ಸರಸ್ವತಿ : ಗಣಪ ಲೋ ಗಣಪ. ಎಲ್ಲೋಗ್ತಿದಿಯಾ ಮರಿ?
ಗಣಪತಿ : ಲಕ್ಷ್ಮಿ ಆಂಟಿ ಮನೆಗೆ.
ಸರಸ್ವತಿ : ಅಯ್ಯಯ್ಯೋ ಏಕಳ್ತಿದಿಯಪ್ಪಾ. ಏನಾಯ್ತು?
ಗಣಪತಿ : ನೋಡಿ ಸರಸ್ವತಿ ಆಂಟಿ, ಅಪ್ಪ ಅಮ್ಮ ಭೂಲೋಕಕ್ಕೆ ಅದ್ಯಾರಿಗೋ ವರ ಕೊಡೋದಿಕ್ಕೆ ಹೋಗಿದಾರೆ. ನಾನು ಬರ್ತಿನಿ ಅಂದಿದ್ದಕ್ಕೆ ಬೇಡ ನೀನಿಲ್ಲೆ ಇರು. ಲಕ್ಷ್ಮಿ ಆಂಟಿ ಮನೆಲೋ, ಸರಸ್ವತಿ ಆಂಟಿ ಮನೇಲೋ ಆಡ್ಕೊಂಡಿರು ಅಂದ್ಬಿಟ್ರು.
ಸರಸ್ವತಿ : ಇರಲಿ ಬಿಡು ಮರಿ. ಅಲ್ಲಿ ಅವರಿಗೇನು ಕೆಲಸ ಇರುತ್ತೋ ಏನೋ. ಬಾ ಮರಿ ಇಲ್ಲೊಂದಿಷ್ಟು ಹೊತ್ತು ಇದ್ದು ಹೋಗು.
ಗಣಪತಿ : ಇಲ್ಲ ಸರಸ್ವತಿ ಆಂಟಿ, ಅಲ್ಲಿ ನಾರದ ನನಗೆ ಅಪಾಯಿಂಟ್ಮೆಂಟ್ ಕೊಟ್ಟಿದಾನೆ. ಯಾವ್ದೋ ಕಥೆ ಹೇಳ್ತೀನಿ ಅಂತ. ವಿಷ್ಣು ಅಂಕಲ್ ಹತ್ರ ಇರ್ತಾನಂತೆ. ಅದಕ್ಕೆ ಅಲ್ಲಿಗೆ ಹೋಗ್ತೀನಿ.
ಸರಸ್ವತಿ : ಅವನು ಇದ್ರೆ ಅಲ್ಲಿ. ಇಲ್ಲ ಭೂಲೋಕದಲ್ಲಿ.
ಗಣಪತಿ : ನಾನು ಬರ್ಲಾ ಆಂಟಿ.
ಸರಸ್ವತಿ : ಅಯ್ಯೋ ಇರೋ ಗಣಪ ಮರೆತೆಬಿಟ್ಟಿದ್ದೆ. ಕಡುಬು ಮಾಡಿದ್ದೆ. ನಿನಗೆ ಅಂತ ಎತ್ತಿಟ್ಟಿದ್ದೆ. ಬಾ ಕೊಡ್ತೀನಿ ತಿಂದು ಹೋಗುವಂತೆ.
ಗಣಪತಿ : ಏನ್ ಆಂಟಿ ನೀವು ಇಷ್ಟು ನಿಧಾನಕ್ಕೆ ಹೇಳ್ತಿದಿರಾ!?
ಸರಸ್ವತಿ : ಮರ್ತುಬಿಟ್ಟಿದ್ದೆ ಪುಟ್ಟಾ. ಬಾ ಕೊಡ್ತೀನಿ.
* * *
ಸರಸ್ವತಿ : ನೋಡೋ ಇಲ್ಲಿ ಗಣಪ. ನಿನಗೆ ಅಂತ ಹತ್ತು ಕಡಬು ತೆಗೆದು ಇಟ್ಟಿದ್ದೆ. ಈಗ ಒಂದ್ಸೊಲ್ಪತ್ತಿನ ಮುಂದೆ, ನಿಮ್ಮ ಬ್ರಹ್ಮ ಅಂಕಲ್ ಹೊಟ್ಟೆ ಹಸಿತಿದೆ ತಿನ್ನೋದಿಕ್ಕೆ ಏನಾದರೂ ಕೊಡು ಅಂದರು. ಮತ್ಯಾರು ಮಾಡ್ತಾರೆ ಅಂತ ಹತ್ತರಲ್ಲೆ ಒಂದು ಕಡುಬು ತಗೊಂಡು ತಿನ್ನಿ ಅಂದೆ. ಆದರೆ ಅವರು ನಾಲ್ಕು ತಿಂದು ಬಿಟ್ಟಿದ್ದಾರೆ.
ಗಣಪತಿ : ನಾಲ್ಕೂ ಕಡಬು ತಿಂದಿದಾರ. ಹೋಗ್ಲಿ ಬಿಡಿ ಇಷ್ಟಾದರೂ ಇದೆಯಲ್ಲ. ನಿಮ್ಮ ಲೆಕ್ಕದಲ್ಲಿ ಒಂದು ಅಂದರೆ ಅವರ ನಾಲ್ಕು ತಲೆನೂ ಒಂದೊಂದು ತಿಂದಿರಬೇಕು!
* * *
ಗಣಪತಿ : ಆಂಟಿ ನನಗೊಂದು ಅನುಮಾನ. ವಿದ್ಯಾದೇವತೆ ನೀವು. ಆದ್ರೂ ಈ ಭೂಲೋಕದ ಜನ ನನ್ನನ್ನು ವಿದ್ಯಾಗಣಪತಿ ಅಂತ ಪೂಜೆ ಮಾಡಿ ವರ ಕೊಡು ಅಂತ ಪೀಡಿಸ್ತಾರಲ್ಲ ಏಕೆ?
ಸರಸ್ವತಿ : ಏನ್ಮಾಡೋದಿಕ್ಕಾಗುತ್ತೆ ಮರಿ, ಕೆಲವಕ್ಕೆ ನಾನೆದೆಷ್ಟು ಕಷ್ಟಪಟ್ಟು ತಿದ್ದಿದ್ರು ಸ ಅಂದರೆ ಶ ಅಂತಾವೆ, ಶ ಅಂದರೆ ಸ ಅಂತಾವೆ. ಅವರಿಗೆ ಕಷ್ಟ ಪಡೋದಿಕ್ಕಾಗಲ್ಲ. ಅದಕ್ಕೆ ನನ್ನನ್ನ ಕೈಲಾಗದ ದೇವತೆ ಅಂತ ನಿನ್ನತ್ರ ಬರ್ತಾವೆ. ಏನ್ಮಾಡೋದು ಹೇಳು. ನೀನು ಸುಮ್ಮನೆ ತಥಾಸ್ತು ಅಂದ್ಬುಡು. ಇಲ್ಲಾಂದರೆ ಮತ್ತೆ ನನ್ನತ್ರ ಬಂದು ನಿನ್ನ ಕೈಲಾಗ್ದೋನು ಅಂತಾರೆ.
ಗಣಪತಿ : ಇಲ್ಲ ಆಂಟಿ ನಾನಿದುವರೆಗೆ ಒಬ್ಬನಿಗೂ ವರ ಕೊಟ್ಟಿಲ್ಲ. ಅದು ನಿನಗೆ ಹೇಳದೆ ನಿನ್ನ ಕೆಲಸ ಮಾಡೋದಿಕ್ಕಾಗುತ್ತ ಆಂಟಿ.
ಸರಸ್ವತಿ : ನಿನಗೆ ಹೇಗೆ ತೋಚುತ್ತೋ ಹಾಗ್ ಮಾಡು.
ಗಣಪತಿ : ಆಂಟಿ ಕಡುಬು ಬಹಳ ಚೆನ್ನಾಗಿತ್ತು. ನಿನ್ನ ಕೈನ ಕಡುಬು ಅಂದರೆ ಕಡುಬು. ನಮ್ಮಮ್ಮಾನು ಹೀಗ್ ಮಾಡಲ್ಲ! ಆಂಟಿ ನಾನು ಬರ್ತಿನಿ. ಇಲ್ಲಾಂದ್ರೆ ನಾರದ, ಲಕ್ಷ್ಮಿ ಆಂಟಿ ಮನೆ ಬಿಟ್ಟು ಹೊರಟ್ಬುಡ್ತಾನೆ. ಮತ್ತೆ ಕೈಗೆ ಸಿಗೋದು ಯಾವಾಗಲೋ.
ಸರಸ್ವತಿ : ಸರಿ ನೀನು ಹೊರಡಪ್ಪ. ನಿಮ್ಮ ಬ್ರಹ್ಮ ಅಂಕಲ್ ಏಕೋ ಅವರ ಒಂದು ಗಂಟಲು ನೋವು ಅಂತಿದ್ದರು. ಒಂಚೂರು ಕಷಾಯ ಮಾಡಿಕೊಡು ಅಂದಿದ್ದರು. ಲಕ್ಷ್ಮಿ ಹತ್ರ ಔಷದಿನೂ ತಂದಿದಿನಿ. ಕೊಡ್ತಿನಿ. ನೀನು ಹೋಗ್ಬಾ.
ಗಣಪತಿ : ಸರಸ್ವತಿ ಆಂಟಿ ನೀವೀಗ ಏನಂದ್ರಿ. ಬ್ರಹ್ಮ ಅಂಕಲ್ ಗೆ ಒಂದು ಗಂಟಲು ನೋವ!? ಹಾಗಾದರೆ ಇನ್ನೊಂದು ಕಡಬು ಅವರು ತಿಂದಿಲ್ಲ. ಆಮೇಲೆ ತಿನ್ನೋಣ ಅಂತ ಎತ್ತಿಟ್ಕೊಂಡಿರಬೇಕು ಅಲ್ವಾ?
ಸರಸ್ವತಿ : ಏನೋಪ್ಪಾ ಇದ್ರು ಇರಬಹುದು. ಈ ವಯಸ್ಸಾದೋರಿಗೆ ಬಾಯಿ ಚಪಲ ಜಾಸ್ತಿ.
ಗಣಪತಿ : ಇರ್ಲಿ ಬಿಡಿ ಆಂಟಿ. ನಾನ್ಬರ್ತಿನಿ.
* * *
ಲಕ್ಷಿ : ಓಹೋ ಬಾರೋ ಗಣಪ ಬಾ ಅಲ್ಲೇನು ಹುಡುಕ್ತಿದಿಯಾ?
ಗಣಪತಿ : ಲಕ್ಷ್ಮಿ ಆಂಟಿ ನಾರದ ಇಲ್ಲೆ ಇರ್ತಿನಿ ಅಂದಿದ್ದ. ಎಲ್ಲೋದ?
ಲಕ್ಷ್ಮಿ : ವಿಷ್ಣು ಅಂಕಲ್ ಇನ್ನೊಂದು ಹಾಡು ಹೇಳು ಅಂತಿದ್ದರು. ಅಲ್ಲೆ ಇದ್ದ ಇನ್ನೇನು ಬರಬಹುದು ಬಾ. ನಿಮ್ಮಮ್ಮ ಏನ್ಮಾಡ್ತಿದ್ದರು?
ಗಣಪತಿ : ಅಮ್ಮ ಎಲ್ಲಿ ಆಂಟಿ? ಅದ್ಯಾರ್ಗೋ ಭೂಲೋಕದಲ್ಲಿ ವರ ಕೊಡೋದಿಕ್ಕೆ ಅಂತ ಹೋಗಿದಾರೆ.
ಲಕ್ಷ್ಮಿ : ಹೌದಾ!? ಹೋಗ್ಲಿ ಬಿಡು. ನೀನು ಏನಾದರೂ ತಿಂದ್ಯಾ ಮರಿ. ತಗೋ ಇಲ್ಲೊಂದಿಷ್ಟು ಕಬ್ಬು ಇದೆ ತಿನ್ನು. ಅಷ್ಟರಲ್ಲಿ ನಾರದ ಬರ್ತಾನೆ.
ಗಣಪತಿ : ಕೊಡಿ ಆಂಟಿ. ಸಂಕ್ರಾಂತಿ ಆಗಿ ಇಷ್ಟು ದಿನ ಆದ್ರು ಕಬ್ಬು ಇಟ್ಟಿದ್ದೀರಲ್ಲ ಅದೇ ಸಂತೋಷ. ಆಂಟಿ ಅಂದ ಹಾಗೆ ’ನಾರದ ಮನೆಗೆ ಬರೋಲ್ಲ’ ಅಂತ ಸರಸ್ವತಿ ಆಂಟಿ ಬೇಜಾರು ಮಾಡ್ಕೋತಿದ್ರು. ಈತ ನನ್ಗು ’ಕಥೆ ಹೇಳ್ತೀನಿ ಬಾ’ ಅಂತ ಹೇಳಿ ಇನ್ನು ಹಾಡು ಹೇಳ್ತಾ ಕೂತಿದ್ದಾನೆ. ಇವನು ಯಾವಾಗಲೂ ಹೀಗೇನೆ ಅಲ್ವಾ ಆಂಟಿ.
ಲಕ್ಷ್ಮಿ : ಏನ್ಮಾಡೋದು ಹೇಳೋ. ಒಬ್ಬೊಬ್ಬರದು ಒಂಥರಾ. ಸರಸ್ವತಿನೂ ಒಬ್ಬಳೆ ಇರ್ಬೇಕು. ನಿಮ್ಮ ಬ್ರಹ್ಮ ಅಂಕಲ್ ದಿನದ ಇಪ್ಪತ್ತನಾಲ್ಕು ಗಂಟೇನು ಆಫೀಸಿನಲ್ಲೇ ಇರ್ತಾರೆ. ಬೆಳೆಗ್ಗೆ ತಾನೆ ಬಂದಿದ್ದಳು. ನಿಮ್ಮ ಅಂಕಲ್ಗೆ ಏನೋ ಗಂಟಲು ನೋವು ಅಂತ ಔಷಧಿ ತಗೊಂಡು ಹೋದಳು.
ಗಣಪತಿ : ಹಾಡು ನಿಂತೋದ್ಹಾಗೆ ಆಯ್ತು. ನಾನೋಗ್ತೀನಿ ಆಂಟಿ. ಇಲ್ಲಾಂದರೆ ನಾರದ ಇವತ್ತು ತಪ್ಪಿಸ್ಕೊಂಡ್ಬಿಡ್ತಾನೆ.
ಲಕ್ಷ್ಮಿ : ಆಯ್ತು. ನಿಧಾನವಾಗಿ ಹೋಗೋ! ಎಲ್ಲು ಹೋಗಲ್ಲ.
* * *
ಗಣಪತಿ : ಏನೋ ನೀನು. ಕಥೆ ಹೇಳ್ತೀನಿ ಅಂತ ಹೇಳಿ ಹೋದ ವಾರ ಕೈಕೊಟ್ಟಿದ್ದೆ. ಈಗ ನೋಡಿದರೆ ನನ್ನ ಬರೋದಕ್ಕೆ ಹೇಳಿ ಅಲ್ಲೋಗಿ ಹಾಡು ಹೇಳ್ತಾ ಇದೀಯಾ.
ನಾರದ : ಹಂಗೇನಿಲ್ಲ ಬಾ. ಇವತ್ತು ನಿನಗೆ ಒಂದು ಕಥೆ ಹೇಳೆ ನಾನು ಮುಂದಿನ ಕೆಲಸಕ್ಕೆ ಹೋಗ್ತೀನಿ. ನಿಮ್ಮ ಅಪ್ಪ ಅಮ್ಮ ಭೂಲೋಕಕ್ಕೆ ಹೊರಟರಾ?
ಗಣಪತಿ : ಹೂಂ. ಹೋದರು. ಅದ್ಯಾರಿಗೋ ವರ ಕೊಡೋದಿಕ್ಕೆ ಅಂತ.
ನಾರದ : ಅದೇ ಕಥೆ ಹೇಳ್ತೀನಿ ಕೇಳು ಇವತ್ತು. ಭೂಲೋಕದಲ್ಲಿ ಒಬ್ಬ ರಾಕ್ಷಸ ಇದ್ದಾನೆ. ಅವನ ನಿರ್ಮೂಲನ ಮಾಡೋದಿಕ್ಕೆ ವೆಂಕಟಾಚಲ ಅಂತ ನಾರಾಯಣನ ಭಕ್ತನೊಬ್ಬ ತೊಡೆತಟ್ಟಿ ನಿಂತಿದ್ದಾನೆ. ಸುದರ್ಶನ ಅನ್ನೋ ಇನ್ನೊಬ್ಬ ಕೂಡಾ ಇದ್ದಾನೆ. ಆದರೆ ಆ ರಾಕ್ಷಸ, ಅವನನ್ನ ಬೆಳೆಸಿದೋರು ಬಹಳ ಘಟಾನುಘಟಿಗಳು. ಅದಕ್ಕೆ ವಿಷ್ಣು ಅಂಕಲ್ ಅವರಿಬ್ಬರಿಗೂ ಸ್ವಲ್ಪ ಸಹಾಯ ಮಾಡು ಅಂತ ನಿಮ್ಮ ಅಪ್ಪನ ಹತ್ರ ಹೇಳಿದ್ದರು. ಅದಕ್ಕೆ ಹೋಗಿದ್ದಾರೆ.
ಗಣಪತಿ : ಅದು ಸರಿ ನಾರದ ವಿಷ್ಣು ಅಂಕಲ್ಲೇ ಹೋಗಬಹುದಿತ್ತಲ್ವಾ? ನಮ್ಮ ಅಪ್ಪ ಅಮ್ಮನ್ನ ಏಕೆ ಹೋಗಿ ಅಂದರು.
ನಾರದ : ಅದು ಹಾಗಲ್ಲ ಕಣೋ ಗಣಪು. ಈ ಅಯೋಧ್ಯೆ ಗಲಾಟೆ ಆದಾಗಿನಿಂದ ವಿಷ್ಣು ಅಂಕಲ್ಗೆ ಭೂಲೋಕ, ಅವತಾರ, ಭಕ್ತರು ಅಂದರೆ ಒಂದು ರೀತಿ ಭಯ. ಅದಕ್ಕೆ ನಿಮ್ಮಪ್ಪ ಅಮ್ಮನಿಗೆ ಕೇಳ್ಕೊಂಡಿದ್ದು.
ಗಣಪತಿ : ಹೌದು ಹತ್ತು ಅವತಾರ ಎತ್ತಿ ಇಲ್ಲಾ ರಾಕ್ಷಸರನ್ನೂ ವಿಷ್ಣು ಅಂಕಲ್ ಬಡದು ಹಾಕಿದ್ದರಲ್ಲಾ. ಈ ಕಲಿಯುಗದಲ್ಲೂ ಅವರ ಸಂತತಿ ಉಳಿದಿದೆಯಾ? ಹಾಗಾದರೆ ಯಾರಪ್ಪ ಅದು, ಆ ರಾಕ್ಷಸ.
ನಾರದ : ಅದೊಂದು ವಿಚಿತ್ರವಾದ ರಾಕ್ಷಸ. ಒಂದು ರೀತೀಲಿ ಖಾಯಿಲೆ ಇದ್ದ ಹಾಗೆ. ರೂಪ ಇಲ್ಲ. ಅದರ ಹೆಸರು ’ಭ್ರಷ್ಟಾಚಾರ’ ಅಂತ.
ಗಣಪತಿ : ಓ, ಈಗ ಗೊತ್ತಾಯಿತು ಬಿಡು. ವರ್ಷಕ್ಕೊಂದು ಬಾರಿ ಭೂಲೋಕಕ್ಕೆ ಹೋದಾಗ ನನಗೂ ಅದರ ಅನುಭವಾನ ಜನ ಮಾಡ್ಸಿದಾರೆ. ನಾನೀಗಲೇ ಹೇಳ್ತೀನಿ. ನಮ್ಮ ಅಪ್ಪ ಅಲ್ಲ, ಈ ತ್ರಿಮೂರ್ತಿಗಳೇ ಹೋಗಿ ವರ ಕೊಟ್ಟರೂ, ಅವತಾರ ಎತ್ತಿದರೂ ಆ ರಾಕ್ಷಸನನ್ನ ನಿರ್ಮೂಲನ ಮಾಡೋದಿಕ್ಕಾಗಲ್ಲ. ಅದು ಹೊಟ್ಟೆ ಒಳಗಿನ ಮಗೂನಿಂದ ಹಿಡಿದು ಸ್ಮಶಾನದ ಹೆಣದವರೆಗೂ ಅದು ಆವರಿಸಿಬಿಟ್ಟಿದೆ.
ನಾರದ : ಅದು ನನಗೂ ಗೊತ್ತೋ. ಆದರೆ ಏನು ಮಾಡೋದು ಹೇಳು. ನಾವು ಏನಾದ್ರೂ ಪ್ರಯತ್ನ ಮಾಡಲೇ ಬೇಕು. ಇಲ್ಲ ಮಾಡ್ತಾ ಇದ್ದೀವಿ ಅಂತ ತೋರಿಸ್ಕೋಬೇಕು. ಇಲ್ಲಾಂದರೆ ಈ ಜನ ನಮ್ಮನ್ನೂ ಕೈಲಾಗದೋರು ಅಂತ ತಿಳ್ಕೊಂಡ್ಬಿಡ್ತಾರೆ. ಆಮೇಲೆ ಅವ್ರು ನಮ್ಮ ಸ್ಥಾನವನ್ನು ಬೇರೆಯವರಿಗೆ ಕೊಡೋದಿಕ್ಕೂ ಹೇಸೋದಿಲ್ಲ.
ಗಣಪತಿ : ಅದು ಸರಿ ಅನ್ನು. ನಾನಿನ್ನು ಬರ್ತೀನಿ ಕಣೋ. ಏಕೋ ಹೊಟ್ಟೆ ಹಸಿತಾ ಇದೆ.
ನಾರದ : ಸರಿ ಹೊರಡು. ಶುಭವಾಗಲಿ ನಿನ್ನ ಹೊಟ್ಟೆಗೆ!
[4/2/2003 ರಂದು ನನ್ನಿಂದ ರಚಿತವಾಗಿ, ಕಾಲೇಜಿನ ಸ್ಪರ್ಧೆಯೊಂದಕ್ಕೆ ನಿರ್ದೇಶಿತವಾಗಿದ್ದ ಈ ಹರಟೆ ಪ್ರಸಂಗದಲ್ಲಿ ನಾನು ನಾರದನ ಪಾತ್ರ ಕೂಡಾ ಮಾಡಿದ್ದೆ. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕೂಡಾ ಬಂದಿತ್ತು ಈ ಹರಟೆಗೆ. ಆದರೆ, ನಂತರ ನನ್ನ ಸಹದ್ಯೋಗಿಗಳೊಬ್ಬರು, ಅದನ್ನು ತೆಗೆದುಕೊಂಡು, ಎಲ್ಲೋ ಕಳೆದು ಬಿಟ್ಟಿದ್ದರು. ಇತ್ತ ನನ್ನ ಕಂಪ್ಯೂಟರಿನಲ್ಲಿದ ಫೈಲ ಕೂಡಾ ಯಾವಾಗಲೋ ಮಾಯವಾಗಿಬಿಟ್ಟಿತ್ತು. ಸುಮಾರು ಒಂಬತ್ತು ವರ್ಷಗಳ ಬಳಿಕ, ನನ್ನ ಸಹದ್ಯೋಗಿ ಮಿತ್ರರು, ತಮ್ಮ ಪುಸ್ತಕದ ಬೀರು ಸ್ವಚ್ಛಗೊಳಿಸುವಾಗ ಯಾವುದೋ ಫೈಲಿನಲ್ಲಿ ಅಂತರಗತ್ವಾಗಿದ್ದ ನನ್ನ ಹರಟೆಯ ಪ್ರತಿಯನ್ನು ಸುರಕ್ಷಿತವಾಗಿ ಹಿಂತಿರುಗಿಸಿ ನಿಟ್ಟುಸಿರು ಬಿಟ್ಟರು. ಅದನ್ನು ಮತ್ತೆ ಕಂಪ್ಯೂಟರಿಗೇರಿಸಿದ್ದು ನನ್ನ ಶ್ರೀಮತಿ. ಈಗ ನಾನು ಅದನ್ನು ಬ್ಲಾಗಿಗೆ ಏರಿಸುತ್ತಿದ್ದೇನೆ. ಲೋಕಾಯುಕ್ತ ವೆಂಕಟಾಚಲ, ಬಿಳಿಗಿರಿ ಬೆಟ್ಟದ ಸುದರ್ಶನ ಅವರ ಹೆಸರುಗಳ ಬದಲಿಗೆ, ಸಂತೋಷ ಹೆಗಡೆ, ನ್ಯಾಯಮೂರ್ತಿ ಸುಧೀಂದ್ರ ರಾವ್, ಶ್ರೀಯುತ ಹಿರೇಮಠ ಇಂಥವರ ಹೆಸರುಗಳನ್ನು ಹಾಕಿಕೊಂಡರೆ ಹರಟೆ ಇಂದಿಗೂ ಪ್ರಸ್ತುತ. ಅದಕ್ಕೆ ಸಂತೋಷ ಪಡಬೇಕೋ, ಅಥವಾ ಪರಿಸ್ಥಿತಿ ಇನ್ನೂ ದುರಂತಮಯವಾಗಿದೆ ಎಂದು ದುಃಖಿಸಬೇಕೋ? ನೀವೇ ನಿರ್ಧರಿಸಿ)
2 comments:
ಹಹಹಹ ಸೂಪರ್ ಸತ್ಯ...ಬಹಳ ಚನ್ನಾಗಿ ಮೂಡಿ ಬಂದಿದೆ... ನನಗೆ ಸಾಧ್ಯ ಆದರೆ ಮಕ್ಕಳ ಕೈಲಿ ಮಾಡಿಸ್ತೀನಿ ಇಲ್ಲಿ...ಕುವೈತಲ್ಲಿ... ನಿಮ್ಮ ಅನುಮತಿ ಬೇಕು ..ಅಷ್ಟೇ...
ಅಜಾದ್ ನಮಸ್ಕಾರ ಮತ್ತು ಧನ್ಯವಾದಗಳು
ನೀವು ಮಕ್ಕಳ ಕೈಯಲ್ಲಿ ಮಾಡಿಸುತ್ತೇನೆ ಎಂದರೆ ಬೇಡ ಅನ್ನುವಷ್ಟು ದಡ್ಡನಲ್ಲ! ಧಾರಾಳವಾಗಿ ಮಾಡಿಸಿ.
ನಾವಿಲ್ಲಿ ವೇಷಭೂಷಣಕ್ಕೆ ವಿಚಿತ್ರ ಕಲ್ಪನೆ ಇಟ್ಟುಕೊಂಡಿದ್ದೆವು. ಗಣಪತಿ ಪಾತ್ರಧಾರಿಯ ಸೊಂಟದಲ್ಲಿ ಕಂಪ್ಯೂಟರ್ ಮೌಸ್ ನೇತುಹಾಕಿದ್ದೆವು. ನಾರದ ಗಿಟಾರ್ ಹಿಡಿದಿದ್ದ. ಸರಸ್ವತಿ ಸಿ.ಡಿ. ಹಡಿದ್ದಿದ್ದಳು. ಲಕ್ಷ್ಮಿ ಕ್ರೆಡಿಟ್ ಕಾರ್ಡ್ ಹಿಡಿದುಕೊಂಡಿದ್ದಳು!
Post a Comment