Monday, February 13, 2012

ನೆಲೆಸು ನಮ್ಮೆರ್ದೆಗಳಲಿ ನಿನ್ನಾ ತಪೋರೂಪದಿಂ

ಮೈಸೂರಿನಿಂದ ಕೇವಲ ೨೫ ಕಿಲೋಮೀಟರ್ ದೂರದಲ್ಲಿದ್ದರೂ ಶತಮಾನಗಳ ಕಾಲ ಅಜ್ಞಾತವಾಗಿದ್ದ ಜೈನ ಕ್ಷೇತ್ರ ಗೊಮ್ಮಟಗಿರಿ, ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿಯಲ್ಲಿದೆ. ಪ್ರಾಕೃತಿಕ ವೈಪರೀತ್ಯ, ಐತಿಹಾಸಿಕ ಹಾಗೂ ಧಾರ್ಮಿಕ ಕಾರಣಗಳಿಂದಾಗಿ ಅಲ್ಲೊಂದು ಜೈನಕ್ಷೇತ್ರ ಇದೆ, ಸುಮಾರು ಹದಿನೇಳು ಅಡಿ ಎತ್ತರದ ಗೊಮ್ಮಟ ಮೂರ್ತಿಯಿದೆ ಎಂಬುದೇ ಮರೆತುಹೋಗಿತ್ತು. ಸುಮಾರು ಇನ್ನೂರು ಅಡಿ ಏಕಶಿಲಾ ಬಂಡೆಯ ಮೇಲೆ ಈ ಮೂರ್ತಿಯಿದೆ. ಹತ್ತಿ ಹೋಗಲು ಮೆಟ್ಟಿಗಳೂ ಇವೆ. ಆದರೆ ಯಾವಾಗಲೋ ಸಂಭವಿಸಿದ ಪ್ರಾಕೃತಿಕ ವೈಪರಿತ್ಯದಿಂದಾಗಿ, ಬಂಡೆ ಎರಡು ಭಾಗಗಳಾಗಿ ದೊಡ್ಡ ಪ್ರಪಾತವೇರ್ಪಟ್ಟಿದೆ. ಇಡೀ ಗುಡ್ಡದ ಸುತ್ತ ಕಾಡು ಬೆಳೆದು ಸುತ್ತಮುತ್ತಲಿನ ಜನರಿಗೆ ಅಲ್ಲೊಂದು ಜೈನಕ್ಷೇತ್ರ ಇರುವ ಬಗ್ಗೆ ಯಾವೊಂದು ಸುಳಿವು ಕೂಡ ಸಿಗದಂತೆ ಅಡಗಿಕುಳಿತುಬಿಟ್ಟಿತ್ತು. ೧೯೪೫-೫೦ರ ಅವಧಿಯಲ್ಲಿ, ಕಾಡಿಗೆ ದನ ಮೇಯಿಸಲು ಹೋಗುತ್ತಿದ್ದ ಹುಡುಗರ ತುಂಟತನ ಹಾಗೂ ಸಾಹಸ ಮನೋಭಾವದಿಂದಾಗಿ, ಅಲ್ಲಿ ಬಾಹುಬಲಿಯ ವಿಗ್ರಹ ಇರುವುದು ಬೆಳಕಿಗೆ ಬಂತು. ಈ ಸುದ್ದಿಯ ಬಾಯಿಂದ ಬಾಯಿಗೆ ಹರಡಿ, ಹಳ್ಳಿಯನ್ನು ಮೀರಿ ಮೈಸೂರನ್ನೂ ತಲುಪಿತು. ಕೆಲವು ಆಸಕ್ತರ ಪ್ರಯತ್ನದಿಂದಾಗಿ ಕುವೆಂಪು ಅವರಿಗೂ ವಿಷಯ ತಲುಪಿ ಅವರು ಅದರಲ್ಲಿ ಆಸಕ್ತಿ ವಹಿಸಿದರು. ಸ್ವತಃ ತಾವೇ ಅಲ್ಲಿಗೆ ಬೇಟಿಕೊಟ್ಟು ಗೊಮ್ಮಟನಿದ್ದ ಬರ್ಬರ ಸ್ಥಿತಿಯನ್ನು ಕಂಡುಬಂದರು. ವಿಷಯಕ್ಕೆ ಹೆಚ್ಚಿನ ಪ್ರಚಾರ ದೊರೆಯಿತು. ಅದರ ಪರಿಣಾಮವಾಗಿ ಮೈಸೂರಿನ ಜೈನ ಸಂಸ್ಥೆಗಳವರು ಪ್ರಾಥಮಿಕ ದುರಸ್ತಿಕ್ರಮ ಕೈಗೊಂಡು ಅಲ್ಲಿಗೆ ಹೋಗಿಬರಲು ಅನುಕೂಲವಾಗುವಂತೆ ಮಾಡಿದರು. ಬಂಡೆಯಲ್ಲಿ ಉಂಟಾಗಿದ್ದ ದೊಡ್ಡ ಬಿರುಕನ್ನು ಕಲ್ಲು ಮಣ್ಣುಗಳಿಂದ ಮುಚ್ಚಿ ಸುಲಭವಾಗಿ ಬೆಟ್ಟ ಹತ್ತಿ ಇಳಿಯಲು ಅನುಕೂಲವಾಯಿತು.

ಬೆಟ್ಟದ ಮೇಲೆ ನಿಂತು ನೋಡಿದರೆ ಸುತ್ತಲಿನ ದೃಶ್ಯ ಮನಮೋಹಕವಾಗಿದೆ. ಕೆ.ಆರ್.ಎಸ್. ಅಣೆಕಟ್ಟಿನ ಹಿನ್ನೀರು ರಚಿಸಿದ ಅಭೂತಪೂರ್ವ ಚಿತ್ರವಳಿಯನ್ನು ಇಲ್ಲಿಂದ ಕಾಣಬಹುದು. ತೆರೆದ ಛಾವಣಿಯಲ್ಲಿ ನಿಂತಿರುವ ವೈರಾಗ್ಯಮೂರ್ತಿಯ ಶಿಲ್ಪ ಮನಮೋಹಕವಾಗಿದೆ. ಅದರ ಸುತ್ತಲೂ ಬಂಡೆಗಯ ಮೇಲೆ ೨೪ ತೀರ್ಥಂಕರರ ಪಾದಗಳ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಆರಂಭಿಕ ಜೀರ್ಣೋದ್ಧಾರ ಕಾರ್ಯ ನೆರವೇರಿದ ಕೂಡಲೆ ಪ್ರಥಮ ಮಹಾಮಸ್ತಕಾಭಿಷೇಕವನ್ನು ನೆರವೇರಿಸಲಾಯಿತು. ನಾಡಿನ ಹೆಸರಾಂತ ಧಾರ್ಮಿಕ ಮುಖಂಡರು, ರಾಜಕಾರಣಿಗಳು ಸಾಹಿತಿಗಳು ಅದರಲ್ಲಿ ಭಾಗವಹಿಸಿದ್ದರು. ಕುವೆಂಪು, ದ.ರಾ.ಬೇಂದ್ರೆ, ಜಿ.ಪಿ.ರಾಜರತ್ನಂ ಅವರು ಮುಖ್ಯರಾಗಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದರು. ಜೈನಧರ್ಮದ ಸಂಪ್ರದಾಯಕ್ಕನುಗುಣವಾಗಿ ನಡೆದ ಮಹಾಮಸ್ತಕಾಭಿಷೇಕವನ್ನು ತದೇಕಚಿತ್ತದಿಂದ ಪೂರ್ಣ ಮುಗಿಯುವವರೆಗೂ ವೀಕ್ಷಿಸಿದ ಕವಿಗೆ ದಕ್ಕಿದ ದರ್ಶನ ’ಶ್ರೀ ಗೋಮಟ ಮಹಾಮಸ್ತಕಾಭಿಷೇಕ ಪ್ರಗಾಥಂ’ ಎಂಬ ಸುದೀರ್ಘ ಕವಿತೆಯಲ್ಲಿ ಕಂಡರಿಸಲ್ಪಟ್ಟಿದೆ.

ಆರು ಭಾಗಗಳಲ್ಲಿ, ಪಂಪನ ಪದ್ಯಗಳ ಸಾಲುಗಳೂ ಸೇರಿದಂತೆ ಒಟ್ಟು ಸುಮಾರು ೧೩೨ ಸಾಲುಗಳಲ್ಲಿ ಈ ಪ್ರಗಾಥವಿದೆ.
ಓ ಕರೆಯುತಿದೆ ನಿನ್ನನೀ ನಮ್ಮ ತಪ್ತ ಭೂಮಿ;
ಓ ಏಳು, ಶ್ರೀ ಗೋಮಟಸ್ವಾಮಿ!
ಏಳು, ಓ ಏಳು, ಕಡೆದು ಜಡತಾ ಅಚಿನ್ನಿದ್ರೆಯಂ;
ಏಳು, ಓ ಏಳು, ಒಡೆದು ಶತಶತಮಾನ ಮೌನದ ಶಿಲಾಮುದ್ರೆಯಂ!
ಎಂದು ಆರಂಭವಾಗಿ, ಮುಂದೆ ಗೋಮಟ ಏಳಬೇಕಾಗಿರುವುದು ಯಾರಿಗಾಗಿ ಏತಕ್ಕಾಗಿ ಎಂಬುದನ್ನು ಹೇಳುತ್ತದೆ.
ಕರುಣೆಯಿಂದೆಮಗಾಗಿ ಏಳಯ್ಯ ನಿರ್ವಾಣ ಸುಪ್ತಿಯಿಂ,
ನಿನ್ನೊಂದು ಪರಿಪೂರ್ಣತಾ ದಿವ್ಯ ತೃಪ್ತಿಯಿಂ!
ನಮ್ಮ ಹೃದಯದ ಬೃಹಚ್ಚೇತನದ ಮೂರ್ತಿಯಾಗೇಳು ಬಾ;
ಜನ್ಮ ಜನ್ಮಾಂತರದ ಸಂಸ್ಕಾರ ಸರ್ವಸ್ವ ಸ್ಪರ್ಶಮಣಿಯಾಗೇಳು ಬಾ!
ಹಿಂದಣಾಲಸ್ಯದ ತಮಿಸ್ರಕ್ಕೆ ರವಿದೇವನಾಗಿ ಓ ಮೂಡಿ ಬಾ;
ಮುಂದಣ ಅಭೀಪ್ಸೆಯಾ ಕೈರವಕೆ ಕುಮುದೇಂದುವೋಲುದಿಸಿ ಬಾ!
ಎಂದು ಗೋಮಟನನ್ನು ಅಹ್ವಾನಗೈಯುತ್ತಾರೆ. ಈಗ ಜೀಣೋದ್ಧಾರವಾಗಿರುವುದು ಆ ನಿರ್ವಾಣ ಮೂರ್ತಿಗೆ ಆದರೂ, ಇನ್ನು ಮುಂದೆ ಆಗಬೇಕಿರುವುದು ನಿಜವಾಗಿ ನಮ್ಮ ಜೀರ್ಣೋದ್ಧಾರ! ’ನಿನ್ನ ಜೋರ್ಣೋದ್ಧಾರವೆಮ್ಮ ಜೀರ್ಣೋದ್ಧಾರವಾಗೆ ಆಶೀರ್ವದಿಸು ಬಾ!’ ಎಂಬ ಸಾಲು ಪ್ರಗಾಥವನ್ನು ಇನ್ನೊಂದು ದಿಕ್ಕಿಗೆ ತಿರುಗಿಸಿಬಿಡುತ್ತದೆ. ದೇವತಾ ವಿಗ್ರಹಕ್ಕೆ, ದೇವಾಲಯಕ್ಕೆ ಜೀರ್ಣೋದ್ಧಾರ ಮಾಡಬಹುದು. ಆದರೆ ದೇವರಿಗೆ ಜೀರ್ಣೋದ್ಧಾರ ಎಂದರೆ ಎಂತಹ ಅಭಾಸವಲ್ಲವೆ?
ನಿನ್ನಜೀರ್ಣೋದ್ಧಾರಮಂ?
ನಗದಿರು, ಮಹಾಗುರುವೆ; ನಮ್ಮದಿದು ಮರ್ತ್ಯಾವಿವೇಕಂ!
ನಿತ್ಯನೂತನನಪ್ಪ ನೀಂ ಜೀರ್ಣನೆಂತಪ್ಪೆಯಯ್?
ಸರ್ವಪರಿಪೂರ್ಣನಿಗೆ ನಿನಗೆ ಉದ್ಧಾರವೆಂದರರ್ಥವೇನಯ್?
ಅಲ್ತಲ್ತು;
ನಿನ್ನ ಜೀರ್ಣೋದ್ಧಾರಮಲ್ತು:
ಹಾಳಾದುದೆಮ್ಮ ಬಾಳಿಂದು ತಾಂ ಮರಳಿ ಪಡೆಯುತಿದೆ ತನ್ನುದ್ಧಾರಮಂ!
ಕೊಳೆ ತಳ್ತುದೆಮ್ಮ ಬಾಳ್ಗಿಂದಾಗುತ್ತಿದೆ ಮೀಹದೋಲ್ ಮಸ್ತಕಾಭಿಷೇಕಂ:
ಜ್ಞಾನ ಮೇಣ್ ಭಕ್ತಿ ಮೇಣ್ ವೈರಾಗ್ಯ ಸಂಕೇತದಾ
ಅಮೃತ ಘೃತ ದಧ್ಯಾದಿ ಪುಣ್ಯಾಭಿಷೇಕಂ!
ಕನ್ನಡದ ಆದಿಕವಿ ಪಂಪ ತನ್ನ ಆದಿಪುರಾಣದಲ್ಲಿ ಕಂಡರಿಸಿರುವ ವೈರಾಗ್ಯಮೂರ್ತಿ ಬಾಹುಬಲಿಯ ಚಿತ್ರಣವನ್ನು ಮನದಲ್ಲಿ ಕೆತ್ತಿಕೊಂಡ ಕವಿಕಲಿ ಚಾವುಂಡರಾಯ ’ಆ ಭವ್ಯತೆಗೊರ್ ಪ್ರತಿಮೆಯನಾಶಿಸಿ ಪುಡುಕುತಿರೆ ಅನುಭವ ಭೂಮತೆಗಾಕಾರವ ಕೋರುತ್ತಿರೆಯಿರೆ’ ಶ್ರವಣಬೆಳಗೊಳದ ಆ ಮಹಾ ಕಲ್ವೆಟ್ಟಿನ ಕೋಡಿನಲ್ಲಿ ನಿನ್ನ ಸ್ವರೂಪವನ್ನು ಕಾಣುತ್ತಾನೆ.
ಬಯ್ಗಿನ ಬಾನ್ಗಿದಿರೆದ್ದು ಆ ಶ್ರವಣನ ಗಿರಿಚೂಡಂ,
ಭೀಮಂ, ರುಂದ್ರಂ, ಆಕಾಶೋನ್ನತ ಗೂಢಂ!
ನಿಂದನ್ ನಟ್ಟಾ ಎಡೆಯೊಳೆ ರಸಯೋಗಪ್ರತಿಭಾರೂಢಂ:
ಕಂಡನ್; ಕಂಡನ್; ಕಂಡನ್; ಕಂಡನ್;
ಕೊರೆಯುವವೋಲ್ ಕರೆಯುವವೋಲ್ ನೋಡಿದನಾ ಕಲ್ ಗುಂಡನ್.
ಕಾಣ್ಕೆಯೆ ಕಂಡರಿಸಿದವೋಲ್ ಮೂಡಿದನಾ ಗೋಮಟೇಶಂ,
ತುಂಬಿದ ಶ್ರೀಗಾತ್ರಕೆ ಕುನಿಯಿತೊ ಎನೆ ದಿಗ್‌ದೇಶಂ,
ಸಾರ್ಥಕಮಾಗಲ್ ಚಾವುಂಡೇಶ್ವರ ಭೂಮಾವೇಶಂ!
ಆ ಕಂಡುದನೆಯೆ ಕಂಡರಿಸಿದನೈಸಲೆ ಶಿಲ್ಪಿ,
ಕನ್ನಡನಾಡಿಗೆ ಕಣ್ಣಾಗಲ್ ಪೆರ‍್ಮೆಯ ಪೆರ್‌ಬಂಡೆಯ ಕಲ್ ಕಲ್ಪಿ!
ಶ್ರವಣಬೆಳಗೊಳದ ಗೊಮ್ಮಟಮೂರ್ತಿಯು ಮೂಡಿರಬಹುದಾದ ಸಂದರ್ಭದ ಸಾಕ್ಷಾತ್ಕಾರವಾದ ಮೇಲೆ, ಬಾಹುಬಲಿಯ ವೀರ-ತ್ಯಾಗಗಳ ದರ್ಶನ ಕವಿತೆಯಲ್ಲಿದೆ. ದಿಗ್ವಿಜಯದಿಂದ ಮತ್ತನಾದ ಭರತ ತನ್ನ ಗೆಲುವಿಗೆ ’ಆ ವೃಷಭಗಿರಿ ಮೇಖಳಾಭಿತ್ತಿಯೊಳ್ ಆತ್ಮೀಯ ವಿಶ್ವ ವಿಶ್ವಂಭರಾ ವಿಜಯಪ್ರಶಸ್ತಿಯಂ’ ಕೆತ್ತಿಸಲೆಂದು ಹೋಗಿ ನೋಡಿದರೆ, ಅಲ್ಲಿ ಜಾಗವೇ ಇಲ್ಲವೆನ್ನುವಷ್ಟು ವಿಜಯಪ್ರಶಸ್ತಿಗಳನ್ನು ಅವನಿಗಿಂತ ಹಿರಿಯ ರಾಜರು ಕೆತ್ತಿಸಿಬಿಟ್ಟದ್ದರಂತೆ! ಅದರಿಂದಲೂ ನಿರಾಶನಾಗದ ಭರತ
ಕೀರ್ತಿವಶನಾಗಿ
ಹಮ್ಮಿಗಡಿಯಾಳಾಗಿ ಬಿದಿಯ ನಗೆಗೀಡಾಗುವೋಲ್
ದಂಡರತ್ನದಿ ಸೀಂಟಿ ಆ ಪ್ರಶಸ್ತಿಯೊಳಂದನಳಿಸಿ
ಕಂಡರಣೆಗೈಸಿದನ್ ತನ್ನೀ ಪ್ರಶಸ್ತಿಯಂ,
ಶಾಶ್ವತವನರಿಯದೀ ನಶ್ವರ ಪ್ರಶಸ್ತಿಯಂ:
ಮುಂದೆ ಭರತನ ವಿಜಯಪ್ರಶಸ್ತಿ ಆರು ಕಂದ ಪದ್ಯಗಳಲ್ಲಿ ಬರೆಯಲ್ಪಟ್ಟಿದೆ. ಕೊನೆಯ ಪದ್ಯದಲ್ಲಿ ’ಭರತೇಶ್ವರನಿಂತೀ ತೆರದಿಂ ನೆಗೞ್ದ ತನ್ನ ಕೀರ್ತಿಯನೀ ವಿಖ್ಯಾತ ವೃಷಭಾದ್ರಿಯೊಳ್ ಸುರಗೀತಯಶಂ ನಿಳಿಸಿದಂ ನೆಲಂ ನಿಲ್ವಿನೆಗಂ’ ಎಂದು ಬರುತ್ತದೆ. ಭೂಮಿಯಿರುವವರೆಗೂ ಭರತನ ಯಶಸ್ಸು ನಿಲ್ಲಬೇಕೆಂಬುದು ಆತನ ಆಸೆ. ಅಂತಹ ಆಸೆಗಳೇ ನಮ್ಮ ಇಂದಿನ ದುರ್ದಶೆಗೆ ಕಾರಣವಾಗಿವೆ ಎಂಬುದನ್ನು ಮನಗಾಣಬಹುದು.
’ನಿಲ್ವಿನೆಗಂ ನೆಲಂ!’
ಅಧಿಕಾರ ಮೋಹಕ್ಕೆ ದರ್ಪಕ್ಕೆ ಏಂ ಪೈತ್ಯಮೇಂ ಚಲಂ?
ಅಂದಿನಾ ಶನಿಯೆ ತಾನಿಂದಿಗೂ ಕದಡುತಿಹುದೆಮ್ಮ ಬಾಳಂ.
ಆ ರೋಷ ಆ ದ್ವೇಷ ಆ ಅಹಂಕಾರದಾವೇಶಗಳೆ
ಪಿಡಿದಿರ್ಪವಲ್ತೆ ಪೇಳಿಂದಿಗೂ ರಾಜ್ಯಸೂತ್ರಂಗಳಂ?
ವಹಿಸಿರ್ಪವಲ್ತೆ ರಣನಾಕಕೆ ಶಕುನಿಪಾತ್ರಂಗಳಂ?
ಆದರೆ ಅಂದು ಅಣ್ಣ ಭರತನ ರೋಷ ದ್ವೇಷ ಅಹಂಕಾರ ಕೀರ್ತಿಲೋಭ ರಾಜ್ಯದಾಹಗಳನ್ನು ಅಹಿಂಸಾ ಪರಮ ಧರ್ಮ ಕಲಿಯಾದ ಬಾಹುಬಲಿ ಗೆದ್ದಿದ್ದು ಹೇಗೆ? ಭರತನೂ ಸೇರಿದಂತೆ ವಿಶ್ವವೇ ನಿನ್ನ ಮುಡಿಗೆರಗುವಂತಾಗಿದ್ದು ಹೇಗೆ?
ನಿನ್ನಣ್ಣ ಭರತನೊಳ್ ಮೂರ್ತಿವೆತ್ತಿದಿರಾದ
ಆ ತಿಮಿರ ಅಸುರೀ ದೂತರ್ಕಳಂ
ನೀನಂದು ಧವಳಸತ್ತ್ವದಿ ಗೆಲ್ದೆಯಲ್ತೆ,
ಭರಂತವೆರಸಿ ವಿಶ್ವಮಡಿಗೆರಗುವೋಲ್!
ಭೋಗಶಿಖರದಿ ತ್ಯಾಗದಾ ಗೆಲ್ಗಂಬಮಂ ಮೆರೆದೆಯಲ್ತೆ
ಲೋಕಸರ್ವಂ ಮಣಿದು ಬೆರಗಾಗುವೋಲ್!
ಎಂದು ಪಂಪನ ಆದಿಪುರಾಣದಲ್ಲಿ ಬಾಹುಬಲಿ ಭರತನಿಗೆ ಹೇಳುವ ಮಾತುಗಳನ್ನೊಳಗೊಂಡ ಪದ್ಯಗಳನ್ನು ಉದ್ಧರಿಸಲಾಗಿದೆ. ಮುಂದೆ ಪರಮವೈರಾಗ್ಯಮೂರ್ತಿಗೆ ಲೋಕಕಲ್ಯಾಣಾರ್ಥವಾಗಿ ಕವಿ ಸಲ್ಲಿಸುವ ಪ್ರಾರ್ಥನೆ ಬರುತ್ತದೆ.
ನಿನ್ನ ನೆನೆವುದೆ ನಮಗೆ ಚೇತನೋದ್ಬೋಧನಂ;
ನಿನ್ನ ಪೂಜೆಯೆ ನಮಗೆ ಆಧ್ಯಾತ್ಮ ಸಾಧನಂ;
ಆ ದಿವ್ಯ ನಿಷ್ಕ್ರಿಯಾ ಕ್ರಿಯೆಗನ್ಯ ಕರ‍್ಮಂಗಳೆಲ್ಲ ಹಿಮಗಿರಿಯಿದಿರ ವಿಂಧ್ಯಂ!
ಹೇ ಸಾಧುಕುಲ ಶಾಶ್ವತ ಸ್ಫೂರ್ತಿ.
ಹೇ ವಿರಾಡ್ ಭವ್ಯ ಗುರುಮೂರ್ತಿ,
ನೆಲೆಸು ನಮ್ಮೆರ್ದೆಗಳಲಿ ನಿನ್ನಾ ತಪೋರೂಪದಿಂ;
ಜ್ಯೋತಿಯೆಡೆಗೆತ್ತು ನಮ್ಮಾತ್ಮಂಗಳಂ ಸ್ವಾರ್ಥತೆಯ ಈ ತಮಃಕೂಪದಿಂ;
ಭೂಮವಾಗಲ್ ನಮ್ಮ ಚೈತನ್ಯವನುದ್ಧರಿಸು ಈ ಅಲ್ಪತ್ವದಭಿಶಾಪದಿಂ!
ನಿನ್ನ ಕನ್ನಡ ನಾಡನೊಂದುಗೂಡಿಸಿ ಕಾಯಿ;
ನಿನ್ನ ಕನ್ನಡನುಡಿಯನಾಡಿ ಧನ್ಯವಾಗಲಿ ನಮ್ಮ ಬಾಯಿ;
ಅನ್ಯಭಾಷಾಮೋಹದಾಸ್ಯಕ್ಕೆ ಪಕ್ಕಾಗದಿರಲೆಮ್ಮ ತಾಯಿ!
ನಿನ್ನ ಭಾರತಭೂಮಿ ನಿನ್ನುನ್ನತಿಗೆ ಬೆಳೆದು ನಿಲ್ಗೆ;
ಪೃಥಿವಿಯ ಸುಧಕಾಂಕ್ಷೆ ಭಾರತೀಯ ಶಾಂತಿಮಯ ವಕಷ್ದಿಂ ಸಲ್ಗೆ;
ಮರ್ತ್ಯಾಮಾನಸಕೋಶಕವತರಿಸಿ ನಿತ್ಯಮತಿಮಾನಸಂ ಗೆಲ್ಗೆ;
ಪೂರ್ಣತಾ ಸಿದ್ಧಿಯಿಂದೀ ಧರೆಯನೇಗಳುಂ ಕ್ಷೀರಕೈವಲ್ಯಮಾಳ್ಗೆ;
ಶ್ರೀ ಮಸ್ತಕಾಬಿಷೇಕದೊಳುದಿಸಿ ನದನದಿಗಳೆಮ್ಮಿಳೆಯ ಸಿರಿಸೊಗಂ ಚಿರಂ ಬಾಳ್ಗೆ!
ಮುಂದೆ ಕುವೆಂಪು ಆಗಾಗ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಗೊಮ್ಮಟಗಿರಿಗೆ ಬೇಟಿಕೊಡುತ್ತಿರುತ್ತಾರೆ. ಬೇರೆಡೆಯ ಗೊಮ್ಮಟ ಮೂರ್ತಿಗೆ ೧೨ ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆದರೆ, ಇಲ್ಲಿ ಮೂರ್ತಿಗೆ ಪ್ರತಿವರ್ಷ ನಡೆಯುತ್ತದೆ. ೨೦೧೧ ಅಕ್ಟೋಬರ್ ೧೬ನೆಯ ತಾರೀಖು ೬೨ನೆಯ ಮಹಾಮಸ್ತಕಾಭಿಷೇಕ ನಡೆದದ್ದನ್ನು ಇಲ್ಲಿ ಸ್ಮರಿಸಬಹುದು.

No comments: