Monday, August 29, 2011

ಯಾರು ಹುಚ್ಚೆಂದರೂ ನನಗೆ ಮರ್ಯಾದೆ!

ಮಕ್ಕಳು ಮನೆಯಲ್ಲಿದ್ದರೆ ಅದರ ಸೊಬಗೇ ಬೇರೆ. ಮಕ್ಕಳಿರಲವ್ವ ಮನೆತುಂಬ ಎನ್ನುವ ಗಾದೆ, ಮಕ್ಕಳಾಟವು ಚೆಂದ ಮತ್ತೆ ಯೌವ್ವನ ಚೆಂದ ಮತು ಕೂಸು ಕಂದಯ್ಯ ಒಳಹೊರಗ ಆಡಿದರ ತಂಪಾದ ಗಾಳಿ ಸುಳಿದಾವೋ ಎಂಬ ಹಾಡುಗಳು ಎಲ್ಲದರಲ್ಲೂ ಮಕ್ಕಳಾಟದ ಸೊಬಗೇ ಕೇಂದ್ರಬಿಂದು. ಅವರು ಗಲಾಟೆ ಮಾಡಿದರೆ ಗದರಿಸುತ್ತೇವೆ. ಗದರುವಿಕೆಯ ಹಿಂದೆ ಕೋಪವಿರುವುದಿಲ್ಲ; ಮುದ್ದಿರುತ್ತದೆ. ಮಗನಿಂದ ದೂರವಾಗಿ ಒಂಟಿ ಪಿಶಾಚಿಯಂತಾಗಿವ ಕವಿಗೆ ಅದೆಲ್ಲಾ ನೆನಪಾಗುವುದು ಹೀಗೆ.
ಓ ನನ್ನ ಕಂದಯ್ಯ,
ನೀನು ಕೂಗಾಡಿದರೆ
ಸದ್ದು ಮಾಡದಿರೆಂದು
(ಮುದ್ದಾಗಿಯಾದರೂ)
ಗದರಿಸುತ್ತಿದ್ದೆ.
ಈಗ ಕಂದಯ್ಯನ ಗಲಾಟೆಯೂ ಇಲ್ಲ ಗದರುವಿಕೆಯೂ ಇಲ್ಲ. ಅದಕ್ಕೆ ಕಾರಣ ಹಾಗೂ ಅದರಿಂದ ಉಂಟಾಗಿರುವ ನಿಶ್ಯಬ್ದತೆಯು ಪದಗಳಲ್ಲಿ ಮೂಡಿದ್ದು ಹೀಗೆ.
ನೀನಮ್ಮನೊಡಗೂಡಿ
ಹೋದೆ ಅಜ್ಜಿ ಮನೆಗೆ;
ಈಗ ಸದ್ದಿನಿತಿಲ್ಲ!
ಹಾಳು ನಿಶ್ಯಬ್ದತೆಯೆ,
ಗಾಳೆನ್ನುವಾ ವೆತೆಯೆ,
ಎದೆಯ ಮೇಲೇರಿ
ಮಾಡುತಿಹುದಯ್ಯೋ ಹಾ
ದೆವ್ವದ ಸವಾರಿ!
ಸರಣಿಯ ಮುಂದಿನ ಕವಿತೆ ಬಾಲ ತೇಜಸ್ವಿ ತನ್ನ ತಾಯಿಯೊಡಗೂಡಿ ಅಜ್ಜಿಯ ಮನೆಗೆ ಹೋದ ಐದು ದಿನಗಳ ನಂತರ ಮೂಡಿದ್ದು. ಕವಿಗೆ ಯಾವುದರಲ್ಲೂ ಆಸಕ್ತಿಯಿಲ್ಲ. ತನ್ನ ಅಚ್ಚುಮೆಚ್ಚಿನ ಕಾವ್ಯರಚನೆಯಲ್ಲೂ ಮನಸ್ಸಿಲ್ಲ. ಶ್ರೀರಾಮಾಯಣ ದರ್ಶನಂ ರಚನೆ ನಡೆಯುತ್ತಿದ್ದ ಕಾಲವದು. ಕಂದನ ಅಗಲಿಕೆ ರಾಮಾಯಣ ದರ್ಶನಂ ಕಾವ್ಯದ ರಚನೆಯ ಮೇಲೂ ಪರಿಣಾಮ ಬೀರಿದೆ. ಅಂದರೆ ಬರವಣಿಗೆ ನಿಂತುಬಿಟ್ಟಿದೆ. ಅದನ್ನೆ ಕವಿ ಹೀಗಿ ಹಾಡಿದ್ದಾರೆ.
ನೀನಜ್ಜಿ ಮನೆಗೆಯ್ದು
ಆಗಿತ್ತು ದಿನವೈದು.
ಏಕಾಂತಕವಚತ್ತು
ಏಕಾಂಗಿ ಬೇಸತ್ತು,
ಹನುಮನನು ಬೀಳ್ಕೊಟ್ಟು
ರಾಮಾಯಣವನಿಟ್ಟು
ವಾಲ್ಮೀಕಿಯನು ಬಿಟ್ಟು
ಹೊರ ಅಂಗಳಕೆ ಬಂದೆ;
ತೆಂಗು ಮರದಡಿ ನಿಂದೆ:
ತೇಜಸ್ವಿ ತೊಟ್ಟಿಲ ಕಂದನಾಗಿದ್ದಾಗ ’ಕಿಷ್ಕಿಂಧಾ ಸಂಪುಟಂ’ನ ನಾಲ್ಕನೆಯ ಸಂಚಿಕೆ ’ಅತ್ತಲಾ ಕಿಷ್ಕಿಂದೆಯೊಳ್’ ಪ್ರಾರಂಭವಾಗಿತ್ತೆಂಬುದಕ್ಕೆ ’ರಾಮಾಯಣ ದರ್ಶನಂ’ದಲ್ಲಿಯೇ ಸೂಚನೆಗಳಿವೆ. ಆ ಸಂಚಿಕೆ ಪ್ರಾರಂಭವಾಗುವುದೇ ’ಏಕಳುವೆ, ತೇಜಸ್ವಿ? ಕಲ್ಪನೆಯೆರಂಕೆಯಂ ಏರಿ ಬಾ ನನ್ನೊಡನೆ’ ಎಂದು. ಅಂದರೆ ಬಹುಶಃ ಈ ವಿರಹಗೀತೆ ರಚನೆಯಾಗುತ್ತಿರುವವ ಹೊತ್ತಿಗೆ ಹನುಮಂತ ಸೀತಾನ್ವೇಷಣೆಗೋ, ಲಂಕೆಗೂ ಹೊರಟಿರಬೇಕು. ಅದನ್ನೇ ’ಹನುಮನನು ಬೀಳ್ಕೊಟ್ಟು’ ಎಂದಿರುವಂತಿದೆ. ’ರಾಮಾಯಣವನಿಟ್ಟು’ ಎಂಬ ಸಾಲು ಬರವಣಿಗೆಯನ್ನು ನಿಲ್ಲಿಸಿದ ಸೂಚನೆಯಾಗಿ ಬಂದಿದೆ. ಹೀಗೆ ತನ್ನ ಸೃಷ್ಟಿಕಾರ್ಯವನ್ನೇ ನಿಲ್ಲಿಸಿದ ಕವಿ ಹೊರ ಅಂಗಳದ ತೆಂಗಿನ ಮರದಡಿಯಲ್ಲಿ ಬಂದು ನಿಲ್ಲುತ್ತಾರೆ.
ಎರಡು ವರುಷದ ಹಿಂದೆ
ನಿನ್ನುಸಿರ ತಂದ
ನಿನ್ನ ಮೋಹದ ತಂದೆ,
ಓ ನನ್ನ ಕಂದ!
ಸುಳ್ಳಲ್ಲ, ತೇಜಸ್ವಿ,
ಎರಡೆ ವರುಷದ ತಂದೆ:
ನಾವಿಬ್ಬರೊಂದೆ!
ಎಂತಹ ಅದ್ಭುತವಾದ ಕಲ್ಪನೆ! ತೇಜಸ್ವಿ ಎರಡು ವರ್ಷದ ಮಗು. ಮಗುವಾಗಿ ತೇಜಸ್ವಿಗೆ ಎರಡು ವರ್ಷ ತುಂಬಿದೆ. ಆದರ ಜೊತೆಗೆ ತಂದೆಯಾಗಿಯೂ ಕವಿಗೆ ಎರಡೇ ವರ್ಷ! ಸುಮಾರು ಮೂವತ್ತಾರು ವರ್ಷದ ಕವಿ ತನ್ನನ್ನು ತಾನು ಎರಡು ವರ್ಷದ ತಂದೆ ಎಂದು ಭಾವಿಸಿಕೊಳ್ಳುವುದರಲ್ಲಿಯೇ ಒಂದು ರೀತಿಯ ಅರ್ಪಣಾ ಮನೋಭಾವ, ಸಂತೋಷ, ಸಂಭ್ರಮ ಮತ್ತು ಚೆಲುವು ಅಡಗಿದೆ. ಮಗುವಾಗಿ ತೇಜಸ್ವಿಗೆ ಎಷ್ಟು ಅನುಭವವಿದೆಯೋ ಅಷ್ಟೇ ಅನುಭವ ತಂದೆಯಾಗಿ ಕವಿರುವುದು! ಮಗನ ನೆನಪಲ್ಲಿ ನಿಂತ ಕವಿ ಅಂಗಳದಲ್ಲೆಲ್ಲಾ ಕಣ್ಣಾಡಿಸುತ್ತಾರೆ. ಮನೆಯಲ್ಲಿ ಮಡದಿಯಿದ್ದಾಗ ನಿತ್ಯವೂ ಮನೆಯ ಮುಂದೆ ರಂಗೋಲಿಯಿರುತ್ತಿತ್ತು. ಆದರೆ ಈಗಿಲ್ಲ. ಆದರೇನಂತೆ ಕವಿಯ ಕಣ್ಣಿಗೆ ಉದುರಿದ್ದ ತೆಂಗಿನ ಹೂವುಗಳು ರಂಗೋಲಿಯಂತೆ ಕಾಣುತ್ತಿವೆ. ಅದಕ್ಕಿಂತ ಹೆಚ್ಚಾಗಿ ಆ ಜಾಗ ಮಗನು ಆಟವಾಡುವ ಸ್ಥಳ ಎಂಬ ನೆನಪೇ ಕವಿಗೆ ಮುಖ್ಯವಾಗುತ್ತದೆ.
ಗಂಟೆ ಎಂಟರ ಹೊತ್ತು;
ಬೆಚ್ಚನೆಳಬಿಸಿಲಿತ್ತು.
ತೆಂಗು ಹೂವಲ್ಲಲ್ಲಿ
ದೋಳೆದ್ದ ನೆಲದಲ್ಲಿ
ನಿನ್ನಾಡುವೊಲದಲ್ಲಿ
ಮುದ್ದು ಚೆಲ್ಲಿ
ಮುತ್ತಿನೋಲೆರಚಿತ್ತು
ರಂಗವಲ್ಲಿ.
ಗೆರೆಗೆರೆಯ ಕರಿನೆಳಲು
ನಡುಗುತಿರೆ ನೆಲದಲ್ಲಿ
ಗಾಳಿ ಮರ್ಮರಿಸಿತ್ತು
ಗರಿಗಳಲ್ಲಿ.
ಗೋಡೆಯೆಡೆ ಗಿಡದಲ್ಲಿ
ಎಲೆ ಹೆಣೆದು ಮರೆಸಿದ್ದ
ಹತ್ತಿಯಾ ಮೆತ್ತನೆಯ
ಗೂಡಿನಲ್ಲಿ
ನಿನ್ನ ಟುವ್ವಿಯ ಹಕ್ಕಿ? . . . .
ಇಲ್ಲ! ಎಲ್ಲಿ?
ಮುದ್ದು ಬೀಡನು ಬಿಟ್ಟು
ಹೋಯಿತೆಲ್ಲಿ?
ತೆಂಗಿನ ಹೂವಿನ ರಂಗವಲ್ಲಿಯನ್ನೀಕ್ಷಿಸುತ್ತಿದ್ದ ಕವಿಯ ಮನಸ್ಸು ತೆಂಗಿನ ಮರೆದ ನೆರಳು, ಗಾಳಿಯೊಡನೆ ಆ ಗರಿಗಳ ಮರ‍್ಮರ, ನೆಳಲಿನ ನೃತ್ಯ ಎಲ್ಲವನ್ನೂ ಗಮನಿಸಿ ಗಿಡದ ಎಲೆಗಳನ್ನೆ ಹೆಣೆದು ಮಾಡಿದ ಟುವ್ವಿ ಹಕ್ಕಿಯ ಗೂಡಿನ ಬಳಿ ಹೋಗುತ್ತದೆ. ಅದು ತೇಜಸ್ವಿಯ ಟುವ್ವಿಯ ಹಕ್ಕಿ! ಆದರೆ ಅಲ್ಲಿ ಹಕ್ಕಿಯಿಲ್ಲ. ಮುದ್ದು ಬೀಡಾದ ಹತ್ತಿಯಾ ಮೆತ್ತನೆಯಾ ಗೂಡನ್ನು ಬಿಟ್ಟು ಕಂದನ ಟುವ್ವಿ ಹಕ್ಕಿ ಎಲ್ಲಿ ಹೋಯಿತು? ಕವಿ ಹುಡುಕಾಡುತ್ತಾರೆ. ಆಗ ಅವರಿಗೆ ಕಂಡಿದ್ದು-
ಹುಡುಕುತಿರೆ ಕಣ್‌ಸುಳಿಸಿ,
ಓ, ಅಲ್ಲಿ ನೋಡಲ್ಲಿ:
ಗೂಡನೂ ಹಾಡನೂ
ಎರಡನೂ ತೊರೆದು,
ಮೂಕ ಶೋಕದ ಚಿಂತೆ
ಸ್ವಪ್ನದಲಿ ಸುಳಿವಂತೆ,
ಗರಿಹೊರಗೆ ದಣಿದುದೆನೆ,
ನೋಡು, ಕುಪ್ಪಳಿಸುತಿದೆ
ಹರೆಹರೆಗೆ ಹರಿದು.
ದೂರದಲ್ಲಿರುವ ಮಗನನ್ನುದ್ದೇಶಿಸಿ ಕವಿ ಹೇಳುತ್ತಿರುವಂತೆ ಈ ರಚನೆಯಿದೆ. ತೇಜಸ್ವಿಯಿಲ್ಲದ ನೋವು ಕವಿಗೆ ಮಾತ್ರವಲ್ಲ. ಟುವ್ವಿ ಹಕ್ಕಿಗೂ ಇದೆ. ಅದಕ್ಕೆ ಅದು ಗೂಡನ್ನೂ ಜೊತೆಗೆ ತನ್ನ ಹಾಡನ್ನೂ ಬಿಟ್ಟು ಬಿಟ್ಟಿದೆ. ಮೂಕ ಶೋಕವನ್ನನುಭವಿಸುತ್ತಿದೆ. ಸ್ವಚ್ಛಂದವಾಗಿ ಹಾರಾಡುವ ಬದಲು ಕುಪ್ಪಳಿಸುತ್ತಿದೆ! ಮುಂದೆ ಕವಿಯ ಕಾಲಿಗೆ ಏನೋ ಮೆತ್ತನೆಯ ಸ್ಪರ್ಶವಾಗುತ್ತದೆ. ಆ ಸ್ಪರ್ಶ ಅವರಿಗೆ ತೇಜಸ್ವಿಯ ಮೈ ಸ್ಪರ್ಶದ ನೆನಪನ್ನು ತಂದುಬಿಡುತ್ತದೆ! ನೋಡಿದಾಕ್ಷಣ ಅವರ ಮನಸ್ಸು ಕಾಲದೇಶಗಳನ್ನು ಮೀರಿ ಏಕಕಾಲಕ್ಕೆ ಭೂತ ವರ್ತಮಾನ ಭವಿಷತ್ತುಗಳಲ್ಲಿ ಸಂಚರಿಸಲಾರಂಭಿಸುತ್ತದೆ. ಹೆಚ್ಚು ಮಾತೇಕೆ? ಐದು ದಿನಗಳ ಹಿಂದೆ, ಮಣ್ಣಿನ ಗುಡ್ಡೆ ಮಾಡಿಕೊಂಡು ಆಡುತ್ತಿದ್ದ ತೇಜಸ್ವಿಯನ್ನು ಸ್ವತಃ ತಂದೆಯೇ ಬಯ್ದಿರುತ್ತಾರೆ. ಆದರೆ ಇಂದು ಆ ಮಣ್ಣಿನ ರಾಶಿಯೇ ಅವರ ಅಲೌಖಿಕ ಆನಂದಕ್ಕೆ ಎಡೆಯಾಗಿದೆ. ತೇಜಸ್ವಿಯ ಹಸ್ತದ ಗುರುತು ಇನ್ನೂ ಮಾಸಲು ಮಾಸಲಾಗಿ ಆ ಮಣ್ಣಗುಡ್ಡೆಯ ಮೇಲೆ ಇದ್ದುದನ್ನೂ ಕವಿ ಗುರುತಿಸುತ್ತಾರೆ. ಮಣ್ಣಗುಡ್ಡೆ ತನ್ನ ಕಂದನ ಅಕ್ಕರೆಯ ಬುತ್ತಿಯಾಗಿ ಕವಿಗೆ ಕಾಣುತ್ತದೆ. ಆ ಭಾಗವನ್ನು ಇಡಿಯಾಗಿ ಇಲ್ಲಿ ಉಲ್ಲೇಖಿಸುತ್ತೇನೆ.
ಫಕ್ಕನೇನಿದು ಕಾಲ್ಗೆ
ನಿನ್ನ ಮೆಯ್ ಕೋಮಲತೆ
ಸೋಂಕಿದಂತೆ?
ದೇಶ ಮಾಯೆಯ ಮೀರಿ
ಶಿವಮೊಗ್ಗೆಯನೆ ಸೇರಿ
ಅಪ್ಪಿದಂತೆ!
ರೋಮಾಂಚನಂ ಬೆತ್ತು
ನೆಲವ ನೋಡಿದರೆತ್ತು
ದೂಳುರಾಸಿ!
ಎದುರುಗೊಂಡಿತು ಕಣ್ಣ
ಕೈಯ ಮುದ್ರಿಕೆ ಸಣ್ಣ,
ಕೊಂಚ ಮಾಸಿ!-
ನೀ ಮಾಡಿದಾ ರಾಸಿ!
ನಿನ್ನ ಕೈಯಚ್ಚು!
ನಿನ್ನ ಮೈಯ್ಯನು ಮಾಸಿ
ಬಯ್ಸಿಕೊಂಡಾ ರಾಸಿ
ಇಂದಾಯ್ತು ಮೆಚ್ಚು:
ಕಂದನಕ್ಕರೆ ಬುತ್ತಿ
ಮತ್ತೆ ಮತ್ತದನೊತ್ತಿ
ಸ್ಪರ್ಶಸುಖಿಯಾದೆ!-
ಇಷ್ಟೆಲ್ಲಾ ಕಲ್ಪನೆಗಳ ಅಂತ್ಯದಲ್ಲಿ ತನ್ನದು ಹುಚ್ಚಾಟವೆನ್ನಿಸಿರಬೇಕು. ಕಂದನಾಡಿದ ಚಿಪ್ಪನ್ನು ಕೊಂಡೊಯ್ದು ದೇವರ ಗುಡಿಯಲ್ಲಿಟ್ಟ, ಕಂದನಾಡಿದ ಮಣ್ಣ ದೂಳರಾಸಿಯನ್ನು ಮುಟ್ಟಿ ಸ್ಪರ್ಶ ಸುಖವನ್ನನುಭವಿಸುತ್ತಿರುವ ತನ್ನದು ಅತಿರೇಕವೆನ್ನಿಸಿರಬಹುದೇನೋ!? ಆದರೂ ಕವಿಗೆ ಹೆಮ್ಮೆ ಎನ್ನಿಸುತ್ತಿದೆ. ಅದಕ್ಕೆ ಕವಿತೆಯ ಕೊನೆಯ ಎರಡು ಸಾಲಿನಲ್ಲಿ ಮಗುಮ್ಮಾಗಿ-
ಯಾರು ಹುಚ್ಚೆಂದರೂ
ನನಗೆ ಮರ್ಯಾದೆ!
ಎಂದು ಬಿಡುತ್ತಾರೆ.

Monday, August 22, 2011

ಆ ಚಿಪ್ಪು ಚಿಪ್ಪಲ್ಲ: ದೇವರೇಂ ಬೆಪ್ಪಲ್ಲ!

ಈ ವಾತ್ಸಲ್ಯ ವಿರಹಿ ಸರಣಿಯ ಕವಿತೆಗಳನ್ನು ಕುರಿತು ಶ್ರೀಯುತ ಎಸ್.ವಿ.ಪರಮೇಶ್ವರ ಭಟ್ಟರು ’ಮಗನ ಮೇಲೆ ಇರುವ ವಾತ್ಸಲ್ಯವನ್ನು ಕಾವ್ಯ ವಿವರವಾಗಿ ವರ್ಣಿಸಿರುವ ಸಮಕಾಲೀನ ಕವಿ ಮತ್ತೊಬ್ಬರಿಲ್ಲ ಎನ್ನಿಸುತ್ತದೆ.’ ಎಂದಿದ್ದಾರೆ. ಕವಿಯ ದೇಹ ಮಾತ್ರ ಬೆಂಗಳೂರಿನ ಬಾಡಿಗೆ ಮನೆಯಲ್ಲಿರುತ್ತದೆ. ಮನಸ್ಸು ಮಾತ್ರ ಮೂರೂ ಹೊತ್ತು ಮಗು ಮತ್ತು ಹೆಂಡತಿಯ ಸುತ್ತಲೇ ಮನಸ್ಸು ಗಿರಕಿಹೊಡೆಯುತ್ತಿರುತ್ತದೆ.
ಆಡಿ, ಓಡಿ, ಕಾಡಿ, ಬೇಡಿ,
ನಲಿಸಿ ನಲಿವ ಕಂದನಿಲ್ಲ;
ಬದುಕನೊಂದು ಗಾನಮಾಡಿ
ಒಲಿಸಿ ಒಲಿವ ನಲ್ಲೆಯಿಲ್ಲ.
ತುಂಟತನದಿಂದ ಹಠಮಾರಿತನದಿಂದ ಒಂದು ರೀತಿಯಲ್ಲಿ ಗೋಳು ಹೊಯ್ದುಕೊಂಡರೂ ನಲಿವನ್ನು ತರುತ್ತಿದ್ದ ಕಂದ, ಬದುಕನ್ನು ಸಂಗೀತದಂತೆ ಸುಮಧುರಗೊಳಿಸಿದ್ದ ಸತಿ ಇಬ್ಬರೂ ಇಲ್ಲ! ಆಗ, ಆ ಕ್ಷಣದ ಕವಿಯ ಸ್ಥಿತಿ ಹೇಗಿತ್ತು ನೋಡಿ.
ಕಂದನಿಲ್ಲ, ನಲ್ಲೆಯಿಲ್ಲ,
ನಾಣೊಬ್ಬನೆ ಮಂಚವೆಲ್ಲ!
ಉಸಿರನೆಷ್ಟನೆಳೆದುಕೊಳಲಿ
ಶ್ವಾಸಕೋಶ ತುಂಬಲೊಲ್ಲ!
ಅತ್ತ ಹೊರಳಿ, ಇತ್ತ ಹೊರಳಿ,
ನಿದ್ದೆಗೆಟ್ಟಿತೂಹೆ ಕೆರಳಿ.
ತೊಳಲಿ, ತೊಳಲಿ, ಕಡೆಗೆ ಬಳಲಿ,
ಮನಸು ಕನಸನಪ್ಪಿತು!
ಕೊನೆಗೆ, ಕನಸಿನಾಚೆಯಲ್ಲಿ
ನಿದ್ದೆಬೊಮ್ಮದೈಕ್ಯದಲ್ಲಿ
ಮಿಲನಶಾಂತಿ ಒಪ್ಪಿತು!
ಬಹುಶಃ ಕಾವ್ಯವನ್ನೇ ಜೀವಿಸುವವರಿಗೆ ಮಾತ್ರ ಈ ರೀತಿಯ ಗ್ರಹಿಕೆ ಸಾಧ್ಯವೇನೋ! ಬದುಕಿನ ಪ್ರತಿಕ್ಷಣವೂ ಕಾವ್ಯಮಯವಾಗಿಯೇ ಕಾಣುತ್ತದೆ. ಅಲ್ಲಿಯ ದುಃಖ ದುಮ್ಮಾನಗಳು, ಹಾಸ್ಯ, ಕರುಣ, ಅಪ್ರಲಂಬ - ವಿಪ್ರಲಂಬ ಶೃಂಗಾರ, ಮಿಲನ, ವಿರಹ ಹೀಗೆ ಎಲ್ಲವೂ. . . . . ವಾಸ್ತವದ ಅಗಲಿಕೆಗೆ ಕನಸಿನಲ್ಲಿ ಕೊನೆಯಾಗುತ್ತದೆ!
ಪುಟ್ಟ ಕಂದನ ಅಗಲಿಕೆ, ಆತನ ಆಟಪಾಟಗಳುಜ, ಆತ ಬಳಸಿದ ವಸ್ತುಗಳು ಎಲ್ಲವೂ ದಿವ್ಯವಾಗಿ ಕಾಣುವಂತೆ ಮಾಡಿಬಿಡುತ್ತದೆ. ಮಗು ತನ್ನ ಆಟಕ್ಕೆ ಬಳಸಿದ ತೆಂಗಿನ ಚಿಪ್ಪೊಂದು ಮಗುವಿನಿಂದ ದೂರವಿರುವ ಕವಿಗೆ ಒಂದು ದಿವ್ಯಸಾಧನದಂತೆ ಕಂಡುಬಿಡುತ್ತದೆ.
ನೀನು ಅಮ್ಮನ ಕೂಡಿ
ಅಜ್ಜಿ ಮನೆಗೆ
ಹೋದಿರುಳು ಬೆಳಗಾಯ್ತು
ಎಂತೋ ಕೊನೆಗೆ.
ಎಂತು ತಿಳಿಸಲಿ ಹೇಳು
ಹಸುಳೆ ನಿನಗೆ?
ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಕಳೆದ ಕವಿಗೆ ಬೆಳಗಿನ ಜಾವ ನಿದ್ದೆ ಬಂದಿರಬೇಕು. ಮರುಕ್ಷಣದಲ್ಲಿಯೇ ಬೆಳಕಾಗಿದೆ. ಅದು ಹೇಗಾಯಿತು ಎನ್ನುವುದು ಕವಿಗೆ ಗೊತ್ತಿಲ್ಲ. ಆದರೆ ಕವಿ ರಾತ್ರಿಯಿಡೀ ಪಟ್ಟ ಅಗಲಿಕೆಯ ನೋವು ಅದನ್ನು ಅರ್ಥ ಮಾಡಿಸುವುದಾದರೂ ಹೇಗೆ?
ನಿಮ್ಮ ನೆನಹಿನ ಉರಿಯೆ
ಹೊತ್ತಿತೆನೆಗೆ!
ಪಕ್ಕದಲ್ಲಿ ನೀನೆಲ್ಲಿ?
ನಿನ್ನಮ್ಮನೆಲ್ಲಿ?
ಶೂನ್ಯತೆಯೆ ಮಲಗಿತ್ತು
ಇಡಿ ಮಂಚದಲ್ಲಿ?
ಇಡೀ ಮಂಚವನ್ನು ಶೂನ್ಯವೇ ಆವರಿಸಿತ್ತು ಎಂಬ ಭಾವ ಕವಿಗೆ ಆಗಿದೆ; ಜೊತೆಗೆ ಸ್ವತಃ ಕವಿಗೂ ಶೂನ್ಯ ಆವರಿಸಿಬಿಟ್ಟಿದೆ. ನಿಟ್ಟುಸಿರೊಂದೇ ಜೊತೆಗಾತಿ ಕವಿಗೆ. ಆ ಜೊತೆಗಾತಿಯೊಂದಿಗೇ ಎದ್ದು ಅಂಗಳಕ್ಕೆ ಬರುತ್ತಾರೆ.
ಸುಯ್ಯುತಲ್ಲಿಂದೆದ್ದು
ಬಂದೆನಂಗಳಕಲ್ಲಿ
ನೀನಾಡಿದಾ ಮುದ್ದು ಮಣ್ಣಿನಲ್ಲಿ
ಕಂಡೆನೊಂದಲ್ಪಮಂ,
ಬೆಂದೆದೆಗೆ ತಣ್ಪೀವ
ಸವಿಸೊದೆಯ ತಲ್ಪಮಂ:
ಒಂದು ಕರಟದ ಚಿಪ್ಪು,
ಮಣ್ಣಿಡಿದ ಬಿರಿದೊಡೆದ
ನೀನಾಡಿದಾ ಚಿಪ್ಪು,
ಮಣ್ಣಾಟದಾ ಚಿಪ್ಪು,
ನಿನ್ನಾಟದಾ ಚಿಪ್ಪು
ನೀನಾಡಿದಾ ಮುದ್ದು
ಮಣ್ಣಿನಲ್ಲಿ
ಪರದೇಶಿಯಾಗಿದ್ದು
ಪರದೇಶಿಯೋಲ್ ಬಿದ್ದು
ಹನಿಯ ತಂದುದು ನನ್ನ
ಕಣ್ಣಿನಲ್ಲಿ!
ಸಾಮಾನ್ಯ ಕಣ್ಣಿಗೆ ಯಕಶ್ಚಿತ್ ಎನ್ನಬಹುದಾದ ಒಂದು ತೆಂಗಿನ ಚಿಪ್ಪು ಕವಿಯ ಭಾವಕೋಶವನ್ನೇ ಆವರಿಸಿಬಿಡುತ್ತದೆ! ಒಂದು ರೀತಿಯಲ್ಲಿ ಕವಿಯೇ ಪರದೇಶಿಯಂತೆ, ಶೂನ್ಯವನ್ನೇ ಉಂಡುಟ್ಟು ಹೊದ್ದು ಮಲಗಿರುವ ಕವಿಗೆ ಪರದೇಶಿಯಂತೆ ಬಿದ್ದಿದ್ದ ತೆಂಗಿನ ಚಿಪ್ಪು ದೊಡ್ಡ ನಿಧಿಯಂತೆ ಕಾಣುತ್ತದೆ. ಅದು ಗುರುವೊಪ್ಪಿದ, ದೇವನೊಪ್ಪಿದ ಪರಮ ಪವಿತ್ರ ವಸ್ತುವಾಗಿ ಬಿಡುತ್ತದೆ. ಅದನ್ನು ಕಂಡ ತಕ್ಷಣ ಕವಿಯೊಲುಮೆ ಹೀಗೆ ಹಾಡುತ್ತದೆ.
ಕಾಣಲಾ ನಿನ್ನೊಲುಮೆ
ಚಿಮ್ಮಿತಕ್ಕರೆ ಚಿಲುಮೆ.
ಅದನೆತ್ತಿ, ಎದೆಗೊತ್ತಿ,
ದೇವರಮನೆಗೆ ಬಂದೆ:
ನೈವೇದ್ಯವನೆ ತಂದೆ!
ಬೀದಿಯಲ್ಲಿ ಬಿದ್ದಿದ್ದ ಚಿಪ್ಪನ್ನು ದೇವರಮನೆಗೆ ತೆಗೆದುಕೊಂಡು ಬರುವ ವಿರಹಿ ತಂದೆ ಕುವೆಂಪು, ತಮ್ಮ ಮೂರುವರ್ಷದ ಕಂದ ತೇಜಸ್ವಿಯ ಸಾನಿಧ್ಯದಲ್ಲಿ ಅನುಭವಿಸಿದ್ದ ದಿವ್ಯತ್ವ ಎಂತಹುದ್ದು ಎಂಬ ಪ್ರಶ್ನೆ ಮೂಡುತ್ತದೆ. ಬಹುಶಃ ಪ್ರೀತಿಯ ವಸ್ತು ದೂರವಾದಾಗಲೇ ಅದು ಹೆಚ್ಚು ಕಾಡಿಸುತ್ತದೆ. ದಿನವೂ ಅದೇ ಚಿಪ್ಪಿನಲ್ಲಿ ಆಟವಾಡುತ್ತಿದ್ದ ಮಗನನ್ನು ಮಾತ್ರ ಗಮನಿಸುತ್ತಿದ್ದರೇನೋ? ಆದರೆ ಈಗ ಆ ’ಯಕಶ್ಚಿತ್’ ಚಿಪ್ಪು ಕವಿಗೆ ಬೇರೆಯೇ ಆಗಿ ಕಾಣುತ್ತಿದೆ. ಅದನ್ನೇ ನೈವೇದ್ಯದಂತೆ ಭಾವಿಸಿ ದೇವರ ಮನೆಗೆ ತಂದು ತಮ್ಮಿಷ್ಟ ಗುರು-ದೇವರುಗಳಿಗೆ ಅರ್ಪಿಸಿಬಿಡುತ್ತಾರೆ!
ನಿನ್ನ ನೆನಹಿನ ನಿಧಿಯ
ಆ ಕರಟ ಚಿಪ್ಪು
ಹೂವು ಹಣ್ಣಿಗೆ ಮಿಗಿಲು
ಗುರುದೇವಗೊಪ್ಪು:
ಗುರುದೇವರಿಗೆ ಹೂವು ಹಣ್ಣುಗಳ ನೈವೇದ್ಯ ಮಾಡುತ್ತಿದ್ದ ಕವಿ ಇಂದು ಮಗನಾಡಿದ ಚಿಪ್ಪನ್ನು ನೈವೇದ್ಯವಾಗಿ ಇಡುತ್ತಿದ್ದಾರೆ. ಕರಟ ಚಿಪ್ಪು ಎಂದು ಒತ್ತಿ ಹೇಳುತ್ತಿರುವುದರಿಂದಲೇ ಅದೊಂದು ನಿಧಿಯಾಗಿ ಕವಿಗೆ ಕಂಡಿದೆ ಎಂಬ ಭಾವ ಮೂಡದಿರದು.
ಬೇರೆ ಹೂವಿಡಲಿಲ್ಲ;
ಬೇರೆ ಹಣ್ಣಿಡಲಿಲ್ಲ.
ನನ್ನ ಮುಡುಪಿಗೆ, ಬಲ್ಲೆ,
ದೇವರೊಪ್ಪಿದನು;
ನನ್ನ ಕಂದನ ಕರಟ
ಚಿಪ್ಪನಪ್ಪಿದನು!
ಕವಿಯರ್ಪಿಸಿದ ಚಿಪ್ಪಿನ ನೈವೇದ್ಯವನ್ನು ಖಂಡಿತ ಆ ದೇವರು ಒಪ್ಪಿ ಅಪ್ಪಿಕೊಳ್ಳುತ್ತಾನೆ. ಏಕೆಂದರೆ-
ಆ ಚಿಪ್ಪು ಚಿಪ್ಪಲ್ಲ:
ದೇವರೇಂ ಬೆಪ್ಪಲ್ಲ!
ಅಕ್ಕರೆಯ ಜತೆಮಾಡಿ
ಏನಾದರೇಂ ನೀಡಿ:
ನೈವೇದ್ಯವೆಲ್ಲ!
ನಿಜವಾಗಿ ದೇವರೇನಾದರೂ ಇದ್ದರೆ ಇದಕ್ಕಿಂತ ಒಳ್ಳೆಯವನಾಗಿರಲು ಸಾಧ್ಯವಿಲ್ಲ! ಮಗುವಾಡಿದ ಚಿಪ್ಪನ್ನು ಒಪ್ಪಿ-ಅಪ್ಪಿಕೊಳ್ಳುವ ದೇವರೇ ನಿಜವಾದ ದೇವರು. ಚಿನ್ನದ ದೇವಾಲಯ, ವಜ್ರದ ಕಿರೀಟ, ಬೆಳ್ಳಿಯ ಪಲ್ಲಕ್ಕಿ ಬೇಡುವವನು ದೇವರಾಗುತ್ತಾನೆಯೇ!?
ಕವಿ ಕುವೆಂಪು ಸ್ವಚ್ಚತೆಗೆ, ಮನಸ್ಸು-ಮನೆ-ಪರಿಸರದ ನೈರ್ಮಲ್ಯಕ್ಕೆ ಹೆಚ್ಚು ಒತ್ತುಕೊಡುತ್ತಿದ್ದವರು. ತಮ್ಮನ್ನು ತಾವೇ ’ನುಡಿರಾಣಿಯ ಗುಡಿ ಕುವೆಂಪು’ ಎಂದು ಕರೆದುಕೊಂಡಿದ್ದವರು! ಅಂತಹ ಸ್ವಚ್ಚತೆ ಸಂಕಲ್ಪವನ್ನು ವ್ರತದಂತೆ ಪಾಲಿಸುತ್ತಿದ್ದ ಕವಿಗೆ, ಸ್ವತಃ ತನ್ನ ಮನೆಯ ನೈರ್ಮಲ್ಯವೇ ಅಸಹ್ಯ ಮೂಡಿಸಿದ್ದು ತನ್ನ ಮಗನ ಅಗಲಿಕೆಯೇ! ಈ ಸರಣಿಯ ಏಳನೆಯ ಕವಿತೆ ಆ ಸಂದರ್ಭವನ್ನು ಕಟ್ಟಿಕೊಡುತ್ತದೆ. ಇಡಿಯಾಗಿ ಕವಿತೆಯನ್ನೊಮ್ಮೆ ಓದಿದರೆ ಸಾಕು; ಕವಿತೆಯಿಂದ ಕವಿಯ ಅಂದಿನ ಮನಸ್ಥಿತಿಯನ್ನು ಹಾಗೂ ಅದಕ್ಕೊದಗಿರುವ ಅಪೂರ್ಣತೆಯಿಂದ ಕವಿಯ ಮನೋಶೂನ್ಯತೆಯನ್ನು ಅರಿಯಬಹುದಾಗಿದೆ.
ನೀನಿಲ್ಲ . . . . .
. . . . ಮನೆಯಲ್ಲಿ
ಎಲ್ಲಿ ಕಣ್ಣಿಡಲಲ್ಲಿ
ಕಸವಿಲ್ಲ . . . .
. . . . ಸರವಿಲ್ಲ!-
ಬಗೆಗೆ ಸುತವಾತ್ಸಲ್ಯ
ಒಗೆಯಲೀ ನೈರ‍್ಮಲ್ಯ
ಬರಿ ಅಸಹ್ಯ:
ನೀ ಚೆಲ್ಲುವಾ ಧೂಳಿ
ಆಗಿತ್ತು ರಂಗೋಲಿ;
ನೀ ಹರಡುತ್ತಿದ್ದ ಕಸ
ಆಗಿತ್ತು ಜೀವರಸ;
ನೀನಿಲ್ಲದೀ ಮನೆಯ
ನೈರ‍್ಮಲ್ಯವೇ, ತನಯ,
ನನಗಾಯ್ತಸಹ್ಯ!

Monday, August 15, 2011

ವಾತ್ಸಲ್ಯ ವಿರಹಿ - ಸರಣಿ ವಿರಹ ಕವಿತೆಗಳು

ಈ ಸರಣಿಯಲ್ಲಿ ೧೩ ಕವಿತೆಗಳಿವೆ. ಪ್ರತಿಯೊಂದು ಕವಿತೆಯು ತವರಿನಲ್ಲಿ ತನ್ನ ಮಗನೊಂದಿಗಿರುವ ಸತಿಯ, ಮೂರುವರ್ಷದ ಮಗನ ಅಗಲುವಿಕೆಯಿಂದ ಮಾಡಿದ ಭಾವಗಳಿಂದ ಕೂಡಿವೆ. ಈ ಕವಿತೆಗಳ ಸರಣಿಗೂ ಮೊದಲು ನಾಲ್ಕು ಸಾಲಿನ ಒಂದು ಚುಟುಕವಿದೆ, ’ಪ್ರಣಯ ಕಟಕಿ’ ಎಂದದರ ಹೆಸರು.
ಬರಲಿರುವ ಕಂದಂಗೊ
ಬಂದ ಕಂದಂಗೊ
ಹೊಲಿಯುತಿರುವೀ ಅಂಗಿ
ಆರಿಗರ್ಧಾಂಗಿ?
ಈ ಚುಟುಕುವನ್ನು ಓದಿದಾಕ್ಷಣ ಒಂದು ಸುಂದರ ಚಿತ್ರಣ ಓದುಗನ ಮನಸ್ಸಿನಲ್ಲಿ ಮೂಡುವಷ್ಟು ಸರಳ ರಚನೆ ಇದಾಗಿದೆ. ಅಂಗಿಯನ್ನು ಹೊಲಿಯುತ್ತಾ ಕುಳಿತಿರುವ ಸತಿ ಒಂದು ಮಗುವಿನ ತಾಯಿ ಎಂಬುದು ’ಬಂದ ಕಂದಂಗೊ’ ಎಂಬ ಸಾಲಿನಲ್ಲಿ ಹರಳುಗಟ್ಟಿದ್ದರೆ, ’ಬರಲಿರುವ ಕಂದಂಗೊ’ ಎಂಬ ಸಾಲಿನಲ್ಲಿ ಆಕೆ ಗರ್ಭಿಣಿಯಾಗಿದ್ದಾಳೆ ಎಂಬ ಭಾವವನ್ನು ಒಳಗೊಂಡಿದೆ.
ವಾತ್ಸಲ್ಯ ವಿರಹಿ ಸರಣಿಯ ಮೊದಲ ಕವಿತೆಯಲ್ಲಿಯೇ, ಹೆಂಡತಿ ತವರು ಮನೆಗೆ ಮೂರುವರ್ಷದ ಮಗನ ಜೊತೆ ಹೋಗಿದ್ದನ್ನು ನೋಡಬಹುದಾಗಿದೆ. ಚೊಚ್ಚಲ ಹೆರಿಗೆಗೆ ಹೋಗಿದ್ದಾಗ, ಕವಿಗೆ ಕೇವಲ ಒಲಿದ ಸತಿಯ ವಿರಹ ಮಾತ್ರ ಇತ್ತು; ಆದರೀಗ ಒಲಿದ ಸತಿ, ಪೂರ್ಣಚಂದ್ರಸಮ ಮೂರುವರ್ಷದ ತೇಜಸ್ವಿ ಇಬ್ಬರ ಅಗಲಿಕೆಯೂ ಕಾಡುತ್ತಿದೆ.
ನೀನಂದು ಹೋದಂದು
ತವರುಮನೆಗೆ
ಒಂದು ನೋವನು ಸಹಿಸಿ
ಸಾಕಾಯ್ತು ನನಗೆ.-
ಎಂಬ ಸಾಲುಗಳು ಮೊದಲ ಬಾರಿ ಸತಿ ಹೆರಿಗೆಗೆ ತವರಿಗೆ ಹೋದದ್ದನ್ನು, ಆಗ ಕವಿ ಅನುಭವಿಸಿದ್ದ ವಿರಹವನ್ನು ಮನಗಾಣಿಸುತ್ತವೆ. ಮುಂದುವರೆದು,
ಕಂದನೊಡಗೂಡಿ
ಮೂರುವರ್ಷದ ಮೇಲೆ,
ಕಂದನೊಡನಾಡಿ
ಬಾಳು ಸಾಗಿದ ಮೇಲೆ,
ಇಂದು ತೆರಳಿದೆ ಕೊನೆಗೆ
ಮತ್ತೆ ತಾಯ್ಮನೆಗೆ
ಮೂರು ವರ್ಷಗಳ ಕಾಲ ಕಂದನೊಡನೆ ಒಡನಾಡಿ ಬಾಳು ಸಾಗಿಸುತ್ತಿದ್ದ ತಂದೆಗೆ, ಸತಿ ಮತ್ತು ಸುತ ಇಬ್ಬರೂ ದೂರವಾಗಿದ್ದಾಗ, ತನ್ನ ವಿರಹ ದ್ವಿಗುಣವಾಗಿದೆ ಎನ್ನಿಸುತ್ತದೆ.
ನಿನ್ನೊಡನೆ ಕಂದನನು
ನೆನೆಯಲಾನಂದನನು,
ಆ ಒಂದು ನೋವಿಂದು
ಎರಡಾಗಿ ದಹಿಸೆ
ಸಾಕು ಸಾಕಾಗುತಿದೆ
ನನಗದನು ಸಹಿಸೆ!
ಚೊಚ್ಚಲ ಹೆರಿಗೆಗೆ ತವರಿಗೆ ಸತಿ ಹೋಗಿದ್ದಾಗ ಅನುಭವಿಸಿದ ಒಂದು ನೋವು, ಇಂದು ಕಂದನನ್ನು ನೆನೆದಾಗ ಎರಡಾಗಿ ವಿರಹಿ ತಂದೆಯನ್ನು ಸುಡುತ್ತಿದೆ. ಅದನ್ನು ಸಹಿಸಿ ಸಹಿಸಿ ಕವಿ ಹೈರಾಣವಾಗಿಬಿಟ್ಟಿದ್ದಾರೆ. ಕವಿತೆಯಲ್ಲಿ ಎದ್ದು ಕಾಣುವ ಸರಳತೆ ಹಾಗೂ ನಿಧಾನ ಗತಿ, ಕವಿತೆಯ ಭಾವವನ್ನು ಮನಮುಟ್ಟಿಸುತ್ತದೆ.
ಈ ಸರಣಿಯ ಎರಡನೆಯ ಕವಿತೆಯಿಂದ, ಕವಿ ಆಗ ಉದಯರವಿಯಲ್ಲಿ ಇರಲಿಲ್ಲ, ಬಾಡಿಗೆ ಮನೆಯಲ್ಲಿದ್ದರೆಂದು ತಿಳಿಯುತ್ತದೆ. ಆಗ ಕುವೆಂಪು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ರೀಡರ್ ಆಗಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ರಾತ್ರಿ ರೈಲಿಗೆ ಹೆಂಡತಿ ಮಗುವನ್ನು ಸ್ವತಃ ಕವಿಯೇ ಹತ್ತಿಸಿ ಬಂದಿದ್ದರ ಚಿತ್ರಣವಿದೆ. ಅಂದು ತವರು ಮನೆಯಲ್ಲಿ ಬಿಟ್ಟು ಒಬ್ಬರೇ ರೈಲಿನಲ್ಲಿ ಮೈಸೂರಿಗೆ, ಉದಯರವಿಗೆ ಬಂದಿದ್ದರೆ, ಇಂದು ಹೆಂಡತಿ ಮಗವನ್ನು ತವರಿಗೆ ಕಳುಹಿಸಿ ಕವಿ ಬಾಡಿಗೆ ಮನೆಗೆ ಬರುತ್ತಿದ್ದಾರೆ. ಆದರೆ ಅನುಭವಿಸುವ ವಿರಹ ಮಾತ್ರ ಬದಲಾಗಿಲ್ಲ. ದ್ವಿಗುಣಗೊಂಡಿದೆ.
ರೈಲು ಹೊರಟಿತು ಮುಂದೆ.
ಬೀಳುಕೊಳುತಾ ನಿಂದೆ,
ನಿಲ್ದಾಣದಲ್ಲಿ.
ತಾಯಿ ಮಕ್ಕಳ್ವೆರಸಿ
ತಂದೆ ಹೊಟ್ಟೆಯನುರಿಸಿ
ಬಂಡಿ ಕಣ್ಮರೆಯಾಯ್ತು
ಇರುಳಿನಲ್ಲಿ . . . .
ಅಂದಿನಂತೆ ಇಂದೂ ಕವಿಗೆ ಸಿಟ್ಟು, ಕಿನಿಸು ಎಲ್ಲಾ ಇದೆ. ಆದರಿಂದು ಆ ಸಿಟ್ಟು ರೈಲಿನ ಮೇಲೆ ತಿರುಗಿದೆ! ತಂದೆಯ ಹೊಟ್ಟೆಯನುರಿಸುವಂತೆ ತಾಯಿ ಮಗವನ್ನು ಕರೆದುಕೊಂಡು ದೂರ ಹೋಗುತ್ತಿದೆಯಲ್ಲಾ ಎಂದು ರೈಲಿನ ಮೇಲೆ ಕವಿ ಕೋಪಗೊಳ್ಳುತ್ತಾರೆ. ಮುಂದುವರೆದು,
ಹಾಲು ಬೆಳ್ದಿಂಗಳಿನಲಿ
ಹಾಳು ಬೀದಿಯ ತೊಳಲಿ
ಬಂದೆನಂತೂ ಕೊನೆಗೆ
ಬಾಡಿಗೆಯ ಮನೆಗೆ!
ಬರುತ್ತಾರೆ. ಬಂದರೆ ಮತ್ತದೆ ಬಣ ಬಣ. ಅದು ಅವರ ಪಾಲಿಗೆ ಮನೆಯಲ್ಲ, ಮನೆ ಎಂಬ ಹೆಸರನು ಹೊತ್ತ ಶೂನ್ಯ!
ಹಕ್ಕಿ ಗೂಡನು ಕೊರೆದು
ಮರಿಮಾಡುತದ ತೊರೆದು
ಬಿಟ್ಟ ಪೊಟರೆಯೊಳೆಂತು
ಗಾಳಿ ನರಳುವುದಂತು
ನರಳಿದೆನು ನಿಂತು,
ಮನೆವೆಸರ ಇಟ್ಟಿಗೆಯ
ಆ ಶೂನ್ಯದಲಿ!
ಕವಿಯೆ ನಿಟ್ಟುಸಿರಿಗೆ ನರಳಿಕೆಗೆ ಒಂದೊಳ್ಳೆಯ ಉಪಮೆ ಇಲ್ಲಿದೆ. ಹಕ್ಕಿ ಮರವೊಂದರಲ್ಲಿ ಗೂಡು ಕೊರೆಯುತ್ತದೆ. ಮೊಟ್ಟೆ ಮಾಡುತ್ತದೆ. ಮರಿಯೂ ಆಗುತ್ತದೆ. ಮರಿಗೆ ರೆಕ್ಕೆ ಪುಕ್ಕ ಬಂದು ಬಲಿತಾದ ಮೇಲೆ ಹಕ್ಕಿಗಳ ಪರಿವಾರ ಗೂಡನ್ನು ಬಿಟ್ಟು ಹಾರಿ ಬೇರೆಡೆಗೆ ಹೋಗುತ್ತವೆ. ಇತ್ತ ಗೂಡು ಪಾಳು ಬೀಳುತ್ತದೆ. ಜೋರಾಗಿ ಗಾಳಿ ಬೀಸಿದಾಗ, ಆ ಪೊಟರೆಯಲ್ಲಿ ಗಾಳಿ ನುಗ್ಗುವಾಗ, ತಿರುಗಿ ಬರುವಾಗ ಉಂಟಾಗುವ ಸುಯ್ದನಿಯಂತೆ ಕವಿಯ ನಿಟ್ಟುಸಿರಿತ್ತಂತೆ! ಸತಿ-ಸುತರಿದ್ದಾಗ ನಂದನವನವಾಗಿದ್ದ ಮನೆ ಇಂದು ಶೂನ್ಯವಾಗಿಬಿಟ್ಟಿದೆ. ಮೊದಲ ಬಾರಿ ಅನುಭವಿಸಿದ್ದ ಶೂನ್ಯ ಶೋಧನೆಯ ಭಾವವನ್ನು ಇಂದೂ ಕವಿ ಅನುಭವಿಸುತ್ತಿದ್ದಾರೆ!
ಈ ಸರಣಿಯ ಮೂರನೆಯ ಕವಿತೆಯಲ್ಲಿ ನೇರವಾಗಿ ಕವಿ ತನ್ನ ಸುತ ತೇಜಸ್ವಿಯ ಅಗಲಿಕೆಯ ವಿರಹವನ್ನು ಹೊರಹಾಕಿದ್ದಾರೆ. ಅತ್ಯಂತ ಪ್ರೀತಿಪಾತ್ರರಾದವರು, ಕಣ್ಣಳತೆಯಿಂದ ದೂರವಿದ್ದಾಗ, ಕಂಡ ಜಡ-ಚೇತನಗಳಲ್ಲೆಲ್ಲಾ ಅವರನ್ನೇ ಕಾಣುವಂತೆ ಕವಿ ಇಲ್ಲಿ ಟುವ್ವಿ ಹಕ್ಕಿಯ ಹಾಡೊಂದರಲ್ಲಿ ತೇಜಸ್ವಿಯನ್ನು ಕಾಣುತ್ತಾರೆ! ಒಂದೇ ಸಮನೆ ಟುವ್ವಿ ಟುವ್ವಿ ಎಂದು ಹಕ್ಕಿ ಹಾಡುತ್ತಿರುವುದನ್ನು ಕೇಳಿದ ಕವಿಗೆ,
ಸುಮ್ಮನೆಯೆ ಕೂಗುತಿದೆ!
ಕೂಗುತಿಹದೇತಕಾ
ಟುವ್ವಿಹಕ್ಕಿ?
ಎಂಬ ಪ್ರಶ್ನೆ ಮೂಡುತ್ತದೆ. ತಕ್ಷಣ,
ತೇಜಸ್ವಿಯಗಲಿಕೆಯ ಉರಿಗೆ ಸಿಕ್ಕಿ?
ಅಂತಲ್ಲದಿನ್ನೇನು?
ಪಂತಕಟ್ಟುವೆ ನಾನು!
ಎಂದು ಉತ್ತರವನ್ನು ಕಂಡುಕೊಳ್ಳುತ್ತದೆ ಕವಿಯ ಮನಸ್ಸು. ಸತಿ-ಸುತರಿಂದ ದೂರವಿರುವುದಕ್ಕೆ ವಿರಹ ದುಃಖವನ್ನು ಅನುಭವಿಸುತ್ತಿದ್ದೇನೆ ಎನ್ನುತ್ತಾರೆ.
ಎಂದಿನಂದದಿ ನೀನು
ಕಣ್ಗೆ ಕಾಣದೆ ತಾನು
ವಿರಹ ದುಃಖಿ!
ತೇಜಸ್ವಿಯ ನೆನಪಿನಲ್ಲಿಯೇ ಮುಳಗಿರುವ ಕವಿಗೆ, ಟುವ್ವಿಹಕ್ಕಿಯ ಟುವ್ವಿ ಹಾಡು ’ಟುವ್ವಿ ಟುವ್ವಿ’ ಎಂಬುದಕ್ಕೆ ಬದಲಾಗಿ ’ತೇಜಸ್ವಿ ತೇಜಸ್ವಿ’ ಎಂದು ಹಾಡುತ್ತಿರುವಂತೆ, ತೇಜಸ್ವಿಯನ್ನು ಹಕ್ಕಿ ಕರೆಯುತ್ತಿರುವಂತೆ ಭಾಸವಾಗುತ್ತದೆ.
ತೇಜಸ್ವಿ ತೇಜಸ್ವಿ
ತೇಜಸ್ವಿ ತೇಜಸ್ವಿ
ತೇಜಸ್ವಿ ತೇಜಸ್ವಿ . . .
ಎಂದು ನಿನ್ನನೆ ಕರೆದು
ಮೊಟ್ಟೆಗೂಡನು ತೊರೆದು
ಹಾತೊರೆದು ಕೊರಗುತಿದೆ;
ನೆನೆ ನೆನೆದು ಮರುಗುತಿದೆ
ಪುಟ್ಟಹಕ್ಕಿ!
ಎಂದು ದೂರದಲ್ಲಿರುವ ಮಗನಿಗೆ ಹೇಳುತ್ತಿದ್ದಾರೆ. ಮುಂದುವರೆದು,
ನನ್ನ ಗೂಡಿಹ ಗಿಡದ
ಧೂಳಿಡಿದ ಬುಡದ
ಮಣ್ಣಾಟವನು ಬಿಡದ
ಅವ ಎತ್ತ ನಡೆದ?
ಎಂದು ಕರೆದೊರಲುತಿದೆ
ನಿನ್ನ ಟುವ್ವಿಯ ಹಕ್ಕಿ,
ವಿರಹದುಃಖಿ!
ನನ್ನಂತೆಯೇ ಆ ಹಕ್ಕಿಯೂ ತೇಜಸ್ವಿ ಕಾಣದಿರುವುದರಿಂದ ಉಂಟಾದ ವಿರಹದ ದುಃಖವನ್ನು ಅನುಭವಿಸುತ್ತಿದೆ ಎಂದು ಭಾವಿಸುತ್ತಾರೆ.
ದೂರದಲ್ಲಿರುವ ಮಗನ ಕ್ಷೇಮಾತುರನಾಗಿರುವ ತಂದೆಯಾಗಿ ಕುವೆಂಪು ನಾಲ್ಕನೆಯ ಕವಿತೆಯಲ್ಲಿ ಕಾಣುತ್ತಾರೆ. ತಮ್ಮ ಕಣ್ಣೆದುರಿಗೆ ಇರದ ಕಂದನ ಆಟಪಾಠಗಳೊಂದಿಗೇ, ಆಕಸ್ಮಿಕವಾಗಿ ಆಗಬಹುದಾದ ಅಪಘಾತಗಳ ನೆನಪೂ ಬಂದು ಮನಸ್ಸು ದಿಗಿಲು ಬೀಳುತ್ತದೆ.
ಅಲ್ಲಿ ಶಿವಮೊಗ್ಗೆಯಲಿ
ಮನೆ ಮುಂದೆ ರಸ್ತೆಯಲಿ
ನೀನು ದೂಳಾಡುತಿರೆ
ಬಹುವೇಗಿಯಾಗಿ ಬರೆ
ಮಾರಿ ಬಸ್ಸು,
ಕಂಡು ಮೇಲೇಳುತಿರೆ . . .
ಶಿವ ಶಿವಾ! . . .
ಗುರು ರಕ್ಷೆ! ಗುರು ರಕಷೆ!
ಸಾಕು ನನಗೀ ಶಿಕ್ಷೆ!
ಬೆಂಕಿಯಿಕ್ಕಲಿ! ಹಾಳು
ಕವಿ ಕಲ್ಪನೆಯ ಬಾಳು
ಗರಗಸದ ಗೋಳು:
ಸುಖದಃಖದೆಳತಕ್ಕೆ
ಸೀಳು ಸೀಳು!
ಕವಿಗೆ ಕಲ್ಪನಾ ಶಕ್ತಿ ಅತ್ಯಂತ ಮಹತ್ವದ್ದು. ಆದರೆ ದೈನಂದಿನ ಜೀವನದಲ್ಲಿ ಈ ಕಲ್ಪನೆ ತಂದಿಕ್ಕುವ ಆತಂಕದಿಂದ ಕವಿಕಲ್ಪನೆಯ ಬಾಳು ಗರಗಸದ ಗೋಳಾಗಿ ಕಂಡು ’ಬೆಂಕಿಯಿಕ್ಕಲಿ’ ಎಂದುಬಿಡುತ್ತಾರೆ. ವಿರಹತಾಪವೆ ಹಾಗೇನೋ ಅನ್ನಿಸುತ್ತದೆ. ಸೂರ‍್ಯೋದಯ ಹೆಣ ಮೂಡಿತು ಎನ್ನುವ, ಕಲ್ಪನಾ ಶಕ್ತಿಗೆ ಬೆಂಕಿಯನ್ನಿಕ್ಕು ಎನ್ನುವ ಮನಸ್ಥಿತಿಗೆ ದರ್ಶನಕಾರನಾದ ಕವಿಯನ್ನು ತಂದು ನಿಲ್ಲಿಸಿರುವ ’ವಿರಹ, ನಿನಗೆ ನಮೋ ನಮಃ!’

Monday, August 08, 2011

'ಜೇನಾಗುವ' ಎನ್ನುವಾಗಲೆ ವಿರಹ!

ಕುವೆಂಪು ಅವರ ಜೇನಾಗುವ ಕವನಸಂಕಲನದಲ್ಲಿ ಹಲವಾರು ವಿರಹಗೀತೆಗಳಿವೆ. ವಾತ್ಸಲ್ಯ ವಿರಹಿ ಸರಣಿಯಲ್ಲಿ ೧೩ ಕವಿತೆಗಳಿವೆ. ಅದಲ್ಲದೆ ಇನ್ನೂ ಕೆಲವು ವಿರಹಕವನಗಳಿವೆ. ಇವುಗಳೆಲ್ಲಾ ಕವಿಯ ಬದುಕಿನ ಹಲವಾರು ಸಂದರ್ಭಗಳನ್ನು ಒಳಗೊಂಡಿವೆ ಎಂಬುದು ಈ ಕವಿತೆಗಳಿಗಿರುವ ಹೆಚ್ಚುವರಿ ಮಹತ್ವ ಎನ್ನಬಹುದು.
ಉದಯರವಿ ಎಂದರೆ ಕವಿಗೆ ಸರ್ವಸ್ವವೂ ಹೌದು. ಇಡೀ ತನ್ನ ಬದುಕನ್ನು ಉದಯರವಿ ಎಂಬ ವಲ್ಮೀಕದೊಳಗೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಕವಿ ಕಳೆದಿದ್ದಾರೆ. ಅಂತಹ ಉದಯರವಿ ಒಮ್ಮೆ ಕವಿಗೆ ವಿರಹ ಚಿತೆಯಾಗಿ ಕಾಡಿತ್ತು! ’ಗೋಡೆ ಸುತ್ತಿದೊಂದು ಟೊಳ್ಳು!’ ಎಂಬಂತೆ ಕಂಡಿತ್ತು! ಕವಿತೆಯ ಶೀರ್ಷಿಕೆಯೇ ’ವಿರಹ ಚಿತೆ’. ಈ ಕವಿತೆಗೆ ಸಂಕಲನದಲ್ಲಿ ಸಿಕ್ಕಿರುವ ಸ್ಥಾನದಿಂದಲೇ, ಚೊಚ್ಚಲ ಹೆರಿಗೆಗಾಗಿ ಹೇಮಾವತಿಯವರು ತವರು ಮನೆಗೆ ಹೋದ ಸಂದರ್ಭದ ಕವಿತೆಯೆಂದು ಹೇಳಬಹುದು. ಸ್ವತಃ ಕವಿಯೇ ಹೆಂಡತಿಯನ್ನು ತವರು ಮನಗೆ ಕರೆದೊಯ್ದು ಬಿಟ್ಟು ಬಂದಿದ್ದಾರೆ. ಆಗಿನ ಸಂದರ್ಭವನ್ನು ಕವಿಯ ಮಾತುಗಳಲ್ಲೇ ಕೇಳಬೇಕು.
ಕಣ್ಣಿನಲ್ಲಿಯೆ ಬೀಳುಕೊಟ್ಟು
ಮನಸಿನಲ್ಲಿಯೇ ಮುತ್ತುಕೊಟ್ಟು
ತವರು ಮನೆಯೊಳಗವಳ ಬಿಟ್ಟು
ಮನಸ್ಸಿಲ್ಲದ ಮನಸಿನಿಂದೆ
ಒಬ್ಬನೆ ಹಿಂತಿರುಗಿ ಬಂದೆ.
ಮರಭೂಮಿಯ ಗಾಳಿಯಂತೆ
ಸುಯ್ದಲೆದಲೆದೂ
ಬಾಯಾರಿತು ವಿರಹ ಚಿಂತೆ
ದಾರಿಯುದ್ದಕೂ.
ಹೆಂಡತಿಯನ್ನು ತವರಿನಲ್ಲಿ ಬಿಟ್ಟು ಹೊರಟಾಗಲೇ ವಿರಹ ಕವಿಯನ್ನು ಕಾಡಲು ಆರಂಭಿಸಿದೆ. ದಾರಿಯುದ್ದಕ್ಕೂ, ಉದಯರವಿಯನ್ನು ತಲಪುವವರೆಗೂ ಕವಿ ತನ್ನ ಪಾಡು ಹೇಗಿತ್ತು ಮುಂದಿನ ಭಾಗದಲ್ಲಿ ಕಂಡರಿಸಿದ್ದಾರೆ.
ನೆನಹಿನುರಿಯ ಬಯಲಿನಲ್ಲಿ
ಸಾಗಿತಿರುಳು ರೈಲಿನಲ್ಲಿ,
ನಿದ್ದೆಯಿಲ್ಲ ಬರಿಯ ಕನಸು;
ಎದೆಯೊಳೇನೊ ಕಿಚ್ಚು, ಕಿನಿಸು.
ಯಾರ ಮೇಲೊ? ಏಕೋ ಮುನಿಸು!
ಏನೊ ಇಲ್ಲ, ಏನೊ ಬೇಕು,
ಎಂಬ ಬಯಕೆ, ಕುದಿವು, ರೋಕು!
ಇಂತು ಸಾಗಿತು ಶನಿ ಇರುಳು;
ಅರಿಲ ಬೆಳಕು ಬಾಡಿತು;
ಚಿತೆಯಾಯಿತು ಕವಿಯ ಕರುಳು;
ಹಗಲೊ ಹೆಣವೊ ಮೂಡಿತು!
ರಾತ್ರಿ ರೈಲಿನಲ್ಲಿ ಮೈಸೂರಿಗೆ ಹೊರಟ ಕವಿಗೆ ರಾತ್ರಿಯೆಲ್ಲಾ ನಿದ್ದೆಯಿಲ್ಲ; ಬರಿಯ ಕನಸು ಮಾತ್ರ. ಕಿಚ್ಚು, ಕಿನಿಸು, ಕೋಪ. ಆದರೆ ಯಾರ ಮೇಲೆ? ತನಗೆ ಏನು ಬೇಕು? ಏನು ಬೇಡ? ಎಂಬುದನ್ನೇ ಅರಿಯಲಾಗದ ಅಸಹಾಯಕ ಸ್ಥಿತಿ! ಅಂತು ಇಂತೂ ನಕ್ಷತ್ರದ ಬೆಳಕು ಬಾಡಿ, ರಾತ್ರಿಯೆಂಬ ಶನಿ ತೊಲಗಿತು. ’ಚಿತೆಯಾಯಿತು ಕರುಳು’ ಎನ್ನುವಲ್ಲಿ ವಿರಹದ ತೀವ್ರತೆ ಮನತಟ್ಟುತ್ತದೆ. ಅಷ್ಟೊತ್ತಿಗೆ ಬೆಳಗಾಗುತ್ತದೆ. ಅದು ಹೇಗೆ ಎನ್ನುತ್ತೀರಿ? ಹೆಣ ಮೂಡಿದಂತೆ ಸೂರ‍್ಯೋದಯವಾಗುತ್ತದೆ. ಸೂರ್ಯನನ್ನು ’ಶಿವಮುಖದ ಕಣ್ಣು’ ಎಂದು, ಸೂರ್ಯೋದಯವನ್ನು ’ದೇವರ ದಯೆ ಕಾಣೊ’ ಎಂದಿದ್ದ ಕವಿಗೆ, ವಿರಹದ ಉರಿಯಲ್ಲಿ ಸೂರ್ಯ ಹೆಣೆದಂತೆ ಭಾಸವಾಗಿದ್ದಾನೆ. ಹೆಣ ಮೂಡಿದೆ, ಹಗಲಿನಂತೆ. ಆಗ ಕವಿ ಪ್ರೇತದಂತೆ ಉದಯರವಿಗೆ ಬರುತ್ತಾರೆ!
ಪ್ರೇತದಂತೆ ನಡೆದೆ ಕೊನೆಗೆ,
’ಉದಯರವಿ’ಗೆ ನಮ್ಮ ಮನೆಗೆ.
ಮನೆಯೆ? ಅಯ್ಯೋ ಬರಿಯ ಸುಳ್ಳು:
ಗೋಡೆ ಸುತ್ತಿದೊಂದು ಟೊಳ್ಳು!
ಕಿಟಕಿ, ಬಾಗಿಲು, ಕಲ್ಲು, ಮಣ್ಣು;
ಬುರುಡೆಯಲುಬಿಗೆ ತೂತುಗಣ್ಣು!
ಪ್ರೇಮ ಕುಣಪವಾಗಿ ನಿಂತೆ
ಚಿತೆಯಾಗಲ್ ವಿರಹ ಚಿಂತೆ!
ಇನ್ನು ಮನೆಯೊಳಗೆ ಕವಿ ಕಾಲಕಳೆಯುವುದೆಂತು? ಮನೆಯೊಡತಿಯಿಲ್ಲದೆ ಸರ್ಪಶೂನ್ಯವಾಗಿದೆ, ಉದಯರವಿ! ಅಂದು ವನವಾಸದಲ್ಲಿ ಸೀತೆಯನ್ನು ಕಳೆದುಕೊಂಡ ರಾಮಚಂದ್ರನ ಮನಸ್ಥಿತಿ ಏನೆಂದು ಇಂದು ಕವಿಗೆ ಅರ್ಥವಾಯಿತಂತೆ!
ರಾಮಚಂದ್ರ, ಇಂತೆ ಕುದಿದೆ;
ಸೀತೆ ಕಳೆಯಲತ್ತು ಕರೆದೆ;
ತಿಳಿಯಿತಿಂದು ನಿನ್ನೆದೆ!
ವಿರಹದುರಿಯಲ್ಲಿ ಮನೆಯೊಳಗೆ ಏಕಾಂಗಿಯಾಗಿದ್ದ ಕವಿಗೆ ಮನೆಯ ಇಂಚಿಂಚೂ ತಮ್ಮ ಸತಿಯ ನೆನಪನ್ನೆ ತರುವ, ಸತಿಯೇ ಸರ್ವಸ್ವವಾಗಿ ಕಾಣುವ ಬಗೆ ಹೇಗಿದೆ ನೋಡಿ.
ಹೇಮಲತೆ, ಪ್ರೇಮಲಕ್ಷ್ಮಿ,
ನನ್ನ ಪಂಚಪ್ರಾಣಲಕ್ಷ್ಮಿ,
ಗಾಳಿ ನೀನೆ; ಬೆಳಕು ನೀನೆ;
ಉಲ್ಲಾಸದ ಉಸಿರು ನೀನೆ;
ನನಗೆ ಮನೆಗೆ ಎಲ್ಲ ನೀನೆ!
ನೀನೆ ಕವಿಗೆ ಹೃದಯ, ಭಾವ,
ಮೇಣಾತ್ಮಕೆ ರಸದ ಜೀವ!
ಗೃಹಿಣಿ, ನೀನೆ ಗೃಹದ ದೇವಿ;
ನೀನು ದೂರ ಹೋದರೆ
ಮಸಣದೊಂದು ಹಾಳುಬಾವಿ
ಗೃಹವಿದು! ’ಮನೆ’ ಎಂಬರೆ?
ಹೆಂಡತಿಯನ್ನು ಗೃಹಲಕ್ಷ್ಮಿ ಎನ್ನುತ್ತಾರೆ. ಕವಿಗೆ ಈ ಭಾವ ಹೊಸತಲ್ಲ. ಆದರೆ ’ನೀನೆ ಕವಿಗೆ ಹೃದಯ ಭಾವ, ಮೇಣಾತ್ಮಕೆ ರಸದ ಜೀವ!’ ಎನ್ನುವ ಸಾಲು ದಂಗುಬಡಿಸುತ್ತದೆ. ’ಗುರುವಿನ ಕೃಪೆ, ಆಶೀರ್ವಚನವೇ ಚೆಲುವಾದ ರೂಪವನ್ನು ಎತ್ತಿದಂತಿರುವ' ತಮ್ಮ 'ಪ್ರಿಯ ಸತಿಗೆ’ ಎಂಬ ಕವನದಲ್ಲಿ,
ದೇವಿ, ಪ್ರತಿಭೆಗೆ ನೀನೆ ಭಾವವಿದ್ಯುಚ್ಛಕ್ತಿ;
ಕಲೆಗೆ ವಿದ್ಯಾಶಕ್ತಿ; ಪ್ರಾಣಕೆ ಪ್ರೇಮಶಕ್ತಿ!
ಎಂದು ಸತಿಯನ್ನು ಕಂಡಿದ್ದಾರೆ. ಮುಂದೆ ಶ್ರೀಮತಿ ಹೇಮಾವತಿಯವರು ನಿಧನರಾದ ಮೇಲೆ ಕವಿ ಕುವೆಂಪು ತಮ್ಮ ಬರವಣಿಗೆಯನ್ನು ಮುಂದುವರೆಸಲಾಗುವುದೇ ಇಲ್ಲ ಎಂಬುದನ್ನು ನೆನಪಿಸಿಕೊಂಡರೆ, ಈ ಮಾತುಗಳಲ್ಲಿರುವ ದರ್ಶನಭಾವ ಸ್ವಲ್ಪಮಟ್ಟಿಗೆ ಸಹೃದಯನಿಗೂ ದಕ್ಕೀತು.
ಕೊನೆಗೆ, ಅಂದು ರಾಮನು ಸೀತೆಯ ಸ್ಮರಣೆಯೊಂದಿಗೆ ರೋಧಿಸಿದಂತೆ ಇಲ್ಲಿ ಕವಿ ತಮ್ಮ ಹೆಂಡತಿಯನ್ನು ನೆನೆಯುತ್ತಾ ಬೇಗ ಬಾ ಬೇಗ ಬಾ ಎಂದು ಕರೆಯುತ್ತಾರೆ. ಹಾಗೆ ಬರಬೇಕು ಎಂಬುದು ಕೇವಲ ವಿರಹತಾಪವನ್ನು ಹೋಗಲಾಡಿಸಲಲ್ಲ, ವಿಯೋಗ ಎಂಬ ಶಾಪಕ್ಕೆ ವರವಾಗಿ, ಆಶೀರ್ವಾದವಾಗಿ ಬಾ ಎಂದು ಮೊರೆಯಿಡುವ ಸಾಲುಗಳಿಂದ ಕವಿತೆ ಮುಕ್ತಾಯವಾಗುತ್ತದೆ.
ತಪ್ಪಲು ಗೃಹಲಕ್ಷ್ಮಿಯ ಜೊತೆ
ಒಪ್ಪಿದ ಮನೆಯೆ ವಿರಹ ಚಿತೆ!
ಹೇಮಾಂಗಿನಿ, ಪ್ರೇಮಸತಿ,
ಕಾತರನತಿ ನಿನ್ನ ಪತಿ!
ಮರುಭೂಮಿಗೆ ಅಮೃತಧಾರೆ,
ಕಗ್ಗತ್ತಲೆಗೆಸೆವ ತಾರೆ,
ನನ್ನ ಹೃದಯ ತಾಪವಾರೆ
’ಉದಯರವಿ’ಗೆ ಬಾಗ ಬಾರೆ!
ಏದುತ್ತಿದೆ ಪ್ರಾಣಪಕ್ಷಿ
ವಿರಹಾತಪ ತಾಪಕೆ!
ಆಶೀರ್ವಾವಾಗಿ ಬಾ
ವಿಯೋಗದೀ ಶಾಪಕೆ!
’ಶೂನ್ಯ ಶೋಧನೆ’ ಎಂಬ ಕವಿತೆಯೂ ಇದೇ ಸಂದರ್ಭದ ವಿರಹಗೀತೆಯಾಗಿದೆ.
ನೀನು ತವರಿಗೆ ಹೋದೆ;
ನಾನೊಬ್ಬನಾದೆ:
ಹೆಬ್ಬುಲಿಯ ಬಾಯಂತೆ ಘೋರವಾಯ್ತು;
ತಬ್ಬಲಿಯ ಕೈಯಂತೆ
ಶೂನ್ಯವಾಯ್ತು!
ಎನ್ನುತ್ತಲೇ, ಸತಿಯನ್ನು ಬಿಟ್ಟಿರಲಾರದ ಮನಸ್ಸಿನ ಚಡಪಡಿಕೆಯನ್ನು ಬಿಡಿಸಿಟ್ಟಿದ್ದಾರೆ. ಕೊನೆಯಲ್ಲಿ,
ಹಗಲು ಇರುಳೂ ನಿನ್ನ
ನೆನೆನೆನೆದು ನನ್ನ
ಪ್ರೇಮಶಿಲಾತ್ಮ ಶಿಶು
ರೋದಿಸುತಿದೆ;
ಕೈಚಾಚಿ ಶೂನ್ಯವನೆ
ಶೋಧಿಸುತಿದೆ!
ಎಂದು ತಮ್ಮ ಚಡಪಡಿಕೆಯ ರೋದನದ ಫಲಿತಾಂಶವನ್ನು ತೆರೆದಿಡುತ್ತಾರೆ. ಇದರ ಮುಂದಿನದು ತೇಜಸ್ವಿಯ ಜನನ ಸುದ್ದಿಯನ್ನು ಕೇಳಿದಾಗ ಕವಿಗಾದ ಭಾವಗಳನ್ನು ಕಟ್ಟಿಕೊಡುವ ’ಕುಮಾರ ಸಂಭವ’ ಕವಿತೆ.

Monday, August 01, 2011

ಮತ್ತಷ್ಟು ಹೂವಿನ ಕವಿತೆಗಳು

‘ಸೌಂದರ್ಯಯಾಜಿ’ ಎನ್ನುವ ಕವಿತೆಯಲ್ಲಿ ತನ್ನ ಮನೆಯ ಉದ್ಯಾನವನವನ್ನು ನೋಡಲು ಬನ್ನಿ ಎಂದು ದೇವರುಗಳನ್ನು ಆಹ್ವಾನಿಸುತ್ತಾರೆ.
ಬನ್ನಿ, ಓ ಬಾನಲೆವರೆ, ನಮ್ಮ ತೋಟಕೆ,
ನಂದನವನೆ ಮೀರಿಸುವೀ ದಿವ್ಯನೋಟಕೆ.
ಬನ್ನಿ ಸೌಂದರ‍್ಯರಸದ ಅಮೃತದೂಟಕೆ,
ಅಲೋಕಸುಖವನೀವ ಈ ಲೋಕಪೀಠಕೆ:
ಉದ್ಯಾನವನವಿರುವುದು ಕವಿಯ ಮನೆಯ ಅಂಗಳದಲ್ಲಿ, ಆದ್ದರಿಂದ ಅದು ನಂದನಕ್ಕೂ ಮಿಗಿಲು!
ಕವಿಯ ಮನೆಯ ಅಂಗಳ
ದಿವಿಜರಿಗೂ ಮಂಗಳ!
ಸರಸ್ವತಿಯ ಕಂದನ
ಮನಕೆ ಮಿಗಿಲೆ ನಂದನ?
ಕವಿಯ ಮನೆಯಂಗಳದಲ್ಲಿ ಏನೆಲ್ಲಾ ಗಿಡ ಮರಗಳಿದ್ದವು? ಬಣ್ಣ ಬಣ್ಣದ ಹೂವುಗಳಿದ್ದವು? ಪಟ್ಟಿ ನೋಡಿ
ಅಲ್ಲಿ ಪಂಕ್ತಿ ಸೂರ್ಯಕಾಂತಿ; ಇಲ್ಲಿ ಪನ್ನೇರಿಳೆ;
ಅಲ್ಲಿ ಹೊಂಗುಲಾಬಿ ಹಂತಿಲ ಇಲ್ಲಿ ಚಿನ್ನ ವೂಮಳೆ;
ಇಲ್ಲಿ ಕೆಂಪು; ಅಲ್ಲಿ ಹಳದಿ; ಹಸುರು, ಪಚ್ಚೆ, ನೀಲಿ
ಹೊಸತೆ ಬಂತೊ ತಾಯ ಹರಕೆ ಹೂವ ರೂಪ ತಾಳಿ!
ಅದರಿಂದ ಕವಿಗೇನು ಉಪಯೋಗ?
ಕೋಕಿಲಾದಿ ಕೂಜನ;
ಸ್ಫಟಿಕಪುಷ್ಪ ಲಾಜನ;
ಸರ್ವಸೃಷ್ಟಿಯ ಸರ್ವಸುಖಕೆ
ಸತ್ಯ ಶಿವ ಸೌಂದರ್ಯಮುಖಕೆ
ಕವಿಯ ಯಾಜನ:
ಇದರಿಂದ ಕವಿಗೆ ಮಾತ್ರ ಉಪಯೋಗವೆ? ಕವಿ ತಾನು ಕಂಡಿದ್ದನ್ನು ಬೇರೆಯವರಿಗೂ ಕಾಣಿಸಬೇಕೆಂಬ ಹಂಬಲವುಳ್ಳವರು. ಅವರ ಹಲವಾರು ಕವಿತೆಗಳಲ್ಲಿ ವ್ಯಕ್ತವಾಗಿರುವಂತೆ ಈ ಕವಿತೆಯಲ್ಲೂ ತನ್ನ ರಸಯಾತ್ರೆಯಲ್ಲಿ ದಿವ್ಯ ಚೇತನಗಳೆಲ್ಲಾ ಪಾಲ್ಗೊಳ್ಳಬೇಕು, ರಸಾನುಭವ ಹೊಂದಬೇಕು ಎಂದು ಕವಿಮನ ಬಯಸುತ್ತದೆ.
ಕವಿಹೃದಯದ ಕರವೀಂಟುವ ಸೃಷ್ಟಿಗೋ ಪಯೋಧರ
ಸೊರಸುವಮೃತ ಮಧುವಿಗೆಣೆಯೆ ನಿಮ್ಮ ಅಪ್ಸರಾಧರ?
ಓ ದಿವ್ಯ ಚೇತನಗಳೇ,
ಇಳಿದು ಬನ್ನಿ, ಬನ್ನಿ!
ಇಳಿದು ಬಂದು ಕವಿಯೊಂದಿಗೆ ವಿಹರಿಸಿದರೆ ಸಹೃದಯನಿಗಾಗುವ ಲಾಭ ಏನು?
ಇಳಿಯೆ ನೀವು ಅಳಿಯೆ ನೋವು
ಬುವಿಗೆ ದಿವಿಯ ತನ್ನಿ!
ಕವಿಯ ಕಾಣ್ಪ ಸವಿಯೆ ನನ್ನಿ;
ತಿಳಿಯೆ ನಾವು,
ಬುವಿಯೆ ದಿವಿ ಎನ್ನಿ!
ಕವಿರಸಾನುಭವದ ಸೇತುವಿಂ
ಪ್ರವಾಹವಿಳಿದು ಬನ್ನಿ!
ಬನ್ನಿ, ಓ ಬನ್ನಿ.
ದಿವಿಯನುಳಿದು ಕವಿಯ ಬುವಿಯ ದಿವ್ಯದಿವಿಗೆ ಬನ್ನಿ!
‘ಹೂವು! ಹೂವು! ಹೂವು! ಹೂವು! ಉಸಿರು ಒಡಲು ಎಲ್ಲ ಹೂವು!’ ಎಂದು ಹೂವಿನ ಬಗ್ಗೆ ಹಾಡಿರುವ ಕವಿತೆ ‘ಹೂವಿನ ತೋಟದಲ್ಲಿ ಪುಷ್ಪಸಮಾಧಿ!’ ಪುಷ್ಪ ಸಮಾಧಿ ಎಂದಿದ್ದರೂ ಇಲ್ಲಿ ರಸಸಮಾಧಿಯಲ್ಲಿ ಮುಳುಗುವುದು ಕವಿಯೆ! ಒಂದೊಂದು ಬಣ್ಣದ ಹೂವನ್ನು ಧನ್ಯಾನಿಸುವಾಗಲೆಲ್ಲಾ ಕವಿಯೂ ಆ ಬಣ್ಣದೊಳಗೆ ಮುಳುಗಿಬಿಡುತ್ತಾರೆ. ಇಡೀ ಜಗತ್ತೇ, ಕವಿಯನ್ನೂ ಸೇರಿಸಿಕೊಂಡು ಆ ಹೂವಿನ ಬಣ್ಣವೇ ಆಗಿಬಿಡುತ್ತದೆ!
ಕೆಂಪಿನೆಡೆಯೊಳಾನು ಕೆಂಪು;
ನೀಲಿಯೆಡೆಯೊಳಾನು ನೀಲಿ;
ಬಣ್ಣ ಬಣ್ಣವೀ ಕುವೆಂಪು
ತಾನೆ ನೋಳ್ಪ ನೋಟವಾಗಿ
ಹೂವಿನೊಂದು ತೋಟವಾಗಿ
ವರ್ಣ ಜಲಧಿಯಲ್ಲಿ ತೇಲಿ
ಮುಳುಗಿ ರಸ ಸಮಾಧಿಯಲ್ಲಿ
ಮೃತವ ದಾಂಟಿ ಅಮೃತವೀಂಟಿ
ಎಂದು ಹೂವಿನ ನೋಟದಿಂದ ತನಗೆ ಲಭಿಸಿದ ಸ್ಥಿತಿಯನ್ನು ಕವಿತೆಯಾಗಿಸಿದ್ದಾರೆ.
ಜರ್ಬರಾ ಹೂವಿನ ಬಗ್ಗೆ ‘ಜರ್ಬರಾ’ ಎಂಬ ಕವಿತೆಯಿದೆ. ಜರ್ಬರಾ ಹೂವಿನ ಸೊಗಸು, ನಯ, ನಾಜೂಕುತನ ಎಲ್ಲವನ್ನೂ ಒಳಗೊಂಡಿರುವ ಕವಿತೆ 'ಜರ್ಬರಾ'
ತೊಂಡೆ ಹಣ್ಣು ಮಣಿಯೆ ನಾಚಿ
ನಗೆಯ ಚೆಲುವ ತುಟಿ ಚಾಚಿ
ಜಗದ ಒಲವನೆಲ್ಲ ಬಾಚಿ
ಜ್ವಲಿಸುವಳೀ ಜರ್ಬರಾ!
