Showing posts with label ಅಕ್ಕಮಹಾದೇವಿ. Show all posts
Showing posts with label ಅಕ್ಕಮಹಾದೇವಿ. Show all posts

Friday, November 20, 2009

ಅಕ್ಕಮಹಾದೇವಿಯ ಹಾಡು - ಪಾಡು : ಭಾಗ - 2

ಕಲ್ಯಾಣದಿಂದ ಶ್ರೀಶೈಲದತ್ತ...
ಮಹಾದೇವಿ ಕಲ್ಯಾಣಕ್ಕೆ ಬರುವ ಮೊದಲೇ ಅವಳ ಕೀರ್ತಿ ಕಲ್ಯಾನಕ್ಕೆ ಬಂದುಬಿಟ್ಟಿತ್ತು. ಅನುಭವಮಂಟಪದ ಅಧ್ಯಕ್ಷನಾದ ಅಲ್ಲಮನಿಗೆ ಮಹಾದೇವಿ ಮಹಾನ್ ಶರಣೆ ಎಂಬುದು ಅವಳ ನಿರ್ಭಿಡೆಯ ನಡೆಯಿಂದಲೇ ಮನದಟ್ಟಾಗಿತ್ತು. ಆದರೂ ಬೇರೆ ಶರಣರಿಗೆ ಅವಳ ಶಿವಭಕ್ತಿಯ ಮಹಿಮೆಯನ್ನು ತೋರುವುದಕ್ಕೋಸ್‌ಕರ ಅವಳನ್ನು ಪರೀಕ್ಷಿಸುವ ನಿರ್ಧಾರಕ್ಕೆ ಬರುತ್ತಾನೆ. ಕಿನ್ನರಿ ಬೊಮ್ಮಯ್ಯನನ್ನು ಕರೆದು, ಬಾಗಿಲಿನಲ್ಲಿಯೇ ಮಹಾದೇವಿಯನ್ನು ಪರೀಕ್ಷಿಸಿ ನೋಡಲು ಹೇಳುತ್ತಾನೆ. ಆಗ ಕಿನ್ನರಿ ಬೊಮ್ಮಯ್ಯ ಬಾಗಿಲಿನಲ್ಲಿಯೇ ಅವಳನ್ನು ತಡೆದು ಪರೀಕ್ಷಿಸುತ್ತಾನೆ. ತಾನು ಮಹಾದೇವಿಯನ್ನು ಪರೀಕ್ಷಿಸಿದ ಪರಿಯನ್ನು ಅವನೇ ತನ್ನೊಂದು ವಚನದಲ್ಲಿ ಹೇಳಿದ್ದಾನೆ.


ಮಸ್ತಕವ ಮುಟ್ಟಿ ನೋಡಿದಡೆ


ಮನೋಹರದಳಿವು ಕಾಣ ಬಂದಿತ್ತು!


ಮುಖಮಂಡಲವ ಮುಟ್ಟಿ ನೋಡಿದಡೆ,


ಮೂರ್ತಿಯ ಅಳಿವು ಕಾಣ ಬಂದಿತ್ತು!


ಕೊರಳ ಮುಟ್ಟಿ ನೋಡಿದಡೆ,


ಗರಳಧರನ ಇರವು ಕಾಣಬಂದಿತ್ತು!


ತೋಳುಗಳ ಮುಟ್ಟಿ ನೋಡಿದಡೆ,


ಶವನಪ್ಪುಗೆ ಕಾಣಬಂದಿತ್ತು!


ಉರಸ್ಥಲವ ಮುಟ್ಟಿ ನೋಡಿದಡೆ,


ಪರಸ್ಥಲದಂಗಲೇಪ ಕಾನ ಬಂದಿತ್ತು!


ಬಸಿರ ಮುಟ್ಟಿನೋಡಿದಡೆ,


ಬ್ರಹ್ಮಾಂಡವ ಕಾಣಬಂದಿತ್ತು!


ಗುಹ್ಯವ ಮುಟ್ಟಿನೋಡಿದಡೆ,


ಕಾಮದಹನ ಕಾಣಬಂದಿತ್ತು!


ಮಹಾಲಿಂಗ ತ್ರಿಪುರಾಂತಕದೇವಾ,


ಮಹಾದೇವಿಯಕ್ಕನ ನಿಲುವನರಿಯದೆ ಅಳುಪಿ ಕೆಟ್ಟೆನು.

ಹೀಗೆ ಮಹಾದೇವಿಯನ್ನು ಪರೀಕ್ಷಿಸಿದ ಬೊಮ್ಮಯ್ಯ ಪಶ್ಚತ್ತಾಪ ಪಡುತ್ತಾನೆ. ಆಗ ಮಹಾದೇವಿಯ ಆತನನ್ನು ಸಮಾಧಾನಪಡಿಸಿ ಸಹೋದರ ಎಂದು ಕರೆದು ಮಾತನಾಡಿಸುತ್ತಾಳೆ. ಕಿನ್ನರಯ್ಯ

‘ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ,


ಶರಣಾರ್ಥಿ ಶರಣಾರ್ಥಿ ಕರುಣಸಾಗರ ನಿಧಿಯೆ,


ದಯಾಮೂರ್ತಿ ತಾಯೆ, ಶರಣಾರ್ಥಿ!


ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,


ನೀವು ಬಿಡಿಸಿದವರಾಗಿ ನಿಮ್ಮ ದಯದಿಂದ


ನಾನು ಹುಲಿನೆಕ್ಕಿ ಬದುಕಿದೆನು


ಶರಣಾರ್ಥಿ ಶರಣಾರ್ಥಿ ತಾಯೆ.’
ಎಂದು ಹಾಡುತ್ತಾನೆ.

Get this widget | Track details | eSnips Social DNA

ಮಹಾದೇವಿಯ ಪರೀಕ್ಷೆ ಅಷ್ಟಕ್ಕೆ ಮುಗಿಯುವುದಿಲ್ಲ. ಅನುಭವಮಂಟಪದ ಅಧ್ಯಕ್ಷಪೀಠದ ಮೇಲೆ ಕುಳಿತು ಅಲ್ಲಮನೂ ಅವಳನ್ನು ಪರೀಕ್ಷಿಸುತ್ತಾನೆ. ಅದನ್ನು ಹೀಗೆ ಸಂಗ್ರಹಿಸಬಹುದು.

ಅಲ್ಲಮ: ನನ್ನ ಪ್ರಶ್ನೆಗೆ ಉತ್ತರಿಸಿದರಷ್ಟೇ ನಿನಗೆ ಶರಣ ಸಭೆಗೆ ಸ್ವಾಗತ.

ಮಹಾದೇವಿ: ತಿಳಿದಂತೆ ಹೇಳುತ್ತೇನೆ.

ಅಲ್ಲಮ: ತಾರುಣ್ಯವತಿಯಾದ ನಿನ್ನ ಪತಿ ಯಾರು?

ಮಹಾದೇವಿ: ಇಹಕ್ಕೊಬ್ಬ ಗಂಡನೆ? ಪರಕ್ಕೊಬ್ಬ ಗಂಡನೆ? ಲೌಕಿಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ? ಎನ್ನ ಗಂಡ ಚೆನ್ನಮಲ್ಲಿಕಾರ್ಜುನ ದೇವರಲ್ಲದೆ ಇನ್ನಾರು? ಮಿಕ್ಕಿನ ಗಂಡರೆಲ್ಲ ಮುಗಿಲ ಮರೆಯ ಬೊಂಬೆಯಂತೆ!

ಅಲ್ಲಮ: ಯಾವ ವ್ಯಾಮೋಹವೂ ಬೇಡದ, ಕೇವಲ ಮಲ್ಲಿಕಾರ್ಜುನನನ್ನೇ ಆಶಿಸುವ ನಿನಗೆ ನಿನ್ನ ಕಾಯದ ಮೇಲಿನ ಆಸೆ ಇನ್ನು ಕುಂದಿಲ್ಲವೆ? ಈ ಕಂಬಳಿಯ ವೇಷವೇಕೆ?

ಮಹಾದೇವಿ: ಕಾಯ ಕರ್ರನೆ ಕಂದಿದರೇನು, ಮಿರ್ರನೆ ಮಿಂಚಿದರೇನು, ಅಂತರಂಗ ಶುದ್ಧವಾದ ಬಳಿಕ, ಚೆನ್ನಮಲ್ಲಿಕಾರ್ಜುನನು ಒಲಿದ ಕಾಯ ಹೇಗಿದ್ದರೇನು?

ಅಲ್ಲಮ: ಅಂತರಂಗದಲಿ ನಾಚಿಕೆಯಿರುವುದಕ್ಕೇ ಈ ಕಂಬಳಿಯ ಹೊದಿಕೆಯೇ?

ಮಹಾದೇವಿ: ಹಣ್ಣು ಪಕ್ವವಾಗಿದ್ದರೆ ಅದರ ಸಿಪ್ಪೆ ಕೆಡುವುದಿಲ್ಲ. ಸಿಪ್ಪೆ ಕೆಡದಿದ್ದರೂ ಹಣ್ಣು ಕೆಡುವುದುಂಟು. ನಾನು ಪಕ್ವವಾದ ಹಣ್ಣು. ಕಾಮನ ಮುದ್ರೆಯ ಕಂಡು ನಿಮ್ಮ ಶರಣರ ನೊಂದುಕೊಳ್ಳಬಾರದು ಎಂದು ಈ ವೇಷ.

ಅಲ್ಲಮ ನಿರುತ್ತರನಾಗುತ್ತಾನೆ. ಆಗ ಮಹಾದೇವಿಯು,

‘ಸಾವಿಲ್ಲದ ಕೇಡಿಲ್ಲದ ರೂಪಿಲ್ಲದ


ಭವವಿಲ್ಲದ ಭಯವಿಲ್ಲದ


ಚೆನ್ನಮಲ್ಲಿಕಾರ್ಜುನನಿಗೆ ಒಲಿದ ನನ್ನನ್ನು ಕಾಡಬೇಡಿ’

ಎಂದು ಪ್ರಾರ್ಥಿಸುತ್ತಾಳೆ. ಅಲ್ಲಮ ಅವಳನ್ನು ಶರಣ ಸಭೆಗೆ ಸ್ವಾಗತಿಸುತ್ತಾನೆ. ಬಸವಣ್ಣ ಅಕ್ಕ ಎಂದು ಪ್ರೀತಿಯಿಂದ ಸಂಬೋಧಿಸುತ್ತಾನೆ. ಆಗ ಶರಣರೆಲ್ಲಾ ಅವಳನ್ನು ಅಕ್ಕ ಎಂದೇ ಕರೆಯುತ್ತಾರೆ. ಮಹಾದೇವಿ ಅಕ್ಕಮಹಾದೇವಿಯಾಗುತ್ತಾಳೆ.

ಅಕ್ಕಮಹಾದೇವಿ ಗುಹೆ - ಶ್ರೀಶೈಲ
(ಚಿತ್ರಕೃಪೆ: ಅಂತರಜಾಲ)
ಹಲವಾರು ದಿನಗಳ ಕಾಲ ಕಲ್ಯಾಣದಲ್ಲಿಯೇ ನೆಲೆಸುತ್ತಾಲೆ. ಮಹಾಮನೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸುತ್ತಾಳೆ. ಅನುಭವ ಮಂಟಪದಲ್ಲಿ ನಡೆಯುವ ಚರ್ಚೆಗಳಲ್ಲಿ ಅಕ್ಕಮಹಾದೇವಿಯ ಮಾತಿಗೆ ಗೌರವವಿರುತ್ತಿತ್ತು. ಹೀಗೆ ದಿನಗಳನ್ನು ಕಳೆಯುತ್ತಿದ್ದ ಅಕ್ಕಮಹಾದೇವಿ ಕೊನೆಗೆ ಬಸವಾದಿ ಶರಣರ ಅನುಮತಿ ಪಡೆದು ಶ್ರೀಶೈಲಕ್ಕೆ ಹೊರಡುತ್ತಾಳೆ. ಶ್ರೀಶೈಲದ ದಾರಿಯಲ್ಲಿ ಕೌಶಿಕ ಅವಳನ್ನು ಬೇಟಿಯಾಗುತ್ತಾನೆ. ತಾನು ಮಾಡಿದ ತಪ್ಪಿಗಾಗಿ ಪಶ್ಚತ್ತಾಪ ಪಟ್ಟು ಅಕ್ಕಮಹಾದೇವಿಯ ಕ್ಷಮೆ ಕೇಳುತ್ತಾನೆ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಮಾಡಿದ ಅಕ್ಕಮಹಾದೇವಿ ಕದಳಿ ಎಂಬ ಜಾಗದಲ್ಲಿ ನೆಲೆಸುತ್ತಾಳೆ. ಅಲ್ಲಿಯೇ ತನ್ನ ಜೀವಿತವನ್ನು ಕೊನೆಗೊಳಿಸುತ್ತಾಳೆ.

ಅಕ್ಕಮಹಾದೇವಿ ಶ್ರೇಷ್ಟ ವಚನಾಕಾರ್ತಿಯಾಗಿರುವಂತೆ ಶ್ರೇಷ್ಟ ಕವಯಿತ್ರಿಯೂ ಹೌದು. ವಚನಗಳಲ್ಲದೆ ‘ಯೋಗಾಂಗ ತ್ರಿವಿಧಿ’ ಸ್ವರವಚನ, ಸೃಷ್ಟಿಯವಚನ ಮತ್ತು ಮಂತ್ರಗೋಪ್ಯ ಎಂಬ ಇತರ ಕೃತಿಗಳನ್ನೂ ರಚಿಸಿದ್ದಾಳೆ. ಅಕ್ಕನ ವಚನಗಳು ಭಾವತೀವ್ರತೆಯಿಂದ ಕೂಡಿದವುಗಳಾಗಿವೆ ಹಾಗೂ ಶ್ರೇಷ್ಟ ತರಗಿತಿಯ ಭಾವಗೀತೆಗಳಾಗಿವೆ ಎಂಬ ಅಭಿಪ್ರಾಯವಿದೆ. ಸತಿಪತಿ ಭಾವ, ವಿರಹ, ಆಧ್ಯಾತ್ಮ ಎಲ್ಲವೂ ಅವಳ ವಚನಗಳಲ್ಲಿ ಸ್ಥಾನ ಪಡೆದು ಕಲಾತ್ಮಕವಾಗಿ ಅಭಿವ್ಯಕ್ತವಾಗಿವೆ. ಅವಳ ವಚನಗಳ ಶ್ರೇಷ್ಟತೆಯನ್ನು ಸಮಕಾಲಿನನಾದ ಚೆನ್ನಬಸವಣ್ಣ ಒಂದು ವಚನದಲ್ಲಿ ಗುರುತಿಸಿದ್ದಾನೆ. ಅದು ಹೀಗಿದೆ.

ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ


ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ


ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ


ಅಜಗಣ್ಣನ ಐದು ವಚನಕ್ಕೆ ಕೂಡಚೆನ್ನಸಂಗಮದೇವಾ


ಮಹದೇವಿಯಕ್ಕನ ಒಂದು ವಚನ ನಿರ್ವಚನ

ಭಾವತೀವ್ರತೆಯನ್ನು ಸೂಸುವ ಹಾಗೇ ಸೂಮದರ ಭಾವಗೀತೆಯಂತಿರುವ ಅಕ್ಕಮಹಾದೇವಿಯ ಒಂದು ವಚನವನ್ನು ಕೆಳಗೆ ನೀಡಲಾಗಿದೆ.

ತನು ಕರಗದವರಲ್ಲಿ


ಮಜ್ಜನವನೊಲ್ಲೆಯಯ್ಯಾ ನೀನು


ಮನ ಕರಗದವರಲ್ಲಿ


ಪುಷ್ಪವನೊಲ್ಲಯಯ್ಯಾ ನೀನು


ಹದುಳಿಗರಲ್ಲದವರಲ್ಲಿ


ಗಂಧಾಕ್ಷತೆಯನೊಲ್ಲೆಯಯ್ಯಾ ನೀನು


ಅರಿವು ಕಣ್ದೆರೆಯದವರಲ್ಲಿ


ಆರತಿಯನೊಲ್ಲೆಯಯ್ಯಾ ನೀನು


ಭಾವಶುದ್ಧವಿಲ್ಲದವರಲ್ಲಿ


ಧೂಪವನೊಲ್ಲೆಯಯ್ಯಾ ನೀನು


ಪರಿಣಾಮಿಗಳಲ್ಲದವರಲ್ಲಿ


ನೈವೇದ್ಯವನೊಲ್ಲೆಯಯ್ಯಾ ನೀನು


ತ್ರಿಕರಣ ಶುದ್ಧವಿಲ್ಲದವರಲ್ಲಿ


ತಾಂಬೂಲವನೊಲ್ಲೆಯಯ್ಯಾ ನೀನು


ಹೃದಯಕಮಲ ಅರಳದವರಲ್ಲಿ


ಇರಲೊಲ್ಲೆಯಯ್ಯಾ ನೀನು


ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ


ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ?

Friday, November 13, 2009

ಅಕ್ಕಮಹಾದೇವಿಯ ಹಾಡು - ಪಾಡು : ಭಾಗ - 1

ಮೊಗ್ಗಾಗಿ.... ಹೂವಾಗಿ....
ಇಂದಿನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೋಕಿನ ಉಡುತಡಿಗೆ ಕನಿಷ್ಠ ಸುಮಾರು ಎಂಟನೂರ ಐವತ್ತು ವರ್ಷಗಳ ಪ್ರಾಚೀನತೆಯಿದೆ. ಆಗ್ಗೆ ಅಲ್ಲಿ ನಿರ್ಮಲಶೆಟ್ಟಿ ಮತ್ತು ಸುಮತಿ ಎಂಬ ಶಿವಭಕ್ತ ದಂಪತಿಗಳಿದ್ದರು. ಅವರಿಗೆ ಮಹಾದೇವಿ ಎಂಬ ಮಗಳಿದ್ದಳು. ಶಿವಭಕ್ತಿಯು ತುಂಬಿ ತುಳುಕುತ್ತಿರುವ ಮನೆಯಲ್ಲಿ ತಂದೆ-ತಾಯಿಗಳ ಅಕ್ಕರೆಯ ಮಗಳಾಗಿ, ಸ್ವತಃ ಶಿವಭಕ್ತಳಾಗಿ ಮಹಾದೇವಿ ಬೆಳೆದು ಪ್ರಾಯಕ್ಕೆ ಬರುತ್ತಾಳೆ. ಶಿವಾಲಯಕ್ಕೆ ನಿತ್ಯವೂ ಹೋಗುವುದು, ಶಿವನನ್ನು ಆರಾಧಿಸುವುದು, ಶಿವಾಲಯದಲ್ಲಿ ನಡೆಯುವ ಪ್ರವಚನಗಳನ್ನು ಕೇಳುವುದು, ತಂದೆ ತಾಯಿಗಳಿಂದ ಶಿವಮಹಾತ್ಮೆಯನ್ನು ಕೇಳುವುದು... ಹೀಗೆ ದಿನಕಳೆಯುತ್ತಿದ್ದಳು. ಹೀಗೆ ವಾತಾವರಣವೇ ಶಿವಮಯವಾಗಿರಲು ಮಹಾದೇವಿಯ ಮನಸ್ಸಿನಲ್ಲಿ ಶಿವನ ರೂಪ ನೆಲೆನಿಂತುಬಿಟ್ಟಿತು. ಶಿವನೇ ಸರ್ವಸ್ವ ಎಂದು ತಿಳಿದು ಭಕ್ತಿಸಾಧನೆ ಮಾಡತೊಡಗಿದಳು. ಸಹಜವಾಗಿ ಮೂಡಿದ ಯೌವ್ವನ, ಸಾಧನೆಯಿಂದ ಕೂಡಿದ ಭಕ್ತಿಯ ತೇಜಸ್ಸು ಮಹಾದೇವಿಯನ್ನು ಮಹಾಸುಂದರಿಯನ್ನಾಗಿ ಮಾಡಿಬಿಟ್ಟಿತ್ತು. ಹೆತ್ತವರಿಗೆ ಮಗಳಿಗೆ ಮದುವೆ ಮಾಡುವ ಆಸೆಯಾಯಿತು. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿದರು. ಆದರೆ ಅದನ್ನು ತಿಳಿದ ಮಹಾದೇವಿಯು, ‘ನನಗೆ ಭವದ ಗಂಡ ಬೇಡ. ಚೆನ್ನ ಮಲ್ಲಿಕಾರ್ಜುನನೇ ನನ್ನ ನಿಜದ ಗಂಡ’ ಎಂದು ಉತ್ತರಿಸಿದಳು. ತಂದೆ ತಾಯಿಯರು ಏನು ಮಾಡಬೇಕೆಂದು ತೋಚದೆ ಸಂದಿಗ್ಧದಲ್ಲಿ ಬಿದ್ದರು.
ಹೀಗಿರುವಾಗ ಒಂದು ದಿನ ಆ ಪ್ರಾಂತ್ಯದ ಆಡಳಿತಗಾರ ಕೌಶಿಕ ಎಂಬುವವನು ತನ್ನ ಪರಿವಾರ ಸಮೇತನಾಗಿ ಊರಿನ ಬೀದಿಯಲ್ಲಿ ಮೆರವಣಿಗೆ ಹೊರಟಿದ್ದ. ಮೆರವಣಿಗೆಯನ್ನು ನೋಡಲು ಊರಿಗೇ ಊರೇ ಅಲ್ಲಿ ನೆರೆದಿತ್ತು. ಸಹಜವಾಗಿ ಮಹಾದೇವಿಯೂ ತನ್ನ ಮನೆ ಮುಂದೆ ನಿಂತು ಮೆರವಣಿಗೆಯನ್ನು ನೋಡುತ್ತಿದ್ದಳು. ಶಿವಭಕ್ತೆಯಾದ ಅವಳಿಗೆ ಅದೊಂದೂ ಹಿತವೆನಿಸಲಿಲ್ಲ. ಅದನ್ನೇ ಶಿವ-ಪಾರ್ವತಿಯರು ಗಣಸಮೂಹದೊಂದಿಗೆ ನಡೆಸುತ್ತಿರುವ ಮೆರವಣಿಗೆ ಎಂದು ಕಲ್ಪಿಸಿಕೊಂಡು ನೋಡುತ್ತಿದ್ದಳು. ಮೆರವಣಿಗೆಯಲ್ಲಿ ಬರುತ್ತಿದ್ದ ಕೌಶಿಕನ ಕಣ್ಣುಗಳು ಗುಂಪಿನಲ್ಲಿ ಎದ್ದು ಕಾಣುವಂತಹ ಸೌಂದರ್ಯವತಿಯಾದ ಮಹಾದೇವಿಯ ಮೇಲೆ ಬಿದ್ದವು. ‘ಎಲಾ! ನಮ್ಮ ಊರಿನಲ್ಲೇ ಇಂಥಹ ಚೆಲುವೆ ಇರುವಳಲ್ಲಾ! ಮದುವೆಯಾದರೆ ಅವಳನ್ನು ಮದುವೆಯಾಗಬೇಕು’ ಎಂದುಕೊಂಡನು. ಮೆರವಣಿಗೆ ಮುಗಿಸಿ ಅರಮನೆಗೆ ಹಿಂತಿರುಗಿದರೂ ಕಣ್ಣಿನಿಂದ ಮಹಾದೇವಿಯ ರೂಪ ಅಳಿಯಲಿಲ್ಲ. ಅವಳನ್ನು ಮದುವೆಯಾಗಲು ನಿಶ್ಚಯಿಸಿ ತನ್ನ ಆಪ್ತರೊಡನೆ ಅವಳ ಬಗ್ಗೆ ವಿಚಾರಿಸಲು ತಿಳಿಸಿದ. ರಾಜನ ಬಯಕೆಯನ್ನು ಅವನ ಕಡೆಯವರಿಂದ ತಿಳಿದ ಮಹಾದೇವಿಯ ತಾಯ್ತಂದೆಯರು ಗಾಬರಿಯಾದರು. ಸ್ವತಃ ರಾಜನೇ ಮಗಳನ್ನು ಮದುವೆಯಾಗುತ್ತೇನೆ ಎಂದು ಹೇಳಿಕಳುಹಿಸಿದ್ದ. ಆದರೆ ಮಹಾದೇವಿ ‘ನಾನು ಮದುವೆಯೇ ಆಗುವುದಿಲ್ಲ, ಚೆನ್ನಮಲ್ಲಿಕಾರ್ಜುನನೇ ನನ್ನ ಪತಿ’ ಎಂದು ಹಿಂದೆಯೇ ಹೇಳಿದ್ದಳು. ಈಗಲೂ ಅವಳದು ಅದೇ ಉತ್ತರವಾಯಿತು.
ಅವಳ ನಿರಾಕರಣೆಯನ್ನು ಕೇಳಿದ ಕೌಶಿಕನಿಗೆ ಕೋಪ ಬಂತು. ಆದರೂ ತೋರಿಸದೆ ಸ್ವತಃ ತಾನೇ ಮಹಾದೇವಿಯ ಮನೆಗೆ ಬಂದು ‘ನನ್ನನ್ನು ಮದುವೆಯಾಗು’ ಎಂದು ಕೇಳಿಕೊಂಡ. ಅದಕ್ಕೂ ಒಪ್ಪದಿದ್ದಾಗ ‘ರಾಜನಾದ ನನ್ನ ಮಾತನ್ನು ಧಿಕ್ಕರಿಸಿದರೆ ಬಲವಂತವಾಗಿಯಾದರೂ ಸರಿಯೆ ನಾನು ಮಹಾದೇವಿಯನ್ನು ಪಡೆದೇ ತೀರುತ್ತೇನೆ’ ಎಂದು ಹೆದರಿಸಿ ಹೋದ. ಮನೆಯವರು ಗಾಭರಿಯಾದರು. ಆದರೆ ಮಹಾದೇವಿ ದೃತಿಗೆಡಲಿಲ್ಲ. ‘ಚೆನ್ನಮಲ್ಲಿಕಾರ್ಜುನನ ಸಂಕಲ್ಪವೇ ಇದಾಗಿರುವಾಗ ನಾನಾದರು ಏಕೆ ತಡೆಯಲಿ’ ಎಂದು ಕೌಶಿಕನ ಅರಮೆನಗೆ ತಾನೇ ಹೋದಳು. ಮದುವೆಯಾಗುವುದಾಗಿ ಹೇಳಿ ಮೂರು ಶರತ್ತುಗಳನ್ನು ವಿಧಿಸಿದಳು. ‘ನನ್ನ ಪೂಜೆಯ ಸಮಯದಲ್ಲಿ ಅಡ್ಡಿ ಮಾಡಬಾರದು. ಜಂಗಮರ ಸೇವೆಗೆ ತಡೆಯೊಡ್ಡಬಾರದು. ನನ್ನ ವ್ರತ ಮುಗಿಯುವವರೆಗೂ ನನ್ನನ್ನು ಮುಟ್ಟಬಾರದು’ ಎಂದು ನಿಬಂಧನೆಗಳು ಹೇಳಿದಳು. ಕಾಮಾತುರನಾದ ಕೌಶಿಕ ಎಲ್ಲಕ್ಕೂ ‘ಒಪ್ಪಿಗೆ’ ಎಂದುಬಿಟ್ಟ.

ಮುಂದೊಂದು ದಿನ ವೈಭವಯುತವಾಗಿ ಮದುವೆ ನಡೆಯಿತು. ಆದರೆ ವೈಭವ ಎಂಬುದು ಕೌಶಿಕನದು ಮಾತ್ರವಾಗಿತ್ತು. ಮಹಾದೇವಿ ಯಾಂತ್ರಿಕವಾಗಿ ಅದರಲ್ಲಿ ಭಾಗವಹಿಸಿದ್ದಳು. ತನ್ನ ಪಕ್ಕದಲ್ಲಿದ್ದ ಕೌಶಿಕ ಅವಳ ಮನಸ್ಸಿನಿಂದಲೂ, ದೃಷ್ಟಿಯಿಂದಲೂ ಮರೆಯಾಗಿಬಿಟ್ಟಿದ್ದ. ಅಲ್ಲಿ ಇದ್ದುದ್ದು ತನ್ನ ನಿಜಪತಿಯಾದ ಚೆನ್ನಮಲ್ಲಕಾರ್ಜುನ ಮಾತ್ರ. ಮದುವೆಯಾಗಿ ಅರಮನೆಗೆ ಬಂದ ಅಕ್ಕಮಹಾದೇವಿ ಪೂಜಾಗೃಹ ಸೇರಿಕೊಂಡು ವ್ರತವನ್ನು ಕೈಗೊಂಡಳು. ದಿನಕಳೆದಂತೆ ಕೌಶಿಕನ ಮನಸ್ಸು ಅವಳನ್ನು ಬಯಸತೊಡಗಿತು. ಮನಗೆ ಯಾವಾಗ ಬೇಕೆಂದರೆ ಆಗ ಜಂಗಮರು ಬಂದುಹೋಗತೊಡಗಿದರು. ಅವರ ಸೇವೆಯಲ್ಲಿ ಮಹಾದೇವಿ ನಿರತಳಾಗಿಬಿಟ್ಟಳು. ಉಳಿದಂತೆ ಶಿವಪೂಜೆ ಮಾಡುತ್ತಿದ್ದಳು. ಇವುಗಳಿಂದ ರೋಸಿಹೋದ ಕೌಶಿಕ ತನ್ನನ್ನು ಕೂಡುವಂತೆ ಒತ್ತಾಯಿಸತೊಡಗಿದ. ಅಕ್ಕಮಹಾದೇವಿ ತನ್ನ ನಿಬಂಧನೆಗಳನ್ನು ನೆನಪಿಸುತ್ತಿದ್ದಳು.


ಚಿತ್ರಕೃಪೆ : ಅಂತರಜಾಲ
ಆದರೆ ಒಂದು ದಿನ ಕಾಮಂದನಾದ ಕೌಶಿಕ ತಡೆಯದೆ ಅವಳನ್ನು ಮೈಮುಟ್ಟಿ ಬಲವಂತಕ್ಕಿಳಿದುಬಿಟ್ಟ. ತಕ್ಷಣ ಮಹಾದೇವಿ
ಎಮ್ಮೆಗೊಂದು ಚಿಂತೆ, ಸಮ್ಮಗಾರಗೊಂದು ಚಿಂತೆ,
ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ,
ಎನಗೆ ಎನ್ನ ಚಿಂತೆ, ನಿನಗೆ ನಿನ್ನ ಕಾಯದ ಚಿಂತೆ,
ಒಲ್ಲೆ ಹೋಗು, ಸೆರಗ ಬಿಡು,
ಎನಗೆ ಎನ್ನ ಚೆನ್ನಮಲ್ಲಿಕಾರ್ಜುನನೊಲಿವನೋ ಒಲಿಯನೋ ಎಂಬ ಚಿಂತೆ
ಎಂದು ನುಡಿದು, ‘ಇಂದಿಗೆ ನಾನಿನ್ನ ಹೆಂಡತಿಯಲ್ಲ, ನೀನನ್ನ ಪತಿಯಲ್ಲ’ ಎಂದು ಹೊರನಡೆದುಬಿಟ್ಟಳು. ಕೌಶಿಕನು ಕೊಟ್ಟಿದ್ದ ಎಲ್ಲಾ ಆಭರಣ ಬಟ್ಟೆ ಬರೆಗಳನ್ನು ಕಿತ್ತೆಸೆದು ಕಂಬಳಿಯನ್ನು (ಕೇಶಾಂಬರ) ಹೊದ್ದು ನಿಜದ ಗಂಡನ ಆರಿಸುತ್ತಾ ಹೊರಟಳು. ಒಲ್ಲದ ಗಂಡನನ್ನು ಮಾತ್ರವಲ್ಲ, ಸರ್ವವನ್ನು ತೊರೆದು ವಿರಾಗಿಣಿಯಾಗಿ ಹೊರಟು ನಿಂತ ಮಗಳನ್ನು ಕಂಡು ತಂದೆ ತಾಯಿ, ಬಂಧುಬಳಗದವರು ದುಃಖಪಟ್ಟರು. ಎಲ್ಲರನ್ನೂ ಮಹಾದೇವಿಯೇ ‘ನನ್ನ ಗಂಡನ ಮನೆ ಸೇರಿ ಹೂವ ತಾರತೆನಲ್ಲದೆ, ಹುಲ್ಲು ತಾರೆನು’ ಎಂದು ಸಮಾಧಾನ ಮಾಡಿದಳು.
‘ಒಬ್ಬಳೇ ಹೋಗುತ್ತೀಯ, ಊಟ ವಸತಿಗೇನು ಮಾಡುತ್ತೀಯ’ ಎಂದು ತಂದೆ ತಾಯಿ ಗೋಳಾಡಿದರು. ಆಗ ಮಹಾದೇವಿ
ಹಸಿವಾದರೆ ಭಿಕ್ಷಾನ್ನಗಳುಂಟು,
ತೃಷೆಯಾದರೆ ಕೆರೆ ಹಳ್ಳ ಬಾವಿಗಳುಂಟು,
ದೇಹದ ಚಳಿಗೆ ಬಿಸುಟ ಅರಿವೆಗಳುಂಟು,
ಶಯನಕ್ಕೆ ಹಾಳು ದೇಗುಲವುಂಟು,
ಆತ್ಮಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನನುಂಟು
ಎಂದು ಸಮಾಧಾನಪಡಿಸಿ ಹೊರಟುಬಿಟ್ಟಳು.
ಮುಂದೆ ಏನು ಎತ್ತ ಎಂದು ತಿಳಿಯದ ಅವಳಿಗೆ ಕಲ್ಯಾಣದಲ್ಲಿ ಬಸವಣ್ಣ-ಅಲ್ಲಮಾದಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಶರಣರ ಚಟುವಟಿಕೆಗಳು ತಿಳಿದು ಬಂದವು.
ಸಂಸಾರಸಂಗದಲ್ಲಿದ್ದೆ ನಾನು,
ಸಂಸಾರ ನಿಸ್ಸಾರವೆಂದು ತೋರಿದ ಶ್ರೀ ಗುರು,
ಅಂಗವಿಕಾರದ ಸಂಗವ ನಿಲಿಸಿ,
ಲಿಂಗವನಂಗದ ಮೇಲೆ ಸಥಾಪ್ಯವ ಮಾಡಿದನು ಎನ್ನ ಗುರು,
ಹಿಂದಣ ಜನ್ಮವ ತೊಡೆದು ಮುಂದಣ ಪಥವ ತೋರಿದನು
ಎನ್ನ ಗುರು ಚೆನ್ನಮಲ್ಲಿಕಾರ್ಜುನ
ಎಂದು ಹಾಡುತ್ತಾ ಕಲ್ಯಾಣದ ದಾರಿ ಹಿಡಿದು ನಡೆದಳು. ದಾರಿಯಲ್ಲಿ ಸಿಕ್ಕ ಸಿಕ್ಕ ಊರುಗಳಲ್ಲಿ ಶಿವಭಕ್ತಿಯನ್ನು ಪದವ ಮಾಡಿ ಹಾಡುತ್ತಾ, ಜನರು ಕೊಟ್ಟಿದ್ದನ್ನು ತಿನ್ನುತ್ತಾ ಕಲ್ಯಾಣಕ್ಕೆ ಬಂದಳು.
ಮುಂದುವರೆಯುವುದು...........