Thursday, September 09, 2010

2010 ಸೆಪ್ಟಂಬರ್ 15 ಐತಿಹಾಸಿಕ ದಿನವಾಗಬೇಕು

ಮೊನ್ನೆ ಮೊನ್ನೆ ಪೇಜಾವರ ಸ್ವಾಮೀಜಿಗಳು ದಲಿತಕೇರಿಯಲ್ಲಿ ಪಾದಯಾತ್ರೆ ಮಾಡಿ ಜಾತಿ ನಿರ್ಮೂಲನೆಯ ಹಾದಿಯಲ್ಲಿ ಆರಂಭದ ಹೆಜ್ಜೆಗಳನ್ನು ಇಟ್ಟರು. (ಈ ಹಿಂದೆಯೂ ಒಮ್ಮೆ ಅವರು ದಲಿತಕೇರಿಗೆ ಬೇಟಿ ಕೊಟ್ಟಿದ್ದು ಉಂಟು). ನಾಡಿನಾದ್ಯಂತ ಇದರ ಬಗ್ಗೆ ಬಿಸಿ ಬಿಸಿ ಚರ್ಚೆಗಳಾದವು. ಮಾದ್ಯಮಗಳೂ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟವು. ಸುವರ್ಣ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಎಲ್. ಹನುಮಂತಯ್ಯನವರು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಹಿನ್ನೆಲೆಯಲ್ಲಿ ಅಸ್ಪೃಷ್ಯತೆಯ ನಿರ್ಮೂಲನೆಗೆ ಇರುವ ಎಡರು ತೊಡರುಗಳನ್ನು ಗುರುತಿಸಿದರೆ, ಗೀತಾ ರಾಮಾನುಜಂ ಅವರು ಕೇವಲ ಮೇಲ್ವರ್ಗದವರು ಪ್ರಯತ್ನ ಪಟ್ಟರೆ ಸಾಲದು; ಅಸ್ಪೃಷ್ಯರೂ ಸಹಕರಿಸಬೇಕು. ಅಸ್ಪೃಷ್ಯತೆಯ ನಿವಾರಣೆಗಾಗಿ ನಾವು (ಮೇಲ್ವರ್ಗ?) ಏನೂ ಮಾಡಲು ಸಿದ್ಧರಿದ್ದೇವೆ. ಆದರೆ ಆ ವರ್ಗವೇ ಸಿದ್ಧವಾಗಿಲ್ಲ ಎನ್ನುವ ಅರ್ಥದಲ್ಲಿ ತಮ್ಮ ವಾದವನ್ನು ಮಂಡಿಸಿ, ಪೇಜಾವರ ಶ್ರೀಗಳ ಪ್ರಯತ್ನವನ್ನು ಶ್ಲಾಘಿಸುತ್ತಾ, ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಎಂದು ಮಾತು ಮುಗಿಸಿದ್ದರು.

ಈ ಚರ್ಚೆಯನ್ನು ನೋಡುತ್ತಿದ್ದಾಗಲೇ ನನಗನ್ನಿಸಿದ್ದು. ಪೇಜಾವರ ಶ್ರೀಗಳು ದಲಿತಕೇರಿಗೆ ಹೋಗಿದ್ದು. ಅಭಿನಂದನೀಯ. ಅವರನ್ನು ದಲಿತ ಸಮುದಾಯ ಸ್ವಾಗತಿಸಿದ್ದು ಅನುಕರಣೀಯ. ಆದರೆ ಬೇರೆ ಜಾತಿಯ ಸ್ವಾಮಿಜಿಗಳು (ಜಾತಿಗೊಂದು ಮಠ, ಸ್ವಾಮಿಜಿ ಇರುವುದು ನಾಗರಿಕ ಸಮಾಜದ ಆರೋಗ್ಯಕರ ಲಕ್ಷಣವಲ್ಲ! ಅದು ಬೇರೆ ಮಾತು) ಬೇರೆ ಬೇರೆ ಜಾತಿಗಳವರ ಊರು ಕೇರಿ ಮನೆಗಳಿಗೆ ಬೇಟಿಕೊಟ್ಟರೆ ಹೇಗಿರುತ್ತದೆ? ಎಂಬ ಆಲೋಚನೆ ತಲೆಯಲ್ಲಿ ಸುಳಿದು ಹೋಗಿತ್ತು. ಅದರಲ್ಲೂ ವಿಶೇಷವಾಗಿ ಈಗ ದಲಿತ ಸಮುದಾಯಕ್ಕೂ ಒಂದು ಮಠ, ಸ್ವಾಮೀಜಿ ಇರುವುದರಿಂದ, ಆ ಸಮುದಾಯದ ಸ್ವಾಮೀಜಿಯೊಬ್ಬರು ಬ್ರಾಹ್ಮಣ ಕೇರಿಯಲ್ಲಿ ಪಾದ ಯಾತ್ರೆ ನಡೆಸಿದರೆ, ಬ್ರಾಹ್ಮಣರ ಮನೆಗಳಿಗೆ ಬೇಟಿ ಕೊಡಲು ಇಚ್ಛಿಸಿದರೆ, ಅವರ ಮನೆಗಳಲ್ಲಿ ದೇವರ ಪೂಜೆ ಮಾಡಲು ಇಚ್ಛಿಸಿದರೆ ಸಮುದಾಯದ ಪ್ರತಿಕ್ರಿಯೆ ಹೇಗಿದ್ದಿರಿಬಹುದು? ಹೀಗೇ ಏನೇನೋ ಯೋಚನೆಗಳು ತಲೆಯನ್ನು ತುಂಬಿಕೊಂಡಿದ್ದೂ ಉಂಟು.

ಇಂದು ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ಈ ವರದಿ ನನ್ನಲ್ಲಿ ಸಂಚಲವನ್ನೇ ಹುಟ್ಟು ಹಾಕಿತ್ತು. ಮಾದಿಗ ಜನಾಂಗ ಗುರುಪೀಠದ ಚನ್ನಯ್ಯ ಸ್ವಾಮೀಜಿಯವರು ಇದೇ ಸೆಪ್ಟಂಬರ್ ಹದಿನೈದರಂದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ’ಸಾಮರಸ್ಯ ನಡಿಗೆ’ ನಡೆಸುವುದಾಗಿ ಘೋಷಿಸಿದ್ದಾರೆ. ’ಯಾವುದೇ ದ್ವೇಷ ಅಥವಾ ಸ್ಪರ್ಧಾ ಮನೋಭಾವದಿಂದ ತಾವು ಬ್ರಾಹ್ಮಣರ ಕೇರಿಗೆ ಹೋಗುತ್ತಿಲ್ಲ. ಪೇಜಾವರ ಸ್ವಾಮೀಜಿ ಅವರಿಗೆ ಸವಾಲು ಹಾಕುವ ಉದ್ದೇಶವಲ್ಲ. ಈ ಎರಡೂ ಜನಾಂಗದ ನಡುವೆ ಸಾಮರಸ್ಯ ತರುವ ಹಿನ್ನೆಲೆಯಲ್ಲಿ ತಮ್ಮದೊಂದು ಪುಟ್ಟ ಪ್ರಯತ್ನ’ ಎಂದು ಹೇಳಿರುವ ಅವರಿಗೆ ವಿಷಯದ ಗಂಭೀರತೆ, ಸಂಕೀರ್ಣತೆ ಹಾಗೂ ವ್ಯಾಪ್ತಿಯ ಎಚ್ಚರವೂ ಇದೆ ಎಂಬುದು ಸ್ಪಷ್ಟವಾಗಿದೆ.

’ಮಾದಿಗರು ಮಾಧ್ವರಾಗಬೇಕು ಎನ್ನುವುದು ಪೇಜಾವರ ಶ್ರೀಗಳ ಆಶಯ. ಆದರೆ ಅವರ ಜನಾಂಗದವರು ಇದನ್ನು ಒಪ್ಪುತ್ತಾರೆಯೇ?’ ಎಂಬ ಪ್ರಶ್ನೆ ಮಾದಾರ ಚನ್ನಯ್ಯ ಸ್ವಾಮಿಗಳಲ್ಲಿದೆ. ಅದಕ್ಕೆ ಉತ್ತರವೂ ಸೆಪ್ಟಂಬರ್ ಹದಿನೈದರಂದು ಸಿಗಲಿದೆ. ಪೇಜಾವರ ಶ್ರೀಗಳಂತಹ ಧೀಮಂತ ವ್ಯಕ್ತಿತ್ವದ ಸ್ವಾಮೀಜಿಯೊಬ್ಬರು ಜಾತಿ ನಿರ್ಮೂಲನೆಯ ನಿಟ್ಟಿನಲ್ಲಿ ಇಟ್ಟಿರುವ ಐತಿಹಾಸಿಕ ಹೆಜ್ಜೆಯ ಮುಂದುವರೆದ ಭಾಗದಂತಿರುವ ಈ ಸಾಮರಸ್ಯದ ನಡಿಗೆಯಲ್ಲಿ, ತಮ್ಮ ಕೇರಿಗೆ ಮನೆಗೆ ಬರುವ ಮಾದಾರ ಚನ್ನಯ್ಯ ಸ್ವಾಮಿಜಿಗಳಿಗೆ ಒಳ್ಳೆಯ ಸ್ವಾಗತವೇ ಸಿಗಲಿ ಎಂದು ಆಶಿಸೋಣ. ಪೇಜಾವರ ಸ್ವಾಮಿಜಿಗಳ ಐತಿಹಾಸಿಕ ನಿರ್ಧಾರಕ್ಕೆ, ಮಾಧ್ವ ಸಮುದಾಯ ಚನ್ನಯ್ಯ ಸ್ವಾಮಿಜಿಗಳನ್ನು ಸ್ವಾಗತಿಸುವ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದರೆ ನಿಜವಾಗಲೂ ಇದೊಂದು ಐತಿಹಾಸಿಕ ದಿನವಾಗಲಿದೆ. ಮಾಧ್ವ ಸಮುದಾಯ ಪೇಜಾವರ ಶ್ರೀಗಳ ಬೆಂಬಲಕ್ಕೆ ನಿಲ್ಲಲೇಬೇಕು. ಇಲ್ಲದಿದ್ದರೆ, ಸ್ವಾಮಿಜಿಗಳು ಒಬ್ಬಂಟಿಗಳಾಗುತ್ತಾರೆ. ಅವರ ಪ್ರಯತ್ನ ಹೊಳೆಯಲ್ಲಿ ಹುಣಿಸೆಹಣ್ಣು ಕಿವುಚಿದಂತೆ ವ್ಯರ್ಥವಾಗುತ್ತದೆ.

ಕೊನೆಯ ಮಾತು: ಪೇಜಾವರ ಸ್ವಾಮಿಜಿಗಳು ದಲಿತಕೇರಿಯಲ್ಲಿ ಪಾದಯಾತ್ರೆ ನಡೆಸುವ; ನಡೆಸಿದ ವಿಷಯ ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ, ಮಾದ್ಯಮಗಳಲ್ಲೂ ಪ್ರಮುಖ ಸುದ್ದಿಯಾಗಿತ್ತು. ಆದರೆ ಈ ಸಾಮರಸ್ಯ ನಡಿಗೆಯ ವಿಷಯ ನನ್ನ ಗಮನಕ್ಕೆ ಬಂದಿರುವಂತೆ ಪ್ರಜಾವಾಣಿ ಪತ್ರಿಕೆಯನ್ನುಳಿದು ಬೇರೆ ಪತ್ರಿಕೆಗಳಲ್ಲಿ ಬಂದಿಲ್ಲ. ಇದು ಪತ್ರಿಕೆಗಳ ಜಾತಿ ರಾಜಕಾರಣವಲ್ಲ ತಾನೆ? ಆಗಿರದಿರಲಿ ಎಂದು ಆಶಿಸೋಣ.

8 comments:

PARAANJAPE K.N. said...
This comment has been removed by the author.
PARAANJAPE K.N. said...
This comment has been removed by the author.
PARAANJAPE K.N. said...

ಹೌದು, ಅದೊ೦ದು ಐತಿಹಾಸಿಕ ದಿನ. ನೋಡೋಣ,ಏನೇನು ಸ೦ಭವಿಸುತ್ತೋ? Let's hope for the best

Ashok.V.Shetty, Kodlady said...

Kaadu Nodona, Ella olleyade aagali, Ellarigu olleyadaagali, ee paadayaatreyinda saamrassya untaagali....

Prabhu Iynanda said...

ನಿಜಕ್ಕೂ ಸೆ ೧೫ರ ಸಾಮರಸ್ಯ ಯಾತ್ರೆ ಒಳ್ಳೆಯದೊಂದು ಐತಿಹಾಸಿಕ ಘಟನೆಯಾಗಲೆಂದು ಬಯಸೋಣ

ಸಾಗರದಾಚೆಯ ಇಂಚರ said...

kaadu nodona

ಶಾನಿ said...

ನಾನು ಜಾಲಾಟವಾಡುತ್ತಿದ್ದಾಗ ಯಾವ್ಯಾವುದೋ ಕೊಂಡಿ ನನ್ನನ್ನು ನಿಮ್ಮ ಬ್ಲಾಗ್ಮನೆಯ ಮುಂದೆ ತಂದು ನಿಲ್ಲಿಸಿತು. ಛೇ! ಎಷ್ಟು ಸುಂದರ ಪಯಣ. ಸಿಹಿಸಿಹಿ ಹಾಡುಗಳ ಹೂರಣ ಎಷ್ಟೊಂದು ಸವಿ. ಇದಕ್ಕೆ ನಿಮಗೊಂದು ಪ್ರೀತಿಯ ನಮಸ್ಕಾರ

ladybug said...

Idhu enaithu antha swalpa thiListhira?