Showing posts with label ಸುಳಿಮನೆ. Show all posts
Showing posts with label ಸುಳಿಮನೆ. Show all posts

Tuesday, February 02, 2010

‘ಕೇಸರಿ’ಗೇ ಒದ್ದ ‘ನಾಟಿದನ’ದಿಂದ ಮನೆಯ ಹೆಸರೇ ಬದಲಾಯಿತು!

“ಕರು ಹಾಕಿದ ದನಗಳ ಹಾಲು ಹಿಂಡದೇ ಇದ್ದರೆ ಅವು ‘ಗೊಡ್ಡು’ ದನ ಆಗುತ್ತವೆ! ಹಾಗಾಗಿ ದಿನಾ ಬೆಳಗ್ಗೆ ಮತ್ತು ಸಾಯಂಕಾಲ ಅವನ್ನು ಕರೆಯಲೇ ಬೇಕು, ಸಾರ್!” ಎಂದು ದನ ಮೇಯಿಸುವ ಹುಡುಗ ನನಗೆ ತಾಕೀತು ಮಾಡಿದ. ನಾನಾದರೋ ಬಹು ಜಂಬದಿಂದಲೇ “ಬಾಲೂ, ಅದೇನು ದೊಡ್ಡ ವಿಷಯ? ನಾನೇ ಸ್ವತಃ ಬೆಳಗ್ಗೆ ಮತ್ತು ಸಾಯಂಕಾಲ ಸ್ವಲ್ಪ ಹಾಲು ಕರೆದು, ಉಳಿಕೆಯ ಹಾಲನ್ನು ಕರುವಿಗೆ ಉಣ್ಣಲು ಬಿಡುತ್ತೇನೆ” ಎಂದೆ.

ಮರು ದಿನ ಬೆಳಗಾಗುತ್ತಲೇ ಎಳೇ ಕರುವಿನ ದನ ಕೆಂಪಿ ‘ಅಂಬಾ, ಅಂಬಾ!’ ಎಂದು ಅರಚುತ್ತಾ ಇತ್ತು. ನಾನು ನನ್ನ ನಿತ್ಯದ ಯೂನಿಫಾರ್ಮ್ ಆದ ಅರ್ಧ ಪ್ಯಾಂಟ್(ಶಾರ್ಟ್ಸ್), ಟೀ ಶರ್ಟ್, ಮಣಿಗಂಟಿನ ವರೆಗೆ ಕವರ್ ಮಾಡುತ್ತಾ ಇದ್ದ ಬಾಟಾ ಕಂಪನಿಯ ‘ಹಂಟರ್ ಬೂಟ್” ಹಾಗೂ ಬೆಂಗಳೂರಿನಲ್ಲಿ ನಾನು ಕೊಂಡಿದ್ದ ಅಗಲ ಬ್ರಿಮ್‌ನ ಹ್ಯಾಟು ಧರಿಸಿ ಹಟ್ಟಿಗೆ ಹೋದೆ.

ಹಿಂದಿನ ದಿನ ಸಾಯಂಕಾಲವೇ ಕೆಂಪಿ ದನವನ್ನು ಪ್ರತ್ಯೇಕವಾಗಿ ಕರುಗಳ ಕೋಣೆಯಲ್ಲೇ ಬಾಲು ಕಟ್ಟಿ ಹೋಗಿದ್ದ. ನಾನು ನನ್ನ ಬಿಡಾರದಿಂದ ಹಾಲು ಕರೆಯಲು ಒಂದು ಪಾತ್ರೆ. ಅದರಲ್ಲಿ ಅರ್ಧವಾಸಿ ತಣ್ಣೀರು ತೆಗೆದುಕೊಂಡು ಹಟ್ಟಿಯ ಕಡೆ ಹೊರಟೆ. ನನ್ನ ತಾಯಿಯವರು ದನಗಳನ್ನು ಕರೆಯುವ ಮೊದಲು ಅವಕ್ಕೆ ಆಹಾರ ಕೊಟ್ಟು ಅವುಗಳ ಕೆಚ್ಚಿಲನ್ನು ತೊಳೆದು ಹಾಲು ಹಿಂಡುತ್ತಾ ಇದ್ದುದು ನೆನಪಿನಲ್ಲಿ ಇತ್ತು. ನಾನು ಕೂಡಾ ಹಾಗೆಯೇ ಮಾಡಲು ಹೊರಟಿದ್ದೆ.

ನನಗೆ ಆ ದಿನಗಳಲ್ಲಿ ಹುಲಿಯ ಹಾಲನ್ನು ಕರೆಯುವ ಸ್ಥೈರ್ಯ ಹಾಗೂ ಹುಮ್ಮಸ್ಸು ಇತ್ತು. ’ಯಕಶ್ಚಿತ್ ಒಂದು ನಾಟಿದನದ ಹಾಲು ಕರೆಯುವದೇನು ಮಹಾ!’ ಎಂದು ಕೊಳ್ಳುತ್ತಾ ನಮ್ಮ ಕೆಂಪಿ ದನ ಮತ್ತು ಕರು ಇದ್ದ ಹಟ್ಟಿಯನ್ನು ಪ್ರವೇಶಿಸಿದೆ.

ಧೈರ್ಯವಾಗಿ ‘ಕೆಂಪಿ, ಕೆಂಪಿ!’ ಎನ್ನುತ್ತಾ ಅದರ ಬಳಿ ಹೋದೆ. ಎರಡು ಸಲ ದನದ ಹೆಸರು ಹಿಡಿದು ಕರೆದಾಗಲೇ ‘ಹಾಲುಕರೆಯುವ ಕೆಲಸ ಅರ್ಧ ಮುಗಿಸಿದೆ’ ಎಂಬ ಭಾವನೆ ನನ್ನಲ್ಲಿ ಮೂಡಿತ್ತು.

ಕೆಂಪಿ ದನ ತನ್ನ ಕರುವಿನ ಮೈ ನೆಕ್ಕುತ್ತಾ ನಿಂತಿತ್ತು. ಅದು ನನ್ನ ಕಡೆಗೆ ಗಮನ ಕೊಡಲೇ ಇಲ್ಲ. ಅಟ್ಟದ ಏಣಿ ಹತ್ತಿ ಅದರ ಎದುರಿಗೆ ಒಂದು ಕಟ್ಟು ಒಣ ಹುಲ್ಲು ತಂದು ಹಾಕಿದೆ. ಅದು ಖುಷಿಯಿಂದ ಆ ಹುಲ್ಲನ್ನು ತಿನ್ನ ತೊಡಗಿತು.

ಅದರ ಪುಟ್ಟ ಕರು ಆಗಲೇ ಹೊಟ್ಟೆತುಂಬಾ ಆಗಲೇ ಹಾಲು ಕುಡಿದಿದ್ದರಿಂದ ಸಂತೋಷವಾಗಿ ನನ್ನ ಕಡೆ ಪಿಳಿ ಪಿಳಿ ನೋಡುತ್ತಾ ಇತ್ತು.

ನಾನು ದನದ ಎಡ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ತಂಬಿಗೆಯಲ್ಲಿ ಇದ್ದ ತಣೀರನ್ನು ಅದರ ಕೆಚ್ಚಲಿಗೆ ಎರಚಿ ಕೆಚ್ಚಲನ್ನು ತೊಳೆಯಲು ಕೈ ಹಾಕುವ ಮೊದಲೇ ಮಿಂಚಿನ ವೇಗದಲ್ಲಿ ಏನೇನೋ ನಡೆದು ಬಿಟ್ಟಿತು.

ನನ್ನ ಕಣ್ಣಿನ ಇದುರು ಏನೋ ಕಪ್ಪಗಿನ ವಸ್ತು ಸುಳಿದಂತೆ ಆಯಿತು.

ಅದು ನನ್ನ ಮುಖದ ಮೇಲೆಯೇ ಬಂದು ಇಳಿಯಿತು.

ಲಟ್! ಎಂಬ ಶಬ್ದ ಕೂಡಾ ಆಯಿತು.

ನಾನು ಆ ಕ್ಷಣದಲ್ಲೇ ಆಯತಪ್ಪಿ ಹಟ್ಟಿಯ ಶಿಲೆ ಹಾಸಿದ ನೆಲದ ಮೇಲೆ ಬಿದ್ದುಬಿಟ್ಟಿದ್ದೆ.

ನೆಲದಲ್ಲಿ ಬಿದ್ದಿದ್ದ ಸೆಗಣಿ ನನ್ನ ಮೈಗೆ ಮೆತ್ತಿಕೊಳ್ಳುತ್ತಾ ಇತ್ತು.

ನನ್ನ ಕೈಯ್ಯಲ್ಲಿ ಇದ್ದ ಪಾತ್ರೆ ಎಲ್ಲೋ ಹಾರಿ ಹೋಗಿತ್ತು.

ನನ್ನ ತಲೆಯಲ್ಲಿ ಅಗಲ ಬ್ರಿಮ್ ಉಳ್ಳ ಹ್ಯಾಟು ಇದ್ದಿದ್ದರಿಂದ ತಲೆ ನೆಲಕ್ಕೆ ಹೊಡೆದ ವೇಗಕ್ಕೆ ನನ್ನ ತಲೆ ಒಡೆದು ಹೋಗಲಿಲ್ಲ. ಬಿದ್ದ ರಭಸಕ್ಕೆ ನನ್ನ ಹ್ಯಾಟ್ ತಲೆಯಿಂದ ಕಳಚಿ ಸೆಗಣಿಯ ಮೇಲೆ ಅಂಗಾತ ಬಿದ್ದಿತು.

‘ನಾನಗೆ ಏನಾಯಿತು?’ ಎಂದು ಊಹಿಸುವ ಮೊದಲೇ ನನ್ನ ಮುಖದಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡಿತು. ಹೇಗೋ ಸುಧಾರಿಸಿಕೊಂಡು ಎದ್ದೆ. ನನ್ನ ತಲೆ ‘ಧಿಂ!’ ಎನ್ನುತ್ತಿತ್ತು. ಬಲ ಕಣ್ಣಿನ ಕೆಳಗೆ ಕೆಳದವಡೆಯ ತನಕ ತಡೆಯಲಾರದ ನೋವು ಪಸರಿಸಿತು. ಮುಖ ಮುಟ್ಟಿ ನೋಡಿಕೊಂಡಾಗ ಮುಖದ ಬಲಭಾಗ ಊದಿಕೊಳ್ಳುತ್ತಾಇರುವುದು ಸ್ಪಷ್ಟವಾಯಿತು.

ಮೆಲ್ಲನೆ ಕೆಳಗೆ ಬಿದ್ದಿದ್ದ ಹ್ಯಾಟ್ ಎತ್ತಿಕೊಂಡೆ. ಎಲ್ಲಿಗೋ ಹಾರಿ ಹೋಗಿದ್ದ ಪಾತ್ರೆಯನ್ನು ಹುಡುಕದೇ ‘ಅದು ಹಾಳಾಗಿ ಹೋಗಲಿ!’ ಎಂದು ಶಪಿಸುತ್ತಾ ಮೇಲೆ ಎದ್ದೆ. ಮೈ ಮೇಲೆ ಪಸರಿಸಿದ್ದ ಹಸೀ ಸೆಗಣಿಯ ವಾಸನೆ ತಡೆಯಲು ಅಸಾಧ್ಯ ಎನಿಸಿತು.

ನಾನು ದನದ ಕಡೆ ನೋಡಿದೆ. ಅದು ಏನೂ ನಡೆದಿಲ್ಲವೇನೋ ಎಂಬಂತೆ ತನ್ನ ಕರುವನ್ನು ನೆಕ್ಕುತ್ತಾ ಇತ್ತು. ನನಗೆ ದನದ ಮೇಲೆ ಸಿಟ್ಟು ಉಕ್ಕಿಬಂದಿತ್ತು.

ಪೆಟ್ಟು ತಿಂದ ನೋವಿನಿಂದಾಗಿ ನನ್ನಲ್ಲಿ ನಿಧಾನವಾಗಿ ವಿವೇಕವೂ ಮೂಡಿ ಬರುತ್ತಿತ್ತು. ‘ಆ ಪುಟ್ಟ ಕರುವಿಗೆ ಸೇರಿದ ಹಾಲನ್ನು ಹಿಂಡಿ ತೆಗೆಯುವ ಅಧಿಕಾರ ನಿನಗೆಲ್ಲಿ?’ ಎಂದು ನನ್ನ ಒಳಮನಸ್ಸು ನನ್ನನ್ನು ಕೇಳುತ್ತಾ ಇತ್ತು.

ಮುಖವನ್ನು ಇನ್ನೊಮ್ಮೆ ಸವರಿಕೊಂಡು ನೋಡಿದೆ. ‘ಯಾವ ಹಲ್ಲೂ ಕಿತ್ತು ಹೋಗಿಲ್ಲ. ದವಡೆಯ ಎಲುಬು ಮುರಿದಿಲ್ಲ’ ಎಂದು ಖಾತ್ರಿ ಮಾಡಿಕೊಂಡೆ. ದಪ್ಪವಾಗಿ ಪೊದೆಯಂತೆ ಬೆಳೆದಿದ್ದ ಗಡ್ದದ ಕೂದಲುಗಳು ನನ್ನ ದವಡೆಯ ಎಲುಬು ಮತ್ತು ಹಲ್ಲುಗಳನ್ನು ಕಾಪಾಡಿದ್ದುವು.

‘ಕನ್ನಡಿ ನೋಡಿಕೊಳ್ಳೋಣ!’ ಎಂದರೆ, ಗಡ್ದ ಧಾರಿಯಾದ ನನ್ನ ಮನೆಯಲ್ಲಿ ಕನ್ನಡಿಯೇ ಇರಲಿಲ್ಲ. ಶೇವಿಂಗ್ ಅಗತ್ಯವೇ ಇಲ್ಲದ ಮುಖ! ತಲೆಯಲ್ಲಿ ಬಾಚಣಿಗೆ ಬೇಡದ "ಕ್ರೂ"ಕಟ್! ಗುಡಿಸಲಿಗೆ ಹೋಗಿ ಸ್ಟೈನ್‌ಲೆಸ್ ಸ್ಟೀಲಿನ ಊಟದ ತಟ್ಟೆಯಲ್ಲಿ ಮುಖ ನೋಡಿಕೊಂಡೆ. ಯಾರದೋ ಮುಖ ಬಲ ಬದಿ ಊದಿಕೊಂಡಂತೆ ಕಂಡಿತು. ಬಲಕಣ್ಣು ಊದಿಕೊಂಡು ಅರ್ಧ ಮುಚ್ಚಿತ್ತು.

ನಾನು ಮಾಮೂಲಿಯಾಗಿ ಸ್ನಾನಕ್ಕೆ ಉಪಯೋಗಿಸುತ್ತಾ ಇದ್ದ ಮಾರ್ಗೋ ಸೋಪ್ ಹಿಡಿದು ನೇರವಾಗಿ ನದಿಯ ಬದಿಗೆ ನಡೆದೆ, ಶೂ ಮತ್ತು ಹ್ಯಾಟ್ ಸಮೇತ ನೀರಿಗಿಳಿದು ಮೈಗೆ ಮೆತ್ತಿದ ಸೆಗಣಿ ತೊಳೆದುಕೊಂಡೆ. ಹರಿಯುವ ನೀರಿನಲ್ಲಿ ಹ್ಯಾಟ್ ಮತ್ತು ಬೂಟ್ ತೊಳೆದು ಬದಿಗೆ ಇರಿಸಿದೆ. ಒದ್ದೆ ಬಟ್ಟೆಯಲ್ಲೇ ಮನೆಗೆ ಬಂದು ಬಟ್ಟೆ ಬದಲಾಯಿಸಿದೆ.

ಬೆಳಗ್ಗಿಗೆ ಇಟ್ಟುಕೊಂಡ ಹಿಂದಿನ ದಿನದ ಹಾಲು ಆಗಲೇ ಮುಂಜಾನೆಯ ಟೀ ಮಾಡಿದಾಗ ಖರ್ಚಾಗಿತ್ತು. ಬಿಸಿ ಬಿಸಿಯಾಗಿ ಒಂದು ಮಗ್ ಕಪ್ಪು ಚಹಾ ಮಾಡಿ ಕುಡಿದೆ.

ಹೊಳೆಯ ನೀರಿನ ಅಭಿಷೇಕದಿಂದ ಮುಖದ ಊತ ಕಡಿಮೆ ಆಗುತ್ತಾ ಇತ್ತು.

ಕೆಲಸದ ಆಳುಗಳು ಇನ್ನೂ ಬಂದಿರಲಿಲ್ಲ. ಗಂಟೆ ನೋಡಿದರೆ ಏಳೂವರೆ! ಅರೆ! ನನ್ನ ಕೈಯ್ಯಲ್ಲಿ ಇದ್ದ ಸ್ವಿಸ್ “ಎನಿಕಾರ್” ವಾಚ್ ಇನ್ನೂ ನಡೆಯುತ್ತಾ ಇತ್ತು! ಅದು ನೀರು ಕುಡಿದಿರಲೂ ಇಲ್ಲ!

ಪೆಟ್ಟು ತಿಂದ (ಒದೆಸಿಕೊಂಡ) ಮುನಿಸು ಇನ್ನೂ ಕಡಿಮೆ ಆಗಿರಲಿಲ್ಲ. ಆ ಕೆಂಪಿ ಎಂಬ ದನಕ್ಕೆ ಚೆನ್ನಾಗಿ ಹೊಡೆದು ಬಿಡೋಣಾಂತ ಒಮ್ಮೆ ಅನ್ನಿಸಿತು. ‘ಎಲೋ ಬುದ್ಧಿಯುಳ್ಳ ಮನುಷ್ಯ ಪ್ರಾಣಿಯೇ! ದನದ ಮೇಲೆ ಯಾಕೆ ಸಿಟ್ಟು ಮಾಡುತ್ತೀಯಾ? ತಪ್ಪು ನಿನ್ನದೇ ಅಲ್ಲವೇ? ನಿನಗೂ ಅದು ಹಾಲು ಹಿಂಡಲು ಬಿಡುತ್ತಿತ್ತೋ ಏನೋ? ನಿನ್ನ ವಿಚಿತ್ರ ವೇಷ! ಮುಖ ತುಂಬ ಗಡ್ಡ! ತಲೆಯ ಮೇಲೆ ಒಂದು ಅಗಲ ಹ್ಯಾಟು! ಅದರ ಮೇಲೆ, ಚಳಿಗಾಲದ ಈ ಹವಾಮಾನದಲ್ಲಿ ಅದರ ಕೆಚ್ಚಲಿಗೆ ಮಹಾ ಬುದ್ಧಿವಂತನಂತೆ ತಣ್ಣೀರು ಎರೆಚಿದೆ! ನೀನು ಮಾಡಿದ್ದು ತಪ್ಪಲ್ಲವೇ?’ ಎಂದಿತು ಸುಪ್ತ ಮನಸ್ಸು.

‘ಹೌದು! ನಾನು ಉಗುರು ಬೆಚ್ಚನೆಯ ನೀರು ಕೊಂಡೊಯ್ಯ ಬೇಕಿತ್ತು! ಹೊಳೆಯಲ್ಲೇ ದಿನಾ ತಣ್ಣೀರಲ್ಲಿ ಮುಳುಗಿ ಸ್ನಾನ ಮಾಡುವ ಈ ನರ ಪ್ರಾಣಿಗೆ, ಒಂದೆರಡು ದಿನಗಳ ಹಿಂದಷ್ಟೇ ಕರು ಹಾಕಿದ ಆ ದನಕ್ಕೆ ಚಳಿ ಆಗಬಹುದೆಂಬ ಪರಿಜ್ಞಾನವೇ ಇರಲಿಲ್ಲ! ಸರಿ! ನಾನು ತಪ್ಪೇ ಮಾಡಿರಬಹುದು. ಆದರೆ, ಆ ದನ ನನಗೆ ಅಷ್ಟು ಜೋರಾಗಿ ಒದೆಯಬೇಕಿರಲಿಲ್ಲ! ನಿಧಾನವಾಗಿ ಕಾಲು ಝಾಡಿಸಿ ಅದು ಹೆದರಿಸಿದ್ದರೆ ಸಾಕಿತ್ತು!’ ಅಂತ ನನ್ನೊಳಗೇ ಸ್ವಲ್ಪ ಸಮಾಧಾನ ಮಾಡಿಕೊಂಡೆ.

ನನ್ನ ಮನೆಯೊಳಗೆ ಒಂದು ಚಿಕ್ಕ ನೀಲಿ ಪೈಂಟ್‌ನ ಡಬ್ಬಿ ಮತ್ತು ಬ್ರಶ್ ಇತ್ತು. ಅದನ್ನು ಒಪಯೋಗಿಸಿ ನನ್ನ ಮನೆಗೆ K ಸ रि ಎಂಬ ಹೆಸರನ್ನು ಬರೆದಿದ್ದೆ. ಕೂಡಲೇ ಆ ಡಬ್ಬವನ್ನು ಹುಡುಕಿ ನಮ್ಮ ಹಟ್ಟಿಗೆ zoo ಎಂಬ ಹೆಸರನ್ನು ಬರೆದು ಅಂದು ತಿಂದ ಒದೆಗೆ ಸೇಡು ತೀರಿಸಿಕೊಂಡೆ.
 
ಆನಂತರ ನಾನು ಅಂದಿನ ಒದೆ ತಿಂದ ಪ್ರಸಂಗವನ್ನು ಬಲವಂತವಾಗಿ ಮರೆತೇ ಬಿಟ್ಟೆ!
 
{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಹಲವಾರು ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ


(ಚಿತ್ರಗಳು: ಲೇಖಕರವು)

Friday, August 07, 2009

ಇಂದು ನಾನು ಮಣ್ಣಿನ ದಾಸನಾದೆ! - ಶ್ರೀ ಮಧುಸೂದನ ಪೆಜತ್ತಾಯ

ನಾನು ಗೊಬ್ಬರಮಿತ್ರನಾದ ಕತೆಯನ್ನು ಮುಂದೊಮ್ಮೆ ಹೇಳುತ್ತೇನೆ!(ref) ಎಂದಿದ್ದೆನಲ್ಲ. ಈಗ ಹೇಳುತ್ತೇನೆ ಕೇಳಿ.
ನಾನು ಕಾಲೇಜು ಮುಗಿಸಿ ಭತ್ತದ ವ್ಯವಸಾಯಕ್ಕೆ ಇಳಿದ ಮೊದಲ ದಿನ ನಮ್ಮ ವ್ಯವಸಾಯ ಕ್ಷೇತ್ರದ ಹಟ್ಟಿಯ ಗೊಬ್ಬರವನ್ನು ತಲೆಯ ಮೇಲೆ ಹೊತ್ತು ನನ್ನ ಅಕ್ಕನ ಗದ್ದೆಗೆ ಹಾಕಿದೆ. ೧೯೬೭ ಜೂನ್ ಕೊನೆಯ ವಾರ ಇರಬೇಕು!
ಆ ದಿನ ಭಾನುವಾರ! ಕೆಲಸದವರಾರೂ ಬಂದಿರಲಿಲ್ಲ.
ನಾನು ನಿರ್ಮಿಸಿದ ನನ್ನ ಅಕ್ಕನ ಹೊಸಾ ‘ಫಾರ್ಮ್’ ಕಾಡಿನ ಬದಿಯ ನಿರ್ಜನ ಜಾಗದಲ್ಲಿ ಇತ್ತು. ನನ್ನ ಅಕ್ಕನ ಗದ್ದೆಯ ಆಚೆಯ ದಡದಲ್ಲಿ ತುಂಬಿದ ಸುವರ್ಣಾ ನದಿ ಹರಿಯುತ್ತಾ ಇತ್ತು. ಗದ್ದೆಯ ಈ ಕಡೆಗೆ ನನ್ನ ಒಂಟಿ ಕೋಣೆಯ ಅರಮನೆ! ಅದರ ಪಕ್ಕದಲ್ಲೇ ನೆಲ ಹಾಸಿಗೆ ಹಸೀ ಸೊಪ್ಪು ಹಾಕುವ, ಮಧ್ಯದಲ್ಲಿ ಬೈಪಣೆ (ಗೋದಿಲು) ಇದ್ದ ವಿಶಾಲವಾದ ಹಟ್ಟಿ ಇತ್ತು.
ಬೆಳಗಾಗಲೇ ನಮ್ಮ ದನಗಳನ್ನು ನನ್ನ ’ಮ್ಯಾನ್ ಫ್ರೈಡೇ’ ಅರ್ಥಾತ್ ಚೀಂಪ ನಾಯ್ಕ ಮೇಯಿಸಲು ಒಯ್ದಿದ್ದ.
ಅಂದು ಕಾಡಿನ ಪಕ್ಕದ ನಮ್ಮ ಸಸ್ಯ ಕ್ಷೇತ್ರದಲ್ಲಿ ನಾನೊಬ್ಬನೇ! ಏಕಾಂಗಿ.
ನಮ್ಮ ಹಟ್ಟಿಯ ಎಲ್ಲಾ ಗೊಬ್ಬರವನ್ನು ಒಬ್ಬನೇ ಹೊತ್ತು ಗದ್ದೆಗೆ ಹಾಕುವ ’ಛಾಲೆಂಜ್’ ನನ್ನ ಮನದಲ್ಲಿ ಹುಟ್ಟಿತು.
ಅದನ್ನು ಸ್ವೀಕರಿಸಿಯೇ ಬಿಟ್ಟೆ!
ಹಿಂದಿನ ದಿನ ಮಾಡಿಟ್ಟ ಎಂಟು ಚಪಾತಿಗಳನ್ನು ಅಕ್ಕ ಡಾ. ಶಶಿಕಲಾ ಬಾಟಲಿಗೆ ಹಾಕಿ ಕೊಟ್ಟಿದ್ದ ಅವಳ ಮನೆಯ ಉಪ್ಪಿನಕಾಯಿ ಜತೆಗೆ ತಿಂದೆ. ಒಂದು ಮಗ್ ಬಿಸಿ ಟೀ ಮಾಡಿಕೊಂಡು ಕುಡಿದೆ.

ಬೇಸಿಗೆಯ ಧಗೆಯಲ್ಲಿ ಭದ್ರಾನದಿಯ ಮೇಲೆ ಮೋಡ!

ಪಾದರಕ್ಷೆ ಮತ್ತು ಶರಟು ಬಿಚ್ಚಿಟ್ಟು ಗೊಬ್ಬರದ ಇಸ್ಮುಳ್ಳು (ಕೊಕ್ಕೆ) ಮತ್ತು ದೊಡ್ಡ ಕಣ್ಣಿನ ಬೆತ್ತದ ಬುಟ್ಟಿ ಕೈಗೆತ್ತಿಕೊಂಡು ಸೆಗಣಿ ವಾಸನೆ ಹೊಡೆಯುತ್ತಾ ಇದ್ದ ಸೊಪ್ಪಿನ ಹಟ್ಟಿಯ ಗೊಬ್ಬರ ಗೋರಲು ಶುರುಮಾಡಿದೆ.
"ಇಂದಿನಿಂದ ಈ ಹಟ್ಟಿ ಗೊಬ್ಬರ ನನ್ನ ಮಿತ್ರ! ಗೊಬ್ಬರ ಇಲ್ಲದೆ ಸಾಗುವಳಿ ಇಲ್ಲ! ಈ ದಿನ ಈ ಹಟ್ಟಿಯ ಗೊಬ್ಬರವನ್ನು ಏಕಾಂಗಿಯಾಗಿ ಗದ್ದೆಗೆ ಸಾಗಿಸಿ, ಹಳ್ಳಿಗರ ಕೈಯ್ಯಲ್ಲಿ ‘ಸೈ’ ಎನ್ನಿಸಿಕೊಳ್ಳುವೆ! " ಅಂತ ನನ್ನ ಕೃಷಿ ಜೀವನದ ’ಓ ನಾಮ’ ಹಾಡಿದೆ.
ಕಳಿತ ಗೊಬ್ಬರದಿಂದ ಇಳಿಯುತ್ತಾ ಇದ್ದ (ಅಂದರೆ ಬಹು ರಸವತ್ತಾಗಿ ಕೊಳೆತಿದ್ದ) ಆ ಗಂಜಳದ ವಾಸನೆಯ ನೀರು ನನ್ನ ಕಣ್ಣುಗಳಿಗೆ ನುಗ್ಗಿದ್ದರಿಂದ ನನ್ನ ಕಣ್ಣುಗಳು ಉರಿಯುತ್ತಿದ್ದುವು. ಸ್ವಲ್ಪ ಕಣ್ಣೀರು ಸುರಿಸಿದ ಮೇಲೆ ಕಣ್ಣುಗಳು ಅದಕ್ಕೆ ಒಗ್ಗಿಕೊಂಡುವು. ದೊಡ್ಡ ಬಾಕಿಮಾರು ಗದ್ದೆಯ ಹರವಿನಲ್ಲಿ ಹಠ ಹಿಡಿದು ಇನ್ನೂರು ಚಿಲ್ಲರೆ ಬುಟ್ಟಿ ಗೊಬ್ಬರವನ್ನು ಎಂಟು ಅಡಿಗೊಂದರಂತೆ ಗುಪ್ಪೆ ಹಾಕಲು ಶುರು ಮಾಡಿದೆ.
ತಲೆಯ ಮೇಲೆ ಅಡಿಕೆಯ ಹಾಳೆಯ ಮುಟ್ಟಾಳೆ ಇತ್ತು. ಉಳಿದಂತೆ ಧರಿಸಿದ್ದು ಖಾಕಿಯ ಬಣ್ಣದ ಶಾರ್ಟ್ಸ್ ಮಾತ್ರ.
ಆಷಾಢ ಮಾಸದ ಮಳೆ ಮಧ್ಯೆ ಮಧ್ಯೆ ಬಿಡುವು ಕೊಟ್ಟು ಬರುತ್ತಾ ಇತ್ತು.
ಮೈ ಮೇಲಿನ ಗೊಬ್ಬರವನ್ನು ಮತ್ತು ಸುವಾಸನೆಯ ಆ ನೀರನ್ನು ಆ ಮಳೆ ಸ್ವಲ್ಪಮಟ್ಟಿಗೆ ಆಗಾಗ ತೊಳೆದು ಸಹಾಯ ಮಾಡುತ್ತಾ ಇತ್ತು! ಜತೆಗೆ, ನನ್ನ ಮೈಯಿಂದ ಬೆವರು ಧಾರಾಕಾರವಾಗಿ ಇಳಿಯುತ್ತಲೂ ಇತ್ತು.
ಕೆಲವೇ ನಿಮಿಷಗಳಲ್ಲಿ ನನ್ನ ಮೂಗು ಗೊಬ್ಬರದ ವಾಸನೆಗೆ ಒಗ್ಗಿ ಬಿಟ್ಟಿತು!
ಕೊನೆಗೆ ಆ ವಾಸನೆ ನನಗೆ ಗೊತ್ತಾಗಲೇ ಇಲ್ಲ!
ಗೊಬ್ಬರದ ನೀರು ನನ್ನ ಬಾಯಿಗೆ ಹರಿದು ಬಂದಾಗ ಉಗುಳನ್ನು ’ಥೂ!’ ಎಂದು ಉಗಿಯುತ್ತಾ ಇದ್ದೆ, ಅಷ್ಟೆ!
ಬರೇ ಕಾಲಿನ ನಡಿಗೆ ಆದ್ದರಿಂದ ನನ್ನ ಕಾಲಿನ ಚರ್ಮ ಕೊನೆಕೊನೆಗೆ ಉರಿಹತ್ತತೊಡಗಿತು. ‘ಸದಾ ಪಾದರಕ್ಷೆ ಧರಿಸಿ ನಾಜೂಕುಗೊಂಡ ನನ್ನ ಕಾಲುಗಳಿಗೆ
ನೋವನ್ನು ಔಡುಗಚ್ಚಿ ಸಹಿಸಿಕೊಂಡೆ.

ಸುಳಿಮನೆ ತೊಟ್ಟಿಯಲ್ಲಿ ಮಳೆ (16-05-2009)

ಅಂತೂ, ಸೊಪ್ಪಿನ ಹಟ್ಟಿಯ ಗೊಬ್ಬರ ಖಾಲಿಮಾಡಿದ್ದಾಯಿತು.
ಹಠದಿಂದ ಇನ್ನೂರು ಚಿಲ್ಲರೆ ದೊಡ್ಡ ಬುಟ್ಟಿ ಹಟ್ಟಿ ಗೊಬ್ಬರವನ್ನು ಏಕಾಂಗಿಯಾಗಿ ಆ ದಿನ ಹೊತ್ತು ಗದ್ದೆಗೆ ಹಾಕಿಯೇ ಬಿಟ್ಟಿದ್ದೆ!
"ಗದ್ದೆ ಸಾಗುವಳಿಯನ್ನು ಶುರುಮಾಡಿ ಸೆಗಣಿ ಗೊಬ್ಬರಕ್ಲ್ಕೆ ಅಂಜಿದೊಡೆ ಎಂತಯ್ಯಾ?" - ಅಂತ ಒಂದು ಅಣಕು ಪದ್ಯ ರಚಿಸಿ ಗಟ್ಟಿಯಾಗಿ ಹಾಡಿದೆ.
ಚೀಂಪ ನನ್ನ ರಾಗವನ್ನು ಅಪ್ಪಿ ತಪ್ಪಿ ಕೇಳಿದ್ದರೆ ಅಂದೇ ರಾಜೀನಾಮೆ ಕೊಟ್ಟು ಓಡಿಯೇ ಹೋಗುತ್ತಿದ್ದ!
ಕೆಲಸ ಮುಗಿದ ಕೂಡಲೇ ನದಿಗೆ ಹಾರಿ ಮಿಂದೆ! ಮೈ ಮೇಲಿನ ಖಾಕಿ ಚಡ್ಡಿಗೂ ಸರಾಗವಾಗಿ ಸೋಪ್ ಹಾಕಿ, ವಾಸನೆ ಹೋಗುವ ತನಕ ನೊರೆ ಎಬ್ಬಿಸಿದೆ! ಅದುವರೆಗೆ ನನಗೆ ಬಟ್ಟೆ ಒಗೆದು ಗೊತ್ತಿರಲಿಲ್ಲ! ಆ ದಿನಗಳಲ್ಲಿ ಬಟ್ಟೆ ಧರಿಸಿ ನೀರಿಗೆ ಇಳಿದು ಅವನ್ನು ಕ್ಲೀನ್ ಆಗುವತನಕ ಲೈಫ್ ಬಾಯ್ ಸೋಪ್ ಹಾಕಿ ತೊಳೆಯುತ್ತಿದ್ದೆ! ಇಂದೂ ಕೈಯ್ಯಲ್ಲಿ ಬಟ್ಟೆ ಒಗೆಯ ಬೇಕಾದಾಗ ಹೀಗೆಯೇ ಮಾಡುತ್ತೇನೆ. ಇತ್ತೀಚೆಗೆ ನನ್ನ ಶ್ರೀಮತಿ ಸರೋಜಮ್ಮನ ’ಬಾಷ್’ ವಾಶಿಂಗ್ ಮಷೀನ್ ಬಳಸಲು ಕಲಿತಿದ್ದೇನೆ!
ಒಮ್ಮೆಗೇ ಹಸಿವು ಕಾಡಿತು. ಅಡುಗೆ ಮಾಡಲು ಹಸಿವು ಬಿಡಲಿಲ್ಲ!
ಅವಲಕ್ಕಿಯ ದೊಡ್ದ ಅಲ್ಯೂಮಿನಿಯಂ ಡಬ್ಬಕ್ಕೇ ಮನೆಯಲ್ಲಿದ್ದ ಎಲ್ಲಾ ಮೊಸರು ಸುರಿದು ಉಪ್ಪು ಹಾಕಿ ಕಬಳಿಸಿಬಿಟ್ಟೆ.! ಹಸಿವಿನ ರಾಕ್ಷಸ ತಣ್ಣಗಾದ!
ಕೊನೆಗೆ,
"ಇಂದು ನಾನು ಮಣ್ಣಿನ ದಾಸನಾದೆ!" - ಅಂತ ಸ್ವಲ್ಪ ಹೆಮ್ಮೆ ಅನ್ನಿಸಿತು.
ಆ ದಿನದಿಂದ ಹಟ್ಟಿಯ ಗೊಬ್ಬರ ಎಂದಿಗೂ ನನಗೆ "ಅಹಸ್ಯ ಅಥವಾ ವಾಸನೆ" ಎಂದು ಅನ್ನಿಸುತ್ತಲೇ ಇಲ್ಲ!
ಇದು ವೃತ್ತಿಪರ ರೈತನಾದ ನನ್ನ "ಲಿವಿಂಗ್ ಕಂಡೀಶನ್!" - ಎಂದು ಒಪ್ಪಿಕೊಂಡು ಬಾಳುತ್ತಾ ಇದ್ದೇನೆ.



ಈಗ ಸೆಗಣಿಯ ಬಗ್ಗೆ ಇನ್ನೊಂದು ಪ್ರಹಸನ!
ಶಿವಮೊಗ್ಗದಲ್ಲಿ ನಾವು ವಾಸ ಇರುವಾಗ ಅಂಗಳಯ್ಯನ ಕೆರೆ ಏರಿಯಾದಲ್ಲಿ ಒಂದು ಮನೆ ಒಕ್ಕಲಿನ ಸಮಾರಂಭಕ್ಕೆ ಹೋಗಲೇ ಬೇಕಾಯಿತು. ಬೆಳಗಿನ ಜಾವ ನಾಲ್ಕುಗಂಟೆಗೆ ಮನೆ ಒಕ್ಕಲು! ಪುರೋಹಿತರು "ಗೋಮಯ ತನ್ನಿ" ಎಂದರು! ಆ ಮನೆಯ ಒಬ್ಬ ವೃದ್ಧೆ ಕತ್ತಲೆಯಲ್ಲೇ ತಡಕಾಡಿ ಬೀದಿಬದಿಯಲ್ಲಿದ್ದ ಗೋಮಯ ಹುಡುಕಿ ತಂದರು. ಪುರೋಹಿತರು ಅದನ್ನು ನೀರು ಹಾಕಿ ಕಲಸುತ್ತಾ ಇದ್ದಾಗ ಮುಖ ಸಿಂಡರಿಸಿ “ಥತ್! ಗೋಮಯ ಕೇಳಿದರೆ ಕತ್ತೆಯ ಲದ್ದಿ ಯಾಕೆ ತಂದಿರಿ?" ಎಂದು ಆ ಹಿರಿಯರಿಗೆ ಸಹಸ್ರ ನಾಮಾರ್ಚನೆ ಮಾಡುತ್ತಾ ಬೆಳಗಿನ ತನಕ ಸ್ನಾನ ಮಾಡಿದರು!
{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಎರಡು ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ
(ಚಿತ್ರಗಳು: ಲೇಖಕರವು)

Monday, July 27, 2009

ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ! - ಶ್ರೀ ಮಧುಸೂದನ ಪೆಜತ್ತಾಯ

ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಎರಡು ಈ ಮೇಲ್ ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.
ನಾನು ನನ್ನ ಅಜ್ಜ ಡಾ. ರಾಮರಾವ್ ಬಾಗ್ಲೋಡಿ (ರಿಟಾಯರ್ಡ್ ರಾಯಲ್ ಇಂಡಿಯನ್ ಆರ್ಮಿ) ಅವರ ಹಳ್ಳಿಯ ಮನೆಯಲ್ಲಿ ಬೆಳೆದೆ.
ಅವರು ತನ್ನ ಜಮೀನುಗಳಿದ್ದ ಕಿನ್ನಿಕಂಬಳ ಎಂಬ ಹಳ್ಳಿಯಲ್ಲಿ ನೆಲೆಸಿದ್ದರು. ಅವರು ಅಲೋಪಥಿ ಡಾಕ್ಟರ್ ಆಗಿದ್ದರೂ ಆಯುರ್ವೇದ ಔಷದದಲ್ಲಿ ಪರಿಣತರಾಗಿದ್ದರು.
ನನ್ನ ಅಜ್ಜಿಯ ಹೆಸರು ಕೃಷ್ಣವೇಣಿಯಮ್ಮ.
ನಾನು ಕೂಡಾ ತಮ್ಮಂತೆಯೇ ದೊಡ್ಡ ಹಟ್ಟಿಯ ಪಕ್ಕ ಇದ್ದ ಮನೆಯಲ್ಲೇ ಬೆಳೆದವನು.
ಮನೆಯಿಂದ ಹಟ್ಟಿಗೆ ಹೋಗುವ ಅಂತರದಲ್ಲೇ ಬಲಬದಿಯಲ್ಲಿ ಇದ್ದದ್ದು ಕರುಗಳ ಕೋಣೆ. ಎಡಬದಿಯಲ್ಲಿ ಇದ್ದುದು ಹಿಂಡಿ ದಾಸ್ತಾನು ಇಡುವ ಕೋಣೆ. ಅದರಲ್ಲಿ ಘಮಘಮಿಸುವ (ಐತುವಿನ ಗಾಣದ) ತೆಂಗಿನ ಹಿಂಡಿ, ಯಂತ್ರದಿಂದ ಹೊರಬರುವಾಗಲೇ ಹಲ್ಲೆಗಳ ರೂಪದಲ್ಲಿ ಬರುತ್ತಿದ್ದ ನೆಲಗಡಲೆ ಮತ್ತು ಎಳ್ಳಿನ ಹಿಂಡಿಯ ಚೀಲಗಳು, ಕೈಯ್ಯಲ್ಲಿ ಭತ್ತ ಕುಟ್ಟುವಾಗ ಮನೆಯಲ್ಲೇ ದೊರಕುತ್ತಿದ್ದ ಭತ್ತದ ತೌಡು, ನುಚ್ಚಕ್ಕಿ ಹಾಕಿಡುತ್ತಾ ಇದ್ದ ಮಣ್ಣಿನ ಬಾನಿಗಳು ಮತ್ತು ದೊಡ್ಡದಾದ ಒಂದು ಕಲ್ಲುಪ್ಪು ಹಾಕಿಡುವ ಮರದ ಪೆಟಾರಿ..... ಇವೆಲ್ಲಾ ಇದ್ದವು.
ಹಿಂಡಿಯ ಕೋಣೆಯ ಪರಿಮಳ ಇಂದಿನ ಕ್ಯಾಟಲ್ ಫೀಡ್ ಹೊರಸೂಸೀತೆ?
ಅದರ ಎದುರಿನದು ಹಸೀ ಹುಲ್ಲು ಹಾಗೂ ದಿನಕ್ಕೆ ಬೇಕಷ್ಟು ಬೈಹುಲ್ಲು ಸಂಗ್ರಹಿಸುವ ಕೋಣೆ.
ಈ ಕೋಣೆಯ ನಂತರ ಇದ್ದುದು ಅಕ್ಕಚ್ಚಿನ ಹಂಡೆಯ ಹಬೆಯಾಡುವ ಕೋಣೆ. ಅದನ್ನು ದಾಟಿ ಹೋದರೆ ನಮಗೆ ಸಿಗುತ್ತಾ ಇದ್ದುದು ದನಗಳ ಗೋದಿಲು ಎಂಬ ಹೆದ್ದಾರಿ! ಇಕ್ಕೆಲದಲ್ಲೂ ಒಂದಕ್ಕೊಂದು ಮುಖ ಹಾಕಿರುವಂತೆ ಕಟ್ಟಿದ ಎಮ್ಮೆ ಮತ್ತು ದನಗಳ ಸಾಲು!
ಪ್ರತೀ ಪಶುವಿಗೂ ಒಂದು ಚೌಕಟ್ಟು. ಅದಕ್ಕೆ ಭದ್ರ್ರವಾಗಿ ಕಟ್ಟಿದ ಬಣ್ಣದ ಕುಚ್ಚಿನ ಗೊಂಡೆ ಹಗ್ಗಗಳು. ಬೈಪಣೆಯಲ್ಲೇ ಪ್ರತೀ ದನಕ್ಕೂ ಒಂದು ಕಲ್ಲಿನ ಮರಿಗೆ - ಅದೇ ದನಗಳ ಊಟದ ಬಟ್ಟಲು ಯಾ ಅಕ್ಕಚ್ಚು ಕುಡಿಯುವ ಬಾನಿ.
ದನಗಳ ತಲೆಯ ಮೇಲೆ ಮಳೆಗಾಲಕ್ಕೆ ಬೆಚ್ಚನೆ ಕಾಪಿಟ್ಟ ಭತ್ತದ ಹುಲ್ಲಿನ ದಾಸ್ತಾನು.
ಬೈಪಣೆಯ ಮಧ್ಯೆ ನಡೆದುಕೊಂಡು ಹೋಗಿ ನಮ್ಮ ಅಜ್ಜಿ ದನಗಳಿಗೆ ದಿನಾ ಬೆಳಗ್ಗೆ ಮತ್ತು ಸಂಜೆ ಅಕ್ಕಚ್ಚಿನಲ್ಲಿ ನೆನೆಸಿಟ್ಟ ಹಿಂಡಿ ತಿನ್ನಿಸಿ, ಕುಡಿಯಲು ಬೇಕಷ್ಟು ಉಗುರು ಬೆಚ್ಚನೆಯ ‘ಅರ್ಕಂಜಿ’ ಹೊಯ್ಯುವರು.
ಹಾಲುಕೊಡುವ ದನಗಳಿಗೆ ಸ್ವಲ್ಪ ಹೆಚ್ಚಿನ ಅರ್ಕಂಜಿ ಹಾಗೂ ಹಿಂಡಿಯ ಉಪಚಾರ ದಿನಾ ಇದ್ದದ್ದೇ!
ನಾನು ದನಗಳ ಹಿಂಭಾಗಕ್ಕೆ ಎಂದಿಗೂ ಹೋದವನಲ್ಲ! ಕಾರಣ ನಮ್ಮದು ಸೊಪ್ಪಿನ ಹಟ್ಟಿ. ಹಟ್ಟಿಯ ನೆಲತುಂಬಾ ಹಸಿ ಸೊಪ್ಪು, ಸೆಗಣಿ ಮತ್ತು ಗಂಜಳ! ಆ ವಾಸನೆ ನನಗೆ ಇಷ್ಟ ಆಗುತ್ತಾ ಇರಲಿಲ್ಲ. ಕಾಲಿಗೆ ಬೇರೆ ದುರ್ವಾಸನೆಯ ಸೆಗಣಿ ಹಿಡಿಯುವ ಭಯ ನನಗೆ ಕೂಡಾ ಇತ್ತು! (ಮುಂದೆ ಇನ್ನೊಮ್ಮೆ ನಾನು ‘ಗೊಬ್ಬರ’ಮಿತ್ರನಾದ ಕತೆ ಹೇಳುತ್ತೇನೆ!)
ದನಗಳಿಗೆ ಈ ಸೊಪ್ಪಿನ ಹಟ್ಟಿಯೇ ಇಷ್ಟ ಅಂತೆ! ಅವು ಮಳೆಗಾಲದಲ್ಲಿ ಬೆಚ್ಚಗೆ ಸೊಪ್ಪಿನ ಮಲೆ ಮಲಗಿರುತ್ತಾ ಇದ್ದುವು. ಹದಿನೈದು ದಿನಗಳಿಗೊಮ್ಮೆ ಗೊಬ್ಬರ ಬಾಚಿದಾಗ ಬೆಚ್ಚನೆಯ ಗೊಬ್ಬರ ದಿಂದ ಹೊಗೆ (ಹಬೆ) ಏಳುತ್ತಿದ್ದದ್ದನ್ನು ನಾನು ಕಂಡಿದ್ದೆ. ಬೇಸಿಗೆಯಲ್ಲಿ ನಮ್ಮ ದನ ಮತ್ತು ಎಮ್ಮೆಗಳು ತಮ್ಮ ‘ಉಚ್ಚೆಯ ಮೇಲೆ ತಂಪಾಗಿ’ ಮಲಗುತ್ತಿದ್ದುವು.
ನಮ್ಮ ದನಗಳನ್ನು ಬೆಳಗ್ಗೆ ಹಾಲು ಕರೆದನಂತರ ಮುದರ ಮತ್ತು ರಾಧು ಮೇಯಲು ನಮ್ಮ ಕುಮರಿಯ ಜಾಗಕ್ಕೆ ಒಯ್ಯುವರು. ಅಲ್ಲಿ ದನ ಮೇಯಿಸಲು ಸಾಧ್ಯವಾಗದಂತೆ ಕುಮರಿಯಲ್ಲೇ ಒಂದು ಕಾಡು ಕಲ್ಲಿನ ಪಾಗಾರ ಹಾಕಿ ಎರಡೆಕರೆ ಜಾಗವನ್ನು ಪ್ರತ್ಯೇಕಿಸಿದ್ದರು. ಅಲ್ಲಿ ನಮ್ಮ ಅಜ್ಜ ಮುಳಿ ಹುಲ್ಲು ಬೆಳೆಸುತ್ತಾ ಇದ್ದರು. ಮುಳಿಹುಲ್ಲು ಹೊಂಬಣ್ಣಕ್ಕೆ ತಿರುಗುವ ಮೊದಲು (ಕತ್ತರಿಸಿದಾಗ ಹಾಲು ತುಂಬಿ ಬರುವಂತೆ ಕಾಣುತ್ತಿದ್ದ ಸಮಯದಲ್ಲಿ) ಪರಿಮಳ ಸೂಸುತ್ತಿದ್ದ ‘ದೋರೆ’ ಬೆಳೆದ ಹುಲ್ಲನ್ನು ಕತ್ತರಿಸಿ ‘ಕರಡ’ ತಯಾರಿಸಿ ಕರಡದ ಬಣವೆ ಮಾಡಿಸುತ್ತಾ ಇದ್ದರು. ಇದು ಅಮೇರಿಕಾದ "ಸೈಲೋ"ಕ್ಕಿಂತ ಕಡಿಮೆ ಇರಲಿಕ್ಕಿಲ್ಲ. ಬೆಳೆದು ಒಣಗಿದ ಮುಳಿಹುಲ್ಲು ಒಕ್ಕಲು ಮನೆಗಳ ಹುಲ್ಲಿನ ಮಾಡಿಗೆ ಪ್ರತೀ ಮಳೆಗಾಲದ ಮೊದಲು ಹೊದಿಸಲು ಅಜ್ಜ ಕೊಡುತ್ತಾ ಇದ್ದರು.
ನನಗೆ ಐದು ವರ್ಷ ಪ್ರಾಯ ತುಂಬುತ್ತಲೇ ಕರುಗಳ ಕೋಣೆಯ ಆಕರ್ಷಣೆ! ಕರುಗಳಿಗೆ ನಮ್ಮ ಗದ್ದೆಯ ಬದು ಬೆಳೆಯುತ್ತಾ ಇದ್ದ ಗರಿಕೆ ತಂದು ತಿನ್ನಿಸುವ ಚಟ! ನಾನು ತಂದ ಮುಷ್ಟಿಯಷ್ಟು ಗರಿಕೆ ಹುಲ್ಲು ಮುಗಿಯುತ್ತಲೇ, ಮೆಲ್ಲಗೆ ಹುಲ್ಲಿನ ಕೋಣೆಗೆ ಹೋಗಿ, ನನ್ನ ಪುಟ್ಟ ಬಾಹುಗಳಿಗೆ ಸಿಕ್ಕಷ್ಟು ಹಸೀ ಹುಲ್ಲು ತಂದು ಕರುಗಳಿಗೆ ನೀಡುತ್ತಾ ಇದ್ದೆ! ಒಣ ಭತ್ತದ ಹುಲ್ಲನ್ನು ನಾನು ಮುಟ್ಟುತ್ತಾ ಇರಲಿಲ್ಲ. ಬೈಹುಲ್ಲನ್ನು ನನ್ನ ಬಾಹುಗಳಿಂದ ಬಾಚಿ ತಂದರೆ ನನ್ನ ಮೈ ಎಲ್ಲಾ ತುರಿಕೆ ಬರುತ್ತಾ ಇತ್ತು.
ನಾನು ದಿನದ ಬಹು ಹೊತ್ತನ್ನು ಕರುಗಳ ಜತೆಗೆ ಆಡುತ್ತಾ ಕಳೆಯುತ್ತಾ ಇದ್ದುದರಿಂದ ನನಗೆ "ಕರುಗಳ ಯಜಮಾನ" ಎಂಬ ಅಡ್ಡ ಹೆಸರು ಬಂದಿತ್ತು!
ಬೆಳಗ್ಗೆ ಮತ್ತು ಸಾಯಂಕಾಲ ನಮ್ಮ ಅಜ್ಜಿ ಹಾಲು ಕರೆಯುತ್ತಾ ಇದ್ದರು. ಮನೆಯ ಉಪಯೋಗಕ್ಕಿಂತ ಹೆಚ್ಚಿಗೆ ಇದ್ದ ಹಾಲನ್ನು ಮಂಗಳೂರಿನ ಮೋಹಿನಿ ವಿಲಾಸಕ್ಕೆ ಅಣ್ಣು ಡ್ರೈವರನ "ಅಣ್ಣು ಬಸ್"ನಲ್ಲಿ ಕಳುಹಿಸುತ್ತಿದ್ದೆವು. ಅಣ್ಣು ಬಸ್ ಎಂದು ನಾವು ಕರೆಯುತ್ತಿದ್ದುದು ಎಸ್.ಡಿ.ಪಿ.ಎಮ್.ಎಸ್ ಅಂದರೆ ಶ್ರೀ ದುರ್ಗಾ ಪರಮೇಶ್ವರೀ ಮೋಟಾರ್ ಸರ್ವಿಸ್ ಬಸ್ಸನ್ನು! ಇದನ್ನು ನಮ್ಮ ಆಳು ಮುದರ ‘ದೆತ್ತ್ ಪಾಡಿ ಪರತ್ತ್ ಮೋಟಾರ್ ಸರ್ವಿಸ್!’ ಅಂದರೆ ನಿಕೃಷ್ಟವಾದ ಹಳೆಯ ಮೋಟಾರ್ ಸರ್ವಿಸ್ ಅಂತ ಕರೆಯುತ್ತಾ ಇದ್ದ!
ಪ್ರತೀ ಸಾಯಂಕಾಲ ಮುದರ ಹಟ್ಟಿಯ ಏಕೈಕ ಹೊರಬಾಗಿಲನ್ನು ಒಳಗಿನಿಂದ ಅಗಳಿ ಹಾಕಿ ಬಂದ್ ಮಾಡುತ್ತಾ ಇದ್ದ! ಆನಂತರ ಮನೆಯ ಅಂತರದ ಜಗಲಿ ಬಾಗಿಲಿನಿಂದ ಹೊರಗೆ ಹೋಗಿ, ಬಿದಿರಿನ ಕಣೆಗಳಿಂದ ಮಾಡಿದ ಬಲವಾದ ತಟ್ಟಿಯೊಂದನ್ನು ಹಟ್ಟಿಯ ಬಾಗಿಲಿನ ಮಲಿದ್ದ ಮದನ ಕೈಗಳಿಗೆ ಹಗ್ಗದಿಂದ ಬಿಗಿದು ಕಟ್ಟುತ್ತಾ ಇದ್ದ. ಹೀಗೆ ಮಾಡದೇ ಇದ್ದರೆ ಕೆಲವೊಮ್ಮೆ ಹಸಿದ ಹೆಬ್ಬುಲಿಗಳು (ಪಟ್ಟೆ ಹುಲಿಗಳು) ಆ ಬಾಗಿಲಿಗೆ ತಮ್ಮ ಬಲವಾದ ಪಂಜಾದಿಂದ ಹೊಡೆದು ಎಷ್ಟು ದಪ್ಪದ ಬಾಗಿಲನ್ನಾದರೂ ಮುರಿದು ಒಳಬಂದು ದನಗಳನ್ನು ಕೊಂದು ಕಾಡಿಗೆ ಒಯ್ದು ತಿನ್ನುತ್ತಾ ಇದ್ದುವಂತೆ!
ನಾವು ಕೆಲವೊಮ್ಮೆ ರಾತ್ರಿಯ ಹೊತ್ತು ಹುಲಿಯ ಆರ್ಭಟವನ್ನು ಕೇಳುತ್ತಾ ಇದ್ದೆವು. ನನ್ನ ಅಜ್ಜ ಆನೆಕಾಲು ರೋಗದಿಂದ ಬಳಲುತ್ತಾ ಇದ್ದರು. ಅವರಿಗೆ ಬೇಗನೆ ನಡೆಯಲು ಸಾಧ್ಯವಾಗುತ್ತಾ ಇರಲಿಲ್ಲ. ಮನೆಯಲ್ಲಿ ಬಂದೂಕು ಇದ್ದರೂ ಅವರು ಹುಲಿಗಳನ್ನು ಹೊಡೆಯಲು ಶಕ್ತರಾಗಿ ಇರಲಿಲ್ಲ. ನಾವು ಹುಲಿಯ ಆರ್ಭಟ ಕೇಳಿದರೆ "ನಮ್ಮ ಹಟ್ಟಿಗೆ ಅದು ಬರಲಾರದು!" ಅಂತ ಧೈರ್ಯ ಮಾಡಿ ಹೊದ್ದು ಮಲಗುತ್ತಾ ಇದ್ದೆವು. ನಮ್ಮ ಅಜ್ಜ ನಿದ್ರೆಯಿಂದ ಎಚ್ಚತ್ತು ಟಾರ್ಚ್ ಹಾಯಿಸಿ ಹುಲಿ ಕಾಣುತ್ತದೋ? - ಅಂತ ನೋಡುತ್ತಾ ಇದ್ದರು. ನನ್ನ ಮಾವಂದಿರು ಕೆಲಸದ ನಿಮಿತ್ತ ಪರ ಊರುಗಳಲ್ಲಿ ನೆಲೆಸಿದ್ದರು.
ಅಜ್ಜ ತಮ್ಮ ತಾರುಣ್ಯದಲ್ಲಿ ಹುಲಿ ಶಿಕಾರಿ ಮಾಡಿದವರೇ! ಅವರು ಕೊಂದ ಒಂದು ಪಟ್ಟೆ ಹುಲಿಯ ತಲೆ ಬುರುಡೆಯೊಂದು ನಮ್ಮ ಮನೆಹಿಂದಿನ ಮಾವಿನ ಮರದಲ್ಲಿ ಒಂದು ತಂತಿ ಕಟ್ಟಿ ನೇತು ಹಾಕಲ್ಪಟ್ಟಿತ್ತು! ಯಾವುದಾದರೂ ಮನುಷ್ಯ ಅಥವಾ ದನಕ್ಕೆ ಹುಲಿಯ ಉಗುರು ಅಥವಾ ಹಲ್ಲು ನಾಟಿ ನಂಜಾದರೆ, ಆ ಹುಲಿಯ ತಲೆಬುರುಡೆಯನ್ನು ಇತರೇ ನಂಜು ನಿವಾರಕ ಔಷದೀಯ ವಸ್ತುಗಳೊಡನೆ ತೆಯ್ದು ಹಚ್ಚುತ್ತಾ ಇದ್ದರು.
ಒಮ್ಮೆ ಹಗಲು ಹೊತ್ತಿನಲ್ಲೇ ಮೇಯಲು ಹೋಗಿದ್ದ ನಮ್ಮ ಮನೆಯ ಗೌರಿ ಎಂಬ ಬಲವಾದ ದೊಡ್ದ ದನವನ್ನು ಪಟ್ಟೆಹುಲಿಯೊಂದು ಕೊಲ್ಲಲು ಪ್ರಯತ್ನಿಸಿತು. ಬಲವಾದ ಆ ದನ ಹ್ಯಾಗೋ ಹುಲಿಯಿಂದ ತಪ್ಪಿಸಿಕೊಂಡು ಮನೆಯವರೆಗೆ ಬಂತು! ಅದರ ಮೈ ತುಂಬಾ ಹುಲಿ ಪರಚಿದ ಗಾಯ! ಅದರ ಗಂಗೆ ತೊಗಲು ಹುಲಿಯು ಕಚ್ಚಿದಾಗ ಹರಿದೇ ಹೋಗಿತ್ತು. ಆ ಸಾಧು ದನವು ನಮ್ಮ ಅಜ್ಜ ಗಾಯಕ್ಕೆ ಹೊಲಿಗೆ ಹಾಕಿದಾಗ ಗಲಾಟೆ ಮಾಡದೇ ನಿಂತಿತ್ತು! ಅಜ್ಜಿಯು ಹಟ್ಟಿಯ ಹೊರಗಿದ್ದ ತೇಯುವ ಕಲ್ಲಿನ ಮೇಲೆ ಬೇಗ ಬೇಗನೇ ನಂಜಿನ ಔಷದವನ್ನು ಸಿದ್ಧಮಾಡಿ ಹುಲಿಯ ತಲೆಬುರುಡೆಯನ್ನು ಅದರ ಮೇಲಿಟ್ಟು ತೇಯ್ದರು. ಈ ಔಷದವನ್ನು ಹತ್ತು ದಿನ ಎಡೆಬಿಡದೇ ಎರಡು ಹೊತ್ತು ಹಚ್ಚಿದನಂತರ ನಮ್ಮ ಗೌರಿ ದನ ಸಂಪೂರ್ಣ ಗುಣಮುಖ ಆಯಿತು.
ಆಗ ನಾನು ಸಂತೋಷದಿಂದ ಕುಣಿದೆ.
ನಾನು ದೊಡ್ದದಾದ ಮೇಲೆ ಆ ದನ ಹಿಡಿಯುವ ಹುಲಿಯನ್ನು ಅಜ್ಜನ ಬಂದೂಕು ಬಳಸಿ ಕೊಲ್ಲುವೆ! - ಎಂದು ಆ ದಿನ ಶಪಥ ಮಾಡಿದೆ.
ನನಗೆ ಅಜ್ಜನ ಬಂದೂಕು ಪಾರಂಪರಿಕವಾಗಿ ಸಿಗಲಿಲ್ಲ. ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ!
ಆ ಹುಲಿಯೂ ನನಗಾಗಿ ಕಾದು ಕಾದು ಸೋತು ಕೊನೆಗೊಮ್ಮೆ ವೃದ್ಧಾಪ್ಯದಿಂದ "ಬಹು ನಿರಾಶೆ ಪಟ್ಟು" ಸತ್ತೇ ಹೋಗಿರಬೇಕು!
ಚಿತ್ರಗಳು: ಲೇಖಕರವು