರಗ್ರಾಹಪುರವರಾಧೀಶ್ವರ ಚಂಡಶಾಸನದೇವರು ನಿಮ್ಮನ್ನು ಕಾಣಲು ನಾಳೆ ಬರುವವರಿದ್ದಾರೆ’ ಎಂದಾಗ ನಾನೆಷ್ಟು ಸಂತೋಷಪಟ್ಟಿದ್ದೆ. ಆ ಖುಷಿಯಲ್ಲಿ ನನ್ನ ಕೊರಳಲಿದ್ದ ಆಭರಣವನ್ನೇ ಉಡುಗೊರಯಾಗಿ ಕೊಟ್ಟಿದ್ದೆ. ನನ್ನೆಲ್ಲಾ ಅರಮನೆಯ, ಅಂತಃಪುರದ ಜನಕ್ಕೆಲ್ಲಾ ನಿನ್ನ ಸ್ವಾಗತಕ್ಕೆ ಸಿದ್ದರಾಗುವಂತೆ ಆಜ್ಞೆ ಮಾಡಿದ್ದೆ. ಇಡೀ ಪೌದನಪುರವನ್ನೇ ನಿನ್ನ ಸ್ವಾಗತಕ್ಕೆ ಸಿದ್ಧಪಡಿಸಲು ನನ್ನಂತರಂಗದ ಜನಕ್ಕೆ ತಿಳಿಸಿದ್ದೆ. ಏಕೆ ಹೇಳು? ಆರು ವರ್ಷಗಳ ನಂತರ, ಜೊತೆಯಲ್ಲೇ ದೂಳಾಟವಾಡಿದ್ದ ಬಾಲ್ಯ ಸ್ನೇಹಿತರಿಬ್ಬರು, ಒಂದೇ ಗುರುವಿನ ಶಿಷ್ಯರಿಬ್ಬರು, ನೆರೆಹೊರೆ ರಾಜ್ಯಗಳ ರಾಜರಿಬ್ಬರು ಆರು ವರ್ಷಗಳ ನಂತರ ಮತ್ತೆ ಬೇಟಿಯಾಗುತ್ತಿದ್ದೆವು. ಚಂಡಶಾಸನ ನಿನಗೆ ನೆನಪಿದೆಯೋ, ಇಲ್ಲವೊ? ನಾವಂದು ಗುರುಕುಲದಿಂದ ಹೊರಟು ನಿಂತಾಗ, ಪ್ರತಿವರ್ಷಕ್ಕೊಮ್ಮೆ ನಾವಿಬ್ಬರು ಸೇರಿ ವಾರವಿಡೀ ಕ್ರೀಡಾವಿಲಾಸಗಳಲ್ಲಿ, ಜಲಕೇಳಿಗಳಲ್ಲಿ, ಮೃಗಕಥಾವಿನೋದಗಳಲ್ಲಿ ವಿಹರಿಸಬೇಕೆಂದು ಮಾತನಾಡಿಕೊಂಡಿದ್ದೆವು. ಅಲ್ಲಿಂದ ಬಂದು ತಿಂಗಳೆರಡರಲ್ಲಿ ನನ್ನ ಪಟ್ಟಾಭಿಷೇಕ. ನಂತರ ಮದುವೆ. ನೀನು ಮದುವೆಗೆ ಬರಲೊಪ್ಪಿದ್ದೆ. ಆದರೆ ನಿನ್ನ ದೇಶದ ದಕ್ಷಿಣದಲ್ಲಿ ಎದ್ದ ದಂಗೆಯಿಂದಾಗಿ ನೀನು ಬರುವುದಿಲ್ಲವೆಂದು ತಿಳಿದಾಗ ನಾನೆಷ್ಟು ಅವಲತ್ತುಕೊಂಡಿದ್ದೆ. ನಿಜ, ಮೊದಲು ಕರ್ತವ್ಯ. ನೀನೂ ಒಂದು ದೇಶದ ಅರಸು. ಎಲ್ಲಾ ಸರಿಯಾಗಿ ಒಂದು ಸ್ಥಿತಿ ತಲುಪಿದಾಗ ಬರುವುದಾಗಿ ನೀನು ತಿಳಿಸಿದ್ದೆ. ಅದಕ್ಕಾಗಿ ನಾನು ಆರು ವರ್ಷಗಳೇ ಕಾಯಬೇಕಾಯಿತು, ಮಿತ್ರ ಆರು ವರ್ಷಗಳು.
ಬಂದೆ. ನೀನು ಮಹೋತ್ಸವದಿಂದ ಪುರಪ್ರವೇಶ ಮಾಡಿದ್ದೆ ನಿನ್ನ ನರ್ಮಸಚಿವ ಸುದರ್ಶನನೊಂದಿಗೆ. ನಾವಿಬ್ಬರು ಆಲಂಗಿಸಿದೆವು. ಅಭಿನಂದಿಸಿದೆವು. ಆನಂದಿಸಿದೆವು. ಎರಡು ಘನಗಜಗಳನ್ನೇರಿ ಮೆರವಣಿಗೆಯಲ್ಲಿ ಅರಮನೆಗೆ ಬಂದೆವು. ಎಲ್ಲವೂ ನಾನಂದುಕೊಂಡಂತೆಯೇ ಆಯಿತು. ಸ್ವತಃ ದೇವಿ ಸುನಂದೆಯೇ ಆರತಿಯೆತ್ತಿ ನಮ್ಮನ್ನು ಸ್ವಾಗತಿಸಿದಳು.
ಮೊದಲೆರಡು ದಿನಗಳು ನಡೆದ ಸಹಪಂಕ್ತಿ ಬೋಜನ, ಸಹವಿಳಾಸಕ್ರೀಡೆಗಳನ್ನು ನಾನು ಹೇಗೆ ಮರೆಯಲಿ. ನಂತರ ನೀನ್ನಲ್ಲಿ ಸ್ವಲ್ಪ ಅನ್ಯಮನಸ್ಕತೆಯನ್ನು ಕಂಡೆ. ತನ್ನ ನಾಡಿನಿಂದ ದೂರವಿರುವುದಕ್ಕೆ ಇರಬೇಕೆಂದುಕೊಂಡೆ. ಆದರೆ ನಾಳೆಗೆ ನಡೆಸಲು ಯೋಜಿಸಿದ್ದ ಮೃಗಬೇಟೆಯ ವಿನೋದದ ಸುಖದ ಕಲ್ಪನೆಯಲ್ಲಿ ನಾನಿದ್ದೆ. ಇದು ನಿನಗೆ ಖುಷಿಕೊಡುತ್ತದೆಯೆಂದು ಭಾವಿಸಿ ಸುಮ್ಮನಾದೆ. ಕಾಡಿನಲ್ಲಿ ಮೃಗವೊಂದನ್ನು ಬೆನ್ನಟ್ಟಿ ನಾವಿಬ್ಬರೂ ದೂರವಾಗಿದ್ದೆವು. ನನಗೆ ಬೇಟೆ ಸಿಗಲಿಲ್ಲ. ಆದರೆ, ಆದರೆ,,,.. ..
* * *

ನೋಡಿದೆಯಾ ಸಹೋದರಿ, ಈ ಮನುಷ್ಯನಂತರಂಗವನ್ನು. ಕ್ರೋಧದ ಕೆಸರಿನಿಂದ ತನ್ನಮನದ ನೈರ್ಮಲ್ಯವನ್ನು ಕಳೆದುಕೊಂಡುಬಿಟ್ಟಿದ್ದಾನೆ. ಈಗ ನೀನು ಇನ್ನೊಬ್ಬನನ್ನು ನೋಡಬೇಕು. ಒಬ್ಬನಲ್ಲ ಇಬ್ಬರು. ಚಂಡಶಾಸನ ಮತ್ತು ಸುನಂದೆಯನ್ನು, ಅರಮನೆಯಲ್ಲಿ. ನೋಡಲ್ಲಿ, ಆತ ಚಂಡಶಾಸನ. ಅವನು ಸುನಂದೆಯನ್ನು ಅನುನಯಿಸುತ್ತಿದ್ದಾನೆ, ಕಾಡುತ್ತಿದ್ದಾನೆ. ಇಲ್ಲ ಆತ ಅವಳನ್ನು ಬೇಡುತ್ತಿದ್ದಾನೆ. ಹೋ, ಹೊರಟುಬಿಟ್ಟ. ನಮ್ಮ ಬರುವು ಒಂದು ಕ್ಷಣ ತಡವಾಯಿತೆ? ಇರಲಿ, ಸೃಷ್ಟಿ ಈಗ ನೀನು ಈತನ ಮನೋಮಂದಿರವನ್ನು ಹೊಕ್ಕು ಅಲ್ಲಿನ ವ್ಯಾಪಾರವನ್ನು ಗ್ರಹಿಸು. ಆತ ನಿದ್ರೆಯನ್ನಂತೂ ಮಾಡಲಾರ. ಮನುಷ್ಯಪ್ರಾಣಿ ಏಕಾಂಗಿಯಾಗಿದ್ದಾಗ ನಿಷ್ಪಕ್ಷಪಾತವಾಗಿ ಸ್ವ-ವಿಮರ್ಶೆ ಮಾಡಿಕೊಳ್ಳುತ್ತಾನೆ. ಹೋಗಿ ಬಾ, ನಾನಿಲ್ಲಿಯೇ ಚಲಿಸುತ್ತಿರುತ್ತೇನೆ.
ಮುಂದುವರೆಯುತ್ತದೆ........

Monday 23 November 2009

ಮೀನು ಹಿಡಿಯುವುದು ಇಷ್ಟು ಸುಲಭವೇ? ಪಂಪ!

ಆಗಾಗ ಟೀವಿಯಲ್ಲಿ, ಕ್ರಿಕೆಟ್ ಆಟದ ನಡುವೆ ಬರುವ ಜಾಹಿರಾತುಗಳಲ್ಲಿ ಹೆಚ್ಚು ಗಮನ ಸೆಳೆದದ್ದು: ಆಧುನಿಕ ಉಪಕರಣಗಳನ್ನು ಹಿಡಿದು ಮೀನಿಗೆ ಗಾಳ ಹಾಕಿ ಒಬ್ಬ ವ್ಯಕ್ತಿ ಕುಳಿತಿರುತ್ತಾನೆ. ಆಗ ಹಳ್ಳಿಯ ಆಸಾಮಿಯೊಬ್ಬ ಹಾಡು ಗುನುಗುತ್ತಾ ಬರುತ್ತಾನೆ. ಗಾಳ ಹಾಕಿಕೊಂಡು ಕುಳಿತವ ‘ಸದ್ದು ಮಾಡಬೇಡ (ಮೀನು ಗಾಳಕ್ಕೆ ಬೀಳುವುದಿಲ್ಲ)’ ಎಂದು ಗದರುತ್ತಾನೆ. ಹಳ್ಳಿಯವ ಒಂದು ಕೋಲಿಗೆ ನಾಲ್ಕು ಹನಿ ಫೆವಿಕ್ವಿಕ್ ಹಾಕಿ ನೀರಿನಲ್ಲಿ ಮುಳುಗಿಸಿ ಮೇಲೆತ್ತುತ್ತಾನೆ. ನಾಲ್ಕು ಮೀನುಗಳು ಕೋಲಿಗೆ ಅಂಟಿಕೊಂಡಿರುತ್ತವೆ! ಹಳ್ಳಿಯವ ಮತ್ತೆ ಸಂತೋಷದಿಂದ ಹಾಡು ಗುನುಗಲಾರಂಭಿಸಿದರೆ ಇತ್ತ ಗಾಳ ಹಾಕಿ ಕುಳಿತವನ ಮುಖ ಇಂಗು ತಿಂದ ಮಂಗನಂತಾಗುತ್ತದೆ!!!
ಇದನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣ ಪಂಪಭಾರತ! ನಮ್ಮ ವಾರಾಂತ್ಯ ಕಾರ್ಯಕ್ರಮ ಪಂಪಭಾರತ ಅಧ್ಯಯನ ನೆನ್ನೆ ನೆಡೆದಿತ್ತು. ಅದರಲ್ಲಿ ಯಮುನಾ ನದಿಯ ಮಡುವೊಂದರಲ್ಲಿ ಕೃಷ್ಣಾರ್ಜುನರು ತಮ್ಮ ಪರಿವಾರದೊಡನೆ ಜಲಕ್ರೀಡೆಯಾಡುವ ಸನ್ನಿವೇಶ ಬರುತ್ತದೆ. ಆಗ ಮೀನು ಹಿಡಿಯುವುದು ಇಷ್ಟೊಂದು ಸುಲಭವೇ? ಅನ್ನಿಸಿತು! ನಂತರ ನನ್ನ ಮನಸ್ಸನ್ನು ಆವರಿಸಿದ್ದು ನಾನು ಬಾಲ್ಯದಲ್ಲಿ ಕಂಡ, ದಕ್ಷಿಣದ ಒಳನಾಡಿನಲ್ಲಿ ಅಂದರೆ ಕರ್ನಾಟಕದ ಬಯಲುಸೀಮೆಯಲ್ಲಿ ಮೀನು ಹಿಡಿಯುವ ಹಲವಾರು ವಿಧಾನಗಳು. ಅವುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ.
ಹಾಂ! ಯೋಚಿಸಬೇಡಿ. ಪಂಪಭಾರತದ ಆ ಸನ್ನಿವೇಶವನ್ನು ಕೊನೆಯಲ್ಲಿ ಹೇಳುತ್ತೇನೆ. ಅದರ ಸ್ವಾರಸ್ಯವನ್ನು ನೀವು ಸವಿಯಲೇಬೇಕು!
ಸಣ್ಣ 'ಕೂಳಿ'ಯಲ್ಲಿ ಮೀನು ಹಿಡಿಯುವುದು
ತೆಂಗಿನ ಗರಿಯಿಂದ ಬೇರ್ಪಡಿಸಿದ ಕಡ್ಡಿಯನ್ನು ಬಳಸಿ ನಿರ್ಮಿಸಿದ 'ಕೂಳಿ' ಅಥವಾ 'ಕೂಣಿ' ಮೀನು ಹಿಡಿಯುವ ಜನಪ್ರಿಯ ಸಾಧನ. ಅವುಗಳನ್ನು ಮಳೆಗಾಲದಲ್ಲಿ ಸಣ್ಣದಾಗಿ ನೀರು ಹರಿಯುವ ಕಾಲುವೆಗಳಿಗೆ ಒಡ್ಡಿ (ಜೋಡಿಸಿ), ನೀರು ಅದರ ಮುಖಾಂತರ ಮಾತ್ರ ಹರಿಯುವಂತೆ ಮಾಡುತ್ತಿದ್ದರು. ಕಾಲುವೆಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಒಂದು ಕೂಳಿಯ ನೀರು, ಎರಡು ಕೂಳಿಯ ನೀರು ಎಂದು ನಿರ್ಧರಿಸುತ್ತಿದ್ದರು. ಹಾಗೆ ರಾತ್ರಿ ಜೋಡಿಸಿ ಬಂದ ಕೂಳಿಯಲ್ಲಿ ಬೆಳಿಗ್ಗೆ ಸೇರುಗಟ್ಟಲೆ ಸಣ್ಣ ಸಣ್ಣ ಮೀನುಗಳು ಸಂಗ್ರಹವಾಗಿರುತ್ತಿದ್ದವು (ಒಮ್ಮೊಮ್ಮೆ ಕೇರೆಹಾವು, ಕಪ್ಪೆ ಮೊದಲಾದವುಗಳೂ ಸೇರಿಕೊಳ್ಳುತ್ತಿದ್ದವು). ಕೆಲವೊಮ್ಮೆ ಕೆಲವು ಉತ್ಸಾಹಿಗಳು ಕೂಳಿ ಹಾಕಿದ ಜಾಗದಲ್ಲೇ ಗುಡಾರ ಹಾಕಿಕೊಂಡು ಕೂಳಿಯೊಳಗೆ ಹಾವು ಬಂದಿದೆಯೇ ಎಂದು ನೋಡಿ ಬಂದಿದ್ದರೆ ಅದನ್ನು ಹೊರಗೆ ಹಾಕಿ ಮತ್ತೆ ಕೂಳಿ ಜೋಡಿಸುತ್ತಿದ್ದರು. ಏಕೆಂದರೆ ಹಾವು ಕೂಳಿಯೊಳಗೆ ಬಂದ ಮೀನೆಲ್ಲವನ್ನೂ ಕಬಳಿಸುತ್ತದೆ ಎಂದು! ಹರಿಯುವ ನೀರಿಗೆ ವಿರುದ್ಧ ದಿಕ್ಕಿನಲ್ಲಿ ಮೀನು ಚಲಿಸುತ್ತವೆ ಎಂದು ಆಗ ನಮಗೆ ಗೊತ್ತಿರಲಿಲ್ಲ. ನೀರು ಹರಿಯುವ ದಿಕ್ಕಿಗೇ ತೆರೆದ ಬಾಯಿಯನ್ನು ಮಾಡಿ ಜೋಡಿಸುತ್ತಿದ್ದ ಕೂಳಿಯೊಳಗೆ ಮೀನು ಹೇಗೆ ಹೋಗುತ್ತವೆ? ಎಂದು ತುಂಬಾ ತಲೆ ಕೆಡಿಸಿಕೊಳ್ಳುತ್ತಿದ್ದೆವು.
ದೊಡ್ಡ ಕೂಳಿಯಲ್ಲಿ ಮೀನು ಹಿಡಿಯುವುದು
ಬಿದಿರು ಕಡ್ಡಿಗಳಲ್ಲಿ ಮಾಡಿರುವ ಇದನ್ನು ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯಲು ಇದನ್ನು ಬಳಸುತ್ತಾರೆ. ಸಿಹಿನೀರಿನಲ್ಲಿ ಅಂದರೆ ಕೆರೆಗಳಲ್ಲಿ ಮೀನು ಸಾಕಿದ ಗ್ರಾಮದವರು ವರ್ಷಕ್ಕೊಮ್ಮೆ ಮೀನು ಹಿಡಿಯುವ ಕಾರ್ಯಕ್ರಮ (ಮೀನು ಪಾಚುವರಿ) ಇಟ್ಟುಕೊಂಡಿರುತ್ತಾರೆ. ನೀರು ಕೂಳಿಗೆ ಅನುಕೂಲಕರ ಹಂತಕ್ಕೆ ಬಂದಾಗ ಈ ಕಾರ್ಯಕ್ರಮವಿರುತ್ತದೆ. ಅಲ್ಲಿಯವರೆಗೆ ಯಾರಾದರೂ ಕದ್ದು ಮೀನು ಹಿಡಿಯುವುದನ್ನು ತಪ್ಪಿಸಲು ಕಾವಲು ಕಾಯುವ ಪದ್ಧತಿಯೂ ಇದೆ. ಈ ವಾರ್ಷಿಕ ಕಾರ್ಯಕ್ರಮದಲ್ಲಿ ಒಂದು ಕೂಳಿಗೆ ಇಷ್ಟು ಎಂದು ಪ್ರವೇಶ ಧನ ತೆಗೆದುಕೊಂಡು ಒಂದೇ ಬಾರಿ ಎಲ್ಲಾ ಮೀನುಗಾರರನ್ನು ಕೆರೆಯೊಳಗೆ ಬಿಡಲಾಗುತ್ತದೆ. ಐನೂರು ಆರನೂರು ಜನ ಒಟ್ಟಿಗೇ ಕೂಳಿಗಳನ್ನು ಮೇಲೆತ್ತಿ ಹಿಡಿದು ಕೂಗುತ್ತಾ ಕೆರೆಯೊಳಗೆ ನುಗ್ಗುವ ಆ ದೃಶ್ಯ ಒಂದು ರೀತಿಯ ರಣೋತ್ಸಾಹವನ್ನು ನೆನಪಿಸುತ್ತದೆ. ದೊಡ್ಡಕೂಳಿಯನ್ನು ಅಲ್ಲಲ್ಲಿ ಹಾಕುತ್ತಾ ಮೀನು ಅದರೊಳಗೆ ಬಂದರೆ ಅದನ್ನು ಕೈಯಲ್ಲಿ ಹಿಡಿದು, ಸೊಂಟದಲ್ಲಿ ದಬ್ಬಳ(ದೊಡ್ಡಸೂಜಿ)ದೊಂದಿಗೆ ನೇತಾಡುವ ದಾರಕ್ಕೆ ಪೋಣಿಸಿಕೊಂಡು ಮುಂದುವರೆಯುತ್ತಾರೆ. ಅಂದು ಕೆಲವು ಮೀನುಗಾರರು ನೂರಾರು ಮೀನುಗಳನ್ನು ಹಿಡಿಯುತ್ತಾರೆ. ದಾರದಲ್ಲಿ ಪೋಣಿಸಿದ ಮೀನನ್ನು ಕದಿಯುವವರೂ ಇರುತ್ತಾರೆ! ಅದಕ್ಕೆ ಕೆಲವರು ಸಹಾಯಕರನ್ನು ಕರೆತಂದು, ಆಗಾಗ ಆರೇಳು ಮೀನುಗಳಾದ ತಕ್ಷಣ ದಾರವನ್ನು ಬದಲಾಯಿಸಿಕೊಳ್ಳುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಊರಿನ ಮಕ್ಕಳು ನೀರೊಳಗೆ ಇಳಿದು ಕೈಗೆ ಸಿಕ್ಕ ಸಣ್ಣ ಪುಟ್ಟ ಮೀನುಗಳನ್ನು ಬಾಚಿಕೊಳ್ಳುತ್ತಾರೆ. ಅವರಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ನಾವು ಮಿಡ್ಲಿಸ್ಕೂಲಿನಲ್ಲಿದ್ದಾಗ ಅಲ್ಲಿನ ಮೇಷ್ಟರುಗಳು ನಮ್ಮನ್ನು ಕಳುಹಿಸಿ ಸಾಕಷ್ಟು ಮೀನನ್ನು ಹಿಡಿಸಿಕೊಂಡು ಸಂಜೆ ಮನೆಗೆ ಕೊಂಡೊಯ್ದಿದ್ದರು! (ಮಿಡ್ಲಿಸ್ಖೂಲಿನ ಮೇಷ್ಟರ ಮೀನು ಕೋಳಿ ಶಿಕಾರಿಯ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುತ್ತೇನೆ)
ತಟ್ಟೋಬಲೆಯಲ್ಲಿ ಮೀನು ಹಿಡಿಯುವುದು
ತ್ರಿಕೋನಾಕಾರದ ತೆರೆದ ಬಾಯಿಯುಳ್ಳ ಹಾಗೂ ಆ ಬಾಯಿಯಿಂದ ಹಿಂದಕ್ಕೆ ಬಾಲದಂತೆ ಕಾಣುವ ಬಲೆಯುಳ್ಳ ಒಂದು ಉಪಕರಣ ತಟ್ಟೋಬಲೆ. ಸುಮಾರು ಮಂಡಿಯುದ್ದದ ನೀರಿರುವ ಕಡೆ ಮೀನುಗಳಿದ್ದರೆ ಈ ಉಪಕರಣವನ್ನು ಬಳಸುತ್ತಾರೆ. ಮೀನು ಗುಂಡಿಗಳಲ್ಲಿ ಇವೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು, ಕ್ಯಾಕರಿಸಿ ಅದರೊಳಗೆ ಉಗಿಯುವುದು, ಅಥವಾ ಮನೆಯಿಂದ ತಂದ ರೊಟ್ಟಿ ಚೂರು ಹಾಕುವುದು ಮಾಡುತ್ತಾರೆ. ಅದನ್ನು ತಿನ್ನಲು ಬರುವ ಮೀನುಗಳ ಸಂಖ್ಯೆಯನ್ನು ಆಧರಿಸಿ ಮೀನು ಹಿಡಿಯಲು ನಿರ್ಧರಿಸುತ್ತಾರೆ. ಈ ತಟ್ಟೋಬಲೆಯ ಜೊತೆಗೆ ಇರುವ ಇನ್ನೊಂದು ಉಪಕರಣವೆಂದರೆ ಮಾರುದ್ದದ ಒಂದು ಕೋಲು. ಕೆಲವೊಮ್ಮೆ ಅದಕ್ಕೆ ಸ್ವಲ್ಪ ಬಟ್ಟೆ ಕಟ್ಟಿರುತ್ತಾರೆ. ತಟ್ಟೋ ಬಲೆಯನ್ನು ಎಡಗೈಯಲ್ಲಿ ನೀರೊಳೊಗಿನ ನೆಲಕ್ಕೆ ಒತ್ತಿ ಹಿಡಿದು, ಬಲಗೈಯಲ್ಲಿ ಕೋಲಿನಿಂದ, ತನಗೆ ಎಟಕುವಷ್ಟು ಅಗಲದ ನೀರಿನೊಳಗೆ ಮುಳುಗಿಸಿ ಮೀನುಗಳನ್ನು ಬೆದರಿಸಿಕೊಂಡು ಬರುತ್ತಾರೆ. ಆಗ ಬೆದರಿದ ಮೀನುಗಳು ತಟ್ಟೋಬಲೆಯೊಳಗೆ ಗುಂಪುಗುಂಪಾಗಿ ಬರುತ್ತವೆ. ತಕ್ಷಣ ಎಡಗೈಯಿಂದ ತಟ್ಟೋಬಲೆಯನ್ನು ಮೇಲಕ್ಕೆ ಎತ್ತುತ್ತಾರೆ. ಅದರೊಳಗೆ ಸಿಕ್ಕಿಹಾಕಿಕೊಂಡ ಮೀನುಗಳು ಬಲೆಯ ಹಿಂಬದಿಗೆ ಸರಿದು ಸಂಗ್ರಹಗೊಳ್ಳುತ್ತವೆ! ಹತ್ತಾರು ಬಾರಿ ಈ ರೀತಿ ಮಾಡಿದ ಮೇಲೆ ಮೇಲೆ ಬಂದು ಮೀನುಗಳನ್ನು ಮತ್ತೊಂದು ಚೀಲಕ್ಕೋ ಪಾತ್ರೆಗೋ ಸುರಿದುಕೊಳ್ಳುತ್ತಾರೆ.
ಗಾಳ ಹಾಕಿ ಮೀನು ಹಿಡಿಯುವುದು
ಇದರ ಬಗ್ಗೆ ಹೆಚ್ಚನದೇನನನು ಹೇಳುವ ಅವಶ್ಯಕತೆಯಿಲ್ಲ. ಕೊಕ್ಕೆಯಂತಹ ಲೋಹದ ಮೊಳೆಗೆ ದಾರಕಟ್ಟಿ, ಅದನ್ನು ಒಂದು ಬಲವಾದ ಕೋಲಿಗೆ ಕಟ್ಟಿಕೊಂಡು, ಗಾಳಕ್ಕೆ ತಿಂಡಿಯನ್ನೋ, ಚಿಕ್ಕ ಮೀನನ್ನೋ, ಎರೆಹುಳುವನ್ನೋ ಸಿಕ್ಕಿಸಿ ಮೀನಿರುವ ಕೊಳ ಅಥವಾ ಗುಂಡಿಯಲ್ಲಿ ಹಾಕಿ ಕುಳಿತರೆ ಮೀನುಗಳು ತಿಂಡಿಯ ಆಸೆಗೆ ಬಂದು ಗಾಳವನ್ನು ಕಚ್ಚಿಕೊಳ್ಳುತ್ತವೆ. ಅದರೊಳಗೆ ಹಿಮ್ಮುಖವಾಗಿರುವ ಕೊಕ್ಕೆ ಮೀನಿನ ಅಂಗುಳಕ್ಕೆ ಚುಚ್ಚಿಕೊಳ್ಳುವುದರಿಂದ ಅದನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಜಗ್ಗಾಟ, ದಾರದ ನಡುವೆ ಕಟ್ಟಿರುವ ಬೆಂಡು ಮುಳುಗಿ, ಮೀನು ಕಚ್ಚಿದೆ ಎಂದು ಗಾಳ ಹಿಡಿದು ಕುಳಿತವನಿಗೆ ತಿಳಿದು ಅದನ್ನು ಮೇಲಕ್ಕೆ ಎಳೆದುಕೊಂಡು ಬಿಡಿಸಿ ಮಡಕೆಯೊಳಗೆ ಸಂಗ್ರಹಿಸಿಕೊಳ್ಳುತ್ತಾನೆ. ತೇಜಸ್ವಿಯವರ ಸಾಹಿತ್ಯ ಓದಿದವರಿಗೆ ಈ ಬಗೆಯ ಮೀನು ಹಿಡಿಯುವ ತಂತ್ರಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಅಂಡಮಾನಿಗೆ ಪ್ರವಾಸ ಹೋಗುವ ತೇಜಸ್ವಿ ರಾಮದಾಸ್ ಮೊದಲಾದವರು ಅಲ್ಲಿಗೆ ಕೊಂಡಯ್ಯವುದು ಈ ರೀತಿ ಮೀನು ಹಿಡಿಯುವ ಗಾಳ, ರಾಡು ರೀಲುಗಳನ್ನು!
ಬಲೆ ಹಾಕಿ ಮೀನು ಹಿಡಿಯುವುದು
ಇದರಲ್ಲಿ ಹಲವಾರು ವಿಧಾನಗಳಿವೆ. ಬೀಸೋ ಬಲೆ ಎಂಬುದರಲ್ಲಿ, ಬಲೆಯನ್ನು ಬೀಸಿ ನೀರಿನಲ್ಲಿ ಹಾಕುತ್ತಾರೆ. ನಿಧಾನವಾಗಿ ಬಲೆಯನ್ನು ನೆರಿಗೆ ನೆರಿಗೆ ಮಾಡಿಕೊಂಡು ಮೇಲಕ್ಕೆ ಎಳದೆಕೊಳ್ಳುತ್ತಾರೆ. ಬಲೆಯೊಳಗೆ ಸಿಕ್ಕಿ ಹಾಕಿಕೊಂಡು ಚಡಪಡಿಸುವ ಮೀನುಗಳನ್ನು ಆರಿಸಿ ಮಡಕೆಯಲ್ಲಿ ತುಂಬಿಕೊಳ್ಳುತ್ತಾರೆ.
ಇನ್ನೊಂದು ವಿಧಾನದಲ್ಲಿ ರಾತ್ರಿವೇಳೆ ಬಲೆಯನ್ನು ಕೆರೆಯೊಳಗೆ ಬೀಸಿ. ಅದರ ಎರಡು ತುದಿಗಳನ್ನು ಬಲವಾದ ಬಡಿಗೆಗಳಿಗೆ ಕಟ್ಟಿ ಬಂದಿರುತ್ತಾರೆ. ಬೆಳಿಗ್ಗೆ ಹೋಗಿ ಬಲೆ ಮೇಲೆತ್ತಿ ಸಂಗ್ರಹಗೊಂಡ ಮೀನುಗಳನ್ನು ಹಿಡಿದುಕೊಳ್ಳುತ್ತಾರೆ.
ಒಮ್ಮೆ ನಮ್ಮ ಮಿಡ್ಲಿಸ್ಕೂಲಿನ ಮೇಷ್ಟರೊಬ್ಬರಿಗೆ ಮೀನು ತಿನ್ನಬೇಕೆನ್ನಿಸಿ, ‘ಎಲ್ಲಿಯಾದ್ರು ಮೀನು ಹಿಡ್ಕೊಂಬರೋಕೆ ಆಗುತ್ತಾ’ ಎಂದರು. ನಾವು ನಾಲ್ಕು ಜನ 'ಅದಕ್ಕೇನಂತೆ ಸಾರ್ ನಾವು ಹಿಡ್ಕೊಂಡು ಬರುತ್ತೇವೆ' ಎಂದು ಹೊರಟೆವು. ಆಗ ಅದರಲ್ಲಿದ್ದ ಬುದ್ಧಿವಂತನೊಬ್ಬ ಅವರ ಮನೆಯಲ್ಲಿದ್ದ ಒಂದು ಹಳೆಯ ಪಂಚೆಯನ್ನು ತಂದ. ಸೊಂಟದಾಳದ ನೀರಿನಲ್ಲಿ ನಿಂತ ನಾವು ಅದರ ನಾಲ್ಕ ಮೂಲೆಗಳನ್ನು ಒಬ್ಬೊಬ್ಬರು ಹಿಡಿದು, ನೀರಿನಲ್ಲಿ ಮುಳುಗಿಸಿ ಮೇಲೆತ್ತುತ್ತಿದ್ದೆವು. ಮೀನು ನಮ್ಮ ಕಣ್ಣಿಗೆ ಕಾಣುತ್ತಿದ್ದರು, ಪಂಚೆ ಮೇಲೆ ಬರುವಷ್ಟರಲ್ಲಿ ನೀರಿನೊಂದಿಗೆ ಮೀನುಗಳೂ ಹೊರಟುಹೋಗುತ್ತಿದ್ದವು. ಪಂಚೆಯಲ್ಲಿ ನೀರು ಸರಾಗವಾಗಿ ಹರಿದುಹೋಗದಿರುವುದೇ ಆದಕ್ಕೆ ಕಾರಣ ಎಂಬುದು ನಮಗೆ ಹೇಗೆ ತಿಳಿಯಬೇಕು. ಖುಷಿಯಿಂದ ಮೂರ್ನಾಲ್ಕು ಬಾರಿ ಹಾಗೆ ಮಾಡಿದೆವು. ಐದನೆಯ ಬಾರಿ ಪಂಚೆ ಮಧ್ಯಕ್ಕೆ ಹರಿದುಹೋಯಿತು! ಹತ್ತಿರದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳಾಮಂಡಲಿ ಹೋ ಎಂದು ನಕ್ಕು ನಮ್ಮನ್ನು ಗೇಲಿ ಮಾಡಿದ್ದರಿಂದ ನಾವು ಜಾಗ ಖಾಲಿ ಮಾಡಬೇಕಾಯಿತು.
