Saturday, February 18, 2012

ಪೆಜತ್ತಾಯ ಅವರ ಕಾಗದದ ದೋಣಿ ಯಾನ - 1 & 2 ಪುಸ್ತಕಗಳ ಬಿಡುಗಡೆ

ಹಿರಿಯರಾದ ಎಸ್.ಎಂ. ಪೆಜತ್ತಾಯ ಅವರು, ವರ್ಷಗಳ ಹಿಂದೆ, ಅವರ ಯಾವತ್ತೂ ಕನ್ನಡ ಬರಹಗಳನ್ನು ನನಗೆ ಕಳುಹಿಸಿ, ಇವುಗಳನ್ನು ಏನಾದರೂ ಮಾಡಿ; ಎಲ್ಲವೂ ನಿಮಗೆ ಸೇರಿದ್ದು ಎಂದುಬಿಟ್ಟಿದ್ದರು. ಅನುಭವವೇ ಹರಳುಗಟ್ಟಿದ್ದಂತಹ ಆ ಬರಹಗಳನ್ನು ಒಂದೆಡೆ ಸಂಕಲಿಸಿದಾಗ, ಬಿಡಿಬಿಡಿಯಾಗಿದ್ದರೂ ಒಂದು ಸಂಸ್ಕೃತಿಯ ಒಂದು ಕಾಲಘಟ್ಟದ ಒಂದು ವ್ಯಕ್ತಿತ್ವದ ಮೂಲಕ ಅನಂತತೆಯತ್ತ ಈ ಬರಹಗಳು ಬೆರಳು ಮಾಡಿವೆ ಅನ್ನಿಸತೊಡಗಿತ್ತು. ಈ ನಿಟ್ಟಿನಲ್ಲಿ, ಅಪ್ರಕಟಿತ ಹಾಗೂ ಇತ್ತೀಚಿಗೆ ಬರೆಯುತ್ತಿರುವ ಲೇಖನಗಳ ಜೊತೆಯಲ್ಲಿ ಅವರ ಸಮಗ್ರ ಲೇಖನಗಳನ್ನು ಇಡಿಯಾಗಿ ಗಮನಿಸುವ ಅಗತ್ಯ ಇದೆ. ಇದುವರೆಗಿನ ಸಮಗ್ರ ಲೇಖನಗಳನ್ನು ಎರಡು ಭಾಗಗಳಲ್ಲಿ ಸಂಪಾದಿಸುವ ಯೋಚನೆಯನ್ನು ಗೆಳೆಯ ನಾಗೇಶನೊಂದಿಗೆ, ಶ್ರೀ ಪೆಜತ್ತಾಯ ಅವರ ಬಳಿ ತಿಳಿಸಿದಾಗ, ಅವರು ಸಂತೋಷದಿಂದ ಒಪ್ಪಿಗೆ ಸೂಚಿಸಿದರು. ನಮ್ಮ ರಕ್ಷಕ ರಕ್ಷಾ ಮತ್ತು ರೈತನಾಗುವ ಹಾದಿಯಲ್ಲಿ ಪುಸ್ತಕಗಳು ಇತ್ತೀಚಿಗಷ್ಟೆ ಪ್ರಕಟವಾಗಿರುವುದರಿಂದ ಅವುಗಳನ್ನು ಹೊರಗಿಟ್ಟು ಇನ್ನುಳಿದ ಲೇಖನಗಳನ್ನು ಈ ಎರಡು ಸಂಪುಟಗಳಲ್ಲಿ ಸಂಕಲಿಸಲಾಗಿದೆ. ಯಾನ-೧ರ ನಂತರ ರೈತನಾಗುವ ಹಾದಿಯಲ್ಲಿ ಪುಸ್ತಕವನ್ನು, ಯಾನ-೨ರ ನಡುವೆ ಯಾವಾಗ ಬೇಕಾದರೂ, ಕೊನೆಗಾದರೂ ನಮ್ಮ ರಕ್ಷಕ ರಕ್ಷಾ ಪುಸ್ತಕವನ್ನು ಓದಬಹುದು. ಓದನ್ನು ಮೊದಲ ಲೇಖನದಿಂದಲೇ ಆರಂಭಿಸಬೇಕಂತಲೂ ಇಲ್ಲ. ಯಾವುದೇ ಲೇಖನದಿಂದ ಆರಂಭಿಸಬಹುದು; ಮುಗಿಸಬಹುದು. ಆದರೂ, ಶ್ರೀಯುತರ ಬದುಕಿನ ಇದುವರೆಗಿನ ಓಟ ಮತ್ತು ಅನುಭವಗಳ ಮೊತ್ತ ಓದುಗನದಾಗುತ್ತದೆ. ತೇಜಸ್ವಿಯವರು ಮಾಯಾಲೋಕದ ಆರಂಭದಲ್ಲಿ ಹೇಳಿದಂತೆ, ಇದೊಂದು ಕೊಲಾಜ್ ಮಾದರಿಯ ಕಲಾಕೃತಿ. ವ್ಯಕ್ತಿಚಿತ್ರಗಳು, ಸಂದರ್ಭಗಳು, ದೃಶ್ಯಗಳು ಕಥೆಯಾಗಿ ಒಂದರ ಮೇಲೊಂದು ಸಂಯೋಜನೆಗೊಳ್ಳುತ್ತಾ ಒಂದು ವಿಶಿಷ್ಟ ಪರಿವೇಶವನ್ನು ಕಲ್ಪಿಸುತ್ತವೆ.



ಈ ಪುಸ್ತಕಗಳಿಗೆ ಬಳಸಿರುವ ಸ್ಕೆಚ್ ಮತ್ತು ರೇಖಾಚಿತ್ರಗಳನ್ನು (ಕೆಲವು ಕಡೆ ಲೇಖನಗಳ ಸಾಂದರ್ಭಿಕ ವಿವರಣೆಯಂತೆ ಕಂಡರೂ) ಆಯಾಯ ಲೇಖನದ ಹಿನ್ನೆಲೆಯಲ್ಲಿ ಮಾತ್ರ ಗಮನಿಸಬಾರದು. ಒಟ್ಟು, ಈ ಲೇಖಕನ ಅನುಭವ, ಮತ್ತು ಅದು ನಮಗೆ ಒದಗಿಸುವ ಅನಂತ ಅನುಭವದ ಒಂದು ಭಾಗವಾಗಿ ಪರಿಭಾವಿಸಬಹುದು.

ಈ ಎರಡೂ ಸಂಪುಟಗಳನ್ನು ಓದುವುದೆಂದರೆ ಒಂದು ರೀತಿಯಲ್ಲಿ ಬಿಡಿ ಬಿಡಿಯಾಗಿ ಇಡಿಯನ್ನು ಗ್ರಹಿಸುವ ಪ್ರಕ್ರಿಯೆ. ಒಟ್ಟಾಗಿಯೇ ಎಲ್ಲವನ್ನೂ ಅಪ್ಪಿಕೊಳ್ಳುತ್ತೇನೆ ಎಂದು ಹೊರಟರೆ ಗಾಳಿಯನ್ನು ಅಪ್ಪಿಕೊಳ್ಳಬೇಕಾಗುತ್ತದೆ. ಆದರೆ ಒಂದೊಂದನ್ನು ಎತ್ತಿಕೊಳ್ಳುತ್ತಲೇ ಎಲ್ಲವನ್ನೂ ಬಾಚಿಕೊಳ್ಳಬಹುದು! ಇಲ್ಲಿ ವಿಶ್ಲೇಷಣೆಗಿಂತ ಸಂಶ್ಲೇಷಣೆಯೇ ಪ್ರಧಾನ. ಹೋಲಿಕೆಗಳಿಗಿಂತ ಅನುಭವವೇ ಪ್ರಧಾನ. ಕೆಡುಕುಗಳಿಗಿಂತ ಒಳಿತುಗಳೇ ಪ್ರಧಾನ. ಶ್ರೀಯುತರ, ಬಹುತೇಕ ಬರಹಗಳು ಮನುಷ್ಯನ ವ್ಯಕ್ತಿತ್ವದ, ಬದುಕಿನ ಒಳಿತುಗಳಿಗೆ ಹಿಡಿದ ಕನ್ನಡಿ. ಒಟ್ಟಿನಲ್ಲಿ ಒಳಿತು ಎಂಬುದೇ ಈ ಲೇಖಕರ ಬರಹಗಳಲ್ಲಿನ ಸ್ಥಾಯಿಭಾವ ಎನ್ನಬಹುದು.
 
ಕಾಗದದ ದೋಣಿ ಯಾನ - 1 & 2 ಪುಸ್ತಕಗಳ ಜೊತೆಯಲ್ಲಿ, ಅವರೇ ಬರೆದಿರುವ 'ನಮ್ಮ ರಕ್ಷಕ ರಕ್ಷಾ' ಎಂಬ ಪುಸ್ತಕ - ಮೂರೂ ಪುಸ್ತಕಗಳು 19.2.2012 ಭಾನುವಾರ ಸಂಜೆ ಬಿಡುಗಡೆಯಾಗುತ್ತಿವೆ. ಸ್ಥಳ : ಕಿದಿಯೂರು ಹೋಟೆಲ್ ಹಾಲ್; ಉಡುಪಿ.
ಸರ್ವರಿಗೂ ಆದರದ ಸ್ವಾಗತ.

No comments: