Monday, July 06, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 19

ಚೌತಿ ಚಂದ್ರ ಮತ್ತು ಕಳ್ಳತನದ ಆರೋಪ
ಗಣೇಶ ಚೌತಿಯ ದಿನ ಚಂದ್ರನನ್ನು ನೋಡಿದರೆ, ನೋಡಿದವರ ಮೇಲೆ ವೃಥಾ ಕಳ್ಳತನದ ಆರೋಪಗಳು ಬರುತ್ತವೆ, ಅವರಿಗೆ ಕಷ್ಟಗಳು ಎದುರಾಗುತ್ತವೆ ಎಂಬೆಲ್ಲಾ ನಂಬಿಕೆಗಳು ಇಂದಿಗೂ ಜನಮಾನಸದಲ್ಲಿ ಇವೆ. ಸ್ವತಃ ಕೃಷ್ಣನೇ ಚೌತಿ ಚಂದ್ರನನ್ನು ನೋಡಿ ಶಮಂತಕ ಮಣಿ ಕದ್ದನೆಂದು ಆರೋಪಕ್ಕೆ ಗುರಿಯಾದ ಕಥೆಗಳನ್ನು ನಾವು ಬಾಲ್ಯದಲ್ಲಿ ಕೇಳಿದ್ದೆವು. ಆದರೆ, ಯಾರ ಭಯವೂ ಇಲ್ಲದೆ, ಅತಿಯಾದ ಹುಡುಗಾಟದಲ್ಲಿ ತೊಡಗಿದ್ದ ನಮಗೆ ಕಳ್ಳತನದ ಆರೋಪ ಹೊರುವ ಭಯವೇ ಇರಲಿಲ್ಲ! ಹೀಗಾಗಿ ಉದ್ದೇಶಪೂರ್ವಕವಾಗಿಯೇ ಪ್ರತಿವರ್ಷವೂ ಚೌತಿಚಂದ್ರನನ್ನು ನೋಡಿ, ನಾವೇನೋ ಕ್ರಾಂತಿ ಮಾಡುತ್ತಿದ್ದೇವೆ ಎಂದು ಖುಷಿಪಡುವ ಸ್ವಭಾವೂ ನಮ್ಮಲ್ಲಿ ಕೆಲವರಿಗಿತ್ತು.
ನಾವು ಎಂಟನೇ ತರಗತಿಯಲ್ಲಿದ್ದಾಗ ಗೌರಿ-ಗಣೇಶ ಹಬ್ಬದ ದಿನದಂದೇ ನಮ್ಮ ಪ್ರೀತಿಯ ಅಜ್ಜ ನಿಧನರಾಗಿದ್ದುದರಿಂದ, ನಮ್ಮ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಮಾಡುವುದನ್ನು ಬಿಟ್ಟು ಬಿಟ್ಟಿದ್ದೆವು. ಮತ್ತೆ ಯಾವಾಗಲಾದರೂ ಆ ಹಬ್ಬದ ದಿನದಂದೇ ಮನೆಯಲ್ಲಿ ಏನಾದರು ಜನಿಸಿದರೆ, ಅಂದರೆ, ಯಾರಿಗಾದರು ಮಗು ಹುಟ್ಟುವುದು, ಹಸು ಅಥವಾ ಎಮ್ಮೆ ಕರು ಹಾಕುವುದು ಮಾಡಿದರೆ ಹಬ್ಬ ಮಾಡುವುದನ್ನು ಮತ್ತೆ ಪುನರಾರಂಭಿಸಬಹುದೆಂದು ಒಂದು ನಂಬಿಕೆಯಿದೆ. ಈ ನಂಬಿಕೆಯಿಂದಾಗಿ ಸುಮಾರು ಹತ್ತು ವರ್ಷಗಳ ಕಾಲ ನಮ್ಮ ಮತ್ತು ನಮ್ಮಜ್ಜನ ಅಣ್ಣತಮ್ಮಂದಿರ ಮನೆಗಳಲ್ಲೂ ಗೌರಿ-ಗಣೇಶ ಹಬ್ಬವನ್ನು ಮಾಡುತ್ತಿರಲಿಲ್ಲ. ಕೊನೆಗೆ ಒಂದು ವರ್ಷ ಗಣೇಶ ಹಬ್ಬದಂದೇ, ನಮ್ಮ ಚಿಕ್ಕಜ್ಜನ ಮನೆಯಲ್ಲಿ ಹಸುವೊಂದು ಕರು ಹಾಕಿದ್ದರಿಂದ ಹಬ್ಬದ ಆಚರಣೆ ಮತ್ತೆ ಪ್ರಾರಂಭವಾಯಿತು. ಈ ಕಾರಣದಿಂದಾಗಿ, ನಾನು ಹಾಸ್ಟೆಲ್ಲಿನಲ್ಲಿದ್ದಾಗ, ಗೌರಿ-ಗಣೇಶ ಹಬ್ಬಗಳಿಗೆ ರಜವಿದ್ದರೂ ಊರಿಗೆ ಹೋಗುತ್ತಿರಲಿಲ್ಲ.
ಆದರೆ ಬಹುತೇಕ ಹುಡುಗರು ಊರಿಗೆ ಹೋಗಿ ಬರುತ್ತಿದ್ದರಲ್ಲ, ಅವರೆಲ್ಲಾ ಅವರವರ ಮನೆಯಲ್ಲಿ ಮಾಡಿದ ತಿಂಡಿಗಳನ್ನು ತಂದಿರುತ್ತಿದ್ದರು. ಕೆಲವರು ನಮಗೆ ತಾವಾಗಿಯೆ ಕೊಡುತ್ತಿದ್ದರು. ಆದರೂ ‘ಕದ್ದು ತಿನ್ನುವ ಬೆಲ್ಲಕ್ಕೆ ರುಚಿ ಜಾಸ್ತಿ’ ಎನ್ನುವ ಹಾಗೆ, ನಾವೆಲ್ಲಾ ಊರಿಗೆ ಹೋಗಿ ಬಂದವರ ಪೆಟ್ಟಿಗೆಳನ್ನು ಯಾರಿಗೂ ತಿಳಿಯದಂತೆ ತೆಗೆದು ತಿಂಡಿ ಮಾತ್ರ ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದೆವು. ಈ ರೀತಿಯ ಕಳ್ಳತನವನ್ನು ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮಾತ್ರ ಮಾಡುತ್ತಿದ್ದರು. ಪರಂಪರೆಯಂತೆ ಆ ವರ್ಷವೂ ನಾವು ಮುಂದುವರೆಸಿದ್ದೆವು. ಐದಾರು ಹುಡುಗರ ಪೆಟ್ಟಿಗೆಗಳ ಬೀಗಗಳನ್ನು ಹೇಗೋ ತೆಗೆದು ತಿಂಡಿಯನ್ನು ಕದ್ದು ಮಜಾ ಉಡಾಯಿಸಿದ್ದೆವು. ಆದರೆ ಒಂದೆರಡು ದಿನಗಳಲ್ಲಿ ಒಂಬತ್ತನೇ ತರಗತಿಯ ‘ಹೇಮಂತ ಎನ್ನುವ ಹುಡುಗನ ಪೆಟ್ಟಿಗೆಯಲ್ಲಿ ಐವತ್ತು ರೂಪಾಯಿ ಕಳ್ಳತನವಾಗಿದೆ’ ಎಂಬ ಸುದ್ದಿ ಹರಡಿಬಿಟ್ಟಿತ್ತು. ನಾವು ತಿಂಡಿಯನ್ನು ಸೂರೆ ಹೊಡೆದ ಪೆಟ್ಟಿಗೆಯಲ್ಲಿ ಅವನದೂ ಒಂದಾಗಿತ್ತು. ಅದರಲ್ಲಿ ತುಂಬಾ ಬೇಯಿಸಿದ ಕಡಲೆಕಾಯಿಗಳಿದ್ದು, ಅವನ್ನು ಒಂದೂ ಬಿಡದಂತೆ ನಾವು ತಿಂದು ಹಾಕಿದ್ದೆವು. ನಾವು ಹಾಗೆ ತಿಂದದ್ದಕ್ಕೆ ನಮ್ಮನ್ನು ಹೆದರಿಸಲು ಹಾಗೆ ಸುದ್ದಿ ಹಬ್ಬಿಸಿರಬಹುದೆಂದು ನಾವು ಅಂದುಕೊಂಡಿದ್ದೆವು.
ನಮ್ಮ ಈ ಕಳ್ಳಕೂಟದಲ್ಲಿ ಒಂಬತ್ತನೇ ತರಗತಿಯಲ್ಲಿದ್ದ ಶಿವೇಗೌಡ ಎಂಬ ಮಹಾನ್ ಕುಳ್ಳನೂ ಇದ್ದ! ಈತ ಈಗ ಹಲವಾರು ಚಿತ್ರಗಳಲ್ಲಿ ನಟಿಸಿರುವ ಕಲಾವಿದ. ಕೇವಲ ಮೂರು ಅಡಿ ಎತ್ತರವಿದ್ದ ಆತನನ್ನು ಯಾರು ಬೇಕಾದರೂ ಎತ್ತಿ ಕೊಂಡೊಯ್ಯಬಹುದಾಗಿತ್ತು. ನಾವು ಆತನನ್ನು ಚಿಕ್ಕ ಹುಡುಗನೆಂದೋ, ಅಥವಾ ಕಡ್ಲೆಕಾಯಿಯ ಮೇಲೆ ನಮಗಿದ್ದ ದುರಾಸೆಯಿಂದಲೋ ಅವನಿಗೆ ತುಂಬಾ ಕಡಿಮೆ ಕಡ್ಲೆಕಾಯಿಗಳನ್ನು ಕೊಟ್ಟಿದ್ದೆವು. ಆ ಹೊಟ್ಟೆಉರಿಯಿಂದ ಆತ, ನಾವು ಪೆಟ್ಟಿಗೆ ಬೀಗ ತೆಗೆದಿದ್ದನ್ನು ಹೇಮಂತನಿಗೆ ತಿಳಿಸಿಬಿಟ್ಟಿದ್ದ. ನಾವೇ ತೆಗೆದಿದ್ದೆಂದು ತಿಳಿದ ತಕ್ಷಣ ಆ ಹುಡುಗ ನೇರವಾಗಿ ವಾರ್ಡನ್‌ಗೇ ದೂರು ಕೊಟ್ಟುಬಿಟ್ಟ. ಶುರುವಾಯಿತು ನೋಡಿ, ವಿಚಾರಣೆ!
ಜಟಗೊಂಡ ಅವರು ಕೈಯಲ್ಲಿ ದೊಣ್ಣೆ ಹಿಡಿದು ನಮ್ಮನ್ನು ಪ್ರಶ್ನಿಸುತ್ತಿದ್ದರು. ನಾವೇನು ಸುಳ್ಳು ಹೇಳಲಿಲ್ಲ. ‘ಕೇವಲ ತಿಂಡಿ ಆಸೆಗಾಗಿ ಪೆಟ್ಟಿಗೆಗಳನ್ನು ತೆಗೆದಿದ್ದು, ಕೇವಲ ತಿಂಡಿಯನ್ನು ಮಾತ್ರವೇ ತಿಂದಿದ್ದೇವೆ ದುಡ್ಡನ್ನು ನಾವು ಕದ್ದಿಲ್ಲ’ ಎಂದು ನಿಜವನ್ನೇ ಹೇಳಿದ್ದೆವು. ‘ಮೊನ್ನೆ ನಾವು ಚೌತಿ ಚಂದ್ರನನ್ನು ನೋಡಿದ್ದರಿಂದ, ಇಂದು ನಮ್ಮ ಮೇಲೆ ವೃಥಾ ಆರೋಪ ಬಂದಿದೆ. ನಾವು ಕದ್ದಿಲ್ಲ’ ಎಂಬುದು ನಮ್ಮ ವಾದವಾಗಿತ್ತು. ನಾವು ಕಳ್ಳರಲ್ಲ ಎಂಬುದು ವಾರ್ಡನ್‌ಗೂ, ಹೇಮಂತನಿಗೂ ಗೊತ್ತಿತ್ತು. ಆದರೆ ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿ ಹೋಯಿತು ಅನ್ನುತ್ತಾರಲ್ಲ ಹಾಗಾಯಿತು. ಯಾವುದೂ ಇತ್ಯರ್ಥವಾಗದೆ, ವಾರ್ಡನ್ ವಿಚಾರಣೆಯನ್ನು ಒಂದು ದಿನಕ್ಕೆ ಮುಂದೂಡಿದರು. ಹಾಗೆ ಒಂದು ದಿನ ಮುಂದೂಡಲು ನಮಗೆ ಒಂದು ಬಲವಾದ ಕಾರಣ ಸಿಕ್ಕಿತ್ತು. ಹೇಮಂತ ತನ್ನ ಐವತ್ತು ರೂಪಾಯಿ ನೋಟಿನ ಮೇಲೆ ಗಣಪತಿಯ ಚಿತ್ರ ಬರೆದಿದ್ದಾಗಿ ಹೇಳಿದ್ದ. ಅದನ್ನೇ ಮುಂದು ಮಾಡಿಕೊಂಡು, ಹುಡುಗರೆಲ್ಲರ ಪೆಟ್ಟಿಗೆಯನ್ನು ಶೋಧಿಸುವುದು ಹಾಗೂ ಛೇರ್ಮನ್ನರ ಅಂಗಡಿ ಮತ್ತು ಮಂಜಣ್ಣನ ಹೋಟೆಲ್ಲಿನಲ್ಲಿ ಅಂಥ ನೋಟೇನಾದರು ಬಂದಿತ್ತೆ ಎಂದು ಕೇಳುವುದು ಎಂಬ ತೀರ್ಮಾನವನ್ನು ವಾರ್ಡನ್ ಪ್ರಕಟಿಸಿದ್ದರು.
ಮರುದಿನ ಇನ್ನೂ ಹುಡುಗರ ಪೆಟ್ಟಿಗೆಗಳನ್ನು ಶೋಧಿಸುವ ಮುನ್ನವೇ, ಹೇಮಂತನ ಪೆಟ್ಟಿಗೆಯ ಕೆಳಗೇ ಆ ನೋಟು ಸಿಕ್ಕಬೇಕೆ! ಪೆಟ್ಟಿಗೆ ಚೆಕ್ ಮಾಡುತ್ತಾರೆಂಬ ಭಯಕ್ಕೆ ಕಳ್ಳ ಅಲ್ಲಿ ಹಾಕಿದ್ದಿರಬಹುದು ಎಂಬ ಅನುಮಾನ ಆಗ ಎಲ್ಲರಿಗೂ ಬಂದಿತ್ತು. ಆದರೆ ಹೇಮಂತ ‘ಸಾರ್ ನಾನು ಊರಿನಿಂದ ಬಂದ ಮೇಲೆ ಪೆಟ್ಟಿಗೆ ಎಲ್ಲವನ್ನೂ ಕ್ಲೀನ್ ಮಾಡಿ ಜೋಡಿಸುವ ಭರದಲ್ಲಿ ಅದು ಕೆಳಗೆ ಬಿದ್ದಿರಬಹುದು’ ಎಂದು ಅನುಮಾನ ವ್ಯಕ್ತಪಡಿಸಿದ್ದರಿಂದ ಆ ವಿಷಯ ಅಲ್ಲಿಗೆ ಮುಕ್ತಾಯವಾಗಿತ್ತು. ಆದರೆ, ನಾವು ಚೌತಿ ಚಂದ್ರನನ್ನು ನೋಡಿದ್ದರಿಂದಲೇ ನಮ್ಮ ಮೇಲೆ ಕಳ್ಳತನದ ಆರೋಪ ಬಂದಿತ್ತು ಎಂಬುದು ಮಾತ್ರ ಅವತ್ತಿಗೆ ಹಾಸ್ಟೆಲ್ಲಿನ ಹಾಗೂ ಸ್ಕೂಲಿನ ಹುಡುಗರ ನಡುವೆ ಯಾವುದೇ ಅನುಮಾನಕ್ಕೆ ಎಡೆಗೊಡದ ಸತ್ಯವಾಗಿತ್ತು!
ಆ ವಿಷಯ ಅಲ್ಲಿಗೆ ಮುಗಿಯಿತು ಎಂದರೆ ತಪ್ಪಾಗುತ್ತದೆ. ಏಕೆಂದರೆ ತಿಂಡಿಕಳ್ಳರಾಗಿದ್ದ ನಮ್ಮ ಗುಂಪಿನ ಐದು ಜನರನ್ನು ವಾರ್ಡನ್ ಕರೆದು, ಬುದ್ಧಿವಾದವನ್ನು ಹೇಳಿದರು. ಆದರೆ ನಮ್ಮ ಜೊತೆಯೇ ಇದ್ದು ಕದ್ದ ತಿಂಡಿ ತಿಂದದ್ದೂ ಅಲ್ಲದೆ, ನಮ್ಮ ಮೇಲೆಯೇ ಚಾಡಿ ಹೇಳಿದ ಕುಳ್ಳ ಶಿವನನ್ನು ಅವರು ಏನೂ ಅನ್ನಲಿಲ್ಲ. ಮೊದಲಿಗೇ ಆತನ ಮೇಲೆ ನಮಗೆ ಸಿಟ್ಟಿತ್ತು. ಈಗ ನಾವು ಕಳ್ಳರಲ್ಲ ಎಂದು ತೀರ್ಮಾನವಾದೊಡನೆ ನಾನು ಮತ್ತು ಇನ್ನೊಬ್ಬ ಸೋಮಶೇಖರ ಎಂಬುವವನು ಸೇರಿಕೊಂಡು, ಕುಳ್ಳ ಶಿವನನ್ನು ಕುಯ್ಯೋ ಮರ್ರೋ ಎನ್ನುವಂತೆ ಹೊಡೆದುಬಿಟ್ಟೆವು. ‘ವಿಶ್ವಾಸ ದ್ರೋಹಿ’, ‘ಮಿತ್ರದ್ರೋಹಿ’ ಎಂದೆಲ್ಲಾ ಆತನನ್ನು ಹೀಯಾಳಿಸಿ, ‘ನಾವು ಹೊಡೆದಿದ್ದನ್ನು ವಾರ್ಡನ್‌ಗೆ ಏನಾದರು ಹೇಳಿದರೆ, ರಾತ್ರಿ ವೇಳೆ ಹಾಸಿಗೆ ಸಮೇತ ಹೊತ್ತುಕೊಂಡು ಹೋಗಿ ಭೂತಯ್ಯನ ಗುಡಿಯ ಬಳಿ ಮಲಗಿಸಿ ಬರುತ್ತೇವೆ’ ಎಂದು ಹೆದರಿಸಿದೆವು.
ಕುಂದೂರುಮಠದ ರಕ್ಷಕ ದೇವರೆಂದು ಭೂತಯ್ಯನನ್ನು ಒಂದು ಕಲ್ಲು ಗುಂಡಿನ ರೂಪದಲ್ಲಿ ಪೂಜಿಸಲಾಗುತ್ತಿತ್ತು. ಅದಕ್ಕೊಂದು ಪುಟ್ಟ ಗುಡಿಯೂ ಇತ್ತು. ಅಲ್ಲಿಗೆ ಹೋಗಲು ಹುಡುಗರು ತುಂಬಾ ಹೆದರುತ್ತಿದ್ದರು. ಅಲ್ಲದೆ ಆಗಾಗ ನಾವು ತಮಾಷೆಗಾಗಿ, ಎಲ್ಲರಿಗಿಂತ ಮೊದಲು ಮಲಗಿ ನಿದ್ದೆ ಮಾಡುತ್ತಿದ್ದ ಕೆಲವರನ್ನು ಹಾಸಿಗೆ ಸಮೇತ ಎತ್ತಿಕೊಂಡು ಹೋಗಿ ಹೊರಗೆ ಮಲಗಿಸಿ, ಆಗಲೂ ಅವರೂ ಎಚ್ಚರಗೊಳ್ಳದಿದ್ದಲ್ಲಿ ಮತ್ತೆ ಎತ್ತಿ ತಂದು ಒಳಗೆ ಮಲಗಿಸಿದ ಉದಾಹರಣೆಗಳಿದ್ದವು. ಭೂತಯ್ಯನ ಗುಡಿಯ ಬಳಿಗೆ ಯಾರನ್ನೂ ಹೊತ್ತುಕೊಂಡು ಹೋಗುವ ಧೈರ್ಯ ನಮಗೂ ಇರಲಿಲ್ಲ. ಆದರೂ ಪುಕ್ಕಲನಾಗಿದ್ದ ಶಿವೇಗೌಡ ನಾವು ಆತನಿಗೆ ಹೊಡೆದಿದ್ದನ್ನು ವಾರ್ಡನ್ ಬಳಿ ಹೇಳುವ ಸಾಹಸಕ್ಕೆ ಕೈಹಾಕಲಿಲ್ಲ.

5 comments:

ರೂpaश्री said...

ಸತ್ಯ ಸರ್,

ಹ್ಹ ಹ್ಹ ಆ ಹುಡುಗಾಟದ ದಿನಗಳು ಬಲು ಮಜ ಅಲ್ವಾ! ಚೌತಿ ಚಂದ್ರನ ನೋಡೋದು ಆಗ ನಮಗೆಲ್ಲಾ ಒಂದ್ ಹಾಬಿ ಆಗಿತ್ತು.
ಇದೆಲ್ಲಾ ನೆನಪಿಟ್ಟುಕೊಂಡು ಬರೆದು ನಮ್ಮೊಂದಿಗೆ ಹಂಚಿಕೊಂಡಿದಕ್ಕೆ ವಂದನೆಗಳು. ನಿಮ್ಮೀ ಲೇಖನದ ಹಿಂದಿನ ಕಂತುಗಳನ್ನು ಓದಿಲ್ಲ, ನಿಧಾನಕ್ಕೆ ಓದುವೆ.

ಅಭಿನಂದನೆಗಳು.

Guruprasad said...

ಹಾ ಹಾ,, ತುಂಬ ಮಜವಾಗಿ ಇದೆ..... ನಮ್ಮ ಸ್ಕೂಲ್ ಡೇಸ್ ನಲ್ಲಿ ನೆಡೆದ ಅನುಭವವನ್ನು ನೆನಪಿಸಿಕೊಂಡು ಸಂತೋಷ ಪಡುವುದೇ ಒಂದು ಮಜಾ....
ತುಂಬ ಚೆನ್ನಾಗಿ ಇದೆ.....

Ittigecement said...

ಸತ್ಯನಾರಾಯಣರೆ....

ಓದುತ್ತ... ಓದುತ್ತ...ನಮ್ಮನ್ನೂ
ನಮ್ಮ ಬಾಲ್ಯಕ್ಕೆ ಕರೆದೊಯ್ದು ಬಿಟ್ರಿ...

ಬಹಳ ಚೆನ್ನಾಗಿದೆ ಆ ನೆನಪುಗಳು... ಹುಡುಗಾಟಿಕೆಗಳು...

ನಿಮ್ಮ ಈ ಪುಸ್ತಕ "ಮೇ ಫ್ಲವರಲ್ಲಿ " ಖರಿದಿಸಿದೆ....

ತುಂಬಾ ಚೆನ್ನಾಗಿದೆ...

ಅಭಿನಂದನೆಗಳು...

umesh desai said...

ಸರ ನಿಜಕ್ಕೂ ಚೆನ್ನಾಗಿದೆ ಬಾಲ್ಯ ಎಷ್ಟು ಚೆಂದ ಅಲ್ಲವೇ

UMESH VASHIST H K. said...

Nimma anubhavagalu thuba chennagide saar, punyavantharu, namma anubhava hanchikollokke time illa saar.