Saturday, March 01, 2014

ರಾಮನ ಬಾಲಲೀಲೆಗಳು ಮತ್ತು ಜನಪದ ಪರಂಪರೆ

ಸಾಮಾನ್ಯವಾಗಿ ಬಾಲಲೀಲೆಗಳು ಎಂದರೆ ನಮಗೆ ನೆನಪು ಬರುವುದು ಕೃಷ್ಣನವು ಮಾತ್ರ. ಶ್ರೀರಾಮನ ಬಾಲಲೀಲೆಗಳೂ ಸಾಕಷ್ಟು ಇದ್ದರೂ ಅಷ್ಟು ಚಿರಪರಿಚಿತವೇನಲ್ಲ. ಮೊನ್ನೆ ನಮ್ಮ ವಾರಂತ್ಯದ ಅಧ್ಯಯನದ ತರಗತಿಯಲ್ಲಿ ಇಂತಹ ಕೆಲವೊಂದು ಬಾಲಲೀಲೆಗಳು ಪ್ರಸ್ತಾಪವಾದುವು. ಈಗ ನಾವು ಅಧ್ಯಯನ ಮಾಡುತ್ತಿರುವುದು ಅಭಿನವಪಂಪನೆಂದೇ ಖ್ಯಾತನಾಗಿರುವ ನಾಗಚಂದ್ರನ ಪಂಪರಾಮಾಯಣ ಅರ್ಥಾತ್ ರಾಮಚಂದ್ರಚರಿತಪುರಾಣ. ಅದರಲ್ಲೇನೂ ರಾಮ ಬಾಲಲೀಲೆಗಳ ಪ್ರಸ್ತಾಪವಿಲ್ಲವಾದರೂ, ಆ ಕಾವ್ಯದ ನೆಪದಲ್ಲಿ ನಾವು ರಾಮನ ಬಾಲಲೀಲೆಗಳನ್ನು ನೆನಪಿಸಿಕೊಳ್ಳುವಂತಾಗಿದ್ದು ಒಂದು ಸುಸಂದರ್ಭವೇ ಸರಿ!
ನಮ್ಮ ಸ್ನೇಹಿತರಾದ ಡಾ. ಜಿ.ಮನೋಜ್ ಅವರು, ಅವರ ಅಜ್ಜಿ ಹೇಳಿದ್ದೆಂದು ಎರಡು ರಾಮನ ಬಾಲಲೀಲೆಗಳನ್ನು ಹೇಳಿದರು. ಅದರಲ್ಲಿ ಒಂದು ರಾಮನ ಕಾಲಂದಿಗೆಗಳು ಸವೆದು ಹೋಗಿದ್ದರ ಬಗ್ಗೆ. ಕೌಸಲ್ಯೆಗೆ ರಾಮನನ್ನು ಕಂಡರೆ ಪಂಚಪ್ರಾಣ. ಏನಾದರೂ ನೆಪವೊಡ್ಡಿ ಅವನನ್ನು ನೋಡುವುದು, ಮಾತನಾಡಿಸುವುದು, ಮುದ್ದುಮಾಡುವುದು, ಲಲ್ಲೆಗರೆಯುವುದು ಮಾಡುತ್ತಿರುತ್ತಾಳೆ. ಒಂದು ದಿನ ಸುಮ್ಮನೇ ಬಾಲರಾಮನೊಂದಿಗೆ ಹರಟೆ ಹೊಡೆಯುತ್ತಾ, ಆತನ ಕೈಕಾಲುಗಳನ್ನು ನೀವುತ್ತಾ, ಮುದ್ದು ಮಾಡುತ್ತ ಕುಳಿತಿರುತ್ತಾಳೆ. ಆಗ ಸುಮ್ಮನೆ, “ಮಗು, ಏಕೆ ನಿನ್ನ ಕಾಲಂದಿಗೆಗಳು ಇಷ್ಟೊಂದು ಸವೆದು ಹೋಗಿಬಿಟ್ಟಿವೆಯಲ್ಲಾ?’ ಎಂದು ಕೇಳುತ್ತಾಳೆ. ಅವು ನಿಜವಾಗಿ ಸವೆದು ಹೋಗಿದ್ದವೋ, ಅಥವಾ ಆಕೆಗೆ ಮಾತನಾಡುವುದಕ್ಕೆ ಒಂದು ನೆಪ ಬೇಕಾಗಿತ್ತೋ ತಿಳಿಯದು. ಆದರೆ ರಾಮ ತನ್ನ ಬಾಲಭಾಷೆಯಲ್ಲಿ ‘ಅಮ್ಮಾ, ನಾನೇನು ಮಾಡಲಮ್ಮಾ, ಎಲ್ಲರೂ ನನ್ನ ಕಾಲುಗಳನ್ನು ತಮ್ಮ ಕೈಗಳಿಂದ ಮುಟ್ಟುತ್ತಿರುತ್ತಾರೆ. ಅವರು ಮುಟ್ಟಿ ಮುಟ್ಟಿಯೇ ನನ್ನ ಕಾಲಂದಿಗೆಗಳು ಸವೆದು ಹೋಗಿವೆ. ಇದರಲ್ಲಿ ನನ್ನ ತಪ್ಪೇನು ಇಲ್ಲಮ್ಮಾ’ ಎಂದು ಹೇಳುತ್ತಾನೆ.
ರಾಮನು ದೈವಾಂಶಸಂಭೂತನೆಂಬುದು ಜನಪದರ ನಂಬಿಕೆ. ಆದ್ದರಿಂದ, ಆತನು ಬಾಲಕನಾದರೂ ನಮಸ್ಕಾರಕ್ಕೆ ಅರ್ಹ ಎಂದಾಯಿತು. ಬಾಲರಾಮನಿಗೆ ಆತನ ಜೊತೆಗಾರರು, ಅರಮನೆಯಲ್ಲಿದ್ದವರು, ಜನಸಾಮಾನ್ಯರು ಬಾಲಕನಾಗಿದ್ದಾಗಲೂ ನಮಸ್ಕರಿಸುತ್ತಿದ್ದರು, ಗೌರವಿಸುತ್ತಿದ್ದರು. ಆದರೆ, ಸ್ವತಃ ರಾಮನಾದರೊ ಎಲ್ಲಾ ಮಕ್ಕಳಂತೆ ಆತನೂ ಒಬ್ಬ. ಜನ ತನ್ನ ಕಾಲುಗಳನ್ನು ಏಕೆ ಮುಟ್ಟುತ್ತಾರೆ ಎಂದು ಆತನಿಗೆ ತಿಳಿಯುವುದಿಲ್ಲ. ಆದರೆ ಜನ ಹಾಗೆ ಮುಟ್ಟುವುದರಿಂದಲೇ ತನ್ನ ಕಾಲಂದಿಗೆಗಳು ಸವೆದು ಹೋಗಿವೆ ಎಂಬ ತರ್ಕ ಬಾಲಕನ ಮಗ್ಧತೆಗೆ ಸಾಕ್ಷಿಯಾಗಿದೆ.
ಇನ್ನೊಂದು ಕಥೆಯೂ ತಾಯಿ ಮಗನ ಅನೋನ್ಯತೆಯನ್ನೇ ಎತ್ತಿ ಹಿಡಿಯುತ್ತದೆ. ಒಂದು ದಿನ ಬೇರೆ ಮಕ್ಕಳೊಂದಿಗೆ ಆಡಲು ಹೋಗಿದ್ದ ರಾಮ ಅಳುತ್ತಲೇ ವಾಪಸ್ಸು ಬರುತ್ತಾನೆ. ಕೌಸಲ್ಯೆ ಎಷ್ಟು ಸಮಾಧಾನ ಮಾಡಿದರೂ ಆತ ಸುಮ್ಮನಾಗುವುದಿಲ್ಲ. ಬಹಳ ಹೊತ್ತಿನ ನಂತರ ಆತನ ಅಳುವಿಗೆ ಕಾರಣವೇನೆಂದು ತಿಳಿಯುವಲ್ಲಿ ಕೌಸಲ್ಯೆ ಸಫಲಳಾಗುತ್ತಾಳೆ. ರಾಮನ ಪ್ರಕಾರ, ಆತ ತನ್ನ ಸ್ನೇಹಿತರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿರುತ್ತಾನೆ. ಕಣ್ಣು ಮುಚ್ಚಿಸಿಕೊಂಡವನು, ಕಣ್ಣು ಬಿಟ್ಟ ಕೂಡಲೇ, ರಾಮ ಎಲ್ಲೇ ಅವಿತುಕೊಂಡಿದ್ದರೂ ನೇರವಾಗಿ ಬಂದು ರಾಮನನ್ನೇ ಹಿಡಿಯುತ್ತಿರುತ್ತಾನೆ. ಒಬ್ಬ ಹುಡುಗುನಲ್ಲ; ಕಣ್ಣು ಕಟ್ಟಿಸಿಕೊಂಡ ಎಲ್ಲಾ ಮಕ್ಕಳಿಗೂ ರಾಮ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತಿರುತ್ತಾನೆ. ಅದೇ ಕಾರಣದಿಂದ ರಾಮನಿಗೆ ಅಳು ಬಂದಿರುತ್ತದೆ. ಕೌಸಲ್ಯೆ ರಾಮನಿಗೆ ಸಮಾಧಾನ ಹೇಳುತ್ತಾಳೆ. ‘ಮಗು, ನೀನು ಎಷ್ಟು ಚಂದ ಇದ್ದೀಯಾ, ಎಷ್ಟೊಂದು ಪ್ರಕಾಶಮಾನವಾಗಿ ಇದ್ದೀಯ ಎಂದರೆ, ನಿನ್ನ ಸುತ್ತಲೂ ಒಂದು ಪ್ರಭಾವಳಿಯೆ (ಬೆಳಕಿನ ವಲಯ) ಇದೆ. ನೀನು ಎಲ್ಲೇ ಇದ್ದರು, ಆ ಬೆಳಕಿನ ದೆಸೆಯಿಂದ ಬೇಗ ಎಲ್ಲರಿಗೂ ಕಾಣಿಸಿಂಡು ಬಿಡುತ್ತೀಯಾ ಅಷ್ಟೆ. ನೀನು ಅಷ್ಟೊಂದು ಚೆಂದ ಇರುವುದು ನಿನಗೆ ಖುಷಿಯಲ್ಲವೆ? ಹೇಳು’ ಎನ್ನುತ್ತಾಳೆ. ಆಗ ರಾಮನಿಗೆ ಖುಷಿಯಾಗುತ್ತದೆ. ನಾನು ಎಲ್ಲರಿಗಿಂತ ಚೆನ್ನಾಗಿದ್ದೇನೆ, ವಿಶೇಷವಾಗಿದ್ದೇನೆ ಎಂಬ ಸಮಾಧಾನದಿಂದ ರಾಂ ತನ್ನ ಅಳಲನ್ನು ಮರೆಯುತ್ತಾನೆ! ಆದ್ದರಿಂದಲೇ ಆತ ‘ರಾಮ’ ಮಾತ್ರನಲ್ಲ; ರಾಮಚಂದ್ರನೂ ಹೌದು! ಚಂದ್ರ ಬೆಳಕನ್ನು ಸೂಸುವವನು, ಜೊತೆಗೆ ಆತನ ಸುತ್ತಲೂ ಬೆಳಕಿನ ವಲಯ ಇರುತ್ತದೆ. ಕೌಸಲ್ಯೆ ಮತ್ತು ರಾಮ ಇಬ್ಬರೂ ಜನಮನದ ದೃಷ್ಟಿಯಲ್ಲಿ ಜಗದ್ವಂದ್ಯರಾದರೂ, ಕೌಸಲ್ಯೆ ರಾಮನ ತಾಯಿ; ರಾಮ ಕೌಸಲ್ಯೆಯ ಮಗ ಮಾತ್ರ!
ಇಲ್ಲಿಯೇ ಈ ಕಥೆಗೆ ಇರುವ ವೈರುದ್ಧ್ಯವೊಂದನ್ನು ಗಮನಿಸಬಹುದು. ಶಿಷ್ಟಕಾವ್ಯದಲ್ಲಿ ರಾಮ ಕೃಷ್ಣವರ್ಣದವನು. ಅಚ್ಚಗನ್ನಡದಲ್ಲಿ ಹೇಳುವುದಾದರೆ ಆತ ‘ಕರಿಯ’. ನಮ್ಮ ಜನಪದರಲ್ಲಿ ಕಪ್ಪಗಿರುವವರನ್ನು ಸ್ವಲ್ಪ ಹೀಯಾಳಿಸಿ ಮಾತನಡುವಾಗ, ‘ತೊಳೆದ ಕೆಂಡ’, ‘ನೀನಿದ್ರೆ ಕತ್ತಲೆ ಮನೆಗೆ ಬೆಳಕೆ ಬೇಡ’ ಎಂಬ ಮಾತುಗಳನ್ನು ಬಳಸುತ್ತಾರೆ. ಕತ್ತಲೆ ಮನೆಗೆ ಬಳಕೇ ಬೇಡ ಎಂದೆನ್ನಿಸಿಕೊಳ್ಳುವ ಕಪ್ಪುಬಣ್ಣದ ರಾಮನಿಗೆ, ಅದೇ ಜನಪದ ಪ್ರತಿಭೆ ಬೆಳಕಿನ ಪ್ರಭಾವಳಿಯನ್ನು ಸೃಷ್ಟಿಸುತ್ತದೆ! ಕಪ್ಪುಬಣ್ಣ ಬೆಳಕನ್ನು ಚೆನ್ನಾಗಿ ಹೀರಿಕೊಳ್ಳುತ್ತದೆಯೆ ಹೊರತು, ಹೊರಚೆಲ್ಲುವುದಿಲ್ಲ. ಆದರೆ ಜನಪದ ಪ್ರಜ್ಞೆಗೆ ರಾಮ ಕೇವಲ ‘ರಾಮ’ನಲ್ಲ!
ಇದೇ ಸಂದರ್ಭದಲ್ಲಿ ನೆನಪಾದ ಪ್ರಸಂಗವೆಂದರೆ, ಚಂದ್ರನಿಗಾಗಿ ರೋಧಿಸುತ್ತಿದ್ದ ರಾಮನಿಗೆ ಮಂಥರೆ ಕನ್ನಡಿಯೊಂದನ್ನು ಕೊಟ್ಟು ಸಮಾಧಾನ ಮಾಡಿದ, ಶ್ರೀರಾಮಾಯಣ ದರ್ಶನಂ ಕಾವ್ಯಭಾಗದ್ದು. ಆ ಕಾವ್ಯದ ಅಧ್ಯಯನ ಸಂದರ್ಭದಲ್ಲಿ ಚರ್ಚೆಯಾಗಿತ್ತು. ಮೂಲತಃ ಅದೊಂದು ಜನಪದ ಕಥೆ. ಅದನ್ನು ಅತ್ಯಂತ ಧ್ವನಿಪೂರ್ಣವಾಗಿ ದರ್ಶನಾತ್ಮಕವಾಗಿ ಕುವೆಂಪು ಅವರು ಶಿಷ್ಟ ಕಾವ್ಯದ ಪರಿಧಿಗೆ ಅಳವಡಿಸಿರುವ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಆ ಕಥೆಯನ್ನೊಮ್ಮೆ ಇಲ್ಲಿ ಗಮನಿಸಬಹುದಾಗಿದೆ.
ಒಂದು ದಿನ ಬೆಳದಿಂಗಳ ರಾತ್ರಿ, ಅಂತಃಪುರದ ಎಲ್ಲರೂ ಉದ್ಯಾನವನದಲ್ಲಿ ಸೇರಿರುತ್ತಾರೆ. ಎಲ್ಲ ಮಕ್ಕಳು, ತಾಯಂದಿರು ‘ಉದ್ಯಾನ ಶಾದ್ವಲ ಶ್ಯಾಮ ವೇದಿಕೆಯಲ್ಲಿ’ ವಿಹರಿಸುತ್ತಿರುತ್ತಾರೆ. ಆಗ ಶಿಶುರಾಮ ಆಕಾಶದಲ್ಲಿದ್ದ ಪೂರ್ಣಚಂದ್ರನನ್ನು ನೋಡಿ, ಅದು ನನಗೆ ಬೇಕೆಂದು ಅಳಲಾರಂಬಿಸುತ್ತಾನೆ. ‘ನೋಡಿ, ಮೋಹಿಸಿ, ಪಡೆಯೆ ಹಲುಬಿ, ಹಂಬಲಿಸಿ ಕಾಡಿದನು ಕೌಸಲ್ಯಯಂ’ ಎಂದು ಒಂದೇ ವಾಕ್ಯದಲ್ಲಿ ಕವಿ ಆತನ ಗೋಳಾಟವನ್ನು ಹಿಡಿದಿಟ್ಟಿದ್ದಾರೆ. ‘ನಭದಚಂದ್ರಂ ನರರ ಧರಣಿಗೈತರನ್’ ಎಂದು ಕೌಸಲ್ಗಯೆ ಹೇಳಿದ ಸಮಾಧಾನ ರಾಮನ ಅಳುವನ್ನು ನಿಲ್ಲಿಸುವುದಿಲ್ಲ. ಅಲ್ಲಿದ್ದವರೆಲ್ಲಾ ರಾಮನಿಗೆ ಚಿನ್ನದ ಆಟದ ಸಾಂಆನುಗಳನ್ನು, ಗೊಂಬೆಗಳನ್ನು, ತಿನ್ನಲು ಸಿಹಿಗಳನ್ನು, ಹಣ್ಣುಗಳನ್ನು ಕೊಟ್ಟು ಸಮಾಧಾನ ಮಾಡುವ ಯತ್ನ ಮಾಡುತ್ತಾರೆ. ರಾಮ ಅಳು ನಿಲ್ಲಿಸುವುದಿಲ್ಲ. “ದಮ್ಮಯ್ಯ, ದಮ್ಮಯ್ಯ, ಸುಮ್ಮನಿರೊ, ಓ ನನ್ನ ಕಣ್ಮಣಿಯೆ, ಕಂದಯ್ಯ, ಕೈಮುಗಿವೆನ್ ಅಳಬೇಡ” ಎಂದು ಕೌಸಲ್ಯೆ ತಾನೂ ಅಳುತ್ತಾ, ‘ರವಿವಂಶದವನು ಎಂಬ ಕರುಬಿಂದ ನೀನು ಹೀಗೆ ರಾಮನನ್ನು ಗೋಳಾಡಿಸುತ್ತಿದ್ದೀಯ’ ಎಂದು ಚಂದ್ರನಿಗೆ ಬಯ್ಯುತ್ತಿರುತ್ತಾಳೆ!
ಭೂಮಿಯೇ ಬೆಚ್ಚುವಷ್ಟು ಆರ್ತವಾಗಿದ್ದ ಆತನ ಅಳು ಕೇಳಿದ ದಶರಥ ಓಡೋಡಿ ಬರುತ್ತಾನೆ. ವಿಷಯ ತಿಳಿದು ದಶರಥ ‘ಮಗನಾಸೆ ತನ್ನ ಬಲ್ಮೆಗೆ ಮೀರಿ ಕೈಗೂಡಲಸದಳಮಲಾ’ ಎಂದು ಮರುಕಗೊಳ್ಳುತ್ತಾನೆ. ‘ತನ್ನ ಸಿರಿ ಇನಿತು ಪುಸಿಯಾಯ್ತೆ’ ಎಂದುಕೊಂಡು ಕೌಸಲ್ಯೆಯಿಂದ ರಾಮನನ್ನು ಕರೆದುಕೊಂಡು ಉದ್ಯಾನವನದಲ್ಲಿದ್ದ ಜಿಂಕೆಗಳನ್ನು ತೋರಿಸಲು ಹೋಗುತ್ತಾನೆ. ಆದರೂ ರಾಮ ಚಂದ್ರನಿಗಾಗಿ ಅಳುವುದನ್ನು ನಿಲ್ಲಿಸಲಿಲ್ಲ. ದಶರಥನ ಮಂತ್ರಿ ಸುಮಂತ್ರನೂ ನಿರುತ್ತರನಾಗುತ್ತಾನೆ.
ಆಗ ಎಲ್ಲಿದ್ದಳೊ ಮಂಥರೆ, ಭರ್ರನೆ ಬರುತ್ತಾಳೆ. ಆಕೆಯ ಕಂಕುಳಲ್ಲಿ ಭರತನಿರುತ್ತಾನೆ. ಅವಳು ಬಂದಿದ್ದನ್ನು ಕಂಡು ಕೈಕೆಯನ್ನುಳಿದು ಇತರರು ಮುಖ ತಿರುಗಿಸುತ್ತಾರೆ – ಅಮಂಗಳವನ್ನೀಕ್ಷಿಸಿದಂತೆ! ಇದಾವುದನ್ನೂ ಗಮನಿಸದ ಮಂಥರೆ ತನ್ನ ಮಡಿಲಿನಿಂದ ಒಂದು ಕನ್ನಡಿಯನ್ನು ತೆಗೆದು ಅಳುತ್ತಿದ್ದ ರಾಮನ ಕೈಯಲ್ಲಿಡುತ್ತಾಳೆ. ಕನ್ನಡಿಯಲ್ಲಿ ಚಂದ್ರನ ಪ್ರತಿಬಿಂಬವನ್ನು ಕಂಡ ರಾಮ, ಚಂದ್ರನೇ ತನ್ನ ಕೈಯಲ್ಲಿ ಇದ್ದಾನೆ ಎಂದುಕೊಂಡು ಕುಣಿಕುಣಿದು ನಲಿಯುತ್ತಾನೆ. ಪಾಪ, ಮಂಥರೆ ರಾಮನ ಸಂಭ್ರಮವನ್ನು ತಾನೂ ಅನುಭವಿಸಿ ತನ್ನನ್ನು ತಾನು ಮರೆತುಬಿಡುತ್ತಾಳೆ. ಆ ಸಂಭ್ರಮದ ಸ್ಥಿತಿಯಲ್ಲಿಯೇ ರಾಮನನ್ನು ಎತ್ತಿಕೊಳ್ಳಲು ಮುಂದಾಗುತ್ತಾಳೆ. ‘ಕಂದಂಗೆ ಅಮಂಗಳಂ, ಮುಟ್ಟದಿರ್ ಮುಟ್ಟದಿರ್, ಬೇಡ ಬೇಡ’ ಎನ್ನುತ್ತಾ ಕೌಸಲ್ಯೆ ಮಂಥರೆಯನ್ನು ತಡೆಯುತ್ತಾಳೆ. ಮಂಥರೆಯ ಸಂಭ್ರಮ ಕುಸಿಯುತ್ತದೆ. ಒಲುಮೆ ಮುರಿಯುತ್ತದೆ. ಕಣ್ಣೀರು ಚಿಮ್ಮುತ್ತದೆ. ಭರತನನ್ನು ಬಿಗಿದು ಅಪ್ಪಿಕೊಂಡು ‘ತುಳಿದ ಸರ್ಪಿಣಿಯಂತೆ ಮುಳಿಸಿನುರಿಯಿಂ ಪೊಗೆದು, ಸುಯ್ದು, ಹೆಡೆಯೆತ್ತಿ’ ಹೊರಟು ಬಿಡುತ್ತಾಳೆ.
ರಾಮನ ಅಳು ನಿಲ್ಲಿಸುವವರೆಗೆ ಮಾತ್ರವಿದ್ದ ಜಾನಪದ ಕಥೆಯನ್ನು ಬಳಸಿಕೊಂಡು, ಕೌಸಲ್ಯೆಯ ಬಗ್ಗೆ ಮಂಥರೆಗಿದ್ದ ಅಸಮಧಾನಕ್ಕೆ ಕಾರಣವನ್ನೊದಗಿಸುವಂತೆ, ಮಂಥರೆಗೆ ಆಗುವ ಒಲುಮೆ ಭಂಗವಾಗುವಂತೆ ಸನ್ನಿವೇಶ ಸೃಷ್ಟಿಸಿ, ಮುಂದೆ ಪತಿತಪಾತ್ರಖಳಾದ ಮಂಥರೆಯಾತ್ಮವನ್ನೂ ಉದ್ಧಾರಪಥದತ್ತ ಹೊರಳಿಸುವ ಸಾಹಸಕ್ಕೆ ತೊಡಗುತ್ತಾರೆ ಕವಿ.
ಮೂಲ ವಾಲ್ಮೀಕಿ ರಾಮಾಯಣದಲ್ಲಿ ರಾಮ ಲಕ್ಷ್ಮಣರ ಸ್ನೇಹದ ಬಗ್ಗೆ ಹೇಳುತ್ತ, ರಾಮನಿಗೆ ಲಕ್ಮಣನಲ್ಲಿ ವಿಶೇಷವಾದ ಪ್ರೀತಿ, ಆಟ ಪಾಟ ಊಟ ನಿದ್ರೆ ಎಲ್ಲದಕ್ಕೂ ಲಕ್ಷ್ಮಣ ಆತನ ಜೊತೆಗಿರಬೇಕಿತ್ತು ಎಂಬ ಚಿತ್ರಣವಿದೆ. ಇದನ್ನೇ ಸ್ವಲ್ಪ ವಿಸ್ತರಿಸಿರುವ ಶ್ರೀ ವೀರಪ್ಪ ಮೊಯಿಲಿಯವರು, ಕೌಸಲ್ಯೆ ರಾಮನಿಗೆ ಊಟ ತಿನ್ನಿಸಲು ಬಂದಾಗ, ಆತ, ಲಕ್ಷ್ಮಣನನ್ನು ಮುಂದೆ ನಿಲ್ಲಿಸಿ, ಆತನಿಗೆ ಕೌಸಲ್ಯೆ ತಿನ್ನಿಸುವುದನ್ನು, ಆತ ತಿನ್ನುವುದನ್ನು ನೋಡಿ ರಾಮ ಸಂತಸದಿ ಕುಣಿಯುತ್ತಿದ್ದ ಎಂದಿದ್ದಾರೆ.
‘ಶ್ರೀಲಕ್ಷ್ಮಣ ಮಹಾನ್ವೇಷಣೆಯ ಮಹಾಕಾವ್ಯ’ವನ್ನಾಗಿಸುವ ಭರದಲ್ಲಿ ಮೊಯಿಲಿಯವರು, ಲಕ್ಷ್ಮಣನಿಗೆ ಸಿಗಬೇಕಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ತೋರಿಸುವುದಕ್ಕೋ ಏನೊ ಒಂದು ಕಥೆಯನ್ನು ಸೃಷ್ಟಿಸಿದ್ದಾರೆ. ನನಗೆ ತಿಳಿದ ಮಟ್ಟಿಗೆ, ಮೂಲ ರಾಮಾಯಣದಲ್ಲಾಗಲೀ, ಕನ್ನಡ ರಾಮಾಯಣಗಳ ಪರಂಪರೆಯಲ್ಲಾಗಲೀ ಲಕ್ಷ್ಮಣ ತಂದೆಯ ಪ್ರೀತಿಯಿಂದ ವಂಚಿತನಾಗಿದ್ದನು, ನಿರ್ಲಕ್ಷಕ್ಕೊಳಗಾಗಿದ್ದನು ಎಂಬ ಮಾಹಿತಿಯಿಲ್ಲ. ಕವಿಗೆ ಜಾನಪದ ಮೂಲದಲ್ಲೇನಾದರೂ ಈ ಕಥೆ ಸಿಕ್ಕಿದೆಯೆ ಎಂಬುದಕ್ಕೆ ಸಧ್ಯಕ್ಕಂತೂ ಆಧಾರಗಳಿಲ್ಲ. ಧ್ರುವನ ಕಥೆ ಅವರಿಗೆ ಈ ಪ್ರೇರಣೆಯನ್ನು ಒದಗಿಸಿರಬಹುದು.ಆದರೆ, ‘ಸೌಮಿತ್ರಿಯ ಚರಣಕ್ಕೆರಗಿ ಲಕ್ಷ್ಮಣಾಯಣಮಾಗಿಸುವ’ ಉದ್ದೇಶದಿಂದ ಈ ಕಥೆಯನ್ನು ಸೃಷ್ಟಿಸಿದ್ದಾರೆ. ಬಿಡಿಯಾಗಿ ಒಂದು ಸುಂದರ ಚಿತ್ರಣವಾಗಿ ಈ ಕಥೆ ಮೂಡಿಬಂದಿದೆ.
ಒಂದು ದಿನ ದಶರಥ ವಿರಮಿಸುತ್ತಿದ್ದಾಗ, ರಾಮ ಲಕ್ಷ್ಮಣ ಭರತ (ಶತ್ರುಘ್ನ ಇಲ್ಲ!) ಮೂವರೂ ಓಡಿ ಆತನ ಬಳಿಗೆ ಬರುತ್ತಾರೆ. ದಶರಥ ಮೂವರನ್ನೂ ತೆರೆದ ಬಾಹುಗಳಿಂದ ಸ್ವಾಗತಿಸುತ್ತಾನೆ. ರಾಮ ಬಲದ ತೊಡೆಯೇರಿ ಕುಳಿತುಕೊಳ್ಳುತ್ತಾನೆ. ಭರತ ಎಡದ ತೊಡೆಯೇರಿ ಕುಳಿತುಕೊಳ್ಳುತ್ತಾನೆ. ಪಾಪ ಲಕ್ಷ್ಮಣನಿಗೆ ಯಾವ ತೊಡೆ? ಆತನಿಗೆ ದುಃಖವಾಗುತ್ತದೆ. ಹೃದಯ ತೊಯ್ದಾಡುತ್ತದೆ. ಕಣ್ಣು ತೇವವಾಗುತ್ತದೆ. ‘ತಾನಾವ ತೊಡೆಯನೇರಲಿ, ತನಗೆಲ್ಲಿದೆ ಸ್ಥಾನ’ ಎಂದು ಹಂಬಲಿಸುತ್ತಾನೆ ಲಕ್ಷ್ಮಣ. ‘ಬಲವಿಲ್ಲ ಎಡವಿಲ್ಲ ಯಾವ ಹೃದಯವು ಇಲ್ಲ ಶೂನ್ಯವಾಗಿದೆ ಪ್ರೇಮ ಮನವು ಮರ್ಕಟವಾಗಿ ಚಡಪಡಿಸಿ ಹೊಯ್ದಾಡೆ ಪ್ರೇಮದನ್ವೇಷಣೆಯು ಮರದ ರೆಂಬೆಗಳಲಿ ಹಾರಾಡಿ ಮತ್ತಲ್ಲಿಯೆ ಚಡಪಡಿಸಿ ನಿಂತಿಹುದು’ ಎಂದು ಲಕ್ಷ್ಮಣನ ಆಗಿನ ಸ್ಥಿತಿಯನ್ನು ಕವಿ ಮಾತಾಗಿಸಿದ್ದಾರೆ. ಆಗ ರಾಮ ತೊಡೆಯಿಂದ ಇಳಿದು, ಲಕ್ಷ್ಮಣನನ್ನು ಬಿಗಿದಪ್ಪಿ, ಕಣ್ಣೀರನೊರೆಸಿ ‘ತನ್ನೆದೆಯ ಕಾವನ್ನು ಸೋದರತೆಗೆ ನೀಡುತ್ತ’ ಲಕ್ಷ್ಮಣನಿಗೆ ಪ್ರೀತಿಯಲ್ಲಿ ಕಾಣಿಸಿಕೊಂಡಿದ್ದ ಶೂನ್ಯತೆಯನ್ನು ಹೋಗಲಾಡಿಸುತ್ತಾನೆ. ರಾಮ ಪ್ರತಿಮೆಯ ುಪ್ಪು ಗೊಂಬೆಯಲಿ ಕರಗಿ ಹೋದ ಲಕ್ಷ್ಮಣ ಭಾತೃಪ್ರೇಮದ ಸಾಗರದಲ್ಲಿ ಐಕ್ಯವಾಗುತ್ತಾನೆ ಎನ್ನುತ್ತಾರೆ ಕವಿ.
ರಾಮನ ಬಾಲಲೀಲೆಗೆ ಸಂಬಂದಿಸಿದಂತೆ ಜಾನಪದ ಪ್ರಜ್ಞೆ ಮೆರೆದಿರುವ ಪಾರಮ್ಯವನ್ನು ಇದುವರೆಗೆ ಗಮನಿಸಿದ್ದೇವೆ. ಮೂಲತಃ ರಾಮಾಯಣ, ಮಹಾಭಾರತಗಳು ಜನಪದ ಕಥೆಗಳು ಮಾತ್ರವಾಗಿದ್ದು, ಯಾವುದೋ ಕಾಲಘಟ್ಟದಲ್ಲಿ ಅವು ವಾಲ್ಮೀಕಿ ವ್ಯಾಸರಿಂದ ಶಿಷ್ಟತೆಯ ಆವರಣದೊಳಕ್ಕೆ ಬಂದಿವೆ ಎಂಬ ವಾದವೊಂದಿದೆ. ಜಗತ್ತಿನ ಪುರಾತನ ಮಹಾಕಾವ್ಯಗಳಲ್ಲಿ ಒಂದಾದ ‘ಗಿಲ್ಗಿಮೆಶ್’ ಕೂಡಾ ಜನಪದ ಮಹಾಕಾವ್ಯವೇ ಆಗಿದೆ. ಹೋಮರನ ಈಲಿಯಡ್ ಕೂಡಾ ಹಾಡುಗಬ್ಬವೆ! ಇವೆಲ್ಲವನ್ನು ಗಮನಿಸಿದಾಗ ಜಗತ್ತಿನ ವಸ್ತುಕ ಮಹಾಕಾವ್ಯಗಳೆಲ್ಲವೂ ಮೂಲತಃ ಮೌಖಿಕ ಪರಂಪರೆಗೆ ಸೇರಿದವುಗಳಾಗಿದ್ದು, ನಂತರ ಶಿಷ್ಟಪರಂಪರೆಗೆ ವರ್ಗಾವಣೆಗೊಂಡಿವೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

2 comments:

Badarinath Palavalli said...

ಬಾಲ ರಾಮನ ಬಗೆಗೆ ಕಣ್ಣಿಗೆ ಕಟ್ಟುವಂತಿದೆ ಲೇಖನ

ದೀಪಸ್ಮಿತಾ said...

ಕೃಷ್ಣನ ಬಾಲಲೀಲೆಗಳು ಎಲ್ಲರಿಗೂ ಗೊತ್ತು, ಆದರೆ ರಾಮನ ಬಾಲಲೀಲೆಗಳು ಹೆಚ್ಚಾಗಿ ಗೊತ್ತಿಲ್ಲ. ರಾಮನನ್ನು ಆದರ್ಶ ಪುರುಷನನ್ನಾಗಿ ಮಾಡಲು ಹೋಗಿ ದೂರ ಇಟ್ಟಿದ್ದೇವೆ. ಒಳ್ಳೆಯ ಲೇಖನ