ಗುಂಡಿ ಉಗ್ಗುವುದು ಅಥವಾ ಗುಂಡಿ ಕದಡುವುದು
ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೆರೆ ಕುಂಟೆಗಳ ನೀರು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆಗ ಕೆರೆಯಂಗಳದಲ್ಲಿ ಅಲ್ಲಲ್ಲಿ ಗುಂಡುಂಡಿಗಳು ಕಾಣಿಸಿಕೊಂಡು ಮುಖ್ಯ ಕೆರೆಯ ನೀರಿನಿಂದ ಪ್ರತ್ಯೇಕವಾಗಿ ಸಣ್ಣಪುಟ್ಟ ಕುಂಟೆಗಳಾಗುತ್ತವೆ. ಅವುಗಳ ನೀರನ್ನು ಖಾಲಿಮಾಡಿ ಮೀನು ಹಿಡಿಯುವ ಪದ್ಧತಿಗೆ ಗುಂಡಿ ಉಗ್ಗುವುದು ಎನ್ನುತ್ತಾರೆ. ಯಾವುದಾದರೂ ಪಾತ್ರೆ ಅಥವಾ ಮಂಕರಿ ಅಥವಾ ಬುಟ್ಟಿಗೆ ಎರಡೂ ಬದಿಗೆ ಎರಡು ಹಗ್ಗಗಳನ್ನು ಕಟ್ಟಿ, ಇಬ್ಬರು ನಿಂತುಕೊಂಡು, ಅದರಿಂದ ನೀರನ್ನು ಮೊಗೆದು ಮೊಗೆದು ಗುಂಡಿಯ ಆಚೆಗೆ ಸುರಿಯುತ್ತಾರೆ. ಸರದಿಯ ಮೇಲೆ ಇಬ್ಬಿಬ್ಬರು ಈ ರೀತಿ ಮಾಡುವುದರಿಂದ ಹೆಚ್ಚು ಸುಸ್ತು ಆಗುವುದಿಲ್ಲ. ನೀರು ಕಡಿಮೆಯಾಗಿ ಮೀನುಗಳು ಮೇಲೆ ಮೇಲೆ ನೆಗೆಯಲು ಪ್ರಾರಂಭಿಸುತ್ತವೆ. ಆಗ ನೀರು ಖಾಲಿಮಾಡುವುದನ್ನು ಬಿಟ್ಟು, ಗುಂಡಿಯಲ್ಲಿ ಕೆಸರೆಬ್ಬಿಸಲಾಗುತ್ತದೆ. (ನೀರು ತೀರಾ ಕಡಿಮೆಯಿರುವ ಗುಂಡಿಗಳಾದರೆ, ನೇರವಾಗಿಯೇ ಕೆಸರೆಬ್ಬಿಸಲಾಗುತ್ತದೆ. ಇದನ್ನು ಗುಂಡಿ ಕದಡುವುದು ಎನ್ನುತ್ತಾರೆ.) ಕೆಸರು ದಟ್ಟವಾಗುತ್ತಿದ್ದಂತೆ ಮೀನುಗಳು ಉಸಿರಾಡುವುದಕ್ಕಾಗಿ ಕೆಸರಿನ ಮೇಲಕ್ಕೆ ತಲೆಯೆತ್ತಿ ಬಾಯಿ ಬಿಡಲಾರಂಬಿಸುತ್ತವೆ. ಆಗ ಅವೆಲ್ಲವನ್ನೂ ಹಿಡಿದು ದಡದಲ್ಲಿರುವವರ ಕೈಗೆ ಕೊಡಲಾಗುತ್ತದೆ.
ಅಂದು ಪಂಚೆಯಲ್ಲಿ ಮೀನು ಹಿಡಿಯುವ ನಮ್ಮ ಸಾಹಸ ವಿಫಲವಾಗಿ, ಮಹಿಳಾ ಮಂಡಳಿಯಿಂದ ಅವಮಾನವಾದಾಗ ನಾವೂ ಹುಡುಕಿ ಹೊರಟಿದ್ದು ಇಂತಹ ಗುಂಡಿಗಳನ್ನೇ! ಒಂದೆರಡು ಗುಂಡಿಗಳನ್ನು ಹುಡುಕಿ, ಕೆಮ್ಮಿ ಕ್ಯಾಕರಿಸಿ ಉಗಿದು ಅವುಗಳಲ್ಲಿ ಮೀನುಗಳಿವೆಯೇ ಎಂದು ಪರೀಕ್ಷಿಸಿದ್ದಾಯಿತು. ಸಣ್ಣ ಸಣ್ಣ ಮೀನುಗಳು ಹಿಂಡುಹಿಂಡಾಗಿ ಬಂದು ಎಂಜಲಿಗೆ ಮುತ್ತಿಗೆ ಹಾಕಿದ್ದನ್ನು ಕಂಡು ದಬದಬ ನೀರೊಳಗೆ ಬಿದ್ದು ಕೆಸರೆಬ್ಬಿಸಿದ್ದೂ ಆಯಿತು. ಆದರೆ ಒಂದೂ ಮೀನು ಬಾಯಿ ಬಿಟ್ಟು ಮೇಲೆ ಬಂದು ನಮ್ಮನ್ನು ಹಿಡಿದುಕೊಳ್ಳಿ ಎನ್ನಲಿಲ್ಲ! ಆಗ ಆ ದಾರಿಯಾಗಿ ಬಂದ ಹಿರಿಯರೊಬ್ಬರು ‘ಅಯ್ಯೋ ದಡ್ಡಮುಂಡೇವೆ! ಹಾಗೆ ಹಿಂಡು ಹಿಂಡಾಗಿ ಬಂದುದ್ದು ಮೀನುಗಳಲ್ಲ; ಕಪ್ಪೆಗೊದ್ದಗಳು! ಅವು ಕೆಸರೆಬ್ಬಿಸಿದರೂ ಮೇಲೆ ಬರಲ್ಲ’ ಎಂದು ಉಗಿದು ಉಪ್ಪಿನಕಾಯಿ ಹಾಕಿದ್ದಲ್ಲದೆ, ‘ನಿಮ್ಮ ಮನೆಗಳಿಗೆ ಹೇಳಿ ಬಿಡಿಸುತ್ತೇನೆ, ಲಾತ. ಬನ್ನಿ’ ಎಂದು ಭಯೋತ್ಪಾದಕರಾಗಿದ್ದರು!
ಭರ್ಜಿಯಲ್ಲಿ ಹೊಡೆಯುವುದು
ನನ್ನ ಸ್ನೇಹಿತನೊಬ್ಬನಿದ್ದ. ಆತನ ಹೆಸರು ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿದೆ, ‘ಮೊಲದ ಮಂಜ’ ಎಂದು. ಈತನ ಮೀನು ಭೇಟೆಯ ಬಗ್ಗೆ ನಾನಾಗಲೇ ಬರೆದಿದ್ದೇನೆ. ಎದೆಮಟ್ಟದ ನೀರಿನಲ್ಲಿ, ರಾತ್ರಿವೇಳೆಯಲ್ಲಿ ಹಣೆಗೆ ಬ್ಯಾಟರೀ ಕೊಟ್ಟಿಕೊಂಡು, ಬಲಗೈಯಲ್ಲಿ ಭರ್ಜಿ ಹಿಡಿದು ನಿಂತುಕೊಂಡು, ಬ್ಯಾಟರಿಯ ಬೆಳಕಿಗೆ ಬರುವ ದೊಡ್ಡ ಮೀನುಗಳಿಗೆ ಗುರಿ ಹಿಡಿದು ಚುಚ್ಚಬೇಕು. ಈ ಕೆಲಸಕ್ಕೆ ರಾತ್ರಿ ಮತ್ತು ನೀರಿನ ಭಯವಂತೂ ಇರುವ ಹಾಗೇ ಇಲ್ಲ; ಜೊತೆಗೆ ಒಳ್ಳೆಯ ಗುರಿಕಾರರಾಗಿರಬೇಕು, ಸಹನೆಯೂ ಇರಬೇಕು.
ಕೆಲವರು ಭರ್ಜಿಯ ಬದಲು ಬಲವಾದ ದೊಣ್ಣೆಯಿಂದಲೇ ತೇಲುತ್ತಾ ಬಂದ ಮೀನಿಗೆ ಒಡೆಯುತ್ತಾರೆ ಎಂದು ಹಾಗೂ ಕೋವಿಯಿಂದಲೂ ಮೀನು ಒಡೆಯುತ್ತಾರೆ ಎಂದು ಕೇಳಿದ್ದೇನೆ. ಇವೆರಡನ್ನೂ ನಾನು ನೋಡಿಲ್ಲ.
ಭಂಗಿಸೊಪ್ಪು ಅಥವಾ ಹೊಗೆಸೊಪ್ಪು ಕದಡುವುದು
ಇದೊಂದು ಸುಲಭವಾದ ಆದರೆ ಸ್ವಲ್ಪ ದುಬಾರಿಯಾದ ವಿಧಾನ. ಸಣ್ಣಪುಟ್ಟ ಗುಂಡಿಗಳಲ್ಲಿ ಮೀನುಗಳಿರುವುದು ಖಚಿತವಾದರೆ ಸ್ವಲ್ಪ ಭಂಗಿ ಸೊಪ್ಪು ಅಥವಾ ಹೊಗೆಸೊಪ್ಪನ್ನು ಚೆನ್ನಾಗಿ ಕೈಯಿಂದ ತಿಕ್ಕಿ ನೀರಿನಲ್ಲಿ ಕದಡಿ ಬಿಡುವುದು. ಅದರ ಘಾಟಿಗೆ ಮೀನುಗಳು ಮತ್ತೇರಿ ತೇಲಲಾರಂಬಿಸುತ್ತವೆ. ಆದರೆ ಭಂಗಿಸೊಪ್ಪು ದುಬಾರಿ ಎಂಬ ಮಾತಿರಲಿ ಅದನ್ನು ಬಳಸಿದರೆ ಜೈಲು ಕಾಣಬೇಕಾಗುತ್ತದೆ ಎಂಬುದು ಆಗಿನ ತಿಳುವಳಿಕೆಯಾಗಿತ್ತು. ಹೊಗೆ ಸೊಪ್ಪು ಸಾಮಾನ್ಯವಾಗಿ ಹಳ್ಳಿಯ ಎಲ್ಲರ ಮೆನಯಲ್ಲೂ ಸಿಗುವ ವಸ್ತುವಾದರೂ ಅಂದಿನ ಕಾಲಕ್ಕೆ ಅತ್ಯಂತ ದುಬಾರಿಯಾದ ವಸ್ತುವಾಗಿತ್ತು.
ಕಾರೆಕಾಯಿ ಕದಡುವುದು
ಭಂಗಿಸೊಪ್ಪು ಅಥವಾ ಹೊಗೆಸೊಪ್ಪಿಗೆ ಪರ್ಯಾಯವಾಗಿ ಕಾರೆಕಾಯಿಯನ್ನು ಬಳಸುವ ಈ ವಿಧಾನ ಸುಲಭವಾದದ್ದು ಆದರೂ ಅಪಾಯಕಾರಿಯಾದದ್ದು. ಕಾರೇಕಾಯಿಗಳಲ್ಲಿ ಒಂದು ಜಾತಿಯ ಕಾಯಿಗಳಿಗೆ ಸ್ವಲ್ಪ ವಿಷ ಜಾಸ್ತಿ, ಕಾರೇ ಹಣ್ಣುಗಳನ್ನು ತಿನ್ನುತ್ತಾರಾದರೂ ಈ ಜಾತಿಯ ಹಣ್ಣುಗಳನ್ನು ಯಾರೂ ತಿನ್ನುವುದಿಲ್ಲ. ಇವನ್ನು ಸಣ್ಣಪುಟ್ಟ ದನಕರುಗಳು ತಿಂದರೆ ಸತ್ತೇ ಹೋಗುತ್ತವೆ. ಇಂತಹ ಕಾರೇಕಾಯಿಗಳನ್ನು ಜಜ್ಜಿ ನೀರಿನಲ್ಲಿ ಕದಡಿದರೆ ಕ್ಷಣಾರ್ಧದಲ್ಲಿ ಮೀನುಗಳು ಪ್ರಜ್ಞಾಶೂನ್ಯವಾಗಿ ತೇಲಲಾರಂಭಿಸುತ್ತವೆ. ನೀರು ಕಪ್ಪಾಗುತ್ತದೆ.ಇದು ತಾಕಿದ ಮೈಕೈಗಳಿಗೆ ತುರಿಕೆಯಾಗುತ್ತದೆ. ಮೀನು ಬಾಚಿಕೊಳ್ಳುವ ಅವಸರದಲ್ಲಿ ನೀರನ್ನು ಬಾಯಿಗೆ ಸೋಕಿಸುವಂತಿಲ್ಲ. ಮೈಯಲ್ಲಿ ತೆರೆದ ಗಾಯಗಳಿದ್ದರೂ ಅಪಾಯ. ಮೀನುಹಿಡಿದ ಮೇಲೆ ಗುಂಡಿಯ ನೀರನ್ನು ಕುಡಿದರೆ ದನಕರುಗಳು ಸತ್ತೇ ಹೋಗುತ್ತವೆ. ಗುಂಡಿಯಿಂದ ಸಹಿಸಲು ಅಸಾಧ್ಯವಾದ ವಾಸನೆ ಬರುತ್ತದೆ. ಆದರೂ ಅದನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿ ಮೀನು ಹಿಡಿಯುತ್ತಾರೆ.
ಡೈನಾಮೆಂಟ್ ಸಿಡಿಸುವುದು
ಕುಂದೂರು ಮಠದಲ್ಲಿ ಕಲ್ಲು ಹೊಡೆಯುವವರು ಈ ವಿಧಾನ ಬಳಸುವುದನ್ನು ಕಂಡಿದ್ದೇನೆ. ಅವರು ಕಲ್ಲು ಸಿಡಿಸಲು ತಂದಿದ್ದ ಡೈನಾಮೆಂಟ್ಟನ್ನು ಕಡಿಮೆ ಪ್ರಮಾಣದಲ್ಲಿ ಮೀನುಗಳಿರುವ ಬಾವಿ ಅಥವಾ ಗುಂಡಿಯಲ್ಲಿ ನೀರೊಳಗೆ ಸಿಡಿಸುತ್ತಿದ್ದರು. ಮೀನುಗಳು ಸತ್ತು ತೇಲುತ್ತಿದ್ದವು. ಅವರು ಅವನ್ನು ಧಾರಾಳವಾಗಿ ಹಿಡಿದು ತಿನ್ನುತ್ತಿದ್ದರು. ಆದರೆ ಅವು ವಿಷಯುಕ್ತ ಎನ್ನುವ ಮಾತುಗಳೂ ಕೇಳಿಬರುತ್ತಿದ್ದವು.
ಸಧ್ಯಕ್ಕೆ ಇಷ್ಟೇ ನನಗೆ ನೆನಪಾಗುತ್ತಿರುವುದು.
ಈಗ ಪಂಪನ ಸರದಿ!
ಕೃಷ್ಣಾರ್ಜುನರು ತಮ್ಮ ಅಂತಃಪುರದ ಸ್ತ್ರೀಯರೊಡನೆ ಯಮುನಾ ನದಿಯಲ್ಲಿ ಜಲಕ್ರೀಡೆಯಾಡುವ ಸನ್ನಿವೇಶ ಬರುತ್ತದೆ. ಪಂಪ ಅದನ್ನು ಸ್ವಾರಸ್ಯಕರವಾಗಿಯೂ ಶೃಂಗಾರರಸಾತ್ಮಕವಾಗಿಯೂ ವರ್ಣಿಸಿದ್ದಾನೆ (ಅದೇ ಒಂದು ಪ್ರತ್ಯೇಖ ಲೇಖನವಾಗುತ್ತದೆ; ಬಿಡಿ).
ಅದರಲ್ಲಿ ಬರುವ ಒಂದು ಪದ್ಯ ಹೀಗಿದೆ.
ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ ಮುಡಿಯ ಪೂವಿನ ರಜದಿಂ|
ವಾಸಿಸಿದ ನೀರ ಕದಡಿಂ
ದಾಸವದೊಳ್ ಸೊರ್ಕಿ ಬೆಂಡುಮಗುೞ್ದುವು ಮೀಂಗಳ್||
ಆ ಎಲ್ಲಾ ಸ್ತ್ರೀ ಸಮೂಹವು ಮೈಯಿಗೆ ಬಳಿದುಕೊಂಡಿದ್ದ ಕಸ್ತೂರಿತೈಲದಿಂದಲೂ, ಮುಡಿದುಕೊಂಡಿದ್ದ ಹೂವುಗಳ ಪರಾಗದಿಂದಲೂ ಸಷ್ಟಿಯಾದ (ಸು)ವಾಸನೆ ಮಡುವಿನ ನೀರಿನಲ್ಲಿ ಸೇರಿಕೊಂಡು ಕದಡಲ್ಪಟ್ಟಿತ್ತು. ಆ ವಾಸನೆಯನ್ನು ಸೇವಿಸಿದ ಮೀನುಗಳು ಸೊಕ್ಕಿ ಅಂದರೆ ಪ್ರಜ್ಞೆ ಕಳೆದುಕೊಂಡು ನೀರಿನಲ್ಲಿ ಬೆಂಡು ತೇಲುವಂತೆ ತೇಲಿದವಂತೆ!
ಆಹಾ! ಮೀನು ಹಿಡಿಯುವುದು ಎಷ್ಟೊಂದು ಸುಲಭ! ಮೈಗೆಲ್ಲಾ ಸುಗಂಧದ್ರವ್ಯಗಳನ್ನು (ಆಧುನಿಕ ತರೇವರಿ ಸೆಂಟ್ ಆದರೂ ಪರಾವಾಗಿಲ್ಲ!!!) ಪೂಸಿಕೊಂಡು ನೀರಿಗಿಳಿದರೆ ಸಾಕು, ಅಲ್ಲವೆ!?
ವಿಶೇಷ ಎಚ್ಚರಿಕೆ: ಪಂಪನಲ್ಲಿ ಪ್ರಜ್ಞೆ ಮಾತ್ರ ಕಳೆದುಕೊಂಡು ತೇಲುತ್ತಿದ್ದ ಮಿನುಗಳು ಆಧುನಿಕ ಸೆಂಟ್ ಸೇವಿಸಿದರೆ ಸತ್ತೇ ಹೋಗುತ್ತವೆ!)