Friday, June 01, 2018

ಟಿಪ್ಪಣಿ-5 - ಕವಿ ಸೃಷ್ಟಿಸಿದ ಕಥಾವಸ್ತುವೊಂದನ್ನು ಬೆಳೆಸುವ ಪರಿ

ನೆನ್ನೆ ಪಂಚವಟಿಯಲ್ಲಿ ಪರ್ಣಕುಟಿಯ ಸಮೀಪ, ಸೀತೆ ಕಾಡು ಹೂಬಳ್ಳಿಯೊಂದನ್ನು ನಟ್ಟು ಬೆಳೆಸಿದ್ದಳು ಎಂಬ ವಿಚಾರ ಬಂತು. ಮಹಾಕವಿ ತಾನು ಸೃಷ್ಟಿಸಿ ಪಾತ್ರವಿರಲಿ ವಸ್ತುವಿರಲಿ ಅದನ್ನು ಬೆಳೆಸುವ ರೀತಿಯೇ ಅನನ್ಯ. ಆ ಹೂಬಳ್ಳಿಯ ವಿಷಯ ಅಲ್ಲಿಗೆ ಮುಗಿಯುವುದಿಲ್ಲ. ರಾವಣ ಸೀತಾಪಹಣಕ್ಕೆ ಬಂದಾಗ, ತನ್ನ ಭಯವನ್ನು ನಿವಾರಿಸಲೋ ಎಂಬಂತೆ ಸೀತೆ ಅವಲಂಬಿಸಿ ನಿಲ್ಲುವುದು ಆ ಬಳ್ಳಿಯನ್ನು! (ತಾಂ ನಟ್ಟು ನಡಪಿದಾ ಬಳ್ಳಿಯನಿರದೆ ನೆಮ್ಮಿ ತಳ್ಕಯಿಸಿ ನಿಂದಳು ಲತಾಂಗಿ)
ಇದು ಇಷ್ಟಕ್ಕೆ ಮುಗಿಯುವುದಿಲ್ಲ. ರಾವಣ ಅವಳನ್ನು ಹೊತ್ತಯ್ಯಲು ಮುಂದೆ ಬಂದು ಕೈಚಪ್ಪಳಿಸಿ ಮಂಜಿನ ಮೋಡವೊಂದನ್ನು ಸೃಷ್ಟಿಸುತ್ತಾನೆ. ಆಗ ಸೀತೆ ತೇಲುಗಣ್ಣಾಗುತ್ತಾಳೆ. ಆಗ ಅವಳು ಆಸೆರೆಗೆ ಬಳ್ಳಿಯನ್ನೇ ಆಸ್ರಯಿಸುತ್ತಾಳೆ. (ತಬ್ಬಿದಳು ಬೆಬ್ಬಳಿಸಿ ಪರ್ಣಶಾಲೆಯ ಲತಾಭಗಿನಿಯಂ!). ಅದನ್ನು ಕಂಡು ಕವಿ “ಹೇ ಹತಭಾಗ್ಯೆ, ಲಕ್ಷ್ಮಣ ಮಹಾಬಾಹು ರಕ್ಷೆಯಂ ನೂಂಕಿದಾ ನಿನಗೆ ಪೇಳೆಂತು ರಕ್ಷಣೆ ಬಳ್ಳಿತೋಳ್? ಅಯ್ಯೊ (ಕೈಲಾಸಮಂ ನೆಗಹಿ ತೂಗಿತಿನೆದಾ ಬಾಹುಗಳಿಂದ ರಾಹುವಿನಂತೆ ಎಳೆಯುವಾಗ). ಎಂದು ಉದ್ಘರಿಸುತ್ತಾರೆ. ಹಾಗೆಯೇ ಆಗುತ್ತದೆ. ರಾವಣ ಮುನ್ನುಗ್ಗಿ ಸೀತೆಯ ಕೂದಲನ್ನು ಹಿಡಿದು ಅವಳನ್ನು ಎತ್ತುಕೊಳ್ಳುತ್ತಾನೆ. ಸೀತೆ ಬಿಗಿಯಾಗಿ ಅಪ್ಪಿದ ಬಳ್ಳಿ ಅವಳ ಜೊತೆಯಲ್ಲಿಯೇ ಕಿತ್ತು ಬರುತ್ತದೆ? ರಾವಣ ಅಂಬರಕ್ಕೆ ನೆಗೆದ ರಭಸಕ್ಕೆ “ಬೀಳ್ವುದು ಬಳ್ಳಿಯಂಗಳಕೆ, ಮುಳ್ಳುವೇಲಿಯುಂ ಬರಂ ನೀಳ್ದು! ರಾವಣನೆಂಬ ಮುಳ್ಳು ಸೀತೆಯನ್ನು ಹಿಡಿಯಿತು. ಇತ್ತ ಬಳ್ಳಿ ಮುಳ್ಳುಬೇಲಿಯ ಮೇಲೆ ಬಿತ್ತು!
ಬಳ್ಳಿಯನ್ನು ಕವಿ ಅಷ್ಟಕ್ಕೇ ಬಿಡುವುದಿಲ್ಲ. ಅದರ ಸೃಷ್ಟಿ ಸಾರ್ಥಕವಾಗಬೇಕಾದರೆ, ಅದು ಕಾವ್ಯೋದ್ದೇಶದ ಮೂಲಕ್ಕೆ ಯಾವುದಾದರೊಂದು ರೀತಿಯಲ್ಲಿ ನೆರವನ್ನೀಯಬೇಕು (ಕುವೆಂಪು ರಾಮಾಯಣದ ಶಿಷ್ಟ ದುಷ್ಟ ಎಲ್ಲ ಪಾತ್ರಗಳು ಇಂತಹ ನೆರವನ್ನು ನೀಡುತ್ತವೆ). ಪರ್ಣಕುಟಿಗೆ ಹಿಂತಿರುಗಿದ ರಾಮ ಲಕ್ಷ್ಮಣರು ಸೀತೆಯನ್ನು ಇಲ್ಲೆ ಎಲ್ಲೊ ಇರಬಹುದು ಎಂಬ ಭಾವದಿಂದ ಒಳಗೆ ಹೊರಗೆಲ್ಲಾ ಹುಡುಕುವಾಗ ಆ ಬಳ್ಳಿ ರಾಮನ ಕಣ್ಣಿಗೆ ಬೀಳುತ್ತದೆ. ರಾಮ ನೋಡಲ್ಲಿ ಎಂದಾಗ ಲಕ್ಷ್ಮಣ ನೋಡುತ್ತಾನೆ: ಕಾಣಿಸಿತು ಪರಿಗೊಂಡ ಪರ್ಣಶಾಲೆಯ ಲತಾಭಗಿನಿ! ಅಂಗಳದುದ್ದಮಾ ಬೇಲಿಯನ್ನೆಗಂ ದಿಂಡುರುಳಿ ಪರಿದೆಲೆ ತರಂಟಾಗಿ, ನಿಡುಚಾಚಿ ಕೆಡದಿರ್ದ ಬಳ್ಳಿ ತೋಳಿನ ಬೆರ್ಚು ಸಾಕ್ಷಿಯಂ! ಈ ಸಾಕ್ಷಿಯಿಂದಲೇ ಸೀತೆ ಇಲ್ಲ. ಅವಘಡ ನಡೆದಿದೆ ಎಂಬ ತೀರ್ಮಾನಕ್ಕೆ ಅವರು ಬರುತ್ತಾರೆ. ಸೀತೆ ನಟ್ಟು ನಡಪಿದಾ ಆ ಬಳ್ಳಿಯ ಬದುಕು, ಮಾಹಾಕಾವ್ಯದ ಒಂದು ಬಿಂದುವಾಗಿ, ಈ ರೀತಿಯಲ್ಲಿ ಸಾರ್ಥಕತೆಯನ್ನು ಕಾಣುತ್ತದೆ.
ಗಾಳಿದೇರು ಭೂಮಿಗಿಳಿಯುವಾಗಿನ ಸಂದರ್ಭದ ಸರ್ಪೋಪಮಾವರ್ತವಾದ ಸುಂಟರಗಾಳಿಯ ಭೂತನರ್ತನದ ವರ್ಣನೆ:
ಕುಣಿದಿಲ್ಲಿ, ನೆಗೆದಲ್ಲಿ, ಹಾರುತ್ತಂ, ಓಡುತ್ತಂ,
ಆಡುತಂ ನಿಲುತೊಮ್ಮೆ ಹೆಡೆಯೆತ್ತಿ ನಾಗರದವೋಲಾಡಿ,
ಮತ್ತೊಮ್ಮೆ ನಡುಬಳುಕಿ ನಟಿಯಂತೆ ಓಲಾಡಿ,
ಒಮ್ಮೆ ತುಂಬುರುಗೊಳ್ಳಿಯನೆ ಚಿಮ್ಮಿ,
ಮತ್ತಂತೆ ಗಣಬಂದವನ ತೆರದಿ ರಿಂಗಣಗುಣಿದು ಹೊಮ್ಮಿ
ರಯ್ಯನೊಯ್ಯನೆ ಹತ್ತೆ ಹರಿತಂದುದಾ ಗಾಳಿ
(ಸೀತೆಯೊಡಲಿನ ನಾಳನಾಳದಲಿ ಹೆದರಿಕೆಯ ಚಳಿ ಹರಿಯುವಂತೆ)!
ಜಟಾಧಾರಿಯಾಗಿ ಬಂದ ರಸಿಕರಾಕ್ಷಸ, ಪರವಧೂ ಪ್ರೇಮಿ ಆ ಚೆಲ್ವಿಯಂ (ಸೀತೆಯನ್ನು) ನೋಡುವ ನೋಟವನ್ನು ಕಂಡದ್ದೇ ತಡ ಸೀತೆ ಬರವಟ್ಟು ಬಳ್ಳಿಯನ್ನಾಶ್ರಯಿಸಿ ನಿಂತುಬಿಡುತ್ತಾಳೆ. ಆಗಿನ ವರ್ಣನೆ:
ನಿಂತುದು ಗಾಳಿ ಬೆದರಿ.
ಗೋದಾವರಿಯ ಹೊನಲ ನಡೆ ಹೆಪ್ಪಾಯ್ತು.
ಚಲನೆಗಳನುಡುಗಿದುವು ಮರಬಳ್ಳಿಗಳ್.
ಖಗಗಳಿಗೆ ಮಳ್ಗಿಚತ್ತಿಂಚರಂ.
ಪರ್ವತಾರಣ್ಯಗಳ್ ಸ್ತಬ್ಧಮಾದುವು
ರೌದ್ರಮಾ ದೈತ್ಯ ದೃಷ್ಟಿಯ ಭೀತಿ ಬಡಿದಂತೆ!
(ಈ ಮೇಲಿನ ಎರಡೂ ವರ್ಣನೆಗಳು ಮೂಲರಾಮಾಯಣದಲ್ಲಿ ಹಾಗೂ ಪಂಪರಾಮಾಯಣದಲ್ಲಿ ಇಲ್ಲ!)
ಕೆಲವು ಸಿನಿಮಾಗಳಲ್ಲಿ ನಾನು ನೋಡಿದಂತೆ: ಆಘಾತಕರವಾದ ಸುದ್ದಿಯೊಂದನ್ನು ಕೇಳಿದಾಗ, ನಾಯಕಿ ಅಥವಾ ನಾಯಕನ ಮನಸ್ಸಿನ ಮೇಲೆ ಆದ ಪರಿಣಾಮವನ್ನು ಸೂಚಿಸಲೆಂಬಂತೆ, ತೂಗಿ ತೊನೆಯುತ್ತಿರುವ ಮರಗಿಡಗಳು ಸ್ತಬ್ಧವಾದಂತೆ; ಹರಿಯುತ್ತಿರುವ ನದಿಯನೀರು, ಜಲಪಾತ ಸ್ತಬ್ಧವಾದಂತೆ ಆರ್ಭಟಿಸುತ್ತಿರುವ ಸಮುದ್ರ ಸ್ತಬ್ಧವಾದಂತೆ, ಹಾರುತ್ತಿರುವ ಹಕ್ಕಿ-ಪಕ್ಷಿಗಳು ಅಚಲವಾಗಿ ನಿಂತುಬಿಟ್ಟಂತೆ, ಓಡುತ್ತಿರುವ ಪ್ರಾಣಿಗಳು ಅಲುಗದೆ ನಿಂತಂತೆ ತೋರಿಸುತ್ತಾರೆ. ಈ ತಂತ್ರವನ್ನು ಏನೆಂದು ಕರೆಯುತ್ತಾರೊ ನನಗೆ ತಿಳಿಯದು (ಫ್ರೀಜಿಂಗ್ ಟೆಕ್ನಾಲಜಿ?) ಆದರೆ ಕುವೆಂಪು ಇದನ್ನು ವರ್ಣನ ಮಹಾಕಾವ್ಯದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿಯೇ (ಬಹುಶಃ ಮೂಕಿಚಿತ್ರಗಳ ಕಾಲದಲ್ಲೇ) ಪ್ರಯೋಗಿಸಿದ್ದರು!
ರಾವಣನ ಮೇಲೆ ಎರಗಲು ಬಂದ ಜಟಾಯುವಿಗೆ, ರಾವಣನ ಹೆಗಲ ಮೇಲೆ ಮೂರ್ಛೆ ಬಿದ್ದಿದ್ದ ಸೀತೆ ಕಣ್ಣೀಗೆ ಬಿದ್ದಾಗ, ನಾನು ಎರಗಿದರೆ ಸೀತೆಗೆ ಗಾಯವಾಗುವಬಹುದು ಅನ್ನಿಸಿದಾಗ ಆತನ ಉದ್ಗಾರ: “ರಕ್ಷೆಯಾದಳೆ ದೇವಿ ರಾಕ್ಷಸಗೆ? ಹಾ”
ರಾವಣನ ಖಡ್ಗದಿಂದ ಗಾಯಗೊಂಡು ಕೆಳಗೆ ಬಿದ್ದ ಜಟಾಯುವನ್ನು ಕಂಡು ‘ಕಾಡುಗೋಳಾಗಿ ಬಿದ್ದನು ಜಟಾಯು’ ಎನ್ನುತ್ತಾರೆ ಕವಿ. ಅದನ್ನು ಅಷ್ಟಕ್ಕೆ ನಿಲ್ಲಿಸಿದ್ದರೆ ಕುವೆಂಪು ಕವಿ ಮಾತ್ರ ಆಗುತ್ತಿದ್ದರು. ಆದರೆ ಅವರು ಮಹಾಕವಿ! ಅದಕ್ಕೆ “ಕಾಡುಗೋಳಾಗಿ ಬಿದ್ದನು ಜಟಾಯು, ರಾವಣನ ಆಯು ಬೀಳ್ವಂತೆ” ಎಂದು ಮುಗಿಸುತ್ತಾರೆ!
ರಾವಣ-ಸೀತೆಯರ ನಡುವೆ ನಡೆಯುವ ಸಂಭಾಷಣೆ ಒಂದು ದುರಂತ ನಾಟಕದ ದೃಶ್ಯದಂತೆ ಕಾಣುತ್ತದೆ. ಅದೇ ಒಂದು ಲೇಖನವಾಗುತ್ತದೆ

No comments: