Wednesday, December 29, 2010

ಕುವೆಂಪು ಜನುಮದಿನ: ಒಂದಷ್ಟು ಕವಿತೆಗಳ ಮೆಲುಕು

ಕುವೆಂಪು
ಹಕ್ಕಿಯುಲಿಗಳುಕ್ಕುವಿಂಪು
ಸುಗ್ಗಿದಳಿರ ಸಗ್ಗಸೊಂಪು
ಹೊಸಹೊಂಗೆಯ ನೆಳಲ ತಣ್ಪು
ಚಿಂಗೆನ್ನೆಯ ಚೆಲುವು ನುಣ್ಪು
ಸುರಹೊನ್ನೆಯ ಗೊಟ್ಟಿಗಂಪು
ಉಸಯಾಸ್ತದ ಬೈಗುಗೆಂಪು
ನಿರ್ಝರಿಣಿಯ ನೆರೆಯ ತಿಣ್ಪು
ಗಿರಿಶೃಂಗದ ಬರ್ದಿಲ ಬಿಣ್ಪು
ಗಡಿಕಾಣದ ಕಡಲ ಗುಣ್ಪು
ಉಡು ರವಿ ಶಶಿ ನಭದ ಪೆಂಪು
ಆದಿ ಆತ್ಮದ ಸಿರಿ ಅಲಂಪು
ಎಲ್ಲವೊಂದುಗೂಡಲೆಂದು
ವಿಧಿಯ ಮನಸು ಕಡೆದ ಕನಸು
ಕಾಣ್ಬ ಕಣಸೆ, ಕಾಣ್: ಕುವೆಂಪು!
ಭಕ್ತಿಯಡಿಯ ಹುಡಿ - ಕುವೆಂಪು!
ಗುರುಹಸ್ತದ ಕಿಡಿ - ಕುವೆಂಪು!
ನುಡಿರಾಣಿಯ ಗುಡಿ - ಕುವೆಂಪು!
ಸಿರಿಗನ್ನಡ ಮುಡಿ - ಕುವೆಂಪು!
ಇರ್ದುಮಿಲ್ಲದೀ ಕುವೆಂಪು!
ಶ್ರೀ ರಾಮಾಯಣ ದರ್ಶನಂ
ಪಂಪನಾ ಗಾಂಭೀರ‍್ಯ
ರನ್ನ ವೀರ‍್ಯ
ಜನ್ನನಾ ಋಜು ಕುಶಲ
ಕಥನಕಾರ‍್ಯ
ನಾಗವರ‍್ಮನ ಕಲ್ಪನಾ
ಕಂದಂಬರೀ ಚಂದ್ರಿಕಾ
ಸ್ವಾಪ್ನ ಸೌಂದರ‍್ಯ
ರಾಘವಾಂಕನ ನಾಟಕೀಯ ಚಾತುರ‍್ಯ
ನಾರಣಪ್ಪನ ದೈತ್ಯರುಂದ್ರತಾ ದಿವ್ಯಧೈರ‍್ಯ
ಲಕ್ಷ್ಮೀಶನಾ ಮೃದುಲ ಮಂಜುಲ ನಾದಮಾದುರ‍್ಯ
ರತ್ನಾಕರನ ಯೋಗದೃಷ್ಟಿಯ ಸಾಗರೌದಾರ‍್ಯ
ಸಕಲ ಛಂದಸ್ ಸರ್ವ ಮಾರ್ಗ ಶೈಲಿಗಳಮರ ಐಶ್ವರ‍್ಯ
ಸರ್ವವೂ ಸಂಗಮಿಸಿದೀ ’ದರ್ಶನಂ’ ತಾನಕ್ಕೆ ಕೃತಿಗಳಾಚಾರ‍್ಯ!
ಅನಾದಿಕವಿ ಊವಾಚ
ಅನಾದಿಕವಿ ನಾಂ ಕಣಾ! ವಾಲ್ಮೀಕಿ
ವ್ಯಾಸ ಹೋಮ್ ದಾಂತೆ ಫಿರ್ದೂಸಿ ಮಿಲ್ಟನ್
ಮಹಾಕವೀಶ್ವರರೆನೆಗೆ ಬಾಹುಮಾತ್ರಗಳಲ್ತೆ?
ಬಹು ನಾಮರೂಪಗಳ್, ಬಹು ಕಾಲದೇಶಗಳ್
ನನಗೆ. ನೂನುಂ ನಾನೆಯೆ, ಕುವೆಂಪು!
ನಾನೊರೆದುದಲ್ಲದೆಯೆ ನೀನ್ ಬರೆದುದೇನ್ ವತ್ಸ?
ನಿನ್ನಹಂಕಾರದಲ್ಪತೆ ಗೆಯ್ದ ದೋಷಗಳ್, ಕೇಳ್,
ನಿನ್ನವಲ್ಲದೆ ಕೃತಿಯ ಪೆರ‍್ಮೆಗೇಂ ಕವಿಯೆ ನೀನ್?
ಏಳ್, ಏಳ್! ತೊರೆ ಆ ಅವಿದ್ಯೆಯಂ! ನತೋರ್ಪೆನದೊ
ಕಾಣ್!
ಪೂರ್ಣದೃಷ್ಟಿಯ ಮಹಾಕಾದಂಬರಿ
ಸರಸ್ವತಿಯ ಸಹಸ್ರಬಾಹು;
ಸರಸ್ವತಿಯ ಸಹಸ್ರಪಾದ
ಸರಸ್ವತಿಯ ಸಹಸ್ರ ವದನ:
ನಾಟ್ಯಮಾನ ದೇವಿಗೆ
ಪೂರ್ಣದೃಷ್ಟಿಯೀ ಕಾದಂಬರಿಯೆ ಮಹಾಸದನ!
ಒಂದಷ್ಟು ಚುಟುಕಗಳು
ಮಠಾಧಿಪತಿ
ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನು ಗುರುವನು ಮಾಡಿ
ಬಡವರ ಹೊನ್ನನು ಕಾಣಿಕೆ ನೀಡಿ
ಧರ‍್ಮವ ಮೆರೆವರ ನೋಡಯ್ಯ!
ದೆವ್ವ-ದೇವ
ಕಾಡಿಸುವ ಕಾಡುದೇವತೆಗೆ ಹೊಗಳಿಕೆ ಬೇಕು;
ಪ್ರೇಮನಿಧಿಯಾಗಿರುವ ದೇವರಿಗೊಲುಮೆ ಸಾಕು.
ಕಲೆ-ನೆಲೆ
ಮಾತು ನನ್ನ ಕಲೆ
ಮೌನ ನನ್ನ ನೆಲೆ
ವ್ಯಾಕರಣ
ಕವಿಗೆ ಕರ್ಣಂ ಪ್ರಮಾಣಂ
ವ್ಯಾಕರಣಮಲ್ತು:
ವ್ಯಾಕರಣಮೇಕೆಂಬೆಯೇಂ?
ಮರೆವುದಕೆ ಕಲ್ತು!
ಅವಿದ್ಯಾ
ಆಶ್ಚರ್ಯಗಳ ಮಧ್ಯೆ
ಪ್ರಶ್ನಚಿಹ್ನೆ;
ಸರ್ವವನು ಸುತ್ತಿಹುದು
ಒಂದು ಸೊನ್ನೆ!
ದೊರೆ ಮತ್ತು ಪುರೋಹಿತ
ಕೂಡಿದಾಗ ಹುಟ್ಟಿತು ಮತ!
ಮೊದಲ ಠಕ್ಕ ಮೊದಲ ಬೆಪ್ಪ
ಕೂಡಿದಾಗ ಮೂಡಿತು ಮತ!
ಯಾವುದನೃತ? ಯಾವುದ ಋತ?
ಅಂತೂ ನಡೆಯಿತದ್ಭುತ!
(ಭಾರತ-ಚೀನಾ ಯುದ್ಧಕಾಲದಲ್ಲಿ)
ಚೀಣಿಯರ ಧಾಳಿ
ಬರಿ ಹಿಮದ ಧೂಳಿ!
ತೂರಿ ಹೋಗುವುದು
ಸ್ವಲ್ಪ ತಾಳಿ!
ಆದರೀ ಕರಾಳಿ
ಇಂಗ್ಲೀಷಿನ ಗಾಳಿ
ಬೀಸಿ ಹೋಗುವುದೆ?
ಸ್ವಲ್ಪ ಕೇಳಿ!
ಸಾಕು, ತಾಯೀ, ಸಾಕು, ಈ ಸಾವು, ಈ ನೋವು;
ಚೀಣೀ ಪಿಶಾಚಿಯಿಂ ಬುದ್ಧಿ ಕಲಿತೆವು ನಾವು!
ಚೀಣೀ ರಾಕ್ಷಸ ದಳವನು ಸೀಳಿ
ಓ ಬಾ ಬಾ ಬಾ , ಹೇ ಮಹಾ ಕಾಳಿ!

ರಣ! ರಣ! ರಣ! ರಣ!
ಹಿಮಾಲಯದಿ ರಕ್ಕಸ ಗಣ
ಕುಣಿಯುತಿಹುದು ರಿಂಗಣ!
ಕೊಡು ಹಣ; ತೊಡು ಪಣ;
ತೀರಿಸು ನಾಡೃಣ!
ಇಲ್ಲಗೈ ನಿನ್ನ ನೀನು
ದೇವರಲ್ಲದುಳಿವುದೇನು?
ಚುನಾವಣೆ
ಅಂದು ಹೂವಿನ ಹಾರ
ಇಂದು ಕಲ್ಲೇಟು:
ಏನಿದೀ ಗ್ರಹಚಾರ?
ಹಾಳು ಈ ಓಟು!
ಕೇಂದ್ರ ಆಕಾಶವಾಣಿಯಲ್ಲಿ ಸುದ್ದಿ
ಹತ್ತುಸಾವಿರ ಜನರು ಅಮರನಾಥದ ಗುಹೆಗೆ
ಯಾತ್ರೆ ದರ್ಶನವಿತ್ತು ಸಂದರ್ಶಿಸಿದರಂತೆ
ಐಕಿಲಿನ ಶಿವಲಿಂಗವನು ಪೂಜಿಗೈಯಲ್ಕೆ
ಮತ್ತೆ ಅಚ್ಚರಿಯೆ ಅನ್ನ ಸಮಸ್ಯೆ ಈ ದೇಶಕ್ಕೆ?
[ಆಕರ : ಕುವೆಂಪು ಸಮಗ್ರಕಾವ್ಯ ಸಂಪುಟಗಳು ಮತ್ತು ಶ್ರೀ ರಾಮಾಯಣ ದರ್ಶನಂ]

Monday, December 13, 2010

ನೇಮಿನಾಥನ ಸರಸ್ವತೀ ದರ್ಶನ

ಶೃಂಗಾರವೇ ಪ್ರಧಾನವಾದ ಕಾವ್ಯ ಲೀಲಾವತಿ ಪ್ರಬಂಧ. ನೇಮಿನಾಥಪುರಾಣ ನೇಮಿನಾಥ ತೀರ್ಥಂಕರನ ಕಥೆಯನ್ನುಳ್ಳದ್ದು. ಲೀಲಾವತಿಯಲ್ಲಿ ನೇಮಿನಾಥನ ಸರಸ್ವತೀ ದರ್ಶನ ವಿಸ್ತೃತವೂ ವಿಶೇಷವೂ ಆಗಿ ಹೊರಹೊಮ್ಮಿದೆ. ಕವಿ ತನ್ನನ್ನು ತಾನು ವಿಶ್ವವಿದ್ಯಾವಿನೋದಂ ಭಾರತೀಚಿತ್ತಚೋರ ಎಂದು ಕರೆದುಕೊಂಡಿದ್ದಾನೆ. ತನ್ನ ಕೃತಿಯನ್ನು ಕಲಾನರ್ತಕಿಯ ನೃತ್ಯರಂಗವೇದಿಕೆ (ಸರಸಕೃತಿ ಕಲಾನರ್ತಕಿ ನೃತ್ಯರಂಗಂ) ಎಂದು ವರ್ಣಿಸಿಕೊಂಡಿರುವ ನೇಮಿಚಂದ್ರ, ಇನ್ನೊಂದು ಪದ್ಯದಲ್ಲಿ, ತನ್ನ ಕೃತಿಯುವತಿಯನ್ನು ಸರಸ್ವತಿಯ ವಿಶೇಷಣಗಳಿಂದ ವರ್ಣಿಸಿದ್ದಾನೆ. ಈಗಾಗಲೇ ನಾಗಚಂದ್ರ ತನ್ನ ಕೃತಿ ಪಂಪರಾಮಾಯಣವನ್ನು ವಚಶ್ರೀನರ್ತಕೀ ನೃತ್ಯವೇದಿಕೆ ಎಂದು ಕರೆದಿರುವುದನ್ನು ಗಮನಿಸಿದ್ದೇವೆ. ಅಲ್ಲಿ ಮಾತೆಂಬ ಲಕ್ಷ್ಮಿ ನರ್ತಿಸುತ್ತಿದ್ದರೆ, ನೇಮಿಚಂದ್ರನಲ್ಲಿ ಸರಸ್ವತಿಯು ಕಲಾನರ್ತಕಿಯಾಗಿದ್ದಾಳೆ. ಕಾವ್ಯಾರಂಭದ ಸರಸ್ವತೀ ಸ್ತುತಿಯೇ ಆತನ ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿದೆ.
ಜಿನಪದಬೋಧವಾರ್ದಿಭವೆ ಭವ್ಯ ಮನೋಹರಕಾಂತೆ ಕಾಮಸಂ
ಜನನಿ ಯಶೋವಿಕಾಸಿನಿ ಗುಣೀಕೃತ ಸಂಸ್ಕೃತಿದೋಷೆ ಪುಣ್ಯ ಭಾ
ಗಿನಿ ಭುವನಪ್ರಬೋಧಿನಿ ಸುಖಾಮೃತದಾಯಿನಿ ಬಂದು ನೇಮಿಚಂ
ದ್ರನ ಮುಖಪದ್ಮದೊಳ್ ಸಿರಿವೊಲಿರ್ಪ ಸರಸ್ವತಿ ನಿಲ್ಕೆ ನಲ್ಮೆಯಿಂ
ಜಿನನ ಮಾತು ಎಂಬ ಜ್ಞಾನಸಮುದ್ರದಲ್ಲಿ ಹುಟ್ಟಿದ, ಜಿನಪದದ ಬಗೆಗಿನ ಅರಿವನ್ನು ಹೆಚ್ಚಿಸುವ, ಜಿನಭಕ್ತರಿಗೆ ಮನೋಹರವಾಗಿ ಕಾಣಿಸುವ ಭವ್ಯಸ್ವರೂಪದ, ಅರಿಷಡ್ವರ್ಗಳಲ್ಲಿ ಮೊದಲನೆಯದಾದ ಕಾಮಕ್ಕೆ ಕಾರಣಳಾಗಿರುವ, ಯಶಸ್ಸನ್ನು ಹೆಚ್ಚಿಸುವ, ತಿದ್ದಿದ ಗುಣಶಾಲಿಯಾದ ನಡವಳಿಕೆಯಿಂದ ಸಂತಸಗೊಳ್ಳುವ, ಭುವನಕ್ಕೆ ಸಮೃದ್ಧಿಯನ್ನುಂಟು ಮಾಡುವ, ಸುಖವೆಂಬ ಅಮೃತವನ್ನು ದಯಪಾಲಿಸುವ, ಲಕ್ಷ್ಮಿಯಂತಿರುವ ಸರಸ್ವತಿಯು ನೇಮಿಚಂದ್ರನ ಮುಖಪದ್ಮದಲ್ಲಿ ನೆಲೆಸಲಿ ಎಂಬುದು ಕವಿಯ ಆಶಯ. ಇಲ್ಲಿ ಬಂದಿರುವ ಕಾಮಸಂಜನನಿ ಎಂಬ ವಿಶೇಷಣ ಪ್ರಮುಖವಾದುದು. ಶೃಂಗಾರವೇ ಪ್ರಧಾನವಾದ, ಶೃಂಗಾರಗೃಹವಾದ ತನ್ನ ಕಾವ್ಯದ ಉದ್ದೇಶಕ್ಕೆ ಅನುಗುಣವಾಗಿ ಸರಸ್ವತಿಯನ್ನು ಸ್ತುತಿಸುವುದಕ್ಕಾಗಿ, ಕಾಮಸಂಜನನಿ ಎನ್ನುತ್ತಾನೆ. ಸರಸ್ವತಿಯು ಹುಟ್ಟಿಸುವ ಕಾಮವಾದ್ದರಿಂದ ಅದು ವಿಕೃತವಲ್ಲ ; ಬದಲಿಗೆ ಯಶಸ್ಸನ್ನು ವಿಸ್ತರಿಸುವಂತದ್ದು, ಸಂಸಾರದ ದೋಷಗಳನ್ನು ಗುಣಗಳನ್ನಾಗಿ ಪರಿವರ್ತಿಸಿ ತೋರಿಸುವಂತದ್ದು. ಸಂಸಾರದಲ್ಲಿ ಕಾಮವು ನಗಣ್ಯವಲ್ಲ ಎಂಬುದು ಕಾವ್ಯದುದ್ದಕ್ಕೂ ನೇಮಿಚಂದ್ರ ಪಾಲಿಸಿಕೊಂಡು ಬಂದಿರುವ ತತ್ವವೇ ಆಗಿದೆ. ಪುಣ್ಯವನ್ನು ದಯಪಾಲಿಸುವವಳು, ಇಡೀ ಜಗತ್ತನ್ನು ಎಚ್ಚರಗೊಳಿಸುವವಳು, ಸುಖವೆಂಬ ಅಮೃತವನ್ನು ದಯಪಾಲಿಸುವವಳು ಆದ ಸರಸ್ವತಿ, ಸಂಪತ್ತಿನಂತೆ ಇರುವ ನೇಮಿಚಂದ್ರನ ಮುಖಕಮಲದಲ್ಲಿ ಪ್ರೀತಿಯಿಂದ ನೆಲಸಲಿ ಎಂಬುದು ಕವಿಯ ಪ್ರಾರ್ಥನೆ. ಋಗ್ವೇದದಲ್ಲಿ ಸರಸ್ವತಿಯು ಪ್ರೇರಣಾದೇವತೆಯಾಗಿರುವುದನ್ನು, ಮತ್ತು ಸರಸ್ವತಿಯನ್ನು ಚೋದಯತ್ರೀ ಅಂದರೆ ಮನುಷ್ಯರನ್ನು ಪ್ರೇರೇಪಿಸುವವಳು ಎಂದು ಕರೆದಿರುವುದನ್ನು ಹಿಂದೆ ಗಮನಿಸಿದ್ದೇವೆ. ಆ ಹಿನ್ನೆಲೆಯಲ್ಲಿ ಭುವನಪ್ರಬೋಧಿನಿ ಎಂಬ ವಿಶೇಷಣ ಮಹತ್ವದ್ದಾಗಿದೆ. ಈಗಾಗಲೇ ನಾಗಚಂದ್ರನ ಸರಸ್ವತಿಯನ್ನು ಕೈವಲ್ಯಬೋಧರಮಾ ಮೌಕ್ತಿಕಹಾರಯಷ್ಟಿ ಎಂದು ಕರೆದಿರುವುದನ್ನು ಗಮನಿಸಿದ್ದೇವೆ. ಜಿನಪದ ಅಂದರೆ ಮೋಕ್ಷ; ಕೈವಲ್ಯ. ಜಿನಪದಬೋಧವಾರ್ದಿಭವೆ ಎಂಬ ಮಾತು ಸರಸ್ವತಿಯು ಮೋಕ್ಷಕ್ಕೂ ಕಾರಣವಾಗುವವಳು ಎಂಬುದನ್ನು ಸೂಚಿಸುತ್ತದೆ. ಇನ್ನೊಂದು ಪದ್ಯದಲ್ಲಿ ಸರಸ್ವತಿಯು ಕುಕವಿಗಳನ್ನಾಶ್ರಯಿಸದೆ, ನೇಮಿಚಂದ್ರನನ್ನು ಏಕೆ ಆಶ್ರಯಿಸಬೇಕೆಂದು ಶ್ಲೇಷೆಯ ಮೂಲಕ ಹೇಳುತ್ತಾನೆ.
ಬಱದೆ ಮರಲ್ದರಲ್ದ ಕುಕವಿವ್ರಜಶಾಲ್ಮಲಿಯಂ ಮಲಂಗದೆ
ೞ್ಚಱಸದೆ ದುರ್ವಿವೇಕಮುಖಕುಟ್ಮಲದಿಂದವಗಂಧಮಂ ಮರು
ಳ್ದೆಱಗದೆ ಮುಗ್ಧಚಂಪಕದೊಳೊಲ್ದು ಸರಸ್ವತಿಯೆಂಬ ತುಂಬಿ ಬಂ
ದೆಱಗುಗೆ ನೇಮಿಚಂದ್ರನ ನವಸ್ಮಿತಜಾತಮುಖಾಂಬುಜಾತದೊಳ್
ವ್ಯರ್ಥವಾಗಿ ಅರಳಿರುವ ಬೂರುಗದ ಹೂವಿಗೆ ಮರುಳಾಗದೆ, ಕೆಟ್ಟುಹೋಗಿರುವ ಮೊಗ್ಗಿನಿಂದ ಸುವಾಸನೆಯನ್ನು ಬಯಸದೆ, ಮುಗ್ಧೆ ಎಂದು ಸಂಪಗೆಯ ವಾಸನೆಗೆ ಮರುಳಾಗದೆ ಸರಸ್ವತಿ ಎಂಬ ದುಂಬಿಯು ಮುಗುಳ್ನಗೆಯಿಂದ ಕೂಡಿದ ನೇಮಿಚಂದ್ರನ ಮುಖವೆಂಬ ಕಮಲದ ಹೂವಿನಲ್ಲಿ ಆಟವಾಡಲಿ ಎಂಬುದು ಕವಿಯ ಪ್ರಾರ್ಥನೆ. ಆದರೆ ಕವಿ ಅದನ್ನು ನಯವಾಗಿ ಕುಕವಿಗಳ ನಿಂದೆಗಾಗಿ ಬಳಸಿಕೊಂಡಿದ್ದಾನೆ. ಅಂತಃಶಕ್ತಿಯಿಲ್ಲದ ಕುಕವಿಸಮೂಹವನ್ನು ಆಶ್ರಯಿಸದೆ, ಅವರ ದುರ್ವಿವೇಕದಿಂದ ಕೂಡಿದ ಮುಖದಲ್ಲಿ ಒಡನಾಡದೆ, ಏನೂ ತಿಳಿಯದವರೆಂದು ಭಾವಿಸಿ ಮರುಳಾಗಿ ಅಂತಹವರ ಸಹವಾಸವನ್ನು ಪಡೆಯದೆ ಸರಸ್ವತಿಯು ಮುಗುಳ್ನಗೆಯಿಂದ ಕೂಡಿದ ನೇಮಿಚಂದ್ರನ ಮುಖದಲ್ಲಿ ಬಂದು ಆಟವಾಡಲಿ ಎಂಬಲ್ಲಿ ಕುಕವಿಗಳಿಗಿರಬೇಕಾದ ಗುಣಗಳ ನಿರೂಪಣೆಯೂ ಇದೆ.
ಸರಸ್ವತಿಯನ್ನು ಕಾವ್ಯಪರಿಕರಗಳಿಗಾಗಿ ಬೇಡುವ ಅವನ ಇನ್ನೊಂದು ಸರಸ್ವತಿಯ ಸ್ತುತಿ ಕೆಳಗಿನಂತಿದೆ.
ರಸಭಾವಂ ಪೊಣ್ಮೆ ವಕ್ತ್ರಂ ತೊಳಗೆ ವಿಕಸಿತಂ ಜಾತ್ಯಲಂಕಾರಮಾಳೋ
ಕಿಸೆ ಕೊಂಕು ರೇಖೆಯುಂ ರಂಜಿಸೆ ಮಿಸುಗೆ ಪದನ್ಯಾಸಮಿಂಬಾಗೆ
ವೃತ್ತಿ ಪ್ರಸರಂ ದೃಷ್ಟಿಪ್ರಸಾದಂ ಪಸರಿಸೆ ಸತತಂ ಭಾರತೀದೇವಿಯೆನ್ನೀ
ರಸನಾರಂಗಾಗ್ರದೊಳ್ ನರ್ತಿಸುಗೆ ಬುಧಜನಸ್ತೋತ್ರತೂರ‍್ಯಂಗಂಳಿಂದಂ
ರಸಭಾವಗಳು ಹೊಮ್ಮುತ್ತಿರುವುದರಿಂದ ಮುಖವು ಬೆಳಗುತ್ತಿರಲು, ಪ್ರಕಾಶ ಹೆಚ್ಚಾಯಿತು. ನೃತ್ಯದ ಬೇರೆ ಬೇರೆ ಭಂಗಿಗಳು ದೃಷ್ಟಿಯ ಮೂಲಕ ಹೊಮ್ಮುತ್ತಿರಲು, ದೇಹದ ಚಲನೆಯ ವಕ್ರ(ಸೌಂದರ್ಯ)ರೇಖೆಗಳು ರಂಜಿಸುತ್ತಿರಲು, ಪದಚಲನೆಯ ಭಂಗಿ ವಿಜೃಂಭಿಸುತ್ತಿರಲು ಕಣ್ಣಿಗೆ ನೋಟದ ಗುಣ ಹರಡುತ್ತಿರಲು, ವ್ಯಾಖ್ಯಾನ ಮಾಡುವುದು ಆ ಭಂಗಿಗಳಿಗೆ ಒತ್ತಾಸೆ ನೀಡುತ್ತಿರಲು, ವಿದ್ವಾಂಸರು ಮಾಡುವ ಸ್ತುತಿಗಳ ತೂರ‍್ಯಶಬ್ದಗಳ ಹಿನ್ನೆಲೆಯಲ್ಲಿ ಭಾರತಿಯು ರಸೋತ್ಪತ್ತಿ ಸ್ಥಾನವಾದ ನಾಲಗೆಯ ತುದಿಯಲ್ಲಿ ನಿರಂತರವಾಗಿ ನರ್ತಿಸುತ್ತಿರಲಿ. ಕಾವ್ಯಗುಣಗಳನ್ನು ಅನ್ವಯಿಸಿಯೂ ಈ ಪದ್ಯವನ್ನು ಅರ್ಥೈಸಬಹುದು. ವಕ್ರವ್ಯಾಪಾರದಿಂದ ಶೋಭಿಸುವ ಸ್ವಭಾವಾಲಂಕಾರಗಳನ್ನು, ಕಂಗೊಳಿಸುವ ಪದಗಳ ರಚನೆಗೆ ಅನುಕೂಲಕರವಾಗಿ ವಾಚ್ಯ, ಲಕ್ಷ್ಯ ಮತ್ತು ವ್ಯಂಗ್ಯಾರ್ಥಗಳನ್ನು ಕೊಡುವ ಶಬ್ದದ ಸಾಮರ್ಥ್ಯ; ವೃತ್ತಿಯನ್ನು ಹರಡಿ, ಕೃಪಾದೃಷ್ಟಿಯನ್ನು ಸುರಿಸಿ, ಭಾರತಿದೇವಿಯು ಬುಧರ ಸ್ತೋತ್ರವೆಂಬ ತುತ್ತೂರಿಯ ದನಿಗಳೊಂದಿಗೆ ನಿರಂತರವಾಗಿ ನನ್ನ ನಾಲಗೆಯ ತುದಿಯಲ್ಲಿ ನರ್ತಿಸಲಿ. ಜಾತ್ಯಾಲಂಕಾರ ಎಂದರೆ ಸ್ವಭಾವಾಲಂಕಾರವೆಂದರ್ಥ. ನೋಡುವುದಕ್ಕೆ ಸ್ವಭಾವಾಲಂಕಾರದಂತಿದ್ದರೂ ಕೊಂಕು ರೇಖೆ ಅಂದರೆ ವಕ್ರವ್ಯಾಪಾರದಿಂದ ಕೂಡಿರಬೇಕು. ವೃತ್ತಿ ಎಂದರೆ ವಾಚ್ಯ, ಲಕ್ಷ್ಯ ಮತ್ತು ವ್ಯಂಗ್ಯಾರ್ಥಗಳನ್ನು ಕೊಡುವ ಶಬ್ದದ ಸಾಮರ್ಥ್ಯ. ಅದನ್ನು ತನ್ನ ಕಾವ್ಯಕ್ಕಾಗಿ ಕವಿ ಬೇಡುತ್ತಾನೆ. ಅಂತಹ ಕಲಾನರ್ತಕಿಯನ್ನು, ಪಂಡಿತರ ಸ್ತೋತ್ರತೂರ‍್ಯಗಳೊಂದಿಗೆ ತನ್ನ ನಾಲಗೆಯ ತುದಿಯಲ್ಲಿ ನರ್ತಿಸುವುದಕ್ಕೆ ಕೋರುತ್ತಾನೆ. ಆ ಅಧ್ಯಾಯದ ಮತ್ತು ಕಾವ್ಯದ ಕೊನೆಗೆ ಕಲಾನರ್ತಕಿ ನೃತ್ಯ ಮಾಡುವ ರಂಗಭೂಮಿ ತನ್ನ ಕೃತಿ ಎನ್ನುತ್ತಾನೆ. ಕವಿಯ ಕೋರಿಕೆಯಂತೆ ಸರಸ್ವತಿಯು ನಾಲಗೆಯ ತುದಿಯಲ್ಲಿ ನರ್ತಿಸಿದ್ದರಿಂದಲೇ, ಕಲಾನರ್ತಕಿಯ ನರ್ತನಕ್ಕೆ ರಂಗಭೂಮಿಯಾಗುವಂತೆ ಆತನ ಕಾವ್ಯರಚನೆ ಮುಂದುವರಿಯುತ್ತಿದೆ; ಮುಂದುವರೆದು ನರ್ತನಕ್ಕೆ ಭೂಮಿಕೆಯೂ ಆಯಿತು ಎನ್ನಬಹುದಲ್ಲವೆ!?
ಸರಸ್ವತಿಯ ನರ್ತನಕ್ಕೆ ವೇದಿಕೆಯಾದ ಕೃತಿಯನ್ನು ಕೃತಿಯುವತಿ ಎಂದು ಕರೆದು, ಕಾವ್ಯಸರಸ್ವತಿಯ ವಿಶೇಷಣಗಳಿಂದ ಕೃತಿಯುವತಿಯನ್ನು ಹೊಗಳುತ್ತಾ ಹೆಮ್ಮೆಪಡುವ ಪದ್ಯ ಸೊಗಸಾಗಿದೆ.
ಲಳಿತಾಲಂಕಾರೆಯಂ ಚಾತುರವಚನೆಯನತ್ಯಾಯತೋತ್ಪ್ರೇಕ್ಷೆಯಂ ಕೋ
ಮಳೆಯಂ ವೃತ್ತಸ್ತನಾಕ್ರಾಂತೆಯನಖಿಲ ಕಲಾಪ್ರೌಢೆಯಂ ಕಾಮ ಕೇಳೀ
ಕಳೆಯೊಳ್ ಜಾಣ್ಬೆತ್ತುವಂದೀ ಕೃತಿಯುವತಿಯನಾರ್ ಕಂಡು ಕಣ್ಬೇಟದಿಂತಾ
ಮೊಳಗಾಗರ್ ಕೂರ್ತು ಕೇಳ್ದಾರ್ ಬಗೆವುಗೆ ಕಿವಿವೇಟಕ್ಕೆ ಪಕ್ಕಾಗದಿರ್ಪರ್
ಲಲಿತವಾದ ಅಲಂಕಾರ, ಚತುರವಾದ ಮಾತುಗಳ, ಅತಿಸುಂದರವಾದ ಉತ್ಪ್ರೇಕ್ಷೆ, ಕೋಮಳೆ, ವೃತ್ತಾಕಾರದ ಸ್ತನ (ವೃತ್ತಾದಿ ಪದ್ಯಗಳನ್ನು), ಸಕಲಕಲಾಪ್ರೌಢಿಮೆ ಇವುಗಳೆಲ್ಲವನ್ನೂ ಸೊಗಸಾದ ಪಂಕ್ತಿಗಳ ತೇಜಸ್ಸಿನಲ್ಲಿ ಚಾತುರ್ಯದಿಂದ ಕಟ್ಟಿದಂತಿರುವ, ಕಾಮಕೇಳಿ ಕಲೆಯಲ್ಲಿ ಜಾಣತನವನ್ನು ಪಡೆದು ಬಂದ ಈ ಕೃತಿಸ್ವರೂಪದ ಯುವತಿಯನ್ನು ಕಂಡು ಕಣ್ಣಿನ ಆಕರ್ಷಣೆಗೆ ಯಾರು ಒಳಗಾಗುವುದಿಲ್ಲ? ಕುಳಿತು ಕೃತಿಯನ್ನು ಕೇಳಿದ ಯಾರ ಮನಸ್ಸು ಉತ್ಸಾಹಗೊಳ್ಳುವುದಿಲ್ಲ? ಅವರು ಕಿವಿಯಾಕರ್ಷಣೆಗೆ ಒಳಗಾಗದಿರುತ್ತಾರೆಯೇ? ಎಂದು ಪ್ರಶ್ನಿಸುತ್ತಾನೆ ಕವಿ. ಶೃಂಗಾರಪ್ರಧಾನವಾದ ಕೃತಿ ರಚನೆಗೆ ತೊಡಗಿಕೊಂಡ ಕವಿ, ಸರಸ್ವತಿಯನ್ನು ಕಾಮಸಂಜನನಿ ಎಂದು ಕರೆಯುವುದರಲ್ಲಿನ ಪ್ರಾರಂಭದ ಉತ್ಸಾಹ ಕೊನೆಯವರೆಗೂ, ತನ್ನ ಕೃತಿಯನ್ನು ಶೃಂಗಾರರಸಪೂರ್ಣವಾಗಿ ಸಿಂಗರಿಸುವವರೆಗೂ ವಿರಮಿಸುವುದಿಲ್ಲ. ಭಾರತೀಚಿತ್ತಚೋರನಾದ ಕವಿ ತನ್ನ ಮುಖಚಂದ್ರಿಕೆಯು ಭಾರತಿಯ ಚಂದ್ರಿಕೆಯಂತೆ ಭೂಲೋಕವನ್ನು ನಿತ್ಯವೂ ಬೆಳಗಲಿ೧೨೩ ಎಂದು ಆಶಿಸುತ್ತಾನೆ.
ನೇಮಿಚಂದ್ರನು ತನ್ನ ಇನ್ನೊಂದು ಕಾವ್ಯ ನೇಮಿನಾಥಪುರಾಣದಲ್ಲಿ ಪೌರಾಣಿಕ ಘಟನೆಯೊಂದರ ಮೂಲಕ ಸರಸ್ವತಿಯನ್ನು ಕಾಮಧೇನು ರೂಪದಲ್ಲಿ ಸ್ತುತಿಸಿದ್ದಾನೆ. ಋಗ್ವೇದ ಮತ್ತು ಬೃಹದಾರಣ್ಯಕಗಳ ಪರಿಶೀಲನೆಯಿಂದ ಸರಸ್ವತಿಗೆ ಕಾಮಧೇನು ಸ್ವರೂಪ ಇತ್ತೆಂಬುದನ್ನು ಈಗಾಗಲೇ ಗಮನಿಸಿದ್ದೇವೆ.
ಪರಮತಮತ್ತಹೈಹಯಮುಖಚ್ಯುತೆ ವಿಶ್ರುತ ಜೈನಶಾಸನಾ
ಮರಭುವನಪ್ರತಿಷ್ಠಿತೆ ರಸಾನುಭವೋಚಿತೆ ವತ್ಸಲತ್ವದಿಂ
ತೊರೆದ ಕುಚಂಬೊಲ್ ಒಪ್ಪುವ ಚತುರ್ವಿಧಭಾಷೆಯೊಳಂ ಸರಸ್ವತೀ
ಸುರಭಿ ನಿರಂತರಂ ಕಱೆಗೆ ಕಾಮಿತಮಂ ಕವಿರಾಜಮಲ್ಲನಾ
ಪರಧರ್ಮದ ಮದದಿಂದ ಕೂಡಿದ ಹೈಹಯ ವಂಶದ ದೊರೆಗಳಿಂದ ದೂರವಾದವಳು, ಪ್ರಸಿದ್ಧವಾದ ಜೈನಧರ್ಮದ ಶಾಶ್ವತವಾದ ಲೋಕದಲ್ಲಿ ಪ್ರತಿಷ್ಠೆಗೊಂಡವಳು, ರಸಾನುಭವದಿಂದ ಔಚಿತ್ಯವನ್ನು ಪಡೆದವಳಾದ ಸರಸ್ವತಿಯು ವಾತ್ಸಲ್ಯ(ತಾಯಿ)ಭಾವದಿಂದ ತುಂಬಿದ ಕುಚಗಳಿಂದ ಹಾಲನ್ನು ಕರೆಯುವ ಸುರಭಿ(ಕಾಮಧೇನು)ಯಂತೆ ನಾಲ್ಕುಭಾಷೆಯಲ್ಲಿಯೂ ಕವಿರಾಜಮಲ್ಲನಾದ ನೇಮಿನಾಥನ ಇಷ್ಟಾರ್ಥವನ್ನು ಸದಾ ನೆರವೇರಿಸುತ್ತಿರಲಿ ಎಂಬುದು ನೇಮಿನಾಥನ ಪ್ರಾರ್ಥನೆ. ಆತನಿಗೆ ನಾಲ್ಕುಭಾಷೆಗಳಲ್ಲಿ ಪರಿಶ್ರಮವಿತ್ತೆಂದು ಊಹಿಸಲು ಸಾಧ್ಯವಿದೆ. ಜೈನಮತಕ್ಕನುಗುಣವಾಗಿ ಸರ್ವಭಾಷಾಮಯಿಯಾದ ಸರಸ್ವತಿಯನ್ನು ನಾಲ್ಕೂ ಭಾಷೆಗಳಲ್ಲಿ ಇಷ್ಟಾರ್ಥವನ್ನು ನೆರವೇರಿಸುವಂತೆ ಕೋರಿರುವುದು ಸಮಂಜಸವಾಗಿದೆ. ಸರಸ್ವತಿಯನ್ನು ಸುರಭಿ ಎಂಬ ಧೇನುವಿಗೆ ಹೋಲಿಸಿರುವುದಕ್ಕೆ ಸರಸ್ವತಿಗಿರುವ ಕಾಮಧೇನು ಸ್ವರೂಪವೂ ಕಾರಣ. ಹೈಹಯವಂಶದ ದೊರೆಯಾದ ಕಾರ್ತವೀರ‍್ಯನು ಜಮದಗ್ನಿಯ ಆಶ್ರಮದಲ್ಲಿದ್ದ ಕಪಿಲೆ ಎಂಬ ಹೋಮಧೇನುವನ್ನು ಬಯಸಿ ಅಪಹರಿಸಿದರೂ ಅದು ಆತನಿಗೆ ದಕ್ಕಲಿಲ್ಲ.೧೨೫ ಹೈಹಯಮುಖಚ್ಯುತೆ ಎಂಬ ಮಾತು ಮೇಲಿನ ಕಥೆಯಿಂದ ಪ್ರೇರಿತವಾಗಿರುವಂತಿದೆ. ಪರಮತಮತ್ತನಾದ ಹೈಹಯನಿಗೆ ಒಲಿಯದೇ ಪ್ರಸಿದ್ಧವಾದ ಜೈನಧರ್ಮದ ಶಾಶ್ವತವಾದ ಲೋಕದಲ್ಲಿ ಪ್ರತಿಷ್ಠಾಪಿತಳಾಗಿದ್ದಾಳೆ ಎಂಬುದು ಜೈನಧರ್ಮೀಯನಾದ ನೇಮಿನಾಥನ ಕಲ್ಪನೆ.

Thursday, September 09, 2010

2010 ಸೆಪ್ಟಂಬರ್ 15 ಐತಿಹಾಸಿಕ ದಿನವಾಗಬೇಕು

ಮೊನ್ನೆ ಮೊನ್ನೆ ಪೇಜಾವರ ಸ್ವಾಮೀಜಿಗಳು ದಲಿತಕೇರಿಯಲ್ಲಿ ಪಾದಯಾತ್ರೆ ಮಾಡಿ ಜಾತಿ ನಿರ್ಮೂಲನೆಯ ಹಾದಿಯಲ್ಲಿ ಆರಂಭದ ಹೆಜ್ಜೆಗಳನ್ನು ಇಟ್ಟರು. (ಈ ಹಿಂದೆಯೂ ಒಮ್ಮೆ ಅವರು ದಲಿತಕೇರಿಗೆ ಬೇಟಿ ಕೊಟ್ಟಿದ್ದು ಉಂಟು). ನಾಡಿನಾದ್ಯಂತ ಇದರ ಬಗ್ಗೆ ಬಿಸಿ ಬಿಸಿ ಚರ್ಚೆಗಳಾದವು. ಮಾದ್ಯಮಗಳೂ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟವು. ಸುವರ್ಣ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಎಲ್. ಹನುಮಂತಯ್ಯನವರು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯ ಹಿನ್ನೆಲೆಯಲ್ಲಿ ಅಸ್ಪೃಷ್ಯತೆಯ ನಿರ್ಮೂಲನೆಗೆ ಇರುವ ಎಡರು ತೊಡರುಗಳನ್ನು ಗುರುತಿಸಿದರೆ, ಗೀತಾ ರಾಮಾನುಜಂ ಅವರು ಕೇವಲ ಮೇಲ್ವರ್ಗದವರು ಪ್ರಯತ್ನ ಪಟ್ಟರೆ ಸಾಲದು; ಅಸ್ಪೃಷ್ಯರೂ ಸಹಕರಿಸಬೇಕು. ಅಸ್ಪೃಷ್ಯತೆಯ ನಿವಾರಣೆಗಾಗಿ ನಾವು (ಮೇಲ್ವರ್ಗ?) ಏನೂ ಮಾಡಲು ಸಿದ್ಧರಿದ್ದೇವೆ. ಆದರೆ ಆ ವರ್ಗವೇ ಸಿದ್ಧವಾಗಿಲ್ಲ ಎನ್ನುವ ಅರ್ಥದಲ್ಲಿ ತಮ್ಮ ವಾದವನ್ನು ಮಂಡಿಸಿ, ಪೇಜಾವರ ಶ್ರೀಗಳ ಪ್ರಯತ್ನವನ್ನು ಶ್ಲಾಘಿಸುತ್ತಾ, ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಎಂದು ಮಾತು ಮುಗಿಸಿದ್ದರು.

ಈ ಚರ್ಚೆಯನ್ನು ನೋಡುತ್ತಿದ್ದಾಗಲೇ ನನಗನ್ನಿಸಿದ್ದು. ಪೇಜಾವರ ಶ್ರೀಗಳು ದಲಿತಕೇರಿಗೆ ಹೋಗಿದ್ದು. ಅಭಿನಂದನೀಯ. ಅವರನ್ನು ದಲಿತ ಸಮುದಾಯ ಸ್ವಾಗತಿಸಿದ್ದು ಅನುಕರಣೀಯ. ಆದರೆ ಬೇರೆ ಜಾತಿಯ ಸ್ವಾಮಿಜಿಗಳು (ಜಾತಿಗೊಂದು ಮಠ, ಸ್ವಾಮಿಜಿ ಇರುವುದು ನಾಗರಿಕ ಸಮಾಜದ ಆರೋಗ್ಯಕರ ಲಕ್ಷಣವಲ್ಲ! ಅದು ಬೇರೆ ಮಾತು) ಬೇರೆ ಬೇರೆ ಜಾತಿಗಳವರ ಊರು ಕೇರಿ ಮನೆಗಳಿಗೆ ಬೇಟಿಕೊಟ್ಟರೆ ಹೇಗಿರುತ್ತದೆ? ಎಂಬ ಆಲೋಚನೆ ತಲೆಯಲ್ಲಿ ಸುಳಿದು ಹೋಗಿತ್ತು. ಅದರಲ್ಲೂ ವಿಶೇಷವಾಗಿ ಈಗ ದಲಿತ ಸಮುದಾಯಕ್ಕೂ ಒಂದು ಮಠ, ಸ್ವಾಮೀಜಿ ಇರುವುದರಿಂದ, ಆ ಸಮುದಾಯದ ಸ್ವಾಮೀಜಿಯೊಬ್ಬರು ಬ್ರಾಹ್ಮಣ ಕೇರಿಯಲ್ಲಿ ಪಾದ ಯಾತ್ರೆ ನಡೆಸಿದರೆ, ಬ್ರಾಹ್ಮಣರ ಮನೆಗಳಿಗೆ ಬೇಟಿ ಕೊಡಲು ಇಚ್ಛಿಸಿದರೆ, ಅವರ ಮನೆಗಳಲ್ಲಿ ದೇವರ ಪೂಜೆ ಮಾಡಲು ಇಚ್ಛಿಸಿದರೆ ಸಮುದಾಯದ ಪ್ರತಿಕ್ರಿಯೆ ಹೇಗಿದ್ದಿರಿಬಹುದು? ಹೀಗೇ ಏನೇನೋ ಯೋಚನೆಗಳು ತಲೆಯನ್ನು ತುಂಬಿಕೊಂಡಿದ್ದೂ ಉಂಟು.

ಇಂದು ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ಈ ವರದಿ ನನ್ನಲ್ಲಿ ಸಂಚಲವನ್ನೇ ಹುಟ್ಟು ಹಾಕಿತ್ತು. ಮಾದಿಗ ಜನಾಂಗ ಗುರುಪೀಠದ ಚನ್ನಯ್ಯ ಸ್ವಾಮೀಜಿಯವರು ಇದೇ ಸೆಪ್ಟಂಬರ್ ಹದಿನೈದರಂದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ’ಸಾಮರಸ್ಯ ನಡಿಗೆ’ ನಡೆಸುವುದಾಗಿ ಘೋಷಿಸಿದ್ದಾರೆ. ’ಯಾವುದೇ ದ್ವೇಷ ಅಥವಾ ಸ್ಪರ್ಧಾ ಮನೋಭಾವದಿಂದ ತಾವು ಬ್ರಾಹ್ಮಣರ ಕೇರಿಗೆ ಹೋಗುತ್ತಿಲ್ಲ. ಪೇಜಾವರ ಸ್ವಾಮೀಜಿ ಅವರಿಗೆ ಸವಾಲು ಹಾಕುವ ಉದ್ದೇಶವಲ್ಲ. ಈ ಎರಡೂ ಜನಾಂಗದ ನಡುವೆ ಸಾಮರಸ್ಯ ತರುವ ಹಿನ್ನೆಲೆಯಲ್ಲಿ ತಮ್ಮದೊಂದು ಪುಟ್ಟ ಪ್ರಯತ್ನ’ ಎಂದು ಹೇಳಿರುವ ಅವರಿಗೆ ವಿಷಯದ ಗಂಭೀರತೆ, ಸಂಕೀರ್ಣತೆ ಹಾಗೂ ವ್ಯಾಪ್ತಿಯ ಎಚ್ಚರವೂ ಇದೆ ಎಂಬುದು ಸ್ಪಷ್ಟವಾಗಿದೆ.

’ಮಾದಿಗರು ಮಾಧ್ವರಾಗಬೇಕು ಎನ್ನುವುದು ಪೇಜಾವರ ಶ್ರೀಗಳ ಆಶಯ. ಆದರೆ ಅವರ ಜನಾಂಗದವರು ಇದನ್ನು ಒಪ್ಪುತ್ತಾರೆಯೇ?’ ಎಂಬ ಪ್ರಶ್ನೆ ಮಾದಾರ ಚನ್ನಯ್ಯ ಸ್ವಾಮಿಗಳಲ್ಲಿದೆ. ಅದಕ್ಕೆ ಉತ್ತರವೂ ಸೆಪ್ಟಂಬರ್ ಹದಿನೈದರಂದು ಸಿಗಲಿದೆ. ಪೇಜಾವರ ಶ್ರೀಗಳಂತಹ ಧೀಮಂತ ವ್ಯಕ್ತಿತ್ವದ ಸ್ವಾಮೀಜಿಯೊಬ್ಬರು ಜಾತಿ ನಿರ್ಮೂಲನೆಯ ನಿಟ್ಟಿನಲ್ಲಿ ಇಟ್ಟಿರುವ ಐತಿಹಾಸಿಕ ಹೆಜ್ಜೆಯ ಮುಂದುವರೆದ ಭಾಗದಂತಿರುವ ಈ ಸಾಮರಸ್ಯದ ನಡಿಗೆಯಲ್ಲಿ, ತಮ್ಮ ಕೇರಿಗೆ ಮನೆಗೆ ಬರುವ ಮಾದಾರ ಚನ್ನಯ್ಯ ಸ್ವಾಮಿಜಿಗಳಿಗೆ ಒಳ್ಳೆಯ ಸ್ವಾಗತವೇ ಸಿಗಲಿ ಎಂದು ಆಶಿಸೋಣ. ಪೇಜಾವರ ಸ್ವಾಮಿಜಿಗಳ ಐತಿಹಾಸಿಕ ನಿರ್ಧಾರಕ್ಕೆ, ಮಾಧ್ವ ಸಮುದಾಯ ಚನ್ನಯ್ಯ ಸ್ವಾಮಿಜಿಗಳನ್ನು ಸ್ವಾಗತಿಸುವ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದರೆ ನಿಜವಾಗಲೂ ಇದೊಂದು ಐತಿಹಾಸಿಕ ದಿನವಾಗಲಿದೆ. ಮಾಧ್ವ ಸಮುದಾಯ ಪೇಜಾವರ ಶ್ರೀಗಳ ಬೆಂಬಲಕ್ಕೆ ನಿಲ್ಲಲೇಬೇಕು. ಇಲ್ಲದಿದ್ದರೆ, ಸ್ವಾಮಿಜಿಗಳು ಒಬ್ಬಂಟಿಗಳಾಗುತ್ತಾರೆ. ಅವರ ಪ್ರಯತ್ನ ಹೊಳೆಯಲ್ಲಿ ಹುಣಿಸೆಹಣ್ಣು ಕಿವುಚಿದಂತೆ ವ್ಯರ್ಥವಾಗುತ್ತದೆ.

ಕೊನೆಯ ಮಾತು: ಪೇಜಾವರ ಸ್ವಾಮಿಜಿಗಳು ದಲಿತಕೇರಿಯಲ್ಲಿ ಪಾದಯಾತ್ರೆ ನಡೆಸುವ; ನಡೆಸಿದ ವಿಷಯ ಬಹುತೇಕ ಎಲ್ಲಾ ಪತ್ರಿಕೆಗಳಲ್ಲೂ, ಮಾದ್ಯಮಗಳಲ್ಲೂ ಪ್ರಮುಖ ಸುದ್ದಿಯಾಗಿತ್ತು. ಆದರೆ ಈ ಸಾಮರಸ್ಯ ನಡಿಗೆಯ ವಿಷಯ ನನ್ನ ಗಮನಕ್ಕೆ ಬಂದಿರುವಂತೆ ಪ್ರಜಾವಾಣಿ ಪತ್ರಿಕೆಯನ್ನುಳಿದು ಬೇರೆ ಪತ್ರಿಕೆಗಳಲ್ಲಿ ಬಂದಿಲ್ಲ. ಇದು ಪತ್ರಿಕೆಗಳ ಜಾತಿ ರಾಜಕಾರಣವಲ್ಲ ತಾನೆ? ಆಗಿರದಿರಲಿ ಎಂದು ಆಶಿಸೋಣ.

Wednesday, September 08, 2010

ಇವರು ಯಾರು ಬಲ್ಲಿರೇನು?

ಲೇಖಕರೊಬ್ಬರ ಕೃತಿಯೊಂದಿಗೆ ನಡೆಸಿದ ಅನುಸಂಧಾನದಿಂದ ಹೊರಹೊಮ್ಮಿದ ಈ ಕೆಳಗಿನ ಸಾಲುಗಳನ್ನು ಓದುತ್ತಿದ್ದ ಹಾಗೆ, ನನ್ನ ಪ್ರಶ್ನೆಗೆ ನಿಮಗೆ ಉತ್ತರ ಹೊಳೆದೇ ಇರುತ್ತದೆ. ಕೊನೆಯಲ್ಲಿ ಅವರ ಫೋಟೋ ಕೂಡಾ ಇದೆ. ಜೊತೆಗೆ ಒಂದು ಕ್ಲೂ ಕೂಡಾ!
  • ದೇವರು ಇದ್ದಾನೋ ಇಲ್ಲವೋ. ಆದರೆ ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ. ಅಂತಹ ವಿಸ್ಮಯಗಳ ಹುಡುಕಾಟ ಇವರ ಹವ್ಯಾಸ. 
  • ಒಬ್ಬ ಮನುಷ್ಯ ಸಾಮಾಜಿಕವಾಗಿ ಸ್ವಲ್ಪ ಗುರುತಿಸಲ್ಪಟ್ಟರೆ ಸಾಕು. ಅವನನ್ನು ಒಂದು ಫಂಥಕ್ಕೆ ಸೀಮಿತಗೊಳಿಸಿ, ಅವನ ಪ್ರಗತಿಪರವಾದ, ಜೀವಪರವಾದ ನಿಲುವುಗಳನ್ನು ಮೂಲೆಗುಂಪು ಮಾಡುವ ಪ್ರತಿಗಾಮಿತನ ಶಕ್ತಿಮೂಲ ಯಾವುದು? 
  • ಬಹುಸಂಸ್ಕೃತಿಯ, ಧಾರ್ಮಿಕತೆಯ ನಾಡಿನಲ್ಲಿ ಸಹಬಾಳ್ವೆ ಸಾದ್ಯವಿರುವೆಡೆಯಲ್ಲೆಲ್ಲಾ ಅಂತರಂಗದಲ್ಲಿ ಕ್ರೋಧ, ದ್ವೇಷಗಳಂತೆ ಜಾತಿಯತೆಯೂ ಸ್ಥಾಯಿಯಾಗಿ ಇರುವುದರಿಂದ ಸಾಂಸ್ಕೃತಿಕ ಚಿದ್ರೀಕರಣವಾಗುತ್ತಿರುವುದು.  
  • ಒಳಗೊಳಗೇ ಮತ್ತೆ ಗಟ್ಟಿಯಾಗುತ್ತಿರುವ ಜಾತೀಯತೆ. ಜಾಗತೀಕರಣದ ತೀವ್ರತರ ಪ್ರಭಾವ ಮತ್ತು ಪರಿಣಾಮದಿಂದಾಗಿ ಜಾತೀಯತೆಯ ಬೇರುಗಳು ಸಡಿಲವಾಗಬಹುದೆಂಬ ಆಶಾಭಾವನೆ. 
  • ಸನಾತನವಾದಿಗಳ ಪ್ರಕಾರ ಗುರುಪೀಠದ ಹಕ್ಕೇ ಇಲ್ಲದ ಶೂದ್ರಪರಂಪರೆಯ ಮಠಗಳೂ ಸಹ ಬೆಳ್ಳಿಕಿರೀಟ, ಅಡ್ಡಪಲ್ಲಕ್ಕಿ ಉತ್ಸವ ಪಾದಪೂಜೆ ಮೊದಲಾದವುಗಳಲ್ಲಿ ತೊಡಗುತ್ತಿರುವುದು.  
  • ಸ್ವಲ್ಪಮಟ್ಟಿನ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿರುವರಿಗೇ (ನನ್ನನ್ನೂ ಸೇರಿಸಿಕೊಂಡು) ಬೆಕ್ಕು ಅಡ್ಡ ಹೋಗುವುದನ್ನು ನೋಡಿ ’ತಥ್’ ಎನ್ನುವಂತೆ ಆಗುತ್ತದೆ. ಅಂದರೆ ಈ ನಂಬಿಕೆಗಳು ಆನುಷಂಗಿಕವೋ ಎಂಬ ಭಾವ. 
  • ಯಾವುದರ ವಿರುದ್ದ ಶೂದ್ರರು ಸೆಟೆದು ನಿಂತಿದ್ದರೊ ಅದರ ಬಗ್ಗೆಯೇ ಮೃದುವಾದರೆಂದರೆ ಶುದ್ರರೂ ದಲಿತರೂ ಮತ್ತೆ ಸನಾತನಿಗಳ ಊಳಗಕ್ಕಿಳಿಯುವ ಸಾಧ್ಯತೆ. 
  • ಮುಸ್ಲಿಂ ಮೂಲಭೂತವಾದದ ದೆಸೆಯಿಂದ ಉದ್ದೀಪನಗೊಳ್ಳುತ್ತಿರುವ ಹಿಂದೂ ಮೂಲಭೂತವಾದದ ಪರಿಣಾಮಗಳು.  
  • ಶಿಕ್ಷಣ ಪದ್ಧತಿ, ಮಾಧ್ಯಮ ಮತ್ತು ಗುಣಮಟ್ಟ. ಟೀ.ವಿ. ಚಾನೆಲ್‌ಗಳನ್ನು ಬದಲಾಯಿಸುವಂತೆ, ನಮ್ಮ ನಾಯಕರುಗಳು ಬದಲಾಯಿಸುತ್ತಿರುವ, ದೂರಗಾಮಿತ್ವವಿಲ್ಲದ ಶಿಕ್ಷಣ ನೀತಿ. 
  • ಶಿಕ್ಷಕ ಸಮುದಾಯದ ನಿಷ್ಕ್ರೀಯತೆ. ಪಠ್ಯೇತರ ಜ್ಞಾನದ ಬಗೆಗಿನ ಅನಾದರ. ಸಾಹಿತ್ಯವು ಅಧ್ಯಾಪಕರ ಸೊತ್ತಾಗಿರುವುದು. ಸಾಹಿತಿಗಳೆನಿಸಿಕೊಂಡವರಲ್ಲಿ ಹೆಚ್ಚುತ್ತಿರುವ ಜ್ಞಾನದ ಅಹಂಕಾರ ಮತ್ತು ಜ್ಞಾನ ಮೂಲದ ನಿರಾಕರಣೆ. 
  • ತನ್ನ ಅನುಭವ ಮತ್ತು ಆಲೋಚನೆಗಳನ್ನು ಇತರರಿಗೆ ವರ್ಗಾಯಿಸುವ ಅತ್ಯಂತ ಕ್ಷಿಪ್ರ ಮತ್ತು ಸಮರ್ಥ ಮಾರ್ಗದ ಅನ್ವೇಷಣೆ.
  • ಕಾಲ, ತಂತ್ರಜ್ಞಾನ ಇವುಗಳ ಬದಲಾವಣೆಯ ವೇಗದೊಂದಿಗೆ ಬದಲಾಗದ ಕನ್ನಡ ಭಾಷೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡವನ್ನು ಬಳಸಲು ಇರುವ ಹಿಂಜರಿಕೆ. 
  • ಪುಸ್ತಕೋದ್ಯಮದ ಶಿಥಿಲ ವ್ಯವಸ್ಥೆ ಹಾಗೂ ಭ್ರಷ್ಟಾಚಾರ. ಸುಳ್ಳು ಹೇಳದೆ, ಮೋಸ ಮಾಡದೆ, ಅನ್ಯಾಯವೆಸಗದೆ ಇಪ್ಪತ್ತನಾಲ್ಕು ಗಂಟೆ ಕಳೆಯುವುದು ಸಹ ಈ ದೇಶದಲ್ಲಿ ದುರ್ಭರವಾದ ಮಹಾಸಾಹಸವಾಗುತ್ತಿರುವುದು. 
  • ಎಲ್ಲಾ ಚಳುವಳಿಗಳು, (ಉದಾಹರಣೆಗೆ ಜಾತಿವಿನಾಶ ಚಳುವಳಿ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ನವ್ಯ, ದಲಿತ ಮತ್ತು ಬಂಡಯ, ಇತ್ತಿಚಿನ ಪರಿಸರ ಚಳುವಳಿಗಳು) ಕೇವಲ ಸಾಹಿತ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗುತ್ತಿರುವುದು. ಸಾಮಾಜಿಕ ಆಯಾಮವನ್ನು ದಕ್ಕಿಸಿಕೊಳ್ಳದೇ ಇರುವುದು. ಗೋಕಾಕ್ ಮತ್ತು ರೈತ ಚಳುವಳಿಗಳು ಸಾಹಿತ್ಯೇತರ ಚಳುವಳಿಯಾಗಿದ್ದರೂ ಸಾಮಾಜಿಕ ಎಚ್ಚರ ಮೂಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದು. 
  • ಆಯಾಯ ಕಾಲಧರ್ಮವನ್ನು ಅನುಸರಿಸಿ ಸಮಾಜೋದ್ಧಾರದಲ್ಲಿ ನಿರತರಾದವರನ್ನು ನೇತಾರರನ್ನು ಅವರುಗಳ ಹೆಸರನ್ನು ಹೇಳಿಕೊಂಡು ತಿರುಗಾಡುತ್ತಿದ್ದರೆ ಅಭಿವೃದ್ಧಿ ಸಾಧ್ಯವೇ ಇಲ್ಲ. ಇಂದಿನ ಸಮಸ್ಯೆಗಳೇ ಬೇರೆ ಸ್ವರೂಪದವುಗಳು. ಆದ್ದರಿಂದ ಯಾವುದೇ ನಾಯಕ- ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ ಸೇರಿದಂತೆ ಯಾವುದೇ ನಾಯಕರು ಇಂದು ರಿಲವೆಂಟ್ ಆಗಿ ಉಳಿದಿಲ್ಲ. 
  • ವೈಚಾರಿಕತೆ ಎಂಬುದನ್ನು ಕೇವಲ ಧಾರ್ಮಿಕವಾದ, ಕೋಮುವಾದ ಮತ್ತು ಸಾಹಿತ್ಯವಾದದ ಹಿನ್ನೆಲೆಯಲ್ಲಿ ಮಾತ್ರ ಏಕೆ ನೋಡಲಾಗುತ್ತಿದೆ? ವೈಚಾರಿಕತೆಯ ನಿಲುವುಗಳನ್ನು ಆರ್ಥಿಕ ಮತ್ತು ಸಾಮಾಜಿಕ ಆಯಾಮಗಳಿಂದ ಏಕೆ ನೋಡಲಾಗುತ್ತಿಲ್ಲ? 
  • ಮನುಷ್ಯನನ್ನು ಒಟ್ಟು ಪರಿಸರದಿಂದ ಬೇರೆಯಾಗಿಯೇ ನೋಡುತ್ತಿರುವುದರಿಂದ ಆಗುತ್ತಿರುವ ದುರಂತ.
ಕ್ಲೂ : ಅಂದ ಹಾಗೆ ಇಂದು ಅವರ ಹುಟ್ಟು ಹಬ್ಬ.
 

Friday, September 03, 2010

ಗೋಪಿನಾಥ ರಾವ್ ಅವರ ’ಸಾರ್ವಭೌಮ’ದ ಕೆಲವು ಕಥೆಗಳು: ಸ್ವಗತ

ಇತ್ತೀಚಿಗೆ ಗೋಪಿನಾಥ ರಾವ್ ಅವರ ಬೇಟಿಯಾಗಿತ್ತು. ಅವರ ಒಂದೆರಡು ಕಥೆಗಳನ್ನು ಹಿಂದೆ ಓದಿದ್ದೆ. ಅದ್ಭುತವಾದ ಕಥೆಗಾರಿಕೆ ಅವರಲ್ಲಿದೆ ಎಂದು ಅರ್ಥಮಾಡಿಕೊಂಡಿದ್ದೆ. ಅವರ ಚೊಚ್ಚಲ ಕಥಾ ಸಂಕಲನ ಸಆರ್ವಭೌಮ ದೂರದ ದುಬೈನಲ್ಲಿ ಬಿಡುಗಡೆಯಾಗಿತ್ತು. ಮೊನ್ನೆ ಅವರು ಬಂದಾಗ ಕಥಾಸಂಕಲನವನ್ನು ಕೊಟ್ಟರು. ಅವರನ್ನು ಬೀಳ್ಕೊಟ್ಟ ತಕ್ಷಣ ನಾನು ಕೆಲವು ಕಥೆಗಳ ಮೇಲೆ ಕಣ್ಣಾಡಿಸಿದೆ. ಅದರ ಹಲವಾರು ಕಥೆಗಳು ಒಂದೇ ಬಾರಿಗೆ ನನ್ನಿಂದ ಓದಿಸಿಕೊಂಡವು. ಒಂದೇ ಒಂದು ಪದ ಆಚೀಚೆಯಾಗದಂತೆ ಬರೆಯುವ ಅವರ ಕಲೆಗಾರಿಕೆ ನನಗೆ ಇಷ್ಟವಾಯಿತು. ಒಂದು ಕಥೆಯಾದ ಮೇಲೆ ಅದರ ಬಗ್ಗೆ ನನಗನ್ನಿಸಿದ್ದನ್ನು ಆಗಲೇ ಟೈಪಿಸಿಬಿಡುತ್ತಿದ್ದೆ. ಅಂತಹ ಅನಿಸಿಕೆಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಬಯಸಿದ್ದೇನೆ. ಆ ಸಂಕಲನದ ಇನ್ನುಳಿದ ಕಥೆಗಳನ್ನು ಓದಿದ ನಂತರ ಮತ್ತೆ ಬರೆಯುತ್ತೇನೆ.

ಗೆಲುವಿನಹಳ್ಳಿ ಸೇತು

ಅತ್ಯಂತ ನಾಟಕೀಯ ತಿರುವು ತೆಗೆದುಕೊಳ್ಳುವ ’ಗೆಲುವಿನಹಳ್ಳಿ ಸೇತು’ ಕಥೆಯಲ್ಲಿ ರಾಜಕೀಯದ ಒಳಸುಳಿಗಳೆಲ್ಲಾ ಬಂದುಹೋಗುತ್ತವೆ. ಉದ್ಘಾಟನೆಗೂ ಮುಂಚೆ ಮುರಿದು ಬಿದ್ದ ಒಂದು ಸೇತುವೆ, ದಿನಗೂಲಿ ನೌಕರ ಸೇತು ಇಲ್ಲಿ ನಿಮಿತ್ತ ಮಾತ್ರ. ಆದರೆ ಈ ಸೇತು(ವೆ) ಮತ್ತು ಆ ಸೇತು ನಡುವೆ ಬೇರೆ ಪಾತ್ರಗಳು ಬಿಚ್ಚಿಡುವ ಸಂಗತಿಗಳು ಯಾವ ಆಧುನಿಕ ರಾಜಕೀಯ ಅಸಂಗತತೆಗೂ ಕಡಿಮೆಯಿಲ್ಲ. ಸೇತುವೆ, ಕಟ್ಟಡ ಕುಸಿದಂತಹ ಅವಘಢಗಳು ನಡೆದಾಗ ತಾಂತ್ರಿಕ ಜ್ಞಾನ ಸವಲ್ಪವೂ ಇಲ್ಲದ ಮಂತ್ರಿಗಳು ಕೊಡುವ ಪತ್ರಿಕಾ ಹೇಳಿಕೆಗಳನ್ನು ಗಮನಿಸಿದಾಗ ಈ ಕಥೆ ಇನ್ನೂ ಹೆಚ್ಚು ಅರ್ಥವಂತಿಕೆಯನ್ನು ಪಡೆದುಕೊಳ್ಳುತ್ತದೆ. ಮೊನ್ನೆ ಮೊನ್ನೆ ಪಶ್ಚಿಮಬಂಗಾಲದಲ್ಲಿ ರೈಲ್ವೇ ಹಳಿ ಸ್ಪೋಟವಾಗಿ ನೂರಾರು ಜನ ಸತ್ತರಲ್ಲ, ಆಗಿನ ರಾಜಕಾರಣಿಗಳ ಅಧಿಕಾರಿಗಳ ಮಾತುಗಳನ್ನು ಕೇಳಿಸಿಕೊಂಡಿದ್ದವರಿಗೆ ಈ ಕಥೆ ಇನ್ನೂ ಹೆಚ್ಚು ಅರ್ಥವತ್ತಾಗಿ ಕಂಡರೆ ಆಶ್ಚರ್ಯವಿಲ್ಲ.

ಭೂತಕ್ಕೆ ಹೆದರುವ ಅಜ್ಜ

’ಭೂತಕ್ಕೆ ಹೆದರುವ ಅಜ್ಜ’ ಕಥೆಯಲ್ಲಿನ ಪಾಟೀಲನ ಪಾತ್ರ ಪ್ರಾರಂಭದಲ್ಲಿ ಉದಾತ್ತವಾಗಿ ಕಂಡರೂ, ಆತನ ಮಾತು ನಡವಳಿಕೆಗಳು ಸ್ವಲ್ಪ ಮಟ್ಟಿಗೆ ಅಪರಿಚಿತವೆನ್ನಿಸುತ್ತವೆ. ಓದುಗನಲ್ಲಿ ಆತನ ಮಾತುಗಳು ನಂಬಿಕೆ ಹುಟ್ಟಿಸುವುದಿಲ್ಲ. ಅದಕ್ಕೆ ಪೂರಕವಾಗಿ ಆತನ ಹೆಂಡತಿ ಆಡಿದ ಮಾತುಗಳು ಓದುಗನ ಮನಸ್ಸಿನಲ್ಲಿ ನಿಂತುಬಿಡುತ್ತವೆ. ಆಕಾಂಕ್ಷ ನನ್ನ ಮೊಮ್ಮಗಳು, ಎನ್ನುವ ಪಾಟೀಲಜ್ಜ ದೂರದ ಊರಿನಲ್ಲಿ ತನ್ನ ಹೆಂಡತಿ ಮಕ್ಕಳು ಮೊಮ್ಮಕ್ಕಳು ಇರುವುದನ್ನು ಮರೆತವನಂತೆ ವರ್ತಿಸುವುದಕ್ಕೆ ಬಲವಾದ ಕಾರಣಗಳಿಲ್ಲ. ತಾನು ಸಂಪಾದಿಸಿದ ಹಣ ಎಂಬ ಪುರುಷ ಅಹಂಕಾರಕ್ಕೆ ಅನುಗುಣವಾಗಿ ಆತನಲ್ಲಿ ಮೂಡಿದ ಸಣ್ಣ ಅನುಮಾನ ವೈವಾಹಿಕ ಸಂಬಂಧಗಳು ಗಟ್ಟಗೊಳ್ಳುವ ಬದಲು ಹರಿದುಹೋಗುವ ಹಂತ ತಲುಪಿದ್ದು ವಿಷಾದನೀಯ. ಆದರೆ ನಿರೂಪಕನಲ್ಲಿ ಪಾಟೀಲಜ್ಜನಿಗಿದ್ದ ಆಪ್ತತೆ ನಂಬಿಕೆ ಹಾಗೂ ನಿರೂಪಕನಿಗೆ ಎರಡು ಬಾರಿ ಹೊಳೆದ ಸತ್ಯ - ಮೊದಲು ಆಕಾಂಕ್ಷ ನನ್ನ ಮೊಮ್ಮಗಳು ಎಂದಾಗ, ಎರಡನೆಯದು, ಪಾಟೀಲಜ್ಜನ ಹೆಂಡತಿ ಕೆಲವೇ ಮಾತುಗಳಲ್ಲಿ ಬಿಡಿಸಿಟ್ಟ ಸತ್ಯ - ಓದುಗನನು ಆಶಾವಾದಿಯನ್ನಾಗಿಸುತ್ತವೆ, ಕಥೆಯ ಅಂತ್ಯಕ್ಕೆ.

ಪಯಣ

’ಪಯಣ’ ಕಥೆಯಲ್ಲಿ ಮನುಷ್ಯ ಸಂಬಂಧಗಳು, ಸಂಘರ್ಷಗಳು, ನಂಬಿಕೆಗಳು ಮುಖಾಮುಖಿಯಾಗುತ್ತವೆ. ದೂರದ ಅಮೆರಿಕಾದಲ್ಲಿ ಯಶಸ್ವೀ ಉದ್ಯಮಿಯಾಗಿ ನೆಲೆಸಿರುವ ಮಗ ಕಥೆಯ ಉದ್ದಕ್ಕೂ ನೇಪಥ್ಯದಲ್ಲೇ ಉಳಿದು, ಆಗಾಗ ಖಳನಾಯಕನಂತೆ ಗೋಚರಿಸಿದರೂ, ಕಥೆಯ ಕೊನೆಯಲ್ಲಿ ಆತನಾಡುವ ಮಾತು ಓದುಗನ ಕಣ್ಣಂಚನ್ನು ಒದ್ದೆಯಾಗಿಸದೆ ಬಿಡುವುದಿಲ್ಲ. ಮಾನವೀಯತೆಯೆ ಎದ್ದುಬಂದಂತೆ ಕಾಣುವ ಮಂಜುನಾಥನ ಸಾವಿನ ನಂತರ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಬೇರೊಂದು ಮಗ್ಗುಲಿಗೆ ಹೊರಳುವುದು ಕಥೆಗಾರರ ಯಶಸ್ವೀ ತಂತ್ರವಾಗಿದೆ. ಘಟಶ್ರಾದ್ಧ ಕ್ರಿಯೆಯ ಜಿಜ್ಞಾಸೆಯೂ ನಡೆಯುತ್ತದೆ. ಆದರೆ ತಾರ್ಕಿಕ ಅಂತ್ಯ ಕಾಣದೆ ಸುಲಭೋಪಾಯಕ್ಕೆ ಮಣಿದುಬಿಡುತ್ತದೆ. ಈ ಕೊರತೆಯನ್ನು ಕಥೆಯ ಅಂತ್ಯ ಹಾಗೂ ಪಟೇಲರ ಮಗ ಆಡುವ ’... ನಾನಿಲ್ಲದಿದ್ದರೆ ಇನ್ನೊಬ್ಬ, ಬೆಂಕಿ ಕೊಟ್ಟೇ ಕೊಡುತ್ತಾರೆ. . . ಬದುಕುಬೇಕಾದವರ ಬಗ್ಗೆ ಆಲೋಚಿಸಿ’ ಎಂಬ ಮಾತುಗಳು ಘಟಶ್ರಾದ್ಧದ ಅರ್ಥಹೀನತೆಯನ್ನೇ ಎತ್ತಿ ತೋರಿಸಿಬಿಡುತ್ತವೆ.

ಮನೆ ಜಗಲಿಯ ಕೋರ್ಟು

’ಮನೆ ಜಗಲಿಯ ಕೋರ್ಟು’ ಮಾನವೀಯ ಸಂಬಂಧಗಳು, ಸಂಘರ್ಷಗಳನ್ನು ಕೆಲವೇ ನಿಮಿಷದಲ್ಲಿ ಮೂವತ್ತು ವರ್ಷಗಳ ಇತಿಹಾಸದೊಂದಿಗೆ ತೆರೆದಿಡುವ ಭಾವಾವೇಶದಿಂದ ಕೂಡಿದ ಅತ್ಯುತ್ತಮ ಸಣ್ಣಕಥೆ. ಒಂದು ಪದ ಆಚೀಚೆ ಆಗದ ಹಾಗೆ ನಿರುಪಣೆಗೊಂಡಿರುವ ಈ ಕಥೆ ಕಥೆಗಾರರ ಕೌಶಲಕ್ಕೆ ಹಿಡಿದ ಕನ್ನಡಿ. ಸಂಪ್ರದಾಯದ ಚೌಕಟ್ಟಿನಲ್ಲಿಯೇ ಬಾಳಿ ಬದುಕುತ್ತಿರುವ ಕುಟುಂಬಗಳಿಗೆ ಮದುವೆ, ಕನ್ಯದಾನ, ಅಪರಕರ್ಮ ಇವುಗಳು ಅತ್ಯಂತ ಪ್ರಮುಖವಾದವುಗಳು. ಅವುಗಳ ಬಗ್ಗೆ ಹಿಂದೆ ಮುಂದೆ ಯೋಚಿಸದೆ ತೀರಾ ಯಾಂತ್ರಿಕವಾಗಿಯೂ ನಡೆದುಕೊಳ್ಳುವುದು ಉಂಟು. ಮಗ ದೊಡ್ಡ ಕಳ್ಳ ಸುಳ್ಳನಾದರೂ ತಂದೆ ಸತ್ತಾಗ ಅವರ ಅಪರಕರ್ಮ ಮಾಡಲೇಬೇಕು, ದುಃಖ ಪಡಬೇಕು! ಅವಿನೆಗ ದುಃಖವಾಗದಿದ್ದರೂ ಜನರ ಸಮಾಧಾನಕ್ಕಾಗಿ ಆತ ಅಳಬೇಕು! ಏಕೆಂದರೆ ಅದು ಸಂಪ್ರದಾಯ. ಆದರೆ ಈ ಕಥೆಯ ಶೇಷಪ್ಪಯ್ಯ ತನ್ನ ತಮ್ಮನ ಸಾವಿಗೆ ದುಃಖಿಸುವುದರಲ್ಲಿ ಅರ್ಥವಿದೆ. ಆತನ ನಾಲ್ಕು ಹನಿ ಕಣ್ಣೀರಿಗೆ ಸಾಗರದಷ್ಟು ಅರ್ಥಗಳು ಭಾವನೆಗಳು ನಮ್ಮನ್ನು ಆವರಿಸಿಬಿಡುತ್ತವೆ. ಏಕೆಂದರೆ ತಮ್ಮನ ಆಸ್ತಿಯನ್ನು ಜೋಪಾನ ಮಾಡಿ ನಿಜವಾದ ಹಕ್ಕುದಾರರಿಗೆ ತಲುಪಿಸುವ ಸತ್ಪ್ರಯತ್ನದಲ್ಲಿದ್ದ ಶೇಷಪ್ಪಯ್ಯ ನಿಜವಾದ ಅರ್ಥದಲ್ಲಿ ’ಅಣ್ಣ’!

ಬೆತ್ತಲೆ ಹಕ್ಕು

ಪುರುಷ ಅಹಂಕಾರದ ಇನ್ನೊಂದು ಉದಾಹರಣೆ ’ಬೆತ್ತಲೆ ಹಕ್ಕು’ ಕಥೆಯಲ್ಲಿ ವ್ಯಕ್ತವಾಗಿದೆ. ಗಂಡಸಿಗೆ ತಾನು ಎಷ್ಟೊಂದು ಜನ ಹೆಣ್ಣುಗಳ ಜೊತೆಗೆ ಸೇರುವುದು ತಪ್ಪಲ್ಲವೆನಿಸಿದರೂ, ತನ್ನ ಹೆಂಡತಿ ಅಥವಾ ತನಗೆ ಸೇರಿದ ವಸ್ತುಗಳು ಬೇರೆಯವರಿಗೆ ಸಿಗಬಾರದು, ಅದರ ರಕ್ಷಣೆ ನನ್ನ ಹೊಣೆ ಎಂಬ ವಿಚಿತ್ರ ಮನಸ್ಥಿತಿ ತನಗರಿವಿಲ್ಲದೇ ಮೂಡಿಬಿಡುತ್ತದೇನೋ? ಹೆಣ್ಣು ಅಬಲೆ ಎಂಬ ಪೂರ್ವಾಗ್ರಹಪೀಡಿತ ಮನಸ್ಸು ’ಅವಳ ರಕ್ಷಣೆ ನನ್ನದು’ ಎಂದು ಅಧಿಕಾರ ಚಲಾಯಿಸುತ್ತದೆ. ಒಮ್ಮೊಮ್ಮೆ ಈ ಪುರುಷ ಅಹಂಕಾರ ಧಾನಾತ್ಮಕ ಪರಿಣಾಮವನ್ನೂ ಉಂಟುಮಾಡುತ್ತದೆ ಎಂಬುದು ಮಾತ್ರ ಈ ಸೃಷ್ಟಿಯ ವೈಚಿತ್ರ್ಯ ಅಥವಾ ಮಾನವ ನಾಗರೀಕತೆಯ ಸಂಕೀರ್ಣತೆಯ ಒಂದು ಭಾಗ. ಕಥೆಯ ಆರಂಭದಿಂದಲೂ ಚೆಲ್ಲಾಟದ ಹುಡುಗಿಯಾಗಿ (ಹಾಗೆ ನೋಡಿದರೆ ಆ ಪಾತ್ರಕ್ಕೆ ಸರಿಯಾಗಿ) ಕಾಣಿಸಿಕೊಳ್ಳುವ ಭಾವನ ಬೆತ್ತಲಾಗಿ ಕುಳಿತು, ಕಲಾವಿದನ ಕುಂಚದಿಂದ ಬಿತ್ತಿಯಲ್ಲಿ ಕಲೆಯಾಗಿ ಅರಳುವಷ್ಟರಲ್ಲಿ ತಾನೂ ಬೆಂಕಿಯಲ್ಲಿ ಅರಳಿದ ಹೂವಾಗಿ ಬಿಟ್ಟಿರುತ್ತಾಳೆ. ಮೂರು ಗಂಟೆಗಳ ಕಾಲ ಇಬ್ಬರು ಪುರುಷರ ಎದುರಿಗೆ ಬೆತ್ತಲಾಗಿ ಕುಳಿತಿದ್ದರೂ ಅವಳಿಗೆ ಸಿಕ್ಕ ಏಕಾಂತ, ಅವಳ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ತಪಸ್ಸು ಸಾರ್ಥಕವಾಗಬೇಕಾದರೆ ದೇವರು ಪ್ರತ್ಯಕ್ಷವಾಗಲೇ ಬೇಕಿಲ್ಲ. (ಹಾಗೆ ನೋಡಿದರೆ ಬುದ್ಧ-ಮಹಾವೀರರಿಗೆ ಯಾವ ದೇವರೂ ಪ್ರತ್ಯಕ್ಷನಾಗಲಿಲ್ಲ) ಯಾವಾಗಲೂ ಹೆಣ್ಣನ್ನು ಆಳುವ ಮನಸ್ಥಿತಿಯ ಪುರುಷ ಅಹಂಕಾರ, ಅವಳ ಬೆತ್ತಲೆ ಚಿತ್ರದ ಮೇಲೂ ಪಸರಿಸುವುದು ಮಾತ್ರ ಅದರ ಔನ್ನತ್ಯದ ಅತಿರೇಕವೆನ್ನಿಸುತ್ತದೆ. ಇಲ್ಲಿ ರಾಜುವಿನ ಪಾತ್ರ ಅದರ ಪ್ರತೀಕ. ಕೇವಲ ಅವಳನ್ನೊಂದಿಷ್ಟು ಹೊತ್ತು ರೇಗಿಸುವ ಎಂದು ಬಂದ ಆತ ’ಆದಿನದ ಒಳ್ಳೆಯ ಸಂಪಾದನೆಯ’ ಫಲವಾಗಿಯೋ ಅಥವಾ ದೃಢತೆಯಿಲ್ಲದ ಮನಸ್ಥಿತಿಯೋ ಆತ ಕುಸಿಯಲಾರಂಭಿಸುತ್ತಾನೆ. ಅಂತಹವನ ಪಾತ್ರವೂ ಕಲಾವಿದನ ಸಾಮೀಪ್ಯದಿಂದ ವಿಚಿತ್ರವಾದ ಸಂಯಮವನ್ನು ಸಂಪಾದಿಸಿಕೊಂಡುಬಿಡುತ್ತದೆ. ಭಯಂಕರ ವಾಚಾಳಿಯಾದವನೂ ಒಂದು ಅತ್ಯುತ್ತಮ ಕಲಾಕೃತಿಯ ಎದುರಿಗೆ ನಿಂತಾಗ ಒಂದರೆ ಕ್ಷಣ ಮಾತು ಮರೆಯುವಂತೆ! ಮತ್ತೆ ಕಾರಿನಲ್ಲಿ ಹೋಗುವಾಗ ’ಈಗ ನನ್ನ ರೂಮಿಗೆ ಬರುತ್ತೀಯೋ ಅಥವಾ ನಿನ್ನ ರೂಮಿಗೆ ಬಿಡಲೋ’ ಎಂಬ ಮಾತು ಆತನದು ತಾತ್ಕಾಲಿಕ ಸಂಯಮ, ಅದೂ ಕಲಾವಿದನ ಸಾಮಿಪ್ಯದಿಂದಲೇ ಬಲವಂತವಾಗಿ ತಂದುಕೊಂಡಿದ್ದು ಎಂಬಂತಾಗುತ್ತದೆ. ಆದರೆ, ಸಾಕ್ಷಾತ್ಕಾರದ ಹಾದಿ ಮುಂದಿದ್ದ ಭಾವನಾ ಮೇಲ್ನೋಟಕ್ಕೆ ವ್ಯಾವಹಾರಿಕವಾಗಿ ವರ್ತಿಸಿದಂತೆ ಕಂಡರೂ ಸಂಯಮವನ್ನು ಪ್ರಕಟಿಸುತ್ತಾಳೆ. ಅದು ನಂತರವೂ ಮುಂದುವರೆಯುತ್ತದೆ. ಅವಳ ಬಗ್ಗೆ ಅಭಿಮಾನವೆನ್ನಿಸುತ್ತದೆ. ಕಲಾವಿದನ ಬಗ್ಗೆ ಆಕೆ ಹೇಳುವ ಮಾತುಗಳು -ರಾಜುವಿನ ಎದುರಿಗೆ ಅಪ್ರಸ್ತುವೆನ್ನಿಸಿದರೂ- ಮನಮುಟ್ಟುತ್ತವೆ. ಆ ಕ್ಷಣ ಆಕೆಗೆ ಹೆಣ್ಣಾಗಿ ಹುಟ್ಟಿದ್ದಕ್ಕೆ ಅಭಿಮಾನವೆನ್ನಿಸುತ್ತದೆ. ಕಲೆಗೆ ಆ ಶಕ್ತಿಯಿದೆ. ಆದರೆ ನಗ್ನತೆಯನ್ನೇ ಆಧಾರವಾಗಿಟ್ಟುಕೊಂಡು ಸಂಸ್ಕೃತಿಯ ರಕ್ಷಣೆ ಮಾಡುತ್ತೇವೆ ಎಂದು ಹೊರಟವರಿಗೆ ಇಂಥದ್ದೆಲ್ಲ ಅರ್ಥವಾಗುವುದಿಲ್ಲ. ಇಡೀ ಕಥೆಯಲ್ಲಿ ಎಲ್ಲಿಯೂ ಪ್ರಸ್ತಾಪವಾಗದ ಆದರೆ ಸೂಕ್ಷ್ಮ ಓದಿಗೆ ನಿಲುಕುವ ವಿಷಯವೆಂದರೆ ಕಥೆಗಾರರ ಸಂಯಮ. ಚಿತ್ರಕಲಾವಿದನ ಸಂಯಮವನ್ನೇ ಕಥೆಗಾರರೂ ತೋರಿದ್ದಾರೆ. ಇಂತಹ ಕಥೆಗಳಲ್ಲಿ ಕೊಂಚ ಆಚೀಚೆಯಾದರೂ ಅಶ್ಲೀಲತೆಯ ಸೋಂಕು ಬಡಿದುಬಿಡುತ್ತದೆ. ಕಥೆಗಾರರ ಈ ಸಂಯಮ ’ಬೆತ್ತಲೆಯ ಹಕ್ಕು’ ಕಥೆಯನ್ನು ಸಂಕಲನದ ಅತ್ಯುತ್ತಮ ಕಥೆಗಳಲ್ಲಿ ಒಂದನ್ನಾಗಿ ಮಾಡಿದೆ.

ಈ ನನ್ನ ಅನಿಸಿಕೆಗಳು ನನ್ನವು ಮಾತ್ರ. ಇವುಗಳನ್ನು ಓದಿ ನಿಮಗೆ ಅವರ ಕಥೆಗಳನ್ನು ಓದಬೇಕೆನ್ನಿಸಿದರೆ ಸಂತೋಷ.

ಅಂದ ಹಾಗೆ ಪುಸ್ತಕದ ವಿವರಗಳು ಹೀಗಿವೆ.

ಪುಸ್ತಕದ ಹೆಸರು : ಸಾರ್ವಭೌಮ

ಪ್ರಕಾರ : ಸಣ್ಣಕಥೆಗಳು

ಕಥೆಗಾರರು : ಶ್ರೀ ಗೋಪಿನಾಥ ರಾವ್

ಪ್ರಕಾಶಕರು : ಸೂರ್ಯಪ್ರಕಾಶನ, ಮಲ್ಲಾಡಿಹಳ್ಳಿ

ವರ್ಷ : ೨೦೦೯

ಪುಟಗಳು : ೧೪೬

ಬೆಲೆ : ೯೦ ರೂಪಾಯಿಗಳು

ಮುನ್ನುಡಿ : ಮಹಾಬಲಮೂರ್ತಿ ಕೊಡ್ಲಕೆರೆ (ಕಥೆಗಾರರು)

Monday, August 30, 2010

ಅಡುಗೆಯವಳೂ ಆದ ಸರಸ್ವತಿ

ಸುಮಾರು ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಮಂಗರಸಕವಿಯನ್ನು ಅಡುಗೆ ಶಾಶ್ತ್ರಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಮೊದಲ ಸ್ವತಂತ್ರ ಕೃತಿ ಬರೆದವನು. ಅದುವರೆಗೆ ಕನ್ನಡದಲ್ಲಿ ಬೇರೆ ಇಬ್ಬರು ಮಂಗರಸ ಕವಿಗಳು ಆಗಿ ಹೋಗಿದ್ದರಿಂದ ಈ ಪಾಕಶಾಶ್ತ್ರದ ಮಂಗರಸನನ್ನು ಮೂರನೆಯ ಮಂಗರಸ ಎಂದೇ ಗುರುತಿಸಲಾಗುತ್ತದೆ. ಮೂರನೆಯ ಮಂಗರಸಕವಿಯ ’ಜಯನೃಪಕಾವ್ಯ’, ’ನೇಮಿಜಿನೇಶ ಸಂಗತಿ’, ’ಸಮ್ಯಕ್ತ್ವ ಕೌಮುದಿ’ ಮತ್ತು ’ಸೂಪಶಾಸ್ತ್ರ’ ನಾಲ್ಕೂ ಕಾವ್ಯಗಳಲ್ಲಿ ಸರಸ್ವತಿಯ ಸ್ತುತಿಯಿದೆ.

ಪರಬ್ರಹ್ಮಹೃದಯಸರಸಿರುಹೋ

ದರದೊಳಗೊಗೆದಾತನ ಸಿರಿಮೊಗದೊಳು

ಗರುವಿಕೆದಾಳಿ ನೆಱೆದು ಕೈವಲ್ಯಸತಿಗೆ ಸಹಚರಿಯಾಗಿ

ಭರದಿಂ ಭವ್ಯಭುಜಂಗರನವಳೊಳ್

ನೆರಪುವ ಕೋವಿದೆ ನರಸುರವಂದಿತೆ

ತರುಣೀಮಣಿ ಭಾರತಿ ಮನ್ಮತಿಗೀವುದು ಮಾಂಗಲ್ಯವನು

ಯಾರ ಹೃದಯಕಮದಲ್ಲಿ ಜನಿಸಿದಳೋ, ಅಂತಹ ಪರಬ್ರಹ್ಮನ ಸಿರಿಮೊಗದಲ್ಲಿ ಚೆಲುವನ್ನು ತಾಳಿ ಸರಸ್ವತಿಯು ನೆಲಸಿದ್ದಾಳೆ. ಕೈವಲ್ಯಸತಿಗೆ ಸಹಚಾರಿಣಿಯಾಗಿ, ಸಡಗರದಿಂದ ಭವ್ಯಭುಜಂಗರೊಂದಿಗೆ ಸೇರಿಸುವ ನೈಪುಣ್ಯವತಿಯೂ, ನರ ಮತ್ತು ಸುರರಿಂದ ಪೂಜಿಸಲ್ಪಡುವವಳೂ ಆದ ತರುಣೀಮಣಿ ಭಾರತಿ ನೀನು ನಮ್ಮ ಮತಿಗೀವುದು ಮಂಗಳವನು ಎಂಬುದು ಕವಿಯ ಆಶಯ. ಆದರೆ ’ಭುಜಂಗ’ ಎಂಬ ಪದಕ್ಕೆ ವಿಟ, ಜಾರ, ಹಾವು ಮೊದಲಾದ ಅರ್ಥಗಳನ್ನು ಪದಕೋಶದಲ್ಲಿ ಹೇಳಲಾಗಿದೆ. ಆದ್ದರಿಂದ ’ಕೈವಲ್ಯಸತಿಗೆ ಸಹಚರಿಯಾಗಿ ಭರದಿಂ ಭವ್ಯಭುಜಂಗರನವಳೊಳ್’ ಎಂಬ ಮಾತು ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ. ’ಸತಿಯೊಡನೆ ಚೆಲ್ಲಾಟ ವಿಟರಿಗೇನೋ ಸ್ವಾಭಾವಿಕ. ಆದರೆ ಕೈವಲ್ಯ ಸತಿಯೊಡನೆ ಭವ್ಯಭುಜಂಗರು ಚೆಲ್ಲಾಟವಾಡಬಹುದೆ? ಹಾಗಾದರೆ ಅವರು ಭವ್ಯರು ಅಂದರೆ ಜಿನಭಕ್ತರು ಹೇಗೆ? ಕೈವಲ್ಯಸತಿ ಹೇಗೆ? ಮತ್ತು ಇವರನ್ನು ನೆರಪುವುದಕ್ಕೆ ತರುಣೀಮಣಿ ಭಾರತಿ ಕೋವಿದೆಯಾಗಿ ಕೆಲಸ ಮಾಡಬೇಕೆ?’ ಎಂಬ ಪ್ರಶ್ನೆಗಳನ್ನು ರಂ.ಶ್ರೀ.ಮುಗಳಿಯವರು ಎತ್ತಿದ್ದಾರೆ. ಭುಜಂಗ ಪದಕ್ಕೆ ಪತಿ, ಒಡೆಯ ಎಂಬ ಅರ್ಥಗಳು ಇರುವುದನ್ನೂ ನಾವು ಗಮನಿಸಬೇಕಾಗಿದೆ. ಇಲ್ಲಿ ಬರುವವರು ಕೇವಲ ಭುಜಂಗರಲ್ಲ; ಭವ್ಯ ಭುಜಂಗರು. ಅಂದರೆ ಜಿನಭಕ್ತರಾದ ಪತಿಗಳು, ಒಡೆಯರು ಎಂದರ್ಥ. ಆದರೂ ’ಭವ್ಯರೆಂಬ ಪತಿಗಳು’ ಎಂಬ ಅರ್ಥ ಬರುವುದರಿಂದ, ’ಒಬ್ಬ ಸತಿಗೆ ಬಹುಪತಿಗಳು ಎಂಬ ವಿಪರೀತಾರ್ಥವಾಗುತ್ತದೆ’ ಎಂಬ ಮುಗಳಿಯವರ ಪ್ರಶ್ನೆ ಹಾಗೇ ಉಳಿಯುತ್ತದೆ. ನಾವು ಅದನ್ನು ಬೇರೊಂದು ರೀತಿಯಲ್ಲಿ ಪರಿಶೀಲಿಸಬಹುದಾಗಿದೆ. ನಾಗಚಂದ್ರನ ’ಕೈವಲ್ಯಬೋಧರಮಾ ಮೌಕ್ತಿಕಹಾರಯಷ್ಟಿ’, ಪಾರ್ಶ್ವಕವಿಯ ’ಅತನುಜಿತಜಿನವದನದಿಂ ನಿರ್ವೃತಿಪಥವ ತೋರಲ್ಕೆತಾಸರಸತಿಯೆನಿಸಿ ಪೊರಮಟ್ಟು ನಿರ್ಮಳರೂಪನಾಂತೀಗ’ ಮತ್ತು ಬಾಹುಬಲಿ ಪಂಡಿತನ ’ಸರಸ್ವತೀ ಕಮಳಿನಿ ತೋರ್ಕೆ ಮುಕ್ತಿಕಮಳಾಮುಖಮಂ ನಮಗೊಲ್ದು ಲೀಲೆಯಿಂ’ ಎಂಬ ಪರಿಕಲ್ಪನೆಗಳನ್ನು ಗಮನಿಸಿದಾಗ, ಸರಸ್ವತಿಯನ್ನು ಮುಕ್ತಿಲಕ್ಷ್ಮಿಗಾಗಿ ಪ್ರಾರ್ಥಿಸುವುದು ಒಂದು ಸಂಪ್ರದಾಯವಾಗಿಯೇ ಬಂದಿರುವುದನ್ನು ಗಮನಿಸಬಹುದು. ಮುಕ್ತಿಸಂಪಾದನೆಗೆ ಸರಸ್ವತಿಯು ನೆರವಾಗುತ್ತಾಳೆ ಎಂಬುದು ಆಶಯ. ಆದ್ದರಿಂದ ಪ್ರಸ್ತುತ ಪದ್ಯದ ವಾಚ್ಯಾರ್ಥವನ್ನು ಮಾತ್ರ ಗಮನಿಸದೆ, ಜಿನಭಕ್ತ(ಭವ್ಯ)ರಾದ ಪತಿಗಳಿಗೆ, ಒಡೆಯರಿಗೆ (ಭುಜಂಗರಿಗೆ) ಮುಕ್ತಿಪದವಿಯನ್ನು ಸೇರುವುದಕ್ಕೆ ನೆರವಾಗುವವಳು ಸರಸ್ವತಿ ಎಂದು ಅರ್ಥೈಸುವುದೇ ಸೂಕ್ತ. ಇವರು ಕೇವಲ ಪತಿಗಳು ಅಥವಾ ಒಡೆಯರು ಮಾತ್ರ ಆಗಿರದೆ ಜಿನಭಕ್ತ(ಭವ್ಯ)ರಾದವರು ಎಂಬುದನ್ನು, ಜಿನಭಕ್ತರಿಗೆ ಮೋಕ್ಷಪದವಿ ಸಿಗುತ್ತದೆ ಎಂಬ ಕಲ್ಪನೆಯನ್ನು ಗಮನಿಸಿ, ಪ್ರಸ್ತುತ ಪದ್ಯದಲ್ಲಿ ಮೇಲ್ನೋಟಕ್ಕೆ ಕಾಣುವ ವಿಪರೀತಾರ್ಥನ್ನು ತೊಡೆದು ಹಾಕಬಹುದಾಗಿದೆ. ಮಂಗರಸ ತನ್ನ ’ನೇಮಿಜಿನೇಶನ ಸಂಗತಿ’ಯಲ್ಲಿ ಸರಸ್ವತಿಯನ್ನು ’ನಿರ್ಮಲನಿಶ್ರೇಯೋಮಾರ್ಗ ನಿಶ್ರೇಣಿ’ ಎಂದು ಕರೆದಿದ್ದಾನೆ.

ವಾಣಿ ವೃಜಿನ ಘನತರಕಾಂತಾರ ಕೃ

ಪಾಣಿ ಸಂಸಾರವಾರಿಧಿಗೆ

ದ್ರೋಣಿ ನಿರ್ಮಮಲನಿಶ್ರೇಯೋಮಾರ್ಗ ನಿ

ಶ್ರೇಣಿಗೆ ನಾನೆರಗುವೆನು

ಕಡಿದಾದ ಕಾಡಿನಂತಿರುವ ಕ್ಲೇಶಗಳಿಗೆ ಕಠಾರಿಯಂತೆ ಇರುವವಳು, ಸಂಸಾರವೆಂಬ ಸಮುದ್ರಕ್ಕೆ ದೋಣಿಯಂತೆ ಇರುವವಳು, ನಿರ್ಮಲವಾದ ಯಶಸ್ಸ(ಮುಕ್ತಿಪದವಿಯ)ನ್ನು ಗಳಿಸಲು ಇರುವ ಮಾರ್ಗಕ್ಕೆ ಏಣಿಯಂತಿರುವವಳು ವಾಗ್ದೇವಿ. ಅವಳಿಗೆ ನಾನು ನಮಸ್ಕರಿಸುತ್ತೇನೆ. ಇಡೀ ಪದ್ಯ ಅಗ್ಗಳನ ’ಚಂದ್ರಪ್ರಭಪುರಾಣಂ’ ಕಾವ್ಯದ ’ದುರಿತವ್ರಾತಲತಾಕೃಪಾಣಿ ವಿಸರದ್ದುರ್ಬೋಧರೋದಸ್ವಿನೀ ತರಣದ್ರೋಣಿ ಸಮುನ್ನತಾಕ್ಷಯಪದ ಪ್ರಾಸಾದ ನಿಶ್ರೇಣಿ’ ಎಂಬ ಪದ್ಯದಿಂದ ಪ್ರಭಾವಿತವಾಗಿದೆ. ’ಸಮ್ಯಕ್ತ್ವ ಕೌಮುದಿ’ಯಲ್ಲಿ ಬಂದಿರುವ ’ವಾಣಿವೀಣಾಪಾಣಿ... ಜಿನಮುಖಜನಿತವಾಣಿ ಶಾಸ್ತ್ರಕ್ಷೆಣಿ ಮಾಣದೆನ್ನೆದೆಯಲಿ ನೆಲಸಿ ಸನ್ಮತಿಯೀವುದು’ ಎಂಬ ಪದ್ಯದ ಮೇಲೂ ’ಚಂದ್ರಪ್ರಭಪುರಾಣಂ’ ಕಾವ್ಯದ ’ದುರಿತವ್ರಾತಲತಾಕೃಪಾಣಿ....’ ಪದ್ಯದ ಪ್ರಭಾವವಿದೆ. ಜಯನೃಪಕಾವ್ಯದ ’ಮುಕ್ತಿಪದವಿಯನ್ನು ಸೇರುವುದಕ್ಕೆ ನೆರವಾಗುವವಳು ಸರಸ್ವತಿ’ ಎಂಬುದಕ್ಕೆ ಪೂರಕವಾಗಿ ’ನಿರ್ಮಲನಿಶ್ರೇಯೋಮಾರ್ಗ ನಿಶ್ರೇಣಿ ಅಂದರೆ ನಿರ‍್ಮಲವಾದ ಯಶಸ್ಸ(ಮುಕ್ತಿಪದವಿಯ)ನ್ನು ಗಳಿಸಲು ಇರುವ ಮಾರ್ಗಕ್ಕೆ ಏಣಿಯಂತಿರುವವಳು ವಾಗ್ದೇವಿ’ ಎಂಬ ಮಾತು ಬಂದಿದೆ.

ಅಡಿಗೆಯನ್ನು ಕುರಿತ ಕನ್ನಡದ ಮೊದಲ ಸ್ವತಂತ್ರ ಕೃತಿ ’ಸೂಪಶಾಸ್ತ್ರ’ವನ್ನು ಮಂಗರಸನು ರಚಿಸಿದ್ದಾನೆ. ಕೃತಿಯ ಎರಡನೇ ಪದ್ಯದಲ್ಲಿಯೇ ಸೂಪಶಾಸ್ತ್ರಕ್ಕನುಗುಣವಾಗಿ ಸರಸ್ವತಿಯನ್ನು ನೆನೆಯುತ್ತಾನೆ.

ನವ ಕವೀಶ್ವರ ವಿಕಸಿತಾನನ ಘಟಂಗಳೊಳು

ನವರಸವನಿಟ್ಟು ಪರಿಣತೆ ಪ್ರೇಕ್ಷೆ ಮೊದಲಾದ

ವಿವಿಧ ಪರಿಕರಮನೊಡಗಲೆಸಿ ಬಳಿಕವರ ನಾಲಗೆಯೆಂಬ ದರ್ವಿವಿಡಿದು

ತವೆ ಪಾಕಮಂ ಮಾಡಿ ರಸಿಕಜನಸಂತತಿಯ

ಕಿವಿಗೆ ತೀವುವ ಭಾರತೀದೇವಿಯಂ ನೆನೆದು

ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು

ಹೊಸ ಕವೀಶ್ವರರ ನಗುವಿನಿಂದ ಬಿರಿದ ಮುಖಗಳೆಂಬ ಪಾತ್ರೆಗಳಲ್ಲಿ ನವರಸಗಳನ್ನು ಹಾಕಿ, ಚಾತುರ್ಯ, ದರ್ಶನ (ಶೋಭೆ) ಮೊದಲಾದ (ಕಾವ್ಯ) ಪರಿಕರಗಳೊಂದಿಗೆ ಕಲೆಸಿ, ಬಳಿಕ ಅವರ (ಹೊಸ ಕವೀಶ್ವರರ) ನಾಲಗೆಯೆಂಬ ಸೌಟಿನಿಂದ ತಿರುಗಿಸುತ್ತಾ, ಒಳ್ಳೆಯ ಅಡುಗೆಯನ್ನು (ಕಾವ್ಯವನ್ನು) ಮಾಡಿ (ಹೇಳಿಸಿ), ರಸಿಕ ಜನರ ಬಾಯಿಗೆ (ಕಿವಿಗೆ) ತುಂಬುವ ಭಾರತಿ(ಸರಸ್ವತಿ)ಯನ್ನು ಸ್ತುತಿಸಿ, ರುಚಿಯಿಂದ, ಷಡ್ರಸಗಳಿಂದ ಕೂಡಿದ ಪಾಕ ವಿಶೇಷಗಳನ್ನು ತಿಳಿದ ಮಟ್ಟಿಗೆ ಹೇಳುತ್ತೇನೆ ಎಂಬುದು ಮಂಗರಸನ ನಿವೇದನೆ. ಸರಸ್ವತಿಯನ್ನು (ಕಾವ್ಯವೆಂಬ) ಪಾಕಶಾಸ್ತ್ರಪ್ರವೀಣೆಯಾಗಿಸಿರುವುದು ಕವಿಯ ಚಮತ್ಕಾರವನ್ನು ತೋರಿಸುತ್ತದೆ. ಜೊತೆಗೆ ಸರಸ್ವತಿಗೆ ಹೊಸತೆರನಾದ ಆದರೆ ವಿಶೇಷವಾದ ಪಾತ್ರವನ್ನೂ ಕಲ್ಪಿಸುತ್ತದೆ.

Saturday, August 21, 2010

ಇವರು ತಪ್ಪಿಸಿಕೊಂಡವರಂತೆ!

ನೆನ್ನೆ ಸಂಜೆ ನಾಲ್ಕರ ಸಮಯದಲ್ಲಿ ಯಾವುದೋ ಕೆಲಸದ ನಿಮಿತ್ತವಾಘಿ ಸ್ನೇಹಿತರೊಂದಿಗೆ, ಮಾಗಡಿ ರಸ್ತೆಯಿಂದ ಯಶವಂತಪುರದ ಕಡೆಗೆ ಆಟೋದಲ್ಲಿ ಹೋಗುತ್ತಿದ್ದೆ. ದಾರಿಯಲ್ಲಿ ಅಲ್ಲಲ್ಲಿ ಕಾಖಿ ಚೆಡ್ಡಿ ಅಂಗಿ ತೊಟ್ಟ ಐದಾರು ಮಂದಿ ದಾರಿಯಲ್ಲಿ ತೂಗಾಡಿಕೊಂಡು ಹೋಗುತ್ತಿದ್ದರು. ಒಂದೆರಡು ಕಡೆ ಒಂದಿಬ್ಬರು ತಿಪ್ಪೆ ಗುಂಡಿ ಕೆದಕುತ್ತಿದ್ದರು. ಅವರೆಲ್ಲಾ ಭಿಕ್ಷುಕರ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಬಂದವರು ಎಂಬ ನಮ್ಮ ಮಾತಿಗೆ ಆಟೋ ಡ್ರೈವರ್ ಹೀಗೆ ಹೇಳಿದ. ‘ಸರ್, ಲೋಕದ ಕಣ್ಣಿಗೆ ಅವರು ಅಲ್ಲಿಂದ ತಪ್ಪಿಸಿಕೊಂಡು ಬಂದವರು. ಆದರೆ ಅವರನ್ನು ಅಲ್ಲಿಯವರೇ ಬಟ್ಟು ಕಳುಹಿಸುತ್ತಿದ್ದಾರೆ, ಅಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಸಾಯುವ ಬದಲು ಬೇರೆಡೆ ಸಾಯಲಿ ಎಂದು ಸರ್ಕಾರವೇ ಅವರನ್ನು ಅನಧಿಕೃತವಾಗಿ ಬಿಡುಗಡೆ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದೆ’ ಎಂದ. ನಂತರ ಮಾತನಾಡುತ್ತಾ ಅತ ನೀಡಿದ ಕೆಲವು ಮಾಹಿತಿಗಳು ಗಾಬರಿ ಹುಟ್ಟಿಸುವಂತಿದ್ದವು.


ಸರ್ ಅದೊಂದು ನರಕ. ಬೆಳಿಗ್ಗೆಯಿಂದ ಅಲ್ಲಿ ಭಿಕ್ಷುಕರು ಹೊರಬರುತ್ತಿರುವುದು ಸಾಮಾನ್ಯವಾಗಿದೆ. ಮುಖ್ಯ ಬಾಗಿಲಿನಲ್ಲಿಯೇ ಅವರು ಬರುತ್ತಿದ್ದಾರೆ. ಅವರೇನು ತಪ್ಪಿಸಿಕೊಂಡು ಹೋಗುವವರು ಹೀಗೆ ರಾಜಾರೋಷವಾಗಿ ಮುಖ್ಯ ಬಾಗಿಲಿನಲ್ಲಿ ಹೋಗುತ್ತಯಾರೆಯೇ? ನಂತರ ಅಲ್ಲಿ ಹೊರಗೆ ಬಂದ ತಕ್ಷಣ ಭಿಕ್ಷೆ ಕೇಳುವುದಕ್ಕೆ ಶುರುವಿಟ್ಟುಕೊಂಡರು. ಅಲ್ಲಿನ ನಮ್ಮ ಆಟೋಸಂಘದವರು, ಸ್ವಲ್ಪ ಹಣ ಸೇರಿಸಿ, ಅಕ್ಕಪಕ್ಕದ ಅಂಗಡಿಗಳವರ ಮನವೊಲಿಸಿ, ಎಲ್ಲರಿಗೂ ಬ್ರೆಡ್ಡು ಬಿಸ್ಕೆಟ್ ಕೊಡಿಸಿದೆವು. ನಂತರ ಕೆಲವರು ಅಲ್ಲಿಯೇ ಮಲಗು ಶುರುಮಾಡಿದರೆ, ಇನ್ನು ಕೆಲವರು ಮೆಜೆಸ್ಟಿಕ್ ಕಡೆ ಹೊರಟರು. ಯಾವುದೇ ಸಿಟಿ ಬಸ್ಸಿನವನೂ ದುಡ್ಡು ಕೊಡುತ್ತೇನೆಂದರೂ ಅವರನ್ನು ಹತ್ತಿಸಿಕೊಳ್ಳಲಿಲ್ಲ. ಆಗ ನಾವು ಒಂದಷ್ಟು ಜನ ಸ್ನೇಹಿತರು, ನಮ್ಮ ನಮ್ಮ ಾಟೋಗಳಲ್ಲಿ ನಾಲ್ಕೈದು ಜನರನ್ನು ಕೂರಿಸಿಕೊಂಡು ಮೆಜೆಸ್ಟಿಕ್ ತಲುಪಿಸಿದೆವು. ಹೀಗೆ ನಾನು ನಾಲ್ಕು ಟ್ರಿಪ್ ಅವರನ್ನು ಉಚಿತವಾಗಿ ಸಾಗಿಸಿ, ಇನ್ನಾದರೂ ಮನೆಗೆ ಹೋಗಬೇಕೆಂದು ಹೋಗುತ್ತಿದ್ದೆ. ಇಂದು ಬೆಳಿಗ್ಗೆಯಿಂದ ನನಗೆ ಐವತ್ತು ರೂಪಾಯಿಕೂಡಾ ಆಗಿರಲಿಲ್ಲ. ಮನೆಯಲ್ಲಿ ಹಬ್ಬ. ಅದಕ್ಕೆ ನೀವು ಯಶವಂತಪುರಕ್ಕೆ ಕರೆದಾಗ ತಡವಾಗಿದ್ದರೂ ನಾನು ಬರಲೊಪ್ಪಿದೆ. ಆದರೂ ಹಬ್ಬದ ದಿನ ನಾವು ಇಷ್ಟು ನಮ್ಮ ಕೈಲಾದ ಸೇವೆಯನ್ನು ಮಾಡಿದೆವೆಂಬ ತೃಪ್ತಿ ನಮಗಿದೆ ಎಂದ.

ಅಷ್ಟರಲ್ಲಿ ಯಶವಂತಪುರದ ಮಾರ್ಗದಲ್ಲಿ ಇನ್ನೂ ಹತ್ತಾರು ಜನ ಭಿಕ್ಷುಕರು ನಡೆದುಕೊಂಡು ಹೋಗುವುದನ್ನು ನಮಗೆ ಆತ ತೋರಿಸಿದ. ನಂತರ ಆತ ಹೇಳಿದ (ಕೆಲವು ಭಿಕ್ಷುಕರು ಅವನಿಗೆ ನೀಡಿದ್ದ ಮಾಹಿತಿಗಳು) ಕೆಲವು ವಿಚಾರಗಳು ಹೀಗಿವೆ.

ಅಲ್ಲಿಯೇ ಆಡಳಿತದವರೇ ಕೆಲವು ಆಯ್ದ ಭಿಕ್ಷುಕರನ್ನು ಬೆಳಿಗ್ಗೆ ಹೊರಕ್ಕೆ ಬಿಡುವುದು. ಸಂಜೆ ಅವರನ್ನು ಎತ್ತಿಕೊಂಡು ಬರುವುದು. ಬೆಳಿಗ್ಗೆಯಿಂದ ಅವರು ಭಿಕ್ಷೆ ಎತ್ತಿ ಸಂಪಾದಿಸಿದ್ದ ಹಣವನ್ನು ಅಲ್ಲಿನ ಜವಾನರು ಆಯಾಗಳು, ಸೆಕ್ಯೂರಿಟಿ ಗಾರ್ಡ್ಸ ಅಧಿಕಾರಿಗಳು ಕಿತ್ತುಕೊಂಡು ಹಂಚಿಕೊಳ್ಳುತ್ತಿದ್ದರಂತೆ.

ಅಲ್ಲಿ ಅಶಕ್ತ ಭಿಕ್ಷುಕರನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಲಾಗಿದೆಯಂತೆ. ಆದರೆ ಅವರೆಷ್ಟು ಕ್ರೂರಿಗಳೆಂದರೆ, ಹತ್ತು ಇಪ್ಪತ್ತು ಜನರನ್ನು ಒಟ್ಟಿಗೆ ಕೂರಿಸಿ ಬಕೆಟ್ಟಿನಿಂದ ನೀರನ್ನು ಎರಚಿ, ಸ್ನಾನವಾಯಿತು ಎಂದು ಕಳುಹಿಸುತ್ತಿದ್ದರಂತೆ. ಸಾವಿರಾರು ಟವೆಲ್ ಪಂಚೆ ಮುಂತಾದವುಗಳನ್ನು ಖರೀದಿಸುತ್ತಿದ್ದರೂ ಒಂದನ್ನೂ ಭಿಕ್ಷುಕರ ಕೈಗೆ ಕೊಡುತ್ತಿರಲಿಲ್ಲವಂತೆ. ಸ್ನಾ ಮಾಡಿಸುವಾಗ ಮಾಡಿಸಿದ ನಂತರ ಬಟ್ಟೆ ಬಸಲಾಯಿಸುವ ಕೆಲಸವೇ ಇಲ್ಲ. ಬೆಟ್ಟೆ ಹಾಕಿಕೊಂಡೇ ಸ್ನಾನ, ಆ ಬಟ್ಟೆಗಳು ಒಣಗುವುದು ಮೈಮೇಲೆಯೇ ಅಂತೆ!.

ಯಾರಾದರೂ ಹೊರಗಿನವರು ಬಂದರೆ, ಅವರೆದುರು ಏನೂ ಮಾತನಾಡದಂತೆ ಹೆದರಿಸುತ್ತಿದ್ದರಂತೆ. ಹೊಡೆಯವುದು ಬಡಿಯುವುದು ಸಾಮಾನ್ಯ ಸಂಗತಿ. ಒಂದು ರೂಮಿನಲ್ಲಿ ಇಪ್ಪತ್ತು ಮೂವತ್ತು ಜನರನ್ನು ಕೂಡಿ ಹಾಕಿ ರಾಥ್ರಿಯೆಲ್ಲಾ ಅಲ್ಲಿಯೇ ಮಲಗಿಸುತ್ತತಿದ್ದರಂತೆ. ಕುಳಿತಲ್ಲಿಯೇ ಒಂದ ಎರಡ ಎಲ್ಲಾ. ಸ್ವಲ್ಪ ಓದು ಬರಹ ಬರುವ, ಪ್ರತಿಭಟನಾ (ಪುನರ್ವಸತಿ ಕೇಂದ್ರದವರ ಮೇಲೆ ರೇಗುವ, ದೈಹಿಕ ಹಲ್ಲೆಗೆ ಮುಂದಾಗುವ) ಮನೋಭಾವದ ಭಿಕ್ಷುಕರೂ ಅಲ್ಲಿದ್ದರಂತೆ. ಅವರನ್ನು ಕಂಡರಂತೂ ಆಯಾಗಳಿಗೂ ಅಧಿಕಾರಿಗಳಿಗೂ ಕೆಂಡಾಮಂಡಲ ಕೋಪ. ಅವರನ್ನಂತೂ ನಾಯಿಗಳಿಗಿಂತ ಕಡೆಯಾಗಿ ನೋಡುತ್ತಿದ್ದರಂತೆ.

ಕೊನೆಗೆ ಆಟೋಡ್ರೈವರ್ ಹೇಳಿದ್ದು.

ಸರ್ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಬಹುದಿತ್ತು. ಅವರನ್ನು ಉದ್ಧಾರ ಮಾಡುವುದಾಗಿ ತಂದು ಇಲ್ಲಿ ಕೂಡಿ ಹಾಕುವುದು ಯಾವ ನ್ಯಾಯ. ಈಗ ಅಲ್ಲಿ ಸಾಯುತ್ತಿರುವವ ಸಂಕ್ಯೆ ಹೆಚ್ಚಾಗಿ ಟೀ.ವಿ.ಪೇಪರಿನಲ್ಲಿ ಸುದ್ದಿ ಬರಲು ಶುರುವಾದಾಗ, ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ನಾಟಕ ಆಡುವುದೇಕೆ? ಈಗ ಇವರೆಲ್ಲ ಮತ್ತೆ ಜನಗಳ ಮಧ್ಯೆ ಬಂದು ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲವೇ? ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ. ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ ಎಂದ.

ಆಗ ನನ್ನ ಜೊತೆ ಬರುತ್ತಿದ್ದ ನನ್ನ ಸ್ನೇಹಿತರು, ಇನ್ನ ರಸ್ತೆಯಲ್ಲಿ ಅನಾಥ ಹೆಣಗಳು ಸಂಖ್ಯೆ ಹೆಚ್ಚಾಗುತ್ತದೆ. ಸರ್ಕಾರಕ್ಕೆ, ಅವರು ಅಲ್ಲಿ ಸಾಯುವ ಬದಲು ಹೊರಗೆಲ್ಲಾದರೂ ಸತ್ತರೆ ಅಷ್ಟು ಸುದ್ದಿಯಾಗುವುದಿಲ್ಲ ಎಂದೂ ಗೊತ್ತಿದೆ. ಅದಕ್ಕೆ ಈಗ ತಪ್ಪಿಸಿಕೊಂಡು ಹೋದರು ಎಂಬ ಸುದ್ದಿ ಹಬ್ಬಿಸಿ ಬಿಟ್ಟು ಓಡಿಸುತ್ತಿದ್ದಾರೆ ಎಂದರು.

‘ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ’ ಎಂದ ಆಟೋ ಡ್ರೈವರನ ಮಾತುಗಳಲ್ಲಿರುವ ಸತ್ಯವನ್ನು ಕುರಿತು ಯೋಚಿಸುತ್ತಿದ್ದೆ. ನಮ್ಮಂತೆ ಅನ್ನ ತಿನ್ನುವ ಕಕ್ಕ ಮಾಡುವ ಓಡಾಡುವ ಮಾತನಾಡುವ ಸಂದರ್ಭ ಬಂದರೆ ಸಾಕ್ಷಿ ನುಡಿಯುವ ಶಕ್ತಿಯಿರುವ ಸಹವಾಸಿ ಮನುಷ್ಯರ ವಿಚಾರದಲ್ಲಿಯೇ ಸರ್ಕಾರಿ ವ್ಯವಸ್ಥೆ ಈ ರೀತಿಯಾಗಿ ನಡೆದುಕೊಂಡಿದೆ. ಇನ್ನು ಮುದಿ ಗೋವುಗಳನ್ನೂ ನಾನೇ ಸಾಕುತ್ತೇನೆ ಎಂದು ಹೊರಟಿರುವ ಈ ವ್ಯವಸ್ಥೆ, ಆ ಮೂಕ ಪ್ರಾಣಿಗಳನ್ನು ಇನ್ನೆಷ್ಟು ಚೆನ್ನಾಗಿ ನೋಡಿಕೊಳ್ಳಬಹುದು. ಈಗ ಸಾವಿರಾರು ಸಂಖ್ಯೆಯ (ಯೂನಿಫಾರ್ಮ್ ಧರಿಸಿರುವ) ಭಿಕ್ಷುಕರು ರಸ್ತೆಯಲ್ಲಿ ಕುಂಟುತ್ತಾ, ಕಾಲೆಳೆಯುತ್ತಾ ಹೋಗುವುದನ್ನು ನೋಡಬೇಕಾಗಿರುವಂತೆ, ಮುಂದೆ ಇನ್ನೇನನ್ನು ನೋಡಬೇಕೋ ತಿಳಿಯುತ್ತಿಲ್ಲ.

ಕೊಸರು: ಬೆಳಿಗ್ಗೆ ವಾರ್ತೆಯಲ್ಲಿ, ಅಲ್ಲಿನ ಅಧಿಕಾರಿಯೊಬ್ಬರನ್ನು ಕೆಲಸದಿಂದ ವಜಾ ಮಾಡಿದ, ಹಾಗೂ ಸಚಿವರೊಬ್ಬರನ್ನು ಸಂಬಂಧಪಟ್ಟ ಖಾತೆಯಿಂದ ಕಿತ್ತುಕೊಂಡು, ಬೇರೆ ಖಾತೆಗೆ ನಿಯುಕ್ತಗೊಳಿಸಿದ್ದನ್ನು ಪ್ರಸಾರ ಮಾಡುತ್ತಿದ್ದರು.

ಹಾಗೆ ವಜಾ ಮಾಡುವುದರಿಂದ, ಖಾತೆ ಬದಲಾಯಿಸುವುದರಿಂದ ಆಗಿರುವ ತಪ್ಪು ಸರಿಹೋಗುತ್ತದೆಯೇ? ಮುಖ್ಯಮಂತ್ರಿಗಳೇ ಯೋಚಿಸಬೇಕು

Monday, August 16, 2010

೨೪೦ ನಿಮಿಷಗಳಲ್ಲಿ ೬೮ ಅಭ್ಯರ್ಥಿಗಳಿಗೆ ಸಂದರ್ಶನ; ತುಮಕೂರು ವಿವಿ ವಿಶ್ವದಾಖಲೆ!!!

ಮೊನ್ನೆ ಶುಕ್ರವಾರ ತುಮಕೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಸಿಸ್ಟೆಂಟ್ ಪ್ರೊಫೆಸರ್ (ಲೆಕ್ಚರರ್ ಎಂಬುದರ ಹೊಸ ಅವತಾರ!) ಹುದ್ದೆಗೆ ಸಂದರ್ಶನ ನಡೆಯಿತು. ಹಿಂದೊಮ್ಮೆ ಇದೇ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದು ಅದು ಕೋರ್ಟ್ ಮೆಟ್ಟಿಲು ಹತ್ತಿತ್ತು. ಕೋರ್ಟ್ ಎಲ್ಲವನ್ನೂ ಹೊಸದಾಗಿ ನಡೆಸುವಂತೆ ತೀರ್ಪು ಇತ್ತುದರಿಂದ ನನಗೂ ಸಂದರ್ಶನದ ಅವಕಾಶ ಸಿಕ್ಕಿತ್ತು. ಎಸ್.ಎಂ.ಎಸ್., ಈ ಮೇಲ್ ಹಾಗೂ ಅಂಚೆ ಮುಖಾಂತರವೂ ಸಂದರ್ಶನದ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದೆಲ್ಲವೂ ಕೋರ್ಟ್ ತೀರ್ಪಿನ ಪ್ರಭಾವವಿದ್ದಿರಬೇಕು.

ಇದೇ ಮೊದಲ ಬಾರಿಗೆ ಕನ್ನಡ ಉಪನ್ಯಾಸಕ ಹುದ್ದೆಯೊಂದಕ್ಕೆ, ವಿವಿಯ ಮಟ್ಟದಲ್ಲಿ ಸಂದರ್ಶನಕ್ಕೆ ಹೊರಟಿದ್ದ ನಾನು ನನ್ನ ಎಲ್ಲಾ ದಾಖಲೆಗಳನ್ನು, ಪ್ರಕಟಣೆಗಳನ್ನು ಹೊತ್ತು, ನನ್ನಂತೆಯೇ ಸಂದರ್ಶನಕ್ಕೆ ಹೊರಟಿದ್ದ ನನ್ನ ಮಿತ್ರರೊಬ್ಬರ ಜೊತೆಗೆ, ಬೆಳಿಗ್ಗೆ ೭.೪೦ ಗಂಟೆಗೆ ತುಮಕೂರು ತಲುಪಿದ್ದೆ. ಅಂದ ಹಾಗೆ ಸಂದರ್ಶನದ ಸಮಯ ನಿಗದಿಯಾಗಿದ್ದು ಬೆಳಿಗ್ಗೆ ೭.೩೦ ಗಂಟೆಗೆ! ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಸುಮಾರು ಎಪ್ಪತ್ತು ಎಂಬತ್ತು ಜನ ಅಲ್ಲಿ ಜಮಾಯಿಸಿದ್ದರು. ನಾಲ್ಕೈದು ಪರಿಚಿತ ಮುಖಗಳೂ ಇದ್ದವು. ನನ್ನ ಸಹದ್ಯೋಗಿಯೊಬ್ಬರೂ ಸಂದರ್ಶನಕ್ಕೆ ಬಂದಿದ್ದರು. ಒಂದೆರಡು ದಿನಗಳ ಮುಂಚೆಯಷ್ಟೇ ಸಂದರ್ಶನದ ಮಾಹಿತಿ ಸಿಕ್ಕಿದ್ದರಿಂದ ನಮಗೆ ಪರಸ್ಪರ ಗೊತ್ತೇ ಆಗಿರಲಿಲ್ಲ.

ಗದ್ದಲವೋ ಗದ್ದಲ. ಒಂದು ಮೂಲೆಯಲ್ಲಿ ಅಭ್ಯರ್ಥಿಗಳ ಕಾಗದ ಪತ್ರ ಅಂಕಪಟ್ಟಿ ಪುಸ್ತಕ ಲೇಖನ ಮೊದಲಾದವುಗಳನ್ನು ಪರಿಶೀಲಿಸಲಾಗುತ್ತಿತ್ತು. ಒಬ್ಬೊಬ್ಬರದಕ್ಕೆ ಕನಿಷ್ಠ ೧೦ ನಿಮಿಷಗಳಾದರೂ ಬೇಕಾಗುತ್ತಿತ್ತು. ಅಷ್ಟರಲ್ಲೇ ನಾಲ್ಕೈದು ಜನರ ಸಂದರ್ಶನವೂ ಮುಗಿದು ಹೋಗಿತ್ತು!

ಸಂದರ್ಶನ ನಡೆಸುವವರ ವೇಗಕ್ಕೆ ಅನುಗುಣವಾಗಿ ದಾಖಲೆಗಳ ಪರಿಶೀಲನೆ ನಡೆಯುತ್ತಿರಲಿಲ್ಲ. ಅದನ್ನು ತಿಳಿದ ವಿ.ಸಿ.ಯವರು ಸ್ವತಃ ಸಂದರ್ಶನದ ಕೊಠಡಿಯಿಂದ ಬಂದು, ಇನ್ನಿಬ್ಬರನ್ನು ಆ ಕೆಲಸಕ್ಕೆ ನೇಮಿಸಿ ಬೇಗ ಬೇಗ ಪರಿಶೀಲನೆ ನಡೆಸುವಂತೆ ಆಜ್ಞೆಯಿತ್ತು ಮತ್ತೆ ಒಳ ಹೋದರು. ಕೇವಲ ಎರಡು ನಿಮಿಷಗಳಲ್ಲಿ ಒಬ್ಬ ಅಭ್ಯರ್ಥಿಯ ಸಂದರ್ಶನ ಮುಗಿದು ಹೋಗುತ್ತಿತ್ತು!

ಎಂಟೂವರೆಯ ಹೊತ್ತಿಗೆ ನನ್ನ ಜೊತೆಯಲ್ಲಿ ಬಂದಿದ್ದ ಸ್ನೇಹಿತರ ಸಂದರ್ಶನ ಮುಗಿದು ಹೋಯಿತು. ’ಇದೇನು ಸದರ್ಶನವೋ? ನಾಟಕವೋ?’ ಎನ್ನುತ್ತಲೇ ಹೊರ ಬಂದರು. ನಾನು ಸಮಯ ನೋಡಿಕೊಂಡಿದ್ದೆ. ಸರಿಯಾಗಿ ಒಂದೂಮುಕ್ಕಾಲು ನಿಮಿಷದಲ್ಲಿ ಅವರು ಹೊರಗೆ ಬಂದಿದ್ದರು! ಒಳ ಹೋದ ತಕ್ಷಣ ಕುರ್ಚಿಯಲ್ಲಿ ಕುಳಿತುಕೊಳ್ಳುವ ಮೊದಲೇ, ಒಬ್ಬರು ಅಂಕಪಟ್ಟಿಗಳಿದ್ದ ಫೈಲನ್ನು ಕೈಯಿಂದ ಕಸಿದುಕೊಂಡರಂತೆ. ಆದರೆ ಅದನ್ನು ತೆಗೆದು ನೋಡುಲೇ ಇಲ್ಲವಂತೆ. ನಂತರ ಮೂರೇ ಪ್ರಶ್ನೆ. ನಿಮ್ಮ ಪಿಹೆಚ್.ಡಿ. ವಿಷಯ ಯಾವುದು? ಗೈಡ್ ಯಾರು? ಏನು ವಿಶೇಷ? ನಂತರ ನೀವಿನ್ನು ಹೋಗಬಹುದು ಎಂಬ ವಿದಾಯ ವಾಕ್ಯ. ಸಾಹಿತಿಯೊಬ್ಬರ ಕೃತಿಗಳ ಹಿನ್ನೆಲೆಯಲ್ಲಿ ಅಂದಿನ ಕಾಲಘಟ್ಟದ ಸಾಂಸ್ಕೃತಿಕ ಪಲ್ಲಟಗಳು, ವೈರುದ್ಧ್ಯಗಳು, ಚಳುವಳಿಗಳ ಬಗ್ಗೆ ಒಳ್ಳೆಯ ಮಹಾಪ್ರಬಂಧ ಬರೆದು ಪಿಹೆಚ್.ಡಿ. ಪದವಿ ಗಳಿಸಿರುವ ನನ್ನ ಗೆಳೆಯರೊಬ್ಬರಿಗೆ ಸಂದರ್ಶನ ನಡೆಯುವಾಗ ಕೇವಲ ಎರಡೇ ನಿಮಿಷದಲ್ಲಿ ಬಿರುಸಿನ ಮಾತು ಕಥೆಗಳಾದವಂತೆ. ಆ ಅಭ್ಯರ್ಥಿ ಕೊಠಡಿಯಿಂದ ಹೊರ ಬರುವಾಗ ’ಎಷ್ಟೇ ಆಗಲಿ ಅವರ ಶಿಷ್ಯರಲ್ಲವೆ?’ ಎಂದು ಮೂದಲಿಕೆಯ ದನಿಯೂ ಹಿಂಬಾಲಿಸಿತಂತೆ!

ಒಂಬತ್ತು ಗಂಟೆಯ ಹೊತ್ತಿಗೆ ಒಳಗೆ ಕಳುಹಿಸಲು, ದಾಖಲೆಗಳ ಪರಿಶೀಲನೆ ಮುಗಿದಿರುವ ಅಭ್ಯರ್ಥಿಗಳೇ ಇರಲಿಲ್ಲ!

ಮತ್ತೆ ವಿ.ಸಿ.ಯವರು ಮತ್ತೆ ಹೊರಬಂದರು. ಮತ್ತೊಂದು ಟೇಬಲ್ ಹಾಕಿಸಿ ಬೇಗ ಬೇಗ ಪರಿಶಿಲನೆ ನಡೆಸುವಂತೆ ಸೂಚನೆ ಕೊಟ್ಟು ಒಳ ಹೋದರು. ಸುಮಾರು ಒಂಬತ್ತೂವರೆಗೆ ನಾನು ಸಂದರ್ಶಕರ ಮುಂದಿದ್ದೆ. ಮೇಲೆ ಹೇಳಿದ ಮೂರು ಪ್ರಶ್ನೆಗಳಲ್ಲಿ ಮೊದಲ ಎರಡೂ ಪ್ರಶ್ನೆಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಮೂರನೆಯ ಪ್ರಶ್ನೆ ಸಂಸ್ಕೃತ ಸಂಗೀತ ಕೃತಿಗಳಿಗೆ ಸಂಬಂಧಿಸಿದ್ದಾಗಿತ್ತು. ನಂತರ ಅದೇ ವಿದಾಯ ವಾಕ್ಯ. ಕೇವಲ ಎರಡು ನಿಮಿಷಗಳಲ್ಲಿ ನಾನು ಒಳಗೆ ತೆಗೆದುಕೊಂಡು ಹೋಗಿದ್ದ ನನ್ನ ಪುಸ್ತಕ ಲೇಖನಗಳ ಕಟ್ಟು ಅಂಕಪಟ್ಟಿಗಳನ್ನು ಹಿಡಿದು ಹೊರಬಿದ್ದಿದ್ದೆ.

ಸರಿ ಇನ್ನು ಕಾಯುವುದರಲ್ಲಿ ಅರ್ಥವಿಲ್ಲ ಎಂದು ಹೊರಡಲು ಸಿದ್ದವಾಗುತ್ತಿದ್ದಾಗ, ನಮ್ಮ ಪರಿಚಿತರೊಬ್ಬರು, ’ನಾನು ಕಾರಿನಲ್ಲಿ ಬಂದಿದ್ದೇನೆ. ಒಟ್ಟಿಗೆ ಹೋಗೋಣ. ನನ್ನದೂ ಸಂದರ್ಶನ ಆಗುವವರೆಗೆ ಕಾಯಿರಿ’ ಎಂದರು.

ಸರಿ ನಾವೂ ಅದೂ ಇದೂ ಮಾತನಾಡುತ್ತಾ ಕುಳಿತೆವು. ದಾಖಲೆಗಳ ಪರಿಶೀಲನೆ ಅಭ್ಯರ್ಥಿಗಳ ಹೆಸರಿನ ಆಂಗ್ಲ ವರ್ಣಾನುಕ್ರಮಣಿಕೆಯಲ್ಲಿ ನಡೆಯುತ್ತಿತ್ತು. ಆದರೆ ಪರಿಶೀಲಕರ ಸಂಖ್ಯೆ ಒಂದರಿಂದ ಮೂರಾಗಿದ್ದದರಿಂದ, ಅವರು ಅಭ್ಯರ್ಥಿಗಳ ಪಟ್ಟಿಯ ಪುಟಗಳನ್ನು ಹಂಚಿಕೊಂಡಿದ್ದರಿಂದ ನಮಗೆ ಕಾಯಲು ಹೇಳಿದ ಮಿತ್ರರ ಹೆಸರು ಕೆಳಗಿನಿಂದ ಮೂರನೆಯವರದ್ದಾಗಿತ್ತು. ಅಲ್ಲಿಯವರೆಗೆ ಕಾಯಲೇ ಬೇಕಾಗಿತ್ತು. ಬೆಳಿಗ್ಗೆ ನಾಲ್ಕೂವರೆಗೆ ಮನೆ ಬಿಟ್ಟಿದ್ದ ನಾವು (ಅಲ್ಲಿದ್ದ ಬಹುತೇಕರು) ಕಾಫಿ ಬಿಟ್ಟು ಬೇರೇನನ್ನೂ ಕಂಡಿರಲಿಲ್ಲ. ನಮ್ಮ ಮಿತ್ರರ ಸಂದರ್ಶನ ಮುಗಿಯುವಷ್ಟರಲ್ಲಿ ಹನ್ನೊಂದು ಗಂಟೆ ಇಪ್ಪತ್ತು ನಿಮಿಷಗಳಾಗಿದ್ದವು. ಇನ್ನು ಇಬ್ಬರಿದ್ದು ಅವರದು ಹನ್ನೊಂದೂವರೆಯ ಹೊರೆಯ ಹೊತ್ತಿಗೆ ಮುಗಿಯಬಹುದು ಎಂದುಕೊಂಡು ನಾವು ಕಾರು ಹತ್ತಿದೆವು.

ಬೆಳಿಗ್ಗೆ ಏಳೂವರೆಯಿಂದ ಹನ್ನೊಂದೂವರೆಯವರೆಗೆ ನಡೆದ ಸಂದರ್ಶನದಲ್ಲಿ ಅರವತ್ತೆಂಟು ಅಭ್ಯರ್ಥಿಗಳಿಗೆ ಸಂದರ್ಶನ ನಡೆದಿತ್ತು. ಅದೂ ವಿಶ್ವವಿದ್ಯಾಲಯವೊಂದರ ಸಹಾಯಕ ಪ್ರಾಧ್ಯಪಕರ ಹುದ್ದೆಗಳಿಗೆ! (ಮಧ್ಯೆ ಸಂದರ್ಶಕರ ಉಪಾಹಾರ, ಎರಡು ಬಾರಿ ಕಾಫಿ/ಟೀ ಸೇವನೆಯೂ ನಡೆಯಿತು! ಆದರೆ ಅಭ್ಯರ್ಥಿಗಳಿಗೆ ತಿಂಡಿಯಿರಲಿ, ೫೦ ಮಿಲಿ ಕಾಫಿಯೂ ಇಲ್ಲ). ಸಂದರ್ಶನ ನಡೆಯುತ್ತಿದ್ದಾಗಲೇ ವಿ.ಸಿ.ಯವರು ಹೊರ ಬಂದು ಒಬ್ಬರ (ಹಿರಿಯರ?) ಜೊತೆಗೆ ಸುಮಾರು ಹತ್ತು ನಿಮಿಷಗಳ ಗಹನ ಚರ್ಚೆ ನಡೆಸಿ ಒಳಹೋಗಿದ್ದು ನಡೆಯಿತು.

ಇಷ್ಟೆಲ್ಲಾ ಹೇಳಿದ ಮೇಲೆ ಅಲ್ಲಿ ನಮ್ಮ ಗಮನಕ್ಕೆ ಬಂದ ಹಲವಾರು ಸಂಗತಿಗಳನ್ನು ಇಲ್ಲಿ ಹೇಳಲೇಬೇಕು. ಇದೇ ಮೊದಲ ಬಾರಿ ವಿಶ್ವವಿದ್ಯಾಲಯ ಒಂದಕ್ಕೆ ಸಂದರ್ಶನಕ್ಕೆ ಹೋಗಿದ್ದ ನಾನು ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಅಲ್ಲಿದ್ದ ಎಲ್ಲಾ ಸಿಬ್ಬಂಧಿಗಳೂ ಯಾವುದೋ ಅವಸರದಲ್ಲಿದ್ದವರಂತೆ ಕಾಣುತ್ತಿದ್ದರು. ಅಲ್ಲಿದ್ದವರೆಲ್ಲ ಎಷ್ಟು ಅವಸರದಲ್ಲಿದ್ದಂದರೆ, ಅಭ್ಯರ್ಥಿಗಳ ಬ್ಯಾಗು ಸೂಟ್‌ಕೇಸುಗಳನ್ನು ವಿವಿಯ ಅಧಿಕಾರಿಗಳೇ ಎತ್ತಿಕೊಡುವುದು ಜೋಡಿಸಿಕೊಡುವುದು ನೋಡಿದರೆ, ’ಇವರೆಲ್ಲಾ ಬೇಗ ಇಲ್ಲಿಂದ ತೊಲಗಿದರೆ ಸಾಕು’ ಎನ್ನುವಂತಿತ್ತು!

ಸ್ವತಃ ವಿ.ಸಿ.ಯವರು ಬಾರೀ ಅವರಸರದಲ್ಲಿದ್ದರು. ಅದಕ್ಕೆ ಅಲ್ಲಿದ್ದ ಅಧಿಕಾರಿಯೊಬ್ಬರು ಕೊಟ್ಟ ಕಾರಣ ಏನು ಗೊತ್ತೆ? ಮಧ್ಯಾಹ್ನ ಪದವಿ ತರಗತಿಗಳು ಪ್ರಾರಂಭವಾಗುವುದರಿಂದ ಅಷ್ಟರಲ್ಲಿ ಸಂದರ್ಶನ ಮುಗಿಸಬೇಕು ಎಂಬುದು! ಆದರೆ ಇದೊಂದು ಕಾರಣವೇ ಅಲ್ಲ ಎಂಬುದು ಎಂಥವರಿಗೂ ಅರ್ಥವಾಗುತ್ತದೆ.

ನಾವು ಗಮನಿಸಿದಂತೆ ಗರಿಷ್ಠ ನಾಲ್ಕೈದು ನಿಮಿಷಗಳಿಗಿಂತ ಯಾರಿಗೂ ಹೆಚ್ಚು ಸಮಯ ಸಂದರ್ಶನ ನಡೆಯಲಿಲ್ಲ. ಒಬ್ಬ ಅಭ್ಯರ್ಥಿಯನ್ನು ಬಿಟ್ಟು! ಬಹುಶಃ ಸಂದರ್ಶಕರು ತಿಂಡಿ ತಿನ್ನುವ ಸಮಯದಲ್ಲಿ ಅವರು ಒಳಹೋಗಿದ್ದರಿಂದ ಇರಬಹುದು ಎಂದು ನಾನು ಭಾವಿಸಿದ್ದೆ. ಆಗ ಅವರಿಗೆ ಸುಮಾರು ಹತ್ತು ನಿಮಿಷ ಹಿಡಿದಿತ್ತು. ಆದರೆ ನಂತರ ಅಲ್ಲಿ ಹರಿದಾಡಿದ ಸುದ್ದಿಗಳು ಮಾತ್ರ ಗಾಬರಿ ಹುಟ್ಟಿಸುವಂತಿದ್ದವು. ಏಕೆಂದರೆ ಆ ಅಭ್ಯರ್ಥಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವಶಿಲ್ಪದ ಆವರಣದಲ್ಲೇ ವಾಸ್ತವ್ಯ ಹೂಡಿದ್ದವರು! ಸರ್ಕಾರದ ಆನ್‌ಲೈನ್ ವಿಶ್ವಕೋಶ ಖಜಾನೆಗೂ ಕೆಲಸ ಮಾಡುತ್ತಿರುವವರು. ಅವರಿಗೆ ಒಂದು ಪೋಸ್ಟ್ ಗ್ಯಾರಂಟಿ ಎಂಬಬುದು ಇನ್ನೂ ಗಾಬರಿ ಹುಟ್ಟಿಸುವಂತಿತ್ತು. ಅದರ ಜೊತೆಗೆ ಅವರ ನಡುವಳಿಕೆಯೂ ಅದಕ್ಕೆ ಪೂರಕವಾಗಿತ್ತು. ಸುಮಾರು ಎಂಟು ಗಂಟೆ ಇಪ್ಪತ್ತು ನಿಮಿಷಕ್ಕೆ ಅವರ ಸಂದರ್ಶನ ಮುಗಿದರೂ ಅವರು ಹನ್ನೊಂದುವರೆಯವರೆಗೂ ಅಲ್ಲಿಂದ ಅಲುಗಲಿಲ್ಲ. ಬೇರೆಯವರ ಜೊತೆ ಅಷ್ಟೊಂದು ಬೆರೆಯಲೂ ಇಲ್ಲ. ಅಲ್ಲಿದ್ದ ವಿವಿಯ ಬೇರೆ ಬೇರೆ ಅಧಿಕಾರಿಗಳ ಜೊತೆಯಲ್ಲಷ್ಟೇ ಮಾತು. ಹೆಚ್ಚು ಹೊತ್ತು ಕುರ್ಚಿಯಲ್ಲಿ ಒಬ್ಬರೇ ಕುಳಿತು ಕಾಲ ದೂಡುತ್ತಿದ್ದರು. ಜೊತೆಗೆ ’ತುಮಕೂರು ವಿವಿಯ ಅಫಿಲಿಯೇಟೆಡ್ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಯೊಬ್ಬರಿಗೆ ಒಂದು ಪೋಸ್ಟ್ ಈಗಾಗಲೇ ಬುಕ್ ಆಗಿದೆ’ ಎಂಬ ಸುದ್ದಿಯೂ ಅಲ್ಲಿ ಹಬ್ಬಿಬಿಟ್ಟಿತ್ತು! ಪಾಪ, ನಿಜವಾದ ಅರ್ಹತೆಯಿದ್ದರೂ ಅವರನ್ನು ಅನುಮಾನದಿಂದ ನೋಡುವದಂತೂ ತಪ್ಪುವುದಿಲ್ಲ.

ಯಾರೋ ಒಬ್ಬರು ಸ್ವಲ್ಪ ಜೋರಾಗಿಯೇ ’ಒಂದು ವಿವಿಯ ಉಪನ್ಯಾಸಕರಿಗೆ ನಡೆಸುವ ಸಂದರ್ಶನದಲ್ಲಿ ನಮ್ಮ ಬಗ್ಗೆ ಹೇಳಿಕೊಳ್ಳಲು ಒಂದು ನಿಮಿಷದ ಕಾಲಾವಕಾಶವೂ ಇಲ್ಲ! ಹೋದ್ಯಾ ಪುಟ್ಟ ಬಂದ್ಯಾ ಪುಟ್ಟ! ಎಲ್ಲಾ ವ್ಯವಸ್ಥಿತ ನಾಟಕವಾಡುತ್ತಿದ್ದಾರೆ. ಇನ್ನು ಕೇವಲ ನಾಲ್ಕೇ ದಿನಗಳಲ್ಲಿ ಲಿಸ್ಟ್ ಅನೌನ್ಸ್ ಮಾಡಿ, ಐದನೇ ದಿನದಲ್ಲಿ ಅವರೆಲ್ಲಾ ಡ್ಯೂಟಿ ರಿಪೋರ‍್ಟ್ ಮಾಡಿಕೊಳ್ಳುವಂತೆ ನೋಡಿಕೊಳ್ಳುತ್ತಾರೆ. ಈಗಾಗಲೇ ಕೆಲವು ವಿಷಯಗಳಿಗೆ ನಡೆದ ಸಂದರ್ಶನದಲ್ಲಿ ಹೀಗೆಯೇ ಆಗಿದೆ. ಕೋರ್ಟಿನವರು ಚಾಪೆ ಕೆಳಗೆ ನುಸುಳಿದರೆ ಇವರು ರಂಗೋಲಿಯ ಕೆಳಗೆ ನುಸುಳುತ್ತಾರೆ’ ಎಂದು ಗೊಣಗಿದರು. ಅಷ್ಟರಲ್ಲಿ ಇನ್ನೊಬ್ಬರು ’ಆರ್.ಎಸ್.ಎಸ್. ಮಂತ್ರಿ; ಆರ್.ಎಸ್.ಎಸ್. ವಿ.ಸಿ.’ ಎಂದು ಏನೇನೋ ಮಾತನಾಡಿದರು.

ಇಂದು ನಮ್ಮ ದೇಶದಲ್ಲಿ ಎಲ್ಲಿ ಏನೇ ನಡೆದರೂ ಅದಕ್ಕೆ ರಾಜಕೀಯ ಬಣ್ಣ ಬಂದು ಬಿಡುತ್ತದೆ. ಅಷ್ಟರ ಮಟ್ಟಿಗೆ ರಾಜಕೀಯ ಎಲ್ಲವನ್ನೂ ಹೊಲಸೆಬ್ಬಿಸಿಬಿಟ್ಟಿದೆ. ವಿವಿಯಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳಿಗೂ ರಾಜಕೀಯ ಕಾರಣಗಳು ಹುಟ್ಟಿಕೊಳ್ಳುತ್ತವೆ. ದುರದೃಷ್ಟವೆಂದರೆ ಅವುಗಳಲ್ಲಿ ಹೆಚ್ಚಿನವುಗಳು ನಿಜವೂ ಆಗಿಬಿಡುವುದು.

ಕೇವಲ ಸುಮಾರು ೨೦೦ ರಿಂದ ೨೪೦ ನಿಮಿಷಗಳಲ್ಲಿ ಅರವತ್ತೆಂಟು ಅಭ್ಯರ್ಥಿಗಳಿಗೆ - ವಿಶ್ವವಿದ್ಯಾಲಯವೊಂದರಲ್ಲಿ ಕಾರ್ಯ ನಿರ್ವಹಿಸಬೇಕಾದ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ - (ಸರಾಸರಿ ಒಬ್ಬರಿಗೆ ೩ ರಿಂದ ೩.೫ ನಿಮಿಷ ಮಾತ್ರ; ಅವರು ಒಳ ಹೋಗುವ, ಹೊರ ಬರುವ ಸಮಯ, ಕಾಫಿ ತಿಂಡಿಯ ಸಮಯ ಕಳೆದರೆ ಸರಾಸರಿ ಎರಡೂವರೆ ನಿಮಿಷಕ್ಕೆ ಇಳಿಯುತ್ತದೆ!) ಸಂದರ್ಶನ ನಡೆಸಿ ತುಮಕೂರು ವಿವಿ ವಿಶ್ವದಾಖಲೆಗೆ ಅರ್ಹವಾಗಿದೆ. ಅದಕ್ಕೆ ನೀವೂ ಒಂದಷ್ಟು ಅಭಿನಂದನೆ ಸಲ್ಲಿಸಿಬಿಡಿ!

Thursday, August 12, 2010

ಸಹೃದಯ

ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯ ಪರಿಕಲ್ಪನೆಯಿದೆ. ಕಾವ್ಯ, ನಾಟಕ ಮತ್ತು ಸಂಗೀತ ಮುಂತಾದವುಗಳನ್ನು ಓದಿ, ಕೇಳಿ ಮತ್ತು ನೋಡಿ ಅವುಗಳ ಸೌಂದರ್ಯವನ್ನು ಅನುಭವಿಸಿ ಆನಂದಪಡುವಾತನೇ ಈ ಸಹೃದಯ. ಸಹೃದಯನೆಂದರೆ ಕವಿ ಹೃದಯಕ್ಕೆ ಸಮನಾದ ಹೃದಯವುಳ್ಳವನು ಎಂದರ್ಥ.

ಕವಿ ಸ್ವತಂತ್ರ; ಕೃತಿ ಪರತಂತ್ರ ಎಂಬ ಮಾತಿದೆ. ನಿಜ. ಕವಿಯಿಂದ ಒಮ್ಮೆ ರಚಿತವಾಯಿತೆಂದರೆ ಕೃತಿ ಪರತಂತ್ರ. ಆದರೆ ಅದು ಕವಿಗೆ ಮಾತ್ರ. ಸಹೃದಯನಿಗಾದರೋ ಅದು ಸ್ವತಂತ್ರವಾಗಿಯೇ ಉಳಿದುಬಿಡುತ್ತದೆ. ಎಷ್ಟೋ ಜನ ಮಹಾಕವಿಗಳೂ ಕೂಡ ತಮ್ಮ ಕೃತಿಗೆ -ಅದರ ಸೌಂದರ್ಯಾತಿಶಯಗಳನ್ನು ಕಂಡು -ತಾವೇ ನಮಸ್ಕರಿಸಿದ್ದಾರೆ. ಕೃತಿ ಕವಿಯಿಂದ ಒಮ್ಮೆ ರಚಿತವಾಗುತ್ತದೆ. ಆದರೆ ಸಹೃದಯರ ಮಟ್ಟಿಗೆ ಮಾತ್ರ ಒಂದೊಂದು ಸಾರಿ ಓದಿದಾಗಲೂ, ಒಬ್ಬೊಬ್ಬ ಸಹೃದಯ ಓದಿದಾಗಲೂ ಮತ್ತೆ ಮತ್ತೆ ರಚಿತವಾಗುತ್ತಲೇ ಇರುತ್ತದೆ. ಸಹೃದಯರಿರುವವರೆಗೆ ತನ್ನದೇ ಕೃತಿಯಿಂದ ಕವಿ ನೂರಾರು, ಸಾವಿರಾರು ಬಾರಿ ಸೃಜನನಾಗುತ್ತಾನೆ. ಅದಕ್ಕೆಂದೇ ಕುವೆಂಪು ಅವರು ತಮ್ಮ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ “ಶ್ರೀ ಕುವೆಂಪುವ ಸೃಜಿಸಿದೀ ಕೃತಿ. . . “ ಎಂದು ವಿನೀತರಾಗಿ ಒಪ್ಪಿಕೊಳ್ಳುತ್ತಾರೆ.

ಕವಿಯ ಕೃತಿ ಸಹೃದಯನ ಮನಸ್ಸೆಂಬ ಕನ್ನಡಿಯ ಮೇಲೆ ಪ್ರತಿಭಾರಿಯೂ ಹೊಸದಾಗಿ ಪ್ರತಿಫಲಿಸುತ್ತದೆ. ಪ್ರತಿಯೊಬ್ಬ ಸಹೃದಯನೂ ಒಂದೇ ಕೃತಿಯನ್ನು ತನ್ನಿಚ್ಛೆಯಂತೆ ಮರುಸೃಷ್ಟಿಸಿಕೊಳ್ಳುತ್ತಾನೆ. ಅದರಿಂದ ಆನಂದ ಪಡುತ್ತಾನೆ. ಆನಂದವರ್ಧನನು ತನ್ನ ಲೋಚನದಲ್ಲಿ, “ಯೇಷಾಂ ಕಾವ್ಯಾನುಶೀಲನವಶಾತ್ ವಿಶದೀ ಭೂತೆ ಮನೋಮುಕುರೇ ವರ್ಣನೀಯ ತನ್ಮಯೀಭವ ಯೋಗ್ಯತಾ ತೇ ಹೃದಯ ಸಂವಾದ ಭಾಜಃ ಸಹೃದಯಾ” ಎಂದು ವಿಸ್ತರಿಸಿ ಸ್ಪಷ್ಟಪಡಿಸಿದ್ದಾನೆ. ಅಂದರೆ ಕಾವ್ಯಗಳನ್ನು ಪರಿಶೀಲಿಸಿ ಮನಸ್ಸೆಂಬ ಕನ್ನಡ ನಿರ್ಮಲವಾಗಿರುವುದರಿಂದ ವರ್ಣಿತ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗುಂಟೋ ಅವರೇ ಸಹೃದಯರು - ಕವಿಯೊಂದಿಗೆ ಹೃದಯ ಸಂವಾದ ನಡೆಸುವವರು.

ಇಲ್ಲಿ ಕವಿ ಸಹೃದಯರಿಬ್ಬರೂ ಸೃಷ್ಟಿಕರ್ತರೆ! ಕವಿಯದು ಸೃಷ್ಟಿಕಾರ್ಯವಾದರೆ, ಸಹೃದಯನದು ಅನುಸೃಷ್ಟಿಕಾರ್ಯ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕವಿ ಪ್ರತಿಭೆ ಕಾರಯಿತ್ರಿ; ಸಹೃದಯ ಪ್ರತಿಭೆ ಭಾವಯಿತ್ರಿ. ಇವೆರಡು ಸೇರದೆ ಕಲಾಕೃತಿಗೆ ಪೂರ್ಣತೆಯೊದಗಲಾರದು. ಕವಿ ಸಹೃದಯರಿಬ್ಬರು ಸಮಶೃತಿಯನ್ನುಳ್ಳ ಎರಡು ವೀಣೆಗಳಿದ್ದಂತೆ. ಒಂದನ್ನು ಮೀಟಿದರೆ ಇನ್ನೊಂದು ಝೇಂಕರಿಸುತ್ತದೆ.

ಜನ್ನನು ತನ್ನ ಅನಂತನಾಥಪುರಾಣದಲ್ಲಿ “ಕಟ್ಟಿಯುಮೇನೋ ಮಾಲೆಗಾರನ ಪೊಸಬಾಸಿಗಂ. ಮುಡಿವ ಭೋಗಿಗಳಿಲ್ಲದೆ ಬಾಡಿ ಪೋಗುದೇ!” ಎಂದು ಸಹೃದಯನನ್ನು ಭೋಗಿಗೆ ಹೋಲಿಸುತ್ತಾನೆ. ಕಲಾವಿದನಿಗೆ ತನ್ನ ಸೃಷ್ಟಿಯು ಸಾರ್ಥಕವಾಗಬೇಕಾದರೆ ಅದನ್ನು ಸ್ವೀಕರಿಸುವ ಸಹೃದಯರೂ ಬೇಕು. ಇಲ್ಲದಿದ್ದರೆ ಮಾಲೆ ಬಾಡಿ ಹೋಗುತ್ತದೆ. ಕವಿಪ್ರತಿಭೆ “ಜೀರ್ಣಮಂಗೇ ಸುಭಾಷಿತಂ” ಎಂಬಂತೆ ಕಮರಿಹೋಗುತ್ತದೆ. ಅದಾಗಬಾರದು. ಕಲೆಯ ಸಾರ್ಥಕತೆ ಸಹೃದಯನ ಹೃದಯದಲ್ಲಿ ನೆಲೆಗೊಂಡ ಮೇಲಲ್ಲವೆ? ಏಕೆಂದರೆ ಕವಿ ಕಲೆಯನ್ನಲ್ಲದೆ ಶಿಲೆಯನ್ನು ಸೃಷ್ಟಿಸುವುದಿಲ್ಲ. ಆತ ಸೃಷ್ಟಿಕರ್ತ; ಆದರೆ ಬ್ರಹ್ಮನಲ್ಲ.

ಪ್ರಸ್ತು ಸೃಷ್ಟಿಕರ್ತರ ಬೆಳೆ ಹುಲುಸಾಗಿಯೇ ಇದೆ. ಆದರೆ ಸಹೃದಯರ ಕೊರತೆಯಿದೆ. ಕೈಯೊಂದರಿಂದ ಚಪ್ಪಾಳೆಯಾಗಲಾರದು. ಕೃತಿ ಸೃಷ್ಟಿಗೆ ಪ್ರತಿಭೆಯಷ್ಟು ಅಗತ್ಯವೋ ಅಷ್ಟೆ ಅಗತ್ಯ ಕವಿಗೆ, ಕೃತಿಗೆ ಸಹೃದಯ ಪ್ರತಿಭೆ. ಅವನ ಮಹತ್ವವನ್ನರಿತೇ ಅಭಿನವಗುಪ್ತನು, “ಕವಿ ಸಹೃದಯರಿಬ್ಬರೂ ಒಂದೇ ಸಾರಸ್ವತ ಲೋಕದ ಅಂಗಗಳು’ ಎಂದು ಸಾರಿದ್ದಾನೆ.

Monday, August 09, 2010

ದಾನ್ ದಾನ್ ಪರ್ ಲಿಖಾ ಹೈ ತೇರಾ ನಾಮ್!

ಶ್ರೀ ಮಧುಸೂದನ ಪೆಜತ್ತಾಯರ ಸ್ಮೃತಿಪಟಲದಿಂದ...
ಕ್ರಿ.ಶ. ೧೯೫೬ನೇ ಇಸವಿ ಇರಬೇಕು. ಆಗಷ್ಟೇ ಉಡುಪಿಯ ಬೋರ್ಡ್ ಹೈಸ್ಕೂಲ್‌ನ ಆರನೇ ತರಗತಿಗೆ ಸೇರಿದ್ದೆ. ನಮ್ಮ ಮನೆಯಿಂದ ಸ್ಕೂಲ್ ಎರಡು ಮೈಲಿ ದೂರ. ನಮ್ಮಮಧ್ಯಾಹ್ನದ ಊಟದ ವಿರಾಮದ ವೇಳೆ ಮಧ್ಯಾಹ್ನ ೧೨-೩೦ ರಿಂದ ೨-೦೦ ಗಂಟೆಯವರೆಗೆ ಇತ್ತು. ಶಾಲಾದಿನಗಳಲ್ಲಿ ಲಗುಬುಗೆಯಿಂದ ಮನೆಗೆ ನಡೆದು ಬಂದು ಬೇಗಬೇಗನೇ ಮೂಗು ಬಾಯಿಯಿಂದ ಊಟ ಮುಕ್ಕಿ ಸಮಯಕ್ಕೆ ಸರಿಯಾಗಿ ಪುನಃ ಸ್ಕೂಲ್ ಸೇರುತ್ತಾ ಇದ್ದೆ!

ಸೈಕಲ್ ಕಲಿತರೆ ನನಗೆ ತುಂಬಾ ಅನುಕೂಲ ಆಗಬಹುದೆಂಬ ಆಸೆಯಿಂದ ಪ್ರತೀ ಸಂಜೆ ಬಾಡಿಗೆಯ ಸೈಕಲ್ ಪಡೆದು ಕಲಿಯ ತೊಡಗಿದೆ. ಮೊದಲ ದಿನವೇ ನನ್ನ ಬಾಡಿಗೆಯ ಸೈಕಲ್ ಪಲ್ಟಿ ಹೊಡೆದು ಕಾಲಿಗೆ ಗಾಯ ಮಾಡಿಕೊಂಡೆ. ಕುಂಟುತ್ತಾ ನಡೆಯುತ್ತಿದ್ದ ನನಗೆ ಅಮ್ಮ ನಾಲ್ಕಾಣೆಯ ಪಾವಲಿ (ನಾಣ್ಯ) ಕೊಟ್ಟು ನಮ್ಮ ಹೈಸ್ಕೂಲ್ ಪಕ್ಕದಲ್ಲೇ ಇದ್ದ ಆನಂದ ಭವನ ಹೋಟೆಲಿನಲ್ಲಿ “ಪ್ಲೇಟ್ ಊಟ ಮಾಡು” ಎಂದು ಹೇಳಿದ್ದರು.

ನನಗೆ ಸಂಭ್ರಮವೋ ಸಂಭ್ರಮ!

ಆ ದಿನಗಳಲ್ಲಿ ನಮಗಾರಿಗೂ ‘ಪಾಕೆಟ್ ಮನಿ’ ಕೊಡುವ ಪದ್ಧತಿ ಇರಲಿಲ್ಲ. ಅಪರೂಪದಲ್ಲಿ, ಮಧ್ಯಾಹ್ನ ಮನೆಗೆ ಊಟಕ್ಕೆ ಬರಲಾಗದ ಇಂತಹಾ ಸಂದರ್ಭಗಳಲ್ಲಿ ಮಾತ್ರ ಮಧ್ಯಾಹ್ನದ ಊಟಕ್ಕೆಂದು ಪಾಕೆಟ್ ಮನಿ ನನಗೆ ಸಿಗುತ್ತಾ ಇತ್ತು.

ಆಗ ಪ್ಲೇಟ್ ಊಟಕ್ಕೆ ಬರೇ ನಾಲ್ಕಾಣೆ (=೨೫ ಪೈಸೆ) ಫುಲ್ ಊಟಕ್ಕೆ ಎಂಟಾಣೆ (= ೫೦ ಪೈಸೆ)! ಫುಲ್ ಊಟ ಅಂದರೆ ಊಟ ಮಾಡಿದಷ್ಟೂ ಅನ್ನ ಹಾಗೂ ವ್ಯಂಜನಗಳು! ಶಾಲಾ ಮಕ್ಕಳಾದ ನಮಗೆ ಆನಂದ ಭವನದ ಪ್ಲೇಟ್ ಊಟವೇ ಹೆಚ್ಚಾಗುತ್ತಾ ಇತ್ತು.

ಒಂದು ದಿನ ಆನಂದ ಭವನದ ಹತ್ತಿರ ಬರುತ್ತಲೇ ಪಕ್ಕದ ಬೀಡಾ ಅಂಗಡಿಯಲ್ಲಿ ತೂಗು ಹಾಕಿದ್ದ ಚಂದ್ರಬಾಳೆಯ ಹಣ್ಣಿನ ಗೊನೆ ಕಂಡಿತು. ಆ ಗೊನೆಯಲ್ಲಿ ನಸುಗೆಂಪು ಬಣ್ಣದ ಸುಮಾರು ಒಂದೊಂದು ಪೌಂಡ್ (ಸುಮಾರು ೪೫೪ ಗ್ರಾಂ) ತೂಗುವ ಮಾಗಿದ ಚಂದ್ರ ಬಾಳೆಯ ಹಣ್ಣುಗಳು ತೂಗಾಡುತ್ತಿದ್ದುವು. ಕ್ರಯ ಕೇಳಲು ಪ್ರತೀ ಬಾಳೆಹಣ್ಣಿಗೆ ಎರಡಾಣೆ (=೧೨ ಪೈಸೆ) ಅಂತ ಅಂಗಡಿಯ ಯಜಮಾನರು ಹೇಳಿದರು.

ನನಗೆ ಈ ಅಪರೂಪದ ಚಂದ್ರಬಾಳೆಹಣ್ಣು ಬಹು ಇಷ್ಟ. ಅದರ ಪರಿಮಳ ಮತ್ತು ಸ್ವಾದಗಳೇ ವಿಶಿಷ್ಟ. ಅದಲ್ಲದೇ, ಒಂದು ಬಾಳೆಯ ಹಣ್ಣು ತಿಂದರೆ ನನ್ನ ಹೊಟ್ಟೆಯೇ ತುಂಬುವಂತಿತ್ತು!

ಬಾಳೆಹಣ್ಣು ಕಂಡೊಡನೆಯೇ, ನನ್ನ ಮಧ್ಯಾಹ್ನದ ಊಟದ ‘ಮೆನು’ ಬದಲಾಯಿತು. “ಇಂದು ಮಧ್ಯಾಹ್ನದ ಊಟದ ಬದಲಿಗೆ ಎರಡಾಣೆ ಕೊಟ್ಟು ಒಂದು ಮಸಾಲೆ ದೋಸೆ ತಿಂದು, ಉಳಿಯುವ ಎರಡಾಣೆಗಳನ್ನು ಸಾಯಂಕಾಲದ ಚಂದ್ರ ಬಾಳೆಚಿi ಹಣ್ಣಿನ ಫಲಾಹಾರಕ್ಕೆ ಉಳಿಸಿಕೊಂಡರೆ ಹೇಗೆ?” ಎಂಬ ಆಲೋಚನೆ ಬಂತು.

ಆನಂದ ಭವನದ ಮಸಾಲೆ ದೋಸೆ ಇಡೀ ಉಡುಪಿಗೇ ಪ್ರಸಿದ್ಧ.

ಉಡುಪಿಯ ದೇವಸ್ಥಾನಗಳ ಸುತ್ತಿನಲ್ಲಿರುವ ರಥಬೀದಿಯ ಉಪಾಹಾರ ಗೃಹಗಳಲ್ಲಿ ನೀರುಳ್ಳಿ ಬಳಸದೇ ಬರೇ ಇಂಗಿನ ಒಗ್ಗರಣೆ ಸೇರಿಸಿದ ಆಲೂಗೆಡ್ಡೆಯ ಪಲ್ಯವನ್ನು ಹಾಕಿ ಘಮಘಮ ಮಸಾಲೆ ದೋಸೆ ತಯಾರಿಸುವ ಕ್ರಮ ಅಂದೂ ಇತ್ತು, ಆ ಕ್ರಮ ಇಂದಿಗೂ ಇದೆ.

ಈ ಈರುಳ್ಳಿ ರಹಿತ ಮಸಾಲೆ ದೋಸೆಗಳು ಯಾತ್ರಾರ್ಥಿಗಳ ಮತ್ತು ಸ್ಥಳೀಯ ಜನರ ಅಭಿರುಚಿಗೆ ತಕ್ಕಂತೆ ಇಂದಿಗೂ ಬದಲಾಗದೇ ಉಳಿದಿವೆ. ಸ್ಥಳೀಯ ಜನರು ಮತ್ತು ಯಾತ್ರಾರ್ಥಿಗಳು ಈ ವಿಶಿಷ್ಟ ಮಸಾಲೆ ದೋಸೆಗಳ ರುಚಿಗೆ ಇಂದಿಗೂ ಮುಗಿಬೀಳುತ್ತಾರೆ.

ಈರುಳ್ಳಿ ಮತ್ತು ಬೆಳ್ಳುಳ್ಳಿಯ ರುಚಿಗೆ ಆಗಲೇ ಮಾರುಹೋಗಿದ್ದ ನಾವು, ಉಡುಪಿಯ ರಥಬೀದಿಯ ಉಪಹಾರಗೃಹಗಳ ಮಸಾಲೆ ದೋಸೆಗಳನ್ನು “ಮಡಿ ಮಸಾಲೆ ದೋಸೆ” ಅಂತ ಲೇವಡಿ ಮಾಡುತ್ತಾ ಇದ್ದೆವು!

ಆನಂದ ಭವನದ ಗರಿ ಗರಿ ದೋಸೆಗಳ ಮೇಲೆ ಕೆಂಪು ಕೆಂಪು ಖಾರದ ಮೆಣಸುಯುಕ್ತವಾದ ಬೆಳ್ಳುಳ್ಳಿಯ ಚಟ್ನಿ ಹಚ್ಚಿ ಈರುಳ್ಳಿ ಮತ್ತು ಆಲೂಗೆಡ್ಡೆಯ ಪಲ್ಯ ಪೇರಿಸಿ ಮಡಚಿ ಕೊಡುತ್ತಾ ಇದ್ದರು.

ಹಾಗಾಗಿ, ನಮಗೆ ಆನಂದ ಭವನದ ಮಸಾಲೆ ದೋಸೆ ಬಹಳ ಇಷ್ಟ.

ಎರಡಾಣೆ ಬೆಲೆಯ ಹನ್ನೆರಡು ಇಂಚು ಅಗಲದ ಒಂದು ಮಸಾಲೆ ದೋಸೆ ತಿಂದು ನೀರು ಕುಡಿದಾಗ ಮಧ್ಯಾಹ್ನದ ಹಸಿವು ಮಂಗಮಾಯ!

ಆ ಸಂಜೆ ಶಾಲೆ ಬಿಟ್ಟೊಡನೆ ಎರಡು ಆಣೆ ಕೊಟ್ಟು ಚೆನ್ನಾಗಿ ಮಾಗಿದ ಒಂದು ಚಂದ್ರಬಾಳೆಯ ಹಣ್ಣನ್ನು ಖರೀದಿಸಿದೆ. ಅದನ್ನು ನನ್ನ ಸ್ಕೂಲ್ ಬ್ಯಾಗ್‌ನ ಒಳಗೆ ಸೇರಿಸಿದೆ. ಮನೆಗೆ ಹೋಗುತ್ತಾ, ಮುಂದೆ ಸಿಗುವ ನಿರ್ಜನವಾದ ದಾರಿಯಲ್ಲಿ, ನಿಧಾನವಾಗಿ ಅದನ್ನು ಆಸ್ವಾದಿಸಿ ತಿನ್ನುವ ಯೋಜನೆ ಹಾಕಿದೆ.

ಮನೆಯ ದಾರಿಯಲ್ಲಿ ಸಾಗುತ್ತಾ ಸಾಗುತ್ತಾ ಇರುವಂತೆ ಜನಸಂದಣಿ ಕಡಿಮೆ ಆಯಿತು. ಬಾಳೆಯ ಹಣ್ಣಿನ ಪರಿಮಳ ಮೂಗಿಗೆ ಬಡಿದು ನನ್ನ ಹಸಿವು ಮತ್ತಷ್ಟು ಹೆಚ್ಚಿತು.

ನನ್ನ ಮುಂದುಗಡೆ, ರಸ್ತೆಯ ಬಲಬದಿಯಲ್ಲಿ ಒಂದು ದನ ನೆರಳಿನಲ್ಲಿ ಮೆಲುಕು ಹಾಕುತ್ತಾ ಮಲಗಿತ್ತು. ಈ ದನಕ್ಕೆ ಬಾಳೆಹಣ್ಣಿನ ಸಿಪ್ಪೆ ತಿನ್ನಲು ಕೊಟ್ಟು ನಾನು ಬಾಳೆಯ ಹಣ್ಣನ್ನು ನಿಧಾನವಾಗಿ, ಆಸ್ವಾದಿಸಿ ತಿನ್ನುವ ಆಲೋಚನೆ ಮಾಡಿದೆ.

ಹಣ್ಣನ್ನು ನಿಧಾನವಾಗಿ ಸುಲಿಯಲಾರಂಬಿಸಿದೆ.

ಬಾಳೆಯ ಹಣ್ಣಿನ ತಿರುಳನ್ನು ಬಲಗೈ ಬೆರಳುಗಳಲ್ಲಿ ಭದ್ರವಾಗಿ ಹಿಡಿದು ಸಿಪ್ಪೆಯನ್ನು ಬೇರ್ಪಡಿಸಿದೆ.

ಆ ನಂತರ ಸಿಪ್ಪೆಯನ್ನು ದನದ ಕಡೆಗೆ ಎಸೆದೇ ಬಿಟ್ಟೆ!

ಆಗಲೇ ದೊಡ್ದ ಅಚಾತುರ್ಯ ನಡೆದಿತ್ತು!!

“ದೇವರೇ! ನೀನು ಯಾಕೆ ನನ್ನನ್ನು ಎಡಚನನ್ನಾಗಿ ಮಾಡಲಿಲ್ಲ?” ಅಂತ ಹಲುಬುವಷ್ಟು ದೊಡ್ದ ತಪ್ಪನ್ನು ಮಾಡಿಬಿಟ್ಟಿದ್ದೆ!!!

ಬಲಗೈ ಬಂಟನಾದ ನಾನು ಬಲಗೈಯ್ಯಲ್ಲಿ ಇದ್ದ ಕದಳೀ ಫಲದ ತಿರುಳನ್ನು ದನದ ಮುಂದೆ ಎಸೆದು, ಎಡಕೈಯ್ಯಲ್ಲಿ ಇದ್ದ ಸಿಪ್ಪೆಯನ್ನು ನನ್ನ ಬಾಯಿಗೆ ಕೊಂಡೊಯ್ದಿದ್ದೆ!!!!

ಅಷ್ಟೊತ್ತಿಗಾಗಲೇ ಆ ದನವು ಮಲಗಿದ್ದಲ್ಲಿಂದಲೇ ಕತ್ತು ನೀಡಿ ಬಾಳೆಯ ಹಣ್ಣನ್ನು ಸ್ವಾಹಾ ಮಾಡಿತ್ತು!

ನನ್ನ ಕೈಯ್ಯಲ್ಲಿ ಉಳಿದಿದ್ದ ಚಂದ್ರಬಾಳೆಯ ಹಣ್ಣಿನ ಸಿಪ್ಪೆಯನ್ನೇ ಒಂದು ಕ್ಷಣ ನಿರಾಸೆಯಿಂದ ದಿಟ್ಟಿಸಿ, ಅದನ್ನೂ ಆ ದನದ ಕಡೆಗೆ ಎಸೆದೆ!!

ನನಗೆ ಅಂದು ಆ ಚಂದದ ಬಾಳೆಯ ಹಣ್ಣು ತಿನ್ನುವ ಯೋಗ ಇರಲಿಲ್ಲ!!!

ಅದನ್ನು ತಿನ್ನುವ ಯೋಗ ಅಂದು ಖಂಡಿತವಾಗಿ ಆ ದನಕ್ಕೆ ಬರೆದಿತ್ತು!

ಈ ಮರೆಯಲಾರದ ಸಂಗತಿಯನ್ನು ಇಂದು ನೆನೆದಾಗ “ದಾನ್ ದಾನ್ ಪರ್ ಲಿಖಾಹೈ ತೇರೇ ನಾಮ್!” ಎಂಬ ಗಾದೆ ನೆನಪಾಗುತ್ತೆ!

{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. 'ರೈತನಾಗುವ ಹಾದಿಯಲ್ಲಿ' ಎಂಬ ಕನ್ನಡ ಪುಸ್ತಕವೂ ಪ್ರಕಟವಾಗುವುದರಲ್ಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ

Monday, August 02, 2010

ಕಿನ್ನರಿ ಬ್ರಹ್ಮಯ್ಯ

ಇಂದಿನ ಆಂಧ್ರಪ್ರದೇಶದ ಪೂದೂರು ಎಂಟನೂರೈವತ್ತು ವರ್ಷಗಳ ಹಿಂದೆ ಕಲ್ಯಾಣದ ಚಾಲುಕ್ಯರ ಆಡಳಿತದಲ್ಲಿತ್ತು. ನಂತರ ಕಲಚೂರಿ ಬಿಜ್ಜಳನ ಆಡಳಿತಕ್ಕೆ ಹೋಯಿತು. ಆಗ ಪೊಡೂರು ಎಂದು ಕರೆಯಲಾಗುತ್ತಿತ್ತು. ಆ ಊರಿನಲ್ಲಿದ್ದ ಅಕ್ಕಸಾಲಿಗ ಕುಟುಂಬವೊಂದರಲ್ಲಿ ಬ್ರಹ್ಮಯ್ಯ ಎಂಬ ಶಿವಭಕ್ತನೊಬ್ಬನಿದ್ದನು. ಅವನು ತನಗೆ ವಂಶಪಾರಂಪರ್ಯವಾಗಿ ಬಂದಿದ್ದ ವೃತ್ತಿಯ ಜೊತೆಗೆ ಕಿನ್ನರಿ ನುಡಿಸುವುದನ್ನೂ ಕಲಿತಿದ್ದನು. ಆತನಿಗೆ ಕಿನ್ನರಿ ನುಡಿಸುವುದನ್ನು ಕಲಿಸಿದ ಗುರುವೊಬ್ಬರಿಗೆ ಒಂದಷ್ಟು ಆಭರಣ ಮಾಡಿಕೊಡುವ ಅವಕಾಶ ಅವನಿಗೆ ಬರುತ್ತದೆ. ಗುರುವಿನ ಕೆಲಸ ಎಂಬ ತುಂಬು ಅಭಿಮಾನದಿಂದ ಆಭರಣ ತಯಾರು ಮಾಡಿದ ಬ್ರಹ್ಮಯ್ಯ ಅದನ್ನು ಗುರುವಿಗೆ ಒಪ್ಪಿಸಲು ಬರುತ್ತಾನೆ. ಆತ ಕೊಟ್ಟ ಆಭರಣಗಳ ಸೊಗಸನ್ನು ಸವಿಯುತ್ತ ಗುರುಗಳು ಅದನ್ನು ಸ್ವೀಕರಿಸುತ್ತಾರೆ. ಆಗ ಗುರುವಿನ ಮನೆಯಲ್ಲಿದ್ದವರೊಬ್ಬರು ‘ಏನು ಗುರುಗಳೆ, ಚಿನ್ನವನ್ನು ತೂಕ ಹಾಕಿಯೇ ತೆಗೆದುಕೊಳ್ಳಬೇಕು. ಹೊಳೆಗೆ ಹಾಕಿದರೂ ಅಳೆದು ಹಾಕು ಎಂಬ ಗಾದೆಯನ್ನು ನೀವು ಕೇಳಿಲ್ಲವೆ? ಅಕ್ಕಸಾಲಿಗರು ಸ್ವತಃ ಅಕ್ಕನ ಚಿನ್ನದಲ್ಲಿಯೂ ಕತ್ತರಿಸದೆ ಬಿಡರು ಎಂಬ ಮಾತಿದೆ. ನೀವು ತೂಕ ಹಾಕಿಸಿ ತೆಗೆದುಕೊಳ್ಳಿ’ ಎಂದರು. ಆಗ ಗುರುಗಳು ‘ನನ್ನ ಶಿಷ್ಯನ ಬಗ್ಗೆ ನನಗೆ ನಂಬಿಕೆಯಿದೆ’ ಎಂದರು. ಆದರೆ ತನ್ನ ಗುರುಭಕ್ತಿಯನ್ನೇ ಅವಮಾನಕ್ಕೆ ಎಡೆಮಾಡಿದ ಹಾಗೂ ತನ್ನ ವೃತ್ತಿಯನ್ನು ಅವಮಾನಿಸಿದ ಆ ವ್ಯಕ್ತಿಯನ್ನು ಕುರಿತು ಬ್ರಹ್ಮಯ್ಯ ‘ನಾನು ವಡವೆಯನ್ನು ತೂಕ ಹಾಕಿಯೇ ಕೊಡುತ್ತೇನೆ’ ಎಂದು ಗುರುಗಳು ತಡೆಯುತ್ತಿದ್ದರೂ ತೂಕಕ್ಕೆ ಹಾಕುತ್ತಾನೆ. ಅದರಲ್ಲಿ ಒಂದು ಸಾಸಿವೆ ಕಾಳಿನಷ್ಟು ತೂಕದ ಚಿನ್ನ ಕಡಿಮೆ ಇರುತ್ತದೆ. ಗುರುಗಳ ಮನೆಯಲ್ಲಿದ್ದ ಆಗುಂತಕ ತನ್ನ ಪ್ರೌಢಿಮೆಗೆ ತಾನೇ ಬೀಗುತ್ತಾ ‘ನಾನು ಹೇಳಲಿಲ್ಲವೇ ಗುರುಗಳೆ’ ಎಂದು ವ್ಯಂಗ್ಯದ ನಗೆ ನಗುತ್ತಾನೆ. ಗುರುಗಳು ‘ಸೂಕ್ಷ್ಮ ಕೆಲಸ ಮಾಡುವಾಗ ಒಂದಷ್ಟು ಹೆಚ್ಚು ಕಡಿಮೆ ಆಗುತ್ತದೆ’ ಎಂದು ಸಮಾಧಾನದ ಮಾತನ್ನಾಡುತ್ತಾರೆ. ಆದರೆ ಬ್ರಹ್ಮಯ್ಯನಿಗೆ ಕೋಪ, ನಾಚಿಕೆ, ದುಃಖ ಎಲ್ಲವೂ ಆಗುತ್ತದೆ. ತಕ್ಷಣ ಗುರುವಿನ ಪಾದಗಳನ್ನು ಹಿಡಿದು ಕ್ಷಮೆ ಕೋರುತ್ತಾ ‘ಇನ್ನೆಂದು ನಾನು ಅಕ್ಕಸಾಲಿಗ ವೃತ್ತಿಯನ್ನು ಮಾಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡುತ್ತಾನೆ.


ಅಕ್ಕಸಾಲಿಗ ವೃತ್ತಿಯನ್ನು ತ್ಯಜಿಸಿದ ಬ್ರಹ್ಮಯ್ಯ ಮುಂಗಾಣದೆ ಕುಳಿತಿದ್ದಾಗ, ಕಲ್ಯಾಣದಲ್ಲಿ ನಡೆಯುತ್ತಿದ್ದ ಬಸವಣ್ಣನ ನೇತೃತ್ವದ ಕಾಯಕ ಚಳುವಳಿ ಗಮನ ಸೆಳೆಯುತ್ತದೆ. ಒಂದೇ ಮನದಿಂದ ಶಿವನನ್ನು ಸ್ತುತಿಸುತ್ತಾ ಕಲ್ಯಾಣದ ದಾರಿ ಹಿಡಿಯುತ್ತಾನೆ. ಅಲ್ಲಿನ ತ್ರಿಪುರಾಂತಕೇಶ್ವರ ದೇವಾಲಯದ ಮುಂದೆ ಕಿನ್ನರಿ ನುಡಿಸುವ ಕಾಯಕ ನಡೆಸುತ್ತಾ ಜೀವನ ಸಾಗಿಸುತ್ತಾನೆ. ಆತನ ಕಿನ್ನರಿಯ ನಾದವನ್ನು ಕೇಳಿದ ಜನತೆ ಪ್ರಸನ್ನರಾಗಿ ನೀಡುತ್ತಿದ್ದ ಹಣವನ್ನು ಸಂಗ್ರಹಿಸಿ ನಿತ್ಯ ಅನ್ನದಾಸೋಹ ನಡೆಸುತ್ತಾನೆ. ಜನ ಅವನನ್ನು ಪ್ರೀತಿಯಿಂದ ಕಿನ್ನರಿ ಬೊಮ್ಮಯ್ಯ ಎಂದು ಕರೆಯುತ್ತಾರೆ. ಇವನ ಜಂಗಮದಾಸೋಹ ಬಸವಣ್ಣ ಕಿವಿಗೂ ಮುಟ್ಟುತ್ತದೆ. ಅಂತಹ ನಿಷ್ಠ ಭಕ್ತರ ಅಗತ್ಯವಿದ್ದ ಬಸವಣ್ಣ ಆತನನ್ನು ಮಹಾಮನೆಗೆ ಕರೆದುಕೊಂಡು ಹೋಗಿ ಅಲ್ಲಿನವರಿಗೆ ಪರಿಚಯಿಸಿ ಆತನನ್ನು ಅವರೊಳಗೊಬ್ಬನನ್ನಾಗಿಸಿಕೊಳ್ಳುತ್ತಾನೆ.

ಒಮ್ಮೆ ಮಹಾಮನೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಸವಣ್ಣ ಈರುಳ್ಳಿಯು ತಾಮಸ ಗುಣವನ್ನು ಪ್ರಚೋದಿಸುವುದೆಂದು ವಾದಿಸಿ, ಈರುಳ್ಳಿಯ ಸೇವನೆಯನ್ನು ತ್ಯಜಿಸಬೇಕೆಂದು ಕರೆಕೊಡುತ್ತಾನೆ. ಜನಸಾಮಾನ್ಯರ ಆಹಾರವಾದ ಈರುಳ್ಳಿಯನ್ನು ಬಸವಣ್ಣ ನಿಂದಿಸಿದ್ದನ್ನು ತಡೆಯದ ಬ್ರಹ್ಮಯ್ಯ ಅದನ್ನು ವಿರೋಧಿಸಿ ಮಹಾಮನೆಯಿಂದ ಹೊರಟು ಹೋಗುತ್ತಾನೆ. ಹಾಗೆ ಬ್ರಹ್ಮಯ್ಯ ವಿರೋಧಿಸಿದ್ದೇಕೆಂದು ಚಿಂತಿಸಿದ ಬಸವಣ್ಣನಿಗೆ ತನ್ನ ಸಂಸ್ಕಾರದ ಬಗ್ಗೆ ತಾನೇ ನಾಚಿಕೆಪಟ್ಟುಕೊಳ್ಳುತ್ತಾನೆ. ಜನಸಾಮಾನ್ಯರೆಲ್ಲಾ ಈರುಳ್ಳಿಯನ್ನು ನಿತ್ಯಸೇವನೆ ಮಾಡುತ್ತಿದ್ದರೂ ಅವರೆಲ್ಲರೂ ತಾಮಸಗುಣದಿಂದ ಪೀಡಿತರಾಗಿಲ್ಲ ಎಂಬ ಸತ್ಯ ಬಸವಣ್ಣನಿಗೆ ಹೊಳೆಯುತ್ತದೆ. ತಕ್ಷಣ ಬ್ರಹ್ಮಯ್ಯನ ಮನೆಗೆ ಹೋಗಿ ತನ್ನ ದುಡುಕಿಗೆ ಕ್ಷಮೆಯಾಚಿಸಿದ್ದಲ್ಲದೆ, ಮತ್ತೆ ಬ್ರಹ್ಮಯ್ಯನನ್ನು ಮಹಾಮನೆಗೆ ಕರೆದುಕೊಂಡು ಬರುತ್ತಾನೆ. ಅಷ್ಟಕ್ಕೆ ಸಮಾಧಾನ ಹೊಂದದ ಬಸವಣ್ಣ ಈರುಳ್ಳಿಯನ್ನು ಊರಿನಲ್ಲೆಲ್ಲಾ ಮೆರವಣಿಗೆ ಮಾಡಿಸಿ, ಜನಸಾಮಾನ್ಯರ ಆಹಾರವಾದ ಅದಕ್ಕೆ ಸಿಗಬೇಕಾದ ಮನ್ನಣೆ ದೊರೆಯುವಂತೆ ಮಾಡುತ್ತಾನೆ.

ತನ್ನಿಷ್ಟದ ಕಿನ್ನರಿ ಕಾಯಕ, ತನ್ನಿಷ್ಟದೈವದ ಪೂಜೆ, ತಾನು ನಡೆಸುತ್ತಿರುವ ಜಂಗಮದಾಸೋಹ ಇವುಗಳೆಲ್ಲದರ ಜೊತೆಗೆ ಬಸವಾದಿಗಳ ಸಹವಾಸ ಇದರಿಂದ ಕಿನ್ನರಿ ಬೊಮ್ಮಯ್ಯನಿಗೆ ತನ್ನ ಬಗ್ಗೆ ತನಗೇ ಅಭಿಮಾನ. ಒಂದು ರೀತಿಯ ಅಹಂಕಾರ ಆಗಾಗ ಮನಸ್ಸಿನಲ್ಲಿ ಮೂಡುತ್ತಿರುತ್ತದೆ. ಒಮ್ಮೆ ಕಲಕೇತಯ್ಯ ಎಂಬ ಕಿಳ್ಳೆಕ್ಯಾತ ಜನಾಂಗದ ಅಲೆಮಾರಿ ಜಾನಪದ ಕಲಾವಿದನೊಬ್ಬನು ನಡೆಸುತ್ತಿದ್ದ ದಾನದ ಎದುರಿಗೆ ತನ್ನದೇನೂ ಅಲ್ಲ ಎಂಬ ಅರಿವು ಕಿನ್ನರಯ್ಯನಿಗೆ ಉಂಟಾಗುತ್ತದೆ. ಆ ಕಥೆ ಹೀಗಿದೆ. ಒಂದು ದಿನ ಬಡವನೊಬ್ಬನು ಕಿನ್ನರಯ್ಯ ನಿತ್ಯಪಡಿಕೊಡುವನೆಂದು ತಿಳಿದು ಅದಕ್ಕಾಗಿ ಅವನಲ್ಲಿಗೆ ಹೊರಟಿರುತ್ತಾನೆ. ದಾರಿಯಲ್ಲಿ ಸಿಕ್ಕ ಕೇತಯ್ಯನು ಆ ಬಡವನ ಕಷ್ಟವೇನೆಂದು ತಿಳಿದುಕೊಂಡು, ಅಂದು ತಾನು ಗಳಿಸಿದ್ದೆಲ್ಲವನ್ನೂ, ತನಗೂ ಒಂದಷ್ಟು ಇಟ್ಟುಕೊಳ್ಳದೆ ಆ ಬಡವನಿಗೆ ದಾನ ಮಾಡಿಬಿಡುತ್ತಾನೆ. ಆತ ಕೊಟ್ಟಿದ್ದೆಲ್ಲವನ್ನೂ ಆ ಬಡವ ಹೊರಲಾರದೆ ತನ್ನಿಂದ ಆದಷ್ಟನ್ನು ಹೊತ್ತುಕೊಂಡು ದಾರಿಯಲ್ಲಿ ಬರುವಾಗ ಬಸವಣ್ಣ ಮತ್ತು ಕಿನ್ನರಯ್ಯ ಅವರನ್ನು ಬೇಟಿ ಮಾಡಿ ಕೇತಯ್ಯನ ದಾನಗುಣವನ್ನು ಪ್ರಶಂಸಿಸುತ್ತಾನೆ. ಬಸವ ಬೇರೊಬ್ಬ ಆಳನ್ನು ಕಳುಹಿಸಿ ಉಳಿದ ಹೊನ್ನನ್ನು ಆ ಬಡವನ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾನೆ. ಬಸವಣ್ಣ ಕಿನ್ನರಯ್ಯನಲ್ಲಿ ಕೇತಯ್ಯನ ನಿಸ್ಸಂಗ್ರಹಬುದ್ದಿಯನ್ನು ಕೊಂಡಾಡುತ್ತಾನೆ. ಅದನ್ನು ಕೇಳಿದ ಕಿನ್ನರಯ್ಯ ‘ಅಯ್ಯೋ ನಾನು ಕೊಡುವ ಪಡಿಯೇ ದೊಡ್ಡದೆಂದು ನಾನೆಂದುಕೊಂಡಿದ್ದೆ. ಆದರೆ ಇಲ್ಲಿ ನನಗೊಬ್ಬ ಗುರುವಿದ್ದಾನೆ’ ಎಂದುಕೊಂಡು ಕೇತಯ್ಯನಲ್ಲಿಗೆ ಬಂದು ಅವನನ್ನು ಸ್ತುತಿಸುತ್ತಾನೆ.

ಮಹಾವಿರಾಗಿನಿಯಾದ ಅಕ್ಕಮಹಾದೇವಿಯು ಮಹಾಮನೆಗೆ ಬಂದಾಗ ಅವಳನ್ನು ಪರೀಕ್ಷಿಸುವ ಸಂದರ್ಭ. ಮಹಾಮನೆಯ ಬಾಗಿಲಿನಲ್ಲೇ ಅಕ್ಕಮಹಾದೇವಿಯನ್ನು ಕಿನ್ನರಿ ಬೊಮ್ಮಯ್ಯ ನಿಲ್ಲಿಸಿ ಅವಳ ವೈರಾಗ್ಯವನ್ನು ಒರೆಗಲ್ಲಿಗೆ ಅಚ್ಚುತ್ತಾನೆ. ಅವಳ ಮೈಮನಸ್ಸೆಲ್ಲವೂ ವೈರಾಗ್ಯವೇ ಆಗಿತ್ತು ಎಂಬುದನ್ನು ಮನಗಂಡ ಕಿನ್ನರಯ್ಯ ತನ್ನ ಅಲ್ಪತನಕ್ಕೆ ಪಶ್ಚತ್ತಾಪ ಪಡುತ್ತಾನೆ. ಸ್ವತಃ ಅಕ್ಕಮಹಾದೇವಿಯು ಆತನನ್ನು ಸಹೋದರ ಎಂದು ಕರೆದು ಸಮಾಧಾನಿಸುತ್ತಾಳೆ. ಕಿನ್ನರಯ್ಯ ತನ್ನೊಂದು ವಚನದಲ್ಲಿ ಆಕೆಯನ್ನು ಹುಲಿಗೆ ಹೋಲಿಸುತ್ತಾ, ‘ನಾನು ಹುಲಿಯ ನೆಕ್ಕಿ ಬದುಕಿದೆನು’ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಅಷ್ಟಲ್ಲದೆ ತನ್ನೊಂದು ವಚನದಲ್ಲಿ ಅಕ್ಕಮಹಾದೇವಿಯನ್ನು ಪರೀಕ್ಷಿಸುವಾಗಿನ ತನ್ನ ಅನುಭವವನ್ನು ಹೇಳಿಕೊಳ್ಳುತ್ತಾ ‘ತ್ರಿಪುರಾಂತಕದೇವಾ ಮಹಾದೇವಿಯಕ್ಕನ ನಿಲುವನ್ನರಿಯದೆ ಅಳುಪಿ ಕೆಟ್ಟೆನು’ ಎಂದು ಆಲಾಪಿಸಿದ್ದಾನೆ.

‘ಶರಣಲೀಲಾಮೃತ’ ಮತ್ತು ‘ಚೆನ್ನಬಸವಪುರಾಣ’ ಇವುಗಳಲ್ಲಿ ಕಿನ್ನರಿ ಬೊಮ್ಮಯ್ಯನ ಬಗ್ಗೆ ಪವಾಡದ ಒಂದು ಕತೆ ಬಂದಿದೆ. ಒಮ್ಮೆ ನಗರದ ಸೂಳೆಯೊಬ್ಬಳಿಗೆ, ಅವಳ ವಿಟಪುರುಷನೊಬ್ಬನು ಕಾಣಿಕೆಯಾಗಿ ಕೊಡಲು ಕೊಬ್ಬಿದ ಕುರಿಯನ್ನು ಕೊಂಡೊಯ್ಯುತ್ತಿರುತ್ತಾನೆ. ಅದು ಅವನಿಂದ ತಪ್ಪಿಸಿಕೊಂಡು ತ್ರಿಪುರಾಂತಕೇಶ್ವರ ದೇಗುಲದ ಗರ್ಭಗುಡಿಯನ್ನು ಹೊಕ್ಕುಬಿಡುತ್ತದೆ. ದೇವಾಲಯದ ಮುಂದೆ ಕಿನ್ನರಿ ಕಾಯಕವ ನಡೆಸುತ್ತಿದ್ದ ಬೊಮ್ಮಯ್ಯ ಅದನ್ನು ನೋಡುತ್ತಾನೆ. ಆ ಟಗರನ್ನು ಎಳೆದೊಯ್ಯಲು ಬಂದ ವಿಟಪುರುಷನಿಗೆ ಆ ದಿನದ ತನ್ನ ಗಳಿಕೆಯಲ್ಲವನ್ನೂ ಕೊಟ್ಟು ಟಗರನ್ನು ಬಿಟ್ಟು ಬಿಡುವಂತೆ ಬೇಡಿಕೊಳ್ಳುತ್ತಾನೆ. ಆ ವಿಟಪುರುಷನಿಗೋ ತನ್ನ ಸೂಳೆಯ ಮುಂದೆ, ಕಿನ್ನರಯ್ಯ ಕೊಡುವ ಒಂದಷ್ಟು ಹೊನ್ನು ಆಕರ್ಷಕವಾಗಿ ಕಾಣುವುದೇ ಇಲ್ಲ. ಆತನ ಕೋರಿಕೆಯನ್ನು ತಿರಸ್ಕರಿಸಿ ಟಗರನ್ನು ಎಳೆದೊಯ್ಯುತ್ತಿದ್ದ ಆತನನ್ನು ಕಿನ್ನರಯ್ಯ ತನ್ನ ಕಿನ್ನರಿಯಿಂದ ಹೊಡೆಯುತ್ತಾನೆ. ಅಷ್ಟಕ್ಕೇ ಆತ ಸತ್ತು ಹೋಗುತ್ತಾನೆ. ಈ ಘಟನೆ ಬಿಜ್ಜಳನವರೆಗೂ ಹೋಗುತ್ತದೆ. ಕಿನ್ನರಯ್ಯ ವಿಟಪುರುಷನನ್ನು ಕೊಂದಿದ್ದು ತಪ್ಪು ಎಂಬುದು ಬಿಜ್ಜಳನ ಆಕ್ಷೇಪ. ಆದರೆ ತನ್ನದೇನು ತಪ್ಪಿಲ್ಲ ಎಂದು ವಾದಿಸುವ ಕಿನ್ನರಯ್ಯ ಬೇಕಾದರೆ ಶಿವನಿಂದ ಸಾಕ್ಷಿ ಹೇಳಿಸುತ್ತೇನೆ ಎಂದು ಬಿಜ್ಜಳನಿಗೆ ಸವಾಲೆಸೆಯುತ್ತಾನೆ. ಎಲ್ಲರೂ ತ್ರಿಪುರಾಂತಕೇಶ್ವರ ಗುಡಿಯ ಬಳಿ ಬರುತ್ತಾರೆ. ಗರ್ಭಗುಡಿಯ ಬಾಗಿಲ ತೆಗೆಸಿ ಕಿನ್ನರಯ್ಯ ಶಿವನನ್ನು ಪ್ರಾರ್ಥಿಸುತ್ತಾನೆ. ಶಿವನೇ ಸಾಕ್ಷಿ ನುಡಿದಿದ್ದರಿಂದ ಬಿಜ್ಜಳ ಸುಮ್ಮನಾಗಬೇಕಾಗುತ್ತದೆ. ಸತ್ತು ಹೋಗಿದ್ದ ವಿಟಪುರುಷನೂ ಬದುಕುತ್ತಾನೆ. ಟಗರೂ ಬದುಕುತ್ತದೆ.

ಬಿಜ್ಜಳನ ಕೊಲೆಯಾಗಿ ಶಿವಶರಣರೆಲ್ಲಾ ಕಲ್ಯಾಣವನ್ನು ತೊರೆಯುವಾಗ, ದಂಡಿನ ದಳಪತಿಯಾಗಿದ್ದ ಚೆನ್ನಬಸವಣ್ಣನು ಅದರ ಉಸ್ತುವಾರಿಯನ್ನು ಕಿನ್ನರಿ ಬೊಮ್ಮಯ್ಯನಿಗೆ ವಹಿಸಿಕೊಡುತ್ತಾನೆ. ದಂಡಿನ ದಳಪತಿಯಾಗಿ ಹೋರಾಟವನ್ನು ಮುಂದುವರೆಸಿದ ಕಿನ್ನರಯ್ಯ, ಉಳವಿಯ ಮಹಾಮನೆಯ ಮುಂದಿನ ನದಿಯ ದಿಕ್ಕನ್ನು ತನ್ನ ದಂಡಿನ ನೆರವಿನಿಂದ ಬದಲಾಯಿಸುತ್ತಾನೆ. ಅದರ ಪರಿಣಾಮವಾಗಿ ಶತ್ರು ಸೇನೆ ಅಪಾರ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ನಂತರ ಉಳವಿಯಲ್ಲೇ ಕೊನೆಯುಸಿರೆಳೆದ ಕಿನ್ನರಯ್ಯ ಸಮಾಧಿ ಈಗಲೂ ಉಳವಿಯಲ್ಲಿದೆ. ಆತ ತಿರುಗಿಸಿದ ಹೊಳೆಗೆ ಕಿನ್ನರಿ ಬೊಮ್ಮಯ್ಯನ ಹೊಳೆ ಎಂದೇ ಹೆಸರಾಗಿದೆ.

ಕಿನ್ನರ ಬೊಮ್ಮಯ್ಯನು ತನ್ನಿಷ್ಟದೈವವಾದ ‘ಮಹಾಲಿಂಗ ತ್ರಿಪುರಾಂತಕ’ನ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಗುರುಲಿಂಗಜಂಗಮ ಸ್ವರೂಪ ಇವನ ವಚನಗಳಲ್ಲಿ ವ್ಯಕ್ತವಾಗಿದೆ. ಮುಖ್ಯವಾಗಿ ಕಿನ್ನರಯ್ಯ ಅಕ್ಕಮಹಾದೇವಿಯನ್ನು ಪರೀಕ್ಷಿಸಿದ ನಂತರ ಅದರಿಂದಾದ ತನ್ನ ಅನುಭವವನ್ನು ದಾಖಲಿಸಿರುವ ವಚನಗಳು ಗಮನ ಸೆಳೆಯುತ್ತವೆ. ಅದರಲ್ಲಿ ಒಂದು ವಚನ ಹೀಗಿದೆ.

ಮಸ್ತಕವ ಮುಟ್ಟಿ ನೋಡಿದಡೆ

ಮನೋಹರದಳಿವು ಕಾಣ ಬಂದಿತ್ತು!

ಮುಖಮಂಡಲವ ಮುಟ್ಟಿ ನೋಡಿದಡೆ,

ಮೂರ್ತಿಯ ಅಳಿವು ಕಾಣ ಬಂದಿತ್ತು!

ಕೊರಳ ಮುಟ್ಟಿ ನೋಡಿದಡೆ,

ಗರಳಧರನ ಇರವು ಕಾಣಬಂದಿತ್ತು!

ತೋಳುಗಳ ಮುಟ್ಟಿ ನೋಡಿದಡೆ,

ಶವನಪ್ಪುಗೆ ಕಾಣಬಂದಿತ್ತು!

ಉರಸ್ಥಲವ ಮುಟ್ಟಿ ನೋಡಿದಡೆ,

ಪರಸ್ಥಲದಂಗಲೇಪ ಕಾನ ಬಂದಿತ್ತು!

ಬಸಿರ ಮುಟ್ಟಿನೋಡಿದಡೆ,

ಬ್ರಹ್ಮಾಂಡವ ಕಾಣಬಂದಿತ್ತು!

ಗುಹ್ಯವ ಮುಟ್ಟಿನೋಡಿದಡೆ,

ಕಾಮದಹನ ಕಾಣಬಂದಿತ್ತು!

ಮಹಾಲಿಂಗ ತ್ರಿಪುರಾಂತಕದೇವಾ,

ಮಹಾದೇವಿಯಕ್ಕನ ನಿಲುವನರಿಯದೆ ಅಳುಪಿ ಕೆಟ್ಟೆನು.

ಅಕ್ಕಮಹಾದೇವಿಯ ಪರೀಕ್ಷೆನಡೆದ ಮೇಲೆ, ಆಕೆ ಕಿನ್ನರಯ್ಯನನ್ನು ಸಹೋದರನೆಂದು ಸ್ವೀಕರಿಸಿದ ಮೇಲೆ ಕಿನ್ನರಯ್ಯ ಅವಳಿಗೆ ಶರಣು ಹೋಗುತ್ತಾನೆ. ಆಗಿನ ಭಾವ ಕೆಳಗಿನ ವಚನದಲ್ಲಿದೆ.

ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ,

ಶರಣಾರ್ಥಿ ಶರಣಾರ್ಥಿ ಕರುಣಸಾಗರ ನಿಧಿಯೆ

ದಯಾಮೂರ್ತಿ ತಾಯೆ, ಶರಣಾರ್ಥಿ!

ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,

ನೀವು ಬಿಡಿಸಿದವರಾಗಿ ನಿಮ್ಮ ದಯದಿಂದ

ನಾನು ಹುಲಿನೆಕ್ಕಿ ಬದುಕಿದೆನು ಶರಣಾರ್ಥಿ ಶರಣಾರ್ಥಿ ತಾಯೆ.

Tuesday, July 20, 2010

ಬೇಂದ್ರೆಯವರ ಸರಸ್ವತೀ ಕಾಣ್ಕೆ

ಬೇಂದ್ರೆಯವರ ‘ನಾಲ್ವರು ತಾಯಂದಿರು’ ಕವನದ ಪಲ್ಲವಿಯಲ್ಲಿ ಪೌರಾಣಿಕ ಕಲ್ಪನೆಯ ಮಹಾಸರಸ್ವತಿಯನ್ನು ಕಾಣಲು ಸಾಧ್ಯವಿದೆ.

ಬಾರೆ ಬಾ ಮಹೇಶ್ವರೀ

ಬಾ, ಬಾ, ಬಾ, ಬಾ.

ಬಾರೆ ಬಾ ಮಹೇಶ್ವರೀ

ಮಹಾಕಾಳಿ, ಮಹಾಲಕ್ಷ್ಮಿ

ಬಾ ಮಹಾಸರಸ್ವತೀ

ಇಹುದು ನಿಮಗೆ ಶಾಶ್ವತಿ

‘ಗಾಯತ್ರೀ ಸೂಕ್ತ’ ಕವನದಲ್ಲಿ ‘ತಾಳಗತಿಯಲ್ಲಿ ವಿಶ್ವಗಳ ಗೀತ ಹಾಡಿದಾP’ ಎಂಬ ಸಾಲು ಇಡೀ ವಿಶ್ವಸಾಹಿತ್ಯಕ್ಕೇ ಸರಸ್ವತಿಯನ್ನು ಅಧಿದೇವತೆಯೆಂಬುದನ್ನು ಸೂಚಿಸುತ್ತದೆ. ‘ಹಾಡಿದವನ ಕಾಪಾಡಲೆಂದು ಕೈ ಹತ್ತು ಎತ್ತಿದಾಕೆ’ ಎಂಬ ಸಾಲು ‘ಕವಿಕುಲದೇವತೆ’ ಸರಸ್ವತಿಯನ್ನು ಮತ್ತು ದಶಭುಜ ಸರಸ್ವತಿಯ ಶಿಲ್ಪವನ್ನು ನೆನಪಿಸುತ್ತದೆ.

‘ಸರಸ್ವತಿ’ ಎಂಬ ಕವನದಲ್ಲಿ, ವಿಷ್ಣುವಿನ ನಾಭಿಯಿಂದ ಹ್ಮಟ್ಟಿದ, ಕಮಲಾಸನದಲ್ಲಿ ಕುಳಿತ, ನಾಲ್ಕು ಮುಖದ ಬ್ರಹ್ಮ ನಾಲ್ಕು ವೇದಗಳನ್ನು ಸೃಷ್ಟಿಸಿ ಹಾಡತೊಡಗಿದಾಗ ‘ಓಂ’ಕಾರ ಸ್ವರೂಪದ ಸರಸ್ವತಿಯು ಶಂಖವನೂದಿದಂತೆ ಹೊರಟಿತು ಎನ್ನುತ್ತಾರೆ. ಹಾಗೆ ಹೊರಟ ಸರಸ್ವತಿಯು ಸರ್ವವನ್ನೂ ವ್ಯಾಪಿಸುತ್ತಾ ಬಂದಾಗ ಕವಿ ಬೇಂದ್ರೆಯವರು,

ನಾಚು ಮಾಡುತ ಬಂದು ವರದ ಹಸ್ತವನಿಟ್ಟ ಬಾಗಿಸಿದ ತಲೆಯ ಮೇಲೆ


...............ಹಚ್ಚೆ ಸತ್ಯ ತತ್ವದ ದೀಪವಾನಂದವನ್ನು ಬೀರೆ

ಎಂದು ಸ್ವಾಗತಿಸುತ್ತಾರೆ.

‘ಸರಸ್ವತೀ ಸೂಕ್ತ’ ಕವನದ

ಅಂಚೆ ಏರಿ ನೀರಿನಾಕೆ

ಗಾಳಿಯಲ್ಲಿ ಸುಳಿದಳೋ

ಬೆಳಕಿನಲ್ಲಿ ಬೆಳೆದಳೋ

ಎಂಬ ಸಾಲು ಸರಸ್ವತಿಯ ಸಾರ್ವತ್ರಿಕತೆಯನ್ನು ಮನಗಾಣಿಸುತ್ತದೆ. ನೀರಿನಾಕೆ ಎಂಬ ಪದ ಸರಸ್ವತೀ ನದಿಯನ್ನು, ಗಾಳಿಯಲ್ಲಿ ಸುಳಿದಳೋ ಎಂಬುದು ಉಸಿರಿನ ಸಹಾಯದಿಂದ ಉತ್ಪತ್ತಿಯಾದ ಮಾತನ್ನು, ಬೆಳಕಿನಲ್ಲಿ ಬೆಳೆದಳೋ ಎಂಬುದು ಭಾಷೆಯ ಚಾಕ್ಷುಷರೂಪವಾದ ಬರವಣಿಗೆಯನ್ನು ಸೂಚಿಸುತ್ತವೆ. ಸರಸ್ವತಿಗಿರುವ ನದಿದೇವತೆ, ವಾಗ್ದೇವತೆ ಮತ್ತು ಭಾಷಾ ಎಂಬ ವಿಶೇಷಣಗಳನ್ನು ಅನುಸರಿಸಿ ಮೇಲಿನ ಪರಿಕಲ್ಪನೆ ಮೂಡಿದೆ. ಸರಸ್ವತಿಯ ಪರಿಕಲ್ಪನೆ ವಿಕಾಸವಾದ ಮೂರು ಮುಖ್ಯ ಹಂತಗಳನ್ನು ಈ ಸಾಲುಗಳು ಧ್ವನಿಸುತ್ತವೆ.

‘ನೀನಾದಿನೀ-ದೇವತಾ ಸರಸ್ವತಿ’ ಕವನದ

....... ಆ ಸ್ವಾದಿನೀ
ವಾಜಿನಿ

ಜೀವಾಜಿನೀ
ವಾಜಿನೀವತೀ
ಸರಸ್ವತೀ

ರಸಸಾರಸ
ಹಂಸೀ
ತಮಧ್ವಂಸೀ

ಉತ್ತಮಾ
ಆದಿಮಾ
ಮಾ
ಆದತೀ

ಎಂಬ ಸಾಲುಗಳು, ವೇದದಲ್ಲಿ ಕಂಡುಬರುವ ಸರಸ್ವತಿಯನ್ನು ಚಿತ್ರಿಸುತ್ತವೆ. ಋಗ್ವೇದದ ಏಳನೇ ಮಂಡಲದ ೯೫ ಮತ್ತು ೯೬ನೇ ಸೂಕ್ತಗಳು ಈ ಪದ್ಯಕ್ಕೆ ಪ್ರೇರಣೆಯಾಗಿರುವಂತೆ ತೋರುತ್ತದೆ. ವಾಜಿನೀವತೀ ಎಂದರೆ ಒಳ್ಳೆ ಅನ್ನವನ್ನು ಕೊಡುವವಳು ಎಂದರ್ಥ; ಅವಳೇ ನದಿದೇವತೆ ಸರಸ್ವತಿ.

ವೇದದಿಂದ ಪ್ರೇರಿತವಾಗಿರುವ ಮತ್ತೊಂದು ಕವಿತೆ ‘ಶಾರದೆಯೇ!’ ಎಂಬುದು.

ವೇದದ ಮಂತ್ರವ ವಾದವ ಮಾಡುವ ತಲೆಯಲ್ಲಿ

ನೀರೋ ನೀರೆಯೋ ಎನುವೊಲು ಇಹೆ ರಸ ಶಿಲೆಯಲ್ಲಿ

ಇಲ್ಲಿ ‘ನೀರೋ ನೀರೆಯೋ’ ಎಂಬುದು ನದಿಯೋ ನದೀದೇವತೆಯೋ ಎಂಬುದನ್ನು ಸೂಚಿಸುತ್ತದೆ. ಮುಂದುವರೆದು, ಬೇಂದ್ರೆಯವರು ತಮ್ಮನ್ನು ತಾವು ‘ನಿನ್ನ ಉಪಾಸನೆ ಮಾಡುವ ಸಾರಸ್ವತ ಸುತನು’ ಎಂದು ಕರೆದುಕೊಂಡಿದ್ದಾರೆ. ಸಾರಸ್ವತನು ಕೆಲವೊಮ್ಮೆ ಸರಸ್ವತಿಯ ಪತಿಯಾಗಿಯೂ ಕೆಲವೊಮ್ಮೆ ಸುತನಾಗಿಯೂ ವೇದಪುರಾಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಇಲ್ಲಿ ಕವಿಗಳು ಸರಸ್ವತೀಸುತರು ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ನೋಡಿದರೆ, ಸಾರಸ್ವತನು ಸರಸ್ವತಿಗೆ ಪತಿ ಎಂದಾಗುತ್ತದೆ. ಇಲ್ಲದಿದ್ದರೆ, ‘ಕವಿ ಬೇಂದ್ರೆ’ ಸರಸ್ವತಿಯ ಮೊಮ್ಮಗನಾಗಬೇಕಾಗುತ್ತದೆ!

‘ರಾಣಿವಾಸದ ವಾಣಿಗೆ’ ಕವಿತೆ ಒಂದು ರೀತಿಯಲ್ಲಿ ಸರಸ್ವತಿಯ ನಿಂದನಾ ಸ್ತುತಿ.

ಸರಸೋತಿ ಅಂತ ನಿನ್ನ

ಅರಸೊತ್ತಿಗೆ ಒಪ್ಪಿಕೊಂಡೆ

ಬರಸೋ ಹೊತ್ತಿಗೆ, ಬರಸು ಇನ್ನ

ಪುರುಸೊತ್ತಿಲ್ಲಾ.

ಎಂದು ವಾಣಿಯ ಕೃಪೆಗಾಗಿ ಪ್ರೀತಿಪೂರ್ವಕ ಒತ್ತಾಯ ಮಾಡುತ್ತಲೇ,

ಆ ಗಾನ ಈ ಗಾನ ಸಾಕು ಮಾಡು

ವೇದಾನ ಹಾಳತ ಮಾಡಿ, ಅದನ್ನ ಹಾಡು

ಎಂದು ಆಜ್ಞಾಪಿಸುತ್ತಾರೆ. ಆದರೆ ಅದಕ್ಕೆ

ಸಂಬಳ ಕೊಡಲಾರೆ

ಸಂಭಾಳಿಸಿಕೋ ನೀನು

ಎಂದು ಕೈಚೆಲ್ಲುತ್ತಾರೆ. ನಿಜವಾಗಿಯೂ ಇದು ಪ್ರತಿಭಾಶಾಲಿಯಾದ ಕವಿಯ ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಮಹಾಕವಿಗಳದ್ದು ಯಾವಾಗಲೂ ಬೇಡುವ ಪ್ರತಿಭೆಯಾಗಿರದೆ, ಪಡೆಯುವ ಪ್ರತಿಭೆಯಾಗಿರುತ್ತದೆ. ಅಂತೆಯೇ ಬೇಂದ್ರೆಯವರದೂ ಸಹ.

ಸರಸ್ವತಿಯನ್ನು ಕಾವ್ಯದೇವತೆಯಾಗಿ ಚಿತ್ರಿಸಿರುವ ಕವಿತೆ ‘ಓ ಹಾಡೇ!’.

ಭೋಗಯೋಗದ ಪದವೆ ಜೈನವಾಙ್ಮಯ ಮಧುವೆ

ಯೋಗ ಭೋಗದ ಹದವೆ ವಚನಬ್ರಹ್ಮನ ವಧುವೆ

ಮುದ್ದುವಿಠಲಗೆ ಮಾರಿಕೊಂಡ ದಾಸಿ!

ಮುದ್ದಣ್ಣನ ಲಲ್ಲೆವಾತಿನ ಪ್ರೇಮರಾಶೀ

ಜೀವ ಜೀವಾಳದಲಿ ಬೆರೆತು ಕೂಡೇ

ಕನ್ನಡ ಸಾಹಿತ್ಯ ವಾಙ್ಮಯ ಬೆಳೆದು ಬಂದ ದಾರಿಯನ್ನು ಸರಸ್ವತಿಯ ಸ್ತುತಿಯಲ್ಲಿಯೇ ತೋರಿಸುವ ಶಬ್ದಗಾರುಡಿಗತನ ಬೇಂದ್ರೆಯವರದ್ದು. ಮುದ್ದುವಿಠಲಗೆ ಮಾರಿಕೊಂಡ ದಾಸಿ ಎಂಬುದು, ದಾಸಸಾಹಿತ್ಯದ ಬೃಹತ್ತು-ಮಹತ್ತುಗಳನ್ನು ಸೂಚಿಸಿದರೆ, ಮುದ್ದಣನ ಲಲ್ಲೆವಾತಿನ ಪ್ರೇಮರಾಶಿ ಎಂಬುದು, ಮುದ್ದಣನ ಕಾವ್ಯಗಳ ಸರಸ-ಪ್ರೇಮವನ್ನು ಮನಗಾಣಿಸುತ್ತದೆ. ಪದ್ಯದ ನಾಲ್ಕನೇ ಚರಣದ ‘ಮುಂಗೈಯ ಮೇಲೆ ಅಂಗಜನ ಅರಗಿಳಿಯಿರಿಸಿ’ ಎಂಬುದು ಶೃಂಗೇರಿ ಶಾರದೆಯನ್ನು ಚಿತ್ರಿಸಿದರೆ, ‘ಚಾರುತಮ ಸರಸ ಅರಸಂಚೆಯನು ಹೂಡಿ, ಬಂದು ನನ್ನಿದಿರಲ್ಲಿ ನಾಟ್ಯವಾಡೆ’ ಸಾಲು ಸರಸ್ವತಿಯ ವಾಹನ ಹಂಸವನ್ನು ಸೂಚಿಸುತ್ತದೆ; ಜತೆಗೆ ನಾಟ್ಯಸರಸ್ವತಿಯನ್ನೂ ಚಿತ್ರಿಸುತ್ತದೆ. ಕೊನೆಯ ಚರಣದ ‘ನನ್ನ ನಾಲಗೆ ನಿನ್ನ ಬರಿ ಸೂಲಗಿತಿ’ ಎಂಬುದು ‘ವಾಕ್’ ಜನನಸ್ಥಾನ ನಾಲಗೆ; ನಾಲಗೆ ಬರಿ ಸೂಲಗಿತ್ತಿ ಮಾತ್ರ, ತಾಯಿಯಾಗಲಾರದು. ಆ (ವಾಕ್)ತಾಯಿ ನೀನೇ ಎಂಬ ನವೀನ ಕಲ್ಪನೆಯನ್ನು ಕಟ್ಟಿಕೊಡುತ್ತದೆ.

‘ಹಿಂದುಸ್ಥಾನ, ಪಾಕಿಸ್ಥಾನ ಒಂದಾಗಬೇಕು, ಭಾರತ ಹಮಾರ ಮುಂದಾಗಬೇಕು’ ಎನ್ನುವ ಆಶಯದ ‘ಕವಿಗಳ ಕಾಣಿಕಿ’ ಕವನದ ಪ್ರಥಮ ಸಾಲಿನಲ್ಲಿಯೇ ‘ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ’ ಎಂದು ಸರ್ವಭಾಷಾಮಯೀ ಸರಸ್ವತಿಗೆ ನಮಸ್ಕರಿಸುತ್ತಾರೆ. ‘ಸಪ್ತಕಲಾ’ ಕವಿತೆ ಸಂಗೀತ, ಶಿಲ್ಪ, ನೃತ್ಯ, ನಾಟಕ, ಜೀವನ, ವಾಸ್ತು ಮತ್ತು ಸಾಹಿತ್ಯ ಎಂಬ ಏಳು ಕಲೆಗಳ ಬಗ್ಗೆ ಪ್ರಸ್ತಾಪಿಸುತ್ತದೆ. ಅದರಲ್ಲಿ ಏಳನೆಯದು ಸರ್ವಾತ್ಮಕವಾದ ಸಾಹಿತ್ಯ. ಅದರಲ್ಲಿ, ‘ಸಕಲಾs ಸಿದ್ಧಾs ಸರಸ್ವತಿ ವೀಣಾ ಪಾಣಿ ಪಶ್ಯಂತಿಯ ವಾಣಿ........’ ಹೀಗೆ ಸಾಹಿತ್ಯವನ್ನು ಸರಸ್ವತಿ ಎಂದೇ ಸ್ತುತಿಸಲಾಗಿದೆ. ಹಾಗೆ ನೋಡಿದರೆ ಬೇಂದ್ರೆಯವರು ಹೇಳಿರುವ ಸಪ್ತಕಲೆಗಳಲ್ಲಿ ಸಾಹಿತ್ಯದ ಜೊತೆಗೆ ಸಂಗೀತ, ಶಿಲ್ಪ, ನೃತ್ಯ, ನಾಟಕ ಇವೆಲ್ಲವೂ ಸರಸ್ವತಿಗೆ ಸಂಬಂಧಿಸಿದವುಗಳೇ ಆಗಿವೆ. ಮಂಗರಸನ ಮತ್ತು ಕವಿಕಾಮನ ‘ಸಂಸಾರವಾರಿಧಿಗೆ ದ್ರೋಣಿ’ ಮತ್ತು ಕವಿಕಾಮನ ‘ಸಂಸಾರ ಸಂಭಾವಿತಾತ್ಮೆ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಸರಸ್ವತಿಯನ್ನು ಗ್ರಹಿಸಿದರೆ, ಜೀವನಕಲೆ ಕೂಡಾ ಸರಸ್ವತಿಗೆ ಸಂಬಂಧಿಸಿದ್ದಾಗಿದೆ. ಆದರೆ, ವಾಸ್ತು ಸಪ್ತಕಲೆಗಳಲ್ಲಿ ಸೇರಿದ್ದು ಹೇಗೆ ಎಂಬುದು ಅರ್ಥವಾಗುವುದಿಲ್ಲ. ಸರಸ್ವತಿಯು ‘ಸಕಲಕಲಾಧಾರಿಣಿ’ ಎಂದರೂ, ವಾಸ್ತುವಿಗೇಕೆ ಈ ಪ್ರಾಮುಖ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹುಶಃ ಬೇಂದ್ರೆಯವರಿಗಿದ್ದ ಸಂಖ್ಯಾಶಾಸ್ತ್ರದ ಒಲವು ವಾಸ್ತುವನ್ನು ಸಪ್ತಕಲೆಗಳಲ್ಲಿ ಸೇರಿಸಲು ಕಾರಣವಿದ್ದಿರಬೇಕು.

Friday, July 09, 2010

ಕಲಕೇತಯ್ಯ ಅಥವಾ ಕಲಕೇತ ಬೊಮ್ಮಯ್ಯ

ಕೈಯಲ್ಲಿ ಹಿಡಿದಿದ್ದ ಬೆತ್ತ ಗಾಳಿಯಲ್ಲಿ ವಿವಿಧ ಆಕೃತಿಗಳನ್ನು ರಚಿಸುತ್ತಾ ತಿರುಗುತ್ತಿತ್ತು. ಕಾಲಿನಲ್ಲಿದ್ದ ಕಿರುಗೆಜ್ಜೆಗಳು ಕಾಲಂದಿಗೆಯೊಂದಿಗೆ ಸೇರಿ ಘಲ್ ಘಲ್ ಶಬ್ದವನ್ನು ಕುಣಿತಕ್ಕೆ ಅನುಗುಣವಾಗಿ ಹೊರಹೊಮ್ಮಿಸುತ್ತಿದ್ದವು. ಮುಂದಲೆಯಲ್ಲಿ ಎತ್ತಿಕಟ್ಟಿದ ಮುಡಿ, ನೊಸಲಲ್ಲಿ ಧರಿಸಿದ ವಿಭೂತಿ, ಕಿವಿಗಳಲ್ಲಿ ಧರಿಸಿದ ಹಸಿರಿನೋಲೆ, ಕಾಲುಗಳಲ್ಲಿ ಗೆಜ್ಜೆ-ಅಂದಿಗೆ, ಎಡಗೈಯಲ್ಲಿ ಟಗರಿನ ಕೊಂಬು, ಬಲಗೈಯಲ್ಲಿ ಬೆತ್ತ ಮೈಮೇಲೆ ಕಾವಿಯ ಬಟ್ಟೆ ಧರಿಸಿದ ಕಲಕೇತಯ್ಯ ಮದ್ದಳೆಯ ಧ್ವನಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರೆ ಬೀದಿಬೀದಿಯ ಜನರೆಲ್ಲಾ ಭಲೇ...ಭಲೇ ಎಂದು ಕೂಗಿ ಆತನನ್ನು ಉರಿದುಂಬಿಸುತ್ತಿದ್ದರು. ಕಲಕೇತಯ್ಯ ಗತ್ತಿನ ನಡಿಗೆ ಹಾಕುತ್ತಾ ಬರುತ್ತಿದ್ದ ಹಾಗೆ ಯಾವಾವುದೋ ಕೆಲಸದ ಮೇಲೆ ಹೊರಟವರೆಲ್ಲಾ ಒಂದರಗಳಿಗೆ ನಿಂತು ಅವನ ಕುಣಿತವನ್ನು ನೋಡಿಯೇ ಮುನ್ನಡೆಯುತ್ತಿದ್ದರು. ಬೀದಿಯ ಕೊನೆಗೆ ಬಂದಾಗ ಕೇತಯ್ಯನ ಕುಣಿತಕ್ಕೆ ವಿರಾಮ. ನೋಡುತ್ತಿದ್ದ ಜನರೆಲ್ಲಾ ತಮಗೆ ತೋಚಿದಷ್ಟು ಹಣವನ್ನು ಕೇತಯ್ಯನ ಸಂಗಡಿಗ ಹಿಡಿದ ಜೋಳಿಗೆಯಲ್ಲಿ ಹಾಕುತ್ತಿದ್ದರು.

ತಮ್ಮ ಬಿಡಾರಕ್ಕೆ ಹಿಂದುರಿಗಿದ ನಂತರ ಕೇತಯ್ಯ ತನ್ನ ಅಂದಿನ ಗಂಜಿಯೂಟಕ್ಕೆ ಎಷ್ಟು ಬೇಕೋ ಅಷ್ಟು ಹಣವನ್ನು ಎಣಿಸಿ ತೆಗೆದುಕೊಡು ಉಳಿದುದ್ದನ್ನು ಬಡವರಿಗೆ, ಅಂಗವಿಕಲರಿಗೆ ಹಂಚಿಬಿಡುವಂತೆ ತನ್ನ ಸಂಗಡಿಗರಿಗೆ ಹೇಳುತ್ತಾನೆ. ಸಂಗಡಿಗರೆಲ್ಲಾ ಕೆಲವೇ ಸಮಯದಲ್ಲಿ ಸಂಗ್ರಹಗೊಂಡ ಅಷ್ಟೂ ಹಣವನ್ನು ನಿರ್ಗತಿಕರಿಗೆ ಹಂಚಿಬರುತ್ತಾರೆ. ಬರುವಷ್ಟರಲ್ಲಿ ಸಿದ್ದಗೊಂಡಿದ್ದ ಗಂಜಿಯೂಟವನ್ನು ಉಂಡು ಎಲ್ಲರೂ ವಿಶ್ರಾಂತಿಯ ಮೊರೆ ಹೋಗುತ್ತಾರೆ.

ಸುಮಾರು ಎಂಟನೂರೈವತ್ತು ವರ್ಷಗಳ ಹಿಂದೆ ಕಲ್ಯಾಣದಲ್ಲಿದ್ದ ಕಿಳ್ಳೇಕ್ಯಾತ ಕುಲದ ಕಲಕೇತ ಬೊಮ್ಮಯ್ಯ ಎಂಬುವವನ ದಿನಚರಿಯಿದು. ತನ್ನ ಕುಲದ ವೃತ್ತಿಯಾದ ವೇಷದ ಕುಣಿತವನ್ನು ನಿಷ್ಠೆಯಿಂದ ನಡೆಸುತ್ತಾ, ಕುಣಿತ ನೋಡಿದವರಿಗೆ ಮನರಂಜನೆಯನ್ನು, ಅದರಿಂದ ಗಳಿಸಿದ ಹಣವನ್ನು ನಿರ್ಗತಿಕರಿಗೆ ಹಂಚುತ್ತಾ ನಿಸ್ಸಂಗ್ರಹ ಬುದ್ದಿಯಿಂದ ಬದುಕು ಸಾಗಿಸುತ್ತಿದ್ದ ಶಿವಭಕ್ತ ಹಾಗೂ ಬಸವಾನುಯಾಯಿ ಈತ.

ಕಿನ್ನರಯ್ಯ ಎಂಬ ಶರಣ ತಾನು ನಡೆಸುತ್ತಿದ್ದ ದಾಸೋಹದಿಂದ ಕಲ್ಯಾಣದಲ್ಲಿ ಅತ್ಯಂತ ಚಿರಪರಿಚಿತನಾಗಿರುತ್ತಾನೆ. ಒಂದು ದಿನ ಬಡವನೊಬ್ಬನು ಕಿನ್ನರಯ್ಯ ನಿತ್ಯಪಡಿಕೊಡುವನೆಂದು ತಿಳಿದು ಅದಕ್ಕಾಗಿ ಅವನಲ್ಲಿಗೆ ಹೊರಟಿರುತ್ತಾನೆ. ದಾರಿಯಲ್ಲಿ ಸಿಕ್ಕ ಕೇತಯ್ಯನು ಆ ಬಡವನ ಕಷ್ಟವೇನೆಂದು ತಿಳಿದುಕೊಂಡು, ಅಂದು ತಾನು ಗಳಿಸಿದ್ದೆಲ್ಲವನ್ನೂ, ತನಗೂ ಒಂದಷ್ಟು ಇಟ್ಟುಕೊಳ್ಳದೆ ಆ ಬಡವನಿಗೆ ದಾನ ಮಾಡಿಬಿಡುತ್ತಾನೆ. ಆತ ಕೊಟ್ಟಿದ್ದೆಲ್ಲವನ್ನೂ ಆ ಬಡವ ಹೊರಲಾರದೆ ತನ್ನಿಂದ ಆದಷ್ಟನ್ನು ಹೊತ್ತುಕೊಂಡು ದಾರಿಯಲ್ಲಿ ಬರುವಾಗ ಬಸವಣ್ಣ ಮತ್ತು ಕಿನ್ನರಯ್ಯ ಅವರನ್ನು ಬೇಟಿ ಮಾಡಿ ಕೇತಯ್ಯನ ದಾನಗುಣವನ್ನು ಪ್ರಶಂಸಿಸುತ್ತಾನೆ. ಬಸವ ಬೇರೊಬ್ಬ ಆಳನ್ನು ಕಳುಹಿಸಿ ಉಳಿದ ಹೊನ್ನನ್ನು ಆ ಬಡವನ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾನೆ. ಬಸವಣ್ಣ ಕಿನ್ನರಯ್ಯನಲ್ಲಿ ಕೇತಯ್ಯನ ನಿಸ್ಸಂಗ್ರಹಬುದ್ದಿಯನ್ನು ಕೊಂಡಾಡುತ್ತಾನೆ. ಅದನ್ನು ಕೇಳಿದ ಕಿನ್ನರಯ್ಯ ‘ಅಯ್ಯೋ ನಾನು ಕೊಡುವ ಪಡಿಯೇ ದೊಡ್ಡದೆಂದು ನಾನೆಂದುಕೊಂಡಿದ್ದೆ. ಆದರೆ ಇಲ್ಲಿ ನನಗೊಬ್ಬ ಗುರುವಿದ್ದಾನೆ’ ಎಂದುಕೊಂಡು ಕೇತಯ್ಯನಲ್ಲಿಗೆ ಬಂದು ಅವನನ್ನು ಸ್ತುತಿಸುತ್ತಾನೆ.

ಕೇತಯ್ಯನ ಹನ್ನೊಂದು ವಚನಗಳು ದೊರಕಿವೆ. ಆತನ ಅಂಕಿತ ‘ಮೇಖಲೇಶ್ವರಲಿಂಗ’. ‘ಎನ್ನ ತಗರು ಆರು ಸನ್ನೆಗೆ ಏರದು, ಮೂರು ಸನ್ನೆಗೆ ಓಡದು, ಲೆಕ್ಕವಿಲ್ಲದ ಸನ್ನೆಗೆ ಧಿಕ್ಕರಿಸಿ ನಿಲುವುದು’, ‘ಕಾಲನಾಲ್ಕು ಮುರಿದು, ಕೋಡೆರಡ ಕಿತ್ತು, ಆರಡಗಿತ್ತು ತಗರಿನ ಹಣೆಯಲ್ಲಿ, ಮೂರು ಹೋಯಿತ್ತು ತಗರಿನ ಕೋಡೆರಡರಲ್ಲಿ, ಎಂಟು ಹೋಯಿತ್ತು ಕಾಲು ನಾಲ್ಕರಲ್ಲಿ, ತಗರಿನ ಜೀವ ಉಭಯದ ಸನ್ನೆಯಲ್ಲಿ ಹೋಯಿತ್ತು’ ಎನ್ನುವ ಮೊದಲಾದ ಬೆಡಗಿನ ವಚನಗಳು ‘ಪ್ರಥಮದಲ್ಲಿ ರುದ್ರತ್ವ, ಅದು ಘಟಿಸಿದಲ್ಲಿ ಈಶ್ವರತ್ತ, ಈ ಎರಡು ಕೂಡಿದಲ್ಲಿ ಸದಾಶಿವತತ್ವ’ ಎಂಬ ತ್ರಿವಿಧ ವಚನಗಳು ಗಮನಸೆಳೆಯುತ್ತವೆ. ಸ್ವತಃ ಬಸವಣ್ಣನೇ ತನ್ನೊಂದು ವಚನದಲ್ಲಿ ‘ಕಲಕೇತನಂತಪ್ಪ ತಂದೆ ನೋಡೆನೆಗೆ’ ಎಂದು ಕೇತಯ್ಯನನ್ನು ನೆನೆದಿದ್ದಾನೆ.

Tuesday, June 29, 2010

ಮುತ್ತಿನೆ ತೆನೆ : ಜಾನಪದ ಹಾಡುಗಳ ಸಂಗ್ರಹ

ಗೆಳೆಯ ಬಂಡ್ಲಹಳ್ಳಿ ವಿಜಯಕುಮಾರ್ ‘ಮುತ್ತಿನ ತೆನೆ’ ಎಂಬ ಹೆಸರಿನಲ್ಲಿ ಒಂದುನೂರ ಮೂವತ್ತಮೂರು ಜಾನಪದ ಹಾಡುಗಳನ್ನು ಒಂದೆಡೆ ಸಂಪಾದಿಸಿದ್ದಾರೆ. ಜಾಗೃತಿ ಪ್ರಿಂಟರ‍್ಸ್ ಪ್ರಕಟಣೆ ಮಾಡಿದೆ. ಸ್ವತಃ ಜಾನಪದ ಕಲಾವಿದರೂ ತಜ್ಞರೂ ಆದ ವಿಜಯಕುಮಾರ್ ಅತ್ಯಂತ ಪರಿಶ್ರಮದಿಂದ ಸಾಧ್ಯವಾದಷ್ಟೂ ಪಾಠದ ಗೊಂದಲಗಳನ್ನು ನಿವಾರಿಸಿ, ಕಾಗುಣಿತದ ತಪ್ಪುಗಳನ್ನು ಇಲ್ಲವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಜನಪ್ರಿಯ ಗೀತೆಗಳಿಂದ ಹಿಡಿದು, ಜನಪ್ರಿಯವಲ್ಲದಿದ್ದರೂ ಅತ್ಯಂತ ಮೌಲಿಕವಾದ ಗೀತೆಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಈ ನಿಟ್ಟಿನಲ್ಲಿ ವಿಜಯಕುಮಾರ್ ಅಭಿನಂದನಾರ್ಹರು.

ಆಯ್ದ ಒಂದೆರಡು ಗೀತೆಗಳನ್ನು ಇಲ್ಲಿ ನೀಡುತ್ತಿದ್ದೇನೆ.

೧. ಸರಸ್ವತಿ

ಸರಸೋತಿ ಎಂಬೋಳು ಸರುವಕ್ಕೆ ದೊಡ್ಡೋಳು

ಸ್ವರವ ಹಾಕ್ಯವ್ಳೆ ಐನೂರು - ವಜ್ರಾವ

ತಿರುವೌಳೆ ಕುಣಿಕೆ ಕೊರಳಲ್ಲಿ


ನಗ್ಗಾಲ ಮರದಡಿ ನಿದ್ರೆ ಮಾಡೋದ ಬಿಟ್ಟು

ಎಗ್ಗಿಲ್ದೆ ಬಂದೆ ನಿನ ಬಳಿಗೆ - ಸರಸೋತಿ

ಚೆಂದುಳ್ಳ ಹಾಡ ಕಲಿಸಮ್ಮ


ಏಳೆಲೇ ಮಾವೀನ ತಾಳಿನಲ್ಲಿರುವೋಳೆ

ತಾಳಾದ ಗತಿಗೆ ನಲಿಯೋಳೆ - ಸರಸೋತಿ

ನಾಲಿಗ್ಯಕ್ಷರವ ನಿಲಿಸವ್ವ


ಹಟ್ಟೀಯ ಮನೆಯೋಳೆ ಪಟ್ಟೆದುಂಗರದೋಳೆ

ಪಟ್ಟೆಯ ಸೀರೆ ನೆರಿಯೋಳೆ - ಸರಸೋತಿ

ಗುಟ್ಟಿನಲಿ ಮತಿಯ ಕಲಿಸವ್ವ


೨. ಯಾತಕೆ ಮಳೆ ಹೋದವೋ

ಯಾತಕೆ ಮಳೆ ಹೋದವೋ

ಶಿವಶಿವ ಲೋಕ ತಲ್ಲಣಿಸುತಾವೋ

ಬೇಕಿಲ್ಲದಿದ್ದರೆ ಬೆಂಕಿಯ ಮಳೆಸುರಿದು

ಉರಿಸಿ ಕೊಲ್ಲು ಬಾರದೆ


ಹೊಟ್ಟೆಗ ಅನ್ನ ಇಲ್ಲಾದೆಲೆ

ನಡೆದರೆ ಜೋಲಿ ಹೊಡೆಯುತಲೆ

ಪಟ್ಟದಾನೆಯಂಥ ಸ್ತ್ರೀಯಾರು ಸೊರಗಿ

ಸೀರೆ ನಿಲ್ಲೋದಿಲ್ಲ ಸೊಂಟಾದಲಿ


ಹಸಗೂಸು ಹಸಿವಿಗೆ ತಾಲಾದೆಲೆ

ಅಳುತಾವೆ ರೊಟ್ಟಿ ಕೇಳುತಲೆ

ಹಡೆದ ಬಾಣಂತಿಗೆ ಅನ್ನವು ಇಲ್ಲದೆಲೆ

ಏರುತಾವೆ ಮೊಣಕೈಗೆ ಬಳೆ


ಒಕ್ಕಾಲು ಮಕ್ಕಳಂತೆ

ಅವರಿನ್ನು ಮಕ್ಕಳನ್ನು ಮಾರುಂಡರು

ಮುಕ್ಕಣ್ಣ ಮಳೆ ಕರುಣಿಸೋ

ಮಕ್ಕಳನ್ನು ಮಾರುಂಡು ದುಃಖವನು ಮಾಡುತಾರೆ


೩. ಸಾಲಕ್ಕೆ ಹೋಗವ್ನೆ ಮಳೆರಾಯ

ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.


ಮಳೆಹೋಯ್ತು ಅಂತ ಮಳೆರಾಯ್ನ ಬೈಬೇಡ

ಒಕ್ಕಳ ಹೊನ್ನ ಸೆರಗೇಲಿ - ಕಟ್ಟಿಕೊಂಡು

ಸಾಲಕ್ಕೆ ಹೋಗವ್ನೆ ಮಳೆರಾಯ


ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.


ಅಂಬು ಕೊಡುವವನೆ ಗೊಂಬೆ ಹಚ್ಚಡದವನೆ

ರಂಬೆ ತೊಡೆಮ್ಯಾಲೆ ಮಲಗಿರುವ - ಮಳೆದೇವ

ಅಂಬಾರದಿಂದ ಕರುಣಿಸೋ


ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.


ಊರಿಗೆ ಮಳೆಊದೋ ಏರ್‌ಕಟ್ಟು ತಮ್ಮಯ್ಯ

ಊರು ಮುಂದಿರುವ ಬಸವಣ್ಣಗೆ - ಕೈಮುಗಿದು

ಏರ್‌ಕಟ್ಟೊ ಮುದ್ದುಮುಖದವನೆ


ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.

Friday, June 11, 2010

ಮನೆ ನೋಡಿದರೆ ಬಡವರು, ಮನಸ್ಸು ನೋಡಿದರೆ ಸಂಪನ್ನರು : ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ

ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮಕ್ಕೆ ಸುಮಾರು ಎಂಟನೂರೈವತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಬಸವನ ಕಾಲಕ್ಕೆ ಆ ಊರಿನಲ್ಲಿ ಮಾರಯ್ಯ ಮತ್ತು ಲಕ್ಕಮ್ಮ ಎಂಬ ದಂಪತಿಗಳಿದ್ದರು. ಅನನ್ಯ ಶಿವಭಕ್ತರಾಗಿದ್ದ ಅವರಿಬ್ಬರೂ ಊರಿನಲ್ಲಿದ್ದ ಅಮರೇಶ್ವರ (ಶಿವ) ದೇವರ ಸೇವೆಯಲ್ಲಿ ನಿರತರಾಗಿದ್ದರು. ನಾಡಿನಾದ್ಯಂತ ಪ್ರಸರಿಸುತ್ತಿದ್ದ ಕಲ್ಯಾಣದ ಸಮಾಚಾರ, ಬಸವಣ್ಣ ಕೀರ್ತಿ ಮಾರಯ್ಯ ದಂಪತಿಗಳಿಗೂ ತಲುಪಿತು. ಮಹಾನ್ ಶಿವಭಕ್ತನಾದ ಬಸವಣ್ಣನನ್ನು ಕಾಣುವ ದಂಪತಿಗಳಿಬ್ಬರಿಗೂ ಅತಿಯಾಗಿ ಒಂದೇ ಚಿತ್ತದಿಂದ ಕಲ್ಯಾಣದ ದಾರಿ ಹಿಡಿದು ನಡದೇಬಿಟ್ಟರು. ನೇರವಾಗಿ ಮಹಾಮನೆಗೆ ಬಂದು ಅಲ್ಲಿ ಶರಣರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅನ್ನದಾಸೋಹದ ನಂತರ ಆ ಜಾಗದಲ್ಲಿ ಚೆಲ್ಲಾಡಿ ಹೋಗಿದ್ದ ದವಸ ಧಾನ್ಯಗಳನ್ನು ಗುಡಿಸಿ, ಮನೆಗೆ ತಂದು ಸ್ವಚ್ಛಗೊಳಿಸಿ, ಅದರಿಂದ ತಮ್ಮ ಮನೆಯಲ್ಲೂ ಅನ್ನ ದಾಸೋಹ ನಡೆಸತೊಡಗಿದರು. ಶಿವನ ಅನುಗ್ರಹದಿಂದ ಅವರ ಇಚ್ಛೆಯ ಅನ್ನ ದಾಸೋಹ ಕಾರ್ಯಕ್ರಮ ಯಾವುದೇ ತೊಂದರೆಯಿಲ್ಲದೆ ನಡೆದುಕೊಂಡು ಬರುತ್ತಿತ್ತು. ಆಯ್ದ ಅಕ್ಕಿಯಿಂದ ಅನ್ನ ದಾಸೋಹ ನಡೆಸುತ್ತಿದ್ದ ದಂಪತಿಗಳಿಬ್ಬರಿಗೂ ಆಯ್ದಕ್ಕಿ ಎಂಬುದು ಅನ್ವರ್ಥ ನಾಮವಾಯಿತು. ಮಹಾಮನೆಯಲ್ಲಿ ಶರಣರೆಲ್ಲರೂ ಅವರನ್ನು ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ಎಂದೇ ಗುರುತಿಸುತ್ತಿದ್ದರು. ಶಿವಭಕ್ತರಾದ ಆ ದಂಪತಿಗಳಿಗೆ ಅದೂ ಸಂತೋಷದ ವಿಚಾರವೇ ಆಗಿತ್ತು.
ಹೀಗಿರಲಾಗಿ ಒಮ್ಮೆ ಬಸವಣ್ಣನಿಗೆ, ಮಾರಯ್ಯ ದಂಪತಿಗಳ ನಿಷ್ಕಲ್ಮಶ ಕಾಯಕ ಭಕ್ತಿಯನ್ನು ಜಗತ್ತಿಗೆ ತೋರಿಸಬೇಕು ಎನ್ನಿಸಿತು. ಒಂದು ದಿನ ಒಂದಷ್ಟು ಅಕ್ಕಿಯನ್ನು ಅಂಗಳದಲ್ಲಿ ಚೆಲ್ಲಿಸಿ ಏನೂ ತಿಳಿಯದವನಂತೆ ಬಸವಣ್ಣ ಸುಮ್ಮನಿದ್ದನು. ಎಂದಿನಂತೆ ಕೆಲಸ ಮುಗಿಸಿ ಬಂದ ಮಾರಯ್ಯ ಅಂಗಳವನ್ನೆಲ್ಲಾ ಗುಡಿಸಿ, ಚೆಲ್ಲಿದ್ದ ಅಕ್ಕಿಯನ್ನೆಲ್ಲಾ ಆರಿಸಿ ಮನೆಗೆ ತೆಗೆದುಕೊಂಡು ಹೋದನು. ಎಂದಿಗಿಂತ ಅಕ್ಕಿ ತುಸು ಹೆಚ್ಚೇ ಇರುವುದು ಲಕ್ಕಮ್ಮನ ಗಮನಕ್ಕೆ ಬಂತು. ಅದರಿಂದ ಅವಳಿಗೆ ಖುಷಿಯಾಗದೇ ಗಂಡನ ಮೇಲೆ ಕೋಪವುಂಟಾಯಿತು. ಜೊತೆಗೆ ಬಸವಣ್ಣನ ಮೇಲೆ ಅನುಮಾನವೂ ಬಂತು. ಇದು ಬಸವನ ಕೆಲಸವೇ ಎಂಬುದು ಅವಳ ಮನಸ್ಸಿಗೆ ಹೊಳೆದು ಹೋಗಿತ್ತು. ಗಂಡನಿಗೆ ‘ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಇದು ನಿಮ್ಮ ಮನವೋ, ಬಸವಣ್ಣನ ಅನುಮಾನದ ಚಿತ್ತವೋ?’ ಎಂದು ಪ್ರಶ್ನಿಸುತ್ತಾಳೆ. ಗಂಡನಿಗೂ ಇದು ಬಸವನ ಕೆಲಸ ಎಂಬುದು ಮನವರಿಕೆಯಾಯಿತು. ಬಸವಣ್ಣ ನಮ್ಮನ್ನು ಪರೀಕ್ಷಿಸಲೆಂದೇ ಈ ಕೆಲಸ ಮಾಡಿದ್ದಾನೆ ಎಂಬುದೂ ಗೊತ್ತಾಯಿತು. ಲಕ್ಕಮ್ಮ ಮುಂದುವರೆದು ‘ಆಸೆ ಎಂಬುದು ರಾಜರಿಗೆ ಸರಿ. ಶಿವಭಕ್ರಿಗೇಕೆ ಬೇಕು? ಇಷ್ಟೊಂದು ಅಕ್ಕಿಯಾಸೆ ನಮಗೇಕೆ? ಇದನ್ನು ಶಿವನು ಒಪ್ಪುವುದಿಲ್ಲ. ಇದರಿಂದ ಮಾಡಿದ ಪ್ರಸಾದವನ್ನೂ ಶಿವನು ಒಪ್ಪುವುದಿಲ್ಲ. ನಮಗೆ ನಿತ್ಯ ದೊರೆಯುತ್ತಿದ್ದಷ್ಟೇ ಅಕ್ಕಿ ಸಾಕು. ತೆಗೆದುಕೊಂಡು ಹೋಗಿ ಇದನ್ನು ಅಲ್ಲಿಯೇ ಚೆಲ್ಲಿ ಬನ್ನಿ’ ಎಂದು ಗಂಡನಿಗೆ ಒಪ್ಪಿಸಿದಳು. ಹೆಂಡತಿಯ ಯೋಚನೆಗೆ ತಲೆದೂಗಿದ ಮಾರಯ್ಯ ಹೆಚ್ಚಿನ ಅಕ್ಕಿಯೊಂದಿಗೆ ಹೊರಟುನಿಂತ. ಆಗ ಲಕ್ಕಮ್ಮನಿಗೆ ‘ತಮ್ಮನ್ನು ತೂಗಬೇಕೆನಿಸಿದ ಬಸವಣ್ಣನನ್ನೇ ಮನೆಗೆ ಪ್ರಸಾದಕ್ಕೆ ಕರೆಯಬೇಕೆನ್ನಿಸಿ ಗಂಡನಿಗೆ ‘ಬಸವನಿಗೆ ಹೇಳಿ. ಬೇಕಾದರೆ ತನ್ನ ಸುತ್ತಣ ಜಂಗಮರನ್ನೆಲ್ಲಾ ಕರೆದುಕೊಂಡು ನಮ್ಮ ಮನಗೆ ಊಟಕ್ಕೆ ಬರಲಿ’ ಎಂದು ಆಹ್ವಾನ ಕೊಡಲು ಹೇಳಿದಳು.

ಮಾರಯ್ಯನಿಂದ ಆಹ್ವಾನವನ್ನು ಸ್ವೀಕರಿಸಿದ ಬಸವಣ್ಣ ಅಲ್ಲಮನೊಂದಿಗೆ ಊರಿನಲ್ಲಿದ್ದ ಜಂಗಮರನ್ನೆಲ್ಲಾ ಕರೆದುಕೊಂಡು ಬಂದ. ಇದಷ್ಟೇ ಅಕ್ಕಿಯಿಂದ ಅನ್ನವ ಮಾಡಿ, ಮೊದಲು ಶಿವನಿಗೆ ಆರೋಗಿಸಿ ಜಂಗಮರಿಗೆ ಲಕ್ಕಮ್ಮ ಬಡಿಸಿದಳು. ಶಿವನ ಮಹಿಮೆಯೋ ಎಂಬಂತೆ ಅಷ್ಟೇ ಅನ್ನ ಬಂದಿದ್ದವರಿಗೆಲ್ಲಾ ಸಾಕಾಯಿತು. ದಂಪತಿಗಳು ಶಿವಭಕ್ತಿಯನ್ನು ಮೆಚ್ಚಿದ ಅಲ್ಲಮ ‘ಈಗ ನೋಡು ನಿಜದ ಕಾಯಕದ ಮಹಿಮೆ ಅರ್ಥವಾಯಿತು’ ಎಂದು ಹೇಳಿದರೆ ಬಸವಣ್ಣ ‘ಮನೆ ನೋಡಿದರೆ ಬಡವರು, ಮನಸ್ಸು ನೋಡಿದರೆ ಸಂಪನ್ನರು’ ಎಂದು ಹೊಗಳಿದ.

ಆಯ್ದಕ್ಕಿ ದಂಪತಿಗಳು ನೂರಾರು ವಚನಗಳನ್ನು ಬರೆದಿದ್ದಾರೆ. ಮಾರಯ್ಯನ ಅಂಕಿತನಾಮ ‘ಅಮರೇಶ್ವರಲಿಂಗ’ ಎಂಬುದಾದರೆ ಪತಿಯನ್ನೇ ಅನುಸಿರಿಸಿದ ಸತಿ ಲಕ್ಕಮ್ಮನ ಅಂಕಿತ ‘ಮಾರಯ್ಯಪ್ರಿಯ ಅಮರೇಶ್ವರಲಿಂಗ’ ಎಂಬುದಾಗಿದೆ. ‘ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ’, ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತಿಗುಂಟೆ?’ ‘ಮಾಡಿ ನೀಡಿ ಹೋದೆಹೆನೆಂಬಾಗ ಕೈಲಾಸವೇನು ಕೈಕೂಲಿಯೇ’ ಮೊದಲಾದ ಗಮನಸೆಳೆಯುವ ವಚನಗಳು ಲಕ್ಕಮನವಾಗಿವೆ. ತನ್ನ ದಾಸೋಹಕಾಯಕವನ್ನು ಸೂಚಿಸುವ ವಚನವೊಂದು ಹೀಗಿದೆ.

ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮೊದಲಾದ

ನೇಮ ನಿತ್ಯ ಕೃತ್ಯ ಸಕಲಸಮೂಹ ನಿತ್ಯನೇಮದ

ಜಂಗಮಭಕ್ತರು ಗಂಣಂಗಳು ಮುಂತಾದ ಸಮೂಹಸಂಪದಕ್ಕೆ

ನೈವೇಧ್ಯಕ್ಕೆ ವೇಳೆಯೆಂದು ಹೇಳಿ ಬಾರಯ್ಯಾ

ಅಮಲೇಶ್ವರಲಿಂಗದ ಮನೆಯಲ್ಲಿ ಆದಿಹಿತೆಂದು


‘ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದಡೂ ಮರೆಯಬೇಕು’ ಎಂಬ ವಚನ ಮಾರಯ್ಯನ ಕಾಯಕದ ಪ್ರೀತಿಯನ್ನು ಸೂಚಿಸುತ್ತದೆ. ‘ಎನಗೆ ಮನೆಯಿಲ್ಲ ಎನಗೆ ಧನವಿಲ್ಲ’, ‘ತನುವೀವೆಡೆ ತನು ಎನಗಿಲ್ಲ ಮನವೀವೆಡೆ ಮನವೆನಗಿಲ್ಲ’ ಮೊದಲಾದ ವಚನಗಳು ಗಮನಸೆಳೆಯುತ್ತವೆ. ಆಯ್ದಕ್ಕಿ ವೃತ್ತಿಯನ್ನು ಸೂಚಿಸುವ ಮಾರಯ್ಯನ ವಚನ ಹೀಗಿದೆ.

ಎನಗೆ ಮನೆಯಿಲ್ಲ ಎನಗೆ ಧನವಿಲ್ಲ

ಮಾಡುವುದೇನು? ನೀಡುವುದೇನು?

