Monday, September 26, 2011

ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು!

ಇಸವಿ ೧೯೨೯. ತರುಣ ಕವಿ ಕುವೆಂಪು ಅವರಿಗೆ ಆಗ ಏರುಯೌವ್ವನದ ವಯಸ್ಸು, ೨೫. ಆ ವರ್ಷದ ಬೇಸಗೆಯ ಎರಡು ತಿಂಗಳು ಪೂರ್ತಿ ಮಲೆನಾಡಿನಲ್ಲೇ ಕಳೆಯುತ್ತಾರೆ, ಮಧ್ಯೆ ಹಂಪಿಯ ಪ್ರವಾಸವನ್ನು ಹೊರತುಪಡಿಸಿ. ಆ ಅವಧಿಯಲ್ಲಿ ಸುಮಾರು ೨೬ ಕವಿತೆಗಳು ರಚಿತವಾಗಿವೆ. ಅವುಗಳಲ್ಲಿ ೨೪ ಕವಿತೆಗಳು ಪಕ್ಷಿಕಾಶಿ, ಕೊಳಲು ಮತ್ತು ನವಿಲು ಸಂಗ್ರಹಗಳಲ್ಲಿ ಸೇರಿವೆ. ಅವುಗಳಲ್ಲಿ ಕೆಲವು ಸುಪ್ರಸಿದ್ಧವಾಗಿ ಒಂದು ರೀತಿಯಲ್ಲಿ ನವೋದಯ ಸಾಹಿತ್ಯದಲ್ಲಿ ಐತಿಹಾಸಿಕ ಸ್ಥಾನ ಗಳಿಸಿವೆ. ಅದರಲ್ಲಿರುವ ಕೆಲವು ಸಾಂದರ್ಭಿಕ ಕವಿತೆಗಳಿಗೆ ಸ್ವಾರಸ್ಯಕರವಾದ ಚರಿತ್ರೆಯೂ ನಿರ್ಮಾಣವಾಗಿದೆ!
ಮೊದಲ ಬಾರಿಗೆ ’ಕೊಳಲು’ ಸಂಕಲನದಲ್ಲಿ ಅಚ್ಚಾಗಿದ್ದ ’ಮುಂಗಾರು’ ಶೀರ್ಷಿಕೆಯ ಕವಿತೆ ಈಗ ’ಪಕ್ಷಿಕಾಶಿ’ ಸಂಕಲನದಲ್ಲಿದೆ. ೨೨-೪-೧೯೨೯ ಕವಿತೆ ರಚನೆಯಾದ ದಿನ. ಮಲೆನಾಡಿನ ರೌದ್ರಭಯಂಕರ ಹಾಗೂ ರುದ್ರರಮಣೀಯ ಮುಂಗಾರು ಮಳೆಯಾರ್ಭಟವನ್ನು ಅನುಭವಿಸಿದ ಕವಿಯ ಮನಸ್ಸಿನಿಂದ ಹುಟ್ಟಿದ ಸ್ವಾನುಭವ ಕವಿತೆ. ಆ ಕವಿತೆ ಅರಳಿದ ಸಂದರ್ಭವನ್ನು ಕವಿ ’ನೆನಪಿನ ದೋಣಿಯಲ್ಲಿ’ ಹೀಗೆ ದಾಖಲಿಸಿದ್ದಾರೆ.
’ಮುಂಗಾರು’ - ಇದನ್ನು ನಾನು ರಚಿಸಿದ್ದು ಕುಪ್ಪಳ್ಳಿಯ ಉಪ್ಪರಿಗೆಯಲ್ಲಿ ಕುಳಿತು. ಆ ಉಪ್ಪರಿಗೆ ಪೂರ್ವದಿಕ್ಕಿಗೆ ಪೂರ್ತಿ ತೆರೆದಿದೆ. ಪೂರ್ವದಿಕ್ಕಿಗೆ ಅಡಕೆ ತೋಟದ ಆಚೆಗೆ ಏರುವ ಮಲೆನೆತ್ತಿ ಅರ್ಧ ಆಕಾಶಕ್ಕೆ ಏರಿದೆ. ಮಲೆ ಎಂದರೆ ಬರಿಯ ಬೆಟ್ಟವಲ್ಲ. ನಿಬಿಡಾರಣ್ಯ ಮುಚ್ಚಿ ಮುಸುಗಿರುವ ಪರ್ವತಶ್ರೇಣಿ. ಆ ದಿನ ಸಂಜೆಯ ಹೊತ್ತು ನಾನು ಹಸುರುಗೋಡೆಯಂತೆ ಓರೆಯಾಗಿ ಬಾನುದ್ದ ಎದ್ದಿದ್ದ ಮಲೆಯ ಕಡೆ ಧ್ಯಾನನೇತ್ರಗಳಿಂದ ನೋಡುತ್ತಾ ಕುಳಿತಿದ್ದೆ. ಆಕಾಶದಲ್ಲಿ ಮುಂಗಾರಿನ ಮೋಡ ಕವಿದು ಭಯಂಕರ ಗುಡುಗು ಮಿಂಚುಗಳಿಂದ ವಿಜೃಂಭಿಸಿತ್ತು. ಕರ್ಮೋಡದ ತುದಿ ಮಲೆನೆತ್ತಿಯನ್ನೆ ಮರೆಗೊಳಿಸಿ ಭೂಮಿಗೆ ಸಮೀಪಿಸಿತ್ತು. ಹೆಮ್ಮರಗಳನ್ನೂ ಅಲುಬಿ ತೂಗಿಸುವ ಬಿರುಗಾಳಿಯೂ ಎದ್ದಿತು. ನೋಡುತ್ತಿದ್ದಂತೆ, ಮಳೆ ಶುರುವಾದುದು ಮಲೆಯ ನೆತ್ತಿಯ ಮರಹಸುರು ಮಬ್ಬಾಗಿ ಗೊತ್ತಾಯಿತು. ಮತ್ತೆ ಮಳೆ ಮಲೆಯ ಇಳಿಜಾರಿನಲ್ಲಿ ಮನೆಯ ಕಡೆಗೆ ಇಳಿಯತೊಡಗಿತು, ನೆತ್ತಿಯಿಂದ ಮಲೆಯ ಓರೆಯ ಸೋಪಾನವನ್ನಿಳಿದು ಬರುವಂತೆ. ಅದು ಇಳಿದಂತೆಲ್ಲ ಕಾಡು ಮಬ್ಬಾಗುತ್ತಾ ಮಬ್ಬು ಮುಂದುವರಿಯುತ್ತಿತ್ತು. ದೂರವಿದ್ದ ಹನಿಗಳು ಬರುಬರುತ್ತಾ ಬಳಿಸಾರಿ ಕೊನೆಗೆ ನಮ್ಮ ತೋಟವೂ ಸೇರಿದಂತೆ ಎಲ್ಲವೂ ಸೊಳ್ಳೆಪರದೆಯೊಳಗಾದಂತೆ ದೃಶ್ಯ ಕಂಗೊಳಿಸಿತು.
ಕವಿಯ ಮೇಲಿನ ಮಾತುಗಳು ಕವಿತೆಯಲ್ಲಿ ಒಡಮೂಡಿರುವುದು ಹೀಗೆ.
ಪಡುವಲ ಕಡಲಿನ ಮಿಂಚನು ಗುಡಗನು ನುಂಗಿ ಬಸಿರಿನಲಿ, ಮುಡಿಗೆದರಿ,
ಮುಂಗಾರಸುರಿಯು ರಕ್ಕಸವಜ್ಜೆಗಳಿಕ್ಕುತ ಬಂದಳು ಬಲು ಗದರಿ!
ಗುಟುರನು ಹಾಕಿತು ಮುಂಗಾರ್ ಗೂಳಿ!
ಘೀಳಿಟ್ಟೊರಲಿತು ಘನಘಟೆಯಾಳಿ!
ಬುಸುಗುಟ್ಟಿತು, ಬೀಸಿತು ಬಿರುಗಾಳಿ!
ಸುತ್ತಲು ಮುತ್ತಿತು ಕಾರ್ಮೋಡ!
ಹರಿಯುವ ಹಾವಿನ ತೆರದಲಿ ಕತ್ತಲೆ ಮೆಲ್ಲನೆ ನುಂಗಿತು ಮಲೆನಾಡ!
ಹಿಂಜರಿದುರಿಬಿಸಿಲಂಜುತಲಡಗಿತು, ರವಿಮಂಡಲ ಕಣ್ಮರೆಯಾಯ್ತು;
ಕಾಳಿಯ ಕೇಶದ ತಿಮಿರವು ಮುಸುಗಿತು, ಶಾಂತಿಯ ಗಲಭೆಗೆ ಸೆರೆಯಾಯ್ತು.
ಕಾಳಿಯ ಕಂಗಳ ಕೆಂಬೆಳಕಂತೆ,
ಕೈ ಹೊಂಬಳೆಗಳ ಹೊಸ ಹೊಗರಂತೆ,
ಝಳಪಿಪ ಖಡ್ಗದ ದೀಧಿತಿಯಂತೆ,
ಮಿಂಚುಗಳೆಸೆದುವು ಗೊಂಚಲಲಿ!
ಹೊಳೆದುವು, ಅಳಿದುವು, ಸುಳಿಸುಳಿದಲೆದುವು ಮುತ್ತುವ ಮೋಡಗಳಂಚಿನಲಿ! 
ಹಾಡುವ ಹಕ್ಕಿಯ ಹಣ್ಣಿನ ಮರದಿಂದೋಡುತ ಹುಲ್ಲಿನ ಹಕ್ಕೆಯಲಿ
ಚಿಲಿಪಿಲಿ ದನಿ ಮಾಡವ್ವನ ಕರೆಯುವ ಮರಿಗಳನಪ್ಪಿತು ತಕ್ಕೆಯಲಿ.
ಬೆಚ್ಚನೆ ರೆಕ್ಕೆಯೊಳವುಗಳನಿಟ್ಟು,
ಹಸಿದಿಹ ಮಕ್ಕಳಿಗುಣಿಸನು ಕೊಟ್ಟು,
ಗೂಡಿನ ಬಾಯಲಿ ಮಂಡೆಯನಿಟ್ಟು
ದಿಟ್ಟಿಯನಟ್ಟಿತು ಯೋಗಿಯೊಲು,
ಕೊಂಬೆಯ ತೊಟ್ಟಿಲ ತೂಗುತ ಗಾಳಿಯು ಬುಸುಬುಸುಗುಡುತಿರೆ ಭೋಗಿಯೊಲು!
ಬನದಲಿ ಬಯಲಲಿ ಮೇಯುವ ತುರುಗಳು ಜವದಲಿ ಕೊಟ್ಟಿಗೆಗೋಡಿದವು;
ಬಾಲವನೆತ್ತಿದ ಕರುಗಳು ಅಂಬಾ ಎನ್ನುತ ತಾಯ್ಗಳ ಕೂಡಿದವು.
ಗುಡುಗಿನ ಸದ್ದಿಗೆ ಕಾಡುಗಳದುರಿ,
ಅಡವಿಯ ಮಿಗಗಳು ಸಿಡಿಲಿಗೆ ಬೆದರಿ
ಪೊದೆಗಳ ಗುಹೆಯನು ಸೇರಿದುವು.
ತೊಳಲುವ ಕರ್ಮುಗಿಲಾಲಿಯ ಕಲ್ಗಳ ಮಿರುಗುವ ಮಳೆಯನು ಕಾರಿದುವು!
ಈ ನಾಲ್ಕೂ ಪದ್ಯಗಳಲ್ಲಿ, ಮಲೆನಾಡಿಗೆ ಕಾಲಿಡುತ್ತಿರುವ ವರ್ಷದ ಮೊದಲ ಮುಂಗಾರಿನ ಆರ್ಭಟ ಆವೇಶಗಳನ್ನು ಕಾಣಬಹುದು. ಕವಿತೆಗಿರುವ ವೇಗದ ಲಯ, ಮಳೆಯ ಆರ್ಭಟವನ್ನು ಕಟ್ಟಿಕೊಡುವಲ್ಲಿ ಸಫಲವಾಗಿದೆ. ಮೊದಲ ಪದ್ಯದ ಮೊದಲ ಸಾಲಿನಲ್ಲಿ ಮತ್ತೆ ಮತ್ತೆ ಬಂದಿರುವ ’ಡ’ಕಾರ ಮಲೆನಾಡಿನ ಮುಂಗಾರಿನ ಮಳೆಯಲ್ಲಿ ಮೂಡುವ ಗುಡುಗು ಸಿಡಿಲಿನ ಶಬ್ದಾಡಂಬರಕ್ಕೆ ಸಾಕ್ಷಿಯಾಗಿದೆ! ಸುಳಿಸುಳಿ, ಬುಸುಬುಸು ಈ ರೀತಿಯ ಪದಪುಂಜಗಳು ಮುಂಗಾರಿನ ಆವೇಶದ ಅಕ್ಷರರೂಪಗಳಾಗಿವೆ. ಮುಂದಿನೆರಡು ಪದ್ಯಗಳಲ್ಲಿ ಮಳೆ ಹಿಡಿದ, ಸುರಿದ ಸನ್ನಿವೇಶ, ಅದರಿಂದ ತಿರೆಗೆ, ಕವಿಗೆ ದೊರೆತ ಫಲಾನುಭವ ಮಡುಗಟ್ಟಿದೆ.
ವನಪರಿವೃತ ಗಿರಿಶಿರದಿಂದೊಯ್ಯನೆ ಮರದಲೆದಳಿರನು ತುಳಿತುಳಿದು
ಚೆಲುವಿನ ಹನಿಗಳು, ಸುರಶಿಶುಮಣಿಗಳು, ಬುವಿಗಿಳಿತಂದರು ನಲಿನಲಿದು.
ಬಳಿ ಸಾರುವ ದೂರದ ಸರ ಕೇಳೆ,
ಗಣನೆಗೆ ಸಿಲುಕದ ಮಳೆಹನಿ ಬೀಳೆ,
ಕಬ್ಬಗನೆದೆಯಲಿ ಮುದ ಮೊಳೆತೇಳೆ
ನೆನೆವುದು ಸೊಗದಲಿ ಬಗೆಗಣ್ಣು:
ಧಾರೆಯ ದಾರದಿ ನೆಯ್ದಿಹ ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು!
[ಮಳೆಯ ಹನಿಯ ದಾರಗಳಿಂದ ನೆಯ್ದ ಒಂದು ಯವನಿಕೆ (ಪರದೆ) ಕಾಡನ್ನು ಸುತ್ತುವರಿದಂತಾಗಿ ಮಲೆ ಕಾಡು ಎಲ್ಲ ಒಂದು ಸೊಳ್ಳೆಪರದೆಯೊಳಗಾದಂತಾಗಿ ಮಸುಗು ಮಸುಗಾಗುತ್ತದೆ ಎಂಬ ಸುಂದರ ದೃಶ್ಯಕ್ಕೆ ಪ್ರತಿಮೆಯೊಡ್ಡುತ್ತದೆ ಕವಿಪ್ರತಿಭೆ, ಕೊನೆಯ ಪಂಕ್ತಯಲ್ಲಿ]
ಮುಗಿಲಿನ ಮುತ್ತುಗಳಾಲಿಯ ಕಲ್ಲುಗಳುದುರಲು ಹೂಮಳೆಯಂದದಲಿ
ಹುಡುಗರು ಹುಡುಗಿಯರಾಯ್ದಾಯ್ದವುಗಳ ಕುಣಿದು ತಿಂದರಾನಂದದಲಿ.
ಸಗ್ಗದ ಕಂಬನಿ ತಿರೆಯನು ತೊಯ್ಯೆ,
ಬೆಂದಿಹದುರಿಯನು ಪರ ಬಂದೊಯ್ಯೆ,
ಲೋಕಕೆ ನಾಕವು ಬಿಜಯಂಗೆಯ್ಯೆ
ಕಿಸಲಯ ಸುಮ ಸೋಪಾನದಲಿ,
ಕವಿ ಹೃದಯದಿ ಮೋಹನ ಸುರಗಾನದ ಮಳೆಗರೆವುದು ಸುಮ್ಮಾನದಲಿ!
ಈ ಕವಿತೆಯನ್ನು ಸಹೃದಯಗೋಷ್ಠಿಯಲ್ಲಿ ಓದಿದಾಗ ಸಹೃದಯರು ಮೆಚ್ಚಿ ಹರ್ಷಘೋಷ ಮಾಡುತ್ತಿದ್ದರಂತೆ. ಆದರೆ ಅದು ಕೊಳಲು ಸಂಗ್ರಹದಲ್ಲಿ ಪ್ರಕಟವಾದಾಗ ವಿಮರ್ಶಕರೊಬ್ಬರು ’ಜಯಕರ್ಣಾಟಕ’ ಮಾಸಪತ್ರಿಕೆಯಲ್ಲಿ, ಕೊಳಲಿನ ಕವನಗಳಲ್ಲಿ ಬರಿಯ ದೋಷಗಳನ್ನೆ ಕೆದಕಿ ಪರಿಹಾಸ್ಯ ಮಾಡಿದರಂತೆ. ಈ ಪದ್ಯಕ್ಕೆ ಸಂಬಂಧಪಟ್ಟಂತೆ ಆ ವಿಮರ್ಶಕರು ಎತ್ತಿದ ದೋಷ ಯಾವುದು ಗೊತ್ತೆ? ಐದನೆಯ ಪದ್ಯದ ಕೊನೆಯ ಸಾಲು - ಧಾರೆಯ ದಾರದಿ ನೆಯ್ದಿಹ ತೆಳ್ಳನೆ ಜವನಿಕೆಯುಡುವಳು ತಿರೆವೆಣ್ಣು! ಎಂಬುದು. ಅದಕ್ಕೆ ಆ ಪೂರ್ವಾಗ್ರಹದಿಂದ ಕೂಡಿದ ವಿಮರ್ಶಕರು ನೀಡಿದ ವಿವರಣೆ ’ಈ ಜವನಿಕೆಯನ್ನು ಉಡುವ ತಿರೆವೆಣ್ಣಿನ ದಪ್ಪ ಸೊಂಟ ಎಷ್ಟು ಮೈಲಿ ವಿಸ್ತಾರದ್ದಿರಬೇಕು?’ ಎಂದು. ಕವಿ ಕಟ್ಟಿದ ಸುಂದರ ಪ್ರತಿಮೆಯೊಂದನ್ನು ಕ್ಷಣ ಮಾತ್ರದಲ್ಲಿ ಕುರೂಪಗೊಳಿಸಿ, ನೋಡಿ ’ಆನಂದ’ಪಟ್ಟ ಆ ಸಹೃದಯ ವಿಮರ್ಶಕ ವಿಭೂತಿಗೆ ಧಿಕ್ಕಾರವಿರಲಿ. ಹೆಣ್ಣಿನ ಸೊಂಟವನ್ನು ಮೈಲಿಯ ಲೆಕ್ಕಾಚಾರದಲ್ಲಿ ಕಲ್ಪಿಸಿಕೊಳ್ಳುವುದರಲ್ಲೇ ವಿಮರ್ಶಕರ ಕಲ್ಪನಾದಾರಿದ್ರ್ಯ ಎದ್ದು ಕಾಣುತ್ತದೆ. ಇಂತಹ ಪ್ರತಿಕ್ರಿಯೆಗಳಿಗೆ ಕವಿಯ ಮರುಪ್ರತಿಕ್ರಿಯೆ ಹೇಗಿದ್ದೀತು? ಇಲ್ಲಿದೆ ನೋಡಿ, ಕವಿಯ ಮಾತು.
"ನನ್ನ ಕವನಗಳಲ್ಲಿ ಬಹುಪಾಲು ಸ್ವಾನುಭವ ಸನ್ನಿವೇಶಗಳಿಂದಲೆ ಹೊಮ್ಮಿವೆ. ಅಂತಹ ಸನ್ನಿವೇಶಗಳ ಪರಿಚಯದಾರಿದ್ರ್ಯವಾಗಲಿ ಅಂತಹ ಅನುಭವಗಳ ದರಿದ್ರತೆಯಾಗಲಿ ಇರುವ ಓದುಗ ಸಹೃದಯನಾಗಿದ್ದರೆ, ಆ ಸನ್ನಿವೇಶ ಮತ್ತು ಅನುಭವಗಳನ್ನು ತನ್ನ ’ಭಾವಯಿತ್ರೀ’ ಪ್ರತಿಭೆಯಿಂದ ಕಲ್ಪಿಸಿಕೊಂಡು ಆ ಕವನಗಳ ರಸಾಸ್ವಾದನೆ ಮಾಡಬೇಕಾಗುತ್ತದೆ. ಅಸೂಯೆ ಅಥವಾ ದ್ವೇಷವಿದ್ದರಂತೂ ಅಂತಹ ವಾಚಕನಿಗೆ ಅವಯ ಒಣಕಟ್ಟಿಗೆಯೆ ಆಗುತ್ತವೆ. ಅವನು ಗೆದ್ದಲಾಗಿಯೆ ಅವನ್ನು ತಿಂದು ಹಾಳು ಮಾಡುತ್ತಾನೆ."
ಇದೇ ಸಂದರ್ಭದಲ್ಲಿ ರಚಿತವಾದ ’ಅರುಣಗೀತೆ’ ಕವನದ್ದು ಇದೇ ತೆರನಾದ ಚರಿತ್ರೆ! ಕವಿಯ ಮಾತಿನಲ್ಲೇ ಕೇಳೋಣ. ’ಸಹಾನುಭೂತಿಯಿಲ್ಲದೆ ವಿಮರ್ಶೆ ಮಾಡುವವನು ಎಂತಹ ಮೂರ್ಖನಾಗುತ್ತಾನೆ ಎನ್ನುವುದಕ್ಕೆ ಇದರ ಒಂದು ಪಂಕ್ತಿಯನ್ನು ಆಶ್ರಯಿಸಿ ಕವಿಯನ್ನು ಲೇವಡಿ ಮಾಡಲು ಹೊರಟು ತನ್ನನ್ನೆ ಶಾಶ್ವತ ಲೇವಡಿಗೆ ಗುರಿಮಾಡಿಕೊಂಡ ಒಬ್ಬ ಪಂಡಿತನ ವಿಚಾರ ಹೇಳಿ, ಅನುದಾರತೆಗೆ ಒಂದು ನಿದರ್ಶನ ಕೊಡುತ್ತೇನೆ’ ಎನ್ನುತ್ತಾರೆ. ಪಠ್ಯಪುಸ್ತಕವೊಂದನ್ನು ಸೇರಿದ ಈ ಶಿಶುಗೀತೆಯ ಮೇಲೆ ಆ ಪಂಡಿತರ ಪ್ರಹಾರ ನಡೆದಿರುತ್ತದೆ. ಕವಿತೆ
ದೇವರ ಮಕ್ಕಳೆ, ಎಲ್ಲರು ಏಳಿ,
ಬೆಳ್ಳಗೆ ಬೆಳಗಾಯಿತು ಬೇಗೇಳಿ!
ಎಂದು ಪ್ರಾರಂಭವಾಗುತ್ತದೆ. ಬೆಳ್ಳಗೆ ಬೆಳಗಾಯಿತು ಎಂಬ ಸಾಲಿನ ಬಗ್ಗೆ ಆತನ ಆಕ್ಷೇಪ! ಈಗಲೂ ಹಳ್ಳಿಗಳ ಕಡೆ ’ಬೆಳ್ಳಂಬೆಳಗಾಗಿದೆ’ ಎಂಬ ಪ್ರಯೋಗವಿದೆ. ಚೆನ್ನಾಗಿ ಬೆಳಕಾಗಿದೆ, ಸೂರ್ಯೋದಯವಾಗಿ ತುಂಬಾ ಹೊತ್ತು ಆಗಿದೆ ಎಂದರ್ಥ ಅಷ್ಟೆ. ಆದರೆ ಆ ವಿಮರ್ಶಕರಿಗೆ ಅದು ಪುನರುಕ್ತಿಯಾಗಿ ಕಂಡಿದೆ. ಪ್ರಾತಃಕಾಲವಾಗಿ ಚೆನ್ನಾಗಿ ಹೊತ್ತು ಮೂಡಿದೆ, ಆದ್ದರಿಂದ ಇನ್ನೂ ಮಲಗಿರುವುದು ಸೋಮಾರಿತನವಾಗುತ್ತದೆ, ಬೇಗನೆ ಎದ್ದು ಬಿಡಿ - ಎಂದು ಮಕ್ಕಳಿಗೆ ಕರೆಕೊಡುತ್ತದೆ ಆ ಪಂಕ್ತಿ! ಅಷ್ಟೆ.
ಇದನ್ನು ಕುರಿತಂತೆ ಕವಿ ಹೀಗೆ ಬರೆಯುತ್ತಾರೆ. "ಸ್ವಲ್ಪ ಸಹಾನುಭೂತಿಯಿಂದ ಓದಿದ್ದರೆ ಆ ಪಂಡಿತರಿಗೆ ಅದೇನು ಅರ್ಥವಾಗದಂತಹ ಬ್ರಹ್ಮಗ್ರಂಥಿಯಾಗುತ್ತಿರಲಿಲ್ಲ. ವಿಮರ್ಶಿಸಲೇ ಬೇಕು ಖಂಡಿಸಲೇ ಬೇಕು ಎಂಬ ಪೂರ್ವಗ್ರಹಪೀಡಿತರಾಗಿ ಹೊರಟಿದ್ದರೆ ಮಾತ್ರ ಅಲ್ಲಿ ಪುನರುಕ್ತಿಯ ದೋಷಾರೋಪಣೆಗೆ ಅವಕಾಶ ದೊರೆಯುತ್ತದೆ! ಕವಿಯನ್ನು ಖಂಡಿಸಿದ ತೃಪ್ತಿಯಿಂದ ಪಂಡಿತ ಹೆಮ್ಮೆಯ ಹುಂಜ ಮನೆಯ ಬೆಂಗಟೆಗೆ ಹಾರಿ ರೆಕ್ಕೆ ಬಡಿದು ಕೊಕ್ಕೊಕ್ಕೋ ಎಂದು ತನ್ನ ದಿಗ್ವಿಜಯ ಸಾರಲು ಸಹಾಯವಾಗುತ್ತದೆ."

Monday, September 19, 2011

’ವಿರಹ’ ಎಂಬ ಮಧುರ ಮೃತ್ಯ!

ನಾನು ಈ ಮೊದಲೇ ಬರೆದಂತೆ ’ಜೇನಿರುಳು ಅಥವಾ ಪ್ರಥಮ ಮಿಲನ’ ಮತ್ತು ’ಪ್ರಥಮ ವಿರಹ’ ಎರಡೂ ಕವಿತೆಗಳು ಒಂದೇ ದಿನ ಬರೆದವುಗಳಾಗಿವೆ. ಸ್ವತಃ ಕವಿವರ್ಯರೇ ೨೪.೫.೧೯೩೭ರಲ್ಲಿ ಇಂಗ್ಲಾದಿಯಲ್ಲಿ ಬರೆದಿದ್ದೆಂದು ದಾಖಲಿಸಿದ್ದಾರೆ. ಈ ಕವಿತೆಯನ್ನು ಪ್ರವೇಶಿಸುವ ಮೊದಲು ’ವಿರಹ’ ಕುರಿತಾದ ಕವಿಗಳ ಅಭಿಪ್ರಾಯವನ್ನು ಸ್ಥೂಲವಾಗಿ ಗಮನಿಸಬಹುದು, ಕವಿಗಳ ಮಾತಿನಲ್ಲೇ!
’ವಿರಹ’ ಪದವನ್ನು ಉಪಯೋಗಿಸಿ ’ವಿರಹಯಾತನೆ’ಯನ್ನು ಕಾವ್ಯಗಳಲ್ಲಿ ಚಿತ್ರಿಸಿದ್ದೆ. ಇತರ ಎಲ್ಲ ಮಹಾಕವಿಗಳ ಕಾವ್ಯನಾಟಕಗಳಲ್ಲಿಯೂ ವಿಪ್ರಲಂಭ ಶೃಂಗಾರದ ವಿರಹವರ್ಣನೆಗಳನ್ನು ಓದಿದ್ದೆ. ಆದರೆ ವಿರಹಯಾತನೆ, ನರಕಯಾತನೆ, ಅರ್ಥವಾದುದು ಈಗಲೆ! ’ಅರ್ಥವಾದುದು’ ಎಂದು ಬರೆದೆ; ಆದರೆ ಬರೆಯಬೇಕಾದುದು ’ಅರ್ಥವಾಗದುದು’ ಎಂದೇ. ಇದ್ದಕ್ಕಿದ್ದ ಹಾಗೆ ನನಗೆ ಸಂಭವಿಸಿದ ಆ ಸಂಕಟದ ಮನಃಸ್ಥಿತಿ ನನಗೆ ಅರ್ಥವಾಗಲಿಲ್ಲ. ದಿಗ್‌ಭ್ರಮೆಯುಂಟು ಮಾಡಿತು! ನನ್ನ ಹೃದಯ ಸ್ಥಿತಿ ಬೆಂಕಿಗೆ ಬಿದ್ದು ಸುಡುತ್ತಿರುವ ಪತಂಗದಂತಾಯ್ತು; ಆಗ ನಾನು ಬರೆಯುತ್ತಿದ್ದ ಶ್ರೀರಾಮಾಯಣದರ್ಶನದಲ್ಲಿ ಎಲ್ಲೆಲ್ಲಿ ಈ ವಿಯೋಗ ದುಃಖ ದಾವಾನಲನ ವರ್ಣನೆ ಇದೆಯೋ ಅಲ್ಲೆಲ್ಲ ನಾನು ಅನುಭವಿಸಿದ ಆ ಒಲವಿನ ಅಗಲುವಿಕೆಯ ಘೋರವೇದನೆಯೆ ಚಿತ್ರಿತವಾಗಿದೆ ಎಂದು ತಿಳಿಯಬಹುದು.
ಮೇ ಒಂದನೆಯ ತಾರೀಖಿನಂದು ಮದುವೆಯಾದ ಕವಿಗೆ ಮೇ ೧೯ರಂದು ಪ್ರಥಮಮಿಲನ. ಮೇ ೨೧ರಂದು ಶ್ರೀ ಗುರುಮಹಾರಾಜರ ಉತ್ಸವವಾದ ಮೇಲೆ ಶ್ರೀಮತಿಯವರು ತವರಿಗೆ ಹಿಂತಿರುಗಿದ್ದಾರೆ. ಆ ಸಂದರ್ಭದಲ್ಲಿ ಕವಿ ಅನುಭವಿಸಿದ ವಿರಯಾತನೆಯ ಅಕ್ಷರರೂಪ ಮೇಲಿನದು!
ಮೇಲಿನ ಘಟನೆಯನ್ನು ದಾಖಲಿಸುತ್ತ ಕವಿ ಹಿಂದೆ ನಡೆದ ಒಂದು ಘಟನೆಯನ್ನು ಹೇಳುತ್ತಾರೆ. ಮಹಾರಾಜಾ ಕಾಲೇಜಿನ ಅಧ್ಯಾಪಕರ ಕೊಠಡಿಯಲ್ಲಿ ಸಂಸ್ಕೃತದ ಯುವ ಅಧ್ಯಾಪಕರೊಬ್ಬರು ಕಾಳಿದಾಸನ ವರ್ಣನೆಗಳಲ್ಲಿ ಅತಿ ಉತ್ಪ್ರೇಕ್ಷೆಯಿದೆ ಎಂದು ವಾದಿಸುತ್ತಾ ಮೇಘದೂತ ಕಾವ್ಯದ ಮೊದಲನೆಯ ಪದ್ಯವನ್ನು ಉದಾಹರಣೆಯಾಗಿ ನೀಡುತ್ತಾರೆ. ’ವಿರಹಗುರುಣೌ ಎಂದು ಅತಿಯಾಗಿ ಉತ್ಪ್ರೇಕ್ಷಿಸಿದ್ದಾನೆ. ಏನು ಮಹಾ? ಒಂದಾರು ತಿಂಗಳು, ಒಂದು ವರ್ಷ, ಹೆಂಡತಿಯಿಂದ ದೂರವಿರುವ ಶಾಪಕ್ಕೆಲ್ಲ ಚೇತನಾಚೇತನಗಳ ಅರಿವೂ ಆಗದಷ್ಟು ವಿರಹ ಸಂಕಟವಾಗುತ್ತದೆಯೇ?’ ಎಂದು ಆ ಯುವ ಅಧ್ಯಾಪಕರು ನಕ್ಕುಬಿಟ್ಟಿದ್ದರಂತೆ. ಆ ಅಧ್ಯಾಪಕರು ಎರಡನೆಯ ಮದುವೆಯಾಗಿದ್ದ ವಿಷಯ ಆಮೇಲೆ ತಿಳಿಯಿತಂತೆ! ಇದೆಲ್ಲವನ್ನೂ ದಾಖಲಿಸುತ್ತಾ ಕವಿ  ಈ ಪ್ರೇಮವಿರಹಗಳ ತೀವ್ರತೆ ಕವಿಚೇತನಕ್ಕೆ ಆಗುವಂತೆ ಇತರರಿಗೆ ಆಗುವುದಿಲ್ಲವೋ ಏನೋ ಎಂದು! ನಿಶ್ಚಯಕ್ಕೆ ಬರುತ್ತಾರೆ.

ನೀನು ಬಳಿಯಿರೆ ಹೊತ್ತು ಹರಿಯುವುದು ಹೊನಲಾಗಿ
ಕುಣಿಕುಣಿದು ನಲಿನಲಿದು ನೊರೆನಗೆಯ ಬೀರಿ;
ನೀನಿಲ್ಲದಿರೆ ಕಾಲ ನಿಲ್ಲುವುದು ಕಲ್ಲಾಗಿ
ಭಾರದಿಂದೆದೆಯ ಜೀವವ ಹಿಂಡಿ ಹೀರಿ:

ನೀನು ಬಳಿಯಿರೆ ಬಾಳ ಕೊಳ ತುಳುಕುವುದು ತುಂಬಿ
ನಲ್ ಸೊಗದ ತಾವರೆಯ ನೂರು ಹೂವರಳಿ;
ನೀನಿಲ್ಲದಿರೆ ಬದುಕು ಶೂನ್ಯತೆಯ ಸುಳಿಯಲ್ಲಿ
ಹೊರಳುರುಳಿ ಕಂತುವುದುಸಿರ್ ಕಟ್ಟಿ ಕೆರಳಿ!

ನೀನೆನ್ನ ಬಳಿಯಿರಲು ರವಿಯುದಯ ಬಲುಸೊಗಸು;
ನಿನ್ನ ಸೋಂಕಿರೆ ಸೊಗಸು ಕಾಂತಾರ ವೀಚಿ;
ನಿನ್ನ ಸೋಂಕಿರೆ ಸೇರೆ ಹಕ್ಕಿಗೊರಲಿಂಚರಕೆ
ನಂದನದ ಗಾನ ಮೈಗರೆಯುವುದು ನಾಚಿ!

ನೀನು ಬಳಿಯಿಲ್ಲದಿದ್ದರೆ, ಓ ನಲ್ಲೆ ಹೇಮಾಕ್ಷಿ,
ಜಗವೆಲ್ಲ ಜಡಂಬಡೆ, ಬೇಸರದ, ಬೀಡು!
ನೀನಗಲಿದೀ ಕವಿಗೆ ಇಂದು ಈ ಮಲೆನಾಡು,
(ಹೇಳೆ ನಾಚಿಗೆಗೇಡು!) ಹಿರಿ ಮರಳುಗಾಡು!
ಜಗವೆಲ್ಲಾ ಜಡವೆಂದ ಮೇಲೆ ಹೇಳುವುದೇನಿದೆ? ಈ ಕವಿತೆಯ ಮೂಲಕ ಶ್ರೀಮತಿ ಹೇಮಾವತಿಯವರು ಕುವೆಂಪು ಅವರ ಕಾವ್ಯವನ್ನು ಪ್ರವೇಶಿಸಿದರು ಎನ್ನಬಹುದು! ಇಂತಹ ಅನುಭವ ಪ್ರತಿಯೊಬ್ಬರಿಗೂ - ಹೆಣ್ಣು ಗಂಡಗಳಿಬ್ಬರಿಗೂ - ಆಗಿರುತ್ತದೆ. ಆದರೆ ಅಕ್ಷರರೂಪಕ್ಕಿಳಿಸುವುದು ಮಾತ್ರ ಕಷ್ಟ. ಏಕೆಂದರೆ ಕವಿಯೇ ಹೇಳುವಂತೆ ಅದು ’ಅರ್ಥವಾಗದುದು’.
ಈ ಕವಿತೆಗೆ ಸಂಬಂಧಪಟ್ಟಂತೆ ಇಲ್ಲಿಗೆ ನಿಲ್ಲಿಸಿಬಿಡಬಹುದು. ಆದರೆ ಸ್ವತಃ ಕವಿಯೇ ಶ್ರೀರಾಮಾಯಣದರ್ಶನದಲ್ಲಿನ ವಿಯೋಗ ದುಃಖ ದಾವಾನಲನ ವರ್ಣನೆಯ ಮೇಲೆ, ಆ ಸಂದರ್ಭದಲ್ಲಿ ಅನುಭವಿಸಿದ ಘೋರಯಾತನೆಯ ಪರಿಣಾಮವಿದೆ ಎಂಬ  ಮಾತೆತ್ತಿದ ಮೇಲೆ ಸಹೃದಯ ಪ್ರತಿಭೆ ವಿರಮಿಸಲು ಸಾಧ್ಯವೇ? ಸಾಧುವೇ?
ಜಟಾಯುವಿನಿಂದ ಸೀತಾಪಹರಣದ ಸುದ್ದಿಯನ್ನು ತಿಳಿದ ರಾಮನಿಗೆ ದಿಕ್ಕುಗಾಣದಾಗುತ್ತದೆ. ಸೀತೆಯ ನೆನಪಷ್ಟೇ; ಉಳಿದೆಲ್ಲವೂ ಜಡವಾಗಿ ಕಾಣಿಸುತ್ತದೆ. ಮಾತು ಮಾತಿಗೆ ’ಹಾ ಸೀತೆ! ಹಾ ಸೀತೆ! ಹಾ ಸೀತೆ!’ ಎಂದು ನಿಟ್ಟುಸಿರುಬಿಡುತ್ತಾನೆ ರಾಮ. ಲಕ್ಷ್ಮಣನ ಸಮಾಧಾನದ ನುಡಿಗಳು ಆತನಿಗೆ ಕೇಳುವುದೇ ಇಲ್ಲ. ದೇವಿ ಗೋದಾವರಿಗೆ ನಮಸ್ಕರಿಸು ಎಂದ ಲಕ್ಷ್ಮಣ ಮಾತುಗಳೂ ಕೇಳಿಸುವುದಿಲ್ಲ. ವಿಭ್ರಾಂತ ಮನಸ್ಥಿತಿಯ ರಾಮನ ಚಿತ್ರಣ ಹೇಗಿದೆ ನೋಡಿ.
. . . . . ಕುಣಿಕುಣಿದಟ್ಟಹಾಸಮಂ ಗೆಯ್ಯುತ್ತೆ
ಧಾವಿಸಿದನನುಜನೆಂದುದನಿನಿತು ಗಮನಿಸದೆ,
ತಗ್ಗುಬ್ಬುಗಳನೆಡವಿ, ಮರಮಂ ಪಾಯ್ದು, ಬಳ್ಳಿ
ತೊಡರ‍್ದುದಂ ಲೆಕ್ಕಿಸದೆ, ಮುಳ್ಳು ನಾಂಟಿರ‍್ದೊಡಂ
ಕಿಳ್ತೆಸೆಯದಾನಂದದುನ್ಮಾದದಿಂದೆ ಆ
ರಮಣೀಯ ಗೋದಾವರಿಯ ಪುಳಿನಮಯ ಶುಭ್ರ
ತಟಿಗೆ. ಓ ಸೀತೆ! ಓ ಸೀತೆ! ಓ ಸೀತೆ! ಓ
ಸೀತೆ! ರಾಮನ ಕೊರಲ ಕೂಗನಾಲಿಸುತೆ
ನೆರವೀಯಲೆಂದು ವಿಶ್ವವೆ ಜನಕಜಾತೆಯಂ
ಪೆಸರ‍್ವಿಡಿದು ಕರೆದುದೆನೆ, ಮರುದನಿಗಳೆದ್ದುವಯ್
ಮರದಿಂದೆ ಗಿಡದಿಂದೆ ಲತೆಯಿಂದೆ ನದಿಯಿಂದೆ
ಪರ್ವತಾರಣ್ಯಂಗಳಿಂದೆ. ದಶ ದಶ ಕೋಟಿ
ಕಂಠಂಗಳಿಂದೆ ದೆಸೆದೆಸೆ ತಲ್ಲಣಿಸುವಂತೆ
ಕೂಗಿತನುಕಂಪದಿಂ ಸೃಷ್ಟಿ, ದಶಕಂಠಂಗೆ
ಮೃತ್ಯು ಡಿಂಡಿಮ ಭೇರಿಯಂ ಪೊಯ್ವವೋಲಿಂತು:
ಹೀಗೆ ಕಾಡಿನಿಂದ ಮಾರ್ದನಿಗೊಂಡ ತನ್ನ ದನಿಯನ್ನೇ ಸೀತೆಯ ಮಾರುತ್ತರವೆಂದು ಭಾವಿಸಿ ರಾಮ ಉನ್ಮತ್ತತೆಯಿಂದ ಲಕ್ಷ್ಮಣನಿಗೆ
...........................................ಕಂಡೆಯಾ
ಸೌಮಿತ್ರಿ, ಮೈಥಿಲಿಯ ಮಾಯೆಯಂ? ಪುಸಿಯಲ್ತು
ದಿಟಮಾಕೆ ಭೂಮಿಜಾತೆಯೆ ವಲಂ! ತಾಯ್ಮರೆಗೆ
ಮಗು ನಿಂತು ಕಣ್ಣುಮುಚ್ಚಾಲೆಯಾಡುವವೋಲೆ
ನಮ್ಮಡನಣಕವಾಡುತಿಹಳಲ್ತೆ?
ಎಂದು ಕೇಳುತ್ತಾನೆ. ಆಗ್ಗೆ ರಾಮನಿಗೆ ಎಲ್ಲವೂ ಜಡ; ಸೀತೆಯೊಬ್ಬಳೇ ಚೇತನ! ಎಂದ ಮೇಲೆ ಹೇಳುವುದೇನಿದೆ?
ಹೀಗೆಯೇ ಇನ್ನೊಮ್ಮೆ ರಾಮ ವಿಸ್ಮೃತಿಗೆ ಒಳಗಾಗುತ್ತಾನೆ. ಶಬರಿ ಹೇಳಿದ ಮಾರ್ಗದಲ್ಲೇ ನಡೆದು ಋಶ್ಯಮೂಕ ಪರ್ವತಕ್ಕೆ ಹತ್ತಿರ ಹತ್ತಿರ ಬರುತ್ತಾರೆ. ಸಂಜೆ ಸೂರ್ಯಾಸ್ತದ ಸಮಯ ರಾಮಲಕ್ಷ್ಮಣರಿಬ್ಬರೂ ಸೂರ್ಯಾಸ್ತವನ್ನು ನೋಡುತ್ತಾ ಕುಳಿತಿರುತ್ತಾರೆ. ರಾಮ ಮೊದಲಿಗೆ ಒಬ್ಬ ನೋಡುಗನಾಗಿ, ಸಹೃದಯನಾಗಿ, ಕವಿಯಾಗಿ ಬದಲಾಗಿಬಿಡುತ್ತಾನೆ. ಸೂರ್ಯಾಸ್ತದ ವರ್ಣಚಿತ್ತಾರವನ್ನು, ವೈಭವವನ್ನು ಲಕ್ಷ್ಮಣನಿಗೆ ವರ್ಣಿಸಿ ಹೇಳುತ್ತಾನೆ. ಹೀಗೆ ಹೇಳುತ್ತಲೇ ಸೀತೆಯ ನೆನಪಿಗೆ ಜಾರಿಬಿಡುತ್ತಾನೆ. ರಾಮ ಕಟ್ಟಿಕೊಡುವ ಸೂರ್ಯಾಸ್ತದ ಚಿತ್ರಣ ಮತ್ತು ಆತನಿಗೆ ಸೀತೆ ಕಾಡಿದ ಬಗೆಯನ್ನು ಕುವೆಂಪು ಹೀಗೆ ಚಿತ್ರಿಸಿದ್ದಾರೆ.
ವತ್ಸ,
ಲಕ್ಷ್ಮಣಾ, ವೈವಾಹ ಮಂಟಪ ಸ್ಮರಣೆಯಂ
ಬಗೆಗೊಳಿಸುವೀ ಮನೋಹರ ಚಿತ್ರ ದೃಶ್ಯಮಂ
ನೋಳ್ಪೆನಗೆ ಬಾಳಿನುರಿ ನೂರ‍್ಮಡಿಸುತಿದೆ. ನಾಳ
ನಾಳದೊಳ್ ಜ್ವಾಳೆವರಿದಿದೆ ಮನ್ಮನೋಹರಿಯ
ಚಿಂತೆ. ಅದೊ ದಡದ ಮರದುಯ್ಯಾಲೆಯಿಂ ಗಾಳಿ
ಮಳೆಯೆರಚುತಿದೆ ಚಿನ್ನವೂಗಳಂ; ಬಂಡೆಯುಂ,
ಪುಳಿನಮುಂ, ಶಿಖರಗೋಪುರದಂತೆ ನೀರಮೇಲ್
ನೀಳ್ದು ಮಲಗಿಹ ಬಂಡೆಕರ್ನೆಳಲುಮೆಸೆಯುತಿವೆ
ಸುಮರಂಗವಲ್ಲಿ ಚಿತ್ರಿತ ರತ್ನಕಂಬಳಿಯವೋಲ್!
ಬಿರಿವ ನೀರ್ವೊಗಳೊಳ್ ಬಂಡುಣುವ ಪರಮೆ ಮೊರೆ
ನೀರ್ವಕ್ಕಿಹಳ ಬೇಟದಿಂಚದೊಡನೆ ಹೊಂಚಿ
ನನ್ನನೇಳಿಪುದಲ್ತೆ? ಅಃ! ಕೇಳಾಲಿಸದೊ ಕೂಗುತಿದೆ,
ಆ ದರಿಯ ದುಮುಕುತಿಹ ವನನಿರ್ಝರದ ಮೊರೆಯ
ಮೀರಿ, ದಾತ್ಯೂಹಕಂ! ವಿರಹದುಲಿ! ಕರೆಯುತಿದೆ
ಪೆಣ್ವಕ್ಕಿಯಂ! ಮೋದಲಿಸುತಿದೆ ನನ್ನನಯ್ಯೋ ಹಾ,
ಸೌಮಿತ್ರಿ: ಪಂಚವಟಿ ಪರ್ಣಶಾಲೆಯೊಳಂದು
ಈ ಉಲಿಯನಾಲಿಸಿದೊಡನೆ ದಯಿತೆ ತಾನುಮಾ
ಕೊರಳನನುಕರಿಸಿ, ಹಾ, ಕರೆಯುತಿರ್ದಳೊ  ನಿನ್ನ
ಈ  ನಿರ್ಭಾಗ್ಯನಂ... ಇನ್ನೆನಗೆ ವಿಸ್ಮೃತಿಯೆ
ಪರಮಾಶ್ರಯಂ, ಶಾಂತಿ, ಸದ್ಗತಿ, ಮಧುರ ಮೃತ್ಯು!

Monday, September 12, 2011

ಹಾಳು ರವಿ ಉದಯಿಸಿದನೇಕೆ?

ಈ ಹಿಂದಿನ ನಾಲ್ಕೈದು ಕಂತುಗಳಲ್ಲಿ ವಿರಹ ಗೀತೆಗಳ ಬಗ್ಗೆ ಬರೆದಿದ್ದೆ. ಅವು ಕೇವಲ ವಿರಹಗೀತೆಗಳಾಗಿರದೆ ವಾತ್ಸಲ್ಯವಿರಹಿಯ ಗೀತೆಗಳಾಗಿದ್ದವು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಈ ವಾತ್ಸಲ್ಯವಿರಹಿಯ ಗೀತೆಗಳನ್ನು ಬೀಳ್ಕೊಡುವಷ್ಟರಲ್ಲಿ ಮತ್ತೊಂದು ವಿರಹ ಗೀತೆ ಕಣ್ಣಿಗೆ ಬೀಳಬೇಕೆ? ’ಪ್ರಥಮ ವಿರಹ’ ಎಂಬುದು ಅದರ ಹೆಸರು. ಆದರೆ ಈ ’ಪ್ರಥಮ ವಿರಹ’ದ ಬಗ್ಗೆ ಬರೆಯುವುದಕ್ಕಿಂತ ಮುಂಚೆ ’ಜೇನಿರುಳು ಅಥವಾ ಪ್ರಥಮಮಿಲನ’ ಎಂಬ ಕವಿತೆಯ ಬಗ್ಗೆ ಬರೆಯಬೇಕೆಂದಿದ್ದೇನೆ. ಏಕೆಂದರೆ ಈ ಎರಡೂ ಕವಿತೆಗಳು ಒಂದೇ ದಿನ ಅಂದರೆ ೨೪-೫-೧೯೩೭ ರಂದು ರಚನೆಯಾದವುಗಳಾಗಿವೆ. ಅಂದರೆ ಕವಿಯ ವಿವಾಹವಾದ ಒಂದು ತಿಂಗಳಳಗಿನ ರಚನೆಯಾಗಿವೆ! ಅವರ ಮದುವೆ ನಡೆದದ್ದು ೩೦-೪-೧೯೩೭ ಮತ್ತು ೧-೫-೧೩೯೭ ರ ನಡುವಿನ ರಾತ್ರಿ ೧ ಗಂಟೆಯ ಸುಮಾರಿಗೆ! ಆಗ ಪುರೋಹಿತರು ಶೂದ್ರವರ್ಗದವರ ಮದುವೆಗಳಿಗೆ ನಿಶಾಲಗ್ನಗಳನ್ನೇ ಇಟ್ಟುಕೊಡುತ್ತಿದ್ದರಂತೆ. ’ಮದುವೆಯ ವಿಷಯದಲ್ಲಿ ಸಂಪ್ರದಾಯವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಲು ಕೇಳಿಕೊಂಡಿದ್ದೆನಾದರೂ ಲಗ್ನ ಇಟ್ಟುಕೊಡುವ ಮುಹೂರ್ತದ ಪುರೋಹಿತರ ಈ ವಿಚಾರವನ್ನು ಗಮನಕ್ಕೇ ತಂದುಕೊಂಡಿರಲಿಲ್ಲ’ ಎಂದಿದ್ದಾರೆ.
ಮದುವೆಯಾದ ೧೯ ದಿನಗಳ ನಂತರ ೧೯-೫-೧೯೩೭ರಂದು ಕವಿಗಳ ಪ್ರಥಮ ರಾತ್ರಿಯ ಸಂಭ್ರಮ ಕೂಡಿಬರುತ್ತದೆ. ’ಸಹೋದರಿ ರಾಜಮ್ಮನವರ ಉತ್ಸಾಹವೇ ಕಾರಣವಾಗಿ ಎಂದು ಊಹಿಸುತ್ತೇನೆ, ಪ್ರಸ್ಥದ ಏರ್ಪಾಡು ನಡೆಯಿತು, ನನಗೆ ಸ್ವಲ್ಪವೂ ಸುಳುಹು ತೋರದಂತೆ’ ಎಂದಿದ್ದಾರೆ ಕವಿ. ಅದನ್ನು ಕವಿಗಳ ಮಾತಿನಲ್ಲೇ ನೋಡೋಣ.
ಕತ್ತಲಾಗಿ ದೀಪ ಹೊತ್ತಿಸಿದ ಮೇಲೆ ನಾವೆಲ್ಲ ಕೆಲವು ಮಿತ್ರರು ಸೇರಿ ಇಸ್ಪೀಟೋ ಏನೋ ಆಟದಲ್ಲಿ ತೊಡಗಿದ್ದೆವು. ನಮ್ಮನ್ನು ಊಟಕ್ಕೆ ಕರೆದ ಸಮಯದಲ್ಲಿ ನಾವೆಲ್ಲ ಕೆಳಗಿಳಿದು ಊಟಕ್ಕೆ ಹೋಗಿದ್ದಾಗ, ಪದ್ಧತಿಯಂತೆ ತಡಿ ದಿಂಬುಗಳನ್ನು ಹಾಕಿ, ಮಗ್ಗಲು ಹಾಸಿಗೆ ಹಾಸಿ, ಹೊದೆಯಲು ಹಾಕಿಡುತ್ತಿದ್ದರು, ಸುಮಾರು ಹತ್ತು ಹದಿನೈದು ನೆಂಟರಿಗೆ, ಎಷ್ಟು ಇರುತ್ತಿದ್ದರೂ ಅಷ್ಟು ಸಂಖ್ಯೆಯಲ್ಲಿ. ನಾವೆಲ್ಲ ಊಟ ಎಲೆ ಅಡಕೆ ಹಣ್ಣು ಮುಂತಾದವನ್ನು ತಿಂದು, ಮಲಗಲೆಂದು ಉಪ್ಪರಿಗೆಗೆ ಬಂದು, ಒಬ್ಬೊಬ್ಬರು ಒಂದೊಂದು ಹಾಸಗೆಗೆ ಕುಳಿತು ನೋಡುತ್ತೇವೆ, ಒಂದು ಹಾಸಗೆ ಕಡಮೆಯಾಗಿದೆ! ಹಾಸಗೆ ಹಾಸಿದ್ದ ಹುಡುಗನನ್ನು ಕರೆದು, ಬೈದು, ಇನ್ನೊಂದು ಹಾಸಿಗೆ ತಂದು ಹಾಕೋ, ಮಂಕೂ! ಎಂದು ಆಜ್ಞೆ ಮಾಡಿದೆವು. ಅಮ್ಮೋರು ಹೇಳಿದ್ದಾರೆ ಇಷ್ಟೇ ಹಾಸಗೆ ಸಾಕು ಎಂದ. ಯಾವ ಅಮ್ಮನೋ ಹೇಳಿದ್ದು? ಕರೆಯೋ! ಎಂದು ಗದರಿಸಲು ಕೆಳಗೆ ಇಳಿದು ಹೋದನು. ತುಸು ಹೊತ್ತಿನಲ್ಲಿ ರಾಜಮ್ಮ ಏಣಿ ಮೆಟ್ಟಲು ಸದ್ದಾಗುವಂತೆ ಹತ್ತಿಬಂದು, ಏನೂ ವಿಶೇಷವಿಲ್ಲ ಎಂಬಂತಹ ನಿರುದ್ವಿಗ್ನ ಧ್ವನಿಯಲ್ಲಿ ಪುಟ್ಟಣ್ಣಯ್ಯಗೆ ಇಲ್ಲಿ ಹಾಸಿಲ್ಲ. ಕೆಳಗೆ ’ಅವರ ಕೋಣೆಯಲ್ಲಿ’ ಹಾಸಿದೆ ಎಂದು, ಮಾರುತ್ತರಕ್ಕೆ ನಿಲ್ಲದೆ ಹೊರಟೇ ಬಿಟ್ಟಳು. ಅದನ್ನು ಗ್ರಹಿಸಿದ ಮಿತ್ರರು ’ನಿಮಗೆ ಕೆಳಗೆ ಹಾಸಿದ್ದಾರಂತೆ. ಇಲ್ಲಿ ಜಾಗ ಕೊಡುವುದಿಲ್ಲ ಹೋಗಿ! ಎಂದೂ ಬಿಟ್ಟರು. ಮೆಟ್ಟಿಲಿಳಿದು ಮಲಗಲು ’ನಮ್ಮ ಕೋಣೆಗೆ’ ತೆಪ್ಪಗೆ ಹೋದೆ.
ಆ ಕೋಣೆಯ ಬಗ್ಗೆ ತಮ್ಮಗಿದ್ದ ಭಾವನಾತ್ಮಕ ಸಂಬಂಧದ ಬಗ್ಗೆ ಹೀಗೆ ಬರೆದಿದ್ದಾರೆ.
ನಮ್ಮ ಕೋಣೆ ಎಂದರೆ ಕುಪ್ಪಳಿ ಮನೆಯಲ್ಲಿ ನನ್ನ ಅಪ್ಪಯ್ಯ ಅವ್ವ ಮಲಗುತ್ತಿದ್ದ ಕೋಣೆ. ನಾನು ಶಿಶುವಾಗಿದ್ದಾಗಿನಿಂದಲೂ ಅಮ್ಮನ ಮಗ್ಗುಲಲ್ಲಿ ಮಲಗಿ ಮೊಲೆವಾಲು ಕುಡಿದ ದೊಡ್ಡಮಂಚವಿದ್ದ ಕೋಣೆ. ನನ್ನ ಹಾಗೆ ನನ್ನ ತಂಗಿಯರಿಬ್ಬರೂ!
ಆ ಕೋಣೆಗೆ ಹೋಗಿ, ಅಲ್ಲಿ ಮಾಡಿದ್ದ ವಿಶೇಷ ಅಲಂಕಾರವನ್ನು ನೋಡುತ್ತಾ, ಬೇಸಗೆಯಾದ್ದರಿಂದ ಹೊದಿಕೆಯನ್ನು ನಿರಾಕರಿಸಿ ರೂಢಿಯಂತೆ ಶ್ರೀಗುರುವನ್ನು ಶ್ರೀಮಾತೆಯರನ್ನು ಜಗನ್ಮಾತೆಯನ್ನೂ ಧ್ಯಾನಿಸುತ್ತಾ, ಮುಂದಿನ ನನ್ನ ಜೀವನ ಸಂಗಾತಿಯನ್ನು ಹೃದಯ ಹಿಗ್ಗಿ ನಿರೀಕ್ಷಿಸುತ್ತಾ ಕಾಯುತ್ತಿದ್ದೆ ಎನ್ನುತ್ತಾರೆ. ಆಗ ಗಳೆತಿಯರಿಂದ ದೂಡಿಸಿಕೊಂಡು ಒಳ ಬಂದ ತಮ್ಮ ಪೂರ್ಣಾಂಗಿಯನ್ನು (ಕುವೆಂಪು ಅವರು ಅವರ ಶ್ರೀಮತಿಯನ್ನು ಅರ್ಧಾಂಗಿಯೆಂದು ಕರೆಯದೆ ಪೂರ್ಣಾಂಗಿಯಂದೇ ಕರೆಯಲು ಇಚ್ಛಿಸುತ್ತಿದ್ದರು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ನೆನಪಿನ ದೋಣಿಯಲ್ಲೇ ’ಚಿ. ಸೌ. ಹೇಮಾವತಿ ನನ್ನ ಚೇತನವನ್ನು ಅರ್ಧಾಂಗಿಯಾಗಿ ಅಲ್ಲ, ಪೂರ್ಣಾಂಗಿಯಾಗಿಯೇ ಆಲಿಂಗಾಕ್ರಮಿಸುತ್ತಾಳೆ’ ಎಂದು ಬರೆದಿದ್ದಾರೆ) ಕುರಿತು ಗುರುಕೃಪೆ ಕವನದ ನಾಲ್ಕು ಸಾಲುಗಳನ್ನು ಉಲ್ಲೇಖಿಸಿದ್ದಾರೆ.
ನಿರಿನಿರಿ ಮೆರೆದುದು ನೀಲಿಯ ಸೀರೆ,
ಶರಧಿಯನುಟ್ಟಳೆ ಭೂಮಿಯ ನೀರೆ?
ಚಂದ್ರಮುಖದಲ್ಲಿ ತಾರೆಯ ಬಿಂದು
ಚಂದ್ರೋದಯದಲಿ ಮಿಂದುದೆ ಸಿಂಧು:
ಪ್ರಥಮರಾತ್ರಿಯ ಸಂಭ್ರಮ ಕಳೆದ ಎರಡನೆಯ ದಿನ, ಕುಪ್ಪಳಿ ಮನೆಯ ಉಪ್ಪರಿಗೆಯಲ್ಲಿ ಸತಿಯೊಡಗೂಡಿ ಪ್ರಥಮಬಾರಿಗೆ ಶ್ರೀಗುರುಮಹರಾಜರ ಉತ್ಸವವನ್ನು ಆಚರಿಸುತ್ತಾರೆ. ಅಂದೇ ಶ್ರೀಮತಿ ಹೇಮಾವತಿಯವರು ಶಿವಮೊಗ್ಗೆಕ್ಕೆ ಹೊರಡುತ್ತಾರೆ. ಆಗಿನಿಂದಲೇ ಮಹಾಯಾತನಾಕ್ಲಿಷ್ಟವಾದ ’ವಿರಹ’ ಶುರುವಾಯಿತು ಎನ್ನುತ್ತಾರೆ. ಆಗ, ’ಪ್ರಥಮ ಮಿಲನ’ ಮತ್ತು ’ಪ್ರಥಮ ವಿರಹ’ ಕವಿತೆಗಳೆರಡೂ ರೂಪುವೊಡೆದು ದಿನಾಂಕ ೨೪.೫.೧೯೩೭ರಂದು ಅಕ್ಷರರೂಪಕ್ಕಿಳಿದಿವೆ.
ಜೇನಿರುಳು ಅಥವಾ ಪ್ರಥಮಮಿಲನ

ಮೊದಲನೆಯ ಮಿಲನವೇನ್?
ಅಹುದು; ಈ ಜನ್ಮದಲಿ!
ಇಲ್ಲದಿರೆ ಮರೆತ ಚಿರಪರಿಚಿತೆಯನಿನ್ನೊಮ್ಮೆ
ಎದುರುಗೊಂಡಂತಾದುದೇಕೆ!
ಜನ್ಮಾಂತರದ ನಲ್ಲೆಯಾಕೆ!
ಜನ್ಮಾಂತರದ ದರ್ಶನದಲ್ಲಿ ಕವಿಗೆ ನಂಬಿಕೆಯಿತ್ತು. ಗಂಡಹೆಂಡತಿಯರ ಸಂಬಂಧ ಜನ್ಮಾಂತರ ಸಂಬಂಧ ಎಂಬುದರ ಬಗ್ಗೆಯೂ ನಂಬಿಕೆಯಿತ್ತು. ಆದ್ದರಿಂದಲೇ ’ಈ ಪ್ರಥಮ ಮಿಲನ ಮೊದಲನೆಯದೇ?’ ಎಂಬ ಪ್ರಶ್ನೆ ಎತ್ತಿಕೊಳ್ಳುತ್ತಾರೆ. ಉತ್ತರ ’ಅಹುದು’ ಎಂದಾದರೆ ’ಅದು ಈ ಜನ್ಮಕ್ಕೆ ಮಾತ್ರ’ ಎನ್ನುತ್ತಾರೆ. ಜನ್ಮಾಂತರ ಸಂಬಂಧವಲ್ಲದಿದ್ದರೆ, ಸತಿ ಮೊದಲ ಬಾರಿಗೆ ಎದುರುಗೊಂಡಾಗ ಮರೆತ ಚಿರಪರಿಚಿತರೊಬ್ಬರನ್ನು ಬಹಳ ದಿನಗಳ ನಂತರ ಎದುರುಗೊಂಡಾಗ ಮೂಡುವಂತಹ ಭಾವ ಮೂಡುತ್ತಿತ್ತೇ? ಆದ್ದರಿಂದ ತಮ್ಮ ಸತಿ ಜನ್ಮಾಂತರದ ನಲ್ಲೆ ಎಂಬುದು ಕವಿಯ ನಂಬಿಕೆ! ಮುಂದೆ ಗಗನದಂತೆ ಕಾಯುತ್ತಿದ್ದ ನನ್ನ ಬಳಿಗೆ ಮಿಂಚಿನಂತೆ ಸತಿ ಬಂದಳೆಂದು ಹೇಳುತ್ತಾರೆ.

ಕುಳಿತು ಕಾಯುತ್ತಿದ್ದೆ ಗಗನದಂತೆ
ಪ್ರಣಯಿ ನಾನು,
ಕತ್ತಲೆಗೆ ಕೆಮ್ಮಿಂಚು ಬಳುಕಿ ಬರುವಂತೆ
ಬಂದೆ ನೀನು,
ಓ ನನ್ನ ಚಿರಪರಿಚಿತೆ!

ನೀ ನ್ನ ಗುರುತಿಸಿದೆ;
ನಾ ನಿನ್ನ ಗುರುತಿಸಿದೆ;
ಕರಗಿದುದು ಬಹುಜನ್ಮ ಕಾಲದೇಶದ
ಹಿರಿಯ ಕರಿಯ ಕಲ್ ಗೋಡೆ
ನಾ-ನಿನ್ನ, ನೀನೆನ್ನ ನೋಡೆ!
ಚೆಲುವೆ, ಶರಣಾದೆ ನೀನೆನ್ನನೊಪ್ಪಿ;
ಸಂಪೂರ್ಣನಾದೆ ನಾ ನಿನ್ನನಪ್ಪಿ!
ನಾನು ಮಾತಿನ ಹೊಳೆಯ ಹೊನಲಾಗಿ ಹರಿದೆ
ಸವಿನುಡಿಯ ಮಳೆಯ ಕರೆದೆ;
ನೀನು ಮೌನದ ಬಂಡೆಯಂದದಲಿ ಕುಳಿತೆ
ನೀರ್ ನಡುವೆ ನಲ್ ಮೊರೆಯನಾಲಿಸುತ, ಓ ಎನ್ನ ಲಲಿತೆ!
ಇಲ್ಲಿ ಒಬ್ಬರನೊಬ್ಬರು ಪರಸ್ಪರ ಗುರುತಿಸುವುದೆಂದರೆ ಬಹುಜನ್ಮದ ಅನುಬಂಧವನ್ನು ಗುಉತಿಸಿದಂತೆ. ಒಂದು ರೀತಿಯಲ್ಲಿ ಆತ್ಮಗಳ ಪರಸ್ಪರ ಗುರುತಿಸುವಿಕೆ, ಸ್ಪಂದಿಸುವಿಕೆ, ಒಪ್ಪಿಸುವಿಕೆ! ಗಂಡು ಮಾತನಾಡುತ್ತಾನೆ. ಹೆಣ್ಣು ಮೌನಬಂಡೆಯಂತೆ ಕುಳಿತಿದ್ದಾಳೆ. ಆದರೆ ಗಂಡನ ಮಾತು ಪ್ರೇಮಾಮೃತದಂತಿದೆ. ಅದನ್ನು ಮಾತ್ರ ಆಲಿಸುತ್ತಾ, ಉಳಿದೆಲ್ಲದಕ್ಕೂ ಕಿವುಡಿಯಾಗಿದ್ದಾಳೆ.

ಅಯ್ಯೋ ಆ ಜೇನಿರುಳು ಬೆಳಗಾದುದೇಕೆ?
ನಮ್ಮಿರ್ವರಾ ಬಿಗಿದ ನಲ್ಮೆತೋಳ್ ತಾವರೆಯ ಸೆರೆಗೆ
ಬಿಡುಗಡೆಯ ಹಾಳು ರವಿ ಉದಯಿಸಿದನೇಕೆ?
ಎಲ್ಲ ನವದಂಪತಿಗಳು ಬೆಳಗಾಗುವುದನ್ನು ವಿರೋಧಿಸಿದಂತೆ ಅವರೂ ವಿರೋಧಿಸುತ್ತಾರೆ! ಸೂರ್ಯೋದಯವನ್ನು ದೇವರ ದಯೆಯೆಂದು ಬಗೆದು ಆರಾಧಿಸಿದ, ಅನುಭವಿಸಿದ, ದರ್ಶಿಸಿದ, ವರ್ಣಿಸಿದ ಮಹಾಕವಿ ಮೊದಲ ಬಾರಿಗೆ, ಒಬ್ಬ ಪತಿಯಾಗಿ, ಪ್ರೇಮಿಯಾಗಿ ’ರವಿಯುದಯ’ವನ್ನು ’ಹಾಳು’ ಎಂದು ಕರೆದಿದ್ದಾರೆ!
(ಮುಂದಿನ ಭಾಗದಲ್ಲಿ ’ಪ್ರಥಮ ವಿರಹ’ ಕವಿತೆಯ ಜೊತೆಯಲ್ಲಿ ವಿರಹವನ್ನು ಕುರಿತ ಕವಿಯ ಅಭಿಪ್ರಾಯಗಳನ್ನು, ಆ ಸಂಧರ್ಭದ ಯಾತನೆ ’ಶ್ರೀ ರಾಮಾಯಣ ದರ್ಶನಂ’ ಕಾವ್ಯದ ಮೇಲೆ ಬೀರಿದ ಪರಿಣಾಮವನ್ನು ಕುರಿತು ಬರೆಯುತ್ತೇನೆ)

Monday, September 05, 2011

ಚಿತ್ತದಲಿ ಸಮಸಖರನಿನ್ನುಮಾನ್ ಪಡೆದಿಲ್ಲ


ಯಾವ ಸುಂದರ ಮುಖವು ನನಗೆ ರುಚಿಸುವುದಿಲ್ಲ;
ಏಕೆಂದರಿಂದು ನೀ ಜೊತೆಯೊಳಿಲ್ಲ.
ಚೆಲುವೆನಿತು ತುಂಬಿರಲಿ, ಮೋಹಕಾರಿಗಳಲ್ಲ:
ನಿನ್ನ ನೆನಪನೆ ತಹವು ಮುಖಗಳೆಲ್ಲ!
ತೇಜಸ್ವಿಯೊಡಗೂಡಿ ತವರು ಮನೆಗೆ ಹೋಗಿರುವ ಹೆಂಡತಿಯನ್ನು ಪ್ರತಿಕ್ಷಣವೂ ನೆನೆಯುತ್ತಿರುವ ಕವಿಯ ಮನಸ್ಥಿತಿಯನ್ನು ಈ ನಾಲ್ಕು ಸಾಳುಗಳು ಮನದಟ್ಟು ಮಾಡಿಕೊಡುತ್ತವೆ. ಸತಿಯ ನೆನಹಿನಿಂದ ಸುತನೆಡೆಗೆ ತಿರುಗುವ ಕವಿಯ ಮನಸ್ಸು ಮತ್ತೆ ಕುಮಾರ ವಿರಹವನ್ನು ಅನುಭವಿಸಿದ್ದನ್ನು ಮತ್ತೊಂದು ಕವಿತೆಯಲ್ಲಿ ಕಟ್ಟಿಕೊಡುತ್ತದೆ.
ಹೂ ಹಿಡಿದು ಮುಡಿ ಮಣಿದು
ನಿಂತಿರುವ, ಓ ಗಿಡವೆ,
ನಿಚ್ಚ ದೂಳಾಡಿದಾ
ಕಂದನಿಲ್ಲದೆ ’ಬೆಕೋ’
ಪಾಳು ಬಿದ್ದಿದೆ ನಿನ್ನ
ಬೂಳು ಬುಡವೆ!
ಜಡೆ ಮಾತ್ರ ಮುತ್ತೈದೆ,
ಅಡಗಿಲ್ಲ ಒಡವೆ!
ತಲೆಯೆಲ್ಲ ಶ್ರೀಮಂತೆ,
ಕಾಲು ಕೈ ಬಡವೆ!
ಬೇರು ಕಾಂಡ ಬಡಕಲಾಗಿದ್ದರೂ ಹೂವರಳಿಸಿಕೊಂಡು ನಿಂತಿರುವ ಹೂಗಿಡವೊಂದನ್ನು ಕಂಡ ಕವಿ ತನ್ನ ಸ್ಥಿತಿಯೂ ಅದೇ ರೀತಿಯದೆಂದು ಭಾವಿಸುತ್ತಾನೆ. ಹೂವಿನ ಬೋಳು ಬುಡ ಬಡಕಲಾಗಿರುವುದಕ್ಕೂ ’ಕಂದ’ನಿಲ್ಲದಿರುವುದೇ ಕಾರಣ ಎಂದೆಣಿಸುತ್ತದೆ! ತಲೆಯೆಲ್ಲ ಶ್ರೀಮಂತೆ, ಕಾಲು ಕೈ ಬಡವೆ ಎಂಬ ಮಾತು ಕವಿಕಲ್ಪನೆ ಶ್ರೀಮಂತವಾಗಿದ್ದರೂ ಅದು ಸಾಕಾರಗೊಳ್ಳುತ್ತಿಲ್ಲ; ಕಾರಣ ಕಂದನ ಅಗಲಿಕೆ!
ಒಲಿದ ಕಂದನ ಸಂಗ
ಮರಳಿ ನಿನಗೊದವೆ
ಐದೆತನದೊಡನೊಡನೆ
ಮರಳುವುದು ಮದುವೆ
ಅದುವರೆಗೆ ನೀನೆಷ್ಟೆ
ಹೂಮುಡಿದರೂ, - ಅಷ್ಟೆ:
ವಿಚಿತ್ರ ವಿಧವೆ!
ನನ್ನ ಕಂದ ಮರಳಿ ಬರುವವರೆಗೂ, ಆತನ ಸಂಗ ನಿನಗೆ ದೊರಕುವವರೆಗೂ ನೀನು ಹೂ ಮುಡಿದಿದ್ದರೂ ಮುತ್ತೈದೆಯಲ್ಲ; ವಿಧವೆ ಎಂದು ಕವಿ ಹೂವರಳಿಸಿಕೊಂಡಿರುವ ಗಿಡಕ್ಕೆ ಹೇಳುತ್ತಿದ್ದಾರೆ. ಮನುಷ್ಯನ ಈ ರೀತಿಯ ಭಾವಶೂನ್ಯತೆಯನ್ನು ಪದಗಳಲ್ಲಿ ಕಟ್ಟಿಕೊಡುವುದು ಎಷ್ಟು ಕಷ್ಟ! ಅದು ಅನುಭವವೇದ್ಯ ಮಾತ್ರ. ಇಲ್ಲಿ ವಿಚಿತ್ರ ವಿಧವೆ ಹೂ ಅರಳಿಸಿರುವ ಹೂಗಿಡವೂ ಹೌದು, ಕವಿಯ ಸೃಷ್ಟಿಕಾರ್ಯವೂ ಹೌದು!
ಈ ಸರಣಿಯ ಕೊನೆಯ ಕವಿತೆ ಉಳಿದವುಗಳಿಗಿಂತ ಅತ್ಯಂತ ಭಿನ್ನವಾದುದು. ’ಒಂದು ಕಟು ನಿಮಿಷದಲ್ಲಿ’ ಎಂಬ ಉಪಶೀರ್ಷಿಕೆಯೂ ಈ ಕವಿತೆಗಿದೆ. ಅದು ವಿವರಣೆಯೂ ಆಘಿದ್ದಿರಬಹುದು ಅಥವಾ ಸಮಾಧಾನವೂ ಆಗಿರಬಹುದು! ಒಂಟಿತನ ಮನುಷ್ಯನನ್ನು ಎಷ್ಟು ಕಂಗೆಡಿಸುತ್ತದೆ ಎಂಬುದಕ್ಕೆ ಈ ಕವಿತೆ ಸಾಕ್ಷಿಯಾಗಿದೆ. ಕುವೆಂಪು ಅವರಂತಹ ದಾರ್ಶನಿಕ ಕವಿಯನ್ನು ಈ ಒಂಟಿತನ ಬಿಟ್ಟಿಲ್ಲ! ಒಂದೇ ಸಮಾಧಾನವೆಂದರೆ ಸ್ಥಿತಪ್ರಜ್ಞನಾದ ಕವಿಗೆ ಶಿವನು ತನ್ನ ಜೊತೆಗಿದ್ದಾನೆ ಎಂಬ ಕ್ಷೀಣಭಾವವೊಂದು ಹೊಳೆದುಬಿಡುತ್ತದೆ. ಒಂಟಿತನದ ಖಿನ್ನತೆಯಿಂದ ಹೊರಬರಲು ಅದು ಸಂಜೀವಿನಿಯಾಗುತ್ತದೆ.
ಏಕಾಂಗಿ, ಏಕಾಂಗಿ, ಏಕಾಂಗಿ,
ಅಯ್ಯೋ ನಾನೇಕಾಂಗಿ!
ಓ ಶಿವಾ, ನಿನ್ನನುಳಿದಾರನೂ ಕಾಣೆ ನಾನ್
ನನಗನವರತ ಸಂಗಿ!
ಹೆತ್ತವರು ಸತ್ತರೆಂದೋ;
ಸತ್ತವರೊಡವುಟ್ಟಿದವರೂ.
ಚಿತ್ತದಲಿ ಸಮಸಖರನಿನ್ನುಮಾನ್ ಪಡೆದಿಲ್ಲ.-
ಅರ್ಧಾಂಗಿ ಮಗುವಿನೊಡನೆ ತವರು ಸೇರಿ ಹಲವು ದಿನಗಳಾಗಿವೆ. ಎರಡು ವರ್ಷಗಳ ಕಾಲ ಸುಖದ ಬೀಡಾಗಿದ್ದ ಮನೆ ಇಂದು ಬಿಕೋ ಎನ್ನುತ್ತಿದೆ. ಮುದ್ದುತನಯನ ನೆನಪು ಹಿಂಡುತ್ತಿದೆ. ಅಂತಹ ಕ್ಲಿಷ್ಟಕರ ಸಮಯದಲ್ಲಿ ಏಕಾಂಗಿಯಾಗಿದ್ದ ಕವಿಗೆ ತನ್ನ ತಂದೆ ತಾಯಿ ಒಡಹುಟ್ಟಿದವರು ಎಲ್ಲಾ ನೆನಪಾಗುತ್ತಾರೆ. ಅವರೆಲ್ಲಾ ಎಂದೋ ಇಹಲೋಕವನ್ನು ತ್ಯಜಿಸಿದ್ದಾರೆ. ಜೊತೆಗೆ ಸಮಾನ ಮನಸ್ಕ ಗೆಳೆಯರೂ ಇಲ್ಲ. ಅದೆಲ್ಲಾ ನೆನಪಾದುದ್ದೇ ತಡ ಕವಿಗೆ ನಾನು ಏಕಾಂಗಿ ಎಂಬ ಅನಿಸಿಕೆ ಬಲವಾಗಿ ಹಿಡಿದುಬಿಡುತ್ತದೆ. ಈ ಎಲ್ಲಾ ಅನಿಸಿಕೆ ತಮ್ಮ ಅರ್ಧಾಂಗಿಯ ನೆನಪಿನೊಂದಿಗೆ, ಅವರಿಗೆ ತಂದೆ ತಾಯಿ ಒಡಹುಟ್ಟಿದವರೂ, ಜೊತೆಗೆ ತನ್ನ ಕಂದ, ಆ ಕಂದನಿಗೆ ಮುದ್ದಾಡುವ ತಾಯಿ ಎಲ್ಲಾ ಇರುವುದು ನೆನಪಾಗುತ್ತದೆ; ಜೊತೆಗೆ ತುಸು ಹೊಟ್ಟೆಕಿಚ್ಚು ಸಹ!
ಕೈಹಿಡಿದ ಸತಿಗೋ
ತಾಯಿ ತಂದೆಯರಿಹರು; ತವರಿಹುದು;
ನಾನೆ ಸರ್ವ್ವಸ್ವವಲ್ಲ.
ಮುದ್ದು ಕಂದಂಗಿಹಳು ಮುದ್ದಾಡುವಾ ತಾಯಿ.
ಕಡೆಗೆ ನಾನೊಬ್ಬನೇ ಬೀದಿನಾಯಿ!
ಆದರೂ, ಆದರೂ ಕವಿಗೊಂದು ಸಮಾಧಾನವಿದೆ. ಏಕಾಂಗಿಯಾಗಿದ್ದರೂ ನನಗೊಬ್ಬ ಸದಾ ಜೊತೆಗಾರನಿದ್ದಾನೆ ಎಂಬ ಕಿರು ಸಮಾಧಾನ ಕವಿಗೆ ತೋರುತ್ತದೆ.
ಓ ಶಿವಾ, ನಿನ್ನನುಳಿದಾರನೂ ಕಾಣೆ ನಾನ್
ನನಗನವರತ ಸಂಗಿ!
ಇಂತಹ ವಿರಹ; ಒಲಿದ ಸತಿ, ಪಡೆದ ಮಗು ಇವರಿಂದ ದೂರವಿರುವ ಸಂದರ್ಭ ಪ್ರತಿಯೊಬ್ಬರ ಜೀವನದಲ್ಲೂ ಒಂದಿಲ್ಲ ಒಂದು ಬಾರಿ ಬಂದೇ ಇರುತ್ತದೆ. ಆದರೆ ಮನಸ್ಸು ಸ್ಥಿಮಿತದಲ್ಲಿದ್ದದ್ದೇ ಆದರೆ ಸಂಯಮವೆಂಬುದು ವ್ಯಕ್ತಿತ್ವದ ಒಂದು ಭಾಗವಾಗಿ ಪಡೆದಿರುವ ವ್ಯಕ್ತಿಗಳಾಗಿದ್ದರೆ ಹೀಗೆ ಕ್ರಿಯಾಶೀಲರಾಗಿ, ಉದ್ಯೋಗ ಉದ್ಯುಕ್ತರಾಗಿ ಕಷ್ಟದ ಕಾಲಾವಧಿಯನ್ನು ಕಳೆದುಬಿಡುತ್ತಾರೆ. ಮಹಾಕವಿಯೊಬ್ಬನ ಬದುಕೂ ಇಂತಹ ಒಂದು ಕಷ್ಟದ ಕಾಲವನ್ನು ದಾಟಿ ಬಂದಿದೆ. ಆದರೆ ಸ್ವಭಾವತಃ ಸೃಷ್ಟಿಶೀಲವಾದ ಮನಸ್ಸು ಅದನ್ನು ಹೇಗೆ ಜಯಿಸಿದೆ ಎಂಬುದಕ್ಕೆ ಈ ವಾತ್ಸಲ್ಯ ವಿರಹಿ ಸರಣಿಗವಿತೆಗಳು ಉತ್ತಮ ಉದಾಹರಣೆಗಳಾಗಿವೆ. ಇಂತಹ ಸಂದರ್ಭಗಳಲ್ಲಿ ಮನಸ್ಸು ಸಡಿಲವಿದ್ದವರು ಅವಿವೇಕಿಗಳಾಗಿ ಅಡ್ಡದಾರಿಗಿಳಿಯುತ್ತಾರೆ. ಧೂಮಪಾನ ಕುಡಿತ ಗೆಳೆಯರೊಡನೆ ಮೋಜು ಮಾಡುವುದು ಹೀಗೆ ಹೊಸ ಹೊಸ ಅಭ್ಯಾಸಗಳಿಗೆ ಈಡಾಗುತ್ತಾರೆ. ಕಷ್ಟದ ಕಾಲ ಕಳೆದು ಸುಖದ ದಿನಗಳು ಮರಳಿದರೂ ಹಿಂತಿರುಗಿ ನೋಡಲಾದರಷ್ಟು ಮುಂದೆ ಹೋಗಿ ಬದುಕನ್ನು ಅಸಹನೀಯ ಮಾಡಿಕೊಂಡವರು ಬಹಳ ಮಂದಿಯಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸರಣಿಯ ಕವಿತೆಗಳು ದಾರಿದೀಪಗಳಾಗಿ ನಿಲ್ಲುತ್ತವೆ ಎನ್ನಬಹುದು.