Thursday, December 31, 2015

ಕವಿಶೈಲದುನ್ನತಿಗೆ ತೇಜಸ್ವಿ ಮಾರ್ಗ!


ಡಿಸೆಂಬರ್ ೨೯ ಕುವೆಂಪು ಅವರ ಜನ್ಮದಿನವನ್ನು ಸರ್ಕಾರ ’ವಿಶ್ವಮಾನವ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿ, ಶಾಲಾ-ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿದೆ. ಕುವೆಂಪು ಬರವಣಿಗೆಯ ವರ್ತಮಾನದಲ್ಲಿ ಹಾಗೂ ನಂತರ ಅವರ ಸಾಹಿತ್ಯ ಪ್ರವೇಶ, ಗ್ರಹಿಕೆ, ಚರ್ಚೆ ಎಲ್ಲವೂ ಈಗ ಇತಿಹಾಸ. ಪ್ರಸ್ತುತ ಹೊಸ ತಲೆಮಾರು ಕುವೆಂಪು ಅವರನ್ನು ಹೇಗೆ ಗ್ರಹಿಸುತ್ತಿದೆ? ಅವರಿಗಿರುವ ಸವಾಲುಗಳೇನು? ಮಾರ್ಗೋಪಾಯಗಳೇನು? ಇದರ ಬಗ್ಗೆ ಒಂದಿಷ್ಟು ಯೋಚಿಸಬೇಕಾಗಿದೆ.

ನವೋದಯದ ಸಂದರ್ಭದಲ್ಲೇ, ಕುವೆಂಪು ಅವರ ಸಾಹಿತ್ಯದ ಬಗ್ಗೆ ಎರಡು ಅತಿರೇಕಗಳು ಕೆಲಸ ಮಾಡುತ್ತಿದ್ದವು. ಒಂದು ಅವರನ್ನು ಅತಿ ಆರಾಧನಾ ಭಾವದಿಂದ ವೈಭವೀಕರಿಸುತ್ತಿದ್ದು; ಇನ್ನೊಂದು ಅತಿ ಖಂಡನೆಗೆ ಒಳಪಡಿಸುತ್ತಿದ್ದುದು. ಈ ಎರಡು ಅತಿರೇಕಗಳಿಗೂ ಜಾತಿಪ್ರೇರಣೆಯೂ ಕಾರಣವಾಗಿತ್ತು ಎಂಬುದು ಸುಳ್ಳಲ್ಲ. ಸ್ವತಃ ಕುವೆಂಪು ಅವರೇ, ಶೂದ್ರತಪಸ್ವಿ ನಾಟಕದ ಮುನ್ನುಡಿಯಲ್ಲಿ “ಯಾವ ಕಾರಣದಿಂದಾಗಲಿ, ಯಾವ ಪೂರ್ವಗ್ರಹದಿಂದಾಗಲಿ, ಯಾವ ದುರಾಗ್ರಹದಿಂದಾಗಲಿ ಹೃದಯಪ್ರವೇಶ ಮಾಡುವ ದಾರಿದ್ರ್ಯವನ್ನು ದೂರೀಕರಿಸಿ, ಶುದ್ಧ ಬುದ್ಧಿಯ ಸಹೃದಯ ಸಹಜವಾದ ಶ್ರೀಮಂತತೆಯಿಂದ ಅದನ್ನು ಓದಿದರೆ ಕೃತಿಗೂ ಕೃತಿಕಾರನಿಗೂ ನ್ಯಾಯ ಮಾಡಿದಂತಾಗುತ್ತದೆ” ಎಂದು ಬರೆದಿದ್ದರೂ, ನಂತರ ನಡೆದ ಘಟನಾವಳಿಗಳು ಹಾಗೂ ಮಾರ್ನುಡಿಯಲ್ಲಿ “ಬ್ರಾಹ್ಮಣೇತರರಲ್ಲಿ ಕೆಲವರು ಕಾವ್ಯತ್ವಕ್ಕಿಂತಲೂ ಹೆಚ್ಚಾಗಿ ಕೃತಿ ಬ್ರಾಹ್ಮಣರಿಗೆ ಚೆನ್ನಾಗಿ ಏಟು ಕೊಡುತ್ತದೆ ಎಂಬ ಅಸತ್ಯವೂ ಅಪ್ರಕೃತವೂ ಅವಿವೇಕವೂ ಆದ ಕಾವ್ಯವಿಮರ್ಶೇತರ ಕಾರಣವನ್ನು ಆರೋಪಿಸಿಕೊಂಡು ಸ್ತುತಿಸಿದರೆಂದು ಕೇಳಿದ್ದೇನೆ” ಎಂದು ಬರೆಯಲು ಕಾರಣವಾದ ಅಂಶಗಳು ಈಗ ತೆರೆದ ಇತಿಹಾಸ.
೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಶಂಭುಶಾಸ್ತ್ರಿ ಎಂಬುವವರು ಕುವೆಂಪು ಅವರ ಮೊದಲ ಸಂಕಲನದ ಮೊದಲ ಕವಿತೆಯ ಮೊದಲೆರಡು ಸಾಲುಗಳನ್ನೇ ಹಿಡಿದು ಅತಿಖಂಡನೆ ಮಾಡಿದ್ದೂ ಉಂಟು. ಧಾರೆಯ ದಾರದಿ ನೆಯ್ದಿಹ ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು ಎಂಬ ಸಾಲನ್ನು ಹಿಡಿದು, ’ಈ ಜವನಿಕೆಯನ್ನು ಉಡುವ ತಿರೆವೆಣ್ಣಿನ ದಪ್ಪ ಸೊಂಟ ಎಷ್ಟು ಮೈಲಿ ವಿಸ್ತಾರದ್ದಿರಬೇಕು?’ ಎಂದು ಕು-ವಿಮರ್ಶೆ ಮಾಡಿದವರೂ ಇದ್ದರು. ಬಹುಶಃ ಇಂತಹ ಘಟನೆಗಳೇ ಕುವೆಂಪು ಅವರಿಗೆ-
“ನೀನೇರಬಲ್ಲೆಯಾ ನಾನೇರುವೆತ್ತರಕೆ?
ನೀ ಹಾರಬಲ್ಲೆಯಾ ನಾ ಹಾರುವಗಲಕ್ಕೆ?
ಎಂಬ ಸಾಲುಗಳನ್ನು ಬರೆಯಲು ಕಾರಣವಾಗಿರಬಹುದು.
ಅವರ ಈ ಸವಾಲು ಕೇವಲ ಅತಿಖಂಡನಕಾರರಿಗೆ ಮಾತ್ರವಲ್ಲ; ಅತಿ ಆರಾಧಕರಿಗೂ ಅನ್ವಯಿಸುತ್ತದೆಯಲ್ಲವೆ? ಕುವೆಂಪು ಈ ಎರಡೂ ಅತಿರೇಖಗಳ ಬಗ್ಗೆ ಹೆಚ್ಚಿನಂಶ ನಿರ್ಲಿಪ್ತರಾಗಿದ್ದರೂ, ಒಬ್ಬ ಬರಹಗಾರನಾಗಿ ಸಂದರ್ಭ ಬಂದಾಗ ಪ್ರತಿಕ್ರಿಯಿಸಲು ಹಿಂಜರಿಯುತ್ತಿರಲಿಲ್ಲ ಎಂಬುದು ಸ್ಪಷ್ಟ. ’ಶೂದ್ರತಪಸ್ವಿ’ಯ ಮಾರ್ನುಡಿಯಲ್ಲದೆ, ’ನನ್ನ ಶೈಲಿ’, ’ನನ್ನ ಕವಿತೆ ತನ್ನ ವಿಮರ್ಶಕನಿಗೆ’, ’ಕವನ ಕೇಳುವವನಿಗೆ’, ’ಗ್ರಾಮಸಿಂಹ’, ’ಎಚ್ಚರಿಕೆ!’, ’ವಾಲ್ಮೀಕಿಗೊಂದು ಎಚ್ಚರಿಕೆ!’, ’ಧರ್ಮಸ್ಥಲ’, ’ಅಖಂಡ ಕರ್ಣಾಟಕ’ ಮೊದಲಾದ ಕವಿತೆಗಳನ್ನು ಕುವೆಂಪು ಅವರ ಸಾತ್ವಿಕ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಗಮನಿಸಬಹುದಾಗಿದೆ.
ಮೇಲಿಂದ ಮೇಲೆ ಇಂತಹ ಘಟನೆಗಳು ಜರುಗುತ್ತಿದ್ದುದರ ಪರಿಣಾಮವೋ ಏನೋ, ‘ಪಕ್ಷಿಕಾಶಿ’ ಕವನದಲ್ಲಿ ನೇರವಾಗಿ ತಮ್ಮ ಕಾವ್ಯ ಪ್ರವೇಶ ಹೇಗಿರಬೇಕೆಂದು ಕವಿ ಧ್ವನ್ಯಾತ್ಮಕವಾಗಿ ಹೇಳಿದ್ದಾರೆ.
ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು
ಅಲ್ಲೆ ಇಟ್ಟು ಬಾ;
ಬಿಂಕದುಕುತಿಯನು ಕೊಂಕು ಯುಕುತಿಯನು
ಎಲ್ಲ ಬಿಟ್ಟು ಬಾ;
ಮೆಯ್ಯ ತೊಳೆದು ಬಾ, ಕಯ್ಯ ಮುಗಿದು ಬಾ,
ಹಮ್ಮನುಳಿದು ಬಾ:
ಇಕ್ಷು ಮಧುರಮೆನೆ ಮೋಕ್ಷ ಪಕ್ಷಿಯಲಿ
ನಾಡಿನಾಡಿಯಲಿ ಹಾಡಿ ಹರಿದು ನಲಿ-
ದಾಡಬಹುದು ಬಾ!
ಹಿಂದೆ ಕವಿ ಹಾಕಿದ್ದ ಸವಾಲಿನಂತೆ, ಕುವೆಂಪು ಅವರ ಈ ಸ್ವಾಗತವೂ ಸಹ ಎರಡೂ ವರ್ಗಗಳಿಗೂ ಅನ್ವಯಿಸುವಂತದ್ದೇ ಆಗಿದೆ. ನಂತರದ ದಿನಗಳಲ್ಲಿ ನವ್ಯ ಸಾಹಿತ್ಯ ಪ್ರಚಾರಕ್ಕೆ ಬಂದ ಮೇಲೆ, ಹೆಚ್ಚು ಖಂಡನೆಗೆ ಗುರಿಯಾದ ಕವಿ ಕುವೆಂಪು ಅವರೇ ಆಗಿದ್ದರು! ಅದಕ್ಕೆ ಸಾಹಿತ್ಯೇತರ ಕಾರಣಗಳೇ ಹೆಚ್ಚಾಗಿದ್ದವು ಎಂಬುದು ಅತ್ಯಂತ ಸ್ಪಷ್ಟ. ಅಂತಹ ಸಂದರ್ಭವೊಂದರಲ್ಲಿಯೇ, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಕುವೆಂಪು ಅವರ ಸಾಹಿತ್ಯ ಕುರಿತ ವಿಚಾರಸಂಕಿರಣದಲ್ಲಿ ಉದ್ಘಾಟನಾ ಭಾಷಣ ಮಾಡಿದ್ದ ತೇಜಸ್ವಿ, ಕುವೆಂಪು ಅವರ ಸಾಹಿತ್ಯವನ್ನು ಕುರಿತಂತೆ ಇದ್ದ ಇಂತಹ ಅತಿರೇಕಗಳ ಸೂಕ್ಷ್ಮತೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು.
“ಕುವೆಂಪುರವರ ಮೇಲೆ ಈಗ ಎರಡು ಬಗೆಯ ಟೀಕೆಗಳು ಕಂಡುಬರುತ್ತವೆ. ಮೊದಲನೆಯದು ಕುವೆಂಪು ಶೂದ್ರವಾದಿ; ಬ್ರಾಹ್ಮಣ ಅಥವಾ ವೈದಿಕ ಸಂಪ್ರದಾಯ ವಿರೋಧಿ ಎಂದು. ಎರಡನೆಯದು ಕುವೆಂಪುರವರ ಬ್ರಾಹ್ಮಣ ವಿರೋಧ ಕೇವಲ ಸಾಮಾಜಿಕ; ಅವರು ಆಳದಲ್ಲಿ ಪ್ರತಿಪಾದಿಸುವುದು ಆರ್ಯಸಂಸ್ಕೃತಿಯನ್ನೇ, ಆದ್ದರಿಂದ ಕೊನೆಗೂ ವೈದಿಕ ಸಂಸ್ಕೃತಿಗೆ ಅದರಿಂದ ಲಾಭ ಎಂದು” ಹೀಗೆ ಆರಂಭವಾಗುವ ಲೇಖನದಲ್ಲಿ ಕುವೆಂಪು ಸಾಹಿತ್ಯ ಪ್ರವೇಶಕ್ಕೆ ಬೇಕಾದ ಕೀಲಿಕೈಗಳು ಸಿಗುತ್ತವೆ. “ಒಬ್ಬ ಕವಿ ಪ್ರಜ್ಞಾಪೂರ್ವಕವಾಗಿ ತಾನು ಯಾವ ಜಾತಿ ಯಾವ ಸಂಪ್ರದಾಯಸ್ಥ ಯಾವ ಪಂಥದವನು ಎಂದು ಘೋಷಿಸಿಕೊಂಡರೂ ಅವನ ಸಾಹಿತ್ಯ ಪರಂಪರೆಯನ್ನು ವಿಶ್ಲೇಷಿಸ ಹೊರಟಾಗ ಇವೆಲ್ಲಾ ಗೌಣವಾಗುತ್ತವೆ. ಅಲ್ಲಿ ನಮಗೆ ಮುಖ್ಯವಾದುದು ಕವಿ ತನ್ನ ಕಲಾನಿರ್ಮಿತಿಯ ಸಂದರ್ಭದಲ್ಲಿ ವ್ಯಕ್ತಪಡಿಸುವ ಚಾರಿತ್ರಿಕ ಪ್ರಜ್ಞೆ ಮತ್ತು ಕಾರ್ಯ ಪ್ರವೃತ್ತವಾಗಿರುವ ಚಾರಿತ್ರಿಕ ಒತ್ತಡಗಳು” ಮತ್ತು “ಕುವೆಂಪು ತಮ್ಮ ಕಲಾನಿರ್ಮಿತಿಯ ಸಂದರ್ಭದಲ್ಲಿ ಪ್ರತಿಪಾದಿಸಿದ ಮತ್ತು ವಿರೋಧಿಸಿದ ತತ್ವ ಸಂಪ್ರದಾಯಗಳು ಬೇರೆ.
ಕುವೆಂಪುರವರ ಕಲಾನಿರ್ಮಿತಿಯಯನ್ನು ಇಡಿಯ ಕರ್ಣಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ವೈಶಾಲ್ಯತೆಯಲ್ಲಿ ಅರ್ಥಮಾಡಿಕೊಳ್ಳುವುದರಿಂದ ನಮಗೆ ಉಂಟಾಗುವ ಕುವೆಂಪುರವರ ಹಿಂದಿನ ಪರಂಪರೆಯ ಅರಿವು ಬೇರೆ” ಎನ್ನುವ ಅವರ ಮಾತುಗಳು ಹೊಸ ತಲೆಮಾರಿನ ಓದುಗರಿಗೆ ದಿಕ್ಸೂಚಿಯಾಗಬಲ್ಲವು. ಸ್ವತಃ ತೇಜಸ್ವಿಯವರ ಬದುಕು-ಬರಹಗಳು ನಮ್ಮನ್ನು ಕುವೆಂಪು ಸಾಹಿತ್ಯದೆಡೆಗೆ ಸೆಳೆಯಬಲ್ಲವು ಕೂಡಾ.
ಜಾಗತೀಕರಣದ ಹಿನ್ನೆಲೆಯಲ್ಲಿ, ಹೊಸ ತಲೆಮಾರಿನ ಓದುಗರಿಗೆ ಹಲವು ಅನುಕೂಲಗಳೂ ಇವೆ. ಜಾತಿ ಧರ್ಮದ ಸೋಂಕಿಲ್ಲದೆ, ಭಾಷೆಯ ಗಡಿಯೂ ಪ್ರಾಂತೀಯ ಭಾವನೆಯೂ ಇಲ್ಲದೆ ಆಲೋಚಿಸುವ ಶಕ್ತಿ ಈ ತಲೆಮಾರಿಗಿದೆ; ಅಜ್ಜನ ಹೆಗಲ ಮೇಲೆ ಕುಳಿತ ಮೊಮ್ಮಗನಿಗೆ, ಅಜ್ಜನಿಗಿಂತ ಹೆಚ್ಚಿನ ದೃಷ್ಟಿವೈಶಾಲ್ಯತೆ ಸಿಗುವಂತೆ! ಕುವೆಂಪು ಸಾಹಿತ್ಯದ ಪುನರ್‌ಮನನ, ಹೊಸ ಓದು, ಪುನರ್‌ಮೌಲ್ಯಮಾಪನ ಇವೆಲ್ಲವೂ ಪ್ರಸ್ತುತ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅತ್ಯಗತ್ಯವಾಗಿ ನಡೆಯಬೇಕಾದ ಕಾರ್ಯವಾಗಿವೆ.
ಜೊತೆಗೆ, ಕುವೆಂಪು ಸಾಹಿತ್ಯ ಪ್ರಚಾರದಲ್ಲಿಯೂ ಹೊಸತನ ಅಗತ್ಯವಾಗಿ ಆಗಬೇಕಿದೆ. ಕೆಲವರ ಕೈಯಲ್ಲಾದರೂ ಇರುತ್ತಿದ್ದ ಪುಸ್ತಕಗಳು ಕಣ್ಮರೆಯಾಗಿ, ಇಂದು ಎಲ್ಲರ ಕೈಯಲ್ಲೂ ’ಸ್ಮಾರ್ಟ್ ಪೋನು’ಗಳು, ’ಈ-ಬುಕ್ ರೀಡರ್’ಗಳು ಕಾಣಿಸುತ್ತಿವೆ. ಓದುವುದು ಬರೆಯುವುದು ಎಲ್ಲವೂ ಕಾಲಾತೀತವಾಗಿ, ದೇಶಾತೀತವಾಗಿ ನಡೆಯುತ್ತವೆ. ’ಪುಸ್ತಕ’ ’ಈ-ಪುಸ್ತಕ’ವಾಗಿ ಬದಲಾದರೆ ಬಹುಜನರ ಕೈಯನ್ನೂ ಸೇರಿದಂತಾಗುತ್ತದೆ.
ಇಂದು, ಕುವೆಂಪು ಅವರ ಸಮಗ್ರ ಸಾಹಿತ್ಯ ಅಂತರ್ಜಾಲದಲ್ಲಿ ಉಚಿತವಾಗಿಯೇ ಸಿಗುತ್ತೆದೆಯಾದರೂ ಸಮರ್ಪಕವಾಗಿಲ್ಲ. ಅದನ್ನೇ ’ಈ-ಪುಸ್ತಕ’ಗಳನ್ನಾಗಿ ಪರಿವರ್ತಿಸಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರ ಕೈಸೇರುವಂತೆ ಮಾಡಬಹುದು. ಸಹೃದಯರ ಅಂಗೈ ಸೇರಿ ಮಸ್ತಕಕ್ಕೂ ಏರಬಹುದು! ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಯೋಚಿಸುವ ಅಗತ್ಯವಿದೆ. ಏಕೆಂದರೆ, ಮೇಲಿನೆರಡು ಅಗತ್ಯಗಳು ನಮ್ಮ ಕನ್ನಡ ಸಾಹಿತ್ಯ ಪರಂಪರೆಯ ದಿಕ್ಕು-ದೆಸೆಯನ್ನು ನಿರ್ಧರಿಸುವಂತಹವುಗಳಾಗಿವೆ!

Tuesday, December 15, 2015

ಅವಿವೇಕಿ ನರಿ - ಈ ಪುಸ್ತಕ

Book titled 'Aviveki Nari (Foolish Fox)'Read this free book made on StoryJumper

Wednesday, August 12, 2015

ಪುಣೇಕರರು ಹಾಗೂ ಅವರ ಆಂಗ್ಲ ಶ್ರೀರಾಮಾಯಣ ದರ್ಶನಂ : ಶ್ರೀನಿವಾಸ ದೇಸಾಯಿ

ಶಂಕರ ಮೊಕಾಶಿ ಪುಣೇಕರ ಕನ್ನಡ ಸಾಹಿತ್ಯದ ವಿಶಿಷ್ಟ ವ್ಯಕ್ತಿ. ಎರಡು ಅಡ್ಡಹೆಸರು ಪಡೆದವರು, ಮಾತೃಭಾಷೆ ಕನ್ನಡ ಹಾಗೂ ವಿಶ್ವಭಾಷೆ ಆಂಗ್ಲಭಾಷೆ ಎರಡರಲ್ಲೂ ಪ್ರತಿಭಾನ್ವಿತರು. ದ್ವಿಭಾಷಾ ಸಾಹಿತಿ ಎಂದು ಪ್ರಸಿದ್ಧರು. ಹಾಗೇ ದೇವಭಾಷೆ ಸಂಸ್ಕೃತವೂ ಚೆನ್ನಾಗಿ ಬರುತ್ತಿತ್ತು. ಪುಣೇಕರರ ಬದುಕಿನ ಪಥವಂತೂ ಅವರೇ ಹೇಳಿಕೊಂಡಂತೆ, ಕಾರವಾನ್(Carvan)ತರಹದ್ದಾಗಿದೆ. ಬಾಲ್ಯದಿಂದಲೂ ಜೀವಕ್ಕೆ ಅಂಟಿಗೊಂಡ ಓದಿನ ಗೀಳು ಬದುಕಿನ ಅಂತ್ಯದವರೆಗೆ ಸಾಗಿತ್ತು. ಬಿ.ಎಂ.ಶ್ರೀ., ಪ್ರೊ. ಮೆನಜಿಸ್, ಡಾ. ಗೋಕಾಕರಂತಹ ಶ್ರೇಷ್ಠ ಶಿಕ್ಷಕರ ಅಡಿಯಲ್ಲಿ ಕಾಲೇಜು ಶಿಕ್ಷಣ ನಡೆದು, ಎಂ.ಎ. (ಇಂಗ್ಲಿಷ್) ಹಾಗೂ ಯೇಟ್ಸ್ ಕವಿಯ ಸಾಹಿತ್ಯ ಕುರಿತು ಡಾಕ್ಟರೇಟ್ ಪಡೆದ ಧೀಮಂತರು. ಮುಂದೆ ಕೆಲವೇ ವರುಷಗಳಲ್ಲಿ ಆಂಗ್ಲ ಸಾಹಿತಿ – ಕವಿ ಯೇಟ್ಸನ ಸಾಹಿತ್ಯ ಕುರಿತು ಓರ್ವ ವಿದ್ವಾಂಸರೆಂದು ಪುಣೇಕರರು ಪ್ರಸಿದ್ಧಿ ಪಡೆದರು ವಿಶ್ವದಾದ್ಯಂತ!
ಪುಣೇಕರರು ಜೀವಿಸಿದ ಅವಧಿ 76 ವರುಷ. (8.5.1928 – 11.8.2004). ಬಹುಮುಖ ವ್ಯಕ್ತಿತ್ವ ಅವರದು. ಶಿಕ್ಷಕ, ಪ್ರಾಧ್ಯಾಪಕ, ಕವಿ, ಕಾಂಬರಿಕಾರ, ವಿಮರ್ಷಕ ಅನುವಾದಕ, ಸಂಗೀತ ಶಾಸ್ತ್ರಜ್ಞ, ಸಂಗೀತ ವಿಮರ್ಷಕ ಹಾಗೂ ಲಿಪಿ ಸಂಶೋಧಕ ಹೀಗೆ ಹಲವು ವಿಧದ ಹೆಗ್ಗಳಿಕೆ. ಸಂಸಾರ ಸಮೇತ ತಿರುಗಿದ ಊರುಗಳು: ಬಿಜಾಪುರ, ಕಾರವಾರ, ಬೆಳಗಾವಿ, ಮುಂಬೈ, ಧಾರವಾಡ, ಉಡುಪಿ, ಮೈಸೂರು, ಪುಟ್ಟಪರ್ತಿ ಕೊನೆಗೆ ಧಾರವಾಡ; ಹುಬ್ಬಳ್ಳಿ

ಶಂಕರ ಮೊಕಾಶಿ ಪುಣೇಕರ
ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳ 11 ಹಾಗೆಯೇ ಆಂಗ್ಲಭಾಷೆಯಲ್ಲಿ 19 ಕೃತಿಗಳು, ಪುಣೇಕರ ಪ್ರತಿಭೆಯಿಂದ ಹೊರಹೊಮ್ಮಿದ ಅಪೂರ್ವ ಕೃತಿಗಳು. ಗಂಗವ್ವ – ಗಂಗಾಮಾಯಿ, ಅವಧೇಶ್ವರಿ (ಕಾದಂಬರಿ), ಮಾಯಿಯ ಮೂರುಮುಖಗಳು (ಕಾವ್ಯ) ಹಾಗೂ ನಟನಾರಾಯಣ (ನಾಟಕ) ಇವು ಸಾರ್ವಕಾಲಿಕ ಕನ್ನಡದ ಕೃತಿಗಳು.
ಆಂಗ್ಲಭಾಷೆಯಲ್ಲಿಯ ಹೆಚ್ಚಿನ ಕೃತಿ ರಚನೆ, ಪುಣೇಕರರಿಗೆ ಶ್ರೇಷ್ಠ ಆಂಗ್ಲ ಸಾಹಿತಿಯೆಂಬ ಪ್ರಸಿದ್ಧಿ ತಂದಿದೆ. The Captive (Poetry), Cycle of Seasons (ಕವಿ ಕಾಳಿದಾಸನ ಋತುಸಂಹಾರದ ಅನುವಾದಿತ ಕಾವ್ಯ), Avadoot Geet (ಅನುವಾದ ಕಾವ್ಯ), ಯೇಟ್ಸ್ ಕವಿಯ ಕುರಿತ ಗ್ರಂಥಗಳು, ಡಾ. ಗೋಕಾಕ ಹಾಗೂ ರಾಷ್ಟ್ರಕವಿ ಕುವೆಂಪುರವರ Monograph (ವ್ಯಕ್ತಿಚಿತ್ರಣ) ಕೆಲವು ಪ್ರಮುಖ ಕೃತಿಗಳು. ಕನ್ನಡದ ಕಳೆದ ಶತಮಾನದ ಮಹಾಕಾವ್ಯ, ಕುವೆಂಪುರವರ ಶ್ರೀರಾಮಾಯಣ ದರ್ಶನಂ ಆಂಗ್ಲ ಅನುವಾದವು ಪುಣೇಕರರ ಆಂಗ್ಲ ಸಾಹಿತ್ಯ ಕೃಷಿಯ ಮಹಾಕಿರೀಟ.
ಪುಣೇಕರರು ತಮ್ಮ ಪಾಂಡಿತ್ಯದೊಡನೆ ಅಪೂರ್ವ ವ್ಯಕ್ತಿತ್ವವನ್ನು ರೂಪಿಸಿಗೊಂಡವರು. ಅವರು ಸರಳಜೀವಿ. ಸ್ನೇಹಪರರು. ಆದರೆ ಪ್ರಚಾರಪ್ರಿಯರಲ್ಲ. ಗುಂಪುಗಾರಿಕೆಯಿಂದ ದೂರವಿದ್ದವರು, ಸ್ವತಂತ್ರ ಮನೋಭಾವ, ವೈಚಾರಿಕತೆ ಭಿಡೆ ಸ್ವಭಾವ ಅವರದಾಗಿತ್ತು.
ಎಲ್ಲರೂ, ಅಚ್ಚುಮೆಚ್ಚಿನಿಂದ ನೋಡಬಯಸುವ ಸುಂದರ ರೂಪದ ಪುಣೇಕರರು ಸಾಧು ಸ್ವಭಾವದ, ಸೃಜನಶೀಲರು, ನಿರಂತರ ಅಧ್ಯಯನಶೀಲರು. ಇವೆಲ್ಲಕ್ಕೂ ಮಿಗಿಲಾಗಿ ಪುಣೇಕರರು ವಿನಯವಂತರು. ಪುಣೇಕರರ ಇಂತಹ ವ್ಯಕ್ತಿತ್ವವನ್ನು ಸನಿಹದಿಂದ ಗಮನಿಸಿದ್ದ ಚಿಂತಕ ಸಾಹಿತಿ ಡಾ. ಮುರಾರಿ ಬಲ್ಲಾಳರು “ವಿದ್ಯೆಯಿಂದ ವಿನಯ, ವಿನಯದಿಂದ ಯೋಗ್ಯತೆ ಎಂಬ ಮಾತಿಗೆ ನಾನು ಕಂಡ ಅತ್ಯಂತ ಸೂಕ್ತ ಉದಾಹರಣೆ ಶಂಕರ ಮೊಕಾಶಿ ಪುಣೇಕರ. ಅವರು ನಿಜಕ್ಕೂ ಪ್ರಜ್ಞೌವಾನ” ಎಂದಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ (1988), ಕನ್ನಡ ಸಾಹಿತ್ಯ ಅಕಾಡೆಮಿ (1986) ಹಾಗೂ ಚಲನಚಿತ್ರ ಕಥಾ ಪ್ರಶಸ್ತಿ (1996), ಮೈಸೂರು ವಿಶ್ವವಿದ್ಯಾಲಯ ಹಬ್ಬದ ಗೌರವ (1977), ಕುವೆಂಪು ವಿದ್ಯಾವರ್ಧಕ ಪ್ರಶಸ್ತಿ (1978) ಈ ಪ್ರಶಸ್ತಿಗಳು ತಂತಾನೆ ಪುಣೇಕರರನ್ನು ಗೌರವಿಸಿವೆ.
ಶಂಕರ ಮೊಕಾಶಿ ಪುಣೇಕರರ ಮೇಲಿನ ವ್ಯಕ್ತಿಚಿತ್ರಣವು ಅವರು ಕನ್ನಡ ಕಾವ್ಯಸಾಹಿತ್ಯದ ಮಹಾಕಾವ್ಯ, ಕುವೆಂಪುರವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಆಂಗ್ಲಭಾಷೆಗೆ ಅನುವಾದಿಸುವ ಕೆಳಗಿನ ಸಂಕ್ಷಿಪ್ತ ನಿರೂಪಣೆಗೆ ಪೀಠಿಕೆಯಾಗಿದೆ. ಈ ಅನುವಾದದ ಹಿಂದೆ ಒಂದು ಜ್ವಲಂತವಾದ ರೋಚಕ ಹಾಗೂ ವ್ಯಥೆಯ ನೈಜ ಕಥೆ ಇದೆ.
1980-90ರ ದಶಕದಲ್ಲಿ ಪುಣೇಕರರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 1986ರಲ್ಲಿ ಅವರನ್ನು ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಻ನುವಾದ ಮಾಡಲು ಕೇಳಲಾಗಿತ್ತು. ಅಷ್ಟೇ ಬೇಕಾಗಿತ್ತೇನೊ ಅನ್ನುವಂತೆ, ಕೇವಲ ೆರಡು ವರುಷಕ್ಕೂ ಕಡಮೆ ಅವಧಿಯಲ್ಲಿಯೇ, ಪುಣೇಕರರು 25000 ಸಾಲುಗಳು ಇಉವ ಮಹಾಛಂದಸ್ಸಿನ ಆ ಮಹಾಕಾವ್ಯವನ್ನು ಅನುವಾದಿಸಿದರು.
ಈ ಅನುವಾದ ಕಾರ್ಯವು ಪುಣೇಕರರ 60ನೇ ಪಕ್ವ ವಯಸ್ಸಿನಲ್ಲಿ ಜರುಗಿದೆ. ಆ ಎರಡು ವರುಷದ ಆ ಅನುವಾದದ ತಪಸ್ಸು, ಸತತವಾಗಿ ಹಗಲು ರಾತ್ರಿಯೆನ್ನದೆ ನಡೆಯಿತಂತೆ! ಸ್ವತಃ ನಿಪುಣ ಬೆರಳಚ್ಚುಗಾರರಾಗಿದ್ದ ಪುಣೇಕರರು, ಟೈಪರೇಟರಿನ ಮೇಲೆ ನೇರವಾಗಿ ಅನುವಾದ ಮಾಡುತ್ತಿದ್ದರು. ಇದಲ್ಲದೇ ತಮ್ಮ ಆ ಅನುವಾದವನ್ನು ಸ್ವತಃ ತಾವೇ ಸೈಕಲ್ಲು ತುಳಿದು, 2-3 ಕಿ.ಮೀ. ದೂರದ ಕುವೆಂಪುರವರ ುದಯರವಿಗೆ ಒಯ್ಯುತ್ತಿದ್ದರು. ಕುವೆಂಪುರವರಿಗೆ ಅನುವಾದ ಓದಿ ತೋರಿಸಿ, ಸಲಹೆ ಪಡೆದುದು ಅಲ್ಲದೇ ಶಹಬ್ಭಾಸ್ ಪಡೆದದ್ದೇ ಪಡೆದದ್ದು.
ಈ ಮೊದಲೇ ಕುವೆಂಪು, ಪುಣೇಕರರ ಆಂಗ್ಲಭಾಷಾ ಪ್ರೌಢಿಮೆಯನ್ನು ಬಹಳ ಮೆಚ್ಚಿಕೊಂಡಿದ್ದರು. ಕುವೆಂಪು ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು ಪುನೇಕರರು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ, ಆಂಗ್ಲಭಾಷೆಯಲ್ಲಿ, ಕುವೆಂಪುರವರ ವ್ಯಕ್ತಿತ್ವ ಹಾಗೂ ಸಮಗ್ರಸಾಹಿತ್ಯದ ಅವಲೋಕನ ಚಿತ್ರಣ ‘Homing Bird’ 1976ರಲ್ಲಿ ಪುಣೇಕರರು ಬರೆದುಕೊಟ್ಟಿದ್ದರು. 75 ಪುಟಗಳ ಈ ವ್ಯಕ್ತಿಚಿತ್ರಣವನ್ನು “A sort of mirroring macrocosm in a microcosm” ಎಂದು ಶ್ಲಾಘಿಸಿದ್ದಾರೆ ಸಾಹಿತಿ ಸದಾನಂದ ಕನವಳ್ಳಿಯವರು. ಕುವೆಂಪು “Homing Bird” ಅನ್ನು ಮನಸಾರೆ ಮೆಚ್ಚಿದ್ದರು. ಒಂದು ಸೆಮಿನಾರದಲ್ಲಿ ಪುಣೇಕರರು ಕುಳಿತಲ್ಲಿಗೆ ಕುವೆಂಪು ತಾವೇ ಸ್ವತಃ ಬರಿಗಾಲಿನಿಂದ ಬಂದು ಅವರನ್ನು ಅದಕ್ಕಾಗಿ ಪ್ರಶಂಸಿಸಿ, ಧನ್ಯವಾದ ಹೇಳಿದರು.
“ಶ್ರೀರಾಮಾಯಣ ದರ್ಶನಂ” ಆಂಗ್ಲ ಅನುವಾದವನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ 1988ರಲ್ಲಿ ನೀಡಿದರು. ನಂತರ ಪುಣೇಕರರು ಮೈಸೂರಿನಿಂದ ತೆರಳಿದರು. ಆದರೆ ಈ ಆಂಗ್ಲ ಅನುವಾದ ಪ್ರಕಟವಾಗಿದ್ದು 2004ರಲ್ಲಿ. ಕನ್ನಡ ಸಾಹಿತ್ಯದ ಮೇರುಕಾವ್ಯದ ಆಂಗ್ಲ ಅನುವಾದಕ್ಕೆ 16 ವರುಷಗಳ ವನವಾಸ! ಶ್ರೀ ಜಿ.ಎಸ್. ಶಿವರುದ್ರಪ್ಪ, ಶ್ರೀ ಪ್ರಭುಶಂಕರ ಹಾಗೂ ಶ್ರೀ ಪೂರ್ಣಚಂದ್ರ ತೇಜಸ್ವಿ ಇವರುಗಳ ಪ್ರಯತ್ನದ ಫಲ, “ಶ್ರೀರಾಮಾಯಣ ದರ್ಶನಂ” ಆಂಗ್ಲ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿದೆ. ಈ ಮಹನೀಯರರ ಜೊತೆ ಪಾಟೀಲ ಪುಟ್ಟಪ್ಪನವರ ಕನ್ನಡದ ಗುಡುಗಿನ ಧ್ವನಿಯೂ ಸೇರಿತ್ತು.
ತಮ್ಮ ಆಂಗ್ಲ ಅನುವಾದವು 15-16 ವರುಷಗಳಾದರೂ ಪ್ರಕಟವಾಗದಿರುವುದಕ್ಕೆ ಪುಣೆಕರರು ತುಂಬ ನಿರಾಶೆ ಹಾಗೂ ಹತಾಶೆ ಅನುಭವಿಸಿದ್ದರು. 1990ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಎದುರು ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದರು. ವೃದ್ಧಾಪ್ಯ ಹಾಗೂ ಅನಾರೋಗ್ಯದಿಂದ ಬಳಲುತಿದ್ದ ಪುಣೇಕರರು, 2004ರಲ್ಲಿ ಪ್ರಕಟವಾದ ತಮ್ಮ ಆಂಗ್ಲ ಅನುವಾದದ ಶ್ರೀರಾಮಾಯಣ ದರ್ಶನಂ ಅನ್ನು ಕಂಡು ಬಹು ಸಂತೋಷಿಸಿದ್ದರು. ತಮ್ಮ ಆಂಗ್ಲ ಸಾಹಿತ್ಯ ಸಾಧನೆಯ ಮಹಾಫಲವನ್ನು ಕಣ್ಣಾರೆ ಕಂಡು, ಮುಂದೆ ಕೆಲವೇ ತಿಂಗಳಲ್ಲಿ ವಿಧಿವಶರಾದರು.
ಶ್ರೀರಾಮಾಯಣ ದರ್ಶನಂ ಆಂಗ್ಲ ಪುಸ್ತಕದಲ್ಲಿ, ಕನ್ನಡದ ಖ್ಯಾತ ಸಾಹಿತಿ ಶ್ರೀ ಜಿ.ಎಸ್. ಆಮೂರರವರ 10 ಪುಟಗಳ ಪೀಠಿಕೆ ಇದೆ. ಇದರಲ್ಲಿ ಪುಣೇಕರರ ಅನುವಾದ ಕುರಿತು ಒಂದು ಸಾಲೂ ಬರೆದಿಲ್ಲ! ಈ ಲೇಖನವನ್ನು ಬಹು ಹಿಂದೆ ಬರೆಯಲಾಗಿತ್ತೆಂದು ಶ್ರೀ ಅಮೂರ ತಿಳಿಸಿದ್ದಾರೆ. ಅನುವಾದಕ ಪುಣೇಕರರು, ತಮ್ಮ ಅನುವಾದ ಕುರಿತು ಬರೆದ ಯಾವ ಮಾಹಿತಿಯೂ ಇಲ್ಲ. ಇದಲ್ಲದೆ ಪುಣೇಕರರ ಪರಿಚಯ ಕೇವಲ ಎರಡು ಸಾಲಿನಲ್ಲಿ, ಅದೂ ಹಿಂಬದಿಗೆ, ಪುಸ್ತಕದ ಕವರ್ ಮೇಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಈ ಎಲ್ಲ ವಿಷಯ ಕುರಿತು, ಈ ಬಗೆಯ ನಿರ್ಲಕ್ಷ್ಯ ತೋರದೆ ಹೆಚ್ಚಿನ ವಿಶಾಲತೆ ತೋರಿಸುವ ಅವಶ್ಯಕತೆ ಇದೆ.
ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಕೆಲವು ಸಾಲುಗಳನ್ನು ಪುಣೇಕರರ ಆಂಗ್ಲ ಅನುವಾದದ ಸಾಲುಗಳ ಜತೆ, ಅರ್ಥಸಹಿತ ಕೆಳಗೆ ಉಲ್ಲೇಖಿಸಿದೆ. ಇದರ ಉದ್ದೇಶ ಅನುವಾದದ ಶ್ರೇಷ್ಠತೆಯ ಸೊಬಗಿನ ನೋಟ ನೀಡುವುದಾಗಿದೆ.
1.      ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಆರಂಭದ ಐದು ಸಾಲುಗಳಿವು:
ಶ್ರೀ ರಾಮ ಕಥೆಯಂ ಮಹರ್ಷಿ ನಾರದ ವೀಣೆಯಿಂ
ಕೇಳ್ದು, ಕಣ್ದಾವರೆಯೊಳಶ್ರುರಸಮುಗುವನ್ನೆಗಂ
ರೋಮಹರ್ಷಂದಾಳ್ದು ಸಹೃದಯಂ ವಾಲ್ಮೀಕಿ ತಾಂ
ನಡೆತಂದನಾತ್ಮಸುಖಿ, ಕೇಳ್, ತಮಸಾ ನದೀ ತಟಿಗೆ,
ತೇಜಸ್ವಿ, ತರುಣಂ ತಪೋವಲ್ಕಲ ವಸ್ತ್ರ ಶೋಭಿ.
(ಅರ್ಥ: ಶ್ರೀರಾಮ ಕಥೆಯನ್ನು ಮಹರ್ಷಿ ನಾರದನ ವೀಣೆಯಿಂದ ಕೇಳಿ, ತಪಸ್ವಿಯೂ, ಸಹೃದಯನೂ, ತೇಜಸ್ವಿಯೂ ಆದ ತರುಣ ವಾಲ್ಮೀಕಿಯು ತನ್ನ ಕಮಲದಂತಹ ಕಣ್ಣುಗಳಲ್ಲಿ ಆನಂದಭಾಷ್ಪಗಳು ಉದುರುವಷ್ಟು ರೋಮಾಂಚನಗೊಂಡನು. ನಾರುಡೆಯನ್ನು ಧರಿಸಿದ್ದ ಅವನು ಆತ್ಮಾನಂದದಿಂದ ಸುಖಿಸುತ್ತಾ ತಮಸಾ ನದಿ ತೀರಕ್ಕೆ ನಡೆದು ಹೊರಟನು)
Sri Rama’s Tale recited in the dulcet voice
By Sage Narada, moved poet Valmiki’s heart
To soulful tears fill his lotus eyes overflowed;
And hair stood on end from the roots. In profound
Self-fulfilment, Valmiki, young, radiant, clad
In ascetic bark, jogged to the banks of Tamasa
To bathe.
2.     ಶಬರಿಯ ಪಾತ್ರವನ್ನು ಕುವೆಂಪು ಈ ಮಹಾಕಾವ್ಯದಲ್ಲಿ ಬಹು ಎತ್ತರದಲ್ಲಿ ಇರಿಸಿದ್ದಾರೆ. ಶಬರಿ ದಿನಾಲು ಭಗವಂತನ ರೂಪದ ರಾಮನು ಸೀತೆ ಹಾಗೂ ಲಕ್ಷ್ಮಣರೊಂದಿಗೆ ಬರುವುದನ್ನು ಕಾಯುತ್ತಿದ್ದಳು. ಸೀತೆ ರಾವಣನಿಂದ ಅಪಹರಣವಾದಳು. ಕಳಾಹೀರಾದ ರಾಮ-ಲಕ್ಷ್ಮಣರು ದಾಗ ಬೇಡರಂತೆ ಶಬರಿಗೆ ಕಾಣುತ್ತಾರೆ. ಕುವೆಂಪು ಕವಿಹೃದಯದ ಕವಿವಾಣಿ ಇದು.
ಭಗವದಾಗಮನಮೇಂ
ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೆ?
ಸುಖದವೋಲಾಶಿಸಲ್ ದುಃಖದೊಲ್ ಮೈದೋರಿ,
ಭಕ್ತನನಿತಂ ಸುಲಿದು ನೈವೇದ್ಯಮಂ ಕೊಳದೆ
ಪೇಳ್ ಅಹಂಕಾರಮಂ ದಿವ್ಯಶೂನ್ಯತೆಗದ್ದುವೊರ್
ಸಂಪೂರ್ಣತಾ ಸಿದ್ಧಿಯೋಲ್!
Does god approach his devotee
With the accoutrements and consume the devotee expects?
When devotee expects joyous end, God comes like, agony,
Plunders devotee’s all, rejects his offerings, plunger his ego
Into the loath of divine nothingness, thus conferring
Perfect achievement!
3.     ವೀರ ಹನುಮಂತ ಲಂಕೆಗೆ ಹಾರಿ, ಸೀತೆಯನ್ನು ಅಶೋಕವನದಲ್ಲಿ ಕಂಡು ಮರಳಿ ಬಂದು, ರಾಮನಿಗೆ ಹೇಳುವ ಮಾತುಗಳು ಹಾಗೂ ಸೀತೆಯ ಚೂಡಾಮಣಿ ನೀಡುವ ದೃಶ್ಯದ ಶಬ್ದಗಳಿವು.
ಮೊಳಗಿದುದು ವೇದಘೋಷ ಸಮಾನವಾಣಿ ಆ
ಯೋಗಿಯುರದಿಂದಿಂತು: “ನಿಯತೆ! ಅಕ್ಷತೆ! ದೇವಿ
ಸುವ್ರತೆ! ಅಶೋಕವನಗತೆ! ಶೋಕಸಂಮ್ಲಾನೆ!
ತವ ವಿರಹ ದೀನೆ! ಹೇ ದಾಶರಥಿ, ಧನ್ಯನಾಂ
ಕಂಡು ಪುಣ್ಯಶ್ಲೋಕೆಯಂ!” ಎನುತೆ ಹೃದಯದ ಖನಿಗೆ
ಕೈಯಿಕ್ಕಿ, ವಕ್ಷದ ವಜ್ರರಕ್ಷೆಯೊಳಿರ್ದುದನ್
ಚೂಡಾಮಣಿಯನಂಜುಳಿಗೆ ತೆಗೆದು, ನೋಳ್ಪರ್ಗೆ
ಕಣ್‍ಮಣಿಯೆ, ನೀಡಿದನವಿನ್ನಾಣಮಂ ಪ್ರೀತಿ
ಗೌರವಸ್ಫೀತನೇತ್ರಂಗೆ, ಸೀತಾ ಶ್ವಾಸ
ಸೂತ್ರಂಗೆ.

Like Veda chant, the Yogi descanted
From heart his gland timings thus: Disciplined! Unharmed!
True to her vow is Devi! She is in Ashokavana!
Grief-Stricken! Saddened by your severance! Dasharathi repute
Then he took out from his hearts jewel box the crest jewel
In his palms as its light dazzled as lookers eyes
And handed it over without much ceremony to Rama,
Who watched him with wide, loving and respectful eyes!
ಮಹಾಕವಿ ಕುವೆಂಪುರವರ ಮಹಾಕಾವ್ಯ ಶ್ರೀರಾಮಾಯಣ ದರ್ಶನಂ ಅನ್ನು ದ್ವಿಭಾಷಾ ಸಾಹಿತಿಯೆಂದು ಖ್ಯಾತರಾದ ಶಂಕರಮೊಕಾಶಿ ಪುಣೇಕರರು ವಿಶ್ವಭಾಷೆ ಆಂಗ್ಲಭಾಷೆಗೆ ಅನುವಾದಿಸಿ, ಕನ್ನಡ ಭಾಷೆಯ ಘನತೆಯನ್ನು ಹೆಚ್ಚಿಸಿದ್ದಾರೆ. ಸರ್ ಹರ್ಬರ್ಟ್ ರೀಡ್ ಎಂಬ ಖ್ಯಾತ ಆಂಗ್ಲ ಲೇಖಕ ಕವಿ ವಿಮರ್ಶಕರು 1965ರಲ್ಲಿಯೇ ಪುಣೇಕರರ ಆಂಗ್ಲ ಭಾಷಾ ಕಾವ್ಯಪ್ರೌಢಿಮೆಯನ್ನು ಬಹುವಾಗಿ ಮೆಚ್ಚಿ ಹೀಗೆ ಬರೆದಿದ್ದಾರೆ: “ಮೊಕಾಶಿಯವರ (ಆಂಗ್ಲ ಕಾವ್ಯಕೃಷಿ) ಈ ಕೆಲಸ, ಇಂಗ್ಲಿಷ್ ಬಳಕೆಯ ವಿಶ್ವದ ಎಲ್ಲ ನಾಡುಗಳಲ್ಲಿ ಮುಂದೆ ಒಂದು ದಿನ ಗಮನಕ್ಕೆ ಬಂದೇ ಬರುತ್ತದೆ.”
“ಶ್ರೀರಾಮಾಯಣ ದರ್ಶನಂ”ದ ಆಂಗ್ಲ ಅನುವಾದ ಈ ಭವಿಷ್ಯವಾಣಿಯನ್ನು ನಿಜಗೊಳಿಸಿದೆ. ಏಕೆಂದರೆ ಆಂಗ್ಲ ಭಾಷೆಯ ಈ ಕೃತಿ Sri Ramayana Darshanam ಸ್ವತಃ ಮೂಲರಚನೆಯ ನೈಜತೆ ಪಡೆದಿದೆ.
-ಶ್ರೀನಿವಾಸ ದೇಸಾಯಿ

Wednesday, July 15, 2015

ಎಲ್ಲರ ಕಣ್ಣು ಅನ್ನಭಾಗ್ಯದ ಅಕ್ಕಿಯ ಮೇಲೆಯೇ!

ವಸ್ತುನಿಷ್ಠ ಚರ್ಚೆಯ ಬದಲು ವೈಯಕ್ತಿಕ ನಿಂದನೆಗಿಳಿದವರಿಗೆ ಟಾಂಗ್ ಕೊಡುವಲ್ಲಿ ಶ್ರೀ ಎಸ್.ಎಲ್. ಭೈರಪ್ಪನವರು ಯಶಸ್ವಿಯಾಗಿದ್ದಾರೆ. ಭೈರಪ್ಪನವರು ಎತ್ತಿದ ವಿಷಯದ ಸಾಧಕ-ಬಾಧಕಗಳನ್ನು ಚರ್ಚಿಸದೆ, ಅವರ ವಾರಾನ್ನದ ವಿಷಯವನ್ನು ಪ್ರಸ್ತಾಪಿಸಿದವರು ಭಟ್ಟಂಗಿಗಳಲ್ಲದೆ ಬೇರೇನೂ ಅಲ್ಲ. ವ್ಯಕ್ತಿಗತ ನಿಂದನೆಗಿಳಿದ ಮಹಾಶಯರಿಗೆ, ವಾರಾನ್ನ ಮಾಡಿದವರು ಅನ್ನಭಾಗ್ಯ ಯೋಜನೆಯ ಬಗ್ಗೆ ಟೀಕೆ ಮಾಡಬಾರದೆಂದರೆ, ಮೃಷ್ಟಾನ್ನವುಂಡವರು ಟೀಕೆ ಮಾಡಬಹುದು ಎಂದಂತಾಗುತ್ತದೆ ಎಂಬುದರ ಅರಿವೂ ಇರಲಿಲ್ಲ. ಆದರೆ, ಭೈರಪ್ಪನವರಿಂದ ನಮ್ಮ ನಿರೀಕ್ಷೆ ಅದಾಗಿರಲಿಲ್ಲ!
ಕೆಲವು ವರ್ಷಗಳ ಹಿಂದೆ ಯಾವುದೋ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ದೇಶದಲ್ಲಿ ಸಾಕಷ್ಟು ಆಹಾರಧಾನ್ಯಗಳ ದಾಸ್ತಾನಿದ್ದರೂ, ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದ್ದುದರ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿತರಣಾ ವ್ಯವಸ್ಥೆಯ ವೈಫಲ್ಯದ ಕಡೆಗೆ ಬೆರಳು ತೋರಿಸಿದ್ದು ಮಾದ್ಯಮಗಳಲ್ಲಿ ಪ್ರಕಟವಾಗಿತ್ತು. ಅನ್ನಭಾಗ್ಯ ಯೋಜನೆಯಲ್ಲೂ ಆಗಿದ್ದು ಅದೆ. ನಿಜವಾಗಿಯೂ ಹಸಿದವರಿಗೆ ಅನ್ನಭಾಗ್ಯ ಯೋಜನೆ ಒಂದು ಚೈತನ್ಯದಾಯಕ ಯೋಜನೆಯಾಗಿತ್ತು. ಆದರೆ ಅದು ಸದುಪಯೋಗವಾಗುವ ಬದಲು ದುರುಪಯೋಗವಾಗಿದ್ದೆ ಹೆಚ್ಚು. ಬಹುತೇಕ ಹಳ್ಳಿಗಳಲ್ಲಿ ಪ್ರತಿಯೊಂದು ಮನೆಯವರೂ ಈ ಯೋಜನೆಯ ಫಲಾನುಭವಿಗಳೇ ಆಗಿದ್ದಾರೆ. ಅವರಲ್ಲಿ ಹೆಚ್ಚಿನವರು ಹತ್ತಿಪ್ಪತ್ತು ಎಕರೆ ಹೊಲ ತೋಟ, ಟ್ರಾಕ್ಟರ್, ಜೆಸಿಬಿ ಹೊಂದಿರುವವರೂ ಸೇರಿದ್ದಾರೆ. ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲೇ ನಮ್ಮ ಆಡಳಿತ ವ್ಯವಸ್ಥೆ ಸೋತುಹೋಗಿತ್ತು. ಇದು ಭಾರತದ ಬಹುತೇಕ ಯೋಜನೆಗಳ ಸಮಸ್ಯೆಯೂ ಆಗಿರುವುದು ನಮ್ಮ ದುರಂತ.
ಇನ್ನು, ಇಂತಹ ಯೋಜನೆಯಿಂದ ಜನರು ಸೋಮಾರಿಗಳಾಗುತ್ತಾರೆ ಎಂಬುದು ಅರ್ಧಸತ್ಯದ ಮಾತು. ಭೈರಪ್ಪನವರು ನೀಡಿರುವ ಒಂದೇ ಉದಾಹರಣೆಯಿಂದ ಇಂತಹ ತೀರ್ಮಾನಕ್ಕೆ ಬರಲಾಗುವುದಿಲ್ಲ. ಇದಕ್ಕೆ ತದ್ವಿರುದ್ಧವಾದ ಉದಾಹರಣೆಗಳು ಇವೆ. ನಮ್ಮ ಹಳ್ಳಿಯ ಕಡೆ ಕೃಷಿಕಾರ್ಮಿಕಳೊಬ್ಬಳನ್ನು ನಾನು ಈ ವಿಷಯವಾಗಿ ಕೇಳಿದಾಗ, ಆಕೆ, 'ಅವರು ಅಕ್ಕಿ ಕೊಟ್ಟರು ಅಂತ ಕೂಲಿಗೆ ಬರೋದು ತಪ್ಸಕ್ಕಾಗುತ್ತಾ' ಎಂದಳು. ಮುಂದುವರೆದು, 'ಏನೋ, ಆ ಉಳಿದ ದುಡ್ಡಲ್ಲಿ ಮಗಿಗೆ ಒಂದೆರಡು ಜೊತೆ ಒಳ್ಳೆ ಬಟ್ಟೆ ಕೊಡ್ಸೋಕ್ಕಾಯ್ತು. ಈಗ ಹುಡುಗ ಸಂತೋಷವಾಗಿ ಸ್ಕೂಲಿಗೆ ಹೋಗ್ತಾನೆ' ಎಂದಳು. ಎರಡೂ ಕಡೆಯ ವಾದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುವುದರಿಂದಲೇ ನಾನು ಇದನ್ನು ಅರ್ಧ ಸತ್ಯ ಎಂದು ಕರೆದಿದ್ದು.
ಎಸ್.ಎಂ.ಕೃಷ್ಣ ಸರ್ಕಾರ ಮಾಡಿದ ಅಭಿವೃದ್ಧಿ ಸಮತೋಲಿತ ಅಭಿವೃದ್ಧಿ ಅಲ್ಲ ಎಂಬುದು ಸಾಮಾನ್ಯ ಜ್ಞಾನವಿದ್ದವರಿಗೆ ಅರಿವಾಗಿರುತ್ತದೆ. ಕೇವಲ ನಗರಕೇಂದ್ರಿತ ಅಭಿವೃದ್ಧಿಯನ್ನು ಮಾದ್ಯಮಗಳ ಮುಖಾಂತರ ಬಿಂಬಿಸಿದ್ದನ್ನು ಯಾರೂ ಅಲ್ಲಗಳೆಯಲಾರರು. ಅಸಮತೋಲಿತ ಅಭಿವೃದ್ಧಿಯ ಕಾರಣದಿಂದಲೇ, ನಂತರದ ಚುನಾವಣೆಯಲ್ಲಿ ಕೃಷ್ಣ ಸರ್ಕಾರದ ಮುಕ್ಕಾಲು ಪಾಲು ಮಂತ್ರಿಗಳು ಮನೆಗೆ ಹೋದರು. ಅವರ ಪಕ್ಷ ಹೀನಾಯವಾಗಿ ಸೋತುಹೋಯಿತು. ಐಟಿ ಬಿಟಿಯ ಜೊತೆಗೆ ಕೃಷಿಯಾಧಾರಿತ ಕೈಗಾರಿಗಳ ಅಭಿವೃದ್ಧಿಗೂ ಒತ್ತು ಕೊಡಬೇಕು ಎಂದು ಕೃಷ್ಣ ಅವರಿಗೆ ಅನ್ನಿಸಿದ್ದು ಅವರು ಸೋತು ಮನೆ ಸೇರಿದಾಗಲೆ.
ಸರ್ಕಾರ ಒಂದು ಯೋಜನೆಯನ್ನು ಆರಂಭಿಸುವಾಗ, ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ಯಾರಿಗಾಗಿ ಆ ಯೋಜನೆ ರೂಪಿಸುತ್ತಿದ್ದಾರೊ ಅವರಿಗೆ ಅದು ತಲಪುವಂತೆ ಮತ್ತು ಅನರ್ಹರಿಗೆ ದಕ್ಕದಂತೆ ಎಚ್ಚರ ವಹಿಸಬೇಕಾಗಿತ್ತು. ಸರ್ಕಾರ ಅನ್ನಭಾಗ್ಯ ವಿಷಯದಲ್ಲಿ ಎಡವಿದೆ.
ಉದ್ಯೋಗಸೃಷ್ಟಿಯ ವಿಷಯವನ್ನು ಅನ್ನಭಾಗ್ಯ ಯೋಜನೆಗೆ ತಳುಕು ಹಾಕಿದ್ದು ಎಷ್ಟು ಸರಿ ಎಂಬ ಪ್ರಶ್ನೆಯೂ ಬರುತ್ತದೆ. ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರದ ವೈಫಲ್ಯತೆಯನ್ನು ಪ್ರತ್ಯೇಕವಾಗಿಯೇ ಚರ್ಚಿಸಬಹುದಿತ್ತು. ಉದ್ಯೋಗ ಸೃಷ್ಟಿಗೆಂದೇ ಸ್ಥಾಪಿಸಿದ ಬೃಹತ್ ಕಂಪೆನಿಗಳಿಗೆ ಕೊಟ್ಟಿರುವ ನಾನಾ ವಿನಾಯಿತಿಗಳನ್ನು ಲೆಕ್ಕ ಹಾಕಿದರೆ, ಅನ್ನಭಾಗ್ಯ ಯೋಜನೆಗೆ ಮಾಡುವ ಖರ್ಚು ಶೇ. ಒಂದೊ ಎರಡೊ ಅಷ್ಟೆ. ಇಂತಹ ಚರ್ಚೆಗಳಿಂದ ಅನ್ನಭಾಗ್ಯ ಯೋಜನೆಯ ಮೂಲ ಆಶಯ ಮತ್ತು ಯೋಜನೆಯ ಜಾರಿಯಲ್ಲಿ ಆದ ಎಡವಟ್ಟುಗಳನ್ನು ಮರೆಮಾಚಿದಂತೆ ಆಗುತ್ತದೆಯೆ ಹೊರತು ಇನ್ನೇನೂ ಆಗಲಾರದು. ಆಗಿರುವ ಎಡವಟ್ಟುಗಳನ್ನು ಗುರುತಿಸಿ, ನಿಜವಾಗಿಯೂ ಅಗತ್ಯವಿರುವವರಿಗೆ ಮಾತ್ರ ಈ ಯೋಜನೆ ತಲಪುವಂತೆ ಮಾಡಿದರೆ ಅನ್ನಭಾಗ್ಯ ಯೋಜನೆ ಒಂದು ಚೈತನ್ಯದಾಯಕ ಯೋಜನೆಯಾಗಬಲ್ಲದು.
ಇಂದು ಎಲ್ಲದಕ್ಕೂ ಅನ್ನಭಾಗ್ಯ ಯೋಜನೆಯನ್ನು ಲಿಂಕ್ ಮಾಡಿ ಮಾತನಾಡುವ ದುರ್ ಹವ್ಯಾಸ ಕೆಲವರಲ್ಲಿದೆ. ಮೊನ್ನೆ ಸಂಜೆ ನನ್ನ ಸ್ನೇಹಿತರ ಮನೆಯಲ್ಲಿದ್ದಾಗ, ನಮಗಿಬ್ಬರಿಗೂ ಪರಿಚಯವಿದ್ದ ಒಬ್ಬ ಹಿರಿಯರು ಬಂದರು. ಒಂದು ಪುಟ ಕನ್ನಡ ಡಿಟಿಪಿ ಮಾಡಿಸಿಕೊಳ್ಳುವುದು ಅವರ ಉದ್ದೇಶ. ಅದರ ವಿಷಯ, ಹಿರಿಯ ನಾಗರಿಕರಿಗೆ ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ಅಥವಾ ಶೇ. 50 ರಿಯಾಯಿತಿ ನೀಡಬೇಕೆಂದು ಸಂಬಂಧಪಟ್ಟವರಿಗೆ ಆಗ್ರಹ ಮಾಡಲು ಆ ಪತ್ರ ಸಿದ್ಧಪಡಿಸಿದ್ದರು. ಆ ವಿಷಯವನ್ನು ಉತ್ಸಾಹದಿಂದ ನಮಗೆ ವಿವರಿಸಿದ ಹಿರಿಯರು, ಅನ್ನಭಾಗ್ಯಕ್ಕೆ ಸಾವಿರಾರು ಕೋಟಿ ಕೊಡುವುದಿಲ್ಲವೆ? ಇದಕ್ಕೂ ಒಂದಷ್ಟು ಕೊಡಲಿ ಬಿಡಿ ಎಂದು ಜಾಡಿಸಿದರು! ಆಗ ನಾನು ಸ್ವಾಮಿ, ನೀವು ಎಷ್ಟು ವರ್ಷದಿಂದ ಸಬ್ಸಿಡಿ ದರದ ಗ್ಯಾಸ್, ಡೀಸೆಲ್ ಪೆಟ್ರೋಲ್ ಬಳಸುತ್ತಿದ್ದೀರಿ. ಈಗಾಗಲೇ ಶೇ 10ರ ರಿಯಾಯಿತಿಯಲ್ಲಿ ಬಸ್ ಸೌಲಭ್ಯವನ್ನೂ ಪಡೆದಿದ್ದೀರಿ. ಈಗ ಇನ್ನೂ ಹೆಚ್ಚಿಗೆ ಬೇಕೆಂದು ಹೋರಾಟಕ್ಕೆ ಇಳಿಯುವ ಮಾತನಾಡುತ್ತಿದ್ದೀರಿ. ಒಂದಷ್ಟು ಪೆನ್ಷನ್, ಉದ್ಯೋಗದಲ್ಲಿರುವ ಮಗ ಎಲ್ಲವನ್ನೂ ಇಟ್ಟುಕೊಂಡೇ ನೀವು ಸರ್ಕಾರದಿಂದ ಮತ್ತೂ ನೆರವನ್ನು ಪಡೆಯಲು ಯೋಜಿಸುತ್ತಿದ್ದೀರಿ. ಆದರೆ, ಹಸಿದವರಿಗೆ ಕೊಡುವ ಐದು ಕೆಜಿ ಅಕ್ಕಿಯ ಮೇಲೆ ಕಿಡಿ ಕಾರುತ್ತೀರಿ. ಇದು ನ್ಯಾಯವೇ ಎಂದೆ. ಅವರು ಸ್ವಲ್ಪ ಅಸಮಾಧಾನದಿಂದಲೇ ನಿರ್ಗಮಿಸಿದರು ಎನ್ನಿ. ಒಟ್ಟಿನಲ್ಲಿ ಎಲ್ಲರ ಕಣ್ಣು ಅನ್ನಭಾಗ್ಯದ ಅಕ್ಕಿಯ ಮೇಲೆಯೇ!.
ಇನ್ನು ಇಂದು ಕಥೆಗಾರ್ತಿ ವೈದೇಹಿಯವರು, ಕಾರ್ಪುರೇಟ್ ಸಂಸ್ಥೆಗಳು ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ. ಮೇಡಂ, ನಿಮಗೆ ಗೊತ್ತೆ. ತಮ್ಮಿಂದ ಚುನಾಯಿತವಾದ ಸರ್ಕಾರದಿಂದ ಐದು ಕೆಜಿ ಅಕ್ಕಿ ಪಡೆಯುತ್ತಿರುವವರನ್ನು ಅನುಮಾನದಿಂದ ನೋಡುತ್ತಿರುವವರು ಇನ್ನು ಕಾರ್ಪೊರೇಟ್ ಸಂಸ್ಥೆಗಳಿಂದಲೂ ನೆರವು ಪಡೆದವರನ್ನು ಭಿಕ್ಷುಕರಂತೆ ಕಾಣುವುದಿಲ್ಲವೆ? ಮೂರು ಕಾಸು ಸಹಾಯ ಮಾಡಿ ಆರು ಕಾಸು ಪ್ರಯೋಜನ ಪಡೆಯುವ ಆ ಸಂಸ್ಥೆಗಳಿಂದ ನಿರ್ಮಾಣವಾಗುವ ಪರಿಸ್ಥಿತಿ ಖಂಡಿತಾ ಫಾಲಾನುಭವಿಗಳನ್ನು ಭಿಕ್ಷುಕರಂತೆ ಕಾಣುವಂತೆ ಮಾಡುತ್ತದೆ. ಈ ಸಂಸ್ಥೆಗಳು ರೈತರಿಗೆ ಸಹಾಯ ಮಾಡುವ ಬದಲು, ತಾವು ಯಾವುದೇ ತೆರಿಗೆ ರಿಯಾಯಿತಿ ಬಯಸದೆ, ಸರ್ಕಾರಕ್ಕೆ ಸಲ್ಲಬೇಕದ್ದನ್ನು ನ್ಯಾಯವಾಗಿ ಕೊಟ್ಟರೆ ಸಾಕಲ್ಲವೆ?
ರೈತರಿಗೆ ನಿಜವಾಗಿಯೂ ಬೇಕಾಗಿರುವುದು ಏನು? ಸಾಧ್ಯವಾದಷ್ಟು ನೀರಾವರಿ ಸೌಲಭ್ಯ. ಕೊಳವೆ ಬಾವಿಗಳಿಗೆ ಗುಣಮಟ್ಟದ ವಿದ್ಯುತ್, ಅಗತ್ಯ ಬಿದ್ದಾಗ ಸುಲಭ ಬಡ್ಇಡ ದರದ ಸಾಲ. ಬೆಳೆದ ಬೆಳೆಗೆ ಸರಿಯಾದ ಬೆಲೆ. ಬೆಳೆ ನಷ್ಟವಾದಾಗ ಸಕಾಲಕ್ಕೆ ಒದಗುವ ವಿಮಾ ಸೌಲಭ್ಯ. ಆದರೆ ಇವು ಇಂದು ನಮ್ಮ ದೇಶದಲ್ಲಿ ಸರಿಯಾಗಿ ಸಿಗುತ್ತಿವೆಯೇ? ಕೃಷಿಯಾಧಾರಿಯ ಕೈಗಾರಿಕೆಗಳ ಬೆಳವಣಿಗೆಯಾಗಿದೆಯೇ? …..
ಇನ್ನೊಬ್ಬ ಬರಹಗಾರ್ತಿ ರೈತರ ಆತ್ಮಹತ್ಯೆ ಕುರಿತು ಬರೆಯುವಾಗ ಪರಿಸ್ಥಿತಿಯ ಜೊತೆಗೆ ಮನಸ್ಥಿತಿಯೂ ಮುಖ್ಯ ಎನ್ನುತ್ತಾರೆ. ಬೆಳೆ ಬಾಡಿಹೋದ ಹೊಲಗಳ, ಕೈಗೆ ಬಂದ ತುತ್ತು ಬಾಯಿಗೆ ಬಾರದ ಕಬ್ಬು ಒಣಗಿಹೋದ ಗದ್ದೆಯ, ಕೊಯ್ಲಿನ ಕಾಸು ಗಿಟ್ಟದೆ ಹೊಲದಲ್ಲೇ ಕೊಳೆಯಲು ಬಿಟ್ಟ ತರಕಾರಿಗಳ ಗಿಡದ ದಂಡೆಯಲ್ಲಿ ನಿಂತ ರೈತನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಾದೀತೆ? ಉಪದೇಶ ನೀಡುವುದು ಸುಲಭ. ಆದರೆ ನಾವೇ ಆ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಸಂದರ್ಭವೇ ಬೇರೆ!

Monday, May 18, 2015

ಪೆಜತ್ತಾಯರ ಒಂದು ಅಪ್ರಕಟಿತ ಬರಹ - ಬನ್ನಿ! ಕನ್ನಡದ ಅಭಿಮನ್ಯುವನ್ನು ಹರಸಿ!

(ಬೆಂಗಳೂರಿನ ಕನ್ನಡಿಗರೇ! ತಾವು ಈ ಕೆಲಸವನ್ನು ತಾವು ಇದ್ದಲ್ಲಿಂದಲೇ ಮಾಡಬಹುದು!)
"ಬೆಂಗಳೂರು" ಇಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಗರ. ಇಲ್ಲಿ ಹಲವಾರು ಭಾಷೆಗಳನ್ನು ಆಡುವ ಜನರು ನೆಲೆಸಿದ್ದಾರೆ. ಇತರೇ ದೊಡ್ಡ ನಗರಗಳಿಗೆ ಹೋಲಿಸಿದರೆ ಇಲ್ಲಿ ಸದಾ ಶಾಂತ ಪರಿಸ್ಥಿತಿ ನೆಲೆಸಿದೆ. ಇಲ್ಲಿನ ಉತ್ತಮ ಹವಾಮಾನ ನೆಲಸಿಗರನ್ನು ಆಕರ್ಷಿಸಿದೆ.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ನೆಲೆಸಲು ಪ್ರತೀ ದಿನ ಐವತ್ತಕ್ಕಿಂತಲೂ ಹೆಚ್ಚು ಇತರ ಭಾಷೆಗಳನ್ನು ಆಡುವ ಸಂಸಾರಗಳು ಬಂದು ನೆಲೆಸುತ್ತಾ ಇವೆ.
ಬೆಂಗಳೂರಿನ "ಸ್ಥಳೀಯ ಭಾಷೆ" ಕನ್ನಡವಾದರೂ, ಇಂಗ್ಲಿಷ್, ಹಿಂದಿ ಅಥವಾ ತಮಿಳು ಭಾಷೆ ತಿಳಿದಿದ್ದರೆ, ಇಲ್ಲಿನ ಸ್ಥಳೀಯ ಜನರೊಡನೆ ಮತ್ತು ಇಲ್ಲಿ ನೆಲಸಿರುವ ಇತರ ಭಾಷೆಗಳನ್ನಾಡುವ ಜನರೊಡನೆ "ಕನ್ನಡ ಭಾಷೆಗೊತ್ತಿಲ್ಲದೇ ಇದ್ದರೂ ವ್ಯವಹರಿಸಲು ಸಾಧ್ಯ!" ಎಂದು ಅಂತರ ರಾಷ್ಟ್ರೀಯ ಟೂರಿಸ್ಟ್ ಗೈಡ್ ಪುಸ್ತಕಗಳು ಸಾರಿ ಹೇಳುತ್ತಾ ಇವೆ.
ಕಳೆದ ಕೆಲವು ಶತಮಾನಗಳಿಂದಲೇ ಹೊರಗಿನಿಂದ ಬಂದ ಜನರು ಇಲ್ಲಿನ ಪ್ರಶಾಂತ ವಾತಾವರಣ ಮತ್ತು ಸುಖಮಯ ಜೀವನದ ಅವಕಾಶಗಳಿಂದ ಆಕರ್ಷಿತರಾಗಿ, ನಮ್ಮ ಬೆಂಗಳೂರಿನ ಶಹರದಲ್ಲಿ ಮತ್ತು ಶಹರದ ಹೊರವಲಯಗಳಲ್ಲಿ ಆಸ್ತಿಪಾಸ್ತಿ ಹಾಗೂ ಜಮೀನುಗಳನ್ನು ಕೊಂಡು ನೆಲೆಸ ತೊಡಗಿದರು.
ಕಳೆದ ಎರಡು ದಶಕಗಳಲ್ಲಿ ಬೆಂಗಳೂರು ಶಹರ ಭಾರತದ "ಇನ್ಫರ್ಮೇಷನ್ ಟೆಕ್ನಾಲಜಿಯ ರಾಜಧಾನಿ" ಅನ್ನಿಸಿಕೊಂಡಿತು.
ಇಲ್ಲಿ ದೊರೆಯುವ ಅಗ್ಗದ ವಿದ್ಯುತ್, ಬೇಕಾದಷ್ಟು ನೀರು, ಅಗ್ಗದ ಜಮೀನು, ಅಗ್ಗದ ಕೂಲಿ ಕೆಲಸಗಾರರು, ವೈಪರೀತ್ಯಗಳಿಲ್ಲದ ಹವಾಮಾನ ಮತ್ತು ಸದಾ ಪರಕೀಯರನ್ನು ವಿಶ್ವಾಸದಿಂದ ಸ್ವಾಗತಿಸುವ ಶಾಂತ ಸ್ವಭಾವದ ಜನತೆ, ನಮ್ಮಲ್ಲಿಗೆ ಕಾಲಿಟ್ಟ ಎಲ್ಲಾ ಹೊಸಾ ನೆಲಸಿಗರನ್ನು ಸ್ವಾಗತಿಸಿದುವು.
ಮೇಲ್ಕಾಣಿಸಿದ ಅಪರೂಪದ ಅನುಕೂಲತೆಗಳು ಬೆಂಗಳೂರಿನಲ್ಲಿ ನೆಲೆಸಲು ಬಂದ "ಐ. ಟಿ." ಮತ್ತು "ಬಿ. ಟಿ." ದೊರೆಗಳಿಗೆ ಬಹು ಅನುಕೂಲವಾದ ವಾತಾವರಣವನ್ನೇ ಕಲ್ಪಿಸಿದುವು.
ನಾವು ನೋಡುತ್ತಿದ್ದಂತೆಯೇ ಈ ದೊಡ್ಡ ದೊಡ್ಡ ಸಂಸ್ಥೆಗಳು ಯಾವ ಸಮಸ್ಯೆಯೂ ಇಲ್ಲದೇ ಬೆಳೆದು ನಿಂತುವು.
ಬೆಂಗಳೂರಿನ ಮೂಲ ರೂಪವೇ ಈ ಸಂಸ್ಥೆಗಳ ಅಸ್ತಿತ್ವದಿಂದ ಬದಲಾಯಿತು. ವಾಹನ ಸಂದಣಿ ಮತ್ತು ಜನಸಂದಣಿ ಹೆಚ್ಚಿ ಇಲ್ಲಿ ವಾಸಿಸುವ ಜನರ ಜೀವನ ರೀತಿಯೇ ಬದಲಾಯಿತು. ಮನೆಗಳ ಮತ್ತು ಸೈಟುಗಳ ಬೆಲೆ ಗಗನಕ್ಕೆ ಏರಿದುವು.
ಅತ್ಯಾಧುನಿಕವಾದ ಅಂತರ ರಾಷ್ಟ್ರೀಯ ಮಟ್ಟದ ಎಲ್ಲಾ ಸೌಲಭ್ಯಗಳು ಇಲ್ಲಿ ಈಗ ದೊರಕುತ್ತಾ ಇರುವುದರಿಂದ "ಜಾಗತಿಕ ಮಟ್ಟದ ನವ ಸಂಸ್ಕೃತಿ ಹಾಗೂ ನಡವಳಿಕೆಗಳು" ಇಂದಿನ ಆಧುನಿಕ ಬೆಂಗಳೂರಿನಲ್ಲಿ ಎದ್ದು ಕಾಣುತ್ತಾ ಇವೆ.
ಇದು ನಮಗೆ ಸಂತೋಷದ ವಿಚಾರವೇ!
ಈ ಬೆಳವಣಿಗೆಯ ಭರಾಟೆಯಲ್ಲಿ ಬೆಂಗಳೂರಿನ ಕನ್ನಡ ಆಡುವ ಜನರ ಪರಿಸ್ಥಿತಿಯು ಮಾತ್ರ ಈ ಅಭಿವೃದ್ಧಿಗಳಿಗೆ ಹೊಂದಿಕೊಂಡಂತೆ ಬೆಳೆಯಲೇ ಇಲ್ಲ!
ಸ್ಥಳೀಯರಾದ ಕನ್ನಡ ಮಾತನಾಡುವ ಜನರಲ್ಲಿ ಅಲ್ಲೋ ಇಲ್ಲೋ ಒಬ್ಬಿಬ್ಬರು ಮಾತ್ರ "ಐ.ಟಿ. ಅಥವಾ ಬಿ. ಟಿ." ಕೆಲಸಗಳನ್ನು ಮಾಡುತ್ತಾ ಇರುವುದನ್ನು ನಾವು ಇಂದು ಕಾಣಬಹುದು ಅಷ್ಟೇ!
ಕನ್ನಡಿಗರನ್ನು ನಿರುದ್ಯೋಗದ ಭೂತ ಇನ್ನೂ ಬಹು ಜೋರಾಗಿ ಕಾಡುತ್ತಾ ಇದೆ.
ನಮ್ಮ ಕರ್ನಾಟಕದ ಸರಕಾರ ಇದುವರೆಗೆ ಇಲ್ಲಿ ನೆಲಸಲು ಬಂದ ಉದ್ಯಮಿಗಳಿಗೆ ಕೆಂಪು ರತ್ನ ಕಂಬಳಿಯ ಸ್ವಾಗತವನ್ನು ನೀಡಿ, ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿತು.
ಆದರೆ, ಇದುವರೆಗೆ ಕರ್ನಾಟಕವನ್ನು ಆಳುತ್ತಾ ಇದ್ದ ನಮ್ಮ ಪರೋಪಕಾರೀ ಸರಕಾರಗಳು, "ಕನ್ನಡಿಗರಿಗೆ ಕಡ್ಡಾಯವಾಗಿ ಒಂದು ಪರಸ್ಪರ ಅನುಕೂಲವಾದ ದಾಮಾಶಯದ ಪ್ರಕಾರ, ನೌಕರಿ ಕೊಡಿರಿ! " ಎಂಬ ಶರತ್ತನ್ನು ಇದುವರೆಗೆ ಹಾಕಲೇ ಇಲ್ಲ.
ಅದಕ್ಕೆ ಸರಿಯಾಗಿ, ಈ "ಐ. ಟಿ. ಮತ್ತು ಬಿ. ಟಿ." ದೊರೆಗಳು, ಹೊರಗಿನಿಂದ ಬಂದವರಿಗೆ ದೊಡ್ಡ ಕೆಲಸಗಳನ್ನು ನೀಡಿ, ಸ್ಥಳೀಯರನ್ನು ಕಡೆಗಣಿಸಿದರು.
ಹೆಚ್ಚಾಗಿ ಸ್ಥಳೀಯರಿಗೆ ತಾತ್ಕಾಲಿಕ ಕೂಲಿ ಅಥವಾ ಕಟ್ಟಡಗಳ ನಿರ್ಮಾಣ ಕೆಲಸಗಳಂತಹಾ ದೇಹ ಶ್ರಮದ ಹಂಗಾಮಿ "ಕೂಲಿ" ಕೆಲಸಗಳನ್ನು ಮಾತ್ರ ನೀಡುವ ಧೋರಣೆಯನ್ನು ರೂಢಿಸಿಕೊಂಡು ಬಿಟ್ಟರು.
ಇದು ನಮ್ಮ ಬೆಂಗಳೂರಿನಲ್ಲಿ ನಡೆದ ಬಹು ದೊಡ್ಡ ವಿಪರ್ಯಾಸ.
ಇದಷ್ಟೇ ಅಲ್ಲದೆ, ನಮ್ಮ ಕೇಂದ್ರ ಸರಕಾರವು ಕೂಡಾ ಧಾರಾಳವಾಗಿ ಜಾಗತಿಕ "ಐ. ಟಿ. ಮತ್ತು ಬಿ. ಟಿ" ಒಪ್ಪಂದಗಳಿಗೆ ಸಹಿ ಹಾಕಿತು ಮತ್ತು "ಈ ಜಾಗತೀಕರಣ ಒಪ್ಪಂದಗಳೇ ಇನ್ನು ಮುಂದಕ್ಕೆ ನಮ್ಮ ಪ್ರಗತಿಯ ಬೆನ್ನೆಲುಬು ಆಗಲಿವೆ!" ಎಂಬ ಹೇಳಿಕೆಗಳನ್ನು ನೀಡಿ ನಮ್ಮ ಜನರನ್ನು ಸಂತೋಷ ಪಡಿಸಲು ಪ್ರಯತ್ನಿಸಿತು.
ಬಹುರಾಷ್ಟ್ರೀಯ ದೈತ್ಯ ಸಂಸ್ಥೆಗಳು ನಮ್ಮ ನಾಡಿಗೆ ಬಂದು ಬಹು ಚೆನ್ನಾಗಿಯೇ ನೆಲೆಯೂರಿ ನಿಂತುವು.
ಭಾರತದ ನೆಲದಲ್ಲಿ ಭದ್ರವಾಗಿ ಬೀಡು ಬಿಟ್ಟ ಹಲವು "ಬಿ.ಟಿ." ಸಂಸ್ಥೆಗಳು, ಇಂದು ನಮ್ಮಲ್ಲಿ ಬೆಳೆಯುವ ಹಲವಾರು ಸಸ್ಯ ತಳಿಗಳು, ವೈದ್ಯಕೀಯ ಗಿಡ ಮೂಲಿಕೆಗಳು, ಹೆಚ್ಚೇಕೆ? ನಮ್ಮಲ್ಲಿ ನಾವು ತಲತಲಾಂತರವಾಗಿ ಬೆಳೆಯುತ್ತಾ ಬಂದಿರುವ ವಿಶಿಷ್ಟ ತರಹೆಯ ಅಕ್ಕಿ, ಬೇಳೆ, ಅರಸಿನ. ಕಹಿ ಬೇವು, ತುಳಸಿ ಮುಂತಾದ ಹಲವಾರು ಕೃಷಿ ಉತ್ಪನ್ನಗಳ ಮೇಲೆ ಇಂದು ತಮ್ಮ ಜಾಗತಿಕ ಪೇಟೆಂಟ್ ಹಕ್ಕುಗಳನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಾ ಇವೆ.
"ಬಿ. ಟಿ." ಕ್ಷೇತ್ರದಲ್ಲಿನ "ಭಾರತೀಯತೆಯೇ" ಮಾಯವಾಗುವ ಕಾಲ ಇದೀಗ ಸನ್ನಿಹಿತ ಆಗುತ್ತಾ ಇದೆ.
ಇಂದು ನಾವು "ನಮ್ಮನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತೇವೆ ಎಂದು ಹೇಳುತ್ತಾ ನಮ್ಮಲ್ಲಿಗೆ ಬಂದು ನೆಲೆನಿಂತ ಬಹು ರಾಷ್ಟ್ರೀಯ ಸ್ವಾಮ್ಯದ ಸಂಸ್ಥೆಗಳನ್ನು ನಂಬಿ ಕೆಟ್ಟೆವೇ?" ಎಂಬ ಪ್ರಶ್ನೆ ಕನ್ನಡಿಗರನ್ನು ಇಂದು ಕಾಡುತ್ತಾ ಇದೆ.
ಈ ಮಧ್ಯೆ "ಐ. ಟಿ. ಮತ್ತು ಬಿ. ಟಿ." ಸಂಸ್ಥೆಗಳವರು ಪ್ರತೀವರ್ಷ "ಶತ ಕೋಟಿ ಕಟ್ಟಲೆ ಲಾಭ ತಂದು, ನಾವು ನಿಮ್ಮ ಕರ್ನಾಟಕವನ್ನು ಉದ್ಧರಿಸುತ್ತಾ ಇದ್ದೇವೆ!" ಎಂಬ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ.
ಎಲ್ಲಾ ಸರಿ! ಅವರುಗಳು ಇತ್ತೀಚೆಗೆ ಹೊಂದಿರುವ "ಸ್ವಂತ ಅಭಿವೃದ್ಧಿಗಳಿಂದ" ನಮ್ಮ ಬಡ ಕನ್ನಡಿಗರಿಗೆ ಎಷ್ಟು ಬಾಭ ಸಿಕ್ಕಿದೆ? - ಎಂಬುವುದೇ ಇಂದು ನಮ್ಮ ಇದುರಿಗೆ ಇರುವ ಯಕ್ಷ ಪ್ರಶ್ನೆ.
ಇಂದು "ಬೆಂಗಳೂರು" ಎಂಬ ಶಬ್ದವು ಒಂದು "ಜಾಗತಿಕ ಭಾಷಾ ಪದವೇ ಆಗಿಬಿಟ್ಟಿದೆ". ಇತ್ತೀಚೆಗೆ ಪ್ರಕಟ ಆಗುತ್ತಾ ಇರುವ ಭಾಷಾ ನಿಘಂಟುಗಳು "ಬೆಂಗಳೂರು" ಎಂಬ ಪದಕ್ಕೆ ಹೊಸ ಅರ್ಥ ನೀಡುತ್ತಾ ಇವೆ.
"ಐ. ಟಿ." ಕ್ಷೇತ್ರದಲ್ಲಿ ಈ "ಬೆಂಗಳೂರು" ಎಂಬ ಪದ ೯/೧೧ ನಂತರ ಸೇರಿದ "ಜಾಗತಿಕ ಪದ" ಆಗಿರುತ್ತದೆ.
ಇಂದು ಅಮೆರಿಕಾದ ಸಂಯುಕ್ತ ಸಂಸ್ಥಾನಗಳ "ಐ. ಟಿ." ಕ್ಷೇತ್ರದಲ್ಲಿ ಯಾರಾದರೂ ತಮ್ಮ ಕೆಲಸ ಕಳೆದುಕೊಂಡರೆ " ಆತನ ಕೆಲಸ ಬೆಂಗಳೂರಿಗೆ ಹೋಯಿತು! "His job is Bangalored!"ಎನ್ನುತ್ತಾರೆ.
ಹೌದು! ಅಮೆರಿಕದಲ್ಲಿ ಕಳೆದುಕೊಂಡ ಆ ಕೆಲಸಗಳು ಬೆಂಗಳೂರಿಗೆ ಖಂಡಿತವಾಗಿ ಬಂದಿರಲೂ ಬಹುದು!
ಆದರೆ, "ಅವು ಇಂದು ಬೆಂಗಳೂರಿನ ಎಷ್ಟು ಕನ್ನಡಿಗರಿಗೆ ಅಥವಾ ಕನ್ನಡದ ಕಲಿತ ಜನರಿಗೆ ದಕ್ಕಿವೆ..??" ಎಂಬುದೇ ಇಂದಿನ "ಮುಖ್ಯ ಪ್ರಶ್ನೆ".
ಇಂದಿನ ಭಾರತದಲ್ಲಿ ನಮ್ಮ ಬೃಹತ್ ಬೆಂಗಳೂರು "ಐ. ಟಿ. ಮತ್ತು ಬಿ. ಟಿ." ಕ್ಶೇತ್ರಗಳ ಕೇಂದ್ರ ಬಿಂದು.
ಬೆಂಗಳೂರು ಅಗಾಧವಾಗಿ ಬೆಳೆಯುತ್ತಾ, ಭಾರತದ ಎಲ್ಲಾ ಭಾಗಗಳಿಂದಲೂ ವಲಸಿಗರನ್ನು ಆಕರ್ಷಿಸುತ್ತಾ ಇದೆ.
ಬೆಂಗಳೂರು ಇಂದು ಉತ್ತರ ಭಾರತೀಯರು ಇಷ್ಟ ಪಟ್ಟು ನೆಲಸಲು ಬಯಸುವ "ಸೇಫ಼್ ಪ್ಲೇಸ್".
ಬೆಂಗಳೂರು ಬಹಳ ಹಿಂದಿನ ಕಾಲದಿಂದಲೂ, ನಮ್ಮ ದಕ್ಷೀಣ ಭಾರತದ ಇತರೇ ರಾಜ್ಯಗಳ ಜನರನ್ನು ಆಕರ್ಷಿಸುತ್ತಾ ಇದೆ. ಈ ವಲಸಿಗರ ಪಾಲಿಗೆ ನಮ್ಮ ಬೆಂಗಳೂರು "ಏರ್ ಕಂಡೀಶನ್ಡ್ ಸಿಟಿ".
ಮೇಲಿನ ಹೆಗ್ಗಳಿಕೆಗಳನ್ನೆಲ್ಲಾ ನಾವು ಕೂಡಾ ಒಪ್ಪಿಕೊಳ್ಳೋಣ. ದುರದೄಷ್ಟವೆಂದರೆ, ಇಲ್ಲಿಗೆ ಬಂದ ವಲಸಿಗರು ಕನ್ನಡ ಭಾಷೆಯನ್ನು ಕಲಿಯುವ ಅಗತ್ಯವನ್ನು ಕಾಣದೇ, ತಮ್ಮ ತಮ್ಮ ಭಾಷೆಗಳ ಜತೆಗೆ ಹಿಂದಿ ಮತ್ತು ಆಂಗ್ಲ ಭಾಷೆಗಳನ್ನು ಬಳಸುತ್ತಾ ಆರಾಮವಾಗಿ ಇರುವುದನ್ನು ನಾವು ಇದುವರೆಗೆ ಕಾಣುತ್ತಾ ಇದ್ದೆವು.
ಇಂದು ನಮ್ಮ ಬೆಂಗಳೂರಿನಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸುವ ಪ್ರಯತ್ನಗಳು ನಡೆಯುತ್ತಾ ಇವೆ, ಇದು ನಮಗೆ ಬಹಳ ಹೆಮ್ಮೆಯ ಸಂಗತಿ.
ಆದರೂ, ಇಂಗ್ಲಿಷ್, ಹಿಂದಿ ಅಥವಾ ತಮಿಳು ಬಾರದ ಬಡ ಕನ್ನಡಿಗರು ಯಾವುದಾದರೂ "ಪ್ರತಿಷ್ಠಿತ" ಅಂತರ ರಾಷ್ಟ್ರೀಯ ಮಳಿಗೆಗಳಿಗೆ ಅಥವಾ ಐಷಾರಮದ ಹೋಟೆಲುಗಳಿಗೆ ಹೋದರೆ, ಅಲ್ಲಿ ಕೆಲಸ ಮಾಡುತ್ತಾ ಇರುವ ಕನ್ನಡದ ಜನರೇ. "ಕನ್ನಡ ಭಾಷೆ ಬರದವರಂತೆ ನಟಿಸಿ" ಯಾವುದೋ ಅನ್ಯ ಭಾಷೆಗಳಲ್ಲಿ ನಮ್ಮನ್ನು ಮಾತನಾಡಿಸುತ್ತಾರೆ!
ಅಚ್ಚ ಕನ್ನಡಿಗರರಾದ ನಾವು ನಮ್ಮದೇ ಆದ ಬೆಂಗಳೂರಿನಲ್ಲಿ "ನಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ವ್ಯವಹಾರ" ಮಾಡಲು, ಈ ರೀತಿಯ "ಪರಭಾಷಾ ಪ್ರೇಮಿ" ಕನ್ನಡಿಗರೇ ಒಂದು ರೀತಿಯ "ಹಿಂಜರಿಕೆಯನ್ನು" ಉಂಟು ಮಾಡುತ್ತಾ ಇದ್ದಾರೆ.
ಇದು ಅತ್ಯಂತ ವಿಷಾದದ ಸಂಗತಿ. ಅಲ್ಲವೇ?
ನಮ್ಮ ಕರ್ನಾಟಕದ ರಾಜಧಾನಿಯಲ್ಲೇ ನಮ್ಮ ಮಾತೃ ಭಾಷೆಯಾದ ಕನ್ನಡವು "ಚಲಾವಣೆ ಆಗದಿದ್ದರೆ" ನಮ್ಮ ಅಸ್ತಿತ್ವಕ್ಕೇ ಅದೊಂದು ದೊಡ್ಡ ಸವಾಲು ಅಲ್ಲವೇ?
ನಮ್ಮ ಬೆಂಗಳೂರಿನಲ್ಲಿ "ನಲ್ವತ್ತು ವರುಷಗಳಿಂದ ನೆಲಸಿರುವ ಹಲವಾರು ಅನ್ಯ ಭಾಷಾ ಮಹನೀಯರು ತಮಗೆ ಹಿಂದಿ, ಇಂಗ್ಲಿಷ್ ಮತ್ತು "ಲೋಕಲ್ ಲ್ಯಾಂಗುವೇಜ್ ಆದ ತಮಿಳು ಮಾತ್ರ ಗೊತ್ತು!" ಎಂದು ಬಹಿರಂಗವಾಗಿ ಬಹು ಹೆಮ್ಮೆಯಿಂದ ಸಾರುತ್ತಾರೆ!
ಇದು ಅವರಿಗೆ ಹೆಮ್ಮೆಯ ವಿಚಾರ ಆಗಿರಬಹುದು. ಆದರೆ, ಈ ತರಹದ ಬೂಟಾಟಿಕೆಯ ಮಾತುಗಳು ಕನ್ನಡಿಗರಾದ ನಮಗೆ ಅಪಮಾನದ ಸಂಗತಿ ಅನ್ನಿಸುತ್ತಾ ಇದೆ.
ನಾವು ಅವರು ಬಲ್ಲ ಭಾಷೆಗಳಲ್ಲಿ ಅವರೊಂದಿಗೆ ವ್ಯವಹರಿಸುವ ವ್ಯವಧಾನ ಮತ್ತು ಸೌಜನ್ಯಗಳನ್ನು ಇದುವರೆಗೆ ನಾವು ತೋರಿರುವಾಗ, ಅವರು ಕೂಡಾ ನಮ್ಮ ಭಾಷೆ ಕಲಿಯುವ ಬಗ್ಗೆ ಸ್ವಲ್ಪ ಒಲವು ತೋರಿಸಬೇಡವೆ?
ನಮ್ಮ ಸ್ನೇಹ ಮತ್ತು ಸೌಜನ್ಯಗಳನ್ನು ಅವರು ದುರುಪಯೋಗಿ ಪಡಿಸಿಕೊಳ್ಳದೇ, ಇಲ್ಲಿ ನೆಲಸಿರುವ ಇತರ ಭಾಷೆಗಳನ್ನು ಅವಲಂಬಿಸಿದ ನೆಲಸಿಗರು, ನಮ್ಮ ಮಾತೃ ಭಾಷೆಯಾದ ಕಸ್ತೂರಿ ಕನ್ನಡವನ್ನು ಕಲಿಯಲು ಒಲವು ತೋರಲೇ ಬೇಕು.
ಇತ್ತೀಚೆಗೆ, ಜಯನಗರದ ಒಂದು ಅಂಗಡಿಯಲ್ಲಿ ನಾನು ಒಂದು ಫಲಕ ನೋಡಿದೆ, ಅದರಲ್ಲಿ ಹೀಗೆ ಬರೆದಿದ್ದರು. "ತಾವು ನಮ್ಮ ಊರಿಗೆ ಬಂದು ಆರು ತಿಂಗಳು ಆಯಿತೇ? ದಯವಿಟ್ಟು ಕನ್ನಡದಲ್ಲೇ ನಮ್ಮೊಂದಿಗೆ ವ್ಯವಹರಿಸಿರಿ, ನಮ್ಮ ಸಹಾಯ ಸದಾ ನಿಮಗೆ ಇದ್ದೇ ಇದೆ. ನಿಮಗೆ ನಮ್ಮ ಸೌಹಾರ್ದ ಪೂರಕ ವಂದನೆಗಳು." ಎಂದು ಇತ್ತು.
ಆ ಫಲಕವನ್ನು ಕಂಡು ನನಗೆ ಬಹಳ ಹೆಮ್ಮೆ ಎನಿಸಿತು. ಇಂತಹಾ ಫಲಕಗಳು ನಮ್ಮ ಸೌಜನ್ಯ ಮತ್ತು ಭಾಷಾ ಪ್ರೇಮದ ದ್ಯೋತಕಗಳಲ್ಲವೆ?
ಈಗ ನಾವು ಕನ್ನಡ ಭಾಷೆ ಮಾತ್ರ ಗೊತ್ತು ಇದ್ದ ಹೆಚ್ಚಿನ ಹಿರಿಯ ಬೆಂಗಳೂರಿಗರು ಇದುವರೆಗೆ ಅನುಭವಿಸಿದ ಸಂಕಷ್ಟಗಳನ್ನು ನಾವು ಸ್ವಲ್ಪ ವಿಮರ್ಷೆ ಮಾಡಿ ನೋಡೋಣ.
ಕಳೆದ ಕೆಲವು ದಶಕಗಳಲ್ಲಿ ಕನ್ನಡ ಮಾತ್ರ ಬಲ್ಲ ಸ್ಥಳೀಯರಿಗೆ ಒಳ್ಳೆಯ ಉದ್ಯೋಗ ಮತ್ತು ವ್ಯಾಪಾರದ ಆವಕಾಶಗಳು ಕಡಿಮೆಯಾಗುತ್ತಾ ಹೋದುವು.
ಹಾಗಾಗಿ ಕನ್ನಡಿಗರು ತಮ್ಮ ಸ್ಥಿರ ಆಸ್ತಿ ಮತ್ತು ಜಮೀನುಗಳನ್ನು ಅಂದಿನ ಮಾರುಕಟ್ಟೆಯ ಬೆಲೆಗೆ ಹೊರಗಿನಿಂದ ಬಂದವರಿಗೆ ಮಾರಿ, ಆ ಹಣದಿಂದ ತಮ್ಮ ಮಕ್ಕಳಿಗೆ "ಇಂಗ್ಲಿಷ್" ವಿದ್ಯಾಭ್ಯಾಸ ಕೊಡಿಸುವ ಕಡೆಗೆ ಗಮನ ಹರಿಸಲು ಶುರುಮಾಡಿದರು.
ಆಸ್ತಿ, ಜಮೀನುಗಳನ್ನು ಮಾರಿ ಬಂದ ಆ ಅಲ್ಪ ಹಣವೂ ಖರ್ಚಾದಾಗ, ತಮ್ಮ ಆಸ್ತಿ ಕೊಂಡವರಲ್ಲೇ, ತಾವೂ ದೈಹಿಕ ಶ್ರಮದ ಕೆಲಸಗಳನ್ನು ಮಾಡಲು ತೊಡಗಿದರು.
ಹೀಗಾಗಿ, ಪರ ಭಾಷೆಯವರ ಪ್ರಾಭಲ್ಯ ನಮ್ಮ ಬೆಂಗಳೂರಿನಲ್ಲಿ ಬೆಳೆಯುತ್ತಾ ಹೋಯಿತು.
ಇಂಗ್ಲಿಷ್, ಹಿಂದಿ, ತಮಿಳು ಮತ್ತು ಉರ್ದೂ ಭಾಷೆಗಳು ನಮ್ಮಲ್ಲಿಗೆ ಬಂದು ನೆಲೆನಿಂತ ವಲಸಿಗ ಜನರೊಡನೆ ನಮ್ಮನ್ನು ಕೂಡಿಸುವ "ಸಂಪರ್ಕ ಸೇತು"ಗಳೇ ಆದವು.
ಈ ಕಾರಣಗಳಿಂದ ನಮ್ಮ ಕನ್ನಡದ ಜನರು ಬೇರೆಯವರ ಭಾಷೆಗಳನ್ನು ಕಲಿತು, ಅವರು ನೀಡಿದ ಕಾಯಕಷ್ಟದ ಕೆಲಸಗಳನ್ನು ಮಾಡುತ್ತಾ, ನಿಷ್ಠೆಯಿಂದ ಜೀವಿಸಲು ಪ್ರಯತ್ನಿಸಿದರು. ಹಾಗೆ ನೋಡಿದರೆ, ಇನ್ನೂ ನಾವು ದಿಶೆಯಲ್ಲಿ ದಿಶೆಯಲ್ಲಿ ಇನ್ನೂ ಮುಂದುವರಿಯುತ್ತಾ ಇದ್ದೇವೆಯೋ? - ಎಂದು ಅನ್ನಿಸುತ್ತಾ ಇದೆ.
ಕಳೆದ ಎರಡು ದಶಕಗಳಲ್ಲಿ ಕನ್ನಡಿಗರ ಮಕ್ಕಳು ಉತ್ತಮ ಶಾಲಾ ಕಾಲೇಜುಗಳನ್ನು ಸೇರಿಕೊಂಡು ಇಂಗ್ಲಿಷ್ ಮಾಧ್ಯಮದಲ್ಲೇ ಶಿಕ್ಷಣ ಹೊಂದಿ ಡಿಗ್ರಿಗಳನ್ನು ಪಡೆದರೂ, ಕನ್ನಡಿಗ ಮಕ್ಕಳಿಗೆ ಒಳ್ಳೆಯ ಕೆಲಸ ಸಿಗುವುದು ಮಾತ್ರ ಮರೀಚಿಕೆಯೇ ಆಯಿತು.
ಈ ಇಂಗ್ಲಿಷ್ ಭಾಷೆಯನ್ನು ಬಲ್ಲ ಯುವ ಪೀಳಿಗೆಯವರು ತಮ್ಮ ಓದು ಮುಗಿಸಿ ಹೊರಬಂದಾಗ ಕಂಡಿದ್ದು ಇನ್ನೂ ಉಲ್ಬಣಿಸಿದ ನಿರುದ್ಯೋಗ ಸಮಸ್ಯೆ!
ತನ್ಮಧ್ಯೆ, ಇಲ್ಲಿ ನೆಲೆಸಿದ ದೈತ್ಯ ಕಂಪೆನಿಗಳು ಅನ್ಯ ಭಾಷಿಗರಿಗೆ ಮೊದಲ ಮಣೆ ಹಾಕಿ ಕೆಲಸ ಕೊಟ್ಟುವು. ಹೆಚ್ಚಿನ ಕೆಲಸಗಳು ಹೊರರಾಜ್ಯಗಳಿಂದ ಬಂದವರ ಪಾಲಿಗೇ ಹೋದುವು.
ಈ ಕಾರಣದಿಂದ "ಕನ್ನಡತನ ಮತ್ತು ಕನ್ನಡ ಭಾಷಾಪ್ರೇಮ" ಸಹಜವಾಗಿಯೇ ನಮ್ಮ ಷಹರದಿಂದ ನಿಧಾನವಾಗಿ ಮರೆಯಾಗ ತೊಡಗಿತು.
ಇದಕ್ಕೆಲ್ಲಾ ಮೂಲ ಕಾರಣ ಏನು?
ಇದಕ್ಕೆ ಕಾರಣ, ನಮ್ಮ ಹುಟ್ಟು ಗುಣಗಳಾದ ನಮ್ಮ ಸೌಜನ್ಯ, ವಿನಯ, ಅತಿಥಿಸತ್ಕಾರ ಮತ್ತು ಪರಭಾಷಾ ಸಹಿಷ್ಣುತೆಗಳು ಎನ್ನಬಹುದೇ?
"ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುವಳು!" ಎಂಬ ಗಾದೆಯಂತೆ, "ನಾವು ಒಗ್ಗಟ್ಟಾಗಿ ನಿಂತು ಕೇಳಿದರೆ ಮಾತ್ರ ಕನ್ನಡಿಗರಿಗೆ ಕೆಲಸ ಸಿಕ್ಕೀತು!" ಎಂಬ ಅಂಶ ನಮಗೆ ಬಹು ತಡವಾಗಿ ಅರಿವಾಯಿತು.
ಇಂದಿನ "ವರ್ಲ್ಡ್ ಕ್ಲಾಸ್ ಸಿಟಿ" ಎನಿಸಿಕೊಳ್ಳುವ ಬೆಂಗಳೂರಿನ ಕನ್ನಡ ಪದವೀಧರ ಯುವಕನೊಬ್ಬನ ಒಂದು ಉದಾಹರಣೆಯನ್ನು ನಾನು ಇಲ್ಲಿ ನಿವೇದಿಸುತ್ತೇನೆ.
ಇಂದು "ಕನ್ನಡ ಭಾಷೆ ಮಾತ್ರ ಬಲ್ಲ" ಒಬ್ಬ ವಿದ್ಯಾವಂತನಿಗೆ ( ಉದಾಹರಣೆಗೆ, ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದ ವಿದ್ಯಾವಂತನಿಗೆ ) ನಮ್ಮ ರಾಜಧಾನಿಯಲ್ಲಿ ಒಂದು ಸಾಮಾನ್ಯ ಕೆಲಸ ಕೂಡಾ ಸಿಗುವ ಭರವಸೆ ಇಲ್ಲ!
ನಾನು ಬಹಳ ದುಃಖದಿಂದ ತಮಗೆ ಒಂದು ನಿಜ ಸಂಗತಿಯನ್ನು ವಿವರಿಸಲು ಬಯಸುತ್ತೇನೆ.
ಮೊನ್ನೆ ಒಬ್ಬ ಕನ್ನಡ ಮಾಧ್ಯಮದಲ್ಲಿ ಬಿ. ಏ. ಓದಿದ ಯುವಕನಿಗೆ ಒಂದು ಮಾಮೂಲಿ "ಏ. ಸಿ. ರೂಮ್" ಹೊಂದಿದ ಉಪಹಾರ ಗೃಹದಲ್ಲಿ ಸೂಪರ್‌ವೈಜರ್ ಕೆಲಸ ನಿರಾಕರಿಸಲ್ಪಟ್ಟಿತು! ಕಾರಣ ಏನು? ಎಂದರೆ, ಆತನಿಗೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಕಷ್ಟ ಆಗುತ್ತಾ ಇತ್ತು.
ಆ ಹುಡುಗ ತನ್ನ ಸರ್ಟಿಫ಼ಿಕೇಟ್‌ಗಳ ಕಡತ ತೋರಿಸುತ್ತಾ, "ಸ್ವಾಮೀ! ಕನ್ನಡ ಮಾಧ್ಯಮದಲ್ಲಿ ಓದಿ ಪದವಿ ಪಡೆದವರು ಇನ್ನು ಬೆಂಗಳೂರಲ್ಲಿ ಹೇಗೆ ಬದುಕಬೇಕು?" ಅನ್ನುತ್ತಾ ಇದ್ದ.
ಆಗ ಆ ಮಧ್ಯಮ ಗಾತ್ರದ ಹೋಟೆಲ್ ಮಾಲಿಕರು, "ಇಲ್ಲಿಗೆ ಕನ್ನಡದವೆರೇ ಊಟ ತಿಂಡಿಗೆ ಬರುತ್ತಾರೇನಯ್ಯಾ? ಬೇರೆ ಭಾಷೆಯವರು ನಮ್ಮಲ್ಲಿಗೆ ಬರುವುದೇ ಜಾಸ್ತಿ. ನಮ್ಮಲ್ಲಿ ಈಗ ಇಪ್ಪತ್ತೈದು ರೂಪಾಯಿಗಳಿಗೆ ಒಂದು ಮಸಾಲೆ ದೋಸೆ, ಹದಿನೈದು ರೂಪಾಯಿಗಳಿಗೆ ಕಾಫಿ! ಇಲ್ಲಿಗೆ ಬರುವ ಹೆಚ್ಚಿನ ಗಿರಾಕಿಗಳು ಕನ್ನಡ ತಿಳಿದಿದ್ದರೂ, ಅವರ ಅಂತಸ್ತಿಗೆ ಸರಿಯಾಗಿ ಇಂಗ್ಲಿಷ್ ಮಾತ್ರ ಮಾತನಾಡುತ್ತಾರೆ. ನಮ್ಮ ಹೋಟೆಲಿನ ಗ್ರಾಹಕರಿಗೆ ಇಂದು ಕನ್ನಡ ಮಾತ್ರ ಮಾತನಾಡುವ ಸುಪರ್‌ವೈಜರ್ ಬೇಡ! ಇಲ್ಲಿ ಕುತ್ತಿಗೆಗೆ ಟೈ ಕಟ್ಟಿಕೊಂಡು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವವರಿಗೇ ಸುಪರ್‌ವೈಜರ್ ಕೆಲಸ ಕೊಡುತ್ತೇವೆ! ಸದ್ಯಕ್ಕೆ ನೀನು ಮೊದಲು ಒಂದು ಕೆಲಸ ಮಾಡು! "ಮಾತನಾಡುವ ಇಂಗ್ಲಿಷ್" (ಸ್ಪೋಕನ್ ಇಂಗ್ಲಿಷ್) ಕಲಿಸುವ ಹಲವಾರು ಕೋಚಿಂಗ್ ಶಾಲೆಗಳಿವೆ. ಅಲ್ಲಿ ಸೇರಿಕೊಂಡು "ಸ್ವಲ್ಪ ಬಟ್ಲರ್ ಇಂಗ್ಲೀಷ್" ಆದರೂ ಕಲಿತುಕೊಂಡು ಬಾ! ಆ ಮೇಲೆ ನೋಡೋಣ!" ಎಂದು ಕೆಲಸ ನಿರಾಕರಿಸಿದರು.
ಬೆಂಗಳೂರಿನಲ್ಲಿ ಕನ್ನಡ ಮಾತ್ರ ಬಲ್ಲ ಪದವೀಧರನಿಗೆ ಕೂಲಿ ಕೆಲಸ ಮಾತ್ರ ಗತಿಯೇ? - ಅಂತ ನನಗೆ ಅನ್ನಿಸಿತು.
ಹೀಗಿದೆ ನಮ್ಮ ಅಚ್ಚ ಕನ್ನಡಿಗರ ಪಾಡು.
ನಮ್ಮ ಶಹರದ ಥಳಥಳಿಸುವ "ಪ್ರತಿಷ್ಠಿತ" ಜಾಗಗಳಲ್ಲಿ ಕನ್ನಡ ಭಾಷೆ ಮಾತ್ರ ಬಲ್ಲವನನ್ನು ಮಾತನಾಡಿಸುವರು ಯಾರೂ ಇಲ್ಲ!
ಇದು ವಿಚಿತ್ರ ಆದರೂ ಸತ್ಯ.
ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣ, ಹೈಟೆಕ್ ಆಸ್ಪತ್ರೆಗಳು. ಪಂಚತಾರಾ ಹೋಟೆಲ್‌ಗಳು, ದೊಡ್ಡ ದೊಡ್ಡ "ಮಾಲ್"ಗಳು, ಬಹು ಮಹಡಿಯ ಸಿನೆಮಾಗಳು, ಅನ್ಯದೇಶೀಯ ಮತ್ತು ಜಾಗತಿಕ ಹೆಸರಿನ ಫಲಕಗಳನ್ನು ಹೊತ್ತ ವ್ಯಾಪಾರೀ ಮಳಿಗೆಗಳು, ಫ಼ಾಸ್ಟ್ ಫ಼ೂಡ್ ಮಳಿಗೆಗಳು ಮತ್ತು ವಿದೇಶೀ ರೀತಿಯನ್ನು ಅನುಸರಿಸುತ್ತಾ ಇರುವ ಭಾರತೀಯ ಉಪಹಾರದ ತಾಣಗಳಲ್ಲಿ ನಮ್ಮ ಮಾತೃ ಭಾಷೆಯು "ಈಗಲೂ ಚಲಾವಣೆಯಾಗದ ನಾಣ್ಯ" ಎಂದು ಹೇಳಲು ನನಗೆ ನಾಚಿಕೆ ಆಗುತ್ತಾ ಇದೆ.
ಈ ಪರಿಸ್ಥಿತಿ ಹೇಗೆ ಉಂಟಾಯಿತು?
ಹೊರದೇಶಗಳಿಂದ ಬಂದವರು ಮತ್ತು ಹೊರರಾಜ್ಯಗಳಿಂದ ಬಂದವರು ಅವರಿಗೆ ಬಲ್ಲ ಭಾಷೆಗಳಲ್ಲಿ ಮತ್ತು ಇಂಗ್ಲಿಷ್ ಬಳಸಿಯೇ ನಮ್ಮೊಂದಿಗೆ ವ್ಯವಹರಿಸಲಿ! ಅದಕ್ಕೆ ನಾವು ಅಭ್ಯಂತರಿಸುವುದಿಲ್ಲ. ಜಗತ್ತಿನ ಜನರೆಲ್ಲಾ ವ್ಯಾಪಾರ ಅಥವಾ ವ್ಯವಹಾರಗಳಿಗೆ ನಮ್ಮ ರಾಜಧಾನಿಗೆ ಬರಲಿ!
ಅವರಿಗೆ ನಮ್ಮ ಸ್ವಾಗತ.
ಇಂದು ನಮ್ಮಲ್ಲಿ ನೆಲೆಸಿ "ಬೆಂಗಳೂರಿಗರೇ ಆಗಿರುವ" ನೆಲಸಿಗರು ನಮ್ಮ ನಾಡಿನ ಭಾಷೆಯಾದ ಕನ್ನಡವನ್ನು ಕಲಿಯಲು ಪ್ರಯತ್ನಿಸಲಿ. ಈ ನೆಲಸಿಗರು ತಮ್ಮ ಭಾಷೆಗಳನ್ನು ಅಥವಾ ಇಂಗ್ಲಿಷ್ ಭಾಷೆಯನ್ನು ನಮ್ಮ ಮೇಲೆ ಹೇರುವ ಪ್ರಯತ್ನಗಳನ್ನು ಕೈಬಿಡಲಿ.
ಪರಭಾಷಿಗರು ನಮ್ಮನ್ನೇ "ತಗ್ಗಿಸಿ ಬಗ್ಗಿಸಿ" ನಮ್ಮ ರಾಜಧಾನಿಯಲ್ಲೇ ನಮ್ಮನ್ನು ಆಳಲು ಪ್ರಯತ್ನಿಸುವ ಕ್ರಮಗಳನ್ನು ಕೈಬಿಡಬೇಕು. ಅವರುಗಳು ನಮ್ಮ ಕಸ್ತೂರಿ ಕನ್ನಡ ಭಾಷೆಯನ್ನು ಕಲಿಯಲು ಒಲವು ತೋರಬೇಕು. ಅವರು ಬಲ್ಲ ಭಾಷೆಗಳನ್ನು ನಮ್ಮ ಮೇಲೆ ಹೇರುವ ಪ್ರಯತ್ನವನ್ನು ಅವರು ಇನ್ನು ಮುಂದೆ ನಿಲ್ಲಿಸಲೇ ಬೇಕಾದ ದಿನಗಳು ಸನ್ನಿಹಿತವಾಗುತ್ತಾ ಇವೆ.
ಇನ್ನು ಮುಂದೆ ನಮ್ಮ "ವಿದ್ಯಾವಂತರು" ಎನ್ನಿಸಿಕೊಂಡ ಕರ್ನಾಟಕದ ಜನರು ಆಂಗ್ಲ ಭಾಷೆ ಅಥವಾ ಅನ್ಯ ಭಾಷೆಗಳಲ್ಲಿ ಮಾತನಾಡುವುದೇ ತಮ್ಮ "ವಿದ್ಯೆ ಮತ್ತು ಅಂತಸ್ತುಗಳ ದ್ಯೋತಕ" ಎಂಬ ಭಾವನೆಯನ್ನು ಬಿಡಬೇಕು. ಕನ್ನಡವನ್ನೆ ಆದಷ್ಟು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಬಳಸುವ ದೃಢ ನಿಶ್ಚಯವನ್ನು ಮಾಡಬೇಕು.
ಇಂದು ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ನಮ್ಮ ಮಕ್ಕಳನ್ನು ನಾವು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿ ವ್ಯವಹರಿಸಲು "ತಿಳಿದೋ ತಿಳಿಯದೆಯೋ" ಪ್ರೊತ್ಸಾಹಿಸುತ್ತಾ ಇದ್ದೇವೆ. ಆದರೆ ಅವರು ಈ ರೀತಿ ಆಂಗ್ಲ ಭಾಷೆಯಲ್ಲಿ ಸಮ್ಭಾಷಿಸುತ್ತಾ, ತಮ್ಮ ಮಾತೃಭಾಷೆ ಮತ್ತು ಕನ್ನಡತನವನ್ನು ಮರೆಯದೇ ಇರಲಿ.
ನಮ್ಮ ಮನೆಗಳಲ್ಲಿನ ಆಂಗ್ಲ ಮಾಧ್ಯಮದ ಶಾಲೆಗಲಲ್ಲಿ ಓದುತ್ತಾ ಇರುವ ಹೆಚ್ಚಾಗಿ ಆಂಗ್ಲ ಭಾಷೆಯಲ್ಲೇ ಮಾತನಾಡಿಕೊಂಡು, ನಮ್ಮ ಕನ್ನಡ ಭಾಷೆಯನ್ನು ಕಡೆಗಣಿಸುತ್ತಾ ಇರುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತಾ ಇದ್ದೇವೆ. ಅವರು ಆಂಗ್ಲ ಭಾಷೆಯಲ್ಲಿ ವ್ಯವಹರಿಸುವಷ್ಟು ಪ್ರಾವೀಣ್ಯವನ್ನು ಅವರು ಖಂಡಿತವಾಗಿ ಪಡೆಯಲಿ, ಇಂದಿನ ಜಗತ್ತು ವಿಶಾಲ. ಆಂಗ್ಲಭಾಷೆ ಗೊತ್ತಿಲ್ಲದೇ ಅವರು ಪರದೇಶಗಳಲ್ಲಿ ಅಥವಾ ಬೇರೆ ಊರುಗಳಲ್ಲಿ ಕೆಲಸ ಮಾಡಲು ಕಷ್ಟ ಆಗಬಹುದು.
ಆದರೆ, ಅವರುಗಳು ನಮ್ಮ ಮನೆಗಳಲ್ಲಿ ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಕಡ್ಡಾಯವಾಗಿ ಆಡುವಂತೆ ನಾವು ಅವರನ್ನು ಪ್ರೇರೇಪಿಸಬೇಕು. ಕನ್ನಡ ವಾರ್ತಾ ಪತ್ರಿಕೆಗಳು ಮತ್ತು ಕನ್ನಡ ಸಾಹಿತ್ಯವನ್ನು ಅವರು ಓದಲು ನಾವು ಪ್ರೋತ್ಸಾಹಿಸಬೇಕು. ಕನ್ನಡ ಭಾಷೆಯ ರೇಡಿಯೋ ಮತ್ತು ದೂರದರ್ಶನದ ಕಾರ್ಯಕ್ರಮಗಳಿಗೆ ನಾವು ನಮ್ಮ ಮನೆಗಳಲ್ಲಿ ಸ್ವಲ್ಪ ಆದ್ಯತೆ ನೀಡಬೇಕು.
ಇತರರೊಂದಿಗೆ ಮಾತನಾಡುವಾಗ ಮತ್ತು ದೂರವಾಣಿಯಲ್ಲಿ ಸಂಬಾಷಿಸುವಾಗ ವಾಗ ಶುದ್ಧ ಕನ್ನಡ ಬಲಸುವ ಅಭ್ಯಾಸವನ್ನು ನಾವು ರೂಢಿಸಿಕೊಳ್ಳಬೇಕು.
ಇಂದು ನಾವು ಆಡುವ ಕನ್ನಡದಲ್ಲಿ ಬಳಸುವ ಆಂಗ್ಲ ಭಾಷೆಹಾಗೂ ಇತರೇ ಭಾಷೆಗಳ ಶಬ್ದಗಳ ಬದಲಿಗೆ ಕನ್ನಡ ಭಾಷೆಯ ಶಬ್ದಗಳನ್ನೇ ಉಪಯೋಗಿಸಬೇಕು.
ಇಂದಿನ ಪರಿಸ್ಥಿತಿಗೆ ಸರಿಯಾಗಿ, ಹೆಚ್ಚಿನ ತಂದೆತಾಯಿಗಳು "ನಾಳೆ ನಮ್ಮ ಮಕ್ಕಳಿಗೆ ಓದಿ ಒಳ್ಳೆಯ ಕೆಲಸ ಸಿಗಬೇಕು!" ಎಂಬ ದೃಷ್ಟಿಯಿಂದ ತುಂಬಾ ಹಣ ವ್ಯಯಿಸಿ, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಿ ಓದಿಸುತ್ತಾ ಇದ್ದೇವೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ಆಂಗ್ಲ ಭಾಷೆಯ ಜ್ಞಾನ ಇಲ್ಲದೇ ಇದ್ದರೆ ನಮ್ಮ ಮಕ್ಕಳಿಗೆ ಒಳ್ಳೆಯ ಉದ್ಯೋಗದ ಭರವಸೆ ಇಲ್ಲ. ಅವರ ಆಂಗ್ಲ ಭಾಷಾ ಜ್ಞಾನ ನಾಳೆ ಅವರು ಪ್ರವೇಶಿಸುತ್ತಿರುವ ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರಗಲಿಗೆ ಮೀಸಲಾಗಿರಲಿ. ಅವರು ತಮ್ಮ ಕನ್ನದತನ ಮರೆಯದೇ ಇರಲಿ.
ಆಂಗ್ಲ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಾ ಇರುವ ಪೋಷಕರನ್ನಾಗಲೀ ಅಥವಾ ಓದುವ ಮಕ್ಕಳನ್ನಾಗಲೀ ನಾವು ಈಗ ದೂರಿ ಪ್ರಯೋಜನ ಇಲ್ಲ. ನಮ್ಮ ಇಂದಿನ ಸಾಮಾಜಿಕ ಪರಿಸ್ಥಿತಿ ಹೀಗೆ ಇದೆ. ಆಂಗ್ಲ ಭಾಷಾ ಜ್ಞಾನದ ಜತೆಗೆ ಅವರ ಕನ್ನಡ ಜ್ಞಾನ ಮತ್ತು ಪ್ರೇಮಗಳೂ ಬೆಳೆಯಲಿ.
ಕನ್ನಡಿಗರಾದ ನಾವು "ತಲೆ ಎತ್ತಿ ಬಾಳುವ ಕಾಲ" ಈಗ ಸನ್ನಿಹಿತವಾಗುತ್ತಾ ಇದೆ! ಕನ್ನಡಿಗರ ಸ್ವಾಭಿಮಾನ ಎಚ್ಚತ್ತುಕೊಳ್ಳುತ್ತಾ ಇದೆ. ಇಂದು ಹೆಚ್ಚಿನ ಕನ್ನಡಿಗರು ಕನ್ನಡದದಲ್ಲೇ ಮಾತನಾಡಿ ವ್ಯವಹಾರ ಮಾಡಲು ಇಷ್ಟ ಪಡುತ್ತಾ ಇದ್ದಾರೆ. ಕನ್ನಡದ ಪುಸ್ತಕ ಹಾಗೂ ಪತ್ರಿಕೆಗಳನ್ನು ಕೊಂಡು ಓದುತ್ತಾ ಇದ್ದಾರೆ.
ನಮ್ಮ ಜನರಲ್ಲಿ ಕನ್ನಡ ಅಭಿಮಾನ ಹೆಚ್ಚುತ್ತಾ ಇದೆ. ಮಾರುಕಟ್ಟೆಗಳಲ್ಲಿ ಮತ್ತು ಹೆಚ್ಚಿನ ಅಂಗಡಿಗಳಲ್ಲಿ ಕನ್ನಡದ ಮಾತು ಕೇಳಿಬರುತ್ತಾ ಇವೆ. ಹಿಂದೆ ಬೆಂಗಳೂರಿನ "ಇಂಗ್ಲಿಷ್" ಪ್ರದೇಶಗಳೆಂದೇ ಹೆಸರಾದ ಬ್ರಿಗೇಡ್ ರಸ್ತೆ ಮತ್ತು ಮಹಾತ್ಮಾ ಗಾಂಧಿ ರಸ್ತೆಗಳಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡಲು ಇಂದು ಸಾಧ್ಯ ಆಗಿದೆ.
ಕನ್ನಡ ಚಲನ ಚಿತ್ರಗಳು ಈಗ ಜನಪ್ರಿಯವಾಗಿ ಬಹಳ ಸಮಯ ಪ್ರದರ್ಶನ ನೀಡಿ ಹಣ ಮತ್ತು ಹೆಸರು ಸಂಪಾದಿಸುತ್ತಾ ಇವೆ. ಹಿಂದೀ ಸಿನೆಮಾದ ಗಾಯಕರು, ನಿರ್ದೇಶಕರು, ನಟ ನಟಿಯರು ಕನ್ನಡ ಚಿತ್ರ ಕ್ಷೇತ್ರದ ಕಡೆಗೆ ತಮ್ಮ ಒಲವು ತೋರುತ್ತಾ ಇದ್ದಾರೆ,
ಟ್ಯಾಕ್ಸಿ ಮತ್ತು ಆಟೋ ಚಾಲಕರು ಇಂದು ಕನ್ನಡದಲ್ಲೇ ಮಾತನಾಡುತ್ತಾರೆ. ತರಕಾರಿ, ಹೂವು, ಹಣ್ಣು ಮಾರುವವರು ಕನ್ನಡದಲ್ಲೇ ವ್ಯವಹಾರ ಮಾಡುವುದು ಕಂಡು ಬರುತ್ತಾ ಇದೆ.
ಈಗ ಬೆಳೆಯುತ್ತಾ ಇರುವ ಕನ್ನಡ ಅಭಿಮಾನವನ್ನು ಈಗ ನಾನು "ಕನ್ನಡದ ಅಭಿಮನ್ಯು" ಎಂದು ಹೆಸರಿಸಿ ಕರೆಯುತ್ತಾ ಇದ್ದೇನೆ.
ಕನ್ನಡದ ಅಭಿಮಾನಿ ಬಾಲಕ ಅಭಿಮನ್ಯು ಇನ್ನೂ ಹದಿಹರೆಯದ ಹುಡುಗ.
ಆದರೂ, ಇಂದು ಆತ ಧೈರ್ಯವಾಗಿ ಇತರೇ ಭಾಷಿಗರಿಗೆ ಸರಿಸಮನಾಗಿ ನಿಂತು ಕನ್ನಡದ ಉಳಿವಿಗೋಸ್ಕರ ಅವಿರತವಾಗಿ ಹೋರಾಡುತ್ತಾ ಇದ್ದಾನೆ.
ಇನ್ನು ಮುಂದೆ ನಮ್ಮ ಕನ್ನಡದ ಅಭಿಮನ್ಯುವು ಇದುವರೆಗೆ ಅಬೇಧ್ಯವಾಗಿದ್ದ ಪಂಚ ತಾರಾ ಮತ್ತು ಬಹು ರಾಷ್ಟ್ರೀಯ ಸ್ವಾಮ್ಯದ ಪ್ರತಿಷ್ಟಿತ ಕೋಟೆಗಳ ಒಳಗೆ ನುಗ್ಗಿ ಅಲ್ಲಿ ತನ್ನ ಕನ್ನಡತನವನ್ನು ಮೆರೆದು ಅಲ್ಲಿ ಅವನು ವಿಜ್ರಂಭಿಸಬೇಕು.
ಇದು ನನ್ನ ಆಶಯ.
ತಾವು ಕೂಡಾ ಕೈಜೋಡಿಸಿ "ಕನ್ನಡದ ಅಭಿಮನ್ಯುವನ್ನು ದೀರ್ಘಾಯುವಾಗು!" ಎಂದು ಹರಸುವಿರಾ?
- ಎಸ್. ಎಮ್. ಪೆಜತ್ತಾಯ
 ಬೆಂಗಳೂರು
 ೨೩/೦೪ /೨೦೦೮

Thursday, May 14, 2015

ಸುದ್ದಿಯನ್ನೂ ಬಿತ್ತಿ ಬೆಳೆಯುವವರು

ಇಂದು ಪತ್ರಕೆಯೊಂದರಲ್ಲಿ ಈ ಸುದ್ದಿಯನ್ನು ಓದಿದಾಗ, ಸುಮಾರು ಹನ್ನೆರಡು ವರ್ಷಗಳ ಹಿಂದೆ ನಾನು ಬರೆದಿದ್ದ ಒಂದು ಸಣ್ಣ ಕಥೆ ನೆನಪಾಯಿತು. ಅದು thatskannada.com ನಲ್ಲಿ ಪ್ರಕಟವಾಗಿತ್ತು. ಎಂಥಾ ಕೊಇನ್ಸಿಡೆನ್ಸ್!!!
ಒಮ್ಮೆ ಓದಿ ನೋಡಿ.

ಬಿರುಬೇಸಿಗೆಯ ಮಧ್ಯಾಹ್ನದ ಬಿಸಿಲಿನಿಂದಾಗಿ ನಿದ್ದೆಯೂ ಬಾರದೆ ಬೆವರಿನಿಂದ ತೊಯ್ಯುತ್ತಾ ಛಾವಣಿಯನ್ನು ದಿಟ್ಟಿಸುತ್ತಾ ಬಿದ್ದುಕೊಂಡಿದ್ದ ರಂಗರಾಜನಿಗೆ ತನ್ನ ಯೋಚನಾ ಲಹರಿ ದಿಕ್ಕು ತಪ್ಪಿದ್ದು ಗೊತ್ತಾಗಿ ಹಣೆ ತೀಡಿಕೊಂಡ. ಎರಡು ವರ್ಷದ ಹಿಂದೆ ವಿಶ್ವಕನ್ನಡ ಪತ್ರಿಕೆ ಪ್ರಾರಂಭವಾಗಿ ರಂಗರಾಜ ಆ ತಾಲ್ಲೋಕಿನ ಅಧಿಕೃತ ವರದಿಗಾರನಾಗಿ ನೇಮಕಗೊಂಡಾಗ ಖುಷಿಯಿಂದ ಕುಣಿದಿದ್ದ. ಪತ್ರಕರ್ತನಾಗಬೇಕೆಂಬ ಮಹದಾಸೆಯಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮಾಡಿಕೊಂಡು ಮೂರ್‍ನಾಲ್ಕು ವರ್ಷ ಕೆಲಸವಿಲ್ಲದೆ ಅಲೆದುಕೊಂಡಿದ್ದವನಿಗೆ ರಾಜ್ಯ ಮಟ್ಟದ ಪತ್ರಿಕೆಯೊಂದಕ್ಕೆ ವರದಿಗಾರನಾಗಿ ನೇಮಕಗೊಂಡಾಗ ಸ್ವರ್ಗ ಆತನ ಮೂಗಿನ ನೇರಕ್ಕೇ ಇಳಿದಿತ್ತು. ಪ್ರಾರಂಭದ ನಾಲ್ಕೈದು ತಿಂಗಳು ಚೆನ್ನಾಗಿಯೇ ನಡೆದಿತ್ತು. ತಾನು ಬರೆದ ಸುದ್ದಿ ಬಂದಾಗ ಸ್ನೇಹಿತರ ಬಳಿ ಹೇಳಿಕೊಂಡು ಹೆಮ್ಮೆಪಡುತ್ತಿದ್ದ. ಕೆಲವೊಮ್ಮೆ ಮೊದಲೇ ಸ್ನೇಹಿತರ ಬಳಿ ತಾನು ಬರೆದ ಸುದ್ದಿ ಬರುತ್ತದೆ ಎಂದು ಜಂಭಪಟ್ಟೂ ಬರದೇ ಇದ್ದಾಗ ಮುಖ್ಯ ಕಛೇರಿಯ ಸುದ್ದಿ ಸಂಪಾದಕನನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ‘ಅವರು ಗ್ರಾಮೀಣ ಪ್ರದೇಶದವರನ್ನು ನೆಗ್ಲೆಕ್ಟ್ ಮಾಡ್ತಿದಾರೆ. ಅವರು ಇಂಟರ್‌ನೆಟ್ಟಲ್ಲಿ ಸಿಗೊ ಸುದ್ದಿಗಳನ್ನೇ ಕಟ್ ಅಂಡ್ ಪೇಸ್ಟ್ ಮಾಡಿ ಪ್ರಿಂಟ್ ಮಾಡ್ತಾರೆ’ ಎಂದು ತನಗೆ ಇಂಟರ್‌ನೆಟ್ ಬಗ್ಗೆಯೂ ಗೊತ್ತು ಎಂಬುದನ್ನು ಪರೋಕ್ಷವಾಗಿ ಪ್ರಸ್ಥಾಪಿಸುತ್ತಿದ್ದ.
ಮೊದಲೇ ಬೋಳೆ ಸ್ವಭಾವದವನಾಗಿದ್ದ ರಂಗರಾಜನಿಗೆ ದಿನಕಳೆದಂತೆ ಪತ್ರಿಕೆಯ ಸುದ್ದಿ ಸಂಪಾದಕರುಗಳ ಮೇಲೆ ಸಿಟ್ಟು ಹೆಚ್ಚಾಗತೊಡಗಿತು. ಬೇಕೆಂದೇ ನಾನು ಕಳುಹಿಸಿದ ಸುದ್ದಿಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ ಎಂಬ ಭಯಂಕರ ಅನುಮಾನ ಬಂದು, ತಾನು ಕಳುಹಿಸುತ್ತಿರುವ ಸುದ್ದಿಯ ಪ್ರಾಮುಖ್ಯತೆಯ ಬಗ್ಗೆಯಾಗಲೀ, ಅದರ ಗುಣಮಟ್ಟದ ಬಗ್ಗೆಯಾಗಲೀ ಚಿಂತಿಸುವ ಸಾಮರ್ಥ್ಯವನ್ನೇ ಕಳೆದುಕೊಂಡುಬಿಟ್ಟಿದ್ದ.
*    *   *  * * *  *   *    *
ವಿಶ್ವಕನ್ನಡ ಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಬೆಂಗಳೂರಿನಲ್ಲಿ ನಡೆದಾಗ, ಗ್ರಾಮೀಣ ಪ್ರದೇಶದಲ್ಲಿ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸುವ ಬಗ್ಗೆ ಒಂದು ವಿಚಾರಸಂಕಿರಣವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಎಲ್ಲಾ ತಾಲ್ಲೋಕುಗಳ ಪತ್ರಿಕಾ ಹಂಚಿಕೆದಾರರು ಭಾಗವಹಿಸಿದ್ದರು. ರಂಗರಾಜನ ತಾಲ್ಲೋಕಿನಿಂದ ಹಂಚಿಕೆದಾರನಾದ ಭರಮಪ್ಪ ಭಾಗವಹಿಸಿದ್ದ. ರಂಗರಾಜನಿಗೂ ಭಾಗವಹಿಸುವ ಆಸೆಯಿತ್ತಾದರೂ, ಟಿ.ಎ., ಡಿ.ಎ. ಕೇವಲ ಏಜಂಟರಿಗೆ ಮೀಸಲಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ಆಯಾಯ ಪ್ರದೇಶದ ಸುದ್ದಿಗಳಿಗೆ ಹೆಚ್ಚಿನ ಆಧ್ಯತೆ ಕೊಡುವುದರಿಂದ ಗ್ರಾಮ ಮಟ್ಟದಲ್ಲಿ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಬಹುದು ಎಂಬುದು ವಿಚಾರ ಸಂಕಿರಣದ ನಂತರ ಮೂಡಿದ ಒಮ್ಮತಾಭಿಪ್ರಾಯ. ಆದರೆ ಪಿಕಲಾಟಕ್ಕೆ ಬಂದಿದ್ದು ಮಾತ್ರ ರಂಗರಾಜನಿಗೆ.
ಅದು ಆಗಿದ್ದು ಹೀಗೆ. ಪತ್ರಿಕಾ ಏಜೆಂಟರ ಸಮಾವೇಶ ಮುಗಿಸಿಕೊಂಡು ಬಂದ ಭರಮಪ್ಪ ರಂಗರಾಜನಿಗೆ “ಸ್ವಾಮಿ ನೀವು ವಿಶ್ವಕರ್ನಾಟಕ ಪತ್ರಿಕೆಗೆ ನಮ್ಮ ತಾಲ್ಲೂಕಿನ ಅಧಿಕೃತ ವರದಿಗಾರರಾಗಿದ್ದೀರ. ಆದರೆ ನೀವು ನಮ್ಮ ಹಳ್ಳಿಗಳ ಯಾವುದೇ ಸುದ್ದಿಯನ್ನು ವರದಿ ಮಾಡುತ್ತಿಲ್ಲ. ಹೀಗಾದರೆ ಪತ್ರಿಕೆಗಳನ್ನು ಮಾರುವುದು ಹೇಗೆ? ನಿಮಗೆ ಗೊತ್ತಾ? ಅತ್ಯಂತ ಕಡಿಮೆ ಪತ್ರಿಕೆ ಮಾರುವ ತಾಲ್ಲೂಕುಗಳಲ್ಲಿ ನಮ್ಮದೇ ಮೂರನೆಯದು. ನೀವು ಸ್ವಲ್ಪ ಗಮನ ಕೊಟ್ಟಿರಾದರೆ, ನಮ್ಮ ಊರಿನ ಸುದ್ದಿ ಬಂದಿದೆ ಎಂದು ಜನ ಪತ್ರಿಕೆ ಕೊಂಡು ಓದುತ್ತಾರೆ. ಅಲ್ಲವೇ?" ಎಂದು ಆಗಾಗ ಪೀಡಿಸುತ್ತಿದ್ದ. ಒಬ್ಬನೇ ಇದ್ದಾಗ ಭರಮಪ್ಪ ಹೀಗೆಂದಿದ್ದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಆಸಾಮಿ ಇವನಲ್ಲ. ಸಿಕ್ಕ ಸಿಕ್ಕವರ ಎದುರಿಗೆಲ್ಲಾ ಭರಮಪ್ಪ ಪೀಡಿಸಲಾರಂಭಿಸಿದಾಗ ರಂಗರಾಜನೂ ಏನಾದರೂ ಸುದ್ದಿಗಳನ್ನು ಕಳುಹಿಸಲೇಬೇಕೆಂದು ತಲೆಕೆಡಿಸಿಕೊಳ್ಳತೊಡಗಿದ.
*    *   *  * * *  *   *    *
ಈ ವರ್ಷವೂ ಮುಂಗಾರು ಕೈಕೊಡುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದ್ದವು. ಬಿಸಿಲಿನ ಬೇಗೆ ಹೆಚ್ಚಾದಂತೆ ರಂಗರಾಜನಿಗೆ ಸುದ್ದಿಯ ಬರವೂ ಹೆಚ್ಚುತ್ತಿತ್ತು. “ಛೆ, ಈ ಹಳ್ಳಿಗಳಲ್ಲಿ ಜನ ಜೀವನ ಸತ್ತು ಹೋಗಿದೆ. ಇಲ್ಲಿ ಯಾರು ಬಡಿದಾಡಿ ಸಾಯುವುದೂ ಇಲ್ಲ. ಒಂದು ಗಲಾಟೆ ಇಲ್ಲ. ಯಾವ ಕ್ರಾಂತಿಯೂ ಇಲ್ಲ. ಒಟ್ಟಾರೆಯಾಗಿ ಇಡೀ ವ್ಯವಸ್ಥೆಯಲ್ಲಿ ಮೂವ್‌ಮೆಂಟ್ ಅನ್ನೋದು ಸತ್ತು ಹೋಗಿದೆ. ಬರೆದರೆ ಅವನ ಮಗನಿಗೆ ಇವನ ಮಗಳ ಮದುವೆಯಾಯಿತು. ಆತನ ಕೋಳಿಯನ್ನು ನರಿ ಹಿಡಿಯಿತು ಇಂತಹ ಸುದ್ದಿಗಳನ್ನೇ ಬರೆಯಬೇಕು. ಇಲ್ಲಿ ಕದ್ದು ಬಸುರಾದರೂ ಗುಟ್ಟು ಬಿಟ್ಟುಕೊಡಲ್ಲ. ಅದೇ ಸಿಟಿಯಲ್ಲಾದರೆ ಬಸುರಿಯಾದ ಹುಡುಗಿಯೇ ಸ್ಟೇಶನ್ನಿಗೆ ಹೋಗಿ ಕಂಪ್ಲೇಂಟ್ ಕೊಡುತ್ತಾಳೆ. ಸಿಟಿಯವರು ಸುದ್ದಿ ಮಾಡದೆ ಏನು ಮಾಡುತ್ತಾರೆ" ಎಂದು ತನ್ನ ಅಸಹನೆಯ ನಂಜನ್ನು ತಾನೆ ತಿನ್ನುತ್ತಿದ್ದ.
*    *   *  * * *  *   *    *
ಹೀಗಿರುವಾಗ, ಮೇ ತಿಂಗಳ ಕೊನೆಯ ಒಂದು ದಿನ ಊರಿನಲ್ಲಿ ಹರಡಿದ್ದ ಒಂದು ಸುದ್ದಿ ರಂಗರಾಜನ ಗಮನ ಸೆಳೆಯಿತು.
ದಿನ ಬೆಳಿಗ್ಗೆ ಮನೆ ಮನೆಗೆ ಪತ್ರಿಕೆ ಹಾಕುತ್ತಿದ್ದ ಜಯರಾಮ ಎಂಬ ಹುಡುಗ ಹತ್ತನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ. ಆತನಿಗೆ ಶೇಕಡಾ ತೊಂಬತ್ಮೂರು ಅಂಕಗಳು ಬಂದಿದ್ದವು. ಜಯರಾಮನ ತಂದೆ ತಾಯಿ ಕೂಲಿನಾಲಿ ಮಾಡಿ ಮಗನನ್ನು ಓದಿಸುತ್ತಿದ್ದರು. ಇದೇ ಸುದ್ದಿ ಸುತ್ತಮುತ್ತಲ ಊರವರ ಬಾಯಲ್ಲೂ ಎಲೆ ಅಡಿಕೆಯಾಗಿ ಜಿಗಿಯಲ್ಪಡುತ್ತಿದ್ದರೆ, ರಂಗರಾಜನಿಗೆ ಖಚಿತವಾಗಿ ಇದನ್ನು ಸುದ್ದಿ ಮಾಡಬಹುದು ಎನ್ನಿಸಿತ್ತು. ತಕ್ಷಣ ಎದ್ದು ಪೆನ್ನು ಪ್ಯಾಡು ತಗೆದುಕೊಂಡು ನಿಜವಾದ ಪತ್ರಕರ್ತನ ಗತ್ತಿನಲ್ಲಿ ಸ್ಕೂಲಿನ ಕಡೆಗೆ ನಡೆಯತೊಡಗಿದ.
“ಅವನವ್ವನ್ ಇದು ಹೇಗೆ ಸುದ್ದಿಯಾಗಲ್ಲವೊ ನಾನು ನೋಡ್ತಿನಿ. ಬರಿ ಸುದ್ದಿಯಾದರೆ ಸಾಲದು. ಭರ್ಜರಿ ಸುದ್ದೀನೆ ಮಾಡಬೇಕು, ಸಿಟಿಯವರ ತಲೆ ಮೇಲೆ ಹೊಡೆದ ಹಾಗೆ" ಎಂದುಕೊಂಡ. ಜಯರಾಮನ ಕಷ್ಟವನ್ನು ಕಣ್ಣಿಗೆ ಕಟ್ಟಿದಂತೆ ಬರೆದು ಹೆಸರು ಮಾಡಬೇಕು ಅಂದುಕೊಂಡು ಸ್ಕೂಲಿಗೆ ಬಂದಾಗ ಹೆಡ್ಮಾಸ್ಟರು ಕಿವಿಯವರೆಗೂ ಬಾಯಿ ತೆರೆದು ಗುಡುಗನ್ನೂ ನಾಚಿಸುವಂತೆ ನಗುತ್ತಾ ಸ್ವಾಗತಿಸಿ “ನೀವು ಬಂದೇ ಬರ್ತೀರ ಅಂತ ನಾನು ಕಾಯ್ತಿದ್ದೆ. ಬನ್ನಿ" ಎಂದರು.
“ಸಾರ್, ಜಯರಾಮನ ಬಗ್ಗೆ ಪೇಪರ್‍ನಲ್ಲಿ ಬರೀತಾ ಇದ್ದೀನಿ. ಅವನದೊಂದು ಮಾರ್ಕ್ಸ್ ಲಿಸ್ಟ್ ಅಟೆಸ್ಟ್ ಮಾಡಿ ಕೊಡಿ" ಎಂದು ನೇರವಾಗಿ ಕೇಳಿದ ರಂಗರಾಜನ ಮಾತಿನಿಂದ ಪೆಚ್ಚಾದರೂ ತೋರಿಸಿಕೊಳ್ಳದ ಹೆಡ್ಮಾಸ್ಟರು “ಬರೀರಿ ಬರೀರಿ. ನಮ್ಮ ಸ್ಕೂಲಿನ ಹುಡುಗ ಬಡತನದಲ್ಲೂ ಕಷ್ಟಪಟ್ಟು ಓದಿದಾನೆ. ನಾವೂ ಬಹಳ ಮುತುವರ್ಜಿ ವಹಿಸಿ ಪಾಠ ಮಾಡಿದಿವಿ. ಅದನ್ನು ಬರೀರಿ" ಎಂದು ಹಲ್ಲು ಗಿಂಜಿದರು. ರಂಗರಾಜ ಮನಸ್ಸಿನಲ್ಲೇ ‘ಕಳ್ಳ ನನ್ಮಗ. ಇವನ ಬಗ್ಗೆ ಬರೀಬೇಕಂತೆ’ ಎಂದುಕೊಂಡ. ಜಯರಾಮನ ಅಂಕಗಳನ್ನು ಬಿಳಿಹಾಳೆಯ ಮೇಲೆ ಬರೆಯುತ್ತಾ “ಪತ್ರಕರ್ತರೆ ನಂದು ತಿಂಡಿ ಆಗಿಲ್ಲ. ಹಾಗೆ ಸಿಟಿ ಕಡೆ ಹೋಗಿ ತಿಂಡಿ ಕಾಫಿ ಮಾಡೋಣ. ನಾನು ನಿಮ್ಮ ಜೊತೆ ಬರತೀನಿ" ಎಂದ ಹೆಡ್ಮಾಸ್ಟರ ಮಾತಿನಿಂದ ಖುಷಿಯಾದ ರಂಗರಾಜ “ಆಗಲಿ ಸಾರ್. ನಿಮ್ಮ ಸ್ಕೂಲಿಗೆ ಡಿಸ್ಟಿಂಕ್ಷನ್ ಬಂದಿರೊ ಖುಷಿಯಲ್ಲಿ ನೀವು ಸ್ವೀಟು ಕೊಡಿಸ್ಬೇಕು" ಎಂದ. “ಆಗಲಿ, ಆಗಲಿ" ಎನ್ನುತ್ತ, ಬರೆದು ಮುಗಿಸಿ ಸಹಿ ಮಾಡುವಾಗ ತಮ್ಮ ಹೆಸರು ಸ್ಪಷ್ಟವಾಗಿ ಕಾಣುವಂತೆ ದಪ್ಪವಾಗಿ ಮಾಡಿ ಸೀಲು ಹಾಕಿ ಕೊಟ್ಟರು.
ತಾವು ಎಷ್ಟು ಕಷ್ಟಪಟ್ಟು ಪಾಠ ಮಾಡುತ್ತೇವೆ. ನಮ್ಮ ಶಾಲೆಗೆ ಡಿಸ್ಟಿಂಕ್ಷನ್ ಬರಲು ಪಟ್ಟ ಕಷ್ಟಗಳೇನು ಹೀಗೆ ಮುಂತಾದವುಗಳನ್ನು ವರ್ಣರಂಜಿತವಾಗಿ ಹೇಳುತ್ತಾ ಹೆಡ್ಮಾಸ್ಟರು ನಡೆಯುತ್ತಿದ್ದರೆ ‘ಹಾಂ, ಹೂಂ, ಹೌದು’ ಹೀಗೆ ಪ್ರತಿಕ್ರಿಯಿಸುತ್ತಾ ಸಾಗುತ್ತಿದ್ದ ರಂಗರಾಜನಿಗೆ, ಅವರು ತಿಂಡಿ ಕೊಡಿಸುತ್ತಾರೆ ಎಂದು ನೆನಪಾದಾಗ ಮಾತ್ರ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಾ ನಡೆಯುತ್ತಿದ್ದ. ಆದರೆ ಅವನ ಮನಸ್ಸಿನಲ್ಲಿ ಯೋಚಿಸುತ್ತಿದ್ದುದೇ ಬೇರೆ. ಸುದ್ದಿಯನ್ನು ಬರೆಯುವಾಗ ಸಂಪಾದಕರುಗಳು ಮೆಚ್ಚುವಂತೆ ಬರೆಯಬೇಕು ಎನ್ನಿಸಿ, ಅದು ಹೇಗೆ ಎಂದು ತಲೆ ಕೆಡಿಸಿಕೊಂಡ. ಹೆಡ್ಮಾಸ್ಟರು ಕೊಡಿಸಿದ ಮಸಾಲೆ ದೋಸೆ ತಿಂದು ಕಾಫಿ ಕುಡಿಯುವಾಗ, ‘ಜಯರಾಮ ಎಲ್ಲಾ ಪತ್ರಿಕೆಗಳನ್ನು ಹಂಚುತ್ತಿದ್ದ. ಆದರೆ ನನ್ನ ಸುದ್ದಿಯಲ್ಲಿ ಜಯರಾಮ ವಿಶ್ವಕನ್ನಡ ಪತ್ರಿಕೆಯನ್ನು ಹಂಚುತ್ತಿದ್ದ ಹುಡುಗ ಎಂಬುದನ್ನು ಹೈಲೈಟ್ ಮಾಡಿ ಬರೆಯಬೇಕು. ಅದರಿಂದ ಪತ್ರಿಕೆಯವರಿಗೂ ಖುಷಿಯಾಗುತ್ತದೆ’ ಅಂದುಕೊಂಡ.
*    *   *  * * *  *   *    *
ಹೆಡ್ಮಾಸ್ಟರಿಗೆ ಗುಡ್‌ಬೈ ಹೇಳಿ ಮನೆಯ ಕಡೆ ತಿರುಗಿದವನಿಗೆ ಕಂಡಿದ್ದು ವಿಶ್ವಕನ್ನಡ ಪತ್ರಿಕೆಯ ಹಂಚಿಕೆದಾರ ಭರಮಪ್ಪ. “ಹೋ ಪತ್ರಕರ್ತ ರಂಗರಾಜ ಅವರು. ಜಯರಾಮನ ಬಗ್ಗೆ ಪತ್ರಿಕೇಲಿ ಒಳ್ಳೆ ಸುದ್ದಿ ಮಾಡಬೇಕಂತೀದಿರಂತೆ. ಮಾಡಿ ಮಾಡಿ. ಸಂತೋಷ ಅಲ್ಲವೇ? ನಮ್ಮೂರ ಹುಡುಗ. ನನ್ನ ಬಳಿಯೇ ಪೇಪರ್ ತಗೊಂಡು ಮನೆಮನೆಗೆ ಹಾಕುತ್ತಿದ್ದ. ಅಂದ ಹಾಗೆ ಅವನನ್ನು ಒಂದು ಸಾರಿ ಬೇಟಿ ಮಾಡ್ಬಿಡಿ. ಅವನದೊಂದು ಫೋಟೊ ಬೇಕಾದರೆ ಕೊಡಿಸ್ತಿನಿ ಬನ್ನಿ" ಎಂದರು. ಭರಮಪ್ಪನ ಸಲಹೆ ರಂಗರಾಜನಿಗೂ ಸರಿಯೆನ್ನಿಸಿತು. “ಅಷ್ಟು ಮಾಡಿ. ಇನ್ನು ಒಳ್ಳೇದೆ ಆಯಿತು" ಎಂದ.
ದಾರಿಯಲ್ಲಿ ನಡೆಯುತ್ತಿದ್ದಾಗ ಭರಮಪ್ಪ ಏನೋ ಹೇಳಲು ತವಕಿಸುತ್ತಿದ್ದ. ಇದನ್ನರಿತ ರಂಗರಾಜ “ಭರಮಪ್ಪನವರೆ ಹುಡುಗ ಹೇಗೆ?" ಎಂದು ಮಾತಿಗಾರಂಭಿಸಿದ. “ಹುಡುಗ ಒಳ್ಳೆಯವನೇ. ಪಾಪ ಬಡವ. ಇಷ್ಟೊಂದು ಮಾರ್ಕ್ಸ್ ತಗೀತಾನೆ ಅಂದಿದ್ದರೆ ನಾವು ಏನಾದರು ಸಹಾಯ ಮಾಡಬಹುದಿತ್ತು ಅಲ್ಲವಾ? ಆದರೂ ನೀನು ಸುದ್ದಿ ಮಾಡುವಾಗ ನಾವು ಆಗಾಗ ಸಹಾಯ ಮಾಡ್ತಿದ್ದಿವಿ ಅಂತ ಬರೆದು, ನಮ್ಮಿಬ್ಬರ ಹೆಸರು ಪತ್ರಿಕೇಲಿ ಬರೊಹಂಗೆ ಮಾಡ್ಬಿಡು. ಇದು ಪತ್ರಿಕೆಯವರಿಗೂ ಇಷ್ಟ ಆಗುತ್ತೆ. ‘ನಮ್ಮ ಪತ್ರಿಕಾ ಬಳಗದೋರು ಸೇವಾಮನೋಭಾವ ಇರೋರು’ ಅಂತ ತೋರಿಸಿಕೊಳ್ಳೋಕೆ ಅವರಿಗೂ ಇದೊಂದು ಅವಕಾಶ" ಎಂದು ನಿಂತು ರಂಗರಾಜನ ಮುಖವನ್ನೊಮ್ಮೆ ನೋಡಿದ.
ಭರಮಪ್ಪನ ಸಲಹೆ ರಂಗರಾಜನಿಗೂ ಇಷ್ಟವಾಯಿತು. ಆದರೂ ಏನೂ ಸಹಾಯ ಮಾಡದೆ, ಮಾಡಿದ್ದೇವೆ ಎಂದು ಬರೆಯುವುದು ಹೇಗೆ? ಎನ್ನಿಸಿ “ಭರಮಪ್ಪನವರೇ ನಾವು ಏನು ಸಹಾಯನೇ ಮಾಡಿಲ್ಲ. ನಾವು ಮಾಡಿದೀವಿ ಅಂತ ಬರೆಯೋದು. ನಾಳೆ ಅವನು ಮಾಡಿಲ್ಲ ಅನ್ನೋದು. ಆಗ ಮರ್ಯಾದೆ ಹೋಗೋದು ನಮ್ಮದೆ ತಾನೆ" ಎಂದ. “ಅದಕ್ಕೆ ನಾ ನಿಮ್ಮನ್ನ ದಡ್ಡರು ಅನ್ನೋದು. ಆ ಹುಡುಗನಿಗೆ ನಾ ಹೇಳ್ತಿನಿ. ‘ಪೇಪರ್‍ನಲ್ಲಿ ನಿನಗೆ ಸಹಾಯ ಮಾಡಿ ಅಂತ ಬರೀತಿವಿ. ನಿನಗೆ ಮುಂದೆ ಓದೋದಿಕ್ಕೆ ಹಣಕಾಸಿನ ಸಹಾಯ ಸಿಗೊ ಹಂಗೆ ಮಾಡ್ತೀವಿ. ನೀನು ಮಾತ್ರ ಯಾರಾದರು ಕೇಳಿದರೆ, ಭರಮಪ್ಪನವರು ರಂಗರಾಜು ಅವರು ಹೇಳೋದು ನಿಜ ಅಂತ ಹೇಳು’ ಅಂತ. ಅವನಿಗೂ ಸಹಾಯ ಬೇಕು ಹೇಳದೆ ಏನ್ಮಾಡ್ತಾನೆ" ಅಂದರು. ರಂಗರಾಜನಿಗೂ ಸರಿಯೆನ್ನಿಸಿ “ಆದರೆ ಯಾವ ರೀತಿ ಸಹಾಯ ಮಾಡಿದ್ವಿ ಅಂತ ಬರೆಯೋದು?" ಎಂದ.
“ಹುಡುಗನ ಪ್ರತಿಭೆಯನ್ನು ಗುರುತಿಸಿದ ಪತ್ರಿಕೆಯ ಈ ವರದಿಗಾರ ಹುಡುಗನಿಗೆ ಕೈಲಾದಷ್ಟು ಸಹಾಯ ಮಾಡಬೇಕೆಂದುಕೊಂಡು ಪತ್ರಿಕೆಯ ಏಜೆಂಟರಾದ ಶ್ರೀ ಭರಮಪ್ಪನವರ ಮನವೊಲಿಸಿ, ಪತ್ರಿಕೆ ಹಂಚಲು ಕೊಡುತ್ತಿದ್ದ ಕಮಿಷನ್ ಅಲ್ಲದೆ ದಿನಕ್ಕೊಂದು ಪತ್ರಿಕೆಯನ್ನು ಉಚಿತವಾಗಿ ಕೊಡಲು ಏರ್ಪಾಡು ಮಾಡಿದ್ದರು. ನಮ್ಮ ಪತ್ರಿಕೆಯಲ್ಲಿ ಬರುತ್ತಿದ್ದ ‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಮಾರ್ಗದರ್ಶಿ’ ಎಂಬ ಲೇಖನದಿಂದ ಇಷ್ಟೊಂದು ಅಂಕ ಗಳಿಸಲು ಸಾದ್ಯವಾಯಿತು ಎಂದು ಜಯರಾಮ ಪ್ರತಿಕ್ರಿಯಿಸುತ್ತಾನೆ ಅಂತ ಬರೀರಿ. ಮುಂದಿನದನ್ನು ನಾನು ನೋಡ್ಕೋತಿನಿ" ಎಂದು ಭರಮಪ್ಪನವರೇ ವರದಿಗೊಂದು ರೂಪವನ್ನೂ ಕೊಟ್ಟುಬಿಟ್ಟರು.
ಎರಡು ದಿನಗಳ ನಂತರ ವಿಶ್ವಕನ್ನಡ ಪತ್ರಿಕೆಯ ಮುಖಪುಟದಲ್ಲಿ ‘ವಿಶ್ವಕನ್ನಡ ಪತ್ರಿಕೆ ಹಂಚುವ ಹುಡುಗನ ಸಾಧನೆ’ ಎಂಬ ತಲೆಬರಹದೊಂದಿಗೆ ಸುದ್ದಿ ಪ್ರಕಟವಾಗಿತ್ತು. ಪೂರ್ಣ ವರದಿಯ ಮಧ್ಯೆ ಬಾಕ್ಸ್ ಐಟಂನಲ್ಲಿ ವರದಿಗಾರ ಮತ್ತು ಏಜೆಂಟರ ಸೇವಾ ಮನೋಭಾವ, ಪತ್ರಿಕೆಯಿಂದ ಪರೀಕ್ಷಾರ್ಥಿಗಳಿಗೆ ಆಗುತ್ತಿರುವ ಉಪಯೋಗದ ಬಗ್ಗೆ ಬರೆಯಲಾಗಿತ್ತು.
*    *   *  * * *  *   *    *
ಇವುಗಳೆಲ್ಲದರ ನಡುವೆ ಬಡ ಹುಡುಗನ ಶ್ರಮ ಕಳೆದು ಹೋಗಿತ್ತು.!
*    *   *  * * *  *   *    *

Monday, May 04, 2015

ಪೆಜತ್ತಾಯ ಸರ್, ನಿಮ್ಮದೇ ನೆನಪಲ್ಲಿ..........



ಪುಸ್ತಕ ಸಂಪಾದನೆಯ ಬಗ್ಗೆ ಹೇಳುವುದಕ್ಕೆ ಮೊದಲು, ಅವಾರ್ಯವಾಗಿ ನನ್ನ ಮತ್ತು ಶ್ರೀ ಎಸ್.ಎಂ. ಪೆಜತ್ತಾಯ ಅವರ ಪರಿಚಯದ ಬಗ್ಗೆ ಹೇಳಲೇಬೇಕೆನ್ನಿಸುತ್ತಿದೆ. ೨೦೦೮ರಲ್ಲಿ ಇರಬಹುದು. ತೇಜಸ್ವಿಯವರ ವೈಚಾರಿಕತೆ ಎನ್ನುವ ನನ್ನ ಲೇಖನ ಕನ್ನಡಧ್ವನಿ.ಕಾಂ ಆನ್ ಲೈನ್ ಪತ್ರಿಕೆಯಲ್ಲಿ ಎಂಟು ಕಂತುಗಳಲ್ಲಿ ಪ್ರಕಟವಾಗಿತ್ತು. ಅದಕ್ಕೆ ಬಂದು ಪ್ರತಿಕ್ರಿಯೆಗಳನ್ನು ಒಟ್ಟಾಗಿಸಿ ಶ್ರೀ ಗೋಪಿನಾಥ್‌ರಾವ್  ದೂರದ ದುಬೈನಿಂದ ನನಗೆ ಈ-ಮೇಲ್ ಕಳುಹಿಸಿದ್ದರು. ಅದರಲ್ಲಿ ಒಂದು ಪ್ರತಿಕ್ರಿಯೆ ಶ್ರೀ ಮಧುಸೂದನ ಪೆಜತ್ತಾಯ ಅವರದ್ದಾಗಿತ್ತು. ಕೇವಲ ನಾಲ್ಕೇ ಸಾಲಿದ್ದ ಅದು ನನಗೆ ವಿಶೇಷವಾಗಿ ಕಂಡಿದ್ದರಿಂದ, ಅವರಿಗೊಂದು ಈ-ಮೇಲ್ ತಕ್ಷಣ ಕಳುಹಿಸಿಬಿಟ್ಟೆ. ಆಶ್ಚರ್ಯ! ಕೇವಲ ಐದೇ ನಿಮಿಷದಲ್ಲಿ ಅದಕ್ಕೆ ಪ್ರತ್ಯುತ್ತರ ಬಂದಿತ್ತು. ಸ್ವತಃ ಪೆಜತ್ತಾಯ ಅವರೇ ತಮ್ಮ ಕಿರು ಪರಿಚಯ ಮಾಡಿಕೊಂಡು ಸ್ನೇಹಪೂರ್ವಕ ಈ-ಮೇಲ್ ಕಳುಹಿಸಿದ್ದರು.
ಹೀಗೆ ಅಂದು ಪ್ರಾರಂಭವಾದ ನಮ್ಮ ಈ-ಮೇಲ್ ಸ್ನೇಹ, ದಿನಕ್ಕೊಂದು ಒಮ್ಮೊಮ್ಮೆ ಎರಡು ಮೂರು ನಾಲ್ಕು ಈ-ಮೇಲ್‌ಗಳವರೆಗೂ ಬಂತು. ಅವರು ಬರೆದ ಇಂಗ್ಲಿಷ್ ಪುಸ್ತಕದ ನೂರಾರು ಪುಟಗಳನ್ನು ನನಗೆ ಈ-ಮೇಲ್ ಮುಖಾಂತರವೇ ಕಳುಹಿಸಿದ್ದರು. ನನ್ನ ಪುಸ್ತಕಗಳನ್ನು ಕೇಳಿ ಪಡೆದು ಓದಿ ಅದಕ್ಕೆ ತಮ್ಮ ಅನಿಸಿಕೆಯನ್ನೂ ಬರೆದರು. ಅತ್ಯಂತ ಸರಳ ನೇರ ಮಾತುಗಾರಿಕೆಯ ಮೂಲಕ ನನ್ನ ಆತ್ಮೀಯರಾದರು. ಕೃಷಿ ವ್ಯವಸಾಯ ಸಾಹಿತ್ಯ ಫೋಟೋಗ್ರಫಿ ಎಲ್ಲವುದರ ಬಗ್ಗೆಯೂ ತಮಗೆ ತಿಳಿದಿರುವುದನ್ನು ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಪ್ರಸ್ತುತ ಪಡಿಸುವ ಅವರ ಶೈಲಿ ನನಗೆ ಅಚ್ಚುಮೆಚ್ಚಾಗಿತ್ತು. ನಂತರ ಅವರನ್ನು ಬೇಟಿ ಮಾಡದೇ, ಅವರ ತೋಟಕ್ಕೂ ಹೋಗಿ ಸುತ್ತಾಡಿಕೊಂಡು ಬರುವ ಯೋಗವೂ ಲಭಿಸಿತು. ಅಲ್ಲಿಂದ ಬಂದ ಮೇಲೆಯೇ ಅವರನ್ನು ಮುಖತಃ ಬೇಟಿಯಾಗಿದ್ದು. ನಮ್ಮಿಬ್ಬರ ನಡುವೆ ಇಪ್ಪತ್ತೈದು ವರ್ಷಗಳ ಅಂತರವಿದೆ. ಒಂದು ತಲೆಮಾರು ಆಗಿಹೋಗಿದೆ. ಆದರೆ ನಮಗೆಂದೂ ಆ ವಯಸ್ಸಿನ ಅಂತರ ಒಂದು ಸಮಸ್ಯೆಯೇ ಆಗಿಲ್ಲ.

ಅವರು ಸುಮ್ಮನೆ ಸಮಯ ಕಳೆಯಲು ಈ-ಮೇಲ್ ಕಳುಹಿಸುವುದಿಲ್ಲ. ಮಾಹಿತಿಯನ್ನು ಕೊಡಲು ಪಡೆಯಲು ಅದನ್ನು ಅವರು ಯಶಸ್ವಿಯಾಗಿ ಬಳಸುತ್ತಾರೆ. ಅವರಿಂದ ಬರುತ್ತಿದ್ದ ಕೆಲವೊಂದು ಈ-ಮೇಲ್ ಬರಹಗಳು ಒಳ್ಳೆಯ ಲೇಖನಗಳ ಕಚ್ಚಾರೂಪದಂತೆಯೇ ನನಗೆ ಕಾಣುತ್ತಿದ್ದವು. ಅದೊಂದು ದಿನ, ಹಾಗೆ ಬಂದ ಈ-ಮೇಲ್ ಬರಹವೊಂದನ್ನು ಲೇಖನದ ರೂಪಕ್ಕೆ ತಂದು ಅವರಿಗೆ ಕಳುಹಿಸಿ ಅಭಿಪ್ರಾಯ ಕೇಳಿದೆ. ತಕ್ಷಣ, ತುಂಬಾ ಚೆನ್ನಾಗಿದೆ. ನನ್ನ ಅಭಿಪ್ರಾಯ, ಭಾಷೆ ಯಾವುದಕ್ಕೂ ಧಕ್ಕೆ ಬಾರದ ಹಾಗೆ ಇಡೀ ಬರಹವನ್ನು ಲಲಿತಪ್ರಬಂದದಂತೆ ಬದಲಾಯಿಸಿರುವುದು ಖುಷಿಯಾಗಿದೆ ಎಂದರು. ನಾನು ಅದನ್ನು (ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ!) ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ಕೇಳಿದೆ. ಸಂತೋಷದಿಂದಲೇ ಒಪ್ಪಿಗೆಯಿತ್ತರು. ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದ ಉತ್ತೇಜನಗೊಂಡು, ಇನ್ನೂ ಒಂದೆರಡು ಈ ಮೇಲ್‌ಗಳನ್ನು ಲೇಖನಗಳನ್ನಾಗಿ ಪರಿವರ್ತಿಸಿ ಅವರ ಒಪ್ಪಿಗೆ ಪಡೆದು ಬ್ಲಾಗಿನಲ್ಲಿ ಹಾಕಿದ್ದೆ.
ಅದೊಂದು ದಿನ ಹೀಗೆ ಪ್ರಕಟವಾಗಿದ್ದ ಬರಹವೊಂದನ್ನು ನೋಡಿ, ಈ-ಮೇಲ್‌ನಲ್ಲಿ ತಮ್ಮ ಎಡಿಟಿಂಗ್ ಶಾಘನೀಯ. ನನ್ನ ಕನ್ನಡ ಬರಹಗಳೆನ್ನೆಲ್ಲಾ ತಮಗೆ ಒಪ್ಪಿಸುವ ಆಸೆ. ಜತೆಗೆ ಅವುಗಳ ಮೇಲಿನ ಸರ್ವ ಅಧಿಕಾರವನ್ನೂ! ಎಂದು ಬರೆದಿದ್ದರು. ನನಗೆ ಏನು ಹೇಳಬೇಕೆಂದು ತೋಚದೆ, ಅವರು ನನ್ನ ಮೇಲಿಟ್ಟ ನಂಬಿಕೆಗೆ ಮೂಕವಿಸ್ಮಿತನಾಗಿ ಸುಮ್ಮನಾಗಿಬಿಟ್ಟದ್ದೆ. ತಕ್ಷಣ ಬಂದ ಇನ್ನೊಂದು ಈ-ಮೇಲಿನಲ್ಲಿ ನನ್ನ ಎಲ್ಲಾ ಕನ್ನಡ ಬರಹಗಳ ಉತ್ತರಾಧಿಕಾರಿ ನೀವೆ! ನಿಮಗೆ ಹೇಗೆ ಬೇಕೋ ಹಾಗೇ ಅವನ್ನು ಬಳಸಿಕೊಳ್ಳಿ. ಅವುಗಳಲ್ಲಿ ನಾನು ಸತ್ಯವನ್ನು ಬಿಟ್ಟು ಬೇರೆ ಏನನ್ನೂ ಬರೆದಿಲ್ಲ. ಎಂದು ಬರೆದು ಅವರ ಕಂಪ್ಯೂಟರಿನಲ್ಲಿದ್ದ ಎಲ್ಲಾ ಕನ್ನಡ ಫೈಲುಗಳನ್ನು ಅಟ್ಯಾಚ್ ಮಾಡಿ ನನಗೆ ಕಳುಹಿಸಿದ್ದರು!
ನನಗೆ ಏನು ಮಾಡಬೇಕೆಂದು ತಕ್ಷಣಕ್ಕೆ ತೋಚಲಿಲ್ಲ. ಅವರ ಬರಹಗಳಟ್ಟುಕೊಂಡು ಏನು ಮಾಡುವುದು? ಇದೊಂದು ಯಕ್ಷಪ್ರಶ್ನೆಯಾಗಿಬಿಟ್ಟಿತ್ತು. ಅವರ ಎಲ್ಲಾ ಬರಹಗಳನ್ನು ಪುಸ್ತಕಕ್ಕೆ ಅಳವಡಿಸಲು ಸಾಧ್ಯವಿರಲಿಲ್ಲ. ಆಗಾಗಲೇ ಅವರ ಕಾಗದದ ದೋಣಿಯಲ್ಲಿ ಸಾಕಷ್ಟು ಪ್ರಕಟವಾಗಿದ್ದವೂ ಕೂಡಾ. ಒಂದೇ ವಿಷಯಕ್ಕೆ ಸಂಬಂಧಪಟ್ಟ ಕೆಲವನ್ನಾದರೂ ಆಯ್ದು ಪುಸ್ತಕ ರೂಪದಲ್ಲಿ ಪ್ರಕಟಿಸಬಹುದಲ್ಲವೇ? ಎಂಬ ಯೋಚನೆ ನನಗೆ ಯಾವಾಗ ಬಂತೋ, ಆಗಲೇ ಕಾರ್ಯಪ್ರವೃತ್ತನಾಗಿಬಿಟ್ಟೆ. ನಾನು ಅಷ್ಟೊತ್ತಿಗಾಗಲೇ ಈ-ಮೇಲ್‌ನಲ್ಲಿ ಬಂದ ಐದಾರು ಬರಹಗಳನ್ನು ಲೇಖನ ರೂಪದಲ್ಲಿ ಸಂಪಾದಿಸಿದ್ದೆ. ಅವುಗಳಿಗೆ ಪೂರಕವಾಗಿಯೇ ವಿಷಯವನ್ನು ಅರಸುತ್ತಾ ಕಾಗದದ ದೋಣಿ ಪುಸ್ತಕದಲ್ಲಿ ಪ್ರಕಟವಾಗದಿರುವ ಬರಹಗಳನ್ನು ಒಂದು ಕಡೆ ಕಲೆ ಹಾಕಿದೆ. ಅದು, ಅವರು ತಮ್ಮ ಪ್ರಾರಂಭದ ದಿನಗಳಲ್ಲಿ, ತಮ್ಮ ಅಕ್ಕ ಮತ್ತು ಭಾವನಿಗೋಸ್ಕರ, ತೋಟ ಮಾಡಲು ಶಿರೂರಿನಲ್ಲಿ ಕಳೆದ ಒಂದು ವರ್ಷದ ಜೀವನದ ಕಥೆಯಾಗಿತ್ತು! ಶಿರೂರಿನ ಒಂದು ವರ್ಷದ ಅವಧಿಯ ಅವರ ಬದುಕನ್ನು ತಮಗರಿವಿಲ್ಲದೇ ಅವರು ಅಕ್ಷರ ರೂಪಕ್ಕೆ ಇಳಿಸಿಬಿಟ್ಟಿದ್ದರು!

ಈ ಪುಸ್ತಕದಲ್ಲಿ ಇಪ್ಪತ್ತಮೂರು ಲೇಖನಗಳನ್ನು ಸಂಪಾದಿಸಿ, ಸಂಕಲಿಸಿದ್ದೇನೆ. ಮೊದಲ ಮತ್ತು ಕೊನೆಯ ಲೇಖನಗಳು ನೇರವಾಗಿ ಶಿರೂರಿನ ಬದುಕಿಗೆ ಸಂಬಂಧಿಸಿದವುಗಳಲ್ಲದಿದ್ದರೂ, ಪೂರಕ ಬರಹಗಳೇ ಆಗಿವೆ. ಪೆಜತ್ತಾಯರ ಜೀವನಪ್ರೀತಿಯನ್ನು ಪ್ರತಿ ಲೇಖನದಲ್ಲೂ ಓದುಗ ಸವಿಯಬಹುದು. ಸಾಹಿತ್ಯಲೋಕದ ಯಾವುದೇ ಕಟ್ಟುಪಾಡುಗಳು, ಮುಲಾಜುಗಳೂ ಈ ಲೇಖಕರಿಗಿಲ್ಲ. ಅವರೆಂದೂ ತಮ್ಮನ್ನು ತಾವು ಲೇಖಕ ಎಂದು ಕರೆದುಕೊಳ್ಳುವುದಿರಲಿ, ಹಾಗೆಂದು ಭಾವಿಸಿಯೂ ಇಲ್ಲ. ನಾನೊಬ್ಬ ರೈತ, ಮಡ್ಡ, ದಡ್ಡ ಎಂದು ಹೇಳಿ ಎದುರಿಗೆ ಕುಳಿತಿರುವವರಲ್ಲಿ ನಗೆಯ ಬುಗ್ಗೆ ಉಕ್ಕಿಸುವ ಅವರೊಳಗೆ ಪ್ರಧಾನವಾಗಿ ಕಾಣುವುದು ರೈತನನ್ನೇ. ಆದರೆ ಮಿಶ್ರಬೆಳೆ ಪದ್ಧತಿಯಲ್ಲಿ ಉಪಉತ್ಪನ್ನಗಳಿರುವಂತೆ, ಪೆಜತ್ತಾಯರೊಳಗೆ ಒಬ್ಬ ಸಂಶೋಧಕ, ಒಬ್ಬ ಬರಹಗಾರ, ಒಬ್ಬ ಛಾಯಾಚಿತ್ರಕಾರ ಒಟ್ಟಾರೆಯಾಗಿ ಬಹುಮುಖೀ ಕಲಾವಿದನೊಬ್ಬನಿದ್ದಾನೆ. ಕೃಷಿ ಅವರ ಜೀವನದ ಸ್ಥಾಯಿಭಾವವಾದರೆ ಉಳಿದೆಲ್ಲವೂ ಸಂಚಾರೀ ಭಾವಗಳು!
ಸಾಹಿತ್ಯಲೋಕದ ಪರಿಭಾಷೆಯ ಬಗ್ಗೆ ಪೆಜತ್ತಾಯರ ಬರಹಗಳನ್ನು ಇಟ್ಟು ನೋಡಲು ಆಗುವುದೇ ಇಲ್ಲ. ಜೀವನದ ಅನುಭವಗಳನ್ನು ಯಾವುದೇ ಸಾಹಿತ್ಯಕ ಮಾನದಂಡಗಳಿಲ್ಲದೇ ನೇರವಾಗಿ, ಸರಳವಾಗಿ, ಆದರೆ ಕುತೂಹಲಕಾರಿಯಾಗಿ ಪ್ರಸ್ತುಪಡಿಸುವುದರಲ್ಲೇ ಅವರ ಬರಹದ ಸೊಗಸಿದೆ. ಪ್ರತೀ ಬರಹದ ಹಿಂದೆ ಅವರ ಹುಡುಕಾಟದ ಗುಣವನ್ನು ನಾವು ಕಾಣಬಹುದಾಗಿದೆ.
ಕೇವಲ ಒಂದು ವರ್ಷದ ಅವಧಿಯಲ್ಲಿ ಅವರು ಪಟ್ಟ ಕಷ್ಟಗಳು, ಎದುರಿಸಿದ ಸವಾಲುಗಳು, ಒಡನಾಡಿದ ಜನಸಮೂಹ ಎಲ್ಲವೂ ಈ ಬರಹದಲ್ಲಿ ಬಂದು ಹೋಗುತ್ತವೆ. ಯಾವುದೇ ರಸವತ್ತಾದ ಕಾದಂಬರಿಗಳ ಪಾತ್ರವನ್ನೂ ಮೀರಿಸಬಲ್ಲಂತಹ ಪಾತ್ರಗಳು ಅವರ ನಿಜಜೀವನದಲ್ಲಿ ಬಂದು ಹೋಗಿರುವುದನ್ನು ಕಾಣಬಹುದಾಗಿದೆ. ಗ್ರಾಮೀಣ ಬದುಕಿನ ಸೊಗಡು ಸಹಜವಾಗಿಯೇ ನಮಗೆ ದಕ್ಕುವುದು ಅವರು ನೆನಪಿನಲ್ಲಿಟ್ಟುಕೊಂಡು ಚಿತ್ರಿಸಿರುವ ಆ ಮುಗ್ಧ ಹಳ್ಳಿಗರ ಪಾತ್ರಗಳಿಂದ! ಕುವೆಂಪು, ಕಾರಂತ, ಗೊರೂರು, ತೇಜಸ್ವಿ, ದೇವನೂರು ಮೊದಲಾದವರ ಕಥೆ ಕಾದಂಬರಿಗಳಲ್ಲಿ ಬಂದು ಹೋಗುವ ನೂರಾರು ಪಾತ್ರಗಳ ಒಂದು ಪುಟ್ಟ ಮೆರವಣಿಗೆ ಈ ಕೃತಿಯ ಓದುಗನ ಮನಸ್ಸಿನಲ್ಲಿ ನಡೆದು ಹೋದರೆ ಆಶ್ಚರ್ಯವೇಲ್ಲ.
ಪ್ರತಿಯೊಂದು ಬರಹಗಳ ಬಗ್ಗೆ ಪ್ರತ್ಯೇಖವಾಗಿ ಇಲ್ಲಿ ಹೇಳುವ ಅಗತ್ಯವಿಲ್ಲ. ಪೆಜತ್ತಾಯರ ಬರಹಗಳಿಗೆ ಅಂತಹ ದಿಕ್ಸೂಚಿಯ ಅಗತ್ಯವೂ ಇಲ್ಲ. ಅಷ್ಟು ಚೆನ್ನಾಗಿ ಓದಿಸಿಕೊಂಡು ಹೋಗುವ ಅವರ ಲೇಖನಗಳ ಬಗ್ಗೆ ಬರೆದು ಪರಿಚಯ ಮಾಡಿಕೊಡುವುದೆಂದರೆ ಅದು ಅವರ ಬರಹಗಳಿಗೆ ಅಪಚಾರ ಮಾಡಿದಂತೆ ಎಂಬ ಎಚ್ಚರ ನನಗಿದೆ.


 ಸರ್ ನೀವು ರಿಟಾಯರ್ಡ್ ರೈತರಾದರೆ, ನಾನು ವೀಕೆಂಡ್ ರೈತ ಎಂದು ನಾನೊಮ್ಮೆ ಬರೆದಿದ್ದೆ. ಅದನ್ನು ಓದಿ ಹೌದು ನಾನು ದೈಹಿಕವಾಗಿ ರಿಟಾಯರ್ಡ್; ಆದರೆ ಮಾನಸಿಕವಾಗಿ ಎಂದೆಂದಿಗೂ ರೈತನೇ! ಈಗ ನೋಡಿ ಇಲ್ಲೇ ಕುಳಿತುಕೊಂಡು, ಕೃತಕವಾಗಿ ಕಾಫಿಯನ್ನು ಒಣಗಿಸುವ ಯಂತ್ರೋಪಕರಣವನ್ನು ನನ್ನ ತೋಟದಲ್ಲಿ ಹಾಕಿಸುತ್ತಿದ್ದೇನೆ ಎಂದು ಜೋರಾಗಿ ನಕ್ಕಿದ್ದರು. ವಯೋಸಹಜವಾದ ದೈಹಿಕ ನಿಶ್ಯಕ್ತಿಯಿಂದ ಬಳಲುತ್ತಿದ್ದರೂ, ಬೆಂಗಳೂರಿನಲ್ಲೇ ನೆಲೆಸಿದ್ದರೂ, ಅವರ ತೋಟದ ಒಂದಿಂಚೂ ಅವರ ಕಣ್ಣೆದುರಿನಿಂದ ಮರೆಯಾಗಿಲ್ಲ. ಅಷ್ಟೊಂದು ದೊಡ್ಡ ತೋಟದ ಪ್ರತಿಯೊಂದನ್ನೂ ಅವರು ನಿಭಾಯಿಸುವ ರೀತಿ ನನ್ನಂತಹ ಕಿರಿಯರಿಗೆ ಆದರ್ಶನೀಯ. ಅವುಗಳೆಲ್ಲದರ ನಡುವೆ ಈಗಲೂ, ಜ್ಞಾನದ ಹುಡುಕಾಟವನ್ನೂ ಬಿಟ್ಟಿಲ್ಲ. ಚೀನಾದ ಸಿಲ್ಕ್ ರೂಟ್ ಬಗ್ಗೆ ಬರೆಯುತ್ತಾರೆ. ಕಾಫಿಗಿಡದ ಖಾಯಿಲೆಯ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಹುಡುಕಿ ತೆಗೆದು ಲೇಖನ ಬರೆಯುತ್ತಾರೆ. ನೇಪಾಳ ಪ್ರವಾಸದ ನೆನಪನ್ನೂ ಬಿಚ್ಚಿಡುತ್ತಾರೆ. ಹೀಗೆ ಪೆಜತ್ತಾಯ ಅವರದು ದಣಿವರಿಯದ ದೊಡ್ಡ ಜೀವ. ತಾವು ರೈತರಾಗಿ, ತಮ್ಮ ರೈತ ಬದುಕಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ ನನ್ನಂತಹ ಕಿರಿಯರ ಮೇಲೆ ಪ್ರಭಾವ ಬೀರುವ ವ್ಯಕ್ತಿತ್ವ ಪೆಜತ್ತಾಯ ಅವರದು. ಅವರ ಪ್ರಭಾವದಿಂದಲೇ ನಾನು ಇಂದು ವಾರಾಂತ್ಯದ ರೈತನಾಗಿ, ನನ್ನ ತೋಟದಲ್ಲಿ ದುಡಿಮೆಯ ಸಂತೋಷವನ್ನು ಅನುಭವಿಸುತ್ತಿದ್ದೇನೆ.
(ರೈತನಾಗುವ ಹಾದಿಯಲ್ಲಿ ಕೃತಿಯ ಸಂಪಾದಕರ ಮಾತುಗಳು)

Saturday, April 04, 2015

ಶಿವರಾಮು ಕಾಡನಕುಪ್ಪೆ ಅವರ ’ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳು’

ಮೊನ್ನೆ ಊರಿನಲ್ಲಾದ ಹತ್ತಿರದ ಬಂಧುವೊಬ್ಬರ ಸಾವು, ಅಂತ್ಯಸಂಸ್ಕಾರ ಮುಗಿಸಿಕೊಂಡು ಮಂಗಳವಾರ ಬೆಳಿಗ್ಗೆ ಕಾಲೇಜಿಗೆ ಬಂದಾಗ ಟೇಬಲ್ಲಿನ ಮೇಲೆ ಪುಸ್ತಕವೊಂದು ಕುಳಿತಿತ್ತು. ಮೈಸೂರಿನಿಂದ ಹಿರಿಯರಾದ ಶ್ರೀರಾಮ್ ಅವರು ವಿಶ್ವಾಸಪೂರ್ವಕವಾಗಿ ಕಳುಹಿಸದ್ದ ಆ ಪುಸ್ತಕವನ್ನು ಕೈಗೆತ್ತಿಕೊಂಡೆ. ’ತೇಜಸ್ವಿಯನ್ನು ಹುಡುಕುತ್ತಾ…..’ ಕೃತಿ ಬಿಡುಗಡೆಯ ಸಂದರ್ಭದಲ್ಲೇ ಶ್ರೀಯುತ ಶ್ರೀರಾಮ್ ಅವರು ಹೇಳಿದ್ದ, ’ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳು’ ಪುಸ್ತಕದ ವಿಷಯವನ್ನು, ಕಾಲೇಜಿನಲ್ಲಿ ನಡೆಯುತ್ತಿದ್ದ ಸಮಾರಂಭಗಳು, ನನ್ನ ತಿಂಗಳ ಮಗಳ ಹಾರೈಕೆ, ಊರಿನ ಜಂಜಡಗಳ ನಡುವೆ ಮರೆತೇ ಬಿಟ್ಟಿದ್ದೆ!
ಹೌದು. ಈ ಪುಸ್ತಕದ ಹೆಸರು. ’ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳು’. ಲೇಖಕರು ಹಿರಿಯರಾದ ಶ್ರೀ ಶಿವರಾಮು ಕಾಡನಕುಪ್ಪೆ. ಪುಸ್ತಕದ ಕಟ್ಟು ಬಿಚ್ಚಿದೊಡನೆ ಓದಲು ಆರಂಬಿಸಿದ್ದೆ. ಕೇವಲ ಒಂದೆರಡು ಗಂಟೆಯೊಳಗೆ ಇಡೀ ಪುಸ್ತಕವನ್ನು ಓದಿ ಮುಗಿಸಿದ್ದೆ. ಆಗ, ಅದೆಷ್ಟೊ ಬಾರಿ ನನಗೆ ಅರಿವಿಲ್ಲದೆ ಕಣ್ಣಿರ ಕೋಡಿ ಹರಿಸಿದ್ದೆ!
ಶ್ರೀ ಶಿವರಾಮು ಕಾಡನಕುಪ್ಪೆ ಅವರ ಬಗ್ಗೆ ನನಗೆ ಗೊತ್ತಿತ್ತು. ಆದರೆ ಅವರನ್ನೆಂದು ನಾನು ಭೇಟಿಯಾಗಿಲ್ಲ. ಆದರೆ, ಪುಸ್ತಕ ಓದತೊಡಗಿದಂತೆ ಇಡೀ ಕಥೆಯನ್ನು ಅವರೇ ನನ್ನ ಮುಂದೆ ನಿಂತು, ಆಸ್ಪತ್ರೆಯಲ್ಲಿ ಮಲಗಿ, ವೀಲ್ ಚೇರಿನಲ್ಲಿ ಕುಳಿತು, ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿಕೊಂಡೇ ನನಗೆ ಹೇಳುತ್ತಿದ್ದಾರೆನಿಸಿ ಮನಸ್ಸು ಭಾರವಾದುದ್ದು ಅದೆಷ್ಟು ಸಲವೊ!
ಕೃತಿಯ ಶೀರ್ಷಿಕೆಯೇ ಹೇಳುತ್ತದೆ: ಈ ಪುಸ್ತಕ ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳ ಕಾಲ ಕಳೆದ ವ್ಯಕ್ತಿ, ತಾನು ಆಸ್ಪತ್ರೆಯಲ್ಲಿ ತನ್ನನ್ನು ತಾನು ಕಂಡುಕೊಂಡ, ಆ ವಾತಾವರಣದಲ್ಲಿ ಪಡೆದ ಅನುಭಗಳ ಕೃತಿಯೆಂದು. ಆ ವ್ಯಕ್ತಿ ಸ್ವತಃ ಶ್ರೀ ಶಿವರಾಮ ಕಾಡನಕುಪ್ಪೆಯವರೆ! ಸರ್ ಸ್ವತಃ ಬರಹಗಾರರು. ಆಸ್ಪತ್ರೆಯಲ್ಲಿ ರೋಗಿಯಾಗಿ ಅಗಾಧ ನೋವಿನ ನಡುವೆ ಮಲಗಿದ್ದರೂ ಅವರ ಸೃಜನಶೀಲ ಮನಸ್ಸು ಎಚ್ಚರವಾಗಿಯೇ ಇತ್ತು! ತನ್ನ ಸುತ್ತಮುತ್ತಲಿನ ಎಲ್ಲವನ್ನೂ ತನ್ನ ಸ್ಮೃತಿಕೋಶದಲ್ಲಿ ದಾಖಲಿಸಿಕೊಳ್ಳುತ್ತಿತ್ತು. ಅದರ ಮೂರ್ತರೂಪವೇ ಈ ಕೃತಿ.
ಐಸಿಯುನಲ್ಲಿ ಕಳೆದ ದಿನಗಳಲ್ಲಿ ಅವರ ಮನಸ್ಸು ದಾಖಲಿಸಿಕೊಂಡಿರುವ ಮರಿರಾಜಕಾರಣಿಯ ಮಾತುಗಳು ಒಂದು ಕಡೆ ನಗೆ ಉಕ್ಕಿಸುತ್ತಿದ್ದರೆ ಇನ್ನೊಂದು ಕಡೆ ನಮ್ಮ ವ್ಯವಸ್ಥೆಯ ಕರಾಳರೂಪವಾಗಿ ಗಾಬರಿಹುಟ್ಟಿಸುತ್ತವೆ! ಜೊತೆಗೆ, ಪಕ್ಕದ ಬೆಡ್ಡಿನಲ್ಲಿದ್ದ ಪುಟ್ಟಮಗು ಮತ್ತು ಅದನ್ನು ನೋಡಿಕೊಳ್ಳುವ ಶುಶ್ರೂಷಕಿಯರು, ಅವರ ಸಹಾಯಕ್ಕೆ ನಿಂತಿದ್ದ ಮಗುವಿನ ತಾಯಿ, ಅವರ ನಡುವಿನ ಸಂಭಾಷಣೆ ನಮ್ಮನ್ನು ಕರಗಿಸಿಬಿಡುತ್ತವೆ. ಐಸಿಯುನಲ್ಲಿದ್ದ ಏಕತಾನತೆ, ಕ್ಷೌರಿಕ ಮುನಿಸ್ವಾಮಿ(ಸೋಮಶೇಖರ)ಯ ಆಗಮನದಿಂದ ತೊಲಗಿ ಲವಲವಿಕೆ ಮೂಡಿದ್ದನ್ನು ಓದುವಾಗ, ಇದ್ದಕ್ಕಿದ್ದಂತೆ ಕೃತಿ ಬೇರೆಯೇ ಆಯಾಮ ಪಡೆದುಕೊಳ್ಳುವುದನ್ನು ನೋಡಿ ಬೆರಗು ಮೂಡುತ್ತದೆ. ಐಸಿಯುನಲ್ಲಿ ಒಬ್ಬ ವ್ಯಕ್ತಿ ಶೇವಿಂಗ್ ಮಾಡಿಸಿಕೊಳ್ಳತ್ತ ಕುಳಿತಿರುವ ಚಿತ್ರ ಕಣ್ಣಿಗೆ ಕಟ್ಟುತ್ತದೆ! ಕ್ಷೌರ ಮತ್ತಿತರ ಕೆಲಸಗಳಿಂದಾಗಿ ತಮ್ಮ ಸಂಪರ್ಕಕ್ಕೆ ಬರುತ್ತಿದ್ದವರ ವೃತ್ತಿ, ಬದುಕು, ಇಂತಹ ಘಟನೆಗಳ ಬಗ್ಗೆಯೂ ತಿಳಿದುಕೊಳ್ಳುತ್ತಾ ಕ್ರಿಯಾಶೀಲರಾಗುವ ಶಿವರಾಮು ಸರ್ ಅವರ ಜಾಗೃತ ಮನಸ್ಥಿತಿ ಗಮನ ಸೆಳೆಯುತ್ತದೆ. ನಮ್ಮ ಬದುಕು ಅದೆಷ್ಟು ಇಷ್ಟ-ಕಷ್ಟಗಳನ್ನು ನಂಬಿಕೆಗಳನ್ನು, ಆಚರಣೆಗಳನ್ನು ಕಟ್ಟಿಕೊಂಡು ರೂಪಗೊಂಡಿರುತ್ತದೆ. ಆದರೆ ಆಸ್ಪತ್ರೆಯಲ್ಲಿ ಮಲಗಿ, ಆ ಏಕಾಂತತೆಯನ್ನು ಅನುಭವಿಸಿ ಮರುಜನ್ಮ ಪಡೆಯುವುದರಲ್ಲಿ ಅವುಗಳಲ್ಲಿ ಕೆಲವು ನಾಶವಾಗಿರುತ್ತವೆ, ಕೆಲವು ಮರುವ್ಯಾಖ್ಯಾನಕ್ಕೊಳಪಟ್ಟಿರುತ್ತವೆ! ಒಟ್ಟಾರೆ ಮನುಷ್ಯ ಹೊಸರೂಪವನು ಪಡೆದಿರುತ್ತಾನೆ. ಇದನು ಸಾಂಕೇತಿಕವಾಗಿ, ಈ ಶೆವಿಂಗ್ ಘಟನೆ ನಿರೂಪಿಸುತ್ತದೆ. ಎಂಐಸಿಯು ಅನ್ನು ಸಾವು ಬದುಕಿನ ತ್ರಿಶಂಕು ನೆಲೆಯೆಂದು ಗುರುತಿಸಿರುವ ಅವರ ಮಾತು ಎಷ್ಟೊಂದು ಅರ್ಥ ಆಯಾಮಗಳನ್ನು ಪಡೆದುಕೊಳ್ಳುತ್ತದೆ! ಇಂತಹ ಹಲವಾರು ಘಟನೆಗಳನ್ನು ಓದಿದ ಯಾರೇ ಆಗಲಿ, ಶಿವರಾಮು ಸರ್ ಅವರ ಸೃಜನಶೀಲ ಮನಸ್ಸಿಗೆ ಒಂದು ಅಭಿನಂದನೆಯನ್ನು ಸಲ್ಲಿಸಲೇಬೇಕು.
ಪುಸ್ತಕದ ಅರ್ಪಣೆಯಾಗಿರುವುದೇ ’ಜಗತ್ತಿನಾದ್ಯಂತ ಸಾವಿರಾರು ಆಸ್ಪತ್ರೆಗಳಲ್ಲಿ ಹಗಲಿರುಳು ಕೆಲಸ ಮಾಡುತ್ತಿರುವ ಲಕ್ಷಾಂತರ ಬ್ರದರ್‌ಗಳ ಮತ್ತು ಸಿಸ್ಟರ್‌ಗಳ ನಿಸ್ವಾರ್ಥ ನರ್ಸಿಂಗ್ ಸೇವೆಗೆ’! ಆಸ್ಪತ್ರೆಯಿಂದ ಮನೆಗೆ ಮರಳುತ್ತಿರುವ, ಗುಣಮುಖವಾಗಿರುವ ವ್ಯಕ್ತಿಯಿಂದ ಹಾಗೂ ಆ ವ್ಯಕ್ತಿಯ ಕಡೆಯವರಿಂದ ಸಲ್ಲುವ, ಕೇವಲ ಒಂದು ’ಥ್ಯಾಂಕ್ಸ್’ನಲ್ಲಿ ಮುಗಿದು ಹೋಗುವ ಸಂಬಂಧ ಇಲ್ಲಿ ಕೃತಿ ಅರ್ಪಣೆಯವರೆಗೂ ಬಂದು ನಿಂತಿದೆ! ಆಸ್ಪತ್ರೆಯಲ್ಲಿ ರೋಗಿಗಳಾಗಿಯೊ, ಅವರ ಸಹಾಯಕ್ಕೆ ಇರುವವರಾಗಿಯೊ ಒಂದಷ್ಟು ದಿನಗಳ ಕಾಲ ಕಳೆದಿರುವವರೆಗೆ ಈ ಮಾತು ಚೆನ್ನಾಗಿ ಅರ್ಥವಾಗುತ್ತದೆ. ಇಂದು ಹೆಚ್ಚಿನ ಆಸ್ಪತ್ರೆಗಳಲ್ಲಿ, ಡಾಕ್ಟರುಗಳ ಕಾರ್ಯನಿರ್ವಹಣೆ, ಬ್ರದರ್‍ಸ್ ಮತ್ತು ಸಿಸ್ಟರ್‍ಸ್ ಇವರುಗಳ ಕೆಲಸಕ್ಕೂ ಆಸ್ಪತ್ರೆಯ ಆಡಳಿತ ವರ್ಗದ ಹಣಕಾಸು ವಿಚಾರಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಅವರ ಮನಸ್ಸು ಪೂರ್ಣ ರೋಗಿಯನ್ನು ಗುಣಪಡಿಸುವುದರ ಕಡೆಗಷ್ಟೇ ಇರುತ್ತದೆ. ಅವರವರು ತಮ್ಮ ತಮ್ಮ ಪಾಲಿನ ಕೆಲಸವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಿಕೊಂಡು ಹೋಗುತ್ತಿರುತ್ತಾರೆ. ಯಾವ ವ್ಯವಸ್ಥೆ, ಹಣಸುಲಿಗೆಯ ಯೋಜನೆ ಎಂದು ಕೆಲವರು ಆಪಾದಿಸುತ್ತಾರೊ ಅದೇ ವ್ಯವಸ್ಥೆಯ ಮಾನವೀಯ ಮುಖ ಇದಾಗಿದೆ!
ಕಳೆದ ತಿಂಗಳು ನಡೆದ ಒಂದು ಪುಟ್ಟ ಅಪಘಾತದಲ್ಲಿ ನನ್ನ ಮಗಳ ಒಂದು ಬೆರಳೇ ತುಂಡಾಗಿ ಹೋಯಿತು. ಆಗ ಶಸ್ತ್ರಚಿಕಿತ್ಸೆಗಾಗಿ ನಾನೂ ಆಸ್ಪತ್ರೆಯಲ್ಲಿ ಮಗಳ ಜೊತೆಯಲ್ಲಿ ಎರಡು ದಿವಸ ಕಳೆದೆ. ಈಗಲೂ ನನಗೆ ಆ ಆಸ್ಪತ್ರೆಯ (ಹಾಸ್ಮ್ಯಾಟ್) ಸಿಸ್ಟರ್‍ಸುಗಳ, ವೈದ್ಯರುಗಳ ನಗುಮೊಗದ ಸೇವೆ ಕಣ್ಣಿಗೆ ಕಟ್ಟಿದಂತಿದೆ. ಅಲ್ಲಿ ಕೇಳುತ್ತಿದ್ದ ’ಅಣ್ಣಾ…, ಅಕ್ಕಾ…’ ಎಂಬ ಕೂಗುಗಳು ಆಗ ನನಗೆ ಕಾಣಿಸದಿದ್ದ ಆಯಾಮಗಳನ್ನು, ಈ ಪುಸ್ತಕದಲ್ಲಿ ದಾಖಲಾಗಿರುವ ಅಣ್ಣ… ಅಕ್ಕಾ… ಕೂಗುಗಳು ಕಾಣಿಸಿವೆ! ಅವರೆಲ್ಲರನ್ನು ನಾನು ಮತ್ತೆ ಮತ್ತೆ ಪ್ರೀತಿಯಿಂದ ಸ್ಮರಿಸಿಕೊಳ್ಳುವಂತೆ ಮಾಡಿವೆ.
ಐಸಿಯುನಲ್ಲಿ ಮಲಗಿದ್ದ ಶಿವರಾಮು ಅವರಿಗೆ ಒಮ್ಮೆ ತಾತ್ವಿಕ ಯೋಚನೆಗಳೇ ಮನಸ್ಸನ್ನು ತುಂಬಿಕೊಳ್ಳುತ್ತವೆ. ತಾನೇನಾದರು ಸತ್ತರೆ, ತನ್ನ ಅಂತ್ಯಸಂಸ್ಕಾರದ ವಿಚಾರದಲ್ಲಿ ಮನೆಯಲ್ಲಿ ನಡೆಯಬಹುದಾದ ಘಟನಾವಳಿಗಳನ್ನು ಕಣ್ಣಮುಂದೆ ತಂದುಕೊಳ್ಳುತ್ತಾರೆ. ಅದರಲ್ಲಿ ಒಂದಿಷ್ಟೂ ಉತ್ಪ್ರೇಕ್ಷೆಯಿಲ್ಲ. ಏಕೆಂದರೆ ನೆನ್ನೆಯಷ್ಟೇ ನಾನು ಒಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಬಂದಿದ್ದೆ. ಆ ಸಂದರ್ಭದಲ್ಲಿ ತಲೆಗೊಂದು ಮಾತನಾಡುವವ ಬಂಧುಗಳು, ಅನಿಸಿದ್ದೆಲ್ಲವನ್ನು ಸಲಹಾರೂಪದಲ್ಲಿ ಮಂಡಿಸುವವರು, ಸತ್ತವರ ವ್ಯಕ್ತಿತ್ವವನ್ನು ದೈವತ್ವಕ್ಕೇರಿಸುವ ಅತಿಭಾವುಕರ ನಡುವೆ, ಸತ್ತವರ ಇಡೀ ಬದುಕನ್ನು ಕೇವಲ ಆ ಅರ್ಧ ಗಂಟೆಯಲ್ಲಿ ಪೋಸ್ಟಮಾರ್‍ಟಮ್ ಮಾಡುವವರು ಎಲ್ಲವನ್ನೂ ನೆನ್ನೆಯಷ್ಟೇ ಕಂಡಿದ್ದೆ. ಅಬ್ಬಾ… ಸಾವೇ, ನೀನು ಕ್ರೂರಿ, ನೀನು ಬಿಡುಗಡೆ, ನೀನು ಪ್ರಭಾವಿ, ನೀನು ಪ್ರೇರಕ ಶಕ್ತಿ, ಇನ್ನೂ ಏನೇನೊ!
ಸಾಮಾನ್ಯವಾಗಿ ನಾನು ಒಂದು ಪುಸ್ತಕವನು ಕೈಗೆತ್ತಿಕೊಂಡರೆ, ಮೊದಲು ಅದರ ಮುನ್ನುಡಿ ಹಿನ್ನುಡಿಯ ಮೇಲೆ ಕಣ್ಣಾಡಿಸುತ್ತೇನೆ. ಆಶ್ಚರ್ಯವೆಂದರೆ, ಈ ಕೃತಿಯನ್ನು ಪೂರ್ಣ ಓದಿದ ಮೇಲೆಯೇ ನನಗೆ ಅದರ ಹಿನ್ನುಡಿ-ಮುನ್ನುಡಿಗಳ ನೆನಪಾಗಿದ್ದು. ಕೃತಿಗೆ ಮುನ್ನುಡಿ ಬರೆದಿರುವ ರಾಗೌ ಅವರು ’ಶಿವರಾಮು ಕಾಡನಕುಪ್ಪೆ ಅವರ ಆಸ್ಪತ್ರೆಯ ಅನುಭವದ ಈ ಕಥನವನ್ನು ಕಂಬನಿಯ ಮಿಡಿತಗಳಿಲ್ಲದೆ ಓದುವುದು ಕಷ್ಟ’ ಎಂಬ ಮಾತು, ಈ ಕೃತಿಯನ್ನು ಓದುವವರೆಲ್ಲರ ಮಾತೂ ಕೂಡಾ ಹೌದು!
ಇನ್ನು ಲೇಖಕರ ಮಾತು ಮತ್ತು ಕೃತಜ್ಞತೆಗಳ ಅರ್ಪಣೆಯ ಭಾಗವನ್ನು ಓದುತ್ತಿದ್ದಂತೆಯೇ ಹಲವಾರು ನಿತ್ಯಸತ್ಯಗಳು ಓದುಗನಿಗೆ ಗೋಚರಿಸಿದರೆ ಆಶ್ಚರ್ಯಪಡಬೇಕಾಗಿಲ್ಲ. ಇಲ್ಲಿ ಉಲ್ಲೇಖಿತರಾಗಿರುವವರು ತಮ್ಮ ಅಧಿಕಾರ-ಅಂತಸ್ತು, ಪೀಠ-ಕಿರೀಟ, ಬಿರುದು-ಬಾವಲಿಗಳನ್ನು ಕಳೆದುಕೊಂಡು ಕೇವಲ, ಅತ್ಯಂತ ಅಂತಃಕರಣವುಳ್ಳ ಮನುಷ್ಯರಾಗಿ ನಮಗೆ ಗೋಚರಿಸುತ್ತಾರೆ. ಈ ಜಗತ್ತು ನಿಂತಿರುವುದೇ ಪರಸ್ಪರ ನಂಬಿಕೆಯ ಮೇಲೆ. ಅಂತಹ ನಂಬಿಕೆಯ ಬಲವೇ ಶ್ರೀಯುತರಿಗೆ ಮರುಜನ್ಮ ನೀಡಿದೆ. ಜೊತೆಗೆ ಇಂತಹ ಮಹತ್ತಾದ ಕೃತಿಯನ್ನೂ ನಮ್ಮ ಕೈಗಿತ್ತಿದೆ. ಕೃತಿಯ ಓದು ನಮ್ಮ ಬದುಕಿನೆಡೆಗಿನ, ವ್ಯಕ್ತಿಗಳೆಡೆಗಿನ ದೃಷ್ಟಿಕೋನಕ್ಕೆ ಹೊಸತೊಂದು ಆಯಾಮವನ್ನು ನೀಡುತ್ತದೆ.
ಈ ಕೃತಿಯ ಇನ್ನೊಂದು ಹೆಚ್ಚುಗಾರಿಕೆಯೆಂದರೆ, ಪುಸ್ತಕದಲ್ಲಿ ಉಲ್ಲೇಕವಾಗಿರುವ ವೈದ್ಯಲೋಕದ ಪಾರಿಭಾಷಿಕ ಪದಗಳಿಗೆ ಅರ್ಥಪೂರ್ಣವಾದ ಟಿಪ್ಪಣಿಗಳನ್ನು ಒದಗಿಸಿರುವುದು. ಇದು ಕೃತಿಯನ್ನು ಸಹೃದಯನಿಗೆ ಮುಟ್ಟಿಸುವಲ್ಲೂ ಹಾಗೂ ಓದುಗನ ವೈದೈಕೀಯ ಅನುಭವಕೋಶವನ್ನು ವಿಸ್ತರಿಸುವಲ್ಲೂ ನೆರವಾಗಿದೆ. ಡಾ. ಸುಶಿಕಾ ಕಾಡನಕುಪ್ಪೆಯವರ ಶ್ರಮಕ್ಕೆ, ಕಾಳಜಿಗೆ, ಅವರು ತಂದೆಯವರ ಮೇಲಿಟ್ಟಿರುವ ಪ್ರೀತಿಗೆ ಅಭಿನಂದನೆಗಳು ಸಲ್ಲಲೇಬೇಕು.
ಯಾವುದೇ ಕೃತಿಯನ್ನು ಓದಿದರೂ ಅದರ ಲೇಖಕರಿಗೆ ಫೊನಾಯಿಸಿ ಮಾತನಾಡುವ ಅಭ್ಯಾಸವೇನು ನನಗಿಲ್ಲ. ಆದರೆ, ಈ ಕೃತಿಯನ್ನು ಓದಿದ ತಕ್ಷಣ ನನಗೆ ಸರ್ ಜೊತೆ ಮಾತನಾಡಬೇಕೆನ್ನಿಸಿ ಫೊನಾಯಿಸಿಬಿಟ್ಟೆ. ದುಃಖ ಉಮ್ಮಳಿಸಿ ಬರುತ್ತಿದ್ದ ನನ್ನ ಮಾತಿನ ನಡುವೆಯೇ ಅವರ ಮಾತಿನಲ್ಲಿದ್ದ ದೃಢತೆ, ಒಂದು ರೀತಿಯ ಛಲ, ಆತ್ಮವಿಶ್ವಾಸ ನನ್ನನ್ನು ಬೆರಗಾಗಿಸಿತ್ತು. ರೋಗಿಯೊಬ್ಬ ತನ್ನ ಖಾಯಿಲೆ, ಅದರ ಚಿಕಿತ್ಸೆಯ ಅನುಭವಗಳನ್ನು ಕೇವಲ ಒಂದು ವರದಿಯಂತೆ, ದಿನಚರಿಯಂತೆ ದಾಖಲಿಸುವ ಬದಲು ಅದನ್ನು ಒಂದು ಸೃಜನಶೀಲ ಕೃತಿಯಂತೆ ಸೃಷ್ಟಿಸಿದ್ದರ ಬಗ್ಗೆ ಅವರು ಮಾತನಾಡಿದರು. ಈ ಕೃತಿಯನ್ನು ಓದಿದ ಯಾರಿಗೇ ಆಗಲಿ, ಅವರ ಈ ಮಾತು ಅನುಭವವೇದ್ಯವಾಗಲಿದೆ.
ಶಿವರಾಮು ಸರ್ ಅವರ ಹಾರೈಕೆಯಲ್ಲಿ, ಈ ಕೃತಿ ಒಡಮೂಡುವಲ್ಲಿ ಅವರ ಕುಟುಂಬವರ್ಗದವರ ಶ್ರಮ, ಪ್ರೀತಿ ಕಾಳಜಿ ಅನುಕರಣೀಯ ಆದರ್ಶ. ಅವರೂ, ಅವರ ಅಪಾರ ಸ್ನೇಹ ಸಮುದಾಯದವರೂ ಅಭಿನಂದನಾರ್ಹರು.
ಕೃತಿಯ ಒಂದು ಕಡೆ ದಾಖಲಾಗಿರುವಂತೆ, ನಿವೃತ್ತರಾದ ನಂತರ ಒಂದೆರಡು ವೈಚಾರಿಕ ಕೃತಿಗಳು ಹಾಗೂ ನಾಲ್ಕೈದು ಕಾದಂಬರಿಗಳನ್ನು ಬರೆಯಬೇಕೆಂದುಕೊಂಡಿದ್ದರಂತೆ. ಶಿವರಾಮು ಸರ್ ಅವರ ಕನಸು ಬೇಗ ಈಡೇರಲಿ. ಈಡೇರಿಯೇ ಈಡೇರುತ್ತದೆ ಎಂಬುದಕ್ಕೆ ಮುನ್ನಡಿಯ ರೂಪದಲ್ಲಿ ಈ ಕೃತಿ ಸಾಕ್ಷಿಯನ್ನೊದಗಿಸುತ್ತಿದೆ.
’ಸರ್, ನಿಮ್ಮ ಕನಸು ಈಡೇರಲಿ, ಆರೋಗ್ಯ ವೃದ್ಧಿಸಲಿ’ ಎಂದು ಇಲ್ಲಿಂದಲೇ ’ಚಿತ್ತಪೋಮಂಗಳದ ರಕ್ಷೆಯಂ’ ಕಟ್ಟುತ್ತಿದ್ದೇವೆ.

Wednesday, March 18, 2015

ಕುವೆಂಪು ತೇಜಸ್ವಿಗೆ ಬರೆದ ಒಂದು ಪತ್ರ!

ಶ್ರೀ
ಕುವೆಂಪು
’ಉದಯರವಿ’
ವಾಣೀವಿಲಾಸಪುರಂ, ಮೈಸೂರು
ತಾ|| ೨೪.೧.’೫೬
ಪ್ರೀತಿಯ ಚಿರಂಜೀವಿ ತೇಜಸ್ವಿಗೆ,
ನೀನು ತಾರೀಖು ಹಾಕದೆ ಬರೆದ ಕಾಗದ ಕೈಸೇರಿತು. ಅದನ್ನೋದಿ ಆಶ್ಚರ್ಯವಾಯಿತು; ಆನಂದವಾಯಿತು; ಸ್ವಲ್ಪ ಚಿಂತೆಗೂ ಕಾರಣವಾಯಿತು.
ನಾನು ಬರೆಯುತ್ತಿರುವ ಈ ಕಾಗದವನ್ನು ನೀನು ಹಾಳುಮಾಡದೆ ನಾಲ್ಕಾರು ಸಾರಿ ಶಾಂತಮನಸ್ಸಿನಿಂದ ಓದಿ ಇಟ್ಟುಕೊ; ಅಥವಾ ನೀನು ಬರುವಾಗ ನನಗೇ ತಂದುಕೊಡು.
ನಾವೆಲ್ಲರೂ ಇಲ್ಲಿ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮ ಎಂದು ಕೇಳಿ ಸಂತೋಷ. ನಿನ್ನ ರತ್ನಾಕರ ಮಾವ ಕಾಗದ ಬರೆದಿದ್ದರು - ನಾಯಿಮರಿಗೆ ಹುಚ್ಚು ಹಿಡಿದಂತೆ ಆಗಿತ್ತು ಎಂದು ನಿನ್ನ ಜಯಕ್ಕ ಕಾಗದ ಬರೆದಿದ್ದರಂತೆ - ನೀನೇನೋ ಇಂಜಕ್‌ಷನ್ ತೆಗೆದುಕೊಳ್ಳುತ್ತಿದ್ದೀಯ ಎಂದು! ಏನು ಸಮಾಚಾರ? ನಿನ್ನ ಕಾಗದದಲ್ಲಿ ಆ ವಿಚಾರವೇ ಇಲ್ಲವಲ್ಲ.
ನೀನು ಹಿಂದೆ ಕಳುಹಿಸಿದ ಕವನಗಳು ತಲುಪಿದವು. ಅವನ್ನು ಪ್ರೀತಿಯಿಂದಲೂ ಹೆಮ್ಮೆಯಿಂದಲೂ ಓದಿದ್ದೇನೆ; ಇಟ್ಟುಕೊಂಡಿದ್ದೇನೆ. ಆ ವಿಚಾರವಾಗಿ ನಿನಗೆ ಬರೆಯಬೇಕೆಂದಿದ್ದೆ. ಅಷ್ಟರಲ್ಲಿ ನಿನ್ನಿಂದ ಮತ್ತೊಂದು ಕಾಗದ ಬಂದಿತು.
ನಿನ್ನ ಆ ಕವನಗಳು ಹಸುಳೆಯ ಮೊದಲ ತೊದಲಂತೆ ಮನೋಹರವಾಗಿವೆ. ಆ ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸುತ್ತೇನೆ. ಅಂದು ನಾನು ನಿನಗೆ, ತಿಳಿಸಿದಂತೆ - ನೀನು ಕನ್ನಡ ಛಂದಸ್ಸಿನ ಸ್ಥೂಲ ಪರಿಚಯವನ್ನಾದರೂ ಮಾಡಿಕೊಳ್ಳಬೇಕು. ಏಕೆಂದರೆ ಸಾಹಿತ್ಯದ ಭಾಷೆಗೆ ವ್ಯಾಕರಣ ಶುದ್ಧಿ ಹೇಗೆ ಅವಶ್ಯಕವೋ ಹಾಗೆಯೇ ಕಾವ್ಯಕ್ಕೆ ಛಂದಸ್ಸಿನ ಅರಿವು ಬೇಕು. ಬೈಸಿಕಲ್ಲನ್ನು ಚೆನ್ನಾಗಿ ಕಲಿತ ಮೇಲೆ ಕೈಬಿಟ್ಟೋ ಕಾಲುಬಿಟ್ಟೋ ಸವಾರಿ ಮಾಡುವ ಪ್ರವೀಣನಂತೆ ನುರಿತ ಮೇಲೆ ಕವಿ ಛಂದಸ್ಸನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಸ್ವಾತಂತ್ರ್ಯ ಪಡೆಯುತ್ತಾನೆ. ಆದರೆ, ಮೊದಲು ಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು. ನನ್ನ ಅನುಭವವನ್ನೆ ನಿನಗೆ ಹೇಳುತ್ತಿದ್ದೇನೆ.
ಛಂದಸ್ಸು ಮಾತ್ರವಲ್ಲದೆ ಭಾಷೆಯೂ ಮುಖ್ಯ. ಹಾಗೆಯೇ ಆಲೋಚನೆ ಭಾವಗಳೂ ಮುಖ್ಯ. ಭಾಷೆಯನ್ನು ಪೂರ್ವಸಾಹಿತ್ಯಾಭ್ಯಾಸದಿಂದ ಪಡೆಯಬೇಕು. ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿಕೊಡುತ್ತವೆ. ವಿಚಾರ ಬಹಳ ದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದ್ದೇನೆ.
ಒಟ್ಟಿನಲ್ಲಿ ಹೇಳುವುದಾದರೆ, ನಿನ್ನ ಪ್ರಥಮ ಪ್ರಯತ್ನದಲ್ಲಿಯೆ, ನೀನು ದೃಢ ಮನಸ್ಸಿನಿಂದ ಕಾರ್ಯೋನ್ಮುಖಿಯಾದರೆ ಮುಂದೆ ಒಳ್ಳೆಯ ಫಲವಾಗುವ ಸೂಚನೆ ಇದೆ.
ನೀನು ಮೊನ್ನೆ ಬರೆದ ಕಾಗದವನ್ನೋದಿ, ನಿನ್ನಲ್ಲಿ ಇದುವರೆಗೂ ಸುಪ್ತವಾಗಿದ್ದ ಯಾವುದೋ ಶಕ್ತಿ, ಆಶೆ, ಅಭೀಪ್ಸೆ, ಉದ್ಧಾರಾಕಾಂಕ್ಷೆ ಈಗತಾನೆ ಕಣ್ಣು ತೆರೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನೀನು ಹುಟ್ಟುವ ಮೊದಲೂ ಹುಟ್ಟಿದ ಮೇಲೆಯೂ ನಾನು ಶ್ರೀಗುರುದೇವನಲ್ಲಿ ಮಾಡುತ್ತಿದ್ದ ಪ್ರಾರ್ಥನೆ ಈಗತಾನೆ ನೆರವೇರಲು ಪ್ರಾರಂಭವಾಗಿದೆಯೋ ಏನೋ ಎನ್ನಿಸುತ್ತಿದೆ. ‘ಜೇನಾಗುವಾ’ ಎಂಬ ನನ್ನ ಕವನ ಸಂಗ್ರಹದಲ್ಲಿರುವ ಕೆಲವು ಕವನಗಳನ್ನು ಓದಿ ನೋಡಿದರೆ ನಿನಗೆ ಗೊತ್ತಾಗುತ್ತದೆ.
ನೀನೀಗ ಹದಿನೇಳನೆಯ ವರ್ಷವನ್ನು ದಾಟಿ ಹದಿನೆಂಟನೆಯದಕ್ಕೆ ಕಾಲಿಟ್ಟಿದ್ದೀಯೆ. ತಾರುಣ್ಯೋದಯದ ಈ ಸಂದರ್ಭದಲ್ಲಿ ಬದುಕು ಹಳೆಯ ಪೊರೆಯನ್ನು ಕಳಚಿ ಹೊಸ ಪೊರೆಯ ಹೊಸ ಬದುಕಿಗೆ ಹೋಗಬೇಕಾದದ್ದು ಸ್ವಾಭಾವಿಕವೆ.
ನೀನು ಶ್ರೀರಾಮಾಯಣದರ್ಶನವನ್ನು ಓದಿದುದು ನಿಜಕ್ಕೂ ನನಗೆ ವಿಸ್ಮಯಕಾರಿಯಾಗಿದೆ. ತುಂಬ ಸಂತೋಷವೂ ಆಗಿದೆ. ಆದರೆ ಅದರಲ್ಲಿ ಯಾವ ಒಂದು ಸನ್ನಿವೇಶದಿಂದಲೂ ಪ್ರತ್ಯೇಕವಾಗಿ ಅವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ. ಆದರೆ ಅದು ನಿನ್ನ ಲೌಕಿಕವಾದ ಓದಿಗೂ ಆಚರಣೆಗೂ ಅಡ್ಡಿಯಾಗದಂತೆ ಸಂಯಮದಿಂದ ವರ್ತಿಸುವುದು ಒಳ್ಳೆಯದು. ಏಕೆಂದರೆ ನಾನು ಹಿಂದೆ ನಿನಗೆ ಹೇಳಿದಂತೆ - ಎಂತಹ ಮಹೋನ್ನತ ಪ್ರತಿಭೆಯಾದರೂ, ಲೋಕದಲ್ಲಿ ಅದು ಪ್ರಕಟನಗೊಳ್ಳುವಾಗ, ಲೌಕಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಠೆಗಳ ಚೌಕಟ್ಟಿನಲ್ಲಿಯೆ ವಿಕಾಸಗೊಳ್ಳಬೇಕಾದುದು ಅನಿವಾರ್ಯ. - ನೀನು ಹೇಗಾದರೂ ಪ್ರಯತ್ನ ಮಾಡಿ ಈ ಸಲದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ವರ್ಷ ಮೈಸೂರಿಗೇ ಬಂದರೆ ಇಲ್ಲಿ ನಿನ್ನ ಬುದ್ಧಿಯ ಮತ್ತು ಹೃದಯದ ಉನ್ಮೀಲನಕ್ಕೂ ವಿಕಾಸಕ್ಕೂ ಯಥೇಚ್ಛವಾದ ಅವಕಾಶ ದೊರೆಯುತ್ತದೆ. ನಿನ್ನ ಅಣ್ಣನ ಲೈಬ್ರರಿಯೆ ನಿನಗೆ ಸಾಕು ಜಗತ್ತಿನ ಅತ್ಯುತ್ತಮತೆಯನೆಲ್ಲ ಪಡೆಯುವುದಕ್ಕೆ. ಬೇರೆಯ ವಿಚಾರ ವಿನಿಮಯಾದಿಗಳಿಗೂ ಹೆಚ್ಚು ಅವಕಾಶ ಪಡೆಯಬಹುದು.
ಈಗಿನ ವಿದ್ಯಾಭ್ಯಾಸ ಕ್ರಮದಲ್ಲಿಯೆ ದೋಷಗಳಿರಬಹುದು ಆದರೆ ಅದು ಬದಲಾಗುವವರೆಗೆ ಅದರಲ್ಲಿಯೆ ನಡೆಯಬೇಕಲ್ಲವೆ? ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವತನಕ ಅದನ್ನೆ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು. ಆದ್ದರಿಂದ ಲಾಜಿಕ್ (ತರ್ಕಶಾಸ್ತ್ರ) ಮುಂತಾದ ವಿಷಯ ನಿನಗೆ ಹಿಡಿಸದಿದ್ದರೂ ಪರೀಕ್ಷೆಗೆ ಬೇಕಾಗುವಷ್ಟನ್ನಾದರೂ ಓದಿಕೊಂಡು ತೇರ್ಗಡೆ ಹೊಂದಬೇಕು. ನಾನೂ ನಿನ್ನ ಹಾಗೆಯೇ ಓದುವಾಗ ಸೈನ್ಸನ್ನೇ ತೆಗೆದುಕೊಂಡಿದ್ದೆ. ನನಗೆ ಅಷ್ಟೇನು ರುಚಿಸದಿದ್ದರೂ ಹೇಗೋ ಓದಿ ಪರೀಕ್ಷೆಯ ಮಟ್ಟಿಗೆ ತಿಳಿದುಕೊಂಡು ಪಾಸಾದೆ. ನೀನೂ ಹಾಗೆಯೆ ಮಾಡು. ಈಗ ನೀನು ಅರ್ಟ್ಸ್ ತೆಗೆದುಕೊಂಡಿದ್ದೀಯೆ. ಆದರಿಂದ ನಿನಗೇನೂ ಕಷ್ಟವಾಗದು. ಇಂಗ್ಲಿಷ್ ಭಾಷೆಯದೊಂದೇ ತೊಂದರೆ ಅಲ್ಲವೆ? ಆದರೆ ಹೇಳುತ್ತೇನೆ ಕೇಳು. ನೀನೇನಾದರೂ ಉತ್ತಮ ಲೇಖಕ, ಸಾಹಿತಿ, ಕವಿ, ಆಲೋಚಕ ಎಲ್ಲ ಆಗಬೇಕೆಂದು ಸಂಕಲ್ಪವಿದ್ದರೆ ಇಂಗ್ಲಿಷ್ ಭಾಷೆಯನ್ನೂ ಚೆನ್ನಾಗಿ ಕಲಿಯುವುದು ಒಳಿತು. ನನ್ನ ಇಂಗ್ಲಿಷ್ ಲೈಬ್ರರಿ ನಿನಗೆ ಜಗತ್ತಿನ ರತ್ನಗಳನ್ನೆಲ್ಲ ದಾನಮಾಡಬಲ್ಲುದು.
ಆದ್ದರಿಂದ ಯಾವ ವಿಚಾರದಲ್ಲಿಯೂ ದುಡುಕಿ ಅವಸರದ ನಿರ್ಣಯ ತೆಗೆದುಕೊಳ್ಳಬೇಡ. ಸಂದೇಹವಿದ್ದರೆ ನನಗೆ ಬರೆ. ನಿಮ್ಮ ಪರೀಕ್ಷೆ ಬಹುಶಃ ಬಹಳ ಸಮೀಪವಿರಬೇಕು. ಸದ್ಯಕ್ಕೆ ಬೇರೆ ಎಲ್ಲವನ್ನೂ ಬದಿಗಿಟ್ಟು ಅದರ ಕಡೆ ಲಕ್ಷ್ಯ ಕೊಡು. ಪರೀಕ್ಷೆ ಮುಗಿದೊಡನೆಯೇ ಬೇಕಾದಷ್ಟು ಸಮಯವಿರುತ್ತದೆ, ಉಳಿದುದಕ್ಕೆ.
ಅಂತೂ ನಿನ್ನಲ್ಲಿ ನಡೆಯುತ್ತಿರುವ ವ್ಯಾಪಾರ ನಿನ್ನ ವಯಸ್ಸಿಗೆ ಸಹಜವಾದದ್ದೆ. ಆದರೆ ಆ ದಾರಿಯಲ್ಲಿ ಮುಂದೆ ನಡೆದವರ ಹಿತವಚನದಂತೆ ಸ್ವಲ್ಪ ಕಾಲ ನಡೆಯುವುದು ಶ್ರೇಯಸ್ಕರ. ನಾನು, ನಿತ್ಯವೂ ದೇವರ ಮನೆಯಲ್ಲಿ ಧ್ಯಾನ ಮಾಡುವಾಗ ನಿನ್ನ ಕ್ಷೇಮ ಶ್ರೇಯಸ್ಸು ಅಭ್ಯುದಯ ಸುಖ ಶಾಂತಿ ಏಳ್ಗೆಗಳಿಗಾಗಿ ಗುರುದೇವನನ್ನೂ ಜಗನ್ಮಾತೆಯನ್ನೂ ಪ್ರಾರ್ಥಿಸುತ್ತೇನೆ. ಅವರು ನಿನಗೆ ಬೆಳಕು ತೋರುತ್ತಾರೆ. ಆದರೆ ನೀನು ಯಾವ ಚಂಚಲತೆಗೂ ಉದ್ರೇಕಕ್ಕೂ ವಶನಾಗದೆ ದೃಢವಾಗಿ ಮುನ್ನಡೆಯಬೇಕಾದುದು ನಿನ್ನ ಪವಿತ್ರ ಕರ್ತವ್ಯ. ನಿನಗೆ ಏನೇನು ನೆರವು ಬೇಕೋ ಅದನ್ನೆಲ್ಲ ಕೊಡಲು ನಾನೂ ನಿನ್ನಮ್ಮನೂ ಸಿದ್ಧರಿದ್ದೇವೆ. ನಿನ್ನ ಮತ್ತು ಇತರ ಮಕ್ಕಳ ಶ್ರೇಯಸ್ಸಿಗೆ ತಾನೆ ನಾವು ಬದುಕುತ್ತಿರುವುದು! ನೀನು ಶ್ರೇಯಸ್ಸಿನ ಕಡೆಗೆ ಒಂದು ಹೆಜ್ಜೆ ಇಟ್ಟರೆ ನನಗೆ ಪರಮಾನಂದವಾಗುತ್ತದೆ. ನನಗೆ ಗುರುದೇವನು ದಯಪಾಲಿಸಿರುವ ಎಲ್ಲ ಸಾಹಿತ್ಯಕ ಆಧ್ಯಾತ್ಮಿಕ ಮತ್ತು ಲೌಕಿಕ ಸಂಪತ್ತೆಲ್ಲ ನಿನಗೆ ಮೀಸಲು, ನೀನು ಅದಕ್ಕೆ ಹೃದಯ ತೆರೆದು ಕೈಚಾಚಿದರೆ!
ನಿನ್ನ ಉಪಾಧ್ಯಾಯರುಗಳೊಡನೆ ತಾಳ್ಮೆಯಿಂದ ವರ್ತಿಸು. ಅವರ ಆಲೋಚನೆಗಳು ನಿನಗೆ ಹಿಡಿಸದಿದ್ದರೂ ಅಸಭ್ಯವಾಗಿ ವಾದಿಸುವ ಗೋಜಿಗೆ ಹೋಗದಿರು.
ನಿನ್ನ ಅಮ್ಮ ಆಶೀರ್ವಾದ ಕಳಿಸುತ್ತಾರೆ. ನಿನ್ನ ತಮ್ಮ ಮತ್ತು ತಂಗಿಯರು ಪ್ರೀತಿ ತಿಳಿಸುತ್ತಾರೆ. ಅವರಿಗೂ ಕಾಗದ ಬರೆದರೆ ಎಷ್ಟು ಸಂತೋಷಪಡುತ್ತಾರೆ!!
ಆಶೀರ್ವಾದಗಳು
ಕುವೆಂಪು
***


ತೇಜಸ್ವಿಗೆ ಹದಿನೇಳು ವರ್ಷ ತುಂಬಿ ಹದಿನೆಂಟಕ್ಕೆ ಕಾಲಿಡುವ ಸಂದರ್ಭ. ಶಿವಮೊಗ್ಗೆಯಲ್ಲಿ, ಅವರ ಅಜ್ಜಿಯ ಮನೆಯಲ್ಲಿದ್ದುಕೊಂಡು, ಆರ್ಟ್ಸ್ ತೆಗೆದುಕೊಂಡು ಕಾಲೇಜಿಗೆ ಹೋಗುತ್ತಿದ್ದ ದಿನಗಳು. ತನ್ನ ಮನೋವ್ಯಾಪರಗಳನ್ನು, ದಿಕ್ಕುದೆಸೆಯಿಲ್ಲದೆ ಹರಿಯುತ್ತಿದ್ದ ಯೋಚನಾತರಂಗಗಳನ್ನು, ಅದರಿಂದ ಉಂಟಾಗುತ್ತಿದ್ದ, ಮನೋಕ್ಲೇಷವನ್ನು ಅತ್ಯಂತ ಮುಕ್ತವಾಗಿ ತನ್ನ ತಂದೆಯವರಿಗೆ ಕಾಗದ ಬರೆದು ತಿಳಿಸಿರುತ್ತಾರೆ. ೬.೧.೧೯೫೬ರಂದು ಬರೆದಿರುವ ಕಾಗದ, ಹಾಗೂ ಅದಕ್ಕೂ ಮೊದಲು ಬರೆದ ದಿನಾಂಕವಿರದ ಒಂದು ಕಾಗದ ಈ ಎರಡಕ್ಕೂ ಉತ್ತರರೂಪವಾಗಿ ಕುವೆಂಪು ಬರೆದಿರುವ ಪತ್ರವೇ ಮೇಲಿನದು. ವಯಸ್ಸಿಗೆ ಬರುತ್ತಿರುವ ಮಗನೊಡನೆ, ನಿಜವಾದ ಪ್ರೀತಿ ವಾತ್ಸಲ್ಯವಿರುವ ತಂದೆಯೊಬ್ಬ ಎಷ್ಟು ಪ್ರಬುದ್ಧವಾಗಿ ಹಾಗೂ ಅಷ್ಟೇ ಸಂಯಮದಿಂದ ವರ್ತಿಸಬಹುದು ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.
ಕಾಗದವನ್ನು ಓದಿ ಇಟ್ಟುಕೊ ಅಥವಾ ನನಗೇ ವಾಪಸ್ಸು ತಂದು ಕೊಡು ಎಂದು ಆರಂಭದಲ್ಲಿಯೇ ಹೇಳಿರುವುದು, ಕಾಗದದಲ್ಲಿ ಪ್ರಸ್ತಾಪಿಸುತ್ತಿರುವ ವಿಚಾರಗಳು ಮಹತ್ವವಾದವುಗಳು ಎಂಬುದನ್ನು ಯುವಕ ತೇಜಸ್ವಿಗೆ, ಮನಗಾಣಿಸುವ ಉದ್ದೇಶದಂತಿದೆ. ಒಬ್ಬ ತಂದೆಗೆ, ತನ್ನ ಮಗ ಬರೆದ ಕವಿತೆಗಳನ್ನು ಓದಿದರೆ ಆಗುವ ಸಂತೋಷ, ಇಲ್ಲಿ ಕವಿಯೂ ಆದ ತಂದೆಗೆ ಆಗಿದೆ. ಅದರ ಜೊತೆಗೆ, ದಾರ್ಶನಿಕನೂ, ಕಾವ್ಯಮೀಮಾಂಸಕನೂ ಆಗಿರುವ ಕುವೆಂಪು ಅವರಿಗೆ ಅದರ ಓರೆಕೋರೆಗಳು ಕಾಣಿಸುತ್ತವೆ. ಮೊದಲು, ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸಿದರೂ, ಮುಂದೆ ಸಾಹಿತ್ಯಕ್ಕೆ ಅಗತ್ಯವಾಗಿ ಬೇಕಾದ ಭಾಷಾ ಶುದ್ಧಿ ಮತ್ತು ಛಂದಸ್ಸುಗಳ ಪರಿಚಯ ಕುರಿತು ಬರೆಯುತ್ತಾರೆ. ಅದನ್ನು ಮನಗಾಣಿಸಲು ಒಂದು ಉಪಮೆಯನ್ನೂ ಕೊಡುತ್ತಾರೆ. ಅದೇನು ಕಾವ್ಯಮೀಮಾಮಸೆಯ, ವಿಮರ್ಶೆಯ ತತ್ವವನ್ನು ಹೊತ್ತುದಲ್ಲ ಎಂಬುದನ್ನು ಗಮನಿಸಬೇಕು. ಆಗಿನ ಯುವಕ ಕನಸಾಗಿದ್ದ ಸೈಕಲ್ಲು ಸವಾರಿಯ ಉಪಮೆಯೇ ತಂದೆ ಮಗನಿಗೆ ಹೇಳಬೇಕಾದುದನ್ನು ಸಮರ್ಥವಾಗಿ ಸಾಧಿಸುತ್ತದೆ. ಮೊದಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು ಎನ್ನುವ ಅಭಿಪ್ರಾಯದಲ್ಲಿ, ಕವಿನಿರ್ಮಿತಿ ನಿಯತಿಕೃತ ನಿಯಮರಾಹಿತ್ಯ ತತ್ವದ ವಾಸನೆಯಿದೆ. ಜೊತೆಗೆ ಅದು ನನ್ನ ಸ್ವಂತ ಅನುಭವ ಎಂದು ಹೇಳುವುದರ ಮೂಲಕ ಸಾಧಕನಿಗೆ ಎದುರಾಗುವ ಸವಾಲಿನ ಸಾರ್ವತ್ರಿಕರಣ ಎಂಬಂತೆ ಬಿಂಬಿಸಿದ್ದಾರೆ.
ಭಾಷೆಯನ್ನು ಪೂರ್ವಸಾಹಿತ್ಯಾಭ್ಯಾಸದಿಂದ ಪಡೆಯಬೇಕು, ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿಕೊಡುತ್ತದೆ ಎಂಬ ಮಾತು ತೇಜಸ್ವಿಯವರ ಬದುಕನ್ನು ಕಂಡವರಿಗೆ, ಕುವೆಂಪು ಅವರ ಮುಂಗಾಣ್ಕೆಯನ್ನು ಕಟ್ಟಿಕೊಡುತ್ತದೆ. ಭಿನ್ನವಾಗಿ ಬದುಕಿದ್ದರಿಂದಲೇ ಬೇರೆಯವರಿಗಿಂತ ಭಿನ್ನವಾದ ಸಾಹಿತ್ಯ ಸೃಷ್ಟಿಸಲು ಸಾದ್ಯವಾಯಿತು ಎಂಬ ಮಾತಿಗೆ, ಮೂರ್ತರೂಪದ ಆಧಾರ, ತೇಜಸ್ವಿಯವರ ಬದುಕಾಗಿದ್ದರೆ, ಅಮೂರ್ತ ರೂಪದ ಆಧಾರ ಈ ಮಾತುಗಳೇ ಆಗುತ್ತವೆ. ಜೊತೆಗೆ ’ವಿಚಾರ ಬಹುದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದೇನೆ’ ಎನ್ನುವಲ್ಲಿ, ಮಗನ ಮುಂದೆ ಒಂದು ಕುತೂಹಲದ ಬಾಗಿಲನ್ನು ತೆರೆದಿಡುತ್ತಿದ್ದಾರೆ. ಮುಂದುವರೆದು ’ದೃಢಮನಸ್ಸಿನಿಂದ ಕಾರ್ಯೋನ್ಮುಖನಾದರೆ ಫಲ ಸಿಗುವ ಸೂಚನೆಯಿದೆ’ ಎಂದು ಹೇಳುವುದರ ಮೂಲಕ, ನಿನ್ನ ಪ್ರಯತ್ನವೂ ಬೇಕು ಎಂದು ಸೂಚ್ಯವಾಗಿ ಹೇಳುತ್ತಿದ್ದಾರೆ ಅನ್ನಿಸುತ್ತದೆ.
“ನೀನು ಮೊನ್ನೆ ಬರೆದ ಕಾಗದವನ್ನೋದಿ, ನಿನ್ನಲ್ಲಿ ಇದುವರೆಗೂ ಸುಪ್ತವಾಗಿದ್ದ ಯಾವುದೋ ಶಕ್ತಿ, ಆಶೆ, ಅಭೀಪ್ಸೆ, ಉದ್ಧಾರಾಕಾಂಕ್ಷೆ ಈಗತಾನೆ ಕಣ್ಣು ತೆರೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನೀನು ಹುಟ್ಟುವ ಮೊದಲೂ ಹುಟ್ಟಿದ ಮೇಲೆಯೂ ನಾನು ಶ್ರೀಗುರುದೇವನಲ್ಲಿ ಮಾಡುತ್ತಿದ್ದ ಪ್ರಾರ್ಥನೆ ಈಗತಾನೆ ನೆರವೇರಲು ಪ್ರಾರಂಭವಾಗಿದೆಯೋ ಏನೋ ಎನ್ನಿಸುತ್ತಿದೆ. ‘ಜೇನಾಗುವ’ ಎಂಬ ನನ್ನ ಕವನ ಸಂಗ್ರಹದಲ್ಲಿರುವ ಕೆಲವು ಕವನಗಳನ್ನು ಓದಿ ನೋಡಿದರೆ ನಿನಗೆ ಗೊತ್ತಾಗುತ್ತದೆ.” ಈ ಸಾಲುಗಳಂತೂ ಅತ್ಯಂತ ಅರ್ಥಪೂರ್ಣವಾದವುಗಳು. ‘ಜೇನಾಗುವಾ’ ಕವನಸಂಕಲನದ ತೇಜಸ್ವಿ ಜನನದ ಮೊದಲಿನ ಕವಿತೆಗಳಾದ, ’ಗರ್ಭಗುಡಿ’ ಮತ್ತು ‘ಬಿನ್ನಯ್ಸಿದಳು ತಾಯಪ್ಪಳಿಂತು’ ಹಾಗೂ ಜನನ ನಂತರದ ಕವಿತೆಗಳಾದ ‘ಕುಮಾರಸಂಭವ’, ‘ಸ್ವಾಗತ ನಿನಗೆಲೆ ಕಂದಯ್ಯ’, ‘ನಾಮಕರಣೋತ್ಸವ’, ‘ತನಯನಿಗೆ’, ‘ತನುಜಾತನಹುದಾತ್ಮಜಾತನುಂ’, ‘ಅಮೃತಕಾಗಿ’, ‘ಕುಣಿಯುತ ಬಾ ಕಂದಯ್ಯ’, ‘ಕಂದನ ಮೈ’ ಮತ್ತು ‘ಹರಕೆರೆಯ ಹರಕೆ’ ಕವಿತೆಗಳನ್ನು ಓದಿದರೆ, ಕುವೆಂಪು ಸಂಕಲ್ಪಸಿದ್ಧಿಯ ಬಗ್ಗೆ ಅಚ್ಚರಿಯಾಗುತ್ತದೆ.
ಬದುಕು ಹಳೆಯ ಪೊರೆಯನ್ನು ಕಳಚಿ ಹೊಸ ಪೊರೆಯ ಹೊಸಬದುಕಿಗೆ ಹೋಗಬೇಕಾದದ್ದು ಸ್ವಾಭಾವಿಕವೇ ಎಂಬ ಮಾತು, ತಾರುಣ್ಯೋದಯದ ಹೊಸ್ತಿಲಲ್ಲಿರುವ ಮಕ್ಕಳ -ಹೆಣ್ಣಾಗಲಿ, ಗಂಡಾಗಲಿ- ವಿಷಯದಲ್ಲಿ ಪ್ರತಿಯೊಬ್ಬ ತಂದೆ-ತಾಯಿ ಕೂಡಾ ಅರಿತುಕೊಳ್ಳಬೇಕಾದುದ್ದಾಗಿದೆ.
ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ, ’ದಶಾನನ ಸ್ವಪ್ನಸಿದ್ಧಿ’ ಮತ್ತು ’ದೈತ್ಯನೇರ್ದನ್ ಚೈತ್ಯಮಂಚಮಂ’ ಸಂಚಿಕೆಗಳನ್ನೋದಿ ಭಾವಾವೇಶಕ್ಕೊಳಗಾದ ವಿಚಾರವನ್ನು ಮಗನ ಪತ್ರದಿಂದ ಅರಿತಿದ್ದ ತಂದೆ, ’ಅವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ’ ಎಂದು ಹೇಳುತ್ತಾರೆ. ಜೊತೆಗೆ ’ನಿನ್ನ ಲೌಕಿಕವಾದ ಓದಿಗೂ ಆಚರಣೆಗೂ ಅಡ್ಡಿಯಾಗದಂತೆ ವರ್ತಿಸುವುದು ಉತ್ತಮ’ ಎಂದು ಎಚ್ಚರಿಸಿಯೂ ಎಚ್ಚರಿಸುತ್ತಾರೆ. (ಕುವೆಂಪು ಮತ್ತು ತೇಜಸ್ವಿಯವರಿಗಿದ್ದ ಪೂರ್ಣಪ್ರಜ್ಞೆ ಮತ್ತು ಪೂರ್ಣದೃಷ್ಟಿ ಕುರಿತಂತೆ, ತೇಜಸ್ವಿಯನ್ನು ಹುಡುಕುತ್ತಾ..... ಕೃತಿಯಲ್ಲಿರುವ ಲೇಖನವನ್ನು ಗಮನಿಸಬಹುದು.)
ಪತ್ರದ ಮುಂದಿನ ಭಾಗ ಅತ್ಯಂತ ಮಹತ್ವವಾದುದು. ಮಗನ ಮುಂದೆ ಸದ್ಯಕ್ಕಿರುವ ಸವಾಲು ಪರೀಕ್ಷೆ. ಅದನ್ನು ಯಶಸ್ವಿಯಾಗಿ ಮುಗಿಸುವ ಅವಶ್ಯಕತೆ ಇದ್ದೇ ಇದೆ. ಆ ಕ್ಷಣಕ್ಕೆ ಅದೇ ಮಹತ್ವದ್ದು ಕೂಡಾ. ಅದನ್ನು ಮಗನಿಗೆ ಮನಗಾಣಿಸುವ, ಈ ಹಿಂದೆಯೂ ಮಗನಿಗೆ ಹೇಳಿದ್ದ ‘ಎಂತಹ ಮಹೋನ್ನತ ಪ್ರತಿಭೆಯಾದರೂ, ಲೋಕದಲ್ಲಿ ಅದು ಪ್ರಕಟನಗೊಳ್ಳುವಾಗ, ಲೌಕಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಠೆಗಳ ಚೌಕಟ್ಟಿನಲ್ಲಿಯೆ ವಿಕಾಸಗೊಳ್ಳಬೇಕಾದುದು ಅನಿವಾರ್ಯ.’ ಎಂಬ ಮಾತುಗಳು ಮಹತ್ವವಾದವುಗಳು. ಇದು ಪ್ರತಿಯೊಬ್ಬ ಚಿಂತಕ, ಬುದ್ಧಿಜೀವಿ, ಕ್ರಾಂತಿಕಾರಿ ಇತ್ಯಾದಿಯವರಿಗೆ ಅನ್ವಯಿಸುವಂತದ್ದು.
ಅಂದಿನ ವಿದ್ಯಾಭ್ಯಾಸ ಕ್ರಮ, ಅದರ ಬೋಧನಾ ವಿಧಾನ ಹಾಗೂ ಅದರಲ್ಲಿದ್ದ ಮಿತಿಗಳು, ಇಂಗ್ಲೀಷ್ ಹೇರಿಕೆ ಇವೆಲ್ಲಾ ತೊಡಕುಗಳಿಂದ ಮಗನ ಮನಸ್ಸು ದಂಗೆಯಯೇಳುತ್ತಿದ್ದೆ ಎಂಬುದನ್ನು ತಂದೆ ಗಮನಿಸಿದ್ದಾರೆ. ಅದರ ಶಮನಕ್ಕಾಗಿ ‘ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವತನಕ ಅದನ್ನೆ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು.’ ಎಂದು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಎಚ್ಚರಿಕೆಯೂ ಹೌದು. ’ನಾನೂ ನಿನ್ನ ಹಾಗೆಯೇ ಎಂದು ತಾವು ಸೈನ್ಸ್ ತೆಗೆದುಕೊಂಡು ಪರೀಕ್ಷಾ ದೃಷ್ಟಿಯಿಂದ ಎಷ್ಟು ಬೇಕೋ ಅಷ್ಟನ್ನು ಓದಿ ಪಾಸು ಮಾಡಿದ್ದೆ’ ಎಂಬ ವಿಚಾರವನ್ನು ಹೇಳಿ, ಇಂತಹ ಸಮಸ್ಯೆ ಸರ್ವರದ್ದು ಹಾಗೂ ಸರ್ವಕಾಲದ್ದು ಎಂದು ಮನಗಾಣಿಸುತ್ತಾರೆ. ಸದ್ಯಕ್ಕೆ ಮುಂದಿರುವ ಪರೀಕ್ಷೆ ಮುಗಿದರೆ ಬೇರೆಯದಕ್ಕೆ ಬೇಕಾದಷ್ಟು ಸಮಯ ನಂತರ ಇದ್ದೇ ಇದೆ ಎಂದು ನೆನಪಿಸುತ್ತಾರೆ.
‘ಅಂತೂ ನಿನ್ನಲ್ಲಿ ನಡೆಯುತ್ತಿರುವ ವ್ಯಾಪಾರ ನಿನ್ನ ವಯಸ್ಸಿಗೆ ಸಹಜವಾದದ್ದೆ. ಆದರೆ ಆ ದಾರಿಯಲ್ಲಿ ಮುಂದೆ ನಡೆದವರ ಹಿತವಚನದಂತೆ ಸ್ವಲ್ಪ ಕಾಲ ನಡೆಯುವುದು ಶ್ರೇಯಸ್ಕರ.’ ಈ ಮಾತು, ಕುವೆಂಪು ಅವರ, ‘ಕವಿನಿರ್ಮಿತಿ ನಿಯತಿಕೃತ ನಿಯಮರಾಹಿತ್ಯ’ ಎಂಬ ದೃಷ್ಟಿಕೋನ ಕೇವಲ ಅವರ ಸಾಹಿತ್ಯಸೃಷ್ಟಿಗೆ ಸಂಬಂಧಿಸಿದ್ದಲ್ಲ; ಬದುಕಿಗೂ ಸಂಬಂಧಿಸಿದ್ದು ಎಂಬುದನ್ನು ಮನಗಾಣಿಸುತ್ತದೆ.
ಕೊನೆಯಲ್ಲಿ, ಗುರುದೇವನಲ್ಲಿ ಮತ್ತು ಜಗನ್ಮಾತೆಯಲ್ಲಿ ನಿನ್ನ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳುತ್ತಾ, ‘ದೃಢ ಮನಸ್ಸಿನಿಂದ ಮುನ್ನಡೆಯಬೇಕಾದ್ದು ನಿನ್ನ ಪವಿತ್ರ ಕರ್ತವ್ಯ’ ಎನ್ನುವ ಮೂಲಕ ಮಗನಿಗೆ ಆತನ ಜವಾಬ್ದಾರಿಯನ್ನು ಮನಗಾಣಿಸುತ್ತಾರೆ. ಮಕ್ಕಳ ಅಭಿವೃದ್ಧಿಯೇ ತಂದೆ ತಾಯಿಯರ ಅಂತಿಮ ಕನಸು ಎಂಬುದನ್ನು ಮನಗಾಣಿಸುತ್ತಾರೆ. ತಂದೆ ತಾಯಿಯರ ಪ್ರಯತ್ನ ಎಷ್ಟೇ ಇದ್ದರೂ, ಸ್ವಪ್ರಯತ್ನವೂ ಮುಖ್ಯ ಎಂಬುದನ್ನು ಮಗನ ಮನಸ್ಸಿಗೆ ಮುಟ್ಟಿಸುತ್ತಾರೆ. ‘ನನಗೆ ಗುರುದೇವನು ದಯಪಾಲಿಸಿರುವ ಎಲ್ಲ ಸಾಹಿತ್ಯಕ ಆಧ್ಯಾತ್ಮಿಕ ಮತ್ತು ಲೌಕಿಕ ಸಂಪತ್ತೆಲ್ಲ ನಿನಗೆ ಮೀಸಲು, ನೀನು ಅದಕ್ಕೆ ಹೃದಯ ತೆರೆದು ಕೈಚಾಚಿದರೆ!’ ಈ ಮಾತುಗಳ ಸಂಸ್ಕಾರ ಮತ್ತು ಸ್ವಪ್ರಯತ್ನಗಳು ಒಬ್ಬ ಮನುಷ್ಯನನ್ನು ಔನ್ನತ್ತಕ್ಕೇರಿಸಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿವೆ. ಇದಕ್ಕೆ ಪೂರಕವಾಗಿ ಹದಿನೆಂಟು ವರ್ಷಗಳ ಹಿಂದೆಯೇ ಬರೆದ ’ತನುಜಾತ್ಮನಹುದಾತ್ಮಜಾತನುಂ’ ಕವಿತೆಯ ಸಾಲುಗಳನ್ನು ಗಮನಿಸಿದರೆ, ಕುವೆಂಪು ಅವರ ದರ್ಶನದೃಷ್ಟಿ ಅಚ್ಚರಿಗೆ ಕಾರಣವಾಗದಿರದು.
ಕವಿಯ ಬೃಹದಾಲೋಚನಾ ಸಾರಂ,
ಕವಿಕಲ್ಪನೆಯ ಮಹಾ ಭೂಮ ಭಾವಂಗಳುಂ,
ಕವಿ ಶರೀರದ ನಾಳದಲಿ ಹರಿವ ನೆತ್ತರೊಳ್
ತೇಲುತಿಹ ಸಹ್ಯಾದ್ರಿ ಪರ್ವತಾರಣ್ಯಮುಂ,
ಕವಿ ಸವಿದ ಸೂರ್ಯ ಚಂದ್ರೋದಯಸ್ತಾದಿಗಳ
ಜಾಜ್ವಲ್ಯ ಸೌಂದರ್‍ಯಮುಂ, ಜೀವ ದೇವರಂ
ಹುಟ್ಟು ಸಾವಂ ಸೃಷ್ಟಿಯುದ್ದೇಶಮಿತ್ಯಾದಿ
ಸಕಲಮಂ ಧ್ಯಾನಿಸಿ ಮಥಿಸಿ ಮುಟ್ಟಿಯನುಭವಿಸಿ
ಕಟ್ಟಿದ ಋಷಿಯ ’ದರ್ಶನ’ದ ರಸ ಮಹತ್ವಮುಂ,
ಪೃಥಿವಿ ಸಾಗರ ಗಗನಗಳನಪ್ಪಿ ಕವಿ ಪೀರ್ದ
ನೀಲ ಶ್ಯಾಮಲ ಭೀಮ ಮಹಿಮೆಯುಂ, ತತ್ತ್ವದಿಂ
ಕಾವ್ಯದಿಂ ವಿಜ್ಞಾನದಿಂದಂತೆ ಋಷಿಗಳಿಂ
ಕವಿಗಳಿಂದಾಚಾರ್ಯವರ್ಯರಿಂ ಪಡೆದಖಿಲ
ಸುಜ್ಞಾನ ಕೃಪೆಯುಂ ನೆರಪಿ ಪಡೆದಿಹವು ನಿನ್ನ
ವ್ಯಕ್ತಿತ್ವಮಂ.
ಇಡೀ ಪತ್ರದಲ್ಲಿ ಅಡಿಗೆರೆ ಎಳೆದಿರುವ ಒಂದೇ ವಿಚಾರವೆಂದರೆ, ’ನಿನ್ನ ಉಪಾಧ್ಯಾಯರುಗಳೊಡನೆ ತಾಳ್ಮೆಯಿಂದ ವರ್ತಿಸು. ಅವರ ಆಲೋಚನೆಗಳು ನಿನಗೆ ಹಿಡಿಸದಿದ್ದರೂ ಅಸಭ್ಯವಾಗಿ ವಾದಿಸುವ ಗೋಜಿಗೆ ಹೋಗದಿರು.’ ಎಂಬುದು. ತೇಜಸ್ವಿಯವರ ಹಿಂದಿನ ಪತ್ರದಲ್ಲಿ, ಲಾಜಿಕ್ ವಿಷಯವಾಗಿ ಕೇಳಿದ ಪ್ರಶ್ನೆಗೆ ಉಪನ್ಯಾಸಕರು ನೀಡಿದ ಅಸಂಬದ್ಧ ಉತ್ತರದಿಂದ ಕುಪಿತರಾಗುವ ವಿಚಾರವನ್ನು ಓದಿರುತ್ತಾರೆ. ಅದಕ್ಕೆ ಈ ಬುದ್ಧಿವಾದ ಮತ್ತು ಅಡಿಗೆರೆ!
ಪತ್ರವನ್ನು ಮುಗಿಸುವ ಮುನ್ನ, ತಾಯಿ, ತಮ್ಮ, ಮತ್ತು ತಂಗಿಯರ ವಿಚಾರವನ್ನು ಹೇಳಿ, ನಾವೆಲ್ಲರೂ ನಿನ್ನ ಜೊತೆಯಿದ್ದೇವೆ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಾರೆ. ತಾರುಣ್ಯೋದಯಲ್ಲಿ ಪ್ರಕ್ಷುಬ್ಧಗೊಂಡ ಮನಸ್ಸಿಗೆ ಕೌಟಂಬಿಕ ಸಾಂತ್ವನ ಅತ್ಯಂತ ಮುಖ್ಯವಾದುದು. ಆ ಕ್ಷಣದಲ್ಲಿ ಕುಟುಂಬದ ನೆನಪು ಮಹತ್ತರವಾದುದನ್ನು ಸಾಧಿಸಬಲ್ಲುದು.
ಒಟ್ಟಾರೆಯಾಗಿ, ಈ ಪತ್ರ ಪ್ರತಿಯೊಬ್ಬ ತಂದೆ ಮಗನೂ/ಮಗಳು ಓದಬೇಕಾದ ಅಮೂಲ್ಯ ದಾಖಲೆಯಾಗಿದೆ. ಇದನ್ನು ಅತ್ಯಂತ ಸುರಕ್ಷಿತವಾಗಿ ಕಾಯ್ದಿಟ್ಟು ಪ್ರಕಟಿಸಿರುವ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರಿಗೆ ಧನವ್ಯಾದಗಳು.

Thursday, March 12, 2015

ಕುವೆಂಪು ಅವರ ಸರಸ್ವತೀ ದರ್ಶನ

'ನೀ ಹೇಳೆ, ನಾನು ಬರದೆ, ನೀ ಹಾಡೆ ನಾನೊರೆದೆ!’ ಎಂದು ಪ್ರಾರಂಭಿಸಿ, ರಾಮಾಯಣದರ್ಶನದ ಕೊನೆಯಲ್ಲಿ ಸರಸ್ವತೀ ತತ್ವವನ್ನು ಅನಾದಿಕವಿಯ ಸ್ಥಾನದ ಉತ್ತುಂಗಕ್ಕೆ ಏರಿಸಿದ ಕವಿ ಕುವೆಂಪು. ’ನಿನ್ನ ವಾಣಿ’ ಎಂಬ ಕವಿತೆಯ ’ಕವಿಯ ಗಾನದೊಳಗೆಲ್ಲ ವಾಣಿಗಳು ಹೊಮ್ಮುತಿವೆ’ ಎಂದು ಚಿಕ್ಕ ತೊರೆಯಾಗಿ ಆರಂಭವಾದ ಸರಸ್ವತೀ ದರ್ಶನ ಕಡಲಾಗುವುದು,
ಯುಗಯುಗದಿ ಸಂಭವಿಪೆನೆಂಬ ಭಗವದ್ದಿವ್ಯಮಾ
ವಚನಮೇಂ ನರರೂಪ ಮಾತ್ರಕ್ಕೆ ಮುಡಿಪೆ, ಪೇಳ್?
.............................................................
..........ಕೃತಿರೂಪಮಾ ಭಗವದಾವಿರ್ಭಾವ
ಬಹುರೂಪ ಸೂತ್ರತೆಗೆ?
ಎಂಬ ಸಾಲುಗಳಲ್ಲಿ. ಕುವೆಂಪು ಕಾವ್ಯದಲ್ಲಿ, ಸರಸ್ವತಿಯ ಸ್ತುತಿ ಎಂಬುದು ಕಾವ್ಯಕ್ಕೆ ಅನಿವಾರ್ಯವಾದ ಕರ್ಮವಾಗಿರದೆ, ಒಂದು ಕಾವ್ಯ ತಂತ್ರವಾಗಿ, ಹಂತ ಹಂತವಾಗಿ ಬೆಳೆದು ಬಂದಿದೆ. ಕವಿಯ ಪ್ರಾರಂಭ ಕವನಗಳಿಂದ ಆರಂಭವಾಗಿ ಹನಿಗವನ, ಕವನ, ಖಂಡಕಾವ್ಯ, ಮಹಾಕಾವ್ಯಗಳಲ್ಲಿ ಬೆಳೆದು ಹೊಸ ದರ್ಶನವಾಗಿ ಸರಸ್ವತೀ ತತ್ವ ವಿಕಾಸವಾಗಿರುವುದನ್ನು ಕಾಣಬಹುದು. ’ಗೊಲ್ಲನ ಬಿನ್ನಹ’ ಕವಿತೆಯಲ್ಲಿ, ’ಒಂದೇ ವೀಣೆಯ ತಂತಿಗಳಂತೆ.॒..... ಪರುಷವು ಹರಿದೀ ವೀಣೆಯ ವಾಣಿ’ ಎಂದು ಹಾಡುವ ಮೂಲಕ ಬಿಡಿ ಬಿಡಿ ಕವಿತೆಗಳಾದರೂ ಅಲ್ಲಿ ಎಲ್ಲವೂ (ಸರ್ವಭಾಷಾ ಸಾಹಿತ್ಯವೂ) ಸರಸ್ವತಿಯ ವೀಣೆಯ ವಾಣಿಯೆ ಎಂದು ಪ್ರತಿಪಾದಿಸಿದ್ದಾರೆ.
’ಕಬ್ಬದಂಗನೆ’ ಎಂದು ಕಾವ್ಯಸರಸ್ವತಿಯನ್ನು ಸಂಬೋಧಿಸಿರುವ ’ಕವಿತೆಗೆ’ ಎಂಬ ಕವನ ಪೂರ್ತಿಯಾಗಿ ಕಾವ್ಯಸರಸ್ವತಿಯ ವೈಶಿಷ್ಟ್ಯವನ್ನು ಮನಗಾಣಿಸುತ್ತದೆ.
.....ರಮಣೆಯೆ!
ನಿನ್ನ ಸಂಗದಿಂದ ತಿರುಕ ರಾಜನಾದನು!
ಮತ್ತು
ನಿನ್ನ ಪುಣ್ಯಸಂಗ ಲಭಿಸೆ ಧನ್ಯನಾದೆನು!
ನಿನ್ನ ಕೂಡೆ ಜನರಿಗೆಲ್ಲ ಗಣ್ಯನಾದೆನು!
ಅಲ್ಲಗಳೆಯುತ್ತಿದ್ದ ಜನಕೆ ಮಾನ್ಯನಾದೆನು!
ಎಂಬ ಮಾತುಗಳಿಂದ ’ಕಾವ್ಯಸರಸ್ವತಿ’ ಎಂಬ ಪರುಷಮಣಿಗಿರುವ ಸಾಮರ್ಥ್ಯದ ಪರಿಚಯವಾಗುತ್ತದೆ.
ನೀನೆ ಎನ್ನ ಬಾಳ ಮುಕ್ತಿ, ನೀನೆ ಎನ್ನ ಆತ್ಮಶಕ್ತಿ,
ನೀನೆ ಸೊಗವು, ನೀನೆ ಹರುಷ
ಕಬ್ಬದಂಗನೆ.
ಸಗ್ಗಬೇಡ, ಮುಕ್ತಿಬೇಡ, ಸಿರಿಯನೊಲ್ಲೆ, ನೆವನೊಲ್ಲೆ
ನೀನೆ ಎನಗೆ ಸಾಕು ಸಾಕು
ಮುದ್ದು ಮೋಹಿನಿ!
ಕಾವ್ಯ ಸರಸ್ವತಿಯ ಸಂಗವಿದ್ದರೆ ಬೇರೇನೂ ಬೇಡ ಎನ್ನುವ ಕವಿಯ ಮಾತು ಸರಸ್ವತಿಯ ಪ್ರಭಾವವನ್ನು ಮನಗಾಣಿಸುತ್ತದೆ. ಕಬ್ಬದಂಗನೆ ಎಂಬ ದೇಸಿಪ್ರಯೋಗ ಸರಸ್ವತಿಯನ್ನು ಕನ್ನಡತಿಯನ್ನಾಗಿಸಿದೆ.
’ಕಲಾ ಸುಂದರಿ’ ಕವಿತೆಯ ಹನ್ನೆರಡು ಚರಣಗಳಲ್ಲಿ ಸೃಷ್ಟಿದೇವತೆಯ ಶಕ್ತಿ, ಚೆಲುವು, ಒಲವು ಮೊದಲಾದವುಗಳು ವರ್ಣಿತವಾಗಿವೆ. ಕಾವ್ಯಕಾಮಿನಿ, ರಸಮೂರ್ತಿ, ಸರ್‍ವರಸಪ್ರದಾಯಕಿ, ಅಸೀಮ ಸ್ಫೂರ್ತಿದೇವತೆ, ನಿತ್ಯನೂತನ ಪ್ರಸೂತೆ ಮೊದಲಾದ ವಿಶೇಷಣಗಳು ಗಮನಸೆಳೆಯುತ್ತವೆ.
ನಿನ್ನ ಎದೆಯ ಮರೆಯಲಿ ನನಗೆ ಮುಕುತಿ ದೊರೆಯಲಿ
ನಿತ್ಯ ಹೇ ನಿಃಶ್ರೇಯಸಿ!
ನಿಖಿಲ ಹೃದಯಪದ್ಮಪಾಣಿ, ಮರಣ ಹರಣ ಅಮೃತವಾಣಿ,
ವಿಶ್ವದೇಕಮಾತ್ರ ರಾಣಿ,
ಹೇ ಮಾನಸ ಮಂದಿರೆ!
ಸೃಷ್ಟಿಮಾತೆಯೂ, ಮುಕ್ತಿದಾತೆಯೂ ಆದ ಸರಸ್ವತಿಗೆ ಕವಿ ಶರಣು ಹೋಗುತ್ತಾನೆ. ವಿಶ್ವದೇಕಮಾತ್ರ ರಾಣಿ ಎಂಬುದು  ಮಾತು ಜಗತ್ತಿನ ಪ್ರಮುಖ ಸಂಪತ್ತು ಎಂಬುದನ್ನು ಧ್ವನಿಸುತ್ತದೆ.
’ನರ್‍ತಿಸಿದಳು ಸ್ವರಸುರನಾರಿ’ ಕವಿತೆಯಲ್ಲಿ ಬಳಸಿರುವ ’ರಸಸಂಚಾರಿ’ ವಿಶೇಷಣವೂ ಗಮನಸೆಳೆಯುತ್ತದೆ. ಸ್ವರದೇವತೆಯಾದ ಸರಸ್ವತಿಯು ಇಲ್ಲಿ ರಸವನ್ನು ಹಂಚುವ ಸಂಚಾರಿ! ’ವಿಶ್ವವಿದ್ಯಾನಿಲಯೆ ಭಗವತಿ ಶ್ರೀ ಸರಸ್ವತಿಗೆ’ ಎಂಬ ಕವನ ಮಹಾರಾಜ ಕಾಲೇಜಿನ ಶತಮಾನೋತ್ಸವದ ಸಂದರ್ಭದಲ್ಲಿ ಬರೆದದ್ದು. ಹರಿಹರನಿಗೆ ತನ್ನ ಕೃತಿ ’ವಾಗ್ದೇವಿಯ ವಾಸಸ್ಥಾನ’ವಾಗಿ ಕಂಡಿದ್ದರೆ, ಇಲ್ಲಿ ವಿದ್ಯಾಲಯವೇ ಸರಸ್ವತಿಯಾಗಿ ಕವಿಗೆ ಕಂಡಿದೆ. ಉಪನಿಷತ್ ಮಂತ್ರದಿಂದ ಪ್ರೇರಿತವಾದ,
ಅಸತ್ತಿನಿಂದ ಸತ್ತಿನೆಡೆಗೆ
ತಮಸ್ಸಿನಿಂದ ಜ್ಯೋತಿಯೆಡೆಗೆ
ಮೃತ್ಯುವಿನಿಂದ ಅಮೃತದೆಡೆಗೆ
ಕರೆದೊಯ್ಯುವ ತಾರಿಣಿ
ವಿದ್ಯೆಯಾಗಿ ಮುಕ್ತಿಯೀವ
ಅವಿದ್ಯಾಪರಿಹಾರಿಣಿ, ಬಂಧಭವತಾರಿಣಿ
ಎಂದು ವಿದ್ಯಾಲಯೆ ಸರಸ್ವತಿಗೆ ವಂದಿಸುತ್ತಾರೆ. ಈ ಕವಿತೆಯ ಪ್ರತಿ ಚರಣವೂ ಸರಸ್ವತಿಗೇ ಸಂಬಂಧಿಸಿದ್ದಾಗಿದೆ. ಭೌತಿಕವಾಗಿ ಕಾಣುವ ವಿದ್ಯಾಲಯವನ್ನು, ಇಂದಿನ ಜಗತ್ತಿನಲ್ಲಿ ವ್ಯಾಪಾರಿ ತಾಣವಾಗಿರುವ ವಿಶ್ವವಿದ್ಯಾಲಯವನ್ನು ಸರಸ್ವತಿಯಾಗಿ ಕಂಡು ಸ್ತುತಿಸಿದ ಕವಿ, ಕವಿತೆಯುದ್ದಕ್ಕೂ, ಕವಿಪ್ರಾಣಪದ್ಮೆ, ಜಗಜ್ಜೀವವೀಣೆ, ಭವ್ಯಸೃಷ್ಟಿರೂಪಿಣಿ, ಕರ್ನಾಟಕ ಸರಸ್ವತಿ, ಕವಿಯಾತ್ಮ ತೃಷೆಯ ತರು ಮೊದಲಾದ ವಿಶೇಷಣಗಳನ್ನು ಬಳಸಿ ಸ್ತುತಿಸಿದ್ದಾರೆ. ’ವಿಶ್ವಪ್ರಜ್ಞೆಗೆ ವೇದಿಕೆಯಾದುದು ಶ್ರೀ ವಿದ್ಯಾಲಯ!’ ಎಂಬ ಮಾತು ಏಕಕಾಲಕ್ಕೆ ಶಾಲಾಕಾಲೇಜುಗಳ ಮಹತ್ವವನ್ನೂ ಸರಸ್ವತಿಯ ಮಹತ್ವವನ್ನೂ ಸ್ಫುರಿಸುತ್ತದೆ.
’ಪೂರ್ಣದೃಷ್ಟಿಯ ಮಹಾಕಾದಂಬರಿ’ ಎನ್ನುವ ಹನಿಗವನದಲ್ಲಿ ಕಾದಂಬರಿಯನ್ನು,
ಸರಸ್ವತಿಯ ಸಹಸ್ರಬಾಹು;
ಸರಸ್ವತಿಯ ಸಹಸ್ರಪಾದ
ಸರಸ್ವತಿಯ ಸಹಸ್ರ ವದನ:
ನಾಟ್ಯಮಾನ ದೇವಿಗೆ
ಪೂರ್ಣದೃಷ್ಟಿಯೀ ಕಾದಂಬರಿಯೆ ಮಹಾಸದನ!
ಎಂದು ಕೊಂಡಾಡಿದ್ದಾರೆ. ಕೃತಿಯೊಂದು ’ವಾಗ್ದೇವಿಯವಾಸಸ್ಥಾನ’ವೆಂಬ ಹರಿಹರನ, ’ವಿದ್ಯಾನಟಿಯ ನಾಟ್ಯವೇದಿಕೆ’ ಎಂಬ ನಾಗಚಂದ್ರನ ಕಲ್ಪನೆಯ ಮುಂದುವರೆದ ಭಾಗವಾಗಿ ಈ ಹನಿಗವನ ಮೂಡಿ ಬಂದಿದೆ. ವಾಗ್ದೇವಿಯ ವಾಸಸ್ಥಾನ ಕಾದಂಬರಿ ಎಂಬ ಮಹಾಸದನವಾಗಿದೆ. ವಿದ್ಯಾನಟಿಗೆ ಸಹಸ್ರಬಾಹು, ಸಹಸ್ರಪಾದ, ಸಹಸ್ರವದನಗಳು ಮೂಡಿ ಸರಸ್ವತಿಯ ನೃತ್ಯವನ್ನು ಭವ್ಯವನ್ನಾಗಿಸಿದೆ.
ಕವಿಗಳು ಸರಸ್ವತಿಯನ್ನು ’ಹೃತ್ಕಮಲದಲ್ಲಿ, ವದನಾರವಿಂದದಲ್ಲಿ, ನಾಲಗೆಯಲ್ಲಿ ನೆಲಸು’ ಎಂದು ಪ್ರಾರ್ಥಿಸುತ್ತಾರೆ. ಆದ್ದರಿಂದ ನಿಜಕವಿಯಾದವನೂ ಸರಸ್ವತಿಗೆ ಸದನಸ್ವರೂಪನಾಗಿರುತ್ತಾನೆ. ಈ ಹಿನ್ನೆಲೆಯಲ್ಲಿ ’ಕುವೆಂಪು’ ಎಂಬ ಕವಿತೆಯ ’ನುಡಿರಾಣಿಯ ಗುಡಿ- ಕುವೆಂಪು’ ಎಂಬ ಮಾತು ಗಮನ ಸೆಳೆಯುತ್ತದೆ.
’ಆಸೆ!’ ಎಂಬ ಕವಿತೆಯಲ್ಲಿ ಕವಿಯು ತನ್ನ ಆಸೆಗಳನ್ನು ಸರಸ್ವತಿಯಲ್ಲಿ ನಿವೇದಿಸಿಕೊಳ್ಳುತ್ತಾರೆ.
ಸೊಬಗಿನ ಸೆರೆಮನೆಯಾಗಿಹೆ ನೀನು;
ಚೆಲುವೇ, ಸರಸತಿಯೆ!
ಅದರಲಿ ಸಿಲುಕಿದ ಸೆರೆಯಾಳಾನು,
ನನ್ನೆದೆಯಾರತಿಯೆ!
ಎಂದು ಪ್ರಾರಂಭವಾಗುವ ಕವಿತೆಯಲ್ಲಿ ಸರಸ್ವತಿಯ ಸೌಂದರ್ಯವನ್ನು ಕುರಿತಾದ ವಿಶೇಷಣಗಳಿವೆ. ಕವಿಯು ಅಂತಹ ಕೆಲವು ವಿಶೇಷಣಗಳೊಂದಿಗೆ ತನ್ನ ಆಸೆಗಳನ್ನು ಸರಸ್ವತಿಯಲ್ಲಿ ನಿವೇದಿಸಿಕೊಳ್ಳುತ್ತಾನೆ. ಎಳೆಮೊಗದಲ್ಲಿ ನಸುನಗೆಯಾಗುವ ಆಸೆ, ತಾವರೆ ಬಣ್ಣದ ಹಣೆಯಲ್ಲಿ ಕುಂಕುಮವಾಗಿರುವ ಆಸೆ, ಬಳ್ಳಿಯಂತಿರುವ ಕೈಗೆ ಹೊಂಬಳೆಯಾಗಿರುವ ಆಸೆ, ನಿಂತಿರುವ ಪದ್ಮವನ್ನು ಮುಚ್ಚಿ ಶೈವಲದಂತೆ ಕಾಣುತ್ತಿರುವ ಸೀರೆಯ ನಿರಿಗೆಯಾಗಿರುವ ಆಸೆ, ಬಡನಡುವಿಗೆ ಕಟಿಬಂಧವಾಗಿರುವ ಆಸೆ, ಹಿಡಿದಿರುವ ವೀಣೆಯಾಗುವ ಆಸೆ ಮೊದಲಾದವುಗಳನ್ನು ಕವಿ ಹೇಳುತ್ತಾರೆ. ಕೊನೆಯಲ್ಲಿ ಬರುವ ಚೆಲುವೆ, ತರಳೇ, ಮುದ್ದಿನ ಹೆಣ್ಣೆ ಎಂಬ ಮಾತುಗಳು ’ಗಾಡಿಗೆ ತವರ್ಮನೆ’ ಎಂಬ ಆಂಡಯ್ಯನ ಮಾತುಗಳನ್ನು ನೆನಪಿಸುತ್ತವೆ. ’ಕಾಮನ ಕಣ್ಣೆ’ ಎಂದು ಸರಸ್ವತಿಯನ್ನು ಕರೆದಿರುವುದು, ನೇಮಿಚಂದ್ರನು ಸರಸ್ವತಿಗೆ ಹೇಳಿರುವ ’ಕಾಮಸಂಜನನಿ’ ಎಂಬ ವಿಶೇಷಣವನ್ನು ಧ್ವನಿಸುತ್ತದೆ.
ನಾಟ್ಯಸರಸ್ವತಿಯ ವಿಗ್ರಹವೊಂದರ ಪ್ರೇರಣೆಯಿಂದಾಗಿ ರಚಿತವಾಗಿರುವ ಕವಿತೆ, ’ನಾಟ್ಯಸರಸ್ವತಿಗೆ’.
ನರ್‍ತಿಸು, ತಾಯೆ,
ಅಜ ಜಾಯೆ,
ಮಮ ಮಸ್ತಕ ನೀರೇಜದಲಿ!
ಎಂದು ಪ್ರಾರಂಭವಾಗುವ ಕವಿತೆ,
ಅಡಿ ಸೋಂಕಿಗೆ ಮುಡಿ ಅರಳೆ
ಅಜ್ಞಾನದ ಗಡಿ ಉರುಳೆ
ವಿಜ್ಞಾನದ ಕಾಂತಿ
ಅವತರಿಸುತ ಬರೆ ಶಾಂತಿ
...........
ಮಮ ಮಸ್ತಕ ನೀರೇಜದಲಿ!
ಎಂದು ಮುಕ್ತಾಯವಾಗುತ್ತದೆ. ನಮ್ಮ ಬುದ್ಧಿಯಲ್ಲಿ ’ವಿಜ್ಞಾನದ ಕಾಂತಿ ಅವತರಿಸಿ ಶಾಂತಿ ಬರುವಂತೆ ನರ್‍ತಿಸು ನಮ್ಮ ಮಸ್ತಕದಲ್ಲಿ’ ಎನ್ನುವ ನುಡಿ ಸೊಗಸಾಗಿ ಮೂಡಿ ಬಂದಿದೆ. ನಾಗಚಂದ್ರನಲ್ಲಿ ಆತನ ಕಾವ್ಯವು ’ವಿದ್ಯಾನಟಿಯ ನಾಟ್ಯವೇದಿಕೆ’ಯಾಗಿದ್ದರೆ, ಇಲ್ಲಿ ಸ್ವತಃ ಕವಿಯ ಮಸ್ತಕವೇ ನೃತ್ಯವೇದಿಕೆಯಾಗಿದೆ. ಸರ್ವರ ಮಸ್ತಕವೂ ಸರಸ್ವತಿಯ ನೃತ್ಯವೇದಿಕೆಯಾಗಬೇಕೆಂಬುದು ಪ್ರಸ್ತುತ ಕವಿತೆಯ ಆಶಯ.
’ಅಖಂಡ ಕರ್ಣಾಟಕ!’ ಕವಿತೆಯಲ್ಲಿ ಬರುವ ’ಸರಸ್ವತಿಯೆ ರಚಿಸಿದೊಂದು ನಿತ್ಯ ಸಚಿವ ಮಂಡಲ ತನಗೆ ರುಚಿರಕುಂಡಲ’, ’ಸರಸ್ವತಿಯೆ ರಚಿಸಿದೊಂದು ರಾಜಕೀಯ ತ್ರೋಟಕ’ ಎಂಬ ಸಾಲುಗಳು ’ಕರ್ನಾಟಕಸರಸ್ವತಿ’ ಎಂಬ ಪರಿಕಲ್ಪನೆಯ ವಿಸ್ತೃತ ರೂಪಗಳು.
ರಾಮಾಯಣವನ್ನು ಸರಸ್ವತಿಯ ವೀಣೆಯೆಂದೇ ಕುವೆಂಪು ಭಾವಿಸಿದ್ದಾರೆ. ಸಾವಿರಾರು ವರ್ಷಗಳಿಂದ ಸಾವಿರಾರು ಕವಿಗಳಿಗೆ ಪ್ರತ್ಯಕ್ಷ ಪರೋಕ್ಷ ಪ್ರಭಾವ ಬೀರುತ್ತಾ ಬಂದಿರುವ ಕೃತಿಗೆ ಸಿಕ್ಕ ಮನ್ನಣೆ ಅದು. ಕವಿಗೆ ಸರಸ್ವತಿಯು ಎಂದೂ ದೂರದವಳಲ್ಲ. ಸರಸ್ವತಿಯನ್ನು ಯಾವಾಗ ಬೇಕಾದರೂ ಸಂಧಿಸಿ ಮಾತನಾಡುವ ರೀತಿಯಲ್ಲಿರುವ ’ಅದ್ಭುತ ರಾಮಾಯಣ ಅಥವಾ ವಾಲ್ಮೀಕಿಗೊಂದು ಎಚ್ಚರಿಕೆ’ ಕವನದ ಮೊದಲ ಸಾಲಿನಲ್ಲಿಯೆ, ’ಓ ತಾಯಿ ಸರಸ್ವತಿಯೆ, ನಿನ್ನ ಬೀಣೆಯ ಮೇಲೆ ಕುಳಿತೇನ ಮಾಡುತಿವೆ ಈ ಗೂಬೆಗಳ ಮಾಲೆ’ ಎಂದು ಪ್ರಶ್ನಿಸುತ್ತಾರೆ. ಉತ್ತರರಾಮಾಯಣದಲ್ಲಿ ಮೂಲರಾಮಾಯಣದ ಆಶಯಕ್ಕೆ ವಿರುದ್ಧವಾದ ಅಸಂಗತವಾದ ಪ್ರಕ್ಷಿಪ್ತಗಳು ಸೇರಿರುವುದನ್ನು ಮೇಲಿನ ಸಾಲು ಧ್ವನಿಸುತ್ತದೆ.
’ಪಂಪ’ ಕವಿತೆಯ ಮೊದಲ ಕಂದಪದ್ಯ ಹೀಗಿದೆ.
ಶ್ರೀ ವಾಗ್ದೇವಿಯ ವೀಣೆಯಿ
ನಾವಗುಮುಗುವಿಂಚರವೊನಲೆಮ್ಮೀ ಕರ್ನಾ
ಟಾವನಿಯಂ ಪುಗಲಾಯ್ತು ಸ
ರೋವರಮದರೊಳ್ ಸರೋಜವಾದೈ, ಪಂಪಾ!
ವಾಗ್ದೇವಿಯ ವೀಣೆಯ ಇಂಚರವು ಹೊಮ್ಮಿದ್ದರಿಂದಲೇ ಕವಿಗಳ ಸರೋವರದ ಮಧ್ಯದ ಸರೋಜವಾದನು ಪಂಪ ಎಂಬ ಮಾತು ’ಸರಸ್ವತಿಯ ವೀಣೆ ನುಡಿಯುತ್ತಿದ್ದರೇ ಕವಿಗಳು ಬರೆಯಲು ಸಾಧ್ಯ’ ಎಂಬ ಕಲ್ಪನೆಯನ್ನು ಮೂಡಿಸುತ್ತದೆ. ಈ ಕಲ್ಪನೆಯ ವಿಸ್ತರಣೆಯ ರೂಪವನ್ನು ’ಮಹಾದರ್ಶನ’, ’ಚಿತ್ರಾಂಗದಾ’ ಮತ್ತು ’ರಾಮಾಯಣ ದರ್ಶನಂ’ ಕಾವ್ಯಗಳಲ್ಲಿ ಕಾಣಬಹುದು.
’ಮಹಾದರ್ಶನ’ ಸುಮಾರು ೮೦೫ ಸಾಲುಗಳ ಖಂಡಕಾವ್ಯದ ವಿಸ್ತಾರವನ್ನುಳ್ಳ ನೀಳ್ಗವಿತೆ. ಕಾವ್ಯದ ಆರಂಭದಲ್ಲಿ ಮಹಾಕವಿಗಳ ಮತ್ತು ನಿರಾಕಾರನಾದ ಪರಮಾತ್ಮನ ಸ್ತುತಿಯಾದ ಮೇಲೆ ವಾಗ್ದೇವಿಯನ್ನು ಸ್ತುತಿಸಲಾಗಿದೆ. 
ಏಳು, ವಾಣಿಯೆ ಏಳು! ಬಿಜ್ಜೆಯರಸಿಯೆ ಏಳು; ವೀಣೆಯನು ತಾಳು
ನವಯುಗದ ಪರಮಾವತಾರನಂ, ಭಕುತ ಜನರಿಗೆ ಮುದದಿ ಪೇಳು|
ಬಿಜ್ಜೆಯರಸಿ ಎಂಬ ದೇಸಿ ವಿಶೇಷಣ ಗಮನ ಸೆಳೆಯುತ್ತದೆ. ಸರ್ವಸಾಹಿತ್ಯವೂ ಸರಸ್ವತಿಯೆ ಬರೆಸಿದ್ದು. ಸರಸ್ವತಿಯ ವೀಣೆ ನುಡಿದರಷ್ಟೇ ಕವಿಗಳಿಗೆ ಬರೆವುದು ಸಾಧ್ಯ ಎಂಬ ಭಾವ ಪ್ರಕಟವಾಗಿದೆ. ಮಧ್ಯೆ, ಎಲ್ಲೆಲ್ಲಿ ಯಾವುದರ ಮೂಲಕ ದರ್ಶನವನ್ನು ಸರಸ್ವತಿಯು ನೀಡಬಹುದೆಂಬುದರ ದೊಡ್ಡ ಪಟ್ಟಿಯೇ ಇದೆ. ಆದರೆ, ಕೊನೆಯಲ್ಲಿ,
ಹಿಂದೆ ರಾಮನ ಕತೆಯ ವಾಲ್ಮೀಕಿ ವೀಣೆಯಲಿ.......,
ಬಾದರಾಯಣನೆಂಬ ತಂತಿಯಲಿ ಭಾರತವ ಹಾಡಿರುವೆ.....
ನವಿಲು ವಾಹನೆ ಏಳು..... ಪಾಣಿಯಲಿ ವೀಣೆಯನು ಪಿಡಿದೇಳು,
ಮಧುರತಮ ವಾಣಿಯಲಿ ಪೇಳು
ಎಂಬ ಸಾಲುಗಳು, ವೀಣೆಯನ್ನು ತಾಳಿ ಕತೆಯನ್ನು ಹೇಳು ಎಂಬುದರ ವಿಸ್ತರಣೆಯಾಗಿವೆ. ’ನವಿಲು ವಾಹನೆ ಏಳು.....’ ಎಂಬುದರಿಂದ ಸರಸ್ವತಿಯ ವಾಹನ ನವಿಲು ಎಂದಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಸರಸ್ವತಿಯು ಹಂಸವಾಹನೆ. ಇಲ್ಲಿ ಸರಸ್ವತಿಯು ಹಂಸವಾಹನೆಯ ಬದಲು ನವಿಲುವಾಹನೆ ಆಗಿದ್ದೇಕೆ ಎಂಬುದನ್ನು,
ನವಿಲುವಾಹನೆ ಏಳು, ವಾಹನದ ಮಳೆಬಿಲ್ಲ ರಾಗಗಳ ಕೀಳು
ಕಣ್ಣುಗಳ ಬಣ್ಣಗಳ ಪದಗಳನು ಸಿಂಗರಿಸುವಂದದಲಿ ಹೂಳು
ಎಂಬ ಸಾಲುಗಳು ಸಮರ್ಥಿಸುತ್ತವೆ. ಕಾವ್ಯಕ್ಕೆ ಅಲಂಕಾರಗಳು ಮುಖ್ಯ. ಅವುಗಳಲ್ಲಿ ವೈವಿಧ್ಯವಿದ್ದರೆ ಇನ್ನೂ ಚೆನ್ನ. ನವಿಲಿನ ಕಣ್ಣು ಮತ್ತು ಬಣ್ಣಗಳಂತಹ ಪದಗಳನ್ನು ಅಂದರೆ ಅಲಂಕಾರಗಳನ್ನು ’ಹೂಳು’ ಎಂದರೆ, ನೀನು ನುಡಿಸುವ ವಾಣಿಯಲ್ಲಿ ಬಿತ್ತು, ಸೇರಿಸು ಎಂದರ್ಥ. ಪ್ರಸ್ತುತ ಕವಿತೆಗೆ ’ನವಿಲುವಾಹನೆ’ ಎಂಬುದು ಸಾರ್ಥಕ ವಿಶೇಷಣವಾಗಿದೆ.
’ಚಿತ್ರಂಗದಾ’ ಕಾವ್ಯದ ಮೊದಲ ಪರ್ವದ ಮೊದಲ ನಲವತ್ತೆರಡು ಸಾಲುಗಳಲ್ಲಿ ಸರಸ್ವತಿಯ ವಿಸ್ತೃತವಾದ ಸ್ತುತಿಯಿದೆ.
ಬ್ರಹ್ಮಮಾನಸ ಮಹದ್‌ಗರ್ಭಸಂಭವೆ, ವಿರಾಟ್
ಪ್ರಭವೆ, ಭವ್ಯಾನಂದ ವಿಭವೆ, ಶಾರದೆ, ವರದೆ,
ಭಾವಚಿಂತಾಖನಿಯೆ, ಶಿಖಿವಾಹಿನಿಯೆ, ವಾಣಿ
ಭುವನಮೋಹನ ಮಧುರ ದಿವ್ಯ ವೀಣಾಪಾಣಿ
ವಾಗ್ದೇವಿ, ಸರಸ ಕವಿತಾ ಕಲಾ ಕಲ್ಯಾಣಿ,
ತುಂಬುವೆನು ನಿನ್ನಮಲ ಪಾದ ಪಂಕೇಜದಲಿ
ಮುಂಗುರುಳ್ದುಂಬಿಗಳನೆಲೆ ತಾಯೆ, ಕೃಪೆಗೈದು
ಕಂದನಂ ಕಾರುಣ್ಯದಿಂ ಕಂಡು, ಜಡಮತಿಗೆ
ದಿವ್ಯ ವೈದ್ಯುತ್ವ ಚೇತನವನಿತ್ತು ನಲಿದೊಲಿದು
ನರ್‍ತನಂಗೈಯೆನ್ನ ಜಿಹ್ವೆಯಲಿ.
ಬ್ರಹ್ಮಮಾನಸ ಮಹದ್‌ಗರ್ಭಸಂಭವೆ ಎಂಬುದು ಸರಸ್ವತಿಯನ್ನು ಬ್ರಹ್ಮನ ಮಾನಸಪುತ್ರಿಯನ್ನಾಗಿಸಿದೆ. ಇಲ್ಲಿ ಸರಸ್ವತಿಯ ವಾಹನ ನವಿಲು (ಶಿಖಿವಾಹಿನಿ). ಶಾರದೆ ಎಂಬುದು ಸರಸ್ವತಿಯ ಹೆಸರಾಗಿ ಬಳಕೆಯಾಗಿದೆ. ಸ್ತುತಿಯ ಎರಡನೇ ಹಂತದಲ್ಲಿ, ಕಾವ್ಯಕಾಮಿನಿಯಾದ ವಾಣಿಯು ’ನಾನುಲಿವ ಗಾನದಲಿ ಕನ್ನಡನಾಡಿನೆರ್ದೆವೂವರಳ್ವವೋಲ್’ ಮಾಧುರ್ಯವನ್ನು, ಸ್ಫೂರ್ತಿಯನ್ನು ದಯಪಾಲಿಸಲಿ ಎಂಬ ಪ್ರಾರ್ಥನೆಯಿದೆ.
ಓ ಕಲ್ಪನಾ ಸುಂದರಿಯೆ, ನಿನ್ನ ಮಹಿಮೆಯೊಳೆ
ವ್ಯಾಧನಾದಂ ಪ್ರಥಮಕವಿ! ಪಸುಳೆ ನಾಂ, ತಾಯೆ,
ನೀನೊರ್ಮೆ ಚುಂಬಿಸಲ್ಕೆನ್ನೀ ತೊದಲ್ವ ತುಟಿ
ಗಾನಗೈಯದೆ ಪೇಳ್ ಬೃಹತ್ ಕಾವ್ಯ ಸಂಗೀತೆಯಂ?
ಸರಸ್ವತಿಯ ಕೃಪೆಯಿಂದ ವ್ಯಾಧ ವಾಲ್ಮೀಕಿ ಪ್ರಥಮಕವಿಯಾಗಿದ್ದಾನೆ. ಇನ್ನೂ ಮಗು ನಾನು; ತಾಯಿ ನೀನು. ನನ್ನ ತೊದಲುವ ತುಟಿಯನ್ನೊಮ್ಮೆ ಚುಂಬಿಸಿದರೆ ಸಾಕು, ಮಹಾಕಾವ್ಯವೇ ಹೊಮ್ಮುತ್ತದೆ ಎಂಬ ಭಾವ ಚೆನ್ನಾಗಿ ಮೂಡಿಬಂದಿದೆ. ವಾಲ್ಮೀಕಿ, ವ್ಯಾಸ, ಪಂಪ, ರನ್ನರ ದಿವ್ಯ ಕಾವ್ಯಗಳೆಂಬ,
ಕೀರ್ತಿಕಾಮಿನಿಯಡಿಗಳಮಲತರ ಧೂಳಿಯಂ
ಶಿರದೊಳಾನುವ ಪುಣ್ಯಮಂ ಬಯಸಿ, ಹೇ ದೇವಿ,
ನಿನ್ನನೆದೆತುಂಬ ಪ್ರಾರ್ಥಿಸುವೆ: ಕೃಪೆದೋರೆನಗೆ
ನಿನ್ನ ವೀಣಾವಾಣಿಯಂ ನೀಡು, ಓ ತಾಯೆ!
ಎಂದು, ಇಷ್ಟಕ್ಕೂ ಸುಮ್ಮನಾಗದ ಕವಿಮನಸ್ಸು, ಸರಸ್ವತಿಯಿಂದ, ಸರಸ್ವತಿಯ ವೀಣೆಯ ಕಡೆಗೆ ಹೊರಳುತ್ತದೆ.
ಏಳು, ವೀಣೆಯೆ ಏಳು! ಹೇಳು ಮುಂದಿನ ಕಥೆಯ
ಹೇ ಅಮೃತಭಾಷಿಣಿಯೆ!
ಎಂದು ಮತ್ತೆ ಮತ್ತೆ ಪ್ರಾರ್ಥಿಸುತ್ತಾರೆ. ’ಮಹಾದರ್ಶನ’ ಕವಿತೆಯಲ್ಲಿ ಸಣ್ಣದಾಗಿ ಕಾಣಿಸಿಕೊಂಡ ’ವೀಣೆಯ ತಾಳಿ ಕಥೆಯ ಹೇಳು’ ಎಂಬ ಕಲ್ಪನೆ ಇಲ್ಲಿ ವಿಸ್ತಾರಗೊಂಡಿದೆ. ತಾನು ಬರೆಯಲು ಉದ್ದೇಶಿಸಿರುವ ಕವಿತೆಯನ್ನು ಸರಸ್ವತಿಯ ವೀಣೆಯು ಹಾಡಲಿ ಎಂಬುದು ಕವಿಯ ಆಶಯ. ’ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ’, ಎಂದು ಕಾವ್ಯ ಮತ್ತು ಕರ್ತೃತ್ವವೆರಡನ್ನೂ ಭಗವಂತನಿಗೇ ಅರ್ಪಿಸುವ ನುಡಿಯ ಮುಂದುವರೆದ ರೂಪ ಈ ಪ್ರಾರ್ಥನೆ. ಅಲ್ಲಿ ಸ್ವತಃ ವೀರನಾರಾಯಣನೇ ಕವಿ. ಇಲ್ಲಿ ಸರಸ್ವತಿಯೇ ಕವಿಯಾದರೂ, ಕತೆಯ ನುಡಿಯುವುದು ಸರಸ್ವತಿಯ ವೀಣೆ!
ಕಾವ್ಯದ ಯಾವುದೋ ಒಂದು ಘಟ್ಟದಲ್ಲಿ, ಸನ್ನಿವೇಶ ಬದಲಾವಣೆಯಾಗುವಾಗ ನಿರಂತರವಾಗಿ ಹರಿಯುತ್ತಿದ್ದ ಕವಿಪ್ರತಿಭೆಗೆ ತತ್ಕಾಲೀನ ಅಡ್ಡಿ ಬಂದಂತಾಗಬಹುದೇನೋ!? ಅಂತಹ ಸಂದರ್ಭದಲ್ಲಿ ಕುವೆಂಪು ’ಮುಂದಿನ ಸನ್ನಿವೇಶವೇನು?’ ಎಂಬಂತೆ ಸರಸ್ವತಿಯನ್ನು ಕೇಳುತ್ತಾರೆ. ಇದು ಒಂದು ರೀತಿಯಲ್ಲಿ ಕಾವ್ಯತಂತ್ರವಾಗಿಯೇ ಬಂದಿರುವುದು ’ಚಿತ್ರಾಂಗದಾ’ ಕಾವ್ಯದಲ್ಲಿ ಆರಂಭವಾಗಿ ’ರಾಮಾಯಣದರ್ಶನಂ’ನಲ್ಲಿ ವಿಕಸಿತವಾಗಿದೆ ಎನ್ನುವುದನ್ನು ಮುಂದೆ ಗಮನಿಸಲಾಗುವುದು. ಪ್ರಸ್ತುತ ’ಚಿತ್ರಂಗದಾ’ದಲ್ಲಿ ಆ ರೀತಿಯ ಎರಡು ಪ್ರಸಂಗಗಳನ್ನು ಗುರುತಿಸಬಹುದು.
ಮತ್ತಾವ
ಮಾಯೆಯಂ ಮಥಸಿದೌ ನಿದ್ರಾಸಮುದ್ರದಲಿ,
ಓ ಸ್ವಪ್ನ ಸುಂದರಿಯೇ? ಸೃಷ್ಟಿಸಲ್ ತೊಡಗಿದರೆ
ನಿನ್ನ ಮಾಯಾಕುಂಚಕಿದಿರೆಲ್ಲಿ? ಎಣೆಯೆಲ್ಲಿ?
ದೇಗುಲದ ಕಲ್ನೆಲದಿ ಮಲಗಿಹ ತಳೋದರಿ
ಅದೇಕಿಂತು ಕಂಪಿಪಳ್? ಕಾಣುತಿಹಳೇನಾಕೆ? ತೋರ್
ಎಂದು ಕಲೆಗಾರ್ತಿ ಸರಸ್ವತಿಯನ್ನು ಕೇಳುತ್ತಾರೆ. ಮೂರನೆಯ ಪರ್ವಾರಂಭದಲ್ಲಿ
ಏಳು,ವೀಣೆಯೆ! ಏಳು, ಶೃಂಗಾರ ಸುಂದರಿಯೆ!
ಏಳು, ಅಂತರ್‍ಯಾಮಿ ಚಿಂತಾ ಪ್ರಭಾಮಯೀ
ಪ್ರತಿಭಾ ಮನೋಹರಿಯೆ! ಹೇಳು ಮುಂದಣ ಕಥಾ
ಭೋಗಮಂ!..............................
॒॒॒॒.॒..............................................................
..........ಜಡಮತಿಗೆ ರಸಮಂತ್ರಮಂ ನೀಡಿ,
ಮಿಡಿದು ನುಡಿಸೆನ್ನೆದೆಯ ನಾದಮಯದಿಂದ್ರಧನು
ತಂತ್ರಿಯಿಂ ಮಾಡಿದ ಮಹಾಕಾಶವೀಣೆಯಿಂ!
ಎಂದು ಸರಸ್ವತಿಯ ಮಹಾವೀಣೆಯನ್ನು ಪ್ರಾರ್ಥಿಸುತ್ತಾರೆ. ಆಕಾಶವೇ ವೀಣೆ; ಕಾಮನಬಿಲ್ಲೇ ತಂತಿಯಾದ್ದರಿಂದ ಸರಸ್ವತಿಯದ್ದು ಮಹಾವೀಣೆ. ಹೀಗೆ ಸರಸ್ವತಿಯ ವೀಣೆಯನ್ನು ಸ್ತುತಿಸುವಾಗ ಮುಂದಣ ಕತೆಯ ಆಶಯಕ್ಕೆ ಅನುಗುಣವಾಗಿಯೇ ಸರಸ್ವತಿಗೆ ವಿಶೇಷಣಗಳನ್ನು ಬಳಸಿರುವುದು ಉಚಿತವಾಗಿದೆ. ಉದಾಹರಣೆಗೆ ಚಿತ್ರಾಂಗದಾ ಕಾವ್ಯದ ಮೂರನೆಯ ಪರ್ವದಲ್ಲಿ ಶೃಂಗಾರಪ್ರಧಾನವಾದ ದೃಶ್ಯಗಳು ಹೆಚ್ಚಾಗಿ ಬರುತ್ತವೆ. ಪ್ರಾರ್ಥನೆಯಲ್ಲಿ ’ಶೃಂಗಾರ ಸುಂದರಿಯೇ’ ಎಂದು ಸ್ತುತಿಸಿರುವುದನ್ನು ಗಮನಿಸಬಹುದಾಗಿದೆ. ಹಳಗನ್ನಡ ಕಾವ್ಯಗಳಲ್ಲಿ, ಷಟ್ಪದಿ ಕಾವ್ಯಗಳಲ್ಲಿ ಆಯಾಯ ಆಶ್ವಾಸದ ಆಶಯವನ್ನು ವ್ಯಕ್ತಪಡಿಸುವ ಪದ್ಯಗಳನ್ನು ಆಶ್ವಾಸದ ವ್ರೆದಲಲ್ಲೇ ತಂದಿರುವುದನ್ನು ನೋಡಬಹುದಾಗಿದೆ. ಆದಿಪುರಾಣದಲ್ಲಿ ಪಂಪನು ಪ್ರಪ್ರಥಮವಾಗಿ ಈ ತಂತ್ರವನ್ನು ಬಳಸಿದ್ದಾನೆ. ಈ ಉದ್ದೇಶಕ್ಕಾಗಿ ಬಳಸಿರುವ ಕಂದಪದ್ಯಗಳೆಲ್ಲವೂ ’ಸರಸ್ವತೀ ಮಣಿಹಾರಂ’ ಎಂದು ಕೊನೆಗೊಂಡಿರುವುದನ್ನು, ಪಂಪನ ಸರಸ್ವತೀ ದರ್ಶನವನ್ನು ವಿವೇಚಿಸುವ ಸಂದರ್ಭದಲ್ಲಿ ಗಮನಿಸಿದ್ದೇವೆ.
’ಶ್ರೀರಾಮಾಯಣದರ್ಶನಂ’ ಬೃಹತ್ತು ಮತ್ತು ಮಹತ್ತುಗಳೆರಡರಲ್ಲೂ ’ಚಿತ್ರಾಂಗದಾ’ ಕಾವ್ಯದ ಮುಂದುವರೆದ ಆವೃತ್ತಿ. ಸರಸ್ವತಿಯ ಪ್ರಾರ್ಥನೆ, ವರ್ಣನೆ ಮತ್ತು ಕಾವ್ಯತಂತ್ರವಾಗಿ ವಾಗ್ದೇವಿಯ ಸ್ತುತಿಯನ್ನು ಬಳಸಿಕೊಂಡಿರುವ ವಿಚಾರದಲ್ಲೂ ಮುಂದುವರೆದ ಆವೃತ್ತಿಯೆ! ’ಶ್ರೀ ವೆಂಕಣ್ಣಯ್ಯನವರಿಗೆ’ ಎಂಬ ಅರ್ಪಣೆಯ ಭಾಗದಲ್ಲಿಯೇ ಸರ್ವಭಾಷಾಮಯಿಯಾದ ಸರಸ್ವತಿಯನ್ನು ವಿಶ್ವಭಾಷಾಮಯೀಯಾಗಿಸಿರುವ ’ಕಾವ್ಯಮಂ ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್’ ಮತ್ತು ’ವಾಗರ್ಥ ರಥವೇರಿ, ಭಾವದಗ್ನಿಯ ಪಥಂ ಬಿಡಿದು ಬನ್ನಿಂ’ ಎಂಬ ಸಾಲುಗಳು ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿವೆ.
‘ಏರುವೆನ್ ವಾಗ್ದೇವಿಯಮೃತ ರಸನೆಯ ಲಸನ್ ನಾವೆಯಂ’ ಎನ್ನುತ್ತಾ ಆದಿಕವಿಗೆ ವಂದಿಸಿ, ‘ದೇವಕವಿ, ನನ್ನನೊಯ್ಯನೆ ಕಾವ್ಯ ವಿದ್ಯುದ್ ವಿಮಾನದೊಳ್ ನಿರಿಸಿ, ಮೇಣ್ ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ ಹರಕೆಗೆಯ್’ ಎಂದು ಕೇಳುತ್ತಾರೆ. ಸಾಮಾನ್ಯವಾಗಿ ಇದುವರೆಗಿನ ಕವಿಗಳು -‘ಚಿತ್ರಾಂಗದಾ’ದಲ್ಲಿ ಕುವೆಂಪೂ ಸಹ- ಸರಸ್ವತಿಯು ನಮ್ಮ ನಾಲಗೆಯಲ್ಲಿ ನೆಲಸಲಿ, ನರ್ತಿಸಲಿ’ ಎಂದು ಪ್ರಾರ್ಥಿಸಿರುವುದನ್ನು ನೋಡಿದ್ದೇವೆ. ಇಲ್ಲಿ ನೇರವಾಗಿ ಸರಸ್ವತಿಯನ್ನು ನಾಲಗೆಗೆ ಆಹ್ವಾನಿಸದೆ, ಆದಿಕವಿಯನ್ನು ‘ಸರಸತಿಯನೆನ್ನಾತ್ಮ ಜಿಹ್ವೆಗೆ ಬರಿಸಿ ಹರಕೆಗೆಯ್’ ಎಂದು ಪ್ರಾರ್ಥಿಸುತ್ತಿದ್ದಾರೆ. ಇಲ್ಲಿ ‘ಆತ್ಮಜಿಹ್ವೆಗೆ’ ಎಂಬ ಮಾತು ಹೊಸದಾಗಿ ಬಂದಿದೆ. ಆದಿಕವಿಯೇ ಸರಸ್ವತಿಯನ್ನು ಕವಿಯಾತ್ಮಜಿಹ್ವೆಗೆ ಇರಿಸಿದ ಮೇಲೆ ಸರಸ್ವತಿಯ ಪ್ರಾರ್ಥನೆ ಕೆಳಗಿನಂತೆ ಬಂದಿದೆ.

ಬಾಳು, ವೀಣಾಪಾಣಿ; ಬಾಳು, ಬ್ರಹ್ಮನ ರಾಣಿ;
ಗಾನಗೆಯ್, ಹೇಳು, ಓ ಭಾವಗಂಗಾ ವೇಣಿ.
ನಂದನದಿ ತುಂಬಿಯೋಂಕೃತಿ ತುಂಬಿ ಮೊರೆವಂತೆವೋಲ್
ಕರ್ಣಾಟಕದ ಜನದ ಕರ್ಣವೀಣಾ ತುಂಬಿ
ನಿನ್ನ ವಾಣಿಗೆ ವಿಕಂಪಿಸಿ, ಜೀಂಕೃತಿಯ ಬೀರಿ,
ರಸದ ನವನೀತಮಂ ಹೃದಯದಿ ಮಥಿಸುವಂತೆ
ಗಾನಗೆಯ್, ಹೇಳು, ಓ ಭಾವಗಂಗಾವೇಣಿ. (ಕವಿಕ್ರತು ದರ್ಶನ, ಸಾಲುಗಳು: ೮೭-೮೮)

ಈ ಭಾಗದಲ್ಲಿ ಭಾವಗಂಗಾವೇಣಿ ಎಂಬ ವಿಶೇಷಣ ಗಮನ ಸೆಳೆಯುತ್ತದೆ. ಭಾರತೀಯರಿಗೆ ಗಂಗಾನದಿಯೇ ದೊಡ್ಡನದಿ. ಗಂಗಾವೇಣಿ ಎಂದರೂ ಸಮಾಧಾನವಾಗದ ಕವಿಗೆ, ಸರಸ್ವತಿಯನ್ನು ಭಾವಗಂಗಾವೇಣಿಯನ್ನಾಗಿ ನೋಡುವ ಬಯಕೆ. ಈ ವಿಶೇಷಣ ಸರಸ್ವತಿಯ ಅಲೌಕಿಕ ಪ್ರತಿಮೆಗೆ ಭವ್ಯಭೂಮತೆಯನ್ನು ತಂದುಕೊಟ್ಟಿದೆ. ಮುಂದಿನ ಭಾಗದಲ್ಲಿ ಸರಸ್ವತಿಯ ಸಾಮರ್ಥ್ಯದ ಅರಿವು ಮೂಡುತ್ತದೆ.

ತೀಡಿದರೆ ನಿನ್ನುಸಿರು, ಮದ್ದಿಗೆ ಕಿಡಿ ತಗುಳ್ದು
ಹೊಮ್ಮುವಂದದಿ ಜ್ಯೋತಿ, ಜಡವೆ ಚಿನ್ಮಯವಾಗಿ
ಚಿಮ್ಮಿದಪುದಯ್. ಮುಟ್ಟಿದರೆ ನಿನ್ನ ಮೆಯ್, ರಾಮಾಂಘ್ರಿ
ಸೋಂಕಿದೊಡನೆಯೆ ಕಲ್ಲು ಕಡುಚೆಲ್ವು ಪೆಣ್ಣಾಗಿ
ಸಂಭವಿಸಿದೋಲ್, ಪಂಕದಿಂ ಕಲಾಪಂಕಜಂ
ಕಂಗೊಳಿಪುದಯ್, ಭುವನ ಮನಮಂ ಮೋಹದಿಂದಪ್ಪಿ
ಸೆಳೆದು. ನಿನ್ನ ಕಯ್ ಪಿಳಿಯೆ ಕಬ್ಬಿಣದಿಂದೆಯುಂ
ಪೊರಸೋಸಿದಪುದು ಕಬ್ಬಿನ ರಸಂ. ಮಂತ್ರಮಯಿ
ನೀಂ ಬಡಿಯೆ, ಬಂಡೆಯಿಂ ನೀರಿನೊಳ್ಬುಗ್ಗೆಯಂ
ಹೊಮ್ಮಿ ಚಿಮ್ಮುವುದಲ್ತೆ, ಮುತ್ತು ಚಿಪ್ಪೊಡೆವಂತೆವೋಲ್
ಬಿರಿದು. ರಸಚಿತ್ ತಪೋಬಲಕೆಲ್ಲೆ ತಾನೊಳದೆ
ಪೇಳ್, ಕಲಾಲಕ್ಷ್ಮಿ? ಕೃಪೆಗೆಯ್, ತಾಯೆ, ಪುಟ್ಟನಂ,
ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ. (ಕವಿಕ್ರತು ದರ್ಶನ, ಸಾಲುಗಳು: ೧೨೮-೧೪೦)

ಕಬ್ಬಿಣದಿಂದಲೂ ಕಬ್ಬಿನ ರಸವುಕ್ಕಿಸುವ ವಾಣಿ ಇಲ್ಲಿ ರಸಸರಸ್ವತಿ. ಮಂತ್ರಮಯೀ ನೀನು ಬಡಿದರೆ ಬಂಡೆಯಿಂದಲೂ ನೀರುಕ್ಕುವುದು ಎಂಬ ಮಾತು ಋಗ್ವೇದದ, ರಭಸವಾಗಿ ಹರಿಯುವ ಸರಸ್ವತಿನದಿಯನ್ನು ಸೂಚಿಸುತ್ತದೆ. ‘ಕನ್ನಡದ ಪೊಸಸುಗ್ಗಿ ಬನ’ ಎಂಬ ಮಾತು ನವೋದಯ ಕಾವ್ಯಸಂದರ್ಭವನ್ನು ಧ್ವನಿಸುತ್ತದೆ. ನವೋದಯದ ಕೋಗಿಲೆಯಾದ ನೀನು ನನಗೆ ಕೃಪೆ ಮಾಡು ಎಂಬುದು ಕವಿಯ ಪ್ರಾರ್ಥನೆ.

‘ಶ್ರೀರಾಮಾಯಣದರ್ಶನಂ’ನ ಕೆಲವು ಸಂಚಿಕೆಗಳು (ಉದಾ: ಅಗ್ನಿಯಾತ್ರೆ ಮತ್ತು ಅತ್ತಲಾ ದೈತ್ಯ ಸಭೆಯೊಳ್) ಆರಂಭದಲ್ಲಿ ಸರಸ್ವತಿಯ ಬದಲು ಆದಿಕವಿ ವಾಲ್ಮೀಕಿಯನ್ನು ಕಾವ್ಯಾವೇಶಕ್ಕಾಗಿ ಸರಸ್ವತಿಯನ್ನು ಸ್ತುತಿಸುವಂತೆಯೇ ಸ್ತುತಿಸಿರುವುದುಂಟು. ಕೆಲವು ಸಂಚಿಕೆಯ ಪ್ರಾರಂಭದಲ್ಲಿ, ಒಮ್ಮೊಮ್ಮೆ ಸಂಚಿಕೆಯ ನಡುವೆಯೂ ಸರಸ್ವತಿಯ ಸ್ತುತಿಯಿದೆ. ಎಂಟನೆಯ ಸಂಚಿಕೆಯ ಆರಂಭದಲ್ಲಿ ಬಂದಿರುವ ಸರಸ್ವತಿಯ ಸ್ತುತಿ ಹೀಗಿದೆ.

ವಾಣಿ, ಓ ಪ್ರಾಣವೀಣಾಪಾಣಿ, ಕವಿಯೆರ್ದೆಯ
ರಸರಾಣಿ, ಮಿಡಿಯೆನ್ನಾತ್ಮತಂತ್ರಿಯಂ; ನುಡಿಸೆನ್ನ
ಹೃದಯಮಂ; ನಡೆಸೆನ್ನ ಈ ಮಹಾಕಾವ್ಯಮಂ,
ತಾಯಿ ಕಂದನ ಕೈಯನಾನುತೆ ನಡೆಯಿಪಂತೆ. (ಕುಣಿದಳುರಿಯ ಉರ್ವಶಿ!, ಸಾಲುಗಳು: ೧-೪)

ಆತ್ಮವೆಂಬ ವೀಣೆಯ ತಂತಿಯನ್ನು ನುಡಿಸುವಂತೆ ರಸರಾಣಿಯನ್ನು ಕವಿ ಕೋರುತ್ತಾರೆ. ಮೊದಲೇ ‘ಪಸುಳೆ ನಾನ್; ತಾಯಿ ನೀನು’ ಎಂದಿರುವುದರಿಂದ ‘ತಾಯಿ ಕಂದನ ಕಯ್ಯನಾನುತೆ ನಡೆಯಿಪಂತೆ’ ಎಂಬ ಉಪಮೆ ಅರ್ಥಪೂರ್ಣವಾಗಿದೆ; ಕವಿಗಳೆಲ್ಲರೂ ಸರಸ್ವತಿಯ ಸುತರು ಎಂಬರ್ಥವನ್ನು ಧ್ವನಿಸುತ್ತದೆ. ಮುಂದುವರೆದು, ತನ್ನ ಮುಂದಿರುವ ಕಾವ್ಯದ ದೂರವನ್ನು, ಕಾವ್ಯದ ಉದ್ದೇಶವನ್ನು ಹೇಳಿ, ಅದಕ್ಕೆ ಸಹಕರಿಸುವಂತೆ ಸರಸ್ವತಿಯನ್ನು ಸ್ತುತಿಸುತ್ತಾರೆ.

........ಪರಕೆಯಿರಲೆನಗೆ
ನಿನ್ನಮೃತ ವರದ ಕರದಾ, ದೇವಿ ಓ ಶಾರದಾ!
ಕೊಲೆಯ ಕಥೆ ಬಗೆಸೆಳೆಯುವಂತೆ ರಾಮನ ಮನದ
ಕಲೆಯ ಕಥೆ ತಾಂ ಬಗೆಗೊಳಿಪುದೇನಳಿವಗೆಯ ರುಚಿಯ
ದೀನರಿಗೆ? ನನ್ನೀ ಕೃತಿಯನೋದುವಾತ್ಮರಾ
ದಾರಿದ್ರ್ಯಮಂ ಪರಿಹರಿಸಿ, ಓ ಸರಸ್ವತಿಯೆ,
ನೆಲಸಲ್ಲರಸಿಯಾಗಿ, ಸಹೃದಯ ಸರಸಲಕ್ಷ್ಮಿ! (ಕುಣಿದಳುರಿಯ ಉರ್ವಶಿ!, ಸಾಲುಗಳು: ೧೪-೨೦)

ಕಾವ್ಯರಚನೆಯಲ್ಲಿ ತೊಡಗಿರುವ ಕವಿಗೆ ಕಾವ್ಯಾವೇಶವನ್ನು ಕೊಡುವಂತೆ, ಕಾವ್ಯವನ್ನು ಓದುವ ಸಹೃದಯರಿಗೂ ಸರಸ್ವತಿಯೆ ಕೃಪೆ ಮಾಡು ಎಂಬುದು ನವೀನವಾಗಿದೆ. ಸಹೃದಯರಿಗೆ ಒಲಿಯುವಳಾದ್ದರಿಂದ ಸರಸ್ವತಿಗೆ ‘ಸಹೃದಯ ಸರಸಲಕ್ಷ್ಮಿ’ ಎಂಬ ವಿಶೇಷಣ ಚೆನ್ನಾಗಿ ಒಪ್ಪುತ್ತದೆ. ‘ಕಿಷ್ಕಿಂಧಾ ಸಂಪುಟ’ದ ಪ್ರಾರಂಭದ ಸಂಚಿಕೆಯಲ್ಲಿ, ಸರಸ್ವತಿಯ ಕಯ್ಯ ವೀಣೆಯನ್ನು ಪ್ರಾರ್ಥಿಸುತ್ತಾರೆ.

ಏಳು, ವೀಣೆಯೆ; ಏಳು, ವಾಕ್ಸುಂದರಿಯ ಕಯ್ಯ
ತ್ರೈಭುವನ ಸಮ್ಮೋಹಿನಿಯೆ, ಕವನಕಮನೀಯೆ!
ಮಂತ್ರದಕ್ಷಿಗಳಿಂದೆ ನೋಳ್ಪ ನೀಂ ಸರ್ವಕ್ಕೆ
ಸಾಕ್ಷಿ. ಕಂಡುದನೆಮಗೆ ಗಾನಗೆಯ್ ಶ್ರೀಕಂಠದಿಂ
ಶತತಂತ್ರಿಯಾ. ಪ್ರತಿಭೆ ತಾಂ ಪ್ರಜ್ವಲಿಸುಗೆಮ್ಮೆರ್ದೆಗೆ
ನಿನ್ನ ದರ್ಶನವೆಮ್ಮ ದರ್ಶನಂ ತಾನಪ್ಪವೋಲ್. (ಲಂಕೇಶನೊಲಿಸಿದನು ಮಾರೀಚನಂ, ಸಾಲುಗಳು: ೧-೬)

ಕವಿಗೆ ಸರಸ್ವತಿ ಮತ್ತು ಸರಸ್ವತಿಯ ವೀಣೆಯ ಬಗೆಗೆ ಯಾವ ಭೇದಭಾವವೂ ಇಲ್ಲ. ಆದರೆ, ಎರಡನ್ನೂ ಬೇರೆ ಬೇರೆ ಎಂಬಂತೆ ಸ್ತುತಿಸುವುದರಿಂದ ವೈವಿಧ್ಯ ಉಂಟಾಗಿದೆ; ಏಕತಾನತೆಯ ಭಯವಿರುವುದಿಲ್ಲ. ಸರಸ್ವತಿಗೆ ‘ಈ’ ‘ಈಕ್ಷತಿ’ ‘ಈಕ್ಷಿತಾ’ ಎಂಬ ಹೆಸರುಗಳೂ ಇವೆ. ಇವುಗಳಿಗೆ ಈಕ್ಷಿಸು, ಅವಲೋಕಿಸು, ಗ್ರಹಿಸು ಮುಂತಾದ ಅರ್ಥಗಳಿವೆ. ‘ನೀಂ ಸರ್ವಕ್ಕೆ ಸಾಕ್ಷಿ’ ಮತ್ತು ‘ಕಂಡುದನೆಮಗೆ ಶತತಂತ್ರಿಯಾ ಶ್ರೀಕಂಠದಿಂ ಗಾನಗೆಯ್’ ಎಂಬ ಪ್ರಯೋಗಗಳಲ್ಲಿ, ಸರಸ್ವತಿಗಿರುವ ಈ ಹೆಸರುಗಳ ಅರ್ಥಪ್ರಸ್ತುತತೆಯನ್ನು ಕಂಡುಕೊಳ್ಳಬಹುದು. ಕಣ್ಣೆದುರಿಗೆ ತಾನು ಕಂಡದ್ದನ್ನು ಕವಿಮನಸ್ಸು ಗ್ರಹಿಸಿ, ಅದನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುತ್ತದೆ. ಅದಕ್ಕೆ ‘ಪ್ರತಿಭೆ’ ಎಂಬ ಸಾಮರ್ಥ್ಯ ಬೇಕು. ಆ ಪ್ರತಿಭೆಯೇ ಸರಸ್ವತಿ. ‘ನೀಂ ಸರ್ವಕ್ಕೆ ಸಾಕ್ಷಿ’ ಮತ್ತು ‘ಕಂಡುದನೆಮಗೆ ಗಾನಗೆಯ್’ ‘ಸರ್ವಪಾರದರ್ಶಿಕೆ’ ಮೊದಲಾದ ಪ್ರಯೋಗಗಳನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬಹುದಾಗಿದೆ. ಇಲ್ಲಿ ಹಾಡುತ್ತಿರುವವಳು ವೀಣಾಸರಸ್ವತಿ; ಬರೆಯುತ್ತಿರುವವನು ಕವಿ. ಆದ್ದರಿಂದ ಸರಸ್ವತಿಯ ದರ್ಶನವೇ ಕವಿಯ ದರ್ಶನವೂ ಆಗಿರುತ್ತದೆ. ಇಂತಹುದೇ ಮತ್ತೊಂದು ಪ್ರಸಂಗ ‘ರಯ್‌ಗೆ ಕರೆದೊಯ್, ಓ ಅಗ್ನಿ!’ ಸಂಚಿಕೆಯ ಪ್ರಾರಂಭದಲ್ಲಿ ಬಂದಿದೆ.

ಕ್ರಾಂತದರ್ಶಿನಿ, ಈ ಜಗತ್‌ಕಾಂತಿಕರೆ, ಶಾಂತೆ,
ಭ್ರಾಂತಿಹರೆ, ಸುಚಿರೆ, ಸುಸ್ಥಿರೆ, ಪರಾತ್ಪರೆ, ವಾಣಿ,
ಓ ಪರಾತ್ಪರವಾಣಿ, ಮಿಡಿ ನಿನ್ನ ಬೀಣೆಯಂ;
ನುಡಿ ಮುಂದೆ ನಡೆದುದಂ, ನಿನಗೆ ಕಾಣ್ಬಂದದಿಂ (ರಯ್‌ಗೆ ಕರೆದೊಯ್, ಓ ಅಗ್ನಿ!, ಸಾಲುಗಳು: ೧-೫)

ಕಾವ್ಯದ, ಸಾಹಿತ್ಯದ ಅರಿವಿನಿಂದ ನಮ್ಮ ಭ್ರಮೆಗಳು ಕಳೆದು, ಶಾಂತಿ ಲಬಿಸುತ್ತದೆ; ಜಗತ್ತನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಆ ಹಿನ್ನೆಲೆಯಲ್ಲಿ ‘ಭ್ರಾಂತಿಹರೆ’ ‘ಶಾಂತೆ’ ‘ಜಗತ್‌ಕಾಂತಿಕರೆ’ ಎಂಬ ವಿಶೇಷಣಗಳು ಗಮನಸೆಳೆಯುತ್ತವೆ.

‘ಇರ್ದುದು ಮಹೇಂದ್ರಾಚಲಂ’ ‘ರಾಮಾಯಣದರ್ಶನಂ’ನಲ್ಲಿ ಒಂದು ಪ್ರಮುಖ ಘಟ್ಟ. ಸೀತಾನ್ವೇಷಣೆಗಾಗಿ ದಿಕ್ಕು ದಿಕ್ಕಿಗೆ ಸುಗ್ರೀವನಾಜ್ಞೆ ಹೊತ್ತು ಹೋಗಿದ್ದ ಕಪಿಸೈನ್ಯದ ಕಾರ್ಯಫಲವನ್ನು ಅರಿತು ಮುಂದಿನ ಸಿದ್ಧತೆಗೆ ತೊಡಗುವ ಸಮಯ. ಕಪಿಸೈನ್ಯದ ಹಲವು ಗುಂಪುಗಳ ಕಾರ್ಯಸಾಹಸವನ್ನು ಅರಿಯಲು ಕವಿ ಆಶ್ರಯಿಸುವುದು ಮತ್ತೆ ವಿಪಂಚಿ ಅಂದರೆ ವೀಣೆಯನ್ನೆ!

ಓ, ಏಳ್, ವಿಪಂಚಿಯೆ, ಕಲಾಲತಾಂಗಿಯ ಬೆರಳ್
ತಳಿರ ಸೋಂಕಿನ ಸೊಮ್ಪು ಸಾಲ್ವುದೇನಿನ್ ನಿನಗೆ?
ಪ್ರಳಯ ಭೈರವ ಡಮರು ರೌರವಾವೇಶಮಂ
ಆಹ್ವಾನಗೆಯ್............................................. (ಇರ್ದುದು ಮಹೇಂದ್ರಾಚಲಂ, ಸಾಲುಗಳು: ೧-೪)

ಕಲಾಲತಾಂಗಿಯ ಬೆರಳೆಂಬ ತಳಿರಿನಿಂದ ವೀಣೆಯನ್ನು ಮೀಟಿ ಹೊಮ್ಮಿಸಿದ ನಾದ, ಮುಂದಿನ ಸಾಹಸದ ಕಥೆಯನ್ನು ಹೇಳಲಾರದು. ಸಾಹಸದ ಕಥೆಯಾದ್ದರಿಂದ ಡಮರು ರೌರವಾವೇಶವನ್ನು ಆಹ್ವಾನಗೆಯ್ಯುವಂತೆ ಪ್ರಾರ್ಥಿಸುತ್ತಾರೆ. ಮುಂದುವರೆದು,

ತಾಂಡವ ಶಿವನ ಕಯ್ಯ ಡಮರು ಆವೇಶಮಂ
ಆಹ್ವಾನಗೆಯ್! ಸಾಗರೋಪಮಂ ಗಾನಗೆಯ್
ಆಂಜನೇಯನ ಸಾಗರೋಲ್ಲಂಘನದ ಮಹಾ
ಸಾಹಸ ಕಥಾಸರಿತ್ಸಾಗರದ ಸಂಮಥನಮಂ! (ಇರ್ದುದು ಮಹೇಂದ್ರಾಚಲಂ, ಸಾಲುಗಳು: ೨೬-೨೮)

ಆಂಜನೇಯನ ಸಾಗರೋಲ್ಲಂಘನದ ಸಾಹಸದ ಕಥೆಯಾದ್ದರಿಂದ ಶಿವನ ಡಮರಿನ ಆವೇಶ ಬೇಕೆಂಬುದು ಕವಿಯ ಆಶಯ. ನಿರಂತರವಾಗಿ ಹರಿದ ಕವಿಪ್ರತಿಭೆ ನಿಲುಗಡೆಯ ಬಯಸಿ, ನಿಂತು, ಮುಂದುವರೆಯುವುದಕ್ಕೆ ಮೊದಲು ಮತ್ತೆ ಮತ್ತೆ ಸರಸ್ವತಿಗೆ ಕಾವ್ಯಾವೇಶಕ್ಕಾಗಿ,

.........ದರ್ಶನದೋರೆಮಗೆ,
ಓ ವಾಙ್ಮಯಿಯೆ, ನಿತ್ಯಸತ್ಯಂ ನಿಕ್ವಣಿಸುವೋಲ್
ವಚಸ್‌ತಂತ್ರಿ ಕವಿಯ ಚಿದ್ಯಂತ್ರಸಮ ಹೃದ್ವೀಣೆಯಿಂ! (ಕನಕಲಂಕಾನ್ವೇಷಣಂ, ಸಾಲುಗಳು: ೧೦-೧೨)

ಎಂದು ಬೇಡುತ್ತದೆ. ಸರಸ್ವತಿಯ ಸತ್ಯವಾಣಿ ನಿತ್ಯವಾದುದು. ವಾಣಿಯ ವೀಣೆಯೊರೆದುದನೇ ಹಾಡುವ ಕವಿಯ ಹೃದಯ ವೀಣೆಯೂ ಅದನ್ನೇ ದನಿಗೈಯಬೇಕು. ಆ ದರ್ಶನವನ್ನೇ ಕವಿ ಬೇಡುತ್ತಾನೆ. ಹೀಗೆ ಘಟನೆಯಿಂದ ಘಟನೆಗೆ ಹೊರಳುವ ಮೊದಲು, ಸರಸ್ವತಿಯ ಸ್ತುತಿಯನ್ನು ಪರಿಣಾಮಕಾರಿಯಾಗಿ ‘ತಪಸ್ಸಿದ್ಧಿ’ ಎಂಬ ಸಂಚಿಕೆಯ ಪ್ರಾರಂಭದಲ್ಲಿ ಬಳಸಿಕೊಳ್ಳಲಾಗಿದೆ. ಲಂಕೆಯಲ್ಲಿನ ಯುದ್ಧ, ಯುದ್ಧಾನಂತರದ ಕಾರ್ಯಭರಗಳ ವರ್ಣನೆಯಲ್ಲಿ ಮುಳುಗಿಹೋಗಿದ್ದ ಕವಿಗೆ, ಒಮ್ಮೆಲೆ ಅಯೋಧ್ಯೆಯ ನೆನಪಾಗುತ್ತದೆ. ಆಗ ವಾಗ್ದೇವಿಯನ್ನೇ ಪ್ರಾಥಿಸುತ್ತಾರೆ.

ಸಾಲದೇನಿನಿತೆ ಸೂಚನೆ ನಿನಗೆ, ಓ ವಾಣಿ,
ವಾಗ್ದೇವಿ? ಯಾಚಿಸುವೆ ಕೈಮುಗಿದು. ಪಿಂತಿರುಗು;
ಬಾ, ತಾಯಿ; ಸಾಲ್ಗುಮಾ ಲಂಕೆ, .?.....................
....................................................................
ತೋರೆಮಗೆಂತು ಸುವ್ರತನ್ ಭರತದೇವಂ?
...........................................................
ಹಾಡಿ ತೋರೆಮಗೆ, ಓ ತಾಯೆ, ಹೇ ವಾಗ್ದೇವಿ! (ತಪಸ್ಸಿದ್ಧಿ, ಸಾಲುಗಳು: ೧೫-೨೫)

ಈ ರೀತಿಯ ಕಾವ್ಯತಂತ್ರದ ಭಾಗವಾಗಿ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಸರಸ್ವತಿಯ ಸ್ತುತಿ ಮತ್ತೆ ಮತ್ತೆ ಬಳಕೆಯಾಗಿದೆ.

ಏನು ಮೌನವಿದೆನ್ನ ಕೋಮಲೆ? ಕೋಪವೆ ನಿನಗೆ
ಕಾಮಿಸಿದನಿನಿಯನೆಂದನ್ಯ ವಿಷಯ ವಧೂ
ಸರೋಜ ಶಾರದೆಗೆ? ತಂಗೆಗೆ ಕರುಬುವರೆ, ಪೇಳ್,
ಉದಾತ್ತೆ ನೀಂ? ರೂಪಕ ರೂಪಿಯಾದೊಡೇನಾ
ಪ್ರೇಮಮುಂ ರಾಮ ಮಹಿಮಾ ಕೀರ್‍ತಿ ಕಥೆಯಲ್ತೆ?
ಕವಿಯೊಲ್ಮೆ ಕಡಲಲ್ತೆ? ಬಡಬ ಕುಂಭೋದ್ಭವರ್
ಕುಡಿದು ಪೂರೈಸುವರೆ? ನಿನಗೆ ರಸಮಿರದವೋಲ್
ಪೀರ್ವಳೆಂತೊರ್ವಳ್ ಕೃಶಾಂಗಿ ತಾನದನ್? ಏಳ್
ಮುನಿಸುನುಳಿ; ಏಳ್, ಕೊಳ್ ಸಹಸ್ರತಂತ್ರಿಯ ನಿನ್ನ
ಗೀರ್ವಾಣ ವೀಣೆಯಂ; ಪೇಳ್, ಮೀಂಟು ಮುಂದಣ ಕಥಾ
ಹರಜಟಾ ಜೂಟಪ್ರಪಾತ ಗಂಗಾ ಸ್ತೋತ್ರಮಂ ಸಂಗೀತಮಂ! (ಸೈನ್ಯಗುಪ್ತಿ, ಸಾಲುಗಳು: ೧-೧೨)

ಸರಸ್ವತಿಯ ಸ್ತುತಿ ಕಾವ್ಯತಂತ್ರವಾಗಿ ಬಳಕೆಯಾಗಿರುವುದಕ್ಕೆ ಒಂದು ಉತ್ತಮ ಉದಾಹರಣೆ ಮೇಲಿನ ಭಾಗ. ಕವಿಪ್ರತಿಭೆ ಅಲೌಕಿಕವಾದರೂ, ಕವಿ ಲೌಕಿಕನೇ! ಕಾವ್ಯ ರಚನೆ ನಿಂತು, ಮತ್ತೆ ಪ್ರಾರಂಭವಾಗಬೇಕಾದಾಗ, ಸರಸ್ವತಿಯನ್ನು ರಮಿಸಿ, ನಮಿಸಿ ಮುಂದುವರೆಯುವ ಸುಂದರ ಚಿತ್ರಣ ಇದಾಗಿದೆ. ಇನಿಯನಾದ ಬ್ರಹ್ಮನೇನಾದರೂ ಅನ್ಯ ವಿಷಯ ವಧೂ ಸರೋಜೆಗೆ ಒಲಿದನೆಂದು ಕೋಪವೆ? ಅದೂ ಒಂದು ಮಹಿಮೆಯಲ್ಲವೆ. ಉದಾತ್ತೆಯಾದ ನೀನು ತಂಗೆಗೆ ಕರುಬುವುದೆ? ಸೃಷ್ಟಿಕರ್ತನೊಲ್ಮೆ ಕಡಂತೆ. ಅದನ್ನು ಕೃಶಾಂಗಿಯಾದ ನಿನ್ನ ತಂಗೆಯೊಬ್ಬಳು ಎಷ್ಟೆಂದು ಕುಡಿಯಬಲ್ಲಳು? ಕೋಪವನ್ನು ಬಿಡು ಎಂದು ಸಂತೈಸಿ, ರಮಿಸಿ, ವೀಣೆಯನ್ನು ಹಿಡಿದು ಮುಂದಿನ ಕಥೆಯನ್ನು ನುಡಿಸುವಂತೆ ಪ್ರಾರ್ಥಿಸುತ್ತಾರೆ.

ಒಳ್ಳೆಯ ಸಾಹಿತ್ಯದಲ್ಲಿ, ಪಾತ್ರಕ್ಕೆ ಒಂದು ಹೆಸರನ್ನಿಟ್ಟರೆ ಕವಿಯ ಕೆಲಸ ಮುಗಿದಂತೆ; ಆ ಪಾತ್ರಗಳು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತವೆ. ಅಷ್ಟರ ಮಟ್ಟಿಗೆ ಕವಿ ನಿರ್ಲಿಪ್ತನಾಗಿರಬೇಕು. ಹಾಗೇ, ತನ್ನದೇ ಕಾವ್ಯದ ಪಾತ್ರವೊಂದು ಏನೋ ಗಹನವಾದ, ರಹಸ್ಯವಾದ (ಬೇರೆ ಪಾತ್ರಗಳಿಗೆ ತಿಳಿಯದಂತೆ) ಕಾರ್ಯವೊಂದನ್ನು ಎಸಗುತ್ತಿರುತ್ತದೆ. ಆಗ ಸ್ವತಃ ಕವಿಯೇ ಅಚ್ಚರಿಪಡುತ್ತಾನೆ. ಅದೇನೆಂದು ತನ್ನ ಸ್ಫೂರ್ತಿಯ ಸೆಲೆಯಾದ, ತನಗೆ ಕಾವ್ಯವನ್ನು ಹೇಳಿ ಬರೆಸುತ್ತಿರುವ ವಾಗ್ದೇವಿಯ ಮೊರೆಹೋಗುತ್ತಾನೆ. ಸಂದರ್ಭಕ್ಕನುಗುಣವಾದ ವಿಶೇಷಣಗಳೊಂದಿಗೆ, ಅಂತಹದೊಂದು ಸನ್ನಿವೇಶ ‘ದಶಾನನ ಸ್ವಪ್ನಸಿದ್ಧಿ’ ಸಂಚಿಕೆಯ ಆರಂಭದಲ್ಲಿ ಬಂದಿದೆ.

ಪೇಳ್ ತಾಯೆ
ಓ ವಾಗಧಿಷ್ಠಾತ್ರಿ, ತೊಡಗಿಹನದೇನಂ
ಮಹತ್ ಪೂಜೆಯಂ ಶರ್ವಮಂದಿರದೊಳೇಕಾಂಗಿ?
ಜ್ಞಾನಾಧಿದೇವಿ ನೀಂ, ಮೇಣ್ ವಿಜ್ಞಾನ ನೇತ್ರಿ:
ಹೊರನನ್ನಿಯೊಂದಲ್ಲದಂತಶ್ಚಕ್ಷು ತಾಂ ಕಾಣ್ಬ
ಲೌಕಿಕಾತೀತಮಹ ನಿತ್ಯಸತ್ಯಂಗಳಂ
ತೋರೆನಗೆ, ದೇವಿ, ವಿಶ್ವಾಂತರಾತ್ಮೆ! ಸ್ಥೂಲಮಂ
ಸೂಕ್ಷ್ಮಮಂ, ಕೋಶಕೋಶಗಳಿತರ ಕಾಲಮಂ
ದೇಶಮಂ, ಕಾರಣವನಂತೆ ಕಾರಣದಾಚೆ
ಲೀಲಾ ಮಹೋದ್ದೇಶಮಂ ಬಲ್ಲೆ ನೀಂ: ಕವಿಗೆ
ಕೃಪೆಗೆಯ್, ಅವಿದ್ಯೆ, ಹೇ ವಿದ್ಯೆ, ವಿದ್ಯಾತೀತೆ! (ದಶಾನನ ಸ್ವಪ್ನಸಿದ್ಧಿ, ಸಾಲುಗಳು: ೫-೧೫)

ಸರಸ್ವತಿಯು ಜ್ಞಾನದೇವಿ, ವಿಜ್ಞಾನ ನೇತ್ರಿ, ವಿಶ್ವಾಂತರಾತ್ಮೆಯಾದ್ದರಿಂದ ಕಾಲ, ದೇಶ, ಕಾರಣ, ಕಾರಣದಾಚೆಗಿನ ಲೀಲಾ, ಉದ್ದೇಶ ಇವೆಲ್ಲವನ್ನೂ ತೋರಿಸಬಲ್ಲಳು. ‘ಅವಿದ್ಯೆ, ವಿದ್ಯೆ ವಿದ್ಯಾತೀತೆ’ ಎಂಬ ಮಾತಂತೂ ಸರಸ್ವತಿಯ ಅಲೌಕಿಕ ಪ್ರತಿಮೆಗೆ ತೊಡಿಸಿದ ನುಡಿಯಾಭರಣವಾಗಿದೆ.

ಕುವೆಂಪು ಅವರ ಸರಸ್ವತಿಯ ವಿರಾಡ್‌ದರ್ಶನವಾಗುವುದು, ಋತಚಿತ್ ಸ್ವರೂಪಿಣಿಯರಾದ ಶಿವೆ, ಸರಸ್ವತಿ ಮತ್ತು ಲಕ್ಷ್ಮಿಯರನ್ನು ವಂದಿಸಿ ಪ್ರಾರಂಭಿಸುವ ‘ಅಭಿಷೇಕ ವಿರಾಡ್‌ದರ್ಶನ’ವೆಂಬ ಕೊನೆಯ ಸಂಚಿಕೆಯಲ್ಲಿ. ಶ್ರೀರಾಮ ಪಟ್ಟಾಭಿಷೇಕದ ವಿಶ್ವರೂಪವನ್ನು ತೋರಿಸಲ್ ಸ್ವತಃ ‘ಅನಾದಿಕವಿ’ಯೇ ಬರುತ್ತಾನೆ. ಇದುವರೆಗೂ ‘ನೀನೊರೆದುದನು ನಾನು ಬರೆವೆನು’ ಎನ್ನುತ್ತಿದ್ದ ಕವಿ, ಆ ಸೃಷ್ಟಿಪ್ರಜ್ಞೆಗೆ ‘ಅನಾದಿಕವಿ’ ಎಂಬ ವಿಶೇಷಣವನ್ನು ಇಲ್ಲಿ ತಂದಿದ್ದಾರೆ. ಪುಲ್ಲಿಂಗವಾಚಿಯಾದರೂ, ‘ಅನಾದಿಕವಿ’ ಕಲ್ಪನೆ ಸರಸ್ವತೀ ತತ್ವದ ವಿಸ್ತೃತ ರೂಪವೇ ಆಗಿದೆ. ‘ನೀನಾರು?’ ಎಂದ ಕವಿಗೆ,

ಅನಾದಿಕವಿ ನಾಂ ಕಣಾ! ವಾಲ್ಮೀಕಿ
ವ್ಯಾಸ ಹೋಮರ್ ದಾಂತೆ ಫಿರ್ದೂಸಿ ಮಿಲ್ಟನ್
ಮಹಾಕವೀಶ್ವರರೆನಗೆ ಬಾಹುಮಾತ್ರಗಳಲ್ತೆ?
ಬಹುನಾಮರೂಪಗಳ್, ಬಹು ಕಾಲದೇಶಗಳ್
ನನಗೆ. ನೀನುಂ ನಾನೆಯೆ, ಕುವೆಂಪು! (ಅಭಿಷೇಕ ವಿರಾಡ್‌ದರ್ಶನಂ, ಸಾಲುಗಳು: ೩೪-೩೮)

ಇಲ್ಲಿ ವ್ಯಕ್ತವಾಗುವ ಸರಸ್ವತಿ ಸ್ವರೂಪ ಕಾಲದೇಶಗಳನ್ನು ಮೀರಿದ್ದು. ಕಾವ್ಯದುದ್ದಕ್ಕೂ, ಸರಸ್ವತಿ ಮತ್ತು ಸರಸ್ವತಿಯ ವೀಣೆಯನ್ನು ಕಾವ್ಯಾವೇಶಕ್ಕಾಗಿ ಬೇಡಿದ ಕವಿಪ್ರತಿಭೆ, ಎಲ್ಲ ಕವಿಗಳಿಗೂ ಮಾತೃರೂಪವಾದ ಪ್ರತಿಭಾಸ್ವರೂಪವನ್ನು ಸರಸ್ವತಿಗೆ ನಿರ್ಮಿಸಿದೆ. ಈ ಸರಸ್ವತಿಯು ಸರ್ವಭಾಷಾಮಯೀ ಮಾತ್ರವಲ್ಲ. ವಿಶ್ವಮಾತೆಯೂ ಹೌದು. ಕಾವ್ಯಾರಂಭದಲ್ಲಿ ಬಂದ ‘ವಿಶ್ವವಾಣ’ ಎಂಬ ಒಂದು ಮಾತು, ವೇದವಾಗುವುದು ಈ ಕೊನೆಯ ಸಂಚಿಕೆಯಲ್ಲಿ. ಸರಸ್ವತಿಯು ನುಡಿಸಿದ್ದನ್ನಷ್ಟೇ ಸರಸ್ವತಿಯ ಬಾಹುರೂಪರಾದ ಕವಿಗಳು ಬರೆಯುವುದು. ಆದ್ದರಿಂದ ಕಾವ್ಯವೆಂಬುದು ಸರಸ್ವತಿಯ ಕೃತಿ, ಭಗವಂತನ ಅವತಾರವಾಗುತ್ತದೆ. ‘ಕೃತಿರೂಪದಿಂದಲೂ ಭಗವಂತನ ಅವತಾರವಾಗುತ್ತದೆ’ ಎಂಬ ಮಾತಿಗೆ ಅನುಗುಣವಾಗಿಯೇ, ಕವಿ ತಾನು ಬರೆದ ‘ಕೃತಿಸರಸ್ವತಿ’ಗೆ ತಾನೇ ಮಣಿಯುತ್ತಾನೆ.

ಅಂದ ಹಾಗೆ ‘ನುಡಿರಾಣಿಯ ಗುಡಿ ಕುವೆಂಪು’ ಎಂಬ ಸಾಲು ಕುವೆಂಪು ಅವರ ‘ಕುವೆಂಪು’ ಎಂಬ ಕವಿತೆಯದ್ದು!

ತೇಜಸ್ವಿಯನ್ನು ಹುಡುಕುತ್ತಾ...........