Saturday, September 22, 2012

ಮಹಾಮಾತೆ ಮಂಥರೆ

ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್.
-ಶ್ರೀ ಕುವೆಂಪು, ಶ್ರೀರಾಮಾಯಣ ದರ್ಶನಂ ಮಹಾಕಾವ್ಯ. ಪುಟ ೧೨೩; ಸಾಲು ೩೦೩-೦೪.

ಸೂರ್ಯೋದಯಕ್ಕೂ ಮೊದಲೆ ಎದ್ದು, ನದಿಯೆಡೆಗೆ ಹೋಗಿ ನಿತ್ಯ ಕರ್ಮಾದಿಗಳನ್ನು ಮುಗಿಸಿ, ಸ್ನಾನಕ್ಕೆಂದು ನಡುಹೊಳೆಗಿಳಿದ ಭರತ ಯೋಚಿಸಿದ. ‘ನೆನ್ನೆಗೆ ಹದಿನಾಲ್ಕು ವರ್ಷಗಳು ಮುಗಿದು ಹೋದವು. ಅಣ್ಣನು ಸೀತಾ ಲಕ್ಷ್ಮಣರೊಂದಿಗೆ ತಿರುಗಿ ಬರಲಿಲ್ಲ. ಅಣ್ಣನ ಸುಳಿವನ್ನರಸಿ ಹೋಗಿದ್ದ ಭಟರು ನಿರಾಶರಾಗಿ ಹಿಂದುರಿಗಿದರಂತೆ. ನನ್ನ ಮನೋನಿಶ್ಚಯದಂತೆ ಇಂದು ನಾನು ಅಗ್ನಿಪ್ರವೇಶ ಮಾಡಲೇ ಬೇಕು. ಇನ್ನೊಂದು ಜಾವದೊಳಗೆ ಅಣ್ಣನ ಸುದ್ದಿ ನನಗೆ ತಲಪದಿದ್ದರೆ ನಾನು ಅಗ್ನಿಗಾಹುತಿಯಾಗುವುದು ಶತಸಿದ್ದ’ ಎಂದು ನಿರ್ಧರಿಸಿ ಸ್ನಾನಾದಿಗಳನ್ನು ಮುಗಿಸಿ, ರಥವೇರುತ್ತಿದ್ದ ಸೂರ್ಯನಿಗೆ ಅರ್ಘ್ಯವನಿತ್ತು ಆಶ್ರಮದೆಡೆಗೆ ನಡೆದನು. ಹೊರೆಹೊರೆ ಉರುವಲುಗಳನ್ನು ತಂದು ಅಗ್ನಿಕುಂಡದ ಸುತ್ತಲೂ ಜೋಡಿಸತೊಡಗಿದ. ಇನ್ನಷ್ಟು ಮತ್ತಷ್ಟು ಸೌದೆಗಳನ್ನು ತಂದು ಅಗ್ನಿಕುಂಡದ ಸುತ್ತಲೂ ಜೋಡಿಸಿ ತುಪ್ಪವನ್ನು ಸುರಿದು ಬೆಂಕಿಯನುರಿಸಿದ ಭರತ ಯೋಚಿಸಿದ. ‘ಹದಿನಾಲ್ಕು ವರ್ಷಗಳು ಕಳೆದ ಮೇಲೆ ಒಂದರಗಳಿಗೆಯೂ ತಡಮಾಡದೆ ಬಂದು ನಿನ್ನನ್ನು ಸೇರುತ್ತೇನೆ ಎಂದಿದ್ದ ಅಣ್ಣ ಹೀಗೇಕೆ ಮಾಡಿದ? ಅವನೆಂದೂ ಮಾತಿಗೆ ತಪ್ಪುವನಲ್ಲ. ನಾನು ಅವನ ತಮ್ಮ. ನಾನೂ ಮಾತಿಗೆ ತಪ್ಪಲಾರೆ. ತಾಯಂದಿರು ಮತ್ತು ಶತ್ರುಜ್ಞಾದಿಗಳುಗಳು ಬಂದು ಅಡ್ಡಿ ಪಡಿಸುವ ಮೊದಲೇ ನಾನು ಅಗ್ನಿ ಪ್ರವೇಶ ಮಾಡಿಬಿಡಬೇಕು’ ಎಂದುಕೊಂಡು ಮತ್ತಷ್ಟು ತುಪ್ಪವನ್ನು ಬೆಂಕಿಗೆ ಸುರಿದನು.

ಮೇಲಿಂದ ಬೀಳುತ್ತಿದ್ದ ತುಪ್ಪದ ಕಡೆಗೆ ದಿಗ್ಗನೆದ್ದ ಜ್ವಾಲೆಗಳು ಛಾವಣಿಯವರೆಗೂ ಕೆನ್ನಾಲಿಗೆಗಳನ್ನು ಚಾಚಿದವು. ಅದರೊಂದಿಗೆ ಮಂಗಳಾಕಾರವಾದ ದೇವತೆಯೊಂದು ಅಗ್ನಿಕುಂಡದೊಳಗೆ ಮೈದಳೆಯತೊಡಗಿತು. ಅಚ್ಚಿರಿಯಿಂದ ಭರತ ನೋಡುತ್ತಿರುವಂತೆಯೇ ಪೂರ್ಣಾಕಾರವನ್ನು ತಳೆದ ದೇವತೆಯಾಕಾರವು ‘ಮಗು ಭರತ, ರಾಮನ ಪ್ರಿಯಾನುಜ. ನೀನು ಅಗ್ನಿಪ್ರವೇಶ ಮಾಡುವ ಅಗತ್ಯವಿಲ್ಲ. ನಿನ್ನಣ್ಣನು ಸೀತಾ ಲಕ್ಷ್ಮಣರೊಡಗೂಡಿ ಇಂದೊ ನಾಳೆಯೊ ಹಿಂತಿರುಗವನು. ಆದ್ದರಿಂದ ನಿನ್ನ ನಿರ್ಧಾರವನ್ನು ಕೈಬಿಡು’ ಎಂದಿತು.

ಅತಿಶಯ ಸಂತೋಷದಿಂದ ಉಬ್ಬಿ ಹೋದ ಭರತ ಆ ದೇವತೆಯಾಕಾರಕ್ಕೆ ಶಿರಬಾಗಿ ನಮಸ್ಕರಿಸಿ ‘ನೀನಾರು ತಾಯೆ? ಉರಿಯೊಳಗಿಹ ನನಗೆ ತಂಪನೆರೆಯುತಿರುವೆ. ನೀನಾರು ತಾಯೆ?’ ಎಂದು ಸಂತೋಷ ಬಾವದಿಂದ ಕೇಳಿದನು.
‘ಇನ್ನಾರು ಮಗು. ಸದಾ ನಿನಗೊಳಿತನ್ನೆ ಬಯಸುತ್ತಿದ್ದವಳು. ಬಯಸುತ್ತಿರುವವಳು. ಮಂಥರೆ!’

‘ಬೇಡ ತಾಯೆ, ಬೇಡ ಆ ಹೆಸರೆನೆಂದು ಹೇಳದಿರು ಮತ್ತೊಮ್ಮೆ. ಗೂನಿಯವಳೆ ಕಾರಣಳು ನನ್ನಣ್ಣನ ವನವಾಸಕ್ಕೆ, ನನ್ನತ್ತಿಗೆಯ ಪರಿತಾಪಕ್ಕೆ, ನನ್ನನುಜನ ಕಾರ್ಪಣ್ಯಕ್ಕೆ, ನನ್ನೆದೆಯೊಳಗಿನ ಉರಿಗೆ. ಆ ಹೆಸರನಿನ್ನೊಮ್ಮೆ ಉಸುರದಿರು ತಾಯೆ’ ಎಂದು ಭರತನು ನಿಷ್ಟುರವಾಗಿ ನುಡಿಯಲು, ‘ಮಗು ಭರತ. ಕಾರಣಳಲ್ಲ ಮಂಥರೆ, ಬರಿ ಕರಣ ಮಾತ್ರಳು. ಅವಳ ಅಂತರಂಗವನ್ನು ನೀನು ಕಾಣೆ. ನಿನ್ನ ಅಭ್ಯುದಯವೊಂದೇ ಅವಳ ಉದ್ಯೋಗ. ಕುಬ್ಜೆಯವಳು. ಗೂನಿಯವಳು. ಆದರೂ ಮಗು ನೀನೂ ಕಾಣದಾದೆಯ ಮಂಥರೆಯಂತರಾತ್ಮವನು. ಮಗು ನೀನೊಮ್ಮೆ ನಿನ್ನ ಮನಃಕ್ಲೇಶಗಳೆಲ್ಲವನೊಮ್ಮೆ ದೂರ ತಳ್ಳಿ, ನಿರ್ಮಲ ಚಿತ್ತನಾಗಿ ನನ್ನನ್ನು ಕಾಣು. ಹದಿನಾಲ್ಕು ವರ್ಷಗಳಿಂದ ನಿನ್ನ ಮಂಗಳ ಮನಸ್ಸಿನಲ್ಲಿ ರಾಮನಲ್ಲದೆ ಬೇರಾರಿಲ್ಲವೆಂಬುದನು ನಾನು ತಿಳಿಯೆನೆ? ಅಂದಿನಿಂದ ಇಂದಿನವರೆಗೂ ನಾನೂ ಕಾಯುತ್ತಿದ್ದೇನೆ, ಮುಕ್ತಿಗಾಗಿ. ಇಂದು ರಾಮ ಬರುವವನಿದ್ದಾನೆ. ಈಗೊಮ್ಮೆ ಈ ಮಂಥರೆಯ ಬಗ್ಗೆ ಯೋಚಿಸಿ ನೋಡು’ ಎಂದು ಇಡೀ ದೇವತೆಯಾಕಾರವು ತಾನು ರೂಪಗೊಂಡಿದ್ದ ಅಗ್ನಿಯ ಜ್ವಾಲೆಗಳಲ್ಲಿಯೇ ಲೀನವಾಯಿತು.

ಭರತ ನಿಂತಿದ್ದ ನಿಬ್ಬೆರಗಾಗಿ ನೋಡುತ್ತ ಶೂನ್ಯವನುಪಕ್ರಮಿಸಿದ ಜ್ವಾಲೆಗಳನ್ನು. ಮಂಥರೆ, ಮಂಥರೆ ಎಂದು ಅವನ ಮನಸ್ಸಿನಲ್ಲಿ ಮತ್ತೆ ಮತ್ತೆ ಅನುರಣವಗೊಳ್ಳುತೊಡಗಿತು. ‘ಹೌದು ಪೂಜ್ಯೆ ಹೌದು. ಈ ಹದಿನಾಲ್ಕು ಸಂವತ್ಸರಗಳಲ್ಲಿ ನಿನ್ನನೊಮ್ಮೆಯೂ ನಾನು ನೆನೆಯಲಿಲ್ಲ. ನಿನ್ನ ಉಸುರಿನ ರಕ್ಷೆಯಲ್ಲಿ ನನ್ನ ಬೆಳಸಿದ್ದೆ ನೀನು. ಆದರೂ ನಾನು ಕಾಣದಾದೆ ನಿನ್ನಂತರಾತ್ಮದ ಪುಣ್ಯಲಕ್ಷ್ಮಿಯನ್ನು. ಕ್ಷಮಿಸು ತಾಯೆ, ಕ್ಷಮಿಸು. ಈ ಕಳಂಕಿತ ಮಗನನ್ನು. ಅಂದು ನೀನು ಶತೃಜ್ಞನಿಂದ ಬಡಿಸಿಕೊಂಡು, ನನ್ನಿಂದಲೂ ತಿರಸ್ಕೃತಗೊಂಡು ಅಮೇಲೆ ಎಲ್ಲಿ ಹೋದೆ? ಅದರ ಬಗ್ಗೆ ನಾನೊಮ್ಮೆಯೂ ಯೋಚಿಸಲೇ ಇಲ್ಲ. ತಾಯೊಡಲನಗಲಿ ನಿನ್ನ ಮಡಿಲಲ್ಲಿ ಬಿದ್ದ ನಾನು ನಿನ್ನ ಪ್ರೇಮಸಿಂಚನವನುಂಡು ಬೆಳೆದೆ. ಆದರೆ ನಿನ್ನ ಅತ್ಯಕಾಲದಲ್ಲಿ ನನ್ನ ಮೈಮನಗಳೆರಡೂ ನಿಷ್ಕ್ರಿಯವಾಗಿ ಹೋದವು. ಹೌದು ತಾಯಿ ಹೌದು. ನೀನೆಷ್ಟು ನೊಂದವಳೆಂಬುದು ನನಗೀಗ ಅರ್ಥವಾಗುತ್ತಿದೆ. ನೀನಂದು ಎಲ್ಲರ ಕಣ್ಣಲ್ಲು ಕುರೂಪಿಯಾಗಿದ್ದೆ. ಅಸಹ್ಯವಾಗಿದ್ದೆ. ಅಂದು.....’

ಅಂದು ನಾನಿನ್ನು ಚಿಕ್ಕವನಾಗಿದ್ದೆ. ನಾನು ಚನ್ನಾಗಿ ನಡೆದಾಡುತ್ತಿದ್ದರೂ ನೀನು ನನ್ನನೆಂದೂ ನಡೆಯಲು ಬಿಡದೆ ಎತ್ತಿಕೊಂಡೇ ತಿರುಗುತ್ತಿದ್ದೆ, ನಾನೆಲ್ಲಿ ನೋಯುತ್ತೇನೊ ಎಂದು. ಆ ದಿನ ನೀನು ನನ್ನನ್ನೆತ್ತಿಕೊಂಡು ದಡದಡನೆ ಓಡಿ ಉಪ್ಪರಿಗೆಯ ಮೇಲೆ ಹೋದೆ. ನಿನ್ನನ್ನು ಕಂಡ ಅಲ್ಲಿದ್ದವರೆಲ್ಲ ದೂರ ಸರಿದರು. ಅಲ್ಲಿ ರಾಮಣ್ಣ ಹೋ ಎಂದು ಅಳುತ್ತಿದ್ದ. ಅಪ್ಪ, ದೊಡ್ಡಮ್ಮ, ನನ್ನಮ್ಮ ಮಂತ್ರಿ ಪುರೋಹಿತರೆಲ್ಲ ಅಸಹಾಯಕರಾಗಿ ನಿಂತಿದ್ದರು. ಅಣ್ಣ ಒಂದೇ ಸಮನೆ ಅಳುತ್ತಿದ್ದ. ನನಗಾಗ ಏಕೆಂದು ಹೊಳೆಯಲಿಲ್ಲ. ಆಗ ನೀನು ನನ್ನಬ್ಬೆಯ ಕಿವಿಯಲ್ಲೇನೊ ಉಸುರಿ, ಕನ್ನಡಿಯೊಂದನು ಅವಳ ಕೈಗಿತ್ತಿದ್ದೆ. ಅವ್ವನ ಕೈಯಿಂದ ಅದನ್ನು ಪಡೆದ ಅಣ್ಣಯ್ಯ ‘ಸಿಕ್ಕಿದ, ಸಿಕ್ಕಿದ’ ಎಂದು ಕೇಕೆ ಹಾಕಿ ಕುಣಿಯುತ್ತಿದ್ದ. ನನ್ನನ್ನು ಕೆಳಗಿಳಿಸಿದ ನೀನು, ಅವನನ್ನೆತ್ತಿಕೊಳ್ಳಲು ಕೈಚಾಚಿದೆ. ಬಾ ಎಂದು ಕರೆದೆ. ನೀನು ನನ್ನನ್ನು ಕೆಳಗಿಳಿಸಿದ್ದರಿಂದ ನನ್ನ ಕಣ್ಣುಲ್ಲಿ ನೀರು ತುಂಬಿತ್ತು. ಯಾರು ಯಾರೊ ಜೋರಾಗಿ ಕೂಗಿಕೊಳ್ಳುತ್ತಿದ್ದರು. ನೀನಾಗ ನನ್ನನ್ನು ಎತ್ತಿಕೊಂಡು ಬಂದ ದಾರಿಯಲ್ಲಿಯೆ ದಡದಡನೆ ಉಪ್ಪರಿಗೆಯನಿಳಿದು ಬಂದೆ......’

ನನಗೀಗ ಅರ್ಥವಾಗುತ್ತಿದೆ ಪೂಜ್ಯೆ. ನೀನಂದು ರಾಮನನ್ನು ನಗಿಸಿ, ಅವರೆಲ್ಲಾ ನೆಮ್ಮದಿಯ ಉಸಿರು ಬಿಡುವಂತೆ ಮಾಡಿದ್ದೆ. ಆದರೆ ಅವರಾರು ಕಾಣದಾದರು ನಿನ್ನಾತ್ಮಸೌಂದರ್ಯಲಕ್ಷ್ಮಿಯನ್ನು!

* * * * * * * * * * * *

‘ಛೇ, ನಾನೇಕೆ ಹೀಗೆ ಸುಮ್ಮನೆ ಕುಳಿತಿದ್ದೇನೆ. ಅಣ್ಣ ಅತ್ತಿಗೆಯರು ಇಂದೋ ನಾಳೆಯೋ ಇಲ್ಲಿರುತ್ತಾರೆ. ಅವರ ಸ್ವಾಗತಕ್ಕೆ ಸಿದ್ದತೆಗಳಾಗ ಬೇಕು. ಶತೃಜ್ಞ ಬರುವುದು ತಡವಾಗಬಹುದು. ಅಲ್ಲಿ ತಾಯಂದಿರೆಲ್ಲ ಅಣ್ಣ ಬರಲಿಲ್ಲವೆಂದು ಎಷ್ಟು ಕಳವಳ ಪಡುತ್ತಿದ್ದಾರೊ? ಅವರನ್ನು ಸಮಾಧಾನ ಮಾಡುವುದೇ ತಮ್ಮನಿಗೆ ಒಂದು ದೊಡ್ಡ ಕೆಲಸ. ’ ಎಂದುಕೊಂಡು ಆಶ್ರಮದಿಂದ ಹೊರಬಂದು, ಎಳೆಯ ಬಿಸಿಲಿನಲ್ಲಿ ನದಿಯ ಮೂಲದ ಕಡೆಗೆ ನಿಧಾನವಾಗಿ ನಡೆಯತೊಡಗಿದ, ‘ನದಿಯ ಮೂಲವನ್ನು ತಲಪಿಯೇ ತೀರುತ್ತೇನೆ’ ಎಂದು ಹಠ ಹಿಡಿದು ನಡೆಯುವ ಯಾತ್ರಿಕನಂತೆ.

‘ಈ ಮಂಥರೆ ಯಾರು? ನನ್ನನ್ನೇಕೆ ಒಂದರಗಳಿಗೆಯೂ ಬಿಟ್ಟಿರುವುದಿಲ್ಲ?’ ಎಂಬ ಹಲವಾರು ಪ್ರಶ್ನೆಗಳು ನನಗೆ ಬಂದಿದ್ದೇ ಬಹಳ ಕಡಿಮೆ. ಒಮ್ಮೊಮ್ಮೆ ಅರಮನೆ ಅಂತಃಪುರಗಳಲ್ಲಿ, ಪುರಜನರ ನಡುವೆ ಅವಮಾನಿತಳಾದಾಗ ‘ಇವಳಾರು? ನನ್ನನ್ನು ಇಷ್ಟೇಕೆ ಹಚ್ಚಿಕೊಂಡಿದ್ದಾಳೆ?’ ಎಂದು ನನ್ನಬೆಯನ್ನೇ ಕೇಳಿದ್ದೆ. ಅದಕ್ಕವಳು ನಕ್ಕು ‘ಮಂಥರೆ ನನ್ನ ತಾಯಿಯಿದ್ದಂತೆ’ ಎಂದು ಬಿಡುತ್ತಿದ್ದಳು. ಹಠ ಬಿಡದ ನಾನು, ಒಮ್ಮೆ ಅಜ್ಜನ ಊರಿಗೆ ಹೊಗಿದ್ದಾಗ ಅಜ್ಜಿಯನ್ನು ಕೇಳಿದ್ದೆ ‘ಯಾರೀ ಮಂಥರೆ?’ ಎಂದು.

‘ನಿನ್ನಜ್ಜನೊಮ್ಮೆ ಬೇಟೆಗೆ ಹೋಗಿದ್ದಾಗ ಕಾಡಿನಲ್ಲಿ ಸಿಕ್ಕ ಮಗು ಇವಳು. ಅದನ್ನು ಎತ್ತಿ ತಂದು ಸಾಕಿ ಬೆಳಸಿದರು. ನಿನ್ನಬ್ಬೆಯು ಹುಟ್ಟಿದಾಗ ನಿನ್ನಜ್ಜ ಮಂಥರೆಗೆ ಮಗು ಆಡಿಸುವ ಕೆಲಸವನ್ನು ವಹಿಸಿದರು. ಅದರಿಂದ ಅವಳೆಷ್ಟು ಖುಷಿ ಪಟ್ಟಳೆಂದರೆ, ತನಗೇ ಮಗುವಾದಷ್ಟು ಖುಷಿಯಿಂದ ನಿನ್ನಬ್ಬೆಯನ್ನು ಆಡಿಸಿ ಬೆಳಸಿದಳು. ಅವಳಿಗೆ ಮದುವೆಯಾಗಿ ಅಯೋದ್ಯೆಗೆ ಹೊರಟಾಗ ಇವಳೂ ಹಠ ಹಿಡಿದು ಅಲ್ಲಿಗೆ ಬಂದಳು. ಇನ್ನು ನೀನು ಹುಟ್ಟಿದಾಗ, ನಿನ್ನಬ್ಬೆ ಕೈಕೆ ಮತ್ತು ನಮ್ಮೆಲ್ಲರದೂ ಒಂದು ಭಾಗ ಸಂಭ್ರಮವಾದರೆ ಇನ್ನೊಂದು ಭಾಗ ಅವಳೊಬ್ಬಳದೇ ಸಂಭ್ರಮ. ಅದನ್ನು ಹೇಳಲು ಬಾಯಿ ಸಾಲದು. ಒಂದು ರೀತಿಯಲ್ಲಿ ನಿನ್ನಬ್ಬೆಗೆ ಅವಳೇ ತಾಯಿ. ನಿನಗೂ ಕೂಡ’ ಅಂದಿದ್ದರು.

ಅಜ್ಜನಂತೂ ‘ಮಗು ಭರತಣ್ಣ, ಪಾಪ ಅವಳು ತಬ್ಬಲಿ. ಅವಳಿಗೆ ನಿನ್ನ, ಕೈಕೆಯ ಹೊರತು ಬೇರೆ ಪ್ರಪಂಚವಿಲ್ಲ. ನಿಮ್ಮ ಜಗತ್ತೇ ಅವಳ ಜಗತ್ತು. ಇಲ್ಲಿ ಎಲ್ಲರೂ ಅವಳನ್ನು ಕುರೂಪಿ, ತೊನ್ನಿ, ಕುಬ್ಜೆ ಮುಂತಾಗಿ ಹಿಯಾಳಿಸುತ್ತಿದ್ದರು. ಅಲ್ಲಿಯೂ ಅದು ತಪ್ಪಲಿಲ್ಲ. ಸೂರ್ಯವಂಶದವರಾದರೇನಂತೆ? ನಿಜ ಸೌಂದರ್ಯವನ್ನು ಅರಿಯುವಲ್ಲಿ ಅವರೂ ತಪ್ಪಿದರು.’ ಎಂದು ನಿಟ್ಟುಸಿರಿಟ್ಟಿದ್ದರು.

ಆಗ ನನಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ಅದನ್ನೆಲ್ಲ ಕೇಳಿದ ಮೇಲೆ ನಾನು ನಿನಗೆ ಇನ್ನಷ್ಟು ಹತ್ತಿರವಾಗಿದ್ದೆ ಅಷ್ಟೆ.

* * * * * * * * * *

ಬಿಸಿಲೇರುತ್ತಿತ್ತು. ಮೈಮೇಲಿದ್ದ ಉತ್ತರೀಯವನ್ನು ತಲೆಯ ಮೇಲೆಳೆದುಕೊಂಡ ಭರತ ಒಂದು ಕ್ಷಣ ನಿಂತು ಮತ್ತೆ ನಡೆಯತೊಡಗಿದ.

‘ಮಂಥರೆ ಕೆಟ್ಟವಳಂತು ಅಲ್ಲ. ರಾಮನಲ್ಲಿ ಅವಳಿಗೆ ದ್ವೇಷವೂ ಇರಲಿಲ್ಲ. ಅಣ್ಣನೂ ಅವಳನ್ನು ಪ್ರೀತಿಯಿಂದಲೇ ಕಾಣುತ್ತಿದ್ದ. ಎಷ್ಟೋ ಬಾರಿ ನನ್ನನ್ನು ಕೆಳಗಿಳಿಸಿ ಅಣ್ಣನನ್ನು ಎತ್ತಿಕೊಂಡು ಮುದ್ದಿಸುತ್ತಿದ್ದಳೂ ಕೂಡ. ನಂತರ ಏನೋ ತಪ್ಪು ಮಾಡಿದವಳಂತೆ ಅತ್ತಿತ್ತ ನೋಡಿ ಅಣ್ಣನನ್ನು ಇಳಿಸಿಬಿಡುತ್ತದ್ದಳು. ಆದರೂ ಅವಳು ರಾಮನನ್ನು ಕಾಡಿಗಟ್ಟಿದಳೆಂದೇ ಎಲ್ಲರು ಭಾವಿಸಿದ್ದಾರೆ. ನಾನೂ ಸಹ ಆಗ್ಗೆ ಹಾಗೆಯೇ ಅಂದುಕೊಂಡಿದ್ದೆ. ಅಂದು ಶತೃಜ್ಞ ಅವಳನ್ನಿಡಿದು ಬಡಿಯುತ್ತಿದ್ದರೆ, ‘ಭರತಾ, ಓ ಭರತಾ’ ಎಂದು ಆರ್ತಳಾಗಿ ಕೂಗಿಕೊಳ್ಳುತ್ತಿದ್ದ ಮಂಥರೆಗೆ ನನ್ನಿಂದ ಸಿಕ್ಕಿದ್ದಾದರು ಏನು? ಬರಿ ತಿರಸ್ಕಾರ.

ನಂತರ ಮಂಥರೆ ಎಲ್ಲಿ ಹೋದಳು? ನಾನದನ್ನು ಯೋಚಿಸಿಯೆ ಇಲ್ಲ. ಅಯ್ಯನ ಮರಣ, ಅಣ್ಣನ ವನವಾಸ, ಅವನನ್ನು ಹಿಂದಕ್ಕೆ ಕರೆತರಲು ಹೋಗಿದ್ದು ಇವುಗಳ ನಡುವೆ ಮಂಥರೆಯ ಬಗ್ಗೆ ಯೋಚಿಸಲಿಲ್ಲ. ಅವಳೇನಾದಳು? ಯಾರು ಏನಂದರೊ? ಕೊಂದರೊ? ಓ ಮಂಥರೆಯೆ, ಪ್ರೇಮಭೈರವಿಯೆ, ನೀನಂದು ನನ್ನಿಂದ ತಿರಸ್ಕೃತಗೊಂಡು ಎತ್ತ ಹೋದೆ? ಬಾಯ್ಬಿಟ್ಟ ಭೂಮಿಯೊಳಗೆ ಇಳಿದೆಯಾ? ಗಾಳಿ ಬಿಸಿಯಾಗಿ ಅದರಲ್ಲಿಯೇ ಕರಗಿ ಹೋದೆಯ? ಏನಾದೆ ತಾಯೆ?

* * * * * * * * *

ಹೌದು ಮಗು. ನನಗಾಗ ಏನಾಗಿತ್ತು. ನನ್ನಲ್ಲೇನಾಗುತ್ತಿತ್ತು. ಎಂಬುದರ ಕಲ್ಪನೆ ನಿನಗಿರಲಿಕ್ಕಿಲ್ಲ. ನಿಜ ಹೇಳಲೆ ಕಂದ. ಹದಿನಾಲ್ಕು ವರ್ಷಗಳ ವನವಾಸ ರಾಮನೊಬ್ಬನಿಗಲ್ಲ. ಸೀತೆ ಲಕ್ಷ್ಮಣರಿಗಷ್ಟೆ ಅಲ್ಲ. ನನಗೆ ನಿನಗೆ ನಿನ್ನಬ್ಬೆಯರಿಗೆ ಕೂಡಾ. ನಿನ್ನಣ್ಣಯ್ಯನಿಗೆ ಹಾದಿ ಸುಗಮವಾಗಲೆಂದು ಹಾರೈಸುವುದನ್ನು ಬಿಟ್ಟು ನಾನೇನನ್ನು ಮಾಡಲಿ?

ನೀವೆಲ್ಲ ನಿಮ್ಮಯ್ಯನ ಅಗ್ನಿ ಕಾರ್ಯಕ್ಕೆಂದು ಹೋಗಿದ್ದಿರಿ. ಅರಮನೆ ಅಂತಃಪುರವೆಲ್ಲ ನಿರ್ಜನವಾಗಿತ್ತು. ನಾನೆದ್ದೆ, ತನ್ನ ವಿಷವನ್ನು ತಾನೇ ಹೀರಲು ಹೊರಟ ಸರ್ಪಿಣಿಯಂತೆ! ‘ನನ್ನ ಕೈಕೆಯ ಕಂದನಿಗೆ ಮುಕುಟವನ್ನು ದೊರಕಿಸಲು ನಾನು ರಾಮನನ್ನು ಅಡವಿಗಟ್ಟಿದೆ. ರಾಮ ಕಾಡುಪಾಲಾದನೆಂದು ಕೈಕೆ ಭರತರೂ ನನ್ನನ್ನು ದೂರ ಮಾಡಿದರು. ಅವರಿಲ್ಲದೆ ನಾನಿಲ್ಲ. ಯಾವ ರಾಮನನ್ನು ಕಾಡಿಗಟ್ಟಿದೆನೆಂದು ಅವರು ನನ್ನನ್ನು ದೂರ ಮಾಡಿದ್ದಾರೋ ಅದೇ ರಾಮನನ್ನು ಹಿಂದಕ್ಕೆ ಕರೆತಂದರೆ? ಎಲ್ಲರೂ ನನ್ನನ್ನು ಮೊದಲಿನ ಹಾಗೆಯೇ ಪ್ರೀತಿಸಿತ್ತಾರೆ. ನಾನು ಹಿಂದಕ್ಕೆ ಬರಬೇಕೆಂದು ರಾಮನ ಪಾದಗಳ ಮೇಲೆ ಬಿದ್ದು ಬೇಡಿಕೊಂಡರೆ ರಾಮ ಬರದೆ ಇರಲಾರ. ಆತನೊಬ್ಬನೇ ನನ್ನ ನಿಜದಂತರಂಗವನ್ನರಿತವನು’ ಎಂದುಕೊಂಡು, ‘ಓ ರಾಮಯ್ಯ ಬಾರಯ್ಯ. ಭರತನಣ್ಣಯ್ಯ ಬಾರಯ್ಯ’ ಎಂದು ಕೂಗಿಕೊಂಡು ನಗರದ ಬೀದಿಯಲ್ಲಿ ಹುಚ್ಚಳಂತೆ ಓಡುತ್ತಿದ್ದರೆ, ಜನರೆಲ್ಲ ಛಿ, ಥೂ ಎಂದು ಉಗಿದರು, ಕಲ್ಲಿನಿಂದ ಹೊಡೆದರು. ಆದರೆ ಅವುಗಳೆಲ್ಲವುಗಳಲ್ಲಿಯೂ ನಾನು ರಾಮನನ್ನೆ ಕಾಣುತ್ತಿದ್ದೆ. ರಾಮನ ಮಂಗಳ ಮೂರ್ತಿಯಲ್ಲದೆ ಬೇರೇನನ್ನು ನಾನು ಕಾಣಲಿಲ್ಲ. ನನ್ನ ಬಾಯಿಂದ ಬರುತ್ತಿದ್ದುದ್ದು ಎರಡೇ ಶಬ್ಧಗಳು. ‘ರಾಮಯ್ಯ, ಭರತನಣ್ಣಯ್ಯ’ ಎಂದು. ದೂರದಲೆಲ್ಲೊ ಕಾಡ್ಗಿಚ್ಚು ಉರಿಯುತಿತ್ತು. ‘ಓ. ನನ್ನ ರಾಮಯ್ಯನಿಲ್ಲೆ ಬಿಡಾರ ಮಾಡಿರಬಹುದು’ ಎಂದುಕೊಂಡೆ. ಅದೆನೆಗೆ ಕಾಡ್ಗಿಚ್ಚಾಗಿರಲಿಲ್ಲ. ರಾಮನ ದಿವ್ಯಾತ್ಮವಾಗಿತ್ತು. ಖಗಮೃಗಗಳ ದ್ವನಿ ರಾಮನ ವಾಣಿಯಾಗಿತ್ತು. ಮುಗಿಲು ಮುಟ್ಟುತ್ತಿದ್ದ ಜ್ವಾಲೆಯ ನಡುವೆ ಅವರೆಲ್ಲರೂ ನಗುತ್ತಲೇ ನಿಂತಿದ್ಡರು. ರಾಮನ ಮಂಗಳ ಮೂರ್ತಿಯನ್ನು ಬಾಚಿ ತಬ್ಬಿಕೊಂಡು ಅವನ ಕಾಲ ಮೇಲುರುಳಿದೆ ‘ಪುಣ್ಯವನು ತಬ್ಬುವ ಪಾಪದಂತೆ’. ಕ್ಷಣ ಮಾತ್ರದಲ್ಲಿ ಯಾವ ಉಗ್ರ ಬೆಂಕಿಯ ಬಿಸಿಯೂ ಇಲ್ಲದೆ ರಾಮನಾಮಾಮೃತವನುಣ್ಣುತ್ತಲೇ ಇಹದ ವ್ಯಾಪಾರವನ್ನು ಮುಗಿಸಿಬಿಟ್ಟಿದ್ದೆ.

* * * * * * * * * * * * * * * *

‘ಓ ತಾಯೆ ಮಂಥರೆ’ ಎಂದು ಮುಖ ಕಿವುಚಿಕೊಂಡ ಭರತ ನೋವಿನಿಂದ. ಹೌದು ಪೂಜ್ಯಳೆ, ಒರಟಾದ ಗಂಧದ ಕೊರಡು ಬೆಂಕಿಯಲ್ಲಿ ಬಿದ್ದು ಇಡೀ ವಾತಾವರಣವನ್ನು ಸುಗಂಧಮಯವನ್ನಾಗಿ ಮಾಡಿದಂತೆ ನೀನು ಅಗ್ನಿಗಾಹುತಿಯಾಗಿ ನಿನ್ನ ಪ್ರೇಮದ ಅಮೃತಮಯ ಸೌಂದರ್ಯ ಪ್ರಭೆ ಲೋಕವಾವರಿಸುವಂತೆ ಮಾಡಿದೆ. ನಿನಗಿದೋ ನನ್ನ ನಮನ ತಾಯೆ’ ಎಂದ ಭರತ ನಿಧಾನವಾಗಿ ನದಿಯೆಡೆಗೆ ಇಳಿದ. ನಡು ಹೊಳೆಯವರೆಗೂ ನಡೆದು ಸೊಂಟದುದ್ದದ ನೀರಿನಲ್ಲಿ ನಿಂತು ಬೊಗೆಸೆ ಬೊಗಸೆಯಾಗಿ ನೀರನೆತ್ತಿ ಮಂಥರೆಗೆ ಅರ್ಪಣವನಿತ್ತನು. ಕೈಮುಗಿದು ಎಷ್ಟು ಹೊತ್ತು ಹಾಗೆಯೇ ನಿಂತಿದ್ದನೊ, ಯಾರೋ ಹಿಂದೆ ನಿಂತತೆ ಭಾಸವಾಗಿ ಕಣ್ತೆರೆದು ನೋಡಿದ. ದಡದಲ್ಲಿ ನಿಂತಿದ್ದ ಮಾರುತಿ, ಭರತ ತನ್ನೆಡೆಗೆ ನೋಡಿದ್ದನ್ನು ಮನಗಂಡು, ಬಾಗಿ ನಮಸ್ಕರಿಸಿ ‘ಮಹಾನುಭಾವನೆ, ನಿನ್ನ ಮಂಗಳಮೂರ್ತಿಯನ್ನು ಕಂಡು ನನ್ನ ಸ್ವಾಮಿಯನ್ನೆ ಕಂಡಂತಾಯಿತು. ಭರತ! ನನ್ನ ಸ್ವಾಮಿಯು ಯಾವಾಗಲೂ ನೆನಪಿಸಿಕೊಳ್ಳುತ್ತದ್ದ ಭರತಕುಮಾರ! ನಿನಗಿದೋ ನನ್ನ ಪ್ರಣಾಮಗಳು’ ಎಂದು ನಡುಬಾಗಿ ನಮಸ್ಕರಿಸಿದ ಮಾರುತಿಯನ್ನು ಕಂಡು ಭರತನು ‘ಎಲೈ ಮಹಾನುಭಾವನೆ ನೀನು ಯಾರು? ಯಾರು ನಿನ್ನ ಸ್ವಾಮಿ? ರಾಮನೆ ನನ್ನಣ್ಣನೆ?’ ಎಂದು ಸಂತೋಷ ಕುತೂಹಲಭರಿತನಾಗಿ ಪ್ರಶ್ನೆಗಳ ಸುರಿಮಳೆಗರೆದನು.

‘ರಾಮ, ಶ್ರೀರಾಮನೇ ನನ್ನ ಸ್ವಾಮಿ. ನಿನ್ನಣ್ಣನೇ ನನ್ನ ಸ್ವಾಮಿ. ಇಂದು ಸಂಜೆಯ ವೇಳೆಗೆ ಸೀತಾಮಾತೆ, ಲಕ್ಷ್ಮಣರೊಡಗೂಡಿ ಇಲ್ಲಿಗೆ ಬರುವವನಿದ್ದಾನೆ. ಅದನ್ನು ತಿಳಿಸಲೆಂದು ನನ್ನನ್ನು ಮುಂದಾಗಿಯೆ ಕಳುಹಿಸಿದರು’ ಎಂದು ನುಡಿಯಲು, ಭರತನು ತೆರೆದ ತೋಳನ್ನು ಹನುಮನೆಡೆಗೆ ಚಾಚಿ ‘ಬಾ ಮಿತ್ರ. ಬಾ. ಶುಭನುಡಿಯ ತಂದಿರುವೆ. ನಿನಗಿದೋ ನನ್ನ ಪ್ರಣಾಮಗಳು’ ಎಂದು ಬಾಚಿ ಅಪ್ಪಿಕೊಂಡ. ಮತ್ತೊಮ್ಮೆ ತಾಯಿ ಕೈಕೆಯ ಒಡಲೊಳಗೆ ಮಂಥರೆಯ ಪ್ರೇಮದ ಮಡಿಲೊಳಗೆ ಇಳಿದಾಡಿದ ಭಾವ ಭರತನಲ್ಲಿ ಸುಳಿದಾಡಿ, ಹೊಸಜನ್ಮ ಪಡೆದವನಂತೆ ಪುಳಕಗೊಂಡನು.

* * * * * * * * * * * *

Monday, August 13, 2012

ಬ್ರಾಹ್ಮನಾಯಿ-ಶೂದ್ರಕೋಳಿ

ಮನೆಗಳಲ್ಲಿ ಸಾಕುಪ್ರಾಣಿಗಳಿದ್ದರೆ, ಮನೆಯಲ್ಲಿನ ಮಕ್ಕಳು ಅವುಗಳೊಂದಿಗೆ ಕಾಲ ಕಳೆಯುವುದು ಹೆಚ್ಚು. ಪ್ರಾಣಿಗಳೊಂದಿಗೆ ಬೆಳೆಯುವ ಮಕ್ಕಳಲ್ಲಿ ಪ್ರಾಣಿ-ಪರಿಸರ ಪ್ರಜ್ಞೆ ಸಹಜವಾಗಿಯೇ ಬೆಳೆಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ, ಅದರಲ್ಲೂ ರೈತಕುಟುಂಬಗಳಲ್ಲಿ ಮಕ್ಕಳು ಸಹಜವಾಗಿಯೇ ಹತ್ತಾರು ಪ್ರಾಣಿಗಳ ಒಡನಾಟದಲ್ಲಿ ಬೆಳೆಯುತ್ತವೆ. ನಾವು ಚಿಕ್ಕವರಾಗಿದ್ದ ನಮ್ಮ ಅಜ್ಜಿ ಸಾಕಿದ್ದ ಕೋಳಿಗಳಲ್ಲಿ, ಒಂದೊಂದು ಕೋಳಿಗಳಿಗೆ ನಮ್ಮ ಹೆಸರಿಟ್ಟು ಅದರ ಉಸ್ತುವಾರಿ ನೋಡಿಕೊಳ್ಳುವಂತೆ ಮಾಡಿದ್ದರು. ನಾವು ಊಟದ ಕೊನೆಯಲ್ಲಿ ಸ್ವಲ್ಪ ಮುದ್ದೆ-ಅನ್ನ ಉಳಿಸಿ ನಮ್ಮ ಕೋಳಿಗಳಿಗೆ ಪ್ರತ್ಯೇಕವಾಗಿ ತಿನ್ನಿಸಲು ಪ್ರಯತ್ನಿಸುತ್ತಿದ್ದೆವು. ಕಡ್ಲೆಪುರಿ ತಿನ್ನಿಸಿದರೆ ಹೆಚ್ಚು ಕೊಬ್ಬಿ ಬೆಳೆಯುತ್ತವೆ ಎಂಬ ನಂಬಿಕೆಯಿಂದ, ವಾರಕ್ಕೊಮ್ಮೆ ಸಂತೆಯ ದಿನ ಮನೆಗೆ ತರುತ್ತಿದ್ದ ಪುರಿಗಡಲೆಯ ನಮ್ಮ ಭಾಗದಲ್ಲಿ ಒಂದಷ್ಟನ್ನು ಉಳಿಸಿ ಕೋಳಿಗಳಿಗೆ ತಿನ್ನಿಸುತ್ತಿದ್ದೆವು. ಸ್ವಲ್ಪ ದೊಡ್ಡವರಾದ ಮೇಲೆ ಒಂದೊಂದು ಟಗರು ಮರಿಯನ್ನು ನಾವು ಮುತುವರ್ಜಿ ವಹಿಸಿ ಸಾಕುವಂತೆ ನಮ್ಮ ಅಜ್ಜ-ಅಜ್ಜಿ ಏರ್ಪಾಡು ಮಾಡಿದ್ದರು. ಮನೆಯಲ್ಲಿದ್ದ ಮೂರು ನಾಯಿಗಳಲ್ಲಿ ಒಂದೊಂದನ್ನು ಒಬ್ಬರು ಹಂಚಿಕೊಂಡು, ನಮ್ಮವುಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದೆವು. ಹೀಗೆ ಸಾಕುತ್ತಿದ್ದ ಸಾಕು ಪ್ರಾಣಿಗಳು ಸಹ ಪರಸ್ಪರ ಸ್ನೇಹದಿಂದ ಇರುತ್ತಿದ್ದವು. ನಾಯಿ ನಾಯಿಗಳಿರಲಿ, ಬೆಕ್ಕು-ನಾಯಿಗಳು, ನಾಯಿ-ಕೋಳಿಗಳು ಪರಸ್ಪರ ಸ್ನೇಹದಿಂದ ಇರುವುದನ್ನು ನಾನು ನೋಡಿದ್ದೇನೆ. ನಮ್ಮ ಮನೆಯಲ್ಲಿದ್ದ ನಾಯಿ ಮತ್ತು ಬೆಕ್ಕು ಒಂದೇ ತಟ್ಟೆಯಲ್ಲಿ ಹಾಲು ಕುಡಿಯುತ್ತಿರುವ ಪೋಟೋ ಕೂಡಾ ತೆಗೆದಿಟ್ಟಿದ್ದೇನೆ. ನಾಯಿಯ ಬೆನ್ನ ಮೇಲೆ ಸವಾರಿ ಮಾಡುತ್ತಿರುವ ಕೋಳಿಯ ಚಿತ್ರಣ ಇನ್ನೂ ನನ್ನ ಮನಃಪಟಲದಲ್ಲಿ ಉಳಿದಿದೆ.

ಕವಿ ಕುವೆಂಪು, ರೈತಕುಟುಂಬದ ಹಿನ್ನೆಲೆಯಿಂದ ಬಂದವರು. ಅವರ ಕುಪ್ಪಳಿ ಮನೆಯಲ್ಲಿದ್ದ ನಾಯಿಗಳ ಸಂಖ್ಯೆ ಎರಡಂಕಿಗಿಂತ ಕಡಿಮೆಯಿರಲಿಲ್ಲ ಎಂಬುದು ಗಮನಾರ್ಹ. ಅವರು ನಾಯಿಗಳನ್ನು, ವಿಶೇಷವಾಗಿ ಬೇಟೆಯಲ್ಲಿ ಪಳಗಿದ್ದ ನಾಯಿಗಳನ್ನು ಹೆಚ್ಚು ಹಚ್ಚಿಕೊಳ್ಳುತ್ತಿದ್ದರು. ಅಂತಹ ಒಂದು ನಾಯಿ, ಹಂದಿಯಿಂದ ಗಾಯಗೊಂಡು ಮೃತಪಟ್ಟಾಗ ಅದಕ್ಕೆ ಒಂದು ಚರಮಗೀತೆಯನ್ನೂ ಕುವೆಂಪು ರಚಿಸಿರುವುದನ್ನು ನೋಡಿದ್ದೇವೆ. ಕಾನೂರು ಹೆಗ್ಗಡತಿಯಲ್ಲಿ, ಪುಟ್ಟಣ್ಣ ಸತ್ತ ನಾಯಿಯ ವಿಷಯದಲ್ಲಿ ತೋರುವ ಭಕ್ತಿ-ಗೌರವಗಳಲ್ಲಿಯೂ, ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಹುಲಿಯನ ಬಗೆಗಿನ ಗುತ್ತಿಯ ಪ್ರೇಮದಲ್ಲೂ ಕುವೆಂಪು ಅವರ ನಾಯಿಗಳ ಬಗೆಗಿನ, ಅವುಗಳ ’ಸೈಕಾಲಜಿ’ ಬೆಗೆಗಿನ ಅರಿವನ್ನು ಮನಗಾಣಬಹುದಾಗಿದೆ.
ಕುವೆಂಪು ಮೈಸೂರಿನ ಉದಯರವಿಯಲ್ಲಿದ್ದರೂ ಮಲೆನಾಡಿನ, ತಮ್ಮ ಮನೆಯ ಕನಸನ್ನೂ ಎಂದೂ ಬಿಟ್ಟವರಲ್ಲ. ತಮ್ಮ ಮನೆಯಲ್ಲಿ ಕೋಳಿ, ನಾಯಿ, ಹಸು, ಬೆಕ್ಕು ಮೊದಲಾದ ಸಾಕು ಪ್ರಾಣಿಗಳನ್ನು ಸಾಕುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಕೇವಲ ಸಾಕುಪ್ರಾಣಿಗಳನ್ನು ಮಾತ್ರವಲ್ಲದೆ, ಮನೆಯ ಮುಂದಿನ ಹೂದೋಟದಲ್ಲಿ ಬರುತ್ತಿದ್ದ ಹಕ್ಕಿ, ಅಳಿಲು ಮೊದಲಾದವುಗಳನ್ನು ಗಮನಿಸುತ್ತಿದ್ದರು. ಅವು ಮೊಟ್ಟೆ ಇಟ್ಟಾಗ, ಮರಿ ಮಾಡಿದಾಗ ಮಕ್ಕಳನ್ನು ಕರೆದು ತೋರಿಸುತ್ತಿದ್ದರು. ಒಮ್ಮೆ ದಾರಿಯಲ್ಲಿ ಇಲಿಯ ಬಿಲವೊಂದರಲ್ಲಿ ಅದು ಹೊರಗೆ ತಂದು ಹಾಕಿರುವ ಮಣ್ಣನ್ನು ತೋರಿಸಿ, ತೇಜಸ್ವಿ-ಚೈತ್ರರಿಗೆ ಇಲಿಯ ಬಿಲದ ಬಗ್ಗೆ ಆಸಕ್ತಿ ಮೂಡಿಸಿರುತ್ತಾರೆ. ಹುಡುಗಾಟದ ಈ ಇಬ್ಬರು, ತಂದೆ ಸ್ವಲ್ಪ ಮುಂದೆ ಹೋಗುತ್ತಿದ್ದ ಹಾಗೆ, ಆ ಇಲಿಯ ಬಿಲವನ್ನು ಮಣ್ಣಿನಿಂದ ಮುಚ್ಚಿ ಏನೂ ಆಗದವರಂತೆ ಮುಂದೆ ಹೋಗಿರುತ್ತಾರೆ. ಮಾರನೆಯ ದಿನ ಹೋದಾಗ, ಇಲಿಯ ಬಿಲದಲ್ಲಿ ಅವರು ಮುಚ್ಚಿದ್ದ ಮಣ್ಣು ಪಕ್ಕಕ್ಕೆ ಸರಿಸಿ, ಇಲಿ ರಾಜಾರೋಷವಾಗಿ ಓಡಾಡಿಕೊಂಡಿರುವುದು ಗಮನಕ್ಕೆ ಬರುತ್ತದೆ. ಆ ವಿಷಯ ಕುವೆಂಪು ಅವರ ಗಮನಕ್ಕೆ ಬಂದಾಗ, ಇನ್ನೊಮ್ಮೆ ಹಾಗೆ ಮಾಡಬಾರದೆಂದು ತಿಳಿಸಿ ಹೇಳುತ್ತಾರೆ. ಸ್ವತಃ ತೇಜಸ್ವಿಯವರೇ ಒಂದು ಕಡೆ, ನನಗೆ ಪ್ರಾಣಿ-ಪರಿಸರದ ಆಸಕ್ತಿಯನ್ನು ಮೊದಲು ಮೂಡಿಸಿದವರೇ ನನ್ನ ತಂದೆ ಎಂದು ಹೇಳಿದ್ದಾರೆ.

ಉದಯರವಿಯಲ್ಲಿ ಒಮ್ಮೆ ಸಾಕಲು ತಂದಿದ್ದ ಕೋಳಿಮರಿಗಳನ್ನು, ನಾಲ್ಕೂ ಜನ ಮಕ್ಕಳಿಗೆ ಒಂದೊಂದು ಎಂದು ಹೇಳಿ, ಅವುಗಳ ಯೋಗಕ್ಷೇಮವನ್ನು ಅವರವರೇ ನೋಡಿಕೊಳ್ಳುವಂತೆ ಮಾಡಿರುತ್ತಾರೆ. ಚೈತ್ರ ಮತ್ತು ಕಲಾ ಅವರದು ಹೇಟೆಗಳಾದರೆ, ತೇಜಸ್ವಿ ಮತ್ತು ತಾರಿಣಿಯವರದು ಹುಂಜಗಳು. ನಾಲ್ಕೂ ಜನ ಪೈಪೋಟಿಯಲ್ಲೇ ಕೋಳಿಗಳನ್ನು ಸಾಕುತ್ತಿರುತ್ತಾರೆ. ಕೋಳಿಗಳು ಕೊಬ್ಬಿ ಬೆಳೆಯಲಾರಂಭಿಸುತ್ತವೆ. ಹೇಟೆಗಳು ಮೊಟ್ಟೆ ಇಡಲಾರಂಭಿಸುತ್ತವೆ. ಮಕ್ಕಳಿಗೆ ಅದನ್ನು ಕಂಡು ಖುಷಿಯೋ ಖುಷಿ. ಅಂತಹ ಖುಷಿಯ ದಿನಗಳಲ್ಲಿ ಒಂದು ದಿನ (೧೦.೬.೧೯೫೦) ಮನೆಯ ಕೈತೋಟದಲ್ಲಿದ್ದ ಹಲಸಿನ ಮರದ, ಮೊದಲ ಹಣ್ಣನ್ನು ಕತ್ತರಿಸಿ, ದೇವರಿಗೆ ಅರ್ಪಿಸಿ, ತಾವೂ ತಿನ್ನುವ ಕಾರ್ಯದಲ್ಲಿ ಮನೆಯವರೆಲ್ಲ ಮುಳುಗಿರುತ್ತಾರೆ. ಸ್ವತಃ ಹೇಮಾವತಿಯವರು ಹಲಸನ್ನು ಕತ್ತರಿಸುತ್ತಿದ್ದರೆ, ಕುವೆಂಪು ಹಾಗೆ ಹೀಗೆ ಎಂದು ಸಲಹೆ ಕೊಡುತ್ತಿರುತ್ತಾರೆ. ತೇಜಸ್ವಿ-ಚೈತ್ರ ಹೊರಗೆ ಆಡಲು ಹೋಗಿರುತ್ತಾರೆ. ತಾರಿಣಿ-ಕಲಾ ಇಬ್ಬರೂ ತಾಯಿಗೆ ಸಹಕರಿಸುತ್ತಿರುತ್ತಾರೆ. ದೇವರಿಗೆ ಅರ್ಪಣೆಯಾಗಿ, ಇನ್ನೇನು ತೊಳೆಯನ್ನು ಬಿಡಿಸ ಬಾಯಿಗಿಡಬೇಕು ಎನ್ನುವಷ್ಟರಲ್ಲಿ, ಹೊರಗಡೆ, ಒಮ್ಮೆಲೆ ಎಲ್ಲಾ ಕೋಳಿಗಳು ಕೂಗಲಾರಂಬಿಸುತ್ತವೆ. ಮನೆಯ ಒಳಗಿದ್ದವರು, ಹೊರಗಿದ್ದವರು ಎಲ್ಲರೂ ಒಮ್ಮೆಲೆ ಧಾವಿಸಿ ಬರುತ್ತಾರೆ. ನಾಯಿಯೊಂದು ಕೋಳಿಯನ್ನು ಹಿಡಿದುಬಿಟ್ಟಿರುತ್ತದೆ. ಅದು ಅವರ ಮನೆಯ ಸಾಕು ನಾಯಿಯಲ್ಲ. ಮನೆಯ ಸಾಕು ನಾಯಿಯ ಜೊತೆ ಕೋಳಿಗಳು ಸಲುಗೆಯಿಂದಲೇ ವರ್ತಿಸುತ್ತಿದ್ದವು. ಈಗ ಹಿಡಿದಿರುವುದು ಯಾವುದೊ ಕಂತ್ರಿನಾಯಿ. ಕಲಾ-ತಾರಿಣಿ ಇಬ್ಬರು ನನ್ನ ಕೋಳಿ ಹೋಯಿತು ಎಂದು ರೋಧಿಸುತ್ತಿರುತ್ತಾರೆ. ಸೇರಿದ್ದವರೆಲ್ಲರ ಕೂಗಾಟದ ನಡುವೆ, ಚೈತ್ರ-ತೇಜಸ್ವಿ ಬರುವಷ್ಟರಲ್ಲಿ, ಕುವೆಂಪು ಅವರೇ ನಾಯಿಯ ಬೆನ್ನು ಹತ್ತುತ್ತಾರೆ. ಅದು ಹಿಂದಿನ ಮನೆಯ ಕಡೆ ನುಗ್ಗುತ್ತದೆ. ಅವರ ಮನೆಯವರು ಹೊರಗೆ ಬಂದು ನಿಂತಿರುತ್ತರಾದರೂ, ನಾಯಿಯನ್ನು ಗದರಿಸುವ, ಕೋಳಿಯನ್ನು ಬಿಡಿಸುವ ಗೋಜಿಗೆ ಹೋಗದೆ, ಕೋಳಿ ಹಿಡಿದಿರುವ ನಾಯಿಯ ಬೆನ್ನು ಅಟ್ಟಿರುವ ಕುವೆಂಪು ಅವರನ್ನು ನೋಡುತ್ತಾ, ನಗುತ್ತಾ ಮೋಜನ್ನು ಅನುಭವಿಸುತ್ತ ನಿಂತಿರುತ್ತಾರೆ. ಅಷ್ಟರಲ್ಲಿ ನಾಯಿ ಅವರ ಮನೆಯೊಳಗೇ ನುಗ್ಗಲಾರಂಭಿಸುತ್ತದೆ. ನಾಯಿ ಕೋಳಿ ಹಿಡಿದು ಅವರ ಮನೆಯೊಳಗೆ ನುಗ್ಗುವ ಹಾಗೆ ಮುಂದುವರೆಯುತ್ತದೆ. ಅವರು ಬ್ರಾಹ್ಮಣರಾದ್ದರಿಂದ, ಕಲ್ಲು ಹೊಡೆದು, ನಾಯಿಯನ್ನು ಬೆದರಿಸಿ, ಓಡಿಸುವ ಹಾಗೂ ಕೋಳಿ ಬಿಡಿಸುವ ಯಾವ ಸಾಹಸಕ್ಕೂ ಅವರು ಕೈಹಾಕುವುದಿಲ್ಲ. ನಾಯಿ ಆ ಮನೆಯೊಳಗೆ ನುಗ್ಗುವಷ್ಟರಲ್ಲಿ ಅದನ್ನು ಬೆನ್ನು ಹತ್ತಿದ್ದ ಕುವೆಂಪು ಅಡ್ಡ ಬಂದಿದ್ದರಿಂದ, ನಾಯಿ ಗಾಬರಿಯಾಗಿ ಕೋಳಿಯನ್ನು ಅಲ್ಲೇ ಬಿಟ್ಟು ಆ ಮನೆಯ ಕಾಂಪೋಂಡು ನೆಗೆದು ಓಡಿ ಹೋಗಿರುತ್ತದೆ. ಅಷ್ಟರಲ್ಲಾಗಲೇ ಕೋಳಿ ತನ್ನ ಕೊನೆಯ ಉಸಿರನ್ನೆಳೆದಿರುತ್ತದೆ. ಕುವೆಂಪು ಆ ಕೋಳಿಯನ್ನು ಹಿಡಿದು ಮನೆಯ ಕಡೆ ಹೆಜ್ಜೆ ಹಾಕುತ್ತಾರೆ. ಅಷ್ಟರಲ್ಲಿ ತೇಜಸ್ವಿ-ಚೈತ್ರರೂ ಬರುತ್ತಾರೆ. ಸತ್ತಿರುವುದು ತಾರಿಣಿ ಸಾಕುತ್ತಿದ್ದ ಕೋಳಿ ಎಂದು ತಿಳಿದಾಗ, ತಾರಿಣಿಯ ದುಃಖ ಹೆಚ್ಚಾಗುತ್ತದೆ. ಅಳುತ್ತಾ, ನಾಯಿಯನ್ನು ಶಪಿಸುತ್ತಾ ತಾರಿಣಿ ರೋಧಿಸುತ್ತಾರೆ. ಇನ್ನುಳಿದವರು ಸಧ್ಯ ನಮ್ಮ ಕೋಳಿ ಸಿಕ್ಕಿಹಾಕೊಳ್ಳಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುತ್ತಾರೆ. ಪ್ರೀತಿಯಿಂದ ಸಾಕಿದ್ದ ಕೋಳಿ ಸತ್ತು, ತುಳಸಿಕಟ್ಟೆಗೆ ಅನತಿ ದೂರದಲ್ಲಿ ನಿಷ್ಪಂದವಾಗಿ ಬಿದ್ದಿದ್ದನ್ನು ಕಂಡು ತಾರಿಣಿ ಅಳುತ್ತಲೇ ಇರುತ್ತಾರೆ. ಮಗಳ ಅಳುವನ್ನು ನಿಲ್ಲಿಸಲು, ಕುವೆಂಪು ಅವರು ದೇವರ ಮನೆಗೆ ಹೋಗಿ ಹೂವೊಂದನ್ನು ತಂದು, ಆ ಸತ್ತಕೋಳಿಯ ಮೇಲೆ ಇಟ್ಟು, ’ಅಳಬೇಡ, ನಿನ್ನ ಕೋಳಿ ದೇವರ ಹತ್ತಿರ ಹೋಯಿತು’ ಎಂದು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ. ಆದರೆ ತಾರಿಣಿಯ ದುಃಖವೇನು ಕಡಿಮೆಯಾಗುವುದಿಲ್ಲ. ಕೊಯ್ದು ಇಟ್ಟಿದ್ದ ಹಲಸಿನ ತೊಳೆ ಹಾಗೆಯೇ ಉಳಿದುಬಿಡುತ್ತದೆ.

ಅದೇ ದಿನ ಸಂಜೆ ಎಳುಗಂಟೆಯ ಹೊತ್ತಿಗೆ ಕುವೆಂಪು ಮಗಳನ್ನು ಕರೆದು, ಪಕ್ಕದ ಕುರ್ಚಿಯಲ್ಲಿ ಕೂರಿಸಿಕೊಂಡು ಅಂದು ಬರೆದಿದ್ದ ಕವಿತೆಯನ್ನು ಓದುತ್ತಾರೆ. ಆ ಪದ್ಯದ ಅರ್ಥ ಎಷ್ಟು ಅರ್ಥವಾಯಿತೊ ಇಲ್ಲವೊ ತಾರಿಣಿಗೆ ಮಾತ್ರ ಸಮಾಧಾನವಾಗುತ್ತದೆ. ತನ್ನ ಪ್ರೀತಿಯ ಕೋಳಿಯ ಮೇಲೆ ಬರೆದಿದ್ದ ಪದ್ಯದ ದೆಸೆಯಿಂದ ಆಕೆಯ ದುಃಖ ಕಡಿಮೆಯಾಗುತ್ತದೆ. ಆ ಕವಿತೆಯ ಶೀರ್ಷಿಕೆ ’ಬ್ರಾಹ್ಮನಾಯಿ-ಶೂದ್ರಕೋಳಿ’. ಅದು ’ಪ್ರೇತ-ಕ್ಯೂ’ ಕವನಸಂಕಲನದಲ್ಲಿ ’ಸಂಭವಿಸಿದ ಒಂದು ಘಟನೆಯಿಂದ ಪ್ರೇರಿತ’ ಎಂಬ ಅಡಿಟಿಪ್ಪಣಿಯೊಂದಿಗೆ ಪ್ರಕಟವಾಗಿದೆ.

ಪದ್ಯದ ಮೊದಲ ಭಾಗದಲ್ಲಿ ಅವರ ಮನೆಯಲ್ಲಿದ್ದ ಕೋಳಿ, ಅದನ್ನು ಹಿಡಿಯಲು ಹೊಂಚುತ್ತಿದ್ದ ಕಂತ್ರಿನಾಯಿ, ಹಾಗೂ ತಮ್ಮನೆಯ ನಾಯಿ ಮತ್ತು ಕೋಳಿಯಲ್ಲಿದ್ದ ಸ್ನೇಹದ ವಿಷಯ ಬರುತ್ತದೆ. ಎರಡನೆಯ ಭಾಗದಲ್ಲಿ ಅಂದು ನಡೆದ ಘಟನೆಯ ಚಿತ್ರಣವಿದ್ದರೆ, ಮೂರನೆಯ ಭಾಗದಲ್ಲಿ, ತನ್ನ ಕೋಳಿಯ ಸಾವಿಗಾಗಿ ಮರುಗುವ ಪುಟ್ಟಹುಡುಗಿಯ ಚಿತ್ರಣ ಮತ್ತು ನಾಯಿಯನ್ನು ಗದರಿಸಿ ಕೋಳಿಯನ್ನು ಉಳಿಸಬಹುದಾದರೂ, ಆ ನಿಟ್ಟಿನಲ್ಲಿ ಏನನ್ನೂ ಮಾಡದೇ ಇದ್ದರೂ, ಇಡೀ ಘಟನೆಯನ್ನು ಮೋಜು ಎಂಬಂತೆ ನೋಡಿ ನಗುತ್ತಿದ್ದವರ ಚಿತ್ರಣವಿದೆ.

ಶೂದ್ರಕೋಳಿ ಮೇಯುತಿತ್ತು
ಗಲ್ಲಿಯಲ್ಲಿ;
ಬ್ರಾಹ್ಮನಾಯಿ ಹೊಂಚುತಿತ್ತು
ಅಲ್ಲಿ ಇಲ್ಲಿ.
ಶೂದ್ರಕೋಳಿಗೇನು ಗೊತ್ತು,
ಪಾಪ, ನಾಯಿ ಬ್ರಾಹ್ಮ ಎಂದು?
ತಮ್ಮ ಮನೆಯ ನಾಯಿಯಂತೆ
ಎಂದು ಸುಮ್ಮ ಮೇಯುತಿತ್ತು.
ಬ್ರಾಹ್ಮನಾಯಿ ಅಪ್ಪಟ ಕಂತ್ರಿ.
ಆದರೇನು? ಕಪಟ ಕುತಂತ್ರಿ!
ಕೊರಳಿನಲ್ಲಿ ಜನ್ನಪಟ್ಟೆ;
ಒಡಲಿನಲ್ಲಿ ಖಾಲಿಹೊಟ್ಟೆ!
ಮೆಲ್ಲ ಮೆಲ್ಲ ಸುಳಿದು ಸುತ್ತಿಹತ್ತೆ ಬಂತು;
ಸಾಧು ಎಂದು ಶೂದ್ರಕೋಳಿ
ನೋಡೆ ನಿಂತು,
ಹಾರಿ ನೆಗೆದು ಹಿಡಿದುಕೊಂಡು
ಓಡಿ ಹೋಯ್ತು!
ಪಾರ್ವವೀಡಿನೊಂದು ಗೋಡೆ
ರಕ್ಷೆಯಾಯ್ತು:
ಪಾರ್ವನಾಯ್ಗೆ ಶೂದ್ರಕೋಳಿ
ಭಕ್ಷ್ಯವಾಯ್ತು!
ಮರಿಯತನದಿ ಮೊದಲುಗೊಂಡು
ಸಾಕಿ ಸಲಹಿ ಒಲಿದ ತನ್ನ
ಪುಟ್ಟ ಮುದ್ದು ಹುಂಜಗಾಗಿ,
ಕರುಣ ತುಂಬಿದೆದೆಯ ದೇವಿ,
ಗೊಳೋ ಎಂದು ಹುಡುಗಿಯೊಂದು
ಅಳುತಲಿತ್ತು.
’ಶುದ್ಧ ಶೂದ್ರ ಹುಡುಗಿ’ ಎಂದು
ಹಾರ್ವನೊಡನೆ ಹಾರ್ತಿ ನಿಂದು,
ಕೇಳಿಗಾಗಿ ಗೇಲಿ ಮಾಡಿ
ಬೀದಿ ಬಾಗಿಲಲ್ಲಿ ಕೂಡಿ
ಬ್ರಾಹ್ಮವೃಂದ ಚೆಂದ ನೋಡಿ
ನಗುತಲಿತ್ತು!

ಪದ್ಯವನ್ನು ಕೇಳಿ ಪುಟ್ಟ ಬಾಲಕಿಗೆ ತನ್ನ ಪ್ರೀತಿಯ ಹುಂಜದ ಸಾವಿನ ದುಃಖದ ತೀವ್ರತೆ ಕಡಿಮೆಯಾಗುತ್ತದೆ. ಅದನ್ನು ಕುರಿತು ತಾರಿಣಿಯವರು ಹೀಗೆ ಹೇಳಿದ್ದಾರೆ. ನನ್ನ ಕೋಳಿ ಬಗ್ಗೆ ತಂದೆಯವರು ಕವನ ಬರೆದದ್ದು ಮನಸ್ಸಿನ ದುಃಖ ಕಡಿಮೆ ಮಾಡಿತು. ಅದಕ್ಕೆ ಸಂದಿರುವ ಗೌರವಕ್ಕೆ ಹೆಮ್ಮೆಯಾಯಿತು. ತುಂಬ ಪ್ರೀತಿಯಿಂದ ಸಾಖಿದ ಕೋಳಿಯ ದುರಂತ ಅಂತ್ಯದ, ದುಃಖ ವೇದನೆಗಳು ಕಡಿಮೆಯಾದವು. ಚೈತ್ರ-ತೇಜಸ್ವಿ ಅನೇಕ ದಿನಗಳವರೆಗೆ ಆ ನಾಯಿಗೆ ಸರಿಯಾಗಿ ಚಚ್ಚಬೇಕೆಂದು ಹುಡುಕುತ್ತಿದ್ದರು. ಆದರೆ ಪರಮಕುತಂತ್ರಿ ನಾಯಿ ಅವರಿಗೆ ಕಾಣಲು ಸಿಗುತ್ತಿರಲಿಲ್ಲ. ಇನ್ನುಮುಂದೆ ನಮ್ಮ ಮನೆಯಲ್ಲಿ ಕೋಳಿ ಮರಿ ತರುವುದನ್ನು ನಿಲ್ಲಿಸಿದರು. ನನ್ನ ದುಃಖ ಅಳುವಿನಿಂದಾಗಿ ಅಂದಿಗೆ ನಮ್ಮ ಕೋಳಿ ಸಾಕಣೆಗೆ ಪೂರ್ಣವಿರಾಮವಾಯಿತು.
ಕೋಳಿ ಸಾಕುವುದನ್ನು ಇವರು ನಿಲ್ಲಿಸಿರಬಹುದು. ಆದರೆ ಹಲಸಿನ ಮರ ಹಣ್ಣು ಕೊಡುವುದನ್ನು ನಿಲ್ಲಿಸಿಲ್ಲ. ಪ್ರತಿವರ್ಷ ಹಣ್ಣು ಕತ್ತರಿಸುವಾಗಲೆಲ್ಲಾ, ನನ್ನ ಕೋಳಿಯ ಅಂತ್ಯದ ದುರಂತ ಘಟನೆಯೊಂದಿಗೆ ತಂದೆಯವರು ಬರೆದ ಕವನ ಇಂದಿಗೂ ನೆನಪಾಗುವುದು ಎನ್ನುತ್ತಾರೆ ತಾರಿಣಿಯವರು.

Monday, August 06, 2012

ಹೆಸರಿಟ್ಟು ಹರಸುವೆನು ಚೈತ್ರನಂ


೧೯೪೧ನೆಯ ಇಸವಿ. ಜಗತ್ತನ್ನು ಎರಡನೆಯ ಮಹಾಯುದ್ಧದ ಕಾರ್ಮೋಡಗಳು ಆವರಿಸಿದ್ದ ದಿನಗಳು. ಇತ್ತ ಮೈಸೂರು ವಿಶ್ವವಿದ್ಯಾಲಯ ಮಾತ್ರ ತನ್ನ ಜ್ಞಾನಪ್ರಸಾರದ, ಸಾಹಿತ್ಯ ಪ್ರಚಾರದ, ಕನ್ನಡ ಕಾಯಕದ ಕರ್ತವ್ಯಕ್ಕೆ ಕಿಂಚಿತ್ತೂ ಚ್ಯುತಿ ಬರದ ರೀತಿಯಲ್ಲಿ ಶ್ರೀಕಾರ್ಯೋನ್ಮುಖವಾಗಿತ್ತು. ಆ ವರ್ಷದ ಮೇ ತಿಂಗಳ ಮೊದಲವಾರದಲ್ಲೇ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ (ಆಗಿನ್ನು ಪ್ರಸಾರಾಂಗ ಎಂಬ ಹೆಸರು ಬಂದಿರಲಿಲ್ಲವಂತೆ) ಸಾಗರದಲ್ಲಿ ವಸಂತ ಸಾಹಿತ್ಯೋತ್ಸವ ಏರ್ಪಡಿಸಿತ್ತು. ಅದರಲ್ಲಿ ಭಾಗವಹಿಸಲು ಪ್ರೊ. ವೆಂಕಣ್ಣಯ್ಯ, ತೀನಂಶ್ರೀ, ಎ.ಎನ್.ಮೂರ್ತಿರಾವ್ ಮೊದಲಾದವರೊಂದಿಗೆ ಕುವೆಂಪು ಶಿವಮೊಗ್ಗಕ್ಕೆ ಬಂದು ಉಳಿದಿದ್ದರು. ಶಿವಮೊಗ್ಗದಲ್ಲಿಯೇ ಅವರ ಶ್ರೀಮತಿ ತಮ್ಮ ತವರು ಮನೆಯಲ್ಲಿ ಎರಡನೆಯ ಹೆರಿಗೆಗಾಗಿ ಬಂದಿದ್ದರು. ಮೇ ೨ನೆಯ ತಾರೀಖು ಬೆಳಗಿನ ಜಾವ ೪.೪೫ಕ್ಕೆ ಶ್ರೀಮತಿ ಹೇಮಾವತಿಯವರು ಗಂಡು ಮಗುವಿಗೆ ಜನ್ಮ ನೀಡುತ್ತಾರೆ. ಪುತ್ರೋತ್ಸವದ ಸಂತೋಷದಲ್ಲಿ ಮುಳುಗೇಳುತ್ತಿದ್ದ ಕುವೆಂಪು, ಏನೂ ಆಗದವರಂತೆ ನಿಗದಿತವಾಗಿದ್ದ ಪ್ರವಾಸ ಕಾರ್ಯಕ್ರಮವೊಂದಕ್ಕೆ ಹೊರಟೇ ಬಿಡುತ್ತಾರೆ. ತೀನಂಶ್ರೀ, ಮೂರ್ತಿರಾವ್ ಮೊದಲಾದ ಗೆಳೆಯರೊಂದಿಗೆ, ಮಾನಪ್ಪನವರ ಸಾರಥ್ಯದಲ್ಲಿ ಶಿವಮೊಗ್ಗಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿದ್ದ ತುಂಗಾ ನದಿಯ ಏಳುಸೀಳು ಎಂಬಲ್ಲಿಗೆ ಹೋಗಿ ಈಜುವ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುತ್ತಾರೆ. ವೆಂಕಣ್ಣಯ್ಯ ಮತ್ತು ಒಂದಿಬ್ಬರು ನೀರಿಗಳಿಯದೆ ಹೊಳೆಯ ದಡದಲ್ಲಿ ಕುಳಿತು ಹರಟುತ್ತಿರುತ್ತಾರೆ. ನೀರಿಗಿಳಿದವರಲ್ಲಿ ಕೆಲವರು ಸ್ವಲ್ಪ ಹೊತ್ತು ಈಜಾಡಿ ಮೇಲೆ ಬಂದು ಕುಳಿತವರೊಡನೆ ಸೇರಿಕೊಳ್ಳುತ್ತಾರೆ. ಆಗ ಬಹುಶಃ ಮಾನಪ್ಪನವರಿಂದ, ಅಂದು ಬೆಳಗಿನ ಜಾವ ಕುವೆಂಪು ಅವರಿಗೆ ಪುತ್ರೋತ್ಸವಾಗಿದ್ದ ವಿಚಾರ ಎಲ್ಲರಿಗೂ ತಿಳಿಯುತ್ತದೆ. ಅಲ್ಲಿ ನೆರೆದಿದ್ದವರಿಗೆಲ್ಲಾ ಆಶ್ಚರ್ಯವಾಗಿತ್ತು. ಬೆಳಗಿನ ಜಾವ ಪುತ್ರ ಜನನವಾದ ಸುದ್ದಿ ತಿಳಿದು ಏನೂ ಆಗಿಲ್ಲ ಎಂಬಂತೆ ಎಲ್ಲರೊಡನೆ ಈಜಲು ಬಂದ ಕವಿಯ ವರ್ತನೆ ಎಲ್ಲರಿಂದಲೂ ತರಾಟಗೆ ಒಳಗಾಯಿತು. ತೀನಂಶ್ರೀಯವರು ’ಪುಟ್ಟಪ್ಪ, ನಿಮ್ಮ ಧೈರ್ಯವೇ ಧೈರ್ಯ ಬಿಡಿ ಎಂದು ಕವಿಯ ಔದಾಸೀನ್ಯವನ್ನು ಛೇಡಿಸಿದ್ದರಂತೆ!
ಕವಿಯ ಬಾಹ್ಯ ವರ್ತನೆಯಲ್ಲಿ ಬೇಜವಾಬ್ದಾರಿ ಇದ್ದಿತಾದರೂ, ಅಂತರಂಗದಲ್ಲಿ ಮಾತ್ರ ಆಗಿರಲಿಲ್ಲ. ಕವಿಯೇ ಹೇಳುವಂತೆ ಮೇಲುನೋಟಕ್ಕೇನೊ ನನ್ನ ವರ್ತತನೆ ಹಾಗೆ ಕಾಣಿಸಿತ್ತಾದರೂ ನನ್ನ ಮಗನ ಜನನದ ವಿಚಾರದಲ್ಲಿ ನಾನು ಅಷ್ಟೇನೂ ನಿಷ್ಕಾಮನೂ ಉದಾಸೀನನೂ ಆಗಿರಲಿಲ್ಲ. ಅದಕ್ಕೆ ’ಕೋಕಿಲೋದಯ ಚೈತ್ರ’ ಎಂದು ಅವನು ಹುಟ್ಟಿದ ಮರುದಿನ ೩.೫.೧೯೪೧ರಂದು ಹಾಗೂ ಅವನನ್ನು ತೊಟ್ಟಿಲಿಗೆ ಹಾಕಿ ಹೆಸರಿಟ್ಟ ದಿನ ೧೨.೫.೧೯೪೧ರಂದು ’ಹೆಸರಿಟ್ಟು ಹರಸುವೆನು ಚೈತ್ರನಂ’ ಎಂದು ಬರೆದಿರುವ ಕವನಗಳೇ ಸಾಕ್ಷಿ ಎನ್ನುತ್ತಾರೆ.
ಬಂದನಿದೊ ಕೋಕಿಲೋಲ್ಲಾಸ ಚೈತ್ರಂ, ಕವಿಯ
ಜೀವನ ಸುಖ ವಹಿತ್ರಂ. ಆಗಮನ ಸಂಭ್ರಮಕೆ
ಸಮೆದಿಹಳ್ ಲೋಕಮಾತೆಯೆ ವಸಂತೋದಾರ
ಸಹ್ಯಸೀಮೆಯ ವಿಪಿನರಂಗಮಂ.
ಎಂದು ಕವಿತೆ ಆರಂಭವಾಗುತ್ತದೆ. ಮೇ ಮೊದಲ ವಾರವೆಂದರೆ ವಸಂತಕಾಲದ ಸಂಭ್ರಮದ ಕಾಲ. ಕವಿಪುತ್ರನ ಜನನನ್ನಕ್ಕಾಗೆ ಲೋಮಮಾತೆ ಸಹ್ಯಾದ್ರಿಯ ವನರಂಗದಲ್ಲಿ ವಸಂತೋತ್ಸವವನ್ನು ನಡೆಸುತ್ತಿದ್ದಾಳೆ. ಮುಂದೆ ವಸಂತದ ವರ್ಣನೆ ಬರುತ್ತದೆ. ಅಂತಹ ವಸಂತಕಾಲದಲಿ ಜನಿಸಿದ ಪುತ್ರನಿಗೆ ಕೋಕಿಲೋದಯ ಚೈತ್ರ ಎಂಬ ಹೆಸರನ್ನು ಕವಿ ಟಂಕಿಸುತ್ತಾರೆ. ಮಗನ ಸ್ವಾಗತಕ್ಕೆ ಹೊಂಗೆ, ನೆಳಲ ನೆಯ್ಯುವ ಪಸುರ ಪೊಸತಳಿರುಡುಗೆಯನುಟ್ಟು, ತನ್ನ ಪಾದಕೆ ತಾನೆ ಕುಸುಮ ಧವಳಾಕ್ಷತೆಯ ರಂಗವಲ್ಲಿಯನಿಕ್ಕಿ ಸಿದ್ಧವಾಗಿತ್ತಂತೆ! ಹಳದಿಯ ಸಾಲ್ಮರ ಹೊನ್ನರಿಲ ಸೇಸೆಯ ಸೂಸಿ ಶುಭಕೋರಿ ಆಶೀರ್ವದಿಸಿತ್ತಂತೆ!
ಉಲಿಯಿರೈ,
ಮಲೆಯ ನೋಟದ ಚೆಲ್ವು ತಾಂ ಬೀಣೆಯಾಗಲಾ
ಶಾಂತಿ ಮೌನದ ತಂತಿಯಂ ಮೀಂಟೆ ಮಿಡಿಯುತ್ತೆ
ಕವಿಗೆ ರಸರೋಮಾಂಚನವನೀವ, ಓ ಮಲೆಯ
ಗರಿವೆತ್ತ ರಸಿಕರಿರ, ಮುಂದೆ ನಿಮ್ಮೊಡನುಲಿವ
ಗಿರಿವನಪ್ರಿಯ ಸಖನ ಪುಣ್ಯ ಜನ್ಮೋತ್ಸವಂ
ಸಂಭವಿಸಿತಿಂದು!
ಎಂದು ಸಂಭ್ರಮಿಸುತ್ತಾರೆ. ತ್ರಿಮೂರ್ತಿಗಳು ತಮ್ಮ ತಮ್ಮ ಹೆಂಡತಿಯರ ಜೊತೆಯಲ್ಲಿ ಬಂದು ಕಂದನನ್ನು ಆಶೀರ್ವದಿಸಬೇಕೆಂದು ಬಯಸುತ್ತಾರೆ. ಜೊತೆಗೆ ತಮ್ಮ ಗುರುಗಳು, ಕವಿಗಳು ಬರಬೇಕೆನ್ನುತ್ತಾರೆ.
ಬಲ್ಲ
ಋಷಿಗಳುಂ, ಮತ್ತೆಲ್ಲ ಗುರುಗಳುಂ, ಮೇಣಖಿಲ
ಕವಿಗಳುಂ ಸರ್ವದೇವತೆಗಳುಂ ಬಂದಿಲ್ಲಿ
ಹರಸುತಿರೆ ದಿವ್ಯ ಕಂದನ ಜೀವಮಾನಮಂ,
ನೀಡುತಿರೆ ತಮ್ಮ ತಮ್ಮಾತ್ಮೀಯ ದಾನಮಂ,
ನಾನೀವೆನಿದೊ ನಿನಗೆ ಈ ಪ್ರೀತಿತಾನಮಂ,
ಮಂತ್ರಛಂದಃಪೂರ್ಣ ಕವಿಹೃದಗಾನಮಂ!
ಎಂದು ಮಗನಿಗೆ ಮೊದಲ ಕಾಣಿಕೆಯ ಕವನಪುಷ್ಪವನ್ನು ಅರ್ಪಿಸುತ್ತಾರೆ. ಅಲ್ಲಿಂದ ಹತ್ತು ದಿನಗಳ ನಂತರ ಮಗಿವಿಗೆ ನಾಮಕರಣವಾಗುತ್ತದೆ. ಕವಿ ಮಗ ಹುಟ್ಟಿದಂದೇ ಕೋಕಿಲೋದಯ ಚೈತ್ರ ಎಂದ ಹೆಸರಿಟ್ಟುಬಿಟ್ಟಿರುತ್ತಾರೆ. ಅಂದು ಸಹ ಅದೇ ಹೆಸರನ್ನು ಮಗನಿಗಿಟ್ಟು ಹರಸುತ್ತಾರೆ ’ಹೆಸರಿಟ್ಟು ಹರಸುವೆನು ಚೈತ್ರನಂ’ ಎಂಬ ಕವಿತೆಯ ಮೂಲಕ. ವಸಂತಸಂಭ್ರದಲ್ಲಿ ಹುಟ್ಟಿದ ಮಗನಾದ್ದರಿಂದ, ಮತ್ತೆ ವಸಂತದ ವರ್ಣನೆ ಕವಿತೆಯಾರಂಭದಲ್ಲಿ ತೆರೆದುಕೊಳ್ಳುತ್ತದೆ. ಆದರೆ ಆ ಸಂಭ್ರಮವೆಲ್ಲಾ ಮಗನ ನಾಮಕರಣಕ್ಕಾಗಿಯೇ! 'ಪೊಸಮಲರ ಕಂಪಾಂತ ತಂಬೆಲರ ಸೊಂಪು, ಮಲ್ಲಿಗೆ ಹೊದರಿನಲ್ಲಿ ಮಡಿವಳ ಹಕ್ಕಿಯ ಸಂಗೀತ, ಜಗದ ಜಡನಿದ್ದೆಯಂ ಬಡಿದೆಚ್ಚರಿಸುವಂತೆವೋಲ್ ಬಡಿದುಕೊಳ್ಳುತ್ತಿರುವ ಕ್ರೈಸ್ತ ದೇವಾಲಯದ ಗಂಟೆ' ಇವುಗಳ ನಡುವೆಯೇ ಮಗನ ನಾಮಕರಣ ನಡೆಯುತ್ತದೆ.
ತೇಜಸ್ವಿ ಸೋದರನೆ,
ಹೇಮಾಂಗಿನಿಯ ತನೂಭವನೆ, ಹೇ ನನ್ನಾತ್ಮ
ನವ್ಯತಾ ದೇವತಾ ಪ್ರತ್ಯಕ್ಷರೂಪಿ, ಓ
ಕೋಕಿಲೋದಯ ಚೈತ್ರ, ಹರಸುವೆನು ಹೆಸರಿಟ್ಟು,
ಹೆಸರಿನ ಹಿರಿಮೆ ಉಸಿರಿಗೂ ಬರಲಿ ಎಂದೊಲಿದು
ಬಯಸಿ:
ಮಗನನ್ನು ಆಶೀರ್ವದಿಸುತ್ತಾರೆ. ವಿಂಧ್ಯ ಸಹ್ಯಾದ್ರಿ ಮಲಯ ಪರ್ವತಗಳು, ಗಂಗಾ ಯಮುನ ತುಂಗಭದ್ರಾ ನದಿಗಳು ನಿನಗಕ್ಕೆ ಭಾರತದ ಬಾಲ್ಯದಾಡುಂಬೊಲದ ಸಂಗಾತಿಗಳ್! ಎನ್ನುತ್ತಾರೆ.
ಸರ್ವಲೋಕ ಶೈಲೇಶ್ವರಂ
ನಿನಗಕ್ಕೆ ತಾಂ ಪ್ರತಿಸ್ಪರ್ಧಿ, ಹೈಮಾಚಲಂ,
ಧವಳಗಿರಿ ಶಿರವರೇಣ್ಯಂ, ಮಾನಸ ಸರೋ
ಜನ್ಮ ಮಹಿಮಂ! ಶ್ವಾಸಕೋಶಗಳಕ್ಕೆ ನಿನಗೆ
ಸಾಗರಾಕಾಶಂಗಳ್!
ತನ್ನ ಕಂದನಿಗೆ ಶಂಕರರ ಶ್ರೀಬುದ್ಧಿ, ರಾಮಾನುಜರ ಹೃದ, ಕ್ರಿಸ್ತ ಬುದ್ಧರ ಮಹಾಸಾತ್ವಿಕ ಕೃಪಾಸ್ಥೈರ್ಯ, ಗಾಂಧಿಯ ದಯಾ ಧೈರ್ಯ, ಶ್ರೀರಾಮಕೃಷ್ಣ ಮತ್ತು ವಿವೇಕನಂದರ ಧರ್ಮದೌದಾರ್ಯದ ಸಮಸ್ತ ಶ್ರೇಯಸ್ಸುಗಳು ಬಂದು ಆಶೀರ್ವದಿಸಬೇಕೆಂದು ಬಯಸುತ್ತಾರೆ.  ಮುಂದುವರೆದು,
ನಿಖಿಲ ಭುವನ ಶ್ರೇಷ್ಠ ಗಾಯಕರ್
ಶಿಲ್ಪಿಗಳ್ ವರ್ಣಶಿಲ್ಪಿಗಳೆಲ್ಲರೈತಂದು
ತಂತಮ್ಮ ದಿವ್ಯಕಲೆಯಂ ಪ್ರಚೋದಿಸಲಿ ಮೇಣ್
ಪ್ರಿಯದಿಂ ಪ್ರತಿಷ್ಠಿಸಲಿ ಈ ನನ್ನ ಚಿಣ್ಣನೀ
ಕೋಕಿಲೋದಯ ಚೈತ್ರನಾತ್ಮಮಂದಿರದಮೃತ
ಪೀಠದಲಿ!
ಇಲ್ಲಿಯವರೆಗೆ ಮಗನ ಭವಿಷ್ಯತ್ತಿಗೆ ಆಶೀರ್ವಾದದ ತೋರಣವನ್ನೈದುತ್ತಿದ್ದ ಕವಿಯ ಮನಸ್ಸು, ಇದ್ದಕ್ಕಿದ್ದಂತೆ, ಫ್ರಾನ್ಸಿನಲ್ಲಿದ್ದ ತನ್ನ ಶ್ರೀಗುರು ಸಿದ್ದೇಶ್ವರಾನಂದರ ಕಡೆಗೆ ತಿರುಗುತ್ತದೆ. ಎರಡನೆಯ ಮಹಾಯುದ್ಧದ ಮಾರಕ ಯಜ್ಞದ ಮಧ್ಯೆ ಸಿಕ್ಕಿದ್ದ ಅವರ ಕ್ಷೇಮಕ್ಕಾಗಿ ಕಾತರಿಸಿ ಪ್ರಾರ್ಥಿಸುತ್ತದೆ. ಮಗನ ಹರಕೆಯೆಂತೆಯೇ ಹಿರಿಯ ಹರಕೆ ಗುರುವಿನ ಕ್ಷೇಮ ಎಂದು ಭಾವಿಸುತ್ತದೆ.
ಈ ಹರಕೆಗಿಂ ಮಿಗಿಲ್ ಹಿರಿಹರಕೆ
ಇರ್ಪೊಡಾ ಹರಕೆಯಂ ಯೋಗ ದಿವ್ಯಜ್ಞಾನಿ
ಜಗದೀಶ್ವರಗೆ ಬಿಡುವೆನೈ; ಬೇಡಿಕೊಳ್, ಕಂದಾ!
ಎಂದು ತನ್ನ ಗುರುವಿನ ಕ್ಷೇಮಕ್ಕಾಗಿ ನನ್ನ ಜೊತೆ ನೀನು ಬೇಡಿಕೊ ಎಂದು ತನ್ನ ಮಗನನ್ನು ಕೇಳಿಕೊಳ್ಳುತ್ತಾರೆ. ಈ ಪ್ರಾರ್ಥನೆಯ ಕಾಲಕ್ಕಾಗಲೇ ಹಿಟ್ಲರನ ಗೂಢಚರ ಸೇನೆ ಪ್ರಾನ್ಸನ್ನು ಆಕ್ರಮಿಸಿತ್ತು. ಪಾರಂಪರಿಕವಾದ ಪ್ಯಾರಿಸ್ ನಗರ ಹಾಳಾಗಬಾರದೆಂದು ಅದನ್ನು 'ತೆರೆದನಗರ'ವೆಂದು ಘೋಷಿಸಲಾಗಿತ್ತು. ಸ್ವಾಮೀಜಿ ಸರ್ಕಾರದ ಅಧೀನದಲ್ಲಿರಬೇಕಾಗಿತ್ತು. ಅವರ ಕ್ಷೇಮಕ್ಕಾಗಿ ಕವಿಯ ಪ್ರಾರ್ಥನೆಯೊಂದಿಗೆ ಕವಿತೆ ಮುಕ್ತಾಯವಾಗುತ್ತದೆ.
ನೀನ್ ಬಂದ ಈ ಜಗಂ ನೀನ್ ಬಿಡುವ ಆ ಜಗಕೆ
ಕೀಳಾಗುವಂತೆ ಬಾಳ್: ಇಂದಲ್ಲಿ, ಪಶ್ಚಿಮದಿ
ಮಾನವೀಯತೆ ಮಾಣ್ದು ತಾಂಡವಂಗೈಯುತಿದೆ
ನೀಚ ರಾಕ್ಷಸತೆ, ಯಾಂತ್ರಿಕ ಕ್ರೌರ್ಯದಾ ರುದ್ರ
ರಣದಲಿ. ಪೆಣ್ಗಳಂ ಮಕ್ಕಳಂ ಬಲಿಗೆಯ್ದು
ತಣಿಸುತಿರುವರು ಸಮರಚಂಡಿಯಂ. ಸೆಣಸುತಿವೆ
ಹಣೆಗೆ ಹಣೆ ಘಟ್ಟಿಸುತ್ತಿರೆಡು ದುಶ್ಯಕ್ತಿಗಳ್
ಲೋಕ ಚಕ್ರಾಧಿಪತ್ಯಕ್ಕೆ. ಆ ದುಷ್ಕರ್ಮ
ಶಕ್ತಿದ್ವಯಂಗಳುಂ ಹೇಳ ಹೆಸರಿಲ್ಲದೆಯೆ
ಒಂದರಿಂದೊಂದಳಿದು ಶೋಕವೊಂದುಳಿಯಲಾ
ಶೋಕಕೊಂದೊಳ್ಪಿನಾಕಾರಮಂ ನೀಡಲ್ಕೆ
ನೀಂ ಸತ್ಕೃತಿಯ ಲಸಚ್ಛಲ್ಪಿವರನಾಗೆಂದು
ಹರಸುವೆನು; ಹರಸುವೆನೊ ಗುರುದೇವನಂ ನುತಿಸಿ; ಮೇಣ್
ನನ್ನನಾಶೀರ್ವದಿಸಿ ಗೃಹಸ್ಥಾಶ್ರಮಕ್ಕೊಯ್ಸು,
ಧರ್ಮದೌದಾರ್ಯಮಂ ಪೇಳೆ ಪಶ್ಚಿಮಕೆಯ್ದಿ,
ಐರೋಪ್ಯ ಯುದ್ಧದಾ ಕ್ರೌರ್ಯ ಭೂಮಿಯೊಳಿರ್ಪ
ನನ್ನ ಆ ಸಿದ್ಧೇಶ್ವರಾನಂದ ಸ್ವಾಮೀಜಿಗೆ
ಸುಕ್ಷೇಮಮಕ್ಕೆಂದು ಬಯಸಿ ನಲ್ಬಯಕೆಯಂ!
ಕವಿಯ ಪ್ರಾರ್ಥನೆ ಹುಸಿಯಾಗಲಿಲ್ಲ. ಪ್ರಭಾವಶಾಳಿ ಭಕ್ತಮಿತ್ರರ ನೆರವಿನಿಂದ ಸ್ವಾಮೀಜಿ ಪಾರಾದರು. ಯುದ್ಧಾನಂತರ 1945ರಲ್ಲಿ ಮತ್ತೆ ಪ್ಯಾರಿಸ್ಸಿಗೆ ಬಂದು ಗ್ರಟ್ಸ್'ನಲ್ಲಿ 'ಸೆಂಟರ್ ಫಾರ್ ವೇದಾಂತಿಕ್ ರಾಮಕೃಷ್ಣ'  ಸಂಸ್ಥೆಯನ್ನು ಪುನರುಜ್ಜೀವನಗೊಳಿಸುತ್ತಾರೆ. ಮುಂದೆ 1957ರಲ್ಲಿ ಅವರು ನಿಧನರಾಗುವವರೆಗೂ ಕವಿಯೊಂದಿಗೆ ಪತ್ರ ಸಂಪರ್ಕದಲ್ಲಿದ್ದ ಸ್ವಾಮಿಗಳು, ಪುಸ್ತಕಗಳನ್ನು ಕಳುಹಿಸುತ್ತಾ ತಮ್ಮ ಪ್ರಿಯ ಶಿಷ್ಯನಿಗೆ ಜಗತ್ತಿನ ಜ್ಞಾನದ ಹೊಸ ಹೊಸ ಮುಖಗಳಿಗೆ ಬಾಗಿಲುಗಳನ್ನು ತೆರೆದು ಹೊಸಬೆಳಕಿನ ವಲಯಕ್ಕೆ ಕವಿಯನ್ನು ನೂಕುತ್ತಿದ್ದರು. "ನನ್ನ ಚೇತನೋದ್ಬೋಧಕ್ಕೆ ಅವರಿಂದಾದ ದೈವೀ ಉಪಕಾರವನ್ನು ನೆನೆದು ನನ್ನ ಭಕ್ತಿ 9.1.1960ರಲ್ಲಿ ಉದಯರವಿಯ ದೇವರ ಮನೆಯಲ್ಲಿ ಧ್ಯಾನದ ಕಾಲದಲ್ಲಿ ರಚಿಸಿದ 'ಕೃತಜ್ಞತೆ' ಎಂಬ ಕವನವನ್ನು ಇಲ್ಲಿ ಅರ್ಪಿಸುತ್ತಿದ್ದೇನೆ" ಎಂದು ನೆನಪಿನ ದೋಣಿಯಲ್ಲಿ ದಾಖಲಿಸಿದ್ದಾರೆ. ಹಾಗೆ ಅರ್ಪಿಸಿದ ಕವಿತೆಯ ಪೂರ್ಣಪಾಠ ಇಲ್ಲಿದೆ.
1
ಗುರುವಿನೆಡೆಗೆ ಕರೆದ ಗುರುವೆ,
ನನ್ನ ಜೀವ ದೇವತರುವೆ,
ನಿಮ್ಮನೆಂತು, ಹೇಳಿ ಮರೆವೆ?
ನೆ  ನೆ  ವೆ
ಕೃತಜ್ಞತೆಯೊಳನುದಿನ!
2
ಮಾನ್ಯರಲ್ಲಿ ಪರಮ ಮಾನ್ಯ!
ಸಾಮಾನ್ಯರಲಿ ಸಾಮಾನ್ಯ!
ನಿಮ್ಮ ಕೃಪೆಯೊಳಾದೆ ಧನ್ಯ.
ನಿ  ಮ್ಮ
ನೆನೆವುದೆನೆಗೆ ಪೂಜನ!
3
ಸತಿಯನೊಲಿದು ನಿಮ್ಮ ನೆನೆವೆ;
ಸುತರ ನಲಿಸಿ ನಿಮ್ಮ ನೆನೆವೆ;
ಕೃತಿಯನೋದಿ ನಿಮ್ಮ ನೆನೆವೆ;
ನಿ  ಮ್ಮ
ನೆನೆವುದಾತ್ಮ ಸಾಧನೆ!
4
ಅಹೈತುಕೀ ಕೃಪಾಸಿಂಧು,
ನಿಷ್ಕಾರಣ ಆತ್ಮಬಂಧು,
ಅಂದಿನಂತೆ ಇಂದು ಮುಂದು
ಇರಲಿ ನನಗೆ ಎಂದೆಂದೂ,
ನಿ   ಮ್ಮ
ಮೈತ್ರಿಯ ಅನುಮೋದನೆ!