Friday, June 11, 2010

ಮನೆ ನೋಡಿದರೆ ಬಡವರು, ಮನಸ್ಸು ನೋಡಿದರೆ ಸಂಪನ್ನರು : ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ

ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮಕ್ಕೆ ಸುಮಾರು ಎಂಟನೂರೈವತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಬಸವನ ಕಾಲಕ್ಕೆ ಆ ಊರಿನಲ್ಲಿ ಮಾರಯ್ಯ ಮತ್ತು ಲಕ್ಕಮ್ಮ ಎಂಬ ದಂಪತಿಗಳಿದ್ದರು. ಅನನ್ಯ ಶಿವಭಕ್ತರಾಗಿದ್ದ ಅವರಿಬ್ಬರೂ ಊರಿನಲ್ಲಿದ್ದ ಅಮರೇಶ್ವರ (ಶಿವ) ದೇವರ ಸೇವೆಯಲ್ಲಿ ನಿರತರಾಗಿದ್ದರು. ನಾಡಿನಾದ್ಯಂತ ಪ್ರಸರಿಸುತ್ತಿದ್ದ ಕಲ್ಯಾಣದ ಸಮಾಚಾರ, ಬಸವಣ್ಣ ಕೀರ್ತಿ ಮಾರಯ್ಯ ದಂಪತಿಗಳಿಗೂ ತಲುಪಿತು. ಮಹಾನ್ ಶಿವಭಕ್ತನಾದ ಬಸವಣ್ಣನನ್ನು ಕಾಣುವ ದಂಪತಿಗಳಿಬ್ಬರಿಗೂ ಅತಿಯಾಗಿ ಒಂದೇ ಚಿತ್ತದಿಂದ ಕಲ್ಯಾಣದ ದಾರಿ ಹಿಡಿದು ನಡದೇಬಿಟ್ಟರು. ನೇರವಾಗಿ ಮಹಾಮನೆಗೆ ಬಂದು ಅಲ್ಲಿ ಶರಣರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅನ್ನದಾಸೋಹದ ನಂತರ ಆ ಜಾಗದಲ್ಲಿ ಚೆಲ್ಲಾಡಿ ಹೋಗಿದ್ದ ದವಸ ಧಾನ್ಯಗಳನ್ನು ಗುಡಿಸಿ, ಮನೆಗೆ ತಂದು ಸ್ವಚ್ಛಗೊಳಿಸಿ, ಅದರಿಂದ ತಮ್ಮ ಮನೆಯಲ್ಲೂ ಅನ್ನ ದಾಸೋಹ ನಡೆಸತೊಡಗಿದರು. ಶಿವನ ಅನುಗ್ರಹದಿಂದ ಅವರ ಇಚ್ಛೆಯ ಅನ್ನ ದಾಸೋಹ ಕಾರ್ಯಕ್ರಮ ಯಾವುದೇ ತೊಂದರೆಯಿಲ್ಲದೆ ನಡೆದುಕೊಂಡು ಬರುತ್ತಿತ್ತು. ಆಯ್ದ ಅಕ್ಕಿಯಿಂದ ಅನ್ನ ದಾಸೋಹ ನಡೆಸುತ್ತಿದ್ದ ದಂಪತಿಗಳಿಬ್ಬರಿಗೂ ಆಯ್ದಕ್ಕಿ ಎಂಬುದು ಅನ್ವರ್ಥ ನಾಮವಾಯಿತು. ಮಹಾಮನೆಯಲ್ಲಿ ಶರಣರೆಲ್ಲರೂ ಅವರನ್ನು ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ಎಂದೇ ಗುರುತಿಸುತ್ತಿದ್ದರು. ಶಿವಭಕ್ತರಾದ ಆ ದಂಪತಿಗಳಿಗೆ ಅದೂ ಸಂತೋಷದ ವಿಚಾರವೇ ಆಗಿತ್ತು.
ಹೀಗಿರಲಾಗಿ ಒಮ್ಮೆ ಬಸವಣ್ಣನಿಗೆ, ಮಾರಯ್ಯ ದಂಪತಿಗಳ ನಿಷ್ಕಲ್ಮಶ ಕಾಯಕ ಭಕ್ತಿಯನ್ನು ಜಗತ್ತಿಗೆ ತೋರಿಸಬೇಕು ಎನ್ನಿಸಿತು. ಒಂದು ದಿನ ಒಂದಷ್ಟು ಅಕ್ಕಿಯನ್ನು ಅಂಗಳದಲ್ಲಿ ಚೆಲ್ಲಿಸಿ ಏನೂ ತಿಳಿಯದವನಂತೆ ಬಸವಣ್ಣ ಸುಮ್ಮನಿದ್ದನು. ಎಂದಿನಂತೆ ಕೆಲಸ ಮುಗಿಸಿ ಬಂದ ಮಾರಯ್ಯ ಅಂಗಳವನ್ನೆಲ್ಲಾ ಗುಡಿಸಿ, ಚೆಲ್ಲಿದ್ದ ಅಕ್ಕಿಯನ್ನೆಲ್ಲಾ ಆರಿಸಿ ಮನೆಗೆ ತೆಗೆದುಕೊಂಡು ಹೋದನು. ಎಂದಿಗಿಂತ ಅಕ್ಕಿ ತುಸು ಹೆಚ್ಚೇ ಇರುವುದು ಲಕ್ಕಮ್ಮನ ಗಮನಕ್ಕೆ ಬಂತು. ಅದರಿಂದ ಅವಳಿಗೆ ಖುಷಿಯಾಗದೇ ಗಂಡನ ಮೇಲೆ ಕೋಪವುಂಟಾಯಿತು. ಜೊತೆಗೆ ಬಸವಣ್ಣನ ಮೇಲೆ ಅನುಮಾನವೂ ಬಂತು. ಇದು ಬಸವನ ಕೆಲಸವೇ ಎಂಬುದು ಅವಳ ಮನಸ್ಸಿಗೆ ಹೊಳೆದು ಹೋಗಿತ್ತು. ಗಂಡನಿಗೆ ‘ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಇದು ನಿಮ್ಮ ಮನವೋ, ಬಸವಣ್ಣನ ಅನುಮಾನದ ಚಿತ್ತವೋ?’ ಎಂದು ಪ್ರಶ್ನಿಸುತ್ತಾಳೆ. ಗಂಡನಿಗೂ ಇದು ಬಸವನ ಕೆಲಸ ಎಂಬುದು ಮನವರಿಕೆಯಾಯಿತು. ಬಸವಣ್ಣ ನಮ್ಮನ್ನು ಪರೀಕ್ಷಿಸಲೆಂದೇ ಈ ಕೆಲಸ ಮಾಡಿದ್ದಾನೆ ಎಂಬುದೂ ಗೊತ್ತಾಯಿತು. ಲಕ್ಕಮ್ಮ ಮುಂದುವರೆದು ‘ಆಸೆ ಎಂಬುದು ರಾಜರಿಗೆ ಸರಿ. ಶಿವಭಕ್ರಿಗೇಕೆ ಬೇಕು? ಇಷ್ಟೊಂದು ಅಕ್ಕಿಯಾಸೆ ನಮಗೇಕೆ? ಇದನ್ನು ಶಿವನು ಒಪ್ಪುವುದಿಲ್ಲ. ಇದರಿಂದ ಮಾಡಿದ ಪ್ರಸಾದವನ್ನೂ ಶಿವನು ಒಪ್ಪುವುದಿಲ್ಲ. ನಮಗೆ ನಿತ್ಯ ದೊರೆಯುತ್ತಿದ್ದಷ್ಟೇ ಅಕ್ಕಿ ಸಾಕು. ತೆಗೆದುಕೊಂಡು ಹೋಗಿ ಇದನ್ನು ಅಲ್ಲಿಯೇ ಚೆಲ್ಲಿ ಬನ್ನಿ’ ಎಂದು ಗಂಡನಿಗೆ ಒಪ್ಪಿಸಿದಳು. ಹೆಂಡತಿಯ ಯೋಚನೆಗೆ ತಲೆದೂಗಿದ ಮಾರಯ್ಯ ಹೆಚ್ಚಿನ ಅಕ್ಕಿಯೊಂದಿಗೆ ಹೊರಟುನಿಂತ. ಆಗ ಲಕ್ಕಮ್ಮನಿಗೆ ‘ತಮ್ಮನ್ನು ತೂಗಬೇಕೆನಿಸಿದ ಬಸವಣ್ಣನನ್ನೇ ಮನೆಗೆ ಪ್ರಸಾದಕ್ಕೆ ಕರೆಯಬೇಕೆನ್ನಿಸಿ ಗಂಡನಿಗೆ ‘ಬಸವನಿಗೆ ಹೇಳಿ. ಬೇಕಾದರೆ ತನ್ನ ಸುತ್ತಣ ಜಂಗಮರನ್ನೆಲ್ಲಾ ಕರೆದುಕೊಂಡು ನಮ್ಮ ಮನಗೆ ಊಟಕ್ಕೆ ಬರಲಿ’ ಎಂದು ಆಹ್ವಾನ ಕೊಡಲು ಹೇಳಿದಳು.

ಮಾರಯ್ಯನಿಂದ ಆಹ್ವಾನವನ್ನು ಸ್ವೀಕರಿಸಿದ ಬಸವಣ್ಣ ಅಲ್ಲಮನೊಂದಿಗೆ ಊರಿನಲ್ಲಿದ್ದ ಜಂಗಮರನ್ನೆಲ್ಲಾ ಕರೆದುಕೊಂಡು ಬಂದ. ಇದಷ್ಟೇ ಅಕ್ಕಿಯಿಂದ ಅನ್ನವ ಮಾಡಿ, ಮೊದಲು ಶಿವನಿಗೆ ಆರೋಗಿಸಿ ಜಂಗಮರಿಗೆ ಲಕ್ಕಮ್ಮ ಬಡಿಸಿದಳು. ಶಿವನ ಮಹಿಮೆಯೋ ಎಂಬಂತೆ ಅಷ್ಟೇ ಅನ್ನ ಬಂದಿದ್ದವರಿಗೆಲ್ಲಾ ಸಾಕಾಯಿತು. ದಂಪತಿಗಳು ಶಿವಭಕ್ತಿಯನ್ನು ಮೆಚ್ಚಿದ ಅಲ್ಲಮ ‘ಈಗ ನೋಡು ನಿಜದ ಕಾಯಕದ ಮಹಿಮೆ ಅರ್ಥವಾಯಿತು’ ಎಂದು ಹೇಳಿದರೆ ಬಸವಣ್ಣ ‘ಮನೆ ನೋಡಿದರೆ ಬಡವರು, ಮನಸ್ಸು ನೋಡಿದರೆ ಸಂಪನ್ನರು’ ಎಂದು ಹೊಗಳಿದ.

ಆಯ್ದಕ್ಕಿ ದಂಪತಿಗಳು ನೂರಾರು ವಚನಗಳನ್ನು ಬರೆದಿದ್ದಾರೆ. ಮಾರಯ್ಯನ ಅಂಕಿತನಾಮ ‘ಅಮರೇಶ್ವರಲಿಂಗ’ ಎಂಬುದಾದರೆ ಪತಿಯನ್ನೇ ಅನುಸಿರಿಸಿದ ಸತಿ ಲಕ್ಕಮ್ಮನ ಅಂಕಿತ ‘ಮಾರಯ್ಯಪ್ರಿಯ ಅಮರೇಶ್ವರಲಿಂಗ’ ಎಂಬುದಾಗಿದೆ. ‘ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ’, ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತಿಗುಂಟೆ?’ ‘ಮಾಡಿ ನೀಡಿ ಹೋದೆಹೆನೆಂಬಾಗ ಕೈಲಾಸವೇನು ಕೈಕೂಲಿಯೇ’ ಮೊದಲಾದ ಗಮನಸೆಳೆಯುವ ವಚನಗಳು ಲಕ್ಕಮನವಾಗಿವೆ. ತನ್ನ ದಾಸೋಹಕಾಯಕವನ್ನು ಸೂಚಿಸುವ ವಚನವೊಂದು ಹೀಗಿದೆ.

ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮೊದಲಾದ

ನೇಮ ನಿತ್ಯ ಕೃತ್ಯ ಸಕಲಸಮೂಹ ನಿತ್ಯನೇಮದ

ಜಂಗಮಭಕ್ತರು ಗಂಣಂಗಳು ಮುಂತಾದ ಸಮೂಹಸಂಪದಕ್ಕೆ

ನೈವೇಧ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯಾ

ಅಮಲೇಶ್ವರಲಿಂಗದ ಮನೆಯಲ್ಲಿ ಆದಿಹಿತೆಂದು


‘ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದಡೂ ಮರೆಯಬೇಕು’ ಎಂಬ ವಚನ ಮಾರಯ್ಯನ ಕಾಯಕದ ಪ್ರೀತಿಯನ್ನು ಸೂಚಿಸುತ್ತದೆ. ‘ಎನಗೆ ಮನೆಯಿಲ್ಲ ಎನಗೆ ಧನವಿಲ್ಲ’, ‘ತನುವೀವೆಡೆ ತನು ಎನಗಿಲ್ಲ ಮನವೀವೆಡೆ ಮನವೆನಗಿಲ್ಲ’ ಮೊದಲಾದ ವಚನಗಳು ಗಮನಸೆಳೆಯುತ್ತವೆ. ಆಯ್ದಕ್ಕಿ ವೃತ್ತಿಯನ್ನು ಸೂಚಿಸುವ ಮಾರಯ್ಯನ ವಚನ ಹೀಗಿದೆ.

ಎನಗೆ ಮನೆಯಿಲ್ಲ ಎನಗೆ ಧನವಿಲ್ಲ

ಮಾಡುವುದೇನು? ನೀಡುವುದೇನು?

ಮನೆ ಧನ ಸಕಲಸಂಪದಸೌಖ್ಯವುಳ್ಳ

ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು

ಎನ್ನೊಡಲ ಹೊರೆವನಾಗಿ

ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ

2 comments:

shridhar said...

sriyuta sri satyanarayanasir ravare nimaa lekana samajika kalakali nodi tumba istavaytu. karana yavaglu youtube site open madi nityanandara lilegalanuu noduttiddda nanage smaya sikkare kaddu aslila site noduttidda naage indeko nimma baraha poorna odabekendinisitu. karana yavude lekana oduganannu odisikondu oguvantirabeku adu odugana manasannu tattuvantirabeku ageye nimma nandonmatu aste chennagi odisikondu oguttide nimminda yechhin lekanagalu nammantavarinda oduvantagali ennuva

nimma oduga
shridhargowda vakilaru
kodala mandya

ಮನದಾಳದಿಂದ............ said...

ನಿಷ್ಕಲ್ಮಶವಾದ ಭಕ್ತಿಗೆ ದೇವರು ಖಂಡಿತಾ ಒಲಿಯುತ್ತಾನೆ. ಆಯ್ದಕ್ಕಿ ದಂಪತಿಗಳು ನಿಸ್ವಾರ್ಥದಿಂದ ಶಿವನ ಸೇವೆಗೈದು ಅಮರರಾದ ಮಹಾನ್ ಭಕ್ತರು. ಇಂತಹ ಶರಣರ ಆದರ್ಶಗಳು ನಮಗೆ ಮಾದರಿಯಾಗಬಾರದೇಕೆ?