Friday, June 22, 2018

ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?

ಅಶೋಕವನದಲ್ಲಿ ಆಂಜನೇಯ ಹುಡುಕುತ್ತಿದ್ದ, ಸೀತೆಯನ್ನಿಟ್ಟಿದ್ದ ಎಲೆವನೆ ಹೇಗಿತ್ತು?
ಎಲ್ಲ ಚೆಲ್ವಿಂಗೆ ಮುಡಿಯಾಗಿ,
ಮರುತಜನ ಕಣ್ಗುರಿಗೆ ಗುಡಿಯಾಗಿ,
ಕಡಲ ನೀರ್ನಡೆಗೆ ನಿಲ್’ಗಡಿಯಾಗಿ,
ಮಾರುತಿಯ ನಿಃಶ್ರೇಯಕೊಂದು ಮುನ್ನುಡಿಯಾಗಿ
ಕುಳ್ತುದು ಎಲೆವನೆವಕ್ಕಿ,
ತನ್ನ ಬೆಚ್ಚನೆ ಗರಿಯ ರೆಕ್ಕೆತಿಪ್ಪುಳೊಳಿಕ್ಕಿ
ರಕ್ಷಿಪ್ಪವೋಲ್ ದುಃಖಿ ಭೂಜಾತೆಯಂ!
ದುಃಖಿತಳಾಗಿರುವ ಸೀತೆಯನ್ನು, ತನ್ನ ಗರಿಯ ತಿಪ್ಪುಳೊಳಗೆ ಹುದುಗಿಸಿಕೊಂಡು ರಕ್ಷಿಸುತ್ತಿರುವ ಹಕ್ಕಿಯಂತೆ ಎಲೆವನೆ ಕಾಣುತ್ತಿತ್ತಂತೆ!
*
ಎಲೆವನೆಯಿಂದ ಹೊರಬರುವ ಸೀತೆಗಾಗಿ ಕಾದು ಕುಳಿತಿದ್ದ ಆಂಜನೇಯನಿಗೆ ಅತ್ಯಂತ ಅನಿರೀಕ್ಷಿತವಾಗಿ (ರಾವಣನಾಗಮನದ ಮುನ್ಸೂಚನೆಯಾಗಿ) ಕೇಳಿಬರುವ ಸಂಗೀತ ಸುಧೆ (ತಂತಿಯಿಂಚರದೈಂದ್ರಜಾಲಿಕಂ!) ರೋಮಾಂಚನವನ್ನುಂಟು ಮಾಡುತ್ತದೆ.
ಅಕ್ಕಜಂ ಇಂಪಿನೊಡನೆ ಮೇಣ್
ಆಶ್ಚರ್ಯಂ ಆನಂದದೊಡನೆ
ಹೊಯ್ ಕಯ್ಯಾಗೆ ಸೊಗಸಿತು
ಆ ತಾನ ತಾನ ಸ್ವನದ ಸಂತಾನ:
ಬೇರ್ಗಳಿಂ ಮರ ಮೆಯ್ಗೆ ರಸಮೇರ್ವ ಛಂದಸ್ಸೊ?
ಬೇರುಗಳ ಮುಖಾಂತರ ಮರದ ಕಾಂಡ ಕೊಂಬೆ ಎಲೆಗಳಿಗೆ ರಸ ಪ್ರವಹಿಸುವ ಗತಿಯಲ್ಲಿ ಆ ಸಂಗೀತ ಆಂಜನೇಯನ ಮೈಮನಕ್ಕೆ ರೋಮಾಂಚನವನ್ನುಂಟು ಮಾಡಿತಂತೆ!!
(ಬಹುಶಃ ಇಂತಹುದೊಂದು ಅಲಂಕಾರವನ್ನು ಯಾವ ಕವಿಯೂ ಸೃಷ್ಟಿಸಿರಲಾರ)
*
ಆ ಸಂಗೀತ ಆಂಜನೇಯನ ಮೈಮನಗಳಿಗೆ ಇಳಿದು ಏರಿ ಉಂಟಾದ ಪರಿಣಾಮ ಸುತ್ತಲಿನ ಪರಿಸರಕ್ಕೂ ಆಯ್ತೇನೊ!:
ರಸಸುಖ ಆಕಸ್ಮಿಕಕೆ ಕಿವಿಸೋಲ್ತನ್ ಅನಿಲಜಂ:
ಲೋಕದೋಲವ ತೂಗಿ ತೊನೆದುದು
ಆ ತಾನ ತಾನ ಸ್ವನದ ಸಂತಾನ!
*
ಸೂರ್ಯನ ಪ್ರಥಮಕಿರಣಗಳು ಸೀತೆಯಿದ್ದ ಎಲೆವನೆಯ ತರಗೆಲೆಯ ತಡಿಕೆಗೋಡೆಯ ಬಿರುಕಿನೊಳಗಿಂದ ಪ್ರವೇಶಿಸಿ ಸೀತೆಯ ಮೇಲೆ ಬಿದ್ದುದು ಕವಿಗೆ ಕಂಡದ್ದು ಹೀಗೆ:
ಆ ಮರುಕ ಎದೆಯ ಬಿಸಿಲ ಪಸುಳೆ
ತನ್ನ ಕೋಮಲ ಕರದ ಕಿಸಲಯೋಪಮ
ಮೃದುಲ ರೋಚಿಯ ಬೆರಲ್ಗಳಿಂ ಸೋಂಕಿ ಸಂತಯ್ಸಿದುದೊ
ಸೀತೆಯ ತಪಃಕ್ಲಾಂತ ಚರಣಾರವಿಂದಂಗಳಂ.
ಅಲ್ಲಿಯವರೆಗೆ ಸೀತೆ ಇದ್ದ ಸ್ಥಿತಿ ಹೇಗಿತ್ತು ಗೊತ್ತೆ?
ಹೈಮ ಶೈಲ ಶಿರ ಗುಹೆಯ ಗರ್ಭದಿ,
ಕಳ್ತಲಿಡಿದ ಕರ್ಗ್ಗವಿಯಲ್ಲಿ,
ಶೈತ್ಯದೈತ್ಯನ ಭಯಕೆ ಹೆಪ್ಪುಗಟ್ಟಿರ್ದ ನೀರ್.....
ಹಿಮಪರ್ವತದ ತುದಿಯಲ್ಲಿರುವ ಕಗ್ಗತ್ತಲೆಯ ಗವಿಯಲ್ಲಿ ಚಳಿಯ ರಕ್ಕಸನ ಭಯದಿಂದ ಮುದುಡಿಕೊಂಡು ಹೆಪ್ಪುಗಟ್ಟಿದ್ದಂತೆ!
(ಶೈತ್ಯದೈತ್ಯ=ರಾವಣ! ಹರಿವ ನೀರು=ಸೀತೆ!! ಆತನ ಭಯದಿಂದ ಹೆಪ್ಪುಗಟ್ಟಿದಂತೆ ಮುರುಟಿಕೋಮಡು ಬಿದ್ದಿದ್ದಾಳೆ!!!)
ತನ್ನ ವಂಶದ ಸೊಸೆ ಸೀತೆಗೆ ಚೈತನ್ಯವನ್ನೀಯಲು ಬಂದನೋ ಎಂಬಂತೆ ಬಂದ ಸೂರ್ಯನ ಕಿರಣಗಳು ಸೀತೆಯ ಕಾಳುಗಳನ್ನು ಸೋಂಕಿದ್ದೇ ತಡ.......
...... ಉತ್ತರಾಯಣ ರವಿಯ ಛವಿಯ ಚುಂಬನಕೆ
ಎಂತು ಮಂಜುಗಡ್ಡೆಯ ತನ್ನ ಘನನಿದ್ರೆಯಂ ದ್ರವಿಸಿ,
ಪೆಡೆನಿಮಿರ್’ದೊಯ್ಯನೆ ಸುರುಳಿವಿರ್ಚ್ಚುವೊಲ್ ಸ್ರವಿಸಿ ಪರಿವಂತೆ...
ಸೀತೆಗೆ ಎಚ್ಚರವಾಯಿತಂತೆ!

No comments: