Thursday, January 22, 2015

ಭಗವಂತನ ನಿರಂಕುಶೇಚ್ಛೆಯ ವಿರುದ್ಧ ದಂಗೆಯೆದ್ದ ಬಾಲಕ!

ಒಂದು ಬೈಗು. ಸ್ಕೂಲಿನಿಂದ ಮನೆಗೆ ಬಂದು ಇತರರೊಡನೆ ತಿಂಡಿ ತಿಂದೆ. ಹೊರಗೆ ಅಲೆಯಲು ಹೋಗುವ ಮನಸ್ಸು ಕುದಿಯತೊಡಗಿತು. ಜೊತೆಯ ಸಹಪಾಠಿಗಳು ಯಾರೊಬ್ಬರೂ ನನ್ನೊಡನೆ ಬರಲೊಪ್ಪಲಿಲ್ಲ. ನಾನೊಬ್ಬನೆ ಹೊರಟೆ ರಬ್ಬರು ಬಿಲ್ಲನ್ನು ಕೈಯಲ್ಲಿ ಹಿಡಿದು, ಕಲ್ಲಿನ ಚೀಲವನ್ನು ಬಗಲಿಗೆ ಸಿಕ್ಕಿಸಿಕೊಂಡು, (ಆ ಕಲ್ಲಿನ ಚೀಲ ಅದರ ಹಿಂದಿನ ಅವತಾರದಲ್ಲಿ ನನ್ನದೆ ಇಜಾರದ ಒಂದು ಕಾಲಾಗಿತ್ತು. ಇಜಾರ ಮಂಡಿಯ ಹತ್ತಿರ ಸವೆದು ತೂತು ಬೀಳಲು ಅದನ್ನು ಅಲ್ಲಿಗೇ, ಹರಿದು ಚಡ್ಡಿಯನ್ನಾಗಿ ಮಾಡಿ ಹಾಕಿಕೊಂಡಿದ್ದೆ. ಉಳಿದ ಕತ್ತರಿಸಿದ ಎರಡು ಕಾಲಿನ ಅರ್ಧ ಭಾಗಗಳನ್ನು ಒಂದು ತುದಿ ಹೊಲಿದು ’ಚಾಟರ್ ಬಿಲ್ಲಿ’ಗೆ ಉಪಯೋಗಿಸಲು ಹರಳುಕಲ್ಲು ತುಂಬುವ ಚೀಲಗಳನ್ನಾಗಿಸಿದ್ದೆ. ಭಾರವಾಗಿದ್ದ ಚೀಲವನ್ನು ಬಗಲಿಗೆ ಸಿಕ್ಕಿಸಿಕೊಳ್ಳಲು ಅನುಕೂಲವಾಘುವಂತೆ ನೇಲುಹಗ್ಗಗಳನ್ನು ಪಟ್ಟಿಯಾಗಿ ಹೊಲೆದಿದ್ದೆ.)

ಸೂರ್ಯ ಆಗತಾನೆ ಪಶ್ಚಿಮದಿಕ್ಕಿನ ಕಾಡುಗಳಲ್ಲಿ ಕಣ್ಮರೆಯಾಗಿದ್ದ. ಸಂಧ್ಯಾರಾಗ ಹಸುರನ್ನೆಲ್ಲ ಮೀಯಿಸಿತ್ತು. ಗೂಡುಗೊತ್ತುಗಳೀಗೆ ಹಿಂತಿರುಗುತ್ತಿದ್ದ ಹಕ್ಕಿಗಳ ತರತರಹ ಉಲಿ ಬನದ ನೀರವತೆಗೆ ರಾಗರೋಮಾಂಚನವೀಯುತ್ತಿತ್ತು. ಅದು ಹೊರತು ಬೇರೆ ಯಾವ ಸದ್ದೂ ಇರಲಿಲ್ಲ. ನಾನು ಹೋಗುತ್ತಿದ್ದ ಕಾಡು ಒಂದು ಪೃಶಾಂತ ವಾತಾವರಣದಿಂದ ಧ್ಯಾನಮಯವಾಗಿತ್ತು. ನನ್ನ ಕೈ ಬಿಲ್ಲನ್ನು ಹಿಡಿದಿದ್ದರೂ, ಕಣ್ಣು ಗುರಿಯನ್ನು ಹುಡುಕುವ ಕಾರ್ಯದಲ್ಲಿ ಮಗ್ನವಾದಂತೆಯಿದ್ದರೂ ಮನಸ್ಸು ಏನೇನನ್ನೊ ಮೆಲುಕುಹಾಕುತ್ತಿತ್ತು. ಒಮ್ಮೊಮ್ಮೆ ಅದು ತುಂಬ ಗಹನವೂ ಉನ್ನತವೂ ಆದ ವಿಚಾರಗಳ ಕಡೆಗೂ ಏರಿ ಇಳಿಯುತ್ತಿತ್ತು. ಪಾಪ, ಪುಣ್ಯ, ದೇವರು, ಜಗತ್ತು, ಸೃಷ್ಟಿ, ವಿಧಿ, ಕಾಡು, ಬೆಟ್ಟ, ಸೂರ್ಯ, ಚಂದ್ರ -ಹೀಗೆಲ್ಲ ಅಲೆಯುತ್ತಿತ್ತು ಆಲೋಚನೆ, ಅಥವಾ ಅದರ ಅಂಬೆಗಾಲಿಕ್ಕುವ ಒಂದು ಮನಃಸ್ಥಿತಿ!
ಅಷ್ಟರಲ್ಲಿ ಬಾಯಲ್ಲಿದ್ದ ಪೆಪ್ಪರಮೆಂಟು ಕರಗಿ ಖರ್ಚಾಗಿತ್ತು. ಮತ್ತೆ ಕೈ ತನಗೆ ತಾನೆ ಸ್ವಯಂಚಾಲಿತವಾಗಿ ಜೇಬಿನೊಳಗೆ ತೂರಿ ಹುಡುಕಿತು. ಇಲ್ಲ, ಪೆಪ್ಪರಮೆಂಟೆಲ್ಲ ಮುಗಿದು ಹೋಗಿವೆ! ಆದರೆ, ತಿಂಡಿಯ ಕೊಸರಾಗಿ ಬಂದಿದ್ದ ಒಂದು ಬಾಳೆಯ ಹಣ್ಣು ಜೇಬಿನ ಆಶ್ರಯ ಪಡೆದಿತ್ತು. ಕೈ ಅದನ್ನು ಈಚೆಗೆ ಎಳೆಯಿತು. ಸಿಪ್ಪೆಯನ್ನು ಸ್ವಲ್ಪಸ್ವಲ್ಪವಾಗಿ ಸುಲಿಯುತ್ತಾ ಅಷ್ಟಷ್ಟೆ ಭಾಗವನ್ನು ಕಚ್ಚಿಕಚ್ಚಿ ತಿನ್ನತೊಡಗಿತು ಬಾಯಿ. ಇಷ್ಟೆಲ್ಲ ಅನೈಚ್ಛಿಕವೊ ಎಂಬಂತಹ ಕ್ರಿಯೆ ನಡೆಯುತ್ತಿದ್ದಾಗ ಕಾಲುಗಳು ನಡೆಯುವ ತಮ್ಮ ಕೆಲಸವನ್ನು ಮಾಡುತ್ತಲೆ ಇದ್ದುವು; ಕಣ್ಣುಗಳು ಪೊದೆ ಮರಗಳಲ್ಲಿ ದಿಟ್ಟಿನೆಟ್ಟು ಹುಡುಕುತ್ತಲೆ ಇದ್ದುವು; ಮನಸ್ಸೂ ತನ್ನ ಪಾಡಿಗೆ ತಾನು ಚಿಂತನ ಕಾರ್ಯದಲ್ಲಿ ತೊಡಗಿಯೆ ಇತ್ತು:
ಈ ಕಾಡು, ಈ ಗುಡ್ಡಸಾಲು, ಈ ಮೋಡ, ಈ ಆಕಾಶ ಇದನ್ನೆಲ್ಲ ಮಾಡಿದ್ದಾನಲ್ಲಾ ದೇವರು, ಅವನು ಎಂತಹ ಅದ್ಭುತ ಶಕ್ತಶಾಲಿಯಾಗಿರಬೇಕು? ಬಾವಿಸುತ್ತೇನೆ. ಎಲ್ಲ ಅವನ ಇಚ್ಛೆಯಂತೆಯೆ ಆಗಿದೆ. ಅವನ ಇಚ್ಛೆಗೆ ಎಲ್ಲವೂ ಅಧೀನ. ಈ ಪೊದೆಯ ಬಳಿ ಹಸುರಿನ ಮೇಲೆ ಅರ್ಧ ಕಾಣಿಸಿಕೊಂಡು ಇಲ್ಲಿ ಬಿದ್ದಿರುವ ಈ ಕಲ್ಲುಗುಂಡು ಇಲ್ಲಿಯೇ ಹೀಗೆಯೇ ಬಿದ್ದಿರಬೇಕೆಂದು ದೇವರು ನಿಯಮಿಸಿದ್ದಾನೆ. ಆದ್ದರಿಂದಲೆ ಅದು ಇಲ್ಲಿಯೇ ಬಿದ್ದಿದೆ, ಇಲ್ಲಿಂದ ಹಂದುವುದಿಲ್ಲ. ಎಲ್ಲ ಭಗವಂತನ ವಜ್ರನಿಯಮಕ್ಕೆ ಅಧೀನ. ಸ್ವತಂತ್ರೇಚ್ಛೆ ಎಲ್ಲಿಯೂ ಇಲ್ಲ. ಯಾರಿಗೂ ಇಲ್ಲ -ಇದ್ದಕ್ಕಿದ್ದ ಹಾಗೆ ಹುಡುಗನ ಮನಸ್ಸು ಸೆರೆಯಲ್ಲಿ ಸಿಕ್ಕಿಬಿದ್ದ ಸಿಂಹದಂತಾಗಿ ಕಂಬಿಗಳನ್ನೆಲ್ಲ ಕಿತ್ತು ಬಿಡುವಂತೆ ನುಗ್ಗತೊಡಗಿತು. ಛೆಃ ಇದೆಂತಹ ದಾಸ್ಯ?
ಅಷ್ಟು ಹೊತ್ತಿಗೆ ಬಾಳೆಯಹಣ್ಣು ತಿಂದು ಮುಗಿದು, ಸಿಪ್ಪೆ ಮಾತ್ರ ಕೈಯಲ್ಲಿತ್ತು. ಕೈ ಯಾಂತ್ರಿಕವಾಗಿ ಅದನ್ನು ಬಲವಾಗಿ ಎಸೆಯಿತು. ಅದು ತುಸುವೆ ದೂರದಲ್ಲಿದ್ದ ಒಂದು ಮುಳ್ಳುಪೊದೆಯ ಹರೆಗೆ ತಗುಲಿ ಒಂದೆರಡು ಕ್ಷಣ ಅಲ್ಲಿ ನೇತಾಡಿ, ಕೆಳಗೆ ನೆಲದ ಹಸುರಿಗೆ ಬಿತ್ತು. ಕಾಲು ತನ್ನ ಪಾಡಿಗೆ ತಾನು ಮುಂದುವರಿಯಿತು. ಹತ್ತಿಪ್ಪತ್ತು ಮಾರು.
ಭಗವಂತನ ನಿರಂಕುಶೇಚ್ಛೆಯ ಪ್ರಭುತ್ವದ ಮೇಲೆ ದಂಗೆಯೆದ್ದಿದ್ದ ನನ್ನ ಮನಸ್ಸು, ಒಡನೆಯೆ, ಆಗತಾನೆ ನಡೆದಿದ್ದ ನಿದರ್ಶನವನ್ನು ಆಶ್ರಯಿಸಿ ಪ್ರತಿಭಟಿಸಲು ಹೆಡೆಯೆತ್ತಿ ನಿಂತಿತ್ತು.
ನೋಡಿದೆಯಾ ದೇವರ ಇಚ್ಛೆಯನ್ನು ಉಲ್ಲಂಘಿಸಲು ಯಾರಿಗೂ ಎಂದಿಗೂ ಸಾಧ್ಯವಿಲ್ಲ. ಈ ಬಾಳೆಹಣ್ಣಿನ ಸಿಪ್ಪೆ ಇಲ್ಲಿಯೇ ಇಂಥ ಜಾಗದಲ್ಲಿಯೆ ಬೀಳಬೇಕೆಂದು ಅವನು ನಿಯಮಿಸಿಬಿಟ್ಟಿದ್ದ. ಆದ್ದರಿಂದ ಅದು ಅಲ್ಲಿಯೇ ಬೀಳಬೇಕಾಯಿತು. ಅದು ಯಾರ ತೋಟದ್ದೊ? ಯಾರು ಯಾರಿಗೆ ಮಾರಿದ್ದೊ? ಅದನ್ನು ನಮ್ಮ ಮನೆಯವರು ತಂದು, ನೀನು ತಿಂದು, ಅದರ ಸಿಪ್ಪೆಯನ್ನು ಇಲ್ಲಿಗೇ ತಂದು ಹಾಕಬೇಕಾಯಿತು. ಆ ವಿಧಿಯ ಇಚ್ಛೆಗೆ ನೀನೆ ವಾಹಕ ಗುಲಾಮ! ನೀನು ಮನೆಯಲ್ಲಿಯೇ ಅದನ್ನು ತಿಂದು ಅಲ್ಲಿಯೆ ಎಸೆಯಬಹುದಾಗಿತ್ತು. ಆದರೆ ಅದರ, ಆ ನೂರಾರು ಗೊನೆಗಳಲ್ಲಿ ಒಂದು ಗೊನೆಯ ನೂರಾರು ಹಣ್ಣುಗಳಲ್ಲಿ ಒಂದು ಯಃಕಶ್ಚಿತ್ ಹಣ್ಣಿನ ಆ ಸಿಪ್ಪೆ ಇಲ್ಲಿಯೇ ಬೀಳಬೇಕೆಂದು ವಿಧಿ ಇಚ್ಛಿಸಿದ್ದುದರಿಂದ ನೀನು ಇಂದು ಸಂಜೆ ಶಾಲೆಯಿಂದ ಬಂದು ತಿಂಡಿಯ ನೆವದಿಂದ ಅದನ್ನು ಇಲ್ಲಿಗೆ ತಂದು ತಿಂದು ಇಲ್ಲಿಯೆ ಹಾಕಬೇಕಾಯಿತು. ಹಾಗಿದೆ ಭಗವಂತನ ಅಲುಗಾಡದ ಕಟ್ಟಳೆ.
ಹುಡುಗನ ಮನಸ್ಸು ರೇಗಿತು. ನಾನೇನು ವಿಧಿಯ ಗುಲಾಮನಲ್ಲ. ವಿಧಿಯ ಇಚ್ಛೆಗೆ ಭಂಗ ತರಲೇಬೇಕು.
ಸೂರ್ಯ ಚಂದ್ರ ಪೃಥ್ವಿ ನಕ್ಷತ್ರಾದಿಗಳನ್ನು ಸೃಷ್ಟಿಸಿ ನಿಯಮ ಬಂಧನದಲ್ಲಿಟ್ಟಿರುವ ಆ ದುಷ್ಟವಿಧಿಯನ್ನು ಭಂಗಿಸುವ ದೃಢಛಲದಿಂದ, ಸಿಪ್ಪೆಯನ್ನೆಸೆದು ಅಷ್ಟು ದೂರ ಹೋಗಿದ್ದ ನಾನು, ಮತ್ತೆ ಹಿಂದಕ್ಕೆ ಬಂದೆ! ಸಿಪ್ಪೆ ಬಿದ್ದಿದ್ದ ಸ್ಥಳಕ್ಕೆ ಧಾವಿಸಿ ಹುಡುಕಿದೆ. ಅದು ಹಸರು ಹುಲ್ಲಿನಲ್ಲಿ ಅಡಗಿ ಬಿದ್ದಿತ್ತು. (ಪಾಪ! ಆ ಸೆರೆಮನೆಯ ಭಯಂಕರ ಶಿಕ್ಷೆಗೆ ಗೋಳಿಡುತ್ತಾ!) ಸೆರೆ ಬಿಡಿಸುವವನಂತೆ ಅದನ್ನು ಎತ್ತಿಕೊಂಡೆ! ಮತ್ತೆ ಸ್ವಲ್ಪ ದೂರ ನಡೆದು ಅದನ್ನು ಬೇರೊಂದು ಕಡೆಗೆ ಎಸೆದು, ವಿಜಯಿಯ ಹೆಮ್ಮೆಯಿಂದ ಮುಂದುವರಿದೆ.
ಆದರೆ ಆ ಹೆಮ್ಮೆ ಅಲ್ಪಾಯುವಾಗಿ ಬಿಟ್ಟಿತು! ಹಾಳು ವಿಧಿ ಮೂದಲಿಸತೊಡಗಿತು. ಆ ಬಾಳೆಹಣ್ಣಿನ ಸಿಪ್ಪೆ ನಾನು ಮತ್ತೆ ಎಸೆದು ಈಗ ಅದು ಬಿದ್ದಿರುವ ಜಾಗದಲ್ಲಿಯೆ ಅದು ಬೀಳಬೇಕೆಂದು ವಿಧಿಯ ಇಚ್ಛೆಯಿದ್ದುದರಿಂದಲೆ ನಾನು ಪುನಃ ಅದರ ದಾಸನಂತೆ ಹಿಂದಕ್ಕೆ ಹೋಗಿ ಅದನ್ನು ತಂದು ಇಲ್ಲಿ ಎಸೆಯಬೇಕಾಯಿತಲ್ಲಾ! ನನಗೆ ತಲೆ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತು. ನನ್ನ ಅಸಹಾಯಕತೆಗೆ ನಾನೆ ದುಃಖಿಸಿ ಕಣ್ಣು ಹನಿತುಂಬಿತು. ಸೋಲಿಗೂ ಅವಮಾನಕ್ಕೂ ಅಳು ಬರುವಂತಾಯ್ತು. ಈ ಬಿದ್ದಿರುವ ಜಾಗದಿಂದಲೂ ಅದನ್ನು ತೆಗೆದು ಬೇರೆ ಕಡೆಗೆ ಬಿಸಾಡಬೇಕು ಎಂದೆನಿಸಿತು. ಆದರೆ ಏನು ಪ್ರಯೋಜನ? ಮತ್ತೆ ವಿಧಿಯ ದಾಸನಾಗಿಯೆ ಕೆಲಸ ಮಾಡಿದಂತಾಗುತ್ತದೆ. ಥೂ! ಹಾಳು ವಿಧಿಯ ಬಾಯಿಗೆ ಮಣ್ಣು ಹಾಕಲಿ! ಏನಾದರೂ ಸಾಯಲಿ! ನನಗೇಕೆ? ಎಂದೆಲ್ಲ ಶಪಿಸಿಬಿಟ್ಟು, ಮನಸ್ಸಿನಿಂದ ಅದನ್ನು ತಳ್ಳಿ, ರಬ್ಬರುಬಿಲ್ಲಿಗೆ ಕಲ್ಲುಹರಳು ಹಾಕಿಕೊಂಡು, ಬೇಗಬೇಗೆ ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳಲು ಧಾವಿಸಿದೆ! ಹೊತ್ತುಮೀರಿ ಹೋದರೆ, ಹಾಳುವಿಧಿ, ಮನೆ ಮೇಷ್ಟರ ಕೈಲಿ ಛಡಿ ಏಟು ಹಾಖಿಸುವ ಹುನಾರು ಮಾಡಿದೆಯೋ ಏನೋ ಯಾಋಉ ಬಲ್ಲರು?
***
ಬೆಟ್ಟಕಾಡುಗಳಲ್ಲಿ, ತಿರುಗಾಡುವ ನನ್ನ ಆಜನ್ಮಚಪಲತೆಗೆ ’ಪ್ರಕೃತಿ ಪ್ರೇಮ’ ’ನಿಸರ್ಗಸೌಂದಾರ್ಯಆಭಿರುಚಿ’ ಎಂದು ನಾಮಕರಣ ಮಾಡಿಸಿಕೊಳ್ಳುವಷ್ಟು ಯೋಗ್ಯತೆಗೆ ಅರ್ಹವಾಗಿತ್ತೆಂದು ನಾನು ನಂಬಲಾರೆ. ಅದು ಒಂದು ತರಹ ಐಂದ್ರಿಯ ಸುಖಾನುಭವವಾಗಿತ್ತೆ ಹೊರತು ಬುದ್ಧಿಪೂರ್ವಕವಾದ ಸೌಂದರ್ಯಪ್ರಜ್ಞೆಯ ಆಸ್ವಾದವಾಗಿರಲಿಲ್ಲ. ಹಸಿದ ಪ್ರಾಣಿಗೆ ಹಸುರು ಮೇಯುವಾಗ ಒಂದು ಸುಖಾನುಭವವಾಗುತ್ತದೆ; ಅದಕ್ಕೆ ಹಸುರಿನ ಬಣ್ಣದ ಚೆಲುವಾಗಲಿ ಅದರ ಕೋಮಲತೆಯಾಗಲಿ ಬುದ್ಧಿಗಮ್ಯವಲ್ಲ. ಹಸುರಿನ ಚೆಲುವೂ ಕೋಮಲತೆಯೂ ಹುಲ್ಲು ಮೇಯುವ ಪ್ರಾಣಿಯ ಅಂತಃಪ್ರಜ್ಞೆಗೆ ಸಂಪೂರ್ಣ ಅಗಮ್ಯವೇನಲ್ಲ. ಸಂವೇದನೆ ಸಂಪೂರ್ಣ ಅಗಮ್ಯವಾಗಿ ಇದ್ದಿದ್ದರೆ ಅದು ಹುಲ್ಲು ಅಷ್ಟು ಹಸನಾಗಿ ಬೆಳೆದಿರದಿದ್ದ ಸ್ಥಳವನ್ನು ತಿರಸ್ಕರಿಸಿ ಈ ’ಸುಂದರ ಕೋಮಲ’ ಸ್ಥಾನಕ್ಕೇ ನುಗ್ಗಿ ಬರುತ್ತಿರಲಿಲ್ಲ. ಆದರೆ ಈ ಸೌಂದರ್ಯ ಈ ಕೋಮಲತೆಗೆಳು ಆ ಪ್ರಾಣಿಗೆ ತನ್ನ ಆಹಾರದ ಸಾರದ ಮತ್ತು ಸ್ವಾದುತ್ವದ ಅಂಗಗಳಾಗಿ ಇಂದ್ರಿಯಗೋಚರವಾಗಿ ಅದನ್ನು ಆಹ್ವಾನಿಸುತ್ತವೆ. ಅದು ’ಅಭಿರುಚಿ’ಗಿಂತಲೂ ಹೆಚ್ಚಾಗಿ ’ರುಚಿ’ಯಾಗಿರುತ್ತದೆ. ಅಂತಹ ಅಬುದ್ಧಿಪೂರ್ವಕವಾದ ಜೀವಪೌಷ್ಠಿಕ ಸಾಮಗ್ರಿಯಾಗಿತ್ತೆಂದು ತೋರುತ್ತದೆ, ನನಗೆ ಅಂದು ಆ ’ಪ್ರಕತಿ ಸೌಂದರ್ಯ!’ ನಾನು ’ಪ್ರಕೃತಿ’ಯನ್ನು ಸವಿಯುತ್ತಿದ್ದೆ ಎನ್ನುವುದಕ್ಕೆ ಬದಲಾಗಿ ’ಪ್ರಕೃತಿ’ಯೆ ನನ್ನನ್ನು ಸವಿಯುತ್ತಿದ್ದಳು ಎನ್ನಬಹುದಾಗಿತ್ತೇನೊ?! ಎಂತೂ ಸಹ್ಯಾದ್ರಿಯ ನೈಸರ್ಗಿಕ ರಮಣೀಯತೆಯ ಸುವಿಶಾಲ ಸರೋವರದಲ್ಲಿ ನನ್ನ ಬಾಲಚೇತನ ಮರಿಮೀನಾಗಿ ಓಲಾಡಿ ತೇಲಾಡುತ್ತಿತ್ತು.

Tuesday, January 20, 2015

ಮೋಸಸ್ ಮೇಷ್ಟರು ಬಿತ್ತಿದ ಪ್ರಾರ್ಥನೆಯ ಕಿಡಿ

ಆದಿಕವಿ ಸಂಭೂತಿ'ಯಿಂದ.....

ನನ್ನ ಅಕ್ಷರಾಭ್ಯಾಸಕ್ಕೆ ಅಗೆಯಾದುದು ಹಿಂದೆ ವರ್ಣಿಸಿದಂತಹ ಯಾವುದೊ ಒಂದು ನವರಾತ್ರಿಯ ಸರಸ್ವತೀ ಪೂಜೆಯ ದಿನದಂದು ಎಂದು ತೋರುತ್ತದೆ. ಮಿಂದು ಮಡಿಯಾದ ಮೇಲೆ ಉಡಿದಾರ, ಲಂಗೋಟಿ, ಅಡ್ಡಪಂಚೆಡಗಳ ದೀಕ್ಷೆತೊಟ್ಟು, ಮರಳ ಮೇಲೆ ಅ ಆ ಬರೆದು, ನಡುಬೆರಳ ಮೇಲೆ ತೋರುಬೆರಳನ್ನು ಇಡುವುದು ಹೇಗೆ ಎಂಬುದನ್ನು ತೋರಿಸಿ, ಕಲಿಸಿ, ಅಕ್ಷರ ತಿದ್ದಲು ಹೇಳಿದ್ದರು. ಅದುವರೆಗೆ ಉಡಿದಾರ ಹಾಕುವುದಾಗಲಿ, ಲಂಗೋಟಿ ಕಟ್ಟುವುದಾಗಲಿ, ಅಡ್ಡಪಂಚೆ ಮುಂಡುಸುತ್ತಿ ಉಡುವುದಾಗಲಿ ನನ್ನ ಇಷ್ಟ ಮತ್ತು ಅನುಕೂಲದ ವಿಷಯವಾಗಿದ್ದುದು ಅಂದಿನಿಂದ ಸಾಧಿಸಲೇಬೇಕಾದ 'ನಿಷ್ಠೆ'ಯ ಕರ್ತವ್ಯವಾಗಿಬಿಟ್ಟಿತು! ಆಗತಾನೆ ಸಮಗ್ರ ಭರತಖಂಡದಲ್ಲಿ ಸುಸ್ಥಾಪಿತವಾದ ಬ್ರಿಟಿಷ್ ಸಾಮ್ರಾಜ್ಯ ಚೆನ್ನಾಗಿ ಬೇರು ಬಿಡಲು ತೊಡಗಿದ್ದ ಕಾಲ. ಆಡಳಿತ ವ್ಯವಸ್ಥೆಯನ್ನು ಕ್ರಮಗೊಳಿಸಿದ ಆಳರಸರು ಅದನ್ನು ಸುಗಮವಾಗಿ ತಮ್ಮ ಇಚ್ಛೆಯಂತೆ ನಡೆಸಿಕೊಂಡು ಹೋಗಲು ನಮ್ಮವರನ್ನೆ ದುಡಿವಾಳುಗಳನ್ನಾಗಿ ಮಾಡಲು ನಿರ್ಧರಿಸಿ, ಅದಕ್ಕೆ ಅನುಕೂಲವೂ ಅನುರೂಪವೂ ಆದ ವಿದ್ಯಾಭ್ಯಾಸ ಪದ್ಧತಿಯನ್ನು ಜಾರಿಗೆ ತಂದರು. ಅದರಲ್ಲಿ ಅತ್ಯಂತ ಮುಖ್ಯವಾದದ್ದು ಮತ್ತು ಬಹುಕಾಲ ಪರಿಣಾಮಕಾರಿಯಾದದ್ದು - ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಇಂಗ್ಲಿಷ್ ಭಾಷೆಯನ್ನೆ ಶಿಕ್ಷಣ ಮಾಧ್ಯಮವನ್ನಾಗಿ ಅಂಗೀಕರಿಸಿದ್ದು. ನನಗೆ ಬುದ್ಧಿ ತಿಳಿಯುವ ಹೊತ್ತಿಗಾಗಲೆ ನಮ್ಮ ಮನೆ ಕುಪ್ಪಳಿಯಿಂದಲೂ ವಾಟಗಾರು ಮನೆಯಿಂದಲೂ ದೇವಂಗಿ ಮನೆಯಿಂದಲೂ ಹೊಸ ವಿಧ್ಯಾಭ್ಯಾಸಕ್ಕಾಗಿ ತರುಣರು ಹೊರಗಣ ದೂರದೂರುಗಳಿಗೆ ಹೋಗತೊಡಗಿದ್ದರು; ಮತ್ತು ಹೋಗಿ, ವಿದ್ಯಾಭ್ಯಾಸವನ್ನು ನಿಲ್ಲಿಸಿ, ಹಿಂತಿರುತ್ತಯೂ ಇದ್ದರು. ಆ ಮಲೆನಾಡಿನ ಕಾಡಿನ ಮೂಲೆಯ ಕೊಂಪೆಯಿಂದ ಹುಡುಗರು ಮೈಸೂರಿಗೆ ಆಗಿನ ಕಾಲದಲ್ಲಿ ವಿದ್ಯಾರ್ಜನೆಗೆ ಹೋಗಿದ್ದರೆಂದರೆ ಅಚ್ಚರಿಯಾಗುತ್ತದೆ. ಆದರೆ ಅವರು ಹಾಗೆ ದೂರ ಹೋಗಲು ಸಾಧ್ಯವಾಗಿದ್ದುದೂ, ಹಾಗೆ ಹೋಗುವುದಕ್ಕೆ ಪ್ರಚೋದನೆ ಪ್ರೋತ್ಸಾಹ ಸಹಾಯಗಳು ದೊರಕಿದುದೂ ಕ್ರೈಸ್ತ ಮಿಷನರಿಗಳಿಂದ ಎಂಬುದನ್ನು ನೆನೆದರೆ ನಮ್ಮ ಆಶ್ಚರ್ಯ ವಿಷಾದಾಂಚಿತವೂ ಆಗುವುದರಲ್ಲಿ ಸಂದೇಹವಿಲ್ಲ. ಅದುವರೆಗೆ ನಮ್ಮ ಉಪ್ಪರಿಗೆಯ ಐಗಳ ಶಾಲೆಗೆ ಕಲಿಸಲು ಬರುತ್ತಿದ್ದವರು ಹೆಚ್ಚಾಗಿ ಕನ್ನಡ ಜಿಲ್ಲೆಯವರೆ. ಅವರ ವಿದ್ಯೆಯ ಮಟ್ಟ ಇರುತ್ತಿದ್ದುದೂ ಅಷ್ಟರಲ್ಲಿಯೆ. ಹುಡುಗರಿಗೆ ಅಕ್ಷರ ಕಲಿಸಿ, ಕನ್ನಡದಲ್ಲಿ ತುಸು ಬರೆಯಲೂ ಓದಲೂ ಹೇಳಿಕೊಟ್ಟರೆ ಮುಗಿಯಿತು. ಆದರೆ ಇನ್ನು ಮುಂದೆ ಕನ್ನಡ ಸಾಕೆ? ಇಂಗ್ಲಿಷಿನವರ ಆಳ್ವಿಕೆಯಲ್ಲಿ ಇಂಗ್ಲಿಷ್ ಕಲಿಯದಿದ್ದರೆ ಆದೀತೆ? ಆದರೆ ಇಂಗ್ಲಿಷ್ ಹೇಳಿಕೊಡುವವರಾರು? ದೊರೆಗಳ ಭಾಷೆಯನ್ನು?

ಆ ಹಳ್ಳಿಗರು ಇನ್ನೆಷ್ಟು ವರ್ಷಗಳೆ ಕಾಯಬೇಕಿತ್ತೊ ಇಂಗ್ಲಿಷ್ ಕಲಿಯಲು? ಆದರೆ ಮತಪ್ರಚಾರ ಮತ್ತು ಮತಾಂತರ ಉದ್ದೇಶವೆ ಪ್ರಧಾನವಾಗಿದ್ದ ಕ್ರೈಸ್ತ ಮಿಷನರಿಗಳು ಬ್ರಿಟಿಷ್ ಸಾಮ್ರಾಜ್ಯದ ಮತ್ತು ಕ್ರೈಸ್ತಧರ್ಮದ ಮುಂಚೂಣಿಯ ದಳಗಳಾಗಿ ಸಹ್ಯಾದ್ರಿಯ ಕಾಡುಹಳ್ಳಿಗಳಿಗೂ ಕಾಲಿಟ್ಟರು. ಸ್ಕೂಲು ಆಸ್ಪತ್ರೆಗಳನ್ನು ತೆರೆದರು; ಸಾಧ್ಯವಾದಷ್ಟು ಜನರನ್ನು ತಮ್ಮ ಮತಕ್ಕೆ ಸೇರಿಸಿಕೊಂಡರು, ಕನ್ನಡ ಭಾಷೆಗೆ ಪರಿವರ್ತಿತವಾಗಿದ್ದ ಬೈಬಲ್ಲನ್ನೂ ಮ್ಯಾಥ್ಯೂ ಮಾರ್ಕ್ ಲ್ಯಾಕ್ ಜಾನ್ ಮೊದಲಾದ ಕ್ರಿಸ್ತಶಿಷ್ಯ ಸಂತರ ಸುವಾರ್ತೆಗಳನ್ನು ಓದಲು ಹಂಚಿದರು. 'ಹಿಂದೂಗಳಾಗಿ ಇದ್ದೂ ಬ್ರಾಹ್ಮಣರಿಂದ ಶೂದ್ರರೆಂದು ತಿರಸ್ಕೃತರಾಗಿ ಮೌಢ್ಯ ಅಜ್ಞಾನಗಳ ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸುತ್ತೇವೆ', 'ನಿಮ್ಮನ್ನು ಬ್ರಾಹ್ಮಣರ ದಾಸ್ಯದಿಂದ ಪಾರು ಮಾಡುತ್ತೇವೆ' ಎಂದು ಮನದಟ್ಟುವಂತೆ ಬೋಧಿಸಿದರು. ಶೂದ್ರರ ಮಕ್ಕಳಿಗೆ ನವೀನ ವಿದ್ಯಾಭ್ಯಾಸ ಮಾಡಿಸಲು ಅವರನ್ನು ಮೈಸೂರು ಬೆಂಗಳೂರುಗಳ ಕ್ರೈಸ್ತ ವಿದ್ಯಾಸಂಸ್ಥೆಗಳಿಗೆ ಕರೆದೊಯ್ದು, ಊಟ ಬಟ್ಟೆ ವಸತಿಗಳನ್ನು ಪುಕ್ಕಟೆಯಾಗಿಯೆ ನೀಡಿ, ಅವರ ತಂದೆ ತಾಯಿ ಬಂಧುಗಳ ಗೌರವ ಕೃತಜ್ಞತೆಗಳನ್ನು ಸೂರೆಹೊಯ್ದರು. ಆ ಎಲ್ಲ ಸ್ನೇಹ ಸೌಹಾರ್ಧ ಸಂಪರ್ಕಗಳ ಪರಿಣಾಮವಾಗಿಯೇ ಕ್ರೈಸ್ತ ಪಾದ್ರಿಗಳು ನಮ್ಮ ಮನೆ ಕುಪ್ಪಳಿಯ ಉಪ್ಪರಿಗೆಯ ವಿದ್ಯಾಸಂಸ್ಥೆಗೂ ಒಬ್ಬ ಇಂಗ್ಲಿಷ್ ಬಲ್ಲ ಕ್ರೈಸ್ತ ತರುಣರನ್ನು ನಮಗೆ ಮೇಷ್ಟರನ್ನಾಗಿ ಕಳಿಸುವ ಕೃಪೆ ಮಾಡಿದರು: ಅವರ ಹೆಸರು ಮೋಸಸ್!
ಮೋಸಸ್ ಅವರ ಆಗಮನದ ತರುವಾಯ 'ಐಗಳು' ಎಂಬ ನಾಮ ಸಂಪೂರ್ಣವಾಗಿ ಅಳಿಸಿಹೋಗಿ, 'ಮೇಷ್ಟರು' ಎಂಬ ಬಿರುದು ಪಟ್ಟಕ್ಕೇರಿತು ಮತ್ತು ಪಾಶ್ಚಾತ್ಯ ಪ್ರಭಾವದ ಆಧುನಿಕ ಪ್ರಪಂಚಕ್ಕೆ ಪ್ರವೇಶಿಸಿತು, ನಮ್ಮ ಉಪ್ಪರಿಗೆಯ ಶಾಲೆ.
ಮಕ್ಕಳೆಲ್ಲ ಅವರ ವ್ಯಕ್ತಿತ್ವದ ಪ್ರಭಾವಕ್ಕೆ ಬಹು ಸುಲಭವಾಗಿಯೆ ಒಳಗಾದೆವು. ಮೊದಲನೆಯದಾಗಿ, ಅವರ ವೇಷಭೂಷಣ ನಮ್ಮ ಹಳ್ಳಿಗರ ರೀತಿಯಿಂದ ಪ್ರತ್ಯೇಕವಾಗಿದ್ದು, ಪಟ್ಟಣದ ನಾಗರಿಕತೆಯ ಶೋಭೆಯಿಂದ ನಮ್ಮ ಶ್ಲಾಘನೆಗೆ ಒಳಗಾಗಿ ಆಕರ್ಷಣೀಯವಾಗಿತ್ತು. ಅವರು ಹಾಕಿಕೊಳ್ಳುತ್ತಿದ್ದ ಬಟ್ಟೆಗಳು ಅದೆಷ್ಟು ಬೆಳ್ಳಗೆ? ಅಷ್ಟು ಬೆಳ್ಳಗಿರುವ ಬಟ್ಟೆಗಳನ್ನು ನಾವು ಸಾಮಾನ್ಯವಾಗಿ ನೋಡಿಯೆ ಇರಲಿಲ್ಲ. ನಮ್ಮ ಅಪ್ಪಯ್ಯ ಚಿಕ್ಕಪ್ಪಯ್ಯ ಅಜ್ಜಯ್ಯ ಅವರು ತೀರ್ಥಹಳ್ಳಿಯ ಮಾರ್ವಾಡಿ ಅಂಗಡಿಯಿಂದ ಕೊಂಡು ತರುತ್ತಿದ್ದ ಪಂಚೆಗಳು, ತಂದಾಗ ಮಾತ್ರ ತಕ್ಕಮಟ್ಟಿಗೆ ಬೆಳ್ಳಗಿದ್ದು, ನಮ್ಮ ಕಣ್ಮೆಚ್ಚಿಗೆ ಪಡೆಯುತ್ತಿದ್ದುವು. ಆದರೆ ಉಪಯೋಗಿಸಲು ತೊಡಗಿದ ಮೇಲೆ ಅವು ಎಂದಿಗೂ ಆ ಧವಳಿಮತೆಯನ್ನು ಮತ್ತೆ ಪಡೆಯುತ್ತಿರಲಿಲ್ಲ. ಒಗೆ ಕಂಡಂತೆಲ್ಲ ಅವುಗಳ ಬಣ್ಣಗೇಡು ಮುಂದುವರಿಯುತ್ತಿತ್ತು! ಸಾಬೂನು, ಸೋಪು ಈ ಮಾತುಗಳೂ ಪರಕೀಯವೂ ಅಪರಿಚಿತವೂ ಆಗಿದ್ದ ಆ ಕಾಲದಲ್ಲಿ ಚಬಕಾರ, ಚೌಳು, ಸೀಗೆ, ಅಂಟುವಾಳಕಾಯಿ ಇವುಗಳು ಬಟ್ಟೆಗಳಿಗೆ ಅಚ್ಚ ಬಿಳಿಯ ಸುಣ್ಣದ ಶ್ವೇತತ್ವವನ್ನು ದಯಪಾಲಿಸಲು ಸಮರ್ಥವಾಗುತ್ತಿರಲಿಲ್ಲ. ಆದ್ದರಿಂದಲೆ ಎಂದು ತೋರುತ್ತದೆ, ಬಿಳಿ ಬಟ್ಟೆಯ ವಿಚಾರವಾಗಿ ನಮ್ಮವರಿಗೆ ಒಂದು ತಿರಸ್ಕಾರ ಭಾವನೆ ಹೃದ್ಗತವಾಗಿ ಬಿಟ್ಟಿತು! ಎಟುಕದ ದ್ರಾಕ್ಷಿ ಹುಳಿ ಎಂಬಂತೆ!
ಅವರು ಬೆಳ್ಳನೆಯ ಕಚ್ಚೆಯುಟ್ಟು, ಹೊಸ ನಮೂನೆಯ ಷರ್ಟು ಹಾಕಿ, ಮೇಲೆ ಕರಿಯ ಅಥವಾ ಗೀರುಗೀರಿನ ಅಥವಾ ಇನ್ನಾವುದೊ ಕಣ್ಣು ಸೆಳೆಯುವ ಬಣ್ಣದ ಕೋಟು ಹಾಕಿಕೊಳ್ಳುತ್ತಿದ್ದರು. ಎಲ್ಲಕ್ಕಿಂತಯಲೂ ಕಿರೀಟಪ್ರಾಯವಾಗಿದ್ದುದೆಂದರೆ ಅವರು ಬಿಟ್ಟಿದ್ದ ಕ್ರಾಪು! ಅವರು ಎಣ್ಣೆ ಹಾಕಿ ಬಾಚಿ ಬೈತಲೆ ತೆಗೆದರೆಂದರೆ, ಮುಂದಲೆ ಚೌರ ಮಾಡಿಸಿಕೊಂಡು ಹಿಂದಲೆ ಜುಟ್ಟು ಬಿಟ್ಟಿದ್ದ ನಮ್ಮ ತಲೆಗಳು ನಾಚಿ ಮೂಲೆ ಸೇರುವಂತಾಗುತ್ತಿತ್ತು. ಅವರ ಕ್ರಾಫನ್ನೇ ನೋಡಿ ನೋಡಿ ಕರುಬಿ, ನಮ್ಮ ತಲೆಗಳನ್ನೂ ಏತಕ್ಕೆ ಹೀಗೆ ಚೌರ ಮಾಡಿಸಿಕೊಳ್ಳಬಾರದು ಎಂಬ ಮತೀಯ ಕ್ರಾಂತಿಭಾವವೋ ಎಂಬಂತಹ, ಒಂದು ಭಯಂಕರ ಮನೋಧರ್ಮ ಇಣುಕುತ್ತಿತ್ತು.
ಆ ಬಾಹ್ಯದ ಅನುಕರಣದ ಆಶೆ ನಮ್ಮಲ್ಲಿ ಆಶಾಮಾತ್ರವಾಗಿಯೆ ಉಳಿಯಬೇಕಾಗಿತ್ತು. ಅದು ಕೈಗೂಡುವ ಸಂಭವ ಒಂದಿನಿತೂ ಇರಲಿಲ್ಲ. ನಮ್ಮ ತಲೆಯ ಮೇಲಣ ಕೂದಲು ನಮ್ಮದೇ ಆಗಿದ್ದರೂ ಅದರ ಹಕ್ಕೆಲ್ಲ ನಮ್ಮ ತಂದೆ ತಾಯಿಗಳಿಗೆ ಹಿರಿಯರಿಗೆ ಸೇರಿದ್ದಾಗಿತ್ತು. ನಮ್ಮ ತಲೆಯ ಮೇಲೆ ಆ ಕೂದಲು ಹೇಗಿರಬೇಕು? ಹೇಗಿರಬಾರದು? ಎಂಬುದರ ಮೇಲಣ ಅಧಿಕಾರ ನಮಗೆ ಸ್ವಲ್ಪವೂ ಇರಲಿಲ್ಲ. ನಮ್ಮ ಆ ತಲೆಯ ಕೂದಲು ನಮ್ಮ ಮಟ್ಟಿಗೆ ಬರಿಯ ಐಹಿಕದ ವಸ್ತುವಾಗಿದ್ದರೂ, ನಮ್ಮ ಹಿರಿಯರಿಗೆ ಅವರ ಆಮುಷ್ಮಿಕ ಕ್ಷೇಮಕ್ಕೆ ಕೊಂಡೊಯ್ಯುವ ಸೂತ್ರವಾಗಿತ್ತು. ಜುಟ್ಟನ್ನು ಕತ್ತರಿಸಿ ಮಂಡೆ ಬೋಳಿಸುವುದು ಅಪ್ಪ ಅಮ್ಮ ಸತ್ತದ್ದಕ್ಕೆ ಸಂಕೇತವಾಗುತ್ತಿತ್ತು. ಅಪ್ಪ ಅಮ್ಮ ಬದುಕಿರುವವರು ಯಾರಾದರೂ ತಲೆ ಬೋಳಿಸುವುದುಂಟೆ? ಅಂತಹ ಪಾಷಂಡಿಕರ್ಮಕ್ಕೆ ನಮ್ಮನ್ನೆಂದೂ ಬಿಡುತ್ತಿರಲಿಲ್ಲ. ಅಲ್ಲದೆ ಹಾಗೆ ಮಾಡುವವರು ಜಾತಿಭ್ರಷ್ಟರಾದಂತೆಯೆ ಅಲ್ಲವೆ? ಅದು ಜಾತಿ ಕೆಟ್ಟ ಕಿಲಸ್ತರಿಗೆ ಮತ್ತು ಮುಸಲ್ಮಾನರಿಗೆ ಮಾತ್ರವೆ ಯೋಗ್ಯ: ಹಿಂದೂಗಳಿಗೆ ಶಿಖೆಯೇ ಸ್ವರ್ಗಕ್ಕೊಯ್ಯುವ ಏಣಿ! ಮತ್ತು ಧರ್ಮಧ್ವಜ!
ನಮ್ಮ ಬುರುಡೆಯ ಮೇಲಣ ವಸ್ತುವಿನ ವಿಚಾರದಲ್ಲಿ ನಮ್ಮ ಹಿರಿಯರಿಗೆ ಇರುತ್ತಿದ್ದ ಆಸಕ್ತಿ ನಮ್ಮ ಮಂಡೆಯ ಒಳಗಿನ ವಸ್ತುವಿನಲ್ಲಿಯೂ ಇರುತ್ತಿದ್ದರೆ ಮುಂದೆ ನಡೆದುದು ನಡೆಯುತ್ತಿರಲಿಲ್ಲವೋ ಏನೊ? ಆದರೆ ಮೆದುಳಿನ ವ್ಯಾಪಾರ ಆಲೋಚನಾ ರೂಪವಾದ್ದರಿಂದ ಆ ಅಗೋಚರದ ವಿಷಯದ ಕಡೆಗೆ ಅವರ ಲಕ್ಷ ಅಷ್ಟಾಗಿ ಬೀಳಲಿಲ್ಲ. ಆ ಕಾರಣವಾಗಿಯೆ ನಮಗೆ ಅಲ್ಲಿ ತಕ್ಕಮಟ್ಟಿನ ಸ್ವಾತಂತ್ರಕ್ಕೆ ಅವಕಾಶ ಒದಗಿತು. ಬಾಹ್ಯಕವಾಗಿ ನಡೆಯಲಾರದಿದ್ದ ಕ್ರಾಂತಿ ದಮನಗೊಂಡು ಆಂತರಿಕವಾಗಿ ತಲೆಯೆತ್ತಿತ್ತು. ನಮ್ಮ ಹೊಸ ಉಪಾಧ್ಯಾಯರ ಕ್ರೈಸ್ತಮತ ಬೋಧೆಗೆ ನಮ್ಮ ಮನಸ್ಸಿನ ಮೊಗ್ಗು ತನ್ನ ಬುದ್ಧಿಯ ಬಾಗಿಲು ತೆರೆದು ಮೆಲ್ಲಮೆಲ್ಲನೆ ಅರಳಿತು.

ಕ್ರಿಸ್ತನ ಬೋಧೆಯಿಂದ ನನ್ನ ಸಹಪಾಂಶು ಸಹಪಾಠಿಗಳಿಗೆ ಏನಾಯಿತೆಂಬುದನ್ನು ನಾನು ನಿಜವಾಗಿ ಹೇಳಲಾರೆ; ನನ್ನ ಮೇಲಾದ ಪರಿಣಾಮವನ್ನು ಮಾತ್ರ ಹೇಳಬಲ್ಲೆ.
ಅದುವರೆಗೆ ದೇವರು ಜೀವಲೋಕ ಪರಲೋಕ ಇವುಗಳ ವಿಚಾರವಾಗಿ ನಾನು ಪ್ರಜ್ಞಾಪೂರ್ವಕ ಬುದ್ಧಿಯಿಂದ ಆಲೋಚಿಸಿದ್ದನೆಂದು ತೋರುವುದಿಲ್ಲ. ಧೂಳಾಡುವ ಎಂಟೊಂಬತ್ತು ವರ್ಷದ ಹಳ್ಳಿ ಮಕ್ಕಳೊಡನೆ ಅಂಥಾದ್ದನ್ನೆಲ್ಲ ಮಾತಾಡುವರಾರು? ಅಂಥಾದ್ದನ್ನೆಲ್ಲ ಆಲೋಚಿಸಿ ಮಾತನಾಡಬಲ್ಲ ಹಿರಿಯರು ಕೂಡ ಯಾರಿದ್ದರು ಅಲ್ಲಿ? ಬಹುಶಃ ಅಂತಹ ಗುರುವಿಷಯ ಜಿಜ್ಞಾಸೆಗೆ ಶೂದ್ರರೆಂದೂ ಅರ್ಹರಲ್ಲ; ಅದೆಲ್ಲ ಬ್ರಾಹ್ಮಣರಿಗೆ ಸೇರಿದ್ದು; ಅವರ ಪಾದಪೂಜೆ ಮಾಡಿ, ಅವರು ಶಾಸ್ತ್ರ ಹೇಳಿದಂತೆ ಕೇಳಿಕೊಂಡಿದ್ದರೆ ಸಾಕು - ಎಂಬ ಸಂಪ್ರದಾಯದ ಶ್ರದ್ಧೆಯೂ ಆ ಮೌಢ್ಯಕ್ಕೆ ಪೋಷಕವೂ ರಕ್ಷಕವೂ ಆಗಿತ್ತೆಂದು ತೋರುತ್ತದೆ.
ಮನೆಯಲ್ಲಿ ದೇವರ ಪೂಜೆ ನಡೆಯುತ್ತಿತ್ತು; ಭೂತದ ಬನದಲ್ಲಿ ವರ್ಷಕ್ಕೊಮ್ಮೆ ಬಲಿ, ಹರಕೆ ಜರುಗುತ್ತಿತ್ತು; ದೆಯ್ಯ, ಜಕ್ಕಿಣಿ, ಕಲ್ಕುಟಿಗ ಮುಂತಾದ ದೆವ್ವ ಪಿಶಾಚಿಗಳ ಭೀಕರ ಕಥನಗಳೂ ಕಿವಿಯ ಮೇಲೆ ಬಿದ್ದು, ಕತ್ತಲೆಯಾದ ಮೇಲೆ ಮನೆ ತುಂಬ ಅವುಗಳ ಓಡಾಟದ ಹೊಂಚಿಕೆಯನ್ನು ಊಹಿಸಿ ಭಾವಿಸಿ ಬೆವರಿ ಬೇಗುದಿಗೊಳ್ಳುತ್ತಿದ್ದೆವು.
ಅದೃಶ್ಯದಲ್ಲಿ, ಅಪ್ರಾಕೃತದಲ್ಲಿ, ಅತೀಂದ್ರಿಯದಲ್ಲಿ ನಂಬಿಕೆ ನಮಗೆ ಹುಟ್ಟುಗುಣವಾಗಿತ್ತು. ಆದರೆ ಆ ಅತೀಂದ್ರಿಯ ವಸ್ತು, ಅದರ ಸ್ವರೂಪ, ಅದರಿಂದ ನಮ್ಮ ಮೇಲಾಗುವ ಪ್ರಭಾವ-ಇವುಗಳೆಲ್ಲ ಬೀಭತ್ಸ ಮತ್ತು ಭಯಾನಕ ವಲಯಗಳದ್ದೇ ಆಗಿತ್ತು. ದೇವರೂ ಕೂಡ ಬೃಹದಾಕಾರಗೊಂಡ, ನಿರಂಕುಶಾಧಿಕಾರಿ ದೆವ್ವವೇ ಆಗಿದ್ದ!
ದೇವರು, ಜೀವ, ಜಗತ್ತು, ಪಾಪ, ಪುಣ್ಯ, ಕರ್ಮ ಮುಂತಾದ ವಿಷಯಗಳನ್ನು ಕುರಿತು ನಮ್ಮಂತಹ ಮಕ್ಕಳೊಡನೆ ಯಾರು ತಾನೆ ಪ್ರಸ್ತಾಪಿಸುತ್ತಾರೆ? ಅದನ್ನು ತಿಳಿದುಕೊಳ್ಳುವ ಸಾಮರ್ಥ್ಯ, ಇಚ್ಛೆ ಇರುತ್ತದೆಯೇ ಮಕ್ಕಳಿಗೆ? ಅಂತಹ 'ಗುರು' ವಿಷಯ 'ಲಘು'ಗಳಿಗೇಕೆ? ಆದರೆ ಕ್ರೈಸ್ತಮತ ಪ್ರಚಾರಕರ ಭೋಧೆಗೆ ಒಳಗಾಗಿ ಕ್ರಿಸ್ತಮತವನ್ನಪ್ಪಿದ ಯುವಕ ಮೋಸಸ್ ಮೇಷ್ಟರಿಗೆ ನಾವು ಅಷ್ಟು 'ಲಘು'ಗಳಾಗಿ ತೋರಲಿಲ್ಲ. ಅವರು ನಮಗೆ ಕನ್ನಡ ಇಂಗ್ಲಿಷ್ ಕಲಿಸುವುದರ ಜೊತೆಗೆ ಯೇಸುಕ್ರಿಸ್ತನ ಕಥೆಯನ್ನು ಹೇಳಿದರು. ಮತಪ್ರಚಾರಕ ಉದ್ದೇಶದಿಂದಿರಬಹುದು. ಕನ್ನಡದಲ್ಲಿ ಅಚ್ಚಾಗಿದ್ದ 'ಮಾರ್ಕನ ಸುವಾರ್ತೆ' ಎಂಬ ಕಿರುಹೊತ್ತಿಗೆಯನ್ನು ಬಿಟ್ಟಿಯಾಗಿ, ನಮನಮಗೇ ಕೊಟ್ಟರು! ನಮ್ಮ ಮೆದುಳಿನ ವಿಚಾರದಲ್ಲಿ ಅದುವರೆಗೆ ಯಾರೂ ತೋರಿಸದಿದ್ದ ಗೌರವವನ್ನು ಹೊಣೆಗಾರಿಕೆಯನ್ನು ಹೊರಿಸಿ, ಆ ಪುಟ್ಟ, ಮುದ್ದಾಗಿ ಅಚ್ಚು ಮಾಡಿದ್ದ, ಮಾರ್ಕನ ಸುವಾರ್ತೆಯನ್ನು ನಮನಮಗೇ ಕೊಟ್ಟುಬಿಟ್ಟರು! ಒಬ್ಬೊಬ್ಬರಿಗೆ ಒಂದೊಂದು! ನನ್ನ ಬದುಕಿಗೆ ಬಂದು ಹೊಸಬಾಗಿಲು ತೆರೆದಂತಾಯ್ತು. ಒಂದು ವಿಸ್ಮಯಕಾರಕ ನೂತನ ಪ್ರಪಂಚಕ್ಕೆ ಪ್ರವೇಶಿಸಿದಂತಾಯ್ತು ನನ್ನ ಪ್ರಜ್ಞೆ. ಯಾವುದು ಎಷ್ಟರಮಟ್ಟಿಗೆ ಬುದ್ಧಿ ಸ್ಪಷ್ಟವಾಗಿತ್ತೋ ನಾನೀಗ ಹೇಳಲಾರೆ. ಆದರೆ ಪ್ರಾರ್ಥನೆ ಮಾಡಿದರೆ ದೇವರು ಓಕೊಳ್ಳುತ್ತಾನೆ; ಇಷ್ಟಗಳನ್ನು ಸಲ್ಲಿಸುತ್ತಾನೆ; ಯೇಸುಸ್ವಾಮಿ ಗುಡ್ಡದ ನೆತ್ತಿಗೆ ಹೋಗಿ ಪ್ರಾರ್ಥನೆ ಮಾಡಿದನು. ಆ ಪ್ರಾರ್ಥನೆ ಮತ್ತು ಶ್ರದ್ಧೆ ಎರಡೂ ಸೇರಿದರೆ 'ಪವಾಡ'ಗಳಾಗುತ್ತವೆ; ರೋಗಿ ಗುಣ ಹೊಂದುತ್ತಾನೆ; ಕುರುಡ ಕಾಣುತ್ತಾನೆ; ಭಗವಂತನು ಭೂಮಿಗಿಳಿದು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಇತ್ಯಾದಿಗಳನ್ನು ಕೇಳಿ ನನ್ನ ಚೇತನ ಭಕ್ತಿದೀಪ್ತವಾಯಿತು. ಮೇಲಿನ ತತ್ವಗಳಿಗೆ ಹಿಂದೂ ಪುರಾಣ ಕಥೆಗಳಲ್ಲಿ ಬರಗಾಲವೇನಿಲ್ಲ. ಆದರೆ ಅವುಗಳನ್ನು ಕುರಿತು ಬುದ್ಧಿ ಗೋಚರವಾಗುವಂತೆ ನಮ್ಮೊಡನೆ ಯಾರೂ ಜಿಜ್ಞಾಸೆ ಮಾಡಿರಲಿಲ್ಲ. ಅಲ್ಲದೆ ಯೇಸು ಸ್ವಾಮಿಯಂತೆಯೇ ಐತಿಹಾಸಿಕವಾದ ಬುದ್ಧಾದಿ ವಿಭೂತಿಪುರುಷರ ಜೀವನ ಕಥೆಗಳನ್ನು ಹೇಳಿ, ಹೃದಯಸ್ಪರ್ಶಿಯಾದ ಆ ತತ್ವಗಳು ಬುದ್ಧಿಯಲ್ಲಿಯೂ ಬೆಳಗುವಂತೆ ನಮ್ಮವರು ಯಾರೂ ತಿಳಿಸುವ ಗೋಜಿಗೆ ಹೋಗಿರಲಿಲ್ಲ.
ಸರಿ, ಯೇಸುಸ್ವಾಮಿಯಂತೆ ನಾವೂ ಗುಡ್ಡದ ನೆತ್ತಿಗೆ ಹೋಗಿ ಪ್ರಾರ್ಥನೆ ಮಾಡಿದರೆ ನಮಗೂ...? ಏನು? ಏನಾಗುತ್ತದೆ? ಏಕೆ? ತಿಳಿಯದು! - ಅಂತೂ ಹಾಗೆ ಪ್ರಾರ್ಥನೆ ಮಾಡಬೇಕು ಎಂಬ ಪ್ರೇರಣೆ ಉತ್ಕಟವಾಯಿತು. ನನ್ನ ಜೊತೆ 'ಐಗಳ ಶಾಲೆ'ಯಲ್ಲಿ ಓದುವುದಕ್ಕಿದ್ದ, (ಕೆಲವರು ನನಗಿಂತಲೂ ವಯಸ್ಸಾದವರು), ಇತರ ಬಾಲಕರಿಗೆ ಅದನ್ನೆಲ್ಲ ಹೇಳಿ ಒಪ್ಪಿಸಿದೆ. ಎಲ್ಲರೂ ಸಂಜೆಯ ಹೊತ್ತು ನಮ್ಮ ಮನೆಯ ಹಿಂದಿರುವ ಗುಡ್ಡಕ್ಕೆ (ಎಷ್ಟೋ ವರ್ಷಗಳ ಆನಂತರ ಅದಕ್ಕೆ 'ಕವಿಶೈಲ' ಎಂದು ನಾಮಕರಣ ಮಾಡಿದವನು ನಾನೆ!) ಏರಿದೆವು.
ಸೂರ್ಯ ಇನ್ನೂ ಮುಳುಗಿರಲಿಲ್ಲ. ಸಾಯಂ ಸಮಯದ ಗೋಧೂಳಿಯ ಹೊಂಗಾಂತಿ ಪಿಪಾಸೆಗೆ ಮಾದಕೋದ್ದೀಪಕವಾಗಿತ್ತು. ಕಲ್ಲು ಬಂಡೆಗಳೇ, ಅದರಲ್ಲಿಯೂ ಹಾಸುಗಲ್ಲುಗಳೇ ಹೆಚ್ಚಾಗಿರುವ ಆ ಗುಡ್ಡದ ಪಶ್ಚಿಮ ಭಾಗದಲ್ಲಿ ಒಂದೆಡೆ ನಾವೆಲ್ಲ ಪ್ರಾರ್ಥನೆ ಮಾಡುವುದಕ್ಕೆ ಯೋಗ್ಯವಾದ ಭಾಗವನ್ನು ಆರಿಸಿಕೊಂಡೆವು. ಏಕೊ ಏನೊ ತಿಳಿಯದು: ಕಣೆ ಬಿದಿರು ಗಳುಗಳನ್ನು ಕಡಿದು ಸುತ್ತಲೂ, ಒಡ್ಡು ಹಾಕಿ, ಪ್ರಾರ್ಥನಾ ವಲಯವನ್ನು ಪ್ರತ್ಯೇಕವಾಗಿ ಗುರುತಿಸುವಂತೆ ಮಾಡಿಕೊಂಡೆವು. ದನ ಗಿನ ನುಗ್ಗಿ ಸೆಗಣಿ ಹಾಕಬಾರದು ಎಂದಿರಬಹುದು. ಎಲ್ಲರೂ ಮೊಳಕಾಲು ಮಂಡಿಯೂರಿ, ಕೈಮುಗಿದುಕೊಂಡು ಕ್ರೈಸ್ತರು ಕೂರುವ ಭಂಗಿಯಲ್ಲಿ ಕುಳಿತು ಬಾಯಿಪಾಠ ಮಾಡಿದ ಪ್ರಾರ್ಥನೆ ಮಾಡಿದೆವು:


"ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಲಿ. 
ನಿನ್ನ ರಾಜ್ಯವು ಬರಲಿ. 
ಪರಲೋಕದಲ್ಲಿ ನೆರವೇರುವಂತೆ ನಿನ್ನ ಇಚ್ಛೆ ಭೂಲೋಕದಲ್ಲಿಯೂ ನೆರವೇರಲಿ.
ನಮ್ಮ ದಿನದಿನದ ಆಹಾರವನ್ನು ಈ ದಿನವೂ ದಯಪಾಲಿಸು.
ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನೂ ನೀನು ಕ್ಷಮಿಸು.
ನಾವು ಪಾಪವಶರಾಗದಂತೆ ನಮ್ಮನ್ನು ಪಾಪಪುರುಷನಿಂದ ಪಾರು ಮಾಡು."
ಪ್ರಾರ್ಥನೆ ನಮಗೆ ತಿಳಿಯುವ ಭಾಷೆಯಲ್ಲಿತ್ತು. ತಿಳಿಯುವ ಧಾಟಿಯಲ್ಲಿತ್ತು. ಸಂಸ್ಕೃತದಲ್ಲಿರುವಂತೆ ಪ್ರೌಢಕಾವ್ಯರೀತಿಯಲ್ಲಿಯೇ ಅಗ್ರಾಹ್ಯವಾಗಿರಲಿಲ್ಲ. ಏನೋ ಒಂದು ಮಹತ್ತಾದುದನ್ನು ಸಾಧಿಸಿದ ಹಿಗ್ಗಿನಿಂದ ನಾವೆಲ್ಲ ಕಪ್ಪಾಗುತ್ತಿದ್ದ ಬೈಗಿನಲ್ಲಿ ಗುಡ್ಡವಿಳಿದೆವು. ಎದುರು ಗುಡ್ಡದ ದಟ್ಟವಾದ ಕಡು ಮರಮರದೆಲೆಯ ಮಸಿ ಮುದ್ದೆಯ ಗೋಡೆಯಾಗಿತ್ತು.