Monday, November 30, 2009

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!

1998-2000 ನಾನು ಕನ್ನಡ ಎಂ.ಎ. ಮಾಡಿದ್ದು. ಆಗ ನನಗೆ ಬೇಂದ್ರೆ ಮತ್ತು ಜನ್ನ ವಿಶೇಷಕವಿಗಳಾಗಿ ಅಧ್ಯಯನಕ್ಕೆ ಇದ್ದವರು. ಬೇಂದ್ರೆ ಆಧುನಿಕ ಕನ್ನಡದ ವರಕವಿಯಾದರೆ, ಜನ್ನ ಹನ್ನೆರಡನೆಯ ಶತಮಾನದ ಕವಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಹಾಸನ ಜಿಲ್ಲೆಯ ಪರಿಸರದಲ್ಲಿ ಹುಟ್ಟಿ ಬೆಳೆದು ಕವಿಚಕ್ರವರ್ತಿ ಎನಿಸಿಕೊಂಡವನು.
ಕನ್ನಡ ಕವಿಚಕ್ರವರ್ತಿಗಳು ಮೂವರು. ಪೊನ್ನ, ರನ್ನ ಮತ್ತು ಜನ್ನ.
ಕನ್ನಡ ರತ್ನತ್ರಯರು ಮೂವರು. ಪಂಪ, ಪೊನ್ನ ಮತ್ತು ರನ್ನ.
ಆದರೆ ನಿಜವಾಗಿಯೂ ಈ ಎರಡೂ ಪಟ್ಟಿಯಲ್ಲಿ ಇರಬೇಕಾದವರು, ಪಂಪ, ರನ್ನ ಮತ್ತು ಜನ್ನ! ಇದು ನನ್ನ ಅನಿಸಿಕೆ. ಇರಲಿ ಬಿಡಿ. ಇಲ್ಲಿ ನಾನು ಯಾವ ಕವಿಯ ಸ್ಥಾನನಿರ್ದೇಶನಕ್ಕೂ ನಿಂತಿಲ್ಲವಾದ್ದರಿಂದ ಮತ್ತೆ ಜನ್ನನೆಡೆಗೆ ಬರುತ್ತೇನೆ.
ಈಗ್ಗೆ ಮೂರ್ನಾಲ್ಕು ತಿಂಗಳ ಹಿಂದೆ, ಅಂದರೆ ಉದಯ ಇಟಗಿಯವರು ಲಿಬಿಯಾದಿಂದ ಭಾರತಕ್ಕೆ ಬಂದು, ಬ್ಲಾಗ್ ಮಿತ್ರರನ್ನು ಒಂದೆಡೆ ಸೇರಿಸಿ ಊಟ ಹಾಕಿಸಿದ್ದರು. ಆ ದಿನ ಪ್ರಕಾಶ ಹೆಗಡೆ ಮೊದಲಾದವರು, ಹಳಗನ್ನಡ ಕಾವ್ಯಗಳ ನನ್ನ ಆಸಕ್ತಿಯಬಗ್ಗೆ ಮಾತನಾಡುತ್ತಾ, (ಅಷ್ಟೊತ್ತಿಗಾಗಲೇ ರನ್ನ ಜೀವನ ಚರಿತ್ರೆ ನನ್ನ ಬ್ಲಾಗಿನಲ್ಲಿ ಪ್ರಕಟವಾಗಿತ್ತು) ‘ಸಾರ್ ಜನ್ನನ ಬಗ್ಗೆ ಬರೆಯಿರಿ. ಆತನ ಬಗ್ಗೆ ಕೇಳಿದ್ದೇವೆ. ನೀವು ವಿವರವಾಗಿ ಬರೆಯಿರಿ’ ಎಂದು ಹೇಳಿದ್ದರು. ಹಲವಾರು ಕಾರ‍್ಯನಿಮಿತ್ತವಾಗಿ ಅದಕ್ಕಿಂತ ಹೆಚ್ಚಾಗಿ ನನ್ನ ಸೋಮಾರಿತನದಿಂದಾಗಿ ನಾನು ಆ ಕಡೆ ತಲೆ ಕೂಡಾ ಹಾಕಿ ಮಲಗಲಿಲ್ಲ!
ಮೊನ್ನೆ ಪದವಿ ತರಗತಿಯೊಂದಕ್ಕೆ, (ಕನ್ನಡ ಉಪನ್ಯಾಸಕರೊಬ್ಬರು ದೀರ್ಘಾವಧಿ ರಜೆ ಹೋಗಿದ್ದರಿಂದ) ‘ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೋಳ್’ ಎಂಬ ಜನ್ನನ ಯಶೋಧರ ಚರಿತ್ರೆಯ ಪದ್ಯಭಾಗವನ್ನು ಪಾಠ ಮಾಡುವ ಅವಕಾಶ ಸಿಕ್ಕಿತ್ತು. ಅಂದಿನಿಂದ ಜನ್ನ ಮತ್ತೆ ಮತ್ತೆ ಕಾಡುತ್ತಿದ್ದಾನೆ. ಆತನ ಬದುಕಿನ ವಿವರಗಳನ್ನು ಕುರಿತು ವಿವರಗಳನ್ನು ಸಂಗ್ರಹಿಸಲು, ಓದಲು ಪ್ರಾರಂಭಿಸಿದ್ದೇನೆ.

ವಿಶೇಷಕವಿಯಾಗಿ ಜನ್ನನನ್ನು ಅಧ್ಯಯನ ಮಾಡುವಾಗ ಆತನ ಅನಂತನಾಥಪುರಾಣ ಕಾವ್ಯದ ಭಾಗವಾದ ಚಂಡಶಾಸನ ವೃತ್ತಾಂತ ನನ್ನ ಮೇಲೆ ತೀವ್ರವಾದ ಪರಿಣಾಮ ಬೀರಿದ್ದಲ್ಲದೇ ಮುಂದೆ ಒಂದು ಸಣ್ಣ ಕಥೆಯಾಗಿ ನನ್ನಿಂದ ಬರೆಯಿಸಿಕೊಂಡಿತ್ತು. ಚಂಡಶಾಸನ ಕಥೆಗೂ, ರಾವಣ ಸೀತಾಪಹರಣ ಮಾಡಿದ ಕಥೆಗೂ ಅಲ್ಲಲ್ಲಿ ಹೋಲಿಕೆಯನ್ನು ವಿಮರ್ಶಕರು ಗುರುತಿಸುತ್ತಾರೆ. ಅಪಹರಣದ ಸಮಯದಲ್ಲಿ ಅಲ್ಲಿ ಜಟಾಯು ಅಡ್ಡ ಬರುತ್ತಾನೆ; ಇಲ್ಲಿ ಸಿಂಹಚೂಡ ಎಂಬ ಸಾಮಂತ ಅಡ್ಡ ಬರುತ್ತಾನೆ! ರಾವಣ ರಾಮನ ಮಾಯಾಶಿರಸ್ಸನ್ನು ತಂದು ತೋರಿದಾಗ ಸೀತೆ ಮೂರ್ಛೆ ಹೋಗುತ್ತಾಳೆ. ಆದರೆ ಇಲ್ಲಿ ಸುನಂದೆ ಸತ್ತೇ ಹೋಗುತ್ತಾಳೆ! ರಾವಣ ಯುದ್ಧ ಮುಂದುವರೆಸಿ ರಾಮನಿಂದ ಹತನಾದರೆ ಇಲ್ಲಿ ಚಂಡಶಾಸನ ಸುನಂದೆಯ ಜೊತೆಯಲ್ಲಿಯೇ ಚಿತೆಯೇರುತ್ತಾನೆ!

ಕಥೆ ಸೃಷ್ಟಿಯಾಗುವ ಕೆಲವು ದಿನಗಳ ಹಿಂದಷ್ಟೇ ಗುಜರಾತಿನಲ್ಲಿ ಭಯಂಕರ ಭೂಕಂಪ ಸಂಭವಿಸಿತ್ತು. ಪ್ರಕೃತಿ ಸೃಷ್ಟಿಸಬಹುದಾದ ವಿಕೋಪಗಳ ಜೊತೆಯಲ್ಲಿ ಮಾನವ ಸೃಷ್ಟಿಸುತ್ತಿದ್ದ ವಿಕೋಪಗಳೂ ಭಯಾನಕವೇ ಆಗಿದ್ದವು. ಪ್ರಾಕೃತಿಕ ವಿಕೋಪಗಳು ಸೃಷ್ಟಿಸಬಹುದಾದ ಭಯಂಕರ ಅನಾಹುತಗಳು, ಅದರ ಮುಂದೆ ಮಾನವನ ಅಲ್ಪತೆ, ಕ್ಷುದ್ರತೆಗಳು ನನ್ನ ಮನಸ್ಸನ್ನು ಆವರಿಸಿದ್ದ ಕಾಲ. ಆ ಹಿನ್ನೆಲೆಯಲ್ಲಿ ಚಂಡಶಾಸನ ವೃತ್ತಾಂತ ಕಥೆ ರಚನೆಯಾಗಿತ್ತು. ಕಥೆಗೆ ಒಂದು ರೀತಿಯ ನಾಟಕೀಯತೆ ಆವರಿಸಿಕೊಂಡು ಹೊಸತನದಿಂದ ಕೂಡಿತ್ತು. ಈ ಹಿಂದೆ ನನ್ನ ಒಂದೆರಡು ಸಣ್ಣಕಥೆಗಳು ಸಣ್ಣಪುಟ್ಟ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ (ಈಗ ಅವುಗಳ ಪ್ರತಿ ಸಹ ನನ್ನಲ್ಲಿಲ್ಲ!) ಕನ್ನಡ ಪ್ರಭದಲ್ಲಿ ಪ್ರಕಟವಾದ ಈ ಕಥೆ ನನಗೆ ‘ಕಥೆಗಾರ’ ಎಂಬ ಗುರುತಿನ ಚೀಟಿಯನ್ನು ನೀಡಿತ್ತು! (ಪ್ರಕಟವಾಗಿ ಮೂರು ತಿಂಗಳ ನಂತರ ನನಗೆ ಓದುಗರೊಬ್ಬರಿಂದ ಈ ವಿಷಯ ತಿಳಿಯಿತು!)

ಜನ್ನನ ಬದುಕು ಬರಹದ ಬಗ್ಗೆಯೇ ಲೇಖನ ಬರೆಯಲು ಸಿದ್ಧತೆ ನಡೆಸುತ್ತಿದ್ದಾಗ ಇದೆಲ್ಲಾ ನೆನಪಾಯಿತು. ಲೇಖನ ಸಿದ್ಧವಾಗಲು ಇನ್ನೂ ಕೆಲವಾರು ದಿನಗಳು ಬೇಕು ಅಷ್ಟರಲ್ಲಿ ನಿಮಗೆ ಈ ಚಂಡಶಾಶನವೃತ್ತಾಂತವನ್ನು ಒಮ್ಮೆ ಓದಿಸಬೇಕೆಂದು ಬ್ಲಾಗಿಗೆ ಎರಡು ಕಂತುಗಳಲ್ಲಿ ಹಾಕುತ್ತಿದ್ದೇನೆ. ನಿಮಗೇನನ್ನಿಸುತ್ತದೆ ಎಂಬುದು ನನಗೆ ಮುಖ್ಯ.
* * *

ಮಾವಿಂಗೆ ಮಾಲ್ಲಿಗೆಗಳ್ ಕೂರ್ತಡೆ, ಮಾವು ಕೂರ್ತುದು ವಸಂತಶ್ರೀಗೆ- ಅನಂತನಾಥ ಪುರಾಣ : ಜನ್ನ

ಭಾಗ - ೧

ಸಹೃದಯರೆ, ನಾನು ಕಾಲ. ವ್ಯಂಗದಿಂದಲೋ, ಗೌರವದಿಂದಲೋ ಕೆಲವರು ನನ್ನನ್ನು ಕಾಲರಾಯನೆಂದು ಕರೆಯುತ್ತಾರೆ. ಈಕೆ ಸೃಷ್ಟಿ. ನನ್ನ ಸಹೋದರಿ. ಈಕೆಯ ಗರ್ಭದಿಂದುದಯಿಸಿದ ಒಳಿತು ಕೆಡುಕುಗಳನ್ನು ನಾನು ನನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೋಗುತ್ತೇನೆ. ನಿರಂತರ ಸೃಷ್ಟಿಕಾರ್ಯದಲ್ಲಿ ನಿರತಳಾದ ಇವಳಿಗೆ ವರ್ತಮಾನದಲ್ಲಿ ಹೆಜ್ಜೆ, ಭವಿಷ್ಯದಲ್ಲಿ ದೃಷ್ಟಿ. ಭೂತದ ಕಡೆಗೆ ನೋಡಲಿವಳಿಗೆ ಸಮಯವಾಗಲಿ, ಸಹನೆಯಾಗಲಿ ಇಲ್ಲ. ನಿರಂತರತೆಯಲ್ಲೊಮ್ಮೆ ಬಿಡುವು ಬೇಸರಗಳಾದಾಗ ನನ್ನ ಬಳಿಬಂದು ‘ಕಾಲರಾಯ ಒಂದಿಷ್ಟು ಇತಿಹಾಸವನ್ನಾದರು ಹೇಳು’ ಎಂದು ದಂಬಾಲು ಬೀಳುತ್ತಾಳೆ. ತನ್ನ ಗರ್ಭದಲ್ಲಿಯೇ ಅಗಣಿತ ವ್ಯಾಪಾರಗಳನ್ನಿಟ್ಟುಕೊಂಡಿರುವ ಇವಳಿಗೆ, ತಾನೇ ಪ್ರಸವಿಸಿದ ಇತಿಹಾಸವನ್ನು ಇಣುಕುವ ಚಪಲ ನನ್ನ ಗರ್ಭದಲ್ಲಿಳಿದು. ನಾನೂ ಒಪ್ಪಿದ್ದೇನೆ. ನಿಮ್ಮನ್ನೂ ಕರೆದಿದ್ದೇನೆ. ಈಕೆಯೊಬ್ಬಳಿಗೆ ನಾನು ಕಥೆ ಹೇಳಿದರೆ ಆಗುವ ಶ್ರಮ ಮತ್ತು ಸಾರ್ಥಕತೆ ನಿಮಗೆ ಹೇಳುವುದರಿಂದ ಹೆಚ್ಚೇನು ಆಗುವುದಿಲ್ಲ. ಒಮ್ಮೊಮ್ಮೆ ಸಾರ್ಥಕತೆಯ ತೂಕ ಹೆಚ್ಚಾಗುತ್ತದೆಯಾದರೂ, ಇಂದು ಇತಿಹಾಸದಿಂದ ಪಾಠ ಕಲಿಯುವವರೆಷ್ಟು ಮಂದಿ ಇದ್ದಾರೆ ಹೇಳಿ. ಇತಿಹಾಸವೆಂಬುದು ರಂಜನೆಯ ವಸ್ತುವಾಗಿದೆ. ವರ್ತಮಾನದಲ್ಲಿ ನಿಂತು, ಭೂತವನ್ನು ಮರೆತು, ಭವಿಷ್ಯವನ್ನು ನೋಡುತ್ತಿರುವ ಈಕೆಯ ಗರ್ಭಸಂಜಾತರಿಗೆ!
ಸೃಷ್ಟಿ ಕೇಳು, ನೀನು ಈಗಿನ ನಿನ್ನ ಇರುವಿಕೆಯಿಂದ ‘ನಾನೆಷ್ಟು ಸುಂದರಿ’ ಎಂದು ಅಹಂಕಾರ ಪಡುತ್ತಿದ್ದೀಯ. ನಿನ್ನೊಳಗೇನಿದೆಯೆಂಬುದೇ ನಿನಗೆ ಗೊತ್ತಿಲ್ಲ. ಪ್ರಸವದ ನಂತರ ತಿರುಗಿ ನೋಡದ ನಿನಗೆ, ನೀನು ಪ್ರಸವಿಸಿ ನನ್ನ ತೆಕ್ಕೆಗೆ ಬಂದ ‘ವಸ್ತು’ ಏನೆಂಬುದು ತಿಳಿಯುವುದೇ ಇಲ್ಲ. ನೀನು ಪ್ರಸವಿಸಿದ್ದೆಲ್ಲವೂ ಒಳಿತಲ್ಲ, ಕೆಡಕೂ ಇದೆ; ಸುಂದರವಲ್ಲ, ಕುರೂಪವೂ ಇದೆ; ಸತ್ಯವಲ್ಲ, ಅಸತ್ಯವೂ ಇದೆ. ಇದು ಎಲ್ಲ ಕಾಲಕ್ಕೂ ಇದ್ದದ್ದೆ. ಆದರೆ ಈ ವರ್ತಮಾನದ ಮಕ್ಕಳು ಅವಘಡಗಳು ನಡೆದಾಗ, ‘ಕೆಟ್ಟಕಾಲ’ ‘ಕಲಿಗಾಲ’ ‘ಕಾಲದ ಮಹಿಮೆ’ ಮುಂತಾಗಿ ಉದ್ಗರಿಸುತ್ತಾರೆ. ಪಾಪ! ಇವರಿಗೆ ಗೊತ್ತಿಲ್ಲ. ಇವರಂದುಕೊಂಡಿರುವ ಈ ನಾಗರೀಕತೆಯ ಒಂದೊಂದು ಪೊರೆ ಕಳಚಿದಾಗಲೂ ಬದಲಾಗುತ್ತಿರುವುದು ಅದರ ಹೊರಮೈಯಷ್ಟೇ ಎಂದು. ಅದರ ಸುಪ್ತಮನಸ್ಸಿನಾಳದಲ್ಲಿರುವ ಈ ಒಳಿತು ಕೆಡಕುಗಳು ವಾಸನಾರೂಪದಲ್ಲಿ ಉಳಿದುಬಿಡುತ್ತವೆ ಎಂದು.
ಸೃಷ್ಟಿ, ಈಗ ಹೇಳುತ್ತೇನೆ ಕೇಳು. ಪುರಾಣವೋ, ಇತಿಹಾಸವೋ ಅದು ಒತ್ತಟ್ಟಿಗಿರಲಿ. ಪುರಾಣದೊಳಗಿನ ಇತಿಹಾಸ, ಇತಿಹಾಸದೊಳಗಿನ ಪುರಾಣ ಅದೂ ನನಗೆ ಸಂಬಂಧಿಸಿದ್ದಲ್ಲ. ನನ್ನ ಪ್ರಕಾರ ಈ ಕ್ರಿಯೆಗೆ ಹಿಂದು, ಇಂದು ಮತ್ತು ಮುಂದು ಎಂಬ ವಿಶೇಷಣಗಳೇ ಬೇಡ.
ಬಾ ಸೃಷ್ಟಿ, ಇತ್ತ ಬಾ. ನನ್ನೊಳಗೆ ಇಣುಕಿ ನೋಡು. ಅದೋ ಅಲ್ಲಿ ನೋಡು. ಕಾಣಿಸುತ್ತದೆಯೆ ಇದು ಯುದ್ಧಭೂಮಿ. ಬೆಳಗಿನಿಂದ ಸಂಜೆಯವರೆಗೂ ಪ್ರಾಣದ ಹಂಗು ತೊರೆದು ಹೋರಾಡಿದ ಸೈನಿಕರು ನಿದ್ರಾಮಾತೆಯ ಮಡಿಲಲ್ಲಿದ್ದಾರೆ. ಗಾಯಗೊಂಡ ಯೋಧರಿಗೆ ಉಪಚಾರವೂ ನಡೆದಿದೆ. ಸಾಕಷ್ಟು ಬೆವೆರಿಳಿಸಿದ ಆನೆ ಕುದುರೆಗಳು ವಿಶ್ರಾಂತಿಯನ್ನುಣ್ಣುತ್ತಿವೆ. ಇದೆಲ್ಲಾ ಆ ಸೂರ್ಯದೇವನ ಕೃಪೆ ನೋಡು. ಹೆಣ್ಣು, ಹೊನ್ನು ಮತ್ತು ಮಣ್ಣು ಇಂತದ್ದಕ್ಕೆಲ್ಲಾ ಲಜ್ಜಾಹೀನರಾಗುವ ರಾಜರು, ಕಾನೂನು ಕಟ್ಟಳೆಗಳನ್ನು ಮುರಿದರೂ, ಸೂರ್ಯ ಮುಳುಗಿದ ಮೇಲೆ ಯುದ್ಧ ನಿಲ್ಲಿಸಿಬಿಡುತ್ತಾರೆ. ಇದು ಯುದ್ಧದ ಕಟ್ಟಳೆಗಳ ಬಗ್ಗೆ ಅವರಿಗಿರುವ ನಿಷ್ಟೆಗಿಂತ, ನಾಳೆ ಮತ್ತೆ ಕಚ್ಚಾಡಲು ಶಕ್ತಿ ಸಂಚಯಮಾಡಲಿಕ್ಕೆ ಮಾಡಿಕೊಂಡಿರುವ ಸಂಚು. ಅದನ್ನೇ ಅವರು ಕಾನೂನು, ಕಟ್ಟಳೆ, ಯುದ್ಧವಿಧಿವಿಧಾನಗಳೆಂದು ಹೇಳುತ್ತಾರೆ. ಆದರೆ ಅದನ್ನೂ ಮುರಿದ ‘ವೀರ ಯೋಧ’ರು ನನ್ನ ತೆಕ್ಕೆಯಲ್ಲಿದ್ದಾರೆ. ಅದಿರಲಿ, ಇಲ್ಲಿ ಕೇಳು. ಅಲ್ಲಿ ಪಂಜುಗಳುರಿಯುತ್ತಿರುವ ಬಿಡಾರವನ್ನು ನೋಡು. ರಾತ್ರಿಕಾವಲೂ ಇದೆ. ಬಿಡಾರದೊಳಗೆ ಅತ್ತಿಂದಿತ್ತ ತಿರುಗುತ್ತಿರುವವನು ವಸುಷೇಣ. ಸುರಮ್ಯ ದೇಶದ ಅರಸು. ಈಗ ಈತನ ಯುದ್ಧ ಈ ಮಕರಗ್ರಾಹಪುರದ ಅರಸು ಚಂಡಶಾಸನ ಮೇಲೆ. ಕಾರಣ! ನಾನು ಹೇಳುವುದಕ್ಕಿಂತ ನೀನೆ ತಿಳಿಯುವುದು ಉತ್ತಮ. ಹೋಗು, ಸ್ವಲ್ಪ ಹೊತ್ತು ಈತನ ಮಾನಸಸರೋವರದಲ್ಲಿ ವಿಹರಿಸಿ ಬಾ. ನಾನಿಲ್ಲಿಯೇ ಕಾಯುತ್ತಿರುತ್ತೇನೆ.
* * *

ನಾನು ಯಾರು? ನಾನು ಯಾರು? ಭರತವರ್ಷದ ಸುರಮ್ಯ ದೆಶದ ಅರಸು. ಪೌದನಪುರವರಾಧೀಶ್ವರ ವಸುಷೇಣ. ನನ್ನಂತವನ ವಿಷಯದಲ್ಲೂ ಹೀಗಾಗಬೇಕೆ? ಲತೆಯೆಂದು ಅಪ್ಪಿದ್ದು ಹಾವಾಗಿ ಕಚ್ಚಬೇಕೆ? ಅ ಹಾವು ಕಚ್ಚಿ ಮೈಯೆಲ್ಲಾ ವಿಷವೇರುತ್ತಿದೆ. ಅದು ನನ್ನ ಮೈಯನ್ನು ಪೂರ್ಣ ಆವರಿಸುವ ಮುನ್ನ ಆ ಜಂತುವನ್ನು ಹಿಡಿದು ಈ ವಿಷವನ್ನು ಇಳಿಸಬೇಕು. ಇಲ್ಲ, ಅದನ್ನು ಕೊಲ್ಲಬೇಕು. ಛೇ! ಈ ಸೂರ್ಯ ಇನ್ನೊಂದೆರಡು ಗಳಿಗೆ ತಡವಾಗಿ ಅಸ್ತಮಿಸಬಾರದೆ. ಇಂದೇ ಆ ಕ್ಷುದ್ರಜಂತುವನ್ನು ಇಲ್ಲವಾಗಿಸಿಬಿಡುತ್ತಿದ್ದೆ.
ಏನೆಲ್ಲಾ ಆಯಿತು ಈ ಐದು ದಿನಗಳಲ್ಲಿ. ಒಂದೇ ಗುರುವಿನ ಶಿಷ್ಯರಿಬ್ಬರಲ್ಲಿ ನಾಳೆ ಒಬ್ಬ ಸಾಯಬೇಕು, ಇನ್ನೊಬ್ಬನಿಂದ. ಇದು ನನ್ನ ಕನಸು ಮನಸುಗಳಲ್ಲೂ ಸುಳಿದಿರದ ಕಲ್ಪನೆ. ಆದರಿಂದು ವಾಸ್ತವವಾಗಿ ಬಂದು ನನ್ನೆದುರೇ ನಿಂತು ನನ್ನನ್ನೇ ಅಣಕಿಸುತ್ತಿದೆ.
ಓ ಚಂಡಶಾಸನ, ನನ್ನ ಪ್ರಿಯಮಿತ್ರ ಚಂಡಶಾಸನ. ನೀನೇಕೆ ಹೀಗೆ ಮಾಡಿದೆ? ಒಂದು ವಾರದ ಕೆಳಗೆ ನಿನ್ನಾಳೊಬ್ಬ ಬಂದು, ‘ಮಕರಗ್ರಾಹಪುರವರಾಧೀಶ್ವರ ಚಂಡಶಾಸನದೇವರು ನಿಮ್ಮನ್ನು ಕಾಣಲು ನಾಳೆ ಬರುವವರಿದ್ದಾರೆ’ ಎಂದಾಗ ನಾನೆಷ್ಟು ಸಂತೋಷಪಟ್ಟಿದ್ದೆ. ಆ ಖುಷಿಯಲ್ಲಿ ನನ್ನ ಕೊರಳಲಿದ್ದ ಆಭರಣವನ್ನೇ ಉಡುಗೊರಯಾಗಿ ಕೊಟ್ಟಿದ್ದೆ. ನನ್ನೆಲ್ಲಾ ಅರಮನೆಯ, ಅಂತಃಪುರದ ಜನಕ್ಕೆಲ್ಲಾ ನಿನ್ನ ಸ್ವಾಗತಕ್ಕೆ ಸಿದ್ದರಾಗುವಂತೆ ಆಜ್ಞೆ ಮಾಡಿದ್ದೆ. ಇಡೀ ಪೌದನಪುರವನ್ನೇ ನಿನ್ನ ಸ್ವಾಗತಕ್ಕೆ ಸಿದ್ಧಪಡಿಸಲು ನನ್ನಂತರಂಗದ ಜನಕ್ಕೆ ತಿಳಿಸಿದ್ದೆ. ಏಕೆ ಹೇಳು? ಆರು ವರ್ಷಗಳ ನಂತರ, ಜೊತೆಯಲ್ಲೇ ದೂಳಾಟವಾಡಿದ್ದ ಬಾಲ್ಯ ಸ್ನೇಹಿತರಿಬ್ಬರು, ಒಂದೇ ಗುರುವಿನ ಶಿಷ್ಯರಿಬ್ಬರು, ನೆರೆಹೊರೆ ರಾಜ್ಯಗಳ ರಾಜರಿಬ್ಬರು ಆರು ವರ್ಷಗಳ ನಂತರ ಮತ್ತೆ ಬೇಟಿಯಾಗುತ್ತಿದ್ದೆವು. ಚಂಡಶಾಸನ ನಿನಗೆ ನೆನಪಿದೆಯೋ, ಇಲ್ಲವೊ? ನಾವಂದು ಗುರುಕುಲದಿಂದ ಹೊರಟು ನಿಂತಾಗ, ಪ್ರತಿವರ್ಷಕ್ಕೊಮ್ಮೆ ನಾವಿಬ್ಬರು ಸೇರಿ ವಾರವಿಡೀ ಕ್ರೀಡಾವಿಲಾಸಗಳಲ್ಲಿ, ಜಲಕೇಳಿಗಳಲ್ಲಿ, ಮೃಗಕಥಾವಿನೋದಗಳಲ್ಲಿ ವಿಹರಿಸಬೇಕೆಂದು ಮಾತನಾಡಿಕೊಂಡಿದ್ದೆವು. ಅಲ್ಲಿಂದ ಬಂದು ತಿಂಗಳೆರಡರಲ್ಲಿ ನನ್ನ ಪಟ್ಟಾಭಿಷೇಕ. ನಂತರ ಮದುವೆ. ನೀನು ಮದುವೆಗೆ ಬರಲೊಪ್ಪಿದ್ದೆ. ಆದರೆ ನಿನ್ನ ದೇಶದ ದಕ್ಷಿಣದಲ್ಲಿ ಎದ್ದ ದಂಗೆಯಿಂದಾಗಿ ನೀನು ಬರುವುದಿಲ್ಲವೆಂದು ತಿಳಿದಾಗ ನಾನೆಷ್ಟು ಅವಲತ್ತುಕೊಂಡಿದ್ದೆ. ನಿಜ, ಮೊದಲು ಕರ್ತವ್ಯ. ನೀನೂ ಒಂದು ದೇಶದ ಅರಸು. ಎಲ್ಲಾ ಸರಿಯಾಗಿ ಒಂದು ಸ್ಥಿತಿ ತಲುಪಿದಾಗ ಬರುವುದಾಗಿ ನೀನು ತಿಳಿಸಿದ್ದೆ. ಅದಕ್ಕಾಗಿ ನಾನು ಆರು ವರ್ಷಗಳೇ ಕಾಯಬೇಕಾಯಿತು, ಮಿತ್ರ ಆರು ವರ್ಷಗಳು.
ಬಂದೆ. ನೀನು ಮಹೋತ್ಸವದಿಂದ ಪುರಪ್ರವೇಶ ಮಾಡಿದ್ದೆ ನಿನ್ನ ನರ್ಮಸಚಿವ ಸುದರ್ಶನನೊಂದಿಗೆ. ನಾವಿಬ್ಬರು ಆಲಂಗಿಸಿದೆವು. ಅಭಿನಂದಿಸಿದೆವು. ಆನಂದಿಸಿದೆವು. ಎರಡು ಘನಗಜಗಳನ್ನೇರಿ ಮೆರವಣಿಗೆಯಲ್ಲಿ ಅರಮನೆಗೆ ಬಂದೆವು. ಎಲ್ಲವೂ ನಾನಂದುಕೊಂಡಂತೆಯೇ ಆಯಿತು. ಸ್ವತಃ ದೇವಿ ಸುನಂದೆಯೇ ಆರತಿಯೆತ್ತಿ ನಮ್ಮನ್ನು ಸ್ವಾಗತಿಸಿದಳು.
ಮೊದಲೆರಡು ದಿನಗಳು ನಡೆದ ಸಹಪಂಕ್ತಿ ಬೋಜನ, ಸಹವಿಳಾಸಕ್ರೀಡೆಗಳನ್ನು ನಾನು ಹೇಗೆ ಮರೆಯಲಿ. ನಂತರ ನೀನ್ನಲ್ಲಿ ಸ್ವಲ್ಪ ಅನ್ಯಮನಸ್ಕತೆಯನ್ನು ಕಂಡೆ. ತನ್ನ ನಾಡಿನಿಂದ ದೂರವಿರುವುದಕ್ಕೆ ಇರಬೇಕೆಂದುಕೊಂಡೆ. ಆದರೆ ನಾಳೆಗೆ ನಡೆಸಲು ಯೋಜಿಸಿದ್ದ ಮೃಗಬೇಟೆಯ ವಿನೋದದ ಸುಖದ ಕಲ್ಪನೆಯಲ್ಲಿ ನಾನಿದ್ದೆ. ಇದು ನಿನಗೆ ಖುಷಿಕೊಡುತ್ತದೆಯೆಂದು ಭಾವಿಸಿ ಸುಮ್ಮನಾದೆ. ಕಾಡಿನಲ್ಲಿ ಮೃಗವೊಂದನ್ನು ಬೆನ್ನಟ್ಟಿ ನಾವಿಬ್ಬರೂ ದೂರವಾಗಿದ್ದೆವು. ನನಗೆ ಬೇಟೆ ಸಿಗಲಿಲ್ಲ. ಆದರೆ, ಆದರೆ,,,.. ..
* * *

ನೋಡಿದೆಯಾ ಸಹೋದರಿ, ಈ ಮನುಷ್ಯನಂತರಂಗವನ್ನು. ಕ್ರೋಧದ ಕೆಸರಿನಿಂದ ತನ್ನಮನದ ನೈರ್ಮಲ್ಯವನ್ನು ಕಳೆದುಕೊಂಡುಬಿಟ್ಟಿದ್ದಾನೆ. ಈಗ ನೀನು ಇನ್ನೊಬ್ಬನನ್ನು ನೋಡಬೇಕು. ಒಬ್ಬನಲ್ಲ ಇಬ್ಬರು. ಚಂಡಶಾಸನ ಮತ್ತು ಸುನಂದೆಯನ್ನು, ಅರಮನೆಯಲ್ಲಿ. ನೋಡಲ್ಲಿ, ಆತ ಚಂಡಶಾಸನ. ಅವನು ಸುನಂದೆಯನ್ನು ಅನುನಯಿಸುತ್ತಿದ್ದಾನೆ, ಕಾಡುತ್ತಿದ್ದಾನೆ. ಇಲ್ಲ ಆತ ಅವಳನ್ನು ಬೇಡುತ್ತಿದ್ದಾನೆ. ಹೋ, ಹೊರಟುಬಿಟ್ಟ. ನಮ್ಮ ಬರುವು ಒಂದು ಕ್ಷಣ ತಡವಾಯಿತೆ? ಇರಲಿ, ಸೃಷ್ಟಿ ಈಗ ನೀನು ಈತನ ಮನೋಮಂದಿರವನ್ನು ಹೊಕ್ಕು ಅಲ್ಲಿನ ವ್ಯಾಪಾರವನ್ನು ಗ್ರಹಿಸು. ಆತ ನಿದ್ರೆಯನ್ನಂತೂ ಮಾಡಲಾರ. ಮನುಷ್ಯಪ್ರಾಣಿ ಏಕಾಂಗಿಯಾಗಿದ್ದಾಗ ನಿಷ್ಪಕ್ಷಪಾತವಾಗಿ ಸ್ವ-ವಿಮರ್ಶೆ ಮಾಡಿಕೊಳ್ಳುತ್ತಾನೆ. ಹೋಗಿ ಬಾ, ನಾನಿಲ್ಲಿಯೇ ಚಲಿಸುತ್ತಿರುತ್ತೇನೆ.
ಮುಂದುವರೆಯುತ್ತದೆ........

Monday, November 23, 2009

ಮೀನು ಹಿಡಿಯುವುದು ಇಷ್ಟು ಸುಲಭವೇ? ಪಂಪ!

ಆಗಾಗ ಟೀವಿಯಲ್ಲಿ, ಕ್ರಿಕೆಟ್ ಆಟದ ನಡುವೆ ಬರುವ ಜಾಹಿರಾತುಗಳಲ್ಲಿ ಹೆಚ್ಚು ಗಮನ ಸೆಳೆದದ್ದು: ಆಧುನಿಕ ಉಪಕರಣಗಳನ್ನು ಹಿಡಿದು ಮೀನಿಗೆ ಗಾಳ ಹಾಕಿ ಒಬ್ಬ ವ್ಯಕ್ತಿ ಕುಳಿತಿರುತ್ತಾನೆ. ಆಗ ಹಳ್ಳಿಯ ಆಸಾಮಿಯೊಬ್ಬ ಹಾಡು ಗುನುಗುತ್ತಾ ಬರುತ್ತಾನೆ. ಗಾಳ ಹಾಕಿಕೊಂಡು ಕುಳಿತವ ‘ಸದ್ದು ಮಾಡಬೇಡ (ಮೀನು ಗಾಳಕ್ಕೆ ಬೀಳುವುದಿಲ್ಲ)’ ಎಂದು ಗದರುತ್ತಾನೆ. ಹಳ್ಳಿಯವ ಒಂದು ಕೋಲಿಗೆ ನಾಲ್ಕು ಹನಿ ಫೆವಿಕ್ವಿಕ್ ಹಾಕಿ ನೀರಿನಲ್ಲಿ ಮುಳುಗಿಸಿ ಮೇಲೆತ್ತುತ್ತಾನೆ. ನಾಲ್ಕು ಮೀನುಗಳು ಕೋಲಿಗೆ ಅಂಟಿಕೊಂಡಿರುತ್ತವೆ! ಹಳ್ಳಿಯವ ಮತ್ತೆ ಸಂತೋಷದಿಂದ ಹಾಡು ಗುನುಗಲಾರಂಭಿಸಿದರೆ ಇತ್ತ ಗಾಳ ಹಾಕಿ ಕುಳಿತವನ ಮುಖ ಇಂಗು ತಿಂದ ಮಂಗನಂತಾಗುತ್ತದೆ!!!
ಇದನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣ ಪಂಪಭಾರತ! ನಮ್ಮ ವಾರಾಂತ್ಯ ಕಾರ್ಯಕ್ರಮ ಪಂಪಭಾರತ ಅಧ್ಯಯನ ನೆನ್ನೆ ನೆಡೆದಿತ್ತು. ಅದರಲ್ಲಿ ಯಮುನಾ ನದಿಯ ಮಡುವೊಂದರಲ್ಲಿ ಕೃಷ್ಣಾರ್ಜುನರು ತಮ್ಮ ಪರಿವಾರದೊಡನೆ ಜಲಕ್ರೀಡೆಯಾಡುವ ಸನ್ನಿವೇಶ ಬರುತ್ತದೆ. ಆಗ ಮೀನು ಹಿಡಿಯುವುದು ಇಷ್ಟೊಂದು ಸುಲಭವೇ? ಅನ್ನಿಸಿತು! ನಂತರ ನನ್ನ ಮನಸ್ಸನ್ನು ಆವರಿಸಿದ್ದು ನಾನು ಬಾಲ್ಯದಲ್ಲಿ ಕಂಡ, ದಕ್ಷಿಣದ ಒಳನಾಡಿನಲ್ಲಿ ಅಂದರೆ ಕರ್ನಾಟಕದ ಬಯಲುಸೀಮೆಯಲ್ಲಿ ಮೀನು ಹಿಡಿಯುವ ಹಲವಾರು ವಿಧಾನಗಳು. ಅವುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ.
ಹಾಂ! ಯೋಚಿಸಬೇಡಿ. ಪಂಪಭಾರತದ ಆ ಸನ್ನಿವೇಶವನ್ನು ಕೊನೆಯಲ್ಲಿ ಹೇಳುತ್ತೇನೆ. ಅದರ ಸ್ವಾರಸ್ಯವನ್ನು ನೀವು ಸವಿಯಲೇಬೇಕು!
ಸಣ್ಣ 'ಕೂಳಿ'ಯಲ್ಲಿ ಮೀನು ಹಿಡಿಯುವುದು
ತೆಂಗಿನ ಗರಿಯಿಂದ ಬೇರ್ಪಡಿಸಿದ ಕಡ್ಡಿಯನ್ನು ಬಳಸಿ ನಿರ್ಮಿಸಿದ 'ಕೂಳಿ' ಅಥವಾ 'ಕೂಣಿ' ಮೀನು ಹಿಡಿಯುವ ಜನಪ್ರಿಯ ಸಾಧನ. ಅವುಗಳನ್ನು ಮಳೆಗಾಲದಲ್ಲಿ ಸಣ್ಣದಾಗಿ ನೀರು ಹರಿಯುವ ಕಾಲುವೆಗಳಿಗೆ ಒಡ್ಡಿ (ಜೋಡಿಸಿ), ನೀರು ಅದರ ಮುಖಾಂತರ ಮಾತ್ರ ಹರಿಯುವಂತೆ ಮಾಡುತ್ತಿದ್ದರು. ಕಾಲುವೆಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಒಂದು ಕೂಳಿಯ ನೀರು, ಎರಡು ಕೂಳಿಯ ನೀರು ಎಂದು ನಿರ್ಧರಿಸುತ್ತಿದ್ದರು. ಹಾಗೆ ರಾತ್ರಿ ಜೋಡಿಸಿ ಬಂದ ಕೂಳಿಯಲ್ಲಿ ಬೆಳಿಗ್ಗೆ ಸೇರುಗಟ್ಟಲೆ ಸಣ್ಣ ಸಣ್ಣ ಮೀನುಗಳು ಸಂಗ್ರಹವಾಗಿರುತ್ತಿದ್ದವು (ಒಮ್ಮೊಮ್ಮೆ ಕೇರೆಹಾವು, ಕಪ್ಪೆ ಮೊದಲಾದವುಗಳೂ ಸೇರಿಕೊಳ್ಳುತ್ತಿದ್ದವು). ಕೆಲವೊಮ್ಮೆ ಕೆಲವು ಉತ್ಸಾಹಿಗಳು ಕೂಳಿ ಹಾಕಿದ ಜಾಗದಲ್ಲೇ ಗುಡಾರ ಹಾಕಿಕೊಂಡು ಕೂಳಿಯೊಳಗೆ ಹಾವು ಬಂದಿದೆಯೇ ಎಂದು ನೋಡಿ ಬಂದಿದ್ದರೆ ಅದನ್ನು ಹೊರಗೆ ಹಾಕಿ ಮತ್ತೆ ಕೂಳಿ ಜೋಡಿಸುತ್ತಿದ್ದರು. ಏಕೆಂದರೆ ಹಾವು ಕೂಳಿಯೊಳಗೆ ಬಂದ ಮೀನೆಲ್ಲವನ್ನೂ ಕಬಳಿಸುತ್ತದೆ ಎಂದು! ಹರಿಯುವ ನೀರಿಗೆ ವಿರುದ್ಧ ದಿಕ್ಕಿನಲ್ಲಿ ಮೀನು ಚಲಿಸುತ್ತವೆ ಎಂದು ಆಗ ನಮಗೆ ಗೊತ್ತಿರಲಿಲ್ಲ. ನೀರು ಹರಿಯುವ ದಿಕ್ಕಿಗೇ ತೆರೆದ ಬಾಯಿಯನ್ನು ಮಾಡಿ ಜೋಡಿಸುತ್ತಿದ್ದ ಕೂಳಿಯೊಳಗೆ ಮೀನು ಹೇಗೆ ಹೋಗುತ್ತವೆ? ಎಂದು ತುಂಬಾ ತಲೆ ಕೆಡಿಸಿಕೊಳ್ಳುತ್ತಿದ್ದೆವು.
ದೊಡ್ಡ ಕೂಳಿಯಲ್ಲಿ ಮೀನು ಹಿಡಿಯುವುದು
ಬಿದಿರು ಕಡ್ಡಿಗಳಲ್ಲಿ ಮಾಡಿರುವ ಇದನ್ನು ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯಲು ಇದನ್ನು ಬಳಸುತ್ತಾರೆ. ಸಿಹಿನೀರಿನಲ್ಲಿ ಅಂದರೆ ಕೆರೆಗಳಲ್ಲಿ ಮೀನು ಸಾಕಿದ ಗ್ರಾಮದವರು ವರ್ಷಕ್ಕೊಮ್ಮೆ ಮೀನು ಹಿಡಿಯುವ ಕಾರ್ಯಕ್ರಮ (ಮೀನು ಪಾಚುವರಿ) ಇಟ್ಟುಕೊಂಡಿರುತ್ತಾರೆ. ನೀರು ಕೂಳಿಗೆ ಅನುಕೂಲಕರ ಹಂತಕ್ಕೆ ಬಂದಾಗ ಈ ಕಾರ್ಯಕ್ರಮವಿರುತ್ತದೆ. ಅಲ್ಲಿಯವರೆಗೆ ಯಾರಾದರೂ ಕದ್ದು ಮೀನು ಹಿಡಿಯುವುದನ್ನು ತಪ್ಪಿಸಲು ಕಾವಲು ಕಾಯುವ ಪದ್ಧತಿಯೂ ಇದೆ. ಈ ವಾರ್ಷಿಕ ಕಾರ್ಯಕ್ರಮದಲ್ಲಿ ಒಂದು ಕೂಳಿಗೆ ಇಷ್ಟು ಎಂದು ಪ್ರವೇಶ ಧನ ತೆಗೆದುಕೊಂಡು ಒಂದೇ ಬಾರಿ ಎಲ್ಲಾ ಮೀನುಗಾರರನ್ನು ಕೆರೆಯೊಳಗೆ ಬಿಡಲಾಗುತ್ತದೆ. ಐನೂರು ಆರನೂರು ಜನ ಒಟ್ಟಿಗೇ ಕೂಳಿಗಳನ್ನು ಮೇಲೆತ್ತಿ ಹಿಡಿದು ಕೂಗುತ್ತಾ ಕೆರೆಯೊಳಗೆ ನುಗ್ಗುವ ಆ ದೃಶ್ಯ ಒಂದು ರೀತಿಯ ರಣೋತ್ಸಾಹವನ್ನು ನೆನಪಿಸುತ್ತದೆ. ದೊಡ್ಡಕೂಳಿಯನ್ನು ಅಲ್ಲಲ್ಲಿ ಹಾಕುತ್ತಾ ಮೀನು ಅದರೊಳಗೆ ಬಂದರೆ ಅದನ್ನು ಕೈಯಲ್ಲಿ ಹಿಡಿದು, ಸೊಂಟದಲ್ಲಿ ದಬ್ಬಳ(ದೊಡ್ಡಸೂಜಿ)ದೊಂದಿಗೆ ನೇತಾಡುವ ದಾರಕ್ಕೆ ಪೋಣಿಸಿಕೊಂಡು ಮುಂದುವರೆಯುತ್ತಾರೆ. ಅಂದು ಕೆಲವು ಮೀನುಗಾರರು ನೂರಾರು ಮೀನುಗಳನ್ನು ಹಿಡಿಯುತ್ತಾರೆ. ದಾರದಲ್ಲಿ ಪೋಣಿಸಿದ ಮೀನನ್ನು ಕದಿಯುವವರೂ ಇರುತ್ತಾರೆ! ಅದಕ್ಕೆ ಕೆಲವರು ಸಹಾಯಕರನ್ನು ಕರೆತಂದು, ಆಗಾಗ ಆರೇಳು ಮೀನುಗಳಾದ ತಕ್ಷಣ ದಾರವನ್ನು ಬದಲಾಯಿಸಿಕೊಳ್ಳುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಊರಿನ ಮಕ್ಕಳು ನೀರೊಳಗೆ ಇಳಿದು ಕೈಗೆ ಸಿಕ್ಕ ಸಣ್ಣ ಪುಟ್ಟ ಮೀನುಗಳನ್ನು ಬಾಚಿಕೊಳ್ಳುತ್ತಾರೆ. ಅವರಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ನಾವು ಮಿಡ್ಲಿಸ್ಕೂಲಿನಲ್ಲಿದ್ದಾಗ ಅಲ್ಲಿನ ಮೇಷ್ಟರುಗಳು ನಮ್ಮನ್ನು ಕಳುಹಿಸಿ ಸಾಕಷ್ಟು ಮೀನನ್ನು ಹಿಡಿಸಿಕೊಂಡು ಸಂಜೆ ಮನೆಗೆ ಕೊಂಡೊಯ್ದಿದ್ದರು! (ಮಿಡ್ಲಿಸ್ಖೂಲಿನ ಮೇಷ್ಟರ ಮೀನು ಕೋಳಿ ಶಿಕಾರಿಯ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುತ್ತೇನೆ)
ತಟ್ಟೋಬಲೆಯಲ್ಲಿ ಮೀನು ಹಿಡಿಯುವುದು
ತ್ರಿಕೋನಾಕಾರದ ತೆರೆದ ಬಾಯಿಯುಳ್ಳ ಹಾಗೂ ಆ ಬಾಯಿಯಿಂದ ಹಿಂದಕ್ಕೆ ಬಾಲದಂತೆ ಕಾಣುವ ಬಲೆಯುಳ್ಳ ಒಂದು ಉಪಕರಣ ತಟ್ಟೋಬಲೆ. ಸುಮಾರು ಮಂಡಿಯುದ್ದದ ನೀರಿರುವ ಕಡೆ ಮೀನುಗಳಿದ್ದರೆ ಈ ಉಪಕರಣವನ್ನು ಬಳಸುತ್ತಾರೆ. ಮೀನು ಗುಂಡಿಗಳಲ್ಲಿ ಇವೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು, ಕ್ಯಾಕರಿಸಿ ಅದರೊಳಗೆ ಉಗಿಯುವುದು, ಅಥವಾ ಮನೆಯಿಂದ ತಂದ ರೊಟ್ಟಿ ಚೂರು ಹಾಕುವುದು ಮಾಡುತ್ತಾರೆ. ಅದನ್ನು ತಿನ್ನಲು ಬರುವ ಮೀನುಗಳ ಸಂಖ್ಯೆಯನ್ನು ಆಧರಿಸಿ ಮೀನು ಹಿಡಿಯಲು ನಿರ್ಧರಿಸುತ್ತಾರೆ. ಈ ತಟ್ಟೋಬಲೆಯ ಜೊತೆಗೆ ಇರುವ ಇನ್ನೊಂದು ಉಪಕರಣವೆಂದರೆ ಮಾರುದ್ದದ ಒಂದು ಕೋಲು. ಕೆಲವೊಮ್ಮೆ ಅದಕ್ಕೆ ಸ್ವಲ್ಪ ಬಟ್ಟೆ ಕಟ್ಟಿರುತ್ತಾರೆ. ತಟ್ಟೋ ಬಲೆಯನ್ನು ಎಡಗೈಯಲ್ಲಿ ನೀರೊಳೊಗಿನ ನೆಲಕ್ಕೆ ಒತ್ತಿ ಹಿಡಿದು, ಬಲಗೈಯಲ್ಲಿ ಕೋಲಿನಿಂದ, ತನಗೆ ಎಟಕುವಷ್ಟು ಅಗಲದ ನೀರಿನೊಳಗೆ ಮುಳುಗಿಸಿ ಮೀನುಗಳನ್ನು ಬೆದರಿಸಿಕೊಂಡು ಬರುತ್ತಾರೆ. ಆಗ ಬೆದರಿದ ಮೀನುಗಳು ತಟ್ಟೋಬಲೆಯೊಳಗೆ ಗುಂಪುಗುಂಪಾಗಿ ಬರುತ್ತವೆ. ತಕ್ಷಣ ಎಡಗೈಯಿಂದ ತಟ್ಟೋಬಲೆಯನ್ನು ಮೇಲಕ್ಕೆ ಎತ್ತುತ್ತಾರೆ. ಅದರೊಳಗೆ ಸಿಕ್ಕಿಹಾಕಿಕೊಂಡ ಮೀನುಗಳು ಬಲೆಯ ಹಿಂಬದಿಗೆ ಸರಿದು ಸಂಗ್ರಹಗೊಳ್ಳುತ್ತವೆ! ಹತ್ತಾರು ಬಾರಿ ಈ ರೀತಿ ಮಾಡಿದ ಮೇಲೆ ಮೇಲೆ ಬಂದು ಮೀನುಗಳನ್ನು ಮತ್ತೊಂದು ಚೀಲಕ್ಕೋ ಪಾತ್ರೆಗೋ ಸುರಿದುಕೊಳ್ಳುತ್ತಾರೆ.
ಗಾಳ ಹಾಕಿ ಮೀನು ಹಿಡಿಯುವುದು
ಇದರ ಬಗ್ಗೆ ಹೆಚ್ಚನದೇನನನು ಹೇಳುವ ಅವಶ್ಯಕತೆಯಿಲ್ಲ. ಕೊಕ್ಕೆಯಂತಹ ಲೋಹದ ಮೊಳೆಗೆ ದಾರಕಟ್ಟಿ, ಅದನ್ನು ಒಂದು ಬಲವಾದ ಕೋಲಿಗೆ ಕಟ್ಟಿಕೊಂಡು, ಗಾಳಕ್ಕೆ ತಿಂಡಿಯನ್ನೋ, ಚಿಕ್ಕ ಮೀನನ್ನೋ, ಎರೆಹುಳುವನ್ನೋ ಸಿಕ್ಕಿಸಿ ಮೀನಿರುವ ಕೊಳ ಅಥವಾ ಗುಂಡಿಯಲ್ಲಿ ಹಾಕಿ ಕುಳಿತರೆ ಮೀನುಗಳು ತಿಂಡಿಯ ಆಸೆಗೆ ಬಂದು ಗಾಳವನ್ನು ಕಚ್ಚಿಕೊಳ್ಳುತ್ತವೆ. ಅದರೊಳಗೆ ಹಿಮ್ಮುಖವಾಗಿರುವ ಕೊಕ್ಕೆ ಮೀನಿನ ಅಂಗುಳಕ್ಕೆ ಚುಚ್ಚಿಕೊಳ್ಳುವುದರಿಂದ ಅದನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಜಗ್ಗಾಟ, ದಾರದ ನಡುವೆ ಕಟ್ಟಿರುವ ಬೆಂಡು ಮುಳುಗಿ, ಮೀನು ಕಚ್ಚಿದೆ ಎಂದು ಗಾಳ ಹಿಡಿದು ಕುಳಿತವನಿಗೆ ತಿಳಿದು ಅದನ್ನು ಮೇಲಕ್ಕೆ ಎಳೆದುಕೊಂಡು ಬಿಡಿಸಿ ಮಡಕೆಯೊಳಗೆ ಸಂಗ್ರಹಿಸಿಕೊಳ್ಳುತ್ತಾನೆ. ತೇಜಸ್ವಿಯವರ ಸಾಹಿತ್ಯ ಓದಿದವರಿಗೆ ಈ ಬಗೆಯ ಮೀನು ಹಿಡಿಯುವ ತಂತ್ರಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಅಂಡಮಾನಿಗೆ ಪ್ರವಾಸ ಹೋಗುವ ತೇಜಸ್ವಿ ರಾಮದಾಸ್ ಮೊದಲಾದವರು ಅಲ್ಲಿಗೆ ಕೊಂಡಯ್ಯವುದು ಈ ರೀತಿ ಮೀನು ಹಿಡಿಯುವ ಗಾಳ, ರಾಡು ರೀಲುಗಳನ್ನು!
ಬಲೆ ಹಾಕಿ ಮೀನು ಹಿಡಿಯುವುದು
ಇದರಲ್ಲಿ ಹಲವಾರು ವಿಧಾನಗಳಿವೆ. ಬೀಸೋ ಬಲೆ ಎಂಬುದರಲ್ಲಿ, ಬಲೆಯನ್ನು ಬೀಸಿ ನೀರಿನಲ್ಲಿ ಹಾಕುತ್ತಾರೆ. ನಿಧಾನವಾಗಿ ಬಲೆಯನ್ನು ನೆರಿಗೆ ನೆರಿಗೆ ಮಾಡಿಕೊಂಡು ಮೇಲಕ್ಕೆ ಎಳದೆಕೊಳ್ಳುತ್ತಾರೆ. ಬಲೆಯೊಳಗೆ ಸಿಕ್ಕಿ ಹಾಕಿಕೊಂಡು ಚಡಪಡಿಸುವ ಮೀನುಗಳನ್ನು ಆರಿಸಿ ಮಡಕೆಯಲ್ಲಿ ತುಂಬಿಕೊಳ್ಳುತ್ತಾರೆ.
ಇನ್ನೊಂದು ವಿಧಾನದಲ್ಲಿ ರಾತ್ರಿವೇಳೆ ಬಲೆಯನ್ನು ಕೆರೆಯೊಳಗೆ ಬೀಸಿ. ಅದರ ಎರಡು ತುದಿಗಳನ್ನು ಬಲವಾದ ಬಡಿಗೆಗಳಿಗೆ ಕಟ್ಟಿ ಬಂದಿರುತ್ತಾರೆ. ಬೆಳಿಗ್ಗೆ ಹೋಗಿ ಬಲೆ ಮೇಲೆತ್ತಿ ಸಂಗ್ರಹಗೊಂಡ ಮೀನುಗಳನ್ನು ಹಿಡಿದುಕೊಳ್ಳುತ್ತಾರೆ.
ಒಮ್ಮೆ ನಮ್ಮ ಮಿಡ್ಲಿಸ್ಕೂಲಿನ ಮೇಷ್ಟರೊಬ್ಬರಿಗೆ ಮೀನು ತಿನ್ನಬೇಕೆನ್ನಿಸಿ, ‘ಎಲ್ಲಿಯಾದ್ರು ಮೀನು ಹಿಡ್ಕೊಂಬರೋಕೆ ಆಗುತ್ತಾ’ ಎಂದರು. ನಾವು ನಾಲ್ಕು ಜನ 'ಅದಕ್ಕೇನಂತೆ ಸಾರ್ ನಾವು ಹಿಡ್ಕೊಂಡು ಬರುತ್ತೇವೆ' ಎಂದು ಹೊರಟೆವು. ಆಗ ಅದರಲ್ಲಿದ್ದ ಬುದ್ಧಿವಂತನೊಬ್ಬ ಅವರ ಮನೆಯಲ್ಲಿದ್ದ ಒಂದು ಹಳೆಯ ಪಂಚೆಯನ್ನು ತಂದ. ಸೊಂಟದಾಳದ ನೀರಿನಲ್ಲಿ ನಿಂತ ನಾವು ಅದರ ನಾಲ್ಕ ಮೂಲೆಗಳನ್ನು ಒಬ್ಬೊಬ್ಬರು ಹಿಡಿದು, ನೀರಿನಲ್ಲಿ ಮುಳುಗಿಸಿ ಮೇಲೆತ್ತುತ್ತಿದ್ದೆವು. ಮೀನು ನಮ್ಮ ಕಣ್ಣಿಗೆ ಕಾಣುತ್ತಿದ್ದರು, ಪಂಚೆ ಮೇಲೆ ಬರುವಷ್ಟರಲ್ಲಿ ನೀರಿನೊಂದಿಗೆ ಮೀನುಗಳೂ ಹೊರಟುಹೋಗುತ್ತಿದ್ದವು. ಪಂಚೆಯಲ್ಲಿ ನೀರು ಸರಾಗವಾಗಿ ಹರಿದುಹೋಗದಿರುವುದೇ ಆದಕ್ಕೆ ಕಾರಣ ಎಂಬುದು ನಮಗೆ ಹೇಗೆ ತಿಳಿಯಬೇಕು. ಖುಷಿಯಿಂದ ಮೂರ್ನಾಲ್ಕು ಬಾರಿ ಹಾಗೆ ಮಾಡಿದೆವು. ಐದನೆಯ ಬಾರಿ ಪಂಚೆ ಮಧ್ಯಕ್ಕೆ ಹರಿದುಹೋಯಿತು! ಹತ್ತಿರದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳಾಮಂಡಲಿ ಹೋ ಎಂದು ನಕ್ಕು ನಮ್ಮನ್ನು ಗೇಲಿ ಮಾಡಿದ್ದರಿಂದ ನಾವು ಜಾಗ ಖಾಲಿ ಮಾಡಬೇಕಾಯಿತು.
ಗುಂಡಿ ಉಗ್ಗುವುದು ಅಥವಾ ಗುಂಡಿ ಕದಡುವುದು
ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೆರೆ ಕುಂಟೆಗಳ ನೀರು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆಗ ಕೆರೆಯಂಗಳದಲ್ಲಿ ಅಲ್ಲಲ್ಲಿ ಗುಂಡುಂಡಿಗಳು ಕಾಣಿಸಿಕೊಂಡು ಮುಖ್ಯ ಕೆರೆಯ ನೀರಿನಿಂದ ಪ್ರತ್ಯೇಕವಾಗಿ ಸಣ್ಣಪುಟ್ಟ ಕುಂಟೆಗಳಾಗುತ್ತವೆ. ಅವುಗಳ ನೀರನ್ನು ಖಾಲಿಮಾಡಿ ಮೀನು ಹಿಡಿಯುವ ಪದ್ಧತಿಗೆ ಗುಂಡಿ ಉಗ್ಗುವುದು ಎನ್ನುತ್ತಾರೆ. ಯಾವುದಾದರೂ ಪಾತ್ರೆ ಅಥವಾ ಮಂಕರಿ ಅಥವಾ ಬುಟ್ಟಿಗೆ ಎರಡೂ ಬದಿಗೆ ಎರಡು ಹಗ್ಗಗಳನ್ನು ಕಟ್ಟಿ, ಇಬ್ಬರು ನಿಂತುಕೊಂಡು, ಅದರಿಂದ ನೀರನ್ನು ಮೊಗೆದು ಮೊಗೆದು ಗುಂಡಿಯ ಆಚೆಗೆ ಸುರಿಯುತ್ತಾರೆ. ಸರದಿಯ ಮೇಲೆ ಇಬ್ಬಿಬ್ಬರು ಈ ರೀತಿ ಮಾಡುವುದರಿಂದ ಹೆಚ್ಚು ಸುಸ್ತು ಆಗುವುದಿಲ್ಲ. ನೀರು ಕಡಿಮೆಯಾಗಿ ಮೀನುಗಳು ಮೇಲೆ ಮೇಲೆ ನೆಗೆಯಲು ಪ್ರಾರಂಭಿಸುತ್ತವೆ. ಆಗ ನೀರು ಖಾಲಿಮಾಡುವುದನ್ನು ಬಿಟ್ಟು, ಗುಂಡಿಯಲ್ಲಿ ಕೆಸರೆಬ್ಬಿಸಲಾಗುತ್ತದೆ. (ನೀರು ತೀರಾ ಕಡಿಮೆಯಿರುವ ಗುಂಡಿಗಳಾದರೆ, ನೇರವಾಗಿಯೇ ಕೆಸರೆಬ್ಬಿಸಲಾಗುತ್ತದೆ. ಇದನ್ನು ಗುಂಡಿ ಕದಡುವುದು ಎನ್ನುತ್ತಾರೆ.) ಕೆಸರು ದಟ್ಟವಾಗುತ್ತಿದ್ದಂತೆ ಮೀನುಗಳು ಉಸಿರಾಡುವುದಕ್ಕಾಗಿ ಕೆಸರಿನ ಮೇಲಕ್ಕೆ ತಲೆಯೆತ್ತಿ ಬಾಯಿ ಬಿಡಲಾರಂಬಿಸುತ್ತವೆ. ಆಗ ಅವೆಲ್ಲವನ್ನೂ ಹಿಡಿದು ದಡದಲ್ಲಿರುವವರ ಕೈಗೆ ಕೊಡಲಾಗುತ್ತದೆ.
ಅಂದು ಪಂಚೆಯಲ್ಲಿ ಮೀನು ಹಿಡಿಯುವ ನಮ್ಮ ಸಾಹಸ ವಿಫಲವಾಗಿ, ಮಹಿಳಾ ಮಂಡಳಿಯಿಂದ ಅವಮಾನವಾದಾಗ ನಾವೂ ಹುಡುಕಿ ಹೊರಟಿದ್ದು ಇಂತಹ ಗುಂಡಿಗಳನ್ನೇ! ಒಂದೆರಡು ಗುಂಡಿಗಳನ್ನು ಹುಡುಕಿ, ಕೆಮ್ಮಿ ಕ್ಯಾಕರಿಸಿ ಉಗಿದು ಅವುಗಳಲ್ಲಿ ಮೀನುಗಳಿವೆಯೇ ಎಂದು ಪರೀಕ್ಷಿಸಿದ್ದಾಯಿತು. ಸಣ್ಣ ಸಣ್ಣ ಮೀನುಗಳು ಹಿಂಡುಹಿಂಡಾಗಿ ಬಂದು ಎಂಜಲಿಗೆ ಮುತ್ತಿಗೆ ಹಾಕಿದ್ದನ್ನು ಕಂಡು ದಬದಬ ನೀರೊಳಗೆ ಬಿದ್ದು ಕೆಸರೆಬ್ಬಿಸಿದ್ದೂ ಆಯಿತು. ಆದರೆ ಒಂದೂ ಮೀನು ಬಾಯಿ ಬಿಟ್ಟು ಮೇಲೆ ಬಂದು ನಮ್ಮನ್ನು ಹಿಡಿದುಕೊಳ್ಳಿ ಎನ್ನಲಿಲ್ಲ! ಆಗ ಆ ದಾರಿಯಾಗಿ ಬಂದ ಹಿರಿಯರೊಬ್ಬರು ‘ಅಯ್ಯೋ ದಡ್ಡಮುಂಡೇವೆ! ಹಾಗೆ ಹಿಂಡು ಹಿಂಡಾಗಿ ಬಂದುದ್ದು ಮೀನುಗಳಲ್ಲ; ಕಪ್ಪೆಗೊದ್ದಗಳು! ಅವು ಕೆಸರೆಬ್ಬಿಸಿದರೂ ಮೇಲೆ ಬರಲ್ಲ’ ಎಂದು ಉಗಿದು ಉಪ್ಪಿನಕಾಯಿ ಹಾಕಿದ್ದಲ್ಲದೆ, ‘ನಿಮ್ಮ ಮನೆಗಳಿಗೆ ಹೇಳಿ ಬಿಡಿಸುತ್ತೇನೆ, ಲಾತ. ಬನ್ನಿ’ ಎಂದು ಭಯೋತ್ಪಾದಕರಾಗಿದ್ದರು!
ಭರ್ಜಿಯಲ್ಲಿ ಹೊಡೆಯುವುದು
ನನ್ನ ಸ್ನೇಹಿತನೊಬ್ಬನಿದ್ದ. ಆತನ ಹೆಸರು ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿದೆ, ‘ಮೊಲದ ಮಂಜ’ ಎಂದು. ಈತನ ಮೀನು ಭೇಟೆಯ ಬಗ್ಗೆ ನಾನಾಗಲೇ ಬರೆದಿದ್ದೇನೆ. ಎದೆಮಟ್ಟದ ನೀರಿನಲ್ಲಿ, ರಾತ್ರಿವೇಳೆಯಲ್ಲಿ ಹಣೆಗೆ ಬ್ಯಾಟರೀ ಕೊಟ್ಟಿಕೊಂಡು, ಬಲಗೈಯಲ್ಲಿ ಭರ್ಜಿ ಹಿಡಿದು ನಿಂತುಕೊಂಡು, ಬ್ಯಾಟರಿಯ ಬೆಳಕಿಗೆ ಬರುವ ದೊಡ್ಡ ಮೀನುಗಳಿಗೆ ಗುರಿ ಹಿಡಿದು ಚುಚ್ಚಬೇಕು. ಈ ಕೆಲಸಕ್ಕೆ ರಾತ್ರಿ ಮತ್ತು ನೀರಿನ ಭಯವಂತೂ ಇರುವ ಹಾಗೇ ಇಲ್ಲ; ಜೊತೆಗೆ ಒಳ್ಳೆಯ ಗುರಿಕಾರರಾಗಿರಬೇಕು, ಸಹನೆಯೂ ಇರಬೇಕು.
ಕೆಲವರು ಭರ್ಜಿಯ ಬದಲು ಬಲವಾದ ದೊಣ್ಣೆಯಿಂದಲೇ ತೇಲುತ್ತಾ ಬಂದ ಮೀನಿಗೆ ಒಡೆಯುತ್ತಾರೆ ಎಂದು ಹಾಗೂ ಕೋವಿಯಿಂದಲೂ ಮೀನು ಒಡೆಯುತ್ತಾರೆ ಎಂದು ಕೇಳಿದ್ದೇನೆ. ಇವೆರಡನ್ನೂ ನಾನು ನೋಡಿಲ್ಲ.
ಭಂಗಿಸೊಪ್ಪು ಅಥವಾ ಹೊಗೆಸೊಪ್ಪು ಕದಡುವುದು
ಇದೊಂದು ಸುಲಭವಾದ ಆದರೆ ಸ್ವಲ್ಪ ದುಬಾರಿಯಾದ ವಿಧಾನ. ಸಣ್ಣಪುಟ್ಟ ಗುಂಡಿಗಳಲ್ಲಿ ಮೀನುಗಳಿರುವುದು ಖಚಿತವಾದರೆ ಸ್ವಲ್ಪ ಭಂಗಿ ಸೊಪ್ಪು ಅಥವಾ ಹೊಗೆಸೊಪ್ಪನ್ನು ಚೆನ್ನಾಗಿ ಕೈಯಿಂದ ತಿಕ್ಕಿ ನೀರಿನಲ್ಲಿ ಕದಡಿ ಬಿಡುವುದು. ಅದರ ಘಾಟಿಗೆ ಮೀನುಗಳು ಮತ್ತೇರಿ ತೇಲಲಾರಂಬಿಸುತ್ತವೆ. ಆದರೆ ಭಂಗಿಸೊಪ್ಪು ದುಬಾರಿ ಎಂಬ ಮಾತಿರಲಿ ಅದನ್ನು ಬಳಸಿದರೆ ಜೈಲು ಕಾಣಬೇಕಾಗುತ್ತದೆ ಎಂಬುದು ಆಗಿನ ತಿಳುವಳಿಕೆಯಾಗಿತ್ತು. ಹೊಗೆ ಸೊಪ್ಪು ಸಾಮಾನ್ಯವಾಗಿ ಹಳ್ಳಿಯ ಎಲ್ಲರ ಮೆನಯಲ್ಲೂ ಸಿಗುವ ವಸ್ತುವಾದರೂ ಅಂದಿನ ಕಾಲಕ್ಕೆ ಅತ್ಯಂತ ದುಬಾರಿಯಾದ ವಸ್ತುವಾಗಿತ್ತು.
ಕಾರೆಕಾಯಿ ಕದಡುವುದು
ಭಂಗಿಸೊಪ್ಪು ಅಥವಾ ಹೊಗೆಸೊಪ್ಪಿಗೆ ಪರ್ಯಾಯವಾಗಿ ಕಾರೆಕಾಯಿಯನ್ನು ಬಳಸುವ ಈ ವಿಧಾನ ಸುಲಭವಾದದ್ದು ಆದರೂ ಅಪಾಯಕಾರಿಯಾದದ್ದು. ಕಾರೇಕಾಯಿಗಳಲ್ಲಿ ಒಂದು ಜಾತಿಯ ಕಾಯಿಗಳಿಗೆ ಸ್ವಲ್ಪ ವಿಷ ಜಾಸ್ತಿ, ಕಾರೇ ಹಣ್ಣುಗಳನ್ನು ತಿನ್ನುತ್ತಾರಾದರೂ ಈ ಜಾತಿಯ ಹಣ್ಣುಗಳನ್ನು ಯಾರೂ ತಿನ್ನುವುದಿಲ್ಲ. ಇವನ್ನು ಸಣ್ಣಪುಟ್ಟ ದನಕರುಗಳು ತಿಂದರೆ ಸತ್ತೇ ಹೋಗುತ್ತವೆ. ಇಂತಹ ಕಾರೇಕಾಯಿಗಳನ್ನು ಜಜ್ಜಿ ನೀರಿನಲ್ಲಿ ಕದಡಿದರೆ ಕ್ಷಣಾರ್ಧದಲ್ಲಿ ಮೀನುಗಳು ಪ್ರಜ್ಞಾಶೂನ್ಯವಾಗಿ ತೇಲಲಾರಂಭಿಸುತ್ತವೆ. ನೀರು ಕಪ್ಪಾಗುತ್ತದೆ.ಇದು ತಾಕಿದ ಮೈಕೈಗಳಿಗೆ ತುರಿಕೆಯಾಗುತ್ತದೆ. ಮೀನು ಬಾಚಿಕೊಳ್ಳುವ ಅವಸರದಲ್ಲಿ ನೀರನ್ನು ಬಾಯಿಗೆ ಸೋಕಿಸುವಂತಿಲ್ಲ. ಮೈಯಲ್ಲಿ ತೆರೆದ ಗಾಯಗಳಿದ್ದರೂ ಅಪಾಯ. ಮೀನುಹಿಡಿದ ಮೇಲೆ ಗುಂಡಿಯ ನೀರನ್ನು ಕುಡಿದರೆ ದನಕರುಗಳು ಸತ್ತೇ ಹೋಗುತ್ತವೆ. ಗುಂಡಿಯಿಂದ ಸಹಿಸಲು ಅಸಾಧ್ಯವಾದ ವಾಸನೆ ಬರುತ್ತದೆ. ಆದರೂ ಅದನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿ ಮೀನು ಹಿಡಿಯುತ್ತಾರೆ.
ಡೈನಾಮೆಂಟ್ ಸಿಡಿಸುವುದು
ಕುಂದೂರು ಮಠದಲ್ಲಿ ಕಲ್ಲು ಹೊಡೆಯುವವರು ಈ ವಿಧಾನ ಬಳಸುವುದನ್ನು ಕಂಡಿದ್ದೇನೆ. ಅವರು ಕಲ್ಲು ಸಿಡಿಸಲು ತಂದಿದ್ದ ಡೈನಾಮೆಂಟ್ಟನ್ನು ಕಡಿಮೆ ಪ್ರಮಾಣದಲ್ಲಿ ಮೀನುಗಳಿರುವ ಬಾವಿ ಅಥವಾ ಗುಂಡಿಯಲ್ಲಿ ನೀರೊಳಗೆ ಸಿಡಿಸುತ್ತಿದ್ದರು. ಮೀನುಗಳು ಸತ್ತು ತೇಲುತ್ತಿದ್ದವು. ಅವರು ಅವನ್ನು ಧಾರಾಳವಾಗಿ ಹಿಡಿದು ತಿನ್ನುತ್ತಿದ್ದರು. ಆದರೆ ಅವು ವಿಷಯುಕ್ತ ಎನ್ನುವ ಮಾತುಗಳೂ ಕೇಳಿಬರುತ್ತಿದ್ದವು.
ಸಧ್ಯಕ್ಕೆ ಇಷ್ಟೇ ನನಗೆ ನೆನಪಾಗುತ್ತಿರುವುದು.
ಈಗ ಪಂಪನ ಸರದಿ!
ಕೃಷ್ಣಾರ್ಜುನರು ತಮ್ಮ ಅಂತಃಪುರದ ಸ್ತ್ರೀಯರೊಡನೆ ಯಮುನಾ ನದಿಯಲ್ಲಿ ಜಲಕ್ರೀಡೆಯಾಡುವ ಸನ್ನಿವೇಶ ಬರುತ್ತದೆ. ಪಂಪ ಅದನ್ನು ಸ್ವಾರಸ್ಯಕರವಾಗಿಯೂ ಶೃಂಗಾರರಸಾತ್ಮಕವಾಗಿಯೂ ವರ್ಣಿಸಿದ್ದಾನೆ (ಅದೇ ಒಂದು ಪ್ರತ್ಯೇಖ ಲೇಖನವಾಗುತ್ತದೆ; ಬಿಡಿ).
ಅದರಲ್ಲಿ ಬರುವ ಒಂದು ಪದ್ಯ ಹೀಗಿದೆ.
ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ ಮುಡಿಯ ಪೂವಿನ ರಜದಿಂ|
ವಾಸಿಸಿದ ನೀರ ಕದಡಿಂ
ದಾಸವದೊಳ್ ಸೊರ್ಕಿ ಬೆಂಡುಮಗುೞ್ದುವು ಮೀಂಗಳ್||
ಆ ಎಲ್ಲಾ ಸ್ತ್ರೀ ಸಮೂಹವು ಮೈಯಿಗೆ ಬಳಿದುಕೊಂಡಿದ್ದ ಕಸ್ತೂರಿತೈಲದಿಂದಲೂ, ಮುಡಿದುಕೊಂಡಿದ್ದ ಹೂವುಗಳ ಪರಾಗದಿಂದಲೂ ಸಷ್ಟಿಯಾದ (ಸು)ವಾಸನೆ ಮಡುವಿನ ನೀರಿನಲ್ಲಿ ಸೇರಿಕೊಂಡು ಕದಡಲ್ಪಟ್ಟಿತ್ತು. ಆ ವಾಸನೆಯನ್ನು ಸೇವಿಸಿದ ಮೀನುಗಳು ಸೊಕ್ಕಿ ಅಂದರೆ ಪ್ರಜ್ಞೆ ಕಳೆದುಕೊಂಡು ನೀರಿನಲ್ಲಿ ಬೆಂಡು ತೇಲುವಂತೆ ತೇಲಿದವಂತೆ!
ಆಹಾ! ಮೀನು ಹಿಡಿಯುವುದು ಎಷ್ಟೊಂದು ಸುಲಭ! ಮೈಗೆಲ್ಲಾ ಸುಗಂಧದ್ರವ್ಯಗಳನ್ನು (ಆಧುನಿಕ ತರೇವರಿ ಸೆಂಟ್ ಆದರೂ ಪರಾವಾಗಿಲ್ಲ!!!) ಪೂಸಿಕೊಂಡು ನೀರಿಗಿಳಿದರೆ ಸಾಕು, ಅಲ್ಲವೆ!?
ವಿಶೇಷ ಎಚ್ಚರಿಕೆ: ಪಂಪನಲ್ಲಿ ಪ್ರಜ್ಞೆ ಮಾತ್ರ ಕಳೆದುಕೊಂಡು ತೇಲುತ್ತಿದ್ದ ಮಿನುಗಳು ಆಧುನಿಕ ಸೆಂಟ್ ಸೇವಿಸಿದರೆ ಸತ್ತೇ ಹೋಗುತ್ತವೆ!)

Friday, November 20, 2009

ಅಕ್ಕಮಹಾದೇವಿಯ ಹಾಡು - ಪಾಡು : ಭಾಗ - 2

ಕಲ್ಯಾಣದಿಂದ ಶ್ರೀಶೈಲದತ್ತ...
ಮಹಾದೇವಿ ಕಲ್ಯಾಣಕ್ಕೆ ಬರುವ ಮೊದಲೇ ಅವಳ ಕೀರ್ತಿ ಕಲ್ಯಾನಕ್ಕೆ ಬಂದುಬಿಟ್ಟಿತ್ತು. ಅನುಭವಮಂಟಪದ ಅಧ್ಯಕ್ಷನಾದ ಅಲ್ಲಮನಿಗೆ ಮಹಾದೇವಿ ಮಹಾನ್ ಶರಣೆ ಎಂಬುದು ಅವಳ ನಿರ್ಭಿಡೆಯ ನಡೆಯಿಂದಲೇ ಮನದಟ್ಟಾಗಿತ್ತು. ಆದರೂ ಬೇರೆ ಶರಣರಿಗೆ ಅವಳ ಶಿವಭಕ್ತಿಯ ಮಹಿಮೆಯನ್ನು ತೋರುವುದಕ್ಕೋಸ್‌ಕರ ಅವಳನ್ನು ಪರೀಕ್ಷಿಸುವ ನಿರ್ಧಾರಕ್ಕೆ ಬರುತ್ತಾನೆ. ಕಿನ್ನರಿ ಬೊಮ್ಮಯ್ಯನನ್ನು ಕರೆದು, ಬಾಗಿಲಿನಲ್ಲಿಯೇ ಮಹಾದೇವಿಯನ್ನು ಪರೀಕ್ಷಿಸಿ ನೋಡಲು ಹೇಳುತ್ತಾನೆ. ಆಗ ಕಿನ್ನರಿ ಬೊಮ್ಮಯ್ಯ ಬಾಗಿಲಿನಲ್ಲಿಯೇ ಅವಳನ್ನು ತಡೆದು ಪರೀಕ್ಷಿಸುತ್ತಾನೆ. ತಾನು ಮಹಾದೇವಿಯನ್ನು ಪರೀಕ್ಷಿಸಿದ ಪರಿಯನ್ನು ಅವನೇ ತನ್ನೊಂದು ವಚನದಲ್ಲಿ ಹೇಳಿದ್ದಾನೆ.


ಮಸ್ತಕವ ಮುಟ್ಟಿ ನೋಡಿದಡೆ


ಮನೋಹರದಳಿವು ಕಾಣ ಬಂದಿತ್ತು!


ಮುಖಮಂಡಲವ ಮುಟ್ಟಿ ನೋಡಿದಡೆ,


ಮೂರ್ತಿಯ ಅಳಿವು ಕಾಣ ಬಂದಿತ್ತು!


ಕೊರಳ ಮುಟ್ಟಿ ನೋಡಿದಡೆ,


ಗರಳಧರನ ಇರವು ಕಾಣಬಂದಿತ್ತು!


ತೋಳುಗಳ ಮುಟ್ಟಿ ನೋಡಿದಡೆ,


ಶವನಪ್ಪುಗೆ ಕಾಣಬಂದಿತ್ತು!


ಉರಸ್ಥಲವ ಮುಟ್ಟಿ ನೋಡಿದಡೆ,


ಪರಸ್ಥಲದಂಗಲೇಪ ಕಾನ ಬಂದಿತ್ತು!


ಬಸಿರ ಮುಟ್ಟಿನೋಡಿದಡೆ,


ಬ್ರಹ್ಮಾಂಡವ ಕಾಣಬಂದಿತ್ತು!


ಗುಹ್ಯವ ಮುಟ್ಟಿನೋಡಿದಡೆ,


ಕಾಮದಹನ ಕಾಣಬಂದಿತ್ತು!


ಮಹಾಲಿಂಗ ತ್ರಿಪುರಾಂತಕದೇವಾ,


ಮಹಾದೇವಿಯಕ್ಕನ ನಿಲುವನರಿಯದೆ ಅಳುಪಿ ಕೆಟ್ಟೆನು.

ಹೀಗೆ ಮಹಾದೇವಿಯನ್ನು ಪರೀಕ್ಷಿಸಿದ ಬೊಮ್ಮಯ್ಯ ಪಶ್ಚತ್ತಾಪ ಪಡುತ್ತಾನೆ. ಆಗ ಮಹಾದೇವಿಯ ಆತನನ್ನು ಸಮಾಧಾನಪಡಿಸಿ ಸಹೋದರ ಎಂದು ಕರೆದು ಮಾತನಾಡಿಸುತ್ತಾಳೆ. ಕಿನ್ನರಯ್ಯ

‘ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ,


ಶರಣಾರ್ಥಿ ಶರಣಾರ್ಥಿ ಕರುಣಸಾಗರ ನಿಧಿಯೆ,


ದಯಾಮೂರ್ತಿ ತಾಯೆ, ಶರಣಾರ್ಥಿ!


ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,


ನೀವು ಬಿಡಿಸಿದವರಾಗಿ ನಿಮ್ಮ ದಯದಿಂದ


ನಾನು ಹುಲಿನೆಕ್ಕಿ ಬದುಕಿದೆನು


ಶರಣಾರ್ಥಿ ಶರಣಾರ್ಥಿ ತಾಯೆ.’
ಎಂದು ಹಾಡುತ್ತಾನೆ.

Get this widget | Track details | eSnips Social DNA

ಮಹಾದೇವಿಯ ಪರೀಕ್ಷೆ ಅಷ್ಟಕ್ಕೆ ಮುಗಿಯುವುದಿಲ್ಲ. ಅನುಭವಮಂಟಪದ ಅಧ್ಯಕ್ಷಪೀಠದ ಮೇಲೆ ಕುಳಿತು ಅಲ್ಲಮನೂ ಅವಳನ್ನು ಪರೀಕ್ಷಿಸುತ್ತಾನೆ. ಅದನ್ನು ಹೀಗೆ ಸಂಗ್ರಹಿಸಬಹುದು.

ಅಲ್ಲಮ: ನನ್ನ ಪ್ರಶ್ನೆಗೆ ಉತ್ತರಿಸಿದರಷ್ಟೇ ನಿನಗೆ ಶರಣ ಸಭೆಗೆ ಸ್ವಾಗತ.

ಮಹಾದೇವಿ: ತಿಳಿದಂತೆ ಹೇಳುತ್ತೇನೆ.

ಅಲ್ಲಮ: ತಾರುಣ್ಯವತಿಯಾದ ನಿನ್ನ ಪತಿ ಯಾರು?

ಮಹಾದೇವಿ: ಇಹಕ್ಕೊಬ್ಬ ಗಂಡನೆ? ಪರಕ್ಕೊಬ್ಬ ಗಂಡನೆ? ಲೌಕಿಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ? ಎನ್ನ ಗಂಡ ಚೆನ್ನಮಲ್ಲಿಕಾರ್ಜುನ ದೇವರಲ್ಲದೆ ಇನ್ನಾರು? ಮಿಕ್ಕಿನ ಗಂಡರೆಲ್ಲ ಮುಗಿಲ ಮರೆಯ ಬೊಂಬೆಯಂತೆ!

ಅಲ್ಲಮ: ಯಾವ ವ್ಯಾಮೋಹವೂ ಬೇಡದ, ಕೇವಲ ಮಲ್ಲಿಕಾರ್ಜುನನನ್ನೇ ಆಶಿಸುವ ನಿನಗೆ ನಿನ್ನ ಕಾಯದ ಮೇಲಿನ ಆಸೆ ಇನ್ನು ಕುಂದಿಲ್ಲವೆ? ಈ ಕಂಬಳಿಯ ವೇಷವೇಕೆ?

ಮಹಾದೇವಿ: ಕಾಯ ಕರ್ರನೆ ಕಂದಿದರೇನು, ಮಿರ್ರನೆ ಮಿಂಚಿದರೇನು, ಅಂತರಂಗ ಶುದ್ಧವಾದ ಬಳಿಕ, ಚೆನ್ನಮಲ್ಲಿಕಾರ್ಜುನನು ಒಲಿದ ಕಾಯ ಹೇಗಿದ್ದರೇನು?

ಅಲ್ಲಮ: ಅಂತರಂಗದಲಿ ನಾಚಿಕೆಯಿರುವುದಕ್ಕೇ ಈ ಕಂಬಳಿಯ ಹೊದಿಕೆಯೇ?

ಮಹಾದೇವಿ: ಹಣ್ಣು ಪಕ್ವವಾಗಿದ್ದರೆ ಅದರ ಸಿಪ್ಪೆ ಕೆಡುವುದಿಲ್ಲ. ಸಿಪ್ಪೆ ಕೆಡದಿದ್ದರೂ ಹಣ್ಣು ಕೆಡುವುದುಂಟು. ನಾನು ಪಕ್ವವಾದ ಹಣ್ಣು. ಕಾಮನ ಮುದ್ರೆಯ ಕಂಡು ನಿಮ್ಮ ಶರಣರ ನೊಂದುಕೊಳ್ಳಬಾರದು ಎಂದು ಈ ವೇಷ.

ಅಲ್ಲಮ ನಿರುತ್ತರನಾಗುತ್ತಾನೆ. ಆಗ ಮಹಾದೇವಿಯು,

‘ಸಾವಿಲ್ಲದ ಕೇಡಿಲ್ಲದ ರೂಪಿಲ್ಲದ


ಭವವಿಲ್ಲದ ಭಯವಿಲ್ಲದ


ಚೆನ್ನಮಲ್ಲಿಕಾರ್ಜುನನಿಗೆ ಒಲಿದ ನನ್ನನ್ನು ಕಾಡಬೇಡಿ’

ಎಂದು ಪ್ರಾರ್ಥಿಸುತ್ತಾಳೆ. ಅಲ್ಲಮ ಅವಳನ್ನು ಶರಣ ಸಭೆಗೆ ಸ್ವಾಗತಿಸುತ್ತಾನೆ. ಬಸವಣ್ಣ ಅಕ್ಕ ಎಂದು ಪ್ರೀತಿಯಿಂದ ಸಂಬೋಧಿಸುತ್ತಾನೆ. ಆಗ ಶರಣರೆಲ್ಲಾ ಅವಳನ್ನು ಅಕ್ಕ ಎಂದೇ ಕರೆಯುತ್ತಾರೆ. ಮಹಾದೇವಿ ಅಕ್ಕಮಹಾದೇವಿಯಾಗುತ್ತಾಳೆ.

ಅಕ್ಕಮಹಾದೇವಿ ಗುಹೆ - ಶ್ರೀಶೈಲ
(ಚಿತ್ರಕೃಪೆ: ಅಂತರಜಾಲ)
ಹಲವಾರು ದಿನಗಳ ಕಾಲ ಕಲ್ಯಾಣದಲ್ಲಿಯೇ ನೆಲೆಸುತ್ತಾಲೆ. ಮಹಾಮನೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸುತ್ತಾಳೆ. ಅನುಭವ ಮಂಟಪದಲ್ಲಿ ನಡೆಯುವ ಚರ್ಚೆಗಳಲ್ಲಿ ಅಕ್ಕಮಹಾದೇವಿಯ ಮಾತಿಗೆ ಗೌರವವಿರುತ್ತಿತ್ತು. ಹೀಗೆ ದಿನಗಳನ್ನು ಕಳೆಯುತ್ತಿದ್ದ ಅಕ್ಕಮಹಾದೇವಿ ಕೊನೆಗೆ ಬಸವಾದಿ ಶರಣರ ಅನುಮತಿ ಪಡೆದು ಶ್ರೀಶೈಲಕ್ಕೆ ಹೊರಡುತ್ತಾಳೆ. ಶ್ರೀಶೈಲದ ದಾರಿಯಲ್ಲಿ ಕೌಶಿಕ ಅವಳನ್ನು ಬೇಟಿಯಾಗುತ್ತಾನೆ. ತಾನು ಮಾಡಿದ ತಪ್ಪಿಗಾಗಿ ಪಶ್ಚತ್ತಾಪ ಪಟ್ಟು ಅಕ್ಕಮಹಾದೇವಿಯ ಕ್ಷಮೆ ಕೇಳುತ್ತಾನೆ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಮಾಡಿದ ಅಕ್ಕಮಹಾದೇವಿ ಕದಳಿ ಎಂಬ ಜಾಗದಲ್ಲಿ ನೆಲೆಸುತ್ತಾಳೆ. ಅಲ್ಲಿಯೇ ತನ್ನ ಜೀವಿತವನ್ನು ಕೊನೆಗೊಳಿಸುತ್ತಾಳೆ.

ಅಕ್ಕಮಹಾದೇವಿ ಶ್ರೇಷ್ಟ ವಚನಾಕಾರ್ತಿಯಾಗಿರುವಂತೆ ಶ್ರೇಷ್ಟ ಕವಯಿತ್ರಿಯೂ ಹೌದು. ವಚನಗಳಲ್ಲದೆ ‘ಯೋಗಾಂಗ ತ್ರಿವಿಧಿ’ ಸ್ವರವಚನ, ಸೃಷ್ಟಿಯವಚನ ಮತ್ತು ಮಂತ್ರಗೋಪ್ಯ ಎಂಬ ಇತರ ಕೃತಿಗಳನ್ನೂ ರಚಿಸಿದ್ದಾಳೆ. ಅಕ್ಕನ ವಚನಗಳು ಭಾವತೀವ್ರತೆಯಿಂದ ಕೂಡಿದವುಗಳಾಗಿವೆ ಹಾಗೂ ಶ್ರೇಷ್ಟ ತರಗಿತಿಯ ಭಾವಗೀತೆಗಳಾಗಿವೆ ಎಂಬ ಅಭಿಪ್ರಾಯವಿದೆ. ಸತಿಪತಿ ಭಾವ, ವಿರಹ, ಆಧ್ಯಾತ್ಮ ಎಲ್ಲವೂ ಅವಳ ವಚನಗಳಲ್ಲಿ ಸ್ಥಾನ ಪಡೆದು ಕಲಾತ್ಮಕವಾಗಿ ಅಭಿವ್ಯಕ್ತವಾಗಿವೆ. ಅವಳ ವಚನಗಳ ಶ್ರೇಷ್ಟತೆಯನ್ನು ಸಮಕಾಲಿನನಾದ ಚೆನ್ನಬಸವಣ್ಣ ಒಂದು ವಚನದಲ್ಲಿ ಗುರುತಿಸಿದ್ದಾನೆ. ಅದು ಹೀಗಿದೆ.

ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ


ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ


ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ


ಅಜಗಣ್ಣನ ಐದು ವಚನಕ್ಕೆ ಕೂಡಚೆನ್ನಸಂಗಮದೇವಾ


ಮಹದೇವಿಯಕ್ಕನ ಒಂದು ವಚನ ನಿರ್ವಚನ

ಭಾವತೀವ್ರತೆಯನ್ನು ಸೂಸುವ ಹಾಗೇ ಸೂಮದರ ಭಾವಗೀತೆಯಂತಿರುವ ಅಕ್ಕಮಹಾದೇವಿಯ ಒಂದು ವಚನವನ್ನು ಕೆಳಗೆ ನೀಡಲಾಗಿದೆ.

ತನು ಕರಗದವರಲ್ಲಿ


ಮಜ್ಜನವನೊಲ್ಲೆಯಯ್ಯಾ ನೀನು


ಮನ ಕರಗದವರಲ್ಲಿ


ಪುಷ್ಪವನೊಲ್ಲಯಯ್ಯಾ ನೀನು


ಹದುಳಿಗರಲ್ಲದವರಲ್ಲಿ


ಗಂಧಾಕ್ಷತೆಯನೊಲ್ಲೆಯಯ್ಯಾ ನೀನು


ಅರಿವು ಕಣ್ದೆರೆಯದವರಲ್ಲಿ


ಆರತಿಯನೊಲ್ಲೆಯಯ್ಯಾ ನೀನು


ಭಾವಶುದ್ಧವಿಲ್ಲದವರಲ್ಲಿ


ಧೂಪವನೊಲ್ಲೆಯಯ್ಯಾ ನೀನು


ಪರಿಣಾಮಿಗಳಲ್ಲದವರಲ್ಲಿ


ನೈವೇದ್ಯವನೊಲ್ಲೆಯಯ್ಯಾ ನೀನು


ತ್ರಿಕರಣ ಶುದ್ಧವಿಲ್ಲದವರಲ್ಲಿ


ತಾಂಬೂಲವನೊಲ್ಲೆಯಯ್ಯಾ ನೀನು


ಹೃದಯಕಮಲ ಅರಳದವರಲ್ಲಿ


ಇರಲೊಲ್ಲೆಯಯ್ಯಾ ನೀನು


ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ


ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ?

Tuesday, November 17, 2009

ನದಿಗಳ ಹೆಸರು ಹುಡುಕಿ; ‘ಜ್ಞಾನಿ ಕನ್ನಡಿಗ’ ಬಿರುದು ಗೆಲ್ಲಿ

ಇತ್ತೀಚಿಗೆ ನನಗೆ ಪರಿಚಿತವಿರುವ ಕನ್ನಡ ಉಪನ್ಯಾಸಕರೊಬ್ಬರು, ‘ಪಿ.ಯು.ಸಿ. ಮಕ್ಕಳಿಗೆ ಕನ್ನಡ-ಕರ್ನಾಟಕ ಕುರಿತಂತೆ ಹಲವಾರು ಸ್ಪರ್ಧೆಗಳನ್ನು ನಡೆಸುತ್ತಿದ್ದೇವೆ. ಯಾವುದಾದರೂ ಹೊಸತರನಾದ ಸ್ಪರ್ಧೆಗಳಿದ್ದರೆ ತಿಳಿಸಿ’ ಎಂದಿದ್ದರು. ನಾನು ಮೂರು ರೀತಿಯ ಸ್ಪರ್ಧೆಗಳನ್ನು ತಿಳಿಸಿದ್ದೆ. ಅದರಲ್ಲಿ ಈ ಪದಬಂಧವೂ ಒಂದು.

ದಶಕಗಳ ಹಿಂದೆ ವಾರ ಪತ್ರಿಕೆಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಈ ರೀತಿಯ ಪದಬಂಧ ಇತ್ತೀಚಿಗೆ ನನ್ನ ಕಣ್ಣಿಗೆ ಬಿದ್ದಿಲ್ಲ. ಈ ಪದಬಂಧವನ್ನು ಬಿಡಿಸುವುದರ ಜೊತೆಗೆ ಕರ್ನಾಟಕದಲ್ಲಿ ಹರಿಯುವ ನದಿಗಳ ಬಗ್ಗೆ ತಿಳಿಸುವುದು ನನ್ನ ಉದ್ದೇಶವಾಗಿತ್ತು. ನಾನು ರೂಪಿಸಿದ ಈ ಪದಬಂಧದಲ್ಲಿ ಕರ್ನಾಟಕದಲ್ಲಿ ಹರಿಯುವ ಇಪ್ಪತ್ತಮೂರು (23) ನದಿಗಳ ಹೆಸರುಗಳು ಅಡಕವಾಗಿವೆ. ಅವುಗಳು ಎಂಟೂ ದಿಕ್ಕಿನಿಂದ ಅಂದರೆ - ಕೆಳಮುಖವಾಗಿ, ಮೇಲ್ಮುಖವಾಗಿ, ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಮೇಲಿನ ಎಡಮೂಲೆಯಿಂದ ಕೆಳಗಿನ ಬಲಮೂಲೆಗೆ, ಮೇಲಿನ ಬಲಮೂಲೆಯಿಂದ ಕೆಳಗಿನ ಎಡಮೂಲಗೆ, ಕೆಳಗಿನ ಎಡಮೂಲೆಯಿಂದ ಮೇಲಿನ ಬಲಮೂಲೆಯ ಕಡೆಗೆ, ಕೆಳಗಿನ ಬಲಮೂಲೆಯಿಂದ ಮೇಲಿನ ಎಡಮೂಲೆಯ ಕಡೆಗೆ -ಬರೆಯಲ್ಪಟ್ಟಿವೆ.

ಸ್ಪರ್ಧೆ ನಡೆದ ಮೇಲೆ ಒಂದು ಉತ್ತರ ಪತ್ರಿಕೆಯನ್ನು ನನ್ನ ಮಿತ್ರರು ತಂದು ಅದರ ಹಿಂಬದಿ ನೋಡುವಂತೆ ಹೇಳಿದರು. ಅದರಲ್ಲಿ ಹೀಗೆ ಬರೆಯಲಾಗಿತ್ತು. ‘ಈ ಸ್ಪರ್ಧೆಯಲ್ಲಿ ನನಗೆ ಉತ್ತರಿಸಲಾಗುತ್ತಲ್ಲ. ಏಕೆಂದರೆ ನನಗೆ ಕಾವೇರಿ ಬಿಟ್ಟರೆ ಬೇರೆ ನದಿಗಳ ಹೆಸರೇ ಗೊತ್ತಿಲ್ಲ. ಇನ್ನು ಅವನ್ನು ಇಲ್ಲಿ ಹುಡಕಲು ಹೇಗೆ ಸಾಧ್ಯ. ಆದರೂ ನನಗೆ ಈ ಸ್ಪರ್ಧೆಯಿಂದ ಉಪಯೋಗವಾಗಿದೆ. ಮನೆಗೆ ಹೋಗಿ ಕರ್ನಾಟಕದಲ್ಲಿ ಹರಿಯುವ ನದಿಗಳು ಯಾವುವು ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಈ ಪದಬಂಧ ಕೊಟ್ಟವರಿಗೆ ಧನ್ಯವಾದಗಳು.’ (ಬರಹದಲ್ಲಿದ್ದ ಕಾಗುಣಿತ ದೋಷಗಳನ್ನು ನಿವಾರಿಸಲಾಗಿದೆ). ನನ್ನ ಶ್ರಮ ಸಾರ್ಥಕವಾಯಿತು ಎಂದಕೊಂಡೆ. ಯಾರೂ ಇಪ್ಪತ್ತಮೂರು ನದಿಗಳ ಹೆಸರುಗಳನ್ನು ಪೂರ್ತಿ ಬರೆದಿರದಿದ್ದರೂ, ಅವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಯೋಚನೆಯನ್ನು ಅವರಲ್ಲಿ ಹುಟ್ಟು ಹಾಕಿದ್ದು ನನಗೆ ಸಂತೋಷ ತಂದಿತ್ತು.



ಈಗ ಅದೇ ಪದಬಂಧವನ್ನು ಬ್ಲಾಗ್ ಓದುಗ ಮಿತ್ರರ ಎದುರು ಇಡುತ್ತಿದ್ದೇನೆ. ನೀವು ಪ್ರಯತ್ನಪಡಿ. ಅಗತ್ಯಬಿದ್ದಲ್ಲಿ ಪದಬಂಧವನ್ನು ಮುದ್ರಿಸಿ ನದಿಗಳ ಹೆಸರುಗಳನ್ನು ಗುರುತಿಸಿ ನಂತರ ಕಾಮೆಂಟ್ ಬಾಕ್ಸಿನಲ್ಲಿ ನದಿಗಳ ಹೆಸರನ್ನು ಬರೆದರೆ ಸಾಕು. ಹೆಚ್ಚು ನದಿಗಳ ಹೆಸರನ್ನು ಬರೆದ ಬ್ಲಾಗ್ ಓದುಗರಿಗೆ ‘ಜ್ಞಾನಿ ಕನ್ನಡಿಗ’ ಎಂಬ ಬಿರದು ಕೊಡಲಾಗುತ್ತದೆ! ಒಮ್ಮೆ ಪ್ರಯತ್ನಿಸಿ ನೋಡಿ. ಶುಭವಾಗಲಿ.



Friday, November 13, 2009

ಅಕ್ಕಮಹಾದೇವಿಯ ಹಾಡು - ಪಾಡು : ಭಾಗ - 1

ಮೊಗ್ಗಾಗಿ.... ಹೂವಾಗಿ....
ಇಂದಿನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೋಕಿನ ಉಡುತಡಿಗೆ ಕನಿಷ್ಠ ಸುಮಾರು ಎಂಟನೂರ ಐವತ್ತು ವರ್ಷಗಳ ಪ್ರಾಚೀನತೆಯಿದೆ. ಆಗ್ಗೆ ಅಲ್ಲಿ ನಿರ್ಮಲಶೆಟ್ಟಿ ಮತ್ತು ಸುಮತಿ ಎಂಬ ಶಿವಭಕ್ತ ದಂಪತಿಗಳಿದ್ದರು. ಅವರಿಗೆ ಮಹಾದೇವಿ ಎಂಬ ಮಗಳಿದ್ದಳು. ಶಿವಭಕ್ತಿಯು ತುಂಬಿ ತುಳುಕುತ್ತಿರುವ ಮನೆಯಲ್ಲಿ ತಂದೆ-ತಾಯಿಗಳ ಅಕ್ಕರೆಯ ಮಗಳಾಗಿ, ಸ್ವತಃ ಶಿವಭಕ್ತಳಾಗಿ ಮಹಾದೇವಿ ಬೆಳೆದು ಪ್ರಾಯಕ್ಕೆ ಬರುತ್ತಾಳೆ. ಶಿವಾಲಯಕ್ಕೆ ನಿತ್ಯವೂ ಹೋಗುವುದು, ಶಿವನನ್ನು ಆರಾಧಿಸುವುದು, ಶಿವಾಲಯದಲ್ಲಿ ನಡೆಯುವ ಪ್ರವಚನಗಳನ್ನು ಕೇಳುವುದು, ತಂದೆ ತಾಯಿಗಳಿಂದ ಶಿವಮಹಾತ್ಮೆಯನ್ನು ಕೇಳುವುದು... ಹೀಗೆ ದಿನಕಳೆಯುತ್ತಿದ್ದಳು. ಹೀಗೆ ವಾತಾವರಣವೇ ಶಿವಮಯವಾಗಿರಲು ಮಹಾದೇವಿಯ ಮನಸ್ಸಿನಲ್ಲಿ ಶಿವನ ರೂಪ ನೆಲೆನಿಂತುಬಿಟ್ಟಿತು. ಶಿವನೇ ಸರ್ವಸ್ವ ಎಂದು ತಿಳಿದು ಭಕ್ತಿಸಾಧನೆ ಮಾಡತೊಡಗಿದಳು. ಸಹಜವಾಗಿ ಮೂಡಿದ ಯೌವ್ವನ, ಸಾಧನೆಯಿಂದ ಕೂಡಿದ ಭಕ್ತಿಯ ತೇಜಸ್ಸು ಮಹಾದೇವಿಯನ್ನು ಮಹಾಸುಂದರಿಯನ್ನಾಗಿ ಮಾಡಿಬಿಟ್ಟಿತ್ತು. ಹೆತ್ತವರಿಗೆ ಮಗಳಿಗೆ ಮದುವೆ ಮಾಡುವ ಆಸೆಯಾಯಿತು. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿದರು. ಆದರೆ ಅದನ್ನು ತಿಳಿದ ಮಹಾದೇವಿಯು, ‘ನನಗೆ ಭವದ ಗಂಡ ಬೇಡ. ಚೆನ್ನ ಮಲ್ಲಿಕಾರ್ಜುನನೇ ನನ್ನ ನಿಜದ ಗಂಡ’ ಎಂದು ಉತ್ತರಿಸಿದಳು. ತಂದೆ ತಾಯಿಯರು ಏನು ಮಾಡಬೇಕೆಂದು ತೋಚದೆ ಸಂದಿಗ್ಧದಲ್ಲಿ ಬಿದ್ದರು.
ಹೀಗಿರುವಾಗ ಒಂದು ದಿನ ಆ ಪ್ರಾಂತ್ಯದ ಆಡಳಿತಗಾರ ಕೌಶಿಕ ಎಂಬುವವನು ತನ್ನ ಪರಿವಾರ ಸಮೇತನಾಗಿ ಊರಿನ ಬೀದಿಯಲ್ಲಿ ಮೆರವಣಿಗೆ ಹೊರಟಿದ್ದ. ಮೆರವಣಿಗೆಯನ್ನು ನೋಡಲು ಊರಿಗೇ ಊರೇ ಅಲ್ಲಿ ನೆರೆದಿತ್ತು. ಸಹಜವಾಗಿ ಮಹಾದೇವಿಯೂ ತನ್ನ ಮನೆ ಮುಂದೆ ನಿಂತು ಮೆರವಣಿಗೆಯನ್ನು ನೋಡುತ್ತಿದ್ದಳು. ಶಿವಭಕ್ತೆಯಾದ ಅವಳಿಗೆ ಅದೊಂದೂ ಹಿತವೆನಿಸಲಿಲ್ಲ. ಅದನ್ನೇ ಶಿವ-ಪಾರ್ವತಿಯರು ಗಣಸಮೂಹದೊಂದಿಗೆ ನಡೆಸುತ್ತಿರುವ ಮೆರವಣಿಗೆ ಎಂದು ಕಲ್ಪಿಸಿಕೊಂಡು ನೋಡುತ್ತಿದ್ದಳು. ಮೆರವಣಿಗೆಯಲ್ಲಿ ಬರುತ್ತಿದ್ದ ಕೌಶಿಕನ ಕಣ್ಣುಗಳು ಗುಂಪಿನಲ್ಲಿ ಎದ್ದು ಕಾಣುವಂತಹ ಸೌಂದರ್ಯವತಿಯಾದ ಮಹಾದೇವಿಯ ಮೇಲೆ ಬಿದ್ದವು. ‘ಎಲಾ! ನಮ್ಮ ಊರಿನಲ್ಲೇ ಇಂಥಹ ಚೆಲುವೆ ಇರುವಳಲ್ಲಾ! ಮದುವೆಯಾದರೆ ಅವಳನ್ನು ಮದುವೆಯಾಗಬೇಕು’ ಎಂದುಕೊಂಡನು. ಮೆರವಣಿಗೆ ಮುಗಿಸಿ ಅರಮನೆಗೆ ಹಿಂತಿರುಗಿದರೂ ಕಣ್ಣಿನಿಂದ ಮಹಾದೇವಿಯ ರೂಪ ಅಳಿಯಲಿಲ್ಲ. ಅವಳನ್ನು ಮದುವೆಯಾಗಲು ನಿಶ್ಚಯಿಸಿ ತನ್ನ ಆಪ್ತರೊಡನೆ ಅವಳ ಬಗ್ಗೆ ವಿಚಾರಿಸಲು ತಿಳಿಸಿದ. ರಾಜನ ಬಯಕೆಯನ್ನು ಅವನ ಕಡೆಯವರಿಂದ ತಿಳಿದ ಮಹಾದೇವಿಯ ತಾಯ್ತಂದೆಯರು ಗಾಬರಿಯಾದರು. ಸ್ವತಃ ರಾಜನೇ ಮಗಳನ್ನು ಮದುವೆಯಾಗುತ್ತೇನೆ ಎಂದು ಹೇಳಿಕಳುಹಿಸಿದ್ದ. ಆದರೆ ಮಹಾದೇವಿ ‘ನಾನು ಮದುವೆಯೇ ಆಗುವುದಿಲ್ಲ, ಚೆನ್ನಮಲ್ಲಿಕಾರ್ಜುನನೇ ನನ್ನ ಪತಿ’ ಎಂದು ಹಿಂದೆಯೇ ಹೇಳಿದ್ದಳು. ಈಗಲೂ ಅವಳದು ಅದೇ ಉತ್ತರವಾಯಿತು.
ಅವಳ ನಿರಾಕರಣೆಯನ್ನು ಕೇಳಿದ ಕೌಶಿಕನಿಗೆ ಕೋಪ ಬಂತು. ಆದರೂ ತೋರಿಸದೆ ಸ್ವತಃ ತಾನೇ ಮಹಾದೇವಿಯ ಮನೆಗೆ ಬಂದು ‘ನನ್ನನ್ನು ಮದುವೆಯಾಗು’ ಎಂದು ಕೇಳಿಕೊಂಡ. ಅದಕ್ಕೂ ಒಪ್ಪದಿದ್ದಾಗ ‘ರಾಜನಾದ ನನ್ನ ಮಾತನ್ನು ಧಿಕ್ಕರಿಸಿದರೆ ಬಲವಂತವಾಗಿಯಾದರೂ ಸರಿಯೆ ನಾನು ಮಹಾದೇವಿಯನ್ನು ಪಡೆದೇ ತೀರುತ್ತೇನೆ’ ಎಂದು ಹೆದರಿಸಿ ಹೋದ. ಮನೆಯವರು ಗಾಭರಿಯಾದರು. ಆದರೆ ಮಹಾದೇವಿ ದೃತಿಗೆಡಲಿಲ್ಲ. ‘ಚೆನ್ನಮಲ್ಲಿಕಾರ್ಜುನನ ಸಂಕಲ್ಪವೇ ಇದಾಗಿರುವಾಗ ನಾನಾದರು ಏಕೆ ತಡೆಯಲಿ’ ಎಂದು ಕೌಶಿಕನ ಅರಮೆನಗೆ ತಾನೇ ಹೋದಳು. ಮದುವೆಯಾಗುವುದಾಗಿ ಹೇಳಿ ಮೂರು ಶರತ್ತುಗಳನ್ನು ವಿಧಿಸಿದಳು. ‘ನನ್ನ ಪೂಜೆಯ ಸಮಯದಲ್ಲಿ ಅಡ್ಡಿ ಮಾಡಬಾರದು. ಜಂಗಮರ ಸೇವೆಗೆ ತಡೆಯೊಡ್ಡಬಾರದು. ನನ್ನ ವ್ರತ ಮುಗಿಯುವವರೆಗೂ ನನ್ನನ್ನು ಮುಟ್ಟಬಾರದು’ ಎಂದು ನಿಬಂಧನೆಗಳು ಹೇಳಿದಳು. ಕಾಮಾತುರನಾದ ಕೌಶಿಕ ಎಲ್ಲಕ್ಕೂ ‘ಒಪ್ಪಿಗೆ’ ಎಂದುಬಿಟ್ಟ.

ಮುಂದೊಂದು ದಿನ ವೈಭವಯುತವಾಗಿ ಮದುವೆ ನಡೆಯಿತು. ಆದರೆ ವೈಭವ ಎಂಬುದು ಕೌಶಿಕನದು ಮಾತ್ರವಾಗಿತ್ತು. ಮಹಾದೇವಿ ಯಾಂತ್ರಿಕವಾಗಿ ಅದರಲ್ಲಿ ಭಾಗವಹಿಸಿದ್ದಳು. ತನ್ನ ಪಕ್ಕದಲ್ಲಿದ್ದ ಕೌಶಿಕ ಅವಳ ಮನಸ್ಸಿನಿಂದಲೂ, ದೃಷ್ಟಿಯಿಂದಲೂ ಮರೆಯಾಗಿಬಿಟ್ಟಿದ್ದ. ಅಲ್ಲಿ ಇದ್ದುದ್ದು ತನ್ನ ನಿಜಪತಿಯಾದ ಚೆನ್ನಮಲ್ಲಕಾರ್ಜುನ ಮಾತ್ರ. ಮದುವೆಯಾಗಿ ಅರಮನೆಗೆ ಬಂದ ಅಕ್ಕಮಹಾದೇವಿ ಪೂಜಾಗೃಹ ಸೇರಿಕೊಂಡು ವ್ರತವನ್ನು ಕೈಗೊಂಡಳು. ದಿನಕಳೆದಂತೆ ಕೌಶಿಕನ ಮನಸ್ಸು ಅವಳನ್ನು ಬಯಸತೊಡಗಿತು. ಮನಗೆ ಯಾವಾಗ ಬೇಕೆಂದರೆ ಆಗ ಜಂಗಮರು ಬಂದುಹೋಗತೊಡಗಿದರು. ಅವರ ಸೇವೆಯಲ್ಲಿ ಮಹಾದೇವಿ ನಿರತಳಾಗಿಬಿಟ್ಟಳು. ಉಳಿದಂತೆ ಶಿವಪೂಜೆ ಮಾಡುತ್ತಿದ್ದಳು. ಇವುಗಳಿಂದ ರೋಸಿಹೋದ ಕೌಶಿಕ ತನ್ನನ್ನು ಕೂಡುವಂತೆ ಒತ್ತಾಯಿಸತೊಡಗಿದ. ಅಕ್ಕಮಹಾದೇವಿ ತನ್ನ ನಿಬಂಧನೆಗಳನ್ನು ನೆನಪಿಸುತ್ತಿದ್ದಳು.


ಚಿತ್ರಕೃಪೆ : ಅಂತರಜಾಲ
ಆದರೆ ಒಂದು ದಿನ ಕಾಮಂದನಾದ ಕೌಶಿಕ ತಡೆಯದೆ ಅವಳನ್ನು ಮೈಮುಟ್ಟಿ ಬಲವಂತಕ್ಕಿಳಿದುಬಿಟ್ಟ. ತಕ್ಷಣ ಮಹಾದೇವಿ
ಎಮ್ಮೆಗೊಂದು ಚಿಂತೆ, ಸಮ್ಮಗಾರಗೊಂದು ಚಿಂತೆ,
ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ,
ಎನಗೆ ಎನ್ನ ಚಿಂತೆ, ನಿನಗೆ ನಿನ್ನ ಕಾಯದ ಚಿಂತೆ,
ಒಲ್ಲೆ ಹೋಗು, ಸೆರಗ ಬಿಡು,
ಎನಗೆ ಎನ್ನ ಚೆನ್ನಮಲ್ಲಿಕಾರ್ಜುನನೊಲಿವನೋ ಒಲಿಯನೋ ಎಂಬ ಚಿಂತೆ
ಎಂದು ನುಡಿದು, ‘ಇಂದಿಗೆ ನಾನಿನ್ನ ಹೆಂಡತಿಯಲ್ಲ, ನೀನನ್ನ ಪತಿಯಲ್ಲ’ ಎಂದು ಹೊರನಡೆದುಬಿಟ್ಟಳು. ಕೌಶಿಕನು ಕೊಟ್ಟಿದ್ದ ಎಲ್ಲಾ ಆಭರಣ ಬಟ್ಟೆ ಬರೆಗಳನ್ನು ಕಿತ್ತೆಸೆದು ಕಂಬಳಿಯನ್ನು (ಕೇಶಾಂಬರ) ಹೊದ್ದು ನಿಜದ ಗಂಡನ ಆರಿಸುತ್ತಾ ಹೊರಟಳು. ಒಲ್ಲದ ಗಂಡನನ್ನು ಮಾತ್ರವಲ್ಲ, ಸರ್ವವನ್ನು ತೊರೆದು ವಿರಾಗಿಣಿಯಾಗಿ ಹೊರಟು ನಿಂತ ಮಗಳನ್ನು ಕಂಡು ತಂದೆ ತಾಯಿ, ಬಂಧುಬಳಗದವರು ದುಃಖಪಟ್ಟರು. ಎಲ್ಲರನ್ನೂ ಮಹಾದೇವಿಯೇ ‘ನನ್ನ ಗಂಡನ ಮನೆ ಸೇರಿ ಹೂವ ತಾರತೆನಲ್ಲದೆ, ಹುಲ್ಲು ತಾರೆನು’ ಎಂದು ಸಮಾಧಾನ ಮಾಡಿದಳು.
‘ಒಬ್ಬಳೇ ಹೋಗುತ್ತೀಯ, ಊಟ ವಸತಿಗೇನು ಮಾಡುತ್ತೀಯ’ ಎಂದು ತಂದೆ ತಾಯಿ ಗೋಳಾಡಿದರು. ಆಗ ಮಹಾದೇವಿ
ಹಸಿವಾದರೆ ಭಿಕ್ಷಾನ್ನಗಳುಂಟು,
ತೃಷೆಯಾದರೆ ಕೆರೆ ಹಳ್ಳ ಬಾವಿಗಳುಂಟು,
ದೇಹದ ಚಳಿಗೆ ಬಿಸುಟ ಅರಿವೆಗಳುಂಟು,
ಶಯನಕ್ಕೆ ಹಾಳು ದೇಗುಲವುಂಟು,
ಆತ್ಮಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನನುಂಟು
ಎಂದು ಸಮಾಧಾನಪಡಿಸಿ ಹೊರಟುಬಿಟ್ಟಳು.
ಮುಂದೆ ಏನು ಎತ್ತ ಎಂದು ತಿಳಿಯದ ಅವಳಿಗೆ ಕಲ್ಯಾಣದಲ್ಲಿ ಬಸವಣ್ಣ-ಅಲ್ಲಮಾದಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಶರಣರ ಚಟುವಟಿಕೆಗಳು ತಿಳಿದು ಬಂದವು.
ಸಂಸಾರಸಂಗದಲ್ಲಿದ್ದೆ ನಾನು,
ಸಂಸಾರ ನಿಸ್ಸಾರವೆಂದು ತೋರಿದ ಶ್ರೀ ಗುರು,
ಅಂಗವಿಕಾರದ ಸಂಗವ ನಿಲಿಸಿ,
ಲಿಂಗವನಂಗದ ಮೇಲೆ ಸಥಾಪ್ಯವ ಮಾಡಿದನು ಎನ್ನ ಗುರು,
ಹಿಂದಣ ಜನ್ಮವ ತೊಡೆದು ಮುಂದಣ ಪಥವ ತೋರಿದನು
ಎನ್ನ ಗುರು ಚೆನ್ನಮಲ್ಲಿಕಾರ್ಜುನ
ಎಂದು ಹಾಡುತ್ತಾ ಕಲ್ಯಾಣದ ದಾರಿ ಹಿಡಿದು ನಡೆದಳು. ದಾರಿಯಲ್ಲಿ ಸಿಕ್ಕ ಸಿಕ್ಕ ಊರುಗಳಲ್ಲಿ ಶಿವಭಕ್ತಿಯನ್ನು ಪದವ ಮಾಡಿ ಹಾಡುತ್ತಾ, ಜನರು ಕೊಟ್ಟಿದ್ದನ್ನು ತಿನ್ನುತ್ತಾ ಕಲ್ಯಾಣಕ್ಕೆ ಬಂದಳು.
ಮುಂದುವರೆಯುವುದು...........

Tuesday, November 10, 2009

ಓ ನನ್ನ ಚೇತನಾ! ಕುವೆಂಪು

ಕುವೆಂಪು ಅವರು ನಿಧನರಾಗಿ ಇಂದಿಗೆ ಹದಿನೈದು ವರ್ಷಗಳು ಕಳೆದುಹೋಗುತ್ತವೆ. ಆ ಕುವೆಂಪುವನ್ನೇ ಸೃಜಿಸಿದ ಬೃಹತ್ತು ಹಾಗೂ ಮಹತ್ತಾದ ಸಾಹಿತ್ಯ ರಾಶಿಯಿಂದಾಗಿ ಇಂದಿಗೂ, ಎಂದಿಗೂ ಕುವೆಂಪು ಜನಮಾನಸದಿಂದ ದೂರವಾಗುವುದಿಲ್ಲ. ಅವರ ಸಮಗ್ರ ಸಾಹಿತ್ಯದ ಸಾರಭೂತದಂತೆ ರೂಪಗೊಂಡಿದ್ದು ವಿಶ್ವಮಾನವ ಸಂದೇಶ. ತನ್ನ ಎಲ್ಲಾ ಸಾಹಿತ್ಯವನ್ನು ಜನ ಮರೆತರೂ ಚಿಂತೆಯಿಲ್ಲ; ವಿಶ್ವಮಾನವ ಸಂದೇಶವೊಂದನ್ನು ಸ್ವೀಕರಿಸಿದರೆ ಸಾಕು ಎಂಬುದು ಸ್ವತಃ ಕುವೆಂಪು ಅವರ ಅಭಿಪ್ರಾಯವಾಗಿತ್ತು. ಅಂತಹ ವಿಶ್ವಮಾನವ ಸಂದೇಶದ ಭಾಗವಾದ "ವಿಶ್ವಮಾನವಗೀತೆ - ಅನಿಕೇತನ" ಗೀತೆಯನ್ನು ಓದುತ್ತಾ ಕೇಳುತ್ತಾ ಆ ಚೇತನಕ್ಕೆ ನಾವು ನಮ್ಮ ನಮನಗಳನ್ನು ಸಲ್ಲಿಸೋಣ.


ವಿಶ್ವಮಾನಗೀತೆ - ಅನಿಕೇತನ

ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!
(ಆಕರ: ಕುವೆಂಪು ಸಮಗ್ರಕಾವ್ಯ - ಸಂಪುಟ 2, ಪುಟ 894)



ಶ್ರೀ ವಿ.ಕೆ.ಗೋಕಾಕ್ ಅವರ ಇಂಗ್ಲಿಷ್ ಅನುವಾದ
The Unhoused Consciousness

Be unhoused, O my soul!
Only the Infinite is your goal.

Leave those myriad forms behind.
Leave the million names that bind.
A flash will pierce your heart and mind.
And unhouse you my soul!

Winnow the chaff of a hundred creeds.
Beyond the systems, hollow as reeds,
Turn unhorizoned where Truth leads,
To be unhoused my soul!

Stop not on the unending way.
Never build a house of clay.
The quest is endless. Night and day,
There can be no end to your play
When you are unhoused, O my soul!

The infinite’s Yoga knows no end.
Endless the quest you apprehend.
You’ll grow infinite and ascend
When you are unhoused, O my soul!
(ಆಕರ: ಕುವೆಂಪು ಸಮಗ್ರಕಾವ್ಯ - ಸಂಪುಟ 2, ಪುಟ 894)

http://www.kuvempu.com/ ತಾಣದಲ್ಲಿರುವ ಇಂಗ್ಲಿಷ್ ಅನುವಾದ

O my spirit…
set roots nowhere… O my spirit


Grow beyond the myriad forms…
Go beyond the countless names…
From a heart overfull, inspiration bursts forth…
O my spirit…
set roots nowhere… O my spirit


Winnow the chaff of a hundred creeds…
Stretch beyond the stifling philosophies…
Rise, immense and endless as the cosmos…
O my spirit…
set roots nowhere… O my spirit


Rest nowhere on the unending road…
Build never a binding nest…
Touch never the boundary…
O remain infinite and boundless…
O my spirit…
set roots nowhere… O my spirit


Infinity's Yoga has no end…
Endless is the quest you apprehend…
You are that infinity…
become that boundless…
Ascend, ascend, ascend, ascend!
O my spirit…
set roots nowhere… O my spirit
(ಕೃಪೆ: http://www.kuvempu.com/ )

"ವಿಶ್ವಮಾನ ಸಂದೇಶ"ದ ಪೂರ್ಣಪಾಠ - ಪಂಚಮಂತ್ರ ಮತ್ತು ಸಪ್ತಸೂತ್ರ - http://www.kuvempu.com/ ವೆಬ್ ತಾಣದಲ್ಲಿ ದೊರೆಯುತ್ತದೆ.

Monday, November 09, 2009

ಹೀಗೊಂದು ಬೆನ್ನುಡಿ -ಸುಗ್ಗನಹಳ್ಳಿ ಷಡಕ್ಷರಿ


{ಹೆಸರಾಂತ ಸಾಹಿತಿ ಶ್ರೀ ಎಸ್. ರುದ್ರಮೂರ್ತಿಶಾಸ್ತ್ರಿಗಳ ತಮ್ಮಂದಿರಾದ ಶ್ರೀ ಸುಗ್ಗನಹಳ್ಳಿ ಷಡಕ್ಷರಿ ಅವರು ನನ್ನ ಸಹೋದ್ಯೋಗಿ. ನಮ್ಮ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಬಂದು, ನಂತರ ಕನ್ನಡ ಎಂ.ಎ. ಮಾಡಿ ಕನ್ನಡ ಉಪನ್ಯಾಸಕರಾದವರು. ಹಲವಾರು ಒಳ್ಳೆಯ ಭಾವಗೀತೆಗಳನ್ನು ಬರೆದಿರುವ ಇವರ ಹಲವು ಭಾವಗೀತೆಗಳ ಸಿ.ಡಿ.ಗಳು ಪ್ರಕಟವಾಗಿವೆ. ಉಡುಪಿ ಜಯರಾಂ ಅವರ ಬಗ್ಗೆ ಪುಸ್ತಕವೊಂದನ್ನೂ ಬರೆದಿದ್ದಾರೆ. ಹಲವಾರು ಸಣ್ಣಕಥೆ, ಕವಿತೆ, ಏಕಾಂಕಗಳನ್ನು ಬರೆದಿದ್ದಾರೆ. ಹವ್ಯಾಸಿ ಪತ್ರಕರ್ತರೂ ಹೌದು. ಜೊತೆಗೆ ಭರತನಾಟ್ಯ ಕಲಾವಿದರಾಗಿ, ವಿಮರ್ಶಕರಾಗಿ ಚಿರಪರಿಚತರು. ಇವರ ಹಾಡೊಂದು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪತಿಭವನದಲ್ಲಿ ಹಾಡಲ್ಪಟ್ಟಿತ್ತು! ಎಲ್ಲಕ್ಕಿಂತ ಹೆಚ್ಚಾಗಿ ಸೊಗಸಾದ ಕಾರ್ಯಕ್ರಮ ನಿರೂಪಕರಾಗಿಯೂ ಜನಪ್ರಿಯರಾಗಿದ್ದಾರೆ. ಅಬ್ದುಲ್ ಕಲಾಂ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಇವರ ಕನ್ನಡ ಭಾಷೆಯ ನಿರೂಪಣೆಯನ್ನು ಕೇಳಿ, ಕಾರ್ಯಕ್ರಮ ಮುಗಿದನಂತರ ಸ್ವತಃ ಕಲಾಂ ಅವರೇ, 'ನನಗೆ ಕನ್ನಡ ಸರಿಯಾಗಿ ಅರ್ಥವಾಗದಿದ್ದರೂ, ನಿಮ್ಮ ನಿರೂಪಣೆಯನ್ನು ಎಂಜಾಯ್ ಮಾಡಿದೆ. ಅಷ್ಟು ಚೆನ್ನಾಗಿತ್ತು. ಸುಂದರವಾದ ಭಾಷೆ' ಎಂದು ಬೆನ್ನು ತಟ್ಟಿ ಹೇಳಿದರಂತೆ!
ನನ್ನ ಪುಸ್ತಕಕ್ಕೆ ಬೆನ್ನುಡಿ ಬರೆದುಕೊಡಿ ಎಂದಾಗ ಪ್ರೀತಿಯಿಂದ ಒಪ್ಪಿಕೊಂಡು ಬರೆದುಕೊಟ್ಟರು. ಅದೇ ಒಂದು ಪ್ರತ್ಯೇಕ ಲೇಖನದಂತಿತ್ತು. 'ಪುಸ್ತಕದ ಬಗ್ಗೆ ನನಗೆ ಹೇಳಬೇಕನಿಸಿದ್ದನ್ನು ಹೇಳಿದ್ದೇನೆ. ಬೆನ್ನುಡಿಗೆ ಎಷ್ಟು ಬೇಕೋ ಅಷ್ಟನ್ನು ಬಳಸಿಕೊಳ್ಳಿ' ಎಂದಿದ್ದರು. ಅದು ಇಲ್ಲಿದೆ}


ಹೈಸ್ಕೂಲು ದಿನಗಳು ಎಲ್ಲರ ಬದುಕಿನಲ್ಲಿ ಯಾವತ್ತೂ ಮಧುರ ನೆನಪನ್ನು ನೀಡುವ ದಿನಗಳು. ಏಕೆಂದರೆ ಎಲ್ಲವನ್ನೂ ಮರೆತುಬಿಡುವ ಬಾಲ್ಯವನ್ನು ಆಗಷ್ಟೇ ಹಾದುಬಂದಿರುತ್ತೇವೆ. ಹಾಗೆಯೇ ಅನುಭವಗಳನ್ನು ತರ್ಕಕ್ಕೆ ಒಡ್ಡಿಕೊಳ್ಳುವ ಯೌವನದ ನಿರೀಕ್ಷೆಯಲ್ಲಿರುತ್ತೇವೆ. ಈ ನಡುವಿನ ಅವಧಿಯ ಹೈಸ್ಕೂಲು ದಿನಗಳ ಅನುಭವ ನಿಜಕ್ಕೂ ರೋಮಾಂಚಕ ಅನುಭವವನ್ನು ನೀಡುತ್ತವೆ. ಅಂತಹ ಅನುಭವಗಳನ್ನು ಬರಹದ ರೂಪದಲ್ಲಿ ದಾಖಲಿಸುತ್ತಿದ್ದೇನೆ ಎಂದು ನನ್ನ ಗೆಳೆಯ ಸತ್ಯ ಹೇಳಿದಾಗ, ನನಗೆ ‘ಹೌದಲ್ಲಾ, ಇಂತದ್ದೊಂದು ಪ್ರಯತ್ನ ಮಾಡಬಹುದಲ್ಲಾ!’ ಅನ್ನಿಸಿತ್ತು. ಅದರಲ್ಲೂ ಸತ್ಯ ನನ್ನ ದೃಷ್ಟಿಯಲ್ಲಿ ಓರ್ವ ನೇರ ಬರಹಗಾರ. ಅದು ಅವನ ವ್ಯಕ್ತಿತ್ವ ಕೂಡ. ಎಷ್ಟೋ ಸಂದರ್ಭದಲ್ಲಿ ನನ್ನ ಸ್ನೇಹಕ್ಕೆ ಕಟ್ಟುಬಿದ್ದು ನನಗಿಷ್ಟವಾಗದ ತನ್ನ ಅನಿಸಿಕೆಗಳನ್ನು ಅದುಮಿಡಲು ಅವನು ಪಡುತ್ತಿದ್ದ ‘ಹರಸಾಹಸ’ ಕಂಡು ನನಗೆ ಅವನ ಬಗ್ಗೆ ‘ಪಾಪ’ ಅನ್ನಿಸಿದ್ದುಂಟು. ಅಂತವನು ತನ್ನ ಹೈಸ್ಕೂಲು ದಿನಗಳ ಬಗ್ಗೆ ಬರೆಯುತ್ತಾನೆ ಅಂದಾಗ ಅವನಿಗಿಂತಲೂ ಆ ಬಗ್ಗೆ ಹೆಚ್ಚಿನ ನಿರೀಕ್ಷೆ ನನಗಿತ್ತು. ಅದಕ್ಕೆ ಸರಿಯಾಗಿ ಮೊನ್ನೆ ತನ್ನ ಬರಹದ ಪ್ರತಿಯೊಂದನ್ನು ನೀಡಿ ‘ನೀನೇ ಹಿಂಬರಹ ಬರೆದುಕೊಡು’ ಅಂದಾಗ, ಪ್ರಕಟಣೆಗೆ ಮೊದಲೇ ಓದುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂದು ಒಪ್ಪಿಕೊಂಡೆ.


ಓದಲು ಆರಂಭಿಸಿದೆ. ಮುಗಿಯುವ ತನಕ ನಿಲ್ಲಿಸಲು ಮನಸ್ಸಾಗಲಿಲ್ಲ. ಎಲ್ಲರಂತೆ ವಯೋಸಹಜವಾದ ತುಂಟತನದಲ್ಲೇ ತನ್ನ ಹೈಸ್ಕೂಲು ವಿಧ್ಯಾಭ್ಯಾಸವನ್ನು ನಡೆಸಿದ ಸತ್ಯ, ಆಗಿನ ಎಲ್ಲಾ ಘಟನೆಗಳನ್ನು ಎಳೆಎಳೆಯಾಗಿ ಬಿಡಿಸಿದ್ದಾನೆ. ಪುಸ್ತಕವಾಗುತ್ತಿದೆ ಅನ್ನುವ ಡಂಬಾಚಾರಕ್ಕೆ ಕಟ್ಟುಬಿದ್ದು ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಅವನ ಗ್ರಾಮಾಂತರ ಪ್ರದೇಶದ ಹೈಸ್ಕೂಲು ದಿನಗಳ ಬಗ್ಗೆ ಓದುವಾಗ, ಅಂತದೊಂದು ಅವಕಾಶದಿಂದ ವಂಚಿತನಾದ ಬಗ್ಗೆ ನನಗೇ ಬೇಸರವಾಗಿದೆ. ಶಾಲೆಯಲ್ಲಿ ನಡೆಯುವ ಅವಾಂತರಗಳು, ಮನುಷ್ಯತ್ವವನ್ನು ಮರೆತ ಮತ್ತು ಮನುಷ್ಯತ್ವದ ಪ್ರತಿರೂಪವೇ ಆದ ಮೇಷ್ಟ್ರುಗಳು, ಅನುಭವ-ಅರ್ಹತೆಗಳಿಲ್ಲದ ಟೀಚರ್‌ಗಳ ಪಾಠ, ಒಂದೋ-ಎರಡೋ ವಿದ್ಯಾರ್ಥಿಗಳು ಉತ್ತೀರ್ಣವಾಗುವ ಪರಿಸ್ಥಿತಿ (ಅಂದಹಾಗೆ ಹತ್ತನೇ ತರಗತಿಯ ತನ್ನ ಬ್ಯಾಚಿನಲ್ಲಿ ಉತ್ತೀರ್ಣನಾದದ್ದು ಸತ್ಯ ಒಬ್ಬನೇ), ಗೆಳೆಯರ ಗುಂಪು-ಗುಂಪುಗಾರಿಕೆ, ತೋಟ-ತುಡಿಕೆಗಳಲ್ಲಿ ಕಳ್ಳತನ, ಸಿಕ್ಕಿಹಾಕಿಕೊಂಡಾಗ ಒಬ್ಬರ ಮೇಲೊಬ್ಬರು ಚಾಡಿ ಹೇಳಿ ತಪ್ಪಿಸಿಕೊಳ್ಳುವ ಹವಣಿಕೆ, ಸಂದರ್ಭ ಬಂದಾಗ ಹಿಂದುಮುಂದು ನೋಡದೆ ಪೋಷಕರ ಸಹಿಯನ್ನು ಫೋರ್ಜರಿ ಮಾಡುವ ಎದೆಗಾರಿಕೆ, ಹಾಸ್ಟೆಲ್ ವಾಸ, ಅಲ್ಲಿನ ಅವ್ಯವಸ್ಥೆ, ವಿದ್ಯಾರ್ಥಿಗಳನ್ನು ಯಾವ ಎಗ್ಗೂ ಇಲ್ಲದೆ ಕೆಲಸಕ್ಕೆ ಬಳಸಿಕೊಳ್ಳುವ ರೀತಿ ಎಲ್ಲವನ್ನೂ ಸತ್ಯ ಕಣ್ಣಿಗೆ ಕಟ್ಟುವಹಾಗೆ ತೆರೆದಿರಿಸಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ಹೈಸ್ಕೂಲಿನ ಸ್ಥಿತಿಗತಿಗಳ ಬಗ್ಗೆ ಓದುವಾಗ, ಅಲ್ಲಿನ ವಿದ್ಯಾರ್ಥಿಗಳ ಬಗ್ಗೆ ನನಗಂತೂ ಮರುಕು ಉಂಟಾಗುತ್ತದೆ. ಅದರಲ್ಲೂ ಇಂಗ್ಲಿಷ್ ಪಾಠಮಾಡುವ ಮೇಷ್ಟ್ರು ‘ಕಾರ್ಪೋರೇಷನ್’ ಪದವನ್ನು ಉಚ್ಛರಿಸಲು ಬರದೆ ಅದನ್ನು, ಸಿ.ಒ.ಆರ್.ಪಿ.ಒ.ರೇಷನ್ ಎಂದು ಉಚ್ಛರಿಸುತ್ತಿದ್ದರು ಎಂದು ಸ್ವಲ್ಪ ತಮಾಷೆಯ ದನಿಯಲ್ಲಿ ಬರೆಯಲಾಗಿದ್ದರೂ, ಅದರ ಹಿಂದಿನ ವಿಷಾದ ನಮಗೆ ತಟ್ಟುತ್ತದೆ. ಅಂತಹ ಪರಿಸರದಲ್ಲಿ ಓದಿದರೂ ಒಂದು ಬ್ಯಾಚುಲರ್ ಪದವಿ, ಎರಡು ಸ್ನಾತಕೋತ್ತರ ಪದವಿ, ಒಂದು ಪಿ.ಹೆಚ್.ಡಿ ಪದವಿ ಪಡೆದ ಸತ್ಯನ ಬಗ್ಗೆ ನನಗಂತೂ ಮನಸ್ಸು ತುಂಬಿದ ಅಭಿಮಾನ. ಜೊತೆಗೆ ಅಂತಹ ಪರಿಸರದಲ್ಲಿ ಓದಿದ ಎಷ್ಟು ವಿದ್ಯಾರ್ಥಿಗಳು ಈ ಹಂತ ತಲುಪಲು ಸಾಧ್ಯ? ಅನ್ನುವ ಪ್ರಶ್ನೆ.

ಇದು ಒಬ್ಬ ವಿದ್ಯಾರ್ಥಿಯ ಅನುಭವ ಎಂದುಕೊಂಡರೂ, ಈ ಪುಸ್ತಕ ಗ್ರಾಮಾಂತರ ಪ್ರದೇಶದ ಶಾಲಾ ಅವ್ಯವಸ್ಥೆಗಳ ಬಗ್ಗೆ ಆಗಲೇಬೇಕಾದ ಬದಲಾವಣೆಗಳನ್ನು ಕುರಿತು ಸಮಾಜಕ್ಕೆ ಮಾಹಿತಿ ನೀಡುತ್ತದೆ. ಜೊತೆಗೆ ಅನುಭವ ಯಾವತ್ತೂ ತಮ್ಮೊಬ್ಬರ ಸ್ವತ್ತಾಗಬಾರದು, ಅದು ಸಮಾಜಕ್ಕೆ ರವಾನೆಯಾಗುವುದರ ಮೂಲಕ ಜನರನ್ನು ಚಿಂತನೆಗೆ ಒಳಪಡಿಸಿಬೇಕು ಎನ್ನುವ ಸಂದೇಶವನ್ನೂ ಈ ಪುಸ್ತಕ ನೀಡುತ್ತದೆ. ಇದೊಂದು ಸ್ವೀಕರಿಸಲೇಬಹುದಾದ ಪ್ರಯತ್ನ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ. ನಮಸ್ಕಾರ.


-ಸುಗ್ಗನಹಳ್ಳಿ ಷಡಕ್ಷರಿ

Wednesday, November 04, 2009

‘ಆ ಕಾಲವೊಂದಿತ್ತು’ - ಡಾ.ರಮೇಶ್‌ಚಂದ್ರ ದತ್ತ


{ಡಾ. ರಮೇಶ್‌ಚಂದ್ರ ದತ್ತ ಅವರು ಹೆಸರಾಂತ ರಂಗನಿರ್ದೇಶಕರು. ಮದರಾಸು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮತ್ತು ಪಿಹೆಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ವಿಜಯನಗರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ಇವರ ರಂಗಪ್ರತಿಭೆಯನ್ನು ಗುರುತಿಸಿ ‘ಭಾರತ ಯಾತ್ರಾಕೇಂದ್ರ’ 2004-2005 ನೇ ಸಾಲಿನ ‘ಸಂಸ’ ರಂಗಪ್ರಶಸ್ತಿಯನ್ನು ನೀಡಿ ಗೌರವಿಸಿದೆ.}


‘ನನ್ನ ಹೈಸ್ಕೂಲ್ ದಿನಗಳು’ ಪುಸ್ತಕದ ಮುನ್ನುಡಿ

ಸತ್ಯ ಘಟನೆಗಳನ್ನು ಅನಾವರಣಗೊಳಿಸುವ ಸಂಕಥನವನ್ನು ರಚಿಸುವುದು ಸ್ವಲ್ಪ ಮುಜುಗರದ ಸಂಗತಿಯೇ. ಒಂದು ತೆರನ ಬೆತ್ತಲಾಗುವ ಪ್ರಕ್ರಿಯೆ. ಹಾಗಾಗಿ ಸತ್ಯಗಳನ್ನೆಲ್ಲಾ ಮರೆಮಾಚುತ್ತಾ ಬರೆಯುವ ರೀತಿಗೆ ಒಗ್ಗಿಹೋಗಿದ್ದೇವೆ. ಮಾತ್ರವಲ್ಲದೆ ಇದು ಕಲಾತ್ಮಕತೆ, ಶೈಲಿ ಎಂದು ಏನೆಲ್ಲಾ ಕರೆದುಕೊಂಡಿದ್ದೇವೆ. ಸತ್ಯನಾರಾಯಣ ತಮ್ಮ ಸ್ಮೃತಿಯಲ್ಲಿರುವ ಭೂತದ ನೆನಪುಗಳನ್ನು ಹಾಗೆಯೇ ಕಾಗದದ ಮೇಲೆ ಇಳಿಸಹೊರಟಿದ್ದಾರೆ. ಇದು ನಿಷ್ಠುರಕ್ಕೊಳಗಾಗುವ ಕೆಲಸ ಎಂಬ ಅರಿವು ಅವರಿಗಿದೆ. ಜೀವನದ ಅನೇಕ ಎಡರು-ತೊಡರುಗಳನ್ನು ದಾಟಿ ಗ್ರಂಥಪಾಲಕರ ಹುದ್ದೆಗೆ ಏರಿದ ಸತ್ಯನಾರಾಯಣರ ಬಾಲ್ಯದ ಅನುಭವ ಅನಂತವಾದುದು. ಬಾಲ್ಯ ಕಟ್ಟಿಕೊಡುವ ಇಂತಹ ಅನುಭವದ ಬುತ್ತಿಯ ಎದುರು ಬೇರೇನಿದೆ. ಹಾಗಾಗಿಯೇ ಕುವೆಂಪುರವರು ‘ಆ ಕಾಲವೊಂದಿತ್ತು’ ಎಂದಿರುವುದು. ನಾಲ್ಕು ಗೋಡೆಗಳ ಒಳಗೆ ಬಾಗಿಲು ಹಾಕಿದ ಮನೆಯಲ್ಲಿ ತೆರೆದುಕೊಳ್ಳದೇ ಬೆಳೆಯುವ ಪಟ್ಟಣದ ಮಕ್ಕಳಿಗೆ ಎಲ್ಲಿದೆ ಇಂತಹ ಅನುಭವದ ಬುತ್ತಿ. ಬಾಲ್ಯದ ಬಡತನದ ನೆನಪಲ್ಲದೆ ಹಣದ ಹುಚ್ಚುಹೊಳೆಯಲ್ಲಿ ತೇಲಿಹೋಗುತ್ತಿರುವ ನವಸಮಾಜದ ನಾಗರಿಕನಿಗೆ ಇದು ಏನೂ ಅಲ್ಲ ಎನಿಸಬಹುದು. ಆದರೆ ಸಾಹಿತ್ಯದ ಅಭಿರುಚಿ ಇರುವ ಪ್ರತಿಯೊಬ್ಬ ಓದುಗನಿಗೆ ಓದುಗನಿಗೆ ಹೊಸ ಅನುಭವ ನೀಡುವ ಬರಹ ಇದಾಗಿದೆ.

ತನ್ನ ಬದುಕಿನ ಸಂದರ್ಭದಲ್ಲೇ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಮರ್ಥರಾಗದ ಅಧ್ಯಾಪಕ ಸಮೂಹ ವಿದ್ಯಾರ್ಥಿಗಳ ಬದುಕನ್ನು ಕಟ್ಟಲು ಸಾಧ್ಯವೇ ಎನ್ನುವ ಗುಮಾನಿಯಿಂದಲೇ ಆರಂಭವಾಗುವ ಸತ್ಯನಾರಾಯಣರ ಜೀವಾನಾನುಭದ ಕಥನ ಬಹುಶಃ ಎಲ್ಲಾ ಗ್ರಾಮೀಣ ವಿದ್ಯಾರ್ಥಿಗಳ ಜೀವನ ಕಥನವೇ ಆಘಿದೆ. ಹೆಂಡ, ಜೂಜು ಮೊದಲಾದವುಗಳಲ್ಲಿ ಮುಳುಗಿರುವ ಅಧ್ಯಾಪಕ ಯಾವ ಜೀವನ ಮೂಲ್ಯಗಳನ್ನು ವಿದೈಆರ್ಥಿಗಳಲ್ಲಿ ಹುಟ್ಟುಹಾಕಲು ಸಾಧ್ಯ. ಒಳ್ಳೆಯ ಸಮಾಜವನ್ನು ಕಟ್ಟುವಲ್ಲಿ ತನ್ನ ಪಾತ್ರವಿದೆ ಎನ್ನುವುದನ್ನು ಮರೆತಿರುವ ಬಹುತೇಕ ಅಧ್ಯಾಪಕರು ಬೆಲ್ಲು-ಬಿಲ್ಲಿನ ಅಧ್ಯಾಪಕರೇ ಆಗಿದ್ದಾರೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಸತ್ಯನಾರಾಯಣ. ಆದರೆಶ್ರದ್ಧಾಭಕ್ತಿಗಳಿಂದ ತನ್ನ ಕಾಯಕವನ್ನು ನಡೆಸುತ್ತಿದ್ದ ಪ್ರಮಾಣಿಕ ಅಧ್ಯಾಪಕ ವೆಂಕಟಪ್ಪನಂಥವರೂ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ.

ಕುಂದೂರುಮಠದ ಹಿನ್ನೆಲೆ ಐತಿಹ್ಯ ಹಾಗೂ ಜಾನಪದ ಆಚರಣೆಗಳ ವಿವರಣೆಗಳು ಅವುಗಳ ಹಿಂದಿನ ರಾಜಕಾರಣ ಬಲಿಷ್ಠ ಜಾತಿಗಳ ಪ್ರಾಬಲ್ಯ ಮೊದಲಾದವುಗಳ ಬಗಗೆ ವಿವರಣೇ ನೀಡುತ್ತಾ ಹೋಗುವ ಸತ್ಯನಾರಾಯಣ ಮತ್ತೆ ತಮ್ಮ ಹೈಸ್ಕೂಲಿನ ಅನುಭವಗಳ ಕಡೆಗೆ ಹೊರಳುತ್ತಾರೆ. ಏಳನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಶಹಬ್ಬಾಸ್ಗಿರಿ ಪಡೆವ ಅವರು ಟೀ.ಸಿ.ಯ ಹಿಂದೆ ಬರೆದ ಅಂಕಗಳನ್ನು ತಿದ್ದಲು ಹೋಗಿ ಸಿಕ್ಕಿಹಾಕಿಕೊಂಡು ಅನುಭವಿಸಿದ ಅವಾಂತರದ ಚಿತ್ರಣ, ಎಂಟನೇ ತರಗತಿಗೆ ಮಾನಿಟರ್ ಆದದ್ದು, ತರಗತಿ ಮಾನಿಟರ್ ಮಾಡುವುದರ ಜೊತೆಗೆ ವೆಂಕಟಪ್ಪನವರ ಬಹಿರ್ದೆಸೆಗೆ ನೀರನ್ನು ತೆಗೆದುಕೊಂಡು ಹೋಗಿ ಕೊಡಬೇಕಾದ ಪ್ರಸಂಗ, ವೆಂಕಟಪ್ಪನವರ ಪ್ಯಾಂಟಿನಲ್ಲಿ ಇರುವೆ ಸೇರಿದಾಗ ಅವುಗಳನ್ನು ಸಂಹರಿಸಿದ್ದು, ವೆಂಕಟಪ್ಪನವರ ಬಂಧುಗಳು ತೀರಿಕೊಂಡಾಗ ಅವರಿಗೆ ಸೈಕಲ್ಲಿನಲ್ಲಿ ಲಿಫ್ಟ್ ಕೊಟ್ಟಿದ್ದು ಈ ಎಲ್ಲಾ ಸಂದರ್ಭಗಳಲ್ಲಿ ವೆಂಕಟಪ್ಪನವರು ತಮ್ಮನ್ನು ಪ್ರೀತಿಯಿಂದ ನಡೆಸಿಕೊಂಡ ಬಗೆ ಇವುಗಳನ್ನು ವಿವರಿಸುತ್ತಾ ಅವರ ಮಾನವೀಯತೆಯ ಬಗೆಗೆ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಜೊತೆಗೆ ಅಂತಹ ಮಾನ್ಯರೂ ಶಿಕ್ಷಣ ಕ್ಷೇತ್ರದಲ್ಲಿದ್ದಾರೆ ಎಂಬ ಸತ್ಯದ ಅರಿವಾದ ಪ್ರಸಂಗವನ್ನೂ ವಿವರಿಸುತ್ತಾರೆ.

ಹೈಸ್ಕೂಲ್ ವಿದ್ಯಾಭ್ಯಾಸದ ದಿನಗಳಲ್ಲಿ ಸತ್ಯನಾರಾಯಣರಿಗೆ ಮೇಷ್ಟ್ರುಗಳು ಬಹಳ ಕಾಡಿದ್ದಾರೆ. ಹುಣ್ಣಿಮೆ ಅಮಾವಾಸ್ಯೆ ದಿನಗಳಲ್ಲಿ ಮನಸ್ಸಿನ ಸ್ವಾಸ್ಥ್ಯ ಕಳೆದುಕೊಂಡು ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದ ಹಾಗೂ ಇಂಗ್ಲಿಷ್ ಓದಲು ಬರದಿದ್ದರೂ ಪಾಠ ಮಾಡುತ್ತಿದ್ದ ಸಿ.ಓ.ಆರ್.ಪಿ.ರೇಷನ್ ಮೇಷ್ಟ್ರು ಡಿ.ಎಸ್.ನಿಂಗೇಗೌಡ, ವಿದ್ಯಾರ್ಥಿಗಳನ್ನು ಹೊಡೆಯುವುದರಲ್ಲಿ ಹೆಸರುವಾಸಿಯಾಗಿದ್ದ ಮಿಡ್ಲಿಸ್ಕೂಲಿನ ರಾಮೇಗೌಡ, ಮುಂದೆ ಹತ್ತನೇ ತರಗತಿಯಲ್ಲಿದ್ದಾಗ ವಾರ್ಡನ್ ಆಗಿ ಭಂದ ಭೀಮಪ್ಪ ಕರಿಯಪ್ಪ ಮೊದಲಾದವರ ಗುಣಸ್ವಭಾವದ ಚಿತ್ರಣ ಕುತೂಹಲಕಾರಿಯಾದವು. ತನ್ನ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ತನ್ನದೇನೂ ಪಾತ್ರವಿಲ್ಲ ಎಂಬಂತೆ ಸ್ವಂತಪುರಾಣವಾಚನಗೋಷ್ಠಿ ನಡೆಸುತ್ತಾ, ಹುಡುಗಿಯರ ಕೈಹಿಡಿದು ಹಸ್ತರೇಖೆ ನೋಡಿ ಭವಿಷ್ಯ ಹೇಳುತ್ತಾ ವಿದ್ಯಾರ್ಥಿನಿಯರ ಎದುರು ಲಘುವಾಗಿ ಮಾತನಾಡುತ್ತಾ ತಮ್ಮ ಅವಿವೇಕವನ್ನು ಪ್ರದರ್ಶಿಸುತ್ತಿದ್ದ ಹಾಗೂ ಗೈಡ್ ನೋಡಿ ಪಾಠ ಮಾಡುವ ಮೇಷ್ಟರಿಂದ ಏನನ್ನು ತಾನೆ ನಿರೀಕ್ಷಿಸಲಾದೀತು? ವಿದ್ಯಾರ್ಥಿಗಳು ಮುಂದೊಂದು ದಿನ ತನ್ನ ಅಧ್ಯಾಪಕರನ್ನು ಃಏಗೆ ನೋಡಬಹುದು ಎನ್ನುವುದಕ್ಕೆ ಈ ಚಿತ್ರಣ ಉತ್ತಮ ನಿದರ್ಶನವಾಗಿದೆ. ಅಧ್ಯಾಪಕನ ಬದುಕಿನ ರೀತಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಲ್ಲದು ಎನ್ನುವ ಅರಿವಿಲ್ಲದ ಅಧ್ಯಾಪಕರ ಸಮೂಹವನ್ನು ಇಲ್ಲಿ ನೋಡಬಹುದು. ಸಾಮಾನ್ಯ ಬರಹಗಳಲ್ಲಿ ಅಧ್ಯಾಪಕರಲ್ಲಿಲ್ಲದ ಗುಣಗಳನ್ನು ಆರೋಪಿಸಿ ಹೊಗಳಿ ಬರೆಯುವ ರೂಢಿಯಿದೆ. ಆದರೆ ಸತ್ಯನಾರಾಯಣರು ಇನ್ನೊಂದು ಮುಖದ ದರ್ಶನ ಮಾಡಿಸಹೊರಟಿದ್ದಾರೆ.

ಮೇಷ್ಟ್ರು ಪುರಾಣದ ಜೊತೆಗೆ ಬಾಲ್ಯದ ಇತರ ಅನುಭಗಳನ್ನು ಸತ್ಯನಾರಾಯಣ ಇಲ್ಲಿ ಹಂಚಿಕೊಂಡಿದ್ದಾರೆ. ಹಾಸ್ಟೆಲ್ ಬದುಕಿನ ಚಿತ್ರಣ ಸಿನಿಮಾ ಹುಚ್ಚು, ಬೆಂಕಿದೆವ್ವ, ಕಡ್ಲೆಕಾಯಿ ಕಲ್ಲಂಗಡಿ ಕದ್ದದ್ದು, ಬಾಂಬ್ ಮಾಡಿದ್ದು, ಜಾತ್ರೆಯಲ್ಲಿ ಚಂದಾ ವಸೂಲಿ ಮಾಡಿದ್ದು, ಕದ್ದು ಸಿಗರೇಟು ಸೇದಿದ್ದು, ರಾಜಕೀಯ ಪಕ್ಷದ ರ‍್ಯಾಲಿಗೆ ಲಾರಿ ಪ್ರವಾಸ ಮಾಡಿದ್ದು ಹೊಟೇಲ್ ಮಂಜಣ್ಣನ ಒಡನಾಟ ಹೀಗೆ ಬಾಲ್ಯವನ್ನು ಇವೆಲ್ಲವುದರ ನಡುವೆ ನೆನಪಿಸಿಕೊಳ್ಳುತ್ತಾರೆ. ಹುಡುಗಾಟದ ದಿನಗಳಲ್ಲಿ ತಾನೂ ಭ್ರಷ್ಟನಾದ ಸಾಧ್ಯತೆಗಳನ್ನು ವಿವರಿಸಲು ಹಿಂಜರಿಯುವುದಿಲ್ಲ. ಅಗಾಧವಾದ ಜೀವನಾನುಭವ ಹೇಗೆ ಗಟ್ಟಿಯಾದ ಬದುಕನ್ನು ಕಟ್ಟಿಕೊಡುತ್ತದೆ ಎನ್ನುವುದಕ್ಕೆ ಈ ಸಂಕಥನ ಸಾಕ್ಷಿಯಾಗಿದೆ. ಹೇಳಬೇಕೆನ್ನಿಸಿದ್ದನ್ನು ನೇರವಾಗಿ ಹೇಳಿಯೇ ಬಿಡುವ ಸತ್ಯನಾರಾಯಣರ ಮನೋದಾರ್ಷ್ಟ್ಯ ಅಪರೂಪದ್ದು. ಬರಹಗಾರನ ತುಡಿತವೇ ಅಂತಹದ್ದು. ಕುವೆಂಪು ಹೇಳುವಂತೆ ‘ಹೇಳಿದರೆ ಹಾಳಾಗುವುದೋ ಈ ಅನುಭವದ ಸವಿಯು ಹೇಳದಿದ್ದರೆ ತಾಳಲಾರನೋ ಕವಿಯು’

ಈ ಸಂಕಥನ ಇಲ್ಲಿಗೇ ನಿಲ್ಲದೇ ಮುಂದಿನ ದಿನಗಳಲ್ಲಿ ಜೀವನಾನುಭವದ ಚಿತ್ರಣಗಳು ಸತ್ಯನಾರಾಯಣರ ಲೇಖನಿಯಿಂದ ಮೂಡಿಬರಲಿ ಎಂದು ಆಶಿಸುತ್ತೇನೆ.

Monday, November 02, 2009

ಡಾ.ರಾಜ್ ಗೇ ಗುದ್ದು!

ಆಗ


ಕನ್ನಡದ ಕಣ್ಮಣಿ ರಸಿಕರರಾಜ

ನಟಸಾರ್ವಭೌಮ ಪದ್ಮಭೂಷಣ

ಡಾ.ರಾಜಕುಮಾರ್

ನಾಯಕರಾಗಿ

ನೂರಾರು ಖಳನಾಯಕರ

ಮೂತಿಗೇ ಗುದ್ದಿದ್ದರು.



ಈಗ

ಪೋಸ್ಟಾಫೀಸಿನವರು

ನಿತ್ಯವೂ ಗುದ್ದುತ್ತಿದ್ದಾರೆ

ರಾಜ್ ಮುಖದ (ಸ್ಟ್ಯಾಂಪಿನ) ಮೇಲೆ!