Friday, December 28, 2012

ಕಾವ್ಯಯಾನಕ್ಕೆ ಬೆನ್ನು ತಟ್ಟಿದ ಹಂಪನಾ


ಅಪರೂಪದ ಕವಿತೆಗಳ ವಿಶ್ಲೇಷಣೆ
ಡಾ.ಬಿ.ಆರ್.ಸತ್ಯನಾರಾಯಣರ ಈ ಕೃತಿ ಕುವೆಂಪು ಕಾವ್ಯಯಾನ ತನ್ನ ಶೀರ್ಷಿಕೆಯನ್ನು ಸಾರ್ಥಕ ಪಡಿಸಿದೆ. ಈ ಪುಸ್ತಕದಲ್ಲಿರುವ ಬಿಡಿ ಬಿಡಿ ಬರೆಹಗಳನ್ನು ಒಂದೊಂದಾಗಿ ಓದುತ್ತ ಹೊರಟರೆ, ಒಟ್ಟು ಪುಸ್ತಕದ ಓದು ಮುಗಿಯುವ ಹೊತ್ತಿಗೆ ಕುವೆಂಪುರವರ ಕಾವ್ಯಪ್ರಪಂಚವನ್ನು ಹೊಕ್ಕು ಹೊರಬಂದ ಅನುಭವ ಆಗುತ್ತದೆ.
ಕುವೆಂಪುರವರು ಬರೆದಿರುವ ಆತ್ಮಕಥೆಯ ಬೃಹದ್‌ಗ್ರಂಥದ ಹೆಸರು ನೆನಪಿನ ದೋಣಿಯಲ್ಲಿ ಎಂದು. ತಮ್ಮ ಬದುಕಿನ ಚಿತ್ರಣವನ್ನು ನೆನಪಿನ ದೋಣಿಯಲ್ಲಿ ಪಯಣಿಸುತ್ತ ಕಟ್ಟಿಕೊಟ್ಟಿದ್ದಾರೆ. ಬಿ.ಆರ್.ಸತ್ಯನಾರಾಯಣರು ಈ ಪುಸ್ತಕದಲ್ಲಿ ಕುವೆಂಪುರವರ ಕವಿತೆಗಳನ್ನೇ ಬಳಸಿಕೊಂಡು ಒಂದು ಕಾವ್ಯ ಪ್ರಯಾಣ(ಯಾನ) ಮಾಡಿದ್ದಾರೆ. ಇದರಿಂದ ಓದುಗರಿಗೆ ಏಕಕಾಲಕ್ಕೆ ಎರಡು ಪ್ರಯೋಜನಗಳು ದಕ್ಕಿವೆ. ಒಂದು, ಕುವೆಂಪುರವರ ಕವಿತೆಗಳ ಪರಿಚಯ; ಎರಡು, ಕುವೆಂಪುರವರ ಜೀವನ ಮತ್ತು ಮನೋಧರ್ಮದ ಪರಿಚಯ.

ಸತ್ಯನಾರಾಯಣರು ಆರಿಸಿಕೊಂಡಿರುವ ಕವಿತೆಗಳ ಸ್ವಾರಸ್ಯ ಹೃದ್ಯವಾಗಿದೆ. ಜತೆಗೆ ಅವರು ವಾಡಿಕೆಯಾಗಿರುವ ಮಾಮೂಲು ಕವಿತೆಗಳನ್ನು ಉದಾಹರಿಸುವುದಲ್ಲದೆ ಅಷ್ಟಾಗಿ ಪ್ರಚಲಿತವಾಗಿರದ ಅಪರೂಪದ ಅಪ್ರಕಟಿತ ಕವಿತೆಗಳನ್ನು ವಿಶ್ಲೇಷಿಸಿರುವುದು ಶ್ಲಾಘನೀಯ. ಇದಲ್ಲದೆ ಆಯ್ದುಕೊಂಡಿರುವ ಕವಿತೆಗಳು ಮೈಪಡೆದ ಸಮಯ, ಸ್ಥಳ ಸಂದರ್ಭ ಮತ್ತು ಔಚಿತ್ಯ ಕುರಿತು ಮಾಹಿತಿಯನ್ನು ಒದಗಿಸಿ ಉಪಕರಿಸಿದ್ದಾರೆ. ಕುವೆಂಪುರವರ ಬಾಳಿನ ಕೆಲವು ಅಪೂರ್ವ ಹಾಗೂ ಮಹತ್ವದ ರಸಗಳಿಗೆಯನ್ನು ಗುರುತಿಸಿರುವುದು ಈ ಕಾವ್ಯಯಾನದ ಮತ್ತೊಂದು ಹೆಚ್ಚುಗಾರಿಕೆ. ಸತ್ಯನಾರಾಯಣರು ತಮ್ಮ ಈ ಗ್ರಂಥ ಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿತವಾಗಿದೆಯೆಂದು ವಿನಯಪೂರ್ವಕ ವಿಜ್ಞಾಪಿಸಿದ್ದಾರೆ. ಆದರೆ ಇಲ್ಲಿನ ಬರವಣಿಗೆಯ ಹಾಸು ಇನ್ನೂ ಮಿಗಿಲಾಗಿದ್ದು ಪ್ರೌಢರಿಗೂ ಪ್ರಿಯವಾಗುತ್ತದೆ.

ಕುವೆಂಪು ಸಮಗ್ರ ಕನ್ನಡ ಸಾಹಿತ್ಯದಲ್ಲಿ ಶಿಖರಸೂರ್ಯ. ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ಅವರ ಕೊಡುಗೆ ಗಣ್ಯವಾದದ್ದು. ಭಾವಗೀತೆಗಳಿಂದ ಹಿಡಿದು ಶಿಶುಸಾಹಿತ್ಯದಿಂದ ತೊಡಗಿ, ಕಾವ್ಯ, ನಾಟಕ, ವಿಮರ್ಶೆ, ಕಾದಂಬರಿ, ಮಹಾಕಾವ್ಯದವರೆಗೆ ಅದರ ವ್ಯಾಪ್ತಿಯಿದೆ. ಸಾಹಿತ್ಯೇತರ ಕಾರಣಗಳಿಗಾಗಿಯೂ ಕುವೆಂಪು ಮಹತ್ವದವರು. ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಅವರ ಛಾಪು ಗಾಢತರವಾಗಿದೆ. ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿಯನ್ನು ಬಿತ್ತಿದ ಏಕಮೇವಾದ್ವಿತೀಯರು ಕುವೆಂಪು. ಮಹಾಕವಿಯಾಗಿ ದಾರ್ಶನಿಕರಾಗಿ ಸಾಂಸ್ಕೃತಿಕ ನಾಯಕರಾಗಿ ಕುವೆಂಪುರವರು ವರ್ತಮಾನಕ್ಕೆ ಹೇಗೆ ಪ್ರಸ್ತುತರಾಗಿದ್ದಾರೆ ಎಂಬುದನ್ನು ಅವರ ಕಾವ್ಯದಿಂದ ಆಯ್ದ ಭಾಗಗಳಿಂದ ಡಾ. ಬಿ.ಆರ್. ಸತ್ಯನಾರಾಯಣ ಸಮರ್ಥವಾಗಿ ಸ್ಥಾಪಿಸಿ ಅಭಿನಂದನಾರ್ಹರಾಗಿದ್ದಾರೆ.
೧೦.೦೯.೨೦೧೨
ನಾಡೋಜ ಪ್ರೊ. ಹಂಪ. ನಾಗರಾಜಯ್ಯ

2 comments:

ಶಾನಿ said...

ಅಭಿನಂದನೆಗಳು!!!

Ravi said...

Abhinandanegalu sir,