Monday, November 21, 2011

ಭದ್ರಾವತಿಯ ದವಾಖಾನೆಯಲ್ಲಿ ಹುಟ್ಟಿತ್ತು 'ನೇಗಿಲಯೋಗಿ' ರೈತಗೀತೆ!

ಕುಪ್ಪಳಿಯ ಅಡಕೆ ತೋಟಕ್ಕೆ ಸಿಡಿಲು ಹೊಡೆದ ಘಟನೆಯನ್ನು ಕವಿ ನೆನಪಿನ ದೋಣಿಯಲ್ಲಿ ಸವಿವರವಾಗಿ ಕೊಟ್ಟಿದ್ದಾರೆ. ಅದೊಂದು ದುರ್ಘಟನೆ ಎಂದು ಭಾವಿಸಿದ ಮನೆಯವರು ಅದಕ್ಕೆ ಶಾಂತಿ ಮಾಡಿಸುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಆದರೆ, ಕವಿಯ ಪಾಲಿಗೆ, ಸಿಡಿಲು ಹೊಡೆಯುವುದು ಬರಿಯ ನಿಸರ್ಗ ವ್ಯಾಪಾರ ಮಾತ್ರ. ಅದನ್ನು ದೋಷ ಎಂದು ಭಾವಿಸುವುದಾಗಲೀ, ಅದಕ್ಕೆ ಪುರೋಹಿತರನ್ನು ಕರೆಸಿ ಶಾಂತಿ ಮಾಡಿಸುವುದಾಗಲೀ ಮೌಢ್ಯವನ್ನು ಒಪ್ಪಿಕೊಂಡಂತೆಯೇ ಸರಿ. ಸಹಜವಾಗಿ ಕವಿ ಶಾಂತಿ ಮಾಡಿಸುವ ಕಾರ್ಯಕ್ರಮವನ್ನು ವಿರೋಧಿಸುತ್ತಾರೆ. ಅವರ ಬೆಂಬಲಕ್ಕೆ ತರುಣವರ್ಗ ನಿಲ್ಲುತ್ತದೆ. ಹಾರುವರ ಕೈಯಿಂದ ಪೂಜೆ ಮಾಡಿಸಿ ಸಮಾರಾಧನೆಯ ಊಟ ಹಾಕಿಸುವುದರಿಂದ ಸಿಡಿಲು ಬಡಿದು ಆಗಿರುವ ನಷ್ಟಕ್ಕೆ ಪರಿಹಾರ ದೊರೆಯುವುದಿಲ್ಲ ಎಂಬ ಇವರ ವಾದ ಮನೆಯವರ ನಂಬಿಕೆಯ ಎದುರಿಗೆ ಶಕ್ತಿ ಕಳೆದುಕೊಳ್ಳುತ್ತದೆ!
ಕಾರ್ಯಕ್ರಮಕ್ಕೆ ವಿರೋಧವಿದ್ದರೂ, ಅಂದು ಮಾಡಿದ್ದ ಊಟಕ್ಕೆ ವಿರೋಧ ಇರಬೇಕಿಲ್ಲವಷ್ಟೆ!? ಪುಳಿಚಾರಿನ ಸಿಹಿಯೂಟ. ಶೂದ್ರವರ್ಗಕ್ಕೆ ಅಷ್ಟೇನು ಆಧರಣೀಯವಲ್ಲದಿದ್ದರೂ ನಂಟರಿಷ್ಟರ ಜೊತೆ ಸೇರಿ ಕವಿಯೂ ಪಟ್ಟಾಗಿ ಹೊಡೆದುಬಿಡುತ್ತಾರೆ. ಮಿತ್ರರೊಂದಿಗೆ ಸ್ಪರ್ಧಿಸಿ ಹೋಳಿಗೆ ತುಪ್ಪ ಪಾಯಸ ಒಡೆ ಮುಂತಾದವುಗಳನ್ನು ಮೀರಿ ತಿನ್ನುತ್ತಾರೆ. ಕವಿಯೇ ಹೇಳುವಂತೆ ’ಪ್ರಚ್ಛನ್ನ ಯೌವನಮದವಶನಾಗಿ!’. ಆದರೆ ಅದರ ಪರಿಣಾಮ ಮಾತ್ರ ಭೀಕರವಾಗಿತ್ತು. ’ಅಶನಿ’ಗಾಗಿ ಮಾಡಿದ ಶಾಂತಿ ’ಶನಿ’ಯಾಗಿ ಕಾಡಿತ್ತು, ನ್ಯೂಮೋನಿಯಾ ರೂಪದಲ್ಲಿ!
ಮೊದಲು ಹೊಟ್ಟೆ ಕೆಟ್ಟು, ನಂತರ ಜ್ವರ ಕೆಮ್ಮು ಶುರುವಾಯಿತು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕವಿ, ಕುಪ್ಪಳಿಯಲ್ಲಿ ಇದ್ದ ದಿನಗಳಲ್ಲಿ ಮಾಡುತ್ತಿದ್ದ ನಿತ್ಯ ಕಾಯಕವನ್ನು - ನಸುಕಿನಲ್ಲಿಯೇ ಕವಿಶೈಲಕ್ಕೆ ಹೋಗಿ ವ್ಯಾಯಾಮ ಪ್ರಾಣಾಯಮ ಧ್ಯಾನ -ನಿಲ್ಲಿಸಲಿಲ್ಲ. ಮಂಜು ಬೀಳುತ್ತಿದ್ದ ಸಮಯದಲ್ಲಿ ಆ ಕಾಯಕ ನಡೆಯುತ್ತಿದ್ದುದರಿಂದ ಜ್ವರ ಉಲ್ಬಣಗೊಂಡು ನ್ಯೂಮೋನಿಯಾ ಆಗಿಬಿಟ್ಟಿತು. ದೇವಂಗಿ ಆಸ್ಪತ್ರೆಯಿಂದ ಔಷಧಿಯನ್ನು ತಂದು ಕೊಟ್ಟರೂ ಜ್ವರ ಕಡಿಮೆಯಾಗಲಿಲ್ಲ. ಆಗಲೇ ಮೈಸೂರಿನಿಂದ ಬಂದ ಕಾಗದ ಅವರು ಎರಡೂ ಭಾಗದಲ್ಲಿಯೂ ಎರಡನೆ ಕ್ಲಾಸಿನಲ್ಲಿ ತೇರ್ಗಡೆಯಾದ ವಿಚಾರ ತಿಳಿಯುತ್ತದೆ. ಮನೆಯವರಿಗೆಲ್ಲಾ, ಊರವರಿಗೆಲ್ಲಾ ತಮ್ಮವನೊಬ್ಬ ಬಿ.ಎ. ಪಾಸಾದನಲ್ಲ ಎಂಬ ಹೆಮ್ಮೆ. ’ನನ್ನ ಬಿ.ಎ. ಪಾಸಿನಿಂದ ಯಾರಿಗೂ ಮೂರು ಕಾಸಿನ ಪ್ರಯೋಜನವಾಗದಿದ್ದರೂ ಎಲ್ಲರೂ ಸಂತೋಷಪಟ್ಟರು’ ಎನ್ನುತ್ತಾರೆ ಕವಿ.
ಆದರೆ ನ್ಯೂಮೋನಿಯಾ ಉಲ್ಬಣಗೊಂಡು ಒಮ್ಮೊಮ್ಮೆ ಮೂರ್ಛೆ ಹೋಗುವಷ್ಟರಮಟ್ಟಿಗೆ ನಿತ್ರಾಣಗೊಂಡಿದ್ದ ಕವಿಗೆ ಮಲಮೂತ್ರ ವಿಸರ್ಜನೆಗೆ ಹೋಗುವುದೂ ಕಷ್ಟವಾಗಿಬಿಡುತ್ತದೆ. ಜಗಲಿಯಲ್ಲೇ ಹಾಸಿಗೆ ಹಾಸಿ ಮಲಗಿಸಲಾಗುತ್ತದೆ. ನಂತರ ಬದುಕುವುದೇ ಸಂದೇಹಾಸ್ಪದವಾಗಿ ತೋರಿ ಶಿವಮೊಗ್ಗೆಗೆ ಟೆಲಿಗ್ರಾಂ ಕೊಟ್ಟು ಆಸ್ಪತ್ರೆಗೆ ಸಾಗಿಸುವ ವಿಚಾರ ಮನೆಯಲ್ಲಿ ನಡೆಯುತ್ತದೆ. ಟೆಲಿಗ್ರಾಂ ಕೆಲಸ ಮಾಡುತ್ತದೆ. ಮಾನಪ್ಪ ಬಾಡಿಗೆ ಕಾರು ಮಾಡಿಕೊಂಡು, ಭದ್ರಾವತಿಯಲ್ಲಿ ಡಾಕ್ಟರಾಗಿದ್ದ ಚೊಕ್ಕಂ ಐಯ್ಯಂಗಾರರನ್ನು ಜೊತೆಗೆ ಕರೆದುಕೊಂಡೇ ನಡುರಾತ್ರಿಯ ಹೊತ್ತಿಗೆ ಬರುತ್ತಾರೆ. ಸದಾ ವಿನೋದಶೀಲರಾಗಿರುತ್ತಿದ್ದ ಡಾ. ಚೊಕ್ಕಂ, ರೋಗಿಯನ್ನು ಪರೀಕ್ಷಿಸುತ್ತಲೇ ಗಂಭೀರ ವದನರಾಗಿಬಿಡುತ್ತಾರೆ. ಒಂದು ಇಂಜೆಕ್ಷನ್ನಷ್ಟೇ ಕೊಟ್ಟು ರಾತ್ರೋರಾತ್ರಿಯೇ ರೋಗಿಯನ್ನು ಭದ್ರಾವತಿಯ ತಮ್ಮ ಆಸ್ಪತ್ರೆಗೆ ಸಾಗಿಸಲು ನಿಶ್ಚಯಿಸಿಬಿಡುತ್ತಾರೆ. ಮನೆಯವರಿಗೆಲ್ಲ ದಿಗಿಲಿಟ್ಟುಕೊಳ್ಳುತ್ತದೆ. ಮುಂಗಾರು ಮಳೆಯ ಆರ್ಬಟ. ರಸ್ತೆಗಳೇ ಇಲ್ಲದ ಮಲೆನಾಡಿನಲ್ಲಿ, ಕ್ಯಾನ್ವಾಸ್ ಮುಚ್ಚಿಗೆಯ ಫೋರ್ಡ್ ಕಾರಿನಲ್ಲಿ, ನಿತ್ರಾಣನಾಗಿ ಮೂರ್ಛೆಗೆ ಬೀಳುತ್ತಿದ್ದ ರೋಗಿಯನ್ನು ಎಪ್ಪತ್ತು ಎಂಬತ್ತು ಮೈಲಿ ಸಾಗಿಸುವ ಕಷ್ಟದ ನಿರ್ಧಾರ ಮಾಡಿಯೇ ಬಿಡುತ್ತಾರೆ.
ದಾರಿಯಲ್ಲಿ ಸಾಗುವಾಗ ಕಾರಿನ ಹೆಡ್‌ಲೈಟ್‌ಗಳೇ ಕೆಟ್ಟುಹೋಗುತ್ತವೆ. ಅವರ ದೊಡ್ಡ ಚಿಕ್ಕಪ್ಪಯ್ಯ ಅಪಶಕುನ ಕಂಡವರಂತೆ ಆತಂಕಪಡುತ್ತಾರೆ. ಆದರೆ ಡಾ. ಚೊಕ್ಕಂ ಮಾತ್ರ ತಮ್ಮ ಮನೋಸ್ಥೈರ್ಯವನ್ನು ಕಳೆದುಕೊಳ್ಳದೆ, ರೋಗಿಯ ನಾಡಿಯನ್ನೊಮ್ಮೆ ಪರಿಶೀಲಿಸುತ್ತಾರೆ. ಮನೆಯಿಂದ ತಂದಿದ್ದ ಕಾಫಿಯನ್ನು ರೋಗಿಗೆ ಕುಡಿಸಿ ನಸುಕಾಗುವವರೆಗೂ ಕಾಯ್ದು ನಂತರ ಹೊರಡುತ್ತಾರೆ. ಭದ್ರಾವತಿಯ ನದಿಯ ದಂಡೆಯ ಮೇಲಿದ್ದ ಅವರ ಆಸ್ಪತ್ರೆಗೆ ತಲುಪಿದ ಮೇಲೆ ಡಾ. ಚೊಕ್ಕಂ ರೋಗಿಯ ಶುಶ್ರೂಷೆಗೆ ಮೊದಲಿಟ್ಟುಕೊಳ್ಳುತ್ತಾರೆ. ಬಹಳ ವರ್ಷಗಳ ನಂತರ ಆ ಘಟನೆಯ ಬಗ್ಗೆ ಹೇಳುತ್ತಾ, ಡಾ. ಚೊಕ್ಕಂ ಕುವೆಂಪು ಅವರ ಹತ್ತಿರ ’It (pulse) was so low, I was shaking in my boots. And I was cursing myself for having brought you in the car in such a condition. And began praying’ ಎಂದಿದ್ದರಂತೆ.
ನ್ಯೂಮೋನಿಯಾ ಕಾರಣದಿಂದ ಕವಿಗೆ ಒಂದಷ್ಟು ದಿನಗಳ ಆಸ್ಪತ್ರೆಯ ವಾಸ ಶುರುವಾಗುತ್ತದೆ. ಕುವೆಂಪು ಮತ್ತು ಮಾನಪ್ಪ ನಂಬಿದ್ದ ಗುರುಬಲವೋ, ದೈವಬಲವೋ ಅಥವಾ ಡಾ.ಚೊಕ್ಕಂ ಅವರ ಪ್ರಾರ್ಥನೆ ಮತ್ತು ಶ್ರಮದ ಫಲವೋ ಆಸ್ಪತ್ರೆ ಸೇರಿದ ಮಾರನೆಯ ದಿನದಿಂದಲೇ ಜ್ವರ ಇಳಿಮುಖವಾಗುತ್ತಾ ಹೋಗುತ್ತದೆ. ಆದರೂ ಯಾವುದೇ ಮಾನಸಿಕ ಶ್ರಮದ ಕಾರ್ಯವನ್ನು ಮಾಡದಂತೆ ಕಟ್ಟಾಜ್ಞೆ ವಿಧಿಸಿಬಿಟ್ಟಿರುತ್ತಾರೆ. ದೈಹಿಕ ಬಲ ಬರುವವರೆಗೂ ಕವಿತೆ ಕಟ್ಟುವ ಕೆಲಸವೂ ಬೇಡ ಎಂದು ಪಥ್ಯ ಹೇಳಿದ್ದರಂತೆ! ಆದರೆ ಬಣ್ಣದ ಚಿತ್ರಗಳನ್ನು ನೋಡುವುದನ್ನು ನಿಷೇಧಿಸಿರಲಿಲ್ಲವಂತೆ; ಕಲಾತ್ಮಕವಾದ ಚಿತ್ರಗಳನ್ನು ನೋಡಿ ಆನಂದಿಸುವುದರಿಂದ ಕಾಯಿಲೆ ಬೇಗ ವಾಸಿಯಾಗಲು ನೆರವಾಗುತ್ತದೆ, ಎಂಬ ನಂಬಿಕೆಯಿಂದ. ಆಗ ಮಾನಪ್ಪ ಭಾರತೀಯ ಮಹಾವರ್ಣಚಿತ್ರಕಾರರ ಚಿತ್ರಗಳನ್ನೊಳಗೊಂಡ ನಾಲ್ಕು ’ಆಲ್ಬಂ’ಗಳನ್ನು ತಂದುಕೊಟ್ಟರಂತೆ. ಪ್ರಕೃತಿಯನ್ನು ನೋಡುತ್ತಾ ಉಂಟಾಗುತ್ತಿದ್ದ ರಸಾನಂದವನ್ನೇ ಸಹೃದಯನಾದವನು ವರ್ಣಚಿತ್ರವನ್ನು ವೀಕ್ಷಿಸಿ ಪರಿಭಾವಿಸಿದಾಗ ಅನುಭವಿಸಬಹುದು. ಇನ್ನು ಕುವೆಂಪು ಅವರಿಗೆ ಅದು ಅಸಾಧ್ಯವಾದುದ್ದೇನಲ್ಲ ಅಲ್ಲವೆ? ಕೆಲವು ದಿನಗಳ ನಂತರ ಡಾ. ಚೊಕ್ಕಂ ಓದುವುದಕ್ಕೆ ಅನುಮತಿಯಿತ್ತರೂ, ಬರೆಯುವುದು ಇನ್ನಷ್ಟು ದಿನ ಬೇಡ ಅನ್ನುತ್ತಿದ್ದರಂತೆ. ಮಾನಪ್ಪ ಶಿವಮೊಗ್ಗದಿಂದ ಬರುವಾಗ ಹಿಂದೂ ಪತ್ರಿಕೆಯನ್ನು ತಂದುಕೊಡುತ್ತಿದ್ದರಂತೆ. ನೂರಾರು ವರ್ಣಚಿತ್ರಗಳನ್ನು ನೋಡಿ ರಸಾನುಭವವನ್ನು ಪಡೆದಿದ್ದ ಕವಿಯ ಮನಸ್ಸು ಸಹಜವಾಗಿಯೇ ಕವಿತಾ ರಚನೆಯಲ್ಲಿ ತೊಡಗಿಬಿಡುತ್ತದೆ. ಆದರೆ ಅವನ್ನೆಲ್ಲಾ ಎಷ್ಟು ದಿನ ಎಂದು ನೆನಪಿಟ್ಟುಕೊಳ್ಳುವುದು? ಮಾನಪ್ಪನಿಂದ ಹೇಗೋ ಒಂದು ಪೆನ್ಸಿಲ್ ಸಂಪಾದಿಸಿ, ಹಿಂದೂ ಪತ್ರಿಕೆಯ ಅಂಚಿನಲ್ಲಿ ಖಾಲಿ ಇದ್ದ ಜಾಗದಲ್ಲಿ ಬರೆದಿಡಲಾರಂಭಿಸಿದರಂತೆ! ಹೀಗೆ ಪತ್ರಿಕೆಯಂಚಿನಲ್ಲಿ ಬರೆದಿಟ್ಟಿದ್ದ ಕವಿತೆಗಳ ಸಂಖ್ಯೆ ಹನ್ನೊಂದು!
ಹೀಗೆ ವಿವಿಧ ವರ್ಣಚಿತ್ರಗಳಿಂದ ಪ್ರೇರಿತರಾಗಿ ರಚಿತವಾದ ಆರು ಕವಿತೆಗಳಲ್ಲಿ ಮೂರು ಕವಿತೆಗಳು - ಮುಜುಂದಾರರ ’Divine Flute’ ಚಿತ್ರದ ಪ್ರೇರಣೆಯಿಂದ ರಚಿತವಾದ ’ಮುರಳಿ ಶಿಕ್ಷ’; ’In Expectation’ ಚಿತ್ರವನ್ನು ನೋಡಿ ಬರೆದ ’ಹಾರೈಕೆ’; ’Lingering Look’ ಚಿತ್ರವನ್ನು ನೋಡಿ ಬರೆದ ’ನಟ್ಟ ನೋಟ’ - ಷೋಡಶಿ ಸಂಕಲನದಲ್ಲಿ ಪ್ರಕಟವಾಗಿವೆ. ಮುಜುಂದಾರರದೇ ಆದ ’Traffic in Soul’ ಚಿತ್ರದಿಂದ ಪ್ರೇರಿತರಾಗಿ ಬರೆದ ’ಆತ್ಮನಿವೇದನ’ ಕವಿತೆ (’ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೇ ಬೇಗ, ಸಖಿ!’ ಎಂದು ಆರಂಭವಾಗುವ, ಪ್ರಸಿದ್ಧವಾಗಿರುವ ಕವಿತೆ) ಪ್ರೇಮಕಾಶ್ಮೀರ ಸಂಕಲನದಲ್ಲಿ ಪ್ರಕಟವಾಗಿದ್ದರೆ, The Goal ಚಿತ್ರದಿಂದ ಪ್ರೇರಿತವಾಗಿ ಬರೆದ ’ಗತಿ’ ಕೊಳಲು ಸಂಕಲನದಲ್ಲಿದೆ. ಆದರೆ ಅನಾಮಿಕ ಚಿತ್ರಕಾರನೊಬ್ಬನ ಚಿತ್ರದ ಪ್ರೇರಣೆಯಿಂದ ಬರೆದ ’ಓಮರ್ ಖಯಾಮ್’ ಕವಿತೆ ಅಪ್ರಕಟಿತವಾಗಿ ಉಳಿದುಬಿಟ್ಟಿದೆ! ನೆನಪಿನ ದೋಣಿಯನ್ನು ಬರೆಯುವಾಗ, ಕವಿ ನೆನಪು ಮಾಡಿಕೊಂಡು ಕೊಟ್ಟಿರುವ ಚಿತ್ರದ ವಿವರಗಳು ಹೀಗಿವೆ: ಒಬ್ಬ ರಸಿಕ ಗಡ್ಡಧಾರಿ ಒಂದು ಮರದಡಿಯಲ್ಲಿ ಒಬ್ಬ ಚೆಲುವೆಯೊಡನೆ ಕುಳಿತಿದ್ದಾನೆ ಪಾನೀಯ ಪದಾರ್ಥಗಳು ಬಳಿ ಇವೆ. ಏನನ್ನೊ ಹೇಳುವಂತಿದೆ.
ಓಮರ್ ಖಯಾಮ್
(ಒಂದು ಚಿತ್ರವನ್ನು ನೋಡಿ ಬರೆದುದು)

ನಿಶೆಯು ಧರೆಯನಾಳುತಿಹುದು
ಮೌನದಿಂದ ರಮಣಿಯೆ.
ಶಶಿಯು ನೀಳಗಗನದಲ್ಲಿ
ಮನವ ಮೋಹಿಸಿರುವುನು.

ಬಿಳಿಯ ಮುಗಿಲ ಬಾನಿನಲ್ಲಿ
ಮೈಮೆದೋರುತಿರುವುದು;
ಅಲರ ಕಂಪ ಸೂರೆಗೊಂಡು
ಎಲರು ಬೀಸುತಿರುವುದು.
ಗಗನವೇನೊ ಮೌನವಚನ-
ವಾಡುತಿಹುದು ತರಳೆಯೆ,
ಜಗವೆ ನಿಂತು ಕೇಳುತಿಹುದು!
ಮಾಯೆಯಾಡುತಿರುವಳು.
ನಿಶೆಯು ಧರೆಯನಾಳುತಿರಲಿ,
ಜೊನ್ನಕಾಂತಿ ಬೆಳಗಲಿ;
ಎಸೆವ ಗಗನ ನುಡಿಯುತಿರಲಿ,
ಮಾಯೆ ಮೆರೆದು ನಲಿಯಲಿ.
ಬಾಲೆ, ಬಾರೆ, ಪ್ರಣಯ ಮಧುವ
ಸುರಿದು ತಾರೆ ಬೇಗನೆ.
ಕಾಲನೆಮ್ಮ ಯೌವನವನು
ಕದಿವ ಮುನ್ನ ಹೀರುವ!

ಚಿತ್ರಪ್ರೇರಿತ ಆರು ಕವಿತೆಗಳಲ್ಲದೆ ಉಳಿದ ಐದು ಕವಿತೆಗಳಲ್ಲಿ ನಾಲ್ಕು ಅಪ್ರಕಟಿತ ಕವಿತೆಗಳಿವೆ. ’ಪ್ರಾರ್ಥನೆ’ಯಲ್ಲಿ ರೋಗದ ದವಡೆಗೆ ಸಿಕ್ಕಿ ತಪ್ಪಿಸಿಕೊಂಡ ಕವಿಯ ಮನಸ್ಥಿತಿ ಚಿತ್ರಿತವಾಗಿದೆ ಎನ್ನಬಹುದು.
’ಕೈಹಿಡಿದು ನಡೆಸೆನ್ನ, ಗುರುವೆ,
ಬಾಲಕನು ನಾನೇನನರಿಯೆ.’ 
ಎಂಬ ಪಲ್ಲವಿಯಿಂದ ಆ ಕವಿತೆ ಪ್ರಾರಂಭವಾಗಿ ’ಗತಿ ನೀನೆ, ಗುರುವೆ!’ ಎಂದು ಅಂತ್ಯವಾಗುತ್ತದೆ. ’ನಿನ್ನ ಕೊಳಲಯ್ಯ ನಾನು’ ಎಂದು ಆರಂಭವಾಗುವ ಶೀರ್ಷಿಕೆಯಿಲ್ಲದ ಕವಿತೆ, ಕವಿಯು ಭಗವಂತನ ಕೈಯ ಕೊಳಲೆಂದೂ, ಊದುವವನು ಭಗವಂತನೆಂದೂ, ಆ ನಾದದ ಇಂಪಿಗೆ ಲೋಕ ಮೋಹಗೊಳ್ಳುವುದೆಂದೂ, ಯಾರು ಆಲಿಸಲಿ ಬಿಡಲಿ ಕೊಳಲಿಗೆ ಆತಂಕವಿಲ್ಲವೆಂದೂ ಹೇಳುತ್ತದೆ.
’ಸ್ಥಿರ ಚಿತ್ತವೇಕಿನ್ನು ಬರಲಿಲ್ಲ, ತಾಯೆ? 
ಚಿತ್ತವನು ಮುತ್ತಿರುವುದೇಕಿನ್ನು ಮಾಯೆ? 
ಎಂಬ ಪಲ್ಲವಿಯಿಂದ ಆರಂಭವಾಗುವ ಅಪ್ರಕಟಿತ ಕವಿತೆ - ಸುಖ ನೆಮ್ಮದಿ ಇರುವಾಗ ದೇವರಿದ್ದಾನೆ, ಕಾಪಾಡುತ್ತಾನೆ ಎಂಬ ನಂಬಿಕೆ ಇರುತ್ತದೆ. ಅದು ತಪ್ಪಿ ಕಷ್ಟ ಕೋಟಲೆ ಪ್ರಾಪ್ತವಾಗಲು ದೇವರಿದ್ದಾನೆ ಎಂಬ ಶ್ರದ್ಧೆಯೆ ಅಳ್ಳಾಡಿಹೋಗುತ್ತದೆ ಎಂಬುದನ್ನು ಕಟ್ಟಿಕೊಡುತ್ತದೆ. ಈ ಕವಿತೆಯ ಎರಡು ಚರಣಗಳು ಹೀಗಿವೆ.

ಕತ್ತಲೊಳು ನಡುಗುವುದು ಎದೆ ಧೈರ್ಯಗುಂದಿ
ಚಿತ್ತದೊಳು ಸುಳಿಯುವುದು ಸಂದೇಹವು;
ಮತ್ತೆ ಬೆಳಕಾಗೆ ನಲಿವುದು ಧೈರ್ಯಹೊಂದಿ
ಸುತ್ತ ನೀನಿಹೆ ಎಂಬ ಭರವಸೆಯಲಿ!

ಬಿರುಗಾಳಿ ಬೀಸದಲೆ ಸಾಗುತಿರೆ ನಾವೆ
ಭರವಸೆಯು ನಾವೆಯೊಳಗಿರುವೆ ಎಂದು;
ಬಿರುಗಾಳಿ ಭೋರೆಂದು ಕಡಲು ಕುದಿವೇಳೆ
ಭರವಸೆಯು ಜಾರುವುದು ಸಂಶಯದೊಳು!
ಇನ್ನೊಂದು ಶೀರ್ಷಿಕೆಯಿಲ್ಲದ ಅಪ್ರಕಟಿತ ಕವಿತೆ ಭೀತಿ ಸಂದೇಹಗಳ ಪರಿಹರಿಸು, ಗುರುವೆ’ ಎಂದು ಪ್ರಾರಂಭವಾಗಿ ಗುರುಕೃಪೆಯನ್ನು ಯಾಚಿಸುತ್ತದೆ.
ಆದರೆ, ಕೊಳಲು ಸಂಕಲನದಲ್ಲಿ ಪ್ರಕಟವಾಗಿ ಪ್ರಸಿದ್ಧವಾಗಿರುವ ಅತ್ಯಂತ ಮುಖ್ಯವಾದ ಕವಿತೆ ’ನೇಗಿಲಯೋಗಿ’!
ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ.
ಲೋಕದೊಳೇನೇ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ:
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೆ ಇಲ್ಲ.
ಬಾಳಿತು ನಮ್ಮೀ ನಾಗರಿಕತೆ ಸಿರಿ
ಮಣ್ಣುಣಿ ನೇಗಿನಾಶ್ರಯದಿ;
ನೇಗಿಲ ಹಿಡಿದಾ ಕೈಯಾಧಾರದಿ
ದೊರೆಗಳು ದರ್ಪದೊಳಾಳಿದರು.
ನೇಗಿಲ ಬಲದೊಳು ವೀರರು ಮೆರೆದರು,
ಶಿಲ್ಪಿಗಳೆಸೆದರು, ಕವಿಗಳು ಬರೆದರು.
ಯಾರೂ ಅರಿಯದ ನೇಗಿಲ ಯೋಗಿಯೆ
ಲೀಕಕೆ ಅನ್ನವನೀಯುವನು.
ಹೆಸರು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ.
ನೇಗಿಲಕುಳದೊಳಗಡಗಿದೆ ಕರ್ಮ;
ನೇಗಿಲ ಮೇಳೆಯೆ ನಿಂತಿದೆ ಧರ್ಮ.


ಇದೊಂದು ಸಾರ್ವಕಾಲಿಕ ಶ್ರೇಷ್ಠ ಕವಿತೆ. ’ಗಾಳಿ’ ಮತ್ತು ’ನೀರು’ ನಂತರದ ಜೀವ ಚೈತನ್ಯವೇ ’ಅನ್ನ’. ಅನ್ನದಾತನಾದ ರೈತನ ಸಾರ್ಥಕತೆಯನ್ನು ಸಾಫಲ್ಯತೆಯನ್ನು ಇಷ್ಟೊಂದು ಸರಳವಾಗಿ, ಆದರೆ ಅರ್ಥಪೂರ್ಣವಾಗಿ ಹಿಡಿದಿಟ್ಟ ಕವಿತೆ ಬಹುಶಃ ಮತ್ತೊಂದಿರಲಾರದು! ಈ ಹಾಡನ್ನು ’ಕಾಮನಬಿಲ್ಲು’ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಡಾ. ರಾಜ್ ಕುಮಾರ್ ನೇಗಿಲು ಹಿಡಿದು ಉಳುಮೆ ಮಾಡುವ ದೃಶ್ಯಕ್ಕೆ ಹಿನ್ನೆಲೆಯಾಗಿ ಮಾಡಿಬಂದ ಈ ಹಾಡಿಗೆ ಸಿ. ಅಶ್ವಥ್ ದನಿಗೂಡಿಸಿದ್ದರು. ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜಿಸಿದ್ದರು.
ಭದ್ರವಾತಿಯ ನದಿ ದಂಡೆಯಲ್ಲಿದ್ದ ಡಾ. ಚೊಕ್ಕಂ ಅವರ ಆಸ್ಪತ್ರೆಯಲ್ಲಿ, ನ್ಯೂಮೋನಿಯಾದಿಂದ ಬಳಲಿ ಬೆಂಡಾಗಿದ್ದ ಕವಿಯಿಂದ ಸೃಜಿಸಲ್ಪಟ್ಟು, ಹಿಂದೂ ಪತ್ರಿಕೆಯ ಅಂಚಿನಲ್ಲಿ ಚಾಕ್ಷುಷ ರೂಪಕ್ಕಿಳಿದ ಕವಿತೆ ’ನೇಗಿಲಯೋಗಿ’!! ಇದು ಇಂದು ನಮ್ಮ ’ರೈತಗೀತೆ’!!!

Monday, November 14, 2011

ಅದ್ವೈತ ಕೇಸರಿ, ಜನಿಸೈ ಭಾರತ ಭೂಮಿಯೊಳಿನ್ನೊಮ್ಮೆ!

ಸಿದ್ಧೇಶ್ವರಾನಂದರ ಆಣತಿಯಂತೆ, ಊರಿಗೆ ಹೋಗಿ, ಬಂಧು-ಬಾಂಧವರ, ಸ್ನೇಹಿತರ, ಪ್ರಕೃತಿಯ ಒಡನಾಡಿ, ತಕ್ಕಮಟ್ಟಿನ ಆರೋಗ್ಯ ಸಂಪಾದಿಸಿ ಮಲೆನಾಡಿನಿಂದ ಹಿಂದಿರುಗಿದ ಮೇಲೆ ಆಶ್ರಮದ ಪ್ರಶಾಂತ ನಿಃಶಬ್ದ ವಾತಾವರಣದಲ್ಲಿ ಕವಿಯ ಅಧ್ಯಯನ ಪ್ರಾರಂಭವಾಗುತ್ತದೆ. ಮೂರನೆಯ ವರ್ಷದ ಡಿಗ್ರಿ ಪರೀಕ್ಷೆಗೆ ಸಿದ್ಧತೆ ನಡೆದಿರುತ್ತದೆ. ಭಾಷಾ ಮತ್ತು ಇತರೆ ಮೈನರ್ ವಿಷಯಗಳ ಪರೀಕ್ಷೆಗಳು ಮೊದಲೆರಡು ವರ್ಷಗಳಲ್ಲಿಯೇ ಮುಗಿದು ಹೋಗಿದ್ದರಿಂದ, ಮೂರನೆಯ ವರ್ಷದಲ್ಲಿ ಮೇಜರ್ ವಿಷಯವಾಗಿದ್ದ ತತ್ವಶಾಸ್ತ್ರ ಮಾತ್ರ ಉಳಿದಿರುತ್ತದೆ. ತರಗತಿಯಲ್ಲಿ ನೋಟ್ಸ್ ಕೂಡಾ ತೆಗೆದುಕೊಳ್ಳುತ್ತಿರಲಿಲ್ಲವಂತೆ! ಪ್ರೊಫೆಸರುಗಳು ತಪ್ಪು ತಿಳಿದಾರು ಎಂದು ಕೊಂಡು ನೋಟ್ಸ್ ತೆಗೆದುಕೊಳ್ಳುವಂತೆ ನಟಿಸುತ್ತಿದ್ದರಂತೆ! ಆ ಇಡೀ ವರ್ಷದ ನೋಟ್ಸ್ ನಾಲ್ಕು ಐದು ಪುಟಗಳಷ್ಟೂ ಆಗಿರಲಿಲ್ಲವಂತೆ! ಆದರೆ ಅವರ ಜ್ಞಾನದ ಹಸಿವು ಕಡಿಮೆಯಾಗಿರಲಿಲ್ಲ. ತಮ್ಮ ಸಹಪಾಠಿಗಳೊಡನೆ ಆಶ್ರಮದ ತಾರಸಿಯ ಮೇಲೆ (ಸ್ವಾಮೀಜಿ, ತಾರಸಿಗೆ ಒಂದು ಲೈಟ್ ಎಳೆಸಿ, ಬೇಸಿಗೆಯಾದ್ದರಿಂದ ಅಲ್ಲಿ ಓದಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದರಂತೆ) ಜಾಯಿಂಟ್ ಸ್ಟಡಿಗೆ ಸೇರಿದ್ದಾಗ, ಅವರ ನೋಟ್ಸುಗಳನ್ನೇ ಇಟ್ಟುಕೊಂಡೇ ಸಹಪಾಠಿಗಳಿಗೂ ಅನುಕೂಲವಾಗುವಂತೆ ಕವಿ ವಿವರಿಸುತ್ತಿದ್ದರಂತೆ.
ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮತ್ತು ಮಹಾಮಾತೆಯ ಜನ್ಮೋತ್ಸವ ಸಂದರ್ಭಗಳಲ್ಲಿ ಬರೆದಿದ್ದ ಕವನಗಳನ್ನುಳಿದು ಬೇರೆ ಕವನಗಳ ರಚನೆಯ ಕಡೆಗೆ ಮನಸ್ಸು ಕೊಡಲಿಲ್ಲ. ರಚಿತವಾದವುಗಳು ಅಗ್ನಿಹಂಸ ಕವನಸಂಕನದಲ್ಲಿ ಸೇರಿವೆ. ಆದರೆ, ಆ ಸಂದರ್ಭದ ಬಲವ ನೀಡೆನೆಗೆ ಎಂಬ ಕವಿತೆ ಅಪ್ರಕಟಿತವಾಗಿ ಉಳಿದುಬಿಟ್ಟಿದೆ! ಪ್ರತಿನಿತ್ಯ ಸಂಜೆಯ ಹೊತ್ತು ಪೂಜೆ ಪ್ರಾರ್ಥನೆ ಮಂಗಳಾರತಿಯಲ್ಲಿ ಸ್ವಾಮೀಜಿಯವರ ಜೊತೆಗೆ ಇರುತ್ತಿದ್ದರು. ನಂತರ ಧ್ಯಾನ ಮಾಡುವುದೂ ನಡೆಯುತ್ತಿತ್ತು. ಸ್ವಾಮೀಜಿ, ಆ ಸಮಯದಲ್ಲಿ (೨.೩.೧೯೨೭) ಎಲ್ಲಾ ವಿದ್ಯುದ್ದೀಪಗಳನ್ನು ಆರಿಸಿ, ನೀಲಾಂಜನದ ಬೆಳಕಿನ ರಹಸ್ಯಮಯ ಕತ್ತಲಿನಲ್ಲೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದರಂತೆ! ಅದನ್ನು ಕವಿ ಮತ್ತಿತರರೂ ಅನುಸರಿಸುತ್ತಿದ್ದರು. ಆ ಸಂದರ್ಭದಲ್ಲಿ ರಚಿತವಾದುದ್ದೇ ಬಲವ ನೀಡೆನೆಗೆ. ಚಿತ್ತಶುದ್ಧಿಗಾಗಿಯೂ ಆತ್ಮಶುದ್ಧಿಗಾಗಿಯೂ ಭಕ್ತನ ಚೇತನ ಬೇಡುತ್ತಿರುವಂತಿದೆ ಕವಿತೆ.

ಬಲವ ನೀಡೆನೆಗೆ, ಗುರುವೇ
ಬಲವ ನೀಡು. ||ಪಲ್ಲವಿ||
ಎಡವಿ ಬೀಳದೆ, ಬಿದ್ದರಳುಕದೆ
ಎದ್ದು ನಡೆಯುವಂತೆ ||ಅನುಪಲ್ಲವಿ||
ಜಗದ ಮೋಹವು ಮನವ ಮೋಹಿಸಿ
ಮಾಯ ಜಾಲವ ಬೀಸಿ ಬರುತಿರೆ
ಮತ್ತನಾಗದೆ ಕುರುಡನಾಗದೆ
ಚಿತ್ತಶುದ್ಧಿಯೊಳಿರುವ ತೆರದೊಳು...ಬಲವ...
ಆತ್ಮವೆಲ್ಲವ ಬಿಡದೆ ಮುತ್ತುತ
ಭುವಿಯ ತಿಮಿರವು ನುಂಗಲೈತರೆ
ದೆಸೆಯನರಿಯದೆ ಮನವು ಭಯದಲಿ
ಪುಡಿಯೊಳೊರಲುತ ಹೊರಳದಂದದಿ.....ಬಲವ...
ಧರೆಯ ರಂಗದಿ ಕಡುಗಿ ಕಾದುತ
ಅರಿಯ ಘಾತದಿ ಮುರಿದು ಬೀಳಲು
ನೆಚ್ಚ ತೊರೆಯದೆ ಬೆಚ್ಚಿ ಬೀಳದೆ
ಮತ್ತೆ ಕೆಚ್ಚೆದೆಯೀಯುವಂದದಿ.......ಬಲವ...
ದಿನಕ್ಕೆ ಎರಡೆರಡು ಪ್ರಶ್ನೆಪತ್ರಿಕೆಗಳಂತೆ ಅಂತೂ ಪರೀಕ್ಷೆ ಮುಗಿಯುತ್ತದೆ. ಮೊದಲನೆಯ ದಿನ ಬರೆದೂ ಬರೆದೂ ಕೈನೋವು ಹತ್ತಿ, ತಲಗೆ ಬಿಸಿ ಏರಿ ಆಶ್ರಮಕ್ಕೆ ಬಂದು ನಲ್ಲಿ ತಿರುಗಿಸಿ ತಣ್ಣೀರಿಗೆ ತಲೆಕೊಟ್ಟು ಕುಳಿತಿದ್ದರಂತೆ!
ಪರೀಕ್ಷೆ ಮುಗಿಯುತ್ತಿದ್ದಂತೆ, ಸ್ವಾಮೀಜಿಯ ಅಪ್ಪಣೆ ಪಡೆದು, ಒಂದಷ್ಟು ಪುಸ್ತಕಗಳನ್ನು ತುಂಬಿಕೊಂಡು ಮಲೆನಾಡಿಗೆ ಹೊರಟುಬಿಡುತ್ತಾರೆ. ಆ ಬಾರಿಯ ಬೇಸಿಗೆ ರಜಾದಲ್ಲಿ ನಡೆದ ಮೂರು ಘಟನೆಗಳ ಬಗ್ಗೆ ನೆನಪಿನ ದೋಣಿಯಲ್ಲಿ ದಾಖಲಿಸುತ್ತಾರೆ. ಒಂದು ಶೃಂಗೇರಿಗೆ ಹೋಗಿದ್ದು, ಎರಡು ಅಡಕೆ ತೋಟಕ್ಕೆ ಸಿಡಿಲು ಹೊಡೆದುದ್ದು ಹಾಗೂ ಅದಕ್ಕೆ ಶಾಂತಿ ಮಾಡಿಸಿದ್ದು! ಮತ್ತು ಮೂರನೆಯದು ಕವಿಗೆ ನ್ಯೂಮೋನಿಯಾ ಆಗಿ ವಿಷಮಿಸಿದ್ದು. ಇವುಗಳಲ್ಲಿ ಮೊದಲ ಮತ್ತು ಕೊನೆಯ ಘಟನೆಗಳು ಕವಿತಾ ರಚನೆಯ ದೃಷ್ಟಿಯಿಂದ ಮಹತ್ವವಾದವುಗಳು.
ಶೃಂಗೇರಿ ಯಾತ್ರೆಯ ಬಗ್ಗೆ ಕವಿ ಹೀಗೆ ಹೇಳುತ್ತಾರೆ: ನಾನು ಶೃಂಗೇರಿಗೆ ಹೋದದ್ದು ಪೂಜೆಗಾಗಿಯೂ ಅಲ್ಲ, ಯಾತ್ರಾರ್ಥಿಯಂತೆಯೂ ಅಲ್ಲ. ದೇ.ರಾ.ವೆಂಕಟಯ್ಯನವರು ಅವರ ಹೆಣ್ಣು ಕೊಟ್ಟ ಮಾವನಮನೆ ಮರಿತೊಟ್ಟಿಲಿಗೆ ಹೋಗುವಾಗ ಒಬ್ಬರೆ ಹೋಗಲು ಬೇಜಾರಾಗಿ ನನ್ನನ್ನೂ ಜೊತೆಗೆ ಬರುವಂತೆ ಕೇಳಿಕೊಂಡರು. ೧೯೨೭ರ ಹೊತ್ತಿಗಾಗಲೆ ಅವರು ಕಾರನ್ನಿಟ್ಟಿದ್ದರು... ಇಂಗ್ಲಾದಿಯಿಂದ ಕಾರಿನಲ್ಲಿ ಕುಪ್ಪಳಿಗೆ ಬಂದು ಜೊತೆಗೆ ಬಾ ಎಂದು ಕರೆದಾಗ ಸಂತೋಷದಿಂದಲೆ ಹೋಗಿದ್ದೆ.
ರಸ್ತೆ ಕೊರಕಲು ದಾರಿಯಾಗಿದ್ದರೂ, ಇಕ್ಕೆಲದ ಸಹ್ಯಾದ್ರಿ ಪರ್ವತಶ್ರೇಣಿಯ ಅರಣ್ಯಮಯ ಗಿರಿಕಂದರಗಳಿಮದ ಭವ್ಯ ರಮ್ಯವಾಗಿದ್ದುರಿಂದ ಸುಖಕರವೂ ಸಂತೋಷಕರವೂ ಕಾವ್ಯೋನ್ಮೇಕರವೂ ಆಗಿತ್ತಂತೆ! ಈ ಹಿಂದೆ ಎತ್ತಿನ ಗಾಡಿಯಲ್ಲೊಮ್ಮೆ ಶೃಂಗೇರಿಗೆ ಹೋಗಿದ್ದಾಗ ಅನುಭವ ಮಾತ್ರವಾಗಿದ್ದ ಸೌಂದರ್ಯಾನುಭೂತಿ, ಆಶ್ರಮದ, ಸ್ವಾಮೀಜಿಯ ಸಹವಾಸದ, ಅಧ್ಯಯನದ ಫಲವಾಗಿ ಕವಿಯ ಮನಸ್ಸು ಆಧ್ಯಾತ್ಮಿಕ ಪ್ರಜ್ಞೆಯ ದಾರ್ಶನಿಕ ಭೂಮಿಕೆಗೆ ಏರಿದ್ದುದರಿಂದ, ಪ್ರಯಾಣದ ದಾರಿಯ ಅನುಭವ ಈ ಬಾರಿ ಅನುಭಾವವೆ ಅಗಿಬಿಡುತ್ತದೆ.
ಅದ್ವೈತ ಮಹಾದರ್ಶನವನ್ನು ವಿಶ್ವಕ್ಕೆ ನೀಡಿದ ಆದಿ ಶಂಕರಾಚಾರ್ಯರ ದಿವ್ಯಸ್ಮೃತಿ, ತುಂಗೆಯ ಸುಂದರ ಸ್ನಾನಘಟ್ಟ, ಅಲ್ಲಿ ಬೃಹತ್ ಗಾತ್ರದ ಮತ್ಸ್ಯ ಸಂಕುಲ, ಆಕಾಶವನ್ನೇ ಎತ್ತಿ ಹಿಡಿದಿರುವಂತೆ ಕಾಣುವ ಗಿರಿಶೃಂಗ ಪಂಕ್ತಿ, ವಿವಿಧ ಪಕ್ಷಿಗಳ ಕೂಜನ, ಶಂಕರರ ದೇವಾಲಯ ಮೊದಲಾದವನ್ನು ನೋಡಿ, ಕವಿಯ ಚೇತನ ಒಂದು ದಿವ್ಯತೆಯನ್ನು ಅನುಭವಿಸುತ್ತದೆ. ಆ ಅನುಭವದ ಅಕ್ಷರರೂಪವೇ ಶೃಂಗೇರಿ ಎಂಬ ಅಪ್ರಕಟಿತ ಕವಿತೆ. ೨೧.೪.೧೯೨೭ರ ರಚನೆ.
ಇದೊಂದು ಪ್ರಬುದ್ಧವಾದ ರಚನೆ. ಆದರೆ ಅದು ಅಪ್ರಕಟಿತವಾಗಿ ಉಳಿದುದ್ದೇಕೆ? ಅದನ್ನು ಕುರಿತಂತೆ ಕವಿ ಹೇಳಿರುವ ಮಾತುಗಳಿವು: ಅದು ಎಲ್ಲಿಯೂ ಅಚ್ಚಾಗಿಲ್ಲ; ಯಾರ ಕಣ್ಣಿಗೂ ಬಿದ್ದಿಲ್ಲ. ಯಾವ ಕವನಸಂಗ್ರಹದಲ್ಲಿಯೂ ಸೇರದಿರುವುದಕ್ಕೆ ಕಾರಣ  ಮಠಗಳು, ದೇವಸ್ಥಾನಗಳು, ನೂರಾರು ದೇವರುಗಳು, ಪುರೋಹಿತ ವರ್ಗದವರು, ಮತ ಮತ್ತು ಧರ್ಮದ ಹೆಸರಿನಲ್ಲಿ ವಿಜೃಂಭಿಸುತ್ತಿರುವ ಮೂಢನಂಬಿಕೆಗಳು ಇತ್ಯಾದಿಗಳ ವಿಷಯದಲ್ಲಿ ನನ್ನ ಮನೋಧರ್ಮದಲ್ಲಿ ಉಂಟಾದ ವಿರುದ್ಧ ಭಾವನೆಯೆ. ಜಗತ್ತಿನ ತತ್ವಜ್ಞರಲ್ಲಿ ಕಿರೀಟಸದೃಶರಾಗಿ ವಿಶ್ವ ವಿಶಾಲವಾದ ಅದ್ವೈತವನ್ನು ಬೋಧಿಸಿದ ಆಚಾರ್ಯನ ಕೇಂದ್ರಸ್ಥಾನ ಇಂದು ಯಾವ ದುರ್ಗತಿಗಿಳಿದಿದೆ? ಎಂತಹ ಸಂಕುಚಿತ ಜಾತಿಭಾವನೆಯ ಗೂಬೆಗವಿಯಾಗಿದೆ, ವಿಶ್ವಕ್ಕೇ ಜ್ಯೋತಿರ್ದಾನ ಮಾಡಲೆಂದು ಆಚಾರ್ಯನು ಕಟ್ಟಿದ ಆ ಸಂಸ್ಥೆ, ಇತರ ಅಂತಹ ಎನಿತೋ ಹಿಂದೂ ಸಂಸ್ಥೆಗಳಂತೆಯೆ? ನನ್ನ ಜುಗುಪ್ಸೆಗೆ ಕಾರಣ ಆ ಸಂಸ್ಥೆಗಳಲ್ಲ ಅವುಗಳ ಅಧೋಗತಿ ಮತ್ತು ಅವು ಇಳಿದಿರುವ ದುಃಸ್ಥಿತಿ! ಆ ಕವನವನ್ನು ಪ್ರಕಟಿಸಿದರೆ ನಾನೂ ಈಗಿನ ಶೃಂಗೇರಿ ಮಠದ ಭಕ್ತನೆಂದುಕೊಂಡಾರು ಎಂದು ಹೆದರಿ ಅದನ್ನು ಅಚ್ಚುಹಾಕಿಸಿರಲಿಲ್ಲ.
ಹಾಗೆ ನೋಡಿದರೆ, ಕುವೆಂಪು ಅವರ ಮೊದಲ ಕೊಳಲು ಕವನ ಸಂಗ್ರಹಕ್ಕೆ ಕವಿತೆಗಳನ್ನು ಆರಿಸಿದವರು ತಿರುಮಲೆ ಶ್ರೀನಿವಾಸಾಚಾರ್ಯ ಎಂಬುವವರು. ಶ್ರೀಯುತ ಮಾಸ್ತಿಯವರು ಕವನಸಂಗ್ರಹವನ್ನು ಪ್ರಕಟಿಸುವ ಮಾತನ್ನು ಹೇಳಿ, ಅದಕ್ಕೆ ಕವಿತೆಗಳನ್ನು ಆರಿಸಿಕೊಡುವ ಕೆಲಸವನ್ನು ಅವರ ಅಧೀನಾಧಿಕಾರಿಯಾಗಿದ್ದ ಶ್ರೀನಿವಾಸಾಚಾರ್ಯರಿಗೆ ವಹಿಸುತ್ತಾರಷ್ಟೆ. ವಸಂತ ಕುಸುಮ ಎಂಬ ಅದ್ವೈತ ದೃಷ್ಟಿಯ ಕವಿತೆ, ಕೊಳಲು ಸಂಗ್ರಹದಿಂದ ಹೊರಗುಳಿದ ಕಥೆಯನ್ನು ಹೇಳುವಾಗಲೇ ತಿರುಮಲೆ ಶ್ರೀನಿವಾಸಾಚಾರ್ಯರು ಈ ಕವನವನ್ನು (ವಸಂತ ಕುಸುಮ) ಅಷ್ಟಾಗಿ ಮೆಚ್ಚಿಕೊಳ್ಳದಿದ್ದುದಕ್ಕೆ ಬಹುಶಃ ಈ ಕವನದಲ್ಲಿ ಅಭಿವ್ಯಕ್ತವಾಗಿರುವ ಅದ್ವೈತ ದೃಷ್ಟಿಯೂ ಕಾರಣವಾಗಿರಬಹುದೆಂದು ತೋರುತ್ತದೆ, ವಿಶಿಷ್ಟಾದ್ವೈತದ ಶ್ರೀ ವೈಷ್ಣವರಾಗಿದ್ದ ಅವರಿಗೆ ಎಂದಿದ್ದರು. ಬಹುಶಃ ಶೃಂಗೇರಿ ಕವಿತೆ ಹೊರಗುಳಿಯುವುದಕ್ಕೆ ಕವಿಯ ಅಭೀಪ್ಸೆಯ ಜೊತೆಗೆ ಇದೂ ಕಾರಣವಾಗಿದ್ದಿರಬಹುದು. ನಂತರದ ಯಾವ ಸಂಕಲನದಲ್ಲೂ ಅದು ಪ್ರಕಟವಾಗದಿರುವುದಕ್ಕೆ ಕವಿಯ ಅಭಿಪ್ರಾಯವೇ ಅಂತಿಮವಾಗಿದೆ.
ನೆನಪಿನ ದೋಣಿಯಲ್ಲಿ ಅದರ ಪೂರ್ಣಪಾಠವನ್ನು ಕೊಡುವ ಕವಿ ಹೀಗೆ ಹೇಳುತ್ತಾರೆ: ಇದು ಶಂಕರಾಚಾರ್ಯರ ಅದ್ವೈತ ದರ್ಶನಕ್ಕೆ ಸಾಂಕೇತಿಕವಾದ ಶೃಂಗೇರಿಗೆ ಮಾತ್ರ ಅನ್ವಯಿಸುತ್ತದೆಯೆ ಹೊರತು ವರ್ಣಾಶ್ರಮ, ಜಾತಿಭೇದ, ಚತುರ್ವರ್ಣ, ಶೂದ್ರ, ಬ್ರಾಹ್ಮಣ, ಇತ್ಯಾದಿ ಸಂಕುಚಿತ ಭಾವನೆಗಳನ್ನು ಪೋಷಿಸುವ ಸಂಪ್ರದಾಯಕೂಪದ ಸಂಸ್ಥೆಗಲ್ಲ ಎಂಬುದನ್ನು ಯಾರೂ ಮರೆಯದಿರಲಿ ಎಂದು ಕೊಳ್ಳುತ್ತೇನೆ.

