Tuesday, July 16, 2013

ಗಾಣರಾಣಿಯರು : ರಾಘವಾಂಕನ ಅದ್ಭುತ ಸೃಷ್ಟಿ!

ರಾಘವಾಂಕನ ‘ಹರಿಶ್ಚಂದ್ರ ಚಾರಿತ್ರ್ಯ’ ಕಾವ್ಯದಲ್ಲಿ ಸಪ್ತಮ ಸ್ಥಲವು ಆತನ ಉಜ್ವಲ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿದೆ. ಆತನ ಇಡೀ ಕಾವ್ಯವೇ ಅದಕ್ಕೆ ಸಾಕ್ಷಿಯಾಗಬಹುದಾದರೂ, (’ಹರಿಶ್ಚಂದ್ರಕಾವ್ಯಸಂಗ್ರಹ’ದ ವಾಚನ ರಸಿಕರಿಗೊಂದು ರಸಯಾತ್ರೆ. – ಕುವೆಂಪು) ಈ ಪ್ರಸಂಗ ಮಾತ್ರ, ತನ್ನ ವೈಚಾರಿಕ ಸಂಘರ್ಷದಿಂದ, ಕಾವ್ಯಸೌಂದರ್ಯದಿಂದ ಆತನ ಪ್ರತಿಭೆಗೆ ಸುಂದರ ಚೌಕಟ್ಟನ್ನು ಒದಗಿಸುತ್ತದೆ. ಸಂದರ್ಭ ಹೀಗಿದೆ: ತಾನು ಸೃಷ್ಟಿಸಿದ ಹಂದಿ, ಹರಿಶ್ಚಂದ್ರನ ಬಾಣಗಳಿಂದ ಗಾಯಗೊಂಡು ಬಂದಿದೆ. ಅದನ್ನು ನೋಡಿ ಕುಪಿತನಾದ ವಿಶ್ವಾಮಿತ್ರ ‘ಸಿಕ್ಕಿದನಲಾ ಭೂಪನ್ ಇಂದು. ನಾನಾಯ್ತು ತಾನಾಯ್ತು, ಕೆಡಿಸದೆ ಮಾಣೆನ್’ ಎಂದು ಹೂಂಕರಿಸಿದಾಗ ಸತಿಯರಿಬ್ಬರು ಸೃಷ್ಟಿಯಾಗುತ್ತಾರೆ. ಆತನ ಆಜ್ಞೆಯಂತೆ, ಅವರಿಬ್ಬರು ಹರಿಶ್ಚಂದ್ರನಿದ್ದಲ್ಲಿಗೆ ಬಂದು, ಹಾಡಿ ನರ್ತಿಸಿ ಅವನನ್ನು ಸಂತೋಷಪಡಿಸುತ್ತಾರೆ. ಆದರೆ ಆತ ಕೊಡಲುದ್ದೇಶಿಸಿದ ಕೊಡುಗೆಯನ್ನು ನಿರಾಕರಿಸಿ ತಮ್ಮನ್ನು ಮದುವೆಯಾಗುವಂತೆ ಹಠ ಹಿಡಿಯುತ್ತಾರೆ. ಆದರೆ, ಹರಿಶ್ಚಂದ್ರ ಅವರನ್ನು ಮದುವೆಯಾಗದಿರುವುದಕ್ಕೆ ಕೊಡುವ ಕಾರಣ ಅವರು ಹೊಲತಿಯರೆಂಬುದು! ಈ ಹೊಲೆತನದ ವಿಶ್ಲೇಷಣೆಯನ್ನು ರಾಘವಾಂಕ ಹೇಗೆ ನೆಡೆಸಿದ್ದಾನೆ? ಅದರ ಬಗ್ಗೆ ಆತನ ನಿಲುವೇನು? ಇಂತಹ ಒಂದು ವೈಚಾರಿಕ ಸಂಘರ್ಷವನ್ನು ಕಾವ್ಯದಲ್ಲಿ ರಾಘವಾಂಕ ಕಲಾತ್ಮಕವಾಗಿ ಅಭಿವ್ಯಕ್ತಿಸಿದ್ದಾನೆಯೆ? ಅದಕ್ಕೆ ಆತ ಕಂಡುಕೊಂಡ ಉಪಾಯವೇನು? ಎಂಬುದನ್ನು ನಾವು ಮನಗಾಣಬೇಕಾಗಿದೆ.
ಮುನಿಗೆ ಹೊಲೆಯಾವುದು? ಅತಿ ಕೋಪ, ಬದ್ಧದ್ವೇಷ, ಅನಿಮಿತ್ತ ವೈರ.
ಅದಱಿಂದ ಹುಟ್ಟಿದರಾಗಿ ವನಿತೆಯರು ಕಡೆಗೆ ಹೊಲತಿಯರಾಗಿ,
ಕೆಲಸಾರಿ ನಿಂದು ‘ಬೆಸನ್ ಆವುದು?’ ಎನಲು
‘ಜನಪತಿ ಹರಿಶ್ಚಂದ್ರ ಬಂದು ನಮ್ಮಯ ತಪೋವನದೊಳೈದನೆ.
ಹೋಗಿ, ಸರ್ವಬುದ್ಧಿಗಳೊಳ್ ಆತನ ಮರುಳು ಮಾಡುತಿರಿ. ಹೋಗಿ.’
ಎಂದು ಅಟ್ಟಿದಂ ದುರ್ಮಂತ್ರ ಬಲವಂತನು.
ಇದು ಸಪ್ತಮಸ್ಥಲದ ಎರಡನೆಯ ಪದ್ಯ. ಮುಂದೆ ತಾನು ಹರಿಶ್ಚಂದ್ರ ಮತ್ತು ಗಾನರಾಣಿಯರ ನಡುವೆ ನಡೆಸಲಿರುವ ವೈಚಾರಿಕ ಸಂಘರ್ಷಕ್ಕೂ ಮೊದಲೇ ರಾಘವಾಂಕ ‘ಹೊಲೆತನ’ ‘ಅಸ್ಪೃಷ್ಯತೆ’ ಇವುಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾನೆ. ಆತನ ಪ್ರಕಾರ ಹೊಲೆತನಕ್ಕೆ ಕಾರಣಗಳು ಮೂರು; . ಅತಿ ಕೋಪ, ಬದ್ಧದ್ವೇಷ, ಅನಿಮಿತ್ತ ವೈರ. ಅದು ಮುನಿಗೆ ಎಂದು ಹೇಳಿದ್ದರೂ ಒಂದು ರೀತಿಯಲ್ಲಿ ಸಾರ್ವತ್ರಿಕವಾಗಿಯೂ ಆ ಕಾರಣಗಳು ಹೊಲೆತನಕ್ಕೆ ಅನ್ವಯವಾಗುವಂತಹವೇ ಆಗಿವೆ. ಅಂತಹ ಗುಣಗಳಿದ್ದರೆ ಮುನಿಯಾದವನಿಗೂ ಹೊಲೆತನ ತಪ್ಪಿದ್ದಲ್ಲ! ಹೊಲೆತನ ಹುಟ್ಟಿನಿಂದ ಬರುವುದಿಲ್ಲ; ಗುಣದಿಂದ ಬರುತ್ತದೆ. ಅದು, ಹುಟ್ಟುವಿಕೆಗೆ ಕಾರಣವಾದ ಸಂದರ್ಭದಿಂದ, ಉದ್ದೇಶದಿಂದ ಹಾಗೂ ವ್ಯಕ್ತಿಯ ನಡವಳಿಕೆಯಿಂದ ಹೊಲೆತನ ಆರೋಪಿತವಾಗುತ್ತದೆ. ಆದರೆ ಒಂದು ಅಂಶವನ್ನು ಸ್ಪಷ್ಟವಾಗಿ ಗಮನಿಸಬೇಕು. ರಾಘವಾಂಕ ಸೂಚನಾಪದ್ಯದಲ್ಲಿ ಮತ್ತು ಎರಡನೆಯ ಪದ್ಯದಲ್ಲಿ ಮಾತ್ರ ಆ ಗಾನರಾಣಿಯರನ್ನು ‘ಹೊಲತಿ’ಯರೆಂದು ಸಂಬೋಧಿಸಿದ್ದಾನೆ. ಇನ್ನು ಉಳಿದಂತೆ ಹರಿಶ್ಚಂದ್ರನ ಮತ್ತು ಗಾನರಾಣಿಯರ ನಡುವೆ ನಡೆಯುವ ವೈಚಾರಿಕ ಸಂಘರ್ಷದಲ್ಲಿ, ವಿಶ್ವಾಮಿತ್ರ-ಹರಿಶ್ಚಂದ್ರರ ನಡುವಿನ ವಾಗ್ಯುದ್ಧದಲ್ಲಿ ಮಾತ್ರ, ಆಯಾಯ ಪಾತ್ರಗಳ ಬಾಯಲ್ಲಿ ಸಂದರ್ಭಾನುಸಾರವಾಗಿ ಬಳಸಿದ್ದಾನೆ.
ಹೊಸ ಕುಟಿಲ ಕುಂತಲದ, ಚಂಚಲ ಆಕ್ಷಿಗಳ,
ಕರ್ಕಶ ಕುಚದ, ಶಿಥಿಲ ಮಧ್ಯದ, ಲಘು ಶ್ವಾಸದ,
ಅತ್ಯಸಮ ರಾಗಾಧರದ, ಗೂಢ ನಾಭಿಯ,
ಮೀಱಿ ಕೊಬ್ಬಿದ ನಿತಂಬಯುಗದ, ಅಸದಳದ ಜಡಗತಿಯ, ಬೆಳುನಗೆಯ,
ವಕ್ರವಾಕ್ಯ ಸಮೂಹದ ಅವಗುಣಂಗಳ ಸಂಗದಿಂ
ಕುಲಂ ಹಸಗೆಟ್ಟ ಅನಾಮಿಕೆಯರ್ ಆದರ್.
ಅಲ್ಲದೆ ಸಂಗವು ಆರ ಕುಲಮಂ ಕೆಡಿಸದು?
ಈ ಪದ್ಯದಲ್ಲಿ ಎರಡು ಭಾಗಗಳಿವೆ. ಮೊದಲು ಆ ಅನಾಮಿಕೆಯರ ಅಸಹಜ ಸೌಂದರ್ಯದ ಕಾರಣದಿಂದ ಅವರ ಕುಲ ಹಸಗೆಟ್ಟು ಅನಾಮಿಕೆಯರಾದರು ಎಂಬುದನ್ನು (ಇಲ್ಲಿ ರಾಘವಾಂಕ ಹೊಲತಿ ಎಂಬ ಪದವನ್ನು ಬಳಸಿಲ್ಲದಿರುವುದು ಗಮನಾರ್ಹ; ಆದರೆ ಕುಲದ ಮಾತೆತ್ತಿದ್ದಾನೆ.) ಒಪ್ಪಲು ಕಷ್ಟವಾಗುತ್ತದೆ. ಆದರೆ ಎರಡನೆಯ ಭಾಗದಲ್ಲಿ ‘ಅವಗುಣಂಗಳ ಸಂಗದಿಂ ಕುಲಂ ಹಸಗೆಟ್ಟು’ ಹೊಲತಿಯರಾದರು ಎಂಬುದರಲ್ಲಿ ಸ್ವಲ್ಪಮಟ್ಟಿನ ಅರ್ಥವಿದೆ. ವಿಚಾರಗೆಟ್ಟವರು ಮಾತ್ರ ಹೊಲೆತನಕ್ಕೆ ಒಳಗಾಗುತ್ತಾರೆ. ಕೊನೆಯ ಸಾಲು, ‘ಸಂಗವು ಆರ ಕುಲಮಂ ಕೆಡಿಸದು’ ಎನ್ನುವಲ್ಲಿ ರಾಘವಾಂಕ ತನ್ನ ವೈಚಾರಿಕ ನಿಲುವನ್ನು ಉನ್ನತೀಕರಿಸಿಕೊಂಡಿರುವುದನ್ನು ನೋಡಬಹುದು. ಅಸಹಜ ಸೌಂದರ್ಯದಿಂದ, ಅವಗುಣಂಗಳ ಸಂಗದಿಂದ ಹೊಲತಿಯರಾಗಿರುವ ಆ ಅನಾಮಿಕೆಯರ ಸಂಗ ಯಾರ ಕುಲವನ್ನೂ ಕೆಡಿಸುವುದಿಲ್ಲ. ಏಕೆಂದರೆ ಅವರಿಗೆ ಆರೋಪಿತವಾಗಿರುವ ಹೊಲೆತನಕ್ಕೆ ಅವರು ಕಾರಣರಲ್ಲ! ಮುಂದಿನ ಪದ್ಯದಲ್ಲಿ,
ಸುರಾಸುರರ್ ಅಬುದಿಯಂ ಮಥಿಸುವಂದು
ಹೊಸವಿಷದ ಹೊಗೆ ಹೊಯ್ದು ಕಗ್ಗನೆ ಕಂದಿ
ಜಲದೇವಿಯರು ಮನದಲಿ ನೊಂದು ಮಾನಿಸರಾದರೋ,
ಕಮಲಜಂ ನೀಲದಿಂದ ಮಾಡಿದ ಸಾಲಭಂಜಿಕೆಗಳ್ ಒದವಿ ಜೀವಂ ತಳೆದವೋ
ಎನಿಪ್ಪ ಅಂದದಿಂ ಬಂದರ್ ಅಂಗನೆಯರ್ ಅವನೀಶನೆಡೆಗೆ.
ಎಂದು ಹೇಳುವಾಗಲೂ, ಅವರ ಬಗ್ಗೆ ರಾಘವಾಂಕ ಸಹಾನುಭೂತಿ ಉಳ್ಳವನಾಗಿದ್ದಾನೆ. ಹಾಗೆ ಬಂದ ಗಾನನಾಯಕಿಯರು, ಹರಿಶ್ಚಂದ್ರನನ್ನು ಸ್ತುತಿಸಿ, ‘ಯಥೋಚಿತ ತಾರಮಧುರಮಂದ್ರಂಗಳಿಂ’ ಹಾಡಿ, ನರ್ತಿಸಿ ರಾಗರಸಲಹರಿಯಿಂದ ಹರಿಶ್ಚಂದ್ರನ ದುಗುಡವನ್ನು ತೊಳೆಯುತ್ತಾರೆ. ಇಲ್ಲಿ ರಾಘವಾಂಕ ಅನಾಮಿಕೆಯರು ಎಂಬ ಪದ ಬಳಸಿರುವುದರಲ್ಲಿ ಔಚಿತ್ಯವಿದೆ. ಏಕೆಂದರೆ ಅವರಿಬ್ಬರೂ ಹರಿಶ್ಚಂದ್ರನಿಗೆ ಅಪರಿಚಿತರು. ಅವರಿಗೆ ಎಂದು ಒಂದು ಹೆಸರೂ ಇಲ್ಲ! ಅವರೇನು ಬಂದು ಹರಿಶ್ಚಂದ್ರನಲ್ಲಿ ತಮ್ಮ ಪರಿಚಯ (ವಿಶ್ವಾಮಿತ್ರನ ಮಕ್ಕಳೆಂದು) ಹೇಳಿಕೊಂಡಿಲ್ಲ. ಹಂದಿಯನ್ನು ಬೆನ್ನಟ್ಟಿದ ಆಸಱು, ವಿಶ್ವಾಮಿತ್ರನ (ಮುನಿರಕ್ಕಸ!) ಆಶ್ರಮಕ್ಕೆ ಬಂದಿರುವ ಅಂಜಿಕೆ, (ಮುಕ್ಕಣ್ಣನೆನಿಪ) ಗುರುವಶಿಷ್ಠನ ಆಜ್ಞೆಯನ್ನು ತಪ್ಪಿದ ಅಳಲು, ವಿಶ್ರಮಿಸಿಕೊಳ್ಳುವಾಗ ಕಂಡ ಕನಸಿನ ಭಯ ಇವುಗಳನ್ನು, ಅನಾಮತ್ತಾಗಿ ಮರೆಸಿಬಿಡುವಂತೆ ಹಾಡಿ ನರ್ತಿಸಿದ ಆ ಕನ್ನೆಯರಿಗೆ ಏನಾದರೂ ಕೊಡಬೇಕೆನ್ನಿಸುತ್ತದೆ. ಹರಿಶ್ಚಂದ್ರ ಕೊಡುಗೈದಾನಿ. ತನ್ನ ಮೈಮೇಲಿದ್ದ ಆಭರಣವನ್ನೇ ತೆಗೆದು ಕೊಡಲು ಮುಂದಾಗುತ್ತಾನೆ. ಆಭರಣಕ್ಕೆ ಆಸೆ ಪಡದ ಆ ಗಾನರಾಣಿಯರು, (ಅಸಮ್ಮತಿಯ ಧ್ವನಿಯಲ್ಲಿ)
ಬಡತನದ ಹೊತ್ತು ಆನೆ ದೊರಕಿ ಫಲವೇನು?
ನೀರಡಸಿರ್ದ ಹೊತ್ತು ಆಜ್ಯ ದೊರಕಿ ಫಲವೇನು?
ರುಜೆ ಅಡಸಿ ಕೆಡೆದಿಹ ಹೊತ್ತು ರಂಭೆ ದೊರಕೊಂಡಲ್ಲಿ ಫಲವೇನು?
ಸಾವ ಹೊತ್ತು ಪೊಡವಿಯ ಒಡೆತನ ದೊರಕಿ ಫಲವೇನು?
ಕಡುವಿಸಿಲು ಹೊಡೆದು ಬೆಂಡಾಗಿ ಬೀಳ್ವ ಎಮಗೆ, ನೀನೊಲಿದು ಮಣಿದೊಡುಗೆಗಳನು ಇತ್ತು ಫಲವೇನು?
ಕಡಲೊಳ್ ಆಳ್ವಂಗೆ ತೆಪ್ಪವನು, ದಾರಿದ್ರಂಗೆ ಕಡವರವನು,
ಅತಿ ರೋಗಿಗೆ ಅಮೃತಮಂ ಕೊಟ್ಟಡೆ,
ಅವರ್ ಅಡಿಗಡಿಗೆ ಅದಾವ ಹರುಷವನ್ ಎಯ್ದುತಿಪ್ಪರ್?
ಅವರಂ ಪೋಲ್ವರ್, ಈ ಪೊತ್ತಿನ ಸುಡುಸುಡನೆ ಸುಡುವ
ಬಿಱುಬಿಸಿಲ ಸೆಕೆ ಉಸುರ ಬಿಸಿ ಹೊಡೆದುದು.
ಉರಿಹೊತ್ತಿ, ಬಾಯ್ಬತ್ತಿ, ಡಗೆ ಸುತ್ತಿ ಸಾವಡಸುತಿದೆ.
ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲುಹು ಭೂಭುಜ.
ಎಂದು ಒತ್ತಾಯಪಡಿಸುತ್ತಾರೆ. ಇಲ್ಲಿಂದಲೇ ರಾಘವಾಂಕ ತಾನು ನೇರವಾಗಿ ಏನನ್ನೂ ಹೇಳದೆ, ಹರಿಶ್ಚಂದ್ರ ಮತ್ತು ಗಾನರಾಣಿಯರ ಮುಖಾಂತರ ವೈಚಾರಿಕ ಸಂಘರ್ಷವನ್ನು ಮುಂದುವರೆಸುತ್ತಾನೆ; ಪರಕಾಯ ಪ್ರವೇಶ ಮಾಡಿದವನಂತೆ! ಇಲ್ಲಿ ಗಾನರಾಣಿಯರ ಮತ್ತು ಹರಿಶ್ಚಂದ್ರನ ಉದ್ದೇಶಗಳು ಮೊದಲೇ ನಿರ್ಧಾರಿತವಾಗಿವೆ. ಆದರೆ, ಅವರಿಬ್ಬರೂ ನಟಿಸಲೇಬೇಕಾಗಿದೆ. ಏಕೆಂದರೆ ರಾಘವಾಂಕ ಸೂತ್ರಧಾರನ ಜಾಗದಲ್ಲಿ ನಿಂತಿದ್ದಾನೆ. ಅವರು ಕೇಳುವ ಮುತ್ತಿನ ಸತ್ತಿಗೆ (ಮುತ್ತಿನಿಂದ ಅಲಂಕೃತವಾದ ಬಿಳಿಕೊಡೆಯಾದರೂ ಆಗಬಹುದು; ಶ್ಲೇಷಾರ್ಥವನ್ನು ಆರೋಪಿಸಿಕೊಂಡರೆ ‘ಚುಂಬನ’ವೂ ಆಗಬಹುದು!) ಹರಿಶ್ಚಂದ್ರನಲ್ಲಿ ದಿಗಿಲನ್ನು ಹುಟ್ಟಿಸುತ್ತದೆ. ಆತ ಆ ಸತ್ತಿಗೆಯನ್ನು ಸೂರ್ಯವಂಶದವರಿಗಲ್ಲದೆ ಬೇರೆಯವರಿಗೆ ಕೊಡಲು ಬಾರುವುದಿಲ್ಲ ಎಂದು ಹೇಳುತ್ತಾನೆ.
ಹರಿಶ್ಚಂದ್ರ: ರವಿಕುಲದ ಪೀಳಿಗೆಯೊಳ್ ಒಗೆದ ರಾಯರ್ಗೆ ಪಟ್ಟವ ಕಟ್ಟುವಂದು, ಇದು ಇಲ್ಲದೊಡೆ ಅರಸುತನ ಸಲ್ಲದು ಅವನಿಯೊಳು. ಯುದ್ಧರಂಗದೊಳು ಇದಂ ಕಂಡ ಹಗೆಗಳು ನಿಲ್ಲರ್. ಇದಱ ಕೆಳಗೆ ಕವಿವ ನೆಳಲೊಳಗೆ ಆವನಿರ್ದನ್ ಆತಂಗೆ ತಾಂ ತವಿಲು, ಎಡರು, ಬಡತನ, ನಿರೋಧ, ಅಪಕೀರ್ತಿ, ಪರಿಭವಭಯಂ ಹರೆವುದು. ಇದನ್ ಅಱಿದು ಅಱಿದು ಸತ್ತಿಗೆಯ ಕೊಡಬಹುದೆ?
ಗಾಣರಾಣಿಯರು: ಕೊಡಬಾರದ ಒಡವೆಯಂ ಕೊಡುವುದು ಅರಿದೈಸೆ. ಕೊಡುವ ಒಡವೆಗಳನ್ ಆರದೊಡಂ ಕೊಡರೆ? ಹೇಳು. (ಸಾಮಾನ್ಯವಾಗಿ ಎಲ್ಲರೂ ಕೊಡುವದನ್ನು ಕೊಟ್ಟರೆ ಅದರಲ್ಲಿ ವಿಶೇಷವೇನಿಲ್ಲ. ಆದರೆ, ಕೊಡಬಾರದ್ದನ್ನು ಕೊಟ್ಟಾಗಲೇ ವಿಶೇಷ ಎಂಬ ವಾದ ಅವರದು)
ಹರಿಶ್ಚಂದ್ರ: (ಅಸಹನೆಯಿಂದ) ಬಿಡೆ ಬೇಡುವರ ಬಾಯಿ ಹಱಿವುದೇ? ಬೇಡಿದುದನ್ ಈವ ದೊರೆ ಆವನ್?
ಗಾಣರಾಣಿಯರು: ಮುನ್ನಿನ ಬಲಿ, ದಧೀಚಿ, ಶಿಬಿಗಳು ಬೇಡಿದ ಒಡವೆಗಳನ್ ಕೊಡರೆ?
ಹರಿಶ್ಚಂದ್ರ: ಅದೇಂ ತ್ಯಾಗವೇ? ದಾನಗುಣವ ಇಡಿದೈಸಲೇ ಕೊಟ್ಟರ್. (ಬಲಿ ದಧೀಚಿ ಶಿಬಿಗಳು ದಾನಗುಣವನ್ನು ಆಶ್ರಯಿಸಿದ್ದರಿಂದ ಕೊಟ್ಟರು. ಆದರೆ ಅದು ತ್ಯಾಗವಲ್ಲ! ಹರಿಶ್ಚಂದ್ರನನ್ನು ಅವರು ಮಾತಿನ ಗಾಳಕ್ಕೆ ಸಿಕ್ಕಿಸುತ್ತಿದ್ದಾರೆ. ಆದ್ದರಿಂದ ಆತ ಗೊಂದಲಕ್ಕೆ ಒಳಗಾಗಿದ್ದಾನೆ)
ಗಾಣರಾಣಿಯರು: ನೀನಿದಂ ಕೊಡಲ್ ಒಂದು ದಾನವೆ? ಪಾಡಿ ಮೆಚ್ಚಿಸಿದ ಕತದಿಂ ತ್ಯಾಗ, ಆಸತ್ತು ಬೇಡಿದುದಱಿಂ ದಾನ, ಹವಣಿನ ಪದಸ್ಥಿಕೆಯ ಜೋಡಿ – ಅದಱೊಳು ಉಪಕಾರ ಉಂಟು. ಕೌಶಿಕನ ಹೆಸರಿಂಗಿತ್ತಡೆ ಆರಾಧನೆ, ಗಾಡಿಕಾತಿಯರಾಗಿ ವಿಟಲಕ್ಷಣಂ, ಮನದ ಪಾಡು ಅಱಯಂಲೆಂದೆವು – ಅದಱಿಂ ಸಲುಗೆ, ಶಂಕಿಸದೆ ನೀಡಿದೊಡೆ ಕೀರ್ತಿ, ಕರುಣಿಸಿ ಕೊಡಲು ಪುಣ್ಯ ಈ ಸತ್ತಿಗೆಯೊಳಹುದು. (ಇಲ್ಲಿ ಗಾನರಾಣಿಯರು ಕೌಶಿಕ ಎಂದು ವಿಶ್ವಾಮಿತ್ರನ ಹೆಸರನ್ನು ಎತ್ತಿದ್ದಾರೆ. ಅವನ ಕಡೆಯವರು ಎಂದು ಸೂಚಿಸಿದ್ದಾರೆ; ಆದರೆ ಅವನ ಮಾನಸಪುತ್ರಿಯರೆಂದು, ಅವನೇ ನಮ್ಮನ್ನು ಇಲ್ಲಿ ಕಳುಹಿಸಿದ್ದು ಎಂದು ಹೇಳಿಲ್ಲ. ಹರಿಶ್ಚಂದ್ರನೂ ಕೌಶಿಕನ ುಲ್ಲೇಖವನ್ನು ಗಮನಕ್ಕೆ ತಂದುಕೊಂಡಿಲ್ಲ ಎಂಬುದು ಗಮನಾರ್ಹ)
ಹರಿಶ್ಚಂದ್ರ: ಅನುನಯದೊಳು ಎಲ್ಲವಂ ಕೊಡಬಹದು ಬಿಡಬಹುದು. ಜನನಿಯಂ, ಜನಕನಂ, ನಲ್ಲಳಂ, ದೈವಮಂ, ನಂಬಿ ನಚ್ಚಿರ್ದ ಪರಿವಾರಮಂ ಮನವಾಱೆ ಕೊಡುವ ಬಿಡುವ ಅತಿಕಲಿಗಳು ಜನರೊಳಗೆ ಜನಿಸರ್!
ಗಾಣರಾಣಿಯರು: ನೀನೀಗ ಪೇಳ್ದ ಅನಿತರೊಳು ಬೇಡಿದಡೆ ಕೊಡಬೇಡ; ಕೊಡೆಯನ್ ಈಯೆನೆ, ಲೋಭವೇಕೆ ಅರಸ?
ಹರಿಶ್ಚಂದ್ರ: ಇದಲ್ಲದೆ ಬೇಱೆ ಮಾತೆ ಪಿತರ್ ಇಲ್ಲ. ಲೋಗರಿಗೆ ಕೊಡಬಾರದಾಗಿ ಸತಿ, ವಂಶಗತವಾಗಿ ಬಂದುದಱಿಂದ ತಂದೆ, ಪಟ್ಟವ ಕಟ್ಟುವಾಗಲ್ ಅರ್ಚಿಸಿಕೊಂಬುದಾಗೆ ದೈವಂ, ನೆಳಲ ತಂಪನ್ ಒಸೆದು ಈವುದಾಗಿ ಸಾಗಿಸುವ ತಾಯ್, ಧುರದೊಳರಿಗಳಂ ನಡುಗಿಸುವುದಾಗಿ ಚತುರಂಗಬಲವು ಎನಿಸಿತು ಈ ಛತ್ರ ಎಂಬಾಗಳ್, ಇದನ್ ಅಱಿದು ಅಱಿದು ಬೇಡುವರನ್ ಮೂಜಗದೊಳು ಅತಿಮರುಳರ್ ಎನ್ನರೇ?
ಇಲ್ಲಿಯವರೆಗೆ ಮಾತಿಗೆ ಮಾತು ಕೊಟ್ಟು ತಾವು ಬೇಡಿದ್ದುದನ್ನು ಗಾಣರಾಣಿಯರು, ಅದನ್ನು ಕೊಡದಿರುವುದಕ್ಕೆ ಹರಿಶ್ಚಂದ್ರ ಸಮರ್ಥನೆಯನ್ನು ಒದಗಿಸುವಲ್ಲಿ ನಿರತರಾಗಿದ್ದಾರೆ. ಆದರೆ ಹರಿಶ್ಚಂದ್ರ ಬಗ್ಗುವುದಿಲ್ಲ ಎಂಬುದನ್ನು ಮನಗಂಡ ಅವರಿಬ್ಬರೂ ತಮ್ಮ ವರಸೆಯನ್ನು ಬದಲಾಯಿಸುತ್ತಾರೆ.
ಗಾಣರಾಣಿಯರು: (ನಿರಾಸೆಯಿಂದ) ಇಳೆಯೊಳಗೆ ಹೆಸರುಳ್ಳ ದಾನಿಯೆಂಬುದನು ಕೇಳ್ದು, ಎಳಸಿ, ಕಟ್ಟಾಸೆಪಟ್ಟು ಎಯ್ತಂದು ಬೇಡಿ ನಿಷ್ಫಲವಾಗಂತೆ, ನಾವು ಅತಿ ಮಱುಗದಂತೆ, ಅಳಲದಂತೆ, ಬಿಸುಸುಯ್ಯದಂತೆ ತಿಳಿದು ನೀನ್ ಎಮಗೆ ವಲ್ಲಭನಾಗಿ ಚಿತ್ತದ ಉಮ್ಮಳಿಕೆಯಂ ಕಳೆ ಹರಿಶ್ಚಂದ್ರ ಭೂನಾಥ.
(ಹರಿಶ್ಚಂದ್ರನನ್ನೇ ಮದುವೆಯಾಗು ಎಂದು ಕೇಳುತ್ತಿದ್ದಾರೆ. ಈಗಾಗಲೇ ಆತನಿಗೆ ಮದುವೆಯಾಗಿದೆ; ಮಗನಿದ್ದಾನೆ. ಅವರಿಬ್ಬರೂ ಅಲ್ಲಿಯೇ ಇದ್ದಾರೆ.ಅದು ಗೊತ್ತಿದ್ದೂ, ಆದರೆ ರಾಜನಾದವನು ಬಹುಪತ್ನಿವಲ್ಲಭನಾಗಬಹುದಲ್ಲವೆ? ಆ ಆಸೆಯಿಂದ ಕೈಮುಗಿದು ಗೋಗರೆದು ಕೇಳುತ್ತಿದ್ದಾರೆ.)
ಹರಿಶ್ಚಂದ್ರ: (ಹೆಮ್ಮೆಯಿಂದ) ಲಲಿತ ವಸುಮತಿ ಹುಟ್ಟುವಂದು ಹುಟ್ಟಿದ ಸೂರ್ಯ ಕುಲದ ರಾಯರ್ಗೆ ವಂಶದೊಳು, ಕೀರ್ತಿಯೊಳು, ಭುಜಬಲದೊಳು ಒರೆದೊರೆಯೆನಿಸಿ ಕನ್ನಿಕೆಯರಂ ಕೊಡುವ ಭೂಪರ್ ಇಲ್ಲ; ಇಂದುತನಕ! (ಅಸಹನೆಯ ಧ್ವನಿಯಲ್ಲಿ) ಹೊಲತಿಯರ್ ಬಂದು ‘ಆವು ಸತಿಯರಾದಪ್ಪೆವು’ ಎಂಬ ಉಲಿಹ ಎಂಬುದು ಬಂದ ಕಾಲಗುಣವೋ? ನಿಂದ ನೆಲದ ಗುಣವೋ? ನೋಡು, ನೋಡು. (ಕೋಪಗೊಳ್ಳುತ್ತಾನೆ) (ನಿಂದ ನೆಲದ ಕಾಲಗುಣವೋ? ಎಂಬಲ್ಲಿ ಆತನಿಗೆ ವಿಶ್ವಾಮಿತ್ರನ ಬಗ್ಗೆ ಇರುವ ಅಸಹನೆ, ತಿರಸ್ಕಾರ, ಭಯ, ದುಗುಡ ಎಲ್ಲವೂ ವ್ಯಕ್ತವಾಗಿವೆ)
ಗಮನಿಸಬೇಕು, ಇಲ್ಲಿಯವರೆಗೂ ಗಾನರಾಣಿಯರ ಹಾಗೂ ಹರಿಶ್ಚಂದ್ರನ ಮಾತಿನಲ್ಲಿ ಹೊಲೆತನದ, ಅಸ್ಪೃಷ್ಯತೆಯ ಮಾತು ಬಂದಿಲ್ಲ. ಹರಿಶ್ಚಂದ್ರನಂತೂ ಅವರನ್ನು ಆ ದೃಷ್ಟಿಯಿಂದ ನೋಡೇ ಇಲ್ಲ. ಆದರೆ ಮದುವೆಯ ಮಾತು ಕೇಳುತ್ತಲೇ ಆತನ ಕುಲಶ್ರೇಷ್ಠತೆಯ ಅಹಂ ಎಚ್ಚೆತ್ತುಬಿಡುತ್ತದೆ. ‘ತನಗೆ ಮದುವೆಯಾಗಿ ಮಗನಿದ್ದಾನೆ, ಮನಕೊಪ್ಪಿದ ಮಡದಿ ಚಂದ್ರಮತಿಯಿದ್ದಾಳೆ. ನನಗೆ ಇನ್ನೊಂದು ಮದುವೆಯ ಆಸೆಯಿಲ್ಲ’ ಎಂದು ನಿರಾಕರಿಸುವ ಬದಲು ಕುಲದ ಮಾತು ಎತ್ತುತ್ತಾನೆ. ಮೊದಲ ಬಾರಿಗೆ ಅವರನ್ನು ‘ಹೊಲತಿ’ಯರು ಎಂದು ಕರೆದು ಹೀಯಾಳಿಸುತ್ತಾನೆ. ಬಂದ ಕಾಲಗುಣದ ಹಾಗೂ ನಿಂದ ನೆಲದ (ವಿಶ್ವಾಮಿತ್ರನ ಆಶ್ರಮಕ್ಕೆ ಸೇರಿದ ಜಾಗ) ಬಗ್ಗೆಯೂ ತಪ್ಪಾಗಿ ಮಾತನಾಡುತ್ತಾನೆ. ಅಷ್ಟಕ್ಕೂ ‘ನಾವು ಹೊಲತಿಯರು’ ಎಂದಾಗಲೀ, ವಿಶ್ವಾಮಿತ್ರನ ಮಕ್ಕಳೆಂದಾಗಲೀ ಅವರು ಹರಿಶ್ಚಂದ್ರನಿಗೆ ಪರಿಚಯಿಸಿಕೊಂಡಿಲ್ಲ. ಯಾವ ಆಧಾರದ ಮೇಲೆ ಅವರನ್ನು ಹೊಲತಿಯರು ಎಂದು ಹರಿಶ್ಚಂದ್ರ ಕರೆಯುತ್ತಾನೆ? ಅವರ ದೈಹಿಕ ಲಕ್ಷಣಗಳ ಆಧಾರದ ಮೇಲೆ; ಮೈಬಣ್ಣದ ಆಧಾರದ ಮೇಲೆ! ಕುಲದ ಅಡಚಣೆಯಿಲ್ಲದಿದ್ದರೆ ಅವರಿಬ್ಬರನ್ನು ಆತ ಮದುವೆಯಾಗುತ್ತಿದ್ದನೆ!? ಈ ಪ್ರಶ್ನೆಗೆ ಹರಿಶ್ಚಂದ್ರನಂತೆ ರಾಘವಾಂಕನೂ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ.
ಏಕೆಂದರೆ, ಇಲ್ಲಿ ಕತೆಯ ನೆಡೆ ಮೊದಲೇ ನಿರ್ಧಾರವಾಗಿಬಿಟ್ಟಿದೆ. ಆದರೆ, ಆ ನೆಡೆಯ ನಡುವೆಯೇ ರಾಘವಾಂಕ ಹೊಲೆತನದ, ಅಸ್ಪೃಷ್ಯತೆಯ ಬಗ್ಗೆ ತನಗಿರುವ ವಿರೋಧವನ್ನು ದಾಖಲಿಸುವ ಮನಸ್ಸು ಮಾಡಿಬಿಟ್ಟಿದ್ದಾನೆ. ಅದಕ್ಕಾಗೆ ಈ ಗಾನರಾಣಿಯರ ಸೃಷ್ಟಿ, ಈ ಪರಕಾಯಪ್ರವೇಶ. ಗಾನರಾಣಿಯರ ಮೂಲಕ ತನ್ನ ನಿಲುವನ್ನು ಇಲ್ಲಿ ರಾಘವಾಂಕ ವ್ಯಕ್ತಪಡಿಸುತ್ತಾ ಹೋಗುತ್ತಾನೆ. ಅದಕ್ಕೆ ಪೂರಕವಾದ ವಾತಾವರಣವನ್ನು ಹರಿಶ್ಚಂದ್ರನ ಮೂಲಕ ಕಲ್ಪಿಸಿಕೊಳ್ಳುತ್ತಾನೆ. ‘ವೈಚಾರಿಕ ದೃಷ್ಟಿಯಿಂದ ಹರಿಶ್ಚಂದ್ರನ ವಾದ ಒಪ್ಪಿತವಾದುದಲ್ಲ’ ಎಂಬ ಡಾ. ಕೆ,ವೈ.ಶಿವಕುಮಾರರ ಗ್ರಹಿಕೆಯೇ ಅದನ್ನು ಸೂಚಿಸುತ್ತದೆ. ಇಲ್ಲಿ ಕವಿ ಗಾನರಾಣಿಯರ ಮೂಲಕ ಮಾತನಾಡುತ್ತಿದ್ದಾನೆ. ಆದ್ದರಿಂದಲೇ ಇಲ್ಲಿ ಸಹೃದಯ ಓದುಗರ ಸಹಾನುಭೂತಿ ಗಾನರಾಣಿಯರ ಕಡೆಗೇ ವ್ಯಕ್ತವಾಗುತ್ತದೆ. (ಮುಂದೆ ಒಟ್ಟು ಕಾವ್ಯದ ನಡೆಯ ದೃಷ್ಟಿಯಿಂದ ಕಥಾನಾಯಕನಾದ ಹರಿಶ್ಚಂದ್ರನಿಗೂ ಸಹಾನಭೂತಿಯನ್ನು ಗಳಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾನೆ)
ಗಾಣರಾಣಿಯರು: ಪಾವನಕ್ಷೀರಮಂ ಕೊಡುವ ಕೆಚ್ಚಲ ಮಾಂಸ ಆವ ಲೇಸು? ಇನಿದುಳ್ಳ ಮಧುವೊನೊಸೆದು ಈವ ನೊಳ (ಜೇನ್ನೊಣ) ಆವ ಲೇಸು? ಅಧಿಕ ಕಸ್ತೂರಿಯಂ ಕೊಡುವ ಮೃಗನಾಭಿ ತಾನ್ ಆವ ಲೇಸು? ದೇವರಿಗೆ ಸಲ್ಲವೇ? ಉತ್ತಮ ಗುಣಂಗಳಿರ್ದ ಅವನೀಶ ಆವ ಕುಂದಂ ಕಳೆಯಲಾಱ? (ವೈಯಾರದಿಂದ) ಕೇಳ್, ಭಾವಿಸುವೊಡೆ ಇಂದೆಮ್ಮ ರೂಪು ಜವ್ವನವಿರಲು ಕುಲದ ಮಾತೇಕೆ?
ಮಾಂಸದ ಕೆಚ್ಚಲಿನ ಹಾಲು, ನೊಣದ ಎಂಜಲಿನ ಜೇನು, ಮೃಗನಾಭಿಯ ಕಸ್ತೂರಿ ಇವಕ್ಕೆ ಮೈಲಿಗೆಯಿಲ್ಲ, ಹೊಲೆತನವಿಲ್ಲ. ಅವು ದೇವರಿಗೆ ಸಲ್ಲುತ್ತವೆ. (ಇಂದಿಗೂ, ‘ಮಡಿ’ ಆಚರಣೆ ಮಾಡುವವರು, ಸನ್ಯಾಸಿಗಳು, ಮಠಾಧಿಪತಿಗಳು ತಾವು ಬಳಸುವ, ರೇಷ್ಮೆಹುಳುವಿನ ಎಂಜಲಿನಿಂದ ಸೃಷ್ಟಿಯಾಗುವ ರೇಷ್ಮೆಬಟ್ಟೆ, ತಾವು ಕುಳಿತುಕೊಳ್ಳಲು ಬಳಸುವ ಮೃಗಚರ್ಮ ಇವುಗಳನ್ನು ಮೈಲಿಗೆ ಎಂದು ಭಾವಿಸುವುದಿಲ್ಲ.) ಸದ್ಗುಣಿಯೇ ಆಗಿರುವ ನೀನು ನಮ್ಮ ಕುಲದ ಕುಂದನ್ನು ಕಳೆಯಲಾರೆಯಾ? ಯೌವನ್ನಕ್ಕೆ ಯಾವ ಕುಲ? ಎನ್ನುವಲ್ಲಿ, ಅವರು ಹರಿಶ್ಚಂದ್ರನ ದೃಷ್ಟಿಯಲ್ಲಿ ಹೊಲೆತನವನ್ನು ಸ್ವೀಕರಿಸಿಯೇ ವಾದ ಮಂಡಿಸುತ್ತಿರುವುದನ್ನು ಗಮನಿಸಬೇಕು. ಹೌದು, ನಮಗೆ ಹೊಲೆತನದ ಕುಂದು ಇದೆ. ಅದನ್ನು ನಿನ್ನ ಸದ್ಗುಣಗಳಿಂದ ಹೋಗಲಾಡಿಸು ಎಂದು ಒತ್ತಾಯಿಸುತ್ತಿದ್ದಾರೆ. ಪ್ರಜೆಗಳ ಕುಂದನ್ನು ಕಳೆಯುವುದು ರಾಜನ ಕರ್ತವ್ಯವಲ್ಲವೆ? ಅದಕ್ಕೆ ತಾನೆ ಹರಿಶ್ಚಂದ್ರ ಬೇಟೆಗೆ ಬಂದಿದ್ದು! ಆದರೆ, ಹರಿಶ್ಚಂದ್ರ ವಿಚಾರದ ದಾರಿಯನ್ನು ಬಿಟ್ಟು ತರ್ಕದ ದಾರಿಯನ್ನು ಹಿಡಿಯುತ್ತಾನೆ. ಇಲ್ಲಿ ವಿಚಾರದ ದಾರಿ ಎಂದರೆ, ಅವರನ್ನು ಮದುವೆಯಾಗುವುದಲ್ಲ; ಬದಲಿಗೆ ಮದುವೆಯನ್ನು ನಿರಾಕರಿಸಲು ತನಗಿರುವ ಕಾರಣಗಳ ಆಯ್ಕೆಯಲ್ಲಿ ಆತ ಎಡವಿರುವುದು. ಮುಂದೆ ಆತ ಕೊಡುವ ಕಾರಣಗಳನ್ನು ಗಮನಿಸಬಹುದು.
ಹರಿಶ್ಚಂದ್ರ: (ಆಶ್ಚರ್ಯದಿಂದ) ಅಕ್ಕಕ್ಕು! ಬಚ್ಚಲುದಕಂ ತಿಳದಡೆ ಆರ ಮೀಹಕ್ಕೆ ಯೋಗ್ಯಂ? ನಾಯ್ಗೆ ಹಾಲುಳ್ಳಡೆ ಆವನ ಊಟಕ್ಕೆ ಯೋಗ್ಯಂ? ಪ್ರೇತವನದೊಳಗೆ ಬೆಳೆದ ಹೂವು ಆರ ಮುಡಿಹಕ್ಕೆ ಯೋಗ್ಯಂ? ಮಿಕ್ಕ ಹೊಲತಿಯರು ನೀವೆನೆ ನಿಮ್ಮ ಜವ್ವನದ ಸೊಕ್ಕು, ರೂಪಿನ ಗಾಡಿ ಜಾಣತನದೊಪ್ಪವೇತಕ್ಕೆ ಯೋಗ್ಯಂ? ರಮಿಸಿದವರುಂಟೆ? ಶಿವಶಿವಾ ಮಾತು ತಾ ಹೊಲೆ! (ಕಿವಿಮುಚ್ಚಿಕೊಳ್ಳುತ್ತಾನೆ)
ಇಂದು ಬಚ್ಚಲ ನೀರನ್ನು ಸಂಸ್ಕರಿಸಿ ಮರುಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುತ್ತಿದೆ; ನಾಯಿಯ ಹಾಲಿನಲ್ಲೂ ಔಷಧಿಯ ಗುಣಗಳಿವೆ ಎನ್ನಲಾಗುತ್ತಿದೆ. ಶ್ಮಶಾಣದಲ್ಲಿ ಬೆಳೆದ ಮಾತ್ರಕ್ಕೆ ಹೂವು ತನ್ನ ಸುವಾಸನೆಯನ್ನು ಕಳೆದುಕೊಳ್ಳಬೇಕೆ? ಸ್ವತಃ ಹರಿಶ್ಚಂದ್ರನ ಆರಾಧ್ಯದೈವ ಸ್ಮಶಣದವಾಸಿ ಶಿವನಲ್ಲವೆ? ನೀವು ಹೊಲತಿಯರೆಂದ ಮೇಲೆ, ನಿಮಗಿರುವ ಜವ್ವನ, ಚೆಲುವು, ಜಾಣತನ ಇವೆಲ್ಲಾ ವ್ಯರ್ಥ. ಅವುಗಳಿದ್ದ ಮಾತ್ರಕ್ಕೆ ನಿಮ್ಮನ್ನು ರಮಿಸಲಾಗದು ಎನ್ನುತ್ತಾನೆ. ಅವರು ಆಡುವ ಮಾತಿಗೂ ಹೊಲೆತನದ ಆರೋಪವನ್ನು ಹೊರಿಸುತ್ತಾನೆ. ಏಕೆಂದರೆ ಅವನ ಪ್ರಕಾರ ಅವರು ಹೊಲತಿಯರು. ಅವರು ಹೊಲತಿಯರಲ್ಲದಿದ್ದ ಪಕ್ಷದಲ್ಲಿ ಹರಿಶ್ಚಂದ್ರನ ವಾದ ಏನಾಗಿರುತ್ತಿತ್ತು?
ಗಾಣರಾಣಿಯರು: (ವ್ಯಂಗ್ಯವಾಗಿ) ಹಾಡನೊಲಿದು ಆಲಿಸಿದ ಕಿವಿಗೆ ಹೊಲೆಯಿಲ್ಲ! ಮಾತಾಡಿ ಹೊಗಳಿದ ಬಾಯ್ಗೆ (ನಾಲಗೆ) ಹೊಲೆಯಿಲ್ಲ! ರೂಪನೆಱೆ ನೋಡಿದ ವಿಲೋಚನಕೆ (ಕಣ್ಣು) ಹೊಲೆಯಿಲ್ಲ! ಮೆಯ್ ಮುಡಿಗಳಿಂ ಸುಳಿವ ತಂಗಾಳಿಯಿಂ ತೀಡುವ ಸುಗಂಧಮಂ ವಾಸಿಸಿದ ನಾಸಿಕಕೆ ಹೊಲೆಯಿಲ್ಲ! ಸೋಂಕಿಂಗೆ (ಚರ್ಮ) ಹೊಲೆಯುಂಟಾಯ್ತೆ? ಕೂಡಿರ್ದ ಪಂಚೇಂದ್ರಿಯಂಗಳೊಳು ನಾಲ್ಕು ಅಧಮ, ಒಂದು (ಚರ್ಮ) ಅಧಿಕವೇ?
ಹರಿಶ್ಚಂದ್ರ: ಕಂಡಱಿವವೈಸಲೇ ನಯನೇಂದ್ರಿಯಂ, ಘ್ರಾಣಕೊಂಡಱಿವವೈಸಲೇ ವಾಸನೆಯ, ಕರ್ಣಂಗಳುಂಡಱಿವವೈಸಲೇ ಶಬ್ದಮಂ ದೂರದಿಂದ ಅಲ್ಲದೆ ಅವು ಮುಟ್ಟಲಿಲ್ಲ! ಭಂಡತನವು ಈ ಮಾತು. ಇದಕ್ಕೆ ಉಪಮಾನವೇ? ಕೆಂಡವನು ಮುಟ್ಟಿದಡೆ ಬೇವಂತೆ ಕೇಳ್ದಡಂ, ಕಂಡು ವಾಸಿಸಿದಡಂ ಬೆಂದವೇ? ಏಗೆಯ್ದಡಂ ಕುಲಜರ್ ಅಧಮ ಸತಿಯರ ನೋಡಲಾಗದು. ಅಱಿಯದೆ ಪಾಪದಿಂ ನೋಡಿದಡೆ ನುಡಿಸಲಾಗದು. ಎಂತಕ್ಕೆ ನುಡಿಸಿದಡೆ ಮನ್ನಿಸಲಾಗದು. ಅನುಗೆಟ್ಟು ಮನ್ನಿಸಿದಡೆ ಮೇಗೆ ಏನುವಂ ಕರೆದು ಕೊಡಲಾಗದು. ಇತ್ತಡೆ ಅವರೇಗಯ್ಯಲೊಪ್ಪದು. ಎನಗಿಂದು ನೀವು ಅಂಗನೆಯರ್ ಆಗಿಪ್ಪೆವೆಂದಿರೈ; ಸಲ್ಲದ ಒಡತಿಯರಪ್ಪೆವು ಎನಲು ತೀರದು. ಕಾಳುಗೆಡೆಯದೆ ನೀವು ಹೋಗಿ.
ಕುಲಜರಾದವರು ಅಧಮ ಸತಿಯರನ್ನು ನೋಡಬಾರದು; ನೋಡಿದರೂ ಮಾತನಾಡಿಸಬಾರದು; ಮಾತನಾಡಿಸಿದರೂ ಒಪ್ಪಿಕೊಳ್ಳಬಾರದು; ಆ ಕ್ಷಣಕ್ಕೆ ಬುದ್ದಿಗೆಟ್ಟು ಒಪ್ಪಿಕೊಂಡರೂ, ಕರೆದು ಏನನ್ನು ಕೊಡಲಾಗದು! ಕೊಟ್ಟರೆ ಅದು ಅನುಚಿತ! ಹರಿಶ್ಚಂದ್ರ ಶೋಷಕರ ವಕ್ತಾರನಂತೆ ಮಾತನಾಡುತ್ತಿದ್ದಾನೆ. ದುರಂತವೆಂದರೆ, ಇದುವರೆವಿಗೂ ಆತ ಅದನ್ನೇ ಮಾಡಿದ್ದಾನೆ. ಅವರನ್ನು ನೋಡಿದ್ದಾನೆ; ಅವರೊಂದಿಗೆ ಮಾತನಾಡಿದ್ದಾನೆ. ಅವರನ್ನು ಮನ್ನಿಸಿದ್ದಾನೆ. ಅವರಿಗೆ ತನ್ನ ಆಭರಣಗಳನ್ನು ಕೊಡಲು ಉದ್ದೇಶಿಸಿದ್ದಾನೆ. ಅಂದರೆ ಆತನೂ ಅನುಚಿತವಾದುದನ್ನು ಮಾಡಲೆಳೆಸಿದ್ದನೆ!?
ಪಾಪ, ಗಾಣರಾಣಿಯರಿಗೆ ನಿರಾಶೆಯಾಗುತ್ತದೆ. ಆದರೂ ಪಟ್ಟು ಬಿಡದೆ “ಸತ್ಕುಲಜಭೂಪ ನಿನ್ನಯ ಸಂಗದಿಂ ಶಾಪದಿಂದಾದ ದುಷ್ಕುಲಂ ಶುದ್ಧವಪ್ಪುದು ಎಂಬ ಅಪೇಕ್ಷೆಯಿಂ ಬಂದೆವು.” ಎನ್ನುತ್ತಾರೆ. ಅವರಿಗೆ ಆರೋಪಿತವಾಗಿರುವ ದುಷ್ಕುಲ ಶಾಪದಿಂದಲೇ ಆದುದು ಎಂದು ಭಾವಿಸಿದರೂ, ಶಾಪವಿಮೋಚನೆ ಆಗಲೇ ಬೇಕಲ್ಲವೆ? ದುಷ್ಕುಲದ ಶಾಪವನ್ನು ಕಳೆಯಲು ಸತ್ಕುಲಜನಾದ ರಾಜನಿಂದಲೇ ಸಾಧ್ಯ ಅಲ್ಲವೆ? ರಾಜ ಪ್ರತ್ಯಕ್ಷ ದೇವರಲ್ಲವೆ? ಇವರ ಈ ಬಲವಾದ ಪಟ್ಟಿನಿಂದ ಹರಿಶ್ಚಂದ್ರ ಅಲ್ಲಾಡಿ ಹೋಗುತ್ತಾನೆ. ಭಂಡತನಕ್ಕೆ ಬಿದ್ದವನಂತೆ ವಾದಕ್ಕೆ ನಿಲ್ಲುತ್ತಾನೆ.
ಹರಿಶ್ಚಂದ್ರ: (ಕೋಪದಿಂದ) ನಿಮಗೋಸುಗ ಎನ್ನ ಕುಲಮಂ ಕೆಡಿಪೆನೆ?
ಗಾಣರಾಣಿಯರು: ಪಾಪಿಗಳ ಪಾಪಮಂ ತೊಳೆವ ಗಂಗೆಗೆ ಪಾಪಲೇಪವುಂಟಾಯ್ತೆ, ಹೇಳು?
ಹರಿಶ್ಚಂದ್ರ: ಕುಲಧರ್ಮವು ಈ ಪಂಥವಲ್ಲ. ಕೊಡವಾಲ ಕೆಡಿಸುವೊಡೆ ಆಮ್ಲ ಎನಿತಾಗಬೇಕು?
ಕೋಟ್ಯಂತರ ಜನರ ಪಾಪವನ್ನು ತೊಳೆಯುತ್ತಿದ್ದರೂ ಗಂಗೆ ಪವಿತ್ರಳಾಗಿಯೇ ಉಳಿದಿದ್ದಾಳಲ್ಲ – ಇದು ಅಮೂರ್ತಕಲ್ಪನೆ. ನೂರು ಒಳ್ಳೆಯ ಹಣ್ಣುಗಳ ನಡುವೆ ಒಂದು ಕೆಟ್ಟ ಹಣ್ಣು ಇಟ್ಟರೆ ಎಲ್ಲ ಹಣ್ಣುಗಳೂ ಕೆಟ್ಟು ಹೋಗುತ್ತವೆ – ವಾಸ್ತವ ಮತ್ತು ಮೂರ್ತಕಲ್ಪನೆ. ಇಲ್ಲಿ ಇಬ್ಬರೂ ತರ್ಕಕ್ಕೆ ಬಿದ್ದು ವಾದಿಸುತ್ತಿರುವುದರಿಂದ ಅವರು ಆಶ್ರಯಿಸಿರುವ ಉದಾಹರಣೆಗಳು ಅದಲು ಬದಲಾಗಿವೆ ಅನ್ನಿಸುತ್ತದೆ. ಮಾತು ಸೋತುದರ ಸಂಕೇತ! ಈ ಮಾತುಗಳ ನಂತರ ಇಬ್ಬರ ಮಾತುಗಳಲ್ಲಿಯೂ ಚರ್ಚೆಯ ಅಂತ್ಯದ ಸುಳಿವು ಸಿಗುತ್ತದೆ. ಹರಿಶ್ಚಂದ್ರನೇ ಮೊದಲಿಗನಾಗಿ ಅವರಿಗೆ ದೈಹಿಕವಾಗಿ ಶಿಕ್ಷಿಸಲು ಮುಂದಾಗುತ್ತಾನೆ.
ಗಾಣರಾಣಿಯರು: ಮಾತಿಂಗೆ ಮಾತು ಕೊಡಲು ಅರಿದು. ನಿನ್ನಯ ನುತಖ್ಯಾತಿಗೆ, ಅದಟಿಂಗೆ, ರೂಪಿಂಗೆ, ಸುರಚಿರಗುಣವ್ರಾತಕ್ಕೆ, ಹರಯಕ್ಕೆ, ಗರುವಿಕೆ ಮನಸಂದು ಮರುಳಾಗಿ ಮತಿಗೆಟ್ಟೆವು. ಓತು ಬಂದವರನ್ ಉಪಚರಿಸದೆ ಇಪ್ಪುದು ನಿನಗೆ ನೀತಿಯಲ್ಲ! (ಭಂಡತನದಿಂದ) ಏಗೆಯ್ದಡಂ ಗಂಡನಾದಲ್ಲದೆ ಆತುರಂ ಪೋಗದು! ಇನ್ನು ಒಲಿದಂತೆ ಮಾಡು. ನಿನ್ನಯ ಬೆನ್ನು ಬಿಡೆವು.
ಹರಿಶ್ಚಂದ್ರನಿಗೆ ಬಹಳ ಇಕ್ಕಟ್ಟಿಗೆ ಇಟ್ಟುಕೊಳ್ಳುತ್ತದೆ. ಅವನ ಪ್ರಕಾರ ಅವರ ಹಾಡು ಕೇಳಿದ್ದೇ ಅವನ ತಪ್ಪು. ಬೀದಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಹೊಕ್ಕಿಸಿಕೊಂಡಂತಾಗಿಬಿಟ್ಟಿದೆ ಆತನಿಗೆ. ಇದುವರೆಗೂ ರಾಜನೆಂಬ ಕಾರಣದಿಂದ ಅಧಿಕಾರಯುತನಾಗಿಯೂ, ತುಸು ಸಂಯಮದಿಂದಲೂ ವಾದಿಸುತ್ತಿದ್ದವನು, ಈಗ ತನ್ನ ಪುರುಷ ಅಹಂಕಾರವನ್ನೂ ಸೇರಿಸಿಕೊಂಡು ಅವರನ್ನು ದೈಹಿಕವಾಗಿ ದಂಡಿಸುವ ಮಟ್ಟಕ್ಕೆ ಇಳಿಸುಬಿಡುತ್ತಾನೆ.
ಹರಿಶ್ಚಂದ್ರ: ಬಳಿವಿಡಿದು ಬಂದು ಮಾಡುವುದೇನು? ನಮ್ಮ ಬೆಂಬಳಿಯಲ್ ಎನಿಬರು ಹೊಲೆಯರಿಲ್ಲ.
ಗಾಣರಾಣಿಯರು: (ಮತ್ಸರದಿಂದ) ಹಗೆ ಬಿಡೆವು. ’ಎಳಸಿ ಮೆಚ್ಚಿಸಿ, ಮರುಳ್ಗೊಳಿಸಿ ಮತ್ತೆ ಒಲ್ಲನ್ ಅವನಿಪನ್’ ಎಂದು ಮೊಱೆಯಿಡುತ್ತ ಇಳೆಯೊಳಗೆ ಸಾಱುತ್ತ, ದೂಱುತ್ತ ಬಪ್ಪೆವು!
ಹರಿಶ್ಚಂದ್ರ ಕೋಪದಿಂದ ದಡದಡನೆ ಎದ್ದು ‘ಹಲ್ಲ ಕಳೆ, ಬಾಯ ಹರಿಯ ಕೊಯ್, ಹೊಡೆ ಹೊಡೆ. ಎನ್ನುತ್ತ, ಎದ್ದು ಚಾವಟಿಯನ್ನು ತೆಗೆದು ಹೊಡೆಯುತ್ತಾನೆ. ಆತನೊಂದಿಗೆ ಮಂತ್ರಿಯೂ ಕೈಜೋಡಿಸುತ್ತಾನೆ. ಒಬ್ಬರೊಬ್ಬರನು ‘ಬೆನ್ನೊಡೆಯೆ, ಮುಡಿ ಹುಡಿಯೊಳಗೆ ಹೊರಳೆ, ಹಲು ಬೀಳೆ, ಬಾಯೊಡೆಯೆ, ಮೆಯ್ ನೋಯೆ, ಕಯ್ಯು ನಡೆದಲ್ಲಿ ನಡೆದು, ಹೊಕ್ಕಲ್ಲಿ ಹೊಕ್ಕು ಓಡಿ, ಹೋದೆಡೆಗೆ ಬೆನ್ನಟ್ಟಿ, ರುಧಿರಂ ಬಸಿಯೆ ಹೊಡೆದು’ ಓಡಿಸಿ ಹಿಂತಿರುಗುತ್ತಾರೆ. ಅವರು ಒರಲುತ್ತ ವಿಶ್ವಾಮಿತ್ರನೆಡೆಗೆ ಬಂದು ’ನಿಷ್ಕಾರಣಂ ನೃಪತಿ ಹೊಡೆದನ್. ಎಲೆ ಕೌಶಿಕಮುನೀಂದ್ರ, ಮೊಱೆಯೋ’ ಎಂದು ದೂರು ಹೇಳುತ್ತಾರೆ.
ಗಾಣರಾಣಿಯರು: (ವಿಶ್ವಾಮಿತ್ರನ ಮುಂದೆ ದುಃಖವನ್ನು ನಟಿಸುತ್ತಾ) ಆರ ಮನೆಯವರೆಂದು ಕೇಳ್ದಡೆ, ಎರಡನೆಯ ಪುರವೈರಿ ವಿಶ್ವಾಮಿತ್ರಮುನಿಯ ಮನೆಯವರೆಂದಡೆ – ಆ ರಾಯನೆದ್ದು, ಕಯ್ಯಾಱೆ ಸದೆಬಡಿದನ್ ಎಮ್ಮಂ! ನಿರಪರಾಧಿಗಳನು. ಕಾರುಣ್ಯ ಚಿತ್ತದಿಂ ಕಳುಹಿ ಕೊಲಿಸಿದೆ, ತಂದೆ. ಓರಂತೆ ಕೇಳು. (ಇಲ್ಲಿ ಗಾನರಾಣಿಯರು ಸುಳ್ಳು ಹೇಳುತ್ತಿದ್ದಾರೆ. ಅಲ್ಲಿ ಅವರು ಹರಿಶ್ಚಂದ್ರನಿಗೆ ನಾವು ವಿಶ್ವಾಮಿತ್ರನ ಮಕ್ಕಳೆಂದು ಹೇಳಿರಲೇ ಇಲ್ಲ! ಮುಂದೆ ಹರಿಶ್ಚಂದ್ರ ವಿಶ್ವಾಮಿತ್ರನಿಗೆ ಯಾರೋ ಬೇರೆಯವರೆಂದು ತಿಳಿದು ಹೊಡೆದೆ ಎನ್ನುತ್ತಾನೆ)
ವಿಶ್ವಾಮಿತ್ರ ಮುಖದಲ್ಲಿ ಸಂತೋಷವನ್ನು ಪ್ರಕಟಿಸುತ್ತಾ “ಎನ್ನಯ ಮನೋರಥಂ ಕೈಸಾರ್ದುದು! (ಗಾಣರಾಣಿಯರ ಕಡೆ ತಿರುಗಿ) ಅಳಲು ಬೇಡ” ಎಂದು ಹರಿಶ್ಚಂದ್ರನಲ್ಲಿಗೆ ಬರುತ್ತಾನೆ. ತನ್ನ ಮಕ್ಕಳಿಗಾದ ಅನ್ಯಾಯಕ್ಕೆ ನ್ಯಾಯ ಕೇಳುತ್ತಾನೆ. “ಕಲೆಗೆ ಮನ್ನಣೆ ಕೊಡುತ್ತೀಯಾ ಎಂದು ಕೇಳಿದರೆ, ಸತ್ತಿಗೆ ಕೊಡುವುದಿಲ್ಲ ಎನ್ನಬಹುದಿತ್ತು; ಸಂಗ ಮಾಡುವುದಿಲ್ಲ ಎಂದು ಹೇಳಿದ್ದರೆ ಸಾಕಿತ್ತು; ಹೊಡೆದುದು ಏಕೆ? ಆ ಹೆಣ್ಣುಗಳನ್ನು ಹೊಲತಿಯರೆನ್ನುವ ಮೂಲಕ ನನ್ನನ್ನೂ ಹೊಲೆಯ ಎನ್ನುತ್ತಿದ್ದೀಯಾ?” ಹೀಗೆ ವಿಶ್ವಾಮಿತ್ರ ಇನ್ನೊಂದು ರೀತಿಯಲ್ಲಿ ಭಂಡತನವನ್ನು ಪ್ರದರ್ಶಿಸುತ್ತಾನೆ. ಇಲ್ಲಿಯವರೆಗೂ ಗಾನರಾಣಿಯರ ಪರವಾಗಿ ಸಹಾನುಭೂತಿಯಿಂದಿದ್ದ ಸಹೃದಯರ ಮನಸ್ಸು ಇಲ್ಲಿಂದ ಮುಂದೆ ಹರಿಶ್ಚಂದ್ರನ ಪರವಾಗಿ ವಾಲುತ್ತದೆ.
“ಮುನಿಗೆ ಹೊಲೆ ಯಾವುದು?’ ಎಂಬ ಪ್ರಶ್ನೆಯನ್ನೆತ್ತಿಕೊಂಡು, ‘ಅತಿ ಕೋಪ, ಬದ್ಧ ದ್ವೇಷ, ಅನಿಮಿತ್ತ ವೈರ’ ಎಂದು ಹೇಳಿ, ‘ಅದರಿಂದ ಹುಟ್ಟಿದರಾಗಿ’ ವಿಶ್ವಾಮಿತ್ರಸಂಭವೆಯರಾದ ಗಾಣಗಾತಿಯರು ‘ಹೊಲತಿ’ಯರಾದರು ಎಂದು ರಾಘವಾಂಕ ವ್ಯಾಖ್ಯಾನಿಸುತ್ತಾನೆ. ಎಂದರೆ ‘ಅತಿಕೋಪ’, ಬದ್ಧದ್ವೇಷ, ಅನಿಮಿತ್ತ ವೈರ’ ಇತ್ಯಾದಿ ತಾಮಸ ಗುಣಗಳಿದ್ದ ಪಕ್ಷದಲ್ಲಿ ಅವನು ಮುನಿಯಾಗಿದ್ದರೂ, ಅದು ಅವನ ಹೊಲೆತನಕ್ಕೆ ಸಾಕ್ಷಿ ಎಂಬುದು ಇಲ್ಲಿನ ಅರ್ಥ”. ಎಂಬ ಜಿ.ಎಸ್.ಎಸ್. ಅವರ ಮಾತುಗಳು ಸಹಜವಾಗಿಯೇ ಇವೆಯಾದರೂ “ಗಾಣಗಾತಿಯರು, ವಿಶ್ವಾಮಿತ್ರನಂಥ ಋಷಿಯ ಕನ್ಯೆಯರಾದರೂ ಆತನ ತಾಮಸಗುಣಗಳಿಂದ ಹುಟ್ಟಿ, ಹರಿಶ್ಚಂದ್ರನಂಥ ಸತ್ಯವಂತನನ್ನು ಹಾದಿಗೆಡಿಸುವ ಉದ್ದೇಶಕ್ಕಾಗಿ ನಿಯುಕ್ತರಾದ್ದರಿಂದ ಅವರು ‘ಹೊಲತಿ’ಯರಾಗಿ ಕಾಣುತ್ತಾರೆ.” ಎನ್ನುವ ಮಾತುಗಳನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ.
ಜಿ.ಎಸ್.ಎಸ್. ಮುಂದುವರೆದು ಹೇಳುವ “‘ಹೊಲೆತನ’ದ ಪ್ರತೀಕವಾದ ಗಾಣಗಾತಿ ‘ಹೊಲತಿ’ಯರಿಗೂ, ಹೊಲೆಯ ಕುಲದಲ್ಲೆ ಹುಟ್ಟಿದ ವೀರಬಾಹುಕನಿಗೂ ಇರುವ ಸ್ವಭಾವದ ವ್ಯತ್ಯಾಸವನ್ನು ಗಮನಿಸಿದರೆ, ಗಾಣಗಾತಿಯರ ‘ಹೊಲೆತನ’ವೆ ನಿಜವಾದ ‘ಹೊಲೆ’ ಎನ್ನಿಸುತ್ತದೆ.” ಎಂಬ ಮಾತುಗಳನ್ನ ಅರಗಿಸಿಕೊಳ್ಳುವುದು ಕಷ್ಟ. ಇಲ್ಲಿ ಅವರು ಸ್ವ-ಇಚ್ಛೆಯಿಂದ ಆ ಕೆಲಸವನ್ನು ಅಂದರೆ, ‘ಹರಿಶ್ಚಂದ್ರನಂಥ ಸತ್ಯವಂತನನ್ನು ಹಾದಿಗೆಡಿಸುವ’ ಕೆಲಸವನ್ನು ಆಯ್ದುಕೊಂಡಿರಲಿಲ್ಲ. ಅವರು ನಿರ್ದೇಶಿತರಾಗಿದ್ದರು. ಆದ್ದರಿಂದ ಇಲ್ಲಿ ಹೊಲೆತನಕ್ಕೆ ಈಡಾಗಬೇಕಾದವನು ವಿಶ್ವಾಮಿತ್ರನೇ ಹೊರತು ಗಾನರಾಣಿಯರಲ್ಲ. ವಿಶ್ವಾಮಿತ್ರನಾದರೊ ಇಂತಹ ಯಾವುದಕ್ಕೂ ಆತ ತಲೆಕೆಡಿಸಿಕೊಂಡವನಲ್ಲ. ಆತನದು ಮುರಿದು ಕಟ್ಟುವ, ಪರ್ಯಾಯವನ್ನು ಸೃಷ್ಟಿಸುವ ಮನೋಧರ್ಮ. ಆತ ತ್ರಿಶಂಕುಸ್ವರ್ಗವನನ್ನು ಸೃಷ್ಟಿಸಿದ್ದು, ಪ್ರಸ್ತುತ ಕಾವ್ಯದಲ್ಲಿ, ಹರಿಶ್ಚಂದ್ರನಿಗೆ ತೋಂದರೆ ಕೊಡುತ್ತಲೇ, ಆತನ ಸತ್ಯಪ್ರಕಾಶಕ್ಕೆ ಅವಕಾಶ ಮಾಡಿಕೊಡುವುದು ಆತನ ಮನೋಧರ್ಮವನ್ನು ಸಮರ್ಥವಾಗಿ ಬಿಂಬಿಸುತ್ತವೆ. “‘ಹೊಲೆತನ’ ಎನ್ನುವುದು ವ್ಯಕ್ತಿಯ ಅಂತರಂಗದ ಅವಗುಣಗಳಿಗೆ ಸಂಬಂಧಿಸಿದ್ದೆ ಹೊರತು, ಅದು ಒಂದು ಜಾತಿಯನ್ನು ಕುರಿತ ಪ್ರಶ್ನೆಯಲ್ಲ ಎನ್ನುವ ತಾತ್ವಿಕ ದೃಷ್ಟಿ ರಾಘವಾಂಕನದು.” ಎಂಬ ಮಾತುಗಳಿಗೆ ಪೂರಕವಾಗಿ “ಗಾಣಗಾತಿಯರ ‘ಹೊಲೆತನ’ವೆ ನಿಜವಾದ ‘ಹೊಲೆ’” ಎಂಬ ಮಾತುಗಳು ಬಂದಿರುವುದರಿಂದ, ಅಷ್ಟರಮಟ್ಟಿಗೆ ಸ್ವೀಕಾರಾರ್ಹ.
ಜಿ.ಎಸ್.ಎಸ್. ಹೇಳುವಂತೆ “ಹರಿಶ್ಚಂದ್ರನಿಗೆ ಹೊಲತಿಯರಾದ ಗಾಣಗಾತಿಯರಿಂದ ಮೊದಲು ಪ್ರಾಪ್ತವಾಗುವ ಆಹ್ವಾನವೇ ಕಡೆಗೆ ಅವನು ವೀರಬಾಹುಕನ ಆಳಾಗಿ ಹೊಲೆಯರಿಗೆ ಉಚಿತವಾದ ಚಾಂಡಾಲತ್ವವನ್ನು ಕೈಗೊಳ್ಳುವವರೆಗೂ ಅಟ್ಟಿಸಿಕೊಂಡು ಹೋಗಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಸಾಮಾಜಿಕವಾಗಿ ಹಾಗೂ ವಾಂಶಿಕವಾಗಿ, ಉಚ್ಚವರ್ಗದ ಪ್ರತಿಷ್ಠಿತ ವ್ಯಕ್ತಿಯಾದ ಹರಿಶ್ಚಂದ್ರ, ತಾನು ಯಾವ ಸಾಮಾಜಿಕ ಸ್ತರವನ್ನು ಉದ್ದಕ್ಕೂ ನಿಕೃಷ್ಟವೆಂದೇ ಕಂಡನೋ, ಅದೇ ಸಾಮಾಜಿಕ ಸ್ತರಕ್ಕೆ ಹೋಗಿ ಮುಟ್ಟುವ ಅನಿವಾರ್ಯತೆಯಲ್ಲಿ, ಆತನ ವಂಶಪ್ರಜ್ಞೆಯ ಹಾಗೂ ಅಹಂಕಾರದ ನಿರಸನಗಳು ಈ ಕೃತಿಯಲ್ಲಿ ಕ್ರಮಬದ್ಧವಾಗಿ ಚಿತ್ರಿತವಾಗಿವೆ.” ಮುಂದೆ ತನ್ನನ್ನು ತಾನು ಮಾರಿಕೊಳ್ಳುವ ಸಂದರ್ಭದಲ್ಲಿ, ತನ್ನನ್ನು ಕೊಳ್ಳುವವನು ಒಬ್ಬ ಚಾಂಡಾಲ ಎಂದು ತಿಳಿದಾಗ ಕನಲುವ ಹರಿಶ್ಚಂದ್ರನಿಗೆ “ಹುಸಿಯ ಹೊಲೆಯನ್ನು ಹೊತ್ತ ನೀನು ಚಾಂಡಾಲನೋ, ತನ್ನ ಪಾಡಿಗೆ ತಾನು ಇರುವ ನನ್ನಂಥವನು ಚಂಡಾಲನೋ” ಎಂದು ಪ್ರಶ್ನಿಸಿ, ಹರಿಶ್ಚಂದ್ರನಿಗೆ ತನ್ನ ತಪ್ಪಿನ ಅರಿವಾಗುವಂತೆ ಮಾಡುವವನೂ ಚಂಡಾಲನಾದ ವೀರಬಾಹುಕ ಎಂಬುದು ಗಮನಾರ್ಹ. ಹೊಲತಿಯರ ವಿಷಯದಲ್ಲಿ ಕಠಿಣನಾದಷ್ಟು ವೀರಬಾಹುಕನ ಮನೆಯಲ್ಲಿದ್ದ ಹರಿಶ್ಚಂದ್ರ ಹೊಲೆತನದ ವಿಷಯದಲ್ಲಿ ಕಠಿಣನಾಗುವುದಿಲ್ಲ ಎಂಬುದನ್ನು ಗಮನಿಸಬೇಕು.”ಆದರೆ ‘ಹೊಲೆಯ’ ಎಂಬ ಜಾತಿಯನ್ನು ಕುರಿತು, ರಾಘವಾಂಕನ ನಾಯಕ ಪಾತ್ರವಾದ ಹರಿಶ್ಚಂದ್ರನ ಪ್ರತಿಕ್ರಿಯೆಯಲ್ಲಿ ನಾವು ಕಾಣುವುದು, ಎಲ್ಲ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಒಂದು ಕುಲದ ಬಗ್ಗೆ ಇರುವ ಮನೋಧರ್ಮವನ್ನೆ. ಹರಿಶ್ಚಂದ್ರನಿಗೆ ತಾನು ಸಾಮಾಜಿಕವಾಗಿ- ಆರ್ಥಿಕವಾಗಿ ಉಚ್ಚವರ್ಗಕ್ಕೆ ಸೇರಿದವನೆಂಬ ಪ್ರಜ್ಞೆಯೆ ಪ್ರಧಾನವಾಗಿದೆ. ಮತ್ತು ಅದು ಸಹಜವೂ ಆಗಿದೆ. ತಾನು ಉತ್ತಮ ವಂಶದವನು, ಚಕ್ರವರ್ತಿ, ಎಂಬ ಹೆಮ್ಮೆಯಲ್ಲಿ ಬದುಕುವ ಹರಿಶ್ಚಂದ್ರನಿಗೆ ಉದ್ದಕ್ಕೂ ಸ್ಪರ್ಧಿಯಾಗುವುದು, ಸಾಮಾಜಿಕವಾಗಿ ಅತ್ಯಂತ ಕೆಳಗಿನ ಸ್ತರವೆಂದು ಭಾವಿಸಲಾಗಿರುವ ಹೊಲೆಯರೊಂದಿಗೆ ಮಾಡಿಕೊಳ್ಳಬೇಕಾದ ಒಡಂಬಡಿಕೆಯ ಪ್ರಶ್ನೆಯೇ.” ಎಂಬ ಅವರದೇ ಮಾತುಗಳು ಹಾಗೂ ಎಲ್. ಬಸವರಾಜು ಅವರ “ಮುನಿ ಎನಿಸಿಕೊಂಡವನಿಗೆ ಹೊಲೆಯಾಗಿರುವ ಅತಿಕೋಪ, ಬದ್ಧದ್ವೇಷ ಮತ್ತು ನಿಷ್ಕಾರಣ ವೈರ – ಈ ಮೂರು ದುರ್ಗಣದಿಂದ ಹುಟ್ಟಿದವರಾಗಿ ಮಾತ್ರ ಅವರು ಹೊಲತಿಯರು. ರಾಘವಾಂಕನ ಅಸ್ಪೃಷ್ಯಕಲ್ಪನೆ ಈ ಮಟ್ಟಿಗೆ ನೀತಿಪರವಾದ್ದು, ವರ್ಣಬೇಧದ ಬರ್ಬರ ರೀತಿಯಲ್ಲ.” ಎಂಬ ಅಭಿಪ್ರಾಯಗಳು ಸಮಂಜಸವಾದವುಗಳೇ ಆಗಿವೆ.
ಹರಿಶ್ಚಂದ್ರನು ಹೊಲತಿಯರೆಂದು ಕರೆಯುವ ಗಾನರಾಣಿಯರು ಹಾಗೂ ಚಾಂಡಾಲನಾದ ವೀರಬಾಹುಕ ಇವರೇ ಆತನ ಉದ್ಧಾರಪಥದಲ್ಲಿ ಬೆಳಕಾಗಿ ನಿಲ್ಲುತ್ತಾರೆ! ಗಾನರಾಣಿಯರ ಪಾತ್ರಗಳು ರಾಘವಾಂಕನ ಸ್ವಂತ ಸೃಷ್ಟಿ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ತಾನು ಸೃಷ್ಟಿಸಿಕೊಂಡ ಪಾತ್ರಗಳ ಮುಖಾಂತರ ತನ್ನ ನಿಲುವನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುವಲ್ಲಿಯೂ, ತಾನು ಸತ್ಯವಂತನೆಂದು ನಿರೂಪಿಸಿಕೊಳ್ಳಲು ಹೊರಟ ಹರಿಶ್ಚಂದ್ರ, ಅದರ ಜೊತೆಗೆ ಕುಲಮದವನ್ನು ಕಳೆದು ಮಾನವೀಯನಾಗುವಂತೆ ಹಾಗೂ ಅದಕ್ಕೆ ಗಾನರಾಣಿಯರಿಗೆ ಆರೋಪಿತವಾಗುವ ಹೊಲೆತನವೇ ಕಾರಣವೆಂಬಂತೆ ಕತೆಯನ್ನು ಬೆಳೆಸುವಲ್ಲಿಯೂ, ಮುಂದೆ ಕಥಾನಾಯಕನ ಪರವಾದ ಸಹಾನುಭೂತಿಯನ್ನು ಸಹೃದಯರು ಹೊಂದುವಂತೆ ಮಾಡುವಲ್ಲಿಯೂ, ಇಡೀ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿಯೂ ರಾಘವಾಂಕ ಕವಿಯಾಗಿ ಗೆಲ್ಲುತ್ತಾನೆ; ಹರಿಶ್ಚಂದ್ರಚಾರಿತ್ರ್ಯಂ ಕಾವ್ಯವಾಗಿ ಗೆಲ್ಲುತ್ತದೆ. ರಸಿಕರಿಗೊಂದು ರಸಯಾತ್ರೆಯ ಅವಕಾಶವಂತೂ ಇದ್ದೇ ಇದೆ.

Thursday, July 11, 2013

ರನ್ನ ಒಬ್ಬ ಮನಶ್ಯಾಸ್ತ್ರಜ್ಞನೂ ಹೌದು!

ರನ್ನನ ’ಸಾಹಸಭೀಮವಿಜಯಂ’ ಕಾವ್ಯದಲ್ಲಿ ದುರ್ಯೋಧನ ಪ್ರತಿನಾಯಕನಾಗಿ ವಿಜೃಂಭಿಸಿದ್ದಾನೆ. ದುರ್ಯೋಧನನ ಚಲ, ಅಹಂಕಾರ, ಜಿಗುಟುತನ, ಭಂಡತನ, ಸ್ವಾಭಿಮಾನ, ದುರಭಿಮಾನ, ದ್ವೇಷಮನೋಭಾವ, ಕುಟಿಲತೆ, ಚಂಚಲತೆ, ದುಡುಕುತನ ಎಲ್ಲವನ್ನೂ ರನ್ನ ಚಿತ್ರಿಸಿದ್ದಾನೆ. ದುರಂತ ಸನ್ನಿವೇಶದ ಮನುಷ್ಯನೊಬ್ಬನ ಮನಸ್ಥಿತಿ ಹೇಗಿದ್ದಿರಬಹುದು ಎಂಬುದನ್ನು ರನ್ನ ಬಿಟಿಸಿಟ್ಟಿದ್ದಾನೆ. ಪ್ರಸ್ತುತ, ರನ್ನನ ಜಾಣ್ಮೆಯನ್ನು ತೋರಿಸುವ ಒಂದು ಪ್ರಸಂಗವನ್ನು ನೋಡಬಹುದು. ಅದು ದುರಂತನಾಯಕನೊಬ್ಬನ ಚಿತ್ರಣವೂ ಆಗಿರುವುದು ಮಾತ್ರ ವಿಶೇಷ.
ದುರ್ಯೋಧನ ಒಬ್ಬನನ್ನು ಬಿಟ್ಟು ಇಡೀ ಕೌರವ ಸೇನೆಯಲ್ಲಾ ನಾಶವಾಗಿದೆ. ಸಂಜಯನ ಸಹಾಯದಿಂದ ಯುದ್ಧಭೂಮಿಯಲ್ಲಿ ಪರ‍್ಯಟನ ನೆಡೆಸುತ್ತಾನೆ. ಅಲ್ಲಿ ಆತ ಕಾಣುವ ದೃಶ್ಯಗಳೇ ಮುಂದಿನ ಅವನ ನಿರ್ಧಾರಗಳನ್ನು ಗಟ್ಟಿಗೊಳಿಸುವಂತಹವು. ಆದರೆ ತನ್ನ ಅಪಾರ ಬಂಧು, ಬಳಗ, ಸಹೋದರರ, ಸ್ನೇಹಿತರ ಕೊಳೆಯುತ್ತಿರುವ ಶವಗಳನ್ನು ನೋಡಿ ಆತನ ಮನಸ್ಥಿತಿ ಹೇಗಾಗಿರಬೇಡ. ಆತನ ಗೋಳಾಟವೇ ಅಲ್ಲಿ ಕಾರುಣ್ಯದ ಕಡಲಾಗುತ್ತದೆ. ಆದರೆ, ಆಗಿನ ಆತನ ಅಭಿವ್ಯಕ್ತಿಯಲ್ಲಿ ಪ್ರಾಮಾಣಿಕತೆಯಿತ್ತೆ? ಅಥವಾ, ಸತ್ತಮೇಲೆ ಕೆಟ್ಟ ಮಾತೇಕೆ ಎಂದು, ಸತ್ತವರ ಬಗ್ಗೆ ಅಭಿಮಾನದಿಂದ ಮಾತನಾಡಿದನೆ? ಇದನ್ನು ಮನಗಾಣುವ ಮೊದಲು, ಆತ ಯುದ್ಧಭೂಮಿಯನ್ನು ಪ್ರವೇಶಿಸದ ಸಂದರ್ಭದಲ್ಲಿ, ತನ್ನ ಸೇನೆಗೆ ಆದ ಗತಿ, ತನಗಾದ ಸೋಲಿನಿಂದಾಗಿ ಆತ ನೋವಿನಿಂದ, ಬೇಸರದಿಂದ ಆಡಿದ ಮಾತುಗಳನ್ನು ಗಮನಿಸಬೇಕು. ಈ ಸಂದರ್ಭದಲ್ಲಿ ಆತ ದ್ರೋಣರ ಬಗ್ಗೆ ಹೇಗೆ ಮಾತನಾಡುತ್ತಾನೆ ನೋಡಿ.
ಈ ದ್ರೌಣಿಯುಂ ದ್ರೋಣನುಂ ಜೋಳದ ಪಾಳಿಯಂ ಬಗೆದರಿಲ್ಲಾ.
ಇಸಲ್ ಅಂಬಂ ತಿರುವಾಯ್ಗೆ ತಂದಱವರೇ?
ತಾಮ್ ಇರ್ವರುಂ ಕಯ್ದುವಂ ಬಿಸುಟರ್!
ರುದ್ರನ ಅವತಾರವೆಂದೇ ನಾನು ಅಶ್ವತ್ಥಾಮನನ್ನು ಸಾಕಿದ್ದೆ. ಆದರೆ, ಆತನೂ ಅವನ ತಂದೆಯೂ ಮಾಡಿದ್ದಾದರೂ ಏನು? ಅನ್ನದ ಹಂಗೂ ಇಲ್ಲದೆ, ಬಾಣವನ್ನು ಬಿಲ್ಲಿನ ಹಗ್ಗಕ್ಕೆ ಸೋಕಿಸದೆ, ಆಯುಧವನ್ನೇ ಕೈಚೆಲ್ಲಿದರು. ಆದರೆ ನಾನು, ಶತ್ರುಸೈನ್ಯಕ್ಕೆ ಅಶ್ವತ್ಥಾಮನೊಬ್ಬನೇ ಸಾಕು ಎಂದುಕೊಂಡು ಮೋಸಹೋದೆ! ಕೋಪಾವೇಶದಿಂದ ಕ್ಷತ್ರಿಯರು ಯುದ್ಧ ಮಾಡಬಹುದು. ಹಾಗೆಂದು ಮಿಕ್ಕವರೂ (ದ್ರೋಣ, ಅಶ್ವತ್ಥಾಮರು) ಮಾಡಲಾದೀತೆ? ಇವರನ್ನು ನಂಬಿ ನನ್ನ ಮಕ್ಕಳು ತಮ್ಮಂದಿರು ಸಾಯಬೇಕಾಯಿತು.
ಪದುಳಂ ಕುಳ್ಳಿರ್ದು, ಎಮಗೆ ಆಯದ ಮಾತಂ ತಗುಳೆ ಗೞಪಿ ಪೋದಂ.
ಸಂದಿರ್ದ ಅದಟರೊಳ್ ಇಱದಱಯಂ.
ತಪ್ಪದೆ ಕಮ್ಮಱಯೋಜನ್ ಎನಿಸಿದಂ ಬಿಲ್ಲೋಜಂ!
ತಾನು ಮಾತ್ರ ಹಾಯಾಗಿ ಕುಳಿತು, ನಮಗೆ ಚೆನ್ನಾಗಿ ಹೆಚ್ಚುಗಾರಿಕೆ ಮಾತನಾಡಿ, ಎದುರಾದ ವೀರರನ್ನು ಎದುರಿಸಿ ಯುದ್ಧ ಮಾಡದೆ ಹೋದನು ಈ ದ್ರೋಣ. ಆದರೆ ತಾನು ಮಾತ್ರ, ಕಮ್ಮಾರನೂ ಓಜನೆನಿಸಿಕೊಂಡಂತೆ, ಬಿಲ್ಲೋಜ ಎನ್ನಿಸಿಕೊಂಡು ಬಿಟ್ಟ!
ಏಕೆ ಕಮ್ಮಾರನು ಓಜನಾಗಬೇಡವೆ? ಎಂಬ ಪ್ರಶ್ನೆ ಏಳುತ್ತದೆ. ಅದನ್ನೇ ಶ್ರೀ ಎಲ್. ಬಸವರಾಜು ಅವರು ವಿಶ್ಲೇಷಣೆ ಮಾಡಿದ್ದಾರೆ. ಉಪಾಧ್ಯಾಯ – ಓಜ ಎಂಬ ಬಿರುದು ವೈದಿಕದಲ್ಲಿ ಬ್ರಾಹ್ಮಣರಿಗೆ ಮೀಸಲಾಗಿತ್ತು. ಅದನ್ನು ರಾಜನಾದ ದುರ್ಯೋಧನ ಸಹಜವಾಗಿಯೇ ತನ್ನದೂ ಎಂದುಕೊಂಡಿದ್ದಾನೆ. ಆದರೆ ಜೈನವೈಶ್ಯನಾದ ರನ್ನನದೂ ಅದೇ ಅಭಿಪ್ರಾಯವೋ? ಎಂದು ಪ್ರಶ್ನಿಸಿದ್ದಾರೆ. ಕಾವ್ಯದಲ್ಲಿ ಪಾತ್ರ ಮಾತನಾಡಿದ್ದು ಅದು ಕವಿಯ ಅಭಿಪ್ರಾಯ ಆಗುತ್ತದೊ ಇಲ್ಲವೊ ಎಂಬುದು ಆಯಾಯ ಸಂದರ್ಭವನ್ನು ಅವಲಂಬಿಸಿರುತ್ತದೆ. ದುರ್ಯೋಧನ ಮೊದಲೇ ದುರಹಂಕಾರಿ. ಆತನ ಕಾಲಕ್ಕೆ ವರ್ಣವ್ಯವಸ್ಥೆ ಬಲವಾಗಿಯೇ ಇತ್ತು. ಪ್ರತಿಭಾವಂತನಾದ ಕಮ್ಮಾರನೊಬ್ಬನು ಸುಂದರವಾದ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದವನು ತನ್ನ ಹೆಸರಿನೊಂದಿಗೆ ಓಜ ಎಂಬುದನ್ನು ಸೇರಿಸಿಕೊಳ್ಳುವುದು (ಮಲ್ಲೋಜ, ಕಾಡೋಜ, ತಿಪ್ಪೋಜ) ಒಂದು ಸಾಮಾನ್ಯ ಬೆಳವಣಿಗೆಯಾಗಿತ್ತು. ಆದರೆ, ಕಲ್ಲು ಕೆತ್ತುವವನು ಓಜನಾಗುವುದನ್ನು ವರ್ಣಾಶ್ರಮದ ನೆಲೆಯಲ್ಲಿ ಯೋಚಿಸುವ ದುರ್ಯೋಧನ ಸಹಿಸಲಾರ. (ಕಮ್ಮಾರನೊಬ್ಬನು ಓಜ ಎನ್ನಿಸಿಕೊಳ್ಳುವುದನ್ನು ಸಹಿಸದ ದುರ್ಯೋಧನ, ಕರ್ಣನನ್ನು ಸಹಿಸಿಕೊಂಡಿರಲಿಲ್ಲವೆ? ಅವನನ್ನು ಅಂಗರಾಜನನ್ನಾಗಿ ಮಾಡಿರಲಿಲ್ಲವೆ? ಎಂಬ ಪ್ರಶ್ನೆಗಳು ಎದುರಾಗುತ್ತವೆಯಾದರೂ, ಅದಕ್ಕೆ ದುರ್ಯೋಧನನಿಗೆ ಬೇರೆ ಕಾರಣವಿತ್ತು ಎಂಬುದು ತಿಳಿದ ವಿಚಾರವಾಗಿದೆ. – ಆನಱವೆಂ, ಪೃಥೆಯಱವಳ್, ದಾನವರಿಪುವಱವನ್, ಅರ್ಕನಱವಂ, ದಿವ್ಯಜ್ಞಾನಿ ಸಹದೇವನಱವಂ; ನೀನಾರ್ಗೆಂದು) ಕಲ್ಲು ಕೆತ್ತುವವನೂ ಓಜ ಎನ್ನಿಸಿಕೊಂಡಂತೆ, ನೀವೂ ಬಿಲ್ಲೋಜ ಅನ್ನಿಸಿಕೊಂಡಿರಿ ಅಷ್ಟೆ ಎಂದು ದ್ರೋಣನನ್ನು ಲೇವಡಿ ಮಾಡುತ್ತಿದ್ದಾನೆ. ಅಂದ ಮಾತ್ರಕ್ಕೆ ಅದು ರನ್ನನ ಅಭಿಪ್ರಾಯವಾಗಬೇಕಿಲ್ಲ. ಏಕೆಂದರೆ ಅವಕಾಶ ಸಿಕ್ಕಾಗಲೆಲ್ಲಾ ರನ್ನ ಬ್ರಾಹ್ಮಣ ಶ್ರೇಷ್ಟತೆಯನ್ನು (ಅದೂ ದರ್ಯೋಧನನ ಬಾಯಿಂದಲೇ) ವಿರೋಧಿಸಿದ್ದಾನೆ ಎಂಬುದನ್ನು ಮುಂದೆ ಕಾಣಬಹುದು. ದುರ್ಯೋಧನನ ದೃಷ್ಟಿಯಲ್ಲಿ, ಕ್ಷತ್ರಿಯನಾದ ಆತ ಮಾತ್ರ ಶ್ರೇಷ್ಠ! ಉಳಿದವರೆಲ್ಲರೂ – ಕಮ್ಮಾರನೂ ಬ್ರಾಹ್ಮಣನೂ – ಒಂದೆ!
ಈಯಲ್, ಇಱಯಲ್, ಶರಣ್ಬುಗೆ ಕಾಯಲ್ ಕ್ಷತ್ರಿಯರ್ ಬಲ್ಲರ್.
ಅಬ್ರಹ್ಮಣ್ಯಂಭೋ ಎನಲುಂ, ಅವಿಧಾ ಅನಲುಂ ಬ್ರಾಹ್ಮಣರ್ ಬಲ್ಲರ್!
ಇಱಯಲ್ ಅವರ್ ಎತ್ತ ಅಱವರ್?
ದಾನ ಮಾಡುವುದನ್ನು, ಯುದ್ಧ ಮಾಡುವುದನ್ನು. ಶರಣು ಬಂದವರ ಕಾಪಾಡುವುದನ್ನು ಕ್ಷತ್ರಿಯರು ಮಾಡಬಲ್ಲರು. ಬ್ರಾಹ್ಮಣರಾದರೊ ಮೈಲಿಗೆಯಾದರೆ ಅಬ್ರಹ್ಮಣ್ಯಂಭೋ ಎನ್ನುತ್ತಾರೆ; ಭಯವಾದರೆ ಅವಿಧಾ ಎನ್ನುತ್ತಾರೆ. ಅವರಿಗೆ ಗೊತ್ತಿರುವುದು ಇಷ್ಟೆ! ಚತುರ್ವರ್ಣೀಯರಲ್ಲಿ, ದ್ವಿಜರಿಗೆ ದರ್ಭೆಯನ್ನು ಹಿಡಿದು ಮಂತ್ರ ಹೇಳುವ ಅಧಿಕಾರವಿದೆಯೇ ಹೊರತು ಶಸ್ತ್ರಾಸ್ತ್ರವೆಂದರೆ, ಅದು ಜಾತಿ ವಿರುದ್ಧ! (ಘಾತಿಪ ಶಸ್ತ್ರಾಸ್ತ್ರಮ್ ಅವರ್ಗೆ ಜಾತಿವಿರುದ್ಧಂ!).
ಭಾರಧ್ವಾಜಂ ಓಜಂ ಗಡ, ಚಿಃ.
ಪಾಂಡು ತನೂಜರ ಪಕ್ಕದೊಳೆ ಪಾೞಗಿಡೆ ನೆಗೞ್ದುದಱಿಂ,
ಗಡ ಬಿಲ್ಲ ಬಲ್ಮೆಯುಂ, ಕುಲಮುಂ ನಿರ್ವ್ಯಾಜಂ ಮಸುೞ್ದುವು.
ನೀತಿ ನಿಯಮವನ್ನು ಬಿಟ್ಟು ಪಾಂಡುತನಯರ ಪರವಹಿಸಿದ್ದರಿಂದ ಆತನ ಕುಲ ಮತ್ತು ಬಿಲ್ಲುವಿದ್ಯೆ ಎರಡೂ ನಿಜವಾಗಿಯೂ ಹಾಳಾದವು!
ಬೇರೆಲ್ಲರನ್ನು ಬಿಟ್ಟು, ದ್ರೋಣರನ್ನೇ ತನ್ನ ಸ್ಥಿತಿಗೆ ಕಾರಣ ಎಂದು ಭಾವಿಸಿರುವ ದುರ್ಯೋಧನನ ಈ ಕೋಪಕ್ಕೆ ಕಾರಣವೂ ಇದೆ. ಆತ ಗುರುವಾಗಿದ್ದುದು ಮತ್ತು ಅರ್ಜುನನ ಬಗ್ಗೆ ವಿಶೇಷ ಒಲವಿಟ್ಟುಕೊಂಡಿದ್ದು ಮೊದಲ ಕಾರಣವಾದರೆ, ಅರ್ಜುನನ ಬಗ್ಗೆ ಕಡುವಿರೋಧವನ್ನು ಬೆಳೆಸಿಕೊಂಡಿದ್ದ, ಆ ಕಾರಣಕ್ಕಾಗಿಯೇ ತನ್ನ ಅಂತರಂಗಕ್ಕೆ ಸೇರಿಸಿಕೊಂಡಿದ್ದ ತನ್ನ ಪ್ರಿಯಮಿತ್ರ ಕರ್ಣನ ವಿಷಯದಲ್ಲಿ ದ್ರೋಣ ನಡೆದುಕೊಂಡ ರೀತಿ ಎರಡನೆಯ ಕಾರಣವಾಗಿದೆ.
ನೆಗೞ್ದ ಇಂದ್ರ ಸುತನಿನ್ ಏಗುಂದಿದನೋ?
ಕಮಲಪ್ರಿಯ ನಂದನನ್ ಪ್ರಿಯಮಿತ್ರನೆನಗೆ,
ಅವನನ್ ಎನ್ನ ಪಕ್ಕದೆ ಪೞದು ಅಪ್ರಿಯಮಂ ಮಾಡಿದನ್
ಆ ಕಳಶಯೋನಿ.
ಕಳಶಯೋನಿ (ಕುಂಭಸಂಭವ=ದ್ರೋಣ) ಎಂದು ದ್ರೋಣನನ್ನು ಸಂಬೋಧಿಸುತ್ತಿರುವ ದುರ್ಯೋಧನನ ಸಿಟ್ಟು, ಕರ್ಣನ ಅವನ ಬಗೆಗಿನ ಪ್ರೀತಿಯನ್ನು ಅರ್ಥ ಮಾಡಿಸುತ್ತದೆ. ಅಷ್ಟಲ್ಲದೆ, ದ್ರೋಣನ ಬಗ್ಗೆ ಅವನಿಗಿರುವ ತಿರಸ್ಕಾರವನ್ನೂ ಸೂಚಿಸುತ್ತದೆ. ತನ್ನ ಗುರುವಿನ ಹುಟ್ಟನ್ನು (ಸಹಜವಾದ ಹುಟ್ಟು ಇಲ್ಲದವನು) ಪ್ರಸ್ತಾಪಿಸಿ ಹೀಯಾಳಿಸುತ್ತಿದ್ದಾನೆ, ದುರ್ಯೋಧನ. ಇಂದ್ರನ ಮಗನಾದ ಅರ್ಜುನನಿಗೆ ಯಾವುದರಲ್ಲಿ ಕಡಿಮೆ ನನ್ನ ಕರ್ಣ? ಎನ್ನುವಲ್ಲಿ, ಅರ್ಜುನನ ಹುಟ್ಟಿನ ಬಗ್ಗೆಯೂ ಇಂದ್ರಸುತ’ ಎಂದು ನೆನಪಿಸುತ್ತಾನೆ. ದ್ರೋಣ ಕರ್ಣನ ಬಗ್ಗೆ ಅಂದು ಆಡಿದ ಮಾತಿಗೆ ನಾವು ಪಂಪನನ್ನೇ ನೋಡಬೇಕು. (ಕುಲಜರನ್ ಉದ್ಧತರಂ ಭುಜಬಲಯುತರಂ ಹಿತರನ್ ಈ ಸಭಾ ಮಧ್ಯದೊಳಗ್ಗಲಿಸಿದ ಮದದಿಂ ನಾಲಗೆ ಕುಲಮಂ ತಬ್ಬುವವೋಲೆ ಉಱದೆ ನೀಂ ಕೆಡೆನುಡಿವೈ)
ದುರ್ಯೋಧನನಿಗೆ ದ್ರೋಣ ಅಶ್ವತ್ಥಾಮರ ಬಗ್ಗೆ ಇಷ್ಟೊಂದು ದ್ವೇಷ ಬರಲು ಅವರಿಬ್ಬರು ಯುದ್ಧವನು ಕೇಚೆಲ್ಲಿದ ರೀತಿ. ಕ್ಷತ್ರಿಯನಾದ ಆತನ ದೃಷ್ಟಿಯಲ್ಲಿ ಯುದ್ಧವೆಂದರೆ, ಗೆಲಲಾರ್ಪೊಡೆ ಇಱದು ಗೆಲ್ವುದು ಗೆಲಲಾಱದೊಡೆ ಅಣ್ಮಿ ಸಾವುದು, ಅಷ್ಟೆ! ಗೆಲ್ಲಲೂ ಆಗದೆ, ಸಾಯಲೂ ಆಗದೆ ದ್ರೋಣ ಅಶ್ವತ್ಥಾಮರಂತೆ ತೊಲಗುವಡೆ ’ನೆಗೞ್ತೆ ತಲಗದೆ ಇರ್ಕುಮೆ ಮೆಯ್ಯಿಂ?’
ತನ್ನವರಿಗಾದ ಗತಿ, ತನಗಾದ ಸೋಲಿನ ಹತಾಶೆಯಿಂದ ಇಷ್ಟೆಲ್ಲಾ ದ್ರೋಣರನ್ನು ದೂಷಿಸುವ ದುರ್ಯೋಧನ ದ್ರೋಣರ ಶವವನ್ನು ಕಂಡೊಡನೆ ಆತ ತೋರುವ ಪ್ರತಿಕ್ರಿಯೆ ಬೇರೆಯದೇ ತೆರನಾಗುತ್ತದೆ.
ಕಾಲಿಡಲೂ ಜಾಗವಿಲ್ಲದಂತೆ ತುಂಬಿದ್ದ ಆಯುಧಗಳ ರಾಶಿಯಲ್ಲಿ ನೆಡೆಯಲಾಗದೆ, ಆಗಲೇ ಊದಿಕೊಂಡಿದ್ದ ಹೆಣಗಳನ್ನೆ ತುಳಿಯುತ್ತಾ ಸಂಜಯನ ಜೊತೆ ಬರುವ ದುರ್ಯೋಧನ ದ್ರೋಣನ ಹೆಣವನ್ನು ಕಾಣುತ್ತಾನೆ. ಧೃಷ್ಟದ್ಯುಮ್ನ ದ್ರೋಣನ ಕೊರಳನ್ನು ಕತ್ತರಿಸುವ ಮೊದಲು ಮೃಗೀಯವಾಗಿ ದ್ರೋಣನ ತಲೆಗೂದಲನ್ನು ಹಿಡಿದಿದ್ದರಿಂದ, ಆತನ ಶಿರಸ್ತ್ರಾಣ ಅನಾಥವಾಗಿ ಬಿದ್ದಿದೆ. ದ್ರೋಣನ ಆ ಸ್ಥಿತಿಯನ್ನು ಕಂಡ ದುರ್ಯೋಧನನ ಹೊರಬರುವಷ್ಟರಲ್ಲಿ, ಆತನ ಮನಸ್ಸಿನಲ್ಲೇ ಮೂಡುವ ಭಾವನೆಗಳನ್ನು ರನ್ನ ಒಂದೇ ಸಾಲಿನಲ್ಲಿ ’ಗುರುವಂ ಲಘುಸಂಧಾನದೆ ನರನ್ ಇಸೆ’ ಎಂದು ಹೇಳುತ್ತಾನೆ. ಗುರುವೆಂಬ ಕಾರಣದಿಂದ ಅರ್ಜುನ ಹೆಚ್ಚು ನೋವುಂಟು ಮಾಡುವ ಬಾಣಗಳನ್ನು ಬಳಸದೆ, ಸುಲಭದ ಬಾಣಗಳನ್ನೇ ಬಳಸಿ ಕೊಂದಿದ್ದಾನೆ! ಇದು ಅರ್ಜುನನ ಪ್ರಶಂಸೆಯೊ? ಅಥವಾ, ಅಂತಹ ಸುಲಭ ಬಾಣಗಳನ್ನು ಎದುರಿಸಲಾಗದೆ ಪ್ರಾಣಬಿಟ್ಟ ದ್ರೋಣನ ಬಗ್ಗೆ ಇರುವ ತಿಸ್ಕಾರವೊ? (ಅದೇನೇ ಇರಲಿ, ಅಲ್ಲಿ ರನ್ನ ’ಗುರು-ಲಘುಮಿಶ್ರಿತಂ ದೊರೆಕೊಳೆ ತದ್ಗುರು ತಚ್ಛಂದೋವೃತ್ತಿಗೆ ದೊರೆಯೆನಿಸಿರ್ದುದು’ ಎಂದು ಕಾವ್ಯಮೀಮಾಂಸೆಯನ್ನೂ ಹೇಳಿಬಿಡುತ್ತಾನೆ). ಮುಂದೆ ದುರ್ಯೋಧನ ಮಾತನಾಡುತ್ತಾನೆ.
ಬಿಲ್ಲ ಬಿನ್ನಣಕೆ, ನಿಮ್ಮೊಡನೆ ಇದಿರ್ಚಿ ಕಾದಿ ಗೆಲಲ್ಕೆ,
ಗಾಂಡಿವಿಯಲ್ತು ಪಿನಾಕಪಾಣಿಯುಂ ನೆಱೆಯನ್!
ಕುಂಭಸಂಭವ, ನಿಮಗಿಂತು ಏತೆಱದಿನ್ ಸಾವುಂ ಸಂಭವಿಸಿರ್ದುದೊ?
ಅದು ನಿಮ್ಮ ಉಪೇಕ್ಷೆ ಎಂದಱಯೆನ್; ಅದು ಎನ್ನ ಕರ್ಮವಶಮ್ ಎಂದಱಯೆಂ!
ಹಿಂದೆ ಎಲ್ಲ ತಪ್ಪನ್ನೂ ದ್ರೋಣನ ಮೇಲೆ ಹಾಕಿ ದೂಷಿಸಿದ್ದ ದುರ್ಯೋಧನನೇ ಇಲ್ಲಿ ನಿಮ್ಮ ಸಾವು ನಿಮ್ಮ ಉಪೇಕ್ಷೆಯಿಂದಾದುದಲ್ಲ; ಅದು ನನ್ನ ಕರ್ಮವಶದಿಂದ ಆದುದು ಎನ್ನುತ್ತಿದ್ದಾನೆ. ಅಷ್ಟಲ್ಲದೆ, ದ್ರೋಣನ ಸಾಮರ್ಥ್ಯವನ್ನು ಅರ್ಜುನ ಮತ್ತು ಪಿನಾಕಪಾಣಿಯಾದ ಶಿವನ ಸಾಮರ್ಥ್ಯಕ್ಕಿಂತಲೂ ಹಿರಿದು ಎಂದು ಪ್ರಶಂಸಿಸುತ್ತಿದ್ದಾನೆ! ಅಲ್ಲಿ ಕಳಶಯೋನಿಜ ಎಂದು ತಿರಸ್ಕಾರದಿಂದ ನುಡಿದಿದ್ದ; ಇಲ್ಲಿ ಕುಂಭಸಂಭವ ಎಂಬುದನ್ನು ಗೌರವದ ಧ್ವನಿಯಲ್ಲಿ ಬಳಸುತ್ತಿದ್ದಾನೆ. ಇಲ್ಲಿ ದ್ರೋಣನ ಮೇಲಿನ ಸಿಟ್ಟೆಲ್ಲಾ ಒಮ್ಮೆಲೆ, ’ದ್ರುಪದಾತ್ಮಜಾತನ್ (ಧೃಷ್ಟದ್ಯುಮ್ನ) ಓವದೆ ಪುಡಿಯೊಳ್ ಪೊರಳ್ಚಿ ತಲೆಯಂ ತೆಗೆವಲ್ಲಿ ಪಿನಾಕಮ್ ಎತ್ತ ಪೋದುದೊ, ಶರವೆತ್ತ ಪೋದುದೊ, ಲಲಾಟದಿನ್ ಇಂಗಳಗಣ್ಣು ಅದೆತ್ತ ಪೋದುದೊ, ಅಲಂಪುಮ್ ಅದೆತ್ತ ಪೋದುದೋ!’ ಅಶ್ವತ್ಥಾಮನ ಮೇಲೆ ತಿರುಗಿಬಿಡುತ್ತದೆ. ಭಾರಧ್ವಾಜಂ ಓಜಂ ಗಡ, ಚಿಃ ಎಂದು ದ್ರೋಣನಿಗೆ ದಿಕ್ಕಾರ ಹೇಳಿದ್ದ, ಯುದ್ಧವನ್ನು ಸುಲಭವಾಗಿ ಕೈಚೆಲ್ಲಿದ ಎಂದು ಹೇಳಿದ್ದ ದುರ್ಯೋಧನನ ಮುಂದಿನ ಮಾತುಗಳಿವು.
ಅನ್ಯ ಸೈನ್ಯದ ಒಡಲೊಳ್ ಶರಸಂಧಾನಮನ್
ತನ್ನ ಶಿಷ್ಯರ ಮೆಯ್ಯೊಳ್ ಬಿಲ್ಬಲ್ಮೆಯಂ
ನಿಖಿಳ ದಿಕ್ಚಕ್ರದೊಳ್ ನಿಜಕೀರ್ತಿಯಂ
ಹರಪಾದಾಂಬುಜ ಯುಗ್ಮದೊಳ್ ಚಿತ್ತಮಂ
ನಿಱಸಿದಂ!
ಚಾಪಾಗಮಾಚಾರ್ಯನೊಳ್ ದೊರೆಯಾರು
ಎಂಬಿನಮ್ ಅಣ್ಮಿ ಸತ್ತ ಅಳವು ಅದೇಂ ದ್ರೋಣಂಗೆ ಮೆಯ್ವುತ್ತದೋ!
ಪ್ರತಿಯೊಬ್ಬ ಶತ್ರುವಿನ ಮೈಯಲ್ಲೂ ಬಾಣವನ್ನು ನಾಟಿಸಿ, ಬಿಲ್ವಿದ್ಯೆಯ ಗುರುವಾಗಿದ್ದ ದ್ರೋಣನಿಗೆ ಸರಿಸಮರಾರು ಎನ್ನುವಂತೆ ಹೋರಾಡಿ, ಸತ್ತ ಕೀರ್ತಿ ದ್ರೋಣನೊಬ್ಬನಿಗೆ ಮಾತ್ರ ಸಾಧ್ಯ ಎಂದು ದ್ರೋಣನ ಶೌರ್ಯವನ್ನು ಪ್ರಶಂಸಿಸುವ ಆತ, ತನ್ನ ಶಿಷ್ಯರ ಮೈಯಲ್ಲಿ ಬಿಲ್ವಿದ್ಯೆಯನ್ನು ಶಾಶ್ವತವಾಗಿ ನಿಲ್ಲಿಸಿದ ಒಳ್ಳೆಯ ಗುರುವೂ ಆಗಿದ್ದ, ಎಂದೂ ಹೊಗಳುತ್ತಾನೆ. ಮಾತಿನ ಶ್ರದ್ಧಾಂಜಲಿಯನ್ನು ಅರ್ಪಿಸಿದ ದುರ್ಯೋಧನ ’ಎನ್ನನ್ ಉಪೇಕ್ಷಿಸಿ ಕಾದಿದನ್. ಇನ್ನು ಈ ಗುರುಗೆ ಎಱಗೆನ್’ ಎಂದುಕೊಳ್ಳದೆ ದ್ರೋಣನ ಕಾಲಿಗೆ ನಮಸ್ಕರಿಸುತ್ತಾನೆ. ಅದನ್ನು ಕಂಡ ರನ್ನ (ಹೌದು ರನ್ನ!) ತಾನು ಸೃಷ್ಟಿಸಿದ ಕಲಾಕೃತಿಗೆ ತಾನೇ ಕೈಮುಗಿಯುವ ಕಲಾಕಾರನಂತೆ, ’ಪಿರಿಯರ್ ಮುನ್ನಂ ಮಾಡಿದುದನ್ ಎಡೆಯೊಳೇಂ ಮಱೆದಪರೇ?’ ಎನ್ನುವಲ್ಲಿ ದುರ್ಯೋಧನನನ್ನು ’ಪಿರಿಯರ್’ ಎಂದು ಕರೆಯುತ್ತಾನೆ.
ಆದರೆ, ದುರ್ಯೋಧನನ ಒಟ್ಟು ವ್ಯಕ್ತಿತ್ವವನ್ನು, ರನ್ನನ ಚಿತ್ರಣದ ಹಿನ್ನೆಲೆಯಲ್ಲೂ ಗಮನಿಸಿದಾಗ, ಆತ ದುರ್ಯೋಧನನ್ನು ’ಹಿರಿಯ’ ಎಂದು ಕರೆದಿರುವುದು ಅತಿಶಯೋಕ್ತಿಯಂತೆ ಕಾಣುತ್ತದೆ. ಅದಕ್ಕೇ ಶ್ರೀ ಎಲ್. ಬಸವರಾಜು ಅವರು, ’ದುರ್ಯೋಧನ ಅದೆಂಥ ದೊಡ್ಡವನು ಹಿರಿಯನು? ಚಕ್ರವರ್ತಿ ಎಂದಲ್ಲವೇ? ರನ್ನನಂತಹ ಕವಿಗಳು ತಮ್ಮ ಪೋಷಕ ಚಕ್ರವರ್ತಿಗಳನ್ನು ಸಿಕ್ಕಿದಾಗಲೆಲ್ಲಾ ಅಸಂಬದ್ಧವಾಗಿ ಹೊಗಳುವುದು ಅವರ ಘನತೆಗೆ ಅವರೇ ಮಾಡಿಕೊಂಡಿರುವ ಅವಮಾನ!’ ಎನ್ನುತ್ತಾರೆ.
ಆದರೆ, ಅದನು ಇನ್ನೊಂದು ನೆಲೆಯಲ್ಲೂ ನೋಡಬಹುದು. ದುರ್ಯೋಧನ ಸ್ವಭಾವತಃ ದುಷ್ಟ ಎಂದರೂ, ಅದು ಮಾನವ ಸಹಜವಾದ ಗುಣಗಳಲ್ಲಿ ಒಂದು. ಆತ ಬೆಳೆದ ರೀತಿ, ಆತನಿಗೆ ಒದಗಿದ ಸಂದರ್ಭ, ಸಂಸ್ಕಾರ, ಆತನ ಬದುಕು ಅವನನ್ನು ರೂಪಿಸಿರುತ್ತವೆ. ಆದರೆ ತನ್ನ ವೈಯಕ್ತಿಕ ನೆಲೆಯಲ್ಲಿ, ತನಗಾದ ನಷ್ಟ, ಅವಮಾನದ ಹಿನ್ನೆಲೆಯಲ್ಲಿ, ದ್ರೋಣನನ್ನು ಗುರುವೆಂದು ಕೂಡಾ ಭಾವಿಸದೆ, ಆತನ ಹುಟ್ಟನ್ನು ಹೀಯಾಳಿಸುತ್ತಾನೆ. ಆದರೆ, ಅದೇ ದ್ರೋಣನ ಶವದ ಮುಂದೆ ನಿಂತಾಗ, ಮಾನವ ಸಹಜವಾಗಿಯೇ ದ್ರವಿಸುತ್ತಾನೆ. ಆದರೆ, ಆತ ಆಡುವ ಮಾತುಗಳು ಮಾತ್ರ (ಮೇಲಿನ ದೂಷಣೆಯನ್ನು ಗಮನಿಸಿ ಹೇಳುವುದಾದರೆ) ಕೃತಕವೇನೊ ಅನ್ನಿಸಿಬಿಡುತ್ತವೆ. ಸಾವು ಮನುಷ್ಯನನ್ನು ಬಗ್ಗಿಸುತ್ತದೆ; ಅಥವಾ ಸಾವಿನ ಬಗ್ಗೆ ಮನುಷ್ಯನಿಗಿರುವ ಪರಿಕಲ್ಪನೆ ಆತನನ್ನು ಮೆತ್ತಗಾಗಿಸುತ್ತದೆ. ಸತ್ತ ದೇಹವನ್ನು ಕಂಡಾಗ, ಎಂತಹ ಕಲ್ಲುಹೃದಯದ ಮನುಷ್ಯನೂ ಒಂದು ಕ್ಷಣ ದ್ರವಿಸುತ್ತಾನೆ. ಹಾಗೆಯೇ ಇಲ್ಲಿ ದುರ್ಯೋಧನ ಕೂಡ. ಆದರೆ, ಇದು ದುರ್ಯೋಧನನ ಆಗಿನ ಸ್ಥಿತಿಯುನ್ನೂ ಸೂಚಿಸುತ್ತದೆ. ಶ್ರೀ ಎಲ್ ಬಸವರಾಜು ಅವರೇ ಹೇಳುವಂತೆ ದುರ್ಯೋಧನ ಸ್ತಿಮಿತಗೆಟ್ಟಿದ್ದಾನೆ. ಇದು ಒಬ್ಬ ದುರಂತನಾಯಕನ ಮನದ ಹದಗೆಟ್ಟ ಸ್ಥಿತಿಯೂ ಆದೀತು! ಒಟ್ಟಾರೆ ಇಂತಹ ಸಂದರ್ಭವನ್ನು ಸೊಗಸಾಗಿ ನಿಭಾಯಿಸಿರುವ ರನ್ನ ಒಬ್ಬ ಮನಶ್ಯಾಸ್ತ್ರಜ್ಞನೂ ಹೌದು.

Tuesday, July 02, 2013

ಬಿಸ್ಕೆಟ್ ಗಾಗಿ ಪೀಡಿಸುವ ’ಆಪೆಲ್ ವ್ಯಾಲಿ’ಯ ಮಕ್ಕಳು!

ನನ್ನ ಸ್ನೇಹಿತ ದಿನೇಶ ನಾಲ್ಕು ವರ್ಷಗಳಿಂದ ಉದ್ಯೋಗನಿಮಿತ್ತವಾಗಿ ಪಂಜಾಬ್’ನ ರೂಪಾರ್ (ರೂಪನಗರ್) ಎಂಬಲ್ಲಿ ನೆಲೆಸಿದ್ದಾನೆ. ಅಂದಿನಿಂದಲೇ ಅವನು, ನೀವೊಮ್ಮೆ ಇಲ್ಲಿಗೆ ಬನ್ನಿ. ಕಾಶ್ಮೀರ, ಪಂಜಾಬ್ ಎಲ್ಲಾ ನೋಡಿಕೊಂಡು ಹೋಗಬಹುದು ಎಂದು ಆಹ್ವಾನಿಸುತ್ತಲೇ ಇದ್ದ. ದೂರದ ಪ್ರಯಾಣ, ದುಬಾರಿ ಖರ್ಚುಗಳ ಕಾರಣದಿಂದಾಗಿ ನಾನು ಮುಂದೂಡುತ್ತಲೇ ಇದ್ದೆ. ೨೦೧೧ರಲ್ಲಿ ಒಂದೇ ವಾರದ ಅಂತರದಲ್ಲಿ ನಾವಿಬ್ಬರೂ ಒಂದೇ ತೆರನಾದ ಕಾರುಗಳನ್ನು ಖರೀದಿಸಿದ್ದೆವು. ಅದಾಗಿ ಆರೇಳು ತಿಂಗಳ ನಂತರ, ದಿನೇಶ ಒಂದು ದಿನ ಪೋನ್ ಮಾಡಿ, ’ಈಗಲಾದರೂ ಬಂದರೆ, ನನ್ನ ಕಾರಿನಲ್ಲೇ ಕಾಶ್ಮೀರ ಎಲ್ಲಾ ಸುತ್ತಬಹುದು. ಮುಂದೆ ನನಗೆ ಟ್ರಾನ್ಸ್ಫರ್ ಆದರೆ, ಇಲ್ಲೆಲ್ಲಾ ಸ್ವಂತ ಕಾರಿನಲ್ಲಿ ಸುತ್ತಲು ಆಗುವುದಿಲ್ಲ’ ಎಂದಿದ್ದ. ಕಾಶ್ಮೀರದ ಕಣಿವೆಗಳಲ್ಲಿ ಕಾರು ಡ್ರೈವ್ ಮಾಡುವ ಮೋಹದಿಂದ ನಾನು ತಪ್ಪಿಸಿಕೊಳ್ಳಲಾಗಲಿಲ್ಲ. ಮುಂದಿನ ಎರಡೇ ತಿಂಗಳಲ್ಲಿ ಕಾಶ್ಮೀರ ಪ್ರವಾಸ ನಿರ್ಧಾರವಾಗಿಬಿಟ್ಟಿತ್ತು.
ನಾನು, ನನ್ನ ಹೆಂಡತಿ ಮಗಳು ಮತ್ತು ನಮ್ಮ ಅಂಕಲ್ ಇಲ್ಲಿಂದ ನೇರವಾಗಿ ವಿಮಾನದಲ್ಲಿ ಶ್ರೀನಗರಕ್ಕೆ ಬರುವುದೆಂತಲೂ, ಆತ ರೂಪಾರಿನಿಂದ ಶ್ರೀನಗರಕ್ಕೆ ತನ್ನ ಹೆಂಡತಿ ಮಗಳೊಂದಿಗೆ ಕಾರಿನಲ್ಲಿ ಬರುವುದೆಂತಲೂ ನಿರ್ಧಾರವಾಯಿತು. ಇಬ್ಬರಿಗೂ ಡ್ರೈವಿಂಗ್ ಗೊತ್ತಿರುವುದರಿಂದ ಹೆಚ್ಚಿನ ತೊಂದರೆ ಏನಿಲ್ಲ ಎಂದು, ಕಾರಿನಲ್ಲಿ ಹೋಗುವುದಕ್ಕೆ ಆತಂಕಪಟ್ಟ ಮನೆಯವರಿಗೆ ಸಮಾಧಾನ ಮಾಡಿದ್ದೆವು. ಅದಕ್ಕೆ ಸಿದ್ಧತೆಗಳೂ ಆರಂಭವಾದವು.
ಕಾಡಿದ ಕಾಶ್ಮೀರ ಎಂಬ ಗುಮ್ಮ!
ನಾವು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗುತ್ತೇವೆ ಎಂದಾಕ್ಷಣ, ನಮ್ಮ ಮನೆಗಳವರು ’ಅಲ್ಲಿ ದಿನ ನಿತ್ಯ ಗಲಾಟೆ ಇರುತ್ತದಂತೆ, ಭಯೋತ್ಪಾದಕರ ಕಾಟ’ ಎಂದು ಆತಂಕ ವ್ಯಕ್ತಪಡಿಸಿದರೂ, ನಾವು ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದೆವು. ಕೆಲವು ಸ್ನೇಹಿತರಂತೂ, ಅಲ್ಲಿ ಹಾಗೆ, ನಮ್ಮವರೊಬ್ಬರು ಹೋಗಿದ್ದಾಗ ಹೀಗಾಯಿತು, ಇತ್ಯಾದಿ ಇತ್ಯಾದಿ ಸುದ್ದಿಗಳನ್ನು ಹೇಳುತ್ತಲೇ ಇದ್ದರು. ಆ ದಿನಗಳಲ್ಲಿ ಮಾದ್ಯಮಗಳಲ್ಲೂ ಶ್ರೀನಗರದ ಒಂದೆರಡು ಕಡೆ ಗುಂಡಿನ ಧಾಳಿ ನಡೆದ ಬಗ್ಗೆ ವರದಿಗಳು ಬಂದಿದ್ದವು. ಭಾರತದಿಂದ ಕಾಶ್ಮೀರವನ್ನು ಎಂದೂ ಬೇರ್ಪಡಿಸಿ ನೋಡಿರದ ನನ್ನ ಮನಸ್ಸು, ನಮ್ಮದೇ ದೇಶದ ಒಂದು ಭಾಗಕ್ಕೆ ಹೋಗಿ ಬರುವುದಕ್ಕೆ ಏಕಿಷ್ಟು ಆತಂಕ? ನಾನು ಹೋಗಿಯೇ ಬರುತ್ತೇನೆ ಎಂದು ದಂಗೆಯೇಳುತ್ತಿತ್ತು. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್’ಗಾಗಿ ಸರದಿಯಲ್ಲಿ ನಿಂತಿದ್ದಾಗ, ಸ್ನೇಹಿತರಾದ ಪ್ರಕಾಶ್ ಹೆಗ್ಗಡೆಯವರು ಸಿಕ್ಕಿದರು. ಅವರೂ ಸಿಮ್ಲಾಗೆ ಹೊರಟಿದ್ದರು. ನಾವು ಶ್ರೀನಗರಕ್ಕೆ ಹೋಗುತ್ತಿದ್ದೇವೆ ಎಂದು ತಿಳಿದಾಕ್ಷಣ ಅವರೂ ಆತಂಕಕ್ಕೆ ಒಳಗಾದರು. ’ನನಗೆ ಅಲ್ಲಿ ಪರಿಚಿತರೊಬ್ಬರು ಒಳ್ಳೆಯ ಪೊಸಿಷನ್ನಿನಲ್ಲಿದ್ದಾರೆ. ಅಲ್ಲಿ ನಿಮಗೇನಾದರೂ ತೊಂದರೆಯಾದರೆ ತಿಳಿಸಿ’ ಎಂದು ಮತ್ತೆ ಮತ್ತೆ ಹೇಳಿದ್ದಲ್ಲದೆ, ಪೋನ್ ನಂಬರನ್ನೂ ಸಹ ಎಸ್.ಎಂ.ಎಸ್. ಮಾಡಿದ್ದರು. ನನ್ನ ಮನಸ್ಸು ಪ್ರಶಾಂತವಾಗಿತ್ತು. ಆದರೆ ನನ್ನ ಹೆಂಡತಿ ’ಏನು ಇವರೆಲ್ಲಾ ಹೀಗೆ ಹೇಳುತ್ತಾರೆ?’ ಎಂದು ಆತಂಕಗೊಂಡಿದ್ದಳು. ಆದರೆ ನನ್ನ ಮಗಳು ಮಾತ್ರ ಅವಳ ಮೊದಲ ವಿಮಾನಯಾನದ ಖುಷಿಯನ್ನು ಸಂಭ್ರಮಿಸಲು ಸಿದ್ಧಳಾಗಿ, ಅಲ್ಲಿರುವ ತನ್ನ ಸ್ನೇಹಿತೆ ’ಸಾನಿಧ್ಯ’ಳ ಜೊತೆ ತಾನು ಆಡಬೇಕಾದ ಆಟಗಳು, ಹೇಳಬೇಕಾದ ಕತೆಗಳು ಎಲ್ಲವನ್ನೂ ನೆನಪು ಮಾಡಿಕೊಳ್ಳುತ್ತಿದ್ದಳು.
ಮಷಿನ್ ಗನ್ನುಗಳ ಸ್ವಾಗತ!
ಮುಂಬಯಿಯಲ್ಲಿ ವಿಮಾನ ಬದಲಿಸಿ, ಶ್ರೀನಗರಕ್ಕೆ ಹೊರಡಲಿದ್ದ ವಿಮಾನವನ್ನೇರಿದ ಮೇಲೆ ಕ್ಷಣಗಣನೆ ಆರಂಭವಾಯಿತು. ದಾರಿಯುದ್ದಕ್ಕೂ, ಅಲ್ಲಲ್ಲಿ, ಬಿಸಿಲು ಚೆನ್ನಾಗಿದ್ದುದರಿಂದಲೂ, ಮೋಡ ಮುಸುಕಿಲ್ಲದಿದ್ದುದರಿಂದಲೂ ಕೆಳಗೆ ಕಾಣಿಸುತ್ತಿದ್ದ ನಗರಗಳು, ನದಿಗಳು, ನದಿ ಸಂಗಮ ಎಲ್ಲವನ್ನೂ ನೋಡುತ್ತಾ, ಮಗಳಿಗೆ ತೋರಿಸುತ್ತಾ ಕಾಲ ಕಳೆಯುತ್ತಿದ್ದೆ. ಹಿಮಾಲಯ ಶ್ರೇಣಿಯ ಹಿಮಾಚ್ಛಾದಿತ ಪರ್ವತ ಶಿಖರಗಳು ಕಣ್ಣ ದೃಷ್ಟಿ ಹರಿಸಿದುದ್ದಕ್ಕೂ ಕಾಣಿಸಿಕೊಂಡವು. ಇನ್ನೊಂದರ್ಧ ಗಂಟೆಯಲ್ಲಿ ಶ್ರೀನಗರದಲ್ಲಿ ಇಳಿಯುತ್ತೇವೆ ಎಂದುಕೊಂಡು, ಮೇಲಿನಿಂದ ನೋಡಿದಾಗ ಶ್ರೀನಗರ ಹೇಗೆ ಕಾಣಬಹುದು ಎಂಬ ಕಾತರದಿಂದ ಕೆಳಗೆ ನೋಡುತ್ತಿದ್ದೆವು. ನಗರ ಪ್ರದೇಶ ಆರಂಭವಾಗಿ ವಿಮಾನ ಲ್ಯಾಂಡಿಂಗ್ ಆಗುವ ಸೂಚನೆಗಳು ಕಂಡವು. ಕಾತರದಿಂದ ಹೊರಗೆ, ಕೆಳಗೆ ನೋಡುತ್ತಿದ್ದ ನಮ್ಮ ಕಣ್ಣಿಗೆ ಮೊದಲು ಬಿದ್ದಿದ್ದು, ಮಷಿನ್ ಗನ್ನುಗಳನ್ನು ಹೊತ್ತು ನಿಂತಿದ್ದ ಮಿಲಿಟರಿ ಜೀಪುಗಳು, ಟ್ರಕ್ಕುಗಳು! ಮಷಿನ್ ಗನ್ನುಗಳ ಮೂತಿಗಳೂ ನಮ್ಮ ವಿಮಾನದ ಕಡೆಗೆ ಗುರಿಯಿಟ್ಟು ನಿಂತಂತೆ ಕಾಣುತ್ತಿದ್ದವು. ಸಹಜವಾಗಿ ನಮಗೆ ಆತಂಕವೂ ಶುರುವಾಯಿತು. ಆದರೆ ಮುಂದಿನ ಮೂವತ್ತು ನಿಮಿಷದಲ್ಲಿ ಸುರಕ್ಷಿತವಾಗಿ ಇಳಿದು, ಲಗ್ಗೇಜು ತೆಗೆದಕೊಂಡು, ವಿಮಾನನಿಲ್ದಾಣದ ಹೊರಗೆ ಟ್ಯಾಕ್ಸಿ ಸ್ಟ್ಯಾಂಡಿನ ಬಳಿ ನಿಂತಿದ್ದೆವು. ಹೆಜ್ಜೆ ಹೆಜ್ಜೆಗೂ ಪೋಲೀಸಿನವರಿದ್ದರು. ಎಲ್ಲರ ಕೈಯಲ್ಲೂ ಮಷಿನ್ ಗನ್ನುಗಳಿದ್ದವು. ನಾವು ಒಂದು ಟ್ಯಾಕ್ಸಿ ಹಿಡಿದು ಹೊರಟ ನಂತರ ಮೊದಲು ಕೇಳಿದ ಪ್ರಶ್ನೆಯೇ ’ಯಾಕಿಷ್ಟು ಜನ ಪೊಲೀಸು?’ ಎಂದು. ಅದಕ್ಕೆ ಟ್ಯಾಕ್ಸಿ ಡ್ರೈವರ್ ’ಇದೆಲ್ಲಾ ಇಲ್ಲಿ ನಿತ್ಯ ಇರುವಂತದ್ದೆ’ ಎಂದು ನಿರ್ಲಿಪ್ತನಾಗಿ ನುಡಿದ. ಪ್ರೀಪೇಯ್ಡ್ ಸಿಮ್ಮುಗಳೆಲ್ಲಾ ಕೆಲಸ ನಿಲ್ಲಿಸಿಬಿಟ್ಟಿದ್ದವು. ನಾವು ದಿನೇಶನನ್ನು ಕಾಂಟ್ಯಾಕ್ಟ್ ಮಾಡಲು ಆ ಡ್ರೈವರನೇ ತನ್ನ ಮೊಬೈಲ್ ನೀಡಿ ಸಹಕರಿಸಿದ. ನಮ್ಮ ಟ್ಯಾಕ್ಸಿ ದಾಲ್‌ಲೇಕ್ ಕಡೆ ಸಾಗುತ್ತಿರಬೇಕಾದರೆ, ಡ್ರೈವರ್ ಇದೇ ಶ್ರೀನಗರದ ’ಲಾಲ್‌ಚೌಕ್’ ಎಂದು ತೋರಿಸಿದ. ನಾನು ಚಿಕ್ಕವನಿದ್ದಾಗಿಲಿಂದಲೂ, ಪ್ರತಿನಿತ್ಯ ರೇಡಿಯೋದಲ್ಲಿ ಕೇಳುತ್ತಿದ್ದ, ಲಾಲ್‌ಚೌಕವನ್ನು ಅಚ್ಚರಿಯಿಂದ ಕಣ್ಣು ತುಂಬಿಸಿಕೊಂಡೆ.
ಆಪೆಲ್ ವ್ಯಾಲಿಯ ಅಮಲು!
ಮೊದಲ ದಿನದ ಅರ್ಧದಿನವಲ್ಲದೆ, ಶ್ರೀನಗರದಲ್ಲಿ ಇನ್ನೂ ಎರಡು ದಿನ ಇರುವುದೆಂದು ತೀರ್ಮಾನವಾಗಿತ್ತು. ಅದರಲ್ಲಿ ಒಂದು ದಿನ ಲೋಕಲ್, ಇನ್ನೊಂದು ದಿನ ಗುಲ್‌ಮಾರ್ಗ್ ನೋಡಿದೆವು. ಗುಲ್‌ಮಾರ್ಗ್ ಮಾರ್ಗದ ಕಣಿವೆಗಳಲ್ಲಿ ಕಾರು ಚಲಾಯಿಸಿದ್ದು ನನಗೆ ಅತ್ಯಂತ ಖುಷಿಕೊಟ್ಟ ಕ್ಷಣವಾಗಿತ್ತು. ಗುಲ್‌ಮಾರ್ಗ್ ಹಿಮಪರ್ವತದ ಮೇಲೆ, ಆಮ್ಲಜನಕದ ಕೊರತೆಯಿಂದ ನಮ್ಮ ಅಂಕಲ್ ಸುಸ್ತಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಅವರು ಸುಧಾರಿಸಿಕೊಳ್ಳಲು ಸುಮಾರು ಮೂರ್ನಾಲ್ಕು ಗಂಟೆಗಳೇ ಬೇಕಾದವು. ಶ್ರೀನಗರದಲ್ಲಿ ಹಾಗೂ ಗುಲ್‌ಮಾರ್ಗ್ ಮಾರ್ಗದಲ್ಲಿ ಎಲ್ಲೆಲ್ಲಿ ಪೊಲೀಸ್ ಠಾಣೆಗಳಿದ್ದವೊ ಅಲ್ಲೆಲ್ಲ ತುಂಬಾ ಜನರ ಗುಂಪನ್ನು ಬೆಳಿಗ್ಗೆ ಬೆಳಿಗ್ಗೆಯೇ ನೋಡಿದೆವು. ಸಂಜೆ ಬೋಟ್ ಹೌಸ್ ಮಾಲೀಕನನ್ನು ಅದರ ಬಗ್ಗೆ ಕೇಳಿದಾಗ, ಅವರೆಲ್ಲಾ, ದಿನನಿತ್ಯ, ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕಾದವರು. ಅದೊಂದು ಇಲ್ಲಿನ ಹೆಚ್ಚಿನವರಿಗೆ ಅಂಟಿದ ಶಾಪ ಎಂದ ವಿಷಾದದಿಂದ ನುಡಿದಿದ್ದ.
ಮಾರನೆಯ ದಿನ ಮುಂಜಾನೆಯೇ ಹೊರಟು ಜಮ್ಮು-ಥಾವಿ ಮಾರ್ಗವಾಗಿ ಪಂಜಾಬ್ ಪ್ರವೇಶಿಸಿ, ಅಮೃತಸರ ತಲಪುವುದೆಂದು ತೀರ್ಮಾನಿಸಿದೆವು. ಆ ದಿನ ರಾತ್ರಿ ನಾವು ಉಳಿದುಕೊಂಡಿದ್ದ ಬೋಟ್ ಹೌಸ್ ಮಾಲೀಕ ನಮ್ಮೊಂದಿಗೆ ಮಾತನಾಡುತ್ತಿದ್ದ. ಕನ್ನಡವೂ ಸೇರಿದಂತೆ ಏಳೆಂಟು ಭಾಷೆ ಬಲ್ಲವನಾಗಿದ್ದ ಆತ ನಮ್ಮ ಮುಂದಿನ ಪ್ರಯಾಣದ ವಿಷಯ ತಿಳಿದಾಕ್ಷಣ, ’ನೀವು ಪೆಹಲ್‌ಗಾಂವ್ ಹೋಗಿ. ಅದು ಅತ್ಯಂತ ಸುಂದರವಾದ ಸ್ಥಳ’ ಎಂದು ಹೇಳಿದ. ನಮ್ಮ ಪ್ರವಾಸದ ಯೋಜನೆಯಲ್ಲಿ ಆ ಸ್ಥಳದ ಬಗ್ಗೆ ತಿಳಿದುಕೊಂಡಿದ್ದೆವು. ಆದರೆ ಅದಕ್ಕಾಗಿ ಒಂದಿಡೀ ದಿನವನ್ನು ಮೀಸಲಿಡಲು ನಮಗೆ ಸಾಧ್ಯವಾಗದೆ ಹಾಗೂ ಗುಲ್‌ಮಾರ್ಗ್ ಕಣಿವೆಗಳನ್ನು ನೋಡುವುದರಿಂದ ಮತ್ತೆ ಪೆಹಲ್‌ಗಾಂವ್ ನೋಡುವ ಅವಶ್ಯಕತೆ ಏನಿದೆ ಎಂದು ಕೈಬಿಟ್ಟಿದ್ದೆವು. ಬೋಟ್‌ಹೌಸ್ ಮಾಲೀಕ ಮಾತನಾಡುತ್ತ, ’ಗ್ರಾಮೀಣ ಕಾಶ್ಮೀರದ ಪರಿಚಯವಾಗಬೇಕೆಂದರೆ ಪೆಹಲ್‌ಗಾಂವ್ ನೋಡಲೇಬೇಕು. ಅಲ್ಲಿ ಸುಂದರವಾದ ನದಿ, ಪುರಾತನವಾದ ಮಾಮಲ್ಲ ದೇವಾಲಯ, ಆಪೆಲ್ ವ್ಯಾಲಿ ಎಲ್ಲಾ ಇದೆ’ ಎಂದು ಹೇಳಿದ. ನನ್ನ ಮತ್ತು ದಿನೇಶ ಇಬ್ಬರೂ ಒಟ್ಟಿಗೆ ಆಪೆಲ್ ವ್ಯಾಲಿಯಲ್ಲಿ ಆಪಲ್ ಮರಗಳಿದ್ದಾವ? ಅಲ್ಲಿ ಆಪಲ್ ಸಿಗುತ್ತವಾ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದೆವು. ಆತ ’ಹೌದು’ ಎಂದು ಹೇಳಿ, ಹೇಗೆ ಹೋಗಬೇಕು ಎಂಬುದನ್ನು ವಿವರವಾಗಿ ಹೇಳಿದ್ದಲ್ಲದೆ, ಒಂದು ಹಾಳೆಯಲ್ಲಿ ಬರೆದೂ ಕೊಟ್ಟ.
ಸ್ವರ್ಗದಲ್ಲಿಯೂ ತಪ್ಪದ ಭ್ರಷ್ಟಾಚಾರ!
ಮಾರನೆಯ ದಿನ ಬೆಳಿಗ್ಗೆ ಏಳು-ಏಳೂವರೆಯ ಹೊತ್ತಿಗೆ ಕಾಫಿ ಮುಗಿಸಿ ಹೊರಟೆವು. ಸಾಕಷ್ಟು ಮಂಜು ಮುಸುಕಿದ್ದರಿಂದ ಹೆಡ್ ಲೈಟ್ ಬೆಳಗಿಸಿಯೇ ಗಾಡಿ ಚಲಾಯಿಸುತ್ತಿದ್ದೆ. ಇನ್ನೇನು ಶ್ರೀನಗರದ ಹೊರವಲಯಕ್ಕೆ ಬರಬೇಕು ಅನ್ನುವಷ್ಟರಲ್ಲಿ, ಒಂದು ದೊಡ್ಡ ಸರ್ಕಲ್ ಬಳಿ ಬ್ಯಾರಿಕೇಡುಗಳನ್ನಿರಸಲಾಗಿತ್ತು. ನಾನು ಕಾರನ್ನು ನಿಧಾನಿಸುವಷ್ಟರಲ್ಲಿ ಭಾರಿಗಾತ್ರದ ಇಬ್ಬರು ಪೋಲೀಸಿನವರು ಪ್ರತ್ಯಕ್ಷರಾದರು. ಇಬ್ಬರೂ ದಪ್ಪ ರಗ್ಗುಗಳನ್ನು ಹೊದ್ದಿದ್ದರಿಂದ ಅವರನ್ನು ಪೊಲೀಸರು ಎಂದು ಗುರುತಿಸುವುದಕ್ಕೇ ಸ್ವಲ್ಪ ಸಮಯ ಬೇಕಾಯಿತು. ಡಿ.ಎಲ್., ಆರ್.ಸಿ. ಬುಕ್, ಇನ್ಷ್ಯೂರೆನ್ಸ್ ಎಲ್ಲಾ ತೆಗೆದಕೊಂಡು ಬರುವಂತೆ ನಮಗೆ ತಿಳಿಸಲಾಯಿತು. ದುರದೃಷ್ಟಕ್ಕೆ ಕಾರಿನ ಎಮಿಷನ್ ಸರ್ಟಿಫಿಕೇಟ್ ದಿನಾಂಕ ಮುಗಿದುಹೋಗಿತ್ತು. ಹಿಂದಿನ ಎರಡು ದಿನಗಳೂ, ಶ್ರೀನಗರದಲ್ಲೇ ಎಮಿಷನ್ ಟೆಸ್ಟ್ ಮಾಡಿಸಲು ಪ್ರಯತ್ನಿಸಿದೆವಾದರೂ, ಟೆಸ್ಟ್ ಮಾಡುವ ಕೇಂದ್ರಗಳೇ ಕಾಣಸಿಗಲಿಲ್ಲ. ಸಧ್ಯ ಈತ ಅದನ್ನು ಬಿಟ್ಟು ಉಳಿದವನ್ನು ಮಾತ್ರ ಕೇಳಿದ್ದರಿಂದ, ಧೈರ್ಯವಾಗಿ ಎಲ್ಲವನ್ನು ತೆಗೆದುಕೊಂಡು ಹೊರಟೆವು. ನಮ್ಮನ್ನು ಒಂದು ಪೊಲೀಸ್ ಬೂತ್ ಒಳಗೆ ಕರೆದೊಯ್ಯಲಾಯಿತು. ಎರಡೇ ನಿಮಿಷದಲ್ಲಿ ಎಲ್ಲವನ್ನೂ ಚೆಕ್ ಮಾಡಿದಂತೆ ಮಾಡಿ ನಮಗೆ ಹೊರಡುವಂತೆ ಸೂಚಿಸಲಾಯಿತು. ಇನ್ನೂ ನಾವು ಹತ್ತು ಹೆಜ್ಜೆ ಹಾಕಿರಲಿಲ್ಲ, ಅಷ್ಟರಲ್ಲೇ ಮತ್ತೆ ಹಿಂದಕ್ಕೆ ಕರೆದರು. ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ತೋರಿಸುವಂತೆ ಕೇಳಲಾಯಿತು. ನಾವು ಇರುವ ವಿಚಾರ ತಿಳಿಸಿ, ದಿನಾಂಕ ಮುಗಿದುಹೋಗಿದ್ದ ದಾಖಲೆಯನ್ನೇ ತೋರಿಸಿದೆವು. ಅಂದಿಗೆ ದಿನಾಂಕ ಮುಗಿದು ಹತ್ತು ದಿನಗಳಾಗಿದ್ದುವು ಅಷ್ಟೆ. ಆದರೆ, ಅದನ್ನು ಕೇಳಲು ಅಲ್ಲಿ ಯಾರೂ ತಯಾರಿರಲಿಲ್ಲ. ಒಂದು ಸಾವಿರ ರುಪಾಯಿ ಫೈನ್ ಕಟ್ಟಬೇಕಾಗುತ್ತದೆ ಎಂದು ಒಬ್ಬ ಪೊಲೀಸಿನವನು ನಮಗೆ ಸೂಚಿಸಿದ. ಇನ್ನು ವಾದ ಮಾಡಿ ಪ್ರಯೋಜನವಿಲ್ಲವೆಂದು, ಹಣಕಟ್ಟಿ ರಸೀದಿ ಪಡೆಯಲು ನಿರ್ಧರಿಸಿದೆವು. ನೋಡಿದರೆ ಅಲ್ಲಿ ಯಾವ ರಸೀದಿ ಪುಸ್ತಕವಾಗಲೀ, ನೋಟೀಸಿನ ಪುಸ್ತಕವಾಗಲೀ ಇರಲೇ ಇಲ್ಲ. ಆಗ ಒಬ್ಬ ಪೋಲೀಸಿನವನು ಒಂದಷ್ಟು ಹಣ ಕೊಟ್ಟು ಹೊರಟುಬಿಡಿ ಎಂದು ಸೂಚಿಸಿದ. ದಿನೇಶ ನೂರರ ಎರಡು ನೋಡುಗಳನ್ನು ಅವನ ಕೈಗಿತ್ತು ಹೊರಟೇ ಬಿಟ್ಟ. ಅಂತೂ ನಾವು ಇನ್ನೂರು ಲಂಚ ಕೊಟ್ಟ ಹಾಗೆ ಆಯಿತು ಎಂದು ನಾನು ಹೇಳಿದಾಗ, ನಮ್ಮ ಅಂಕಲ್ ಒಂದು ಮಾತು ಹೇಳಿದರು. ನೋಡಿ, ಅವರು ಬೀಟ್ ಪೋಲೀಸಿನವರು. ಅವರಿಗೆ ಗಾಡಿಗಳನ್ನು ನಿಲ್ಲಿಸಿ ಚೆಕ್ ಮಾಡುವ ಅಧಿಕಾರವೇ ಇಲ್ಲ. ಅದರಲ್ಲೂ ಎಮಿಷನ್ ಸರ್ಟಿಫಿಕೇಟ್ ಮೊದಲಾದವನ್ನು ಚೆಕ್ ಮಾಡುವ ಅಧಿಕಾರವಂತೂ ಇರಲಿಕ್ಕೆ ಸಾಧ್ಯವೇ ಇಲ್ಲ. ಅವೆಲ್ಲಾ ಇದ್ದಿದ್ದರೆ ರಸೀದಿ ಪುಸ್ತಕ ಇರುತ್ತಿರಲಿಲ್ಲವೆ? ಪಂಜಾಬ್ ರಿಜಿಸ್ಟ್ರೇಷನ್ ಗಾಡಿಯಾದ್ದರಿಂದ, ಪ್ರವಾಸಿಗರದೇ ಇರುತ್ತದೆ ಎಂದುಕೊಂಡು ಒಂದಷ್ಟು ಕಾಫಿ ತಿಂಡಿಗೆ ಕಾಸು ಗಿಟ್ಟಿಸಿಕೊಂಡಿದ್ದಾರೆ ಅಷ್ಟೆ ಎಂದರು. ನಮಗೂ ಅದೇ ಸರಿಯೆನ್ನಿಸಿತು.
ಮುಂದೆ ಅನಂತನಾಗ್ ನಗರಕ್ಕೆ ಬಂದಾಗ, ಎಮಿಷನ್ ಟೆಸ್ಟ್ ಮಾಡಿಸಲೇಬೇಕೆಂದು, ಆ ಟೆಸ್ಟ್ ಮಾಡುವ ಜಾಗವನ್ನು ಕೊನೆಗೂ ಪತ್ತೆ ಹಚ್ಚಿದೆವು. ಆದರೆ, ಏನು ಮಾಡುವುದು ಸುಮಾರು ಮೂವತ್ತು ನಲವತ್ತು ವಾಹನಗಳು ಸರದಿಯಲ್ಲಿದ್ದವು. ಕೊನೆಗೆ ದಿನೇಶ, ಆ ಎಮಿಷನ್ ಟೆಸ್ಟ್ ಮಾಡುತ್ತಿದ್ದ ಹುಡುಗನನ್ನು ಹಿಡಿದು, ನಮ್ಮ ಪರಿಸ್ಥಿತಿಯನ್ನು ಹೇಳಿ, ಮತ್ತೊಂದು ಕೇಂದ್ರ ಮುಂದೆ ಎಲ್ಲಿ ಸಿಗುತ್ತದೆ ಎಂದು ಕೇಳಿದ. ಅದಕ್ಕೆ ಆತ ಕಾರಿನ ಬಳಿ ಬಂದು, ಹೊಸ ಕಾರಲ್ಲವೆ? ಎಂದ. ನಾವು ಹೌದು ಎಂದಾಗ, ಉದ್ದ ವಯರ್ ಇದ್ದ ವೆಬ್ ಕ್ಯಾಮೆರವಾನ್ನು ಕಾರಿನ ಬಳಿ ತಂದು ನಂಬರ್ ಪ್ಲೇಟ್ ಕ್ಲಿಕ್ಕಿಸಿದ. ನಂತರ ಐದೇ ನಿಮಿಷದಲ್ಲಿ ಎಮಿಷನ್ ಸರ್ಟಿಫಿಕೇಟ್ ನಮ್ಮ ಕೈಯಲ್ಲಿತ್ತು. ನಾವು ಇತ್ತ ನೂರು ರೂಪಾಯಿಗೆ, ಇಪ್ಪತ್ತೈದು ರೂಪಾಯಿ ಚಿಲ್ಲರೆಯನ್ನು ಆತ ವಾಪಸ್ ನೀಡಿದ. ನಾನು ಅಲ್ಲಿ ನೇತು ಹಾಕಿದ್ದ ದರಪಟ್ಟಿಯಿದ್ದ ಬೋರ್ಡನ್ನು ನೋಡಿದೆ. ಅದರಲ್ಲಿ ಪೆಟ್ರೋಲ್ ಕಾರ್ ಐವತ್ತು ರೂಪಾಯಿ, ಡೀಸೆಲ್ ಕಾರು ಎಪ್ಪತ್ತೈದು ರೂಪಾಯಿ ಎಂದಿತ್ತು! ನಮ್ಮದು ಡೀಸೆಲ್ ಕಾರು ಆಗಿತ್ತು ಹಾಗೂ ಆ ಹುಡುಗ ಸರಿಯಾಗೆ ಹಣ ತೆಗೆದುಕೊಂಡಿದ್ದ. ಅಂದು ಬೆಳಿಗ್ಗೆಯೇ ಕಾಶ್ಮೀರ ಎಂಬ ಸ್ವರ್ಗದಲ್ಲಿ ಪೋಲೀಸಿನವರು ನಡೆದುಕೊಂಡಿದ್ದ ರೀತಿಯನ್ನು ಕಂಡಿದ್ದ ನಮಗೆ ಆ ಹುಡುಗನ ಪ್ರಾಮಾಣಿಕತೆ ಅತಿ ದೊಡ್ಡದು ಎನ್ನಿಸಿತ್ತು. ಏಕೆಂದರೆ ಆತ ಹೆಚ್ಚಿಗೆ ಕೇಳಿದ್ದರೂ ಕೊಡಲು ನಾವು ತಯಾರಿದ್ದೆವು.
ಪ್ರತ್ಯಕ್ಷವಾದ ಆಪೆಲ್ ವ್ಯಾಲಿ!
ರಸ್ತೆಯ ಎರಡೂ ಬದಿಗೆ ಆಪೆಲ್ ಹಣ್ಣುಗಳ ಬಾಕ್ಸ್ ಮತ್ತು ಬುಟ್ಟಿಗಳು ಕಾಣಿಸತೊಡಗಿದವು. ಸೇಬಿನ ಮರಗಳೆಲ್ಲಿ ಎಂದು ಹುಡುಕುತ್ತಲೇ ಡ್ರೈವ್ ಮಾಡುತ್ತಿದ್ದ ದಿನೇಶನಿಗೆ ರಸ್ತೆಯ ಎರಡೂ ಬದಿ ಕೊಂಬೆ ರಂಬೆಗಳಲ್ಲಿ ಸೇಬನ್ನು ತೂಗಿಸಿತ್ತಾ ನಿಂತಿದ್ದ ಸಾಲು ಸಾಲು ಸೇಬಿನ ಮರಗಳನ್ನು ಕಂಡು ಖುಷಿಯೋ ಖುಷಿ. ಒಂದು ಕಡೆ ರಸ್ತೆ ಬದಿಯಲ್ಲೇ ಲೋಡುಗಟ್ಟಲೆ ಸೇಬನ್ನು ರಾಶಿ ಹಾಕಿಕೊಂಡು ಕೆಲವರು ಗ್ರೇಡ್ ಮಾಡಿ ವಿಂಗಡಿಸುತ್ತಿದ್ದರು. ಇನ್ನು ಕೆಲವರು ಕಾಗದದ ಬಾಕ್ಸುಗಳಲ್ಲಿ ತುಂಬಿಸಿ ಪ್ಯಾಕ್ ಮಾಡುತ್ತಿದ್ದರು. ನಾವು ಕಾರಿನಿಂದ ಇಳಿಯುತ್ತಲೇ ಒಂದಷ್ಟು ಜನ ಬಂದು ಫ್ರೆಷ್ ಹಣ್ನುಗಳನ್ನು ಕೊಳ್ಳುವಂತೆ ಪೀಡಿಸತೊಡಗಿದರು. ಆಗ ದಿನೇಶ ಮತ್ತು ನಮ್ಮ ಅಂಕಲ್ ಅವರೊಂದಿಗೆ ಚೌಕಾಸಿಗೆ ಇಳಿದರು. ದಿನೇಶ ಮತ್ತು ನಾನು ನಾವೇ ಮರದಿಂದ ಹಣ್ಣು ಕಿತ್ತುಕೊಳ್ಳಬೇಕು ಎಂದು ಆಲೋಚಿಸಿದೆವು. ಒಂದು ಬಾಕ್ಸಿಗೆ (ಸುಮಾರು ಆರರಿಂದ ಎಂಟು ಕೇಜಿ ತೂಕದವು) ನಾನೂರು ಐನೂರು ಹೇಳುತ್ತಿದ್ದರು. ಆಗ ನಾವು, ಮರದಿಂದಲೇ ಕಿತ್ತುಕೊಳ್ಳಲು ಅವಕಾಶ ಮಾಡಿಕೊಟ್ಟರೆ ಐನೂರು ಕೊಡುವುದಾಗಿ ತಿಳಿಸಿದೆವು. ಆದರೆ, ಆ ತೋಟದ ಮಾಲೀಕ ಅಲ್ಲಿ ಇರಲಿಲ್ಲ. ಅಲ್ಲಿದ್ದವರೆಲ್ಲಾ ಕೆಲಸಗಾರರು, ಒಬ್ಬ ಮ್ಯಾನೇಜರ್ ಮಾತ್ರ. ಅಷ್ಟರಲ್ಲಿ ಬೇರೆ ಇನ್ನೊಬ್ಬ ಬಂದು, ಇಲ್ಲಿಂದ ಸ್ವಲ್ಪ ದೂರದಲ್ಲಿ ನನ್ನ ತೋಟವಿದೆ. ಅಲ್ಲಿ ನೀವೆ ಕಿತ್ತು ಕೊಳ್ಳಬಹುದು. ಆದರೆ ನಾನು ತೋರಿಸಿದ ಹಣ್ಣುಗಳನ್ನೇ ಕಿತ್ತುಕೊಳ್ಳಬೇಕು ಎಂದು ಆಹ್ವಾನಿಸಿದ. ಎಲ್ಲರೂ ಅತ್ತ ಹೊರಟಾಗ ಕೆಲವು ಮಕ್ಕಳು ಬಂದು ಬಿಸ್ಕತ್ತು ಇದ್ದರೆ ಕೊಡಿ ಎಂದು ಪೀಡಿಸತೊಡಗಿದರು. ನಾವು ನಮ್ಮಲ್ಲಿದ್ದ ಬಿಸ್ಕತ್ತುಗಳನ್ನು ಕೊಟ್ಟೆವು. ಆಗ ದೊಡ್ಡವರೂ ಬಂದು ಬಿಸ್ಕತ್ತಿಗಾಗಿ ಪೀಡಿಸತೊಡಗಿದರು. ನಮ್ಮಲ್ಲಿದ್ದ ಎಲ್ಲಾ ಬಿಸಸ್ಕತ್ತುಗಳನ್ನು ಪ್ಯಾಕ್ ಸಮೇತ ನೀಡಿದರೂ ಅವರು ಕಾಡುವುದು ತಪ್ಪಲಿಲ್ಲ. ಆಗ ನಮ್ಮನ್ನು ತನ್ನ ತೋಟಕ್ಕೆ ಆಹ್ವಾನಿಸಿದಾತನೇ ಅವರನ್ನೆಲ್ಲಾ ಗದರಿ ದೂರ ಕಳುಹಿಸಿದ. ಕಾರಿನ ಮೇಲೆಯೇ ನಮ್ಮ ಲೆಗ್ಗೇಜು ಇದ್ದುದರಿಂದ ನಾನು ಕಾರಿನ ಬಳಿಯೇ ಉಳಿದೆ. ಉಳಿದವರು ತೋಟದಲ್ಲಿ ಹಣ್ಣು ಕೀಳುವ ಸಂಭ್ರಮದಿಂದ ಹೆಜ್ಜೆ ಹಾಕಿದರು.
ಆಗ ನಾನು ಅಲ್ಲಿದ್ದ ಒಬ್ಬ ವಯಸ್ಕನೊಂದಿಗೆ ನನ್ನ ಅರೆಬರೆ ಹಿಂದಿಯಲ್ಲಿ ಸಂಭಾಷಣೆಗೆ ತೊಡಗಿದೆ. ನಾನು ಏನು ಕೇಳಿದೆನೊ? ಅವನು ಏನು ಹೇಳಿದನೊ? ಆದರೆ ನನಗೆ ಅರ್ಥವಾಗಿದ್ದು ಇಷ್ಟೆ. ಅಲ್ಲಿನ ಹೆಚ್ಚಿನ ಸೇಬು ತೋಟಗಳು ಬೇರೆ ಬೇರೆ ಕಂಪೆನಿ ಆಡಳಿತಕ್ಕೆ ಒಳಪಟ್ಟಿವೆ. ಚಿಕ್ಕಪುಟ್ಟ ತೋಟ ಇಟ್ಟುಕೊಂಡಿರುವವರೂ ಅಲ್ಲಿ ನೆಲೆಸಿಲ್ಲ. ಎಲ್ಲ ನಗರಗಳಲ್ಲಿ ನೆಲೆಸಿದ್ದಾರೆ. ಇಲ್ಲಿ ಮ್ಯಾನೇಜರುಗಳೇ ಆಳು ಕಾಳುಗಳನ್ನು ಕರೆದು ಕೆಲಸ ಮಾಡಿಸುತ್ತಾರೆ. (ನಮ್ಮ ಕಾಫಿ ತೋಟದ ಮಾಲೀಕರ ಕಥೆಯನ್ನೇ ಇದು ಸ್ವಲ್ಪ ಹೋಲುತ್ತದೆ)
ನಾನು, ತಿನ್ನಲು ಬೇಕಾದಷ್ಟು ಸೇಬುಗಳೇ ಇರುವಾಗ ಹೀಗೆ ಬಿಸ್ಕತ್ತಿಗೆ ಪೀಡಿಸುವುದು ಏಕೆ ಎಂದೆ. ಅದಕ್ಕೆ ಆತ, ಇಲ್ಲಿರುವವರೆಲ್ಲಾ ಬಡವರೆ. ಕೆಲಸಗಾರರು ಸೇಬನ್ನು ಎಷ್ಟು ತಿಂದರೂ ಯಾರೂ ಕೇಳುವುದಿಲ್ಲ. ಆದರೆ ಈ ಚಳಿಯಲ್ಲಿ ಆ ಹಣ್ಣನ್ನು ಎಷ್ಟು ತಿನ್ನಲು ಸಾಧ್ಯ. ವರ್ಷದಲ್ಲಿ ಆರುತಿಂಗಳು ಮಾತ್ರ ಸಂಪಾದನೆ. ಅದರಲ್ಲೇ ಉಳಿಸಿಕೊಂಡರೆ ಮುಂದಿನ ಆರುತಿಂಗಳು ಜೀವನ. ಇಲ್ಲದಿದ್ದರೆ ಕಷ್ಟ. ಬಿಸ್ಕತ್ತು ತಿಂದು ನೀರು ಕುಡಿದರೆ, ತುಂಬಾ ಹೊತ್ತು ಹೊಟ್ಟೆ ಹಸಿಯುವುದಿಲ್ಲ. ಅದಕ್ಕೆ ಮಕ್ಕಳು ಇಲ್ಲಿ ಯಾರೇ ಪ್ರವಾಸಿಗರು ಬಂದರೂ ಬಿಸ್ಕತ್ತಿಗಾಗಿ ಪೀಡಿಸುತ್ತವೆ ಎಂದ.
ರಸ್ತೆಯ ಬದಿಯಲ್ಲೇ ಥರಾವರಿ ಹಣ್ಣುಗಳನ್ನು ಬೇರೆ ಬೇರೆಯಾಗಿ ಗ್ರೇಡ್ ಮಾಡಿ ಗುಡ್ಡೆ ಹಾಕಿದ್ದರು. ಒಂದಷ್ಟನ್ನು ಚರಂಡಿಗಳಲ್ಲಿ ಬಿಸಾಕಿದ್ದರು. ಅವು ಬಳಸಲು ಯೋಗ್ಯವಿಲ್ಲದವು ಎಂದು ಆತ ಹೇಳಿದ. ಒಂದು ಗುಡ್ಡೆಯಿಂದ ಒಂದು ಹಣ್ಣನ್ನು ತಂದು ತಿನ್ನುವಂತೆ ನನಗೆ ಕೊಟ್ಟ. ಅದನ್ನು ಅಲ್ಲಿನಿಂದ ಕಚ್ಚಿದೆ, ಅಷ್ಟೆ. ನನ್ನ ಬಾಯಿಯ ಎರಡೂ ಕಡೆಯಿಂದ ರಸ ರಭಸವಾಗಿ ಹೊರ ಬಂದಿತ್ತು. ನನ್ನ ಜೀವನದಲ್ಲಿ ಅಷ್ಟೊಂದು ರಸಭರಿತ ಸೇಬನ್ನು ನಾನು ತಿಂದೇ ಇರಲಿಲ್ಲ.
ಅತ್ತ ಸೇಬನ್ನು ಮರದಿಂದ ಕೀಳುವ ಉತ್ಸಾಹದಿಂದ ಹೋದವರು, ಎರಡು ಬಾಕ್ಸುಗಳ್ನು ಹೊತ್ತು ತರುತ್ತಿದ್ದರು. ಅದಲ್ಲದೆ ಉಳಿದವರ ಕೈಯಲ್ಲಿ ಎರಡು ಮೂರು ಹಣ್ಣುಗಳು! ನಾನು ಹಣ್ಣು ತಿನ್ನುತ್ತಿರುವುದನ್ನು ಗಮನಿಸಿದ, ನನ್ನ ಹಂಡತಿ, ಅಯ್ಯೋ ಅದನ್ನು ಬಿಸಾಕಿ, ಈಗ ತಾನೆ ಮರದಿಂದ ಕಿತ್ತು ತಂದಿರುವ ಇದನ್ನು ತಿಂದು ನೋಡಿ. ನಾವಂತೂ ಒಬ್ಬೊಬ್ಬರು ಎರಡ್ಮೂರು ತಿಂದಿದ್ದೇವೆ. ರಸ ಹಾಗೆ ಬಾಯಿಯಿಂದ ಹೊರ ಬರುತ್ತದೆ ಎಂದು ಒಂದು ಹಣ್ಣು ಕೊಟ್ಟಳು. ನಾನು ಅದನ್ನು ಹಲ್ಲಿನಿಂದ ಕಚ್ಚಿದೆ. ನಾನು ಮೊದಲು ತಿಂದ ಹಣ್ಣಿಗಿಂತ ಸಿಹಿಯಾಗಿ ರಸಭರಿತವಾಗಿತ್ತು. ಆಗ ನನೊಂದಿಗೆ ಮಾತನಾಡುತ್ತಿದ್ದಾತ, ನಾನು ತಿನ್ನುತ್ತಿದ್ದ ಹಣ್ಣಿನ ನಡುವೆ ಅಲ್ಲಲ್ಲಿ ಕೆಂಪಗೆ ಇದ್ದ ಭಾಗವನ್ನು ತೋರಿಸಿ, ಇದು ಒಂದೆರಡು ದಿನಗಳಾದ ಮೇಲೆ ಕಾಣೆಯಾಗುತ್ತದೆ. ಆಗ ಇಷ್ಟೊಂದು ರುಚಿ ಸೇಬಿಗೆ ಇರುವುದಿಲ್ಲ ಎಂದ. ನಾನು ನಮ್ಮವರ ಎಲ್ಲರ ಬಾಯಿಯನ್ನೂ ನೋಡಿದೆ. ಎಲ್ಲರ ಬಾಯಿಯೂ ಸೇಬಿನ ರಸದಿಂದ ಆವೃತ್ತವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹಣ್ಣು ಕೀಳಲು ಕರೆದುಕೊಂಡು ಹೋಗಿದ್ದಾತ, ಎಷ್ಟು ಬೇಕಾದರೂ ತಿನ್ನಿ ಎಂದು ಹೇಳಿದ್ದೇ ಇವರಿಗೆ ಸಾಕಾಗಿತ್ತು. ಕನಿಷ್ಠ ಇಪ್ಪತ್ತು ಹಣ್ಣುಗಳಾದರೂ ನಮ್ಮೆಲ್ಲರ ಹೊಟ್ಟೆ ಸೇರಿದ್ದವು. ಮಕ್ಕಳಿಬ್ಬರೂ ಮುಖಮೂತಿಯನ್ನೆಲ್ಲಾ ಸೇಬು ಮಾಡಿಕೊಂಡು, ಬಾಯಿಯಲ್ಲಿ ಒತ್ತರಿಸಕೊಂಡೇ ಮಾತನಾಡುತ್ತಿದ್ದರು!
ನಾವು ಬೆಂಗಳೂರಿನಲ್ಲಿ ಸೇಬು ಕೊಂಡುಕೊಳ್ಳುವಾಗಲೆಲ್ಲಾ, ಇವು ಕನಿಷ್ಠ ಒಂದು ವಾರದಷ್ಟಾದರೂ ಹಳೆಯವು ಎಂಬುದು ಮನಸ್ಸಿಗೆ ಬರುತ್ತದೆ. ನೆನೆದಾಗಲೆಲ್ಲಾ ಕಾಶ್ಮೀರದ ರಸಭರಿತ ಸೇಬನ್ನು ಸವಿಯುವಂತಿದ್ದರೆ ಎನ್ನಿಸುತ್ತದೆ. ಬಹುಶಃ ಉತ್ತರದ ಕಡೆಯವರಿಗೆ ತೆಂಗಿನ ಕಾಯಿಯನ್ನು ನೋಡಿದರೆ ಹಾಗೆ ಅನ್ನಿಸಬಹುದೇನೊ? ಏಕೆಂದರೆ ನಾನು ಉತ್ತರಖಂಡ, ಕಾಶ್ಮೀರ ಮತ್ತು ಪಂಜಾಬಿನ ಕೆಲವು ನಗರಗಳಲ್ಲಿ ತೆಂಗಿನ ಕಾಯಿಯ ತುಂಡುಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುವುದನ್ನು ನೋಡಿದ್ದೇನೆ. ಒಂದು ಹೋಳಿನಿಂದ ಎಂಟು ಚೂರು ಒಟ್ಟಾರೆ ಒಂದು ಕಾಯಿಯಿಂದ ಹದಿನಾರು ಚೂರು ಮಾಡಿರುತ್ತಾರೆ. ಒಂದೊಂದು ಚುರು ಮೂರರಿಂದ ಐದು ರೂಪಾಯಿಗೆ ಮಾರಟವಾಗುತ್ತಿದ್ದವು. ಅಂದರೆ ಒಂದು ತೆಂಗಿನ ಕಾಯಿಗೆ ೫೦ ರಿಂದ ಎಂಬತ್ತು ರೂಪಾಯಿ!
ಸದ್ಯ, ಇನ್ನೂ ನಮ್ಮ ಕಡೆ ಸೇಬನ್ನು ತುಂಡರಿಸಿ ಮಾರಾಟ ಮಾಡುವ ವ್ಯವಸ್ಥೆ ಬಂದಿಲ್ಲ.