Friday, June 01, 2018

ಟಿಪ್ಪಣಿ-2: ರೂಪಕಸಾಮ್ರಾಜ್ಯದ ಸಾರ್ವಭೌಮ

ಟಿಪ್ಪಣಿ-2: ರೂಪಕಸಾಮ್ರಾಜ್ಯದ ಸಾರ್ವಭೌಮ
ಕುಮಾರವ್ಯಾಸ - ರೂಪಕಸಾಮ್ರಾಜ್ಯದ ಚಕ್ರವರ್ತಿ ಎಂಬ ಮಾತನ್ನು ಎಸ್.ವಿ. ರಂಗಣ್ಣನವರು ಹೇಳಿ 80-90 ವರ್ಷಗಳೇ ಕಳೆದಿವೆ. 2011ರಲ್ಲಿ ಆರ್. ಗಣೇಶ್ ಅವರು ರೂಪಕಸಾಮ್ರಾಜ್ಯದ ಸಾರ್ವಭೌಮ ಎನ್ನುವ ಮಾತನ್ನು ಕುವೆಂಪು ಅವರಿಗೆ ಹೇಳಿದ್ದರು. ಈ ಮಾತನ್ನು ಅವರು ಸುಮ್ಮನೆ ಹೇಳಿರಲಿಲ್ಲ. ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಹರಡಿರುವ ನೂರಾರು ರೂಪಕಗಳನ್ನು ತಮ್ಮ ವ್ಯಾಖ್ಯಾನದ ಸಂದರ್ಭದಲ್ಲಿ ಗುರುತಿಸುತ್ತಾ ಬಂದು, ಒಂದು ಹಂತದಲ್ಲಿ- ಗಾಯಗೊಂಡಿದ್ದ ಚಂದ್ರನಖಿಯ ಮುಖವನ್ನು ರಾವಣ ಕಾಣುವ ಸಂದರ್ಭದಲ್ಲಿನ ರೂಪಕವೊಂದನ್ನು ಗಮನಿಸಿ (ಚುಂಗುಳಂ ತಿನೆ ಮೊಗಂಗೆಟ್ಟು ಸಂಮ್ಲಾನಮಾದ ಮಲರಂತಿರ್ದಾಕೆ - ಇದು ಮಲೆನಾಡಿನ, ತೋಟತುಡಿಕೆಗಳಲ್ಲಿ ಅಲೆದು ಸೂಕ್ಷ್ಮಕ್ರಿಮಿಕೀಟಾದಿಗಳನ್ನು ಗಮನಿಸಿದ ಕವಿ ಮಾತ್ರ ಸೃಷ್ಟಿಸಬಹುದಾದ ರೂಪಕ) ಕುವೆಂಪು ರೂಪಕಸಾಮ್ರಾಜ್ಯದ ಸಾರ್ವಭೌಮ ಎನ್ನುವ ಮಾತನ್ನು ಹೇಳಿದ್ದಾರೆ.
ಕಳಿತ ಪಣ್ಮಳೆಗರೆದು ಸೋರ್ದ ರಸಕೆ ನೆಲಂ ಕೆಸರೇಳುತಿದೆ
ಅವರ ಇನ್ನೊಂದು ಟಿಪ್ಪಣಿ ಕುವೆಂಪು ಸೃಷ್ಟಿಸಿರುವ ನೂರಾರು ನುಡಿಗಟ್ಟುಗಳು, ಅಚ್ಚಗನ್ನಡ ಪದಗಳು/ಪದಗುಚ್ಛಗಳ ಬಗ್ಗೆ: ಕುಮಾರವ್ಯಾಸ ಅದ ಮೇಲೆ ಸುಮಾರು 500 ವರ್ಷಗಳ ಕಾಲ ಕನ್ನಡ ಕಾವ್ಯಭಾಷೆ ಸವಕಲೆದ್ದು ಹೋಗಿತ್ತು. ಅದಕ್ಕೆ ಮತ್ತೆ ಹೊಸಚೈತನ್ಯ, ಹೊಸ ಮೆರಗು, ಹೊಸ ರಭಸ ಬಂದಿದ್ದೇ ಕುವೆಂಪು ಅವರಿಂದ. ನೀರ್ಬೀಳ (ಜಲಪಾತ) ಕಲ್ದವಸಿ (ಶಿಲಾತಪಸ್ವಿ) ನೆಲಗುವರಿ (ಭೂಜಾತೆ-ಸೀತೆ) ಗಾಳಿದೇರು, ಗಗನರಥ (ಪುಷ್ಪಕವಿಮಾನ) ಎಲೆವನೆ (ಪರ್ಣಕುಟಿ) ಐಕಿಲ್ ಸೋನೆ (ಹಿಮವರ್ಷ) ಹೀಗೆ ನೂರಾರು ಪದಗಳು ಕಾಣಸಿಗುತ್ತವೆ. ಆದರೆ ಕಾಣುವ ಸಹೃದಯ ಪ್ರತಿಭೆ ಬೇಕು ಅಷ್ಟೆ. ಒಂದು ಭಾಷೆಯಲ್ಲಿ ಒಂದು ಮಹೋನ್ನತವಾದ ಕೃತಿ ಸೃಷ್ಟಿಯಾದ ಕಾಲಘಟ್ಟದ ನಂತರ ಒಂದೆರಡು ಶತಮಾನಗಳ ಕಾಲ, ಆ ಭಾಷೆಯಲ್ಲಿ ಮತ್ತೆ ಮಹತ್ತರವಾದ ಹೊಸದೇನೂ ಹುಟ್ಟಲಾರದು ಎಂಬಂತೆ (ಎಲಿಯಟ್) ಕನ್ನಡ ಸಾಹಿತ್ಯಕ ಭಾಷೆ ಮತ್ತೆ ಒಂದು ರೀತಿಯಲ್ಲಿ ಚೈತನ್ಯರಹಿತವಾಗುವತ್ತ ಸಾಗುತ್ತಿದೆ. ಇನ್ನು ತಿಕ್ತಕಥೆ, ರುದ್ರರಮಣೀಯ, ಕೃಪಾಕೇತು, ಮುಕ್ತಿರಾಹು, ಶ್ರೀಸಾಮಾನ್ಯ, ವಿಪಿನರಾಜೇಶ್ವರಿ, ಬನ್ನಿಗಂಬ, ಹುತ್ತದೆರೆ, ಮಿದುಳ್’ಬಿಳಿ, ಹಸುರ್’ನೆತ್ತರ್, ಮೀಸೆಗೈಯಾಗು ಇಂತಹ ನೂರಾರು ಪದಗಳನ್ನೂ ಗುರುತಿಸಬಹುದು. ರುಂದ್ರ ಎಂಬ ಪದವನ್ನು ಪಂಪನಾದ ಮೇಲೆ ಬಳಸಿದವರು ಕುವೆಂಪು ಮಾತ್ರವಂತೆ!
ಅವರ ಇನ್ನೊಂದು ಮಾತು: ಕುವೆಂಪು ಅವರ ಮೇಲಿನ ಅತಿಯಾದ ಅಭಿಮಾನದಿಂದ ಕೆಲವರು, ಶ್ರೀರಾಮಾಯಣದರ್ಶನಂ ಓದದೆಯೇ ಹಲವರು; ಓದಿಯೂ ಕುತ್ಸಿತ ಮನೋಭಾವದಿಂದ, ವ್ಯಕ್ತಿದ್ವೇಷದಿಂದ ಕೆಲವರು ನಡೆಸಿದ ವಿಮರ್ಶೆಯಿಂದ ಕುವೆಂಪು ಅವರ ಕಾವ್ಯಪ್ರತಿಭೆಗೆ, ಶ್ರೀರಾಮಾಯಣ ದರ್ಶನಂ ಅನನ್ಯತೆಗೆ ನ್ಯಾಯ ಸಿಕ್ಕಿಲ್ಲ. ಕೆಲವು ಕಡೆ ಸಣ್ಣ ಸಣ್ಣ ವಿವರಗಳು ಎಷ್ಟು ಮಹತ್ವದವುಗಳಾಗಿರುತ್ತವೆ ಎಂದರೆ, ಭಾರತದ ಇನ್ನಾವ ಮಹಾಕಾವ್ಯದಲ್ಲೂ ಕಾಣಸಿಗುವುದಿಲ್ಲ. ಒಂದು ಉದಾಹರಣೆ: ಲಂಕೆ ಒಂದು ದ್ವೀಪ ರಾಷ್ಟ್ರ. ದ್ವೀಪಗಳಲ್ಲಿ ತೆಂಗಿನ ಮರಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಆದರೆ, ಮೂಲ ವಾಲ್ಮೀಕಿ ರಾಮಾಯನದಲ್ಲಿ ತೆಂಗಿನ ಮರದ ಪ್ರಸ್ತಾಪವೇ ಬರುವುದಿಲ್ಲ. ಅದನ್ನು ಕುವೆಂಪು ‘ಕಡಲತಡಿಯಂ ತುಂಬಿ ಲಂಕೆಗಂಚಂ ಕಟ್ಟಿದೊಲ್ ಬೆಳೆದ ತೋಂಟದಿಂ ಮೂಡಿದತ್ತಡಕೆ ತೆಂಗಿನ ಗರಿಯ ಮರ್ಮರ’ ಎಂದು ಹೇಳಿ ಕೊರತೆಯನ್ಉ ನೀಗಿಸಿಬಿಟ್ಟಿದ್ದಾರೆ.

No comments: