Friday, June 22, 2018

ರಾವಣನ (ಕು)ತರ್ಕ, ಸೀತೆಯ ಕೋಪ, ರಾವಣನ ಪ್ರತಿಜ್ಞೆ

ಸೀತೆಯನ್ನು ಉದ್ದೇಶಿಸಿ ಅನುನಯದಿಂದ ಮಾತನಾಡುವ ರಾವಣ ಅವಳನ್ನು ಸಂಬೋಧಿಸುವ ರೀತಿ:
ಹೇ, ವ್ಯರ್ಥ ದುಃಖಾರ್ಥೆ, ಇನ್ನೆಲ್ಲಿ ನಿನಗೆ ರಾಮನ ವಾರ್ತೆ?.....
ಶಬ್ದಾಲಂಕಾರ ಸಹಿತವಾದ ವಾಕ್ಯಗಳನ್ನು ನೂರರ ಲೆಕ್ಕದಲ್ಲಿ ಪಟ್ಟಿ ಮಾಡಬಹುದು, ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ!
***
ಸೀತೆಯ ಪ್ರಭಾವಕ್ಕೊಳಗಾದ ತಂಗಿ ಚಂದ್ರನಖಿಯೂ ರಾವಣನಿಗೆ ಬುದ್ಧಿವಾದ ಹೇಳುವಷ್ಟರಮಟ್ಟಿಗೆ ಧೈರ್ಯವಹಿಸುತ್ತಾಳೆ. ರಾವಣ ಕೆರಳುತ್ತಾನೆ, ಒಳಗೊಳಗೆ ಬೆವರುತ್ತಾನೆ! ಮೇಲ್ಮೇಲೆ ಬೆದರಿಸುತ್ತಾನೆ!!
ನೀನಾದೊಡಂ,
ಅನಲೆಯಾದೊಡಂ
ಮತ್ತಂ ಇನ್ನಾರಾದರೊಡಂ
ಇತ್ತಲ್ ಈ ಬನಕೆ ಕಾಲಿಟ್ಟುದಂ
ಕೇಳ್ದೆನಾದೊಡೆ.....
ಎಂದು ಮಾತು ಮುಂದುವರಿಸುತ್ತಿರುವಾಗಲೇ, ಆತ ನಿಂತಿದ್ದ ಆಲಿವಾಣದ ಮರದ ಮೇಲಿಂದ ಹೂಕುಡಿವ ಹಕ್ಕಿ ಕೆಡಹಿದ ಆಲಿವಾಣದ ಕೆಂಪು ಹೂ ದೊಪ್ಪನೆ ರಾವಣನ ಮೇಲೆ ಬಿದ್ದು ಆತನ ಮಾತಿಗೆ ಅಡ್ಡಿಯಾಗುತ್ತದೆ. ಅದರಿಂದ ಕಿನಿಸಿ ತಲೆಕೊಡಹಿ, ಮೇಲಕ್ಕೊಂದು ಸಾರಿ ನೋಡಿ ಮತ್ತೆ ಮಾತು ಮುಂದುವರಿಸಿ-
.......ಕೊರಳ್ ಉರುಳ್ದಪುದು
ಎಂದು ವಾಕ್ಯವನ್ನು ಪೂರ್ಣಗೊಳಿಸುತ್ತಾನೆ. ಕವಿ “ಪೂರೈಸಿದನ್ ತನ್ನ ದುರ್ವಾಕ್ಯಮಂ” ಎನ್ನುತ್ತಾರೆ! ಇದೊಂದು ಅತ್ಯದ್ಭುತವಾದ ಪ್ರತಿಮಾಸೃಷ್ಟಿ. ಮುಂದೆ ರಾವಣನಿಗೊದಗಲಿರುವ ಅವಸಾನದ ಸೂಚನೆ. ಕೆಂಪು ಹೂವನ್ನು (ಕೆಂಪುಕಣಿಗಿಲೆ ಅಥವಾ ಆಲಿವಾಣ) ಬಲಿಯ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ. ಬಲಿಯಾಗುವ ಪ್ರಾಣಿಯ ಮೇಲೆ ಕೆಂಪುಹೂವನ್ನು ಹಾಕಿ ಬಲಿಗೆ ಒಪ್ಪಿಗೆ ಸೂಚಿಸಲಾಗುತ್ತದೆ. ಇಲ್ಲಿ ಹೂವು ಬಿದ್ದಿರುವುದು ರಾವಣನ ತಲೆಯ ಮೇಲೆ. ಆದರೆ ರಾವಣನೇ ‘ಕೊರಳ್ ಉರುಳ್ದಪುದು’ ಎನ್ನುತ್ತಿದ್ದಾನೆ! ಅವನ ಮಾತಿನ ವಾಚ್ಯಾರ್ಥ ತನ್ನ ಮಾತನ್ನು ಮೀರಿ ಸೀತೆಯ ಬೇಟಿಗೆ ಬರುವ ಅನಲೆ ಚಂದ್ರನಖಿಯ ಮೊದಲಾದವರನ್ನು ಕುರಿತು. ಅದು ತನ್ನ ಮೇಲೆ ಹೂವನ್ನು ಕೆಡವಿದ ಹಕ್ಕಿಗೂ ಅನ್ವಯಿಸಿರಬಹುದು. ಆದರೆ, ನಿಜದಲ್ಲಿ ಕೊರಳು ಉರುಳುವುದು ರಾವಣನದು!
***
‘ನಿನ್ನನ್ನು ಉಳಿದ ರಾಮನು, ಕಿಷ್ಕಿಂದೆಯಲ್ಲಿ ಇನ್ನಾವಳನ್ನೊ ಕಟ್ಟಿಕೊಂಡು ಸುಖವಾಗಿದ್ದಾನೆ’ ಎಂಬ ಸುಳ್ಳಿನಿಂದ ಆರಂಭಿಸಿ, “ಇಲ್ಲದಿರ್ಕೆ ಬಯಸಿ ಎಳಸದಿರ್, ಇರ್ಪುದನೊಪ್ಪಿ ಸೊಗವನುಣ್” ಎಂಬ ತರ್ಕವನ್ನು ರಾವಣ ಸೀತೆಯ ಮುಂದಿಡುತ್ತಾನೆ. ಅಷ್ಟರವರೆಗೆ ರಾವಣನ ಮಾತಿಗೆ ಕ್ಷಣಮಾತ್ರವೂ ಪ್ರತಿಕ್ರಿಯೆ ತೋರದಿದ್ದ ಸೀತೆ-
.....ಭಿತಿಯಂ ಕೆಲಕೊತ್ತಿ,
ದುಕ್ಕಮಂ ಮೆಟ್ಟಿಕ್ಕಿ,
ಸುಯ್ದೋರಿದುದು ಕೋಪಫಣಿ
ಜನಕನಂದಿನಿಯ ಮೌನವಲ್ಮೀಖದಿಂ.....
ಎಂಬಂತೆ ಸಿಡಿಯುತ್ತಾಳೆ, ತ್ರಿಜಟೆಗೆ ಹೇಳುವಂತೆ, ರಾವಣನನ್ನು ಉದ್ದೇಶಿಸಿ ಮಾತನಾಡುತ್ತಾಳೆ. ಭಾಗಶಃ ಬಯ್ಯುತ್ತಾಳೆ (ಅಲ್ಪಪ್ರಾಣಿ, ನಾಯಿ, ಕತ್ತೆ ಎಂದೆಲ್ಲಾ ರಾವನೆದುರಿಗೇ ರಾವಣನನ್ನು ಹೀಯಾಳಿಸುವುದು, ಅಸಹಾಯಕ ಸ್ಥಿತಿಯಲ್ಲಿ ಸಿಡಿದೇಳುವ ಸಾತ್ವಿಕ ಮನೋಭಾವದ ಸ್ತ್ರೀಯರ ಪ್ರತಿನಿಧಿಯಂತೆ ಕಾಣುತ್ತಾಳೆ ಸೀತೆ); ಬಹುಶಃ ರಾಮಾಯಣ ದರ್ಶನಂ ಕಾವ್ಯದಲ್ಲಿ ಈ ಭಾಗದಷ್ಟು ಕಠಿಣವಾದ ವಾಕ್ಯಗಳನ್ನು ಬೇರೆಲ್ಲೂ ಕಾಣಲಾಗುವುದಿಲ್ಲ. ಸೀತೆ ಮಾತಿನ ಸೊಬಗನ್ನು ಇಡಿಯಾಗಿ ಓದಿಯೇ ಅನುಭವಿಸಬೇಕು:
“ಪೇಳ್, ತ್ರಿಜಟೆ,
ಪಿತ್ತೋತ್ಪನ್ನ ಜಲ್ಪಕೆ ಉತ್ತರವಿದಂ
ನಿನ್ನ ಅನ್ನದಾತಂಗೆ:
ಕತ್ತೆಯ ತತ್ತ್ವಮಂ ಕತ್ತೆ ಕತ್ತೆಗಳ್ಗೆ ಉಪದೇಶಿಸಲ್ವೇಳ್ಕುಂ ಅಲ್ಲದೆಯೆ
ಉತ್ತಮ ರಘುಕುಲೋತ್ತಮನ ಸತಿಯ ಮುಂದದಂ ಗಳಪಲ್ ಪ್ರಯೋಜನಮೆ?
ಪ್ರತ್ಯುತ್ತರಕ್ಕಮೀ ಅರ್ಹನಲ್ತಲ್ಪಾಸು!
ಮರುಕಮಂ, ಕರುಣೆಯಂ, ವಿನಯಮಂ, ಸೌಜನ್ಯಮಂ
ನಟಿಸುವೀ ನಟನ ಶುನಕಾಭಿನಯಕೆ ಧಿಕ್!
ಪುಸಿವೇಳ್ವ ನಾಲಗೆಗೆ ಧಿಕ್, ಧಿಕ್! ಕೋಟಿ ಧಿಕ್!
ಇವನ ಪೊಲೆಸಿರಿಗೆ ಧಿಕ್! ಇವನ ಬಲ್ಮೆಗೆ ಲಕ್ಷಧಿಕ್!
ಉಗುಳುಮಪವಿತ್ರಮಕ್ಕು, ಈತಂಗೆ ಪೇಸಿ ಆ ದಿಕ್ಕಿಗೆಂಜಲನೆಸೆಯೆ ನಾಂ!
ಶ್ರೀ ರಾಮಚಂದ್ರನೆಲ್ಲಿರ್ದೊಡಂ ನನಗೆ ಪತಿ!
ಶ್ರೀ ರಾಮನೆಂತಿರ್ದೊಡಂ ನನಗೆ ಪತಿ!
ಸತ್ತೆ ನಾಂ ಸೇರ್ದಪೆನಾತನೊಡನೆ;
ಬದುಕಮೇಧ್ಯಮೆ ದಿಟಂ ಇನ್ನರಿರ್ಪೀ ಜಗದಿ!#
ಈ ಸೊಣಗಮರಿಯದಾ ಭೀಮ ವಿಕ್ರಮಿ ರಾಮ ಮಹಿಮೆಯಂ.
ಬಲ್ಲೆನಾಂ. ಪೇಳ್, ತ್ರಿಜಟೆ, ನಿನ್ನನ್ನದಾತಂಗೆ.
ಕೂಳ್ ಕೊಟ್ಟು ಸಲಹಿದಾ ಜೋಳವಾಳಿಗೆ ಉಪಕೃತಿಯನೆಸಗಿ ಋಣಮುಕ್ತೆಯಾಗು.
ಪಾಪಿಗೆ ಮೋಕ್ಷಮೆಂತಂತೆ ದುರ್ಲಭಳ್ ನಾನೀ ನಿಶಾಚರಗೆ.
ನಾಂ ಮುನ್ನೆ ಗೆಂಟರಿಂ ಕೇಳ್ದ ರಾಕ್ಷಸವಿಕೃತಿ, ಪೊರಗಲ್ತು, ಒಳಗಿರ್ಪುದೀತಂಗೆ.
ಕೇಳದೊ ವಿಹಂಗಮಂ ಕುಕಿಲಿದೆ ಭವಿಷ್ಯಮಂ:
ತರುವುದೀ ಸಾಗರಂ ತಾನೆ ಸೇತುವೆಯಾಗಿ ರಾವಣನ ಮೃತ್ಯುವಂ,
ಬೇಗಂ ಇವನೆನ್ನನಾ ಮುನ್ನಮೊಪ್ಪಿಸದಿರಲ್ ಆ ಕೃಪಾಕರನಡಿಗೆ ಮುಡಿಯಿಟ್ಟು!”
ಸೀತೆಯ ಮಾತಿನ ತೀಕ್ಷ್ಣತೆಗೆ, ಅದರಲ್ಲಿನ ತಿರಸ್ಕೃತಿಯ ಘಾತಕ್ಕೆ ರಾವಣ ಕಣ್ಣು ಮುಚ್ಚಿದನಂತೆ. ಮತ್ತೆ ಕಣ್ಣುತೆರದನಂತೆ ಸತ್ತು ಹುಟ್ಟಿದ ರೀತಿಯಲ್ಲಿ!!
#(ಜನ್ನನ ಅನಂತನಾಥಪುರಾಣದಲ್ಲಿ ಸುನಂದೆ 'ವಸುಷೇಣನೇ ನನ್ನ ಬದುಕು; ವಸುಷೇಣನೇ ನನ್ನ ಸಾವು; ವಸುಷೇಣನೇ ನನ್ನ ಚಿತೆಗೊಡೆಯ" ಎಂದು ಚಂಡಶಾಸನನಿಗೆ ಉತ್ತರನೀಡುವ ದೃಶ್ಯವಿದೆ)
***
ರಾವಣ ಎಂದೂ ಈಡೇರದ ಪ್ರತಿಜ್ಞೆಯೊಂದನ್ನು ಮಾಡುತ್ತಾನೆ- ಸೀತೆಗೆ ಹೇಳುವಂತೆ ತ್ರಿಜಟೆಗೆ ಹೇಳುತ್ತಾನೆ!
ತ್ರಿಜಟೆ, ಕೇಳ್ ಲಂಕೇಶನಾಜ್ಞೆಯಂ. ಮತ್ತೆ ಪೇಳ್,
ಉಣಿಸಿಲ್ಲದೀ ಮೆದುಳ್ಗೆಟ್ಟಳ್ಗೆ ಬುದ್ಧಿಸ್ಥಿರತೆ ಮರಳ್ದಾಮೇಲೆ.
ಮೊದಲ್, ಇಲ್ಲಿ ಬಂದಿರ್ದರಾರೆಂಬುದಂ. ಪೇಳ್ದುದೇನೆಂಬುದಂ ಮತ್ತೆ.
ಇನ್ನೆರಳ್ ತಿಂಗಳಿಹುದಿತ್ತವಧಿ.
ಆ ಮೇರೆಯೊಳ್ ಪುರ್ಚಿನೀ ಬಗೆಕದಡು ಹಣಿಯದಿರೆ,
ಭೇಷಜಂ ಬರ್ಪುದು ಬಲಾತ್ಕಾರ ರೂಪಮಂ ತಾಳ್ದು! ಮೇಣ್,”
(ಸುಯ್ದು ನಿಡುನೋಡುತಾ ಸೀತೆಯಂ ವಿರಳಾಕ್ಷರದಿ ತಡೆತಡೆದು ನುಡಿದನಿಂತು)
“ಮೇಣ್, ನಿರಶನವ್ರತರೂಪದ ಆತ್ಮಹತ್ಯೆಯಿನ್ ಆಕೆ ಮಡಿಯುವೊಡೆ,
ಅದೆ ಚಿತೆಯನೇರುವೆನ್;
ಪೆಣದೆಡೆಯೆ ಪವಡಿಪೆನ್;
ಭಸ್ಮರೂಪದಿನಾದೊಡಂ ಕೂಡಿ ಪೊಂದುವೆನ್ ಸಾಯುಜ್ಯಮಂ!”
(ಇಲ್ಲಿ ರಾವಣನ ಈ ಪ್ರತಿಜ್ಞೆ ಈಡೇರುವುದಿಲ್ಲ; ಆದರೆ ಜನ್ನನ ಅನಂತನಾಥಪುರಾಣದಲ್ಲಿ ಚಂಡಶಾಸನ "ನಿನ್ನ ಚಿತೆಗೊಡೆಯ ವಸುಷೇಣನಲ್ಲ; ಚಂಡಶಾಶನ" ಎಂದು ಹೇಳಿದಂತೆ ಸನುಂದೆಯ ಹೆಣದೊಂದಿಗೆ ಚಿತೆಗೇರುತ್ತಾನೆ!!!!)

No comments: