Showing posts with label ಮಧುಸೂದನ ಪೆಜತ್ತಾಯ. Show all posts
Showing posts with label ಮಧುಸೂದನ ಪೆಜತ್ತಾಯ. Show all posts

Friday, January 14, 2011

ರೈತನಾಗುವ ಹಾದಿಯಲ್ಲಿ . . .

ಮಿತ್ರರೇ,
ನಾನು ಸಂಪಾದಿಸಿರುವ, ಶ್ರೀ ಮಧುಸೂದನ ಪೆಜತ್ತಾಯರ 'ರೈತನಾಗುವ ಹಾದಿಯಲ್ಲಿ' ಕೃತಿಯು ದಿನಾಂಕ 25.1.2011 ಮಂಗಳವಾರ ಸಂಜೆ 5.30ಕ್ಕೆ ಕನ್ನಡ ಭವನದ 'ನಯನ' ಸಭಾಂಗಣದಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡುವ ಮೂಲಕ, ನಾಡಿನ ಹಿರಿಯ ಸಜ್ಜನ ರೈತರೊಬ್ಬರನ್ನು ಸನ್ಮಾನಿಸಲು ತೀರ್ಮಾನಿಸಿಲಾಗಿದೆ. ನಿಮಗೆಲ್ಲರಿಗೂ ಆತ್ಮೀಯ ಆಹ್ವಾನ ಪತ್ರಿಕೆ ಕಳುಹಿಸಲಾಗಿವುದು. ದಯಮಾಡಿ ಬನ್ನಿ. ನಾಡಿನ ರೈತಸುಮುದಾಯಕ್ಕೆ ಅರ್ಪಣೆಯಾಗಿರುವ ಈ ಪುಸ್ತಕದ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಾವೂ ರೈತರ ಜೊತೆ ನಿಲ್ಲೋಣ. ಕಥೆಗಾರ ಅಬ್ದುಲ್ ರಷೀದ್ ಅವರ ಮುನ್ನುಡಿ ಪುಸ್ತಕಕ್ಕಿದೆ. ಶ್ರೀ ಜಿ.ಎಸ್.ಎಸ್.ರಾವ್ ಅವರು ಬೆನ್ನುಡಿಯನ್ನು ಬರೆದಿದ್ದಾರೆ.
ಪೆಜತ್ತಾಯ ಅವರನ್ನು ಬಲ್ಲವರು, ಬಂಧು-ಮಿತ್ರರು, ಅವರ ಬರಹಗಳ ಓದುಗರು, ಅಭಿಮಾನಿಗಳು, ಬ್ಲಾಗ್ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಪ್ರಾರ್ಥನೆ.
ರೈತನಾಗುವ ಹಾದಿಯಲ್ಲಿ . . .
ಯಶಸ್ವೀ ರೈತರೊಬ್ಬರು, ಸುಮಾರು ನಲವತ್ತೈದು ವರ್ಷಗಳ ಹಿಂದೆ, ರೈತರಾಗಲು ಹೊರಟಾಗಿನ ಪ್ರಾರಂಭದ ಒಂದು ವರ್ಷದ ಕಥೆ! ಆದರ್ಶದ ಬೆನ್ನು ಹತ್ತಿದ ಯುವಕನೊಬ್ಬನ ನಿಜಜೀವನದ ಸಾಹಸಗಾಥೆಯನ್ನು ಕಥೆಯಾಗಿಸಿದ್ದಾರೆ ಪೆಜತ್ತಾಯರು. ತಾವು ನಡೆದ ಹಾದಿಯಲ್ಲಿ ಪ್ರಕೃತಿ ವಿಕೋಪಗಳು, ಸಾಮಾಜಿಕ ವೈಪರರೀತ್ಯಗಳು, ಮನುಷ್ಯರ ಸ್ವಭಾವಗಳು ಇವುಗಳ ನಡುವೆಯೂ ಗುರಿಸಾಧನೆ ಮಾಡುವುದು ಈ ಕೃತಿಯ ತಿರುಳು. ವಿಷಾದದಲ್ಲಿ ಕೊನೆಯಾಗಬಹುದಾಗಿದ್ದ ಘಟನೆಗಳು ಕೂಡ ತಿಳಿಹಾಸ್ಯದ ಲೇಪವನ್ನೊಳಗೊಂಡು ಸಹ್ಯವಾಗಿಬಿಡುತ್ತವೆ. ಸಮಾಜದ ಮತ್ತು ಪರಿಸರದ ಅವಿಭಾಜ್ಯ ಅಂಗವೆಂದು ತಮ್ಮನ್ನು ಗುರುತಿಸಿಕೊಂಡಿರುವ ಪೆಜತ್ತಾಯರು, ರೋಚಕ ಚಿತ್ರಗಳನ್ನು ನೀಡುತ್ತಾರೆ. ತಾವು ಪಟ್ಟ ಪಾಡನ್ನು ಹಾಡಾಗಿಸಿರುವ ಕೃತಿ ಇದು.
- ಜಿ.ಎಸ್.ಎಸ್.ರಾವ್

Monday, August 09, 2010

ದಾನ್ ದಾನ್ ಪರ್ ಲಿಖಾ ಹೈ ತೇರಾ ನಾಮ್!

ಶ್ರೀ ಮಧುಸೂದನ ಪೆಜತ್ತಾಯರ ಸ್ಮೃತಿಪಟಲದಿಂದ...
ಕ್ರಿ.ಶ. ೧೯೫೬ನೇ ಇಸವಿ ಇರಬೇಕು. ಆಗಷ್ಟೇ ಉಡುಪಿಯ ಬೋರ್ಡ್ ಹೈಸ್ಕೂಲ್‌ನ ಆರನೇ ತರಗತಿಗೆ ಸೇರಿದ್ದೆ. ನಮ್ಮ ಮನೆಯಿಂದ ಸ್ಕೂಲ್ ಎರಡು ಮೈಲಿ ದೂರ. ನಮ್ಮಮಧ್ಯಾಹ್ನದ ಊಟದ ವಿರಾಮದ ವೇಳೆ ಮಧ್ಯಾಹ್ನ ೧೨-೩೦ ರಿಂದ ೨-೦೦ ಗಂಟೆಯವರೆಗೆ ಇತ್ತು. ಶಾಲಾದಿನಗಳಲ್ಲಿ ಲಗುಬುಗೆಯಿಂದ ಮನೆಗೆ ನಡೆದು ಬಂದು ಬೇಗಬೇಗನೇ ಮೂಗು ಬಾಯಿಯಿಂದ ಊಟ ಮುಕ್ಕಿ ಸಮಯಕ್ಕೆ ಸರಿಯಾಗಿ ಪುನಃ ಸ್ಕೂಲ್ ಸೇರುತ್ತಾ ಇದ್ದೆ!

ಸೈಕಲ್ ಕಲಿತರೆ ನನಗೆ ತುಂಬಾ ಅನುಕೂಲ ಆಗಬಹುದೆಂಬ ಆಸೆಯಿಂದ ಪ್ರತೀ ಸಂಜೆ ಬಾಡಿಗೆಯ ಸೈಕಲ್ ಪಡೆದು ಕಲಿಯ ತೊಡಗಿದೆ. ಮೊದಲ ದಿನವೇ ನನ್ನ ಬಾಡಿಗೆಯ ಸೈಕಲ್ ಪಲ್ಟಿ ಹೊಡೆದು ಕಾಲಿಗೆ ಗಾಯ ಮಾಡಿಕೊಂಡೆ. ಕುಂಟುತ್ತಾ ನಡೆಯುತ್ತಿದ್ದ ನನಗೆ ಅಮ್ಮ ನಾಲ್ಕಾಣೆಯ ಪಾವಲಿ (ನಾಣ್ಯ) ಕೊಟ್ಟು ನಮ್ಮ ಹೈಸ್ಕೂಲ್ ಪಕ್ಕದಲ್ಲೇ ಇದ್ದ ಆನಂದ ಭವನ ಹೋಟೆಲಿನಲ್ಲಿ “ಪ್ಲೇಟ್ ಊಟ ಮಾಡು” ಎಂದು ಹೇಳಿದ್ದರು.

ನನಗೆ ಸಂಭ್ರಮವೋ ಸಂಭ್ರಮ!

ಆ ದಿನಗಳಲ್ಲಿ ನಮಗಾರಿಗೂ ‘ಪಾಕೆಟ್ ಮನಿ’ ಕೊಡುವ ಪದ್ಧತಿ ಇರಲಿಲ್ಲ. ಅಪರೂಪದಲ್ಲಿ, ಮಧ್ಯಾಹ್ನ ಮನೆಗೆ ಊಟಕ್ಕೆ ಬರಲಾಗದ ಇಂತಹಾ ಸಂದರ್ಭಗಳಲ್ಲಿ ಮಾತ್ರ ಮಧ್ಯಾಹ್ನದ ಊಟಕ್ಕೆಂದು ಪಾಕೆಟ್ ಮನಿ ನನಗೆ ಸಿಗುತ್ತಾ ಇತ್ತು.

ಆಗ ಪ್ಲೇಟ್ ಊಟಕ್ಕೆ ಬರೇ ನಾಲ್ಕಾಣೆ (=೨೫ ಪೈಸೆ) ಫುಲ್ ಊಟಕ್ಕೆ ಎಂಟಾಣೆ (= ೫೦ ಪೈಸೆ)! ಫುಲ್ ಊಟ ಅಂದರೆ ಊಟ ಮಾಡಿದಷ್ಟೂ ಅನ್ನ ಹಾಗೂ ವ್ಯಂಜನಗಳು! ಶಾಲಾ ಮಕ್ಕಳಾದ ನಮಗೆ ಆನಂದ ಭವನದ ಪ್ಲೇಟ್ ಊಟವೇ ಹೆಚ್ಚಾಗುತ್ತಾ ಇತ್ತು.

ಒಂದು ದಿನ ಆನಂದ ಭವನದ ಹತ್ತಿರ ಬರುತ್ತಲೇ ಪಕ್ಕದ ಬೀಡಾ ಅಂಗಡಿಯಲ್ಲಿ ತೂಗು ಹಾಕಿದ್ದ ಚಂದ್ರಬಾಳೆಯ ಹಣ್ಣಿನ ಗೊನೆ ಕಂಡಿತು. ಆ ಗೊನೆಯಲ್ಲಿ ನಸುಗೆಂಪು ಬಣ್ಣದ ಸುಮಾರು ಒಂದೊಂದು ಪೌಂಡ್ (ಸುಮಾರು ೪೫೪ ಗ್ರಾಂ) ತೂಗುವ ಮಾಗಿದ ಚಂದ್ರ ಬಾಳೆಯ ಹಣ್ಣುಗಳು ತೂಗಾಡುತ್ತಿದ್ದುವು. ಕ್ರಯ ಕೇಳಲು ಪ್ರತೀ ಬಾಳೆಹಣ್ಣಿಗೆ ಎರಡಾಣೆ (=೧೨ ಪೈಸೆ) ಅಂತ ಅಂಗಡಿಯ ಯಜಮಾನರು ಹೇಳಿದರು.

ನನಗೆ ಈ ಅಪರೂಪದ ಚಂದ್ರಬಾಳೆಹಣ್ಣು ಬಹು ಇಷ್ಟ. ಅದರ ಪರಿಮಳ ಮತ್ತು ಸ್ವಾದಗಳೇ ವಿಶಿಷ್ಟ. ಅದಲ್ಲದೇ, ಒಂದು ಬಾಳೆಯ ಹಣ್ಣು ತಿಂದರೆ ನನ್ನ ಹೊಟ್ಟೆಯೇ ತುಂಬುವಂತಿತ್ತು!

ಬಾಳೆಹಣ್ಣು ಕಂಡೊಡನೆಯೇ, ನನ್ನ ಮಧ್ಯಾಹ್ನದ ಊಟದ ‘ಮೆನು’ ಬದಲಾಯಿತು. “ಇಂದು ಮಧ್ಯಾಹ್ನದ ಊಟದ ಬದಲಿಗೆ ಎರಡಾಣೆ ಕೊಟ್ಟು ಒಂದು ಮಸಾಲೆ ದೋಸೆ ತಿಂದು, ಉಳಿಯುವ ಎರಡಾಣೆಗಳನ್ನು ಸಾಯಂಕಾಲದ ಚಂದ್ರ ಬಾಳೆಚಿi ಹಣ್ಣಿನ ಫಲಾಹಾರಕ್ಕೆ ಉಳಿಸಿಕೊಂಡರೆ ಹೇಗೆ?” ಎಂಬ ಆಲೋಚನೆ ಬಂತು.

ಆನಂದ ಭವನದ ಮಸಾಲೆ ದೋಸೆ ಇಡೀ ಉಡುಪಿಗೇ ಪ್ರಸಿದ್ಧ.

ಉಡುಪಿಯ ದೇವಸ್ಥಾನಗಳ ಸುತ್ತಿನಲ್ಲಿರುವ ರಥಬೀದಿಯ ಉಪಾಹಾರ ಗೃಹಗಳಲ್ಲಿ ನೀರುಳ್ಳಿ ಬಳಸದೇ ಬರೇ ಇಂಗಿನ ಒಗ್ಗರಣೆ ಸೇರಿಸಿದ ಆಲೂಗೆಡ್ಡೆಯ ಪಲ್ಯವನ್ನು ಹಾಕಿ ಘಮಘಮ ಮಸಾಲೆ ದೋಸೆ ತಯಾರಿಸುವ ಕ್ರಮ ಅಂದೂ ಇತ್ತು, ಆ ಕ್ರಮ ಇಂದಿಗೂ ಇದೆ.

ಈ ಈರುಳ್ಳಿ ರಹಿತ ಮಸಾಲೆ ದೋಸೆಗಳು ಯಾತ್ರಾರ್ಥಿಗಳ ಮತ್ತು ಸ್ಥಳೀಯ ಜನರ ಅಭಿರುಚಿಗೆ ತಕ್ಕಂತೆ ಇಂದಿಗೂ ಬದಲಾಗದೇ ಉಳಿದಿವೆ. ಸ್ಥಳೀಯ ಜನರು ಮತ್ತು ಯಾತ್ರಾರ್ಥಿಗಳು ಈ ವಿಶಿಷ್ಟ ಮಸಾಲೆ ದೋಸೆಗಳ ರುಚಿಗೆ ಇಂದಿಗೂ ಮುಗಿಬೀಳುತ್ತಾರೆ.

ಈರುಳ್ಳಿ ಮತ್ತು ಬೆಳ್ಳುಳ್ಳಿಯ ರುಚಿಗೆ ಆಗಲೇ ಮಾರುಹೋಗಿದ್ದ ನಾವು, ಉಡುಪಿಯ ರಥಬೀದಿಯ ಉಪಹಾರಗೃಹಗಳ ಮಸಾಲೆ ದೋಸೆಗಳನ್ನು “ಮಡಿ ಮಸಾಲೆ ದೋಸೆ” ಅಂತ ಲೇವಡಿ ಮಾಡುತ್ತಾ ಇದ್ದೆವು!

ಆನಂದ ಭವನದ ಗರಿ ಗರಿ ದೋಸೆಗಳ ಮೇಲೆ ಕೆಂಪು ಕೆಂಪು ಖಾರದ ಮೆಣಸುಯುಕ್ತವಾದ ಬೆಳ್ಳುಳ್ಳಿಯ ಚಟ್ನಿ ಹಚ್ಚಿ ಈರುಳ್ಳಿ ಮತ್ತು ಆಲೂಗೆಡ್ಡೆಯ ಪಲ್ಯ ಪೇರಿಸಿ ಮಡಚಿ ಕೊಡುತ್ತಾ ಇದ್ದರು.

ಹಾಗಾಗಿ, ನಮಗೆ ಆನಂದ ಭವನದ ಮಸಾಲೆ ದೋಸೆ ಬಹಳ ಇಷ್ಟ.

ಎರಡಾಣೆ ಬೆಲೆಯ ಹನ್ನೆರಡು ಇಂಚು ಅಗಲದ ಒಂದು ಮಸಾಲೆ ದೋಸೆ ತಿಂದು ನೀರು ಕುಡಿದಾಗ ಮಧ್ಯಾಹ್ನದ ಹಸಿವು ಮಂಗಮಾಯ!

ಆ ಸಂಜೆ ಶಾಲೆ ಬಿಟ್ಟೊಡನೆ ಎರಡು ಆಣೆ ಕೊಟ್ಟು ಚೆನ್ನಾಗಿ ಮಾಗಿದ ಒಂದು ಚಂದ್ರಬಾಳೆಯ ಹಣ್ಣನ್ನು ಖರೀದಿಸಿದೆ. ಅದನ್ನು ನನ್ನ ಸ್ಕೂಲ್ ಬ್ಯಾಗ್‌ನ ಒಳಗೆ ಸೇರಿಸಿದೆ. ಮನೆಗೆ ಹೋಗುತ್ತಾ, ಮುಂದೆ ಸಿಗುವ ನಿರ್ಜನವಾದ ದಾರಿಯಲ್ಲಿ, ನಿಧಾನವಾಗಿ ಅದನ್ನು ಆಸ್ವಾದಿಸಿ ತಿನ್ನುವ ಯೋಜನೆ ಹಾಕಿದೆ.

ಮನೆಯ ದಾರಿಯಲ್ಲಿ ಸಾಗುತ್ತಾ ಸಾಗುತ್ತಾ ಇರುವಂತೆ ಜನಸಂದಣಿ ಕಡಿಮೆ ಆಯಿತು. ಬಾಳೆಯ ಹಣ್ಣಿನ ಪರಿಮಳ ಮೂಗಿಗೆ ಬಡಿದು ನನ್ನ ಹಸಿವು ಮತ್ತಷ್ಟು ಹೆಚ್ಚಿತು.

ನನ್ನ ಮುಂದುಗಡೆ, ರಸ್ತೆಯ ಬಲಬದಿಯಲ್ಲಿ ಒಂದು ದನ ನೆರಳಿನಲ್ಲಿ ಮೆಲುಕು ಹಾಕುತ್ತಾ ಮಲಗಿತ್ತು. ಈ ದನಕ್ಕೆ ಬಾಳೆಹಣ್ಣಿನ ಸಿಪ್ಪೆ ತಿನ್ನಲು ಕೊಟ್ಟು ನಾನು ಬಾಳೆಯ ಹಣ್ಣನ್ನು ನಿಧಾನವಾಗಿ, ಆಸ್ವಾದಿಸಿ ತಿನ್ನುವ ಆಲೋಚನೆ ಮಾಡಿದೆ.

ಹಣ್ಣನ್ನು ನಿಧಾನವಾಗಿ ಸುಲಿಯಲಾರಂಬಿಸಿದೆ.

ಬಾಳೆಯ ಹಣ್ಣಿನ ತಿರುಳನ್ನು ಬಲಗೈ ಬೆರಳುಗಳಲ್ಲಿ ಭದ್ರವಾಗಿ ಹಿಡಿದು ಸಿಪ್ಪೆಯನ್ನು ಬೇರ್ಪಡಿಸಿದೆ.

ಆ ನಂತರ ಸಿಪ್ಪೆಯನ್ನು ದನದ ಕಡೆಗೆ ಎಸೆದೇ ಬಿಟ್ಟೆ!

ಆಗಲೇ ದೊಡ್ದ ಅಚಾತುರ್ಯ ನಡೆದಿತ್ತು!!

“ದೇವರೇ! ನೀನು ಯಾಕೆ ನನ್ನನ್ನು ಎಡಚನನ್ನಾಗಿ ಮಾಡಲಿಲ್ಲ?” ಅಂತ ಹಲುಬುವಷ್ಟು ದೊಡ್ದ ತಪ್ಪನ್ನು ಮಾಡಿಬಿಟ್ಟಿದ್ದೆ!!!

ಬಲಗೈ ಬಂಟನಾದ ನಾನು ಬಲಗೈಯ್ಯಲ್ಲಿ ಇದ್ದ ಕದಳೀ ಫಲದ ತಿರುಳನ್ನು ದನದ ಮುಂದೆ ಎಸೆದು, ಎಡಕೈಯ್ಯಲ್ಲಿ ಇದ್ದ ಸಿಪ್ಪೆಯನ್ನು ನನ್ನ ಬಾಯಿಗೆ ಕೊಂಡೊಯ್ದಿದ್ದೆ!!!!

ಅಷ್ಟೊತ್ತಿಗಾಗಲೇ ಆ ದನವು ಮಲಗಿದ್ದಲ್ಲಿಂದಲೇ ಕತ್ತು ನೀಡಿ ಬಾಳೆಯ ಹಣ್ಣನ್ನು ಸ್ವಾಹಾ ಮಾಡಿತ್ತು!

ನನ್ನ ಕೈಯ್ಯಲ್ಲಿ ಉಳಿದಿದ್ದ ಚಂದ್ರಬಾಳೆಯ ಹಣ್ಣಿನ ಸಿಪ್ಪೆಯನ್ನೇ ಒಂದು ಕ್ಷಣ ನಿರಾಸೆಯಿಂದ ದಿಟ್ಟಿಸಿ, ಅದನ್ನೂ ಆ ದನದ ಕಡೆಗೆ ಎಸೆದೆ!!

ನನಗೆ ಅಂದು ಆ ಚಂದದ ಬಾಳೆಯ ಹಣ್ಣು ತಿನ್ನುವ ಯೋಗ ಇರಲಿಲ್ಲ!!!

ಅದನ್ನು ತಿನ್ನುವ ಯೋಗ ಅಂದು ಖಂಡಿತವಾಗಿ ಆ ದನಕ್ಕೆ ಬರೆದಿತ್ತು!

ಈ ಮರೆಯಲಾರದ ಸಂಗತಿಯನ್ನು ಇಂದು ನೆನೆದಾಗ “ದಾನ್ ದಾನ್ ಪರ್ ಲಿಖಾಹೈ ತೇರೇ ನಾಮ್!” ಎಂಬ ಗಾದೆ ನೆನಪಾಗುತ್ತೆ!

{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. 'ರೈತನಾಗುವ ಹಾದಿಯಲ್ಲಿ' ಎಂಬ ಕನ್ನಡ ಪುಸ್ತಕವೂ ಪ್ರಕಟವಾಗುವುದರಲ್ಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ

Thursday, October 15, 2009

ಪರಿಸರ ಪ್ರೇಮ ಬೆಳೆಸಿಕೊಳ್ಳಲು ಯಾರ ನಿರ್ಬಂಧವೂ ಇಲ್ಲ

(ಹಿರಿಯರಾದ ಶ್ರೀ ಮಧುಸೂದನ ಪೆಜತ್ತಾಯ ಅವರು, ನನ್ನ ಬ್ಲಾಗಿನ ಇದುವರೆಗಿನ ಏಕೈಕ ಅತಿಥಿ ಬರಹಗಾರ. ಕೆಂಡಸಂಪಿಗೆಯಲ್ಲಿ ಪ್ರಕಟವಾಗುತ್ತಿದ್ದ 'ಕಾಗದದ ದೋಣಿ' ಇವರ ಆತ್ಮಕತೆಯ ಸರಣಿ. ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ ಮನಸ್ಸಿಗೆ ಮುದನೀಡುವಂತದ್ದು. ವೃತ್ತಿಯಿಂದ ಪ್ರಗತಿಪರ ಕಾಫಿ ಬೆಳೆಗಾರರಾದ ಶ್ರೀಯುತರು ಒಳ್ಳೆಯ ಬರಹಗಾರರು, ಮಾತುಗಾರರೂ, ಕೃಷಿ ಪಂಡಿತರೂ ಆಗಿದ್ದಾರೆ. ಈಗ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಒಂದಿಷ್ಟು ಒಳ್ಳೆಯ ಬರವಣಿಗೆಯನ್ನು ಆಗಾಗ ಮಾಡುತ್ತಿರುತ್ತಾರೆ. ಅದನ್ನು ತಮ್ಮ ಸ್ನೇಹಿತರೊಡನೆ ಹಂಚಿಕೊಂಡು ಸಂತೋಷ ಪಡುತ್ತಾರೆ. ಹಾಗೆ ಬಂದ ಈ ಮೇಲ್ ಗಳನ್ನು ಲೇಖನಗಳನ್ನಾಗಿ ಪರಿವರ್ತಿಸಿ ಈ ಹಿಂದೆ ನನ್ನ ಬ್ಲಾಗಿನಲ್ಲಿ ಅವರ ಪೂರ್ವಾನುಮತಿಯೊಂದಿಗೆ ಪ್ರಕಟಿಸಿದ್ದೇನೆ.
ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ!
ಇಂದು ನಾನು ಮಣ್ಣಿನ ದಾಸನಾದೆ!
ಈಗಲೂ ಮೊನ್ನೆ ಬಂದ ಈ ಮೇಲ್ 'ಬ್ಲಾಗ್ ಆಕ್ಷನ್ ಡೇ'ಗೆ ಪೂರಕವಾದ ವಿಷಯ ಅದರಲ್ಲಿ ಇರುವುದರಿಂದ ನಿಮ್ಮ ಮುಂದಿಡುತ್ತಿದ್ದೇನೆ.)

ಇಂದಿನ ಯುವಜನರಿಗೆ ಪರಿಸರದ ಅರಿವು ಮೂಡಿಸಲು ಶಾಲಾಕಾಲೇಜುಗಳಲ್ಲಿ ಸ್ವಲ್ಪ ಪ್ರಯತ್ನ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ!
ಇಂದಿನ ಯುವ ಪೀಳಿಗೆಯ ಕೆಲ ಮಂದಿಗೆ ಪ್ರಕೃತಿ, ವನ ಭೋಜನ ಮುಂತಾದುವೆಲ್ಲಾ ಒಂದು ಮನೋರಂಜನೆ. ಕೆಲವರಿಗೆ ಪಿಕ್ನಿಕ್ ಮಾಡಿ, ಪೇಪರ್ ಪ್ಲೇಟ್, ನೀರಿನ ಬಾಟಲಿ ಎಸೆದು ಬರುವ ಜಾಗ,
ಹಲವು ಜನರಿಗೆ ಫಾರಂ ಹೌಸ್ ಎಂದರೆ ಮೋಜಿನ ತಾಣ! ಇದು ಹೊಸಾ ಸಂಸ್ಕೃತಿ ಅಂತೆ!
ಹಲವು ಜನ ನನ್ನ ಪರಿಚಯಸ್ಥರು " ನಿಮ್ಮ ತೋಟಕ್ಕೆ ಬರುತ್ತೇವೆ. ಶಿಕಾರಿ ಮಾಡಲು ಬಿಡುತ್ತೀರಾ? ಸ್ವಲ್ಪ ಕುಡಿದು ರಿಲ್ಯಾಕ್ಸ್ ಮಾಡಬಹುದೆ? ನಿಮ್ಮಲ್ಲಿ ಶಿಕಾರಿ ಮಾಂಸದ ಅಡುಗೆ ಮಾಡಿಸಿ ಹಾಕುತ್ತೀರಾ? ಕಾರ್ಡ್ಸ್ ಆಡಬಹುದೇ? ಸಾಯಂಕಾಲ ಕ್ಯಾಂಫ್ ಫೈರ್ ಮಾಡಿ ಅದರ ಸುತ್ತ ನರ್ತಿಸಬಹುದೇ? ನಿಮ್ಮಲ್ಲಿ ಹೈ ವ್ಯಾಟ್ಟೇಜ್ ಮ್ಯೂಸಿಕ್ ಸಿಸ್ಟಂ ಇದೆಯೇ? ಡ್ರಿಂಕ್ಸ್ ನಾವೇ ತರುತ್ತೇವೆ " ಅನ್ನುತ್ತಾರೆ.
ಆಗ ನಾನು " ಕ್ಷಮಿಸಿ. ನಮ್ಮ ಹಳ್ಳಿಯ ಮನೆ ನಮ್ಮ ಕಾರ್ಯ ಕ್ಷೇತ್ರ. ನಾವು ಸಸ್ಯಾಹಾರಿಗಳು. ಶಿಕಾರಿ, ಕಾರ್ಡ್ಸ್ ಮತ್ತು ಡ್ರಿಂಕ್ಸ್ ನಮ್ಮಲ್ಲಿ ನಿಶಿದ್ಧ. ಕುಡಿದು ಕುಣಿಯುವ ಸಂಸ್ಕೃತಿ ನಮ್ಮಲ್ಲಿ ಇಲ್ಲ. ಸೂರ್ಯ ಹುಟ್ಟಿದಾಗ ಏಳುತ್ತೇವೆ. ಕೆಲಸ ಮಾಡುತ್ತೇವೆ. ಸೂರ್ಯ ಮುಳುಗಿದ ಮೇಲೆ ಮನೆಗೆ ಬಂದು ದಿನದ ಪೇಪರ್ ಓದಿ ಬೇಗನೇ ಸಸ್ಯಾಹಾರೀ ಊಟ ಮಾಡಿ ಮಲಗುತ್ತೇವೆ. ಬೆಳಗ್ಗೆ ಬೇಗಲೇ ಏಳುತ್ತೇವೆ. ತೋಟದಲ್ಲಿ ನನ್ನ ಪುಸ್ತಕ ಸಂಗ್ರಹ ಇದೆ. ನನ್ನಲ್ಲಿ ಒಳ್ಳೆಯ ಬೈನಾಕುಲರ್ ಇದೆ. ಪಕ್ಷಿವೀಕ್ಷಣೆ ಮಾಡಿ. ಚಾರಣ ಮಾಡಿ. ಎಲ್ಲಾ ಮರಗಳ ಗಿಡಗಳ ಹಕ್ಕಿಗಳ ಕನ್ನಡ ಮತ್ತು ತುಳು ಹೆಸರುಗಳನ್ನು ಬಲ್ಲ ಆಳು ಒಬ್ಬನನ್ನು ಜತೆಗೆ ಕಳುಹಿಸುವೆ. ಕೆಮೆರಾ ತನ್ನಿ. ಫೋಟೋ ತೆಗೆದುಕೊಳ್ಳಿ. ನದಿಯಲ್ಲಿ ಈಜು ಹೊಡೆಯಲು ಅಥವಾ ಮೀನುಗಾರಿಕೆ ಮಾಡಲು ನಮ್ಮಲ್ಲಿ ಅನುಮತಿ ಕೊಡುವುದಿಲ್ಲ. ಒಳ್ಳೆಯ ಜಮಖಾನ ಒಂದನ್ನು ಕೊಡುತ್ತೇವೆ. ಒಳ್ಳೆಯ ಮರಗಳ ನೆರಳಲ್ಲಿ ವಿಶ್ರಮಿಸಿ. ಅಲೇ ನಿದ್ರೆ ಕೂಡಾ ಮಾಡಬಹುದು. ಊಟ ತಿಂಡಿಯ ಸಮಯಕ್ಕೆ ಸರಿಯಾಗಿ ನಮ್ಮ ಮನೆಯಲ್ಲಿ ಹಾಜರಾಗಿ. ನಮ್ಮ ಸಸ್ಯ ಕ್ಷೇತ್ರ ನಮಗೆ ಒಂದು ಪವಿತ್ರವಾದ ಜಾಗ. ನಮ್ಮ ಮನೆ ಮತ್ತು ಮನಗಳನ್ನು ಒಂದು ಮಂದಿರ ಎಂದು ತಿಳಿದು ನಾವು ಹಳ್ಳಿಯಲ್ಲಿ ಬಾಳುತ್ತೇವೆ. ಪುಷ್ಕಳ ಊಟ, ತಿಂಡಿ, ಕಾಪಿ ಚಹಾ ಕೊಡುತ್ತೇವೆ. ನಮ್ಮ ಜೀವನ ರೀತಿ ಗಮನಿಸಿ. ನಮ್ಮ ಹಾಗೇ ನಮ್ಮ ಜತೆ ಬಾಳಿ. ಯಾವ ಕೆಲಸವನ್ನೂ ಮಾಡದೇ ಆರಾಮವಾಗಿ ನಮ್ಮ ಅತಿಥಿಗಳಾಗಿ ಬೇಕಷ್ಟು ದಿನ ನಮ್ಮಲ್ಲಿ ಇರಿ. ಕಾರ್ಮಿಕರ ಮತ್ತು ನೌಕರರ ಪರಿಚಯ ಮಾಡಿಕೊಳ್ಳಿ ಅವರಲ್ಲಿ ವಿಚಾರ ವಿನಿಮಯ ಮಾಡಿ. ನಮ್ಮ ಕೃಷಿ ಪದ್ಧತಿ ಮತ್ತು ನಮ್ಮ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಅರಿಯಿರಿ. ನಮ್ಮ ಸಾಂಪ್ರದಾಯಿಕ ಕೃಷಿ ಜೀವನ ವಿಧಾನವನ್ನು ನಾವು ಬಿಟ್ಟಿಲ್ಲ. ಕರೆಂಟು ಇದ್ದಾಗ ಟೀವಿ ಅಥವಾ ಫ್ಯಾನ್ ಉಪಯೋಗಿಸಬಹುದು. ನಮ್ಮಲ್ಲಿ ರೇಡಿಯೋ ಇದೆ. ವಿ. ಸಿ. ಡಿ. ಪ್ಲೇಯರ್ ಇನ್ನೂ ಇಟ್ಟಿಲ್ಲ. ಕರೆಂಟು ಹೋದಾಗ ನಾವು ಸೋಲಾರ್ ಲೈಟ್ ಉಪಯೋಗಿಸುತ್ತೇವೆ. ಸೀಮೆ ಎಣ್ಣೆ ದೀಪದ ಕಷ್ಟ ಇಲ್ಲ. ಸ್ನಾನಕ್ಕೆ ಸದಾ ಕಟ್ಟಿಗೆ ಒಲೆಯ ಬಿಸಿನೀರು ಸಿಗುತ್ತೆ. ಹೆಚ್ಚಿನ ಅಡುಗೆ ಕಟ್ಟಿಗೆಯ ಒಲೆಯಲ್ಲೇ ಮಾಡುತ್ತೇವೆ, ನೆಲದಲ್ಲೇ ಕುಳಿತು ಬಾಳೆ ಎಲೆಯಲ್ಲಿ ಉಣ್ಣುತ್ತೇವೆ. ಊಟ ತಿಂಡಿಗಳ ಬಗ್ಗೆ ದಾಕ್ಷಿಣ್ಯ ಬೇಡ. ಸಾಯಂಕಾಲ ಬ್ಯಾಡ್ಮಿಂಟನ್, ಕ್ಯಾರಂ, ಚೆನ್ನೆಮಣೆ, ಚೆಸ್ಸ್, ಪಗಡೇ ಆಟ, ಹಾವು ಏಣಿ ಆಟ ಅಥವಾ ವಾಲಿಬಾಲ್ ಆಡಬಹುದು. ಬೆಳಗ್ಗೆ ಮತ್ತು ಸಂಜೆ ಹೊತ್ತು ಪಕ್ಷಿಗಳ ಕಲರವ ಕೇಳಬಹುದು. ಮನೆಯಲ್ಲಿ ದನ ಕರು ಇವೆ. ನಾಯಿಗಳು ಇವೆ. ಅವುಗಳನ್ನು ನೋಡಿ ಸಂತಸ ಪಡಬಹುದು. ಹೆಚ್ಚಿನಂಶ ನಮ್ಮಲ್ಲಿ ಈಗ ಟೆಲಿಫೋನ್ ಕೆಡುವುದಿಲ್ಲ. ಡಯಲ್ ಅಪ್ ಉಪಯೋಗಿಸಿ ಲ್ಯಾಪ್ ಟಾಪ್ ಬಳಸ ಬಹುದು. ನಿಮಗೆ ಸ್ವಾಗತ!" ಅನ್ನುತ್ತಾ ಇದ್ದೆ.
ನಮ್ಮ ಜತೆ ವಾಸ ಮಾಡಲು ಕಳೆದ ೩೮ ವರುಷಗಳಲ್ಲಿ ಬೆರಳ ಎಣಿಕೆಯ ಮಂದಿ ಮಾತ್ರ ಬಂದರು. ಎರಡು ದಿನಗಳಲ್ಲೇ ವಾಪಸ್ ಹೊರಟರು. ಅವರಿಗೆ ನಮ್ಮಲ್ಲಿ " ಬೋರ್" ಆಗುತ್ತಂತೆ!
ನನಗೆ ನನ್ನ ಕೃಷಿ ಜೀವನದಲ್ಲಿ ಎಂದೂ ಬೋರ್ ಆಗಿಲ್ಲ. ಸಂತೋಷವಾಗೇ ಇದ್ದೆ. ಇಂದು ನಿವೃತ್ತನಾಗಿ ಪೇಟೆಯ ಕಾಂಕ್ರಿಟ್ ಗೂಡಿನಲ್ಲಿ ಕಷ್ಟದಿಂದ ವಾಸಿಸುತ್ತಾ ಇದ್ದೇನೆ. ನನಗೆ ಇಂದು ಡಾಕ್ಯ್ಟರು ಹತ್ತಿರ, ಕಾಫಿಯ ಕಾಡು ದೂರ!
ಕೃಷಿಕ್ಷೇತ್ರದ ನೆನಪುಗಳೊಂದಿಗೆ ಇಂದು ಕೂಡಾ ಸಂತಸವಾಗಿ ಕಾಲ ಕಳೆಯುತ್ತಾ ಇದ್ದೇನೆ.