Showing posts with label ಕಾದಂಬರಿ. Show all posts
Showing posts with label ಕಾದಂಬರಿ. Show all posts

Friday, December 19, 2014

ಕಾನೂರು ಹೆಗ್ಗಡಿತಿ ಕಾದಂಬರಿಯ ಪಾತ್ರಪ್ರಪಂಚ

ಕಾನೂರು ಹೆಗ್ಗಡತಿ ಕಾದಂಬರಿ ರಚಿತವಾಗಿ, ಇದೇ ಡಿಸೆಂಬರ್ ೧೬ನೆಯ ತಾರೀಖಿಗೆ (ಕುವೆಂಪು ಮುನ್ನುಡಿಯ ದಿನಾಂಕ) ಸಾರ್ಥಕ ೭೮ ವರ್ಷಗಳು ತುಂಬುತ್ತವೆ. ನೆನಪಿನ ದೋಣಿಯಲ್ಲಿ ದಾಖಲಾಗಿರುವ ೧೭.೯.೧೯೩೩ರ ದಿನಚರಿಯಲ್ಲಿ ಹೀಗೆ ಹೇಳಿದೆ: ನಾನೊಂದು ಕಾದಂಬರಿಗೆ ವಸ್ತು ಸಂವಿಧಾನ ಪ್ರಾರಂಭಿಸಿದ್ದೇನೆ. ಹಗಲೆಲ್ಲ ಅದನ್ನೇ ಕುರಿತು ಆಲೋಚಿಸಿದೆ. ಇದು ಕಳೆದ ಎರಡೇ ದಿನಗಳಲ್ಲಿ, ಅಂದರೆ ೧೯.೯.೧೯೩೩ರ ಬೆಳಿಗ್ಗೆಯಿಂದಲೇ ಕಾದಂಬರಿಯ ಬರವಣಿಗೆ ಆರಂಭವಾಗುತ್ತದೆ. ಅಂದಿನಿಂದ ಸುಮಾರು ನಾಲ್ಕು ವರ್ಷಗಳ ನಂತರ ೧೯೩೭ರಲ್ಲಿ ಕಾದಂಬರಿ ಬೆಳಕು ಕಾಣುತ್ತದೆ.
ಈ ಎಲ್ಲಾ ಘಟನೆಗಳ ಹಿಂದಿದ್ದ ಮನೋಬಲಕ್ಕೆ ಧೈರ್ಯ ತುಂಬಿದವರು, ಕನಸನ್ನು ಬಿತ್ತಿದವರು ಕುವೆಂಪು ಅವರ ಗುರುಗಳಾದ ಶ್ರೀ ಟಿ.ಎಸ್.ವೆಂಕಣ್ಣಯ್ಯನವರು. ಟಾಲ್‌ಸ್ಟಾಯ್, ರೋಮಾ ರೋಲಾ, ಥಾಮಸ್ ಹಾರ್ಡಿ, ಗಾಲ್ಸ್‌ವರ್ದಿ ಮೊದಲಾದವರ ಮಹಾಕಾದಂಬರಿಗಳನ್ನು ಓದಿದ ಮೇಲೆ ’ಕನ್ನಡದಲ್ಲಿ ಅಂತಹ ಒಂದು ಕಾದಂಬರಿ ಯಾವಾಗ ಹುಟ್ಟುತ್ತದೆ?’ ಎಂದು ಕಾಯುತ್ತಿದ್ದ ಕುವೆಂಪು, ತಮ್ಮ ಮಿತ್ರರಾಗಿದ್ದ ಅನೇಕ ಲೇಖಕರಲ್ಲಿ ’ನೀವೇಕೆ ಬರೆಯಲು ಪ್ರಯತ್ನಿಸಬಾರದು?’ ಎಂದು ಪೀಡಿಸುತ್ತಿದ್ದರಂತೆ.
ಒಂದು ದಿನ ಸಂಜೆ ಕುಕ್ಕನಹಳ್ಳಿ ಕೆರೆಯ ದಂಡೆಯ ಮೇಲೆ ವಾಯುಸಂಚಾರದಲ್ಲಿದ್ದಾಗ ವೆಂಕಣ್ಣಯ್ಯನವರು ’ನೀವೇ ಏಕೆ ಬರೆಯಬಾರದು?’ ಎಂದರಂತೆ. ಆಗ ಕುವೆಂಪು ಅವರು ’ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಅಥವಾ ಸಾಧಾರಣ ಕಾದಂಬರಿ ಬರೆದಂತೆಯೇ? ಮಹಾಕಾದಂಬರಿಗೆ ಇಂಗ್ಲಿಷಿನಲ್ಲಿ ಗ್ರೇಟರ್ ನಾವೆಲ್ ಅನ್ನುತ್ತಾರೆ. ಅದರ ಪಾತ್ರ ಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯ – ಆಲೋಚಿಸಿದರೆ ಮೈ ಜುಮ್ಮೆನ್ನುತ್ತದೆ! ಅವನ್ನೆಲ್ಲ ಅನ್ವಯ ಕೆಡದಂತೆ, ಎಲ್ಲಿಯೂ ಹೊಂದಾಣಿಕೆಗೆ ಭಂಗ ಬರದಂತೆ ಕಲ್ಪನೆಯಲ್ಲಿ ಹಿಡಿದಿಟ್ಟುಕೊಂಡು ಸಾವಿರಾರು ಪುಟಗಳಲ್ಲಿ ನಡೆಸುವುದು ಸಾಧ್ಯವೇ? ನಾನು ಬರೆಯಹೊರಟರೆ ಉತ್ತರಕುಮಾರನ ರಣಸಾಹಸವಾಗುತ್ತದಷ್ಟೆ!’ ಎಂದು ನಕ್ಕಬಿಟ್ಟಿದ್ದರಂತೆ.
ಆದರೆ ಶಿಷ್ಯನ ಸಾಮರ್ಥ್ಯದಲ್ಲಿ ವೆಂಕಣ್ಣಯ್ಯನವರಿಗೆ ಶಂಕೆಯಿನಿತೂ ಇರಲಿಲ್ಲ. ಮುಂದುವರೆದು ಅವರು ಹೀಗೆ ಹೇಳಿದ್ದರು. ’ನೋಡಿ, ಕಾದಂಬರಿಗೆ ಅವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೆ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನ ಈ ಮೂರು ಶಕ್ತಿಗಳು ನಿಮ್ಮಲ್ಲಿ ಇವೆ. ಸಣ್ಣಕಥೆ ಬರೆದಿದ್ದೀರಿ, ನಾಟಕ ಬರೆದಿದ್ದೀರಿ, ಮಲೆನಾಡಿನ ಚಿತ್ರಗಳಲ್ಲಿ ವರ್ಣನ ಪ್ರತಿಭೆ ಸೊಗಸಾಗಿ ವ್ಯಕ್ತಗೊಂಡಿದೆ. ಆದ್ದರಿಂದ ನೀವು ಹೆದರಬೇಕಾಗಿಲ್ಲ ಇನ್ನೊಬ್ಬರಿಗೆ ಹೇಳುತ್ತಾ ಹೋಗುವುದರ ಬದಲು ನೀವೇ ಒಂದು ಕೈ ನೋಡಿಬಿಡಿ!’
ಗುರುವಿನ ಸಲಹೆಯನ್ನು ಆಶೀರ್ವಾದ ರೂಪದಲ್ಲಿ ಧರಿಸಿದ ಕವಿ, ಮಹಾ ಕಾದಂಬರಿ ರಚಿಸುವ ಗೀಳಿಗೆ ವಶವಾಗಿಬಿಡುತ್ತಾರೆ. ಆಗ ಮೊದಲು ಹುಟ್ಟಿದ್ದೇ ’ಕಾನೂರು ಹೆಗ್ಗಡಿತಿ’. ’ಮಲೆನಾಡಿನ ಮೂಲೆಯಲ್ಲಿ’, ’ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಮೊದಲಾದ ಹೆಸರುಗಳನ್ನು ಆಲೋಚಿಸಿದ್ದರೂ ಕೊನೆಯಲ್ಲಿ ನಿಂತದ್ದು ’ಕಾನೂರು ಹೆಗ್ಗಡಿತಿ’ ಎಂಬುದು.
ಮಹಾ ಕಾದಂಬರಿ ಎಂದರೆ ನೂರಾರು ಪುಟಗಳು, ಸಾವಿರಾರು ಘಟನೆಗಳು, ಅಸಂಖ್ಯಾತ ಸ್ಥಳಗಳು ಇವೆಲ್ಲವನ್ನೂ ಒಂದಕ್ಕೊಂದು ಜೋಡಿಸುತ್ತಾ ಹದಗೆಡದಂತೆ ಕಟ್ಟಿಕೊಡುವ ಕಥನಕ್ರಮವೇ ಮುಖ್ಯವಾದುದು. ವೆಂಕಣ್ಣಯ್ಯನವರ ಮಾತಿನಲ್ಲೇ ಹೇಳುವುದಾದರೆ ’ಕಥನ, ಸಂವಾದ ಮತ್ತು ವರ್ಣನೆಗಳ ಹದವರಿತ ಮಿಶ್ರಣವಾಗಿರಬೇಕು.’ ಮುಂದುವರೆದು ಹೇಳುವುದಾದರೆ ಭೂತ-ವರ್ತಮಾನ-ಭವಿಷ್ಯತ್ ಹೀಗೆ ತ್ರಿಕಾಲದಲ್ಲೂ ಕವಿಯ ಮನಸ್ಸು ಸಂಚರಿಸುತ್ತಿರಬೇಕಾಗುತ್ತದೆ. ಭವಿಷ್ಯದ ಕಡೆಗೆ ದೃಷ್ಟಿಯಿಟ್ಟು ವರ್ತಮಾನದಲ್ಲಿ ವಿಹರಿಸುತ್ತಿದ್ದರೂ ಕವಿಯ ಒಂದು ಕೈ ಭೂತಕಾಲದತ್ತಲೂ ಚಾಚಿರುತ್ತದೆ. ಆ ಭೂತಕಾಲವೇ ನಮ್ಮ ಇಂದಿನ ವರ್ತಮಾನವನ್ನು ರೂಪಿಸುತ್ತಿದೆ ಎಂಬ ಎಚ್ಚರವಿದ್ದೇ ಇರುತ್ತದೆ. ಭೂತ-ವರ್ತಮಾನಗಳೆರಡೂ ನಮ್ಮ ಭವಿಷ್ಯತ್‌ಕಾಲಕ್ಕೆ ಮುನ್ನುಡಿಯಂತಿರುತ್ತವೆ.
’ಕಾದಂಬರಿ ಕರತಲ ರಂಗಭೂಮಿ: ಅಂಗೈಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ’ ಎಂದು ಮುನ್ನುಡಿಯಲ್ಲಿ ಕುವೆಂಪು ಮೊದಲಿಗೇ ಹೇಳಿದ್ದಾರೆ.
ಈ ಕಾದಂಬರಿ ಐತಿಹಾಸಿಕವಾಗಿಯೂ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಚಳುವಳಿ, ಗಾಂಧಿಪ್ರಭಾವ, ಮದ್ಯಪಾನ ವಿರೋಧಿ ಚಳುವಳಿ ಮೊದಲಾದವುಗಳು, ಮಲೆನಾಡಿನ ಬದುಕು, ಕೃಷಿ-ಕಾಡು, ಸಂಸ್ಕೃತಿ ಎಲ್ಲವೂ ಅನಾವರಣಗೊಳ್ಳುತ್ತವೆ. ಅದಕ್ಕೆ ಕುವೆಂಪು ಅವರು ತಮ್ಮ ಕಾದಂಬರಿಯನ್ನು ಕುರಿತು ’ನನ್ನ ಕಾದಂಬರಿ’ ಎಂಬ ಚುಟುಕುವೊಂದರಲ್ಲಿ
ಕಲೆ ಹಡೆದ ಕಲ್ಪನೆಯೆ
ಕತ್ತರಿಯು, ಕೇಳ;
ಹಾಳೆ ಹಾಳೆಗಳಾಗಿ
ಕತ್ತರಿಸಿ ಬಾಳ
ರಟ್ಟು ಹಾಕಿದೆನೊಟ್ಟು:
ಕಾದಂಬರಿಯ ಹುಟ್ಟು
ಗುಟ್ಟೆಲ್ಲ ರಟ್ಟು!
ಎಂದು ಹಾಡಿದ್ದಾರೆ.
ಈ ಮಹಾಕಾದಂಬರಿಗೆ ೭೮ ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ, ಕಾದಂಬರಿ ತೆರೆದುಕೊಳ್ಳುವ ಸ್ಥಳಗಳ, ಎಲ್ಲಾ ಪಾತ್ರಗಳ ಒಂದು ಪಟ್ಟಿಕೆಯನ್ನು ಸಂಪಾದಿಸಿದ್ದೇನೆ. ಮೊದಲ ಬಾರಿಗೆ ’ಕಾದಂಬರಿಯ ಅರಣ್ಯಜಗತ್ತನ್ನು ಪ್ರವೇಶಿಸುವ’ ಓದುಗರಿಗೆ, – ಈಗಾಗಲೇ ಓದಿರುವವರಿಗೂ – ಉಪಯೋಗವಾಗುತ್ತದೆ ಎಂಬ ನಂಬಿಕೆ ನನ್ನದು.

ಕಾದಂಬರಿಯಲ್ಲಿನ ಸ್ಥಳಗಳು
ತೀರ್ಥಹಳ್ಳಿ
ತೀರ್ಥಹಳ್ಳಿ ರಾಮತೀರ್ಥದ ಕಲ್ಲುಸಾರ
ಕಾನೂರು
ಮುತ್ತಳ್ಳಿ
ಸೀತೆಮನೆ
ಕೆಳಕಾನೂರು
ಅಗ್ರಹಾರ
ನೆಲ್ಲುಹಳ್ಳಿ
ಕಳ್ಳಂಗಡಿ
ಕಾನುಬೈಲು
ಕತ್ತಲೆಗಿರಿ
ಉಲ್ಲೇಖಮಾತ್ರವಾದ ಸ್ಥಳಗಳು
ಮೈಸೂರು
ಚಾಮುಂಡಿಬೆಟ್ಟ
ಅಠಾರ ಕಛೇರಿ
ಅರಮನೆ
ಕುಕ್ಕರಹಳ್ಳಿ ಕೆರೆ
ಕುರುವಳ್ಳಿ
ಕೊಪ್ಪ
ಬೆಂಗಳೂರು
ತಿರುಪತಿ
ಧರ್ಮಸ್ಥಳ
ಆಗುಂಬೆ ಘಾಟಿ
ಕುಂದದ ಗುಡ್ಡ
ಕುದುರೆಮುಖ
ಮೇರುತಿ ಪರ್ವತ
ಕೂಳೂರು ಸಿದ್ಧರಮಠ
ಸಿಬ್ಬಲುಗುಡ್ಡೆ
ಕಾನೂರು

ಚಂದ್ರಯ್ಯಗೌಡ : ಕಾನೂರು ಮನೆಯ ಯಜಮಾನ; ಹೂವಯ್ಯನ ತಂದೆ ಸುಬ್ಬಯ್ಯಗೌಡರ ತಮ್ಮ; ಸುಬ್ಬಯ್ಯಗೌಡರ
ಮರಣಾನಂತರ ಕಾನೂರು ಮನೆಗೆ ಯಜಮಾನರಾಗಿರುತ್ತಾರೆ
ಸುಬ್ಬಯ್ಯಗೌಡ : ಚಂದ್ರಯ್ಯಗೌಡರ ದಿವಂಗತ ಅಣ್ಣ; ಹೂವಯ್ಯನ ತಂದೆ
ನಾಗಮ್ಮ : ಹೂವಯ್ಯನ ತಾಯಿ; ಚಂದ್ರಯ್ಯಗೌಡರ ದಿವಂಗತ ಅಣ್ಣ ಸುಬ್ಬಯ್ಯಗೌಡರ ಹೆಂಡತಿ; ಸೀತೆಮನೆ ಸಿಂಗಪ್ಪಗೌಡರ ಹೆಂಡತಿಯ ಅಕ್ಕ
ಹೂವಯ್ಯ : ಚಂದ್ರಯ್ಯಗೌಡರ ಅಣ್ಣ ಸುಬ್ಬಯ್ಯಗೌಡ ಮತ್ತು ನಾಗಮ್ಮನವರ ಮಗ
? : ಚಂದ್ರಯ್ಯಗೌಡರ ಮೊದಲ ಹೆಂಡತಿ; ರಾಮಯ್ಯನ ತಾಯಿ
? : ಚಂದ್ರಯ್ಯಗೌಡರ ಎರಡನೆಯ ಹೆಂಡತಿ; ಪುಟ್ಟಮ್ಮ ಮತ್ತು ವಾಸುವಿನ ತಾಯಿ
ರಾಮಯ್ಯ : ಹೂವಯ್ಯನ ಚಿಕ್ಕಪ್ಪ ಚಂದ್ರಯ್ಯಗೌಡರ ಮೊದಲ ಹೆಂಡತಿಯ ಮಗ;
ಸುಬ್ಬಮ್ಮ : ಚಂದ್ರಯ್ಯಗೌಡರ ಮೂರನೆಯ ಹೆಂಡತಿ; ನೆಲ್ಲುಹಳ್ಳಿಯ ಪೆದ್ದೇಗೌಡರ ಮಗಳು
ಪುಟ್ಟಮ್ಮ : ಚಂದ್ರಯ್ಯಗೌಡರ ಎರಡನೆಯ ಹೆಂಡತಿಯ ಮಗಳು; ರಾಮಯ್ಯನ ಮಲತಂಗಿ
ವಾಸು : ಚಂದ್ರಯ್ಯಗೌಡರ ಎರಡನೆಯ ಹೆಂಡತಿಯ ಮಗ; ರಾಮಯ್ಯನ ಮಲತಮ್ಮ; ಕೊನೆಯಲ್ಲಿ ಕಾನೂರಿನ ಗೌಡನಾಗುವವನು; ಸೀತೆಯ ತಂಗಿ ಲಕ್ಷ್ಮಿಯನ್ನು ಮದುವೆಯಾಗುವವನು
ಪುಟ್ಟಣ್ಣ : ಮನೆಯ ಕೆಲಸಗಾರ; ಹೂವಯ್ಯನ ನಂಬಿಕಸ್ಥ ಬಂಟ; ಒಳ್ಳೆಯ ಬೇಟೆಗಾರ
ರಂಗಪ್ಪಸೆಟ್ಟಿ : ಕಾನೂರು ಮನೆಯ ಸೇರೆಗಾರ
ನಿಂಗ : ಗಾಡಿಯಾಳು; ಧರ್ಮಸ್ಥಳ ಯಾತ್ರೆಯ ನಡುವೆ ಅಕಾಲದಲ್ಲಿ ಮರಣ ಹೊಂದಿದವನು
ಪುಟ್ಟ : ನಿಂಗನ ಮಗ; ವಾಸುವಿನ ಸಮವಯಸ್ಕ; ಕೊನೆಯಲ್ಲಿ ಸಣ್ಣಪುಟ್ಟಣ್ಣ ಎಂದು ಕರೆಸಿಕೊಳ್ಳುವವನು
ಬೈರ : ಕಾನೂರು ಮನೆಯ ಜೀತದಾಳು; ಮನೆ ಭಾಗವಾದಾಗ ಹೂವಯ್ಯನ ಜೊತೆಗೆ ಸೇರುವವನು
ಸೇಸಿ : ಬೈರನ ಹೆಂಡತಿ
ಗಂಗ : ಬೈರನ ಮಗ; ವಾಸುವಿನ ಸಮವಯಸ್ಕ; ಚಿಕ್ಕವಯಸ್ಸಿಗೆ ಸತ್ತು ಹೋಗುತ್ತಾನೆ
ಸಿದ್ದ : ಜೀತದಾಳು
ಗಂಗೆ : ಘಟ್ಟದಾಳು; ಸೇರೆಗಾರರ ಪ್ರೇಯಸಿ; ಚಂದ್ರಯ್ಯಗೌಡರ ಪ್ರೀತಿಗೆ ಒಳಗಾಗಿದ್ದವಳು
ಕೃಷ್ಣಯ್ಯಸೆಟ್ಟಿ : ಗಂಗೆಯ ಮೊದಲ ಪ್ರಣಯಿ
ತಿಮ್ಮಯ್ಯಸೆಟ್ಟಿ : ಗಂಗೆಯನ್ನು ಮದುವೆಯಾದ ಮುದುಕ ಶ್ರೀಮಂತ
ತಿಮ್ಮ : ಹಳೆಪೈಕದವನು; ಚಂದ್ರಯ್ಯಗೌಡರ ಒಕ್ಕಲು; ಗೌಡರಿಗೆ ಕಳ್ಳು ಕಾಯಿಸಿಕೊಡುವವನು
ಬಾಡುಗಳ್ಳ ಸೋಮ: ಗಟ್ಟದಾಳು; ಕೊನೆಯಲ್ಲಿ ಕಾನೂರಿನ ಸೇರೆಗಾರ ಸೋಮಯ್ಯಸೆಟ್ಟಿ ಎಂದು ಕರೆಸಿಕೊಳ್ಳುವವನು
ಬಗ್ರ : ಘಟ್ಟದಾಳು
ಸದಿಯ : ಘಟ್ಟದಾಳು
ಕಾಡಿ : ಘಟ್ಟದಾಳು
ಸುಬ್ಬಿ : ಘಟ್ಟದಾಳು
ಗುತ್ತಿ : ಒಬ್ಬ ಆಳು (ಮಲೆಗಳಲ್ಲಿ ಮದುಮಗಳು ಕಾದಂಬರಿಯ ಕೊನೆಯಲ್ಲಿ ನಾಯಿಗುತ್ತಿ, ಕಾನೂರು ಚಂದ್ರಯ್ಯಗೌಡರಲ್ಲಿ ಜೀತದಾಳಾಗಿ ನಿಲ್ಲುವ ಸೂಚನೆಯಿದೆ. ಅದೇ ಗುತ್ತಿಯೆಂದು ತಿಳಿಯಬಹುದು)
ಬಚ್ಚ : ಬೇಲರಾಳು
? : ಗಂಗೆಯ ತಂದೆ
? : ಗಂಗೆಯ ತಾಯಿ
? : ಕಾನೂರು ಮನೆಯ ಅಡುಗೆಯವನು
? : ಹೂವಯ್ಯ ವಾಸವಿದ್ದ ಕೆಳಕಾನೂರು ಮನೆಯ ಅಡುಗೆಯವನು
? : ಕಾನೂರು ಪಟೇಲರು
ಮುತ್ತಳ್ಳಿ
ಶಾಮಯ್ಯಗೌಡ : ಮುತ್ತಳ್ಳಿ ಮನೆತನದ ಯಜಮಾನ; ಪಟೇಲ; ಕಾನೂರು ಚಂದ್ರಯ್ಯಗೌಡರ ಭಾವನೆಂಟ
ಗೌರಮ್ಮ : ಶಾಮಯ್ಯಗೌಡರ ಹೆಂಡತಿ; ಚಿನ್ನಯ್ಯನ ತಾಯಿ
ಚಿನ್ನಯ್ಯ : ಶಾಮಯ್ಯಗೌಡ-ಗೌರಮ್ಮನವರ ಮಗ; ಸೀತೆಯ ಅಣ್ಣ; ಕಾನೂರು ಪುಟ್ಟಮ್ಮನ ಗಂಡ
ಸೀತೆ : ಶಾಮಯ್ಯಗೌಡ-ಗೌರಮ್ಮನವರ ಹಿರಿಯ ಮಗಳು; ಚಿನ್ನಯ್ಯನ ತಂಗಿ;
ಲಕ್ಷ್ಮಿ : ಶಾಮಯ್ಯಗೌಡ-ಗೌರಮ್ಮನವರ ಕಿರಿಯ ಮಗಳು; ಸೀತೆಯ ತಂಗಿ; ಕೊನೆಯಲ್ಲಿ ಕಾನೂರು ವಾಸಪ್ಪಗೌಡನನ್ನು ಮದುವೆಯಾಗುವ ಹುಡುಗಿ
ರಮೇಶ : ಚಿನ್ನಯ್ಯ ಪುಟ್ಟಮ್ಮರ ಮೊದಲ ಮಗ
ಲಲಿತೆ : ಚಿನ್ನಯ್ಯ ಪುಟ್ಟಮ್ಮರ ಮಗಳು
ಮಾಧೂ : ಚಿನ್ನಯ್ಯ ಪುಟ್ಟಮ್ಮರ ಕೂಸು
ಕುಂಬಾರ ನಂಜ : ಶಾಮಯ್ಯಗೌಡರ ಒಕ್ಕಲು
? : ನಂಜನ ಹೆಂಡತಿ
ರಂಗಿ : ನಂಜನ ಹೆಣ್ಣುಕೂಸು
ಕಾಳ : ಮನೆಯ ಆಳು
ರಾಮಕ್ಕ : ಕಾಳನ ದಿವಂಗತ ತಾಯಿ
ಸೀತೆಮನೆ
ಸಿಂಗಪ್ಪಗೌಡ : ಸೀತೆಮನೆ ಯಜಮಾನ; ಹೂವಯ್ಯನ ತಾಯಿ ನಾಗಮ್ಮನವರ ತಂಗಿಯ ಗಂಡ; ಸಂಬಂಧದಲ್ಲಿ ಹೂವಯ್ಯನಿಗೆ ಚಿಕ್ಕಪ್ಪ;
? : ಸಿಂಗಪ್ಪಗೌಡರ ಹೆಂಡತಿ; ಹೂವಯ್ಯನ ತಾಯಿ ನಾಗಮ್ಮನವರ ಸಹೋದರಿ; ಕೃಷ್ಣಪ್ಪನ ತಾಯಿ
ಕೃಷ್ಣಪ್ಪ : ಸಿಂಗಪ್ಪಗೌಡರ ಮಗ
ಶಂಕರಯ್ಯ : ಸಿಂಗಪ್ಪಗೌಡರ ಕೊನೆಯ ಮಗ
ಕಿಲಸ್ತರ ಜಾಕಿ : ಕೃಷ್ಣಪ್ಪನ ಬಂಟ
? : ದನ ಕಾಯುವವನು
ಸುಕ್ರ : ಗಾಡಿ ಹೊಡೆಯುವವನು
ಅಗ್ರಹಾರ
ವೆಂಕಪ್ಪಯ್ಯ : ಜೋಯಿಸರು; ಚಂದ್ರಮೌಳೇಶ್ವರ ದೇವಾಲಯದ ಅರ್ಚಕರು
? & ? : ವೆಂಕಪ್ಪಯ್ಯನವರ ಇಬ್ಬರು ಮಕ್ಕಳು
? & ? : ಇಬ್ಬರು ಬ್ರಾಹ್ಮಣ ಬಾಲಕರು
ಮಂಜಭಟ್ಟರು : ವೃದ್ಧ ಬ್ರಾಹ್ಮಣರು
ಸಿಂಗಾಜೋಯಿಸರು: ಅಗ್ರಹಾರದ ಬ್ರಾಹ್ಮಣರು
ರಾಮಭಟ್ಟರು : ಅಗ್ರಹಾರದ ಬ್ರಾಹ್ಮಣರು
ಕೆಳಕಾನೂರು
ಅಣ್ಣಯ್ಯಗೌಡರು : ಚಂದ್ರಯ್ಯಗೌಡರ ಒಕ್ಕಲು
ಓಬಯ್ಯ : ಅಣ್ಣಯ್ಯಗೌಡರ ಎರಡನೆಯ ಹೆಂಡತಿಯ ಮಗ; ಕಾನೂರು ಬಿಟ್ಟು ಹೋದರೂ, ಕೊನೆಯಲ್ಲಿ ಕಾನೂರು ಮನೆಯಲ್ಲೇ ಆಶ್ರಯ ಪಡೆದಾತ
? : ಅಣ್ಣಯ್ಯಗೌಡರ ನಾಲ್ಕನೆಯ ಹೆಂಡತಿ
? : ಮೂರನೆಯ ಹೆಂಡತಿಯ ಮಗಳು
ನೆಲ್ಲುಹಳ್ಳಿ
ಪೆದ್ದೇಗೌಡ : ಸುಬ್ಬಮ್ಮನ ತಂದೆ
? : ಸುಬ್ಬಮ್ಮನ ತಾಯಿ
? : ಸುಬ್ಬಮ್ಮನ ಅತ್ತಿಗೆ
? : ಕುತ್ತುರೆ ಹಾಕುವ ಯುವಕ; ಸುಬ್ಬಮ್ಮ ಚಂದ್ರಯ್ಯಗೌಡರನ್ನು ಮದುವೆಯಾಗುವ ಮೊದಲು ಈ ಯುವಕನಿಗೆ ಕೊಡುವ ಗಾಳಿಸುದ್ದಿಯಿದ್ದಿತ್ತು.
ಕಳ್ಳಂಗಡಿ
ಚಿಕ್ಕಣ್ಣ : ಕಳ್ಳಂಗಡಿಯ ಮಾಲೀಕ
? : ಕಳ್ಳಗಂಡಿಯವನ ಹೆಂಡತಿ
? : ಅಂಗಡಿಯವನ ಮಗ
ಮನೆ ಹಿಸ್ಸೆ ಪಂಚಾಯ್ತಿಯಲ್ಲಿ ಭಾಗವಹಿಸಿದ್ದ ಪಾಲು ಮುಖಂಡರು
ಬಾಳೂರು ಸಿಂಗೇಗೌಡ
ಬೈದೂರು ಬಸವೇಗೌಡ
ನೆಲ್ಲಹಳ್ಳಿ ಪೆದ್ದೇಗೌಡ
ಮುದ್ದೂರು ಭರ್ಮೇಗೌಡ
ಎಂಟೂರು ಶೇಷೇಗೌಡ
ಮೇಗ್ರಳ್ಳಿ ನಾಗಪ್ಪ ಹೆಗ್ಗಡೆ
ಇತರೆ
ಅತ್ತಿಗದ್ದೆ ಹಿರಿಯಣ್ಣಗೌಡ
ರಂಗಮ್ಮ – ಅತ್ತಿಗದ್ದೆ ಹಿರಿಯಣ್ಣಗೌಡರ ಮಗಳು
ನುಗ್ಗಿಮನೆ ತಮ್ಮಣ್ಣಗೌಡ
ದಾನಮ್ಮ – ನುಗ್ಗಿಮನೆ ತಮ್ಮಣ್ಣಗೌಡರ ಮಗಳು
ಸಂಪಗೆಹಳ್ಳಿ ಪುಟ್ಟಯ್ಯಗೌಡ
ದುಗ್ಗಮ್ಮ – ಸಂಪಗೆಹಳ್ಳಿ ಪುಟ್ಟಯ್ಯಗೌಡರ ಮಗಳು
ತೀರ್ಥಹಳ್ಳಿ ಡಾಕ್ಟರ್
ಪೊಲೀಸಿನವರು
ತೀರ್ಥಹಳ್ಳಿ ಹೆಗ್ಗಡೆ
ಮಾರ್ಕ – ಹೆಂಡ ಕಟ್ಟುವ ಬಗನಿ ಮರಗಳಿಗೆ ಮಾರ್‍ಕ್ ಮಾಡುವವನು
ಗಾರ್ಡ – ಫಾರೆಸ್ಟ್ ಗಾರ್ಡ್
ಮುತ್ತಳ್ಳಿ ಸೇರೆಗಾರ
ಸೀತೆಮನೆ ಸೇರೆಗಾರ
ಕುದುಕ – ಬಿಲ್ಲರವನು
? – ಸೈಕಲ್ ಸವಾರ
ತೀರ್ಥಹಳ್ಳಿಯ ಕಿಲಸ್ತರು
ಸಾಕುಪ್ರಾಣಿಗಳು
ನಂದಿ ಮತ್ತು ಲಚ್ಚ – ಕಾನೂರು ಮನೆಯ ಎತ್ತುಗಳು
ಪುಟ್ರಾಮ – ಕಾನೂರಿನ ಒಂದು ಎತ್ತು
ಟೈಗರ್, ರೂಬಿ, ಟಾಪ್ಸಿ, ಡೈಮಂಡು, ಕೊತ್ವಾಲ, ಡೂಲಿ ಮತ್ತು ರೋಜಿ – ಕಾನೂರು ಮನೆಯ ನಾಯಿಗಳು
ಡೈಮಂಡು ಮತ್ತು ರೂಬಿ – ಮುತ್ತಳ್ಳಿ ಮನೆಯ ನಾಯಿಗಳು
? – ಎತ್ತು
ಪಾಟ್‌ರೈಟ್ – ಸೀತೆಮನೆಯ ಒಂದು ನಾಯಿ

Monday, February 22, 2010

ಮ.ಮ.ಮ. ಓದಿಗೊಂದು ಪೂರ್ವಸಿದ್ಧತೆ: ಭಾಗ-1


‘ಏನು ಕಾಫಿಗೆ ಬರುವುದಿಲ್ಲವೆ?’
‘ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ್ತಿದೆ’

‘ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು ನೀವು ಬಂದು ಕಾಫಿ ಕುಡಿದು ಹೋಗಿ’

ಅರ್ಧಗಂಟೆಯ ನಂತರ ಕಾಪಿ ಕುಡಿಯುತ್ತಾ,

‘ಚಿನ್ನಮ್ಮ ತಪ್ಪಿಸಿಕೊಂಡು ಹೋದಳೆ?’

‘ಹ್ಞೂ ಅವಳು ಕ್ಷೇಮವಾಗಿ ಹುಲಿಕಲ್ಲು ನೆತ್ತಿ ಹತ್ತಿದಳು’

ಈ ಸಂಭಾಷಣೆ ಕುವೆಂಪು ದಂಪತಿಗಳದ್ದು. ಮಲೆಗಳಲ್ಲಿ ಮಧುಮಗಳು ಕಾದಂಬರಿ ರಚನೆಯಾಗುತ್ತಿದ್ದ ಕಾಲದ ಒಂದು ದಿನ ಸಂಜೆ ಕಾಫಿಯ ಸಮಯದಲ್ಲಿ ನಡೆದದ್ದು. ಇದನ್ನು ಸೊಗಸಾಗಿ ತಾರಿಣಿಯವರು ‘ಮಗಳು ಕಂಡು ಕುವೆಂಪು’ ಕೃತಿಯಲ್ಲಿ ದಾಖಲಿಸಿದ್ದಾರೆ.

ಮೊದಲು ಪ್ರಾರಂಭವಾಗಿ, ಒಂದೆರಡು ಅಧ್ಯಾಯಗಳನ್ನು ಬರೆದು ಮುಗಿಸಿದ ಮೇಲೆ, ನಂತರ ಸುಮಾರು ೩೦ ವರ್ಷಗಳಾದ ಮೇಲೆ ಮೂರು ವರ್ಷಗಳ ಕಾಲ ಬರೆಯಿಸಿಕೊಂಡ ಕಾದಂಬರಿ ಇದು! ಅದು ಹೇಗೆ ಸಾಧ್ಯವಾಯಿತು? ಇದಕ್ಕೂ ಉತ್ತರ ತಾರಿಣಿಯವರ ಕೃತಿಯಲ್ಲಿ ಸಿಗುತ್ತದೆ.

ಕುವೆಂಪು ನಿವೃತ್ತರಾದ ಮೇಲೆ ಮನೆಯಲ್ಲಿ ಅರಾಮವಾಗಿದ್ದಾಗ ಒಂದು ದಿನ ಪುಸ್ತಕದ ಬೀರುವಿನಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ತಾರಿಣಿ ‘ಏನು?’ ಎಂದು ಕೇಳಿದಾಗ, ‘ಅಕ್ಕಾ ಎಲ್ಲಾದರೂ ನನ್ನ ಪುಸ್ತಕಗಳ ಬೀರುವಿನಲ್ಲಿ ಆ ಕಾದಂಬರಿಯ ಮ್ಯಾಪ್ ಇದೆಯೇ ನೋಡುವೆಯಾ? ನಿನಗೆ ಸಮಯವಾದಾಗ ಹುಡುಕು’ ಎನ್ನುತ್ತಾರೆ. ‘ಅದು ಹೇಗಿದೆ ಅಣ್ಣಾ?’ ಎನ್ನುವ ಪ್ರಶ್ನೆಗೆ, ಒಂದು ಫುಲ್ ಸ್ಕೇಪ್ ಬಿಳಿ ಹಾಳೆ, ಅದರಲ್ಲಿ ಎಲ್ಲಾ ಬರೆದಿರುವೆ’ ಎಂಬ ಉತ್ತರ ದೊರೆಯುತ್ತದೆ.

ಕೆಲ ದಿನಗಳ ನಂತರ, ಕುವೆಂಪು ತಮ್ಮ ಹಸ್ತಪ್ರತಿಗಳನ್ನು ಒಂದೊಂದೇ ತೆಗೆದು ನೋಡುತ್ತಿದ್ದಾಗ ಆ ಹಾಳೆ ಸಿಗುತ್ತದೆ. ಅವರು ಸಂತೋಷದಿಂದ ಅಲ್ಲಿಯೇ ಇದ್ದ ತಾರಿಣಿಗೆ ‘ಅಕ್ಕಾ ಇಲ್ಲಿ ನೋಡು, ಅಂತೂ ಈ ಕಾದಂಬರಿ ಮ್ಯಾಪ್ ಸಿಕ್ಕಿತು’ ಎಂದು ಹರ್ಷದಿಂದ ಹೇಳುತ್ತಾರೆ.

(ತಾರಿಣಿಯವರ ಮಾತಿನಲ್ಲೇ ಹೇಳುವುದಾದರೆ) ಬಹಳ ಹಳೆಯದಾದ ಒಂದು ಕಾಗದದ ಹಾಳೆ. ಆ ಕಾಗದದ ಬಣ್ಣ ಮಾಸಿತ್ತು. ಬಿಳಿ ಬಣ್ಣ ಹೋಗಿ ಮಾಸಲು ಕೆಂಪು ಬಣ್ಣ ಬಂದಿತ್ತು. ಮಡಿಕೆಯಾದ ಜಾಗದಲ್ಲಿ ಸ್ವಲ್ಪ ಹರಿದಿತ್ತು. ಕಾಗದದಲ್ಲಿ ತಲೆಬರಹ ದೊಡ್ಡದಾಗಿ ಮಲೆಗಳಲ್ಲಿ ಮಧುಮಗಳು ಎಂದು ಬರೆದಿತ್ತು. ಆ ಕಾಗದದ ತುಂಬ ಏನೇನೋ ಅತ್ತ ಇತ್ತ ಗೀರು, ಗೀರಿನ ಕೆಳಗೆ, ಮಧ್ಯೆ, ಪಕ್ಕ, ಕಾದಂಬರಿ ಪಾತ್ರಗಳ ಹೆಸರು, ಸಥಳಗಳ ಹೆಸರು, ಊರಿನ ಹೆಸರು, ಬಾಣದ ಗುರುತುಗಳು, ಅಡ್ಡಗೀರು, ಉದ್ದಗೀರು, ತ್ರಿಕೋಣಗೆರೆಗಳು ಹೀಗೆ ಎಲ್ಲಾ ಕಡೆ ಚಿತ್ತಾರವಾಗಿ ನೋಡಿದವರಿಗೆ ಏನೂ ಅರ್ಥವಾಗುತ್ತಿರಲಿಲ್ಲ!

ಅದನ್ನು ನೋಡಿದ ತಾರಿಣಿಯವರು ‘ಇದೇನಣ್ಣಾ ಈ ಮ್ಯಾಪ್ ಹೀಗಿದೆ? ನಾನು ಏನೋ ಬೇರೆಯೇ ತರವೇ ಊಹಿಸಿದ್ದೆ. ನನ್ನಿಂದ ಈ ಮ್ಯಾಪ್ ಹುಡುಕಲು ಆಗುತ್ತಿರಲಿಲ್ಲ’ ಎನ್ನುತ್ತಾರೆ.

‘ಮತ್ತಿನ್ನೇನು? ಭೂಗೋಳ ಮ್ಯಾಪ್ ಹಾಗೆ ಇದರಲ್ಲಿ ಚಿತ್ರ ಬರೆದಿರುವೆ ಎಂದು ತಿಳಿದೆಯಾ? ಇಡೀ ಕಾದಂಬರಿ ಹೇಗೆ ಚಿತ್ರಿತವಾಗುವುದು ಎಂದು ಸ್ಥೂಲವಾಗಿ ಗುರುತು ಹಾಕಿದ್ದೆ. ಸಿಕ್ಕಿದ್ದು ಒಳ್ಳೆಯದಾಯಿತು. ಮತ್ತೆ ಬರೆಯಲು ಪ್ರಾರಂಭಿಸುವೆ. ಅಂತೂ ಸಧ್ಯ ಬೇಗ ಸಿಕ್ಕಿತಲ್ಲಾ. ಮೂವತ್ತು ವರ್ಷಗಳ ಹಿಂದೆ ಬರೆದಿಟ್ಟಿದ್ದು. ಹಾಳಾಗದೇ ಉಳಿದದ್ದೇ ಆಶ್ಚರ್ಯ’ ಎನ್ನುತ್ತಾರೆ.

ಆ ಕಾದಂಬರಿ ಮ್ಯಾಪ್ ಸಿಗದಿದ್ದರೆ...!?

ಮಲೆಗಳಲ್ಲಿ ಮಧುಮಗಳು ಎಂಬ ಮಹಾ ಕಾದಂಬರಿ ಸೃಷ್ಟಿಯಾಗುತ್ತಿರಲೇ ಇಲ್ಲವೇನೋ! ಆದರೆ ಶ್ರೇಷ್ಠ ಸಾಹಿತ್ಯ ಕೃತಿಯೊಂದು ಜನ್ಮ ತಳೆಯುವುದು ಭುವನದ ಭಾಗ್ಯವಲ್ಲವೆ!

ತಾರಿಣಿಯವರ ಪುಸ್ತಕದಲ್ಲಿ ಈ ಘಟನೆಯನ್ನು ಓದಿದ ಮೇಲೆ, ಇಷ್ಟೊಂದು ಸಂಕೀರ್ಣ ಸಂರಚನೆಯುಳ್ಳ ಕಾದಂಬರಿ ಮೊದಲ ಬಾರಿಗೆ ಓದುಗನನ್ನು ಬೆಕ್ಕಸಬೆರಗುಗೊಳಿಸುವ ಈ ಕಾದಂಬರಿಯ ಬಗ್ಗೆ ನನಗೆ ಸಾಧ್ಯವಾದ ಹಾಗೆ ಓಮದು ಮ್ಯಾಪ್ ರಚಿಸಬೇಕೆಂದು ಕೊಂಡೆ, ವರ್ಷಗಳ ಹಿಂದೆಯೇ! ಆದರೆ ಅದನ್ನು ಮರು ಓದಿಗೆ ಒಳಪಡಿಸಿದ್ದು ತೀರಾ ಇತ್ತೀಚಿಗೆ. ಒಂದು ವಾರಗಳ ಕಾಲ ಓದುತ್ತಾ ವ್ಯಕ್ತಿನಾಮ, ಸ್ಥಳನಾಮ, ಪರಸ್ಪರ ಸಂಬಂಧಗಳನ್ನು ಗುರುತಿಸಿಕೊಳ್ಳುತ್ತಾ ಹೋದ ಹಾಗೆ ತೆರೆದುಕೊಂಡಿದ್ದೇ ಒಂದು ದೊಡ್ಡ ಪ್ರಪಂಚ!

ಒಂದು ಮಹಾ ಕಾದಂಬರಿ ಹೇಗೆ ಇರುತ್ತದೆ. ವರ್ತಮಾನದಲ್ಲಿದ್ದುಕೊಂಡೇ ಭೂತಕಾಲದಲ್ಲಿಯೂ ವಿಹರಿಸುತ್ತಾ ಭವಿಷ್ಯದತ್ತ ಸಾಗುವ ಅಚ್ಚರಿ! ಮೊದಲ ಸುಮಾರು ೨೦೦ ಪುಟಗಳ ಕಥೆ ಕೇವಲ ಒಂದು ದಿನದಲ್ಲಿ ನಡೆಯುವ ಘಟನೆಗಳು. ಇಡೀ ಕಾದಂಬರಿ ಸುಮಾರು ಒಂದು ಮಳೆಗಾಲ ಪ್ರಾರಂಭವಾಗಿ ಮುಗಿಯುವ ಮೊದಲೇ ಮುಗಿದು ಹೋಗುತ್ತದೆ. ಎಂಟನೂರಕ್ಕೂ ಅಧಿಕ ಪುಟಗಳಲ್ಲಿ ಕಾಲ ದೇಶಗಳನ್ನು ಮೀರಿ ನಡೆಯುವ ಘಟನೆಗಳು ಕಿಕ್ಕಿರಿದಿವೆ. ನೂರಾರು ಪ್ರಾಣಿ ಪಕ್ಷಿಗಳ ಹೆಸರುಗಳು ದಟ್ಟೈಸಿವೆ. ಮರಗಿಡಗಳ ಪ್ರಸ್ತಾಪವಾಗುತ್ತದೆ. ಮೇಲಿನವುಗಳಲ್ಲದೆ ಅಸಂಖ್ಯಾತ ಅನಾಮಿಕ ಪಾತ್ರಗಳು, ಜಾಗಗಳು ಪ್ರಸ್ತಾಪವಾಗುತ್ತವೆ. ಇಷ್ಟೊಂದು ಪಾತ್ರಗಳು ಅವುಗಳ ಮನೋಭಾವ, ಕಾರ್ಯವಿಧಾನ, ವೃತ್ತಿ, ಸಂಬಂಧಗಳು ಎಲ್ಲವನ್ನೂ ಕವಿ ನಿಭಾಯಿಸಿರುವುದು ಅದ್ಭುತ!

ಎಲ್ಲಿಯಾದರೂ ಸರಿ, ಹೇಗಾದರೂ ಸರಿ ಒಂದಿಷ್ಟೂ ಗೊಂದಲ ಕಾದಂಬರಿಕಾರನಿಗೆ ಬಂದಿರಬಹುದಲ್ಲ ಎನ್ನುವ ಸಹಜ(ಕೆಟ್ಟ)ಕುತೂಹಲ ಉತ್ತರವಾಗಿ ಸಿಕ್ಕಿದ್ದು ಎರಡು ಸನ್ನಿವೇಶಗಳು. ಅದರಲ್ಲು ಒಂದು ಸನ್ನಿವೇಶ ಕಾದಂಬರಿಕಾರನ ಉದ್ದೇಶಪೂರ್ವಕ ನಡೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮತ್ತೊಂದು ಇಬ್ಬರು ವ್ಯಕ್ತಿಗಳ ಹೆಸರು ಮತ್ತು ವೃತ್ತಿಯ ಅದಲು ಬದಲು ಅಷ್ಟೆ!

ಈ ಕೆಳಗೆ ನಾನು ಪಟ್ಟಿ ಮಾಡಿರುವ ಸ್ಥಳಗಳು, ಪಾತ್ರಗಳು, ಅವುಗಳ ಪರಸ್ಪರ ಸಂಬಂಧಗಳನ್ನು ಗಮನಿಸಿದರೆ ಮಹಾಕಾದಂಬರಿಯೊಂದರ ಅರಹು ಹೇಗಿರುತ್ತದೆ ಹಾಗೂ ಹೇಗಿರಬೇಕು ಎಂದು ತಿಳಿಯುತ್ತದೆ. ಮಲೆಗಳಲ್ಲಿ ಮಧುಮಗಳು ಓದುವುದಕ್ಕೆ ಪೂರ್ವಭಾವಿಯಾಗಿ ಈ ಸಿದ್ಧಟಿಪ್ಪಣಿ ಒಳ್ಳೆಯ ಪ್ರವೇಶವಾಗಬಹುದು.
ಕಾದಂಬರಿಯ ಬಿಚ್ಚಿಕೊಳ್ಳುವ ಪ್ರಮುಖ ಸ್ಥಳಗಳು

  1. ಸಿಂಬಾವಿ (ಭರಮೈ ಹೆಗ್ಗಡೆಯ ಮನೆ)
  2. ಸೀತೂರುಗುಡ್ಡ (ಸಿಂಬಾವಿ-ಲಕ್ಕೂಂದದ ನಡುವಿನ ಒಂದು ಗುಡ್ಡ)
  3. ಲಕ್ಕುಂದ (ಹಳೇಪೈಕದವರ ಹಟ್ಟಿ. ಸಿಂಬಾವಿಯಿಂದ ಮೂರ‍್ನಾಲ್ಕು ಮೈಲಿ)
  4. ಮೇಗರವಳ್ಳಿ (ತೀರ್ಥಹಳ್ಳಿ ಆಗುಂಬೆ ರಸ್ತೆಯಲ್ಲಿನ ಊರು. ಲಕ್ಕುಂದದಿಂದ ಎರಡು ಮೈಲಿ)
  5. ಬೆತ್ತದಸರ
  6. ಹುಲಿಕಲ್ಲು
  7. ಹಳೆಮನೆ (ಸುಬ್ಬಣ್ಣ ಹೆಗ್ಗಡೆಯವರ ಮನೆ. ಮೇಗರವಳ್ಳಿಯಿಂದ ಒಂದು ಹರಿದಾರಿ)
  8. ಅರೆಕಲ್ಲು (ಹಳೆಮನೆಯಿಂದ ಬೆಟ್ಟಳ್ಳಿಗೆ ಹೋಗುವ ದಾರಿಯಲ್ಲಿ ಬೆಟ್ಟಳ್ಳಿಯ ಹೊಲಗೇರಿಗೆ ದಾರಿ ಕವಲೊಡೆಯುವ ಜಾಗ)
  9. ಬೆಟ್ಟಳ್ಳಿ (ಕಲ್ಲಯ್ಯಗೌಡರ ಮನೆ)
  10. ಬೆಟ್ಟಳ್ಳಿ ಹಕ್ಕಲು (ಬಿಸೇಕಲ್ ಸವಾರಿ ನಡೆದ ಜಾಗ)
  11. ಬೆಟ್ಟಳ್ಳಿ ಹೊಲಗೇರಿ
  12. ಅರೆಕಲ್ಲು ಕಾರೇಮೆಟ್ಟು (ಬೆಟ್ಟಳ್ಳಿ ಹೊಲಗೇರಿಯ ಹತ್ತಿರದ್ದು. ಗುತ್ತಿ ತಿಮ್ಮಿಗಾಗಿ ಕಾಯುತ್ತಾ ಕುಳಿತಿದ್ದ ಜಾಗ)
  13. ಕಮ್ಮಾರಸಾಲೆ (ಕೋಣೂರಿಗೂ ಬೆಟ್ಟಳ್ಳಿಗೂ ಮಧ್ಯೆ, ಮೇಗರವಳ್ಳಿ ಹೂವಳ್ಳಿ ಹಳೆಮನೆಗಳಿಗೂ ಸಮದೂರದಲ್ಲಿದ್ದ ಜಾಗ. ಕಳ್ಳಂಗಡಿ, ಮೂರ‍್ನಾಲ್ಕು ಜೋಪಡಿಗಳಿದ್ದ ಜಾಗ)
  14. ಕೋಣೂರು (ರಂಗಪ್ಪಗೌಡರ ಮನೆ)
  15. ಭೂತದವನ (ಕೋಣುರು ಮನೆಗೆ ಸೇರಿದ್ದು)
  16. ಹಾಡ್ಯದ ಮಾರಮ್ಮನ ಗುಡಿ
  17. ಹಳೆಪೈಕದ ಯೆಂಕಿಯ ಮನೆ
  18. ಹೂವಳ್ಳಿ (ವೆಂಕಟಣ್ಣ ನಾಯಕರ ಮನೆ)
ಗುತ್ತಿ ಓಡಾಡಿದ ಮಾರ್ಗ

ಗುತ್ತಿ ಯಾ ನಾಯಿಗುತ್ತಿ ಈ ಕಾದಂಬರಿಯ ಪ್ರಮುಖ ಪಾತ್ರ ಹಾಗೂ ಚಲನಶೀಲತೆಯ ಪ್ರತೀಕ. ಈಡೀ ಕಾದಂಬರಿಯಲ್ಲಿ ಪ್ರಸ್ತಾಪವಾಗುವ ಬಹುತೇಕ ಸ್ಥಳಗಳಿಗೆ ಈ ಪಾತ್ರ ಭೇಟಿಕೊಡುತ್ತದೆ. ಅದು ಕೇವಲ ಬೇಟಿಯಲ್ಲ! ಆ ಬೇಟಿ ಕಾದಂಬರಿಯ ಮುಂದಿನ ಓಟಕ್ಕೆ ತೆರೆದುಕೊಳ್ಳಲು ಕಾರ್ಯಕಾರಣ ಸಂಬಂಧವನ್ನು ಸೃಷ್ಟಿಸುತ್ತದೆ. ವಿವಾದಗಳನ್ನೇ ಹುಟ್ಟು ಹಾಕುತ್ತದೆ. ಕೆಲವೊಮ್ಮೆ ಶಾಂತಿ ನೆಮ್ಮದಿಗೆ ಕಾರಣವಾಗುತ್ತದೆ. ಆರಂಭದಿಂದ ಕೊನೆಯವರೆಗೆ, ಸಿಂಭಾವಿಯಿಂದ ಕಾನೂರು ಚಂದ್ರಯ್ಯಗೌಡರ (ಕಾನೂರು ಹೆಗ್ಗಡತಿ ಕಾದಂಬರಿಯ ಪ್ರಮುಖ ಪಾತ್ರ) ಆಶ್ರಯಕ್ಕೆ ಬರುವವರೆಗೆ ಆ ಪಾತ್ರದ ಪ್ರಯಾಣವನ್ನು ಗಮನಿಸಿ.

  1. ಸಿಂಬಾವಿ
  2. ಸೀತೂರುಗುಡ್ಡ
  3. ಲಕ್ಕುಂದ
  4. ಮೇಗರವಳ್ಳಿ
  5. ಬೆತ್ತದಸರ
  6. ಹುಲಿಕಲ್ಲು
  7. ಹಳೆಮನೆ
  8. ಅರೆಕಲ್ಲು
  9. ಬೆಟ್ಟಳ್ಳಿ
  10. ಬೆಟ್ಟಳ್ಳಿ ಹಕ್ಕಲು
  11. ಬೆಟ್ಟಳ್ಳಿ ಹೊಲಗೇರಿ
  12. ಅರೆಕಲ್ಲು ಕಾರೇಮೆಟ್ಟು
  13. ಕಮ್ಮಾರಸಾಲೆ
  14. ಕೋಣೂರು ದಾರಿ
  15. ಹುಲಿಕಲ್ಲು
  16. ಬೆತ್ತದ ಸರ
  17. ಲಕ್ಕುಂದ
  18. ಸೀತೂರುಗುಡ್ಡ
  19. ಸಿಂಬಾವಿ ಹೊಲಗೇರಿ
  20. ಸಿಂಬಾವಿ
  21. ಮೇಗರವಳ್ಳಿ ತೀರ್ಥಹಳ್ಳಿ ರಸ್ತೆ
  22. ಕಾಗಿನಹಳ್ಳಿ
  23. ಹಳೆಮನೆ ಸ್ಮಶಾಣ
  24. ಹಳೆಮನೆ ಹೊಲಗೇರಿ
  25. ಹಳೆಮನೆ ಶಂಕರ ಹಗ್ಗಡೆ ಮನೆ
  26. ಹುಲಿಕಲ್ಲು
  27. ಕೋಣುರು ಮನೆ
  28. ಕೋಣುರು ಐತನ ಬಿಡಾರ
  29. ಹುಲಿಕಲ್ಲು
  30. ಹೂವಳ್ಳಿ ಮನೆಯ ಹತ್ತಿರದವರೆಗೆ
  31. ಹುಲಿಕಲ್ಲು
  32. ತೀರ್ಥಹಳ್ಳಿ
  33. ತುಂಗಾನದಿ ದೋಣಿ ಗಿಂಡಿ
  34. ಕಾನೂರು 
ಮುಂದುವರೆಯುವುದು . . . . . . . .  . .