ಮನೆ ಧನ ಸಕಲಸಂಪದಸೌಖ್ಯವುಳ್ಳ

ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು

ಎನ್ನೊಡಲ ಹೊರೆವನಾಗಿ

ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ

Monday, June 07, 2010

ಸಮವಸ್ತ್ರ : ಒಂದು ಹಳೆಯ ಕಥೆ

[ಇಂದು ನಮ್ಮ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ತರಗತಿಗಳು ಪ್ರಾರಂಭವಾದವು. ಬಣ್ಣ ಬಣ್ಣದ ಬಟ್ಟೆ ತೊಟ್ಟು ಸಂಭ್ರಮದಿಂದ (ಆತಂಕದಿಂದಲೂ ಹೌದು) ಕಾಲೇಜಿನ ಒಳಗೆ ಕಾಲಿಡುತ್ತಿದ್ದ ಹುಡುಗ-ಹುಡುಗಿಯರನ್ನು ನೋಡಿ ನಾನು ಸುಮಾರು ಒಂಬತ್ತು ವರ್ಷಗಳ [15.08.2001] ಹಿಂದೆ ಬರೆದಿದ್ದ ಸಮವಸ್ತ್ರ ಎಂಬ ಕಥೆ ನೆನಪಾಯಿತು. ಆ ಕಥೆಗೂ ಹೀಗೇ ಸಂಭ್ರಮದಿಂದ ಕಾಲೇಜಿಗೆ ಬಂದ ಸೀಮಾ ಎಂಬ ಹುಡುಗಿಯೊಬ್ಬಳು ಪ್ರೇರಣೆಯಾಗಿದ್ದಳು! ತನ್ನ ಸ್ನಿಗ್ಧ ಚೆಲುವಿನಿಂದ, ಮುಗ್ಧಮುಖದಿಂದ ಅದಕ್ಕಿಂತಲೂ ಹೆಚ್ಚಾಗಿ ಬೇರೆ ಬೇರೆ ತರಗತಿಗಳ ಹಿರಿ ಯಹುಡುಗರ ಜೊತೆಯಲ್ಲೂ ಅವಳು ಬೆರೆಯುತ್ತಿದ್ದ ರೀತಿಯಿಂದಾಗಿ ಎಲ್ಲರ ಗಮನ ಸೆಳೆದಿದ್ದಳು. ಅದೇ ಸಮಯದಲ್ಲಿ ಕಾಲೇಜಿರುವುದೇ ಹುಡುಗಿಯರ ಬೇಟೆಯಾಡಲು ಎಂದು ಭಾವಿಸಿರುವ ಹಸಿಹಸಿ ಕನಸುಗಳ ಮೊತ್ತವೇ ಆಗಿರುವ ಹುಡುಗರ ಗುಂಪುಗಳೂ ಗಮನ ಸೆಳೆಯುತ್ತವೆ. ಅಂತಹ ಪೂರ್ವಾಪರ ವಿವೇಚನೆಯಿಲ್ಲದ ಹುಡುಗರ ಗುಂಪಿನಲ್ಲಿ ಈ 'ಸೀಮಾ'ನಂತಹ ಮುಗ್ಧೆಯರು ಸಿಕ್ಕಿಬಿದ್ದರೆ... ಎಂಬ ಯೋಚನೆಯೇ ಈ ಕಥೆಗೆ ಹುಟ್ಟಿಗೆ ಕಾರಣವಾಗಿತ್ತು. ಆದರೆ ಒಮ್ಮೆ ಟೈಪಿಸಲು ಕುಳಿತ ಮೇಲೆ ಅದು ತನ್ನದೇ ರೂಪ ಪಡೆದು 'ಸಮವಸ್ತ್ರ' ಸಿದ್ಧವಾಗಿ ಕನ್ನಡಪ್ರಭದಲ್ಲಿ ಪ್ರಕಟವೂ ಆಗಿತ್ತು. ಇಂದು ನನ್ನ ಬ್ಲಾಗ್ ಓದುಗರೊಂದಿಗೆ ಆ ಕಥೆಯನ್ನು ಹಂಚಿಕೊಳ್ಳಬೇಕೆನ್ನಿಸಿ ಇಲ್ಲಿ ಹಾಕುತ್ತಿದ್ದೇನೆ. ನಿಮಗೇನನ್ನಿಸಿತು ತಿಳಿಸಿ.]

ಕೈಯಲ್ಲಿ ತಿಂಡಿ ಹಿಡಿದು ಅಡುಗೆ ಮನೆಯಿಂದ ರಾಜಮ್ಮ ಗೊಣುಗುತ್ತಲೆ ಹೊರಬಂದರು. ‘ಇವತ್ತೆ ಕಾಲೇಜು ಓಪನ್ನು. ಮೊದಲ ದಿನವೆ ಲೇಟಾಗೋದ್ರೆ ಏನ್ ಚಂದ?’ ಎಂದು. ‘ಶಮಿ. ಶಮಿ. ಬೇಗ ಬಾರೆ. ತಿಂಡಿ ತಣ್ಣಗಾಗುತ್ತೆ. ಈಗ್ಲೆ ಲೇಟಾಗಿದೆ. ನೀನಿನ್ನು ರೆಡಿಯಾಗಿಲ್ಲ’ ಎಂದರು. ರೂಮಿನಿಂದ ಏನೂ ಪ್ರತಿಕ್ರಿಯೆ ಬರದಿದ್ದಾಗ ತಾವೆ ಒಳ ಹೋಗಿ ನೋಡಿದರು. ಶಮಿ ಅಲ್ಲಿರಲಿಲ್ಲ. ಆಶ್ಚರ್ಯದಿಂದ ‘ಇವಳೆಲ್ಲಿ ಹೋದಳೊ!’ ಎಂದುಕೊಂಡು ಹೊರ ಬರುತಿದ್ದವರಿಗೆ ಕಂಡಿದ್ದು, ಮನೆಯ ಹೊರಗಿನಿಂದ ಒಳ ಬರುತಿದ್ದ ಮಗಳು ಶಮಿ. ಆಗಲೆ ಸಿದ್ದಳಾಗಿ ಕೈಯಲ್ಲಿ ನೋಟ್ ಬುಕ್ ಹಿಡಿದು ನಿಂತಿದ್ದಳು. ಮಗಳ ಸರಳವಾದ ಅಲಂಕಾರ, ಅವಳ ಎತ್ತರವನ್ನು ಗಮನಿಸಿದ ರಾಜಮ್ಮ ‘ಹೆಣ್ಣು ಮಕ್ಕಳು ಅದೆಷ್ಟು ಬೇಗ ಬೆಳೆಯುತ್ತವೊ’ ಎಂದುಕೊಂಡು, ‘ಶಮಿ ನೀನು ಇನ್ನು ತಿಂಡಿ ತಿಂದಿಲ್ಲ. ನಿಮ್ಮಪ್ಪ ಆಗಲೆ ರೆಡಿಯಾಗಿ ಕಾಯ್ತಿದಾರೆ. ಬೇಗ ತಿನ್ನು.’ ಎಂದು ತಟ್ಟೆಯನ್ನು ಅವಳ ಕೈಗಿತ್ತರು.

‘ನನಗೆ ಹಸಿವೆ ಇಲ್ಲಮ್ಮ. ನೀನು ನೋಡಿದರೆ ಇಷ್ಟೊಂದು ತಿಂಡಿ ಹಾಕಿದ್ದಿಯ’ ಎಂದು ಮುಕ್ಕಾಲು ಭಾಗದಷ್ಟು ತಿಂಡಿಯನ್ನು ತಟ್ಟೆಯಲ್ಲಿಯೆ ಒಂದು ಕಡೆ ತಳ್ಳಿ, ಮಿಕ್ಕಿದ್ದನ್ನು ನಾಲ್ಕೆ ತುತ್ತಿಗೆ ತಿಂದ ಮಗಳನ್ನು ನೋಡುತ್ತಲೆ ನಿಂತಿದ್ದ ರಾಜಮ್ಮ, ಮಗಳು ‘ತಟ್ಟೆ ತಗೊಳಮ್ಮ’ ಎಂದಾಗ ಎಚ್ಚೆತ್ತು ‘ಹುಶಾರಾಗಿ ಹೊಗ್ಬಾಮ್ಮ’ ಎಂದು ತಟ್ಟೆ ತಗೆದುಕೊಂಡು ಹೊರಟರು.

‘ಮೊನ್ನೆ ಮೊನ್ನೆಯವರೆಗೂ ಇವಳಿಗೆ ಯೂನಿಫಾರ್ಮ್ ಹಾಕಿ ಸ್ಕೂಲ್ ಬಸ್ಸಿಗೆ ಹತ್ತಿಸುವಷ್ಟರಲ್ಲಿ ಸಾಕುಸಾಕಾಗುತಿತ್ತು. ಇಂದಿನಿಂದ ಅವಳು ಕಾಲೇಜಿಗೆ ಹೋಗುತ್ತಾಳೆ. ಏನು ಖುಷಿನೊ? ಅವಳೆ ಬೇಗ ರೆಡಿಯಾಗಿದಾಳೆ. ಯೂನಿಫಾರ್ಮ್ ಹಾಕ್ಕೊಂಡ್ರೆ ಚಿಕ್ಕ ಹುಡುಗಿ, ಬಣ್ಣದ ಚೂಡಿದಾರ್ ಹಾಕ್ಕೊಂಡ್ರೆ ದೊಡ್ಡ ಹುಡುಗಿ’ ಎಂದು ತಮ್ಮ ಯೋಚನೆಗೆ ತಾವೆ ನಕ್ಕರು ರಾಜಮ್ಮ.

ಈಗಾಗಲೆ ತಿಂಡಿ ಮುಗಿಸಿ ಎರಡನೆ ಬಾರಿಗೆ ಪೇಪರ್ ತಿರುವಿ ಹಾಕುತ್ತಿದ್ದ ಶಿವಣ್ಣನಿಗೆ ‘ಅಪ್ಪ ನಾನ್ ರೆಡಿ’ ಎಂದ ಮಗಳ ಕೂಗು ಮೊದಲ ಬಾರಿಗೆ ಕೇಳಿಸಲೇ ಇಲ್ಲ. ‘ಕಾಲೇಜು ತಲುಪಿದರೆ ಸಾಕು ತಿಗ ಊರೋದುಕ್ಕು ಪುರುಸೊತ್ತು ಇರೋದಿಲ್ಲ. ಕಾಲೆಜುಗಳಲ್ಲಿ ಯಾವ ಕೆಲಸ ಬೇಕಾದ್ರು ಮಾಡ್ಬೌಹುದು. ಆದರೆ ಈ ಗುಮಾಸ್ತನ ಕೆಲಸ ಮಾತ್ರ ಮಾಡಕ್ಕಾಗೊಲ್ಲ’ ಎನ್ನುತ್ತಿದ್ದರು ಶಿವಣ್ಣ. ಮಗಳ ಎರಡನೆ ಕೂಗಿಗೆ ಎಚ್ಚೆತ್ತು, ಕೈಯಲ್ಲಿ ಹೆಲ್ಮೆಟ್ ಹಿಡಿದು ಹೊರಟರು.

ಮದುವೆಯಲ್ಲಿ ಮಾವ ಕೊಡಿಸಿದ್ದ ಬಜಾಜ್ ಸ್ಕೂಟರ್ ಹಲವಾರು ಮಾರ್ಪಾಟುಗಳನ್ನು ಹೊಂದಿದ್ದರು, ತನ್ನ ಮೂಲ ಸ್ವರೂಪವನ್ನು ಮಾತ್ರ ಉಳಿಸಿಕೊಂಡಿತ್ತು. ಅದನ್ನು ಹೊರತೆಗೆದು, ನಲವತ್ತೈದು ಡಿಗ್ರಿಗೆ ಬಾಗಿಸಿ ಸ್ಟಾರ್ಟ್ ಮಾಡುವದನ್ನು ನೋಡಿದ ಶಮಿ ‘ಅಪ್ಪ ಈ ಹಳೆ ಸ್ಕೂಟರನ್ನು ಮಾರಿ ಒಂದು ಹೊಸದನ್ನು ತಗೊ ಬಾರದೆ?’ ಎಂದಳು. ಒಂದೆರಡು ಒದೆತಕ್ಕು ಜೀವ ತಳೆಯದಿದ್ದ ಸ್ಕೂಟರನ್ನು ಸೊಂಟಕ್ಕೆ ತಾಗಿಸಿಕೊಂಡು ನಿಂತು ‘ಶಮಿ, ನಿಮ್ಮಪ್ಪ ಒಬ್ಬ ಗುಮಾಸ್ತ ಕಣಮ್ಮ. ಅದೂ ಕಾಲೇಜಿನಲ್ಲಿ. ಬರೋದು ಆರೇಳು ಸಾವಿರ ಸಂಬಳ. ಈಗ ನಿನಗೆ ಹದಿನೈದು ಸಾವ್ರ ಡೊನೇಶನ್ ಕೊಡೊ ಹೊತ್ತಿಗೆ ಸಾಕಾಗೋಗಿದೆ. ಇನ್ನು ಮುಂದಿನ ವರ್ಷ ಮತ್ತೆ ಕಟ್ಟೋಕೆ ಹತ್ತು ಸಾವ್ರ ರೆಡಿ ಮಾಡ್ಕೊಬೇಕು. ಅದ್ರೊಳಗೆ ಈ ಸ್ಕೂಟರ್ ಇದೆಲ್ಲ ಆಗೊ ಕೆಲಸ ಅಲ್ಲಮ್ಮ‘ ಎಂದು ಸ್ಕೂಟರ್ ಸ್ಟಾರ್ಟ್ ಮಾಡಿದರು. ವಿಷಯ ತನ್ನ ಕಡೆಗೆ ತಿರುಗಿದ್ದರಿಂದ ಮರುಮಾತನಾಡದೆ ಶಮಿ ಅಪ್ಪನ ಹಿಂದೆ ಸ್ಕೂಟರ್ ಹತ್ತಿದಳು. ಗೇರು ಬದಲಾಯಿಸುತ್ತ ಶಿವಣ್ಣ ಯೋಚಿಸಿದರು. ‘ಯೂನಿಫಾರ್ಮ್ ಕಳಚಿ ಬಣ್ಣದ ಬಟ್ಟೆ ಹಾಕ್ಕೊಳ್ಳದೆ ತಡ, ಈ ಮಕ್ಕಳೂ ಬಣ್ಣದ ಕನಸು ಕಾಣದಿಕ್ಕೆ ಶುರು ಮಾಡುತ್ತವೆ’ ಎಂದು.

* * *
ಮೊದಲ ದಿನ ವೆಲ್ಕಂ ಪಾರ್ಟಿ, ಎರಡನೆ ದಿನ ಫ್ರೆಷರ್ಸ್ ಡೆ ಹೀಗೆ ಕಳೆದು, ಮೂರನೆ ದಿನವೆ ಒಂದಿಷ್ಟು ತರಗತಿಗಳು ಪ್ರಾರಂಭವಾಗಿದ್ದವು. ನಾಲ್ಕನೆ ದಿನ. ಎರಡು ಪೀರಿಯಡ್ಡು ಕಳೆದ ನಂತರ ಇದ್ದ ಅರ್ಧ ಗಂಟೆ ವಿರಾಮದಲ್ಲಿ ಶಮಿಯೊಬ್ಬಳೆ ಬಾಗಿಲ ಬಳಿ ನಿಂತಿದ್ದಳು. ಆಗ ಅವಳ ಮುಂದೆ ನಾಲ್ಕು ಜನ ಹುಡುಗರು ಬಂದು ನಿಂತು ಮಾತನಾಡಿಸಿದರು. ‘ಹಲೊ ಫ್ರೆಂಡ್, ನಾನು ರಾಕೇಶ್. ಇವನು ಪರೇಶ್, ರಾಜು, ವಿಕ್ಕಿ. ನಾವೆಲ್ಲ ಸೆಕೆಂಡಿಯರ್ ಸ್ಟೂಡೆಂಟ್ಸ್. ನಿಮ್ಮ ಹೆಸರು ಶಮಿ. ಸರಿ ತಾನೆ?’ ಎಂದು ಕೈ ನೀಡಿದ. ವೆಲ್ಕಂ ಪಾರ್ಟಿಯಲ್ಲಿ ಮೂಳೆ ಇಲ್ಲದವನಂತೆ ಡ್ಯಾನ್ಸ್ ಮಾಡಿದ್ದ ರಾಕೇಶನನ್ನು ಶಮಿ ನೋಡಿದ್ದಳು. ಹುಡುಗರೆಲ್ಲ ‘ಹೋ’ ಎಂದು ಚಪ್ಪಾಳೆ ತಟ್ಟಿ ಕೂಗುತ್ತಿದ್ದರೆ, ಮನಸ್ಸಿನಲ್ಲೆ ಅವನೊಂದಿಗೆ ನರ್ತಿಸುತ್ತಿದ್ದ ಶಮಿ ‘ಎಷ್ಟೊಂದು ಚೆನಾಗಿದಾನೆ’ ಅಂದು ಕೊಂಡಿದ್ದಳು. ಈಗ ಅವನಾಗೆ ಬಂದು ಮಾತನಾಡಿಸುತ್ತಿದ್ದರೆ ಅವಳ ಮೈಯಲ್ಲಿ ಸಣ್ಣಗೆ ಕಂಪನ ಶುರುವಾಗಿಬಿಟ್ಟಿತ್ತು. ಅವನು ನೀಡಿದ್ದ ಕೈಯಿಗೆ ತಾನು ಕೈ ನೀಡಲು ಸ್ವಲ್ಪ ಆತಂಕವೆನಿಸಿದರೂ ತೋರಿಸದೆ ‘ಹಲೊ’ ಎಂದು ಕೈ ನೀಡಿದಳು. ಆತ ಸ್ವಲ್ಪ ಬಿಗಿಯಾಗಿಯೆ ಹಿಡಿದು ಕುಲುಕಿದ. ಬೇರೆಯವರೆಲ್ಲ ಅವನನ್ನೆ ಅನುಸರಿಸಿದರು. ನಾಲ್ಕು ಜನರ ಕೈ ಕುಲುಕುವಷ್ಟರಲ್ಲಿ ಕೈ ಕೆಂಪಗಾಗಿ ಬಿಟ್ಟಿತ್ತು. ಮುಖವೂ ಕೂಡ.

ಕ್ಲಾಸ್ ಬೆಲ್ಲಾಗುವವರಗೆ ಅವರ ಮಾತುಕಥೆ ಸಾಗಿತ್ತು. ಇಂತಹುದೇ ವಿಷಯ ಎಂದೇನಿರಲಿಲ್ಲ. ಸಿನಿಮಾ, ಕ್ರಿಕೆಟ್, ಇಂಟರ್‌ನೆಟ್ ಹೀಗೆ ಬದಲಾಗುತಿತ್ತು. ಬೆಲ್ಲಾದಾಗ ಮತ್ತೊಮ್ಮೆ ಎಲ್ಲರ ಕೈಯನ್ನು ಮುಟ್ಟಿದಂತೆ ಮಾಡಿ ಕ್ಲಾಸಿಗೆ ಬಂದ ಶಮಿಗೆ ಸ್ವಲ್ಪ ಹೊತ್ತು ಕ್ಲಾಸ್ ರೂಂ, ಪಕ್ಕ ಕುಳಿತಿದ್ದ ಹುಡುಗರು ಎಲ್ಲ ಮರೆಯಾಗಿ ರಾಕೇಶನೊಬ್ಬನೆ ಕಾಣುತ್ತಿದ್ದ.

* * *
ಎರಡನೆ ಪಿರಿಯಡ್ಡು ಮುಗಿಯಲು ಇನ್ನು ಐದು ನಿಮಿಷಗಳಿವೆ ಎನ್ನುವಾಗಲೆ ರಾಕೇಶ್ ಅಂಡ್ ಕೊ ಬಾಗಿಲ ಬಳಿ ಠಳಾಯಿಸುತ್ತಿದ್ದರು. ಅದನ್ನು ಕಂಡ ಶಮಿ ‘ನೆನ್ನೆಯಷ್ಟೆ ಪರಿಚಯವಾದ ಅವರು ನನಗಾಗೆ ಕಾಯುತ್ತಿದ್ದಾರೆ’ ಎಂಬ ಯೋಚನೆಯಿಂದಲೇ ಮೈ ಬಿಸಿಯೆನಿಸಿತು. ಹೊರಬಂದ ತಕ್ಷಣ ಮತ್ತದೆ ಕೈ ಕುಲುಕಾಟ. ನೆನ್ನೆ ಮಾತನಾಡಿದ ವಿಷಯಗಳೆ. ಯಾರಿಗೂ ಬೇಸರವಿಲ್ಲ. ಮಾತು ನಗು, ನಗು ಮಾತು ಇವುಗಳ ನಡುವೆ ಶಮಿ ಗಮನಿಸಿದಳು. ರಾಕೇಶ್ ಶಮಿಯ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತಿದ್ದ. ವಿಕ್ಕಿ ಮತ್ತು ಪರೇಶ್ ಇಬ್ಬರೂ ಶಮಿಯ ಮೈಗೆ ತಾಕುವಷ್ಟು ಹತ್ತಿರ ನಿಂತಿದ್ದರು. ರಾಜು ಕೂಡ ಅಷ್ಟೆ. ಆಗಾಗ ಶಮಿಯ ಭುಜದ ಮೇಲೆ ಹೊಡೆಯುತಿದ್ದ. ಅವರ ಮನೆಯ ವಾತಾವರಣ, ಅವಳ ತಾಯಿ ತಂದೆ ಇವರು ರೂಪಿಸಿದ್ದ ಸಂಸ್ಕಾರವುಳ್ಳ ಮನಸ್ಸು ‘ಯಾರಾದರು ನೋಡಿದರೆ’ ಎಂದು ಒಂದು ಕ್ಷಣ ಆತಂಕಗೊಂಡಿತು. ಆದರೆ ಅವಳಿದ್ದ ಪರಿಸರ, ಸಮಾಜದಿಂದ ರೂಪ ಪಡೆದಿದ್ದ ಮನಸ್ಸು ‘ನೋಡಿದರೇನು? ನಾವೇನು ತಪ್ಪು ಮಾಡುತ್ತಿಲ್ಲವಲ್ಲ’ ಎಂದು ಸಮಾಧಾನ ಪಟ್ಟುಕೊಂಡಿತು. ಕ್ಲಾಸ್ ಮುಗಿದ ಮೇಲೆ ಪಿಚ್ಚರಿಗೆ ಹೋಗುವ ಮಾತನ್ನು ವಿಷಯವನ್ನು ರಾಕೇಶ್ ಎತ್ತಿದಾಗ ಶಮಿ ‘ಸಾರಿ ಫ್ರೆಂಡ್ಸ್. ನಾನಿವತ್ತು ಮನೆಯಲ್ಲಿ ಹೇಳಿ ಬಂದಿಲ್ಲ. ನಾಳೆ ಬೇಕಾದರೆ ಹೋಗೋಣ’ ಎಂದಳು. ಅದಕ್ಕೆ ಎಲ್ಲರ ಒಪ್ಪಿಗೆಯೂ ಬಿತ್ತು.

* * *
ಮೂರು ಬೈಕುಗಳಲ್ಲಿ ಪಿಚ್ಚರಿಗೆ ಹೊರಟ ಆರು ಜನರಲ್ಲಿ ಸೆಕೆಂಡಿಯರಿನ ರೋಹಿಣಿಯೂ ಸೇರಿದ್ದಳು. ಅವಳ ಪರಿಚಯವಾಗಿ, ಅವಳು ಸಿನಿಮಾಕ್ಕೆ ಬರುತ್ತಾಳೆ ಎಂದಾಗ ತುಸು ಸಮಾಧಾನವಾಯಿತಾದರು, ಅವಳು ತನ್ನ ಸ್ಕೂಟಿಯನ್ನು ಅಲ್ಲೆ ನಿಲ್ಲಿಸಿ ಪರೇಶನ ಬೈಕ್ ಹತ್ತಿದಾಗ ಹೊಟ್ಟೆಯೊಳಗೆ ಸಣ್ಣಗೆ ನಡುಕವುಂಟಾಯಿತು. ಬೇರೆ ದಾರಿ ಕಾಣದೆ ರಾಕೇಶನ ಬುಲ್ಲೆಟ್ ಹತ್ತಿ ಅವನಿಗೆ ತಗುಲಿಸಿಕೊಳ್ಳದಂತೆ ಕುಳಿತುಕೊಳ್ಳಲು ಪ್ರಯತ್ನಿಸಿದಳು. ಬುಲ್ಲೆಟ್ ವೇಗ ಹೆಚ್ಚಾದಂತೆ ಅವಳ ಮನಸ್ಸಿನ ಆತಂಕ ಕಡೆಮೆಯಾಗುತ್ತಾ ಹೋಗಿ ಅವರಿಬ್ಬರ ನಡುವಿನ ಅಂತರವೂ ಕಡಿಮೆಯಾಯಿತು. ಹೆಚ್ಚಿದ್ದ ವೇಗ, ಆಗಾಗ ಸಡನ್ನಾಗಿ ಬ್ರೇಕು ಹಾಕುತ್ತಿದ್ದರಿಂದ ಉಂಟಾಗುತ್ತಿದ್ದ ಅವನ ಸ್ಪರ್ಶ ಇಷ್ಟವಾಗತೊಡಗಿ ‘ಭಯಪಡುವಂತದ್ದೇನಿಲ್ಲ’ ಎಂದುಕೊಂಡಳು.

ಪರ್ಸನಲ್ಲಿ ಕೇವಲ ಹತ್ತೇ ರೂಪಾಯಿ ಇರುವದನ್ನು ನೆನೆದು ಮತ್ತೊಮ್ಮೆ ಆತಂಕಗೊಂಡಳಾದರು, ರಾಕೇಶನೆ ಎಲ್ಲರಿಗು ಟಿಕೆಟ್ ತಂದಾಗ ಸಮಾಧಾನಗೊಂಡಳು. ಒಳಗೆ ವಿಕ್ಕಿಯ ಪಕ್ಕದಲ್ಲಿ ಕುಳಿತಿದ್ದ ರೋಹಿಣಿಯ ಪಕ್ಕದಲ್ಲಿ ತಾನು ಕುಳಿತುಕೊಳ್ಳಬೇಕೆಂದು ಯೋಚಿಸುತ್ತಿರುವಾಗಲೆ ರಾಕೇಶ್ ಅಲ್ಲಿ ಕುಳಿತು ‘ಕಮಾನ್ ಶಮಿ’ ಎಂದು ಕೈ ಹಿಡಿದು ಶಮಿಯನ್ನು ಪಕ್ಕಕ್ಕೆ ಕೂರಿಸಿಕೊಂಡ. ಇನ್ನೊಂದು ಪಕ್ಕಕ್ಕೆ ಪರೇಶ್, ರಾಜು ಕುಳಿತುಕೊಂಡರು. ಸಿನಿಮ ಶುರುವಾಯಿತು.

* * *
ಅಂದಿನಿಂದ ಶಮಿಗೆ ಬಣ್ಣದ ಕನಸುಗಳ ಕಾಟ ಶುರುವಾಯಿತು. ಮನೆಯಲ್ಲಿದ್ದರೂ ರಾಕೇಶನದೆ ಕನಸು. ಸಿನಿಮಾ ಮಂದಿರದ ಕತ್ತಲಿನಲ್ಲಿ ಅವನು ಸಣ್ಣಗೆ ಪಿಸುಗುಟ್ಟುತ್ತಿದ್ದಾಗ ತಾಗುತ್ತಿದ್ದ ಬಿಸಿಯುಸಿರಿನ ನೆನಪು ಮನೆಯಲ್ಲಿಯೂ ಅವಳ ಮೈಯನ್ನು ಬಿಸಿಯಾಗಿಸುತಿತ್ತು. ತಿಂಗಳೆರಡು ಕಳೆಯುವದರಲ್ಲಿ ಅವರೆಲ್ಲ ಹತ್ತು ಬಾರಿ ಸಿನಿಮಾ ಯಾತ್ರೆ ಮಾಡಿ ಬಂದಿದ್ದರು.

ನೆನ್ನೆಯೆ ತೀರ್ಮಾನವಾಗಿದ್ದ ಹಾಗೆ ಇಂದು ಕ್ಲಾಸಿಗೆ ಚಕ್ಕರ್ ಹೊಡೆದು ಹೊಸದಾಗಿ ಬಂದಿದ್ದ ಹಿಂದಿ ಪಿಚ್ಚರಿಗೆ ಹೋಗಬೇಕಾಗಿತ್ತು. ಏಕೊ? ಶಮಿಗೆ ಬೆಳಿಗ್ಗೆಯಿಂದ ಒಂದು ರೀತಿಯ ಅನ್ಯಮನಸ್ಕತೆ. ಅದು ಅವಳು ಬಂದಿದ್ದ ರೀತಿಯಲ್ಲೂ ವ್ಯಕ್ತವಾಗುತಿತ್ತು. ಒಂದು ರೀತಿಯಲ್ಲಿ ಮೈ ಮನಸುಗಳೆರಡೂ ಅಸ್ತವ್ಯಸ್ತವಾಗಿದ್ದವು. ಅಂದು ರೋಹಿಣಿ ಬರದೇ ಇರುವುದನ್ನು ಗಮನಿಸಿದಾಗ ಇನ್ನೂ ಬೇಸರವಾಗಿ ‘ರಾಕೇಶ್ ಇವತ್ತು ಪ್ರೋಗ್ರಾಮ್ ಕ್ಯಾನ್ಸಲ್ ಮಾಡೋಣ. ನಾಳೆ ಹೋಗೋಣ’ ಎಂದಳು. ‘ನೋ ನೊ ಶಮಿ. ಈಗಾಗಲೆ ಟಿಕೆಟ್ ರಿಸರ್ವ್ ಮಾಡಿಸಿ ಹಾಗಿದೆ. ಇವತ್ತೆ ಹೋಗಬೇಕು’ ಎಂದು ಬುಲ್ಲೆಟ್ ಸ್ಟಾರ್ಟ್ ಮಾಡಿದ. ಶಮಿ ಹತ್ತಿದಳು. ಬುಲ್ಲೆಟ್ ತಗೆದುಕೊಂಡ ವೇಗ ಅವಳ ಆತಂಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿತ್ತು.

ಇಂಟರ್‌ವೆಲ್ ಬಿಡುವ ವೇಳೆಗೆ ಶಮಿಗೆ ಭಯವಾಗತೊಡಗಿತು. ಸಿನಿಮಾ ನೋಡುತ್ತಲೆ ಅವಳು ಗಮನಿಸಿದ್ದಳು. ರಾಕೇಶ್ ಪರೇಶ್ ನಡುವೆ ಕುಳಿತಿದ್ದ ಅವಳ ಬೆನ್ನು ಹೆಗಲುಗಳ ಮೇಲೆ ಆಗಾಗ ಕೈ ಬೀಳುತಿತ್ತು. ಅದು ಒಮ್ಮೊಮ್ಮೆ ಸೊಂಟದವರೆಗೂ ಬರುತಿತ್ತು. ಒಮ್ಮೆಯಂತು ಅವಳ ಎದೆಯನ್ನೆ ಹಿಚಿಕಿದಂತಾಗಿ ಬೆಚ್ಚಿ ಬಿದ್ದಳು. ಇಬ್ಬರಲ್ಲಿ ಅದು ಯಾರ ಕೈ ಎಂದು ಅವಳಿಗೆ ತಿಳಿಯಲಿಲ್ಲ. ಪಿಚ್ಚರ್ ಕೂಡ ಅಷ್ಟೆ ಕೆಟ್ಟದಾಗಿತ್ತು. ‘ತಾನು ನೂರಾರು ಜನರ ನಡುವೆ ಬೆತ್ತಲಾಗಿ ನಿಂತಿದ್ದೇನೆ’ ಎನ್ನಿಸಿ, ಮೊತ್ತಮೊದಲ ಬಾರಿಗೆ ಶಮಿ ನಾನಿವರ ಜೊತೆ ಸೇರಲೇ ಬಾರದಾಗಿತ್ತು’ ಅನ್ನಿಸಿತು.

ಚಿತ್ರ ಮುಗಿಸಿ ಎಲ್ಲರು ಬೈಕುಗಳ ಬಂದಾಗ ರಾಕೇಶ್ ಹೇಳಿದ. ‘ಫ್ರೆಂಡ್ಸ್. ಈಗ ನಮ್ಮ ಮನೆಗೆ ಹೋಗೋಣ. ಶಮೀನ ನಮ್ಮ ಮಮ್ಮಿಗೆ ಪರಿಚಯ ಮಾಡೆ ಕೊಟ್ಟಿಲ್ಲ‘. ಅದಕ್ಕೆ ಎಲ್ಲರು ಹೋ ಎಂದು ಸಮ್ಮತಿ ಸೂಚಿಸಿದರು. ಶಮಿಯನ್ನು ಯಾರೂ ಕೇಳಲಿಲ್ಲ.

ಭವ್ಯವಾದ ಅಪಾರ್ಟ್‌ಮೆಂಟೊಂದರ ಬೇಸಮೆಂಟಿನಲ್ಲಿ ಬೈಕುಗಳನ್ನು ಪಾರ್ಕ್ ಮಾಡಿ ಲಿಫ್ಟ್ ಹತ್ತಿದಾಗಲೆ ರಾಕೇಶ್ ಚಳಿ ಹಿಡಿದವರಂತೆ ನಡುಗುತ್ತ ಡ್ಯಾನ್ಸ್ ಮಾಡುತೊಡಗಿದ. ಪರೇಶನು ಅವನನ್ನೆ ಅನುಸರಿಸುತಿದ್ದ. ಶಮಿಯ ಮನಸ್ಸಿನಲ್ಲಿ ಬೆಳಿಗ್ಗೆಯಿಂದ ತೋರಿ ಮರೆಯಾಗುತ್ತಿದ್ದ ಭಯದ ಭೂತ ಮತ್ತೆ ದುತ್ತೆಂದು ತಲೆಯತ್ತಿ ನಿಂತಿತ್ತು. ‘ಇಂದು ಇವರ ತಾಯಿಯನ್ನು ನೋಡಿಕೊಂಡು ಹೋದ ಮೇಲೆ ಮತ್ತೆ ಇವರ ಜೊತೆ ಸೇರಬಾರದು’ ಅಂದುಕೊಂಡಳು.

ಆಶ್ಚರ್ಯ! ಮನೆಯಲ್ಲಿ ರಾಕೇಶನ ತಾಯಿಯೆ ಇರಲಿಲ್ಲ. ರಾಕೇಶ್ ‘ಮಮ್ಮಿ ಇಲ್ಲ’ ಎಂದು ಉದ್ಗಾರ ತೆಗೆದು, ಅವರ ಮೊಬೈಲಿಗೆ ಪೋನ್ ಮಾಡುವವನಂತೆ ನಟಿಸತೊಡಗಿದ. ಪರೇಶ್ ಟೇಪ್ ರೆಕಾರ್ಡರ್ ಹಾಕಿ ಲಿಪ್ಟಿನಲ್ಲಿ ನಿಂತು ಹೋಗಿದ್ದ ಡ್ಯಾನ್ಸ್ ಮುಂದುವರೆಸುವನಂತೆ ಕುಣಿಯತೊಡಗಿದ. ವಿಕ್ಕಿ ರಾಜು ಕೂಡ ಅವನನ್ನೆ ಅನುಸರಿಸಿದರು. ಪರೇಶ್ ‘ಶಮಿ. ಕಮಾನ್. ನೀನು ನಮ್ಮ ಜೊತೆ ಡ್ಯಾನ್ಸ್ ಮಾಡು’ ಎಂದು ಕೈ ಹಿಡಿದು ಎಳೆಯತೊಡಗಿದ. ‘ನನಗೆ ಡ್ಯಾನ್ಸ್ ಬರೋಲ್ಲ’ ಎನ್ನುತಿದ್ದ ಶಮಿಯನ್ನು, ‘ಮಮ್ಮಿ ಮೊಬೈಲ್ ಆಫ್ ಮಾಡಿದಾರೆ’ ಅಂದುಕೊಂಡು ಬಂದ ರಾಕೇಶ್ ‘ಕಮಾನ್ ಶಮಿ. ನಾನ್ ನಿನಗೆ ಡ್ಯಾನ್ಸ್ ಹೇಳಿ ಕೊಡ್ತಿನಿ’ ಎಂದು ಸೊಂಟಕ್ಕೇ ಕೈ ಹಾಕಿದ!. ಶಮಿ ಯೋಚಿಸಿದಳು. ‘ನಾನು ಎಂತ ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದೀನಿ’ ಎಂದು. ‘ನಾನಿವರ ಜೊತೆ ಸೇರಲೇ ಬಾರದಾಗಿತ್ತು’ ಎಂದು ಮತ್ತೆ ಮತ್ತೆ ಅಂದು ಕೊಂಡಳು. ‘ಏನಾದರು ಮಾಡಿ ಇವತ್ತೊಂದು ದಿನ ಈ ನಾಯಿಗಳಿಂದ ತಪ್ಪಿಸಿಕೊಂಡು ಹೋದರೆ ಸಾಕು. ಇನ್ನೆಂದು ಇವರ ಜೊತೆ ಸೇರಬಾರದು’ ಅಂದುಕೊಂಡಳು.

ರಾಕೇಶನ ಹಿಡಿತದಿಂದಾದ ಮುಜುಗರವನ್ನು ತೋರಿಸಿಕೊಳ್ಳದೆ ‘ರಾಕೇಶ್, ಮನೆಗೆ ಬಂದವರಿಗೆ ಒಂದು ಗ್ಲಾಸ್ ನೀರು ಕೊಡುವುದಿಲ್ಲವೆ?’ ಎಂದಳು. ‘ಓ.. ಸ್ಸಾರಿ ಡಿಯರ್, ಸ್ಸಾರಿ. ನಾನೀಗಲೆ ನಿನಗೆ ಜ್ಯೂಸ್ ಮಾಡಿಕೊಡುತ್ತೇನೆ’ ಎಂದು ಅವಳ ಸೊಂಟವನ್ನು ಬಿಡದೆ ರೆಪ್ರಿಜಿರೇಟರ್ ಕಡೆಗೆ ಸಾಗಿದ. ಜ್ಯೂಸ್ ರೆಡಿಯಾಗಿ ಅವಳಿಗೆ ಕೊಡುವಂತೆ ಮಾಡಿ ಕೊಡದೆ, ‘ಡಿಯರ್. ಅದಕ್ಕು ಮೊದಲು ಒಂದು ಕಿಸ್ ಮಾಡಿಬಿಡು’ ಎಂದು ತುಟಿಯನ್ನು ಮುಂದೆ ಚಾಚಿದ. ಮಾತುಮಾತಿಗೆ ‘ಡಿಯರ್’ ಅನ್ನುವದನ್ನು ಕಂಡು ಅವಳ ಮೈ ಉರಿದು ಹೋಯಿತು. ‘ನಾಯಿಗಳೆ ವಾಸಿ’ ಎಂದುಕೊಂಡು ‘ರಾಕೇಶ್, ನಾನು ನಿನ್ನ ಜೊತೆ ಇರೋದಿಕ್ಕೆ ಇಷ್ಟಪಡ್ತಿನಿ. ನಿನಗೆ ಕಿಸ್ ಮಾಡೋದಿಕ್ಕಾಗಲಿ ಮತ್ತೊಂದುಕ್ಕಾಗಲಿ ನನ್ನ ಅಭ್ಯಂತರ ಇಲ್ಲ. ಆದರೆ ಅದೆಲ್ಲ ನೀನೊಬ್ಬನೆ ಇದ್ದಾಗ ಮಾತ್ರ. ಇಷ್ಟು ಜನದ ಎದುರಿಗೆ ಅಲ್ಲ. ಅದು ಅಲ್ಲದೆ ನಾನೀಗಲೆ ಮನೆಗೆ ಹೋಗ್ಬೇಕು. ಅಮ್ಮ ಕಾಯ್ತಿರ್ತಾರೆ’ ಎಂದು ಅವನಿಗೆ ಮಾತ್ರ ಕೇಳಿಸುವಂತೆ ಮೆಲ್ಲಗೆ ಹೇಳಿದಳು. ರಾಕೇಶ್ ಖುಷಿಯಲ್ಲಿ ಉಬ್ಬಿ ಹೋದ. ಒಂದು ಕ್ಷಣ ಯೋಚಿಸಿ ತನ್ನ ಮಿತ್ರರ ಕಡೆ ತಿರುಗಿ ‘ಫ್ರೆಂಡ್ಸ್, ನಾವಿನ್ನು ಹೊರಡೋಣ. ಶಮಿಗೆ ಅರ್ಜೆಂಟ್ ಮನೆಗೆ ಹೋಗ್ಬೇಕಾಗಿದೆಯಂತೆ. ಬೇಕಾದರೆ ನಾಳೆ ವಿಕ್ಕಿ ಮನೇಲೊ ಪರೇಶ್ ಮನೇಲೊ ಸೇರೋಣ. ಏನಂತೀರ?’ ಎಂದ. ಮಿಕ್ಕವರಿಗೆಲ್ಲ ನಿರಾಶೆಯಾಗಿದ್ದು ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸುತಿತ್ತು. ವಿಕ್ಕಿ ‘ನಾಳೆ ಸೇರೋದು ಇದ್ದೆ ಇರುತ್ತೆ. ಬೇಕಾದ್ರೆ ನಮ್ಮ ಮನೇಲೆ ಸೇರೋಣ. ಇವತ್ತು ಇನ್ನು ಸ್ವಲ್ಪ ಹೊತ್ತು ಇಲ್ಲೆ ಇರೋಣ’ ಎಂದ. ‘ನೊ ವಿಕ್ಕಿ. ನಾನೀಗ ಹೋಗಲೇಬೇಕು.’ ಎಂದ ಶಮಿಯ ದ್ವನಿಯಲ್ಲಿ ಸಿಡುಕು ಎದ್ದು ಕಾಣುತಿತ್ತು. ನಾಳೆ ವಿಕ್ಕಿಯ ಮನೆಯಲ್ಲಿ ಸೇರುವುದೆಂದು ತೀರ್ಮಾನಿಸಿದಾಗ ಶಮಿ ನಿಟ್ಟುಸಿರು ಬಿಟ್ಟು, ಮುಖ ತೊಳೆಯುವದಕ್ಕೆಂದು ಬಾತ್ ರೂಂ ಕಡೆಗೆ ಹೊರಟಳು. ಮಿತ್ರರೆಲ್ಲ ಸಿಕ್ಕಿದ ಚಾನ್ಸ್ ಮಿಸ್ಸಾಗಿದ್ದಕ್ಕೆ ಬೇಸರಪಟ್ಟುಕೊಂಡು ಅದೇ ವಿಷಯವನ್ನು ಮಾತನಾಡುತ್ತಿದ್ದರು. ಮುಖ ತೊಳೆದುಕೊಂಡು ಹೊರಬರುತ್ತಿದ್ದ ಶಮಿಗೆ, ವಿಕ್ಕಿ ‘ಎಂಥ ಚಾನ್ಸ್ ಹಾಳು ಮಾಡಿದ್ಯೊಲೊ ನೀನು’ ಎಂದಿದ್ದು ಮತ್ತು ರಾಕೇಶ್ ‘ನಾನೇನೊ ಮಾಡ್ಲಿ. ಅವಳು ಮನೆಗೆ ಹೋಗ್ಬೇಕಂತೆ. ಇವತ್ತಿಲ್ಲದಿದ್ರೆ ಇನ್ನೊಂದು ದಿವ್ಸ. ಎಲ್ಲೋಗ್ತಾಳೆ ಬಿಡೊ’ ಎಂದಿದ್ದು ಕಿವಿಗಪ್ಪಳಿಸಿ ನಡುಗಿ ಹೋದಳು. ‘ಇದೆಲ್ಲ ಪೂರ್ವನಿಯೋಜಿತ’ ಎಂದು ಹೊಳೆದು ಕಣ್ಣು ಕತ್ತಲಿಟ್ಟಂತಾಯಿತು. ಹೇಗೊ ಸಾವರಿಸಿಕೊಂಡು ಎಲ್ಲರಿಗು ಕೈಕುಲುಕಿ ರಾಕೇಶನ ಬೈಕ್ ಹತ್ತಿ ಬಸ್ ಸ್ಟ್ಯಾಂಡಿಗೆ ಬಂದಳು.

* * *
ಬಸ್ಸಿನಲ್ಲಿ ಸೀಟಿಗೊರಗಿ ಕುಳಿತುಕೊಂಡ ಶಮಿಗೆ ಮತ್ತೊಮ್ಮೆ ‘ತಾನು ಬೆತ್ತಲಾಗಿಯೇ ಕುಳಿತಿರುವಂತೆ, ಈ ಬಸ್ಸಿನ ಎಲ್ಲರು ತನ್ನನ್ನೆ ನೋಡುತ್ತಿರುವಂತೆ’ ಬಾಸವಾಗಿ ಹೊಟ್ಟೆಯೊಳಗೆ ನಡುಕ ಹುಟ್ಟಿಕೊಂಡಿತು. ತನ್ನ ಮೈ ಮೇಲೆ ಬಟ್ಟೆ ಇದೆಯೊ ಇಲ್ಲವೊ ಎಂದು ಮುಟ್ಟಿ ಮುಟ್ಟಿ ನೋಡಿಕೊಂಡಳು. ತಾನು ತೊಟ್ಟಿದ್ದ ಬಣ್ಣದ ಚೂಡಿದಾರನ್ನು ಕಂಡು ಅವಳ ಮೈಯಲ್ಲಿ ಉರಿಯೆದ್ದಿತು. ‘ನಾನು ಯೂನಿಫಾರ್ಮ್ ಹಾಕುವಾಗ ಎಂದೂ ಈಗಾಗಿರಲಿಲ್ಲ!. ಈ ಬಣ್ಣದ ಬಟ್ಟೆ ಹಾಕಿದ ದಿನದಿಂದಲೇ ನನಗೆ ಈ ರೀತಿ ಮನೋವಿಕಾರವುಂಟಾಗುತ್ತಿದೆ’ ಎಂದು ಕೊಂಡಳು. ‘ಇನ್ನೆಂದು ಈ ನಾಯಿಗಳ ಜೊತೆ ಸೇರುವುದಿರಲಿ ಅವರೊಡನೆ ಮಾತನಾಡುವುದೂ ಬೇಡ’ ಎಂದು ಮತ್ತೆ ಶಪಥ ಮಾಡಿಕೊಡಳು.

ಮನೆಗೆ ಬಂದ ತಕ್ಷಣ ತಾನುಟ್ಟಿದ್ದ ಬಟ್ಟೆ ಬದಲಿಸಿ, ಕಳೆದ ವರ್ಷ ಹಾಕಿಕೊಳ್ಳುತ್ತಿದ್ದ ಯೂನಿಫಾರ್ಮ್ ಹುಡುಕಿ ತಗೆದು ಹಾಕಿಕೊಂಡಳು. ಸ್ವಲ್ಪ ಬಿಗಿಯೆನಿಸಿದರೂ ಮನಸ್ಸಿಗೆ ನಿರಾಳವೆನಿಸಿತು. ಮುಖ ತೊಳೆದು ಅಡುಗೆ ಮನೆಗೆ ನುಗ್ಗಿ ‘ಅಮ್ಮ ತಿಂಡಿ ಕೊಡಮ್ಮ. ಹೊಟ್ಟೆ ಹಸಿತಾ ಇದೆ’ ಎಂದಳು. ಮಗಳನ್ನು ನೋಡಿದ ರಾಜಮ್ಮ ಆಶ್ಚರ್ಯದಿಂದ ‘ಏನಮ್ಮ ಇದು. ಹಳೆ ಯೂನಿಫಾರ್ಮ್ ಹಾಕ್ಕೊಂಡಿದಿಯ. ಬೇರೆ ಬಟ್ಟೆ ಇರ್ಲಿಲ್ವೆ?’ ಎಂದು ತಟ್ಟೆಗೆ ತಿಂಡಿ ಹಾಕಿಕೊಟ್ಟರು. ‘ನನಗೆ ಇದೆ ಸರಿ’ ಎಂದು ತಿಂಡಿ ತಿಂದು ಮುಗಿಸಿ ಇನ್ನಷ್ಟು ಕೇಳಿ ಹಾಕಿಸಿಕೊಂಡಾಗ ರಾಜಮ್ಮನವರಿಗೆ ಖುಷಿಯಾಯಿತು. ಅವಳು ಹೀಗೆ ಕೇಳಿ ಹಾಕಿಸಿಕೊಂಡು ತಿಂದು ಬಹಳದಿನವಾಗಿತ್ತು.

* * *
ರಾತ್ರಿ ಊಟಕ್ಕೆ ಕುಳಿತುಕೊಳ್ಳುವಾಗ ಶಿವಣ್ಣನವರು ‘ಶಮಿ. ಈ ತಿಂಗಳ ಸಂಬಳ ಬಂದಾಗ ನಿನಗೆ ಒಂದು ಡ್ರೆಸ್ಸ್ ಕೊಡಿಸುತ್ತೇನೆ ಅಂದಿದ್ದೆ. ನಾಳೆ ಶನಿವಾರ ಹೋಗಿ ತರೋಣ’ ಎಂದರು. ‘ಥ್ಯಾಂಕ್ಸ್ ಅಪ್ಪಾ’ ಎಂದ ಶಮಿ ಸ್ವಲ್ಪ ಯೋಚಿಸಿ ‘ಅಪ್ಪ ನಾನೀಗ ಹಾಕಿದಿನಲ್ಲ. ಅಂತದೆ ಇನ್ನೊಂದು ಜೊತೆ ಯೂನಿಫಾರ್ಮ್ ಕೊಡಿಸಿಬಿಡಿ ಸಾಕು. ಬೇರೆ ಡ್ರೆಸ್ಸ್ ಬೇಡ’ ಎಂದಳು. ‘ಯಾಕಮ್ಮಾ!’ ಎಂದು ತಂದೆ ತಾಯ ಒಟ್ಟಿಗೆ ಕೇಳಿದರು. ‘ಯಾಕು ಇಲ್ಲಪ್ಪ ನನಗೆ ಈ ಯೂನಿಫಾರ್ಮ್ ಅಂದರೆ ತುಂಬ ಇಷ್ಟ. ಅಷ್ಟೆ’ ಎಂದರು, ಇನ್ನೂ ಅಚ್ಚರಿಯಿಂದ ತನ್ನನ್ನೆ ನೋಡುತ್ತಿದ್ದ ತಂದೆಗೆ, ಗಂಟಲು ಸರಿಪಡಿಸಿಕೊಳ್ಳುತ್ತ ಕೇಳಿದಳು, ‘ಅಪ್ಪ, ಈ ಜಗತ್ತಿನಲ್ಲಿ ಈಗ ಇರುವ ಅಸ್ತ್ರಗಳಲ್ಲಿ ಯಾವುದು ಅತ್ಯಂತ ಪ್ರಬಲವಾದುದ್ದು?’ ಎಂದು. ಶಿವಣ್ಣ ನಕ್ಕು ‘ಇನ್ಯಾವುದು? ಅಣುಬಾಂಬ್’ ಎಂದರು. ಇಲ್ಲವೆಂದು ತಲೆಯಾಡಿಸಿದ ಶಮಿ ಭಾಷಣ ಮಾಡುವವರಂತೆ ಎತ್ತರದ ದನಿಯಲ್ಲಿ ‘ಈ ಜಗತ್ತಿನಲ್ಲಿ ಈಗಿರುವ ಅತ್ಯಂತ ಪ್ರಬಲವಾದ ಅಸ್ತ್ರ ಯಾವುದು ಗೊತ್ತೆ? ಅದು ಸಮವಸ್ತ್ರ! ದೇಶಕ್ಕೆ ಮಿಲಿಟರಿ, ಅಣುಬಾಂಬುಗಳಿದ್ದಂತೆ. ಈ ಸಮವಸ್ತ್ರ! ವಿವಿಧತೆಯಲ್ಲಿ ಏಕತೆಯನ್ನು ತೋರಲು ಬೇಕು ಸಮವಸ್ತ್ರ!!. ನಿಮ್ಮ ಮಾನ ಪ್ರಾಣಗಳ ರಕ್ಷಣೆಗೆ ಬೇಕು ಈ ಸಮವಸ್ತ್ರ!!!’ ಎಂದಳು. ಶಿವಣ್ಣ ಜೋರಾಗಿ ನಕ್ಕುಬಿಟ್ಟರು. ರಾಜಮ್ಮನವರೂ ಅವರನ್ನೆ ಅನುಸರಿಸಿದಾಗ ಶಮಿಯ ಮುಖದಲ್ಲೂ ನಗೆಯ ಹೂವರಳಿತ್ತು.

* * *
[ನೆನಪು: ದ್ವಿತೀಯ ಪಿ.ಯು.ಸಿ.ಯ ಕೊನೆಯಲ್ಲಿ ಗ್ರಂಥಾಲಯದ ಒಂದು ಪುಸ್ತಕವನ್ನು ಸೀಮಾ ಕಳೆದುಬಿಟ್ಟಿದ್ದಳು. ಅದರ ಹಣವನ್ನು ಪಾವತಿಸಿ ಎನ್.ಒ.ಸಿ. ತೆಗೆದುಕೊಳ್ಳುವಾಗ ಅವರ ತಂದೆ ಬಂದಿದ್ದರು. ಆಗ ಅವರಾಡಿದ 'ಕೋಟಿಗಟ್ಟಲೆ ಕೊಳ್ಳೆಯೊಡೆಯುವ ವೀರಪ್ಪನ್ ಅಂತವರನ್ನು ಏನೂ ಮಾಡಲಾಗುವುದಿಲ್ಲ. ಮಕ್ಕಳು ಒಂದು ಪುಸ್ತಕ ಕಳೆದರೆ ಹಣ ಕೇಳುತ್ತೀರಾ? ಆ ವೀರಪ್ಪನ್ನನ್ನು ಹಿಡಿಯಿರಿ ನೋಡೋಣ' ಎಂದು ಮಾತನಾಡಿದ್ದು ನೆನಪಾಯಿತು. ಸೀಮಾ ಸ್ವಿತೀಯ ಪಿ.ಯು.ಸಿ.ಯಲ್ಲಿ ಫೇಲ್ ಆಗಿದ್ದಳು. ಪರೀಕ್ಷೆ ಕಟ್ಟಿಸಲು ಬಂದಿದ್ದ ಆಕೆಯ ತಾಯಿ 'ನನ್ನ ಮಗಳು ರಾತ್ರಿಯೆಲ್ಲಾ ಕುಳಿತು ಓದಿದ್ದಳು. ಆದರೂ ಮ್ಯಾಥಮೆಟಿಕ್ಸಿನಲ್ಲಿ ಕೇವಲ ಒಂದೇ ಒಂದು ಮಾರ್ಕ್ಸ್ ಕೊಟ್ಟಿದ್ದಾರಲ್ಲ' ಎಂದು ಕ್ಲರ್ಕ್ ಹತ್ತಿರ ಹೇಳುತ್ತಿದ್ದುದು ಆಗ ಒಂದು ಜೋಕಿನಂತೆ ಪ್ರಚಾರದಲ್ಲಿತ್ತು.]

Thursday, June 03, 2010

ಯಾವುದು ಆ ರಾಷ್ಟ್ರೀಯ ಸ್ಮಾರಕ?

ಈ ಕಲಾಕೃತಿ ರಾಷ್ಟ್ರೀಯ ಸ್ಮಾರಕವೊಂದರ ಭಾಗವಾಗಿದೆ.
ಯಾವುದು ಆ ರಾಷ್ಟ್ರೀಯ ಸ್ಮಾರಕ?
ಹೇಳಬಲ್ಲಿರಾ?

Monday, May 31, 2010

ಇಂಡಿಯಾಸ್ ಲಾಸ್ಟ್ ಟೀ ಶಾಪ್ !!!

ಭಾರತದ ಉತ್ತರಖಾಂಡ ರಾಜ್ಯ ಹಾಗೂ ಚೀನಾದೇಶದ ಗಡಿಯಲ್ಲಿರುವ ಚಾ ಅಂಗಡಿ. ಅಲ್ಲಿಂದ ಮುಂದೆ ಸುಮಾರು 48 ಕಿಲೋಮೀಟರ್ ದೂರದಲ್ಲಿ ಗಡಿಯಿದೆ. ಈ 48 ಕಿಲೋ ಮೀಟರ್ ಹಾಗೂ ಚೀನಾ ಭೂಭಾಗದಲ್ಲಿರುವ 12 ಕಿಲೋಮೀಟರ್ ಜಾಗ ನಿರ್ಜನ ಪ್ರದೇಶ (noman land)
ಅಂಗಡಿಯ ಮುಂದಿರುವ ಬಹುಭಾಷಾ ಫಲಕ (ಕನ್ನಡದ ಫಲಕ ತಪ್ಪಾಗಿ ಬರೆದಿದೆ. ಅದನ್ನು ಅಂಗಡಿಯವ ವಿನಮ್ರನಾಗಿ ಒಪ್ಪಿಕೊಂಡು, ಮುಂದೆ ಸರಿಯಾಗಿ ಸ್ಟಿಕರ್ ಬೋರ್ಡ್ ಮಾಡಿಸುತ್ತೇನೆ ಎಂದು ಭರವಸೆ ನೀಡಿ, ಡೈರಿಯಲ್ಲಿ ಸರಿಯಾದ ವಾಕ್ಯವನ್ನು ಬರೆಸಿಕೊಂಡಿದ್ದಾನೆ.)



ಟೀ ಕುಡಿಯುತ್ತಾ ನಿಂತಾಗ ಅಂಗಡಿಯ ಮುಂದಿನ ದೃಶ್ಯಾವಳಿ ಕಂಡಿದ್ದು ಹೀಗೆ


Tuesday, May 11, 2010

ನಾಗಚಂದ್ರನ ಪರಮೋಚ್ಛ ಕಲ್ಪನೆಯ 'ಸರಸ್ವತೀ'

‘ಅಭಿನವಪಂಪ’ನೆಂದೇ ಖ್ಯಾತನಾಗಿರುವ ನಾಗಚಂದ್ರನು ಸರಸ್ವತಿಯ ವಿಷಯದಲ್ಲಿಯೂ ಅಭಿನವಪಂಪನೇ ಆಗಿರುವುದು, ಅವನ ಎರಡೂ ಕಾವ್ಯಗಳಲ್ಲಿ ಪ್ರಕಟಗೊಂಡಿರುವ ಸರಸ್ವತೀ ದರ್ಶನದಿಂದ ವ್ಯಕ್ತವಾಗುತ್ತದೆ. ‘ಮಲ್ಲಿನಾಥಪುರಾಣ’ ಮತ್ತು ‘ರಾಮಚಂದ್ರಚರಿತಪುರಾಣ’ (ಪಂಪರಾಮಾಯಣ) ಈತನ ಕೃತಿಗಳು. “ನಾಗಚಂದ್ರನು ‘ಮಲ್ಲಿನಾಥಪುರಾಣ’ದಲ್ಲಿ ತನ್ನ (ಸರಸ್ವತಿ) ದರ್ಶನದ ಪ್ರಥಮದರ್ಶನ ಮಾಡಿಸಿ ಅದರ ಪರಿಣಿತಸ್ವರೂಪವನ್ನು ‘ಪಂಪರಾಮಾಯಣ’ದಲ್ಲಿ ತೋರಿದ್ದಾನೆ. ‘ಮಲ್ಲಿನಾಥಪುರಾಣ’ದಲ್ಲಿ ಬರುವ ಸರಸ್ವತೀ ಸ್ತುತಿ ಹೀಗಿದೆ.


ಪದವಿನ್ಯಾಸವಿಲಾಸಮಂಗವಿಭವಂ ಚೆಲ್ವಾದ ದೃಷ್ಟಿಪ್ರಸಾ

ದದೊಳೊಂದಾದ ನಯಂ ಮೃದೂಕ್ತಿ ವನಿತಾಸಾಮಾನ್ಯವಲ್ತೆಂಬ ಕುಂ

ದದ ವರ‍್ಣಂ ನಿಜವೆಂಬ ರೂಪೆಸೆಯೆ ನಾನಾಭಂಗಿಯಂ ಬೇಱೆ ತಾ

ಳ್ದಿ ವಾಗ್ದೇವತೆ ಮಾೞ್ಕೆ ಮತ್ಕೃತಿಗೆ ಲೋಕಾಶ್ಚರ‍್ಯಚಾತುರ‍್ಯಮಂ||

ಪದಗಳ ವಿನ್ಯಾಸ, ವಿಲಾಸ, ಅಂಗವೈಭವ, ಚೆಲುವನ್ನು ಹೆಚ್ಚಿಸುವ ನಯ-ನಾಜೂಕು, ಮೃದುವಾದ ಉಕ್ತಿ, ವನಿತೆಯರಿಗೆ ಸಾಮಾನ್ಯವಾಗಿಯೇ ಇರುವ ವರ್ಣಕ್ಕಿಂತಲೂ ಹೆಚ್ಚು ತೇಜಸ್ಸುಳ್ಳ, ಆದರೆ ಕುಂದದ ನಿಜವಾದ ಸೌಂದರ್ಯವನ್ನು ವಾಗ್ದೇವತೆ ಪಡೆದಿದ್ದಾಳೆ. ವರ್ಣ ಎಂದರೆ ಅಕ್ಷರ ಎಂಬ ಅರ್ಥವೂ ಇದೆ. ಕಾವ್ಯ ಕವಿಸೃಷ್ಟಿಯಾದರೂ ಅದೂ ಪೂರ್ಣ ಸಾಕಾರಗೊಳ್ಳುವುದು ಅಕ್ಷರರೂಪದಲ್ಲಿಯೆ. ಇವೆಲ್ಲವುಗಳನ್ನು ಒಳಗೊಂಡ ಕಾವ್ಯದ ದೃಷ್ಟಿಯೇ ಸರಸ್ವತಿಯ ಮುಖಲಕ್ಷಣ. ‘ನಾನಾಭಂಗಿಯಂ ಬೇಱೆ ತಾಳ್ದಿ’ ಎಂಬಲ್ಲಿ ಸರಸ್ವತಿಯ ವ್ಯಾಪಕತೆ ಪ್ರಕಟವಾಗಿದೆ. ‘ಸರ್ವಭಾಷಾಸರಸ್ವತಿ’ ವಿವಿಧಪ್ರಕಾರಗಳನ್ನು ತಾಳಿ ಪ್ರಕಟವಾಗುವ ಚಿತ್ರ, ನಾಟ್ಯಸರಸ್ವತಿಯನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ.

‘ಮಲ್ಲಿನಾಥಪುರಾಣ’ದ ಕೊನೆಯ ಪದ್ಯ ಹೀಗಿದೆ.

ಸುಕೃತಿಪ್ರೀತಿಲತಾಸಮುತ್ಕಳಿಕೆ ವಿದ್ವನ್ಮಂಡಳೀರತ್ನಕಂ

ಠಿಕೆ ಧರ್ಮಾಮೃತಮೇಘಮಾಳಿಕೆ ವಚಶ್ರೀನರ್ತಕೀ ನೃತ್ಯವೇ

ದಿಕೆ ಸಾಹಿತ್ಯಸರೋಜಕರ್ಣಿಕೆ ಯಶಶ್ಯ್ರೀಕೇಕರಾಳೋಕ ಚಂ

ದ್ರಿಕೆ ನಿಲ್ಕೀಕೃತಿ ಕಲ್ಪಕೋಟಿವರೆಗಂ ಭದ್ರಂ ಶುಭಂ ಮಂಗಳಂ||

ಪುಣ್ಯವಂತರಾದ ರಸಿಕರ ಪ್ರೀತಿಯ ಬಳ್ಳಿಗೆ ಬಿಟ್ಟ ಮೊಗ್ಗೆ, ವಿದ್ವಾಂಸರ ಮಂಡಳಿಯ ಕೊರಳಲ್ಲಿಯ ರತ್ನಹಾರ, ಧರ್ಮವೆಂಬ ಅಮೃತದ ಮಳೆಗರೆಯುವ ಮೇಘಮಾಲೆ, ಮಾತಿನ ಲಕ್ಷ್ಮಿಯೆಂಬ ನರ್ತಕಿ ಕುಣಿಯುವ ನೃತ್ಯವೇದಿಕೆ, ಸಾಹಿತ್ಯವೆಂಬ ಕಮಲದ ಬೀಜಕೋಶ, ಯಶೋಲಕ್ಷ್ಮಿಯ ಕುಡಿಗಣ್ಣಿನ ಬೆಳದಿಂಗಳು ಆಗಿರುವ ಈ ಕೃತಿ ಕಲ್ಪಕೋಟಿಯವರೆಗೆ ನಿಲ್ಲಲಿ. ಭದ್ರಂ ಶುಭಂ ಮಂಗಳಂ. ತನ್ನ ಕಾವ್ಯವನ್ನು ತಾನೇ ಸ್ತುತಿಸಿಕೊಳ್ಳುತ್ತಿರುವ ನಾಗವರ್ಮನ ಈ ಪದ್ಯ, ಸ್ವಕಾವ್ಯಸ್ತುತಿ ಮಾತ್ರವಾಗಿರದೇ, ಯಾವುದೇ ಒಂದು ಒಳ್ಳೆಯ ಕಾವ್ಯದ ಹಿಂದಿನ ಮಹೋದ್ದೇಶವನ್ನು ನಿರೂಪಿಸುತ್ತದೆ. ಇಲ್ಲಿ ನಮಗೆ ಮುಖ್ಯವಾಗಿರುವುದು ‘ವಚಶ್ರೀನರ್ತಕೀನೃತ್ಯವೇದಿಕೆ’ ಎಂಬ ವಿಶೇಷಣ. ಒಂದು ಒಳ್ಳೆಯ ಕಾವ್ಯದ ಹುಟ್ಟಿಗೆ ಒಳ್ಳೆಯ ವಾಕ್ ಹಾಗೂ ಒಳ್ಳೆಯ ಭಾಷೆ ಬಹಳ ಮುಖ್ಯ. ಲಯಬದ್ಧವಾದ ಪದಗಳ ವಿಲಾಸವು ಕಾವ್ಯದ ಓದಿಗೆ ಅನುಕೂಲವನ್ನು ಒದಗಿಸುತ್ತದೆ. ಲಕ್ಷ್ಮಿ ಸಂಪತ್ತಿಗೆ ಅಧಿದೇವತೆ. ಒಳ್ಳೆಯ ಮಾತೂ ಸಹ ಒಂದು ಸಂಪತ್ತು. ಆದರೆ ಧನಸಂಪತ್ತಿನಂತೆ ನಾಶವಾಗುವುದಿಲ್ಲ. ನಾಗವರ್ಮನು ಧನಸಂಪತ್ತಿನಂತೆ ನಾಶವಾಗದ ಮಾತಿಗೆ ಅಧಿದೇವತೆಯಾದ ಸರಸ್ವತಿಯನ್ನು ವಚಶ್ರೀ ಅಂದರೆ ಮಾತಿನ ಲಕ್ಷ್ಮಿ ಎಂದು ಕರೆದಿದ್ದಾನೆ. ‘ತನ್ನ ಕಾವ್ಯವು ವಚಶ್ರೀ ಅಂದರೆ ಮಾತಿನ ಲಕ್ಷ್ಮಿಯಾದ ಸರಸ್ವತಿಯು ನರ್ತನ ಮಾಡುವ ನೃತ್ಯವೇದಿಕೆ’ ಎಂದು ಹೇಳಿರುವುದು ವಿನೂತನವಾಗಿದೆ.

ಪರಿಣಿತಕವೀಂದ್ರವದನಾ

ಜಿರದೊಳ್ ಮೃದುಪದವಿಲಾಸ ವಿನ್ಯಾಸಾಲಂ

ಕರಣಂ ರಂಜಿಸೆ ನರ್ತಿಪ

ಸರಸ್ವತೀಲಾಸ್ಯ ಭೇದಮಂ ಜಡನಱಯಂ||

ಮೃದುವಾದ ಪದಗಳ ವಿಲಾಸ ವಿನ್ಯಾಸದಿಂ ಆಲಂಕೃತಳಾಗಿರುವ ಸರಸ್ವತಿಯು ಪರಿಣಿತರಾದ ಕವಿಗಳ ಮೊಗದಲ್ಲಿ ಲಾಸ್ಯವಾಡುತ್ತಿರುತ್ತಾಳೆ; ಆದರೆ ಅದನ್ನು ಜಡರು ಅರಿಂiiಲಾಗುವುದಿಲ್ಲ. ಸರಸ್ವತಿಯ ನರ್ತನಕ್ಕೆ ತನ್ನ ಕಾವ್ಯವನ್ನೇ ವೇದಿಕೆಯನ್ನಾಗಿಸಿರುವ ನಾಗಚಂದ್ರನ ಈ ಕಲ್ಪನೆಯೂ ವಿನೂತನವಾಗಿಯೇ ಇದೆ. ಬ್ರಹ್ಮನ ಮುಖಕಮಲದಲ್ಲಿ ವಾಸವಾಗಿರುವ ಸರಸ್ವತಿಯು ತಮ್ಮ ಮುಖದಲ್ಲಿ ಬಂದು ನೆಲಸಲಿ ಎಂಬ ಕಲ್ಪನೆಗಿಂತ, ‘ಮೃದುಪದವಿಲಾಸವಿನ್ಯಾಸಾಲಂಕರಣ’ದಿಂದ ಪರಿಣಿತ ಕವಿಗಳ ಮೊಗದಲ್ಲಿ ಲಾಸ್ಯವಾಡಲಿ ಎಂಬ ಪರಿಕಲ್ಪನೆ ಹೊಸದಾಗಿಯೂ, ಅರ್ಥಪೂರ್ಣವಾಗಿಯೂ ಕಾಣಿಸುತ್ತದೆ.

ನಾಗಚಂದ್ರನ ಸರಸ್ವತಿಯ ದರ್ಶನ ಆತನ ‘ಪಂಪರಾಮಾಯಣ’ದಲ್ಲೂ ಮುಂದುವರೆದಿದೆ. ಆ ಕೃತಿಯ ಆರಂಭದ ಪ್ರಾರ್ಥನಾಪದ್ಯದಲ್ಲಿಯೇ ‘ವಿದ್ಯಾನಟೀನಾಟ್ಯವೇದೀಕಲ್ಪಂ ಮುಖಚಂದ್ರಬಿಂಬಂ’ ಎಂಬ ವಿವರಣೆಯಿದೆ.

ಪರಬ್ರಹ್ಮ ಶರೀರಪುಷ್ಟಿ ಜನತಾಂತರ್ದೃಷ್ಟಿ ಕೈವಲ್ಯಬೋ

ಧರಮಾ ಮೌಕ್ತಿಕಹಾರಯಷ್ಟಿ ಕವಿತಾವಲ್ಲೀ ಸುಧಾವೃಷ್ಟಿ ಸ

ರ್ವರಸೋತ್ಪಾದ ನವೀನಸೃಷ್ಟಿ ಬುಧಹರ್ಷಾಕೃಷ್ಟಿ ಸರ್ವಾಂಗಸುಂ

ದರಿ ವಿದ್ಯಾನಟಿನಾಟಕಂ ನಲಿಗೆ ಮತ್ಕಾವ್ಯಸ್ಥಲೀರಂಗದೊಳ್||

ಈ ಪದ್ಯ ‘ಸರಸ್ವತಿಗೆ ತೊಡಿಸಿದ ರತ್ನಕಿರೀಟ’ ಎನ್ನಬಹುದು. ‘ಮಲ್ಲಿನಾಥಪುರಾಣ’ವನ್ನು ವಚಶ್ರೀ ನರ್ತಕಿಯ ನರ್ತನಕ್ಕೆ ನೃತ್ಯವೇದಿಕೆಯನ್ನಾಗಿ ಮಾಡಿದ್ದ ನಾಗಚಂದ್ರ, ‘ಪಂಪರಾಮಾಯಣ’ದಲ್ಲಿ ಇನ್ನೂ ಮುಂದುವರೆದು, ‘ಸರ್ವಾಂಗಸುಂದರಿಯಾದ ವಾಗ್ದೇವತೆ ಎಂಬ ವಿದ್ಯಾನಟಿಯ ನಾಟಕ ತನ್ನ ಕಾವ್ಯ’ ಎಂದು ಹೇಳಿ ಕಾವ್ಯಸರಸ್ವತಿಗೆ ರತ್ನಕಿರೀಟವನ್ನು ತೊಡಿಸಿದ್ದಾನೆ. ಈ ಪದ್ಯದ ಸರಸ್ವತಿಯ ದರ್ಶನದ ಬಗ್ಗೆ ಕನ್ನಡದ ಇಬ್ಬರು ಹಿರಿಯ ಕವಿಗಳಾದ, ದ.ರಾ.ಬೇಂದ್ರೆ ಮತ್ತು ರಂ.ಶ್ರೀ.ಮುಗಳಿ ವಿಸ್ತಾರವಾಗಿ ಚರ್ಚಿಸಿದ್ದಾರೆ. ಸಮಗ್ರವಾಗಿ ಪದ್ಯದ ದರ್ಶನಾಂಶವನ್ನು ವ್ಯಾಖ್ಯಾನಿದ್ದಾರೆ. ಅವರಿಬ್ಬರ ದರ್ಶನಮೀಮಾಂಸೆಯ ವಿವರಗಳನ್ನು ಕೆಳಗಿನಂತೆ ಸಂಗ್ರಹಿಸಲಾಗಿದೆ.

ರಂ.ಶ್ರೀ.ಮುಗಳಿಯವರು ‘ಮಲ್ಲಿನಾಥಪುರಾಣದ ವಚಶ್ರೀನರ್ತಕೀನೃತ್ಯವೇದಿಕೆ ಎಂಬಲ್ಲಿ ವಿಶಿಷ್ಟಕೃತಿಯೊಂದನ್ನು ಮೆಚ್ಚಿದ ಮಾತು ವಿಸ್ತರಗೊಂಡು ‘ವಿದ್ಯಾನಟಿನಾಟಕ’ದ ಸಮಗ್ರರೂಪವಾಗಿ ಇಲ್ಲಿ (ಪಂಪರಾಮಾಯಣ) ಅವತಾರ ತಾಳಿದೆ. ಇಡಿಯ ಪದ್ಯವು ನಾಗಚಂದ್ರನು ಪಡೆದ ಸರಸ್ವತಿಯ ಭವ್ಯದರ್ಶನವನ್ನು ಸಮಗ್ರವಾಗಿ ನಿರೂಪಿಸುತ್ತದೆ. ವಿದ್ಯಾನಟಿನಾಟಕ ಎಂದರೆ ಸರಸ್ವತಿ ಎಂಬ ನಟಿಯ ನೃತ್ಯನಾಟಕ.’ ಎನ್ನುತ್ತಾರೆ. ಅವರು ಮುಂದುವರೆದು ಆರು ಹಂತಗಳಲ್ಲಿ ಪದ್ಯವನ್ನು ವಿಶ್ಲೇಷಿಸಿದ್ದಾರೆ
  • ‘ಪರಬ್ರಹ್ಮ ಶರೀರಪುಷ್ಟಿ’ - ಪರಮಜಿನನ ಶರೀರಕ್ಕೆ, ಸರಸ್ವತಿಯಿಂದ ದೊರೆಯುವ ಆನಂದದ ಅನ್ನ, ರಸದ ಅಮೃತ ಪುಷ್ಟಿಯನ್ನು ಒದಗಿಸುತ್ತದೆ. ಈ ಜಗತ್ತು ಅಥವಾ ಸೃಷ್ಟಿಯೇ ಪರಮಾತ್ಮನ ಶರೀರ. ಸರಸ್ವತಿಯು ಆನಂದದ ಆಹಾರದಿಂದ ಈ ಸೃಷ್ಟಿಯನ್ನು ಪೋಷಿಸುತ್ತಾಳೆ. ‘ಪ್ರಜಾಪತಿಯು ವಾಕ್ಕಿನಿಂದಲೇ ಶಕ್ತಿಯನ್ನು ತೃಪ್ತಿಯನ್ನು ಪಡೆಯುತ್ತಾನೆ’ ಎಂಬುದು ವೈದಿಕಮತದ ನಂಬುಗೆಯೂ ಆಗಿದೆ.
  • ‘ಜನತಾಂತರ್ದೃಷ್ಟಿ’ - ಜನಸಾಮಾನ್ಯನ ಒಳಗಣ್ಣು. ಹೊರಗಣ್ಣಿನಿಂದ ನೋಡಿದರೆ ಕಾಣದ ಕಾವ್ಯಸತ್ಯ ಮತ್ತು ಸೌಂದರ್ಯ ಒಳಗಣ್ಣಿಗೆ ಕಾಣುತ್ತದೆ. ‘ಜನತೆಯ ಅಂತರ್ದೃಷ್ಟಿ ಎಂದರೆ ಸರಸ್ವತಿ.’ ಆದರೆ ‘ಮುಕ್ತರಿಗೆ ಮಾತ್ರ ಅಂತರ್ದೃಷ್ಟಿ, ಅವರಿಗೇ ಸರಸ್ವತಿಯು ಪ್ರಸನ್ನವಾಗುವವಳು.’
  • ‘ಕೈವಲ್ಯಬೋಧರಮಾ ಮೌಕ್ತಿಕಹಾರಯಷ್ಟಿ’ - ಕೇವಲಜ್ಞಾನವೆಂಬ ಲಕ್ಷ್ಮಿಯ ಕೊರಳಿಗೆ ಮುತ್ತಿನಹಾರದಂತೆ ಸರಸ್ವತಿಯು ಇದ್ದಾಳೆ. ಮುಕ್ತಾವಸ್ಥೆಯಲ್ಲಿ ಪಡೆಯುವ ಜ್ಞಾನಕ್ಕೆ ಸರಸ್ವತಿಯು ಒಂದು ಅಲಂಕಾರ. ಜ್ಞಾನವು ಹೆಚ್ಚುತ್ತಾ ಹೋದಂತೆ ಆನಂದವು ಅದರೊಡನೆ ಸೇರಿಕೊಂಡು ಶೋಭೆಯನ್ನು ಹೆಚ್ಚಿಸುತ್ತದೆ. ಕೈವಲ್ಯಬೋಧಲಕ್ಷ್ಮಿ ತನ್ನಷ್ಟಕ್ಕೆ ತಾನು ಸುಂದರಿಯಾದರೂ, ಸರಸ್ವತಿಯೆಂಬ ಮುತ್ತಿನಹಾರದ ತೊಡುಗೆಯಿಂದ ಮಾತ್ರ ಅವಳ ಸೌಂದಂiiಕ್ಕೆ ಪರಿಪೂರ್ಣತೆ ಲಭಿಸುತ್ತದೆ.
  • ‘ಕವಿತಾವಲ್ಲೀ ಸುಧಾವೃಷ್ಟಿ’ - ಕವಿತೆ ಎಂಬ ಬಳ್ಳಿಗೆ ಅಮೃತದ ಮಳೆಗರೆಯುವವಳು ಸರಸ್ವತಿ. ವಸ್ತು ವಿಷಯ ಪ್ರತಿಭೆ ಎಲ್ಲಾ ಇದ್ದರೂ, ಸರಸ್ವತಿಯ ಸುಧಾವೃಷ್ಟಿ ಇಲ್ಲದಿದ್ದರೆ ಕವಿತೆ ಎಂಬ ಬಳ್ಳಿ ಬಾಡಿಹೋಗುತ್ತದೆ. ಒಂದು ಪಕ್ಷ ಅದು ಉಳಿದರೂ ಅದರ ಹೂವುಗಳಿಗೆ ಸುವಾಸನೆಯಿರುವುದಿಲ್ಲ. ಸರಸ್ವತಿಯ ಕೃಪೆಯಿದ್ದರಷ್ಟೇ ಕಾವ್ಯ ಅಮರವಾಗುವುದು.
  • ‘ಸರ್ವರಸೋತ್ಪಾದ ನವೀನ ಸೃಷ್ಟಿ’ - ಸರಸ್ವತಿಯು ಸರ್ವರಸಗಳಿಂದ ಕೂಡಿದ ನವೀನಸೃಷ್ಟಿಯನ್ನೇ ಬೆಳಕಿಗೆ ತರುವವಳು. ಜೀವನದ ಸರ್ವವಿಧ ಚಿತ್ರಣ, ಸಮಗ್ರದರ್ಶನ, ಆಳ-ಅಗಲಗಳ ನಿರೂಪಣ ಸರ್ವರಸೋತ್ಪಾದದಿಂದ ಆಗುತ್ತದೆ. ಅವುಗಳನ್ನೆಲ್ಲ ಒಟ್ಟುಗೂಡಿಸಿ ಕವಿಯಾದವನು ನವೀನಸೃಷ್ಟಿಯನ್ನು ನಿರ್ಮಿಸುತ್ತಾನೆ. ಪ್ರತಿ ಕವಿಗೂ ಅದು ನವನವೀನವಾಗಿಯೇ ಇರುತ್ತದೆ.
  • ‘ಬುಧಹರ್ಷಾಕೃಷ್ಟಿ’ - ಬಲ್ಲವರ, ಸಹೃದಯರ ಹರ್ಷವನ್ನು ಆಕರ್ಷಿಸುವ ಶಕ್ತಿಯಾಗಿರುವವಳು ಸರಸ್ವತಿ. ಕಾವ್ಯ ಒಳ್ಳೆಯವರನ್ನಷ್ಟೇ ಆಕರ್ಷಿಸುವುದಿಲ್ಲ. ಆದರೆ ಕಾವ್ಯದಿಂದ ಆಕರ್ಷಿತರಾದವರೆಲ್ಲಾ ಒಳ್ಳೆಯವರಾಗುತ್ತಾರೆ, ಸಹೃದಯರಾಗುತ್ತಾರೆ. ‘ಸಮಸ್ತಚೆಲುವನ್ನು ಹೊಂದಿರುವ ಸರ್ವಾಂಗಸುಂದರಿಯಾದ ವಿದ್ಯಾನಟಿಯ ನಾಟಕವು ತನ್ನ ಕಾವ್ಯವೆಂಬ ರಂಗಸ್ಥಳದಲ್ಲಿ ನಡೆಯಲಿ’ ಎಂಬುದು ನಾಗಚಂದ್ರನ ಆಶಯ.
ದ.ರಾ.ಬೇಂದ್ರೆಯವರು ಈ ಪದ್ಯದ ದರ್ಶನವನ್ನು ಗ್ರಹಿಸಿರುವ, ತನ್ಮೂಲಕ ಸರಸ್ವತಿಗೆ ಸುವರ್ಣಕಿರೀಟವನ್ನು ತೊಡಿಸಿರುವ ರೀತಿ ಕೆಳಗಿನಂತಿದೆ.
  1. ಈ ಸೃಷ್ಟಿಯೆಂಬ ಕೃತಿಯನ್ನು ರಚಿಸುವಲ್ಲಿ ವಿದ್ಯೆಯೇ ಒಳಗಿಂದ ಪೋಷಣೆ ಕೊಡುವವಳು.
  2. ಆಕೃತಿಯ ರಸರಹಸ್ಯದ ಅರಿಕೆಯುಂಟಾಗುವಂತೆ ಜನತೆಯಲ್ಲಿ ಅಂತರ್ದೃಷ್ಟಿಯಾಗುವಳು.
  3. ತಾನೇ ತಾನಾದ ತನ್ಮಯತೆಯಲ್ಲಿ ಬೋಧರೂಪವಾಗುವವಳು.
  4. ಬ್ರಹ್ಮಪ್ರಕೃತಿಗೆ ಪ್ರತಿಬಿಂಬವಾದ ಕಲಾಸೀಮೆಯಾದ ಕಾವ್ಯಕೃತಿಗಳ ವಿವಿಧರೂಪ ತಳೆವಳು.
  5. ನವೋನವರಸಸೃಷ್ಟಿಯಾಗುವಳು.
  6. ಬಲ್ಲವರಿಗೂ ವಲ್ಲಭೆಯಂತೆ ಸೋಲಿಸುವಳು.
  7. ಅಂಗಾಂಗದಲ್ಲಿ ಸುಂದರಿಯಾಗಿರುವಳು.

ಇಂತು ಈ ಸಪ್ತಭಂಗಿ ನಯದಲ್ಲಿ ನಯವಾಗಿ ನೃತ್ಯವಾಡುವ ವಿದ್ಯಾನಟಿಯು ಕವಿಗಳ ಉಪಾಸನಾದೇವತೆಯಾಗಿರುವಳು.

‘ಮಲ್ಲಿನಾಥಪುರಾಣ’ದಲ್ಲಿ ‘ಪರಿಣಿತ ಕವಿಗಳ ಮುಖದಲ್ಲಿ ಲಾಸ್ಯವಾಡುವ ಮೃದುಪದವಿಲಾಸವಿನ್ಯಾಸಗಳಿಂದ ಆಲಂಕೃತಗೊಂಡ ಸರಸ್ವತಿಯು ಲಾಸ್ಯವಾಡುವುದನ್ನು ಜಡರು ಅರಿಯಲಾರರು’ ಎಂದಿದ್ದ ನಾಗಚಂದ್ರನೇ ‘ಜನತಾಂತರ್ದೃಷ್ಟಿ’ಯನ್ನು ಸರಸ್ವತಿಗೆ ಸಮೀಕರಿಸಿರುವುದು ಆತನ ಸರಸ್ವತಿಯ ಭವ್ಯದರ್ಶನಕ್ಕೆ ಸಾಕ್ಷಿಯಾಗಿದೆ. ಸರಸ್ವತಿದರ್ಶನದ ವಿಚಾರವೈಭವದಲ್ಲಿ ಪಂಪನಿಗಿಂತ ನಾಗಚಂದ್ರ ಒಂದು ಹೆಜ್ಜೆ ಮುಂದೆಯೇ ಇದ್ದಾನೆ; ಉಳಿದೆಲ್ಲಾ ಕವಿಗಳಿಗಿಂತ ಹಲವಾರು ಹೆಜ್ಜೆ ಮುಂದಿದ್ದಾನೆ