ಶೃಂಗೇರಿ
ಶ್ರೀಮಚ್ಛಂಕರ ಗುರುವರ ಪುರವಿದು
ಪಾವನಮಾಗಿಹ ಶೃಂಗೇರಿ;
ಪರಮತೆಗಾಲಯ, ರಮ್ಯತೆಗಾಶ್ರಯ,
ಬ್ರಹ್ಮಾನಂದಾವಾಸಮಿದು!
ಪುಣ್ಯ ತೀರ್ಥಜಲದಿಂದ ಮೆರೆವಮಲ
ತುಂಗಾ ತೀರೋದ್ಯಾನಮಿದು;
ಶಂಕರ ಕೇಸರಿ ಗರ್ಜಿಸುತಲೆದ ಮ-
ಹಾ ಅದ್ವೈತಾರಣ್ಯಮಿದು!
ಕಂಗಳ ಮೋಹಿಪ ಮಂಗಳಕರವಹ
ಶೃಂಗಗಳೆಲ್ಲಿಯು ಮೆರೆಯುತಿವೆ;
ಮನವನೆ ಅಳಿಸುವ ಘನತರವಾಗಿಹ
ಚಿನುಮಯನನುಭವವಾಗುತಿದೆ;
ಮಾಯಾ ಬಂಧವ ಮುರಿವಾ ಚೆಂದವ
ಮೋಕ್ಷಾನಂದವು ತೋರುತಿದೆ;
ಶಕ್ತಿಗೂಡಭಯ ಭಕ್ತಿವಾಹಿನಿಯ
ಮುಕ್ತಿಮಹಾರ್ಣವವಾಗುತಿದೆ!
ಕಲ್ಪನೆಯೆನ್ನನು ಶತಮಾನಗಳಾ-
ಚೆಗೆ ಕರೆದೊಯ್ಯನೆ ಒಯ್ಯುತಿದೆ:
ಅಂದಿನ ಜೀವನವಂದಿನ ನೋಟಗ
ಳಂದದಿ ಮನದೊಳು ಮೆರೆಯುತಿವೆ.
ಕುಸುಮಿತ ಮರದಡಿ ಶಂಕರ ಗುರು ತಾ
ಧ್ಯಾನದೊಳಿರುವುದ ನೋಡುವೆನು!
ಅಹಹಾ ಶಾಂತಿಗೆ ನೆಲವನೆಯಾಗಿಹ
ವದನವು ಜ್ಯೋತಿಯ ಬೀರುತಿದೆ!
ತುಂಗೆಯ, ಗುರುವಿನ ಮಂಗಳ ಚರಣ ಯು
ಗಂಗಳ ನಿನ್ನ ತರಂಗಗದೊಳು
ಮಂಜುಳ ವೇದ ನಿನಾದವ ಮಾಡುತ
ತೊಳೆಯುವ ನೀನೇ ಪಾವನಳು!
ನಿನ್ನಾ ಪರಮ ಪವಿತ್ರತೆ ಇಂದಿಗು
ಪಾಪವಿನಾಶಕವಾಗಿಹುದು.
ಜನ್ಮಮೃತ್ಯುಗಳ ಪಾಪಪುಣ್ಯಗಳ
ಮೀರಿದೆ ಗುರುವಿನ ಸಂಗದಲಿ!
ಎಲೆಲೇ ಕೋಗಿಲೆ, ಕೂಗುವೆ ಏತಕೆ
ಗುರುವಿನ ಧ್ಯಾನವ ಭಂಗಿಸಲು?
ವಿಕಲ್ಪವಿಲ್ಲದ ಭಾವಸಮಾಧಿಯ-
ಲಳಿವನು ಎಂಬುವ ಭಯದಿಂದೇ?
ಲೋಕಕೆ ಗುರುವರ ಬೋಧಾಮೃತ ತಾ
ದೊರಕದು ಎಂಬುವ ಭಯದಿಂದೇ?
ಹಾಡೈ, ಕೋಗಿಲೆ, ಸೃಷ್ಟಿ ನಿಯಮದೊಳು
ನಿನಗಿಹ ಕರ್ಮವ ನೀಮಾಡು!
ಗುರುವರ, ನಿನ್ನಯ ಹೃದಯ ವಿಶಾಲತೆ-
ಯರಿಹರು ನಿನ್ನನುಯಾಯಿಗಳು:
ಎಲ್ಲದರಲ್ಲಿಯು ಎಲ್ಲೆಲ್ಲಿಯು ನೀ
ಬ್ರಹ್ಮವ ಕಾಣುತ ಪೂಜಿಸಿದೆ.
ಮ್ಲೋಚ್ಛ ಶೂದ್ರರನು ತತ್ತ್ವವೇತ್ತರನು
ಒಂದೇ ಎನ್ನುತ ಭಾವಿಸಿದೆ;
ತ್ಯಾಗಭೋಗಗಳ ಕರ‍್ಮಧರ್ಮಗಳ
ಯೋಗದ ಪರಿಯನು ಬೋಧಿಸಿದೆ.
ಗುರುವರ, ನಿನ್ನೀ ಮುದ್ದಿನ ಭಾರತ
ಭೂಮಿಯ ದುರ್ಗತಿಗಿಳಿದಿಹುದು;
ಹಿಂದೂಸ್ಥಾನದ ರಮ್ಯಾರಣ್ಯವ
ಸೋಹಂ ಗರ್ಜನೆ ಇನ್ನೊಮ್ಮೆ
ಕುರಿಗಳ ಹರಿಗಳ ಮಾಡುವ ತೆರೆದೊಳು
ತುಂಬಲಿ, ಶಂಕರ ಕೇಸರಿಯೆ!
ತಾಯಿಯ ಭೂಮಿಯ ಸಲಹಲು ಜನಿಸೈ
ಭಾರತ ಭೂಮಿಯೊಳಿನ್ನೊಮ್ಮೆ!
(೨೪.೪.೧೯೨೭)
ಶಂಕರರ ಘನ ಉದ್ದೇಶ, ಮಹಿಮೆ ಎಲ್ಲವನ್ನೂ ಸಾರು ಈ ಕವಿತೆ ಅತ್ಯಂತ ಮಹತ್ವದ್ದು. ೪ ೪ ೪ ೪, ೪ ೪ ೪ ೧ರ ಲಯದ ಪಂಕ್ತಿಗಳು ಕವಿತೆಯುದ್ದಕ್ಕೂ ಗಮನ ಸೆಳೆಯುತ್ತವೆ. ಈ ಕವಿತೆಗೆ ಸಂಬಂಧಪಟ್ಟಂತೆ, ಧರ್ಮ, ವರ್ಣಾಶ್ರಮ, ಜಾತಿಪದ್ಧತಿ, ಮಠ ಮೊದಲಾದುವುಗಳ ಬಗ್ಗೆ ಹೀಗೆ ಅಭಿಪ್ರಾಯಪಟ್ಟಿದ್ದಾರೆ. ನನ್ನ ಜೊತೆ ಬಂದಿದ್ದವರು ಭಟ್ಟರ ಕೈಲಿ ಪೂಜೆಗೀಜೆ ಮಾಡಿಸುವ ಕಾರ್ಯದಲ್ಲಿ ತೊಡಗಿದ್ದರು. ನಾನು ಎಂದಿನಂತೆ ಆ ಪೂಜೆಪ್ರಸಾದಗಳ ಗೋಜಿಗೆ ಹೋಗದೆ ಶಾಂಕರ ದೇವಾಲಯದ ಪ್ರಾಚೀನ ಪ್ರಶಾಂತಿಯಲ್ಲಿ ಪರಿಚಿಂತನಶೀಲನಾಗಿದ್ದೆ: ಈ ದೇವಾಲಯಗಳ ಸ್ವರೂಪವೆ ಬದಲಾಗದಿದ್ದರೆ, ಶ್ರುತ್ಯಂಶದ ವೇದಾಂತ ದರ್ಶನವನ್ನಾಶ್ರಯಿಸಿ, ಸ್ಮೃತ್ಯಂಶದ ಧರ್ಮಶಾಸ್ತ್ರಪುರಾಣಾದಿಗಳ ಕಾಲದೇಶಾಚಾರಗಳ ಅನಿತ್ಯಾಂಶಗಳನ್ನು ತ್ಯಜಿಸದಿದ್ದರೆ ಧರ್ಮದ ವಿನಾಶ ಇಂದಲ್ಲ ನಾಳೆ ಸ್ವತಃಸಿದ್ಧ! ವರ್ಣಾಶ್ರಮ, ಜಾತಿಪದ್ಧತಿ, ಚಾತುವೃರ್ಣ್ಯ ಮೊದಲಾದ ಮೂಢನಂಬಿಕೆಗಳ ಪುರೋಹಿತಶಾಹಿಯಿಂದ ಸಂಪೂರ್ಣವಾಗಿ ಪಾರಾದಂದೇ ಹಿಂದೂಮತವು ವೇದಾಂತ ದರ್ಶನವಾಗಿ, ವಿಶ್ವಧರ್ಮವಾಗಿ, ಸರ್ವಧರ್ಮಗಳನ್ನು ಒಳಗೊಂಡು, ನಿಜವಾದ ವಿಶ್ವಧರ್ಮವಾಗುತ್ತದೆ. ಅಲ್ಲಿಯವರೆಗೂ ಅದು, ಶೂದ್ರಪೀಡನಕರವಾಗಿ ಪುರೋಹಿತ ಪೀಡೆಯ ಬ್ರಾಹ್ಮಣ್ಯ ಮಾತ್ರವಾಗಿರುತ್ತದೆ; ಮತ್ತು ಬುದ್ಧಿಯುಳ್ಳವರಿಗೆ ಜುಗುಪ್ಸೆ ಉಂಟುಮಾಡುವ ಅಸಹ್ಯವಾಗಿರುತ್ತದೆ.
ಈ ಅಸಹ್ಯ ಭಾವನೆ ಉಂಟಾಗುವುದನ್ನು ತಪ್ಪಿಸಲೋಸುಗವಾದರೂ ಅದ್ವೈತ ಕೇಸರಿ, ಜನಿಸೈ ಭಾರತ ಭೂಮಿಯೊಳಿನ್ನೊಮ್ಮೆ!

Friday, November 11, 2011

ಶೃಂಗೇರಿ ಬಗ್ಗೆ ಕುವೆಂಪು ಕವಿತೆ ಗೊತ್ತಾ?

ಶ್ರೀಮಚ್ಛಂಕರ ಗುರುವರ ಪುರವಿದು
ಪಾವನಮಾಗಿಹ ಶೃಂಗೇರಿ;
ಪರಮತೆಗಾಲಯ, ರಮ್ಯತೆಗಾಶ್ರಯ,
ಬ್ರಹ್ಮಾನಂದಾವಾಸಮಿದು!
ಪುಣ್ಯ ತೀರ್ಥಜಲದಿಂದ ಮೆರೆವಮಲ
ತುಂಗಾ ತೀರೋದ್ಯಾನಮಿದು;
ಶಂಕರ ಕೇಸರಿ ಗರ್ಜಿಸುತಲೆದ ಮ-
ಹಾ ಅದ್ವೈತಾರಣ್ಯಮಿದು!
ಶೃಂಗೇರಿ ಬಗ್ಗೆ ಕುವೆಂಪು ಕವಿತೆ ಗೊತ್ತಾ? ಅದರ ಬಗ್ಗೆ ಸ್ವತಃ ಕವಿಯ ಅನಿಸಿಕೆ ಏನು ಗೊತ್ತಾ?? ಅದ್ಯಾಕೆ ಎಲ್ಲೂ ಪ್ರಕಟವಾಗಲಿಲ್ಲ ಅನ್ನೋದು ಗೊತ್ತಾ??? ಇವೆಲ್ಲಾ ಗೊತ್ತಾಗಬೇಕು ಅಂದರೆ 14.11.2011ರ ಸೋಮವಾರದವರೆಗೂ ಕಾಯಬೇಕು!!!
ಹಾಗೆ ನೋಡಿದರೆ ನಿಮ್ಮನ್ನು ಕಾಯಿಸಬೇಕು ಅನ್ನೋದು ನನ್ನ ಉದ್ದೇಶ ಅಲ್ಲ. 
ಕೆಲವು ಸ್ನೇಹಿತರು ವಾರಕ್ಕೊಂದೇ ಪೋಸ್ಟ್ ಏಕೆ? ಎರಡು ಮೂರನ್ನಾದರೂ ಹಾಕಬಹುದಲ್ಲ. ಕುವೆಂಪು ಅವರ ಬಗ್ಗೆ, ಅವರ ಸಾಹಿತ್ಯದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ನಿಮ್ಮ ಲೇಖನಗಳು ಸಹಕಾರಿಯಾಗಿವೆ ಅಂತ ಕೇಳುತ್ತಿದ್ದಾರೆ. 
ದಿನಕ್ಕೊಂದು ಪೋಸ್ಟ್ ಮಾಡಬಹುದು, ಅಷ್ಟೊಂದು ಕವಿತೆಗಳಿದಾವೆ. ಆದರೆ ಎಷ್ಟು ಬರಿತೇನೆ, ಅನ್ನೋದಿಕ್ಕಿಂತ ಅದನ್ನು ಸಾಧ್ಯವಾದಷ್ಟು ಆಕರ್ಷಕವಾಗಿ ನಿಮ್ಮ ಮುಂದೆ ಪ್ರೆಸೆಂಟ್ ಮಾಡಬೇಕು ಅನ್ನೋದು ನನ್ನ ಉದ್ದೇಶ. ಅದಕ್ಕೆ ವಾರಕ್ಕೊಂದೇ ಲೇಖನ ಅನ್ನೊ ಮಿತಿಯನ್ನ ನನಗೆ ನಾನೇ ಹಾಕಿಕೊಂಡು ಬಿಟ್ಟಿದ್ದೇನೆ. ಚೆನ್ನಾಗಿ ಹಸಿದಾಗ ಊಟದ ರುಚಿ ಹೆಚ್ಚು ಅಲ್ಲವೆ?
ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹಕ್ಕೆ ನಾನು ಚಿರಋಣಿ. 
ಶುಭದಿನ. 
ಮತ್ತೆ ಭೇಟಿಯಾಗೋಣ.

Monday, November 07, 2011

’ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೇವಲ ನಾಲ್ಕು ಗಂಟೆಯ ರಚನೆ!

ಆಶ್ರಮದ ಪ್ರಶಾಂತ ಪವಿತ್ರ ಸ್ನೇಹಮಯ ವಾತಾವರಣದಲ್ಲಿ ಸ್ವಾಮೀಜಿಯ ಅಕ್ಕರೆಯ ಶುಶ್ರೂಷೆಯಿಂದ ಕವಿ ಚೇತರಿಸಿಕೊಂಡರು. ಬರವಣಿಗೆಯೂ ಆರಂಭಗೊಂಡಿತ್ತು. ಕಾಲೇಜಿನ ಪರೀಕ್ಷಗಳಿಗೂ ಮೂರ‍್ನಾಲ್ಕು ತಿಂಗಳು ಕಾಲಾವಕಾಶವಿತ್ತು. ಅಂತಹ ಸಂದರ್ಭದಲ್ಲಿ ಸ್ವಾಮೀಜಿಯೆ ಒಂದು ದಿನ, ಊರಿಗೆ ಹೋಗಿ ಬರಲು ಸೂಚಿಸುತ್ತಾರೆ. ಹಾಗೆ ಹೇಳಲು ಸ್ವಾಮಿಜಿಗೆ ಇದ್ದ ಕಾರಣಗಳನ್ನು ಅರಿತಾಗ ಅವರ ದೂರದರ್ಶಿತ್ವ, ಸಮಾಧಾನಶೀಲತೆ, ತರುಣ ಕವಿ ಕುವೆಂಪು ಅವರ ಬಗೆಗಿದ್ದ ಪ್ರೀತಿ, ಅಚಲ ವಿಶ್ವಾಸ ಎದ್ದು ಕಾಣುತ್ತವೆ. ಕವಿಯ ಮಾತುಗಳಲ್ಲೇ ಹೇಳುವುದಾದರೆ: "ಆಶ್ರಮದ ಮೇಲೆ ಬಂದಿದ್ದ ಆಪಾದನೆಯ ನಿವಾರಣಕ್ಕಾಗಿ: ನಾನು ಊರಿಗೆ ಹೋಗಿ ನೆಂಟರಿಷ್ಟರಿಗೆ ಮುಖ ತೋರಿಸಿ, ಸ್ವಾಮಿಜಿಗಳು ನನ್ನನ್ನು ಆಶ್ರಮಕ್ಕೆ ಕರೆದೊಯ್ದುದು ಸಂನ್ಯಾಸಿಯನ್ನಾಗಿ ಮಾಡಲಿಕ್ಕಲ್ಲ ಎಂದು ಅವರಿಗೆಲ್ಲ ಮಂದಟ್ಟು ಮಾಡಿಕೊಡಲಿಕ್ಕೆ; ಆಶ್ರಮದ ಮತ್ತು ಸ್ವಾಮಿಗಳ ವಿಷಯದಲ್ಲಿ ಅವರ ದುರ್ಭಾವನೆ ತೊಲಗಿ, ವಿಶ್ವಾಸ ಗೌರವಗಳನ್ನು ಮಂಡಿಸಲಿಕ್ಕೆ."
ಸ್ವಾಮೀಜಿಯ ಮಾತಿನಂತೆ ಮಲೆನಾಡಿಗೆ ಹೊರಟ ಕವಿ ಅ ಇಡೀ ಪ್ರವಾಸದಲ್ಲಿ ಹಲವಾರು ಕವಿತೆಗಳನ್ನು ಬರೆಯುತ್ತಾರೆ. ಹೆಚ್ಚಿನವು ಪ್ರಕೃತಿಗೀತೆಗಳು. ಹೆಚ್ಚಿನವು ಪ್ರಕಟಿತವಾದವುಗಳಾಗಿದ್ದರೆ, ’ಹೊಳೆಯರೆಯ ಮೇಲೆ’, ’ಚೈತನ್ಯದಲಿ ವಸಂತಾಗಮ’, ಮಲೆನಾಡು’ ಮೊದಲಾದ ಅಪ್ರಕಟಿತ ಕವನಗಳೂ ಇವೆ. ಇವುಗಳಲ್ಲದೆ, ೧೬.೧೧.೧೯೨೬ರಂದು ಬರೆದ ಶೀರ್ಷಿಕೆಯಿಲ್ಲದ, ಅಪ್ರಕಟಿತ ಕವನವೊಂದು, ಆ ದಿನಗಳಲ್ಲಿ ಕವಿಯ ಮನಸ್ಸಿನಲ್ಲಿ ನಡೆಯುತ್ತಿದ್ದ ಚಿಂತನೆಗಳಿಗೆ, ಕವಿಯ ಚೇತನದಲ್ಲಿ ಜರಗುತ್ತಿದ್ದ ದಾರ್ಶನಿಕ ಚಿಂತನಗಳಿಗೆ ಪುಟ್ಟ ಗವಾಕ್ಷದಂತಿದೆ. ಆ ಕವಿತೆಯನ್ನು ಕುರಿತು ಕವಿ ’ತಾಯಿಯ ಒಲುಮೆ ಒಂದೆಯೆ ಸರ್ವಸಿದ್ಧಿಗಳನ್ನೂ ಮೀರುವ ಪರಮೋಚ್ಛಸಿದ್ಧಿ!’ ಎನ್ನುತ್ತಾರೆ.
ನಿನ್ನ ಸಿರಿ ಬೇಡೆನಗೆ;
ನಿನ್ನ ಬಲ ಬೇಡೆನಗೆ,
ನಿನ್ನೊಲುಮೆ ಸಾಕು!
ನಿನ್ನ ಕರುಣೆಯು ಬೇಡ,
ನಿನ್ನ ವರಗಳು ಬೇಡ,
ನಿನ್ನೊಲುಮೆ ಬೇಕು!
ಮುಕ್ತಿ ಬಂದರು ಬರಲಿ,
ಮುಕ್ತಿ ಬಾರದೆ ಇರಲಿ,
ಭಕ್ತಿಯೊಂದಿರಲಿ!
ದುಃಖಗಳ ನೀನ ನೀಡೆ
ಸುಖಗಳನು ನಾ ಬೇಡೆ;
ನಿನ್ನಿಷ್ಟವಿರಲಿ!
ಸ್ವರ್ಗಸುಖವೆನಗೇಕೆ?
ವೈಕುಂಠವೆನಗೇಕೆ?
ಇರಲು ನಿನ್ನನುರಾಗ
ಅದೆ ಪರಮತರ ಭೋಗ!
ಅದೆ ಚಾಗ, ಯೋಗ!
ದೀರ್ಘಕಾಲದ ಕಾಯಿಲೆಯ ತರುವಾಯ ಹುಟ್ಟೂರಿನ ಮಲೆ ಬಾನು ಬಯಲು ಕಾಡುಗಳಲ್ಲಿ ವಿಹರಿಸಿ ಮನಃಸಂತೋಷವನ್ನೂ ದೇಹಾರೋಗ್ಯವನ್ನೂ ಸಂಪಾದಿಸಿದ ಕವಿಗೆ ನಂಟರಿಷ್ಟರು ಗೆಳೆಯರು ತೋರಿದ ಅಕ್ಕರೆಯನ್ನು ಸವಿದ ಪ್ರಾಣ ಹಿಗ್ಗನ್ನು ಹೀರಿ ಮತ್ತಷ್ಟು ಬಲಿಷ್ಠವಾಯಿತು ಎನ್ನುತ್ತಾರೆ! ಆ ಸಂದರ್ಭದಲ್ಲಿಯೇ ಕನ್ನಡ ಸಾಹಿತ್ಯಕ್ಕೂ, ವಿಶೇಷವಾಗಿ ಕನ್ನಡ ನಾಡಿನ ಮಕ್ಕಳಿಗೂ ಲಭಿಸಿದೊಂದು ಸಿರಿಯ ಹೊಂಗಾಣಿಕೆ: ’ಬೊಮ್ಮನಹಳ್ಳಿಯ ಕಿಂದರಿಜೋಗಿ’.
ಮೈಸೂರಿನಿಂದ ಊರಿಗೆ ಹೊರಟ ಕವಿ ವಾಡಿಕೆಯಂತೆ ಶಿವಮೊಗ್ಗದಲ್ಲಿ ಕೆಲವು ದಿನಗಳನ್ನು ಕಳೆಯುತ್ತಾರೆ. ಯಥಾಪ್ರಕಾರ ದೇವಂಗಿ ರಾಮಣ್ಣಗೌಡರ ಅಡಕೆ ಮಂಡಿಯ ಉಪ್ಪರಿಗೆಯೇ ಅವರ ಆಗಿನ ವಸತಿ. ಭೂಪಾಳಂ ಚಂದ್ರಶೇಖರಯ್ಯ ಮೊದಲಾದ ಗೆಳೆಯರ ಸಹವಾಸ. ದೇವಂಗಿ ಮಾನಪ್ಪನ ಆತಿಥ್ಯ. ಜೊತೆಗೆ ಕವಿಯ ರಚನೆಗಳನ್ನೆಲ್ಲಾ ಪ್ರತಿಯೆತ್ತುವ ಕೆಲಸವನ್ನೂ ಮಾನಪ್ಪ ನಿರ್ವಹಿಸುತ್ತಿರುತ್ತಾರೆ. ಹಿಂದೆ ಆಶ್ರಮದಲ್ಲಿ ರಚನೆಯಾಗಿದ್ದ ’ಹಾಳೂರು’ ದೀರ್ಘ ಕವಿತೆಯನ್ನೂ ಮಾನಪ್ಪ ೧೮.೧೧.೧೯೨೬ರಂದು ಪ್ರತಿಯೆತ್ತಿರುತ್ತಾರೆ. ಅದರ ಮಾರನೆಯ ದಿನವೇ ೧೯.೧೧.೧೯೨೬ರಂದು ಬೊಮ್ಮನಹಳ್ಳಿಯ ಕಿಂದರಿಜೋಗಿ ರಚನೆಯಾಗುತ್ತದೆ. ಆಗ ಕವಿಗೆ ಕೇವಲ ಇಪ್ಪತ್ತೆರಡು ವರ್ಷ ವಯಸ್ಸು! ವಿಶೇಷವೆಂದರೆ ರಚನೆಯ ಜೊತೆಜೊತೆಗೇ ಪ್ರತಿಯೆತ್ತುವ ಕೆಲಸವನ್ನು ಮಾನಪ್ಪ ಮಾಡುತ್ತಾರೆ! ಅಂದರೆ ಇಡೀ ರಚನೆ ಮತ್ತೆ ಕವಿಯಿಂದ ಮರುಓದಿಗೆ ತಿದ್ದುಪಡಿಗೆ ಒಳಪಡುವುದೇ ಇಲ್ಲ!
ಅಷ್ಟಕ್ಕೂ ಬೊಮ್ಮನಹಳ್ಳಿಯ ಕಿಂದರಿಜೋಗಿ ಎಂಬ ದೀರ್ಘಕವಿತೆಯ (೧೪ ಭಾಗಗಳು; ೪೨೮ ಸಾಲುಗಳು) ರಚನೆ ಕೇವಲ ನಾಲ್ಕು ಗಂಟೆಯಲ್ಲಿ ಮುಗಿದುಹೋಗುತ್ತದೆ! ಬೊಮ್ಮನಹಳ್ಳಿಯ ಕಿಂದರಿಜೋಗಿ ನೀಳ್ಗವಿತೆಯ ರಚನೆಯ ಬಗೆಗೆ ಕವಿಯ ಮಾತುಗಳು ಹೀಗಿವೆ: "ನನಗಿನ್ನೂ ವಿಶದವಾದ ನೆನಪಿದೆ. ಬೆಳಿಗ್ಗೆ ಸ್ನಾನ ಕಾಫಿ ತಿಂಡಿ ಪೂರೈಸಿ ಉಪ್ಪರಿಗೆಗೆ ಹೋಗಿ, ಒಂದು ಮೇಜಿನ ಮುಂದಿದ್ದ ಕುರ್ಚಿಯ ಮೇಲೆ ಕುಳಿತು, ಬಿಡಿ ಹಾಳೆಗಳಲ್ಲಿ ಬರೆಯತೊಡಗಿದೆ. ಒಂದೊಂದೆ ಹಾಳೆ ತುಂಬಿದಂತೆಲ್ಲ ಅದನ್ನು ಕೆಳಗೆ ಹಾಕುತ್ತಿದ್ದೆ. ಮಾನಪ್ಪ ಈಗ ನನ್ನ ಬಳಿ ಇರುವ ನೋಟುಬುಕ್ಕಿನ ಹಸ್ತಪ್ರತಿಗೆ ಅದನ್ನು ಕಾಪಿ ಮಾಡುತ್ತಾ ಹೋಗುತ್ತಿದ್ದ. ಮಧ್ಯಾಹ್ನದ ಊಟದ ಹೊತ್ತಿಗೆ ಬರೆಯುವುದೂ ಪೂರೈಸಿತ್ತು! ಅಂದರೆ ಅದರ ರಚನೆಗೆ ಸುಮಾರು ನಾಲ್ಕು-ಐದು ಗಂಟೆ ಹಿಡಿದಿತ್ತು."
ಬೊಮ್ಮನಹಳ್ಳಿಯ ಕಿಂದರಿಜೋಗಿಯ ಕಂಪು ಕರ್ಣಾಟಕದಾದ್ಯಂತ ಪಸರಿಸಿತು. ಕನ್ನಡ ಮಕ್ಕಳ ನಾಲಿಗೆಯಲ್ಲಿ ನಲಿಯುತ್ತಿತ್ತು. ೧೯೨೮ರಲ್ಲಿ ಮೊದಲ ಬಾರಿಗೆ ಪ್ರಕಟವಾದಾಗ ಅದನ್ನು ಬ್ರೌನಿಂಗ್ ಕವಿಯ ’ಪೈಡ್ ಪೈಪರ್ ಆಫ್ ಹ್ಯಾಮಿಲ್ಟನ್’ ಕವನದ ಭಾಷಾಂತರವೆಂದು ಕೆಲವರು, ಅನುವಾದವೆದು ಕೆಲವರು ವಾದಿಸತೊಡಗಿದರು. ಆದರೆ ಅದು ಅವೆರಡೂ ಆಗಿರಲಿಲ್ಲ ಎಂಬುದು ಕವಿಯ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಅನೇಕರು ಅದನ್ನು ಬ್ರೌನಿಂಗ್ ಕವಿಯ ’ಪೈಡ್ ಪೈಪರ್ ಆಫ್ ಹ್ಯಾಮಿಲ್ಟನ್’ ಕವಿತೆಯ ಭಾಷಾಂತರವೆಂದು ಭಾವಿಸಿದ್ದಾರೆ. ಅದು ಮೊದಲು ’ಕಿರಿಯ ಕಾಣಿಕೆ’ಯಲ್ಲಿ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘದಿಂದ ೧೯೨೮ರಲ್ಲಿ ಪ್ರಕಟವಾದಾಗ ಅದು ಬ್ರೌನಿಂಗ್ ಕವಿಯ ಕವಿತೆಯ ಆಧಾರದ ಮೇಲೆ ರಚಿತವಾದದ್ದು ಎಂಬ ಉಲ್ಲೇಖವಿದೆ. ಅದು ಯಾವ ದೃಷ್ಟಿಯಿಂದ ಪರಿಶೀಲಿಸಿದರೂ ಭಾಷಾಂತರವಾಗುವುದಿಲ್ಲ; ಕಡೆಗೆ, ಸಮೀಪದ ಅನುವಾದ ಕೂಡ ಆಗುವುದಿಲ್ಲ. ಅದನ್ನು ಬರೆಯುವಾಗ ಶಿವಮೊಗ್ಗದಲ್ಲಿ ನನ್ನ ಬಳಿ ಬ್ರೌನಿಂಗ್ ಕೃತಿ ಇರಲಿಲ್ಲ. ಅಷ್ಟೆ ಅಲ್ಲ. ಇಂಗ್ಲಿಷಿನಲ್ಲಿ ಅದನ್ನು ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ನಾನು ಐದನೆ ಫಾರಂನಲ್ಲಿ ಓದುತ್ತಿದ್ದಾಗ ಪಠ್ಯಪುಸ್ತಕದಲ್ಲಿ ಓದಿದ್ದೆನೆ ಹೊರತು ಆಮೇಲೆ ಅದನ್ನು ಓದಿರಲೂ ಇಲ್ಲ. ಆದ್ದರಿಂದ ಅದು ಭಾಷಾಂತರವೂ ಅಲ್ಲ, ಅನುವಾದವೂ ಅಲ್ಲ. ಆ ಕಥೆಯ ನೆನಪಿನ ಆಧಾರದ ಮೇಲೆ ರಚಿತವಾದದ್ದು ಎಂದು ಹೇಳಬಹುದು.
ಬೊಮ್ಮಹಳ್ಳಿಯ ಕಿಂದರಿಜೋಗಿಯ ವಸ್ತು, ವಿಷಯ, ಚೌಕಟ್ಟು, ಛಂದಸ್ಸು, ರೂಪಾಂಶ ಎಲ್ಲವುಗಳ ದೃಷ್ಟಿಯಿಂದಲೂ ಅದು ಬ್ರೌನಿಂಗ್ ಕವಿಯ ’ಪೈಡ್ ಪೈಪರ್ ಆಫ್ ಹ್ಯಾಮಿಲ್ಟನ್’ ಕವಿತೆಯ ಭಾಷಾಂತರವಾಗಲೀ ಅನುವಾದವಾಗಲೀ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಕವಿಯೇ ಹೇಳಿದಂತೆ ಅದರಿಂದ ಪ್ರೇರಣೆ ಪಡೆದ ರಚನೆಯಾಗಿದೆ, ಅಷ್ಟೆ. ಮುಂದೆ ಅದು ಪ್ರತ್ಯೇಕವಾಗಿ ಪ್ರಕಟವಾದಾಗ, ಅದಕ್ಕೆ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರು ರೇಖಾಚಿತ್ರಗಳನ್ನು ಬರೆದಿರುತ್ತಾರೆ. ಹಾಡುಗಬ್ಬವಾಗಿ, ಸಹಸ್ರಾರು ಮಂದಿಯ ನಾಲಗೆಯ ತುದಿಯಲ್ಲಿ ನರ್ತಿಸಿದ್ದರೆ, ಪ್ರದರ್ಶನ ರೂಪಕವಾಗಿಯೂ ನೂರಾರು ವೇದಿಕೆಗಳಲ್ಲಿ ಪ್ರದರ್ಶಿಸಲ್ಪಟ್ಟಿರುತ್ತದೆ.
ದೊಡ್ಡವರೆಲ್ಲರ ಹೃದಯದಿ ಕಟ್ಟಿಹ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿರುವುದು
ವಿಸ್ಮೃತ ನಾಕದಲಿ:
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು;
ಹಾಡಲಿ ಕುಣಿಯಲಿ; ಹಾರಲಿ, ಏರಲಿ
ದಿವಿಜತ್ವಕೆ ಈ ಮನುಜಪಶು!
ಎಂಬ ಮುಂಬರಹ ಬೊಮ್ಮನಹಳ್ಳಿಯ ಕಿಂದರಿಜೋಗಿಗಿದೆ. ಪ್ರತಿಯೊಬ್ಬರಲ್ಲೂ ಯಾವಾಗಲೂ (ನಿತ್ಯ ಕಿಶೋರತೆ) ಇರುವ ’ಮಗು’ತ್ವ ಮಕ್ಕಳ ಸಂಗದಲ್ಲಿ ಪ್ರಕಟವಾಗುತ್ತದೆ. ಅದು ಆನಂದದ ದಿವ್ಯ ಶಿಶು ಎಂಬುದು ಕವಿಯ ಅಭಿಪ್ರಾಯ.
ತುಂಗಾತೀರದ ಬಲಗಡೆಯಲ್ಲಿ
ಹಿಂದಲ್ಲಿದ್ದುದು ಬೊಮ್ಮನಹಳ್ಳಿ.
ಅಲ್ಲೇನಿಲಿಗಳ ಕಾಟವೆ ಕಾಟ,
ಅಲ್ಲಿಯ ಜನಗಳಿಗತಿಗೋಳಾಟ:
೪ ೪ ೪ ೩ ಮಾತ್ರಾಗಣಗಳ ಓಟ ಕವಿತೆಗಿದೆ. ನೀಳ್ಗವಿತೆಯಾದ್ದರಿಂದ ಛಂದೋವೈವಿಧ್ಯತೆಯೂ ಓದುಗನ ಮನಸೂರೆಗೊಳ್ಳುತ್ತದೆ.
ಇಲಿಗಳು!
ಬಡಿದುವು ನಾಯಿಗಳ!
ಇಲಿಗಳು!
ಕಡಿದುವು ಬೆಕ್ಕುಗಳ!
ಇಂತಹ ಬಿಡಿಸಿಟ್ಟಿರುವ ಸಾಲುಗಳಲ್ಲಿಯೂ ೪ ೪ ೪ ೧ ಮಾತ್ರಾಗಣಗಳ ಸೊಗಸನ್ನು ಸವಿಯಬಹುದು. ಮತ್ತೆ ತಕ್ಷಣ ಧುತ್ತೆಂದು ತಲೆದೋರುವ ೪ ೪ ೪ ೪; ೪ ೪ ೪ ೩; ೪ ೪ ೪ ೪ ಹೀಗೆ ವೈವಿಧ್ಯಮಯವಾಗಿರುವ ಮಾತ್ರಗಳಣಗಳ ಸೊಬಗನ್ನು ನೋಡಿ:
ಕೆಲವನು ಕೊಂದುವು, ಕೆಲವು ತಿಂದುವು,
ಕೆಲವನು ಬೆದರಿಸಿ ಹಿಂಬಾಲಿಸಿದುವು.
ಅಲ್ಲಿಯ ಮೂಷಿಕನಿಕರವು ಸೊಕ್ಕಿ
ಎಲ್ಲರ ಮೇಲೆಯೆ ಕೈಬಾಯಿಕ್ಕಿ
ಹೆದರಿಕೆಯಿಲ್ಲದೆ ಬೆದರಿಕೆಯಿಲ್ಲದೆ
ಕುಣಿದುವು ಯಾರನು ಲೆಕ್ಕಿಸದೆ!
ಈ ಛಂದೋವೈವಿಧ್ಯೆತೆ ನೀಳ್ಗವಿತೆಗಳಲ್ಲಿ ಸಾಮಾನ್ಯವಾಗಿರುವ ಏಕತಾನತೆಯ ದೋಷವನ್ನು ಹೋಗಲಾಡಿಸಿ ಒಂದು ಹೊಸ ರೀತಿಯೆ ಹುರುಪನ್ನೂ ಓಟವನ್ನೂ ಕವಿತೆಗೆ ಒದಗಿಸುತ್ತದೆ. ಇಡೀ ಕವಿತೆಯ ಲಯಕ್ಕೆ, ಹಾಡುವಿಕೆಗೆ, ಈ ಛಂದೋ ಏರಿಳಿಕೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಬೊಮ್ಮನಹಳ್ಳಿಯ ಕಿಂದರಿಜೋಗಿಯ ಸಾರ್ವಕಾಲಿಕ ಯಶಸ್ಸು, ಜನಪ್ರಿಯತೆ ಸಾಕ್ಷಿಯಾಗಿವೆ. ಹೆಚ್ಚಿನ ಕ್ರಿಯಾಪದಗಳು ’ಉವು’ ಸಮೂಹ ವಾಚಕದೊಂದಿಗೆ ಕೊನೆಗೊಂಡಿರುವುದು ಗಮನಾರ್ಹ. ಹರಿದುವು; ಮೆದ್ದುವು; ಬಂದುವು; ಓಡಿದುವು; ನಿಂತುವು; ಬಿಕ್ಕಿದುವು ಮೊದಲಾದವು. ಕವಿತೆಗೆ ಒಂದು ರೀತಿಯ ಉತ್ಸಾಹ ಹಾಗೂ ಉಲ್ಲಸಿತೆಯನ್ನೂ ಇದು ದಯಪಾಲಿಸಿದೆ ಎನ್ನಬಹುದು.
ಕೆಲವು ಬಿಡಿ ಚಿತ್ರಗಳು:
ಟೋಪಿಯ ಒಳಗಡೆ ಗೂಡನು ಮಾಡಿ
ಹೆತ್ತುವು ಮರಿಗಳನು;
ಪೇಟದ ಒಳಗಡೆ ಆಟವನಾಡಿ
ಕಿತ್ತುವು ಸರಿಗೆಯನು!
ಗೋಡೆಗೆ ತಗುಲಿಸಿದಂಗಿಯ ಜೇಬನು
ದಿನವೂ ಜಪ್ತಿಯ ಮಾಡಿದುವು;
ಮಲಗಿರೆ ಹಾಸಿಗೆಯನ್ನೇ ಹರಿದುವು,
ಕೇಶಚ್ಛೇದವ ಮಾಡಿದುವು;
ಬೆಣ್ಣೆಯ ಕದ್ದುವು, ಬೆಲ್ಲವ ಮೆದ್ದುವು
ಎಣ್ಣೆಗೆ ಬಿದ್ದುವು ದಿನದಿನವು;
ಭೃಂಗಾಮಲಕದ ತೈಲವ ಹಚ್ಚಿದ
ಶೇಷಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನಡಿ ನೋಡೆ
ಇಲಿಗಳಿಗಾಗಿತ್ತೂಟದ ಫೇಣಿ!
ಸಿದ್ದೋಜೈಗಳು ಶಾಲೆಗೆ ಹೋಗಿ
ಪಾಠವ ಬೋಧಿಸುತ್ತಿದ್ದಾಗ
ಅಂಗಿಯ ಜೇಬಿಂ ಹೆಳವಿಲಿಯೊಂದು
ಚಂಗನೆ ನೆಗೆಯಿತು ತೂತನು ಮಾಡಿ.
ಲೇವಡಿ ಎಬ್ಬಿಸೆ ಬಾಲಕರೆಲ್ಲ
ಗುರುಗಳಿಗಾಯಿತು ಬಲು ಗೇಲಿ!
ಬಂದನು ಬಂದನು ಕಿಂದರಿ ಜೋಗಿ!
ಕೆದರಿದ ಕೂದಲ ಗಡ್ಡದ ಜೋಗಿ!
ನಾನಾ ಬಣ್ಣದ ಬಟ್ಟೆಯ ಜೋಗಿ!
ಕೈಯಲಿ ಕಿಂದರಿ ಹಿಡಿದಾ ಜೋಗಿ!
ಮರುಮಾತನಾಡದೆ ಕಿಂದರಿ ಜೋಗಿ
ಕಟ್ಟೆಯನಿಳಿದನು ಬೀದಿಗೆ ಹೋಗಿ.
ಗಡ್ಡವ ನೀವುತ ಸುತ್ತಲು ನೋಡಿ,
ಮಂತ್ರವ ಬಾಯಲಿ ಮಣಮಣ ಹಾಡಿ,
ಕಿಂದರಿ ಬಾರಿಸತೊಡಗಿದನು;
ಜಗವನೆ ಮೋಹಿಸಿತಾ ನಾದ!
ಏನಿದು? ಏನಿದು? ಗಜಿಬಿಜಿ ಎಲ್ಲಿ?
ಊರನೆ ಮುಳುಗಿಪ ನಾದವಿದೆಲ್ಲಿ?
ಇಲಿಗಳು! ಇಲಿಗಳು! ಇಲಿಗಳ ಹಿಂಡು!
ಬಳ ಬಳ ಬಂದುವು ಇಲಿಗಳ ದಂಡು!
ಅನ್ನದ ಮಡಕೆಯನಗಲಿದುವು!
ಟೋಪಿಯ ಗೂಡನು ತ್ಯಜಿಸಿದುವು!
ಬಂದುವು ಅಂಗಿಯ ಜೇಬನು ಬಿಟ್ಟು,
ಮಕ್ಕಳ ಕಾಲಿನ ಚೀಲವ ಬಿಟ್ಟು.
ಹಾರುತ ಬಂದುವು, ಓಡುತ ಬಂದುವು,
ನೆಗೆಯುತ ಬಂದುವು, ಕುಣಿಯುತ ಬಂದುವು,
ಜೋಗಿಯು ಬಾರಿಸೆ ಕಿಂದರಿಯ!
ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ,
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ,
ಮಾವಿಲಿ, ಬಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ,
ಎಲ್ಲಾ ಬಂದುವು ಓಡೋಡಿ,
ಜೋಗಿಯು ಬಾರಿಸೆ ಕಿಂದರಿಯ!
ಬಂದುವು ನಾನಾ ಬಣ್ಣದ ಇಲಿಗಳು,
ಕೆಂಪಿನ ಇಲಿಗಳು, ಹಳದಿಯ ಇಲಿಗಳು,
ಬೆಳ್ಳಿಲಿ, ಕರಿಯಲಿ, ಗಿರಯಿಲಿ, ಹೊಲದಿಲಿ
ಕುಂಕುಮರಾಗದ, ಚಂದನರಾಗದ,
ಹಸುರಿನ ಬಣ್ಣದ, ಪಚ್ಚೆಯ ವರ್ಣದ,
ಸಂಜೆಯ ರಾಗದ, ಗಗನದ ರಾಗದ,
ನಾನಾವರ್ಣದ ಇಲಿಗಳು ಬಂದುವು
ಕುಣಿಯುತ ನಲಿಯುತ ಸಂತಸದಿ
ಜೋಗಿಯು ಬಾರಿಸೆ ಕಿಂದರಿಯ!
ನೋಡಿರಿ! ಕಾಣಿರಿ! ಬರುತಿಹವಿನ್ನೂ!
ಅಟ್ಟದ ಮೇಲಿಂ ಬರುವುವು ಕೆಲವು!
ಕಣಜದ ಮೇಲಿಂ ಬರುವುವು ಕೆಲವು!
ಓಹೋ! ಬಂದುವು ಹಿಂಡ್ಹಿಂಡಾಗಿ!
ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ,
ಚೀ! ಪೀ! ಎನ್ನುತ ಕೂಗುತಲೋಡಿ
ಗಹಗಹಿಸುತ ನೆರೆ ನಲಿನಲಿದಾಡಿ
ಬಂದಿತು ಮೂಷಿಕಸಂಕುಲವು
ಜೋಗಿಯು ಬಾರಿಸೆ ಕಿಂದರಿಯ!
ಕಿಂದರಿಜೋಗಿಯೆ ಹೇಳುವೆ ಕೇಳು,
ಸಾವಿರ ಆರನು ನಾ ಕೊಡಲಾರೆನು;
ನೀ ಮಾಡಿದ ಕೆಲಸವು ಹೆಚ್ಚಲ್ಲ.
ಸುಮ್ಮನೆ ಕಿಂದರಿ ಬಾರಿಸಿದೆ.
ಇಲಿಗಳ ಹೊತ್ತೆಯ ನೀನೇನು?
ಅವುಗಳು ತಮ್ಮಷ್ಟಕೆ ತಾವೇ
ಬಿದ್ದುವು ಹೊಳೆಯಲಿ ಮುಳುಗಿದುವು!
ಕೊಡುವೆನು ನೀ ಪಟ್ಟಿಹ ಶ್ರಮಕಾಗಿ
ಕಾಸೈದಾರನು ತೆಗೆದುಕೊ, ಜೋಗಿ;
ಪುರಿಗಡಲೆಯ ಕೊಂಡುಕೊ ಹೋಗಿ!
’ಟಿಂಗ್ ಟಿಂಗ್! ಟಿಂಗ್ ಟಿಂಗ್!’ ನಾದವ ಕೇಳಿ
ಚಂಗ್ ಚಂಗ್ ನೆಗೆದರು ಬಾಲಕರೋಡಿ.
ಕಿಂದರಿ ಜೋಗಿಯು ಹೊರಟನು ಮುಂದೆ,
ಬಾಲಕರೆಲ್ಲರು ಹರಿದರು ಹಿಂದೆ!
ಕುಂಟರು ಭರದಿಂದೋಡಿದರು!
ಕುರುಡರು ನೋಟವ ನೋಡಿದರು!
ಮೂಗರು ಸವಿಮಾತನಾಡಿದರು!
ಕಿವುಡರು ನಾದವ ಕೇಳಿದರು!
ಬಾಳರು ಭರದಿಂದೋಡಿದರು:
ಜನರೆಲ್ಲಾ ಗೋಳಾಡಿದರು!
ಅಯ್ಯೋ ಎನಗಿಲ್ಲವರನಾಂದ!
ಜೋಗಿಯು ಕಿಂದರಿ ಬಾರಿಸೆ ಕಂಡೆವು
ಬಣ್ಣದ ಮನೆಗಳ ಪಟ್ಟಣವ,
ಹಣ್ಣುಗಳುದುರಿದ ತೋಟಗಳ!
ನಾನಾ ಆಟದ ಸಾಮಾನುಗಳ,
ತರತರ ರಾಗದ ಗೊಂಬೆಗಳ;
ಮಾತಿಗೆ ಮೀರಿದ ಆನಂದಗಳ,
ಕೈಗೇ ಸಿಕ್ಕುವ ಹಕ್ಕಿಗಳ!
ಜಿಂಕೆಗಳೆಮ್ಮಡನಾಡಿದುವಲ್ಲಿ,
ಮೊಲಗಳು ಕುಳಿತುವು ಮೈಮೇಲಲ್ಲಿ!
ಅಯ್ಯೋ ಹೋಯಿತೆ ಆ ನಾಕ!
ಅಯ್ಯೋ ಬಂದಿತೆ ಈ ಲೋಕ!
ಬಂದರು ಎಲ್ಲರು ಬೊಮ್ಮನಹಳ್ಳಿಗೆ
ದುಃಖಾಂಬುಧಿಯೊಳಗೀಜಾಡಿ;
ಕಂಬನಿಗರೆದರು ಗೋಳಾಡಿ!
ಈಗಾ ಹಳ್ಳಿಯ ಬೀದಿಯಲಾರೂ
ಕಿಂದರಿನಾದವನಾಲಿಸರು
ಕಿಂದರಿ ಜೋಗಿಗಳಲ್ಲಿಗೆ ಬಂದರೆ
ಬೇಕಾದ್ದೆಲ್ಲವನೀಯುವರು!
ಭಾಷೆಯ ಕೊಟ್ಟರೆ, ಮೂರ್ತೀ, ನಾವು
ಮೋಸವ ಮಾಡದೆ ಸಲ್ಲಿಸಬೇಕು.
ಆದುದರಿಂದ, ಮೂರ್ತೀ, ಕೇಳು:
ಸತ್ಯವನೆಂದೂ ತ್ಯಜಿಸದೆ ಬಾಳು!