

ಅಜ್ಜಿಗೆ ಒಬ್ಬ ತಮ್ಮ ಇದ್ದ. ಆತನಿಗೆ ಸುಂದರಳಾಗಿದ್ದ ಒಬ್ಬಳೇ ಮಗಳಿದ್ದಳು. ಅವಳನ್ನು ತನ್ನ ಸೊಸೆ ಮಾಡಿಕೊಳ್ಳಬೇಕು ಅಂತ ಆಸೆ. ಆದರೆ ತಮ್ಮ ‘ಸೋಮಾರಿಗಳಾಗಿರುವ ಇವರಿಗೆ ನನ್ನ ಮಗಳನ್ನು ನಾನು ಕೊಡುವುದಿಲ್ಲ. ಯಾರಾದರು ದುಡಿದು ತಿನ್ನುವಂತಹ ಬುದ್ಧವಂತನಿಗೆ ಕೊಡುತ್ತೇನೆ’ ಎಂದು ಹೇಳಿಬಿಟ್ಟ. ಅಜ್ಜಿಗೆ ದುಃಖವಾಯ್ತು. ತನ್ನ ಮೂವರು ಮಕ್ಕಳನ್ನು ಬಳಿಗೆ ಕರೆದು ‘ನೋಡ್ರೋ, ನಾನು ಮುಂದೊಂದು ದಿನ ಸತ್ತೋಯ್ತಿನಿ. ಮುಂದೆ ಜೀವನಕ್ಕೆ ಏನು ಮಾಡ್ತೀರಿ. ನಾನು ಕಷ್ಟಪಟ್ಟು ಒಂದಷ್ಟು ದುಡ್ಡು ಕೂಡಿಟ್ಟಿದ್ದಿನಿ. ಅದನ್ನು ಮೂರು ಭಾಗ ಮಾಡಿ ನಿಮಗೆ ಒಂದೊಂದು ಭಾಗ ಕೊಡ್ತಿನಿ. ಅದನ್ನು ತಗೊಂಡು, ಬೇರೆ ಯಾವ ಊರಿಗಾದ್ರೂ ಹೋಗಿ, ಏನಾದ್ರು ವ್ಯಾಪಾರ ಮಾಡಿ, ಸಂಪಾದನೆ ಮಾಡಿಕೊಂಡು ಬನ್ನಿ’ ಎಂದಳು. ಅಂತೆಯೇ ಮೂವರಿಗೂ ದುಡ್ಡು ಭಾಗ ಮಾಡಿಕೊಟ್ಟಳು.
ಆಗ ಮೂವರೂ ಊಟ ಮಾಡಿಕೊಂಡು, ಅಜ್ಜಿ ಕೊಟ್ಟಿದ್ದ ದುಡ್ಡು ತಗೊಂಡು ಊರು ಬಿಟ್ಟರು. ಆದರೆ ಮುಂದೆ ಎಲ್ಲಿ ಹೋಗಬೇಕು? ಏನು ಮಾಡಬೇಕು ಎಂದು ಯಾರಿಗೂ ಗೊತ್ತಿಲ್ಲ. ಸುಮ್ಮನೆ ಸುಸ್ತಾಗುವವರೆಗೂ ನಡೆದು ಒಂದು ಊರು ತಲುಪಿದರು. ಅಲ್ಲಿ ಊರಮುಂದೆ ಒಂದು ಅಂಗಡಿ ಇತ್ತು.
ಅದರ ಮುಂದೆ ಸುಮ್ಮನೇ ಹೋಗಿ ಕುಂತುಕೊಂಡರು. ಅದರ ಯಜಮಾನ ಕಾಲಿಲ್ಲದ ಕುಂಟ. ಈ ಮೂರೂ ಜನರನ್ನ ನೋಡಿ ‘ಏನ್ರಪ್ಪ, ಏನು ಬೇಕು?’ ಎಂದ. ಇವ್ರಿಗೂ ಏನೂ ತೋಚಲಿಲ್ಲ. ಒಬ್ಬ, ‘ಅಣ್ಣ, ನನ್ನತ್ರ ಸ್ವಲ್ಪ ದುಡ್ಡಿದೆ. ಅದನ್ನು ತೊಗೊಂಡು ವ್ಯಾಪಾರ ಮಾಡೋಕೆ ಏನಾರ ಸಾಮಾನನ್ನು, ಈಗ ತಿನ್ನೋದಿಕ್ಕೆ ಕಡ್ಲೆಪುರಿನು ಕೊಡು’ ಅಂದ. ಆಗ ಕುಂಟ ಅವನಿಗೆ ಒಂದು ‘ಭೂತಗನ್ನಡಿ’ಯನ್ನೂ (ದೂರದರ್ಶಕಯಂತ್ರ - ಬೈನಾಕ್ಯುಲರ್!), ತಿನ್ನಲೂ ಕಡ್ಲೆ ಪುರಿಯನ್ನು ಕೊಟ್ಟು ದುಡ್ಡು ತಗೊಂಡ. ಇನ್ನೊಬ್ಬನೂ ಹಾಗೇ ಕೇಳಿದಾಗ, ಅವನಿಗೆ, ಸತ್ತವರನ್ನು ಒಮ್ಮೆ ಮಾತ್ರ ಬದುಕಿಸುವ ‘ಜೀವಾಳದ ಕಡ್ಡಿ’ಯನ್ನು, ತಿನ್ನಲು ಕಡ್ಲೆಪುರಿಯನ್ನು ಕೊಟ್ಟ. ಮೂರನೆಯವನೂ ಕೇಳಿದಾಗ, ಅವನಿಗೆ ಆಕಾಶದಲ್ಲಿ ಹಾರಿ ಹೋಗುವ ಒಂದು ಕುದುರೆಯನ್ನು, ಕಡ್ಲೆಪುರಿಯನ್ನು ಕೊಟ್ಟ.
ಮೂವರೂ ಅವನ್ನೆಲ್ಲಾ ತಗೊಂಡು ಊರಾಚೆ ಹೊಳೆದಂಡೆಲಿರೂ ಒಂದು ಮರದ ಕೆಳಗೆ ಕುಂತ್ಕೊಂಡು, ತಿಂದ್ಕೊಂಡು, ನೀರ್ಕುಡ್ಕೊಂಡು ಹಾಗೇ ಮಲಿಕ್ಕೊಂಡ್ರು. ಬೆಳ್ಳಿಗ್ಗೆ ಎದ್ದಾಗ, ಭೂತಗನ್ನಡಿ ತಗೊಂಡಿದ್ದವನು, ಸುಮ್ಮನೇ ಭೂತಗನ್ನಡಿಲಿ ಎಲ್ಲಾ ಕಡೆಗೂ ನೋಡ್ತಾಯಿದ್ದ.
ಅದ್ರಲ್ಲಿ ಅವರ ಊರಲ್ಲಿ ಅವರ ಸೋದರಮಾವನ ಮಗಳು ಸತ್ತೋಗಿರೋದು ಕಾಣ್ತಾಯಿತ್ತು. ಹೆಣ ಸುಡೋದಿಕ್ಕೆ ವ್ಯವಸ್ಥೆ ಮಾಡ್ತಾಯಿದ್ರು. ಅವನು ಪಕ್ಕದವನನ್ನು ಕರೆದು ಅದನ್ನು ತೋರಿಸಿದ. ಆಗ ಅವನು, ‘ಅಯ್ಯೋ ನನ್ನತ್ರ ಸತ್ತವರನ್ನು ಬದುಕಿಸೋ ಜೀವಾಳದ ಕಡ್ಡಿ ಐತೆ. ಹೆಣ ಸುಡೋದ್ರೊಳಗೆ ಅಲ್ಲಿಗೆ ಬೇಗ ಹೋಗಬೇಕು. ಹೋದ್ರೆ ಅವಳನ್ನು ಜೀವಂತ ಮಾಡ್ತಿನಿ’ ಅಂದ. ಆಗ ಮೂರನೆಯವನು ‘ಬನ್ನಿ ಬನ್ನಿ, ನನ್ನ ಕುದ್ರೆ ಮೇಲೆ ಕುಂತ್ಕೊಂಡ್ರೆ, ಬೇಗ ಹೋಗಬೌದು’ ಎಂದ. ಅದರಂತೆ ಮೂರೂಜನ ಕುದ್ರೆ ಹತ್ತಿ ಊರಿಗೆ ಬಂದ್ರು.
ಅಲ್ಲಿ ಬಂದವರೆ, ಹೆಣವಾಗಿ ಮಲಗಿದ್ದ ಸೋದರಮಾವನ ಮಗಳ ಹತ್ರ ಹೋಗಿ, ಜೀವಾಳದ ಕಡ್ಡಿನ ಅವಳಿಗೆ ಮುಟ್ಟಿಸಿದ್ರು. ತಕ್ಷಣ ಅವಳು ಎದ್ದು ಕುಂತ್ಕೊಂಡ್ಳು.
ಸೋದರ ಮಾವನಿಗೆ ಬಾಳ ಖುಷಿಯಾಯಿತು. ತನ್ನ ಅಳಿಯಂದಿರೂ ಬುದ್ಧಿವಂತರು ಎಂದು ಒಪ್ಪಿಕೊಂಡ. ಆಗ ಮೂರೂ ಜನರಿಗೆ ಮಾವನ ಮಗಳನ್ನು ಮದುವೆಯಾಗುವ ಆಸೆಯಾಯಿತು. ಮೂರು ಜನರಲ್ಲಿ ಜಗಳ ಶುರುವಾಯಿತು. ‘ನಾನು ಭೂತಗನ್ನಡಿಯಲ್ಲಿ ನೋಡದ್ರಿಂದಲೇ ಗೊತ್ತಾಗಿದ್ದು. ನಾನು ನೋಡದೇ ಹೋಗಿದ್ರೆ, ಇವನು ಕುದ್ರೆ ಮೇಲೆ ಕರ್ಕೊಂಡು ಬರೋಕು ಆಗ್ತಾಯಿರ್ಲಿಲ್ಲ; ಇವನು ಜೀವಾಳದ ಕಡ್ಡಿಲಿ ಬದುಕ್ಸೋಕು ಆಗ್ತಾಯಿರ್ಲಿಲ್ಲ. ಅದರಿಂದ ನನಗೆ ಅವಳನ್ನು ಕೊಟ್ಟು ಮದುವೆ ಮಾಡಬೇಕು’ ಎಂದು ಭೂತಗನ್ನಡಿಯಿದ್ದವನು ಹಠ ಹಿಡಿದ. ಆಗ ಜೀವಾಳದ ಕಡ್ಡಿಯಿದ್ದವನು, ‘ನಾನು ನನ್ನ ಜೀವಾಳದ ಕಡ್ಡಿಯಿಂದ ಅವಳನ್ನ ಬದುಕಿಸಿರೋದು. ಒಬ್ಬ ಭೂತಗನ್ನಡಿಲಿ ನೋಡಿದ್ರೂ, ಬೇಗ ನನ್ನನ್ನ ಇಲ್ಲಿಗೆ ಇನ್ನೊಬ್ಬ ಕರ್ಕೊಂಡು ಬಂದಿದ್ರೂ ಸತ್ತವಳನ್ನು ಬದುಕಿಸಿದ್ದು ನಾನೆ. ಆದ್ರಿಂದ ನನಗೆ ಕೊಟ್ಟು ಮದುವೆ ಮಾಡ್ಬೇಕು’ ಅಂದ. ಮೂರನೆಯವನು, ‘ಒಬ್ಬ ಭೂತಗನ್ನಡಿಲಿ ನೋಡಿದ್ರೂ, ಇನ್ನೊಬ್ಬನತ್ರ ಜೀವಾಳದ ಕಡ್ಡಿ ಇದ್ರೂ ನಾನು ಬೇಗ ಇಲ್ಲಿಗೆ ಕರ್ಕೊಂಡು ಬರ್ದೆ ಇದ್ರೆ, ಹೆಣ ಸುಟ್ಟೋಗ್ತಾಯಿತ್ತು. ನಾನು ವೇಗವಾಗಿ ನಿಮ್ಮನ್ನ ಕರ್ಕೊಂಡು ಬಂದಿದ್ದಕ್ಕೆ ಅಲ್ಲವಾ, ಅವಳನ್ನ ಉಳಿಸೋದಿಕ್ಕೆ ಸಾಧ್ಯವಾಗಿದ್ದು. ಅದ್ರಿಂದ ನನಗೇ ಕೊಟ್ಟು ಮದುವೆ ಮಾಡ್ಬೇಕು’ ಎಂದು ಹಠ ಹಿಡಿದ. ಮೂರೂ ಜನಕ್ಕೆ ದೊಡ್ಡ ಜಗಳ ಆಯ್ತು. ಊರಲ್ಲಿ ಪಂಚಾಯ್ತಿ ಶುರುವಾಯಿತು.
ಅವರವರ ವಾದ ಕೇಳಿದಾಗಲೂ ಜನ ಅವನಿಗೇ ಕೊಡಬೇಕು ಅನ್ನೋರು. ಅದರಿಂದ ಊರಿನ ಜನರಲ್ಲೂ ಮೂರು ಭಾಗ ಆಗೋಯ್ತು. ಇವತ್ತಿಗೂ ಆ ಊರಲ್ಲಿ ಜಗಳ ನಿಂತಿಲ್ಲ. ಯಾರಾದ್ರು ಬುದ್ದಿವಂತರು ಇದ್ರೆ ಈ ಪಂಚಾಯ್ತಿನ ಬಗೆಹರಿಸಿ, ಊರವರ ಜಗಳ ನಿಲ್ಲಿಸಬೇಕಾಗಿ ನನ್ನ ಕೋರಿಕೆ.
ಈ ಸಮ್ಯೆಸ್ಯೆಯನ್ನು ಬಿಡಿಸುವುದಕ್ಕೆ ನಿಮಗೆ ಒಂದುವಾರ ಸಮಯವಿರುತ್ತದೆ. ಈಗಿನಿಂದಲೇ ಯೋಚಿಸಿ, ಉತ್ತರಿಸಿ. ಊರಿನವರ ಜಗಳ ನಿಲ್ಲಿಸಿ. ಆ ಹುಡುಗಿಗೊಂದು ಮದುವೆ ಮಾಡಿಸಿ. ನಾನಂತೂ ಮುಂದಿನವಾರ ಮುಹೂರ್ತ ಫಿಕ್ಸ್ ಮಾಡಿಕೊಂಡು ಕಾಯುತ್ತಿದ್ದೇನೆ!
2
(ಆಗಳ್ ಆ) ಬಸಂತರಾಜನ ಬರವಿಂಗೆ ಗುಡಿಗಟ್ಟಿದಂತೆ
ಬಳ್ವಳ ಬಳೆದಮಿಳಿರ್ವ ಅಶೋಕೆಯ ತಳಿರ್ಗಳುಂ
ಆತನ ಬರುವಿಂಗೆ ತೋರಣ ಕಟ್ಟಿದಂತೆ
ಬಂದ ಮಾಮರಂಗಳನ್ ಅಡರ್ದು ತೊಡರ್ದು ಎಳಗೊಂಬುಗಳ್ವಿಡಿದು
ಮರದಿಂ ಮರಕ್ಕೆ ದಾಂಗುಡಿಯಿಡುವ ಮಾಧವೀಲತೆಗಳುಂ
ಆತನ ಬರವಿಂಗೆ ನೆಱೆಯೆ ಸೊಗಯಿಸೆ ಕೆಯ್ಗೆಯ್ವ ನಲ್ಲಳಂತೆ
ನನೆಯಬಿರಿಮುಗುಳ್ಗಳ ತುಱುಗಲೊಳ್ ಎರಗಿದ ಕಲ್ಪಲತೆಗಳುಂ
ಆತನ ಬರವಿಂಗೆ ಬದ್ದವಣಂ ಬಾಜಿಪಂತೆ
ಭೋರ್ಗರೆದು ಮೊರೆವ ತುಂಬಿಗಳುಂ
ಆತನ ಬರವಿಂಗೆ ರಂಗವಲ್ಲಿಯಿಕ್ಕಿದಂತೆ
ಪುಳಿನಸ್ಥಳಂಗಳೊಳುದಿರ್ದ ಕೞವೂಗಳುಂ
ಆತನ ಬರವಿಂಗೆ ವನವನಿತೆ ಮೆಚ್ಚಿ ನೆಱೆಯೆ ಕೆಯ್ಗೆಯ್ದಂತೆ
ನಿಱನಿಱಗೊಂಡು ಸೊಯಿಸುವ ನಿಱಗನ ನಿಱದಳಿರ ಗೊಂಚಲ್ಗಳುಂ
ಆತನ ಮೇಲ್ವಾಯೆ ರಾಗಿಸಿ ರೋಮಾಂಕುರಂ ಒಗೆದಂತೆ
ಒಗೆದ ಕಳಿಕಾಂಕುರಂಗಳುಂ
ಆತನ ಅಂಗಸಂಗದೊಳ್ ಕಾಮರಸಂ ಉಗುವಂತೆ
ಉಗುವ ಸೊನೆಯ ಸೋನೆಗಳುಮನ್ -
ಒಳಕೊಂಡು ತದಾಶ್ರಮದ ನಂದನವನಂಗಳ್
ಜನಂಗಳನ್ ಅನಂಗಂಗೆ ತೊಫ್ತುವೆಸಂಗೆಯ್ಸಿದವು
[ಆಗ
ವಸಂತರಾಜನಾಗಮನಕ್ಕಾಗಿ ಬಾವುಟ ಕಟ್ಟಿದಂತೆ
ಸೋಂಪಾಗಿ ಬೆಳೆದ ಅಶೋಕೆಯ ಚಿಗುರು
ವಸಂತರಾಜನಾಗಮನಕ್ಕಾಗಿ ತೋರಣವ ಕಟ್ಟಿದಂತೆ
ತುಂಬಿದ ಮಾಮರಗಳನಾವರಿಸಿ, ಏರಿ ಎಳೆಕೊಂಬೆಗಳನಿಡಿದು
ಮರದಿಂದ ಮರಕ್ಕೆ ಸಾಗುತ್ತಿರುವ ಮಾಧವೀಲತೆಗಳು
ವಸಂತರಾಜನಾಗಮನಕ್ಕಾಗಿ ಪೂರ್ಣಾಲಂಕಾರದಿಂದ
ಸೊಗಯಿಸುತ್ತಿರುವ ನಲ್ಲಳಂತೆ ಸೋಂಪಾದ ಮೊಗ್ಗುಗಳ ಗೊಂಚಲುಗಳೊಂದಿಗೆ ಸೊಯಿಸುತ್ತಿರುವ ಕಲ್ಪಲತೆಗಳು
ವಸಂತರಾಜನಾಗಮನಕ್ಕಾಗಿ ಮಂಗಳವಾದ್ಯಗಂತೆ
ಭೋರ್ಗರೆಯುತ್ತಿರುವ ದುಂಬಿಗಳು
ವಸಂತರಾಜನಾಗಮನಕ್ಕಾಗಿ ರಂಗವಲ್ಲಿಯಿಕ್ಕಿದಂತೆ ಮರಳಿನ ಮೇಲೆ
ಉದುರಿರುವ ಮಾಗಿದ ಹೂವುಗಳು
ವಸಂತರಾಜನಾಗಮನಕ್ಕಾಗಿ ಕಾಡಿನ ಹೆಣ್ಣು ಸಂತೋಷದಿಂದ ಅಲಂಕರಿಸಿಕೊಂಡಂತೆ
ನಿರಿನಿರಿಯಾಗಿ ಶೋಭಿಸುತ್ತಿರುವ ಸಿಹಿಮಾವಿನಮರದ ನವಿರಾದ ಎಳೆಚಿಗುರಿನ ಗೊಂಚಲುಗಳು
ವಸಂತರಾಜನ ಮೇಲೆ ಪ್ರೀತಿಯಿಂದ ಹಾಯಲು ರೋಮಾಂಚನಗೊಂಡಂತೆ
ಮಾವಿನ ಮರದ ಮೇಲೆ ಬೆಳೆದಿರುವ ನವಿರಾದ ಚಿಗುರುಗಳು ಎಳೆಕೊಂಬೆಗಳು
ವಸಂತನ ಅಂಗಸಂಗದೊಳಗೆ ಕಾಮರಸವು ಉಕ್ಕುವಂತೆ ಉಕ್ಕುತ್ತಿರುವ ಮಾವಿನ ಸೊನೆಯನ್ನು
ಒಳಕೊಂಡು ಆ ಆಶ್ರಮದ ಉದ್ಯಾನವನದಲ್ಲಿ ಜನಗಳನ್ನು ವಸಂತನಿಗೆ ತೊಳ್ತಾಗುವಂತೆ ಮಾಡಿದವು.]
3
‘ಬಿರಯಿಯ ಮಿೞ್ತುವೆಂ, ಮಿದಿದೊಡಲ್ಲದೆ ಅಣಂ ಮುಳಿಸಾರದು’
ಎಂದು ಮನ್ಮಥನ್ ಇಲ್ಲಿ ಪಲ್ಮೊರೆದಪನ್
‘ಇದಂ ಪುಗಲಿಂಗಡಿಂ’
ಎಂದು ಬೇಟಕಾಱರನ್ ಇರದೂಱ ಸಾಱ ಜಡಿವಂತೆ
ಸಹಕಾರ ಕೋಮಳಾಂಕುರ ಒರಿತುಷ್ಟ ಪಷ್ಟ ಪರಪುಷ್ಟ ಗಳಧ್ವನಿ
ನಂದನಂಗಳೊಳ್ ಎಸಗುಂ
[‘ವಿರಹಿಗಳನ್ನು ಚಚ್ಚದೆ, ವಿರಹಿಗಳ ಮೃತ್ಯುವಾಗಿರುವ ನನ್ನ ಕೋಪ ತಣಿಯದು’ ಎಂದಲ್ಲಿ ಮನ್ಮಥನ್ ಹಲ್ಕಡಿದನು
‘ಪ್ರವೇಶವಿಲ್ಲ ನಿಮಗೆ’ ಎಂದು ವಿರಹಿಗಳನ್ನು ದೂರ ಸರಿಸುತ್ತಿರುವವೋ ಎನ್ನುವಂತೆ
ಮಾವಿನೆಳೆ ಚಿಗುರನು ತಿಂದು ಸುಪುಷ್ಟವಾಗಿ ಬೆಳೆದಿರುವ ಕೋಗಿಲೆಗಳ ಧ್ವನಿ ಮೊರೆಯುತ್ತಿತ್ತು ಆ ಉದ್ಯಾನದಲ್ಲಿ]
4
ಕವಿವ ಮದಾಳಿಯಿಂ ಮುಸುಳನ್ ಆಗಿ
ಪಯೋಜರಜಂಗಳೊಳ್ ಕವಿಲ್ಗವಿಲನುಂ ಆಗಿ
ಬಂದ ಮಲಯಾನಿಲನ್ ಊದೆ
ತೆರಳ್ವ ಚೂತ ಪಲ್ಲವದ ತೆರಳ್ಕೆ
ತದ್ವನವಿಳಾಸಿನಿಯುಟ್ಟ ದುಕೂಲದ
ಒಂದು ಪಲ್ಲವದ ತೆರಳ್ಕೆಯಂತೆ ಎಸೆಯೆ
ನಂದನಾಳಿಗಳ್ ಎಸೆದಿರ್ದವು ಕಣ್ಗೆ
[ಮುತ್ತುತ್ತಿರುವ ಸೊಕ್ಕಿನ ದುಂಬಿಗಳಿಂದಾಗಿ ಅಪ್ರಾಕಶಿತವಾಗಿದ್ದರೂ
ತಾವರೆಯ ಧೂಳಿನಿಂದ ಮಾಸಲು ಬಣ್ಣವಾಗಿದ್ದರೂ
ಬೀಸುತ್ತಿರುವ ಮಲಯಮಾರುತದಿಂದಾಗಿ ಅಲ್ಲಾಡುತ್ತಿರುವ ಮಾವಿನೆಳೆ ಚಿಗುರಿನ ಸಪ್ಪಳ
ವನದೇವಿಯುಟ್ಟ ರೇಷ್ಮೆವಸ್ತ್ರದ ಸೆರಗಿನ ಸಪ್ಪಳದಂತೆ
ಶೋಭಿಸುತ್ತಿರಲು ಆ ತೋಟದ ಶೋಭೆ ಮೆರೆಯುತ್ತಿತ್ತು.]
5
ಪೋಗದೆ ಪಾಡುತಿರ್ಪ ಅಳಿಯೆ ಬೃಂಹಿತಂ ಆಗಿರೆ
ಚಂದ್ರಕಾಂತಿ ಕಾಯ್ಪು ಆಗಿರೆ
ಬೀಸುವ ಒಂದು ಎಲರೆ ಬೀಸುವುದು ಆಗಿರೆ
ಕಾಯ್ಗಳಿಂದಂ ಇಂಬಾಗಿರೆ ಸೋರ್ವ ಸೋನೆ ಮದಂ ಆಗಿರೆ
ಬಂದ ಮಾವಿನ ಕೋಡೆ ಕೋಡಾಗಿರೆ
ವಸಂತಗಜಂ ವಿಯೋಗಿಯಂ ಕೋಡುಗೊಂಡು ಪರಿದತ್ತು
[ಉದ್ಯಾನವನ್ನು ಬಿಟ್ಟು ಹೋಗದೆ ಭೋರ್ಗರೆಯುತ್ತಿರುವ ದುಂಬಿಯ ಝೇಂಕಾರವೇ ಆನೆಯ ಘೀಂಕಾರವಾಗಿರಲು
ಬೆಳದಿಂಗಳೇ ಆ ಗಜದ ಕೋಪವಾಗಿರಲು
ಬೀಸುಗಾಳಿಯೇ ಬೀಸಣಿಕೆಯಾಗಿರಲು
ಮಾವಿನೆಳೆ ಕಾಯಿಯಿಂದ ಒಸರುತ್ತಿರುವ ಸೊನೆಯೇ ಮದೋದಕವಾಗಿರಲು
ಮಾಮರದ ಕೊಂಬೆಗಳೇ ಅದರ ಕೊಂಬಾಗಿರಲು
ವಸಂತವೆಂಬಾನೆಯು ವಿರಹಿಗಳನ್ನು ತನ್ನ ಕೋಡಿಂದ ತಿವಿದು ಓಡಿತ್ತು ಅಲ್ಲಿ]