Wednesday, May 27, 2009

ನಮ್ಮ ಕಡೆಯ ಶಿಶುಪ್ರಾಸಗಳು

ಶಿಶುಪ್ರಾಸಗಳು ಜಾನಪದ ಸಾಹಿತ್ಯದ ಒಂದು ಪ್ರಾಕಾರ. ಇವುಗಳಲ್ಲಿ ಅರ್ಥಕ್ಕೂ ಹಾಗೂ ಅರ್ಥಕ್ಕಿಂತ (ಹೆಸರೇ ಹೇಳುವಂತೆ) ಪ್ರಾಸಕ್ಕೂ ಲಯಕ್ಕೂ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಇವು ಕರ್ನಾಟಕದಾದ್ಯಂತ ಕೇಳಸಿಗುತ್ತವೆ. ಆದರೆ ಇತ್ತೀಚಿನ ಆಧುನೀಕರಣ ಪ್ರಕ್ರಿಯೆಯಿಂದಾಗಿ, ವಿಭಕ್ತ ಕುಟುಂಬಗಳಿಂದಾಗಿ ಇಂತಹ ಶಿಶುಪ್ರಾಸಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.ನಮ್ಮ ಬಯಲಸೀಮೆಯಲ್ಲಿ (ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೋಕು) ಹಲವಾರು ಶಿಶುಪ್ರಾಸಗಳು ಪ್ರಚಲಿತದಲ್ಲಿವೆ. ಗಾದೆ, ಒಗಟುಗಳ ರೂಪವೂ ಅವಕ್ಕಿವೆ ಹಾಗೂ ಕ್ರೀಡಾ ಸ್ವರೂಪವೂ ಇದೆ. ಭಾಷೆಯು ಬದಲಾದಂತೆ, ಆಯಾಯ ಪ್ರಾಂತ್ಯದ ವೈಶಿಷ್ಟ್ಯವನ್ನು ಅವು ಮೈಗೂಡಿಸಿಕೊಂಡಿರುತ್ತವೆ. ಉದಾಹರಣೆಗೆ,
ಕಬಡ್ಡಿ ಕಬಡ್ಡಿ ಕಾರ
ಹುಳ್ಳಿ ಹೊಲದಲ್ಲಿ ಕೀರ

ಇದು ನಮ್ಮ ಪ್ರದೇಶದಲ್ಲಿ ಅತ್ಯಂತ ಜನಪ್ರಿಯ ಹಾಗೂ ಸರಳ ಶಿಶುಪ್ರಾಸ. ಆದರೆ ಇದನ್ನು ಮಂಡ್ಯ, ಕೊಳ್ಳೆಗಾಲದ ಕಡೆ
ಕಬಡ್ಡಿ ಕಬಡ್ಡಿ ಕಾರ
ಕಬ್ಬಿನ ಗದ್ದೆಲಿ ಕೀರ
ಎಂದು ಹೇಳುತ್ತಾರೆ.

ಬಯಲಸೀಮೆಯಲ್ಲಿ ಹುಳ್ಳಿ (ಹುರುಳಿ) ಬೆಳೆಯನ್ನು ಹೆಚ್ಚಾಗಿ ಬೆಳೆಯುವುದರಿಂದ, ಅದರ ಹೆಸರನ್ನು ಬಳಸಿದರೆ, ಕಬ್ಬನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಕಬ್ಬಿನ ಹೆಸರನ್ನು ಹೆಚ್ಚಾಗಿ ಬಳಸುವುದನ್ನು ಗಮನಿಸಬಹುದಾಗಿದೆ.ನಮ್ಮ ಕಡೆ ಕೇಳಸಿಗುವ ಹಾಗೂ ನನ್ನ ನೆನಪಿನಲ್ಲಿ ಉಳಿದಿರುವ ಕೆಲವು ಶಿಶುಪ್ರಾಸಗಳನ್ನು, ನನ್ನ ಮಗಳಿಗೆ ಹೇಳಿಕೊಡುವ ನೆಪದಲ್ಲಿ ಆಗಾಗ ಮನಸ್ಸಿಗೆ ತಂದುಕೊಳ್ಳುತ್ತಿರುತ್ತೇನೆ. ಅವುಗಳನ್ನು ಒಂದು ಕಡೆ ಸಂಗ್ರಹಿಸಿ ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾದದ್ದು ರೂಪಶ್ರೀ ಎನ್ನುವವರ ಬ್ಲಾಗಿನಲ್ಲಿ, ‘ಕಣ್ಣಾಮುಚ್ಚೆ ಕಾಡಿಗೆ ಓಡೆ’ ಎಂಬ ಶಿಶುಪ್ರಾಸವನ್ನು ನೋಡಿದ ಮೇಲೆ. ಇಲ್ಲಿ ಸಂಗ್ರಹವಷ್ಟೇ ನನ್ನ ಕೆಲಸ. ಹೆಚ್ಚಿನ ವಿವರಣೆ, ಸಂಪಾದನೆ, ವಿಶ್ಲೇಷಣೆ ಇವ್ಯಾವುದಕ್ಕೂ ಇಳಿಯದೇ, ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ ಪ್ರತಿಕ್ರಿಯಿಸಿದರೆ, ನಿಮಗನ್ನಿಸಿದ್ದನ್ನು ಹಂಚಿಕೊಂಡರೆ, ನಿಮಗೆ ನೆನಪಿರುವ ಶಿಶುಪ್ರಾಸಗಳನ್ನು ಇತರರೊಂದಿಗೆ ಹಂಚಿಕೊಂಡರೆ ಸಂತೋಷ.

ನಾನು ಹೈಸ್ಕೂಲ್ ಓದಿದ ಕುಂದೂರು ಮಠ ಮತ್ತು ಅದರ ಕುದುರೆ, ಅದರ ಸವಾರಿ ಮಾಡುವ ಸ್ವಾಮಿಜಿಗಳು ನಮ್ಮ ಕಡೆ, ನಮ್ಮ ಕಾಲದಲ್ಲಿ ಕಾಣಸಿಗುತ್ತಿದ್ದವು. ಅದರ ಹಿನ್ನೆಲೆಯಲ್ಲಿರುವ ಶಿಶುಪ್ರಾಸ.
ಬಾಗೂರಯ್ಯ ಬಾಗ್ಲು ತೆಗಿ
ಬಗ್ಗಿ ನೋಡೋಣ
ಕುಂದೂರಯ್ಯ ಕುದುರೆ ಕೊಡು
ಹತ್ತಿ ನೋಡೋಣ!

ಪ್ರಶ್ನೋತ್ತರ ರೂಪದ ಶಿಶುಪ್ರಾಸಗಳೂ ಇರುತ್ತವೆ.
ಕಾಗೆ ಕಾಗೆ ಕೌವ್ವ
ಯಾರು ಬರ್‍ತಾರವ್ವ?
ಮಾವ ಬರ್‍ತನವ್ವ
ಮಾವಗೇನು ಊಟ?
ರಾಗಿಕಲ್ಲಿನ ಗೂಟ!

ಇನ್ನೊಂದು ಗೀತೆ
ಶಾಂತಕ್ಕ ಶಾಂತಕ್ಕ ಚೆನ್ನಾಗಿದಿಯಾ?
ಮಂಚದ ಮೇಲೆ ಮಲಗಿದಿಯಾ?

ಅತ್ಯಂತ ಸರಳ ಶಿಶುಪ್ರಾಸಗಳು ಹೇಗಿರುತ್ತವೆ ನೋಡಿ!
ನಾನು ನೀನು ಜೋಡಿ
ಗಾಡಿ ಕಟ್ಟಿಕೊಂಡು ಓಡಿ

ಹೆಣ್ಣುಮಗಳೊಬ್ಬಳು ತನ್ನ ತಾಯಿಗೆ ಹೇಳುತ್ತಿರುವ ರೀತಿಯ ಒಂದು ಶಿಶುಗೀತೆ ಹೀಗಿದೆ.
ಯವ್ವ ಯವ್ವ ಗೆಣಸೆ
ಕುಕ್ಕೆಲಿ ಕುಣಿಸೆ
ಕರಿಸೀರೆ ಉಡಿಸೆ
ಗಂಡನ ಮನೆಗೆ ಕಳಿಸೆ!

ಆಟ ಆಡುವಾಗ ಬಳಕೆಯಾಗುವ ಶಿಶುಪ್ರಾಸಗಳೂ ಇರುತ್ತವೆ!
ಕಣ್ಣಾಮುಚ್ಚೆ
ಕಾಡಿಗೆ ಓಡೆ
ಉದ್ದಿನ ಮೂಟೆ
ಉರುಳೇ ಹೋಯ್ತು
ನನ್ನ ಹಕ್ಕಿ ಬಿಟ್ಟೇಬಿಟ್ಟೆ
ನಿನ್ನ ಹಕ್ಕಿ ಹಿಡ್ಕೋ ಹಿಡ್ಕೋ!
ಇನ್ನೊಂದು ಆಟದ ಗೀತೆ.
ಅಪ್ಪಪ್ಪಂಡೆ ಆರಿಗೆಜ್ಜೆ
ಊರೆಲ್ಲ ಕೇಳೊ ಗೆಜ್ಜೆ
ಕಲ್ಲ್ ಕಲ್ಲಮ್ಮು
ಮಾಯಿಮೊಗ್ಗು
ಮಲ್ಲಿಸೀರೆ
ಗಿಲೀಟ್!

ಈ ಆಟದ ಮುಂದುವರಿಕೆಯಲ್ಲಿ ಬರುವ ಕೆಲವು ಸಾಲುಗಳು ಹೀಗಿವೆ.
ಕೈ ಕೈ ಎಲ್ಹೋದೋ?
ಸಂತೆಗ್ ಹೋದೋ
ಸಂತೇಲಿ ಏನ್ ತಂದೋ?
ಬಾಳೆಹಣ್ಣು ತಂದೋ
ಬಾಳೆಹಣ್ಣು ಏನ್ ಮಾಡ್ದೆ?
ಒಳ್ಳೆದು ತಿಂದು ಕೆಟ್ಟದ್ದು ಬಾಗ್ಲಿಂದಕ್ಕೆ ಹಾಕ್ದೆ
ಬಾಗ್ಲೇನು ಕೊಡ್ತು?
ಬಾಗ್ಲು ಚಕ್ಕೆ ಕೊಡ್ತು
ಚಕ್ಕೆ ಏನ್ ಮಾಡ್ದೆ?
ಒಲೆಗೆ ಹಾಕ್ದೆ
ಒಲೆ ಏನ್ ಕೊಡ್ತು?
ಬೂದಿ ಕೊಡ್ತು
ಬೂದಿ ಏನ್ ಮಾಡ್ದೆ?
ತಿಪ್ಪೆಗೆ ಹಾಕ್ದೆ
ತಿಪ್ಪೆ ಏನ್ ಕೊಡ್ತು?
ಗೊಬ್ಬರ ಕೊಡ್ತು
ಗೊಬ್ಬರ ಏನ್ ಮಾಡ್ದೆ?
ಹೊಲಕ್ಕೆ ಹಾಕ್ದೆ
ಹೊಲ ಏನ್ ಕೊಡ್ತು?
ಗರಿಕೆ ಕೊಡ್ತು
ಗರಿಕೆ ಏನ್ ಮಾಡ್ದೆ?
ಹಸಿಗೆ ಹಾಕ್ದೆ
ಹಸ ಏನ್ ಕೊಡ್ತು?
ಹಾಲು ಕೊಡ್ತು
ಹಾಲು ಏನ್ ಮಾಡ್ದೆ?
ಬೊಮ್ಮ(ಬ್ರಹ್ಮ)ಗೆ ಕೊಟ್ಟೆ
ಬೊಮ್ಮ ಏನ್ ಕೊಟ್ಟ?
ಹೆಣ್ಣು ಕೊಟ್ಟ
ಹೆಣ್ಣು ಏನ್ ಮಾಡ್ದೆ?
ದೊಡ್ಡ ಕೆರೇಲಿ ನೂಕ್ದೆ, ಚಿಕ್ಕ ಕೆರೆಲಿ ಕೈತೊಳ್ಕೊಂಡೆ!

ಐದಾರು ಮಕ್ಕಳು ಆಡುವಾಗ ಒಬ್ಬರನ್ನು ಆಟದಿಂದ ಕೈ ಬಿಡಬೇಕಾಗಿ ಬರುತ್ತದೆ. ಆಗ ಕೆಳಗಿನ ಶಿಶುಪ್ರಾಸದ ಒಂದೊಂದು ಸೊಲ್ಲನ್ನು ಒಬ್ಬೊಬ್ಬರಿಗೆ ಹೇಳಿ ‘ಕ್ವಟಾಸ್’ ಎಂಬ ಪದ ಬಂದವನನ್ನು ಹೊರಗೆ ಕಳುಹಿಸಲಾಗುತ್ತದೆ. (ಇದನ್ನು ಚಿತ್ರಗೀತೆಯೊಂದರಲ್ಲಿ ಬಳಸಿಕೊಂಡಿದ್ದಾರೆ)
ಅವಲಕ್ಕಿ
ಪವಲಕ್ಕಿ
ಕಾಂಚನ
ಮಿನಮಿನ
ಡಾಂಡೂಂ
ಕಯ್ಯ
ಕ್ವಟಾಸ್!

ಎರಡೂ ಕೈಗಳನ್ನು ಕೈ ಮುಗಿಯುವ ಭಂಗಿಯಲ್ಲಿ ಹಿಡಿದುಕೊಂಡು, ಒಂದೊಂದು ಸೊಲ್ಲಿಗೆ ಒಂದೊಂದು ಜೊತೆ ಬೆರಳನ್ನು ಬಡಿಯುತ್ತಾ ಹಾಡುವ ಶಿಶುಪ್ರಾಸ ಹೀಗಿದೆ.
ಹಬ್ಬ ಬಂತು ಹಬ್ಬ (ಎರಡೂ ಕಿರುಬೆರಳನ್ನು ಒಂದಕ್ಕೊಂದು ತಟ್ಟಬೇಕು)
ಹಬ್ಬಕ್ಕೆ ಅಕ್ಕಿಯಿಲ್ಲ (ಉಂಗುರದ ಬೆರಳು........)
ಸಾಲ ಮಾಡೋಣ (ಮಧ್ಯದ ಬೆರಳು..........)
ಸಾಲ ಯಾರು ತೀರ್‍ಸೋರು? (ತೋರುಬೆರಳು...............)
ನಾನು ಇದ್ದೀನಲ್ಲ (ಎಂದು, ಹೆಬ್ಬೆರಳನ್ನು ಮೇಲೆತ್ತಿ ‘ಡನ್’ ಅನ್ನುವಂತೆ ತೋರಿಸಬೇಕು)

ಒಗಟಿನ ಸ್ವರೂಪವನ್ನು ಪಡೆದಿರುವ ಒಂದು ಶಿಶುಪ್ರಾಸ ಹೀಗಿದೆ. ಸಾಮಾನ್ಯವಾಗಿ ಇದನ್ನು ಹೇಳುವಾಗ ಒಬ್ಬರು ಪ್ರಶ್ನೆ ಕೇಳುತ್ತಿರುವಂತೆ, ಇನ್ನೊಬ್ಬರು ಪಟಪಟನೆ ಉತ್ತರ ಹೇಳುತ್ತಾ ಹೋಗುತ್ತಾರೆ.
ಏರಿ ಹಿಂದೆ ಕೆಂದೆತ್ತು ಬಾಲ ಬೀಸುತ್ತೆ
ಭತ್ತ
ಭತ್ತಕ್ಕೆ ಮೂರು ಮುತ್ತು
ಇಬ್ಬನಿ
ಇಬ್ಬನಿಗೊಬ್ಬಣ್ಣ
ಬಿಸಿಲು
ಬಿಸಿಲಿಗೆ ಬಿರಿಯಣ್ಣ
ಕೆಕ್ಕರಿಕೆ ಹಣ್ಣು
ಕೆಕ್ಕರಿಕೆ ಹಣ್ಣು ಕೆರಿಯಣ್ಣ
ಹಲ್ಲು
ಹಲ್ಲಿಗೆ ಮೂರು ಸೊಲ್ಲು
ಎಲೆ ಅಡಿಕೆ ಸುಣ್ಣ

ನಾಲಿಗೆ ಹೊರಳಲು ಸಹಾಯ ಮಾಡುವಂತಹ ಪದಪುಂಜಗಳನ್ನು ನಾವು ಚಿಕ್ಕ ಹುಡುಗರಾಗಿದ್ದಾಗ, ನಮ್ಮ ಕಡೆ ದೊಡ್ಡವರು ಹೇಳಿಕೊಡುತ್ತಿದ್ದರು. ಅವು ಮೂರು ನೆನಪಿವೆ.
ಅರಳಿಮರಬುಡತಳಿರೊಡೆದೆರಡೆಲೆಯಾಯ್ತು
ತರಿಕೆರೆಕೆರೆಏರಿಮೇಲೆಮೂರುಕರಿಕುರಿಮರಿಮೇಯ್ತಿದ್ವೋ (ಇದನ್ನು ಚಿತ್ರಗೀತೆಯೊಂದರಲ್ಲಿ ಬಳಸಿಕೊಂಡಿದ್ದಾರೆ)
ಸಂಕಂಗಪ್ಪನಮಗಮರಿಸಂಕಂಗಪ್ಪ

ವಾಟೀಸ್ ದಿಸ್
ಹೊಟ್ಟೆಗಿಲ್ಲದೆ ಪುಸ್
ಈ ಸಾಲುಗಳನ್ನು ನಾವು ಮೂರನೇ ತರಗತಿಯಲ್ಲಿದ್ದಾಗ ಹೆಚ್ಚಾಗಿ ಹೇಳಿಕೊಳ್ಳುತ್ತಿದ್ದ ನೆನಪು. ಇದನ್ನು ಯಾವಾಗಲೂ ಹೇಳುತ್ತಿದ್ದುದನ್ನು ಕಂಡು ನಮ್ಮ ತಂದೆ ನನಗೆ ಎರಡೇಟು ಕೊಟ್ಟಿದ್ದು ನೆನಪಿದೆ!
ಇವಲ್ಲದೆ ಅಶ್ಲೀಲವೆನ್ನಬಹುದಾದ ಕೆಲವು ಶಿಶುಪ್ರಾಸಗಳೂ ಇವೆ. ನನಗೆ ನೆನಪಿಗೆ ಬರುತ್ತಿರುವುದು ಎರಡು ಮಾತ್ರ. ಅದರಲ್ಲಿ ಒಂದು ಅರ್ಧ ಮಾತ್ರ! ಆದರೂ ಆ ಒಂದೂವರೆ ಶಿಶುಪ್ರಾಸವನ್ನು ಇಲ್ಲಿ ಟೈಪಿಸಲು ‘ನಮಸೆಮಂ’ (ನನ್ನ ಮನಸ್ಸಿನ ಸೆನ್ಸಾರ್ ಮಂಡಳಿ) ಒಪ್ಪುತ್ತಿಲ್ಲ, ಕ್ಷಮಿಸಿ!

Monday, May 25, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 16

ಎಂ.ಕೆ.ಸ್ವಾಮಿ ಎಂಬ ವಿದ್ಯಾರ್ಥಿಯೂ ಮತ್ತು ಅವನ ನಾಯಿಯು
ಹಾಸ್ಟೆಲ್ಲಿನ ನನ್ನ ಜೀವನದಲ್ಲಿ ನಾನು ಕಂಡ ನಾಲ್ಕಾರು ವಿಶೇಷ ವಿದ್ಯಾರ್ಥಿಗಳ ಬಗ್ಗೆ ಇಲ್ಲಿ ಹೇಳಬಯಸುತ್ತೇನೆ. ಎಂ.ಕೆ.ಸ್ವಾಮಿ ಎಂಬ ವಿದ್ಯಾರ್ಥಿಯ ಹೆಸರನ್ನು ಮೊದಲೇ ಪ್ರಸ್ತಾಪಿಸಿದ್ದೇನೆ. ನೋಡಲು ಗಟ್ಟಿಮುಟ್ಟಾಗಿ ಆ ವಯಸ್ಸಿಗೆ ತುಸು ಹಚ್ಚೇ ಎನ್ನಿಸುವಂತ ಎತ್ತರಕ್ಕಿದ್ದ ಆತ ಮಂಡ್ಯ ಜಿಲ್ಲೆ, ಕಿಕ್ಕೇರಿ ಕಡೆಯವನು. ಈ ಮೊದಲು ಹೇಳಿದ ಡಿ.ಎಸ್.ಎನ್. ಅವರ ಊರಿಗೆ ಹತ್ತಿರದವನಂತೆ! ಈತ ನನಗಿಂತ ಒಂದು ತರಗತಿ ಮುಂದಿದ್ದ. ಆದ್ದರಿಂದ ಆತನೊಂದಿಗೆ ನನ್ನ ಒಡನಾಟ ಎರಡು ವರ್ಷದ್ದು. ಈತ ಊಟ ಮಾಡುವುದರಲ್ಲಿ, ಕೆಲಸ ಮಾಡುವುದರಲ್ಲಿ ಯಾವಾಗಲೂ ಮುಂದಾಗಿರುತ್ತಿದ್ದ. ಒಮ್ಮೆ ಊಟಕ್ಕೆ ಕುಳಿತನೆಂದರೆ ಏಳು ಮುದ್ದೆಗಳನ್ನಾದರೂ ಸಲೀಸಾಗಿ ಊಟ ಮಾಡಿಬಿಡುತ್ತಿದ್ದ. ಜೊತೆಗೆ ಒಂದೆರಡು ತಟ್ಟೆ ಅನ್ನವನ್ನೂ ಮುಗಿಸಿಬಿಡುತ್ತಿದ್ದ. ವಾರ್ಡನ್ ಅವರೇ ಆತನಿಗೆ ತಿನ್ನುವಷ್ಟು ಊಟ ಬಡಿಸುವಂತೆ ಹೇಳಿಬಿಟ್ಟಿದ್ದರು.
ಆತನಿಗೆ ಧರ್ಮಣ್ಣ ಭಟ್ಟರೆಂದರೆ ಅಚ್ಚುಮೆಚ್ಚು. ಬೆಳೆಯುವ ಹುಡುಗ ಎಂದು ಧರ್ಮಣ್ಣ ಆತ ತಿನ್ನುವಷ್ಟನ್ನು ಬಡಿಸಿಬಿಡುತ್ತಿದ್ದ. ಆದರೆ ಅಪ್ಪಣ್ಣ ಹಾಗಲ್ಲ. ಆತನ ಮನೋಸ್ಥಿತಿ ಸರಿಯಿಲ್ಲದಿದ್ದರೆ, ಅದರ ಸಿಟ್ಟೆಲ್ಲಾ ಹುಡುಗರ ಮೇಲೆ ಹಾಕುತ್ತಿದ್ದ. ಒಬ್ಬರಿಗೆ ಒಂದೂವರೆ ಮುದ್ದೆಗಿಂತ ಹೆಚ್ಚು ಬಡಿಸುತ್ತಿರಲಿಲ್ಲ. ಅನ್ನವನ್ನು ಲೆಕ್ಕಕ್ಕೆ ಎರಡು ಸ್ಪೂನ್ ಎಂದು ಅತ್ಯಂತ ಕಡಿಮೆ ಬಡಿಸುತ್ತಿದ್ದ. ಆ ದಿನಗಳಲ್ಲಿ ಪಾಪ, ಸ್ವಾಮಿಗೆ ಊಟ ಸಾಕಾಗುತ್ತಿರಲಿಲ್ಲ. ಅದಕ್ಕೆ ಆತ ಕಂಡುಕೊಂಡಿದ್ದ ಮಾರ್ಗವೆಂದರೆ ತನ್ನ ಎರಡೂ ಕಡೆ, ಕಡಿಮೆ ಊಟ ತಿನ್ನುವ ಇಬ್ಬರನ್ನು ಊಟಕ್ಕೆ ಕೂರಿಸಿಕೊಳ್ಳುತ್ತಿದ್ದ. ಆ ಇಬ್ಬರಲ್ಲಿ ನಾನೂ ಒಬ್ಬನಾಗಿದ್ದೆ. ಬಡಿಸಲು ಬಂದಾಗ ಏನನ್ನೂ ಬೇಡ ಎನ್ನದೆ ಬಡಿಸಿಕೊಂಡು, ಅದನ್ನು ಎಂ.ಕೆ. ಸ್ವಾಮಿಯ ತಟ್ಟೆಗೆ ವರ್ಗಾಯಿಸಿಬಿಡುತ್ತಿದ್ದೆವು.
ಸ್ವತಃ ಸ್ವಾಮಿಗೇ ಊಟ ಸಾಕಾಗುತ್ತಿರಲಿಲ್ಲವಾದರೂ ಆತ ಒಂದು ನಾಯಿಮರಿಯನ್ನು ಸಾಕಿಕೊಂಡಿದ್ದ. ಅದಕ್ಕೇನು ಆತ ಊಟ ಹಾಕಬೇಕಾಗಿರಲಿಲ್ಲ. ಏಕೆಂದರೆ ಊಟದ ಕೊನೆಯಲ್ಲಿ ಹುಡುಗರೆಲ್ಲ ತಮ್ಮ ತಮ್ಮ ತಟ್ಟೆಗಳಲ್ಲಿ ಉಳಿದದ್ದನ್ನು ಹಾಕಿದರೆ ಅದಕ್ಕೆ ಸಾಕಾಗಿತ್ತು. ಆದರೂ ಎಂ.ಕೆ.ಸ್ವಾಮಿ ಮಾತ್ರ ಒಂದೆರಡು ಗುಕ್ಕನ್ನಾದರೂ ತನ್ನ ಕೈಯಾರೆ ಅದಕ್ಕೆ ತಿನ್ನಿಸುತ್ತಿದ್ದ. ಅದೂ ದಷ್ಟಪುಷ್ಟವಾಗಿ ಬೆಳೆದಿತ್ತು. ಅದಕ್ಕೆ ಆತನೇ ಸ್ನಾನ ಮಾಡಿಸುತ್ತಿದ್ದ. ತನ್ನ ಪಕ್ಕದಲ್ಲಿಯೇ ಮಲಗಿಸಿಕೊಳ್ಳುತ್ತಿದ್ದ. ಒಮ್ಮೆ ಇದನ್ನು ಆಡಿಕೊಂಡವನೊಂದಿಗೆ ಬೆಟ್ ಕಟ್ಟಿ, ನಾಯಿಯೊಂದಿಗೆ ಒಂದೇ ತಟ್ಟೆಯಲ್ಲಿ ಊಟ ಕೂಡ ಮಾಡಿದ್ದ! ಒಂದೇ ತಟ್ಟೆಯಲ್ಲಿ ಒಂದು ಕಡೆ ಅವನು ಊಟ ಮಾಡುತ್ತಿದ್ದರೆ ಆತನ ಪ್ರೀತಿಯ ನಾಯಿ ತಟ್ಟೆಯ ಇನ್ನೊಂದು ಬದಿಯಲ್ಲಿ ತಿನ್ನುತ್ತಿದ್ದುದ್ದನ್ನು ನಾವೆಲ್ಲಾ ಪರಮಾಶ್ಚರ್ಯವೆಂಬಂತೆ ನೋಡಿದ್ದೆವು. ಅಂದ ಹಾಗೆ ಆತ ಆ ಬೆಟ್‌ನಲ್ಲಿ ಗೆದ್ದದ್ದು, ಮಾರನೆಯ ದಿನ ಬೆಳಿಗ್ಗೆ ಮಂಜಣ್ಣನ ಹೋಟೆಲಿನ ಹತ್ತು ಇಡ್ಲಿಗಳನ್ನು! ಈತನ ಈ ಗಟ್ಟಿತನವನ್ನು ನೋಡಿಯೇ ಡಿ.ಎಸ್.ಎನ್. ತೋಟದ ಕೆಲಸ ಮಾಡಲು ರಜಾದಿನಗಳಲ್ಲಿ ಚಿಕ್ಕಯ್ಯ ಮತ್ತು ನನ್ನಣ್ಣನೊಂದಿಗೆ ಈತನನ್ನೂ ಕರೆದುಕೊಂಡು ಹೋಗಿದ್ದಿರಬಹುದು! ತನ್ನ ಮೂರನೇ ಪ್ರಯತ್ನದಲ್ಲಿ ಆತ ಹತ್ತನೇ ತರಗತಿ ಪಾಸು ಮಾಡಿದ. ನಂತರ ಮಿಲಿಟರಿ ಸೇರಿಕೊಂಡನೆಂದು ಯಾರೋ ಹೇಳಿದ್ದು ನೆನಪಿದೆ.
ಇಂಗ್ಲೀಷ್‌ನಲ್ಲಿ ಇಪ್ಪತ್ತಮೂರುವರೆ ಅಕ್ಷರ!
ಚಂದ್ರಯ್ಯ ಎಂಬ ವಿದ್ಯಾರ್ಥಿ ಐದನೇ ತರಗತಿಯಿಂದಲೂ ಹಾಸ್ಟೆಲ್ಲಿನಲ್ಲಿದ್ದವನು. ಪರಿಶಿಷ್ಟ ಜಾತಿ ಮಾತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಐದನೇ ತರಗತಿಯಿಂದಲೂ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿತ್ತು. ನನ್ನದೇ ತರಗತಿಯವನು. ಆದರೆ ಇಂಗ್ಲೀಷ್ ಇರಲಿ ಕನ್ನಡವನ್ನೂ ಓದಲು ಬರೆಯಲು ಬರುತ್ತಿರಲಿಲ್ಲ. ಬಹುಶಃ ಅಷ್ಟು ದಡ್ಡ ವಿದ್ಯಾರ್ಥಿಯನ್ನು ನಾನೆಂದೂ ಕಂಡಿಲ್ಲ. ಆದರೂ ಪ್ರತಿ ವರ್ಷ ಪಾಸಾಗಿ ಹತ್ತನೇ ತರಗತಿಯವರಗೆ ಬಂದಿದ್ದ. ನಾವು ಹತ್ತನೇ ತರಗತಿಯಲ್ಲಿದ್ದಾಗ ವಾರ್ಡನ್ ಜಟಗೊಂಡ ಅವರು ಪಾಠ ಮಾಡುತ್ತಿದ್ದರೆಂದು ಹಿಂದೆ ಹೇಳಿದೆನಲ್ಲ, ಹಾಗೆ ಪಾಠ ಮಾಡುವಾಗ ಅವರು ಒಬ್ಬರ ಕೈಯಲ್ಲಿ ಪಾಠ ಓದಿಸುತ್ತಾ ಬೇರೆಯವರು ಕೇಳಿಸಿಕೊಳ್ಳುವಂತೆ ಹೇಳಿ, ಕೊನೆಯಲ್ಲಿ ತಾವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಹುಡುಗರು ಉತ್ತರ ಹೇಳದಿದ್ದಾಗ ಅವರೇ ಉತ್ತರವನ್ನು ಹೇಳಿ, ಪರೀಕ್ಷೆಯಲ್ಲಿ ಹೇಗೆ ಬರೆಯಬೇಕೆಂದು ಹೇಳುತ್ತಿದ್ದರು.
ಅದೊಂದು ದಿನ ಚಂದ್ರಯ್ಯನನ್ನು ಓದಲು ಹೇಳಿದರು. ಇಂಗ್ಲೀಷ್ ಪಾಠ. ಪುಸ್ತಕ ಹಿಡಿದುಕೊಂಡು ಎದ್ದು ನಿಂತ ಚಂದ್ರಯ್ಯ ಒಂದೆರಡು ನಿಮಿಷವಾದರೂ ಬಾಯಿ ಬಿಡಲಿಲ್ಲ. ನಮಗೆಲ್ಲಾ ಚಂದ್ರಯ್ಯನ ಬಂಡವಾಳ ಗೊತ್ತಿದ್ದರಿಂದ, ಏನಾಗುತ್ತದೆಯೋ ನೋಡೋಣ ಎಂದು ಕಾದು ಕುಳಿತಿದ್ದೆವು. ‘ಓದೋ...’ ವಾರ್ಡನ್ ಮತ್ತೊಮ್ಮೆ ಹೇಳಿದರು. ಮತ್ತೂ ಒಂದು ನಿಮಿಷ ಕಳೆಯಿತು. ಅವರಿಗೆ ರೇಗಿ, ‘ಏನಲೇ ಮಂಗ್ಯಾ ನನಮಗನ. ಓದು ಎಂದರೆ ಕಣ್ ಬಿಡ್ತಾ ನಿಂತೀಯಲ್ಲೊ. ಕಣ್ಣು ಕಾಣಂಗಿಲ್ಲೇನು. ಹೇಳು’ ಎಂದು ಪುಸ್ತಕ ತಿರುಗಿಸಿ ಬೆರಳಿನಲ್ಲಿ ನಿರ್ದೇಶಿಸುತ್ತಾ ‘ಟಿ.ಹೆಚ್.ಇ. ಅಂದರೆ ‘ದಿ’, ಹೀಗೆ ಹೇಳಲೆ ಮಗನ’ ಎಂದು ಕೂಗಿದರು. ಅವನು ಪ್ರಾಮಾಣಿಕವಾಗಿ ಅಷ್ಟನ್ನು ಮಾತ್ರ ಹೇಳಿ ಮತ್ತೆ ಬಾಯಿಗೆ ಬೀಗ ಬಡಿದುಕೊಂಡ!
ಸಿಟ್ಟಿಗೆದ್ದ ವಾರ್ಡನ್ ‘ಏನಲೇ ಮಗನ ಮೆಟ್ರಿಕ್ ಕಲಿಯಾಕ ಹತ್ತೀಯಾ. ಇಂಗ್ಲೀಷ್ ಅಕ್ಷರ ಬರಾಂಗಿಲ್ಲ ಅಂದ್ರ ಹೆಂಗ! ಹೋಗಲಿ ಇಂಗ್ಲೀಷ್‌ನಾಗ ಎಷ್ಟು ಅಕ್ಷರದಾವಪ್ಪ. ಅದಾರ ಹೇಳು ನೋಡಾನ’ ಎಂದರು.
ಆತ ಯಾವ ಅಳುಕೂ ಇಲ್ಲದೆ ‘ಇಪ್ಪತ್ತನಾಲ್ಕು ಸಾರ್’ ಎಂದು ಬಿಟ್ಟ. ನಾವೆಲ್ಲಾ ‘ಗೊಳ್’ ಎಂದು ನಕ್ಕೆವು. ಆದರೆ ಜಟಗೊಂಡ ಅವರಿಗೆ ನಿಜವಾಗಿ ಸಿಟ್ಟು ಬಂದಿತ್ತು. ಹತ್ತನೇ ತರಗತಿಯಲ್ಲಿ ಓದುತ್ತಿರುವ ಒಬ್ಬ ಹುಡುಗ ಇಷ್ಟರ ಮಟ್ಟಿಗೆ ದಡ್ಡ ಇದ್ದರೆ ಹೇಗೆ ಎಂಬ ಚಿಂತೆ ಅವರದಾಗಿತ್ತು ಎನ್ನಿಸುತ್ತದೆ. ಅಲ್ಲದೆ ಅಲ್ಲಿಯವರೆಗೆ ಒಂದು ವರ್ಷವೂ ಫೇಲ್ ಆಗದೆ ಬಂದಿದ್ದ ಆತನನ್ನು ಕಂಡು ಅವರಿಗೆ ಮೈಯೆಲ್ಲಾ ಉರಿದಿರಬೇಕು.
‘ಹೋಗಲಿ ಮಗನಾ. ಕನ್ನಡನಾದರೂ ಓದುತ್ತೀಯಾ?’ ಅಂದರು. ಆತ ಹೌದೆಂದು ತಲೆಯಾಡಿಸಿದ. ಕನ್ನಡ ಪುಸ್ತಕ ಬಿಡಿಸಿ ಕೊಟ್ಟು ಓದು ಎಂದಾಗ ಮತ್ತೆ ಬಾಯಿಗೆ ಬೀಗ ಬಡಿದುಕೊಂಡವನಂತೆ, ಗೊಮ್ಮಟನಂತೆ ನಿಂತುಬಿಟ್ಟ. ಇದನ್ನು ಕಂಡು ಅವರ ಸಹನೆ ಒಡೆಯಿತು. ಹೊಡೆಯುವಂತೆ ಕೈ ಎತ್ತುತ್ತಾ, ‘ಅಲ್ಲವೋ ಸೂಳಿಮಗನ, ಕನ್ನಡ ಕೂಡ ಓದಾಕೆ ಬರಾಂಗಿಲ್ಲ. ಇಂಗ್ಲೀಷ್‌ನಾಗೆ ಎಷ್ಟು ಅಕ್ಷರ ಅದಾವ ಅಂತ ಗೊತ್ತಿಲ್ಲ....’ ಅಂತ ಅವರು ಹೇಳುತ್ತಿರುವಾಗಲೇ ಚಂದ್ರಯ್ಯ ‘ಗೊತ್ತು ಸಾರ್, ಗೊತ್ತು ಸಾರ್. ಇಪ್ಪತ್ತಮೂರೂವರೆ ಅಕ್ಷರ ಅವೆ ಸಾರ್!’ ಎಂದು ಕೂಗಿಕೊಂಡ.
ಎತ್ತಿದ ಕೈಯನ್ನು ಹಾಗೆಯೇ ಇಳಿಸಿದ ಜಟಗೊಂಡ ಅವರು ಸುಸ್ತಾಗಿ ಅಲ್ಲಿದ್ದ ಟ್ರಂಕ್ ಮೇಲೆ ಕುಳಿತು ಬಿಟ್ಟರು. ಸ್ವಲ್ಪ ಹೊತ್ತಿನ ನಂತರ ‘ಮಗನ ನಾನೀಗಲೇ ಹಾಸ್ಟೆಲ್ ಬಿಟ್ಟು ನಿನ್ನ ಓಡಿಸಿಬಿಡಬಹುದು. ಆದರೆ ಹುಡ್ಗ ಹತ್ತನೇ ತರಗತಿಯವರೆಗೆ ಪಾಸು ಮಾಡಿದ್ದಾನಲ್ಲ ಅಂತ ಯಾರದ್ರು ಕೇಳಿದರೆ ನಾನೇನೂ ಉತ್ತರ ಕೊಡಂಗಿಲ್ಲ. ಆದ್ದರಿಂದ ಇನ್ನೊಂದಾರು ತಿಂಗಳು ಹಾಸ್ಟೆಲ್ಲಿನ ಫ್ರೀ ಊಟ ತಿಂದು, ಪರೀಕ್ಷೆ ಕುಂತ ನಾಟ್ಕ ಮಾಡಿ ಮನಿಗೆ ಹೊರಡು ಮಗನ’ ಎಂದು ದುಃಖದ ಧ್ವನಿಯಲ್ಲಿ ಹೇಳಿ ಎದ್ದು ಹೊರಟರು. ಅಂದು ಪಾಠ ಮುಂದುವರೆಯಲಿಲ್ಲ.
ಟಿ.ಹೆಚ್.ಇ. - ದಿ; ಟಿ.ಐ.ಜಿ.ಇ.ಆರ್. - ಟೈಗರ್ ರಮೇಶ!
ರಮೇಶ ಎಂಬ ಇನ್ನೊಬ್ಬ ವಿದ್ಯಾರ್ಥಿಯಿದ್ದ. ಆತನನ್ನು ಕೆರೆಗಳ್ಳಿ ಎಂದು ಅವನ ಊರಿನ ಹೆಸರಿನಿಂದಲೇ ಕರೆಯುತ್ತಿದ್ದೆವು. ಆತ ಹಿಂದೆ ಹೆಡ್ಮಾಸ್ಟರಾಗಿದ್ದ ವೆಂಕಟಪ್ಪನವರ ದೂರದ ಸಂಬಂಧಿಯಂತೆ! ರನ್ನಿಂಗ್ ರೇಸ್‌ನಲ್ಲಿ ಪ್ರವೀಣನಾಗಿದ್ದ ಆತನಿಗೆ ಎ.ಬಿ.ಸಿ.ಡಿ. ನೋಡಿಕೊಂಡು ಓದಲು ಬರೆಯಲು ಮಾತ್ರ ಬರುತ್ತಿತ್ತು. ಪುಸ್ತಕ ಮುಚ್ಚಿ ಬರೆಯಲಾಗಲೀ, ಪದಗಳ ಸ್ಪೆಲ್ಲಿಂಗ್ ಹೇಳಲಾಗಲೀ ಆತನಿಗೆ ಕೊನೆಯವರೆಗೂ ಬರಲೇಯಿಲ್ಲ. ‘ಹನ್ನೆರಡು ಅಟೆಂಪ್ಟ್ ಆದರೂ ಪಾಸಾಗದಿದ್ದರೆ, ಅವರೇ ಎಲ್ಲರನ್ನು ಗಾಂಧಿ ಪಾಸ್ ಮಾಡುತ್ತಾರೆ’ ಎಂದು ಆತ ಬಲವಾಗಿ ನಂಬಿದ್ದ!
ಒಂದು ದಿನ ಗಣಿತ ಮೇಷ್ಟ್ರಾದ ಜಿ.ಎಸ್.ಎಸ್. ಇಂಗ್ಲೀಷ್ ಕ್ಲಾಸ್ ತೆಗೆದುಕೊಂಡು ಇಂಗ್ಲೀಷ್ ಬಗ್ಗೆ ಪಾಠ ಮಾಡುತ್ತಿದ್ದರು. ಆ ದಿನ ಹಿಂದಿನ ಬೆಂಚಿನಲ್ಲಿ ಕುಳಿತು ಗಲಾಟೆ ಮಾಡುತ್ತಿದ್ದ ಈ ರಮೇಶ ಅವರ ಕಣ್ಣಿಗೆ ಬಿದ್ದ. ಅಪರೂಪಕ್ಕೆ ಇಂಗ್ಲೀಷ್ ಕ್ಲಾಸ್ ತೆಗೆದುಕೊಂಡು ತಮ್ಮ ಇಂಗ್ಲೀಷ್ ಪಾಂಡಿತ್ಯವನ್ನು ಅದ್ಭುತವಾಗಿ ಪ್ರದರ್ಶನ ಮಾಡುತ್ತಿದ್ದ ಬಿಸಿರಕ್ತದ ಯುವ ಮೇಷ್ಟ್ರು ಜಿ.ಎಸ್.ಎಸ್. ಅವರಿಗೆ ಹೇಗಾಗಿರಬೇಡ! ಗಣಿತದ ಕ್ಲಾಸ್‌ನಲ್ಲಿ ರಮೇಶ ದಡ್ಡನೆಂದು ಅವರಿಗೆ ತಿಳಿದಿದ್ದರಿಂದ ಅವನನ್ನು ಎದ್ದು ನಿಲ್ಲಿಸಿ ಪಾಠ ಓದುವಂತೆ ಹೇಳಿದರು. ಪುಸ್ತಕ ಹಿಡಿದು ನಿಂತ ರಮೇಶ ಟಿ.ಹೆಚ್.ಇ. - ದಿ, ಟಿ.ಐ.ಜಿ.ಇ.ಆರ್. - ಟೈಗರ್ ಎಂದು ಅಕ್ಷರಗಳನ್ನು ಹೇಳುತ್ತಾ ನಂತರ ಕೂಡಿಸಿ ಪದವನ್ನು ಹೇಳುತ್ತಾ ಓದತೊಡಗಿದ. ಅವನನ್ನು ಕೀಟಲೆ ಮಾಡಬೇಕೆಂದೋ ಏನೋ ಜಿ.ಎಸ್.ಎಸ್. ‘ಹಿ ಎಂಬುದಕ್ಕೆ ಸ್ಪೆಲ್ಲಿಂಗ್ ಹೇಳು’ ಎಂದರು, ಆತ ಹೇಳಲಿಲ್ಲ. ಅವರು ಅದನ್ನು ಬೋರ್ಡ್ ಮೇಲೆ ಬರೆದು ‘ಇದು ಏನು?’ ಎಂದರು. ಆತ ನಿಧಾನವಾಗಿ ‘ಹೆಚ್.ಇ. - ಹಿ’ ಎಂದು ಹೇಳಿದ. ಅದನ್ನು ಡಸ್ಟರ್‌ನಿಂದ ಒರೆಸಿದ ಜಿಎಸ್.ಎಸ್. ಮತ್ತೆ ‘ಹಿ’ ಎಂಬುದಕ್ಕೆ ಸ್ಪೆಲ್ಲಿಂಗ್ ಹೇಳು’ ಎಂದರು. ಪುಣ್ಯಾತ್ಮ ರಮೇಶ ಬಾಯಿ ಬಿಡಲೇ ಇಲ್ಲ. ಮೇಷ್ಟ್ರೇ ಮೊದಲು ನಗಲು ಪ್ರಾರಂಭಿಸಿದ್ದರಿಂದ ತರಗತಿಯ ಎಲ್ಲರೂ ಗೊಳ್ ಎಂದು ನಗಲಾರಂಭಿಸಿದರು. ಅವರು ಮತ್ತೆ ‘ಷಿ’ ಎಂಬ ಪದವನ್ನೂ ಅದೇ ರೀತಿ ಬರೆದು ಅಳಿಸಿ ಆತನನ್ನು ಗೋಳು ಹುಯ್ದುಕೊಂಡರು. ಇಡೀ ತರಗತಿಯೇ ನಕ್ಕು ನಕ್ಕು ಸುಸ್ತಾಯಿತು.
ಈ ಎರಡು ಘಟನೆಗಳನ್ನು ಇಲ್ಲಿ ನಾನು ಪ್ರಸ್ತಾಪಿಸಲು ಕಾರಣ ಇಷ್ಟೆ. ಇಂಗ್ಲೀಷ್ ಎಂಬುದು ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಭೂತವಾಗಿಯೇ ಕಾಡುತ್ತಿದೆ. ಅದು ನಮ್ಮದಾಗಲು ಸಾಧ್ಯವೇ ಆಗಿಲ್ಲ. ವ್ಯವಸ್ಥೆಯೂ ಅದಕ್ಕೆ ಪೂರಕವಾಗಿಲ್ಲ. ಇಂದೂ ತಕ್ಕಮಟ್ಟಿಗಾದರೂ ಒಳ್ಳೆಯ ಇಂಗ್ಲೀಷ್‌ನ್ನು ಕಲಿಸುವ ಮೇಷ್ಟ್ರುಗಳೂ ಹೆಚ್ಚಿಲ್ಲ. ಬಿ.ಎಸ್ಸಿ. ಪದವಿಯ ನಂತರ ಎರಡು ಸ್ನಾತಕೋತ್ತರ ಪದವಿ, ಒಂದು ಪಿಹೆಚ್.ಡಿ ಮಾಡಿರುವ ನನಗೂ ಇಂಗ್ಲೀಷ್ ಇನ್ನೂ ಕಬ್ಬಿಣದ ಕಡಲೆಯೇ ಆಗಿದೆ! ಆ ವಿಷಯವಾಗಿ ಆಗಾಗ ಕೀಳರಿಮೆಯೂ ಕಾಡುತ್ತದೆ!
ಅಂದಿನಂತೆ ಇಂದಿಗೂ ಇಂಗ್ಲೀಷ್ ಬೇಕೆ ಬೇಡವೇ ಎಂಬುದರ ಬಗ್ಗೆಯೇ ವೃಥಾ ವಾದವಿವಾದಗಳು ನಡೆಯುತ್ತಿರುವುದು ಮಾತ್ರ ದುರದೃಷ್ಟಕರ. ಇಂಗ್ಲೀಷ್ ಬೇಡವೇ ಬೇಡ ಎನ್ನುವವರು ಮೊದಲು ಯೋಚಿಸಬೇಕಾದ್ದು ಇಂಗ್ಲೀಷ್ ಇಂದಿನ ಮತ್ತು ಮುಂದಿನ ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಾದ ಭಾಷೆಯಾಗಿದೆಯೆ ಇಲ್ಲವೆ ಎಂಬ ಸಂಗತಿ. ಆಗಿಲ್ಲ ಎಂದು ಮೊಂಡುವಾದ ಹೂಡುವವರಿಗೆ ನಾವೇನು ಮಾಡಲಾಗುವುದಿಲ್ಲ. ಜಾಗತೀಕರಣದ ಒಳ್ಳೆಯ ಫಲವನ್ನು ನಾವು ಅನುಭವಿಸಲು ಸಿದ್ಧರಾಗಿರುವಂತೆ ಅದರಿಂದ ಬರುವ ಕೆಟ್ಟದ್ದನ್ನು ಅನುಭವಿಸಲೂ ನಾವು ಸಿದ್ಧರಿರಬೇಕಾಗುತ್ತದೆ. ಬರುವ ಒಳ್ಳೆಯ ಫಸಲನ್ನು ತಿನ್ನಲು ಕೇವಲ ಒಂದು ವರ್ಗಕ್ಕೆ ಸಾಧ್ಯವಾದರೆ, ಅದರ ಕೆಟ್ಟ ಫಸಲು ಇನ್ನೊಂದು ವರ್ಗಕ್ಕೆ ಮೀಸಲಾಗಬೇಕಾಗುತ್ತದೆ. ಇದಾಗಬಾರದು. ಆದ್ದರಿಂದಲೇ ‘ಒಂದು ಭಾಷೆಯಾಗಿ ಇಂಗ್ಲೀಷ್ ಅಗತ್ಯವಾಗಿ ಬೇಕು’ ಎಂದರೆ ತಪ್ಪು ಎನ್ನಲಾಗುವುದಿಲ್ಲ ಅಲ್ಲವೆ?

Wednesday, May 20, 2009

ಅಜ್ಜ ಹೇಳಿದ್ದ ‘ಕೋತಿಯ ಕಥೆ’ - (5)

ಒಂದು ಊರಲ್ಲಿ ಒಂದು ಕೋತಿ ಇತ್ತು. ಒಂದು ದಿವಸ ಅದರ ಬಾಲ ಮುಳ್ಳಿಗೆ ಸಿಕ್ಕೊಂಡಿತ್ತು. ಆಗ ಆ ದಾರಿಲಿ ಒಬ್ಬ ಕುಡ್ಲು ಹಿಡ್ಕೊಂಡು ಬರ್‍ತಿದ್ದ. ಕೋತಿ ‘ಅಣ್ಣ ಅಣ್ಣ, ನನ್ನ ಬಾಲ ವಸಿ ಬಿಡಿಸ್ತೀಯಾ’ ಅಂತು. ಅವನು ಅದರ ಬಾಲ ಬಿಡಸುವಾಗ ಅಡ್ಡ ಬರ್‍ತಿದ್ದ ಮುಳ್ಳುಗಳನ್ನು ಕತ್ತರಿಸುವಾಗ, ಕೋತಿ ಬಾಲವೂ ತುಂಡಾಗಿ ಹೋಯ್ತು! ಆಗ ಕೋತಿ ‘ಏನಣ್ಣ, ಬಾಲ ಬಿಡ್ಸು ಅಂದ್ರೆ, ಅದನ್ನೇ ಕತ್ರಿಸಿಬಿಟ್ಟೆ. ಈಗ ನನ್ನ ಬಾಲ ಸರಿಮಾಡ್ಕೊಡು. ಇಲ್ಲಾಂದ್ರೆ ನಿನ್ನ ಕುಡ್ಲು ಕೊಡು’ ಅಂದ್ಬುಡ್ತು. ಅವನು ಕುಡ್ಲು ಕೊಟ್ಟ .
ಇತ್ತ ಕೋತಿ ಕುಡ್ಲು ಹಿಡ್ಕೊಂಡು ಬರ್‍ತಿರಬೇಕಾದ್ರೆ ಒಬ್ಬ ತೆಂಗಿನ್ಕಾಯಿನ ಹಲ್ಲಲ್ಲಿ ಸುಲೀತಿದ್ದ. ಆಗ ಕೋತಿ ‘ಅಣ್ಣ ಹಲ್ಲಲ್ಲಿ ಏಕ್ ಸುಲಿತೀಯಾ? ತಗೋ ಕುಡ್ಲು’ ಅಂತ ಕೊಡ್ತು. ಅವನು ಕುಡ್ಲು ತಗೊಂಡು ಕಾಯಿ ಸುಲಿದು, ಅದನ್ನು ಹೊಡಿಬೇಕಾದ್ರೆ ಕುಡ್ಲು ಮುರ್‍ದೋಯ್ತು! ಆಗ ಕೋತಿ ‘ಅಯ್ಯೋಯ್ಯೋ ನನ್ನ ಕುಡ್ಲು ಮುರ್‍ದೋಯ್ತು. ಈಗ ನನ್ನ ಕುಡ್ಲು ಸರಿ ಮಾಡ್ಕೊಡು. ಇಲ್ಲಾಂದ್ರೆ ನಿನ್ನ ತೆಂಗಿನ್ಕಾಯಿನೆ ಕೊಡು’ ಅಂತು. ಅವನು ಕಾಯಿ ಕೊಟ್ಟ.
ಕೋತಿ ಕಾಯಿ ಹಿಡ್ಕೊಂಡು ಬರ್‍ತಿರಬೇಕಾದ್ರೆ, ಅಲ್ಲೊಬ್ಬ ಒಂದು ಕೋಣನ್ನ ಹೊಡ್ಕೊಂಡು ಬರ್‍ತಿದ್ದ. ಅವನಿಗೆ ತುಂಬಾ ಹೊಟ್ಟೆ ಹಸ್ತಿತ್ತು. ಅದನ್ನು ನೋಡಿ ಕೋತಿ ‘ಅಣ್ಣ ಅದ್ಯಾಕೆ ಹಸ್ಕೊಂಡಿದ್ದಿ? ತಗೋ ಕಾಯಿ ತಿನ್ನು’ ಅಂತ ಕೊಡ್ತು. ಅವನು ಕಾಯಿ ತಿಂದು ಹೊಟ್ಟೆ ತುಂಬಿಸ್ಕೊಂಡ. ಆಗ ಕೋತಿ ‘ನನ್ನಕಾಯಿ ನನಗೆ ಕೊಟ್ಟುಬಿಡು. ಇಲ್ಲಾಂದ್ರೆ ನಿನ್ನ ಕೋಣನ್ನ ಕೊಡು’ ಅಂತು. ಅವನಿಗೆ ಬೇಜಾರಾಗಿ, ಕೋಣನ್ನೆ ಕೊಟ್ಟ.
ಕೋತಿ ಕೋಣನ ಮೇಲೆ ಕುತ್ಕೊಂಡು ಬರ್‍ತಿತ್ತು. ಅಲ್ಲೊಬ್ಬ ಗಾಣಿಗ, ಗಾಣಕ್ಕೆ ತನ್ನ ಹೆಂಡತೀನ ಕಟ್ಟಿ ಗಾಣ ಹೊಡಿತಿದ್ದ. ಆಗ ಕೋತಿ ‘ಏನಣ್ಣ? ಗಾಣಕ್ಕೆ ಯಾರ್‍ಯಾರ ಹೆಂಡ್ತೀನ ಕಟ್ಟಿ ಹೊಡಿತಾರ? ತಗೋ ಕೋಣನ್ನ. ಹೂಡು ಗಾಣಕ್ಕೆ’ ಅಂತು. ಅವನು ಖುಷಿಯಿಂದ ಗಾಣಕ್ಕೆ ಕೋಣನ್ನ ಹೂಡಿ ಹೊಡೆದ. ಅದು ಸುತ್ತುಬೇಕಾದ್ರೆ ಅದ್ರ ಕಾಲು ಮುರ್‍ದೋಯ್ತು! ಆಗ ಕೋತಿ ‘ನನ್ನ ಕೋಣದ ಕಾಲು ಸರಿಮಾಡ್ಕೊಡು. ಇಲ್ಲಾಂದ್ರೆ ನನಗೆ ಎಣ್ಣೆ ಕೊಡು’ ಅಂತು. ಅವನು ಎಣ್ಣೆ ಕೊಟ್ಟ.
ಕೋತಿ ಎಣ್ಣೆ ಇಡ್ಕೊಂಡು ಬರ್‍ತಿರಬೇಕಾದ್ರೆ ಅಲ್ಲೊಬ್ಬ ದೋಸೆ ಮಾಡ್ತಾಯಿದ್ದ. ಅದಕ್ಕೆ ಹಾಕಕ್ಕೆ ಅವನತ್ರ ಎಣ್ಣೆ ಇರ್‍ಲಿಲ್ಲ. ಆಗ ಕೋತಿ ‘ತಗೊಳ್ಳಣ್ಣ ಎಣ್ಣೆ ಹಾಕಿ ದೋಸೆ ಮಾಡು’ ಅಂತ ಕೊಡ್ತು. ಅವನು ದೋಸೆ ಮಾಡ್ದ. ಎಣ್ಣೆ ಎಲ್ಲ ಮುಗ್ದೋಯ್ತು! ಆಗ ಕೋತಿ, ‘ನನ್ನ ಎಣ್ಣೆ ವಾಪಸ್ ಕೊಡು. ಇಲ್ಲಾ ನನಗೆ ದೋಸೆ ಕೊಡು’ ಅಂತು. ಅವನು ಎಲ್ಲಾ ದೋಸೆ ಕೋತಿಗೆ ಕೊಟ್ಟ.
ಕೋತಿ ಒಂದಷ್ಟು ದೋಸೆ ತಿಂದು, ಉಳ್ದಿದ್ದ ದೋಸೆ ಹಿಡ್ಕೊಂಡು ಬರ್‍ತಾಯಿತ್ತು. ಅಲ್ಲೊಬ್ಬ ಡೋಲು ಹೊತ್ಕೊಂಡು ಹೋಗ್ತಾಯಿದ್ದ. ಅವನಿಗೆ ತುಂಬಾ ಹೊಟ್ಟೆ ಹಸ್ದಿತ್ತು. ಅದನ್ನ ನೋಡಿ ಕೋತಿ ಅವನಿಗೆ ದೋಸೆ ತಿನ್ನೋಕೆ ಕೊಡ್ತು. ಅವನು ದೋಸೆ ತಿಂದ. ಆಗ ಕೋತಿ, ‘ನನ್ನ ದೋಸೆ ನನಗೆ ಕೊಡು. ಇಲ್ಲಾ ನಿನ್ನ ಡೋಲು ಕೋಡು’ ಅಂತು. ಅವನು ಡೋಲು ಕೊಟ್ಟ.
ಆಗ ಕೋತಿ ಡೋಲು ನೇತಾಕ್ಕೊಂಡು ಬಡಿಯೋದಿಕ್ಕೆ ಶುರುಮಾಡ್ತು.
ಬಾಲ ಹೋಗಿ ಕುಡ್ಲು ಬಂತು ಡುಂ... ಡುಂ...
ಕುಡ್ಲು ಹೋಗಿ ಕಾಯಿ ಬಂತು ಡುಂ... ಡುಂ...
ಕಾಯಿ ಹೋಗಿ ಕೋಣ ಬಂತು ಡುಂ... ಡುಂ...
ಕೋಣ ಹೋಗಿ ಎಣ್ಣೆ ಬಂತು ಡುಂ... ಡುಂ...
ಎಣ್ಣೆ ಹೋಗಿ ದೋಸೆ ಬಂತು ಡುಂ... ಡುಂ...
ದೋಸೆ ಹೋಗಿ ಡೋಲು ಬಂತು ಡುಂ... ಡುಂ... ಡುಂ... ಡುಂ...
{ಈ ಕಥೆಯ ಹಲವಾರು ಪ್ರಬೇಧಗಳನ್ನು ನಾನು ಕೇಳಿದ್ದೇನೆ. ಬಹುಶಃ ಹೇಳಲು ಸುಲಭವಾಗಿರುವುದು ಮತ್ತು ಬಾಲ ಹಾಗೂ ಡೋಲು ಇವುಗಳ ಮಧ್ಯೆ ಎಷ್ಟು ಬೇಕಾದರೂ ಸೇರಿಸುವ ಅವಕಾಶ ಇರುವುದು ಈ ವೈವಿಧ್ಯತೆಗೆ ಕಾರಣ ಎನ್ನಿಸುತ್ತದೆ. ಕೋಣಕ್ಕೆ ಬದಲಾಗಿ ಎಣ್ಣೆ ಕೇಳುವ ಕೋತಿ ಇಲ್ಲಿದೆ. ಆದರೆ ಇನ್ನೊಂದರಲ್ಲಿ ಆ ಗಾಣಿಗನ ಹೆಂಡತಿಯನ್ನೇ ಕೇಳಿ ಪಡೆದುಕೊಳ್ಳುತ್ತದೆ! ಮುಂದೆ ದೋಸೆ ಮಾಡುವವನು ದೋಸೆಗೆ ಹಿಟ್ಟು ರುಬ್ಬೋದನ್ನು ನೋಡಿ, ತಗೋ ಹೆಂಡ್ತಿ ಕೈಯಲ್ಲಿ ರುಬ್ಬುಸ್ಕೊ ಅನ್ನುತ್ತೆ. ಆಗ ಅವಳ ಕೈ ಮುರ್‍ದೋಗಿ, ಅವಳ ಬದಲಿಗೆ ದೋಸೆ ಕೇಳುತ್ತೆ.}
ಚಿತ್ರಕೃಪೆ: ಅಂತರ್ಜಾಲ

Monday, May 18, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 15

ಎರಡೆರಡು ಬಾರಿ ಕಟಿಂಗ್ ಮಾಡಿಸಿದರು!
ಹಾಸ್ಟೆಲ್ಲಿನ ಎಲ್ಲರಿಗೂ ನಾಗರಾಜ ಎಂಬ ಕ್ಷೌರಿಕ ಬಂದು ಕಟಿಂಗ್ ಮಾಡಿ ಹೋಗುತ್ತಿದ್ದ. ಎರಡು ತಿಂಗಳಿಗೊಮ್ಮೆ ಆ ಮಹಾಯಜ್ಞ ನಡೆಯುತ್ತಿತ್ತು. ಭಾನುವಾರ ಬೆಳಿಗ್ಗೆಯೇ ಬಂದು ಹನ್ನೆರಡು ಗಂಟೆಯ ಹೊತ್ತಿಗೆ, ಹಾಸ್ಟೆಲ್ಲಿನಲ್ಲಿ ಅವತ್ತು ಇದ್ದ ಎಲ್ಲರಿಗೂ ಕಟಿಂಗ್ ಮಾಡಿ ಮುಗಿಸುತ್ತಿದ್ದ! ಯಾರೂ ಬೇಡ ಎನ್ನುವಂತಿಲ್ಲ. ವಾರ್ಡನ್ನರೇ ಮುಂದೆ ನಿಂತು ಈ ಕೆಲಸವನ್ನು ಮಾಡಿಸುತ್ತಿದ್ದರು. ಕೇವಲ ಐದು ಹತ್ತು ನಿಮಿಷಗಳಲ್ಲೇ ಒಬ್ಬೊಬ್ಬರ ಕಟಿಂಗ್ ಮುಗಿದು ಹೋಗುತ್ತಿತ್ತು. ಆತ ಎಷ್ಟೊಂದು ಕೆಟ್ಟದಾಗಿ ಕಟಿಂಗ್ ಮಾಡುತ್ತಿದ್ದ ಎಂದರೆ, ನಾವು ಕಟಿಂಗ್ ಮುಗಿದ ಮೇಲೆ ತಲೆ ಬಾಚಿ ನಿಂತರೆ ಇಲಿ ಕೆರೆದ ಹಾಗೆ ಕಾಣುತ್ತಿತ್ತು. ಆದ್ದರಿಂದ ಅವನು ಬರುವುದು ತಿಳಿದರೆ ಹೇಗಾದರೂ ಸರಿಯೆ ನಾವು ತಪ್ಪಿಸಿಕೊಳ್ಳುತ್ತಿದ್ದೆವು. ಮನೆಯಲ್ಲಿ ಬಯ್ಯಿಸಿಕೊಂಡರೂ ಎರಡು ರೂಪಾಯಿ ಕಿತ್ತುಕೊಂಡು ಬೇರೆಡೆ ನಮಗೆ ಬೇಕಾದ ಹೇರ್ ಸ್ಟೈಲ್ ಮಾಡಿಸಿಕೊಂಡು ಬೀಗುತ್ತಿದ್ದೆವು.
ಒಮ್ಮೆ ಭಾನುವಾರ ಬೆಳಿಗ್ಗೆ ಮಜವಾಗಿ ಮಲಗಿದ್ದ ನಮಗೆ, ಎಚ್ಚರವಾಗುವಷ್ಟರಲ್ಲಿ ನಾಗರಾಜ ಬಂದು ಕುಳಿತಿದ್ದ. ಅಂದು ತಪ್ಪಿಸಿಕೊಳ್ಳುವಂತಿರಲಿಲ್ಲ. ಕೂದಲೂ ಬೆಳೆದಿತ್ತು. ವಾರ್ಡನ್, ನಾನು ಏನೇ ಸಬೂಬು ಹೇಳಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ನನಗೊಬ್ಬನಿಗೆ ರಿಯಾಯಿತಿ ತೋರಿಸಿದರೆ ಬೇರೆಯವರಿಗೂ ತೋರಿಸಬೇಕಾಗಿತ್ತು. ಆತನ ಕೆಲಸ ಶುರುವಾಗಿ ಐದಾರು ಜನ ಮುಗಿಯುವಷ್ಟರಲ್ಲಿ ವಾರ್ಡನ್ ಎಲ್ಲೋ ಹೋಗಿ ಬರುತ್ತೇನೆ ಎಂದು ಭಟ್ಟರುಗಳಿಗೆ ಇನ್‌ಚಾರ್ಜ್ ವಹಿಸಿ ಹೋದರು. ಇದೇ ಸುಸಮಯವೆಂದು ನಾಗರಾಜನ ಮುಂದೆ ಕುಳಿತ ನಾನು ಆತನ ಕೈಗೆ ಒಂದು ರೂಪಾಯಿ ಹಾಕಿ ‘ಸ್ಟೆಪ್ ಕಟಿಂಗ್ ಮಾಡು’ ಎಂದೆ. ಆತ ಸೊಗಸಾಗಿಯೇ ಕಟಿಂಗ್ ಮಾಡಿ ಮುಗಿಸಿದ. ನನ್ನನ್ನು ನೋಡಿ ಇನ್ನೂ ಐದಾರು ಜನ ಅದೇ ಮಾರ್ಗ ಹಿಡಿದರು. ವಾರ್ಡನ್ ಬರುವಷ್ಟರಲ್ಲಿ ನಾವು ಬೋರ್‌ವೆಲ್ ಬಳಿಗೆ ಹೋಗಿ ಸ್ನಾನ ಮಾಡಿ ವಾಪಸ್ಸಾಗಿದ್ದೆವು.
ಅಂದು ಅವರ ಜೊತೆಯಲ್ಲಿ ಯಾರೋ ಬಂದಿದ್ದರಿಂದ ಅವರೂ ನಮ್ಮನ್ನು ಗಮನಿಸಲಿಲ್ಲ. ಹಾಸ್ಟೆಲ್ಲಿನ ಹಿಂದೆ ಇನ್ನೂ ಕಟಿಂಗ್ ಕೆಲಸ ಮುಂದುವರೆದೇ ಇತ್ತು. ಬಂದವರಿಗೆ ಹಾಸ್ಟೆಲ್‌ನ್ನು ಪರಿಚಯ ಮಾಡಿಕೊಡುತ್ತಾ ಹಾಸ್ಟೆಲ್ ಹಿಂದಕ್ಕೆ ಬಂದರು. ಬಂದಿದ್ದಾತ ಮಿಲಿಟರಿಯಲ್ಲಿದ್ದವನು. ಆ ರೀತಿ ತುಂಡಾಗಿ ಕಟಿಂಗ್ ಮಾಡುತ್ತಿರುವುದನ್ನು ನೋಡಿ ಅವನಿಗೆ ಸಂತೋಷವಾಯಿತೆಂದು ಕಾಣುತ್ತದೆ. ‘ಇನ್ನು, ಇನ್ನು ಶಾರ್ಟ್ ಮಾಡು’ ಎಂದು ನಾಗರಾಜನಿಗೆ ಹೇಳತೊಡಗಿದ್ದ. ಸ್ಟೆಪ್ ಕಟಿಂಗ್ ಮಾಡಿಸಿಕೊಂಡಿದ್ದ ನಾವು ಒಂದಿಬ್ಬರು ಅದೇ ವೇಳೆಗೆ ಅಲ್ಲಿದ್ದೆವು.
ನಮ್ಮನ್ನು ನೋಡಿದ ಆತ ‘ಏನು ನಿಮ್ಮ ಕಟಿಂಗ್ ಆಯಿತೆ?’ ಎಂದ. ನಾವು ಹೌದೆಂದು ತಲೆಯಾಡಿಸಿದೆವು. ‘ಏನು ಅದನ್ನು ಯಾರಾದರೂ ಕಟಿಂಗ್ ಎನ್ನುತ್ತಾರೆಯ? ವಾರ್ಡನ್ ಸಾಹೇಬರೆ ನೋಡಿರಿಲ್ಲಿ. ಇವರಿಗೆ ಇನ್ನಷ್ಟು ಶಾರ್ಟ್ ಆಗಿ ಕಟಿಂಗ್ ಮಾಡಿಸಿ’ ಎಂದು ನಾಗರಾಜನನ್ನು ಕರೆದು, ನಮಗೆ ಷಾರ್ಟಾಗಿ ಕಟಿಂಗ್ ಮಾಡಲು ಆರ್ಡರ್ ಮಾಡಿದ. ಅವತ್ತೇಕೋ ವಾರ್ಡನ್ ಕೂಡಾ ಅವನ ಪರವಾಗಿಯೇ ಇದ್ದರು! ವಿಧಿಯಿಲ್ಲದೆ ನಾವು ಮತ್ತೊಮ್ಮೆ ಕಟಿಂಗಿಗೆ ತಲೆ ಕೊಡಬೇಕಾಯಿತು!


‘ತಾನು ಮಾಡಿದ ಕಟಿಂಗನ್ನೂ ಒಬ್ಬರು ‘ಚೆನ್ನಾಗಿದೆ’ ಎಂದರಲ್ಲ, ಅದೂ ಮಿಲಿಟರಿಯಲ್ಲಿರುವವರು’ ಎಂದು ಜಂಭ ಕೊಚ್ಚಿಕೊಳ್ಳುತ್ತಾ ಉತ್ಸಾಹದಿಂದಲೇ ನಾಗರಾಜ ತನ್ನ ಕತ್ತರಿಸುವ ಕಾಯಕವನ್ನು ಮುಂದುವರೆಸಿದ. ಹತ್ತೇ ನಿಮಿಷದಲ್ಲಿ, ಸುಂದರವಾದ ಸ್ಟೆಪ್ ಕಟಿಂಗ್‌ನಿಂದ ಕಂಗೊಳಿಸುತ್ತಿದ್ದ ನಮ್ಮ ತಲೆ ಅರ್ಧಂಬರ್ಧ ಪುಕ್ಕ ಕಿತ್ತ ಕೋಳಿಯಂತಾಗಿತ್ತು. ನಮ್ಮ ಸಿಟ್ಟನ್ನು ನಾವು ಯಾರ ಮೇಲೆ ತೋರಿಸುವುದು? ನಮ್ಮಂತೆಯೇ ಕಟಿಂಗ್ ಮಾಡಿಸಿಕೊಂಡು ಅವಿತು ಕುಳಿತಿದ್ದ ಬೇರೆಯವರ ಹೆಸರನ್ನೂ ನಾವು ಅವರಿಗೆ ಹೇಳಿದೆವು. ಸ್ವತಃ ಅವರೇ ಎದ್ದು ಹುಡುಕಾಡಿ ಉಳಿದ ಮೂವರನ್ನೂ ಕರೆದು ತಂದು ಅವರ ತಲೆಯನ್ನು ಕೋಳಿ ತರಿದಂತೆ ತರಿಸಿಬಿಟ್ಟರು!
ಹಾಗೇ ಮಾತಾನಾಡುವಾಗ ತಾನು ಹಾಕಿಕೊಂಡಿದ್ದ ಟೋಪಿಯನ್ನು ಆತ ತೆಗೆದಾಗ ಆತನ ಕಟಿಂಗ್ ಕೂಡಾ ನಮ್ಮದರಷ್ಟೇ ಕೆಟ್ಟದಾಗಿರುವುದನ್ನು ನೋಡಿ ನಮಗೆ ಸಮಾಧಾನವಾಯಿತು! ಆತನ ಕೆಟ್ಟ ಕಟಿಂಗೇ ಆತ ನಮಗೆ ಅಷ್ಟೊಂದು ಆಸಕ್ತಿ ವಹಿಸಿ ನಮಗೂ ಕೆಟ್ಟ ಕಟಿಂಗ್ ಮಾಡಿಸಲು ಕಾರಣವಾಗಿತ್ತು.
ಆದರೆ ನಮ್ಮ ಕಟಿಂಗ್ ಪುರಾಣವನ್ನು ನಾವು ಅಷ್ಟಕ್ಕೆ ಬಿಡಲು ಸಿದ್ಧರಿರಲಿಲ್ಲ. ಕಟಿಂಗ್ ಮಾಡಿದ ನಾಗರಾಜನ ಬಳಿ ನಮ್ಮ ಹಣವನ್ನು ವಾಪಸ್ ಕೊಡಲು ಜಗಳ ಶುರು ಮಾಡಿದೆವು. ಆತನದು ಒಂದೇ ಪಟ್ಟು, ‘ನಾನು ನೀವು ಹೇಳಿದಂತೆ ಸ್ಟೆಪ್ ಕಟಿಂಗ್ ಮಾಡಿರುವಾಗ ನಾನೇಕೆ ದುಡ್ಡು ವಾಪಸ್ ಕೊಡಬೇಕು?! ಇನ್ನು ನೀವೇ ಏನಿದ್ದರೂ ಎರಡನೇ ಬಾರಿಗೆ ಕಟಿಂಗ್ ಮಾಡಿಸಿಕೊಂಡಿದ್ದಕ್ಕೆ ದುಡ್ಡು ಕೊಡಬೇಕು ಗೊತ್ತಾ?’ ಎಂಬುದು ಅವನ ವಾದ. ಆದರೆ, ನಾವು ‘ದುಡ್ಡು ಕೊಟ್ಟಿದ್ದು ಸ್ಟೆಪ್ ಕಟಿಂಗ್ ಮಾಡಲಲ್ಲ! ಸ್ಟೆಪ್ ಕಟಿಂಗ್ ಮಾಡಿದ ಮೇಲೆಯೇ ನೀನು ನಿನ್ನ ಕೆಟ್ಟ ಕಟಿಂಗನ್ನು ಎಲ್ಲರಿಗೂ ಮಾಡುವುದರಿಂದ, ಅದನ್ನು ಅಷ್ಟಕ್ಕ್ಕೆ ನಿಲ್ಲಿಸಲು ಮಾತ್ರ ನಿನಗೆ ಹಣ ಕೊಟ್ಟಿದ್ದು. ನೀನು ಹೇಳಿದ್ದೇ ನಿಜವಾಗಿದ್ದಲ್ಲಿ ಸ್ಟೆಪ್ ಕಟಿಂಗ್ ಮಾಡಿದ ಮೇಲೆ ಮತ್ತೆ ಕಟಿಂಗ್ ಮಾಡಲಾಗುವುದಿಲ್ಲ ಎಂದು ಏಕೆ ಹೇಳಲಿಲ್ಲ’ ಎಂಬುದು ನಮ್ಮ ವಾದವಾಗಿತ್ತು. ‘ಆತ ಕೊಡ; ನಾವು ಬಿಡ’ ಎಂಬಂತಾಗಿತ್ತು. ಕೊನೆಯ ಅಸ್ತ್ರವಾಗಿ ನಾನು ‘ನೀನು ದುಡ್ಡು ತೆಗೆದುಕೊಂಡಿದ್ದನ್ನು ವಾರ್ಡನ್‌ಗೆ ಹೇಳಿ, ಮುಂದಿನ ಸಾರಿಯಿಂದ ನೀನು ಇಲ್ಲಿಗೆ ಬರದಂತೆ ಮಾಡುತ್ತೇವೆ’ ಎಂದುಬಿಟ್ಟೆ.
ಕೇವಲ ‘ವಾರ್ಡನ್‌ಗೆ ಹೇಳುತ್ತೇವೆ’ ಎಂದಿದ್ದರೆ ಆತ ಕೇರ್ ಮಾಡುತ್ತಿದ್ದನೋ ಇಲ್ಲವೋ. ಆದರೆ ‘ಮುಂದಿನ ಸಾರಿ ನೀನು ಬರದಂತೆ ಮಾಡುತ್ತೇವೆ’ ಎಂದ ನನ್ನ ಮಾತು ಚೆನ್ನಾಗಿಯೇ ಪರಿಣಾಮ ಬೀರಿತ್ತು. ಕೊನೆಗೆ ಆತನೇ ಪುಸಲಾಯಿಸಿ, ಐದೂ ಜನರಿಗೆ ಐವತ್ತು ಐವತ್ತು ಪೈಸೆ ಕೊಡುವ ಮಾತು ತೆಗೆದ. ಆದರೆ ಪಟ್ಟು ಬಿಡದ ನಾವು ಪೂರ್ತಿ ಹಣ ಬೇಕೆಂದು ಹಠ ಮಾಡಿದೆವು. ಆ ಹಣ ಆತ ಬಯಸದೇ ಬಂದುದ್ದಾಗಿತ್ತು. ನಮ್ಮಿಂದ ಹಣ ಪಡೆದ ಮೇಲೆ ಸಂಜೆಗೆ ಏನೇನು ಕಾರ್ಯಕ್ರಮವನ್ನು ಆತ ಊಹಿಸಿದ್ದನೋ ಏನೋ. ಪಾಪ. ಅದಕ್ಕೆ ಅಷ್ಟು ಬೇಗ ಸಂಚಕಾರ ಬಂದಿತೆಂದು ಆತ ಊಹಿಸಿರಲಿಕ್ಕಿಲ್ಲ. ಅದಕ್ಕೇ ಆತ ಅಷ್ಟು ಸುಲಭವಾಗಿ ಹಣ ವಾಪಸ್ ಮಾಡಲು ನಿರಾಕರಿಸಿದ್ದು. ‘ಏನೋ ಇವತ್ತೊಂದು ಚೂರು ಬ್ರಾಂದಿ ಹಾಕ್ಕೊಂಡು ಮಜ ಮಾಡಾನ ಅಂದ್ರೆ ಅದನ್ನು ಕಿತ್ಕೋತಿರಲ್ಲ. ನಿಮ್ಗೆ ಒಳ್ಳೆದಾಗಲ್ಲ. ಓದೋ ಹುಡುಗರು ಹಿಂಗೆಲ್ಲ ಮಾಡಬಾರದು’ ಎಂದು ರಾಗ ಎಳೆದ. ಕೊನೆಗೆ ನಮಗೇ ಬೇಸರವಾಗಿ ‘ಹೋಗಲಿ, ಒಬ್ಬೊಬ್ಬರಿಗೆ ಎಪ್ಪತ್ತೈದು ಪೈಸೆ ಕೊಟ್ಟುಬಿಡು. ನಾವು ಯಾರಿಗೂ ಹೇಳುವುದಿಲ್ಲ’ ಎಂದು ರಾಜಿ ಮಾಡಿಕೊಂಡೆವು! ನಾಗರಾಜ ಗೊಣಗುಡುತ್ತಲೇ ಹಣ ಎಣಿಸಿಕೊಟ್ಟ!
ಸಿನಿಮಾ ಹುಚ್ಚು - ಹಾಫ್ ಟಿಕೆಟ್ ಪ್ಲಾನ್
ಹಾಸ್ಟೆಲ್ಲಿಗೆ ತರಕಾರಿಯನ್ನು ತರುವ ವ್ಯವಸ್ಥೆಯ ಬಗ್ಗೆ ಮೊದಲೇ ಹೇಳಿದ್ದೇನೆ. ಆದರೆ ಅದನ್ನು ತರಲು ಹೋಗಲು ಹುಡುಗರಲ್ಲಿ ಕಾಂಪಿಟೇಷನ್ ಇತ್ತು ಎಂಬುದೂ ಸತ್ಯ. ಸಾಮಾನ್ಯವಾಗಿ ವಾರ್ಡನ್ ಅಥವಾ ಭಟ್ಟರು ಚನ್ನರಾಯಪಟ್ಟಣಕ್ಕೆ ಹೋದಾಗ ತರಕಾರಿ ತರುತ್ತಿದ್ದರು. ಆದರೆ ಹೆಚ್ಚಿನ ದಿನಗಳಲ್ಲಿ ಯಾರಾದರೊಬ್ಬ ಹುಡುಗನನ್ನು ಕಳುಹಿಸಿ ತರಿಸಲಾಗುತ್ತಿತ್ತು. ಅದಕ್ಕಾಗಿಯೆ ಇದ್ದ ಒಂದು ಪುಸ್ತಕವನ್ನು ತೆಗೆದುಕೊಂಡು ಹೋಗಿ ತರಕಾರಿ ಅಂಗಡಿಯವನಿಗೆ ಕೊಟ್ಟರೆ, ಆತ ತನಗೆ ತೋಚಿದ ತರಕಾರಿಯನ್ನು ಒಂದು ಚೀಲಕ್ಕೆ ಹಾಕಿ ಕಟ್ಟಿಕೊಡುತ್ತಿದ್ದ. ಅದನ್ನು ಒಂದು ಆಟೋಗೆ ಹಾಕಿಕೊಂಡು ಬಸ್‌ಸ್ಟ್ಯಾಂಡ್‌ಗೆ ತಂದು ಬಸ್‌ನಲ್ಲಿ ಹಾಕಿಕೊಂಡು ಕುಂದೂರುಮಠಕ್ಕೆ ತರುವುದು ಹುಡುಗನ ಕೆಲಸವಾಗಿರುತ್ತಿತ್ತು. ಅದಕ್ಕಾಗಿ ಆತನಿಗೆ ಕೊಡುತ್ತಿದ್ದುದ್ದು ಕೇವಲ ಇಪ್ಪತ್ತು ರೂಪಾಯಿ. ಆ ಇಪ್ಪತ್ತು ರೂಪಾಯಿಯಲ್ಲೇ ಹೇಗೋ ಒಂದೆರಡು ರೂಪಾಯಿ ಉಳಿಸಿಬಿಡಬಹುದಿತ್ತು. ಆ ಉಳಿತಾಯದಲ್ಲೇ ಒಂದು ಮಾರ್‍ನಿಂಗ್ ಷೋ ಅನ್ನೊ ಮ್ಯಾಟನಿಯನ್ನೊ ನೋಡಿಕೊಂಡು ಬರುವ ಅವಕಾಶ ಇದ್ದುದ್ದರಿಂದಲೇ ತರಕಾರಿ ತರಲು ಹುಡುಗರ ನಡುವೆ ಪೈಪೋಟಿ ಇರುತ್ತಿತ್ತು.
ಹಾಸ್ಟೆಲ್ಲಿನಲ್ಲಿದ್ದ ಬಹುತೇಕ ಹುಡುಗರಿಗೆ ಸಿನಿಮಾ ಹುಚ್ಚು ಬಹಳವೇ ಇತ್ತು. ಹತ್ತಿರದ ಅಂದರೆ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿದ್ದ ಬಾಗೂರಿನಲ್ಲಿ ಒಂದು ಟೆಂಟ್ ಇತ್ತು. ಶನಿವಾರ ಭಾನುವಾರ ಮತ್ತು ರಜಾದಿನಗಳಲ್ಲಿ ಊರಿಗೆ ಹೋಗದೆ ಹಾಸ್ಟೆಲ್ಲಿನಲ್ಲೇ ಉಳಿದಿರುತ್ತಿದ್ದವರೆಲ್ಲ ಸೇರಿಕೊಂಡು ಬಾಗೂರಿಗೆ ನಡೆದುಕೊಂಡು ಹೋಗಿ ಸಿನಿಮಾ ನೋಡಿ, ಮತ್ತೆ ನಡೆದುಕೊಂಡೇ ಬರುತ್ತಿದ್ದರು!
ಒಮ್ಮೊಮ್ಮೆ ಬಾಗೂರಿನ ಟೆಂಟ್‌ನಲ್ಲಿ ಹಾಕುತ್ತಿದ್ದ ಸಿನಿಮಾಗಳೆಲ್ಲ ಹಳೆಯವು ಅನ್ನಿಸಿ ಚನ್ನರಾಯಪಟ್ಟಣದ ಟಾಕೀಸಿಗೂ ಸಿನಿಮಾಕ್ಕೆ ಹೋಗುವ ಹವ್ಯಾಸ ನಮ್ಮಲ್ಲಿತ್ತು. ಹೋಗಿಬರಲು ಐದು ರೂಪಾಯಿ, ಎರಡು ಸಿನಿಮಾಗಳಿಗೆ ನಾಲ್ಕು ರೂಪಾಯಿ ಹೀಗೆ ಒಟ್ಟಿಗೆ ಸುಮಾರು ಹತ್ತು ರೂಪಾಯಿ ಖರ್ಚು ಮಾಡುವ ತಾಕತ್ತಿದ್ದವರು ಚನ್ನರಾಯಪಟ್ಟಣಕ್ಕೆ ಹೋಗಿ ಒಂದೇ ದಿನ ಎರಡು ಸಿನಿಮಾ ನೋಡಿಕೊಂಡು ಬರುತ್ತಿದ್ದೆವು.
ಬಸ್ ಚಾರ್ಜನ್ನು ಏನಾದರೂ ಮಾಡಿ ಉಳಿಸುವ ಅಥವಾ ಕಡಿಮೆ ಮಾಡುವ ಹಲವಾರು ಉಪಾಯಗಳನ್ನು ಹಾಸ್ಟೆಲ್ ಹುಡುಗರು ಶೋಧಿಸುತ್ತಿದ್ದರು. ಮುಂದಿನ ಸ್ಟೇಜ್ ಸಿಗುವವರೆಗೂ ಕಂಡಕ್ಟರನ ಕಣ್ಣನ್ನು ಹೇಗೋ ತಪ್ಪಿಸಿ, ಸ್ಟೇಜ್ ಕಳೆದ ನಂತರ ಟಿಕೆಟ್ ತೆಗೆದುಕೊಂಡರೆ ಒಂದು ಸ್ಟೇಜಿನ ಹಣ ಅಂದರೆ ಸುಮಾರು ಒಂದು ರೂಪಾಯಿ ಉಳಿತಾಯವಾಗುತ್ತಿತ್ತು. ಕಂಡಕ್ಟರನ ಕೈಗೆ ಸಿಕ್ಕಿ ಬಯ್ಯಿಸಿಕೊಂಡರೂ, ನಿದ್ದೆ ಮಾಡುತ್ತಿದ್ದೆವೆಂದೋ, ಮರೆತವೆಂದೋ ಹಸಿಹಸಿ ಸುಳ್ಳು ಹೇಳುವುದು ಅಭ್ಯಾಸವಾಗಿತ್ತು. ಇನ್ನು ಕೆಲವರು ಕಂಡಕ್ಟರನ ಕೈಯಲ್ಲಿ ಬಯ್ಯಿಸಿಕೊಳ್ಳುವ ಉಸಬಾರಿಯೇ ಬೇಡ ಎಂದು ಒಂದು ಸ್ಟೇಜ್ ಕಳೆಯುವವರೆಗೂ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ ಚಾರ್ಜ ಮಾತ್ರ ಕೊಟ್ಟು ಒಂದು ರೂಪಾಯಿ ಉಳಿತಾಯ ಮಾಡುತ್ತಿದ್ದರು.
ಈ ಬಸ್‌ಚಾರ್ಜ್ ಉಳಿಸಲು ನನಗೆ ಕೆಲವೊಂದು ಅನುಕೂಲವಿದ್ದವು. ಅದರಲ್ಲಿ ಮುಖ್ಯವಾಗಿ ಕಂಡಕ್ಟರ್‌ಗಳ ಸ್ನೇಹ. ಚನ್ನರಾಯಪಟ್ಟಣದಿಂದ ಕುಂದೂರುಮಠಕ್ಕೆ ಒಂದು ರಿಟರ್ನ್ ಬಸ್ಸು ಬಂದು ಹೋಗುತ್ತಿತ್ತು. ಅದು ಬೆಳಿಗ್ಗೆ ಒಂಬತ್ತು ಗಂಟೆಯ ವೇಳೆಗೆ ಬರುತ್ತಿತ್ತು. ಅದರಲ್ಲಿ ಬರುತ್ತಿದ್ದ ಪೇಪರನ್ನು ನಾನು ಮೊದಲು ತಂದು ಓದಿದ ನಂತರವೇ ವಾರ್ಡನ್‌ಗೆ ಕೊಡುತ್ತಿದ್ದೆ. ಅಲ್ಲದೆ ಒಂದೊಂದು ದಿನ ಚೆಕ್ಕಿಂಗ್ ನಡೆಸುವವರು ಬಂದು ಆ ಬಸ್ಸಿಗೆ ಕಾಯುತ್ತಾ ಮರೆಯಲ್ಲಿ ನಿಂತಿರುತ್ತಿದ್ದರು. ಆಗ ನಾನು ಬಸ್ ಬರುವ ದಾರಿಯಲ್ಲಿ ಓಡುತ್ತಲೋ, ಇಲ್ಲವೇ ಯಾವುದಾದರೂ ಸೈಕಲ್ಲಿನಲ್ಲಿ ಬರುತ್ತಲೋ ಕಂಡಕ್ಟರ್‌ಗೆ ಸುದ್ದಿ ಮುಟ್ಟಿಸಿಬಿಡುತ್ತಿದ್ದೆ. ಅಂದು ಕಂಡಕ್ಟರ್ ಖುಷಿಯಿಂದ ನನಗೆ ಒಂದು ರೂಪಾಯಿ ಕೊಡುತ್ತಿದ್ದ. ಒಂದೊಂದು ದಿನ ಮಂಜಣ್ಣನ ಹೋಟೆಲಿನಲ್ಲಿ ಎರಡು ಇಡ್ಲಿಯನ್ನು ಕೊಡಿಸುತ್ತಿದ್ದ. ಈ ರೀತಿ ಹಾಗೂ ತರಕಾರಿ ತರಲು ಹೆಚ್ಚಿಗೆ ಹೋಗಿ ಬರುತ್ತಿದ್ದ ನನಗೆ ಕಂಡಕ್ಟರ್‌ಗಳ ಪರಿಚಯವಿತ್ತು. ಈ ಪರಿಚಯದ ಮೇಲೆ, ಕೆಲವೊಮ್ಮೆ ಕೇವಲ ಐವತ್ತು ಪೈಸೆ ಅಷ್ಟೆ ಕೊಟ್ಟು ಚನ್ನರಾಯಪಟ್ಟಣಕ್ಕೆ ಟಿಕೆಟ್ ಇಲ್ಲದೆ ಹೋಗಿದ್ದೂ ಇದೆ! ಈ ಘಟನೆಯ ಹಿನ್ನೆಲೆಯಲ್ಲಿ ಹೇಳುವುದಾದರೆ, ಆಗ ನಾನು ಭ್ರಷ್ಟಾಚಾರದ ಮಹಾನ್ ಪೋಷಕನಾಗಿದ್ದೆ!!
ಬಸ್‌ಚಾರ್ಜ್ ಉಳಿಸುವ ಇನ್ನೊಂದು ಸುಲಭೋಪಾಯವೆಂದರೆ ಹಾಫ್ ಟಿಕೆಟ್ ತೆಗೆದುಕೊಳ್ಳುವುದು. ಇದು ಸಾಮಾನ್ಯವಾಗಿ ರಾತ್ರಿ ವಾಪಸ್ ಬರುವಾಗ ಹಾಲ್ಟ್ ಬಸ್‌ನಲ್ಲಿ ನಡೆಯುತ್ತಿದ್ದ ಆಟ. ಬಸ್ಸಿನಲ್ಲಿ ಒಬ್ಬೊಬ್ಬರು ಒಂದೊಂದು ಕಡೆ ಕುಳಿತುಕೊಳ್ಳುತ್ತಿದ್ದರು. ಯಾರೋ ಒಬ್ಬ ಸ್ವಲ್ಪ ದೊಡ್ಡ ಹುಡುಗನಂತಿರುವವನು ಕಂಡಕ್ಟರ್‌ಗೆ, ಒಂದು ಫುಲ್ ಎರಡು ಹಾಫ್ ಎಂದೋ, ಎರಡು ಫುಲ್ ಎರಡು ಹಾಫ್ ಎಂದೋ ಹೇಳಿ ಟಿಕೆಟ್ ತೆಗೆದುಕೊಳ್ಳುವುದು. ಹಿಂದಿನವರನ್ನು ಕೇಳಿದಾಗ ಮುಂದೆ ತೆಗೆದುಕೊಂಡಿದ್ದಾರೆ ಎನ್ನುವುದು. ಒಂದು ದಿನ, ಫುಲ್ ಟಿಕೆಟ್‌ಗೆ ದುಡ್ಡಿದ್ದರೂ, ಅಂದು ಬಸ್ ಬರುವುದು ಲೇಟಾಗಿ, ಕಣ್ಣು ಮೂಗುಗಳಿಗೆ ನಯನಮನೋಹರವಾಗಿ ಕಾಣುತ್ತಿದ್ದ ಪಾನೀಪುರಿಯನ್ನು ತಿಂದು ಖರ್ಚಾಗಿದ್ದುದರಿಂದ, ಸ್ವಲ್ಪ ದೊಡ್ಡ ಹುಡುಗನಂತೆ ಕಾಣುತ್ತಿದ್ದ ನನಗೇ, ಹಾಫ್ ಟಿಕೆಟ್‌ನ್ನು, ಇನ್ನೊಬ್ಬ ಸಣ್ಣ ಹುಡುಗ ತೆಗೆದುಕೊಳ್ಳುವಂತೆ ಏರ್ಪಾಡು ಮಾಡಲಾಗಿತ್ತು. ಎರಡೂ ಹಾಫ್ ಟಿಕೆಟ್ ಎಂದಾಗ ಕಂಡಕ್ಟರ್‌ಗೆ ಅನುಮಾನ ಬಂದು ಬಯ್ದಿದ್ದ. ಆದರೆ ರಾತ್ರಿ ಬಸ್ಸಾದ್ದರಿಂದ ಹುಡುಗರಾದ ನಮ್ಮನ್ನು ಮಧ್ಯದಲ್ಲಿ ಇಳಿಸಿ ಹೋಗುವಷ್ಟು ಆತ ಕೆಟ್ಟವನಾಗಿರಲಿಲ್ಲ. ಆದರೆ ‘ಬೆಳಿಗ್ಗೆ ಬಂದು ಹೆಡ್ಮಾಸ್ಟರಿಗೋ, ವಾರ್ಡನ್ನಿಗೋ ಹೇಳುತ್ತೇನೆ’ ಎಂದರೆ ಮಾತ್ರ ಭಯವಾಗುತ್ತಿತ್ತು. ಪಾಪ, ಯಾವ ಕಂಡಕ್ಟರನೂ ಸ್ಕೂಲಿನ ಅಥವಾ ಹಾಸ್ಟೆಲ್ಲಿನ ಬಳಿಗೆ ಬರುತ್ತಿರಲಿಲ್ಲ.
ಹದಿನೈದು ಕಿಲೋಮೀಟರ್ ನಡೆಸಿದ ಸಿನಿಮಾ ಹುಚ್ಚು!
ಉದಯಪುರದ ಹಾಸ್ಟೆಲ್ಲಿನ ಹುಡುಗರಿಗೂ ನಮ್ಮ ಹಾಸ್ಟೆಲ್ಲಿನ ಹುಡುಗರಿಗೂ ಕಬ್ಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಯನ್ನು, ಒಂದು ದಿನ ನಮ್ಮ ವಾರ್ಡನ್ ಏರ್ಪಡಿಸಿದ್ದರು. ಎರಡೂ ಆಟಗಳು ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಮುಗಿದೇ ಹೋಗಿದ್ದವು. ನಾವು ಕಬ್ಬಡ್ಡಿಯಲ್ಲಿ ಗೆದ್ದರೆ ಅವರು ವಾಲಿಬಾಲ್‌ನಲ್ಲಿ ಗೆದ್ದರು. ಮಧ್ಯಾಹ್ನ ನಮ್ಮ ಹಾಸ್ಟೆಲ್ಲಿನಲ್ಲಿ ಊಟವಾದ ನಂತರ ಅವರೆಲ್ಲ ಹೊರಡುವ ತರಾತುರಿಯಲ್ಲಿದ್ದರು. ಆಗ ನಮಗೆ ಸಿನಿಮಾಕ್ಕೆ ಹೋಗುವ ಹುಚ್ಚು ತಲೆಗೇರಿತು. ಏಳೆಂಟು ಜನ ತಮ್ಮಲ್ಲಿದ್ದ ದುಡ್ಡನ್ನೆಲ್ಲಾ ಸೇರಿಸಿದರೂ ಬಸ್ ಚಾರ್ಜ್ ಮತ್ತು ಸಿನಿಮಾಕ್ಕೆ ಆಗುವಷ್ಟು ದುಡ್ಡು ಇರಲಿಲ್ಲ. ಕೊನೆಗೆ, ಉದಯಪುರದವರು ಎಂಟು ಕಿಲೋಮೀಟರ್ ದೂರ ನಡೆದುಕೊಂಡೇ ಬಂದಿದ್ದರು; ಹೋಗುವಾಗಲೂ ನಡೆದುಕೊಂಡೇ ಹೋಗುವವರಿದ್ದರು. ನಾವು ಅವರ ಜೊತೆಯಲ್ಲಿ ಅಲ್ಲಿಯವರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ಬಸ್ಸು ಹತ್ತುವುದೆಂದು ತೀರ್ಮಾನಿಸಿ ಹೊರಟೆವು. ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಉದಯಪುರ ಸೇರಿದ ನಮಗೆ ಇನ್ನೊಂದು ಉಳಿತಾಯದ ಯೋಚನೆ ಹೊಳೆಯಿತು. ಹೇಗಿದ್ದರೂ ಮೊದಲನೇ ಷೋ ಆರಂಭವಾಗುವುದು ಆರು ಗಂಟೆಗೆ. ಇನ್ನೂ ಎರಡು ಗಂಟೆ ಸಮಯವಿರುವುದರಿಂದ ಚನ್ನರಾಯಪಟ್ಟಣಕ್ಕೂ ನಡೆದೇ ಹೋಗಲು ತೀರ್ಮಾನಿಸಿದೆವು.
ಸುಮಾರು ಆರುಕಾಲು ಗಂಟೆಯ ಹೊತ್ತಿಗೆ ಅಲ್ಲಿಗೆ ತಲುಪಿ ಟಿಕೆಟ್ ಕೊಂಡು ಹೋದರೆ ಅಲ್ಲಿದ್ದ ಸಿನಿಮಾ ನಾವು ಹಿಂದೆ ಏಳೆಂಟು ಬಾರಿಯಾದರೂ ನೋಡಿದ್ದ ‘ನಾನಿನ್ನ ಮರೆಯಲಾರೆ!’ ವಿಧಿಯಿಲ್ಲದೆ ಮತ್ತೆ ಅದನ್ನೇ ನೋಡಬೇಕಾಯಿತು. ಅಂದು ಭಾನುವಾರ ಆಗಿದ್ದರಿಂದ, ಹಾಗೂ ಭಾನುವಾರ ಮತ್ತು ಗುರುವಾರ ಬರುವ ಹಾಲ್ಟ್ ಗಾಡಿಯ ಡ್ರೈವರ್ ಮತ್ತು ಕಂಡಕ್ಟರ್ ಹತ್ತು ನಿಮಿಷ ಮುಂಚೆಯೇ ಸ್ಟ್ಯಾಂಡ್ ಬಿಡುತ್ತಿದ್ದುದ್ದು ನಮಗೆ ಗೊತ್ತಿದ್ದರಿಂದ ಸಿನಿಮಾವನ್ನು ಪೂರ್ತಿ ನೋಡದೆ ಎದ್ದು ಬರಬೇಕಾಯಿತು!
ವಿಡಿಯೋ ಥಿಯೇಟರ್ - ನಾ ನಿನ್ನ ಮರೆಯಲಾರೆ
‘ನಾನಿನ್ನ ಮರೆಯಲಾರೆ’ ಸಿನಿಮಾವನ್ನು ಏಳೆಂಟು ಬಾರಿಯಾದರೂ ನೋಡಿದ್ದೆವು ಎಂದು ಹೇಳಿದ್ದನ್ನು ಕೇಳಿ ನಮ್ಮನ್ನು ಹುಚ್ಚರೆಂದು ಭಾವಿಸಬೇಡಿ. ನಾವು ಈ ಸಿನಿಮಾವನ್ನು ಯಾವುದೇ ಟಾಕೀಸಿಗೆ ಹೋಗಿ ದುಡ್ಡು ಕೊಟ್ಟು ನೋಡಿದ್ದಲ್ಲ. ಆದರೆ ಏಳೆಂಟು ಬಾರಿ ನೋಡಿದ್ದಂತೂ ನಿಜ!
ಕುಂದೂರುಮಠದಲ್ಲಿ ವರ್ಷಕ್ಕೊಮ್ಮೆ ಷಷ್ಟಿ ಜಾತ್ರೆ ನಡೆಯುತ್ತದೆ. ನಾವು ಮೊದಲನೇ ವರ್ಷ ಹಾಸ್ಟೆಲ್ಲಿನಲ್ಲಿದ್ದಾಗ ಅಲ್ಲಿದ್ದ ಪಾರ್ಟ್‌ಟೈಮ್ ಪಿ.ಟಿ. ಮೇಷ್ಟ್ರೊಬ್ಬರು ಭಾರೀ ಮುಂದಾಲೋಚನೆ ಮಾಡಿ, ಒಂದು ಟೀವಿಯನ್ನು, ಒಂದು ವಿ.ಸಿ.ಪಿ.ಯನ್ನು ಬಾಡಿಗೆಗೆ ತಂದಿದ್ದರು. ಆ ದಂಧೆಯಲ್ಲಿ ಆಗಿನ ಹಾಸ್ಟೆಲ್ ವಾರ್ಡನ್ನನೂ ಭಾಗಿಯಾಗಿದ್ದ. ಅದನ್ನು ಹಾಸ್ಟೆಲ್ಲಿನ ದೊಡ್ಡ ಹಾಲ್‌ನಲ್ಲಿ ಇಡುತ್ತಿದ್ದರು. ಒಬ್ಬರಿಗೆ ಎರಡು ರೂಪಾಯಿ ಪ್ರವೇಶ ಧನ ಎಂದು ನಿಗದಿಪಡಿಸಿ, ಬಾಗಿಲಿನಲ್ಲಿಯೇ ನಿಂತು ಪಿ.ಟಿ. ಮೇಷ್ಟ್ರು ದುಡ್ಡು ತೆಗೆದುಕೊಂಡು ಜನಗಳನ್ನು ಒಳಗೆ ಬಿಡುತ್ತಿದ್ದ. ಹಾಲ್ ಭರ್ತಿಯಾಗುತ್ತಿದ್ದಂತೆ ಸಿನಿಮಾ ಶುರು. ಮೊದಲಿಗೆ ಶುಭಮಂಗಳ ಕ್ಯಾಸೆಟ್ಟನ್ನು ಹಾಕಿದ್ದರು. ಜಾತ್ರೆಗೆ ಬರುವ ಜನರಿಗೆಲ್ಲಾ ಇದೊಂದು ವಿಶೇಷ ಆಕರ್ಷಣೆಯಾಗಿತ್ತು. ಹೆಚ್ಚಿನ ಹುಡುಗರೆಲ್ಲ ಅವರವರ ಊರಿಗೆ ಷಷ್ಟಿ ಹಬ್ಬಕ್ಕೆ ಹೋಗಿದ್ದರಿಂದ ಹಾಸ್ಟೆಲ್ಲಿನಲ್ಲಿ ಇದ್ದವರು ಕಡಿಮೆ. ಅವರಿಗೆ ಮಾತ್ರ ಯಾವ ಚಾರ್ಜೂ ಇರಲಿಲ್ಲ. ಅಲ್ಲಿದ್ದ ನಮ್ಮಿಂದ ಅವರಿಗೆ ಉಪಯೋಗವೇ ಆಗುತ್ತಿತ್ತು. ಅವರಿಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದೆವು.
ಎರಡೇ ದಿನದಲ್ಲಿ ಆರು ಷೋ ‘ಶುಭಮಂಗಳ’ ಸಿನಿಮಾ ನೋಡಿದ್ದೆವು. ನಂತರ ‘ನಾನಿನ್ನ ಮರೆಯಾಲಾರೆ’ ಕ್ಯಾಸೆಟ್ ಬಂತು. ಜಾತ್ರೆ ಮುಗಿಯುವವರೆಗೂ ಅದನ್ನು ನೋಡಿಯೇ ನೋಡಿದ್ದು. ನಂತರ ನಡೆದಿದ್ದು ಮಾತ್ರ ಈಗ ನಂಬಲು ಕಷ್ಟವಾಗುವಂತಹದ್ದು. ಅಕ್ಕಪಕ್ಕದ ಊರವರಿಂದ ವಿಡಿಯೋಗೆ ಬೇಡಿಕೆ ಬರಲಾರಂಭಿಸಿತು. ಆ ಪಿ.ಟಿ. ಮೇಷ್ಟ್ರು ನಾಲ್ಕೈದು ಜನ ಹುಡುಗರನ್ನು ಕರೆದುಕೊಂಡು, ಅದನ್ನು ನಮ್ಮ ತಲೆಯ ಮೇಲೆ ಹೊರೆಸಿಕೊಂಡು ಊರೂರು ಸುತ್ತಲು ಆರಂಭಿಸಿದ. ನಮಗೆಲ್ಲಾ ಊಟ ಕೊಡಿಸುತ್ತಿದ್ದ. ನಾವು ನೋಡಿದ ಚಿತ್ರವನ್ನೇ ಮತ್ತೆ ಮತ್ತೆ ನೋಡಿ ಸಂತೋಷ ಪಡುತ್ತಿದ್ದೆವು.
ಹೀಗೆ ‘ವಿಡಿಯೋ ಟೂರಿಂಗ್ ಟಾಕೀಸ್’ ಜಾತ್ರೆ ಕಳೆದ ಮೇಲೂ ಒಂದೆರಡು ವಾರಗಳ ಕಾಲ ಊರೂರು ಸುತ್ತಿ ಚೆನ್ನಾಗಿಯೇ ಸಂಪಾದನೆ ಮಾಡಿತು. ಆ ಪಿ.ಟಿ. ಮಾಸ್ಟರನ್ನು ಮಠಕ್ಕೆ ಕರೆಸಿಕೊಂಡು ಅಲ್ಲಿಯೂ ಒಂದು ಷೋ ನಾನಿನ್ನ ಮರೆಯಲಾರೆ ಸಿನಿಮಾವನ್ನು ಮಠದವರು ಉಚಿತವಾಗಿ ನೋಡಿದರು. ಅವತ್ತು ಅದಕ್ಕೆ ಕೊನೆಯ ದಿನ. ಇಷ್ಟು ಮುಗಿಯುವಷ್ಟರಲ್ಲಿ ನಾವು ಐದಾರು ಸಿನಿಮಾಗಳನ್ನು, ಒಂದೊಂದನ್ನೂ ಏಳೆಂಟು ಬಾರಿಯಾದರೂ ನೋಡಿದ್ದೆವು!ಇಷ್ಟೆಲ್ಲಾ ಆದರೂ, ನಮ್ಮ ಸಿನಿಮಾ ಹುಚ್ಚಿನಿಂದ ಎಷ್ಟೆಲ್ಲಾ ಅಪಾಯಗಳನ್ನು ಎದುರು ಹಾಕಿಕೊಳ್ಳುತ್ತಿದ್ದರೂ ವಾರ್ಡನ್‌ಗೆ ಮಾತ್ರ ಅದರ ಸುಳಿವನ್ನು ನಾವು ಬಿಟ್ಟುಕೊಟ್ಟಿರಲಿಲ್ಲ! ಹತ್ತನೇ ತರಗತಿಯಲ್ಲಿದ್ದಾಗ, ಒಮ್ಮೆ ಹಾಲ್ಟ್ ಗಾಡಿ ಸಿಗದೆ, ಮೂಡನಹಳ್ಳಿಯವರೆಗೂ ಲಾರಿಯೊಂದರಲ್ಲಿ ಬಂದು, ಅಲ್ಲಿಂದ ನಡೆದು ಹಾಸ್ಟೆಲ್ ತಲಪುವಷ್ಟರಲ್ಲಿ ರಾತ್ರಿ ಹನ್ನೆರಡಾಗಿತ್ತು. ಅಂದು ರಜಾದಿನವಾಗಿದ್ದರಿಂದ ಹಾಸ್ಟೆಲ್ಲಿನಲ್ಲಿ ಉಳಿದಿದ್ದ ಕೆಲವೇ ಹುಡುಗರು ಭಯದಿಂದ ಬಾಗಿಲನ್ನು ತೆಗೆಯದೆ, ನಾವೇ ಅದನ್ನು ಬಲವಾಗಿ ತಳ್ಳಿ, ಅದಕ್ಕೆ ಒತ್ತುಕೊಟ್ಟಿದ್ದ ಬಿದಿರು ಗಳದ ಸಮೇತ ಬಾಗಿಲನ್ನೂ ಎತ್ತಿ ಹಾಕಿದ್ದೆವು! ಆ ಸಾಹಸದಲ್ಲಿ ಒಮ್ಮೆ ಬಾಗಿಲು ಸ್ಲಿಪ್ಪಾಗಿ ಬಿದ್ದು ನನ್ನ ಎಡಗೈ ಹೆಬ್ಬೆರಳಿನ ಉಗುರು ಹಾರಿಹೋಗಿತ್ತು!
ಈ ಸಿನಿಮಾ ಹುಚ್ಚು ಅಷ್ಟಕ್ಕೆ ನಿಲ್ಲದೆ, ಪತ್ರಿಕೆಯಲ್ಲಿ ಬರುತ್ತಿದ್ದ ಸಿನಿಮಾ ಜಾಹಿರಾತುಗಳನ್ನು ಕುರಿತು ಹುಡುಗರೆಲ್ಲಾ ಸೀರಿಯಸ್ಸಾಗಿ ಚರ್ಚಿಸುವವರೆಗೂ ಮುಂದುವರೆಯುತ್ತಿತ್ತು. ಯಾವ್ಯಾವ ಊರಿನಲ್ಲಿ ಯಾವ್ಯಾವ ಥಿಯೇಟರ್‌ಗಳಿವೆ, ಯಾವ ಸಿನಿಮಾ ಎಷ್ಟು ದಿನ ಓಡಿದೆ ಎಲ್ಲವೂ ನಮ್ಮ ಅಧ್ಯಯನದ ಭಾಗವಾಗಿದ್ದವು ಎಂಬುದನ್ನು, ಐದಾರು ವರ್ಷಗಳಿಂದ ಥಿಯೇಟರ್ ಕಡೆಗೇ ಮುಖ ಮಾಡದ ನನಗೆ, ಈಗ ಈ ಹೊತ್ತಿನಲ್ಲಿ ನೆನೆದಾಗ ನಗು ಬರುತ್ತದೆ!
ಹತ್ತನೇ ತರಗತಿಯಲ್ಲಿ ನಾನು ನೋಡಿದ ಎಲ್ಲಾ ಸಿನಿಮಾಗಳ ಹೆಸರುಗಳನ್ನು ಒಂದು ನೋಟ್ ಪುಸ್ತಕದಲ್ಲಿ ಬರೆದಿಟ್ಟಿದ್ದೆ. ಅವುಗಳ ಟಿಕೆಟ್‌ನ್ನು ಒಂದು ಕವರ್‌ನಲ್ಲಿ ಹಾಕಿ ಸಂಗ್ರಹಿಸಿದ್ದೆ. ಅಂದ ಹಾಗೆ ಆ ವರ್ಷ, ಹಾಸ್ಟೆಲ್ಲಿನಲ್ಲಿದ್ದ ಹತ್ತು ತಿಂಗಳ ಅವಧಿಯಲ್ಲಿ ನಾನು ನೋಡಿದ ಸಿನಿಮಾಗಳ ಸಂಖ್ಯೆ ಮೂವತ್ತೆಂಟು! ಅಂದರೆ ಸರಾಸರಿ ವಾರಕ್ಕೆ ಒಂದು!!

Friday, May 15, 2009

‘ರೆಡ್ಡಿಮೇಷ್ಟ್ರು’ ಮತ್ತು ನಾನು

ಕ್ರಿ.ಶ.೧೯೯೮ರಲ್ಲಿ ನಾನು ಉದ್ಯೋಗಾರ್ಥಿಯಾಗಿ ಬೆಂಗಳೂರಿಗೆ ಬಂದೆ. ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರಗೆ ಮಾತ್ರ ಉದ್ಯೋಗ. ನಂತರ ಕಾಲ ಕಳೆಯುವುದು ಬಹಳ ಕಷ್ಟವಾಗುತ್ತಿತ್ತು. ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂಬ ಉತ್ಕಟವಾದ ಆಕಾಂಕ್ಷೆ. ಆಗೊಂದು ದಿನ ದಿನಪತ್ರಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ಶಾಸನಶಾಸ್ತ್ರ’ ತರಗತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು ಕಣ್ಣಿಗೆ ಬಿತ್ತು. ಮುಕ್ತ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ತರಗತಿಗೆ ದಾಖಲಾಗಿದ್ದ ನನಗೆ, ಅಲ್ಲಿ ‘ಶಾಸನಶಾಸ್ತ್ರ’ ಎಂಬ ಒಂದು ಪತ್ರಿಕೆಯೇ ಇತ್ತು. ಸಂಜೆಯ ವೇಳೆ ತರಗತಿಗಳು ನಡೆಯುತ್ತಿದ್ದುದರಿಂದ, ಯಾವುದೇ ಯೋಚನೆ ಮಾಡದೆ ನಾನು ಶಾಸನಶಾಸ್ತ್ರ ತರಗತಿಗೆ ಸೇರಿಕೊಂಡುಬಿಟ್ಟೆ. ಅಲ್ಲಿಂದ ಮುಂದೆ ನನ್ನ ಅಧ್ಯಯನ, ಆಸಕ್ತಿ ಮೊದಲಾದವುಗಳು ಬದಲಾಗಿಬಿಟ್ಟವು. ಬಹುಶಃ ನಾನು ಈ ತರಗತಿಗಳಿಗೆ ಹೋಗಿರದಿದ್ದರೆ, ನಾನೊಬ್ಬ ಕೇವಲ ಸಂಬಳದ ಉದ್ಯೋಗಿಯಾಗಿ ಬೆಲ್ಲು-ಬಿಲ್ಲು ನೋಡಿಕೊಂಡು, ಹತ್ತರಲ್ಲಿ ಹನ್ನೊಂದನೆಯವನಾಗಿ ಬಿಡುತ್ತಿದ್ದೆ, ಅಷ್ಟೆ!
ಆ ತರಗತಿಗಳಲ್ಲಿ ಡಾ.ಕೆ.ಆರ್.ಗಣೇಶ, ಡಾ.ಪಿ.ವಿ.ಕೃಷ್ಣಮೂರ್ತಿ ಮೊದಲಾದವರು ಮಾಡುತ್ತಿದ್ದ ಪಾಠಗಳಿಂದಾಗಿ ಶಾಸನಕ್ಷೇತ್ರದಲ್ಲಿ ನನ್ನ ಆಸಕ್ತಿ ಹೆಚ್ಚಾಗತೊಡಗಿತು. ಈ ಶಾಸನಗಳ ಅಧ್ಯಯನ ಬಹುಮುಖಿಯಾದದ್ದು. ಅದಕ್ಕೆ ಪೂರಕವಾಗಿ ಇತಿಹಾಸ, ಸಾಹಿತ್ಯ, ದೇವಾಲಯ ವಾಶ್ತುಶಿಲ್ಪ, ಮೂರ್ತಿಶಿಲ್ಪ ಮೊದಲಾದವುಗಳ ತಿಳುವಳಿಕೆ ಅಗತ್ಯ ಬೇಕಾಗಿರುತ್ತದೆ. ಎರಡು ವರ್ಷಗಳ ಪ್ರವೇಶ ಮತ್ತು ಪ್ರೌಢ ಶಾಸನಶಾಸ್ತ್ರ ತರಗತಿಗಳು ಮುಗಿಯುವಷ್ಟರಲ್ಲಿ ನನ್ನ ಕನ್ನಡ ಎಂ.ಎ. ಕೂಡಾ ಮುಗಿದಿತ್ತು. ಪ್ರೌಢ ತರಗತಿಗಳಲ್ಲಿ ಇದ್ದಾಗಲೇ, ‘ಜಾನಪದ’ ಪ್ರವೇಶ ತರಗತಿಗೂ ದಾಖಲಾಗಿ ಅದನ್ನು ಯಶಸ್ವಿಯಾಗಿ ಮುಗಿಸಿಬಿಟ್ಟಿದ್ದೆ. ಬಿಎಂಶ್ರೀ ಪ್ರತಿಷ್ಠಾನದವರು ನಡೆಸುತ್ತಿದ್ದ ‘ಹಸ್ತಪ್ರತಿಶಾಸ್ತ್ರ’ ಕೋರ್ಸನ್ನೂ ಮಾಡಿಬಿಟಿದ್ದೆ. ಇನ್ನು ಪಿಹೆಚ್.ಡಿ. ಮಾಡುವುದಾದರೆ ಇದೇ ಕ್ಷೇತ್ರದಲ್ಲಿ ಮಾಡಬೇಕು ಎಂಬ ಆಲೋಚನೆಯೂ ಬಂತು. ಆದರೆ ವಿಷಯ ಯಾವುದು? ಇತಿಹಾಸ, ಸಾಹಿತ್ಯ, ಶಾಸನ, ಜಾನಪದ, ದೇವಾಲಯ ಮತ್ತು ಮೂರ್ತಿಶಿಲ್ಪ ಎಲ್ಲವೂ ನನ್ನ ಅಧ್ಯಯನದಲ್ಲಿ ಬಳಕೆಯಾಗುವಂತಹ ವಿಷಯಕ್ಕೆ ಹುಡಕಾಟ ನಡೆಸಿದಾಗ ನನ್ನ ತಲೆಗೆ ಹೊಳೆದಿದ್ದು ‘ಸರಸ್ವತಿ’.
ಈ ವಿಷಯವನ್ನು ನನ್ನ ಗೆಳೆಯರು, ಗುರುಗಳು ಎಲ್ಲರೂ ಅನುಮೋದಿಸಿದರು. ಆದರೆ ಯಾವ ವಿಶ್ವವಿದ್ಯಾಲಯ? ಮಾರ್ಗದರ್ಶಕರು ಯಾರು? ಎಂಬ ಹುಡುಕಾಟದಲ್ಲಿ ಒಂದೆರಡು ವರ್ಷಗಳು ಕಳೆದುಹೋದವು. ಅಷ್ಟರಲ್ಲಿ ನನ್ನ ಮದುವೆಯೂ ಆಯಿತು. ಈ ನಡುವೆ ಪ್ರಾಚೀನ ದೇವಾಲಯಗಳಿಗೆ ಬೇಟಿ ನೀಡುವುದು, ಅವುಗಳ ಅಧ್ಯಯನ ನಡೆಸುವುದು, ಪತ್ರಿಕೆಗಳಿಗೆ ಅವುಗಳ ಬಗ್ಗೆ ಲೇಖನ ಬರೆಯುವುದು ಮಾಡುತ್ತಿದ್ದೆ. ಈ ಸಂದರ್ಭದಲ್ಲಿ, ಶಾಸನ ತರಗತಿಯ ಹಿರಿಯ ವಿದ್ಯಾರ್ಥಿಯಾಗಿದ್ದ ಬಿ.ಆರ್.ಭಾರತಿಯವರ ಪರಿಚಯವಾಯಿತು. ಅವರು ಡಾ.ದೇವರಕೊಂಡಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ. ಅಧ್ಯಯನ ಕೈಗೊಂಡಿದ್ದರು. ಅವರ ಮುಖಾಂತರವಾಗಿಯೇ ನನಗೆ ‘ನನ್ನ ಮೇಷ್ಟ್ರು’ ದೇವರಕೊಂಡಾರೆಡ್ಡಿಯವರ ಪರಿಚಯವಾಗಿದ್ದು. ಭಾರತಿಯವರ ಮಹಾಪ್ರಬಂಧ ಸಿದ್ಧವಾಗುವಾಗ ಅವರಿಗೆ ತೀವ್ರವಾದ ಅನಾರೋಗ್ಯ ಕಾಡುತ್ತಿತ್ತು. ಆಗ ನಾವು ಸ್ನೇಹಿತರೆಲ್ಲಾ ಆ ಕೆಲಸದಲ್ಲಿ ಕೈಜೋಡಿಸಿದ್ದೆವು. ಒಂದೆರಡು ಬಾರಿ ಬಂದ ಮೇಷ್ಟ್ರಿಗೆ ನನ್ನ ವಿಷಯ ತಿಳಿಯಿತು. ಭಾರತಿಯವರ ಮಹಾಪ್ರಬಂಧ ಸಲ್ಲಿಕೆಯಾದ ಮೇಲೆ ಮೇಷ್ಟ್ರು ನನಗೆ ಒಂದು ಜವಾಬ್ದಾರಿಯನ್ನು ವಹಿಸುವುದಾಗಿ ಹೇಳಿದರು. ಅದರಂತೆ ಹಂಪಿ ವಿಶ್ವವಿದ್ಯಾಲಯದ ಡಾ.ಬಾಲಸುಬ್ರಹ್ಮಣ್ಯ ಅವರು ದೆಹಲಿ ಐ.ಜಿ.ಎನ್.ಸಿ.ಎ.ಗಾಗಿ ಸಿದ್ಧಪಡಿಸುತ್ತಿದ್ದ ಹಂಪಿ ಶಾಸನಗಳ ಸೂಚಿ ಕೆಲಸದಲ್ಲಿ ಭಾಗವಹಿಸುವಂತೆ ನನಗೆ ತಿಳಿಸಿದರು. ನಾನು ಆ ಕೆಲಸದಲ್ಲಿ ಸಂತೋಷವಾಗಿ ಭಾಗವಹಿಸಿದೆ. ಆ ಸಂದರ್ಭದಲ್ಲಿ ಭಾರತಿಯವರು, ‘ಮೇಷ್ಟ್ರನ್ನೇ ಏಕೆ ನೀವು ಗೈಡ್ ಆಗಲು ಕೇಳಬಾರದು’ ಎಂಬ ಸಲಹೆಯನ್ನು ಕೊಟ್ಟರು. ಜೊತೆಗೆ, ‘ನಾನು ಜನರಲ್ ಕೋಟಾದ ಅಭ್ಯರ್ಥಿ. ಆದ್ದರಿಂದ, ನನ್ನ ಮಹಾಪ್ರಬಂಧ ಸಲ್ಲಿಕೆಯಾಗಿರುವುದರಿಂದ ನಿಮ್ಮನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು ಕೇಳಿ ನೋಡಿ’ ಎಂಬ ಸಲಹೆಯನ್ನು ಕೊಟ್ಟರು.
ಬೆಂಗಳೂರಿನ ಬಿ.ಎಂ.ಶ್ರೀ. ಪ್ರತಿಷ್ಠಾನದ ಯಾವುದೋ ಸಮಾರಂಭಕ್ಕೆ ಬಂದಿದ್ದ ಮೇಷ್ಟ್ರಿಗೆ ಸಮಯ ನೋಡಿಕೊಂಡು ವಿಷಯ ತಿಳಿಸಿದೆ. ಅವರು ಎಲ್ಲವನ್ನೂ ನಿಧಾನವಾಗಿ ಕೇಳಿಸಿಕೊಂಡು, ‘ನನ್ನದು ಶಾಸನಶಾಸ್ತ್ರ ವಿಭಾಗವಾಗಿವುದರಿಂದ, ನಿಮ್ಮ ಅಧ್ಯಯನ ಆಂಶಿಕವಾಗಿಯದರೂ ಶಾಶನಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿರಬೇಕಾಗುತ್ತದೆ. ಆದ್ದರಿಂದ ಶಾಶನಗಳಲ್ಲಿ ಸರಸ್ವತಿಯ ವಿಷಯ ಬಂದಿದೆಯೇ? ಅದು ಒಂದು ಅಧ್ಯಾಯವಾಗುವಷ್ಟು ಇದೆಯೇ? ಎಂಬುದನ್ನು ಪರಿಶೀಲಿಸಿ ತಿಳಿಸಿ. ನೋಡೋಣ’ ಎಂದು ಹೇಳಿದರು. ನಾನು ಅಲ್ಲಿಂದ ಮೂರ್ನಾಲ್ಕು ತಿಂಗಳು ಕೆಲಸ ಮಾಡಿ ಶಾಸನಗಳಲ್ಲಿ ವ್ಯಕ್ತವಾಗಿದ್ದ ಸರಸ್ವತಿಗೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸಿ ಮೇಷ್ಟ್ರ ಗಮನಕ್ಕೆ ತಂದೆ. ಆಗ ಅವರು ಮಾರ್ಗದರ್ಶಕರಾಗಲು ತಮ್ಮ ಒಪ್ಪಿಗೆ ಸೂಚಿಸಿ, ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಹೇಳಿದರು.

ಬಾ.ರಾ.ಗೋಪಾಲ್ ಪ್ರಶಸ್ತಿ ಸ್ವೀಕಾರ ಸಮಾರಂಭ

ಎಲ್ಲ ಮಾರ್ಗದರ್ಶಕರಂತೆ ಅವರೂ ನನಗೆ ಮಾರ್ಗದರ್ಶನ ಮಾಡಿದರು ಎಂದರೆ ಅವರ ವ್ಯಕ್ತಿತ್ವಕ್ಕೆ ನಾನು ಅಪಚಾರವೆಸಗಿದಂತೆ. ಮಾರ್ಗದರ್ಶಕರಾಗಿದ್ದಂತೆ ಒಬ್ಬ ವ್ಯಕ್ತಿಯಾಗಿಯೂ ಅವರು ನನಗೆ ಮುಖ್ಯರು. ಅವರು ನನಗೆ ಮೊದಲು ನೀಡಿದ ಸಲಹೆಯೇ, ಉತ್ಸಾಹದಲ್ಲಿ ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡಲು ಹೋಗಬೇಡಿ’ ಎಂಬುದಾಗಿತ್ತು. ಸ್ವತಃ ಅವರೇ ಹಂಪಿಯಿಂದ ಅರ್ಜಿಯನ್ನು ಕೊರಿಯರ್ ಮೂಲಕ ಕಳುಹಿಸಿಕೊಟ್ಟಿದ್ದರು. ಸಣ್ಣ ವಿಚಾರಗಳಿಗೂ ಅವರು ಮಹತ್ವ ಕೊಡುತ್ತಿದ್ದರು. ಮೊದಲ ಬಾರಿ ನಾನು ಪ್ರವೇಶ ಮತ್ತು ಮೌಖಿಕ ಪರೀಕ್ಷೆಗಾಗಿ ಹಂಪಿಗೆ ಹೊರಟು ನಿಂತಾಗ ಹೇಗೆ ಬರಬೇಕೆಂಂದು ಎಲ್ಲವನ್ನೂ ಫೋನಿನಲ್ಲಿಯೇ ತಿಳಿಸಿದ್ದರು. ‘ರೈಲಿನಲ್ಲಿ ಬರುವುದಾದರೆ, ಒಂದು ವಾರ ಮುಂಚಿತವಾಗಿಯೇ ರಿಸರ್ವೇಷನ್ ಮಾಡಿಸಿಕೊಳ್ಳಿ. ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಇಳಿದು, ಒಂದು ಆಟೋ ಹಿಡಿದು ಬಸ್ ಸ್ಟ್ಯಾಂಡಿಗೆ ಬನ್ನಿ. ಹತ್ತು ರೂಪಾಯಿ ಆಟೋಗೆ ತೆಗೆದುಕೊಳ್ಳುತ್ತಾರೆ. ಬೆಳಿಗ್ಗೆ ಏಳೂವರೆ ಮತ್ತು ಒಂಬತ್ತಕ್ಕೆ ವಿದ್ಯಾರಣ್ಯಕ್ಕೆ ಬಸ್ ಹೊರಡುತ್ತವೆ. ಏಳೂವರೆಯ ಬಸ್ ತಪ್ಪಿ ಹೋಗಿದ್ದರೆ, ಕಮಲಾಪುರಕ್ಕೆ ಬೇರೆ ಯಾವುದಾದರು ಬಸ್ ಹಿಡಿದು ಬಂದು, ಅಲ್ಲಿಂದ ಆಟೋದಲ್ಲಿ ಬಂದುಬಿಡಿ. ಆಟೋದವರು ಕೇಳುವಾಗ ಹೆಚ್ಚಿಗೆ ಕೇಳುತ್ತಾರೆ ಮೂವತ್ತು ರೂಪಾಯಿಗೆ ಒಪ್ಪಿಕೊಳ್ಳುತ್ತಾರೆ. ನೇರವಾಗಿ ನನ್ನ ಕ್ವಾರ್ಟ್ರಸಿಗೆ ಬನ್ನಿ. ಆಟೋದವರಿಗೆ ನನ್ನ ಹೆಸರು ಹೇಳಿದರೆ ಅವರೇ ನನ್ನ ಮನೆಯವರಗೆ ಕರೆದುಕೊಂಡು ಬರುತ್ತಾರೆ’ ಹೀಗೆ ಸಣ್ಣ ಸಣ್ಣ ವಿಷಯವನ್ನೂ ತಿಳಿಸಿ ನನಗೆ ಒಂದು ಸಣ್ಣ ತೊಂದರೆಯೂ ಆಗದಂತೆ ನೋಡಿಕೊಂಡು, ಮೊದಲ ಬಾರಿಗೇ ತಮ್ಮ ಶಿಷ್ಯವಾತ್ಸಲ್ಯವನ್ನು ನನಗೆ ಉಣಬಡಿಸಿಬಿಟ್ಟರು. ಅವರು ಅಲ್ಲಿ ಒಬ್ಬರೇ ಇದ್ದುದರಿಂದ, ತಿಂಡಿ ಮಾಡುವ ಕಷ್ಟ ಬೇಡ ಎಂದು ತಿಳಿಸಿ ಹೊಸಪೇಟೆಯಿಂದ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದೆ. ನಾನು ಹೋಗುವಷ್ಟರಲ್ಲಿ ತಮ್ಮ ಸ್ನಾನಾದಿಗಳನ್ನು ಮುಗಿಸಿ ಅಧ್ಯಯನ ಕೊಠಡಿಯಲ್ಲಿ ಕುಳಿತಿದ್ದ ಮೇಷ್ಟ್ರು, ನನಗೆ ಸ್ನಾನ ಮಾಡಿಕೊಳ್ಳುವಂತೆ ಹೇಳಿದರು. ಸ್ವತಃ ಅವರೇ ಸ್ಟೌವ್‌ನಲ್ಲಿ ಬಿಸಿನೀರು ಕಾಯಿಸಿ ಸಿದ್ಧಪಡಿಸಿದ್ದರು! ನನಗೆ ತುಸುವೇ ಸಂಕೋಚವಾಗದಂತೆ ನೋಡಿಕೊಂಡರು. ಇಬ್ಬರೂ ತಿಂಡಿ ಮುಗಿಸಿ ವಿಭಾಗದ ಕಡೆಗೆ ಹೊರಟೆವು. ದಾರಿಯಲ್ಲಿ ‘ಈ ಪ್ರವೇಶ ಪರೀಕ್ಷೆ, ಮೌಖಿಕ ಪರೀಕ್ಷೆ ಎಲ್ಲದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಡಿ. ಎಲ್ಲವೂ ಎಸ್.ಎಸ್.ಎಲ್.ಸಿ ಸ್ಟ್ಯಾಂಡರ್ಡಿಗೆ ಇರುತ್ತದೆ. ನಿಮಗೆ ಈಗಾಗಲೇ ಶಾಸನಶಾಸ್ತ್ರದಲ್ಲಿ ಸಾಕಷ್ಟು ಪರಿಶ್ರಮವಿರುವುದರಿಂದ ಇದು ಕಷ್ಟವಾಗುವುದಿಲ್ಲ ಎಂದು ಹೇಳಿದರು.
ಎಲ್ಲವನ್ನು ಮುಗಿಸಿ ಸಂಜೆಯ ವೇಳಗೆ ತಾತ್ಕಾಲಿಕ ಪ್ರವೇಶಧನವನ್ನು ಕಟ್ಟಿ ನಾನು ಊರಿಗೆ ಬಂದು ಬಿಟ್ಟೆ. ನಂತರ ಕೆಲ ತಿಂಗಳುಗಳಲ್ಲಿ ನನ್ನ ಪ್ರವೇಶ ಅಧಿಕೃತವಾಗಿ ಘೋಷಿಸಲ್ಪಟ್ಟಿತ್ತು. ಆಗ ನಾನು ಮತ್ತೆ ಹಂಪೆಗೆ ಹೋಗಿ ಪ್ರವೇಶ ಶುಲ್ಕವನ್ನು ಕಟ್ಟಬೇಕಾಗಿತ್ತು. ಆದರೆ ಮೇಷ್ಟ್ರು, ‘ಅದಕ್ಕಾಗಿ ನೀವು ಇಲ್ಲಿಯವರೆಗೆ ಬರಬೇಕಾಗಿಲ್ಲ. ಡಿ.ಡಿ. ತೆಗೆದು ನನ್ನ ವಿಳಾಸಕ್ಕೆ ಕಳುಹಿಸಿ. ನಾನೇ ಅದನ್ನು ಅಧ್ಯಯನಾಂಗಕ್ಕೆ ತಲುಪಿಸಿ, ಅದರ ರಸೀತಿಯನ್ನು ನಿಮಗೆ ತಲುಪಿಸುತ್ತೇನೆ’ ಎಂದು ನನಗೆ ಆಗಬಹುದಾಗಿದ್ದ ಆರ್ಥಿಕ ಹೊರೆಯನ್ನು ತಪ್ಪಿಸಿಬಿಟ್ಟರು. ಮುಂದೆಯೂ ಅಷ್ಟೆ, ಅರ್ಧವಾರ್ಷಿಕ ವರದಿಗಳನ್ನು ಅಂಚೆ ಮುಖಾಂತರ ತರಿಸಿಕೊಂಡು ಅಥವಾ ಅವರು ಬೆಂಗಳೂರಿಗೆ ಬಂದಾಗ ಸ್ವತಃ ತಾವೇ ತೆಗೆದುಕೊಂಡು ಅದನ್ನು ಅಧ್ಯಯನಾಂಗಕ್ಕೆ ಸಲ್ಲಿಸಿಬಿಡುತ್ತಿದ್ದರು. ಇದರಿಂದಾಗಿ ಆಗ ‘ತೀರಾ ಕಡಿಮೆ’ ಸಂಬಳದವನಾಗಿದ್ದ ನನಗೆ ಆರ್ಥಿಕವಾಗಿ ಹೊಡೆತ ಬೀಳುವುದನ್ನು ತಪ್ಪಿಸುತ್ತಿದ್ದರು. ಮಧ್ಯ ಒಂದು ಬಾರಿ ಮಾತ್ರ ನಾನು ಹಂಪೆಗೆ ಹೋಗಿದ್ದೆ. ಅದೂ ನನ್ನ ಪರಿವಾರದ ಸಮೇತ. ಜೊತೆಗೆ ನಾಲ್ಕೈದು ಊರಿಗಳಲ್ಲಿ ಕ್ಷೇತ್ರಕಾರ್ಯದ ಯೋಜನೆ ಬೇರೆ. ಅವರು ದೆಹಲಿಗೋ ಎಲ್ಲೋ ಹೊರಟಿದ್ದರು. ಆದರೆ ತಮ್ಮ ಮನೆಯನ್ನೇ ಪೂರ್ತಿ ನಮಗೆ ಬಿಟ್ಟುಕೊಟ್ಟು ನಾವು ಅಲ್ಲಿರುವವರಗೆ ಅಲ್ಲಿಯೇ ಉಳಿಯುವಂತೆ ತಿಳಿಸಿ ಹೋಗಿದ್ದರು. ಅವರ ಮನೆಯ ಹಿಂದೆ ಅವರೇ ಸ್ವತಃ ಕೈಯಾರೆ ಬೆಳೆಸಿದ್ದ ಹಲವಾರು ತರಕಾರಿಗಳನ್ನು ಬಳಸಿಕೊಳ್ಳುವಂತೆ ಹೇಳಿ ಹೋಗಿದ್ದರು!
ಮೇಷ್ಟ್ರು ತುಂಬಾ ಸರಳ ಜೀವಿ. ಅದು ಅವರ ಜೀವನ ವಿಧಾನದಲ್ಲೂ ಅಡಕವಾಗಿತ್ತು. ನಾನು ಚಿಕ್ಕಪುಟ್ಟ ವಿಷಯಕ್ಕೂ, ಎಲ್ಲಾದರೂ ಸರಸ್ವತಿಯ ಬಗ್ಗೆ ಒಂದು ಸಣ್ಣ ಮಾಹಿತಿ ದೊರೆತರೂ, ಆ ಊರು ಎಷ್ಟೇ ದೂರದಲ್ಲಿದ್ದರೂ ಹೊರಟು ನಿಂತು ಬಿಡುತ್ತಿದ್ದೆ. ಆಗೆಲ್ಲಾ ಅವರು, ಪ್ರತಿಯೊಂದನ್ನೂ ಸ್ಥಳಕ್ಕೇ ಹೋಗಿ ನೋಡಬೇಕೆಂದೇನಿಲ್ಲ. ಏನಾದರು ವಿಶೇಷವಿದ್ದರೆ ಮಾತ್ರ ಹೋಗಿ ನೋಡಿ’ ಎಂದು ಹೇಳುತ್ತಿದ್ದರು. ಅವರು ಬೆಂಗಳೂರಿಗೆ ಬಂದಾಗ ಮಾತ್ರ ನನ್ನ ಅವರ ಬೇಟಿ. ಮಿಥಿಕ್ ಸೊಸೈಟಿ, ಬಿಎಂಶ್ರೀ ಪ್ರತಿಷ್ಠಾನ ಅಥವಾ ಸಾಹಿತ್ಯ ಪರಿಷತ್ ಗ್ರಂಥಾಲಯದಲ್ಲಿ ಕುಳಿತು ಚರ್ಚೆ ಮಾಡುತ್ತಿದ್ದವು. ಒಂದೆರಡು ಬಾರಿ ಅವರ ಮನೆಗೇ ನನ್ನ ಆಹ್ವಾನಿಸಿ, ಊಟ ತಿಂಡಿ ಎಲ್ಲವನ್ನೂ ಅವರೇ ಕೊಟ್ಟು, ನನಗೆ ವಿದ್ಯಾದಾನ ಮಾತ್ರವಲ್ಲ ಅನ್ನದಾನವನ್ನೂ ಮಾಡಿದ್ದಾರೆ. ಇದು ಮನೆಯಲ್ಲಿ ಮಾತ್ರವಲ್ಲ. ಯಾವಗಲಾದರೂ ಹೋಟೆಲ್ಲಿಗೆ ಹೋಗಿ ತಿಂಡಿ ಕಾಫಿ ಮಾಡಿದರೂ ನನ್ನಿಂದ ಒಂದೂ ಪೈಸವನ್ನು ಅವರು ಕೊಡಿಸಲಿಲ್ಲ. ಆ ಐದು ವರ್ಷಗಳ ಅವಧಿಯಲ್ಲಿ ಬೈಟು ಕಾಫಿಯನ್ನು ಕುಡಿಸುವ ಅವಕಾಶವನ್ನು ಅವರು ನನಗೆ ನೀಡಲಿಲ್ಲ. ‘ನಿಮ್ಮ ಮನೆಗೆ ಬರುತ್ತೇನೆ. ಅಲ್ಲಿ ಕಾಫಿ ಕೊಡ್ರಿ’ ಎಂದು ಹೇಳುತ್ತಿದ್ದರು. ಒಂದೆರಡು ಬಾರಿ ನಮ್ಮ ಮನೆಗೇ ಬಂದು, ಗಂಟೆಗಟ್ಟಲೆ ಇದ್ದು, ಅಧ್ಯಯನದ ಪ್ರಗತಿಯನ್ನು ಪರಿಶೀಲಿಸಿ, ಚರ್ಚಿಸಿ, ಸಲಹೆಗಳನ್ನು ಕೊಟ್ಟು ಹೊರಡುತ್ತಿದ್ದರು. ಅವರಿಗೆ ಕಾಂಗ್ರೆಸ್ ಕಡ್ಲೆಬೀಜ ಎಂದರೆ ಇಷ್ಟ. ಜೊತೆಗೆ ಕಾಫಿ. ಇವೆರಡನ್ನು ಸಂತೋಷವಾಗಿ ಸ್ವೀಕರಿಸುತ್ತಿದ್ದರು. ಹೊರಡುವಾಗ ನಾನು ‘ಸಾರ್, ನಾನು ಬೈಕಿನಲ್ಲಿ ಬಿಟುಕೊಡುತ್ತೇನೆ’ ಎಂದರೆ, ‘ಅಯ್ಯೋ ಈ ಟ್ರಾಫಿಕ್ಕಿನಲ್ಲಿ ಸುಮ್ನೆ ಏಕೆ ತೊಂದರೆ ತಗೋತಿರಿ. ಹತ್ರದ ಬಸ್‌ಸ್ಟ್ಯಾಂಡಿಗೆ ಬಿಡಿ ಸಾಕು’ ಎನ್ನುತ್ತಿದ್ದರು. ಒಮ್ಮೆ, ಒಂದು ಭಾನುವಾರ ಅವರ ಮನೆಯಲ್ಲಿ, ನನ್ನನ್ನು ಪಕ್ಕದಲ್ಲೇ ಕೂರಿಸಿಕೊಂಡು, ಬಿರಿಯಾನಿ ಊಟ ಮಾಡಿಸಿದ್ದರು. ನನಗೆ ಸಂಕೋಚವಾಗಬಾರದೆಂದು ಅವರೇ ಕೇಳಿ ಕೇಳಿ ಬಡಿಸುತ್ತಿದ್ದರು ಕೂಡಾ.
ನನ್ನ ಪ್ರವೇಶ ಅಧಿಕೃತವಾಗಿ ಘೋಷಣೆಯಾದ ಮೇಲೆ, ಒಂದು ವಾರದ ಕಾಲ ವಿಶ್ವವಿದ್ಯಾಲಯದಲ್ಲಿ ಅಧ್ಯಯನಾಂಗದವರು ನಡೆಸುವ ಕಾರ್ಯಾಗಾರದಲ್ಲಿ ಭಾಗವಹಿಸಬೇಕಾಗಿತ್ತು. ಆಗ ಪೂರ್ತಿ ನನ್ನನ್ನು ಅವರ ಮನೆಯಲ್ಲಿಯೇ ಇರಿಸಿಕೊಂಡಿದ್ದರು. ಅವರು ತುಂಬಾ ರುಚಿಕಟ್ಟಾಗಿ ಸಾರು, ಫಲ್ಯ ಮಾಡುತ್ತಿದ್ದರು. ಮುದ್ದೆ ಮಾಡಿಕೊಳ್ಳಲು ಅಷ್ಟಾಗಿ ಬರುತ್ತಿರಲಿಲ್ಲ. ನಾನು ಚೆನ್ನಾಗಿ ಮುದ್ದೆ ಮಾಡುತ್ತಿದ್ದೆ. ಆದು ತಿಳಿದ ನಂತರ ನಾನಲ್ಲಿರುವಷ್ಟು ದಿನ ಬೆಳಿಗ್ಗೆ ತಿಂಡಿಗೇ ಮುದ್ದೆ ಊಟ, ರಾತ್ರಿ ಮತ್ತೆ ಮುದ್ದೆ ಊಟ! ಡಿಸೆಂಬರ್ ಮೂವತ್ತೊಂದನೇ ತಾರೀಖಿನಂದು ಅವರೇ ಹೊಸಪೇಟೆಗೆ ಹೋಗಿ ಚಿಕನ್ ತಂದಿದ್ದರು. ನಾನು ಚಿಕನ್ ಸಾಂಬಾರು ಮಾಡಿ ಮುದ್ದೆ ಮಾಡಿದ್ದೆ. ರಾತ್ರಿ ಕೆಲವು ಸ್ನೇಹಿತರೊಂದಿಗೆ ಊಟ ಮಾಡಿ, ಸುಮಾರು ಹನ್ನೆರಡು ಗಂಟೆಯ ಹೊತ್ತಿನಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಡಿದ ವಾಕಿಂಗ್‌ನ್ನು ನಾನು ಮರೆಯಲು ಸಾಧ್ಯವೇ ಇಲ್ಲ! ಅಲ್ಲಿದ್ದ ದಿನಗಳಲ್ಲಿ, ಅಲ್ಲಿಯ ಮಧ್ಯಾಹ್ನದ ಸೆಖೆಗೆ ನಾನು ಆಚೆ ಈಚೆ ಓಡಾಡುತ್ತಿದ್ದರೆ, ‘ಫ್ಯಾನ್ ಹಾಕಿಕೊಂಡು ಸ್ವಲ್ಪ ಹೊತ್ತು ಆರಾಮವಾಗಿ ಮಲಗಿಬಿಡಿ. ಇಲ್ಲಿಯ ಸೆಖೆಯೇ ಹೀಗೆ’ ಎಂದು ಹೇಳುತ್ತಿದ್ದರು.
ನನ್ನ ಮಹಾಪ್ರಬಂದ ಸಿದ್ಧವಾಗಿ ಅದನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಲು ಹೋಗಬೇಕಾಗಿತ್ತು. ಆಗ ನನ್ನ ಮನೆ ನಿರ್ಮಾಣವೂ ನಡೆಯುತ್ತಿತ್ತು. ಆಗಲೂ ಅವರು ‘ಅಲ್ಲಿ ನಿಮಗೆ ಕೆಲಸವಿದ್ದರೆ, ಕೊರಿಯರ್‌ನಲ್ಲಿ ಕಳುಹಿಸಿಬಿಡಿ. ಸುಮ್ಮನೇ ನೀವೇಕೆ ಹೊತ್ತುಕೊಂಡು ಬರುತ್ತೀರಿ’ ಎಂದಿದ್ದರು. ಆದರೂ ನಾನು ಸ್ವತಃ ಮಹಾಪ್ರಬಂಧದ ಸಂಪುಟಗಳನ್ನು ತೆಗೆದುಕೊಂಡು ಹೋಗಿದ್ದೆ. ರೈಲ್ವೆ ರಿಸರ್ವೇಷನ್ ಸಿಗದೆ ಬಸಿನಲ್ಲಿ ಹೋಗಿದ್ದೆ. ನಾನು ಹೋಗುವಷ್ಟರಲ್ಲಿ ಸೀಗಡಿ ಸಾರು ಮಾಡಿ, ಕಾಯುತ್ತಾ ಕುಳಿತಿದ್ದರು. ಬಕೆಟ್‌ಗಳಲ್ಲಿ ನೀರು ಸಹ ತುಂಬಿಸಿಟಿದ್ದರು! ‘ಹೋಗಿ ಸ್ನಾನ ಮಾಡಿಬಿಡಿ. ಆಮೇಲೆ ಮುದ್ದೆ ಮಾಡಿ. ಊಟ ಮಾಡಿ ಡಿಪಾರ್ಟಮೆಂಟಿಗೆ ಹೋಗೋಣ’ ಎಂದರು. ಅಂದು ನಾನು ಊಟ ಮಾಡಿದ ಮುದ್ದೆ-ಸೀಗಡಿ ಸಾರಿನ ರುಚಿಯನ್ನು (ಅನ್ನ ಕೂಡಾ ಮಾಡಿರಲಿಲ್ಲ) ನಾನು ಮತ್ತೆ ಸವಿಯುತ್ತೇನೋ ಇಲ್ಲವೋ, ಅದಕ್ಕೆ ಮುಂಚೆ ಮಾತ್ರ ಸವಿದಿಲ್ಲ. ಹೆಚ್ಚು ಮಸಾಲೆ ಹಾಕದೆ ಅತ್ಯಂತ ರುಚಿಕಟ್ಟಾಗಿ ಸೀಗಡಿ ಸಾರು ಮಾಡಬಹುದೆಂದು ನನಗೆ ನನ್ನ ಮೇಷ್ಟ್ರು ಕಲಿಸಿಬಿಟಿದ್ದರು!
ಕೇವಲ ಪಿಹೆಚ್.ಡಿ. ಅಧ್ಯಯನಕ್ಕೆ ಮಾತ್ರ ಅವರು ನನ್ನ ಮಾರ್ಗದರ್ಶಕರಾಗಿರಲಿಲ್ಲ. ನಾನು ಮನೆ ಕಟ್ಟಿಸುವ ವಿಚಾರ ತಿಳಿಸಿದಾಗಲೂ ಹಲವಾರು ಸಲಹೆ ಸೂಚನೆಗಳನ್ನು ಕೊಟ್ಟರು. ‘ಲಕ್ಸುರಿ, ಸ್ಟ್ಯಾಂಡರ್ಡ್ ಎಂದು ಅನಾವಶ್ಯಕವಾಗಿ ದುಡ್ಡು ಸುರಿಯಬೇಡಿ. ನಾವು ಕಟುವ ಮನೆ ನಮ್ಮ ತಲೆಮಾರಿಗಷ್ಟೆ. ಮುಂದಿನ ತಲೆಮಾರಿನವರಿಗೆ ಅದು ಹಳೆಯದಾಗುತ್ತದೆ.’ ಎಂದು ಹೇಳಿ ಬೆಂಗಳೂರಿನಲ್ಲಿ ಕೆಡವುತ್ತಿರುವ ಒಳ್ಳೊಳ್ಳೆಯ ಬಂಗಲೆಗಳ ಉದಾಹರಣೆಗಳನ್ನು ಕೊಟ್ಟಿದ್ದರು. ನನ್ನ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಮೇಷ್ಟ್ರು ಊರಿನಲ್ಲಿ ಇರಲಿಲ್ಲ. ಆದರೆ ಆಮೇಲೆ ಒಂದು ದಿನ ಫೋನ್ ಮಾಡಿ ‘ಇವತ್ತು ನಿಮ್ಮ ಮನೆಗೆ ಬರುತ್ತೇನೆ. ನಿಮ್ಮ ಹೊಸಮನೆ ನೋಡಬೇಕು’ ಎಂದು ಬಂದು ಒಂದೆರಡು ಗಂಟೆಗಳ ಕಾಲ ಇದ್ದು, ನನ್ನ ಮಗಳೊಂದಿಗೆ ಆಟವಾಡಿ, ಅದು ಇದು ಮಾತನಾಡಿ, ತಿಂಡಿ ತಿಂದು ಹೋಗಿದ್ದರು. ನನ್ನ ಮಗಳು ಡಾ.ಕೆ.ಆರ್.ಗಣೇಶ ಅವರನ್ನು ‘ಮೇಷ್ಟ್ರುತಾತ’ ಎಂದು ಕರೆಯುತ್ತಿದ್ದುರಿಂದ, ರೆಡ್ಡಿಮೇಷ್ಟ್ರನ್ನು ‘ಗೈಡ್‌ತಾತ’ ಎಂದು ಕರೆಯುತ್ತಿದ್ದಳು!
ನನ್ನ ಮೌಖಿಕ ಪರೀಕ್ಷೆ ನಡೆಯುವಷ್ಟರಲ್ಲಿ ಅವರು ನಿವೃತ್ತರಾಗಿದ್ದರು. ಅಷ್ಟರಲ್ಲಾಗಲೇ ಅವರು ವಿಶ್ವವಿದ್ಯಾಲಯದ ಪಕ್ಕದಲ್ಲೇ ಒಂದು ಎಕರೆ ಜಮೀನು ಖರೀದಿಸಿ, ಅಲ್ಲಿಯೇ ಕೈತೋಟ ಮಾಡಿಕೊಂಡು, ಪುಟ್ಟಮನೆ ನಿರ್ಮಾಣ ಮಾಡಿಕೊಂಡು ನೆಲೆಸಿದ್ದರು. ಗಿಡಗಳನ್ನು ಬೆಳೆಸುವುದರಲ್ಲಿ ಅವರಿಗೆ ವಿಶೇಷ ಪ್ರೀತಿ. ವಿಶ್ವವಿದ್ಯಾಲಯದ ಆವರಣದಲ್ಲಿನ ತೋಟಗಾರಿಕೆಯ ಉಸ್ತುವಾರಿಯನ್ನೂ ಕೆಲವು ವರ್ಷಗಳ ಕಾಲ ಅವರು ನಿರ್ವಹಿಸಿದ್ದುಂಟು. ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಯಾವುದಾದರು ಗಿಡದ ಮುಂದೆ ನಿಂತುಕೊಂಡು, ಅದನ್ನು ಎಲ್ಲಿಂದ ತರಿಸಿದೆ, ಅದರ ವಿಶೇಷವೇನು ಮೊದಲಾದವುಗಳನ್ನು ನನಗೆ ಹೇಳುತ್ತಿದ್ದರು. ಅವರ ಪುಟ್ಟ ತೋಟದ ಬಹುತೇಕ ಎಲ್ಲಾ ಗಿಡಗಳನ್ನು ಅವರು ನನಗೆ ಪರಿಚಯ ಮಾಡಿಕೊಟ್ಟಿದ್ದಾರೆ! ಇಂದು ಹಂಪಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಸುರು ಕಾಣುತ್ತಿರುವುದಕ್ಕೆ ಅತಿಮುಖ್ಯ ಕಾರಣಕರ್ತರು ನಮ್ಮ ಮೇಷ್ಟ್ರು. ಅಲ್ಲಿ ಬರುತ್ತಿದ್ದ ಕೆಲಸಗಾರರೊಂದಿಗೆ ಸ್ನೇಹದಿಂದ ವರ್ತಿಸುತ್ತಾ, ಕೆಲಸ ಮಾಡಿಸುತ್ತಿದ್ದುದನ್ನು ನಾನು ಹಲವಾರು ಬಾರಿ ಕಣ್ಣಾರೆ ಕಂಡಿದ್ದೇನೆ.
ನನ್ನ ಮೌಖಿಕ ಪರೀಕ್ಷೆಯಲ್ಲಿ ಒಬ್ಬ ಪ್ರಾಧ್ಯಪಕರು ಧರ್ಮಸಂಬಂಧವಾದ ಪ್ರಶ್ನೆಯನ್ನು ಅನಾವಶ್ಯಕವಾಗಿ ಎತ್ತಿದ್ದರಿಂದ, ಆ ಪ್ರಾಧ್ಯಪಕರು ಅಲ್ಲಿ ನೆರೆದಿದ್ದವರಿಂದಲೇ ತೀವ್ರವಾದ ಆಕ್ಷೇಪಕ್ಕೆ ಗುರಿಯಾಗಬೇಕಾಯಿತು. ಆಗ ಏರ್ಪಟ್ಟ ಗೊಂದಲದ ವಾತಾವರಣದಲ್ಲಿ ನನಗೆ, ಅವರ ಪ್ರಶ್ನೆಗೆ ಉತ್ತರಿಸುವ ಅವಕಾಶ ಸಿಗಲೇ ಇಲ್ಲ. ಸ್ವತಃ ಮಾನ್ಯ ಕುಲಪತಿಯವರೇ ಆ ಪ್ರಶ್ನೆಯನ್ನು ನಿರಾಕರಿಸಿ ಮುಂದೆ ಬೇರೆ ಪ್ರಶ್ನೆಗೆ ಉತ್ತರಿಸುವಂತೆ ಹೇಳಿಬಿಟ್ಟರು! ಎಲ್ಲಾ ಮುಗಿದ ಮೇಲೆ, ಮೇಷ್ಟ್ರಿಗೆ ತುಂಬಾ ಬೇಸರವಾಗಿತ್ತು. ‘ನಿಮಗೆ ಗೊತ್ತಿರುವ, ಬರೆದಿರುವ ವಿಷಯವನ್ನು ಹೇಳುವ ಅವಕಾಶ ಇಲ್ಲವಾಯಿತು’ ಎಂದು ಬೇಸರಪಟ್ಟುಕೊಂಡರು. ಕೊನೆಗೆ ಅವರೇ, ‘ಇಲ್ಲಿ ಇವೆಲ್ಲಾ ಮಾಮೂಲು ಬಿಡಿ’ ಎಂದು ಸುಮ್ಮನಾದರು ಕೂಡಾ.
ಘಟಿಕೋತ್ಸವದ ದಿನ ಅವರು ಊರಿನಲ್ಲಿ ಇರಲಿಲ್ಲ. ಆದರೂ ಅವರೇ ಫೋನ್ ಮಾಡಿ, ಅಲ್ಲಿ ಕೀ ಕೊಟ್ಟು ಬಂದಿರುವ, ಅಲ್ಲಿರುವ ವ್ಯಕ್ತಿಗೆ ನೀರು ತುಂಬಿಸಿಡಲು ಹೇಳಿ ಬಂದಿರುವ ವಿಚಾರವನ್ನು ತಿಳಿಸಿದ್ದರು. ಅಂದು ಅವರು ಅಲ್ಲಿಲ್ಲದಿದ್ದರೂ ನಾನು ಹೋಗಿ, ಸ್ನಾನ ಮಾಡಿಕೊಂಡು ಆರಾಮವಾಗಿ ಘಟಿಕೋತ್ಸವದಲ್ಲಿ ಭಾಗವಹಿಸಿ ಬಂದಿದ್ದೆ. ನಾನು ಹಂಪೆಯಲ್ಲಿದ್ದ ದಿನಗಳಲ್ಲಿ ನನ್ನ ಮನೆಯಿಂದ ಹೊರಗೆ ಇದ್ದೇನೆ ಎಂಬ ಭಾವನೆ ನನಗೆಂದೂ ಬರಲೇ ಇಲ್ಲ.
ಹೀಗೆ ಗುರು-ಶಿಷ್ಯ ಸಂಬಂಧದ ನಡುವೆ ಒಂದು ಆರೋಗ್ಯಕರ ದೂರವನ್ನು ಕಾಪಾಡಿಕೊಂಡೇ, ನನಗೆ ಅತ್ಯಂತ ಪ್ರೀತಿಯನ್ನು, ವಾತ್ಸಲ್ಯವನ್ನು ತೋರಿದ ನನ್ನ ಮೇಷ್ಟ್ರು ಒಬ್ಬ ವ್ಯಕ್ತಿಯಾಗಿ ನೂರಾರು ಜನಕ್ಕೆ ಮಾರ್ಗದರ್ಶಕರಾಗಿದ್ದವರು. ಕಮಲಾಪುರದ ಆಟೋ ಹುಡುಗರಿಗೆ, ‘ರೆಡ್ಡಿ ಮೇಷ್ಟ್ರ ಮನೆಗೆ’ ಅಂದರೆ ಸಾಕು, ‘ಓ ಅವ್ರಾ! ಗೊತ್ತು ಬನ್ರಿ ಸರ್’ ಎಂದು ಯಾವ ಸಬೂಬು ಹೇಳದೆ, ಚೌಕಾಸಿ ಮಾಡದೆ ಕರೆದುಕೊಂಡು ಹೋಗುತ್ತಿದ್ದರು. ಒಬ್ಬ ಮೇಷ್ಟ್ರು, ವಿಶ್ವವಿದ್ಯಾಲಯದ ಹೊರಗೂ ತನ್ನ ಪ್ರಭಾವವನ್ನು ಬೀರಬಲ್ಲ ಎಂಬುದಕ್ಕೆ ಅತ್ಯಂತ ಉತ್ತಮ ಉದಾಹರಣೆ ನಮ್ಮ ‘ರೆಡ್ಡಿ ಮೇಷ್ಟ್ರು’.
{ಕರ್ನಾಟಕದ ಇತಿಹಾಸ ಮತ್ತು ಶಾಸನತಜ್ಞರ ಸಾಲಿನಲ್ಲಿ ಚಿರಪರಿಚಿತವಾದ ಹೆಸರು ಡಾ.ದೇವರಕೊಂಡಾರೆಡ್ಡಿ ಅವರದು. ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಿವೃತ್ತರಾದ ಮೇಲೆ ಅವರಿಗೆ ಸಲ್ಲಿಕೆಯಾಗುತ್ತಿರುವ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನ ಇದು. ಅವರ ಕಿರುಪರಿಚಯ ಹೀಗಿದೆ.
ಮೂಲತಃ ಆನೆಕಲ್ ತಾಲ್ಲೋಕಿನವರಾದ ಡಾ.ರೆಡ್ಡಿಯವರು ಕನ್ನಡ ಎಂ.ಎ. ನಂತರ ಗಂಗ ಅರಸರ ಕಾಲದ ದೇವಾಲಯಗಳ ವಾಸ್ತುಶಿಲ್ಪವನ್ನು ಕುರಿತಂತೆ ಅಧ್ಯಯನ ನಡೆಸಿ ಪಿಎಚ್.ಡಿ. ಪದವಿ ಪಡೆದುಕೊಂಡರು. ಸಾಹಿತ್ಯ ಪರಿಷತ್ತಿನಲ್ಲಿ ನಡೆಸುತ್ತಿದ್ದ ಶಾಸನಶಾಸ್ತ್ರ ತರಗತಿಗಳಲ್ಲಿ ಗೌರವ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಲೇ ತಮ್ಮ ಅಧ್ಯಯನಶಿಲತೆಯನ್ನು ಉಳಿಸಿಕೊಂಡಿದ್ದ ಶ್ರೀ ರೆಡಿಯವರನ್ನು ಡಾ.ಸೂರ್ಯನಾಥಕಾಮಥ್ ಅವರು ಕರ್ನಾಟಕ ಗೆಸೆಟಿಯರ್ ಇಲಾಖೆಗೆ ನೇಮಕ ಮಾಡಿಕೊಂಡರು. ಅಲ್ಲಿಂದ ಡಾ.ಚಂದ್ರಶೇಖರ ಕಂಬಾರರ ಕಣ್ಣಿಗೆ ಬಿದ್ದ ರೆಡ್ಡಿಯವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಶಾಸನಶಾಸ್ತ್ರ ವಿಭಾಗಕ್ಕೆ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಪ್ರೊ.ಕಲ್ಬುರ್ಗಿಯವರ ಪ್ರೋತ್ಸಾಹದಿಂದಾಗಿ, ವಿಭಾಗವನ್ನು ಸದೃಢವಾಗಿ ಕಟ್ಟಿದ ಮೇಷ್ಟ್ರು, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಶಾಸನ ಸಂಪುಟಗಳನ್ನು ಸಿದ್ಧಪಡಿಸಿದರು. ಜೊತೆಗೆ ಉತ್ತರಕರ್ನಾಟಕದ ಹಲವಾರು ಜಿಲ್ಲೆಗಳ ಶಾಸನ ಸಂಪುಟಗಳನ್ನು ಸಿದ್ಧಪಡಿಸಿದರು. ಹೀಗೆ ಹದಿಮೂರು ಶಾಸನಸಂಪುಟಗಳನ್ನು ಸಿದ್ಧಪಡಿಸಿದ ರೆಡ್ಡಿಯವರು, ಡಾ.ಬಿ.ಎಲ.ರೈಸ್ (ಎಪಿಗ್ರಾಫಿಯಾ ಕರ್ನಾಟಿಕದ ಸಂಪಾದಕರು) ನಂತರ ಅತಿ ಹೆಚ್ಚು ಶಾಸನ ಸಂಪುಟಗಳನ್ನು ಸಂಪಾದಿಸಿ ಕೀರ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ಲಿಪಿಶಾಸ್ತ್ರ, ಶ್ರವಣಬೆಳಗೊಳದ ವಾಸ್ತುಶಿಲ್ಪ, ಶಾಸನಪದಕೋಶ ಮೊದಲಾದ ಮೌಲಿಕ ಕೃತಿಗಳನ್ನು ಶ್ರೀಯುತರು ರಚಿಸಿದ್ದಾರೆ. ಶ್ರೀಯುತರು ಇತಿಹಾಸತಜ್ಞರಿಗೆ ಸಲ್ಲುವ ಶ್ರೀ ಬಾ.ರಾ.ಗೋಪಾಲ್ ಪ್ರಶಸ್ತಿ ಪುರಸಕೃತರಾಗಿದ್ದಾರೆ.}

Monday, May 11, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 14

ಅಡುಗೆ ಭಟ್ಟರು
ಇನ್ನು ಭಟ್ಟರ ಬಗ್ಗೆ ಖಂಡಿತ ಇಲ್ಲಿ ಹೇಳಲೇಬೇಕು. ಹುಡುಗರಿಂದ ಎಲ್ಲಾ ಕೆಲಸಕ್ಕೂ ನೆರವು ಧಾರಾಳವಾಗಿ ಸಿಗುತ್ತಿದ್ದುದರಿಂದ ಮೊದಲಿದ್ದ ಇಬ್ಬರು ಭಟ್ಟರು ಒಟ್ಟಿಗೆ ಇಲ್ಲಿ ಉಳಿಯುತ್ತಿದ್ದು ತುಂಬಾ ಅಪರೂಪ. ವಾರದಲ್ಲಿ ಮೂರು ದಿನ ಒಬ್ಬರಿದ್ದರೆ, ಇನ್ನುಳಿದ ದಿನಗಳಲ್ಲಿ ಇನ್ನೊಬ್ಬನಿರುತ್ತಿದ್ದ. ಸ್ಥಳೀಯರಾದ ಇವರನ್ನು ಬದಲಾಯಿಸಲು ಪರ ಊರಿನವರಾದ ವಾರ್ಡನ್ನರಿಗೂ ಸಾಧ್ಯವಾಗಲಿಲ್ಲ. ಸ್ವಲ್ಪ ವಿದ್ಯಾವಂತನಾಗಿದ್ದ ಅಪ್ಪಣ್ಣ ಎಂಬುವವನು ‘ಹೆಡ್‌ಕುಕ್’ ಆಗಿದ್ದ. ಆವನಂತೂ ಹುಟ್ಟಾ ಸೋಮಾರಿಯಾಗಿದ್ದು ಅಡುಗೆಯನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ರಾಗಿ ಮುದ್ದೆ ಗಂಟುಗಂಟಾಗಿರುತ್ತಿತ್ತು. ಮುದ್ದೆ ಕಟ್ಟಲು ಆತ ನಾಲ್ಕೈದು ಹುಡುಗರನ್ನು ಬಳಸಿಕೊಳ್ಳುತ್ತಿದ್ದ. ಸಾರು ನೀರು ನೀರಾಗಿದ್ದು, ಮುದ್ದೆ ತಿನ್ನಲು ಹೊಂದಿಕೊಳ್ಳುತ್ತಿರಲಿಲ್ಲ. ಹುಡುಗರು ಮೇಲಿಂದ ಮೇಲೆ ಗಲಾಟೆ ಮಾಡಿದಾಗ ಆತ ಕಂಡುಕೊಂಡಿದ್ದ ಸುಲಭ ಮಾರ್ಗವೆಂದರೆ, ಒಂದಷ್ಟು ಹುರಿಗಡಲೆ ಹಿಟ್ಟನ್ನು ಸಾರಿಗೆ ಕದರಿ ಬೇಯಿಸಿಬಿಡುತ್ತಿದ್ದ!
ಜ್ಯೂನಿಯರ್ ಕುಕ್ ಧರ್ಮಣ್ಣ
ಧರ್ಮಣ್ಣ ಎಂಬುವವನು ಮಾತ್ರ ಒಳ್ಳೆಯ ಅಡುಗೆಯವನಾಗಿದ್ದ. ಆತನನ್ನು ನಾವು ಜ್ಯೂನಿಯರ್ ಕುಕ್ ಎನ್ನುತ್ತಿದ್ದೆವು. ತಾನಿದ್ದ ದಿನಗಳಲ್ಲಿ ಆತ ಇದ್ದುದರಲ್ಲಿಯೇ ಚೆನ್ನಾಗಿ ಅಡುಗೆ ಮಾಡುತ್ತಿದ್ದ. ಹುಡುಗರನ್ನು ಹೆಚ್ಚು ಬಳಸಿಕೊಳ್ಳುತ್ತಿರಲಿಲ್ಲ. ಹುಡುಗರೊಂದಿಗೆ ಯಾವಾಗಲೂ ತಮಾಷೆ ಮಾಡಿಕೊಂಡು ಕೆಲಸ ಮಾಡುತ್ತಿದ್ದ. ಹುಡುಗರೂ ಅಷ್ಟೆ. ಆತನೊಂದಿಗೆ ತುಂಬಾ ಸ್ನೇಹದಿಂದ ವರ್ತಿಸುತ್ತಿದ್ದರು. ಒಮ್ಮೊಮ್ಮೆ ಅಪ್ಪಣ್ಣ ಧರ್ಮಣ್ಣನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕೆ ನಿಂತಾಗ ಹುಡುಗರು ಧರ್ಮಣ್ಣನ ಪರ ವಹಿಸಿ ವಾರ್ಡನ್ ಬಳಿ ಮಾತನಾಡುತ್ತಿದ್ದುದ್ದೂ ಉಂಟು. ಆದರೆ ಧರ್ಮಣ್ಣ ಓದು ಬರಹ ಬಾರದ ಅನಕ್ಷರಸ್ಥನಾಗಿದ್ದ.
ಇನ್ನೂ ಯುವಕನಾಗಿದ್ದ ಆತ ಹುಡುಗರಿಂದ ಹೇಳಿಸಿಕೊಂಡು ಕನ್ನಡದ ‘ಧ’ ಮತ್ತು ಇಂಗ್ಲಿಷ್‌ನ ‘ಡಿ’ ಎಂಬ ಎರಡು ಅಕ್ಷರಗಳನ್ನು ಬರೆಯಲು ಕಲಿತುಕೊಂಡಿದ್ದ. ಪ್ರತಿನಿತ್ಯ ಹಾಜರಿ ಪುಸ್ತಕದಲ್ಲಿ ಸಹಿ ಮಾಡಲು ಆತ ಬರೆಯುತ್ತಿದ್ದುದ್ದು ಯಾವುದಾರೊಂದು ಅಕ್ಷರ ಮಾತ್ರ. ತಿಂಗಳ ಕೊನೆಯಲ್ಲಿ ಸಂಬಳ ಪಡೆಯುವಾಗ ಮಾತ್ರ ಕನ್ನಡದ ‘ಧ’ ಅಕ್ಷರವನ್ನು ನಾಲ್ಕು ಬಾರಿ ಯೋಚಿಸಿ ನಿಧಾನವಾಗಿ ಬರೆಯುತ್ತಿದ್ದನಂತೆ. ಆದರೆ ಆತ ಒಳ್ಳೆಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದ. ಯಾರಾದರೂ ನೋಡಿದರೆ ಆತನನ್ನು ಅಡುಗೆ ಭಟ್ಟ ಎನ್ನಲು ಸಾಧ್ಯವೇ ಇರಲಿಲ್ಲ.
ಆತನಿಗೆ ನಾಯಿಗಳನ್ನು ಕಂಡರೆ ತುಂಬಾ ಇಷ್ಟ. ಉಳಿಯುತ್ತಿದ್ದ ಊಟವನ್ನು ನಾಯಿಗಳಿಗೆ ಹಾಕುತ್ತಿದ್ದ ಅಷ್ಟೆ. ಆದರೆ ಆ ನಾಯಿಗಳೋ ಆತನನ್ನು ಕಂಡರೆ ಸಾಕು, ಕಾಲ ಕೆಳಗೆಲ್ಲ ನುಗ್ಗಿ ಆತ ಹಾಕಿದ್ದ ಗರಿ ಗರಿ ಪ್ಯಾಂಟ್‌ನ್ನು ಕೊಳೆ ಮಾಡಿಬಿಡುತ್ತಿದ್ದವು. ಆಗ ಅವುಗಳನ್ನು ಆತ ಬಯ್ಯುತ್ತಿದ್ದ ಬಯ್ಗಳ ಸ್ವಾರಸ್ಯಕರವಾಗಿದೆ. ಸಣ್ಣ ಮರಿನಾಯಿಗಳಿಗೆ ಆತ ‘ಹೋಗೋ ನಾಯಿಗ್ಹುಟ್ಟಿದ್ದೆ’ ಎನ್ನುತ್ತಿದ್ದ. ಮತ್ತೆ ಯಾವುದಾರು ನಾಯಿಯನ್ನು ಬೇರೆಯವರಿಗೆ ತೋರಿಸುವಾಗ ಅಥವಾ ಪರಿಚಯ ಮಾಡಿಸುವಾಗ ‘ಅದೇ ಚೆಡ್ಡಿ ಹಾಕಿಲ್ವಲ್ಲ ಆ ನಾಯಿ’ ಎಂದೋ, ‘ಅಲ್ಲಿ ನೋಡು ಬಟ್ಟೆ ಹಾಕಿಕೊಳ್ಳದೆ ಬೆತ್ತಲೆ ನಿಂತಿದೆಯಲ, ನಾಚಿಕೆ ಇಲ್ಲದೆ’ ಎಂದು ಗುಂಪಿನಲ್ಲಿದ್ದ ನಾಯಿಯನ್ನು ನಿರ್ದೇಶಿಸಿ ಮಾತನಾಡುತ್ತಿದ್ದ!
ಕ್ರಾಂತಿಕಾರಿ ಜಯಣ್ಣ!
ನಾವು ಒಂಬತ್ತನೇ ತರಗತಿಗೆ ಬರುವಷ್ಟರಲ್ಲಿ ಇನ್ನೊಬ್ಬ ಭಟ್ಟನ ಆಗಮನವಾಯಿತು. ಆತನ ಹೆಸರು ಜಯಣ್ಣ. ಆತನನ್ನು ನಾವು ಸಬ್‌ಜ್ಯೂನಿಯರ್ ಭಟ್ಟ ಎನ್ನುತ್ತಿದ್ದೆವು. ಆತ ಇದ್ದುದ್ದು ಒಂದೇ ವರ್ಷ. ಆತ ಆರಕ್ಕೇರದ ಮೂರಕ್ಕಿಳಿಯದ ಭಟ್ಟ. ಆದರೆ ಮೊದಲ ಇಬ್ಬರು ಭಟ್ಟರ ಹಾಗೆ ವಾರಕ್ಕೆ ಕೇವಲ ಮೂರು ದಿನ ಮಾತ್ರವಲ್ಲದೆ ಯಾವಾಗಲೂ ಹಾಸ್ಟೆಲ್ಲಿನಲ್ಲಿಯೇ ಇರುತ್ತಿದ್ದ. ಕೆಲವು ಹೊಟ್ಟೆಬಾಕ ವಿದ್ಯಾರ್ಥಿಗಳನ್ನು ಬುಟ್ಟಿಗೆ ಹಾಕಿಕೊಂಡು, ಅವರಿಗೆ ಅವರು ಕೇಳಿದ್ದನ್ನು ಕೇಳಿದಷ್ಟು ಬಡಿಸಿ, ತನ್ನ ಬೀಡಿಗೆ ಕಾಸು ಮಾಡಿಕೊಳ್ಳುತ್ತಿದ್ದ. ಆದರೆ ಆತ ಅಲ್ಲಿದ್ದಾಗ ಮಾಡಿದ ಸುದ್ದಿಗಿಂತ ಅಲ್ಲಿಂದ ವರ್ಗವಾಗಿ ಬೇರೆಡೆಗೆ ಹೋದಾಗ ಸುದ್ದಿಯಾಗಿದ್ದೆ ಹೆಚ್ಚು!
ಜಯಣ್ಣ ಮೊದಲಿಗೆ ಬಂದಾಗ ಆತನನ್ನು ಯಾರೂ ಯಾವ ಜಾತಿ ಎಂದು ಕೇಳಲಿಲ್ಲ. ಆತನೂ ಹೇಳಲಿಲ್ಲ. ಹಾಸ್ಟೆಲ್ಲಿನಲ್ಲಿ ಎಲ್ಲಾ ಜಾತಿಯ ಹುಡುಗರೂ ಇದ್ದರು. ಆತ ಯಾವ ಜಾತಿಯವನಾದರೂ ಹುಡುಗರು ಏನೂ ಅನ್ನುತ್ತಿರಲಿಲ್ಲ. ಆಲ್ಲದೆ ಆತ ಗೌರ್‍ನಮೆಂಟ್ ಸರ್ವೆಂಟ್ ಆಗಿ ಬಂದಿದ್ದರಿಂದ ಯಾರೂ ಏನನ್ನೂ ಮಾಡುವಂತೆಯೂ ಇರಲಿಲ್ಲ. ಅಲ್ಲಿದ್ದ ಒಂದು ವರ್ಷದ ಅವಧಿಯಲ್ಲಿ ಆತ ತನ್ನ ಜಾತಿಯನ್ನು ಘೋಷಿಸಿಕೊಳ್ಳುವ ಅವಕಾಶವೂ ಬಂದಿರಲಿಲ್ಲ.
ದುರಾದೃಷ್ಟಕ್ಕೆ ಕುಂದೂರುಮಠದಲ್ಲಿ ಅಸ್ಪೃಷ್ಯತೆ ಆಚರಣೆಯಲ್ಲಿತ್ತು. ಬಹುಶಃ ಈಗಲೂ ಇರಬಹುದು. ಮಠದ ಒಂದನೇ ಪೌಳಿಯವೊಳಗೆ ಮಾತ್ರ ದಲಿತರಿಗೆ ಪ್ರವೇಶವಿತ್ತು. ಸುಬ್ಬಪ್ಪನ ಗುಡಿಗಳ ಕಾಂಪೌಂಡಿನೊಳಕ್ಕೂ ಅವರು ಬರುವಂತಿರಲಿಲ್ಲ. ಮೆಳೆಯಮ್ಮನಿಗೆ ಅವರು ಬಲಿ ಕೊಡಲು ಬರುತ್ತಿದ್ದರಾದರೂ ಗುಡಿಯ ಒಳಗೆ ಹೋಗುವಂತಿರಲಿಲ್ಲ. ಆದರೆ ಬಲಿ ಕೊಡಲು ವಿಧಿಸಿದ್ದ ಸುಂಕವನ್ನು ಮಾತ್ರ ತಪ್ಪದೆ ಮಠಕ್ಕೆ ಒಪ್ಪಿಸಬೇಕಾಗಿತ್ತು! ಅಲ್ಲಿಯೇ ಇರುತ್ತಿದ್ದ ಯಾರಾದರೊಬ್ಬ ಮಠಕ್ಕೆ ಸೇರಿದವನನ್ನು ಹಿಡಿದು ಅವನ ಮುಖಾಂತರ ಸುಂಕವನ್ನು ಪಾವತಿಸುತ್ತಿದ್ದರು. ಹಾಸ್ಟೆಲ್ಲಿನಲ್ಲಿದ್ದ ಬಹುತೇಕ ವಿದ್ಯಾರ್ಥಿಗಳು ಬೆಳಿಗೆ ನಿತ್ಯಕರ್ಮ ಮುಗಿಸಿದ ಮೇಲೆ ಮೆಳೆಯಮ್ಮನ ಗುಡಿಗೋ ಮಠಕ್ಕೋ ಹೋಗಿಬರುವ ಅಭ್ಯಾಸ ಮಾಡಿಕೊಂಡಿದ್ದರು. ಆದರೆ ದಲಿತ ವಿದ್ಯಾರ್ಥಿಗಳು ಮಾತ್ರ ದೂರದಿಂದಲೇ ಕೈ ಮುಗಿಯಬೇಕಾಗಿತ್ತು!
ಇಷ್ಟೆಲ್ಲಾ ಕಟ್ಟುನಿಟ್ಟಿನ ಅಸ್ಪೃಷ್ಯತೆ ಆಚರಣೆಯಿರುವ ಕುಂದೂರುಮಠಕ್ಕೆ ತೀರ ಕೆಳಜಾತಿಯವನಾದ ಜಯಣ್ಣ, ಆತ ಗೌರ್‍ನಮೆಂಟ್ ಸರ್ವೆಂಟನಾಗಿದ್ದರೂ ಮಠದ ಒಳಗೆ, ದೇವಾಸ್ಥಾನದೊಳಗೆ, ಸಾಮೀಜಿಗಳ ಮನೆಯೊಳಗೆ ಎಲ್ಲಾ ಕಡೆ ಓಡಾಡಿದ್ದು ಮಹಾಪರಾಧವಾಗಿತ್ತು! ಆದರೆ ಆತ ದಲಿತನೆಂದು ಮಠದ ಹಿತಾಸಕ್ತಿಗಳಿಗೆ ಗೊತ್ತಾಗುವ ಒಂದೆರಡು ದಿನಗಳ ಮೊದಲೇ ಆತನಿಗೆ ವರ್ಗವಾಗಿ ಬೇರೆಡೆಗೆ ಹೋಗಿದ್ದ. ಇದರಿಂದಾಗಿ ಮಠದವರು ಎಷ್ಟೇ ಹಾರಾಡಿದರೂ ಅವನನ್ನು ಏನೂ ಮಾಡುವಂತಿರಲಿಲ್ಲ. ಕಾನೂನು, ಪೊಲೀಸ್ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವಷ್ಟು ಬಲಿಷ್ಠ ಮಠವೂ ಅದಾಗಿರಲಿಲ್ಲ. ಕೇವಲ ಸುತ್ತ ಹತ್ತೂರಿನಲ್ಲಷ್ಟೇ ಅದರ ಪ್ರತಾಪಗಳು ತಕ್ಕಮಟ್ಟಿಗೆ ನಡೆಯುತ್ತಿದ್ದದ್ದು. ಆದ್ದರಿಂದ ಅವರು ಕೇವಲ ಮಾತಿನಲ್ಲೇ ಆತನಿಗೆ ಶಿಕ್ಷೆ ಕೊಟ್ಟರು! ಮಾತಿನಲ್ಲೇ ಕಂಬಕ್ಕೆ ಕಟ್ಟಿದರು! ಇನ್ನು ಏನೇನೋ ಮಾಡಿದರು!
ಆಗ ಅನೇಕರಂತೆ ನನಗೂ ಇದ್ದ ಅನುಮಾನ ಈಗಲೂ ನನಗಿದೆ. ಏನೆಂದರೆ ಆತ ಹೋಗುವ ಹಿಂದಿನ ದಿನವಷ್ಟೇ ಆತ ತನ್ನ ಜಾತಿಯನ್ನು ಬಹಿರಂಗ ಪಡಿಸಿ ಹೋಗಿರಬಹುದು. ಇಲ್ಲದಿದ್ದರೆ ವರ್ಷದಿಂದ ಗೊತ್ತಾಗದಿದ್ದ ಜಾತಿ ಆತ ಹೋದ ಎರಡೇ ದಿನಗಳಲ್ಲಿ ಗೊತ್ತಾಗಿದ್ದು ಹೇಗೆ? ಅಂತೂ ಮಠದವರು ಮಾತ್ರ ಸ್ವಲ್ಪ ದಿನಗಳ ಕಾಲ ಮಠದ ಪಾವಿತ್ರತೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದು ನಿಜ!
ಗಲೀಜು ಗೋಪಿನಾಥ!
ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಇನ್ನೊಬ್ಬ ಭಟ್ಟ ಗೋಪಿನಾಥನ ಆಗಮನವಾಯಿತು. ನೋಡಲು ಕ್ಷಯರೋಗದವನಂತೆ, ಬೆಳ್ಳಗೆ ಬಿಳುಚಿಕೊಂಡಿದ್ದ ಆತ ಹಂಚಿಕಡ್ಡಿಯಂತೆ ಸಣ್ಣಗೆ ಉದ್ದಕ್ಕಿದ್ದ. ಅಡುಗೆ ಮನೆಯಲ್ಲಿಯೂ ಮತ್ತು ಸ್ವತಃ ಆತನಲ್ಲಿಯೂ ಯಾವ ಅಚ್ಚುಕಟ್ಟುತನವೂ ಇಲ್ಲದ ಆತನನ್ನು ಗಲೀಜು ಗೋಪಿ ಅಂತಲೇ ನಾವು ಕರೆಯುತ್ತಿದ್ದೆವು. ಸಣ್ಣಗೆ ಕೀರಲು ದನಿಯಲ್ಲಿ ಮಾತನಾಡುತ್ತಿದ್ದ. ಆತನ ಅಣ್ಣನೋ ತಮ್ಮನೋ ಬಿ.ಇ.ಓ. ಕಛೇರಿಯಲ್ಲಿ ಜೀಪ್ ಡ್ರೈವರ್‌ನಾಗಿದ್ದರಿಂದ ಇನ್ಫ್ಲುಯೆನ್ಸ್ ಮಾಡಿ ಕೆಲಸ ಕೊಡಿಸಿದ್ದಾನೆ ಎಂದು ಆಗ ಸುದ್ದಿಯಿತ್ತು. ಆತ ಎಷ್ಟು ದುರ್ಬಲನಾಗಿದ್ದನೆಂದರೆ ಒಂದು ಸಣ್ಣಭಾರವನ್ನು ಎತ್ತಲೂ ಅವನಿಂದ ಆಗುತ್ತಿರಲಿಲ್ಲ. ಅಪ್ಪಣ್ಣ ಮತ್ತು ಧರ್ಮಣ್ಣ ಈ ಇಬ್ಬರೂ ಇಲ್ಲದ ದಿನಗಳಲ್ಲಿ ಆತನಿಗೆ ಅಡುಗೆ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಆ ದಿನಗಳಲ್ಲಿ ಹುಡುಗರು ಮಾಡಿದ್ದೇ ಅಡುಗೆಯಾಗುತ್ತಿತ್ತು.
ಇಂತಹ ಗೋಪಿನಾಥನಿಗೆ ಒಂದು ದಿನ ಮದುವೆಯೂ ಆಯಿತು. ಮದುವೆಯಾಗಿ ಹೆಂಡತಿಯನ್ನು ಕರೆದುಕೊಂಡು ಬಂದ ಆತ ಮಠದ ಮೊದಲನೇ ಪೌಳಿಯ ಆವರಣದಲ್ಲಿದ್ದ ಒಂದು ದನದ ಕೊಟ್ಟಿಗೆಯ ವಪ್ಪಾರಿನಲ್ಲಿದ್ದ ಸಣ್ಣ ಕೊಠಡಿಯಲ್ಲಿ ಬಾಡಿಗೆಗೆ ನಿಂತ. ಅದಕ್ಕಾಗಿ ಆತ ಮಠಕ್ಕೆ ಐವತ್ತು ರೂಪಾಯಿ ಬಾಡಿಗೆ ತೆರಬೇಕಾಗಿತ್ತು. ನೀರು, ಶೌಚಾಲಯ ಯಾವುದೂ ಇರಲಿಲ್ಲ. ನಮ್ಮ ಹಾಸ್ಟೆಲ್ಲಿನ ಅಡುಗೆ ಮನೆಯ ಬಾಗಿಲಿನಲ್ಲಿ ನಿಂತರೆ ಆತನ ವಾಸದ ಮನೆ ಕಾಣುತ್ತಿತ್ತು. ಆತನ ಕೆಟ್ಟ ಚಾಳಿಯೆಂದರೆ ಜಗತ್ತೆಲ್ಲವನ್ನೂ ಅನುಮಾನಿಸುವುದು. ಆತನ ಹೆಂಡತಿಯೂ ಆತನ ಈ ಅನುಮಾನದ ರೋಗಕ್ಕೆ ಆಗಾಗ ತುತ್ತಾಗುತ್ತಿದ್ದಳು. ಆತ ಇಲ್ಲಿ ನಿಂತು ನೋಡಿದಾಗ ಅತ್ತ ಆತನ ಹೆಂಡತಿ ಯಾವ ಕಾರಣಕ್ಕೋ ಬಾಗಿಲನ್ನು ತೆರೆದಿದ್ದರೆ, ಅಂದು ಅವಳಿಗೆ ಏಟು ಬಿದ್ದವೆಂದೇ ಅರ್ಥ. ಅವರ ಜಗಳ ಬಿಡಿಸಲು ವಾರ್ಡನ್, ಹುಡುಗರು, ಒಮ್ಮೊಮ್ಮೆ ಸ್ವಾಮೀಜಿಗಳು ಎಲ್ಲರೂ ಹೋಗಬೇಕಾಗುತ್ತಿತ್ತು. ಈಗ ನನಗನ್ನಿಸುವಂತೆ, ತನ್ನ ನಿಕೃಷ್ಟವಾದ ಶರೀರ, ಕೀರಲು ಧ್ವನಿ ಇವುಗಳಿಂದಾಗಿ ಆತನಿಗೆ ತನ್ನ ಬಗ್ಗೆಯೇ ಕೀಳರಿಮೆ ಇತ್ತೇನೋ. ಅದನ್ನು ಮುಚ್ಚಿಟ್ಟುಕೊಳ್ಳಲು ಆತ ಈ ಅನುಮಾನದ ರೋಗವನ್ನು ಅಂಟಿಸಿಕೊಂಡಿದ್ದನೋ ಏನೋ?

Friday, May 08, 2009

ತಿಪ್ಟೂರ್ ತೆಂಗಿನ್ಕಾಯಿ

{ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ಪುಸ್ತಕವನ್ನು ನನ್ನ ಹೆಂಡತಿ ಈಗ ಓದುತ್ತಿದ್ದಾಳೆ. ಆದ್ದರಿಂದ ಅದು ಈಗ ಮನೆಯಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಇಂದು ಬಳಿಗ್ಗೆ ಕಾಫಿ ಕುಡಿಯುತ್ತ ಸುಮ್ಮನೆ ಅದರ ಒಂದು ಪುಟವನ್ನು ತಿರುಗಿಸಿದೆ. ಆ ಪುಟದಲ್ಲಿ, ಶಾಮಣ್ಣನವರ ತೋಟದ ಪಕ್ಕದಲ್ಲಿ ಏತನೀರಾವರಿ ಪಂಪಿನ ಪ್ರಾರಂಭೊತ್ಸವದ ಸಂದರ್ಭದಲ್ಲಿ ನಡೆದ ಒಂದು ಘಟನೆಯಿತ್ತು. ಪೂಜೆ ಮಾಡುತ್ತಿದ್ದ ಪೂಜಾರಿಗೆ ತೆಂಗಿನ ಕಾಯಿಯನ್ನು ಎಲ್ಲಿ ಒಡೆಯಲು ತಕ್ಷಣಕ್ಕೆ ಏನೂ ಸಿಗದೆ, ಪಂಪ್ ಸೆಟ್ಟಿಗೆ ಒಡೆದನಂತೆ. ಆಗ ಆ ಪಂಪ್ ಸೆಟ್ ಎರಡು ಭಾಗವಾಗಿ ಸೀಳುಬಿಟ್ಟಿತಂತೆ! ಅದಕ್ಕೆ ತೇಜಸ್ವಿ, ನಮ್ಮ ತಿಪಟೂರು ತೆಂಗಿನಕಾಯಿ ಅಷ್ಟೊಂದು ಗಟ್ಟಿ ಎಂದುಕೊಳ್ಳಬೇಕೋ, ಅಥವಾ ಈ ಪಂಪ್ ಸೆಟ್ ಅಷ್ಟೊಂದು ದುರ್ಬಲ ಎಂದುಕೊಳ್ಳಬೇಕೋ ಎಂದು ತಮಾಷೆ ಮಾಡುತ್ತಾರೆ. ಆ ತಿಪಟೂರು ತೆಂಗಿನ ಕಾಯಿಯ ಘಟನೆಯನ್ನು ಓದುವಾಗ ನಾನು ತಿಪಟೂರಿನಲ್ಲಿ ಬಿ.ಎಸ್ಸಿ. ಮಾಡುತ್ತಿದ್ದಾಗ ಬರೆದ ‘ತಿಪ್ಟೂರ್ ತೆಂಗಿನ್ಕಾಯಿ’ ಎಂಬ ಕವಿತೆ ನೆನಪಿಗೆ ಬಂತು. ಅದು ನನ್ನ ‘ವೈತರಣೀದಡದಲ್ಲಿ’ ಕವನಸಂಕಲನದಲ್ಲಿ ಸೇರಿದೆ. ಅದನ್ನು ನನ್ನ ಬ್ಲಾಗ್ ಓದುಗರಿಗಾಗಿ ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇನೆ. }


ತಿಪ್ಟೂರ್ ತೆಂಗಿನ್ಕಾಯಿ
ಬೆಳ್ಗಾನ್ ಎದ್ದು
ಸ್ನಾನ ಮಾಡಿ
ಪೂಜೆಗ್ ಕೂತ್ರೆ
ಬೇಕೆಬೇಕು ತಿಪ್ಟೂರ್ ತೆಂಗಿನ್ಕಾಯಿ

ಪೂಜೆ ಮುಗ್ಸಿ
ಪ್ರಾರ್ಥ್ನೆ ಮುಗ್ಸಿ
ತಿಂಡಿಗ್ ಕೂತ್ರೆ
ಉಪ್ಪಿಟ್ನಲ್ಲು ತಿಪ್ಟೂರ್ ತೆಂಗಿನ್ಕಾಯಿ

ಮಧ್ಯಾಹ್ನದೂಟದ್
ದುಡ್ಡು ಉಳ್ಸೋಕೆ
ಹೋಟೆಲ್ಗೋಗಿ ಸಿಂಪಲ್ಲಾಗಿ
ಇಡ್ಲಿ ಅಂದ್ರು
ಚಟ್ನೀಲದೆ ತಿಪ್ಟೂರ್ ತೆಂಗಿನ್ಕಾಯಿ

ಸಂಜೆ ಸುಸ್ತಾಗಿ
ಮನೆಗ್ ಬಂದ್ರೆ
ಹೆಂಡ್ತಿ ತಪ್ದೆ ಕೇಳ್ತಾಳೆ
ತಂದಿದಿರೇನ್ರಿ ತಿಪ್ಟೂರ್ ತೆಂಗಿನ್ಕಾಯಿ

ಗುಂಡ್ಕಲ್ ದುಂಡಿನಂಗೆ
ನಾರಿನ್ ಸೀರೆ ಉಟ್ಕೊಂಡು
ಮೇಲ್ಮೂರ್ ತೂತು ಕಣ್ಣಿನಾಗೆ
ಒಳ್ಗೊಂದಿಷ್ಟು
ತೀರ್ಥ ಇಟ್ಕೊಂಡೈತೆ ತಿಪ್ಟೂರ್ ತೆಂಗಿನ್ಕಾಯಿ

ಹಳ್ಳೀಲ್ ಡಿಳ್ಳೀಲ್
ಎಲ್ಲಿ ನೋಡಿದ್ರಲ್ಲಿ
ಕತ್ತು ಮೇಲೆತ್ತಿದ್ರಲ್ಲಿ
ತೆಂಗಿನ ಮರ್‍ದಲ್
ಜೋತಾಡ್ತವೆ ತಿಪ್ಟೂರ್ ತೆಂಗಿನ್ಕಾಯಿ

Tuesday, May 05, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 13

ಬಿ.ಸಿ.ಎಂ. ಹಾಸ್ಟೆಲ್
ಕುಂದೂರುಮಠದಲ್ಲಿ ಒಂದು ಓ.ಬಿ.ಸಿ. ಹಾಸ್ಟೆಲ್ ಇತ್ತು. ಓ.ಬಿಸಿ. ಹಾಸ್ಟೆಲ್ ಎಂಬುದು ಅದರ ಚಿರಪರಿಚಿತ ನಾಮವಾದರೂ ನಿಜವಾದ ಹೆಸರು ಬಿ.ಸಿ.ಎಂ. ಹಾಸ್ಟೆಲ್ ಎಂಬುದು. ‘ಬ್ಯಾಕ್‌ವರ್ಡ್ ಕಮ್ಯುನಿಟಿ ಅಂಡ್ ಮೈನಾರಿಟಿ ಹಾಸ್ಟೆಲ್’ ಎಂಬುದು ಅದರ ವಿಸ್ತರಣೆ. ಓ.ಬಿ.ಸಿ ಅಂದರೆ, ‘ಅದರ್ ಬ್ಯಾಕ್‌ವರ್ಡ್ ಕಮ್ಯುನಿಟಿ’ ಎಂದಷ್ಟೇ ಆಗುವುದರಿಂದ ಬಿ.ಸಿ.ಎಂ. ಎಂಬುದೇ ಸೂಕ್ತವಾಗಿತ್ತು. ಕನ್ನಡದಲ್ಲಿ ಬರೆದಿದ್ದ ಬೋರ್ಡಿನಲ್ಲಿ ‘ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯ’ ಎಂದೇ ಬರೆಯಲಾಗಿತ್ತು. ಆ ಹಾಸ್ಟೆಲ್ಲಿನಲ್ಲಿ ಐವತ್ತು ವಿದ್ಯಾರ್ಥಿಗಳಿಗೆ ಎಲ್ಲಾ ಅನುಕೂಲ ಮಾಡಿಕೊಡಲಾಗಿತ್ತು.
ಎಲ್ಲಾ ಎಂಬ ಮಾತು ಸ್ವಲ್ಪ ದೊಡ್ಡದಾಗಬಹುದು. ಏಕೆಂದರೆ ಆಗ ಅದಕ್ಕೆ ಸ್ವಂತ ಕಟ್ಟಡವೇ ಇರಲಿಲ್ಲ. ಕುಂದೂರುಮಠಕ್ಕೆ ಸೇರಿದ ಒಂದು ಮನೆಯೇ ಅದರ ಕಾರ್ಯಸ್ಥಾನ. ಒಂದು ದೊಡ್ಡ ಹಾಲ್, ಪಡಸಾಲೆ, ಒಂದು ಕೋಣೆ, ಹಿಂಬದಿಯಲ್ಲಿದ್ದ ಒಂದು ಚಿಕ್ಕ ಹಾಲ್ ಇಷ್ಟೇ ಜಾಗ! ಹಾಲ್‌ನಲ್ಲಿ ಸುಮಾರು ನಲವತ್ತು ವಿದ್ಯಾರ್ಥಿಗಳು ತಮ್ಮ ಪೆಟ್ಟಿಗೆಗಳನ್ನು ಇಟ್ಟುಕೊಳ್ಳಬಹುದಾದ ಜಾಗಕ್ಕಷ್ಟೆ ಒಡೆಯರಾಗಿದ್ದರು. ಹತ್ತನೇ ತರಗತಿಯ ಸುಮಾರು ಹತ್ತು-ಹನ್ನೆರಡು ವಿದ್ಯಾರ್ಥಿಗಳು ಪಡಸಾಲೆಯಲ್ಲಿ ವಾಸ್ತವ್ಯ ಹೂಡಬೇಕಿತ್ತು. ಇದ್ದ ಏಕೈಕ ಕೋಣೆಯು ಆಫೀಸ್ ಕಮ್ ಸ್ಟೋರ್ ರೂಮ್! ಹಿಂದಿನ ಚಿಕ್ಕ ಹಾಲ್, ಕಿಚನ್ ಕಮ್ ಡೈನಿಂಗ್‌ಹಾಲ್. ಇನ್ನು ಕಕ್ಕಸ್ಸಿಗೆ ಕುಂದೂರುಮಠದ ಸುತ್ತಲೂ ಇದ್ದ ಕುರುಚಲು ಕಾಡು, ಸ್ನಾನಕ್ಕೆ ಬೋರ್‌ವೆಲ್ ಅಥವಾ ಮಠಕ್ಕೆ ಸೇರಿದ್ದ ಎರಡು ಬಾವಿ. ಇದಿಷ್ಟೂ ಅಲ್ಲಿದ್ದ ಮೂಲಭೂತ ಸೌಕರ್ಯ!
ಮಕ್ಕಳಿಗೆ ಬೇಕಾದ ಎಲ್ಲಾ ವಸ್ತುಗಳು ಅಂದರೆ ಹಾಸಿಗೆ, ತಟ್ಟೆ ಲೋಟ, ವರ್ಷಕ್ಕೆ ಎರಡು ಜೊತೆ ಬಟ್ಟೆ, ಪುಸ್ತಕಗಳು, ಸಾಕಷ್ಟು ನೋಟ್ ಪುಸ್ತಕಗಳು, ಜಾಮಿಟ್ರಿ ಬಾಕ್ಸ್, ತಿಂಗಳಿಗೊಂದು ಲೈಫ್‌ಬಾಯ್ ಸೋಪ್, ಒಂದು ರಿನ್ ಸೋಪ್, ಹಲ್ಲುಪುಡಿ, ಹರಳೆಣ್ಣೆ, ಸೀಗೆಪುಡಿ ಎಲ್ಲವನ್ನೂ ಪೂರೈಸುತ್ತಿದ್ದರು. ವಿದ್ಯುತ್ ಇಲ್ಲದ ಆ ಮನೆಯಲ್ಲಿ, ರಾತ್ರಿ ಉಪಯೋಗಕ್ಕೆ ಸೀಮೆಎಣ್ಣೆ ಅಥವಾ ಕ್ಯಾಂಡೆಲ್‌ಗಳನ್ನು ಪೂರೈಸುತ್ತಿದ್ದರು. ಎರಡು ತಿಂಗಳಿಗೊಮ್ಮೆ ಸ್ಥಳೀಯ ಕ್ಷೌರಿಕನೊಬ್ಬ ಬಂದು ಎಲ್ಲರಿಗೂ ಷಾರ್ಟ್ ಕಟಿಂಗ್ ಮಾಡಿ ಹೋಗುತ್ತಿದ್ದ. ದಿನಕ್ಕೆ ಎರಡು ಊಟ ಮತ್ತು ಒಂದು ತಿಂಡಿಯ ವ್ಯವಸ್ಥೆಯೂ ಇತ್ತು. ತಿಂಗಳಿಗೆ ಎರಡು ಬಾರಿ ಸ್ಪೆಷಲ್ ಎಂದು ವೆಜ್‌ಪಲಾವ್ ಮತ್ತು ಪಾಯಸ ಮಾಡಿಸುತ್ತಿದ್ದರು. ಸ್ಕೂಲಿನಲ್ಲಿ ಮಧ್ಯಾಹ್ನ ಲಂಚ್ ಅವರ್ ಕೇವಲ ನಲವತ್ತು ನಿಮಿಷಗಳಿದ್ದುದ್ದರಿಂದ ಆ ಸಮಯದಲ್ಲಿ ಊಟ ಮಾಡಲಾಗುವುದಿಲ್ಲವೆಂದು, ಹಾಗೂ ಮಧ್ಯಾಹ್ನ ಊಟ ಮಾಡುವುದರಿಂದ ತರಗತಿಯಲ್ಲಿ ನಿದ್ದೆ ಬರುತ್ತದೆಂದು ವಿದ್ಯಾರ್ಥಿಗಳೆಲ್ಲ ಒತ್ತಾಯಿಸಿ, ಬೆಳಿಗ್ಗೆಯೇ ಊಟ ಮಾಡುವುದೆಂದು ಮಧ್ಯಾಹ್ನ ತಿಂಡಿ ತಿನ್ನುವುದೆಂದು ವಾರ್ಡನ್‌ರ ಮನವೊಲಿಸಿದ್ದರು. ಅದರಂತೆ ಮಧ್ಯಾಹ್ನ ಏನಾದರೂ ಸಿಂಪಲ್ಲಾಗಿ ತಿಂಡಿ ಇರುತ್ತಿತ್ತು. ಚಿತ್ರಾನ್ನ, ಉಪ್ಪಿಟ್ಟು ಇವೆರಡೇ ಹೆಚ್ಚಾಗಿ ಮಾಡುತ್ತಿದ್ದ ತಿಂಡಿಗಳು. ಸೋಮಾರಿಗಳಾದ ನಾವು ಕೆಲವರು, ಮಧ್ಯಾಹ್ನ ಇಷ್ಟು ಕಡಿಮೆ ತಿಂಡಿ ತಿನ್ನಲು, ತಿನ್ನುವ ಮೊದಲು ಮತ್ತು ನಂತರ ಎರಡು ಬಾರಿ ಅಷ್ಟು ದೊಡ್ಡ ತಟ್ಟೆ ತೊಳೆಯಬೇಕೇಕೆ? ಎಂದು ತಿಂಡಿಯನ್ನು ಕೈಯಿಗೇ ಹಾಕಿಸಿಕೊಂಡು ತಿನ್ನುತ್ತಿದ್ದೆವು!
ಊಟದ ವ್ಯವಸ್ಥೆಯಂತೂ ತುಂಬಾ ಅಚ್ಚುಕಟ್ಟಾಗಿತ್ತು. ಮೊದಲು ನಾನು ಹಾಸ್ಟೆಲ್ ಸೇರಿದಾಗ ಇಬ್ಬರು ಭಟ್ಟರು ಅಡುಗೆ ಮಾಡಲು ಇದ್ದರು, ನಂತರ ಮೂವರಾದರು. ಒಬ್ಬ ವಾರ್ಡನ್ ಇರುತ್ತಿದ್ದರು. ವಾರ್ಡನ್ ತಿಂಗಳಿಗೊಮ್ಮೆ ಚನ್ನರಾಯಪಟ್ಟಣಕ್ಕೆ ಹೋಗಿ ತಿಂಗಳಿಗೆ ಬೇಕಾಗುವಷ್ಟು ರೇಷನ್ ಕೊಂಡು ತರುತ್ತಿದ್ದರು. ಅಕ್ಕಿ-ರಾಗಿ ಮಾಡಲು ಪಕ್ಕದ ಬೆಳಗುಲಿಯ ಇಬ್ಬರು ಹೆಂಗಸರು ಬರುತ್ತಿದ್ದರು. ಅವರು ಹಾಗೆ ಸಿದ್ಧಪಡಿಸಿದ ರಾಗಿಯನ್ನು, ಮೆಣಸಿನಕಾಯಿಯನ್ನು, ಸಂಬಾರ ಸಾಮಾನುಗಳನ್ನು ಒಂದು ದಿನ ಭಟ್ಟರು ಮೂಡನಹಳ್ಳಿಯಲ್ಲಿದ್ದ ಮಿಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು. ಇನ್ನು ಅಡುಗೆಯಲ್ಲಾ ಸೌದೆ ಒಲೆಯಲ್ಲೇ ನಡೆಯುತ್ತಿತ್ತು. ಸೌದೆಗಾಗಿ ತಿಂಗಳಿಗೆ ಒಂದೆರಡು ಗಾಡಿ ತೆಂಗಿನ ಮಟ್ಟೆಗಳನ್ನು ಅಕ್ಕಪಕ್ಕದ ಊರುಗಳಿಂದ ಕೊಂಡುಕೊಳ್ಳಲಾಗುತ್ತಿತ್ತು. ತರಕಾರಿಯೂ ಅಷ್ಟೆ. ವಾರಕ್ಕೊಮ್ಮೆ ಚನ್ನರಾಯಪಟ್ಟಣದಿಂದ ಬರುವಂತೆ ವ್ಯವಸ್ಥೆಯಾಗಿತ್ತು.
ನಾನು ಅಲ್ಲಿದ್ದ ಮೂರು ವರ್ಷಗಳಲ್ಲಿ ಮೂವರು ವಾರ್ಡನ್‌ಗಳು, ನಾಲ್ವರು ಭಟ್ಟರು ಅಲ್ಲಿ ಕೆಲಸ ಮಾಡಿದ್ದರು. ಭೀಮಪ್ಪ ಕರಿಯಪ್ಪ ಜಟಗೊಂಡ ಅವರು ವಾರ್ಡನ್ನಾಗಿ ಬರುವ ಮೊದಲು ಅಲ್ಲಿದ್ದ ವಾರ್ಡನ್ ಸಿಟಿಯವರಾಗಿದ್ದು, ಅವರಿಗೆ ಹಳ್ಳಿಯಲ್ಲಿ ಹೇಗೆ ಬದುಕಬೇಕೆಂದಾಗಲೀ, ಹಳ್ಳಿಯವರ ಸಮಸ್ಯೆಯಾಗಲೀ ಗೊತ್ತೇ ಇರಲಿಲ್ಲ. ಅವರ ಜೀವಮಾನದಲ್ಲೇ ಅವರು ಪಂಚೆ ಉಟ್ಟಿರಲಿಲ್ಲವಂತೆ! ಅದರಿಂದಾಗಿ ಇಲ್ಲಿ ಕಕ್ಕಸ್ಸು ವ್ಯವಸ್ಥೆಯೂ ಇಲ್ಲದೆ ಪ್ರಾರಂಭದಲ್ಲಿ ಅವರು ತುಂಬಾ ಕಷ್ಟ ಪಡಬೇಕಾಯಿತಂತೆ! ಆದರೆ ಜಟಗೊಂಡ ಅವರು ಹಳ್ಳಿಯ ಹಿನ್ನೆಲೆಯಲ್ಲಿ ಬಂದವರಾದ್ದರಿಂದ ಅವರಿಗೆ ಇವಾವೂ ಸಮಸ್ಯೆ ಎನ್ನಿಸಲೇ ಇಲ್ಲ. ಬಂದ ಕೆಲವೇ ದಿನಗಳಲ್ಲಿ ನಮ್ಮವರಲ್ಲಿ ಒಬ್ಬರಾಗಿ ಬೆರೆತು ಹೋದರು.
ಸಾಮಾನ್ಯವಾಗಿ ಹಾಸ್ಟೆಲ್ಲಿನ ಯಾವ ಕೆಲಸವೂ ಕೇವಲ ಈ ವಾರ್ಡನ್ ಮತ್ತು ಭಟ್ಟರ ಕೈಯಿಂದ ಆಗುತ್ತಿರಲಿಲ್ಲ. ಪ್ರತಿಯೊಂದಕ್ಕೂ ವಿದ್ಯಾರ್ಥಿಗಳ ನೆರವು ಬೇಕಾಗುತ್ತಿತ್ತು. ರೇಷನ್ ತರಲು, ಸೌದೆ ತಂದು ಒಂದೆಡೆ ಪೇರಿಸಲು, ಮಿಲ್‌ಗೆ ರಾಗಿ ತೆಗೆದುಕೊಂಡು ಹೋಗಲು, ತರಕಾರಿ ತರಲು, ಅನ್ನ ಬಸಿಯಲು, ರಾಗಿಮುದ್ದೆ ಕಟ್ಟಲು.... ಹೀಗೆ ಎಲ್ಲದಕ್ಕೂ ವಿದ್ಯಾರ್ಥಿಗಳ ನೆರವನ್ನು ಅವರು ಧಾರಾಳವಾಗಿ ಪಡೆಯುತ್ತಿದ್ದರು. ಇದ್ದ ಒಂದೇ ಬೋರ್‌ವೆಲ್ಲಿನಿಂದ ನೀರನ್ನು ತರಲು ಹುಡುಗರನ್ನು ಸರದಿಯ ಮೇಲೆ ಬಳಸಿಕೊಳ್ಳಲಾಗುತ್ತಿತ್ತು. ಹೀಗೆ ಅವರಿಗೆ ನೆರವು ನೀಡುತ್ತಿದ್ದವರಲ್ಲಿ ನಾನೂ ಒಬ್ಬನಾಗಿದ್ದೆ. ಜಟಗೊಂಡ ಅವರು ಬಂದ ಹೊಸತರಲ್ಲಿ ಅವರೊಡನೆ ಚನ್ನರಾಯಪಟ್ಟಣಕ್ಕೆ ರೇಷನ್ ತರಲು ಹೋಗಿದ್ದೆ. ಎಲ್ಲ ಭಾರವಾದ ಸಾಮಾನುಗಳನ್ನು ಕೊಂಡು ಒಂದು ಗಾಡಿ ಗೊತ್ತು ಮಾಡಿ ಅದರಲ್ಲಿ ಪೇರಿಸಿದ್ದೆವು. ಎರಡು ಸಣ್ಣ ಬಾಕ್ಸ್‌ಗಳನ್ನು ನಾವು ಬಸ್‌ಸ್ಟ್ಯಾಂಡ್‌ನಲ್ಲಿ ಇಟ್ಟುಕೊಂಡು ಬಸ್ಸಿಗೆ ಕಾಯುತ್ತಿದ್ದೆವು. ನಾನು ಮತ್ತು ಭಟ್ಟರಾದ ಧರ್ಮಣ್ಣ ಮಾತನಾಡುತ್ತಾ ಕುಳಿತಿದ್ದಾಗ, ಜಟಗೊಂಡ ಅವರು ‘ಒಂದು ನಿಮಿಷ ಇರ್ರೋ, ಬಂದೆ’ ಎಂದು ಅಂಗಡಿ ಸಾಲುಗಳಿದ್ದ ಕಡೆ ಹೋದರು. ಸುಮಾರು ಹತ್ತು ನಿಮಿಷಗಳ ನಂತರ ಹಿಂತಿರುಗಿದ ಅವರು, ‘ಯಾವ ಸೀಮೆ ಊರ್ರೋ ಇದು! ಒಂದು ಕೆ.ಜಿ. ಶೇಂಗಾ ಈ ಊರಾಗ ಸಿಗಾಂಗಿಲ್ಲ. ಸುಡುಗಾಡು’ ಎಂದು ಬೆವರು ಒರೆಸಿಕೊಂಡಿದ್ದರು. ಧರ್ಮಣ್ಣ ಇದ್ದವನು ‘ಶೇಂಗಾ ಏಕೆ ಸಾರ್ ಸಿಗೋಲ್ಲ. ಬನ್ನಿ ನಾನು ಕೊಡಿಸುತ್ತೇನೆ’ ಎಂದು ಅವರು ಹೋಗಿದ್ದ ಅಂಗಡಿಗೇ ಹೋಗಿ, ಒಂದು ಕೆಜಿ ಕಡ್ಲೆಬೀಜ ಕೊಡಿಸಿದ. ಆಗ ಜಟಗೊಂಡ ಅವರು ‘ಅದರಪ್ಪನ, ಈಗ ತಾನೆ ಬಂದು ಶೇಂಗಾ ಕೇಳಿದರೆ ಇಲ್ಲ ಅಂದ್ರು. ನೀನು ಬಂದರೆ ಕೊಟ್ರಲ್ಲೊ’ ಎಂದು ಆಶ್ಚರ್ಯಪಟ್ಟಿದ್ದರು!
ಬೆಳಗಾಂ ಕಡೆಯವರಾದ ಅವರಿಗೆ, ಶೇಂಗಾ ಎಂಬುದಕ್ಕೆ ಬಯಲುಸೀಮೆಯವರು ಕಡ್ಲೆ ಅಥವಾ ನೆಲಗಡ್ಲೆ ಎನ್ನುತ್ತಾರೆಂದು ಗೊತ್ತೇ ಇರಲಿಲ್ಲ. ನಮ್ಮ ಕಡೆಯವರಿಗೆ ಕಡ್ಲೆಬೀಜಕ್ಕೆ ಶೇಂಗಾ ಎನ್ನುತ್ತಾರೆಂಬುದೂ ಗೊತ್ತಿರಲಿಲ್ಲ!
ಮಗ ಬಾಳ ಬೆರಕಿ ಇದ್ದಾನ!
ಶೇಂಗಾ-ಕಡ್ಲೆಬೀಜದ ಘಟನೆ ನಡೆದ ನಂತರ ಇಂತದ್ದೇ ಮತ್ತೊಂದು ಅವಾಂತರ ನಡೆದಿತ್ತು. ಒಮ್ಮೆ ಜಟಗೊಂಡ ಅವರ ಊರಿನ ಕಡೆಯವರು ಯಾರೋ ಹಾಸ್ಟೆಲ್ಲಿಗೆ ಬಂದಿದ್ದರು. ಹೊಸದಾಗಿ ಹಾಸ್ಟೆಲ್ಲಿಗೆ ಸೇರಿಕೊಂಡಿದ್ದ ಸುರೇಶ ಎಂಬ ಎಂಟನೇ ತರಗತಿಯ ಹುಡುಗನೊಬ್ಬ ಓದಿನಲ್ಲಿ ಚುರುಕಾಗಿದ್ದ. ಆ ಹುಡುಗನ ಬಗ್ಗೆ ಅವರಿಗೆ ಹೇಳುವಾಗ, ‘ಮಗ ಬಾಳ ಬೆರಕಿ ಇದ್ದಾನ’ ಎಂದರು.
ಅವರು ‘ಬೆರಕಿ’ ಎಂದು ಉಚ್ಛರಿಸುವ ‘ಬೆರಕೆ’ ಪದಕ್ಕೆ ನಮ್ಮ ಬಯಲುಸೀಮೆಯಲ್ಲಿ ಕೆಟ್ಟ ಅರ್ಥವಿದೆ. ನಮ್ಮ ಕಡೆ ಈ ಬೆರೆಕೆ ಪದವನ್ನು ಸೇರಿಸಿಕೊಂಡು ‘ಬೆರಕೆಗೆ ಹುಟ್ಟಿದವನು’ ಎಂದು ಬಯ್ಯುವುದಿದೆ. ಅದರ ಅರ್ಥ, ಸಾಮಾಜಿಕವಾಗಿ ಸ್ವೀಕರಿಸಲ್ಪಟ್ಟ ಆತನ ಅಪ್ಪನಿಗಲ್ಲದೆ, ಬೇರೆಯವನಿಗೆ ಹುಟ್ಟಿದವನು ಎಂಬುದು! ಅಂದರೆ, ಹೆಂಡತಿ ತನ್ನ ಗಂಡನಲ್ಲದವನ ಜೊತೆ ಸೇರಿದ್ದರಿಂದ ಜನಿಸಿದವನನ್ನು ‘ಬೆರಕೆ’ ಎಂದು ಬಯ್ಯುತ್ತಾರೆ! ಈ ಪದವನ್ನು ನಮ್ಮಲ್ಲಿ ಯಾರಾದರು ಬಳಸಿದರೆಂದರೆ ಜಗಳ ವಿಪರೀತಕ್ಕೆ ಹೋಗಿದೆ ಎಂದೇ ಅರ್ಥ. ಜಟಗೊಂಡ ಅವರು ಆ ಪದವನ್ನು ಯಾವ ಅರ್ಥದಲ್ಲಿ ಬಳಸಿದರೆಂದು ನಮಗೆ ಗೊತ್ತಿರಲಿಲ್ಲವಾದ್ದರಿಂದಲೂ, ವಾರ್ಡನ್ ಕೆಟ್ಟ ಮಾತು ಬಳಸುವುದಿಲ್ಲವೆಂಬ ನಂಬಿಕೆಯಿಂದಲೂ ನಾವು ಸುಮ್ಮನಿದ್ದೆವು.
ಅದನ್ನು ಕೇಳಿಸಿಕೊಂಡ ಸುರೇಶ ಅಷ್ಟೇನು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕೆಲವು ಬೇರೆ ಹುಡುಗರು ಸುರೇಶನನ್ನು ಮತ್ತೆ ಮತ್ತೆ ‘ಬೆರಕೆ’ ಎನ್ನಲು ಶುರುವಾದಾಗ ಸುರೇಶನ ತಲೆ ಕೆಟ್ಟಿರಬೇಕು. ಶನಿವಾರ ಊರಿಗೆ ಹೋದ ಸುರೇಶ ಸೋಮವಾರ ಬರುವಾಗ ಜೊತೆಯಲ್ಲಿ ತನ್ನ ತಂದೆ ಮತ್ತು ಅಣ್ಣನನ್ನು ಕರೆದುಕೊಂಡು ಬಂದಿದ್ದ! ಅವರಿಬ್ಬರು ಬಂದವರೆ ಜಟಗೊಂಡ ಅವರ ಬಳಿ ಬಂದು ಜಗಳಕ್ಕೆ ನಿಂತರು. ಜಟಗೊಂಡ ಅವರಿಗೆ ತಾನು ಮಾಡಿದ ತಪ್ಪು ಏನೆಂದು ತಿಳಿಯಲಿಲ್ಲ. ಸುರೇಶನ ಅಣ್ಣ ಮತ್ತು ತಂದೆ ‘ಬೆರಕೆ’ ಎಂಬ ಪದವನ್ನು ಹೇಳದೆ, ‘ನಮ್ಮ ಹುಡುಗನನ್ನು ನೀವು ಕೆಟ್ಟದ್ದಾಗಿ ಬಯ್ದಿದ್ದೇಕೆ? ನಮ್ಮ ಮನೆಯವರೇನು ಅಂತವರಲ್ಲ!’ ಎಂದು ಜಗಳಕ್ಕೆ ನಿಂತರು.
ಜಟಗೊಂಡ ಅವರಿಗೆ ಏನೂ ಅರ್ಥವಾಗದೆ ಸುರೇಶನನ್ನೇ ಕರೆದು ಕೇಳಿದರು. ‘ಏ, ಹೇಳಲೆ ಸುರೇಶ, ನಾನಿನಗೆ ಏನಾರ ಬಯ್ದೆನೇನು?’ ಎಂದರು.
ಆತ ಹೆದರಿಕೊಳ್ಳುತ್ತಲೇ ‘ಸಾರ್, ನೀವು ಅವತ್ತು ನನ್ನನ್ನು ಮಗ ಬಹಳ ಬೆರಕೆ ಇದಾನೆ ಅಂತ ಯಾರತ್ರಲೋ ಹೇಳ್ತಿದ್ರಿ. ಅದಕ್ಕೆ ಬೇರೆ ಹುಡುಗರು ನನ್ನನ್ನು ಬೆರಕೆ ಎಂದು ಆಡಿಕೊಳ್ಳುತ್ತಿದ್ದಾರೆ’ ಎಂದ.
ಜಟಗೊಂಡ ಸ್ವಲ್ಪ ಸಮಾಧಾನದಿಂದ ‘ಅದ್ರಲಿ ಏನ್ ತಪ್ಪದ. ಈಗಲೂ ಹೇಳ್ತೀನಿ, ನೀನು ಬಾಳ ಬೆರಕಿ ಇದ್ದೀಯ ಅಂತ. ನಾನೇನು ಸುಳ್ಳ ಹೇಳಾಂಗಿಲ್ಲ. ಕರೇನ ಹೇಳಾಂವ’ ಎಂದರು.
ಆಗ ಸುರೇಶನ ಅಣ್ಣ ‘ಏನ್ರಿ ನನ್ನ ತಮ್ಮನ್ನ ಬೆರಕೆಗ್ಹುಟ್ಟಿದವನು ಅನ್ನೋಕೆ ಎಷ್ಟು ಧೈರ್ಯ ನಿಮಗೆ’ ಎಂದು ಕೂಗಾಡಲು ಆರಂಭಿಸಿದ.
ಗಾಭರಿಯಾದ ಜಟಗೊಂಡ ‘ಲೇ ತಮ್ಮ, ನಾನು ಅವನನ್ನ ಬೆರಕಿ ಇದಾನೆ ಅಂದ್ನೆ ಹೊರ್ತು, ಬೆರಕಿಗ್ಹುಟ್ಟಿದವನು ಅಂತ ಎಲ್ಲಿ ಅಂದೆ. ಸುಳ್ಳು ಸುಳ್ಳೆ ಹೇಳಬೇಡ ಮತ್ತ’ ಎಂದರು.
ಚನ್ನರಾಯಪಟ್ಟಣದ ಅಂಗಡಿಯಲ್ಲಿ ಷೇಂಗಾ ಕೇಳಿ ಇಲ್ಲ ಅನ್ನಿಸಿಕೊಂಡಿದ್ದ ಜಟಗೊಂಡ ಅವರ ಬಗ್ಗೆ ಗೊತ್ತಿದ್ದ ಧರ್ಮಣ್ಣ ಮತ್ತು ನಾನು, ‘ಸಾರ್ ನಮ್ಕಡೆ, ಬೆರಕೆಗ್ಹುಟ್ಟಿದವನು ಅಂದ್ರೆ ಕೆಟ್ಟ ಬಯ್ಗಳ. ಆದರೆ ನೀವು ಸುರೇಶನನ್ನು ಮೇಲಿಂದ ಮೇಲೆ ಬೆರಕಿ ಅನ್ನುತ್ತಿದ್ದೀರಾ. ನೀವು ಯಾವ ಅರ್ಥದಲ್ಲಿ ಅನ್ನುತ್ತಿದ್ದೀರೋ ನಮಗ್ಯಾರಿಗೂ ಗೊತ್ತಾಗ್ತಾ ಇಲ್ಲ’ ಎಂದೆವು.
‘ಏನು? ಬೆರಕಿ ಅಂದ್ರ ಕೆಟ್ಟ ಬಯ್ಗಳ ಏನು?! ಅಯ್ಯೋ ನಮ್ಕಡಿ ಶಾಣ್ಯಾ ಇದ್ದವನಿಗೆ ಬೆರಕಿ ಅಂತಾರ್ರೋ. ಅಂದ್ರ ಚಲೋ ಇದ್ದಾನ, ಬುದ್ಧಿವಂತ ಇದ್ದಾನ, ಜಾಣ ಇದ್ದಾನ ಅಂತ ಅರ್ಥ. ಆತ ಓದೋದ್ರಲ್ಲಿ ಬುದ್ದಿವಂತ ಇರೋದ್ರಿಂದ ನಾನು ಆತನ್ನ ಬೆರಕಿ ಇದ್ದಾನ ಅಂದಿದ್ದು’ ಎಂದು ಒಂದು ದೀರ್ಘ ವಿವರಣೆ ಕೊಟ್ಟರು. ಆಗ ನಮಗೆಲ್ಲ ಜ್ಞಾನೋದಯವಾಗಿತ್ತು. ಸುರೇಶನ ತಂದೆ ಮತ್ತು ಅಣ್ಣ ಇಬ್ಬರೂ ‘ಸರ್ ನಮಗೆ ಅದು ಗೊತ್ತಿರಲಿಲ್ಲ’ ಎಂದು ಹೊರಟು ಹೋದರು. ಈ ಘಟನೆಯನ್ನು ಮೇಲಿಂದ ಮೇಲೆ ಅವರಿವರಲ್ಲಿ ಹೇಳಿಕೊಂಡು ವಾರ್ಡನ್ ನಗುತ್ತಿದ್ದರು.
ಜಟಗೊಂಡ ಅವರು ಹೀಗೆ ಬೆಳಗಾವಿ ಕಡೆಯ ಮಾತುಗಳನ್ನು ಬಳಸಿ ಪೇಚಿಗೆ ಸಿಲುಕಿಕೊಳ್ಳುವ ಘಟನೆ ಮತ್ತೆ ನಡೆಯಲಿಲ್ಲ. ಆದರೆ ‘ಬಚ್ಚಲು’ ಮತ್ತು ‘ತಿಂಡಿ’ ಎಂಬ ಎರಡು ಪದಗಳು ಅಪಹಾಸ್ಯಕ್ಕೆ ಗುರಿಯಾಗಿದ್ದವು. ಸೋಮಾರಿಗಳಾಗಿದ್ದ ಹಾಸ್ಟೆಲ್ ಹುಡುಗರು ಕೈ, ತಟ್ಟೆ, ಲೋಟ ತೊಳೆಯಲು ದೂರ ಹೋಗದೆ ಊಟದ ಮನೆಯ ಬಾಗಿಲಿನಲ್ಲೇ ತೊಳೆಯುತ್ತಿದ್ದರು. ಅದರಿಂದಾಗಿ ಬಾಗಿಲಿನ ಬಳಿ ಯಾವಾಗಲು ಗಲೀಜಾಗಿರುತ್ತಿತ್ತು.
ಒಂದು ದಿನ ವಾರ್ಡನ್ ಬಂದವರೇ ‘ಯಾವನಲೇ ಅಂವಾ. ಆ ಬಾಗ್ಲಲ್ಲೇ ತೊಳೆದೂ ತೊಳೆದೂ ಅದನ್ನ ಬಚ್ಚಲ ಮಾಡಿಟ್ಟಿರಿ. ಊಟದ ಮನೆ ಸ್ವಚ್ಛ ಇರಬೇಕು ಅನ್ನೊ ಖಬರು ಇರಾಂಗಿಲ್ಲೇನು?’ ಎಂದು ಬಯ್ಯತೊಡಗಿದರು.
ಆಗ ಹುಡಗರೆಲ್ಲಾ ‘ಸಾರ್ ನಾವು ತಿಕ ಮಖ ಸ್ನಾನ ಎಲ್ಲಾ ತೊಳೆಯಾದು ಬೋರ್‌ವೆಲ್ ಹತ್ರ. ನಾವು ಇಲ್ಲಿ ಬಾಗಿಲ ಹತ್ತಿರ ಯಾರು ಸ್ನಾನ ಮಾಡೋದಿಲ್ಲ ಸಾರ್’ ಎಂದು ಒಕ್ಕೊರಲಿನಿಂದ ಹೇಳಿದರು. ನಮ್ಮ ಕಡೆ ‘ಚರಂಡಿ’ ಎಂಬುದಕ್ಕೆ ಅವರ ಕಡೆ ‘ಬಚ್ಚಲು’ ಅನ್ನುತ್ತಿದ್ದಾರೆ ಎಂದು ನಾವ್ಯಾರೂ ಊಹಿಸಿರಲಿಲ್ಲ.
‘ಅಲ್ರೋ, ನಿಮಗೇನಾಗ್ಯದ ಅಂತಿನಿ. ನಾನು, ನೀವು ಎಂಜಲು ತಟ್ಟೆ ಲೋಟ ಎಲ್ಲಾ ಬಾಗ್ಲ ಹತ್ರ ತೊಳೆದು ಗಟಾರ ಮಾಡಿದರಿ ಅಂದ್ರ, ನಾವೇನು ಅಲ್ಲಿ ಸ್ನಾನ ಮಾಡೋದಿಲ್ಲ ಅಂತಿರಿ!’ ಎಂದು ಆಶ್ಚರ್ಯ ಪಟ್ಟಿದ್ದರು. ನಮ್ಮ ಕಡೆ ಬಚ್ಚಲು ಎಂದರೆ ‘ಸ್ನಾನ ಮಾಡುವ ಮನೆ’ ಎಂದಷ್ಟೇ ಅರ್ಥ ಇರುವುದನ್ನು ತಿಳಿಸಿ ಹೇಳಿದ ಮೇಲೆ ನಕ್ಕುಬಿಟ್ಟಿದ್ದರು.
ಇನ್ನಮ್ಮೆ ಪಾಠ ಮಾಡುವಾಗ ಒಬ್ಬ ಹುಡುಗ ಪಿಸಪಿಸನೆ ಪಕ್ಕದವನೊಂದಿಗೆ ಮಾತನಾಡುತ್ತಿದ್ದ. ಅದನ್ನು ಗಮನಿಸಿದ ಜಟಗೊಂಡ ‘ಏನಲೇ ಮಗನಾ, ಮೈಗೆ ತಿಂಡಿ ಹತ್ತಿತೇನು? ಬೇಕಾ ಲಾತಾ’ ಎಂದರು. ನಮಗೆ ‘ಬೇಕಾ ಲಾತಾ’ ಎಂಬುದು ಅರ್ಥವಾಗಿತ್ತು. ಆದರೆ ಮೈಗೆ ತಿಂಡಿ ಹತ್ತುವುದೆಂದರೇನು? ಅರ್ಥವಾಗಲಿಲ್ಲ. ಸ್ವಲ್ಪ ಧೈರ್ಯಸ್ಥನಾಗಿದ್ದ ಆ ಹುಡುಗ ‘ಸಾರ್ ತಿಂಡಿ ಕೈಯಿಗೂ ಬಾಯಿಗೂ ಮಾತ್ರ ಹತ್ತುತ್ತೆ. ಮೈಯಿಗೆ ಹತ್ತೋದಿಲ್ಲ ಸಾರ್’ ಎಂದು ಬಿಟ್ಟ.
ಜಟಗೊಂಡ ಅವರು ‘ಏನಲೇ ಮಗನ. ನನಗೆ ಹೊಳ್ಳಿ ಮಾತಾಡ್ತಿ’ ಎಂದು ಹೊಡೆಯಲು ಹೋದರು.
ಆಗ ಆ ಹುಡುಗ ‘ಸಾರ್ ನಮ್ಕಡೆ ತಿಂಡಿ ಅಂದ್ರೆ, ಟಿಫನ್... ನಾಷ್ಟ ಅಂತ ಸಾರ್. ಅದೆ, ರೊಟ್ಟಿ, ಇಡ್ಲಿ, ದೋಸೆ ಜೊತೆಗೆ ನೀವು ಹಾಸ್ಟೆಲ್ಲಿನಲ್ಲಿ ಕೊಡೋ ಉಪ್ಪಿಟ್ಟು, ಚಿತ್ರಾನ್ನ ಇವಕ್ಕೆ ತಿಂಡಿ ಅಂತಾರೆ ಸಾರ್. ಅದಕ್ಕೆ ನಾನು, ತಿಂಡಿ ಕೈಯಿಗೂ ಬಾಯಿಗೂ ಮಾತ್ರ ಹತ್ತುತ್ತೆ ಅಂದಿದ್ದು ಸಾರ್’ ಎಂದು ಎದ್ದು ಓಡಿ, ಅವರ ಏಟಿನಿಂದ ತಪ್ಪಿಸಿಕೊಂಡ.
ಹೊಡೆಯಲು ಹೋಗಿದ್ದ ಜಟಗೊಂಡ ಅವರು ಬಿದ್ದು ಬಿದ್ದು ನಗತೊಡಗಿದರು. ಜೊತೆಗೆ ಹುಡುಗರೂ ಸೇರಿಕೋಂಡರು. ಅವರ ಕಡೆ, ಮೈಯಿಗೆ ತಿಂಡಿ ಹತ್ತುವುದೆಂದರೆ, ಮೈ ಕಡಿಯುವುದು ಎಂದರ್ಥ! ಹಾಗೆ ನಮಗೆ ಮೈ ಕಡಿತವಾದರೆ ನಾವು ಅದನ್ನು ಕೆರೆದುಕೊಳ್ಳುತ್ತೇವೆ!! ಜಟಗೊಂಡ ಅವರು ತುರಿಸಿಕೊಳ್ಳುತ್ತಾರೆ!!!