Thursday, December 11, 2008

ತೇಜಸ್ವಿ: ಮಾತು ಮೂರು ಅರ್ಥ ನೂರಾರು

“ತೇಜಸ್ವಿ: ಮಾತು ಮೂರು ಅರ್ಥ ನೂರಾರು” ಎಂಬ ಈ ಲೇಖನ ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆದರೆ ಆ ಪತ್ರಿಕೆಗಿರುವ ಸೀಮಿತ ಓದುಗ ವಲಯದಿಂದಾಗಿ ಹೆಚ್ಚಿನ ಜನಕ್ಕೆ ಲೇಖನ ತಲುಪಿಲ್ಲವೆಂಬುದು ನನ್ನ ಅಭಿಪ್ರಾಯ. ಅದೀಗ ನನ್ನ ಬ್ಲಾಗಿನಲ್ಲಿ!
ತೇಜಸ್ವಿ: ಮಾತು ಮೂರು ಅರ್ಥ ನೂರಾರು
ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ನಾನಾಗ ಪಿಯಿಸಿ ವಿದ್ಯಾರ್ಥಿಯಾಗಿದ್ದೆ. ನಮಗೆ ‘ಕರ್ವಾಲೊ’ ಕಾದಂಬರಿ ಪಠ್ಯವಾಗಿತ್ತು. ನನ್ನ ಆಗಿನ ಅಭ್ಯಾಸದಂತೆ ತರಗತಿಗಳು ಪ್ರಾರಂಭವಾಗುವ ಮೊದಲೇ ಪಠ್ಯಪುಸ್ತಕಗಳನ್ನು ಓದಿ ಮುಗಿಸಿದ್ದೆ. ಅಲ್ಲಿಂದ ಪರೀಕ್ಷೆ ಮುಗಿಯುವ ಒಂದು ವರ್ಷದ ಅವಧಿಯಲ್ಲಿ ಸುಮಾರು ಇಪ್ಪತ್ತೈದು ಬಾರಿ ಕರ್ವಾಲೋ ಕಾದಂಬರಿಯನ್ನು ಓದಿದ್ದೆ! ಪರೀಕ್ಷೆಯ ದೃಷ್ಟಿಯಿಂದ ಒಂದು ಬಾರಿಯೂ ಓದಲಿಲ್ಲ. ಕಾದಂಬರಿಯ ಕರ್ತೃ ‘ಪೂರ್ಣಚಂದ್ರ ತೇಜಸ್ವಿ’ ಎಂಬುದಷ್ಟೇ ಗೊತ್ತಾದರೂ, ಅವರ ಪೂರ್ವಾಪರವನ್ನಾಗಲೀ, ಇತರ ಕೃತಿಗಳ ವಿವರಗಳನ್ನಾಗಲೀ ನಾನು ಗಮನಿಸಲೇ ಇಲ್ಲ. ಹೀಗೆ ಕರ್ವಾಲೋ ಕಾದಂಬರಿಯ ಮೂಲಕ ತೇಜಸ್ವಿ ನನ್ನವರಾದರು.
ಮುಂದಿನ ದಿನಗಳಲ್ಲಿ ತೇಜಸ್ವಿಯವರ ಇತರ ಕೃತಿಗಳನ್ನು ಓದುವ ಅವಕಾಶ ಭಿಸಿತ್ತು. ಆದರೂ ಅವರು ಕುವೆಂಪು ಅವರ ಮಗ ಎಂಬುದು ತಿಳಿದಿದ್ದು, ಮೈಸೂರಿನಲ್ಲಿ ಕುವೆಂಪು ಅವರು ನಿಧನರಾದ ದಿನದಂದು! ಅಷ್ಟರಮಟ್ಟಿಗೆ ತನ್ನ ಓದುಗರಿಂದ ಅಪರಿಚತರಾಗಿ ತೇಜಸ್ವಿ ಉಳಿದಿದ್ದರು. ಅದು ಅವರ ಅಪೇಕ್ಷೆಯಲ್ಲದಿದ್ದರೂ ಇಷ್ಟವಾದುದ್ದೇ ಆಗಿತ್ತು.
ತೇಜಸ್ವಿಯವರನ್ನು ಗಂಟೆಗಟ್ಟಲೆ ಬೇಟಿಯಾಗಿ ಮಾತನಾಡುವ ಅವಕಾಶ ನನಗೆ ಸಿಗಲಿಲ್ಲ. ಅವರ ಮಾತಿನ ಪ್ರಖರತೆ ನನಗೆ ಗೊತ್ತಾಗಿದ್ದು ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಅವರ ಪತ್ರಗಳ ಮೂಲಕ ಮಾತ್ರ. ಅವರು ಭಾಗವಹಿಸಿದ್ದ ಮೂರ್‍ನಾಲ್ಕು ಸಂವಾದ ಕಾರ್ಯಕ್ರಗಳಲ್ಲಿ ತೇಜಸ್ವಿಯವರಿಗೆ ಪ್ರಶ್ನೆ ಕೇಳಿದ್ದುಂಟು. ಸಂವಾದ ಕಾರ್ಯಕ್ರಮ ಮುಗಿದ ನಂತರ ನಿಂತು ಮಾತನಾಡುವಾಗ ಪರಿಚಯ ಮಾಡಿಕೊಂಡಿದ್ದುಂಟು. ಆದರೂ ತೇಜಸ್ವಿ ನಮಗೆ ದಕ್ಕಿದ್ದು ಅವರ ಕೃತಿಗಳ ಮೂಲಕ ಮಾತ್ರ. ಬೆಂಗಳೂರಿನಲ್ಲಿ ತೇಜಸ್ವಿಯವರ ಸಾಹಿತ್ಯವನ್ನು ಕುರಿತು ಬೆಂಗಳೂರಿನಲ್ಲಿ ಒಂದು ವಿಚಾರ ಕಮ್ಮಟವನ್ನು ಸಂಘಟಿಸುವ ಹಾಗೂ ಆ ವಿಚಾರ ಕಮ್ಮಟದಲ್ಲಿ ಮಂಡಿತವಾದ ಪ್ರಬಂಧಗಳನ್ನು ಸಂಪಾದಿಸುವ ಅವಕಾಶ ನನಗೆ ಲಭಿಸಿತ್ತು. ಆ ಕಮ್ಮಟಕ್ಕೆ ಉದ್ಘಾಟನಾ ಭಾಷಣ ಮಾಡಲು ಬಂದಿದ್ದ, ತೇಜಸ್ವಿಯವರ ಗೆಳೆಯ ಕೆ.ರಾಮದಾಸ್ ಅವರು, ಹೋಟೆಲ್ ರೂಮಿನಲ್ಲಿ ಕುಳಿತು ತೇಜಸ್ವಿಯವರ ಬಗ್ಗೆ ಭಾವುಕರಾಗಿ ಮಾತನಾಡಿದ್ದರು. ಅವರ ಮಾತುಗಳಿಂದ ತೇಜಸ್ವಿ ನಮಗೆ ಇನ್ನಷ್ಟು ಹತ್ತಿರವಾಗಿದ್ದರು.
ಅವರ ಸಾಹಿತ್ಯವನ್ನು ಕುರಿತ ಹಲವಾರು ಸಾಹಿತ್ಯಕಮ್ಮಟದಲ್ಲಿ ಭಾಗವಹಿಸುವ ಅವಕಾಶ ಲಭಿಸಿತ್ತು. ಹೀಗೆ ತೇಜಸ್ವಿ ತಮ್ಮ ಕೃತಿಗಳ ಮೂಲಕವೇ ನನ್ನ ಹಾಗೂ ನನ್ನಂತಹ ಸಾವಿರಾರು ಓದುಗರಿಗೆ ಪರೋಕ್ಷ ಗುರುವಾದವರು. ಅವರ ಋಷಿ ಸದೃಶ ಬದುಕು ಹಾಗೂ ಆ ಬದುಕಿನ ಉಪಉತ್ಪನ್ನಗಳಾದ ಅವರ ಕೃತಿಗಳು ಅವರಿಗೆ ಗುರುವಿನ ಸ್ಥಾನವನ್ನು ತಂದುಕೊಟ್ಟಿವೆ. ಅದು ಅವರಿಗೆ ಇಷ್ಟವಿತ್ತೋ ಇಲ್ಲವೋ! ಈಗಿನ ನನ್ನ ಅರಿವಿಗೆ, ಪ್ರಜ್ಞೆಗೆ ಅವರೇ ಗುರು ಎಂಬುದಂತೂ ನನ್ನ ಮಟ್ಟಿಗೆ ಸತ್ಯಸ್ಯಸತ್ಯ.
ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಹತ್ತಿರದವರು ಸತ್ತಾಗ ದುಃಖವಾಗುತ್ತದೆ. ನಾಲ್ಕು ದಿನ ಅಳುವುದರಿಂದಲೂ ಕಾಲದ ಪ್ರಭಾವದಿಂದಲೂ ಆ ದುಃಖ ಕಡಿಮೆಯಾಗಿ ಇಲ್ಲವಾಗುತ್ತದೆ. ಆದರೆ ತೇಜಸ್ವಿ ನಿಧನರಾದರೆಂದು ತಿಳಿದಾಗ ದುಃಖಕ್ಕಿಂತ ಹೆಚ್ಚಾಗಿ ಒಂದು ಬಗೆಯ ಶೂನ್ಯ ನನ್ನನ್ನಾವರಿಸಿತ್ತು. ಅಂದು ಸುಮಾರು ೨.೨೫ರ ಹೊತ್ತಿಗೆ, ಕಾಲೇಜಿನಲ್ಲಿದ್ದ ನನಗೆ ಮನೆಯಿಂದ ‘ತೇಜಸ್ವಿ ನಿಧನರಾದರಂತೆ’ ಎಂಬ ಸುದ್ದಿ ಪೋನ್ ಮುಖಾಂತರ ತಲುಪಿದಾಗ ಒಂದು ರೀತಿಯ ಶೂನ್ಯ ಆವರಿಸಿತ್ತು. ಮಾಡುತ್ತಿದ್ದ ಕೆಲಸವನ್ನು ಮುಂದುವರೆಸಿದರೂ ಏನೋ ಒಂದು ರೀತಿಯ ಮಂಕು ಕವಿದಿತ್ತು. ‘ಅಲ್ಲಿದ್ದ ನಮ್ಮ ಒಂದು ವಸ್ತು ಇಲ್ಲವಾಗಿದೆ’, ‘ಏನೋ ನಮ್ಮದು ಕಳೆದು ಹೋಗಿದೆ’ ಎಂಬ ಭಾವನೆಗಳು ಮನಸ್ಸನ್ನಾವರಿಸಿತ್ತು. ಆ ಶೂನ್ಯದಿಂದ ಹೊರಬರಲು ಸುಮಾರು ಮೂರು ಘಂಟೆಗಳೇ ಬೇಕಾಯಿತು. ಹಾಗೆ ಹೊರಬರಲು ನೆರವಾಗಿದ್ದು, ತೇಜಸ್ವಿ ಬದುಕನ್ನು ನೋಡುತ್ತಿದ್ದ ರೀತಿ ಹಾಗೂ ಅವರ ಕ್ರಿಯಾಶೀಲತೆಯ ನೆನಪುಗಳೇ!
ತೇಜಸ್ವಿ ಮಾತನಾಡಿದ್ದು ಕಡಿಮೆ. ಕೆಲವೊಂದು ಬಾರಿ ಅವರು ಮಾತನಾಡಲೆಂದು ಬೆಂಗಳೂರಿನ ಮಾಧ್ಯಮಗಳು ಕಾಯುತ್ತಿದ್ದವೇನೋ ಅನ್ನಿಸುತ್ತಿತ್ತು. ಯಾವುದೇ ಒಂದು ಚಿಕ್ಕ ವಿಷಯಕ್ಕಾದರೂ ಸರಿಯೆ, ಅವರ ಪ್ರತಿಕ್ರಿಯೆ ಪತ್ರಿಕೆಯಲ್ಲಿ ಬಂದಿತೆಂದರೆ ಸಾಕು ಇಡೀ ಕನ್ನಡ ಸಾಂಸ್ಕೃತಿಕ ಲೋಕವೇ ಎಚ್ಚರಗೊಳ್ಳುತ್ತಿತ್ತು. ಇತ್ತೀಚಿಗೆ ನಾಡಗೀತೆ, ಇಂಗ್ಲೀಷ್ ಭಾಷಾಕಲಿಕೆ, ಕನ್ನಡ ತಂತ್ರಾಂಶ ಮುಂತಾದ ವಿಷಯಗಳ ಬಗ್ಗೆ ತೇಜಸ್ವಿ ಪತ್ರಿಕೆಗಳಿಗೆ ಕಾಗದ ಬರೆದಿದ್ದರು. ಗೋಹತ್ಯೆ ನಿಷೇಧದ ಸಾಧಕಬಾದಕಗಳನ್ನು ಕುರಿತು ಅಂದಿನ ಪ್ರಧಾನಿ ವಾಜಪೇಯಿಯವರಿಗೆ ಬಹಿರಂಗ ಪತ್ರ ಬರೆದಿದ್ದರು. ಆಗೆಲ್ಲಾ ಕನ್ನಡ ಸಾಂಸ್ಕೃತಿಕ ಲೋಕ ಸ್ಪಂದಿಸಿದೆ. ನಾಡಗೀತೆಯ ಚರ್ಚೆಯಲ್ಲಂತೂ ಅವರ ವೈಚಾರಿಕ ಪ್ರಖರತೆಯ ಸ್ಪಷ್ಟ ಪರಿಚಯ ಕನ್ನಡ ಜನತೆಗಾಗಿದೆ. ಇನ್ನೂ ಕೆಲವೊಮ್ಮೆ ಅವರ ಮೌನವನ್ನು ಹಾಗೂ ವಿಚಾರಧಾರೆಯನ್ನು ಸಹಿಸದ ಬೆಂಗಳೂರಿನ ಸುದ್ದಿಜೀವಿಗಳು ಚಟಪಡಿಸಿದ್ದುಂಟು. ‘ತೇಜಸ್ವಿ ಕನ್ನಡಕ್ಕಾಗಿ ಕಡಿದು ಕಟ್ಟೆ ಹಾಕಿರುವುದು ಏನನ್ನು?’, ‘ಕಾಫಿತೋಟದಲ್ಲಿ ಬೆಚ್ಚಗೆ ಕುಳಿತಿದ್ದಾರೆ’ ಎಂದು ಅವಿಚಾರಿಗಳಾಗಿ ಕಾಲು ಕೆರೆಯುತ್ತಿದ್ದುದೂ ಇದೆ. ಅಂತಹವುಗಳಿಗೆಲ್ಲಾ ತೇಜಸ್ವಿ ಉತ್ತರಿಸುತ್ತಿರಲಿಲ್ಲ. ಆದರೆ ಪ್ರಾರಂಭದ ದಿನದಲ್ಲಿ ಅದನ್ನು ಸಹಿಸದ ನಮಗೆ, ವಾಚಕರವಾಣಿಗೆ ಪತ್ರ ಬರೆದು ಸುದ್ದಿಜೀವಿಗಳನ್ನು ಕುಟುಕುವ ಚಪಲ. ಅದೆಲ್ಲವನ್ನು ಈಗ ಗಮನಿಸಿದರೆ, ತೇಜಸ್ವಿಯ ಮೌನವೇ ಅರ್ಥಪೂರ್ಣವಾಗಿತ್ತೆನಿಸುತ್ತದೆ. ಆದರೆ ತೇಜಸ್ವಿ ನಮ್ಮಲ್ಲಿ ಮೂಡಿಸಿದ ಅರಿವು ಅದರ ಬಗ್ಗೆ ಪಶ್ಚತ್ತಾಪಪಟ್ಟುಕೊಂಡು ಕೂರಲು ಬಿಡುವುದಿಲ್ಲ. ನೆನ್ನೆ ನೆನ್ನೆಗೆ, ನಾಳೆ ನಾಳೆಗೆ ಆದರೂ ನೆನ್ನೆಗಳಿಂದ ಪಾಠ ಕಲಿಯಲು ಆ ‘ಅರಿವು’ ನಮ್ಮನ್ನು ಸದಾ ಪ್ರೇರೇಪಿಸುತ್ತಿರುತ್ತದೆ.
ಸ್ವತಃ ಗ್ರಂಥಪಾಲಕನಾದ ನಾನು ತೇಜಸ್ವಿ ಸಾಹಿತ್ಯದ ಓದುಗನಾಗಿದ್ದಂತೆ ಒಂದು ರೀತಿಯಲ್ಲಿ ಪ್ರಚಾರಕನೂ ಆಗಿದ್ದೆ. ಕನ್ನಡದಲ್ಲಿ ಓದಲು ಒಳ್ಳೆಯ ಪುಸ್ತಕಗಳಿದ್ದರೆ ಕೊಡಿ ಎನ್ನುವವರಿಗೆ ನಾನು ಮೊದಲು ಕೊಡುತ್ತಿದ್ದುದು ತೇಜಸ್ವಿಯವರ ಕೃತಿಗಳೇ. ತೇಜಸ್ವಿಯವರ ಒಂದೆರಡು ಕೃತಿಗಳನ್ನು ಓದಿದವರು ಬಂದು ಅವರ ಉಳಿದ ಪುಸ್ತಕಗಳನ್ನು ಕೇಳಿ ಪಡೆದುಕೊಂಡು ಓದಿದವರಿದ್ದಾರೆ. ನನ್ನ ಸ್ನೇಹಿತರ ವಲಯದಲ್ಲೇ ಹತ್ತಾರು ಜನಕ್ಕೆ ತೇಜಸ್ವಿಯವರ ಕೃತಿಗಳ ಹುಚ್ಚನ್ನು ಹಿಡಿಸಿದ್ದೆ. ಅವರ ಎಲ್ಲಾ ಕೃತಿಗಳನ್ನು ಸರದಿಯ ಪ್ರಕಾರ ಓದಿ ಚರ್ಚೆ ಮಾಡಿದ್ದೇವೆ. ಇತ್ತೀಚಿಗೆ ಕನ್ನಡವನ್ನು ಓದಲು ಕಲಿತ, ಸಾಹಿತ್ಯದ ಬಗ್ಗೆ ಆಸಕ್ತಿಯಿರುವ ಗುಜರಾಥಿ ಮಹಿಳೆಯೊಬ್ಬರಿಗೆ, ನನ್ನ ಇನ್ನೊಬ್ಬ ಗ್ರಂಥಾಲಯ ಮಿತ್ರನ ಕೋರಿಕೆಯ ಮೇರೆಗೆ ನಾನು ಮೊದಲಿಗೆ ಸೂಚಿಸಿದ್ದು, ಪರಿಸರದ ಕಥೆಗಳು ಮತ್ತು ಕರ್ವಾಲೋ ಪುಸ್ತಕಗಳನ್ನು. ಕೇವಲ ಮೂರೇ ದಿನಗಳಲ್ಲಿ ಓದಿಮುಗಿಸಿದ ಅವರು ತೇಜಸ್ವಿಯವರ ಎಲ್ಲಾ ಕೃತಿಗಳನ್ನು ಓದುವ ಆಸೆ ವ್ಯಕ್ತಪಡಿಸಿದರಂತೆ. ಆದರೆ ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆಯದೆ ಎಲ್ಲಾ ಪುಸ್ತಕಗಳನ್ನು ಕೊಂಡೇ ಓದುತ್ತೇನೆ ಎಂದರಂತೆ! ಇದು ತೇಜಸ್ವಿಯವರ ಸಾಹಿತ್ಯಕ್ಕಿರುವ ಶಕ್ತಿ. ಗುರುಲಿಂಗ ಕಾಪಸೆಯವರೊಂದಿಗೆ ಮಾತನಾಡುತ್ತಿದ್ದ ಮರಾಠಿ ಸಾಹಿತಿ ವಿ.ಸಾ. ಖಾಂಡೇಕರರು ‘ನಿಮ್ಮ ತೇಜಸ್ವಿ ಬೇರೆ ಭಾಷೆಯ ಲೇಖಕರಿಗಿಂತ ನೂರು ವರ್ಷ ಮುಂದಿದ್ದಾರೆ’ ಎಂದಿದ್ದರಂತೆ. ‘ಕಂಪ್ಯೂಟರ್ ಕೊಂಡ ಮೊದಲ ಕನ್ನಡ ಸಾಹಿತಿ’ ಎಂದು ಕನ್ನಡಿಗರು ಗುರುತಿಸುವ ಮೊದಲೇ, ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಖಾಂಡೇಕರರು ತೇಜಸ್ವಿ ಸಾಹಿತ್ಯದ ಅನನ್ಯತೆಯನ್ನು ಗುರುತಿಸಿದ್ದರು! ಅವರ ಬರವಣಿಗೆ ಓದುಗನೊಂದಿಗೆ ಬಹುಬೇಗ ಉತ್ತಮ ಸಂವಹನವನ್ನು ಏರ್ಪಡಿಸಿಕೊಂಡುಬಿಡುತ್ತದೆ. ಅವರ ಪುಸ್ತಕದ ವಿವರಗಳು ನಮ್ಮ ಬದುಕಿನ ವಿವರಗಳಾಗಿಬಿಡುತ್ತವೆ. ಅವರ ಪಾತ್ರಗಳಲ್ಲೊಂದು ನಾವಾಗಿರುತ್ತೇವೆ. ನಮ್ಮ ಅಕ್ಕಪಕ್ಕದವರಾಗಿರುತ್ತಾರೆ. ಇದು ತೇಜಸ್ವಿಯವರ ಸಾಹಿತ್ಯದ ವಿಶೇಷ.
ತೇಜಸ್ವಿ ಸಾಹಿತ್ಯದ ಓದುಗನಾಗಿದ್ದರೂ ಅವರ ಪುಸ್ತಕಗಳ ಬಗ್ಗೆ ಬಂದಿರುವ ವಿಮರ್ಶೆಯನ್ನು ಓದಲು ನನಗೆ ಬಹಳ ಕಷ್ಟವಾಗುತ್ತಿತ್ತು. ಏಕೋ ಈ ವಿಮರ್ಶಕರು ತೇಜಸ್ವಿಯವರನ್ನು ಓದುಗನಿಂದ ದೂರ ಮಾಡುತ್ತಿದ್ದಾರೆ ಎಂಬ ಗುಮಾನಿ ನನ್ನನ್ನು ಕಾಡುತ್ತಿತ್ತು. ಅಣ್ಣನ ನೆನಪು ಪುಸ್ತಕದಲ್ಲಿ ತೇಜಸ್ವಿ ಹೇಳುವಂತೆ ವ್ಯಾಖ್ಯಾನ ಬೇಕಾಗುವುದು ಪದ್ಯಸಾಹಿತ್ಯಕ್ಕೆ ಮಾತ್ರ; ಗದ್ಯಸಾಹಿತ್ಯಕ್ಕಲ್ಲ. ಗದ್ಯದಲ್ಲಿ ‘ಅವನು ಸತ್ತ’ ಎಂದರೆ ಸತ್ತ ಎಂದೇ ಅರ್ಥ. ಪದ್ಯದಲ್ಲಿಯಾದರೆ ಅದನ್ನೊಂದು ಪ್ರತಿಮೆಯೆನ್ನಾಗಿಯೂ ಬಳಸಿಕೊಳ್ಳಬಹುದು. ಅದರಲ್ಲೂ ತೇಜಸ್ವಿಯಂಥ ಅಪ್ರತಿಮ ಗದ್ಯಲೇಖಕನ ಪುಸ್ತಕಗಳನ್ನು ವ್ಯಾಖ್ಯಾನಿಸುವುದರ ಅಗತ್ಯವೇ ಇಲ್ಲ. ನಾವು ಪರಿಸರಕ್ಕೆ ಮಾಡುವ ಸಹಾಯವೇ ಅದಕ್ಕೆ ಉರುಳಾಗುವಂತೆ, ತೇಜಸ್ವಿಯವರ ಸಾಹಿತ್ಯಕ್ಕೆ ನಾವು ಮಾಡುವ ವಿಮರ್ಶೆಯೇ ಓದುಗ ಮತ್ತು ಕೃತಿಯ ನಡುವಿನ ಗೋಡೆಯಾಗಿಬಿಡುವ ಅಪಾಯವಿದೆ. ಇತ್ತೀಚಿಗೆ ತೇಜಸ್ವಿ ಸಾಹಿತ್ಯವನ್ನು ಕುರಿತ ವಿಚಾರಕಮ್ಮಟಗಳಲ್ಲೂ ಇಂತಹ ಅಭಿಪ್ರಾಯಗಳು ಮೂಡಿಬಂದಿವೆ. ವಿಮರ್ಶೆಯ ಸಿದ್ಧಮಾದರಿಗಳನ್ನು ಇಟ್ಟುಕೊಂಡು ತೇಜಸ್ವಿ ಕೃತಿಗಳನ್ನು ಪರಿಶೀಲಿಸಲಾಗದು ಎನ್ನುವ ವಿಮರ್ಶಕರೇ ಆಡಿದ ಮಾತನ್ನು ಮರೆತು ಸಿದ್ಧಮಾದರಿಗಳ ಚೌಕಟಿನಲ್ಲೇ ಮಾತನಾಡುವುದನ್ನು ನೋಡಿದ್ದೇನೆ. ಏಕೆಂದರೆ ಅಗತ್ಯವನ್ನಷ್ಟೇ ಗುರುತಿಸುವ ವಿಮರ್ಶಕನ ಪ್ರತಿಭೆ ಅದಕ್ಕೆ ಬೇಕಾಗಿರುವ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುವಲ್ಲಿ ಸೋಲುತ್ತಿದೆ. ಈ ರೀತಿಯ ‘ಪ್ರೌಢ ಠಕ್ಕ ವಿಮರ್ಶೆ’ಯ ಬಗ್ಗೆ ತೇಜಸ್ವಿಯವರಿಗಿದ್ದ ವಿರೋಧ ಎಲ್ಲರಿಗೂ ತಿಳಿದಿದ್ದೇ ಆಗಿದೆ. ಆದರೆ ತೇಜಸ್ವಿಯವರು ಶುದ್ಧ ವಿಮರ್ಶೆಯ ವಿರೋಧಿಯಾಗಿರಲಿಲ್ಲ. ಇತ್ತೀಚಿಗೆ ಅವರು ಸಹೃದಯ ವಿಮರ್ಶೆಯನ್ನು ಮೆಚ್ಚಿಕೊಂಡಿದ್ದರು. ಕುವೆಂಪು ಅವರು ದ್ರೌಪದಿಯ ಶ್ರೀಮುಡಿ ಮತ್ತು ತಪೋನಂದನ ಕೃತಿಗಳಲ್ಲಿ ನಡೆಸಿರುವ ಹಳೆಗನ್ನಡ ಕೃತಿಗಳ ವಿಮರ್ಶಾ ಮಾದರಿಗಳನ್ನು ಇಂದಿನ ಅಗತ್ಯಗಳೆಂದು ಪ್ರತಿಪಾದಿಸಿದ್ದರು.
ತೇಜಸ್ವಿ ಸಾಹಿತ್ಯಕ್ಕೆ ಹೇಗೆ ವ್ಯಾಖ್ಯಾನ ಬೇಕಿಲ್ಲವೋ ಹಾಗೇ ಅವರ ಮಾತುಗಳಿಗಂತೂ ಯಾವ ವಿವರಣೆಯೂ ಬೇಕಾಗಿಲ್ಲ. ನೇರ ನುಡಿಯ ತೇಜಸ್ವಿ ನಾಡಿನ ಹಲವಾರು ವಿಷಯಗಳ ಬಗ್ಗೆ ಸಾರ್ವಜನಿಕವಾಗಿ, ಖಾಸಗಿಯಾಗಿ ಪ್ರತಿಕ್ರಿಯತಿಸಿದ್ದಾರೆ. ಈ ಪ್ರತಿಕ್ರಿಯೆ ಕೇವಲ ಮಹತ್ವದ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಾಗೆ ನೋಡಿದರೆ ಮನುಷ್ಯನ ಬದುಕಿನ ಪ್ರತಿಯೊಂದು ಕ್ಷಣವೂ ಮಹತ್ವದ್ದೇ ಆಗಿರುತ್ತದೆ ಎಂದು ನಂಬಿದ್ದವರು ತೇಜಸ್ವಿ. ಅವರ ಒಂದೊಂದು ಮಾತೂ ಅರಿತವಾದ ಅಲುಗಿನಂತೆ. ಆದರೆ ಅವುಗಳಲ್ಲೂ ಅವರ ಅಭಿವ್ಯಕ್ತಿಯ ಅಂತಸ್ಸತ್ವವಾದ ಹಾಸ್ಯದ ಲೇಫನ ಮಾತ್ರ ಇದ್ದೇ ಇರುತ್ತದೆ. ಅವುಗಳು ಮಾಡುವ ಪರಿಣಾಮ ಮಾತ್ರ ಅಗಾಧವಾದುದು. ತೇಜಸ್ವಿಯವರ ಪ್ರತಿಕ್ರಿಯೆಗಾಗಿ ಮಾಧ್ಯಮವಲಯ ಕಾಯುತ್ತಿತ್ತು ಎಂದು ಹೇಳಿದ್ದು ಈ ಅರ್ಥದಲ್ಲೇ. ತೇಜಸ್ವಿಯವರ ಪ್ರತಿಕ್ರಿಯೆಗಳನ್ನು ಒಂದೆಡೆ ಸಂಗ್ರಹಿಸುವುದಷ್ಟೇ ಈ ಲೇಖನದ ಉದ್ದೇಶ. ಅವುಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ಕೊಡುವ ಉದ್ದೇಶವಿಲ್ಲ. ಆಯಾಯಾ ಸಂದರ್ಭದೊಂದಿಗೆ ಅವರ ಪ್ರತಿಕ್ರಿಯಗಳನ್ನು ನೀಡಲಾಗುವುದು. ಈ ಪ್ರತಿಕ್ರಿಯೆಗಳಿಗೆ ಪತ್ರಿಕೆಗಳು, ಅವರ ಕೃತಿಗಳು, ಸಂವಾದಗಳಲ್ಲಿ ಅವರು ಕೊಟ್ಟ ಉತ್ತರಗಳು ಆಧಾರಗಳಾಗಿವೆ. ತೇಜಸ್ವಿ ಸಾಹಿತ್ಯದ ಓದುಗನಾದ ಮೇಲೆ ಅವರ ಮಾತುಗಳನ್ನು ಸಂಗ್ರಹಿಸುವ ನನ್ನ ಹವ್ಯಾಸದಿಂದಾಗಿ ನೂರಾರು ಪತ್ರಿಕಾ ಸಂಗ್ರಹಗಳು ನನ್ನಲ್ಲಿದ್ದು ಅವುಗಳಲ್ಲಿ ಕೆಲವನ್ನಾದರೂ ಒಂದೆಡೆ ತರುವ ನನ್ನ ಕನಸು ಈ ಲೇಖನದ ಮೂಲಕ ಈಡೇರುತ್ತಿದೆ.
* * * * *
ಕರ್ವಾಲೋ ಕಾದಂಬರಿಗೆ ಮುನ್ನುಡಿ ಬರೆಯುವಂತೆ ಜಿ.ಎಚ್.ನಾಯಕ್ ಅವರನ್ನು ತೇಜಸ್ವಿ ಕೇಳಿದಾಗ ನಾಯಕರು ‘ತೇಜಸ್ವಿ, ತಮಾಷೆ ಮಾಡ್ತಿರೇನ್ರಿ? ಬೇರೆ ದೊಡ್ಡವರ ಹತ್ತಿರ ಬರೆಸಬಹುದಲ್ಲ?’ ಎಂದರಂತೆ. ಅದಕ್ಕೆ ಪ್ರತಿಯಾಗಿ ತೇಜಸ್ವಿ ಹೇಳಿದ್ದು ಹೀಗೆ: “ಏ... ದೊಡ್ಡವರಿಗೆಲ್ಲ ಅರ್ಥ ಆಗಲ್ಲ ಕಣ್ರೀ... ನೀವೇ ಬರೀಬೇಕು. ನೀವು ಏನಾದ್ರೂ ಬರೀರಿ, ಎಷ್ಟಾದ್ರೂ ಬರೀರಿ. ನಾನು ನೋಡೋದಿಲ್ಲ. ನೇರ ಶ್ರೀರಾಮ್‌ಗೆ ಕೊಟುಬಿಡಿ. ಪ್ರಿಂಟ್ ಆದಮೇಲೆ ನೋಡ್ತೀನಿ!”
ನಾಯಕರೊಂದಿಗೆ ನಡೆದ ಇನ್ನೊಂದು ಮಾತುಕತೆ ಹೀಗಿದೆ.
ತೇಜಸ್ವಿ: ನಾಯಕ್ರೆ ನಾನು ಮೈಸೂರಲ್ಲೇ ಕೆಲಸಕ್ಕೆ ಸೇರಿದ್ರೆ ಕನ್ನಡ ಡಿಪಾರ್ಟ್‌ಮೆಂಟಿಗೆ ನನ್ನನ್ನೇ ಡೈರಕ್ಟರ್ ಮಾಡ್ತಿದ್ರು ಅಲ್ವಾ?
ಜಿ.ಎಚ್.ನಾಯಕ್: ಯಾರ್‍ಯಾರೋ ಆಗಿದ್ದಾರೆ ತೇಜಸ್ವಿ. ನೀವು ಆಗಿದ್ರೆ ಚೆನ್ನಾಗಿರೋದು.
ತೇಜಸ್ವಿ: ಹೌದು ಆಗಬೌದಿತ್ತು. ಆದ್ರೆ ನಿಮ್ ಕಣ್ಣಲ್ಲಿ ನಾನು ಹೇಲ್‌ಗುಪ್ಪೆ ಥರಾ ಕಾಣಿಸ್ತಿದ್ದೆ
‘ಕನ್ನಡಿಗರಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ’ ಎಂಬ ಆರೋಪಕ್ಕೆ: “ನೀವು ಬರೆದ ಕಗ್ಗವನ್ನೆಲ್ಲ ಜನ ಕೊಂಡು ಓದ್ತಾ ಇಲ್ಲ. ಅದಕ್ಕೆ ಪುಸ್ತಕ ಕೊಂಡು ಓದೋ ಪ್ರವೃತ್ತಿ ಬೆಳೆದೇ ಇಲ್ಲ ಅನ್ನೋದು ತಪ್ಪು...”
ತೇಜಸ್ವಿಯವರ ಕಾದಂಬರಿಗಳು ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಬಂದಿದ್ದಕ್ಕೆ: “ನಾನು ಬರೆಯೋದು ಓದುಗರಿಗೆ ಕಣ್ರೀ. ಅದಕ್ಕಿರುವ ಏಕೈಕ ಮಾರ್ಗ ಪತ್ರಿಕೆಗಳು. ನಾವಿಲ್ಲಿ ಸಾವಿರ ಕಾಪಿನೋ ಎರಡು ಸಾವಿರ ಕಾಪಿನೋ ಪ್ರಿಂಟ್ ಮಾಡ್ಕೊಂಡು ಕೂತ್ರೆ ಏನು ಪ್ರಯೋಜನ. ಒಂದು ಪತ್ರಿಕೇಲಿ ಬಂದ್ರೆ ಲಕ್ಷಾಂತರ ಮಂದಿ ಓದುತ್ತಾರೆ”
ತಾರಿಣಿಯವರ ‘ಮಗಳು ಕಂಡ ಕುವೆಂಪು’ ಕೃತಿಗೆ ನೀಡಿದ ಪ್ರತಿಕ್ರಿಯೆ: “ಎಷ್ಟು ಚೆನ್ನಾಗಿ ಬರೆದಿದ್ದಾಳ್ರೀ, ವಂಡರ್‌ಫುಲ್”
ಜಾಗತೀಕರಣವಾಗಿದ್ದು ಏಕೆ ಒಳ್ಳೆಯದೆಂದು ವಿವರಿಸುತ್ತಾ: “ನೋಡ್ರಿ ಈ ಜಾಗತೀಕರಣದ ಪ್ರಕ್ರಿಯೆಗಳು ತೀವ್ರವಾಗಿ ನಡೆದರೆ ಭಾರತದಲ್ಲಿ ನೆಲೆನಿಂತಿರುವ ಜಾತಿಪದ್ಧತಿಯ ಬೇರುಗಳು ಸಡಿಲವಾಗಬಹುದೇನೋ ಅನ್ನಿಸುತ್ತಿದೆ.”
ತಬರನ ಕಥೆ ಅಷ್ಟೇನು ಗ್ರೇಟ್ ಕಥೆ ಅಲ್ಲ ಎಂಬ ನಾಯಕರ ಅಭಿಪ್ರಾಯಕ್ಕೆ ತೇಜಸ್ವಿಯವರ ಉತ್ತರ “ಹೌದಾ? ಹಾಗಂತೀರಾ? ನೋಡ್ಬೇಕು”
ಬೆಂಗಳೂರಿನಲ್ಲಿ ಸೈಟ್ ತೆಗೆದುಕೊಂಡು ಮನೆ ಕಟ್ಟುವ ಗಿರೀಶ್ ಕಾಸರವಳ್ಳಯವರ ಮಾತಿಗೆ ನೀಡಿದ ಸಲಹೆ. “ಸೈಟ್ ತಗೋ. ಆದರೆ ಸಿನಿಮಾ ಮಂದಿ ಇರುವ ಕಡೆ ಮಾತ್ರ ತಗೋಬೇಡ. ಏಕೆಂದರೆ ನಿಮ್ಮ ನಿಮ್ಮೋರೇ ಸೇರಿಕೊಂಡರೆ ನೀವು ಬರೀ ಸಿನಿಮಾ ಬಗ್ಗೆ ಮಾತ್ರ ಮಾತಾಡ್ತೀರ. ಹಾಗಾಗಿ ಬೇರೆ ವಿಷಯಗಳ ಬಗ್ಗೆ ಮಾತೇ ಹರಿಯಲ್ಲ. ನನ್ನ ನೋಡು, ಎಷ್ಟು ದೂರದಲ್ಲಿದೀನಿ. ಇಲ್ಲಿ ಮೀನು ಹಿಡಿಯೋರು, ಹಕ್ಕಿ ಹಿಡಿಯೋರು, ಕೃಷಿ ಮಾಡೋರೇ ನನ್ನ ಗೆಳೆಯರು. ಸಾಹಿತಿಗಳ ಸಹವಾಸವೇ ಇಲ್ಲ!”
ತಬರನ ಕಥೆಯ ಸ್ಕ್ರಿಪ್ಟ್ ತೋರಿಸಿದ್ದಕ್ಕೆ: “ನಿಮಗೆ ಕಥೆ ಕೊಟಿದ್ದೇನೆ. ನಿಮಗೆ ಹ್ಯಾಗೆ ಬೇಕೋ ಹಾಗೆ ಸಿನಿಮಾ ಮಾಡಿ. ನನ್ನದೇನು ಅಭ್ಯಂತವಿಲ್ಲ. ಆದರೆ ಜನ ನೋಡೋ ಅಂತಹ ಸಿನಿಮಾ ಮಾಡಿ”
ತಬರನ ಕಥೆ ಚಿತ್ರೀಕರಣದ ಸಮಯದಲ್ಲಿ ತೇಜಸ್ವಿಯವರ ಮನೆಯ ಮಹಡಿಯ ಮೇಲೆ ಚಿತ್ರೀಕರಿಸಲು ಗಿರೀಶ್ ಕಾಸರವಳ್ಳಿಯವರು ತೇಜಸ್ವಿಯವರ ಒಪ್ಪಿಗೆಯನ್ನು ಕೇಳಿದ್ದಕ್ಕೆ ಕೊಟ್ಟ ಉತ್ತರ: “ನೀವು ಮೇಲೆ ಶೂಟ್ ಮಾಡಿಕೊಳ್ಳಬಹುದು, ನಾನಂತೂ ಅಲ್ಲಿಗೆ ಬರುವುದಿಲ್ಲ. ನೀವೇನಾದರೂ ಕೆಳಗೆ ಬಂದಿರೋ, ನಾನು ಶೂಟ್ ಮಾಡಿಬಿಡುತ್ತೇನೆ!”
ಕೃಷ್ಣೇಗೌಡನ ಆನೆ ಕಥೆಯ ಸಿನಿಮಾ ಹಕ್ಕನ್ನು ಕೇಳಲು ಬಂದ ನಿರ್ದೇಶಕರಿಗೆ- ಹೇಳಿದ ಮಾತು: “ಯಾವ ಕಾರಣಕ್ಕೂ ಇದನ್ನು ಆರ್ಟ್ ಸಿನಿಮಾ ಮಾಡಿ ಬೋರು ಹೊಡೆಸಬೇಡಿ. ಕೆಡಿಸಿದ್ರೆ ಜನ ನನ್ನ ಬೈತಾರೆ. ಚೆನ್ನಾಗಿ ಮಾಡಿದ್ರೆ ನನಗೂ ಹೆಸರು ಬರುತ್ತೆ”
ಅಣ್ಣನ ನೆನಪು ಕೃತಿಯನ್ನು ನಾಟಕ ಮಾಡುವ ಮಾತಿಗೆ ತೇಜಸ್ವಿಯವರ ಅಭಿಪ್ರಾಯ: “ನಾಟಕ ಬೇಡಪ್ಪ... ಅದೇನೊ ಟ್ರಯಲ್ ನೋಡಿ. ಅದು ಟಿ.ವಿ.ಸೀರಿಯಲ್ ತರ ಆದ್ರೆ ಆಗಬೌದು.... ಸ್ಟೇಜ್ ಮೇಲೆ... ಐ ಡೋಂಟ್ ನೋ ಹೌ ಇಟ್ ಲುಕ್”
‘ಸಾರ್ ನೀವು ಬ್ಯುಸೀನಾ’ ಎಂಬ ಪ್ರಶ್ನೆಗೆ ತೇಜಸ್ವಿ ಕೊಟ್ಟ ಉತ್ತರ: “ಅಯ್ಯೋ ನಾನು ಸಾಯೋತನ್ಕ ಬ್ಯುಸಿಯಾಗಿರ್‍ತೀನಿ ಬಿಡ್ರಿ”
ತೇಜಸ್ವಿ ತಾವು ಯಾವಾಗಲೂ ಬ್ಯುಸಿಯಾಗಿರುವುದಕ್ಕೆ ಕೊಡುತ್ತಿದ್ದ ಕಾರಣ: “ನಮ್ಮ ಗ್ಯಾರಂಟಿ ಪೀರಿಯಡ್ ಮುಗಿದು ಹೋಗಿದೆ ಕಣ್ರೀ. ಅದಷ್ಟು ಬೇಗ ಮಾಡಬೆಕು ಅಂದುಕೊಂಡಿದ್ದನ್ನೆಲ್ಲ ಮಾಡಿ ಮುಗಿಸಬೇಕು”
ಈಗೇನು ಬರಿತೀದೀರಾ ಎಂಬ ಪ್ರಶ್ನೆಗೆ ತೇಜಸ್ವಿ ಉತ್ತರ “ಯಾವಾಗ್ಲೂ ಯಾಕಯ್ಯ ಬರೀಬೇಕು?”
ಬೆಂಗಳೂರಿನ ಒಬ್ಬ ಕಲಾವಿದ ಮಿತ್ರನಿಗೆ “ನೀವು ಬೆಂಗಳೂರಿನ ಕಲಾವಿದರೆಲ್ಲ ಕ್ಯಾಕ್ಟಸ್‌ಗಳು ಕಣಯ್ಯಾ”
ಸಾವಿನ ಬಗ್ಗೆ ಗೆಳೆಯರೊಡನೆ ಮಾತನಾಡುತ್ತ “ಜಗತ್ತಿನಲ್ಲಿಯೇ ಅದ್ಭುತ ಕಣ್ರೀ. ಡೆತ್ ಇಸ್ ಎ ಮಿರಾಕಲ್. ಅದನ್ನು ಒಮ್ಮೆಯಾದರೂ ಅನುಭವಿಸಬೇಕು”
ಮುನೀರ್ ಎಂಬುವವರು ತೇಜಸ್ವಿಯವರ ಸ್ಕೂಟರ್ ಹಿಂದೆ ಕುಳಿತು ಹೋಗುವಾಗ ಸ್ಕಿಡ್ಡಾಗಿ ಸ್ಕೂಟರ್ ಬಿದ್ದರೂ, ಕೈಯಲ್ಲಿ ಹಿಡಿದಿದ್ದ ಮೊಟ್ಟೆ ಹೊಡೆಯದಂತೆ ಹಿಡಿದುಕೊಂಡಿದ್ದಕ್ಕೆ ನೀಡಿದ ಪ್ರಶಂಸೆ. “ರಾಜೂ (ರಾಜೇಶ್ವರೀ) ಈ ಮುನೀರ ಎಂತಹ ಮೊಟ್ಟೆಬಾಕ ಗೊತ್ತಾ, ಜೀವ ಬೇಕಾದರೆ ಬಿಟ್ಟೇನು, ಮೊಟ್ಟೆ ಬಿಡೋಲ್ಲ ಅಂತಾನೆ”
ತಮ್ಮ ಸ್ಕೂಟರ್‌ನ ಹಿಂಬದಿಯ ಸೀಟನ್ನು ತೆಗೆಸಿದ್ದಕ್ಕೆ ತೇಜಸ್ವಿ ನೀಡಿದ ಕಾರಣ: “ತೋಟದಿಂದ ಮೂಡಿಗೆರೆಗೆ ಹೋಗುವಾಗ ದಾರಿಯಲ್ಲಿ ಸಿಕ್ಕವರು ಡ್ರಾಪ್ ಕೇಳ್ತಾರೆ. ಕೂರಿಸ್ಕೊಳ್ದಿದ್ರೆ ಬಯ್ಕೊತಾರೆ. ಕೂರಿಸ್ಕೊಂಡ್ರೆ ಅದು ಇದು ಮಾತನಾಡಿ ತಲೆಗೆ ಮೆದುಳಿಗೆ ಕೈ ಹಾಕ್ತಾರೆ ಮುಂಡೆ ಮಕ್ಳು. ಅದಕ್ಕೆ ಹಿಂದಿನ ಸೀಟು ತೆಗಿಸ್ಬಿಟೆ”
ತೇಜಸ್ವಿ ಸ್ಕೂಟರ್‌ನಲ್ಲಿ ಹೋಗುವಾಗ ನಮಸ್ಕಾರ ಮಾಡಿದವರೊಬ್ಬರಿಗೆ ಗ್ರಹಚಾರ ಬಿಡಿಸಿದ್ದು ಹೀಗೆ: “ನಿಮಗೆ ಬೇರೆ ಕೆಲಸ ಇಲ್ಲವಾ, ಡ್ರೈವಿಂಗ್ ಮಾಡುವವರಿಗೆ ನಮಸ್ಕಾರ ಮಾಡ್ತೀರಾ, ನಿಮಗೆ ನಮಸ್ಕಾರ ಹೇಳಲು ಹೋಗಿ ನಾವು ಆಕ್ಸಿಡೆಂಟ್ ಮಾಡ್ಕೋಬೇಕಾ”
ಕರ್ನಾಟಕ ರಕ್ಷಣಾ ವೇದಿಕೆಯವರು ಎಂ.ಈ.ಎಸ್. ಶಾಸಕರಿಗೆ, ಮೇಯರ್‌ಗೆ ಮಸಿ ಬಳಿದಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು ಅದಕ್ಕೆ ಪ್ರತಿಯಾಗಿ ತೇಜಸ್ವಿ ಹೇಳಿದ್ದು ಹೀಗೆ: “ಕನ್ನಡದ ಕತ್ತು ಹಿಚುಕುವವರ ಮುಖಕಕ್ಕೆ ಮಸಿ ಬಳಿಯದೇ ಫೇರ್ ಅಂಡ್ ಲೌಲಿ ಹಚ್ಬೇಕಾ?”
‘ಫೇರ್ ಅಂಡ್ ಲೌಲಿ ಹಚ್ಬೇಕಾ’ ಎಂಬ ತೇಜಸ್ವಿಯವರ ಹೇಳಿಕೆಯಿಂದಾಗಿ ಆ ಕಂಪೆನಿಯ ಮಾರಾಟ ಹೆಚ್ಚಿತೆಂಬುದೊಂದು ವರದಿ. ಅದಕ್ಕೆ ಆ ಕಂಪೆನಿಯ ಅಧಿಕಾರಿಯೊಬ್ಬ ‘ಸಾರ್ ನಿಮ್ಮ ಹೇಳಿಕೆಯಿಂದ ನಮ್ಮ ನಮ್ಮ ಕಂಪೆನಿ ಪ್ರಾಡಕ್ಟ್ ಮಾರಾಟ ಹೆಚ್ಚಾಗಿದೆ’ ಎಂದು ಹೇಳಿ ಗಿಫ್ಟ್ ಕೊಡಲು ಮುಂದಾಗಿದ್ದಾನೆ. ಆಗ ತೇಜಸ್ವಿ “ಕಂತ್ರಿ ನನ್ಮಗನ ಆಚೆ ಕಳಿಸ್ರೋ. ನಮ್ ಹುಡುಗರಿಗೆ ನೈತಿಕ ಶಕ್ತಿ ತುಂಬಲಿಕ್ಕೆ ಹಾಗೆ ಹೇಳಿದ್ದರೆ ಲಂಚ (ಗಿಪ್ಟ್) ಕೊಡಲಿಕ್ಕೆ ಬಂದವ್ನೆ” ಎಂದು ಕೂಗು ಹಾಕಿದ್ದರಂತೆ!
೯೦ರ ದಶಕದಲ್ಲಿ ಉಂಟಾದ ಬಿಜೆಪಿಯ ಬೆಳವಣಿಗೆಯ ಬಗ್ಗೆ ಕೆಲವರಲ್ಲಿ ಆತಂಕ. ಆದರೆ ತೇಜಸ್ವಿ ಆ ಆತಂಕವನ್ನು ನಿವಾರಣೆ ಮಾಡಿದ್ದು ಮಾತ್ರ ಅಚ್ಚರಿ “ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ರಾಮರಾಜ್ಯ ಸ್ಥಾಪನೆ ಆಗುತ್ತದೆ ಎಂದು ಕೆಲವರಿಗೆ ಭ್ರಮೆ ಇದೆ. ಈ ಭ್ರಮೆ ಅದಷ್ಟು ಬೇಗ ಕಳಚಿ ಹೋಗುವುದಕ್ಕಾಗಿಯಾದರೂ ಬಿಜೆಪಿ ಒಮ್ಮೆ ಅಧಿಕಾರಕ್ಕೆ ಬರಬೇಕು”
ರಾಜ್ಯಕ್ಕೆ ಅಗತ್ಯವಿರುವ ಪ್ರಾದೇಶಿಕ ಪಕ್ಷವೊಂದರ ಬಗ್ಗೆ: “ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟುವ ಅಗತ್ಯವಿದೆ. ಈ ರೀತಿಯ ಪಕ್ಷ ಕಟ್ಟುವಲ್ಲಿ ಎಚ್.ಡಿ.ದೇವೇಗೌಡರು ಸಮರ್ಥರಾಗಿದ್ದರು. ಆದರೆ ಅವರು ಆಗ ರಾಷ್ಟ್ರರಾಜಕಾರಣಕ್ಕೆ ಹೋದರು; ಈಗ ಕುಟುಂಬಕ್ಕೆ ಮಾತ್ರವೇ ಸೀಮಿತರಾಗಿಬಿಟ್ಟರು”
ತೇಜಸ್ವಿಯವರನ್ನು ಎಂ.ಎಲ್.ಸಿ. ಮಾಡಲು ಕೆಲವರು ಪ್ರಯತ್ನಿಸಿದ್ದುಂಟು. ನೀವ್ಯಾಕೆ ಒಪ್ಪಲಿಲ್ಲ? ಎಂಬುದಕ್ಕೆ ತೇಜಸ್ವಿಯವರ ಉತ್ತರ ‘’ಮಾರಾಯ್ರೆ ನನಗೆಲ್ಲಿ ಟೈಮು? ಅಲ್ಲಿ ವಿಧಾನಪರಿಷತ್‌ನಲ್ಲಿ ಯಾರಾದ್ರೂ ಬಾಯಿನ ತೆರೆದ್ರೆ ಸಂಜೆ ತನಕ ಭಾಷಣ ಮಾಡೋರು. ಅಷ್ಟೊಂದು ಭಾಷಣ ಕೇಳ್ಕೊಂಡು ನಾನು ಕುತ್ಕೊಳ್ಳೋಕೆ ಆಗ್ತಿತ್ತಾ”
ತಮ್ಮ ಕ್ಷೇತ್ರದ ಶಾಸಕರಿಗೆ ತೇಜಸ್ವಿ ಕೇಳಿದ ಪ್ರಶ್ನೆ: “ರಾಜಕಾರಣ ಹೊಲಸು ಆಗುತ್ತಿದೆ. ಏನು ರಾಜಕಾರಣ ಮಾಡುತ್ತೀರಿ ಅರ್ಥವಾಗುತ್ತಿಲ್ಲ. ಚುನಾವಣೆಯಲ್ಲಿ ಕಳ್ಳರು-ಸುಳ್ಳರು ಎಲ್ಲರನ್ನೂ ವೋಟು ಕೇಳುವುದು ಪಾಪದ ಕೆಲಸ ಅಲ್ವಾ?”
ತಾವು ವೋಟು ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಸೋತಾಗ “ಇದುವರೆಗೂ ನಾನು ಕಾಂಗ್ರೆಸ್‌ಗೆ ವೋಟ್ ಹಾಕಿಲ್ಲ. ನಿಮಗೋಸ್ಕರ ಮೈಸೂರಿನಿಂದ ಬಂದು ವೋಟ್ ಹಾಕಿದ್ದೆ. ಅಲ್ಲಿಂದ ಬಂದು ವೋಟ್ ಹಾಕಿದ್ರೂ ಸೋತ್ರಾ?”
ದೇಶದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದವರಿಗೆ ತೇಜಸ್ವಿಯವರ ಸಮಾಧಾನ: “ದೇಶದಲ್ಲಿ ಯುವಶಕ್ತಿ ಅಗಾಧವಾಗಿದೆ. ಭ್ರಷ್ಟಾಚಾರ ಇನ್ನಿತರೆ ಅನಿಷ್ಟಗಳ ವಿರುದ್ಧ ಸಿಡಿದೇಳುವ ಹಂತಕ್ಕೂ ತಲುಪಿದೆ. ಈ ಹಂತದಲ್ಲಿ ಅವರನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯುವ ಕೆಲಸ ನಡೆಯಬೇಕಾಗಿದೆ ಅಷ್ಟೆ. ಯುವಕರನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ದಾಗ ಮಾತ್ರ ದೇಶ ತನ್ನಿಂದ ತಾನೆ ಸರಿಯಾದ ದಿಕ್ಕಿನಲ್ಲಿ ಹೋಗುತ್ತದೆ.”
ದತ್ತಪೀಠದ ಬಗ್ಗೆ ನಡೆದ ಗಲಾಟಯ ಬಗ್ಗೆ ಮಾತನಾಡುತ್ತಾ ಮಹಿಳಾ ವರದಿಗಾರರೊಬ್ಬರು ‘ಸಾರ್ ಇದಕ್ಕೆಲ್ಲಾ ಏನಾದ್ರೂ ಮಾಡಬೇಕು’ ಅಂದಾಗ ತೇಜಸ್ವಿ ಹೇಳಿದ್ದು: “ಏನ್ರಿ ಮಾಡೋದು? ಕೊಲೆ ಮಾಡಬ್ಯಾಡಿ, ಮನುಷ್ಯ ಮನುಷ್ಯನ್ನ ಕಡಿಯೋದು ತಪ್ಪು ಅಂತಾ ಹೇಳೋಕೆ ಖುರಾನು ಭಗವದ್ಗೀತೆ ಬೇಕಾಗಿಲ್ಲಾರಿ. ಆ ಭಾವನೆ ಮನುಷ್ಯನ ಒಳಗಡೆಯಿಂದ ಬರಬೇಕೆ ಅಷ್ಟೆ”
ಕಾವೇರಿ ತೀರ್ಪಿಗೆ ಗಿರೀಶ್ ಕಾರ್ನಾಡ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ: “ಗಿರೀಶ್‌ಗೆ ವ್ಯವಸಾಯ ಅಂದ್ರೆ ಎನೂ ಗೊತ್ತಿಲ್ಲ”
ಕಾವೇರಿ ತೀರ್ಪಿಗೆ ತೇಜಸ್ವಿ ಸೂತ್ರ: ರೈತರು ತಮ್ಮ ಹೊಲಗಳ ಮೇಲೆ ಬಿದ್ದ ಮಳೆ ನೀರಿಗೆ ಎಷ್ಟರ ಮಟ್ಟಿಗೆ ಬಾಧ್ಯಸ್ತರೋ, ಹಾಗೆಯೇ ನಮ್ಮ ರಾಜ್ಯಗಳು ತಮ್ಮ ಭೂಪ್ರದೇಶದ ಮೇಲೆ ಬೀಳುವ ಮಳೆ ನೀರಿಗೆ ಬಾಧ್ಯಸ್ತರಾಗಬೇಕಾಗುತ್ತದೆ. ಆಗ ಕರ್ನಾಟಕದಲ್ಲಿ ಬಿದ್ದ ಮಳೆ ನೀರಿಗೆ ರಾಜ್ಯ ಹಕ್ಕುದಾರನಾಗುವುದು. ನಮಗೆ ವಿದ್ಯುತ್ ಕೊರತೆ ಬಿದ್ದಾಗ ನಾವು ನೆರೆ ರಾಜ್ಯಗಳಿಂದ ವಿದ್ಯುತ್ ಅನ್ನು ಖರೀದಿಸುವುದಿಲ್ಲವೆ? ಹಾಗೇ ತಮಿಳು ನಾಡು ನೀರಿನ ಕೊರೆತ ಬಿದ್ದಾಗ ನಮ್ಮಲ್ಲಿ ಹೆಚ್ಚುವರಿ ನೀರು ಶೇಖರಣೆಯಾಗಿದ್ದರೆ, ಅದನ್ನು ಖರೀದಿಸಬಹುದು. ಭಾರತ ಒಕ್ಕೂಟ ರಾಜ್ಯ ವ್ಯವಸ್ಥೆಗೆ ಈ ಸೂತ್ರ ಪರಿಹಾರವಾಗಬಲ್ಲದು”
ದೇವರು ವಿಸ್ಮಯ ಇವುಗಳ ಬಗ್ಗೆ ಅನಂತಮೂರ್ತಿಯವರಿಗೆ ಹೀಗೆ ಹೇಳಿದ್ದರಂತೆ: “ಈ ಪ್ರಪಂಚದಲ್ಲಿ ದೇವರು ಇದ್ದಾನೆ ಅಂತ ತಿಳಿದಾಗ ಎಂತಹ ವಿಸ್ಮಯ ಹುಟ್ಟಬಹುದೋ ಅದೇ ದೇವರು ಇಲ್ಲ ಅಂತ ತಿಳಿದಾಗಲೂ ಪ್ರಪಂಚದ ವಿದ್ಯಮಾನಗಳೆಲ್ಲಾ ಅಷ್ಟೇ ವಿಸ್ಮಯಕಾರಿಯಾಗಿರಬಹುದು”
ತೇಜಸ್ವಿಯವರ ಮನೆಯ ಹೆಸರು ನಿರುತ್ತರ. ಅದಕ್ಕೆ ನೀಡಿದ ವಿವರಣೆ: “ಮಳೆ ಬರುತ್ತದೆ, ರೈತ ಬೀಜ ಬಿತ್ತುತ್ತಾನೆ, ಆಗ ಬೆಳೆ ಬರುತ್ತದೆ. ಇದು ರೈತರ ಬದುಕಿನಲ್ಲಿ ಅನಿರೀಕ್ಷಿತ”
ತೇಜಸ್ವಿ ಕನ್ನಡಕ್ಕೆ ನೀಡಿದ ಕೊಡುಗೆ ಮಹತ್ವವಾದುದು ಎಂಬ ಮಾತಿಗೆ ತೇಜಸ್ವಿಯವರ ಪ್ರತಿಕ್ರಿಯೆ: “ಅಯ್ಯೋ ಹೋಗ್ರಿ ಹೋಗ್ರಿ. ಈ ಕೊಡುಗೆ ಗಿಡುಗೆ ಅನ್ನೋದೆಲ್ಲಾ ದೊಡ್ಡ ಮಾತು ಕಂಡ್ರಿ. ನಾನು ಎಲ್ಲರ ಥರಾ ಆರ್ಡಿನರಿ ಮನುಷ್ಯಾ ಕಣ್ರೀ”
ಪಂಪ ಪ್ರಶಸ್ತಿ ಬಂದಾಗ ಅಭಿನಂಧಿಲು ಫೋನು ಮಾಡಿದ ಮಿತ್ರರಿಗೆ: ಅಯ್ಯೋ ಮಾರಾಯ್ರ ನಮ್ ಪಾಡಿಗೆ ನಮ್ ಬಿಡ್ರೋ. ನಿಮ್ ಪ್ರಶಸ್ತಿ ತಗೊಂಡು ನಾನೇನ್ ಮಾಡ್ಲಿ. ನನ್ ಪಾಡಿಗೆ ನನ್ ಬಿಟ್ರೆ ಸಾಕಪ್ಪ”
ಸಭೆ ಸಮಾರಂಭಗಳಲ್ಲಿ ಭಾಗವಹಿಸದಿರುವುದಕ್ಕೆ ತೇಜಸ್ವಿ ಕೊಟ್ ಕಾರಣ: “ಸನ್ಮಾನ ಮಾಡ್ಸಿಕೊಳ್ಳೋದು ಆರತಿ ಗೀರತಿ ಎತ್ತೋದು ಶುರುಮಾಡ್ತು ಅಂದ್ರೆ ತಾಳಕ್ಕಾಗಲ್ಲ ಕಣ್ರೀ. ನಾಚಿಕೆ ಆಗುತ್ತೆ -ನನಗೆ. ನನಗೆ ಮಾಡೋದು ಇರಲಿ ಬೇರೆಯವರಿಗೆ ಯಾರಿಗಾದ್ರೂ ಮಾಡಿದ್ರೂನು ನೋಡೋದಿಕ್ಕಾಗಲ್ಲ. ಎದ್ದು ಓಡಿ ಬಂದ್ಬಿಡ್ತೀನಿ”
ಯಾವುದಾದರೂ ಸಭೆ ಸಮಾರಂಭಕ್ಕೆ ತೇಜಸ್ವಿಯವರನ್ನು ಕರೆದರೆ ಅವರು ಹೇಳುತ್ತಿದ್ದುದು. ಸಭೆ ಸಮಾರಂಭ ಸನ್ಮಾನ ಹಾಗೂ ಭಾಷಣಗಳಿಗೆ ನನ್ನನ್ನು ಕರಿಬ್ಯಾಡ್ರೋ. ಬಾಕಾದ್ರೆ ಎಲ್ಲರ ಜತೆ ಬಂದು ಸ್ವಲ್ಪ ಹೊತ್ತು ಕೂತಿದ್ದು ಹರಟೆ ಹೊಡೆದು ಹೋಗ್ತೀನಿ”
ಯಾರ್‍ಯಾರದೋ ಬಲವಂತಕ್ಕೆ ಒಪ್ಪಿಕೊಂಡಾಗಲೂ ಅವರು ಹಾಕುತ್ತಿದ್ದ ಶರತ್ತು: “ಟಿ.ಎ., ಡಿ.ಎ. ಕೊಡಕೂಡದು, ಲಾಡ್ಜ್ ಬುಕ್ ಮಾಡಕೂಡದು”
ಬೆಂಗಳೂರಿನ ಯೌವನಿಕಾದಲ್ಲಿ ನಡೆದ ಸಂವಾದ ಕಾರ್ಯಕ್ರಮ ಮುಗಿದ ಮೇಲೆ ಸಂಘಟಕರು ಅವರ ಜೊತೆ ಪೋಟೋ ತೆಗೆಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾಗ ಅವರು ಹೇಳಿದ್ದು: “ಕ್ರಾಂತಿ ಮಾಡಿ ಅಂದ್ರೆ ಫೋಟೋ ತೆಗಿಸ್ಕೋಳದಲ್ಲಾರ್ರೀ”
ಪಂಪ ಪ್ರಶಸ್ತಿ ತೆಗೆದುಕೊಳ್ಳಲು ಬನವಾಸಿಗೆ ಯಾಕೆ ಹೋಗಲಿಲ್ಲ ಎಂಬುದಕ್ಕೆ ಅವರು ಹೇಳಿದ್ದು “ವೇದಿಕೆ ಹತ್ತಲು ನಾಚಿಕೆಯಾಗುತ್ತ ಕಣ್ರೀ” ಎಂದು. ನಿಮಗೆ ಜ್ಞಾನಪೀಠ ಬರುವುದನ್ನು ಕಾಯುತ್ತಿದ್ದೇವೆ ಎಂಬ ಮಾತಿಗೆ “ಅಯ್ಯೋ ನಮ್ಮ ಪಾಡಿಗೆ ನಮ್ಮನ್ನ ಬಿಡ್ರೋ ಮಾರಾಯ” ಎಂಬ ಉತ್ತರ.
ಹಾಸನದಲ್ಲಿ ವರದಿಗಾರನೊಬ್ಬನ ಜೊತೆಯಲ್ಲಿ ಟೀ ಕುಡಿಯುವಾಗ, ಟೀ ಕೊಟ್ಟ ಹುಡುಗ ‘ಸಾರ್ ನೀವು ತೇಜಸ್ವಿ ಅಲ್ಲವೆ?’ ಎಂದು ಗುರುತು ಹಿಡಿಯುತ್ತಾನೆ. ಆಗ ತೇಜಸ್ವಿ ಪ್ರತಿಕ್ರಿಯೆ: “ಲೋ ನನ್ನ ಗುರುತು ಹಿಡಿದ್ಯಲ್ಲೋ... (ವರದಿಗಾರನಿಗೆ) ನೀ ಏನಾದ್ರೂ ಹೇಳಿಕೊಟ್ಟಿದ್ಯಾ... ಬಡ್ಡಿಮಗನೆ. ನೀನು ಅಂತೋನೆ ಬಿಡು”
ತಮಗೆ ಇಷ್ಟವಿಲ್ಲದ್ದನ್ನು ನೇರವಾಗಿ ‘ಇಷ್ಟವಿಲ್ಲ’ ಎಂದು ತೇಜಸ್ವಿ ಹೇಳುತ್ತಾರೆ. ತೇಜಸ್ವಿ ದಂಪತಿಗಳನ್ನು ಊಟಕ್ಕೆ ಕರೆದಿದ್ದವರೊಬ್ಬರು, ಬಲವಂತ ಮಾಡಿ ಹೆಚ್ಚಿಗೆ ಬಡಿಸಿದಾಗ “ನೋಡಿ ನನಗೆ ಬೇಕಾದ್ದನ್ನು ಕೇಳಿ ಹಾಕಿಸಿಕೊಂಡು ತಿನ್ನುತ್ತೇನೆ. ಈ ರೀತಿ ಬಲವಂತ ಮಾಡಿ ಹಿಂಸೆ ಕೊಡಬೇಡಿ” ಎಂದು ರೇಗಿದ್ದರಂತೆ.
ಕನ್ನಡ ತಂತ್ರಾಂಶ ಅಭಿವೃದ್ಧಿಯ ಬಗೆಗಿನ ಸರಕಾರದ ನಿರಾಸಕ್ತಿಯನ್ನು ಕಂಡು ಕೋಪಗೊಂಡ ತೇಜಸ್ವಿ ಹೇಳಿದ್ದು ಹೀಗೆ. “ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಕೋಟಿಗಟ್ಲೆ ವ್ಯಯಿಸುವ ಸರ್ಕಾರ ತಂತ್ರಾಂಶ ಅಭಿವೃದ್ಧಿಗೇಕೆ ಹಣ ನೀಡಬಾರದು?”
ಕನ್ನಡ ತಂತ್ರಾಂಶಕ್ಕೇಕೆ ಅಷ್ಟೊಂದು ಪ್ರಾಮುಖ್ಯ ಎಂಬ ಪ್ರಶ್ನೆಗೆ: “ಕಂಪ್ಯೂಟರ್‍ನಲ್ಲಿ ಇಂಗ್ಲೀಷ್‌ನಷ್ಟೇ ಸರಳವಾಗಿ ಮತ್ತು ಸಹಜವಾಗಿ ಕನ್ನಡವನ್ನು ಬಳಸಲು ಸಾಧ್ಯವಾಗದಿದ್ದರೆ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ”
ಎಸ್.ಎಂ.ಕೃಷ್ಣನೇತೃತ್ವದ ಮೈಕ್ರೋಸಾಫ್ಟ್ ಕಂಪೆನಿಯೊಂದಿಗೆ ತಂತ್ರಾಂಶ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಾಗ: “ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್‌ನಂತಹ ಬಹುರಾಷ್ಟ್ರೀಯ ಸಂಸ್ಥೆಗೆ ಕನ್ನಡವನ್ನು ಅಡ ಇಡುವುದು ಸರಿಯಲ್ಲ. ಭಾಷೆಗೆ ತಕ್ಕ ಹಾಗೆ ತಂತ್ರಾಂಶ ಇರಬೇಕೇ ಹೊರತು, ತಂತ್ರಾಂಶಕ್ಕೆ ತಕ್ಕ ಹಾಗೆ ಭಾಷೆ ಬದಲಾಗಬೇಕು ಎಂದರೆ ಯಾವ ನ್ಯಾಯ?”
ಕನ್ನಡ ವಿಶ್ವವಿದ್ಯಾಲಯದಿಂದ ತೇಜಸ್ವಿಯವರಿಗೆ ನಾಡೋಜ ಪುರಸ್ಕಾರ ನೀಡಲು ವಿಶ್ವವಿದ್ಯಾಲಯದವರು ಸಂಪರ್ಕಿಸಿದಾಗ “ಕನ್ನಡ ತಂತ್ರಾಂಶ ಅಭಿವೃದ್ಧಿಮಾಡಿ ಅದು ನನಗೆ ನೀಡಿದ ನಾಡೋಜವಾಗುತ್ತದೆ” ಎಂದಿದ್ದರು.
ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಹಸ್ತಪ್ರತಿ ಪರಕಟಣೆಯ ಸಂದರ್ಭದಲ್ಲಿ ಅವರು ನೀಡಿದ ಪ್ರತಿಕ್ರಿಯೆ: ನೋಡಯ್ಯಾ... ನಾನು ಕನ್ನಡದ ಜನತೆಗೆ ಮೋಸ ಮಾಡಿ ಹಣವನ್ನು ಕಿತ್ತುಕೊಳ್ಳಬೇಕಿಲ್ಲ, ನನಗೆ ಬದುಕುವುದು ಗೊತ್ತಿದೆ. ಆದರೆ ಒಂದು ರೀತಿಯಲ್ಲಿ ನನ್ನೊಡನೆ ಆತ್ಮೀಯತೆಯಿಂದದ್ದವರು ಎಲ್ಲೋ ಒಂದು ಕಡೆ ಪರ್ಸನಲ್ ಆದ ಕೆಲವು ವಿಚಾರಗಳನ್ನು ತಂದು ಅವಮಾನ ಮಾಡಿದರು.”
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಬಗ್ಗೆ: “ನಾನಂತೂ ಸಮ್ಮೇಳನದ ಅಧ್ಯಕ್ಷನಾಗದೇ ಸಾಯುವವನು”
ಕುರ್‌ಕುರೆ ಎಂಬ ಕರಿದ ತಿಂಡಿಯ ಬಗ್ಗೆ: “ನಮ್ಮವರು ಮಾಡುವ ಮಿಕ್ಸ್ಚರ್ ಹಿಟ್ಟು ತಿಂದಂತಾಗುತ್ತದೆ. ಕುರ್‌ಕುರೆ ಒಳ್ಳೆ ಕುರುಂಕುರುಂ ಅನ್ನುತ್ತೆ”
ಹಕ್ಕಿಯ ಒಳ್ಳೆಯ ಫೋಟೋ ತೆಗೆದಿದ್ದಕ್ಕೆ ಪ್ರತಿಯಾಗಿ ಹಕ್ಕಿಗಳಿಗೆ ಹೇಳುತ್ತಿದುದು: “ನನಗೆ ಒಳ್ಳೆಯ ಪೋಸು ಕೊಡೋಕೆಂದೇ ಇಲ್ಲಿಗೆ ಬರುತ್ತವೆ ಮುಂಡೇವು”
ಉದಯರವಿ ಪ್ರಕಾಶನದ ಎಂಬ್ಲಮ್ ಸಂಯೋಜಿಸಿದ್ದರ ಬಗ್ಗೆ: “ನೋಡಯ್ಯಾ, ಇದೊಂದು ಹಕ್ಕೀನಾ ಒಂದೇ ಪಿಕ್ಚರ್‌ನಲ್ಲಿ ಹಿಡಿಯೋದು ಅಂದ್ರೆ ಕಷ್ಟ. ಅದಕ್ಕೇ ನೋಡು ಎರಡು ಚಿತ್ರ ಬೇರೆ ಬೇರೆ ತೆಗೆದು ಒಂದೇ ಎನ್ನುವಂತೆ ಜೋಡಿಸಿದ್ದೇನೆ”
ಕಾರಿನಲ್ಲಿ ಹೋಗುವಾಗ ಪೋಲೀಸಿನವನೊಬ್ಬ ಗಣಪತಿ ಹಬ್ಬಕ್ಕೆ ಚಂದಾ ಕೇಳುತ್ತಾನೆ. ತೇಜಸ್ವಿ ಐವತ್ತು ರೂಪಾಯಿ ಕೊಡುತ್ತಾರೆ. ಅದನ್ನು ಪ್ರತಿಭಟಿಸಿದ ರಾಮದಾಸ್ ಅವರಿಗೆ ತೇಜಸ್ವಿ ಹೇಳಿದ್ದು: “ರ್ರೀ ರಾಮದಾಸ್ ನಿಮಗೆ ಏನೂ ಗೊತ್ತಾಗಲ್ಲ ಕಣ್ರೀ. ನನ್ಹತ್ರ ಕಾರ್ ಡ್ರೈವಿಂಗ್ ಲೈಸೆನ್ಸ್ ಇಲ್ಲ, ಕಾರಿನ ಡಾಕ್ಯುಮೆಂಟ್ ಇಲ್ಲ. ಅವನು ಅದ್ನೆಲ್ಲ ಕೇಳಿದ್ರೆ ಏನ್ರೀ ಮಾಡೋದು. ಸುಮ್ಮನೆ ಐವತ್ತು ರೂಪಾಯಿ ಕೊಟ್ಟು ದೊಡ್ಡ ರಗಳೆಯಿಂದ ಪಾರಾದರೆ ಸಾಕಲ್ವೇನ್ರಿ”
ತೇಜಸ್ವಿ ನಿಧನರಾಗುವ ನಾಲ್ಕೈದು ದಿನ ಮುಂಚೆ ರಾಮದಾಸ್ ಅವರಿಗೆ ಫೋನ್ ಮಾಡಿದಾಗ “ಮೊನ್ನೆ ಸ್ವಲ್ಪ ಗುಡ್ಡ ಹತ್ತಿದೆ ನೋಡ್ರಿ. ಅಷ್ಟಕ್ಕೆ ಸುಸ್ತಾಯ್ತು... ನಮಗೆಲ್ಲ ವಾಯಸ್ಸಾಗುತ್ತಿದೆ ರಾಮದಾಸ್... ನಾವು ಹುಡುಗರಲ್ಲ. ಅದೇನ್ರಿ ಇನ್ನೂ ನೀವು ಎಲ್ಲ ಕಡೆ ಹೋಗಿ ಭಾಷಣ ಮಾಡ್ತೀರ. ಸ್ವಲ್ಪ ಕಡಿಮೆ ಮಾಡಿಕೊಳ್ರಿ..”
ತೇಜಸ್ವಿ ನಿಧನರಾಗುವ ಐದು ತಿಂಗಳ ಮುಂಚೆ ಆಸ್ಪತ್ರೆ ಸೇರಿದ್ದರು. ಅಲ್ಲಿಂದ ಡಿಸ್‌ಚಾರ್ಜ್ ಆಗಿ ಮನೆಗೆ ಬಂದ ತೇಜಸ್ವಿಯವರಿಗೆ ಫೋನ್ ಮಾಡಿದ ಪರಿಚಯದ ವರದಿಗಾರೊಬ್ಬರು ‘ಏನ್ ಸಾರ್ ಚೆನ್ನಾಗಿದೀರಾ?’ ಎಂದು ಕೇಳಿದ್ದಕ್ಕೆ- “ಏನ್ ಚಂದ ರ್ರೀ... ಅದೇನೋ ಆಯಿಲ್ ಮಸಾಜ್ ಅಂತ ಮಾಡಿಸ್ಕೊಂಡೆ ಕಣ್ರೀ, ಅಲರ್ಜಿ ಆಗಿ ವಾರಗಟ್ಲೆ ಆಸ್ಪತ್ರೆಯಲ್ಲಿರಬೇಕಾಯ್ತು. ಅದೂ ಬೆಂಗಳೂರಲ್ಲಿ... ಆ ಟ್ರಾಫಿಕ್ಕೂ... ಆ ಜನ.... ಯಾವಾಗ ಆ ಊರು ಬಿಟ್ಟುಬಿಡೋಣ ಅನ್ನಿಸಿತ್ತು. ಆದರೆ ಒಂದು ತಿಂಗಳು ಅಲ್ಲೇ ಕೊಳೆ ಹಾಕ್ಬಿಟ್ರು ಕಣ್ರೀ... ನನ್ನ ಸ್ಥಿತಿ ಬಗ್ಗೆ ಸಿಂಪತಿ ತೋರಿಸೋದಿರಲಿ.. ಈ ವಯಸ್ಸಲಿ ಆಯಿಲ್ ಮಸಾಜ್ ಮಾಡಿಸ್ಕೊಳ್ಳೊ ಉಸಬಾರಿ ಯಾಕೆ ಬೇಕಿತ್ತು ಅಂತ, ಬಯ್ಯೋರೆ ಹೆಚ್ಚಾಗಿದ್ರು ಕಣ್ರೀ. ಅದಕ್ಕೇ ಎಲ್ಲೂ ಹೊರಗೆ ಹೋಗ್ತಾ ಇಲ್ಲ. ಆರೋಗ್ಯ ಪರ್‍ಮಿಟ್ ಮಾಡೋದಿರ್ಲಿ ಡಾಕ್ಟ್ರೂ ಪರ್‍ಮಿಟ್ ಕೊಡ್ತಾ ಇಲ್ಲ ಕಣ್ರಿ...”
ಕಾಲಿನ ಗಾಯ ವಾಸಿಯಾಗಿ ಮತ್ತೆ ಮೂಡಿಗೆರೆಗೆ ಹೋಗುವ ಹಿಂದಿನ ದಿನ ಗೆಳೆಯರೊಬ್ಬರಿಗೆ ಹೇಳಿದ್ದು: “ಈ ಖಾಯಿಲೆಗಿಂತಲೂ ದೊಡ್ಡ ಹಿಂಸೆ ಮೂಡಿಗೆರೆ ಬಿಟ್ಟು ಈ ಆಸ್ಪತ್ರೇಲಿ ಮಲಗುವುದು. ನಾಳೆ ಮೂಡಿಗೆರೆಗೆ ಹೊರಟಿದ್ದೇನೆ. ಇನ್ನೆಂದೂ ಈ ಆಸ್ಪತ್ರೆ ಸಹವಾಸವಲ್ಲ. ತೋಟ ಈ ನಾಲ್ಕು ತಿಂಗಳಲ್ಲಿ ಮೂವತ್ತು ಭಾಗ ಹಾಳಾಗಿ ಹೋಗಿರುತ್ತೆ. ಹೋಗಿ ಸರಿ ಮಾಡಿದ್ರೆ ಆಯಿತು ಬಿಡು”
ಯಾವುದೋ ವಿಷಯವಾಗಿ ಬೆಂಗಳೂರಿನಲ್ಲಿ ಬೇಟಿಯಾಗಿ ಮಾತನಾಡುವ ಎಂದ ಗೆಳೆಯರೊಬ್ಬರಿಗೆ ತೇಜಸ್ವಿ ಹೇಳಿದ್ದು ಹೀಗೆ: “ಬೇಡ ಮಾರಾಯ ಅದೊಂದು ಊರಿನ ಕುಲವಾ? ಅಲ್ಲಿ ಯಾರು ಯಾರನ್ನು ಮಾತಾಡ್ಸೋಕೆ ಆಗಲ್ಲ. ಅಲ್ಲೇನಿದ್ರೂ ವ್ಯಾಪಾರ ಮಾಡಬಹುದು ಅಷ್ಟೆ”
ಮೂಡಿಗೆರೆ ತೋಟದಲ್ಲಿ ತೇಜಸ್ವಿಯವರನ್ನು ಬೇಟಿಯಾದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ‘ಸಾರ್ ನಿಮ್ಮನ್ನು ನೋಡಲು ಬೆಂಗಳೂರಿನಿಂದ ಬಂದಿದ್ದೇವೆ’ ಎಂದಾಗ ತೇಜಸ್ವಿ “ಹೌದಾ ನೋಡಿ ಚೆನ್ನಾಗಿ ನೋಡಿ” ಎಂದು ಸೊಂಟದ ಮೇಲೆ ಕೈಹಾಕಿ ನಿಂತರಂತೆ. ಆಗ ಒಬ್ಬರು ‘ಸರ್ ನಿಮ್ಮನ್ನು ಕಾರಂತರಂತೆ ತಿಳಿದುಕೊಂಡಿದ್ದೆ. ನೀವು ತುಂಬಾ ಸರಳ ಸರ್’ ಅಂದಿದ್ದಕ್ಕೆ ತೇಜಸ್ವಿ ಹೇಳಿದ್ದು ಹೀಗೆ: ಕಾರಂತರನ್ನು ನೀವು ಎಷ್ಟು ಸಲ ಮಾತನಾಡಿಸಿದ್ದೀರಿ? ಒಂದು ಬಾರಿಯೂ ಇಲ್ಲ. ಕಾರಂತರು ನನಗಿಂತ ಚೆನ್ನಾಗಿ ಮಾತನಾಡುತ್ತಾರೆ”
ಚಳುವಳಿಗಳು ಅರ್ಥ ಕಳೆದುಕೊಂಡಿವೆ ಎಂದು ಹೇಳುತ್ತಾ: “ಸಮಾಜವಾದಿ ಘೋಷಣೆ ಕೂಗಿ ನಾವು ಮಾಡಿದಂತೆ ನೀವು ಮಾಡಬೇಡಿ. ನಾವು ಫೂಲ್ಸ್ ಆದಂತೆ ನೀವು ಆಗಬೇಡಿ”
ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಿದ ಉತ್ಸಾಹಿ ತರುಣನೊಬ್ಬನಿಗೆ ತೇಜಸ್ವಿಯೇ ಪ್ರಶ್ನೆ ಕೇಳಿದರು “ಎಲ್ಲಿಂದ ಬಂದಿದೀರಿ ನೀವು?” ‘ಸರ್ ಚಿಕ್ಕಮಗಳೂರಿನಿಂದ’ ಎಂಬ ಉತ್ತರಕ್ಕೆ ತೇಜಸ್ವಿ ಪ್ರತಿಕ್ರಿಯಿಸಿದ್ದು ಹೀಗೆ: “ಯಾಕ್ರಿ ಸುಮ್ನೆ ಅಷ್ಟೊಂದು ದೂರದಿಂದ ಬಂದಿದ್ದೀರಿ?”
ಅಭಯಾರಣ್ಯಕ್ಕಾಗಿ ಕಾಡಿನ ಜನರನ್ನು ಸ್ಥಾಳಾಂತರಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ನೀಡಿದ ಉತ್ತರ: “ನೋಡ್ರಿ, ಭದ್ರಾ ಹುಲಿ ಅಭಯಾರಾಣ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಮಂದಿಗೆ ಪುನರ್ವಸತಿ ಕಲ್ಪಸಲಾಗಿದೆ. ಈಗ ಅವರಿಗೆಲ್ಲಾ ದುಡ್ಡು ಕೊಡ್ತೀವಿ ಮತ್ತೆ ಕಾಡಿಗೆ ಹೋಗ್ರಿ ಅಂದರೆ ಹೊಡೆಯುತ್ತಾರೆ ಅಷ್ಟೆ. ರ್ರೀ ಅವರ ಬದುಕು ಅವರ ಇಷ್ಟದ ಹಾಗೆ ನಡೆಯಬೇಕು. ನಿವ್ಯಾರ್ರೀ ಅದನ್ನ ನಿರ್ಧರಿಸೋಕೆ?”
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುವೆಂಪು ಸಾಹಿತ್ಯ ಕುರಿತ ವಿಚಾರಸಂಕಿರಣ ನಡೆದಿತ್ತು. ಆಗ ಒಬ್ಬ ವಿಮರ್ಶಕ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಗುತ್ತಿಯ ನಾಯಿ ಹುಲಿಯನಿಗೆ ಸಿಕ್ಕಿದ ಪ್ರಾಶಸ್ತ್ಯವನ್ನು ಪ್ರಶ್ನಿಸುತ್ತಾನೆ. ಅದಕ್ಕೆ ತೇಜಸ್ವಿ ನೀಡಿದ ಪ್ರತಿಕ್ರಿಯೆ. “ನಾಯಿ ಸಾಕುವುದು ನಿಮಗಿರಲಿ, ನಿಮ್ಮ ಜಾತಿಗೂ ಗೊತ್ತಿಲ್ಲ. ಆದ್ದರಿಂದ ಹುಲಿಯನ ಸುದ್ದಿಗೆ ಮಾತ್ರ ಬರಬೇಡಿ.”
ಮಾನಸಗಂಗೋತ್ರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ತೇಜಸ್ವಿ ಉಪನ್ಯಾಸಕರನ್ನು ಕುರಿತು ಹೇಳಿದ್ದು: “ಉಪನ್ಯಾಸಕರು ಸಮಾಜಕ್ಕೆ ಹೊಸದನ್ನು ಹೇಳಬೇಕು. ಸಮಾಜ ತಪ್ಪುದಾರಿಗೆ ಹೋಗುತ್ತಿದ್ದರೆ ಅದನ್ನು ತಿದ್ದಬೇಕು. ಅದು ಬಿಟ್ಟು ತಿಂಗಳಿಗೆ ಸಂಬಳ ಬರುತ್ತೆ ತಗೊಂಡು ತಾವಾಯಿತು ತಮ್ಮ ಕುಟುಂಬವಾಯಿತು ಎನ್ನುವಂತಿದ್ದರೆ ಅವರಿಂದ ಏನನ್ನೂ ನಿರೀಕ್ಷಿಸಲಾಗುವುದಿಲ್ಲ”
ಅಸಂಬದ್ಧವಾದ ಪ್ರಶ್ನೆಗಳು ಸಂವಾದ ಕಾರ್ಯಕ್ರಮದಲ್ಲಿ ತೂರಿ ಬಂದರೆ ತೇಜಸ್ವಿ ಹೇಳುತ್ತಿದ್ದುದು ಹೀಗೆ: “ಅಯ್ಯೋ ಏನ್ರೀ ಇವೆಲ್ಲಾ ಪ್ರಶ್ನೆಗಳೇನ್ರಿ?”
ಮೈಸೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದು: “ತಿಂಗಳಿಗೆ ೩೫ ಸಾವಿರ ರೂಪಾಯಿ ಸಂಬಳ ತೆಗೆದುಕೊಳ್ಳೊ ನೀವು ಏನ್ ಪಾಠ ಮಾಡ್ತಿದ್ದೀರಾ ಅನ್ನೋದು ಇವರ ಪ್ರಶ್ನೆ ಕೇಳಿದ್ರೆ ಅರ್ಥವಾಗುತ್ತೆ”
ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಜಾರಿಗೆ ತರುವುದು ಹೇಗೆ ಎಂಬ ಪ್ರಶ್ನೆಗೆ ನೀಡಿದ ಉತ್ತರ: “ಕಾನೂನು ಮಾಡಿಬಿಡ್ರಿ”
ಪುಸ್ತಕ ಪ್ರಕಾಶನದ ಶ್ರೀರಾಮ್‌ಗೆ ಹೇಳಿದ್ದರಂತೆ: “ಪುಸ್ತಕ ಬರೆಯೋದೆಲ್ಲಾ ದೊಡ್ಡ ಕೆಲಸ ಅಲ್ಲಾರೀ. ಮಿಲೆನಿಯಂ ಸೀರೀಸ್ ಬರೆದ ಹಾಗೆ ತಿಂಗಳಿಗೊಂದು ಬರ್‍ದ್ ಹಾಕ್ಬೌದು”
ಎನ್.ಎಸ್.ಡಿ.ಗಾಗಿ ಪ್ರಸನ್ನ ಬೆಂಗಳೂರಿನಲ್ಲಿ ಉಪವಾಸ ಮಾಡಿದ್ದರು. ಆಗ ತೇಜಸ್ವಿ ಹೇಳಿದ್ದು: “ಈ ವಯಸ್ನಲ್ಲಿ ಅದನ್ನೆಲ್ಲಾ ಅಷ್ಟೊಂದು ಗಂಭೀರವಾಗಿ ತಗೋಬೇಡ”
ಅಂತಾರ್ಜಾತಿ ವಿವಾಹವಾದವರಿಗೆ ಮೀಸಲಾತಿಯಲ್ಲಿ ಅವಕಾಶ ಕಲ್ಪಿಸುವ ಸಂಬಂಧ ಬೆಂಗಳೂರಿನ ಯವನಿಕಾದಲ್ಲಿ ತೇಜಸ್ವಿಯವರೊಂದಿಗೆ ಒಂದು ಸಂವಾದ ಕಾರ್ಯಕ್ರಮವಿತ್ತು. ‘ಹೀಗೆ ಮೀಸಾಲತಿ ಪಡೆದುಕೊಂಡ ಅಂತಾರ್ಜಾತಿ ವಿವಾಹವಾದವರದೂ ಒಂದು ಹೊಸ ಜಾತಿಯಾಗಿಬಿಡುವ ಅಪಾಯವಿಲ್ಲವೆ?’ ಎಂಬ ನನ್ನ ಪ್ರಶ್ನೆಗೆ, “ಮೊದಲು ಮೀಸಲಾತಿ ಕೊಡಲಿ ಬಿಡ್ರಿ. ಅಮೇಲೆ ನೋಡೋಣ” ಎಂದಿದ್ದರು. ಇಂದಿಗೂ ಆ ವಿಷಯವಾಗಿ ಯಾವುದೇ ಪ್ರಗತಿಯಾಗಿಲ್ಲ!
ಸಾಹಿತ್ಯದಲ್ಲಿ ಧರ್ಮ ಬೇಡ ಅನ್ನುವುದಾದರೆ ಧರ್ಮಕ್ಕೆ ಬೇರೆ ಸಂವಾದಿ ಯಾವುದು ಎಂಬುದಕ್ಕೆ: “ಧರ್ಮಕ್ಕೆ ಸಂವಾದಿಯಾಗಿ ಸಾಹಿತ್ಯದಲ್ಲಿ ವಿಜ್ಞಾನ ಹಾಗೂ ವೈಚಾರಿಕತೆಯನ್ನು ಬಳಸುವ ದಿಸೆಯಲ್ಲಿ ನನ್ನ ಇತ್ತೀಚಿನ ಕೃತಿಗಳಾದ ಕರ್ವಾಲೋ ಮತ್ತು ಚಿದಂಬರ ರಹಸ್ಯಗಳನ್ನು ಒಂದು ಪ್ರಯೋಗವೆಂದು ಕರೆಯಬಹುದು”
ಕುವೆಂಪು ಅಂತ್ಯಸಂಸ್ಕಾರ ಮಾನಸಗಂಗೋತ್ರಿಯಲ್ಲೇ ನಡೆಯಬೇಕು ಎಂದು ಕೆಲವರು ಉದಯರವಿಯಲ್ಲಿ ಧರಣಿ ಕುಳಿತಿದ್ದರು. ಆಗ ತೇಜಸ್ವಿ ಆಡಿದ ಮಾತು: “ವಿಶ್ವವಿದ್ಯಾಲಯ ವಿಶ್ವವಿದ್ಯಾಲಯವಾಗಿರಬೇಕೇ ಹೊರತು ಕುಲಪತಿಗಳ ಗೋರಿಯಾಗಬಾರದು. ಜತೆಗೆ ಒಬ್ಬ ಕುಲಪತಿಯನ್ನು ಮಲಗಿಸಿದರೆ ಸಾಕು, ಸಾಲಾಗಿ ಕುಲಪತಿಗಳನ್ನು ಮಲಗಿಸಬೇಕಾಗುತ್ತದೆ ಅಷ್ಟೆ”
ಕುವೆಂಪು ಅವರ ಚಿತೆಗೆ ಎಲ್ಲರೂ ಒಂದೊಂದು ಕಟ್ಟಿಗೆಯ ಚಕ್ಕೆ ಇಡುತ್ತಿರುವಾಗ ತೇಜಸ್ವಿಗೂ ಇಡಲು ಯಾರೋ ಹೇಳಿದರಂತೆ. ತೇಜಸ್ವಿ ಬಲಗೈಯಲ್ಲಿ ಇಡುತ್ತಿರುವುದನ್ನು ಗಮನಿಸಿದ ಡಿ.ಬಿ.ಚಂದ್ರೇಗೌಡ ಅವರು ‘ಅಯ್ಯೊ ಬಲಗೈಲಿ ಇಡಬಾರದು; ಎಡಗೈಯಲ್ಲಿ ಇಡಿ’ ಅಂದರಂತೆ. ತಕ್ಷಣ ತೇಜಸ್ವಿ ನೀಡಿದ ಪ್ರತಿಕ್ರಿಯೆ ಹೀಗಿತ್ತು: “ನಾನು ಈಗ ಎಡಗೈಯಲ್ಲಿ ಚಕ್ಕೆ ಇಟ್ಟರೆ, ಅಣ್ಣ ತನ್ನ ಜೀವಮಾನವಿಡೀ ಯಾವುದರ ವಿನಾಶಕ್ಕಾಗಿ ಹೋರಾಡಿದರೋ ಅದೆಲ್ಲಾ ಹೊಳೆಯಲ್ಲಿ ಕೊಚ್ಚಿಹೋದಂತೆ” ತೇಜಸ್ವಿ ಕುವೆಂಪು ಚಿತೆಗೆ ಕೊಳ್ಳಿ ಇಟ್ಟಿದ್ದು ಬಲಗೈಯಿಂದಲೇ!
ಕುಪ್ಪಳ್ಳಿಯಲ್ಲಿ ಕುವೆಂಪು ಅವರ ದೇಹಸಂಸ್ಕಾರವಾದ ಮೇಲೆ ಯಾರೋ ಪರಿಚಿತರು ತೇಜಸ್ವಿಗೆ ಹೇಳಿ ಹೋಗಲು ಬಂದರಂತೆ. ಆಗ ತೇಜಸ್ವಿ “ನೀವೆಲ್ಲಾ ಯಾಕೋ ಮಾರಾಯ ಅಷ್ಟು ದೂರದಿಂದ ಬಂದ್ರಿ. ನಾನು ಸತ್ತಾಗ ಮಾತ್ರ ಹೀಗೆಲ್ಲಾ ಬರಬೇಡಿ” ಅಂದರಂತೆ!
ಕುಪ್ಪಳ್ಳಿಗೆ ತೇಜಸ್ವಿ ಹೋದರೆ ಕುವೆಂಪು ಸಮಾದಿಯ ಬಳಿ ಹೋಗುತ್ತಿರಲಿಲ್ಲ. ಅದನ್ನು ಪ್ರಶ್ನಿಸಿದವರಿಗೆ ತೇಜಸ್ವಿ ಹೀಗೆ ಹೇಳಿದರು. “ನನ್ನ ತಂದೆ ನನ್ನ ಒಳಗೇ ಇದ್ದಾರೆ. ನಾನು ಅವರನ್ನು ನೋಡಿಕೊಂಡು ತಮಾಷೆ ಮಾಡಿಕೊಂಡು ಬೆಳೆದವನು. ಅವರ ಕೃತಿಗಳು ಅವರು ನಿಸರ್ಗವನ್ನು ನೋಡಿ ಗ್ರಹಿಸುತ್ತಿದ್ದ ರೀತಿ ಇವೆಲ್ಲಾ ನನ್ನಲ್ಲಿ ಉಳಿದುಬಿಟ್ಟಿವೆ. ಹೀಗಾಗಿ ತಂದೆಯನ್ನು ಪೂಜ್ಯಸ್ಥಾನಕ್ಕೆ ಏರಿಸೋದು ವು ಹೇಳಿದ ರೀತಿಯಲ್ಲಿ ಕಲ್ಪಿಸಿಕೊಳ್ಳೋದು ನಂಗೆ ಸಾಧ್ಯವಿಲ್ಲ ಕಣ್ರೀ”
* * * * *
ಈ ಮೇಲಿನ ತಾಜಸ್ವಿಯವರ ಮಾತುಗಳನ್ನು ಗಮನಿಸಿದವರಿಗೆ ಖಂಡಿತಾ ಒಂದು ವಿಷಯ ಮನದಟ್ಟಾಗುತ್ತದೆ. ಅದೆಂದರೆ ಅವರ ಮಾತುಗಳು ಎಂದೂ ತೂಕತಪ್ಪದವು; ಹಾಸ್ಯದ ಲೇಫನದೊಂದಿಗೇ ಹೊರಹೊಮ್ಮಿದವುಗಳು; ಅವುಗಳು ಮಹತ್ವವಾದ ಆಶಯಗಳನ್ನು ಹೊತ್ತೇ ವ್ಯಕ್ತವಾದಂತಹವುಗಳು. ಕೆಲವುಗಳನ್ನು ತೇಜಸ್ವಿ ಉದ್ದೇಶಪೂರ್ವಕವಾಗಿ ಆಡಿದ್ದಿಲ್ಲದಿರಬಹುದು. ಆದರೆ ತೇಜಸ್ವಿಯ ಸ್ವಭಾವ ಮತ್ತು ಆಶಯಕ್ಕೆ ಅನುಗುಣವಾಗಿಯೇ ಅವು ವ್ಯಕ್ತವಾಗಿವೆ. ಮತ್ತೊಂದು ಪ್ರಮುಖ ಅಂಶವೆಂದರೆ, ಈ ಯಾವುದೇ ಮಾತುಗಳನ್ನು ವ್ಯಾಖ್ಯಾನಿಸಿ ಓದುಗರಿಗೆ ಅರ್ಥಮಾಡಿಸುವ ತೊಂದರೆ ಖಂಡಿತಾ ಬೇಕಿಲ್ಲ ಎನ್ನುವುದು.
ಸಹೃದಯರಲ್ಲಿ ನನ್ನದೊಂದು ಕೋರಿಕೆ. ಈ ಲೇಖನಕ್ಕೆ ಯಾವುದೇ ಕಾಪಿರೈಟ್ ಇರುವುದಿಲ್ಲ. ಲೇಖನದ ಎರಡನೆಯ ಭಾಗಕ್ಕೆ, ತಮ್ಮ ನೆನಪಿನಲ್ಲಿರುವ ಹಾಗೂ ಸಂಗ್ರಹದಲ್ಲಿರುವ ತೇಜಸ್ವಿಯವರ ಮಾತುಗಳನ್ನು ಸೇರಿಸಬಹುದು!

2 comments:

Eshanye K P said...

ಇದರಲ್ಲಿ, ಕೆಲವು ತೇಜಸ್ವಿಯವರು ಹೇಳಿದ ಮಾತುಗಳೇ ಅಲ್ಲ ! (ಅವರ ಸ್ಟೈಲೇ ಬೇರೆ.. ಉದಾಹರಣೆಗೆ, ಅವರೆಂದೂ ರಾಜೇಶ್ವರಿಯವರನ್ನು ರಾಜೂ ಎಂದು ಕರೆಯುತ್ತಿರಲ್ಲ.. ’ಬಂದವ್ನೆ’ ಎಂದು ಉಪಯೂಗಿಸುತ್ತಿರಲ್ಲಿಲ್ಲ... ಇನ್ನೂ ಅನೇಕ). ಅಲ್ಲದೆ, ಇಲ್ಲಿರುವ ಕೆಲವು ತೇಜಸ್ವಿಯವರ ಅನಿಸಿಕೆಗಳು ಬೇರೆಯವರ ಅನಿಸಿಕೆಗಳಂತೆ ತೋರುತ್ತಿವೆ !

Unknown said...

ಶ್ರೀಮತಿ ಈಶಾನ್ಯೆ ಅವರೆ, ನಿಮ್ಮ ಅನಿಸಿಕೆ ಖಂಡಿತ ಸರಿಯಿರುತ್ತದೆ. ನಾನು ತೇಜಸ್ವಿಯವರನ್ನು ಬೇಟಿ ಮಾಡಿ ಮಾತನಾಡಿದ್ದು ಬೆರಳೆಣಿಕೆಯ ದಿನಗಳಲ್ಲಿ ಬೆರಳೆಣಿಕೆಯ ನಿಮಿಷಗಳಷ್ಟೆ! ಅವರ ಪ್ರಭಾವಕ್ಕೆ ಒಳಗಾದ ಮೇಲೆ ಅವರ ಬಗ್ಗೆ ಮಾದ್ಯಮದಲ್ಲಿ ಬರುವ ಎಲ್ಲಾ ವಿಷಯಗಳನ್ನು ಸಂಗ್ರಹಿಸಸುವ ಹವ್ಯಾಸ ಬೆಳೆಸಿಕೊಂಡೆ. ಹಾಗೆ ಸಂಗ್ರಹಿಸಿದ ಮಾಹಿತಿಗಳನ್ನು ಹಾಗೆ ಹಾಗೆಯೇ ಕೋಟ್ ಮಾಡಿ ಬರೆದಿದ್ದೇನೆ ಅಷ್ಟೆ. ಯಾವುದೇ ಮಾತುಗಳನ್ನು ಬದಲಾಯಿಸಲು ಹೋಗಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ.