Monday, May 18, 2015

ಪೆಜತ್ತಾಯರ ಒಂದು ಅಪ್ರಕಟಿತ ಬರಹ - ಬನ್ನಿ! ಕನ್ನಡದ ಅಭಿಮನ್ಯುವನ್ನು ಹರಸಿ!

(ಬೆಂಗಳೂರಿನ ಕನ್ನಡಿಗರೇ! ತಾವು ಈ ಕೆಲಸವನ್ನು ತಾವು ಇದ್ದಲ್ಲಿಂದಲೇ ಮಾಡಬಹುದು!)
"ಬೆಂಗಳೂರು" ಇಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಗರ. ಇಲ್ಲಿ ಹಲವಾರು ಭಾಷೆಗಳನ್ನು ಆಡುವ ಜನರು ನೆಲೆಸಿದ್ದಾರೆ. ಇತರೇ ದೊಡ್ಡ ನಗರಗಳಿಗೆ ಹೋಲಿಸಿದರೆ ಇಲ್ಲಿ ಸದಾ ಶಾಂತ ಪರಿಸ್ಥಿತಿ ನೆಲೆಸಿದೆ. ಇಲ್ಲಿನ ಉತ್ತಮ ಹವಾಮಾನ ನೆಲಸಿಗರನ್ನು ಆಕರ್ಷಿಸಿದೆ.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ನೆಲೆಸಲು ಪ್ರತೀ ದಿನ ಐವತ್ತಕ್ಕಿಂತಲೂ ಹೆಚ್ಚು ಇತರ ಭಾಷೆಗಳನ್ನು ಆಡುವ ಸಂಸಾರಗಳು ಬಂದು ನೆಲೆಸುತ್ತಾ ಇವೆ.
ಬೆಂಗಳೂರಿನ "ಸ್ಥಳೀಯ ಭಾಷೆ" ಕನ್ನಡವಾದರೂ, ಇಂಗ್ಲಿಷ್, ಹಿಂದಿ ಅಥವಾ ತಮಿಳು ಭಾಷೆ ತಿಳಿದಿದ್ದರೆ, ಇಲ್ಲಿನ ಸ್ಥಳೀಯ ಜನರೊಡನೆ ಮತ್ತು ಇಲ್ಲಿ ನೆಲಸಿರುವ ಇತರ ಭಾಷೆಗಳನ್ನಾಡುವ ಜನರೊಡನೆ "ಕನ್ನಡ ಭಾಷೆಗೊತ್ತಿಲ್ಲದೇ ಇದ್ದರೂ ವ್ಯವಹರಿಸಲು ಸಾಧ್ಯ!" ಎಂದು ಅಂತರ ರಾಷ್ಟ್ರೀಯ ಟೂರಿಸ್ಟ್ ಗೈಡ್ ಪುಸ್ತಕಗಳು ಸಾರಿ ಹೇಳುತ್ತಾ ಇವೆ.
ಕಳೆದ ಕೆಲವು ಶತಮಾನಗಳಿಂದಲೇ ಹೊರಗಿನಿಂದ ಬಂದ ಜನರು ಇಲ್ಲಿನ ಪ್ರಶಾಂತ ವಾತಾವರಣ ಮತ್ತು ಸುಖಮಯ ಜೀವನದ ಅವಕಾಶಗಳಿಂದ ಆಕರ್ಷಿತರಾಗಿ, ನಮ್ಮ ಬೆಂಗಳೂರಿನ ಶಹರದಲ್ಲಿ ಮತ್ತು ಶಹರದ ಹೊರವಲಯಗಳಲ್ಲಿ ಆಸ್ತಿಪಾಸ್ತಿ ಹಾಗೂ ಜಮೀನುಗಳನ್ನು ಕೊಂಡು ನೆಲೆಸ ತೊಡಗಿದರು.
ಕಳೆದ ಎರಡು ದಶಕಗಳಲ್ಲಿ ಬೆಂಗಳೂರು ಶಹರ ಭಾರತದ "ಇನ್ಫರ್ಮೇಷನ್ ಟೆಕ್ನಾಲಜಿಯ ರಾಜಧಾನಿ" ಅನ್ನಿಸಿಕೊಂಡಿತು.
ಇಲ್ಲಿ ದೊರೆಯುವ ಅಗ್ಗದ ವಿದ್ಯುತ್, ಬೇಕಾದಷ್ಟು ನೀರು, ಅಗ್ಗದ ಜಮೀನು, ಅಗ್ಗದ ಕೂಲಿ ಕೆಲಸಗಾರರು, ವೈಪರೀತ್ಯಗಳಿಲ್ಲದ ಹವಾಮಾನ ಮತ್ತು ಸದಾ ಪರಕೀಯರನ್ನು ವಿಶ್ವಾಸದಿಂದ ಸ್ವಾಗತಿಸುವ ಶಾಂತ ಸ್ವಭಾವದ ಜನತೆ, ನಮ್ಮಲ್ಲಿಗೆ ಕಾಲಿಟ್ಟ ಎಲ್ಲಾ ಹೊಸಾ ನೆಲಸಿಗರನ್ನು ಸ್ವಾಗತಿಸಿದುವು.
ಮೇಲ್ಕಾಣಿಸಿದ ಅಪರೂಪದ ಅನುಕೂಲತೆಗಳು ಬೆಂಗಳೂರಿನಲ್ಲಿ ನೆಲೆಸಲು ಬಂದ "ಐ. ಟಿ." ಮತ್ತು "ಬಿ. ಟಿ." ದೊರೆಗಳಿಗೆ ಬಹು ಅನುಕೂಲವಾದ ವಾತಾವರಣವನ್ನೇ ಕಲ್ಪಿಸಿದುವು.
ನಾವು ನೋಡುತ್ತಿದ್ದಂತೆಯೇ ಈ ದೊಡ್ಡ ದೊಡ್ಡ ಸಂಸ್ಥೆಗಳು ಯಾವ ಸಮಸ್ಯೆಯೂ ಇಲ್ಲದೇ ಬೆಳೆದು ನಿಂತುವು.
ಬೆಂಗಳೂರಿನ ಮೂಲ ರೂಪವೇ ಈ ಸಂಸ್ಥೆಗಳ ಅಸ್ತಿತ್ವದಿಂದ ಬದಲಾಯಿತು. ವಾಹನ ಸಂದಣಿ ಮತ್ತು ಜನಸಂದಣಿ ಹೆಚ್ಚಿ ಇಲ್ಲಿ ವಾಸಿಸುವ ಜನರ ಜೀವನ ರೀತಿಯೇ ಬದಲಾಯಿತು. ಮನೆಗಳ ಮತ್ತು ಸೈಟುಗಳ ಬೆಲೆ ಗಗನಕ್ಕೆ ಏರಿದುವು.
ಅತ್ಯಾಧುನಿಕವಾದ ಅಂತರ ರಾಷ್ಟ್ರೀಯ ಮಟ್ಟದ ಎಲ್ಲಾ ಸೌಲಭ್ಯಗಳು ಇಲ್ಲಿ ಈಗ ದೊರಕುತ್ತಾ ಇರುವುದರಿಂದ "ಜಾಗತಿಕ ಮಟ್ಟದ ನವ ಸಂಸ್ಕೃತಿ ಹಾಗೂ ನಡವಳಿಕೆಗಳು" ಇಂದಿನ ಆಧುನಿಕ ಬೆಂಗಳೂರಿನಲ್ಲಿ ಎದ್ದು ಕಾಣುತ್ತಾ ಇವೆ.
ಇದು ನಮಗೆ ಸಂತೋಷದ ವಿಚಾರವೇ!
ಈ ಬೆಳವಣಿಗೆಯ ಭರಾಟೆಯಲ್ಲಿ ಬೆಂಗಳೂರಿನ ಕನ್ನಡ ಆಡುವ ಜನರ ಪರಿಸ್ಥಿತಿಯು ಮಾತ್ರ ಈ ಅಭಿವೃದ್ಧಿಗಳಿಗೆ ಹೊಂದಿಕೊಂಡಂತೆ ಬೆಳೆಯಲೇ ಇಲ್ಲ!
ಸ್ಥಳೀಯರಾದ ಕನ್ನಡ ಮಾತನಾಡುವ ಜನರಲ್ಲಿ ಅಲ್ಲೋ ಇಲ್ಲೋ ಒಬ್ಬಿಬ್ಬರು ಮಾತ್ರ "ಐ.ಟಿ. ಅಥವಾ ಬಿ. ಟಿ." ಕೆಲಸಗಳನ್ನು ಮಾಡುತ್ತಾ ಇರುವುದನ್ನು ನಾವು ಇಂದು ಕಾಣಬಹುದು ಅಷ್ಟೇ!
ಕನ್ನಡಿಗರನ್ನು ನಿರುದ್ಯೋಗದ ಭೂತ ಇನ್ನೂ ಬಹು ಜೋರಾಗಿ ಕಾಡುತ್ತಾ ಇದೆ.
ನಮ್ಮ ಕರ್ನಾಟಕದ ಸರಕಾರ ಇದುವರೆಗೆ ಇಲ್ಲಿ ನೆಲಸಲು ಬಂದ ಉದ್ಯಮಿಗಳಿಗೆ ಕೆಂಪು ರತ್ನ ಕಂಬಳಿಯ ಸ್ವಾಗತವನ್ನು ನೀಡಿ, ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿತು.
ಆದರೆ, ಇದುವರೆಗೆ ಕರ್ನಾಟಕವನ್ನು ಆಳುತ್ತಾ ಇದ್ದ ನಮ್ಮ ಪರೋಪಕಾರೀ ಸರಕಾರಗಳು, "ಕನ್ನಡಿಗರಿಗೆ ಕಡ್ಡಾಯವಾಗಿ ಒಂದು ಪರಸ್ಪರ ಅನುಕೂಲವಾದ ದಾಮಾಶಯದ ಪ್ರಕಾರ, ನೌಕರಿ ಕೊಡಿರಿ! " ಎಂಬ ಶರತ್ತನ್ನು ಇದುವರೆಗೆ ಹಾಕಲೇ ಇಲ್ಲ.
ಅದಕ್ಕೆ ಸರಿಯಾಗಿ, ಈ "ಐ. ಟಿ. ಮತ್ತು ಬಿ. ಟಿ." ದೊರೆಗಳು, ಹೊರಗಿನಿಂದ ಬಂದವರಿಗೆ ದೊಡ್ಡ ಕೆಲಸಗಳನ್ನು ನೀಡಿ, ಸ್ಥಳೀಯರನ್ನು ಕಡೆಗಣಿಸಿದರು.
ಹೆಚ್ಚಾಗಿ ಸ್ಥಳೀಯರಿಗೆ ತಾತ್ಕಾಲಿಕ ಕೂಲಿ ಅಥವಾ ಕಟ್ಟಡಗಳ ನಿರ್ಮಾಣ ಕೆಲಸಗಳಂತಹಾ ದೇಹ ಶ್ರಮದ ಹಂಗಾಮಿ "ಕೂಲಿ" ಕೆಲಸಗಳನ್ನು ಮಾತ್ರ ನೀಡುವ ಧೋರಣೆಯನ್ನು ರೂಢಿಸಿಕೊಂಡು ಬಿಟ್ಟರು.
ಇದು ನಮ್ಮ ಬೆಂಗಳೂರಿನಲ್ಲಿ ನಡೆದ ಬಹು ದೊಡ್ಡ ವಿಪರ್ಯಾಸ.
ಇದಷ್ಟೇ ಅಲ್ಲದೆ, ನಮ್ಮ ಕೇಂದ್ರ ಸರಕಾರವು ಕೂಡಾ ಧಾರಾಳವಾಗಿ ಜಾಗತಿಕ "ಐ. ಟಿ. ಮತ್ತು ಬಿ. ಟಿ" ಒಪ್ಪಂದಗಳಿಗೆ ಸಹಿ ಹಾಕಿತು ಮತ್ತು "ಈ ಜಾಗತೀಕರಣ ಒಪ್ಪಂದಗಳೇ ಇನ್ನು ಮುಂದಕ್ಕೆ ನಮ್ಮ ಪ್ರಗತಿಯ ಬೆನ್ನೆಲುಬು ಆಗಲಿವೆ!" ಎಂಬ ಹೇಳಿಕೆಗಳನ್ನು ನೀಡಿ ನಮ್ಮ ಜನರನ್ನು ಸಂತೋಷ ಪಡಿಸಲು ಪ್ರಯತ್ನಿಸಿತು.
ಬಹುರಾಷ್ಟ್ರೀಯ ದೈತ್ಯ ಸಂಸ್ಥೆಗಳು ನಮ್ಮ ನಾಡಿಗೆ ಬಂದು ಬಹು ಚೆನ್ನಾಗಿಯೇ ನೆಲೆಯೂರಿ ನಿಂತುವು.
ಭಾರತದ ನೆಲದಲ್ಲಿ ಭದ್ರವಾಗಿ ಬೀಡು ಬಿಟ್ಟ ಹಲವು "ಬಿ.ಟಿ." ಸಂಸ್ಥೆಗಳು, ಇಂದು ನಮ್ಮಲ್ಲಿ ಬೆಳೆಯುವ ಹಲವಾರು ಸಸ್ಯ ತಳಿಗಳು, ವೈದ್ಯಕೀಯ ಗಿಡ ಮೂಲಿಕೆಗಳು, ಹೆಚ್ಚೇಕೆ? ನಮ್ಮಲ್ಲಿ ನಾವು ತಲತಲಾಂತರವಾಗಿ ಬೆಳೆಯುತ್ತಾ ಬಂದಿರುವ ವಿಶಿಷ್ಟ ತರಹೆಯ ಅಕ್ಕಿ, ಬೇಳೆ, ಅರಸಿನ. ಕಹಿ ಬೇವು, ತುಳಸಿ ಮುಂತಾದ ಹಲವಾರು ಕೃಷಿ ಉತ್ಪನ್ನಗಳ ಮೇಲೆ ಇಂದು ತಮ್ಮ ಜಾಗತಿಕ ಪೇಟೆಂಟ್ ಹಕ್ಕುಗಳನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಾ ಇವೆ.
"ಬಿ. ಟಿ." ಕ್ಷೇತ್ರದಲ್ಲಿನ "ಭಾರತೀಯತೆಯೇ" ಮಾಯವಾಗುವ ಕಾಲ ಇದೀಗ ಸನ್ನಿಹಿತ ಆಗುತ್ತಾ ಇದೆ.
ಇಂದು ನಾವು "ನಮ್ಮನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತೇವೆ ಎಂದು ಹೇಳುತ್ತಾ ನಮ್ಮಲ್ಲಿಗೆ ಬಂದು ನೆಲೆನಿಂತ ಬಹು ರಾಷ್ಟ್ರೀಯ ಸ್ವಾಮ್ಯದ ಸಂಸ್ಥೆಗಳನ್ನು ನಂಬಿ ಕೆಟ್ಟೆವೇ?" ಎಂಬ ಪ್ರಶ್ನೆ ಕನ್ನಡಿಗರನ್ನು ಇಂದು ಕಾಡುತ್ತಾ ಇದೆ.
ಈ ಮಧ್ಯೆ "ಐ. ಟಿ. ಮತ್ತು ಬಿ. ಟಿ." ಸಂಸ್ಥೆಗಳವರು ಪ್ರತೀವರ್ಷ "ಶತ ಕೋಟಿ ಕಟ್ಟಲೆ ಲಾಭ ತಂದು, ನಾವು ನಿಮ್ಮ ಕರ್ನಾಟಕವನ್ನು ಉದ್ಧರಿಸುತ್ತಾ ಇದ್ದೇವೆ!" ಎಂಬ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ.
ಎಲ್ಲಾ ಸರಿ! ಅವರುಗಳು ಇತ್ತೀಚೆಗೆ ಹೊಂದಿರುವ "ಸ್ವಂತ ಅಭಿವೃದ್ಧಿಗಳಿಂದ" ನಮ್ಮ ಬಡ ಕನ್ನಡಿಗರಿಗೆ ಎಷ್ಟು ಬಾಭ ಸಿಕ್ಕಿದೆ? - ಎಂಬುವುದೇ ಇಂದು ನಮ್ಮ ಇದುರಿಗೆ ಇರುವ ಯಕ್ಷ ಪ್ರಶ್ನೆ.
ಇಂದು "ಬೆಂಗಳೂರು" ಎಂಬ ಶಬ್ದವು ಒಂದು "ಜಾಗತಿಕ ಭಾಷಾ ಪದವೇ ಆಗಿಬಿಟ್ಟಿದೆ". ಇತ್ತೀಚೆಗೆ ಪ್ರಕಟ ಆಗುತ್ತಾ ಇರುವ ಭಾಷಾ ನಿಘಂಟುಗಳು "ಬೆಂಗಳೂರು" ಎಂಬ ಪದಕ್ಕೆ ಹೊಸ ಅರ್ಥ ನೀಡುತ್ತಾ ಇವೆ.
"ಐ. ಟಿ." ಕ್ಷೇತ್ರದಲ್ಲಿ ಈ "ಬೆಂಗಳೂರು" ಎಂಬ ಪದ ೯/೧೧ ನಂತರ ಸೇರಿದ "ಜಾಗತಿಕ ಪದ" ಆಗಿರುತ್ತದೆ.
ಇಂದು ಅಮೆರಿಕಾದ ಸಂಯುಕ್ತ ಸಂಸ್ಥಾನಗಳ "ಐ. ಟಿ." ಕ್ಷೇತ್ರದಲ್ಲಿ ಯಾರಾದರೂ ತಮ್ಮ ಕೆಲಸ ಕಳೆದುಕೊಂಡರೆ " ಆತನ ಕೆಲಸ ಬೆಂಗಳೂರಿಗೆ ಹೋಯಿತು! "His job is Bangalored!"ಎನ್ನುತ್ತಾರೆ.
ಹೌದು! ಅಮೆರಿಕದಲ್ಲಿ ಕಳೆದುಕೊಂಡ ಆ ಕೆಲಸಗಳು ಬೆಂಗಳೂರಿಗೆ ಖಂಡಿತವಾಗಿ ಬಂದಿರಲೂ ಬಹುದು!
ಆದರೆ, "ಅವು ಇಂದು ಬೆಂಗಳೂರಿನ ಎಷ್ಟು ಕನ್ನಡಿಗರಿಗೆ ಅಥವಾ ಕನ್ನಡದ ಕಲಿತ ಜನರಿಗೆ ದಕ್ಕಿವೆ..??" ಎಂಬುದೇ ಇಂದಿನ "ಮುಖ್ಯ ಪ್ರಶ್ನೆ".
ಇಂದಿನ ಭಾರತದಲ್ಲಿ ನಮ್ಮ ಬೃಹತ್ ಬೆಂಗಳೂರು "ಐ. ಟಿ. ಮತ್ತು ಬಿ. ಟಿ." ಕ್ಶೇತ್ರಗಳ ಕೇಂದ್ರ ಬಿಂದು.
ಬೆಂಗಳೂರು ಅಗಾಧವಾಗಿ ಬೆಳೆಯುತ್ತಾ, ಭಾರತದ ಎಲ್ಲಾ ಭಾಗಗಳಿಂದಲೂ ವಲಸಿಗರನ್ನು ಆಕರ್ಷಿಸುತ್ತಾ ಇದೆ.
ಬೆಂಗಳೂರು ಇಂದು ಉತ್ತರ ಭಾರತೀಯರು ಇಷ್ಟ ಪಟ್ಟು ನೆಲಸಲು ಬಯಸುವ "ಸೇಫ಼್ ಪ್ಲೇಸ್".
ಬೆಂಗಳೂರು ಬಹಳ ಹಿಂದಿನ ಕಾಲದಿಂದಲೂ, ನಮ್ಮ ದಕ್ಷೀಣ ಭಾರತದ ಇತರೇ ರಾಜ್ಯಗಳ ಜನರನ್ನು ಆಕರ್ಷಿಸುತ್ತಾ ಇದೆ. ಈ ವಲಸಿಗರ ಪಾಲಿಗೆ ನಮ್ಮ ಬೆಂಗಳೂರು "ಏರ್ ಕಂಡೀಶನ್ಡ್ ಸಿಟಿ".
ಮೇಲಿನ ಹೆಗ್ಗಳಿಕೆಗಳನ್ನೆಲ್ಲಾ ನಾವು ಕೂಡಾ ಒಪ್ಪಿಕೊಳ್ಳೋಣ. ದುರದೄಷ್ಟವೆಂದರೆ, ಇಲ್ಲಿಗೆ ಬಂದ ವಲಸಿಗರು ಕನ್ನಡ ಭಾಷೆಯನ್ನು ಕಲಿಯುವ ಅಗತ್ಯವನ್ನು ಕಾಣದೇ, ತಮ್ಮ ತಮ್ಮ ಭಾಷೆಗಳ ಜತೆಗೆ ಹಿಂದಿ ಮತ್ತು ಆಂಗ್ಲ ಭಾಷೆಗಳನ್ನು ಬಳಸುತ್ತಾ ಆರಾಮವಾಗಿ ಇರುವುದನ್ನು ನಾವು ಇದುವರೆಗೆ ಕಾಣುತ್ತಾ ಇದ್ದೆವು.
ಇಂದು ನಮ್ಮ ಬೆಂಗಳೂರಿನಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸುವ ಪ್ರಯತ್ನಗಳು ನಡೆಯುತ್ತಾ ಇವೆ, ಇದು ನಮಗೆ ಬಹಳ ಹೆಮ್ಮೆಯ ಸಂಗತಿ.
ಆದರೂ, ಇಂಗ್ಲಿಷ್, ಹಿಂದಿ ಅಥವಾ ತಮಿಳು ಬಾರದ ಬಡ ಕನ್ನಡಿಗರು ಯಾವುದಾದರೂ "ಪ್ರತಿಷ್ಠಿತ" ಅಂತರ ರಾಷ್ಟ್ರೀಯ ಮಳಿಗೆಗಳಿಗೆ ಅಥವಾ ಐಷಾರಮದ ಹೋಟೆಲುಗಳಿಗೆ ಹೋದರೆ, ಅಲ್ಲಿ ಕೆಲಸ ಮಾಡುತ್ತಾ ಇರುವ ಕನ್ನಡದ ಜನರೇ. "ಕನ್ನಡ ಭಾಷೆ ಬರದವರಂತೆ ನಟಿಸಿ" ಯಾವುದೋ ಅನ್ಯ ಭಾಷೆಗಳಲ್ಲಿ ನಮ್ಮನ್ನು ಮಾತನಾಡಿಸುತ್ತಾರೆ!
ಅಚ್ಚ ಕನ್ನಡಿಗರರಾದ ನಾವು ನಮ್ಮದೇ ಆದ ಬೆಂಗಳೂರಿನಲ್ಲಿ "ನಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ವ್ಯವಹಾರ" ಮಾಡಲು, ಈ ರೀತಿಯ "ಪರಭಾಷಾ ಪ್ರೇಮಿ" ಕನ್ನಡಿಗರೇ ಒಂದು ರೀತಿಯ "ಹಿಂಜರಿಕೆಯನ್ನು" ಉಂಟು ಮಾಡುತ್ತಾ ಇದ್ದಾರೆ.
ಇದು ಅತ್ಯಂತ ವಿಷಾದದ ಸಂಗತಿ. ಅಲ್ಲವೇ?
ನಮ್ಮ ಕರ್ನಾಟಕದ ರಾಜಧಾನಿಯಲ್ಲೇ ನಮ್ಮ ಮಾತೃ ಭಾಷೆಯಾದ ಕನ್ನಡವು "ಚಲಾವಣೆ ಆಗದಿದ್ದರೆ" ನಮ್ಮ ಅಸ್ತಿತ್ವಕ್ಕೇ ಅದೊಂದು ದೊಡ್ಡ ಸವಾಲು ಅಲ್ಲವೇ?
ನಮ್ಮ ಬೆಂಗಳೂರಿನಲ್ಲಿ "ನಲ್ವತ್ತು ವರುಷಗಳಿಂದ ನೆಲಸಿರುವ ಹಲವಾರು ಅನ್ಯ ಭಾಷಾ ಮಹನೀಯರು ತಮಗೆ ಹಿಂದಿ, ಇಂಗ್ಲಿಷ್ ಮತ್ತು "ಲೋಕಲ್ ಲ್ಯಾಂಗುವೇಜ್ ಆದ ತಮಿಳು ಮಾತ್ರ ಗೊತ್ತು!" ಎಂದು ಬಹಿರಂಗವಾಗಿ ಬಹು ಹೆಮ್ಮೆಯಿಂದ ಸಾರುತ್ತಾರೆ!
ಇದು ಅವರಿಗೆ ಹೆಮ್ಮೆಯ ವಿಚಾರ ಆಗಿರಬಹುದು. ಆದರೆ, ಈ ತರಹದ ಬೂಟಾಟಿಕೆಯ ಮಾತುಗಳು ಕನ್ನಡಿಗರಾದ ನಮಗೆ ಅಪಮಾನದ ಸಂಗತಿ ಅನ್ನಿಸುತ್ತಾ ಇದೆ.
ನಾವು ಅವರು ಬಲ್ಲ ಭಾಷೆಗಳಲ್ಲಿ ಅವರೊಂದಿಗೆ ವ್ಯವಹರಿಸುವ ವ್ಯವಧಾನ ಮತ್ತು ಸೌಜನ್ಯಗಳನ್ನು ಇದುವರೆಗೆ ನಾವು ತೋರಿರುವಾಗ, ಅವರು ಕೂಡಾ ನಮ್ಮ ಭಾಷೆ ಕಲಿಯುವ ಬಗ್ಗೆ ಸ್ವಲ್ಪ ಒಲವು ತೋರಿಸಬೇಡವೆ?
ನಮ್ಮ ಸ್ನೇಹ ಮತ್ತು ಸೌಜನ್ಯಗಳನ್ನು ಅವರು ದುರುಪಯೋಗಿ ಪಡಿಸಿಕೊಳ್ಳದೇ, ಇಲ್ಲಿ ನೆಲಸಿರುವ ಇತರ ಭಾಷೆಗಳನ್ನು ಅವಲಂಬಿಸಿದ ನೆಲಸಿಗರು, ನಮ್ಮ ಮಾತೃ ಭಾಷೆಯಾದ ಕಸ್ತೂರಿ ಕನ್ನಡವನ್ನು ಕಲಿಯಲು ಒಲವು ತೋರಲೇ ಬೇಕು.
ಇತ್ತೀಚೆಗೆ, ಜಯನಗರದ ಒಂದು ಅಂಗಡಿಯಲ್ಲಿ ನಾನು ಒಂದು ಫಲಕ ನೋಡಿದೆ, ಅದರಲ್ಲಿ ಹೀಗೆ ಬರೆದಿದ್ದರು. "ತಾವು ನಮ್ಮ ಊರಿಗೆ ಬಂದು ಆರು ತಿಂಗಳು ಆಯಿತೇ? ದಯವಿಟ್ಟು ಕನ್ನಡದಲ್ಲೇ ನಮ್ಮೊಂದಿಗೆ ವ್ಯವಹರಿಸಿರಿ, ನಮ್ಮ ಸಹಾಯ ಸದಾ ನಿಮಗೆ ಇದ್ದೇ ಇದೆ. ನಿಮಗೆ ನಮ್ಮ ಸೌಹಾರ್ದ ಪೂರಕ ವಂದನೆಗಳು." ಎಂದು ಇತ್ತು.
ಆ ಫಲಕವನ್ನು ಕಂಡು ನನಗೆ ಬಹಳ ಹೆಮ್ಮೆ ಎನಿಸಿತು. ಇಂತಹಾ ಫಲಕಗಳು ನಮ್ಮ ಸೌಜನ್ಯ ಮತ್ತು ಭಾಷಾ ಪ್ರೇಮದ ದ್ಯೋತಕಗಳಲ್ಲವೆ?
ಈಗ ನಾವು ಕನ್ನಡ ಭಾಷೆ ಮಾತ್ರ ಗೊತ್ತು ಇದ್ದ ಹೆಚ್ಚಿನ ಹಿರಿಯ ಬೆಂಗಳೂರಿಗರು ಇದುವರೆಗೆ ಅನುಭವಿಸಿದ ಸಂಕಷ್ಟಗಳನ್ನು ನಾವು ಸ್ವಲ್ಪ ವಿಮರ್ಷೆ ಮಾಡಿ ನೋಡೋಣ.
ಕಳೆದ ಕೆಲವು ದಶಕಗಳಲ್ಲಿ ಕನ್ನಡ ಮಾತ್ರ ಬಲ್ಲ ಸ್ಥಳೀಯರಿಗೆ ಒಳ್ಳೆಯ ಉದ್ಯೋಗ ಮತ್ತು ವ್ಯಾಪಾರದ ಆವಕಾಶಗಳು ಕಡಿಮೆಯಾಗುತ್ತಾ ಹೋದುವು.
ಹಾಗಾಗಿ ಕನ್ನಡಿಗರು ತಮ್ಮ ಸ್ಥಿರ ಆಸ್ತಿ ಮತ್ತು ಜಮೀನುಗಳನ್ನು ಅಂದಿನ ಮಾರುಕಟ್ಟೆಯ ಬೆಲೆಗೆ ಹೊರಗಿನಿಂದ ಬಂದವರಿಗೆ ಮಾರಿ, ಆ ಹಣದಿಂದ ತಮ್ಮ ಮಕ್ಕಳಿಗೆ "ಇಂಗ್ಲಿಷ್" ವಿದ್ಯಾಭ್ಯಾಸ ಕೊಡಿಸುವ ಕಡೆಗೆ ಗಮನ ಹರಿಸಲು ಶುರುಮಾಡಿದರು.
ಆಸ್ತಿ, ಜಮೀನುಗಳನ್ನು ಮಾರಿ ಬಂದ ಆ ಅಲ್ಪ ಹಣವೂ ಖರ್ಚಾದಾಗ, ತಮ್ಮ ಆಸ್ತಿ ಕೊಂಡವರಲ್ಲೇ, ತಾವೂ ದೈಹಿಕ ಶ್ರಮದ ಕೆಲಸಗಳನ್ನು ಮಾಡಲು ತೊಡಗಿದರು.
ಹೀಗಾಗಿ, ಪರ ಭಾಷೆಯವರ ಪ್ರಾಭಲ್ಯ ನಮ್ಮ ಬೆಂಗಳೂರಿನಲ್ಲಿ ಬೆಳೆಯುತ್ತಾ ಹೋಯಿತು.
ಇಂಗ್ಲಿಷ್, ಹಿಂದಿ, ತಮಿಳು ಮತ್ತು ಉರ್ದೂ ಭಾಷೆಗಳು ನಮ್ಮಲ್ಲಿಗೆ ಬಂದು ನೆಲೆನಿಂತ ವಲಸಿಗ ಜನರೊಡನೆ ನಮ್ಮನ್ನು ಕೂಡಿಸುವ "ಸಂಪರ್ಕ ಸೇತು"ಗಳೇ ಆದವು.
ಈ ಕಾರಣಗಳಿಂದ ನಮ್ಮ ಕನ್ನಡದ ಜನರು ಬೇರೆಯವರ ಭಾಷೆಗಳನ್ನು ಕಲಿತು, ಅವರು ನೀಡಿದ ಕಾಯಕಷ್ಟದ ಕೆಲಸಗಳನ್ನು ಮಾಡುತ್ತಾ, ನಿಷ್ಠೆಯಿಂದ ಜೀವಿಸಲು ಪ್ರಯತ್ನಿಸಿದರು. ಹಾಗೆ ನೋಡಿದರೆ, ಇನ್ನೂ ನಾವು ದಿಶೆಯಲ್ಲಿ ದಿಶೆಯಲ್ಲಿ ಇನ್ನೂ ಮುಂದುವರಿಯುತ್ತಾ ಇದ್ದೇವೆಯೋ? - ಎಂದು ಅನ್ನಿಸುತ್ತಾ ಇದೆ.
ಕಳೆದ ಎರಡು ದಶಕಗಳಲ್ಲಿ ಕನ್ನಡಿಗರ ಮಕ್ಕಳು ಉತ್ತಮ ಶಾಲಾ ಕಾಲೇಜುಗಳನ್ನು ಸೇರಿಕೊಂಡು ಇಂಗ್ಲಿಷ್ ಮಾಧ್ಯಮದಲ್ಲೇ ಶಿಕ್ಷಣ ಹೊಂದಿ ಡಿಗ್ರಿಗಳನ್ನು ಪಡೆದರೂ, ಕನ್ನಡಿಗ ಮಕ್ಕಳಿಗೆ ಒಳ್ಳೆಯ ಕೆಲಸ ಸಿಗುವುದು ಮಾತ್ರ ಮರೀಚಿಕೆಯೇ ಆಯಿತು.
ಈ ಇಂಗ್ಲಿಷ್ ಭಾಷೆಯನ್ನು ಬಲ್ಲ ಯುವ ಪೀಳಿಗೆಯವರು ತಮ್ಮ ಓದು ಮುಗಿಸಿ ಹೊರಬಂದಾಗ ಕಂಡಿದ್ದು ಇನ್ನೂ ಉಲ್ಬಣಿಸಿದ ನಿರುದ್ಯೋಗ ಸಮಸ್ಯೆ!
ತನ್ಮಧ್ಯೆ, ಇಲ್ಲಿ ನೆಲೆಸಿದ ದೈತ್ಯ ಕಂಪೆನಿಗಳು ಅನ್ಯ ಭಾಷಿಗರಿಗೆ ಮೊದಲ ಮಣೆ ಹಾಕಿ ಕೆಲಸ ಕೊಟ್ಟುವು. ಹೆಚ್ಚಿನ ಕೆಲಸಗಳು ಹೊರರಾಜ್ಯಗಳಿಂದ ಬಂದವರ ಪಾಲಿಗೇ ಹೋದುವು.
ಈ ಕಾರಣದಿಂದ "ಕನ್ನಡತನ ಮತ್ತು ಕನ್ನಡ ಭಾಷಾಪ್ರೇಮ" ಸಹಜವಾಗಿಯೇ ನಮ್ಮ ಷಹರದಿಂದ ನಿಧಾನವಾಗಿ ಮರೆಯಾಗ ತೊಡಗಿತು.
ಇದಕ್ಕೆಲ್ಲಾ ಮೂಲ ಕಾರಣ ಏನು?
ಇದಕ್ಕೆ ಕಾರಣ, ನಮ್ಮ ಹುಟ್ಟು ಗುಣಗಳಾದ ನಮ್ಮ ಸೌಜನ್ಯ, ವಿನಯ, ಅತಿಥಿಸತ್ಕಾರ ಮತ್ತು ಪರಭಾಷಾ ಸಹಿಷ್ಣುತೆಗಳು ಎನ್ನಬಹುದೇ?
"ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುವಳು!" ಎಂಬ ಗಾದೆಯಂತೆ, "ನಾವು ಒಗ್ಗಟ್ಟಾಗಿ ನಿಂತು ಕೇಳಿದರೆ ಮಾತ್ರ ಕನ್ನಡಿಗರಿಗೆ ಕೆಲಸ ಸಿಕ್ಕೀತು!" ಎಂಬ ಅಂಶ ನಮಗೆ ಬಹು ತಡವಾಗಿ ಅರಿವಾಯಿತು.
ಇಂದಿನ "ವರ್ಲ್ಡ್ ಕ್ಲಾಸ್ ಸಿಟಿ" ಎನಿಸಿಕೊಳ್ಳುವ ಬೆಂಗಳೂರಿನ ಕನ್ನಡ ಪದವೀಧರ ಯುವಕನೊಬ್ಬನ ಒಂದು ಉದಾಹರಣೆಯನ್ನು ನಾನು ಇಲ್ಲಿ ನಿವೇದಿಸುತ್ತೇನೆ.
ಇಂದು "ಕನ್ನಡ ಭಾಷೆ ಮಾತ್ರ ಬಲ್ಲ" ಒಬ್ಬ ವಿದ್ಯಾವಂತನಿಗೆ ( ಉದಾಹರಣೆಗೆ, ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದ ವಿದ್ಯಾವಂತನಿಗೆ ) ನಮ್ಮ ರಾಜಧಾನಿಯಲ್ಲಿ ಒಂದು ಸಾಮಾನ್ಯ ಕೆಲಸ ಕೂಡಾ ಸಿಗುವ ಭರವಸೆ ಇಲ್ಲ!
ನಾನು ಬಹಳ ದುಃಖದಿಂದ ತಮಗೆ ಒಂದು ನಿಜ ಸಂಗತಿಯನ್ನು ವಿವರಿಸಲು ಬಯಸುತ್ತೇನೆ.
ಮೊನ್ನೆ ಒಬ್ಬ ಕನ್ನಡ ಮಾಧ್ಯಮದಲ್ಲಿ ಬಿ. ಏ. ಓದಿದ ಯುವಕನಿಗೆ ಒಂದು ಮಾಮೂಲಿ "ಏ. ಸಿ. ರೂಮ್" ಹೊಂದಿದ ಉಪಹಾರ ಗೃಹದಲ್ಲಿ ಸೂಪರ್‌ವೈಜರ್ ಕೆಲಸ ನಿರಾಕರಿಸಲ್ಪಟ್ಟಿತು! ಕಾರಣ ಏನು? ಎಂದರೆ, ಆತನಿಗೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಕಷ್ಟ ಆಗುತ್ತಾ ಇತ್ತು.
ಆ ಹುಡುಗ ತನ್ನ ಸರ್ಟಿಫ಼ಿಕೇಟ್‌ಗಳ ಕಡತ ತೋರಿಸುತ್ತಾ, "ಸ್ವಾಮೀ! ಕನ್ನಡ ಮಾಧ್ಯಮದಲ್ಲಿ ಓದಿ ಪದವಿ ಪಡೆದವರು ಇನ್ನು ಬೆಂಗಳೂರಲ್ಲಿ ಹೇಗೆ ಬದುಕಬೇಕು?" ಅನ್ನುತ್ತಾ ಇದ್ದ.
ಆಗ ಆ ಮಧ್ಯಮ ಗಾತ್ರದ ಹೋಟೆಲ್ ಮಾಲಿಕರು, "ಇಲ್ಲಿಗೆ ಕನ್ನಡದವೆರೇ ಊಟ ತಿಂಡಿಗೆ ಬರುತ್ತಾರೇನಯ್ಯಾ? ಬೇರೆ ಭಾಷೆಯವರು ನಮ್ಮಲ್ಲಿಗೆ ಬರುವುದೇ ಜಾಸ್ತಿ. ನಮ್ಮಲ್ಲಿ ಈಗ ಇಪ್ಪತ್ತೈದು ರೂಪಾಯಿಗಳಿಗೆ ಒಂದು ಮಸಾಲೆ ದೋಸೆ, ಹದಿನೈದು ರೂಪಾಯಿಗಳಿಗೆ ಕಾಫಿ! ಇಲ್ಲಿಗೆ ಬರುವ ಹೆಚ್ಚಿನ ಗಿರಾಕಿಗಳು ಕನ್ನಡ ತಿಳಿದಿದ್ದರೂ, ಅವರ ಅಂತಸ್ತಿಗೆ ಸರಿಯಾಗಿ ಇಂಗ್ಲಿಷ್ ಮಾತ್ರ ಮಾತನಾಡುತ್ತಾರೆ. ನಮ್ಮ ಹೋಟೆಲಿನ ಗ್ರಾಹಕರಿಗೆ ಇಂದು ಕನ್ನಡ ಮಾತ್ರ ಮಾತನಾಡುವ ಸುಪರ್‌ವೈಜರ್ ಬೇಡ! ಇಲ್ಲಿ ಕುತ್ತಿಗೆಗೆ ಟೈ ಕಟ್ಟಿಕೊಂಡು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವವರಿಗೇ ಸುಪರ್‌ವೈಜರ್ ಕೆಲಸ ಕೊಡುತ್ತೇವೆ! ಸದ್ಯಕ್ಕೆ ನೀನು ಮೊದಲು ಒಂದು ಕೆಲಸ ಮಾಡು! "ಮಾತನಾಡುವ ಇಂಗ್ಲಿಷ್" (ಸ್ಪೋಕನ್ ಇಂಗ್ಲಿಷ್) ಕಲಿಸುವ ಹಲವಾರು ಕೋಚಿಂಗ್ ಶಾಲೆಗಳಿವೆ. ಅಲ್ಲಿ ಸೇರಿಕೊಂಡು "ಸ್ವಲ್ಪ ಬಟ್ಲರ್ ಇಂಗ್ಲೀಷ್" ಆದರೂ ಕಲಿತುಕೊಂಡು ಬಾ! ಆ ಮೇಲೆ ನೋಡೋಣ!" ಎಂದು ಕೆಲಸ ನಿರಾಕರಿಸಿದರು.
ಬೆಂಗಳೂರಿನಲ್ಲಿ ಕನ್ನಡ ಮಾತ್ರ ಬಲ್ಲ ಪದವೀಧರನಿಗೆ ಕೂಲಿ ಕೆಲಸ ಮಾತ್ರ ಗತಿಯೇ? - ಅಂತ ನನಗೆ ಅನ್ನಿಸಿತು.
ಹೀಗಿದೆ ನಮ್ಮ ಅಚ್ಚ ಕನ್ನಡಿಗರ ಪಾಡು.
ನಮ್ಮ ಶಹರದ ಥಳಥಳಿಸುವ "ಪ್ರತಿಷ್ಠಿತ" ಜಾಗಗಳಲ್ಲಿ ಕನ್ನಡ ಭಾಷೆ ಮಾತ್ರ ಬಲ್ಲವನನ್ನು ಮಾತನಾಡಿಸುವರು ಯಾರೂ ಇಲ್ಲ!
ಇದು ವಿಚಿತ್ರ ಆದರೂ ಸತ್ಯ.
ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣ, ಹೈಟೆಕ್ ಆಸ್ಪತ್ರೆಗಳು. ಪಂಚತಾರಾ ಹೋಟೆಲ್‌ಗಳು, ದೊಡ್ಡ ದೊಡ್ಡ "ಮಾಲ್"ಗಳು, ಬಹು ಮಹಡಿಯ ಸಿನೆಮಾಗಳು, ಅನ್ಯದೇಶೀಯ ಮತ್ತು ಜಾಗತಿಕ ಹೆಸರಿನ ಫಲಕಗಳನ್ನು ಹೊತ್ತ ವ್ಯಾಪಾರೀ ಮಳಿಗೆಗಳು, ಫ಼ಾಸ್ಟ್ ಫ಼ೂಡ್ ಮಳಿಗೆಗಳು ಮತ್ತು ವಿದೇಶೀ ರೀತಿಯನ್ನು ಅನುಸರಿಸುತ್ತಾ ಇರುವ ಭಾರತೀಯ ಉಪಹಾರದ ತಾಣಗಳಲ್ಲಿ ನಮ್ಮ ಮಾತೃ ಭಾಷೆಯು "ಈಗಲೂ ಚಲಾವಣೆಯಾಗದ ನಾಣ್ಯ" ಎಂದು ಹೇಳಲು ನನಗೆ ನಾಚಿಕೆ ಆಗುತ್ತಾ ಇದೆ.
ಈ ಪರಿಸ್ಥಿತಿ ಹೇಗೆ ಉಂಟಾಯಿತು?
ಹೊರದೇಶಗಳಿಂದ ಬಂದವರು ಮತ್ತು ಹೊರರಾಜ್ಯಗಳಿಂದ ಬಂದವರು ಅವರಿಗೆ ಬಲ್ಲ ಭಾಷೆಗಳಲ್ಲಿ ಮತ್ತು ಇಂಗ್ಲಿಷ್ ಬಳಸಿಯೇ ನಮ್ಮೊಂದಿಗೆ ವ್ಯವಹರಿಸಲಿ! ಅದಕ್ಕೆ ನಾವು ಅಭ್ಯಂತರಿಸುವುದಿಲ್ಲ. ಜಗತ್ತಿನ ಜನರೆಲ್ಲಾ ವ್ಯಾಪಾರ ಅಥವಾ ವ್ಯವಹಾರಗಳಿಗೆ ನಮ್ಮ ರಾಜಧಾನಿಗೆ ಬರಲಿ!
ಅವರಿಗೆ ನಮ್ಮ ಸ್ವಾಗತ.
ಇಂದು ನಮ್ಮಲ್ಲಿ ನೆಲೆಸಿ "ಬೆಂಗಳೂರಿಗರೇ ಆಗಿರುವ" ನೆಲಸಿಗರು ನಮ್ಮ ನಾಡಿನ ಭಾಷೆಯಾದ ಕನ್ನಡವನ್ನು ಕಲಿಯಲು ಪ್ರಯತ್ನಿಸಲಿ. ಈ ನೆಲಸಿಗರು ತಮ್ಮ ಭಾಷೆಗಳನ್ನು ಅಥವಾ ಇಂಗ್ಲಿಷ್ ಭಾಷೆಯನ್ನು ನಮ್ಮ ಮೇಲೆ ಹೇರುವ ಪ್ರಯತ್ನಗಳನ್ನು ಕೈಬಿಡಲಿ.
ಪರಭಾಷಿಗರು ನಮ್ಮನ್ನೇ "ತಗ್ಗಿಸಿ ಬಗ್ಗಿಸಿ" ನಮ್ಮ ರಾಜಧಾನಿಯಲ್ಲೇ ನಮ್ಮನ್ನು ಆಳಲು ಪ್ರಯತ್ನಿಸುವ ಕ್ರಮಗಳನ್ನು ಕೈಬಿಡಬೇಕು. ಅವರುಗಳು ನಮ್ಮ ಕಸ್ತೂರಿ ಕನ್ನಡ ಭಾಷೆಯನ್ನು ಕಲಿಯಲು ಒಲವು ತೋರಬೇಕು. ಅವರು ಬಲ್ಲ ಭಾಷೆಗಳನ್ನು ನಮ್ಮ ಮೇಲೆ ಹೇರುವ ಪ್ರಯತ್ನವನ್ನು ಅವರು ಇನ್ನು ಮುಂದೆ ನಿಲ್ಲಿಸಲೇ ಬೇಕಾದ ದಿನಗಳು ಸನ್ನಿಹಿತವಾಗುತ್ತಾ ಇವೆ.
ಇನ್ನು ಮುಂದೆ ನಮ್ಮ "ವಿದ್ಯಾವಂತರು" ಎನ್ನಿಸಿಕೊಂಡ ಕರ್ನಾಟಕದ ಜನರು ಆಂಗ್ಲ ಭಾಷೆ ಅಥವಾ ಅನ್ಯ ಭಾಷೆಗಳಲ್ಲಿ ಮಾತನಾಡುವುದೇ ತಮ್ಮ "ವಿದ್ಯೆ ಮತ್ತು ಅಂತಸ್ತುಗಳ ದ್ಯೋತಕ" ಎಂಬ ಭಾವನೆಯನ್ನು ಬಿಡಬೇಕು. ಕನ್ನಡವನ್ನೆ ಆದಷ್ಟು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಬಳಸುವ ದೃಢ ನಿಶ್ಚಯವನ್ನು ಮಾಡಬೇಕು.
ಇಂದು ನಾವು ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ನಮ್ಮ ಮಕ್ಕಳನ್ನು ನಾವು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿ ವ್ಯವಹರಿಸಲು "ತಿಳಿದೋ ತಿಳಿಯದೆಯೋ" ಪ್ರೊತ್ಸಾಹಿಸುತ್ತಾ ಇದ್ದೇವೆ. ಆದರೆ ಅವರು ಈ ರೀತಿ ಆಂಗ್ಲ ಭಾಷೆಯಲ್ಲಿ ಸಮ್ಭಾಷಿಸುತ್ತಾ, ತಮ್ಮ ಮಾತೃಭಾಷೆ ಮತ್ತು ಕನ್ನಡತನವನ್ನು ಮರೆಯದೇ ಇರಲಿ.
ನಮ್ಮ ಮನೆಗಳಲ್ಲಿನ ಆಂಗ್ಲ ಮಾಧ್ಯಮದ ಶಾಲೆಗಲಲ್ಲಿ ಓದುತ್ತಾ ಇರುವ ಹೆಚ್ಚಾಗಿ ಆಂಗ್ಲ ಭಾಷೆಯಲ್ಲೇ ಮಾತನಾಡಿಕೊಂಡು, ನಮ್ಮ ಕನ್ನಡ ಭಾಷೆಯನ್ನು ಕಡೆಗಣಿಸುತ್ತಾ ಇರುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತಾ ಇದ್ದೇವೆ. ಅವರು ಆಂಗ್ಲ ಭಾಷೆಯಲ್ಲಿ ವ್ಯವಹರಿಸುವಷ್ಟು ಪ್ರಾವೀಣ್ಯವನ್ನು ಅವರು ಖಂಡಿತವಾಗಿ ಪಡೆಯಲಿ, ಇಂದಿನ ಜಗತ್ತು ವಿಶಾಲ. ಆಂಗ್ಲಭಾಷೆ ಗೊತ್ತಿಲ್ಲದೇ ಅವರು ಪರದೇಶಗಳಲ್ಲಿ ಅಥವಾ ಬೇರೆ ಊರುಗಳಲ್ಲಿ ಕೆಲಸ ಮಾಡಲು ಕಷ್ಟ ಆಗಬಹುದು.
ಆದರೆ, ಅವರುಗಳು ನಮ್ಮ ಮನೆಗಳಲ್ಲಿ ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಕಡ್ಡಾಯವಾಗಿ ಆಡುವಂತೆ ನಾವು ಅವರನ್ನು ಪ್ರೇರೇಪಿಸಬೇಕು. ಕನ್ನಡ ವಾರ್ತಾ ಪತ್ರಿಕೆಗಳು ಮತ್ತು ಕನ್ನಡ ಸಾಹಿತ್ಯವನ್ನು ಅವರು ಓದಲು ನಾವು ಪ್ರೋತ್ಸಾಹಿಸಬೇಕು. ಕನ್ನಡ ಭಾಷೆಯ ರೇಡಿಯೋ ಮತ್ತು ದೂರದರ್ಶನದ ಕಾರ್ಯಕ್ರಮಗಳಿಗೆ ನಾವು ನಮ್ಮ ಮನೆಗಳಲ್ಲಿ ಸ್ವಲ್ಪ ಆದ್ಯತೆ ನೀಡಬೇಕು.
ಇತರರೊಂದಿಗೆ ಮಾತನಾಡುವಾಗ ಮತ್ತು ದೂರವಾಣಿಯಲ್ಲಿ ಸಂಬಾಷಿಸುವಾಗ ವಾಗ ಶುದ್ಧ ಕನ್ನಡ ಬಲಸುವ ಅಭ್ಯಾಸವನ್ನು ನಾವು ರೂಢಿಸಿಕೊಳ್ಳಬೇಕು.
ಇಂದು ನಾವು ಆಡುವ ಕನ್ನಡದಲ್ಲಿ ಬಳಸುವ ಆಂಗ್ಲ ಭಾಷೆಹಾಗೂ ಇತರೇ ಭಾಷೆಗಳ ಶಬ್ದಗಳ ಬದಲಿಗೆ ಕನ್ನಡ ಭಾಷೆಯ ಶಬ್ದಗಳನ್ನೇ ಉಪಯೋಗಿಸಬೇಕು.
ಇಂದಿನ ಪರಿಸ್ಥಿತಿಗೆ ಸರಿಯಾಗಿ, ಹೆಚ್ಚಿನ ತಂದೆತಾಯಿಗಳು "ನಾಳೆ ನಮ್ಮ ಮಕ್ಕಳಿಗೆ ಓದಿ ಒಳ್ಳೆಯ ಕೆಲಸ ಸಿಗಬೇಕು!" ಎಂಬ ದೃಷ್ಟಿಯಿಂದ ತುಂಬಾ ಹಣ ವ್ಯಯಿಸಿ, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಿ ಓದಿಸುತ್ತಾ ಇದ್ದೇವೆ. ಇಂದಿನ ಕಂಪ್ಯೂಟರ್ ಯುಗದಲ್ಲಿ ಆಂಗ್ಲ ಭಾಷೆಯ ಜ್ಞಾನ ಇಲ್ಲದೇ ಇದ್ದರೆ ನಮ್ಮ ಮಕ್ಕಳಿಗೆ ಒಳ್ಳೆಯ ಉದ್ಯೋಗದ ಭರವಸೆ ಇಲ್ಲ. ಅವರ ಆಂಗ್ಲ ಭಾಷಾ ಜ್ಞಾನ ನಾಳೆ ಅವರು ಪ್ರವೇಶಿಸುತ್ತಿರುವ ಉದ್ಯೋಗ ಅಥವಾ ವ್ಯವಹಾರ ಕ್ಷೇತ್ರಗಲಿಗೆ ಮೀಸಲಾಗಿರಲಿ. ಅವರು ತಮ್ಮ ಕನ್ನದತನ ಮರೆಯದೇ ಇರಲಿ.
ಆಂಗ್ಲ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಾ ಇರುವ ಪೋಷಕರನ್ನಾಗಲೀ ಅಥವಾ ಓದುವ ಮಕ್ಕಳನ್ನಾಗಲೀ ನಾವು ಈಗ ದೂರಿ ಪ್ರಯೋಜನ ಇಲ್ಲ. ನಮ್ಮ ಇಂದಿನ ಸಾಮಾಜಿಕ ಪರಿಸ್ಥಿತಿ ಹೀಗೆ ಇದೆ. ಆಂಗ್ಲ ಭಾಷಾ ಜ್ಞಾನದ ಜತೆಗೆ ಅವರ ಕನ್ನಡ ಜ್ಞಾನ ಮತ್ತು ಪ್ರೇಮಗಳೂ ಬೆಳೆಯಲಿ.
ಕನ್ನಡಿಗರಾದ ನಾವು "ತಲೆ ಎತ್ತಿ ಬಾಳುವ ಕಾಲ" ಈಗ ಸನ್ನಿಹಿತವಾಗುತ್ತಾ ಇದೆ! ಕನ್ನಡಿಗರ ಸ್ವಾಭಿಮಾನ ಎಚ್ಚತ್ತುಕೊಳ್ಳುತ್ತಾ ಇದೆ. ಇಂದು ಹೆಚ್ಚಿನ ಕನ್ನಡಿಗರು ಕನ್ನಡದದಲ್ಲೇ ಮಾತನಾಡಿ ವ್ಯವಹಾರ ಮಾಡಲು ಇಷ್ಟ ಪಡುತ್ತಾ ಇದ್ದಾರೆ. ಕನ್ನಡದ ಪುಸ್ತಕ ಹಾಗೂ ಪತ್ರಿಕೆಗಳನ್ನು ಕೊಂಡು ಓದುತ್ತಾ ಇದ್ದಾರೆ.
ನಮ್ಮ ಜನರಲ್ಲಿ ಕನ್ನಡ ಅಭಿಮಾನ ಹೆಚ್ಚುತ್ತಾ ಇದೆ. ಮಾರುಕಟ್ಟೆಗಳಲ್ಲಿ ಮತ್ತು ಹೆಚ್ಚಿನ ಅಂಗಡಿಗಳಲ್ಲಿ ಕನ್ನಡದ ಮಾತು ಕೇಳಿಬರುತ್ತಾ ಇವೆ. ಹಿಂದೆ ಬೆಂಗಳೂರಿನ "ಇಂಗ್ಲಿಷ್" ಪ್ರದೇಶಗಳೆಂದೇ ಹೆಸರಾದ ಬ್ರಿಗೇಡ್ ರಸ್ತೆ ಮತ್ತು ಮಹಾತ್ಮಾ ಗಾಂಧಿ ರಸ್ತೆಗಳಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡಲು ಇಂದು ಸಾಧ್ಯ ಆಗಿದೆ.
ಕನ್ನಡ ಚಲನ ಚಿತ್ರಗಳು ಈಗ ಜನಪ್ರಿಯವಾಗಿ ಬಹಳ ಸಮಯ ಪ್ರದರ್ಶನ ನೀಡಿ ಹಣ ಮತ್ತು ಹೆಸರು ಸಂಪಾದಿಸುತ್ತಾ ಇವೆ. ಹಿಂದೀ ಸಿನೆಮಾದ ಗಾಯಕರು, ನಿರ್ದೇಶಕರು, ನಟ ನಟಿಯರು ಕನ್ನಡ ಚಿತ್ರ ಕ್ಷೇತ್ರದ ಕಡೆಗೆ ತಮ್ಮ ಒಲವು ತೋರುತ್ತಾ ಇದ್ದಾರೆ,
ಟ್ಯಾಕ್ಸಿ ಮತ್ತು ಆಟೋ ಚಾಲಕರು ಇಂದು ಕನ್ನಡದಲ್ಲೇ ಮಾತನಾಡುತ್ತಾರೆ. ತರಕಾರಿ, ಹೂವು, ಹಣ್ಣು ಮಾರುವವರು ಕನ್ನಡದಲ್ಲೇ ವ್ಯವಹಾರ ಮಾಡುವುದು ಕಂಡು ಬರುತ್ತಾ ಇದೆ.
ಈಗ ಬೆಳೆಯುತ್ತಾ ಇರುವ ಕನ್ನಡ ಅಭಿಮಾನವನ್ನು ಈಗ ನಾನು "ಕನ್ನಡದ ಅಭಿಮನ್ಯು" ಎಂದು ಹೆಸರಿಸಿ ಕರೆಯುತ್ತಾ ಇದ್ದೇನೆ.
ಕನ್ನಡದ ಅಭಿಮಾನಿ ಬಾಲಕ ಅಭಿಮನ್ಯು ಇನ್ನೂ ಹದಿಹರೆಯದ ಹುಡುಗ.
ಆದರೂ, ಇಂದು ಆತ ಧೈರ್ಯವಾಗಿ ಇತರೇ ಭಾಷಿಗರಿಗೆ ಸರಿಸಮನಾಗಿ ನಿಂತು ಕನ್ನಡದ ಉಳಿವಿಗೋಸ್ಕರ ಅವಿರತವಾಗಿ ಹೋರಾಡುತ್ತಾ ಇದ್ದಾನೆ.
ಇನ್ನು ಮುಂದೆ ನಮ್ಮ ಕನ್ನಡದ ಅಭಿಮನ್ಯುವು ಇದುವರೆಗೆ ಅಬೇಧ್ಯವಾಗಿದ್ದ ಪಂಚ ತಾರಾ ಮತ್ತು ಬಹು ರಾಷ್ಟ್ರೀಯ ಸ್ವಾಮ್ಯದ ಪ್ರತಿಷ್ಟಿತ ಕೋಟೆಗಳ ಒಳಗೆ ನುಗ್ಗಿ ಅಲ್ಲಿ ತನ್ನ ಕನ್ನಡತನವನ್ನು ಮೆರೆದು ಅಲ್ಲಿ ಅವನು ವಿಜ್ರಂಭಿಸಬೇಕು.
ಇದು ನನ್ನ ಆಶಯ.
ತಾವು ಕೂಡಾ ಕೈಜೋಡಿಸಿ "ಕನ್ನಡದ ಅಭಿಮನ್ಯುವನ್ನು ದೀರ್ಘಾಯುವಾಗು!" ಎಂದು ಹರಸುವಿರಾ?
- ಎಸ್. ಎಮ್. ಪೆಜತ್ತಾಯ
 ಬೆಂಗಳೂರು
 ೨೩/೦೪ /೨೦೦೮

1 comment:

sunaath said...

ಹಾಸ್ಯಪಿತಾಮಹ ರಾ.ಶಿ.ಯವರು ವೃತ್ತಿಯಿಂದ ವೈದ್ಯರು. ಅವರು ತಮ್ಮ ಅನುಭವವನ್ನು ತಮಾಶೆಯಾಗಿ ಹೀಗೆ ಹೇಳುತ್ತಿದ್ದರು:
ಬೆಂಗಳೂರಿನಲ್ಲಿ ತಮ್ಮ ಕ್ಲಿನಿಕ್ಕಿಗೆ ಬಂದ ರೋಗಿಗಳ ಜೊತೆಗೆ ವೈದ್ಯರು ತಮಿಳು, ತೆಲಗು, ಮಲೆಯಾಳಮ್, ಉರ್ದು ಭಾಷೆಗಳಲ್ಲಿ ಮಾತನಾಡುವುದು ಅನಿವಾರ್ಯವಾಗಿದೆ. ಇನ್ನು ಮನೆಗೆ ಹೋದ ಬಳಿಕ ಹೆಂಡತಿಯೊಡನೆ ಮಾತನಾಡುವ ಅವಶ್ಯಕತೆಯಾದರೂ ಏನಿದೆ? ಏನಿದ್ದರೂ ಅಲ್ಲಿ Tarzan ಕೆಲಸ ಮಾತ್ರ! ಆದುದರಿಂದ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಅಗತ್ಯವೇ ಇಲ್ಲ!