Thursday, April 30, 2009

ಎಮ್ಮೆಪಾಪು ಕಕ್ಕ ಮಾಡ್ತಿದೆ...!

ಕಳೆದ ಒಂದು ವಾರ ಊರಿನಲ್ಲಿ ತಳವೂರಿದ್ದೆ. ಎಲೆಕ್ಷನ್, ಭಾನುವಾರ, ಬಸವಜಯಂತಿಯ ಕೃಪೆ! ತೋಟದಲ್ಲಿ ವಿಪರೀತ ಕೆಲಸ.

ನನ್ನ ಮಗಳು ಈಕ್ಷಿತಾ ಕಟ್ಟು ಬಿಚ್ಚಿದ ಚಿಗರೆಯಂತಾಗಿದ್ದಳು. ತಿಂಗಳಿಗೊಮ್ಮೆಯಾದರೂ ತೋಟಕ್ಕೆ ಬರುತ್ತಾಳಾದರೂ, ಅವೆಲ್ಲವೂ ಒಂದೆರಡು ದಿನಗಳ ಬೇಟಿ. ಆದರೆ ಈಗಿನದು ಹತ್ತು ಹದಿನೈದು ದಿನಗಳದ್ದು. ಹೀಗಾಗಿ ಅವಳಿಗೆ ಸ್ಕೂಲು, ಮಿಸ್ಸು, ಹೋಮ್‌ವರ್ಕ್, ವ್ಯಾನು, ಫ್ರೆಂಡ್ಸ್ ಎಲ್ಲಾ ಮರೆತುಹೋದರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಅವಳು ಮಾಡುತ್ತಿದ್ದ ಕೆಲಸ ಇಷ್ಟೆ. ತೋಟದಲ್ಲಿ ಎಮ್ಮೆಕರುವನ್ನು ಹಿಡಿದುಕೊಂಡು ಸುತ್ತುವುದು. ನಾವೆಂದೂ ಕಟ್ಟಿರದಿದ್ದ ನಾಯಿಮರಿಗೆ ಸರಪಳಿ ಹಾಕಿಸಿಕೊಂಡು ವಾಕಿಂಗ್ ಮಾಡಿಸುವುದು. ಮನೆಯೊಳಗೆ ಬಂದರೆ ಚೌಕಾಬಾರ ಮತ್ತು ಅಳುಗುಳಿ ಮನೆಯಾಡುವುದು.

ಸ್ನಾನ, ಊಟ ತಿಂಡಿ ಎಲ್ಲವೂ ಬಲವಂತದ ಮಾಘಸ್ನಾನ!


ಮೊನ್ನೆ ನಾನು ತೋಟದಲ್ಲಿ ತೆಂಗಿನ ಗರಿ ಸವರುತ್ತಿದ್ದೆ. ಈಕ್ಷಿತಾ ಅಲ್ಲಿಯೇ ಆಟವಾಡುತ್ತಿದ್ದಳು. ಹುಟ್ಟಿ ಸುಮಾರು ಹದಿನೈದು ದಿನಗಳಷ್ಟೇ ಕಳೆದಿದ್ದ ಪುಟಾಣಿ ಎಮ್ಮೆಕರು ಅವಳ ಕಣ್ಣಳತೆಯಲ್ಲಿಯೇ ನಿಂತಿತ್ತು. ಇದ್ದಕ್ಕಿದ್ದಂತೆ ಈಕ್ಷಿತಾ ‘ಅಪ್ಪಾ, ಅಪ್ಪಾ, ಬೇಗ ಬಾ’ ಎಂದು ಕೂಗಿದಳು. ನಾನು ಅಲ್ಲಿಂದಲೇ ‘ಏಕೆ?’ ಎಂದೆ. ಅದಕ್ಕೆ ಅವಳು ‘ಎಮ್ಮೆ ಪಾಪು ಕಕ್ಕ ಮಾಡ್ತಿದೆ, ಬೇಗ ಬಾ’ ಎಂದಳು. ನಾನು ಹೋಗಿ ನೋಡಿದೆ. ಪಾಪ, ಎಮ್ಮೆಕರು ತನ್ನ ಇಡೀ ದೇಹವನ್ನು ಕಾಮನಬಿಲ್ಲಿನಂತೆ ಬಗ್ಗಿಸಿಕೊಂಡು ಸಗಣಿ ಹಾಕಲು ಪ್ರಯತ್ನಿಸುತ್ತಿತ್ತು. ‘ಅಪ್ಪಾ ಅಪ್ಪಾ, ಅದರ ಫೋಟೋ ತೆಗೆಯೋಣವೆ?’ ಮಗಳ ಪ್ರಶ್ನೆ. ‘ಸರಿ’ ಎಂದು ನಾನು ಮನೆಯೊಳಗೆ ಹೋಗಿ ಮೊಬೈಲ್ ತಂದಾಗಲೂ, ಕರು ಅದೇ ಕಾಮನಬಿಲ್ಲನ ಆಕಾರದಲ್ಲೇ ನಿಂತಿತ್ತು. ನಾನು ಫೋಟೋ ತೆಗೆಯುವಷ್ಟರಲ್ಲಿ ಮತ್ತೆ ಎರಗಿತ್ತು ಮಗಳ ಪ್ರಶ್ನೆ. ‘ಅಪ್ಪಾ, ಅದು ಏಕೆ ಆಗಲಿಂದ ಹಾಗೇ ನಿಂತಿದೆ?’. ನಾನು ಅವಳಿಗೆ, ಸಾಮಾನ್ಯವಾಗಿ ಸಣ್ಣ ಸಣ್ಣಕರುಗಳು ಸಗಣಿ ಹಾಕಲು ತುಂಬಾ ಕಷ್ಟಪಡುತ್ತವೆ. ಕಾರಣ ಅವು ಬರೀ ಹಾಲು ಕುಡಿಯುವುದರಿಂದ ಹಾಗಾಗುತ್ತದೆ. ಬೆಳೆಯುತ್ತಾ ಹುಲ್ಲು ತಿನ್ನಲು ಆರಂಭಿಸಿದರೆ ಸರಿಹೋಗುತ್ತವೆ ಎಂಬಿತ್ಯಾದಿ ವಿಷಯಗಳನ್ನು ವಿವರಿಸಿದೆ.
ಕರು ಅದೇ ಭಂಗಿಯಲ್ಲಿಯೇ ಒಂದು ಚೂರು ಸಗಣಿ ಹಾಕಿತಾದರೂ ಮತ್ತೂ ಪ್ರಯತ್ನ ಮುಂದುವರೆಸಿತ್ತು. ಒಂದು ಕ್ಷಣ ಮೌನವಾಗಿದ್ದ ಮಗಳು ‘ಅಪ್ಪಾ ಅದನ್ನು ಬಿಸಿನೀರಿನ ಟಬ್ಬಿನಲ್ಲಿ ಕೂರಿಸಿದರೆ ಸುಲಭವಾಗಿ ಕಕ್ಕ ಮಾಡಬೌದು, ಅಲ್ಲವಾ?’ ಎಂದಳು ನನಗೆ ಒಂದು ಕ್ಷಣ ಶಾಕ್!
ಸುಮಾರು ಎರಡು ವರ್ಷಗಳ ಹಿಂದೆ ಸ್ವತಃ ಅವಳೇ ಟಾಯ್ಲೆಟ್ಟಿಗೆ ಹೋಗಲು ಹಿಂದೇಟು ಹಾಕುತ್ತಿದ್ದಳು. ಬಲವಂತ ಮಾಡಿ ಕೂರಿಸಿದರೆ ತುಂಬಾ ಕಷ್ಟ ಪಡುತ್ತಿದ್ದಳು. ಅದನ್ನು ಡಾಕ್ಟರರ ಗಮನಕ್ಕೆ ತಂದಾಗ ಅವರು ‘ಒಂದು ಟಬ್ಬಿನಲ್ಲಿ ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಹಾಕಿ, ಅದರಲ್ಲಿ ಅವಳನ್ನು ಸ್ವಲ್ಪ ಹೊತ್ತು ಕೂರಿಸಿ. ಮೂರುವಾರಗಳ ಕಾಲ ಈ ರೀತಿ ಮಾಡಿ’ ಎಂಬ ಸಲಹೆ ಕೊಟ್ಟಿದ್ದರು. ನಾವೂ ಅದರಂತೆ ಮಾಡಿದ್ದೆವು. ಅವಳ ಸಮಸ್ಯೆಯೂ ದೂರವಾಗಿತ್ತು. ಅದನ್ನು ನೆನಪಿನಲ್ಲಿಟ್ಟುಕೊಂಡು, ಎಮ್ಮೆ ಕರುವಿಗೂ ‘ವಾಟರ್ ಥೆರಪಿ’ ನೀಡಬೇಕೆಂದು ಸಲಹೆ ಕೊಟ್ಟಿದ್ದಳು. ಸದ್ಯ ಪುಣ್ಯಕ್ಕೆ ದೊಡ್ಡ ಎಮ್ಮೆ ಸಗಣಿ ಹಾಕಲು ಕಷ್ಟಪಡುತ್ತಿರಲಿಲ್ಲ!
ಅವಳ ನೆನಪಿನ ಶಕ್ತಿಯನ್ನು ಹಿಂದೊಮ್ಮೆ ಹೀಗೆ ಪ್ರದರ್ಶಿಸಿದ್ದಳು. ಕಳೆದ ಸಾಲಿನಲ್ಲಿ ಎಲ್.ಕೆ.ಜಿ.ಯಲ್ಲಿದ್ದಾಗ ಪೇರೆಂಟ್ಸ್ ಮೀಟಿಂಗಿಗೆಂದು ನನ್ನ ಹೆಂಡತಿ ಹೋಗಿದ್ದಳು. ಅಲ್ಲಿ ಇವರು ಕುಳಿತಿದ್ದ ಕುರ್ಚಿಯ ಪಕ್ಕದಲ್ಲೇ ಬಂದು ಕುಳಿತ ಇನ್ನೊಬ್ಬಾಕೆ, ಸಹಜವಾಗಿಯೇ ‘ಏನು ನಿನ್ನ ಹೆಸರು?’ ಎಂದಿದ್ದಾರೆ. ‘ಈಕ್ಷಿತಾ’ ಎಂಬ ಉತ್ತರ ಕೇಳಿದಾಕ್ಷಣ ಆಕೆ ಎದ್ದುನಿಂತು ‘ನೀನೇನಾ ಈಕ್ಷಿತಾ!? ಪ್ರೀನರ್ಸರಿಯಲ್ಲಿದ್ದಾಗ ನನ್ನ ಮಗನ ಕೆನ್ನೆಯನ್ನು ಕಚ್ಚಿದ್ದವಳು!’ ಎಂದು ಕೇಳಿ, ನನ್ನ ಹೆಂಡತಿಯನ್ನು ಪರಿಚಯ ಮಾಡಿಕೊಂಡು ಪ್ರೀನರ್ಸರಿಯ ವರ್ಷಾರಂಭದಲ್ಲೇ ಅವರ ಮಗ ಪ್ರೀತಮ್ ಗೌಡ ಎಂಬುವವನ ಕೆನ್ನೆಯನ್ನು ಇವಳು ಕಚ್ಚಿದ್ದು, ಅವರ ಮಗ ಮನೆಗೆ ಹೋಗಿ ‘ಈಕ್ಷಿತಾ ಕಚ್ಚಿದ್ದು’ ಎಂದು ದೂರು ಹೇಳಿದ್ದು, ಕೆನ್ನೆ ಬಾತುಕೊಂಡಿದ್ದು, ಇಂಜೆಕ್ಷನ್ ಚುಚ್ಚಿಸಿದ್ದು ಹೀಗೆ ಹಿಂದಿನದೆಲ್ಲಾ ಹೇಳಿ, ‘ಅವನ ಕೈಯಲ್ಲೂ ನಿನ್ನ ಕೆನ್ನೆ ಕಚ್ಚಿಸುತ್ತೇನೆ, ನೋಡು’ ಎಂದು ಒಂದಷ್ಟು ರೇಗಿಸಿದರಂತೆ. ನನ್ನ ಹೆಂಡತಿ ಮಗಳನ್ನು ‘ಕೆನ್ನೆ ಕಚ್ಚಿದ್ದು ನಿಜವಾ? ಏಕೆ ಕಚ್ಚಿದೆ?’ ಎಂದು ಕೇಳಿದರೆ ಬಾಯಿಯೇ ಬಿಡಲಿಲ್ಲವಂತೆ.

ಸಂಜೆ ನನಗೆ ವರದಿ ಸಿಕ್ಕಿತು. ನಾನು ‘ಕೆನ್ನೆ ಏಕೆ ಕಚ್ಚಿದ್ದು?’ ಎಂದು ವಿಚಾರಿಸಿದೆ. ಆಗ ಅವಳು ‘ಅದೇ ಅಪ್ಪ, ನಾವು ಅಡಿಗೆ ಮನೆಗೆ (ಅಡಿಗೆ ಕಟ್ಟೆಯ ಕಲ್ಲನ್ನು ತೋರಿಸುತ್ತಾ) ಈ ಕಲ್ಲನ್ನು ತರಲು ಹೋಗಿದ್ದೆವಲ್ಲ, ಅವತ್ತು, ಅಲ್ಲಿ ನಿನ್ನ ಬೈಕ್ ಬಿದ್ದಿತ್ತಲ್ಲ, ಆಗ ಅದು (ಭುಜ ತೋರಿಸುತ್ತಾ) ನನ್ನ ಕೈಗೆ ತಗುಲಿ ನೋವಾಗಿತ್ತು. ಅವನು (ಪ್ರೀತಮ್ ಗೌಡ) ಅವತ್ತು ಸ್ಕೂಲಲ್ಲಿ ಹಿಂದಿನಿಂದ ಬಂದು ಹೀಗೆ ಹಿಡಿದು (ನನ್ನ ಭುಜ ಹಿಡಿದು ಅಲ್ಲಾಡಿಸುತ್ತ) ಅಲ್ಲಾಡಿಸಿದ. ನನಗೆ ಸಿಟ್ಟು ಬಂದು ಅವನ ಕೆನ್ನೆ ಹೀಗೆ ಹಿಡಿದು ಕಚ್ಚಿಬಿಟ್ಟೆ’ ಎಂದು ನನ್ನ ಕೆನ್ನೆಗೆ ಒಂದು ಮುತ್ತು ಕೊಟ್ಟು ಅಭಿನಯಿಸಿ ತೋರಿಸಿಬಿಟ್ಟಿದ್ದಳು. ಆ ಕ್ಷಣದಲ್ಲಿ ನಮಗೆ ನಗಬೇಕೋ ಅಳಬೇಕೋ ತಿಳಿಯದಾಗಿತ್ತು. ಆ ದಿನ ಗ್ರಾನೈಟ್ ಅಂಗಡಿಯ ಮುಂದೆ ಬೈಕ್ ನಿಲ್ಲಿಸಿ ತಿರುಗುವಷ್ಟರಲ್ಲಿ, ಸ್ಟ್ಯಾಂಡ್ ಸರಿಯಾಗಿ ಹಾಕದೇ ಇದ್ದುದರಿಂದ ಅದು ಬಿದ್ದಿತ್ತು. ಈಕ್ಷಿತಾ ಅದರ ಮುಂದೆಯೇ ನಿಂತಿದ್ದಳು. ಆದರೆ ನಮ್ಮಿಬ್ಬರಿಗೂ ಬೈಕು ಬೀಳುವಾಗ ಅವಳಿಗೆ ತಾಗಿದ್ದು ಗಮನಕ್ಕೆ ಬಂದಿರಲಿಲ್ಲ. ಅವಳೂ ಹೇಳಿರಲೂ ಇಲ್ಲ!

ಸಾಮಾನ್ಯವಾಗಿ ಎಲ್ಲಾ ಮಕ್ಕಳಲ್ಲೂ ನೆನಪಿನ ಶಕ್ತಿ ಅಗಾಧವಾಗಿ ಇರುತ್ತದೆಂದು, ಅದು ಮಕ್ಕಳು ಬೆಳೆದಂತೆ ಏರುಪೇರಾಗುತ್ತದೆಂದು ಕೇಳಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕವಾಗಿ ನಡೆಸಿದ ಸರ್ವೆಯೊಂದರ ಪ್ರಕಾರ ಆರುವರ್ಷದ ಮಕ್ಕಳುಗಳ ಕಲಿಯುವ ಶಕ್ತಿಯಲ್ಲಿ ಭಾರತದ ಮಕ್ಕಳು ಮೊದಲನೆಯ ಸ್ಥಾನದಲ್ಲಿರುತ್ತವಂತೆ. ಆದರೆ ಅದೇ ಮಕ್ಕಳು ಹದಿನಾರನೇ ವರ್ಷಕ್ಕೆ ಬರುವಷ್ಟರಲ್ಲಿ ಇಪ್ಪತ್ತಾರನೆಯ ಸ್ಥಾನಕ್ಕೆ ಜಾರಿಬಿಟ್ಟಿರುತ್ತಾರಂತೆ! ಅದೇ ಏಳೋ ಎಂಟೋ ಸ್ಥಾನದಲ್ಲಿದ್ದ ಜಪಾನಿ ಮಕ್ಕಳು ಒಂದನೇ ಸ್ಥಾನಕ್ಕೇರಿರುತ್ತಾರಂತೆ. ಪೋರ್ಚುಗಲ್ ಮಕ್ಕಳು ಎರಡನೇ ಸ್ಥಾನಕ್ಕೆ ಬರುತ್ತಾರಂತೆ. ಇದನ್ನು ಈ ವರ್ಷಾರಂಭದ ಓರಿಯಂಟೇಷನ್ ಪ್ರೋಗ್ರಾಮಿನಲ್ಲಿ ಒಬ್ಬ ಭಾಷಣಕಾರರು ಹೇಳಿದ್ದರು. ಅದಕ್ಕೆ ಕಾರಣವೇನು? ಎಂಬ ಪ್ರಶ್ನೆಯನ್ನೂ ಕೇಳಿದ್ದರು. ಆಗ ನಾನು ನಮ್ಮಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆಯೇ ಅದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದೆ. ಜೊತೆಗೆ ಕುವೆಂಪು ಅವರ ವಿಶ್ವಮಾನವ ಸಂದೇಶದ ‘ಪ್ರತಿಯೊಂದು ಮಗುವು ಹುಟ್ಟುತ್ತಲೆ-ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು’ ಎಂಬ ಮಾತುಗಳನ್ನು ಹೇಳಿ, ಕುವೆಂಪು ಅವರ ದಾರ್ಶನಿಕ ದೃಷ್ಟಿಕೋನವನ್ನು ವೈಜ್ಞಾನಿಕವಾಗಿ ನಡೆಸಿದ ಸರ್ವೆಯೊಂದು ದೃಢಪಡಿಸುತ್ತಿರುವುದನ್ನು ಸೂಚಿಸಿದ್ದೆ.

ಹುಟ್ಟಿನಂದಲೇ ಬರುವ ಶಕ್ತಿಯನ್ನು ಬೆಳೆಸಬೇಕೆ ಹೊರತು ಕುಂಠಿತಗೊಳಿಸಬಾರದು. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣಪದ್ಧತಿ ನವೀಕರಣಗೊಳ್ಳಲೇಬೇಕೆಂಬುದು ನನ್ನ ಆಶಯ.

Tuesday, April 28, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 12

ಐ ಲವ್ ಯೂ!
ಇಂಗ್ಲೀಷ್ ಗ್ರಾಮರ್ ಮತ್ತು ನಾನ್‌ಡೀಟೈಲ್ ಪಾಠ ಮಾಡುತ್ತಿದ್ದ ಎಸ್.ಮಂಚಯ್ಯ ಎಂಬ ಮೇಷ್ಟ್ರೊಬ್ಬರಿದ್ದರು. ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಅವರೂ ಬೇರೆಡೆಗೆ ವರ್ಗವಾಗಿ ಹೋದರು. ಒಂಬತ್ತನೇ ತರಗತಿಯಲ್ಲಿದ್ದಾಗ ನಮಗೆ ಇಂಗ್ಲೀಷ್ ಗ್ರಾಮರ್ ಪಾಠ ಮಾಡುತ್ತಿದ್ದರು. ಒಂದು ದಿನ ವಾಕ್ಯ ರಚನೆಯ ಬಗ್ಗೆ ಪಾಠ ಮಾಡುತ್ತಿದ್ದು, ನಮಗೆ ಅರ್ಥವಾಗಲೆಂದು ಹಲವಾರು ಸರಳವಾದ ಉದಾಹರಣೆಗಳನ್ನು ಕೊಡುತ್ತಿದ್ದರು. ಹೀಗೆ ಉದಾಹರಣೆ ಕೊಡುತ್ತಾ ‘ಐ ಲವ್ ಯೂ ರಾಧಾ’ ಎಂದು ಒಂದು ವಾಕ್ಯವನ್ನು ಹೇಳಿದರು. ಒಂದು ಕ್ಷಣ ಇಡೀ ಕ್ಲಾಸಿಗೇ ಶಾಕ್ ಹೊಡೆದಂತೆ ಸ್ತಬ್ಧವಾಯಿತು. ನಂತರ ಗುಜುಗುಜು ಮಾತು, ಮುಸಿಮುಸಿ ನಗೆ ಶುರುವಾಯಿತು. ನಮ್ಮ ಮುಂದಿನ ಡೆಸ್ಕಿನಲ್ಲಿಯೇ ಕುಳಿತಿದ್ದ ರಾಧಾ ಎಂಬ ಹುಡುಗಿ, ಡೆಸ್ಕಿನ ಮೇಲೆ ತಲೆ ಇಟ್ಟುಕೊಂಡು ಬಿಕ್ಕುತ್ತಿದ್ದಳು! ನಮಗೆಲ್ಲಾ ‘ಲವ್’ ಎಂಬ ಪದವೇ ಭಯಂಕರವಾಗಿ ಕೇಳಿಸಿತ್ತು. ಏಕೆಂದರೆ ಆಗ ನಾವು ‘ಲವ್’ ಎನ್ನುವ ಪದವನ್ನು ತುಂಬಾ ಅಪಾರ್ಥದಲ್ಲಿ ಅರ್ಥೈಸಿಕೊಂಡಿದ್ದೆವು! ‘ಇವರಿಗೇನು ಬಂತು ಕೇಡು? ಆ ಹುಡುಗಿಯನ್ನು ‘ಲವ್’ ಮಾಡುತ್ತೇನೆ ಎಂದು ಓಪನ್ನಾಗಿ ಹೇಳಿಕೊಳ್ಳುತ್ತಿದ್ದಾರಲ್ಲಾ!’ ಎಂದು ಗಾಬರಿಯೂ, ಅವರು ಪೋಲಿಯಾಗಿ ಮಾತನಾಡುತ್ತಿದ್ದಾರೆಂದು ಒಂದು ಬಗೆಯ ಖುಷಿಯೂ ಆಯಿತು! ಹಿಂದೊಮ್ಮೆ, ಕೇವಲ ಹುಡುಗರಿಗೇ ಹೇಳಬಹುದಾದ ಒಂದು ಜೋಕನ್ನು ತರಗತಿಯಲ್ಲಿ ಹೇಳಲು, ಹುಡುಗಿಯರನ್ನು ಹೊರಗೆ ಕಳುಹಿಸಿದ್ದ ಮಂಚಯ್ಯ ಮೇಸ್ಟರನ್ನು, ಇಂದಿನ ಘಟನೆಯಿಂದ ‘ಪೋಲಿ’ ಎಂದು ಇಡೀ ತರಗತಿ ಭಾವಿಸಿದಂತಿತ್ತು. ತಕ್ಷಣ ತಮ್ಮ ತಪ್ಪಿನ ಅರಿವಾದ ಮೇಸ್ಟರು ಅದರ ರಿಪೇರಿಗೆ ತೊಡಗಿದರು. ‘ಐ ಲವ್ ಯೂ ರಾಧಾ, ಐ ಲವ್ ಇಂಡಿಯಾ, ಐ ಲವ್ ಮೈ ಡ್ಯಾಡಿ, ಐ ಲವ್ ಮೈ ಸಿಸ್ಟರ್, ಐ ಲವ್ ಮೈ ಮದರ್, ಐ ಲವ್ ಮೈ ಬ್ರದರ್’ ಹೀಗೇ ಮತ್ತೆ ಮತ್ತೆ ‘ಲವ್’ ಎಂಬ ಪದ ಬಳಕೆಯಾಗುವ ಹಲವಾರು ವಾಕ್ಯಗಳನ್ನು ಹೇಳಿ ಅವುಗಳ ಕನ್ನಡ ಅನುವಾದವನ್ನು ಹೇಳಿದರು. ಅಷ್ಟರಲ್ಲಿ ನಮಗೆ ಈ ‘ಲವ್’ ಎಂಬ ಪದ ನಾವು ಅಂದುಕೊಡ ಅರ್ಥದ್ದಲ್ಲ ಎಂಬ ಅರಿವೂ ಆಯಿತು. ಆದರೆ ಆ ಹುಡುಗಿ ಮಾತ್ರ ಅವರ ಕ್ಲಾಸು ಮುಗಿಯುವವರೆಗೂ ತಲೆಯೆತ್ತಲಿಲ್ಲ.
ಸಂಜೆ ಮಂಚಯ್ಯನವರೊಂದಿಗೆ ನಡೆದುಕೊಂಡು ಹೋಗುವಾಗ ‘ಏನ್ರೊ, ನಾನು ವಾಕ್ಯ ರಚನೆ ಮಾಡಿದಾಗ ಅಷ್ಟೊಂದು ನಕ್ಕಿದ್ದೇಕೆ?’ ಎಂದರು.
ನಾವು ಮತ್ತೊಮ್ಮೆ ನಗುತ್ತಾ ‘ಸಾರ್, ನೀವು ಆ ಹುಡುಗಿಯನ್ನು ಲವ್ ಮಾಡಿದ್ದನ್ನು ಅಷ್ಟು ಓಪನ್ನಾಗಿ ಹೇಳಿದಿರಲ್ಲಾ, ಅದಕ್ಕೆ ಅಷ್ಟೊಂದು ನಗು ಬಂತು’ ಎಂದು ಹೇಳಿದೆವು.
‘ಅಯ್ಯೋ ದಡ್ಡ ಬಡ್ಡೆತ್ತವಾ! ಅವಳೊಬ್ಬಳನ್ನೇ ಅಲ್ಲ, ನಿಮ್ಮನ್ನೆಲ್ಲಾ ನಾನು ಲವ್ ಮಾಡುತ್ತೇನೆ! ಲವ್ ಅಂದರೆ ಏನು ತಿಳಿದುಕೊಂಡಿದ್ದೀರಿ! ಲವ್ ಅಂದರೆ ಪ್ರೀತಿ ಅಂತ, ಇಷ್ಟ ಪಡೋದು ಅಂತ’ ಎಂದು ಮತ್ತೆ ಮತ್ತೆ ‘ಲವ್’ ಪದದ ಅರ್ಥವನ್ನು ನಮಗೆ ಮನದಟ್ಟು ಮಾಡಿಕೊಡಲು ಪ್ರಯತ್ನಪಟ್ಟರು!
ಕನ್ನಡ ಮೇಸ್ಟ್ರು ಮದುವೆಯಾದರು
ನಮ್ಮ ಹೈಸ್ಕೂಲಿನಲ್ಲಿ ಎಂ.ರಾಜಶೇಖರಯ್ಯ ಎಂಬ ಕನ್ನಡ ಮೇಸ್ಟರಿದ್ದರು. ಹುಡುಗರೆಲ್ಲಾ ಅವರನ್ನು ಎಂ.ಆರ್.ಎಸ್. ಅನ್ನುತ್ತಿದ್ದರು. ಚೆನ್ನಾಗಿ ಪಾಠ ಮಾಡುತ್ತಿದ್ದರು. ದಿನಾ ಪಾಠ ಮಾಡಿದ್ದಷ್ಟಕ್ಕೆ ಎಷ್ಟು ಪ್ರಶ್ನೆಗಳು ಬರುತ್ತವೆಯೋ ಅಷ್ಟಕ್ಕೆ ಹುಡುಗರೇ ಮಾರನೇ ದಿನ ಉತ್ತರ ಬರೆದುಕೊಂಡು ಹೋಗಬೇಕಾಗಿತ್ತು. ಉತ್ತರಗಳು ಸರಿಯಾಗಿದ್ದರೆ ಭೇಷ್ ಎಂದು ಜೋರಾಗಿಯೇ ಬೆನ್ನು ತಟ್ಟುತ್ತ್ತಿದ್ದರು. ತಪ್ಪಾಗಿದ್ದರೆ, ‘ಲೌಡಿಗಂಡ, ಮುಂಡೆಗಂಡ, ರಂಡೇಗಂಡ, ಸರಿಯಾಗಿ ಓದಲ್ಲ, ಸರಿಯಾಗಿ ಓದಬೇಕು, ಪ್ರಶ್ನೆಗೆ ತಕ್ಕ ಉತ್ತರ ಬರೀಬೇಕು’ ಎಂದು ಒಂದೊಂದೇ ಪದ ಹೇಳುತ್ತಾ ತಮ್ಮ ಕೈಯಿಂದ ಬೆನ್ನಿನ ಮೇಲೆ ಗುದ್ದುತ್ತಿದ್ದರು.
ತುಂಬಾ ವರ್ಷಗಳಿಂದ ಒಂದು ರೂಮು ಮಾಡಿಕೊಂಡು ಕುಂದೂರಿನಲ್ಲಿ ನೆಲೆಸಿದ್ದರು. ಊರಿನವರಿಗೆಲ್ಲಾ ಚಿರಪರಚಿತರಾಗಿದ್ದರು. ದಿನಾ ಬೆಳಿಗ್ಗೆ ವ್ಯಾಯಮ ಮಾಡಿ, ಕೆರಯಲ್ಲಿ ತಣ್ಣೀರು ಸ್ನಾನ ಮಾಡುತ್ತಿದ್ದರು. ‘ಒಂದು ರೋಣಗಲ್ಲನ್ನು ಅವರು ಎತ್ತುತ್ತಾರೆ’ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಅವರು ರೋಣಗಲ್ಲನ್ನು ಎತ್ತಿದ್ದನ್ನು ನಾನಂತೂ ನೋಡಿರಲಿಲ್ಲ. ರಾಜಶೇಖರಯ್ಯನವರ ವಯಸ್ಸು ಆಗ ಸುಮಾರು ಮೂವತ್ತೈದು ನಲವತ್ತಾಗಿದ್ದಿರಬಹುದು. ಆದರೆ ಇನ್ನೂ ಮದುವೆಯಾಗಿರಲಿಲ್ಲ.
ಆಗ ಅವರೇಕೆ ಮದುವೆಯಾಗಿಲ್ಲ ಎಂಬುದಕ್ಕೆ ಕುಂದೂರಿನಲ್ಲಿ ಸ್ವಾರಸ್ಯಕರವಾದ ಒಂದು ಕಥೆ ಹೇಳುತ್ತಿದ್ದರು. ಅವರು, ಅವರ ಅಣ್ಣಂದಿರ ಜೊತೆಯಲ್ಲಿ ಚೌಕಾಬಾರ ಆಡುವಾಗ ಬೆಟ್ ಕಟ್ಟಲು ಏನೂ ಇಲ್ಲದೆ, ‘ನಾನು ಈ ಆಟದಲ್ಲಿ ಸೋತರೆ ಮದುವೆಯೇ ಆಗುವುದಿಲ್ಲ’ ಎಂದು ಶಪಥ ಮಾಡಿದ್ದರಂತೆ. ಸೋತು ಹೋದುದ್ದರಿಂದ ಮದುವೆಯಾಗದೆ ಹಾಗೇ ಉಳಿದಿದ್ದರಂತೆ! ಆದರೆ ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಅವರಿಗೆ ಮದುವೆ ಗೊತ್ತಾಯಿತು! ಆಗ ಈ ಕಥೆಯೆಲ್ಲಾ ಸುಳ್ಳು ಎಂಬ ತೀರ್ಮಾನಕ್ಕೆ ನಾವು ಬಂದೆವು.
ಮದುವೆಗೆ ಅವರ ಪ್ರಿಯ ಶಿಷ್ಯರಾಗಿದ್ದ ಎಂ.ಕೆ.ಸ್ವಾಮಿ, ಚಿಕ್ಕಯ್ಯ ಮತ್ತು ನಮ್ಮ ಅಣ್ಣ ಮೂವರೂ ಹೋಗಿ ಬಂದರು. ಆಗ ಅವರು ಹೇಳಿದ ಸಂಗತಿಯಿಂದ ಆ ಕಥೆ ನಿಜವಾಗಿದ್ದುದ್ದು ತಿಳಿಯಿತು! ಹುಡುಗಾಟಕ್ಕೆ ಆಟವಾಡಿದ್ದನ್ನು ಅವರು ಶಿರಸಾವಹಿಸಿ ಪಾಲಿಸಲು ನಿರ್ಧರಿಸಿದ್ದರಂತೆ. ಆದ ಕಾರಣಕ್ಕೆ ಅಣ್ಣಂದಿರೆ ಬಲವಂತ ಮಾಡಿದ್ದರೂ ಮದುವೆಯಾಗದೆ ಹಾಗೇ ಇದ್ದರಂತೆ. ಆದರೆ ತಂದೆ ತಾಯಿಗಳ ಒತ್ತಡ, ಅವರ ಆತ್ಮಹತ್ಯೆಯ ಬೆದರಿಕೆ ಮತ್ತು ಊರವರೆಲ್ಲರೂ ಸೇರಿ ಪಂಚಾಯಿತಿ ಮಾಡಿ, ಮಕ್ಕಳಾಟಕ್ಕೆ ಮಾಡಿಕೊಂಡ ಒಪ್ಪಂದವನ್ನು ಮುರಿದರೆ ತಪ್ಪೇನಿಲ್ಲ ಎಂದು ವಾದಿಸಿ ಒಪ್ಪಿಸಿದ್ದರಿಂದ ಅವರಿಗೆ ಮದುವೆಯಾಯಿತಂತೆ!
ಜಿ.ಎಸ್.ಎಸ್. ಅಂಗನವಾಡಿ ಮೇಡಮ್‌ಗೆ ಕಣ್ಣು ಹೊಡೆದಿದ್ದು
ನಮ್ಮ ರಾಷ್ಟ್ರಕವಿ ಜಿ.ಎಸ್.ಎಸ್. ಅದ್ಯಾವ ಅಂಗನವಾಡಿ ಮೇಡಮ್‌ಗೆ ಕಣ್ಣು ಹೊಡೆದಿದ್ದರು ಎಂದು, ತಲೆಬರಹ ನೋಡಿ ಗಾಬರಿಯಾಗಬೇಡಿ. ನಾನೀಗ ಹೇಳಹೊರಟಿರುವುದು ನಮ್ಮ ಗಣಿತದ ಮೇಷ್ಟ್ರಾಗಿದ್ದ ಜಿ.ಎಸ್.ಎಸ್. ಬಗ್ಗೆ. ಅವರ ಪೂರ್ಣ ಹೆಸರು, ಜಿ.ಎಸ್.ಶ್ರೀನಿವಾಸಮೂರ್ತಿ ಎಂದು. ಅವರು ನಿತ್ಯವೂ ಅರಸೀಕೆರೆಯಿಂದ ಬಂದು ಹೋಗುತ್ತಿದ್ದರು. ನಾವು ಒಂಬತ್ತನೇ ತರಗತಿಯಲ್ಲಿದ್ದಾಗ ಹೊಸದಾಗಿ ಕೆಲಸಕ್ಕೆ ಸೇರಿದ್ದ ‘ಯುವಮೇಷ್ಟ್ರು’ ಅವರಾಗಿದ್ದರು. ಸಹಜವಾಗಿಯೇ ಅವರು ನಮ್ಮ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ದಿನಕ್ಕೊಂದು ಹೊಸ ಬಟ್ಟೆ ತೊಟ್ಟು ಬರುತ್ತಿದ್ದರೋ ಎಂಬಂತೆ ಗರಿಗರಿಯಾಗಿ ಐರನ್ ಮಾಡಿದ ಫ್ಯಾಂಟ್-ಷರ್ಟ್ ತೊಟ್ಟು, ಷರ್ಟ್-ಇನ್ ಮಾಡಿಕೊಂಡು, ದಪ್ಪದಾದ ಷೂ ತೊಟ್ಟುಕೊಂಡು ಫ್ರೆಷ್ಷಾಗಿ ಬರುತ್ತಿದ್ದರು. ಗಣಿತ ಮತ್ತು ವಿಜ್ಞಾನ ಪಾಠ ಮಾಡುತ್ತಿದ್ದರು. ಆದರೆ ಅಲ್ಲಿನ ಹದಗೆಟ್ಟ ವ್ಯವಸ್ಥೆಯಿಂದಾಗಿ ತಮ್ಮ ಪ್ರತ್ಯೇಕ ಐಡೆಂಟಿಟಿಯನ್ನು ನಾವಿದ್ದ ಕಾಲದಲ್ಲಂತೂ ಅವರು ತೋರಿಸಲಾಗಲಿಲ್ಲ! ಆದರೆ ವಯೋಸಹಜವಾಗಿ ಹುಡುಗಿಯರೆಂದರೆ ಕರಗಿ ಹೋಗುವಷ್ಟರ ಮಟ್ಟಿಗೆ ತುಂಬಾ ಮೃದುವಾಗಿ ವರ್ತಿಸುತ್ತಿದ್ದರು!
ನಾನು ಮೊದಲೇ ಹೇಳಿದಂತೆ ಕುಂದೂರು ಮಠದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಂಡಲ ಪಂಚಾಯಿತಿ ಆಫೀಸುಗಳಿದ್ದವು. ಅವುಗಳ ಆಶ್ರಯದಲ್ಲೋ ಏನೋ, ಒಂದು ಬಾರಿ ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಸಮ್ಮೇಳನ ನಡೆದಿತ್ತು. ನೂರಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಅಂಗನವಾಡಿ ವ್ಯವಸ್ಥೆ ಆಗಿನ್ನೂ ಹೊಸದಾಗಿ ಬಂದದ್ದಾಗಿತ್ತು. ಸಹಜವಾಗಿಯೇ ಅದರಲ್ಲಿ ಕೆಲಸ ಮಾಡುವವರಲ್ಲಿ ಬಹುತೇಕ ಎಲ್ಲರೂ ಎಳೆಯ ವಯಸ್ಸಿನವರೇ ಆಗಿದ್ದರು. ಅಲ್ಲೊಬ್ಬರು ಇಲ್ಲೊಬ್ಬರು ಮದುವೆಯಾಗಿದ್ದವರು ಇದ್ದಿರಬಹುದು ಅಷ್ಟೆ. ಎಲ್ಲರಿಗೂ ಹಾಸ್ಟೆಲ್ ಮತ್ತು ಶಾಲಾ ಆವರಣದಲ್ಲಿದ್ದ ಮಠಕ್ಕೆ ಸೇರಿದ್ದ ಮನೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನಗಳ ಕಾಲ ನಡೆದ ಆ ಸಮ್ಮೇಳನದ ಕಾಲದಲ್ಲಿ ನಮ್ಮ ಈ ಗಣಿತದ ಮೇಷ್ಟ್ರ ಲೆಕ್ಕಾಚಾರ ಏನಾಗಿತ್ತೋ ನನಗೆ ಗೊತ್ತಿರಲಿಲ್ಲ. ಮೊದಲೆಲ್ಲಾ ಹತ್ತು ಗಂಟೆಗೆ ಬರುತ್ತಿದ್ದ ಅವರು ಆ ದಿನಗಳಲ್ಲಿ ಒಂಬತ್ತಕ್ಕೇ ಹಾಜರ್!
ಸಮ್ಮೇಳನದ ಕೊನೆಯ ದಿನ ಹಾಗೆ ಬಂದವರೇ ಹಾಸ್ಟೆಲ್ ಕಡೆಗೆ ಬಂದರು. ಹೊರಗಡೆ ನಿಂತಿದ್ದ ನಾವೆಲ್ಲಾ ಹಾಸ್ಟೆಲ್ ಹುಡುಗರು ‘ಇವರ್‍ಯಾಕಪ್ಪಾ ಬರುತ್ತಾರೆ’ ಎಂದು ಒಳಗೆ ಹೋಗಲು ಹವಣಿಸುತ್ತಿದ್ದೆವು. ಆಗ ಅವರು ನನ್ನನ್ನು ಕರೆದು ಏನೇನೋ ಅಸಂಬದ್ಧವಾಗಿ ಮಾತನಾಡತೊಡಗಿದರು. ಅವರು ಏನು ಮಾತನಾಡಿದರೆಂದು ನನಗೀಗ ಒಂದು ಪದವೂ ನೆನಪಿಗೆ ಬರುತ್ತಿಲ್ಲ. ಆಗ ಅಲ್ಲಿಯೇ ಗುಂಪುಗುಂಪಾಗಿ ಓಡಾಡುತ್ತಿದ್ದ, ಅಂಗನವಾಡಿಯ ಕಾರ್ಯಕರ್ತೆಯರ ಒಂದು ಗುಂಪು ನಮ್ಮ ಹತ್ತಿರಕ್ಕೆ ಬಂದಿತ್ತು. ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಜಿ.ಎಸ್.ಎಸ್. ತಮ್ಮ ಎಡಗಣ್ಣನ್ನು ಪಟಾರನೆ ಆ ಗುಂಪಿನ ಕಡೆಗೆ ಹೊಡೆದರು. ನಂತರ ಇನ್ನೇನೋ ಹೇಳಿ ಸ್ಕೂಲಿನ ಕಡೆ ಹೊರಟರು. ನಾನು ನೋಡುವಷ್ಟರಲ್ಲಿ ಆ ಹೆಂಗಳೆಯರ ಗುಂಪಿಲ್ಲಿದ್ದ ಒಂದು ಹುಡುಗಿ, ‘ಥೂ’ ಎಂದು ನಮ್ಮ ಕಡೆಗೆ ಉಗಿಯುತ್ತಿದ್ದಳು! ಆಗಲೇ ನನಗೇ ಅರ್ಥವಾಗಿದ್ದು, ಜಿ.ಎಸ್.ಎಸ್. ಆ ಹುಡುಗಿಯರಿಗೆ ಕಣ್ಣು ಹೊಡೆಯಲೆಂದೇ ನನ್ನನ್ನು ಹುಡುಕಿಕೊಂಡು ಮಾತನಾಡಿಸಲು ಬಂದಿದ್ದರೆಂದು!
ಹೈಸ್ಕೂಲ್ ಕ್ಲರ್ಕ್ ಮತ್ತು ಮೆಳೆಯಮ್ಮನ ಪ್ರಸಾದ
ನನ್ನ ಹೈಸ್ಕೂಲಿಗೆ ಒಬ್ಬ ಕ್ಲರ್ಕ್ ಕೂಡಾ ಇದ್ದ. ಆತನ ಹೆಸರೇನು ಎಂಬುದೇ ನನಗೆ ಈಗ ಮರೆತು ಹೋಗಿದೆ! ಏಕೆಂದರೆ ಆತ ಕ್ಲರ್ಕ್ ಮಾತ್ರ ಆಗಿದ್ದ! ಆತ ನಮ್ಮ ಮೇಲೆ ಯಾವುದೇ ಪ್ರಭಾವ ಬೀರುವಷ್ಟು ದೊಡ್ಡ ವ್ಯಕ್ತಿಯಾಗಿರಲಿಲ್ಲ. ಆದರೂ ಆತನ ಒಂದು ವಿಚಿತ್ರ ಹವ್ಯಾಸವನ್ನು ಇಲ್ಲಿ ಹೇಳಬಯಸುತ್ತೇನೆ.
ಆತ ಹಾಸನದಿಂದಲೋ ಶಾಂತಿಗ್ರಾಮದಿಂದಲೋ ನಿತ್ಯವೂ ಬಂದು ಹೋಗುತ್ತಿದ್ದ. ಸೋಮವಾರ ಬಿಟ್ಟರೆ ಇನ್ಯಾವತ್ತೂ ಆತ ಮಧ್ಯಾಹ್ನದ ಊಟ ತರುತ್ತಿರಲಿಲ್ಲ! ಉಳಿದ ದಿನಗಳೆಲ್ಲಾ ಆತನ ಮಧ್ಯಾಹ್ನದ ಊಟಕ್ಕೆ ಮೆಳೆಯಮ್ಮನ ಪ್ರಸಾದವೇ ಗತಿ. ಆತ ಮಾಡುತ್ತಿದ್ದುದು ಇಷ್ಟೆ. ಮಧ್ಯಾಹ್ನ ಲಂಚ್ ಅವರ್ ಆದ ಮೇಲೆ, ಮತ್ತೆ ತರಗತಿಗಳು ಸೇರಲು ಬೆಲ್ ಆಗುತ್ತಿದ್ದಂತಯೇ ಆತ ಒಂದೆರಡು ಫೈಲ್ ಹಿಡಿದುಕೊಂಡು ಹೊರಡುತ್ತಿದ್ದ. ನಾನು ಮೊದಲೇ ಹೇಳಿದಂತೆ ಅಲ್ಲಿದ್ದ ಮೆಳೆಯಮ್ಮ ಎಂಬ ರಕ್ತದೇವತೆಗೆ ಪ್ರತಿ ದಿನವೂ ಪ್ರಾಣಿಬಲಿ ಇರುತ್ತಿತ್ತು. ದಿನವೂ ನೂರಾರು ಜನ ಕುರಿ ಕೋಳಿ ಬಲಿ ಕೊಡುತ್ತಿದ್ದರು. ಹಾಗೆ ಕೊಟ್ಟ ಬಲಿಯನ್ನು ಅಲ್ಲಿಯೇ ಅಡುಗೆ ಮಾಡಿ, ಮೇಳೆಯಮ್ಮನ ಭೂತಗಳಿಗೆ ಎಡೆ ಹಾಕಿ, ತಾವೂ ಊಟ ಮಾಡಿಕೊಂಡು ಹೊರಡುತ್ತಿದ್ದರು. ದೂರದ ಊರುಗಳಿಂದಲೂ ಗಾಡಿ, ಟ್ರಾಕ್ಟರ್, ಲಾರಿಗಳಲ್ಲಿ ಜನ ಈ ರೀತಿ ಹರಕೆ ತೀರಿಸಲು ಬರುತ್ತಿದ್ದರು. ಇತ್ತ ಫೈಲ್ ಹಿಡಿದುಕೊಂಡು ಹೊರಡುತ್ತಿದ್ದ ನಮ್ಮ ಕ್ಲರ್ಕ್ ಮಹಾಶಯ ಗಾಡಿಗಳ ದಟ್ಟಣೆಯಿರುವಲ್ಲಿಗೆ ಹೋಗಿ, ಎರಡು ಮೂರು ಗಾಡಿಯವರಿಗೆ ಕಾಣುವಂತೆ ಫೈಲ್ ನೋಡುತ್ತಾ ಕುಳಿತುಬಿಡುತ್ತಿದ್ದ. ಗ್ರಾಮೀಣ ಜನರಿಗೆ ಸಹಜವಾಗಿಯೇ ಬಂದಿರುವ ಗುಣದಂತೆ, ಯಾರಾದರೂ ಒಬ್ಬರು ಮಾತನಾಡಿಸುತ್ತಿದ್ದರು. ಹೀಗೇ ಮಾತನಾಡುತ್ತಾ, ಊಟದ ಸಮಯವಾದಾಗ ಊಟಕ್ಕೇಳಿಸುತ್ತಿದ್ದರು. ಚೆನ್ನಾಗಿ ಊಟ ಮಾಡಿ ಮತ್ತೆ ಸ್ಕೂಲಿಗೆ ಹಿಂತಿರುಗುತ್ತಿದ್ದ. ಸುಮಾರು ನಲವತ್ತು ನಲವತ್ತೈದರ ಪ್ರಾಯದ ಆ ಕ್ಲರ್ಕ್‌ನ ಗುಡಾಣದಂತಹ ಹೊಟ್ಟೆಗೆ ಆತನ ಈ ರೀತಿಯ ದಿನಚರಿಯೇ ಕಾರಣವಾಗಿತ್ತು!

Thursday, April 23, 2009

ಅನಾಮಿಕನ ನೆನವರಿಕೆಯಲ್ಲಿ.....

[ಮೊದಲ ಮಾತು: ನೆನ್ನೆ ಕಂಪ್ಯೂಟರಿನಿಲ್ಲಿದ್ದ ಅನುಪಯುಕ್ತ ಫೈಲುಗಳನ್ನು ಹುಡುಕಿ ಡಿಲೀಟ್ ಮಾಡುತ್ತಿದ್ದೆ. ಆಗ ಈ ಕಥೆ ಕಣ್ಣಿಗೆ ಬಿತ್ತು! ಆಶ್ಚರ್ಯವೆಂದರೆ ಅದನ್ನು ಯಾವಾಗ ಬರೆದಿದ್ದೆ ಎಂಬುದೇ ನನಗೆ ಮರೆತು ಹೋಗಿತ್ತು! ಈ ಕಥೆ ನನ್ನದೇ ಅಥವಾ ಬೇರೆ ಯಾರದ್ದೋ ಎಂಬ ಅನುಮಾನವೂ ಬಂತು. ಆದರೆ ಕಥೆಯ ಕೊನೆಯಲ್ಲಿ (ನನ್ನ ಅಭ್ಯಾಸದಂತೆ) ಟೈಪ್ ಮಾಡಿದ್ದ ನನ್ನ ಹೆಸರು, ಫೋನ್ ನಂಬರ್ ಮತ್ತು ಈ-ಮೇಲ್ ವಿಳಾಸ ಎಲ್ಲವೂ ಇತ್ತು! ಕೊನೆಗೆ ಆ ಫೈಲ್ ಕ್ರಿಯೇಟ್ ಆದ ದಿನಾಂಕವನ್ನು ಪರಿಶೀಲಿಸಿದೆ. ನನ್ನದೇ ಕಂಪ್ಯೂಟರಿನಲ್ಲಿ ಸುಮಾರು ಒಂಬತ್ತು ತಿಂಗಳ ಹಿಂದೆ 28.06.2008ರಲ್ಲಿ ಕ್ರಿಯೇಟ್ ಆಗಿತ್ತು. ಆಗ ನನಗೆ ನೆನಪಿಗೆ ಬಂತು. ಜುಲೈ ಹನ್ನೊಂದಕ್ಕೆ ನನ್ನ ಪಿಹೆಚ್.ಡಿ. ವೈವ ನಡೆದಿತ್ತು. ಕೇವಲ ಒಂದೆರಡು ವಾರದ ಮುಂಚೆ ವೈವಾದ ದಿನಾಂಕ ನನಗೆ ಗೊತ್ತಾಗಿತ್ತು. ಆ ಗಡಿಬಿಡಿಯಲ್ಲಿ ನಾನೇ ಸ್ವತಃ ಟೈಪಿಸಿದ ಕಥೆಯನ್ನು ನಾನು ಮರೆತೇಬಿಟ್ಟಿದ್ದೆ! ಎಂದು. ಅದನ್ನು ಟೈಪಿಸಿದ ಮೇಲೆ ಓದಿಯೇ ಇಲ್ಲ ಎಂದು ಅದರಲ್ಲಿದ್ದ ಸಾಕಷ್ಟು ಕಾಗುಣಿತದ ತಪ್ಪುಗಳು ಎತ್ತಿ ತೋರಿಸುತ್ತಿದ್ದವು. ಆ ಅಕ್ಷರದ ತಪ್ಪುಗಳನ್ನಷ್ಟೇ ತಿದ್ದಿ, ಅದು ಹೇಗಿತ್ತೋ ಹಾಗೇ ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ. ಇಷ್ಟವಾದರೆ ಸಂತೋಷ. ಇಲ್ಲದಿದ್ದರೆ ಮರೆತುಬಿಡಿ]

ಮುಂಬಾಗಿಲಿಗೆ ರಂಗೋಲಿಯಿಕ್ಕುತ್ತಿದ್ದ ರಜನಿಯ ಮೇಲೆ ಬಾಲರವಿಯ ಕಿರಣಗಳು ಲಾಸ್ಯವಾಡುತ್ತಿದ್ದವು. ಇಂದು ಅವಳ ಮನಸ್ಸು ಪ್ರಪುಲ್ಲವಾಗಿತ್ತು. ಎಂದೂ ನೆನಪಿಗೆ ಬರದ ಆ ‘ಅನಾಮಿಕ’ ಇಂದು ಬೆಳಿಗ್ಗೆ ಹಾಸಿಗೆಯಿಂದೇಳುವಾಗಲೇ ನೆನಪಾಗಿದ್ದ. ಅದರ ಬಗ್ಗೆಯೇ ಯೋಚಿಸುತ್ತಾ ದೈನಂದಿನ ಕೆಲಸದಲ್ಲಿ ತೊಡಗಿದಳು. ಆದರೆ ರಂಗೋಲಿಯಿಡಲು ಬರುವಷ್ಟರಲ್ಲಿ ‘ಇಂದೇಕೆ ಆತ ಇಷ್ಟೊಂದು ನೆನಪಾಗುತ್ತಿದ್ದಾನೆ?’ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತ್ತು. ಆತ ಯಾರೋ, ಏನೋ. ಸುಮಾರು ಆರು ತಿಂಗಳಿನಿಂದ ನಾನು ಅವನನ್ನು ಗಮನಿಸುತ್ತಿರಬಹುದು. ವಾರದಲ್ಲಿ ಐದು ದಿನ, ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ಒಂಬತ್ತೂಕಾಲರ ಸುಮಾರಿಗೆ ನಾನು ನಡೆಯುವ ದಾರಿಯಲ್ಲಿ ಆತ ಬೈಕಿನಲ್ಲಿ ಸಾಗಿ ಹೋಗುತ್ತಾನೆ ಅಷ್ಟೆ. ಅದೇ ವೇಳೆಗೆ, ಒಂದೆರಡು ನಿಮಿಷಗಳ ವ್ಯತ್ಯಾಸದಲ್ಲಿ ನಾನೂ ಕತ್ರಿಗುಪ್ಪೆಯಿಂದ ಹೊರಟು ವಾಟರ್ ಟ್ಯಾಂಕ್ ಸರ್ಕಲ್ ಬಳಿಯಿರುವ ಆಫೀಸಿಗೆ ಹೋಗುತ್ತಿರುತ್ತೇನೆ. ಸುಮಾರು ಅರ್ಧ ಕಿಲೋಮೀಟರ್ ನೇರವಾಗಿ ಇರುವ ರಸ್ತೆಯ ಯಾವುದಾದರೊಂದು ಜಾಗದಲ್ಲಿ ಆತ ಎದುರಿನಿಂದ ಬೈಕಿನಲ್ಲಿ ಬರುತ್ತಾನೆ. ಕಂಡಷ್ಟೇ ವೇಗವಾಗಿ ಮಾಯವಾಗುತ್ತಾನೆ. ಅಷ್ಟೆ, ಒಂದು ನಗುವಿಲ್ಲ. ನೋಟಗಳ ವಿನಿಮಯ ಇದ್ದಿರಬಹುದೇನೋ ನೆನಪಿಗೆ ಬರುತ್ತಿಲ್ಲ. ಅದೇಕೆ ಇಂದು ನೆನಪಾದ? ಎಂದುಕೊಂಡಳು. ಬಹುಶಃ ಆತನಿಗೂ ನನ್ನಂತೆಯೇ ಆಗಿರಬಹುದು ಅನ್ನಿಸಿತು. ತಕ್ಷಣ ಆ ಬಾವನೆಯೇ ಅವಳಿಗೆ ಮತ್ತೆ ಮತ್ತೆ ಇಷ್ಟವಾಗತೊಡಗಿತು. ಅದು ಅವಳ ಗಮನಕ್ಕೂ ಬಂತು.
ಒಳಗೆ ಬರುವಷ್ಟರಲ್ಲಿ ಅತ್ತಿಗೆ ಮಕ್ಕಳಿಗೆ ಹಲ್ಲುಜ್ಜಿಸುತ್ತಿದ್ದರು. ಮೂವತ್ತನ್ನು ದಾಟದ ಅತ್ತಿಗೆಗೆ ಎರಡು ಮಕ್ಕಳ ತಾಯಿ. ಮೂವತ್ತು ದಾಟುತ್ತಿರುವ ನಾನಿನ್ನೂ ಕನ್ಯೆ! ಆದರೆ ಅತ್ತಿಗೆ ವಿಧವೆ. ನಮ್ಮಿಬ್ಬರಲ್ಲಿ ಯಾರು ಹೆಚ್ಚು ಸುಖಿ? ಎಂಬ ಪ್ರಶ್ನೆ ಮನಸ್ಸಿಗೆ ಬಂತು. ದಿನನಿತ್ಯದ ಕೆಲಸಗಳು ಯಾಂತ್ರಿಕವಾಗಿ ಸಾಗುತ್ತಿದ್ದವು. ಅತ್ತಿಗೆ ಏನೇನೋ ಮಾತನಾಡುತ್ತಿದ್ದರು. ‘ನೆನ್ನೆ ಬಂದ ಬಂಡಲ್ಲಿನಲ್ಲಿ ಹೆಚ್ಚು ಹರಿದು ಹೋಗಿದ್ದ ಪೇಪರ್‌ಗಳು, ತೂಕ ಹೆಚ್ಚು ಕಮ್ಮಿ ಮಾಡುವ ಅಂಗಡಿಯ ಶೆಟ್ಟಿ, ಮಕ್ಕಳು ರಬ್ಬರ್ ಹರಿದು ಎರಡು ಭಾಗ ಮಾಡಿರುವುದು’ ಹೀಗೇ ಏನೇನೋ. ಆದರೆ ರಜನಿ ಅನಾಮಿಕನ ನೆನಪಲ್ಲಿ ಮುಳುಗಿ ಹೋದಳು. ಆ ದಾರಿಯಲ್ಲಿ ತಾನು ನಡೆದುಕೊಂಡು ಹೋಗುವಷ್ಟರಲ್ಲಿ ಕನಿಷ್ಟ ನೂರಾದರೂ ಬೈಕ್‌ಗಳು ಸಾಗಿ ಹೋಗುತ್ತವೆ. ಅವರಂತೆಯೇ ಈತನೂ ಒಬ್ಬ. ಆದರೂ ಆತನ ನೆನಪೇಕೆ? ಗೆರೆಯೆಳೆದಂತೆ ಬೈತಲೆ ತೆಗೆದು ಬಾಚಿದ ತಲೆ, ದುಂಡಾದ ಮುಖ, ಷರ್ಟ್ ಇನ್ ಮಾಡಿದ ಅರ್ಧತೋಳಿನ ಅಂಗಿ, ಬೆನ್ನಿಗೇರಿದ್ದ ಬ್ಯಾಗ್, ಕನ್ನಡಿಗೆ ನೇತುಹಾಕಿದ ಹೆಲ್ಮೆಟ್ ಎಲ್ಲವೂ ಕಣ್ಣಿಗೆ ಕಟ್ಟುವಂತೆ ನೆನಪಾಗುತ್ತಿವೆ.
* * *
ದಿನಗಳು ಕಳೆಯುತ್ತಿದ್ದವು. ಅಣ್ಣ ಬದುಕಿದ್ದರೆ ನನಗೂ ಇಷ್ಟೊತ್ತಿಗೆ ಮದುವೆಯಾಗುತ್ತಿತ್ತು. ಬಹುಶಃ ಒಂದೆರಡು ಮಕ್ಕಳೂ ಆಗಿರುತ್ತಿದ್ದವು. ಆದರೆ ದುರದೃಷ್ಟ ಬೆಂಬಿಡದಂತೆ ಕಾಡುತ್ತಿದೆ. ಹದಿನೈದು ವರ್ಷದ ಹಿಂದೆ, ಜಾತಿಯ ಜಗಳಕ್ಕೆ ಸುಟ್ಟು ಹೋಗಿದ್ದ ಮನೆ, ಸತ್ತು ಹೋಗಿದ್ದ ಅಪ್ಪ, ದೊಡ್ಡಪ್ಪ, ಅವ್ವಂದಿರು ತಮ್ಮಂದಿರು ಎಲ್ಲಾ ನೆನಪಾದರು. ಬರೀ ಎಡಗೈಗಷ್ಟೇ ಸುಟ್ಟಗಾಯ ಮಾಡಿಕೊಂಡು ಬದುಕುಳಿದ ನಾನು ಎಲ್ಲರ ಆಶ್ಚರ್ಯಕ್ಕೆ ಕಾರಣಳಾಗಿದ್ದೆ. ಆದರೆ ಊರಿನಿಂದ ಕದ್ದು ಓಡಿಹೋಗಿದ್ದ ದೊಡ್ಡಪ್ಪನ ಮಗ, ಈ ಅಣ್ಣ ಪತ್ರಿಕೆಯಲ್ಲಿ ವಿಷಯ ತಿಳಿದು ಊರಿಗೆ ಬಂದಿದ್ದ. ಮಾಡಬೇಕಾದ ಕಾರ್ಯ ಮಾಡಿ, ಬದುಕುಳಿದಿದ್ದ ನನ್ನನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದ. ಆಶ್ಚರ್ಯವೆಂದರೆ ಅಣ್ಣ ನಮಗಾರಿಗೂ ತಿಳಿಯದಂತೆ, ಇನ್ನೂ ಹದಿನೆಂಟು ತುಂಬಿರದ ಸರೋಜಳನ್ನು ಮದುವೆಯಾಗಿದ್ದ. ನಾನು ಮನೆಯೊಳಗೆ ಕಾಲಿಡುತ್ತಲೇ ಆಕೆ ಪ್ರೀತಿಯಿಂದ ಸ್ವಾಗತಿಸಿದಳು. ಒಳ್ಳೆಯ ಗೆಳತಿಯೂ ಆದಳು.
ಆಟೋ ಓಡಿಸುತ್ತಿದ್ದ ಅಣ್ಣ ನನ್ನ ವಿದ್ಯಾಭ್ಯಾಸಕ್ಕೂ ನೆರವಾದ. ನಾನು ಡಿಗ್ರಿ ಮುಗಿಸುವಷ್ಟರಲ್ಲಿ ಅವರಿಗೆ ಎರಡು ಮಕ್ಕಳಾದವು. ದುರದೃಷ್ಟವೆಂದರೆ, ನನ್ನ ಮದುವೆಯ ಮಾತನಾಡುತ್ತಿದ್ದ ಅಣ್ಣ ಅಪಘಾತವೊಂದರಲ್ಲಿ ದುರ್ಮರಣವನ್ನಪ್ಪಿದ. ನನಗೆ ಪ್ರಕಾಶನ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕಿ ಆರು ತಿಂಗಳೂ ಆಗಿರಲಿಲ್ಲ. ನಾನೂ, ಅತ್ತಿಗೆ ಮಕ್ಕಳು ಬೀದಿಗೆ ಬೀಳಬೇಕಾದ ಸಂದರ್ಭ. ಆದರೆ ಅಣ್ಣ ಸತ್ತೂ ನಮ್ಮನ್ನು ಕಾಪಾಡಿದ್ದ. ಆತನ ಇನ್ಷ್ಯೂರೆನ್ಸ್ ಮತ್ತು ಆತನ ಆಟೋಗೆ ಡಿಕ್ಕಿ ಹೊಡೆದಿದ್ದ ಲಾರಿಯವರ ಕಡೆಯಿಂದ ಬಂದ ಪರಿಹಾರ ಎಲ್ಲಾ ಸೇರಿ ಮನೆಯೊಂದನ್ನು ಭೋಗ್ಯಕ್ಕೆ ಹಾಕಿಸಿಕೊಳ್ಳುವಷ್ಟರ ಮಟ್ಟಿಗೆ ಸಹಾಯವಾಯಿತು. ನಂತರ ಅತ್ತಿಗೆ ನಾನೂ ಕುಳಿತು ಮುಂದಿನ ಜೀವನದ ಬಗ್ಗೆ, ಮಕ್ಕಳ ಬಗ್ಗೆ ಮಾತನಾಡಿದೆವು. ಅತ್ತಿಗೆಯೂ ಪೇಪರ್‌ನಲ್ಲಿ ಕವರ್ ಮಾಡುವುದನ್ನು ಕಲಿತು, ಮನೆಯಲ್ಲಿಯೇ ಒಂದಿಷ್ಟು ಸಂಪಾದನೆಗೆ ದಾರಿ ಮಾಡಿಕೊಂಡರು. ನನಗೆ ಬರುವ ಸಂಬಳದಲ್ಲಿ ಮನೆ ನಡೆಯುತ್ತಿತ್ತು. ಆಗಾಗ ಅತ್ತಿಗೆ ನನ್ನ ಮದುವೆಯ ಬಗ್ಗೆ ಮಾತು ತೆಗೆದರೂ ನಾನು ಬಾಯಿ ಮುಚ್ಚಿಸಿಬಿಡುತ್ತಿದ್ದೆ.
ಆ ಬೈಕ್ ಹುಡುಗನ ನೆವದಿಂದಾಗಿ ಇಂದು ಹಿಂದಿನದೆಲ್ಲಾ ನೆನಪಿಗೆ ಬಂತು. ಯಾವುದಾದರೂ ಒಂದುದಿನ ಆತನನ್ನು ಮಾತನಾಡಿಸಬೇಕು ಎನ್ನಿಸಿತು. ಅವನಿಗೂ ಹಾಗೇ ಅನ್ನಿಸಿರಬಹುದೆ? ಎಂಬ ಪ್ರಶ್ನೆಯೂ ಎದುರಾಯಿತು. ಹೆಣ್ಣಾದ ನಾನೇ ಮೇಲೆ ಬಿದ್ದು ಮಾತನಾಡಿಸುವುದು ಸರಿಯೇ? ಎಂಬ ಗೊಂದಲವೂ ಎದುರಾಯಿತು. ಕೇವಲ ನಗುವಿನ ವಿನಿಮಯವಾದರೂ ನಡೆಯಬಾರದೇ ಎನ್ನಿಸಿತು.
* * *
ಆತ ಯಾರೋ? ಏನೋ? ಹೀಗೆ ಪ್ರತಿನಿತ್ಯ ಠಾಕುಠೀಕಾಗಿ ಹೋಗುವದನ್ನು ನೋಡಿದರೆ, ಯಾವುದೋ ಒಳ್ಳೆಯ ಕೆಲಸದಲ್ಲಿಯೇ ಇರಬೇಕು. ಶನಿವಾರ ಭಾನುವಾರ ಬರದೇ ಇರುವುದನ್ನು ನೋಡಿದರೆ, ಸೆಂಟ್ರಲ್ ಗೌವರ್‍ನಮೆಂಟೋ, ಎಂ.ನ್.ಸಿ.ಯಲ್ಲೋ ಕೆಲಸಕ್ಕಿರಬೇಕು. ಮದುವೆಯಾಗಿರಬೇಕು. ಅವನ ಸಂಸಾರ ಸುಖವಾಗಿ ಇರಬೇಕು. ಇನ್ನೂ ಏನೇನೋ ಯೋಚನೆಗಳು ತಲೆ ತುಂಬಿಕೊಳ್ಳತೊಡಗಿದವು. ಬಹುಶಃ ಮದುವೆಯಾಗಿರಲಾರದು. ನೋಡಿದರೆ ಇಪ್ಪತ್ತೇಳು ಇಪ್ಪತ್ತೆಂಟರ ಹಾಗೆ ಕಾಣುತ್ತಾನೆ. ಆತನಿಗಿನ್ನೂ ಮದುವೆಯಾಗಿರಲಾರದು ಎಂಬ ಯೋಚನೆ ಮನಸ್ಸಿಗೆ ಇಷ್ಟವಾಗತೊಡಗಿ, ಆಶ್ಚರ್ಯವೂ ಆಯಿತು. ಅಯ್ಯೋ ಮದುವೆಯಾಗದಿದ್ದರೆ ತಾನೆ ಏನು ಪ್ರಯೋಜನ? ಅವನೇನು ನನ್ನನ್ನು ಮದುವೆಯಾಗುತ್ತಾನೆಯೇ? ಎಡಗೈಯಲ್ಲಿ ಸುಟ್ಟಗಾಯದ ದೊಡ್ಡ ಗುರುತು. ನಾನೋ ನೋಡಲು ಸ್ವಲ್ಪ ಕಪ್ಪು ಬೇರೆ. ಅದಕ್ಕೆ ಒಪ್ಪವಿಟ್ಟಂತೆ ಹೆಸರು ರಜನಿ. ಅಪ್ಪ ರಜನಿಕಾಂತನ ಅಭಿಮಾನಿ. ಗಂಡು ಮಗುವಾದರೆ ರಜನಿಕಾಂತನ ಹೆಸರನ್ನೇ ಇಡುತ್ತೇನೆ ಅಂದಿದ್ದನಂತೆ. ಆದರೆ ಹುಟ್ಟಿದ್ದು ನಾನು, ಹೆಣ್ಣು. ರಜನಿಯೆಂದೇ ಹೆಸರಿಟ್ಟ. ಕಾಲೇಜಿನ ಕೊನೆಯ ವರ್ಷದಲ್ಲಿ ಎಕಾನಾಮಿಕ್ಸ್ ಲೆಕ್ಚರರ್, ನಿನಗೆ ರಜನಿ ಎನ್ನುವ ಹೆಸರು ಚೆನ್ನಾಗಿ ಒಪ್ಪುತ್ತದೆ ಎಂದಿದ್ದರು. ಏಕೆ? ಎಂದಿದ್ದಕ್ಕೆ, ಕಪ್ಪಗಿರುವವರಿಗೆ ಆ ಹೆಸರು ಚೆನ್ನಾಗಿರುತ್ತದೆ ಎಂದು ಬೆಳ್ಳಗಿನ ಕೈಗಳನ್ನು ತಿರುಗಿಸುತ್ತಾ ಹೇಳಿದ್ದರು.
* * *
ಈ ಬೈಕ್ ಸುಂದರಾಂಗನಿಂದ ನನಗೆ ಬಿಡುಗಡೆಯೇ ಇಲ್ಲ. ಹಗಲು ರಾತ್ರಿ ಎನ್ನದೆ ನೆನಪಾಗುತ್ತಾನೆ. ಮಾತನಾಡಿಸಿಯೇ ಬಿಡುತ್ತೇನೆ ಎಂದು, ಪ್ರತಿನಿತ್ಯ ಎಡಬದಿಯಲ್ಲಿ ನಡೆಯುತ್ತಿದ್ದವಳು ಮೊನ್ನೆ ಬಲಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ನನ್ನ ಅವನ ನಡುವಿನ ಅಂತರ ಆರೇಳು ಮೀಟರಿನಿಂದ ಒಂದೆರಡು ಮೀಟರ್‌ಗೆ ಇಳಿದಿತ್ತು. ಆದರೆ ಆತನ ಕಣ್ಣುಗಳನ್ನು ನಾನು ನೋಡುವುದರಲ್ಲಿ ಮುಂದೆ ಸಾಗಿಬಿಟ್ಟ. ಆತನಿಗೆ ಒಮ್ಮೆಯಾದರೂ, ಈ ಹುಡುಗಿಯನ್ನು ದಿನವೂ ನೋಡುತ್ತಿದ್ದೇನಲ್ಲ ಅನ್ನಿಸಿರುವುದಿಲ್ಲವೆ? ಅನ್ನಿಸಿರದೆ ಏನು? ಈಗಿನ ಹುಡುಗರು ಸ್ವಲ್ಪ ಹಮ್ಮು ಬಿಮ್ಮು ಅಷ್ಟೆ. ಇನ್ನು ಪ್ರತಿ ದಿನ ಬಲಬದಿಯಲ್ಲೇ ನಡೆದುಕೊಂಡು ಹೋಗಿ ನೋಡುತ್ತೇನೆ. ಒಮ್ಮೆ ನಕ್ಕು, ಪರಿಚಯಕ್ಕೆ ಇಳಿದು ಬಿಟ್ಟರೆ ಸಾಕು. ನೀನು ನನ್ನನ್ನು ರಾತ್ರಿಯಿಡೀ ಕಾಡುತ್ತೀಯ ಏಕೆ? ಎಂದು ಕೇಳುತ್ತೇನೆ. ಈ ಅನಿಸಿಕೆಗೆ ಅವಳಿಗೇ ನಗುಬಂತು. ನಾನಾಗೇ ಮೇಲೆಬಿದ್ದು ಮದುವೆ ಆಗು ಎಂದರೂ ಈ ಕರಿಮೂತಿಯನ್ನು, ಆತ ಒಪ್ಪುತ್ತಾನೆಯೇ? ಸುಟ್ಟಗಾಯದ ಕೈ ನೋಡಿಯೇ ಓಡಿಹೋಗುತ್ತಾನೇನೋ? ಆದರೂ ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರಲ್ಲ, ಅದು ನನ್ನ ವಿಷಯದಲ್ಲಿ ಏಕೆ ನಿಜವಾಗಬಾರದು?
* * *
ಇಂದು ಆತನನ್ನು ಮಾತನಾಡಿಸಿಯೇ ತೀರುತ್ತೇನೆ ಎಂದು ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿ ನಡೆಯುತ್ತಿದ್ದ ರಜನಿಗೆ, ಒಂದು ಕ್ಷಣ ಆತ ಬರದಿದ್ದರೆ ಎನ್ನಿಸಿ ಭಯವಾಯಿತು. ನಾನು ಆತನನ್ನು ಮಾತನಾಡಿಸದಿದ್ದರೆ ಅಷ್ಟೆ ಹೋಯಿತು. ಆತ ಬಂದರೆ ಸಾಕು. ನಾನೂ ನಿನ್ನನ್ನು ನೋಡುತ್ತಿದ್ದೆ ಎನ್ನುವಂತೆ ಒಂದು ನಗು ನಕ್ಕರೆ ಸಾಕು. ದಾರಿಯಲ್ಲಿ ಬೈಕ್ ಏನೋ ಬಂತು. ಆದರೆ ಒಂದೇ ಕೈಯಲ್ಲಿ ಬೈಕ್ ಓಡಿಸುತ್ತಾ, ಇನ್ನೊಂದು ಕೈಯನ್ನು ಕಿವಿಯ ಬಳಿ ಹಿಡಿದುಕೊಂಡು ಬರುತ್ತಿದ್ದ. ವೇಗ ತುಂಬಾ ಕಡಿಮೆಯಾಗಿತ್ತು. ಬಹುಶಃ ಮೊಬೈಲ್‌ನಲ್ಲಿ ಮಾತನಾಡುತ್ತಾ ಬರುತ್ತಿರಬೇಕು. ನನ್ನ ಬಳಿಗೆ ಬರುವಷ್ಟರಲ್ಲಿ ಅದು ಕೊನೆಗೊಂಡರೆ ಖಂಡಿತ ಇಂದು ನಮ್ಮಿಬ್ಬರ ಪರಿಚಯ ನಿಶ್ಚಿತ ಎಂದುಕೊಂಡು ಕಣ್ಣು ಕೀಲಿಸಿ, ನಡಿಗೆ ನಿಧಾನವಾಗಿಸಿದಳು. ಬೈಕ್ ಕೂಡಾ ನಿಧಾನವಾಗಿಯೇ ಬಂತು. ಇನ್ನೇನು ನನ್ನ ಮುಂದೆ ನಿಲ್ಲುತ್ತದೆ ಎಂದುಕೊಳ್ಳುವಷ್ಟರಲ್ಲಿ ಬೈಕ್ ಮುಂದೆ ಹೊರಟೇ ಹೋಯಿತು. ಆದರೆ ಆತ ಪೋನಿನಲ್ಲಿ ಹೇಳುತ್ತಿದ್ದ ‘ಸ್ಸಾರಿ, ನನಗೆ ಒಪ್ಪಿಗೆಯಾಗಲಿಲ್ಲ’ ಎನ್ನುವ ಮಾತು ಕೇಳಿಸಿತು. ದ್ವನಿಯೇನೋ ಮಧುರವಾಗಿತ್ತು. ಆದರೆ ಆತನಿಗೆ ಯಾವುದು ಒಪ್ಪಿಗೆಯಾಗಲಿಲ್ಲ. ಅದಕ್ಕೆ ಸ್ಸಾರಿ ಏಕೆ? ಎನ್ನುವ ಪ್ರಶ್ನೆಗಳೆದ್ದವು. ಇಂದು ಅವನ ದ್ವನಿಯನ್ನಾದರೂ ಕೇಳಿದೆ ಎಂದು ಸಂಭ್ರಮಿಸುವ ಮುನ್ನವೇ ಈ ಪ್ರಶ್ನೆಗಳೆದ್ದುದ್ದು ಕಸಿವಿಸಿಯಾಯಿತು.
ಈ ಸಂದರ್ಭದಲ್ಲಿ ಅಣ್ಣನಿದ್ದಿದ್ದರೆ ಅವನ ಬಳಿ ತನ್ನ ಆಸೆ, ಆತಂಕ ಎಲ್ಲವನ್ನು ಹೇಳಿಕೊಳ್ಳಬಹುದಾಗಿತ್ತು ಅನ್ನಿಸಿತು. ಅತ್ತಿಗೆಗೆ ಹೇಳಿದರೆ ಏನೆಂದುಕೊಳ್ಳುತ್ತಾರೋ? ಬೈಕ್ ಚೆಲುವನಿಗೆ ಒಪ್ಪಿಗೆಯಾಗದ್ದು ಏನು? ಮನೆಯಲ್ಲಿ ಆತನಿಗೆ ಹುಡುಗಿ ನೋಡುತ್ತಿರಬೇಕು. ಅದು ತನಗೆ ಇಷ್ಟವಾಗಲಿಲ್ಲ ಅಂದನೇನೋ. ಅಯ್ಯೋ, ಆತನಿಗೆ ಮದುವೆಯಾದರೆ ಈ ದಾರಿಯಲ್ಲಿ ಇನ್ನು ಬರುವುದಿಲ್ಲ. ಅವನಿಗೆ ಮದುವೆಯಾಗದಿರಲಿ, ಮದುವೆ ಗೊತ್ತಾಗದಿರಲಿ, ನಾನು ಅವನನ್ನು ಮಾತನಾಡಿಸಿ, ಪ್ರೀತಿಸಿ ಮದುವೆಯಾಗುವವರೆಗೂ... ಎಂದು ಏನೇನೋ ಹಲುಬಿಕೊಂಡಳು. ಛೇ, ನನ್ನ ಮನಸ್ಸು ಇಷ್ಟೊಂದು ದುರ್ಬಲವೇ? ನಾಳೆಯಿಂದ ಅವನ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿಯೇ ತೀರುತ್ತೇನೆ ಎಂದು ಶಪಥ ಮಾಡಿಕೊಂಡಳು. ತನ್ನ ಅಣ್ಣ, ಅಪ್ಪ ಅಮ್ಮ ಎಲ್ಲರ ಮೇಲೂ ಆಣೆ ಇಟ್ಟುಕೊಂಡಳು. ಸ್ಕೂಲಿನಲ್ಲಿ ಯಾವಾಗಲೋ ಕಲಿತಿದ್ದ, ‘ಮಸುಕಿದ ಮಬ್ಬಿನಲಿ ಕೈಹಿಡಿದು ನಡೆಸನ್ನೆನು’ ಹಾಡನ್ನು ಹೇಳಿಕೊಳ್ಳತೊಡಗಿದಳು.
ಮಾರನೇ ದಿನ ಹಠ ಹಿಡಿದವಳಂತೆ ಹಾಡನ್ನು ಹೇಳಿಕೊಳ್ಳುತ್ತಲೇ, ದಾರಿಯಲ್ಲಿ ಬರುತ್ತಿದ್ದಳು. ಎಷ್ಟೊತ್ತಾದರೂ ಬೈಕ್ ಬರಲೇ ಇಲ್ಲ. ವಾಚ್ ನೋಡಿಕೊಂಡಳು. ದಿನ ಬಿಡುವ ಹೊತ್ತಿಗೆ ಮನೆಯನ್ನು ಬಿಟ್ಟಿದ್ದಳು. ಆದರೂ ಆತ ಬರಲಿಲ್ಲ. ಹೇಳಿಕೊಳ್ಳುತ್ತಿದ್ದ ಹಾಡು ನಿಂತು ಹೋಗಿತ್ತು. ಇಂದು ಆತನೇಕೆ ಬರಲಿಲ್ಲ? ಪ್ರಶ್ನೆ ಪಿಶಾಚಿಯಂತೆ ಪ್ರಥ್ಯಕ್ಷವಾಗಿತ್ತು. ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ಅರಿತು, ಸ್ವಲ್ಪ ದೂರ ಹಿಂದೆ ಬಂದು ಮತ್ತೆ ನಿಧಾನವಾಗಿ ನಡೆದಳು. ಆದರೂ ಬೈಕ್ ಬರಲಿಲ್ಲ. ನಿರಾಶಳಾಗಿ ಅಫಿಸಿಗೆ ಹೋದಳು.
* * *
ಮೊದಲ ಬಾರಿಗೆ- ಆತನ ನೆನಪಿನಲ್ಲಿ ನಿಂತ ದಿನದಿಂದ ಇದೇ ಮೊದಲ ಬಾರಿಗೆ ಆತ ಬಂದಿರಲಿಲ್ಲ. ಆತನ ಬಗ್ಗೆಯೇ ಯೋಚಿಸುತ್ತಿದ್ದರೂ ಮನೆಯಲ್ಲಿ, ಆಫೀಸಿನಲ್ಲಿ ಅದನ್ನು ಅವಳು ತೋರಿಸಿಕೊಂಡಿರಲಿಲ್ಲ. ಆದರೆ ಇಂದು ಮಾತ್ರ ಅವಳಿಗೆ ತಡೆಯಲಾಗಲಿಲ್ಲ. ಕೆಲಸ ಮಾಡಲಾಗಲಿಲ್ಲ. ಹೇಗೋ ಮಧ್ಯಾಹ್ನದವರೆಗೂ ಆಪೀಸಿನಲ್ಲಿದ್ದು, ನಂತರ ಪರ್ಮಿಷನ್ ತೆಗೆದುಕೊಂಡು ಮನೆಗೆ ಬಂದಳು. ಇದೇ ಮೊದಲ ಬಾರಿಗೆ ಮಧ್ಯಾಹ್ನಕ್ಕೆ ಮನೆಗೆ ಬಂದ ರಜನಿಯನ್ನು ಕಂಡು ಸರೋಜಳಿಗೆ ಭಯ, ಆಶ್ಚರ್ಯ ಎಲ್ಲವೂ! ಏಕೋ ತಲೆ ನೋಯುತ್ತಿದೆ ಎಂಬ ಉತ್ತರಕ್ಕೆ ತೃಪ್ತಳಾಗದಿದ್ದರೂ, ರೆಸ್ಟ್ ತಗೋ ಎಂದು ಸಮಾಧಾನ ಹೇಳಿದಳು.
ಸಂಜೆ, ಏಳಾದರೂ ಎದ್ದು ಬಾರದ ರಜನಿಯನ್ನು ನೋಡಿ ಸರೋಜಳಿಗೆ ಗಾಬರಿಯಾಯಿತು. ಏಕೆ? ಏಕೆ? ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿದಳು. ಅದುವರೆಗೂ ಕಟ್ಟಿಕೊಂಡಿದ್ದ ಆತಂಕವೆಲ್ಲಾ ಮಾತಾಗಿ ಹೊರಗೆ ಬಂತು. ರಜನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಮಕ್ಕಳು ಟೀವಿ ನೋಡುತ್ತಿದ್ದುದರಿಂದ ಇಬ್ಬರೂ ವಿವರವಾಗಿ ಮಾತನಾಡಿದರು. ರಜನಿ ಆತನನ್ನೇ ಮದುವೆಯಾಗಬೇಕೆಂದು ಹಂಬಲಿಸುತ್ತಿರುವ ತನ್ನ ಮನದಾಳವನ್ನು ಹೇಳಿರಲಿಲ್ಲ. ಕೇವಲ ಆತ ಬರುದಿದ್ದುದಕ್ಕೆ ಆಗಿರುವ ಆತಂಕ, ಮತ್ತೆ ನೋಡುತ್ತೇನೋ ಇಲ್ಲವೋ ಎನ್ನುವ ಭಯ ಎನ್ನುವಂತೆ ಮಾತನಾಡಿದ್ದಳು. ರಜನಿ ಇನ್ನೊಂದೆರಡು ದಿನ ನೋಡು, ಆಗಲೂ ಬರದೇ ಇದ್ದರೆ, ಅವನ ಮನೆಯನ್ನು ಪತ್ತೆ ಹಚ್ಚಿ ಹೋಗಿ ನೋಡಿಕೊಂಡು ಬಾ. ಆದರೆ ಈ ರೀತಿ ಕೊರಗಿದರೆ ನನಗೆ ಭಯವಾಗುತ್ತದೆ ಎಂದಳು. ಮನೆ ಪತ್ತೆ ಹಚ್ಚುವುದು ಹೇಗೆ? ಎಂಬ ಪ್ರಶ್ನೆ ಭೂತಾಕಾರವಾಗಿ ಕಾಡಿತು. ಅವನ ಬಗ್ಗೆ ನಿನಗೆ ಏನು ಗೊತ್ತು, ಎಂದಾಗ, ಅವನ ಬೈಕ್‌ನ ನಂಬರ್ ಅಷ್ಟೇ ಗೊತ್ತು ಎಂದಳು. ತಕ್ಷಣ ಸರೋಜ, ಹಾಗದರೆ ಅವನ ಮನೆಯನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ ಬಿಡು. ಇನ್ನೊಂದೆರಡು ದಿನ ನೋಡು, ಎಂದು ಸಮಾಧಾನ ಮಾಡಿದಳು.

* * *

ಒಂದು. ಎರಡು.. ಮೂರು... ದಿನಗಳು ಕಳೆದು ಹೋದವು. ಆತ ಬರಲೇ ಇಲ್ಲ. ಇತ್ತ ರಜನಿ ಮನೋರೋಗಿಯಂತಾಗಿದ್ದಳು. ಸಿಟಿಯಲ್ಲೇ ಹುಟ್ಟಿ ಬೆಳೆದಿದ್ದ ಸರೋಜಾ ಮಾತ್ರ ಎದೆಗುಂದಲಿಲ್ಲ. ಒಂದು ಬಾರಿ ಆತ ಯಾರು? ಏನಾದ ಎಂಬ ವಿಷಯಗಳು ತಿಳಿದರೆ ಇವಳ ಖಾಯಿಲೆ ಹುಷಾರಾದಂತೆಯೇ ಎಂದುಕೊಂಡಳು. ತನ್ನ ಗಂಡನ ಜೊತೆಯಲ್ಲಿಯೇ ಆಟೋ ಓಡಿಸಿಕೊಂಡಿದ್ದ ತನ್ನ ಚಿಕ್ಕಪ್ಪನನ್ನು ಕರೆದು, ಬೈಕ್ ನಂಬರ್ ಕೊಟ್ಟು ಅದರ ವಿಳಾಸವನ್ನು ಪತ್ತೆ ಮಾಡಿಕೊಡುವಂತೆ ಕೇಳಿಕೊಂಡಳು. ಇದರಿಂದಾಗಿ ರಜನಿಯೂ ಸ್ವಲ್ಪ ಉತ್ಸಾಹದಿಂದಲೇ ಇದ್ದಳು. ಚಿಕ್ಕಪ್ಪನಿಗೆ ಹಲವಾರೂ ಅನುಮಾನಗಳೂ ಹುಟ್ಟಿಕೊಂಡವು. ಆದರೆ ಸರೋಜ, ಆ ಬೈಕಿನಿಂದ ಬಿದ್ದ ಕೆಲವು ಕಾಗದ ಪತ್ರಗಳು ನನ್ನ ಸ್ನೇಹಿತೆಗೆ ಸಿಕ್ಕಿವೆ, ಅವುಗಳನ್ನು ಹಿಂತಿರುಗಿಸುವುದಕ್ಕೆ ಎಂದು ಸುಳ್ಳು ಹೇಳಿಬಿಟ್ಟಳು.
ಎರಡು ದಿನ ಕಳೆದು, ಸಂಜೆ ಅವಳ ಚಿಕ್ಕಪ್ಪ ಅಡ್ರೆಸ್ ಹಿಡಿದು ಬಂದಾಗ ಇಬ್ಬರಿಗೂ ಖುಷಿಯಾಯಿತು. ರಜನಿಯೇ ಟೀ ಮಾಡಿಕೊಟ್ಟಳು. ಆಕಡೆಗೆ ಚಿಕ್ಕಪ್ಪ ಹೊರಟ ತಕ್ಷಣ, ಅಡ್ರೆಸ್ ನೋಡಿದಳು. ಹೆಸರು ರಮೇಶ್ ಎಂದಿತ್ತು. ಆ ವಿಳಾಸ ತೀರಾ ದೂರವೇನಿರಲಿಲ್ಲ. ನಡೆದೇ ಹೋದರೆ ಅರ್ಧ ಗಂಟೆಯ ದಾರಿ. ಈಗಲೇ ಹೋಗೋಣವೇ? ಎಂದಳು. ಸರೋಜಳಿಗೆ ಅವಳ ಆತುರ ಕಂಡು ನಗು ಬಂತು. ಅವನು ಯಾರು? ಮದುವೆಯಾಗಿದೆಯಾ? ಆಗಿಲ್ಲವೆಂದರೆ ನಿನ್ನನ್ನು ಇಷ್ಟಪಡುತ್ತಾನಾ? ಎಂಬ ಹಲವಾರು ಅನುಮಾನಗಳನ್ನು ಸರೋಜ ವ್ಯಕ್ತಪಡಿಸಿದಳು. ಆದರೆ ರಜನಿಯದು ಒಂದೇ ಒತ್ತಡ. ಆತನನ್ನು ಮದುವೆಯಾಗುವುದು ಬಿಡುವುದು ನನಗೆ ಮುಖ್ಯವಲ್ಲ. ಆತ ಬರುವುದು ಏಕೆ ನಿಂತು ಹೋಯಿತು ಎಂದು ತಿಳಿದುಕೊಂಡರೆ ಸಾಕು ಎಂದು ಸರೋಜಳ ಬಾಯನ್ನು ಮುಚ್ಚಿಸಿದಳು. ಬೆಳಿಗ್ಗೆಯೇ ಎದ್ದು ಹೋಗುವುದೆಂದು ತೀರ್ಮಾನಿಸಿದರು.

* * *

ಬೆಳಿಗ್ಗೆ ಅಲ್ಲಿಗೆ ತಲುಪಿದಾಗ ಏಳೂವರೆಯಾಗಿತ್ತು. ದಾರಿಯುದ್ದಕ್ಕೂ ರಜನಿ ಆತನನ್ನು ಯಾವ ರೀತಿಯಲ್ಲಿ ಎದುರುಗೊಳ್ಳುತ್ತೇನೆ ಎಂದು ಯೋಚಿಸಿ ಯೋಚಿಸಿ ಸುಸ್ತಾಗಿದ್ದಳು. ವಿಳಾಸದಲ್ಲಿದ್ದ ಎಲ್ಲವೂ ಅವರು ನಿಂತಿದ್ದ ಮನೆಯದ್ದೇ ಆಗಿತ್ತು. ಇನ್ನು ಒಳಗೆ ಹೋಗುವುದೊಂದೇ ಬಾಕಿ. ಆದರೆ ಹೇಗೆ? ಏನೆಂದು ಹೇಳುವುದು? ಇದುವರೆಗೂ ಅವರಿಬ್ಬರು ಯೋಚಿಸದ ನೂರಾರು ಪ್ರಶ್ನೆಗಳು ಆವರಿಸಿಕೊಳ್ಳತೊಡಗಿದವು. 'ದಿನವೂ ದಾರಿಯಲ್ಲಿ ಹೋಗುತ್ತಿದ್ದ ಒಬ್ಬನನ್ನು, ಈಗೇಕೆ ಆ ದಾರಿಯಲ್ಲಿ ಬರುತ್ತಿಲ್ಲ ಎಂದು ಹುಡುಕಿಕೊಂಡು ಬಂದಿದ್ದೇವೆ' ಎಂದರೆ ಎಂತಹ ನಗೆಪಾಟಲಿಗೆ ಈಡಾಗುತ್ತೇವೆ ಎಂದು ಇಬ್ಬರಿಗೂ ಭಯ, ಅವಮಾನ, ಅನಿಶ್ಚತತೆ ಎಲ್ಲವೂ ಉಂಟಾಯಿತು. 'ಬೇಡವೇ ಬೇಡ ವಾಪಸ್ಸು ಹೋಗೇ ಬಿಡುವ' ಎಂದು ರಜನಿ ಹೇಳಿ, ಇಬ್ಬರೂ ತಿರುಗುವಷ್ಟರಲ್ಲಿ, ಗೇಟು ಶಬ್ದ ಮಾಡಿಬಿಟ್ಟಿತು. ಇಬ್ಬರೂ ಕರೆಂಟ್ ಹೊಡೆದವರಂತೆ ಬೆಚ್ಚಿ ಬಿದ್ದರು. ಹೊರಗೆ ಬಂದವಳು ಹಾಲಿನವಳಾದ್ದರಿಂದ ಸ್ವಲ್ಪ ಸಮಾಧಾನವಾಯಿತು. ಇವರನ್ನು ನೋಡಿಕೊಂಡೇ ಮುಂದೇ ಹೋಗುತ್ತಿದ್ದ ಹಾಲಿನವಳನ್ನು, ಇನ್ನು ಬಿಟ್ಟರೆ ಸಾಧ್ಯವೇ ಇಲ್ಲವೆನ್ನುವಂತೆ ಸರೋಜ ಧಾವಿಸಿ ಮಾತನಾಡಿಸತೊಡಗಿದಳು. ‘ರಮೇಶ್ ಅನ್ನುವವರ ಮನೆ ಇದೆಯೇ?’ ಎಂದು ಕೇಳಿದಳು. ‘ಅಲ್ಲ, ಇದು ದನಿನ ಡಾಕ್ಟ್ರು ಮನೆ’ ಅಂದಳು. ಏನೋ ಹೊಳೆದವಳಂತೆ, ‘ಅದೆ, ಅವ್ರ ಮಗ ರಮೇಶ್’ ಅಂದಳು ಸರೋಜ. ‘ಏ.. ಅವ್ರಿಗೆ ಗಂಡುಮಕ್ಳಿಲ್ಲಕಣೇಳಿ’ ಎಂದ ಹಾಲಿನವಳು ‘ನಿಮಗೆ ಬೇಕಾಗಿರೋರು ಬೇರೆ ಯಾರೋ ಇರಬೇಕು’ ಎಂದು ಹೊರಟಳು. ರಜನಿ ಸರೋಜ ಇಬ್ಬರಿಗೂ ಮನಸ್ಸಿಗೆ ಪಿಚ್ಚೆನಿಸಿತು. ಐದಾರು ಹೆಜ್ಜೆ ಮುಂದೆ ಹೋಗಿದ್ದ ಹಾಲಿನವಳು ಮತ್ತೆ ಬಂದು, ‘ಮುಂಚೆ ಈ ಮನೇಲಿದ್ದವರಿಗೆ ರಮೇಶ ಅನ್ನೋ ಮಗ ಇದ್ದಂಗೆ ನೆನಪು. ಅವರು ಮನೆ ಖಾಲಿ ಮಾಡಿ, ಪುಷ್ಪಗಿರಿನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ಹೋಗಿ ಬಾಳ ದಿನ್ವಾತು’ ಅಂದಳು. ‘ಅದ್ರ ಅಡ್ರೆಸ್ ಗೊತ್ತಾ’ ಇಬ್ಬರೂ ಒಟ್ಟಿಗೆ ಕೇಳಿದ್ದನ್ನು ಅಚ್ಚರಿಯಿಂದ ನೋಡುತ್ತಾ ಹಾಲಿನವಳು ‘ಏ.. ಅದ್ಹೆಂಗೆ ಗೊತ್ತಾದತು ನಂಗೆ. ಬೇಕಾರೆ ಡಾಕ್ಟ್ರನ್ನ ಕೇಳಿ ನೋಡಿ’ ಅಂದು ಹೊರಟೇ ಹೋದಳು.
ಇಬ್ಬರೂ ಸ್ವಲ್ಪ ಹೊತ್ತು ಯೋಚಿಸಿ ಮನೆಯ ಗೇಟ್ ತೆಗೆದು ಒಳ ನುಗ್ಗಿಯೇ ಬಿಟ್ಟರು. ಕಾಲಿಂಗ್ ಬೆಲ್ ಒತ್ತಿ ಕಾದರು. ಸುಮಾರು ಅಯ್ವತ್ತರ ಪ್ರಾಯದ ವ್ಯಕ್ತಿ ಬಾಗಿಲು ತೆಗೆದು ಪ್ರಶ್ನಾರ್ಥಕವಾಗಿ ನೋಡಿದರು. ರಜನಿ ತಟ್ಟನೆ, ‘ಸಾರ್, ನಾನು ಜ್ಯೋತಿ ಅಂತ. ರಮೇಶ್ ಅವರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಬೇರೆಡೆ ಇದ್ದೇನೆ. ಸ್ವಲ್ಪ ರಮೇಶ್ ಅವ್ರನ್ನ ನೋಡಬೇಕು.’ ಏನೇನೋ ಹಲುಬತೊಡಗಿದಳು. ಆತ ಒಂದು ಕ್ಷಣ ಚಿಂತಾಕ್ರಾಂತವಾದವನಂತೆ ಕಂಡ. ಒಳಗೆ ಬನ್ನಿ ಎಂದು ಅವರಿಗೆ ಹೇಳಿ, ‘ಪಾಪ, ಈಗ ಒಂದ್ವಾರದಿಂದ ಅವನನ್ನ ಕೇಳಿಕೊಂಡು ಇನ್ನೂ ಮೂರ್‍ನಾಲ್ಕು ಜನ ಬಂದಿದ್ರು’ ಎನ್ನುತ್ತಾ ತಾನೂ ನಡೆದು ವರಾಂಡದಲ್ಲಿದ್ದ ಕುರ್ಚಿಯಲ್ಲಿ ಕುಳಿತ. ಅವರನ್ನೂ ಕುಳಿತುಕೊಳ್ಳಲು ಹೇಳಿದ. ನಂತರ, ನಿಧಾನವಾಗಿ ‘ನಿಮಗೆ ವಿಷಯ ಗೊತ್ತಾಗಿಲ್ಲ ಅನ್ಸುತ್ತೆ. ಈಗ್ಗೆ ಆರು ದಿನದ ಹಿಂದೆ ಆತ ತೀರಿಕೊಂಡ. ಅವನಿಗೆ ಬ್ರೈನ್ ಟ್ಯೂಮರ್ ಇತ್ತು...’ ಎಂದು ಏನೇನೋ ಹೇಳುತ್ತ, ಟೇಬಲ್ ಮೇಲೆ ಹರಡಿದ್ದ ವಿಸಿಟಿಂಗ್ ಕಾರ್ಡ್‌ಗಳಲ್ಲಿ ಹುಡುಕಿ ಒಂದನ್ನು ಎತ್ತಿಕೊಡುತ್ತ, ‘ಅವರ ತಂದೆ ತಾಯಿಯನ್ನು ನೋಡುವುದಾದರೆ ಈ ಅಡ್ರೆಸ್‌ಗೆ ಹೋಗಿ’ ಎಂದ.

* * *

ಸರೋಜ ರಜನಿ ಇಬ್ಬರೂ ಮುಖ ಮುಖ ನೋಡಿಕೊಂಡರು. ಮತ್ತಿನ್ನೇನ್ನೂ ಕೇಳಬೇಕೆನಿಸಲಿಲ್ಲ. ಕಾರ್ಡ್ ತೆಗೆದುಕೊಂಡು ಹೊರಟರು. ಮನೆಗೆ ಬರುವವರೆಗೂ ಯಾರೂ ಮಾತನಾಡಲಿಲ್ಲ. ಮನೆ ತಲುಪಿದ ತಕ್ಷಣ ‘ಈಗ ಆಪೀಸಿಗೆ ಹೋಗಿ ಬಾ, ಸಂಜೆ ಹೋಗಿ ನೋಡಿಕೊಂಡು ಬರೋಣ’ ಎಂದ ಸರೋಜಳಿಗೆ ಬೇಡ ಎನ್ನುವಂತೆ ತಲೆಯಾಡಿಸಿದಳು ರಜನಿ. ಕೈಲ್ಲಿದ್ದ ಕಾರ್ಡನ್ನು ಬಿಗಿಯಾಗಿ ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದಳು, ಸರೋಜಳ ಭುಜಕ್ಕೆ ಮುಖವಾನಿಸಿ.