Monday, February 20, 2012

ಶಿವರಾತ್ರಿಯ ನೆಪ; ಜಲಗಾರನ ಜಪ

೧೯೨೭-೨೮ ಕುವೆಂಪು ಅವರ ಸಾಹಿತ್ಯಕ ಜೀವನದ ಮಹತ್ತರ ಘಟ್ಟ. ಅವರು ಎಂ.ಎ. ಕನ್ನಡ ತರಗತಿಗೆ ಸೇರಿದ್ದರಿಂದ ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆಯ ಶಾಸ್ತ್ರೀಯವಾದ ಅಭ್ಯಾಸದ ಅವಕಾಶ ಲಭಿಸಿತು. ಕವಿಯ ಸೃಜನ ಪ್ರತಿಭೆಯ ತಾಯಿಬೇರಿಗೆ ಅಮೃತಾಹಾರ ಒದಗಿದಂತಾಗಿತ್ತು. ಕನ್ನಡದಲ್ಲಿ ಇಂಗ್ಲೀಷಿನಂತೆ ಸರ್ವವಿಧವಾದ ಛಂದೋವೈವಿಧ್ಯತೆಯಿಂದ ಕೂಡಿದ ಸಾಹಿತ್ಯವನ್ನು ಸೃಷ್ಟಿಸಬೇಕೆಂಬ ಅವರ ಹಂಬಲ ಕ್ಷಣಿಕವಾದುದಾಗಿರಲಿಲ್ಲ. ಕುಳಿತಲ್ಲಿ, ನಿಂತಲ್ಲಿ, ಓದುವಾಗ, ಬರೆಯುವಾಗ - ಕೊನೆಗೆ ನಿದ್ದೆ ಮಾಡುವಾಗಲೂ ಅದರ ಬಗ್ಗೆ ಚಿಂತಿಸಿತ್ತಿದ್ದರು. ಸಾನೆಟ್ ಮತ್ತು ಬ್ಲಾಂಕ್‌ವರ್ಸ್ ಛಂದಸ್ಸುಗಳಲ್ಲಿ ಪರಿಣಿತಿ ಸಾಧಿಸುತ್ತಿದ್ದಂತೆ, ಅವುಗಳಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮನಸ್ಸು ಹಾತೊರೆಯುತ್ತಿತ್ತು. ಬ್ಲಾಂಕ್‌ವರ್ಸ್ ಗತಿಯಲ್ಲಿ ಆಗಲೇ ಕರಿಸಿದ್ದ ಮತ್ತು ಪ್ರಾಯಶ್ಚಿತ್ತ ಎಂಬ ದೀರ್ಘ ಕಥನಕವನಗಳು ರಚಿತವಾಗಿದ್ದವು. ಆಗ ಕವಿಗೆ, ಈ ಬ್ಲಾಂಕ್‌ವರ್ಸ್ ಛಂದೋಶೈಲಿಯನ್ನು ಬಳಸಿಕೊಂಡು ಕನ್ನಡದಲ್ಲಿ ನಾಟಕ ರಚಿಸಬಹುದಲ್ಲ ಎಂಬ ಯೋಚನೆ ಪ್ರಬಲವಾಗಿ, ಒಳಗಿನ ಒತ್ತಡವಾಗಿ ಬೆಳೆಯತೊಡುಗುತ್ತದೆ. ಅದುವರೆಗೆ ಯಾರೂ ಕನ್ನಡದಲ್ಲಿ ನಾಟಕಕ್ಕೆ ಬ್ಲಾಂಕ್‌ವರ್ಸ್ ಪ್ರಯೋಗ ಮಾಡಿರಲೂ ಇಲ್ಲ. ಅದಕ್ಕೆ ಅನುಗುಣವಾದ ನಾಟಕದ ವಸ್ತು, ವಿಷಯ, ರೂಪ ಇವುಗಳ ಬಗ್ಗೆ ಏನೊಂದೂ ಹೊಳೆಯದೆ ಕವಿ ಭಾವಶೂನ್ಯನಾಗಿದ್ದಾಗಲೇ ಒಂದು ದಿನ ಅಸಮಾನ್ಯವೆನ್ನಬಹುದಾದ ಘಟನೆಯೊಂದು ನಡೆದುಬಿಡುತ್ತದೆ.

ದಿವಾನರ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಆಶ್ರಮದಲ್ಲಿ ಕವಿಯ ವಾಸ. ಮನೆ ಚಿಕ್ಕದಾಗಿದ್ದುದರಿಂದ, ಪ್ರತ್ಯೇಕ ದೇವರ ಮನೆಯಿರಲಿಲ್ಲ. ಪೂಜೆ ಮುಗಿದ ಮೇಲೆ, ಪರದೆಯೊಂದನ್ನು ಅಡ್ಡ ಎಳೆದು, ದೇವರ ಕಡೆ ತಲೆ ಹಾಕಿ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದರು. ಒಂದು ಭಾನುವಾರ ಹಗಲು ವೇಳೆಯಲ್ಲಿಯೇ ಕವಿ ಗಡದ್ದಾದ ನಿದ್ದೆಯಲ್ಲಿ ಮುಳುಗಿಬಿಟ್ಟಿರುತ್ತಾರೆ. ಕನ್ನಡ, ನಾಟಕ, ಬ್ಲಾಂಕ್‌ವರ್ಸ್ ಈ ವಿಚಾರಗಳೇ ತಲೆಯಲ್ಲಿದ್ದುರಿಂದಲೋ ಏನೋ ಕವಿಗೆ ಅದರದೇ ಒಂದು ಕನಸು ಬೀಳುತ್ತದೆ. ಅದು ಹೀಗಿತ್ತು: ನಾನೊಂದು ಬೃಹದ್‌ಗಾಥ್ರದ ಅಪ್ರಾಸಛಂದಸ್ಸಿನ (ಬ್ಲಾಂಕ್‌ವರ್ಸ್) ಮಹಾಕಾವ್ಯ (ಎಪಿಕ್) ರಚಿಸಿದ್ದೇನೆ. ಅದು ಅಚ್ಚಾಗಿ ಬಂದಿದೆ! ಕೈಯಲ್ಲಿ ಹಿಡಿದಿದ್ದೇನೆ. ತೂಕವಾಗಿದೆ! ಎಷ್ಟು ಮನೋಹರವಾಗಿ ಮುದ್ರಿತವಾಗಿದೆ! ಅದರ ಕ್ಯಾಲಿಕೊ ಬೈಂಡಿನ ಸೌಂದರ್ಯವೊ ಹೇಳತೀರದು! ಹಾಳೆಗಳನ್ನು ಮಗುಚಿ ನೋಡುತ್ತಿದ್ದೇನೆ: ನುಣ್ಣನೆ ಕಾಗದ, ಮುದ್ದಾದ ಅಚ್ಚು! ಓದುತ್ತಿದ್ದೇನೆ....

ಅಷ್ಟರಲ್ಲಿ ರೀ, ರೀ ಪುಟ್ಟಪ್ಪ! ಎಷ್ಟು ನಿದ್ದೆ ಮಾಡ್ತೀರ್ರಿ? ಏಳ್ರಿ! ಎಂದು ಭುಜ ಹಿಡಿದು ಅಲುಗಿಸುತ್ತ ಎಚ್.ಬಿ.ನಂಜಯ್ಯ ಎಂಬುವವರು ಕವಿಯ ನಿದ್ರೆಗೂ ಅದಕ್ಕಿಂತ ಹೆಚ್ಚಾಗಿ ಕನಸಿಗೂ ಭಂಗ ತಂದುಬಿಡುತ್ತಾರೆ. ಪಾಪ! ಆತನಿಗೆ ಹೇಗೆ ಗೊತ್ತಾಗಬೇಕು ತಾನೆಸಗಿದ ಮಹಾ ಅನರ್ಥ? - ಕವಿಯ ಪ್ರತಿಕ್ರಿಯೆಯಿದು. ಆದರೂ ಕವಿಗೆ ಸಂತೋಷವಾಗುತ್ತದೆ; ಕನಸಿನಲ್ಲಾದರೂ ಎಪಿಕ್ಕಿಗೆ ಬೇಕಾದ ಅಪ್ರಾಸ ಛಂದಸ್ಸಿನ ಗುಟ್ಟು ಸಿಕ್ಕಿತಲ್ಲಾ ಎಂದು. ಆದರೆ ಕನಸಿನಲ್ಲಿ ಕಂಡಿದ್ದ ಪುಸ್ತಕದಲ್ಲಿದ್ದ ಭಾಷೆ ಲಿಪಿ ಯಾವುದೂ ನೆನಪಾಗುವುದಿಲ್ಲ. ಅದರ ಒಂದು ಸಾಲನ್ನಾದರೂ ನೆನಪಿಗೆ ತಂದುಕೊಳ್ಳುವ ಪ್ರಯತ್ನ ಸಫಲವಾಗುವುದಿಲ್ಲ.

ಅಂದು ಕನಸಿನಲ್ಲಿ ಸಿಕ್ಕ ಅಪ್ರಾಸ ಛಂದಸ್ಸಿನ ಗುಟ್ಟು ವ್ಯರ್ಥವಾಗಲಿಲ್ಲ. ಆ ಛಂದೋಲಯದಲ್ಲಿ ಹಿಡಿತ ಸಾಧಿಸಿದ ಕವಿ ಕೇವಲ ನಾಲ್ಕು ದಿನಗಳಲ್ಲಿ ’ಜಲಗಾರ’, ’ಯಮನಸೋಲು’ ಮತ್ತು ’ಮಹಾರಾತ್ರಿ’ ಎಂಬ ಮೂರು ನಾಟಕಗಳನ್ನು ಬರೆದು ಮಗಿಸಿಬಿಡುತ್ತಾರೆ. ಇವುಗಳಲ್ಲಿ ಮೊದಲನೆಯದೇ ಅಪ್ರಾಸ ಛಂದಸ್ಸಿನ ’ಸರಳರಗಳೆ’ ರೂಪದಲ್ಲಿರುವ, ಕೇವಲ ಎರಡು ದೀರ್ಘ ದೃಶ್ಯಗಳಿರುವ ಜಲಗಾರ ಎಂಬ ನಾಟಕ. ನಾಟಕ ರಚನೆಯಾದ ದಿನವೇ, ರಚಿಸುವಾಗ ಇದ್ದ ಆವೇಶದಲ್ಲಿಯೇ, ಆಶ್ರಮದಲ್ಲಿ ಸ್ವಾಮೀಜಿ, ನಾ.ಕಸ್ತೂರಿ ಮುಂತಾದವರ ಮುಂದೆ ಓದುತ್ತಾರೆ. ಅದರಲ್ಲಿದ್ದ ಹೊಸ ಆಲೋಚನೆಗಳು, ಹೊಸ ಭಾವಗಳು ಎಲ್ಲರ ಗಮನ ಸೆಳೆಯುತ್ತವೆ. ಹೀಗೆ ಕನ್ನಡದ ಮೊತ್ತಮೊದಲ ಸರಳರಗಳೆಯ ನಾಟಕ ಸಿದ್ಧವಾಗುತ್ತದೆ.

ಮಹಾಶಿವರಾತ್ರಿಯ ದಿನ ಶರತ್ಕಾಲದ ಸುಂದರ ಮುಂಜಾನೆ. ಊರಿನ ಕಾಯಕಯೋಗಿಜಲಗಾರನು ಸಂತೋಷವಾಗಿ ’ಮಂಜು ಹರಿಯುವವರೆಗೆ ಕುಳಿತಿಲ್ಲಿ, ನಲಿಯುವೆನು ನಲ್ಗಬ್ಬಗಳ ಹಾಡಿ’ ಎಂದು ಹಾಡುತ್ತಿದ್ದಾನೆ. ಮುಂಜಾವಿನ ಸೊಬಗಿಗೆ ಆತನೂ ಮಾರುಹೋಗಿದ್ದಾನೆ. ’ಸೃಷ್ಟಿಕರ್ತನನೆಮಗೆ ಸಾಧಿಸಲು, ತೋರಿಸಲು, ಸೃಷ್ಟಿಯಿದು ಸಾಲದೇ? ..... ಬಿಜ್ಜೆಯೇಂ ತೋರ್ಕುಮೇ ಎದೆಯರಿವು ತೋರದಾ ಪರಮನಂ?’ ಎನ್ನಿಸಿಬಿಡುತ್ತದೆ. ಆಗ ’ನೇಗಿಲ ಯೋಗಿಯು ನಾನು; ಮಣ್ಣಿನ ಭೋಗಿಯು ನಾನು!’ ಎಂದು ಹಾಡುತ್ತಾ ಒಬ್ಬ ರೈತನ ಆಗಮನವಾಗುತ್ತದೆ. ಆಗ ಜಲಗಾರ ’ಮುಂಜಾನೆಯೊಳಗೆಲ್ಲಿ ಹೋಗುತಿಹೆ, ರೈತ?’ ಎನ್ನುತ್ತಾನೆ. ಆಗ ರೈತ-
ಓಹೊ ನೀನರಿಯೆಯಾ? ಇಂದು ನಮ್ಮೂರ
ಶಿವಗುಡಿಯ ಜಾತ್ರೆ! ಬರುವುದಿಲ್ಲವೆ ನೀನು?
ತೇರೆಳೆಯಲೆಂದನಿಬರೂ ಬರುತಿಹರು.
ಎಂದು ಆ ದಿನದ ಮಹತ್ವವನನು ಹೇಳುತ್ತಾನೆ. ’ನನಗೇಕೆ ಶಿವಗುಡಿಯ ಜಾತ್ರೆ? ಜೋಯಿಸರು ದೇಗುಲದ ಬಳಿಗೆನ್ನ ಸೇರಿಸರು’ ಎನ್ನುತ್ತಾನೆ ಜಲಗಾರ. ಪಾಪ ರೈತನಿಗೆ ಜಲಗಾರನ ಮಾತುಗಳಲ್ಲಿದ್ದ ನೋವು ಅರ್ಥವಾಗುವುದಿಲ್ಲ. ’ದೂರದಲ್ಲಿಯೇ ನಿಂತು ಕೈಮುಗಿದು ಬಾ.’ ಎನ್ನುತ್ತಾನೆ. ಶಿವದರ್ಶನಕ್ಕೆ ದೇವಾಲಯಕ್ಕೆ ಹೋಗುವ ಅವಶ್ಯಕತೆ ಜಲಗಾರಿನಿಗೆ ಕಾಣುವುದಿಲ್ಲ.

ಶಿವಗುಡಿಯ ಶಿವನು ಜೋಯಿಸರ ಶಿವನಂತೆ; ನನ್ನ ಶಿವನೀ ಮಣ್ಣಿನಲ್ಲಿಹನು. ಕಪ್ಪುರದೊಳಗಿಲ್ಲ, ಮಂಗಳಾರತಿಯೊಳಗಿಲ್ಲ, ಹೂವುಗಳಲ್ಲಿಲ್ಲ; ಕೊಳೆತ ಕಸದೊಳಗಿಹನು ನನ್ನ ಶಿವ’ ಎಂದು ’ಲೋಕ ನಗಬೇಕಾದರೆ ಆರಾದರೂ ಅಳಬೇಕು’ ಎನ್ನುವಂತೆ ತಾನು ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತಾನೆ. ರೈತ ’ಪೂಜೆಯೆಂಬುದನರಿಯ; ದೇವನೆಂಬುದನರಿಯ; ಹುಟ್ಟುಗುಣ ಸುಟ್ಟರೂ ಹೋಗುವುದೆ?’ ಎಂದು ತಾನು ತಂದಿದ್ದ ಹೂವು ಹಣ್ಣುಗಳೊಂದಿಗೆ ಶಿವಾಲಯದೆಡೆಗೆ ಹೊರಡುತ್ತಾನೆ. ’ತಿರೆಗಿಂತ ದೇಗುಲವದೊಳದೇನ್?’ ಎಂದು ಜಲಗಾರ ಹಾಡುತ್ತಾನೆ.

ಆಗ ಇಬ್ಬರು ಪಾರ್ವರ ಪ್ರವೇಶವಾಗುತ್ತದೆ. ದೂರದಿಂದ ಹಾಡು ಕೇಳಿದ ಅವರಲ್ಲೊಬ್ಬ
ಕೊಳಲಿನಿದನಿಯಂತೆ ಸವಿಗೊರಲಿನಿಂದೊಗೆದ
ಗಾಯನವದೆನಿತಿಂಪು! ಹಾಡಿದವರಾರೊ?
ಎನ್ನುತ್ತಾನೆ. ಎರಡನೆಯವನು-
ಯಾರೋ ದಿವ್ಯಾತ್ಮನಿರಬೇಕು. ಮಧುರತಮ
ಗಾಯನವು ಅಮಲತಮ ಹೃದಯದಿಂದಲ್ಲದೆ
ಹೊರಹೊಮ್ಮಲರಿಯದು! ಗುಡಿಯ ಬಳಿಯಾದರೂ
ಹಾಡಿದನೆ!
ಎನ್ನುತ್ತಾನೆ. ಜಲಗಾರನನ್ನು ನೋಡಿ ಹಾಡಿದವನು ಅವನೇ ಎಂದು ತಿಳಿಯುತ್ತಿದ್ದ ಹಾಗೆ ಅವರ ವರ್ತನೆಯೇ ಬದಲಾಗಿಬಿಡುತ್ತದೆ.
ಸಂಗೀತವನಿತೇನು ಮನಮೋಹಿಪಂತೆ
ಇರಲಿಲ್ಲ. ಗಾನದೇವಿಯು ಹೀನ ಜಲಗಾರನನ್
ಒಲಿಯುವಳೇ? ಎಂದಿಗೂ ಇಲ್ಲ
ಎಂದು ಒಬ್ಬನು,
ಶೂದ್ರರೊಳ್
ಕವಿವರ್ಯರುದಿಸುವರೆ? ಹುಟ್ಟುವರೆ ಪಂಡಿತರ್?
ಜನಿಸುವರೆ ಶಿಲ್ಪಿಗಳ್? ಗಾಯಕರ್? ಯೋಗಿಗಳ್?
ಅಸದಳಂ! ಹೊತ್ತಾಯ್ತು ಹೋಗೋಣ
ಎಂದು ಹೊರಡುತ್ತಾರೆ. ಶ್ರೇಷ್ಠತೆಯನ್ನು ಗುರುತಿಸುವಲ್ಲಿ ಸಫಲರಾದರೂ, ಸಾಮಾಜಿಕ ಕಾರಣದಿಂದ ಅದನ್ನು ಸ್ವೀಕರಿಸುವ ಮನೋಭಾವ ಅವರಿಗಿರುವುದಿಲ್ಲ.

ಮುಂದೆ ಒಬ್ಬ ಯುವಕ ಬಂದು ಜಲಗಾರನಿಗೆ ’ಒಂದು ದಿನವಾದರೂ ವಿಶ್ರಾಂತಿಯಿರಲಿ; ಬಾ, ಹೋಗೋಣ’ ಎನ್ನುತ್ತಾನೆ. ಆದರೆ ಜಲಗಾರ ’ನೀನು ಶಿವನ ಗುಡಿಯೊಳಗರಸು; ನಾನು ಪುಡಿಯೊಳಗರಸುವೆನು’ ಎಂದು ಬೀಳ್ಕೊಡುತ್ತಾನೆ. ’ತ್ವಮೇವ ಮಾತಾ ಚಿ ಪಿತಾ ತ್ವಮೇವ!’ ಎಂದು ಮಂತ್ರ ಹೇಳುತ್ತ ಬರುವ ಭಟ್ಟನೊಬ್ಬ, ’ಕಣ್ಣಿಲ್ಲ, ಧರ್ಮರೇ, ಕಾಸು ಕೊಡಿರಪ್ಪಾ!’ ಎನ್ನುತ್ತಾ ಬರು ತಿರುಕನಿಗೆ ’ನೀ ಸತ್ತರೆನಗೇನೊ? ಮಡಿಬಟ್ಟೆ ಮುಟ್ಟುವೆಯಾ? ಅದಕೆ ದೇವರು ನಿನ್ನ ಕಣ್ಣಿಂಗಿಸಿದ್ದು’ ಎಂದು, ಮತ್ತೆ ’ತ್ವಮೇವ ಮಾತಾ ಚ......’ ಹೇಳುತ್ತಾ ಸಾಗಿ ಹೋಗುತ್ತಾನೆ. ನಂತರ ವಿಚಾರವಾದಿಗಳಂತೆ ಕಾಣುವ ಇಬ್ಬರು ತರುಣರ ಪ್ರವೇಶವಾಗುತ್ತದೆ. ’ಜಗವೆಲ್ಲ ದೇವನಿಹ ಗುಡಿಯಲ್ಲವೇ, ಗೆಳೆಯ?’ ಎನ್ನುವ ಒಬ್ಬ;
ಮೊದಲ ಠಕ್ಕನು ಮೊದಲ ಬೆಪ್ಪನಂ ಸಂಧಿಸಲು
ಸಂಭವಿಸಿತೆಂಬರೀ ಮತ ಎಂಬ ಮತಿವಿಕಾರಂ.
ದೊರೆ ಪುರೋಹಿತರ್ ಅವಳಿಮೊಲೆಯೂಡಿ ಸಲುಹಿದರದಂ.
ಮತದ ಮದಿರೆಯನೀಂಟಿ ಮಂಕುಬಡಿದಿದೆ ಜನಕೆ.
ಕೊನೆ ದೊರೆಯ ಕೊರಳಿಗಾ ಕೊನೆ ಪುರೋಹಿತನ ಕರುಳ್
ಉರುಳಾಗುವಾ ವರೆಗೆ ಸುಖವಿಲ್ಲ ಈ ಧರೆಗೆ!
ಎನ್ನುವ ಇನ್ನೊಬ್ಬ ತಮ್ಮ ವಿಚಾರಧಾರೆಯನ್ನು ಹರಿಯಬಿಡುತ್ತಾರೆ. ತಿರುಕ ಅವರ ಬಳಿ ಭಿಕ್ಷೆ ಬೇಡಿದಾಗ ಕೊಡುವಂತೆ ನಟಿಸಿ, ಕೊಡದೆ ಆತನನ್ನು ಗೋಳು ಹುಯ್ದುಕೊಳ್ಳುತ್ತಾರೆ. ’ಭಿಕ್ಷುಕರ ದೆಸೆಯಿಂದ ದೇಶವೇ ಹಾಳಾಯ್ತು! ಲೋ! ನಿನ್ನ ಕಣ್ಣು ಕುರುಡೇನೊ, ಠಕ್ಕ!’ ಎಂದು ಆತನನ್ನು ಹಿಂಸಿಸುತ್ತಾರೆ. ಜಲಗಾರ ಬಂದು ತಿರುಕನನ್ನು ಬಿಡಿಸಿಕೊಳ್ಳುತ್ತಾನೆ. ಆ ಯುವ ವಿಚಾರವಾದಿಗಳ ವಿಚಾರ ಕೇವಲ ಪುಸ್ತಕದ ಬದನೆಯಾಗುತ್ತದೆ!
ಎದ್ದೇಳು ಭಿಕ್ಷುಕನೆ, ನನ್ನನ್ನದೊಳೆ, ಮುಷ್ಟಿ
ನಿನಗಿಕ್ಕಿ, ಶಿವಪೂಜೆ ಮಾಡುವೆನು. ನೀನೆನ್ನ
ಸೋದರ, ನೀನೆನ್ನ ದೇಗುಲ!...........
ಎನ್ನುತ್ತಾನೆ ಜಲಗಾರ. ಮುಂದೆ, ಎರಡನೆಯ ದೃಶ್ಯದಲ್ಲಿ ಜಲಗಾರ ತನ್ನ ಸಂಜೆಯ ಕೆಲಸವನ್ನು ಮಾಡುತ್ತಿರುತ್ತಾನೆ. ಜಾತ್ರೆಗೆ ಹೋದವರೆಲ್ಲಾ ಹಿಂತಿರುಗುತ್ತಿರುತ್ತಾರೆ. ಜಾತ್ರೆಯ ವೈಭವ, ಆಡಂಬರದ್ದೇ ಮಾತು! ’ಜಲಗಾರ ಪುಣ್ಯವಿಲ್ಲವೊ ನಿನಗೆ!’ ಎನ್ನುತ್ತಾನೆ ರೈತ. ’ಶಿವಗುಡಿಯಿಂದ ಏನು ತಂದೆ’ ಎಂಬ ಜಲಗಾರನ ಮಾತಿಗೆ ’ಹಣ್ಣು ಕಾಯಿ ಹೂವು ಕರ್ಪೂರ ಕುಂಕುಮ’ ಎನ್ನುತ್ತಾನೆ; ದೇವಾಲಯದ ಕಲಾವೈಭವವನ್ನು ವರ್ಣಿಸುತ್ತಾನೆ! ತನ್ನ ಬದುಕಿನ ಕಷ್ಟವನ್ನು ಹಾಡುತ್ತಾ ಹುಡುಗಿಯೊಬ್ಬಳು ಹೋಗುತ್ತಾಳೆ. ಪಾರ್ವರಿಬ್ಬರು ಬರುತ್ತಾರೆ. ಅಂದಿನ ಅವರ ದಕ್ಷಿಣೆ, ಹಣ್ಣುಕಾಯಿನ ದುಡ್ಡು, ತೀರ್ಥ ಮಾರಿದ ದುಡ್ಡುಗಳ ಬಾರಿ ಲೆಕ್ಕಾಚಾರದಲ್ಲಿ ಅವರಿಬ್ಬರೂ ಮುಳುಗಿರುತ್ತಾರೆ. ’ಅಂತೂ ನಮಗೆಲ್ಲ ಶಿವಗುಡಿಯ ದೆಸೆಯಿಂದ ಹಿಟ್ಟು ಹೊಟ್ಟೆಗೆ, ದುಡ್ಡು ಬಟ್ಟೆಗೆ’ ಎಂದು ಒಬ್ಬ; ’ಗುಟ್ಟು ಬಿಟ್ಟರೆ ಕೆಟ್ಟೆ. ನಡೆ ಬೇಗ’ ಎಂದು ಇನ್ನೊಬ್ಬ ಹೇಳುತ್ತಾ ಹೋಗುತ್ತಾರೆ. ಇವರ ಮಾತು ಕೇಳಿದ ಜಲಗಾರ-
ಜೋಯಿಸರು
ಗುಡಿಯ ನುಗ್ಗುವ ಮುನ್ನವೇ ಶಿವನ ಹೊರಗಟ್ಟಿ
ನುಗ್ಗುವರು. ಶಿವಶಿವಾ ಗುಡಿಯೊಳಿದ್ದರು ಕೂಡ
ದೇವರಿಂದತಿ ದೂರವಿಹ ಪಾಪಿಯೆಂಥವನು?
ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಕವಿಯೊಬ್ಬ ತನಗೂ ಇದಕ್ಕೂ ಏನೂ ಸಂಬಂಧವಿಲ್ಲವೆನ್ನುವಂತೆ ’ಕೊರಗಲೇಕೆ? ಮರುಗಲೇಕೆ? ಬರಿದೆ ಬಾಳನು ಜರೆವುದೇಕೆ? ಎಂದು ಹಾಡುತ್ತಾನೆ. ಹುಡುಗರ ಗುಂಪೊಂದು ’ನಾವು ಮರುಳರು, ನಾವು ಕುಡುಕರು, ಮರುಳುತನವೆಮ್ಮಾಟವು’ ಎಂದು ಹಾಡುತ್ತಾ ಸಾಗುತ್ತದೆ! ಇವೆಲ್ಲವನ್ನೂ ಕಂಡ, ಕೆಲಸ ಮುಗಿಸಿದ ಜಲಗಾರ ’ಕುಳಿತಿಲ್ಲಿ ಶಿವನಂ ಧ್ಯಾನಿಸುವೆ’ ಎಂದು ಮಧುರವಾಗಿ ಹಾಡತೊಡಗುತ್ತಾನೆ. ಜಲಗಾರನ ವೇಷದಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ. ಆಗ ಜಲಗಾರ-
ನೀನಾರು ಆಕೃತಿಯೆ! ನೀನಾರು? ಯಾರು?
ಮಾನುಷವಾಗಿ ಕಂಡರೂ ಅಮಾನುಷವಾಗಿ
ತೋರುತಿಹೆ! ಮಿಣುಕುತಿಹ ತಾರೆಗಳನೇಳಿಸುವ
ಕಂಗಳಿಂದೇಕೆನ್ನ ನೋಡುತಿಹೆ ಇಂತು?
ನೀನಾರು? ಆಕೃತಿಯೆ?
ಎಂದು ಹೆದರುತ್ತಲೇ ಕೇಳುತ್ತಾನೆ. ಆಗ ಶಿವ-
ನಾನೊಬ್ಬ ಜಲಗಾರ.
ಅಂಜದಿರು, ಸೋದರನೆ! ಜಗದ ಜಲಗಾರ
ನಾನು! ಶಿವನೆಂದು ಕರೆಯುವರು ಎನ್ನ!
........................................................
ರುದ್ರನೆಂಬರು ಎನ್ನ; ಶಿವನೆಂಬರೆನ್ನ;
ಹೇಸುವರು, ಅಂಜುವರು, ಜಲಗಾರನೆನಲು!
ಎನ್ನುತ್ತಾನೆ. ಆಗ ಜಲಗಾರ ಮುಗ್ಧವಾಗಿ, ವಿನಯದಿಂದ-
ನಿನ್ನನಾ ಶಿವನೆಂದು ನಂಬುವುದೆಂತು? ಹೇ ದೇವ,
ನಿನ್ನೀ ರೂಪಮಂ ನಾನೆಂದುಮಾವೆಡೆಯೊಳುಂ
ಕಂಡರಿಯೆ, ಕೇಳರಿಯೆ. ತಿಳಿದವರು, ಪಂಡಿತರು,
ಬೇರೊಂದು ರೀತಿಯಲ್ಲಿ ಬಣ್ಣಿಸಿರುವರು ನಿನ್ನ
ಎಂದು ಕೇಳುತ್ತಾನೆ. ಆಗ ಶಿವ, ’ನಾನು ಶಾಸ್ತ್ರಿಗಳ ಶಿವನಲ್ಲ, ಕಾವ್ಯಗಳ ಶಿವನಲ್ಲ, ಬೆಳ್ಳಿಬೆಟ್ಟದ ಮೇಲೆ ಗಿರಿಜೆಯೊಡಗೂಡಿ ಸರಸವಾಡುವ ರಸಿಕ ಶಿವನಲ್ಲ! ಬ್ರಹ್ಮಾಂಡ ಒತ್ತುತಿಹ ಕಸದ ರಾಸಿಯ ಮೇಲೆ ಹತ್ತಿ, ನಿಂತು ನರ್ತನವೆಸಗುತಿಹ ತೋಟಿ ನಾನು! ನಿಜಶಿವನು ಜಲಗಾರ! ನಿನ್ನ ಮುಂದಿಹನು, ನೋಡು’ ಎನ್ನುತ್ತಾನೆ. ಆದರೂ, ”ಪಂಡಿತರದೇಕಂತು ಬಣ್ಣಿಪರು ನಿನ್ನ?’ ಎಂಬ ಜಲಗಾರನ ಪ್ರಶ್ನೆಗೆ, ಶಾಸ್ತ್ರಿಗಳ ಕಂಗಳಿಗೆ ನಾನು ನೋಡಲು ಕುರೂಪಿಯಾಗಿದರಿಂದ ತಣ್ಗದಿರನೊಡವೆ ಮಾಡಿದರು. ಅವರ ಭಾಗಕೆ ನಾನು ಪಾಪಿಯಾಗಿದ್ದರಿಂದ ಗಂಗೆಯನ್ನು ತಲೆಯಲ್ಲಿಟ್ಟು ಶುದ್ಧ ಮಾಡಿದರು! ಅಸ್ಪೃಶ್ಯನಾಗಿದ್ದರಿಂದ ಹಣೆಗಣ್ಣಿನ ಬೆಂಕಿಯಿಂದ ಸುಟ್ಟರು. ರೌದ್ರವಾಗಿ ನಾನು ಕಾಣಬೇಕೆಂದು ಹಾವುಗಳ ಸುತ್ತಿದರು ಎಂದೆಲ್ಲಾ ಹೇಳಿ,
ಚಂದ್ರನಿಲ್ಲದೆ, ಗೆಂಗೆ
ಇಲ್ಲದೆಯೆ, ಹೆಣೆಗಣ್ಣು ಹಾವುಗಳು ಇಲ್ಲದೆಯೆ,
ಜಿನವಾರ ಬೂದಿಗಳು ಇಲ್ಲದೆಯೆ, ಶಿವಗುಡಿಗೆ
ಸೇರಿಸರು ಶಿವನಾದ ಎನ್ನ. ಅದರಿಂದ
ನಿಜವಾದ ಶಿವನು, ಜಲಗಾರ ಶಿವನು,
ಶಿವಗುಡಿಯ ಪೀಠದಲಿ ಎಂದೆಂದಿಗೂ ಇಲ್ಲ!
ಎನ್ನುತ್ತಾನೆ. ’ನೀನು ಮತ್ತೆಲ್ಲಿರುವೆ?’ ಎಂಬ ಜಲಗಾರನ ಪ್ರಶ್ನೆಗೆ-
ಬೀದಿ ಗುಡಿಸುವ ಬಡವನೆದೆಯಲ್ಲಿ ನಾನಿರುವೆ!
ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ!
ಎಲ್ಲಿ ಹೊಲೆಯನು ನನ್ನ ಕಾರ್ಯದಲಿ ತೊಡಗಿಹನೊ
ಅಲ್ಲಿ ನಾನವನ ಪಕ್ಕದೊಳಿರುವೆ. ಕುಂಟರನು,
ಕುರುಡರನು, ದೀನರನು, ಅನಾಥರನು ಕೈಹಿಡಿದು
ಪೊರೆಯುತಿಹನೆಡೆಯಿರುವೆ................
....................................
ಊರ ತೋಟಿಯು ನೀನು; ಜಗದ ತೋಟಿಯು ನಾನು!
ಬಾ ಎನ್ನ ಸೋದರನೆ. ನೀನೆನ್ನ ನಿಜಭಕ್ತ!
ನಿನ್ನದೇ ಶಿವಭಕ್ತಿ! ನೀನೇ ಶಿವಭಕ್ತ!
ನೀನೆ ನಾನಾಗಿಹೆನು! ನಾನೆ ನೀನಾಗಿರುವೆ!
ಶಿವ ನೀನು! ಶಿವ ನೀನು!
ಎಂದು ಜಲಗಾರ ರೂಪಿಯಾದ ಶಿವ ಹಾಡುತ್ತಾನೆ. ಆಗ ಭಾವಪರವಶನಾದ ಜಲಗಾರ ’ಶಿವ ನಾನು! ಶಿವ ನಾನು!’ ಎಂದು ಹೇಳುತ್ತಾ ಶಿವನ ತೆಕ್ಕೆಯೊಳಗಾಗುತ್ತಾನೆ. ನಾಟಕ ಮುಗಿಯುತ್ತದೆ.

ಈ ನಾಟಕ ಆರಂಭದಲ್ಲಿಯೇ, ಮೈಸೂರಿನ ಸಾಹಿತ್ಯ ವಲಯದಲ್ಲಿ ಹಲವರ ಪ್ರಶಂಸೆಯನ್ನೂ ಕೆಲವರ ನಿಂದನೆಯನ್ನೂ ಎದುರಿಸಬೇಕಾಯಿತು. ನಾ.ಕಸ್ತೂರಿಯವರು ಸ್ವತಃ ತಾವೇ ನಿರ್ದೇಶಿಸಿ, ಸ್ಕೌಟು ದಳದ ವಾರ್ಷಿಕೋತ್ಸವದಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಮುಂದೆ ಪ್ರದರ್ಶಿಸುತ್ತಾರೆ. (ನಾನು ನನ್ನ ರೂಢಿಯಂತೆ ಆ ನಾಟಕ ಪ್ರದರ್ಶನಕ್ಕೆ ಹೋಗಿರಲಿಲ್ಲ-ಕುವೆಂಪು) ಅದಕ್ಕೆ ಸಾಕಷ್ಟು ಶ್ಲಾಘನೆಯೂ ವ್ಯಕ್ತವಾಗುತ್ತದೆ. ಆದರೆ ಆಗ್ಗೆ ಮೈಸೂರಿನ ವೃದ್ಧಪಿತಾಮಹರೆಂದು ಪ್ರಸಿದ್ಧರಾಗಿದ್ದ ಎಂ.ವೆಂಕಟಕೃಷ್ಣಪ್ಪಯ್ಯನವರು ತಮ್ಮ ಪತ್ರಿಕೆಯಲ್ಲಿ, ’ಆ ನಾಟಕ ಬ್ರಾಹ್ಮಣರನ್ನು ಅವಹೇಳನ ಮಾಡುವುದಕ್ಕೆ ಬರೆಯಲಾಗಿದೆ’ ಎಂದೂ ’ಜಾತಿದ್ವೇಷದ ವಿಷದ ಹಲ್ಲನ್ನು ಬಿತ್ತುವವರು ವಿಷದ ಫಲವನ್ನೆ ಅನುಭವಿಸಬೇಕಾಗುತ್ತದೆ’ ಎಂದೂ ಟೀಕಿಸಿದ್ದರಂತೆ. ಆದರೆ, ನಾಟಕದಲ್ಲಿ ವ್ಯಕ್ತವಾಗಿದ್ದ ಹೊಸ ವಿಚಾರಗಳಿಂದಾಗಿ ನಾಟಕ ದಿನದಿಂದ ದಿನಕ್ಕೆ ಆಸಕ್ತರನ್ನು ಸೆಳೆಯುತ್ತಲೇ ಹೋಯಿತು. ಎಷ್ಟೋ ದಿನಗಳವರೆಗೂ ನಾಟಕಕ್ಕೆ ವ್ಯಕ್ತವಾಗಿದ್ದ ಪ್ರಶಂಸೆ-ನಿಂದನೆಗಳು ಕವಿಗೆ ತಿಳಿಯಲೇ ಇಲ್ಲ! ತಿಳಿದಾಗಲೂ ಒಂದು ನಗುವಷ್ಟೇ ಕವಿಯ ಉತ್ತರವಾಗಿತ್ತು.

೧೯೨೮ ಅಥವಾ ೧೯೨೯ನೆಯ ವರ್ಷದ ಶಿವರಾತ್ರಿಯ ದಿನ ಹಲವರ ಒತ್ತಾಯದ ಮೇರೆಗೆ ಜಲಗಾರ ನಾಟಕವನ್ನು ಸ್ವತಃ ಕವಿಯ ಬಾಯಿಂದ ಕೇಳುವ ಕಾರ್ಯಕ್ರಮವನ್ನು ಯೋಜಿಸಲಾಗಿತ್ತು. ನಾಟಕದ ಕೊನೆಯಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ ಎಂಬುದರಿಂದಲೋ ಅಥವಾ ಶಿವರಾತ್ರಿಯಾಗಿದ್ದರಿಂದಲೋ ಏನೋ ಸಾಕಷ್ಟು ಜನ ಸೇರಿದ್ದರು. ಕವಿಯೂ ಅಪ್ರಾಸಛಂದಸ್ಸಿನ ಹೊಸ ಶೈಲಿಯಲ್ಲಿ ಅದನ್ನು ಧ್ವನಿಯ ಮಟ್ಟಿಗಾದರು ಅಭಿನಯಪೂರ್ವಕವಾಗಿ ವಾಚಿಸಿದರು. ಜನರೆಲ್ಲಾ ಮೆಚ್ಚಿಕೊಂಡರು. ಆದರೆ ಲಿಂಗಾಯಿತ ಶಿವಭಕ್ತರೊಬ್ಬರು ಮಾತ್ರ ಕುವೆಂಪು ಕಡೆಗೆ ಕೈದೋರುತ್ತಾ, ಭಯಂಕರವಾಗಿ ’ಶಿವದ್ರೋಹಿ! ಶಿವದ್ರೋಹಿ!’ ಎಂದು ಆರ್ಭಟಿಸುತ್ತಾ, ಶಿವನಿಂದೆಯಾದಲ್ಲಿ ನಿಲ್ಲಬಾರದು ಎನ್ನುವಂತೆ ಸಭಾತ್ಯಾಗ ಮಾಡಿದರಂತೆ! ಮೊದಲು ವಿಷಯ ತಿಳಿಯದೆ, ಶಿವಭಕ್ತರ ಆರ್ಭಟದಿಂದ ಗಾಬರಿಯಾಗಿದ್ದ ಸ್ವಾಮೀಜಿಗಳು, ತಾತಗಾರು, ನಾ.ಕಸ್ತೂರಿಯವರು ಮತ್ತಿತರರು ಜೋರಾಗಿ ನಕ್ಕುಬಿಟ್ಟರಂತೆ!

ಕುವೆಂಪು ಅವರು ನಿಧನರಾದಾಗ, ಅಂತಿಮದರ್ಶನಕ್ಕಾಗಿ ಉದಯರವಿಯ ಮುಂದೆ ಸಾಲುಗಟ್ಟಿದ ಸಾವಿರಾರು ಜನರುಗಳಲ್ಲಿ ಜಾಡಮಾಲಿಗಳ ಗುಂಪೊಂದು ಸಹ ಸಾಲಿನಲ್ಲಿ ನಿಂತಿತ್ತು. ಅವರಾರು ಕುವೆಂಪು ಅವರಿಗೆ ಪರಿಚಿತರಲ್ಲ, ಅವರ ಸಾಹಿತ್ಯವನ್ನು ಓದಿದವರೂ ಅಲ್ಲ. ಅದನ್ನು ನೋಡಿ, ಕುತೂಹಲದಿಂದ ರಾಮದಾಸ್ ಮೊದಲಾದವರು ಅವರನ್ನು ಮಾತನಾಡಿಸಿದಾಗ, ಅವರೆಲ್ಲರೂ ಕುವೆಂಪು ಮತ್ತು ಜಲಗಾರ ನಾಟಕದ ಹೆಸರುಗಳನ್ನು ಹೇಳಿದರಂತೆ! ಒಬ್ಬ ಬರಹಗಾರ ಅಥವಾ ಆತನ ಒಂದು ಕೃತಿ ಜನರ ಸ್ವತ್ತಾಗಿರುವುದಕ್ಕೆ ಇದೊಂದು ಉತ್ತಮ ಉದಾಹರಣೆ.

ಇಂದು ಶಿವರಾತ್ರಿ. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದು ಹಾಡಿದ ಬಸವನ ಹೆಸರನ್ನು ಹೇಳಿಕೊಂಡು, ಆತನ ಧರ್ಮದ ವಾರಸುಧಾರರೆನಸಿಕೊಂಡವರು, ರಾಜಕಾರಣಿಗಳು, ಮಠಾಧಿಪತಿಗಳು ನೂರು - ಇನ್ನೂರು ಅಡಿಯ ಶಿವಮೂರ್ತಿಗಳನ್ನು ಲಿಂಗಗಳನ್ನು ಮಾಡಿಸುತ್ತಾ - ಎದೆಯೊಳಗಿನ ಶಿವನಿಗೆ ಸಮಾಧಿ ಕಟ್ಟುತ್ತಾ - ಕಾಂಕ್ರೀಟ್ ಶಿವನ ಆರಾಧಕರಾಗುತ್ತಿದ್ದಾರೆ. ’ನಿಜಶಿವನಾರು?’ ಎಂಬುದನ್ನು ಅರಿಯುವುದೇ ನಿಜವಾದ ಶಿವರಾತ್ರಿಯಲ್ಲವೆ?

ಚಿತ್ರಗಳು : ಲಕ್ಷ್ಮಣ್. ಸಿ. (picasa web albums)

2 comments:

ಗೌರಾತೋ said...

Kuvempu avaranna nanage thumba hattira maadutiddira.. thumba danyavaadagalu!

Swarna said...

ತುಂಬಾ ಚೆನ್ನಾಗಿದೆ.
ನಮ್ಮೊಳಗಣ ಶಿವನನ್ನ ಕವಿ ಕಂಡ ಬಗೆ ತಾವು ನಮಗೆ ತಿಳಿಸಿದ ಬಗೆ.
ತಿಳಿಯಲೆಂದು ನನಗೆ ನಾನೇ ಹಾರೈಸಿಕೊಳ್ಳುವೆ :)
ಸ್ವರ್ಣಾ