Thursday, January 02, 2014

1932ರ ಮಡಿಕೇರಿ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳು

ಇಲ್ಲಿಗೆ 81 ವರ್ಷಗಳ ಹಿಂದೆ, ಅಂದರೆ, 1932 ಡಿಸೆಂಬರ್ 28ರಿಂದ 31ರವರೆಗೆ ನಾಲ್ಕು ದಿನಗಳ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆದಿತ್ತು. ಸಮ್ಮೇಳನಾಧ್ಯಕ್ಷತೆಯನ್ನು ಶ್ರೀಯುತ ಡಿ.ವಿ.ಜಿ. ವಹಿಸಿದ್ದರು. 2014ರಲ್ಲಿ ಅದೇ ಮಡಿಕೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಹೊತ್ತಿನಲ್ಲಿ, ಅಂದಿನ ಸಮ್ಮೇಳನದ ಕೆಲವು ನೆನಪುಗಳು ಇಲ್ಲಿವೆ. [ಆಧಾರ : ಕುವೆಂಪು ಅವರ 'ನೆನಪಿನ ದೋಣಿಯಲ್ಲಿ']
27.12.1932 ರಂದು ಮೈಸೂರಿನಿಂದ ಬರುವವರಿಗೆಂದೇ ಒಂದು ಬಸ್ಸನ್ನು ಗೊತ್ತು ಮಾಡಿದ್ದರು. ಆ ಬಸ್ಸಿನಲ್ಲಿ, ವೆಂಕಣ್ಣಯ್ಯ, ಬಿ.ಎಂ.ಶ್ರೀ, ರಾಜರತ್ನಂ, ಶ್ರೀನಿವಾಸ, ವಿಜಯದೇವ ಅವರೊಂದಿಗೆ ಕುವೆಂಪು ಇದ್ದರು. ಮಡಿಕೇರಿಯ ದಾರಿಯಲ್ಲಿ ಫ್ರೇಸರ್ಪೇಟೆ ಎಂಬಲ್ಲಿ ತಿಂಡಿಗೆಂದು ಇಳಿದಿದ್ದಾಗ ಎಲ್ಲರೂ ಬೆಣ್ಣೆದೋಸೆ ತಿನ್ನುತ್ತಾರೆ. ಆಗ ರಾಜರತ್ನಂ ಅವರು ಹೆಚ್ಚು ದೋಸೆ ತಿನ್ನುವ ಸಾಹಸವನ್ನೂ ಮಾಡುತ್ತಾರೆ. ಅಂದೇ ಸಂಜೆ ಈ ಸಾಹಿತಿಗಳ ದಂಡು ರಾಜಾಸೀಟಿಗೆ ಹೋಗಿ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುತ್ತದೆ.
28.12.1932 ಬೆಳಿಗ್ಗೆ ಅಧಿವೇಶನ ಅರಂಭ. ಡಿ.ವಿ.ಜಿ. ಅಧ್ಯಕ್ಷ ಭಾಷಣ ಮಾಡುತ್ತಾರೆ. ಜನರು ಉತ್ಸಾಹದಿಂದ ಭಾಗವಹಿದ್ದರು. 'ಏನುಉತ್ಸಾಹ ಇಲ್ಲಿಯ ಜನಕ್ಕೆ! ಕಿಕ್ಕಿರಿದಿದ್ದರು' ಎಂದು ಕುವೆಂಪಿಉ ದಾಖಲಿಸಿದ್ದಾರೆ. ಸಾಯಂಕಾಲ ಸಾಹಿತ್ಯ ಚರ್ಚೆ ಆರಂಭವಾಗುತ್ತದೆ. ಆಗ ಮಡಿಕೇರಿಯ ಶಂಭುಶಾಸ್ತ್ರಿ ಎಂಬುವವರು ಹೊಸ ರೀತಿಯ ನವೋದಯದ ಕವನಗಳನ್ನೆಲ್ಲಾ ಖಂಡಿಸಿ ಮಾತನಾಡುತ್ತಾರೆ. ಕುವೆಂಪು ಹೇಳುವಂತೆ 'ಗಾಂಭೀರ್ಯ ತಪ್ಪಿ'. ಅವರು ತನ್ನ ಖಂಡನೆಗೆ ಬಳಸಿಕೊಂಡಿದ್ದು ಕುವೆಂಪು ಅವರ 'ಕೊಳಲು' ಕವನ ಸಂಕಲನದ ಮೊದಲ ಪದ್ಯದ ಮೊದಲ ಎರಡು ಸಾಲಗಳು!
ಕಾಡಿನ ಕೊಳಲಿದು, ಕಾಡ ಕವಿಯು ನಾ,
ನಾಡಿನ ಜನರೊಲಿದಾಲಿಪುದು.
ಅವರ ಖಂಡನೆ ಮಂಡನೆ ಎಲ್ಲಾ ಮುಗಿದ ಮೇಲೆ ಮಾಸ್ತಿ, ಸಿ.ಕೆ. ವೆಂಕಟರಾಮಯ್ಯ, ಟಿ.ಎಸ್.ವೆಂಕಣ್ಣಯ್ಯ, ತೀ.ನಂ.ಶ್ರೀ. ಮೊದಲಾದವರು ಒಬ್ಬರಾದ ಮೇಲೆ ಒಬ್ಬರು ವೇದಿಕೆ ಏರಿ ಶಂಭುಶಾಸ್ತ್ರಿಯ ವಾದವನ್ನು ವಿರೋಧಿಸಿ ಮಾತನಾಡುತ್ತಾರೆ.
29.12.1932 ರಾಜರತ್ನಂ ನೇತೃತ್ವದಲ್ಲಿ ಮಡಿಕೇರಿಯ ದರ್ಶನ ನಡೆಯುತ್ತದೆ. ಮೊದಲು ಓಂಕಾರೇಶ್ವರ ದೇವಾಲಯಕ್ಕೆ ಹೋಗುತ್ತಾರೆ. ಅದರ ಬಗ್ಗೆ ಕುವೆಂಪು 'ಅಲ್ಲಿಯ ಸರೋವರ ಬಹಳ ಮನೋಹರವಾಗಿದೆ. ಅಲ್ಲಿಯ ವಿಗ್ರಹ ತುರುಕಣ್ಣಗೆ ಜುಟ್ಟು ಬಿಡಿಸಿ ಲಿಂಗ ಕಟ್ಟಿ ಬಿಟ್ಟಿದ್ದಾರೆ! ಅದು ಮೊದಲು ಮಸೀದಿಯಾಗಿದ್ದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ' ಎಂದು ಬರೆದಿದ್ದಾರೆ.
ಅಲ್ಲಿಂದ ಕಾಡು ತಿರಗಲು ಹೊರಡುತ್ತಾರೆ. ಆ ತಿರುಗಾಟದಲ್ಲಿ 'ಪೂವಮ್ಮ' ಎಂಬ ಬಾಲೆಯನ್ನು ಸಂಧಿಸುತ್ತಾರೆ, ಆ ಬೇಟಿಯ ನಂತರ ಕುವೆಂಪು ಮತ್ತು ರಾಜರತ್ನಂ ಅದೇ ಹೆಸರಿನಲ್ಲಿ ಒಂದೊಂದು ಕವಿತೆ ಬರೆದಿರುತ್ತಾರೆ. ಆ ಕವಿತೆಗಳನ್ನು ಕುರಿತು ಕುವೆಂಪು 'ಪ್ರತ್ಯೇಕವಾಗಿ, ಸ್ವತಂತ್ರವಾಗಿ: ಅವರು ಬರೆಯುತ್ತಾರೆ ಎಂಬುದು ನನಗಾಗಲಿ, ನಾನು ಬರೆಯುತ್ತೇನೆ ಎಂಬುದು ಅವರಿಗಾಗಲಿ ತಿಳಿದಿರಲಿಲ್ಲ. ನಮ್ಮ ಕವನಗಳು ಅಚ್ಚಾದ ಮೇಲೆ ಅದು ಗೊತ್ತಾದದ್ದು. ಅವರದ್ದು ಎಂಡ್ಕುಡ್ಕ ರತ್ನನ ಶೈಲಿಯಲ್ಲಿದೆ. ನನ್ನದು ಸಾಹಿತ್ಯ ಭಾಷೆಯಲ್ಲಿದೆ. ಆದರೂ ಸಾಮ್ಯ ಎಷ್ಟು ಅದ್ಭುತವಾಗಿದೆ? ಕೆಲವು ಉಪಮೆಗಳಂತೂ ಒಂದು ಮತ್ತಯೊಂದರ ಭಾಷಾಂತರ ಎಂಬಂತಿವೆ' ಎಂದು ಅಭಿಪ್ರಾಯ ದಾಖಲಿಸಿದ್ದಾರೆ.
30.12.1932 ಮಿತ್ರರೊಂದಿಗೆ ಕುವೆಂಪು ತಲಕಾವೇರಿ ನೋಡಲು ಹೋಗುತ್ತಾರೆ. ಬ್ರಹ್ಮಗಿರಿಯನ್ನು ಹತ್ತಿ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾರೆ. (ಅಂದು ಅವರಿಗುಂಟಾದ ದರ್ಶನ ಒಂದು ಮಹೋಪಮೆಯಾಗಿ ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಬಳಕೆಯಾಗಿದೆ)
31.12.1932 ಪ್ರೊ. ವೆಂಕಣ್ಣಯ್ಯನವರ ಸಲಹೆಯಂತೆ ಕವನ ವಾಚನ ನಡೆಯುತ್ತದೆ. ರಾಜರತ್ನಂ ಮತ್ತು ಕುವೆಂಪು ಇಬ್ಬರೂ ವೇದಿಕೆಯಲ್ಲಿದ್ದರು. ಕೊನೆಯಲ್ಲಿ ಕುವೆಂಪು ಸುಮಾರು ಒಂದೂವರೆ ಗಂಟೆಗಳ ಕಾಲ ಕವನ ವಾಚನ ಮಾಡುತ್ತಾರೆ!
ಆಗ ಸತ್ಯಾಗ್ರಹದ ಕಾಲ. ಕೊಡಗು ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ಕುವೆಂಪು ಮೊದಲಾದ ಕವಿಗಳು ದೇಶೀ ಸಂಸ್ಥಾನವಾದ ಮೈಸೂರಿನಿಂದ ಹೋಗಿದ್ದವು. ಕೊಡಗಿನಲ್ಲಿದ್ದಷ್ಟು ಸತ್ಯಾಗ್ರಹದ ಕಾವು ಇವರಿಗೆ ತಟ್ಟಿರಲೇ ಇಲ್ಲ. ಮೊದಲೇ ದೇಶಪ್ರೇಮಿಗಳಾಗಿದ್ದ, ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ಕೊಡಗಿನವರಿಗೆ ಕುವೆಂಪು ವಾಚಿಸಿದ 'ಸತ್ಯಾಗ್ರಹಿ' 'ಇಂದಿನ ದೇವರು', 'ಮಹಾತ್ಮ ಗಾಂಧಿ' 'ಮತಿಲಾಲ ನೆಹರು', 'ಭರತಮಾತೆಗೆ' 'ಕಲ್ಕಿ', 'ಪಾಂಚಜನ್ಯ' ಕವಿತೆಗಳು ಅಲ್ಲಿ ನೆರೆದಿದ್ದವರಿಗೆ ಭಾವಸ್ಫೋಟಕ್ಕೆ ಕಾರಾಣವಾಗಿಬಿಟ್ಟಿದ್ದವು. ಕೊನೆಯಲ್ಲಿ, 'ಭಾರತ ತಪಸ್ವಿನಿಗೆ' ಎಂಬ ಸಾನೆಟ್ಟನ್ನು ವಾಚಿಸುವಾಗ ಸಭೆಯ ನಡುವೆಯೇ ಸತ್ಯಾಗ್ರಹಿಗಳಾಗಿದ್ದ ಕೆಲವು ಯುವಕರು ಎದ್ದು 'ಮಹಾತ್ಮ ಗಾಂಧೀ ಕೀ ಜೈ!' 'ಭಾರತ ಮಾತಾ ಕೀ ಜೈ!' 'ಕಾಂಗ್ರೆಸ್ ಜಿಂದಾಬಾದ್' ಬ್ರಿಟಿಷರಿಗೆ ಧಿಕ್ಕಾರ!' ಇತ್ಯಾದಿ ಇತ್ಯಾದಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಯಾರ ಸಮಾಧಾನಕ್ಕೂ ಅವರು ಬಗ್ಗಲಿಲ್ಲ! ಅಲ್ಲಿಯೇ ಮಪ್ತಿಯಲ್ಲಿದ್ದ ಪೊಲೀಸಿನವರು ಅವರನ್ನೆಲ್ಲಾ ದಸ್ತಗಿರಿ ಮಾಡಿ ಹೊರಗೆ ಕರೆದುಕೊಂಡು ಹೋದರು. ಯಾವಾಗಲೂ ಕುವೆಂಪು ಅವರ ಜೊತೆಯಲ್ಲೇ ಇದ್ದು, ಅವರ ಕವನಗಳನ್ನು ಕೇಳುತ್ತಾ ಹೊಗಳುತ್ತಾ ಇದ್ದವರೊಬ್ಬರೇ ಸಿ.ಐ.ಡಿ. ಪೊಲೀಸರಾಗಿದ್ದರಂತೆ! ಕೊನೆಯಲ್ಲಿ ಅವರು ಕುವೆಂಪು ಅವರಿಗೆ 'ಪುಟ್ಟಪ್ಪನವರೆ, ಈ ಕೊಡಗಿನ ಜನ ಮೈಸೂರಿನಂಥವರಲ್ಲ. ನಿಮ್ಮ ಕವನಗಳನ್ನು ತಪ್ಪುತಪ್ಪಾಗಿ ತಿಳಿದು ರಾಜಕೀಯಕ್ಕೆ ಪರಿವರ್ತಿಸಿ ಬಿಡುತ್ತಾರೆ. ಆದ್ದರಿಂದ ಇಲ್ಲಿ ಅಂತಹ ಕವನಗಳನ್ನು ಓದದಿರುವುದೇ ಲೇಸು' ಎಂದು ಮುಸುಗಿನ ಎಚ್ಚರಿಕೆ ಕೊಟ್ಟರಂತೆ!





1981ರಲ್ಲಿ ಮಡಿಕೇರಿಯಲ್ಲಿ 54ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅದರ ಅಧ್ಯಕ್ಷತೆ ವಹಿಸಿದ್ದವರು ಶ್ರೀ ಶಂ.ಬಾ.ಜೋಶಿಯವರು.








 
ಈಗ 80ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿಯಲ್ಲಿ ನಡೆಯುತ್ತಿದೆ. ನಾ.ಡಿಸೋಜಾ ಅವರು ಅಧ್ಯಕ್ಷತೆ ವಹಿಸಿದ್ದಾರೆ. ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸೋಣ.




No comments: