Wednesday, January 08, 2014

ಕೊನೆಗೂ ಸಿಕ್ಕಿದಳು; ರಾಜರತ್ನಂ ಅವರ 'ಪೂವಮ್ಮ!'

ಸಹೃದಯರೆ, ಜ್ಞಾನಕ್ಕೆ ನೀರಿನ ಗುಣವಿದೆ ಎಂದು ತೇಜಸ್ವಿ ಒಂದು ಕಡೆ ಬರೆದಿದ್ದಾರೆ. ಅದು ಮಾನವನ ಎದೆಯಿಂದಲೆದೆಗೆ ಹರಿಯುತ್ತಲೇ ಇರುತ್ತದೆ. ನಾನು ಮೊನ್ನೆ ಕುವೆಂಪು ಅವರ 'ಪೂವಮ್ಮ' ಕವಿತೆಯ ಪಠ್ಯವನ್ನು ದಾಖಲಿಸುವಾಗ, ರಾಜರತ್ನಂ ಅವರ 'ಪೂವಮ್ಮ' ಸಿಗದೇ ಇರುವ ವಿಷಯ ತಿಳಿಸಿದ್ದನಷ್ಟೆ. ಆದರೆ ಈಗ ನೋಡಿ: ಕೇವಲ ಒಂದೇ ದಿನದಲ್ಲಿ, 'ಕನಸು' ಕಾವ್ಯನಾಮದ, http://www.kannadakavyakanaja.blogspot.in/ ಮಾಲೀಕರು ಕವನದ ಪಠ್ಯವನ್ನು ಕಳುಹಿಸಿಕೊಟ್ಟಿದ್ದಾರೆ. ನಾನು ಅವರ ಬ್ಲಾಗಿಗೆ ತಕ್ಷಣ ಭೇಟಿ ಕೊಟ್ಟೆ. ಏನಾಶ್ಚರ್ಯ. ಹಲವಾರು ಕವಿಗಳ ಹಲವಾರು ಕವಿತೆಗಳನ್ನು ಅವರು ಸಂಗ್ರಹಿಸಿದ್ದಾರೆ; ಆ ಮೂಲಕ ಓದುಗರಿಗೆ ನೆರವಾಗಿದ್ದಾರೆ.

'ಕನಸು' ಕಾವ್ಯನಾಮ ಇವರ ಹೆಸರು ರೇಖಾ ರೋಹಿತ್.. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಮನಃ ಶಾಸ್ತ್ರಜ್ಞೆ, ಸಾಹಿತ್ಯ, ಸಂಗೀತ, ಪ್ರಕೃತಿಯೆಡೆಗೆ ಎಂದೂ ಮುಗಿಯದ ಒಲವಿರಿಸಿಕೊಂಡಿರುವ ಅವರ ಬ್ಲಾಗನ್ನು ನಾನು ಅನುಸರಿಸತೊಡಗಿದ್ದೇನೆ. ನೀವು ಅನುಸರಿಸಿ, ಕನ್ನಡ ಕವನಗಳ ರಸದೌತಣವನ್ನುಣ್ಣಬಹುದು.

ಧನ್ಯವಾದಗಳು... ಧನ್ಯವಾದಗಳು... ಧನ್ಯವಾದಗಳು 'ಕನಸು' ಅವರಿಗೆ-

ರಾಜರತ್ನಂ ಅವರ ಪೂವಮ್ಮ' ಕವಿತೆಯ ಪಾಠ ಕೆಳಗಿದೆ. ಸಹೃದಯ ಓದುಗರು ಎರಡನ್ನೂ ಓದಿ ಆನಂದಿಸಿ. ಹೋಲಿಸಿ ನೋಡಿದರೆ ನಿಮಗೇ ಅಚ್ಚರಿಯಾಗುತ್ತದೆ. ಮಹಾವ್ಯಕ್ತಿಗಳ(ಪ್ರತಿಭೆಗಳ) ಯೋಚನೆ ಒಂದೇ ಆಗಿರುತ್ತದಂತೆ! ಕನ್ನಡದ ಕವಿಗಳಿಬ್ಬರು ಒಂದೇ ವ್ಯಕ್ತಿಯಿಂದ, ಒಂದೇ ಸನ್ನಿವೇಶದಿಂದ ಪ್ರಭಾವಿತಗೊಂಡು ಒಂದೇ ಸಮಯದಲ್ಲಿ ರಚಿಸಿರುವ ಈ ಎರಡೂ ಕವಿತೆಗಳು, ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಪ್ರಸ್ತಾಪವಾಗುವ 'ಪ್ರತಿಭೆ' ವ್ಯುತ್ಪತ್ತಿ' ಮೊದಲಾದವುಗಳಿಗೆ ಹಾಗೂ ಕವಿತೆಯ ಹುಟ್ಟು ಹೇಗೆ ಎಂಬ ವಿಚಾರಗಳಿಗೆ ನಮ್ಮನ್ನು ಚಿಂತನೆಗೆ ಹಚ್ಚಬಲ್ಲವು!

ಪೂವಮ್ಮ
ಮಡಕೇರೀಲಿ ರತ್ನ
ಕಂಡ ಒಸಾ ಮತ್ನ.

'ಮಡಕೇರೀಲಿ ಮಡಕೆ ಯೆಂಡ
ಈರ್ದಿದ್ರ್ ಅಲ್ಲೀಗ್ ಓದ್ದೂ ದಂಡ'
ಅಂದಿ ರತ್ನ ಪಡಕಾನೇಗೆ
ಒಂಟ, ಬೆಟ್ಟದ ನೆತ್ತಿ ಮೇಗೆ
        ಓಯ್ತಿದ್ದಂಗೆ ನಿಂತ!
        ಕಲ್ಲಾದಂಗೆ ಕುಂತ!

ಸುತ್ತ ಸಾಯೋ ಬಿಸಿಲಿನ್ ಚಾಪೆ!
ಅಲ್ಲಲ್ಲೆ ಒಸಿ ನೆರಳಿನ್ ತೇಪೆ!
ಅಲೆಯಲೆಯಾಗಿ ಬಿಸಿಲಿನ್ ಜೊತ್ಗೆ
ಸುತ್ತಿನ್ ಗುಡ್ಡಗೊಳ್ ಕುಣದರ್ ಮೆತ್ಗೆ
       ಮನಸೀಗ್ ಅರ್ಸ ತರ್‍ತ-
       ರತ್ನ ಯೆಂಡ ಮರ್‍ತ!

'ಮುದುಕರ್ ಸಾವೇ ನೋಡಾಕ್ ಚಂದ!'
ಅಂದ್ರೆ ಸೂರ್‍ಯ ಸಾಯಾಲ್ಲೇಂದ;
'ಸಾಯೋ ಮುದುಕ ಸಂಜೆ ಸೂರ್‍ಯ
ನೆಗತ ನಿಲ್ಲೋಕ್ ಇವ್ಗೇನ್ ಕಾರ್‍ಯ?'
        ಅಂತ ಇಂದಕ್ ತಿರ್ಗಿ
        ನೋಡ್ದೆ - ಬತ್ತು ಗಿರ್ಕಿ!

ದೇವರದೊಂದು ಚೆಂದದ್ ಸೋತ್ರ
ಕೊಡಗಿನ್ ಮೇಗಿನ್ ಒಂದ್ ನಕ್ಸತ್ರ
ಕೊಡಗಿನ್ ಒಂದ್ ಊ ಗಾಳೀಲ್ ತೇಲ್ತ
ಬಂದಂಗಿದ್ಲು ಅತ್ರ ಕಾಲ್ತಾವ್
          ಒಂದು ಕೊಡಗೀನುಡಗಿ!
          ಐದಾರೊರಸದ್ ವುಡಗಿ!

ಕೊಡಗಿನ್ ತೋಟದ್ ಕಾಪೀ ಅಣ್ಣು
ತುಟಿಗೊಳ್! ಇಳ್ಳಿನ್ ಬೆಳಕೆ ಕಣ್ಣು!
ಕೆನ್ನೆ ಅನಕ ಕೊಡಗಿನ್ ಕಿತ್ಲೆ!
ಔಳೇಳಿದ್ಲು ನಾ ಕೇಳೂತ್ಲೆ:
         'ನಿಂಗೆ ಯೆಸರೇನಮ್ಮ?'
         'ನನ್ನೆಸರು ಪೂವಮ್ಮ!'

'ಪೂವಮ್ಮ!' ಹಾ! ಎಂತಾ ಯೆಸರು!
ಕಣ್ಣಿಗ್ ಚಿತ್ರ ಕಟ್ಟೋ ಯೆಸರು!
ರೂಪು ರಾಗಕ್ ತಕ್ಕಂತ್ ಯೆಸರು!
ಎಂಗ್ ನೋಡಿದ್ರು ಒಪ್ಪೋ ಯೆಸರು!
'ಪೂವಮ್ಮಾ! ಪೂವಮ್ಮಾ!'
'ಪೂವಮ್ಮಾ! ಪೂವಮ್ಮಾ!'

ಔಳ್ ನೋಡೂತ್ಲೆ ನಂಗ್ ಮತ್ತಾಯ್ತು!
ಔಳ್ ಮಾತ್ಕೇಳಿ ಒಂದ್ ಅತ್ತಾಯ್ತು!
ಔಳ್ ಮಾತ್ ಇನ್ನಾ ಕೇಳ್ಬೇಕೂಂತ
'ನಾನ್ಯಾರ್ ಗೊತ್ತೆ?' ಅಂದ್ರೆ 'ಹ್ಞೂ'oತ
          'ನೀ ಯೆಂಡಕುಡಕ' ಅಂದ್ಲು
           ನೆಗ್ತ ಅತ್ರ ಬಂದ್ಲು.

'ನೀ ನಾ ಕುಡಿಯೋದ್ನ್ ಎಲ್ ನೋಡ್ದೇಮ್ಮ?'
ಅಂದ್ರೆ, 'ಯಾವೋನ್ಗೈತೆ ಜಮ್ಮ
ಔನ್ಗೆ ಯೇಳ್ತೀವ್ ಕೊಡವಾಂತಂದಿ!
ಕುಡದಂಗ್ ಆಡೋನ್ ಕುಡಕಾಂ'ತ್ ಅಂದಿ
          ತೊಡೇನ್ ಅತ್ತಿದ್ಲು ಮೆಲ್ಗೆ!
          ಕುಡದೋನ್ ಅಂದ್ರೆ ಸಲ್ಗೆ!

ಕತ್ತಿನ್ ಸುತ್ತ ಕೈ ಆಕ್ಕೊಂಡಿ
'ಅಣ್ಣ ರತ್ನ' ಅಂತ್ ನೆಕ್ಕೊಂಡಿ
'ಯೆಂಡದ ಪದಗೊಳ್ ಏಳ್ ನೋಡಾನೆ!
ನಾನೂ ನಿನ್ನಂಗ್ ಕಲ್ತ್ ಆಡಾನೆ!'
          ಅಂದ್ಲು ಮೊಕಾನ್ ನೋಡಿ!
          ಕಣ್ಣ ದೊಡ್ದುಮಾಡಿ!

ಇಲ್ದಿದ್ ತಂಗಿ ಆಗ್ ವುಟ್ಟಿದ್ಲು
ಪೂವಮ್ಮಾನೆ ನಂಗೆ ಮೊದಲು!
ತಂಗಿ ವುಟ್ಟಿದ್ ದಿವಸಾಂತೇಳಿ
ಆಡ್ದೆ ಯೆಂಗೀಸ್ ಇಡದಂಗ್ ತಾಲಿ-
      ಸೂರ್‍ಯ ಮುಳಗಿದ್ ಕಾಣ್ದೆ!
      ಯೆಂಡ ಬೇಕಂತ್ ಅನ್ದೆ!

No comments: