Tuesday, March 30, 2010

ಶಬ್ದಗಾರುಡಿಗ ಬೇಂದ್ರೆಯವರ ಮೂರು-ಮೂರೇ ಸಾಲುಗಳು

ಬದುಕಿನಲ್ಲಿ ಬೆಂದರೆ ಬೇಂದ್ರೆಯಾಗುತ್ತಾನಂತೆ! ಹಾಗೆ ಬದುಕಿನುದ್ದಕ್ಕೂ ಬೇಯುತ್ತಲೇ ಇದ್ದ ಬೇಂದ್ರೆಯವರನ್ನು ವಿಶೇಷ ಕವಿಯಾಗಿ ಕನ್ನಡ ಎಂ.ಎ. ಮಾಡುವಾಗ ಓದಬೇಕಾಯಿತು. ಆಗಿನ ನನ್ನ ದರದೃಷ್ಟವೆಂದರೆ ಬೇಂದ್ರೆಯವರ ಯಾವುದೇ ಸಾಹಿತ್ಯಕೃತಿ ಮರುಮುದ್ರಣವಾಗಿರಲಿಲ್ಲ. ಹಳೆಯ ಪ್ರತಿಗಳು ಸಿಗುತ್ತಿರಲಿಲ್ಲ. ಆದ್ದರಿಂದ ವಿಧಿಯಿಲ್ಲದೆ, ವಿ.ವಿ.ಯವರು ಪೂರೈಕೆ ಮಾಡಿದ್ದ ಪಾಠಗಳಲ್ಲಷ್ಟೇ ಬೇಂದ್ರೆಯವರನ್ನು ಓದಬೇಕಾಯಿತು. ಹಾಗಾಗಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೇನೋ! ಏಕೆಂದರೆ ಬೇಂದ್ರೆಯವರ ಸಾಹಿತ್ಯವನ್ನು ಮೂಲದಲ್ಲೇ ಓದಬೇಕು ಎಂಬ ‘ಹೆಬ್ಬಯಕೆ’ ನನ್ನಲ್ಲಿ ಆಗಿನಿಂದಲೂ ಮೂಡಿಬಿಟ್ಟಿತು. ಅವರ ಸಮಗ್ರ ಕಾವ್ಯವನ್ನು ಸೇರಿಸಿ ‘ಔದುಂಬರ ಗಾಥೆ’ ಎಂಬ ಹೆಸರಿನಲ್ಲಿ ಆರು ಸಂಪುಟಗಳು ಪ್ರಕಟವಾದಾಗ ನನ್ನ ಆಸೆ ಈಡೇರುವ ಕಾಲ ಬಂದಿತೆಂದು ಸಂತೋಷವಾಯಿತು. ಹೀಗೆ ನಮ್ಮ ಗ್ರಂಥಾಲಯಕ್ಕೆ ಬಂದ ಆರು ಸಂಪುಟಗಳನ್ನು ನನ್ನ ಸುಪರ್ದಿನಲ್ಲಿಯೇ ಇಟ್ಟುಕೊಂಡು ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ಮೊನ್ನೆ ಬಿ.ಎ. ಹುಡುಗರಿಗೆ ಬೇಂದ್ರೆಯವರ ಬಗ್ಗೆ ಅಸೈನ್‌ಮೆಂಟ್ ಕೊಟ್ಟಿದ್ದರೆಂದು ಕಾಣುತ್ತದೆ. ಇದ್ದಕ್ಕಿದ್ದಂತೆ ಆ ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಯಿತು. ಅವರೆಲ್ಲಾ ಬರೆದುಕೊಂವೋ ಕ್ಸೆರಾಕ್ಸ್ ಮಾಡಿಸಿಕೊಂಡೋ ಹೋದ ನಂತರ ಆರು ಸಂಪುಟಗಳೂ ನನ್ನ ಟೇಬಲ್ಲಿನ ಮೇಲೆ ಬಿದ್ದಿದ್ದವು. ನಾನು ಅವುಗಳ ಮೇಲೆ ನೆನ್ನೆಯಿಂದ ಕಣ್ಣಾಡಿಸುತ್ತಲೇ ಇದ್ದೆ. ಆಗ ಈ ಮೂರು ಮೂರು ಸಾಲಿನ ಪುಟ್ಟ ಪುಟ್ಟ ಪದ್ಯಗಳು ನನ್ನ ಗಮನ ಸೆಳೆದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಎನ್ನಿಸಿ ಇಲ್ಲಿ ಬ್ಲಾಗಿಗೇರಿಸಿದ್ದೇನೆ. ಓದಿ ಬೇಂದ್ರೆಯವರ ಕಾವ್ಯಾಮೃತದ ಕೆಲವು ಹನಿಗಳನ್ನು. ಇದು ಅವರ ಹೆಚ್ಚಿನ ಸಾಹಿತ್ಯವನ್ನು ಓದುವಂತೆ ನಿಮ್ಮಲ್ಲಿ ಪ್ರೇರೇಪಿಸಿದರೆ ನಾನು ಧನ್ಯ.
1
ರಸವೆ ಜನನ
ವಿರಸ ಮರಣ
ಸಮರಸವೇ ಜೀವನ
2
ಒಂದೇ ಒಂದು ರಾಡಿ
ಬರಿದು ಓರಂದ ಇರದು ಮಕರಂದ
ರಸವು ಹುಡಿಯ ಜೋಡಿ
3
ಆತನು!
ನೂಲು ನೂತನು
ಯಾವಾತನು
4
ಆ ಮೈ ಕತ್ತಲು ನಾಮ
ಈ ಮೈ ಬೆಳಕು ರೂಪ
ದೇಹರೂಪ
5
ಬೆಣ್ಣೆಯೊಳಗ ಬಟ್ಟು ಅದ್ದಿ ಮೂಗಿಗೆ
ಹಚ್ಚಿಗೊಂಬಾವ್ರು ಬಹದ್ದೂರ ಜನಾ!
ಇದು ಮಾತಿನ ಪವಾಡಲ್ಲ, ಮುಖವಾಡ
6
ದಶಕಂಠಗಿಲ್ಲ ಆರಾಮ.
ಸಂಹಾರ ವಿಶ್ರಾಮ,
ಜಯದ ವಿಜಯದ್ವಾರ- ಜಯ ವಿಜಯ ಆಕಾರ
7
ಸಾಗು ಮಾಗು ಗುರುಪಾದ
ಸೇವಕ ನಾಗು ಹಾಗೂ ಹೀಗೂ
ಮಂಗಾಟ ನಿಲ್ಲಿಸು ಹನುಮಂತನಾಗು
8
ಕತ್ತಿಗೆ ಹಾಕೋದಿಲ್ಲ ನತ್ತು
ಮೂಗಿಗೆ ಇರೋದಿಲ್ಲ ಮುತ್ತು
ಹರಕು ಮುರುಕ ಕಳ್ಳಗತ್ತು
9
ಆರು ಏಳು ಎಂಟು
ಹೊರಗೊಂದು ಒಳಗೊಂದು
೨೮ ಉಂಟು ಹಾಂಗೂ ಹೀಂಗೂ
10
ನಾನೆಲ್ಲಿ ಹೋಗಿದ್ದೆ?
ನಿಮ್ಮ ಹೃದಯದೊಳಗಿದ್ದೆ
ವಿವೇಕ ಅಂತ ಹೊರಗ ಬಂದೆ
11
ಯಾವುದರ ಬೋಧ ಇಲ್ಲವೋ
ಅದರ ಶೋಧವು
ಸಫಲವೆನಿಸಲಾರದು
12
ಕಿಲಿಕಿಲಿ ಹಕ್ಕಿಯ
ಕಲಕಲರವದಲಿ
ಧ್ವನಿಸುವ ಬಗೆಯಾಕೆ
13
ಅಂಚೆ ಏರಿ ನೀರಿನಾಕೆ
ಗಾಳಿಯಲ್ಲಿ ಸುಳಿದಳೋ
ಬೆಳಕಿನಲ್ಲಿ ಬೆಳೆದಳು
14
ಕಾಮದೊಳಗೆ ಹೊತ್ತಿದೆ ಪ್ರೇಮಾ
ಅದಕ್ಕಾವ ನೇಮಾ ಗೀಮಾ
ಅದು ಬಾಳೋ ಸೀಮಾ ನಿತ್ಯಾನಂದ ಧಾಮಾ
15
ಬೀರ ನೆತ್ತರ ಸವಿದು
ಸುರುಚಿ ಸುಮಧುರವೆಂದೆ
ನಿನ್ನ ಹನಿಯೇ ಬೇರೆ ತಣಿವಿನರಸ
16
ಉಂಡು ನೈವೇದ್ಯದ ಮುದ್ದೀ
ಬ್ರಹ್ಮಚೈತನ್ಯರ ಶುದ್ಧಿ
ಹಂಚ್ಯಾಡು ಶ್ರೀರಾಮ ಋದ್ಧೀ
17
ಇದು ಬುದ್ಧನ ಅವತಾರ
ಜೀವನದುದ್ಧಾರ
ಶೂನ್ಯದ ಹೊಲದಲಿ ಬೆಳೆಯುವ ಆತ್ಮದಶೃಂಗಾರ

4 comments:

PARAANJAPE K.N. said...

ಬೆ೦ದ್ರೆಯವರ ಮೂರು ಸಾಲುಗಳಲ್ಲಿ ಅಡಗಿರುವ ಅರ್ಥವಿಸ್ತಾರ, ಆಳ ಹರಹು ತು೦ಬಾ ದೊಡ್ಡದು. ಒ೦ದಷ್ಟು
ಮೂರು ಸಾಲು ಪದ್ಯಗಳನ್ನು ಹ೦ಚಿಕೊ೦ಡಿದ್ದೀರಿ. ಓದಿ ಖುಷಿಯಾಯಿತು.

ಸಾಗರದಾಚೆಯ ಇಂಚರ said...

ಬೇಂದ್ರೆ ಕರುನಾಡು ಕಂಡ ಹೆಮ್ಮೆಯ ಕವಿ
ಅವರಿಗೆ ಅವರೇ ಸಾಟಿ

ಬಿಸಿಲ ಹನಿ said...

ಬೇಂದ್ರೆಯವರ ಈ ಚುಟುಕುಗಳು ಒಂದಕ್ಕಿಂತ ಒಂದು ಚನ್ನಾಗಿವೆ. ಬೇಂದ್ರೆಯವರ “ರಸವೇ.......” ಎಂಬ ಮೂರು ಸಾಲಿನ ಪದ್ಯ ಬಿಟ್ಟರೆ ಬೇರೆ ಇಂಥ ಮೂರು ಸಾಲಿನ ಚುಟುಕುಗಳನ್ನು ಬರೆದಿದ್ದರೆಂದು ಗೊತ್ತಿರಲಿಲ್ಲ. ಮಾಹಿತಿಗೆ ಧನ್ಯವಾದಗಳು.

V.R.BHAT said...

ಬೇಂದ್ರೆಗೆ ಸಾಟಿ ಬೇಂದ್ರೆಯವರೇ ವಿನಃ ಬೇರೆ ಇಲ್ಲ, ಶಬ್ಧಗಳ ಜೊತೆ ಅವರು ಸರಸವಾಡುತ್ತಿದ್ದರು, ಬೇಂದ್ರೆಯವರ ಬಗ್ಗೆ ಈಗಾಗಲೇ ಬರೆದಿದ್ದೇನೆ ನನ್ನ 'ಕಾವಿ ನೆನಪುಗಳು' ಮಾಲಿಕೆಯಲ್ಲಿ, ಮಾಹಿತಿಯುಕ್ತ ಬರಹ, ತಮಗೂ, ನಮ್ಮ ಬೇಂದ್ರೆಜೀಗೂ ನಮನ