Saturday, August 21, 2010

ಇವರು ತಪ್ಪಿಸಿಕೊಂಡವರಂತೆ!

ನೆನ್ನೆ ಸಂಜೆ ನಾಲ್ಕರ ಸಮಯದಲ್ಲಿ ಯಾವುದೋ ಕೆಲಸದ ನಿಮಿತ್ತವಾಘಿ ಸ್ನೇಹಿತರೊಂದಿಗೆ, ಮಾಗಡಿ ರಸ್ತೆಯಿಂದ ಯಶವಂತಪುರದ ಕಡೆಗೆ ಆಟೋದಲ್ಲಿ ಹೋಗುತ್ತಿದ್ದೆ. ದಾರಿಯಲ್ಲಿ ಅಲ್ಲಲ್ಲಿ ಕಾಖಿ ಚೆಡ್ಡಿ ಅಂಗಿ ತೊಟ್ಟ ಐದಾರು ಮಂದಿ ದಾರಿಯಲ್ಲಿ ತೂಗಾಡಿಕೊಂಡು ಹೋಗುತ್ತಿದ್ದರು. ಒಂದೆರಡು ಕಡೆ ಒಂದಿಬ್ಬರು ತಿಪ್ಪೆ ಗುಂಡಿ ಕೆದಕುತ್ತಿದ್ದರು. ಅವರೆಲ್ಲಾ ಭಿಕ್ಷುಕರ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು ಬಂದವರು ಎಂಬ ನಮ್ಮ ಮಾತಿಗೆ ಆಟೋ ಡ್ರೈವರ್ ಹೀಗೆ ಹೇಳಿದ. ‘ಸರ್, ಲೋಕದ ಕಣ್ಣಿಗೆ ಅವರು ಅಲ್ಲಿಂದ ತಪ್ಪಿಸಿಕೊಂಡು ಬಂದವರು. ಆದರೆ ಅವರನ್ನು ಅಲ್ಲಿಯವರೇ ಬಟ್ಟು ಕಳುಹಿಸುತ್ತಿದ್ದಾರೆ, ಅಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಸಾಯುವ ಬದಲು ಬೇರೆಡೆ ಸಾಯಲಿ ಎಂದು ಸರ್ಕಾರವೇ ಅವರನ್ನು ಅನಧಿಕೃತವಾಗಿ ಬಿಡುಗಡೆ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದೆ’ ಎಂದ. ನಂತರ ಮಾತನಾಡುತ್ತಾ ಅತ ನೀಡಿದ ಕೆಲವು ಮಾಹಿತಿಗಳು ಗಾಬರಿ ಹುಟ್ಟಿಸುವಂತಿದ್ದವು.


ಸರ್ ಅದೊಂದು ನರಕ. ಬೆಳಿಗ್ಗೆಯಿಂದ ಅಲ್ಲಿ ಭಿಕ್ಷುಕರು ಹೊರಬರುತ್ತಿರುವುದು ಸಾಮಾನ್ಯವಾಗಿದೆ. ಮುಖ್ಯ ಬಾಗಿಲಿನಲ್ಲಿಯೇ ಅವರು ಬರುತ್ತಿದ್ದಾರೆ. ಅವರೇನು ತಪ್ಪಿಸಿಕೊಂಡು ಹೋಗುವವರು ಹೀಗೆ ರಾಜಾರೋಷವಾಗಿ ಮುಖ್ಯ ಬಾಗಿಲಿನಲ್ಲಿ ಹೋಗುತ್ತಯಾರೆಯೇ? ನಂತರ ಅಲ್ಲಿ ಹೊರಗೆ ಬಂದ ತಕ್ಷಣ ಭಿಕ್ಷೆ ಕೇಳುವುದಕ್ಕೆ ಶುರುವಿಟ್ಟುಕೊಂಡರು. ಅಲ್ಲಿನ ನಮ್ಮ ಆಟೋಸಂಘದವರು, ಸ್ವಲ್ಪ ಹಣ ಸೇರಿಸಿ, ಅಕ್ಕಪಕ್ಕದ ಅಂಗಡಿಗಳವರ ಮನವೊಲಿಸಿ, ಎಲ್ಲರಿಗೂ ಬ್ರೆಡ್ಡು ಬಿಸ್ಕೆಟ್ ಕೊಡಿಸಿದೆವು. ನಂತರ ಕೆಲವರು ಅಲ್ಲಿಯೇ ಮಲಗು ಶುರುಮಾಡಿದರೆ, ಇನ್ನು ಕೆಲವರು ಮೆಜೆಸ್ಟಿಕ್ ಕಡೆ ಹೊರಟರು. ಯಾವುದೇ ಸಿಟಿ ಬಸ್ಸಿನವನೂ ದುಡ್ಡು ಕೊಡುತ್ತೇನೆಂದರೂ ಅವರನ್ನು ಹತ್ತಿಸಿಕೊಳ್ಳಲಿಲ್ಲ. ಆಗ ನಾವು ಒಂದಷ್ಟು ಜನ ಸ್ನೇಹಿತರು, ನಮ್ಮ ನಮ್ಮ ಾಟೋಗಳಲ್ಲಿ ನಾಲ್ಕೈದು ಜನರನ್ನು ಕೂರಿಸಿಕೊಂಡು ಮೆಜೆಸ್ಟಿಕ್ ತಲುಪಿಸಿದೆವು. ಹೀಗೆ ನಾನು ನಾಲ್ಕು ಟ್ರಿಪ್ ಅವರನ್ನು ಉಚಿತವಾಗಿ ಸಾಗಿಸಿ, ಇನ್ನಾದರೂ ಮನೆಗೆ ಹೋಗಬೇಕೆಂದು ಹೋಗುತ್ತಿದ್ದೆ. ಇಂದು ಬೆಳಿಗ್ಗೆಯಿಂದ ನನಗೆ ಐವತ್ತು ರೂಪಾಯಿಕೂಡಾ ಆಗಿರಲಿಲ್ಲ. ಮನೆಯಲ್ಲಿ ಹಬ್ಬ. ಅದಕ್ಕೆ ನೀವು ಯಶವಂತಪುರಕ್ಕೆ ಕರೆದಾಗ ತಡವಾಗಿದ್ದರೂ ನಾನು ಬರಲೊಪ್ಪಿದೆ. ಆದರೂ ಹಬ್ಬದ ದಿನ ನಾವು ಇಷ್ಟು ನಮ್ಮ ಕೈಲಾದ ಸೇವೆಯನ್ನು ಮಾಡಿದೆವೆಂಬ ತೃಪ್ತಿ ನಮಗಿದೆ ಎಂದ.

ಅಷ್ಟರಲ್ಲಿ ಯಶವಂತಪುರದ ಮಾರ್ಗದಲ್ಲಿ ಇನ್ನೂ ಹತ್ತಾರು ಜನ ಭಿಕ್ಷುಕರು ನಡೆದುಕೊಂಡು ಹೋಗುವುದನ್ನು ನಮಗೆ ಆತ ತೋರಿಸಿದ. ನಂತರ ಆತ ಹೇಳಿದ (ಕೆಲವು ಭಿಕ್ಷುಕರು ಅವನಿಗೆ ನೀಡಿದ್ದ ಮಾಹಿತಿಗಳು) ಕೆಲವು ವಿಚಾರಗಳು ಹೀಗಿವೆ.

ಅಲ್ಲಿಯೇ ಆಡಳಿತದವರೇ ಕೆಲವು ಆಯ್ದ ಭಿಕ್ಷುಕರನ್ನು ಬೆಳಿಗ್ಗೆ ಹೊರಕ್ಕೆ ಬಿಡುವುದು. ಸಂಜೆ ಅವರನ್ನು ಎತ್ತಿಕೊಂಡು ಬರುವುದು. ಬೆಳಿಗ್ಗೆಯಿಂದ ಅವರು ಭಿಕ್ಷೆ ಎತ್ತಿ ಸಂಪಾದಿಸಿದ್ದ ಹಣವನ್ನು ಅಲ್ಲಿನ ಜವಾನರು ಆಯಾಗಳು, ಸೆಕ್ಯೂರಿಟಿ ಗಾರ್ಡ್ಸ ಅಧಿಕಾರಿಗಳು ಕಿತ್ತುಕೊಂಡು ಹಂಚಿಕೊಳ್ಳುತ್ತಿದ್ದರಂತೆ.

ಅಲ್ಲಿ ಅಶಕ್ತ ಭಿಕ್ಷುಕರನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಲಾಗಿದೆಯಂತೆ. ಆದರೆ ಅವರೆಷ್ಟು ಕ್ರೂರಿಗಳೆಂದರೆ, ಹತ್ತು ಇಪ್ಪತ್ತು ಜನರನ್ನು ಒಟ್ಟಿಗೆ ಕೂರಿಸಿ ಬಕೆಟ್ಟಿನಿಂದ ನೀರನ್ನು ಎರಚಿ, ಸ್ನಾನವಾಯಿತು ಎಂದು ಕಳುಹಿಸುತ್ತಿದ್ದರಂತೆ. ಸಾವಿರಾರು ಟವೆಲ್ ಪಂಚೆ ಮುಂತಾದವುಗಳನ್ನು ಖರೀದಿಸುತ್ತಿದ್ದರೂ ಒಂದನ್ನೂ ಭಿಕ್ಷುಕರ ಕೈಗೆ ಕೊಡುತ್ತಿರಲಿಲ್ಲವಂತೆ. ಸ್ನಾ ಮಾಡಿಸುವಾಗ ಮಾಡಿಸಿದ ನಂತರ ಬಟ್ಟೆ ಬಸಲಾಯಿಸುವ ಕೆಲಸವೇ ಇಲ್ಲ. ಬೆಟ್ಟೆ ಹಾಕಿಕೊಂಡೇ ಸ್ನಾನ, ಆ ಬಟ್ಟೆಗಳು ಒಣಗುವುದು ಮೈಮೇಲೆಯೇ ಅಂತೆ!.

ಯಾರಾದರೂ ಹೊರಗಿನವರು ಬಂದರೆ, ಅವರೆದುರು ಏನೂ ಮಾತನಾಡದಂತೆ ಹೆದರಿಸುತ್ತಿದ್ದರಂತೆ. ಹೊಡೆಯವುದು ಬಡಿಯುವುದು ಸಾಮಾನ್ಯ ಸಂಗತಿ. ಒಂದು ರೂಮಿನಲ್ಲಿ ಇಪ್ಪತ್ತು ಮೂವತ್ತು ಜನರನ್ನು ಕೂಡಿ ಹಾಕಿ ರಾಥ್ರಿಯೆಲ್ಲಾ ಅಲ್ಲಿಯೇ ಮಲಗಿಸುತ್ತತಿದ್ದರಂತೆ. ಕುಳಿತಲ್ಲಿಯೇ ಒಂದ ಎರಡ ಎಲ್ಲಾ. ಸ್ವಲ್ಪ ಓದು ಬರಹ ಬರುವ, ಪ್ರತಿಭಟನಾ (ಪುನರ್ವಸತಿ ಕೇಂದ್ರದವರ ಮೇಲೆ ರೇಗುವ, ದೈಹಿಕ ಹಲ್ಲೆಗೆ ಮುಂದಾಗುವ) ಮನೋಭಾವದ ಭಿಕ್ಷುಕರೂ ಅಲ್ಲಿದ್ದರಂತೆ. ಅವರನ್ನು ಕಂಡರಂತೂ ಆಯಾಗಳಿಗೂ ಅಧಿಕಾರಿಗಳಿಗೂ ಕೆಂಡಾಮಂಡಲ ಕೋಪ. ಅವರನ್ನಂತೂ ನಾಯಿಗಳಿಗಿಂತ ಕಡೆಯಾಗಿ ನೋಡುತ್ತಿದ್ದರಂತೆ.

ಕೊನೆಗೆ ಆಟೋಡ್ರೈವರ್ ಹೇಳಿದ್ದು.

ಸರ್ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಬಹುದಿತ್ತು. ಅವರನ್ನು ಉದ್ಧಾರ ಮಾಡುವುದಾಗಿ ತಂದು ಇಲ್ಲಿ ಕೂಡಿ ಹಾಕುವುದು ಯಾವ ನ್ಯಾಯ. ಈಗ ಅಲ್ಲಿ ಸಾಯುತ್ತಿರುವವ ಸಂಕ್ಯೆ ಹೆಚ್ಚಾಗಿ ಟೀ.ವಿ.ಪೇಪರಿನಲ್ಲಿ ಸುದ್ದಿ ಬರಲು ಶುರುವಾದಾಗ, ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ನಾಟಕ ಆಡುವುದೇಕೆ? ಈಗ ಇವರೆಲ್ಲ ಮತ್ತೆ ಜನಗಳ ಮಧ್ಯೆ ಬಂದು ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲವೇ? ಸರ್ಕಾರಕ್ಕೆ ಮಾನವೀಯತೆಯೇ ಇಲ್ಲ. ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ ಎಂದ.

ಆಗ ನನ್ನ ಜೊತೆ ಬರುತ್ತಿದ್ದ ನನ್ನ ಸ್ನೇಹಿತರು, ಇನ್ನ ರಸ್ತೆಯಲ್ಲಿ ಅನಾಥ ಹೆಣಗಳು ಸಂಖ್ಯೆ ಹೆಚ್ಚಾಗುತ್ತದೆ. ಸರ್ಕಾರಕ್ಕೆ, ಅವರು ಅಲ್ಲಿ ಸಾಯುವ ಬದಲು ಹೊರಗೆಲ್ಲಾದರೂ ಸತ್ತರೆ ಅಷ್ಟು ಸುದ್ದಿಯಾಗುವುದಿಲ್ಲ ಎಂದೂ ಗೊತ್ತಿದೆ. ಅದಕ್ಕೆ ಈಗ ತಪ್ಪಿಸಿಕೊಂಡು ಹೋದರು ಎಂಬ ಸುದ್ದಿ ಹಬ್ಬಿಸಿ ಬಿಟ್ಟು ಓಡಿಸುತ್ತಿದ್ದಾರೆ ಎಂದರು.

‘ಎಲ್ಲಾ ಕೆಲಸವನ್ನೂ ನಾನೇ ಮಾಡುತ್ತೇನೆಂದು ಹೊರಟು, ತಿನ್ನುವವರಿಗೆ ದಾರಿ ಮಾಡಿಕೊಡುತ್ತದೆ’ ಎಂದ ಆಟೋ ಡ್ರೈವರನ ಮಾತುಗಳಲ್ಲಿರುವ ಸತ್ಯವನ್ನು ಕುರಿತು ಯೋಚಿಸುತ್ತಿದ್ದೆ. ನಮ್ಮಂತೆ ಅನ್ನ ತಿನ್ನುವ ಕಕ್ಕ ಮಾಡುವ ಓಡಾಡುವ ಮಾತನಾಡುವ ಸಂದರ್ಭ ಬಂದರೆ ಸಾಕ್ಷಿ ನುಡಿಯುವ ಶಕ್ತಿಯಿರುವ ಸಹವಾಸಿ ಮನುಷ್ಯರ ವಿಚಾರದಲ್ಲಿಯೇ ಸರ್ಕಾರಿ ವ್ಯವಸ್ಥೆ ಈ ರೀತಿಯಾಗಿ ನಡೆದುಕೊಂಡಿದೆ. ಇನ್ನು ಮುದಿ ಗೋವುಗಳನ್ನೂ ನಾನೇ ಸಾಕುತ್ತೇನೆ ಎಂದು ಹೊರಟಿರುವ ಈ ವ್ಯವಸ್ಥೆ, ಆ ಮೂಕ ಪ್ರಾಣಿಗಳನ್ನು ಇನ್ನೆಷ್ಟು ಚೆನ್ನಾಗಿ ನೋಡಿಕೊಳ್ಳಬಹುದು. ಈಗ ಸಾವಿರಾರು ಸಂಖ್ಯೆಯ (ಯೂನಿಫಾರ್ಮ್ ಧರಿಸಿರುವ) ಭಿಕ್ಷುಕರು ರಸ್ತೆಯಲ್ಲಿ ಕುಂಟುತ್ತಾ, ಕಾಲೆಳೆಯುತ್ತಾ ಹೋಗುವುದನ್ನು ನೋಡಬೇಕಾಗಿರುವಂತೆ, ಮುಂದೆ ಇನ್ನೇನನ್ನು ನೋಡಬೇಕೋ ತಿಳಿಯುತ್ತಿಲ್ಲ.

ಕೊಸರು: ಬೆಳಿಗ್ಗೆ ವಾರ್ತೆಯಲ್ಲಿ, ಅಲ್ಲಿನ ಅಧಿಕಾರಿಯೊಬ್ಬರನ್ನು ಕೆಲಸದಿಂದ ವಜಾ ಮಾಡಿದ, ಹಾಗೂ ಸಚಿವರೊಬ್ಬರನ್ನು ಸಂಬಂಧಪಟ್ಟ ಖಾತೆಯಿಂದ ಕಿತ್ತುಕೊಂಡು, ಬೇರೆ ಖಾತೆಗೆ ನಿಯುಕ್ತಗೊಳಿಸಿದ್ದನ್ನು ಪ್ರಸಾರ ಮಾಡುತ್ತಿದ್ದರು.

ಹಾಗೆ ವಜಾ ಮಾಡುವುದರಿಂದ, ಖಾತೆ ಬದಲಾಯಿಸುವುದರಿಂದ ಆಗಿರುವ ತಪ್ಪು ಸರಿಹೋಗುತ್ತದೆಯೇ? ಮುಖ್ಯಮಂತ್ರಿಗಳೇ ಯೋಚಿಸಬೇಕು

4 comments:

ಸಾಗರದಾಚೆಯ ಇಂಚರ said...

touching article

PaLa said...

ಆಟೋ ಡ್ರೈವರ್ - ವಸತಿ ಅಧಿಕಾರಿಗಳು... ಎಂಥಾ ಕಾಂಟ್ರಾಸ್ಟ್!!

Raghu said...

ನೈಸ್ article !!
ನಿಮ್ಮವ,
ರಾಘು.

ಎಂ.ಶಿವನಂಜಯ್ಯ said...

ನಮ್ಮ ಸಮಾಜದ ಇಂಥ ವಿಕೃತ ಮುಖಗಳಿಂದಾಗಿ ನನ್ನ ಮನಸ್ಸಿನಲ್ಲಿ ವಿಷಣ್ಣತೆ ತುಂಬಿ ಹೋಗಿದೆ.ಈ ದೇಶಕ್ಕೆ ಭ್ರಷ್ಟತೆಯಿಂದ ಮುಕ್ತಿಯೇ ಇಲ್ಲವೆ? ಭ್ರಷ್ಟ ರಾಜಕಾರಣ ಎಲ್ಲಿಗೆ ಹೋಗಿ ನಿಲ್ಲಬಹುದು?