Monday, December 31, 2012

ಕುವೆಂಪು ಕಾವ್ಯಯಾನ ಮತ್ತು ಅಜ್ಞಾತ ಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ ಪುಸ್ತಕಗಳ ಬಿಡುಗಡೆ ಸಮಾರಂಭ - ಕುಪ್ಪಳಿ 29.12.12

ಪ್ರಾರ್ಥನೆ - ಶ್ರೀ ಕಾ.ಹಿ. ರಾಧಾಕೃಷ್ಣ

ಬಿಡುಗಡೆ

ಪರಿಚಯ - ಡಾ. ಚಂದ್ರಶೇಖರ ನಂಗಲಿ


ಅಲಿಗೆ ಪುಟ್ಟಯ್ಯನಾಯಕರ ನೆನಪು


ಧನ್ಯತೆ - ಸತ್ಯನಾರಾಯಣ

ಅಭಿನಂದನೆ - ಶ್ರೀ ವಿ.ಎಂ. ಕುಮಾರಸ್ವಾಮಿ

ನೆನಪು - ಶ್ರೀ ಅಮ್ಮಡಿ ನಾಗಪ್ಪನಾಯಕ


ಅಧ್ಯಕ್ಷಭಾಷಣ - ಚಂದ್ರಶೇಖರ ಕಂಬಾರ





Friday, December 28, 2012

ಕಾವ್ಯಯಾನಕ್ಕೆ ಬೆನ್ನು ತಟ್ಟಿದ ಹಂಪನಾ


ಅಪರೂಪದ ಕವಿತೆಗಳ ವಿಶ್ಲೇಷಣೆ
ಡಾ.ಬಿ.ಆರ್.ಸತ್ಯನಾರಾಯಣರ ಈ ಕೃತಿ ಕುವೆಂಪು ಕಾವ್ಯಯಾನ ತನ್ನ ಶೀರ್ಷಿಕೆಯನ್ನು ಸಾರ್ಥಕ ಪಡಿಸಿದೆ. ಈ ಪುಸ್ತಕದಲ್ಲಿರುವ ಬಿಡಿ ಬಿಡಿ ಬರೆಹಗಳನ್ನು ಒಂದೊಂದಾಗಿ ಓದುತ್ತ ಹೊರಟರೆ, ಒಟ್ಟು ಪುಸ್ತಕದ ಓದು ಮುಗಿಯುವ ಹೊತ್ತಿಗೆ ಕುವೆಂಪುರವರ ಕಾವ್ಯಪ್ರಪಂಚವನ್ನು ಹೊಕ್ಕು ಹೊರಬಂದ ಅನುಭವ ಆಗುತ್ತದೆ.
ಕುವೆಂಪುರವರು ಬರೆದಿರುವ ಆತ್ಮಕಥೆಯ ಬೃಹದ್‌ಗ್ರಂಥದ ಹೆಸರು ನೆನಪಿನ ದೋಣಿಯಲ್ಲಿ ಎಂದು. ತಮ್ಮ ಬದುಕಿನ ಚಿತ್ರಣವನ್ನು ನೆನಪಿನ ದೋಣಿಯಲ್ಲಿ ಪಯಣಿಸುತ್ತ ಕಟ್ಟಿಕೊಟ್ಟಿದ್ದಾರೆ. ಬಿ.ಆರ್.ಸತ್ಯನಾರಾಯಣರು ಈ ಪುಸ್ತಕದಲ್ಲಿ ಕುವೆಂಪುರವರ ಕವಿತೆಗಳನ್ನೇ ಬಳಸಿಕೊಂಡು ಒಂದು ಕಾವ್ಯ ಪ್ರಯಾಣ(ಯಾನ) ಮಾಡಿದ್ದಾರೆ. ಇದರಿಂದ ಓದುಗರಿಗೆ ಏಕಕಾಲಕ್ಕೆ ಎರಡು ಪ್ರಯೋಜನಗಳು ದಕ್ಕಿವೆ. ಒಂದು, ಕುವೆಂಪುರವರ ಕವಿತೆಗಳ ಪರಿಚಯ; ಎರಡು, ಕುವೆಂಪುರವರ ಜೀವನ ಮತ್ತು ಮನೋಧರ್ಮದ ಪರಿಚಯ.

ಸತ್ಯನಾರಾಯಣರು ಆರಿಸಿಕೊಂಡಿರುವ ಕವಿತೆಗಳ ಸ್ವಾರಸ್ಯ ಹೃದ್ಯವಾಗಿದೆ. ಜತೆಗೆ ಅವರು ವಾಡಿಕೆಯಾಗಿರುವ ಮಾಮೂಲು ಕವಿತೆಗಳನ್ನು ಉದಾಹರಿಸುವುದಲ್ಲದೆ ಅಷ್ಟಾಗಿ ಪ್ರಚಲಿತವಾಗಿರದ ಅಪರೂಪದ ಅಪ್ರಕಟಿತ ಕವಿತೆಗಳನ್ನು ವಿಶ್ಲೇಷಿಸಿರುವುದು ಶ್ಲಾಘನೀಯ. ಇದಲ್ಲದೆ ಆಯ್ದುಕೊಂಡಿರುವ ಕವಿತೆಗಳು ಮೈಪಡೆದ ಸಮಯ, ಸ್ಥಳ ಸಂದರ್ಭ ಮತ್ತು ಔಚಿತ್ಯ ಕುರಿತು ಮಾಹಿತಿಯನ್ನು ಒದಗಿಸಿ ಉಪಕರಿಸಿದ್ದಾರೆ. ಕುವೆಂಪುರವರ ಬಾಳಿನ ಕೆಲವು ಅಪೂರ್ವ ಹಾಗೂ ಮಹತ್ವದ ರಸಗಳಿಗೆಯನ್ನು ಗುರುತಿಸಿರುವುದು ಈ ಕಾವ್ಯಯಾನದ ಮತ್ತೊಂದು ಹೆಚ್ಚುಗಾರಿಕೆ. ಸತ್ಯನಾರಾಯಣರು ತಮ್ಮ ಈ ಗ್ರಂಥ ಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿತವಾಗಿದೆಯೆಂದು ವಿನಯಪೂರ್ವಕ ವಿಜ್ಞಾಪಿಸಿದ್ದಾರೆ. ಆದರೆ ಇಲ್ಲಿನ ಬರವಣಿಗೆಯ ಹಾಸು ಇನ್ನೂ ಮಿಗಿಲಾಗಿದ್ದು ಪ್ರೌಢರಿಗೂ ಪ್ರಿಯವಾಗುತ್ತದೆ.

ಕುವೆಂಪು ಸಮಗ್ರ ಕನ್ನಡ ಸಾಹಿತ್ಯದಲ್ಲಿ ಶಿಖರಸೂರ್ಯ. ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ಅವರ ಕೊಡುಗೆ ಗಣ್ಯವಾದದ್ದು. ಭಾವಗೀತೆಗಳಿಂದ ಹಿಡಿದು ಶಿಶುಸಾಹಿತ್ಯದಿಂದ ತೊಡಗಿ, ಕಾವ್ಯ, ನಾಟಕ, ವಿಮರ್ಶೆ, ಕಾದಂಬರಿ, ಮಹಾಕಾವ್ಯದವರೆಗೆ ಅದರ ವ್ಯಾಪ್ತಿಯಿದೆ. ಸಾಹಿತ್ಯೇತರ ಕಾರಣಗಳಿಗಾಗಿಯೂ ಕುವೆಂಪು ಮಹತ್ವದವರು. ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಅವರ ಛಾಪು ಗಾಢತರವಾಗಿದೆ. ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿಯನ್ನು ಬಿತ್ತಿದ ಏಕಮೇವಾದ್ವಿತೀಯರು ಕುವೆಂಪು. ಮಹಾಕವಿಯಾಗಿ ದಾರ್ಶನಿಕರಾಗಿ ಸಾಂಸ್ಕೃತಿಕ ನಾಯಕರಾಗಿ ಕುವೆಂಪುರವರು ವರ್ತಮಾನಕ್ಕೆ ಹೇಗೆ ಪ್ರಸ್ತುತರಾಗಿದ್ದಾರೆ ಎಂಬುದನ್ನು ಅವರ ಕಾವ್ಯದಿಂದ ಆಯ್ದ ಭಾಗಗಳಿಂದ ಡಾ. ಬಿ.ಆರ್. ಸತ್ಯನಾರಾಯಣ ಸಮರ್ಥವಾಗಿ ಸ್ಥಾಪಿಸಿ ಅಭಿನಂದನಾರ್ಹರಾಗಿದ್ದಾರೆ.
೧೦.೦೯.೨೦೧೨
ನಾಡೋಜ ಪ್ರೊ. ಹಂಪ. ನಾಗರಾಜಯ್ಯ

Thursday, December 27, 2012

ಕುವೆಂಪು ಕಾವ್ಯಯಾನಕ್ಕೊಂದು ಆರಂಭ

ನನ್ನ ಮಾತು
ಇಲ್ಲಿನ ಬರಹಗಳು ಕುವೆಂಪು ಕಾವ್ಯದ ವಿಮರ್ಶೆಯಲ್ಲ; ಕೇವಲ ಮರು ಓದು ಎಂಬುದನ್ನು ಮೊದಲೇ ಸ್ಪಷ್ಟಪಡಿಸುತ್ತೇನೆ. ಏಕೆಂದರೆ ನಾನು ವಿಮರ್ಶಕನಲ್ಲ; ಕೇವಲ ಒಬ್ಬ ಓದುಗ ಮಾತ್ರ. ಕುವೆಂಪು ಕಾವ್ಯ-ಬದುಕು ಸಾಮಾನ್ಯ ಓದುಗನಾದ ನನ್ನನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಿಬಿಟ್ಟಿವೆ. ಒಬ್ಬ ಓದುಗನಾಗಿ, ಕೆಲವು ಕವನಗಳ ಸಾಂದರ್ಭಿಕ ಹಿನ್ನೆಲೆಯಲ್ಲಿ ನಡೆಸಿದ ಕಾವ್ಯಯಾತ್ರೆಯ ಫಲವೇ ಈ ಬರಹಗಳು. 

ಕವನಗಳ ಹುಟ್ಟಿನ ಸಂದರ್ಭದ ಹಿನ್ನೆಲೆಯಲ್ಲಿ ಅವುಗಳನ್ನು ನೋಡುವುದು, ಆ ಕವಿತೆಗಳಿಗೆ ಮತ್ತೊಂದು ಆಯಾಮವನ್ನು ತಂದುಕೊಡುತ್ತದೆ ಎಂಬ ನಂಬಿಕೆ ನನ್ನದು. ಕುವೆಂಪು ಅವರ ಬದುಕು-ಬರಹವನ್ನು ಗ್ರಹಿಸುವಲ್ಲಿ ಇದೊಂದು ಹೊಸ ಆಯಾಮವಷ್ಟೆ! ಖಂಡ ಖಂಡವಾಗಿ ಅಖಂಡವನ್ನು ಗ್ರಹಿಸುವ ಹಾಗೆ. ಕವಿತೆಗಳ ಸಂದರ್ಭವನ್ನು ಹುಡುಕಿಕೊಂಡು ಹೊರಟ ನನಗೆ ಸಿಕ್ಕಿದ್ದು ಪ್ರಕೃತಿಯ ಶಿಶು, ಗುರುವಿನೊಲುಮೆಯ ಶಿಷ್ಯ, ಶಿಷ್ಯರೊಲುಮೆಯ ಗುರು, ಪೂರ್ಣಾಂಗಿಗೊಲಿದ ಪತಿ, ಮಕ್ಕಳ ವಾತ್ಸಲ್ಯಮಯೀ ತಂದೆ, ಪೂರ್ಣಾನಂದದ ಅನುಭಾವಿ, ಕಲ್ಮಶವಿಲ್ಲದ ಚಿಂತಕ, ಗದ್ದಲವಿಲ್ಲದ ಕ್ರಾಂತಿಕಾರ, ಅದ್ಭುತಗಳನ್ನು ಸಾಧಿಸಿದ ದಾರ್ಶನಿಕ ಕುವೆಂಪು!
 
ಕೇವಲ ಕುವೆಂಪು ಕಾವ್ಯಗಳನ್ನು ಓದುವುದು ಮತ್ತು ಆಸಕ್ತ ಓದುಗರಿಗೆ ಓದಿಸುವುದು ಇಲ್ಲಿನ ಬರಹಗಳ ಏಕಮಾತ್ರ ಉದ್ದೇಶ.  ನಿಮ್ಮ ಲೇಖನವನ್ನು ಓದಿದಾಗ, ಕವಿತೆಯ ಪೂರ್ಣಪಾಠವನ್ನು ಓದಬೇಕೆನ್ನಿಸಿದರೂ, ಕಾರ್ಯದೊತ್ತಡದಿಂದ ಓದಲಾಗುತ್ತಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದರು. ಅದಕ್ಕಾಗಿ ಸಾಧ್ಯವಾದಷ್ಟು ಕಡೆ, ಕವಿತೆಗಳ ಪೂರ್ಣಪಾಠ ಉಲ್ಲೇಖಿಸಿದ್ದೇನೆ. ಬ್ಲಾಗಿನಲ್ಲಿ ಬರೆಯುವಾಗ ಭಾಗಶಃ ಉಲ್ಲೇಖಗೊಳ್ಳುತ್ತಿದ್ದ ಕವಿತೆಗಳನ್ನು  ಅಲ್ಲಲ್ಲಿಯೇ ಪೂರ್ತಿಯಾಗಿ ಓದಲು ಅನುವಾಗವಂತೆ ಪೂರ್ಣಪಾಠ ನೀಡಬೇಕಂತಲೂ ಹಲವಾರು ಸ್ನೇಹಿತರು ಒತ್ತಾಯಿಸಿದ್ದೂ ಅದಕ್ಕೆ ಕಾರಣ. ಇಲ್ಲಿಯ ಬರಹಗಳಲ್ಲಿ, ಅವುಗಳ ಸಂಯೋಜನೆಯಲ್ಲಿ ಏನಾದರೂ ಅಸಂಬದ್ಧತೆ ಕಂಡು ಬಂದರೆ, ಅದಕ್ಕೆ ನಾನೇ ಪೂರ್ಣ ಹೊಣೆಗಾರನಾಗಿರುತ್ತೇನಯೇ ಹೊರತು, ಕವಿಯ ಕಾವ್ಯವಲ್ಲ.
ನನ್ನ ನಂದೊಂದ್ಮಾತು ಬ್ಲಾಗಿನಲ್ಲಿ ಕುವೆಂಪು ಕಾವ್ಯದ ಬಗ್ಗೆ ನಾನು ಬರೆದ ಲೇಖನಗಳನ್ನು ಓದಿ ಪ್ರೋತ್ಸಾಹಿಸಿದ, ಪ್ರತಿಕ್ರಿಯೆ ನೀಡಿದ, ಪ್ರೀತಿಯಿಂದ ಜಗಳಕ್ಕೆ ಬಿದ್ದ ಆತ್ಮೀಯರಿಗೆ,
ನಾಲ್ಕೈದು ಕಂತುಗಳಲ್ಲಿ ಮುಗಿಸಬೇಕೆಂದಿದ್ದ ಬರವಣಿಗೆಯನ್ನು, ದಯಮಾಡಿ ಕುವೆಂಪು ಅವರ ಕಾವ್ಯದ ಬಗೆಗಿನ ಬರವಣಿಗೆಯನ್ನು ಮುಂದುವರೆಸಿ, ನಮ್ಮ ಕೆಲಸದ ನಡುವೆ ಆ ಮಹಾಕವಿಯನ್ನು ಪೂರ್ತಿ ಓದಲಾಗದಿದ್ದರೂ, ನಿಮ್ಮ ಬರಹಗಳ ಮೂಲಕ ಸ್ವಲ್ಪವಾದರೂ ಓದಿಕೊಳ್ಳುತ್ತೇವೆ ಎಂದು ಪ್ರೀತಿಯಿಂದ ಒತ್ತಾಯಿಸಿದ ನನ್ನ ಬ್ಲಾಗ್ ಸ್ನೇಹಿತರಿಗೆ, ಅನಿವಾಸಿ ಭಾರತೀಯರಿಗೆ,
ಬ್ಲಾಗಿನಲ್ಲಿ ಪ್ರಕಟವಾಗುವಾಗಲೇ ಕೆಲವೊಂದನ್ನು ಬ್ಲಾಗಿನಿಂದೆತ್ತಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ಸಂಪಾದಕರುಗಳಿಗೆ, ಸಂಪದ, ಅವಧಿ, ದಟ್ಸ್‌ಕನ್ನಡ ಮತ್ತು ಕೆಂಡಸಂಪಿಗೆ ಮೊದಲಾದ ಆನ್‌ಲೈನ್ ಪತ್ರಿಕೆಗಳವರಿಗೆ,
ಕುವೆಂಪು ಕವಿತೆಗಳ ಬರವಣಿಗೆಯ ಬಗ್ಗೆ ತಿಳಿಸಿದಾಗ, ಪ್ರೋತ್ಸಾಹದ ಮಾತನಾಡಿದ ಶ್ರೀಮತಿ ತಾರಿಣಿಯವರಿಗೆ ಮತ್ತು ಶ್ರೀಮತಿ ರಾಜೇಶ್ವರಿಯವರಿಗೆ, 
ಆಗೊಮ್ಮೆ ಈಗೊಮ್ಮೆ ನಾನು ಕೊಟ್ಟ ಈ ಸರಣಿಯ ಲೇಖನಗಳನ್ನು ಓದಿ ಪ್ರತಿಕ್ರಿಯಿಸಿದ, ಪ್ರೋತ್ಸಾಹಿಸಿದ ಹಿರಿಯ ಮಿತ್ರರಾದ ಶ್ರೀ ಜಿ.ಎಸ್.ಎಸ್.ರಾವ್, ಶ್ರೀ ಎಸ್.ಎಂ.ಪೆಜತ್ತಾಯ ಹಾಗೂ ಶ್ರೀ ಎಂ.ವಿ.ಕುಮಾರಸ್ವಾಮಿಯವರಿಗೆ,  ಮತ್ತು ನಮ್ಮ ಮನೆಯವರಿಗೆ,
ತಮ್ಮ ಕಾರ್ಯಬಾಹುಳ್ಯದ ನಡುವೆಯೂ, ಈ ಕಿರಿಯನ ಪ್ರಾರ್ಥನೆಗೆ ಓಗೊಟ್ಟು, ಕೃತಿಗೆ ಮುನ್ನುಡಿಯನ್ನು ಬರೆದು ಆಶೀರ್ವದಿಸಿರುವ ಹಿರಿಯ ಸಂಶೋಧಕರಾದ ನಾಡೋಜ ಪ್ರೊ. ಹಂಪ. ನಾಗರಾಜಯ್ಯನವರಿಗೆ,
ಈಗ, ಲೇಖನಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವ ಮಿತ್ರ ಸೃಷ್ಟಿ ನಾಗೇಶನಿಗೆ, ಮುಖಪುಟ ಕಲಾವಿದರಾದ ಸುಧಾಕರ ದರ್ಭೆ ಮತ್ತು ಸತ್ಯಶ್ರೀ ಪ್ರಿಂಟರ‍್ಸ್ ಎಲ್.ಲಿಂಗಪ್ಪನವರಿಗೆ,
ಮತ್ತು ಸಹೃದಯ ಓದುಗರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
 


Wednesday, December 26, 2012

ರಸತಪಸ್ವಿಯ ನೆನವರಿಕೆ

ಕುವೆಂಪು ಅವರ ನೆನಪಿನ ದೋಣಿಯಲ್ಲಿ ಕೃತಿಯನ್ನು ಓದುವಾಗ ಪುಟ್ಟಯ್ಯನಾಯಕರ ಹೆಸರನ್ನು ಎದುರುಗೊಂಡಿದ್ದೆ. ನಂತರ ಅಲಿಗೆ ಗುರು ಅವರ ಎರಡು ಪುಸ್ತಕಗಳಲ್ಲಿ ಈ ಹೆಸರನ್ನು ಗಮನಿಸಿದ್ದೆ. ಕುವೆಂಪು ಅವರು ಗೌರವಪೂರ್ವಕವಾಗಿ ಪುಟ್ಟಯ್ಯನಾಯಕರನ್ನು ನೆನಪಿಸಿಕೊಳ್ಳುವುದು, ಪುಟ್ಟಯ್ಯನಾಯಕರು ಕುವೆಂಪು ಅವರ ತಾಯಿಯೊಂದಿಗೆ ಮಾತನಾಡಿದ್ದು, ಸಮಾಧಾನ ಮಾಡಿದ್ದು ಈ ಎಲ್ಲಾ ಅಂಶಗಳಿಂದ, ಯಾರೋ ಆ ಭಾಗದ ಸಹೃದಯ ಹಿರಿಯರು, ಕುವೆಂಪು ಅವರಿಗಿಂತ ವಯಸ್ಸಿನಲ್ಲಿ ಬಹುದೊಡ್ಡವರು ಎಂಬ ಭಾವನೆ ನನ್ನಲ್ಲಿ ನೆಲೆನಿಂತಿತ್ತು.

ನಾನು ನನ್ನ ಬ್ಲಾಗಿನಲ್ಲಿ ಕುವೆಂಪು ಅವರ ಕೆಲವು ಕವಿತೆಗಳ ಸಂದರ್ಭದ ಸ್ವಾರಸ್ಯವನ್ನು ಕುರಿತು ಬರೆಯುತ್ತಿದ್ದಾಗ, ಮೊದಲೇ ಪರಿಚಯವಾಗಿದ್ದ ಶ್ರೀ ವಿ.ಎಂ. ಕುಮಾರಸ್ವಾಮಿಯವರು, ಒಂದು ದಿನ ಪೋನ್ ಮಾಡಿ, ಅಲಿಗೆ ಪುಟ್ಟಯ್ಯನಾಯಕರ ಬಗ್ಗೆ, ಕುವೆಂಪು ಅವರ ಅಜ್ಜಿಯ (ಶೇಷಮ್ಮ) ತವರುಮನೆಯ ಬಗ್ಗೆ, ಕುವೆಂಪು ಮತ್ತು ಪುಟ್ಟಯ್ಯನಾಯಕರ ಸಂಬಂಧದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಅವರ ಬಗ್ಗೆ ಗೊತ್ತಿರುವ ವಿಷಯಗಳನ್ನು ಬರೆದು ಕೊಡುವಂತೆ ಕೇಳಿದರು. ನಾನೂ ಒಪ್ಪಿಕೊಂಡು, ಇಡೀ ನೆನಪಿನ ದೋಣಿಯಲ್ಲಿ ಕೃತಿಯನ್ನೂ ಹಾಗೂ ಗುರು ಅವರ ಎರಡು ಕೃತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಒಂದು ಲೇಖನವನ್ನು ಸಿದ್ಧಪಡಿಸಿ ಕೊಟ್ಟಿದ್ದೆ. ಆ ಸಂದರ್ಭದಲ್ಲಿ ಪುಟ್ಟಯ್ಯನಾಯಕರು ಕುವೆಂಪು ಅವರಿಗಿಂತ ಕೇವಲ ಎಂಟು ವರ್ಷ ದೊಡ್ಡವರೆಂದೂ, ಸಂಬಂಧದಲ್ಲಿ ಅಣ್ಣನಾಗಬೇಕೆಂದು ನನಗೆ ತಿಳಿಯಿತು. ಅದಕ್ಕಿಂತ ಹೆಚ್ಚಾಗಿ ಶ್ರೀ ಪುಟ್ಟಯ್ಯನಾಯಕರ ಎತ್ತರ ಬಿತ್ತರಗಳು ನನ್ನಲ್ಲಿ ಬೆರಗು ಮೂಡಿಸಿದ್ದವು. ಎರಡು ಮೇರು ವ್ಯಕ್ತಿತ್ವಗಳ ನಡುವೆ ನಾನು ಮೂಕವಿಸ್ಮಿತನಾಗಿ ನಿಂತುಬಿಟ್ಟಿದ್ದೆ. ಒಬ್ಬರು ರಸಋಷಿ; ಇನ್ನ್ನೊಬ್ಬರು ರಸತಪಸ್ವಿ. ಒಬ್ಬರು ಕವಿ; ಇನ್ನೊಬ್ಬರು ಕವಿಮನದವರು ಹಾಗೂ ಕವಿಜನಪ್ರಿಯರು. ಒಬ್ಬರು ರೈತರು; ಇನ್ನೊಬ್ಬರು ರೈತರಿಗೂ ಉಸಿರನ್ನಿತ್ತವರು!
ನಾನು ಕಳುಹಿಸಿದ ಲೇಖನವನ್ನು ಓದಿದ ಕುಮಾರಸ್ವಾಮಿಯವರು, ಅಲಿಗೆ ಪುಟ್ಟಯ್ಯನಾಯಕರಂತಹ ಜನಸಮುದಾಯದ ನಾಯಕರ ಬಗ್ಗೆ ಒಂದೂ ಪುಸ್ತಕ ಬರದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ನೀನು ಕುವೆಂಪು ಸಾಹಿತ್ಯ ಬಗ್ಗೆ ಚೆನ್ನಾಗಿ ಓದಿಕೊಂಡಿದ್ದೀಯಾ ಎಂದು ನಿನ್ನ ಬರವಣಿಗೆಗಳಿಂದ ತಿಳಿಯುತ್ತಿದೆ. ಪುಟ್ಟಯ್ಯನಾಯಕರ ಬಗ್ಗೆ ಒಂದು ಪುಸ್ತಕವನ್ನು ನೀನೇಕೆ ಸಿದ್ಧಪಡಿಸಬಾರದು. ಅದಕ್ಕೆ ಬೇಕಾದ ಸಹಕಾರವನ್ನು ನಾನು ನೀಡುತ್ತೇನೆ ಎಂದು ಕೇಳಿದರು. ಮತ್ತೊಮ್ಮೆ ಕುವೆಂಪು ಪ್ರಪಂಚದಲ್ಲಿ ವಿಹರಿಸುವ ಸಂದರ್ಭವನ್ನು ನಾನು ಕಳೆದುಕೊಳ್ಳುತ್ತೇನೆಯೇ? ಸಂತೋಷವಾಗಿ ಒಪ್ಪಿದೆ. ಫೋನಿನಲ್ಲಿಯೇ ಪುಸ್ತಕ ಹೇಗಿರಬೇಕು ಎಂಬ ಒಂದು ಸ್ಥೂಲ ಕಲ್ಪನೆಗೆ ನಾವು ಬಂದಿದ್ದೆವು. ಒಂದರ ಹಿಂದೊಂದು ಬರುತ್ತಿದ್ದ ಈಮೇಲುಗಳಲ್ಲಿಯೂ ಮಾಹಿತಿ ವಿನಿಮಯ ಮಾಡಿಕೊಂಡೆವು. ನೀನು ಒಮ್ಮೆ ಅಲಿಗೆಗೆ ಹೋಗಿ ಬಾ ಎಂದು ಕುಮಾರಸ್ವಾಮಿ, ನನಗೆ ಅಲಿಗೆ ಮನೆಯವರ ಎಲ್ಲರ ಪರಿಚಯವನ್ನು ಪೋನಿನಲ್ಲಿಯೇ ಮಾಡಿಕೊಟ್ಟರು.
ಪೂರ್ಣಚಂದ್ರ ತೇಜಸ್ವಿಯವರ ನೆನಪಿನಲ್ಲಿ ೫.೪.೧೨ರಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದವನು ಅಲಿಗೆ ಮನೆಗೆ ನನ್ನ ಹೆಂಡತಿ ಮಗಳೊಂದಿಗೆ ಭೇಟಿಯಿತ್ತೆ. ಅಲ್ಲಿಯವರು ನನಗೆ ನೀಡಿದ ಸ್ವಾಗತ, ನಮ್ಮನ್ನು ಸತ್ಕರಿಸಿದ ರೀತಿ, ನೀಡಿದ ಮಾಹಿತಿಗಳು ನನ್ನನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿದ್ದವು. ನಾನು ಪುಟ್ಟಯ್ಯನಾಯಕರ ಹಾಗೂ ಅವರ ಕಾಲದ ಚಿತ್ರಣವನ್ನು ಬಿಂಬಗ್ರಾಹ್ಯವಾಗಿಸಿಕೊಳ್ಳತೊಡಗಿದ್ದೆ. ಮಾಹಿತಿ ನೀಡುವುದರಲ್ಲಿದ್ದ ಆತ್ಮೀಯತೆ ಕೃತಿಯಲ್ಲೂ ನಡೆಯುತ್ತಿತ್ತು. ಕೇವಲ ಐದಾರು ಗಂಟೆ ಕಳೆಯುವಷ್ಟರಲ್ಲಿ ನಾವೂ ಆ ಬೃಹತ್ ಮನೆತನದ ಭಾಗವಾಗಿದ್ದೇವೊ ಎಂಬ ಭಾವನೆ ನಮ್ಮನ್ನಾವರಿಸಿತ್ತು. ರಸತಪಸ್ವಿಯ ಚಿತ್ರಣ ಮನದಲ್ಲಿ ಮೂಡುತ್ತಿತ್ತು.
ಮುಂದೆ ಮೂರೇ ತಿಂಗಳಲ್ಲಿ ಕುಮಾರಸ್ವಾಮಿಯವರು ಭಾರತಕ್ಕೆ ಬಂದಾಗ, ಮತ್ತೆ ಅಲಿಗೆ ಮನೆಗೆ ಭೇಟಿ ಕೊಡುವ ಅವಕಾಶ ನನಗೆ ಸಿಕ್ಕಿತ್ತು. ಮೂರು ದಿನಗಳ ಕಾಲ ಕುಪ್ಪಳಿಯಲ್ಲಿ ಉಳಿದಕೊಂಡು, ಅಮ್ಮಡಿ, ದೇವಂಗಿ, ಹೊಸಕೇರಿ, ಅಲಿಗೆ, ಹಿರಿಕೊಡಿಗೆ ಮುಂತಾದ ಪ್ರದೇಶಗಳಲ್ಲಿ ಸುತ್ತಿ ಪುಟ್ಟಯ್ಯನಾಯಕರ ಕಾರ್ಯಕ್ಷೇತ್ರವನ್ನು ಪರಿಚಯ ಮಾಡಿಕೊಂಡೆವು. ಹಿರಿಯರಾದ ಶ್ರೀ ಅಮ್ಮಡಿ ಆರ್. ನಾಗಪ್ಪನಾಯಕರು ಶಿವಮೊಗ್ಗದಿಂದ ಬಂದು ನಮ್ಮ ಜೊತೆ ಸೇರಿದ್ದರಿಂದ, ಬಾಗಶಃ ನಾವು ಪುಟ್ಟಯ್ಯನಾಯಕರ ಪ್ರಪಂಚವನ್ನು ಪ್ರವೇಶಿಸಿದ್ದೆವು.
ಪುಟ್ಟಯ್ಯನಾಯಕರನ್ನು ಹತ್ತಿರದಿಂದ ಬಲ್ಲ, ಅವರೊಂದಿಗೆ ಒಡನಾಡಿದ ಹಲವಾರು ಮಂದಿಯನ್ನು ಸಂಪರ್ಕಿಸಿ, ಅವರಿಗೆ ಗೊತ್ತಿರುವ ಮಾಹಿತಿಯನ್ನು ಬರೆದುಕೊಡುವಂತೆ, ನೀಡುವಂತೆ ಕೇಳಿಕೊಳ್ಳಲಾಗಿತ್ತು. ನಾವು ಸಂಪರ್ಕಿಸಿದ ಎಲ್ಲರೂ ಸ್ಪಂದಿಸದಿದ್ದರೂ, ಪುಟ್ಟಯ್ಯನಾಯಕರ ಕುಟುಂಬದವರು, ಆತ್ಮೀಯರು, ಅವರ ಶಿಷ್ಯರು, ಅಭಿಮಾನಿಗಳು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಲ್ಲದೆ, ಲೇಖನಗಳನ್ನೂ ಬರೆದುಕೊಟ್ಟರು. ನಾಯಕರ ಮರಿಮೊಮ್ಮಗ ೧೩ ವರ್ಷದ ಮಂಚಲ್‌ನಿಂದ ಹಿಡಿದು, ಹಿರಿಯರಾದ ನಾಗಪ್ಪನಾಯಕ ಹಾಗೂ ಪುಟ್ಟಯ್ಯನಾಯಕರ ಶ್ರೀಮತಿ ರಾಜಮ್ಮ ಅವರುಗಳವರೆಗೆ ಎಲ್ಲರೂ ನೀಡಿದ ಸಹಕಾರದಿಂದ ಈ ಕೃತಿ ಸಿದ್ಧಗೊಂಡಿದೆ. ಕುಮಾರಸ್ವಾಮಿಯವರ ದೃಢನಿರ್ಧಾರ, ಅವರ ಕಾರ್ಯಚಾತುರ್ಯದಿಂದ ಇಂದು ಸಹೃದಯ ಓದುಗರ ಕೈ ಸೇರುತ್ತಿದೆ.

ನನ್ನನ್ನು ಚಿಂತೆಗೆ ಈಡುಮಾಡಿದ ವಿಷಯವೆಂದರೆ, ಒಂದು ಕಾಲದಲ್ಲಿ ಪುಟ್ಟಯ್ಯನಾಯಕರಿಂದ ಪುರಸ್ಕರಿಸಲ್ಪಟ್ಟವರು, ಅವರ ಪ್ರೀತಿಯ ಅತಿಥಿಸತ್ಕಾರವನ್ನು ಉಂಡವರು, ಅವರು ಬದುಕಿದ್ದಾಗ, ವಾರಗಟ್ಟಲೆ ಅಲಿಗೆಗೆ ಬಂದು ಉಳಿದು ಉಂಡು ತಿಂದು ಹೋದವರು, ತಮ್ಮ ಪುಸ್ತಕಗಳನ್ನು ಕಳುಹಿಸಿ ಅವರಿಂದ ಮೆಚ್ಚುಗೆ ಪತ್ರಗಳನ್ನು ಬರೆಯಿಸಿಕೊಂಡವರು, ಅದನ್ನು ಬೇರೆಯವರಿಗೆ ತೋರಿಸಿ ಬೀಗಿದವರು... ಇಂತಹ ಕೆಲವರು ಕೇವಲ ಬಾಯಿ ಮಾತಿನಲ್ಲಿ ಪುಟ್ಟಯ್ಯನಾಯಕರನ್ನು ನೆನಪು ಮಾಡಿಕೊಂಡರೂ, ಅವರ ಬಗ್ಗೆ, ಅವರ ಜೊತೆಗಿನ ಒಡನಾಟದ ಬಗ್ಗೆ ಬರೆದುಕೊಡದೇ ಹೋದದ್ದು! ಅದೂ ಕೆಲವರು ದೊಡ್ಡ ದೊಡ್ಡ ಬರಹಗಾರರೆನ್ನಿಸಿಕೊಂಡವರೂ ಕೂಡಾ! ಅದೇನೇ ಇರಲಿ, ಪುಟ್ಟಯ್ಯನಾಯಕರಂತಹ ಶಾಂತಜೀವಿಯ ಸ್ಮರಣೆಯೇ ನಮ್ಮ ಬದುಕಿಗೆ ಒಂದು ನವಚೈತನ್ಯವನ್ನು ನೀಡಬಲ್ಲುದು ಎಂಬುದು ನನ್ನ ಅನುಭವ. ನಾಯಕರಿಂದ ಉಪಕೃತರಾದವರೇ ಅಂತಹ ಅವಕಾಶವನ್ನು ಕಳೆದುಕೊಂಡರಲ್ಲ ಎಂಬ ಬೇಸರವೂ ಆಗುತ್ತದೆ.
ಕುವೆಂಪು ಅವರೇ ಕರೆದಿರುವಂತೆ ನಾಯಕರು ಅಜ್ಞಾತ ಮಹಾಪುರುಷ. ಅವರು ಬದುಕು, ಆದರ್ಶಗಳನ್ನು ಗಮನಿಸಿದರೆ ಅವರೊಬ್ಬ ನಿಷ್ಕಾಮ ಕರ್ಮಯೋಗಿ. ಅಂತಹ ಮಹಾವ್ಯಕ್ತಿಯ ಪ್ರಭಾವಲಯದಲ್ಲಿ ಸುತ್ತಿ, ಅವರ ಬದುಕು, ಆದರ್ಶ, ಧ್ಯೇಯಗಳನ್ನು ಅರಿಯುವ ತನ್ಮೂಲಕ ಅಲಿಗೆಯಂತಹ ಒಂದು ಸಾರ್ಥಕ ಮನೆತನದ ಇತಿಹಾಸದಬಗ್ಗೆ, ಪರಂಪರೆಯ ಬಗ್ಗೆ ಅನುಸಂಧಾನ ನಡೆಸುವ ಭಾಗ್ಯ ನನ್ನದಾಗಿದೆ.
ಈ ಕೆಲಸಕ್ಕೆ ಪುಟ್ಟಯ್ಯನಾಯಕರ ಕುಟುಂಬವರ್ಗದವರು ನೀಡಿದ ಸಹಕಾರ  ಅಪಾರವಾದದ್ದು. ಅದಕ್ಕಾಗಿ ಆ ಇಡೀ ಮನೆತನದ ಸರ್ವರಿಗೂ ಮೊದಲಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪ್ರತಿಯೊಬ್ಬರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ. ಅದನ್ನು ಎದುರು ನೋಡುವಂತಹ ಸಂಸ್ಕಾರವೂ ಆ ಕುಟುಂಬದವರಿಗಿಲ್ಲ ಎಂಬುದೇ ಅಲಿಗೆಯವರ ದೊಡ್ಡಸ್ತಿಕೆ. ಮೊದಲ ಭೇಟಿಯಲ್ಲೇ ಮಿತ್ರಗೌರವವನ್ನು ದಯಪಾಲಿಸಿ ತಮ್ಮ ಅತಿಥಿ ಸತ್ಕಾರದಲ್ಲಿ ನನ್ನ ಕುಟುಂಬವನ್ನು ಮುಳುಗಿಸಿದ ಹಿರಿಯರಾದ ಶ್ರೀ ಗಣಪಯ್ಯನಾಯಕರ ಕುಟುಂಬವರ್ಗ, ಹಲವಾರು ಮಾಹಿತಿಗಳನ್ನು ನೀಡಿದ ಶ್ರೀ ವಿಜಯರಾಘವ ಅವರ ಕುಟುಂಬವರ್ಗ, ಹಾಗೂ ಇಡೀ ಅಲಿಗೆ ಮನೆಯನ್ನೇ ನಮ್ಮ ಮುಂದೆ ತೆರೆದಿಟ್ಟಿದ್ದ ಶ್ರೀ ವಿವೇಕಾನಂದ ಮತ್ತು ಶ್ರೀ ವಿಷ್ಣುಮೂರ್ತಿ ಮತ್ತು ಅವರ ಮನೆಯವರನ್ನು ನಾನಿಲ್ಲಿ ನೆನೆಯಲೇಬೇಕಾಗಿದೆ. ಅಲಿಗೆಯ ಬಂಧುಗಳಾದ ಶ್ರೀಮತಿ ಹೆಚ್.ಬಿ. ಪ್ರಮೀಳಾ ಅವರು ತಾವು  ಬಾಲ್ಯದಲ್ಲಿ ಕಂಡಿದ್ದ ಅಜ್ಜಯ್ಯನ ನೆನಪನ್ನು ದಾಖಲಿಸಿದ್ದಾರೆ. ಅವರನ್ನಿಲ್ಲಿ ಗೌರವದಂದ ನೆನೆಯುತ್ತೇನೆ.
ಅಲಿಗೆ ಮನೆಯವರೊಂದಿಗೆ ಈ ಕೆಲಸದಲ್ಲಿ ಸಹಕರಿಸಿ, ಮಾಹಿತಿ ನೀಡಿ, ಲೇಖನವನ್ನು ಬರೆದುಕೊಟ್ಟ, ಅಮ್ಮಡಿ ಆರ್. ನಾಗಪ್ಪನಾಯಕ, ಕೋಣೆಗದ್ದೆ ಪದ್ಮನಾಭ ಶ್ರೀಮತಿ ಹೆಚ್.ಬಿ ಪ್ರಮೀಳಾ, ಹೆಚ್.ಸಿ.ದಯನಂದ, ಕಡಿದಾಳು ದಯಾನಂದ, ಕಾ.ಹಿ. ರಾಧಾಕೃಷ್ಣ ಅವರಿಗೆ ಕೃತಜ್ಞನಾಗಿದ್ದೇನೆ. ಅವರ ಲೇಖನಗಳು ಈ ಪುಸ್ತಕದ ಮಹತ್ವವನ್ನು ಹೆಚ್ಚಿಸಿವೆ. ಅವುಗಳನ್ನು ಓದುವುದೆಂದರೆ ಗತಕಾಲಕ್ಕೇ ಒಂದು ಪಯಣ ಮಾಡಿದಂತೆ. ಪುಟ್ಟಯ್ಯನಾಯಕರನ್ನು ಕಂಡಿರದ ನನ್ನಂತವರಿಗೆ ಅವರನ್ನು ತಂದು ಮುಂದೆ ನಿಲ್ಲಿಸಿದ್ದಾರೆ.
ಕುಪ್ಪಳಿಯಲ್ಲಿ ಸಿಕ್ಕಾಗ ಅಲಿಗೆ ಪುಟ್ಟಯ್ಯನಾಯಕರ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಲ್ಲದೆ, ಲೇಖನವನ್ನು ಬರೆದುಕೊಟ್ಟ ಹಿರಿಯರಾದ ಶ್ರೀ ಕಡಿದಾಳ ಶಾಮಣ್ಣ ಅವರ ಸೌಜನ್ಯಕ್ಕೆ ನಾನು ಆಭಾರಿಯಾಗಿದ್ದೇನೆ. ಪುಟ್ಟಯ್ಯನಾಯಕರು ತೇಜಸ್ವಿಯವರಿಗೆ ಬರೆದಿದ್ದ ಕಾಗದಗಳನ್ನು ಸ್ಕ್ಯಾನ್ ಮಾಡಿಸಿ ನೀಡಿದ್ದಲ್ಲದೆ, ತೇಜಸ್ವಿಯವರ ಮುಖಾಂತರ ತಾವು ಕಂಡಿದ್ದ ಪುಟ್ಟಯ್ಯನಾಯಕರ ಬಗ್ಗೆ ಪ್ರೀತಿಯಿಂದ ಬರೆದುಕೊಟ್ಟ ಶ್ರೀಮತಿ ರಾಜೇಶ್ವರಿಯವರಿಗೂ ಹಾಗೂ ನಾಯಕರು ಅವರ ಹೃದಯಸಾಮ್ರಾಟರಾಗಿದ್ದ ಕುವೆಂಪು ಅವರಿಗೆ ಬರೆದಿರುವ ಹಲವಾರು ಪತ್ರಗಳನ್ನು ಪರಿಶೀಲಿಸಿ, ಆಯ್ದ ಪತ್ರಗಳನ್ನು ನೀಡಿದ್ದಲ್ಲದೆ, ತಾವು ಬಾಲ್ಯದಲ್ಲಿ ಕಂಡಿದ್ದ ನಾಯಕರ ಬಗ್ಗೆ ಆಪ್ತವಾಗಿ ಬರೆದುಕೊಟ್ಟಿರುವ  ಶ್ರೀಮತಿ ತಾರಿಣಿ ಚಿದಾನಂದಗೌಡ ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ. ಕುವೆಂಪು ಮತು ತೇಜಸ್ವಿಯವರಿಗೆ ಬಂದಿರುವ ಎಲ್ಲಾ ಕಾಗದಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಅವುಗಳು ಮುಂದಿನ ತಲೆಮಾರಿಗೆ ಲಭ್ಯವಾಗುವಂತೆ ಮಾಡುತ್ತಿರುವ ತಾರಿಣಿ ಮತ್ತು ರಾಜೇಶ್ವರಿಯವರ ಪ್ರಯತ್ನಕ್ಕೆ ನಾವು ಋಣಿಯಾಗಿದ್ದೇವೆ.
ಶ್ರೀಯುತರೆಲ್ಲರೂ ನೀಡಿದ ಮಾಹಿತಿಗಳು, ಬರೆದುಕೊಟ್ಟ ಲೇಖನಗಳು ಮತ್ತು ಇನ್ನಿತರ ಲಭ್ಯ ಮಾಹಿತಿಗಳನ್ನು ಸಮಗ್ರವಾಗಿ ಪರಿಶೀಲಿಸಿ, ಈ ಪುಸ್ತಕದ ಮೊದಲ ಭಾಗವನ್ನು ಸಿದ್ಧಪಡಿಸುವಲ್ಲಿ ನನಗೆ ನೆರವಾದವರು, ಹಿರಿಯರಾದ ಅಲಿಗೆ ವಿವೇಕಾನಂದ ಅವರು. ಪುಟ್ಟಯ್ಯನಾಯಕರ ಮಗನಾಗಿದ್ದರೂ, ಹೊರಗಿನ ವ್ಯಕ್ತಿಯಂತೆ, ವಸ್ತುನಿಷ್ಟವಾಗಿ ಯೋಚಿಸಿ, ದಾಖಲಿಸುವಲ್ಲಿ ಅವರು ಅಪಾರ ಶ್ರಮವಹಿಸಿದ್ದಾರೆ. ಅಲಿಗೆಯಿಂದ ಬೆಂಗಳೂರಿಗೆ ಬಂದು ಐದಾರು ದಿನಗಳ ಕಾಲ ನಮ್ಮೊಡನಿದ್ದು ಅಲಿಗೆ ಮನೆಯ ಇತಿಹಾಸ, ಸಂಸ್ಕೃತಿ, ಆಗಿ ಹೋದ ಮಹನೀಯರುಗಳು, ಪುಟ್ಟಯ್ಯನಾಯಕರ ಒಡನಾಡಿಗಳು, ಘಟನೆಗಳು ಇವುಗಳ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಹಲವನ್ನು ಬರೆದೂ ಕೊಟ್ಟಿದ್ದಾರೆ. ಆ ಬರವಣಿಗೆಯ ಡಿ.ಟಿ.ಪಿ.ಯಾಗುತ್ತಿದ್ದ ಹಾಗಯೇ ಅದರ ಕರಡಚ್ಚು ತಿದ್ದುವಲ್ಲಿಯೂ ಶ್ರೀಯುತರ ಪರಿಶ್ರಮವಿದೆ. ಅದಕ್ಕಾಗಿ ಅವರಿಗೆ ನಾನು ಆಭಾರಿಯಾಗಿದ್ದೇನೆ. ನಮಗಾಗಿ, ನಮಗೆ ಬೇಕೆಂದಲ್ಲಿಗೆ ಅವರನ್ನು ಬೆಂಗಳೂರಿನಲ್ಲಿ ಕರೆದುಕೊಂಡು ಬರುತ್ತಿದ್ದ ಹೆ.ಚ್.ಸಿ ದಯಾನಂದ ಅವರ ಶ್ರಮವನ್ನು ಪ್ರೀತಿಯಿಂದ ನೆನೆಯುತ್ತೇನೆ.
ಎಲ್ಲರ ಅಹಕಾರದಿಂದ, ಸಿಕ್ಕಿದ ಮಾಹಿತಿಗಳು ಮತ್ತು ಲಭ್ಯ ಆಕರಗಳಿಂದ ಸ್ಥೂಲವಾಗಿ ಅಲಿಗೆ ಮನೆಯ ಇತಿಹಾಸ, ಸಾಂಸ್ಕೃತಿಕ ಮಹತ್ವ,, ಪುಟ್ಟಯ್ಯನಾಕರ ತಂದೆಯ ಸಾಧನೆಗಳು, ಪುಟ್ಟಯ್ಯನಾಯಕರ ಬದುಕು, ಧ್ಯೇಯ, ಆದರ್ಶ, ವ್ಯಕ್ತಿತ್ವ ಮೊದಲಾದವನ್ನು ಮೊದಲಭಾಗದಲ್ಲಿ ಕಟ್ಟಿಕೊಡಲು ಯತ್ನಿಸಲಾಗಿದೆ. ನಂತರ ಪುಟ್ಟಯ್ಯನಾಯಕರ ಬಗ್ಗೆ ಬೇರೆಯವರು ಬರೆದ ಲೇಖನಗಳನ್ನು ಕೊಟ್ಟಿದೆ.
ಇಂತಹ ಮಹತ್ವದ ಕೆಲಸವನ್ನು ನನ್ನ ಮೇಲೆ ನಂಬಿಕೆಯಿಟ್ಟು  ನನಗೆ ವಹಿಸಿದ್ದಲ್ಲದೇ ಸ್ವತಃ ತಾವೂ ಸಕ್ರೀಯವಾಗಿ ನನ್ನೊಂದಿಗಿದ್ದ, ಹಿರಿಯರೂ ಅಭಿಮಾನಧನರೂ ಆದ ಶ್ರೀ ಕುಮಾರಸ್ವಾಮಿಯವರಿಗೆ ನಾನು ಆಭಾರಿಯಾಗಿದ್ದೇನೆ. ಅವರೊಂದಿಗೆ ಕುಪ್ಪಳಿ ಪ್ರವಾಸಕ್ಕೆ ಬಂದುದಲ್ಲದೆ, ಹಲವಾರು ಸಲಹೆಗಳನ್ನು ನೀಡಿ ಮಾರ್ಗದರ್ಶನ ಮಾಡಿದ ಡಾ. ಹ.ಕ.ರಾಜೇಗೌಡರಿಗೆ ಮತ್ತು ಮಾಹಿತಿ ಸಂಗ್ರಹಿಸುವಲ್ಲಿ ಹಾಗೂ ಛಾಯಾಚಿತ್ರಗಳನ್ನು ತೆಗೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದ ಶ್ರೀ ಟಿ. ಗೋವಿಂದರಾಜು ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ತಮ್ಮ ಸಂಗ್ರಹದಲ್ಲಿದ್ದ ಪೋಟೊವನ್ನು ಒದಗಿಸಿದ ಹಿರಿಯ ಜಾನಪದ ತಜ್ಞ ಕ.ರಾ.ಕೃ. ಅವರನ್ನಿಲ್ಲಿ ನೆನೆಯುತ್ತೇನೆ.
ಕೈಬರಹದಲ್ಲಿದ್ದ ಕೆಲವು ಲೇಖನಗಳನ್ನು ಡಿ.ಟಿ.ಪಿ. ಮಾಡಿ ಸಹಕರಿಸಿದ ನನ್ನ ಶ್ರೀಮತಿ ಶ್ವೇತಾ, ಕರಡಚ್ಚು ತಿದ್ದುವಲ್ಲಿ ಸಹಕರಿಸಿದ ಹಿರಿಯರಾದ ಶ್ರೀ ಜಿ.ಎಸ್.ಎಸ್.ರಾವ್ ಅವರಿಗೂ, ನನ್ನ ಈ ಕೆಲಸಕ್ಕೆ ಸಮಯಾನುಕೂಲ ಮಾಡಿಕೊಟ್ಟ ಮಗಳು ಈಕ್ಷಿತಾಳಿಗೂ, ನನ್ನ ಸುರಾನಾ ಕಾಲೇಜಿನ ಸರ್ವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಮಿತ್ರ ಸೃಷ್ಟಿ ನಾಗೇಶನಿಗೆ, ಮುಖಪುಟ ಕಲಾವಿದರಾದ ಸುಧಾಕರ ದರ್ಭೆ ಮತ್ತು ಸತ್ಯಶ್ರೀ ಪ್ರಿಂಟರ‍್ಸ್ ಎಲ್.ಲಿಂಗಪ್ಪನವರಿಗೆ ಹಾಗೂ ಸಹೃದಯ ಓದುಗರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

Friday, December 21, 2012

ಕುವೆಂಪು ಕಾವ್ಯ ಯಾನ & ಅಲಿಗೆ ಪುಟ್ಟಯ್ಯನಾಯಕ

ಕುವೆಂಪು ಕಾವ್ಯಯಾನ & ಅಲಿಗೆ ಪುಟ್ಟಯ್ಯನಾಯಕ

ಈ ಎರಡೂ ಪುಸ್ತಕಗಳು ಕುವೆಂಪು ಜನ್ಮದಿನ 29.12.2012ರಂದು ಕುಪ್ಪಳಿ ಕುವೆಂಪು ಶತಮಾನೋತ್ಸವ ಭವನದಲ್ಲಿ ಸಂಜೆ ಐದು ಗಂಟೆಗೆ ಬಿಡುಗಡೆಯಾಗಲಿವೆ.



Tuesday, December 18, 2012

ನಮ್ಮ ಗಣೇಶ ಮೇಷ್ಟ್ರು


ನಾಳೆ 19.12.2012 ಬುಧವಾರ ಸಂಜೆ 4.30 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಮ್ಮ ಮೇಷ್ಟ್ರು ಡಾ. ಕೈದಾಳ ರಾಮಸ್ವಾಮಿ ಗಣೇಶ ಅವರಿಗೆ ಅಭಿನಂದನಾ ಸಮಾರಂಭ ನಡೆಯುತ್ತಿದೆ. ಅವರಿಗೆ "ಕೈದಾಳ" ಎಂಬ ಅಭಿನಂದನಾ ಗ್ರಂಥವನ್ನು ಅವರ ವಿದ್ಯಾರ್ಥಿಗಳು, ಅಭಿಮಾನಿಗಳು ಮಿತ್ರರು ಸೇರಿ ಸಮರ್ಪಿಸಲಿದ್ದಾರೆ.
ಅವರ ಮತ್ತು ನನ್ನ ಗುರು-ಶಿಷ್ಯ ಸಂಬಂಧವನನ್ಉ ಕುರಿತಂತೆ ಈ ಬರಹ

೧೯೯೮ರಲ್ಲಿ ನಾನು ಉದ್ಯೋಗಾರ್ಥಿಯಾಗಿ ಬೆಂಗಳೂರಿಗೆ ಬಂದೆ. ಸಂಜೆ ವೇಳೆ ಕಳೆಯಲು, ಜೊತೆಗೆ ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮಾಡುತ್ತಿದ್ದುದರಿಂದ ಉಪಯೋಗವಾಗಬಹುದೆಂದು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಶಾಸನಶಾಸ್ತ್ರ ಪ್ರವೇಶ ತರಗತಿಗೆ ಸೇರಿಕೊಂಡಿದ್ದೆ. ಮೊದಲ ವರ್ಷ ಕಳೆದು ಪ್ರೌಢ ತರಗತಿಗಳು ಆರಂಭವಾಗುವಷ್ಟರ ಹೊತ್ತಿಗೆ ನಾನು ಸಾಯಂಕಾಲದ ವೇಳೆ ಕರ್ತವ್ಯ ನಿರ್ವಹಿಸಬೇಕಾಗಿದ್ದರಿಂದ, ಆರಂಭದ ತರಗತಿಗಳಿಗೆ ಹೋಗಲಾಗಲೇ ಇಲ್ಲ. ಶಾಸನಶಾಸ್ತ್ರ ತರಗತಿಗಳಲ್ಲಿ ನಡೆಯುತ್ತಿದ್ದ ಕರ್ನಾಟಕ ಸಾಂಸ್ಕೃತಿಕ ಇತಿಹಾಸದ ಬಗೆಗಿನ ಚರ್ಚೆಗಳು ನನ್ನ ಆ ಕಡೆಗೆ ಎಳೆಯುತ್ತಲೇ ಇದ್ದವು. ಒಂದು ದಿನ ನನ್ನ ಸಹದ್ಯೋಗಿಯನ್ನು ಹೇಗೋ ಒಪ್ಪಿಸಿ ತರಗತಿಗೆ ನಡೆದೇ ಬಿಟ್ಟೆ. ಇನ್ನೂ ಮೆಟ್ಟಿಲು ಹತ್ತುತ್ತಿರುವಾಗಲೇ ಹಳಗನ್ನಡ ಪದ್ಯವೊಂದರ ಸಾಲುಗಳು ಕಿವಿಗಪ್ಪಳಿಸುತ್ತಿದ್ದವು. ಧ್ವನಿ ಹೊಸದಾಗಿತ್ತು ಅಂದರೆ ಪ್ರವೇಶ ತರಗತಿಗಳಲ್ಲಿ ಇದ್ದ ಮೇಷ್ಟ್ರು ಇವರಾಗಿರಲಿಲ್ಲ. ಮುಂದುವರೆದು ಬಾಗಿಲಲ್ಲಿ ನಿಂತಾಗ, ನಾನು ಒಳ ಬರಲೇ ಎಂದು ಕೇಳುವಷ್ಟರಲ್ಲಿ ಬನ್ನಿ ಬನ್ನಿ ಎಂದು ಕುಳಿತುಕೊಳ್ಳಲು ಜಾಗ ತೋರಿಸಿ ಮತ್ತೆ ಪಾಠ ಮಾಡುತ್ತಿದ್ದ ಪದ್ಯಗಳಲ್ಲಿ ಮುಳುಗಿದರು. ಪದ್ಯಗಳನ್ನು ಅವರು ಓದುತ್ತಿದ್ದ ರೀತಿಯೇ ನನ್ನನ್ನು ಮಂತ್ರಮುಗ್ಧನನ್ನಾಗಿಸಿತ್ತು. ಅತ್ಯಂತ ಸ್ಪಷ್ಟವಾಗಿ, ಪದ್ಯವನ್ನು ಓದಿ, ಬಿಡಿಸಿ ಓದಿ, ಅರ್ಥೈಸಿ, ಅನ್ವಯಿಸಿ ಅವರು ಅದ್ಭುತವಾಗಿ ಪಾಠ ಮಾಡುತ್ತಿದ್ದರು. ಒಂದು ಗಂಟೆಯ ಕಾಲ ಕಳೆದಿದ್ದೇ ಗೊತ್ತಾಗಲಿಲ್ಲ. ನನ್ನ ಹೆಸರು ಕೇಳಿ ಅಟೆಂಡೆನ್ಸ್ ರಿಜಿಸ್ಟರಿನಲ್ಲಿ ಹೆಸರು ಬರೆದುಕೊಂಡರು ಮೇಷ್ಟ್ರು.
ಸೊಗಸಾದ ಹಳಗನ್ನಡ ಪಾಠವನ್ನು ನಾನು ಮೊದಲ ಬಾರಿಗೆ ಕೇಳಿದ್ದೆ. ತರಗತಿಯ ನಂತರ, ಪಾಠ ಮಾಡಿದ ಮೇಷ್ಟ್ರು ಡಾ.ಕೆ.ಆರ್.ಗಣೇಶ ಅವರೆಂತಲೂ, ಅವರು ಮಾಡುತ್ತಿದ್ದುದು ಬೊಪ್ಪಣನ ಗೊಮ್ಮಟಸ್ತುತಿಯೆಂತಲೂ ನನಗೆ ತಿಳಿಯಿತು. ಹೀಗೆ ನನ್ನ ಮತ್ತು ಮೇಷ್ಟ್ರ ಮುಖಾಮುಖಿಯಾಯಿತು. ಅಂದಿನಿಂದ ನಾನು ಹಠ ಹಿಡಿದು ನನ್ನ ಕೆಲಸದ ಅವಧಿಯನ್ನು ಬದಲಾಯಿಸಿಕೊಂಡು ತರಗತಿಗಳಿಗೆ ಹಾಜರಾಗತೊಡಗಿದೆ. ಗಣೇಶ ಮೇಷ್ಟ್ರು ನಮ್ಮ ಮೇಷ್ಟ್ರು ಆಗಿದ್ದರು! ಪ್ರೌಢ ತರಗತಿಯಲ್ಲಿ ಮೇಷ್ಟ್ರ ಜೊತೆಯಲ್ಲಿ ಎರಡು ಬಾರಿ ಪ್ರವಾಸ ಹೋಗಿಬರುವ ಅವಕಾಶ ನನಗೆ ಲಭಿಸಿತು. ಒಮ್ಮೆ ಶ್ರವಣಬೆಳಗೊಳಕ್ಕೆ ಹೋಗಿಬಂದೆವು. ಎರಡನೆಯ ಬಾರಿ ಹತ್ತು ದಿನಗಳ ಭರ್ತಿ ಪ್ರವಾಸದಲ್ಲಿ ಅರಳಗುಪ್ಪೆ, ಅರಸೀಕೆರೆ, ಹೊಂಬುಚ್ಚ, ಕೋಟಿಪುರ, ಬನವಾಸಿ, ಹಾನಗಲ್ಲು, ಗದಗ, ಬದಾಮಿ, ಪಟಟ್ದಕಲ್ಲು, ಐಹೊಳೆ, ಮಹಾಕೂಟ ಎಲ್ಲವನ್ನೂ ಅಧ್ಯಯನದ ದೃಷ್ಟಿಯಿಂದ ನೋಡುವ ಅವಕಾಶ ನನ್ನದಾಯಿತು. ಆಗ ಗಣೇಶ ಮೇಷ್ಟ್ರ ನಿಜವಾದ ವಿದ್ವತ್ತು, ಅವರೊಳಗಿನ ಅತ್ಯಂತ ಯಶಸ್ವೀ ಶಿಕ್ಷಕ, ಅವರ ಪ್ರತಿಭೆ, ವಿಶಾಲವಾದ ಕಾರ್ಯಕ್ಷೇತ್ರ ಅನುಭವ ಎಲ್ಲವೂ ನನಗೆ ಮನದಟ್ಟಾಯಿತು.
ಬಾ.ರಾ. ಗೋಪಾಲ ಪ್ರಶಸ್ತಿ ಸಮಾರಂಭ

ಪ್ರೌಢ ತರಗತಿಗಳು ಮುಗಿಯುವಷ್ಟರಲ್ಲಿ, ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಹಸ್ತಪ್ರತಿ ತರಗತಿಗಳು ನಡೆಯುತ್ತವೆ ಎಂದು, ಅಲ್ಲಿಯೂ ಗಣೇಶ ಮೇಷ್ಟ್ರು ಪಾಠ ಮಾಡುತ್ತಾರೆಂದು ತಿಳಿದು, ಹೋಗಿ ಸೇರಿಕೊಂಡೆ. ಅಲ್ಲಿಯೂ ಅಷ್ಟೆ ಕನ್ನಡ ಕಾವ್ಯ ಛಂದಸ್ಸು ಪಾಠ ಕೇಳುವ ಸೌಭಾಗ್ಯ ಸಿಕ್ಕಿತು. ಹಸ್ತಪ್ರತಿ ತರಗತಿಗಳು ಮುಗಿಯುವಷ್ಟರಲ್ಲಿ, ಪ್ರತಿಷ್ಠಾನದಲ್ಲೇ ಸಿರಿಕಂಟ ಕಾವ್ಯಾಸಕ್ತರ ಕೂಟದ ರಚನೆಯಾಯಿತು. ನಾನು ಸಂಚಾಲಕನಾಗಿದ್ದೆ. ಸಿರಿಕಂಟದ ಆಶ್ರಯದಲ್ಲಿ ಹಳಗನ್ನಡ ಕಾವ್ಯಾಭ್ಯಾಸ ಶಿಭಿರಗಳನ್ನು ನಡೆಸುತ್ತಿದ್ದೆವು. ಗಣೇಶ ಮೇಷ್ಟ್ರ ಮಾರ್ಗದರ್ಶನ ಅದಕ್ಕಿತ್ತು. ಕನ್ನಡ ಸಾಹಿತ್ಯದ ಆಳಕ್ಕಿಳಿಯಲು ನನಗೆ ನೆರವಾಗಿದ್ದೇ ಆ ತರಗತಿಗಳು. ಆ ವರ್ಷವೂ ಮೇಷ್ಟ್ರ ಮಾರ್ಗದರ್ಶನದಲ್ಲಿ ಕರ್ನಾಟಕದ ಹಲವಾರು ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವದ ಸ್ಥಳಗಳನ್ನು ಸಂದರ್ಶಿಸುವ ಸೌಭಾಗ್ಯ ನನ್ನದಾಗಿತ್ತು.
ಆ ನಡುವೆ ನನ್ನ ಕನ್ನಡ ಎಂ.ಎ. ಮುಗಿದಿತ್ತು. ಕನ್ನಡ ಛಂದಸ್ಸಿಗೆ ನಾನು ಮಾಡಿಕೊಂಡಿದ್ದ ನೋಟ್ಸುಗಳನ್ನು ಸ್ವಲ್ಪ ವಿಸ್ತರಿಸಿ ಪುಸ್ತಕರೂಪಕ್ಕೆ ತಂದಿದ್ದೆ. ಅದನ್ನು ಪ್ರಕಟಿಸಲು ಸುಮುಖ ಪ್ರಕಾಶನದವರು ಮುಂದೆ ಬಂದಿದ್ದರು. ಆಗ ನಾನು ಅದನ್ನು ಮೇಷ್ಟ್ರ ಗಮನಕ್ಕೆ ತಂದೆ. ಅವರು ಅದನ್ನೊಮ್ಮೆ ಇಡಿಯಾಗಿ ಓದಿ, ತಿದ್ದಿ, ಚೊಕ್ಕದಾದ ಮುನ್ನುಡಿಯನ್ನೂ ಬರೆದು ನನ್ನನ್ನು ಆಶೀರ್ವದಿಸಿದ್ದರು. ಹಾಸನದಲ್ಲಿ ನನ್ನ ಮದುವೆ ನಡೆಯುವುದಿತ್ತು. ಅಷ್ಟು ದಊರ ಬರುತ್ತಾರೊ ಇಲ್ಲವೊ ಎಂಬ ಅನುಮಾನದಿಂದಲೇ ಮದುವೆ ಆಹ್ವಾನವಿತ್ತಿದ್ದೆ. ಆಶ್ಚರ್ಯವೆಂದರೆ, ಮದುವೆಯ ದಿನ ಬೆಳಿಗ್ಗೆ ಅವರು ನನ್ನೆದುರಿಗೆ ಪ್ರತ್ಯಕ್ಷಾವಾಗಿದ್ದರು. ನಾನಾಗ ಮದುವೆ ಗಂಡಿನ ವೇಷದಲ್ಲಿದ್ದು, ವಾದ್ಯದವರ ಹಿಂದೆ, ಬಂಧು-ಬಳಗದವರ ಸ್ನೇಹಿತರ ನಡುವೆ ನಡೆದುಕೊಂಡು ಛತ್ರ ಪ್ರವೇಶ ಮಾಡುವುದರಲ್ಲಿದ್ದೆ. ಮೇಷ್ಟ್ರನ್ನು ನೋಡಿ ನಾನು, ತಕ್ಷಣ ಎಲ್ಲದರಿಂದ ಬಿಡಿಸಿಕೊಂಡು ಒಬ್ಬರೇ ನಿಂತಿದ್ದ ಅವರನ್ನು ಮಾತನಾಡಿಸಲು ಓಡಿದೆ. ನಾನು ಹಾಗೆ ಓಡಿದ್ದನ್ನು ಕಂಡು ಅಲ್ಲಿದ್ದವರೆಲ್ಲಾ ಸ್ವಲ್ಪ ಗೊಂದಲಕ್ಕೀಡಾಗಿಬಿಟ್ಟಿದ್ದರು. ಅದು ಮೇಷ್ಟ್ರ ಗಮನಕ್ಕೂ ಬಂದಿತ್ತು. ತಕ್ಷಣ, ಅವರೇ ಮುಂದೆ ಬಂದು, ನೀವು ಹೋಗಿ, ಅವರ ಜೊತೆ ನಿಲ್ಲಿ. ನಾನು ಒಬ್ಬನೇ ಇದ್ದರೂ ನನಗೇನೂ ಯೋಚನೆಯಿಲ್ಲ. ಇನ್ನೇನು ಉಳಿದವರು ಬಂದುಬಿಡುತ್ತಾರೆ ಎಂದು ನನ್ನನ್ನು ಹಿಂದಕ್ಕೆ ಓಡಿಸಿಬಿಟ್ಟಿದ್ದರು!
ಬಿ.ಎಂ.ಶ್ರೀ. ಪ್ರತಿಷ್ಠಾನದಲ್ಲಿ ಹತ್ತಿದ್ದ ಹಳಗನ್ನಡ ಕಾವ್ಯದ ರುಚಿಯನ್ನು ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ. ಆಗ ನಾನು ಹಿರಿಯರಾದ ಜಿ.ಎಸ್.ಎಸ್.ರಾವ್, ಸಂಧ್ಯಾ ಮೇಡಂ, ಮನೋಜ್ ಅವರನ್ನು ಸೇರಿಸಿಕೊಂಡು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ಮೇಷ್ಟ್ರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುವ ಕಾರ್ಯತಂತ್ರವನ್ನು ರೂಪಿಸಿದೆ. ಅದು ಮನೋಜ್ ಅವರ ಮನೆಯಲ್ಲಿ ಕಾರ್ಯಗತವಾಯಿತು. ನನ್ನ ಶ್ರೀಮತಿ ಶ್ವೇತಾ ಮತ್ತು ಮನೋಜ್ ಅವರ ಶ್ರೀಮತಿ ರಂಜಿತಾ ನಮ್ಮ ಗುಂಪಿಗೆ ಸೇರಿಕೊಂಡರು. ಐದು ತಿಂಗಳ ನನ್ನ ಮಗಳನ್ನು ನಡುವೆ ಮಲಗಿಸಿಕೊಂಡು ನಾವು ಸುತ್ತಲು ಕುಳಿತು ಕಾವ್ಯವನ್ನು ಓದಿ ನಮಗೆ ತೋಚಿದಂತೆ ಅರ್ಥೈಸುತ್ತಿದ್ದೆವು. ಮಾರ್ಗದರ್ಶಕರಾಗಿದ್ದ ಮೇಷ್ಟ್ರು ನಮ್ಮನ್ನು ತಿದ್ದುತ್ತಿದ್ದರು. ನಮ್ಮ ತಂಡದ ಯಾರೇ ತಪ್ಪು ಹೇಳಿದರೂ, ಅದನ್ನು ತಪ್ಪು ಎನ್ನದೆ, ಅದೂ ಒಂದು ರೀತಿಯಲ್ಲಿ ಸರಿ ಎಂದು ಹೇಳಿ, ನಂತರ ಅವರೇ ಅದನ್ನು ವಿವರಿಸುತ್ತಿದ್ದರು. ಅವರು ಕಾವ್ಯವನ್ನು ಓದುವ ರೀತಿ, ಪದವಿಭಾಗ, ಅನ್ವಯ, ಸ್ವಾರಸ್ಯ ಮೊದಲಾದವನ್ನು ನಿಧಾನವಾಗಿ ಕಲಿಸಿದರು. ಆದರೆ ಅವರು ಅದನ್ನು ನಮಗೆ ಕಲಿಸುತ್ತಿದ್ದೇನೆ ಎಂದು ಯಾವತ್ತೂ ಹೇಳಲಿಲ್ಲ. ನಮಗೂ ಹಾಗೆ ಅನ್ನಿಸಲಿಲ್ಲ. ಆದರೆ ನಮಗೆ ಆಶ್ಚೆರ್ಯವಾಗುವ ರೀತಿಯಲ್ಲಿ ನಾವು ಅದನ್ನು ಕಲಿಯುತ್ತಿದ್ದೆವು.
ರಾಮಾಯಣ ದರ್ಶನಂ ತರಗತಿಯಲ್ಲಿದ್ದ ನಾವು ಆರೂ ಜನರು ಮೇಷ್ಟ್ರ ಮಾರ್ಗದರ್ಶನದಲ್ಲಿ ಭುವನೇಶ್ವರ, ಪುರಿ, ಕೊನಾರ್ಕ್ ಮೊದಲಾದ ಕಡೆ ಒಂದು ಪ್ರವಾಸ ಮಾಡಿ ಬಂದೆವು. ತರಗತಿಗಳು ವಾರಕ್ಕೆ ಒಂದು ದಿನ ನಡೆಯುತ್ತಿದ್ದವು. ಅದರ ನಡುವೆ, ಹಿರಿಯರಾದ ಜಿ.ಎಸ್.ಎಸ್. ರಾವ್ ಅವರ ಆರೋಗ್ಯದಲ್ಲಿ ಏರುಪೇರಾದಾಗ, ಅವರು ಹುಷಾರಾದ ಮೇಲೆ ಅವರ ಮನೆಯಲ್ಲೇ ತರಗತಿಗಳು ನಡೆಯಲಾರಂಭಿಸಿದವು. ಸುಮಾರು ಮೂರೂವರೆ ವರ್ಷಗಳ ಕಾಲ, ವಾರಕ್ಕೆ ಒಂದು ದಿನ, ಒಂದು-ಒಂದೂವರೆ ಗಂಟೆಗಳ ಕಾಲ ನಮ್ಮ ಕಾವ್ಯಾಧ್ಯಯನ ನಡೆದೆ ಯಶಸ್ವಿಯಾಗಿ ಮುಗಿಯಿತು! ಎಷ್ಟೋ ದಿನಗಳು, ಅವರು ಬರುವಾಗಲೇ, ಬಿಸಿಬಿಸಿ ಬನ್ ಅಥವಾ ಪ್ಲೇನ್ ಕೇಕ್ ಅಥವಾ ಕಡ್ಲೆಬೀಜವನ್ನೂ ತರುತ್ತಿದ್ದರು. ಅದನ್ನು ನಮಗೆ ಕೊಟ್ಟು,ನಾವು ತಿಂದು ಮುಗಿಸಿದ ಮೇಲೆಯೇ ತರಗತಿಗಳು ಆರಂಭವಾಗುತ್ತಿದ್ದವು. ಆಗಾಗ ನನ್ನ ಮಗಳಿಗೆ ಚಾಕೊಲೇಟ್ ಸಹ ಇರುತ್ತಿತ್ತು. ಅದರ ನಡುವೆಯೇ ನನ್ನ ಶ್ರೀಮತಿ ಮುಕ್ತವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮಾಡುತ್ತಿದ್ದಳು. ಅದಕ್ಕೂ ಮೇಷ್ಟ್ರು ಆಗಾಗ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು. ಕೆಲವೊಮ್ಮೆ ನಮ್ಮ ಮನೆಗೇ ಬಂದು ಕಾವ್ಯಮೀಮಾಂಸೆ, ಭಾಷಾಚರಿತ್ರೆ ಪಾಠ ಮಾಡಿ, ನನ್ನ ಮಗಳೊಂದಿಗೆ ಸ್ವಲ್ಪ ಹೊತ್ತು ಆಟವಾಡಿ ಹೋಗುತ್ತಿದ್ದರು. ಆದ್ದರಿಂದ ನನ್ನ ಮಗಳಿಗೆ ಅವರು ಮೇಷ್ಟ್ರುತಾತ ಆಗಿದ್ದರು.
ನನ್ನ ಪಿಹೆಚ್.ಡಿ. ಅಧ್ಯಯನ ಆರಂಭವಾದಾಗ ನಾನು ಅವರ ಸಲಹೆಗಳನ್ನು ಕೇಳುತ್ತಿದ್ದೆ. ನಾನು ಕೇಳುತ್ತಿದ್ದ ಎಲ್ಲ ಅನುಮಾನಗಳಿಗೆ ಉತ್ತರಿಸುತ್ತಿದ್ದರೂ, ತೀರ್ಮಾನಗಳನ್ನು ನನಗೆ ಬಿಡುತ್ತಿದ್ದರು. ನನ್ನ ಮಹಾಪ್ರಬಂಧ ಅಂತಿಮವಾಗುತ್ತಿದ್ದಾಗಲೇ, ನನ್ನ ಮನೆಯೂ ನಿರ್ಮಾಣವಾಗುತ್ತಿತ್ತು. ನನ್ನ ಬರವಣಿಗೆಯನ್ನು ಅವರಿಗೊಮ್ಮೆ ತೋರಿಸಿ ಅಭಿಪ್ರಾಯ ಪಡೆಯುತ್ತಿದ್ದೆ. ಮಹಾಪ್ರಬಂದವನ್ನು ತಿದ್ದುವಲ್ಲಿ ಅವರ ಸಹಕಾರವನ್ನು ವರ್ಣಿಸಲಸಾಧ್ಯ. ಸ್ವತಃ ಅವರೇ ನನ್ನ ಕೇಲೇಜಿನ ಬಳಿ ಬಂದು, ನನ್ನ ಗ್ರಂಥಾಲಯಲದಲಿ ಕುಳಿತು, ಪ್ರೂಫ್ ನೋಡಿಕೊಡುತ್ತಿದ್ದರು. ಪ್ರೂಫ್ ನೋಡುವಾಗಲೇ ಅವರಿಗಾದ ಸಂದೇಹಗಳನ್ನು ಒಂದು ಹಾಳೆಯಲ್ಲಿ ಬರೆದು, ಇವುಗಳ ಕಡೆಗೆ ಗಮನ ಹರಿಸಿ ಎಂದು ನನಗೆ ಕೊಡುತ್ತಿದ್ದರು. ಅವರ ಸಂಗ್ರಹದ ಹಲವಾರು ಅಪರೂಪದ ಪುಸ್ತಕಗಳನ್ನು ನನಗೆ ತಂದುಕೊಟ್ಟು, ನಾನು ಗ್ರಂಥಾಲಯಗಳಿಗೆ ಅಲೆಯುವ ಶ್ರಮವನ್ನೂ ತಪ್ಪಿಸಿದ್ದರು. ಅವರ ಶಿಶ್ಯವಾತ್ಸಲ್ಯದಿಂದ ನಾನು ನನ್ನ ಪಿಹೆಚ್.ಡಿ. ಅಧ್ಯಯನವನ್ನು ಯಶಸ್ವಿಯಾಗಿ ಮುಗಿಸಿದೆ. ಅದು ಮುಂದೆ ಪುಸ್ತಕ ರೂಪದಲ್ಲಿ ಪ್ರಕಟವಾದಾಗ, ನನ್ನ ಇನ್ನೊಬ್ಬ ಮೇಷ್ಟ್ರೂ, ಮಾರ್ಗದರ್ಶಕರೂ ಆದ ಡಾ. ದೇವರಕೊಂಡಾರೆಡ್ಡಿ ಮತ್ತು ಡಾ. ಕೆ.ಆರ್. ಗಣೇಶ ಅವರಿಗೆ ಗೌರವಪೂರ್ವಕವಾಗಿ ಅರ್ಪಣೆ ಮಾಡಿದ್ದೆ.
ರಾಮಾಯಣದರ್ಶನಂ ಮುಗಿದ ಮೇಲೆ ಪಂಪಭಾರತವನ್ನು ನಮ್ಮ ತಂಡ ಅಧ್ಯಯನಕ್ಕೆ ಆರಿಸಿಕೊಂಡತು. ಗಣೇಶ ಮೇಷ್ಟ್ರು ಪಂಪನ, ಹಾಗೂ ಅವನ ಕಾವ್ಯದ ಗುಣಾವಗುಣಗಳನ್ನೆಲ್ಲಾ ಸರ್ವ ಆಯಾಮಗಳಿಂದ ನಮಗೆ ಬಿಡಿಸಿಟ್ಟಿದ್ದರು.  ಅಧ್ಯಯನದಲ್ಲಿ ಅವರ ಶ್ರದ್ಧೆ, ಶಿಷ್ಯಂದಿರಾದ ನಮಗೇ ನಾಚಿಕೆ ಮೂಡಿಸುವಂತಿತ್ತು! ಇಡೀ ಪಂಪಭಾರತದ ಪುಸ್ತಕವನ್ನು ಬಿಚ್ಚಿ. ಪ್ರತಿ ಹಾಳೆಯ ನಡುವೆ ಒಂದು ಬಿಳಿ ಹಾಳೆಯನ್ನು ಇಟ್ಟು ಮತ್ತೆ ಬೈಂಡ್ ಮಾಡಿಸಿದ್ದರು. ಹಲವಾರು ಹಳಗನ್ನಡದ ಕಾವ್ಯಗಳನ್ನು ಅವರು ಅದೇ ರೀತಿ ರೀ-ಬೈಂಡ್ ಮಾಡಿಸಿ ಇಟ್ಟುಕೊಂಡಿದ್ದರು. ಪ್ರತಿ ಪದ್ಯವನ್ನು ಓದಿ, ಅರ್ಥೈಸಿ, ಅನ್ವಯಿಸಿರುತ್ತಿದ್ದರು. ತಮ್ಮ ಅನುಮಾನಗಳನ್ನು ಬಿಳಿ ಹಾಳೆಯಲ್ಲಿ ಬರೆದಿರುತ್ತಿದ್ದರು. ಛಂದಸ್ಸು, ಅಲಂಕಾರ, ವಿಶೇಷ ಯಾವುದನ್ನೂ ಅವರು ನಿರ್ಲಕ್ಷ್ಯ ಮಾಡುತ್ತಿರಲಿಲ್ಲ. ನಿಜವಾಗಿಯೂ ಹಳಗನ್ನಡದ ಅಧ್ಯಯನಕ್ಕೆ ಒಂದು ಮಾದರಿ ಎಂದರೆ ಅದು ನಮ್ಮ ಮೇಷ್ಟ್ರು ಮಾತ್ರ. ಪಂಪಭಾರತ ಮುಗಿಯುತ್ತಿದ್ದಂತೆ, ಅವರೇ ಹರಿಶ್ಚಂದ್ರಕಾವ್ಯವನ್ನು ಸೂಚಿಸಿ ಅಧ್ಯಯನವನ್ನು ಮುಂದುವರೆಸೆವಂತೆ ನಮ್ಮನ್ನು ಪ್ರೇರೇಪಿಸಿದ್ದಾರೆ.
ಹಳಗನ್ನಡ ಸಾಹಿತ್ಯ, ಶಾಸನ ಸಾಹಿತ್ಯ ಇವೆಲ್ಲದರ ನಡುವೆಯೂ ಅವರು ಹಲವಾರು ಕ್ಷೇತ್ರಗಳಲ್ಲಿ ಆಸಕ್ತರು. ತಮ್ಮ ಹಳೆಯ ಸ್ಕೂಟರುಗಳನ್ನು ರಿಪೇರಿ ಮಾಡುವುದರಲ್ಲಿ, ಅವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿ ಅವರ ನೈಪುಣ್ಯತೆ ಅಗಾಧವಾದದ್ದು. ಅವರ ಕಂಪ್ಯೂಟರ್ ಜ್ಞಾನವನ್ನು ನೋಡಿ ನಮ್ಮ ಕನ್ನಡ ಮೇಷ್ಟ್ರುಗಳು ಕಲಿಯಬೇಕು. ಅತ್ಯಂತ ವೇಗವಾಗಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಟೈಪ್ ಮಾಡುವ ಚಾಕಚಕ್ಯತೆಯೂ ಅವರಿಗಿದೆ. ಅವರ ಕೈಬರಹವೂ ಅಷ್ಟೆ, ತಪ್ಪಿಲ್ಲದ ಸ್ಪಷ್ಟ ಬರವಣಿಗೆ. ಸಾವಿರಾರು ಜನರ ಹಸ್ತಪ್ರತಿಗಳ ನಡುವೆಯೂ ನಾನು ಅವರ ಕೈಬರಹದ ಹಸ್ತಪ್ರತಿಯನ್ನು ಸುಲಭವಾಗಿ ಗುರುತಿಸಬಲ್ಲೆ. ಅವರೇ ಸಿದ್ಧ ಪಡಿಸಿದ ಹಲವಾರು ನೋಟ್ಸುಗಳನ್ನು ಅವರೇ ಕ್ಸೆರಾಕ್ಸ್ ಮಾಡಿಸಿ ನಮಗೆ ಓದಲು ಕೊಟ್ಟಿದ್ದಾರೆ. ಅವರು ಸಿದ್ಧಪಡಿಸಿರುವ ಶಾಸನಗಳ, ಕಾಲೇಜಿನ ಪಠ್ಯಭಾಗಗಳ, ಕಾವ್ಯಭಾಗಗಳ ನೋಟ್ಸುಗಳನ್ನು ಹೇಗಿವೆಯೋ ಹಾಗೇ ಮುದ್ರಿಸಿದರೂ ಅತ್ಯುತ್ತಮ ಪುಸ್ತಕಗಳಾಗುತ್ತವೆ.
ಮೇಷ್ಟ್ರಿಗೆ ಹಳೆಯ ಹಿಂದಿ ಚಲನಚಿತ್ರಗೀತೆಗಳೆಂದರೆ ಇಷ್ಟ. ಹಲವಾರು ಸಿನಿಮಾದ ಸಿ.ಡಿ.ಗಳನ್ನು ಸಂಗ್ರಹಸಿದ್ದಾರೆ. ಹಲವಾರು ಯುದ್ಧ ಸರಣಿಯ ಇಂಗ್ಲಿಷ್ ಸಿನಿಮಾಗಳನ್ನು ನಾನು ಅವರಿಂದ ಸಿ.ಡಿ. ಪಡೆದು ನೋಡಿದ್ದೇನೆ. ಯಾವಾಗಲೂ ರೇಡಿಯೋ ಒಂದನ್ನು ಜೊತೆಯಲ್ಲಿರಿಸಿಕೊಂಡು, ತಮಗೆ ಬೇಕೆನ್ನಿಸಿದಾಗ, ಯಾವುದೋ ಸ್ಟೇಷನ್ನಿಗೆ ಟ್ಯೂನ್ ಮಾಡಿ, ಶಾಸ್ತ್ರೀಯ ಸಂಗೀತವನ್ನೊ, ಹಳೆಯ ಗೀತೆಗಳನ್ನು ಕೇಳುತ್ತ ಅವರು ದಿವ್ಯಾನಂದವನ್ನು ಅನುಭವಿಸಬಲ್ಲರು. ಕ್ರಿಕೆಟ್ ಬಗ್ಗೆಯೂ ಅಷ್ಟೆ! ಅದರಲ್ಲೂ ಟೆಸ್ಟ್ ಕ್ರಿಕೆಟ್ ಎಂದರೆ ಅವರಿಗೆ ಅಚ್ಚುಮೆಚ್ಚು. ಜೊತೆಗೆ, ಲೆಕ್ಕ ಪತ್ರಗಳನ್ನು ಇಡುವುದರಲ್ಲಿ, ಅವುಗಳನ್ನು ಆಡಿಟ್ ಮಾಡುವುದರಲ್ಲಿ ಅವರಿಗೆ ವಿಶೇಷ ಆಸಕ್ತಿಯಿದೆ. ಹಲವಾರು ಸಣ್ಣಪುಟ್ಟ ಸಂಘಸಂಸ್ಥೆಗಳಿಗೆ ಉಚಿತವಾಗಿ ಆಡಿಟ್ ಮಾಡಿಕೊಡುವ ಅವರ ಹವ್ಯಾಸ ಗಮನಾರ್ಹ.
ತಾನಾಯ್ತು, ತನ್ನ ಕೆಲಸವಾಯ್ತು. ತನ್ನಿಂದಂತೂ ಯಾರಿಗೂ ತೊಂದರೆಯಿಲ್ಲ. ಎಂದು ಅವರು ಬಾಯಿಬಿಟ್ಟು ಹೇಳದಿದ್ದರೂ, ಅದರಂತೆಯೇ ಬದುಕುತ್ತಿರುವವರು. ಅವರ ಪ್ರತಿಫಲಾಪೇಕ್ಷೆಯಿಲ್ಲದ ಕರ್ತವ್ಯಶೀಲತೆ, ವೃತ್ತಿಯ ಬಗೆಗಿನ ಗೌರವ, ಕ್ರಿಯಾಶೀಲ ಬದುಕು ಸದಾ ಅನುಕರಣೀಯ.


Friday, October 05, 2012

ನದಿ-ಕಡಲು ಆಡುಂಬೊಲ
ಶೃಂಗಾರ ರಸಸೀಮೆ

Saturday, September 22, 2012

ಮಹಾಮಾತೆ ಮಂಥರೆ

ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್.
-ಶ್ರೀ ಕುವೆಂಪು, ಶ್ರೀರಾಮಾಯಣ ದರ್ಶನಂ ಮಹಾಕಾವ್ಯ. ಪುಟ ೧೨೩; ಸಾಲು ೩೦೩-೦೪.

ಸೂರ್ಯೋದಯಕ್ಕೂ ಮೊದಲೆ ಎದ್ದು, ನದಿಯೆಡೆಗೆ ಹೋಗಿ ನಿತ್ಯ ಕರ್ಮಾದಿಗಳನ್ನು ಮುಗಿಸಿ, ಸ್ನಾನಕ್ಕೆಂದು ನಡುಹೊಳೆಗಿಳಿದ ಭರತ ಯೋಚಿಸಿದ. ‘ನೆನ್ನೆಗೆ ಹದಿನಾಲ್ಕು ವರ್ಷಗಳು ಮುಗಿದು ಹೋದವು. ಅಣ್ಣನು ಸೀತಾ ಲಕ್ಷ್ಮಣರೊಂದಿಗೆ ತಿರುಗಿ ಬರಲಿಲ್ಲ. ಅಣ್ಣನ ಸುಳಿವನ್ನರಸಿ ಹೋಗಿದ್ದ ಭಟರು ನಿರಾಶರಾಗಿ ಹಿಂದುರಿಗಿದರಂತೆ. ನನ್ನ ಮನೋನಿಶ್ಚಯದಂತೆ ಇಂದು ನಾನು ಅಗ್ನಿಪ್ರವೇಶ ಮಾಡಲೇ ಬೇಕು. ಇನ್ನೊಂದು ಜಾವದೊಳಗೆ ಅಣ್ಣನ ಸುದ್ದಿ ನನಗೆ ತಲಪದಿದ್ದರೆ ನಾನು ಅಗ್ನಿಗಾಹುತಿಯಾಗುವುದು ಶತಸಿದ್ದ’ ಎಂದು ನಿರ್ಧರಿಸಿ ಸ್ನಾನಾದಿಗಳನ್ನು ಮುಗಿಸಿ, ರಥವೇರುತ್ತಿದ್ದ ಸೂರ್ಯನಿಗೆ ಅರ್ಘ್ಯವನಿತ್ತು ಆಶ್ರಮದೆಡೆಗೆ ನಡೆದನು. ಹೊರೆಹೊರೆ ಉರುವಲುಗಳನ್ನು ತಂದು ಅಗ್ನಿಕುಂಡದ ಸುತ್ತಲೂ ಜೋಡಿಸತೊಡಗಿದ. ಇನ್ನಷ್ಟು ಮತ್ತಷ್ಟು ಸೌದೆಗಳನ್ನು ತಂದು ಅಗ್ನಿಕುಂಡದ ಸುತ್ತಲೂ ಜೋಡಿಸಿ ತುಪ್ಪವನ್ನು ಸುರಿದು ಬೆಂಕಿಯನುರಿಸಿದ ಭರತ ಯೋಚಿಸಿದ. ‘ಹದಿನಾಲ್ಕು ವರ್ಷಗಳು ಕಳೆದ ಮೇಲೆ ಒಂದರಗಳಿಗೆಯೂ ತಡಮಾಡದೆ ಬಂದು ನಿನ್ನನ್ನು ಸೇರುತ್ತೇನೆ ಎಂದಿದ್ದ ಅಣ್ಣ ಹೀಗೇಕೆ ಮಾಡಿದ? ಅವನೆಂದೂ ಮಾತಿಗೆ ತಪ್ಪುವನಲ್ಲ. ನಾನು ಅವನ ತಮ್ಮ. ನಾನೂ ಮಾತಿಗೆ ತಪ್ಪಲಾರೆ. ತಾಯಂದಿರು ಮತ್ತು ಶತ್ರುಜ್ಞಾದಿಗಳುಗಳು ಬಂದು ಅಡ್ಡಿ ಪಡಿಸುವ ಮೊದಲೇ ನಾನು ಅಗ್ನಿ ಪ್ರವೇಶ ಮಾಡಿಬಿಡಬೇಕು’ ಎಂದುಕೊಂಡು ಮತ್ತಷ್ಟು ತುಪ್ಪವನ್ನು ಬೆಂಕಿಗೆ ಸುರಿದನು.

ಮೇಲಿಂದ ಬೀಳುತ್ತಿದ್ದ ತುಪ್ಪದ ಕಡೆಗೆ ದಿಗ್ಗನೆದ್ದ ಜ್ವಾಲೆಗಳು ಛಾವಣಿಯವರೆಗೂ ಕೆನ್ನಾಲಿಗೆಗಳನ್ನು ಚಾಚಿದವು. ಅದರೊಂದಿಗೆ ಮಂಗಳಾಕಾರವಾದ ದೇವತೆಯೊಂದು ಅಗ್ನಿಕುಂಡದೊಳಗೆ ಮೈದಳೆಯತೊಡಗಿತು. ಅಚ್ಚಿರಿಯಿಂದ ಭರತ ನೋಡುತ್ತಿರುವಂತೆಯೇ ಪೂರ್ಣಾಕಾರವನ್ನು ತಳೆದ ದೇವತೆಯಾಕಾರವು ‘ಮಗು ಭರತ, ರಾಮನ ಪ್ರಿಯಾನುಜ. ನೀನು ಅಗ್ನಿಪ್ರವೇಶ ಮಾಡುವ ಅಗತ್ಯವಿಲ್ಲ. ನಿನ್ನಣ್ಣನು ಸೀತಾ ಲಕ್ಷ್ಮಣರೊಡಗೂಡಿ ಇಂದೊ ನಾಳೆಯೊ ಹಿಂತಿರುಗವನು. ಆದ್ದರಿಂದ ನಿನ್ನ ನಿರ್ಧಾರವನ್ನು ಕೈಬಿಡು’ ಎಂದಿತು.

ಅತಿಶಯ ಸಂತೋಷದಿಂದ ಉಬ್ಬಿ ಹೋದ ಭರತ ಆ ದೇವತೆಯಾಕಾರಕ್ಕೆ ಶಿರಬಾಗಿ ನಮಸ್ಕರಿಸಿ ‘ನೀನಾರು ತಾಯೆ? ಉರಿಯೊಳಗಿಹ ನನಗೆ ತಂಪನೆರೆಯುತಿರುವೆ. ನೀನಾರು ತಾಯೆ?’ ಎಂದು ಸಂತೋಷ ಬಾವದಿಂದ ಕೇಳಿದನು.
‘ಇನ್ನಾರು ಮಗು. ಸದಾ ನಿನಗೊಳಿತನ್ನೆ ಬಯಸುತ್ತಿದ್ದವಳು. ಬಯಸುತ್ತಿರುವವಳು. ಮಂಥರೆ!’

‘ಬೇಡ ತಾಯೆ, ಬೇಡ ಆ ಹೆಸರೆನೆಂದು ಹೇಳದಿರು ಮತ್ತೊಮ್ಮೆ. ಗೂನಿಯವಳೆ ಕಾರಣಳು ನನ್ನಣ್ಣನ ವನವಾಸಕ್ಕೆ, ನನ್ನತ್ತಿಗೆಯ ಪರಿತಾಪಕ್ಕೆ, ನನ್ನನುಜನ ಕಾರ್ಪಣ್ಯಕ್ಕೆ, ನನ್ನೆದೆಯೊಳಗಿನ ಉರಿಗೆ. ಆ ಹೆಸರನಿನ್ನೊಮ್ಮೆ ಉಸುರದಿರು ತಾಯೆ’ ಎಂದು ಭರತನು ನಿಷ್ಟುರವಾಗಿ ನುಡಿಯಲು, ‘ಮಗು ಭರತ. ಕಾರಣಳಲ್ಲ ಮಂಥರೆ, ಬರಿ ಕರಣ ಮಾತ್ರಳು. ಅವಳ ಅಂತರಂಗವನ್ನು ನೀನು ಕಾಣೆ. ನಿನ್ನ ಅಭ್ಯುದಯವೊಂದೇ ಅವಳ ಉದ್ಯೋಗ. ಕುಬ್ಜೆಯವಳು. ಗೂನಿಯವಳು. ಆದರೂ ಮಗು ನೀನೂ ಕಾಣದಾದೆಯ ಮಂಥರೆಯಂತರಾತ್ಮವನು. ಮಗು ನೀನೊಮ್ಮೆ ನಿನ್ನ ಮನಃಕ್ಲೇಶಗಳೆಲ್ಲವನೊಮ್ಮೆ ದೂರ ತಳ್ಳಿ, ನಿರ್ಮಲ ಚಿತ್ತನಾಗಿ ನನ್ನನ್ನು ಕಾಣು. ಹದಿನಾಲ್ಕು ವರ್ಷಗಳಿಂದ ನಿನ್ನ ಮಂಗಳ ಮನಸ್ಸಿನಲ್ಲಿ ರಾಮನಲ್ಲದೆ ಬೇರಾರಿಲ್ಲವೆಂಬುದನು ನಾನು ತಿಳಿಯೆನೆ? ಅಂದಿನಿಂದ ಇಂದಿನವರೆಗೂ ನಾನೂ ಕಾಯುತ್ತಿದ್ದೇನೆ, ಮುಕ್ತಿಗಾಗಿ. ಇಂದು ರಾಮ ಬರುವವನಿದ್ದಾನೆ. ಈಗೊಮ್ಮೆ ಈ ಮಂಥರೆಯ ಬಗ್ಗೆ ಯೋಚಿಸಿ ನೋಡು’ ಎಂದು ಇಡೀ ದೇವತೆಯಾಕಾರವು ತಾನು ರೂಪಗೊಂಡಿದ್ದ ಅಗ್ನಿಯ ಜ್ವಾಲೆಗಳಲ್ಲಿಯೇ ಲೀನವಾಯಿತು.

ಭರತ ನಿಂತಿದ್ದ ನಿಬ್ಬೆರಗಾಗಿ ನೋಡುತ್ತ ಶೂನ್ಯವನುಪಕ್ರಮಿಸಿದ ಜ್ವಾಲೆಗಳನ್ನು. ಮಂಥರೆ, ಮಂಥರೆ ಎಂದು ಅವನ ಮನಸ್ಸಿನಲ್ಲಿ ಮತ್ತೆ ಮತ್ತೆ ಅನುರಣವಗೊಳ್ಳುತೊಡಗಿತು. ‘ಹೌದು ಪೂಜ್ಯೆ ಹೌದು. ಈ ಹದಿನಾಲ್ಕು ಸಂವತ್ಸರಗಳಲ್ಲಿ ನಿನ್ನನೊಮ್ಮೆಯೂ ನಾನು ನೆನೆಯಲಿಲ್ಲ. ನಿನ್ನ ಉಸುರಿನ ರಕ್ಷೆಯಲ್ಲಿ ನನ್ನ ಬೆಳಸಿದ್ದೆ ನೀನು. ಆದರೂ ನಾನು ಕಾಣದಾದೆ ನಿನ್ನಂತರಾತ್ಮದ ಪುಣ್ಯಲಕ್ಷ್ಮಿಯನ್ನು. ಕ್ಷಮಿಸು ತಾಯೆ, ಕ್ಷಮಿಸು. ಈ ಕಳಂಕಿತ ಮಗನನ್ನು. ಅಂದು ನೀನು ಶತೃಜ್ಞನಿಂದ ಬಡಿಸಿಕೊಂಡು, ನನ್ನಿಂದಲೂ ತಿರಸ್ಕೃತಗೊಂಡು ಅಮೇಲೆ ಎಲ್ಲಿ ಹೋದೆ? ಅದರ ಬಗ್ಗೆ ನಾನೊಮ್ಮೆಯೂ ಯೋಚಿಸಲೇ ಇಲ್ಲ. ತಾಯೊಡಲನಗಲಿ ನಿನ್ನ ಮಡಿಲಲ್ಲಿ ಬಿದ್ದ ನಾನು ನಿನ್ನ ಪ್ರೇಮಸಿಂಚನವನುಂಡು ಬೆಳೆದೆ. ಆದರೆ ನಿನ್ನ ಅತ್ಯಕಾಲದಲ್ಲಿ ನನ್ನ ಮೈಮನಗಳೆರಡೂ ನಿಷ್ಕ್ರಿಯವಾಗಿ ಹೋದವು. ಹೌದು ತಾಯಿ ಹೌದು. ನೀನೆಷ್ಟು ನೊಂದವಳೆಂಬುದು ನನಗೀಗ ಅರ್ಥವಾಗುತ್ತಿದೆ. ನೀನಂದು ಎಲ್ಲರ ಕಣ್ಣಲ್ಲು ಕುರೂಪಿಯಾಗಿದ್ದೆ. ಅಸಹ್ಯವಾಗಿದ್ದೆ. ಅಂದು.....’

ಅಂದು ನಾನಿನ್ನು ಚಿಕ್ಕವನಾಗಿದ್ದೆ. ನಾನು ಚನ್ನಾಗಿ ನಡೆದಾಡುತ್ತಿದ್ದರೂ ನೀನು ನನ್ನನೆಂದೂ ನಡೆಯಲು ಬಿಡದೆ ಎತ್ತಿಕೊಂಡೇ ತಿರುಗುತ್ತಿದ್ದೆ, ನಾನೆಲ್ಲಿ ನೋಯುತ್ತೇನೊ ಎಂದು. ಆ ದಿನ ನೀನು ನನ್ನನ್ನೆತ್ತಿಕೊಂಡು ದಡದಡನೆ ಓಡಿ ಉಪ್ಪರಿಗೆಯ ಮೇಲೆ ಹೋದೆ. ನಿನ್ನನ್ನು ಕಂಡ ಅಲ್ಲಿದ್ದವರೆಲ್ಲ ದೂರ ಸರಿದರು. ಅಲ್ಲಿ ರಾಮಣ್ಣ ಹೋ ಎಂದು ಅಳುತ್ತಿದ್ದ. ಅಪ್ಪ, ದೊಡ್ಡಮ್ಮ, ನನ್ನಮ್ಮ ಮಂತ್ರಿ ಪುರೋಹಿತರೆಲ್ಲ ಅಸಹಾಯಕರಾಗಿ ನಿಂತಿದ್ದರು. ಅಣ್ಣ ಒಂದೇ ಸಮನೆ ಅಳುತ್ತಿದ್ದ. ನನಗಾಗ ಏಕೆಂದು ಹೊಳೆಯಲಿಲ್ಲ. ಆಗ ನೀನು ನನ್ನಬ್ಬೆಯ ಕಿವಿಯಲ್ಲೇನೊ ಉಸುರಿ, ಕನ್ನಡಿಯೊಂದನು ಅವಳ ಕೈಗಿತ್ತಿದ್ದೆ. ಅವ್ವನ ಕೈಯಿಂದ ಅದನ್ನು ಪಡೆದ ಅಣ್ಣಯ್ಯ ‘ಸಿಕ್ಕಿದ, ಸಿಕ್ಕಿದ’ ಎಂದು ಕೇಕೆ ಹಾಕಿ ಕುಣಿಯುತ್ತಿದ್ದ. ನನ್ನನ್ನು ಕೆಳಗಿಳಿಸಿದ ನೀನು, ಅವನನ್ನೆತ್ತಿಕೊಳ್ಳಲು ಕೈಚಾಚಿದೆ. ಬಾ ಎಂದು ಕರೆದೆ. ನೀನು ನನ್ನನ್ನು ಕೆಳಗಿಳಿಸಿದ್ದರಿಂದ ನನ್ನ ಕಣ್ಣುಲ್ಲಿ ನೀರು ತುಂಬಿತ್ತು. ಯಾರು ಯಾರೊ ಜೋರಾಗಿ ಕೂಗಿಕೊಳ್ಳುತ್ತಿದ್ದರು. ನೀನಾಗ ನನ್ನನ್ನು ಎತ್ತಿಕೊಂಡು ಬಂದ ದಾರಿಯಲ್ಲಿಯೆ ದಡದಡನೆ ಉಪ್ಪರಿಗೆಯನಿಳಿದು ಬಂದೆ......’

ನನಗೀಗ ಅರ್ಥವಾಗುತ್ತಿದೆ ಪೂಜ್ಯೆ. ನೀನಂದು ರಾಮನನ್ನು ನಗಿಸಿ, ಅವರೆಲ್ಲಾ ನೆಮ್ಮದಿಯ ಉಸಿರು ಬಿಡುವಂತೆ ಮಾಡಿದ್ದೆ. ಆದರೆ ಅವರಾರು ಕಾಣದಾದರು ನಿನ್ನಾತ್ಮಸೌಂದರ್ಯಲಕ್ಷ್ಮಿಯನ್ನು!

* * * * * * * * * * * *

‘ಛೇ, ನಾನೇಕೆ ಹೀಗೆ ಸುಮ್ಮನೆ ಕುಳಿತಿದ್ದೇನೆ. ಅಣ್ಣ ಅತ್ತಿಗೆಯರು ಇಂದೋ ನಾಳೆಯೋ ಇಲ್ಲಿರುತ್ತಾರೆ. ಅವರ ಸ್ವಾಗತಕ್ಕೆ ಸಿದ್ದತೆಗಳಾಗ ಬೇಕು. ಶತೃಜ್ಞ ಬರುವುದು ತಡವಾಗಬಹುದು. ಅಲ್ಲಿ ತಾಯಂದಿರೆಲ್ಲ ಅಣ್ಣ ಬರಲಿಲ್ಲವೆಂದು ಎಷ್ಟು ಕಳವಳ ಪಡುತ್ತಿದ್ದಾರೊ? ಅವರನ್ನು ಸಮಾಧಾನ ಮಾಡುವುದೇ ತಮ್ಮನಿಗೆ ಒಂದು ದೊಡ್ಡ ಕೆಲಸ. ’ ಎಂದುಕೊಂಡು ಆಶ್ರಮದಿಂದ ಹೊರಬಂದು, ಎಳೆಯ ಬಿಸಿಲಿನಲ್ಲಿ ನದಿಯ ಮೂಲದ ಕಡೆಗೆ ನಿಧಾನವಾಗಿ ನಡೆಯತೊಡಗಿದ, ‘ನದಿಯ ಮೂಲವನ್ನು ತಲಪಿಯೇ ತೀರುತ್ತೇನೆ’ ಎಂದು ಹಠ ಹಿಡಿದು ನಡೆಯುವ ಯಾತ್ರಿಕನಂತೆ.

‘ಈ ಮಂಥರೆ ಯಾರು? ನನ್ನನ್ನೇಕೆ ಒಂದರಗಳಿಗೆಯೂ ಬಿಟ್ಟಿರುವುದಿಲ್ಲ?’ ಎಂಬ ಹಲವಾರು ಪ್ರಶ್ನೆಗಳು ನನಗೆ ಬಂದಿದ್ದೇ ಬಹಳ ಕಡಿಮೆ. ಒಮ್ಮೊಮ್ಮೆ ಅರಮನೆ ಅಂತಃಪುರಗಳಲ್ಲಿ, ಪುರಜನರ ನಡುವೆ ಅವಮಾನಿತಳಾದಾಗ ‘ಇವಳಾರು? ನನ್ನನ್ನು ಇಷ್ಟೇಕೆ ಹಚ್ಚಿಕೊಂಡಿದ್ದಾಳೆ?’ ಎಂದು ನನ್ನಬೆಯನ್ನೇ ಕೇಳಿದ್ದೆ. ಅದಕ್ಕವಳು ನಕ್ಕು ‘ಮಂಥರೆ ನನ್ನ ತಾಯಿಯಿದ್ದಂತೆ’ ಎಂದು ಬಿಡುತ್ತಿದ್ದಳು. ಹಠ ಬಿಡದ ನಾನು, ಒಮ್ಮೆ ಅಜ್ಜನ ಊರಿಗೆ ಹೊಗಿದ್ದಾಗ ಅಜ್ಜಿಯನ್ನು ಕೇಳಿದ್ದೆ ‘ಯಾರೀ ಮಂಥರೆ?’ ಎಂದು.

‘ನಿನ್ನಜ್ಜನೊಮ್ಮೆ ಬೇಟೆಗೆ ಹೋಗಿದ್ದಾಗ ಕಾಡಿನಲ್ಲಿ ಸಿಕ್ಕ ಮಗು ಇವಳು. ಅದನ್ನು ಎತ್ತಿ ತಂದು ಸಾಕಿ ಬೆಳಸಿದರು. ನಿನ್ನಬ್ಬೆಯು ಹುಟ್ಟಿದಾಗ ನಿನ್ನಜ್ಜ ಮಂಥರೆಗೆ ಮಗು ಆಡಿಸುವ ಕೆಲಸವನ್ನು ವಹಿಸಿದರು. ಅದರಿಂದ ಅವಳೆಷ್ಟು ಖುಷಿ ಪಟ್ಟಳೆಂದರೆ, ತನಗೇ ಮಗುವಾದಷ್ಟು ಖುಷಿಯಿಂದ ನಿನ್ನಬ್ಬೆಯನ್ನು ಆಡಿಸಿ ಬೆಳಸಿದಳು. ಅವಳಿಗೆ ಮದುವೆಯಾಗಿ ಅಯೋದ್ಯೆಗೆ ಹೊರಟಾಗ ಇವಳೂ ಹಠ ಹಿಡಿದು ಅಲ್ಲಿಗೆ ಬಂದಳು. ಇನ್ನು ನೀನು ಹುಟ್ಟಿದಾಗ, ನಿನ್ನಬ್ಬೆ ಕೈಕೆ ಮತ್ತು ನಮ್ಮೆಲ್ಲರದೂ ಒಂದು ಭಾಗ ಸಂಭ್ರಮವಾದರೆ ಇನ್ನೊಂದು ಭಾಗ ಅವಳೊಬ್ಬಳದೇ ಸಂಭ್ರಮ. ಅದನ್ನು ಹೇಳಲು ಬಾಯಿ ಸಾಲದು. ಒಂದು ರೀತಿಯಲ್ಲಿ ನಿನ್ನಬ್ಬೆಗೆ ಅವಳೇ ತಾಯಿ. ನಿನಗೂ ಕೂಡ’ ಅಂದಿದ್ದರು.

ಅಜ್ಜನಂತೂ ‘ಮಗು ಭರತಣ್ಣ, ಪಾಪ ಅವಳು ತಬ್ಬಲಿ. ಅವಳಿಗೆ ನಿನ್ನ, ಕೈಕೆಯ ಹೊರತು ಬೇರೆ ಪ್ರಪಂಚವಿಲ್ಲ. ನಿಮ್ಮ ಜಗತ್ತೇ ಅವಳ ಜಗತ್ತು. ಇಲ್ಲಿ ಎಲ್ಲರೂ ಅವಳನ್ನು ಕುರೂಪಿ, ತೊನ್ನಿ, ಕುಬ್ಜೆ ಮುಂತಾಗಿ ಹಿಯಾಳಿಸುತ್ತಿದ್ದರು. ಅಲ್ಲಿಯೂ ಅದು ತಪ್ಪಲಿಲ್ಲ. ಸೂರ್ಯವಂಶದವರಾದರೇನಂತೆ? ನಿಜ ಸೌಂದರ್ಯವನ್ನು ಅರಿಯುವಲ್ಲಿ ಅವರೂ ತಪ್ಪಿದರು.’ ಎಂದು ನಿಟ್ಟುಸಿರಿಟ್ಟಿದ್ದರು.

ಆಗ ನನಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಅದನ್ನೆಲ್ಲ ಕೇಳಿದ ಮೇಲೆ ನಾನು ನಿನಗೆ ಇನ್ನಷ್ಟು ಹತ್ತಿರವಾಗಿದ್ದೆ ಅಷ್ಟೆ.

* * * * * * * * * *

ಬಿಸಿಲೇರುತ್ತಿತ್ತು. ಮೈಮೇಲಿದ್ದ ಉತ್ತರೀಯವನ್ನು ತಲೆಯ ಮೇಲೆಳೆದುಕೊಂಡ ಭರತ ಒಂದು ಕ್ಷಣ ನಿಂತು ಮತ್ತೆ ನಡೆಯತೊಡಗಿದ.

‘ಮಂಥರೆ ಕೆಟ್ಟವಳಂತು ಅಲ್ಲ. ರಾಮನಲ್ಲಿ ಅವಳಿಗೆ ದ್ವೇಷವೂ ಇರಲಿಲ್ಲ. ಅಣ್ಣನೂ ಅವಳನ್ನು ಪ್ರೀತಿಯಿಂದಲೇ ಕಾಣುತ್ತಿದ್ದ. ಎಷ್ಟೋ ಬಾರಿ ನನ್ನನ್ನು ಕೆಳಗಿಳಿಸಿ ಅಣ್ಣನನ್ನು ಎತ್ತಿಕೊಂಡು ಮುದ್ದಿಸುತ್ತಿದ್ದಳೂ ಕೂಡ. ನಂತರ ಏನೋ ತಪ್ಪು ಮಾಡಿದವಳಂತೆ ಅತ್ತಿತ್ತ ನೋಡಿ ಅಣ್ಣನನ್ನು ಇಳಿಸಿಬಿಡುತ್ತದ್ದಳು. ಆದರೂ ಅವಳು ರಾಮನನ್ನು ಕಾಡಿಗಟ್ಟಿದಳೆಂದೇ ಎಲ್ಲರು ಭಾವಿಸಿದ್ದಾರೆ. ನಾನೂ ಸಹ ಆಗ್ಗೆ ಹಾಗೆಯೇ ಅಂದುಕೊಂಡಿದ್ದೆ. ಅಂದು ಶತೃಜ್ಞ ಅವಳನ್ನಿಡಿದು ಬಡಿಯುತ್ತಿದ್ದರೆ, ‘ಭರತಾ, ಓ ಭರತಾ’ ಎಂದು ಆರ್ತಳಾಗಿ ಕೂಗಿಕೊಳ್ಳುತ್ತಿದ್ದ ಮಂಥರೆಗೆ ನನ್ನಿಂದ ಸಿಕ್ಕಿದ್ದಾದರು ಏನು? ಬರಿ ತಿರಸ್ಕಾರ.

ನಂತರ ಮಂಥರೆ ಎಲ್ಲಿ ಹೋದಳು? ನಾನದನ್ನು ಯೋಚಿಸಿಯೆ ಇಲ್ಲ. ಅಯ್ಯನ ಮರಣ, ಅಣ್ಣನ ವನವಾಸ, ಅವನನ್ನು ಹಿಂದಕ್ಕೆ ಕರೆತರಲು ಹೋಗಿದ್ದು ಇವುಗಳ ನಡುವೆ ಮಂಥರೆಯ ಬಗ್ಗೆ ಯೋಚಿಸಲಿಲ್ಲ. ಅವಳೇನಾದಳು? ಯಾರು ಏನಂದರೊ? ಕೊಂದರೊ? ಓ ಮಂಥರೆಯೆ, ಪ್ರೇಮಭೈರವಿಯೆ, ನೀನಂದು ನನ್ನಿಂದ ತಿರಸ್ಕೃತಗೊಂಡು ಎತ್ತ ಹೋದೆ? ಬಾಯ್ಬಿಟ್ಟ ಭೂಮಿಯೊಳಗೆ ಇಳಿದೆಯಾ? ಗಾಳಿ ಬಿಸಿಯಾಗಿ ಅದರಲ್ಲಿಯೇ ಕರಗಿ ಹೋದೆಯ? ಏನಾದೆ ತಾಯೆ?

* * * * * * * * *

ಹೌದು ಮಗು. ನನಗಾಗ ಏನಾಗಿತ್ತು. ನನ್ನಲ್ಲೇನಾಗುತ್ತಿತ್ತು. ಎಂಬುದರ ಕಲ್ಪನೆ ನಿನಗಿರಲಿಕ್ಕಿಲ್ಲ. ನಿಜ ಹೇಳಲೆ ಕಂದ. ಹದಿನಾಲ್ಕು ವರ್ಷಗಳ ವನವಾಸ ರಾಮನೊಬ್ಬನಿಗಲ್ಲ. ಸೀತೆ ಲಕ್ಷ್ಮಣರಿಗಷ್ಟೆ ಅಲ್ಲ. ನನಗೆ ನಿನಗೆ ನಿನ್ನಬ್ಬೆಯರಿಗೆ ಕೂಡಾ. ನಿನ್ನಣ್ಣಯ್ಯನಿಗೆ ಹಾದಿ ಸುಗಮವಾಗಲೆಂದು ಹಾರೈಸುವುದನ್ನು ಬಿಟ್ಟು ನಾನೇನನ್ನು ಮಾಡಲಿ?

ನೀವೆಲ್ಲ ನಿಮ್ಮಯ್ಯನ ಅಗ್ನಿ ಕಾರ್ಯಕ್ಕೆಂದು ಹೋಗಿದ್ದಿರಿ. ಅರಮನೆ ಅಂತಃಪುರವೆಲ್ಲ ನಿರ್ಜನವಾಗಿತ್ತು. ನಾನೆದ್ದೆ, ತನ್ನ ವಿಷವನ್ನು ತಾನೇ ಹೀರಲು ಹೊರಟ ಸರ್ಪಿಣಿಯಂತೆ! ‘ನನ್ನ ಕೈಕೆಯ ಕಂದನಿಗೆ ಮುಕುಟವನ್ನು ದೊರಕಿಸಲು ನಾನು ರಾಮನನ್ನು ಅಡವಿಗಟ್ಟಿದೆ. ರಾಮ ಕಾಡುಪಾಲಾದನೆಂದು ಕೈಕೆ ಭರತರೂ ನನ್ನನ್ನು ದೂರ ಮಾಡಿದರು. ಅವರಿಲ್ಲದೆ ನಾನಿಲ್ಲ. ಯಾವ ರಾಮನನ್ನು ಕಾಡಿಗಟ್ಟಿದೆನೆಂದು ಅವರು ನನ್ನನ್ನು ದೂರ ಮಾಡಿದ್ದಾರೋ ಅದೇ ರಾಮನನ್ನು ಹಿಂದಕ್ಕೆ ಕರೆತಂದರೆ? ಎಲ್ಲರೂ ನನ್ನನ್ನು ಮೊದಲಿನ ಹಾಗೆಯೇ ಪ್ರೀತಿಸಿತ್ತಾರೆ. ನಾನು ಹಿಂದಕ್ಕೆ ಬರಬೇಕೆಂದು ರಾಮನ ಪಾದಗಳ ಮೇಲೆ ಬಿದ್ದು ಬೇಡಿಕೊಂಡರೆ ರಾಮ ಬರದೆ ಇರಲಾರ. ಆತನೊಬ್ಬನೇ ನನ್ನ ನಿಜದಂತರಂಗವನ್ನರಿತವನು’ ಎಂದುಕೊಂಡು, ‘ಓ ರಾಮಯ್ಯ ಬಾರಯ್ಯ. ಭರತನಣ್ಣಯ್ಯ ಬಾರಯ್ಯ’ ಎಂದು ಕೂಗಿಕೊಂಡು ನಗರದ ಬೀದಿಯಲ್ಲಿ ಹುಚ್ಚಳಂತೆ ಓಡುತ್ತಿದ್ದರೆ, ಜನರೆಲ್ಲ ಛಿ, ಥೂ ಎಂದು ಉಗಿದರು, ಕಲ್ಲಿನಿಂದ ಹೊಡೆದರು. ಆದರೆ ಅವುಗಳೆಲ್ಲವುಗಳಲ್ಲಿಯೂ ನಾನು ರಾಮನನ್ನೆ ಕಾಣುತ್ತಿದ್ದೆ. ರಾಮನ ಮಂಗಳ ಮೂರ್ತಿಯಲ್ಲದೆ ಬೇರೇನನ್ನು ನಾನು ಕಾಣಲಿಲ್ಲ. ನನ್ನ ಬಾಯಿಂದ ಬರುತ್ತಿದ್ದುದ್ದು ಎರಡೇ ಶಬ್ಧಗಳು. ‘ರಾಮಯ್ಯ, ಭರತನಣ್ಣಯ್ಯ’ ಎಂದು. ದೂರದಲೆಲ್ಲೊ ಕಾಡ್ಗಿಚ್ಚು ಉರಿಯುತಿತ್ತು. ‘ಓ. ನನ್ನ ರಾಮಯ್ಯನಿಲ್ಲೆ ಬಿಡಾರ ಮಾಡಿರಬಹುದು’ ಎಂದುಕೊಂಡೆ. ಅದೆನೆಗೆ ಕಾಡ್ಗಿಚ್ಚಾಗಿರಲಿಲ್ಲ. ರಾಮನ ದಿವ್ಯಾತ್ಮವಾಗಿತ್ತು. ಖಗಮೃಗಗಳ ದ್ವನಿ ರಾಮನ ವಾಣಿಯಾಗಿತ್ತು. ಮುಗಿಲು ಮುಟ್ಟುತ್ತಿದ್ದ ಜ್ವಾಲೆಯ ನಡುವೆ ಅವರೆಲ್ಲರೂ ನಗುತ್ತಲೇ ನಿಂತಿದ್ಡರು. ರಾಮನ ಮಂಗಳ ಮೂರ್ತಿಯನ್ನು ಬಾಚಿ ತಬ್ಬಿಕೊಂಡು ಅವನ ಕಾಲ ಮೇಲುರುಳಿದೆ ‘ಪುಣ್ಯವನು ತಬ್ಬುವ ಪಾಪದಂತೆ’. ಕ್ಷಣ ಮಾತ್ರದಲ್ಲಿ ಯಾವ ಉಗ್ರ ಬೆಂಕಿಯ ಬಿಸಿಯೂ ಇಲ್ಲದೆ ರಾಮನಾಮಾಮೃತವನುಣ್ಣುತ್ತಲೇ ಇಹದ ವ್ಯಾಪಾರವನ್ನು ಮುಗಿಸಿಬಿಟ್ಟಿದ್ದೆ.

* * * * * * * * * * * * * * * *

‘ಓ ತಾಯೆ ಮಂಥರೆ’ ಎಂದು ಮುಖ ಕಿವುಚಿಕೊಂಡ ಭರತ ನೋವಿನಿಂದ. ಹೌದು ಪೂಜ್ಯಳೆ, ಒರಟಾದ ಗಂಧದ ಕೊರಡು ಬೆಂಕಿಯಲ್ಲಿ ಬಿದ್ದು ಇಡೀ ವಾತಾವರಣವನ್ನು ಸುಗಂಧಮಯವನ್ನಾಗಿ ಮಾಡಿದಂತೆ ನೀನು ಅಗ್ನಿಗಾಹುತಿಯಾಗಿ ನಿನ್ನ ಪ್ರೇಮದ ಅಮೃತಮಯ ಸೌಂದರ್ಯ ಪ್ರಭೆ ಲೋಕವಾವರಿಸುವಂತೆ ಮಾಡಿದೆ. ನಿನಗಿದೋ ನನ್ನ ನಮನ ತಾಯೆ’ ಎಂದ ಭರತ ನಿಧಾನವಾಗಿ ನದಿಯೆಡೆಗೆ ಇಳಿದ. ನಡು ಹೊಳೆಯವರೆಗೂ ನಡೆದು ಸೊಂಟದುದ್ದದ ನೀರಿನಲ್ಲಿ ನಿಂತು ಬೊಗೆಸೆ ಬೊಗಸೆಯಾಗಿ ನೀರನೆತ್ತಿ ಮಂಥರೆಗೆ ಅರ್ಪಣವನಿತ್ತನು. ಕೈಮುಗಿದು ಎಷ್ಟು ಹೊತ್ತು ಹಾಗೆಯೇ ನಿಂತಿದ್ದನೊ, ಯಾರೋ ಹಿಂದೆ ನಿಂತತೆ ಭಾಸವಾಗಿ ಕಣ್ತೆರೆದು ನೋಡಿದ. ದಡದಲ್ಲಿ ನಿಂತಿದ್ದ ಮಾರುತಿ, ಭರತ ತನ್ನೆಡೆಗೆ ನೋಡಿದ್ದನ್ನು ಮನಗಂಡು, ಬಾಗಿ ನಮಸ್ಕರಿಸಿ ‘ಮಹಾನುಭಾವನೆ, ನಿನ್ನ ಮಂಗಳಮೂರ್ತಿಯನ್ನು ಕಂಡು ನನ್ನ ಸ್ವಾಮಿಯನ್ನೆ ಕಂಡಂತಾಯಿತು. ಭರತ! ನನ್ನ ಸ್ವಾಮಿಯು ಯಾವಾಗಲೂ ನೆನಪಿಸಿಕೊಳ್ಳುತ್ತದ್ದ ಭರತಕುಮಾರ! ನಿನಗಿದೋ ನನ್ನ ಪ್ರಣಾಮಗಳು’ ಎಂದು ನಡುಬಾಗಿ ನಮಸ್ಕರಿಸಿದ ಮಾರುತಿಯನ್ನು ಕಂಡು ಭರತನು ‘ಎಲೈ ಮಹಾನುಭಾವನೆ ನೀನು ಯಾರು? ಯಾರು ನಿನ್ನ ಸ್ವಾಮಿ? ರಾಮನೆ ನನ್ನಣ್ಣನೆ?’ ಎಂದು ಸಂತೋಷ ಕುತೂಹಲಭರಿತನಾಗಿ ಪ್ರಶ್ನೆಗಳ ಸುರಿಮಳೆಗರೆದನು.

‘ರಾಮ, ಶ್ರೀರಾಮನೇ ನನ್ನ ಸ್ವಾಮಿ. ನಿನ್ನಣ್ಣನೇ ನನ್ನ ಸ್ವಾಮಿ. ಇಂದು ಸಂಜೆಯ ವೇಳೆಗೆ ಸೀತಾಮಾತೆ, ಲಕ್ಷ್ಮಣರೊಡಗೂಡಿ ಇಲ್ಲಿಗೆ ಬರುವವನಿದ್ದಾನೆ. ಅದನ್ನು ತಿಳಿಸಲೆಂದು ನನ್ನನ್ನು ಮುಂದಾಗಿಯೆ ಕಳುಹಿಸಿದರು’ ಎಂದು ನುಡಿಯಲು, ಭರತನು ತೆರೆದ ತೋಳನ್ನು ಹನುಮನೆಡೆಗೆ ಚಾಚಿ ‘ಬಾ ಮಿತ್ರ. ಬಾ. ಶುಭನುಡಿಯ ತಂದಿರುವೆ. ನಿನಗಿದೋ ನನ್ನ ಪ್ರಣಾಮಗಳು’ ಎಂದು ಬಾಚಿ ಅಪ್ಪಿಕೊಂಡ. ಮತ್ತೊಮ್ಮೆ ತಾಯಿ ಕೈಕೆಯ ಒಡಲೊಳಗೆ ಮಂಥರೆಯ ಪ್ರೇಮದ ಮಡಿಲೊಳಗೆ ಇಳಿದಾಡಿದ ಭಾವ ಭರತನಲ್ಲಿ ಸುಳಿದಾಡಿ, ಹೊಸಜನ್ಮ ಪಡೆದವನಂತೆ ಪುಳಕಗೊಂಡನು.

* * * * * * * * * * * *

Monday, August 13, 2012

ಬ್ರಾಹ್ಮನಾಯಿ-ಶೂದ್ರಕೋಳಿ

ಮನೆಗಳಲ್ಲಿ ಸಾಕುಪ್ರಾಣಿಗಳಿದ್ದರೆ, ಮನೆಯಲ್ಲಿನ ಮಕ್ಕಳು ಅವುಗಳೊಂದಿಗೆ ಕಾಲ ಕಳೆಯುವುದು ಹೆಚ್ಚು. ಪ್ರಾಣಿಗಳೊಂದಿಗೆ ಬೆಳೆಯುವ ಮಕ್ಕಳಲ್ಲಿ ಪ್ರಾಣಿ-ಪರಿಸರ ಪ್ರಜ್ಞೆ ಸಹಜವಾಗಿಯೇ ಬೆಳೆಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ, ಅದರಲ್ಲೂ ರೈತಕುಟುಂಬಗಳಲ್ಲಿ ಮಕ್ಕಳು ಸಹಜವಾಗಿಯೇ ಹತ್ತಾರು ಪ್ರಾಣಿಗಳ ಒಡನಾಟದಲ್ಲಿ ಬೆಳೆಯುತ್ತವೆ. ನಾವು ಚಿಕ್ಕವರಾಗಿದ್ದ ನಮ್ಮ ಅಜ್ಜಿ ಸಾಕಿದ್ದ ಕೋಳಿಗಳಲ್ಲಿ, ಒಂದೊಂದು ಕೋಳಿಗಳಿಗೆ ನಮ್ಮ ಹೆಸರಿಟ್ಟು ಅದರ ಉಸ್ತುವಾರಿ ನೋಡಿಕೊಳ್ಳುವಂತೆ ಮಾಡಿದ್ದರು. ನಾವು ಊಟದ ಕೊನೆಯಲ್ಲಿ ಸ್ವಲ್ಪ ಮುದ್ದೆ-ಅನ್ನ ಉಳಿಸಿ ನಮ್ಮ ಕೋಳಿಗಳಿಗೆ ಪ್ರತ್ಯೇಕವಾಗಿ ತಿನ್ನಿಸಲು ಪ್ರಯತ್ನಿಸುತ್ತಿದ್ದೆವು. ಕಡ್ಲೆಪುರಿ ತಿನ್ನಿಸಿದರೆ ಹೆಚ್ಚು ಕೊಬ್ಬಿ ಬೆಳೆಯುತ್ತವೆ ಎಂಬ ನಂಬಿಕೆಯಿಂದ, ವಾರಕ್ಕೊಮ್ಮೆ ಸಂತೆಯ ದಿನ ಮನೆಗೆ ತರುತ್ತಿದ್ದ ಪುರಿಗಡಲೆಯ ನಮ್ಮ ಭಾಗದಲ್ಲಿ ಒಂದಷ್ಟನ್ನು ಉಳಿಸಿ ಕೋಳಿಗಳಿಗೆ ತಿನ್ನಿಸುತ್ತಿದ್ದೆವು. ಸ್ವಲ್ಪ ದೊಡ್ಡವರಾದ ಮೇಲೆ ಒಂದೊಂದು ಟಗರು ಮರಿಯನ್ನು ನಾವು ಮುತುವರ್ಜಿ ವಹಿಸಿ ಸಾಕುವಂತೆ ನಮ್ಮ ಅಜ್ಜ-ಅಜ್ಜಿ ಏರ್ಪಾಡು ಮಾಡಿದ್ದರು. ಮನೆಯಲ್ಲಿದ್ದ ಮೂರು ನಾಯಿಗಳಲ್ಲಿ ಒಂದೊಂದನ್ನು ಒಬ್ಬರು ಹಂಚಿಕೊಂಡು, ನಮ್ಮವುಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದೆವು. ಹೀಗೆ ಸಾಕುತ್ತಿದ್ದ ಸಾಕು ಪ್ರಾಣಿಗಳು ಸಹ ಪರಸ್ಪರ ಸ್ನೇಹದಿಂದ ಇರುತ್ತಿದ್ದವು. ನಾಯಿ ನಾಯಿಗಳಿರಲಿ, ಬೆಕ್ಕು-ನಾಯಿಗಳು, ನಾಯಿ-ಕೋಳಿಗಳು ಪರಸ್ಪರ ಸ್ನೇಹದಿಂದ ಇರುವುದನ್ನು ನಾನು ನೋಡಿದ್ದೇನೆ. ನಮ್ಮ ಮನೆಯಲ್ಲಿದ್ದ ನಾಯಿ ಮತ್ತು ಬೆಕ್ಕು ಒಂದೇ ತಟ್ಟೆಯಲ್ಲಿ ಹಾಲು ಕುಡಿಯುತ್ತಿರುವ ಪೋಟೋ ಕೂಡಾ ತೆಗೆದಿಟ್ಟಿದ್ದೇನೆ. ನಾಯಿಯ ಬೆನ್ನ ಮೇಲೆ ಸವಾರಿ ಮಾಡುತ್ತಿರುವ ಕೋಳಿಯ ಚಿತ್ರಣ ಇನ್ನೂ ನನ್ನ ಮನಃಪಟಲದಲ್ಲಿ ಉಳಿದಿದೆ.

ಕವಿ ಕುವೆಂಪು, ರೈತಕುಟುಂಬದ ಹಿನ್ನೆಲೆಯಿಂದ ಬಂದವರು. ಅವರ ಕುಪ್ಪಳಿ ಮನೆಯಲ್ಲಿದ್ದ ನಾಯಿಗಳ ಸಂಖ್ಯೆ ಎರಡಂಕಿಗಿಂತ ಕಡಿಮೆಯಿರಲಿಲ್ಲ ಎಂಬುದು ಗಮನಾರ್ಹ. ಅವರು ನಾಯಿಗಳನ್ನು, ವಿಶೇಷವಾಗಿ ಬೇಟೆಯಲ್ಲಿ ಪಳಗಿದ್ದ ನಾಯಿಗಳನ್ನು ಹೆಚ್ಚು ಹಚ್ಚಿಕೊಳ್ಳುತ್ತಿದ್ದರು. ಅಂತಹ ಒಂದು ನಾಯಿ, ಹಂದಿಯಿಂದ ಗಾಯಗೊಂಡು ಮೃತಪಟ್ಟಾಗ ಅದಕ್ಕೆ ಒಂದು ಚರಮಗೀತೆಯನ್ನೂ ಕುವೆಂಪು ರಚಿಸಿರುವುದನ್ನು ನೋಡಿದ್ದೇವೆ. ಕಾನೂರು ಹೆಗ್ಗಡತಿಯಲ್ಲಿ, ಪುಟ್ಟಣ್ಣ ಸತ್ತ ನಾಯಿಯ ವಿಷಯದಲ್ಲಿ ತೋರುವ ಭಕ್ತಿ-ಗೌರವಗಳಲ್ಲಿಯೂ, ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಹುಲಿಯನ ಬಗೆಗಿನ ಗುತ್ತಿಯ ಪ್ರೇಮದಲ್ಲೂ ಕುವೆಂಪು ಅವರ ನಾಯಿಗಳ ಬಗೆಗಿನ, ಅವುಗಳ ’ಸೈಕಾಲಜಿ’ ಬೆಗೆಗಿನ ಅರಿವನ್ನು ಮನಗಾಣಬಹುದಾಗಿದೆ.
ಕುವೆಂಪು ಮೈಸೂರಿನ ಉದಯರವಿಯಲ್ಲಿದ್ದರೂ ಮಲೆನಾಡಿನ, ತಮ್ಮ ಮನೆಯ ಕನಸನ್ನೂ ಎಂದೂ ಬಿಟ್ಟವರಲ್ಲ. ತಮ್ಮ ಮನೆಯಲ್ಲಿ ಕೋಳಿ, ನಾಯಿ, ಹಸು, ಬೆಕ್ಕು ಮೊದಲಾದ ಸಾಕು ಪ್ರಾಣಿಗಳನ್ನು ಸಾಕುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಕೇವಲ ಸಾಕುಪ್ರಾಣಿಗಳನ್ನು ಮಾತ್ರವಲ್ಲದೆ, ಮನೆಯ ಮುಂದಿನ ಹೂದೋಟದಲ್ಲಿ ಬರುತ್ತಿದ್ದ ಹಕ್ಕಿ, ಅಳಿಲು ಮೊದಲಾದವುಗಳನ್ನು ಗಮನಿಸುತ್ತಿದ್ದರು. ಅವು ಮೊಟ್ಟೆ ಇಟ್ಟಾಗ, ಮರಿ ಮಾಡಿದಾಗ ಮಕ್ಕಳನ್ನು ಕರೆದು ತೋರಿಸುತ್ತಿದ್ದರು. ಒಮ್ಮೆ ದಾರಿಯಲ್ಲಿ ಇಲಿಯ ಬಿಲವೊಂದರಲ್ಲಿ ಅದು ಹೊರಗೆ ತಂದು ಹಾಕಿರುವ ಮಣ್ಣನ್ನು ತೋರಿಸಿ, ತೇಜಸ್ವಿ-ಚೈತ್ರರಿಗೆ ಇಲಿಯ ಬಿಲದ ಬಗ್ಗೆ ಆಸಕ್ತಿ ಮೂಡಿಸಿರುತ್ತಾರೆ. ಹುಡುಗಾಟದ ಈ ಇಬ್ಬರು, ತಂದೆ ಸ್ವಲ್ಪ ಮುಂದೆ ಹೋಗುತ್ತಿದ್ದ ಹಾಗೆ, ಆ ಇಲಿಯ ಬಿಲವನ್ನು ಮಣ್ಣಿನಿಂದ ಮುಚ್ಚಿ ಏನೂ ಆಗದವರಂತೆ ಮುಂದೆ ಹೋಗಿರುತ್ತಾರೆ. ಮಾರನೆಯ ದಿನ ಹೋದಾಗ, ಇಲಿಯ ಬಿಲದಲ್ಲಿ ಅವರು ಮುಚ್ಚಿದ್ದ ಮಣ್ಣು ಪಕ್ಕಕ್ಕೆ ಸರಿಸಿ, ಇಲಿ ರಾಜಾರೋಷವಾಗಿ ಓಡಾಡಿಕೊಂಡಿರುವುದು ಗಮನಕ್ಕೆ ಬರುತ್ತದೆ. ಆ ವಿಷಯ ಕುವೆಂಪು ಅವರ ಗಮನಕ್ಕೆ ಬಂದಾಗ, ಇನ್ನೊಮ್ಮೆ ಹಾಗೆ ಮಾಡಬಾರದೆಂದು ತಿಳಿಸಿ ಹೇಳುತ್ತಾರೆ. ಸ್ವತಃ ತೇಜಸ್ವಿಯವರೇ ಒಂದು ಕಡೆ, ನನಗೆ ಪ್ರಾಣಿ-ಪರಿಸರದ ಆಸಕ್ತಿಯನ್ನು ಮೊದಲು ಮೂಡಿಸಿದವರೇ ನನ್ನ ತಂದೆ ಎಂದು ಹೇಳಿದ್ದಾರೆ.

ಉದಯರವಿಯಲ್ಲಿ ಒಮ್ಮೆ ಸಾಕಲು ತಂದಿದ್ದ ಕೋಳಿಮರಿಗಳನ್ನು, ನಾಲ್ಕೂ ಜನ ಮಕ್ಕಳಿಗೆ ಒಂದೊಂದು ಎಂದು ಹೇಳಿ, ಅವುಗಳ ಯೋಗಕ್ಷೇಮವನ್ನು ಅವರವರೇ ನೋಡಿಕೊಳ್ಳುವಂತೆ ಮಾಡಿರುತ್ತಾರೆ. ಚೈತ್ರ ಮತ್ತು ಕಲಾ ಅವರದು ಹೇಟೆಗಳಾದರೆ, ತೇಜಸ್ವಿ ಮತ್ತು ತಾರಿಣಿಯವರದು ಹುಂಜಗಳು. ನಾಲ್ಕೂ ಜನ ಪೈಪೋಟಿಯಲ್ಲೇ ಕೋಳಿಗಳನ್ನು ಸಾಕುತ್ತಿರುತ್ತಾರೆ. ಕೋಳಿಗಳು ಕೊಬ್ಬಿ ಬೆಳೆಯಲಾರಂಭಿಸುತ್ತವೆ. ಹೇಟೆಗಳು ಮೊಟ್ಟೆ ಇಡಲಾರಂಭಿಸುತ್ತವೆ. ಮಕ್ಕಳಿಗೆ ಅದನ್ನು ಕಂಡು ಖುಷಿಯೋ ಖುಷಿ. ಅಂತಹ ಖುಷಿಯ ದಿನಗಳಲ್ಲಿ ಒಂದು ದಿನ (೧೦.೬.೧೯೫೦) ಮನೆಯ ಕೈತೋಟದಲ್ಲಿದ್ದ ಹಲಸಿನ ಮರದ, ಮೊದಲ ಹಣ್ಣನ್ನು ಕತ್ತರಿಸಿ, ದೇವರಿಗೆ ಅರ್ಪಿಸಿ, ತಾವೂ ತಿನ್ನುವ ಕಾರ್ಯದಲ್ಲಿ ಮನೆಯವರೆಲ್ಲ ಮುಳುಗಿರುತ್ತಾರೆ. ಸ್ವತಃ ಹೇಮಾವತಿಯವರು ಹಲಸನ್ನು ಕತ್ತರಿಸುತ್ತಿದ್ದರೆ, ಕುವೆಂಪು ಹಾಗೆ ಹೀಗೆ ಎಂದು ಸಲಹೆ ಕೊಡುತ್ತಿರುತ್ತಾರೆ. ತೇಜಸ್ವಿ-ಚೈತ್ರ ಹೊರಗೆ ಆಡಲು ಹೋಗಿರುತ್ತಾರೆ. ತಾರಿಣಿ-ಕಲಾ ಇಬ್ಬರೂ ತಾಯಿಗೆ ಸಹಕರಿಸುತ್ತಿರುತ್ತಾರೆ. ದೇವರಿಗೆ ಅರ್ಪಣೆಯಾಗಿ, ಇನ್ನೇನು ತೊಳೆಯನ್ನು ಬಿಡಿಸ ಬಾಯಿಗಿಡಬೇಕು ಎನ್ನುವಷ್ಟರಲ್ಲಿ, ಹೊರಗಡೆ, ಒಮ್ಮೆಲೆ ಎಲ್ಲಾ ಕೋಳಿಗಳು ಕೂಗಲಾರಂಬಿಸುತ್ತವೆ. ಮನೆಯ ಒಳಗಿದ್ದವರು, ಹೊರಗಿದ್ದವರು ಎಲ್ಲರೂ ಒಮ್ಮೆಲೆ ಧಾವಿಸಿ ಬರುತ್ತಾರೆ. ನಾಯಿಯೊಂದು ಕೋಳಿಯನ್ನು ಹಿಡಿದುಬಿಟ್ಟಿರುತ್ತದೆ. ಅದು ಅವರ ಮನೆಯ ಸಾಕು ನಾಯಿಯಲ್ಲ. ಮನೆಯ ಸಾಕು ನಾಯಿಯ ಜೊತೆ ಕೋಳಿಗಳು ಸಲುಗೆಯಿಂದಲೇ ವರ್ತಿಸುತ್ತಿದ್ದವು. ಈಗ ಹಿಡಿದಿರುವುದು ಯಾವುದೊ ಕಂತ್ರಿನಾಯಿ. ಕಲಾ-ತಾರಿಣಿ ಇಬ್ಬರು ನನ್ನ ಕೋಳಿ ಹೋಯಿತು ಎಂದು ರೋಧಿಸುತ್ತಿರುತ್ತಾರೆ. ಸೇರಿದ್ದವರೆಲ್ಲರ ಕೂಗಾಟದ ನಡುವೆ, ಚೈತ್ರ-ತೇಜಸ್ವಿ ಬರುವಷ್ಟರಲ್ಲಿ, ಕುವೆಂಪು ಅವರೇ ನಾಯಿಯ ಬೆನ್ನು ಹತ್ತುತ್ತಾರೆ. ಅದು ಹಿಂದಿನ ಮನೆಯ ಕಡೆ ನುಗ್ಗುತ್ತದೆ. ಅವರ ಮನೆಯವರು ಹೊರಗೆ ಬಂದು ನಿಂತಿರುತ್ತರಾದರೂ, ನಾಯಿಯನ್ನು ಗದರಿಸುವ, ಕೋಳಿಯನ್ನು ಬಿಡಿಸುವ ಗೋಜಿಗೆ ಹೋಗದೆ, ಕೋಳಿ ಹಿಡಿದಿರುವ ನಾಯಿಯ ಬೆನ್ನು ಅಟ್ಟಿರುವ ಕುವೆಂಪು ಅವರನ್ನು ನೋಡುತ್ತಾ, ನಗುತ್ತಾ ಮೋಜನ್ನು ಅನುಭವಿಸುತ್ತ ನಿಂತಿರುತ್ತಾರೆ. ಅಷ್ಟರಲ್ಲಿ ನಾಯಿ ಅವರ ಮನೆಯೊಳಗೇ ನುಗ್ಗಲಾರಂಭಿಸುತ್ತದೆ. ನಾಯಿ ಕೋಳಿ ಹಿಡಿದು ಅವರ ಮನೆಯೊಳಗೆ ನುಗ್ಗುವ ಹಾಗೆ ಮುಂದುವರೆಯುತ್ತದೆ. ಅವರು ಬ್ರಾಹ್ಮಣರಾದ್ದರಿಂದ, ಕಲ್ಲು ಹೊಡೆದು, ನಾಯಿಯನ್ನು ಬೆದರಿಸಿ, ಓಡಿಸುವ ಹಾಗೂ ಕೋಳಿ ಬಿಡಿಸುವ ಯಾವ ಸಾಹಸಕ್ಕೂ ಅವರು ಕೈಹಾಕುವುದಿಲ್ಲ. ನಾಯಿ ಆ ಮನೆಯೊಳಗೆ ನುಗ್ಗುವಷ್ಟರಲ್ಲಿ ಅದನ್ನು ಬೆನ್ನು ಹತ್ತಿದ್ದ ಕುವೆಂಪು ಅಡ್ಡ ಬಂದಿದ್ದರಿಂದ, ನಾಯಿ ಗಾಬರಿಯಾಗಿ ಕೋಳಿಯನ್ನು ಅಲ್ಲೇ ಬಿಟ್ಟು ಆ ಮನೆಯ ಕಾಂಪೋಂಡು ನೆಗೆದು ಓಡಿ ಹೋಗಿರುತ್ತದೆ. ಅಷ್ಟರಲ್ಲಾಗಲೇ ಕೋಳಿ ತನ್ನ ಕೊನೆಯ ಉಸಿರನ್ನೆಳೆದಿರುತ್ತದೆ. ಕುವೆಂಪು ಆ ಕೋಳಿಯನ್ನು ಹಿಡಿದು ಮನೆಯ ಕಡೆ ಹೆಜ್ಜೆ ಹಾಕುತ್ತಾರೆ. ಅಷ್ಟರಲ್ಲಿ ತೇಜಸ್ವಿ-ಚೈತ್ರರೂ ಬರುತ್ತಾರೆ. ಸತ್ತಿರುವುದು ತಾರಿಣಿ ಸಾಕುತ್ತಿದ್ದ ಕೋಳಿ ಎಂದು ತಿಳಿದಾಗ, ತಾರಿಣಿಯ ದುಃಖ ಹೆಚ್ಚಾಗುತ್ತದೆ. ಅಳುತ್ತಾ, ನಾಯಿಯನ್ನು ಶಪಿಸುತ್ತಾ ತಾರಿಣಿ ರೋಧಿಸುತ್ತಾರೆ. ಇನ್ನುಳಿದವರು ಸಧ್ಯ ನಮ್ಮ ಕೋಳಿ ಸಿಕ್ಕಿಹಾಕೊಳ್ಳಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುತ್ತಾರೆ. ಪ್ರೀತಿಯಿಂದ ಸಾಕಿದ್ದ ಕೋಳಿ ಸತ್ತು, ತುಳಸಿಕಟ್ಟೆಗೆ ಅನತಿ ದೂರದಲ್ಲಿ ನಿಷ್ಪಂದವಾಗಿ ಬಿದ್ದಿದ್ದನ್ನು ಕಂಡು ತಾರಿಣಿ ಅಳುತ್ತಲೇ ಇರುತ್ತಾರೆ. ಮಗಳ ಅಳುವನ್ನು ನಿಲ್ಲಿಸಲು, ಕುವೆಂಪು ಅವರು ದೇವರ ಮನೆಗೆ ಹೋಗಿ ಹೂವೊಂದನ್ನು ತಂದು, ಆ ಸತ್ತಕೋಳಿಯ ಮೇಲೆ ಇಟ್ಟು, ’ಅಳಬೇಡ, ನಿನ್ನ ಕೋಳಿ ದೇವರ ಹತ್ತಿರ ಹೋಯಿತು’ ಎಂದು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ. ಆದರೆ ತಾರಿಣಿಯ ದುಃಖವೇನು ಕಡಿಮೆಯಾಗುವುದಿಲ್ಲ. ಕೊಯ್ದು ಇಟ್ಟಿದ್ದ ಹಲಸಿನ ತೊಳೆ ಹಾಗೆಯೇ ಉಳಿದುಬಿಡುತ್ತದೆ.

ಅದೇ ದಿನ ಸಂಜೆ ಎಳುಗಂಟೆಯ ಹೊತ್ತಿಗೆ ಕುವೆಂಪು ಮಗಳನ್ನು ಕರೆದು, ಪಕ್ಕದ ಕುರ್ಚಿಯಲ್ಲಿ ಕೂರಿಸಿಕೊಂಡು ಅಂದು ಬರೆದಿದ್ದ ಕವಿತೆಯನ್ನು ಓದುತ್ತಾರೆ. ಆ ಪದ್ಯದ ಅರ್ಥ ಎಷ್ಟು ಅರ್ಥವಾಯಿತೊ ಇಲ್ಲವೊ ತಾರಿಣಿಗೆ ಮಾತ್ರ ಸಮಾಧಾನವಾಗುತ್ತದೆ. ತನ್ನ ಪ್ರೀತಿಯ ಕೋಳಿಯ ಮೇಲೆ ಬರೆದಿದ್ದ ಪದ್ಯದ ದೆಸೆಯಿಂದ ಆಕೆಯ ದುಃಖ ಕಡಿಮೆಯಾಗುತ್ತದೆ. ಆ ಕವಿತೆಯ ಶೀರ್ಷಿಕೆ ’ಬ್ರಾಹ್ಮನಾಯಿ-ಶೂದ್ರಕೋಳಿ’. ಅದು ’ಪ್ರೇತ-ಕ್ಯೂ’ ಕವನಸಂಕಲನದಲ್ಲಿ ’ಸಂಭವಿಸಿದ ಒಂದು ಘಟನೆಯಿಂದ ಪ್ರೇರಿತ’ ಎಂಬ ಅಡಿಟಿಪ್ಪಣಿಯೊಂದಿಗೆ ಪ್ರಕಟವಾಗಿದೆ.

ಪದ್ಯದ ಮೊದಲ ಭಾಗದಲ್ಲಿ ಅವರ ಮನೆಯಲ್ಲಿದ್ದ ಕೋಳಿ, ಅದನ್ನು ಹಿಡಿಯಲು ಹೊಂಚುತ್ತಿದ್ದ ಕಂತ್ರಿನಾಯಿ, ಹಾಗೂ ತಮ್ಮನೆಯ ನಾಯಿ ಮತ್ತು ಕೋಳಿಯಲ್ಲಿದ್ದ ಸ್ನೇಹದ ವಿಷಯ ಬರುತ್ತದೆ. ಎರಡನೆಯ ಭಾಗದಲ್ಲಿ ಅಂದು ನಡೆದ ಘಟನೆಯ ಚಿತ್ರಣವಿದ್ದರೆ, ಮೂರನೆಯ ಭಾಗದಲ್ಲಿ, ತನ್ನ ಕೋಳಿಯ ಸಾವಿಗಾಗಿ ಮರುಗುವ ಪುಟ್ಟಹುಡುಗಿಯ ಚಿತ್ರಣ ಮತ್ತು ನಾಯಿಯನ್ನು ಗದರಿಸಿ ಕೋಳಿಯನ್ನು ಉಳಿಸಬಹುದಾದರೂ, ಆ ನಿಟ್ಟಿನಲ್ಲಿ ಏನನ್ನೂ ಮಾಡದೇ ಇದ್ದರೂ, ಇಡೀ ಘಟನೆಯನ್ನು ಮೋಜು ಎಂಬಂತೆ ನೋಡಿ ನಗುತ್ತಿದ್ದವರ ಚಿತ್ರಣವಿದೆ.

ಶೂದ್ರಕೋಳಿ ಮೇಯುತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮನಾಯಿ ಹೊಂಚುತಿತ್ತು
ಅಲ್ಲಿ ಇಲ್ಲಿ.
ಶೂದ್ರಕೋಳಿಗೇನು ಗೊತ್ತು,
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮ ಮೇಯುತಿತ್ತು.
ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನಪಟ್ಟೆ;
ಒಡಲಿನಲ್ಲಿ ಖಾಲಿಹೊಟ್ಟೆ!
ಮೆಲ್ಲ ಮೆಲ್ಲ ಸುಳಿದು ಸುತ್ತಿಹತ್ತೆ ಬಂತು;
ಸಾಧು ಎಂದು ಶೂದ್ರಕೋಳಿ
ನೋಡೆ ನಿಂತು,
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾರ್ವವೀಡಿನೊಂದು ಗೋಡೆ
ರಕ್ಷೆಯಾಯ್ತು:
ಪಾರ್ವನಾಯ್ಗೆ ಶೂದ್ರಕೋಳಿ
ಭಕ್ಷ್ಯವಾಯ್ತು!
ಮರಿಯತನದಿ ಮೊದಲುಗೊಂಡು
ಸಾಕಿ ಸಲಹಿ ಒಲಿದ ತನ್ನ
ಪುಟ್ಟ ಮುದ್ದು ಹುಂಜಗಾಗಿ,
ಕರುಣ ತುಂಬಿದೆದೆಯ ದೇವಿ,
ಗೊಳೋ ಎಂದು ಹುಡುಗಿಯೊಂದು
ಅಳುತಲಿತ್ತು.
’ಶುದ್ಧ ಶೂದ್ರ ಹುಡುಗಿ’ ಎಂದು
ಹಾರ್ವನೊಡನೆ ಹಾರ್ತಿ ನಿಂದು,
ಕೇಳಿಗಾಗಿ ಗೇಲಿ ಮಾಡಿ
ಬೀದಿ ಬಾಗಿಲಲ್ಲಿ ಕೂಡಿ
ಬ್ರಾಹ್ಮವೃಂದ ಚೆಂದ ನೋಡಿ
ನಗುತಲಿತ್ತು!

ಪದ್ಯವನ್ನು ಕೇಳಿ ಪುಟ್ಟ ಬಾಲಕಿಗೆ ತನ್ನ ಪ್ರೀತಿಯ ಹುಂಜದ ಸಾವಿನ ದುಃಖದ ತೀವ್ರತೆ ಕಡಿಮೆಯಾಗುತ್ತದೆ. ಅದನ್ನು ಕುರಿತು ತಾರಿಣಿಯವರು ಹೀಗೆ ಹೇಳಿದ್ದಾರೆ. ನನ್ನ ಕೋಳಿ ಬಗ್ಗೆ ತಂದೆಯವರು ಕವನ ಬರೆದದ್ದು ಮನಸ್ಸಿನ ದುಃಖ ಕಡಿಮೆ ಮಾಡಿತು. ಅದಕ್ಕೆ ಸಂದಿರುವ ಗೌರವಕ್ಕೆ ಹೆಮ್ಮೆಯಾಯಿತು. ತುಂಬ ಪ್ರೀತಿಯಿಂದ ಸಾಖಿದ ಕೋಳಿಯ ದುರಂತ ಅಂತ್ಯದ, ದುಃಖ ವೇದನೆಗಳು ಕಡಿಮೆಯಾದವು. ಚೈತ್ರ-ತೇಜಸ್ವಿ ಅನೇಕ ದಿನಗಳವರೆಗೆ ಆ ನಾಯಿಗೆ ಸರಿಯಾಗಿ ಚಚ್ಚಬೇಕೆಂದು ಹುಡುಕುತ್ತಿದ್ದರು. ಆದರೆ ಪರಮಕುತಂತ್ರಿ ನಾಯಿ ಅವರಿಗೆ ಕಾಣಲು ಸಿಗುತ್ತಿರಲಿಲ್ಲ. ಇನ್ನುಮುಂದೆ ನಮ್ಮ ಮನೆಯಲ್ಲಿ ಕೋಳಿ ಮರಿ ತರುವುದನ್ನು ನಿಲ್ಲಿಸಿದರು. ನನ್ನ ದುಃಖ ಅಳುವಿನಿಂದಾಗಿ ಅಂದಿಗೆ ನಮ್ಮ ಕೋಳಿ ಸಾಕಣೆಗೆ ಪೂರ್ಣವಿರಾಮವಾಯಿತು.
ಕೋಳಿ ಸಾಕುವುದನ್ನು ಇವರು ನಿಲ್ಲಿಸಿರಬಹುದು. ಆದರೆ ಹಲಸಿನ ಮರ ಹಣ್ಣು ಕೊಡುವುದನ್ನು ನಿಲ್ಲಿಸಿಲ್ಲ. ಪ್ರತಿವರ್ಷ ಹಣ್ಣು ಕತ್ತರಿಸುವಾಗಲೆಲ್ಲಾ, ನನ್ನ ಕೋಳಿಯ ಅಂತ್ಯದ ದುರಂತ ಘಟನೆಯೊಂದಿಗೆ ತಂದೆಯವರು ಬರೆದ ಕವನ ಇಂದಿಗೂ ನೆನಪಾಗುವುದು ಎನ್ನುತ್ತಾರೆ ತಾರಿಣಿಯವರು.

Monday, August 06, 2012

ಹೆಸರಿಟ್ಟು ಹರಸುವೆನು ಚೈತ್ರನಂ


೧೯೪೧ನೆಯ ಇಸವಿ. ಜಗತ್ತನ್ನು ಎರಡನೆಯ ಮಹಾಯುದ್ಧದ ಕಾರ್ಮೋಡಗಳು ಆವರಿಸಿದ್ದ ದಿನಗಳು. ಇತ್ತ ಮೈಸೂರು ವಿಶ್ವವಿದ್ಯಾಲಯ ಮಾತ್ರ ತನ್ನ ಜ್ಞಾನಪ್ರಸಾರದ, ಸಾಹಿತ್ಯ ಪ್ರಚಾರದ, ಕನ್ನಡ ಕಾಯಕದ ಕರ್ತವ್ಯಕ್ಕೆ ಕಿಂಚಿತ್ತೂ ಚ್ಯುತಿ ಬರದ ರೀತಿಯಲ್ಲಿ ಶ್ರೀಕಾರ್ಯೋನ್ಮುಖವಾಗಿತ್ತು. ಆ ವರ್ಷದ ಮೇ ತಿಂಗಳ ಮೊದಲವಾರದಲ್ಲೇ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ (ಆಗಿನ್ನು ಪ್ರಸಾರಾಂಗ ಎಂಬ ಹೆಸರು ಬಂದಿರಲಿಲ್ಲವಂತೆ) ಸಾಗರದಲ್ಲಿ ವಸಂತ ಸಾಹಿತ್ಯೋತ್ಸವ ಏರ್ಪಡಿಸಿತ್ತು. ಅದರಲ್ಲಿ ಭಾಗವಹಿಸಲು ಪ್ರೊ. ವೆಂಕಣ್ಣಯ್ಯ, ತೀನಂಶ್ರೀ, ಎ.ಎನ್.ಮೂರ್ತಿರಾವ್ ಮೊದಲಾದವರೊಂದಿಗೆ ಕುವೆಂಪು ಶಿವಮೊಗ್ಗಕ್ಕೆ ಬಂದು ಉಳಿದಿದ್ದರು. ಶಿವಮೊಗ್ಗದಲ್ಲಿಯೇ ಅವರ ಶ್ರೀಮತಿ ತಮ್ಮ ತವರು ಮನೆಯಲ್ಲಿ ಎರಡನೆಯ ಹೆರಿಗೆಗಾಗಿ ಬಂದಿದ್ದರು. ಮೇ ೨ನೆಯ ತಾರೀಖು ಬೆಳಗಿನ ಜಾವ ೪.೪೫ಕ್ಕೆ ಶ್ರೀಮತಿ ಹೇಮಾವತಿಯವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಪುತ್ರೋತ್ಸವದ ಸಂತೋಷದಲ್ಲಿ ಮುಳುಗೇಳುತ್ತಿದ್ದ ಕುವೆಂಪು, ಏನೂ ಆಗದವರಂತೆ ನಿಗದಿತವಾಗಿದ್ದ ಪ್ರವಾಸ ಕಾರ್ಯಕ್ರಮವೊಂದಕ್ಕೆ ಹೊರಟೇ ಬಿಡುತ್ತಾರೆ. ತೀನಂಶ್ರೀ, ಮೂರ್ತಿರಾವ್ ಮೊದಲಾದ ಗೆಳೆಯರೊಂದಿಗೆ, ಮಾನಪ್ಪನವರ ಸಾರಥ್ಯದಲ್ಲಿ ಶಿವಮೊಗ್ಗಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿದ್ದ ತುಂಗಾ ನದಿಯ ಏಳುಸೀಳು ಎಂಬಲ್ಲಿಗೆ ಹೋಗಿ ಈಜುವ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ವೆಂಕಣ್ಣಯ್ಯ ಮತ್ತು ಒಂದಿಬ್ಬರು ನೀರಿಗಳಿಯದೆ ಹೊಳೆಯ ದಡದಲ್ಲಿ ಕುಳಿತು ಹರಟುತ್ತಿರುತ್ತಾರೆ. ನೀರಿಗಿಳಿದವರಲ್ಲಿ ಕೆಲವರು ಸ್ವಲ್ಪ ಹೊತ್ತು ಈಜಾಡಿ ಮೇಲೆ ಬಂದು ಕುಳಿತವರೊಡನೆ ಸೇರಿಕೊಳ್ಳುತ್ತಾರೆ. ಆಗ ಬಹುಶಃ ಮಾನಪ್ಪನವರಿಂದ, ಅಂದು ಬೆಳಗಿನ ಜಾವ ಕುವೆಂಪು ಅವರಿಗೆ ಪುತ್ರೋತ್ಸವಾಗಿದ್ದ ವಿಚಾರ ಎಲ್ಲರಿಗೂ ತಿಳಿಯುತ್ತದೆ. ಅಲ್ಲಿ ನೆರೆದಿದ್ದವರಿಗೆಲ್ಲಾ ಆಶ್ಚರ್ಯವಾಗಿತ್ತು. ಬೆಳಗಿನ ಜಾವ ಪುತ್ರ ಜನನವಾದ ಸುದ್ದಿ ತಿಳಿದು ಏನೂ ಆಗಿಲ್ಲ ಎಂಬಂತೆ ಎಲ್ಲರೊಡನೆ ಈಜಲು ಬಂದ ಕವಿಯ ವರ್ತನೆ ಎಲ್ಲರಿಂದಲೂ ತರಾಟಗೆ ಒಳಗಾಯಿತು. ತೀನಂಶ್ರೀಯವರು ’ಪುಟ್ಟಪ್ಪ, ನಿಮ್ಮ ಧೈರ್ಯವೇ ಧೈರ್ಯ ಬಿಡಿ ಎಂದು ಕವಿಯ ಔದಾಸೀನ್ಯವನ್ನು ಛೇಡಿಸಿದ್ದರಂತೆ!
ಕವಿಯ ಬಾಹ್ಯ ವರ್ತನೆಯಲ್ಲಿ ಬೇಜವಾಬ್ದಾರಿ ಇದ್ದಿತಾದರೂ, ಅಂತರಂಗದಲ್ಲಿ ಮಾತ್ರ ಆಗಿರಲಿಲ್ಲ. ಕವಿಯೇ ಹೇಳುವಂತೆ ಮೇಲುನೋಟಕ್ಕೇನೊ ನನ್ನ ವರ್ತತನೆ ಹಾಗೆ ಕಾಣಿಸಿತ್ತಾದರೂ ನನ್ನ ಮಗನ ಜನನದ ವಿಚಾರದಲ್ಲಿ ನಾನು ಅಷ್ಟೇನೂ ನಿಷ್ಕಾಮನೂ ಉದಾಸೀನನೂ ಆಗಿರಲಿಲ್ಲ. ಅದಕ್ಕೆ ’ಕೋಕಿಲೋದಯ ಚೈತ್ರ’ ಎಂದು ಅವನು ಹುಟ್ಟಿದ ಮರುದಿನ ೩.೫.೧೯೪೧ರಂದು ಹಾಗೂ ಅವನನ್ನು ತೊಟ್ಟಿಲಿಗೆ ಹಾಕಿ ಹೆಸರಿಟ್ಟ ದಿನ ೧೨.೫.೧೯೪೧ರಂದು ’ಹೆಸರಿಟ್ಟು ಹರಸುವೆನು ಚೈತ್ರನಂ’ ಎಂದು ಬರೆದಿರುವ ಕವನಗಳೇ ಸಾಕ್ಷಿ ಎನ್ನುತ್ತಾರೆ.
ಬಂದನಿದೊ ಕೋಕಿಲೋಲ್ಲಾಸ ಚೈತ್ರಂ, ಕವಿಯ
ಜೀವನ ಸುಖ ವಹಿತ್ರಂ. ಆಗಮನ ಸಂಭ್ರಮಕೆ
ಸಮೆದಿಹಳ್ ಲೋಕಮಾತೆಯೆ ವಸಂತೋದಾರ
ಸಹ್ಯಸೀಮೆಯ ವಿಪಿನರಂಗಮಂ.
ಎಂದು ಕವಿತೆ ಆರಂಭವಾಗುತ್ತದೆ. ಮೇ ಮೊದಲ ವಾರವೆಂದರೆ ವಸಂತಕಾಲದ ಸಂಭ್ರಮದ ಕಾಲ. ಕವಿಪುತ್ರನ ಜನನನ್ನಕ್ಕಾಗೆ ಲೋಮಮಾತೆ ಸಹ್ಯಾದ್ರಿಯ ವನರಂಗದಲ್ಲಿ ವಸಂತೋತ್ಸವವನ್ನು ನಡೆಸುತ್ತಿದ್ದಾಳೆ. ಮುಂದೆ ವಸಂತದ ವರ್ಣನೆ ಬರುತ್ತದೆ. ಅಂತಹ ವಸಂತಕಾಲದಲಿ ಜನಿಸಿದ ಪುತ್ರನಿಗೆ ಕೋಕಿಲೋದಯ ಚೈತ್ರ ಎಂಬ ಹೆಸರನ್ನು ಕವಿ ಟಂಕಿಸುತ್ತಾರೆ. ಮಗನ ಸ್ವಾಗತಕ್ಕೆ ಹೊಂಗೆ, ನೆಳಲ ನೆಯ್ಯುವ ಪಸುರ ಪೊಸತಳಿರುಡುಗೆಯನುಟ್ಟು, ತನ್ನ ಪಾದಕೆ ತಾನೆ ಕುಸುಮ ಧವಳಾಕ್ಷತೆಯ ರಂಗವಲ್ಲಿಯನಿಕ್ಕಿ ಸಿದ್ಧವಾಗಿತ್ತಂತೆ! ಹಳದಿಯ ಸಾಲ್ಮರ ಹೊನ್ನರಿಲ ಸೇಸೆಯ ಸೂಸಿ ಶುಭಕೋರಿ ಆಶೀರ್ವದಿಸಿತ್ತಂತೆ!
ಉಲಿಯಿರೈ,
ಮಲೆಯ ನೋಟದ ಚೆಲ್ವು ತಾಂ ಬೀಣೆಯಾಗಲಾ
ಶಾಂತಿ ಮೌನದ ತಂತಿಯಂ ಮೀಂಟೆ ಮಿಡಿಯುತ್ತೆ
ಕವಿಗೆ ರಸರೋಮಾಂಚನವನೀವ, ಓ ಮಲೆಯ
ಗರಿವೆತ್ತ ರಸಿಕರಿರ, ಮುಂದೆ ನಿಮ್ಮೊಡನುಲಿವ
ಗಿರಿವನಪ್ರಿಯ ಸಖನ ಪುಣ್ಯ ಜನ್ಮೋತ್ಸವಂ
ಸಂಭವಿಸಿತಿಂದು!
ಎಂದು ಸಂಭ್ರಮಿಸುತ್ತಾರೆ. ತ್ರಿಮೂರ್ತಿಗಳು ತಮ್ಮ ತಮ್ಮ ಹೆಂಡತಿಯರ ಜೊತೆಯಲ್ಲಿ ಬಂದು ಕಂದನನ್ನು ಆಶೀರ್ವದಿಸಬೇಕೆಂದು ಬಯಸುತ್ತಾರೆ. ಜೊತೆಗೆ ತಮ್ಮ ಗುರುಗಳು, ಕವಿಗಳು ಬರಬೇಕೆನ್ನುತ್ತಾರೆ.
ಬಲ್ಲ
ಋಷಿಗಳುಂ, ಮತ್ತೆಲ್ಲ ಗುರುಗಳುಂ, ಮೇಣಖಿಲ
ಕವಿಗಳುಂ ಸರ್ವದೇವತೆಗಳುಂ ಬಂದಿಲ್ಲಿ
ಹರಸುತಿರೆ ದಿವ್ಯ ಕಂದನ ಜೀವಮಾನಮಂ,
ನೀಡುತಿರೆ ತಮ್ಮ ತಮ್ಮಾತ್ಮೀಯ ದಾನಮಂ,
ನಾನೀವೆನಿದೊ ನಿನಗೆ ಈ ಪ್ರೀತಿತಾನಮಂ,
ಮಂತ್ರಛಂದಃಪೂರ್ಣ ಕವಿಹೃದಗಾನಮಂ!
ಎಂದು ಮಗನಿಗೆ ಮೊದಲ ಕಾಣಿಕೆಯ ಕವನಪುಷ್ಪವನ್ನು ಅರ್ಪಿಸುತ್ತಾರೆ. ಅಲ್ಲಿಂದ ಹತ್ತು ದಿನಗಳ ನಂತರ ಮಗಿವಿಗೆ ನಾಮಕರಣವಾಗುತ್ತದೆ. ಕವಿ ಮಗ ಹುಟ್ಟಿದಂದೇ ಕೋಕಿಲೋದಯ ಚೈತ್ರ ಎಂದ ಹೆಸರಿಟ್ಟುಬಿಟ್ಟಿರುತ್ತಾರೆ. ಅಂದು ಸಹ ಅದೇ ಹೆಸರನ್ನು ಮಗನಿಗಿಟ್ಟು ಹರಸುತ್ತಾರೆ ’ಹೆಸರಿಟ್ಟು ಹರಸುವೆನು ಚೈತ್ರನಂ’ ಎಂಬ ಕವಿತೆಯ ಮೂಲಕ. ವಸಂತಸಂಭ್ರದಲ್ಲಿ ಹುಟ್ಟಿದ ಮಗನಾದ್ದರಿಂದ, ಮತ್ತೆ ವಸಂತದ ವರ್ಣನೆ ಕವಿತೆಯಾರಂಭದಲ್ಲಿ ತೆರೆದುಕೊಳ್ಳುತ್ತದೆ. ಆದರೆ ಆ ಸಂಭ್ರಮವೆಲ್ಲಾ ಮಗನ ನಾಮಕರಣಕ್ಕಾಗಿಯೇ! 'ಪೊಸಮಲರ ಕಂಪಾಂತ ತಂಬೆಲರ ಸೊಂಪು, ಮಲ್ಲಿಗೆ ಹೊದರಿನಲ್ಲಿ ಮಡಿವಳ ಹಕ್ಕಿಯ ಸಂಗೀತ, ಜಗದ ಜಡನಿದ್ದೆಯಂ ಬಡಿದೆಚ್ಚರಿಸುವಂತೆವೋಲ್ ಬಡಿದುಕೊಳ್ಳುತ್ತಿರುವ ಕ್ರೈಸ್ತ ದೇವಾಲಯದ ಗಂಟೆ' ಇವುಗಳ ನಡುವೆಯೇ ಮಗನ ನಾಮಕರಣ ನಡೆಯುತ್ತದೆ.
ತೇಜಸ್ವಿ ಸೋದರನೆ,
ಹೇಮಾಂಗಿನಿಯ ತನೂಭವನೆ, ಹೇ ನನ್ನಾತ್ಮ
ನವ್ಯತಾ ದೇವತಾ ಪ್ರತ್ಯಕ್ಷರೂಪಿ, ಓ
ಕೋಕಿಲೋದಯ ಚೈತ್ರ, ಹರಸುವೆನು ಹೆಸರಿಟ್ಟು,
ಹೆಸರಿನ ಹಿರಿಮೆ ಉಸಿರಿಗೂ ಬರಲಿ ಎಂದೊಲಿದು
ಬಯಸಿ:
ಮಗನನ್ನು ಆಶೀರ್ವದಿಸುತ್ತಾರೆ. ವಿಂಧ್ಯ ಸಹ್ಯಾದ್ರಿ ಮಲಯ ಪರ್ವತಗಳು, ಗಂಗಾ ಯಮುನ ತುಂಗಭದ್ರಾ ನದಿಗಳು ನಿನಗಕ್ಕೆ ಭಾರತದ ಬಾಲ್ಯದಾಡುಂಬೊಲದ ಸಂಗಾತಿಗಳ್! ಎನ್ನುತ್ತಾರೆ.
ಸರ್ವಲೋಕ ಶೈಲೇಶ್ವರಂ
ನಿನಗಕ್ಕೆ ತಾಂ ಪ್ರತಿಸ್ಪರ್ಧಿ, ಹೈಮಾಚಲಂ,
ಧವಳಗಿರಿ ಶಿರವರೇಣ್ಯಂ, ಮಾನಸ ಸರೋ
ಜನ್ಮ ಮಹಿಮಂ! ಶ್ವಾಸಕೋಶಗಳಕ್ಕೆ ನಿನಗೆ
ಸಾಗರಾಕಾಶಂಗಳ್!
ತನ್ನ ಕಂದನಿಗೆ ಶಂಕರರ ಶ್ರೀಬುದ್ಧಿ, ರಾಮಾನುಜರ ಹೃದ, ಕ್ರಿಸ್ತ ಬುದ್ಧರ ಮಹಾಸಾತ್ವಿಕ ಕೃಪಾಸ್ಥೈರ್ಯ, ಗಾಂಧಿಯ ದಯಾ ಧೈರ್ಯ, ಶ್ರೀರಾಮಕೃಷ್ಣ ಮತ್ತು ವಿವೇಕನಂದರ ಧರ್ಮದೌದಾರ್ಯದ ಸಮಸ್ತ ಶ್ರೇಯಸ್ಸುಗಳು ಬಂದು ಆಶೀರ್ವದಿಸಬೇಕೆಂದು ಬಯಸುತ್ತಾರೆ.  ಮುಂದುವರೆದು,
ನಿಖಿಲ ಭುವನ ಶ್ರೇಷ್ಠ ಗಾಯಕರ್
ಶಿಲ್ಪಿಗಳ್ ವರ್ಣಶಿಲ್ಪಿಗಳೆಲ್ಲರೈತಂದು
ತಂತಮ್ಮ ದಿವ್ಯಕಲೆಯಂ ಪ್ರಚೋದಿಸಲಿ ಮೇಣ್
ಪ್ರಿಯದಿಂ ಪ್ರತಿಷ್ಠಿಸಲಿ ಈ ನನ್ನ ಚಿಣ್ಣನೀ
ಕೋಕಿಲೋದಯ ಚೈತ್ರನಾತ್ಮಮಂದಿರದಮೃತ
ಪೀಠದಲಿ!
ಇಲ್ಲಿಯವರೆಗೆ ಮಗನ ಭವಿಷ್ಯತ್ತಿಗೆ ಆಶೀರ್ವಾದದ ತೋರಣವನ್ನೈದುತ್ತಿದ್ದ ಕವಿಯ ಮನಸ್ಸು, ಇದ್ದಕ್ಕಿದ್ದಂತೆ, ಫ್ರಾನ್ಸಿನಲ್ಲಿದ್ದ ತನ್ನ ಶ್ರೀಗುರು ಸಿದ್ದೇಶ್ವರಾನಂದರ ಕಡೆಗೆ ತಿರುಗುತ್ತದೆ. ಎರಡನೆಯ ಮಹಾಯುದ್ಧದ ಮಾರಕ ಯಜ್ಞದ ಮಧ್ಯೆ ಸಿಕ್ಕಿದ್ದ ಅವರ ಕ್ಷೇಮಕ್ಕಾಗಿ ಕಾತರಿಸಿ ಪ್ರಾರ್ಥಿಸುತ್ತದೆ. ಮಗನ ಹರಕೆಯೆಂತೆಯೇ ಹಿರಿಯ ಹರಕೆ ಗುರುವಿನ ಕ್ಷೇಮ ಎಂದು ಭಾವಿಸುತ್ತದೆ.
ಈ ಹರಕೆಗಿಂ ಮಿಗಿಲ್ ಹಿರಿಹರಕೆ
ಇರ್ಪೊಡಾ ಹರಕೆಯಂ ಯೋಗ ದಿವ್ಯಜ್ಞಾನಿ
ಜಗದೀಶ್ವರಗೆ ಬಿಡುವೆನೈ; ಬೇಡಿಕೊಳ್, ಕಂದಾ!
ಎಂದು ತನ್ನ ಗುರುವಿನ ಕ್ಷೇಮಕ್ಕಾಗಿ ನನ್ನ ಜೊತೆ ನೀನು ಬೇಡಿಕೊ ಎಂದು ತನ್ನ ಮಗನನ್ನು ಕೇಳಿಕೊಳ್ಳುತ್ತಾರೆ. ಈ ಪ್ರಾರ್ಥನೆಯ ಕಾಲಕ್ಕಾಗಲೇ ಹಿಟ್ಲರನ ಗೂಢಚರ ಸೇನೆ ಪ್ರಾನ್ಸನ್ನು ಆಕ್ರಮಿಸಿತ್ತು. ಪಾರಂಪರಿಕವಾದ ಪ್ಯಾರಿಸ್ ನಗರ ಹಾಳಾಗಬಾರದೆಂದು ಅದನ್ನು 'ತೆರೆದನಗರ'ವೆಂದು ಘೋಷಿಸಲಾಗಿತ್ತು. ಸ್ವಾಮೀಜಿ ಸರ್ಕಾರದ ಅಧೀನದಲ್ಲಿರಬೇಕಾಗಿತ್ತು. ಅವರ ಕ್ಷೇಮಕ್ಕಾಗಿ ಕವಿಯ ಪ್ರಾರ್ಥನೆಯೊಂದಿಗೆ ಕವಿತೆ ಮುಕ್ತಾಯವಾಗುತ್ತದೆ.
ನೀನ್ ಬಂದ ಈ ಜಗಂ ನೀನ್ ಬಿಡುವ ಆ ಜಗಕೆ
ಕೀಳಾಗುವಂತೆ ಬಾಳ್: ಇಂದಲ್ಲಿ, ಪಶ್ಚಿಮದಿ
ಮಾನವೀಯತೆ ಮಾಣ್ದು ತಾಂಡವಂಗೈಯುತಿದೆ
ನೀಚ ರಾಕ್ಷಸತೆ, ಯಾಂತ್ರಿಕ ಕ್ರೌರ್ಯದಾ ರುದ್ರ
ರಣದಲಿ. ಪೆಣ್ಗಳಂ ಮಕ್ಕಳಂ ಬಲಿಗೆಯ್ದು
ತಣಿಸುತಿರುವರು ಸಮರಚಂಡಿಯಂ. ಸೆಣಸುತಿವೆ
ಹಣೆಗೆ ಹಣೆ ಘಟ್ಟಿಸುತ್ತಿರೆಡು ದುಶ್ಯಕ್ತಿಗಳ್
ಲೋಕ ಚಕ್ರಾಧಿಪತ್ಯಕ್ಕೆ. ಆ ದುಷ್ಕರ್ಮ
ಶಕ್ತಿದ್ವಯಂಗಳುಂ ಹೇಳ ಹೆಸರಿಲ್ಲದೆಯೆ
ಒಂದರಿಂದೊಂದಳಿದು ಶೋಕವೊಂದುಳಿಯಲಾ
ಶೋಕಕೊಂದೊಳ್ಪಿನಾಕಾರಮಂ ನೀಡಲ್ಕೆ
ನೀಂ ಸತ್ಕೃತಿಯ ಲಸಚ್ಛಲ್ಪಿವರನಾಗೆಂದು
ಹರಸುವೆನು; ಹರಸುವೆನೊ ಗುರುದೇವನಂ ನುತಿಸಿ; ಮೇಣ್
ನನ್ನನಾಶೀರ್ವದಿಸಿ ಗೃಹಸ್ಥಾಶ್ರಮಕ್ಕೊಯ್ಸು,
ಧರ್ಮದೌದಾರ್ಯಮಂ ಪೇಳೆ ಪಶ್ಚಿಮಕೆಯ್ದಿ,
ಐರೋಪ್ಯ ಯುದ್ಧದಾ ಕ್ರೌರ್ಯ ಭೂಮಿಯೊಳಿರ್ಪ
ನನ್ನ ಆ ಸಿದ್ಧೇಶ್ವರಾನಂದ ಸ್ವಾಮೀಜಿಗೆ
ಸುಕ್ಷೇಮಮಕ್ಕೆಂದು ಬಯಸಿ ನಲ್ಬಯಕೆಯಂ!
ಕವಿಯ ಪ್ರಾರ್ಥನೆ ಹುಸಿಯಾಗಲಿಲ್ಲ. ಪ್ರಭಾವಶಾಳಿ ಭಕ್ತಮಿತ್ರರ ನೆರವಿನಿಂದ ಸ್ವಾಮೀಜಿ ಪಾರಾದರು. ಯುದ್ಧಾನಂತರ 1945ರಲ್ಲಿ ಮತ್ತೆ ಪ್ಯಾರಿಸ್ಸಿಗೆ ಬಂದು ಗ್ರಟ್ಸ್'ನಲ್ಲಿ 'ಸೆಂಟರ್ ಫಾರ್ ವೇದಾಂತಿಕ್ ರಾಮಕೃಷ್ಣ'  ಸಂಸ್ಥೆಯನ್ನು ಪುನರುಜ್ಜೀವನಗೊಳಿಸುತ್ತಾರೆ. ಮುಂದೆ 1957ರಲ್ಲಿ ಅವರು ನಿಧನರಾಗುವವರೆಗೂ ಕವಿಯೊಂದಿಗೆ ಪತ್ರ ಸಂಪರ್ಕದಲ್ಲಿದ್ದ ಸ್ವಾಮಿಗಳು, ಪುಸ್ತಕಗಳನ್ನು ಕಳುಹಿಸುತ್ತಾ ತಮ್ಮ ಪ್ರಿಯ ಶಿಷ್ಯನಿಗೆ ಜಗತ್ತಿನ ಜ್ಞಾನದ ಹೊಸ ಹೊಸ ಮುಖಗಳಿಗೆ ಬಾಗಿಲುಗಳನ್ನು ತೆರೆದು ಹೊಸಬೆಳಕಿನ ವಲಯಕ್ಕೆ ಕವಿಯನ್ನು ನೂಕುತ್ತಿದ್ದರು. "ನನ್ನ ಚೇತನೋದ್ಬೋಧಕ್ಕೆ ಅವರಿಂದಾದ ದೈವೀ ಉಪಕಾರವನ್ನು ನೆನೆದು ನನ್ನ ಭಕ್ತಿ 9.1.1960ರಲ್ಲಿ ಉದಯರವಿಯ ದೇವರ ಮನೆಯಲ್ಲಿ ಧ್ಯಾನದ ಕಾಲದಲ್ಲಿ ರಚಿಸಿದ 'ಕೃತಜ್ಞತೆ' ಎಂಬ ಕವನವನ್ನು ಇಲ್ಲಿ ಅರ್ಪಿಸುತ್ತಿದ್ದೇನೆ" ಎಂದು ನೆನಪಿನ ದೋಣಿಯಲ್ಲಿ ದಾಖಲಿಸಿದ್ದಾರೆ. ಹಾಗೆ ಅರ್ಪಿಸಿದ ಕವಿತೆಯ ಪೂರ್ಣಪಾಠ ಇಲ್ಲಿದೆ.
1
ಗುರುವಿನೆಡೆಗೆ ಕರೆದ ಗುರುವೆ,
ನನ್ನ ಜೀವ ದೇವತರುವೆ,
ನಿಮ್ಮನೆಂತು, ಹೇಳಿ ಮರೆವೆ?
ನೆ  ನೆ  ವೆ
ಕೃತಜ್ಞತೆಯೊಳನುದಿನ!
2
ಮಾನ್ಯರಲ್ಲಿ ಪರಮ ಮಾನ್ಯ!
ಸಾಮಾನ್ಯರಲಿ ಸಾಮಾನ್ಯ!
ನಿಮ್ಮ ಕೃಪೆಯೊಳಾದೆ ಧನ್ಯ.
ನಿ  ಮ್ಮ
ನೆನೆವುದೆನೆಗೆ ಪೂಜನ!
3
ಸತಿಯನೊಲಿದು ನಿಮ್ಮ ನೆನೆವೆ;
ಸುತರ ನಲಿಸಿ ನಿಮ್ಮ ನೆನೆವೆ;
ಕೃತಿಯನೋದಿ ನಿಮ್ಮ ನೆನೆವೆ;
ನಿ  ಮ್ಮ
ನೆನೆವುದಾತ್ಮ ಸಾಧನೆ!
4
ಅಹೈತುಕೀ ಕೃಪಾಸಿಂಧು,
ನಿಷ್ಕಾರಣ ಆತ್ಮಬಂಧು,
ಅಂದಿನಂತೆ ಇಂದು ಮುಂದು
ಇರಲಿ ನನಗೆ ಎಂದೆಂದೂ,
ನಿ   ಮ್ಮ
ಮೈತ್ರಿಯ ಅನುಮೋದನೆ!

Wednesday, July 11, 2012

ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ!

ದಿನಾಂಕ : ೧೮.೧೧.೧೯೫೬, ಸ್ಥಳ : ಬೆಂಗಳೂರು-ಶಿವಮೊಗ್ಗ ರಸ್ತೆ. ಕವಿ ಆಗ ವೈಸ್ ಛಾನ್ಸಲರ್ ಆಗಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು, ಅಲ್ಲಿಂದ ಶಿವಮೊಗ್ಗೆಗೆ ಪಯಣ ಬೆಳೆಸಿದ್ದರು.
ಶಿವಮೊಗ್ಗೆಗೆ ಧಾವಿಸಿತ್ತು ಕವಿಯ ಕಾರು
ಕಾಲದೇಶ ಲಗ್ಗೆಗೆ ಕ್ಷಣಕ್ಷಣಕ್ಷಣಕ್ಕೆ ಮೈಲಿ ಮೈಲಿ ಮೈಲಿ
ಹಾರುತ್ತಿತ್ತು ಕವಿಯ ಕಾರು:
ತೇಲುತಿತ್ತು ಚಿಮ್ಮುತಿತ್ತು ಈಜುತಿತ್ತು ಮಿಂಚುತಿತ್ತು
ಸಿಮೆಂಟು, ಟಾರು!
ಉಬ್ಬು ತಗ್ಗು ನೇರ ಡೊಂಕು
ಕರಿಯ ರಸ್ತೆ ಹಾವು ಹರಿಯುತಿತ್ತು
ಸರ್ಪಿಸಿ!
ದೂರದ ಪಯಣ. ವೇಗವಾಗಿ ಚಲಿಸುತ್ತಿರುವ ಕಾರು. ಅದರೊಳಗೆ ಕುಳಿತ ಕವಿಗೆ ಉಂಟಾಗಿದ್ದ ದೀರ್ಘ ಪಯಣದ ಏಕತಾನತೆಯ ಬೇಸರ ’ಕರಿಯ ರಸ್ತೆ ಹಾವು ಹರಿಯುತಿತ್ತು ಸರ್ಪಿಸಿ’ ಎಂಬ ಸಾಲಿನಲ್ಲಿ ವ್ಯಕ್ತವಾಗಿದೆ. ಆಗ ಆ ಕಾರಿನಲ್ಲಿ ಇನ್ನೂ ಯಾರ‍್ಯಾರು ಇದ್ದರು? ಕಾರು ಯಾವುದು? ಡ್ರೈವರ್ ಯಾರು?
ಕವಿ: ವೈಸ್ ಛಾನ್ಸಲರ್!
ಕಾರ್ : ಸ್ಟುಡಿಬೇಕರ್!
ಸದ್ಯದ ಡ್ರೈವರ್ : ಪೂರ್ಣಚಂದ್ರ ತೇಜಸ್ವಿ!
ಅವನ ಪಕ್ಕ ನಿಜ ಡ್ರೈವರ್!
ಇವರುಗಳ ಜೊತೆಯಲ್ಲಿ ಹಿಂದಿನ ಸೀಟಿನಲ್ಲಿ ಕುಳಿತು ಪಯಣಿಸುತ್ತಿದ್ದ ಕವಿಗೆ, ಕಾರಿನ ವೇಗ ’ಜವದ ಹುಚ್ಚೆ ಹಿಡಿಯಿತೇನೊ ಪೆಟ್ರೋಲಿಗೆ’ ಅನ್ನಿಸಿಬಿಟ್ಟಿದೆ. ಅವುಗಳ ನಡುವೆಯೂ ಕಾರ‍್ತಿಕ ಮಾಸಜ ನೆಲ, ಮುಗಿಲು, ನೀಲ ಬಾನು, ಎಪ್ಪತ್ತೈದು ಮೈಲಿಯ ವೇಗದಲ್ಲಿರುವ ಕಾರು ಎಲ್ಲವನ್ನೂ ಕವಿ ಗಮನಿಸುತ್ತಿದ್ದಾರೆ. ಕಾರಿನ ಸ್ಪೀಡಾಮೀಟರ್ ಕಡೆ ಕಣ್ಣು ಹಾಯಿಸುತ್ತಾರೆ. ಕಾರಿನ ಹೆಚ್ಚಿದ ವೇಗವನ್ನು ’ಗೂಳಿಗಣ್ಣ ಸ್ಪೀಡಾಮೀಟರ್ ಕೂಗಿ ಹೇಳುತ್ತಿತ್ತು.’
"ಬೇಡ ಕಣೋ ಇಷ್ಟು ಸ್ಪೀಡು!
ಬಿಡಿ, ಅಣ್ಣಾ, ಸುಮ್ಮನಿರಿ,
ನನಗೆ ಗೊತ್ತಿದೆ!"
ಎಂದಿನಂತೆ ತೇಜಸ್ವಿಯ ಉಡಾಫಿ ಉತ್ತರ!
ಚಾಲಕನಾಗಿ ಕುಳಿತಿದ್ದ ತೇಜಸ್ವಿಗೆ ಆಗಿನ್ನೂ ಹದಿನೆಂಟು ವರ್ಷ ತುಂಬಿದೆ ಅಷ್ಟೆ. ಬಹುಶಃ ಡೈವಿಂಗ್ ಲೈಸೆನ್ಸ್ ಬಂದು ಕೆಲವು ದಿನಗಳಷ್ಟೇ ಕಳೆದಿದ್ದರಬಹುದು. ಆದರೂ ಕಾರು ಚಾಲನೆಯಲ್ಲಿ ತೇಜಸ್ವಿ ಫಳಗಿಬಿಟ್ಟಿದ್ದಾರೆ. ನಿಜವಾದ ಡ್ರೈವರ್ ಇದ್ದರೂ, ಆತನನ್ನು ಪಕ್ಕದಲ್ಲಿ ಕುಳ್ಳಿರಿಸಿ, ಕಾರು ಚಾಲನೆಗಿಳಿದಿರುವ ತೇಜಸ್ವಿಯ ಮೇಲಿನ ನಂಬಿಕೆಯಿಂದ ಕವಿ ಕುಳಿತಿದ್ದಾರೆ. ಮಗನ ಉಡಾಫಿ ಉತ್ತರ ಬಹುಶಃ ಅವರಿಗೆ ದಿಗಿಲಿಕ್ಕಿಸಿರಬಹುದು. ಅದಕ್ಕೆ ’ಸರಿ, ಕಣ್ಣು ಮುಚ್ಚಿ ಕುಳಿತೆ:’ ಎನ್ನುತ್ತಾರೆ. ದೇವರ ಮೇಲೆ ಭಾರ ಹಾಕಿದ್ದಿರಬಹುದು! ಹಾಗೆ ಕಣ್ಣು ಮುಚ್ಚಿ ಕುಳಿತ ಕವಿ ಕಂಡಿದ್ದು ಮಾತ್ರ ಜಗದ್ಬವ್ಯ ದೃಶ್ಯವನ್ನು.
ದಕ್ಷಿಣೇಶ್ವರ! ಭವತಾರಿಣಿ!
ಜಗದಂಬೆಗೆ ಚವರಿ ಬೀಸುತಿಹರು ಪರಮಹಂಸರು!
ಕೈಯ ಮುಗಿದು ನಿಂತು ನೋಡಿ ಧನ್ಯನಾಗುತ್ತಿದ್ದೆ.
ಅಷ್ಟರಲ್ಲಿ ಕಾರಿನ ಚಕ್ರದಲ್ಲಿ ಏನೋ ಕಿರ್ರ್ ಎಂಬ ಶಬ್ದ! ’ಗಾಲಿ ವಾಲಿ ಸದ್ದು ಮಾಡತೊಡಗಿದೆ!’ ಆ ಶಬ್ದದ ನಡುವೆ ಮುಂದಿನ ಸೀಟಾಸೀನರಾಗಿದ್ದ ತೇಜಸ್ವಿ ಮತ್ತು ಡ್ರೈವರ್ ನಡುವೆ ನಡೆಯುವ ಸಂಭಾಷಣೆ ಕವಿಯ ಕಿವಿಯನ್ನಪ್ಪಳಿಸುತ್ತದೆ.
"ಸ್ಟೀರಿಂಗೇಕೊ ಸರಿ ಇಲ್ಲ; ಸ್ವಲ್ಪ ಎಣ್ಣೆ ಬಿಡಬೇಕಿತ್ತೊ?"
"ನಿನ್ನೆ ಅಲ್ಲ ಮೊನ್ನೆ ತಾನೆ ಲೂಬ್ರಿಕೇಷನ್ ಆಗಿದೆ"
ಎಂದ ಡ್ರೈವರ್, ಡ್ರೈವ್ ಮಾಡುತ್ತಿದ್ದ ತೇಜಸ್ವಿಗೆ.
"ಚಕ್ರವೇಕೊ ಎಡದ ಕಡೆಗೆ ವಾಲುತ್ತಿದೆ!"
ಗಾಡಿ ನಿಲ್ಲುತ್ತದೆ. ಎಲ್ಲರೂ ಕೆಳಗಿಳಿಯುತ್ತಾರೆ. ಪರೀಕ್ಷೆ ನಡೆಯುತ್ತದೆ. ಮೆಷಿನರಿಗಳ ಮರಿ ಡಾಕ್ಟರ್ ತೇಜಸ್ವಿ ಸುಮ್ಮನಿರುತ್ತಾರೆಯೇ!?
ಜಾಕ್ ಹೊರಗೆ ಬಂದಿತು
ಗಾಡಿ ಮೇಲಕೆದ್ದಿತು.
ಚಕ್ರ ಬಿಚ್ಚಿದರು.
ಸ್ಪ್ಯಾನರ್-ಸ್ಕ್ರೂ ಡ್ರೈವರ್-ವ್ಹೀಲ್ ಸ್ಪ್ಯಾನರ್- ಟಕ್ ಟಕ್ ಟಕ್....
ಅರ್ಧ ಗಂಟೆ ರಿಪೇರಿ ನಂತರ ಮತ್ತೆ ಎಲ್ಲರೂ ಕಾರು ಏರಿ ಹೊರಡುತ್ತಾರೆ. ಸ್ವಲ್ಪ ದೂರ ಅಷ್ಟೆ. ಮತ್ತೆ ಚಕ್ರದಿಂದ ಕಿರೋ ಕಿರೋ ಶಬ್ದ ಬರುತ್ತದೆ. "ಫಿಷ್ ಪ್ಲೇಟ್...... ಟೈರ್ ರಾಡ್ ಎಂಡ್....." ಇನ್ನೂ ಏನೇನೊ ಶಬ್ದಗಳು ಕವಿಯ ಕಿವಿಗೆ ಬೀಳುತ್ತವೆ. ಆದರೆ, ಏನೆಂದು ಕವಿಗೆ ಅರ್ಥವಾಗುವುದಿಲ್ಲ. ಈ ಬಾರಿ ತೇಜಸ್ವಿ ಡ್ರೈವರ್ ಇಬ್ಬರೇ ಇಳಿಯುತ್ತಾರೆ. ಸ್ವಲ್ಪ ಒತ್ತಿನ ನಂತರ ಕವಿಯೂ ಬೇಸರದಿಂದಲೇ ಇಳಿಯುತ್ತಾರೆ; ಒಳಗೆ ಕೂರುವ ಬೇಸರದಿಂದ ತಪ್ಪಿಸಿಕೊಳ್ಳಲು. ಅವರಿಬ್ಬರ ಸಂಭಾಷಣೆ, ಅದರೊಂದಿಗೆ ರಿಪೇರಿ ಕಾರ್ಯಭಾರ ಮುಂದುವರೆಯುತ್ತದೆ.
"ಚಕ್ರ ವಾಲಿ ಹೀಗೆ ಗಾಡಿ ನಡೆದರೆ
ಬಹಳ ಕೆಟ್ಟದು" ಎಂದ ತೇಜಸ್ವಿ.
"ಹೌದು ಅಣ್ಣ" ಎಂದು ಡ್ರೈವರ್ ಪಲ್ಲವಿ!
ಮತ್ತೆ ಜಾಕು ಕೊಟ್ಟು ಕಾರು ಎದ್ದಿತು.
ಡ್ರೈವರ್ ಕಾರಿನ ಹೊಟ್ಟೆ ಅಡಿ ಅಡಗಿದ.
ದಾರವಿಟ್ಟು ಅಳೆದರು: ಏಕೊ ಏನೊ?
ಅದರ ಬದಲು ಕುಂಕುಮ ಹಚ್ಚಿದ್ದರೂ
ಆಗುತಿತ್ತೇನೊ!
ಈ ಎಲ್ಲಾ ರಿಪೇರಿ ಕರ್ಮವನ್ನು ಹುಡುಗರ ಬೇಜವಬ್ದಾರಿಯನ್ನು ಕಂಡು ಕವಿಗೆ ರೇಗುತ್ತದೆ.
"ಮೊನ್ನೆ ತಾನೆ ಲ್ಯೂಬ್ರಿಕೇಷನ್ ಮಾಡಿಸಿದೆ.
ಇಂದು ಕಾರು ದಾರಿಯಲ್ಲಿ ತೊಂದರೆ ಕೊಡುತ್ತಿದೆ.
ನಿನಗೆ ತಲೆ ನೆಟ್ಟಗಿದ್ದರೆ ಹೀಗಾಗುತಿತ್ತೆ?
ನೀನೊಬ್ಬ ಡ್ರೈವರ್... ಕೆಲಸಕ್ಕೆ ಬಾರದವ...
ಬೆಪ್ಪು ಮುಂಡೇದು!...
ಹೀಗೆ ಸಹಸ್ರನಾಮ!....
ಇನ್ನೆಂದಿಗೂ ಈ ಡ್ರೈವರು ಈ ಕಾರು ನಂಬಿ
ದೂರ ಪಯಣಕ್ಕೆ ಹೊರಡುವುದಿಲ್ಲ.
ಇದೇ ಕೊಟ್ಟಕೊನೆ! ಇದೇ ಕೊಟ್ಟ ಕೊನೆ!"
ರೇಗಿದ ಕವಿಯಿಂದ ಡ್ರೈವರನಿಗೆ ಕಾರಿಗೆ ಸಹಸ್ರಾರ್ಚನೆ! ಜೊತೆಗೆ ಭೀಷ್ಮ ಪ್ರತಿಜ್ಞೆ ಬೇರೆ. ರಿಪೇರಿಯಲ್ಲೇ ಎರಡು ಗಂಟೆ ಕಳೆದ ಬೇಸರ. ಆದರೂ ಒಂದು ಸಲಹೆ ಕವಿಯಿಂದ ಬರುತ್ತದೆ.
"ಹೇಗಾದರು ಅರಸಿಕೆರೆಯವರೆಗೆ ಹೋಗಿ
ವರ್ಕ್‌ಷಾಪಿನಲ್ಲಿ ತೋರಿಸಿ ಸರಿಪಡಿಸೋಣ!"
ಸಂಜೆಯಾಗಿದೆ. ಆ ಸಮಯದಲ್ಲಿ ಪ್ರತಿನಿತ್ಯ ಮೈಸೂರಿನ ಉದಯರವಿಯಲ್ಲಿ ದೀಪ ಹೊತ್ತಿಸುತ್ತಿದ್ದುದು ಕವಿಯ ನೆನಪಿಗೆ ಬರುತ್ತದೆ.
ಅದೇ ಹೊತ್ತಿನಲ್ಲಿ
ದೂರ ಮೈಸೂರಿನಲ್ಲಿ, ಮನೆ ’ಉದಯರವಿ’ಯಲ್ಲಿ,
ಮಗಳು ತಾರಿಣಿ ಗುಡಿಸಿ, ದೇವರ ಮನೆಯ ತೊಳೆದು,
ಹೂ ಮುಡಿಸಿ, ಸೊಡರ ಹೊತ್ತಿಸಿ, ಊದುಕಡ್ಡಿಯಿಟ್ಟು
ಒಂದು ವಾರದ ವರೆಗೆ ದೂರ ಪಯಣಕೆ ಹೋದ
ತಂದೆಯನು ನೆನೆದು
"ಸುಗಮವಾಗಲಿ ದೇವ, ಅಣ್ಣನಿಗೆ ಪಯಣ!
ಕ್ಷೇಮವಾಗಿಯೆ ಅಣ್ನ ತಿರುಗಿ ಬರಲಿ!"
ಎಂದು ಮಗಳು ಅತ್ತ ಪ್ರಾರ್ಥನೆ ಮಾಡುತ್ತಿದ್ದರೆ, ಇತ್ತ ಡ್ರೈವರನ ಅನುಭವದ ತಲೆಗೆ ಏನೋ ಹೊಳೆದಂತಾಯ್ತು! "ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ನೋಡಬೇಕಿತ್ತಣ್ಣಾ..." ಎಂದು ರಾಗವೆಳೆಯುತ್ತಾನೆ. "ನಿನ್ನ ಬೆಪ್ಪುತಕ್ಕಡಿತನವ ಮುಚ್ಚಿಕೊಳ್ಳಲು ಏನೇನೋ ಬೊಗಳ್ತೀಯಾ!" ಎಂಬ ಕವಿಯ ಮಾತಿನ ನಡುವೆ ಮತ್ತೆ ಕಾರು ಚಕ್ರದ ಕೀರಲು ಸ್ವರ ಕೇಳಿಸುತ್ತದೆ. ಮರಿ ಯಂತ್ರಜ್ಞನಾಗಿದ್ದ ತೇಜಸ್ವಿ ಮಾತ್ರ ಆ ಸಂದರ್ಭದಲ್ಲಿ ಕವಿಗಿಂತಲೂ ಸ್ಥಿತಪ್ರಜ್ಞನಾಗಿ-
"ಇಲ್ಲ, ಅಣ್ಣಾ, ಕಾರು ಹಾಳಾಗುತ್ತದೆ
ಹೀಗೇ ನಾವು ಮುಂದುವರಿದರೆ.
ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ನೋಡಿದರೆ
ಸರಿಹೋಗಬಹುದೇನೋ!"
ಎನ್ನುತ್ತಾನೆ. ರಸ್ತೆ ಎಡಕ್ಕೆ ಕಾರು ನಿಲ್ಲುತ್ತದೆ. ಮತ್ತೆ ಎಲ್ಲರೂ ಕೆಳಗಿಳಿಯುತ್ತಾರೆ. ಕೆಳಗಿಳಿದ ಕವಿಗೆ ಕಂಡ ನೋಟವಿದು.
ಗಡ್ಡ ಬಿಳಲಿಳಿದ ಹಸುರಿನ ದಟ್ಟ ಹೇರಾಲಗಳ ಹಂತಿ
ಸಾಲು ಸಾಲಾಗಿ ನಿಂತು ರಸ್ತೆಯಿಕ್ಕೆಲದಲ್ಲಿ
ನಮಗೆ ಗೌರವ ರಕ್ಷೆ ನೀಡಿದ್ದುವು.
ಕಾರ‍್ತಿಕದ ಹಿತ ಬಿಸಿಲು ಹಸುರು ಹೊಲಗಳ ಮೇಲೆ
ಹುಲುಸಾಗಿ ಹಸರಿಸಿತ್ತು.
ಹಣ್ಣು ತುಂಬಿದ ಆಲ ಹಕ್ಕಿಗಳನೌತಣಕೆ ಕರೆದಿತ್ತು:
ಲಕ್ಷ ಪಕ್ಷಿಯ ಕೊರಲು ಕಿವಿಗಿಂಪ ಸುರಿದಿತ್ತು.
ದಾರಿ ಬದಿ ಕಲ್ಲಬೋರ್ಡಿನೊಳಿತ್ತು ಬರೆಹ:
"ಸಿಡ್ಲೆಹಳ್ಳಿ!"
ಕವಿ ಸಿಡ್ಲೆಹಳ್ಳಿಯನ್ನು ಸುತ್ತಲೂ ಹುಡುಕುತ್ತಾರೆ. ಹಳ್ಳಿ ಕಾಣುವುದಿಲ್ಲ. ಆದರೆ ಹತ್ತಿರದಲ್ಲೆಲ್ಲೋ ಹಳ್ಳಿಯಿದ್ದಿರಬೇಕು ಎನ್ನುವುದಕ್ಕೆ ಸಾಕ್ಷಿಯಾಗಿ ಏಳೆಂಟು ವರ್ಷದ ಹುಡುಗನೊಬ್ಬ ಕುತೂಹಲದಿಂದ ಕಾರನ್ನು ನೋಡುತ್ತಾ ನಿಲ್ಲುತ್ತಾನೆ. ಡ್ರೈವರ್-ತೇಜಸ್ವಿ ಮಾತ್ರ ಕರ್ಮಯಜ್ಞದಲ್ಲಿ ತಲ್ಲೀನರಾಗಿಬಿಟ್ಟಿರುತ್ತಾರೆ.
ಜಾಕ್-ಟೈರ್ ಲಿವರ್-ಸ್ಪಾನರ್-ಚಕ್ರಕ್ಕೆ ಕಲ್ಲಾಪು.
ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ನೋಡಲಿಕ್ಕೆ
ಕಾರಿನಡಿ ಹೊಟ್ಟೆ ಮೇಲಾಗಿ ಮಲಗಿದನು ಡ್ರೈವರ್.
"ಓ ಹೋ ಹೋ ಹೋ ಅಣ್ಣಾ!"
"ಏನೋ?" ಕೇಳಿದನು ತೇಜಸ್ವಿ.
"ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ಅಲ್ಲ...."
"ಮತ್ತೇನೋ?"
"ಫ್ರಂಟ್ ವ್ಹೀಲ್ ಮೆಯ್ನ್ ಸ್ಪ್ರಂಗ್ ಸ್ಕ್ರೂ ಬಿದ್ದು ಹೋಗಿದೆ!"
ಆ ಕ್ಷಣ ಕವಿಗನ್ನಿಸಿದ್ದು "ಛೆ ಛೆ ಛೆ! ಏನಪಾಯವಾಗುತಿತ್ತು!!...." ಎಂದು. ಇತ್ತ ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ, ಅತ್ತ ಉದಯರವಿಯಲ್ಲಿ ತಾರಿಣಿಯ ಪ್ರಾರ್ಥನೆ ಮುಂದುವರೆದು ಮುಗಿಯುವ ಹಂತ ತಲುಪಿತ್ತು!
’ಉದಯರವಿ’ಯ ದೇವರ ಮನೆಯಲ್ಲಿ
ಪ್ರಾರ್ಥಿಸುತ್ತಿದ್ದ ತಾರಿಣಿಯ ಕೈ ಮುಗಿಯುತಿತ್ತು.
ಆಗಳಾಗಳೆ ಮುಗಿಯುತಿತ್ತು
ಪ್ರಾರ್ಥನೆಯೂ:
"ಸುಮಗಮವಾಗಲಿ, ದೇವ, ಅಣ್ಣನಿಗೆ ಪಯಣ!
ಕ್ಷೇಮವಾಗಿಯೆ ಅಣ್ಣ ಹೋಗಿಬರಲಿ!"
ತಾರಿಣಿಯ ಪ್ರಾರ್ಥನೆ, ಕವಿಯ ಕನಸು, ಡ್ರೈವರನ ಅನುಭವ, ತೇಜಸ್ವಿಯ ಕ್ರಿಯಾಶೀಲತೆಯ ಫಲವಾಗಿ ಕಾರು ಸರಿ ಹೋಗುತ್ತದೆ. ಪಯಣ ಮುಂದುವರೆಯುತ್ತದೆ. ಪಯಣ ಮುಗಿದು, ಬಹುಶಃ ಒಂದು ವಾರದ ನಂತರ ಮೈಸೂರಿಗೆ ಹಿಂದಿರುಗಿದ ಮೇಲೆ, ೨೬.೧೧.೧೯೫೬ರಂದು ಪ್ರಯಾಣದ ಅನುಭವವನ್ನು, ಕಾರಿನಿಂದ ಉಂಟಾದ ಪರಿಪಾಟಲನ್ನು ಮನೆಯಲ್ಲಿ ಮಾತನಾಡುತ್ತಿದ್ದಾಗ, ಆ ಸಮಯದಲ್ಲಿ ಉದಯರವಿಯ ದೇವರ ಮನೆಯಲ್ಲಿ ತಾರಿಣಿ ದೀಪ ಬೆಳಗಿಸುತ್ತಿದ್ದ ವಿಚಾರ ಕವಿಗೆ ತಿಳಿದಿರಬೇಕು. ಅಂದೇ ’ಸಿಡ್ಲೆಹಳ್ಳಿ ಮತ್ತು ತಾರಿಣಿಯ ಪ್ರಾರ್ಥನೆ’ ಎಂಬ ಮೇಲಿನ ಕವಿತೆ ರಚಿತವಾಗಿದೆ.
'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯದಲ್ಲಿ, ಕಾಡಿಗೆ ಹೊರಟ ಅಣ್ಣ-ಅತ್ತಿಗೆಯರ ಜೊತೆ ಲಕ್ಷ್ಮಣನೂ ನಿಂತ ನಿಲುವಿನಲ್ಲಿ ಹೊರಡುತ್ತಾನೆ. ಇತ್ತ ಅರಮನೆಯಲ್ಲಿ ಲಕ್ಷ್ಮಣನ ಸತಿ ಊರ್ಮಿಳೆ ಒಂಟಿಯಾಗುತ್ತಾಳೆ. ಆಗ ಕವಿ ಊರ್ಮಿಳೆಯನ್ನು ಕೇಳುತ್ತಾರೆ-
-ಸೌಮಿತ್ರಿ ತಾಂ
ನಿನ್ನನುಮತಿಯನಣ್ಣನೊಡನಡವಿಗೈದಲ್ಕೆ ಪೇಳ್
ಬೇಡಿದನೆ? ಭ್ರಾತೃಭಕ್ತಿಯ ಸಂಭ್ರಮಾಧಿಕ್ಯದೊಳ್
ಪ್ರೀತಿಯಿಂ ಬೀಳ್ಕೊಳ್ವುದಂ ತಾಂ ಮರೆಯನಲ್ತೆ?
ಮರೆಯನೆಂದುಂ ಸುಮಿತ್ರಾತ್ಮಜಂ! ಪೇಳ್ದನೇನಂ,
ಪೇಳ್, ಬನಕೆ ನಡೆವಂದು?
’ಪೇಳ್ವಳೆಂತಯ್ ಮಂತ್ರಮಂ’ ಎನ್ನುವ ಕವಿ, ಸತಿಶಿರೋಮಣಿಯಾದ ಊರ್ಮಿಳೆ ತಳೆದ ದಿಟ್ಟ ನಿಲುವನ್ನು ಹೀಗೆ ಪ್ರತಿಪಾದಿಸಿದ್ದಾರೆ.
ಪ್ರಾಣೇಶ
ಲಕ್ಷ್ಮಣಂ ರಾಮ ಸೀತೆಯರೊಡನಯೋಧ್ಯೆಯಂ
ಬಿಟ್ಟಂದುತೊಟ್ಟು, ಸರಯೂನದಿಯ ತೀರದೊಳ್
ಪರ್ಣಕುಟಿಯಂ ರಚಿಸಿ, ಚಿರ ತಪಸ್ವಿನಿಯಾಗಿ
ಕಟ್ಟಿದಳ್ ಚಿತ್ತಪೋಮಂಗಳದ ರಕ್ಷೆಯಂ
ಮೈಥಿಲಿಗೆ ರಾಮಂಗೆ ಮೇಣ್ ತನ್ನಿನಿಯ ದೇವನಿಗೆ!
ಅಂದು ಊರ್ಮಿಳೆ ಕಟ್ಟಿದ ಚಿತ್ತಪೋಮಂಗಳದ ಶ್ರೀರಕ್ಷೆಯಿದ್ದುದರಿಂದಲೇ ರಾಮ ಲಕ್ಷ್ಮಣರಿಗೆ, ಸೀತೆಗೆ ಎಲ್ಲ ರೀತಿಯ ಅಗ್ನಿ ಪರೀಕ್ಷೆಯನ್ನು ಗೆದ್ದು ಬರಲು ಸಾಧ್ಯವಾಯಿತು. ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಮದುವೆ ಮನೆಯಿಂದ, ಪೀಂಚಲು ಜೊತೆ ಹೊರಬಿದ್ದ ಚಿನ್ನಮ್ಮ, ಮಾರಿಯಮ್ಮನ ಗುಡಿಯಲ್ಲಿ, ತನ್ನ ಮತ್ತು ತನ್ನಿನಿಯನ ಕ್ಷೇಮ ಕಾತರಳಾಗಿ ಮಾರಿಯಮ್ಮನ ಪದತಲದಲ್ಲಿ ದೀನಳಾಗಿ ಬೇಡುತ್ತಿರುವುದನ್ನು, ಅದೇ ಸಮಯದಲ್ಲಿ, ದೂರದ ಕಲ್ಕತ್ತಾದ ವರಾಹನಗರದಲ್ಲಿದ್ದ ಹಾಳುಮನೆಯ ಮಠದಲ್ಲಿ, ತರುಣ ಸನ್ಯಾಸಿಯೊಬ್ಬನು, ತಾನು ಗುರುಕೃಪೆಯಿಂದ ಕಂಡ ದರ್ಶನದ ಫಲವಾಗಿ, ತಾನು ಕಂಡ ಆ ಹೆಣ್ಣುಮಗಳ ಸಂಕಟ ಏನಿದ್ದರೂ ಪರಿಹಾರವಾಗಿ, ಆಕೆಗೆ ತಾಯಿ ಕೃಪೆಮಾಡಲಿ! ಎಂದು ತಪೋರಕ್ಷೆಯನ್ನು ಕಟ್ಟುತ್ತಾನೆಯಲ್ಲವೆ!? ಕಾವ್ಯರಂಗದಲ್ಲಿಯಂತೊ, ಅಂತೆಯೇ ಲೋಕರಂಗದಲ್ಲಿ ಯಾರ‍್ಯಾರ ಮಂಗಳಕ್ಕಾಗಿ ಯಾರ‍್ಯಾರು, ಕಾಲ ದೇಶಗಳನ್ನು ಮೀರಿ ತಪೋಮಂಗಳದ ಶ್ರೀರಕ್ಷೆಯನ್ನು ಕಟ್ಟುತ್ತಿದ್ದಾರೋ ಬಲ್ಲವರು ಯಾರು? ಅಣ್ಣನ ಕ್ಷೇಮಕ್ಕಾಗಿ ಮಾಡಿದ ತಾರಿಣಿಯ ಪ್ರಾರ್ಥನೆಯೂ ಅಂತಹುದೊಂದು ತಪೋಶ್ರೀರಕ್ಷೆಯೇ ಆಗಿದ್ದಿರಬಹುದಲ್ಲವೆ?
ರಾಮನ ಕಿರೀಟದಾ
ರನ್ನವಣಿಯೋಲೆ ರಮ್ಯಂ, ಪಂಚವಟಿಯೊಳ್
ದಿನೇಶೋದಯದ ಶಾದ್ವಲದ ಪಸುರ್ ಗರುಕೆಯೊಳ್
ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ.
ಎನ್ನುವ ವಿಶ್ವಭಾವದ ಕವಿಗೆ, ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಮೊದಲಲ್ಲಿ ಹೇಳಿರುವಂತೆ-
ಇಲ್ಲಿ
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಃಕಶ್ಚಿತವಲ್ಲ!
ಇಲ್ಲಿ
ಯಾವುದಕ್ಕೂ ಮೊದಲಿಲ್ಲ;
ಯಾವುದಕ್ಕೂ ತುದಿಯಿಲ್ಲ;
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
ಕೊನೆ ಮುಟ್ಟುವುದೂ ಇಲ್ಲ!
ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ!
ಇಲ್ಲಿ
ಎಲ್ಲಕ್ಕೂ ಇದೆ ಅರ್ಥ;
ಯಾವುದೂ ಅಲ್ಲ ವ್ಯರ್ಥ;
ನೀರೆಲ್ಲ ಊ ತೀರ್ಥ!

Friday, July 06, 2012

ಕಂಡ ಕವಿಗೆ, ಅಖಂಡ ದೇವಿ ಕಣಾ ಕರ್ಣಾಟಕ!

ಮದರಾಸು, ಬಾಂಬೆ ಮತ್ತು ಹೈದರಾಬಾದ್ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಭಾಗಗಳನ್ನು ಸೇರಿಸಿಕೊಂಡು ವಿಶಾಲ ಮೈಸೂರು ರಾಜ್ಯ ’ಅಖಂಡ ಕರ್ನಾಟಕ’ ಆಗಿದ್ದು, ೨೦ನೆಯ ಶತಮಾನದ ಕರ್ನಾಟಕದ ಇತಿಹಾಸದ ಪ್ರಮುಖ ಘಟನೆಗಳಲ್ಲೊಂದು. ಶತಮಾನದ ಹೋರಾಟದ ಫಲವಾಗಿ ೧೯೫೬ರಲ್ಲಿ ಏಕೀಕರಣಗೊಂಡರೂ, ಕರ್ನಾಟಕ ಎಂಬ ಹೆಸರಿಗಾಗಿ ೧೯೭೩ರವರೆಗೆ ಅಂದರೆ ಸುಮಾರು ೧೭ ವರ್ಷಗಳನ್ನು ಕಾಯಬೇಕಾಯಿತು.
ಮೈಸೂರು ರಾಜ್ಯ ಅಭಿವೃದ್ಧಿಯ ಪಥದಲ್ಲಿ ಮುನ್ನುಗಿತ್ತು. ಸ್ವತಃ ಮಹಾತ್ಮ ಗಾಂಧಿಯವರಿಂದ ’ರಾಜರ್ಷಿ’ ಎಂದು ಕರೆಸಿಕೊಂಡಿದ್ದ ರಾಜನ ಆಡಳಿತವಿತ್ತು. ಮೈಸೂರಿನಂತಹ ಸಂಸ್ಥಾನವಿದ್ದರೆ, ಸಾಂಸ್ಥಿಕ ಆಡಳಿತವನ್ನು ಬದಿಗೊತ್ತಿ ಭಾರತವನ್ನು ಒಗ್ಗೂಡಿಸುವ ಅಗತ್ಯವೇ ಇರಲಿಲ್ಲ ಎಂದು ವಲ್ಲಭಬಾಯಿ ಪಟೇಲರು ಉದ್ಘರಿಸಿದ್ದರು. ಅಂತಹ ಮೈಸೂರು ರಾಜ್ಯದಲ್ಲಿದ್ದುದು, ಈಗಿನ ಕರ್ನಾಟಕದ ಎಂಟೂವರೆ- ಒಂಬತ್ತು ಜಿಲ್ಲೆಗಳು ಮಾತ್ರ! ಇನ್ನೂ ಅದರ ಎರಡು ಪಟ್ಟು ಭೂಮಿಯನ್ನು ಒಟ್ಟಾಗಿ ಸೇರಿಸಿ ಅಖಂಡ ಕರ್ನಾಟಕವನ್ನು ಕಟ್ಟಬೇಕಾಗಿತ್ತು. ಸಾಂಸ್ಕೃತಿಕವಾಗಿ ಯಾವಾಗಲೂ ಒಂದಾಗಿದ್ದ ಕರ್ನಾಟಕ ಭೌಗೋಳಿಕವಾಗಿ ಮಾತ್ರ್ರ ಖಂಡತುಂಡವಾಗಿತ್ತು. ಕರ್ನಾಟಕದ ಸಹಸ್ರಾರು ಜನ ಚಿಂತಕರು, ಸಾಹಿತಿಗಳು, ಮಹನೀಯರು ಏಕೀಕರಣಕ್ಕಾಗಿ ಹೋರಾಡುತ್ತಿದ್ದರು. ಅಭಿವೃದ್ಧಿಯ ದೃಷ್ಟಿಯಿಂದ ಮುಂದಿದ್ದ ಮೈಸೂರು ಪ್ರಾಂತ್ಯದವರು ಕರ್ನಾಟಕದ ಏಕೀಕರಣವನ್ನು ವಿರೋದಿಸುತ್ತಿದ್ದರು. ಏಕೀಕರಣವಾದರೆ ಮೈಸೂರು ಪ್ರಾಂತ್ಯದಲ್ಲಿ ಪ್ರಬಲರಾಗಿದ್ದ ಬ್ರಾಹ್ಮಣ ಮತ್ತು ಒಕ್ಕಲಿಗ ಸಮುದಾಯದ ಬಲ ಕ್ಷಿಣಿಸುತ್ತದೆ ಎಂಬುದೇ ಅವರ ವಿರೋಧಕ್ಕಿದ್ದ ಏಕೈಕ ಕಾರಣ. ಸಾಹಿತಿ ದಿಗ್ಗಜರಾಗಿದ್ದ ಡಿ.ವಿ.ಜಿ., ರಾಜಕೀಯ ನೇತಾರರಾಗಿದ್ದ, ವೀರಣ್ಣಗೌಡ, ಶಂಕರೇಗೌಡ ಮೊದಲಾದವರು ಬೇಕಾದರೆ ಎರಡು ಕರ್ನಾಟಕಗಳಾಗಲಿ ಎನ್ನುತ್ತಿದ್ದರು. ಆರಂಭದಲ್ಲಿ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ ಮೊದಲಾದ ಮೈಸೂರು ಪ್ರಾಂತ್ಯದ ಕಾಂಗ್ರೆಸ್ ನಾಯಕರುಗಳೂ ಏಕೀಕರಣದ ವಿರೋಧಿಗಳಾಗೇ ಇದ್ದರು. ’ಏಕೀಕರಣದ ವಿಷಯದಲ್ಲಿ ಡಿ.ವಿ.ಜಿ.ಯವರು ಒಕ್ಕಲಿಗರ ಗುರುಗಳಂತಿದ್ದರು’ ಎನ್ನುತ್ತಾರೆ ಅನಂತಮೂರ್ತಿಯವರು. ’ಒಂದು ಕರ್ನಾಟಕ ಕೊಡ್ತೀವಿ ಅಂದರೆ ಒನ್ ಬೈ ಟೂ ಕೇಳ್ತಾರಲ್ಲ’ ಎಂದು ಬೀಚಿಯವರು ಏಕೀಕರಣದ ವಿರೋಧಿಗಳನ್ನು ಕುರಿತು ಹೇಳುತ್ತಿದ್ದರಂತೆ. 
ಬ್ರಾಹ್ಮಣ ಸಮುದಾಯದ ಧುರೀಣ ಹಾರನಹಳ್ಳಿ ರಾಮಸ್ವಾಮಿ ಮಾತ್ರ ಏಕೀಕರಣದ ಪರವಾಗಿದ್ದರು. ಇಡೀ ಮೈಸೂರು ಪ್ರಾಂತ್ಯದಲ್ಲಿ ಏಕೀಕರಣದ ಪರವಾಗಿದ್ದ ಇಬ್ಬರು ಒಕ್ಕಲಿಗ ಸಮುದಾಯದ ಪ್ರಮುಖರೆಂದರೆ ಒಬ್ಬರು ರಾಷ್ಟ್ರಕವಿ ಕುವೆಂಪು; ಇನ್ನೊಬ್ಬರು ರಾಜಕೀಯ ಕ್ಷೇತ್ರದ ಸಂತ ಶಾಂತವೇರಿ ಗೋಪಾಲಗೌಡ. 
ಸ್ವತಂತ್ರಪೂರ್ವದಲ್ಲಿಯೇ ಏಕೀಕರಣದ ಕನಸನ್ನು ಕಂಡಿದ್ದ ಕವಿ ಕುವೆಂಪು ಆ ನಿಟ್ಟಿನಿಲ್ಲಿ ಹಲವಾರು ಕವಿತೆಗಳನ್ನು ಬರೆದಿದ್ದಾರೆ. ಭಾಷಣಗಳನ್ನು ಮಾಡಿದ್ದಾರೆ. ೧೯೨೫ರ ರಚನೆಯಾದ ’ಕರ್ಣಾಟ ರಾಷ್ಟ್ರಗೀತೆ’ಯಲ್ಲಿಯೇ (ಈಗಿನ ನಾಡಗೀತೆ ’ಜಯ ಹೇ ಕರ್ಣಾಟಕ ಮಾತೆ’ ಗೀತೆಗೆ ಮೂಲ ಆಕರವಾಗಿರುವ ಗೀತೆ ಇದು) ಅಖಂಡ ಕರ್ನಾಟಕದ ಅಭಿಲಾಷೆ ವ್ಯಕ್ತವಾಗಿದೆ. ’ಪುಲಕೇಶೀ ಯದು ಕಂಠೀರವ ಕಂಪೇನೃಪಶೇಖರ ಭೂಮಿ’, ’ಕೃಷ್ಣ ಶರಾವತಿ ವರ ತುಂಗಾ, ಕಪಿನಿ ಕಾವೇರಿಗಳ ತರಂಗ’ ’ಭಾರತ ಜನನಿಯ ತನುಜಾತೆ ಜಯಹೇ ಕರ್ಣಾಟಕ ಮಾತೆ’ ಮೊದಲಾದ ಸಾಲುಗಳನ್ನು ಆ ನಿಟ್ಟಿನಲ್ಲಿ ಗಮನಿಸಬಹುದಾಗಿದೆ. 
೧೬.೧೦.೧೯೪೧ರಲ್ಲಿಯೇ ’ಏಕೈಕ ಕರ್ನಾಟಕ’ ಎಂಬ ಕವಿತೆಯನ್ನು ರಚಿಸಿ, 
ಕನಸು ನನಸಾಯಿತಿದೊ ಏಕೈಕ ಕರ್ನಾಟಕ:
ಕಣ್‌ನಟ್ಟು ಬಯಸಿ ಕಾಣ್ ದಿಕ್‌ತಟಧ್ವಜಪಟ!
ಕವಿಯ ದೃಷ್ಟಿಯಲ್ಲಿ ಒಂದಾಗಿದ್ದ ಸಾಂಸ್ಕೃತಿಕ ಕರ್ನಾಟಕವನ್ನು ತೋರಿಸುತ್ತಾರೆ. ೨೩-೧೨-೧೯೪೨ರ ’ಅಳುಕದೀ ಕನ್ನಡಂ’ ಎಂಬ ಕವಿತೆಯಲ್ಲಿ 
ಪಂಪರನ್ನರ್ ಕುಮಾರವ್ಯಾಸ ಲಕ್ಷ್ಮೀಶ
ಹರಿಹರಾದಿಗಳುಸಿರ್ ನಮ್ಮೊಳಿರ್ಪನ್ನೆಗಂ
ಅಳುಕದೀ ಕನ್ನಡಂ, ಅಳಿಯದೀ ಕನ್ನಡಂ
ಉಳಿವುದೀ ಕನ್ನಡಂ!
ಎಂದು ಘೊಷಿಸಿದ್ದರು.
ಸ್ವತಂತ್ರ್ಯಾನಂತರ, ಮೈಸೂರು ಸಂಸ್ಥಾನ ಭಾರತ ಸರ್ಕಾರದಲ್ಲಿ ವಿಲೀನಗೊಂಡು, ಇಲ್ಲೂ ಪ್ರಜಾಸರ್ಕಾರ ಸ್ಥಾಪನೆಯಾಯಿತು. ಕೆ.ಸಿ.ರೆಡ್ಡಿಯವರು ಮುಖ್ಯಮಂತ್ರಿಯಾದರು. ಭಾರತದ ಸ್ವತಂತ್ರ್ಯಾನಂತರ ಕರ್ನಾಟಕ ಏಕೀಕರಣದ ಕೂಗು ಇನ್ನೂ ಹೆಚ್ಚಾಯಿತು. ಮೈಸೂರು ವಿಶ್ವವಿದ್ಯಾಲಯದೊಳಗೆ ಬಿ.ಎಂ.ಶ್ರೀ. - ಕುವೆಂಪು ನೇತೃತ್ವದ ಏಕೀಕರಣ ಪರವಾದ ಧ್ವನಿ ಜೋರಾಗಿಯೇ ಸದ್ದು ಮಾಡಿತು. ೧೯೪೯ರಲ್ಲಿ ಮಹಾರಾಜ ಕಾಲೇಜಿನಲ್ಲಿ ನಡೆದ ಸಭೆಯೊಂದರಲ್ಲಿ ಕುವೆಂಪು ಏಕೀಕರಣವನ್ನು ಬೆಂಬಲಿಸಿ ಭಾಷಣ ಮಾಡಿದರು. “ನಮ್ಮ ಕರ್ಣಾಟಕ ಬರಿಯ ದೇಶವಿಸ್ತೀರ್ಣಕ್ಕೆ ಮಾತ್ರ ಸಂಬಂಧಪಟ್ಟುದಲ್ಲ; ಕಾಲವಿಸ್ತೀರ್ಣವನ್ನೂ ನಾವು ಪ್ರಮುಖವಾಗಿ ಭಾವಿಸುತ್ತೇವೆ. ಅದನ್ನು ಚದರಮೈಲಿಗಳಿಂದ ಅಳೆದರೆ ಸಾಲದು; ಚದರವರ್ಷಗಳಿಂದಲೂ ಗುರುತಿಸಬೇಕು. ವ್ಯಷ್ಟಿರೂಪವಾದ ವ್ಯಕ್ತಿಗೆ ಕೋಶಗಳಿರುವಂತೆ ಸಮಷ್ಟಿ ರೂಪವಾದ ದೇಶಕ್ಕೂ ಕೋಶಗಳಿವೆ ಎಂದು ಭಾವಿಸುವುದಾದರೆ ಕರ್ಣಾಟಕಕ್ಕೆ ಅನ್ನಮಯ ರೂಪವಾದ ಭೂ ಪ್ರದೇಶವಿರುವಂತೆಯೆ ಪ್ರಾಣಮನೋಮಯ ರೂಪವಾದ ಚಿತ್ ಪ್ರದೇಶವೂ ಇದೆ. ಚಿನ್ಮಯವೂ ಆಧಾತ್ಮಿಕವೂ ಆಗಿರುವ ಆ ಸಂಸ್ಕೃತಿಕೋಶವೆ ಕರ್ಣಾಟಕ ದೇವಿಯ ಸೂಕ್ಷ್ಮ ಶರೀರ. ನಶ್ವರವೂ ಚಂಚಲವೂ ಕಾಲಸನ್ನಿವೇಶವಶವೂ ಆಗಿರುವ ಭೂವಿಸ್ತೀರ್ಣ ರೂಪವಾದ ಲೀಲಾಸ್ಥೂಲ ಶರೀರವನ್ನು ಸರ್ವದಾ ಧಾರಣೆ ಮಾಡುತ್ತಿರುತ್ತದೆ ಆ ನಿತ್ಯ ಭಾವತನು. ಆ ಜ್ಯೋತಿಶ್ಶರೀರಿಯೆ ದೇವಿ. ಆ ದೇವಿಯ ಉಪಾಸನೆಯೆ ಕವಿ ಕಲಾವಿದ ತತ್ವಜ್ಞ ಸಾಧಕರಾದಿಯಾಗಿ ಸಕಲರ ಗಂತವ್ಯ ಮತ್ತು ಗಮ್ಯ. ಕರ್ಣಾಟಕದ ಕಾವ್ಯ ಸಂಸ್ಕೃತಿಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕನ್ನಡಿಗನು ಭೌಗೋಲಿಕವಾದ ಎಲ್ಲೆಗಳಿಂದ ಹೆದರಬೇಕಾದ್ದಿಲ್ಲ?.ಕನ್ನಡ ಕಾವ್ಯಗಳನ್ನೋದುವಾತನು ಅಮೆರಿಕೆಯಲ್ಲಿದ್ದರೂ ಅದು ‘ಕರ್ಣಾಟಕವೆ’ ‘ಪಂಪನನೋದುವ ನಾಲಗೆ’ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೆ. ‘ಕುಮಾರವ್ಯಾಸನನಾಲಿಪ ಕಿವಿ’ ಆಂಡಿಸ್ ಪರ್ವತವನ್ನೇರುತ್ತಿದ್ದರೂ ಅದು ಸಹ್ಯಾದ್ರಿಯೆ. ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡು’ ಎಂದು ನೃಪತುಂಗನು ಬಣ್ಣಿಸಿದ ಕರ್ನಾಟಕದ ನೆಲದ ಎಲ್ಲೆ ಇಂದು ಭೌಗೋಲಿಕವಾಗಿ ವ್ಯತ್ಯಸ್ತವಾಗಿರುವುದಕ್ಕಾಗಿ ನಾವು ಪರಿತಪಿಸುವುದು ಅನಾವಶ್ಯಕ. ಕಾವೇರಿ ಮತ್ತು ಗೋದಾವರಿಗಳು ನಿತ್ಯವೂ ನಿರ್ದಿಗಂತವಾಗಿ ವಿಸ್ತರಿಸುತ್ತಿರುವ ಕರ್ಣಾಟಕದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಭೂಮಿಕೆಯ ಗಡಿಗಳಿಗೆ ಸಂಕೇತ ಮಾತ್ರಗಳಾಗಿರಲಿ. ಅವು ಭಾವೋಪಯೋಗಿಗಳೆ ಹೊರತು ಲೋಕೋಪಯೋಗಿಗಳಾಗುವುದಿಲ್ಲ. ಏಕೆಂದರೆ ಮೈಸೂರಿನ ಎಲ್ಲೆ ರಾಜಕೀಯದಿಂದ ಭೌಗೋಲಿಕವಾಗಿ ನಿರ್ಣಯವಾಗಿದ್ದರೂ ಕರ್ಣಾಟಕದ ಸಾಂಸ್ಕೃತಿಕ ಮೇರೆ ನಮ್ಮೆಲ್ಲರಿಂದ ಮಾನಸಿಕವಾಗಿ ನಿರಂತರವೂ ನಿರ್ಣಯವಾಗುತ್ತಿರುತ್ತದೆ. ಕನ್ನಡಿಗರ ಸಂಸ್ಕೃತಿಗೆ ಪ್ರತಿಮಾರೂಪವಾಗಿರುವ ಕರ್ಣಾಟಕದ ವಿಸ್ತಾರ ನಿರ್ದಿಗಂತವಾದದ್ದು: ಅದರ ಔನ್ನತ್ಯ ನಿಶ್ಶಿಖರವಾದದ್ದು. ಅಂತಹ ಸಾಂಸ್ಕೃತಿಕ ಕರ್ಣಾಟಕದ ಸ್ಥಾಪನೆ ರಕ್ಷಣೆ, ಪೋಷಣೆ ಮತ್ತು ವಿಸ್ತರಣೆಗಳಿಗಾಗಿಯೆ ಸಹೃದಯ ಸಮಷ್ಟಿರೂಪವಾದ ಸಾಹಿತ್ಯ ಪರಿಷತ್ತು ನಿರಂತರವೂ ತಪಸ್ವಿಯಾಗಿ ದುಡಿಯಬೇಕಾಗಿದೆ. ಏಕೆಂದರೆ ಭೌಗೋಲಿಕವಾಗಿ ಕರ್ಣಾಟಕ ರಾಜ್ಯಸ್ಥಾಪನೆಯಾಯಿತು ಎಂದು ನಾವು ಸಡಿಲ ಬಾಳಿಗರಾಗಿ ಸುಮ್ಮನಾದರೆ ರಾಜ್ಯ ಸ್ಥಾಪನೆಯ ಮೂಲೋದ್ದೇಶವೆ ವಿಫಲವಾಗುತ್ತದೆ.” ಎಂಬ ಆಶಯದ ಕುವೆಂಪು ಅವರ ನುಡಿಗಳು ಏಕೀಕರಣ ವಿರೋಧಿ ಬಣದವರನ್ನು ಕಂಗೆಡೆಸಿದ್ದವು. ಮೈಸೂರು ಪ್ರಾಂತ್ಯದ ನಾಯಕರ ಮೇಲೆ ಹೆಚ್ಚಿನ ಒತ್ತಡವಿತ್ತು. ಕೆ.ಸಿ.ರೆಡ್ಡಿಯವರ ನೇತೃತ್ವದ ಮೈಸೂರು ಸರ್ಕಾರ ಕುವೆಂಪು ಅವರ ಧ್ವನಿಯನ್ನು ಅಡಗಿಸುವ ದುಸ್ಸಾಹಸಕ್ಕೆ ಕೈ ಹಾಕಿತು. ಕುವೆಂಪು ಅವರಿಗೆ ಎಚ್ಚರಿಕೆಯ ನೋಟೀಸೊಂದನ್ನು ನೀಡಿ ’ಕರ್ನಾಟಕ ಏಕೀಕರಣದ ಪರವಾಗಿ ಯಾವುದೇ ಹೇಳಿಕೆ ನೀಡಬಾರದು’ ಎಂದು ಎಚ್ಚರಿಸಿತು. ಇದು ಕುವೆಂಪು ಅವರನ್ನು ಕೆರಳಿಸಿತು. ನೋಟೀಸಿಗೆ ಉತ್ತರ ಕೊಟ್ಟರೊ ಬಿಟ್ಟರೊ. (ಬಹುಶಃ ಕೊಟ್ಟಿರಲಿಲ್ಲ. ಮುಂದೆ ಕೆಂಗಲ್ ಹನುಮಂತಯ್ಯನವರ ಸರ್ಕಾರ ಅದನ್ನು ಹಿಂಪಡೆಯುತ್ತದೆ.) ಆದರೆ ಕರ್ನಾಟಕ ಏಕೀಕರಣವನ್ನು ವಿರೋಧಿಸುತ್ತಿದ್ದ ರಾಜಕೀಯ ಮುತ್ಸದ್ದಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ’ಅಖಂಡ ಕರ್ಣಾಟಕ!’ ಎಂಬ ಪದ್ಯವನ್ನು ೨.೫.೧೯೪೯ರಂದು ಬರೆದು ಪ್ರತಿಕ್ರಿಯಿಸಿದರು. 
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ!
ಹರುಸಿತಿಹನು ದೇವ ಗಾಂಧಿ;
ಮಂತ್ರಿಸಿಹುದು ಋಷಿಯ ನಾಂದಿ;
ತನಗೆ ತಾನೆ ಋತಸ್ಯಂದಿ
ಅವಂದ್ಯೆ ಕವಿಯ ಕಲ್ಪನೆ!
ಒರ್ವನಾದೊಡೋರ್ವನಲ್ತು:
ಶಕ್ತಿ ಸರ್ವನಲ್ಪನೆ?
ಹಿಂದದೊಂದು ಹಿರಿಯ ಕನಸು:
ಇಂದು ಕೋಟಿ ಕೋಟಿ ಮನಸು
ಕೂಡಿ ಮೂಡಿ ನಿಂದ ನನಸು!
ತಡೆವುದೇನೊ ನಿನ್ನ ಕಿನಿಸು
ಒಣರುವಲ್ಪ ಜಲ್ಪನೆ?
ಭುವನ ವಂದ್ಯೆ, ಕೇಳ್, ಅವಂಧ್ಯೆ
ಕವಿಯ ವಿಂಧ್ಯಕಲ್ಪನೆ!
ಎಂದು, ಹಿಂದೆ ಹಿರಿಯ ಕನಸಾಗಿದ್ದ ಏಕೀಕರಣ ಇಂದು ಕೋಟಿ ಕೋಟಿ ಜನರ ಕನಸಾಗಿದೆ. ಅದಕ್ಕೆ ಹಿನ್ನೆಲೆಯಾಗಿ ಗಾಂಧಿಯ ಮಾರ್ಗವಿದೆ. ಆದರೂ ಅದೊಂದು ರಾಜಕೀಯ ನಾಟಕವಾಗಿದೆ. ಮುಂದುವರೆದು, 
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಗನ್ನಡ ಸರಸ್ವತಿಯ
ವಜ್ರಕರ್ಣಕುಂಡಲ!
ಬೂಟಾಟದ ರಾಜಕೀಯ ನಾಟಕ ತೊಲಗಿ ಹೊಸತೊಂದು ಸಚಿವ ಮಂಡಲವನ್ನು ಕವಿ ರಚಿಸುತ್ತಾರೆ. ನಾಡಿನ ಸಾಂಸ್ಕೃತಿಕ ಹಿನ್ನೋಟ-ಮುನ್ನೋಟಗಳಿಲ್ಲದ, ಇಂದು ಬಂದು ನಾಳೆ ಹೋಗುವ ಮಂತ್ರಿಗಳ ಗುಂಪೊಂದು ಏಕೀಕರಣವನ್ನು ವಿರೋಧಿಸಿರುವುದು ಕವಿಯನ್ನು ಕುಪಿತಗೊಳಿಸಿದೆ. ಅದಕ್ಕೆ ಅವರೇ ಸಾಂಸ್ಕೃತಿಕ ಕರ್ನಾಟಕದ ನಿತ್ಯ ಸಚಿವಮಂಡಲವೊಂದನ್ನು ರಚಿಸುತ್ತಾರೆ:
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ
ನೃಪತುಂಗನೆ ಚಕ್ರವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ!
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ:
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ,
ತನಗೆ ರುಚಿರ ಕುಂಡಲ!
ಸಾವಿರಾರು ವರ್ಷದಿಂದ ಸಾಂಸ್ಕೃತಿಕವಾಗಿ ಕರ್ನಾಟಕವನ್ನಾಳಿದ ಮಹೋನ್ನತ ವ್ಯಕ್ತಿತ್ವಗಳನ್ನು ಸೇರಿಸಿ ಕಟ್ಟಿದ ಸಚಿವ ಮಂಡಲದ ಗೊತ್ತು ಗುರಿಗಳನ್ನು ಸ್ಪಷ್ಟಪಡಿಸುತ್ತಾರೆ. ತನ್ಮೂಲಕ ಈಗಿನ ಸಚಿವ ಮಂಡಲದ ಹುಳುಕು-ಕೊಳಕುಗಳನ್ನು ಬಿಚ್ಚಿಡುತ್ತಾರೆ
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ
ಬರಿಯ ಹೊಟ್ಟೆ ಬಟ್ಟೆಗಲ್ತೊ;
ಪಕ್ಷ ಜಾತಿ ಕಲಹಕಲ್ತೊ;
ಹಮ್ಮು ಬಿಮ್ಮು ಸೊಮ್ಮಿಗಲ್ತೊ;
ಬಣ್ಣ ಚಿಟ್ಟೆ ಬಾಳಿಗಲ್ತೊ;
ಜೋಳವಾಳಿ ಕೂಳಿಗಲ್ತೊ;
ದರ್ಪ ಸರ್ಪ ಕರ್ಕೋಟಕ
ಸ್ವಾರ್ಥ ಫಣಾ ಕ್ರೀಡೆಗಲ್ತೊ;
ರಾಜಕೀಯ ಪೇಟಕ,
ಅಖಂಡ ಕರ್ಣಾಟಕ!
ಅಖಂಡ ಕರ್ಣಾಟಕ:ಸರಸ್ವತಿಯೆ ರಚಿಸಿದೊಂದರಾಜಕೀಯ ತ್ರೋಟಕ!
ಮೆರೆಯಲಾತ್ಮ ಸಂಸ್ಕೃತಿ;
ಬೆಳಗೆ ಜೀವ ದೀಧ್ಮಿತಿ;
ಪರಮಾತ್ಮನ ಚರಣದೀಪ್ತಿ
ಶರಣ ಹೃದಯಗಳಲಿ ಹೊತ್ತಿ
ಉಸಿರುಸಿರಿನ ಹಣತೆ ಬತ್ತಿ
ಉರಿಯಲೆಂದು ತಣ್ಣಗೆ;
ಬಾಳ ಸೊಡರ್ಗುಡಿಯ ನೆತ್ತಿ
ತನ್ನ ಮುಡಿಯ ಬಾನಿಗೆತ್ತಿ
ಸೊಗಸಲೆಂದು ರಸಸ್ಫೂರ್ತಿ
ಭಗವಂತನ ಕಣ್ಣಿಗೆ;
ಹಾಡುತಿಹೆನು ಕಂಡ ನಾನು;
ದಿಟ್ಟಗೇಡೊ? ಹುಟ್ಟು ಕುರುಡೊ?
ಬುದ್ಧಿ ಬರಡೊ? ಬೇರೆ ಹುರುಡೊ?
ಮೆಳ್ಳಗಣ್ಣ, ಕಾಣೆ ನೀನು!
ಹೇಳು! ತಪ್ಪು ನನ್ನದೇನು?
ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ! ಶಕ್ತಿ ಕಣಾ!
ತಾಯಿ ಕಣಾ! ದೇವಿ ಕಣಾ!
ಬೆಂಕಿ ಕಣಾ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಪ ಕಣ್ಣಿಗೆ!
ವಿರೋಧಿಗಾಸ್ಪೋಟಕ,
ಕಂಡ ಕವಿಗಖಂಡ ದೇವಿ ಕಣಾ ಕರ್ಣಾಟಕ!
ಸರಸ್ವತಿಯೆ ರಚಿಸೊಂದರಾಜಕೀಯ ತ್ರೋಟಕ!
ವಿರೋಧಿಗಾಸ್ಫೋಟಕ,
ಅಖಂಡ ಕರ್ಣಾಟಕ:
ಅಲ್ತೊ ನಮ್ಮ ನರ್ತಿಪೊಂದು ರಾಜಕೀಯ ನಾಟಕ!
ಅಖಂಡ ಕರ್ಣಾಟಕ!
ಅಖಂಡ ಕರ್ಣಾಟಕ!
ಜಯ್ ಜಯ್ ಜಯ್ ಅಖಂಡ ಕರ್ಣಾಟಕ!
ಕಣ್ಣಿದ್ದೂ ಕಾಣದ, ಬೇಕೆಂದೇ ವಕ್ರವಾಗಿ ಕಾಣುವ ರಾಜಕಾರಣಿಗಳನ್ನು ಮೆಳ್ಳಗಣ್ಣ ಎಂದು ಕರೆದಿದ್ದಾರೆ. ಕರ್ಣಾಟಕ ಎಂಬುದು ಕೇವಲ ಭೌಗೋಳಿಕ ವಿಸ್ತಾರವನ್ನು ಸೂಚಿಸುವ ಮಣ್ಣಲ್ಲ ಎಂಬುದಕ್ಕೆ ಒತ್ತು ಕೊಟ್ಟು ’ಮಂತ್ರ ಕಣಾ! ಶಕ್ತಿ ಕಣಾ! ತಾಯಿ ಕಣಾ! ದೇವಿ ಕಣಾ! ಬೆಂಕಿ ಕಣಾ! ಸಿಡಿಲು ಕಣಾ!’ ಎಂದು ಎಚ್ಚರಿಸುತ್ತಾರೆ. ಕನ್ನಡ, ಕರ್ನಾಟಕ ಎಂಬುದು ಕೇವಲ ಭಾಷೆ, ನಾಡು ಎಂಬ ಸೀಮಿತಾರ್ಥವನ್ನು ಮೀರಿದ, ಭಾವನಾತ್ಮಕವಾದ ಮತ್ತು ಸಾಂಸ್ಕೃತಿಕವಾದ ಪರಿಭಾಷೆ ಎಂಬುದನ್ನು ಮನಗಾಣಿಸುತ್ತಾರೆ. ಈ ಕವಿತೆ ಸಭೆ ಸಮಾರಂಭಗಳಲ್ಲಿ ಓದಲ್ಪಟ್ಟು ವಿರೋಧಿಗಳಿಗೆ ಮುಟ್ಟಿ ನೋಡಿಕೊಳ್ಳುವಂತಾಗುತ್ತದೆ. ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ರಾಜಕಾರಣಿಗಳು ಮಾತ್ರ ಸುಮ್ಮನಿರಲಿಲ್ಲ. ಅವರದೇ ಕ್ರಮದಲ್ಲಿ ಕಾರ್ಯೋನ್ಮುಖರಾಗುತ್ತಾರೆ. ೧೯೪೯ರಲ್ಲಿ ’ಮೈಸೂರಿನ ಪ್ರಜಾಪ್ರತಿನಿಧಿ ಸಭೆಯಲ್ಲಿ ಏಕೀಕರಣಕ್ಕೆ ಇದು ಸಕಾಲವಲ್ಲ’ ಎಂಬ ನಿರ್ಣಯ ಅಂಗೀಕರಿಸುತ್ತಾರೆ. ಅವರು ರಾಜಕೀಯವಾಗಿ ನೀಡಿದ ಪ್ರತಿಕ್ರಿಯೆಗೆ ಕುವೆಂಪು ಸಾಂಸ್ಕೃತಿಕವಾಗಿ ೧.೧೧.೧೯೪೯ರಂದು ’ಕರ್ಣಾಟಕ ಮಂತ್ರದೀಕ್ಷೆ’ ಎಂಬ ಕವಿತೆಯ ಮೂಲಕ ಪ್ರತಿಕ್ರಿಯಿಸುತ್ತಾರೆ. 
ದೀಕ್ಷೆಯ ತೊಡು ಇಂದೇ;
ಕಂಕಣ ಕಟ್ಟಿಂದೇ!
ಕನ್ನಡ ನಾಡೊಂದೇ;
ಇನ್ನೆಂದೂ ತಾನೊಂದೇ!
ನೃಪತುಂಗನ ದೊರೆಮುಡಿ ಸಾಕ್ಷಿ!ಪಂಪನ ಪದ ಧೂಳಿಯ ಸಾಕ್ಷಿ!
ಕೂಡಲ ಸಂಗನ ಅಡಿ ಸಾಕ್ಷಿ!
ಗದುಗಿನ ಕವಿದೇವನ ಸಾಕ್ಷಿ!
ದೀಕ್ಷೆಯ ತೊಡು ಇಂದೇ . . . .
ಇಡು ಸಹ್ಯಾದ್ರಿಯ ಮೇಲಾಣೆ!ಇಡು ಕಾವೇರಿಯ ಮೇಲಾಣೆ!
ಇಡು ಚಾಮುಂಡಿಯ ಮೇಲಾಣೆ!
ಇಡು ಗೊಮ್ಮಟ ಗುರುದೇವಾಣೆ!
ದೀಕ್ಷೆಯ ತೊಡು ಇಂದೆ . . . .
ಕಾಣಲಿ ಕನ್ನಡ ವ್ಯೋಮಾಕ್ಷಿ!ನಿಲ್ಲಲಿ ರವಿ ಚಂದ್ರರ ಸಾಕ್ಷಿ!
ಕೇಳಲಿ ಕನ್ನಡ ಪಶು ಪಕ್ಷಿ!
ಸರ್ವ ದೇವರೂ ಶ್ರೀ ಸಾಕ್ಷಿ!
ದೀಕ್ಷೆಯ ತೊಡು ಇಂದೆ . . . .
ಇಡು ನಿನ್ನಯ ಸತಿಯಾಣೆ!ಇಡು ನಿನ್ನಯ ಪತಿಯಾಣೆ!
ಮಕ್ಕಳ ಮೇಲಾಣೆ!
ಅಕ್ಕರೆ ಮೇಲಾಣೆ!
ಗುರುದೇವರ ಆಣೆ!
ನನ್ನಾಣೆ!
ನಿನ್ನಾಣೆ!
ಕನ್ನಡ ಜನರೆಲ್ಲರ ಮೇಲಾಣೆ!
ಕನ್ನಡ ನಾಡೊಂದಾಗದೆ ಮಾಣೆ!
ತೊಡು ದೀಕ್ಷೆಯ! ಇಡು ರಕ್ಷೆಯ!
ಕಂಕಣ ಕಟ್ಟಿಂದೇ
ಇನ್ನೆಂದೂ ತಾನೊಂದೇ!
ಕನ್ನಡ ನಾಡೊಂದೇ!
ಕುವೆಂಪು ಅವರ ಏಕೀಕರಣ ಪರವಾದ ನಿಲುವನ್ನು ರಾಜಕೀಯ ಕಾರಣದಿಂದ ವಿರೋಧಿಸುತ್ತಿದ್ದವರೆಲ್ಲರೂ, ವೈಯಕ್ತಿಕವಾಗಿ ಕವಿಯ ಬಗ್ಗೆ ಗೌರವಾಧರಗಳನ್ನು ಇಟ್ಟುಕೊಂಡಿದ್ದವರೆ. ಇಲ್ಲದಿದ್ದರೆ ಅಧಿಕಾರ ರಾಜಕಾರಣದ ಮನಸ್ಸುಗಳು ಅಷ್ಟು ಬೇಗ ಬದಲಾಗುವುದಿಲ್ಲ. ಕುವೆಂಪು ಅವರಂತೆ ಏಕೀಕರಣಕ್ಕೆ ತಪೋಶ್ರೀರಕ್ಷೆಯನ್ನು ಕಟ್ಟಿದ ಸಹಸ್ರಾರು ಮಹನೀಯರ ಕಾರಣದಿಂದ ಹಾಗೂ ಐತಿಹಾಸಿಕ ಕಾರಣದಿಂದ ಕರ್ನಾಟಕ ಏಕೀಕರಣವಾಗುವ ಸಂದರ್ಭ ಬಂದೇ ಬಿಡುತ್ತದೆ. ೧೯೫೩ ಜನವರಿ ೩ರಂದು ಹೈದರಾಬಾದ್‌ನ ನಾನಲ ನಗರದಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಇಡೀ ಚಿತ್ರಣವೇ ಬದಲಾಗುತ್ತದೆ. ಕಾರ್ಯಸೂಚಿಯಲ್ಲಿ ನಿರ್ಣಯ ಮಂಡನೆಗೆ ಅವಕಾಶ ವಿಲ್ಲದಿದ್ದಾಗ್ಯೂ, ಹಾರನಹಳ್ಳಿ ರಾಮಸ್ವಾಮಿಯವರು ಮಂಡಿಸಿದ ’ಕರ್ಣಾಟಕ ಏಕೀಕರಣ ನಿರ್ಣಯ’ವನ್ನು ಮಂಡಿಸುತ್ತಾರೆ. ಏಕೀಕರಣಕ್ಕೆ, ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ ಅವರಿಗೆ ಮೊದಲಿದ್ದ ವಿರೋಧವನ್ನು ತಿಳಿದಿದ್ದ ನೆಹರೂ ಅವರು, ಏಕೀಕರಣ ನಿರ್ಣಯಕ್ಕೆ ಉತ್ತರಿಸುವಾಗ,, ’ಏಕೀಕರಣದ ಪರ ಅರವತ್ತಕ್ಕೂ ಹೆಚ್ಚು ಜನ ಶಾಸಕರು ಸಹಿ ಹಾಕಿರಬಹುದು. ಆದರೆ ನಿಮ್ಮ ಮುಖ್ಯಮಂತ್ರಿಗಳೇ ಏಕೀಕರಣದ ಪರವಾಗಿಲ್ಲ. ಇನ್ನು ಏಕೀಕರಣ ಹೇಗೆ ಸಾಧ್ಯ?’ ಎಂದು ಪ್ರಶ್ನಿಸುತ್ತಾರೆ. ’ಅವಕಾಶ ಕೊಟ್ಟರೆ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ’ ಎಂದ ಕೆಂಗಲ್ ಅವರು ಕನ್ನಡ ಭಾಷೆ ಸಾಹಿತ್ಯ ಇತಿಹಾಸ ಇವುಗಳ ಹಿರಿಮೆ ಗರಿಮೆಗಳನ್ನು ಕುರಿತು ಮಾತನಾಡಿ, ’ಅಖಂಡ ಕರ್ನಾಟಕ ರಚನೆಗೆ, ಕಾಯಾ, ವಾಚಾ, ಮನಸಾ ನನ್ನ ಬೆಂಬಲವಿದೆ. ಪ್ರಧಾನಿ ಪಂಡಿತ್ ನೆಹರು ಅವರು ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ಸ್ಪಂದಿಸಿ ಕರ್ನಾಟಕ ಏಕೀಕರಣಕ್ಕೆ ಪೂರಕ ಭೂಮಿಕೆ ಸಿದ್ಧಪಡಿಸಲು ನೆರವಾಗಬೇಕು’ ಎನ್ನುತ್ತಾರೆ. ಸ್ವತಂತ್ರ್ಯಾನಂತರ ಆರು ವರ್ಷಗಳ ಬಳಿಕ ಕರ್ನಾಟಕ ಏಕೀಕರಣಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ವೇದಿಕೆ ಸಿದ್ಧವಾಗುತ್ತದೆ. ಪ್ರಾರಂಭದಲ್ಲಿ ವಿರೋಧಿಸಿದ್ದ ಕೆಂಗಲ್ ಹನುಮಂತಯ್ಯನವರು ಪೂರ್ವಾಗ್ರಹ ಪೀಡಿತರಾಗದೆ ಜನಗಳ ಭಾವನೆಗೆ ಸ್ಪಂದಿಸಿದ್ದರು. ತಾವು ಮುಖ್ಯಮಂತ್ರಿಯಾಗಿದ್ದಾಗಲೇ, ಅಂದರೆ ೧೯೫೬ರಲ್ಲೇ ಕರ್ನಾಟಕದ ಏಕೀಕರಣದ ಕನಸು ನನಸಾಗುವಂತೆ ಮಾಡಿದರು.
ಕರ್ನಾಟಕದ ಏಕೀಕರಣವಾದಾಗ, ೧.೧೧.೧೯೫೬ರಂದು ’ಕರ್ಣಾಟಕ ರಾಜ್ಯೋದಯ ಶ್ರೀಗೀತೆ’ಯನ್ನು ಬರೆದು, 
ಓ ತಾಯಿ ಭಾರತಿಯೆ, ನಿನ್ನ ಮಗಳನು ಹರಸು.
ವರುಷ ಒಂಬತ್ತರಾಚೆಯಲಿ ಬಂಧಮುಕ್ತಳಾದಂದು
ನೀ ಕಂಡ ಕನಸು,
ಎರಡು ಕೋಟಿಯ ಹೃದಯದಲಿ ಶತಮಾನದಿಂ ಕುದಿದ ಒಮ್ಮನಸು,
ದುರ್ಮುಖಿಯೆ ಸುಮುಖಿ ತಾನಾದ ದೀವಳಿಯ ಸುದಿನದಂದು
ತಾನಾಗಿಹುದು ನನಸು!
ಎಂದು ಹಾಡುತ್ತಾರೆ.
ಓ ಏಳು, ನೃಪತುಂಗದೇವ,
ಕೃಪೆಯಿಟ್ಟು ಕವಿರಾಜದರಮನೆಯ ಸಿಂಹಾಸನವನಿಳಿದು ಬಾ
ಕರ್ಣಾಟಕದ ನಿನ್ನ ಈ ಹೆಸರ ತಾಯ್ನೆಲಕೆ.
ನೀನಂದು ಹಾಡಿದಾ ಕನ್ನಡದ ನಾಡು
ಒಂದುಗೂಡಿದೆ ಇಂದು ಇದೊ ಬಂದು ನೋಡು.
ಎಂದು ಏಕೀಕರಣದ ಕನಸು ಸಾವಿರ ವರ್ಷಕ್ಕೂ ಹಿಂದಿನದು ಎಂಬುದನ್ನು ಮನಗಾಣಿಸುತ್ತಾರೆ.
ಕರ್ನಾಟಕವೇನೋ ಒಂದಾಯಿತು. ಆದರೆ ಮನಸುಗಳು ಒಂದಾದವೆ? ಉತ್ತರ ದಕ್ಷಿಣ ಎಂದು ಕಿತ್ತಾಡುತ್ತಿದ್ದ ಕನ್ನಡ ಮಂದಮತಿಗಳನ್ನು ಕಂಡು ಕವಿಗೆ ’ಇವರನ್ನು ಸರಿಪಡಿಸಲು ಶಿವನೇ ಬರಬೇಕು’ ಅನ್ನಿಸುತ್ತದೆ. ೨೮.೪.೧೯೬೦ರಂದು ’ಮಾನಸಗಂಗೋತ್ರಿ’ಯ ಪ್ರಾರಂಭೋತ್ಸವ ಸಂದರ್ಭದಲ್ಲಿ ಹಾಡಿದ ’ಕನ್ನಡ ಡಿಂಡಿಮ’ ಕವಿತೆ ಪರೋಕ್ಷವಾಗಿ ಪ್ರಸ್ತಾಪಿಸುತ್ತದೆ.
ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯಶಿವ!
ಕರ್ನಾಟಕ ಏಕೀಕರಣವಾಗಿ ಹದಿನೇಳು ವರ್ಷಗಳ ನಂತರ ’ವಿಶಾಲ ಮೈಸೂರು ರಾಜ್ಯ’ ’ಕರ್ನಾಟಕ’ ಎಂದು ಕರೆಸಿಕೊಂಡಿತು. ಏಕೀಕರಣಕ್ಕೆ ಮೊದಲು ವಿರೋಧವಿದ್ದರೂ, ತಮ್ಮ ಹೃದಯ ವೈಶಾಲ್ಯತೆಯಿಂದ, ಏಕೀಕರಣಕ್ಕೆ ಕಾರಣಕರ್ತರಾದ ಕೆಂಗಲ್ ಹನುಮಂತಯ್ಯನವರಂತೆಯೇ, ಹಿಂದೆ ಏಕೀಕರಣಕ್ಕೆ ವಿರೋಧಸಿದ್ದ ಇನ್ನೊಬ್ಬ ನಾಯಕ, ದೇವರಾಜ ಅರಸು ಅವರು ’ಕರ್ನಾಟಕ’ ಎಂದು ಹೆಸರು ಬದಲಾಯಿಸುವಲ್ಲಿ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಯಿತು.

Thursday, June 21, 2012

ನಡುವೆ ನಿಂತುದದೊಂದೆ ವಿಶ್ವದಾ ಶಿಶುಮೂರ್ತಿ


೫-೧೨-೧೯೩೧ರಂದು ಸಂಜೆ, ಕುವೆಂಪು ಅವರು, ಅಜ್ಜಂಪುರ ಸೀತಾರಾಂ ಅವರೊಂದಿಗೆ ಒಂಟಿಕೊಪ್ಪಲಿನಿಂದ ಆಚೆ, ತುಸು ದೂರವಿದ್ದ, ಹೊಲಗಳ ಕಡೆ ವಾಯುಸಂಚಾರಕ್ಕೆ ಹೋಗಿರುತ್ತಾರೆ. ದೂರದ ದಿಗಂತದ ಪರ್ವತರೇಖೆಗಳನ್ನು, ನಿಂತಲ್ಲಿಂದ ಕಾಣುತ್ತಿದ್ದ ಚಾಮುಂಡಿ ಬೆಟ್ಟದ ದೃಶ್ಯವನ್ನು, ಬಯಲಿನಲ್ಲಿ ಗುಂಪು ಗುಂಪಾಗಿ ಕುಳಿತಿದ್ದ ತೇನೆಹಕ್ಕಿಗಳನ್ನು ಕುರಿತು ಮಾತನಾಡುತ್ತಾ, ಕಲ್ಲು ದಿಣ್ಣೆಯಿಂದ ಕೂಡಿದ ಜಾಗಕ್ಕೆ ಬರುತ್ತಾರೆ. ಅಲ್ಲಿಂದ ಮುಂದಕ್ಕೆ ಕಂಡ ದೃಶ್ಯ ಆಪ್ಯಾಯಮಾನವಾಗಿತ್ತು. ಅದೊಂದು ’ಹುಚ್ಚೆಳ್ಳು’ ಹೊಲವಾಗಿದ್ದು, ಇಡೀ ಬಯಲು ಹಳದಿಯ ಮಯವಾಗಿತ್ತು. ಹೊಲದಲ್ಲಿ ರಾಗಿಯ ಹುಲ್ಲು ಕೊಯ್ಯುತ್ತಿದ್ದ ರೈತನೊಬ್ಬ ಹತ್ತಿರ ಬಂದು, ’ಬುದ್ದೀ, ಕೂತುಕೊಳ್ಳಿ. ಹವಾ ಚೆನ್ನಾಗಿದೆ’ ಎಂದು ಉಪಚಾರ ಮಾಡಿದ. ಆತನೂ ಅವರ ಜೊತೆಯಲ್ಲಿ ಕುಳಿತ. ಮಾತು ಮಳೆ-ಬೆಳೆ, ರೈತ-ಬದುಕು ಎಂದು ಸಾಗಿತ್ತು. ಮಾತನಾಡುತ್ತ ಹುಚ್ಚೆಳ್ಳನ್ನು ’ಅಚ್ಚೆಳ್ಳು’ ಎಂದು ಕರೆದಾಗ ರೈತ ಅದನ್ನು ನಯವಾಗಿ ತಿದ್ದಿದ. ’ಇದು ಹುಚ್ಚೆಳ್ಳು, ಸ್ವಾಮೀ. ಎಳ್ಳಿನ ಹೂವು ಹೀಗೆ ಹಳದಿಯಾಗಿರೋದಿಲ್ಲ. ಅದರ ಹೂವು ನಿಮ್ಮ ಪಂಚೆಯಂತೆ ಬೆಳ್ಳಗಿರುತ್ತದೆ. ಕಾಯಿ ನಿಮ್ಮ ಕವಚದಂತೆ (ನೀಲಶ್ಯಾಮಲ) ಇರುತ್ತದೆ ಎನ್ನುತ್ತಾನೆ. ಆತನ ನಡೆನುಡಿಗಳಲ್ಲಿ ಪ್ರಕೃತಿಗೆ ಸಹಜವಾದ ಸರಳತೆ-ಮೈತ್ರಿಗಳು ಹೊರಹೊಮ್ಮುತ್ತಿದ್ದುದನ್ನು ಕವಿ ಗುರುತಿಸುತ್ತಾರೆ. ಆ ಸುಂದರ ಸಂಜೆಯಲ್ಲಿ, ಹುಚ್ಚೆಳ್ಳು ಹೊಲದ ನಡುವೆ ಕುಳಿತು ಆ ರೈತನ ಎದುರು ತಮ್ಮ ರಚನೆಗಳಾದ ’ನೇಗಿಲಯೋಗಿ’ ’ಹೊಲದ ಹುಡುಗಿ’ ’ಸಂಜೆವೆಣ್ಣು’ ಕವಿತೆಗಳನ್ನು ಹಾಡುತ್ತಾರೆ. ಪಶ್ಚಿಮದಲ್ಲಿ ಸಂಧ್ಯಾ ಅರುಣರಾಗವು ಜಡೆಜಡೆಯಾದ ಮೇಘಗಳಲ್ಲಿ ಅದ್ಭುತವಾಗಿ ರಂಜಿಸುತ್ತಿತ್ತಂತೆ, ಆಗ. ಆತ ’ಸರ‍್ಕಾರಕ್ಕೆ ದುಡ್ಡು ಕೊಟ್ಟು ಜಮೀನು ಖರೀದಿಸಿದ್ದು, ಕಟ್ಟುವ ದುಬಾರಿ ಕಂದಾಯ ಇವುಗಳ ನಡುವೆ ಮಳೆ ನಡೆಸಿದರೆ ಮಾತ್ರ ರೈತ ಬದುಕಬೇಕಾದ ಸಂದರ್ಭ’ ಇವುಗಳನ್ನು ಕುರಿತು ಮಾತನಾಡುತ್ತಾನೆ. ಆತನ ಮಾತುಗಳಲ್ಲಿ ಯಾರೊಬ್ಬರ ಬಗ್ಗೆಯೂ ದ್ವೇಷವಾಗಲಿ, ಆವೇಶವಾಗಲಿ, ಕುರುಬಾಗಲೀ ಕಾಣುವುದಿಲ್ಲ, ಕವಿಗೆ. ಮಾತು ಮುಗಿಯುವಷ್ಟರಲ್ಲಿ ಕತ್ತಲಾವರಿಸುತ್ತದೆ. ಮನೆಯ ಕಡೆ ಹೊರಟಾಗ ಆತ ’ನಾಳೆ ಬನ್ನಿ, ಸ್ವಾಮೀ. ಹವಾ ಚೆನ್ನಾಗಿರುತ್ತದೆ. ನಾನೂ ಬರುತ್ತೇನೆ. ಇಲ್ಲಿಗೆ’ ಎಂದು ಆಹ್ವಾನ ನೀಡುತ್ತಾನೆ. ಅಂದು ನಡೆದ ಕವಿ-ರೈತ ನಡುವಿನ ಸಂಭಾಷಣೆಯಲ್ಲಿ ಯುಗಗಳ ಮೈತ್ರಿ ಇತ್ತು ಎನ್ನುತ್ತಾರೆ, ಕವಿ. ಆ ಸಂದರ್ಭವನ್ನು ಕುರಿತು ಅಂದಿನ ದಿನಚರಿಯಲ್ಲಿ ಹೀಗೆ ಬರೆದಿದ್ದಾರೆ.
’.... ಆ ರೈತನ ಮುದ್ದಾದ ಬಡ ಮೂರುತಿಯೊಂದೆ ಮನಸ್ಸನ್ನು ತುಂಬಿತು..... ದಾರಿಯಲ್ಲಿ ಆತನೊಬ್ಬನೇ ನಮ್ಮ ಮಾತಿನ ಮನಸ್ಸಿನ ಹೃದಯದ ಹಿರಿಯ ಮೂರ್ತಿಯಾದನು. ನನ್ನ ಜೀವಮಾನದಲ್ಲಿ ಅವನೊಡನೆ ಮಾತಾಡಿದಂತೆ, ಅವನನ್ನು ಒಲಿದಂತೆ, ಅವನಿಗಾಗಿ ಮರುಗಿ ಕರಗಿದಂತೆ ಅನೇಕ ಜನಗಳಿಗೆ ಕರಗಿಲ್ಲ ಮರುಗಿಲ್ಲ, ಕೊರಗಿಲ್ಲ, ನಾಳೆ ಹೋಗಲು ಸಮಯವಿಲ್ಲ. ನಾಡಿದ್ದಾದರೂ ಅಲ್ಲಿಗೆ ಹೋಗಿ ಪುನಃ ಆತನೊಡನೆ ಮಾತಾಡುವೆನು. ಹೇ ಸರಸ್ವತಿಯೇ, ಆ ರೈತನ ಮೈತ್ರಿಯನ್ನು ನನ್ನೆದೆಯಲ್ಲಿ ಹರಿಸಿ ಕವನವಾಹಿನಿಯಾಗುವಂತೆ ಮಾಡು! ಅಯ್ಯೋ ಅವನ ಹೆಸರು ಕೇಳುವುದನ್ನೆ ಮರೆತನಲ್ಲಾ!’
ಕವಿಯು ಸರಸ್ವತಿಯಲ್ಲಿಟ್ಟ ಮೊರೆ ವ್ಯರ್ಥವಾಗಲಿಲ್ಲ. ಬಹುಶಃ ಮಾರನೆಯ ದಿನವೇ ’ಹೊಲದ ಕವಿ’ ಎಂಬ ಕವಿತೆಯ ರಚನೆಗೆ ತೊಡಗುತ್ತಾರೆ. ಅದರ ಮಾರನೆಯ ದಿನದ (೭-೧೨-೧೯೩೧) ದಿನಚರಿಯಲ್ಲಿ ಹೇಳಿರುವಂತೆ - ’ಹೊಲದ ಕವಿ’ ಪೂರೈಸಿದೆ - ಎಂದಿದೆ. ಆ ಕವಿತೆಯ ಓದಿಗೂ ಮುಂಚೆ, ಕವಿತೆಯ ಹೆಸರು ’ಕಿಟ್ಟಯ್ಯ’ ಎಂದು ಬದಲಾಗಿದ್ದರ ಕಾರಣ ತಿಳಿಯಬಹುದು. ಎಂಟನೆಯ ತಾರೀಖು ’ಹೊಲದ ಕವಿ’ಯ ಹೊಲಕ್ಕೆ ಕವಿ ಹೋಗುತ್ತಾರೆ. ಅಲ್ಲಿ ಆತನನ್ನು ಕಂಡು ಮಾತನಾಡಿಸಿ, ರಾಮಕೃಷ್ಣ ಪರಮಹಂಸರ ವಿಚಾರ ತಿಳಿಸಿ, ಆತನ ಹೆಸರು ’ಕಿಟ್ಟಯ್ಯ’ ಎಂದು ತಿಳಿದು ಕವಿ ಹಿಂದಿರುಗುತ್ತಾರೆ. ಕವಿತೆಯ ಶೀರ್ಷಿಕೆ ’ಕಿಟ್ಟಯ್ಯ’ ಎಂದು ಬದಲಾಗುತ್ತದೆ. ’ಹೊಲದ ಕವಿ ಕಿಟ್ಟಯ್ಯ’ ಎನ್ನಬಹುದಾದ ಈ ಕವಿತೆ ೨೨೦ ಸಾಲುಗಳವರೆಗೂ ವಿಸ್ತರಿಸಿರುವ ಕಥನಕವನವಾಗಿದೆ.
ಆನಂದನೊಡಗೂಡಿ ಸಂಜೆಯಲಿ ಸಂಚರಿಸೆ
ಆಶ್ರಮವನುಳಿದು ಪಡುವಣದೆಸೆಗೆ ತಿರುಗಿದೆನು
ಒಟಿಕೊಪ್ಪಲಿನಾಚೆ ಹಬ್ಬಿರುವ ದಿಬ್ಬಕ್ಕೆ.
ಎಂದು ಕವಿತೆ ಆರಂಭವಾಗುತ್ತದೆ. ತಲುಪಿದ ಜಾಗದ ಬಗ್ಗೆ ಹೀಗೆ ಬರೆಯುತ್ತಾರೆ.
.... ನಿಂತು ನೋಡಿದೆವು
ನಮ್ಮ ಬಲ ಭಾಗದಲಿ ಮೈಸೂರು ಚಾಮುಂಡಿ;
ಎದುರಿನಲಿ ಉತ್ತು ಬಿತ್ತಿದ ಹೊಲದ ಹಸುರಿನಲಿ
ಅಲ್ಲಲ್ಲಿ ಬೆಳೆದ ಮರಗಳು; ದೂರ ದೂರದಲಿ
ಅಲೆಯೇರಿ ಹಾರಿಬಹ ಬಯಲುಸೀಮೆಯ ಭೂಮಿ;
ಎಡದ ಭಾಗದಲೊಂದು ಹಿರಿಯ ದಿಣ್ಣೆಯ ಬೋರೆ
ಸಂಜೆಗೆಂಪಿನ ಬಾನಿಗೆದುರಾಗಿ ಹಬ್ಬಿತ್ತು;
ಹಿಂದುಗಡೆ ಹೊಲ, ಹಳ್ಳಿ. ಆ ಸೊಬಗು, ಆ ಶಾಂತಿ,
ಆ ಮಧುರ ನಿರ್ಜನತೆ, ಹಲಕೆಲವು ಪಕ್ಷಿಗಳ
ಕೂಜನದಿ ಹೊರೆಯೇರುತಿದ್ದ ಆ ನೀರವತೆ,
ಎಲ್ಲವೂ ಭವ್ಯತೆಯ ಸೀಮೆಯಲ್ಲಿ ನೆಲೆಸಿತ್ತು!
ಕಬ್ಬಿಗನು ಕತೆಗಾರರಿಬ್ಬರೂ ಮಾತುಳಿದು
ಗಾಢವಾಗುತಲಿದ್ದ ಧ್ಯಾನದಲಿ ಮುಳುಗಿದರು!
ಆಗ ಅವರಿಗೆ ’ಕೂತುಕೊಳ್ಳೀ ಬುದ್ದಿ!’ ಎಂಬ ಧ್ವನಿ ಕೇಳಿಸುತ್ತದೆ. ಧ್ವನಿ ಬಂದ ಕಡೆ ನೋಡಿದಾಗ ಕಂಡುದ್ದು,
ಸ್ವರ್ಣವರ್ಣದ ಲಕ್ಷ ಪುಷ್ಪಗಳ ಶೋಭೆಯಲಿ
ಮೆರೆದಿದ್ದ ಹುಚ್ಚೆಳ್ಳು ಗಿಡಗಳಾ ಹೊಲದಲ್ಲಿ,
ರೈತನೊಬ್ಬನು ತನ್ನ ಕಾರ್ಯದಲಿ ತೊಡಗಿದುದು.
ಹತ್ತಿರ ಬಂದ ರೈತ ’ಕೂತುಕೊಳ್ಳೀ ಬುದ್ದಿ! ಹವವು ಚೆನ್ನಾಗಿಹುದು!’ ಎಂದು ಉಪಚಾರ ಮಾಡುತ್ತಾನೆ. ಕವಿಯೆದುರಿಗೆ ಕುಳಿತು ಮಾತನಾಡುತ್ತಿರುವ ಮುಗ್ಧ ರೈತನ ಚಿತ್ರಣ ಹೀಗಿದೆ.
ಆ ವಾಣಿಯಾಹ್ವಾನದಲಿ ಎನಿತು ಸರಳತೆ,
ಎನಿತು ಆದರವೆನಿತು ವಾತ್ಸಲ್ಯವೆನಿತೊಲ್ಮೆ!
ಆ ಮಾತಿನಾ ಮೋಹದಿಂಪಿನಲಿ ಸೆರೆಸಿಕ್ಕಿ
ಮರುಳಾಗಿ ಮುಗ್ಧಭಾವದಿನಲ್ಲಿ ಕುಳಿತುಬಿಡೆ,
ಮೆಲುಮೆಲನೆ ಮಾತು ತೆಗೆದನು ನೇಗಿಲಿನ ಯೋಗಿ.
ರೈತನ ಮಾತುಗಳನ್ನು ಕವಿಯ ಕಿವಿ ಕೇಳುತ್ತಿದ್ದರೆ, ಕಣ್ಗಳು ಹನಿತುಂಬಿ ಆತ್ಮೀಯತೆಯಿಂದ ಆ ಪುಣ್ಯಮೂರ‍್ತಿಯನ್ನು ತುಂಬಿಕೊಂಡವಂತೆ. ಆತನೇ ದೇವಮೂರ‍್ತಿ; ಮುಳುಗುತ್ತಿರುವ ಸಂಧ್ಯೆಯ ಸೂರ್ಯನೇ ಆ ಪುಣ್ಯಮೂರ್ತಿಗೆ ಆರತಿ ಎತ್ತುತ್ತಿರುವಂತೆ ಕಾಣುತ್ತದೆ, ಕವಿಗೆ.
ಅವನ ಮೈಯಲ್ಲಿ ಹರಕು ಅಂಗಿ; ಮೊಳಕಾಲಿನಲಿ
ಚಿಂದಿ ಪಂಚೆ: ಆ ಮನೋಹರ ಮಂಗಳದ ಮೂರ್ತಿ!
ಮುಳುಗುತಿಹ ಕನಕಮಯ ಸಂಧ್ಯೆಯ ದಿವಾಕರನು,
ಬೈಗುವೆಣ್ಣಿನ ಕುಂಕುಮದ ಮಂಗಳಾರತಿಯು,
.............. ........... ......... ಮಿಗಿಲೆನಿಸಿ ಆ
ಹಸುರು ಹುಚ್ಚೆಳ್ವೊಲದ ಪುಷ್ಪಿತ ಹರಿದ್ರದಲಿ
ರೈತನೆಸೆದನು ತನ್ನ ಶುಭದ ದಾರಿದ್ರ್ಯದಲಿ!
ಮನೆಗೆ ಬಂದ ಅತಿಥಿಗಳನ್ನು ಸ್ವಾಗತಿಸುವಂತೆ ತನ್ನ ಹೊಲಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸಿ, ಕೂರಿಸಿ ಮಾತನಾಡಿಸುವ ರೈತನನ್ನು ಕವಿ ಕತೆಗಾರರಿಬ್ಬರೂ ಆತನ ಮಾತಿನ ಮೋಡಿಗೆ ಒಳಗಾದವರಂತೆ ಕೇಳುಗರಾಗಿಬಿಡುತ್ತಾರೆ. ’ಶುಭದ ದಾರಿದ್ರ್ಯ’ ಎಂಬ ಮಾತು ವಿಶೇಷವಾಗಿದೆ. ಆತ ತನ್ನ ಇಡೀ ಸಂಸಾರದ ಕಥೆಯನ್ನು ಅವರೆದುರು ಬಿಡಿಸಿಡುತ್ತಾನೆ. ಯಾರನ್ನೂ ದೂರುವುದಿಲ್ಲ; ನಿಂದಿಸುವುದಿಲ್ಲ. ಎಲ್ಲವನ್ನೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.
ಮೂರು ಎಕ್ಕರೆ ಭುಮಿ ನನಗಿಹುದು, ಬುದ್ದಿ. ಅದು
ನಮ್ಮ ತಂದೆಯ ತಂದೆ ಕೊಂಡಿದ್ದು, ಆರ‍್ನೂರು
ರುಪಾಯಿ ನಗದು ಹಣ ಸುರಿದು ಸರಕಾರಕ್ಕೆ
ಕೊಂಡುದಿದು. ಆದರೂ ವರುಷ ವರುಷವು ನಾವು
ಕಂದಾಯ ಕೊಡಬೇಕು! ಆರುವರೆ ರುಪಾಯಿ!
ಎಂದು ತನ್ನ ಹೊಲದ ಎಲ್ಲೆಯನ್ನು ತೋರಿಸುತ್ತಾನೆ. ಆದರೆ ಆ ಹೊಲ ಕಲ್ಲುಮಂಟಿಗಳಿಂದ ಕೂಡಿದ್ದು. ಹುರುಳಿ ಜೋಳ ರಾಗಿ ಹುಚ್ಚೆಳ್ಳು ಮಾತ್ರ ಬೆಳೆಯಬಹುದಾದಂತಹ ಭುಮಿ; ಅದೂ ಮಳೆಯಾದರೆ ಮಾತ್ರ! ನಲವತ್ತು ವಯಸ್ಸಿನ ಆತನಿಗೆ ಆದರಿನಿತೂ ಬೇಸರವಿಲ್ಲ. ಜೀವನಕೆ ನಿನಗಿದರ ಉತ್ಪತ್ತಿ ಸಾಲುವುದೆ? ಎಂಬ ಪ್ರಶ್ನೆಗೆ ಮಳೆ ನಡೆಸಿದರೆ ಸಾಲುವುದು, ಬುದ್ದಿ. ಎನ್ನುತ್ತಾನೆ. ’ಮಳೆಯಾಗಲಿ, ಬಿಡಲಿ, ಬೆಳೆ ಬರಲಿ ಬಿಡಲಿ ತೆರಿಗೆ ಮಾತ್ರ ಕೊಡಲೇಬೇಕು’ ಎನ್ನುತ್ತಾನೆ. ಆ ಹೊಲದ ಬಗ್ಗೆ ಆತನಿಗೆ ಇನ್ನಿಲ್ಲದ ಹೆಮ್ಮೆ! ಅದರ ಉತ್ಪತ್ತಿಯ ಮೇಲೆಯೇ ಅವಲಂಬಿತರಾಗಿರಉವ ತನ್ನ ಸಂಸಾರದ ಪರಿಚಯ ಮಾಡಿಕೊಡುತ್ತಾನೆ, ಹೀಗೆ.
............. ಹಿರಿಯರಿತ್ತೀ ನೆಲವ
ತೆರಿಗೆ ಕೊಡದೆಯೆ ನಾವು ಪರರ ವಶಮಾಡಿದರೆ
ಮಕ್ಕಳಾದಪೆವೆಂತು ನಾವವರಿಗೆ? ಮುಂದೆಮಗೆ
ಒಳಿತಹುದೆ? ನಾವಿಬ್ಬರಣ್ಣತಮ್ಮದಿರಿಹೆವು.
ಅಣ್ಣನಿಗೆ ಮಗನೊಬ್ಬ; ಮದುವೆಯಾಗಿಹುದವಗೆ;
ಮಕ್ಕಳೆರಡಿವೆ; ನಿಮ್ಮ ವಯಸವಗೆ. ನನಗೊಬ್ಬ
ಮಗನಿಹನು. ಮನೆಯಲ್ಲಿ ಹೆಂಗಸರು ಬೇರಿಹರು.
ಇಷ್ಟು ಜನರಿಗೆ ಹೊಟ್ಟೆ ಬಟ್ಟೆಯಂದರೆ ಎಲ್ಲಿ
ಹಣಕಾಸು? ಹೇಗೊ ಸಾಲದ ಮೇಲೆ ಬಡಬದುಕು
ಹೊರೆಯುತಿದೆ
ಎನ್ನುತ್ತಾನೆ. ’ನಿನಗೆನಿತು ಸಾಲವಿದೆ? ಅದನೆಂತು ತೀರಿಸುವೆ?’ ಎಂದ ಮಾತಿಗೆ, ಅಷ್ಟೇ ಮುಗ್ಧನಾಗಿ ಉತ್ತರಿಸುತ್ತಾನೆ.
ಈಗ ಬಡ್ಡಿಯ ಕೊಟ್ಟು,
ಮುಂದೆ ಒಳ್ಳೆಯ ಕಾಲ ಬಂದಾಗ ತೀರಿಸುವೆ.
ಎಷ್ಟು ಬಡ್ಡಿಯ ಕೊಡುವೆ?
ನೂರಕ್ಕೆ ಹದಿನೆಂಟು!
ಅಷ್ಟರಲ್ಲಿ ಸೂರ್ಯ ಅಸ್ತಮಿಸಿಯಾಗಿರುತ್ತದೆ. ಕತ್ತಲು ಕವಿಯಲಾರಂಬಿಸುತ್ತದೆ. ’ಕತ್ತಲಾಯಿತು, ದಾರಿ ಕೊರಕಲಾಗಿದೆ’ ಎಂದು ಅಕ್ಕರೆಯಿಂದ ಕವಿ ಕಥೆಗಾರರಿಬ್ಬರನ್ನೂ ಎಬ್ಬಿಸುತ್ತಾನೆ. ಮೈಸೂರಿನ ಕಡೆ ದೀಪಗಳು, ಆಕಾಶದೆಡೆ ನಕ್ಷತ್ರಗಳು ಮಿನುಗುತ್ತವೆ. ಆಗ ಕವಿಗನ್ನಿಸಿದ್ದು:
................ ದೂರ ಮೈಸೂರಿನಲಿ
ಮಿಂಚಿದುವು ದೀಪಗಳು ಐಶ್ವರ‍್ಯಗರ‍್ವದಲಿ.
ಮೇಲೆ ಆಕಾಶದಲಿ ಮಿಣುಕಿದುವು ತಾರೆಗಳು
ವಿಶ್ವದೌದಾಸೀನ್ಯದಲಿ? ಅಥವ ಶೋಕದಲಿ?
ಕತ್ತಲಲಿ ರೈತನಾಕೃತಿಯೊಂದು ಕನಸಿನ ತೆರದಿ
ಕಾಣಿಸಿತು: ಅವನೊಂದು ವಿಶ್ವದ ಮಹಾಸ್ವಪ್ನ!
ಪೂರ್ಣ ಕತ್ತಲಾವರಿಸಿದ್ದರಿಂದ ದಾರಿ ಕವಲಾಗಿರುವವರಗೆ ಜೊತೆ ಬರುತ್ತೇನೆಂದು ಹೊರಡುತ್ತಾನೆ. ಆಗ ಇವರಿಬ್ಬರೂ 
ಬೇಡ ಬೇಡೈ, ನೀನು ಗುಡಿಗೆ ನಡೆ; ಹಗಲೆಲ್ಲ
ಉಣಿಸಿಲ್ಲ, ಹಸಿದಿರುವೆ, ದುಡಿದು ಮೈದಣಿದಿರುವೆ.
ಎಂದು ಹೇಳುತ್ತಾರೆ. ಆದರೂ ಆತ ಕೇಳುವುದಿಲ್ಲ. ’ನನ್ನ ಊಟಕಿನ್ನೂ ಹೊತ್ತು ಬಹಳವಿದೆ.’ ಎಂದು ಜೊತೆ ಬರುತ್ತಾನೆ. ದಾರಿ ಕವಲಾಗುವೆಡೆಯಲ್ಲಿ ಇವರನ್ನು ಬೀಳ್ಕೊಡುತ್ತಾನೆ. ಕವಿಗೆ ಆತನ ಮನಸ್ಸಂಪತ್ತು, ಸರಳ ನಡವಳಿಕೆ ಎಲ್ಲವೂ ಮಹತ್ವವೆನಿಸಿಬಿಡುತ್ತವೆ. ನುಡಿಕವಿಯು ಹೊಲದ ಕವಿಯ ನಡವಳಿಕೆಯ ಸಿರಿತನದ ಮಹನ್ನೋತಿಯನ್ನು ಗುರುತಿಸುತ್ತಾನೆ.
............. ಒಂದು ಗಂಟೆಯ ನುಡಿಗೆ
ಅವನದೆಂತಹ ಮೈತ್ರಿ! ನಾಗರಿಕರಂತಿಹರೆ?
ಆತನು ಅನಾಗರಿಕನೆ? ಅವನ ಆ ದುಃಖದಲಿ
ಹೆರರ ಸುಖವನು ಕಂಡು ಕುದಿವ ಕರುಬಿನಿತಿಲ್ಲ;
ತನ್ನ ನೋವನು ಕುರಿತು ನುಡಿವಾಗ ಮಾತಿನಲಿ
ಕ್ರೋಧ ಮತ್ಸರವಿಲ್ಲ, ಕೋಪವೆಂಬುವುದಿಲ್ಲ.
ಸ್ಥಿತ ಪ್ರಜ್ಞನಿಗೆ ಸಹಜವಾಗಿಹ ಸಹಿಷ್ಣುತೆ,
ಧೀರತೆ, ಸೌಜನ್ಯಗಳು ಹುಟ್ಟುಗುಣವವಗೆ.
ನಮ್ಮೊಡನೆ ಯಾರನೂ ಆತನು ಹಳಿಯಲಿಲ್ಲ:
ಎಲ್ಲವನು ಹೇಳಿದನೆ ಹೊರತು ಖಂಡಿಸಲಿಲ್ಲ!
ನಾಗರಿಕರಂತಿಹರೆ? ಆತನು ಅನಾಗರಿಕನೆ?
ಕವಿ ಕಥೆಗಾರರಿಬ್ಬರೂ ಇನಿವಾತುಗಳನಾಡಿ ಕಡೆಗವನ ಬೀಳ್ಕೊಂಡು ಹಿಂತಿರುಗುತ್ತಾರೆ. ಹೊಲದ ಕವಿಯ ದರ್ಶನದಿಂದ ಕವಿಗೆ ಹೊಸದೊಂದು ದರ್ಶನವಾಗುತ್ತದೆ. ಕಡೆಯಲ್ಲಿ ಹೀಗೆ ಹೇಳುತ್ತಾರೆ.
ಇನಿವಾತುಗಳನಾಡಿ ಕಡೆಗವನ ಬೀಳ್ಕೊಂಡು
ಬರುತಿರಲು, ನಮ್ಮೆದೆ ದುಃಖ ಸಂಮಿಶ್ರಣದ
ಸ್ಮೃತಿಯ ಮಾಧುರ‍್ಯದಲಿ ಗಂಭೀರವಾಗಿತ್ತು.
ಸ್ವಂತ ಸ್ವಾಂತದ ಚಿಂತೆಯ ತರಂಗಗಳ ಮಧ್ಯೆ
ನಮ್ಮಾತ್ಮಗಳು ತೇಲಿ ಮುಳುಗಿದುವು. ಮೌನದಲಿ,
ಧ್ಯಾನದಲಿ, ಬ್ರಹ್ಮಾಂದ ಭವ್ಯ ಗಾಂಭೀರ‍್ಯದಲಿ,
ಚಿತ್ತಕೆ ಅತೀತವಹ ಗೂಢತರ ಶಾಂತಿಯಲಿ,
ಜಗದ ವಸ್ತುಗಳೆಲ್ಲ ಮನದಿಂದ ಜಾರುತಿರೆ
ನಡುವೆ ನಿಂತುದದೊಂದೆ ವಿಶ್ವದಾ ಶಿಶುಮೂರ್ತಿ,
ಹಸುರು ಹುಚ್ಚೆಳ್ವೊಲದಿ ಕಂಡ ರೈತನ ಮೂರ್ತಿ!
ನಾನವಗೆ ನುಡಿದಂತೆ ಬಹುಜನಕೆ ನುಡಿದಿಲ್ಲ;
ಅವನಿಗೆ ಕರಗಿದಂತೆ ಬಹುಜನಕೆ ಕರಗಿಲ್ಲ!
ಈ ಕವಿತೆಯ ಉದ್ದಕ್ಕೂ ಐದೈದು ಮಾತ್ರೆ ನಾಲ್ಕು ನಾಲ್ಕು ಗಣಗಳ ಪಂಕ್ತಿಗಳ ಓಟವಿದೆ. ಅಂತ್ಯಪ್ರಾಸ ರಹಿತ ಲಲಿತ ರಗಳೆ ಎನ್ನಬಹುದು. ಇಡೀ ಕವಿತೆಯನ್ನು ಒಂದೇ ಬೀಸಿನಲ್ಲಿ ಲಯತಪ್ಪದೆ ಓದಬಹುದು! ಆದರೆ ಅದಕ್ಕಿಂತ ಹೆಚ್ಚಾಗಿ, ಮುಂದೆ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಬಳಕೆಯಾಗಲಿದ್ದ ಛಂದಸ್ಸು ಇದು ಎಂಬುದು ಗಮನಾರ್ಹ. ಈ ಬಗೆಯ ಛಂದಸ್ಸಿನ ದೀರ್ಘ ಕವಿತೆಗಳು ಮಹಾಕಾವ್ಯ ರಚನಾಪೂರ್ವ ಸಿದ್ಧತೆಯಂತೆ ತೋರುತ್ತದೆ.