Thursday, December 27, 2012

ಕುವೆಂಪು ಕಾವ್ಯಯಾನಕ್ಕೊಂದು ಆರಂಭ

ನನ್ನ ಮಾತು
ಇಲ್ಲಿನ ಬರಹಗಳು ಕುವೆಂಪು ಕಾವ್ಯದ ವಿಮರ್ಶೆಯಲ್ಲ; ಕೇವಲ ಮರು ಓದು ಎಂಬುದನ್ನು ಮೊದಲೇ ಸ್ಪಷ್ಟಪಡಿಸುತ್ತೇನೆ. ಏಕೆಂದರೆ ನಾನು ವಿಮರ್ಶಕನಲ್ಲ; ಕೇವಲ ಒಬ್ಬ ಓದುಗ ಮಾತ್ರ. ಕುವೆಂಪು ಕಾವ್ಯ-ಬದುಕು ಸಾಮಾನ್ಯ ಓದುಗನಾದ ನನ್ನನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಿಬಿಟ್ಟಿವೆ. ಒಬ್ಬ ಓದುಗನಾಗಿ, ಕೆಲವು ಕವನಗಳ ಸಾಂದರ್ಭಿಕ ಹಿನ್ನೆಲೆಯಲ್ಲಿ ನಡೆಸಿದ ಕಾವ್ಯಯಾತ್ರೆಯ ಫಲವೇ ಈ ಬರಹಗಳು. 

ಕವನಗಳ ಹುಟ್ಟಿನ ಸಂದರ್ಭದ ಹಿನ್ನೆಲೆಯಲ್ಲಿ ಅವುಗಳನ್ನು ನೋಡುವುದು, ಆ ಕವಿತೆಗಳಿಗೆ ಮತ್ತೊಂದು ಆಯಾಮವನ್ನು ತಂದುಕೊಡುತ್ತದೆ ಎಂಬ ನಂಬಿಕೆ ನನ್ನದು. ಕುವೆಂಪು ಅವರ ಬದುಕು-ಬರಹವನ್ನು ಗ್ರಹಿಸುವಲ್ಲಿ ಇದೊಂದು ಹೊಸ ಆಯಾಮವಷ್ಟೆ! ಖಂಡ ಖಂಡವಾಗಿ ಅಖಂಡವನ್ನು ಗ್ರಹಿಸುವ ಹಾಗೆ. ಕವಿತೆಗಳ ಸಂದರ್ಭವನ್ನು ಹುಡುಕಿಕೊಂಡು ಹೊರಟ ನನಗೆ ಸಿಕ್ಕಿದ್ದು ಪ್ರಕೃತಿಯ ಶಿಶು, ಗುರುವಿನೊಲುಮೆಯ ಶಿಷ್ಯ, ಶಿಷ್ಯರೊಲುಮೆಯ ಗುರು, ಪೂರ್ಣಾಂಗಿಗೊಲಿದ ಪತಿ, ಮಕ್ಕಳ ವಾತ್ಸಲ್ಯಮಯೀ ತಂದೆ, ಪೂರ್ಣಾನಂದದ ಅನುಭಾವಿ, ಕಲ್ಮಶವಿಲ್ಲದ ಚಿಂತಕ, ಗದ್ದಲವಿಲ್ಲದ ಕ್ರಾಂತಿಕಾರ, ಅದ್ಭುತಗಳನ್ನು ಸಾಧಿಸಿದ ದಾರ್ಶನಿಕ ಕುವೆಂಪು!
 
ಕೇವಲ ಕುವೆಂಪು ಕಾವ್ಯಗಳನ್ನು ಓದುವುದು ಮತ್ತು ಆಸಕ್ತ ಓದುಗರಿಗೆ ಓದಿಸುವುದು ಇಲ್ಲಿನ ಬರಹಗಳ ಏಕಮಾತ್ರ ಉದ್ದೇಶ.  ನಿಮ್ಮ ಲೇಖನವನ್ನು ಓದಿದಾಗ, ಕವಿತೆಯ ಪೂರ್ಣಪಾಠವನ್ನು ಓದಬೇಕೆನ್ನಿಸಿದರೂ, ಕಾರ್ಯದೊತ್ತಡದಿಂದ ಓದಲಾಗುತ್ತಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದರು. ಅದಕ್ಕಾಗಿ ಸಾಧ್ಯವಾದಷ್ಟು ಕಡೆ, ಕವಿತೆಗಳ ಪೂರ್ಣಪಾಠ ಉಲ್ಲೇಖಿಸಿದ್ದೇನೆ. ಬ್ಲಾಗಿನಲ್ಲಿ ಬರೆಯುವಾಗ ಭಾಗಶಃ ಉಲ್ಲೇಖಗೊಳ್ಳುತ್ತಿದ್ದ ಕವಿತೆಗಳನ್ನು  ಅಲ್ಲಲ್ಲಿಯೇ ಪೂರ್ತಿಯಾಗಿ ಓದಲು ಅನುವಾಗವಂತೆ ಪೂರ್ಣಪಾಠ ನೀಡಬೇಕಂತಲೂ ಹಲವಾರು ಸ್ನೇಹಿತರು ಒತ್ತಾಯಿಸಿದ್ದೂ ಅದಕ್ಕೆ ಕಾರಣ. ಇಲ್ಲಿಯ ಬರಹಗಳಲ್ಲಿ, ಅವುಗಳ ಸಂಯೋಜನೆಯಲ್ಲಿ ಏನಾದರೂ ಅಸಂಬದ್ಧತೆ ಕಂಡು ಬಂದರೆ, ಅದಕ್ಕೆ ನಾನೇ ಪೂರ್ಣ ಹೊಣೆಗಾರನಾಗಿರುತ್ತೇನಯೇ ಹೊರತು, ಕವಿಯ ಕಾವ್ಯವಲ್ಲ.
ನನ್ನ ನಂದೊಂದ್ಮಾತು ಬ್ಲಾಗಿನಲ್ಲಿ ಕುವೆಂಪು ಕಾವ್ಯದ ಬಗ್ಗೆ ನಾನು ಬರೆದ ಲೇಖನಗಳನ್ನು ಓದಿ ಪ್ರೋತ್ಸಾಹಿಸಿದ, ಪ್ರತಿಕ್ರಿಯೆ ನೀಡಿದ, ಪ್ರೀತಿಯಿಂದ ಜಗಳಕ್ಕೆ ಬಿದ್ದ ಆತ್ಮೀಯರಿಗೆ,
ನಾಲ್ಕೈದು ಕಂತುಗಳಲ್ಲಿ ಮುಗಿಸಬೇಕೆಂದಿದ್ದ ಬರವಣಿಗೆಯನ್ನು, ದಯಮಾಡಿ ಕುವೆಂಪು ಅವರ ಕಾವ್ಯದ ಬಗೆಗಿನ ಬರವಣಿಗೆಯನ್ನು ಮುಂದುವರೆಸಿ, ನಮ್ಮ ಕೆಲಸದ ನಡುವೆ ಆ ಮಹಾಕವಿಯನ್ನು ಪೂರ್ತಿ ಓದಲಾಗದಿದ್ದರೂ, ನಿಮ್ಮ ಬರಹಗಳ ಮೂಲಕ ಸ್ವಲ್ಪವಾದರೂ ಓದಿಕೊಳ್ಳುತ್ತೇವೆ ಎಂದು ಪ್ರೀತಿಯಿಂದ ಒತ್ತಾಯಿಸಿದ ನನ್ನ ಬ್ಲಾಗ್ ಸ್ನೇಹಿತರಿಗೆ, ಅನಿವಾಸಿ ಭಾರತೀಯರಿಗೆ,
ಬ್ಲಾಗಿನಲ್ಲಿ ಪ್ರಕಟವಾಗುವಾಗಲೇ ಕೆಲವೊಂದನ್ನು ಬ್ಲಾಗಿನಿಂದೆತ್ತಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ಸಂಪಾದಕರುಗಳಿಗೆ, ಸಂಪದ, ಅವಧಿ, ದಟ್ಸ್‌ಕನ್ನಡ ಮತ್ತು ಕೆಂಡಸಂಪಿಗೆ ಮೊದಲಾದ ಆನ್‌ಲೈನ್ ಪತ್ರಿಕೆಗಳವರಿಗೆ,
ಕುವೆಂಪು ಕವಿತೆಗಳ ಬರವಣಿಗೆಯ ಬಗ್ಗೆ ತಿಳಿಸಿದಾಗ, ಪ್ರೋತ್ಸಾಹದ ಮಾತನಾಡಿದ ಶ್ರೀಮತಿ ತಾರಿಣಿಯವರಿಗೆ ಮತ್ತು ಶ್ರೀಮತಿ ರಾಜೇಶ್ವರಿಯವರಿಗೆ, 
ಆಗೊಮ್ಮೆ ಈಗೊಮ್ಮೆ ನಾನು ಕೊಟ್ಟ ಈ ಸರಣಿಯ ಲೇಖನಗಳನ್ನು ಓದಿ ಪ್ರತಿಕ್ರಿಯಿಸಿದ, ಪ್ರೋತ್ಸಾಹಿಸಿದ ಹಿರಿಯ ಮಿತ್ರರಾದ ಶ್ರೀ ಜಿ.ಎಸ್.ಎಸ್.ರಾವ್, ಶ್ರೀ ಎಸ್.ಎಂ.ಪೆಜತ್ತಾಯ ಹಾಗೂ ಶ್ರೀ ಎಂ.ವಿ.ಕುಮಾರಸ್ವಾಮಿಯವರಿಗೆ,  ಮತ್ತು ನಮ್ಮ ಮನೆಯವರಿಗೆ,
ತಮ್ಮ ಕಾರ್ಯಬಾಹುಳ್ಯದ ನಡುವೆಯೂ, ಈ ಕಿರಿಯನ ಪ್ರಾರ್ಥನೆಗೆ ಓಗೊಟ್ಟು, ಕೃತಿಗೆ ಮುನ್ನುಡಿಯನ್ನು ಬರೆದು ಆಶೀರ್ವದಿಸಿರುವ ಹಿರಿಯ ಸಂಶೋಧಕರಾದ ನಾಡೋಜ ಪ್ರೊ. ಹಂಪ. ನಾಗರಾಜಯ್ಯನವರಿಗೆ,
ಈಗ, ಲೇಖನಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವ ಮಿತ್ರ ಸೃಷ್ಟಿ ನಾಗೇಶನಿಗೆ, ಮುಖಪುಟ ಕಲಾವಿದರಾದ ಸುಧಾಕರ ದರ್ಭೆ ಮತ್ತು ಸತ್ಯಶ್ರೀ ಪ್ರಿಂಟರ‍್ಸ್ ಎಲ್.ಲಿಂಗಪ್ಪನವರಿಗೆ,
ಮತ್ತು ಸಹೃದಯ ಓದುಗರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
 


2 comments:

Unknown said...

CONGRATS SIR :) BARALIKKAAGADIDDARU NAMMA HARAIKE SADA NIMMONDIGE

Ashok.V.Shetty, Kodlady said...

Congrats and all the very best sir....