
ಚನ್ನೇಗೌಡರು ತುಂಬಾ ಸರಳವಾದ ವ್ಯಕ್ತಿ. ಯಾವಾಗಲೂ ಖಾದಿ ಪ್ಯಾಂಟ್ ಮತ್ತು ಅರ್ಧತೋಳಿನ ಖಾದಿ ಶರ್ಟ್ ಧರಿಸುತ್ತಿದ್ದರು. ಗಣಿತ ಪಾಠ ಮಾಡುತ್ತಿದ್ದ ಅವರು ತುಂಬಾ ಮೆಲ್ಲಗೆ ಮಾತನಾಡುತ್ತಿದ್ದರು. ಅವರು ಅಷ್ಟೊಂದು ಸರಳವಾಗಿ ಇರುತ್ತಿದ್ದುದಕ್ಕೆ, ಅವರ ಬಗ್ಗೆ ಆಗ ಒಂದು ಕಥೆ ಜನಜನಿತವಾಗಿತ್ತು. ಅವರು ಮದುವೆಯಾದ ಹೊಸದರಲ್ಲಿ ತುಂಬಾ ಶೋಕಿದಾರರಾಗಿದ್ದರಂತೆ. ಒಂದು ದಿನ ದುಬಾರಿಯಾದ ಬಟ್ಟೆ, ವಡವೆ ತೊಟ್ಟು ಹೆಂಡತಿಯ ಮನೆಗೆ ಹೋಗುತ್ತಿರಬೇಕಾದರೆ ಕಳ್ಳರು ಅಡ್ಡಗಟ್ಟಿ ಎಲ್ಲವನ್ನೂ ಕಿತ್ತುಕೊಂಡು ಕೇವಲ ಬನಿಯನ್ ಮತ್ತು ಚೆಡ್ಡಿ ಮಾತ್ರ ಬಿಟ್ಟು ಹೋದರಂತೆ. ಅಂದಿನಿಂದ ಅವರು ಸರಳವಾಗಿ ಇರಲು ತೀರ್ಮಾನಿಸಿದರಂತೆ. ಸುಮಾರು ಹತ್ತು ಕಿಲೋಮೀಟರ್ ದೂರದ ಹೊಸಹಳ್ಳಿಯಿಂದ ಅವರು ಸೈಕಲ್ಲಿನಲ್ಲಿ ನಿತ್ಯ ಬಂದು ಹೋಗುತ್ತಿದ್ದರು. ಹೈಸ್ಕೂಲಿನಿಂದ ಕೂಗಳತೆಯ ದೂರದವರೆಗೂ, ಖಾದಿ ಪಂಚೆ ಉಟ್ಟುಕೊಂಡು ಬರುತ್ತಿದ್ದ ಅವರು, ಅಲ್ಲೆ ಯಾವುದಾದರೊಂದು ಮರದ ಮರೆಯಲ್ಲಿ ಸೈಕಲ್ ನಿಲ್ಲಿಸಿ, ಪಂಚೆ ತೆಗೆದು ಪ್ಯಾಂಟ್ ಹಾಕಿಕೊಂಡು ಸ್ಕೂಲಿಗೆ ಬರುತ್ತಿದ್ದರು. ಮತ್ತೆ ಸಂಜೆ ಹೋಗುವಾಗ ಅದೇ ಜಾಗದಲ್ಲಿ ಪ್ಯಾಂಟ್ ತೆಗೆದು ಪಂಚೆ ಉಟ್ಟುಕೊಂಡು ಹೋಗುತ್ತಿದ್ದರು!
ಇವರ ಮೃದುಸ್ವಭಾವದಿಂದಾಗಿ ಕೆಲವು ಮೇಷ್ಟ್ರುಗಳು ಆಗಲೇ ಬಾಲ ಬಿಚ್ಚಲು ಆರಂಭಿಸಿದ್ದರು. ಆಗ ಹೊಸದಾಗಿ ಬಂದ ಪ್ರಾಂಶುಪಾಲರು ಅದಕ್ಷರಾಗಿದ್ದರಿಂದಲೋ ಏನೋ ಇಡೀ ಶೈಕ್ಷಣಿಕ ವಾತಾವರಣ ಹದಗೆಟ್ಟಿತ್ತು. ಆ ವರ್ಷ ನಡೆದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಪಾಸಾದವರ ಸಂಖ್ಯೆ ಕೇವಲ ಮೂರು! ಆದ್ದರಿಂದ ಪ್ರಥಮ ಪಿ.ಯು.ಸಿ.ಗೆ ಅಡ್ಮಿಷನ್ ಆದವರೂ ಅದೇ ಮೂರು ಜನ ಮಾತ್ರ! ಅದರಲ್ಲಿ ಒಬ್ಬರು ನಡುವೆಯೇ ಟೀ.ಸಿ. ತೆಗೆದುಕೊಂಡು ಚನ್ನರಾಯಪಟ್ಟಣದ ಕಾಲೇಜಿಗೆ ಸೇರಿಕೊಂಡಿದ್ದರಿಂದ ಕಾಲೇಜನ್ನು ಆಗಲೋ ಈಗಲೋ ಮುಚ್ಚುತ್ತಾರೆಂದು ಜನ ಮಾತಾಡಿಕೊಳ್ಳುತ್ತಿದ್ದರು. ಸ್ವತಃ, ಹೈಸ್ಕೂಲಿನ ಕೆಲವು ಮೇಷ್ಟ್ರುಗಳೇ ‘ಈ ಕಾಲೇಜು ತೊಲಗಿದರೆ ಸಾಕು’ ಎನ್ನುತ್ತಿದ್ದುದನ್ನು ನಾನು ಕೇಳಿದ್ದೇನೆ. ಅವರಿಗೂ ಕಾಲೇಜಿನ ಲೆಕ್ಚರರಿಗೂ ಯಾವಾಗಲೂ ಜಗಳಗಳಾಗುತ್ತಿದ್ದವು. ಬಹುಶಃ ಕಾಲೇಜು ಲೆಕ್ಚರರಿಗೆ ಸಿಗುತ್ತಿದ್ದ ಅತಿಯಾದ ಗೌರವದಿಂದ, ಸಣ್ಣ ಮನಸ್ಸಿನ ಕೆಲವು ಮೇಷ್ಟ್ರುಗಳಿಗೆ ಹೊಟ್ಟೆ ಉರಿದಿರಬೇಕು!
ಹೈಸ್ಕೂಲ್ ಬಿಲ್ಡಿಂಗಿಗೆ ಹೆಂಚು ಹೊತ್ತಿದ್ದು

ಸ್ಕೂಲ್ ಹೊಸ ಕಟ್ಟಡಕ್ಕೆ ಶಿಫ್ಟ್ ಆದ ನಂತರ, ಹಾಸ್ಟೆಲ್ ಎಂಟನೇ ತರಗತಿ ಹಾಗೂ ಆಫೀಸು ನಡೆಯುತ್ತಿದ್ದ ಮನೆಗೆ ಬದಲಾಯಿತು. ಹಾಸ್ಟೆಲ್ಲಿದ್ದ ಮನೆಯನ್ನು ಆಸ್ಪತ್ರೆಗೆ ಬಿಟ್ಟುಕೊಟ್ಟರು. ಆಗ ಅಲ್ಲಿದ್ದ ಬೆಟ್ಟೇಗೌಡ ಎಂಬ ಡಾಕ್ಟರ್ ತುಂಬಾ ಹೆಸರುವಾಸಿಯಾಗಿದ್ದರು. ದೂರದ ಊರುಗಳಿಂದೆಲ್ಲಾ ಜನ ಅಲ್ಲಿದ್ದ ಆಸ್ಪತ್ರೆಗೆ ಬರುತ್ತಿದ್ದರಿಂದ, ಆಸ್ಪತ್ರೆಗೆ ದೊಡ್ಡ ಜಾಗ ಬೇಕಾಗಿತ್ತು. ಅದಕ್ಕೆ ಮೊದಲು ಆಸ್ಪತ್ರೆ, ಮಠದ ಒಳಗೇ ಒಂದು ದನದ ಕೊಟ್ಟಿಗೆಗೆ ಅಂಟಿಕೊಂಡಿದ್ದ ರೂಮಿನಲ್ಲಿತ್ತು!
2 comments:
ತುಂಬಾ ಕುತೂಹಲಕರ ಅನುಭವಗಳು. ಸಣ್ಣವಯಸ್ಸಿನಲ್ಲೇ ಕಷ್ಟಸಹಿಷ್ಣುಗಳಾಗಿದ್ದವರು ಮುಂದೆ ಬರುವ ದೊಡ್ಡ ಕಷ್ಟಗಳಿಗೆ ಹೆದರದೆ ಪಡೆಯುವ ಸುಖಗಳಿಗೆ ಮಾರುಹೋಗದೇ ಹೆಚ್ಚು ನಿರ್ಲಿಪ್ತರಾಗಿರುತ್ತರೆಂದು ಕೇಳಿದ್ದೇನೆ. ಮುಂದಿನ ಭಾಗಕ್ಕಾಗಿ ಕಾಯುತ್ತಿರುವೆ.
ಸರ್..
ನಿಮ್ಮ ಅನುಭವಗಳಿಂದ
ನಾವು ಕಲಿಯುವದು ಬಹಳಷ್ಟಿದೆ...
ನಿಮ್ಮ ಅನುಭವ ಭಂಡಾರದ
ಮುಂದಿನ ಭಾಗ ಕಾಯುತ್ತಿರುವೆ..
ವಂದನೆಗಳು..
Post a Comment