Friday, March 01, 2013

ಚಂದ್ರಮಂಚಕೆ ಬಾ, ಚಕೋರಿ!

ಕುವೆಂಪು ಅವರ ಬಹು ಮಹತ್ವದ ಶೃಂಗಾರ ಗೀತೆಗಳಲ್ಲಿ ಚಂದ್ರಮಂಚಕೆ ಬಾ ಚಕೋರಿ ಎಂಬುದೂ ಒಂದು.
ಅದರ ಪೂರ್ಣಪಾಠ ಇದು.

ಚಂದ್ರಮಂಚಕೆ ಬಾ, ಚಕೋರಿ!

ಚಂದ್ರಮಂಚಕೆ ಬಾ, ಚಕೋರಿ!
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ!
ಚಂದ್ರಿಕಾ ಮಧು ಪಾನ ಮತ್ತ
ಪೀನ ಕುಂಭ ಪಯೋದವಿತ್ತ
ವಕ್ಷ ಪರಿರಂಭನ ನಿಮಿತ್ತ
ನಿರಾವಲಂಬನಾ!
ಬಾ, ಚಕೋರಿ! ಬಾ, ಚಕೋರಿ!
ಚಾತಕದೊಲು ಬಾಯಾರಿದೆ
ಚಕೋರ ಚುಂಬನ!


ಚರಣನೂಪುರ ಕಿಂಕಿಣೀ ಕ್ವಣ
ಮದನ ಸಿಂಜಿನೀ ಜನಿತ ನಿಕ್ವಣ:
ಚಿತ್ತ ರಂಜನಿ, ತಳುವದೀ ಕ್ಷಣ
ಚಂದ್ರಮಂಚಕೆ ಬಾ, ಚಕೋರಿ!
ಬಾ, ಚಕೋರಿ! ಬಾ, ಚಕೋರಿ!
ಚಾತಕದೊಲು ಬಾಯಾರಿದೆ
ಚಕೋರ ಚುಂಬನ!

ತೆರೆಯ ಚಿಮ್ಮಿಸಿ, ನೊರೆಯ ಹೊಮ್ಮಿಸಿ,
ಕ್ಷೀರಸಾಗರದಲ್ಲಿ ತೇಲುವ
ಬಾಗುಚಂದ್ರನ ತೂಗುಮಂಚಕೆ
ಬಾ, ಚಕೋರಿ! ಬಾ, ಚಕೋರಿ!
ಎದೆ ಹಾರಿದೆ ಬಾಯಾರಿದೆ
ಚಕೋರ ಚುಂಬನ!

ನಿಕುಂಜ ರತಿವನ ಮದನಯಾಗಕೆ
ಅನಂಗ ರಕ್ತಿಯ ಬಿಂಬ ಭೋಗಕೆ
ಕಾಂಕ್ಷಿಯಾಗಿದೆ ನಗ್ನ ಯೋಗಕೆ
ಇಕ್ಷು ಮಂಚ ರಸಾಗ್ನಿ ಪಕ್ಷಿಯ
ಅಚಂಚು ಚುಂಬನ!
ಬಾ, ಚಕೋರಿ! ಬಾ, ಚಕೋರಿ!
ಚಂದ್ರಮಂಚಕೆ ಬಾ, ಚಕೋರಿ!


ಅದನ್ನು ಒಂದು ಬ್ಲಾಗಿನಲ್ಲಿ ಓದಿದ ಒಬ್ಬ ಸಹೃದಯ ಅದು ಅರ್ಥವಾಗಲಿಲ್ಲವೆಂದು ಗೋಳಾಡಿರುವುದು ಹೀಗೆ.

("""ಸುಮಾರು ವರುಷಗಳಿಂದ ಈ ಹಾಡನ್ನು ಕೇಳಿ ಆನಂದಿಸಿದ್ದೇನೆ. ಆದರೆ ಯಾವ ಸಾಲುಗಳು ಅರ್ಥವಾಗಿರಲಿಲ್ಲ ಅಲ್ಲೊಂದು ಇಲ್ಲೋಂದು ನುಡಿ ಬಿಟ್ಟು. ನನಗೆ ಕನ್ನಡ ಗೊತ್ತಿರುವುದೇ ಅಷ್ಟೇನೋ ಅಂದು ಕೊಂಡುಬಿಟ್ಟಿದ್ದೆ. ತುಂಬಾ ಜನಗಳಲ್ಲಿ ಅರ್ಥ ಕೇಳಿದರು ಸರಿಯಾರಿ ಯಾರಿಗೂ ಗೊತ್ತಿರಲಿಲ್ಲ. ಕುವೆಂಪು ಬರೆದಿರುವುದು, ತುಂಬಾ ಎತ್ತರದ ಕನ್ನಡದಲ್ಲಿದೆ ಅಂತ ಜಾರಿಕೆಯ ಮಾತು ಹೇಳಿಬಿಡುತಿದ್ದರು. ಒಂದು ದಿನ ನಾನೆ ನುಡಿಗಂಟು ಹಿಡಿದು ಕೂತೆ. ವೆಂಕಟ ಸುಬ್ಬಯ್ಯನವರ ನುಡಿಗಂಟಿನಲ್ಲಿ ಜಾಲಾಡಿದೆ, ಕಸ್ತೂರಿ ಕನ್ನಡದಲ್ಲಿ ಜಾಲಾಡಿದೆ. ಅಷ್ಟೂ ಕನ್ನಡ ನುಡಿಗಂಟಲ್ಲಿ ಎಷ್ಟೊಂದು ನುಡಿಗಳೇ ಸಿಗುತ್ತಿರಲಿಲ್ಲ. ತದನಂತರ ಒಂದು ದಿನ ಗೊತ್ತಾಯಿತು. ಈ ಹಾಡಲ್ಲಿ ಇರುವುದು ಕನ್ನಡ ನುಡಿಗಳಲ್ಲ ಬರಿ ಸಂಸ್ಕೃತ ನುಡುಗಳು ಅಂತ. ಹುಡುಕಿ ನೋಡಿದಾಗ ನೂರಕ್ಕೆ ತೊಂಬತ್ತು ನುಡಿಗಳು ಸಂಸ್ಕೃತ ನುಡಿಗಳೇ. ಹೇಗೆ ಅರ್ಥವಾಗಬೇಕು ಈ ಸಂಸ್ಕೃತ ನಮ್ಮಂತ ಹಳ್ಳಿ ಹೈದರಿಗೆ?? ಅಯ್ಯೋ ನನ್ನ ಕಸ್ತೂರಿ ಕನ್ನಡವೇ..ಅಯ್ಯೋ ಕನ್ನಡದ ರಸಕವಿಯೇ..ಯಾಕಪ್ಪ ಈಗೆ ಮಾಡಿದೆ ಅನ್ನಿಸಿಬಿಟ್ಟಿತು. ಗುರು ಅವತ್ತೆ ನನಗೆ ಕುವೆಂಪು ಮೇಲೆ ಇದ್ದ ಅಭಿಮಾನ ಕಿಂಚಿತ್ತಾದರು ಕಮ್ಮಿ ಆಯಿತು ನೋಡು.ಕನ್ನಡ ನಾಡಗೀತೆ ಜಯಭಾರತ ಜನನಿಯ ತನು ಜಾತೆ ಇದು ಕೂಡ ಸಂಸ್ಕೃತಮಯ ಗುರು. ಬರಿ ಹೋಳು. ನೇರವಾಗಿ ಕನ್ನಡದ ಬದಲು ಸಂಸ್ಕೃತನೆ ಓದಬಹುದಲ್ಲ!! ಅನಾನಿಮಸ್ ಹೇಳುವಂತೆ ಎಲ್ಲದು ಕಂಸ್ಕೃತವೆ. ತುಂಬಾನೆ ಬೌನ್ಸರ್.""" - ನನ್ನಿ ಸ್ವಾಮಿ)

ಅದಕ್ಕೆ ನನ್ನ ಸಮಾಧಾನ ಇದು.
ಇಲ್ಲಿನ ಕೆಲವರ ಗೋಳಾಟವನ್ನು ಗಮನಿಸಿದರೆ ಅಯ್ಯೊ ಎನ್ನಿಸುತ್ತದೆ. ತಮಗೆ ಅರ್ಥವಾಗಲಿಲ್ಲ ಎಂದ ಮಾತ್ರಕ್ಕೆ, ಕವಿ ಅದನ್ನು ಬರೆಯಲೇ ಬಾರದು ಎಂಬ ನಿಯಮವೆಲ್ಲಿದೆ ಸ್ವಾಮಿ? ಸ್ವಲ್ಪಮಟ್ಟಿನ ಭಾಷಾಶಾಸ್ತ್ರದ ಪರಿಚಯವಿದ್ದ ಯಾವನೇ ಆಗಲೀ ನಿಮ್ಮ ಮಾತನ್ನು ಒಪ್ಪುವುದಿಲ್ಲ. ಒಂದು ಭಾಷೆ ಬೆಳೆಯುವುದೇ ಅದರ 'ಸ್ವೀಕರಣ' ಮತ್ತು 'ಧಾರಣ' ಗುಣದ ಶಕ್ತಿಯಿಂದ. ಅದು ಹೆಚ್ಚಾಗಿರುವುದರಿಂದಲೇ ಇಂದು ಇಂಗ್ಲಿಷ್ ಪ್ರಪಂಚದ ಶಕ್ತ ಭಾಷೆಗಳಲ್ಲಿ ಒಂದಾಗಿದೆ' ಇದನ್ನು ಯಾರು ಒಪ್ಪಲಿ, ಬಿಡಲಿ! ಕನ್ನಡದ 'ಸ್ವೀಕರಣ' ಮತ್ತು 'ಧಾರಣ' ಗುಣ ಚೆನ್ನಾಗಿಯೇ ಇದೆ. ಉದಾ: 'ಬಸ್' BUS ಎಂಬ ಇಂಗ್ಲಿಷ್ ಪದವನ್ನು ನಾವು ಕನ್ನಡೀಕರಿಸಿಕೊಂಡಿರುವ ರೀತಿಯನ್ನೊಮ್ಮೆ ಗಮನಿಸಿ. ಬಸ್ಸು, ಬಸ್ಸಿಗೆ, ಬಸ್ಸಿನಿಂದ, ಬಸ್ಸಿನಲ್ಲಿ, ಬಸ್ಸಿಗಾಗಿ, ಬಸ್ಸಲ್ಲಿ, ಬಸ್ಸಿಗೋಸ್ಕರ... ಇತ್ಯಾದಿ... ಆದರೆ ಮಡಿವಂತಿಕೆ ಅದನ್ನು ವಿರೋಧಿಸುತ್ತದೆ. ಇದು ಕನ್ನಡಿಗರ ದೌರ್ಭಾಗ್ಯವೇ ಸರಿ!
ಇನ್ನು ಈ ಪದ್ಯದ ಪದಗಳ ಅರ್ಥಕ್ಕಾಗಿ ನೀವು ಹುಡುಕಾಡಿರುವ ನಿಘಂಟುಗಳು ಸೀಮಿತವಾಗಿವೆ ಎಂಬುದೇ ನಿಮಗೆ ಗೊತ್ತಿಲ್ಲ. ಕೇವಲ ಐದು ರುಪಾಯಿಯ 'ಕನ್ನಡ ಸಾಹಿತ್ಯ ಪರಿಷತ್ತಿ'ನ ನಿಘಂಟಿನಲ್ಲೇ ಈ ಪದ್ಯದ ಎಲ್ಲ ಪದಗಳಿಗೆ ಅರ್ಥ ಸಿಗುತ್ತದೆ. ಒಂದು ಪದಕ್ಕೆ (ನಿಕ್ವಣ) ಮಾತ್ರ ನೂರು ರುಪಾಯಿಯ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿಗೆ ಮೊರೆ ಹೋಗಬೇಕು ಅಷ್ಟೆ! ಏಕೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಎಂದು ಹೇಳುತ್ತಿದ್ದೇನೆಂದರೆ, ಅವೆಲ್ಲಾ ಬಹಳ ಹಿಂದೆಯೇ ಅಂದರೆ ಸುಮಾರು ಸಾವಿರಾರು ವರ್ಷಗಳೀಮದಲೇ ಕನ್ನಡಕ್ಕೆ ಬಂದು ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗಿವೆ. ಅದಕ್ಕೆ ಕನ್ನಡ ನಿಘಂಟನ್ನು ಸೇರಿವೆ ಎಂಬುದನ್ನು ಮನಗಾಣಿಸಲು. ಅಷ್ಟೊಂದು ನಿಕ್ಕಿಯಾಗಿ ನಾನು ಹೇಳಲು ಈ ಹಾಡನ್ನು ಬಹುದಿನಗಳ ಕಾಲದಿಂದಲೂ ಎಂಜಾಯ್ ಮಾಡಿಕೊಂಡು ಬರುತ್ತಿರುವವರಲ್ಲಿ ನಾನೂ ಒಬ್ಬ. ಅದನ್ನು ನಾನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದರಿಂದ ಈ ಮಾತನ್ನು ಹೇಳುತ್ತಿದ್ದೇನೆ.
ಇನ್ನು ಒಂದು ಮಾತನ್ನು ಗಮನಿಸಬೇಕು. ಈ ಪದ್ಯದ ಭಾಷೆಯನ್ನು ಕನ್ನಡ ಸಾಹಿತ್ಯದ ಚರಿತ್ರೆಯ ಹಿನ್ನೆಲೆಯಲ್ಲಿ ಗಮನಿಸಬೇಕು. ಈ ಗೀತೆ ರಚನೆಯಾದಾಗ ಕುವೆಂಪು ಒಬ್ಬರೇ ಶೂದ್ರ ಬರಹಗಾರ. ಸಾಹಿತ್ಯ ಪರಂಪರೆಯಲ್ಲೇ ತನಗೆದುರಾದ ಎಲ್ಲವನ್ನೂ ಎದುರಿಸಿ, ಆದರೆ ನಿರಾಕರಿಸದೆ, ಅವಕಾಶ ಸಿಕ್ಕರೆ ಎಂತಹ ಪದ್ಯವನ್ನಾದರೂ ಬರೆಯುತ್ತೇನೆ ಎಂದು ಸಾಧಿಸಿ ತೋರಿಸಬೇಕಾದ ಅವಶ್ಯಕತೆ ಕುವೆಂಪು ಅವರಿಗೆ ಇತ್ತು. ಅದನ್ನು ಸಾಧಿಸಿ ತೋರಿಸಿದ್ದಾರೆ.
ಇನ್ನು ಪದ್ಯದ ವಸ್ತು: ಶೃಂಗಾರ. ಅದರ ಅಭಿವ್ಯಕ್ತಿಯಲ್ಲಿ ಒಂಚೂರು ಅಚೀಚೆಯಾದರೂ ಅಶ್ಲೀಲತೆಯೆಡೆಗೆ ವಾಲಿಬಿಡುತ್ತದೆ. ಸಂಸ್ಕಾರವಂತನಾದ ಕವಿಗೆ ಆ ಎಚ್ಚರವಿದ್ದುದರಿಂದಲೇ ಪದಗಳ ಬಳಕೆಯಲ್ಲಿ ಎಚ್ಚರವಹಿಸಿರುತ್ತಾನೆ.
ಇನ್ನು ಅದರ ಅರ್ಥವನ್ನು ಅಶ್ಲೀಲತೆಗೆ ಎಡೆ ಮಾಡಿಕೊಡದೆ ಸರಳವಾಗಿ ಹೇಳಬೇಕೆಂದರೆ, ಇಷ್ಟೆ.
"ಬೆಳದಿಂಗಳೆಂಬ ಜೇನಿಗಾಗಿ ಬಾಯಾರಿದೆ ಚಕೋರ
ಬೆಳದಿಂಗಳೆಂಬ ಜೇನನ್ನು ಸೇವಿಸಿ ಮದಿಸಿರುವ ದೊಡ್ಡ ಕಲಶದಂತಹ ಮೊಲೆಯನ್ನುಳ್ಳ ಎದೆಯನ್ನು ಆಲಂಗಿಸಿದ್ದರಿಂದ ನಾನು ನಿರಾವಲಂಬಿತನಾಗಿದ್ದೇನೆ. (ಆ ಸುಖದ ಮತ್ತಿನಲ್ಲಿ ಕಳೆದು ಹೋಗಿದ್ದೇನೆ)
ಮಳೆಹನಿಯನ್ನು ಕುಡಿದು ಬದುಕುತ್ತದೆ ಎಂದು ನಂಬಿರುವ ಕಾಲ್ಪನಿಕ ಪಕ್ಷಿಗೆ ಬಾಯಾರಿದ ಹಾಗೆ ನನಗೂ ಬಾಯಾರಿಕೆಯಾಗಿದೆ.

ಕಾಲಂದಿಗೆ ಕಿರುಗೆಜ್ಜೆಗಳ ಶಬ್ದ ಮನ್ಮಥ ಬಿಲ್ಲನ್ನು ಹೆದೆಯೇರಿಸಿದ್ದರಿಂದ ಉಂಟಾದ ಶಬ್ದದಂತಿದೆ. ಮನಸ್ಸನ್ನು ರಂಜಿಸುತ್ತಿರುವವಳೆ, ಇನ್ನು ತಡವಾಗುವುದು ಬೇಡ. ಬಾ ಚಂದ್ರಮಂಚಕೆ.


ಅಲೆಗಳನ್ನು ಚಿಮ್ಮಿಸಿ ನೊರೆಯನ್ನು ಹೊರಡಿಸಿ ಕ್ಷೀರಸಮುದ್ರದಲ್ಲಿ ತೇಲೋಣ ಬಾ ಚಂದ್ರಮಂಚಕೆ. ಎದೆ ಡವಗುಡುತ್ತಿದೆ; ಬಾಯಾರುತ್ತಿದೆ ಚುಂಬನಕ್ಕೆ ಕಾತರಿಸಿ ಬಾ ಚಂದ್ರಮಂಚಕೆ.

ಲತಾಗೃಹದಿಂದ ಕೂಡಿದ ರತಿಯ ತೋಟವು ಮನ್ಮಥನ ಯಾಗಕ್ಕೆ
ಅಮೂರ್ತವಾದ ಪ್ರೀತಿಯ ಮೂರ್ತ ಅನುಭವಕ್ಕೆ
ನಗ್ನಯೋಗವನ್ನು ಬಯಸುತ್ತಿದೆ. ಕಬ್ಬಿನ ಮಂಚದ ರಸವನ್ನುಳ್ಳ ಅಗ್ನಿ ಪಕ್ಷಿ(ಬಯಕೆ)ಯ ಅಚಂಚು (ಕೊಕ್ಕಿಲ್ಲದ, ನೋವಿಲ್ಲದ) ಚುಂಬನಕ್ಕಾಗಿ ಬಾ ಚಂದ್ರಮಂಚಕೆ.

4 comments:

Unknown said...

ಅತ್ಯಧಿಕ ಪ್ರೇಕ್ಷಕರನ್ನು ಮುಟ್ಟಲು ಸಲವಾಗ್ ನಿಮ್ಮ ಕವಿತೆಗಳನ್ನು/ಸಾಹಿತ್ತ್ಯವನ್ನು KannadaViswha.com ನಲ್ಲಿ ಪೋಸ್ಟ್ ಮಾಡಿ.

We invite you to join and contribute to the Kannada Sahittya with us.

ravi said...

ಧನ್ಯವಾಗಳು ಸರ್.....

ಪಟ್ಟಣಗೆರೆ said...

ಗುರುಗಳೆ ಇನ್ನಷ್ಟು ವಿಸ್ತೃತತೆ ಸಿಗ್ತದಾ ? ದಯವಿಟ್ಟು ತಿಳಿಸಿ.

Anon said...

Thank you so much. Came across this song in edelu manjunatha movie. I always like this song but did not dig deep into it. Today I made an effort to dig deep into it. Your efforts made it easier for me. Thank you once again.