Showing posts with label ಪಂಪಭಾರತ. Show all posts
Showing posts with label ಪಂಪಭಾರತ. Show all posts

Monday, March 01, 2010

ಸರಸ್ವತೀ ಮಣಿಹಾರನಾದ ಪಂಪ ಮಹಾಕವಿ

ಪಂಪ ಕನ್ನಡದ ಆದಿಕವಿ. ‘ಆದಿಪುರಾಣ’ ಮತ್ತು ‘ಪಂಪಭಾರತ’ ಆತನ ಕೃತಿಗಳು. ಅವನೇ ಹೇಳಿರುವಂತೆ, ಭಾರತವೂ ‘ಆದಿಪುರಾಣ’ವೂ ಸಮಸ್ತ ಕ್ಷಿತಿಗೆ ಅಲಂಕಾರದಂತಿವೆ. ಸರಸ್ವತಿಗೆ ಅವು ಹೊಸ ವಿಲಸವನ್ನುಂಟುಮಾಡಿವೆ. ಸರಸ್ವತಿಗೇ ಹೊಸ ವಿಲಾಸವನ್ನುಂಟುಮಾಡಿದ ಪಂಪನ ವಾಗ್ವಿಳಾಸ ಸರಸ್ವತಿಯ ವಿಷಯದಲ್ಲಿಯೂ ಉದಾರವಾಗಿಯೇ ಇದೆ. ‘ಆದಿಪುರಾಣ’ ಕೃತಿರಚನೆಯ ಶಿಸ್ತಿನಲ್ಲೇ ಸರಸ್ವತಿಯು ನೆಲೆಯಾಗಿರುವುದನ್ನು ಕಾಣಬಹುದು. ಮೊದಲನೆಯ ಆಶ್ವಾಸವೊಂದನ್ನು ಉಳಿದು ಪ್ರತಿ ಆಶ್ವಾಸದ ಪ್ರಾರಂಭದ ಪದ್ಯದಲ್ಲಿ ತನ್ನ ಕಾವ್ಯದ ಮುಖ್ಯಪಾತ್ರಗಳಾದ ಮಹಾಬಲ, ಲಲಿತಾಂಗ, ವಜ್ರಜಂಘ, ಸುವಿಧಿ, ಪುರುದೇವ, ಶ್ರೀಪತಿ, ಆದಿನಾಥ, ಭರತ ಮೊದಲಾದವರನ್ನು ಸರಸ್ವತಿಗೆ ಮಣಿಹಾರವನ್ನಾಗಿಸಿದ್ದಾನೆ. ಸ್ವತಃ ತನ್ನನ್ನೇ ಮೂರು ಪದ್ಯಗಳಲ್ಲಿ ಸರಸ್ವತೀಮಣಿಹಾರನೆಂದು ಕರೆದುಕೊಳ್ಳುತ್ತಾನೆ. ಅದರಲ್ಲಿ ಒಂದು ಪದ್ಯವಂತೂ ಆತನ ಸರಸ್ವತಿಯ ದರ್ಶನಕ್ಕೆ ಮುನ್ನುಡಿಯಂತಿದೆ.

ಅತಿಸುಭಗೆಗೆ ಸಂದಂ ಸರ

ಸ್ವತಿಗೀತನ ಲಲಿತಾವಾಗ್ವಿಳಾಸಮೆ ದಲಂ

ಕೃತಿಯವೊಲೆಸೆದಪುದು ಜಗ

ತ್ಪ್ರತೀತನೀತನೆ ಸರಸ್ವತೀ ಮಣಿಹಾರಂ

ಈತನ ಲಲಿತವಾದ ವಾಗ್ವಿಳಾಸ, ಅತಿಸುಭಗಳಾದ ಸರಸ್ವತಿಗೆ ವಿಶೇಷವಾದ ಅಲಂಕಾರವಾಗುತ್ತದೆ. ಜಗತ್ಪ್ರಸಿದ್ಧನಾದ ಪಂಪ ಸರಸ್ವತಿಯ ಕಂಠದ ಮಣಿಹಾರ. ‘ಆದಿಪುರಾಣ’ದ ಪ್ರಾರಂಭದಲ್ಲಿಯೇ ಬಂದಿರುವ ಸರಸ್ವತಿಯ ಸ್ತುತಿ ಜೈನ ಕಾವ್ಯಪ್ರಪಂಚಕ್ಕೆ ದಿಕ್ಸೂಚಿಯಾಗಿ, ಜೈನಪರಂಪರೆಯ ಸರಸ್ವತಿಯ ಪರಿಕಲ್ಪನೆಯನ್ನು ಒಂದು ಸೂತ್ರಬದ್ಧವಾಗಿಸಿದೆ.

ಪರಮಜಿನೇಂದ್ರವಾಣಿಯೆ ಸರಸ್ವತಿ ಬೇಱದು ಪೆಣ್ಣರೂಪಮಂ

ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ

ದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದಾನದ

ರ್ಕೆರೆದಪೆನಾ ಸರಸ್ವತಿಯ ಮಾೞ್ಕೆಮಗಿಲ್ಲಿಯೆ ವಾಗ್ವಿಳಾಸಮಂ

‘ಪರಮಜಿನೇಂದ್ರವಾಣಿಯೇ ಸರಸ್ವತಿ, ಅದು ಬೇರೆಯಲ್ಲ. ಹೆಣ್ಣಿನ ರೂಪವನ್ನು ಧರಿಸಿ ನಿಂತಿಲ್ಲ. ಅಂತಹ ಜಿನವಾಣಿಯು ಭಾವಿಸಿ ಓದುವ ಕೇಳುವ ಪೂಜಿಸುವ ಆದರಿಸುವ ಭವ್ಯಕೋಟಿಗೆ (ಜಿನಭಕ್ತರಿಗೆ) ನಿರಂತರ ಸೌಖ್ಯವನ್ನು ಕೊಡುವುದು. ಅಂತಹ ಸರಸ್ವತಿಯು ನಮಗೆ ವಾಗ್ವಿಳಾಸವನ್ನು ಮಾಡಲಿ’ ಎಂದು ಬೇಡಿಕೊಳ್ಳುತ್ತಾನೆ. ನದಿಯಾಗಿ, ನದಿದೇವತೆಯಾಗಿ ಮೊದಮೊದಲು ಪ್ರಚಲಿತದಲ್ಲಿದ್ದ ಸರಸ್ವತಿಯು ವಾಗ್ದೇವತೆಯಾಗಿ, ವಿದ್ಯಾದೇವತೆಯಾಗಿ ನಂತರ ಹೆಚ್ಚು ಪ್ರಸಿದ್ಧಳಾಗಿದ್ದಾಳೆ. ವಾಗ್ದೇವತೆಯನ್ನು ಸ್ತ್ರೀರೂಪದಲ್ಲಿಯೇ ಆರಾಧಿಸುತ್ತಾ ಬಂದಿರುವವರಿಗೆ ಪಂಪನ ‘ಪರಮಜಿನೇಂದ್ರನವಾಣಿಯೆ ಸರಸ್ವತಿ, ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತಿರುವುದಲ್ಲ’ ಎಂಬ ಪರಿಕಲ್ಪನೆ ಆಶ್ಚರ್ಯವನ್ನುಂಟುಮಾಡುತ್ತದೆ. ಆದರೆ ಜೈನ ಪರಿಕಲ್ಪನೆಯಲ್ಲಿ, ಜೈನವೇದವೇ ಸರಸ್ವತಿ. ಅವುಗಳು ಶ್ರೇಷ್ಠರಾದ ತೀರ್ಥಂಕರರ ವಾಣಿಯಲ್ಲದೆ ಬೇರೆಯಲ್ಲ. ಸಂಸ್ಕೃತ ‘ಮಹಾಪುರಾಣ’ದಲ್ಲಿ ಆದಿಜಿನನ ಮೊಗದಿಂದ ಉದಯಿಸಿದ ಮಾತೇ ಸರಸ್ವತಿಯಾಯಿತು ಎಂಬ ಪರಿಕಲ್ಪನೆಯಿದೆ. ಜಿನನು ರಾಗದ್ವೇಷದಿಂದ ಮುಕ್ತನಾದ ಸಿದ್ಧ. ಅವನು ಕಾವ್ಯವನ್ನಾಗಲಿ, ಶಾಸ್ತ್ರವನ್ನಾಗಲಿ ಸೃಷ್ಟಿಸುವುದಿಲ್ಲ. ಅವನು ಮಾತನಾಡಿದ್ದೆಲ್ಲ ಕಾವ್ಯವಾಗುತ್ತದೆ ಹಾಗೂ ಶಾಸ್ತ್ರವಾಗುತ್ತದೆ. ಜೈನರ ನಂಬಿಕೆಯಂತೆ ಆ ಶಾಸ್ತ್ರಗಳೇ ಸರಸ್ವತಿ. ವೈದಿಕ ಪರಂಪರೆಯಲ್ಲೂ ಸರಸ್ವತಿಯ ಸೃಷ್ಟಿಕರ್ತ ಬ್ರಹ್ಮನೇ ಆಗಿದ್ದಾನೆ. ಬ್ರಹ್ಮ ಸರಸ್ವತಿಯ ಸೃಷ್ಟಿಕರ್ತನಾದರೆ, ಕವಿಗಳು ಸರಸ್ವತಿಯ ರೂಪಗಳಾದ ಕಾವ್ಯಗಳ ಸೃಷ್ಟಿಕರ್ತರು. ಆದ್ದರಿಂದ ಕವಿಗಳು ಅಭಿನವ ಸೃಷ್ಟಿಕರ್ತರು.

ಸರಸ್ವತಿ ಎಂದರೆ ಹೆಣ್ಣರೂಪವನ್ನು ಧರಿಸಿದ ದೇವತೆ ಎಂಬ ಪೌರಾಣಿಕ ಕಲ್ಪನೆಯನ್ನು ನಿರಾಕರಿಸಿ, ಪಂಪನು ಜೈನಪರಂಪರೆಗೆ ಅನುಗುಣವಾಗಿ ಸರಸ್ವತಿಯನ್ನು ಪರಿಭಾವಿಸಿದ್ದಾನೆ. ಆದರೆ ವೈದಿಕ ಪಂರಂಪರೆಯಂತೆಯೇ ಜೈನರಲ್ಲಿಯೂ ಸರಸ್ವತಿಯು ವಾಗ್ದೇವತೆ; ವಿದ್ಯಾಧಿದೇವತೆಯೂ ಹೌದು. ಭಾವಿಸುವ, ಓದುವ, ಆಲಿಸುವ ಪೂಜಿಸುವ ಆದರಿಸುವವರಿಗೆ ನಿತ್ಯಸೌಖ್ಯವನ್ನು ಉಂಟುಮಾಡುವುದು ವಾಕ್. ಆ ವಾಕ್ಕಿಗೆ ದೇವತೆಯಾದ ಸರಸ್ವತಿಯು ಎಲ್ಲರಿಗೂ ವಾಗ್ವಿಳಾಸವನ್ನು ಮಾಡಲಿ ಎಂಬಲ್ಲಿ ಸರಸ್ವತಿಯನ್ನು ಕುರಿತಾದ ವೈದಿಕ ಪರಿಕಲ್ಪನೆ ಮುಂದುವರೆದಿದೆ.

‘ಪರಮಜಿನೇಂದ್ರವಾಣಿಯೆ ಸರಸ್ವತಿ, ಅವಳು ಕೇವಲ ಹೆಣ್ಣಿನ ರೂಪವನ್ನು ಧರಿಸಿ ನಿಂತವಳಲ್ಲ’ ಎಂದು ಸಾರಿದ ಪಂಪ ತನ್ನ ಕಾವ್ಯಗಳಲ್ಲಿಯೇ ಸರಸ್ವತಿಗೆ ಹೆಣ್ಣಿನ ರೂಪವನ್ನು ತೊಡಿಸಿರುವುದುಂಟು. ‘ಅತಿಸುಭಗಗೆ ಸಂದ.......’ ಎಂಬ ಪದ್ಯದಲ್ಲಿ ಪಂಪ ಮಾಡಿಕೊಂಡಿರುವ ಆತ್ಮಶ್ಲಾಘನೆಯಲ್ಲಿ ಸರಸ್ವತಿಯು ಸ್ತ್ರೀರೂಪದಲ್ಲಿದ್ದಾಳೆ. ಆತನು ‘ತಾನೇ ಆಕೆಗೆ ಮಣಿಹಾರ’ ಎನ್ನುತ್ತಾನೆ. ಪ್ರತಿ ಅಧ್ಯಾಯದ ಮೊದಲ ಪದ್ಯದಿಂದಲೇ ಚಕ್ರವರ್ತಿಯಾದ ಭರತ, ಜಿನನಾದ ಆದಿನಾಥ ಮೊದಲಾದವರನ್ನೆಲ್ಲಾ ಸರಸ್ವತಿಯ ಕೊರಳಿನ ಮಣಿಹಾರವಾಗಿಸುತ್ತಾನೆ. ಹೀಗೇಕೆ? ಆದರೆ, ಆತನೆಲ್ಲೂ ‘ಸರಸ್ವತಿಯನ್ನು ಸ್ತ್ರೀರೂಪದಲ್ಲಿ ಚಿತ್ರಿಸುವುದಿಲ್ಲ’ ಎಂದು ಹೇಳಿಲ್ಲ. ‘ಹೆಣ್ಣರೂಪದಲ್ಲಿ ಸರಸ್ವತಿಯನ್ನು ಬಣ್ಣಿಸಲೇಬಾರದೆಂದು ಅವನೇನು ಹಟತೊಟ್ಟಿರಲಿಲ್ಲವೆಂದೂ, ಮೂಲಭೂತ ಅರ್ಥವನ್ನು ನಿರ್ವಚನ ಮಾಡಬೇಕೆಂದು ಬಯಸಿದ್ದನೆಂದೂ ತಿಳಿದುಕೊಳ್ಳಬಹುದು.’ ಕವಿ ಪ್ರತಿಮಾಪ್ರಿಯ ಮತ್ತು ಪ್ರಯೋಗಪ್ರಿಯ. ಕವಿ ಹೊಸಹೊಸತನ್ನು ಸೃಷ್ಟಿಸುವ ಅಭಿನವ ಸೃಷ್ಟಿಕರ್ತ ಎಂಬ ಮಾತಿಗೆ ಪಂಪನೇ ಸಾಕ್ಷಿ. ಪರಮಜಿನೇಂದ್ರವಾಣಿಯೆ ಸರಸ್ವತಿ ಎಂದು ಹೇಳಿದ ‘ಆದಿಪುರಾಣ’ದಲ್ಲಿಯೇ ಪಂಪ, ಸರಸ್ವತಿಯನ್ನು ವಾಗ್ವಧುವನ್ನಾಗಿಯೂ ಚಿತ್ರಿಸಿದ್ದಾನೆ. ‘ವಾಗ್ವಧೂಮುದ್ರೆಯೊಳ್ ಮುದ್ರಿಸಿ ನಿಂದತ್ತು ಆದಿತೀರ್ಥೇಶ್ವರ ಚರಿತದೊಳ್ ವಾಕ್ಯಮಾಣಿಕ್ಯಕೋಶಂ’ ಎನ್ನುತ್ತಾನೆ. ಆದಿತೀರ್ಥೇಶ್ವರ ಚರಿತ್ರೆಯಲ್ಲಿ ವಾಕ್ಯಗಳೆಂಬ ಮಾಣಿಕ್ಯಗಳ ಕೋಶಕ್ಕೆ ವಾಗ್ವಧೂ ಅಂದರೆ ಸರಸ್ವತಿಯೇ ಮುದ್ರೆಯೊತ್ತಿದ್ದಾಳಂತೆ! ಪಂಪನಿಗೆ ತನ್ನ ಕಾವ್ಯಗಳ ಶ್ರೇಷ್ಠತೆಯ ಬಗ್ಗೆ ಅಷ್ಟೊಂದು ವಿಶ್ವಾಸ.

ಪಂಪನು ತನ್ನ ‘ವಿಕ್ರಮಾರ್ಜುನವಿಜಯ’ ಕೃತಿಯಲ್ಲಿ,

ಕ್ಷಯಮಣಮಿಲ್ಲ ಕೇೞ್ದು ಕಡೆಗಂಡವನಾನಾವನುಮಿಲ್ಲೆನಲ್ ತದ

ಕ್ಷಯನಿಧಿ ತಾನೆ ತನ್ನನೊಸೆದೋಲಗಿಪಂಗರಿದಿಲ್ಲೆನಿಪ್ಪ ವಾ

ಙ್ಮಯಮನಿತರ್ಕಮಂಬಿಕೆ ಸರಸ್ವತಿ ಮನ್ಮುಖಪದ್ಮರಂಗದೇ

ೞ್ಗೆಯನೆಡೆಗೊಂಡು ಕೊಂಡುಕೊನೆದೀಗರಿಗಂಗೆ ವಿಶುದ್ಧ ಬುದ್ಧಿಯಂ

ಎಂದು ಪ್ರಾರ್ಥಿಸಿದ್ದಾನೆ. ಸರಸ್ವತಿಯು, ಅರಿಗ ಅಂದರೆ ಅರಿಕೇಸರಿಗೆ ನಿಷ್ಕಲ್ಮಷವಾದ ಬುದ್ಧಿಯನ್ನು ಕೊಡಲಿ ಎಂಬುದು ಕವಿಯ ಆಶಯ. ಆದರೆ ಆತ ಸರಸ್ವತಿಗೆ ಆರೋಪಿಸಿರುವ ಒಂದೊಂದು ಗುಣವೂ ವಿಚಾರಯೋಗ್ಯ. ವಾಙ್ಮಯಕ್ಕೆ ನಾಶವೆಂಬುದು ಒಂದಿನಿತೂ ಇಲ್ಲ. ಕೇಳಿದ ಮಾತ್ರಕ್ಕೇ ವಾಙ್ಮಯದ ಕೊನೆಯನ್ನು ತಿಳದವನು ಯಾವನೂ ಇಲ್ಲ. ವಾಙ್ಮಯ ಎಂಬುದು ತನಗೆ ತಾನೇ ಅಕ್ಷಯನಿಧಿ ಆಗಿರುವುದು. ಪ್ರೀತಿಯಿಂದ ಸೇವಿಸಿದವರಿಗೆ ಅಸಾಧ್ಯವಾದುದು ಯಾವುದೂ ಇಲ್ಲವೆನ್ನಿಸುವುದು ವಾಙ್ಮಯ. ಅಂತಹ ಸಮಸ್ತ ವಾಙ್ಮಯಕ್ಕೆ ಸರಸ್ವತಿಯು ತಾಯಿಯಾಗಿದ್ದಾಳೆ. ಒಬ್ಬ ವ್ಯಕ್ತಿ ಗಳಿಸಿದ ಆಸ್ತಿಯನ್ನು ಕಳೆದುಕೊಳ್ಳಬಹುದು. ಬೇರೆಯವರು ಕಿತ್ತುಕೊಳ್ಳಬಹುದು. ಅದು ತನ್ನಿಂದ ತಾನೇ ನಾಶವಾಗಬಹುದು. ಗಳಿಸಿದಾತನ ಮರಣಾನಂತರ ಅದು ಬೇರೆಯವರಿಗೆ ವರ್ಗವಾಗಬಹುದು. ಆದರೆ, ವಿದ್ಯೆ ಎಂಬ ಅಕ್ಷಯ ನಿಧಿ ಮಾತ್ರ ಮನುಷ್ಯ ತಾನು ಬದುಕಿರುವವರೆಗೂ ಕಳೆದುಕೊಳ್ಳಲಾರದ ಸಂಪತ್ತು. ಅದನ್ನು ಬೇರೆಯವರಿಗೆ ವರ್ಗಾಯಿಸಿದಷ್ಟೂ ಬೆಳೆಯುತ್ತಲೇ ಇರುತ್ತದೆ. ಪಿತ್ರಾರ್ಜಿತ ಆಸ್ತಿಯಂತೆ ಮುಂದಿನ ತಲೆಮಾರಿಗೆ ಬಿಡಲಾಗುವುದಿಲ್ಲ. ಅಂತಹ ವಾಙ್ಮಯಕ್ಕೆ ಸರಸ್ವತಿಯು ‘ತಾಯಿ’ ಎಂಬ ಪರಿಕಲ್ಪನೆ ಪಂಪನದು. ‘ಅಂಬಿಕೆ ಸರಸ್ವತಿ’ ಎಂಬಲ್ಲಿ ತಾಯಿಯಂತೆ ಅವಳು ಪ್ರೇಮಮಯಿ. ಹೀಗೆ ಜಿನೇಂದ್ರವಾಣಿಯಾಗಿ ಕಾಣಿಸಿಕೊಂಡ ಸರಸ್ವತಿ, ಆದಿಪುರಾಣದಲ್ಲಿ ವಾಗ್ವಧು ಆಗಿ, ಪಂಪಭಾರತದಲ್ಲಿ ಅಂಬಿಕೆಯಾಗಿ ಪರಿಪೂರ್ಣತೆಯತ್ತ ಸಾಗುತ್ತಾಳೆ.

ಸುಮಾರು ಹತ್ತನೇ ಶತಮಾನದಲ್ಲಿಯೇ, ‘ಮಾನವಜಾತಿ ತಾನೊಂದೆ ವಲಂ’ ಎಂದು ಸಾರಿದ ಪಂಪ ಮಹಾನ್ ಮಾನವತಾವಾದಿ; ಒಬ್ಬ ಶ್ರೇಷ್ಠ ಕವಿ. ಅವನ ಕಾವ್ಯಗಳು ಈ ಲೋಕಕ್ಕೆ ಅಲಂಕಾರಪ್ರಾಯವಾಗಿರುವವು. ‘ಸರಸ್ವತಿಗೆ ವಿಳಾಸಮಂ ಪೊಸತುಮಾಡುವ ಪಂಪನ ವಾಗ್ವಿಲಾಸ’ ಶ್ರೇಷ್ಠ ತರಗತಿಯದ್ದು. ಅಂತೆಯೇ ಆತನ ಸರಸ್ವತೀ ದರ್ಶನವೂ ಸಹ.

Monday, November 23, 2009

ಮೀನು ಹಿಡಿಯುವುದು ಇಷ್ಟು ಸುಲಭವೇ? ಪಂಪ!

ಆಗಾಗ ಟೀವಿಯಲ್ಲಿ, ಕ್ರಿಕೆಟ್ ಆಟದ ನಡುವೆ ಬರುವ ಜಾಹಿರಾತುಗಳಲ್ಲಿ ಹೆಚ್ಚು ಗಮನ ಸೆಳೆದದ್ದು: ಆಧುನಿಕ ಉಪಕರಣಗಳನ್ನು ಹಿಡಿದು ಮೀನಿಗೆ ಗಾಳ ಹಾಕಿ ಒಬ್ಬ ವ್ಯಕ್ತಿ ಕುಳಿತಿರುತ್ತಾನೆ. ಆಗ ಹಳ್ಳಿಯ ಆಸಾಮಿಯೊಬ್ಬ ಹಾಡು ಗುನುಗುತ್ತಾ ಬರುತ್ತಾನೆ. ಗಾಳ ಹಾಕಿಕೊಂಡು ಕುಳಿತವ ‘ಸದ್ದು ಮಾಡಬೇಡ (ಮೀನು ಗಾಳಕ್ಕೆ ಬೀಳುವುದಿಲ್ಲ)’ ಎಂದು ಗದರುತ್ತಾನೆ. ಹಳ್ಳಿಯವ ಒಂದು ಕೋಲಿಗೆ ನಾಲ್ಕು ಹನಿ ಫೆವಿಕ್ವಿಕ್ ಹಾಕಿ ನೀರಿನಲ್ಲಿ ಮುಳುಗಿಸಿ ಮೇಲೆತ್ತುತ್ತಾನೆ. ನಾಲ್ಕು ಮೀನುಗಳು ಕೋಲಿಗೆ ಅಂಟಿಕೊಂಡಿರುತ್ತವೆ! ಹಳ್ಳಿಯವ ಮತ್ತೆ ಸಂತೋಷದಿಂದ ಹಾಡು ಗುನುಗಲಾರಂಭಿಸಿದರೆ ಇತ್ತ ಗಾಳ ಹಾಕಿ ಕುಳಿತವನ ಮುಖ ಇಂಗು ತಿಂದ ಮಂಗನಂತಾಗುತ್ತದೆ!!!
ಇದನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣ ಪಂಪಭಾರತ! ನಮ್ಮ ವಾರಾಂತ್ಯ ಕಾರ್ಯಕ್ರಮ ಪಂಪಭಾರತ ಅಧ್ಯಯನ ನೆನ್ನೆ ನೆಡೆದಿತ್ತು. ಅದರಲ್ಲಿ ಯಮುನಾ ನದಿಯ ಮಡುವೊಂದರಲ್ಲಿ ಕೃಷ್ಣಾರ್ಜುನರು ತಮ್ಮ ಪರಿವಾರದೊಡನೆ ಜಲಕ್ರೀಡೆಯಾಡುವ ಸನ್ನಿವೇಶ ಬರುತ್ತದೆ. ಆಗ ಮೀನು ಹಿಡಿಯುವುದು ಇಷ್ಟೊಂದು ಸುಲಭವೇ? ಅನ್ನಿಸಿತು! ನಂತರ ನನ್ನ ಮನಸ್ಸನ್ನು ಆವರಿಸಿದ್ದು ನಾನು ಬಾಲ್ಯದಲ್ಲಿ ಕಂಡ, ದಕ್ಷಿಣದ ಒಳನಾಡಿನಲ್ಲಿ ಅಂದರೆ ಕರ್ನಾಟಕದ ಬಯಲುಸೀಮೆಯಲ್ಲಿ ಮೀನು ಹಿಡಿಯುವ ಹಲವಾರು ವಿಧಾನಗಳು. ಅವುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ.
ಹಾಂ! ಯೋಚಿಸಬೇಡಿ. ಪಂಪಭಾರತದ ಆ ಸನ್ನಿವೇಶವನ್ನು ಕೊನೆಯಲ್ಲಿ ಹೇಳುತ್ತೇನೆ. ಅದರ ಸ್ವಾರಸ್ಯವನ್ನು ನೀವು ಸವಿಯಲೇಬೇಕು!
ಸಣ್ಣ 'ಕೂಳಿ'ಯಲ್ಲಿ ಮೀನು ಹಿಡಿಯುವುದು
ತೆಂಗಿನ ಗರಿಯಿಂದ ಬೇರ್ಪಡಿಸಿದ ಕಡ್ಡಿಯನ್ನು ಬಳಸಿ ನಿರ್ಮಿಸಿದ 'ಕೂಳಿ' ಅಥವಾ 'ಕೂಣಿ' ಮೀನು ಹಿಡಿಯುವ ಜನಪ್ರಿಯ ಸಾಧನ. ಅವುಗಳನ್ನು ಮಳೆಗಾಲದಲ್ಲಿ ಸಣ್ಣದಾಗಿ ನೀರು ಹರಿಯುವ ಕಾಲುವೆಗಳಿಗೆ ಒಡ್ಡಿ (ಜೋಡಿಸಿ), ನೀರು ಅದರ ಮುಖಾಂತರ ಮಾತ್ರ ಹರಿಯುವಂತೆ ಮಾಡುತ್ತಿದ್ದರು. ಕಾಲುವೆಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಒಂದು ಕೂಳಿಯ ನೀರು, ಎರಡು ಕೂಳಿಯ ನೀರು ಎಂದು ನಿರ್ಧರಿಸುತ್ತಿದ್ದರು. ಹಾಗೆ ರಾತ್ರಿ ಜೋಡಿಸಿ ಬಂದ ಕೂಳಿಯಲ್ಲಿ ಬೆಳಿಗ್ಗೆ ಸೇರುಗಟ್ಟಲೆ ಸಣ್ಣ ಸಣ್ಣ ಮೀನುಗಳು ಸಂಗ್ರಹವಾಗಿರುತ್ತಿದ್ದವು (ಒಮ್ಮೊಮ್ಮೆ ಕೇರೆಹಾವು, ಕಪ್ಪೆ ಮೊದಲಾದವುಗಳೂ ಸೇರಿಕೊಳ್ಳುತ್ತಿದ್ದವು). ಕೆಲವೊಮ್ಮೆ ಕೆಲವು ಉತ್ಸಾಹಿಗಳು ಕೂಳಿ ಹಾಕಿದ ಜಾಗದಲ್ಲೇ ಗುಡಾರ ಹಾಕಿಕೊಂಡು ಕೂಳಿಯೊಳಗೆ ಹಾವು ಬಂದಿದೆಯೇ ಎಂದು ನೋಡಿ ಬಂದಿದ್ದರೆ ಅದನ್ನು ಹೊರಗೆ ಹಾಕಿ ಮತ್ತೆ ಕೂಳಿ ಜೋಡಿಸುತ್ತಿದ್ದರು. ಏಕೆಂದರೆ ಹಾವು ಕೂಳಿಯೊಳಗೆ ಬಂದ ಮೀನೆಲ್ಲವನ್ನೂ ಕಬಳಿಸುತ್ತದೆ ಎಂದು! ಹರಿಯುವ ನೀರಿಗೆ ವಿರುದ್ಧ ದಿಕ್ಕಿನಲ್ಲಿ ಮೀನು ಚಲಿಸುತ್ತವೆ ಎಂದು ಆಗ ನಮಗೆ ಗೊತ್ತಿರಲಿಲ್ಲ. ನೀರು ಹರಿಯುವ ದಿಕ್ಕಿಗೇ ತೆರೆದ ಬಾಯಿಯನ್ನು ಮಾಡಿ ಜೋಡಿಸುತ್ತಿದ್ದ ಕೂಳಿಯೊಳಗೆ ಮೀನು ಹೇಗೆ ಹೋಗುತ್ತವೆ? ಎಂದು ತುಂಬಾ ತಲೆ ಕೆಡಿಸಿಕೊಳ್ಳುತ್ತಿದ್ದೆವು.
ದೊಡ್ಡ ಕೂಳಿಯಲ್ಲಿ ಮೀನು ಹಿಡಿಯುವುದು
ಬಿದಿರು ಕಡ್ಡಿಗಳಲ್ಲಿ ಮಾಡಿರುವ ಇದನ್ನು ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯಲು ಇದನ್ನು ಬಳಸುತ್ತಾರೆ. ಸಿಹಿನೀರಿನಲ್ಲಿ ಅಂದರೆ ಕೆರೆಗಳಲ್ಲಿ ಮೀನು ಸಾಕಿದ ಗ್ರಾಮದವರು ವರ್ಷಕ್ಕೊಮ್ಮೆ ಮೀನು ಹಿಡಿಯುವ ಕಾರ್ಯಕ್ರಮ (ಮೀನು ಪಾಚುವರಿ) ಇಟ್ಟುಕೊಂಡಿರುತ್ತಾರೆ. ನೀರು ಕೂಳಿಗೆ ಅನುಕೂಲಕರ ಹಂತಕ್ಕೆ ಬಂದಾಗ ಈ ಕಾರ್ಯಕ್ರಮವಿರುತ್ತದೆ. ಅಲ್ಲಿಯವರೆಗೆ ಯಾರಾದರೂ ಕದ್ದು ಮೀನು ಹಿಡಿಯುವುದನ್ನು ತಪ್ಪಿಸಲು ಕಾವಲು ಕಾಯುವ ಪದ್ಧತಿಯೂ ಇದೆ. ಈ ವಾರ್ಷಿಕ ಕಾರ್ಯಕ್ರಮದಲ್ಲಿ ಒಂದು ಕೂಳಿಗೆ ಇಷ್ಟು ಎಂದು ಪ್ರವೇಶ ಧನ ತೆಗೆದುಕೊಂಡು ಒಂದೇ ಬಾರಿ ಎಲ್ಲಾ ಮೀನುಗಾರರನ್ನು ಕೆರೆಯೊಳಗೆ ಬಿಡಲಾಗುತ್ತದೆ. ಐನೂರು ಆರನೂರು ಜನ ಒಟ್ಟಿಗೇ ಕೂಳಿಗಳನ್ನು ಮೇಲೆತ್ತಿ ಹಿಡಿದು ಕೂಗುತ್ತಾ ಕೆರೆಯೊಳಗೆ ನುಗ್ಗುವ ಆ ದೃಶ್ಯ ಒಂದು ರೀತಿಯ ರಣೋತ್ಸಾಹವನ್ನು ನೆನಪಿಸುತ್ತದೆ. ದೊಡ್ಡಕೂಳಿಯನ್ನು ಅಲ್ಲಲ್ಲಿ ಹಾಕುತ್ತಾ ಮೀನು ಅದರೊಳಗೆ ಬಂದರೆ ಅದನ್ನು ಕೈಯಲ್ಲಿ ಹಿಡಿದು, ಸೊಂಟದಲ್ಲಿ ದಬ್ಬಳ(ದೊಡ್ಡಸೂಜಿ)ದೊಂದಿಗೆ ನೇತಾಡುವ ದಾರಕ್ಕೆ ಪೋಣಿಸಿಕೊಂಡು ಮುಂದುವರೆಯುತ್ತಾರೆ. ಅಂದು ಕೆಲವು ಮೀನುಗಾರರು ನೂರಾರು ಮೀನುಗಳನ್ನು ಹಿಡಿಯುತ್ತಾರೆ. ದಾರದಲ್ಲಿ ಪೋಣಿಸಿದ ಮೀನನ್ನು ಕದಿಯುವವರೂ ಇರುತ್ತಾರೆ! ಅದಕ್ಕೆ ಕೆಲವರು ಸಹಾಯಕರನ್ನು ಕರೆತಂದು, ಆಗಾಗ ಆರೇಳು ಮೀನುಗಳಾದ ತಕ್ಷಣ ದಾರವನ್ನು ಬದಲಾಯಿಸಿಕೊಳ್ಳುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಊರಿನ ಮಕ್ಕಳು ನೀರೊಳಗೆ ಇಳಿದು ಕೈಗೆ ಸಿಕ್ಕ ಸಣ್ಣ ಪುಟ್ಟ ಮೀನುಗಳನ್ನು ಬಾಚಿಕೊಳ್ಳುತ್ತಾರೆ. ಅವರಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ನಾವು ಮಿಡ್ಲಿಸ್ಕೂಲಿನಲ್ಲಿದ್ದಾಗ ಅಲ್ಲಿನ ಮೇಷ್ಟರುಗಳು ನಮ್ಮನ್ನು ಕಳುಹಿಸಿ ಸಾಕಷ್ಟು ಮೀನನ್ನು ಹಿಡಿಸಿಕೊಂಡು ಸಂಜೆ ಮನೆಗೆ ಕೊಂಡೊಯ್ದಿದ್ದರು! (ಮಿಡ್ಲಿಸ್ಖೂಲಿನ ಮೇಷ್ಟರ ಮೀನು ಕೋಳಿ ಶಿಕಾರಿಯ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುತ್ತೇನೆ)
ತಟ್ಟೋಬಲೆಯಲ್ಲಿ ಮೀನು ಹಿಡಿಯುವುದು
ತ್ರಿಕೋನಾಕಾರದ ತೆರೆದ ಬಾಯಿಯುಳ್ಳ ಹಾಗೂ ಆ ಬಾಯಿಯಿಂದ ಹಿಂದಕ್ಕೆ ಬಾಲದಂತೆ ಕಾಣುವ ಬಲೆಯುಳ್ಳ ಒಂದು ಉಪಕರಣ ತಟ್ಟೋಬಲೆ. ಸುಮಾರು ಮಂಡಿಯುದ್ದದ ನೀರಿರುವ ಕಡೆ ಮೀನುಗಳಿದ್ದರೆ ಈ ಉಪಕರಣವನ್ನು ಬಳಸುತ್ತಾರೆ. ಮೀನು ಗುಂಡಿಗಳಲ್ಲಿ ಇವೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು, ಕ್ಯಾಕರಿಸಿ ಅದರೊಳಗೆ ಉಗಿಯುವುದು, ಅಥವಾ ಮನೆಯಿಂದ ತಂದ ರೊಟ್ಟಿ ಚೂರು ಹಾಕುವುದು ಮಾಡುತ್ತಾರೆ. ಅದನ್ನು ತಿನ್ನಲು ಬರುವ ಮೀನುಗಳ ಸಂಖ್ಯೆಯನ್ನು ಆಧರಿಸಿ ಮೀನು ಹಿಡಿಯಲು ನಿರ್ಧರಿಸುತ್ತಾರೆ. ಈ ತಟ್ಟೋಬಲೆಯ ಜೊತೆಗೆ ಇರುವ ಇನ್ನೊಂದು ಉಪಕರಣವೆಂದರೆ ಮಾರುದ್ದದ ಒಂದು ಕೋಲು. ಕೆಲವೊಮ್ಮೆ ಅದಕ್ಕೆ ಸ್ವಲ್ಪ ಬಟ್ಟೆ ಕಟ್ಟಿರುತ್ತಾರೆ. ತಟ್ಟೋ ಬಲೆಯನ್ನು ಎಡಗೈಯಲ್ಲಿ ನೀರೊಳೊಗಿನ ನೆಲಕ್ಕೆ ಒತ್ತಿ ಹಿಡಿದು, ಬಲಗೈಯಲ್ಲಿ ಕೋಲಿನಿಂದ, ತನಗೆ ಎಟಕುವಷ್ಟು ಅಗಲದ ನೀರಿನೊಳಗೆ ಮುಳುಗಿಸಿ ಮೀನುಗಳನ್ನು ಬೆದರಿಸಿಕೊಂಡು ಬರುತ್ತಾರೆ. ಆಗ ಬೆದರಿದ ಮೀನುಗಳು ತಟ್ಟೋಬಲೆಯೊಳಗೆ ಗುಂಪುಗುಂಪಾಗಿ ಬರುತ್ತವೆ. ತಕ್ಷಣ ಎಡಗೈಯಿಂದ ತಟ್ಟೋಬಲೆಯನ್ನು ಮೇಲಕ್ಕೆ ಎತ್ತುತ್ತಾರೆ. ಅದರೊಳಗೆ ಸಿಕ್ಕಿಹಾಕಿಕೊಂಡ ಮೀನುಗಳು ಬಲೆಯ ಹಿಂಬದಿಗೆ ಸರಿದು ಸಂಗ್ರಹಗೊಳ್ಳುತ್ತವೆ! ಹತ್ತಾರು ಬಾರಿ ಈ ರೀತಿ ಮಾಡಿದ ಮೇಲೆ ಮೇಲೆ ಬಂದು ಮೀನುಗಳನ್ನು ಮತ್ತೊಂದು ಚೀಲಕ್ಕೋ ಪಾತ್ರೆಗೋ ಸುರಿದುಕೊಳ್ಳುತ್ತಾರೆ.
ಗಾಳ ಹಾಕಿ ಮೀನು ಹಿಡಿಯುವುದು
ಇದರ ಬಗ್ಗೆ ಹೆಚ್ಚನದೇನನನು ಹೇಳುವ ಅವಶ್ಯಕತೆಯಿಲ್ಲ. ಕೊಕ್ಕೆಯಂತಹ ಲೋಹದ ಮೊಳೆಗೆ ದಾರಕಟ್ಟಿ, ಅದನ್ನು ಒಂದು ಬಲವಾದ ಕೋಲಿಗೆ ಕಟ್ಟಿಕೊಂಡು, ಗಾಳಕ್ಕೆ ತಿಂಡಿಯನ್ನೋ, ಚಿಕ್ಕ ಮೀನನ್ನೋ, ಎರೆಹುಳುವನ್ನೋ ಸಿಕ್ಕಿಸಿ ಮೀನಿರುವ ಕೊಳ ಅಥವಾ ಗುಂಡಿಯಲ್ಲಿ ಹಾಕಿ ಕುಳಿತರೆ ಮೀನುಗಳು ತಿಂಡಿಯ ಆಸೆಗೆ ಬಂದು ಗಾಳವನ್ನು ಕಚ್ಚಿಕೊಳ್ಳುತ್ತವೆ. ಅದರೊಳಗೆ ಹಿಮ್ಮುಖವಾಗಿರುವ ಕೊಕ್ಕೆ ಮೀನಿನ ಅಂಗುಳಕ್ಕೆ ಚುಚ್ಚಿಕೊಳ್ಳುವುದರಿಂದ ಅದನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಜಗ್ಗಾಟ, ದಾರದ ನಡುವೆ ಕಟ್ಟಿರುವ ಬೆಂಡು ಮುಳುಗಿ, ಮೀನು ಕಚ್ಚಿದೆ ಎಂದು ಗಾಳ ಹಿಡಿದು ಕುಳಿತವನಿಗೆ ತಿಳಿದು ಅದನ್ನು ಮೇಲಕ್ಕೆ ಎಳೆದುಕೊಂಡು ಬಿಡಿಸಿ ಮಡಕೆಯೊಳಗೆ ಸಂಗ್ರಹಿಸಿಕೊಳ್ಳುತ್ತಾನೆ. ತೇಜಸ್ವಿಯವರ ಸಾಹಿತ್ಯ ಓದಿದವರಿಗೆ ಈ ಬಗೆಯ ಮೀನು ಹಿಡಿಯುವ ತಂತ್ರಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಅಂಡಮಾನಿಗೆ ಪ್ರವಾಸ ಹೋಗುವ ತೇಜಸ್ವಿ ರಾಮದಾಸ್ ಮೊದಲಾದವರು ಅಲ್ಲಿಗೆ ಕೊಂಡಯ್ಯವುದು ಈ ರೀತಿ ಮೀನು ಹಿಡಿಯುವ ಗಾಳ, ರಾಡು ರೀಲುಗಳನ್ನು!
ಬಲೆ ಹಾಕಿ ಮೀನು ಹಿಡಿಯುವುದು
ಇದರಲ್ಲಿ ಹಲವಾರು ವಿಧಾನಗಳಿವೆ. ಬೀಸೋ ಬಲೆ ಎಂಬುದರಲ್ಲಿ, ಬಲೆಯನ್ನು ಬೀಸಿ ನೀರಿನಲ್ಲಿ ಹಾಕುತ್ತಾರೆ. ನಿಧಾನವಾಗಿ ಬಲೆಯನ್ನು ನೆರಿಗೆ ನೆರಿಗೆ ಮಾಡಿಕೊಂಡು ಮೇಲಕ್ಕೆ ಎಳದೆಕೊಳ್ಳುತ್ತಾರೆ. ಬಲೆಯೊಳಗೆ ಸಿಕ್ಕಿ ಹಾಕಿಕೊಂಡು ಚಡಪಡಿಸುವ ಮೀನುಗಳನ್ನು ಆರಿಸಿ ಮಡಕೆಯಲ್ಲಿ ತುಂಬಿಕೊಳ್ಳುತ್ತಾರೆ.
ಇನ್ನೊಂದು ವಿಧಾನದಲ್ಲಿ ರಾತ್ರಿವೇಳೆ ಬಲೆಯನ್ನು ಕೆರೆಯೊಳಗೆ ಬೀಸಿ. ಅದರ ಎರಡು ತುದಿಗಳನ್ನು ಬಲವಾದ ಬಡಿಗೆಗಳಿಗೆ ಕಟ್ಟಿ ಬಂದಿರುತ್ತಾರೆ. ಬೆಳಿಗ್ಗೆ ಹೋಗಿ ಬಲೆ ಮೇಲೆತ್ತಿ ಸಂಗ್ರಹಗೊಂಡ ಮೀನುಗಳನ್ನು ಹಿಡಿದುಕೊಳ್ಳುತ್ತಾರೆ.
ಒಮ್ಮೆ ನಮ್ಮ ಮಿಡ್ಲಿಸ್ಕೂಲಿನ ಮೇಷ್ಟರೊಬ್ಬರಿಗೆ ಮೀನು ತಿನ್ನಬೇಕೆನ್ನಿಸಿ, ‘ಎಲ್ಲಿಯಾದ್ರು ಮೀನು ಹಿಡ್ಕೊಂಬರೋಕೆ ಆಗುತ್ತಾ’ ಎಂದರು. ನಾವು ನಾಲ್ಕು ಜನ 'ಅದಕ್ಕೇನಂತೆ ಸಾರ್ ನಾವು ಹಿಡ್ಕೊಂಡು ಬರುತ್ತೇವೆ' ಎಂದು ಹೊರಟೆವು. ಆಗ ಅದರಲ್ಲಿದ್ದ ಬುದ್ಧಿವಂತನೊಬ್ಬ ಅವರ ಮನೆಯಲ್ಲಿದ್ದ ಒಂದು ಹಳೆಯ ಪಂಚೆಯನ್ನು ತಂದ. ಸೊಂಟದಾಳದ ನೀರಿನಲ್ಲಿ ನಿಂತ ನಾವು ಅದರ ನಾಲ್ಕ ಮೂಲೆಗಳನ್ನು ಒಬ್ಬೊಬ್ಬರು ಹಿಡಿದು, ನೀರಿನಲ್ಲಿ ಮುಳುಗಿಸಿ ಮೇಲೆತ್ತುತ್ತಿದ್ದೆವು. ಮೀನು ನಮ್ಮ ಕಣ್ಣಿಗೆ ಕಾಣುತ್ತಿದ್ದರು, ಪಂಚೆ ಮೇಲೆ ಬರುವಷ್ಟರಲ್ಲಿ ನೀರಿನೊಂದಿಗೆ ಮೀನುಗಳೂ ಹೊರಟುಹೋಗುತ್ತಿದ್ದವು. ಪಂಚೆಯಲ್ಲಿ ನೀರು ಸರಾಗವಾಗಿ ಹರಿದುಹೋಗದಿರುವುದೇ ಆದಕ್ಕೆ ಕಾರಣ ಎಂಬುದು ನಮಗೆ ಹೇಗೆ ತಿಳಿಯಬೇಕು. ಖುಷಿಯಿಂದ ಮೂರ್ನಾಲ್ಕು ಬಾರಿ ಹಾಗೆ ಮಾಡಿದೆವು. ಐದನೆಯ ಬಾರಿ ಪಂಚೆ ಮಧ್ಯಕ್ಕೆ ಹರಿದುಹೋಯಿತು! ಹತ್ತಿರದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳಾಮಂಡಲಿ ಹೋ ಎಂದು ನಕ್ಕು ನಮ್ಮನ್ನು ಗೇಲಿ ಮಾಡಿದ್ದರಿಂದ ನಾವು ಜಾಗ ಖಾಲಿ ಮಾಡಬೇಕಾಯಿತು.
ಗುಂಡಿ ಉಗ್ಗುವುದು ಅಥವಾ ಗುಂಡಿ ಕದಡುವುದು
ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೆರೆ ಕುಂಟೆಗಳ ನೀರು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆಗ ಕೆರೆಯಂಗಳದಲ್ಲಿ ಅಲ್ಲಲ್ಲಿ ಗುಂಡುಂಡಿಗಳು ಕಾಣಿಸಿಕೊಂಡು ಮುಖ್ಯ ಕೆರೆಯ ನೀರಿನಿಂದ ಪ್ರತ್ಯೇಕವಾಗಿ ಸಣ್ಣಪುಟ್ಟ ಕುಂಟೆಗಳಾಗುತ್ತವೆ. ಅವುಗಳ ನೀರನ್ನು ಖಾಲಿಮಾಡಿ ಮೀನು ಹಿಡಿಯುವ ಪದ್ಧತಿಗೆ ಗುಂಡಿ ಉಗ್ಗುವುದು ಎನ್ನುತ್ತಾರೆ. ಯಾವುದಾದರೂ ಪಾತ್ರೆ ಅಥವಾ ಮಂಕರಿ ಅಥವಾ ಬುಟ್ಟಿಗೆ ಎರಡೂ ಬದಿಗೆ ಎರಡು ಹಗ್ಗಗಳನ್ನು ಕಟ್ಟಿ, ಇಬ್ಬರು ನಿಂತುಕೊಂಡು, ಅದರಿಂದ ನೀರನ್ನು ಮೊಗೆದು ಮೊಗೆದು ಗುಂಡಿಯ ಆಚೆಗೆ ಸುರಿಯುತ್ತಾರೆ. ಸರದಿಯ ಮೇಲೆ ಇಬ್ಬಿಬ್ಬರು ಈ ರೀತಿ ಮಾಡುವುದರಿಂದ ಹೆಚ್ಚು ಸುಸ್ತು ಆಗುವುದಿಲ್ಲ. ನೀರು ಕಡಿಮೆಯಾಗಿ ಮೀನುಗಳು ಮೇಲೆ ಮೇಲೆ ನೆಗೆಯಲು ಪ್ರಾರಂಭಿಸುತ್ತವೆ. ಆಗ ನೀರು ಖಾಲಿಮಾಡುವುದನ್ನು ಬಿಟ್ಟು, ಗುಂಡಿಯಲ್ಲಿ ಕೆಸರೆಬ್ಬಿಸಲಾಗುತ್ತದೆ. (ನೀರು ತೀರಾ ಕಡಿಮೆಯಿರುವ ಗುಂಡಿಗಳಾದರೆ, ನೇರವಾಗಿಯೇ ಕೆಸರೆಬ್ಬಿಸಲಾಗುತ್ತದೆ. ಇದನ್ನು ಗುಂಡಿ ಕದಡುವುದು ಎನ್ನುತ್ತಾರೆ.) ಕೆಸರು ದಟ್ಟವಾಗುತ್ತಿದ್ದಂತೆ ಮೀನುಗಳು ಉಸಿರಾಡುವುದಕ್ಕಾಗಿ ಕೆಸರಿನ ಮೇಲಕ್ಕೆ ತಲೆಯೆತ್ತಿ ಬಾಯಿ ಬಿಡಲಾರಂಬಿಸುತ್ತವೆ. ಆಗ ಅವೆಲ್ಲವನ್ನೂ ಹಿಡಿದು ದಡದಲ್ಲಿರುವವರ ಕೈಗೆ ಕೊಡಲಾಗುತ್ತದೆ.
ಅಂದು ಪಂಚೆಯಲ್ಲಿ ಮೀನು ಹಿಡಿಯುವ ನಮ್ಮ ಸಾಹಸ ವಿಫಲವಾಗಿ, ಮಹಿಳಾ ಮಂಡಳಿಯಿಂದ ಅವಮಾನವಾದಾಗ ನಾವೂ ಹುಡುಕಿ ಹೊರಟಿದ್ದು ಇಂತಹ ಗುಂಡಿಗಳನ್ನೇ! ಒಂದೆರಡು ಗುಂಡಿಗಳನ್ನು ಹುಡುಕಿ, ಕೆಮ್ಮಿ ಕ್ಯಾಕರಿಸಿ ಉಗಿದು ಅವುಗಳಲ್ಲಿ ಮೀನುಗಳಿವೆಯೇ ಎಂದು ಪರೀಕ್ಷಿಸಿದ್ದಾಯಿತು. ಸಣ್ಣ ಸಣ್ಣ ಮೀನುಗಳು ಹಿಂಡುಹಿಂಡಾಗಿ ಬಂದು ಎಂಜಲಿಗೆ ಮುತ್ತಿಗೆ ಹಾಕಿದ್ದನ್ನು ಕಂಡು ದಬದಬ ನೀರೊಳಗೆ ಬಿದ್ದು ಕೆಸರೆಬ್ಬಿಸಿದ್ದೂ ಆಯಿತು. ಆದರೆ ಒಂದೂ ಮೀನು ಬಾಯಿ ಬಿಟ್ಟು ಮೇಲೆ ಬಂದು ನಮ್ಮನ್ನು ಹಿಡಿದುಕೊಳ್ಳಿ ಎನ್ನಲಿಲ್ಲ! ಆಗ ಆ ದಾರಿಯಾಗಿ ಬಂದ ಹಿರಿಯರೊಬ್ಬರು ‘ಅಯ್ಯೋ ದಡ್ಡಮುಂಡೇವೆ! ಹಾಗೆ ಹಿಂಡು ಹಿಂಡಾಗಿ ಬಂದುದ್ದು ಮೀನುಗಳಲ್ಲ; ಕಪ್ಪೆಗೊದ್ದಗಳು! ಅವು ಕೆಸರೆಬ್ಬಿಸಿದರೂ ಮೇಲೆ ಬರಲ್ಲ’ ಎಂದು ಉಗಿದು ಉಪ್ಪಿನಕಾಯಿ ಹಾಕಿದ್ದಲ್ಲದೆ, ‘ನಿಮ್ಮ ಮನೆಗಳಿಗೆ ಹೇಳಿ ಬಿಡಿಸುತ್ತೇನೆ, ಲಾತ. ಬನ್ನಿ’ ಎಂದು ಭಯೋತ್ಪಾದಕರಾಗಿದ್ದರು!
ಭರ್ಜಿಯಲ್ಲಿ ಹೊಡೆಯುವುದು
ನನ್ನ ಸ್ನೇಹಿತನೊಬ್ಬನಿದ್ದ. ಆತನ ಹೆಸರು ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿದೆ, ‘ಮೊಲದ ಮಂಜ’ ಎಂದು. ಈತನ ಮೀನು ಭೇಟೆಯ ಬಗ್ಗೆ ನಾನಾಗಲೇ ಬರೆದಿದ್ದೇನೆ. ಎದೆಮಟ್ಟದ ನೀರಿನಲ್ಲಿ, ರಾತ್ರಿವೇಳೆಯಲ್ಲಿ ಹಣೆಗೆ ಬ್ಯಾಟರೀ ಕೊಟ್ಟಿಕೊಂಡು, ಬಲಗೈಯಲ್ಲಿ ಭರ್ಜಿ ಹಿಡಿದು ನಿಂತುಕೊಂಡು, ಬ್ಯಾಟರಿಯ ಬೆಳಕಿಗೆ ಬರುವ ದೊಡ್ಡ ಮೀನುಗಳಿಗೆ ಗುರಿ ಹಿಡಿದು ಚುಚ್ಚಬೇಕು. ಈ ಕೆಲಸಕ್ಕೆ ರಾತ್ರಿ ಮತ್ತು ನೀರಿನ ಭಯವಂತೂ ಇರುವ ಹಾಗೇ ಇಲ್ಲ; ಜೊತೆಗೆ ಒಳ್ಳೆಯ ಗುರಿಕಾರರಾಗಿರಬೇಕು, ಸಹನೆಯೂ ಇರಬೇಕು.
ಕೆಲವರು ಭರ್ಜಿಯ ಬದಲು ಬಲವಾದ ದೊಣ್ಣೆಯಿಂದಲೇ ತೇಲುತ್ತಾ ಬಂದ ಮೀನಿಗೆ ಒಡೆಯುತ್ತಾರೆ ಎಂದು ಹಾಗೂ ಕೋವಿಯಿಂದಲೂ ಮೀನು ಒಡೆಯುತ್ತಾರೆ ಎಂದು ಕೇಳಿದ್ದೇನೆ. ಇವೆರಡನ್ನೂ ನಾನು ನೋಡಿಲ್ಲ.
ಭಂಗಿಸೊಪ್ಪು ಅಥವಾ ಹೊಗೆಸೊಪ್ಪು ಕದಡುವುದು
ಇದೊಂದು ಸುಲಭವಾದ ಆದರೆ ಸ್ವಲ್ಪ ದುಬಾರಿಯಾದ ವಿಧಾನ. ಸಣ್ಣಪುಟ್ಟ ಗುಂಡಿಗಳಲ್ಲಿ ಮೀನುಗಳಿರುವುದು ಖಚಿತವಾದರೆ ಸ್ವಲ್ಪ ಭಂಗಿ ಸೊಪ್ಪು ಅಥವಾ ಹೊಗೆಸೊಪ್ಪನ್ನು ಚೆನ್ನಾಗಿ ಕೈಯಿಂದ ತಿಕ್ಕಿ ನೀರಿನಲ್ಲಿ ಕದಡಿ ಬಿಡುವುದು. ಅದರ ಘಾಟಿಗೆ ಮೀನುಗಳು ಮತ್ತೇರಿ ತೇಲಲಾರಂಬಿಸುತ್ತವೆ. ಆದರೆ ಭಂಗಿಸೊಪ್ಪು ದುಬಾರಿ ಎಂಬ ಮಾತಿರಲಿ ಅದನ್ನು ಬಳಸಿದರೆ ಜೈಲು ಕಾಣಬೇಕಾಗುತ್ತದೆ ಎಂಬುದು ಆಗಿನ ತಿಳುವಳಿಕೆಯಾಗಿತ್ತು. ಹೊಗೆ ಸೊಪ್ಪು ಸಾಮಾನ್ಯವಾಗಿ ಹಳ್ಳಿಯ ಎಲ್ಲರ ಮೆನಯಲ್ಲೂ ಸಿಗುವ ವಸ್ತುವಾದರೂ ಅಂದಿನ ಕಾಲಕ್ಕೆ ಅತ್ಯಂತ ದುಬಾರಿಯಾದ ವಸ್ತುವಾಗಿತ್ತು.
ಕಾರೆಕಾಯಿ ಕದಡುವುದು
ಭಂಗಿಸೊಪ್ಪು ಅಥವಾ ಹೊಗೆಸೊಪ್ಪಿಗೆ ಪರ್ಯಾಯವಾಗಿ ಕಾರೆಕಾಯಿಯನ್ನು ಬಳಸುವ ಈ ವಿಧಾನ ಸುಲಭವಾದದ್ದು ಆದರೂ ಅಪಾಯಕಾರಿಯಾದದ್ದು. ಕಾರೇಕಾಯಿಗಳಲ್ಲಿ ಒಂದು ಜಾತಿಯ ಕಾಯಿಗಳಿಗೆ ಸ್ವಲ್ಪ ವಿಷ ಜಾಸ್ತಿ, ಕಾರೇ ಹಣ್ಣುಗಳನ್ನು ತಿನ್ನುತ್ತಾರಾದರೂ ಈ ಜಾತಿಯ ಹಣ್ಣುಗಳನ್ನು ಯಾರೂ ತಿನ್ನುವುದಿಲ್ಲ. ಇವನ್ನು ಸಣ್ಣಪುಟ್ಟ ದನಕರುಗಳು ತಿಂದರೆ ಸತ್ತೇ ಹೋಗುತ್ತವೆ. ಇಂತಹ ಕಾರೇಕಾಯಿಗಳನ್ನು ಜಜ್ಜಿ ನೀರಿನಲ್ಲಿ ಕದಡಿದರೆ ಕ್ಷಣಾರ್ಧದಲ್ಲಿ ಮೀನುಗಳು ಪ್ರಜ್ಞಾಶೂನ್ಯವಾಗಿ ತೇಲಲಾರಂಭಿಸುತ್ತವೆ. ನೀರು ಕಪ್ಪಾಗುತ್ತದೆ.ಇದು ತಾಕಿದ ಮೈಕೈಗಳಿಗೆ ತುರಿಕೆಯಾಗುತ್ತದೆ. ಮೀನು ಬಾಚಿಕೊಳ್ಳುವ ಅವಸರದಲ್ಲಿ ನೀರನ್ನು ಬಾಯಿಗೆ ಸೋಕಿಸುವಂತಿಲ್ಲ. ಮೈಯಲ್ಲಿ ತೆರೆದ ಗಾಯಗಳಿದ್ದರೂ ಅಪಾಯ. ಮೀನುಹಿಡಿದ ಮೇಲೆ ಗುಂಡಿಯ ನೀರನ್ನು ಕುಡಿದರೆ ದನಕರುಗಳು ಸತ್ತೇ ಹೋಗುತ್ತವೆ. ಗುಂಡಿಯಿಂದ ಸಹಿಸಲು ಅಸಾಧ್ಯವಾದ ವಾಸನೆ ಬರುತ್ತದೆ. ಆದರೂ ಅದನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿ ಮೀನು ಹಿಡಿಯುತ್ತಾರೆ.
ಡೈನಾಮೆಂಟ್ ಸಿಡಿಸುವುದು
ಕುಂದೂರು ಮಠದಲ್ಲಿ ಕಲ್ಲು ಹೊಡೆಯುವವರು ಈ ವಿಧಾನ ಬಳಸುವುದನ್ನು ಕಂಡಿದ್ದೇನೆ. ಅವರು ಕಲ್ಲು ಸಿಡಿಸಲು ತಂದಿದ್ದ ಡೈನಾಮೆಂಟ್ಟನ್ನು ಕಡಿಮೆ ಪ್ರಮಾಣದಲ್ಲಿ ಮೀನುಗಳಿರುವ ಬಾವಿ ಅಥವಾ ಗುಂಡಿಯಲ್ಲಿ ನೀರೊಳಗೆ ಸಿಡಿಸುತ್ತಿದ್ದರು. ಮೀನುಗಳು ಸತ್ತು ತೇಲುತ್ತಿದ್ದವು. ಅವರು ಅವನ್ನು ಧಾರಾಳವಾಗಿ ಹಿಡಿದು ತಿನ್ನುತ್ತಿದ್ದರು. ಆದರೆ ಅವು ವಿಷಯುಕ್ತ ಎನ್ನುವ ಮಾತುಗಳೂ ಕೇಳಿಬರುತ್ತಿದ್ದವು.
ಸಧ್ಯಕ್ಕೆ ಇಷ್ಟೇ ನನಗೆ ನೆನಪಾಗುತ್ತಿರುವುದು.
ಈಗ ಪಂಪನ ಸರದಿ!
ಕೃಷ್ಣಾರ್ಜುನರು ತಮ್ಮ ಅಂತಃಪುರದ ಸ್ತ್ರೀಯರೊಡನೆ ಯಮುನಾ ನದಿಯಲ್ಲಿ ಜಲಕ್ರೀಡೆಯಾಡುವ ಸನ್ನಿವೇಶ ಬರುತ್ತದೆ. ಪಂಪ ಅದನ್ನು ಸ್ವಾರಸ್ಯಕರವಾಗಿಯೂ ಶೃಂಗಾರರಸಾತ್ಮಕವಾಗಿಯೂ ವರ್ಣಿಸಿದ್ದಾನೆ (ಅದೇ ಒಂದು ಪ್ರತ್ಯೇಖ ಲೇಖನವಾಗುತ್ತದೆ; ಬಿಡಿ).
ಅದರಲ್ಲಿ ಬರುವ ಒಂದು ಪದ್ಯ ಹೀಗಿದೆ.
ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ ಮುಡಿಯ ಪೂವಿನ ರಜದಿಂ|
ವಾಸಿಸಿದ ನೀರ ಕದಡಿಂ
ದಾಸವದೊಳ್ ಸೊರ್ಕಿ ಬೆಂಡುಮಗುೞ್ದುವು ಮೀಂಗಳ್||
ಆ ಎಲ್ಲಾ ಸ್ತ್ರೀ ಸಮೂಹವು ಮೈಯಿಗೆ ಬಳಿದುಕೊಂಡಿದ್ದ ಕಸ್ತೂರಿತೈಲದಿಂದಲೂ, ಮುಡಿದುಕೊಂಡಿದ್ದ ಹೂವುಗಳ ಪರಾಗದಿಂದಲೂ ಸಷ್ಟಿಯಾದ (ಸು)ವಾಸನೆ ಮಡುವಿನ ನೀರಿನಲ್ಲಿ ಸೇರಿಕೊಂಡು ಕದಡಲ್ಪಟ್ಟಿತ್ತು. ಆ ವಾಸನೆಯನ್ನು ಸೇವಿಸಿದ ಮೀನುಗಳು ಸೊಕ್ಕಿ ಅಂದರೆ ಪ್ರಜ್ಞೆ ಕಳೆದುಕೊಂಡು ನೀರಿನಲ್ಲಿ ಬೆಂಡು ತೇಲುವಂತೆ ತೇಲಿದವಂತೆ!
ಆಹಾ! ಮೀನು ಹಿಡಿಯುವುದು ಎಷ್ಟೊಂದು ಸುಲಭ! ಮೈಗೆಲ್ಲಾ ಸುಗಂಧದ್ರವ್ಯಗಳನ್ನು (ಆಧುನಿಕ ತರೇವರಿ ಸೆಂಟ್ ಆದರೂ ಪರಾವಾಗಿಲ್ಲ!!!) ಪೂಸಿಕೊಂಡು ನೀರಿಗಿಳಿದರೆ ಸಾಕು, ಅಲ್ಲವೆ!?
ವಿಶೇಷ ಎಚ್ಚರಿಕೆ: ಪಂಪನಲ್ಲಿ ಪ್ರಜ್ಞೆ ಮಾತ್ರ ಕಳೆದುಕೊಂಡು ತೇಲುತ್ತಿದ್ದ ಮಿನುಗಳು ಆಧುನಿಕ ಸೆಂಟ್ ಸೇವಿಸಿದರೆ ಸತ್ತೇ ಹೋಗುತ್ತವೆ!)

Tuesday, July 21, 2009

ಈಗ ಚಂದ್ರೋದಯ! ಜೊತೆಗೆ ವಿರಹ!

‘ನಾಳೆ ಸೂರ್ಯಗ್ರಹಣವಾಗುತ್ತಿದೆ, ಈಗೆಂತ ಚಂದ್ರೋದಯ?’ ಎಂದುಕೊಳ್ಳಬೇಡಿ.
ಚಂದ್ರ ಉದಯವಾದರೇನೇ ಸೂರ್ಯಗ್ರಹಣವಾಗಲು ಸಾಧ್ಯ!
ಜೊತೆಗೆ ಚಂದ್ರಲೋಕಕ್ಕೆ ಮಾನವ ಕಾಲಿರಿಸಿ ನಲವತ್ತು ವರ್ಷಗಳೂ ಕಳೆದೊಹೋದವು.
ಆದರೆ ನಾನು ಹೇಳಲು ಹೊರಟಿರುವುದು ಗ್ರಹಣದ ಅಥವಾ ಚಂದ್ರಯಾನದ ವಿಷಯವನ್ನಲ್ಲ.
ಮಹಾನ್ ಗಿರಿಕಂದರಗಳಿಂದ ಕೂಡಿದ ಚಂದ್ರ ನಮ್ಮ ಕವಿಗಳಿಗೆ ಮಾತ್ರ ಅತಿ ಸುಂದರ! ಈ ಹಿನ್ನೆಲೆಯಲ್ಲಿ ಒಂದು ಚಂದ್ರೋದಯದ ವರ್ಣನೆಯನ್ನು ನಿಮಗೆ ಪರಿಚಯಿಸುವ ಇರಾದೆ ನನ್ನದು.
ನಾನು ಹೇಳಲು ಹೊರಟಿರುವ ಚಂದ್ರೋದಯದ ವರ್ಣನೆ ಬಂದಿರುವದು ಪಂಪಭಾರತದ ನಾಲ್ಕನೇ ಆಶ್ವಾಸದಲ್ಲಿ. ಅರ್ಜುನ ದೇಶಸಂಚಾರ ಮಾಡುತ್ತಾ ಕೃಷ್ಣ-ಬಲರಾಮರ ದ್ವಾರಕೆಗೆ ಬರುತ್ತಾನೆ. ಅವನಿಗೆ ಭವ್ಯವಾದ ಸ್ವಾಗತ ದೊರೆಯುತ್ತದೆ. ಆಗ ಮೊದಲ ಭಾರಿಗೆ ಸುಭದ್ರೆ ಮತ್ತು ಸರ್ಜುನರ ದೃಷ್ಟಿಗಳು ಪರಸ್ಪರ ಸಂಧಿಸುತ್ತವೆ. ಆನಂತರ, ಸ್ಥಿರತೆಗೆ ಸಂಕೇತವಾದ ಸೂರ್ಯ ಅಸ್ತಮಿಸುತ್ತಾನೆ. ಚಂಚಲತೆಗೆ ಸಂಕೇತವಾದ ಚಂದ್ರೋದಯವಾಗುತ್ತದೆ. ಜೊತೆಗೆ, ಚಂಚಲತೆಯನ್ನುಂಟು ಮಾಡುವ ವಿರಹ ಅರ್ಜುನ ಸುಭದ್ರೆ ಇಬ್ಬರಲ್ಲೂ ಉಂಟಾಗುತ್ತದೆ. ಅವರಿಬ್ಬರ ತೀವ್ರವಾದ ವಿರಹಕ್ಕೆ ಕಾರಣವಾದ ಅವತ್ತಿನ ಚಂದ್ರೋದಯವನ್ನು ಪಂಪ ಹೇಗೆ ಕಂಡರಿಸಿದ್ದಾನೆ ಎಂಬುದನ್ನು ಅರಿಯುವುದೇ ಈ ಲೇಖನದ ಉದ್ದೇಶ.
ಸೂರ್ಯಾಸ್ತವಾದ ಕೆಲ ಸಮಯದಲ್ಲಿಯೇ ‘ದಿತಿಸುತಂ ಮಸಿಯಿಂದಂ ಜಗಮೆಲ್ಲಮಂ ಮುಂ ಪೂಳ್ದನೋ’ (ರಾಕ್ಷಸನು ಜಗತ್ತೆಲ್ಲವನ್ನೂ ಮಸಿಯಿಂದ ಮುಚ್ಚಿಬಿಟ್ಟನೋ), ಎಂಬ ರೀತಿಯಲ್ಲಿ ಕತ್ತಲು ಆವರಿಸಿಬಿಟ್ಟಿದೆ. ಆಗ ‘ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆನಿತು ಬೆಳಗಿಯುಂ ಕೞ್ತಲೆಯನ್ ಅಲೆಯಲ್ ಆರಾದವು’ (ತಾರಾಸಮೂಹಗಳು ದಿಕ್ಕುಗಳೆಂಬ ಹೆಣ್ಣುಗಳು ತೊಟ್ಟಿರುವ ಮಾಣಿಕ್ಯಗಳಂತೆ ಆಕಾಶಾದಾದ್ಯಂತ ಬೆಳಗಿದರೂ ಆ ಕತ್ತಲೆಯನ್ನು ಕಳೆಯಲಾಗಲಿಲ್ಲ). ಅಂತಹ ಸಂದರ್ಭದಲ್ಲಿ ಒಳಗೆ ದೀಪಗಳನ್ನು ಉರಿಯಿಸುತ್ತಿದ್ದ ಉಪ್ಪರಿಗೆ ಮನೆಗಳು (ತಮೋರಾಜಕಂ ಮುಳಿದು ಸೆಱೆಗೆಯ್ದ ಬೆಳಗಿನ ಸೆಱೆಯ ಮನೆಗಳನ್ನವಾದುವು) ‘ಕತ್ತಲೆ ಎಂಬ ರಾಜನು ಕೋಪದಿಂದ ಬೆಳಕನ್ನು ಬಂದಿಸಿಟ್ಟಿರುವ ಸೆರೆಮನೆ’ಗಳಂತೆ ಕಾಣುತ್ತಿದ್ದವಂತೆ!
ಆಗ ಪೂರ್ವದಿಗಂತದಲ್ಲಿ ಚಂದ್ರೋದಯವಾಗುತ್ತದೆ. ಅದು ಹೇಗಿತ್ತು?
ಅದು ಕೆಂಪು ಕೆಂಪಾಗಿತ್ತು. ಚಂದ್ರ ಕೂಡಾ ಕೆಂಪಾಗಿದ್ದ. ಅದೂ ಎಂತಹ ಕೆಂಪು? (ಹರಿದಳಿತ ನಿಜ ಹರಿಣ ರುಧಿರ ನಿಚಯ ನಿಚಿತಮಾದಂತೆ) ಸಿಂಹದಿಂದ ಸೀಳಲ್ಪಟ್ಟ ಜಿಂಕೆಯ ರಕ್ತರಾಶಿಯಿಂದ ತುಂಬಿದ ಕೆಂಪು!
ಚಿತ್ರಕೃಪೆ: ಅಂತರಜಾಲ

ಸಂಜೆ ಅಥವಾ ಸಂಧ್ಯಾ ಎಂಬ ಪರಸ್ತ್ರೀಯಲ್ಲಿ ಸೇರಿದ್ದಕ್ಕೆ ಚಂದ್ರನ ಹೆಂಡತಿಯಾದ ರೋಹಿಣಿ ಚಂದ್ರನಿಗೆ ಒದೆಯುತ್ತಾಳೆ. (ನೆರೆದೈ ಸಂಜೆಯೊಳೆಂದು ಕಾಯ್ದೊದೆದೊಡೇನ್ ಆತ್ಮಾಂಗದೊಳ್ ರೋಹಿಣೀ ಚರಣಾಲಕ್ತಕ ರಾಗಮಚ್ಚಿದುದೋ) ಆಗ ಅವಳ ಕಾಲಿಗೆ ಹಚ್ಚಿದ್ದ ಕೆಂಪು ಬಣ್ಣ ಚಂದ್ರನಿಗೂ ವ್ಯಾಪಿಸಿದ್ದರಿಂದ ಚಂದ್ರೋದಯದ ಸಮಯದಲ್ಲಿ ಕೆಂಪು ಬಣ್ಣವುಂಟಾಗುತ್ತದಂತೆ!
ಚಂದ್ರ ಅಥವಾ ಚಂದ್ರನಲ್ಲಿ ಕಾಣುವ ಜಿಂಕೆಯು ಕತ್ತಲೆ ಎಂಭ ಆನೆಯ ಕೊಂಬಿನಿಂದ ಗಾಯಗೊಂಡಿದ್ದರಿಂದ (ತಮೋಗಜದ ಕೋಡೇಱಂದಮೇಂ ನೊಂದುದೋ ಹರಿಣಂ) ಅಷ್ಟೊಂದು ಕೆಂಪಾಗಿಬಿಟ್ಟಿದೆಯಂತೆ!
ಸ್ವಲ್ಪ ಕಾಲದ ನಂತರ ಚಂದ್ರ ಕೆಂಪುಬಣ್ಣ ಕಳೆದು ಸಹಜ ಬೆಳಕಿನ ಬಣ್ಣಕ್ಕೆ ತಿರುಗುತ್ತಾನೆ.

ಚಿತ್ರಕೃಪೆ: ಅಂತರಜಾಲ

ಅದಕ್ಕೆ ಕಾರಣವೇನು?
ಬೆಂಳದಿಂಗಳು ಪ್ರೇಮಿಗಳಲ್ಲಿ ವಿರಹವನ್ನು ಹೆಚ್ಚಿಸುತ್ತದಂತೆ. ಅವರಲ್ಲಿ ಸೇರುವ ಬಯಕೆಯನ್ನು ವೃದ್ಧಿಸುತ್ತದಂತೆ. ಚಂದ್ರ ತನ್ನ ಕೆಂಪು ಬಣ್ಣವನ್ನು ಪ್ರೇಮಿಗಳಿಗೆ/ವಿರಹಿಗಳಿಗೆ ಹಂಚಿಕೊಟ್ಟಿದ್ದರಿಂದ (ತನ್ನ ರಾಗಮಂ ರಾಗಿಗಳ್ಗೆಲ್ಲಂ ಪಚ್ಚುಕೊಟ್ಟಂತೆ) ತಾನು ಬೆಳ್ಳಗಾದನಂತೆ!
ಚಂದ್ರೋದಯ ಪೂರ್ಣವಾಯಿತು. ಅವನ ನಡುವಿನ ಕಪ್ಪು ಕಲೆ ಹೇಗೆ ಕಾಣುತ್ತಿತ್ತು?
(ಗೆಳೆಯ ಮಲ್ಲಿಕಾರ್ಜುನ್ ತೆಗೆದಿರುವ ಫೋಟೋ ನೋಡಿ. ಆ ಕಲೆ ಕರ್ನಾಟಕ ಭೂಪಟದಂತೆ ಕಾಣುತ್ತದೆ!)

ಚಿತ್ರಕೃಪೆ: ಡಿ.ಜಿ.ಮಲ್ಲಿಕಾರ್ಜುನ್

ಆದರೆ ಪಂಪನಿಗೆ!?
ಈಶ್ವರನ ಶಾಪದಿಂದ ಸುಟ್ಟು ಹೋಗಿ, ಮತ್ತೆ ಅವನ ಅನುಗ್ರಹದಿಂದಲೇ ಅನಂಗನಾಗಿ ಪುನರ್ಜನ್ಮವೆತ್ತಿದ ಮನ್ಮಥನಿಗೆ ಪುಣ್ಯಸ್ನಾನ ಮಾಡಿಸುವುದಕ್ಕೆ ಚಂದ್ರಕಾಂತ ಶಿಲೆಯಲ್ಲಿ ಮಾಡಿದ ಪಾತ್ರೆಯಲ್ಲಿ ನೀರನ್ನು ತುಂಬಿಸಿದ್ದಳಂತೆ. ಆ ನೀರು ಸುವಾಸನಾಯುಕ್ತವಾಗಲು ಕನ್ನೈದಿಲೆ ಪುಷ್ಪವನ್ನು ಹಾಕಿದ್ದಳಂತೆ. (ಚಂದ್ರಕಾಂತ ಘಟದೊಳ್ ತಂದೞಳ್ತಿಯಿಂ ಪುಷ್ಪ ವಾಸನೆಗೆಂದಿಕ್ಕಿದ ನೀಳ ನೀರರುಹಮಂ ಪೋಲ್ದತ್ತು ಕೞಳ್ಪಿಂದುವಾ) ಚಂದ್ರಕಾಂತ ಶಿಲೆಯ ಪಾತ್ರೆಯ ನಡುವೆ ತೇಲುತ್ತಿರುವ ಕನ್ನೈದಿಲೆ ಪುಷ್ಪದಂತೆ, ಈ ಪೂರ್ಣ ಚಂದ್ರನ ನಡುವಿನ ಕಲೆ ಕಾಣುತ್ತಿತ್ತು, ನಮ್ಮ ಪಂಪನಿಗೆ!
ಮೇಲೇರಿ ಬರುತ್ತಿದ್ದ ಚಂದ್ರನ ಪ್ರಕಾಶ ಹೇಗಿತ್ತು? ಅದೂ ಈ ಭೂಲೋಕದ ಪ್ರೇಮಿಗಳ ಕಣ್ಣಿಗೆ ಹೇಗೆ ಕಣುತ್ತಿತ್ತು?
ಭೂಮಿ ಅಂತರಿಕ್ಷಗಳನ್ನು ಚಂದ್ರನ ಬೆಳಕು ಆವರಿಸಿತ್ತು. ಅಷ್ಟೊಂದು ಬೆಳಕನ್ನು ಸುರಿಸುತ್ತಿಒರುವ ಚಂದ್ರ ಈ ವಿರಹಿಗಳ/ಪ್ರೇಮಿಗಳ ಕಣ್ಣಿಗೆ, ಮನ್ಮಥನು ನಮ್ಮನ್ನು ಹುಡುಕಲು ತಂದಿರುವ (ಮದನನ ಸೋದನ ದೀವಿಗೆ) ಕೈದೀಪದಂತೆ ಕಾಣುತ್ತಿತ್ತಂತೆ! ಅಷ್ಟರ ಮಟ್ಟಿಗೆ ಚಂದ್ರ ಆಕಾಶದ ನೀಲಿ ತಟ್ಟೆಯಲ್ಲಿ ಹೊಳೆಯುತ್ತಿದ್ದ.
ಇದಿಷ್ಟು ಪಂಪ ಚಂದ್ರೋದಯದ ವಿವಿಧ ಹಂತಗಳನ್ನು ಕುರಿತು ಮಾಡಿರುವ ಕಲ್ಪನೆ. ಇಲ್ಲಿಂದ ಮುಂದಕ್ಕೆ, ಚಂದ್ರದೋಯದ ಹಿನ್ನೆಲಯಲ್ಲಿ, ಅರ್ಜುನ ಸುಭದ್ರೆಯರ ಮನಸ್ಸಿನಲ್ಲಿ ನಡೆಯುವ ವಿರಹ ವ್ಯಪಾರವನ್ನು, ಮಾನಸಿಕ ತಾಕಲಾಟವನ್ನು ಕವಿ ಚಿತ್ರಿಸಿದ್ದಾನೆ. ಅದರ ವರ್ಣನೆಯ ಅಗತ್ಯ ಇಂದಿನ ನಮಗೆಲ್ಲಾ ಅನಾವಶ್ಯಕವೆಂದು ಹೇಳಬಹುದೇ? ಏಕೆಂದರೆ, ಶೃಂಗಾರ ಅಥವಾ ಬಾಂಧವ್ಯಕ್ಕೆ ಸಂಬಂಧಿಸಿದಂತೆ ನಾವೆಲ್ಲಾ ಒಂದಲ್ಲ ಒಂದು ಸಮಯದಲ್ಲಿ ವಿರಹವನ್ನು ಅನುಭವಿಸಿದವರೇ ಅಲ್ಲವೇ!?