Friday, January 30, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 1

ನಾನೇಕೆ ನನ್ನ ಹೈಸ್ಕೂಲು ದಿನಗಳ ಬಗ್ಗೆ ಬರೆಯಬೇಕು?
ನನ್ನ ಹೈಸ್ಕೂಲು ಬದುಕಿನ ಮೂರು ವರ್ಷಗಳು, ಇದುವರೆಗಿನ ನನ್ನ ಜೀವಮಾನದಲ್ಲೇ ಅತ್ಯಂತ ಸ್ವಾರಸ್ಯಕರವಾದ ಘಟನೆಗಳಿಂದ ಕೂಡಿದವುಗಳಾಗಿವೆ. ಗ್ರಾಮೀಣ ಪ್ರದೇಶವೊಂದರ ಸರ್ಕಾರಿ ಶಾಲೆ, ಅಲ್ಲಿದ್ದ ಮೇಷ್ಟ್ರುಗಳು, ಅವರ ಸೋಮಾರಿತನ, ಒಂದಂಕಿ ದಾಟದ ಫಲಿತಾಂಶ, ಹಾಸ್ಟೆಲ್ ಜೀವನ ಎಲ್ಲವೂ ನನ್ನ ಮನೋಭಿತ್ತಿಯಲ್ಲಿ ಅಚ್ಚಳಿಯದೆ ದಾಖಲಾಗಿಬಿಟ್ಟಿವೆ. ನಾನು ಎಂಟನೇ ತರಗತಿಗೆ ಕುಂದೂರುಮಠದಲ್ಲಿದ್ದ ಸರ್ಕಾರಿ ಹೈಸ್ಕೂಲಿಗೆ ದಾಖಲಾದ ವರ್ಷವೇ ಅಲ್ಲಿಗೆ ಜೂನಿಯರ್ ಕಾಲೇಜು ಬಂದಿತ್ತು. ಅದರ ಹಿಂದಿನ ಎರಡು ವರ್ಷಗಳಲ್ಲಿ ಶ್ರೀ ವೆಂಕಟಪ್ಪ ಎಂಬ ಹೆಡ್ಮಾಸ್ಟರ್ ಮಾಡಿದ್ದ ಸಾಧನೆ ಅದಕ್ಕೆ ಕಾರಣ. ವರ್ಷದಲ್ಲಿ ಎರಡು ಮೂರು ಜನ ಮಾತ್ರ ಹತ್ತನೇ ತರಗತಿ ಪಾಸಾಗುತ್ತಿದ್ದ ಹಾಗೂ ಅವ್ಯವಸ್ಥೆಯ ಗೂಡಾಗಿದ್ದ ಆ ಹೈಸ್ಕೂಲಿಗೆ ಹೆಡ್ಮಾಸ್ಟರಾಗಿ ಬಂದ ವೆಂಕಟಪ್ಪನವರು ಕೇವಲ ಎರಡೇ ವರ್ಷದಲ್ಲಿ ಫಲಿತಾಂಶವನ್ನು ಶೇಕಡಾ ಐವತ್ತಕ್ಕೆ ಏರಿಸಿದ್ದರು. ಅದರ ಫಲವಾಗಿ ಆಗ ಮಂತ್ರಿಗಳಾಗಿದ್ದ ದೇವೇಗೌಡರು ಸ್ವತಃ ಆಸಕ್ತಿ ವಹಿಸಿ ಜೂನಿಯರ್ ಕಾಲೇಜು ಕೊಡಿಸಿದ್ದರು. ‘ಜಿ.ಹೆಚ್.ಎಸ್. ಕುಂದೂರುಮಠ’ ಇದ್ದಿದ್ದು ‘ಜಿ.ಜೆ.ಸಿ. ಕುಂದೂರುಮಠ’ ಆಗಿತ್ತು. ದುರದೃಷ್ಟವೆಂದರೆ, ಹೈಸ್ಕೂಲ್ ಹೆಡ್ಮಾಸ್ಟರಾಗಿದ್ದ ವೆಂಕಟಪ್ಪನವರಿಗೆ ಸಾಮರ್ಥ್ಯವಿದ್ದರೂ ಜೂನಿಯರ್ (ಸಂಯುಕ್ತ) ಕಾಲೇಜು ಪ್ರಾಂಶುಪಾಲರಾಗುವಷ್ಟು ಕ್ವಾಲಿಫಿಕೇಷನ್ ಇರಲಿಲ್ಲ. ಅವರು ಬೇರೆಡೆಗೆ ವರ್ಗವಾಗಿದ್ದರಿಂದ, ಹೊಸದಾಗಿ ಬಂದ ಪ್ರಾಂಶುಪಾಲರ ಹೊಣೆಗೇಡಿತನದಿಂದಾಗಿ ಮುಂದಿನ ಮೂರೇ ವರ್ಷದಲ್ಲಿ, ಅಂದರೆ ನನ್ನ ಹೈಸ್ಕೂಲು ಶಿಕ್ಷಣ ಮುಗಿಯುವಷ್ಟರಲ್ಲಿ ಆ ಕಾಲೇಜು ಮುಚ್ಚಿ ಹೋಯಿತು. ಮತ್ತೆ ‘ಜಿ.ಹೆಚ್.ಎಸ್. ಕುಂದೂರುಮಠ’ವೇ ಆಯಿತು!
ಆಡಳಿತದಲ್ಲಿ ಬಿಗಿ ಇಲ್ಲದೆ, ಸ್ವತಃ ದರ್ಬಾರ್ ಮಾಡುತ್ತಿದ್ದ ಕೆಲವು ಮೇಷ್ಟ್ರುಗಳಿಂದಾಗಿ ವಿದ್ಯಾರ್ಥಿಗಳೆಲ್ಲರೂ ಬಿಟ್ಟು ಮೇಯಿಸಿದ ಕುದುರೆಗಳಾಗಿದ್ದರು. ನಾವಂತೂ ಹಾಸ್ಟೆಲ್ಲಿನಲ್ಲಿದ್ದುದರಿಂದ ತಂದೆ-ತಾಯಿಯರ ಭಯವೂ ನಮಗಿರಲಿಲ್ಲ. ನಾನು ಹತ್ತನೇ ತರಗತಿಗೆ ಬರುವಷ್ಟರಲ್ಲಿ, ನನ್ನ ಅದೃಷ್ಟಕ್ಕೆ, ಹಾಸ್ಟೆಲ್ಲಿಗೆ ವಾರ್ಡನ್ ಆಗಿ ಶ್ರೀ ಭೀಮಪ್ಪ ಕರಿಯಪ್ಪ ಜಟಗೊಂಡ ಎಂಬುವವರು ಬಂದಿದ್ದರು. ಅವರೊಬ್ಬರು ಮಾತ್ರ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ವತಃ ತಾವೇ ಪಾಠ ಮಾಡುತ್ತ, ಬುದ್ಧಿ ಹೇಳುತ್ತಾ ಸ್ವಲ್ಪ ಮಟ್ಟಿಗೆ ಶಿಸ್ತನ್ನೂ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಜೂನಿಯರ್ ಕಾಲೇಜು ಬಂದ ಮರುವರ್ಷದಿಂದಲೇ ಹತ್ತನೇ ತರಗತಿ ಫಲಿತಾಂಶ ಅಧೋಗತಿಗಿಳಿಯಲಾರಂಭಿಸಿತ್ತು. ವೆಂಕಟಪ್ಪನವರು ವರ್ಗವಾದ ವರ್ಷ ಮೂರು, ಅದರ ಮುಂದಿನ ವರ್ಷ ಇಬ್ಬರು ಮಾತ್ರ ಉತ್ತೀರ್ಣರಾಗಿದ್ದರು. ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಸುತ್ತಮುತ್ತಲಿನ ಊರಿನವರು ಮುಂದಿನ ವರ್ಷ ಪಾಸಾಗುವವರು ಒಬ್ಬರೇ ಎಂದು ತಮಾಷೆ ಮಾಡುತ್ತಿದ್ದರು. ನಮ್ಮ ತರಗತಿಯ ಕೆಲವರು ಟೀ.ಸಿ. ತಗೆದುಕೊಂಡು ಬೇರೆಡೆಗೆ ಹೊರಟು ಹೋಗಿದ್ದರು. ಸ್ವತಃ ಅಲ್ಲಿದ್ದ ಒಬ್ಬ ಮೇಷ್ಟ್ರೇ ತಮ್ಮ ಮಗಳನ್ನು ಬೇರೆ ಸ್ಕೂಲಿಗೆ ಸೇರಿಸಿದ್ದರು. ನಮ್ಮ ಅಣ್ಣನೂ ಆ ವರ್ಷ ಫೇಲಾಗಿದ್ದ. ಆದರೂ ನಮ್ಮ ಮನೆಯವರು ನನ್ನನ್ನು ಮಾತ್ರ ಬೇರೆ ಸ್ಕೂಲಿಗೆ ಸೇರಿಸುವ ಯೋಚನೆ ಮಾಡಲಿಲ್ಲ. ಕಾರಣ ನಮ್ಮ ಆಗಿನ ಆರ್ಥಿಕ ಪರಿಸ್ಥಿತಿ. ‘ಉಚಿತ ಹಾಸ್ಟೆಲ್ ಇದೆ. ಹೇಗೋ ನೀನು ಕಷ್ಟಪಟ್ಟು ಓದಿದರೆ ಪಾಸಾಗುತ್ತೀಯಾ ಇಲ್ಲ ಫೇಲಾಗುತ್ತೀಯಾ’ ಎಂದು ಬೇರೆ ಸ್ಕೂಲಿಗೆ ಸೇರಿಸುವ ವಿಷಯವನ್ನು ಬಿಟ್ಟೇಬಿಟ್ಟರು. ಇದೇ ಸಮಸ್ಯೆ ಎಷ್ಟೋ ವಿದ್ಯಾರ್ಥಿಗಳಿಗಿತ್ತು. ಹಾಗಾಗಿ ಕೊನೆಗೂ ಹತ್ತನೇ ತರಗತಿಯಲ್ಲಿ ನಲವತ್ತೈದು ಮಂದಿ ಉಳಿದಿದ್ದೆವು.
ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಿಗೆ ಮೇಷ್ಟ್ರುಗಳೇ ಇರಲಿಲ್ಲ. ಹಿಂದಿಯಂತು ನಮಗೆ ಮಿಡ್ಲಿಸ್ಕೂಲ್‌ನಲ್ಲೂ ಇರಲಿಲ್ಲ. ಹಾಗಾಗಿ ಅದರ ಲಿಪಿಗಳನ್ನು ಬರೆಯುವುದಿರಲಿ ಓದುವುದಕ್ಕೂ ಒಂದಕ್ಷರ ಬರುತ್ತಿರಲಿಲ್ಲ. ಆ ವರ್ಷದ ಕೊನೆಯ ಹೊತ್ತಿಗೆ ಪಿ.ಟಿ.ಮೇಷ್ಟ್ರಾಗಿ ಬಂದ ಉಮೇಶ್ ಎಂಬುವವರು, ಹಿಂದಿ ಪ್ರಶ್ನೆ ಪತ್ರಿಕೆಯನ್ನು ನೋಡಿಕೊಂಡು ಅದನ್ನೇ ಉಲ್ಟಾಪಲ್ಟಾ ಮಾಡಿ ಹೇಗೆ ಬರೆಯಬೇಕೆಂದು ತೋರಿಸಿಕೊಟ್ಟಿದ್ದರು. ಐವತ್ತು ಅಂಕಗಳ ಹಿಂದಿ ಪತ್ರಿಕೆಯಲ್ಲಿ ನಾವು ಗಳಿಸಬೇಕಾಗಿದ್ದು ಹದಿಮೂರು ಅಂಕಗಳು ಮಾತ್ರ. ಅದಕ್ಕೆ ನಮಗೆ ಒದಗಿದ ತರಬೇತಿ ಪ್ರಶ್ನೆಪತ್ರಿಕೆಯನ್ನೇ ಉಲ್ಟಾಪಲ್ಟಾ ಮಾಡಿ ಬರೆಯುವಷ್ಟು ಮಾತ್ರ!
ಇನ್ನು ಇಂಗ್ಲೀಷ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಮೊದಲ ಶತ್ರು. ಸಮಾಜ ಪತ್ರಿಕೆಯನ್ನು ಮಾಡುತ್ತಿದ್ದ ಇಬ್ಬರು ಮೇಷ್ಟ್ರುಗಳು ಇಂಗ್ಲೀಷಿನ ಡಿಟೈಲ್ ಮತ್ತು ನಾನ್‌ಡಿಟೈಲ್ ಪೇಪರ್‌ಗಳನ್ನು ಪರಸ್ಪರ ಹಂಚಿಕೊಂಡಿದ್ದರು. ಅದರಲ್ಲೂ ನಾನ್‌ಡಿಟೈಲ್ ಪೇಪರ್ ತಗೆದುಕೊಳ್ಳುತ್ತಿದ್ದವರು ಮಧ್ಯದಲ್ಲೇ ವರ್ಗವಾಗಿ ಹೋದರು. ಆಗ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಲ್ಲದಿದ್ದರಿಂದ ಅದರ ಉಪನ್ಯಾಸಕರು ಯಾವ ಕೆಲಸವೂ ಇರದೆ ಸುಮ್ಮನೆ ಬೆಲ್ಲು-ಬಿಲ್ಲು ನೋಡಿಕೊಂಡು ಕಾಲ ಕಳೆಯುತ್ತಿದ್ದರು. ಅವರು ಇಂಗ್ಲೀಷ್ ಪಾಠ ಮಾಡಬಹುದಿತ್ತು. ನಾವು ವಿದ್ಯಾರ್ಥಿಗಳೇ ಕೇಳಿಕೊಂಡ ಮೇಲೆ ಅವರು ಒಪ್ಪಿಕೊಂಡರೂ, ಈ ಸಮಾಜದ ಮೇಷ್ಟ್ರು ಒಪ್ಪಲೇ ಇಲ್ಲ! ‘ಅದು ನನ್ನ ಕೆಲಸ ನಾನೇ ಮಾಡುತ್ತೇನೆ’ ಎಂದು ಅಡ್ಡರಾಗ ಹಾಡಿಯೇಬಿಟ್ಟರು. ಅಂತೂ ನಮಗೆ ಇಂಗ್ಲೀಷ್ ಪಾಠ ಕೇಳುವ ಅದೃಷ್ಟ ಬರಲೇಯಿಲ್ಲ! ನಾನು ಇಂಗ್ಲೀಷ್ ಭಾಷೆಯ ಒಂದು ಗೈಡನ್ನು ಕೊಂಡು ಪರೀಕ್ಷೆಗೆ ಸ್ದಿದ್ಧನಾಗಿದ್ದೆ. ನನ್ನ ವಿದ್ಯಾರ್ಥಿ ಬದುಕಿನ ಮೊದಲ ಮತ್ತು ಕೊನೆಯ ಗೈಡ್ ಅದಾಗಿತ್ತು!
ಕುಂದೂರುಮಠದ ಹೈಸ್ಕೂಲಿನಲ್ಲಿ ಏನೇ ಅವ್ಯವಸ್ಥೆಯಿರಲಿ, ವ್ಯವಸ್ಥೆ ಎಷ್ಟೇ ರೋಗಗ್ರಸ್ಥವಾಗಿರಲಿ, ಪರೀಕ್ಷೆಯಂತೂ ಬಂದೇಬಿಟ್ಟಿತ್ತು. ಅಲ್ಲಿಂದ ಹತ್ತು ಕಿಲೋಮೀಟರ್ ದೂರದಲ್ಲಿದ್ದ ಉದಯಪುರ ಹೈಸ್ಕೂಲಿನಲ್ಲಿ ಪರೀಕ್ಷಾ ಕೇಂದ್ರ. ಇದ್ದ ನಲವತ್ತೈದರಲ್ಲಿ ನಲವತ್ತೆರಡು ಜನ ಪರೀಕ್ಷೆ ತಗೆದುಕೊಂಡಿದ್ದೆವು. ಪ್ರತೀವರ್ಷ ಅಲ್ಲಿಗೆ ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳು ಊಟ ವಸತಿಗೆಲ್ಲಾ ಪರದಾಡಬೇಕಾಗುತ್ತಿತ್ತು. ನಮ್ಮ ಅದೃಷ್ಟಕ್ಕೆ ಅಲ್ಲಿಯೂ ಒಂದು ಓ.ಬಿ.ಸಿ.ಹಾಸ್ಟೆಲ್ ಇದ್ದು, ಅದರ ವಾರ್ಡನ್ ಆಗಿದ್ದ ಸಿ.ಎನ್. ಅಂಗಡಿ ಎಂಬುವವರು ನಮ್ಮ ಹಾಸ್ಟೆಲಿನ ವಾರ್ಡನ್ ಜಟಗೊಂಡ ಅವರಿಗೆ ಸ್ನೇಹಿತರಾಗಿದ್ದರು. ಇಬ್ಬರೂ ಬೆಳಗಾವಿ ಜಿಲ್ಲೆಯವರೇ ಆಗಿದ್ದರು. ಆದ್ದರಿಂದ ಇಬ್ಬರೂ ಪರಸ್ಪರ ಮಾತನಾಡಿ ಹಾಸ್ಟೆಲ್ಲಿನಲ್ಲಿದ್ದ ಹದಿಮೂರು ಜನ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಏರ್ಪಡಿಸಿದ್ದರು. ಜೊತೆಗೆ, ನಮ್ಮ ಸಹಾಯಕ್ಕಿರಲಿ ಎಂದು ಇಬ್ಬರು ಎಂಟನೇ ತರಗತಿಯ ಹುಡುಗರನ್ನೂ ನಮ್ಮ ಜೊತೆ ಕಳುಹಿಸಿದ್ದರು. ಅಂತೂ ಪರೀಕ್ಷೆ ಬರೆದಿದ್ದೂ ಆಯಿತು.
ಆ ವರ್ಷ ಫಲಿತಾಂಶಗಳು ಪ್ರಕಟವಾಗಿದ್ದು ತುಂಬಾ ತಡವಾಗಿ. ನಮಗಂತೂ, ಅಂದರೆ ಸಪ್ಲಿಮೆಂಟರಿ ಪರೀಕ್ಷೆ ತಗೆದುಕೊಂಡಿದ್ದ ನನ್ನಣ್ಣನಿಗು ಹಾಗೂ ನನಗು ಎರಡು ದಿನಕ್ಕೊಮ್ಮೆ ಸ್ಕೂಲಿಗೆ ಅಲೆಯುವುದೇ ಕೆಲಸವಾಗಿತ್ತು. ಕೊನೆಗೆ ನಾನೊಂದು ದಿನ ಅವನೊಂದು ದಿನ ಎಂದು ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ನಮ್ಮ ಫಲಿತಾಂಶ ನಮಗೆ ಗೊತ್ತಾಗಿದ್ದು ಮಾತ್ರ ಒಂದು ವಿಚಿತ್ರ ಸನ್ನಿವೇಶದಲ್ಲಿ.
ಗುರುವಾರದ ಗಂಡಸಿ ಸಂತೆ ನಮ್ಮ ಸುತ್ತಮುತ್ತಲಿನವರಿಗೆ ಅತ್ಯಂತ ಪ್ರಮುಖವಾದುದ್ದು. ಬುಧುವಾರ ರಾತ್ರಿಯೇ ಕಾಯಿ, ರಾಗಿ ಮಾರಬೇಕಾದವರು ಸಂತೆ ಸೇರಿ, ಬೆಳಗಿನ ಜಾವವೇ ವ್ಯಾಪಾರ ಮುಗಿಸಿಬಿಡುತ್ತಾರೆ. ಅಂದು ಬುಧವಾರ ರೇಡಿಯೋದಲ್ಲಿ ‘ನಾಳೆ ರಾಜ್ಯಾದ್ಯಂತ ಹೈಸ್ಕೂಲ್‌ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ’ ಎಂಬ ಸುದ್ದಿ ಬಂದಿತ್ತು. ಆದರೂ ನಮ್ಮ ತಂದೆ ನನ್ನ ದೊಡ್ಡಣ್ಣನ ಜೊತೆಯಲ್ಲಿ ಸಂತೆಗೆ ಹೋಗಿಬರಲು ಹೇಳಿದ್ದರು. ನಾನು ‘ರಿಸಲ್ಟ್ ಬರುತ್ತದೆ ನಾನು ಹೋಗುವುದಿಲ್ಲ’ ಅಂದರೆ, ‘ನಿಮ್ಮ ಸ್ಕೂಲಿನಲ್ಲಿ ರಿಸಲ್ಟ್ ಹಾಕುವುದೇ ಹನ್ನೊಂದು ಗಂಟೆಯ ಮೇಲೆ. ಅಷ್ಟೊತ್ತಿಗೆ ಕಾಯಿ ಕೊಟ್ಟು ಬಂದುಬಿಡಿ’ ಎಂದು ಹೊರಡಿಸಿಬಿಟ್ಟಿದ್ದರು. ರಾತ್ರಿಯೇ ಗಾಡಿ ಮೇಲೆ ಪ್ರಯಾಣ ಮಾಡಿ ಸಂತೆಮಾಳದಲ್ಲಿದ್ದ ಒಂದು ‘ಟೆಂಟ್’ ಹೋಟೆಲಿನಲ್ಲಿ ಬಿಡಾರ ಹೂಡಿದೆವು. ಇಡೀ ರಾತ್ರಿ ನಿದ್ದೆಯಿಲ್ಲದೆ ‘ನನ್ನ ರಿಸಲ್ಟ್ ಪಾಸಾದರೆ ಏನಾಗಬಹುದು, ಫೇಲಾದರೆ ಏನಾಗಬಹುದು’ ಎಂಬ ಲೆಕ್ಕಾಚಾರ ಮಾಡುತ್ತಿದ್ದೆ. ಒಂದರೆಗಳಿಗೆಯೂ ನಾನವತ್ತು ನಿದ್ದೆ ಮಾಡಲಿಲ್ಲ!
ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ನಮ್ಮ ಕಾಯಿಗಳು ಮಾರಾಟವಾಗಿ ದುಡ್ಡು ಕೈಗೆ ಬಂತು. ತಕ್ಷಣ ನಾನು ಗಾಡಿಯನ್ನು, ನನ್ನಣ್ಣನನ್ನು ಬಿಟ್ಟು ಸಿಕ್ಕಿದ ಲಾರಿ ಹತ್ತಿ ಊರಿಗೆ ಬಂದೆ. ಇನ್ನು ಲಾರಿ ಇಳಿಯುತ್ತಿರುವಾಗಲೇ ಎದುರಿಗೆ ಪೋಸ್ಟ್‌ಮ್ಯಾನ್ ತಮ್ಮಯ್ಯ ಸಿಕ್ಕಬೇಕೆ! ನನ್ನ ಅವಸರವನ್ನು ಬಲ್ಲ ಆತ ‘ಲೇ ನಿಮ್ಮ ರಿಸಲ್ಟ್ ನೆನ್ನೇನೆ ನೋಡಿದ್ದೆ. ಒಬ್ಬನೇ ಪಾಸಾಗಿರೋದು’ ಎಂದು ಛೇಡಿಸಿದ. ‘ಅದು ಯಾರು?’ ಎಂಬುದಕ್ಕೆ ಮಾತ್ರ ಆತನ ಬಳಿ ಉತ್ತರವಿರಲಿಲ್ಲ. ಆತ ಛೇಡಿಸಿದ್ದನೋ? ಇಲ್ಲವೋ? ಅಲ್ಲಿಂದ ಹತ್ತೇ ನಿಮಿಷದಲ್ಲಿ ನಾಗೇಶ್ ಎಂಬುವವರು ಸಿಕ್ಕು ‘ಏನಪ್ಪ ಹೊಡಿದ್ಯಲ್ಲ ಬಂಪರ್. ನಿಮ್ಮ ಸ್ಕೂಲಿನಲ್ಲಿ ನೀನೊಬ್ಬನೇ ಪಾಸಾಗಿರೋದಂತೆ’ ಎಂದರು. ಅಂತೂ ಅದು ನಿಜವಾಗಿತ್ತು. ನನಗೆ ಆಘಾತ, ಆನಂದ ಎಲ್ಲವೂ ಆಯಿತು. ಅದಕ್ಕಿಂತಲೂ ಆಘಾತದ ಸಂಗತಿಯೆಂದರೆ ಉಳಿದ ನಲವತ್ತೊಂದು ಜನ ವಿದ್ಯಾರ್ಥಿಗಳಲ್ಲಿ ಒಬ್ಬನೂ, ಆರರಲ್ಲಿ ಐದು ಪತ್ರಿಕೆಗಳಲ್ಲಿ ಪಾಸಾಗಿರಲಿಲ್ಲ! ಇಬ್ಬರು ಮಾತ್ರ ನಾಲ್ಕು ಪತ್ರಿಕೆಗಳಲ್ಲಿ ಪಾಸಾಗಿದ್ದರು!!
ಹೀಗೆ ತನ್ನ ಅಧೋಮುಖ ಸ್ಥಿತಿಯತ್ತ ಮುಖಮಾಡಿ ನಿಂತಿದ್ದ ಸರ್ಕಾರಿ ಕೃಪಾಫೋಷಿತ ವ್ಯವಸ್ಥೆಯ ಬಗ್ಗೆ, ಸುಮಾರು ಇಪ್ಪತ್ತೈದು ವರ್ಷಗಳ ನಂತರ ತಿರುಗಿ ನೋಡಬೇಕೆನ್ನಿಸಿದೆ. ಆ ಮೂರು ವರ್ಷಗಳ ಅವಧಿಯ ನನ್ನ ಬದುಕನ್ನು ನಾನು ಮತ್ತೆ ಕಾಣಬೇಕೆನ್ನಿಸಿದೆ. ಎಲ್ಲವನ್ನೂ ಒಟ್ಟಿಗೆ ಯಾರಿಗಾದರೂ ಹೇಳಬೇಕೆನ್ನಿಸಿದೆ. ಅಲ್ಲಿ ನಾನು ಕಂಡ ವ್ಯಕ್ತಿಗಳು, ಪರಿಸ್ಥಿತಿ, ಮೇಷ್ಟ್ರುಗಳು, ಅವರುಗಳ ದೊಡ್ಡತನ, ಸೋಗಲಾಡಿತನ, ಅಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆ ಎಂಬ ಅವ್ಯವಸ್ಥೆ ಮೊದಲಾದವನ್ನು ಇಂದು ನನ್ನ ಅನುಭವದ ಹಿನ್ನೆಲೆಯಲ್ಲಿ ಹಿಡಿದಿಡಬೇಕೆನ್ನಿಸಿದೆ.
ಇದು ಆತ್ಮಚರಿತ್ರೆಯಲ್ಲ. ಆತ್ಮದ ಬಗ್ಗೆ ನನಗೆ ನಂಬಿಕೆಯೂ ಇಲ್ಲ! ಜೀವನ ಚರಿತ್ರೆಯೂ ಅಲ್ಲ. ಏಕೆಂದರೆ ಕೇವಲ ಮೂರೇ ವರ್ಷದ ಕಾಲಮಿತಿ ಇದಕ್ಕಿದೆ. ಆದ್ದರಿಂದ ಇದು, ನನ್ನ ಇತಿಹಾಸವನ್ನು ನಾನೇ ಕಂಡುಕೊಳ್ಳುವ, ಇತಿಹಾಸದ ಭಾಗವಾಗಿ ಹೋಗಿರುವ ನನ್ನನ್ನು ಮತ್ತು ಒಂದು ಕಾಲಘಟ್ಟದ ನನ್ನ ಬದುಕನ್ನು ನಾನೇ ಸಂಶೋಧಿಸುವ ಪುಟ್ಟ ಪ್ರಯತ್ನ ಮಾತ್ರ. ಹಾಗೇ ನೋಡಿದರೆ ಎಲ್ಲ ಆತ್ಮಕಥೆಗಳೂ ಜೀವನಚರಿತ್ರೆಗಳೂ ಐತಿಹಾಸಿಕ ಸಂಶೋಧನೆಗಳೇ ಆಗಿರುತ್ತವೆ!

Tuesday, January 27, 2009

ಅಜ್ಜ ಹೇಳಿದ ‘ಹನ್ಮಂತಪ್ಪನ ಕಥೆ’ (೧)


ನಾನು ನನ್ನ ಬಾಲ್ಯವನ್ನು ನನ್ನಜ್ಜ ಹೇಳುತ್ತಿದ್ದ ಕಥೆಗಳನ್ನು ಕೇಳುತ್ತಾ ಕಳೆದವನು. ನೂರಾರು ಕಥೆಗಳನ್ನು ಅಜ್ಜ ನನಗೆ ಹೇಳಿದ್ದರು. ಆದರೆ ಅದರಲ್ಲಿ ನನಗೆ ನೆಪಿರುವ ಕಥೆಗಳ ಸಂಖ್ಯೆ ಎರಡಂಕಿ ದಾಟುವುದಿಲ್ಲವೇನೋ! ಇನ್ನೂ ಐದು ವರ್ಷ ತುಂಬದ
ನನ್ನ ಮಗಳು ಕಥೆ ಹೇಳು ಎಂದು ಪೀಡಿಸುತ್ತಿದ್ದಾಗ ಕೆಲವೊಂದು ಜ್ಞಾಪಕಕ್ಕೆ ಬರುತ್ತಿವೆ. ನೆನಪಿಗೆ
ಬಂದ ಕಥೆಗಳನ್ನೆಲ್ಲಾ ದಾಖಲಿಸಲು ತೀರ್ಮಾನಿಸಿದ್ದೇನೆ. ‘ಅಜ್ಜ ಹೇಳಿದ್ದ ಕಥೆಗಳು’ ಎಂಬ
ಶಿರ್ಷಿಕೆಯಲ್ಲಿ ನೆನಪಾದಾಗ ಬರೆದು ಹಾರಿಬಿಡುತ್ತೇನೆ. ಈ ಕಥೆಗಳು ಎಲ್ಲ
ವಯೋಮಾನದ ಮಕ್ಕಳಿಗೂ ಇಷ್ಟವಾಗುವಂತವುಗಳು. ಆದರೆ
ಅಲ್ಲಿನ ಕೆಲವು ಪದಗಳು ಇಂದು ಬಳಕೆಯಲ್ಲಿಲ್ಲ. ನಗರದ
ಮಕ್ಕಳಿಗಂತೂ ಅವು ಅರ್ಥವಾಗುವುದಿಲ್ಲ. ಅದನ್ನು
ತಿಳಿಸಿ, ಅಗತ್ಯಬಿದ್ದಲ್ಲಿ ಇಂಗ್ಲಿಷ್ ಪದಗಳನ್ನೇ
ಬಳಸಿ ಮಕ್ಕಳಿಗೆ ಹೇಳಿದರೆ ಖಂಡಿತಾ
ಎಂಜಾಯ್ ಮಾಡುತ್ತವೆ.
ಜನಪದ & ಜಾನಪದ
ಬೆಳೆದು ಬಂದಿದ್ದೇ
ಹಾಗೆ.

ಒಂದು ಊರು. ಆ ಊರಿನ ಪಕ್ಕ ಒಂದು ಹೊಳೆ. ಅಲ್ಲೊಂದು ಅರಳಿಮರ. ಒಂದಿನ ರಾತ್ರಿ ಬರಬಾರದ ಮಳೆ ಬಂದು, ಬೀಸಬಾರದ ಗಾಳಿ ಬೀಸಿ ಆ ಅರಳಿ ಮರದ ಎಲೆ ಎಲ್ಲಾ ಉದುರೋದ್ವು. ಅದರ ಮಾರನೆ ದಿನ ಎಲ್ಲಿಂದ್ಲೊ ಬಂದ ಒಂದು ಬೆಳ್ಳಕ್ಕಿ ಅರಳಿ ಮರನ ಕೇಳ್ತು, ‘ಅರಳಿ ಮರ, ಆರಳಿ ಮರ. ನಿನ್ನ ಎಲೆ ಎಲ್ಲಾ ಯಾಕೆ ಉದುರೊದ್ವು?’ ಅಂತ. ಅದಕ್ಕೆ ಅರಳಿಮರ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ನನ್ನ ಎಲೆ ಎಲ್ಲಾ ಉದುರೋದ್ವು.
ಈಗ ನಿನ್ನ ಪುಕ್ಕ ಎಲ್ಲಾ ಉದುರೋಗ್ಲಿ’ ಅಂತು.


ಬೆಳ್ಳಕ್ಕಿ ಅಳ್ತಾ ನದಿದಡದಲ್ಲಿ ಬಂದು ಕುಳ್ತಿತ್ತು. ಆಗ ಆ ಊರಿನ ಹನುಮಂತಪ್ಪನ ಗುಡಿ ಬಸವ ನದಿಗೆ ನೀರು ಕುಡಿಯೊಕೆ ಅಂತ ಬಂತು. ಅಳ್ತಾ ಕೂತಿದ್ದ ಬೆಳ್ಳಕ್ಕಿನ ಕಂಡು ‘ಯಾಕ್ ಬೆಳ್ಳಕ್ಕಿ ಅಳ್ತಾಯಿದ್ದಿ, ನಿನ್ನ ಪುಕ್ಕ ಎಲ್ಲ ಯಾಕ್ ಉದುರೋದೊ?’ ಅಂತು. ಅದಕ್ಕೆ ಬೆಳ್ಳಕ್ಕಿ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿದ್ವು.
ಈಗ ನಿನ್ನ ಕೊಂಬು ಮುರ್ದೋಗ್ಲಿ’ ಅಂತು.


ಬಸವ ನೀರು ಕುಡ್ದು ಊರ್ಕಡೆಗೆ ಹೋಗ್ತಾಯಿತ್ತು. ದಾರಿಲಿ ಗುದ್ಲಿ ಇಡ್ಕಂಡು ತೋಟುಕ್ಕೊಂಟಿದ್ದ ಊರಿನ ಗೌಡ ಸಿಕ್ಕ. ಬಸವಣ್ಣನ ಕಂಡು ‘ಯಾಕ್ ಬಸವಣ್ಣ ನಿನ್ನ ಕೋಡು ಮುರ್ದೋಗೈತೆ’ ಅಂದ. ಅದಕ್ಕೆ ಬಸವಣ್ಣ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿ,
ಬಸವಣ್ಣನ ಕೊಂಬು ಮುರ್ದೋಯ್ತು.
ಈಗ ಗೌಡನ ಅಂಡಿಗೆ ಗುದ್ಲಿ ಅಂಟ್ಕೊಳ್ಳಿ’ ಅಂತು.


ಗೌಡ ಮನಿಗೆ ವಾಪಸ್ಸು ಬಂದ. ಅದನ್ಕಂಡು ಗೌಡ್ತಿ ‘ಅಯ್ಯೊ, ನಿನ್ನಂಡಿಗೆ ಗುದ್ಲಿಯಾಕ್ ಅಂಟ್ಕಂಡೈತೆ’ ಅಂದು ಗುದ್ಲಿನ ಕೀಳಕ್ಕೆ ಕೈ ಹಾಕಿದ್ಲು. ಅದಕ್ಕೆ ಗೌಡ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿ,
ಬಸವಣ್ಣನ ಕೊಂಬು ಮುರ್ದು,
ಗೌಡನ ಅಂಡಿಗೆ ಗುದ್ಲಿ ಅಂಟ್ಕಂತು.
ಈಗ ನಿನ್ನ ಕೈಯೆ ಮುರ್ದೋಗ್ಲಿ’ ಅಂದ.


ಪಾಪ ಗೌಡ್ತಿ ಹೊರ್ಗೆಲ್ಲು ಹೋಗ್ದೆ ಒಳಗೇ ಇದ್ಲು. ಗೌಡನ ಮನೆಗೆ ಕಸಗುಡ್ಸಾಕೆ ಬರೊ ಹೊಲ್ತಿ ಗೌಡತಿ ಅವಸ್ಥೆ ಕಂಡು, ‘ಯಾಕ್ ಗೌಡ್ತಿ ಇಂಗೆ’ ಅಂದ್ಲು. ಅದಕ್ಕೆ ಗೌಡ್ತಿ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿ,
ಬಸವಣ್ಣನ ಕೊಂಬು ಮುರ್ದು,
ಗೌಡನ ಅಂಡಿಗೆ ಗುದ್ಲಿ ಅಂಟ್ಕಂಡು,
ಗೌಡ್ತಿ ಕೈ ಮುರ್ದೋಯ್ತು.
ಈಗ ಹೊಲ್ತಿ ತಿಕ್ಕೆ ಬರ್ಲು ಹೊಕ್ಕಳ್ಳಿ’ ಅಂದ್ಲು.


ಹೊಲ್ತಿ ಮನಿಗೆ ಹೋಗ್ತಾ ಇರುವಾಗ ದಾರಿಲಿ, ದೇವ್ರ ಅಬ್ಷೇಕಕ್ಕೆ ಚೆಂಬಲ್ಲಿ ನೀರು ತಗಂಡೋಗ್ತಿದ್ದ ಹನುಮಂತಪ್ಪನ ಗುಡಿ ಪೂಜಾರಿ ನೋಡ್ದ. ‘ಯಾಕಮ್ಮ, ನಿನ್ನ ತಿಕ್ಕೆ ಬರ್ಲು ಹೊಕ್ಕೊಂತು?’ ಅಂದ. ಅದಕ್ಕೆ ಹೊಲ್ತಿ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿ,
ಬಸವಣ್ಣನ ಕೊಂಬು ಮುರ್ದು,
ಗೌಡನ ಅಂಡಿಗೆ ಗುದ್ಲಿ ಅಂಟ್ಕಂಡು,
ಗೌಡ್ತಿ ಕೈ ಮುರ್ದೋಗಿ,
ಹೊಲ್ತಿ ತಿಕ್ಕೆ ಬರ್ಲು ಹೊಕ್ಕತ್ತು.
ಈಗ ಪೂಜಾರಪ್ಪನ ಸೊಂಟಕ್ಕೆ ಚೆಂಬೊಕ್ಕೊಳ್ಳಿ’ ಅಂದ್ಲು.


ಪಾಪ ಪೂಜಾರಪ್ಪ ಗುಡಿಗೆ ಬಂದು, ಎಡ್ಗೈಲಿ ಚೆಂಬಿಂದ ನೀರು ತಕ್ಕೊಂಡು, ಬಲ್ಗೈಲಿ ದೇವ್ರ ಮೇಲೆ ಹಾಕ್ತಾಯಿದ್ದ. ಅದನ್ನ ಕಂಡು ಹನ್ಮಂತಪ್ಪನಿಗೆ ಕೋಪಬಂದು ‘ಯಾಕಯ್ಯ ಪೂಜಾರಿ, ನಿನ್ನ ಸೊಂಟಕ್ಕೆ ಚೆಂಬು ಹೊಕ್ಕೊಂಡೈತೆ?’ ಅಂದ. ಅದಕ್ಕೆ ಪೂಜಾರಿ,


‘ಏನಂದ್ರೆ ಏನೇಳ್ಳಿ,
ಬರಬಾರದ ಮಳೆ ಬಂದು,
ಬೀಸಬಾರದ ಗಾಳಿ ಬೀಸಿ,
ಅರಳೀಮರದ ಎಲೆ ಉದುರಿ,
ಬೆಳ್ಳಕ್ಕಿ ಪುಕ್ಕ ಉದ್ರಿ,
ಬಸವಣ್ಣನ ಕೊಂಬು ಮುರ್ದು,
ಗೌಡನ ಅಂಡಿಗೆ ಗುದ್ಲಿ ಅಂಟ್ಕಂಡು,
ಗೌಡ್ತಿ ಕೈ ಮುರ್ದೋಯ್ತು.
ಹೊಲ್ತಿ ತಿಕ್ಕೆ ಬರ್ಲು ಹೊಕ್ಕಂಡು,
ಪೂಜರಪ್ಪನ ಸೊಂಟಕ್ಕೆ ಚೆಂಬು ಹೊಕ್ಕೊಂತು.
ಈಗ ಹನುಮಂತಪ್ಪನ ಮೂತಿ ಮೂಡುಮುಂದಾಗಿ ತಿರಿಕ್ಕೊಳ್ಳಿ’ ಅಂದ.


ಅವತ್ನಿಂದ ಯಾವೂರಲ್ಲೆ ಆಗ್ಲಿ ಹನುಮಂತನ ಗುಡಿ ಬಾಗ್ಲು ಯಾವ ದಿಕ್ಕಿಗಿದ್ರು ಹನುಮಂತಪ್ಪನ ಮೂತಿ ಮಾತ್ರ ಮೂಡುಮುಂದಾಗಿ (ಪೂರ್ವಕ್ಕೆ) ತಿರಿಗಿರುತ್ತೆ.

Tuesday, January 20, 2009

ಮಗಳ ಪಾಠ

ಹುಟ್ಟಿನಿಂದಲೂ
ನಮ್ಮ ಕಣ್ಣಸೀಮೆಯಿಂದ
ಅತ್ತಿತ್ತ ಅಲುಗಾಡದೆ,
ಕಣ್ಬೊಲವ ಮೀರದೆ
ಆಡಿ, ಬೆಳೆದಿದ್ದ ಮಗಳೀಗ
ಬೆಳೆದು ನಿಂತಿದ್ದಾಳೆ, ಎದೆಯೆತ್ತರ.

ಅವಳು
ಕುಳಿತರೆ ನಿಂತರೆ
ಅವಳಮ್ಮನ ಕಣ್ಣಲ್ಲಿ ತಪ್ಪು,
ಬರುವುದು ತಡವಾದರೆ
ನನ್ನ ಕಣ್ಣಲ್ಲಿ ಆತಂಕ.

ಈಗ
ನಮ್ಮಿಷ್ಟ ಅವಳಿಗೆ ಕಷ್ಟ
ಅವಳಿಷ್ಟ ನಮಗೆ ನಷ್ಟ!

‘ಊರಿನಲ್ಲಿ ಬೀದಿನಾಯಿಗಳು ಹೆಚ್ಚಾಗಿವೆ’
ಪತ್ರಿಕೆಯ ಸುದ್ದಿಗೆ
‘ಹೌದು. ಏಕೋ ಇತ್ತೀಚಿಗೆ
ಬೀದಿನಾಯಿಗಳು ಹೆಚ್ಚಾಗಿವೆ’
ಅವಳಮ್ಮನ ಪ್ರತಿಕ್ರಿಯೆ!

ಮೊನ್ನೆ
ಏಕೋ, ಏನೋ
ಮಾತಿಗೆ ಮಾತು ಬೆಳೆದು
ಮೌನವೇ ಕೆಲಸವಾಗಿ
ಅವರವರ ರೂಮು, ಬೆಡ್ಡು ಸೇರಿ
ಮೌನವನೆ ಉಂಡು, ಕುಡಿದು
ಮೌನವನೆ ಹೊದ್ದು ಮಲಗಿಬಿಟ್ಟೆವು.

ಮೌನಕ್ಕೆ
ಮನೆಯ ಮನಸ್ಸಿನ
ಗೋಡೆ ಬಿರಿಯದಿರುತ್ತದೆಯೆ!?

‘ಗುಡ್ ಮಾರ್ನಿಗ್ ಪಪ್ಪಾ’
ಧ್ವನಿಗೆ, ಮುಸುಕು ಸರಿಸಿ ನಗುವಷ್ಟರಲ್ಲಿ
ಬೆಚ್ಚಿಬಿದ್ದಿದ್ದೆ.
ಐದು ವರ್ಷದ ಹಿಂದಿನ ಹಳೆಯ ಡ್ರೆಸ್
ತೊಟ್ಟ ಮಗಳ ಕಂಡು.
ಗುಂಡಿ ಕಿತ್ತಿದೆ, ಹೊಲಿಗೆ ಬಿಚ್ಚಿದೆ
ಬಿಗಿಯಾಗಿದೆ,
ಅವಳ ಗಾತ್ರವ ಗಂಟುಮೂಟೆ ಕಟ್ಟಿದಂತೆ.

ಕಾಫಿ ಹಿಡಿದು ಬಂದ
ಅವಳಮ್ಮನ ಕಣ್ಣಲ್ಲಿ ಬೆಂಕಿ
‘ಇಷ್ಟು ಬಿಗಿಯಾಗಿರುವ ಹಳೆಯ ಡ್ರೆಸ್ ಏಕೆ?’
ಎಂಬ ಪ್ರಶ್ನೆ ಕಿಡಿ!

‘ನನ್ನ ಮೈಬೆಳೆದಂತೆ ಮನಸ್ಸೂ ಬೆಳೆದಿದೆ, ಅಮ್ಮಾ!’ ಮಗಳ ಉತ್ತರ
ಕಾಫಿ ಹೀರುವ ಶಬ್ದ;
ಉಳಿದಂತೆ ಎಲ್ಲವೂ ನಿಶ್ಯಬ್ದ!

Wednesday, January 07, 2009

ಈ ರಾಜ್ಯದಲ್ಲಿ ಏನು ನಡೆಯುತ್ತಿದೆ... ಸಾರ್?

ಮೊನ್ನೆ ಸಚಿವ ಸಂಪುಟದ ಸಭೆ ಮುಗಿಸಿ ಮಾಧ್ಯಮಗಳ ಮುಂದೆ ಬಂದ ಶೋಭಾ ಕರಂದ್ಲಾಜೆ ಅವರು, ಸಂಪುಟ ಸಭೆಯ ನಿರ್ಣಯಗಳನ್ನು ಓದಿ ಹೇಳಿದರು. ಅವುಗಳಲ್ಲಿ ಒಂದು, ‘ದತ್ತಪೀಠ ವಿವಾದದಲ್ಲಿ ಕೆಲವರ ಮೇಲೆ ಹಾಕಾಲಾಗಿದ್ದ ೧೧ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು!’ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ಅದಕ್ಕೆ ಎಂಬಂತೆ ಸಂಪುಟ ಸಂಬೆಯಲ್ಲಿ ತೀರ್ಮಾನಿಸಿ ಅದರ ಹಿಂಬಾಲಕರ ಮೇಲಿದ್ದ ಕೇಸುಗಳನ್ನು ಹಿಂದಕ್ಕೆ ಪಡೆದುಕೊಂಡುಬಿಟ್ಟಿತು! ಹೊಟ್ಟೆ ತುಂಬಿದ ಜನ ಧರ್ಮದ ಹೆಸರಿನಲ್ಲಿ ಮುಗ್ಧ ಜನರ ಮೇಲೆ ದಾಂದಲೆ ನಡೆಸಿದ ಪ್ರಕರಣಗಳನ್ನು ಯಾವ ಆಧಾರದ ಮೇಲೆ ಹಿಂದಕ್ಕೆ ಪಡೆಯಲಾಯಿತೋ ಅದು ಬಿ.ಜೆ.ಪಿಯ ದೇವರುಗಳಿಗೇ ಗೊತ್ತು.
ಇದೇ ಸರ್ಕಾರ ಅಧಿಕಾರಕ್ಕೆ ಬಂದ ತಿಂಗಳೊಳಗೆ ಹಾವೇರಿಯಲ್ಲಿ ರೈತರ ಮೇಲೆ ನಡೆಸಿದ ಗೋಲಿಬಾರ್ ನಡೆಸಿತು. ಆ ಗಲಭೆಯಲ್ಲಿ ೧೦೧ ಜನರ ಮೇಲೆ ೧೫೭ ಪ್ರಕರಣಗಳನ್ನು ಹಾವೇರಿ ಠಾಣೆಯಲ್ಲಿ ದಾಖಲಿಸಲಾಗಿದೆ. ಅವರೆಲ್ಲಾ ತೀರಾ ಸಣ್ಣ ರೈತರು. ಆ ವರ್ಷದ ಗಳಿಕೆ ಆ ವರ್ಷಕ್ಕೆ ಎಂದು ಸರಿದೂಗಿಸಿಕೊಂಡು ಬದುಕುತ್ತಿರುವವರು. ಅಂತಹ ಬಡರೈತರ ಮೇಲಿನ ಮೊಕದ್ದಮೆಗಳು ಮಾತ್ರ ಸರ್ಕಾರದ ನೆನಪಿಗೆ ಬರುತ್ತಿಲ್ಲ. ಅದರೆ ಹೊಟ್ಟೆಪಾಡಿಗಾಗಿ, ರೈತರ ಬದುಕಿಗೆ ಅಗತ್ಯವಾಗಿ ಬೇಕಾಗಿರುವ ರಸಗೊಬ್ಬರಕ್ಕಾಗಿ ಹೋರಾಟ ನಡೆಸಿದ ಬಡರೈತರ ಗೋಳು ಮಾತ್ರ ಯಾವ ದೇವರನ್ನೂ ಮುಟ್ಟುತ್ತಿಲ್ಲ. ಹಾವೇರಿ ರೈತ ಹೋರಾಟದಲ್ಲಿ ಗಾಯಗೊಂಡ ರೈತರ ಮೇಲೂ ಕೇಸು ದಾಖಲಾಗಿವೆ! ಅತ್ತ ಆಸ್ಪತ್ರೆ ಖರ್ಚು, ಇತ್ತ ಕೋರ್ಟಿಗೆ ಅಲೆದಾಟ. ನಿಂತುಹೋಗಿರುವ ಕೃಷಿ ಚಟುವಟಿಕೆಗಳು ಇವು ಯಾವುವೂ ಸರ್ಕಾರಕ್ಕೆ ಏಕೆ ಕಾಣುವುದಿಲ್ಲ? ವಿಧಾನಸೌಧದ ಎದುರು ಹಸಿರು ಟವೆಲ್ ಹಾಕಿಕೊಂಡು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಾತ್ರಕ್ಕೆ ರೈತರ ಬದುಕು ಸುಧಾರಿಸೀತೇ?
ಇನ್ನು ಕರೆಂಟ್ ಮಿನಿಷ್ಟ್ರು ಈಶ್ವರಪ್ಪ ತಮ್ಮ ಮಾತಿನ ಕರೆಂಟನ್ನೇ ಕಳೆದುಕೊಂಡಿದ್ದಾರೆ. ‘ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ, ಬೇಸಿಗೆಯಲ್ಲೂ ಪವರ್ ಕಟ್ ಇಲ್ಲ’ ಎಂದು ಒಂದು ಊರಿನಲ್ಲಿ ಹೇಳಿದರೆ, ಇನ್ನೊಂದು ಊರಿನಲ್ಲಿ, ‘ರಾಜ್ಯದ ವಿದ್ಯುತ್ ಅಭಾವವನ್ನು ನೀಗಿಸಲು ಶಿವನ ಸಮುದ್ರದಲ್ಲಿ ಒಂದು ರುಪಾಯಿಗೆ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಲಾಗುವುದು’ ಎಂಬ ನುಡಿಮುತ್ತುಗಳನ್ನುದುರಿಸುತ್ತಾರೆ. ಅಲ್ಲೆಲ್ಲೋ ಉಷ್ಣು ವಿದ್ಯುತ್ ಸ್ಥಾವರ ಸ್ಥಾಪಿಸಿ ರಾಜ್ಯಕ್ಕೆ ವಿದ್ಯುತ್ ಕೊಡುತ್ತೇವೆ ಎನ್ನುತ್ತಾರೆ! ‘ಅಧಿಕಾರಕ್ಕೆ ಬಂದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ರೈತರ ಪಂಪ್ ಸೆಟ್ಟುಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು’ ಎಂಬ ಆಶ್ವಾಸನೆ ಬಿ.ಜೆ.ಪಿ.ಯ ಪ್ರಣಾಳಿಕೆಯಲ್ಲೇ ಇದೆ. ಆದರೆ ಅದು ಮುಖ್ಯಮಂತ್ರಿಗಳಿಗೆ, ಕರೆಂಟ್ ಮಂತ್ರಿಗಳಿಗೆ ಮರೆತುಹೋಗಿದೆ!
ಅಷ್ಟಕ್ಕೂ ರೈತರ ಬೇಡಿಕೆಗಳು ಸರಳ. ‘ಕೊಡುವಷ್ಟು ಕಾಲ ಗುಣಮಟ್ಟದ ವಿದ್ಯುತ್ ಬೇಕು.’ ‘ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಬೇಕು.’ ಆದರೆ ಇವೆರಡೂ ಬೇಡಿಕೆಗಳು ಆಡಳಿತ ನಡೆಸುವವರ ದಪ್ಪ ಚರ್ಮದಿಂದಾಗಿ ಇಂದು ಸವೆದು ಹೋಗಿವೆ. ಕರೆಂಟ್ ಬಂತು ಎಂದು ಪಂಪ್ ಸೆಟ್ ಆನ್ ಮಾಡಿದರೆ ಮೋಟಾರ್ ಸುಟ್ಟು ಹೋಗುತ್ತದೆ! ಅದೃಷ್ಟಕ್ಕೆ ಆನ್ ಆದರೆ ಮತ್ತೆ ಕೆಲವೇ ನಿಮಿಷಗಳಲ್ಲಿ ಕರೆಂಟ್ ಕಟ್ ಆಗುತ್ತದೆ. ಹೇಗೋ ಬೆಳೆದ ಬೆಳೆ ಮಾರ್ಕೆಟ್ಟಿಗೆ ಬರುವಷ್ಟರಲ್ಲಿ ಬೆಲೆ ಕಳೆದುಕೊಳ್ಳುತ್ತದೆ. ಆದರೆ ಪೈಪೋಟಿಯ ಮೇಲೆ ರೈತರನ್ನು ಸಾಲಗಾರರನ್ನಾಗಿ ಮಾಡುವಲ್ಲಿ ಯಾವ ರಾಜಕೀಯ ಪಕ್ಷಗಳು ಹಿಂದೆ ಬಿದ್ದಿಲ್ಲ. ಸಾಲ, ಪರಿಹಾರ ಮೊದಲಾದವುಗಳನ್ನು ಘೋಷಣೆ ಮಾಡಿ ರೈತರ ಸ್ವಾಭಿಮಾನವನ್ನೇ ನಾಶ ಮಾಡುತ್ತಿದೆಯೇನೋ ಎಂಬ ಅನುಮಾನ ಬಂದರೆ ಆಶ್ಚರ್ಯವೇನೂ ಇಲ್ಲ. ಇದನ್ನು ತಿಳಿಸಿ ಹೇಳುವವರು ನಕಕ್ಸಲರಂತೆ, ರಾಜಕೀಯ ವ್ಯಭಿಚಾರ ಮಾಡುವವರಂತೆ ಈ ಸರ್ಕಾರಕ್ಕೆ ಕಾಣುತ್ತಾರೆ.
ರೈತರಿಗೆ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ಸರ್ಕಾರ ‘ತಾನು ರೈತಪರ’ ಎಒದು ಹೇಳಿಕೊಳ್ಳ್ಳುವಂತೆ ಕೆಲಸ ಮಾಡುತ್ತಿದೆ! ಅದರಲ್ಲಿ ನೂರಾರು ರೈತರನ್ನು ಚೀನಾಪ್ರವಾಸಕ್ಕೆ ಕಳುಹಿಸಿರುವುದು ಅದರ ಸಾಧನೆ. ‘ಹೋದವರಲ್ಲಿ ರೈತರೆಷ್ಟು ಮಂದಿ?’ ಎಂಬ ಪ್ರಶ್ನೆ ಒತ್ತೊಟ್ಟಿಗಿರಲಿ. ಸಾವಿರಾರು ವರ್ಷಗಳಿಂದ ಈ ದೇಶ ಕೃಷಿಯನ್ನೇ ಅವಲಂಬಿಸಿ ಬದುಕಿದೆ. ಆಗ ಯಾವ ದೇಶದ ಕೃಷಿಯನ್ನೂ ಅದು ಅನುಕರಿಸುತ್ತಿರಲಿಲ್ಲ. ಆದರೆ ಈಗ? ನಮ್ಮ ದೇಶದ ಹವಾಮಾನಕ್ಕೆ ಹೊಂದುತ್ತದೋ ಇಲ್ಲವೋ ಬೇರೆ ದೇಶದ ಕೃಷಿ ಪದ್ಧತಿಯನ್ನು ಅನುಸರಿಸಲು ಸರ್ಕಾರವೇ ಪ್ರೋತ್ಸಾಹಿಸುತ್ತದೆ. ಇನ್ನೂ ಒಂದು ರೈತರ ತಂಡವನ್ನು ಅದು ಚೀನಾಕ್ಕೆ ಕಳುಹಿಸುತ್ತದಂತೆ! ರೈತರ ಜೀವನಾಡಿಯಾಗಿರುವ ಕಾಲುವೆಗಳು ಒಡೆಯುವುದರಲ್ಲಿ ಗಿನ್ನೆಸ್ ದಾಖಲೆ ಸೇರುತ್ತಿವೆ. ಇವಾವೂ ದಪ್ಪಚರ್ಮದವರಿಗೆ ಕಾಣುತ್ತಿಲ್ಲ. ತನ್ನ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿದ ಕೆಲವರನ್ನು ತೃಪ್ತಿ ಪಡಿಸಲು ರಾಜಕೀಯ ಪಕ್ಷಗಳಿಗೆ ಹಲವಾರು ಮಾರ್ಗಗಳಿವೆ. ಅದರಲ್ಲಿ ರೈತರ ವಿದೇಶಿ ಪ್ರವಾಸವೂ ಒಂದು!
ಈ ಸರ್ಕಾರದ ವಿರುದ್ಧ ಮಾತನಾಡುವವರು ರಾಜಕೀಯ ಕ್ರಿಮಿನಲ್‌ಗಳಂತೆ ಕಾಣುತ್ತಾರೆ! ಬಳ್ಳಾರಿ ಹತ್ತಿರ ಸ್ಥಾಪಿಸಲು ಉದ್ಧೇಶಿಸಿರುವ ವಿಮಾನ ನಿಲ್ದಾಣದ ಜಾಗದ ಬಗ್ಗೆ ಅಪಸ್ವರ ಎತ್ತಿರುವ ರೈತರು, ಜಾಗ ಬದಲಿಸುವಂತೆ ಗ್ರಾಮಪಂಚಾಯಿತಿಯಲ್ಲಿ ಠರಾವು ಪಾಸು ಮಾಡಿದ್ದಾರೆ. ಅದರೆ ಅದು ಅಲ್ಲಿಯ ಗಣಿದಣಿ ಮಂತ್ರಿಗಳಿಗೆ ರಾಜಕೀಯ ಕ್ರಿಮಿನಲ್‌ಗಳು ಮಾಡುವ ಕೆಲಸದಂತೆ ಕಾಣುತ್ತದೆ. ಜನರಿಂದಲೇ ಆರಿಸಲ್ಪಟ್ಟ ಗ್ರಾಮಪಂಚಾಯಿತಿಯ ಸದಸ್ಯರ ಬಗ್ಗೆ ಇವರಿಗೆ ಯಾವುದೇ ಗೌರವವಿಲ್ಲ. ಈ ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆಲ್ಲಾ ಮಾನನಷ್ಟ ಮೊಕದ್ದಮೆ ಹೂಡುವ ಮಾತುಗಳನ್ನು ಮುಖ್ಯಮಂತ್ರಿಗಳು ಆಡುತ್ತಾರೆ. ಮುಂದೆ ರಾಜ್ಯದಲ್ಲಿ ಮಾನನಷ್ಟ ಮೊಕದ್ದಮೆಗಳನ್ನು ನಡೆಸಲೆಂದೇ ಒಂದು ಪ್ರತ್ಯೇಕ ಇಲಾಖೆ, ಮಂತ್ರಿ ಬೇಕಾಗಬಹುದು!
ಅಂದ ಹಾಗೆ ಇವಾವೂ ಬಿ.ಜೆ.ಪಿ.ಯ ಚುನಾವಣಾ ಪ್ರಣಾಳಿಕೆಯಲ್ಲೇನು ಸೇರಿರಲಿಲ್ಲ! ಈ ಪಕ್ಷಕ್ಕೆ ಹಿಡನ್ ಅಜೆಂಡಾ ಎಂಬುದೊಂದಿದೆ. ಅದರಲ್ಲಿವೆ! ಅದರಲ್ಲಿ ರೈತರ ವಿಷಯಗಳಿಗೆ ಪ್ರಾಶಸ್ತ್ಯವಿಲ್ಲ. ಹಿಡನ್ ಅಜೆಂಡಾವನ್ನು ಕಾರ್ಯರೂಪಕ್ಕೆ ತರಲು ಅದರ ಹಿಂಬಾಲಕರು ತುದಿಗಾಲಿನಲ್ಲಿ ನಿಂತಿರುವಂತೆ ಕಾಣುತ್ತದೆ. ಸರ್ಕಾರದ ಬೆಂಬಲವೂ ಇದೆ. ಮೊನ್ನೆ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಕುಣಿಗಲ್ ಪಟ್ಟಣದ ನಡುವೆ ರಸ್ತೆ ಅಗಲೀಕರಣಕ್ಕೆ ದೇವಾಲಯವೊಂದನ್ನು ತೆರವು ಗೊಳಿಸಲಾಯಿತು. ಆಗ ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಕೇವಲ ಐದಾರು ಕೇಸರಿ ಭಾವುಟಗಳು, ಸಾವಿರಾರು ಜನರನ್ನು ಸೇರಿಸಿ ಸುಮಾರು ಆರು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರು. ಅವರ್‍ಯಾರನ್ನೂ ಬಂಧಿಸುವ ಅಥವಾ ಅವರ ಮೇಲೆ ಕೇಸು ದಾಖಲಿಸುವ ಕಾರ್ಯವನ್ನು ಯಾರೂ ಮಾಡಲಿಲ್ಲ. ಆದರೆ ಅದೇ ಕುಣಿಗಲ್ಲಿನಲ್ಲಿ ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ರೈತ ಮತ್ತು ಕನ್ನಡಪರ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಸೇರಿದ್ದ ಜನ ಐವತ್ತನ್ನೂ ಮೀರಿರಲಿಲ್ಲ. ಸಾವಿರಾರು ಜನರಿಗೆ ಜೀವನಾಧಾರವಾಗಿರುವ ಕೆರೆಯನ್ನು ಉಳಿಸುವುದಕ್ಕಿಂತ, ಸಾರ್ವಜನಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದ ದೇವಾಲಯವನ್ನು ತೆರವುಗೊಳಿಸುವುದು ಈ ರಾಜ್ಯದಲ್ಲಿ ಮಹಾಪರಾಧ!
ಈ ದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ಗೋಮಾಂಸ ಸೇವೆನೆ ನಡೆದು ಬಂದಿದೆ. ಒಂದು ಕಾಲದಲ್ಲಿ ಬ್ರಾಹ್ಮಣರೂ ಗೋಮಾಂಸ ತಿನ್ನುತ್ತಿದ್ದವರೆ. ಇವರು ಕಷ್ಟಕಾಲದಲ್ಲಿ ಮಾತ್ರ ಯಾರನ್ನು ಹಿಂದುಗಳು ಎನ್ನುತ್ತಾರೋ ಅವರಲ್ಲಿ ಹೆಚ್ಚಿನವರು ಗೋಮಾಂಸ ಸೇವೆಯನ್ನು ಇಂದೂ ಮಾಡುತ್ತಿದ್ದಾರೆ. ಅದು ಕೇವಲ ಮುಸಲ್ಮಾನರಿಗೆ ಮಾತ್ರ ಮೀಸಲಾಗಿಲ್ಲ. ಅದರಿಂದಾಗಿ ಗೋವಧೆ, ವ್ಯಾಪಾರ ಮೊದಲಾದವುಗಳು ಈ ದೇಶದಲ್ಲಿ ವ್ಯವಸ್ಥಿತವಾಗಿಯೇ ನಡೆದುಕೊಂಡು ಬಂದಿವೆ. ಆದರೆ ಈಗ ಕೆಲವು ಜನರಿಗೆ ಅದು ಅಪರಾಧವಾಗಿ ಕಂಡು, ಗೋವುಗಳನ್ನು ಸಾಗಿಸುವವರಿಗೆಲ್ಲಾ ತೊಂದರೆ ಕೊಡುತ್ತಾರೆ. ಗೋವಧೆ, ಗೋಮಾಂಸ ಸೇವನೆ, ಇವುಗಳಿಗಾಗಿ ಗೋವುಗಳನ್ನು ಸಾಗಿಸುವುದು ಮೊದಲೂ ನಡೆಯುತ್ತಿದ್ದವು. ಈಗಲೂ ನಡೆಯುತ್ತಿವೆ. ಆದರೆ ಈಗ ಅದನ್ನು ವಿರೋಧಿಸುವ, ಅದನ್ನು ತಡೆಯುವ ನೆಪದಲ್ಲಿ ಅಮಾಯಕರನ್ನು ಥಳಿಸುವ ಕಾರ್ಯ ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆಲ್ಲಾ ಸರ್ಕಾರದ ಗುಪ್ತ ಬೆಂಬಲ ಇದ್ದೇ ಇದೆ. ಹಾಗೆಯೇ ಮತಾಂತರವೂ ಸಹ!
‘ಸನಾತನ ಸಂಸ್ಕೃತಿ ಅಪಾಯದಲ್ಲಿದೆ. ಅದನ್ನು ಉಳಿಸಲು ಬ್ರಾಹ್ಮಣರು ಶ್ರಮಿಸಬೇಕು’ ಎಂದು ಬಿ.ಜೆ.ಪಿ. ದುರೀಣರು ಹೇಳಿಕೆ ಕೊಡುತ್ತಾರೆ. ಈ ಹೇಳಿಕೆಯಲ್ಲೇ ಸನಾತನ ಸಂಸ್ಕೃತಿ ಬ್ರಾಹ್ಮಣರದ್ದು ಎನ್ನುವ ಧೋರಣೆ ಎದ್ದು ಕಾಣುತ್ತಿದೆ. ಆದರೆ ಯಾರಾದರೂ ಬೇರೆ ಧರ್ಮಕ್ಕೆ ಮತಾಂತರವಾದಾಗ ಮಾತ್ರ ಈ ಜನಕ್ಕೆ ಉಳಿದವರೂ ಹಿಂದೂಗಳ ತರವೇ ಕಾಣುತ್ತಾರೆ! ಬೌದ್ಧಧರ್ಮವೂ ಹಿಂದೂ ಧರ್ಮದ ಒಂದು ಭಾಗವೇ ಎಂದು ಹೇಳಿಕೆ ಕೊಡುವವರೇ, ದಲಿತರು ಬೌದ್ಧ ಧರ್ಮಕ್ಕೆ ಮತಾಂತರ ಆಗಬಾರದು. ಆರ್ಯ ಸಮಾಜ ಸೇರಲಿ ಎಂದು ಅಪ್ಪಣೆ ಕೊಡುತ್ತಾರೆ. ಈ ಹೇಳಿಕೆಯಲ್ಲು ಅಷ್ಟೆ. ದಲಿತರು ಹಿಂದೂಗಳಲ್ಲ ಎನ್ನುವ ಧೋರಣೆ ಕಾಣುತ್ತದೆ. ಈ ರೀತಿ ಹೇಳಿಕೆ ಕೊಡುವ ಮಹನೀಯರಿಗೆ ‘ದಲಿತರು ತಮ್ಮ ಮಠಕ್ಕೇ ಸೇರಲಿ, ತಮ್ಮ ಮತಕ್ಕೇ ಸೇರಲಿ’ ಎಂದುಹೇಳುವ ದೊಡ್ಡತನವಿಲ್ಲ. ದಲಿತರು ಆಹ್ವಾನಿಸಿದರೂ ಸಹಭೋಜನಕ್ಕೆ ಒಪ್ಪುವುದಿಲ್ಲ. ಸನ್ಯಾಸಿಯಾದವನಿಗೆ ಸಹಬೋಜನಕ್ಕೆ ನಿಷೇಧವಿರುವಂತೆ ಲೌಖಿಕ ವಿಚಾರಗಳಿಗೂ ಆತ ತಲೆ ಕೆಡಿಸಿಕೊಳ್ಳಬಾರದು. ಆದರೆ ಲೌಖಿಕ ವಿಚಾರಗಳಿಗೆ ಅಡ್ಡಿ ಬಾರದ ಸನ್ಯಾಸತ್ವ ಸಹಭೋಜನಕ್ಕೆ ಬರುತ್ತದೆ!
ಕೋಮುವಾದದ ವಿರುದ್ಧ ಮಾತನಾಡುವವರೆಲ್ಲಾ ಸಾರಸಗಟಾಗಿ ಕೆಲವು ವಿಚಾರವಂತರಿಗೆ ಸುಳ್ಳುಗಾರರಂತೆ ಕಾಣುತ್ತಾರೆ. ಆಜನ್ಮ ಬ್ರಹ್ಮಚಾರಿಗಳೊಬ್ಬರು ಮುಂಬಯಿಯ ಕಾಮಟಿಪುರವನ್ನು ಹೆಸರಿಸಿ ಬುದ್ದಿಜೀವಿಗಳನ್ನು ಟೀಕಿಸುತ್ತಾರೆ. ಕಾಮಟಿಪುರದ ವ್ಯವಸ್ಥೆ ಬಲಗೊಳ್ಳಲು ಬ್ರಹ್ಮಚಾರಿಗಳೆನಿಸಿಕೊಂಡವರ ಕೊಡುಗೆಯೂ ಇದೆ ಎಂಬುದನ್ನು ಮರೆಯುತ್ತಾರೆ. ಭಾರತೀಯ ಸಂಸ್ಕೃತಿಯ ರಕ್ಷಕರೆನಿಸಿಕೊಂಡವರು, ಭಾರತೀಯತೆಯನ್ನು ಗುತ್ತಿಗೆ ಹಿಡಿದಂತೆ ಮಾತನಾಡುತ್ತಿರುವವರು, ‘ಈ ದೇಶದ ಬಹುಸಂಖ್ಯಾತ ಜನರ ಸಂಸ್ಕೃತಿಯೇನು?’ ಎಂಬುದನ್ನೇ ತಿಳಿದಿಲ್ಲ!
ಗಣಿಗಾರಿಕೆಯಿಂದ ಈ ರಾಜ್ಯದ ಗಡಿಯನ್ನೇ ಒತ್ತುವರಿ ಮಾಡಲಾಗುತ್ತಿದೆ. ಕನ್ನಡಕ್ಕೆ ಯಾವಾಗಲೂ ಕೈ ಎತ್ತುತ್ತಿದ್ದ ಹಿರಿಯರೊಬ್ಬರು ಈಗ, ಕನ್ನಡದ ವಿಷಯದಲ್ಲಿ ಪಂಚೇಂಧ್ರಿಯಗಳನ್ನು ಮುಚ್ಚಿ ಕುಳಿತಿದ್ದಾರೆ. ಮೊದಲು ಕನ್ನಡಿಗ ಮಾತ್ರರಾಗಿದ್ದ ಅವರು ಈಗ ಭಾರತೀಯರಂತೆ! ವಿಶ್ವಮಾನವರಾಗುವುದು ಯಾವಾಗ ಕಾದು ನೋಡಬೇಕು. ಯಾವುದೋ ಪ್ರಶ್ನೆಗೆ ಲೋಕಸಭೆಯಲ್ಲಿ ಜನಗಣತಿಯ ವಿವರಗಳನ್ನು ಉತ್ತರವಾಗಿ ಕೊಟ್ಟಾಗ, ಆ ಉತ್ತರದ ಕಾಲಾವಧಿಯ ಬಗ್ಗೆ ಯೋಚಿಸದೇ, ಮಾರನೆಯ ದಿನವೇ ಇವರಿಗೆ ಅನುಕೂಲವಾಗುವ ಕಾಲಾವಧಿಯ ಅಂಕಿಸಂಖ್ಯೆಗಳನ್ನು ಕೊಟ್ಟು ವಾಚಕರವಾಣಿಗೆ ಕಾಗದ ಬರೆಯುತ್ತಾರೆ. ಗಣಿ ವಿಚಾರದಲ್ಲಿ ಲೋಕಾಯುಕ್ತರ ವರದಿ ಬೆಳಕಿಗೆ ಬಂದು, ಅದರಲ್ಲಿ ಸ್ಪಷ್ಟವಾಗಿ ನಾಡಿನ ಗಡಿ ಒತ್ತುವರಿಯಾಗುತ್ತಿರುವುದನ್ನು ಸೂಚಿಸಿ, ಎರಡು ವಾರಗಳು ಕಳೆದಿದ್ದರೂ ಮಹಾನುಭಾವರು ಬಾಯಿ ಬಿಟ್ಟಿಲ್ಲ! ಇವರು ಕ್ರೈಸ್ತ-ಮುಸಲ್ಮಾನರಿಂದ ಈ ದೇಶವನ್ನು ಕಾಪಾಡಬೇಕೆಂದು ಮೊರೆಯಿಡುತ್ತಾರೆ!
ಈ ದೇಶವನ್ನು, ಈ ರಾಜ್ಯವನ್ನು ಯಾರು, ಯಾರಿಂದ ಕಾಪಾಡಬೇಕು? ದಿಕ್ಕು ಕಾಣದಾಗಿದೆ.