ಜರ್ಬರಾ ಹೂವಿನ ವರ್ಣವೈಭವವನ್ನು ಮನಗಾಣಿಸುವ ಸಾಲುಗಳು ಹೀಗಿವೆ.
ಪಂಚಬಾಣ ರಕ್ತಕಿರಣೆ
ಮನ್ಮಥ ಸತಿ ಅಲಕ್ತಚರಣೆ
ಜೀರ್ಕೋವಿಯ ಓಕುಳಿಯೆಣೆ
ಚಿಮ್ಮುವಳೀ ನಿರ್ಜರಾ!
‘ನಾಚುತಿರುವ ನಿರ್ಜರಾ ಬಿಂಬಾಧರದಪ್ಸರಾ!’ ಜರ್ಬರಾವನ್ನು
ನಿಲ್ಲು, ನೋಡು, ಕಾಣ್!
ಗಮನಿಸು, ಬಾಗು!
ಪರಿಭಾವಿಸು! ಆಸ್ವಾದಿಸು! ಧ್ಯಾನಿಸು! ಒಂದಾಗು!
ಹೀಗೆ ಆಸ್ವಾದಿಸಬೇಕು. ಆಸ್ವಾದಿಸದಿದ್ದರೆ,
ಅದು ಇದ್ದೂ ನೀನಿದ್ದೂ
ಅದೂ ಇಲ್ಲ, ನೀನೂ ಇಲ್ಲ;
ಶೂನ್ಯ ಇಬ್ಬರೂ!
ಆಸ್ವಾದಿಸಿದರೆ,
ಅಸ್ತಿ, ಭಾತಿ, ಪ್ರಿಯ:
ಅದೂ ನೀನೂ ಶಾಶ್ವತ!
ಅದೇ ನೀನು, ನೀನೆ ಅದು;
ಎರಡೊಂದಾಗುತ ಶಾಶ್ವತ!
ಒಂದು ಶೂನ್ಯ ಓಷ್ಠವಾಗೆ
ಪೂರ್ಣವೊಂದೆ ಚುಂಬಿತ!
ರಸಾನಂದ ಯೋಗಲಯದಿ
ಶೂನ್ಯವನ್ನು ಶೂನ್ಯವಪ್ಪಿ
ಪೂರ್ಣವಿಬ್ಬರೂ! ಋತ!
‘ಪುಷ್ಪ ಭಗವಾನ್’ ಎಂಬ ಕವಿತೆಯಲ್ಲಿ,
ಇದು ದರ್ಶನ:
ಇದು ಸಾಕ್ಷಾತ್ಕಾರ:
ಬರಿ ನೋಡುವುದಲ್ಲೋ!
ಈ ಅನುಭವಕಿನ್ನಾವುದು ಬೇರೆಯ ಹೆಸರಿಲ್ಲೋ!
ಎಂದು ಮಾತು ಸೋತ ಕವಿಯಾಗಿಬಿಡುತ್ತಾರೆ. ಹೂವು ಬಿಡುವುದು ಸಾಮಾನ್ಯದ ಪ್ರಾಕೃತ ಸಂಗತಿ ಮಾತ್ರವೇ? ಅಲ್ಲ. ಅದು ಭಾವಿಸಿ ಕಂಡರೆ, ಅದೊಂದು ‘ಭಗವಂತನ ಅವತಾರ’!
ಈ ಉದ್ಯಾನದಿ
ಈ ಹೊತ್ತರೆಯಲಿ
ಈ ಹೂಬಿಸಿಲಲಿ
ಧ್ಯಾನದಿ ನಿಂತವಲೋಕಿಸಿದರೆ ಪ್ರತ್ಯಕ್ಷಂ
ಇದು ಮಹದವತಾರ!
ಇದನೀಕ್ಷಿಸುವುದೇ ಸಾಕ್ಷಾತ್ಕಾರ!
ಹೇ ಭಗವತ್ ಪುಷ್ಪಾಕಾರ,
ನಿನಗಿದೋ ನಮಸ್ಕಾರ!
ಸಾಷ್ಟಾಂಗ ನಮಸ್ಕಾರ!
ಎಂದು ಆ ಭಗವಂತನ ಅವತಾರವೇ ಆಗಿರುವ ಪುಷ್ಪಕ್ಕೆ ಶಿರಭಾಗಿಬಿಡುತ್ತಾರೆ. ‘ಪವಾಡ ಸಂದರ್ಶನ’ ಎಂಬ ಕವಿತೆಯಲ್ಲಿ ಡಾಲಿಯಾ ಹೂವಿನಲ್ಲಿ ಆದ ಭಗವಂತನ ಸಾಕ್ಷಾತ್ಕಾರ, ಕಂಡ ದರ್ಶನ, ಅದರಿಂದ ತನಗೊದಗಿದ ರಸಸಮಾಧಿ ಸ್ಥಿತಿಯನ್ನು ಹೀಗೆ ದಾಖಲಿಸುತ್ತಾರೆ.
ಮನೆಯ ಉದ್ಯಾನದಲ್ಲಿ
ಅಗೆದಗೆದು ಹಸನು ಮಾಡಿದ ಈ ಮಣ್ಣಿನಲ್ಲಿ
ನೀರು ಗೊಬ್ಬರವಿಟ್ಟು
ಗೆಡ್ಡೆ ನಟ್ಟು
ಮೂಡಿದೀ ಡಾಲಿಯಾ ಗಿಡದ ಹಸುರು ಕೈಯಲ್ಲಿ
ಜಗದ ಅಮ್ಮ
ಬಿಸಿಲು ಗಾಳಿಯನಿಡಲು,
ಮೆಲ್ಲನೆಯೆ,
ಮೊಗ್ಗುಗಣ್ ತೆರೆತೆರೆಯೆ ತೆರೆದು
ಅಲೆಅಲೆಯ ಕಡಲು ಈ ಹೂವು ಬಿಡಲು,
ನಾನದರ ದಿವ್ಯ ಸಾನ್ನಿಧ್ಯದಲಿ ಕೈಮುಗಿದು ನಿಂತು
ವಿಸ್ಮಯಾರಾಧೆನಯ ರಸಸಮಾಧಿಯನಾಂತು
ತೂಣಗೊಂಡಿಹೆನಿಂತು
ಮಹಾದ್ಭುತ ಪವಾಡ ಸಂದರ್ಶನಕ್ಕೆ!
ಋಷಿ ಶಾಪದಿಂದ ಗುಲಾಬಿ ಗಿಡವಾಗಿ ಹುಟ್ಟಿರುವ ಅಪ್ಸರೆಯ ಹವಳದ ತುಟಿಯಂತೆ ಕಾಣುತ್ತದೆ ಗುಲಾಬಿ ಹೂ. ಅದು ಮದನ ಹೃದಯರತಿಯ ಸಾವಾಗಿ ಕಂಡು, ಯತಿಸ್ವರೂಪಿಯಾದ ಕವಿಯನ್ನು ಚುಂಬನಕಾಹ್ವಾನಿಸುತ್ತಿದೆಯಂತೆ! ಕೊನೆಗೆ
ನಾನೆಯೆ ಆಗಿದ್ದೆನೆ ಅವನು?
ಆ ಯತಿ?
ಬಲ್ಲನು ಆ ಶಿವನು!
ಪಶುಪತಿ!
ಎಂದು, ಆತ್ಮ ಪರಮಾತ್ಮರ ನಡುವಿನ ಆಟದಂತೆ ಕಂಡು ನಿಸ್ಸಹಾಯಕರಾಗಿಬಿಡುತ್ತಾರೆ. ‘ಉದ್ಯಾನದಲ್ಲಿ ಧ್ಯಾನಯೋಗಿ’ ಎಂಬ ಕವಿತೆಯಲ್ಲಿ ಭಗವಂತನಿಲ್ಲಿ ಪುಷ್ಪವೇಷಿ ಎಂಬ ಮಾತಿದೆ. ಆದ್ದರಿಂದ ಇದು ಬರಿಯ ಉದ್ಯಾನವಲ್ತೋ ಇದು ಪುಷ್ಪಕಾಶಿ! ಎನ್ನುತ್ತಾರೆ. ಈ ಪುಷ್ಪವನವೊಂದು ಸೇತು. ರಸರಾಮಸೇತು! ಇದರ ಮೂಲಕವೇ ಕವಿಗೆ ದೇವರನುರಾಗವಿಳಿದು ಬರುತ್ತಿರುವಂತೆ ಭಾಸವಾಗುತ್ತದೆ. ಪುಷ್ಪವನದೊಳಗಿರುವ ಕವಿ ದೇವಕಿಯ ಗರ್ಭಸ್ಥ ಕೃಷ್ಣನಿದ್ದಂತೆ, ಧ್ಯಾನದ ಫಲ ಕೃಷ್ಣಾವತಾರವಿದ್ದಂತೆ ಎಂಬುದನ್ನು
ದಿಟದಿ ದೇವಕಿಯ ದಿವ್ಯಗರ್ಭ:
ಧ್ಯಾನಿಗುದ್ಯಾನ
ಶ್ರೀ ಕೃಷ್ಣ ಸಂಭವಕ್ಕೊಡ್ಡಿರುವ ಯೋಗಸಂದರ್ಭ!
ಎಂಬ ಮಾತುಗಳು ಗರ್ಭೀಕರಿಸಿಕೊಂಡಿವೆ.
ಹೂವಿನಿಂದ ಕವಿಯ ಮನಸ್ಸು ಉದ್ಬೋಧನಗೊಳ್ಳುತ್ತಿದ್ದುದು, ಅದರಿಂದ ಕವಿಗಾಗುತ್ತಿದ್ದ ಆನಂದ, ಅನುಭವ, ದರ್ಶನ ಎಲ್ಲವನ್ನೂ ಒಳಗೊಂಡಿರುವ ಕವಿತೆ ‘ಹೂವಿನ ತೋಟದಲ್ಲಿ’. ಅದನ್ನಿಲ್ಲಿ ಇಡಿಯಾಗಿ ಉಲ್ಲೇಖಿಸಿಬಿಡುತ್ತೇನೆ. ಕವಿತೆ ಭಾಷೆ ಪ್ರೌಢವಾಗಿದೆ. ಗಂಭೀರವಾಗಿದೆ. ಅದರ ಲಯಬದ್ಧತೆ ಗಮನ ಸೆಳೆಯುತ್ತದೆ.
ಬಣ್ಣದ ರೂಪದಿ ಭಗವತ್ ಪ್ರೇಮ
ಕಣ್ಣನು ಚುಂಬಿಸಿದೆ!
ಬಿಂಬಾಧರದಾ ಸೃಷ್ಟಿಯ ಹೃದ್‌ರತಿ
ಜ್ವಾಲಾ ವರ್ಣದ ಲೀಲಾ ಪರ್ಣದಿ
ಓಷ್ಠಾಗ್ನಿಯ ಪ್ರತಿಬಿಂಬಿಸಿದೆ!
ಕಬ್ಬಿಗನೆದೆಯಲಿ ಶ್ರದ್ಧಾನಂದಂ
ಅಗ್ನಿಯ ಬುಗ್ಗೆಯೊಲುಕ್ಕುತೆ ಧಗ್ಗನೆ
ಪ್ರಾಣ ಸಮುದ್ರಂ ಜೃಂಭಿಸಿದೆ!
ದೇವಾಲಯುವೀ ಹೂವಿನ ತೋಟಂ!
ರಸ ಸಾಧನೆಯೀ ಯೋಗದ ನೋಟಂ!
ಜೀವನ ದೇವನ ಈ ಹೂಬೇಟಂ!
ಮೂಲೋಕವನಾಲಂಗಿಸಿದೆ
ಭಗವದ್ ಭೋಗದ ಈ ಜೇನೂಟಂ!
ತೃಷ್ಣೆಯ ಬೇರನೆ ಭಂಗಿಸಿದೆ!
ಇಂದ್ರಿಯಗಳನುಲ್ಲಂಘಿಸಿದೆ!
ನಾನೆಂಬಬುಧಿಯನಿಂಗಿಸಿದೆ!