Wednesday, March 18, 2015

ಕುವೆಂಪು ತೇಜಸ್ವಿಗೆ ಬರೆದ ಒಂದು ಪತ್ರ!

ಶ್ರೀ
ಕುವೆಂಪು
’ಉದಯರವಿ’
ವಾಣೀವಿಲಾಸಪುರಂ, ಮೈಸೂರು
ತಾ|| ೨೪.೧.’೫೬
ಪ್ರೀತಿಯ ಚಿರಂಜೀವಿ ತೇಜಸ್ವಿಗೆ,
ನೀನು ತಾರೀಖು ಹಾಕದೆ ಬರೆದ ಕಾಗದ ಕೈಸೇರಿತು. ಅದನ್ನೋದಿ ಆಶ್ಚರ್ಯವಾಯಿತು; ಆನಂದವಾಯಿತು; ಸ್ವಲ್ಪ ಚಿಂತೆಗೂ ಕಾರಣವಾಯಿತು.
ನಾನು ಬರೆಯುತ್ತಿರುವ ಈ ಕಾಗದವನ್ನು ನೀನು ಹಾಳುಮಾಡದೆ ನಾಲ್ಕಾರು ಸಾರಿ ಶಾಂತಮನಸ್ಸಿನಿಂದ ಓದಿ ಇಟ್ಟುಕೊ; ಅಥವಾ ನೀನು ಬರುವಾಗ ನನಗೇ ತಂದುಕೊಡು.
ನಾವೆಲ್ಲರೂ ಇಲ್ಲಿ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮ ಎಂದು ಕೇಳಿ ಸಂತೋಷ. ನಿನ್ನ ರತ್ನಾಕರ ಮಾವ ಕಾಗದ ಬರೆದಿದ್ದರು - ನಾಯಿಮರಿಗೆ ಹುಚ್ಚು ಹಿಡಿದಂತೆ ಆಗಿತ್ತು ಎಂದು ನಿನ್ನ ಜಯಕ್ಕ ಕಾಗದ ಬರೆದಿದ್ದರಂತೆ - ನೀನೇನೋ ಇಂಜಕ್‌ಷನ್ ತೆಗೆದುಕೊಳ್ಳುತ್ತಿದ್ದೀಯ ಎಂದು! ಏನು ಸಮಾಚಾರ? ನಿನ್ನ ಕಾಗದದಲ್ಲಿ ಆ ವಿಚಾರವೇ ಇಲ್ಲವಲ್ಲ.
ನೀನು ಹಿಂದೆ ಕಳುಹಿಸಿದ ಕವನಗಳು ತಲುಪಿದವು. ಅವನ್ನು ಪ್ರೀತಿಯಿಂದಲೂ ಹೆಮ್ಮೆಯಿಂದಲೂ ಓದಿದ್ದೇನೆ; ಇಟ್ಟುಕೊಂಡಿದ್ದೇನೆ. ಆ ವಿಚಾರವಾಗಿ ನಿನಗೆ ಬರೆಯಬೇಕೆಂದಿದ್ದೆ. ಅಷ್ಟರಲ್ಲಿ ನಿನ್ನಿಂದ ಮತ್ತೊಂದು ಕಾಗದ ಬಂದಿತು.
ನಿನ್ನ ಆ ಕವನಗಳು ಹಸುಳೆಯ ಮೊದಲ ತೊದಲಂತೆ ಮನೋಹರವಾಗಿವೆ. ಆ ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸುತ್ತೇನೆ. ಅಂದು ನಾನು ನಿನಗೆ, ತಿಳಿಸಿದಂತೆ - ನೀನು ಕನ್ನಡ ಛಂದಸ್ಸಿನ ಸ್ಥೂಲ ಪರಿಚಯವನ್ನಾದರೂ ಮಾಡಿಕೊಳ್ಳಬೇಕು. ಏಕೆಂದರೆ ಸಾಹಿತ್ಯದ ಭಾಷೆಗೆ ವ್ಯಾಕರಣ ಶುದ್ಧಿ ಹೇಗೆ ಅವಶ್ಯಕವೋ ಹಾಗೆಯೇ ಕಾವ್ಯಕ್ಕೆ ಛಂದಸ್ಸಿನ ಅರಿವು ಬೇಕು. ಬೈಸಿಕಲ್ಲನ್ನು ಚೆನ್ನಾಗಿ ಕಲಿತ ಮೇಲೆ ಕೈಬಿಟ್ಟೋ ಕಾಲುಬಿಟ್ಟೋ ಸವಾರಿ ಮಾಡುವ ಪ್ರವೀಣನಂತೆ ನುರಿತ ಮೇಲೆ ಕವಿ ಛಂದಸ್ಸನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಸ್ವಾತಂತ್ರ್ಯ ಪಡೆಯುತ್ತಾನೆ. ಆದರೆ, ಮೊದಲು ಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು. ನನ್ನ ಅನುಭವವನ್ನೆ ನಿನಗೆ ಹೇಳುತ್ತಿದ್ದೇನೆ.
ಛಂದಸ್ಸು ಮಾತ್ರವಲ್ಲದೆ ಭಾಷೆಯೂ ಮುಖ್ಯ. ಹಾಗೆಯೇ ಆಲೋಚನೆ ಭಾವಗಳೂ ಮುಖ್ಯ. ಭಾಷೆಯನ್ನು ಪೂರ್ವಸಾಹಿತ್ಯಾಭ್ಯಾಸದಿಂದ ಪಡೆಯಬೇಕು. ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿಕೊಡುತ್ತವೆ. ವಿಚಾರ ಬಹಳ ದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದ್ದೇನೆ.
ಒಟ್ಟಿನಲ್ಲಿ ಹೇಳುವುದಾದರೆ, ನಿನ್ನ ಪ್ರಥಮ ಪ್ರಯತ್ನದಲ್ಲಿಯೆ, ನೀನು ದೃಢ ಮನಸ್ಸಿನಿಂದ ಕಾರ್ಯೋನ್ಮುಖಿಯಾದರೆ ಮುಂದೆ ಒಳ್ಳೆಯ ಫಲವಾಗುವ ಸೂಚನೆ ಇದೆ.
ನೀನು ಮೊನ್ನೆ ಬರೆದ ಕಾಗದವನ್ನೋದಿ, ನಿನ್ನಲ್ಲಿ ಇದುವರೆಗೂ ಸುಪ್ತವಾಗಿದ್ದ ಯಾವುದೋ ಶಕ್ತಿ, ಆಶೆ, ಅಭೀಪ್ಸೆ, ಉದ್ಧಾರಾಕಾಂಕ್ಷೆ ಈಗತಾನೆ ಕಣ್ಣು ತೆರೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನೀನು ಹುಟ್ಟುವ ಮೊದಲೂ ಹುಟ್ಟಿದ ಮೇಲೆಯೂ ನಾನು ಶ್ರೀಗುರುದೇವನಲ್ಲಿ ಮಾಡುತ್ತಿದ್ದ ಪ್ರಾರ್ಥನೆ ಈಗತಾನೆ ನೆರವೇರಲು ಪ್ರಾರಂಭವಾಗಿದೆಯೋ ಏನೋ ಎನ್ನಿಸುತ್ತಿದೆ. ‘ಜೇನಾಗುವಾ’ ಎಂಬ ನನ್ನ ಕವನ ಸಂಗ್ರಹದಲ್ಲಿರುವ ಕೆಲವು ಕವನಗಳನ್ನು ಓದಿ ನೋಡಿದರೆ ನಿನಗೆ ಗೊತ್ತಾಗುತ್ತದೆ.
ನೀನೀಗ ಹದಿನೇಳನೆಯ ವರ್ಷವನ್ನು ದಾಟಿ ಹದಿನೆಂಟನೆಯದಕ್ಕೆ ಕಾಲಿಟ್ಟಿದ್ದೀಯೆ. ತಾರುಣ್ಯೋದಯದ ಈ ಸಂದರ್ಭದಲ್ಲಿ ಬದುಕು ಹಳೆಯ ಪೊರೆಯನ್ನು ಕಳಚಿ ಹೊಸ ಪೊರೆಯ ಹೊಸ ಬದುಕಿಗೆ ಹೋಗಬೇಕಾದದ್ದು ಸ್ವಾಭಾವಿಕವೆ.
ನೀನು ಶ್ರೀರಾಮಾಯಣದರ್ಶನವನ್ನು ಓದಿದುದು ನಿಜಕ್ಕೂ ನನಗೆ ವಿಸ್ಮಯಕಾರಿಯಾಗಿದೆ. ತುಂಬ ಸಂತೋಷವೂ ಆಗಿದೆ. ಆದರೆ ಅದರಲ್ಲಿ ಯಾವ ಒಂದು ಸನ್ನಿವೇಶದಿಂದಲೂ ಪ್ರತ್ಯೇಕವಾಗಿ ಅವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ. ಆದರೆ ಅದು ನಿನ್ನ ಲೌಕಿಕವಾದ ಓದಿಗೂ ಆಚರಣೆಗೂ ಅಡ್ಡಿಯಾಗದಂತೆ ಸಂಯಮದಿಂದ ವರ್ತಿಸುವುದು ಒಳ್ಳೆಯದು. ಏಕೆಂದರೆ ನಾನು ಹಿಂದೆ ನಿನಗೆ ಹೇಳಿದಂತೆ - ಎಂತಹ ಮಹೋನ್ನತ ಪ್ರತಿಭೆಯಾದರೂ, ಲೋಕದಲ್ಲಿ ಅದು ಪ್ರಕಟನಗೊಳ್ಳುವಾಗ, ಲೌಕಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಠೆಗಳ ಚೌಕಟ್ಟಿನಲ್ಲಿಯೆ ವಿಕಾಸಗೊಳ್ಳಬೇಕಾದುದು ಅನಿವಾರ್ಯ. - ನೀನು ಹೇಗಾದರೂ ಪ್ರಯತ್ನ ಮಾಡಿ ಈ ಸಲದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದಿನ ವರ್ಷ ಮೈಸೂರಿಗೇ ಬಂದರೆ ಇಲ್ಲಿ ನಿನ್ನ ಬುದ್ಧಿಯ ಮತ್ತು ಹೃದಯದ ಉನ್ಮೀಲನಕ್ಕೂ ವಿಕಾಸಕ್ಕೂ ಯಥೇಚ್ಛವಾದ ಅವಕಾಶ ದೊರೆಯುತ್ತದೆ. ನಿನ್ನ ಅಣ್ಣನ ಲೈಬ್ರರಿಯೆ ನಿನಗೆ ಸಾಕು ಜಗತ್ತಿನ ಅತ್ಯುತ್ತಮತೆಯನೆಲ್ಲ ಪಡೆಯುವುದಕ್ಕೆ. ಬೇರೆಯ ವಿಚಾರ ವಿನಿಮಯಾದಿಗಳಿಗೂ ಹೆಚ್ಚು ಅವಕಾಶ ಪಡೆಯಬಹುದು.
ಈಗಿನ ವಿದ್ಯಾಭ್ಯಾಸ ಕ್ರಮದಲ್ಲಿಯೆ ದೋಷಗಳಿರಬಹುದು ಆದರೆ ಅದು ಬದಲಾಗುವವರೆಗೆ ಅದರಲ್ಲಿಯೆ ನಡೆಯಬೇಕಲ್ಲವೆ? ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವತನಕ ಅದನ್ನೆ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು. ಆದ್ದರಿಂದ ಲಾಜಿಕ್ (ತರ್ಕಶಾಸ್ತ್ರ) ಮುಂತಾದ ವಿಷಯ ನಿನಗೆ ಹಿಡಿಸದಿದ್ದರೂ ಪರೀಕ್ಷೆಗೆ ಬೇಕಾಗುವಷ್ಟನ್ನಾದರೂ ಓದಿಕೊಂಡು ತೇರ್ಗಡೆ ಹೊಂದಬೇಕು. ನಾನೂ ನಿನ್ನ ಹಾಗೆಯೇ ಓದುವಾಗ ಸೈನ್ಸನ್ನೇ ತೆಗೆದುಕೊಂಡಿದ್ದೆ. ನನಗೆ ಅಷ್ಟೇನು ರುಚಿಸದಿದ್ದರೂ ಹೇಗೋ ಓದಿ ಪರೀಕ್ಷೆಯ ಮಟ್ಟಿಗೆ ತಿಳಿದುಕೊಂಡು ಪಾಸಾದೆ. ನೀನೂ ಹಾಗೆಯೆ ಮಾಡು. ಈಗ ನೀನು ಅರ್ಟ್ಸ್ ತೆಗೆದುಕೊಂಡಿದ್ದೀಯೆ. ಆದರಿಂದ ನಿನಗೇನೂ ಕಷ್ಟವಾಗದು. ಇಂಗ್ಲಿಷ್ ಭಾಷೆಯದೊಂದೇ ತೊಂದರೆ ಅಲ್ಲವೆ? ಆದರೆ ಹೇಳುತ್ತೇನೆ ಕೇಳು. ನೀನೇನಾದರೂ ಉತ್ತಮ ಲೇಖಕ, ಸಾಹಿತಿ, ಕವಿ, ಆಲೋಚಕ ಎಲ್ಲ ಆಗಬೇಕೆಂದು ಸಂಕಲ್ಪವಿದ್ದರೆ ಇಂಗ್ಲಿಷ್ ಭಾಷೆಯನ್ನೂ ಚೆನ್ನಾಗಿ ಕಲಿಯುವುದು ಒಳಿತು. ನನ್ನ ಇಂಗ್ಲಿಷ್ ಲೈಬ್ರರಿ ನಿನಗೆ ಜಗತ್ತಿನ ರತ್ನಗಳನ್ನೆಲ್ಲ ದಾನಮಾಡಬಲ್ಲುದು.
ಆದ್ದರಿಂದ ಯಾವ ವಿಚಾರದಲ್ಲಿಯೂ ದುಡುಕಿ ಅವಸರದ ನಿರ್ಣಯ ತೆಗೆದುಕೊಳ್ಳಬೇಡ. ಸಂದೇಹವಿದ್ದರೆ ನನಗೆ ಬರೆ. ನಿಮ್ಮ ಪರೀಕ್ಷೆ ಬಹುಶಃ ಬಹಳ ಸಮೀಪವಿರಬೇಕು. ಸದ್ಯಕ್ಕೆ ಬೇರೆ ಎಲ್ಲವನ್ನೂ ಬದಿಗಿಟ್ಟು ಅದರ ಕಡೆ ಲಕ್ಷ್ಯ ಕೊಡು. ಪರೀಕ್ಷೆ ಮುಗಿದೊಡನೆಯೇ ಬೇಕಾದಷ್ಟು ಸಮಯವಿರುತ್ತದೆ, ಉಳಿದುದಕ್ಕೆ.
ಅಂತೂ ನಿನ್ನಲ್ಲಿ ನಡೆಯುತ್ತಿರುವ ವ್ಯಾಪಾರ ನಿನ್ನ ವಯಸ್ಸಿಗೆ ಸಹಜವಾದದ್ದೆ. ಆದರೆ ಆ ದಾರಿಯಲ್ಲಿ ಮುಂದೆ ನಡೆದವರ ಹಿತವಚನದಂತೆ ಸ್ವಲ್ಪ ಕಾಲ ನಡೆಯುವುದು ಶ್ರೇಯಸ್ಕರ. ನಾನು, ನಿತ್ಯವೂ ದೇವರ ಮನೆಯಲ್ಲಿ ಧ್ಯಾನ ಮಾಡುವಾಗ ನಿನ್ನ ಕ್ಷೇಮ ಶ್ರೇಯಸ್ಸು ಅಭ್ಯುದಯ ಸುಖ ಶಾಂತಿ ಏಳ್ಗೆಗಳಿಗಾಗಿ ಗುರುದೇವನನ್ನೂ ಜಗನ್ಮಾತೆಯನ್ನೂ ಪ್ರಾರ್ಥಿಸುತ್ತೇನೆ. ಅವರು ನಿನಗೆ ಬೆಳಕು ತೋರುತ್ತಾರೆ. ಆದರೆ ನೀನು ಯಾವ ಚಂಚಲತೆಗೂ ಉದ್ರೇಕಕ್ಕೂ ವಶನಾಗದೆ ದೃಢವಾಗಿ ಮುನ್ನಡೆಯಬೇಕಾದುದು ನಿನ್ನ ಪವಿತ್ರ ಕರ್ತವ್ಯ. ನಿನಗೆ ಏನೇನು ನೆರವು ಬೇಕೋ ಅದನ್ನೆಲ್ಲ ಕೊಡಲು ನಾನೂ ನಿನ್ನಮ್ಮನೂ ಸಿದ್ಧರಿದ್ದೇವೆ. ನಿನ್ನ ಮತ್ತು ಇತರ ಮಕ್ಕಳ ಶ್ರೇಯಸ್ಸಿಗೆ ತಾನೆ ನಾವು ಬದುಕುತ್ತಿರುವುದು! ನೀನು ಶ್ರೇಯಸ್ಸಿನ ಕಡೆಗೆ ಒಂದು ಹೆಜ್ಜೆ ಇಟ್ಟರೆ ನನಗೆ ಪರಮಾನಂದವಾಗುತ್ತದೆ. ನನಗೆ ಗುರುದೇವನು ದಯಪಾಲಿಸಿರುವ ಎಲ್ಲ ಸಾಹಿತ್ಯಕ ಆಧ್ಯಾತ್ಮಿಕ ಮತ್ತು ಲೌಕಿಕ ಸಂಪತ್ತೆಲ್ಲ ನಿನಗೆ ಮೀಸಲು, ನೀನು ಅದಕ್ಕೆ ಹೃದಯ ತೆರೆದು ಕೈಚಾಚಿದರೆ!
ನಿನ್ನ ಉಪಾಧ್ಯಾಯರುಗಳೊಡನೆ ತಾಳ್ಮೆಯಿಂದ ವರ್ತಿಸು. ಅವರ ಆಲೋಚನೆಗಳು ನಿನಗೆ ಹಿಡಿಸದಿದ್ದರೂ ಅಸಭ್ಯವಾಗಿ ವಾದಿಸುವ ಗೋಜಿಗೆ ಹೋಗದಿರು.
ನಿನ್ನ ಅಮ್ಮ ಆಶೀರ್ವಾದ ಕಳಿಸುತ್ತಾರೆ. ನಿನ್ನ ತಮ್ಮ ಮತ್ತು ತಂಗಿಯರು ಪ್ರೀತಿ ತಿಳಿಸುತ್ತಾರೆ. ಅವರಿಗೂ ಕಾಗದ ಬರೆದರೆ ಎಷ್ಟು ಸಂತೋಷಪಡುತ್ತಾರೆ!!
ಆಶೀರ್ವಾದಗಳು
ಕುವೆಂಪು
***


ತೇಜಸ್ವಿಗೆ ಹದಿನೇಳು ವರ್ಷ ತುಂಬಿ ಹದಿನೆಂಟಕ್ಕೆ ಕಾಲಿಡುವ ಸಂದರ್ಭ. ಶಿವಮೊಗ್ಗೆಯಲ್ಲಿ, ಅವರ ಅಜ್ಜಿಯ ಮನೆಯಲ್ಲಿದ್ದುಕೊಂಡು, ಆರ್ಟ್ಸ್ ತೆಗೆದುಕೊಂಡು ಕಾಲೇಜಿಗೆ ಹೋಗುತ್ತಿದ್ದ ದಿನಗಳು. ತನ್ನ ಮನೋವ್ಯಾಪರಗಳನ್ನು, ದಿಕ್ಕುದೆಸೆಯಿಲ್ಲದೆ ಹರಿಯುತ್ತಿದ್ದ ಯೋಚನಾತರಂಗಗಳನ್ನು, ಅದರಿಂದ ಉಂಟಾಗುತ್ತಿದ್ದ, ಮನೋಕ್ಲೇಷವನ್ನು ಅತ್ಯಂತ ಮುಕ್ತವಾಗಿ ತನ್ನ ತಂದೆಯವರಿಗೆ ಕಾಗದ ಬರೆದು ತಿಳಿಸಿರುತ್ತಾರೆ. ೬.೧.೧೯೫೬ರಂದು ಬರೆದಿರುವ ಕಾಗದ, ಹಾಗೂ ಅದಕ್ಕೂ ಮೊದಲು ಬರೆದ ದಿನಾಂಕವಿರದ ಒಂದು ಕಾಗದ ಈ ಎರಡಕ್ಕೂ ಉತ್ತರರೂಪವಾಗಿ ಕುವೆಂಪು ಬರೆದಿರುವ ಪತ್ರವೇ ಮೇಲಿನದು. ವಯಸ್ಸಿಗೆ ಬರುತ್ತಿರುವ ಮಗನೊಡನೆ, ನಿಜವಾದ ಪ್ರೀತಿ ವಾತ್ಸಲ್ಯವಿರುವ ತಂದೆಯೊಬ್ಬ ಎಷ್ಟು ಪ್ರಬುದ್ಧವಾಗಿ ಹಾಗೂ ಅಷ್ಟೇ ಸಂಯಮದಿಂದ ವರ್ತಿಸಬಹುದು ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.
ಕಾಗದವನ್ನು ಓದಿ ಇಟ್ಟುಕೊ ಅಥವಾ ನನಗೇ ವಾಪಸ್ಸು ತಂದು ಕೊಡು ಎಂದು ಆರಂಭದಲ್ಲಿಯೇ ಹೇಳಿರುವುದು, ಕಾಗದದಲ್ಲಿ ಪ್ರಸ್ತಾಪಿಸುತ್ತಿರುವ ವಿಚಾರಗಳು ಮಹತ್ವವಾದವುಗಳು ಎಂಬುದನ್ನು ಯುವಕ ತೇಜಸ್ವಿಗೆ, ಮನಗಾಣಿಸುವ ಉದ್ದೇಶದಂತಿದೆ. ಒಬ್ಬ ತಂದೆಗೆ, ತನ್ನ ಮಗ ಬರೆದ ಕವಿತೆಗಳನ್ನು ಓದಿದರೆ ಆಗುವ ಸಂತೋಷ, ಇಲ್ಲಿ ಕವಿಯೂ ಆದ ತಂದೆಗೆ ಆಗಿದೆ. ಅದರ ಜೊತೆಗೆ, ದಾರ್ಶನಿಕನೂ, ಕಾವ್ಯಮೀಮಾಂಸಕನೂ ಆಗಿರುವ ಕುವೆಂಪು ಅವರಿಗೆ ಅದರ ಓರೆಕೋರೆಗಳು ಕಾಣಿಸುತ್ತವೆ. ಮೊದಲು, ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸಿದರೂ, ಮುಂದೆ ಸಾಹಿತ್ಯಕ್ಕೆ ಅಗತ್ಯವಾಗಿ ಬೇಕಾದ ಭಾಷಾ ಶುದ್ಧಿ ಮತ್ತು ಛಂದಸ್ಸುಗಳ ಪರಿಚಯ ಕುರಿತು ಬರೆಯುತ್ತಾರೆ. ಅದನ್ನು ಮನಗಾಣಿಸಲು ಒಂದು ಉಪಮೆಯನ್ನೂ ಕೊಡುತ್ತಾರೆ. ಅದೇನು ಕಾವ್ಯಮೀಮಾಮಸೆಯ, ವಿಮರ್ಶೆಯ ತತ್ವವನ್ನು ಹೊತ್ತುದಲ್ಲ ಎಂಬುದನ್ನು ಗಮನಿಸಬೇಕು. ಆಗಿನ ಯುವಕ ಕನಸಾಗಿದ್ದ ಸೈಕಲ್ಲು ಸವಾರಿಯ ಉಪಮೆಯೇ ತಂದೆ ಮಗನಿಗೆ ಹೇಳಬೇಕಾದುದನ್ನು ಸಮರ್ಥವಾಗಿ ಸಾಧಿಸುತ್ತದೆ. ಮೊದಮೊದಲು ಒಂದು ನಿಯಮಕ್ಕೆ ಒಳಗಾಗಿ ಕಲಿಯುವುದು ಮೇಲು ಎನ್ನುವ ಅಭಿಪ್ರಾಯದಲ್ಲಿ, ಕವಿನಿರ್ಮಿತಿ ನಿಯತಿಕೃತ ನಿಯಮರಾಹಿತ್ಯ ತತ್ವದ ವಾಸನೆಯಿದೆ. ಜೊತೆಗೆ ಅದು ನನ್ನ ಸ್ವಂತ ಅನುಭವ ಎಂದು ಹೇಳುವುದರ ಮೂಲಕ ಸಾಧಕನಿಗೆ ಎದುರಾಗುವ ಸವಾಲಿನ ಸಾರ್ವತ್ರಿಕರಣ ಎಂಬಂತೆ ಬಿಂಬಿಸಿದ್ದಾರೆ.
ಭಾಷೆಯನ್ನು ಪೂರ್ವಸಾಹಿತ್ಯಾಭ್ಯಾಸದಿಂದ ಪಡೆಯಬೇಕು, ಉಳಿದುದನ್ನು ಜೀವನದ ಅನುಭವವೂ ಸಾಹಿತ್ಯಾಧ್ಯಯನವೂ ಸಂಪಾದಿಸಿಕೊಡುತ್ತದೆ ಎಂಬ ಮಾತು ತೇಜಸ್ವಿಯವರ ಬದುಕನ್ನು ಕಂಡವರಿಗೆ, ಕುವೆಂಪು ಅವರ ಮುಂಗಾಣ್ಕೆಯನ್ನು ಕಟ್ಟಿಕೊಡುತ್ತದೆ. ಭಿನ್ನವಾಗಿ ಬದುಕಿದ್ದರಿಂದಲೇ ಬೇರೆಯವರಿಗಿಂತ ಭಿನ್ನವಾದ ಸಾಹಿತ್ಯ ಸೃಷ್ಟಿಸಲು ಸಾದ್ಯವಾಯಿತು ಎಂಬ ಮಾತಿಗೆ, ಮೂರ್ತರೂಪದ ಆಧಾರ, ತೇಜಸ್ವಿಯವರ ಬದುಕಾಗಿದ್ದರೆ, ಅಮೂರ್ತ ರೂಪದ ಆಧಾರ ಈ ಮಾತುಗಳೇ ಆಗುತ್ತವೆ. ಜೊತೆಗೆ ’ವಿಚಾರ ಬಹುದೊಡ್ಡದು. ಇಲ್ಲಿ ಸೂತ್ರಪ್ರಾಯವಾಗಿ ತಿಳಿಸಿದೇನೆ’ ಎನ್ನುವಲ್ಲಿ, ಮಗನ ಮುಂದೆ ಒಂದು ಕುತೂಹಲದ ಬಾಗಿಲನ್ನು ತೆರೆದಿಡುತ್ತಿದ್ದಾರೆ. ಮುಂದುವರೆದು ’ದೃಢಮನಸ್ಸಿನಿಂದ ಕಾರ್ಯೋನ್ಮುಖನಾದರೆ ಫಲ ಸಿಗುವ ಸೂಚನೆಯಿದೆ’ ಎಂದು ಹೇಳುವುದರ ಮೂಲಕ, ನಿನ್ನ ಪ್ರಯತ್ನವೂ ಬೇಕು ಎಂದು ಸೂಚ್ಯವಾಗಿ ಹೇಳುತ್ತಿದ್ದಾರೆ ಅನ್ನಿಸುತ್ತದೆ.
“ನೀನು ಮೊನ್ನೆ ಬರೆದ ಕಾಗದವನ್ನೋದಿ, ನಿನ್ನಲ್ಲಿ ಇದುವರೆಗೂ ಸುಪ್ತವಾಗಿದ್ದ ಯಾವುದೋ ಶಕ್ತಿ, ಆಶೆ, ಅಭೀಪ್ಸೆ, ಉದ್ಧಾರಾಕಾಂಕ್ಷೆ ಈಗತಾನೆ ಕಣ್ಣು ತೆರೆಯುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನೀನು ಹುಟ್ಟುವ ಮೊದಲೂ ಹುಟ್ಟಿದ ಮೇಲೆಯೂ ನಾನು ಶ್ರೀಗುರುದೇವನಲ್ಲಿ ಮಾಡುತ್ತಿದ್ದ ಪ್ರಾರ್ಥನೆ ಈಗತಾನೆ ನೆರವೇರಲು ಪ್ರಾರಂಭವಾಗಿದೆಯೋ ಏನೋ ಎನ್ನಿಸುತ್ತಿದೆ. ‘ಜೇನಾಗುವ’ ಎಂಬ ನನ್ನ ಕವನ ಸಂಗ್ರಹದಲ್ಲಿರುವ ಕೆಲವು ಕವನಗಳನ್ನು ಓದಿ ನೋಡಿದರೆ ನಿನಗೆ ಗೊತ್ತಾಗುತ್ತದೆ.” ಈ ಸಾಲುಗಳಂತೂ ಅತ್ಯಂತ ಅರ್ಥಪೂರ್ಣವಾದವುಗಳು. ‘ಜೇನಾಗುವಾ’ ಕವನಸಂಕಲನದ ತೇಜಸ್ವಿ ಜನನದ ಮೊದಲಿನ ಕವಿತೆಗಳಾದ, ’ಗರ್ಭಗುಡಿ’ ಮತ್ತು ‘ಬಿನ್ನಯ್ಸಿದಳು ತಾಯಪ್ಪಳಿಂತು’ ಹಾಗೂ ಜನನ ನಂತರದ ಕವಿತೆಗಳಾದ ‘ಕುಮಾರಸಂಭವ’, ‘ಸ್ವಾಗತ ನಿನಗೆಲೆ ಕಂದಯ್ಯ’, ‘ನಾಮಕರಣೋತ್ಸವ’, ‘ತನಯನಿಗೆ’, ‘ತನುಜಾತನಹುದಾತ್ಮಜಾತನುಂ’, ‘ಅಮೃತಕಾಗಿ’, ‘ಕುಣಿಯುತ ಬಾ ಕಂದಯ್ಯ’, ‘ಕಂದನ ಮೈ’ ಮತ್ತು ‘ಹರಕೆರೆಯ ಹರಕೆ’ ಕವಿತೆಗಳನ್ನು ಓದಿದರೆ, ಕುವೆಂಪು ಸಂಕಲ್ಪಸಿದ್ಧಿಯ ಬಗ್ಗೆ ಅಚ್ಚರಿಯಾಗುತ್ತದೆ.
ಬದುಕು ಹಳೆಯ ಪೊರೆಯನ್ನು ಕಳಚಿ ಹೊಸ ಪೊರೆಯ ಹೊಸಬದುಕಿಗೆ ಹೋಗಬೇಕಾದದ್ದು ಸ್ವಾಭಾವಿಕವೇ ಎಂಬ ಮಾತು, ತಾರುಣ್ಯೋದಯದ ಹೊಸ್ತಿಲಲ್ಲಿರುವ ಮಕ್ಕಳ -ಹೆಣ್ಣಾಗಲಿ, ಗಂಡಾಗಲಿ- ವಿಷಯದಲ್ಲಿ ಪ್ರತಿಯೊಬ್ಬ ತಂದೆ-ತಾಯಿ ಕೂಡಾ ಅರಿತುಕೊಳ್ಳಬೇಕಾದುದ್ದಾಗಿದೆ.
ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ, ’ದಶಾನನ ಸ್ವಪ್ನಸಿದ್ಧಿ’ ಮತ್ತು ’ದೈತ್ಯನೇರ್ದನ್ ಚೈತ್ಯಮಂಚಮಂ’ ಸಂಚಿಕೆಗಳನ್ನೋದಿ ಭಾವಾವೇಶಕ್ಕೊಳಗಾದ ವಿಚಾರವನ್ನು ಮಗನ ಪತ್ರದಿಂದ ಅರಿತಿದ್ದ ತಂದೆ, ’ಅವೇಶಗೊಳ್ಳುವ ಬದಲು ಅದರ ಪೂರ್ಣತೆಯಿಂದ ಪೂರ್ಣದೃಷ್ಟಿಯನ್ನು ಪಡೆಯುವುದು ಉತ್ತಮ’ ಎಂದು ಹೇಳುತ್ತಾರೆ. ಜೊತೆಗೆ ’ನಿನ್ನ ಲೌಕಿಕವಾದ ಓದಿಗೂ ಆಚರಣೆಗೂ ಅಡ್ಡಿಯಾಗದಂತೆ ವರ್ತಿಸುವುದು ಉತ್ತಮ’ ಎಂದು ಎಚ್ಚರಿಸಿಯೂ ಎಚ್ಚರಿಸುತ್ತಾರೆ. (ಕುವೆಂಪು ಮತ್ತು ತೇಜಸ್ವಿಯವರಿಗಿದ್ದ ಪೂರ್ಣಪ್ರಜ್ಞೆ ಮತ್ತು ಪೂರ್ಣದೃಷ್ಟಿ ಕುರಿತಂತೆ, ತೇಜಸ್ವಿಯನ್ನು ಹುಡುಕುತ್ತಾ..... ಕೃತಿಯಲ್ಲಿರುವ ಲೇಖನವನ್ನು ಗಮನಿಸಬಹುದು.)
ಪತ್ರದ ಮುಂದಿನ ಭಾಗ ಅತ್ಯಂತ ಮಹತ್ವವಾದುದು. ಮಗನ ಮುಂದೆ ಸದ್ಯಕ್ಕಿರುವ ಸವಾಲು ಪರೀಕ್ಷೆ. ಅದನ್ನು ಯಶಸ್ವಿಯಾಗಿ ಮುಗಿಸುವ ಅವಶ್ಯಕತೆ ಇದ್ದೇ ಇದೆ. ಆ ಕ್ಷಣಕ್ಕೆ ಅದೇ ಮಹತ್ವದ್ದು ಕೂಡಾ. ಅದನ್ನು ಮಗನಿಗೆ ಮನಗಾಣಿಸುವ, ಈ ಹಿಂದೆಯೂ ಮಗನಿಗೆ ಹೇಳಿದ್ದ ‘ಎಂತಹ ಮಹೋನ್ನತ ಪ್ರತಿಭೆಯಾದರೂ, ಲೋಕದಲ್ಲಿ ಅದು ಪ್ರಕಟನಗೊಳ್ಳುವಾಗ, ಲೌಕಿಕವಾದ ಸಂಪ್ರದಾಯದ ಅಥವಾ ನಿಯಮನಿಷ್ಠೆಗಳ ಚೌಕಟ್ಟಿನಲ್ಲಿಯೆ ವಿಕಾಸಗೊಳ್ಳಬೇಕಾದುದು ಅನಿವಾರ್ಯ.’ ಎಂಬ ಮಾತುಗಳು ಮಹತ್ವವಾದವುಗಳು. ಇದು ಪ್ರತಿಯೊಬ್ಬ ಚಿಂತಕ, ಬುದ್ಧಿಜೀವಿ, ಕ್ರಾಂತಿಕಾರಿ ಇತ್ಯಾದಿಯವರಿಗೆ ಅನ್ವಯಿಸುವಂತದ್ದು.
ಅಂದಿನ ವಿದ್ಯಾಭ್ಯಾಸ ಕ್ರಮ, ಅದರ ಬೋಧನಾ ವಿಧಾನ ಹಾಗೂ ಅದರಲ್ಲಿದ್ದ ಮಿತಿಗಳು, ಇಂಗ್ಲೀಷ್ ಹೇರಿಕೆ ಇವೆಲ್ಲಾ ತೊಡಕುಗಳಿಂದ ಮಗನ ಮನಸ್ಸು ದಂಗೆಯಯೇಳುತ್ತಿದ್ದೆ ಎಂಬುದನ್ನು ತಂದೆ ಗಮನಿಸಿದ್ದಾರೆ. ಅದರ ಶಮನಕ್ಕಾಗಿ ‘ಹಳೆಯ ದೋಣಿ ತೂತಾದರೂ ಹೊಸದೋಣಿ ಬರುವತನಕ ಅದನ್ನೆ ಹೇಗಾದರೂ ಆಶ್ರಯಿಸಬೇಕು. ಇಲ್ಲದಿದ್ದರೆ ಹೊಳೆಯಪಾಲು.’ ಎಂದು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಎಚ್ಚರಿಕೆಯೂ ಹೌದು. ’ನಾನೂ ನಿನ್ನ ಹಾಗೆಯೇ ಎಂದು ತಾವು ಸೈನ್ಸ್ ತೆಗೆದುಕೊಂಡು ಪರೀಕ್ಷಾ ದೃಷ್ಟಿಯಿಂದ ಎಷ್ಟು ಬೇಕೋ ಅಷ್ಟನ್ನು ಓದಿ ಪಾಸು ಮಾಡಿದ್ದೆ’ ಎಂಬ ವಿಚಾರವನ್ನು ಹೇಳಿ, ಇಂತಹ ಸಮಸ್ಯೆ ಸರ್ವರದ್ದು ಹಾಗೂ ಸರ್ವಕಾಲದ್ದು ಎಂದು ಮನಗಾಣಿಸುತ್ತಾರೆ. ಸದ್ಯಕ್ಕೆ ಮುಂದಿರುವ ಪರೀಕ್ಷೆ ಮುಗಿದರೆ ಬೇರೆಯದಕ್ಕೆ ಬೇಕಾದಷ್ಟು ಸಮಯ ನಂತರ ಇದ್ದೇ ಇದೆ ಎಂದು ನೆನಪಿಸುತ್ತಾರೆ.
‘ಅಂತೂ ನಿನ್ನಲ್ಲಿ ನಡೆಯುತ್ತಿರುವ ವ್ಯಾಪಾರ ನಿನ್ನ ವಯಸ್ಸಿಗೆ ಸಹಜವಾದದ್ದೆ. ಆದರೆ ಆ ದಾರಿಯಲ್ಲಿ ಮುಂದೆ ನಡೆದವರ ಹಿತವಚನದಂತೆ ಸ್ವಲ್ಪ ಕಾಲ ನಡೆಯುವುದು ಶ್ರೇಯಸ್ಕರ.’ ಈ ಮಾತು, ಕುವೆಂಪು ಅವರ, ‘ಕವಿನಿರ್ಮಿತಿ ನಿಯತಿಕೃತ ನಿಯಮರಾಹಿತ್ಯ’ ಎಂಬ ದೃಷ್ಟಿಕೋನ ಕೇವಲ ಅವರ ಸಾಹಿತ್ಯಸೃಷ್ಟಿಗೆ ಸಂಬಂಧಿಸಿದ್ದಲ್ಲ; ಬದುಕಿಗೂ ಸಂಬಂಧಿಸಿದ್ದು ಎಂಬುದನ್ನು ಮನಗಾಣಿಸುತ್ತದೆ.
ಕೊನೆಯಲ್ಲಿ, ಗುರುದೇವನಲ್ಲಿ ಮತ್ತು ಜಗನ್ಮಾತೆಯಲ್ಲಿ ನಿನ್ನ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳುತ್ತಾ, ‘ದೃಢ ಮನಸ್ಸಿನಿಂದ ಮುನ್ನಡೆಯಬೇಕಾದ್ದು ನಿನ್ನ ಪವಿತ್ರ ಕರ್ತವ್ಯ’ ಎನ್ನುವ ಮೂಲಕ ಮಗನಿಗೆ ಆತನ ಜವಾಬ್ದಾರಿಯನ್ನು ಮನಗಾಣಿಸುತ್ತಾರೆ. ಮಕ್ಕಳ ಅಭಿವೃದ್ಧಿಯೇ ತಂದೆ ತಾಯಿಯರ ಅಂತಿಮ ಕನಸು ಎಂಬುದನ್ನು ಮನಗಾಣಿಸುತ್ತಾರೆ. ತಂದೆ ತಾಯಿಯರ ಪ್ರಯತ್ನ ಎಷ್ಟೇ ಇದ್ದರೂ, ಸ್ವಪ್ರಯತ್ನವೂ ಮುಖ್ಯ ಎಂಬುದನ್ನು ಮಗನ ಮನಸ್ಸಿಗೆ ಮುಟ್ಟಿಸುತ್ತಾರೆ. ‘ನನಗೆ ಗುರುದೇವನು ದಯಪಾಲಿಸಿರುವ ಎಲ್ಲ ಸಾಹಿತ್ಯಕ ಆಧ್ಯಾತ್ಮಿಕ ಮತ್ತು ಲೌಕಿಕ ಸಂಪತ್ತೆಲ್ಲ ನಿನಗೆ ಮೀಸಲು, ನೀನು ಅದಕ್ಕೆ ಹೃದಯ ತೆರೆದು ಕೈಚಾಚಿದರೆ!’ ಈ ಮಾತುಗಳ ಸಂಸ್ಕಾರ ಮತ್ತು ಸ್ವಪ್ರಯತ್ನಗಳು ಒಬ್ಬ ಮನುಷ್ಯನನ್ನು ಔನ್ನತ್ತಕ್ಕೇರಿಸಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿವೆ. ಇದಕ್ಕೆ ಪೂರಕವಾಗಿ ಹದಿನೆಂಟು ವರ್ಷಗಳ ಹಿಂದೆಯೇ ಬರೆದ ’ತನುಜಾತ್ಮನಹುದಾತ್ಮಜಾತನುಂ’ ಕವಿತೆಯ ಸಾಲುಗಳನ್ನು ಗಮನಿಸಿದರೆ, ಕುವೆಂಪು ಅವರ ದರ್ಶನದೃಷ್ಟಿ ಅಚ್ಚರಿಗೆ ಕಾರಣವಾಗದಿರದು.
ಕವಿಯ ಬೃಹದಾಲೋಚನಾ ಸಾರಂ,
ಕವಿಕಲ್ಪನೆಯ ಮಹಾ ಭೂಮ ಭಾವಂಗಳುಂ,
ಕವಿ ಶರೀರದ ನಾಳದಲಿ ಹರಿವ ನೆತ್ತರೊಳ್
ತೇಲುತಿಹ ಸಹ್ಯಾದ್ರಿ ಪರ್ವತಾರಣ್ಯಮುಂ,
ಕವಿ ಸವಿದ ಸೂರ್ಯ ಚಂದ್ರೋದಯಸ್ತಾದಿಗಳ
ಜಾಜ್ವಲ್ಯ ಸೌಂದರ್‍ಯಮುಂ, ಜೀವ ದೇವರಂ
ಹುಟ್ಟು ಸಾವಂ ಸೃಷ್ಟಿಯುದ್ದೇಶಮಿತ್ಯಾದಿ
ಸಕಲಮಂ ಧ್ಯಾನಿಸಿ ಮಥಿಸಿ ಮುಟ್ಟಿಯನುಭವಿಸಿ
ಕಟ್ಟಿದ ಋಷಿಯ ’ದರ್ಶನ’ದ ರಸ ಮಹತ್ವಮುಂ,
ಪೃಥಿವಿ ಸಾಗರ ಗಗನಗಳನಪ್ಪಿ ಕವಿ ಪೀರ್ದ
ನೀಲ ಶ್ಯಾಮಲ ಭೀಮ ಮಹಿಮೆಯುಂ, ತತ್ತ್ವದಿಂ
ಕಾವ್ಯದಿಂ ವಿಜ್ಞಾನದಿಂದಂತೆ ಋಷಿಗಳಿಂ
ಕವಿಗಳಿಂದಾಚಾರ್ಯವರ್ಯರಿಂ ಪಡೆದಖಿಲ
ಸುಜ್ಞಾನ ಕೃಪೆಯುಂ ನೆರಪಿ ಪಡೆದಿಹವು ನಿನ್ನ
ವ್ಯಕ್ತಿತ್ವಮಂ.
ಇಡೀ ಪತ್ರದಲ್ಲಿ ಅಡಿಗೆರೆ ಎಳೆದಿರುವ ಒಂದೇ ವಿಚಾರವೆಂದರೆ, ’ನಿನ್ನ ಉಪಾಧ್ಯಾಯರುಗಳೊಡನೆ ತಾಳ್ಮೆಯಿಂದ ವರ್ತಿಸು. ಅವರ ಆಲೋಚನೆಗಳು ನಿನಗೆ ಹಿಡಿಸದಿದ್ದರೂ ಅಸಭ್ಯವಾಗಿ ವಾದಿಸುವ ಗೋಜಿಗೆ ಹೋಗದಿರು.’ ಎಂಬುದು. ತೇಜಸ್ವಿಯವರ ಹಿಂದಿನ ಪತ್ರದಲ್ಲಿ, ಲಾಜಿಕ್ ವಿಷಯವಾಗಿ ಕೇಳಿದ ಪ್ರಶ್ನೆಗೆ ಉಪನ್ಯಾಸಕರು ನೀಡಿದ ಅಸಂಬದ್ಧ ಉತ್ತರದಿಂದ ಕುಪಿತರಾಗುವ ವಿಚಾರವನ್ನು ಓದಿರುತ್ತಾರೆ. ಅದಕ್ಕೆ ಈ ಬುದ್ಧಿವಾದ ಮತ್ತು ಅಡಿಗೆರೆ!
ಪತ್ರವನ್ನು ಮುಗಿಸುವ ಮುನ್ನ, ತಾಯಿ, ತಮ್ಮ, ಮತ್ತು ತಂಗಿಯರ ವಿಚಾರವನ್ನು ಹೇಳಿ, ನಾವೆಲ್ಲರೂ ನಿನ್ನ ಜೊತೆಯಿದ್ದೇವೆ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಾರೆ. ತಾರುಣ್ಯೋದಯಲ್ಲಿ ಪ್ರಕ್ಷುಬ್ಧಗೊಂಡ ಮನಸ್ಸಿಗೆ ಕೌಟಂಬಿಕ ಸಾಂತ್ವನ ಅತ್ಯಂತ ಮುಖ್ಯವಾದುದು. ಆ ಕ್ಷಣದಲ್ಲಿ ಕುಟುಂಬದ ನೆನಪು ಮಹತ್ತರವಾದುದನ್ನು ಸಾಧಿಸಬಲ್ಲುದು.
ಒಟ್ಟಾರೆಯಾಗಿ, ಈ ಪತ್ರ ಪ್ರತಿಯೊಬ್ಬ ತಂದೆ ಮಗನೂ/ಮಗಳು ಓದಬೇಕಾದ ಅಮೂಲ್ಯ ದಾಖಲೆಯಾಗಿದೆ. ಇದನ್ನು ಅತ್ಯಂತ ಸುರಕ್ಷಿತವಾಗಿ ಕಾಯ್ದಿಟ್ಟು ಪ್ರಕಟಿಸಿರುವ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರಿಗೆ ಧನವ್ಯಾದಗಳು.

3 comments:

Badarinath Palavalli said...

ಕುವೆಂಪು ಅವರು ಬರೆದ:
'ಕವನಗಳು ಹಸುಳೆಯ ಮೊದಲ ತೊದಲಂತೆ ಮನೋಹರವಾಗಿವೆ. ಆ ತೊದಲು ಕ್ರಮೇಣ ವಿಕಾಸವಾಗಿ ಉತ್ತಮ ಫಲ ಬಿಡಲಿ ಎಂದು ಹಾರೈಸುತ್ತೇನೆ' ಎಂಬುದು ಪೂಚತೇ ಅವರ ಮುಂದುನ ಬಹು ಪ್ರಕಾರದ ಸಾಹಿತ್ಯ ಕೃಷಿಯ ಮುನ್ಸೂಚನೆಯಂತಿದೆ.

Unknown said...

ಕೋಕಿಲೋದಯ ಚೈತ್ರ ಎಂಬ ಇನ್ನೊಬ್ಬ ಮಗ ಕುವೆಂಪು ಅವರಿಗೆ ಇದ್ದಾರಲ್ಲವೆ ಅವರ ಬಗ್ಗೆ ಅಪ್ಪನೊಡನೆ ಅವರ ಒಡನಾಟ ತಿಳಿದುಕೊಳ್ಳುವ ಬಗ್ಗೆ ನನಗೆ ಆಸೆ. ಆ ಬಗ್ಗೆ ನಿಂದೊಂದ್ಮಾತು ಬರಲಿ.

Unknown said...

ಶ್ರೀ ಸಾಪೇಕ್ಷ ಅವರೆ, ಚೈತ್ರನ ಜನ್ಮ ಸಂದರ್ಭದ ಲೇಖನ http://nandondmatu.blogspot.in/2012/08/blog-post.html ಈ ಕೊಂಡಿಯಲ್ಲಿದೆ. ಅವರ ಬಾಲ್ಯದ ಬಗ್ಗೆ ಬೇಕಾದರೆ, ತೇಜಸ್ವಿಯವರ ಅಣ್ಣನ ನೆನಪು,ತಾರಿಣಿಯವರ ಮಗಳು ಕಂಡ ಕುವೆಂಪು ಕೃತಿಗಳನ್ನು (ನೀವೀಗಾಗಲೆ ನೋಡಿರದಿದ್ದರೆ) ನೋಡಬಹುದು. ಇನ್ನೂ ಹೆಚ್ಚಿನ ವಿವರಗಳು ರಾಜೇಶ್ವರಿಯವರ ನನ್ನ ತೇಜಸ್ವಿ ಪುಸ್ತಕದಲ್ಲಿವೆ.