Showing posts with label ಎಲ್ಲೋರ ಕೈಲಾಸನಾಥ ದೇವಾಲಯ. Show all posts
Showing posts with label ಎಲ್ಲೋರ ಕೈಲಾಸನಾಥ ದೇವಾಲಯ. Show all posts

Saturday, July 11, 2009

ಎಲ್ಲೋರಾ!!! ಎಷ್ಟು ಗೊತ್ತು?


ಈ ಸೃಷ್ಟಿಯ ಮಹಾ ಮಹಾ ಅದ್ಭುತಗಳನ್ನು ನೋಡಿ ಆಶ್ಚರ್ಯ ಪಡುವುದು ಮಾನವನ ಸಹಜಗುಣವೇ ಆಗಿದೆ. ಹಾಗೆಯೇ ಮಾನವ ನಿರ್ಮಿತ ಅದ್ಭುತಗಳೂ ನಮ್ಮನ್ನು ಮೂಕವಿಸ್ಮಿತರಾಗುವಂತೆ ಮಾಡುತ್ತವೆ.


ಶ್ರವಣಬೆಳಗೊಳದ ಗೊಮ್ಮಟನ ಎದುರಿಗೆ ನಿಂತಾಗ ಮಾತು ಇಲ್ಲವಾಗಿ ಭವ್ಯತೆಯೇ ಎದ್ದು ಬಂದಂತಾಗುವುದಿಲ್ಲವೇ!? ಅಂತಹ ಮತ್ತೊಂದು ಮಹಾದ್ಭುತವೇ ಎಲ್ಲೋರ ಕೈಲಾಸನಾಥ ದೇವಾಲಯ!


ಇತ್ತೀಚಿಗೆ ಒಂದು ದಿನ ಮಿತ್ರರ ಜೊತೆಯಲ್ಲಿ ಎಲ್ಲೋರಕ್ಕೆ ಭೇಟಿಯಿತ್ತು, ಸುಮಾರು ಒಂಬತ್ತು ಗಂಟೆಗಳ ಕಾಲ ಕೈಲಾಸನಾಥ ದೇವಾಲಯ ಒಂದನ್ನೇ ವೀಕ್ಷಿಸಿದ್ದೆ!.


ಭವ್ಯತೆ, ಭೂಮತೆ, ಮಹೋನ್ನತಿ ಮೊದಲಾದ ಪದಗಳು ಕಲ್ಪನೆಗೆ ನಿಲುಕುವ ಏಕೈಕ ಸ್ಥಳ ಕೈಲಾಸನಾಥ ದೇವಾಲಯ! ಮುನ್ನೂರಕ್ಕೂ ಹೆಚ್ಚು ಫೋಟೋಗಳನ್ನು ಕ್ಲಿಕ್ಕಿಸಿದ ನಾವು, ದೇವಾಲಯದಲ್ಲಿ ಇದ್ದಷ್ಟು ಹೊತ್ತು ಮಾತನಾಡಿದ್ದು ತುಂಬಾ ಕಡಿಮೆ.


ಮಾತನಾಡಬಾರದೆಂದು ನಾವೇನು ಮೊದಲೇ ನಿರ್ಧರಿಸಿರಲಿಲ್ಲ. ಆ ಭವ್ಯ ಕಲಾದೇಗುಲವನ್ನು ಹಾಗೂ ಅದರ ನಿರ್ಮಿತಿಯ ಹಿಂದಿರುವ ಕಲಾವಂತ ಮನಸ್ಸುಗಳನ್ನು ಹಾಗೂ ಶತಮಾನಗಳ ಕಾಲ ದುಡಿದವರ ಶ್ರಮವನ್ನು ಕಂಡು ಮಾತೇ ಮರೆತು ಹೋಗಿತ್ತು!


ಬೆಟ್ಟದ ಮೇಲೆ ಒಂದೇ ಜಾಗದಲ್ಲಿ, ಬಿಸಿಲನ್ನೂ ಲೆಕ್ಕಿಸದೆ ಸುಮಾರು ಹೊತ್ತು ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ದೇವಾಲಯವನ್ನು ನೋಡಿ ಆನಂದಿಸುತ್ತಿದ್ದ ವಿದೇಶಿ ಪ್ರವಾಸಿಗನೊಬ್ಬನನ್ನು ‘ದೇವಾಲಯ ನೋಡಿ ಏನನ್ನಿಸಿತು?’ ಎಂದು ಕೇಳಿದಾಗ ಆತ ಹೇಳಿದ್ದು ಒಂದೇ ವಾಕ್ಯ! ‘ನಾನು ನನ್ನ ಮಾತುಗಳನ್ನು ಕಳೆದುಕೊಂಡಿದ್ದೇನೆ!’ ಎಂದು.


ಈಗಿನ ಮಹಾರಾಷ್ಟ್ರ ರಾಜ್ಯದ ಔರಂಗಬಾದ್ ಜಿಲ್ಲೆಯ ಎಲ್ಲೋರಾದಲ್ಲಿ ೩೪ ಮಾನವ ನಿರ್ಮಿತ ಗುಹೆಗಳ ಸಮುಚ್ಚಯವಿದೆ. ಚರಣಾದ್ರಿ ಪರ್ವತಸಾಲಿನಲ್ಲಿರುವ ಈ ಗುಹೆಗಳಲ್ಲಿ ಅತ್ಯಂತ ಬೃಹತ್ತಾದುದ್ದು ಮತ್ತು ಮಹತ್ತಾದುದ್ದು ೧೬ನೆಯದಾದ ಕೈಲಾಸನಾಥ ದೇವಾಲಯ.


ಕರ್ನಾಟಕವನ್ನು ಆಳಿದ ರಾಷ್ಟ್ರಕೂಟ ದೊರೆಗಳ ಮಹೋನ್ನತ ಕೊಡುಗೆಯಿದು. ಇದರ ನಿರ್ಮಾಣ ಕಾಲ ಏಳರಿಂದ ಹತ್ತನೇ ಶತಮಾನದ ಸುಮಾರು ಮುನ್ನೂರಕ್ಕೂ ಅಧಿಕ ವರ್ಷಗಳು! ರಾಷ್ಟ್ರಕೂಟ ದೊರೆ, ಕನ್ನಡಿಗ ಮೂರನೇ ಕೃಷ್ಣನ ಕಾಲದಲ್ಲಿ ಅದರ ನಿರ್ಮಾಣ ಪೂರ್ಣವಾಯಿತೆಂದು ಊಹಿಸಲಾಗಿದೆ.


ಈಗ ಈ ದೇವಾಲಯ ಯುನೆಸ್ಕೊ ಗುರುತಿಸಿರುವ ವಿಶ್ವಪರಂಪರೆಯ ತಾಣವಾಗಿದೆ.


ಇದು ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಏಕಶಿಲಾ ದೇವಾಲಯ. ಕಳಶದಿಂದ ಹಿಡಿದು ಇಡೀ ದೇವಾಲಯ, ಗರ್ಭಗುಡಿ, ಸಭಾಮಂಟಪ, ಕೈಲಾಸನಾಥ ಲಿಂಗ, ಬೃಹತ್‌ಗಾತ್ರದ ಆನೆಗಳು, ವಿಜಯಸ್ಥಂಭಗಳು, ಮುಖ್ಯದೇವಾಲಯದ ಎಡ ಬಲ ಹಾಗೂ ಹಿಂಬದಿಯಲ್ಲಿರುವ ಸಾವಿರಾರು ಅಡಿ ವಿಸ್ತೀರ್ಣದ ವಿಶಾಲ ಸಭಾಮಂಟಪಗಳು, ನೂರಾರು ಕಂಬಗಳು ಎಲ್ಲವೂ ಒಂದೇ ಕಲ್ಲಿನಲ್ಲಿ ರಚಿತವಾಗಿವೆ.


ಒಟ್ಟು ಶಿಲಾಪರ್ವತದ ಸುಮಾರು ೮೧ ಮೀಟರ್ ಉದ್ದ, ೪೭ ಮೀಟರ್ ಅಗಲ ಹಾಗೂ ೩೩ ಮೀಟರ್ ಎತ್ತರದ ಜಾಗದಲ್ಲಿ ದೇವಾಲಯವನ್ನು ಮೇಲಿನಿಂದ ಕೆಳಗೆ ಕೆತ್ತುತ್ತಾ ನಿರ್ಮಿಸಿಲಾಗಿದೆ.


ಮೇಲ್ಭಾಗದಲ್ಲಿ ಬಿಡಿಸಿರುವ ಒಂದು ಕಮಲದ ಹೂವಿನ ಮೇಲೆ ನಾಲ್ಕು ಸಿಂಹಗಳನ್ನು ಕೆತ್ತರಲಾಗಿದೆ.


ಈ ನಾಲ್ಕು ಸಿಂಹಗಳನ್ನು ಸ್ಥಳಾಂತರಿಸಿದರೆ, ಆ ಕಮಲದ ಹೂವಿನ ನಡುವೆ ಒಂದು ದೊಡ್ಡ ಹೆಲಿಕಾಪ್ಟರನ್ನು ಸರಾಗವಾಗಿ ಇಳಿಸಬಹುದಾದಷ್ಟು ದೊಡ್ಡದಾದ ಕಮಲದ ಹೂವನ್ನು ವರ್ಣನೆಯಿಂದಾಗಲೀ, ವಿವರಣೆಯಿಂದಾಗಲೀ ನಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲಾಗಿವುದಿಲ್ಲ!


ಬೃಹತ್ ಗಾತ್ರದ ನೂರಾರು ಆನೆಗಳು ಇಡೀ ದೇವಾಲಯವನ್ನು ಹೊತ್ತು ನಿಂತಿರುವಂತೆ ನಿರ್ಮಾಣ ಮಾಡಲಾಗಿದೆ.


ಒಂದು ಅಂದಾಜಿನ ಪ್ರಕಾರ ಈ ದೇವಾಲಯವನ್ನು ಕಂಡರಿಸುವುದಕ್ಕೆ ಬೆಟ್ಟದಿಂದ ಹೊರ ತೆಗೆದಿರುವ ಕಲ್ಲು ಎರಡು ಲಕ್ಷ ಟನ್‌ಗಳಿಗಿಂತಲೂ ಹೆಚ್ಚು!


ಗಂಗಾ, ಯಮುನ, ಸರಸ್ವತಿ, ಗಣಪತಿ, ಶಿವನ ವಿವಿಧ ಸ್ವರೂಪಗಳು, ವಿಷ್ಣುವಿನ ದಶಾವತಾರ ಸ್ವರೂಪಗಳು, ದುರ್ಗಾ, ಸಪ್ತಮಾತೃಕೆಯರು ಮೊದಲಾದ ಬೃಹತ್‌ಗಾತ್ರದ ದೇವತಾ ಮೂರ್ತಿಗಳು ಭಿತ್ತಿಯಲ್ಲಿವೆ.


ಗಜಾಸುರಮರ್ಧನ ಶಿವನ ಮೂರ್ತಿ ಹಾಗೂ ರಾವಣ ಕೈಲಾಸ ಪರ್ವತವನ್ನು ಎತ್ತುತ್ತಿರುವ ಶಿಲ್ಪಗಳಂತೂ ಗೊಮ್ಮಟ ಸದೃಶ್ಯವಾಗಿವೆ. ದೇವಾಲಯದ ಭವ್ಯತೆಯನ್ನು ಪುಟಗಟ್ಟಲೆ ವಿವರಣೆಯಿಂದಲೂ ಕಟ್ಟಿಕೊಡಲಾಗುವುದಿಲ್ಲ.


ಜೀವನದಲ್ಲಿ ಒಮ್ಮೆಯಾದರೂ ನೋಡಿ ಆನಂದಿಸಬೇಕಾದ ಕಲಾಕೃತಿ ಎಂದಷ್ಟೇ ಹೇಳಬಹುದು. ಪ್ರತಿಯೊಬ್ಬ ಕನ್ನಡಿಗನೂ ಒಮ್ಮೆಯಾದರೂ ಹೋಗಿ, ಕನ್ನಡಿಗ ದೊರೆಗಳ ಆ ಮಹೋನ್ನತ ಕೊಡುಗೆಯನ್ನು ಕಂಡು ಧನ್ಯರಾಗಬೇಕು ಎಂಬುದಷ್ಟೇ ನನ್ನ ಅಭೀಪ್ಸೆ! ಏಕೆಂದರೆ, ಅದೊಂದು ಕಲ್ಲಿನಲ್ಲಿ ಕಡೆದಿಟ್ಟ ಮಹಾಕಾವ್ಯ.


ರಾಮಾಯಣ ಮಹಾಭಾರತಗಳು ಈ ಶಿಲ್ಪಕಾವ್ಯದ ಮುಂದೆ ಕುಬ್ಜವಾಗಿ ಕಂಡರೆ ಖಂಡಿತ ಅದು ನಿಮ್ಮ ದೃಷ್ಟಿ ದೋಷವಲ್ಲ.


ಹಲವಾರು ಕೋನಗಳಿಂದ ದೇವಾಲಯವನ್ನು ಕ್ಲಿಕ್ಕಿಸುವುದು ಹಾಗೂ ದೇವಾಲಯದ ಒಳಗೆ ಮತ್ತು ಹೊರಗೆ ನಿರ್ಮಿಸಿರುವ ಅದ್ಭುತವಾದ ಶಿಲ್ಪಗಳನ್ನು ಕೆಮಾರದಲ್ಲಿ ಸೆರೆಹಿಡಿಯುವುದು ನಮ್ಮ ಉದ್ದೇಶವಾಗಿತ್ತು.


ಹೀಗೆ ವಿಶೇಷವಾಗಿ ಸೆರೆಹಿಡಿದ ಕೈಲಾಸನಾಥ ದೇವಾಲಯದ ವಾಸ್ತು-ಶಿಲ್ಪ ಸೌಂದರ್ಯವನ್ನು ಆಯ್ದ ಚಿತ್ರಗಳ ಮೂಲಕ ಪರಿಚಯಿಸುವ ಇರಾದೆ ನನ್ನದಾಗಿತ್ತು.